ಸ್ವಪಕ್ಷ ಸಚಿವರ ಕಾರ್ಯವೈಖರಿಗೆ ಶಾಸಕ ರವಿಕುಮಾರ್ ಗಣಿಗ ಗರಂ; ಹೊಸಬರಿಗೆ ಅವಕಾಶಕ್ಕೆ ಆಗ್ರಹ

ಸ್ವಪಕ್ಷ ಸಚಿವರ ಕಾರ್ಯವೈಖರಿಗೆ ಶಾಸಕ ರವಿಕುಮಾರ್ ಗಣಿಗ ಗರಂ; ಹೊಸಬರಿಗೆ ಅವಕಾಶಕ್ಕೆ ಆಗ್ರಹ

ಮಂಡ್ಯ, ಏಪ್ರಿಲ್​​ 12: ಸಚಿವ ಸಂಪುಟ ಪುನರ್‌ರಚನೆ ಕುರಿತು ಶಾಸಕ ರವಿಕುಮಾರ್ ಗಣಿಗ ಮಂಡ್ಯದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಲವು ಶಾಸಕರು ಸಚಿವರಾಗುವ ಆಸೆ ಹೊಂದಿದ್ದು, ಮೂರು-ನಾಲ್ಕು ಬಾರಿ ಗೆದ್ದಿರುವ ಹಿರಿಯ ಶಾಸಕರು ಸಹ ಮಂತ್ರಿಗಿರಿಗಾಗಿ ದೆಹಲಿಗೆ ತೆರಳುತ್ತಿದ್ದಾರೆ. ಅವರೆಲ್ಲರಿಗೂ ಸಚಿವ ಸ್ಥಾನ ಸಿಕ್ಕು ರಾಜ್ಯಕ್ಕೆ ಸೇವೆ ಸಲ್ಲಿಸಲಿ. ಈ ಸಂಬಂಧ ತಾವು ಸೇರಿದಂತೆ 38 ಶಾಸಕರು ಪತ್ರ ಬರೆದಿದ್ದು, ಐದು ಮಂದಿ ಹೊಸಬರಿಗೆ ಮಂತ್ರಿಗಿರಿ ನೀಡುವಂತೆ ಕೋರಿದ್ದೇವೆ. ಹೊಸದಾಗಿ ಶಾಸಕರಾದವರಿಗೆ ಸಚಿವ ಸ್ಥಾನ ಸಿಗಬೇಕು ಎಂಬ ತಮ್ಮ ಆಗ್ರಹದಲ್ಲಿ ಯಾವುದೇ ಬದಲಾವಣೆ ಇಲ್ಲ. ವೈಯಕ್ತಿಕವಾಗಿ ತನಗೆ ಸಚಿವ ಸ್ಥಾನ ಬೇಡ ಎಂದು ರವಿಕುಮಾರ್​​ ಗಣಿಗ ತಿಳಿಸಿದ್ದಾರೆ. ಹಾಲಿ ಇರುವ ಕೆಲವು ಸಚಿವರು ಸಮರ್ಥವಾಗಿ ಕಾರ್ಯನಿರ್ವಹಿಸದಿರುವುದು ಮತ್ತು ಜನರಿಗೆ ಲಭ್ಯವಿಲ್ಲದಿರುವುದು ಕೆಲಸಗಳಿಗೆ ಅಡ್ಡಿಯಾಗುತ್ತಿದೆ. ಆದ್ದರಿಂದ ಇಂತಹ ಸಚಿವರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ನೀಡುವುದು ಉತ್ತಮ. ಹೀಗಿದ್ದರೂ ಈ ನಿರ್ಧಾರ ಮುಖ್ಯಮಂತ್ರಿಗಳು ಮತ್ತು ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಉದ್ಯಮಿ ಸುದೀಪ್ ರೈ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್; ಪತ್ನಿ ಸೌಮ್ಯ ಅರೆಸ್ಟ್!

ಉಡುಪಿ, ಏಪ್ರಿಲ್ 12: ಉದ್ಯಮಿ ಸುದೀಪ್ ರೈ ಆತ್ಮಹತ್ಯೆ (Sudeep Rai Suicide) ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಪತ್ನಿ ಸೌಮ್ಯ ಶೆಟ್ಟಿ ಮೇಲೆ ಹತ್ತು ಹಲವು ಆರೋಪಗಳು ಕೇಳಿ ಬಂದಿದ್ದವು. ಸುದೀಪ್​ ಜೊತೆಗೆ ಎರಡನೇ ಮದುವೆಯಾಗಿದ್ದ ಆಕೆ ಕಿರುಕುಳ ನೀಡಿ ಆತ್ಮಹತ್ಯೆಗೆ ಪ್ರಚೋದಿಸಿದ್ದಾಳೆಂದು ಆತನ ತಂದೆ ದಾಮೋದರ ಶೆಟ್ಟಿ ಕೇಸ್ ದಾಖಲಿಸಿದ್ದರು. ತನ್ನ ಮೇಲಿನ ಆರೋಪಗಳನ್ನು ಸೌಮ್ಯ ಅಲ್ಲಗಳೆದರೂ ಇದೀಗ ಪ್ರಾಥಮಿಕ ತನಿಖೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆ ಸೌಮ್ಯಳನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿದ್ದು, ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಪತಿಗೆ ಬೆದರಿಕೆ ಹಾಕಿದ್ದ ಸೌಮ್ಯ

ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಮೂಲದ ಸುದೀಪ್ ರೈ ಫೆಬ್ರವರಿ 17ರಂದು ಕಾರ್ಕಳ ಮೂಲದ ಸೌಮ್ಯ ಶೆಟ್ಟಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಬಳಿಕ ಸುದೀಪ್ ರೈ ಅವರು ಕಾರ್ಕಳದ ಬಂಗ್ಲೆಗುಡ್ಡೆಯಲ್ಲಿರುವ ಪತ್ನಿಯ ಮನೆಯಲ್ಲಿ ವಾಸವಾಗಿದ್ದರು. ಮಾರ್ಚ್ 17ರಂದು ತಾಯಿಯೊಂದಿಗೆ ಕಾರಿನಲ್ಲಿ ನೆಲ್ಯಾಡಿ ಕಡೆಗೆ ತೆರಳುತ್ತಿದ್ದ ವೇಳೆ, ಸೌಮ್ಯ ಶೆಟ್ಟಿ ಕಾರಿಗೆ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾಳೆಂದು ಸುದೀಪ್ ಅವರ ಪೋಷಕರು ಆರೋಪಿಸಿದ್ದರು.

ಈ ಘಟನೆಯ ಬಳಿಕ ಮಾರ್ಚ್ 22ರಂದು ಸುದೀಪ್ ರೈ ಅವರು ವಿಷ ಸೇವಿಸಿರುವುದಾಗಿ ಸೌಮ್ಯ ಶೆಟ್ಟಿ ಸಂಬಂಧಿಕರಿಗೆ ಕರೆಮಾಡಿ ತಿಳಿಸಿದ್ದಳು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 29ರಂದು ಸುದೀಪ್ ಮೃತಪಟ್ಟಿದ್ದರು. ಆ ಬಳಿಕ ಪೊಲೀಸ್ ಠಾಣೆ ಮೆಟ್ಟಿಲೇರಿದ ಮೃತನ ತಂದೆ ಸೊಸೆ ಸೌಮ್ಯಳೇ ಮಗನಿಗೆ ಮಾನಸಿಕ ಹಿಂಸೆ ನೀಡಿ ಆತ್ಮಹತ್ಯೆಗೆ ಪ್ರಚೋದಿಸಿದ್ದಾಳೆ ಎಂದು ದೂರು ನೀಡಿದ್ದರು.

ಇದನ್ನೂ ಓದಿ ಸುದೀಪ್ ಆತ್ಮಹತ್ಯೆ ಪ್ರಕರಣ: ಪತಿ ಸಾವಿಗೆ ಕಾರಣ ಬಿಚ್ಚಿಟ್ಟ ಉದ್ಯಮಿ ಪತ್ನಿ ಸೌಮ್ಯಾ

ನ್ಯಾಯಾಂಗ ಬಂಧನ

ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ಮಂಜಪ್ಪ ಅವರ ನೇತೃತ್ವದಲ್ಲಿ ತನಿಖೆ ನಡೆಸಲಾಗಿದ್ದು, ಪ್ರಾಥಮಿಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ವಿಚಾರಣೆಯ ವೇಳೆ ಸೌಮ್ಯ ಶೆಟ್ಟಿ ವಿರುದ್ಧದ ಆರೋಪಗಳು ದೃಢಪಟ್ಟ ಹಿನ್ನೆಲೆ, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Hindu Traditions: ದೇಹದ ಸೂರ್ಯ-ಚಂದ್ರ ಭಾಗಗಳು; ಬಲಗಾಲಿಟ್ಟು ಮನೆಗೆ ಬಾ ಎನ್ನುವುದೇಕೆ ಗೊತ್ತಾ?

ಹಿಂದೂ ಸಂಪ್ರದಾಯದಲ್ಲಿ ಯಾವುದೇ ಸ್ಥಳಕ್ಕೆ ಪ್ರವೇಶಿಸುವಾಗ ಬಲಗಾಲು ಅಥವಾ ಎಡಗಾಲು ಇಡುವಿಕೆಗೆ ವಿಶೇಷ ಮಹತ್ವವಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ನಾವು ಯಾವುದೇ ಕೆಲಸಕ್ಕೆ ಹೊರಟಾಗ ಅಥವಾ ಹೊಸ ಸ್ಥಳಕ್ಕೆ ಪ್ರವೇಶಿಸುವಾಗ ಯಾವ ಕಾಲು ಇಡಬೇಕು ಎಂಬುದು ಭಾರತೀಯ ಸಂಸ್ಕೃತಿಯಲ್ಲಿ ಮಹತ್ವ ಪಡೆದಿದೆ. ಉದಾಹರಣೆಗೆ, ಮದುವೆಯಾದ ಕನ್ಯೆ ಅತ್ತೆಯ ಮನೆಗೆ ಪ್ರವೇಶಿಸುವಾಗ ಬಲಗಾಲಿಟ್ಟು ಬಾರಮ್ಮ ಎಂದು ಹೇಳುವುದು ರೂಢಿ. ಈ ಬಲಗಾಲು ಮತ್ತು ಎಡಗಾಲಿನ ಮಹತ್ವವೇನೆಂದರೆ, ನಮ್ಮ ದೇಹದ ಬಲಭಾಗವನ್ನು ಸೂರ್ಯ ಭಾಗ ಎಂದೂ, ಎಡಭಾಗವನ್ನು ಚಂದ್ರ ಭಾಗ ಎಂದೂ ಕರೆಯಲಾಗುತ್ತದೆ. ಬಲಗಾಲು ಸೂರ್ಯ ಭಾಗವನ್ನು ಪ್ರತಿನಿಧಿಸುವುದರಿಂದ, ಇದನ್ನು ಸುಪ್ರೋವೃದ್ಧಿ ಮತ್ತು ಅಭಿವೃದ್ಧಿಯ ಚಿಹ್ನೆ ಎಂದು ನಂಬಲಾಗುತ್ತದೆ. ಬಲಗಾಲು ಇಟ್ಟು ಬಂದಾಗ ಮನೆಯಲ್ಲಿ ಸಕಲ ಶುಭವಾಗುತ್ತದೆ ಎಂಬ ನಂಬಿಕೆಯಿದೆ. ಈ ನಂಬಿಕೆಯನ್ನು ಕೆಲವರು ಗೇಲಿ ಮಾಡಬಹುದು, ಆದರೆ ನಮ್ಮ ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂಬ ಮಾತಿದೆ.

ಹನುಮಂತನ ಲಂಕಾ ಪ್ರವೇಶದ ಕಥೆ ಇದಕ್ಕೆ ಉತ್ತಮ ಉದಾಹರಣೆ. ಹನುಮಂತನು ಸೀತಾನ್ವೇಷಣೆಗಾಗಿ ಲಂಕಾನಗರದ ಮುಖ್ಯ ದ್ವಾರಕ್ಕೆ ಬಂದಾಗ, ರಾವಣನು ಸೀತೆಯನ್ನು ಅಪಹರಿಸಿ ನಮ್ಮ ಶತ್ರುವಾಗಿದ್ದಾನೆಂದು ಭಾವಿಸಿ, ಆತನಿಗೆ ಕೆಟ್ಟದ್ದಾಗಲಿ ಎಂಬ ಉದ್ದೇಶದಿಂದ ಎಡಗಾಲನ್ನು ಇಟ್ಟು ಲಂಕೆಯನ್ನು ಪ್ರವೇಶಿಸುತ್ತಾನೆ. ಇದು ನಮಗೆ ಒಂದು ಪಾಠವನ್ನು ಕಲಿಸುತ್ತದೆ: ಶತ್ರುಗಳು, ಕ್ರೂರಿಗಳು, ಭ್ರಷ್ಟರು ಅಥವಾ ಸಮಾಜ ಘಾತಕರ ಮನೆಗಳಿಗೆ ಪ್ರವೇಶಿಸುವಾಗ ಬಲಗಾಲು ಇಡಬೇಕೆಂಬ ನಿಯಮವಿಲ್ಲ, ಎಡಗಾಲು ಇಟ್ಟು ಕೂಡ ಹೋಗಬಹುದು. ಹನುಮಂತನ ಈ ಕಾರ್ಯವೇ ಇದಕ್ಕೆ ಪ್ರಬಲ ನಿದರ್ಶನ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ವೇದಶಾಸ್ತ್ರಗಳ ಪ್ರಕಾರ, ಶುಭ ಕಾರ್ಯಗಳಿಗೆ ಮತ್ತು ಶುಭ ಸ್ಥಳಗಳಿಗೆ ಬಲಗಾಲು ಇಟ್ಟು ಪ್ರವೇಶಿಸುವುದು ಶ್ರೇಯಸ್ಕರ. ದೇವಾಲಯಗಳ ಮುಖ್ಯ ದ್ವಾರದಲ್ಲಿ, ಮಠಮಾನ್ಯಗಳಿಗೆ ಹೋದಾಗ, ಸಂಬಂಧಿಕರ ಮನೆಗಳಿಗೆ ಭೇಟಿ ನೀಡಿದಾಗ, ವಿಶೇಷವಾಗಿ ಅತ್ತೆಯ ಮನೆಗೆ ಹೋದಾಗ ಬಲಗಾಲು ಇಡುವುದು ಶಾಸ್ತ್ರ ಹೇಳುತ್ತದೆ. ಸಾಮಾನ್ಯವಾಗಿ ಶುಭ ಜಾಗಗಳಿಗೆ ಬಲಗಾಲು ಇಡುವುದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಆಸ್ಪತ್ರೆಗೆ ಹೋದಾಗಲೂ ಬಲಗಾಲು ಇಡಬೇಕು ಎಂದು ಶಾಸ್ತ್ರ ಹೇಳುತ್ತದೆ. ರೋಗಿಗಳು ಇರುವ ಕಡೆ ಬಲಗಾಲು ಇಟ್ಟು ಹೋಗುವುದರಿಂದ ಅವರಿಗೆ ಒಳಿತಾಗುತ್ತದೆ ಎಂಬ ನಂಬಿಕೆಯಿದೆ. ಇತರರಿಗೆ ಶುಭವನ್ನು ಹಾರೈಸಿದಾಗ, ಆ ಶುಭ ಫಲ ನಮಗೂ ದೊರೆಯುತ್ತದೆ ಎಂಬ ಭಾವನೆಯಿದೆ. ಒಳ್ಳೆಯ ಮನಸ್ಸಿನಿಂದ ಬಲಗಾಲು ಇಟ್ಟು ಹೋಗುವುದರಿಂದ ಸಾಕಷ್ಟು ಶುಭ ಫಲಗಳು ದೊರೆಯುತ್ತವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಡಾನೆ ದಾಳಿಗೆ ರಾಜ್ಯದಲ್ಲಿ ಮತ್ತೊಂದು ಸಾವು: ದಾರುಣವಾಗಿ ಮೃತಪಟ್ಟ ಹಾಸನದ ರೈತ

ಹಾಸನ, ಏಪ್ರಿಲ್​​ 12: ಕರ್ನಾಟಕದಲ್ಲಿ ಕಾಡು ಪ್ರಾಣಿಗಳು ಮತ್ತು ಮಾನವ ಸಂಘರ್ಷ ಮುಂದುವರಿದಿದ್ದು, ಹುಲಿ ಮತ್ತು ಆನೆಗಳ ದಾಳಿಗೆ ಮೃತ ಪಡುವ ಅಮಾಯಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ನಡುವೆ ಕಾಡಾನೆ ದಾಳಿಗೆ ಮತ್ತೊಂದು ಸಾವು ರಾಜ್ಯದಲ್ಲಿ ನಡೆದಿದ್ದು, ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕಣಗುಪ್ಪೆ ಗ್ರಾಮದ ರೈತ ರಾಜಶೆಟ್ಟಿ(56) ಬಲಿಯಾಗಿದ್ದಾರೆ. ಬೆಳಗ್ಗೆ ತೋಟಕ್ಕೆ ತೆರಳಿದ್ದ ರಾಜಶೆಟ್ಟಿ ಅವರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದ್ದು, ಸೊಂಡಿಲಿನಿಂದ ಎತ್ತಿ ಬಿಸಾಡಿ ತುಳಿದು ರೈತನ ಕೊಂದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಾಡಾನೆ ದಾಳಿ ಮತ್ತು ಸಾವು

  • ಫೆಬ್ರವರಿ 16, 2026: ಚಿಕ್ಕಮಗಳೂರು ತಾಲ್ಲೂಕಿನ ಹುಣಸೆಹಳ್ಳಿ ಗ್ರಾಮದಲ್ಲಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ 50 ವರ್ಷದ ಕಾರ್ಮಿಕ ಯಲ್ಲಪ್ಪ ಆನೆ ದಾಳಿಗೆ ಬಲಿಯಾಗಿದ್ದರು. ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ತಿರುವಳ್ಳಿ ಗ್ರಾಮದ ನಿವಾಸಿ ಯಲ್ಲಪ್ಪ, ನಾಗೇಶ್ ಗೌಡ ಅವರ ತೋಟದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಕಾಡಾನೆ ದಾಳಿ ಮಾಡಿತ್ತು.
  • ಫೆಬ್ರವರಿ 22, 2026: ಚಿಕ್ಕಮಗಳೂರು ತಾಲೂಕಿನ ಪುರ ಗ್ರಾಮದಲ್ಲಿ ಕಾಡಾನೆ ದಾಳಿಗೆ ಹೊಸಪೇಟೆ ಮೂಲದ ಬೋರಮ್ಮ(34) ಬಲಿಯಾಗಿದ್ದರು. ಈ ಘಟನೆಯೂ ನಾಗೇಶ್ ಗೌಡ ಅವರ ತೋಟದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿಯೇ ನಡೆದಿತ್ತು.
  • ಮಾರ್ಚ್​​ 09, 2026: ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ವಾಲ್ನೂರಿನಲ್ಲಿ ಕಾಡಾನೆ ದಾಳಿಗೆ ನಂಜರಾಯಪಟ್ಟಣ ಗ್ರಾಮ ಪಂಚಾಯತ್​​ ಮಾಜಿ ಸದಸ್ಯೆ ಜಲಜಾಕ್ಷಿ(53) ಮೃತಪಟ್ಟಿದ್ದರು. ನಡೆದುಕೊಂಡು ಹೋಗುತ್ತಿದ್ದ ಜಲಜಾಕ್ಷಿ ಅವರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿತ್ತು.
  • ಮಾರ್ಚ್​​ 12, 2026: ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪ ಹೈಸ್ಕೂಲ್ ಪೈಸಾರಿಯಲ್ಲಿ ಕಾಫಿ ತೋಟಕ್ಕೆ ತೆರಳಿದ್ದ ಬೆಳೆಗಾರನ ಮೇಲೆ ಸಲಗ ಅಟ್ಯಾಕ್​​ ಮಾಡಿದ ಪರಿಣಾಮ ಗಣಪತಿ (49) ಮೃತಪಟ್ಟಿದ್ದರು.
  • ಏಪ್ರಿಲ್​​ 08, 2026: ಪೊನ್ನಂಪೇಟೆ ತಾಲೂಕಿನ ಕುರ್ಚಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ರತ್ತು (56) ಎಂಬ ಬೆಳೆಗಾರ ಮೃತಪಟ್ಟಿದ್ದರು. ಬೆಳಗ್ಗೆ ಮನೆ ಬಳಿ ವಾಕ್ ಮಾಡುವಾಗ ಅವರ ಮೇಲೆ ಕಾಡಾನೆ ದಾಳಿ ನಡೆಸಿತ್ತು.
  • ಏಪ್ರಿಲ್​​ 28, 2026: ಕಾಡಾನೆ ದಾಳಿಗೆ ಮಡಿಕೇರಿ ತಾಲೂಕಿನ ಬೆಟ್ಟತ್ತೂರು ಗ್ರಾಮದಲ್ಲಿ ಪಿಯು ವಿದ್ಯಾರ್ಥಿನಿ ದಾರುಣ‌ವಾಗಿ ಮೃತಪಟ್ಟಿದ್ದಳು. ಪೂಜ್ಯ(19) ಮೃತಳಾಗಿದ್ದು, ತಂದೆ-ತಾಯಿ‌ ಜತೆ ಬೈಕ್‌ನಲ್ಲಿ ಬರುವಾಗ ಆನೆ ಅಟ್ಯಾಕ್​​ ಮಾಡಿತ್ತು.

ಮೇಲಿಂದ ಮೇಲೆ ಈ ರೀತಿಯ ಘಟನೆಗಳು ರಾಜ್ಯದ ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನಡೆಯುತ್ತಿರುವ ನಡುವೆ ಕಾಡಂಚಿನ ಗ್ರಾಮಗಳ ಜಮೀನಿಗೆ ವನ್ಯಜೀವಿಗಳು ನುಗ್ಗುತ್ತಿರೋದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಘಟನೆ ಬಳಿಕ ಕ್ರಮಕ್ಕೆ ಮುಂದಾಗುವ ಬದಲು, ಅರಣ್ಯ ಇಲಾಖೆ ಸಿಬ್ಬಂದಿ ಮೊದಲೇ ಎಚ್ಚೆತ್ತುಕೊಳ್ಳಬೇಕು. ಮುಂದೆ ಈ ರೀತಿಯ ಯಾವುದೇ ಅನಾಹುತ ನಡೆಯದಂತೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅನೈತಿಕ ಸಂಬಂಧಕ್ಕೆ ಅಡ್ಡಿ: ಪ್ರಿಯಕರನ ಜೊತೆ ಸೇರಿ ಪತಿಗೇ ಚಟ್ಟ ಕಟ್ಟಿದ ಪತ್ನಿ; ಕೊಲೆ ಬಳಿಕ ಅಮಾಯಕಳಂತೆ ನಾಟಕ

ಬೆಳಗಾವಿ, ಏಪ್ರಿಲ್​​ 12: ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಕಾರಣ ಲವ್ವರ್​​ ಜೊತೆ ಸೇರಿಕೊಂಡು ಪ್ರೀತಿಸಿ ಮದುವೆ ಆಗಿದ್ದ ಗಂಡನನ್ನೇ ಪತ್ನಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಅನಗೋಳದ ಬಾಬಲೇ ಗಲ್ಲಿಯಲ್ಲಿ ನಡೆದಿದೆ. ಖಾಸಗಿ ಆಯುರ್ವೇದಿಕ್ ಕಾಲೇಜಿನ ಥೆರಪಿಸ್ಟ್ ಅವಿನಾಶ್ ಸೂಪ್ಪಣ್ಣವರ (40) ಮೃತ ವ್ಯಕ್ತಿಯಾಗಿದ್ದು, ಘಟನೆ ಸಂಬಂಧ ಪತ್ನಿ ಲಕ್ಷ್ಮೀ ಸೂಪಣ್ಣವರ ಮತ್ತು ಕೈಲಾಶ್ ಅಚ್ಚಿತಾಲ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ತಂಪು ಪಾನೀಯದಲ್ಲಿ ನಿದ್ದೆ ಮಾತ್ರ ಹಾಕಿ ನೀಡಿದ್ದ ಆರೋಪಿಗಳು, ಅವಿನಾಶ್ ಕುಸಿದು ಬೀಳ್ತಿದ್ದಂತೆ ಸಿಲಿಂಡರ್​​ನಿಂದ ತಲೆ ಮತ್ತು ಎದೆ ಭಾಗಕ್ಕೆ ಹೊಡೆದು ಕೊಲೆ ಮಾಡಿದ್ದರು ಎಂಬುದು ಗೊತ್ತಾಗಿದೆ.

ಮಾರ್ಚ್ 6ರಂದು ಸಂಜೆ 4ಕ್ಕೆ ಮನೆಯಿಂದ ಅವಿನಾಶ್ ಕ್ಲಿನಿಕ್‌ಗೆ ಹೋಗಿದ್ದರು. ಈ ವೇಳೆ ಥೆರಪಿ ಮಾಡಿಸಿಕೊಳ್ಳಲೆಂದು ಆರೋಪಿ ಕೈಲಾಶ್ ಕೂಡ ಕ್ಲಿನಿಕ್​​ಗೆ ತೆರಳಿದ್ದ. ಹೋಗುವಾಗ ತಂಪು ಪಾನೀಯದಲ್ಲಿ ನಿದ್ರೆ ಮಾತ್ರೆ ಬೆರಸಿಕೊಂಡು ಹೋಗಿದ್ದ ಈತ, ಥೆರಪಿಗೂ ಮುನ್ನ ಅವಿನಾಶ್​​ಗೆ ಅದನ್ನು ಕುಡಿಸಿದ್ದ. ತಂಪು ಪಾನೀಯ ಕುಡಿಯುತ್ತಿದ್ದಂತೆ ಅವಿನಾಶ್ ಕುಸಿದು ಬಿದ್ದಿದ್ದು, ಅಲ್ಲೇ ಇದ್ದ ಸಿಲಿಂಡರ್​​ನಿಂದ ದಾಳಿ ಮಾಡಿ ಕೈಲಾಶ್​​ ಕೊಲೆ ಮಾಡಿದ್ದ. ಈ ವೇಳೆ ಗಂಡ ಸತ್ತಿರುವುದನ್ನ ಕನ್ಪರ್ಮ್ ಮಾಡಿಕೊಳ್ಳಲು ಪತ್ನಿ ಲಕ್ಷ್ಮೀ ವಿಡಿಯೋ ಕಾಲ್ ಮಾಡಿದ್ದಳು. ಗಂಡ ಸತ್ತಿಲ್, ಮೂಗು ಬಿಗಿಹಿಡಿದು ಸಾಯಿಸು ಎಂದು ಈ ವೇಳೆ ಕೈಲಾಶ್​​ಗೆ ಹೇಳಿದ್ದಳು. ಆ ಬಳಿಕ ಕ್ಲಿನಿಕ್​​ಗೆ ಹೋಗಿದ್ದ ಲಕ್ಷ್ಮೀ, ಗಂಡನ ಸಾವಿನ ಬಗ್ಗೆ ಏನೂ ಗೊತ್ತಿಲ್ಲದಂತೆ ಗೋಳಾಟ ನಡೆಸಿದ್ದಳು. ಅಲ್ಲದೆ, ಶುಗರ್ ಹೆಚ್ಚಾಗಿ ಕುಸಿದು ಬಿದ್ದು, ತಲೆಗೆ ಪೆಟ್ಟಾಗಿ ಸಾವನಪ್ಪಿರುವ ಬಗ್ಗೆ ಕತೆ ಹೇಳಿದ್ದಳು.

ಇದನ್ನೂ ಓದಿ: ಪ್ಯಾಸೆಂಜರ್ ವಿಚಾರಕ್ಕೆ ಗಲಾಟೆ; ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಆಟೋ ಚಾಲಕನ ಭೀಕರ ಹತ್ಯೆ

ಆದರೆ ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮೃತನ ತಾಯಿ ದೂರು ದಾಖಲಿಸಿದ್ದು, ಪ್ರಕರಣ ಬೆನ್ನತ್ತಿದ ಪೊಲೀಸರಿಗೆ ಪತ್ನಿ ಲಕ್ಷ್ಮೀ ಮೇಲೆಯೇ ಅನುಮಾನ ಬಂದಿತ್ತು. ಎರಡು ವರ್ಷಗಳಿಂದ ಕೈಲಾಶ್ ಜೊತೆಗೆ ಲಕ್ಷ್ಮೀ ಅನೈತಿಕ ಸಂಬಂಧ ಹೊಂದಿದ್ದು, ಮೊಬೈಲ್ ರಿಚಾರ್ಜ್ ಮಾಡಿಸಲು ಹೋದಾಗ ಪೋನ್ ನಂಬರ್ ಶೇರ್ ಆಗಿತ್ತು. ಬಳಿಕ ಅವಿನಾಶ ಜೊತೆಗೂ ಕೈಲಾಶ್ ಉತ್ತಮ ಸಂಬಂಧ ಹೊಂದಿದ್ದ. ಇದನ್ನೇ ಬಂಡವಾಳ ಮಾಡಿಕೊಂಡು ಲಕ್ಷ್ಮೀ ಭೇಟಿಗೆ ಬರುತ್ತಿದ್ದ. ಅವಿನಾಶ್ ಮನೆಯ ಕೂಗಳತೆ ದೂರದಲ್ಲಿ ಕೈಲಾಶ್ ಮೊಬೈಲ್ ಶಾಪ್ ಇದ್ದು, ಈ ವಿಚಾರ ಗೊತ್ತಾಗಿ ಪತ್ನಿ ಮತ್ತು ಕೈಲಾಶ್​​ಗೆ ಅವಿನಾಶ್​​ ವಾರ್ನ್​​ ಕೂಡ ಮಾಡಿದ್ದ. ಇದೇ ಸಿಟ್ಟಿಗೆ ಪತಿ ಅವಿನಾಶ್ ಕೊಲೆಗೆ ಲಕ್ಷ್ಮೀ ಸ್ಕೆಚ್ ಹಾಕಿದ್ದಳು. ಒಂದು ತಿಂಗಳಿಂದ ಅವಿನಾಶ್ ಕೊಲೆಗೆ ಕೈಲಾಶ್‌ ಮೇಲೆ ಒತ್ತಡ ಹಾಕ್ತಿದ್ದಳು ಎಂಬುದೀಗ ಬಯಲಾಗಿದೆ. ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಇರಾನ್ ಜತೆ ಚೀನಾ ಕೈಜೋಡಿಸಿದರೆ ಕಾದಿದೆ ಆಪತ್ತು, ಡೊನಾಲ್ಡ್​ ಟ್ರಂಪ್ ಅಂತಿಮ ಎಚ್ಚರಿಕೆ

ವಾಷಿಂಗ್ಟನ್, ಏಪ್ರಿಲ್ 12: ಜಾಗತಿಕ ರಾಜಕೀಯದ ರಣರಂಗದಲ್ಲಿ ಈಗ ಅಮೆರಿಕ, ಇರಾನ್(Iran) ಮತ್ತು ಚೀನಾ ನಡುವಿನ ಸಂಘರ್ಷ ತಾರಕಕ್ಕೇರಿದೆ. ಇರಾನ್ ಬೆನ್ನಿಗೆ ನಿಂತಿರುವ ಚೀನಾಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಎಚ್ಚರಿಕೆ ಈಗ ಮೂರನೇ ಮಹಾಯುದ್ಧದ ಭೀತಿಯನ್ನು ಹುಟ್ಟುಹಾಕಿದೆ. ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಬಿಕ್ಕಟ್ಟು ಈಗ ಅಮೆರಿಕ ಮತ್ತು ಡ್ರ್ಯಾಗನ್ ದೇಶ ಚೀನಾವನ್ನು ಮುಖಾಮುಖಿಯಾಗಿಸಿದೆ. ಇರಾನ್​ಗೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿರುವ ಚೀನಾಗೆ ಡೊನಾಲ್ಡ್​ ಟ್ರಂಪ್ ಕಠಿಣ ಎಚ್ಚರಿಕೆ ನೀಡಿದ್ದಾರೆ.

ಷಿ ಜಿನ್​ಪಿಂಗ್ ಅವರೇ, ಇರಾನ್​ಗೆ ಶಸ್ತ್ರಾಸ್ತ್ರ ನೀಡುವ ಸಾಹಸ ಮಾಡಬೇಡಿ, ಇಲ್ಲದಿದ್ದರೆ ನೀವು ಊಹಿಸಲಾಗದ ಸಂಕಷ್ಟಕ್ಕೆ ಸಿಲುಕುತ್ತೀರಿ ಎಂದು ಟ್ರಂಪ್ ಗುಡುಗಿದ್ದಾರೆ. ಯಾರು ಎಷ್ಟೇ ಬಲಪ್ರಯೋಗ ಮಾಡಿದರೂ ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕವೇ ಗೆಲ್ಲಲಿದೆ. ಇರಾನ್ ರಾಜಿ ಮಾಡಿಕೊಳ್ಳಲು ಮಾತ್ರ ಅಸ್ತಿತ್ವದಲ್ಲಿದೆ. ಅದು ಒಪ್ಪದಿದ್ದರೆ ನಾವು ಅದನ್ನು ಸಂಪೂರ್ಣವಾಗಿ ನಾಶಪಡಿಸುತ್ತೇವೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ.

ಇರಾನ್ ಹಾರ್ಮುಜ್ ಜಲಸಂಧಿಯಲ್ಲಿ ನೆಲಬಾಂಬ್‌ಗಳನ್ನು ಅಳವಡಿಸಿ ಜಾಗತಿಕ ತೈಲ ಸಾರಿಗೆಯನ್ನು ತಡೆಯಲು ಯತ್ನಿಸುತ್ತಿದೆ.ಆ ಮಾರ್ಗವನ್ನು ನಿರ್ಬಂಧಿಸಲು ನಾವು ಬಿಡುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಇರಾನ್ ಒಪ್ಪಂದಕ್ಕೆ ಸಹಿ ಹಾಕದಂತೆ ಚೀನಾ ತೆರೆಮರೆಯಲ್ಲಿ ಪ್ರಚೋದಿಸುತ್ತಿದೆ ಎಂಬ ಆಘಾತಕಾರಿ ಮಾಹಿತಿ ಈಗ ಹೊರಬಿದ್ದಿದೆ.

ಮತ್ತಷ್ಟು ಓದಿ: ಇರಾನ್ ಬಯಸಿದರೂ ಹಾರ್ಮುಜ್ ಜಲಸಂಧಿ ತೆರೆಯಲು ಸಾಧ್ಯವಿಲ್ಲ; ಇಲ್ಲಿದೆ ಕಾರಣ

ಅಮೆರಿಕದ ಯುದ್ಧ ವಿಮಾನಗಳು ಎಲ್ಲಿದ್ದವು ಎಂಬ ನಿಖರ ಮಾಹಿತಿಯನ್ನು ಚೀನಾ ಇರಾನ್‌ಗೆ ಒದಗಿಸುತ್ತಿದೆ. ಇದರಿಂದಾಗಿ ಇರಾನ್ ಅಮೆರಿಕದ ವಿಮಾನಗಳ ಮೇಲೆ ಗುರಿ ಇಡಲು ಸಾಧ್ಯವಾಗುತ್ತಿದೆ. ಮುಂದಿನ ವಾರ ಚೀನಾ ಇರಾನ್‌ಗೆ ಅತ್ಯಾಧುನಿಕ ‘ವಾಯು ರಕ್ಷಣಾ ವ್ಯವಸ್ಥೆ’ಗಳನ್ನು ನೀಡಲಿದೆ. ವಿಶೇಷವಾಗಿ ಭುಜದ ಮೇಲೆ ಇಟ್ಟು ಹಾರಿಸುವ (MANPADS) ಕ್ಷಿಪಣಿಗಳ ಮೂಲಕ ಇರಾನ್ ಈಗಾಗಲೇ ಅಮೆರಿಕದ ಎಫ್-15 ಇ ಫೈಟರ್ ಜೆಟ್ ಮತ್ತು ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗಳನ್ನು ಹೊಡೆದುರುಳಿಸಿದೆ.

ಕಳೆದ 20 ವರ್ಷಗಳಲ್ಲಿ ಅಮೆರಿಕದ ವಿಮಾನಗಳನ್ನು ಮುಟ್ಟಲು ಯಾವ ದೇಶಕ್ಕೂ ಸಾಧ್ಯವಾಗಿರಲಿಲ್ಲ, ಆದರೆ ಚೀನಾದ ತಂತ್ರಜ್ಞಾನದಿಂದ ಇರಾನ್ ಈಗ ಈ ಸಾಹಸ ಮಾಡುತ್ತಿದೆ. ಮಾರ್ಚ್ 2026 ರಲ್ಲಿ ಚೀನಾ ಎರಡು ಹಡಗುಗಳ ಮೂಲಕ ರಾಕೆಟ್ ಇಂಧನಕ್ಕೆ ಬಳಸುವ ಸೋಡಿಯಂ ಪರ್ಕ್ಲೋರೇಟ್ ಅನ್ನು ಇರಾನ್‌ಗೆ ರವಾನಿಸಿರುವುದು ಪತ್ತೆಯಾಗಿದೆ. ಇರಾನ್ ತನ್ನ ಪರಮಾಣು ಹಠ ಮತ್ತು ಚೀನಾದ ಬೆಂಬಲದಿಂದಾಗಿ ಜಾಗತಿಕ ಶಾಂತಿಗೆ ಭಂಗ ತರುತ್ತಿದೆ ಎಂದು ಅಮೆರಿಕ ಆರೋಪಿಸಿದೆ.

ಒಂದು ವೇಳೆ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಶಾಂತಿ ಮಾತುಕತೆ ಸಂಪೂರ್ಣ ಹಳಿ ತಪ್ಪಿದರೆ, ಅದರ ಹೊಣೆಯನ್ನು ಇರಾನ್ ಮತ್ತು ಚೀನಾ ಹೊರಬೇಕಾಗುತ್ತದೆ ಎಂದು ಟ್ರಂಪ್ ಹೇಳಿದ್ದಾರೆ. ಒಂದು ಕಡೆ ರಾಜತಾಂತ್ರಿಕ ಮಾತುಕತೆ ನಡೆಯುತ್ತಿದ್ದರೆ, ಇನ್ನೊಂದು ಕಡೆ ಸಮರ ಸನ್ನದ್ಧತೆ ಭರದಿಂದ ಸಾಗಿದೆ. ಚೀನಾ ಮತ್ತು ಅಮೆರಿಕದ ನಡುವಿನ ಈ ‘ನೇರ ಸಮರ’ದ ಮುನ್ಸೂಚನೆಯು ಇಡೀ ಜಗತ್ತನ್ನು ಆತಂಕಕ್ಕೆ ತಳ್ಳಿದೆ. ಇರಾನ್-ಅಮೆರಿಕ ಸಂಘರ್ಷವು ಈಗ ದೊಡ್ಡ ಶಕ್ತಿಗಳ ನಡುವಿನ ಜಿದ್ದಾಜಿದ್ದಿಯಾಗಿ ಮಾರ್ಪಟ್ಟಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಇರಾನ್-ಅಮೆರಿಕ ಸಂಧಾನಕ್ಕೆ ‘ಪರಮಾಣು’ ತಡೆ: ಇಸ್ಲಾಮಾಬಾದ್ ಮ್ಯಾರಥಾನ್ ಮಾತುಕತೆ ಹಳಿ ತಪ್ಪಿದ್ದೇಕೆ?

ಇಸ್ಲಾಮಾಬಾದ್, ಏಪ್ರಿಲ್ 12: ಜಾಗತಿಕ ಶಾಂತಿ ಮತ್ತು ಸ್ಥಿರತೆ ಮೇಲೆ ಭಾರಿ ಪರಿಣಾಮ ಬೀರಬಹುದಾಗಿದ್ದ ಅಮೆರಿಕ-ಇರಾನ್(Iran) ನಡುವಿನ ಹೈ-ವೋಲ್ಟೇಜ್ ಸಂಧಾನ ಸದ್ಯಕ್ಕೆ ಹಳಿತಪ್ಪಿದೆ. ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ 21 ಗಂಟೆಗಳ ಸುದೀರ್ಘ ಮ್ಯಾರಥಾನ್ ಚರ್ಚೆಯು ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿದ್ದು, ಈ ವೈಫಲ್ಯದ ಹಿಂದಿನ ಆಘಾತಕಾರಿ ಕಾರಣಗಳು ಇಲ್ಲಿವೆ. ಅಮೆರಿಕ ಮತ್ತು ಇರಾನ್ ನಡುವೆ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಸಂಘರ್ಷಕ್ಕೆ ಅಂತ್ಯ ಹಾಡಲು ಪಾಕಿಸ್ತಾನ ಹಮ್ಮಿಕೊಂಡಿದ್ದ ಸಂಧಾನ ಸಭೆಯು ಅನಿಶ್ಚಿತವಾಗಿ ಕೊನೆಗೊಂಡಿದೆ. ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನೇತೃತ್ವದ ನಿಯೋಗವು ಇದು ಇರಾನ್‌ಗೆ ಕೆಟ್ಟ ಸುದ್ದಿ ಎಂದು ಹೇಳುತ್ತಾ ಮಾತುಕತೆಯಿಂದ ಹೊರಬಂದಿದೆ.

ವಿಫಲತೆಗೆ ಪ್ರಮುಖ ಕಾರಣ: ಪರಮಾಣು ಹಠ
21 ಗಂಟೆಗಳ ಕಾಲ ನಡೆದ ಈ ಮ್ಯಾರಥಾನ್ ಚರ್ಚೆಯು ಪರಮಾಣು ಶಸ್ತ್ರಾಸ್ತ್ರಗಳ ವಿಷಯದಲ್ಲಿ ಮುಗ್ಗರಿಸಿತು. ಇರಾನ್ ತನ್ನ ಪರಮಾಣು ಶಸ್ತ್ರಾಸ್ತ್ರಗಳ ತಯಾರಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಮತ್ತು ಭವಿಷ್ಯದಲ್ಲಿ ಅಂತಹ ಆಯುಧಗಳನ್ನು ತಯಾರಿಸುವ ಯಾವುದೇ ಹಾದಿಯನ್ನು ಹುಡುಕಬಾರದು ಎಂಬುದು ಅಮೆರಿಕದ ಪ್ರಮುಖ ಷರತ್ತು. ಇದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಮುಖ ಗುರಿಯಾಗಿದೆ.

ಇರಾನ್‌ನ ನಿಲುವು
ಇರಾನ್ ತನ್ನ ಪರಮಾಣು ಕಾರ್ಯಕ್ರಮವು ಶಾಂತಿಯುತ ಉದ್ದೇಶಕ್ಕಾಗಿ ಎಂದು ವಾದಿಸುತ್ತಿದೆ. ಆದರೆ ಇರಾನ್ ದೀರ್ಘಾವಧಿಯಲ್ಲಿ ಪರಮಾಣು ಅಸ್ತ್ರ ತ್ಯಜಿಸುವ ಇಚ್ಛಾಶಕ್ತಿ ಹೊಂದಿದೆಯೇ ಎಂಬ ಪ್ರಶ್ನೆಗೆ ವ್ಯಾನ್ಸ್ ಅವರಿಂದ ಬಂದ ಉತ್ತರ ಇನ್ನೂ ಅಂತಹ ಬದ್ಧತೆ ಕಂಡಿಲ್ಲ ಎಂಬುದು.

ಹಾರ್ಮುಜ್ ಜಲಸಂಧಿ ಮತ್ತು ಆಸ್ತಿ ಮುಟ್ಟುಗೋಲು
ಮಾತುಕತೆಯಲ್ಲಿ ಕೇವಲ ಪರಮಾಣು ವಿಷಯ ಮಾತ್ರವಲ್ಲದೆ ಇನ್ನುಳಿದ ಪ್ರಮುಖ ಅಂಶಗಳೂ ಚರ್ಚೆಗೆ ಬಂದಿವೆ:

ಹಾರ್ಮುಜ್ ಜಲಸಂಧಿ: ಜಾಗತಿಕ ತೈಲ ಸಾರಿಗೆಯ ಜೀವನಾಡಿಯಾಗಿರುವ ಹಾರ್ಮುಜ್ ಜಲಸಂಧಿಯನ್ನು ಮುಕ್ತವಾಗಿರಿಸುವ ಬಗ್ಗೆ ತೀವ್ರ ಚರ್ಚೆ ನಡೆದಿದೆ.

ಆಸ್ತಿ ಬಿಡುಗಡೆ: ಅಮೆರಿಕ ಮುಟ್ಟುಗೋಲು ಹಾಕಿಕೊಂಡಿರುವ ಇರಾನ್‌ನ ಆಸ್ತಿಗಳ ಬಿಡುಗಡೆಯ ಬಗ್ಗೆಯೂ ಚರ್ಚೆಯಾಗಿದ್ದರೂ, ಅಂತಿಮವಾಗಿ ಇರಾನ್ ಅಮೆರಿಕದ ಷರತ್ತುಗಳಿಗೆ ಒಪ್ಪಿಗೆ ಸೂಚಿಸಲಿಲ್ಲ.

ಪರಸ್ಪರ ಆರೋಪಗಳ ಸುರಿಮಳೆ
ಮಾತುಕತೆ ಮುರಿದುಬಿದ್ದ ನಂತರ ಎರಡೂ ದೇಶಗಳು ಪರಸ್ಪರ ದೂಷಿಸಿಕೊಂಡಿವೆ. ನಾವು ಸಾಕಷ್ಟು ಹೊಂದಿಕೊಳ್ಳುವ ಸ್ವಭಾವದಿಂದಲೇ ಬಂದಿದ್ದೆವು ಮತ್ತು ಉತ್ತಮ ಆಫರ್​ಗಳನ್ನು ನೀಡಿದ್ದೆವು. ಆದರೆ ಇರಾನ್ ಒಪ್ಪಲಿಲ್ಲ ಎಂದು ವ್ಯಾನ್ಸ್ ಹೇಳಿದ್ದಾರೆ.

ಮತ್ತಷ್ಟು ಓದಿ: ಇರಾನ್ ಬಯಸಿದರೂ ಹಾರ್ಮುಜ್ ಜಲಸಂಧಿ ತೆರೆಯಲು ಸಾಧ್ಯವಿಲ್ಲ; ಇಲ್ಲಿದೆ ಕಾರಣ

ಯಾವುದೇ ಬ್ಯಾಕಪ್ ಪ್ಲಾನ್ ಇಲ್ಲ: ಡೊನಾಲ್ಡ್ ಟ್ರಂಪ್ ಖಡಕ್ ಎಚ್ಚರಿಕೆ
ಈ ಮಾತುಕತೆ ವಿಫಲವಾದರೆ ನಿಮ್ಮ ಮುಂದಿನ ದಾರಿಯೇನು ಎಂಬ ಪ್ರಶ್ನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅತ್ಯಂತ ಗಂಭೀರವಾಗಿ ಪ್ರತಿಕ್ರಿಯಿಸಿದ್ದಾರೆ. ನಮಗೆ ಯಾವುದೇ ಪ್ಲಾನ್ ಬಿ (Plan B) ಅಗತ್ಯವಿಲ್ಲ. ಏಕೆಂದರೆ ಇರಾನ್‌ನ ಸೇನೆ ಈಗಾಗಲೆ ಸೋತಿದೆ. ಅವರ ಉತ್ಪಾದನಾ ಸಾಮರ್ಥ್ಯ ಮತ್ತು ಕ್ಷಿಪಣಿಗಳನ್ನು ನಾವು ತೀವ್ರವಾಗಿ ಹೊಡೆದುರುಳಿಸಿದ್ದೇವೆ. ನಮ್ಮ ಸೇನೆ ಅದ್ಭುತ ಕೆಲಸ ಮಾಡಿದೆ, ಎಂದು ಟ್ರಂಪ್ ಹೇಳುವ ಮೂಲಕ ಇರಾನ್ ಮೇಲೆ ಮಿಲಿಟರಿ ಒತ್ತಡವನ್ನು ಮುಂದುವರಿಸುವ ಮುನ್ಸೂಚನೆ ನೀಡಿದ್ದಾರೆ.

ಇಸ್ಲಾಮಾಬಾದ್‌ನಲ್ಲಿ ನಡೆದ ಈ 21 ಗಂಟೆಗಳ ಸಂಧಾನವು ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸುವ ಬದಲು, ಎರಡು ರಾಷ್ಟ್ರಗಳ ನಡುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಯುದ್ಧದ ಪರಿಸ್ಥಿತಿ ಮತ್ತಷ್ಟು ಉಲ್ಬಣಿಸುವ ಸಾಧ್ಯತೆಯಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

IPL 2026: MI vs RCB ಪಂದ್ಯಕ್ಕೆ 4 ಆಟಗಾರರು ಅಲಭ್ಯ

Source link

ನನ್ನ ಯಶಸ್ಸಿಗೆ ದಾವುದ್ ಇಬ್ರಾಹಿಂ ಕಾರಣ: ರಾಮ್ ಗೋಪಾಲ್ ವರ್ಮಾ ವಿವಾದಾತ್ಮಕ ಹೇಳಿಕೆ

ವಿವಾದಾತ್ಮಕ ಮತ್ತು ಪ್ರತಿಭಾವಂತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (RGV) ಮತ್ತೆ ಸುದ್ದಿಯಲ್ಲಿದ್ದಾರೆ. ಭೂಗತ ಜಗತ್ತಿನ ಕಥೆಗಳನ್ನು ತೆರೆಯ ಮೇಲೆ ಅಚ್ಚುಕಟ್ಟಾಗಿ ಚಿತ್ರಿಸುವ ವರ್ಮಾ, ಈಗ ಭೂಗತ ಪಾತಕಿ ದಾವುದ್ ಇಬ್ರಾಹಿಂ (Dawood Ibrahim) ಬಗ್ಗೆ ನೀಡಿರುವ ಹೇಳಿಕೆ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಇತ್ತೀಚೆಗೆ ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಆರ್‌ಜಿವಿ, ತಮ್ಮ ಆತ್ಮಚರಿತ್ರೆಯಾದ ‘ಗನ್ಸ್ ಆ್ಯಂಡ್ ಥೈಸ್’ ಪುಸ್ತಕವನ್ನು ಭೂಗತ ಪಾತಕಿ ದಾವುದ್ ಇಬ್ರಾಹಿಂಗೆ ಅರ್ಪಿಸಲು ಬಯಸಿದ್ದಾಗಿ ಬಹಿರಂಗಪಡಿಸಿದ್ದಾರೆ.

‘ನಾನು ನನ್ನ ಪುಸ್ತಕವನ್ನು ದಾವುದ್ ಇಬ್ರಾಹಿಂಗೆ ಅರ್ಪಿಸಿದ್ದೆ. ಆದರೆ ಪ್ರಕಾಶಕರು ಅವನ ಹೆಸರನ್ನು ತೆಗೆದುಹಾಕಿದರು. ಒಂದು ವೇಳೆ ದಾವುದ್ ಇಬ್ರಾಹಿಂ ಇಲ್ಲದಿದ್ದರೆ, ನಾನು ‘ಸತ್ಯ’ ಮತ್ತು ‘ಕಂಪನಿ’ ರೀತಿಯ ಐಕಾನಿಕ್ ಚಿತ್ರಗಳನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅವನಿಲ್ಲದೇ ನಾನು ಜೀವನೋಪಾಯವನ್ನು ಕಂಡುಕೊಳ್ಳಲು ಸಾಧ್ಯವಿರಲಿಲ್ಲ. ಹಾಗಾಗಿ ನಾನು ಅವನಿಗೆ ಪುಸ್ತಕವನ್ನು ಯಾಕೆ ಅರ್ಪಿಸಬಾರದು’ ಎಂದು ಅವರು ಪ್ರಶ್ನಿಸಿದ್ದಾರೆ.

1990ರ ದಶಕದಲ್ಲಿ ಬಾಲಿವುಡ್ ಚಿತ್ರರಂಗದ ಮೇಲೆ ಭೂಗತ ಜಗತ್ತಿನ ಪ್ರಭಾವ ಹೆಚ್ಚಾಗಿತ್ತು. ಅನೇಕ ನಟರು ಮತ್ತು ನಿರ್ದೇಶಕರು ಬೆದರಿಕೆ ಕರೆಗಳನ್ನು ಸ್ವೀಕರಿಸುತ್ತಿದ್ದರು. ಆದರೆ ತಮಗೆ ಎಂದಿಗೂ ಅಂತಹ ಕರೆಗಳು ಬರಲಿಲ್ಲ ಎಂದು ವರ್ಮಾ ಹೇಳಿದ್ದಾರೆ. ಇದಕ್ಕೆ ಕಾರಣ ಏನು ಎಂಬುದನ್ನೂ ಅವರು ವಿವರಿಸಿದ್ದಾರೆ.

‘ಗ್ಯಾಂಗ್‌ಸ್ಟರ್‌ಗಳು ನನ್ನ ನಿರ್ದೇಶನದ ‘ಸತ್ಯ’ ಮತ್ತು ‘ಕಂಪನಿ’ ಸಿನಿಮಾಗಳನ್ನು ತುಂಬಾ ಇಷ್ಟಪಟ್ಟಿದ್ದರು. ನಾನು ಅವರ ಜೀವನವನ್ನು ತೆರೆಯ ಮೇಲೆ ತೋರಿಸಿದ ರೀತಿ ಅವರಿಗೆ ಇಷ್ಟವಾಗಿತ್ತು. ಹಾಗಾಗಿ ಅವರು ನನ್ನನ್ನು ಎಂದಿಗೂ ತೊಂದರೆಗೆ ಸಿಲುಕಿಸಲಿಲ್ಲ. ಬದಲಾಗಿ, ನಾನು ಅವರಿಗೆ ಒಬ್ಬ ಆತ್ಮೀಯ ಗೆಳೆಯನಂತೆ ಕಂಡೆ’ ಎಂದು ರಾಮ್ ಗೋಪಾಲ್ ವರ್ಮಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ರಾಮ್ ಗೋಪಾಲ್ ವರ್ಮಾ ವಿರುದ್ಧ ಮಾಜಿ ಐಪಿಎಸ್ ಅಧಿಕಾರಿ ದೂರು

ರಾಮ್ ಗೋಪಾಲ್ ವರ್ಮಾ ಅವರ ಗ್ಯಾಂಗ್‌ಸ್ಟರ್ ಚಿತ್ರಗಳು ನೈಜ ಘಟನೆಗಳಿಂದ ಪ್ರೇರಿತವಾಗಿದ್ದವು. ಭೂಗತ ಲೋಕದ ಕರಾಳ ಮುಖವನ್ನು ಅತ್ಯಂತ ನೈಜವಾಗಿ ಚಿತ್ರಿಸಿದ್ದರಿಂದ ಪಾತಕಿಗಳೂ ಸಹ ಅವರ ಕಲೆಗೆ ಮಾರುಹೋಗಿದ್ದರು ಎಂಬುದು ಆರ್‌ಜಿವಿ ಅವರ ವಾದ. ಒಟ್ಟಿನಲ್ಲಿ, ದಾವುದ್ ಇಬ್ರಾಹಿಂ ಕುರಿತಾದ ವರ್ಮಾ ಅವರ ಈ ನೇರ ಮತ್ತು ವಿವಾದಾತ್ಮಕ ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿನಲ್ಲಿ ವಿದ್ಯುತ್ ಬೇಡಿಕೆ ಏರಿಕೆ! ಹಾಗಾದ್ರೆ ಇನ್ನು ಪವರ್ ಕಟ್ ಜಾಸ್ತಿಯಾಗತ್ತಾ?

ಬೆಂಗಳೂರು, ಏಪ್ರಿಲ್ 12: ನಗರದಲ್ಲಿ ಹೆಚ್ಚುತ್ತಿರುವ ತಾಪಮಾನ ಮತ್ತು ವಿದ್ಯುತ್ ಬಳಕೆಯ ಏರಿಕೆಯಿಂದಾಗಿ ಇತ್ತೀಚೆಗೆ ವಿದ್ಯುತ್ ವ್ಯತ್ಯಯಗಳು ಹೆಚ್ಚಾಗುತ್ತಿರುವುದು ಗಮನಾರ್ಹವಾಗಿದೆ. ಹೀಗಾಗಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಶುಕ್ರವಾರ ಬೆಳಿಗ್ಗೆ 10.30ಕ್ಕೆ ಇತಿಹಾಸದಲ್ಲೇ ಅತಿ ಹೆಚ್ಚು ವಿದ್ಯುತ್ ಬೇಡಿಕೆ ಮತ್ತು ಸರಬರಾಜನ್ನು ದಾಖಲಿಸಿದೆ. ಒಟ್ಟು 173.58 ಮಿಲಿಯನ್ ಯೂನಿಟ್ (8,802 ಮೆಗಾವಾಟ್) ವಿದ್ಯುತ್ ಬಳಕೆ ಆಗಿದೆ.

ಟ್ರಾನ್ಸ್‌ಫಾರ್ಮರ್ ಹಾಗೂ ಫೀಡರ್‌ಗಳ ಮೇಲೆ ಅಧಿಕ ಒತ್ತಡ

ಸಾಮಾನ್ಯವಾಗಿ ನಗರದಲ್ಲಿ ಹೆಚ್ಚು ಎಂದರೆ ಸುಮಾರು 7,800 ಮೆಗಾವಾಟ್ ವರೆಗೆ ವಿದ್ಯತ್ ಬಳಕೆಯಾಗುತ್ತದೆ. ಆದರೆ ಈ ಬೇಸಿಗೆ ಕಾಲದಲ್ಲಿ ವಿದ್ಯುತ್ ಬೇಡಿಕೆ ಗಣನೀಯವಾಗಿ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ತಾಪಮಾನ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇರುವುದರಿಂದ ವಿದ್ಯುತ್ ಬೇಡಿಕೆ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ಹೆಚ್ಚಿದ ಲೋಡ್ ಮತ್ತು ಉಷ್ಣತೆಯಿಂದಾಗಿ ವಿದ್ಯುತ್ ಲೈನ್‌ಗಳಲ್ಲಿ ಟ್ರಿಪ್ಪಿಂಗ್ ಸಮಸ್ಯೆಗಳು ಉಂಟಾಗುತ್ತಿವೆ. ಇದರಿಂದ ತಾತ್ಕಾಲಿಕವಾಗಿ ವಿದ್ಯುತ್ ವ್ಯತ್ಯಯಗಳು ಕಾಣಿಸಿಕೊಳ್ಳುತ್ತಿವೆ. ಕೆಲವು ಪ್ರದೇಶಗಳಲ್ಲಿ ಟ್ರಾನ್ಸ್‌ಫಾರ್ಮರ್ ಹಾಗೂ ಫೀಡರ್‌ಗಳ ಮೇಲೆ ಅಧಿಕ ಒತ್ತಡ ಇರುವುದರಿಂದ ಸುರಕ್ಷತಾ ಕಾರಣಗಳಿಂದ ಲೈನ್‌ಗಳನ್ನು ಬದಲಾಯಿಸುವ ಅಗತ್ಯವಿದೆ. ಇದರಿಂದಲೂ ವಿದ್ಯುತ್ ಕಡಿತಗಳು ಸಂಭವಿಸುತ್ತಿವೆ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ವಿದ್ಯುತ್ ಕೊರತೆ ಏನೂ ಇಲ್ಲ

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎನ್. ಶಿವಶಂಕರ ಮಾತನಾಡಿ, ಕಳೆದ ಒಂದು ವಾರದಿಂದ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಆದರೆ ರಾಜ್ಯದಲ್ಲಿ ವಿದ್ಯುತ್ ಕೊರತೆ ಏನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದಲ್ಲದೆ, ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ಅಧಿಕಾರಿಗಳ ಪ್ರಕಾರ, ಖೋದೇಸ್ ಫ್ಯಾಕ್ಟರಿ ಸಮೀಪದ ಕೇಂದ್ರದಲ್ಲಿ ಶುಕ್ರವಾರ ರಾತ್ರಿ ಒಂದು ಸಾಧನದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದರಿಂದ ಸುಮಾರು 45 ನಿಮಿಷಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಯಿತು. ಸಣ್ಣಪುಟ್ಟ ದುರಸ್ತಿ ಕಾರ್ಯಗಳೂ ತಾತ್ಕಾಲಿಕ ವ್ಯತ್ಯಯಗಳಿಗೆ ಕಾರಣವಾಗಬಹುದು ಎಂದು ಅವರು ತಿಳಿಸಿದ್ದಾರೆ.

ರಾಜ್ಯ ಸರ್ಕಾರವು ಫೆಬ್ರವರಿಯಿಂದ ಏಪ್ರಿಲ್ ಅವಧಿಯಲ್ಲಿ ಯಾವುದೇ ಯೋಜಿತ ವಿದ್ಯುತ್ ಕಡಿತಗಳನ್ನು ಮಾಡಬಾರದು ಎಂಬ ತೀರ್ಮಾನ ಕೈಗೊಂಡಿದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳ ಪರೀಕ್ಷೆಗಳು ನಡೆಯುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಮೇ ತಿಂಗಳ ಪರಿಸ್ಥಿತಿ ಕುರಿತು ಇನ್ನೂ ನಿರ್ಧಾರ ಕೈಗೊಳ್ಳಲಾಗಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version