Delayed Marriage: ಮದುವೆ ವಿಳಂಬವಾಗುತ್ತಿದೆಯೇ? ಜಾತಕದಲ್ಲಿನ ಈ ಗ್ರಹ ದೋಷಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ

Delayed Marriage: ಮದುವೆ ವಿಳಂಬವಾಗುತ್ತಿದೆಯೇ? ಜಾತಕದಲ್ಲಿನ ಈ ಗ್ರಹ ದೋಷಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ

ಜೀವನದಲ್ಲಿ ಎಲ್ಲವೂ ಸುಸೂತ್ರವಾಗಿದ್ದರೂ, ಅಂದರೆ ಉತ್ತಮ ಉದ್ಯೋಗ, ಸುಸಂಸ್ಕೃತ ನಡವಳಿಕೆ ಮತ್ತು ಗೌರವಾನ್ವಿತ ಕುಟುಂಬವಿದ್ದರೂ ಕೆಲವೊಮ್ಮೆ ಮದುವೆ ಎಂಬುದು ವಿಳಂಬವಾಗುತ್ತಿರುತ್ತದೆ . ಬಂದ ಸಂಬಂಧಗಳು ಕೈತಪ್ಪುವುದು ಅಥವಾ ಸೂಕ್ತವಾದ ಪ್ರಸ್ತಾಪಗಳೇ ಬಾರದಿರುವುದು ಅನೇಕರನ್ನು ಚಿಂತೆಗೀಡು ಮಾಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿನ ಗ್ರಹಗಳ ಸ್ಥಾನಗತಿ ಮತ್ತು ದೋಷಗಳೇ ಇಂತಹ ಅಡೆತಡೆಗಳಿಗೆ ಪ್ರಮುಖ ಕಾರಣಗಳಾಗಿವೆ.

ಜಾತಕದ ‘ಏಳನೇ ಮನೆ’ಯ ಪ್ರಾಮುಖ್ಯತೆ:

ಜ್ಯೋತಿಷ್ಯ ಶಾಸ್ತ್ರದಲ್ಲಿ ಜಾತಕದ 12 ಮನೆಗಳ ಪೈಕಿ ಏಳನೇ ಮನೆಯನ್ನು ವಿವಾಹ ಮತ್ತು ಜೀವನ ಸಂಗಾತಿಯ ಸ್ಥಾನ ಎಂದು ಕರೆಯಲಾಗುತ್ತದೆ. ಈ ಮನೆಯ ಅಧಿಪತಿ ದುರ್ಬಲನಾಗಿದ್ದರೆ ಅಥವಾ ಅಶುಭ ಸ್ಥಾನಗಳಲ್ಲಿ (6, 8 ಅಥವಾ 12ನೇ ಮನೆ) ಕುಳಿತಿದ್ದರೆ ಮದುವೆಯಲ್ಲಿ ಪದೇ ಪದೇ ಅಡೆತಡೆಗಳು ಎದುರಾಗುತ್ತವೆ. ಏಳನೇ ಮನೆಯ ಮೇಲೆ ಪಾಪ ಗ್ರಹಗಳ ದೃಷ್ಟಿ ಬಿದ್ದಾಗಲೂ ಸಂಬಂಧಗಳು ಅಂತಿಮ ಹಂತದಲ್ಲಿ ಮುರಿದು ಬೀಳುವ ಸಾಧ್ಯತೆ ಇರುತ್ತದೆ.

ಮದುವೆಯ ಮೇಲೆ ಪ್ರಭಾವ ಬೀರುವ ಪ್ರಮುಖ ಗ್ರಹಗಳು:

ಶನಿ ಗ್ರಹದ ಮಂದಗತಿ:

ಶನಿಯನ್ನು ಶಿಸ್ತು ಮತ್ತು ನ್ಯಾಯದ ದೇವರೆಂದು ಕರೆಯಲಾಗುತ್ತದೆ. ಶನಿಯು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾದ್ದರಿಂದ, ಇದರ ಪ್ರಭಾವ ಏಳನೇ ಮನೆಯ ಮೇಲಿದ್ದರೆ ಮದುವೆಯು ಸಾಮಾನ್ಯವಾಗಿ 30 ವರ್ಷಗಳ ನಂತರವೇ ಜರುಗುತ್ತದೆ. ಆದರೆ, ಶನಿಯಿಂದ ವಿಳಂಬವಾದ ಮದುವೆಯು ಹೆಚ್ಚು ಸ್ಥಿರವಾಗಿ ಮತ್ತು ದೀರ್ಘಕಾಲ ಬಾಳಿಕೆ ಬರುತ್ತದೆ ಎಂಬುದು ಜ್ಯೋತಿಷ್ಯದ ನಂಬಿಕೆ.

ಮಂಗಳ ದೋಷ (ಕುಜ ದೋಷ):

ಅನೇಕರು ‘ಮಂಗಳಿಕ’ ಅಥವಾ ‘ಕುಜ ದೋಷ’ದ ಬಗ್ಗೆ ಕೇಳಿರುತ್ತಾರೆ. ಜಾತಕದಲ್ಲಿ ಮಂಗಳನ ಸ್ಥಾನವು ಉಗ್ರವಾಗಿದ್ದರೆ, ಅದು ಕೇವಲ ಮದುವೆ ವಿಳಂಬ ಮಾಡುವುದು ಮಾತ್ರವಲ್ಲದೆ, ವಿವಾಹದ ನಂತರ ದಂಪತಿಗಳ ನಡುವೆ ಹೊಂದಾಣಿಕೆಯ ಸಮಸ್ಯೆಗಳನ್ನು ಸೃಷ್ಟಿಸಬಹುದು.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ರಾಹು ಮತ್ತು ಕೇತುಗಳ ಛಾಯೆ:

ರಾಹು ಮತ್ತು ಕೇತುಗಳನ್ನು ಛಾಯಾ ಗ್ರಹಗಳೆಂದು ಪರಿಗಣಿಸಲಾಗುತ್ತದೆ. ಇವುಗಳ ಪ್ರಭಾವವಿದ್ದರೆ ಸಂಬಂಧಗಳು ನಿಶ್ಚಯವಾಗುವ ಮೊದಲೇ ತಪ್ಪು ತಿಳುವಳಿಕೆಯಿಂದ ಹಠಾತ್ತನೆ ಮುರಿದು ಬೀಳುತ್ತವೆ. ಇವು ಮದುವೆಯ ಪ್ರಕ್ರಿಯೆಯಲ್ಲಿ ಗೊಂದಲಗಳನ್ನು ಸೃಷ್ಟಿಸುತ್ತವೆ.

ಗುರು ಮತ್ತು ಶುಕ್ರ ಗ್ರಹಗಳ ಬಲ:

ವಿವಾಹ ಸುಗಮವಾಗಿ ನಡೆಯಲು ಸ್ತ್ರೀ ಜಾತಕದಲ್ಲಿ ಗುರು (Jupiter) ಮತ್ತು ಪುರುಷ ಜಾತಕದಲ್ಲಿ ಶುಕ್ರ (Venus) ಗ್ರಹಗಳ ಬಲ ಅತ್ಯಗತ್ಯ. ಹುಡುಗಿಯರಿಗೆ ಗುರುವು ಪತಿ ಸುಖವನ್ನು ನೀಡುವ ಗ್ರಹವಾದರೆ, ಹುಡುಗರಿಗೆ ಶುಕ್ರನು ಪತ್ನಿಯ ಸುಖವನ್ನು ನೀಡುವವನು. ಈ ಗ್ರಹಗಳು ದುರ್ಬಲವಾದಾಗ ಮದುವೆಯ ಪ್ರಸ್ತಾಪಗಳು ಬರುವುದು ಕಡಿಮೆಯಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶ್ರೀನಂದಾ ಸಾವಿಗೆ ಸ್ಫೋಟಕ ಟ್ವಿಸ್ಟ್: ಬಾಲಕಿ ಸಾವಿನ ಬಗ್ಗೆ ಪೊಲೀಸರಿಗೆ ಮತ್ತೊಂದು ಅನುಮಾನ

ಚಿಕ್ಕಮಗಳೂರು, (ಏಪ್ರಿಲ್ 10): ಪ್ರವಾಸಕ್ಕೆಂದು ಚಿಕ್ಕಮಗಳೂರಿಗೆ (Chikkamagaluru) ಬಂದಿದ್ದ ಕೇರಳ ಮೂಲದ ಬಾಲಕಿ ಶ್ರೀನಂದಾ (Srinanda) (14) ಪ್ರಪಾತದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಏಪ್ರಿಲ್ 7ರಂದು ಕುಟುಂಬದವರೊಂದಿಗೆ ಚಿಕ್ಕಮಗಳೂರಿನ ಮಾಣಿಕ್ಯಧಾರಕ್ಕೆ ಪ್ರವಾಸಕ್ಕೆ ಬಂದಿದ್ದು, ಮಂಗಳವಾರ ಸಂಜೆ ಸುಮಾರು 5.30ರ ವೇಳೆ ಆಕೆ ಆಕಸ್ಮಿಕವಾಗಿ ನಾಪತ್ತೆಯಾಗಿದ್ದಳು. ಬಳಿಕ ಹಿನ್ನೆಲೆಯಲ್ಲಿ ಕುಟುಂಬದವರು ಹಾಗೂ ಸ್ಥಳೀಯರು ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ.ಬಳಿಕ ಅರಣ್ಯ ಇಲಾಖೆ, ಪೊಲೀಸರು, ಸೇರಿದಂತೆ ಇತರೆ ರಕ್ಷಣಾ ತಂಡಗಳು ಸತತ ಮೂರು ದಿನಗಳ ಕಾಲ ಕಾರ್ಯಾಚರಣೆ ನಡೆಸಿದ್ದು ಅಂತಿಮವಾಗಿ ಇಂದು (ಏಪ್ರಿಲ್ 10) ಶ್ರೀನಂದಾ 2000 ಅಡಿ ಆಳದ ಪ್ರಪಾತದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆದ್ರೆ, ಶ್ರೀನಂದಾ ಅದು ಹೇಗೆ ಬಿದ್ದಿದ್ದಾಳೆ ಎನ್ನುವುದೇ ನಿಗೂಢವಾಗಿದೆ. ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿರಬಹುದು ಎನ್ನಲಾಗಿತ್ತು. ಆದ್ರೆ, ಇದೀಗ ತಂದೆ, ಪೊಲೀಸರ ಮುಂದೆ ಹೇಳಿರುವ ಅದೊಂದು ಹೇಳಿಕೆ ಶ್ರೀನಂದಾ ಸಾವಿನ ಬಗ್ಗೆ ಮತ್ತೊಂದು ಅನುಮಾನ ಮೂಡಿದ್ದು,  ತಂದೆ ಬೈದಿದ್ದಕ್ಕೆ ಶ್ರೀನಂದಾ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಕ್ಷಣಾರ್ಧದಲ್ಲೇ ಮಾಯವಾಗಿದ್ದ ಶ್ರೀನಂದಾ

ಆ ದಿನ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಮಾಣಿಕ್ಯಾಧಾರದ ಮೆಟ್ಟಿಲುಗಳನ್ನು ಇಳಿಯುತ್ತಿದ್ದರು. ಕುಟುಂಬದ ಸದಸ್ಯರೆಲ್ಲಾ ಮುಂದೆ ಹೋಗುತ್ತಿದ್ದರೆ, ಬಾಲಕಿ ಶ್ರೀನಂದ ಅವರ ಹಿಂದೆಯೇ ಬರುತ್ತಿದ್ದಳು. ಆದರೆ, ಒಂದು ತಿರುವಿನಲ್ಲಿ ನೋಡುವಷ್ಟರಲ್ಲಿ ಆಕೆ ಅಲ್ಲಿರಲಿಲ್ಲ. ಕ್ಷಣಾರ್ಧದಲ್ಲಿ ಬಾಲಕಿ ದಟ್ಟ ಕಾನನದ ನಡುವೆ ನಾಪತ್ತೆಯಾದ್ದಳು. ಇದರಿಂದ ಆತಂಕಗೊಂಡ ಕುಟುಂಬಸ್ಥ ಸುತ್ತಮುತ್ತ ಗಾಬರಿಯಿಂದ ಹುಡುಕಾಡಿದರೂ ಆಕೆಯ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಈಗ ಇರುವ ಅನುಮಾನ ಬಾಲಕಿ ಕಾಡು ಪ್ರಾಣಿಗಳ ದಾಳಿಗೆ ಒಳಗಾಗಿದ್ದಾಳೋ ಅಥವಾ ಆಕಸ್ಮಿಕವಾಗಿ ಕಂದಕಕ್ಕೆ ಬಿದ್ದಿದ್ದಾಳೋ ಎನ್ನುವ ಪ್ರಶ್ನೆಗಳು ಉದ್ಭವಿಸಿದ್ದವು. ಆದ್ರೆ, ಇದೀಗ ತಂದೆ ಹೇಳಿಕೆ ಶ್ರೀನಂದಾ ಸಾವಿನ ಸುತ್ತ ಮತ್ತೊಂದು ಅನುಮಾನ ವ್ಯಕ್ತವಾಗಿದೆ.

ಇದನ್ನೂ ನೋಡಿ: 2000 ಅಡಿ ಆಳದ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ

ತಂದೆ ಬೈದಿದ್ದಕ್ಕೆ ಆತ್ಮಹತ್ಯೆ ಶಂಕೆ

ಮೂರು ದಿನಗಳ ಕಾಲ ನಿರಂತರ ಶೋಧ ಕಾರ್ಯಾಚರಣೆ ನಡೆದ ಬಳಿಕ, ಅರಿಶಿನಗುಪ್ಪೆ ಭಾಗದಿಂದ ಹೊರಟ ಶೋಧ ತಂಡಕ್ಕೆ ಸುಮಾರು ಮೂರ್ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಆಳವಾದ ಕಂದಕದ ಬಳಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಈ ಪ್ರಪಾತವು ಸುಮಾರು 2000 ಅಡಿ ಆಳವಿದೆ. ಅತ್ಯಂತ ದುರ್ಗಮ ಪ್ರದೇಶವಾಗಿರುವ ಕಾರಣ ಶವವನ್ನು ಹೊರತೆಗೆದು ಮೇಲೆ ಎತ್ತಿಕೊಂಡು ಬರುವ ಕಾರ್ಯವೂ ಸವಾಲಿನದ್ದಾಗಿತ್ತು. ಇನ್ನು ಶ್ರೀನಂದಾ ಮೃತದೇಹ ಪತ್ತೆಯಾದ ಬಳಿಕ ಕಾಲು ಜಾರಿ ಬಿದ್ದಿರಬಹುದು ಎನ್ನಲಾಗಿತ್ತು. ಆದ್ರೆ, ಇದೀಗ ತಂದೆ ರಮೇಶ್, ಮೊಬೈಲ್ ವಿಚಾರಕ್ಕೆ ಮಗಳಿಗೆ ಬೈದಿದ್ದ ಬಗ್ಗೆ ಪೊಲೀಸರ ಮುಂದೆ ಹೇಳಿದ್ದಾರೆ. ಇದರಿಂದ ಶ್ರೀನಂದಾ, ಮಾಣಿಕ್ಯಧಾರಾ ಪಾರ್ಕಿಂಗ್ ಸ್ಥಳದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕಿ ವ್ಯಕ್ತವಾಗಿದೆ.

ಶ್ರೀನಂದಾ ಕಾಣೆಯಾಗುವ ಮುನ್ನ ಆಗಿದ್ದೇನು?

ಶ್ರೀನಂದಾ ತಂದೆ ರಮೇಶ್ ಅವರು ಮೊಬೈಲ್ ವಿಚಾರಕ್ಕೆ ಮಗಳಿಗೆ ಬೈದಿದ್ದ ಬಗ್ಗೆ ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ. ಮಾಣಿಕ್ಯಧಾರಾ ಬಳಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಶ್ರೀನಾಂದಗೆ ತಂದೆ ರಮೇಶ್​​ ಬೈದಿದ್ದು, ಅಲ್ಲದೇ ಮೊಬೈಲ್ ಕೊಡುವಂತೆ ವಾರ್ನ್​ ಮಾಡಿದ್ದ. ಇದರಿಂದ ಮನನೊಂದು ಶ್ರೀನಂದಾ, ಮಾಣಿಕ್ಯಧಾರಾದ ಫಾಲ್ಸ್​ಗೆ ತೆರಳದೆ ವಾಪಸ್ ವಾಪಸ್ ಆಗಿದ್ದಳು. ಬಳಿಕ ಶ್ರೀನಂದಾ ಕಾಣೆಯಾಗಿದ್ದಳು. ಈ ಹಿನ್ನೆಲೆಯಲ್ಲಿ ತಂದೆ ಬೈದಿದ್ದಕ್ಕೆ ಚಂದ್ರದ್ರೋಣ ಪರ್ವತದ ಮಾಣಿಕ್ಯಧಾರಾ ಪಾರ್ಕಿಂಗ್ ಸ್ಥಳದಿಂದ ಜಿಗಿದಿರಬಹುದು ಎಂದು ಶಂಕಿಸಲಾಗಿದ್ದು, ಈ ಬಗ್ಗೆ ಪೊಲೀಸರು ಸಹ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Video: ನೋ ಕಿಡ್ಸ್, ಡಬಲ್ ಇನ್ಕಮ್; ಬೆಂಗಳೂರಿನಲ್ಲಿ ನೆಲೆಸಿರುವ ಈ ದಂಪತಿಯ ತಿಂಗಳ ಖರ್ಚು ಎಷ್ಟು ಗೊತ್ತಾ?

ಬೆಂಗಳೂರು, ಏಪ್ರಿಲ್‌ 10: ಇಂದಿನ ದುಬಾರಿ ದುನಿಯಾದಲ್ಲಿ ಎಷ್ಟು ದುಡಿದ್ರೂ ಕಡಿಮೆನೇ. ಈ ಬೆಂಗಳೂರಿನಲ್ಲಿ (Bengaluru) ತಿಂಗಳಿಗೆ ಲಕ್ಷ ಲಕ್ಷ ರೂ ದುಡಿಯುತ್ತಿದ್ರೂ ಖರ್ಚು ವೆಚ್ಚಗಳಿಗೆ ಲಗಾಮು ಹಾಕದೇ ಇದ್ರೆ ಉಳಿತಾಯ ಮಾಡೋದು ಅಷ್ಟು ಸುಲಭವಲ್ಲ. ಡ್ಯುಯಲ್ ಇನ್‌ಕಮ್ ಹಾಗೂ ಮಕ್ಕಳಿಲ್ಲದ (DINK) ದಂಪತಿ ಬೆಂಗಳೂರಿನಲ್ಲಿ ತಮ್ಮ ತಿಂಗಳ ಖರ್ಚು ವೆಚ್ಚದ ಬಗ್ಗೆ ಹಂಚಿಕೊಂಡು, ಮಾಸಿಕ ಖರ್ಚು 81,600 ರೂ ಆಗುತ್ತದಂತೆ ಎಂದು ತಿಳಿಸಿದ್ದಾರೆ. ದಂಪತಿಯ ತಿಂಗಳ ಖರ್ಚು ವೆಚ್ಚದ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ.

@_the_ghosh ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ದಂಪತಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಹೌದು, ಬೆಂಗಳೂರು ಮೂಲದ ಕಂಪನಿಯೊಂದರಲ್ಲಿ ಹಿರಿಯ ಅಸೋಸಿಯೇಟ್-ಸೇಲ್ಸ್ ಆಗಿ ಕೆಲಸ ಮಾಡುತ್ತಿರುವ ಐಶ್ವರ್ಯ ಘೋಷ್ ತಾನು ಹಾಗೂ ತನ್ನ ಪತಿ ತಿಂಗಳಿಗೆ ಎಷ್ಟು ಖರ್ಚು ಮಾಡುತ್ತೇವೆ ಎಂದು ವಿವರಿಸಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಬಾಡಿಗೆ ಮತ್ತು ನಿರ್ವಹಣೆ ವೆಚ್ಚ 29,000 ರೂ, ಪೀಠೋಪಕರಣಗಳ ಬಾಡಿಗೆ 2,500 ರೂ, ಮನೆಕೆಲಸಕ್ಕೆ (ಮನೆಕೆಲಸಗಾರ ಸೇರಿದಂತೆ) ಮಾಸಿಕ ಖರ್ಚು 2,800 ರೂ, ವಿದ್ಯುತ್ ಮತ್ತು ನೀರು ತಲಾ 600 ರೂ, ವೈಫೈ 850 ರೂ ಮತ್ತು ಎಲ್‌ಪಿಜಿ ಆರು ತಿಂಗಳಿಗೊಮ್ಮೆ ರೂ 1,500 ವೆಚ್ಚವಾಗುತ್ತದೆ ಎಂದು ಹೇಳಿದ್ದಾರೆ. ದಿನಸಿ ಮತ್ತು ಮನೆಯ ಅಡುಗೆಗೆ ಸುಮಾರು 6,000 ರೂ, ಹೊರಗಡೆ ಊಟ ಹಾಗೂ ಫುಡ್ ಆರ್ಡರ್ ಗೆ ಹೆಚ್ಚುವರಿ 4,000 ರೂ ಹಾಗೂ ಪ್ರತಿ ತಿಂಗಳು ₹ 15,000 ರಜೆಗಾಗಿಯೇ ಮೀಸಲಿಡುತ್ತೇವೆ ಎಂದಿದ್ದಾರೆ.

ಬೈಕ್ ಇಂಧನದ ಬೆಲೆ 1,500 ರೂ, ಆಟೋ ಮತ್ತು ಕ್ಯಾಬ್‌ ಸೇವೆಗೆ 2,000 ರೂ ಹಾಗೂ ಮೆಟ್ರೋದಲ್ಲಿ ಪ್ರಯಾಣಿಸಲು 2,500 ರೂ ಎತ್ತಿಡುತ್ತೇವೆ. ಇನ್ನು ಉಳಿದಂತೆ  ಸ್ನೇಹಿತರೊಂದಿಗೆ ಸೇರಿದಾಗ 5,000 ರೂ ಕೈಯಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಅದರೊಂದಿಗೆ  ಶಾಪಿಂಗ್ ಗಾಗಿ 3,000 ರೂ ಮನರಂಜನೆಗಾಗಿ 2,000 ರೂ, ಉಡುಗೊರೆ ಸೇರಿದಂತೆ ಇತರ ವೆಚ್ಚಗಳು 4,000 ರೂ  ಖರ್ಚು ತಗಲುತ್ತದೆ. ಹೀಗಾಗಿ ಒಟ್ಟಾರೆ ತಿಂಗಳ ವೆಚ್ಚಗಳು 81,600 ರೂ ಎಂದು ಹೇಳಿರುವುದನ್ನು ನೀವು ನೋಡಬಹುದು.

ಇದನ್ನೂ ಓದಿ: ಮೈಸೂರ್ ಸಿಲ್ಕ್ ಸೀರೆ ಖರೀದಿಸಲು ಮುಂಜಾನೆ 4 ಗಂಟೆಗೆ ಸರತಿ ಸಾಲಿನಲ್ಲಿ ನಿಂತ ಬೆಂಗಳೂರಿನ ಯುವತಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಬೆಂಗಳೂರು ದುಬಾರಿ ದುನಿಯಾ ಎಂದರೆ ಮತ್ತೊಬ್ಬರು, ನಾವು ಕೂಡ ಡಿಂಕ್ ದಂಪತಿಗಳು. ನಮ್ಮ ಖರ್ಚು ನೀವು ಹೇಳಿರುವುದಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. ಬಾಡಿಗೆಯಿಂದ ಪ್ರಾರಂಭಿಸಿ ಎಲ್ಲವೂ ಎರಡು ಪಟ್ಟು ಹೆಚ್ಚು ಎಂದು ಹೇಳಿದ್ದಾರೆ. ಇನ್ನೊಬ್ಬರು, ಬೆಂಗಳೂರು ನಾನು ನಿರೀಕ್ಷಿಸಿದ್ದಕ್ಕಿಂತ ಅಗ್ಗವಾಗಿ ಕಾಣುತ್ತದೆ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಲೆಬನಾನ್‌ನಲ್ಲಿ ಇಸ್ರೇಲ್ ದಾಳಿ ಬಗ್ಗೆ ಭಾರತ ತೀವ್ರ ಕಳವಳ

ನವದೆಹಲಿ, ಏಪ್ರಿಲ್ 10: ಲೆಬನಾನ್ ಮೇಲಿನ ಇಸ್ರೇಲ್ ದಾಳಿಯಿಂದ (Israel Attack) ಜನರ ಸಾವಿನ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಇಸ್ರೇಲ್ ದಾಳಿಯಿಂದಾಗಿ ಲೆಬನಾನ್‌ನಲ್ಲಿ ಹೆಚ್ಚುತ್ತಿರುವ ಜನರ ಸಾವಿನ ಸಂಖ್ಯೆಯ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಕದನವಿರಾಮದ ನಂತರ ಲೆಬನಾನ್‌ನಲ್ಲಿ ಇಸ್ರೇಲ್ ತನ್ನ ಅತ್ಯಂತ ವಿನಾಶಕಾರಿ ದಾಳಿಗಳನ್ನು ನಡೆಸಿತ್ತು. ಈ ದಾಳಿಯಲ್ಲಿ 250ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ಮತ್ತು 1,150 ಜನರು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ವಕ್ತಾರ ರಣಧೀರ್ ಜೈಸ್ವಾಲ್ ಪ್ರತಿಕ್ರಿಯೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ವಿದೇಶಾಂಗ ವ್ಯವಹಾರಗಳ ವಕ್ತಾರ ರಣಧೀರ್ ಜೈಸ್ವಾಲ್, “ಲೆಬನಾನ್‌ನಲ್ಲಿ ಹೆಚ್ಚಿನ ಸಂಖ್ಯೆಯ ನಾಗರಿಕ ಸಾವುನೋವುಗಳ ವರದಿಗಳಿಂದ ನಾವು ತೀವ್ರ ಕಳವಳಗೊಂಡಿದ್ದೇವೆ. ಭಾರತವು ಯಾವಾಗಲೂ ನಾಗರಿಕರ ರಕ್ಷಣೆಯನ್ನು ಪ್ರಮುಖ ಆದ್ಯತೆಯಾಗಿ ಒತ್ತಿಹೇಳಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಲೆಬನಾನ್ ಮೇಲಿನ ದಾಳಿಗೆ ಪ್ರತೀಕಾರ; ಮತ್ತೆ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ ಇರಾನ್

“ಲೆಬನಾನ್‌ನಲ್ಲಿ ಹೆಚ್ಚಿನ ಸಂಖ್ಯೆಯ ನಾಗರಿಕ ಸಾವುನೋವುಗಳ ವರದಿಗಳಿಂದ ನಾವು ತೀವ್ರ ಕಳವಳಗೊಂಡಿದ್ದೇವೆ. ಭಾರತ ಯಾವಾಗಲೂ ನಾಗರಿಕರ ರಕ್ಷಣೆಯನ್ನು ಪ್ರಮುಖ ಆದ್ಯತೆಯಾಗಿ ಒತ್ತಿಹೇಳಿದೆ. ಅಂತಾರಾಷ್ಟ್ರೀಯ ಕಾನೂನನ್ನು ಪಾಲಿಸುವುದು, ರಾಜ್ಯಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವುದು ಅತ್ಯಗತ್ಯ. ಲೆಬನಾನ್‌ನಲ್ಲಿರುವ ನಮ್ಮ ರಾಯಭಾರ ಕಚೇರಿಯು ಭಾರತೀಯ ಸಮುದಾಯದೊಂದಿಗೆ ಅವರ ಸುರಕ್ಷತೆ ಮತ್ತು ಭದ್ರತೆಗಾಗಿ ನಿಕಟ ಸಂಪರ್ಕದಲ್ಲಿದೆ” ಎಂದು ರಣಧೀರ್ ಜೈಸ್ವಾಲ್ ಹೇಳಿದ್ದಾರೆ ಎಂದು ಎಎನ್​ಐ ವರದಿ ಮಾಡಿದೆ.

ಇದನ್ನೂ ಓದಿ: ಲೆಬನಾನ್‌ನಲ್ಲಿ ಶಾಂತಿ ಸ್ಥಾಪನೆಯಾಗುವವರೆಗೆ ಚರ್ಚೆ ಇಲ್ಲ, ಅಮೆರಿಕದೊಂದಿಗೆ ಮಾತುಕತೆ ಸ್ಥಗಿತಗೊಳಿಸುವುದಾಗಿ ಇರಾನ್ ಎಚ್ಚರಿಕೆ

ಇರಾನ್ ಮತ್ತು ಯುಎಸ್ 2 ವಾರಗಳ ಒಪ್ಪಂದಕ್ಕೆ ಒಪ್ಪಿಕೊಂಡ ಬಳಿಕ ಈ ದಾಳಿಗಳು ನಡೆದಿವೆ. ಯುಎಸ್-ಇರಾನ್ ನಡುವಿನ ಕದನವಿರಾಮ ಲೆಬನಾನ್‌ಗೆ ಅನ್ವಯಿಸುವುದಿಲ್ಲ ಎಂದು ಇಸ್ರೇಲ್ ಹೇಳಿತ್ತು. ಲೆಬನಾನ್ ಮೇಲೆ ಮಿಲಿಟರಿ ಕಾರ್ಯಾಚರಣೆಗಳು ಮುಂದುವರಿಯುತ್ತವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಹಿಜ್ಬೊಲ್ಲಾ ಕೂಡ ಉತ್ತರ ಇಸ್ರೇಲ್ ಮೇಲೆ ರಾಕೆಟ್ ದಾಳಿಯನ್ನು ಮುಂದುವರೆಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ಯಾಸೆಂಜರ್ ವಿಚಾರಕ್ಕೆ ಗಲಾಟೆ: ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಆಟೋ ಚಾಲಕನ ಭೀಕರ ಹತ್ಯೆ

ಬೆಳಗಾವಿ, ಏಪ್ರಿಲ್​​ 10: ಸರತಿ ಸಾಲಿನಲ್ಲಿ ಆಟೋ ನಿಲ್ಲಿಸುವ ವಿಚಾರಕ್ಕೆ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದಲ್ಲಿ ನಡೆದಿದೆ. ಆಟೋ ಚಾಲಕ ಅಶೋಕ ವಡ್ಡರ್(27) ಕೊಲೆಯಾದ ವ್ಯಕ್ತಿಯಾಗಿದ್ದು, ಆರೋಪಿಗಳಾದ ಶಿವಾ ವಡ್ಡರ್​, ಸಾಗರ್​ ವಡ್ಡರ್​ ಮತ್ತು ವಿನೋದ್ ಎಂಬವರನ್ನು ಪೊಲೀಸರು​ ಬಂಧಿಸಿದ್ದಾರೆ. ಇನ್ನು 20 ದಿನದಲ್ಲಿ ಮದುವೆಯಾಗಬೇಕಿದ್ದ ಅಶೋಕ ಹಸೆಮಣೆ ಏರುವ ಬದಲು ಭೀಕರವಾಗಿ ಹತ್ಯೆಯಾಗಿದ್ದಾರೆ.

ಮೊನ್ನೆ ದಿನ ಊರಲ್ಲಿ ದೇವರ ಜಾತ್ರೆ ನಡೆದ ಕಾರಣ, ಭಕ್ತರ ಸಂಖ್ಯೆ ಹೆಚ್ಚಿತ್ತು. ಹೀಗಾಗಿ ಪ್ರತಿನಿತ್ಯ ಸರತಿ ಸಾಲಲ್ಲಿ ನಿಲ್ಲುತ್ತಿದ್ದ ಆಟೋಗಳು ಅಂದು ಈ ನಿಯಮ ಉಲ್ಲಂಘಿಸಿ ಜನ ಬಂದಂತೆ ಅವರನ್ನು ಬಸ್ ನಿಲ್ದಾಣದಿಂದ ದೇವಸ್ಥಾನಕ್ಕೆ ಕರೆದುಕೊಂಡು ಹೋಗೋದು, ಬರೋದು ಮಾಡಿದ್ದಾರೆ. ಅದರಂತೆ ತನ್ನ ಆಟೋ ಹಿಂದಿದ್ರೂ ಇಬ್ಬರು ಪ್ಯಾಸೆಂಜರ್ ಬಂದ ಕಾರಣ ಅವರನ್ನು ಕರೆದುಕೊಂಡು ಅಶೋಕ ಹೋಗಿದ್ದಾರೆ. ಇದನ್ನ ಗಮನಿಸಿದ್ದ ಮತ್ತೊಬ್ಬ ಆಟೋ ಚಾಲಕ ಶಿವಾ ವಡ್ಡರ್, ಅಶೋಕ ವಾಪಸ್ ಬಂದಿದ್ದೇ ತಡ  ಜಗಳ ತೆಗೆದಿದ್ದಾನೆ. ಸಾಲದ್ದಕ್ಕೆ ಮತ್ತಿಬ್ಬರು ಸ್ನೇಹಿತರು ಸೇರಿಕೊಂಡು ಅಶೋಕ್​ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಬಳಿಕ ಸಾಯಿಸಿ ಆತನ ಬಳಿ ಇದ್ದ ಹಣ ಕಿತ್ತುಕೊಂಡು ಆಟೋದ ಹಿಂಬದಿ ಸೀಟ್​​ನಲ್ಲಿ ಆತನನ್ನ ಮಲಗಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಸಿದ್ದೇಶ್ವರ ಜಾತ್ರೆಯಲ್ಲಿ ರಕ್ತದೊಕುಳಿ; ಮನೆ ಮುಂದೆ ಕುಣಿದಿದ್ದಕ್ಕೆ ವ್ಯಕ್ತಿಯ ಬರ್ಬರ ಹತ್ಯೆ

ಇನ್ನು ಅಶೋಕನ ಮೇಲೆ ಹಲ್ಲೆ ಮಾಡೋದನ್ನ ನೋಡಿರುವ ಬೇರೆ ಆಟೋ ಚಾಲಕರು ಅವರ ಸಹೋದರನಿಗೆ ವಿಚಾರವನ್ನ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಕುಟುಂಬಸ್ಥರು ಅಶೋಕನನ್ನ ಅದೇ ಆಟೋದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಬಲವಾದ ಏಟಿನಿಂದ ಅದಾಗಲೇ ಅಶೋಕ ಮೃತಪಟ್ಟಿರೋದಾಗಿ ವೈದ್ಯರು ತಿಳಿಸಿದ್ದಾರೆ. ಕಾಗವಾಡ ಠಾಣೆ ಪೊಲೀಸರಿಗೆ ಕುಟುಂಬಸ್ಥರು ವಿಷಯ ತಿಳಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ಕೊಲೆ ಕೇಸ್ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ. ತಲೆ ಮರೆಸಿಕೊಂಡಿದ್ದ ಶಿವಾ ವಡ್ಡರ್, ಸಾಗರ್ ವಡ್ಡರ್, ವಿನೋದ್ ವಡ್ಡರ್ ಮೂವರನ್ನ ಬಂಧಿಸಿ ಜೈಲಿಗಟ್ಟಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸರ್ಕಾರಿ ವಸತಿ ಕಾಲೇಜ್​ ವಿದ್ಯಾರ್ಥಿಗಳಿಗೆ ಗುಡ್​​​ ನ್ಯೂಸ್​​: ಸಚಿವ ಮಹದೇವಪ್ಪ ಮಹತ್ವದ ಘೋಷಣೆ

ಬೆಂಗಳೂರು, ಏಪ್ರಿಲ್ 10: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ (2nd PUC Result) ಏಪ್ರಿಲ್​ 09ರಂದು ಪ್ರಕಟವಾಗಿದ್ದು, ಈ ಬಾರಿ ಶೇಕಡಾ 86ರಷ್ಟು ಮಕ್ಕಳು ಪಾಸ್​ ಆಗುವ ಮೂಲಕ ಫಲಿತಾಂಶ ದಾಖಲೆ ಮಟ್ಟಕ್ಕೆ ಏರಿಕೆ ಆಗಿದೆ. ಇನ್ನು ಸರ್ಕಾರಿ ವಸತಿ ಶಾಲೆಗಳಲ್ಲಿ ಶೇ.97.22 ಮಕ್ಕಳು ತೇರ್ಗಡೆಯಾಗಿದ್ದಾರೆ. ಆ ಮೂಲಕ ವಸತಿ ಶಾಲೆಗಳಲ್ಲೂ ಈ ಬಾರಿ ಉತ್ತಮ ಫಲಿತಾಂಶ ಬಂದಿದೆ. 72 ವಸತಿ ಕಾಲೇಜುಗಳಲ್ಲಿ ಜಿಇಇ, ಎಸ್​​ಇಇಟಿ ಮತ್ತು ಕೆಸಿಇಟಿ ಪ್ರವೇಶ ಪರೀಕ್ಷೆಗೆ ತರಬೇತಿ ನೀಡುವ ವ್ಯವಸ್ಥೆ ಮಾಡುತ್ತೇವೆ ಎಂದು ಸಮಾಜಕಲ್ಯಾಣ ಸಚಿವ ಹೆಚ್​​ಸಿ ಮಹದೇವಪ್ಪ (HC Mahadevappa) ಮಹತ್ವದ ಘೋಷಣೆ ಮಾಡಿದ್ದಾರೆ.

ಸರ್ಕಾರಿ ವಸತಿ ಶಾಲೆಗಳಲ್ಲಿ ಶೇ.97.22 ಮಕ್ಕಳು ತೇರ್ಗಡೆ: ಸಚಿವ H.C.ಮಹದೇವಪ್ಪ

ಬೆಂಗಳೂರಿನಲ್ಲಿ ಸಮಾಜಕಲ್ಯಾಣ ಸಚಿವ H.C.ಮಹದೇವಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಸರ್ಕಾರಿ ವಸತಿ ಶಾಲೆಗಳಲ್ಲಿ ಶೇ.97.22 ಮಕ್ಕಳು ತೇರ್ಗಡೆಯಾಗಿದ್ದಾರೆ. ಹಳ್ಳಿ ಮಕ್ಕಳು ಹೆಚ್ಚು ಪಾಸಾಗಿದ್ದಾರೆ, ಅದರಲ್ಲೂ ಹೆಣ್ಣು ಮಕ್ಕಳು ಹೆಚ್ಚು ಪಾಸಾಗಿದ್ದಾರೆ. ಇದು ಬಹಳ ಸಂತೋಷ. ವಸತಿ ಶಾಲೆಗಳಲ್ಲಿ ಈ ಬಾರಿ ಹೆಚ್ಚಿನ ರಿಸಲ್ಟ್ ಬಂದಿದೆ ಎಂದು ಹೇಳಿದರು.

ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಮಹಾ ಎಡವಟ್ಟು! 600ಕ್ಕೆ 683 ಅಂಕ ನೀಡಿದ ಬೋರ್ಡ್​!

ರಾಜ್ಯದಲ್ಲಿ 539 ಎಸ್​ಸಿ, 156 ಎಸ್​ಟಿ ಮತ್ತು 179 ಹಿಂದುಳಿದ ವರ್ಗಗಳ ವಸತಿ ಶಾಲೆಗಳಿವೆ. ವಿಜ್ಞಾನ ವಿಭಾಗದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಅಂಕಿತ್ ಭೀಮಪ್ಪ 598 ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: 2nd PUC Exam 2 Time Table: ಫೇಲಾದ್ರೇನಂತೆ ಇನ್ನೊಂದು ಎಕ್ಸಾಮ್ ಟೈಮ್ ಟೇಬಲ್ ಇಲ್ಲಿದೆ ನೋಡಿ

ಇನ್ನು ವಸತಿ ಶಾಲೆಗಳಲ್ಲಿ ಓದಿದ 2,321 ಮಕ್ಕಳು ಡಿಸ್ಟಿಂಕ್ಷನ್​, 2487 ವಿದ್ಯಾರ್ಥಿಗಳು ಫಸ್ಟ್​​ ಕ್ಲಾಸ್​​ನಲ್ಲಿ ಪಾಸ್​ ಆಗಿದ್ದಾರೆ. 72 ವಸತಿ ಕಾಲೇಜುಗಳಲ್ಲಿ JEE, NEET, KCET ಪ್ರವೇಶ ಪರೀಕ್ಷೆಗೆ ತರಬೇತಿ ನೀಡುವ ವ್ಯವಸ್ಥೆ ಮಾಡುತ್ತೇವೆ ಎಂದು ಸಮಾಜಕಲ್ಯಾಣ ಸಚಿವ ಹೆಚ್​​ಸಿ ಮಹದೇವಪ್ಪ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬೇಸಿಗೆಯ ಧಗೆಯ ನಡುವೆ ಅಡುಗೆಮನೆಯ ನಿರ್ವಹಣೆ ಮತ್ತು ಆಹಾರದ ಸುರಕ್ಷತೆ ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ

ಬೇಸಿಗೆ ಎಂದರೆ ಬರೀ ಬೆವರುವ ತಾಪಮಾನ ಮಾತ್ರವಲ್ಲ, ಅದು ಅಡುಗೆಮನೆಯ ತಾಳ್ಮೆಯ ಪರೀಕ್ಷೆಯೂ ಹೌದು. ಹೊರಗಿನ ಬಿಸಿಲಿಗೆ ಫ್ರಿಜ್ ಬಾಗಿಲು ತೆರೆದಾಗ ಸಿಗುವ ತಂಪು ಹಿತವೆನಿಸಿದರೂ, ಅಡುಗೆಮನೆಯೊಳಗಿನ ಪದಾರ್ಥಗಳು ಬಾಡದಂತೆ ನೋಡಿಕೊಳ್ಳುವುದು ಒಂದು ದೊಡ್ಡ ಕಲೆ. ಹಿರಿಯರು ಹೇಳುತ್ತಿದ್ದ ಒಂದು ಮಾತು ಇಂದಿಗೂ ಸತ್ಯ— “ಆಹಾರವನ್ನು ಅಡುಗೆ ಮಾಡುವುದು ಎಷ್ಟು ಮುಖ್ಯವೋ, ಅದನ್ನು ಕಾಪಾಡುವುದು ಅಷ್ಟೇ ಮುಖ್ಯ”. ಬೇಸಿಗೆಯ ಈ ದಿನಗಳಲ್ಲಿ ನಿಮ್ಮ ಅಡುಗೆಮನೆಯನ್ನು ತಾಜಾವಾಗಿಡಲು ಇಲ್ಲಿವೆ ಕೆಲವು ಸರಳ ಮತ್ತು ಪ್ರಭಾವಶಾಲಿ ಸೂತ್ರಗಳು.

ಯಾವುದನ್ನು ಎಲ್ಲಿಡಬೇಕು? – ಸರಿಯಾದ ಜಾಗದ ಆಯ್ಕೆ:

ಪ್ರತಿ ಪದಾರ್ಥಕ್ಕೂ ತನ್ನದೇ ಆದ ಸ್ವಭಾವವಿರುತ್ತದೆ. ಹಣ್ಣು, ಸೊಪ್ಪು ಮತ್ತು ಹಾಲಿನ ಪದಾರ್ಥಗಳಿಗೆ ತಂಪು ಆಶ್ರಯ ಬೇಕು, ಹಾಗಾಗಿ ಅವು ಫ್ರಿಜ್‌ಗೆ ಸೇರಲಿ. ಆದರೆ ಈರುಳ್ಳಿ, ಆಲೂಗಡ್ಡೆ, ಬೆಳ್ಳುಳ್ಳಿ ಮತ್ತು ಬಾಳೆಹಣ್ಣುಗಳಿಗೆ ಫ್ರಿಜ್‌ನ ತಂಪು ಹಿಡಿಸುವುದಿಲ್ಲ. ಅವುಗಳನ್ನು ಗಾಳಿಯಾಡುವ, ಒಣ ಜಾಗದಲ್ಲಿಟ್ಟರೆ ಮಾತ್ರ ದೀರ್ಘಕಾಲ ಬಾಳಿಕೆ ಬರುತ್ತವೆ.

ತೊಳೆಯುವುದರಲ್ಲೂ ಇರಲಿ ವಿವೇಚನೆ:

ಸಾಮಾನ್ಯವಾಗಿ ತರಕಾರಿ ತಂದೊಡನೆ ತೊಳೆದಿಡುತ್ತೇವೆ. ಆದರೆ ಬೇಸಿಗೆಯಲ್ಲಿ ತರಕಾರಿಗಳಲ್ಲಿ ತೇವಾಂಶ ಉಳಿದರೆ ಅವು ಬೇಗ ಕೊಳೆಯುವ ಸಾಧ್ಯತೆ ಹೆಚ್ಚು. ಆದ್ದರಿಂದ, ಹಣ್ಣು-ತರಕಾರಿಗಳನ್ನು ಬಳಸುವ ಮೊದಲು ತೊಳೆಯುವ ಅಭ್ಯಾಸ ರೂಢಿಸಿಕೊಳ್ಳಿ. ಒಂದು ವೇಳೆ ತೊಳೆದರೂ ಸಹ, ಅವುಗಳನ್ನು ಸಂಪೂರ್ಣವಾಗಿ ಒಣಗಿಸಿ ನಂತರ ಫ್ರಿಜ್‌ನಲ್ಲಿ ಸಂಗ್ರಹಿಸಿ.

ಮುಚ್ಚಿದ ಡಬ್ಬಿ ಬಳಸಿ:

ಅಡುಗೆಮನೆಯಲ್ಲಿ ಗಾಳಿ ಮತ್ತು ಅತಿಯಾದ ತೇವಾಂಶ ಆಹಾರದ ಶತ್ರುಗಳು. ಉಳಿದ ಅನ್ನ, ಪಲ್ಯ ಅಥವಾ ಕತ್ತರಿಸಿದ ಹಣ್ಣುಗಳನ್ನು ತೆರೆದಿಡುವುದರಿಂದ ಅವು ಬೇಗನೆ ಬ್ಯಾಕ್ಟೀರಿಯಾಗಳ ವಾಸಸ್ಥಾನವಾಗುತ್ತವೆ. ಒಂದು ಗಾಳಿಯಾಡದ (Air-tight) ಡಬ್ಬಿ ಆಹಾರದ ರುಚಿ ಮತ್ತು ತಾಜಾತನವನ್ನು ಕಾಪಾಡುವ ಸಣ್ಣ ಕೋಟೆಯಂತೆ ಕೆಲಸ ಮಾಡುತ್ತದೆ.

ಫ್ರಿಜ್ ಕೂಡ ಉಸಿರಾಡಲಿ:

ಹಾಳಾಗಬಾರದು ಎಂಬ ಆತುರದಲ್ಲಿ ಫ್ರಿಜ್ ತುಂಬಾ ಪದಾರ್ಥಗಳನ್ನು ತುರುಕಬೇಡಿ. ಫ್ರಿಜ್ ಸರಿಯಾಗಿ ತಂಪಾಗಲು ಅದರೊಳಗೆ ಗಾಳಿಯ ಸಂಚಾರ (Air circulation) ಅಗತ್ಯ. ಫ್ರಿಜ್‌ನಲ್ಲಿ ಸ್ವಲ್ಪ ಜಾಗ ಬಿಡುವುದು ಆಹಾರದ ದೀರ್ಘಕಾಲದ ರಕ್ಷಣೆಗೆ ಬಹಳ ಮುಖ್ಯ.

ಬೇಯಿಸಿದ ಆಹಾರದ ಬಗ್ಗೆ ಎಚ್ಚರವಿರಲಿ:

ಬೇಸಿಗೆಯಲ್ಲಿ ಬೆಳಿಗ್ಗೆ ಮಾಡಿದ ಅಡಿಗೆ ಮಧ್ಯಾಹ್ನದ ಹೊತ್ತಿಗೆ ಹಾಳಾಗುವ ಸಾಧ್ಯತೆ ಇರುತ್ತದೆ. ಆಹಾರ ತಯಾರಾದ ನಂತರ ಅದು ಸಾಮಾನ್ಯ ತಾಪಮಾನಕ್ಕೆ ಬಂದ ತಕ್ಷಣ ಫ್ರಿಜ್‌ನಲ್ಲಿಡುವುದು ಉತ್ತಮ. ಹೆಚ್ಚು ಹೊತ್ತು ಹೊರಗೆ ಬಿಟ್ಟರೆ ಆಹಾರದ ಗುಣಮಟ್ಟ ಹದಗೆಡುತ್ತದೆ.

ಇದನ್ನೂ ಓದಿ: Cold Water Vs Warm Water: ಬಿಸಿ ನೀರು ಅಥವಾ ತಣ್ಣೀರು; ಬೇಸಿಗೆಯಲ್ಲಿ ಕುಡಿಯಲು ಯಾವುದು ಬೆಸ್ಟ್?

ಒಣ ಪದಾರ್ಥಗಳ ರಕ್ಷಣೆ:

ಅಕ್ಕಿ, ಬೇಳೆ ಮತ್ತು ಮಸಾಲೆ ಪದಾರ್ಥಗಳಿಗೆ ಬೇಸಿಗೆಯಲ್ಲಿ ಕೀಟಗಳ ಕಾಟ ಹೆಚ್ಚು. ಅವುಗಳನ್ನು ಗಾಳಿಯಾಡದ ಡಬ್ಬಿಗಳಲ್ಲಿಡಿ. ಅಜ್ಜಿಯ ಹಳೆಯ ಪದ್ಧತಿಯಂತೆ ಬೇಳೆಕಾಳುಗಳ ಡಬ್ಬಿಗೆ ಸ್ವಲ್ಪ ಒಣಗಿದ ಬೇವು ಎಲೆ ಹಾಕಿದರೆ ಕೀಟಗಳ ಬಾಧೆಯನ್ನು ಸುಲಭವಾಗಿ ತಡೆಯಬಹುದು.

ದಿನಕ್ಕೊಮ್ಮೆ ಇಣುಕಿ ನೋಡಿ:

ಅಡುಗೆಮನೆಯ ಕಪಾಟು ಮತ್ತು ಫ್ರಿಜ್ ಅನ್ನು ದಿನಕ್ಕೊಮ್ಮೆ ಗಮನಿಸುವುದು ಒಳ್ಳೆಯ ಅಭ್ಯಾಸ. ಹಳೆಯ ಪದಾರ್ಥ ಯಾವುದು, ಹೊಸದು ಯಾವುದು ಎಂಬ ಅರಿವಿದ್ದರೆ ವ್ಯರ್ಥವಾಗುವುದನ್ನು ತಪ್ಪಿಸಬಹುದು. ಯಾವುದಾದರೂ ಹಣ್ಣು ಅಥವಾ ತರಕಾರಿ ಹಾಳಾಗಿದ್ದರೆ ಅದನ್ನು ಕೂಡಲೇ ತೆಗೆಯಿರಿ, ಇಲ್ಲದಿದ್ದರೆ ಅದು ಪಕ್ಕದಲ್ಲಿರುವ ಪದಾರ್ಥಗಳನ್ನೂ ಹಾಳು ಮಾಡುತ್ತದೆ.

ಲೇಖನ: ಡಾ. ರವಿಕಿರಣ ಪಟವರ್ಧನ, ಪಟವರ್ಧನ ಆಯುರ್ವೇದಿಕ್ ಕ್ಲಿನಿಕ್, ಶಿರಸಿ (9242122874)

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಣ್ಣೀರಿಟ್ಟ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ: ಕಾರಣ ಇಲ್ಲಿದೆ

ಹಾವೇರಿ, ಏಪ್ರಿಲ್​​ 10: ಜಿಲ್ಲಾ ಪಂಚಾಯತ್​​ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ ಕಣ್ಣೀರಿಟ್ಟ ಪ್ರಸಂಗ ನಡೆದಿದೆ. ಸ್ವತಂತ್ರಪೂರ್ವದಿಂದಲೂ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡು ಕೆಲವು ಗ್ರಾಮ ಇವೆ. ಅವು ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿ ಬರುತ್ತವೆ ಎಂದು ಜನರ ಮೇಲೆ FIR ದಾಖಲು ಮಾಡಿ ಜಾಗೆ ಖಾಲಿ ಮಾಡಿಸಿದ್ದಾರೆ. ಹಾವೇರಿಯ ಗುತ್ತಲ ತಾಂಡಾ, ಕರೂರು ಗ್ರಾಮ ನಿವಾಸಿಗಳನ್ನ ವಕ್ಕಲು ಎಬ್ಬಿಸಿದ್ದಾರೆ. ಸರ್ಕಾರವೇ ಮೂರು ದಶಕಗಳಿಂದ ಮನೆ ಮತ್ತು ಉಳುಮೆಗೆ ಅವಕಾಶ ಮಾಡಿದೆ. ಈಗ ಅರಣ್ಯ ಇಲಾಖೆ ಸಿಬ್ಬಂದಿ ಜಾಗ ಮೀಸಲು ಅರಣ್ಯಕ್ಕೆ ಬರುತ್ತೆ ಎಂದು ನೋಟೀಸ್ ನೀಡಿದ್ದಾರೆ. ಐದು ವರ್ಷಗಳಿಂದ ಕೇಂದ್ರ ಸರ್ಕಾರದ ಮಂತ್ರಿ ಮತ್ತು ಸಂಸದರನ್ನ ನಾನು ಭೇಟಿ ಮಾಡಿದ್ದಾನೆ. ಎಲ್ಲಿಯೋ ಎಸಿ ಕಚೇರಿಯಲ್ಲಿ ಕೂತು ಆದೇಶ ಮಾಡುತ್ತಾರೆ. ಹೀಗಾದರೆ ಸಾವಿರಾರು ಬಡವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸುತ್ತಲೇ ಅವರು ಭಾವುಕರಾಗಿದ್ದಾರೆ. ಅಲ್ಲದೆ ಈ ಸಂಬಂಧ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಆಗ್ರಹಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ವೇಗ ಅತಿವೇಗ.. ಟಿ20 ಕ್ರಿಕೆಟ್​ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಬಾಬರ್ ಆಝಂ

Source link

ಟೋಲ್ ಬೂತ್​ನಲ್ಲಿ ಇನ್ಮುಂದೆ ಕ್ಯಾಷ್ ಪೇಮೆಂಟ್​ಗೆ ಅವಕಾಶವೇ ಇಲ್ಲ; ಫಾಸ್​ಟ್ಯಾಗ್ ಕಡ್ಡಾಯ

ನವದೆಹಲಿ, ಏಪ್ರಿಲ್ 10: ಹೆದ್ದಾರಿಗಳಲ್ಲಿರುವ ಟೋಲ್ ಬೂತ್​ಗಳಲ್ಲಿ ನೂರಕ್ಕೆ ನೂರು ಫಾಸ್​ಟ್ಯಾಗ್ (FASTag) ಕಡ್ಡಾಯ ಮಾಡಲಾಗಿದೆ. ಇವತ್ತಿನಿಂದಲೇ ಡಿಜಿಟಲ್ ಟೋಲ್ ಕಲೆಕ್ಷನ್ ಸಿಸ್ಟಂ (Digital toll collection system) ಜಾರಿಯಾಗಿದೆ. ದೇಶಾದ್ಯಂತ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಎಕ್ಸ್​ಪ್ರೆಸ್​ವೇಗಳಲ್ಲಿ ಇರುವ ಟೋಲ್ ಬೂತ್​ಗಳಲ್ಲಿ ಫಾಸ್​ಟ್ಯಾಗ್ ಮೂಲಕವೇ ವಾಹನಗಳು ಟೋಲ್ ಪಾವತಿಸಬೇಕು. ಫಾಸ್​ಟ್ಯಾಗ್ ಇಲ್ಲದವರು ಟೂಲ್ ಬೂತ್​ಗಳಲ್ಲಿ ಕ್ಯಾಷ್ ನೀಡಿ ಪಾವತಿಸುವ ಅವಕಾಶ ನಿನ್ನೆಯೇ ಮುಕ್ತಾಯಗೊಂಡಿದೆ.

ಫಾಸ್​ಟ್ಯಾಗ್ ಇಲ್ಲದ ವಾಹನಗಳಿಂದ ಟೋಲ್ ಬೂತ್​ಗಳಲ್ಲಿ ವಾಹನದಟ್ಟನೆ ಹೆಚ್ಚುತ್ತಿರುವುದು ಗಮನಕ್ಕೆ ಬಂದಿತ್ತು. ಟೋಲ್ ಬೂತ್​ಗಳಲ್ಲಿ ಈ ವಾಹನದಟ್ಟನೆ ಕಡಿಮೆ ಮಾಡಲು, ಕಾಯುವಿಕೆ ಅವಧಿ ಕಡಿಮೆ ಮಾಡಲು ಮತ್ತು ವಾಹನ ಸಂಚಾರವನ್ನು ಸುಗಮಗೊಳಿಸಲು ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಪೂರ್ಣ ಮಟ್ಟದಲ್ಲಿ ಡಿಜಿಟಲ್ ಟೋಲ್ ಕಲೆಕ್ಷನ್ ಸಿಸ್ಟಂ ಅನ್ನು ಅನುಷ್ಠಾನಕ್ಕೆ ತಂದಿದೆ.

ಇದನ್ನೂ ಓದಿ: AMFI data: ಮಾರ್ಚ್​ನಲ್ಲಿ ಈಕ್ವಿಟಿ ಫಂಡ್​ಗಳಿಗೆ ಹೂಡಿಕೆ ಸುಗ್ಗಿ; ಶೇ. 55ರಷ್ಟು ಹೆಚ್ಚಿದ ಒಳಹರಿವು

ಫಾಸ್​ಟ್ಯಾಗ್ ಕೆಲಸ ಮಾಡದಿದ್ದಾಗ?

ಎಲ್ಲಾ ವಾಹನಗಳಿಗೂ ಫಾಸ್​ಟ್ಯಾಗ್ ಅಳವಡಿಸಿಕೊಳ್ಳಬೇಕಾಗುತ್ತದೆ. ಫಾಸ್​ಟ್ಯಾಗ್ ಅಳವಡಿಕೆ ಆಗಿದ್ದೂ ಅದು ಸಕ್ರಿಯವಾಗಿಲ್ಲದಿದ್ದರೆ ಆಟೊಮ್ಯಾಟಿಕ್ ಟೋಲ್ ಕಲೆಕ್ಷನ್ ಆಗುವುದಿಲ್ಲ. ಇಂಥ ಸಂದರ್ಭದಲ್ಲಿ ವಾಹನ ಸವಾರರು ಕ್ಯಾಷ್ ಮೂಲಕ ಟೋಲ್ ಪೇಮೆಂಟ್ ಮಾಡುತ್ತಿದ್ದರು? ಈಗ ಕ್ಯಾಷ್ ಪೇಮೆಂಟ್​ಗೆ ಅವಕಾಶ ಇಲ್ಲದಿರುವಾಗ ಏನು ಮಾಡಬೇಕು? ಆಗ ಕ್ಯಾಷ್ ಬದಲು ಯುಪಿಐ ಅಥವಾ ಇತರ ಡಿಜಿಟಲ್ ವಿಧಾನಗಳಿಂದ ಟೋಲ್ ಪೇಮೆಂಟ್ ಮಾಡಬಹುದು. ಇದಕ್ಕೆ ಹೆಚ್ಚಿನ ಟೋಲ್ ವಿಧಿಸಲಾಗುತ್ತದೆ. ಶೇ. 125ರಷ್ಟು ಟೋಲ್ ಕಟ್ಟಬೇಕಾಗುತ್ತದೆ. ಅಂದರೆ, 100 ರೂ ಇರುವ ಟೋಲ್​ಗೆ 125 ರೂ ಪಾವತಿಸಬೇಕಾಗುತ್ತದೆ.

ಟೋಲ್ ಬೂತ್​ಗಳಲ್ಲಿ ವಿನಾಯಿತಿ; ನಿಯಮಗಳೀಗ ಕಠಿಣ

ಟೋಲ್ ಬೂತ್​ಗಳಲ್ಲಿ ವಿವಿಧ ಅಧಿಕಾರಿಗಳು ಮತ್ತು ರಾಜಕಾರಣಿಗಳ ಹೆಸರು ಹೇಳಿಕೊಂಡು ಬಹಳ ಜನರು ಟೋಲ್ ಕಟ್ಟುವುದಿಲ್ಲ. ಸಾಕಷ್ಟು ಕಡೆ ಮಾರಾಮಾರಿಯೇ ಆಗಿ ಹೋಗಿ ಸಾವುನೋವುಗಳು ಸಂಭವಿಸಿರುವುದಿದೆ. ಇದನ್ನು ತಪ್ಪಿಸಲು ಈಗ ಸರ್ಕಾರ ಬಿಗಿ ನಿಯಮ ತಂದಿದೆ. ಯಾವುದೇ ವ್ಯಕ್ತಿಗಳಿಗೆ ಟೋಲ್ ಎಕ್ಸೆಂಪ್ಷನ್ ಸಿಗುವುದಿಲ್ಲ. ನಿರ್ದಿಷ್ಟಪಡಿಸಿದ ವಾಹನಗಳಿಗೆ ಮಾತ್ರವೇ ಈ ವಿನಾಯಿತಿ ಕೊಡಲಾಗುತ್ತದೆ.

ಇದನ್ನೂ ಓದಿ: ಎಡಿಬಿ ವರದಿ: ಭಾರತದ ಜಿಡಿಪಿ ಬೆಳವಣಿಗೆ 2025ರಲ್ಲಿ ಶೇ. 6.9, 2027ರಲ್ಲಿ ಶೇ. 7.3 ಅಂದಾಜು

ಫಾಸ್​ಟ್ಯಾಗ್ ವಾರ್ಷಿಕ ಪಾಸ್

ಹೆದ್ದಾರಿಗಳನ್ನು ಸಾಕಷ್ಟು ಬಳಸುವವರಿಗೆ, ಅಂದರೆ ನಿಯಮಿತವಾಗಿ ಹೆದ್ದಾರಿ ಬಳಸುವವರಿಗೆ ಫಾಸ್​ಟ್ಯಾಗ್ ವಾರ್ಷಿಕ ಪಾಸ್ ಅನುಕೂಲವಾಗಲಿದೆ. ಖಾಸಗಿ ಕಾರುಗಳಿಗೆ ಈ ವಾರ್ಷಿಕ ಪಾಸ್ ನೀಡಲಾಗುತ್ತದೆ. ವರ್ಷದಲ್ಲಿ 200 ಟೋಲ್ ಕ್ರಾಸಿಂಗ್ ಮಾಡಬಹುದು. ಈ ಪಾಸ್ ಬೆಲೆ 3,000 ರೂ ಇದ್ದದ್ದು 3,075ಕ್ಕೆ ಏರಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version