ಹೋಟೆಲ್‌ ಗ್ರಾಹಕರಿಗೆ ಮತ್ತೊಂದು ಶಾಕ್: ಇನ್ಮುಂದೆ ಊಟ-ತಿಂಡಿಗೆ ಹೆಚ್ಚು ಹೊತ್ತು ಕಾದು ಕುಳಿತುಕೊಳ್ಳುವುದು ಅನಿವಾರ್ಯ!

ಹೋಟೆಲ್‌ ಗ್ರಾಹಕರಿಗೆ ಮತ್ತೊಂದು ಶಾಕ್: ಇನ್ಮುಂದೆ ಊಟ-ತಿಂಡಿಗೆ ಹೆಚ್ಚು ಹೊತ್ತು ಕಾದು ಕುಳಿತುಕೊಳ್ಳುವುದು ಅನಿವಾರ್ಯ!

ಬೆಂಗಳೂರು, ಏಪ್ರಿಲ್ 13: ಹೋಟೆಲ್‌ಗೆ (Hotels) ಹೋದ ತಕ್ಷಣ ಬಿಸಿ ಬಿಸಿ ತಿಂಡಿ ಅಥವಾ ಊಟ ಸಿಗುತ್ತದೆ ಎಂಬ ಕಾಲ ಈಗ ಬದಲಾಗುತ್ತಿದೆ! ಇರಾನ್, ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮದಿಂದಾಗಿ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಅಭಾವ ಎದುರಾಗಿದ್ದು, ಬೆಂಗಳೂರಿನ (Bengaluru) ಹೋಟೆಲ್‌ಗಳಲ್ಲಿ ಸರ್ವೀಸ್ ಸಮಯವನ್ನು ಹೆಚ್ಚಿಸಲಾಗಿದೆ. ಇನ್ಮುಂದೆ ನೀವು ಆರ್ಡರ್ ಮಾಡಿದ ತಿಂಡಿ ನಿಮ್ಮ ಕೈ ಸೇರಲು ಕನಿಷ್ಠ 15 ರಿಂದ 20 ನಿಮಿಷ ಕಾಯುವುದು ಅನಿವಾರ್ಯವಾಗಲಿದೆ.

ಸಿಲಿಂಡರ್ ಅಭಾವಕ್ಕೆ ಸೌದೆ ಒಲೆ ಪರ್ಯಾಯ

ಕೆಲ ದಿನಗಳ ಹಿಂದಷ್ಟೇ ಸಿಲಿಂಡರ್ ಬೆಲೆ ಏರಿಕೆಯಿಂದ ಹೋಟೆಲ್ ಊಟದ ದರ ಹೆಚ್ಚಳ ಮಾಡಲಾಗಿತ್ತು. ಈಗ ಬೆಲೆ ಹೆಚ್ಚಳದ ಜೊತೆಗೆ ಸಿಲಿಂಡರ್‌ಗಳ ಲಭ್ಯತೆಯೇ ಇಲ್ಲದಂತಾಗಿದೆ. ಈ ಅಭಾವವನ್ನು ನೀಗಿಸಲು ಹೋಟೆಲ್ ಮಾಲೀಕರು ಸೌದೆ ಒಲೆ ಹಾಗೂ ಎಲೆಕ್ಟ್ರಿಕ್ ಸ್ಟೌವ್‌ಗಳ ಮೊರೆ ಹೋಗುತ್ತಿದ್ದಾರೆ. ಎಲ್‌ಪಿಜಿ ಒಲೆಗಳಿಗೆ ಹೋಲಿಸಿದರೆ ಸೌದೆ ಅಥವಾ ಎಲೆಕ್ಟ್ರಿಕ್ ಸ್ಟೌವ್‌ಗಳಲ್ಲಿ ಅಡುಗೆ ತಯಾರಿಸಲು ಹೆಚ್ಚಿನ ಸಮಯ ತಗಲುತ್ತದೆ. ಇದೇ ಕಾರಣಕ್ಕೆ ಗ್ರಾಹಕರಿಗೆ ತಕ್ಷಣಕ್ಕೆ ಊಟ-ತಿಂಡಿ ನೀಡಲು ಹೋಟೆಲ್‌ಗಳು ಹೈರಾಣಾಗುತ್ತಿವೆ.

ಗ್ರಾಹಕರಿಗೆ ತಪ್ಪದ ಸಂಕಷ್ಟ

ತುರ್ತಾಗಿ ಕೆಲಸಕ್ಕೆ ಹೋಗುವವರು ಅಥವಾ ಹಸಿವಿನಿಂದ ಹೋಟೆಲ್‌ಗೆ ಬರುವವರು ಈಗ ಅನಿವಾರ್ಯವಾಗಿ ವೈಟಿಂಗ್ ರೂಮ್‌ನಲ್ಲಿ ಕಾಯಬೇಕಿದೆ. ಗಲ್ಫ್ ರಾಷ್ಟ್ರಗಳ ಯುದ್ಧ ತಂದೊಡ್ಡಿರುವ ಈ ಅನಿಶ್ಚಿತತೆ ಹೋಟೆಲ್ ಉದ್ಯಮವನ್ನೇ ಅಸ್ತವ್ಯಸ್ತಗೊಳಿಸಿದೆ. ‘ಹೆಚ್ಚು ಹಣ ಕೊಟ್ಟರೂ ಊಟಕ್ಕಾಗಿ ಕಾಯಬೇಕಾದ ಪರಿಸ್ಥಿತಿ ಬಂದಿದೆ’ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ, ಯುದ್ಧದ ಪರಿಣಾಮ ಸಾಮಾನ್ಯ ಜನರ ತಟ್ಟೆಯವರೆಗೂ ತಲುಪಿದೆ.

ಇದನ್ನೂ ಓದಿ: Karnataka LPG Crisis: ಬೆಂಗಳೂರಿನಲ್ಲಿ ಆಟೋ ಗ್ಯಾಸ್​ಗಾಗಿ ಕಿ.ಮೀ ದೂರ ಫುಲ್ ಕ್ಯೂ!

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Daily Devotional: ಊಟದ ಬಳಿಕ ನೀವೇ ತಟ್ಟೆ ತೆಗೆಯುವುದರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ?

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಊಟದ ಬಳಿಕ ತಟ್ಟೆ ತೆಗೆಯುವುದರಹಿಂದೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂದು ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಊಟದ ನಂತರ ಸ್ವತಃ ತಮ್ಮ ತಟ್ಟೆಯನ್ನು ತೆಗೆಯುವುದು ಹಿಂದಿನಿಂದಲೂ ರೂಢಿಯಲ್ಲಿರುವ ಒಂದು ಪದ್ಧತಿಯಾಗಿದೆ. ಅನೇಕ ಗುರುಕುಲಗಳು, ಮಠಗಳು ಮತ್ತು ಆಶ್ರಮಗಳಲ್ಲಿ ಈ ಸಂಪ್ರದಾಯವನ್ನು ಪಾಲಿಸಲಾಗುತ್ತದೆ. ಇದನ್ನು ಕೇವಲ ಒಂದು ಆಚಾರವೆಂದು ಪರಿಗಣಿಸದೆ, ಅದರ ಹಿಂದೆ ಆಳವಾದ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಮಹತ್ವವಿದೆ.

ಈ ಅಭ್ಯಾಸವು ಮನುಷ್ಯರಲ್ಲಿ ವಿನಯ, ವಿಧೇಯತೆ, ಭಕ್ತಿ ಮತ್ತು ಕೃತಜ್ಞತಾ ಭಾವವನ್ನು ಬೆಳೆಸುತ್ತದೆ. ಆಹಾರವನ್ನು ಅನ್ನಯಜ್ಞ ಎಂದು ಪರಿಗಣಿಸಿ, ಅದನ್ನು ತಯಾರಿಸಿದವರಿಗೆ ಮತ್ತು ಪ್ರಕೃತಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಹೀಗೆ ಮಾಡಿದರೆ ಎಂದಿಗೂ ಆಹಾರದ ಕೊರತೆ ಎದುರಾಗುವುದಿಲ್ಲ ಎಂಬ ನಂಬಿಕೆಯಿದೆ. ತಟ್ಟೆಯನ್ನು ಸ್ವಚ್ಛಗೊಳಿಸಿಡುವುದರಿಂದ ಅಲಕ್ಷ್ಮಿ ದೂರವಾಗಿ ಆರ್ಥಿಕ ಸಮೃದ್ಧಿ ಮತ್ತು ಮನೆಯಲ್ಲಿ ಅನ್ಯೋನ್ಯತೆ ಹೆಚ್ಚುತ್ತದೆ. ಇದು ಶಿಸ್ತು, ನಮ್ರತೆ ಮತ್ತು ಸಹನೆಯ ಬೀಜಗಳನ್ನು ಮೊಳಕೆಯೊಡೆಯಿಸುತ್ತದೆ ಎಂದು ಗುರೂಜಿ ಹೇಳಿದ್ದಾರೆ.

 

 

 

Source link

ಒಂದು ಫೋನ್ ಕಾಲ್, ಶಾಂತಿ ಮಾತುಕತೆ ಫೇಲ್: ಪಾಕ್ ಸಂಧಾನದ ನಡುವೆ ನೆತನ್ಯಾಹು ಕರೆ, ಅಮೆರಿಕ-ಇರಾನ್ ಒಪ್ಪಂದಕ್ಕೆ ಬಿತ್ತು ಬ್ರೇಕ್

ಟೆಹ್ರಾನ್, ಏಪ್ರಿಲ್ 13: ಇಸ್ಲಾಮಾಬಾದ್‌ನ ಐಷಾರಾಮಿ ಹೋಟೆಲ್‌ನಲ್ಲಿ  21 ಗಂಟೆಗಳ ಕಾಲ ನಡೆದ ಅಮೆರಿಕ ಮತ್ತು ಇರಾನ್(Iran) ನಡುವಿನ ಹೈ-ವೋಲ್ಟೇಜ್ ಸಂಧಾನವು ಅಂತಿಮ ಹಂತಕ್ಕೆ ತಲುಪಿತ್ತು. ಜಗತ್ತೇ ಉಸಿರು ಬಿಗಿಹಿಡಿದು ಶಾಂತಿಯ ನಿರೀಕ್ಷೆಯಲ್ಲಿದ್ದಾಗ, ಬಂದ ಆ ಒಂದು ‘ಫೋನ್ ಕಾಲ್’ ಇಡೀ ಚಿತ್ರಣವನ್ನೇ ಬದಲಿಸಿತು. ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುತ್ತಿದ್ದ ಅಮೆರಿಕ-ಇರಾನ್ ನಡುವಿನ ಐತಿಹಾಸಿಕ ಶಾಂತಿ ಮಾತುಕತೆಗಳು ಹಳಿ ತಪ್ಪಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ದೂರವಾಣಿ ಕರೆಯೇ ಕಾರಣ ಎಂದು ಇರಾನ್ ಗಂಭೀರ ಆರೋಪ ಮಾಡಿದೆ.

ಸಂಧಾನದ ಮೇಜಿನ ಮೇಲೆ ಪ್ರಗತಿ ಕಾಣುತ್ತಿದ್ದಾಗಲೇ ನೆತನ್ಯಾಹು ಅವರು ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರಿಗೆ ಕರೆ ಮಾಡಿದ್ದು, ಅಲ್ಲಿಂದಲೇ ಎಲ್ಲವೂ ಉಲ್ಟಾ ಆಯಿತು ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ದೂರಿದ್ದಾರೆ.
ಇರಾನ್ ವಿದೇಶಾಂಗ ಸಚಿವರ ಪ್ರಕಾರ, ಮಾತುಕತೆಯ ನಡುವೆಯೇ ನೆತನ್ಯಾಹು ಅವರು ವ್ಯಾನ್ಸ್ ಅವರ ಗಮನವನ್ನು ಇಸ್ರೇಲ್‌ನ ಹಿತಾಸಕ್ತಿಗಳತ್ತ ತಿರುಗಿಸಿದರು.

ಯುದ್ಧದ ಮೂಲಕ ಇಸ್ರೇಲ್ ಮತ್ತು ಅಮೆರಿಕ ಏನನ್ನು ಸಾಧಿಸಲು ಸಾಧ್ಯವಾಗಲಿಲ್ಲವೋ, ಅದನ್ನು ಸಂಧಾನದ ಮೇಜಿನ ಮೇಲೆ ಇರಾನ್‌ನಿಂದ ಕಸಿದುಕೊಳ್ಳಲು ಅಮೆರಿಕ ಪ್ರಯತ್ನಿಸಿತು, ಎಂದು ಅರಘ್ಚಿ ಆಕ್ರೋಶ ಹೊರಹಾಕಿದ್ದಾರೆ. ಈ ಕರೆಯ ನಂತರ ಅಮೆರಿಕದ ನಿಲುವು ಅತ್ಯಂತ ಕಠಿಣವಾಯಿತು ಎಂದು ಅವರು ಆರೋಪಿಸಿದ್ದಾರೆ.

ಮತ್ತಷ್ಟು ಓದಿ: ಇರಾನ್-ಅಮೆರಿಕ ಸಂಧಾನಕ್ಕೆ ‘ಪರಮಾಣು’ ತಡೆ: ಇಸ್ಲಾಮಾಬಾದ್ ಮ್ಯಾರಥಾನ್ ಮಾತುಕತೆ ಹಳಿ ತಪ್ಪಿದ್ದೇಕೆ?

ಇರಾನ್‌ನ ಯುರೇನಿಯಂ ಪುಷ್ಟೀಕರಣ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಕಿತ್ತುಹಾಕುವುದು.ಇರಾನ್ ಬಳಿ ಇರುವ ಯುರೇನಿಯಂ ದಾಸ್ತಾನನ್ನು ಬೇರೆಡೆಗೆ ವರ್ಗಾಯಿಸುವುದು. ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ಹಡಗುಗಳಿಗೆ ಜಲಸಂಧಿಯ ಮೂಲಕ ಮುಕ್ತ ಸಂಚಾರಕ್ಕೆ ಅವಕಾಶ ನೀಡುವುದು.

ವ್ಯಾನ್ಸ್ ಅವರು ಇವುಗಳನ್ನು ವಾಷಿಂಗ್ಟನ್‌ನ ಅಂತಿಮ ಮತ್ತು ಅತ್ಯುತ್ತಮ ಆಫರ್ ಎಂದು ಹೇಳಿದಾಗ, ಇರಾನ್ ಅದನ್ನು ತನ್ನ ಸಾರ್ವಭೌಮತ್ವದ ಮೇಲಿನ ದಾಳಿ ಎಂದು ಕರೆದು ತಿರಸ್ಕರಿಸಿತು. ಏಪ್ರಿಲ್ 9ರಂದು ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ 119 ಡಾಲರ್ ಇದ್ದ ತೈಲ ಬೆಲೆ 95 ಡಾಲರ್​ಗೆ ಇಳಿದಿತ್ತು. ಈಗ ಮಾತುಕತೆ ಮುರಿದುಬಿದ್ದಿರುವುದರಿಂದ ತೈಲ ಬೆಲೆ ಮತ್ತೆ 100 ಡಾಲರ್ ಗಡಿ ದಾಟುವ ನಿರೀಕ್ಷೆ ಇದೆ. ಈ ಬಿಕ್ಕಟ್ಟು ಅಮೆರಿಕದ ಮೈತ್ರಿಕೂಟದೊಳಗಿನ ಭಿನ್ನಾಭಿಪ್ರಾಯಗಳನ್ನು ಬಯಲು ಮಾಡಿದೆ.

ಸ್ಪೇನ್ ಮತ್ತು ಇಟಲಿಯಂತಹ ದೇಶಗಳು ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಗೆ ತಮ್ಮ ವಾಯುಪ್ರದೇಶ ನೀಡಲು ನಿರಾಕರಿಸಿವೆ. ಎರಡು ವಾರಗಳ ಕಾಲ ಘೋಷಿಸಲಾಗಿದ್ದ ಕದನ ವಿರಾಮ ಮುಕ್ತಾಯಗೊಳ್ಳಲು ಇನ್ನು ಕೇವಲ 9 ದಿನಗಳು ಮಾತ್ರ ಉಳಿದಿವೆ. ಈ ಸಮಯದಲ್ಲಿ ಹೊಸ ಒಪ್ಪಂದವಾಗದಿದ್ದರೆ, ಹಾರ್ಮುಜ್ ಜಲಸಂಧಿಯಲ್ಲಿ ಮತ್ತೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಘರ್ಜನೆ ಆರಂಭವಾಗಬಹುದು.

ಒಂದು ಫೋನ್ ಕರೆಯಿಂದ ಇಡೀ ವಿಶ್ವದ ಶಾಂತಿ ಪ್ರಕ್ರಿಯೆ ಹಳಿ ತಪ್ಪಿದೆಯೇ? ನೆತನ್ಯಾಹು ಅವರ ಹಸ್ತಕ್ಷೇಪವು ಇರಾನ್-ಅಮೆರಿಕ ಯುದ್ಧಕ್ಕೆ ಮುನ್ನುಡಿ ಬರೆದಿದೆಯೇ? ಎಂಬ ಪ್ರಶ್ನೆಗಳಿಗೆ ಮುಂಬರುವ ದಿನಗಳಲ್ಲಿ ಉತ್ತರ ಸಿಗಲಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

 

Source link

ಅಭಿಮಾನಿ ಎಸೆದ ಹೂವಿನ ಮಾಲೆಯನ್ನು ಬಾಂಬ್ ಎಂದು ತಿಳಿದು ಓಡಿದ ದಳಪತಿ ವಿಜಯ್

ದಳಪತಿ ವಿಜಯ್ (Thalapathy Vijay) ಅವರು ಟಿವಿಕೆ ಪಕ್ಷ ಸ್ಥಾಪಿಸಿ ತಮಿಳುನಾಡು ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ. ಅವರು ನಿರಂತರವಾಗಿ ಪ್ರಚಾರ ಕಾರ್ಯದಲ್ಲಿ ಭಾಗಿ ಆಗುತ್ತಿದ್ದಾರೆ. ರಾಜಕಾರಣಿ ಎಂದಾಗ ವಿವಿಧ ರೀತಿಯ ಪ್ರಯೋಗಗಳನ್ನು ಮಾಡಬೇಕಾಗುತ್ತದೆ. ಅದೇ ರೀತಿ ದಳಪತಿ ವಿಜಯ್ ಅವರು ಸೈಕಲ್ ರೈಡ್ ಮಾಡಿದ್ದಾರೆ. ಈ ವೇಳೆ ಅಭಿಮಾನಿ ಎಸೆದ ಹೂವಿನ ಮಾಲೆಯನ್ನು ಬಾಂಬ್ ಎಂದು ಭಾವಿಸಿ ದಳಪತಿ ವಿಜಯ್ ಅವರು ಸ್ಥಳದಿಂದ ಓಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.

ದಳಪತಿ ವಿಜಯ್ ಅವರು ಕನ್ಯಾಕುಮಾರಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿ ಆಗಿದ್ದಾರೆ. ಈ ವೇಳೆ ಅವರು ಹೈವೇಲಿ ಸೈಕಲ್ ರೈಡ್ ಮಾಡಿದರು. ಸಾಕಷ್ಟು ಅಭಿಮಾನಿಗಳು ಅವರ ಕಡೆಗೆ ನುಗ್ಗುವ ಪ್ರಯತ್ನ ಮಾಡುತ್ತಿದ್ದರು. ಇವರೆಲ್ಲರಿಂದ ತಪ್ಪಿಸಿಕೊಂಡು ವಿಜಯ್ ಅವರು ಸೈಕಲ್ ರೈಡ್ ಮಾಡುತ್ತಾ ತೆರಳುತ್ತಿದ್ದರು. ಆ ಸಂದರ್ಭದಲ್ಲಿ ಸಂಭವಿಸಿತು ನೋಡಿ ಒಂದು ಘಟನೆ.

ಇದನ್ನೂ ಓದಿ: ‘ಜನ ನಾಯಗನ್’ ಲೀಕ್ ವಿಷಯ; ಸುತ್ತಿ ಬಳಸಿ ವಿಜಯ್ ಮೇಲೆ ಬಂತು ಆರೋಪ

ವಿಜಯ್ ಅವರು ಸೈಕಲ್ ರೈಡ್ ಮಾಡುವಾಗ ಅಲ್ಲಿ ಅಭಿಮಾನಿಯೋರ್ವ ಹೂವಿನ ಮಾಲೆಯನ್ನು ತೆಗೆದುಕೊಂಡುಬಂದು ಎಸೆಯುವ ಪ್ರಯತ್ನ ಮಾಡಿದ್ದಾನೆ. ಇದನ್ನು ನೋಡಿ ದಳಪತಿ ವಿಜಯ್ ಗಾಬರಿಗೊಂಡಿದ್ದಾರೆ. ಅದು ಬಾಂಬ್ ಎಂದು ಭಾವಿಸಿ ಸೈಕಲ್ ಬಿಟ್ಟು ಓಡಿ ನೇರವಾಗಿ ಕಾರನ್ನು ಏರಿದ್ದಾರೆ. ‘ವಿಜಯ್ ಅವರು ಬಾಂಬ್ ಎಂದು ಭಾವಿಸಿ ಈ ರೀತಿ ಮಾಡಿರಬಹುದು’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ವಿಜಯ್ ಪರ ಬ್ಯಾಟ್ ಬೀಸಿದ್ದಾರೆ. ‘ಅಲ್ಲಿ ಸಾಕಷ್ಟು ಜನರು ಮುತ್ತಿಕೊಳ್ಳುವ ಸೂಚನೆ ಸಿಕ್ಕಿದ್ದರಿಂದ ಈ ರೀತಿ ಮಾಡಿರಬಹುದು’ ಎಂದು ಕೆಲವರು ಹೇಳಿದ್ದಾರೆ.

ವಿಜಯ್ ಅವರ ಕೊನೆಯ ಸಿನಿಮಾ ‘ಜನ ನಾಯಗನ್’ ಚಿತ್ರಕ್ಕೆ ತೊಂದರೆ ಉಂಟಾಗಿದೆ. ಸಿನಿಮಾ ರಿಲೀಸ್​​ಗೆ ವಿವಿಧ ರೀತಿಯ ಅಡಚಣೆಗಳು ಎದುರಾಗುತ್ತಿವೆ. ಈ ಮಧ್ಯೆ ಸಿನಿಮಾ ಲೀಕ್ ಆಗಿರುವುದು ತಂಡದವರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಚುನಾವಣೆ ಬಳಿಕ ಸಿನಿಮಾ ತೆರೆಗೆ ಬರಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕ ಹವಾಮಾನ ಮುನ್ಸೂಚನೆ: ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಸಂಭವ, ಕರಾವಳಿಯಲ್ಲಿ ಹೆಚ್ಚಲಿದೆ ಬಿಸಿಲ ಧಗೆ

ಬೆಂಗಳೂರು, ಏಪ್ರಿಲ್ 13: ಕರ್ನಾಟಕದಾದ್ಯಂತ (Bangalore Weather) ಬಿಸಿಲ ಧಗೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನರನ್ನು ಕಂಗಾಲಾಗಿಸಿದೆ. ಈ ಮಧ್ಯೆ ತುಸು ತಂಪೆರೆಯುವಂಥ ಸುದ್ದಿಯನ್ನು ಹವಾಮಾನ ಇಲಾಖೆ (IMD) ನೀಡಿದೆ. ಹವಾಮಾನ ಇಲಾಖೆಯ ಇತ್ತೀಚಿನ ಮುನ್ಸೂಚನೆ ಪ್ರಕಾರ, ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಇಂದು ಮತ್ತು ನಾಳೆ (ಏಪ್ರಿಲ್ 13 ಮತ್ತು 14) ರಾಜ್ಯದ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

ಎಲ್ಲೆಲ್ಲಿ ಮಳೆ ಸಾಧ್ಯತೆ?

ಐಎಂಡಿ ವರದಿಯ ಪ್ರಕಾರ, ಏಪ್ರಿಲ್ 13 ಮತ್ತು 14 ರಂದು ಬೆಳಗಾವಿ, ಧಾರವಾಡ ಮತ್ತು ಗದಗ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮಳೆಯ ಸಮಯದಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಂಭವವಿದೆ. ಇದಲ್ಲದೆ ದಕ್ಷಿಣ ಒಳನಾಡಿನ ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿಯೂ ಅಲ್ಲಲ್ಲಿ ತುಂತುರು ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ.

ಬೆಂಗಳೂರಿನಲ್ಲಿ ಎಷ್ಟಿರಲಿದೆ ತಾಪಮಾನ? ಮಳೆ ಬರುತ್ತಾ?

ಬೆಂಗಳೂರಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಗರಿಷ್ಠ ತಾಪಮಾನ 36-37 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರಲಿದೆ. ಏಪ್ರಿಲ್ 13ರ ಸಂಜೆ ಅಥವಾ ರಾತ್ರಿಯ ವೇಳೆ ಬೆಂಗಳೂರು ನಗರದ ಕೆಲವು ಭಾಗಗಳಲ್ಲಿ ಹಗುರ ಮಳೆಯಾಗುವ 30% ಸಾಧ್ಯತೆಯಿದೆ ಎಂದು ಗೂಗಲ್ ವೆದರ್ ಮುನ್ಸೂಚನೆ ನೀಡಿದೆ.

ಇನ್ನಷ್ಟು ಏರಿಕೆಯಾಗಲಿದೆ ತಾಪಮಾನ

ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಉಷ್ಣಾಂಶ ಹೆಚ್ಚಳವಾಗಲಿದ್ದು, ಸೆಖೆಯ ವಾತಾವರಣ ಮುಂದುವರಿಯಲಿದೆ. ರಾಜ್ಯದ ಉತ್ತರ ಒಳನಾಡಿನ ಬಾಗಲಕೋಟೆ, ಕಲಬುರಗಿ, ಕೊಪ್ಪಳ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ 2 ರಿಂದ 4 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗುವ ಸಾಧ್ಯತೆಯಿದ್ದು, ಶಾಖದ ಅಲೆ (Heatwave) ಮುನ್ಸೂಚನೆ ನೀಡಲಾಗಿದೆ. ಈ ಅವಧಿಯಲ್ಲಿ ಜನರು ಸನ್ ಸ್ಟ್ರೋಕ್‌ನಿಂದ ರಕ್ಷಿಸಿಕೊಳ್ಳಲು ಮಧ್ಯಾಹ್ನದ ವೇಳೆ ಮನೆಯಿಂದ ಹೊರಬರದಂತೆ ಮತ್ತು ಆಗಾಗ್ಗೆ ನೀರು ಕುಡಿದು ದೇಹವನ್ನು ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳಲು ಆರೋಗ್ಯ ಇಲಾಖೆ ಸಲಹೆ ನೀಡಿದೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಕರಾವಳಿ ಭಾಗಗಳಲ್ಲಿ ಉಷ್ಣ ಅಲೆ; ಶಿವಮೊಗ್ಗ ಸೇರಿದಂತೆ ಹಲವೆಡೆ ಮಳೆಯಾಗುವ ಮುನ್ಸೂಚನೆ

ಏತನ್ಮಧ್ಯೆ, ಉತ್ತರ ಕರ್ನಾಟಕದ ಹಲವೆಡೆ ಗುಡುಗು ಸಹಿತ ಮಳೆಯ ಮುನ್ಸೂಚನೆ ಇರುವುದರಿಂದ, ರೈತರು ಕಟಾವು ಮಾಡಿದ ಬೆಳೆಗಳನ್ನು ಸುರಕ್ಷಿತವಾಗಿರಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಂಗ್ರೆಸ್‌ನಲ್ಲಿ ದಾವಣಗೆರೆ ಉಪಕದನ ಕಿಚ್ಚು: ಅಬ್ದುಲ್ ಜಬ್ಬಾರ್ ಬೆನ್ನಲ್ಲೇ ಆಪ್ತರಿಂದಲೂ ಸಾಮೂಹಿಕ ರಾಜೀನಾಮೆ!

ದಾವಣಗೆರೆ/ಬೆಂಗಳೂರು, ಏಪ್ರಿಲ್ 13: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ (Davanagere By Election) ಟಿಕೆಟ್ ಹಂಚಿಕೆ ವಿಚಾರ ಈಗ ಕಾಂಗ್ರೆಸ್ (Congress) ಮನೆಯಲ್ಲಿ ಬೆಂಕಿ ಹೊತ್ತಿಸಿದೆ. ಅಲ್ಪಸಂಖ್ಯಾತ ನಾಯಕರ ನಡುವಿನ ಗುದ್ದಾಟ ಬೀದಿಗೆ ಬಂದಿದ್ದು, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ನೀಡಿದ್ದ ರಾಜೀನಾಮೆಯನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಂಗೀಕರಿಸಿದ್ದಾರೆ. ಇದರ ಬೆನ್ನಲ್ಲೇ ಘಟಕದ 10ಕ್ಕೂ ಹೆಚ್ಚು ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ಪ್ರತಿಭಟಿಸಿದ್ದಾರೆ.

ರಾಜೀನಾಮೆ ಪರ್ವ ಮತ್ತು ಆಕ್ರೋಶ

ಅಬ್ದುಲ್ ಜಬ್ಬಾರ್ ರಾಜೀನಾಮೆ ಅಂಗೀಕಾರವಾಗುತ್ತಿದ್ದಂತೆಯೇ ಅವರ ಬೆಂಬಲಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಸಮಸ್ಯೆಯನ್ನು ಈ ಹಂತಕ್ಕೆ ತಲುಪಲು ಬಿಟ್ಟಿದ್ದೇಕೆ?’ ಎಂದು ಹೈಕಮಾಂಡ್ ವಿರುದ್ಧ ಕಿಡಿಕಾರಿದ್ದಾರೆ. ಮತ್ತೊಂದೆಡೆ, ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಡಿಕೆ ಶಿವಕುಮಾರ್ ಅವರು ಸಂಪೂರ್ಣ ಕೆಪಿಸಿಸಿ ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜನೆ ಮಾಡಿದ್ದು, ಶೀಘ್ರದಲ್ಲೇ ಹೊಸ ಘಟಕ ರಚನೆಯಾಗಲಿದೆ ಎಂದು ತಿಳಿಸಿದ್ದಾರೆ.

ಶಾಸಕ ರಿಜ್ವಾನ್ ಅರ್ಷದ್ ಸ್ಫೋಟಕ ಹೇಳಿಕೆ

ಸಚಿವ ಜಮೀರ್ ಅಹ್ಮದ್ ಹೆಸರು ಹೇಳದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಶಾಸಕ ರಿಜ್ವಾನ್ ಅರ್ಷದ್, ‘ಸಿಎಂ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಒಬ್ಬ ಹಿರಿಯ ನಾಯಕರು, ಟಿಕೆಟ್ ಕೊಟ್ಟರೆ ಜಬ್ಬಾರ್ ಅವರಿಗೆ ಕೊಡಿ ಇಲ್ಲದಿದ್ದರೆ ಯಾರಿಗಾದರೂ ಕೊಡಿ ಎಂದು ಹೇಳಿದ್ದರು. ಇದಕ್ಕೆ ನನ್ನ ಬಳಿ ಸಾಕ್ಷಿಯಿದೆ,’ ಎಂದು ತಿವಿದಿದ್ದಾರೆ. ವ್ಯಕ್ತಿ ಪರವಾಗಿ ಟಿಕೆಟ್ ಕೇಳಿದ್ದರಿಂದಲೇ ಇಂದು ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅಬ್ದುಲ್ ಜಬ್ಬಾರ್ ರಾಜೀನಾಮೆ ಅಂಗೀಕಾರ: ಕೆಪಿಸಿಸಿ ಅಲ್ಪಸಂಖ್ಯಾತ ಘಟಕಕ್ಕೆ ಡಿಕೆಶಿ ಬಿಗ್ ಶಾಕ್

ಕಾಂಗ್ರೆಸ್ ಆರೋಪಕ್ಕೆ ಎಸ್‌ಡಿಪಿಐ ತಿರುಗೇಟು

ಇದೇ ವೇಳೆ, ಚುನಾವಣೆ ಸೋಲಿನ ಭೀತಿಯಿಂದ ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ ಎಂದು ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಪೇಟೆ ತಿರುಗೇಟು ನೀಡಿದ್ದಾರೆ. ‘ನಮಗೆ ಯಾರೂ ಫಂಡಿಂಗ್ ಮಾಡಿಲ್ಲ. ಕಾಂಗ್ರೆಸ್ ತನ್ನ ಆಂತರಿಕ ಕಿತ್ತಾಟವನ್ನು ಮುಚ್ಚಿ ಹಾಕಲು ಇಂತಹ ಆರೋಪಗಳನ್ನು ಮಾಡುತ್ತಿದೆ,’ ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿನ ಭವಿಷ್ಯ: ಇಂದು ಈ ರಾಶಿಯವರ ಬೆಂಬಲಕ್ಕೆ ನಿಲ್ಲುವವರು ಕಡಿಮೆಯಾಬಹುದು

ಮೇಷ ರಾಶಿ:

ಯಾವುದಾದರೂ ದುರ್ವ್ಯಸನಕ್ಕೆ ತುತ್ತಾಗಿ ಹಣವನ್ನೂ ಆರೋಗ್ಯವನ್ನೂ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಮಾಡದೇ ಉಳಿದ ಕೆಲಸ ಕಾರ್ಯಗಳತ್ತ ಗಮನಹರಿಸಿ. ವ್ಯಾಪರದಲ್ಲಿ ಲಾಭವಾಗಲಿದೆ. ವಿದ್ಯಾರ್ಥಿಗಳು ಪರಿಶ್ರಮದ ಓದಿಗೆ ಫಲಸಿಗಬಹುದು. ನಿಮ್ಮ ಅಧಿಕಾರದ ಆಸೆಗೆ ನೀರೆರೆಯಬಹುದು. ದೌರ್ಬಲ್ಯವನ್ನು ಹೇಳಿಕೊಂಡು ಪರಿಹಾರ ಕಂಡುಕೊಳ್ಳುವುದು ಉತ್ತಮ.ಯಾರನ್ನೂ ಸರಿಯಾಗಿ ಊಹಿಸಲಾರಿರಿ. ವಿಳಂಬವಾಗಿ ಬರುತ್ತದೆ ಎಂದುಕೊಂಡ ಹಣವು ಬೇಗ ನಿಮಗೆ ಬೇಗ ಸಿಗಬಹುದು.

ವೃಷಭ ರಾಶಿ:

ಇಂದು ನಿಮಗೆ ಹಣಕಾಸಿನ ಹರಿವು ಹೆಚ್ಚಾಗುವುದರ ಜೊತೆಗೆ ಆತಂಕವೂ ಇರುವುದು. ಅತಿಯಾದ ಖರ್ಚುಗಳಿಂದ ಚಿಂತೆಯಿದ್ದು, ಬಹುಕಾಲದಿಂದ ಸಿಕ್ಕಿಹಾಕಿಕೊಂಡಿದ್ದ ಹಣ ಇಂದು ಮರಳಿ ಸಿಕ್ಕಿ ಸಮಾಧಾನವಾಗುವುದು. ನಕಾರಾತ್ಮಕ ವಿಚಾರಗಳ ನಡೆಯೂ ನೀವು ಬಲವಾಗಿದ್ದರೆ ಅದು ವಿದ್ಯೆಯ ಕಾರಣದಿಂದ. ಆಪ್ತರಿಗೆ ನಿಮ್ಮ ಬದಲಾದ ನಡವಳಿಕೆಯು ಇಷ್ಟವಾಗದು. ಸಮಯದ ಹೊಂದಾಣಿಕೆಯು ನಿಮಗೆ ಕಷ್ಟವಾಗುವುದು.

ಮಿಥುನ ರಾಶಿ:

ಸೃಜನಾತ್ಮಕವಾಗಿ ಬದುಕುವ ಸ್ವಭಾವಕ್ಕೆ ಫಲಸಿಗಬಹುದು. ಉತ್ತಮವಾದ ಯೋಜನೆಗಳನ್ನು ರೂಪಿಸಿ. ಶೈಕ್ಷಣಿಕ ಕಾರ್ಯದಲ್ಲಿ ನೀವು ಅಡೆತಡೆಗಳನ್ನು ಎದುರಿಸಬಹುದು. ಭರವಸೆ ಮತ್ತು ಹತಾಶೆಯ ಭಾವನೆ ಇರುತ್ತದೆ. ಕೌಟುಂಬಿಕ ಜೀವನದಲ್ಲಿ ಸಂತೋಷ. ಅತಿಯಾಗಿ ಯಾವುದನ್ನು ಮಾಡಲು ಹೋಗುವುದು ಬೇಡ. ಹೊಸ ಕಲಿಕೆಗೆ ಉತ್ಸಾಹ ಇರಲಿದ್ದು ಶ್ರದ್ಧೆಯಿಂದ ಅದನ್ನು ಅಭ್ಯಾಸ ಮಾಡುವಿರಿ. ನಿಮ್ಮ ತಮಾಷೆಯು ಇಷ್ಟವಾಗದೇ ಇರಬಹುದು.

ಕರ್ಕಾಟಕ ರಾಶಿ:

ನಿಮ್ಮ ವೇತನವನ್ನು ಪ್ರಯತ್ನಪೂರ್ವಕವಾಗಿ ಯಾರಾದರೂ ತಿಳಿದುಕೊಳ್ಳಲು ಯತ್ನಿಸುವರು. ನಿಮ್ಮನ್ನು ನೀವು ಪರಿಚಯ ಮಾಡಿಕೊಳ್ಳುವಿರಿ. ಸಿಕ್ಕ ಸಮಯವನ್ನು ಧಾರ್ಮಿಕ ಆಚರಣೆಗೆ ಮೀಸಲಿಡುವಿರಿ. ಕಛೇರಿಯ ಕಾರ್ಯಗಳನ್ನು ಮುಂದುವರಿಸಲು ನಿಮಗೆ ಆಗದು. ಯಾವುದೋ ಗಾಢವಾದ ಆಲೋಚನೆಯಲ್ಲಿ ಮುಳುಗಿರುವಿರಿ. ಸರ್ಕಾರದ ಸೌಲಭ್ಯ ಪಡೆಯಲು ಚಿಂತನೆ. ಮಕ್ಕಳಿಂದ ನಿಮಗೆ ಸಂತೃಪ್ತಿಯು ಸಿಗಲಿದೆ. ಬಂಧುಗಳ ಭೇಟಿಯು ನಿಮಗೆ ಅಷ್ಟಾಗಿ ಇಷ್ಟವಾಗದು. ಸರಳವಾದ ಕೆಲಸವನ್ನು ಮನಶ್ಚಾಂಚಲ್ಯದಿಂದ ಸಂಕೀರ್ಣ ಮಾಡಿಕೊಳ್ಳುವಿರಿ.

ಸಿಂಹ ರಾಶಿ:

ಹಿತಶತ್ರುಗಳಿಂದ ಬೇಕಾದ ಮಾಹಿತಿಯು ಸಿಗಲಿದೆ. ಸಂಗಾತಿಯ ಬಗ್ಗೆ ಪ್ರೀತಿಯನ್ನು ಅನುಭವಿಸುವಿರಿ. ನಿಮಗೆ ಇಂದು ಪ್ರಭಾವೀ ವ್ಯಕ್ತಿಗಳ ಭೇಟಿ ನಿಮ್ಮ ಮನೋಬಲವನ್ನು ಹೆಚ್ಚಿಸುತ್ತದೆ. ಕುಟುಂಬದೊಂದಿಗೆ ಸಮಸ್ಯೆಗಳನ್ನು ಹಂಚಿಕೊಳ್ಳಿ. ಚಿಂತೆಯಿಂದ ಆರೋಗ್ಯಕ್ಕೆ ತೊಂದರೆ. ನಿಮ್ಮ ಅಂತರಂಗವನ್ನು ವ್ಯಕ್ತಪಡಿಸಲು ನಿಮಗೆ ಸೂಕ್ತ ಸಮಯವು ಲಭ್ಯವಾಗದೇ ಇರಬಹುದು. ಅಪರಿಚಿತರ ಬಗ್ಗೆ ಜಾಗರೂಕತೆ ಇರಲಿ. ನಿಮ್ಮ ತಪ್ಪಿನ ನಿರ್ಧಾರದಿಂದ ಪಶ್ಚಾತ್ತಾಪ ಪಡಬೇಕಾಗುವುದು.

ಕನ್ಯಾ ರಾಶಿ:

ನೀವೇ ಇಂದು ಕುಟುಂಬದ ಅಸಮಾಧಾನಕ್ಕೆ ಕಾರಣವಾಗಬಹುದು. ನಿಮ್ಮ ದುಃಸ್ಥಿಯನ್ನು ಬಳಸಿಕೊಳ್ಳುವರು. ಮಕ್ಕಳ ಆರೋಗ್ಯದ ವಿಷಯದಲ್ಲಿ ಗಮನವಿರಲಿ. ಪ್ರಣಯದ ಸಂಬಂಧಿಸಿದಂತೆ ಹೆಚ್ಚು ಬೇಡಿಕೆಗಳು ಬರಬಹುದು. ಪರರನ್ನೂ ನಿಮ್ಮಂತೆ ಕಾಣುವಿರಿ. ಅಧಿಕಾರ ಹಸಿವನ್ನು ನೀಗಿಸಿಕೊಳ್ಳಲು ಅಶಕ್ತರನ್ನು ಕಳಸಿಕೊಳ್ಳುವಿರಿ. ಪ್ರೀತಿಪಾತ್ರರ ಜೊತೆ ಇಂದು ಸಲುಗೆಯಿಂದ ಇರುವಿರಿ. ಮನಸ್ಸಿಗೆ ಇಷ್ಟವಾಗದ ಕಾರ್ಯವನ್ನು ನೀವು ಮಾಡಬೇಕಾದೀತು.

ತುಲಾ ರಾಶಿ:

ಇಂದು ಏನಾದರೂ ಅಪ್ರಯೋಜನ ಎಂದನಿಸಿದ್ದನ್ನು ಮಾಡುವ ಮೊದಲು ಅದರ ಪರಿಣಾಮದ ಬಗ್ಗೆಯೂ ಆಲೋಚಿಸಿ. ನಿದ್ರಾಹೀನತೆಯಿಂದ ಕಿರಿಕಿರಿ ಉಂಟಾಗುವುದು. ಎಲೆಕ್ಟ್ರಾನಿಕ್ ವಿಚಾರದಲ್ಲಿ ನೀವು ಚಾಣಾಕ್ಷರು. ಹಿರಿಯರ ಸಲಹೆಯನ್ನು ಪಡೆಯುವುದು ನಿಮಗೆ ಅಪಮಾನದಂತೆ ಕಂಡೀತು. ಉಗುರಿನಿಂದ ಆಗುವ ಕಾರ್ಯಕ್ಕೆ ಕೊಡಲಿ ಏಟು ತರುವುದು ಉಚಿತವಲ್ಲ. ವಿಷಯ, ಸಮಯ ಎಲ್ಲವನ್ನೂ ನೋಡಿ ವ್ಯವಹರಿಸಿ. ಅಶಕ್ತರ ಸೇವೆಯಲ್ಲಿ ತೊಡಗಿಕೊಳ್ಳುವಿರಿ.

ವೃಶ್ಚಿಕ ರಾಶಿ:

ಯಾರದ್ದಾದರೂ ಮೂಲಕ ತೊಂದರೆಯ ಮುನ್ಸೂಚನೆ ಇರುವುದು. ಸಂಗಾತಿಯನ್ನು ಹೊರಗೆ ಕರೆದುಕೊಂಡುಹೋಗುವ ಸಂದರ್ಭ ಬರುವುದು. ನಿಮ್ಮ ವೃತ್ತಿಯನ್ನು ಯಾರಾದರೂ ಅವಮಾನಿಸುವ ಸಾಧ್ಯತೆ ಇದೆ. ನಿಮ್ಮ ದುರಭ್ಯಾಸವು ಮಿತಿಮೀರಬಹುದು. ಕಛೇರಿಯಲ್ಲಿ ಸ್ವಲ್ಪ ಬಿಡುವು ಮಾಡಿಕೊಂಡು ಕುಟುಂಬಕ್ಕೆ ಸಮಯವನ್ನು ಕೊಡುವಿರಿ. ಹಿಂದೆ ಕೊಟ್ಟ ಸಾಲವು ಮರಳಿ ಬರುವ ನಿರೀಕ್ಷೆಯಲ್ಲಿ ಇರುವಿರಿ. ನಿಮ್ಮ ಬಗ್ಗೆ ಊಹಾಪೋಹಗಳು ಹುಟ್ಟಿಕೊಳ್ಳುವ ಸಾಧ್ಯತೆ ಇದೆ.

ಧನು ರಾಶಿ:

ಇಂದು ಹೆಚ್ಚು ಸಮಯವು ಸಿಗುವ ಕಾರಣ ಇನ್ನೊಬ್ಬರ ಕುರಿತು ಹರಟೆ ಮಾಡುವಿರಿ. ನಿಮಗೆ ಇಂದು ಹಣಕಾಸಿನ ವಿಚಾರದಲ್ಲಿ ಲೆಕ್ಕಾಚಾರವು ಗಟ್ಟಿತನ ಕೊಡಲಿದೆ. ಸಾಹಿತ್ಯ ಕ್ಷೇತ್ರದ ಕಡೆಗೆ ನಿಮ್ಮ ಗಮನ ಹೆಚ್ಚಾಗುವುದು. ಹಳೆಯ ವಸ್ತುಗಳು ನಿಮಗೆ ಸಾಕೆನಿಸಬಹುದು. ಮಕ್ಕಳ ಭವಿಷ್ಯಕ್ಕೆ ಹಣವನ್ನು ಕೂಡಿಡಬೇಕಾಗುವುದು. ಸಾಲ ಕೊಟ್ಟವರು ನಿಮ್ಮನ್ನು ಇಂದು ಏನೂ ಕೇಳುವುದಿಲ್ಲ. ಮಕ್ಕಳು ನಿಮಗೆ ಬೇಕಾದ ಆರ್ಥಿಕ ನೆರವನ್ನು ಕೊಡುವರು.

ಮಕರ ರಾಶಿ:

ಇಂದು‌ ನೀವು ದೈಹಿಕ ಸೌಕರ್ಯವನ್ನು ಇಷ್ಟಪಡುವಿರಿ. ಯಾರಮೇಲಾದೂ ಶಂಕೆ ಇದ್ದರೆ, ಸುಮ್ಮನೇ ಕುಳಿತಿರಬೇಡಿ. ಹೊಸ ಯೋಜನೆಯನ್ನು ನಿರ್ವಹಿಸುವ ಅವಕಾಶವು ಸಿಗಲಿದೆ. ಎಲ್ಲ ಕಡೆಗಳಲ್ಲಿ ನೀವು ಆತ್ಮರಕ್ಷಣೆಯನ್ನು ಮಾಡಿಕೊಳ್ಳುವಿರಿ. ದಿನವನ್ನು ಜಾಗರೂಕತೆಯಿಂದ ಆಯೋಜಿಸಿ. ನಿಮ್ಮ ಬಗ್ಗೆ ಕುಟುಂಬದಲ್ಲಿ ಒಳ್ಳೆಯ ಅಭಿಪ್ರಾಯವು ಇರುವುದು. ವೈವಾಹಿಕ ಜೀವನದಲ್ಲಿ ಏರಿಳಿತವು ಆರಂಭವಾಗಬಹದು.

ಕುಂಭ ರಾಶಿ :

ನಿಮಗೆ ಉದ್ಯೋಗದಲ್ಲಿ ಬಡ್ತಿ ಸಿಗುವ ಬಗ್ಗೆ ಖುಷಿ ಇರಲಿದೆ. ಕೆಲವು ಸಂದರ್ಭದಲ್ಲಿ ನೀವು ತಾಳ್ಮೆಯನ್ನು ಕಳೆದುಕೊಳ್ಳಬಹುದು. ಹಣಕ್ಕಾಗಿ ತಾಯಿಯನ್ನು ಪೀಡಿಸುವುದು ಬೇಡ. ನಿಮ್ಮದೇ ಸರಿ ಇದ್ದರೂ ಅದನ್ನು ಪ್ರತಿಪಾದಿಸುವ ಕ್ರಮವು ವ್ಯತ್ಯಾಸವಾಗುವುದು. ಜೀವನದ ತೊಂದರೆಗಳನ್ನು ಸಂಗಾತಿಯ ಜೊತೆಗೆ ಹಂಚಿಕೊಳ್ಳಲು ಬಯಸುವಿರಿ. ಸಂಬಂಧಿಕರ ಜೊತೆ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತವೆ. ಆತುರಾತುರವಾಗಿ ಯಾವುದನ್ನೂ ಮಾಡಲು ಹೋಗುವುದು ಬೇಡ.

ಮೀನ ರಾಶಿ:

ಅಲ್ಪ ಭೂಮಿಯ ಕೃಷಿಯಲ್ಲಿ ಒಳ್ಳೆಯ ಲಾಭವನ್ನು ಯೋಜನೆ ಹಾಕುವಿರಿ. ಪ್ರಭಾವಿ ವ್ಯಕ್ತಿಗಳ ಭೇಟಿಗೆ ಇಂದು ಅವಕಾಶ ಸಿಗದೇ ಹೋಗದೆ ಇರಬಹುದು. ಆರ್ಥಿಕ ವ್ಯವಹಾರದಲ್ಲಿ ದಾಖಲೆ ನಷ್ಟ. ಇಂದು ಬಂಧುಗಳ ಆಗಮನವಾದ ಕಾರಣ ಕುಟುಂಬ ಜೊತೆ ಹೆಚ್ವು ಕಾಲ ಕಳೆಯಿರಿ. ಇಂದು ನೀವಾಡುವ ಮಾತಿನ ಮೇಲೆ ನಿಮ್ಮ ಕಾರ್ಯಗಳು ನಿಂತಿರುವುದು. ಓಡಾಟಕ್ಕೆ ನಿಮಗೆ ವಾಹನದ ಅನುಕೂಲತೆಯೂ ಆಗುವುದು. ಸ್ವಂತ ಉದ್ಯಮದಲ್ಲಿ ನಿರೀಕ್ಷಿತ ಲಾಭವನ್ನು ಕಾಣುವಿರಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ರೇವತೀ, ವಾರ : ಸೋಮ, ಪಕ್ಷ : ಕೃಷ್ಣ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಶತಭಿಷಾ, ಯೋಗ : ಸಾಧ್ಯ, ಕರಣ : ಗರಜ, ಸೂರ್ಯೋದಯ – 06 – 13 am, ಸೂರ್ಯಾಸ್ತ – 06 – 36 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:46 – 09:19, ಯಮಗಂಡ ಕಾಲ 10:52 – 12:25, ಗುಳಿಕ ಕಾಲ 13:58 – 15:31

-ಲೋಹಿತ ಹೆಬ್ಬಾರ್ – 8762924271 (what’s app only)

Source link

MI vs RCB: ವಾಂಖೆಡೆಯಲ್ಲಿ ಮುಂಬೈಗೆ ಮಣ್ಣು ಮುಕ್ಕಿಸಿದ ಆರ್​ಸಿಬಿ

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್ 2026 ರ 20ನೇ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಿತ್ತು. ಈ ಲೀಗ್​ನಲ್ಲಿ ಉಭಯ ತಂಡಗಳಿಗೆ ಇದು ನಾಲ್ಕನೇ ಪಂದ್ಯವಾಗಿತ್ತು. ಅದರಂತೆ ತವರು ಮೈದಾನದಲ್ಲಿ ಆರ್​ಸಿಬಿಯನ್ನು ಮಣಿಸುವ ಇರಾದೆಯಲ್ಲಿದ್ದ ಮುಂಬೈಗೆ ಮತ್ತೆ ನಿರಾಸೆ ಎದುರಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆರ್​ಸಿಬಿ ಮೂವರ ಅರ್ಧಶತಕದ ನೆರವಿನಿಂದ 241 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಮುಂಬೈ 222 ರನ್ ಕಲೆಹಾಕಲಷ್ಟೇ ಶಕ್ತವಾಗಿ 19 ರನ್​ಗಳಿಂದ ಸೋಲೊಪ್ಪಿಕೊಂಡಿತು. ಇದು ಮುಂಬೈಗೆ ಸತತ ಎರಡನೇ ಸೋಲಾದರೆ, ಇತ್ತ ಕಳೆದ ಪಂದ್ಯದಲ್ಲಿ ಸೋಲುಕಂಡಿದ್ದ ಆರ್​ಸಿಬಿ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ.

Source link

MI vs RCB: ಒಂದೇ ಒಂದು ವಿಕೆಟ್ ಇಲ್ಲದೆ 5ನೇ ಪಂದ್ಯ ಮುಗಿಸಿದ ಜಸ್ಪ್ರೀತ್ ಬುಮ್ರಾ

ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ ಅತ್ಯಂತ ಅಪಾಯಕಾರಿ ಬೌಲರ್ ಯಾರಾದರೂ ಇದ್ದರೆ, ಅದು ಭಾರತದ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah). ನಿರಂತರವಾಗಿ ಬ್ಯಾಟ್ಸ್‌ಮನ್‌ಗಳನ್ನು ತೊಂದರೆಗೊಳಿಸುವುದು ಮತ್ತು ವಿಕೆಟ್ ಪಡೆಯುವುದು ಬುಮ್ರಾಗೆ ಅಭ್ಯಾಸವಾಗಿದೆ. ಬ್ಯಾಟ್ಸ್‌ಮನ್‌ಗಳು ಅವರ ವಿರುದ್ಧ ರನ್ ಗಳಿಸಲು ಹೆಣಗಾಡುತ್ತಾರೆ. ಆದರೆ ಈ ಬಾರಿಯ ಐಪಿಎಲ್​ನಲ್ಲಿ (IPL 2026) ಮಾತ್ರ ಬುಮ್ರಾಗೆ ವಿಕೆಟ್ ಬರ ಎದುರಾಗಿದೆ. ಈ ಐಪಿಎಲ್‌ನಲ್ಲಿ ಇದುವರೆಗೆ 4 ಪಂದ್ಯಗಳನ್ನಾಡಿರುವ ಬುಮ್ರಾಗೆ ಖಾತೆಯಲ್ಲಿ ಒಂದೇ ಒಂದು ವಿಕೆಟ್ ಇಲ್ಲ. ಇದನ್ನು ಕೇಳಿದವರಿಗೆ ಅಚ್ಚರಿಯಾಗಬಹುದು. ಆದರೆ ಇದು ನಿಜ. ಮುಂಬೈ ಇಂಡಿಯನ್ಸ್‌ನ ಅನುಭವಿ ವೇಗಿ ಬುಮ್ರಾ ಸತತ ಐದು ಪಂದ್ಯಗಳಲ್ಲಿ ಬರಿಗೈಯಲ್ಲಿ ಮರಳಿದ್ದಾರೆ.

ಆರ್​ಸಿಬಿ ವಿರುದ್ಧವೂ ವಿಕೆಟ್ ಇಲ್ಲ

ಐಪಿಎಲ್ 2026 ರ 20ನೇ ಪಂದ್ಯವು ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಿತು. ಈ ಪಂದ್ಯದಲ್ಲಿ ಬೆಂಗಳೂರು ತಂಡ ಮೊದಲು ಬ್ಯಾಟ್ ಮಾಡಿ 240 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು. ಬೆಂಗಳೂರಿನ ಬ್ಯಾಟ್ಸ್‌ಮನ್‌ಗಳು ಪಂದ್ಯದಲ್ಲಿ ಬಹುತೇಕ ಎಲ್ಲಾ ಮುಂಬೈ ಬೌಲರ್‌ಗಳ ವಿರುದ್ಧ ಸರಾಗವಾಗಿ ರನ್ ಕಲೆಹಾಕಿದರು. ಆದಾಗ್ಯೂ, ಎಂದಿನಂತೆ ರನ್​ಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದ ಬುಮ್ರಾ ತಮ್ಮ ನಾಲ್ಕು ಓವರ್‌ಗಳಲ್ಲಿ 35 ರನ್‌ಗಳನ್ನು ಬಿಟ್ಟುಕೊಟ್ಟರು.

ಅತ್ಯಂತ ಅಚ್ಚರಿಯ ಅಂಶವೆಂದರೆ ಈ ಪಂದ್ಯದಲ್ಲಿಯೂ ಬುಮ್ರಾ ವಿಕೆಟ್ ಪಡೆಯಲಿಲ್ಲ ಎಂಬುದು. ಮೇಲೆ ಹೇಳಿದಂತೆ ಬುಮ್ರಾ ಅವರು ಈ ಆವೃತ್ತಿಯಲ್ಲಿ ವಿಕೆಟ್ ಪಡೆಯದೆ ಇರುವುದು ಇದೇ ಮೊದಲಲ್ಲ. ಮುಂಬೈನ ಅತ್ಯಂತ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರಾದ ಜಸ್ಪ್ರೀತ್ ಬುಮ್ರಾ, ಐಪಿಎಲ್ 2026 ರ ನಾಲ್ಕು ಪಂದ್ಯಗಳಲ್ಲಿಯೂ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ.

IND vs SA: ಟಿ20 ವಿಶ್ವಕಪ್​ನಲ್ಲಿ ಹೊಸ ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ

ಸತತ 5 ಪಂದ್ಯಗಳಿಂದ ವಿಕೆಟ್ ಇಲ್ಲ

ಈ ನಾಲ್ಕು ಪಂದ್ಯಗಳ ಜೊತೆಗೆ ಕಳೆದ ಆವೃತ್ತಿಯ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿಯೂ ಬುಮ್ರಾಗೆ ಒಂದೇ ಒಂದು ವಿಕೆಟ್ ಸಿಕ್ಕಿರಲಿಲ್ಲ. ಪಂಜಾಬ್ ವಿರುದ್ಧದ ಆ ಪಂದ್ಯದಲ್ಲಿ ಬುಮ್ರಾ ನಾಲ್ಕು ಓವರ್‌ಗಳಲ್ಲಿ 40 ರನ್‌ಗಳನ್ನು ಬಿಟ್ಟುಕೊಟ್ಟರು ಆದರೆ ವಿಕೆಟ್ ಪಡೆಯಲಿಲ್ಲ. ಇನ್ನು ಈ ಆವೃತ್ತಿಯಲ್ಲಿ, ಬುಮ್ರಾ ಕೋಲ್ಕತ್ತಾ, ದೆಹಲಿ, ರಾಜಸ್ಥಾನ ಮತ್ತು ಬೆಂಗಳೂರು ವಿರುದ್ಧ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ. ಸತತ ಐದು ಪಂದ್ಯಗಳಲ್ಲಿ, ಅವರು ಒಟ್ಟು 19 ಓವರ್‌ಗಳನ್ನು ಬೌಲಿಂಗ್ ಮಾಡಿ 163 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಅಂದರೆ ಬುಮ್ರಾ 8.5 ರ ಎಕಾನಮಿ ದರದಲ್ಲಿ ರನ್‌ಗಳನ್ನು ಬಿಟ್ಟುಕೊಟ್ಟಿದ್ದು, ಇದರಲ್ಲಿ ಒಂದೇ ಒಂದು ವಿಕೆಟ್ ಪಡೆದಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ಕಸ ನಿರ್ವಹಣೆಗೆ ಬಂತು ಟೆಕ್ನಾಲಜಿ, ಏನಿದು ‘ನಮ್ಮ ಕಸ’ ತಂತ್ರಜ್ಞಾನ?

ಬೆಂಗಳೂರು, ಏಪ್ರಿಲ್​ 12: ಸಿಲಿಕಾನ್ ಸಿಟಿಯಲ್ಲಿ ಕಸ ನಿರ್ವಹಣೆ ಮಾಡುವುದೇ ದೊಡ್ಡ ಸವಾಲು. ಇದೀಗ ಬೆಂಗಳೂರು ಮತ್ತೆ ಗಾರ್ಬೇಜ್ ಸಿಟಿಯಾಗುತ್ತಿದೆಯಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಏಕೆಂದರೆ ಕಳೆದ ಒಂದು ತಿಂಗಳಿಂದ ರಸ್ತೆಯಲ್ಲಿಯೇ ಬೃಹತ್ ಕಸದ ರಾಶಿ ಬಿದ್ದು ನಾರುತ್ತಿದ್ದರು ಸ್ಚಚ್ಛ ಮಾಡಿದೆ ಕಸ ನಿರ್ವಹಣೆಯಲ್ಲಿ GBA ಸಂಪೂರ್ಣ ವಿಫಲವಾಗಿದೆ. ಈ ಮಧ್ಯೆ ಬೆಂಗಳೂರಿನ ವ್ಯಕ್ತಿಯೊಬ್ಬರು ಇದಕ್ಕಾಗಿ ‘ನಮ್ಮ ಕಸ’ (NammaKasa) ಎಂಬ ವೇದಿಕೆಯನ್ನೇ ಸೃಷ್ಟಿಸಿದ್ದಾರೆ. ಆ ಮೂಲಕ ಕಸ ನಿರ್ವಹಣೆಗೂ ಟೆಕ್ನಾಲಜಿ ಬಂದಿದೆ.

ಕಸದ ರಾಶಿ ಕಂಡು ಮೂಗು ಮುಚ್ಚಿಕೊಂಡು ಹೋಗುವ ಬದಲು, ಆ ಕಸವನ್ನು ಹಾಕಿದವರನ್ನು ಮತ್ತು ಅದನ್ನು ಎತ್ತದವರನ್ನು ಹೊಣೆಗಾರರನ್ನಾಗಿ ಮಾಡಲು ‘ನಮ್ಮ ಕಸ’ ಎಂಬ ಹೊಸ ವೇದಿಕೆ ಸೃಷ್ಟಿಯಾಗಿದೆ. ಫಿನ್‌ಟೆಕ್ ಸಂಸ್ಥೆಯ ಪ್ರಾಡಕ್ಟ್ ಡಿಸೈನರ್ ಜ್ಯೋತಿಶ್ ವಿ.ಎಂ. ಅವರು ಕೇವಲ ಮೂರು ಸಾವಿರ ರೂ ವೆಚ್ಚದಲ್ಲಿ ಈ ಅದ್ಭುತ ಪ್ಲಾಟ್‌ಫಾರ್ಮ್ ಸಿದ್ಧಪಡಿಸಿದ್ದಾರೆ.

Indian Tech & Infra Tweet

‘ನಮ್ಮ ಕಸ’ ವೇದಿಕೆಯ ಕಾರ್ಯ ಹೇಗೆ?

ಇದು ಕೇವಲ ದೂರು ನೀಡುವ ಅಪ್ಲಿಕೇಶನ್ ಅಲ್ಲ, ಬದಲಿಗೆ ಇದೊಂದು ಅಕೌಂಟೆಬಿಲಿಟಿ ಲೀಡರ್‌ಬೋರ್ಡ್. ರಸ್ತೆಬದಿಯಲ್ಲಿ ಕಸ ಕಂಡರೆ ಅದರ ಫೋಟೋ ತೆಗೆದು ಲೊಕೇಶನ್ ಸಮೇತ ಅಪ್‌ಲೋಡ್ ಮಾಡಬಹುದು. ಇಲ್ಲಿ ದೂರು ನೀಡುವವರ ಹೆಸರನ್ನು ಗೌಪ್ಯವಾಗಿಡಲಾಗುತ್ತದೆ.

ಇದನ್ನೂ ಓದಿ: ಕಸದ ರಾಶಿಗೆ ರಸ್ತೆ, ಫುಟ್​ಪಾತ್ ಮಾಯ! ಜಿಬಿಎ ವಿರುದ್ಧ ರೊಚ್ಚಿಗೆದ್ದ ಜನ

ಈ ಪ್ಲಾಟ್‌ಫಾರ್ಮ್‌ನಲ್ಲಿ ನಗರದ 243 ವಾರ್ಡ್‌ಗಳು, 28 ಶಾಸಕರು ಮತ್ತು 4 ಸಂಸದರ ಪಟ್ಟಿ ಇದೆ. ಯಾವ ಕ್ಷೇತ್ರದಲ್ಲಿ ಅತಿ ಹೆಚ್ಚು ಕಸದ ದೂರುಗಳಿವೆಯೋ ಆ ನಾಯಕರು ಲೀಡರ್‌ಬೋರ್ಡ್​​ ಪಟ್ಟಿಯಲ್ಲಿ ಕೆಳಗೆ  ಹೋಗುತ್ತಾರೆ. ಇನ್ನು ದೂರು ದಾಖಲಾದ ಕೂಡಲೇ ಸಂಬಂಧಪಟ್ಟ ಶಾಸಕರ ಎಕ್ಸ್​​ ಖಾತೆಗೆ ಟ್ಯಾಗ್ ಮಾಡುವ ಮೂಲಕ ಎಚ್ಚರಿಸುವ ವ್ಯವಸ್ಥೆ ಕೂಡ ಇದೆ.

230ಕ್ಕೂ ಹೆಚ್ಚು ದೂರುಗಳು

ನಮ್ಮ ಕಸ ವೇದಿಕೆ ಸಿದ್ಧಪಡಿಸಲು ಜಾಸ್ತಿ ಹಣ ಖರ್ಚು ಮಾಡಲಾಗಿಲ್ಲ. ಮುಕ್ತವಾಗಿರುವ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೆಲವೇ ದಿನಗಳಲ್ಲಿ ಜ್ಯೋತಿಶ್ ಇದನ್ನು ರೂಪಿಸಿದ್ದಾರೆ. ಏಪ್ರಿಲ್ 4 ರಂದು ಪ್ರಾರಂಭವಾಗಿರುವ ಈ ಪ್ಲಾಟ್‌ಫಾರ್ಮ್‌ನಲ್ಲಿ ಈಗಾಗಲೇ 230ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಮಹದೇವಪುರ ಭಾಗದಲ್ಲಿ ಕಸದ ರಾಶಿ ಅತಿ ಹೆಚ್ಚಾಗಿರುವುದು ಸದ್ಯಕ್ಕೆ ಕಂಡುಬಂದಿದೆ.

ಇದನ್ನೂ ಓದಿ: Video: ಬೀದಿ ಬದಿ ಕಸ ಹಾಕುವವರಿಗೆ ವಿಶಿಷ್ಟ ಬ್ಯಾನರ್ ಹಾಕಿ ವಾರ್ನಿಂಗ್ ಕೊಟ್ಟ ವ್ಯಕ್ತಿ

ಇನ್ನು ಸರ್ಕಾರದ ಜೊತೆಗೆ ಪಾಲುದಾರಿಕೆಯಲ್ಲಿ ಕೆಲಸ ಮಾಡುವ ಉದ್ದೇಶ ಹೊಂದಿರು ಜ್ಯೋತಿಶ್, ಬೆಂಗಳೂರಿನಿಂದ ಆರಂಭವಾಗಿರುವ ಈ ಕಸದ ಕ್ರಾಂತಿಯನ್ನು ದೇಶಾದ್ಯಂತ ವಿಸ್ತರಿಸುವ ಗುರಿ ಹೊಂದಿದ್ದಾರೆ. ಹೀಗಾಗಿ ನಾಗರಿಕರು ಮತ್ತು ಸರ್ಕಾರ ಕೈಜೋಡಿಸಿದರೆ ಮಾತ್ರ ಬದಲಾವಣೆ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version