ಮೆಟ್ರೋ ಟಿಕೆಟ್ ದರ ಏರಿಕೆ ಜಟಾಪಟಿ: ದಾಖಲೆ ಸಮೇತ ಸಿಎಂಗೆ ಟಾಂಗ್ ಕೊಟ್ಟ ತೇಜಸ್ವಿ ಸೂರ್ಯ – Kannada News | Bengaluru Metro Fare Hike: CM Blames Centre, Tejasvi Surya spark on State Over BMRCL Cost

ಬೆಂಗಳೂರು, ಫೆಬ್ರವರಿ 06: ಬೆಂಗಳೂರಿಗರಿಗೆ ಒಂದು ಕಾಲದಲ್ಲಿ ವರದಾನವಾಗಿದ್ದ ನಮ್ಮ ಮೆಟ್ರೋ (Namma Metro​) ಇಂದು ದೇಶದಲ್ಲಿ ಅತೀ ದುಬಾರಿ ಸಾರಿಗೆ ಆಗಿದೆ. ಒಂದು ಲೆಕ್ಕದಲ್ಲಿ ಆಟೋ ಪ್ರಯಾಣಿಕ್ಕಿಂತಲೂ ದುಬಾರಿ ಆಗಿದೆ. ಕಳೆದ ವರ್ಷವಷ್ಟೇ ಟಿಕೆಟ್ ದರ ಹೆಚ್ಚಿಸಿದ್ದ ಬಿಎಂಆರ್​​ಸಿಎಲ್ (BMRCL) ಇದೀಗ ಮತ್ತೆ ಟಿಕೆಟ್‌ ದರ ಹೆಚ್ಚಿಸಿದೆ. ಸದ್ಯ ಇದು ರಾಜಕೀಯ ಜಟಾಪಟಿಗೂ ಕಾರಣವಾಗಿದೆ. ಮೆಟ್ರೋ ದರಗಳನ್ನು ರಾಜ್ಯ ಸರ್ಕಾರ ನಿರ್ಧರಿಸುವುದಿಲ್ಲ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಕೇಂದ್ರದ ಕಡೆ ಬೊಟ್ಟು ಮಾಡಿದ್ದಾರೆ. ಈ ವಿಚಾರವಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ದಾಖಲೆಯೊಂದಿಗೆ ತಿರುಗೇಟು ನೀಡಿದ್ದಾರೆ.

ಮೆಟ್ರೋ ಟಿಕೆಟ್​​​ ದರ ಏರಿಕೆ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ಜೊತೆ ಚರ್ಚಿಸುವುದಾಗಿ ಹೇಳಿದ್ದಾರೆ. ಜೊತೆಗೆ ಮೆಟ್ರೋ ದರಗಳನ್ನು ರಾಜ್ಯ ಸರ್ಕಾರ ನಿರ್ಧರಿಸುವುದಿಲ್ಲ. ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ರಚಿಸಿರುವ ಸ್ವತಂತ್ರ ದರ ನಿಗದಿ ಕಮಿಟಿ ನಿರ್ಧರಿಸುತ್ತದೆ ಎಂದಿದ್ದಾರೆ. ಸದ್ಯ ಇದೇ ವಿಚಾರವಾಗಿ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ಟ್ವೀಟ್​​

ಈ ಬಗ್ಗೆ ಟ್ವೀಟ್​ ಮಾಡಿರುವ ಸಂಸದ ತೇಜಸ್ವಿ ಸೂರ್ಯ, ನಿಮ್ಮ ಕಾರಣಗಳು ಕೇಳಿ ಜನತೆ ಬೇಸತ್ತು ಹೋಗಿದ್ದಾರೆ. ಈ ವಿಷಯವನ್ನು ಔಪಚಾರಿಕವಾಗಿ ಕೈಗೆತ್ತಿಕೊಳ್ಳಲು ನೀವು ಕಾಯುತ್ತಿರುವ ವೇಳೆಯಲ್ಲೇ, ಬೆಂಗಳೂರು ಜನತೆ ಸುಮಾರು ಒಂದು ವರ್ಷ ಕಾಲ ಭಾರೀ ದರ ಏರಿಕೆಯ ಹೊರೆ ಹೊತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಕೇಂದ್ರವೇ ಮೆಟ್ರೋ ದರ ಏರಿಸಿದ್ದಾದ್ರೆ ರಾಜ್ಯ ಇವತ್ತೇ ಪತ್ರ ಬರೆಯಲಿ, ತೇಜಸ್ವಿ ಸೂರ್ಯ ಸವಾಲ್

ನಿರಂತರ ಸಾರ್ವಜನಿಕ ವಿರೋಧ ಮತ್ತು ಕಳೆದ ಒಂದು ವರ್ಷದಿಂದ ಈ ವಿಚಾರಕ್ಕೆ ಗಮನ ಸೆಳೆಯಲು ನಡೆದ ಪ್ರಯತ್ನಗಳ ಬಳಿಕ ಇದೀಗ ಸರ್ಕಾರ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ. ರಾಜ್ಯ ಸರ್ಕಾರದ ನಗರಾಭಿವೃದ್ಧಿ ಹಾಗೂ ಹಣಕಾಸು ಇಲಾಖೆಗಳಿಂದ ಬಿಎಂಆರ್‌ಸಿಎಲ್‌ಗೆ ಕಳುಹಿಸಿರುವ ಪತ್ರಗಳಲ್ಲಿ, ದರ ಪರಿಷ್ಕರಣೆಯನ್ನು ರಾಜ್ಯ ಸರ್ಕಾರದ ಹಣಕಾಸು ಹೊರೆ ಕಡಿಮೆ ಮಾಡಲು ‘ಅನಿವಾರ್ಯ’ ಎಂದು ಪರಿಗಣಿಸಲಾಗಿತ್ತು. ಅಂದರೆ ಹಣಕಾಸು ಒತ್ತಡ ತಗ್ಗಿಸುವ ನಿಟ್ಟಿನಲ್ಲಿ ದರ ಏರಿಕೆಗೆ ಒತ್ತಾಯ ಆರಂಭವಾದದ್ದು ರಾಜ್ಯ ಸರ್ಕಾರದಿಂದಲೇ ಎಂಬುವುದು ಸ್ಪಷ್ಟ. ಹೀಗಾಗಿ, ರಾಜ್ಯ ಸರ್ಕಾರ ಈ ವಿಷಯದಲ್ಲಿ ತಾನು ಅಸಹಾಯಕ ಪ್ರೇಕ್ಷಕ ಎಂಬಂತೆ ವರ್ತಿಸುವುದು ಸರಿಯಲ್ಲ ಎಂದಿದ್ದಾರೆ.

ದರ ನಿಗದಿ ಸಮಿತಿ ಕಾನೂನುಬದ್ಧ ಸಂಸ್ಥೆಯಾಗಿರಬಹುದು. ಆದರೆ ಅದರ ಮುಂದೆ ಸಲ್ಲಿಸಲಾಗುವ ಮಾಹಿತಿಗಳು, ಉದ್ದೇಶಗಳು ಮತ್ತು ದರ ಭರಿಸುವ ಸಾಮರ್ಥ್ಯದ ದೃಷ್ಟಿಕೋನ ಎಲ್ಲವೂ ರಾಜ್ಯ ಸರ್ಕಾರದಿಂದಲೇ ಬರುತ್ತವೆ. ಇದನ್ನು ಯಾವುದೇ ಸುಳ್ಳುಗಳಿಂದ ಮರೆಮಾಡಲು ಸಾಧ್ಯವಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಮೆಟ್ರೊ ಟಿಕೆಟ್ ದರ ಏರಿಕೆ ಬಗ್ಗೆ ಕೊನೆಗೂ ಮೌನಮುರಿದ ಸಿದ್ದರಾಮಯ್ಯ ಹೇಳಿದ್ದಿಷ್ಟು

ಇನ್ನಾದರೂ ಕಾಯ್ದೆಯ ಹಿಂದೆ ಅಡಗಿಕೊಳ್ಳುವುದನ್ನು ನಿಲ್ಲಿಸಿ, ದರ ಏರಿಕೆಯನ್ನು ಶೀಘ್ರವಾಗಿ ಹಿಂಪಡೆಯಲು ಕ್ರಮಕೈಗೊಳ್ಳಬೇಕು. ಹೊಸ ದರ ನಿಗದಿ ಸಮಿತಿಯನ್ನು ರಚಿಸಿ, ಸಮಯಬದ್ಧವಾಗಿ ದರ ಸಮೀಕರಣಕ್ಕೆ ಸೂಚನೆ ನೀಡಬೇಕು. ಬೆಂಗಳೂರಿಗೆ ಬೇಕಿರುವುದು ಹೊಣೆಗಾರಿಕೆ ಮತ್ತು ಕ್ರಮಕೈಗೊಳ್ಳುವಿಕೆ ಹೊರತು ನಾಟಕೀಯ ಆಕ್ರೋಶವಲ್ಲ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 10:24 pm, Fri, 6 February 26

Source link

ಇದು ನನ್ನ ಜಾಗ; ಕಾಡಿನ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರನ್ನು ಎತ್ತಲು ಯತ್ನಿಸಿದ ಆನೆ – Kannada News | Wild elephant attempts to charge a vehicle on forest road in Dhenkanal

ಭುವನೇಶ್ವರ, ಫೆಬ್ರವರಿ 6: ಕಾಂಕ್ರೀಟ್ ಕಾಡು ಹೆಚ್ಚಾಗುತ್ತಿದ್ದಂತೆ ಅರಣ್ಯ ನಾಶವಾಗುತ್ತಿದೆ. ಇದರಿಂದ ವನ್ಯಜೀವಿಗಳು ಆಹಾರಕ್ಕಾಗಿ ಊರಿನೊಳಗೆ ಬರುವಂತಾಗಿದೆ. ಕಾಡಾನೆಯೊಂದು (Elephant) ಅರಣ್ಯದ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಿನ ಬಳಿ ಹೋಗಿ ಆಕ್ರೋಶದಿಂದ ವರ್ತಿಸಿದೆ. ಒಡಿಶಾದ ಧೆಂಕನಲ್‌ನಲ್ಲಿ ಅರಣ್ಯದ ರಸ್ತೆಯಲ್ಲಿ ಕಾಡಾನೆಯೊಂದು ವಾಹನವನ್ನು ಎತ್ತಲು ಪ್ರಯತ್ನಿಸಿದೆ. ಈ ವೇಳೆ ಆಚೀಚೆ ರಸ್ತೆಗಳಲ್ಲಿ ಇದ್ದವರು ಜೋರಾಗಿ ಕಿರುಚಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಆನೆ ಆ ಕಾರನ್ನು ಬಿಟ್ಟು ಜನರತ್ತ ಧಾವಿಸಿದೆ. ಅರಣ್ಯ ಕಾರಿಡಾರ್‌ಗಳ ಬಳಿ ಸಂಚಾರ ಹೆಚ್ಚುತ್ತಿರುವುದರಿಂದ ಮಾನವ-ವನ್ಯಜೀವಿ ಸಂಘರ್ಷ ಯಾವ ಮಟ್ಟಿಗೆ ಆತಂಕಕಾರಿಯಾಗಿ ಮಾರ್ಪಟ್ಟಿದೆ ಎಂಬುದಕ್ಕೆ ಇದೊಂದು ನಿದರ್ಶನವಷ್ಟೇ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

U19 World Cup 2026: ಚಾಂಪಿಯನ್ ಭಾರತಕ್ಕೆ ಐಸಿಸಿಯಿಂದ ನಯಾಪೈಸೆ ಸಿಗಲಿಲ್ಲ – Kannada News | India U19 Champions 2026 BCCI Prize Money Expectation

ವರ್ಷಕ್ಕೊಂದು ಐಸಿಸಿ (ICC) ಟ್ರೋಫಿಯನ್ನು ಗೆಲ್ಲುವುದನ್ನು ಟೀಂ ಇಂಡಿಯಾ (Team India) ಅಭ್ಯಾಸ ಮಾಡಿಕೊಂಡಿದೆ. ಇದೀಗ 2026 ರ ಆರಂಭದಲ್ಲಿ ಭಾರತ ಯುವ ಪಡೆ 19 ವರ್ಷದೊಳಗಿನವರ ವಿಶ್ವಕಪ್ (U19 World Cup 2026) ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಫೈನಲ್‌ ಪಂದ್ಯವನ್ನು 100 ರನ್​ಗಳಿಂದ ಗೆದ್ದಿಕೊಳ್ಳುವ ಮೂಲಕ ಟೀಂ ಇಂಡಿಯಾ ಆರನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಮೂಲಕ ಭಾರತ ತಂಡ ಅತಿ ಹೆಚ್ಚು ಬಾರಿ ವಿಶ್ವಕಪ್ ಗೆದ್ದ ತಂಡ ಎನಿಸಿಕೊಂಡಿದೆ. ಈ ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತ ತಂಡ ಅಜೇಯ ತಂಡವಾಗಿ ಫೈನಲ್​ಗೇರಿದ್ದು ಮಾತ್ರವಲ್ಲದೆ ಚಾಂಪಿಯನ್ ಕೂಡ ಆಯಿತು.

ಭಾರತಕ್ಕೆ ಐತಿಹಾಸಿಕ ಗೆಲುವು

ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 411 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಭಾರತದ ಪರ ಆರಂಭಿಕ ವೈಭವ್ ಸೂರ್ಯವಂಶಿ ಕೇವಲ 80 ಎಸೆತಗಳಲ್ಲಿ 175 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡಕ್ಕೆ ಭರ್ಜರಿ ಆರಂಭ ಒದಗಿಸಿಕೊಟ್ಟರು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಕೂಡ ಉತ್ತಮ ಹೋರಾಟ ನೀಡಿತ್ತಾದರೂ ಬೃಹತ್ ಗುರಿಯ ಒತ್ತಡಕ್ಕೆ ಸಿಲುಕಿ 50 ಓವರ್​ಗಳನ್ನು ಪೂರ್ಣಗೊಳಿಸಲಾಗದೆ ಸೋಲೊಪ್ಪಿಕೊಂಡಿತು. ಈ ಮೂಲಕ 28 ವರ್ಷಗಳ ಬಳಿಕ ವಿಶ್ವಕಪ್ ಗೆಲ್ಲಬೇಕೆನ್ನುವ ಇಂಗ್ಲೆಂಡ್ ತಂಡದ ಕನಸು ಕನಸಾಗಿಯೇ ಉಳಿಯಿತು.

ಐಸಿಸಿಯಿಂದ ನಗದು ಬಹುಮಾನವಿಲ್ಲ

ಈ ಐತಿಹಾಸಿಕ ಗೆಲುವಿನ ಹೊರತಾಗಿಯೂ ಟೀಂ ಇಂಡಿಯಾ ಐಸಿಸಿಯಿಂದ ಯಾವುದೇ ಅಧಿಕೃತ ಬಹುಮಾನದ ಹಣವನ್ನು ಪಡೆಯುವುದಿಲ್ಲ. ಏಕೆಂದರೆ 19 ವರ್ಷದೊಳಗಿನ ಪುರುಷರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಐಸಿಸಿ ಯಾವುದೇ ನಗದು ಬಹುಮಾನವನ್ನು ನೀಡುವುದಿಲ್ಲ. ಈ ಪಂದ್ಯಾವಳಿಯು ಯುವ ಕ್ರಿಕೆಟಿಗರಿಗೆ ಅಭಿವೃದ್ಧಿ, ಅನುಭವ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಒದಗಿಸಲು ವಿನ್ಯಾಸಗೊಳಿಸಲಾದ ಅಭಿವೃದ್ಧಿ ಪಂದ್ಯಾವಳಿಯಾಗಿದೆ. ಹೀಗಾಗಿ ವಿಜೇತ ತಂಡಕ್ಕಾಗಲಿ ಅಥವಾ ರನ್ನರ್ ಅಪ್ ತಂಡಕ್ಕಾಗಲಿ ಟ್ರೋಫಿಯನ್ನು ಹೊರತುಪಡಿಸಿ ಯಾವುದೇ ನಗದು ಬಹುಮಾನ ಸಿಗುವುದಿಲ್ಲ. ಹಿಂದಿನ ಆವೃತ್ತಿಯಲ್ಲೂ ಐಸಿಸಿ ಯಾವುದೇ ಬಹುಮಾನದ ಹಣವನ್ನು ನೀಡಲಿಲ್ಲ.

U19 World Cup: 6ನೇ ಬಾರಿಗೆ ಅಂಡರ್-19 ವಿಶ್ವಕಪ್ ಗೆದ್ದ ಟೀಂ ಇಂಡಿಯಾ

ಬಹುಮಾನ ನೀಡಲಿರುವ ಬಿಸಿಸಿಐ

ಐಸಿಸಿಯಿಂದ ಯಾವುದೇ ನಗದು ಬಹುಮಾನ ಸಿಗದಿದ್ದರೂ, ವಿಶ್ವ ಕ್ರಿಕೆಟ್​ನ ದೊಡ್ಡಣ್ಣ ಬಿಸಿಸಿಐನಿಂದ ಯುವ ಭಾರತ ತಂಡಕ್ಕೆ ನಗದು ಬಹುಮಾನ ಸಿಗಲಿದೆ. ಈ ಹಿಂದೆಯೂ ಬಿಸಿಸಿಐ ಅಂಡರ್ 19 ವಿಶ್ವಕಪ್ ಗೆದ್ದ ತಂಡಗಳಿಗೆ ನಗದು ಬಹುಮಾನ ಘೋಷಿಸಿತ್ತು. ಉದಾಹರಣೆಗೆ, 2024 ರ ಅಂಡರ್ 19 ವಿಶ್ವಕಪ್‌ ಗೆದ್ದ ಭಾರತ ತಂಡದ ಪ್ರತಿಯೊಬ್ಬ ಆಟಗಾರನಿಗೆ ಬಿಸಿಸಿಐ ತಲಾ 30 ಲಕ್ಷ ರೂ. ಬಹುಮಾನ ನೀಡಿತ್ತು. ಅದೇ ರೀತಿ, 2025 ರ ಮಹಿಳಾ ಅಂಡರ್-19 ಟಿ20 ವಿಶ್ವಕಪ್‌ ಗೆದ್ದಿದ್ದ ವನಿತಾ ಪಡೆಗೆ ಬಿಸಿಸಿಐ 5 ಕೋಟಿ ರೂ. ಬಹುಮಾನ ನೀಡಿತ್ತು. ಅದರಂತೆ ಈ ಬಾರಿಯೂ ಸಹ ಬಿಸಿಸಿಐ ಆಟಗಾರರು, ಸಹಾಯಕ ಸಿಬ್ಬಂದಿ ಮತ್ತು ತರಬೇತಿ ತಂಡಕ್ಕೆ ನಗದು ಬಹುಮಾನ ಘೋಷಣೆ ಮಾಡುವ ನಿರೀಕ್ಷೆಯಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

T20 World Cup: ಟಿ20 ವಿಶ್ವಕಪ್​ನಿಂದ 7 ಸ್ಟಾರ್ ಆಟಗಾರರು ಔಟ್ – Kannada News | T20 World Cup 2026: Key Player Injuries Jolt Teams Before Tournament Start

2026 ರ ಟಿ20 ವಿಶ್ವಕಪ್ ಆರಂಭವಾಗುವುದಕ್ಕೂ ಮೊದಲೇ ಪ್ರಮುಖ ಆಟಗಾರರ ಗಾಯ ತಂಡಗಳ ತಲೆನೋವು ಹೆಚ್ಚಿಸಿದೆ. ಟೀಂ ಇಂಡಿಯಾ, ಆಸ್ಟ್ರೇಲಿಯಾ ಸೇರಿದಂತೆ ಪ್ರಮುಖ ತಂಡಗಳ ಸ್ಟಾರ್ ಆಟಗಾರರು ಗಾಯಕ್ಕೆ ತುತ್ತಾಗಿದ್ದಾರೆ. ಇದರಿಂದ ಅವರು ಟೂರ್ನಿಯಿಂದಲೂ ಹೊರಬಿದ್ದಿದ್ದಾರೆ. ಏಕಾಂಗಿಯಾಗಿ ಪಂದ್ಯದ ದಿಕ್ಕನೇ ಬದಲಿಸುತ್ತಿದ್ದ ಆಟಗಾರರ ಅಲಭ್ಯತೆ ತಂಡಗಳಿಗೆ ದೊಡ್ಡ ನಷ್ಟವನ್ನುಂಟು ಮಾಡಿದೆ.

Source link

ಲಕ್ಕುಂಡಿ ಚೌಕಿಮಠ ಕುಟುಂಬಸ್ಥರ ಮೂಲ, ಹಿನ್ನೆಲೆ ಏನ್ ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ – Kannada News | Lakkundi History: temple Found inside house, here Is Family Reaction

ಗದಗ, (ಫೆಬ್ರವರಿ 06) : ಐತಿಹಾಸಿಕ ಲಕ್ಕುಂಡಿಯಲ್ಲಿ (Lakkundi) ಚಿನ್ನದ ನಿಧಿ (Gold Treasure) ಪತ್ತೆಯಾಗಿ ದೊಡ್ಡ ಸುದ್ದಿಯಾಗಿತ್ತು. ಇದಾದ ಬಳಿಕ ಸರ್ಕಾರ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ಕಾರ್ಯ (Excavation) ಶುರುಮಾಡಿದೆ. ಸುಮಾರು ಐದು ದಿನಗಳಿಂದ ಲಕ್ಕುಂಡಿ ಗ್ರಾಮದಲ್ಲಿರುವ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಉತ್ಖನನ ಕಾರ್ಯ ಭರದಿಂದ ಸಾಗುತ್ತಿದೆ. ಈ ವೇಳೆ ಪುರಾತನ ವಸ್ತುಗಳು (Antiquities) ಪತ್ತೆಯಾಗಿವೆ. ಈ ಬೆನ್ನಲ್ಲೇ ಮತ್ತೊಂದು ಅಚ್ಚರಿ ತಿಳಿದುಬಂದಿದೆ. ಗ್ರಾಮದಲ್ಲಿರುವ ಮನೆಯೊಳಗೊಂದು ಐತಿಹಾಸಿಕ ದೇವಸ್ಥಾನ ಪತ್ತೆಯಾಗಿದ್ದು, ಹೊರಗೆ ನೋಡಿದ್ರೆ ಮನೆ ಒಳಗೆ ಹೋದ್ರೆ ದೇಗುಲ. ಹೌದು…. ಚೌಕಿಮಠ ಮನೆತನದ ಆವರಣದಲ್ಲಿ ಈಶ್ವರ ಹಾಗೂ ಅರ್ಧನಾರೇಶ್ವರ ದೇವಸ್ಥಾನವಿದೆ. ಈ ಪುರಾತನ ದೇಗುಲವನ್ನು ಪರಿಶೀಲನೆ ನಡೆಸಿರುವ ಇತಿಹಾಸಕಾರರು ಇದು ಚಾಲುಕ್ಯರ ಕಾಲದ ಈಶ್ವರ ದೇವಸ್ಥಾನ ಎಂದು ಹೇಳಿದ್ದಾರೆ. ಹೀಗಾಗಿ ಚೌಕಿಮಠ ಕುಟುಂಬಕ್ಕೆ ಮನೆ ಖಾಲಿ ಮಾಡುವ ಸ್ಥಿತಿ ಎದುರಾಗಿದ್ದು. 15 ಮನೆಗಳು ನಿರ್ಮಾಣ ಮಾಡಿ ಕೊಡಬೇಕು, ಜೊತೆಗೆ ಪರಿಹಾರ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ಟಿವಿ9ಗೆ ಚೌಕಿಮಠ ಕುಟುಂಬ ಸದಸ್ಯರು ಪ್ರತಿಕ್ರಿಯಿಸಿದ್ದು, 15 ಮನೆಗಳು ನಿರ್ಮಾಣ ಮಾಡಿ ಕೊಡಬೇಕು. ಜೊತೆಗೆ ಪರಿಹಾರ ನೀಡಬೇಕು. ಇಲ್ಲಾಂದ್ರೆ ನಾವು ಯಾವುದೇ ಕಾರಣಕ್ಕೂ ಬಿಟ್ಟು ಕೊಡಲ್ಲ. ಇನ್ನೂ ನಮ್ಮ ಕುಟುಂಬದ ಜೊತೆ ಯಾವ ಅಧಿಕಾರಿಗಳು ಮಾತನಾಡಿಲ್ಲ.. ಭೂಮಿ ಪೂಜೆ ಕಾರ್ಯಕ್ರಮ ಮಾಡ್ತೀವಿ ಅಂದ್ರು, ಅವಕಾಶ ಕೊಟ್ಟಿದ್ದೇವೆ.ಈಶ್ವರ ದೇವಸ್ಥಾನ‌ ಸಂಕೀರ್ಣದಲ್ಲಿ ಒಟ್ಟು 15 ಕುಟುಂಬಸ್ಥರು ಇದ್ದೇವೆ. ನಮಗೆ ಈ ಜಾಗ ಬಿಟ್ರೆ ಬೇರೆ ಏನೂ ಇಲ್ಲ. ಹೂವು ಕಟ್ಟಿ ಜೀವನ ಮಾಡಬೇಕು. ಬಡ ಕುಟುಂಬಗಳೇ ಇಲ್ಲಿ ವಾಸವಾಗಿದ್ದಾರೆ. ಹೀಗಾಗಿ ಸರ್ಕಾರ ನಮ್ಮ 15 ಕುಟುಂಬಗಳಿಗೆ ನಿವೇಶನ ಜೊತೆಗೆ ಮನೆಗಳ ನಿರ್ಮಾಣ ಮಾಡಿ‌ ಕೊಡಬೇಕು. ಲಕ್ಕುಂಡಿ ಇತಿಹಾಸ ಉಳಿಯಬೇಕು, ಮುಂದಿನ ಪೀಳಿಗೆಗೆ ಗೋತ್ತಾಗಬೇಕು. ಅದಕ್ಕೆ ನಮ್ಮ ಸಂಪೂರ್ಣ ಸಹಕಾರ ಇರುತ್ತೆ. ಆದ್ರೆ, ನಮಗೆ ಸರ್ಕಾರ ಸೂಕ್ತ ಪರಿಹಾರ ಕೊಡಬೇಕು . ಅಂದಾಗ ಮಾತ್ರ ಬಿಟ್ಟು‌ ಕೊಡ್ತೀವಿ. ಇಲ್ಲಂದ್ರೆ ಬಿಟ್ಟುಕೊಡಲ್ಲ ಎಂದು ಸ್ಪಷ್ಟಪಡಿಸಿದರು.

Source link

ಒಡಿಶಾ ಸರ್ಕಾರದ ಬ್ಲ್ಯಾಕ್ ಸ್ವಾನ್ ಶೃಂಗಸಭೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿ – Kannada News | President Droupadi Murmu graces Black Swan Summit by the Government of Odisha in Bhubaneswar

ಭುವನೇಶ್ವರ, ಫೆಬ್ರವರಿ 6: ಒಡಿಶಾ ಸರ್ಕಾರವು ಗ್ಲೋಬಲ್ ಫೈನಾನ್ಸ್ ಮತ್ತು ಟೆಕ್ನಾಲಜಿ ನೆಟ್‌ವರ್ಕ್ ಸಹಯೋಗದೊಂದಿಗೆ ಒಡಿಶಾ ಸರ್ಕಾರ ಆಯೋಜಿಸಿರುವ ಭಾರತದ ಬ್ಲ್ಯಾಕ್ ಸ್ವಾನ್ ಶೃಂಗಸಭೆಯಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಇಂದು (ಫೆಬ್ರವರಿ 6) ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ತಂತ್ರಜ್ಞಾನವು ಭಾರೀ ವೇಗದಲ್ಲಿ ವಿಕಸನಗೊಳ್ಳುತ್ತಿರುವ ಕಾಲದಲ್ಲಿ ನಾವು ಬದುಕುತ್ತಿದ್ದೇವೆ ಎಂದು ಹೇಳಿದರು.

ಹೊಸ ಆವಿಷ್ಕಾರಗಳು ಎಷ್ಟು ವೇಗವಾಗಿ ಬರುತ್ತವೆ ಎಂದರೆ ನಮ್ಮ ವ್ಯವಸ್ಥೆಗಳು, ಕೌಶಲ್ಯಗಳು ಮತ್ತು ವ್ಯವಹಾರ ಮಾದರಿಗಳು ಆಗಾಗ ಮುಂದುವರಿಯಲು ಹೆಣಗಾಡುತ್ತವೆ. ಹಾಗೇ, ಇವು ಸೈಬರ್ ಭದ್ರತಾ ಬೆದರಿಕೆಗಳು, ಡೀಪ್‌ಫೇಕ್‌ಗಳು, ತಪ್ಪು ಮಾಹಿತಿ ಮತ್ತು ತಂತ್ರಜ್ಞಾನದ ಮೇಲೆ ಹೆಚ್ಚುತ್ತಿರುವ ಅವಲಂಬನೆ ಸೇರಿದಂತೆ ಗಂಭೀರ ಸವಾಲುಗಳನ್ನು ಸಹ ತರಬಹುದು. ಈ ತ್ವರಿತ ತಾಂತ್ರಿಕ ಬದಲಾವಣೆಗಳು ನಾವೀನ್ಯತೆ ಮತ್ತು ಬೆಳವಣಿಗೆಯ ಮೇಲೆ ಪಾಸಿಟಿವ್ ಪರಿಣಾಮ ಬೀರುತ್ತವೆ. ಬ್ಲ್ಯಾಕ್ ಸ್ವಾನ್ ಶೃಂಗಸಭೆಯಂತಹ ಕಾರ್ಯಕ್ರಮಗಳ ಮೂಲಕ ಕೌಶಲ್ಯದ ಮೂಲಕ ಸಾಮರ್ಥ್ಯಗಳನ್ನು ಮತ್ತಷ್ಟು ಹೆಚ್ಚಿಸಲು, ಉದ್ಯೋಗ ಸೃಷ್ಟಿಸಲು, ಡಿಜಿಟಲ್ ಮತ್ತು ಆರ್ಥಿಕ ಪರಿವರ್ತನೆಯನ್ನು ವೇಗಗೊಳಿಸಲು ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ನವೀನ ವಿಧಾನಗಳನ್ನು ಅನ್ವೇಷಿಸಬಹುದು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.

ಇದನ್ನೂ ಓದಿ: Budget 2026: ಡಿಫೆನ್ಸ್​ನಿಂದ ಹಿಡಿದು ಚಿಪ್​ವರೆಗೆ ಭಾರತವನ್ನು ತಂತ್ರಜ್ಞಾನ ದೈತ್ಯವಾಗಿಸಬಲ್ಲ ಬಜೆಟ್

ತಂತ್ರಜ್ಞಾನವು ಆರ್ಥಿಕತೆಯ ಎಲ್ಲಾ ವಲಯಗಳು ಮತ್ತು ಸಮಾಜದ ಎಲ್ಲಾ ವರ್ಗಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಅಗಾಧ ಸಾಮರ್ಥ್ಯವನ್ನು ಹೊಂದಿದೆ. ಆದರೆ ಕೆಲವೊಮ್ಮೆ ಅದನ್ನು ಆರ್ಥಿಕ ವಂಚನೆಗೆ ದುರುಪಯೋಗಪಡಿಸಿಕೊಳ್ಳಬಹುದು. ಅಂತಹ ವಂಚನೆಯನ್ನು ತಡೆಗಟ್ಟಲು ಜಾಗರೂಕರಾಗಿರಲು ಮತ್ತು ಎಚ್ಚರವಾಗಿರಲು ಜನರಲ್ಲಿ ಜಾಗೃತಿ ಮೂಡಿಸುವುದು ಸೂಕ್ತವಾಗಿದೆ. ಇಂತಹ ವಂಚನೆಗಳನ್ನು ತಡೆಗಟ್ಟಲು ಭಾರತ ಸರ್ಕಾರವು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ, ನಾಗರಿಕ ಹಣಕಾಸು ಸೈಬರ್ ವಂಚನೆ ವರದಿ ಮತ್ತು ನಿರ್ವಹಣಾ ವ್ಯವಸ್ಥೆ ಮತ್ತು ಸೈಬರ್ ವಂಚನೆ ತಗ್ಗಿಸುವಿಕೆ ಕೇಂದ್ರವನ್ನು ಸ್ಥಾಪಿಸುವುದು ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಂಡಿದೆ ಎಂದಿದ್ದಾರೆ.

ಇದನ್ನೂ ಓದಿ: ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಅಂತ್ಯ; ಮುಖ್ಯಮಂತ್ರಿಯಾಗಿ ಖೇಮ್‌ಚಂದ್ ಪ್ರಮಾಣವಚನ ಸ್ವೀಕಾರ

ಆನ್‌ಲೈನ್ ಹಣಕಾಸು ವಂಚನೆಯನ್ನು ತಡೆಯಲು ಡಿಜಿಟಲ್ ಮತ್ತು ಆರ್ಥಿಕ ಸಾಕ್ಷರತೆಯನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ. ತಂತ್ರಜ್ಞಾನದ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಚಿಕ್ಕ ವಯಸ್ಸಿನಲ್ಲಿಯೇ ಅರ್ಥಮಾಡಿಕೊಳ್ಳಲು ಇದನ್ನು ಶಾಲಾ ಪಠ್ಯಕ್ರಮದ ಭಾಗವಾಗಿಸಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

17ನೇ ಬೆಂಗಳೂರು ಚಲನಚಿತ್ರೋತ್ಸವ ಮುಕ್ತಾಯ; ಹಂಸಲೇಖಗೆ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ – Kannada News | 17th Bangalore Film Festival concludes; Hamsalekha gets Lifetime Achievement Award

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (BIFFes) 17ನೇ ಆವೃತ್ತಿಗೆ ಶುಕ್ರವಾರ (ಫೆಬ್ರವರಿ 6) ರಾತ್ರಿ ನಗರದ ಲುಲು ಮಾಲ್‌ನಲ್ಲಿ ತೆರೆ ಬಿದ್ದಿದೆ. ಜಪಾನ್‌ ದೇಶದ ‘ಲಾಸ್ಟ್‌ ಲ್ಯಾಂಡ್‌’, ಮರಾಠಿಯ ‘ಸಬರ್‌ ಬೊಂಡಾ’ ಮತ್ತು ಕನ್ನಡದ ‘ವನ್ಯಾ’ ಸಿನಿಮಾಗಳು ಅನುಕ್ರಮವಾಗಿ ಚಿತ್ರೋತ್ಸವದ ಏಷ್ಯಾ, ಭಾರತ ಮತ್ತು ಕನ್ನಡ ಸ್ಪರ್ಧಾ ವಿಭಾಗಗಳಲ್ಲಿ ‘ಅತ್ಯುತ್ತಮ ಸಿನಿಮಾ’ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡವು. ಹಿರಿಯ ಗೀತರಚನೆಕಾರ ಮತ್ತು ಸಂಗೀತ ನಿರ್ದೇಶಕ ಹಂಸಲೇಖ (Hamsalekha) ಅವರಿಗೆ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಚಿವ ದಿನೇಶ್‌ ಗುಂಡೂರಾವ್‌ ಭಾಗವಹಿಸಿದ್ದರು. ಚಿತ್ರೋತ್ಸವದ ರಾಯಭಾರಿ ಪ್ರಕಾಶ್‌ ರಾಜ್‌, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ. ಸಾಧು ಕೋಕಿಲ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲ ಮುಂತಾದವರು ಈ ಸಮಾರಂಭದಲ್ಲಿ ಹಾಜರಿದ್ದರು.

ವೇದಿಕೆಯಲ್ಲಿ ಹಂಸಲೇಖ ಅವರು ಮಾತನಾಡಿದರು. ‘ಕಲೆಗೆ ಸಂಬಂಧಿಸಿದ ಸಮಾರಂಭಕ್ಕೆ ಸಮಾರೋಪ ಇರುವುದಿಲ್ಲ. ಅದು ಆರಂಭ. ಸೃಷ್ಟಿ ಕಾರ್ಯ ನಿರಂತರ. ಅದು ಯಾವತ್ತೂ ನಿಲ್ಲುವುದಿಲ್ಲ. ಕೃಷಿಕರು, ಕಾರ್ಮಿಕರು, ಸಿನಿಮಾದವರಿಗೆ ಯಾವುದೇ ವ್ಯತ್ಯಾಸ ಇಲ್ಲ. ಒಬ್ಬನಿಂದ ಸಿನಿಮಾ ಆಗುವುದಿಲ್ಲ. ಅದೊಂದು ಸಾಮೂಹಿಕ ಕೃಷಿ’ ಎಂದು ಅವರು ಹೇಳಿದರು.

‘ಈ ಚಿತ್ರೋತ್ಸವಕ್ಕೆ ರಾಜ್ಯ ಸರ್ಕಾರ ತುಂಬು ಸಹಾಕಾರ‌ ನೀಡಿದೆ. ಜೀವಮಾನ ಪ್ರಶಸ್ತಿ ಸಿಕ್ಕಿದ್ದು ಖುಷಿಯ ವಿಷಯ. ನಾವು ಕನ್ನಡ ನಾಡಿಗೆ ಋಣಿಯಾಗಿರಬೇಕು. ಕನ್ನಡದಲ್ಲಿ ಬದುಕಿದ್ದೇವೆ. ಕಲೆ ಎನ್ನುವುದು ಆತ್ಮದ ಮೇವು. ಕಲೆಯ ಮೇವನ್ನು ಆರು ದಶಕಗಳ ಕಾಲ‌ ಮೇದಿರುವೆ. ಇಲ್ಲಿನ ವೈಚಾರಿಕತೆ, ಆಧ್ಯಾತ್ಮಿಕತೆ ನನ್ನನ್ನು ಬೆಳೆಸಿದೆ. ಪ್ರಜಾಪ್ರಭುತ್ವದ ಬೀಜ ಬಿತ್ತಿದ ಬಸವ ನಾಡಿನಲ್ಲಿ ಪ್ರಜಾಪ್ರಭುತ್ವ ರಕ್ಷಿಸುವ ಸಿನಿಮಾ ‌ಮಾಡಬೇಕಿದೆ’ ಎಂದು ಹಂಸಲೇಖ ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ‘ಚಿತ್ರೋತವಗಳಿಂದ ಬೇರೆ ಭಾಷೆಯ ಸಿನಿಮಾ ನೋಡಬಹುದಾಗಿದೆ. ಇದು ಕಲೆಯನ್ನು ಉತ್ಕೃಷ್ಟ ಮಟ್ಟಕ್ಕೆ ಒಯ್ಯುವ ಉದ್ದೇಶದಿಂದ ಮಾಡುವ ಚಿತ್ರೋತ್ಸವ. ಪ್ರಜಾಪ್ರಭುತ್ವ ಉಳಿಸುವ ಜವಾಬ್ದಾರಿ ಕಲೆ ಮೇಲಿದೆ ಎಂಬುವ ಮಾತು ಒಪ್ಪುವೆ. ಎಲ್ಲ ರೀತಿಯ ಸಿನಿಮಾಗಳು ಬರಬೇಕು. ಕಮರ್ಷಿಯಲ್, ಕಲಾತ್ಮಕ ಸೇರಿ ಎಲ್ಲಾ ರೀತಿಯಲ್ಲಿ ಬರಬೇಕು. ಕಲೆಯಲ್ಲಿ ಭಯ, ಭೀತಿ ಇರಬಾರದು. ಅಭಿವ್ಯಕ್ತಿ ಇರಬೇಕು’ ಎಂದು ಹೇಳಿದರು.

ಇದನ್ನೂ ಓದಿ: ಮತ್ತೆ ಕೈ ಜೋಡಿಸಿದ ಹಂಸಲೇಖ, ಎಸ್. ಮಹೇಂದರ್: ಹೊಸ ಸಿನಿಮಾ ಅನೌನ್ಸ್

ಚಿತ್ರೋತ್ಸವದ ರಾಯಭಾರಿ ಪ್ರಕಾಶ್‌ ರಾಜ್‌ ಮಾತನಾಡಿ, ‘ಭಾಷೆ ಹಲವಾದರೂ, ಭಾವನೆ ಒಂದೇ. ಬೇರೆಬೇರೆ ವ್ಯಾಕರಣ ಇದ್ದರೂ, ಅದರ ಗರ್ಭದಲ್ಲಿ ಗ್ರಹಿಕೆ ಒಂದೇ. ಮನುಷ್ಯ ವಿಕಾಸದಲ್ಲಿ ಸಿನಿಮಾ ಹೊಸ ಭಾಷೆ. ಅದು ಅವನ ಸಂಸ್ಕೃತಿ, ನೋವು, ಅಳಲು ದಾಖಲಿಸುತ್ತದೆ. ಚಿತ್ರೋತ್ಸವ ಎನ್ನುವುದು ಪ್ರಪಂಚದ ಬೇರೆಬೇರೆ ಮಾನವೀಯ ಗ್ರಹಿಕೆಗಳನ್ನು ಹಂಚಿಕೊಳ್ಳುವ ವೇದಿಕೆ. ದೇಶಕ್ಕೆ, ಸಮಾಜಕ್ಕೆ ಆದ ನೋವು ದೊಡ್ಡ ನೋವು. ಅಂತಹ ನೋವುಗಳನ್ನು ಸಿನಿಮಾಗಳು ದಾಖಲಿಸಬೇಕು. ಈ‌ ನಿಟ್ಟಿನಲ್ಲಿ‌ ಚಿತ್ರೋತ್ಸವ ಉತ್ಸವವಾಗಿದೆ. ಹಂಸಲೇಖ ಅವರನ್ನು ಸನ್ಮಾನಿಸಿ ಉತ್ಸವದ ಅರ್ಥವನ್ನು ಹೆಚ್ಚಿಸಿದೆ’ ಎಂದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ. ಸಾಧು ಕೋಕಿಲ ಮಾತನಾಡಿ, ‘ಭಾರತದ ಅತೀ ದೊಡ್ಡ ಚಿತ್ರೋತ್ಸವ ನಮ್ಮದಾಗಿದೆ. ಇದಕ್ಕೆ ಶ್ರಮಿಸಿದ ಸರ್ಕಾರ ಹಾಗೂ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸುವೆ’ ಎಂದರು. ಈ ಸಮಾರಂಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್‌ ಎಂ. ನಿಂಬಾಳ್ಕರ್‌, ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯ ಕಾರ್ಯದರ್ಶಿ ಬಿ.ಬಿ. ಕಾವೇರಿ, ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್‌ ವಿನೋದ್‌ ಚಂದ್ರ, ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಮುರಳಿ ಮುಂತಾದವರು ಭಾಗಿಯಾಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕದಲ್ಲಿ ಮತ್ತೊಂದು ದರೋಡೆ: ಫ್ಲಿಪ್‌ಕಾರ್ಟ್​​ನ ಲಕ್ಷಾಂತರ ರೂ ಮೌಲ್ಯದ ವಸ್ತುಗಳ ಕಳ್ಳತನ – Kannada News | Haveri: 24 Lakh Flipkart Mobiles Stolen from Goods Vehicle

ಹಾವೇರಿಯಲ್ಲಿ ಕಳ್ಳತನ Image Credit source: tv9 kannada

ಹಾವೇರಿ, ಫೆಬ್ರವರಿ 06: ಇತ್ತೀಚೆಗೆ ಬೆಳಗಾವಿಯ ಚೋರ್ಲಾಘಾಟ್​​​ನಲ್ಲಿ 400 ಕೋಟಿ ರೂ ಹೊತ್ತೊಯ್ತಿದ್ದ ಹಣವನ್ನ ಕಂಟೇನರ್​ ಸಮೇತ ಹೈಜಾಕ್​​ ಮಾಡಲಾಗಿದೆ ಅನ್ನೋ ವಿಷಯ ಕೋಲಾಹಲ ಸೃಷ್ಟಿಸಿತ್ತು. ಇದೀಗ ಅದರಂತೆ ಹೋಲುವ ಪ್ರಕರಣ ಒಂದು ಬೆಳಕಿಗೆ ಬಂದಿದೆ. ಫ್ಲಿಪ್‌ಕಾರ್ಟ್ (Flipkart) ಕಂಪನಿಗೆ ಸೇರಿದ 24 ಲಕ್ಷ ರೂ ಮೌಲ್ಯದ ಮೊಬೈಲ್ ಸೇರಿದಂತೆ ವಿವಿಧ ವಸ್ತುಗಳನ್ನು ಖದೀಮರು ಮೂವಿಂಗ್ ಗೂಡ್ಸ್ ವಾಹನದಿಂದಲೇ ಮಂಗಮಾಯ (theft) ಮಾಡಿದ್ದಾರೆ. ಬೆಂಗಳೂರಿನಿಂದ ಧಾರವಾಡದ ಕೊಟೂರ ಗ್ರಾಮದಲ್ಲಿರುವ ಫ್ಲಿಪ್‌ಕಾರ್ಟ್ ಕಂಪನಿಯ ವೇರ್ ಹೌಸ್​​ಗೆ ಸಾಗಿಸುವ ವೇಳೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಹೆದ್ದಾರಿಯಲ್ಲೇ ಕಳ್ಳರ ಕೈಚಳಕ

ಇತ್ತೀಚಿನ ದಿನಗಳಲ್ಲಿ ಹೆದ್ದಾರಿ ಸೇರಿದಂತೆ ಹಲವು ಕಡೆ ಸಿನಿಮೀಯ ರೀತಿಯಲ್ಲಿ ಕಳ್ಳತನ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಕಾಕೋಳ ಮತ್ತು ಮೊಟೇಬೆನ್ನೂರು ಮಧ್ಯದಲ್ಲಿ ಲಕ್ಷಾಂತರ ರೂ ಮೌಲ್ಯದ ಮೊಬೈಲ್ ಕಳ್ಳತನ ಮಾಡಿದ ಪ್ರಕರಣ ತಡವಾಗಿ ಬೆಳಕಿನ ಬಂದಿದೆ. ಕಳೆದ ಶನಿವಾರ ಘಟನೆ ನಡೆದಿದ್ದು, ಫ್ಲಿಪ್ಕಾರ್ಟ್ ಕಂಪನಿಗೆ ಸೇರಿದ ಮೊಬೈಲ್ ಸೇರಿದಂತೆ ವಿವಿಧ ವಸ್ತುಗಳು ಬೆಂಗಳೂರಿನಿಂದ ಧಾರವಾಡದ ಕೊಟೂರು ಗ್ರಾಮದ ವೇರ್​ ಹೌಸ್​ಗೆ ಹೋಗುತ್ತಿದ್ದ ವೇಳೆ ಕಳ್ಳತನವಾಗಿದೆ.

ಇದನ್ನೂ ಓದಿ: 400 ಕೋಟಿ ರೂ. ದರೋಡೆ ಪ್ರಕರಣದ ಪ್ರಮುಖ ಆರೋಪಿ ಕಿಶೋರ್ ಸಾಳ್ವೆ ಬಂಧನ

ಗೂಡ್ಸ್ ಲಾರಿ KA-22 D0666 ನಂಬರ್ ವಾಹನದಲ್ಲಿ 6 ಬಾಕ್ಸ್​​ನಲ್ಲಿದ್ದ 25 ಲಕ್ಷ ರೂ ಮೌಲ್ಯದ ಮೊಬೈಲ್ ಕಳ್ಳತನ ‌ಮಾಡಿದ್ದಾರೆ. ಲಿಂಕಿಟ್ ಡಿವೈಸ್ ಲಾಕ್ ಮುರಿದು ಮೊಬೈಲ್ ಕಳ್ಳತನ ಮಾಡಿದ್ದಾರೆ. ಮಲಿಕಜಾನ್ ಮುಲ್ಲಾ ಎಂಬಾತ ಲಾರಿ ಚಾಲನೆ ಮಾಡುತ್ತಿದ್ದು, ಲಾಕ್ ಮುರಿಯುತ್ತಿದ್ದಂತೆ ಮಾಲೀಕನಿಗೆ ಮೆಸೇಜ್ ಹೋಗಿದೆ. ಲಾರಿಯನ್ನ ಪಕ್ಕಕ್ಕೆ ನಿಲ್ಲಿಸಿ ನೋಡಿದಾಗ 25 ಲಕ್ಷ ರೂ ಮೌಲ್ಯದ 6 ಬಾಕ್ಸ್​​ನಲ್ಲಿದ್ದ ಮೊಬೈಲ್ ಕಳ್ಳತನವಾಗಿದೆ.

ಪ್ರಕರಣ ದಾಖಲು

ಶನಿವಾರ ಸಂಜೆ ಬೆಂಗಳೂರಿನಿಂದ ಲಾರಿ ಹೊರಟಿದ್ದು ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಕಳ್ಳತನ ನಡೆದಿದೆ ಎನ್ನಲಾಗಿದೆ. ಖದೀಮರು ಹಿಂದೆ ಹಾಕಿದ್ದ ಸೀಲ್ ಮತ್ತು ಡಿಜಿಟಲ್ ಲಾಕರ್ ಕೂಡ ಓಪನ್ ಮಾಡಿದ್ದಾರೆ. ಸದ್ಯ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಘಟನೆ ಹೇಗೆ ನಡೆದಿದೆ ಎನ್ನುವುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಎಸ್​​ಪಿ ಯಶೋದಾ ವಂಟಗೋಡಿ ಹೇಳಿದ್ದಾರೆ.

ಇದನ್ನೂ ಓದಿ: 400 ಕೋಟಿ ರೂ. ದರೋಡೆ ಪ್ರಕರಣ: ಹಣ ಸಾಗಿಸುತ್ತಿದ್ದ ಕಂಟೇನರ್ ಚಾಲಕರು ಕೊನೆಗೂ ಸಿಕ್ಕಿಬಿದ್ರಾ?

ಒಟ್ಟಿನಲ್ಲಿ ಹೆದ್ದಾರಿಯಲ್ಲಿ ಸಾವಿರಾರು ವಾಹನಗಳ ಓಡಾಟದ ಮಧ್ಯೆ ಗೂಡ್ಸ್ ವಾಹನದ ಲಾಕ್ ಮುರಿದು 24 ಲಕ್ಷ ರೂ ಮೌಲ್ಯದ ವಸ್ತುಗಳ ಕಳ್ಳತನ ಮಾಡುವ ಮೂಲಕ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಸದ್ಯ ಪೊಲೀಸರ ತನಿಖೆಯಿಂದ ಸತ್ಯಾಸತ್ಯತೆ ಹೊರಬರಬೇಕಿದೆ.

ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Mahashivaratri 2026: ಮಹಾಶಿವರಾತ್ರಿಯಂದು ಶಿವ ಪೂಜೆಯ ವೇಳೆ ಈ ವಸ್ತು ಬಳಸಲೇಬೇಡಿ – Kannada News | Mahashivaratri 2026: Puja Guide, Fasting Benefits and Offerings for Shiva Blessings

ಮಹಾಶಿವರಾತ್ರಿ ಹಬ್ಬವು ಹಿಂದೂ ಧರ್ಮದಲ್ಲಿ ಶಿವನ ಆರಾಧನೆಗೆ ಅತ್ಯಂತ ಪವಿತ್ರ ಮತ್ತು ಮಹತ್ವದ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಶಿವ ಮತ್ತು ಪಾರ್ವತಿ ದೇವಿಯರ ದಿವ್ಯ ವಿವಾಹ ನಡೆದದ್ದು ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದ್ದು, ಭಕ್ತರು ಉಪವಾಸ, ಜಾಗರಣೆ ಮತ್ತು ಶಿವಪೂಜೆ ಮಾಡುವ ಮೂಲಕ ದೇವರ ಕೃಪೆಯನ್ನು ಪಡೆಯುತ್ತಾರೆ. ನಿಜವಾದ ಭಕ್ತಿಯಿಂದ ಶಿವನನ್ನು ಆರಾಧಿಸಿದರೆ ಜೀವನದಲ್ಲಿನ ಕಷ್ಟಗಳು, ಅಡೆತಡೆಗಳು ಮತ್ತು ದುಃಖಗಳು ದೂರವಾಗಿ ಮನಸ್ಸಿಗೆ ಶಾಂತಿ, ಸಮೃದ್ಧಿ ಮತ್ತು ಯಶಸ್ಸು ದೊರೆಯುತ್ತದೆ ಎಂಬುದು ನಂಬಿಕೆ. ಪಂಚಾಂಗದ ಪ್ರಕಾರ ಈ ವರ್ಷ ಮಹಾಶಿವರಾತ್ರಿ ಫೆಬ್ರವರಿ 15 ರಂದು ಆಚರಿಸಲಾಗುತ್ತದೆ. ಈ ಶುಭ ದಿನದಲ್ಲಿ ಶಿವನಿಗೆ ಯಾವ ವಸ್ತುಗಳನ್ನು ಅರ್ಪಿಸಬೇಕು ಮತ್ತು ಯಾವುದು ತಪ್ಪಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.

ಶಿವನಿಗೆ ಸರಳತೆ ಅತ್ಯಂತ ಪ್ರಿಯ. ಆದ್ದರಿಂದ ಅಲಂಕಾರಕ್ಕಿಂತ ಭಕ್ತಿ ಮುಖ್ಯ. ಬಿಲ್ವಪತ್ರೆ ಶಿವನಿಗೆ ಅತ್ಯಂತ ಇಷ್ಟವೆಂದು ಪರಿಗಣಿಸಲಾಗುತ್ತದೆ; ಮೂರು ಎಲೆಗಳು ಒಂದೇ ಕಾಂಡದಲ್ಲಿ ಇರುವ ಬಿಲ್ವಪತ್ರೆ ಶುದ್ಧವಾಗಿ ಅರ್ಪಿಸಿದರೆ ವಿಶೇಷ ಫಲ ಸಿಗುತ್ತದೆ. ದತುರಾ ಮತ್ತು ಭಾಂಗ್ ನಕಾರಾತ್ಮಕತೆಯನ್ನು ದೂರ ಮಾಡುವ ಸಂಕೇತಗಳಾಗಿ ಶಿವನಿಗೆ ಅರ್ಪಿಸಲಾಗುತ್ತದೆ. ಶಿವಲಿಂಗಕ್ಕೆ ಹಸಿ ಹಾಲು, ಗಂಗಾಜಲ ಮತ್ತು ಜಲಾಭಿಷೇಕ ಮಾಡುವುದು ಶ್ರೇಷ್ಠ. ಬಿಳಿ ಶ್ರೀಗಂಧದ ತಿಲಕ ಹಚ್ಚುವುದು ಮನಸ್ಸಿಗೆ ಶಾಂತಿ ನೀಡುತ್ತದೆ. ಪೂಜೆಯಲ್ಲಿ ಅಕ್ಷತೆ ಬಳಸುವುದು ಶುಭಕರ.

ಆದರೆ ಕೆಲವು ವಸ್ತುಗಳನ್ನು ಶಿವಪೂಜೆಯಲ್ಲಿ ತಪ್ಪಿಸುವುದು ಉತ್ತಮ. ಕೇದಗೆ ಅಥವಾ ಕೇತಕಿ ಹೂವನ್ನು ಶಿವನು ನಿಷೇಧಿಸಿದ್ದಾನೆ ಎಂಬ ಪುರಾಣ ಕಥೆಯಿದೆ. ತುಳಸಿ ಎಲೆಗಳನ್ನು ಶಿವಪೂಜೆಯಲ್ಲಿ ಬಳಸುವುದಿಲ್ಲ. ಸಿಂಧೂರ ಅಥವಾ ಕುಂಕುಮವು ಗೃಹಸ್ಥ ಜೀವನದ ಸಂಕೇತವಾಗಿರುವುದರಿಂದ ತಪಸ್ವಿ ಸ್ವರೂಪದ ಶಿವನಿಗೆ ಅರ್ಪಿಸುವುದಿಲ್ಲ. ಶಂಖದಿಂದ ನೀರು ಅರ್ಪಿಸುವುದೂ ಶ್ರೇಯಸ್ಕರ ಅಲ್ಲ ಎಂಬ ನಂಬಿಕೆಯಿದೆ. ಪೂಜೆ ಮಾಡುವಾಗ ಮುರಿದ ಶಿವಲಿಂಗವನ್ನು ಆರಾಧಿಸಬಾರದು. ಅಭಿಷೇಕಕ್ಕೆ ನೀರನ್ನು ತಾಮ್ರದ ಪಾತ್ರೆಯಲ್ಲಿ ಮತ್ತು ಹಾಲನ್ನು ಬೆಳ್ಳಿ ಅಥವಾ ಉಕ್ಕಿನ ಪಾತ್ರೆಯಲ್ಲಿ ಬಳಸುವುದು ಉತ್ತಮ. ಶಿವಲಿಂಗದ ಸಂಪೂರ್ಣ ಪ್ರದಕ್ಷಿಣೆ ಮಾಡದೆ ಅರ್ಧ ಪ್ರದಕ್ಷಿಣೆ ಮಾಡುವ ಸಂಪ್ರದಾಯವೂ ಇದೆ.‘

ಇದನ್ನೂ ಓದಿ: ಈ ರಾಶಿಯವರು ತಪ್ಪಿಯೂ ಬೆಳ್ಳಿ ಧರಿಸಬೇಡಿ, ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು!

ಮಹಾಶಿವರಾತ್ರಿ ಉಪವಾಸವು ಕೇವಲ ಆಚರಣೆ ಮಾತ್ರವಲ್ಲ, ಆತ್ಮಶುದ್ಧಿ ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ಸಂಕೇತವಾಗಿದೆ. ಈ ದಿನ ಉಪವಾಸವಿಟ್ಟು ಜಪ, ಧ್ಯಾನ, ಭಜನೆ ಮತ್ತು ಶಿವನಾಮ ಸ್ಮರಣೆ ಮಾಡಿದರೆ ಮನಸ್ಸಿನ ಒತ್ತಡ ಕಡಿಮೆಯಾಗುತ್ತದೆ ಮತ್ತು ಆಂತರಿಕ ಶಕ್ತಿ ಹೆಚ್ಚುತ್ತದೆ. ಶಿವಲಿಂಗದ ಅಭಿಷೇಕ ಮತ್ತು ಪೂಜೆಯಿಂದ ಪಾಪಗಳು ನಿವಾರಣೆಯಾಗುತ್ತವೆ ಹಾಗೂ ಜೀವನದಲ್ಲಿ ಸುಖ-ಶಾಂತಿ ನೆಲೆಸುತ್ತದೆ ಎಂದು ಭಕ್ತರು ನಂಬುತ್ತಾರೆ. ಅವಿವಾಹಿತರಿಗೆ ಇಷ್ಟ ಸಂಗಾತಿ ದೊರೆಯಲಿ, ವಿವಾಹಿತರಿಗೆ ದಾಂಪತ್ಯ ಜೀವನ ಸುಖಮಯವಾಗಲಿ ಎಂಬ ಆಶಯದಿಂದ ಈ ದಿನ ವಿಶೇಷವಾಗಿ ಪ್ರಾರ್ಥನೆ ಮಾಡಲಾಗುತ್ತದೆ.

ಹೀಗೆ ಮಹಾಶಿವರಾತ್ರಿ ದಿನವನ್ನು ಭಕ್ತಿ, ಶ್ರದ್ಧೆ ಮತ್ತು ಶುದ್ಧ ಮನಸ್ಸಿನಿಂದ ಆಚರಿಸಿದರೆ ಶಿವನ ಕೃಪೆ ಸದಾ ನಮ್ಮೊಂದಿಗೆ ಇರುತ್ತದೆ. ಶಿವನ ಆಶೀರ್ವಾದದಿಂದ ಜೀವನದಲ್ಲಿ ಬೆಳಕು, ಆರೋಗ್ಯ ಮತ್ತು ಯಶಸ್ಸು ತುಂಬಿ ಹರಿಯಲಿ ಎಂಬುದು ಪ್ರತಿಯೊಬ್ಬ ಭಕ್ತನ ಪ್ರಾರ್ಥನೆ. “ಓಂ ನಮಃ ಶಿವಾಯ” ಎಂಬ ನಾಮಸ್ಮರಣೆ ಈ ದಿನದ ಮಹತ್ವವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಸ್ಲಿಮರಿಗೂ ಸೇಫ್ ಅಲ್ಲ ಪಾಕಿಸ್ತಾನ; ಮಸೀದಿಯಲ್ಲೂ ಬಾಂಬ್ ದಾಳಿ ನಡೆದಿದ್ದೇಕೆ? – Kannada News | Islamabad mosque blast why shia Muslims targeted in pakistan

ನವದೆಹಲಿ, ಫೆಬ್ರವರಿ 6: ಪಾಕಿಸ್ತಾನದ ಇಸ್ಲಮಾಬಾದ್​​​ನಲ್ಲಿ ಇಂದು ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 69 ಜನರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಟೈಮ್ಸ್ ಆಫ್ ಇಸ್ಲಾಮಾಬಾದ್ ವರದಿಯ ಪ್ರಕಾರ, ಆತ್ಮಾಹುತಿ ಬಾಂಬರ್ ಬರುವುದನ್ನು ನೋಡಿದ ಕಾವಲುಗಾರರು ಆತನನ್ನು ಮಸೀದಿಯ ಪ್ರವೇಶದ್ವಾರದಲ್ಲಿ ತಡೆದಿದ್ದರು. ಸ್ಫೋಟದ ಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಆ ಸ್ಥಳದ ಸುತ್ತಲೂ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳ ಈ ಸ್ಫೋಟದ ಸ್ವರೂಪವನ್ನು ತನಿಖೆ ಮಾಡುತ್ತಿದೆ. ಪಾಕಿಸ್ತಾನದಲ್ಲಿ (Pakistan)  ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮೇಲೆ ಪದೇಪದೆ ದಾಳಿ ನಡೆಯುತ್ತಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು, ಆದರೆ, ಇದೀಗ ಅಲ್ಲಿ ಮುಸ್ಲಿಮರ ಒಂದು ಪಂಗಡವಾದ ಶಿಯಾ ಸಮುದಾಯದವರಿಗೂ ರಕ್ಷಣೆ ಇಲ್ಲದಂತಾಗಿದೆ.

ಪಾಕಿಸ್ತಾನದಲ್ಲಿ ಧಾರ್ಮಿಕ ಹಿಂಸಾಚಾರವು ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಮಾತ್ರ ಸೀಮಿತವಾಗಿಲ್ಲ. ದೇಶದೊಳಗಿನ ಶಿಯಾ ಮುಸ್ಲಿಮರು ಸಹ ಆಗಾಗ ಭಯೋತ್ಪಾದಕ ದಾಳಿಗೆ ಗುರಿಯಾಗುತ್ತಿದ್ದಾರೆ. ಪಾಕಿಸ್ತಾನದಲ್ಲಿ ಶಿಯಾ ಮುಸ್ಲಿಮರ ಮಸೀದಿಗಳಲ್ಲಿ ಬಹಿರಂಗವಾಗಿ ಸ್ಫೋಟಗಳು ನಡೆಯುತ್ತಿರುವುದಕ್ಕೆ ಕಾರಣವೇನು? ಎಂಬ ಮಾಹಿತಿ ಇಲ್ಲಿದೆ.

ಇಂದು ಇಸ್ಲಾಮಾಬಾದ್‌ನಲ್ಲಿ ಪ್ರಾರ್ಥನೆಯ ಸಮಯದಲ್ಲಿ ಶಿಯಾ ಮಸೀದಿಯ (ಇಂಬಾರಾ) ಮೇಲೆ ಆತ್ಮಾಹುತಿ ಬಾಂಬರ್ ದಾಳಿ ನಡೆಸಿದ್ದಾನೆ. ಈ ಘಟನೆಯ ನಂತರ ಸರ್ಕಾರ ನಗರದಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿತು ಮತ್ತು ಭದ್ರತೆಯನ್ನು ಬಿಗಿಗೊಳಿಸಿತು. ಈ ಸ್ಫೋಟದ ಹೊಣೆಯನ್ನು ಯಾವುದೇ ಸಂಘಟನೆ ಇನ್ನೂ ಹೊತ್ತುಕೊಂಡಿಲ್ಲ. ಆದರೆ, ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಮತ್ತು ಇಸ್ಲಾಮಿಕ್ ಸ್ಟೇಟ್ (ಐಎಸ್)ನಂತಹ ಭಯೋತ್ಪಾದಕ ಗುಂಪುಗಳ ಮೇಲೆ ಅನುಮಾನ ಉಂಟಾಗಿದೆ. ಈ ಎರಡೂ ಸಂಘಟನೆಗಳು ಈ ಹಿಂದೆ ಸುನ್ನಿ ಬಹುಸಂಖ್ಯಾತರಾಗಿರುವ ಪಾಕಿಸ್ತಾನದಲ್ಲಿ ಶಿಯಾ ಮುಸ್ಲಿಮರನ್ನು ಗುರಿಯಾಗಿಸಿಕೊಂಡಿತ್ತು.

ಇದನ್ನೂ ಓದಿ: Pakistan Mosque Blast: ಪಾಕಿಸ್ತಾನದ ಮಸೀದಿಯಲ್ಲಿ ಬಾಂಬ್ ಸ್ಫೋಟ, 10ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಶಂಕೆ

ಪಾಕಿಸ್ತಾನದಲ್ಲಿ ಶಿಯಾ ಮುಸ್ಲಿಮರ ಮೇಲಿನ ದಾಳಿಗಳು ಹೊಸದೇನಲ್ಲ. ಈ ದೇಶದ ಒಟ್ಟು ಮುಸ್ಲಿಂ ಜನಸಂಖ್ಯೆಯಲ್ಲಿ ಶಿಯಾಗಳು ಶೇ. 10-15ರಷ್ಟಿದ್ದಾರೆ. ಇರಾನ್ ನಂತರ ಪಾಕಿಸ್ತಾನವು ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಶಿಯಾ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದೆ. ಇದರ ಹೊರತಾಗಿಯೂ, ಶಿಯಾ ಸಮುದಾಯವು ಬಹಳ ಹಿಂದಿನಿಂದಲೂ ಪಾಕಿಸ್ತಾನದಲ್ಲಿ ಪಂಥೀಯ ಹಿಂಸಾಚಾರಕ್ಕೆ ಬಲಿಯಾಗಿದೆ. ಪಾಕಿಸ್ತಾನದಲ್ಲಿರುವ ಕೆಲವು ಮೂಲಭೂತ ಸುನ್ನಿ ಭಯೋತ್ಪಾದಕ ಸಂಘಟನೆಗಳು ಶಿಯಾಗಳನ್ನು ನಾಸ್ತಿಕರು ಮತ್ತು ಇಸ್ಲಾಂನಿಂದ ಹೊರಗಿರುವವರು ಎಂದು ಪರಿಗಣಿಸುತ್ತವೆ. ಇದೇ ಶಿಯಾ ಮಸೀದಿಗಳು, ಇಮಾಂಬರ್ಗಾಗಳು, ಮೆರವಣಿಗೆಗಳು ಮತ್ತು ಧಾರ್ಮಿಕ ಸಭೆಗಳ ಮೇಲೆ ಆಗಾಗ ದಾಳಿ ನಡೆಯಲು ಕಾರಣವಾಗಿದೆ.

ಮೊಹರಂ ಸಮಯದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಶಿಯಾ ಸಮುದಾಯದ ಶೋಕಾಚರಣೆಯ ಸಮಯದಲ್ಲಿ ದ್ವೇಷ ಹರಡುವವರು ಇನ್ನಷ್ಟು ಸಕ್ರಿಯರಾಗುತ್ತಾರೆ. ಕರಾಚಿಯಂತಹ ನಗರಗಳಲ್ಲಿ ಮೊಹರಂ ವೇಳೆ ಗೋಡೆಗಳ ಮೇಲೆ “ಶಿಯಾಗಳು ನಾಸ್ತಿಕರು” ಎಂಬ ಘೋಷಣೆಗಳನ್ನು ಬರೆಯಲಾಗುತ್ತದೆ. ಈ ದ್ವೇಷಪೂರಿತ ಭಾವನೆ 1980ರ ದಶಕದಿಂದಲೂ ಪಾಕಿಸ್ತಾನದಲ್ಲಿ ಸಾಮಾನ್ಯವಾಗಿಬಿಟ್ಟಿದೆ.

ಇದನ್ನೂ ಓದಿ: ಪಾಕಿಸ್ತಾನದಿಂದ ವಲಸೆ ಬಂದ ದಲಿತ ಹಿಂದೂಗಳಿಗೆ ವಸತಿ ಕಲ್ಪಿಸಿ; ಸುಪ್ರೀಂ ಕೋರ್ಟ್ ಆದೇಶ

ಶಿಯಾ ಸಮುದಾಯದೊಳಗೆ ಹೆಚ್ಚು ದುರ್ಬಲರೆಂದರೆ ಹಜಾರ ಶಿಯಾಗಳು. ಅವರು ಬಲೂಚಿಸ್ತಾನದ ರಾಜಧಾನಿ ಕ್ವೆಟ್ಟಾದಲ್ಲಿ ವಾಸಿಸುತ್ತಾರೆ. ಅವರನ್ನು ಅವರ ಮುಖಭಾವ ಮತ್ತು ಭಾಷೆಯಿಂದ ಸುಲಭವಾಗಿ ಗುರುತಿಸಬಹುದು. ಇದು ಭಯೋತ್ಪಾದಕರಿಗೆ ಬಹಳ ಅನುಕೂಲವಾಗುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಕ್ವೆಟ್ಟಾದಲ್ಲಿ ಹಜಾರ ಶಿಯಾಗಳ ಮೇಲೆ ಹಲವಾರು ಪ್ರಮುಖ ದಾಳಿಗಳು ನಡೆದಿವೆ.

ಇನ್ನೂ ವಿಶೇಷವಾದ ಸಂಗತಿಯೆಂದರೆ, ಪಾಕಿಸ್ತಾನದ ಸ್ಥಾಪಕ ಮುಹಮ್ಮದ್ ಅಲಿ ಜಿನ್ನಾ ಕೂಡ ಶಿಯಾ ಮುಸ್ಲಿಂ ಆಗಿದ್ದರು. ಪಾಕಿಸ್ತಾನದ ಸ್ಥಾಪಕನ ಜಾತಿಯವರನ್ನೇ ಈಗ ನಾಸ್ತಿಕರು, ದೇಶಭ್ರಷ್ಟರೆಂಬಂತೆ ನೋಡುತ್ತಿರುವುದು ಅತ್ಯಂತ ದೊಡ್ಡ ವಿಪರ್ಯಾಸ. ಪಾಕಿಸ್ತಾನದಲ್ಲಿ ಇಂದು ಮುಸ್ಲಿಮೇತರರು ಮಾತ್ರವಲ್ಲದೆ ಶಿಯಾಗಳಂತಹ ಮುಸ್ಲಿಂ ಪಂಗಡಗಳು ಸಹ ಅಸುರಕ್ಷಿತ ಭಾವನೆಯನ್ನು ಅನುಭವಿಸುತ್ತಿವೆ.

2025ರ ಜಾಗತಿಕ ಭಯೋತ್ಪಾದನಾ ಸೂಚ್ಯಂಕದ ಪ್ರಕಾರ, ಪಾಕಿಸ್ತಾನವು ಈಗ ವಿಶ್ವದ ಎರಡನೇ ಅತಿ ಹೆಚ್ಚು ಭಯೋತ್ಪಾದನಾ ಪೀಡಿತ ರಾಷ್ಟ್ರವಾಗಿದೆ. ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ದಾಳಿಗಳು ಶೇ. 90ರಷ್ಟು ಹೆಚ್ಚಾಗಿದೆ. ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್ಎ) ದಾಳಿಗಳು ಶೇ. 60ರಷ್ಟು ಹೆಚ್ಚಾಗಿದೆ. ಕೆಲವು ದಿನಗಳ ಹಿಂದೆ ಬಲೂಚ್ ಲಿಬರೇಶನ್ ಆರ್ಮಿ (BLA) ಬಲೂಚಿಸ್ತಾನದಲ್ಲಿ ದೊಡ್ಡ ಪ್ರಮಾಣದ, ಸಂಘಟಿತ ದಾಳಿಗಳನ್ನು ನಡೆಸಿತ್ತು. ಅದರ ಬೆನ್ನಲ್ಲೇ ಇಂದು ಈ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 8:16 pm, Fri, 6 February 26

Source link

Exit mobile version