ಪತಿಗಿಂತ ಹೆಚ್ಚು ಆದಾಯವಿದ್ದರೂ ಜೀವನಾಂಶ ಕೇಳಿದ ಮಹಿಳೆಗೆ ಹೈಕೋರ್ಟ್ ಶಾಕ್ – Kannada News | Bombay HC Denies Maintenance to Wife Earning More Than Husband, Cites AI Job Risk

ಮುಂಬೈ, ಜುಲೈ 26: ತನ್ನ ಪತಿಗಿಂತ ಹೆಚ್ಚಿನ ಸಂಬಳ ಪಡೆಯುತ್ತಿರುವ ಮಹಿಳೆಯೊಬ್ಬರ ಮಧ್ಯಂತರ ಜೀವನಾಂಶ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ. ಅಲ್ಲದೆ, ಪ್ರಸ್ತುತ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಪತಿಯ ಐಟಿ ಉದ್ಯೋಗವೇ ಅಪಾಯದಲ್ಲಿದೆ ಎಂದು ನ್ಯಾಯಾಲಯ ಮುಖ್ಯವಾಗಿ ಉಲ್ಲೇಖಿಸಿದೆ.

ಅಮೆರಿಕದ ನ್ಯೂಜೆರ್ಸಿಯಲ್ಲಿ ವಾಸಿಸುತ್ತಿರುವ ಈ ಮಹಿಳೆ ತಿಂಗಳಿಗೆ ಸುಮಾರು 8 ಲಕ್ಷ ರೂ. ಗಳಿಸುತ್ತಿದ್ದಾರೆ. ಇದು ಅವರ ಪತಿಯ ಆದಾಯಕ್ಕಿಂತ ಹೆಚ್ಚಾಗಿದೆ. ಮಹಿಳೆಯು ತನಗೆ ಜೀವನಾಂಶವಾಗಿ ತಿಂಗಳಿಗೆ 1 ಲಕ್ಷ ರೂ. ನೀಡಬೇಕೆಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಭಾರತಿ ಡಾಂಗ್ರೆ ಮತ್ತು ನ್ಯಾಯಮೂರ್ತಿ ಮಂಜುಷಾ ದೇಶಪಾಂಡೆ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ವಿದೇಶದಲ್ಲಿದ್ದರೆ ಜೀವನ ವೆಚ್ಚ ಹೆಚ್ಚಿರುತ್ತದೆ ಎಂಬ ಕಾರಣಕ್ಕೆ ಜೀವನಾಂಶ ಪಡೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಕೃತಕ ಬುದ್ಧಿಮತ್ತೆಯ (AI) ವೇಗದ ಬೆಳವಣಿಗೆ ಮತ್ತು ಐಟಿ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಸ್ಪರ್ಧೆಯಿಂದಾಗಿ ಪತಿಯ ಕೆಲಸ ಯಾವಾಗ ಬೇಕಾದರೂ ಅಪಾಯಕ್ಕೆ ಸಿಲುಕಬಹುದು ಎಂದು ಕೋರ್ಟ್ ಗಮನಿಸಿದೆ.

ಮತ್ತಷ್ಟು ಓದಿ: ಡಿವೋರ್ಸ್‌ ಪ್ರಕರಣಗಳಲ್ಲಿ ಕೋರ್ಟ್ ಜೀವನಾಂಶದ ಮೊತ್ತವನ್ನು ಹೇಗೆ ನಿರ್ಧರಿಸುತ್ತವೆ? ಪುರುಷರು ಜೀವನಾಂಶ ಪಡೆಯಬಹುದೇ?

ಕೌಟುಂಬಿಕ ನ್ಯಾಯಾಲಯವು ಈ ಹಿಂದೆ ಜೀವನಾಂಶ ಅರ್ಜಿಯನ್ನು ತಿರಸ್ಕರಿಸಿ, ಮೊಕದ್ದಮೆ ವೆಚ್ಚವಾಗಿ ಪತಿಗೆ 25,000 ರೂ. ನೀಡಲು ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು. ದಂಪತಿಯ ಹಿರಿಯ ಮಗು ತಂದೆಯ ಬಳಿ ಹಾಗೂ ಕಿರಿಯ ಮಗು ತಾಯಿಯ ವಶದಲ್ಲಿದೆ.

ಕಾಯ್ದೆಯಡಿ ನಿಯಮ: ಭಾರತೀಯ ಕುಟುಂಬ ಕಾನೂನುಗಳ ಪ್ರಕಾರ (ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 24), ಮಧ್ಯಂತರ ಜೀವನಾಂಶವನ್ನು ಸ್ವಂತ ಆದಾಯವಿಲ್ಲದ ಅಥವಾ ಜೀವನ ನಡೆಸಲು ಸಾಕಷ್ಟಿಲ್ಲದ ಸಂಗಾತಿಗೆ ನೀಡಲಾಗುತ್ತದೆ. ಸಂಗಾತಿಯೇ ಸ್ವಾವಲಂಬಿಯಾಗಿದ್ದು, ಉತ್ತಮ ಆದಾಯ ಹೊಂದಿದ್ದರೆ ಜೀವನಾಂಶಕ್ಕೆ ಅರ್ಹರಾಗುವುದಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಭಾರತದ ವಿವಿಧ ಹೈಕೋರ್ಟ್‌ಗಳು ಮತ್ತು ಸರ್ವೋಚ್ಚ ನ್ಯಾಯಾಲಯವು ‘ಉತ್ತಮ ಶಿಕ್ಷಣ ಪಡೆದು ಕೆಲಸ ಮಾಡಲು ಸಾಮರ್ಥ್ಯವಿರುವ ಹಾಗೂ ಸ್ವತಂತ್ರ ಆದಾಯವಿರುವ ಸಂಗಾತಿಗೆ ಜೀವನಾಂಶ ನೀಡುವುದು ಕಡ್ಡಾಯವಲ್ಲ’ ಎಂದು ಹಲವು ತೀರ್ಪುಗಳಲ್ಲಿ ಸ್ಪಷ್ಟಪಡಿಸಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಮೈ ಬ್ಯಾಡ್’… ಹೀಗೂ ರನೌಟ್ ಮಿಸ್ ಮಾಡಿಕೊಳ್ತಾರಾ! – Kannada News | Ishan Kishan’s Hilarious Run Out Blunder Goes Viral

ಕ್ರಿಕೆಟ್ ಮೈದಾನದಲ್ಲಿ ಕೆಲವೊಮ್ಮೆ ಗಂಭೀರ ಕ್ಷಣಗಳೂ ಹಾಸ್ಯಮಯವಾಗಿ ಬದಲಾಗುತ್ತವೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ, ಭಾರತ ತಂಡ ವಿಕೆಟ್‌ಕೀಪರ್-ಬ್ಯಾಟರ್ ಇಶಾನ್ ಕಿಶನ್ ಝಿಂಬಾಬ್ವೆ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಅತ್ಯಂತ ಸುಲಭದ ರನ್‌-ಔಟ್ ಅವಕಾಶವೊಂದನ್ನು ಕೈಚೆಲ್ಲಿರುವುದು.

ಮೈದಾನದಲ್ಲಿ ನಡೆದಿದ್ದೇನು?

ಝಿಂಬಾಬ್ವೆ ಇನ್ನಿಂಗ್ಸ್‌ನ 15ನೇ ಓವರ್‌ನಲ್ಲಿ ರವಿ ಬಿಷ್ಣೋಯ್ ಎಸೆದ ಚೆಂಡನ್ನು ಬ್ಯಾಟರ್ ತಡಿವಾನಾಶೆ ಮಾರುಮಣಿ ಡೀಪ್ ಬ್ಯಾಕ್‌ವರ್ಡ್ ಪಾಯಿಂಟ್ ಕಡೆಗೆ ತಳ್ಳಿದರು. ಈ ವೇಳೆ ಇಬ್ಬರು ಝಿಂಬಾಬ್ವೆ ಬ್ಯಾಟರ್‌ಗಳ ನಡುವೆ ರನ್ ಓಡುವಾಗ ಭಾರಿ ಗೊಂದಲ ಉಂಟಾಯಿತು.

ಪರಿಣಾಮವಾಗಿ, ಇಬ್ಬರೂ ಬ್ಯಾಟರ್‌ಗಳು ಬೌಲರ್ ತುದಿಯಲ್ಲೇ ಕ್ರೀಸ್ ಬಿಟ್ಟು ನಿಂತರು. ಇದರಿಂದ ಸ್ಟ್ರೈಕರ್ ತುದಿಯ ವಿಕೆಟ್‌ಗಳು ಸಂಪೂರ್ಣವಾಗಿ ಖಾಲಿಯಿದ್ದವು, ಭಾರತಕ್ಕೆ ರನ್‌-ಔಟ್ ಮಾಡಲು ಅತ್ಯುತ್ತಮ ಅವಕಾಶವಿತ್ತು.

ಇಶಾನ್ ‘ಬ್ರೈನ್ ಫೇಡ್’ ಕ್ಷಣ:

ಚೆಂಡನ್ನು ಕೈಗೆತ್ತಿಕೊಂಡ ಇಶಾನ್ ಕಿಶನ್, ಅತ್ಯಂತ ಸುಲಭವಾಗಿ ವಿಕೆಟ್‌ಗೆ ಬಾಲ್ ಎಸೆಯಬಹುದಿತ್ತು ಅಥವಾ ತಾವೇ ಒಂದೆಜ್ಜೆ ಮುಂದೆ ಬಂದು ಬೈಲ್ಸ್ ಹಾರಿಸಬಹುದಿತ್ತು. ಆದರೆ, ಅವರು ಬ್ಯಾಟರ್ ಈಗಾಗಲೇ ಕ್ರೀಸ್ ತಲುಪಿದ್ದಾನೆ ಎಂದು ತಪ್ಪು ತಿಳುವಳಿಕೆ ಮಾಡಿಕೊಂಡರು. ಹೀಗಾಗಿ ತೀರಾ ಉದಾಸೀನತೆಯಿಂದ ಚೆಂಡನ್ನು ವಿಕೆಟ್ ಕಡೆಗೆ ರೋಲ್ ಮಾಡಿದರು.

ಆದರೆ ಆ ಥ್ರೋ ವಿಕೆಟ್‌ಗೂ ತಗುಲಲಿಲ್ಲ, ಇತ್ತ ಬ್ಯಾಕಪ್ ಮಾಡಲು ನಿಂತಿದ್ದ ರವಿ ಬಿಷ್ಣೋಯ್ ಕೈಗೂ ಚೆಂಡು ಸಿಗಲಿಲ್ಲ. ಅಷ್ಟರಲ್ಲಿ ಝಿಂಬಾಬ್ವೆ ಬ್ಯಾಟರ್ ಕ್ರೀಸ್ ತಲುಪಿ ಬಚಾವಾದರು. ತಮ್ಮ ತಪ್ಪಿನ ಅರಿವಾಗುತ್ತಿದ್ದಂತೆ ಇಶಾನ್ ಕಿಶನ್ ತಲೆ ಮೇಲೆ ಕೈ ಹೊತ್ತು ನಿಂತರು.

‘ಮೈ ಬ್ಯಾಡ್’ ಎಂದು ನಗೆ ಬೀರಿದ ಕಿಶನ್!

ಈ ಪಂದ್ಯ ಮುಗಿದ ಬಳಿಕ ಈ ಬಗ್ಗೆ ಮಾತನಾಡಿದ ಇಶಾನ್ ಕಿಶನ್, ಬ್ಯಾಟರ್ ಈಗಾಗಲೇ ಕ್ರೀಸ್ ಒಳಗಡೆ ಬಂದಿದ್ದಾನೆ ಎಂದು ನಾನು ಭಾವಿಸಿದ್ದೆ, ಅದು ನನ್ನ ತಪ್ಪು. ಮುಂದಿನ ಬಾರಿ ಖಂಡಿತಾ ಬೈಲ್ಸ್ ಕಡೆಗೆ ಗಮನ ಹರಿಸುತ್ತೇನೆ ಎಂದಿದ್ದಾರೆ.

ಗೆದ್ದು ಬೀಗಿದ ಟೀಮ್ ಇಂಡಿಯಾ:

ಈ ಸಣ್ಣ ಯಡವಟ್ಟನ್ನು ಹೊರತುಪಡಿಸಿದರೆ ಇಶಾನ್ ಕಿಶನ್ ಪಂದ್ಯದ ಅಸಲಿ ಹೀರೋ ಆಗಿದ್ದರು. ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಅವರು ಕೇವಲ 44 ಎಸೆತಗಳಲ್ಲಿ 81 ರನ್ ಚಚ್ಚಿ ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿ ಪಡೆದರು.

ಇದನ್ನೂ ಓದಿ: ಬ್ಯಾಟಿಂಗ್ ಮಾತ್ರ ‘ರಕನಾಕ’ ಆಗಿತ್ತು: ಶ್ರೇಯಸ್ ಅಯ್ಯರ್

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್​ಗಳಲ್ಲಿ 219 ರನ್‌ಗಳ ಬೃಹತ್ ಮೊತ್ತ ಪೇರಿಸಿದರೆ, ಝಿಂಬಾಬ್ವೆ ತಂಡ 129 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಭಾರತ 90 ರನ್‌ಗಳ ಭರ್ಜರಿ ಜಯ ಸಾಧಿಸಿ, 3 ಪಂದ್ಯಗಳ ಟಿ20 ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ.

Source link

Karnataka Weather Forecast: ರಾಜ್ಯಾದ್ಯಂತ ವರುಣನ ಅಬ್ಬರ; ಕರಾವಳಿ, ಮಲೆನಾಡಿಗೆ ಬಿರುಗಾಳಿ ಸಹಿತ ಮಳೆಯ ಅಲರ್ಟ್! – Kannada News | Karnataka Weather Update July 26: Rain and Wind Alert Across Districts

ಕರಾವಳಿ, ಮಲೆನಾಡಿಗೆ ಬಿರುಗಾಳಿ ಸಹಿತ ಮಳೆಯ ಅಲರ್ಟ್!

ಬೆಂಗಳೂರು, ಜುಲೈ 26: ಕಳೆದ ಹಲವು ದಿನಗಳಿಂದ ಮಲೆನಾಡು ಸೇರಿದಂತೆ ಕರಾವಳಿ ಭಾಗಗಳಲ್ಲಿ ಮಳೆಯಾರ್ಭಟ (Monsoon) ಜೋರಾಗಿದೆ. ಇಂದೂ ಸಹ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆ

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಹಗುರದಿಂದ ಸಾಧಾರಣ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ. ಸಮುದ್ರದಲ್ಲಿ ಅಲೆಗಳ ಆರ್ಭಟ ಹೆಚ್ಚಿರಲಿದ್ದು, ಕರಾವಳಿ ಭಾಗದ ಜನರು ಹಾಗೂ ಮೀನುಗಾರರು ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ.

ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಗಾಳಿ ಸಹಿತ ಮಳೆ

ಬೆಳಗಾವಿ, ಬೀದರ್, ವಿಜಯಪುರ, ಧಾರವಾಡ, ಗದಗ್, ರಾಯಚೂರು, ಹಾವೇರಿ, ಯಾದಗಿರಿ, ಕಲ್ಬುರ್ಗಿ, ಬಾಗಲಕೋಟೆ ಮತ್ತು ಕೊಪ್ಪಳ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ಬಲವಾದ ಗಾಳಿಯೊಂದಿಗೆ ಸಾಧಾರಣ ಮಳೆಯಾಗಲಿದೆ.

ರಾಜಧಾನಿ ಬೆಂಗಳೂರು (ನಗರ ಮತ್ತು ಗ್ರಾಮಾಂತರ), ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ರಾಮನಗರ, ತುಮಕೂರು, ವಿಜಯನಗರ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ರಾಜ್ಯದ ಪ್ರಮುಖ ನಗರಗಳಲ್ಲಿ ಮೋಡಕವಿದ ವಾತಾವರಣ ಮುಂದುವರಿಯಲಿದ್ದು, ಸಾರ್ವಜನಿಕರು ಹಾಗೂ ಪ್ರಯಾಣಿಕರು ಸೂಕ್ತ ಮುನ್ನೆಚ್ಚರಿಕೆ ವಹಿಸಲು ಕೋರಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Raksha Bandhan 2026: ರಕ್ಷಾ ಬಂಧನದಂದೇ ಚಂದ್ರಗ್ರಹಣ; ಭಾರತದಲ್ಲಿ ಗೋಚರಿಸುತ್ತಾ? ಇಲ್ಲಿದೆ ಸಂಪೂರ್ಣ ವಿವರ! – Kannada News | Raksha Bandhan 2026: Lunar Eclipse on Aug 28 – Sutak, Rituals and Celebration in India

ರಕ್ಷಾ ಬಂಧನದಂದೇ ವರ್ಷದ 2ನೇ ಚಂದ್ರಗ್ರಹಣ

ಪ್ರತಿ ವರ್ಷ ದೇಶಾದ್ಯಂತ ರಕ್ಷಾ ಬಂಧನ ಹಬ್ಬವನ್ನು ಸಹೋದರ-ಸಹೋದರಿಯರ ಪ್ರೀತಿಯ ಸಂಕೇತವಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ. ವೈದಿಕ ಪಂಚಾಂಗದ ಪ್ರಕಾರ, ಈ ವರ್ಷ ಆಗಸ್ಟ್ 28ರಂದು ರಕ್ಷಾ ಬಂಧನವನ್ನು ಆಚರಿಸಲಾಗುತ್ತಿದ್ದು, ಅದೇ ದಿನದಂದು ವರ್ಷದ ಎರಡನೇ ಚಂದ್ರಗ್ರಹಣವೂ ಸಂಭವಿಸಲಿದೆ. ರಕ್ಷಾ ಬಂಧನದ ದಿನವೇ ಚಂದ್ರಗ್ರಹಣ ಸಂಭವಿಸುತ್ತಿರುವುದರಿಂದ ಹಬ್ಬದ ಆಚರಣೆ, ರಾಖಿ ಕಟ್ಟುವುದು ಮತ್ತು ಸೂತಕದ ನಿಯಮಗಳ ಕುರಿತು ಜನರಲ್ಲಿ ಹಾಗೂ ಭಕ್ತರಲ್ಲಿ ಸಾಕಷ್ಟು ಗೊಂದಲಗಳು ಮೂಡಿವೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ಚಂದ್ರಗ್ರಹಣ ದಿನಾಂಕ ಮತ್ತು ಸಮಯ:

ವೈದಿಕ ಕ್ಯಾಲೆಂಡರ್ ಹಾಗೂ ಖಗೋಳ ಲೆಕ್ಕಾಚಾರಗಳ ಪ್ರಕಾರ, ಆಗಸ್ಟ್ 28 ರಂದು ರಕ್ಷಾಬಂಧನದ ದಿನದಂದೇ ವರ್ಷದ ಎರಡನೇ ಚಂದ್ರಗ್ರಹಣ ಸಂಭವಿಸಲಿದೆ. ಭಾರತೀಯ ಪ್ರಮಾಣಿತ ಸಮಯದ (IST) ಪ್ರಕಾರ, ಈ ಚಂದ್ರಗ್ರಹಣವು ಬೆಳಿಗ್ಗೆ 6:53 ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 12:31 ಕ್ಕೆ ಕೊನೆಗೊಳ್ಳಲಿದೆ. ಈ ಚಂದ್ರಗ್ರಹಣದ ಒಟ್ಟು ಅವಧಿ ಸುಮಾರು 5 ಗಂಟೆ 38 ನಿಮಿಷಗಳಾಗಿರಲಿದೆ.

ಭಾರತದಲ್ಲಿ ಚಂದ್ರಗ್ರಹಣ ಗೋಚರಿಸುತ್ತದೆಯೇ?

ರಕ್ಷಾ ಬಂಧನದಂದು ಸಂಭವಿಸಲಿರುವ ಚಂದ್ರಗ್ರಹಣವು ಭಾಗಶಃ ಚಂದ್ರಗ್ರಹಣವಾಗಿದೆ (Partial Lunar Eclipse). ಖಗೋಳ ವಿಜ್ಞಾನಿಗಳ ಪ್ರಕಾರ, ಈ ಗ್ರಹಣವು ಭಾರತದಲ್ಲಿ ಎಲ್ಲೂ ಗೋಚರಿಸುವುದಿಲ್ಲ. ಈ ಚಂದ್ರಗ್ರಹಣವು ಪ್ರಮುಖವಾಗಿ ಪಶ್ಚಿಮ ಏಷ್ಯಾ, ದಕ್ಷಿಣ ಅಮೆರಿಕ, ಆಫ್ರಿಕಾ, ಯುರೋಪ್ ಹಾಗೂ ಉತ್ತರ ಅಮೆರಿಕದ ಕೆಲವು ಭಾಗಗಳಲ್ಲಿ ಮಾತ್ರ ಸ್ಪಷ್ಟವಾಗಿ ಕಾಣಿಸಿಕೊಳ್ಳಲಿದೆ.

ಇದನ್ನೂ ಓದಿ: ನವಗ್ರಹ ಮಂಟಪಕ್ಕೆ ಎಷ್ಟು ಬಾರಿ ಪ್ರದಕ್ಷಿಣೆ ಹಾಕುವುದು ಶುಭ? ಶಾಸ್ತ್ರೋಕ್ತ ನಿಯಮ ಇಲ್ಲಿದೆ

ಸೂತಕ ಅವಧಿ ಮಾನ್ಯವಾಗುತ್ತದೆಯೇ? ಹಬ್ಬ ಆಚರಿಸಬಹುದೇ?

ಶಾಸ್ತ್ರಗಳು ಹಾಗೂ ಧಾರ್ಮಿಕ ನಿಯಮಗಳ ಪ್ರಕಾರ, ಗ್ರಹಣವು ಯಾವ ಪ್ರದೇಶದಲ್ಲಿ ಕಣ್ಣಿಗೆ ಗೋಚರಿಸುತ್ತದೆಯೋ ಅಲ್ಲಿ ಮಾತ್ರ ಅದರ ಸೂತಕ ಅವಧಿ (Sutak Kaal) ಮಾನ್ಯವಾಗುತ್ತದೆ. ಆಗಸ್ಟ್ 28 ರ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸದಿರುವುದರಿಂದ, ಇದರ ಸೂತಕ ಅವಧಿಯು ನಮ್ಮಲ್ಲಿ ಮಾನ್ಯವಾಗಿರುವುದಿಲ್ಲ. ಆದ್ದರಿಂದ ರಕ್ಷಾ ಬಂಧನದ ಪೂಜೆ, ಸಹೋದರರಿಗೆ ರಾಖಿ ಕಟ್ಟುವುದು ಹಾಗೂ ಹಬ್ಬದ ಆಚರಣೆಗಳನ್ನು ಯಾವುದೇ ಅಡಚಣೆಯಿಲ್ಲದೆ ಎಂದಿನಂತೆ ನಡೆಸಬಹುದು.

ಗ್ರಹಣ ಸಂದರ್ಭದಲ್ಲಿ ನೆನಪಿನಲ್ಲಿಡಬೇಕಾದ ಪ್ರಮುಖ ನಿಯಮಗಳು:

ಸಾಮಾನ್ಯವಾಗಿ ಗ್ರಹಣ ಕಾಲದಲ್ಲಿ ಧಾರ್ಮಿಕ ನಂಬಿಕೆಗಳ ಪ್ರಕಾರ ಕೆಲವು ಜಾಗರೂಕತೆಗಳನ್ನು ವಹಿಸುವುದು ಒಳಿತು ಎಂದು ಪರಿಗಣಿಸಲಾಗುತ್ತದೆ. ಗ್ರಹಣ ಆರಂಭವಾಗುವ ಮುನ್ನ ಆಹಾರ ಪದಾರ್ಥಗಳಿಗೆ ತುಳಸಿ ಎಲೆಗಳನ್ನು ಹಾಕಿಡುವುದರಿಂದ ಆಹಾರ ಕಲುಷಿತವಾಗುವುದಿಲ್ಲ ಹಾಗೂ ಋಣಾತ್ಮಕ ಪರಿಣಾಮಗಳನ್ನು ತಡೆಯಬಹುದು ಎಂಬ ನಂಬಿಕೆಯಿದೆ. ಇದರ ಜೊತೆಗೆ, ಈ ಅವಧಿಯಲ್ಲಿ ಇಷ್ಟದೇವತೆಯ ಸ್ಮರಣೆ, ಮಹಾಮೃತ್ಯುಂಜಯ ಮಂತ್ರ ಹಾಗೂ ಗಾಯತ್ರಿ ಮಂತ್ರಗಳನ್ನು ಪಠಿಸುವುದು ಶುಭಕರ. ಹಾಗೆಯೇ ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಮನೆಯಿಂದ ಹೊರಗೆ ಹೋಗದಂತೆ ಜಾಗ್ರತೆ ವಹಿಸುವುದು ಅತ್ಯಂತ ಅಗತ್ಯ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬ್ಯಾಟಿಂಗ್ ಮಾತ್ರ ‘ರಕನಾಕ’ ಆಗಿತ್ತು: ಶ್ರೇಯಸ್ ಅಯ್ಯರ್ – Kannada News | Shreyas iyer Post match interview after IND vs ZIM 2nd T20 Match

ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಸರಣಿ ಗೆಲುವಿನ ಖಾತೆ ತೆರೆದಿದ್ದಾರೆ. ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಗಳಲ್ಲಿ ಪರಾಜಯ ಅನುಭವಿಸಿದ್ದ ಅಯ್ಯರ್, ಝಿಂಬಾಬ್ವೆ ವಿರುದ್ಧ ಬ್ಯಾಕ್ ಟು ಬ್ಯಾಕ್ 2 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಈ ಗೆಲುವುಗಳೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 2-0 ಅಂತರದ ಅಜೇಯ ಮುನ್ನಡೆ ಸಾಧಿಸುವ ಮೂಲಕ ಸರಣಿಯನ್ನು ವಶಪಡಿಸಿಕೊಂಡಿದ್ದಾರೆ.

ಹರಾರೆಯಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 219 ರನ್​ಗಳು. ಈ ಕಠಿಣ ಗುರಿ ಬೆನ್ನತ್ತಿದ ಝಿಂಬಾಬ್ವೆ ತಂಡವು 17.5 ಓವರ್​ಗಳಲ್ಲಿ 129 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 90 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಈ ಭರ್ಜರಿ ಗೆಲುವಿನ ಬಳಿಕ ಮಾತನಾಡಿದ ಶ್ರೇಯಸ್ ಅಯ್ಯರ್,  ಇಂದಿನ ಪಂದ್ಯವನ್ನು ನಾವು ಗೆದ್ದ ರೀತಿಯಿಂದ ನನಗೆ ತುಂಬಾನೇ ಸಂತೋಷವಾಗಿದೆ. ಇದು ಅತ್ಯಂತ ಸುಸಜ್ಜಿತ ಮತ್ತು ಪರಿಪೂರ್ಣ ಗೆಲುವು. ತಂಡದ ಪ್ರತಿಯೊಬ್ಬ ಆಟಗಾರನೂ ಕೂಡ ಈ ಗೆಲುವಿಗೆ ಅದ್ಭುತ ಕೊಡುಗೆ ನೀಡಿದ್ದಾರೆ.

ನಮ್ಮ ಬ್ಯಾಟಿಂಗ್ ಪ್ರದರ್ಶನದಿಂದಲೇ ಆರಂಭಿಸುವುದಾದರೆ, ಇಶಾನ್ ಕಿಶನ್ ಮತ್ತು ತಿಲಕ್ ವರ್ಮಾ ಆಡಿದ ರೀತಿ ನಿಜಕ್ಕೂ ಅದ್ಭುತವಾಗಿತ್ತು. ಅವರು ಹೊಡೆದ ಕೆಲವು ಶಾಟ್‌ಗಳು ‘ರಕನಾಕ’ (ಝಿಂಬಾಬ್ವೆಯ ಸ್ಥಳೀಯ ಶೋನಾ ಭಾಷೆಯಲ್ಲಿ ‘ಅದ್ಭುತ’ ಎಂದರ್ಥ) ಆಗಿದ್ದವು. ಕಣ್ಣಿಗೆ ಅvರ ಆಟವು ಹಬ್ಬ ನೀಡಿದವು.

ಆರಂಭದಲ್ಲಿ ಈ ಪಿಚ್‌ನಲ್ಲಿ 180 ರಿಂದ 200 ರನ್ ಗಳಿಸಿದರೆ ಅದು ಉತ್ತಮ ಮೊತ್ತ ಅಂದುಕೊಂಡಿದ್ದೆ. ಆದರೆ ನಾವು 220 ರನ್ ಗಳಿಸಿದೆವು, ಇದು ನಮಗೆ ಸಿಕ್ಕ ಹೆಚ್ಚುವರಿ ಲಾಭ. ಅವರಿಬ್ಬರ ಕೊಡುಗೆ ಅಮೋಘವಾಗಿತ್ತು ಎಂದು ಶ್ರೇಯಸ್ ಅಯ್ಯರ್ ಇಬ್ಬರ ಎಡಗೈ ದಾಂಡಿಗರ ಆಟವನ್ನು ಕೊಂಡಾಡಿದ್ದಾರೆ.

ಬೌಲರ್‌ಗಳ ನಿಖರ ದಾಳಿ:

ನಮ್ಮ ಬೌಲರ್‌ಗಳು ಎಂದಿನಂತೆ ನಿಖರವಾದ ಲೈನ್ ಮತ್ತು ಲೆಂತ್‌ಗಳಲ್ಲಿ ಬೌಲಿಂಗ್ ಮಾಡಿದರು. ಅವರ ಯೋಜನೆಯನ್ನು ಸರಿಯಾಗಿ ಕಾರ್ಯಗತಗೊಳಿಸಿ ಝಿಂಬಾಬ್ವೆ ತಂಡವನ್ನು 130 ರನ್‌ಗಳ ಆಸುಪಾಸಿಗೆ ಆಲ್-ಔಟ್ ಮಾಡಿದರು. ಇಡೀ ಪಂದ್ಯದ ಕಥೆಯನ್ನು ಈ ಪ್ರದರ್ಶನವೇ ಹೇಳುತ್ತದೆ ಎಂದು ಶ್ರೇಯಸ್ ಅಯ್ಯರ್ ಬೌಲರ್​ಗಳ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯುವ ತಂಡದ ನಿರ್ಭೀತ ಆಟ:

ಟಿ20 ಕ್ರಿಕೆಟ್ ಅನ್ನು ಇದೇ ರೀತಿಯ ಧನಾತ್ಮಕ ಮನೋಭಾವದಿಂದ ಆಡಬೇಕು. ಹಿಂದಿನ ಪಂದ್ಯಗಳ ಪ್ರದರ್ಶನಗಳ ಬಗ್ಗೆ ಅತಿಯಾಗಿ ಯೋಚಿಸದೆ, ಸದಾ ಮುನ್ನಡೆಯುವುದು ಮತ್ತು ಪ್ರಸ್ತುತ ಕ್ಷಣದಲ್ಲಿ ಬದುಕುವುದು ಮುಖ್ಯ. ಸಿಗುವ ಪ್ರತಿಯೊಂದು ಅವಕಾಶವನ್ನೂ ಗರಿಷ್ಠವಾಗಿ ಬಳಸಿಕೊಳ್ಳಬೇಕು. ನಾಳೆ ನಮಗೆ ಮತ್ತೊಂದು ಹೊಸ ಅವಕಾಶ ಸಿಗಲಿದ್ದು, ಅದಕ್ಕಾಗಿ ಕಾಯುತ್ತಿದ್ದೇವೆ ಎಂದು ಇದೇ ಅಯ್ಯರ್ ತಿಳಿಸಿದರು.

ಇನ್ನು ಅಂತಿಮ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ ಮಾಡುವ ಬಗ್ಗೆ ಮಾತನಾಡಿದ ಶ್ರೇಯಸ್ ಅಯ್ಯರ್, ನಾವು ಇನ್ನೂ ಕೋಚ್ ಜೊತೆ ಚರ್ಚಿಸಿಲ್ಲ. ಆದರೆ, ದುರದೃಷ್ಟವಶಾತ್ ನಮ್ಮ ಆಟಗಾರ ಪ್ರಿನ್ಸ್ ಯಾದವ್ ಗಾಯಗೊಂಡಿದ್ದಾರೆ. ಹಾಗಾಗಿ ಮುಂದಿನ ಪಂದ್ಯದಲ್ಲಿ ತಂಡದಲ್ಲಿ ಒಂದೆರಡು ಬದಲಾವಣೆಗಳಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಏಷ್ಯನ್ ಗೇಮ್ಸ್​​ಗೆ ಟೀಮ್ ಇಂಡಿಯಾ ಹೀಗಿದೆ

ಒಟ್ಟಾರೆಯಾಗಿ ಹೇಳುವುದಾದರೆ, ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಲ್ಲಿ ಮುಖಭಂಗ ಅನುಭವಿಸಿದ್ದ ಭಾರತ ತಂಡ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಅವರಿಗೆ ಈ ಝಿಂಬಾಬ್ವೆ ಸರಣಿಯ ಗೆಲುವು ಅತ್ಯಂತ ಸ್ಮರಣೀಯ ಹಾಗೂ ಮಹತ್ವದ್ದಾಗಿದೆ. ಯುವ ಆಟಗಾರರ ಸಾಂಘಿಕ ಪ್ರದರ್ಶನ, ಇಶಾನ್ ಮತ್ತು ತಿಲಕ್ ಅವರ ಭರ್ಜರಿ ಬ್ಯಾಟಿಂಗ್ ಹಾಗೂ ಬೌಲರ್‌ಗಳ ನಿಖರ ದಾಳಿಯ ಬಲದಿಂದ ಭಾರತ ತಂಡ ಸರಣಿಯಲ್ಲಿ 2-0 ಅಂತರದ ಅಜೇಯ ಮುನ್ನಡೆ ಸಾಧಿಸಿದೆ. ಈ ಮೂಲಕ ಶ್ರೇಯಸ್ ಅಯ್ಯರ್ ತಮ್ಮ ಟಿ20 ನಾಯಕತ್ವದ ವೃತ್ತಿಜೀವನದಲ್ಲಿ ಮೊದಲ ಸರಣಿ ಗೆಲುವಿನ ಸಿಹಿ ಸವಿದಿದ್ದಾರೆ.

Source link

ಕೇಂದ್ರ ಶಿಕ್ಷಣ ಸಚಿವರಾಗಿ ಪ್ರಲ್ಹಾದ್ ಜೋಶಿ ಅಧಿಕಾರ ಸ್ವೀಕಾರ, ಶೈಕ್ಷಣಿಕ ಅರ್ಹತೆ ಏನು? – Kannada News | Pralhad Joshi Appointed Union Education Minister: Background, Qualifications and Vision

ನವದೆಹಲಿ, ಜುಲೈ 26: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬಳಿಕ, ಬಿಜೆಪಿಯ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ(Pralhad Joshi)ಯವರಿಗೆ ಕೇಂದ್ರ ಶಿಕ್ಷಣ ಸಚಿವರಾಗಿ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿದೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ ಹುಬ್ಬಳ್ಳಿಯ ಕೆ.ಎಸ್. ಆರ್ಟ್ಸ್ ಕಾಲೇಜಿನಿಂದ ಬಿ.ಎ. ಪದವಿ ಪಡೆದಿದ್ದಾರೆ.

ಹುಬ್ಬಳ್ಳಿಯ ರೈಲ್ವೆ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ನ್ಯೂ ಇಂಗ್ಲಿಷ್ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದ್ದಾರೆ. ನವೆಂಬರ್ 27, 1962 ರಂದು ಕರ್ನಾಟಕದ ವಿಜಯಪುರದಲ್ಲಿ ಜನಿಸಿದರು. ಇವರ ತಂದೆ ಭಾರತೀಯ ರೈಲ್ವೆಯಲ್ಲಿ ಉದ್ಯೋಗಿಯಾಗಿದ್ದರು. ಚಿಕ್ಕ ವಯಸ್ಸಿನಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸಕ್ರಿಯ ಕಾರ್ಯಕರ್ತರಾಗಿ ಸಾರ್ವಜನಿಕ ಜೀವನ ಪ್ರವೇಶಿಸಿದರು. 2004 ರಿಂದ ಧಾರವಾಡ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಸತತ 5 ಬಾರಿ (2004, 2009, 2014, 2019, 2024) ಸಂಸದರಾಗಿ ಆಯ್ಕೆಯಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸೇರಿ, ಬಳಿಕ ಭಾರತೀಯ ಜನತಾ ಪಾರ್ಟಿ (BJP) ಮೂಲಕ ಸಕ್ರಿಯ ರಾಜಕೀಯ ಪ್ರವೇಶಿಸಿದರು.

ನಿರ್ವಹಿಸಿದ ಪ್ರಮುಖ ಹುದ್ದೆಗಳು ಹಾಗೂ ಇತರೆ ಮಾಹಿತಿ
ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷರು (2013–2016)

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರು (2019–2024)

ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವರು (2019–2024)

ಮತ್ತಷ್ಟು ಓದಿ: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಗೀಕಾರ, ಪ್ರಲ್ಹಾದ್ ಜೋಶಿಗೆ ಕೇಂದ್ರ ಶಿಕ್ಷಣ ಖಾತೆ ಹೆಚ್ಚುವರಿ ಹೊಣೆ

1990 ರ ದಶಕದಲ್ಲಿ ರಾಷ್ಟ್ರಧ್ವಜ ಗೌರವ ರಕ್ಷಣಾ ಸಮಿತಿಯ ಸಂಚಾಲಕರಾಗಿ ಪ್ರಲ್ಹಾದ್ ಜೋಶಿ ಅವರು ರಾಜ್ಯಮಟ್ಟದಲ್ಲಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡರು. ರಾಜಕೀಯ ಪ್ರವೇಶಿಸುವ ಮೊದಲು ಹುಬ್ಬಳ್ಳಿಯಲ್ಲಿ ಸಣ್ಣ ಪ್ರಮಾಣದ ಕೈಗಾರಿಕಾ ಉದ್ಯಮವನ್ನು (ವೈಭವ್ ಪ್ರಿಂಟರ್ಸ್) ನಡೆಸುತ್ತಿದ್ದರು. ಸಂಸತ್ತಿನಲ್ಲಿ ಸಕ್ರಿಯ ಭಾಗವಹಿಸುವಿಕೆ ಮತ್ತು ಪ್ರಮುಖ ಮಸೂದೆಗಳನ್ನು ಅಂಗೀಕರಿಸುವಲ್ಲಿ ಸಂಸದೀಯ ವ್ಯವಹಾರಗಳ ಸಚಿವರಾಗಿ ಪ್ರಮುಖ ಪಾತ್ರ ವಹಿಸಿದ್ದರು.

ಹೊಸ ಜವಾಬ್ದಾರಿ ಏಕೆ?
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಪರೀಕ್ಷಾ ನಿರ್ವಹಣೆ ಹಾಗೂ ನೀಟ್ (NEET) ವಿವಾದಕ್ಕೆ ಸಂಬಂಧಿಸಿದಂತೆ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜೀನಾಮೆಯನ್ನು ಅಂಗೀಕರಿಸಿದ ಬಳಿಕ, ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯಂತೆ ಪ್ರಲ್ಹಾದ್ ಜೋಶಿ ಅವರಿಗೆ ಈ ಹೊಣೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಿರೀಕ್ಷೆಗೆ ತಕ್ಕಂತೆ ಪೂರ್ಣ ನಿಷ್ಠೆಯಿಂದ ಕೆಲಸ ಮಾಡುತ್ತೇನೆ ಹಾಗೂ ಭಾರತದ ಶಿಕ್ಷಣ ಕ್ಷೇತ್ರವನ್ನು ಬಲಪಡಿಸಲು ಶ್ರಮಿಸುತ್ತೇನೆ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಲಂಡನ್‌ನಲ್ಲಿ ಫ್ಯಾಮಿಲಿ ಜತೆ ಶಾರುಖ್ ಖಾನ್ ಸುತ್ತಾಟ: ವಿದ್ಯಾರ್ಥಿಗಳ ಪ್ರತಿಭಟನೆಗೆ ನಟನ ಮೌನ ಪ್ರಶ್ನಿಸಿದ ನೆಟ್ಟಿಗರು – Kannada News | Shah Rukh Khan and Family in London Vacation People question his silence on CJP Student Protest

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ (Shah Rukh Khan) ಇತ್ತೀಚೆಗೆ ತಮ್ಮ ಕುಟುಂಬದೊಂದಿಗೆ ಲಂಡನ್‌ನಲ್ಲಿ ರಜಾದಿನಗಳನ್ನು ಕಳೆಯುತ್ತಿರುವುದು ಕಂಡುಬಂದಿದೆ. ಪತ್ನಿ ಗೌರಿ ಖಾನ್, ಮಕ್ಕಳಾದ ಸುಹಾನಾ ಖಾನ್, ಆರ್ಯನ್ ಖಾನ್ ಮತ್ತು ಅಬ್ರಾಮ್ ಖಾನ್ ಅವರೊಂದಿಗೆ ಶಾರುಖ್ ಅವರು ಲಂಡನ್ ನಗರದಲ್ಲಿ ಸಮಯ ಕಳೆಯುತ್ತಿರುವ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆದರೆ, ಒಂದೆಡೆ ಅಭಿಮಾನಿಗಳಿಗೆ ಈ ಫೋಟೋಗಳು ಸಂತಸ ತಂದಿದ್ದರೆ, ಮತ್ತೊಂದೆಡೆ ದೇಶದಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆ (Student Protest) ಕುರಿತು ಶಾರುಖ್ ಮೌನ ವಹಿಸಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ಹಾಗೂ ಟೀಕೆ ವ್ಯಕ್ತವಾಗಿದೆ.

ಶುಕ್ರವಾರ (ಜುಲೈ 24) ರಾತ್ರಿಯಿಂದೀಚೆಗೆ ಲಂಡನ್‌ನ ಬೀದಿಗಳಲ್ಲಿ ಶಾರುಖ್ ಖಾನ್ ಕುಟುಂಬದೊಂದಿಗೆ ಕ್ಯಾಶುಯಲ್ ಉಡುಪಿನಲ್ಲಿ ಓಡಾಡುತ್ತಿರುವ ದೃಶ್ಯಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಶಾರುಖ್ ಸರಳವಾದ ಟೀ-ಶರ್ಟ್, ಬ್ಯಾಗಿ ಪ್ಯಾಂಟ್ ಹಾಗೂ ಹೂಡಿ ಧರಿಸಿದ್ದದರೆ, ಗೌರಿ ಖಾನ್ ಗ್ರೇ ಪೈಜಾಮ ಮತ್ತು ತಿಳಿ ನೀಲಿ ಬಣ್ಣದ ಶರ್ಟ್ ಧರಿಸಿದ್ದರು. ಇನ್ನು ಮಗಳು ಸುಹಾನಾ ಖಾನ್ ಗ್ರೇ ಬಣ್ಣದ ಉಡುಪಿನಲ್ಲಿ ಸಿಂಪಲ್ ಹಾಗೂ ಸೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.

ಪ್ರತಿಭಟನೆಯ ಮೌನದ ಸುತ್ತ ಎದ್ದ ವಿವಾದ:

ಒಂದೆಡೆ ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ, ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳ ವಿರುದ್ಧದ ವಿದ್ಯಾರ್ಥಿ ಹೋರಾಟದ ಬಗ್ಗೆ ಶಾರುಖ್ ಖಾನ್ ಯಾವುದೇ ಪ್ರತಿಕ್ರಿಯೆ ನೀಡದಿರುವುದನ್ನು ನೆಟ್ಟಿಗರು ಪ್ರಶ್ನಿಸಲು ಪ್ರಾರಂಭಿಸಿದ್ದಾರೆ. ದೇಶದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ ಎದ್ದಿರುವಾಗ ಶಾರುಖ್ ಮೌನ ವಹಿಸಿ ವಿದೇಶದಲ್ಲಿ ರಜೆ ಕಳೆಯುತ್ತಿದ್ದಾರೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾರುಖ್ ಬೆಂಬಲಕ್ಕೆ ನಿಂತ ಅಭಿಮಾನಿಗಳು:

ಆದಾಗ್ಯೂ, ಶಾರುಖ್ ಖಾನ್ ಮೌನವನ್ನು ಸಮರ್ಥಿಸಿಕೊಂಡು ಅವರ ಹಲವು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ‘ಜನರು ಈಗ ಅವರನ್ನು ಬೆನ್ನೆಲುಬಿಲ್ಲದವರು ಎಂದು ಕರೆಯುತ್ತಿದ್ದಾರೆ. ಆದರೆ ಈ ಹಿಂದೆ ಅವರು ದೇಶದ ವಿಷಯಗಳಲ್ಲಿ ಧ್ವನಿ ಎತ್ತಿದಾಗಲೆಲ್ಲಾ ಅವರ ಮನೋಬಲವನ್ನು ಜನರು ಕುಗ್ಗಿಸಲು ಯತ್ನಿಸಿದ್ದರು. ಪ್ರತಿಯೊಂದು ಬಾರಿಯೂ ಅವರು ಅಭಿಪ್ರಾಯ ವ್ಯಕ್ತಪಡಿಸಿದಾಗ ಅವರ ಮೇಲೆ ಅಪಪ್ರಚಾರ ಮಾಡಲಾಯಿತು. ಈಗ ಶಾರುಖ್ ಏಕೆ ಮಾತನಾಡುತ್ತಿಲ್ಲ ಅಂತ ಜನರು ಪ್ರಶ್ನಿಸುತ್ತಿದ್ದಾರೆ’ ಎಂದು ಅಭಿಮಾನಿಯೊಬ್ಬರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ‘ಕಿಂಗ್’ ಚಿತ್ರಕ್ಕೆ 450 ಕೋಟಿ ರೂ. ಬಜೆಟ್; ಶಾರುಖ್ ಖಾನ್ ವೃತ್ತಿಜೀವನದ ದುಬಾರಿ ಸಿನಿಮಾ

ಮತ್ತೊಬ್ಬ ಅಭಿಮಾನಿಯು ಸೋಶಿಯಲ್ ಮೀಡಿಯಾದ ವಾಸ್ತವವನ್ನು ಬಿಚ್ಚಿಡುತ್ತಾ, ‘ಅವರ ಮೇಲೆ ನೂರಾರು ಕೋಟಿ ರೂಪಾಯಿಗಳ ಹೂಡಿಕೆ ಇರುತ್ತದೆ. ಸಾವಿರಾರು ಜನರ ಜೀವನ, ಸಿನಿಮಾಗಳ ಬಿಡುಗಡೆ ಮತ್ತು ನಿರ್ಮಾಪಕ-ನಿರ್ದೇಶಕರ ಭವಿಷ್ಯ ಅವರ ಮೇಲೆ ಅವಲಂಬಿತವಾಗಿರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಮಾಡುವ ಒಂದು ಸಣ್ಣ ಟ್ವೀಟ್ ಕೂಡ ಇಡೀ ಪ್ರಾಜೆಕ್ಟ್ ಅನ್ನು ಅಪಾಯಕ್ಕೆ ಸಿಲುಕಿಸಬಹುದು. ಸೋಶಿಯಲ್ ಮೀಡಿಯಾ ಅತ್ಯಂತ ಕ್ರೂರವಾಗಿದೆ’ ಎಂದು ನಟನ ಮೌನದ ಹಿಂದಿನ ಜವಾಬ್ದಾರಿಯನ್ನು ಎತ್ತಿಹಿಡಿದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಿಪ್ಪರಗಿಯಲ್ಲಿ ಬಾರ್​​ ಮುಂದೆ ನಿಲ್ಲಿಸಿದ್ದ ಕಾರು ಸ್ಫೋಟ: ತಪ್ಪಿದ ಭಾರಿ ದುರಂತ – Kannada News | Mahindra XUV300 Bursts Into Flames Outside Wine Shop in Jamakhandi

ಪೊಲೀಸರಿಂದ ಸ್ಥಳ ಪರಿಶೀಲನೆImage Credit source: Tv9 Kannada

ಬಾಗಲಕೋಟೆ, ಜುಲೈ 26: ಬಾರ್​​ ಎದುರು ನಿಲ್ಲಿಸಿದ್ದ ಕಾರೊಂದು ಸ್ಫೋಟಗೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹಿಪ್ಪರಗಿ ನಡೆದಿದೆ. ವೈನ್ ಶಾಪ್ ಮ್ಯಾನೇಜರ್ ಹನುಮಂತ ಸಂಗೊಂಡ ಎಂಬವರು ತಂದಿದ್ದ ಕಾರು ಸ್ಫೋಟಗೊಂಡ ತೀವ್ರತೆಗೆ ಕಾರಿನ ಬಿಡಿ ಭಾಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ವೈನ್ ಶಾಪ್ ಗೋಡೆಯ ಸಿಮೆಂಟ್ ಉದುರಿದ್ದರೆ, ಬಿಯರ್ ಹಾಗೂ ಕೂಲ್ ಡ್ರಿಂಕ್ಸ್ ಬಾಟಲ್​​ಗಳು ಕೆಳಗೆ ಬಿದ್ದಿವೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಸೊಕೊ ಟೀಂ ಮತ್ತು ಜಮಖಂಡಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಾವ ಕಾರಣದಿಂದ ಸ್ಪೋಟ ಆಗಿದೆ ಎಂದು ತನಿಖೆ ನಡೆಸುತ್ತಿದ್ದಾರೆ.

ಆಗಿದ್ದೇನು?

ಸ್ಪೋಟಗೊಂಡಿರುವ ಮಹಿಂದ್ರಾ XUV300 ಕಾರು ಎಂ.ಜಿ.ತೋರಗಲ್ ಎಂಬುವರ ಹೆಸರಿನಲ್ಲಿರುವುದು ಗೊತ್ತಾಗಿದ್ದು, ಕಾರು ಸ್ಫೋಟದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎನ್ನಲಾಗಿದೆ. ನಿನ್ನೆ ಸಂಜೆ 4.30ರಲ್ಲಿ ಕಾರನ್ನು ತಂದು ಬಾರ್​​ ಬಳಿ ನಿಲ್ಲಿಸಲಾಗಿತ್ತು. ರಾತ್ರಿ ಮನೆಗೆ ಹೊರಡಬೇಕು ಅಂದಾಗ ಸ್ಫೋಟದ ಶಬ್ದ ಕೇಳಿಸಿತು. ಬಾಂಬ್ ಸ್ಫೋಟ ಆಗಿರಬಹುದು ಅಂತಾ ಅನುಮಾನ ಬರುತ್ತಿದೆ. ಕಾರು ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಮನೆಗಳ ಶೀಟ್ ಹಾರಿವೆ. ಘಟನೆ ವೇಳೆ ಪೂಜಾರಿ ಎಂಬ ಹುಡುಗ ಸ್ವಲ್ಪ ದೂರದಲ್ಲಿ ಇದ್ದ. ಆ ಹುಡುಗನೇ ಹೀಗೆ ಮಾಡಿರಬಹುದು ಎಂದು ಹಿಡಿದೆವು. ಆದರೆ ಆತ ನನಗೆ ಗಾಯವಾಗಿದೆ ಎಂದು ತೋರಿಸಿದ್ದಾನೆ. ಜಮಖಂಡಿ ಆಸ್ಪತ್ರೆಯಲ್ಲಿ ಆ ಹುಡುಗ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಕಾರು ನಿಲ್ಲಿಸಿದ್ದ ವೈನ್ ಶಾಪ್ ಮ್ಯಾನೇಜರ್ ಹನುಮಂತ ತಿಳಿಸಿದ್ದಾರೆ.

ಇದನ್ನೂ ಓದಿ: ನಗರಸಭೆ ಆಯುಕ್ತರ ಚೇಂಬರ್‌ಗೆ “ಸಾರ್ವಜನಿಕರಿಗೆ ಪ್ರವೇಶವಿಲ್ಲ”; ಬೋರ್ಡ್​ ನೋಡಿ ಉಪ ಲೋಕಾಯುಕ್ತ ಶಾಕ್

ತಪ್ಪಿದ ಭಾರಿ ಅನಾಹುತ

ಸ್ಫೋಟದ ತೀವ್ರತೆ ಗಮನಿಸಿದರೆ ಸಂಭವನೀಯ ಭಾರಿ ಅನಾಹುತವೊಂದು ತಪ್ಪಿದೆ. ಘಟನೆ ವೇಳೆ ಸುತ್ತಮುತ್ತಲಿನ ಪ್ರದೇಶದಲ್ಲಿ ಧೂಳು ತುಂಬಿಕೊಂಡು ಕೆಲ ಕಾಲ ಆತಂಕದ ವಾತಾವಣರ ನಿರ್ಮಾಣವಾಗಿತ್ತು. ಆದರೆ ಯಾವುದೇ ಜೀವಹಾನಿ ಆಗಿಲ್ಲ. ಕಾರಿನ ಸಮೀಪ ಅಥವಾ ಕಾರಲ್ಲಿ ಯಾರಾದರೂ ಇದ್ದ ವೇಳೆಯೇ ಘಟನೆ ನಡೆದಿದ್ದರೆ ಸಾವು ನೋವು ಸಂಭವಿಸುವ ಸಾಧ್ಯತೆ ಇತ್ತು. ಅಷ್ಟಕ್ಕೂ ಕಾರು ಸ್ಫೋಟಗೊಂಡಿದ್ದು ಯಾವ ಕಾರಣಕ್ಕೆ? ಇದು ದುಷ್ಕೃತ್ಯವಾ? ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡಿದ್ದು ಎಲ್ಲ ಆಯಾಮಗಳಲ್ಲಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 7:10 am, Sun, 26 July 26

Source link

Horoscope Today: ಇಂದು ಈ ರಾಶಿಯವರಿಗೆ ಉದ್ಯೋಗಾವಕಾಶ!

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜುಲೈ 26, ಭಾನುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸ, ಗ್ರೀಷ್ಮ ಋತು, ಶುಕ್ಲಪಕ್ಷ, ದ್ವಾದಶಿ ತಿಥಿ, ಜ್ಯೇಷ್ಠ ನಕ್ಷತ್ರ, ಐಂದ್ರ ಯೋಗ, ಬಾಲವಕರಣದಿಂದ ಕೂಡಿರುವ ದಿನವಾಗಿದೆ.ಇದು ಭಾನುವಾರವಾಗಿರುವುದರಿಂದ, ಸೂರ್ಯನ ದಿನವೆಂದು ಪರಿಗಣಿಸಲಾಗುತ್ತದೆ. ಸೂರ್ಯ ನಮಸ್ಕಾರದಿಂದ ಆರೋಗ್ಯ ಲಭಿಸುತ್ತದೆ ಎಂಬ ನಂಬಿಕೆಯಿದೆ. ಇಂದು ಪ್ರದೋಷದ ದಿನವೂ ಆಗಿದ್ದು, ಶಯನ ದ್ವಾದಶಿ, ಶಾಖ ವ್ರತಾರಂಭ, ವಾಮನ ಪೂಜೆ, ಮತ್ತು ವಾಲೂಕೇಶ್ವರ ಭಾರತಿ ಸ್ವಾಮಿಗಳ ಆರಾಧನಾ ಮಹೋತ್ಸವವಿರುವ ಪರ್ವಕಾಲವಾಗಿದೆ. ಸೂರ್ಯನು ಕರ್ಕಾಟಕ ರಾಶಿಯಲ್ಲಿ ಮತ್ತು ಚಂದ್ರನು ವೃಶ್ಚಿಕ ರಾಶಿಯ ಜ್ಯೇಷ್ಠ ನಕ್ಷತ್ರದಲ್ಲಿ ಸಂಚರಿಸುತ್ತಿದ್ದಾನೆ ಎಂದು ಬಸವರಾಜ ಗುರೂಜಿ ತಿಳಿಸಿದ್ದಾರೆ.

 

Source link

Bengaluru Air Quality: ಮಾಲಿನ್ಯ ಮುಕ್ತವಾಯ್ತು ಬೆಂಗಳೂರು, ಕರ್ನಾಟಕದ್ಯಾಂತ ಶುದ್ಧ ಗಾಳಿ! – Kannada News | Karnataka AQI July 26: Bengaluru Air Quality Status and City Index

ಬೆಂಗಳೂರು, ಜುಲೈ 26: ಇಂದು ರಾಜ್ಯಾದ್ಯಂತ ವಾಯು ಗುಣಮಟ್ಟ ಸೂಚ್ಯಂಕ (AQI) ಅತ್ಯಂತ ಸಮಾಧಾನಕರ ಮಟ್ಟದಲ್ಲಿದೆ. ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯದ ಪ್ರಮಾಣ ಕಡಿಮೆಯಿದ್ದು, ಸಾರ್ವಜನಿಕರು ಮುಕ್ತವಾಗಿ ಹೊರಸಂಚಾರ ನಡೆಸಲು ಸೂಕ್ತ ವಾತಾವರಣವಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಸರಾಸರಿ AQI 45 ರಿಂದ 55ರ ನಡುವೆ ದಾಖಲಾಗಿದ್ದು, ‘ಉತ್ತಮ’ (Good) ಮತ್ತು ‘ಸಾಧಾರಣ’ (Moderate) ಶ್ರೇಣಿಯಲ್ಲಿದೆ.

ರಾಜಧಾನಿ ಬೆಂಗಳೂರಿನಲ್ಲಿ ಉತ್ತಮ ವಾಯು ಗುಣಮಟ್ಟ

ಜಯನಗರ, ಬಸವನಗುಡಿ, ಮತ್ತು ಕೋರಮಂಗಲದಲ್ಲಿ AQI 50ಕ್ಕಿಂತ ಕಡಿಮೆಯಿದ್ದು ಶುದ್ಧ ಗಾಳಿ ದಾಖಲಾಗಿದೆ. ಪೀಣ್ಯ, ಸಿಟಿ ರೈಲ್ವೆ ಸ್ಟೇಷನ್ ಮತ್ತು ಬಿಟಿಎಂ ಲೇಔಟ್ ಪ್ರದೇಶಗಳಲ್ಲಿ AQI 55 ರಿಂದ 63 ರಷ್ಟಿದ್ದು ಸಾಧಾರಣ ಮಟ್ಟದಲ್ಲಿದೆ. ಮಾನ್ಸೂನ್ ಮಳೆಯ ಸಕ್ರಿಯತೆಯಿಂದಾಗಿ ಧೂಳು ಮತ್ತು ಹಾನಿಕಾರಕ ಕಣಗಳ (PM2.5 ಮತ್ತು PM10) ಪ್ರಭಾವ ಕಡಿಮೆಯಾಗಿದ್ದು, ನಗರವಾಸಿಗಳು ನಿಟ್ಟುಸಿರು ಬಿಡುವಂತಾಗಿದೆ.

ರಾಜ್ಯದ ಇತರ ಪ್ರಮುಖ ನಗರಗಳ ಸ್ಥಿತಿಗತಿ

ಮಂಗಳೂರು ಮತ್ತು ಉಡುಪಿ ಸೇರಿದಂತೆ ಕರಾವಳಿ ಭಾಗದಲ್ಲಿ ಸಮುದ್ರದ ತಂಗಾಳಿ ಮತ್ತು ಮಳೆಯಿಂದಾಗಿ AQI 32 ರಿಂದ 45ರಷ್ಟಿದ್ದು, ‘ಉತ್ತಮ’ ವಿಭಾಗದಲ್ಲಿದೆ. ಪರಿಸರ ಸ್ನೇಹಿ ವಾತಾವರಣ ಹೊಂದಿರುವ ಚಾಮರಾಜನಗರ ಹಾಗೂ ಮಡಿಕೇರಿ ಜಿಲ್ಲೆಗಳಲ್ಲಿ AQI 40 ರಿಂದ 45ರಷ್ಟಿದೆ. ಮೈಸೂರು, ಹುಬ್ಬಳ್ಳಿ, ಮತ್ತು ಬೆಳಗಾವಿ ನಗರಗಳಲ್ಲಿಯೂ AQI 50 ರಿಂದ 60 ರ ಆಜುಬಾಜಿನಲ್ಲಿದ್ದು, ಯಾವುದೇ ಆರೋಗ್ಯ ಭೀತಿ ಇಲ್ಲ. ಒಟ್ಟಾರೆಯಾಗಿ, ರಾಜ್ಯದಲ್ಲಿ ಇಂದು ವಾಯು ಮಾಲಿನ್ಯದ ಮಟ್ಟ ನಿಯಂತ್ರಣದಲ್ಲಿದ್ದು, ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಉತ್ತಮ ದಿನವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version