12 ವರ್ಷಗಳ ಅಭಿವೃದ್ಧಿ, ವಿಶ್ವಾಸ ಮತ್ತು ಸಾರ್ವಜನಿಕ ಕಲ್ಯಾಣ: ದೇಶವನ್ನು ಬಲಪಡಿಸುವಲ್ಲಿ ಯಾವುದೇ ಅವಕಾಶ ಬಿಟ್ಟುಕೊಟ್ಟಿಲ್ಲ: ಪ್ರಧಾನಿ ಮೋದಿ – Kannada News

ನವದೆಹಲಿ, ಜೂನ್ 09: ಭಾರತದ ಪ್ರಧಾನಿಯಾಗಿ ಅತ್ಯಂತ ಯಶಸ್ವಿಯಾಗಿ ಮತ್ತು ಗೌರವಾನ್ವಿತವಾಗಿ 12 ವರ್ಷಗಳ ಸುದೀರ್ಘ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ಐತಿಹಾಸಿಕ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ದೇಶದ ಜನತೆಗೆ ಭಾವುಕ ಹಾಗೂ ಕೃತಜ್ಞತೆಯ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಭಾರತದ ಇತಿಹಾಸದಲ್ಲೇ ಸತತವಾಗಿ ಅತಿ ದೀರ್ಘ ಅವಧಿಗೆ ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅವರು, ಮುಂಬರುವ ದಿನಗಳಲ್ಲೂ ದೇಶವನ್ನು ಸಮೃದ್ಧಿಯ ಪಥದಲ್ಲಿ ಮುನ್ನಡೆಸುವ ಅಚಲ ಸಂಕಲ್ಪವನ್ನು ಪುನರುಚ್ಚರಿಸಿದ್ದಾರೆ.

ಮಂಗಳವಾರ (ಜೂನ್ 9, 2026) ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಆಡಳಿತದ ಸಾಧನೆ ಮತ್ತು ದೇಶದ ಪರಿವರ್ತನೆಯನ್ನು ಸ್ಮರಿಸುತ್ತಾ ಪ್ರಧಾನಿ ಮೋದಿ ಅವರು ಹಂಚಿಕೊಂಡಿರುವ ದೇಶಪ್ರೇಮದ ಸಂದೇಶದ ಮುಖ್ಯಾಂಶಗಳು ಇಲ್ಲಿವೆ.

ದೇಶದ ಆಶೀರ್ವಾದವೇ ನನ್ನ ಶಕ್ತಿ
ತಮ್ಮ ಸುದೀರ್ಘ ಆಡಳಿತದ ಯಶಸ್ಸನ್ನು ದೇಶದ ಜನತೆಗೆ ಸಮರ್ಪಿಸಿದ ಪ್ರಧಾನಿ ಮೋದಿ, ರಾಷ್ಟ್ರದ ಪ್ರತಿಯೊಬ್ಬ ನಾಗರಿಕನ ಸಬಲೀಕರಣವೇ ತಮ್ಮ ಸರ್ಕಾರದ ಪರಮೋಚ್ಚ ಗುರಿಯಾಗಿದೆ ಎಂದು ತಿಳಿಸಿದ್ದಾರೆ.

ನಮ್ಮ ಸರ್ಕಾರದ ಕಳೆದ 12 ವರ್ಷಗಳು ಸಂಪೂರ್ಣವಾಗಿ ಜನರ ನಂಬಿಕೆ, ದೇಶದ ಅಭಿವೃದ್ಧಿ ಮತ್ತು ಸಾರ್ವಜನಿಕ ಕಲ್ಯಾಣಕ್ಕೆ ಮೀಸಲಾಗಿವೆ. 1.4 ಶತಕೋಟಿ ದೇಶವಾಸಿಗಳ ಅಚಲವಾದ ಆಶೀರ್ವಾದ ಮತ್ತು ‘ಮೊದಲು ರಾಷ್ಟ್ರ’ ಎಂಬ ದೃಢ ಮನೋಭಾವದೊಂದಿಗೆ, ನಾವು ನಮ್ಮ ದೇಶದ ಯುವಕರು, ಮಹಿಳೆಯರು ಹಾಗೂ ಅನ್ನದಾತ ರೈತ ಸಹೋದರ ಸಹೋದರಿಯರನ್ನು ಸಬಲೀಕರಣಗೊಳಿಸುವಲ್ಲಿ ಯಾವುದೇ ಅವಕಾಶವನ್ನು ಬಿಟ್ಟುಕೊಟ್ಟಿಲ್ಲ ಎಂದಿದ್ದಾರೆ.

ಮತ್ತಷ್ಟು ಓದಿ: ಸುದೀರ್ಘ ಪ್ರಧಾನಿ: ನೆಹರು ದಾಖಲೆ ಮುರಿದ ನರೇಂದ್ರ ಮೋದಿ ನಾಯಕತ್ವ ಕೊಂಡಾಡಿದ ಚಂದ್ರಬಾಬು ನಾಯ್ಡು, ಹೆಚ್.ಡಿ. ದೇವೇಗೌಡ

ಜಾಗತಿಕ ರಂಗದಲ್ಲಿ ಭಾರತಕ್ಕೆ ಹೊಸ ಗುರುತು
ಮೂಲಸೌಕರ್ಯಗಳ ಆಧುನೀಕರಣದಿಂದ ಹಿಡಿದು ಜಗತ್ತೇ ಬೆರಗಾಗುವಂತೆ ಮಾಡಿರುವ ಡಿಜಿಟಲ್ ಕ್ರಾಂತಿಯವರೆಗೆ ಭಾರತದ ಅವಿರತ ಪ್ರಯತ್ನಗಳನ್ನು ಪ್ರಧಾನಿ ಉಲ್ಲೇಖಿಸಿದ್ದಾರೆ. ಈ ಬಹುಮುಖಿ ಪ್ರಗತಿಯ ಫಲವಾಗಿ ಇಂದು ಇಡೀ ಪ್ರಪಂಚದಾದ್ಯಂತ ಭಾರತವು ಅತ್ಯಂತ ಗೌರವಾನ್ವಿತ ಮತ್ತು ಹೊಸ ಗುರುತನ್ನು ಗಳಿಸಿದೆ ಎಂದು ಅವರು ಹೆಮ್ಮೆಯಿಂದ ಹೇಳಿದ್ದಾರೆ. 2047 ರ ವೇಳೆಗೆ ‘ವಿಕಸಿತ ಭಾರತ’ (ಅಭಿವೃದ್ಧಿ ಹೊಂದಿದ ಭಾರತ) ಎಂಬ ಮಹತ್ವಾಕಾಂಕ್ಷೆಯ ಸಂಕಲ್ಪವನ್ನು ಸಾಕಾರಗೊಳಿಸಲು ನಾವು ಸೇವೆ, ಉತ್ತಮ ಆಡಳಿತ ಮತ್ತು ಸಮೃದ್ಧಿಯ ಇದೇ ಹಾದಿಯಲ್ಲಿ ಇನ್ನಷ್ಟು ವೇಗವಾಗಿ ಮುಂದುವರಿಯಲಿದ್ದೇವೆ ಎಂದು ಅವರು ಭರವಸೆ ನೀಡಿದ್ದಾರೆ.

ಭಾರತದ ರಾಜಕೀಯ ಇತಿಹಾಸದಲ್ಲೇ ಅಪ್ರತಿಮ ಮೈಲಿಗಲ್ಲು
ಮೇ 26, 2014 ರಂದು ಪ್ರಧಾನಿ ಮೋದಿ ಅವರು ಮೊದಲ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ತದನಂತರ ಜೂನ್ 9, 2024 ರಂದು ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಜನಾಶೀರ್ವಾದ ಪಡೆಯುವ ಮೂಲಕ ಅವರು ಸ್ವತಂತ್ರ ಭಾರತದ ರಾಜಕೀಯ ಇತಿಹಾಸದಲ್ಲೇ ಭವ್ಯ ಚರಿತ್ರೆ ಬರೆದರು.

ಐತಿಹಾಸಿಕ ಮೈಲಿಗಲ್ಲು: ಜೂನ್ 9, 2026 ರ ಇಂದಿನ ದಿನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರದಲ್ಲಿ ನಿರಂತರವಾಗಿ 4,398 ದಿನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ದೀರ್ಘಾವಧಿಯೊಂದಿಗೆ, ಸ್ವತಂತ್ರ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಮೊದಲ ಸಾರ್ವತ್ರಿಕ ಚುನಾವಣೆಯ ನಂತರ ಹೊಂದಿದ್ದ ಸತತ ಆಡಳಿತದ ದಾಖಲೆಯನ್ನು ಹಿಂದಿಕ್ಕಿರುವ ನರೇಂದ್ರ ಮೋದಿ ಅವರು, ಭಾರತದಲ್ಲಿ ಸತತವಾಗಿ ಅತಿ ಹೆಚ್ಚು ಕಾಲ ಚುನಾಯಿತರಾದ ಮೊದಲ ಪ್ರಧಾನಿ ಎಂಬ ಅಪ್ರತಿಮ ಜಾಗತಿಕ ಕೀರ್ತಿಗೆ ಪಾತ್ರರಾಗಿದ್ದಾರೆ.

ದಶಕದ ಸುಸ್ಥಿರ ಆಡಳಿತ, ಆರ್ಥಿಕ ಸ್ಥಿರತೆ ಮತ್ತು ಬಡವರ ಕಲ್ಯಾಣ ಯೋಜನೆಗಳ ಮೂಲಕ ನವ ಭಾರತದ ನಾಯಕನಾಗಿ ಹೊರಹೊಮ್ಮಿರುವ ಪ್ರಧಾನಿ ಮೋದಿಯವರ ಈ ಯಶಸ್ಸು ಇಡೀ ದೇಶದ ಪ್ರಜಾಪ್ರಭುತ್ವದ ಶಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ವಿಶ್ಲೇಷಕರು ಬಣ್ಣಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 3:16 pm, Tue, 9 June 26

Source link

Karnataka Teaching Jobs: ಅತಿಥಿ ಉಪನ್ಯಾಸಕ ಹುದ್ದೆಗಳ ಆಕಾಂಕ್ಷಿಗಳಿಗೆ ಸುವರ್ಣಾವಕಾಶ; ನೇಮಕಾತಿ ವೇಳಾಪಟ್ಟಿ ಪ್ರಕಟ! – Kannada News

ಅತಿಥಿ ಉಪನ್ಯಾಸಕರ ಹುದ್ದೆImage Credit source: Pinterest

ಕಾಲೇಜು ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಕರ್ನಾಟಕ ಸರ್ಕಾರವು ಭರ್ಜರಿ ಸುದ್ದಿ ನೀಡಿದೆ. ಕಾಲೇಜು ಶಿಕ್ಷಣ ಇಲಾಖೆಯು 2026-27ನೇ ಶೈಕ್ಷಣಿಕ ಸಾಲಿಗಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಸರ್ಕಾರಿ ಸಂಸ್ಕೃತ ಮತ್ತು ಚಿತ್ರಕಲಾ ಕಾಲೇಜುಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ (Guest Lecturers) ಹುದ್ದೆಗಳ ಆಯ್ಕೆ ಪ್ರಕ್ರಿಯೆಯ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಬೋಧನಾ ಕಾರ್ಯಭಾರಕ್ಕೆ ಅನುಗುಣವಾಗಿ ಮೆರಿಟ್ ಮತ್ತು ಕೌನ್ಸೆಲಿಂಗ್ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.

ಜೂನ್ 21 ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ:

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜೂನ್ 21 ರಿಂದ ಇಲಾಖೆಯ ಅಧಿಕೃತ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅತಿಥಿ ಉಪನ್ಯಾಸಕ ಹುದ್ದೆಗಳಿಗೆ (ಗ್ರಂಥಪಾಲಕರು ಮತ್ತು ದೈಹಿಕ ಶಿಕ್ಷಣ ನಿರ್ದೇಶಕರು ಸೇರಿದಂತೆ) ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ನಿಗದಿತ ಸಮಯದೊಳಗೆ ತಮ್ಮ ಅರ್ಜಿಯನ್ನು ಪೂರ್ಣಗೊಳಿಸಬೇಕಾಗಿದ್ದು, ಅರ್ಜಿ ಸಲ್ಲಿಸಲು ಜೂನ್ 27 ಕೊನೆಯ ದಿನಾಂಕವಾಗಿರುತ್ತದೆ.

ಜೂನ್ 28 ಕ್ಕೆ ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟ:

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ವಿದ್ಯಾರ್ಹತೆ ಮತ್ತು ಅರ್ಹತೆಯ ಆಧಾರದ ಮೇಲೆ ಸಿದ್ಧಪಡಿಸಲಾದ ತಾತ್ಕಾಲಿಕ ಮೆರಿಟ್ ಪಟ್ಟಿಯನ್ನು (Temporary Merit List) ಜೂನ್ 28 ರಂದು ಅಧಿಕೃತವಾಗಿ ಪ್ರಕಟಿಸಲಾಗುವುದು. ಅಭ್ಯರ್ಥಿಗಳು ತಮ್ಮ ಅರ್ಜಿಯಲ್ಲಿ ಯಾವುದೇ ಬದಲಾವಣೆ ಅಥವಾ ತಪ್ಪುಗಳಿದ್ದಲ್ಲಿ ಅವುಗಳನ್ನು ಸರಿಪಡಿಸಲು ಜೂನ್ 29 ಮತ್ತು 30 ರವರೆಗೆ ಎರಡು ದಿನಗಳ ಕಾಲ ಅರ್ಜಿ ತಿದ್ದುಪಡಿ (Edit Option) ಮಾಡಲು ಇಲಾಖೆಯು ಅವಕಾಶ ನೀಡಿದೆ.

ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ; 6,565 ಟೆಕ್ನೀಷಿಯನ್ ಹುದ್ದೆಗೆ ಅರ್ಜಿ ಆಹ್ವಾನ

ಜುಲೈ 1 ಕ್ಕೆ ಕಾರ್ಯಭಾರ (Workload) ವಿವರ ಬಿಡುಗಡೆ:

ರಾಜ್ಯದ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಲಭ್ಯವಿರುವ ಒಟ್ಟು ಬೋಧನಾ ಕಾರ್ಯಭಾರದ (Workload) ಸಂಪೂರ್ಣ ವಿವರಗಳನ್ನು ಜುಲೈ 01, 2026 ರಂದು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಇದರಿಂದ ಅಭ್ಯರ್ಥಿಗಳು ತಮಗೆ ಸೂಕ್ತವಾದ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಲು ಸುಲಭವಾಗುತ್ತದೆ. ತದನಂತರ ಮೆರಿಟ್ ಪಟ್ಟಿಯ ಆಧಾರದ ಮೇಲೆ ಕಾಲೇಜು ಆಯ್ಕೆಗಾಗಿ ಜುಲೈ 07 ರಿಂದ ಆನ್‌ಲೈನ್ ಕೌನ್ಸೆಲಿಂಗ್ (Online Counselling) ಪ್ರಕ್ರಿಯೆಯು ಅಧಿಕೃತವಾಗಿ ಆರಂಭವಾಗಲಿದೆ.

ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ:

ಅತಿಥಿ ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ, ಅರ್ಜಿ ಸಲ್ಲಿಕೆ ಮತ್ತು ಮುಂದಿನ ಅಪ್‌ಡೇಟ್‌ಗಳಿಗಾಗಿ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್‌ ಆದ dce.karnataka.gov.in ಗೆ ಭೇಟಿ ನೀಡಲು ಕೋರಲಾಗಿದೆ. ಕೊನೆಯ ದಿನದ ವರೆಗೆ ಕಾಯದೇ ಅಭ್ಯರ್ಥಿಗಳು ಆದಷ್ಟು ಬೇಗ ಅರ್ಜಿ ಸಲ್ಲಿಸುವುದು ಉತ್ತಮ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೋಮವಾರದ ಪರೀಕ್ಷೆಯಲ್ಲಿ ಹಿನ್ನಡೆ ಕಂಡ ಬಾಬಿ ಡಿಯೋಲ್ ನಟನೆಯ ‘ಬಂದರ್’ ಸಿನಿಮಾ – Kannada News

ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಹೊಸ ಸಿನಿಮಾ ‘ಬಂದರ್’ (Bandar) ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಮಾಡಿಲ್ಲ. ಬಾಬಿ ಡಿಯೋಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಕ್ರೈಮ್ ಥ್ರಿಲ್ಲರ್ ಸಿನಿಮಾ ಜೂನ್ 4ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಯಿತು. ಚಿತ್ರದಲ್ಲಿ ಬಾಬಿ ಡಿಯೋಲ್ (Bobby Deol) ಅವರ ನಟನೆಗೆ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆಯಾದರೂ, ಇದು ಗಲ್ಲಾಪೆಟ್ಟಿಗೆಯ ಗಳಿಕೆಯಲ್ಲಿ ದೊಡ್ಡ ಮಟ್ಟದ ಯಶಸ್ಸು ತರುತ್ತಿಲ್ಲ. ಮೊದಲ ಸೋಮವಾರ (ಜೂನ್ 9) ಚಿತ್ರದ ಕಲೆಕ್ಷನ್‌ನಲ್ಲಿ ಭಾರಿ ಕುಸಿತ ಕಂಡುಬಂದಿದೆ.

ಪ್ರಸಿದ್ಧ ಬಾಕ್ಸ್ ಆಫೀಸ್ ಟ್ರ್ಯಾಕರ್ ‘ಸ್ಯಾಕ್ನಿಲ್ಕ್’ ವರದಿಯ ಪ್ರಕಾರ, ‘ಬಂದರ್’ ಸಿನಿಮಾ ತನ್ನ ನಾಲ್ಕನೇ ದಿನವಾದ ಸೋಮವಾರದಂದು ಅತ್ಯಂತ ಕಡಿಮೆ ಗಳಿಕೆಯನ್ನು ದಾಖಲಿಸಿದೆ. ಚಿತ್ರವು ಸೋಮವಾರ ಕೇವಲ 24 ಲಕ್ಷ ರೂಪಾಯಿ ಗಳಿಸಲಷ್ಟೇ ಶಕ್ತವಾಗಿದೆ. ಮೊದಲ ದಿನ (ಗುರುವಾರ) 50 ಲಕ್ಷ ರೂಪಾಯಿ ಕಲೆಕ್ಷನ್ ಆಗಿತ್ತು. ಶನಿವಾರ 95 ಲಕ್ಷ ರೂಪಾಯಿ, ಭಾನುವಾರ 1 ಕೋಟಿ ರೂಪಾಯಿ ಗಳಿಸಿತ್ತು.

ವಿಭಿನ್ನ ಕಥಾಹಂದರ ಹೊಂದಿರುವ ‘ಬಂದರ್’ ಸಿನಿಮಾಗೆ ಚಿತ್ರಮಂದಿರಗಳಲ್ಲಿ ಇತರ ದೊಡ್ಡ ಸಿನಿಮಾಗಳಿಂದ ಭಾರಿ ಪೈಪೋಟಿ ಎದುರಾಗಿದೆ. ವರುಣ್ ಧವನ್ ನಟನೆಯ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’, ಹಾಲಿವುಡ್ ಹಾರರ್ ಸಿನಿಮಾ ‘ಒಬ್ಸೆಷನ್’, ರಾಮ್ ಚರಣ್ ನಟನೆಯ ತೆಲುಗು ಚಿತ್ರ ‘ಪೆದ್ದಿ’ ಮತ್ತು ಹೊಸ ಹೀ-ಮ್ಯಾನ್ ಸಿನಿಮಾ ‘ಮಾಸ್ಟರ್ಸ್ ಆಫ್ ದಿ ಯೂನಿವರ್ಸ್’ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಪೈಪೋಟಿ ನೀಡುತ್ತಿವೆ.

ಇದನ್ನೂ ಓದಿ: ‘ಹಸಿಬಿಸಿ ಸೀನ್ ಬಗ್ಗೆ ಪತ್ನಿಗೆ ಆಮೇಲೆ ಗೊತ್ತಾಗಿದ್ದರೆ ಸಂಕಷ್ಟಕ್ಕೆ ಸಿಲುಕುತ್ತಿದ್ದೆ’: ಬಾಬಿ ಡಿಯೋಲ್

ನೈಜ ಘಟನೆಗಳಿಂದ ಪ್ರೇರಿತವಾಗಿರುವ ಈ ಕ್ರೈಮ್ ಥ್ರಿಲ್ಲರ್ ಚಿತ್ರಕ್ಕೆ ಸುದೀಪ್ ಶರ್ಮಾ ಮತ್ತು ಅಭಿಷೇಕ್ ಬ್ಯಾನರ್ಜಿ ಕಥೆ ಬರೆದಿದ್ದಾರೆ. ಚಿತ್ರದಲ್ಲಿ ಬಾಬಿ ಡಿಯೋಲ್ ಅವರು ಚಲನಚಿತ್ರ ರಂಗದಲ್ಲಿ ಸತತ ಸೋಲುಗಳನ್ನು ಕಂಡು ಕೆರಿಯರ್‌ನಲ್ಲಿ ಹಿನ್ನಡೆ ಅನುಭವಿಸುತ್ತಿರುವ ಗಾಯಕ ಮತ್ತು ನಟ ಸಮರ್ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಗಾಯತ್ರಿ (ಸಪ್ನಾ ಪಬ್ಬಿ) ಎಂಬ ಮಹಿಳೆ ಸಮರ್ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದಾಗ ಆತನ ಜೀವನ ಸಂಪೂರ್ಣವಾಗಿ ಬದಲಾಗುತ್ತದೆ. ಕಾನೂನು ಹೋರಾಟದ ಚಕ್ರವ್ಯೂಹದಲ್ಲಿ ಸಿಲುಕುವ ಸಮರ್, ‘ಬಂದರ್’ (ಕೋತಿ) ರೀತಿ ಒಂದೊಂದೇ ಅಡೆತಡೆಗಳನ್ನು ಹೇಗೆ ದಾಟಬೇಕಾಗುತ್ತದೆ ಎಂಬುದೇ ಚಿತ್ರದ ಮುಖ್ಯ ಕಥಾಹಂದರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರೈಲುಗಳಲ್ಲಿ ಇನ್ಮುಂದೆ ಮತ್ತೆ ಅಡುಗೆ ಶುರು; ಆದರೆ, ಎಲ್​ಪಿಜಿ ಬದಲು ಇಂಡಕ್ಷನ್ ಸ್ಟೌವ್ ಬಳಲು ನಿರ್ಧಾರ – Kannada News

ನವದೆಹಲಿ, ಜೂನ್ 9: ಎಲ್‌ಪಿಜಿ (LPG) ಅನಿಲ ಪೂರೈಕೆಯಲ್ಲಿನ ನಿರ್ಬಂಧ ಮತ್ತು ಸುರಕ್ಷತೆಯ ದೃಷ್ಟಿಯಿಂದ, ರೈಲುಗಳಲ್ಲಿ ಅಡುಗೆ ಮಾಡುವ ವಿಧಾನವನ್ನು ಬದಲಾಯಿಸಲು ಭಾರತೀಯ ರೈಲ್ವೆ ಮತ್ತು ಐಆರ್‌ಸಿಟಿಸಿ (IRCTC) ಮುಂದಾಗಿವೆ. ಇನ್ನು ಮುಂದೆ ರೈಲು ಪ್ರಯಾಣಿಕರಿಗೆ ಒದಗಿಸಲು ಆಹಾರ ತಯಾರಿಕೆಗೆ ಎಲ್​ಪಿಜಿ ಬದಲು ಇಂಡಕ್ಷನ್ ಸ್ಟೌವ್ ಬಳಸುವ ಪ್ರಸ್ತಾಪ ಇದೆ. ಹಾಗೆಯೇ, ರೈಲುಗಳ ಅಡುಗೆ ಕೋಣೆಯಲ್ಲೂ (ಪ್ಯಾಂಟ್ರಿ ರೂಮ್) ಇಂಡಕ್ಷನ್ ಸ್ಟೌವ್‌ಗಳನ್ನು (Induction Stoves) ಬಳಸಲು ನಿರ್ಧರಿಸಲಾಗಿದೆ. ಇದರೊಂದಿಗೆ ವರ್ಷಗಳ ನಂತರ ರೈಲು ಪ್ಯಾಂಟ್ರಿಯಲ್ಲಿ ಅಡುಗೆ ಭಾಗ್ಯ ಮರಳಿದಂತಾಗಿದೆ.

ರೈಲುಗಳಲ್ಲಿ ಎಲ್​ಪಿಜಿ ಸಿಲಿಂಡರ್‌ಗಳನ್ನು ಒಯ್ಯುವುದು ಅಗ್ನಿ ಅವಘಡಗಳ ದೃಷ್ಟಿಯಿಂದ ಅಪಾಯಕಾರಿ. ಈ ಕಾರಣಕ್ಕೆ ರೈಲಿನೊಳಗೆ ಎಲ್​ಪಿಜಿ ಇಡುವುದನ್ನು ಇಲಾಖೆ ನಿರ್ಬಂಧಿಸಿತ್ತು. ಈಗ ಗ್ಯಾಸ್ ಸಿಲಿಂಡರ್​ಗೆ ಪರ್ಯಾಯವಾಗಿರುವ ವಿದ್ಯುತ್ ಚಾಲಿತ ಇಂಡಕ್ಷನ್ ಸ್ಟೌವ್ ಬಳಸಲು ಅನುಮತಿಸುತ್ತಿದೆ. ಅಲ್ಲದೆ, ಗ್ಯಾಸ್ ಸಿಲಿಂಡರ್‌ಗಳ ಲಭ್ಯತೆಯ ಸಮಸ್ಯೆ ಇರುವುದರಿಂದ ಎಲೆಕ್ಟ್ರಿಕ್ ಸ್ಟೌವ್​ಗೆ ಮಣೆ ಹಾಕಲಾಗುತ್ತಿದೆ.

ಇದನ್ನೂ ಓದಿ: ಹೊಸ DL, ವಾಹನ ನಿಯಮ: ಪರವಾನಗಿ ಅವಧಿ ವಿಸ್ತರಣೆ, ಆನ್​ಲೈನ್​ನಲ್ಲೇ ವಾಹನ ಮಾಲಕತ್ವ ವರ್ಗಾವಣೆ

ರೈಲ್ವೆ ಅಡುಗೆ ವ್ಯವಸ್ಥೆಯನ್ನು ಹೆಚ್ಚು ಸುಸ್ಥಿರ ಮತ್ತು ಆಧುನಿಕವನ್ನಾಗಿ ಮಾಡುವ ಉದ್ದೇಶದಿಂದ ಈ ಬದಲಾವಣೆಯನ್ನು ತರಲಾಗುತ್ತಿದೆ. ಆರಂಭಿಕ ಹಂತದಲ್ಲಿ ಆಯ್ಕೆಮಾಡಿದ ಮಾರ್ಗಗಳಲ್ಲಿ ಮತ್ತು ರೈಲುಗಳಲ್ಲಿ ಇಂಡಕ್ಷನ್ ಆಧಾರಿತ ಅಡುಗೆ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಇದರಿಂದ ಅಡುಗೆ ಮಾಡುವ ಸ್ಥಳದಲ್ಲಿನ ಬಿಸಿಯನ್ನು ಕಡಿಮೆ ಮಾಡಲು ಮತ್ತು ಅಡುಗೆಯ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ.

ಸದ್ಯ ಇರುವ ವ್ಯವಸ್ಥೆಯಲ್ಲಿ ರೈಲುಗಳ ಪ್ಯಾಂಟ್ರಿಯಲ್ಲಿ ಹಲವು ವರ್ಷಗಳಿಂದ ಗ್ಯಾಸ್ ಸ್ಟೌವ್ ಬಳಸಲಾಗುತ್ತಿಲ್ಲ. ಅಡುಗೆ ಕೂಡ ಮಾಡಲಾಗುತ್ತಿಲ್ಲ. ಪ್ರಯಾಣಿಕರಿಗೆ ಊಟ ಸರಬರಾಜು ಮಾಡಲು ನಿರ್ದಿಷ್ಟ ರೈಲ್ವೆ ನಿಲ್ದಾಣಗಳಲ್ಲಿ ಕೇಂದ್ರೀಕೃತ ಅಡುಗೆ ಕೋಣೆಗಳ ವ್ಯವಸ್ಥೆ ಮಾಡಲಾಗಿರುತ್ತದೆ. ಈ ಸ್ಟೇಷನ್​ಗಳಲ್ಲಿರುವ ಅಡುಗೆ ಕೋಣೆಗಳಲ್ಲಿ ತಯಾರಾಗುವ ಆಹಾರವನ್ನು ಪ್ರಯಾಣಿಕರಿಗೆ ಒದಗಿಸಲಾಗುತ್ತದೆ. ಈಗ ಈ ಸೆಂಟ್ರಲೈಸ್ಡ್ ಕಿಚನ್​ಗಳಲ್ಲೂ ಎಲ್​ಪಿಜಿ ಬದಲು ಇಂಡಕ್ಷನ್ ಸ್ಟೌವ್ ತರುವ ವ್ಯವಸ್ಥೆ ಮಾಡಲಾಗುತ್ತಿದೆ.

ಇದನ್ನೂ ಓದಿ: ನಿಜವಾದ ಶ್ರೀಮಂತಿಕೆ ಲಕ್ಷುರಿ ಕಾರು, ಬಂಗಲೆಗಳಲ್ಲ; ಏನೆಲ್ಲಾ ಅಂಶಗಳಲ್ಲಿ ನೀವು ಪಾಸಾಗಬೇಕು?

ವಿದ್ಯುತ್ ಚಾಲಿತ ಇಂಡಕ್ಷನ್ ಸ್ಟೌವ್‌ಗಳನ್ನು ಬಳಸುವುದು ಸುಲಭವಾಗಿದ್ದು, ರೈಲುಗಳಲ್ಲಿನ ವಿದ್ಯುತ್ ವ್ಯವಸ್ಥೆಯನ್ನು ಇದಕ್ಕೆ ಅನುಗುಣವಾಗಿ ಮೇಲ್ದರ್ಜೆಗೇರಿಸಲಾಗುತ್ತದೆ. ಈ ಬದಲಾವಣೆಯು ಪ್ರಯಾಣಿಕರಿಗೆ ನೀಡುವ ಆಹಾರದ ತಯಾರಿಕೆಯನ್ನು ಹೆಚ್ಚು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮೊಹಮ್ಮದ್ ನಲಪಾಡ್​ಗೆ ಬೆನ್ನುಬೆನ್ನಿಗೆ ಸಂಕಷ್ಟ: SIT ಚಾರ್ಜ್​ಶೀಟ್ ಬೆನ್ನಲ್ಲೇ ಇಡಿ 3ನೇ ಸಮನ್ಸ್

ಬೆಂಗಳೂರು, ಜೂನ್ 9: ಬಿಟ್ ಕಾಯಿನ್ ಬಹುಕೋಟಿ ರೂಪಾಯಿ ಹಗರಣದಲ್ಲಿ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ವಿರುದ್ಧ ಎಸ್ಐಟಿ ಚಾರ್ಜ್ ಶೀಟ್ ದಾಖಲಿಸಿದೆ. ಈ ಚಾರ್ಜ್ ಶೀಟ್‌ನಲ್ಲಿ ನಲಪಾಡ್, ಶ್ರೀಕಿ ಮತ್ತು ರಾಬಿನ್ ಸೇರಿದಂತೆ ಕೆಲವರ ಹೆಸರನ್ನು ಉಲ್ಲೇಖಿಸಲಾಗಿದೆ. ಬಿಟ್ ಕಾಯಿನ್ ನಗದೀಕರಣಕ್ಕೆ ಸಂಬಂಧಿಸಿದಂತೆ ನಲಪಾಡ್ ಹಣ ಪಡೆದಿದ್ದಾರೆ ಮತ್ತು ಕಮಿಷನ್ ಪಡೆದಿದ್ದಾರೆ ಎಂದು ಚಾರ್ಜ್ ಶೀಟ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಏತನ್ಮಧ್ಯೆ, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಸಹ ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ನಲಪಾಡ್‌ಗೆ ಮೂರನೇ ಬಾರಿಗೆ ಸಮನ್ಸ್ ಜಾರಿ ಮಾಡಿದೆ. ಈ ಹಿಂದೆ ಎರಡು ಬಾರಿ ಇಡಿ ವಿಚಾರಣೆಗೆ ನಲಪಾಡ್ ಹಾಜರಾಗಿರಲಿಲ್ಲ. ಸರ್ಕಾರ ರಚನೆಯ ನೆಪವೊಡ್ಡಿ ಗೈರಾಗಿದ್ದರು. ಈಗ ಮೂರನೇ ಬಾರಿಗೆ ಸಮನ್ಸ್ ಜಾರಿಯಾಗಿದ್ದು, ಈ ಬಾರಿ ಹಾಜರಾಗದಿದ್ದರೆ ನಲಪಾಡ್‌ಗೆ ಸಂಕಷ್ಟ ಎದುರಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭರ್ಜರಿ ಸೆಂಚುರಿ ಸಿಡಿಸಿದ ರುತುರಾಜ್ ಗಾಯಕ್ವಾಡ್ – Kannada News

ಶ್ರೀಲಂಕಾ ಎ ವಿರುದ್ಧದ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ಭರ್ಜರಿ ಸೆಂಚುರಿ ಸಿಡಿಸಿದ್ದಾರೆ. ರಂಗಿರಿ ದಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಎ ತಂಡದ ನಾಯಕ ತಿಲಕ್ ವರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ.

ಆರಂಭಿಕ ದಾಂಡಿಗ ವೈಭವ್ ಸೂರ್ಯವಂಶಿ 12 ರನ್​ಗಳಿಸಿ ಔಟಾದರೆ, ಪ್ರಭ್​ಸಿಮ್ರಾನ್ ಸಿಂಗ್ 2 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪ್ರಿಯಾಂಶ್ ಆರ್ಯಾ 32 ರನ್​ಗಳ ಕೊಡುಗೆ ನೀಡಿದರು.

ಈ ಹಂತದಲ್ಲಿ ಜೊತೆಗೂಡಿದ ರುತುರಾಜ್ ಗಾಯಕ್ವಾಡ್ ಹಾಗೂ ತಿಲಕ್ ವರ್ಮಾ ಅತ್ಯುತ್ತಮ ಜೊತೆಯಾಟ ಪ್ರದರ್ಶಿಸಿದರು. 13ನೇ ಓವರ್​ನಲ್ಲಿ ಜೊತೆಗೂಡಿದ ಈ ಜೋಡಿಯು 42 ಓವರ್​ಗಳ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 200ರ ಗಡಿದಾಟಿಸಿದರು.

ಇನ್ನು ಕೊನೆಯ 8 ಓವರ್​ಗಳಿರುವಾಗ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ರುತುರಾಜ್ ಗಾಯಕ್ವಾಡ್ 112 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಸೆಂಚುರಿ ಬೆನ್ನಲ್ಲೇ ವನುಜಾ ಸಹನ್ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿ ಔಟಾದರು.

ಔಟಾಗುವ ಮುನ್ನ 114 ಎಸೆತಗಳನ್ನು ಎದುರಿಸಿದ ರುತುರಾಜ್ ಗಾಯಕ್ವಾಡ್ 3 ಭರ್ಜರಿ ಸಿಕ್ಸರ್ ಹಾಗೂ 6 ಫೋರ್​ಗಳೊಂದಿಗೆ 101 ರನ್ ಬಾರಿಸಿದ್ದರು. ಇನ್ನು ರುತುರಾಜ್ ನಿರ್ಗಮನದ ಬೆನ್ನಲ್ಲೇ ತಿಲಕ್ ವರ್ಮಾ (60) ಕೂಡ ವಿಕೆಟ್ ಒಪ್ಪಿಸಿದರು.

ಆ ಬಳಿಕ ಬಂದ ಆಯುಷ್ ಬದೋನಿ 24 ರನ್ ಬಾರಿಸಿದರೆ, ಸೂರ್ಯವಂಶಿ ಶೆಡ್ಗೆ 26 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಭಾರತ ಎ ತಂಡ 50 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 277 ರನ್ ಕಲೆಹಾಕಿದೆ.

ಭಾರತ ‘ಎ’ ಪ್ಲೇಯಿಂಗ್ XI: ಪ್ರಭ್​ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ, ತಿಲಕ್ ವರ್ಮಾ (ನಾಯಕ), ರುತುರಾಜ್ ಗಾಯಕ್ವಾಡ್, ಆಯುಷ್ ಬದೋನಿ, ಅನ್ಕುಲ್ ರಾಯ್, ಸೂರ್ಯಂಶ್ ಶೆಡ್ಗೆ, ಅನ್ಶುಲ್ ಕಂಬೋಜ್, ಅರ್ಷಾದ್ ಖಾನ್, ವಿಪ್ರಾಜ್ ನಿಗಮ್.

ಇದನ್ನೂ ಓದಿ: ಅನ್​ಫಿಟ್​… ವಿರಾಟ್ ಕೊಹ್ಲಿ ಮತ್ತೆ ಕಣಕ್ಕಿಳಿಯುವುದು ಯಾವಾಗ?

ಶ್ರೀಲಂಕಾ ‘ಎ’ ಪ್ಲೇಯಿಂಗ್ XI: ನಿರೋಷನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ಅವಿಷ್ಕ ಫೆರ್ನಾಂಡೋ, ನುವಾನಿಡು ಫೆರ್ನಾಂಡೋ, ಸದೀರ ಸಮರವಿಕ್ರಮ, ಸಹನ್ ಅರಾಚಿಂಗೆ (ನಾಯಕ), ಚಾಮಿಕ ಕರುಣಾರತ್ನೆ, ರವಿಂದು ಫೆರ್ನಾಂಡೋ, ವನುಜಾ ಸಹನ್, ವಿಜಯಕಾಂತ್ ವಿಯಾಸ್ಕಾಂತ್, ಮೊಹಮ್ಮದ್ ಶಿರಾಜ್, ಗರುಕ ಸಂಕೇತ್.

Source link

ವಿದೇಶಿ ಮಹಿಳೆ ಮೇಲೆ ಅತ್ಯಾಚಾರವಾಗಿದ್ದರೆ ಅದು ಬಹಳ ಗಂಭೀರ ವಿಷಯ: ಕರ್ನಾಟಕ ಹೈಕೋರ್ಟ್​​ – Kannada News

ಕರ್ನಾಟಕ ಹೈಕೋರ್ಟ್​​
Image Credit source: Getty Images

ಬೆಂಗಳೂರು, ಜೂನ್​​ 09: ವಿದೇಶಿ ಮಹಿಳೆಯ ಮೇಲೆ ಭಾರತದಲ್ಲಿ ಅತ್ಯಾಚಾರ ನಡೆದಿರುವ ಆರೋಪ ಅತ್ಯಂತ ಗಂಭೀರ ವಿಷಯ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಕೊಡಗಿನ ಕುಟ್ಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಂಸ್ಟೇ ಮಾಲೀಕ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಲ್ಲಿ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿದೆ.  ಏಪ್ರಿಲ್​​ನಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ,  ಮಾದಕ ವಸ್ತು ನೀಡಿ ಪ್ರಜ್ಞೆ ತಪ್ಪಿಸಿ ಹೋಂಸ್ಟೇಯಲ್ಲಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು 33 ವರ್ಷದ ಅಮೆರಿಕ ಮೂಲದ ಮಹಿಳೆ ಆರೋಪಿಸಿದ್ದರು. ಈ ಸಂಬಂಧ ಹೋಂಸ್ಟೇ ಮಾಲೀಕ ವಿಶಾಲ್ ಪೊನ್ನಣ್ಣ ಹಾಗೂ ಕೆಲಸಗಾರ ಬ್ರಿಜೇಶ್ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಇದು ಗಂಭೀರ ಪ್ರಕರಣವಾಗಿರುವ ಹಿನ್ನೆಲೆ ತನಿಖಾ ದಾಖಲೆಗಳನ್ನು ಬುಧವಾರದೊಳಗೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ನಿರ್ದೇಶನ ನೀಡಿದ್ದಾರೆ.

ಅರ್ಜಿದಾರರ ಪರ ವಕೀಲರ ವಾದವೇನು?

ಆರೋಪಿಸಲಾದ ಅಪರಾಧಗಳು ಜಾಮೀನು ದೊರೆಯುವ ಸ್ವರೂಪದವು ಎಂದು ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿದ್ದರು. ಅಲ್ಲದೆ, ಎಫ್‌ಐಆರ್ ದಾಖಲಾಗುವ ಮೊದಲು ತಮ್ಮ ಕಕ್ಷಿದಾರರಿಗೆ ಯಾವುದೇ ಆರೋಪದ ಕುರಿತು ಮಾಹಿತಿ ನೀಡಲಾಗಿರಲಿಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು. ದೂರುದಾರರು ಏಪ್ರಿಲ್ 12ರಂದು ಆರೋಪಿಯನ್ನು ಹೋಂಸ್ಟೇ ಸಿಬ್ಬಂದಿ ಎಂದು ಗುರುತಿಸಿದ್ದರೇ ಹೊರತು, ಅರ್ಜಿದಾರರನ್ನು ಆರೋಪಿಸಿರಲಿಲ್ಲ. ಹೀಗಾಗಿ ಏಪ್ರಿಲ್ 19ರಿಂದ ಮೇ 2ರವರೆಗೆ ಕಕ್ಷಿದಾರರ ಬಂಧನ ಕಾನೂನುಬಾಹಿರವಾಗಿದ್ದು, ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ವಾದಿಸಿದ್ದರು. ಹೀಗಾಗಿ ಅರ್ಜಿದಾರರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿದ್ದರು.

ಇದನ್ನೂ ಓದಿ: ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ; ಪ್ರಕರಣ ಮುಚ್ಚಿ ಹಾಕಲು ನಡೆದಿತ್ತಾ ಸಂಚು?

ಇದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಮೂರ್ತಿ ನಾಗಪ್ರಸನ್ನ, ಮೂಲಭೂತ ಹಕ್ಕುಗಳು ಉಲ್ಲಂಘನೆಯಾಗಿವೆಯೇ ಎಂಬುದನ್ನು ನಾವು ಪರಿಶೀಲಿಸುತ್ತೇವೆ. ಮೊದಲು ತನಿಖಾ ದಾಖಲೆಗಳನ್ನು ಸಲ್ಲಿಸಿ ಎಂದು ಸೂಚಿಸಿದ್ದಾರೆ. ಅಲ್ಲದೆ ಬೇರೆ ದೇಶದ ಪ್ರಜೆಯೊಬ್ಬರ ಮೇಲೆ ಇಲ್ಲಿ ಅತ್ಯಾಚಾರ ನಡೆದಿದ್ದರೆ, ಅದು ಅತ್ಯಂತ ಗಂಭೀರ ಅಪರಾಧವಾಗಿದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ. ಇದು ತಕ್ಷಣವೇ ಸಂಪೂರ್ಣ ತಡೆಯಾಜ್ಞೆ ನೀಡಬಹುದಾದ ಪ್ರಕರಣವಲ್ಲ. ತನಿಖಾ ದಾಖಲೆಗಳನ್ನು ಪರಿಶೀಲಿಸಬೇಕಿದೆ ಎಂದೂ ಅವರು ಈ ವೇಳೆ ತಿಳಿಸಿದ್ದಾರೆ ಎಂದು ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:19 pm, Tue, 9 June 26

Source link

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಸಂಕಷ್ಟ: ಡಿಸೇಲ್ ಬೆಲೆ ಹೆಚ್ಚಳದಿಂದ ಪ್ರತಿ ತಿಂಗಳು 4 ಕೋಟಿ ರೂ. ಹೆಚ್ಚುವರಿ ಹೊರೆ – Kannada News

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್​ಗಳುImage Credit source: tv9

ಹುಬ್ಬಳ್ಳಿ, ಜೂನ್ 9: ಜಾಗತಿಕ ಯುದ್ಧದ ಸನ್ನಿವೇಶಗಳು ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವುದು ದೇಶದ ಆರ್ಥಿಕತೆಯ ಮೇಲೆ ಮಾತ್ರವಲ್ಲದೆ ರಾಜ್ಯದ ಸಾರ್ವಜನಿಕ ಸಾರಿಗೆ ಸಂಸ್ಥೆಗಳ ಮೇಲೂ ಪರಿಣಾಮ ಬೀರಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಕೂಡ ತೀವ್ರ ಆರ್ಥಿಕ ಆಘಾತಕ್ಕೆ ಒಳಗಾಗಿದ್ದು, ದಿನನಿತ್ಯದ ಬಸ್ ಕಾರ್ಯಾಚರಣೆ ಹಾಗೂ ನಿರ್ವಹಣೆಗೆ ಹಣ ಹೊಂದಿಸಲು ಪರದಾಡುವಂತಾಗಿದೆ.

ಮುಖ್ಯಾಂಶಗಳು

  • ಡೀಸೆಲ್‌ನಿಂದಲೇ ಮಾಸಿಕ 4 ಕೋಟಿ ರೂ. ಹೊರೆ.
  • ಬಿಡಿಭಾಗಗಳ ಟೆಂಡರ್‌ದಾರರಿಂದ ಪೂರೈಕೆಗೆ ನಿರಾಕರಣೆ.
  • ಬಸ್‌ಗಳ ನಿರ್ವಹಣೆಗೆ ಹೆಚ್ಚಿದ ಆರ್ಥಿಕ ವೆಚ್ಚ.

ಪ್ರತಿ ತಿಂಗಳು 4 ಕೋಟಿ ರೂಪಾಯಿ ಹೆಚ್ಚುವರಿ ಹೊರೆ

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಡಿಯಲ್ಲಿ ಪ್ರತಿದಿನ 5,000 ಕ್ಕೂ ಅಧಿಕ ಬಸ್‌ಗಳು ಸಂಚರಿಸುತ್ತವೆ. ಜಾಗತಿಕ ಬಿಕ್ಕಟ್ಟಿನಿಂದಾಗಿ ಇಂಧನ ದರ ಏರಿಕೆಯಾಗಿರುವುದರಿಂದ ಸಂಸ್ಥೆಗೆ ಕೇವಲ ಡೀಸೆಲ್ ಖರೀದಿಯೊಂದರಿಂದಲೇ ಪ್ರತಿ ತಿಂಗಳು ಬರೋಬ್ಬರಿ 4 ಕೋಟಿ ರೂಪಾಯಿಗಳ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿದೆ. ಇದರ ಜೊತೆಗೆ ಪರಿಸರ ಮಾಲಿನ್ಯ ನಿಯಂತ್ರಣಕ್ಕಾಗಿ ಡೀಸೆಲ್ ಜೊತೆಗೆ ಕಡ್ಡಾಯವಾಗಿ ಮಿಶ್ರಣ ಮಾಡಬೇಕಾದ ‘ಆಡ್ ಬ್ಲೂ (AdBlue)’ ತೈಲ, ಟೈರ್‌ಗಳು, ನಟ್-ಬೋಲ್ಟ್‌ಗಳು ಹಾಗೂ ಸ್ಟೀಲ್ ಸೇರಿದಂತೆ ಇತರೆ ಕಚ್ಚಾ ವಸ್ತುಗಳ ಬೆಲೆಯೂ ಕೂಡ ಗಗನಕ್ಕೇರಿದೆ. ಪರಿಣಾಮವಾಗಿ, ಕೇವಲ ಬಸ್‌ಗಳ ತಾಂತ್ರಿಕ ನಿರ್ವಹಣೆಗಾಗಿ ಸಂಸ್ಥೆಯು ಪ್ರತಿ ತಿಂಗಳು ಸರಾಸರಿ 8 ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿದ್ದು, ಈ ವೆಚ್ಚ ಈಗ ದುಪ್ಪಟ್ಟಾಗುವ ಆತಂಕ ಎದುರಾಗಿದೆ.

ನಿರಂತರ ಸಂಚಾರದಿಂದ ಕೆಟ್ಟು ನಿಲ್ಲುತ್ತಿರುವ ಸಾರಿಗೆ ಬಸ್​ಗಳು

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಶಕ್ತಿ’ ಯೋಜನೆ ಜಾರಿಗೆ ಬಂದಾಗಿನಿಂದ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಬಸ್‌ಗಳ ನಿರಂತರ ಓಡಾಟದಿಂದಾಗಿ ಅವುಗಳ ರಿಪೇರಿ ಹಾಗೂ ತಾಂತ್ರಿಕ ದೋಷಗಳು ಕೂಡ ಹೆಚ್ಚಾಗುತ್ತಿವೆ. ಈ ಬಗ್ಗೆ ಮಾಹಿತಿ ನೀಡಿರುವ ವಾಯುವ್ಯ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕಿ (MD) ಪ್ರಿಯಾಂಕಾ ಎಂ., ‘ಬಸ್‌ಗಳ ಬಿಡಿಭಾಗಗಳು ಹಾಗೂ ಟೈರ್ ಪೂರೈಕೆಗಾಗಿ ಈ ಹಿಂದೆಯೇ ಟೆಂಡರ್ ಪ್ರಕ್ರಿಯೆ ಮುಗಿದಿತ್ತು. ಆದರೆ ಮಾರುಕಟ್ಟೆಯಲ್ಲಿ ಕಚ್ಚಾ ವಸ್ತುಗಳ ಬೆಲೆ ಹೆಚ್ಚಿರುವುದರಿಂದ, ಹಳೆಯ ದರಕ್ಕೆ ವಸ್ತುಗಳನ್ನು ಪೂರೈಸಲು ಸಾಧ್ಯವಿಲ್ಲ ಎಂದು ಟೆಂಡರ್‌ದಾರರು ಪಟ್ಟು ಹಿಡಿದಿದ್ದಾರೆ. ಸದ್ಯ ಅವರ ಮನವೊಲಿಸಿ ಅಗತ್ಯ ವಸ್ತುಗಳನ್ನು ಪಡೆದುಕೊಳ್ಳುವುದೇ ನಮಗೆ ದೊಡ್ಡ ಹರಸಾಹಸದ ಕೆಲಸವಾಗಿದೆ’ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಸಂಸ್ಥೆಯ ದಿನನಿತ್ಯದ ಖರ್ಚು-ವೆಚ್ಚಗಳು ತೀವ್ರವಾಗಿ ಏರಿಕೆಯಾಗುತ್ತಿದ್ದರೂ, ಸಾರ್ವಜನಿಕ ಸಾರಿಗೆ ಬಸ್‌ಗಳ ಪ್ರಯಾಣದ ಟಿಕೆಟ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹೀಗಾಗಿ ನಿಗಮದ ಆದಾಯವು ಹಳೆಯ ಮಟ್ಟದಲ್ಲೇ ಉಳಿದುಕೊಂಡಿದ್ದು, ಖರ್ಚು ಮಾತ್ರ ಮಿತಿಮೀರುತ್ತಿದೆ. ಈ ಭೀಕರ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸಲು ಹಾಗೂ ಹೆಚ್ಚುವರಿ ಹೊರೆಯನ್ನು ಭರಿಸಲು ಸೂಕ್ತ ಆರ್ಥಿಕ ಮಾರ್ಗದರ್ಶನ ಮತ್ತು ಅನುದಾನ ನೀಡುವಂತೆ ನಿಗಮದ ಹಿರಿಯ ಅಧಿಕಾರಿಗಳು ಈಗಾಗಲೇ ಸಾರಿಗೆ ಸಚಿವರಿಗೆ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಸಮಗ್ರ ವರದಿ ಸಲ್ಲಿಸಿದ್ದಾರೆ. ಈ ಆರ್ಥಿಕ ಸುಳಿಯಿಂದ ನಿಗಮವನ್ನು ಪಾರು ಮಾಡಲು ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಪ್ಪು ಒಪ್ಪಿಕೊಂಡು ವಿವಾದಾತ್ಮಕ ದೃಶ್ಯ ತೆಗೆದು ಹಾಕಿದ ‘ಪೆದ್ದಿ’ ನಿರ್ದೇಶಕ ಬುಚ್ಚಿ ಬಾಬು ಸನಾ – Kannada News

ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರದಲ್ಲಿ ನಟಿ ಜಾನ್ವಿ ಕಪೂರ್ (Janhvi Kapoor) ಅವರ ಪಾತ್ರವನ್ನು ಆಕ್ಷೇಪಾರ್ಹವಾಗಿ ತೋರಿಸಲಾಗಿದೆ ಎಂಬ ತೀವ್ರ ವಿರೋಧದ ಬೆನ್ನಲ್ಲೇ, ನಿರ್ದೇಶಕ ಬುಚ್ಚಿ ಬಾಬು ಸನಾ (Buchi Babu Sana) ಅಧಿಕೃತವಾಗಿ ಕ್ಷಮೆಯಾಚಿಸಿದ್ದಾರೆ. ಅಷ್ಟೇ ಅಲ್ಲದೆ, ಪ್ರೇಕ್ಷಕರಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಕೆಲವು ವಿವಾದಾತ್ಮಕ ದೃಶ್ಯಗಳನ್ನು ಚಿತ್ರದಿಂದ ಕತ್ತರಿಸಿ ತೆಗೆದುಹಾಕಲಾಗಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ.

ಬುಚ್ಚಿ ಬಾಬು ಸನಾ ನಿರ್ದೇಶನದ ಸ್ಪೋರ್ಟ್ಸ್ ಆ್ಯಕ್ಷನ್ ಡ್ರಾಮಾ ‘ಪೆದ್ದಿ’ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಮಾಯಿ ಮಾಡುತ್ತಿದ್ದರೂ, ಜಾನ್ವಿ ಕಪೂರ್ ನಿರ್ವಹಿಸಿರುವ ಅಚಿಯಮ್ಮ ಎಂಬ ಪಾತ್ರದ ಚಿತ್ರಣದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಚಿತ್ರದಲ್ಲಿ ಕಥೆಗೆ ಪೂರಕವಾಗಿರದೆ, ಕೇವಲ ಜಾನ್ವಿ ಅವರ ದೈಹಿಕ ಸೌಂದರ್ಯವನ್ನು ಅನಗತ್ಯವಾಗಿ ತೋರಿಸಲಾಗಿದೆ ಎಂದು ಪ್ರೇಕ್ಷಕರು ಮತ್ತು ಸಿನಿಮಾ ವಿಮರ್ಶಕರು ಆಕ್ಷೇಪ ಎತ್ತಿದ್ದರು.

ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಈ ವಿವಾದದ ಕುರಿತು ಮುಕ್ತವಾಗಿ ಮಾತನಾಡಿದ ನಿರ್ದೇಶಕ ಬುಚ್ಚಿ ಬಾಬು ಸನಾ, ‘ನನ್ನ ದೃಷ್ಟಿಯಲ್ಲಿ, ಒಂದು ಉತ್ತಮ ಕಥೆಯಲ್ಲಿ ಜಾನ್ವಿ ಕಪೂರ್ ಅವರ ಟ್ರ್ಯಾಕ್ ಅನಗತ್ಯವಾಗಿತ್ತು ಎಂದು ಅನೇಕರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಾನು ಸ್ವಲ್ಪ ವಿಭಿನ್ನ ಹಾಗೂ ರಗಡ್ ಆದ ಹಾದಿ ತುಳಿಯಲು ಬಯಸಿದ್ದೆ. ಏಕೆಂದರೆ ನಾಯಕ ಪೆದ್ದಿ ಬೆಟ್ಟದ ಪ್ರದೇಶಗಳಿಂದ ದೂರವಿರುವ ಒಂದು ಹಳ್ಳಿಗಾಡಿನ ಹಿನ್ನೆಲೆಯಿಂದ ಬಂದವನು’ ಎಂದು ವಿವರಿಸಿದ್ದಾರೆ.

‘ಅವನ ಹಿನ್ನೆಲೆ ಮತ್ತು ಬೆಳೆದ ವಾತಾವರಣದಿಂದಾಗಿ ಅವನ ವರ್ತನೆ ಆ ರೀತಿ ಇರುತ್ತದೆ ಎಂಬುದನ್ನು ತೋರಿಸಿ, ಚಿತ್ರದ ಕೊನೆಯಲ್ಲಿ ಅದನ್ನು ತಿದ್ದುವ ಆಲೋಚನೆ ನನ್ನದಾಗಿತ್ತು. ಅಂತಹ ಪಾತ್ರವೊಂದು ತಾನು ಪ್ರೀತಿಸುವ ಮಹಿಳೆಯನ್ನೇ ಮದುವೆಯಾಗಬೇಕು ಎಂದು ಹಠ ಹಿಡಿಯುತ್ತದೆ. ಈ ಪ್ರಕ್ರಿಯೆಯಲ್ಲಿ ಕೆಲವು ಶಾಟ್‌ಗಳು ಪ್ರೇಕ್ಷಕರಿಗೆ ತಪ್ಪು ಸಂದೇಶ ರವಾನಿಸುವಂತೆ ಮೂಡಿಬಂದಿವೆ. ನಾವು ತಕ್ಷಣವೇ ಎಚ್ಚೆತ್ತುಕೊಂಡು, ಆ ವಿವಾದಾತ್ಮಕ ದೃಶ್ಯಗಳನ್ನು ಸಿನಿಮಾದಿಂದ ಸಂಪೂರ್ಣವಾಗಿ ತೆಗೆದುಹಾಕಿದ್ದೇವೆ’ ಎಂದು ಬುಚ್ಚಿ ಬಾಬು ಸನಾ ಒಪ್ಪಿಕೊಂಡಿದ್ದಾರೆ.

ಚಿತ್ರ ಬಿಡುಗಡೆಯಾದ ನಂತರ, ಅಚಿಯಮ್ಮ ಮತ್ತು ಪೆದ್ದಿ ನಡುವಿನ ಪ್ರಣಯದ ದೃಶ್ಯಗಳು ತೀವ್ರ ಚರ್ಚೆಗೆ ಗ್ರಾಸವಾಗಿದ್ದವು. ನಾಯಕಿಯ ಇಷ್ಟವಿಲ್ಲದಿದ್ದರೂ ನಾಯಕ ಪ್ರೀತಿ ವ್ಯಕ್ತಪಡಿಸುವ ದೃಶ್ಯಗಳು ಹಾಗೂ ಮುಖ್ಯವಾಗಿ ಕರೆಂಟ್ ಹೋದ ಸಮಯದಲ್ಲಿ ನಾಯಕಿಗೆ ಬಲವಂತವಾಗಿ ಮುತ್ತಿಡುವ ದೃಶ್ಯದ ವಿರುದ್ಧ ಪ್ರೇಕ್ಷಕರು ತೀವ್ರ ಅಸಮಾಧಾನ ಹೊರಹಾಕಿದ್ದರು. ನಾಯಕಿಯ ವ್ಯಕ್ತಿತ್ವ ಅಥವಾ ಕಥೆಗೆ ಪ್ರಾಮುಖ್ಯತೆ ನೀಡುವ ಬದಲು ಆಕೆಯನ್ನು ಕೇವಲ ಒಂದು ವಸ್ತುವಿನಂತೆ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

ಇದನ್ನೂ ಓದಿ: ‘ಪೆದ್ದಿ’ ಚಿತ್ರದ ಆಕ್ಷೇಪಾರ್ಹ ಶಾಟ್‌ಗಳಿಗೆ ಜಾನ್ವಿ ಕಪೂರ್ ವಿರೋಧ? ನಟಿಯ ಮೆಸೇಜ್ ಲೀಕ್

ವಿವಾದದ ತೀವ್ರತೆಯನ್ನು ಅರಿತ ನಿರ್ದೇಶಕರು ಬಳಿಕ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡು ಕ್ಷಮೆಯಾಚಿಸಿದ್ದರು. ‘ಬೆಳ್ಳಿತೆರೆಯ ಮೇಲಿರಲಿ ಅಥವಾ ನಿಜ ಜೀವನದಲ್ಲಿರಲಿ, ನಾನು ಯಾವಾಗಲೂ ಮಹಿಳೆಯರಿಗೆ ಅಪಾರ ಗೌರವ ನೀಡುತ್ತೇನೆ. ಯಾವುದೇ ಮಹಿಳಾ ಪಾತ್ರವನ್ನು ಕೀಳಾಗಿ ಅಥವಾ ವಸ್ತುವಿನಂತೆ ಬಿಂಬಿಸುವುದು ನಮ್ಮ ಉದ್ದೇಶವಾಗಿರಲಿಲ್ಲ. ಒಂದು ವೇಳೆ ಚಿತ್ರದ ಯಾವುದೇ ಭಾಗ ಪ್ರೇಕ್ಷಕರ ಭಾವನೆಗಳಿಗೆ ಧಕ್ಕೆ ತಂದಿದ್ದರೆ, ನಾವು ಆ ಕಳಕಳಿಯನ್ನು ಗೌರವಿಸುತ್ತೇವೆ ಮತ್ತು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ’ ಎಂದು ಬರೆದುಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹೊಸ ಮನೆ ನಿರ್ಮಾಣ ವೀಕ್ಷಿಸಿದ ದೀಪಿಕಾ; ಬೇಬಿ ಬಂಪ್ ಫೋಟೋ ವೈರಲ್ – Kannada News

ಬಾಲಿವುಡ್‌ನ ಸ್ಟಾರ್ ಜೋಡಿ ದೀಪಿಕಾ ಪಡುಕೋಣೆ (Deepika Padukone) ಮತ್ತು ರಣವೀರ್ ಸಿಂಗ್ ಸದ್ಯ ತಮ್ಮ ಜೀವನದ ಅತ್ಯಂತ ಸುಂದರ ಕ್ಷಣಗಳನ್ನು ಆನಂದಿಸುತ್ತಿದ್ದಾರೆ. ನಟಿ ದೀಪಿಕಾ ಪಡುಕೋಣೆ ಈಗ ತುಂಬು ಗರ್ಭಿಣಿ. ಇತ್ತೀಚೆಗೆ ಈ ದಂಪತಿ ಮುಂಬೈನ ಐಷಾರಾಮಿ ಬಾಂದ್ರಾ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ತಮ್ಮ ಹೊಸ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ದೀಪಿಕಾ ಅವರ ಬೇಬಿ ಬಂಪ್ ಸ್ಪಷ್ಟವಾಗಿ ಕಾಣಿಸಿಕೊಂಡಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.

ಸೋಮವಾರ (ಜೂನ್ 9) ಈ ಜೋಡಿ ತಮ್ಮ ಹೊಸ ನಿವಾಸಕ್ಕೆ ಭೇಟಿ ನೀಡಿ, ಅಲ್ಲಿ ನಡೆಯುತ್ತಿರುವ ಇಂಟೀರಿಯರ್ ಹಾಗೂ ಕನ್ಸ್ಟ್ರಕ್ಷನ್ ಕೆಲಸಗಳ ಪ್ರಗತಿಯನ್ನು ಪರಿಶೀಲಿಸಿದೆ. ಬಿಳಿ ಬಣ್ಣದ ಡ್ರೆಸ್ ಧರಿಸಿದ್ದ ದೀಪಿಕಾ ಮುಖದಲ್ಲಿ ಪ್ರೆಗ್ನೆನ್ಸಿ ಗ್ಲೋ ಎದ್ದು ಕಾಣುತ್ತಿತ್ತು. ಇನ್ನು ರಣವೀರ್ ಸಿಂಗ್ ಕೆಂಪು ಟಿ-ಶರ್ಟ್ ಮತ್ತು ಬ್ಲ್ಯಾಕ್ ಟ್ರ್ಯಾಕ್ ಪ್ಯಾಂಟ್ ಧರಿಸಿ ಕ್ಯಾಶುಯಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಹೊಸ ಮನೆಯ ಬಾಲ್ಕನಿಯಲ್ಲಿ ನಿಂತು ಇಬ್ಬರೂ ಗಂಭೀರವಾಗಿ ಚರ್ಚಿಸುತ್ತಿರುವ ಫೋಟೋಗಳನ್ನು ಅಭಿಮಾನಿಗಳು ಮುಗಿಬಿದ್ದು ಶೇರ್ ಮಾಡುತ್ತಿದ್ದಾರೆ.

ದೀಪಿಕಾ ಹಾಗೂ ರಣವೀರ್

ದೀಪಿಕಾ ಮತ್ತು ರಣವೀರ್ ಸಿಂಗ್ ದಂಪತಿ ಇತ್ತೀಚೆಗಷ್ಟೇ ತಾವಿಬ್ಬರು ಎರಡನೇ ಮಗುವಿನ ನಿರೀಕ್ಷೆಯಲ್ಲ ಇರುವುದಾಗಿ ಅಧಿಕೃತವಾಗಿ ಘೋಷಿಸಿದ್ದರು. 2018ರಲ್ಲಿ ಇಟಲಿಯಲ್ಲಿ ವಿವಾಹವಾಗಿದ್ದ ಈ ಜೋಡಿಗೆ, ಸೆಪ್ಟೆಂಬರ್ 2024ರಲ್ಲಿ ಮೊದಲ ಹೆಣ್ಣು ಮಗು ಜನಿಸಿತ್ತು. ಆ ಮಗುವಿಗೆ ಇವರು ‘ದುವಾ’ಎಂದು ಹೆಸರಿಟ್ಟಿದ್ದಾರೆ.

ಇದನ್ನೂ ಓದಿ: ತೆಲುಗು ಚಿತ್ರರಂಗವ ಕೊಂಡಾಡಿ, ದೀಪಿಕಾ ಪಡುಕೋಣೆಗೆ ಟಾಂಗ್ ಕೊಟ್ಟ ಜಾನ್ಹವಿ

ಗರ್ಭಾವಸ್ಥೆಯ ನಡುವೆಯೂ ದೀಪಿಕಾ ಪಡುಕೋಣೆ ತಮ್ಮ ಸಿನಿಮಾ ಕೆಲಸಗಳಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗಷ್ಟೇ ಅವರು ಶಾರುಖ್ ಖಾನ್ ನಟನೆಯ ‘ಕಿಂಗ್’ ಚಿತ್ರದ ಶೂಟಿಂಗ್ ಮುಗಿಸಿ ದಕ್ಷಿಣ ಆಫ್ರಿಕಾದಿಂದ ಮರಳಿದ್ದಾರೆ. ಈ ಚಿತ್ರ ಇದೇ ಡಿಸೆಂಬರ್ 24ರಂದು ಬಿಡುಗಡೆಯಾಗಲಿದೆ. ಇದರ ಜೊತೆಗೆ ಅಟ್ಲಿ ನಿರ್ದೇಶನದ, ಅಲ್ಲು ಅರ್ಜುನ್ ನಾಯಕತ್ವದ ‘ರಾಕಾ’ ಚಿತ್ರದಲ್ಲೂ ದೀಪಿಕಾ ನಟಿಸುತ್ತಿದ್ದಾರೆ. ಇತ್ತ ರಣವೀರ್ ಸಿಂಗ್ ಕೂಡ ತಮ್ಮ ಮುಂಬರುವ ಜಾಂಬಿ ಅಡ್ವೆಂಚರ್ ಚಿತ್ರ ‘ಪ್ರಳಯ್’ ಕೆಲಸಗಳಲ್ಲಿ ತೊಡಗಿಕೊಳ್ಳಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version