ಉದ್ಯಮಿಯ ಮನೆಯಿಂದ 220 ಗ್ರಾಂ ಚಿನ್ನ ಕದ್ದ ಐವರು ಪೊಲೀಸ್ ಅಧಿಕಾರಿಗಳು! – Kannada News | 5 police officers stole 220 grams gold from businessman’s house in Indore

ಇಂದೋರ್, ಏಪ್ರಿಲ್ 21: ಇದು ಬೇಲಿಯೇ ಎದ್ದು ಹೊಲ ಮೇಯ್ದ ಕತೆ. ಕಳ್ಳರಿಂದ ಜನರನ್ನು ಕಾಪಾಡಬೇಕಾದ ಪೊಲೀಸ್ ಅಧಿಕಾರಿಗಳೇ ಕಳ್ಳತನ (Robbery) ಮಾಡಿರುವ ಘಟನೆ ಇಂದೋರ್​​ನಲ್ಲಿ ನಡೆದಿದೆ. ನಿವೃತ್ತ ಎಸಿಪಿಯನ್ನು ಒಳಗೊಂಡ ಆಸ್ತಿ ವಿವಾದವನ್ನು ಪರಿಹರಿಸುವ ನೆಪದಲ್ಲಿ ಒಟ್ಟು 5 ಪೊಲೀಸ್ ಅಧಿಕಾರಿಗಳು ತಮ್ಮ ಮನೆಗೆ ಅಕ್ರಮವಾಗಿ ಪ್ರವೇಶಿಸಿದ್ದಾರೆ ಎಂದು ಉದ್ಯಮಿಯೊಬ್ಬರು ಆರೋಪಿಸಿದ್ದಾರೆ. ರೇಡ್ ಮಾಡುವ ನೆಪದಲ್ಲಿ ಮನೆಯೊಳಗೆ ಬಂದ ಪೊಲೀಸ್ ಅಧಿಕಾರಿಗಳು 220 ಗ್ರಾಂ ಚಿನ್ನ ದೋಚಿದ್ದಾರೆ ಎಂದು ಆ ಉದ್ಯಮಿ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

ಗೌರವ್ ಜೈನ್ ಎಂಬ ಉದ್ಯಮಿ ಪೊಲೀಸ್ ಅಧಿಕಾರಿಗಳ ವಿರುದ್ಧ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಪೊಲೀಸರು ತಮ್ಮ ಮನೆಯ ಹೊರಗಿನ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಿ ಮಾಸ್ಟರ್ ಕೀ ಬಳಸಿ ಮುಖ್ಯ ಬಾಗಿಲನ್ನು ತೆರೆದಿದ್ದಾರೆ ಎಂದು ಅವರು ಹೇಳಿದ್ದಾರೆ. ಪೊಲೀಸರು ತಮ್ಮ ಮನೆಯಿಂದ ಸುಮಾರು 220 ಗ್ರಾಂ ಚಿನ್ನವನ್ನು ಕದ್ದಿದ್ದಾರೆ ಎಂದು ಗೌರವ್ ಜೈನ್ ಆರೋಪಿಸಿದ್ದಾರೆ. ಪೊಲೀಸರನ್ನು ಎಸ್‌ಐ ಸಂಜಯ್ ವಿಷ್ಣೋಯ್, ರಣವೀರ್ ಕುಶ್ವಾ, ಪ್ರಣೀತ್ ಭಡೋರಿಯಾ, ದಿನೇಶ್ ಗುರ್ಜರ್ ಮತ್ತು ದೀಪೇಂದ್ರ ಮಿಶ್ರಾ ಎಂದು ಗುರುತಿಸಲಾಗಿದೆ. ಈ ಅಧಿಕಾರಿಗಳು ತನ್ನ ಮೇಲೆ ಹಲ್ಲೆ ನಡೆಸಿ ನಂತರ ತನ್ನನ್ನು ಗ್ವಾಲಿಯರ್‌ನ ಅತಿಥಿ ಗೃಹದಲ್ಲಿ ನಿವೃತ್ತ ಎಸಿಪಿಗೆ ಸಂಬಂಧಿಸಿದ ಜನರಿಗೆ ಹಸ್ತಾಂತರಿಸಿದ್ದಾರೆ ಎಂದು ಗೌರವ್ ಆರೋಪಿಸಿದ್ದಾರೆ.

ಇದನ್ನೂ ಓದಿ: ಕೇರಳದ ತ್ರಿಶೂರ್‌ನಲ್ಲಿ ಪಟಾಕಿಗಳ ಸ್ಫೋಟ; 10 ಜನ ಸಾವು, ಹಲವರಿಗೆ ಗಾಯ

ಪೊಲೀಸರು ಗೌರವ್ ಜೈನ್ ಅವರಿಂದ 27,000 ರೂ. ಹಣವನ್ನು ಸುಲಿಗೆ ಮಾಡಿದ್ದಾರೆ. ಕ್ಯೂಆರ್ ಕೋಡ್ ಮೂಲಕ ಅವರಿದ್ದ ಹೋಟೆಲ್‌ಗೆ 10,000 ರೂ.ಗಳನ್ನು ನೀಡಲಾಗಿದೆ. 17,000 ರೂ.ಗಳನ್ನು ಎಸ್‌ಐ ಮಗನ ಖಾತೆಗೆ ವರ್ಗಾಯಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಿರಿಯ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದರು. ಇದಾದ ಬಳಿಕ ಡಿಸಿಪಿ ಅಮರೇಂದ್ರ ಸಿಂಗ್ ಎಲ್ಲಾ ಐವರು ಅಧಿಕಾರಿಗಳನ್ನು ಅಮಾನತು ಮಾಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಲ್ಲಿಕಾರ್ಜುನ್ ನಂಬಿ ಮೋಸ ಹೋಗಬೇಡಿ: ಎಚ್ಚರಿಕೆ ನೀಡಿದ ದಿನಕರ್ ತೂಗುದೀಪ – Kannada News | Darshan brother Dinakar Thoogudeepa viral post about Ex Manager Mallikarjun

ಹಲವು ವರ್ಷಗಳ ಕಾಲ ನಾಪತ್ತೆ ಆಗಿದ್ದ ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ (Darshan Ex Manager Mallikarjun) ಇತ್ತೀಚೆಗೆ ದಿಢೀರ್ ಪ್ರತ್ಯಕ್ಷ ಆದರು. ಬಳಿಕ ಅವರು ಸುದ್ದಿಗೋಷ್ಠಿ ನಡೆಸಿ ಹಲವು ವಿಷಯಗಳ ಬಗ್ಗೆ ಸ್ಪಷ್ಟನೆ ನೀಡಿದರು. 7 ವರ್ಷ ತಾವು ಕಾಣೆ ಆಗಿದ್ದಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದರು. ಆದರೆ ಈಗ ಮಲ್ಲಿಕಾರ್ಜುನ್ ವಿರುದ್ಧ ದರ್ಶನ್ ಸಹೋದರ ದಿನಕರ್ ತೂಗುದೀಪ (Dinakar Thoogudeepa) ಗುಡುಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಮಲ್ಲಿಕಾರ್ಜುನ್ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಮಲ್ಲಿಕಾರ್ಜುನ್ ಓರ್ವ ವಂಚಕ ಎಂದು ದಿನಕರ್ ತೂಗುದೀಪ ಹೇಳಿದ್ದಾರೆ. ಅವರ ಪೋಸ್ಟ್ ಈ ಕೆಳಗಿನಂತಿದೆ.

‘ಮಲ್ಲಿಕಾರ್ಜುನ್ ಗದಗ ಅಲಿಯಾಸ್ ಚೀಟರ್ ಮಲ್ಲು ಎಂಬ ಫ್ರಾಡ್ ಎಂಟು ವರ್ಷಗಳ ಹಿಂದೆ ನಮಗೂ ಹಣಕಾಸಿನಲ್ಲಿ ಮೋಸ ಮಾಡಿ ನನ್ನ ಹೆಸರನ್ನು, ದರ್ಶನ್ ಅವರ ಹೆಸರನ್ನು ಮತ್ತು ನಮ್ಮ ತೂಗುದೀಪ ಸಂಸ್ಥೆ ಹೆಸರನ್ನು ದುರ್ಬಳಕೆ ಮಾಡಿ, ನಮ್ಮ ಪರಿಚಯದವರ, ಸ್ನೇಹಿತರ ಹಾಗೂ ನಮ್ಮ ಸಂಪರ್ಕದಲ್ಲಿದ್ದ ಅನೇಕ ವ್ಯಕ್ತಿಗಳ ಬಳಿ ಸುಳ್ಳು ಹೇಳಿ ಹಣ ಪಡೆದು ವಂಚಿಸಿ ಪರಾರಿಯಾಗಿದ್ದವನು ಈಗ ದಿಢೀರನೆ ಪ್ರತ್ಯಕ್ಷನಾಗಿ 16-04-2026 ರಂದು ಪತ್ರಿಕಾಗೋಷ್ಠಿ ನಡೆಸಿರುತ್ತಾನೆ.’

‘ಅದರಲ್ಲಿ ಜನರನ್ನು ನಂಬಿಸಲು ತನಗೆ ಬೇಕಾದಂತೆ ಹೇಳಿಕೆ ಕೊಟ್ಟಿರುತ್ತಾನೆ. ತನಗೆ ಏನೇನೆಲ್ಲಾ ಆಯಿತು ಎಂದು ಹೇಳುತ್ತಿರುವ ಈತ ತನ್ನಿಂದ ಯಾರಿಗೆಲ್ಲ ಏನು ಅನಾಹುತ ಆಯಿತು ಎಂದು ಹೇಳಿರುವುದಿಲ್ಲ. ಈತ ಮಹಾ ಮೋಸಗಾರ. ಆ ಪತ್ರಿಕಾಗೋಷ್ಠಿಯಲ್ಲಿ ತನ್ನ ಲಾಭಕ್ಕೆ ತಕ್ಕಂತೆ ಪದೇ ಪದೇ ನಮ್ಮ ತೂಗುದೀಪ ಸಂಸ್ಥೆಯ ಹೆಸರು, ದರ್ಶನ್ ಅವರ ಹೆಸರು ಮತ್ತು ನನ್ನ ಹೆಸರನ್ನು ದುರ್ಬಳಕೆ ಮಾಡಿರುತ್ತಾನೆ.’

ದಿನಕರ್ ತೂಗುದೀಪ ಅವರ ಇನ್​ಸ್ಟಾಗ್ರಾಮ್ ಪೋಸ್ಟ್:

‘ನಮ್ಮ ನಂಬಿಕೆಗೆ ದ್ರೋಹ ಮಾಡಿರುವ ಮೋಸಗಾರ ಇವನು. ಮೋಸ ಮಾಡುವ ಮುನ್ನ ಈತ ಬಳಸುವ ದಾಳವೇ ಸಿಂಪತಿ. ಅದನ್ನು ಪಡೆಯಲು ಈತ ಹೇಳುವುದೇ ಕಟ್ಟು ಕತೆಗಳು. ಇವನನ್ನು ಯಾರೂ ನಂಬಬೇಡಿ. ನಾನಾಗಲಿ, ನಮ್ಮ ತೂಗುದೀಪ ಸಂಸ್ಥೆ, ದರ್ಶನ್ ಅವರು ಯಾರೂ ಈತನನ್ನು ಸೇರಿಸುವುದಿಲ್ಲ. ಈ ನಂಬಿಕೆ ದ್ರೋಹಿಗೂ ನಮಗೂ ಯಾವುದೇ ಸಂಬಂಧವಿರುವುದಿಲ್ಲ.’

ಇದನ್ನೂ ಓದಿ: ದರ್ಶನ್​ಗೆ ಮುಖ ತೋರಿಸಲು ಸಾಧ್ಯವಾಗದೇ ಊರು ಬಿಟ್ಟೆ: ಎಲ್ಲವನ್ನೂ ಹೇಳಿದ ಮಲ್ಲಿಕಾರ್ಜುನ್

‘ಈತ ಎಲ್ಲಾದರೂ ನಮ್ಮ ಒಡನಾಟದ ಬಗ್ಗೆ ಹೇಳಿಕೊಂಡು ಲಾಭ ಮಾಡಲು ಬಂದರೆ ಯಾಮಾರಬೇಡಿ. ದರ್ಶನ್ ಅವರ ಹೆಸರನ್ನು ಬಳಸಿ ದುಡ್ಡು ಮಾಡುವ ಇನ್ನೊಂದು ಹುನ್ನಾರವಷ್ಟೇ. ದಯವಿಟ್ಟು ಯಾರೂ ಇವನ ಮಾತನ್ನು ನಂಬಿ ಮೋಸ ಹೋಗಬೇಡಿ. ಇಂತಿ ನಿಮ್ಮ, ದಿನಕರ್ ತೂಗುದೀಪ’ ಎಂದು ಅವರು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಮಲ್ಲಿಕಾರ್ಜುನ್ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದುನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗೃಹ ಸಚಿವ ಪರಮೇಶ್ವರ್‌ಗೆ ‘500 ರೂ. ಬೆಟ್ಟಿಂಗ್’ ಸಂಕಷ್ಟ: ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಕೋರ್ಟ್ ಆದೇಶ! – Kannada News | Court Orders FIR Against Karnataka Home Minister Dr. G. Parameshwara for Rs 500 Bet

ಬೆಂಗಳೂರು, ಏ.21: ಗೃಹ ಇಲಾಖೆ ಎಂದರೆ ಅದೊಂದು ಶಿಸ್ತಿನ ಇಲಾಖೆ. ಬೆಟ್ಟಿಂಗ್​​​ಗಳನ್ನು ತಡೆಯಬೇಕಿದ್ದ ಇಲಾಖೆಯ ಸಚಿವರೇ ಬೆಟ್ಟಿಂಗ್ ಮಾಡಿದ್ದಾರೆ ಎಂದರೆ ನಂಬಲು ಸಾಧ್ಯವಿಲ್ಲ. ಆದರೆ ನಂಬಲೇಬೇಕು. ಕಬಡ್ಡಿ ಪಂದ್ಯಾವಳಿಯೊಂದರಲ್ಲಿ ಕೇವಲ 500 ರೂಪಾಯಿ ಬೆಟ್ಟಿಂಗ್ ಕಟ್ಟಿದ್ದಾಗಿ ಹೇಳಿಕೆ ನೀಡಿದ್ದ ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ವಿರುದ್ಧ ಇದೀಗ ಎಫ್‌ಐಆರ್ (FIR) ದಾಖಲಿಸಿ ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ. ತಾನು ನೀಡಿದ ಹೇಳಿಕೆಯೇ ಈಗ ಅವರಿಗೆ ಸುತ್ತಿಕೊಂಡಿದೆ. ತುಮಕೂರಿನಲ್ಲಿ ನಡೆದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿಜಯಪುರ ತಂಡ ಗೆಲ್ಲುತ್ತದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರೊಂದಿಗೆ 500 ರೂಪಾಯಿ ಬಾಜಿ ಕಟ್ಟಿದ್ದರು. ಅಂತಿಮ ಪಂದ್ಯದಲ್ಲಿ ದಕ್ಷಿಣ ಕನ್ನಡ ತಂಡವು 36-26 ಅಂಕಗಳಿಂದ ವಿಜಯಪುರ ತಂಡವನ್ನು ಸೋಲಿಸಿತು. ಇದರಿಂದಾಗಿ ಬಾಜಿ ಹಣವನ್ನು ಕಳೆದುಕೊಂಡ ಸಚಿವ ಪರಮೇಶ್ವರ್, ವಿಜೇತ ತಂಡಕ್ಕೆ ಪ್ರಶಸ್ತಿ ವಿತರಿಸುವಾಗ ಈ ವಿಷಯವನ್ನು ಸ್ವತಃ ಬಹಿರಂಗಪಡಿಸಿದ್ದರು. ಇದೀಗ ಇದುವೇ ಅವರಿಗೆ ಸಮಸ್ಯೆಯಾಗಿದೆ.

ಏನಿದು ಪ್ರಕರಣ?

ಕೆಲವು ದಿನಗಳ ಹಿಂದೆ ನಡೆದ ಕಬಡ್ಡಿ ಟೂರ್ನಿಯಲ್ಲಿ ಗೃಹ ಸಚಿವರು ಕುತೂಹಲಕ್ಕಾಗಿ ಅಥವಾ ತಮಾಷೆಗಾಗಿ “ಯಾರು ಗೆಲ್ಲುತ್ತಾರೆ ಎಂದು 500 ರೂಪಾಯಿ ಬೆಟ್ಟಿಂಗ್ ಕಟ್ಟೋಣ” ಎಂದು ಹೇಳಿಕೆ ನೀಡಿದ್ದರು. ಆದರೆ, ಸಾರ್ವಜನಿಕವಾಗಿ ಬೆಟ್ಟಿಂಗ್ ಕಟ್ಟುವುದು ಅಥವಾ ಅದನ್ನು ಪ್ರೋತ್ಸಾಹಿಸುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಹೆಚ್.ಆರ್. ನಾಗಭೂಷಣ್ ಎಂಬುವವರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರಿನ 42ನೇ ಎಸಿಜೆಎಂ (ACJM) ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎನ್. ಶಿವಕುಮಾರ್ ಅವರು ಕೆಲವೊಂದು ಸೂಚನೆಯನ್ನು ನೀಡಿದ್ದಾರೆ.

ಇದನ್ನೂ ಓದಿ: ಬೆಟ್ಟಿಂಗ್ ಆಡಿ ಸೋತ ಗೃಹ ಸಚಿವ: ವ್ಯಾಪಕ ಟೀಕೆಗೆ ಗುರಿಯಾದ ಪರಮೇಶ್ವರ್!

ಗೃಹ ಸಚಿವರ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸಬೇಕು.ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ತುಮಕೂರಿನ ಕೊಡಿಗೇಹಳ್ಳಿ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಮಾತನಾಡುವುದು ಸರಿಯಲ್ಲ ಎಂಬ ಅಂಶದ ಮೇಲೆ ದೂರು ದಾಖಲಾಗಿದೆ. ಬೆಟ್ಟಿಂಗ್ ಹಣ ಚಿಕ್ಕದಾಗಿದ್ದರೂ, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕಾದ ಗೃಹ ಸಚಿವರೇ ಇಂತಹ ಹೇಳಿಕೆ ನೀಡಿರುವುದು ವಿರೋಧ ಪಕ್ಷಗಳಿಗೂ ಆಹಾರವಾಗಿದೆ. ಈಗ ಪೊಲೀಸರು ತಮ್ಮದೇ ಇಲಾಖೆಯ ಮುಖ್ಯಸ್ಥರ ವಿರುದ್ಧ ತನಿಖೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

8ನೇ ವೇತನ ಆಯೋಗ: ಕೇಂದ್ರ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗಳು – ಇಲ್ಲಿದೆ ಸಂಪೂರ್ಣ ವಿವರ – Kannada News | 8th pay commission central govt employees demand rs 69k minimum wage key revisions

ನವದೆಹಲಿ, ಏಪ್ರಿಲ್ 21: ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆಗಾಗಿ 8ನೇ ವೇತನ ಆಯೋಗಕ್ಕೆ ಬೇಡಿಕೆ ಇಡಲಾಗಿದೆ. ಈ ನಿಟ್ಟಿನಲ್ಲಿ ‘ರಾಷ್ಟ್ರೀಯ ಜಂಟಿ ಸಮಾಲೋಚನಾ ಸಮಿತಿ’ (NCJCM) ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, 7 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ. ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಇತ್ತೀಚಿನ ಜ್ಞಾಪನಾ ಪತ್ರದಲ್ಲಿ, ಕೇವಲ ವೇತನ ಏರಿಕೆ ಮಾತ್ರವಲ್ಲದೆ ವೇತನ ಶ್ರೇಣಿಯ ಸ್ವರೂಪವನ್ನೇ ಬದಲಿಸುವಂತಹ ಪ್ರಮುಖ ಬೇಡಿಕೆಗಳನ್ನು ಇಡಲಾಗಿದೆ. ಎನ್​ಸಿಜೆಸಿಎಂ ಸಂಘಟನೆಯು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರನ್ನು ಪ್ರತಿನಿಧಿಸುತ್ತದೆ.

1. ಕನಿಷ್ಠ ವೇತನ 69,000 ರೂ.ಗೆ ಏರಿಕೆ

7ನೇ ವೇತನ ಆಯೋಗದಲ್ಲಿ ಕನಿಷ್ಠ ವೇತನ 18,000 ರೂ. ಇತ್ತು. ಆದರೆ ಈಗಿನ ಹಣದುಬ್ಬರ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಆಧರಿಸಿ, 8ನೇ ವೇತನ ಆಯೋಗದಲ್ಲಿ ಕನಿಷ್ಠ ಮೂಲ ವೇತನವನ್ನು 69,000 ರೂಪಾಯಿಗಳಿಗೆ ನಿಗದಿಪಡಿಸಬೇಕು ಎಂದು NCJCM ಒತ್ತಾಯಿಸಿದೆ.

2. ವಾರ್ಷಿಕ ವೇತನ ಏರಿಕೆ (Increment) ಶೇ. 6ಕ್ಕೆ ಹೆಚ್ಚಳ

ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರಿಗೆ ವಾರ್ಷಿಕವಾಗಿ ಶೇ. 3ರಷ್ಟು ವೇತನ ಏರಿಕೆ (Increment) ನೀಡಲಾಗುತ್ತಿದೆ. ಆದರೆ ನೌಕರರ ಸಂಘಟನೆಯು ಇದನ್ನು ಶೇ. 6ಕ್ಕೆ ಹೆಚ್ಚಿಸಬೇಕು ಎಂದು ಬೇಡಿಕೆ ಇಟ್ಟಿದೆ. ಇದರಿಂದ ನೌಕರರ ವೇತನದ ಬೆಳವಣಿಗೆ ವೇಗವಾಗಿ ನಡೆಯಲಿದೆ.

ಇದನ್ನೂ ಓದಿ: ಬರಲಿದೆ ಆಲ್ಕೋಹಾಲ್ ಆಧಾರಿತ ಸುಂಕ; ಇಲ್ಲಿವೆ ಕರ್ನಾಟಕದ ಪ್ರಸ್ತಾಪಿತ ಹೊಸ ಮದ್ಯ ನೀತಿ ಮುಖ್ಯಾಂಶಗಳು

3. ಪೌಷ್ಟಿಕಾಂಶ ಆಧಾರಿತ ವೇತನ ಲೆಕ್ಕಾಚಾರ (Nutrition Linked Calculation)

ನೌಕರರ ಕನಿಷ್ಠ ವೇತನವನ್ನು ಕೇವಲ ಅಂದಾಜಿನ ಮೇಲೆ ನಿರ್ಧರಿಸಬಾರದು. ‘ಅಯಕ್ರೋಯ್ಡ್ ಫಾರ್ಮುಲಾ’ (Aykroyd Formula) ಅನ್ವಯ, ಒಬ್ಬ ನೌಕರನ ಕುಟುಂಬಕ್ಕೆ ಅಗತ್ಯವಿರುವ ಪೌಷ್ಟಿಕ ಆಹಾರ, ಬಟ್ಟೆ, ಮನೆ ಬಾಡಿಗೆ ಮತ್ತು ಇತರೆ ಅಗತ್ಯಗಳನ್ನು ಇಂದಿನ ಮಾರುಕಟ್ಟೆ ಬೆಲೆಗೆ ಅನುಗುಣವಾಗಿ ಲೆಕ್ಕ ಹಾಕಿ, ಕನಿಷ್ಠ ವೇತನವನ್ನು 69,000 ರೂ. ಗೆ ನಿಗದಿಪಡಿಸಬೇಕು ಎಂದು ಒತ್ತಾಯಿಸಲಾಗಿದೆ.

4. ಫಿಟ್‌ಮೆಂಟ್ ಫ್ಯಾಕ್ಟರ್ 3.833

ವೇತನವನ್ನು ಮಲ್ಟಿಪ್ಲೈ ಮಾಡಲು ಬಳಸುವ ಫಿಟ್‌ಮೆಂಟ್ ಫ್ಯಾಕ್ಟರ್ ಅನ್ನು 3.833 ಕ್ಕೆ ನಿಗದಿಪಡಿಸಬೇಕು. ಇದು ಜಾರಿಯಾದಲ್ಲಿ ಮೂಲ ವೇತನದಲ್ಲಿ ಭಾರಿ ಜಿಗಿತ ಕಂಡುಬರಲಿದೆ.

5. ಪೇ ಲೆವೆಲ್‌ಗಳ ವಿಲೀನ (Merging of Pay Levels)

7ನೇ ವೇತನ ಆಯೋಗದಲ್ಲಿರುವ ಕೆಲವು ಕೆಳಹಂತದ ಪೇ ಲೆವೆಲ್‌ಗಳನ್ನು (Pay Levels 1, 2, and 3) ವಿಲೀನಗೊಳಿಸಲು ಪ್ರಸ್ತಾಪಿಸಲಾಗಿದೆ. 4 ಮತ್ತು 5ನೇ ಲೆವೆಲ್ ಅನ್ನು ಲೆವೆಲ್ 5ಕ್ಕೆ ವಿಲೀನಗೊಳಿಸಬೇಕು. 9 ಮತ್ತು 10 ಅನ್ನು 10ಕ್ಕೆ ಸೇರಿಸಬೇಕು. ಲೆವೆಲ್ 5ರ ಉದ್ಯೋಗಿಗಳ ಪೇ ಲೆವೆಲ್ ಅನ್ನು 6ಕ್ಕೆ ಅಪ್​​ಗ್ರೇಡ್ ಮಾಡಬೇಕು ಎನ್ನುವ ಒತ್ತಾಯ ಇದೆ.

6. 10 ವರ್ಷಗಳ ಕಾಯುವಿಕೆ ಬೇಡ (Periodical Revision)

ಮುಂದಿನ ವೇತನ ಪರಿಷ್ಕರಣೆಗಾಗಿ ಮತ್ತೆ 10 ವರ್ಷ ಕಾಯುವ ಅಗತ್ಯವಿರಬಾರದು. ತುಟ್ಟಿಭತ್ಯೆ (DA) ಶೇ. 50 ದಾಟಿದಾಗ ಅಥವಾ ಕಾಲಕಾಲಕ್ಕೆ ಮಾರುಕಟ್ಟೆ ಏರಿಳಿತಕ್ಕೆ ಅನುಗುಣವಾಗಿ ವೇತನವನ್ನು ಸ್ವಯಂಚಾಲಿತವಾಗಿ ಪರಿಷ್ಕರಿಸುವ ವ್ಯವಸ್ಥೆ ಬರಬೇಕು.

7. ನಿವೃತ್ತರಿಗೂ ಸಮಾನ ವೇತನ ಪರಿಷ್ಕರಣೆ (Pension Parity)

ಸೇವೆಯಲ್ಲಿರುವ ನೌಕರರ ವೇತನ ಎಷ್ಟು ಹೆಚ್ಚಾಗುತ್ತದೆಯೋ, ಅದೇ ಅನುಪಾತದಲ್ಲಿ ನಿವೃತ್ತ ನೌಕರರ ಪಿಂಚಣಿಯೂ ಸಹ ಪರಿಷ್ಕರಣೆಯಾಗಬೇಕು ಎಂಬ ‘ಒಂದು ಶ್ರೇಣಿ ಒಂದು ಪಿಂಚಣಿ’ ಮಾದರಿಯ ಬೇಡಿಕೆಯನ್ನು ಬಲವಾಗಿ ಮಂಡಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು ಟೆಕ್ಕಿಯ ಕಾರ್ಪೊರೇಟ್ ಕ್ರೆಡಿಟ್ ಕಾರ್ಡ್ ರಾದ್ದಾಂತ; ಬ್ಲ್ಯಾಕ್​ಮೈಲ್, ಆತ್ಮಹತ್ಯೆ ಬೆದರಿಕೆ, ಅಶ್ಲೀಲ ಚಿತ್ರಗಳ ಕರ್ಮಕಾಂಡ

ಈ ಅಂಶಗಳು ಜಾರಿಯಾದಲ್ಲಿ ಕೇಂದ್ರ ಸರ್ಕಾರಿ ನೌಕರರ ಆರ್ಥಿಕ ಸ್ಥಿತಿಯಲ್ಲಿ ಅಭೂತಪೂರ್ವ ಬದಲಾವಣೆ ಉಂಟಾಗಲಿದೆ. ಸದ್ಯಕ್ಕೆ ಈ ಎಲ್ಲಾ ಅಂಶಗಳು ಸಂಘಟನೆಯ ಬೇಡಿಕೆಗಳಾಗಿದ್ದು, ಸರ್ಕಾರದ ಅಧಿಕೃತ ಪ್ರತಿಕ್ರಿಯೆಗಾಗಿ ನೌಕರರು ಕಾಯುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್’ ಗೆದ್ದರೂ ರಣವೀರ್ ಸಿಂಗ್ ‘ಶಕ್ತಿಮಾನ್’ ಆಗಲು ಸಾಧ್ಯವಿಲ್ಲ: ಕಾರಣ ಏನು? – Kannada News | Mukesh Khanna on why Ranveer Singh is not right for Shaktimaan Movie

ಭಾರತದ ಮೊದಲ ಸೂಪರ್ ಹೀರೋ ‘ಶಕ್ತಿಮಾನ್’ (Shaktimaan) ಕಥೆಯನ್ನು ಬೆಳ್ಳಿತೆರೆಗೆ ತರುವ ಪ್ಲ್ಯಾನ್ ಇದೆ. ಆದರೆ, ಈ ಪಾತ್ರಕ್ಕೆ ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಅವರನ್ನು ಆಯ್ಕೆ ಮಾಡುವ ವಿಚಾರದಲ್ಲಿ ಕಿರುತೆರೆಯ ಶಕ್ತಿಮಾನ್ ನಟ ಮುಖೇಶ್ ಖನ್ನಾ Mukesh Khanna ಅವರು ಸಹಮತಿ ಸೂಚಿಸುತ್ತಿಲ್ಲ. ರಣವೀರ್ ಎಷ್ಟೇ ದೊಡ್ಡ ನಟನಾಗಿದ್ದರೂ ಅವರು ಶಕ್ತಿಮಾನ್ ಪಾತ್ರಕ್ಕೆ ಸೂಕ್ತವಲ್ಲ ಎಂದು ಮುಖೇಶ್ ಖನ್ನಾ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ರಣವೀರ್ ಸಿಂಗ್ (Ranveer Singh) ಅವರ ನಟನಾ ಸಾಮರ್ಥ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರೂ, ಪಾತ್ರದ ಘನತೆಯ ವಿಚಾರದಲ್ಲಿ ಮಾತ್ರ ರಾಜಿ ಮಾಡಿಕೊಳ್ಳಲು ಸಿದ್ಧರಿಲ್ಲ ಎಂದು ಹೇಳಿದ್ದಾರೆ.

ರಣವೀರ್ ಸಿಂಗ್ ಅವರ ಇತ್ತೀಚಿನ ಯಶಸ್ವಿ ಚಿತ್ರಗಳಾದ ‘ಧುರಂಧರ್’ ಮತ್ತು ‘ಧುರಂಧರ್ 2’ ಬಗ್ಗೆ ಮಾತನಾಡಿದ ಖನ್ನಾ, ‘ಅವರು ಅದ್ಭುತ ಶಕ್ತಿಯುಳ್ಳ ನಟ. ಅವರು ಧುರಂಧರ್, ಗಲ್ಲಿ ಬಾಯ್ ಅಥವಾ ಖಿಲ್ಜಿಯಂತಹ ಪಾತ್ರಗಳನ್ನು ಅಚ್ಚುಕಟ್ಟಾಗಿ ಮಾಡಬಲ್ಲರು. ಆದರೆ ಶಕ್ತಿಮಾನ್ ಪಾತ್ರಕ್ಕೆ ಕೇವಲ ನಟನೆಯಷ್ಟೇ ಸಾಲದು, ಆ ಪಾತ್ರಕ್ಕೆ ಒಪ್ಪುವ ಮುಖವೂ ಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಅಕ್ಷಯ್ ಕುಮಾರ್ ಅವರು ಪೃಥ್ವಿರಾಜ್ ಚೌಹಾಣ್ ಪಾತ್ರ ಮಾಡಿದರು. ಎಷ್ಟೇ ಕಾಸ್ಟ್ಯೂಮ್ ಮತ್ತು ವಿಗ್ ಹಾಕಿದರೂ ಅವರು ಆ ಪಾತ್ರದಂತೆ ಕಾಣಲಿಲ್ಲ. ಐತಿಹಾಸಿಕ ಅಥವಾ ಪೌರಾಣಿಕ ಪಾತ್ರಗಳಿಗೆ ಒಂದು ರೀತಿಯ ಸರಳತೆ ಮತ್ತು ಗಾಂಭೀರ್ಯ ಬೇಕು. ಅದು ರಣವೀರ್ ಅವರ ಇಮೇಜ್‌ಗೆ ಹೊಂದಿಕೆಯಾಗುವುದಿಲ್ಲ’ ಎಂದು ಮುಖೇಶ್ ಖನ್ನಾ ಅವರು ಹೇಳಿದ್ದಾರೆ.

ಸೋನಿ ಪಿಕ್ಚರ್ಸ್ ಈ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡಲು ಉತ್ಸುಕವಾಗಿದ್ದು, ರಣವೀರ್ ಅವರನ್ನೇ ನಾಯಕನನ್ನಾಗಿ ಮಾಡಲು ಬಯಸಿದೆ. ‘ಸೋನಿ ಸಂಸ್ಥೆ ನನಗೆ ಕೋಟಿಗಟ್ಟಲೆ ಹಣ ನೀಡಲು ಸಿದ್ಧವಿದೆ. ಈ ಪ್ರಾಜೆಕ್ಟ್ ತಡೆಹಿಡಿಯುತ್ತಿರುವುದರಿಂದ ನನಗೂ ಆರ್ಥಿಕವಾಗಿ ನಷ್ಟವಾಗುತ್ತಿದೆ. ಆದರೆ ನನಗೆ ಹಣಕ್ಕಿಂತ ಪಾತ್ರದ ಗುಣಮಟ್ಟ ಮುಖ್ಯ. ನನಗೆ ಸ್ಟಾರ್ ನಟ ಬೇಡ, ದೇಶಾದ್ಯಂತ ಆಡಿಷನ್ ನಡೆಸಿ, ಶಕ್ತಿಮಾನ್‌ನಂತಹ ಮುಗ್ಧತೆ ಮತ್ತು ಶಕ್ತಿ ಇರುವ ಹೊಸ ಮುಖವನ್ನು ಹುಡುಕಲು ನಾನು ಸಿದ್ಧನಿದ್ದೇನೆ’ ಎಂದು ಮುಖೇಶ್ ಖನ್ನಾ ಅವರು ಹೇಳಿದ್ದಾರೆ.

ಇದನ್ನೂ ಓದಿ: ಅಂಬಾನಿ ಮಗನ ಹುಟ್ಟುಹಬ್ಬದ ಪಾರ್ಟಿ: ಕುಣಿದು ಕುಪ್ಪಳಿಸಿದ ನಟ ರಣವೀರ್ ಸಿಂಗ್

ಒಮ್ಮೆ ಸೋನಿ ಸಂಸ್ಥೆಯು ರಣವೀರ್ ಮತ್ತು ಮುಖೇಶ್ ಖನ್ನಾ ನಡುವೆ ಮೀಟಿಂಗ್ ಏರ್ಪಡಿಸಿತ್ತು. ರಣವೀರ್ ಅವರು ಮುಖೇಶ್ ಖನ್ನಾ ಅವರನ್ನು ಒಪ್ಪಿಸಲು ಪ್ರಯತ್ನಿಸಿದ್ದರು. ಆದರೆ ಖನ್ನಾ ಮಾತ್ರ ಒಪ್ಪಿಕೊಳ್ಳಲೇ ಇಲ್ಲ. ಬದಲಿಗೆ, ‘ನಿನಗೆ ಶಕ್ತಿಮಾನ್ ಆಗಲು ಇಷ್ಟವಿದ್ದರೆ, ಅದರ ಬದಲು ವಿಲನ್ ತಾಮ್ರಾಜ್ ಕಿಲ್ವಿಶ್ ಪಾತ್ರ ಮಾಡು’ ಎಂದು ರಣವೀರ್‌ಗೆ ಸಲಹೆ ನೀಡಿದ್ದರಂತೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Chanakya Niti: ಈ ಅಭ್ಯಾಸಗಳು ನಿಮ್ಮಲ್ಲಿದ್ದರೆ ಜೀವನದಲ್ಲಿ ಸೋಲು ಕಟ್ಟಿಟ್ಟ ಬುತ್ತಿ ಎಂದಿದ್ದಾರೆ ಚಾಣಕ್ಯ – Kannada News | Chanakya Niti: If you have these habits, you will never be successful in life

ಜೀವನದಲ್ಲಿ ಮುಂದುವರೆಯಬೇಕು, ಯಶಸ್ಸನ್ನು (success) ಗಳಿಸಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಈ ಕೆಲವೊಂದು ಅಭ್ಯಾಸಗಳನ್ನು ಹೊಂದಿರುವವರು ಖಂಡಿತವಾಗಿಯೂ ಜೀವನದಲ್ಲಿ ಜಯಿಸುವುದಿಲ್ಲ, ಅವರಿಗೆ ಸೋಲು ಖಚಿತ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಸಿದ್ದಾರೆ. ನಿಮ್ಮಲೂ ಕೂಡ ಈ ಅಭ್ಯಾಸಗಳಿರಬಹುದು, ಆ ತಪ್ಪು ಅಭ್ಯಾಸಗಳನ್ನು ಸರಿಪಡಿಸಿದರೆ ಖಂಡಿತವಾಗಿಯೂ ನೀವು ಸಹ ಜೀವನದಲ್ಲಿ ಮುಂದುವರೆಯಬಹುದು. ಹಾಗಿದ್ರೆ ಯಶಸ್ಸಿಗೆ ಅಡ್ಡಿಪಡಿಸುವ, ಸೋಲುಣಿಸುವ ಆ ಅಭ್ಯಾಸಗಳು ಯಾವುವು  ಎಂಬುದನ್ನು ನೋಡೋಣ ಬನ್ನಿ.

ಈ ಅಭ್ಯಾಸಗಳಿದ್ದರೆ ಜೀವನದಲ್ಲಿ ಯಶಸ್ಸು ಸಿಗಲಾರದು:

ಸಮಯವನ್ನು ವ್ಯರ್ಥ ಮಾಡುವುದು: ಸಮಯಕ್ಕಿಂತ ಅಮೂಲ್ಯವಾದದ್ದು ಯಾವುದೂ ಇಲ್ಲ ಎಂದು ಚಾಣಕ್ಯರು ಹೇಳುತ್ತಾರೆ. ಸಮಯಕ್ಕೆ ಸರಿಯಾಗಿ ಕೆಲಸವನ್ನು ಮಾಡದೆ ಅದನ್ನು ನಾಳೆಗೆ ಮುಂದೂಡುವ ಅಭ್ಯಾಸವನ್ನು ಬೆಳೆಸಿಕೊಂಡಿರುವ ವ್ಯಕ್ತಿಯು ಕ್ರಮೇಣ ತನ್ನ ಗುರಿಗಳನ್ನು ಮರೆತುಬಿಡುತ್ತಾನೆ. ಇಂದಿನ ಕೆಲಸಗಳನ್ನು ನಾಳೆಗೆ ಮುಂದೂಡುವುದರಿಂದ ಉತ್ಪಾದಕತೆ ಕಡಿಮೆಯಾಗುವುದಲ್ಲದೆ ಯಶಸ್ಸಿನ ಹಾದಿಯೂ ಜಟಿಲವಾಗುತ್ತದೆ. ಆದ್ದರಿಂದ, ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದು ಮತ್ತು ಸಮಯದ ಮೌಲ್ಯವನ್ನು ಕಲಿಯುವುದು ಬಹಳ ಮುಖ್ಯ.

ಸಂಬಂಧಗಳನ್ನು ನಿರ್ಲಕ್ಷಿಸುವುದು: ಕುಟುಂಬ ಮತ್ತು ಸ್ನೇಹಿತರು ಜೀವನದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಹಾಗಾಗಿ ಸಂಬಂದವು ಜೀವನದಲ್ಲಿ ತುಂಬಾನೇ ಮುಖ್ಯ.  ಚಾಣಕ್ಯ ನೀತಿಯ ಪ್ರಕಾರ, ಯಾರೂ ಒಬ್ಬಂಟಿಯಾಗಿ ಸಂತೋಷವಾಗಿರಲು ಸಾಧ್ಯವಿಲ್ಲ. ನಿಮ್ಮ ನಿಕಟ ಸಂಬಂಧಗಳಿಗೆ ನೀವು ಸಮಯ ನೀಡದಿದ್ದರೆ, ಕಷ್ಟದ ಸಮಯದಲ್ಲಿ ನೀವು ಒಂಟಿಯಾಗಿರುತ್ತೀರಿ. ಆದ್ದರಿಂದ, ನಿಮ್ಮ ಪ್ರೀತಿಪಾತ್ರರ ಜೊತೆ ಸಮಯ ಕಳೆಯುವುದು ಮತ್ತು ಬಲವಾದ ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಮುಖ್ಯ.

ಇದನ್ನೂ ಓದಿ: ಮಹಿಳೆಯರು ರೀತಿಯ ಜನರಿಂದ ಸಾಧ್ಯವಾದಷ್ಟು ದೂರವಿರಬೇಕು ಎನ್ನುತ್ತಾರೆ ಚಾಣಕ್ಯ

ಕಲಿಕೆಯನ್ನು ನಿಲ್ಲಿಸುವುದು: ಒಬ್ಬ ವ್ಯಕ್ತಿಯು ಕಲಿಯುವುದನ್ನು ನಿಲ್ಲಿಸಿದ ದಿನ ಅವನ ಪ್ರಗತಿ ನಿಲ್ಲುತ್ತದೆ ಎಂದು ಚಾಣಕ್ಯ ಹೇಳುತ್ತಾರೆ. ಯಾವುದೇ ಕಠಿಣ ಪರಿಸ್ಥಿತಿಯನ್ನು ನಿವಾರಿಸಲು ನಿಮಗೆ ಸಹಾಯ ಮಾಡುವ ಏಕೈಕ ಶಕ್ತಿ ಜ್ಞಾನ. ಜೀವನದಲ್ಲಿ ಯಾವಾಗಲೂ ಹೊಸ ವಿಷಯಗಳನ್ನು ಕಲಿಯುವ ಬಯಕೆಯನ್ನು ಕಾಪಾಡಿಕೊಳ್ಳಿ ಮತ್ತು ಇತರರ ಅನುಭವಗಳಿಂದ ಕಲಿಯಲು ಪ್ರಯತ್ನಿಸಿ. ಆಗ ಮಾತ್ರ ಯಶಸ್ಸಿನ ಹಾದಿಯನ್ನು ತಲುಪಲು ಸಾಧ್ಯ, ಇಲ್ಲದಿದ್ದರೆ ಸೋಲು ಕಟ್ಟಿಟ್ಟ ಬುತ್ತಿ.

ಆರೋಗ್ಯವನ್ನು ಕಡೆಗಣಿಸುವುದು:  ಯಶಸ್ಸು ಮತ್ತು ಶ್ರೀಮಂತಿಕೆ ಗಳಿಸುವ ಧಾವಂತದಲ್ಲಿ ಅನೇಕ ಜನರು ಹೆಚ್ಚಾಗಿ ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಾರೆ. ಚಾಣಕ್ಯರ ಪ್ರಕಾರ, ಇದು ಜೀವನಕ್ಕೆ ಅಡ್ಡಿಯಾಗುವ ಗಂಭೀರ ತಪ್ಪು. ನಿಮ್ಮ ಆರೋಗ್ಯ ಕೆಟ್ಟದಾಗಿದ್ದರೆ, ನಿಮ್ಮ ಸಾಧನೆಗಳನ್ನು ಆನಂದಿಸಲು ಅಥವಾ ಜೀವನದಲ್ಲಿ ಮುಂದುವರಿಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಕೆಲಸದ ಜೊತೆಗೆ, ನೀವು ನಿಮ್ಮ ಆರೋಗ್ಯದ ಬಗ್ಗೆಯೂ ಸಂಪೂರ್ಣ ಕಾಳಜಿ ವಹಿಸಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮನೆ, ಸ್ಪಾಗಳಲ್ಲಿ ವೇಶ್ಯಾವಾಟಿಕೆ: ನಾಲ್ವರು ಆರೋಪಿಗಳ ಬಂಧನ, 6 ಮಹಿಳೆಯರ ರಕ್ಷಣೆ – Kannada News | Bengaluru Prostitution Ring Busted: 4 Arrested, 6 Women Rescued from Spas and Homes

ಬೆಂಗಳೂರು, ಏಪ್ರಿಲ್​​ 21: ನಗರದ ವಿವಿಧೆಡೆ ಸ್ಪಾ ಮತ್ತು ಮನೆಗಳಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಖತರ್ನಾಕ್​​ ಜಾಲವನ್ನು ಪೊಲೀಸರು ಭೇದಿಸಿದ್ದು, ಮೂವರು ಮಹಿಳೆಯರು ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಮಾರತಹಳ್ಳಿ, ಸುಂಕದಕಟ್ಟೆ ಸಮೀಪದ ಸ್ಪಾಗಳು ಹಾಗೂ ಮಂಜುನಾಥನಗರದ ಮನೆಯಲ್ಲಿ ಮಹಿಳೆಯರನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡಲಾಗುತ್ತಿತ್ತು. ಈ ಬಗ್ಗೆ ಸಿಕ್ಕ ಮಾಹಿತಿಯ ಆಧಾರದಲ್ಲಿ ಲೆ ಸೆಂಟ್ರಲ್ ಕ್ರೈಮ್ ಬ್ರಾಂಚ್ (CCB) ಮಹಿಳಾ ರಕ್ಷಣಾ ಘಟಕದ ಪೊಲೀಸರು ದಾಳಿ ನಡೆಸಿದ್ದರು.

ಬಲವಂತವಾಗಿ ಅಥವಾ ಆಮಿಷಕ್ಕೆ ಒಳಪಡಿಸಿ ಆರೋಪಿಗಳು ಮಹಿಳೆಯರನ್ನು ವೇಶ್ಯಾಪಾಟಿಕೆಗೆ ತಳ್ಳಿದ್ದು, 6 ಮಂದಿಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಫೋನ್ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ಸ್ಪಾಗಳು ಮತ್ತು ಮನೆಯಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಬಗ್ಗೆ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಈ ಸಂಬಂಧ HAL, ಬ್ಯಾಡರಹಳ್ಳಿ ಮತ್ತು ಬಾಗಲಗುಂಟೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಕುರಿತ ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ‘ಫಾರಿನ್ ಸ್ಟೈಲ್’ ಪ್ರಪೋಸ್ ಮಾಡ್ತೀನಿ ಅಂತ ಕೈ-ಕಾಲು ಕಟ್ಟಿ ಪ್ರಿಯಕರನಿಗೆ ಬೆಂಕಿ ಹಚ್ಚಿದ ಪ್ರಿಯತಮೆ! ಕಣ್ಣೆದುರೇ ಸುಟ್ಟು ಕರಕಲಾದ ಯುವಕ

ಸುಲಿಗೆ ಮಾಡಿದ್ದ ಆರೋಪಿಗಳ ಬಂಧನ

ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಯನ್ನ ಸುಲಿಗೆ ಮಾಡಿದ್ದ ಘಟನೆ ಸಂಬಂಧ ಬೆಂಗಳೂರಿನ ಹೆಣ್ಣೂರು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಸ್ಯಾಮ್ಸನ್ ಸಾಲ್ಮನ್ (19) ಹಾಗೂ ಜಯಶೀಲನ್ ಡೇವಿಡ್ ಬಂಧಿತ ಆರೋಪಿಗಳು. ವಾಕಿಂಗ್​​ ಮಾಡುತ್ತಿದ್ದ ಶಾಸ್ತ್ರಿ ಎಂಬವರಿಂದ ಆರೋಪಿಗಳು ಚಿನ್ನದ ಸರ ಸುಲಿಗೆ ಮಾಡಿದ್ದರು. ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಟೀಚರ್ಸ್ ಲೇಔಟ್​​ನಲ್ಲಿ ಘಟನೆ ನಡೆದಿತ್ತು. ಬಂಧಿತರು ಡಿಜೆ ಹಳ್ಳಿ ನಿವಾಸಿಗಳಾಗಿದ್ದು, ಈ ಹಿಂದೆಯೂ ಇವರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂಬುದು ಗೊತ್ತಾಗಿದೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದ್ದು, 38 ಗ್ರಾಂನ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ವಶಕ್ಕೆ ಪಡೆಯಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಬಿಸಿಲಿನಿಂದ ಪಾರಾಗಲು ಹೊಸ ಮಾರ್ಗ ಕಂಡುಕೊಂಡ ಬೆಂಗಳೂರಿನ ಯುವತಿ – Kannada News | Bengaluru: A young woman from Bengaluru has a new plan to escape the scorching sun.

ಬೆಂಗಳೂರು, ಏಪ್ರಿಲ್ 21: ಬಿಸಿಲೋ ಬಿಸಿಲು, ಹೊರಗಡೆ ಕಾಲಿಡಂಗಿಲ್ಲ. ಹೌದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ (Bengaluru) ಬೇಸಿಗೆಯ ತಾಪ ದಿನದಿಂದ ದಿನಕ್ಕೆ ಏರುತ್ತಿದೆ. ಮಾಯಾನಗರಿಯ ಜನರು ಬಿಸಿಲಿಗೆ ಹೈರಾಣಾಗಿದ್ದಾರೆ. ಆದರೆ ಇದೀಗ ಬೆಂಗಳೂರಿನ ಯುವತಿ ರಣ ಬಿಸಿಲಿನಿಂದ ಪಾರಾಗಲು ಹೊಸ ಮಾರ್ಗ ಕಂಡುಕೊಂಡಿದ್ದಾಳೆ. ಮನೆಯಲ್ಲಿ ಫ್ಯಾನ್ ಇದ್ರೂ ಬಿಸಿಲಿನ ಝಳ ತಾಳಲಾರದೇ ತಮ್ಮ ಮನೆಯ ಸಮೀಪವೇ ಇರುವ ಹೋಟೆಲ್‌ವೊಂದರಲ್ಲಿ ರೂಮ್ ಬುಕ್ ಮಾಡಿದ್ದಾಳೆ. ಈ ಕುರಿತಾದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಬೆಂಗಳೂರಿನ ನಿವಾಸಿ ಪ್ರಿಯಾ ಪಾಲ್ (Priya Paal) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬಿಸಿಲಿನಿಂದ ಪಾರಾಗಲು ಕಂಡುಕೊಂಡ ಹೊಸ ಉಪಾಯದ ಬಗ್ಗೆ ಹೇಳಿದ್ದಾಳೆ. ತಮ್ಮ ಮನೆಯ ಸಮೀಪದಲ್ಲೇ ಇರುವ ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿದ್ದು, ಎಸಿ ರೂಮಿನಲ್ಲಿ ಕುಳಿತುಕೊಂಡಿರುವ ವಿಡಿಯೋ ಇದಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಎಸಿ ಇಲ್ಲದ ಇನ್ನು ಸಾಧ್ಯವಿಲ್ಲ ಎಂದು ಪ್ರಿಯಾ ಹೇಳಿದ್ದಾರೆ. ಹೋಟೆಲ್ ಬುಕ್ ಮಾಡಿದ್ದು ತನ್ನ ಮೊದಲ ಆಯ್ಕೆಯಾಗಿರಲಿಲ್ಲ. ಮಳೆ ಬಂದು ವಾತಾವರಣ ತಂಪಾಗಬಹುದು ಎನ್ನುವ ಭರವಸೆ ಇತ್ತು. ಆದರೆ ಮಳೆ ಬರಲಿಲ್ಲ. ಎಸಿ ಖರೀದಿಸಲು ಹೋದಾಗ ಅಂಗಡಿಗಳಲ್ಲಿ ಸ್ಟಾಕ್ ಖಾಲಿಯಾಗಿದ್ದು, ಡೆಲಿವರಿ ಹೆಚ್ಚಿನ ದಿನಗಳು ತೆಗೆದುಕೊಳ್ಳುತ್ತದೆ ಎನ್ನುವಂತಾಯಿತ್ತಂತೆ. ಹೋಟೆಲ್ ರೂಮ್ ಬುಕ್ ಮಾಡುವ ಆಯ್ಕೆಯತ್ತ ಮುಂದಾದೆ ಎಂದು ಹೇಳಿರುವುದನ್ನು ಕಾಣಬಹುದು. ಯುವತಿಯೂ ಹೋಟೆಲ್ ರೂಮ್ ಬುಕ್ ಮಾಡಿ ಭಾನುವಾರ ಎಸಿ ರೂಮಿನಲ್ಲಿ ನೆಟ್‌ಫ್ಲಿಕ್ಸ್ ನೋಡುತ್ತಾ ಕಳೆದಿರುವುದನ್ನು ನೋಡಬಹುದು.

ಇದನ್ನೂ ಓದಿ: ಮನೆಯೊಳಗೆ ಇಟ್ಟರೂ ಬಿಸಿಲಿನ ಶಾಖಕ್ಕೆ ಕರಗಿದ ಕ್ರಯಾನ್ಸ್; ಬೆಂಗಳೂರಿನ ಮಹಿಳೆ ಹೇಳಿದ್ದೇನು?

ಈ ವಿಡಿಯೋ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಒಳ್ಳೆಯ ಐಡಿಯಾ ಎಂದರೆ, ಮತ್ತೊಬ್ಬರು, ನಿಮ್ಮ ಆಲೋಚನೆಗೆ ನನ್ನದೊಂದು ಸಲಾಂ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಇದು ಮಾಡ್ರನ್ ಪ್ರಾಬ್ಲಮ್, ಮಾಡ್ರನ್ ಜನರೇಷನ್ ಕಂಡುಕೊಂಡ ಮಾರ್ಗ ಇದು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: ಸತೀಶ್ ಜಾರಕಿಹೊಳಿ ಶಾಕಿಂಗ್ ಹೇಳಿಕೆ – Kannada News | Compromise politics inevitable to CM Siddaramaiah Says Minister Satish Jarkiholi

ಮೈಸೂರು, (ಏಪ್ರಿಲ್ 21): ಕಾಂಗ್ರೆಸ್‌ನಲ್ಲಿ (Congress) ನಡೆಯುತ್ತಿರುವ ಬೆಳವಣಿಗೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ (Siddaramaiah) ಬಗ್ಗೆ ಆಪ್ತರಾದ ಸತೀಶ್ ಜಾರಕಿಹೊಳಿ (Satish jarkiholi) ಹಾಗೂ ಕೆಎನ್ ರಾಜಣ್ಣ ನೀಡುತ್ತಿರುವ ಹೇಳಿಕೆಗಳು ಸಂಚಲನ ಮೂಡಿಸಿವೆ. ಸಿದ್ದರಾಮಯ್ಯ ಅವರಿಂದ ಇಂಥಾ ಅಸಹಾಯಕತೆಯನ್ನ ನಿರೀಕ್ಷೆ ಮಾಡಿರಲಿಲ್ಲ. ಸಿಎಂ ತಟಸ್ಥ ಧೋರಣೆ ಯಾಕೆ ತಾಳಿದ್ದಾರೋ ಗೊತ್ತಿಲ್ಲ, ಧ್ವನಿ ಕುಗ್ಗಿದಾಗ ಅಸಹಾಯಕತೆ ಆಗುತ್ತದೆ ಎಂದು ಮೊನ್ನೆ ಅಷ್ಟೇ ರಾಜಣ್ಣ ಶಾಕಿಂಗ್ ಹೇಳಿಕೆ ನೀಡಿದ್ದರು. ಇದಾದ ಬೆನ್ನಲ್ಲೇ ಇಂದು (ಏಪ್ರಿಲ್ 21) ಸಿದ್ದರಾಮಯ್ಯ ಅವರ ಮೇಲೆ ಮಾಟ ಮಂತ್ರ ಆಗಿರಬಹುದು ಎಂದಿದ್ದಾರೆ. ಹೀಗೆ ಸಿದ್ದರಾಮಯ್ಯ ಮೌನದ ಬಗ್ಗೆ ನಾನಾ ಹೇಳಿಕೆ ನೀಡುತ್ತಿರುವ ಬೆನ್ನಲ್ಲೇ ಇತ್ತ ಸತೀಶ್ ಜಾರಿಹೊಳಿ ಸಹ ಸಿಎಂಗೆ ಈಗ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯವಾಗಿದೆ ಎಂದಿದ್ದಾರೆ.

ಮೈಸೂರಿನಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯ ಈಗ ಕಾಂಪ್ರಾಮೈಸ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ. ಈಗ ಅವರಿಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯವಾಗಿದೆ. ಎಲ್ಲಾ ಸಮಯದಲ್ಲೂ ಒಂದೇ ರೀತಿ ರಾಜಕಾರಣ ಮಾಡಲಾಗಲ್ಲ. ಕಾಂಪ್ರಾಮೈಸ್ ಅನಿವಾರ್ಯ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ಸದ್ದು ಮಾಡಿದ ಮಾಟ, ಮಂತ್ರ: ಕೆಎನ್ ರಾಜಣ್ಣ ಸ್ಫೋಟಕ ಹೇಳಿಕೆ

Source link

ಇನ್ನೆಷ್ಟು ದಿನ ಜನರ ದಾರಿ ತಪ್ಪಿಸುತ್ತೀರಿ? ಖರ್ಗೆ ವಿರುದ್ಧ ಪ್ರಲ್ಹಾದ್ ಜೋಶಿ ವಾಗ್ದಾಳಿ – Kannada News | Mallikarjun Kharge must apologise to the Prime Minister and people of India Pralhad Joshi urges

ನವದೆಹಲಿ, ಏಪ್ರಿಲ್ 21: ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಶುರುವಾಗಿರುವುದರಿಂದ ಚೆನ್ನೈನಲ್ಲಿ ಇಂದು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಮಾತನಾಡುವ ಭರದಲ್ಲಿ ಅವರು ಪ್ರಧಾನಿ ಮೋದಿಯವರನ್ನು ಭಯೋತ್ಪಾದಕ ಎಂದು ಕರೆದಿದ್ದರು. ಇದಾದ ಬಳಿಕ ತಮ್ಮ ಹೇಳಿಕೆಗೆ ಅವರು ಸ್ಪಷ್ಟನೆ ನೀಡಿದ್ದರೂ ಅದು ವಿವಾದ ಸೃಷ್ಟಿಸಿದೆ. ಮಲ್ಲಿಕಾರ್ಜುನ ಖರ್ಗೆಯವರ ವಿರುದ್ಧ ಕಿಡಿ ಕಾರಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಖರ್ಗೆಯವರು ಪ್ರಧಾನಿ ಮೋದಿಯವರ ಮತ್ತು ದೇಶದ ಕ್ಷಮೆ ಕೋರಬೇಕೆಂದು ಒತ್ತಾಯಿಸಿದ್ದಾರೆ.

“ಮಲ್ಲಿಕಾರ್ಜುನ ಖರ್ಗೆಯವರ ಮಾತಿನಲ್ಲಿ ಹತಾಶೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ಪಕ್ಷ ಈಗಾಗಲೇ ಸೋಲನ್ನು ಒಪ್ಪಿಕೊಂಡಂತೆ ಕಾಣುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಇಂತಹ ಅಸಂಬದ್ಧ ಹೇಳಿಕೆಗಳನ್ನು ನೀಡುವ ಮೂಲಕ ಅವರು ಇನ್ನೂ ಎಷ್ಟು ದಿನ ಸಾರ್ವಜನಿಕರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಾರೆ? ಸಾಕಷ್ಟು ರಾಜಕೀಯ ಅನುಭವ ಹೊಂದಿರುವ ಮಲ್ಲಿಕಾರ್ಜುನ ಖರ್ಗೆ ವಿರೋಧ ಪಕ್ಷದ ಅಧ್ಯಕ್ಷರ ಪಾತ್ರವನ್ನು ಮರೆತು ಇಂತಹ ಕೀಳು ಮಟ್ಟಕ್ಕೆ ಇಳಿದಿರುವುದು ದುರಾದೃಷ್ಟ. ಇದಕ್ಕಾಗಿ ಅವರು ಪ್ರಧಾನಿ ಹಾಗೂ ಭಾರತದ ಜನತೆಯ ಕ್ಷಮೆಯಾಚಿಸಬೇಕು” ಎಂದು ಪ್ರಲ್ಹಾದ್ ಜೋಶಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿಗೆ ಭಯೋತ್ಪಾದಕ ಎಂದ ಮಲ್ಲಿಕಾರ್ಜುನ ಖರ್ಗೆ; ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ

ಬಿಜೆಪಿ ಹಿರಿಯ ನಾಯಕ ಅಮಿತ್ ಮಾಳವಿಯಾ ಕೂಡ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಿಡಿ ಕಾರಿದ್ದು, “ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭಯೋತ್ಪಾದಕ ಎಂದು ಕರೆದು, ಎಐಎಡಿಎಂಕೆ ಅವರೊಂದಿಗೆ ಹೇಗೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಖರ್ಗೆ ಸಾರ್ವಜನಿಕ ಚರ್ಚೆಯನ್ನು ಇಷ್ಟೊಂದು ಕೆಳಮಟ್ಟಕ್ಕೆ ಎಳೆದಿರುವುದು ಇದೇ ಮೊದಲಲ್ಲ. ಆದರೆ ಈ ಹೇಳಿಕೆಯೊಂದಿಗೆ ಅವರು ತಮ್ಮನ್ನು ಮಾತ್ರ ಕುಗ್ಗಿಸಿಕೊಂಡಿಲ್ಲ, ಇಡೀ ಕಾಂಗ್ರೆಸ್‌ನ ಮನಸ್ಥಿತಿ ಇದೇ ಎಂಬುದನ್ನು ಬಹಿರಂಗಪಡಿಸಿದ್ದಾರೆ” ಎಂದು ಟೀಕಿಸಿದ್ದಾರೆ.

ವಿವಾದಕ್ಕೀಡಾದ ನಂತರ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದ ಮಲ್ಲಿಕಾರ್ಜುನ ಖರ್ಗೆ, “ಪ್ರಧಾನಿಯನ್ನು ಭಯೋತ್ಪಾದಕ ಎಂದು ಕರೆಯುವ ಉದ್ದೇಶ ನನಗಿಲ್ಲ. ನಾನು ಆ ಅರ್ಥದಲ್ಲಿ ಮಾತನಾಡಿದ್ದಲ್ಲ. ಅವರು ಜನರನ್ನು ಮತ್ತು ರಾಜಕೀಯ ಪಕ್ಷಗಳನ್ನು ಯಾವಾಗಲೂ ಭಯಭೀತಗೊಳಿಸುತ್ತಾರೆ ಎಂಬುದು ನನ್ನ ಮಾತಿನ ತಾತ್ಪರ್ಯವಾಗಿತ್ತು. ಪ್ರಧಾನಿ ಮೋದಿ ಜನರನ್ನು ಮತ್ತು ರಾಜಕೀಯ ಪಕ್ಷಗಳನ್ನು ಭಯಭೀತಗೊಳಿಸುತ್ತಿದ್ದಾರೆ. ಅವರು ಭಯೋತ್ಪಾದಕ ಎಂದು ನಾನು ಹೇಳಲಿಲ್ಲ. ಮೋದಿ ಯಾವಾಗಲೂ ಬೆದರಿಕೆ ಹಾಕುತ್ತಾರೆ. ಇಡಿ, ಐಟಿ ಮತ್ತು ಸಿಬಿಐನಂತಹ ಸಂಸ್ಥೆಗಳು ಅವರ ಕೈಯಲ್ಲಿವೆ. ಅವರು ಗಡಿನಿರ್ಣಯವನ್ನೂ ತಮ್ಮ ಕೈಗೆ ತೆಗೆದುಕೊಳ್ಳಲು ಬಯಸುತ್ತಾರೆ ಎಂದು ಹೇಳಿದೆನಷ್ಟೇ” ಎಂದು ಸ್ಪಷ್ಟನೆ ನೀಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version