Guru Purnima 2026: ಇಂದು ಸಂಜೆ ಮನೆಯ ಈ ಜಾಗಗಳಲ್ಲಿ ತುಪ್ಪದ ದೀಪ ಹಚ್ಚಿ, ಸಿಗಲಿದೆ ಲಕ್ಷ್ಮಿ ದೇವಿ ಕೃಪೆ! – Kannada News | Guru Purnima: Light Ghee Lamps at 6 Places for Wealth and Prosperity

ಹಿಂದೂ ಧರ್ಮದಲ್ಲಿ ಪ್ರತಿಯೊಂದು ಹುಣ್ಣಿಮೆಗೂ ತನ್ನದೇ ಆದ ವಿಶೇಷ ಧಾರ್ಮಿಕ ಮಹತ್ವವಿದೆ. ವರ್ಷದಲ್ಲಿ ಬರುವ 12 ಹುಣ್ಣಿಮೆಗಳಲ್ಲಿ ಆಷಾಢ ಮಾಸದ ಹುಣ್ಣಿಮೆ ಅಂದರೆ ಗುರು ಪೂರ್ಣಿಮೆಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಈ ಶ್ರೇಷ್ಠ ದಿನದಂದು ಶ್ರೀ ಮಹಾವಿಷ್ಣು ಮತ್ತು ಧನಲಕ್ಷ್ಮಿ ದೇವಿಯನ್ನು ವಿಶೇಷವಾಗಿ ಆರಾಧಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಗುರು ಪೂರ್ಣಿಮೆಯಂದು ಮನೆಯ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಹಸುವಿನ ತುಪ್ಪದ ದೀಪ ಬೆಳಗಿಸುವುದರಿಂದ ಮನೆಯಲ್ಲಿ ನೆಮ್ಮದಿ, ಯಶಸ್ಸು ಹಾಗೂ ಅಷ್ಟೈಶ್ವರ್ಯಗಳು ನಿರಂತರವಾಗಿ ನೆಲೆಸುತ್ತವೆ.

ಈ ವರ್ಷ ಜುಲೈ 29 ರಂದು ಗುರು ಪೂರ್ಣಿಮೆಯನ್ನು ಅಂದರೆ ಇಂದು ಆಚರಿಸಲಾಗುತ್ತಿದೆ. ಈ ದಿನ ಚಂದ್ರನು ತನ್ನ ಸಂಪೂರ್ಣ ಕಳೆಯಿಂದ ಪ್ರಕಾಶಿಸುವುದರಿಂದ, ನಾವು ಮಾಡುವ ಪ್ರತಿಯೊಂದು ಧಾರ್ಮಿಕ ಆಚರಣೆಗೂ ಸಂಪೂರ್ಣ ಫಲ ದೊರೆಯುತ್ತದೆ.

ಗುರು ಪೂರ್ಣಿಮೆಯಂದು ದೀಪ ಬೆಳಗಿಸಬೇಕಾದ 6 ಶುಭ ಸ್ಥಳಗಳು:

ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿಸಲು ಹಾಗೂ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಲು ಈ ಕೆಳಗಿನ ಸ್ಥಳಗಳಲ್ಲಿ ತುಪ್ಪದ ದೀಪವನ್ನು ಹಚ್ಚಿ:

ಮನೆಯ ಪೂಜಾ ಮಂದಿರ:

ಗುರು ಪೂರ್ಣಿಮೆಯ ಪೂಜೆಯ ಸಮಯದಲ್ಲಿ ನಿಮ್ಮ ಮನೆಯ ಪೂಜಾ ಕೊಠಡಿಯಲ್ಲಿ ಹಸುವಿನ ತುಪ್ಪದ ದೀಪವನ್ನು ಬೆಳಗಿಸಿ. ಲಕ್ಷ್ಮಿ ನಾರಾಯಣರ ಮುಂದೆ ಈ ದೀಪ ಹಚ್ಚುವುದರಿಂದ ಪೂಜೆಯ ಸಂಪೂರ್ಣ ಫಲ ಸಿಗುತ್ತದೆ ಹಾಗೂ ಮನೆಯಲ್ಲಿ ಸಾತ್ವಿಕ ವಾತಾವರಣ ನಿರ್ಮಾಣವಾಗುತ್ತದೆ.

ತುಳಸಿ ಗಿಡದ ಬಳಿ:

ತುಳಸಿ ಗಿಡದಲ್ಲಿ ಲಕ್ಷ್ಮಿ ದೇವಿಯು ವಾಸಿಸುತ್ತಾಳೆ ಎಂಬುದು ಶಾಸ್ತ್ರಗಳ ನಂಬಿಕೆ. ಹುಣ್ಣಿಮೆಯ ಶುಭ ದಿನದಂದು ಸಂಜೆ ತುಳಸಿ ಕಟ್ಟೆಯ ಬಳಿ ತುಪ್ಪದ ದೀಪವನ್ನು ಹಚ್ಚಿ ನಮಸ್ಕರಿಸುವುದರಿಂದ ವಿಷ್ಣು ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ನಿರಂತರವಾಗಿ ನಿಮ್ಮ ಮೇಲಿರುತ್ತದೆ.

ಇದನ್ನೂ ಓದಿ: ಇಂದು ಗುರು ಪೂರ್ಣಿಮೆಯ ವಿಶೇಷ ದಿನ, ಏನಿದರ ವಿಶೇಷತೆ?

ಮನೆಯ ಮುಖ್ಯ ದ್ವಾರ (ಸಿಂಹದ್ವಾರ):

ಮನೆಗೆ ಸಕಲ ಶಕ್ತಿಗಳು ಪ್ರವೇಶಿಸುವುದು ಮುಖ್ಯ ದ್ವಾರದ ಮೂಲಕವೇ. ಗುರು ಪೂರ್ಣಿಮೆಯಂದು ಮನೆಯ ಬಾಗಿಲಲ್ಲಿ ತುಪ್ಪದ ದೀಪವನ್ನು ಬೆಳಗಿಸುವುದರಿಂದ ನಕಾರಾತ್ಮಕ ಶಕ್ತಿಗಳು ದೂರವಾಗಿ, ಲಕ್ಷ್ಮಿ ದೇವಿಯು ಮನೆಗೆ ಸಮ್ಮೋಹಕವಾಗಿ ಆಗಮಿಸುತ್ತಾಳೆ.

ಅರಳಿ ಮರದ ಕೆಳಗೆ (ಅಶ್ವತ್ಥ ವೃಕ್ಷ):

ಅರಳಿ ಮರದಲ್ಲಿ ತ್ರಿಮೂರ್ತಿಗಳು ಹಾಗೂ ಲಕ್ಷ್ಮಿ ದೇವಿಯ ವಾಸವಿರುತ್ತದೆ. ಈ ದಿನ ಅರಳಿ ಮರದ ಕೆಳಗೆ ತುಪ್ಪದ ದೀಪವನ್ನು ಹಚ್ಚುವುದರಿಂದ ಧನ ಸಂಪತ್ತು ವೃದ್ಧಿಯಾಗುತ್ತದೆ, ಕುಟುಂಬದ ಸದಸ್ಯರಲ್ಲಿ ಸಕಾರಾತ್ಮಕತೆ ಹೆಚ್ಚುತ್ತದೆ ಹಾಗೂ ವ್ಯಾಪಾರ-ಉದ್ಯೋಗದಲ್ಲಿನ ತೊಂದರೆಗಳು ನಿವಾರಣೆಯಾಗುತ್ತವೆ.

ಮನೆಯ ಅಡುಗೆಮನೆ:

ಅಡುಗೆಮನೆಯು ಅನ್ನಪೂರ್ಣೇಶ್ವರಿ ದೇವಿಯ ಪವಿತ್ರ ನೆಲೆ. ಗುರು ಪೂರ್ಣಿಮೆಯಂದು ಅಡುಗೆಮನೆಯ ಒಂದು ಮೂಲೆಯಲ್ಲಿ ತುಪ್ಪದ ದೀಪವನ್ನು ಬೆಳಗಿಸುವುದರಿಂದ ಮನೆಯಲ್ಲಿ ಎಂದಿಗೂ ಧಾನ್ಯ ಮತ್ತು ಸಂಪತ್ತಿನ ಅಭಾವ ಉಂಟಾಗುವುದಿಲ್ಲ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮೇಲೆ ದಾಳಿ: ವಿಶ್ವಸಂಸ್ಥೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ ಭಾರತ – Kannada News | India Condemns Hormuz Strait Attacks at UNSC: Urges Diplomacy Amidst West Asia Conflict

ವಾಷಿಂಗ್ಟನ್, ಜುಲೈ 29: ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷ ಹಾಗೂ ಹಾರ್ಮುಜ್ ಜಲಸಂಧಿ(Hormuz Strait)ಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ನಡೆಯುತ್ತಿರುವ ದಾಳಿಗಳನ್ನು ಭಾರತ ತೀವ್ರವಾಗಿ ಖಂಡಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ಮಾತನಾಡಿದ ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿಯಾಗಿರುವ ಪರ್ವತನೇನಿ ಹರೀಶ್,ಈ ಪ್ರದೇಶದ ಉದ್ವಿಗ್ನತೆಯು ತೀವ್ರ ಕಳವಳಕಾರಿಯಾಗಿದ್ದು, ಎಲ್ಲಾ ಕಡೆಯವರು ತಕ್ಷಣವೇ ಸಂಯಮ ವಹಿಸಿ ಮಾತುಕತೆ ಮತ್ತು ರಾಜತಾಂತ್ರಿಕತೆಗೆ ಮರಳಬೇಕು ಎಂದು ಆಗ್ರಹಿಸಿದ್ದಾರೆ.

ದಾಳಿಯಲ್ಲಿ ಭಾರತೀಯ ನಾವಿಕನ ಸಾವು
ಹಾರ್ಮುಜ್ ಜಲಸಂಧಿಯಲ್ಲಿ ‘ಜಿಎಫ್‌ಎಸ್ ಗ್ಯಾಲಕ್ಸಿ’,’ಎಂಟಿ ಅಲ್ ಬಹಿಯಾ’ ಮತ್ತು ‘ಎಂಟಿ ಮೊಂಬಾಸಾ’ ಸೇರಿದಂತೆ ಹಲವು ವಾಣಿಜ್ಯ ಹಡಗುಗಳ ಮೇಲೆ ನಡೆದ ದಾಳಿಯಲ್ಲಿ ಭಾರತೀಯ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ದಾಳಿಗಳಲ್ಲಿ ಒಬ್ಬ ಭಾರತೀಯ ನಾವಿಕ ದುರಂತವಾಗಿ ಸಾವನ್ನಪ್ಪಿದ್ದು, ಮತ್ತೊಬ್ಬರು ಕಾಣೆಯಾಗಿದ್ದಾರೆ ಹಾಗೂ ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ನಾವಿಕರನ್ನು ಗುರಿಯಾಗಿಸಿಕೊಂಡು ನಡೆಸುವ ಹಿಂಸಾಚಾರವನ್ನು ಭಾರತ ಖಂಡಿಸಿದ್ದು, ಅಡೆತಡೆಯಿಲ್ಲದ ಮತ್ತು ಸುರಕ್ಷಿತ ಹಡಗು ಸಂಚಾರವನ್ನು ತಕ್ಷಣವೇ ಪುನಃಸ್ಥಾಪಿಸಬೇಕೆಂದು ಒತ್ತಾಯಿಸಿದೆ. ಪಶ್ಚಿಮ ಏಷ್ಯಾದ ಸ್ಥಿರತೆಯು ಭಾರತದ ಆರ್ಥಿಕತೆ ಹಾಗೂ ಭದ್ರತೆಗೆ ಅತ್ಯಂತ ನಿರ್ಣಾಯಕವಾಗಿದೆ ಎಂದು ರಾಯಭಾರಿ ಹರೀಶ್ ವಿವರಣೆ ನೀಡಿದ್ದಾರೆ.

ಮತ್ತಷ್ಟು ಓದಿ: ಇರಾನ್ ಜತೆ ಮಾತುಕತೆ ನಡೆಸಲು ನಮಗೆ ಆಸಕ್ತಿ ಇಲ್ಲ, ತೆರೆಮರೆಯ ಸಂಭಾಷಣೆ ತಿರಸ್ಕರಿಸಿದ ಟ್ರಂಪ್

ಗಲ್ಫ್ ದೇಶಗಳಲ್ಲಿ ಸುಮಾರು 1 ಕೋಟಿ ಭಾರತೀಯರು ವಾಸಿಸುತ್ತಿದ್ದು, ಅವರ ಸುರಕ್ಷತೆಯೇ ಭಾರತದ ಮೊದಲ ಆದ್ಯತೆಯಾಗಿದೆ. ಭಾರತವು ಈ ಪ್ರದೇಶದೊಂದಿಗೆ ವಾರ್ಷಿಕ 180 ಶತಕೋಟಿ ಡಾಲರ್ ದ್ವಿಪಕ್ಷೀಯ ವ್ಯಾಪಾರವನ್ನು ಹೊಂದಿದ್ದು, ಗಲ್ಫ್ ದೇಶಗಳಿಂದ ವಾರ್ಷಿಕ 52 ಶತಕೋಟಿ ಡಾಲರ್​ಗೂ ಹೆಚ್ಚು ವಿದೇಶಿ ಹಣ ಭಾರತಕ್ಕೆ ಹರಿದುಬರುತ್ತದೆ.

ಇಸ್ರೇಲ್-ಅಮೆರಿಕ ಹಾಗೂ ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ಜುಲೈ 11 ರಿಂದ ಹಾರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿದ್ದರಿಂದ, ಪ್ರತಿದಿನ 100ಕ್ಕೂ ಹೆಚ್ಚು ಸಂಚರಿಸುತ್ತಿದ್ದ ಹಡಗುಗಳ ಸಂಖ್ಯೆ ಕೇವಲ 8 ರಿಂದ 15 ಕ್ಕೆ ಕುಸಿದಿದೆ. ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟಿನ ನಡುವೆಯೂ ಗಾಜಾ ಪಟ್ಟಿಯಲ್ಲಿರುವ ಮಾನವೀಯ ಬಿಕ್ಕಟ್ಟನ್ನು ನಿರ್ಲಕ್ಷಿಸುವಂತಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಪ್ಯಾಲೆಸ್ತೀನ್ ಜನರಿಗೆ ಭಾರತ ಇದುವರೆಗೆ175 ಮಿಲಿಯನ್ ಡಾಲರ್ ಅಭಿವೃದ್ಧಿ ನೆರವು ನೀಡಿದೆ.

ಇಸ್ರೇಲ್ ಜೊತೆಗೆ ಸುರಕ್ಷಿತ ಗಡಿಗಳನ್ನು ಹೊಂದಿರುವ ‘ಸ್ವತಂತ್ರ ಮತ್ತು ಸಾರ್ವಭೌಮ ಪ್ಯಾಲೆಸ್ತೀನ್ ರಾಷ್ಟ್ರ’ ನಿರ್ಮಾಣವಾಗುವುದೇ ಈ ಸುದೀರ್ಘ ಸಮಸ್ಯೆಗೆ ಶಾಶ್ವತ ಪರಿಹಾರ ಎಂದು ಭಾರತ ವಿಶ್ವಸಂಸ್ಥೆಯಲ್ಲಿ ತನ್ನ ನಿಲುವನ್ನು ಪುನರುಚ್ಚರಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

“ರಕ್ತ ಕೊಟ್ಟೇವು ನೀರು ಕೊಡೆವು!”: ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ – Kannada News | Karnataka Faces Drought: Farmers and Kannada Organisations Protest CWRC Order to Release Cauvery Water

ಬೆಂಗಳೂರು, ಜು.29: ಕಾವೇರಿ ನಿಯಂತ್ರಣ ಸಮಿತಿ (CWRC) ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ಸ್‌ ಕಾವೇರಿ ನೀರನ್ನು 15 ದಿನಗಳ ಕಾಲ ಹರಿಸುವಂತೆ ನೀಡಿರುವ ಆದೇಶವು ಕರ್ನಾಟಕದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಮಳೆ ಕೊರತೆ ಮತ್ತು ಭೀಕರ ಬರಗಾಲದಿಂದ ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ಈ ಆದೇಶವು “ಗಾಯದ ಮೇಲೆ ಬರೆ ಎಳೆದಂತಿದೆ” ಎಂದು ರೈತರು ಮತ್ತು ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಮಂಡ್ಯ, ಮೈಸೂರು ಮತ್ತು ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕನ್ನಡ ಸಂಘಟನೆಗಳು ಮತ್ತು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ನಿನ್ನೆ ಪಂಜಿನ ಮೆರವಣಿಗೆ ನಡೆಸಿ, ಟೈರ್‌ಗಳಿಗೆ ಬೆಂಕಿ ಹಚ್ಚುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಕೃಷಿ ಚಟುವಟಿಕೆಗಳಿಗೆ ನೀರು ಇಲ್ಲದಿದ್ದರೂ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವುದು ಸರಿಯಲ್ಲ ಎಂದು ರೈತರು ಪ್ರಶ್ನಿಸಿದ್ದಾರೆ. ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿದ್ದು, ಕೇವಲ 17 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಇದರಲ್ಲಿ 5 ಟಿಎಂಸಿ ಡೆಡ್ ಸ್ಟೋರೇಜ್ ಆಗಿದ್ದು, ಕುಡಿಯುವ ನೀರಿಗೂ ತೀವ್ರ ಅಭಾವ ಎದುರಾಗಲಿದೆ. ಈ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವುದು ರಾಜ್ಯದ ರೈತರಿಗೆ ಮರಣ ಶಾಸನ ಎಂದು ಹೇಳಲಾಗಿದೆ. ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಎಚ್ಚರಿಕೆ ನೀಡಿವೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ರಿಚರ್ಡ್ ಆಂಟನಿ’ ಅಪ್ಡೇಟ್; ಕೊನೆಗೂ ರಕ್ಷಿತ್ ಶೆಟ್ಟಿ ಎಲ್ಲಿದ್ದಾರೆ ಎಂಬುದನ್ನು ಹೇಳಿದ ಹೇಮಂತ್ ರಾವ್ – Kannada News | Director Hemanth Rao Reveals Where is Rakshit Shetty Amid Richard Antony Movie Delay

ನಟ ರಕ್ಷಿತ್ ಶೆಟ್ಟಿ ಅವರು ಹಲವು ಹಿಟ್ ಚಿತ್ರಗಳನ್ನುನೀಡಿದ್ದಾರೆ. ಅವರು ತಮ್ಮ ಬಹುನಿರೀಕ್ಷಿತ ‘ರಿಚರ್ಡ್​ ಆಂಟನಿ’ ಸಿನಿಮಾ ಘೋಷಣೆ ಮಾಡಿ ಸಾಕಷ್ಟು ವರ್ಷಗಳು ಕಳೆದಿವೆ. ಆದರೆ ಸಿನಿಮಾ ಇನ್ನೂ ಸೆಟ್ಟೇರದಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ‘ರಕ್ಷಿತ್ ಶೆಟ್ಟಿ ಸದ್ಯ ಎಲ್ಲಿದ್ದಾರೆ’ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ. ಇದೀಗ ಈ ಮಿಲಿಯನ್ ಡಾಲರ್ ಪ್ರಶ್ನೆಗೆ ರಕ್ಷಿತ್ ಅವರ ಆಪ್ತ ಗೆಳೆಯ ಹಾಗೂ ಸ್ಟಾರ್ ನಿರ್ದೇಶಕ ಹೇಮಂತ್ ರಾವ್ ಉತ್ತರ ನೀಡಿದ್ದಾರೆ.

ರಕ್ಷಿತ್ ಶೆಟ್ಟಿ ಎಲ್ಲಿದ್ದಾರೆ? ಸತ್ಯ ಬಿಚ್ಚಿಟ್ಟ ನಿರ್ದೇಶಕ

‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಮತ್ತು ‘ಸಪ್ತ ಸಾಗರದಾಚೆ ಎಲ್ಲೋ’ (ಪಾರ್ಟ್ ಎ ಹಾಗೂ ಬಿ) ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ರಕ್ಷಿತ್ ಜೊತೆ ನೀಡಿದ್ದ ನಿರ್ದೇಶಕ ಹೇಮಂತ್ ರಾವ್ ‘ಗೋಲ್ಡ್​ ಕ್ಲಾಸ್​​’ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ‘ರಕ್ಷಿತ್ ಶೆಟ್ಟಿ ಎಲ್ಲಿದ್ದಾರೆ ಎಂಬುದು ಸದ್ಯಕ್ಕೆ ಮಿಲಿಯನ್ ಡಾಲರ್ ಪ್ರಶ್ನೆ. ಆದರೆ ಅವರು ಖಂಡಿತವಾಗಿಯೂ ತಮ್ಮ ಮುಂದಿನ ಸಿನಿಮಾಗಾಗಿ ಭರ್ಜರಿಯಾಗಿಯೇ ರೆಡಿಯಾಗುತ್ತಿದ್ದಾರೆ ಎಂಬ ನಂಬಿಕೆ ನನಗಿದೆ’ ಎಂದು ನಗುತ್ತಲೇ ಹೇಮಂತ್ ರಾವ್ ಸ್ಪಷ್ಟನೆ ನೀಡಿದ್ದಾರೆ.

‘ರಿಚರ್ಡ್ ಆಂಟನಿ’ ಚಿತ್ರಕ್ಕೆ ಇದುವೇ ಬೆಸ್ಟ್ ಮಾರ್ಕೆಟಿಂಗ್

ರಕ್ಷಿತ್ ಶೆಟ್ಟಿ ಸದ್ಯಕ್ಕೆ ಕಾಣಿಸಿಕೊಳ್ಳುತ್ತಿಲ್ಲ ಎನ್ನುವುದು ಸಿನಿಮಾಗೆ ಪ್ರಚಾರ ಎಂದು ಹೇಮಂತ್ ರಾವ್ ಅಭಿಪ್ರಾಯಪಟ್ಟಿದ್ದಾರೆ. ‘ರಕ್ಷಿತ್ ಶೆಟ್ಟಿ ಚಿತ್ರರಂಗದಲ್ಲಿ ಒಬ್ಬ ಅದ್ಭುತ ನಟ. ಅವರ ಸಿನಿಮಾ ಮತ್ತು ಎಮೋಷನ್‌ಗಳ ಮೇಲಿರುವ ಸ್ಕೇಲ್ ಬೇರೆಯದೇ ಮಟ್ಟದ್ದು. ಸದ್ಯ ಅವರು ಎಲ್ಲೂ ಕಾಣಿಸಿಕೊಳ್ಳದೆ ಇರುವುದೇ ರಿಚರ್ಡ್ ಆಂಟನಿ ಸಿನಿಮಾಗೆ ಸಿಗುತ್ತಿರುವ ಬೆಸ್ಟ್ ಮಾರ್ಕೆಟಿಂಗ್’ ಎಂದು ಅಭಿಪ್ರಾಯಪಟ್ಟಿದ್ದಾರೆ. ನಟನಿಗಾಗಿ ಇಡೀ ಗಾಂಧಿನಗರ ಹಾಗೂ ಪ್ರೇಕ್ಷಕರು ಕಾಯುತ್ತಿದ್ದಾರೆ ಎಂದರೆ, ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಮೂಡಿಬರಲಿದೆ ಎಂಬುದನ್ನು ಊಹಿಸಬಹುದು ಎಂದು ಅವರು ಪರೋಕ್ಷವಾಗಿ ಚಿತ್ರದ ಹೈಪ್ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ಬಿಳಿ ಶರ್ಟು ಪಂಚೆ ತೊಟ್ಟು ಕಾಣಿಸಿಕೊಂಡ ರಕ್ಷಿತ್ ಶೆಟ್ಟಿ, ವಿಶೇಷತೆಯೇನು?

ಸಿನಿಮಾ ಬಗ್ಗೆ

ರಕ್ಷಿತ್ ಶೆಟ್ಟಿ ಅವರು 2023ರಲ್ಲಿ ರಿಲೀಸ್ ಆದ ‘ಸಪ್ತ ಸಾಗರಾದಚೆ ಎಲ್ಲೋ: ಸೈಡ್ ಬಿ’ ಚಿತ್ರವೇ ಕೊನೆ. ಇದಾದ ಬಳಿಕ ಅವರ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಇದರ ಜೊತೆಗೆ ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡುವ ಕೆಲಸ ಮಾಡುತ್ತಿದ್ದಾರೆ. ಹೇಮಂತ್ ರಾವ್ ಅವರು ‘666 ಆಪರೇಷನ್ ಡ್ರೀಮ್ ಥಿಯೇಟರ್’ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.

ಪ್ರಶ್ನೆ: ರಕ್ಷಿತ್  ಶೆಟ್ಟಿ ಮುಂದಿನ ಸಿನಿಮಾ ಯಾವುದು?
ಉತ್ತರ: ರಿಚರ್ಡ್ ಆಂಟನಿ

ಪ್ರಶ್ನೆ: ರಕ್ಷಿತ್  ಶೆಟ್ಟಿ ಕೊನೆಯ ಸಿನಿಮಾ ಯಾವುದು?
ಉತ್ತರ: ‘ಸಪ್ತ ಸಾಗರದಾಚೆ ಎಲ್ಲೋ ಪಾರ್ಟ್​ ಬಿ’

ಪ್ರಶ್ನೆ: ರಕ್ಷಿತ್  ಶೆಟ್ಟಿ ಈಗ ಏನು ಮಾಡುತ್ತಿದ್ದಾರೆ?
ಉತ್ತರ: ರಿಚರ್ಡ್ ಆಂಟನಿ ಸ್ಕ್ರಿಪ್ಟ್​ ಕೆಲಸದಲ್ಲಿ ಬ್ಯುಸಿ ಇದ್ದಾರೆ.

Source link

ಕಾಂಗ್ರೆಸ್ ನಾಯಕರ ಮಾಧ್ಯಮ ಸಲಹೆಗಾರ, MLC ಸ್ಥಾನ ಕೊಡಿಸ್ತೇನೆಂದವನಿಗೆ ₹1.50 ಕೋಟಿ ಕೊಟ್ಟು ಕೈಸುಟ್ಟುಕೊಂಡ ಮಹಿಳೆ! – Kannada News | Woman Alleges Rs 1.5 Crore Fraud on Promise of Congress MLC Seat, Complaint Filed in Bengaluru

ಬೆಂಗಳೂರು, ಜುಲೈ 29: ಕಾಂಗ್ರೆಸ್ (Congress) ಪಕ್ಷದಿಂದ ವಿಧಾನ ಪರಿಷತ್ (MLC) ಸದಸ್ಯ ಸ್ಥಾನ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚನೆ ಎಸಗಿರುವ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ಬೆಂಗಳೂರು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಂಗಳೂರಿನ ಮೂಲದ ಸಮಾಜಸೇವಕಿ ನೀಡಿರುವ ದೂರಿನ ಅನ್ವಯ, ಪ್ರಮುಖ ಕಾಂಗ್ರೆಸ್ ನಾಯಕರ ಮಾಧ್ಯಮ ಸಲಹೆಗಾರ ಎಂದು ಪರಿಚಯಿಸಿಕೊಂಡ ವ್ಯಕ್ತಿ, ರಾಜಕೀಯ ನಾಯಕರ ಜೊತೆಗಿನ ಫೋಟೋಗಳನ್ನು ತೋರಿಸಿ ನಂಬಿಕೆ ಗಳಿಸಿದ್ದ. ಬಳಿಕ 1.50 ಕೋಟಿ ರೂ. ಪಡೆದು ವಂಚನೆ ಮಾಡಿದ್ದಾನೆ.

ದೂರುದಾರ ಮಹಿಳೆ ಮಂಗಳೂರಿನ ಮೂಲದವರಾಗಿದ್ದು, ಖಾಸಗಿ ಟ್ರಸ್ಟ್ ಮೂಲಕ ಕ್ಯಾನ್ಸರ್ ಮುಕ್ತ ಅಭಿಯಾನ ಸೇರಿದಂತೆ ವಿವಿಧ ಸಮಾಜಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಈ ವೇಳೆ ಯರಿಸ್ವಾಮಿ ಎಂಬಾತ ಮಹಿಳೆಯ ಪರಿಚಯ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಪ್ರಮುಖ ರಾಜಕಾರಣಿಗಳ ಜತೆಗಿನ ಫೋಟೊ ತೋರಿಸಿ ಯಾಮಾರಿಸಿದ ಯರಿಸ್ವಾಮಿ

ತಾನು ಕಾಂಗ್ರೆಸ್‌ನ ಪ್ರಮುಖ ನಾಯಕರ ಮಾಧ್ಯಮ ಸಲಹೆಗಾರನಾಗಿದ್ದು, ಪಕ್ಷದ ಹೈಕಮಾಂಡ್ ನಾಯಕರೊಂದಿಗೆ ನೇರ ಸಂಪರ್ಕ ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದ ಆರೋಪಿ, ರಾಜ್ಯದ ಹಲವು ಪ್ರಮುಖ ರಾಜಕಾರಣಿಗಳೊಂದಿಗೆ ಇರುವ ಫೋಟೋಗಳನ್ನು ತೋರಿಸಿ ಮಹಿಳೆಯ ವಿಶ್ವಾಸ ಗಳಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

₹5 ಕೋಟಿ ಬೇಡಿಕೆ, ಬಳಿಕ ₹1.25 ಕೋಟಿಗೆ ಒಪ್ಪಂದ

‘ನೀವು ಇಷ್ಟು ಸಮಾಜಸೇವೆ ಮಾಡುತ್ತಿದ್ದೀರಿ. ನೀವು ಯಾಕೆ MLC ಆಗಬಾರದು? ಕಾಂಗ್ರೆಸ್‌ನಿಂದ ನಿಮ್ಮನ್ನು MLC ಮಾಡಿಸುತ್ತೇನೆ’ ಎಂದು ಹೇಳಿದ ಆರೋಪಿ, ಆರಂಭದಲ್ಲಿ 5 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾನೆ. ಮಹಿಳೆ ಅಷ್ಟು ಹಣ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ ಬಳಿಕ, 1.25 ಕೋಟಿ ರೂ.ಗೆ ಮಾತುಕತೆ ಅಂತಿಮಗೊಂಡಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಆದರೆ 2024ರ ಆಗಸ್ಟ್‌ನಿಂದ 2025ರ ಜನವರಿವರೆಗೆ ವಿವಿಧ ಹಂತಗಳಲ್ಲಿ ಒಟ್ಟು ₹1.50 ಕೋಟಿ ಹಣವನ್ನು ಆರೋಪಿ ಮತ್ತು ಆತನ ಸಹಚರರಾದ ಸಿದ್ದರಾಜು ಹಾಗೂ ಬಸವರಾಜು ಅವರಿಗೆ ನೀಡಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ. ಮೈಸೂರು ಬ್ಯಾಂಕ್ ಸರ್ಕಲ್ ಸಮೀಪದ ಶಿಕ್ಷಕರ ಸದನ ಹಾಗೂ ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆ ಬಳಿ ಹಣ ಹಸ್ತಾಂತರಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೆಹಲಿ ಪ್ರವಾಸದ ವೇಳೆ ಅಸಭ್ಯ ವರ್ತನೆ ಆರೋಪ

ಹಣ ಪಡೆದ ಬಳಿಕ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಸುವುದಾಗಿ ಹೇಳಿ ಆರೋಪಿಯು ಮಹಿಳೆಯನ್ನು ದೆಹಲಿಗೂ ಕರೆದೊಯ್ದಿದ್ದಾನೆ ಎನ್ನಲಾಗಿದೆ. ದೆಹಲಿಯ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯವಿದ್ದ ವೇಳೆ ಆರೋಪಿ ಮಹಿಳೆಯ ಕೊಠಡಿಯ ಬಾಗಿಲು ಬಡಿದು, ಮೈ-ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ವೇಳೆ ಮಹಿಳೆ ಪ್ರತಿರೋಧ ವ್ಯಕ್ತಪಡಿಸಿ ಕೊಠಡಿಯನ್ನು ಒಳಗಿನಿಂದ ಲಾಕ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಹಣ ವಾಪಸ್ ಕೇಳಿದಾಗ ಬೆದರಿಕೆ ಆರೋಪ

MLC ಸ್ಥಾನ ದೊರೆಯದ ಹಿನ್ನೆಲೆಯಲ್ಲಿ ಮಹಿಳೆ ಹಣವನ್ನು ವಾಪಸ್ ಕೇಳಿದಾಗ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಸಂತ್ರಸ್ತೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Guru Purnima 2026: ಗುರು ಪೂರ್ಣಿಮೆಯಂದು ಮಾಡಬೇಕಾದ ಶುಭ ಕಾರ್ಯಗಳಿವು – Kannada News | Guru Purnima 2026: Significance, Rituals and 7 Sacred Acts for Blessings and Prosperity

ಹಿಂದೂ ಧರ್ಮದಲ್ಲಿ ಗುರು ಪೂರ್ಣಿಮೆಗೆ ಅತ್ಯಂತ ವಿಶೇಷ ಹಾಗೂ ಪವಿತ್ರವಾದ ಸ್ಥಾನವಿದೆ. ಇದು ನಮ್ಮ ಜೀವನದಲ್ಲಿ ಅಂಧಕಾರವನ್ನು ಹೋಗಲಾಡಿಸಿ, ಜ್ಞಾನದ ಬೆಳಕನ್ನು ನೀಡಿದ ಗುರುಗಳಿಗೆ ಭಕ್ತಿ, ಗೌರವ ಮತ್ತು ಕೃತಜ್ಞತೆಯನ್ನು ಸಮರ್ಪಿಸುವ ಅಪರೂಪದ ದಿನ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ಶುಭ ದಿನದಂದು ಗುರುಗಳನ್ನು ಪೂಜಿಸುವುದು ಮತ್ತು ಸತ್ಕಾರ್ಯಗಳನ್ನು ಮಾಡುವುದರಿಂದ ಜ್ಞಾನ, ಯಶಸ್ಸು, ಸಂತೋಷ, ಸಮೃದ್ಧಿ ದೊರೆಯುವುದಲ್ಲದೆ ಜೀವನದ ಸಕಲ ಅಡೆತಡೆಗಳಿಂದ ಮುಕ್ತಿ ಸಿಗುತ್ತದೆ.

ಗುರು ಪೂರ್ಣಿಮೆಯಂದು ಮಾಡಬೇಕಾದ 7 ಒಳ್ಳೆಯ ಕೆಲಸಗಳು:

ಗುರುಗಳನ್ನು ಪೂಜಿಸಿ ಆಶೀರ್ವಾದ ಪಡೆಯಿರಿ:

ನಿಮ್ಮ ಗುರುಗಳು, ಶಿಕ್ಷಕರು, ತಂದೆ-ತಾಯಿ ಅಥವಾ ನಿಮಗೆ ಸರಿಯಾದ ಹಾದಿ ತೋರಿಸಿದ ಯಾವುದೇ ಮಾರ್ಗದರ್ಶಕರನ್ನು ಈ ದಿನ ಪೂಜಿಸಿ, ಅವರ ಆಶೀರ್ವಾದ ಪಡೆಯಿರಿ. ಒಂದು ವೇಳೆ ನಿಮ್ಮ ಗುರುಗಳು ದೂರದಲ್ಲಿದ್ದರೆ, ಅವರಿಗೆ ದೂರವಾಣಿ ಕರೆ ಮಾಡಿ ಅಥವಾ ಸಂದೇಶದ ಮೂಲಕ ನಿಮ್ಮ ನಮನಗಳನ್ನು ತಿಳಿಸಿ. ಗುರುವಿನ ಕೃಪೆಯು ಜೀವನದಲ್ಲಿ ಅಭಿವೃದ್ಧಿಗೆ ಹೊಸ ಬಾಗಿಲುಗಳನ್ನು ತೆರೆಯುತ್ತದೆ.

ಶ್ರೀ ಮಹಾವಿಷ್ಣು ಮತ್ತು ಮಹರ್ಷಿ ವೇದವ್ಯಾಸರ ಆರಾಧನೆ:

ಈ ದಿನವನ್ನು ಮಹರ್ಷಿ ವೇದವ್ಯಾಸರ ಜನ್ಮದಿನವಾಗಿಯೂ (ವ್ಯಾಸ ಪೂರ್ಣಿಮೆ) ಆಚರಿಸಲಾಗುತ್ತದೆ. ಹೀಗಾಗಿ ವಿಷ್ಣು ಮತ್ತು ವೇದವ್ಯಾಸರನ್ನು ಪೂಜಿಸುವುದು ವಿಶೇಷ. ಪೂಜೆಯಲ್ಲಿ ಅರಿಶಿನ ಬಣ್ಣದ ಹೂವುಗಳು, ಶ್ರೀಗಂಧ ಮತ್ತು ತುಳಸಿ ಎಲೆಗಳನ್ನು ಅರ್ಪಿಸಿ. “ಓಂ ನಮೋ ಭಗವತೇ ವಾಸುದೇವಾಯ” ಮಂತ್ರವನ್ನು ಜಪಿಸಿ. ಇದು ಸಕಾರಾತ್ಮಕ ಶಕ್ತಿ ಮತ್ತು ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತದೆ.

ದಾನ-ಧರ್ಮ ಮಾಡಿ:

ಗುರು ಪೂರ್ಣಿಮೆಯಂದು ದಾನ ಮಾಡುವುದು ಅತ್ಯಂತ ಶ್ರೇಷ್ಠ. ಅಗತ್ಯವಿರುವವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ. ಆಹಾರ, ಬಟ್ಟೆ, ಹಣ್ಣುಗಳು, ಧಾನ್ಯಗಳು, ಅರಿಶಿನ, ಪುಸ್ತಕಗಳು ಅಥವಾ ದಕ್ಷಿಣೆ. ಸಾತ್ವಿಕ ಮನಸ್ಸಿನಿಂದ ಮಾಡುವ ದಾನವು ಮನೆಯಲ್ಲಿ ಆರ್ಥಿಕ ಪ್ರಗತಿ ಮತ್ತು ನೆಮ್ಮದಿಯನ್ನು ತರುತ್ತದೆ.

ಧಾರ್ಮಿಕ ಗ್ರಂಥಗಳ ಅಧ್ಯಯನ:

ಮನಸ್ಸಿನ ಶಾಂತಿ ಮತ್ತು ಜ್ಞಾನದ ವೃದ್ಧಿಗಾಗಿ ಈ ದಿನ ಪವಿತ್ರ ಗ್ರಂಥಗಳನ್ನು ಓದಿ. ಭಗವದ್ಗೀತೆ, ಶ್ರೀಮದ್ ಭಾಗವತ, ರಾಮಚರಿತಮಾನಸ ಅಥವಾ ಇತರ ನೀತಿ ಬೋಧಕ ಗ್ರಂಥಗಳ ಅಧ್ಯಯನವು ಮನಸ್ಸನ್ನು ಸನ್ಮಾರ್ಗದಲ್ಲಿ ನಡೆಸಲು ಸಹಾಯ ಮಾಡುತ್ತದೆ.

ಗುರು ಮಂತ್ರ ಅಥವಾ ಇಷ್ಟ ದೇವತಾ ಮಂತ್ರ ಜಪ:

ನಿಮಗೆ ನಿಮ್ಮ ಗುರುಗಳಿಂದ ಗುರುದೀಕ್ಷೆ ಸಿಕ್ಕಿದ್ದರೆ, ಅವರು ನೀಡಿದ ಮಂತ್ರವನ್ನು ಶ್ರದ್ಧೆಯಿಂದ ಜಪಿಸಿ. ಗುರು ಮಂತ್ರವಿಲ್ಲದವರು ತಮ್ಮ ಇಷ್ಟದೈವದ ಮಂತ್ರವನ್ನು ಧ್ಯಾನಿಸಬಹುದು. ಮಂತ್ರ ಜಪದಿಂದ ಮಾನಸಿಕ ಏಕಾಗ್ರತೆ ಹಾಗೂ ಆತ್ಮವಿಶ್ವಾಸ ಹೆಚ್ಚಾಗುತ್ತದೆ.

ಇದನ್ನೂ ಓದಿ: ಇಂದು ಗುರು ಪೂರ್ಣಿಮೆಯ ವಿಶೇಷ ದಿನ, ಏನಿದರ ವಿಶೇಷತೆ?

ಸಾತ್ವಿಕ ಆಹಾರ ಸೇವನೆ ಮತ್ತು ಸ್ವಯಂ ನಿಯಂತ್ರಣ:

ಗುರು ಪೂರ್ಣಿಮೆಯಂದು ಸಂಪೂರ್ಣ ಸಾತ್ವಿಕ ಆಹಾರವನ್ನು ಸ್ವೀಕರಿಸಿ. ಕೋಪ, ಅಹಂಕಾರ ಮತ್ತು ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ. ಎಲ್ಲರೊಂದಿಗೆ ಸಿಹಿ ಮಾತು, ನಮ್ರತೆಯ ನಡವಳಿಕೆಯನ್ನು ಬೆಳೆಸಿಕೊಳ್ಳುವುದು ಗುರುವಿನ ಕೃಪೆಗೆ ಪಾತ್ರರಾಗಲು ನೆರವಾಗುತ್ತದೆ.

ಜ್ಞಾನ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ವಸ್ತುಗಳಿಗೆ ಗೌರವ:

ವಿದ್ಯಾರ್ಥಿಗಳಿಗೆ ಈ ದಿನ ಅತ್ಯಂತ ವಿಶೇಷ. ನಿಮ್ಮ ಲೇಖನಿ, ಪುಸ್ತಕಗಳು, ವಾದ್ಯಗಳು ಅಥವಾ ಜ್ಞಾನಕ್ಕೆ ಸಂಬಂಧಿಸಿದ ಸಾಧನಗಳನ್ನು ಪೂಜಿಸಿ ಗೌರವಿಸಿ. ಈ ಶುಭ ದಿನದಂದು ಹೊಸ ಕೋರ್ಸ್, ಹೊಸ ವಿದ್ಯೆ ಅಥವಾ ಶಿಕ್ಷಣಕ್ಕೆ ಸಂಬಂಧಿಸಿದ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅತ್ಯಂತ ಶ್ರೇಯಸ್ಕರ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Male Mahadeswara Hundi: ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ! – Kannada News | Male Mahadeswara Temple Hundi Collection Exceeds Rs. 3.37 Crore

ಚಾಮರಾಜನಗರ, ಜುಲೈ 29: ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದೆ. ದೇವಸ್ಥಾನದ ಹುಂಡಿಯಲ್ಲಿ ಭಕ್ತರು ಅರ್ಪಿಸಿದ ಕಾಣಿಕೆಯ ಮೊತ್ತವು 3 ಕೋಟಿ 37 ಲಕ್ಷ ರೂಪಾಯಿಗಳನ್ನು ದಾಟಿದೆ. ಜೂನ್ 17 ರಿಂದ ಜುಲೈ 27 ರವರೆಗಿನ 41 ದಿನಗಳ ಅವಧಿಯಲ್ಲಿ ಸಂಗ್ರಹವಾದ ಕಾಣಿಕೆ ಇದಾಗಿದೆ. ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿಗಳ ನೇತೃತ್ವದಲ್ಲಿ ಈ ಹುಂಡಿ ಎಣಿಕೆ ಕಾರ್ಯವು ನಿನ್ನೆ ಬೆಳಿಗ್ಗೆಯಿಂದ ತಡರಾತ್ರಿಯವರೆಗೂ ನಡೆಯಿತು. ನಗದು ಕಾಣಿಕೆ ಜೊತೆಗೆ ಭಕ್ತರು 58 ಗ್ರಾಂ ಚಿನ್ನ ಮತ್ತು 1 ಕೆ.ಜಿ 250 ಗ್ರಾಂ ಬೆಳ್ಳಿ ಆಭರಣಗಳನ್ನು ಸಹ ಹುಂಡಿಯಲ್ಲಿ ಸಮರ್ಪಿಸಿದ್ದಾರೆ.

ಪ್ರತಿ 41 ದಿನಗಳಿಗೊಮ್ಮೆ ನಡೆಯುವ ಹುಂಡಿ ಎಣಿಕೆ ಪ್ರಕ್ರಿಯೆಯು ಪಾರದರ್ಶಕವಾಗಿ ನಡೆಯುತ್ತದೆ. ಈ ಬಾರಿ ಸಂಗ್ರಹವಾದ ಕಾಣಿಕೆಯು ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗವಾಗಲಿದೆ. ಮಾದಪ್ಪನ ಸನ್ನಿಧಿಗೆ ಭಕ್ತರು ಅಪಾರ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದು, ತಮ್ಮ ಶ್ರದ್ಧಾ ಭಕ್ತಿಯಿಂದ ಕಾಣಿಕೆಗಳನ್ನು ಸಲ್ಲಿಸುತ್ತಿದ್ದಾರೆ. ಈ ಬಾರಿ ಸಂಗ್ರಹವಾದ ಕಾಣಿಕೆ ಮೊತ್ತವು ಹಿಂದಿನ ಅವಧಿಗಳಿಗೆ ಹೋಲಿಸಿದರೆ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಟ್ರೋಲ್ ಸಂಸ್ಕೃತಿಗೆ ಗುಡ್‌ಬೈ ಹೇಳಿ’; ಅಭಿಮಾನಿಗಳಿಗೆ ಅಲ್ಲು ಅರ್ಜುನ್ ಖಡಕ್ ಸಂದೇಶ – Kannada News | Say Goodbye to Troll Culture Actor Allu Arjun Strong Message to His Fans

ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ನಟರ ಅಭಿಮಾನಿಗಳ ನಡುವೆ ನಡೆಯುವ ಟ್ರೋಲ್ ವಾರ್ ಹಾಗೂ ದ್ವೇಷಕೆ ಬ್ರೇಕ್ ಹಾಕಲು ನಟ ಅಲ್ಲು ಅರ್ಜುನ್ ಮುಂದಾಗಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ‘ಅಲ್ಲು ಅರ್ಜುನ್ (Allu Arjun)ಫ್ಯಾನ್ಸ್ ಅಸೋಸಿಯೇಷನ್’ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು, ಅಭಿಮಾನಿಗಳಿಗೆ ಕಿವಿಮಾತೊಂದನ್ನು ನೀಡಿದ್ದಾರೆ. ಇಷ್ಟವಿಲ್ಲದವರನ್ನು ಟ್ರೋಲ್ ಮಾಡಿ ನಿಮ್ಮ ಅಮೂಲ್ಯವಾದ ಸಮಯ ಮತ್ತು ಶಕ್ತಿಯನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಕರೆ ನೀಡಿದ್ದಾರೆ.

ಹುಡುಗಿ ಮನೆ ಮುಂದೆ ಕಾಯಿರಿ, ಆದ್ರೆ ಟ್ರೋಲ್ ಮಾಡ್ಬೇಡಿ

ವೇದಿಕೆ ಮೇಲೆ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅಲ್ಲು ಅರ್ಜುನ್, ‘ನಿಮಗೆ ಯಾರಾದರೂ ಇಷ್ಟವಾಗದಿದ್ದರೆ ಅವರನ್ನು ಅಲ್ಲೇ ಬಿಟ್ಟುಬಿಡಿ. ಅವರ ಬಗ್ಗೆ ತಲೆಕೆಡಿಸಿಕೊಂಡು ನಿಮ್ಮ ಸಮಯ, ಹಣ ಹಾಗೂ ಶಕ್ತಿಯನ್ನು ವ್ಯರ್ಥ ಮಾಡಬೇಡಿ. ಯಾರನ್ನೂ ದ್ವೇಷಿಸುವುದು ಅಥವಾ ಟೀಕಿಸುವುದು ಯಾರಿಗೂ ಒಳ್ಳೆಯದಲ್ಲ. ಬೇಕಿದ್ದರೆ ನಿಮಗೆ ಇಷ್ಟವಾದ ಹುಡುಗಿಯ ಮನೆ ಮುಂದೆ ಹೋಗಿ ಕಾಯಿರಿ, ಪರವಾಗಿಲ್ಲ. ಕನಿಷ್ಠ ಆ ಸಮಯದಲ್ಲಾದರೂ ನೀವು ಖುಷಿಯಾಗಿರುತ್ತೀರಿ. ಅದನ್ನು ಬಿಟ್ಟು ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವಿಟಿ ಹರಡಬೇಡಿ’ ಎಂದು ತಮಾಷೆಯಾಗಿಯೇ ಜವಾಬ್ದಾರಿಯುತ ಸಂದೇಶ ರವಾನಿಸಿದರು.

ನನ್ನ ಮನಸ್ಸಿನಲ್ಲಿ ಆ್ಯಂಟಿ-ಫ್ಯಾನ್ಸ್‌ಗೂ ಜಾಗವಿದೆ

ತಮ್ಮನ್ನು ದ್ವೇಷಿಸುವವರ ಬಗ್ಗೆಯೂ ಔದಾರ್ಯ ತೋರಿದ ಅಲ್ಲು ಅರ್ಜುನ್, ‘ನನ್ನ ಅಭಿಮಾನಿಗಳ ಜೊತೆಗೆ ಆ್ಯಂಟಿ-ಫ್ಯಾನ್ಸ್ ಹಾಗೂ ಹೇಟರ್ಸ್ ಎಲ್ಲರಿಗೂ ನಾನೊಂದು ಮಾತು ಹೇಳಲು ಬಯಸುತ್ತೇನೆ. ನಿಮ್ಮ ಲೈಫ್ ಒಂದು ಬ್ಯಾಟರಿ ಇದ್ದಂತೆ. ಪ್ರತಿದಿನ ಅದು 100ರಷ್ಟು ಚಾರ್ಜ್ ಆಗಿರಬೇಕು. ಆ ನೂರು ಪ್ರತಿಶತ ಎನರ್ಜಿಯನ್ನು ನಿಮ್ಮ ಸ್ವಂತ ಬೆಳವಣಿಗೆಗೆ ಬಳಸಬೇಕೇ ಹೊರತು, ಬೇರೆಯವರನ್ನು ಟ್ರೋಲ್ ಮಾಡಲು 1ರಷ್ಟು ಸಮಯವನ್ನೂ ವೇಸ್ಟ್ ಮಾಡಬಾರದು’ ಎಂದು ಬುದ್ಧಿವಾದ ಹೇಳಿದರು. ಇದೇ ವೇಳೆ ಗಂಟೆಗಟ್ಟಲೆ ನಿಂತು ಅಭಿಮಾನಿಗಳಿಗೆ ಫೋಟೋ ನೀಡಿದ ನಟ, ಸಂಘ ಸ್ಥಾಪಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಇದನ್ನೂ ಓದಿ: ಅಭಿಮಾನಿಗಳಿಗೆ ಆಪತ್ಬಾಂಧವನಾದ ಅಲ್ಲು ಅರ್ಜುನ್; 900 ಫ್ಯಾನ್ಸ್​ಗೆ ಇನ್ಶೂರೆನ್ಸ್

ಎಕ್ಸ್ ಖಾತೆಯಲ್ಲಿ ಭಾವುಕ ಪೋಸ್ಟ್

ಕಾರ್ಯಕ್ರಮ ಮುಗಿದ ಬಳಿಕ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಲ್ಲು ಅರ್ಜುನ್, ‘ನನ್ನ ಮೇಲಿನ ಪ್ರೀತಿಯಿಂದ ದೇಶದ ವಿವಿಧ ಮೂಲೆಗಳಿಂದ ಬಂದಿದ್ದ ಅಭಿಮಾನಿಗಳನ್ನು ನೋಡಿ ಮನಸ್ಸು ತುಂಬಿಬಂದಿದೆ. ನಿಮ್ಮ ಈ ಅಪಾರ ಪ್ರೀತಿಗೆ ನಾನು ಸದಾ ಋಣಿಯಾಗಿರುತ್ತೇನೆ. ಮುಂದಿನ ದಿನಗಳಲ್ಲಿ ನಿಮ್ಮ ತಲೆ ಎತ್ತಿ ನಿಲ್ಲುವಂತಹ ಸಿನಿಮಾಗಳನ್ನು ಮಾಡಲು ಮತ್ತಷ್ಟು ಶ್ರಮಿಸುತ್ತೇನೆ’ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳು

ಸದ್ಯ ಅಲ್ಲು ಅರ್ಜುನ್ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಖ್ಯಾತ ನಿರ್ದೇಶಕ ಅಟ್ಲಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ‘ರಾಕಾ’ ಸಿನಿಮಾದ ಶೂಟಿಂಗ್‌ನಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಈ ಬಿಗ್ ಬಜೆಟ್ ಚಿತ್ರದ ಬೆನ್ನಲ್ಲೇ ಲೋಕೇಶ್ ಕನಗರಾಜ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾದಲ್ಲೂ ಬನ್ನಿ ಅಬ್ಬರಿಸಲಿದ್ದಾರೆ.

ಪ್ರಶ್ನೆ: ಅಲ್ಲು ಅರ್ಜುನ್ ಮುಂದಿನ ಸಿನಿಮಾ ಯಾವುದು?
ಉತ್ತರ: 
ರಾಕಾ

ಪ್ರಶ್ನೆ: ಅಲ್ಲು ಅರ್ಜುನ್ ಪತ್ನಿ ಹೆಸರೇನು?
ಉತ್ತರ: 
ಸ್ನೇಹಾ ರೆಡ್ಡಿ

ಪ್ರಶ್ನೆ: ಅಲ್ಲು ಅರ್ಜುನ್ ಮಕ್ಕಳ ಹೆಸರೇನು?
ಉತ್ತರ:
ಅಲ್ಲು ಅಯಾನ್ ಹಾಗೂ ಅಲ್ಲ ಅರ್ಹಾ

Source link

ಪಾಕ್ ಪಡೆಯನ್ನು ಮಕಾಡೆ ಮಲಗಿಸಿದ ವೆಸ್ಟ್ ಇಂಡೀಸ್ – Kannada News | WI vs PAK: Pakistan Crushed by 90 Runs as WI Clinch 1st Test

ಪಾಕಿಸ್ತಾನ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಭರ್ಜರಿ ಜಯ ಸಾಧಿಸಿದೆ. ಟ್ರಿನಿಡಾಡ್​ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ನಾಯಕ ರೋಸ್ಟನ್ ಚೇಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಮೊದಲ ಇನಿಂಗ್ಸ್:

ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಪರ ಶಾಯ್ ಹೋಪ್ (92) ಮತ್ತು ಕವೆಮ್ ಹಾಡ್ಜ್ (84) ಆಕರ್ಷಕ ಅರ್ಧಶತಕ ಬಾರಿಸಿದರು. ಈ ಹಾಫ್ ಸೆಂಚುರಿಗಳ ನೆರವಿನೊಂದಿಗೆ ವೆಸ್ಟ್ ಇಂಡೀಸ್ ತಂಡವು ಮೊದಲ ಇನಿಂಗ್ಸ್​ನಲ್ಲಿ 311 ರನ್​ಗಳಿಸಿ ಆಲೌಟ್ ಆಯಿತು.

ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಪಾಕಿಸ್ತಾನ್ ತಂಡದ ಪರ ಮಾಜಿ ನಾಯಕ ಶಾನ್ ಮಸೂದ್ (109) ಭರ್ಜರಿ ಶತಕ (109) ಸಿಡಿಸಿ ಮಿಂಚಿದ್ದರು. ಆದರೆ ವೆಸ್ಟ್ ಇಂಡೀಸ್‌ನ ಜಸ್ಟಿನ್ ಗ್ರೀವ್ಸ್ ಕೇವಲ 27 ರನ್ ನೀಡಿ 5 ವಿಕೆಟ್ ಕಬಳಿಸಿದ ಪರಿಣಾಮ ಪಾಕ್ ತಂಡವು ಪ್ರಥಮ ಇನಿಂಗ್ಸ್‌ನಲ್ಲಿ 282 ರನ್‌ಗಳಿಗೆ ಆಲೌಟ್ ಆಯಿತು.

ದ್ವಿತೀಯ ಇನಿಂಗ್ಸ್​:

ಕೇವಲ 29 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್, ಪಾಕಿಸ್ತಾನದ ವೇಗಿ ಮೊಹಮ್ಮದ್ ಅಬ್ಬಾಸ್ (5/22) ಅವರ ಸ್ವಿಂಗ್ ಬೌಲಿಂಗ್‌ಗೆ ತತ್ತರಿಸಿ ಕೇವಲ 181 ರನ್‌ಗಳಿಗೆ ಸರ್ವಪತನ ಕಂಡಿತು.

ಕೊನೆಯ ಇನಿಂಗ್ಸ್​ನಲ್ಲಿ 211 ರನ್​ಗಳ ಸುಲಭ ಗುರಿ ಪಡೆದ ಪಾಕಿಸ್ತಾನ್ ಪರ ನಾಯಕ ಬಾಬರ್ ಆಝಂ ಅಜೇಯ 58 ರನ್ ಬಾರಿಸಿದರು. ಆದರೆ ಮತ್ತೊಂದೆಡೆ ಪಾಕ್ ಬ್ಯಾಟರ್​ಗಳ ಪೆವಿಲಿಯನ್ ಪರೇಡ್ ನಡೆಸಿದ್ದರು. ಪರಿಣಾಮ ಪಾಕ್ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ ಕೇವಲ 120 ರನ್​ಗಳಿಗೆ ಆಲೌಟ್ ಆಯಿತು. ವೆಸ್ಟ್ ಇಂಡೀಸ್ ಪರ ಮಿಂಚಿನ ದಾಳಿ ಸಂಘಟಿಸಿದ ಜೇಡನ್ ಸೀಲ್ಸ್ ಕೇವಲ 20 ರನ್ ನೀಡಿ 5 ವಿಕೆಟ್ ಕಬಳಿಸಿದರು.

ವೆಸ್ಟ್ ಇಂಡೀಸ್​ಗೆ ಅಮೋಘ ಜಯ:

211 ರನ್​ಗಳ ಸುಲಭ ಗುರಿ ಬೆನ್ನತ್ತಿದ ಪಾಕಿಸ್ತಾನ್ ತಂಡವನ್ನು 120 ರನ್​ಗಳಿಗೆ ಆಲೌಟ್ ಮಾಡುವ ಮೂಲಕ ವೆಸ್ಟ್ ಇಂಡೀಸ್ ತಂಡವು 90 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ವಿಂಡೀಸ್ ಪಡೆ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

ಪಾಕಿಸ್ತಾನ್ ಪ್ಲೇಯಿಂಗ್ 11: ಅಝಾನ್ ಅವೈಸ್ , ಇಮಾಮ್-ಉಲ್-ಹಕ್ , ಶಾನ್ ಮಸೂದ್ , ಬಾಬರ್ ಆಝಂ (ನಾಯಕ) ,
ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಸಲ್ಮಾನ್ ಅಘಾ , ಅಮೀರ್ ಜಮಾಲ್ , ಅಲಿ ಉಸ್ಮಾನ್ , ಖುರ್ರಂ ಶಹಝಾದ್ , ಮೊಹಮ್ಮದ್ ಅಲಿ , ಮೊಹಮ್ಮದ್ ಅಬ್ಬಾಸ್.

ಇದನ್ನೂ ಓದಿ: ಅಬ್ಬರ ಸಿಡಿಲಬ್ಬರ… ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿದ ಸ್ಮೃತಿ ಮಂಧಾನ!

ವೆಸ್ಟ್ ಇಂಡೀಸ್ ಪ್ಲೇಯಿಂಗ್ 11:  ಬ್ರಾಂಡನ್ ಕಿಂಗ್ , ತೇಜ್​ನರೈನ್ ಚಂದ್ರಪಾಲ್ , ಕವೆಮ್ ಹಾಡ್ಜ್ , ಶಾಯ್ ಹೋಪ್ (ವಿಕೆಟ್ ಕೀಪರ್ ), ಅಮೀರ್ ಜಾಂಗೊ,  ಜಸ್ಟಿನ್ ಗ್ರೀವ್ಸ್ , ರೋಸ್ಟನ್ ಚೇಸ್ (ನಾಯಕ) , ಕೆಮರ್ ರೋಚ್ , ಜೋಮೆಲ್ ವಾರಿಕನ್ , ಶಮರ್ ಜೋಸೆಫ್ , ಜೇಡನ್ ಸೀಲ್ಸ್.

Source link

ಅಯೋಧ್ಯಾ ರಾಮ ಮಂದಿರ ಟ್ರಸ್ಟ್‌ಗೆ ಹೊಸ ಕಾರ್ಯದರ್ಶಿ ನೇಮಕ: ಜಗದೀಶ್ ಅಫ್ಲೆ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ – Kannada News | Ayodhya Ram Mandir Trust Appoints Jagdish Afle as New Secretary: IIT Alumnus and RSS Volunteer

ಅಯೋಧ್ಯೆ, ಜುಲೈ 29: ಅಯೋಧ್ಯೆಯ ಶ್ರೀ ರಾಮ ಮಂದಿರ(Ram Mandir)ದಲ್ಲಿ ನಡೆದ ದೇಣಿಗೆ ಕಳ್ಳತನ ಪ್ರಕರಣ ಹಾಗೂ ಆಡಳಿತಾತ್ಮಕ ಬದಲಾವಣೆಗಳ ನಡುವೆಯೇ ಟ್ರಸ್ಟ್ ಮಹತ್ವದ ನಿರ್ಧಾರ ತಳೆದಿದೆ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವ ಹಂತದಲ್ಲೇ, ಟ್ರಸ್ಟ್‌ನ ಮೊದಲ ‘ಕಾರ್ಯದರ್ಶಿ’ ಹುದ್ದೆಗೆ ಜಗದೀಶ್ ಅಫ್ಲೆ ಅವರನ್ನು ನೇಮಿಸಲಾಗಿದೆ. ಸೆಪ್ಟೆಂಬರ್ 2 ರಂದು ನಡೆಯಲಿರುವ ಟ್ರಸ್ಟ್‌ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಇವರ ನೇಮಕಾತಿಗೆ ಅಧಿಕೃತ ಮುದ್ರೆ ಬೀಳಲಿದ್ದು, ಪ್ರಸ್ತುತ ಎಸ್‌ಬಿಐ ಬ್ಯಾಂಕ್ ಖಾತೆಗಳ ನಿರ್ವಹಣೆಗಾಗಿ ಅಫ್ಲೆ ಅವರನ್ನು ಅಧಿಕೃತ ಸಹಿದಾರರನ್ನಾಗಿ ನೇಮಿಸಲಾಗಿದೆ.

ಯಾರೀ ಜಗದೀಶ್ ಅಫ್ಲೆ?
ಮಹಾರಾಷ್ಟ್ರದ ಪುಣೆ ಮೂಲದವರಾದ ಜಗದೀಶ್ ಅಫ್ಲೆ ಅವರು ಪ್ರತಿಷ್ಠಿತ ಐಐಟಿ ಬಾಂಬೆಯಿಂದ ಬಿ.ಟೆಕ್ ಹಾಗೂ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಎಂ.ಟೆಕ್ ಪದವಿ ಪಡೆದಿದ್ದಾರೆ. ಅಮೆರಿಕ ಹಾಗೂ ಹಲವು ಯುರೋಪಿಯನ್ ದೇಶಗಳ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡಿದ ಅನುಭವ ಇವರಿಗಿದೆ.

ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿರುವ ಅಫ್ಲೆ, ವಿದೇಶದಿಂದ ನಿವೃತ್ತರಾಗಿ ಮರಳಿದ ನಂತರ ರಾಮಮಂದಿರ ನಿರ್ಮಾಣ ಆರಂಭವಾದ ದಿನದಿಂದಲೂ ಯಾವುದೇ ವೇತನ ಪಡೆಯದೇ ಯೋಜನಾ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಅವರು ತಮ್ಮ ಪತ್ನಿಯೊಂದಿಗೆ ಅಯೋಧ್ಯೆಯ ತೀರ್ಥ ಕ್ಷೇತ್ರ ಭವನದಲ್ಲೇ ನೆಲೆಸಿದ್ದಾರೆ.

ಮತ್ತಷ್ಟು ಓದಿ: ರಾಮ ಮಂದಿರ ದೇಣಿಗೆ ಹಗರಣ:ಬೆಳಗ್ಗೆ ಫೋನ್ ಕಾಲ್, ಮಧ್ಯಾಹ್ನ ಕೋಟಿ ಕಳ್ಳತನ, ಏನೇನೆಲ್ಲಾ ನಡೀತು?

ಜುಲೈ 6 ರಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಡಾ. ಅನಿಲ್ ಮಿಶ್ರಾ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ ನಂತರ, ಬ್ಯಾಂಕ್ ವಹಿವಾಟು ನಡೆಸಲು ಸಹಿದಾರರಿಲ್ಲದೆ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಸುಮಾರು 1,000 ಸಿಬ್ಬಂದಿಯ ಜೂನ್ ತಿಂಗಳ ವೇತನ ಹಾಗೂ ಹೊರಗುತ್ತಿಗೆ ಸಂಸ್ಥೆಗಳ ಪಾವತಿ ವಿಳಂಬವಾಗಿತ್ತು.

ಈ ಸಮಸ್ಯೆಗೆ ಪರಿಹಾರವಾಗಿ, ಮಧ್ಯಂತರ ಪ್ರಧಾನ ಕಾರ್ಯದರ್ಶಿ ಕೃಷ್ಣ ಮೋಹನ್ ಹಾಗೂ ಕಾರ್ಯದರ್ಶಿ ಜಗದೀಶ್ ಅಫ್ಲೆ ಅವರನ್ನು ಸಹಿದಾರರನ್ನಾಗಿ ಎಸ್‌ಬಿಐಗೆ ಟ್ರಸ್ಟ್ ಪ್ರಸ್ತಾವನೆ ಸಲ್ಲಿಸಿದ್ದು, ಸದ್ಯ ಹಣಕಾಸು ವಹಿವಾಟು ಸುಗಮಗೊಂಡಿದೆ.

ಸಿಇಒ ಹುದ್ದೆಗೆ 5,200 ಅರ್ಜಿಗಳು
ಟ್ರಸ್ಟ್‌ನ ಸಿಇಒ ಹುದ್ದೆಗಾಗಿ ಬರೋಬ್ಬರಿ5,200 ಅರ್ಜಿಗಳು ಬಂದಿದ್ದು, ನಿವೃತ್ತ ನ್ಯಾಯಾಧೀಶ ಪ್ರಮೋದ್ ಕೊಹ್ಲಿ ನೇತೃತ್ವದ ಸಮಿತಿಯು ಇವುಗಳ ಪರಿಶೀಲನೆ ನಡೆಸುತ್ತಿದೆ. ಸಿಇಒ ಹಾಗೂ ಅಧಿಕೃತ ವಕ್ತಾರರ ನೇಮಕಾತಿಯನ್ನು ಸೆಪ್ಟೆಂಬರ್ 2 ರ ಸಭೆಯಲ್ಲಿ ಅಂತಿಮಗೊಳಿಸುವ ಸಾಧ್ಯತೆಯಿದೆ.

ಆಡಳಿತಾತ್ಮಕ ಸುಧಾರಣೆ: ರಾಮಮಂದಿರ ಉದ್ಘಾಟನೆಯ ನಂತರ ಲಕ್ಷಾಂತರ ಭಕ್ತರು ಆಗಮಿಸುತ್ತಿರುವುದರಿಂದ ಹಾಗೂ ದೇಣಿಗೆ ಕಳ್ಳತನದಂತಹ ಆಡಳಿತಾತ್ಮಕ ಲೋಪಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ, ಟ್ರಸ್ಟ್ ತನ್ನ ನಿರ್ವಹಣಾ ವ್ಯವಸ್ಥೆಯನ್ನು ವೃತ್ತಿಪರಗೊಳಿಸಲು ಸಿಇಒ ಹಾಗೂ ಕಾರ್ಯದರ್ಶಿ ಹುದ್ದೆಗಳನ್ನು ಸೃಷ್ಟಿಸಿದೆ.

ಆಡಿಟಿಂಗ್ ಮತ್ತು ತಂತ್ರಜ್ಞಾನ ಆಧಾರಿತ ಕಾವಲು: ದೇಣಿಗೆ ಸಂಗ್ರಹದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಕ್ಯೂಆರ್ ಕೋಡ್, ಡಿಜಿಟಲ್ ಸ್ವೀಕೃತಿ ಹಾಗೂ ಸಿಸಿಟಿವಿ ಕಣ್ಗಾವಲನ್ನು ಹೆಚ್ಚಿಸಲು ನೂತನ ಆಡಳಿತ ಮಂಡಳಿ ನಿರ್ಧರಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version