‘2023ರ ಚುನಾವಣೆಯಲ್ಲಿ ನಾನು ಗೆದ್ದಿದ್ದರೆ ಸಿದ್ದರಾಮಯ್ಯ ಸಿಎಂ ಆಗುತ್ತಿರಲಿಲ್ಲ’: ಜಿ. ಪರಮೇಶ್ವರ್ – Kannada News

ಜಿ. ಪರಮೇಶ್ವರ್

ತುಮಕೂರು, ಜೂನ್ 08: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ (G Parameshwar) ಅವರು ಇತ್ತೀಚೆಗೆ ತುಮಕೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾವುಕರಾಗಿ ಮಾತನಾಡಿದ್ದು, ಮುಖ್ಯಮಂತ್ರಿ ಸ್ಥಾನವು ಮೂರು ಬಾರಿ ಕೈತಪ್ಪಿದ ಕುರಿತು ನೋವು ತೋಡಿಕೊಂಡಿದ್ದಾರೆ. ಇದು ತಮ್ಮ ಬಹುಕಾಲದ ಕನಸಾಗಿದ್ದು, ರಾಜಕೀಯ ಸನ್ನಿವೇಶಗಳಿಂದಾಗಿ ಕೈಗೂಡಿಲ್ಲ ಎಂದು ಅವರು ಹೇಳಿದ್ದಾರೆ.

ಮುಖ್ಯಾಂಶಗಳು

  • ಮೂರು ಬಾರಿ ಮುಖ್ಯಮಂತ್ರಿ ಹುದ್ದೆ ಕೈತಪ್ಪಿದ ಬಗ್ಗೆ ಪರಮೇಶ್ವರ್ ಭಾವುಕರಾಗಿದ್ದಾರೆ.
  • ನಾನು ಗೆದ್ದಿದ್ದರೆ 2013 ರಲ್ಲಿ ಸಿದ್ದರಾಮಯ್ಯ ಸಿಎಂ ಆಗುತ್ತಿರಲಿಲ್ಲ ಎಂದಿದ್ದಾರೆ.
  • 2026 ರಲ್ಲೂ ಸಿಎಂ ಹುದ್ದೆಯ ನಿರೀಕ್ಷೆ ಇತ್ತು ಎಂದು ನೋವು ಹಂಚಿಕೊಂಡಿದ್ದಾರೆ.

ಮುಖ್ಯಮಂತ್ರಿಯಾಗುವ ಅವಕಾಶ ಸಿಗಲಿಲ್ಲ

ಹಳೆಯ ನೆನಪುಗಳನ್ನು ಹಂಚಿಕೊಂಡ ಅವರು, 2013ರ ಚುನಾವಣೆಯಲ್ಲಿ ನಾನು ಸೋತಿದ್ದರಿಂದ ಮುಖ್ಯಮಂತ್ರಿ ಹುದ್ದೆ ಕೈತಪ್ಪಿತು. ಅಂದು ನಾನು ಗೆದ್ದಿದ್ದರೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ. ಮುಂದುವರಿದು, 2018ರಲ್ಲಿ ಕಾಂಗ್ರೆಸ್ 80 ಸ್ಥಾನಗಳನ್ನು ಗೆದ್ದಿದ್ದರೂ ಮೈತ್ರಿ ಸರ್ಕಾರದಲ್ಲಿ ಎಚ್. ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರು. ಅವತ್ತು ನನ್ನನ್ನೂ ಮುಖ್ಯಮಂತ್ರಿ ಮಾಡಬಹುದಿತ್ತು, ಆದರೆ ಆ ಅವಕಾಶ ಸಿಗಲಿಲ್ಲ ಎಂದು ಬೇಸರದಿಂದ ನುಡಿದಿದ್ದಾರೆ.

ಈ ಬಾರಿ ಸಿಎಂ ಹುದ್ದೆಯ ನಿರೀಕ್ಷೆಯಲ್ಲಿದ್ದ ಪರಮೇಶ್ವರ್

ಇನ್ನು 2026ರ ಪ್ರಸ್ತುತ ರಾಜಕೀಯ ವಿದ್ಯಮಾನಗಳಲ್ಲೂ ತಮಗೆ ಸಿಎಂ ಹುದ್ದೆಯ ನಿರೀಕ್ಷೆ ಇತ್ತು, ಆದರೆ ವಿವಿಧ ರಾಜಕೀಯ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲಎಂದು ಪರಮೇಶ್ವರ್ ಹೇಳಿದ್ದಾರೆ. ಹೈಕಮಾಂಡ್ ಜತೆಗಿನ ಚರ್ಚೆಯನ್ನು ಸ್ಮರಿಸಿದ ಅವರು, ನನಗೆ ಸಂಸ್ಥೆಯ ಶ್ರೇಯೋಭಿವೃದ್ಧಿ ಮುಖ್ಯ. ಕೊಡಲು ಸಾಧ್ಯವಿಲ್ಲ ಅಂದರೆ ನೇರವಾಗಿ ಹೇಳಿ, ನನಗೆ ಬಹಳ ದೊಡ್ಡ ಕೆಲಸಗಳಿವೆ, ನಾನು ವಾಪಸ್ ಹೋಗ್ತೀನಿ ಎಂದು ಹೇಳಿದ್ದೆ. ಕೊನೆಗೆ ಪಕ್ಷ ನನಗೆ ಉಪಮುಖ್ಯಮಂತ್ರಿ ಹುದ್ದೆಯ ಜವಾಬ್ದಾರಿ ನೀಡಿದೆಎಂದರು.

ಇದನ್ನೂ ಓದಿ ಶಿಸ್ತಿನ ಸಿಪಾಯಿಗಳಿಗೆ ಒಲಿದ ಅದೃಷ್ಟ: ಲಿಂಗರಾಜ್ ಪಾಟೀಲ್, ರಘು ಕೌಟಿಲ್ಯಗೆ ಪರಿಷತ್ ಟಿಕೆಟ್ ನೀಡಲು ಕಾರಣಗಳೇನು?

ಸದ್ಯ ತಮಗೆ ಸಿಕ್ಕಿರುವ ಜವಾಬ್ದಾರಿಯನ್ನು ಅತ್ಯಂತ ನಿಷ್ಠೆಯಿಂದ ನಿಭಾಯಿಸುವುದಾಗಿ ಹೇಳಿದ ಪರಮೇಶ್ವರ್, ಜನರು ನಮ್ಮನ್ನು ಸೂಕ್ಷ್ಮವಾಗಿ ನೋಡುತ್ತಾರೆ. ಆದ್ದರಿಂದ ಅತ್ಯಂತ ಜವಾಬ್ದಾರಿಯಿಂದ ನಡೆದುಕೊಳ್ಳುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು. ಸರ್ಕಾರದಲ್ಲಿ ಯಾವುದೇ ಕುಂದುಬರದಂತೆ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಜನರ ನಿರೀಕ್ಷೆಗಳನ್ನು ಪೂರೈಸಲು ಶ್ರಮಿಸುವುದಾಗಿ ಅವರು ಭರವಸೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಯುಷ್ಮಾನ್ ಹೆಸರಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡಿದರೆ ಖಾಸಗಿ ಆಸ್ಪತ್ರೆಗಳ ಪರವಾನಗಿ ರದ್ದು: ಸಚಿವ ಯು.ಟಿ.ಖಾದರ್ ಖಡಕ್ ಎಚ್ಚರಿಕೆ – Kannada News

ಮಂಗಳೂರು, ಜೂ.8: ಯುಟಿ ಖಾದರ್​​ ಅವರು ಅಧಿಕಾರ ಸ್ವೀಕಾರ ಮಾಡಿದ ನಂತರ ತಮ್ಮ ಆಡಳಿತಕ್ಕೆ ಚುರುಕು ನೀಡಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ಆಗಿರುವ ತಪ್ಪುಗಳನ್ನು ಹಾಗೂ ಕೆಲವೊಂದು ಬದಲಾವಣೆಗಳನ್ನು ಮಾಡಲು ಮುಂದಾಗಿದ್ದಾರೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನೆಗಾಗಿ ಮಂಗಳೂರಿನಲ್ಲಿ ಆರೋಗ್ಯ ಇಲಾಖೆಯ ಎಲ್ಲಾ ಉನ್ನತ ಅಧಿಕಾರಿಗಳು ಹಾಗೂ ವೈದ್ಯಕೀಯ ತಂಡದ ಪ್ರಮುಖ ಸಭೆಯನ್ನು ಆರೋಗ್ಯ ಸಚಿವ ಯು.ಟಿ. ಖಾದರ್ ನಡೆಸಿದ್ದಾರೆ. ಸಭೆಯ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳ ಬಲವರ್ಧನೆ ಮತ್ತು ಖಾಸಗಿ ಆಸ್ಪತ್ರೆಗಳ ಮನಸೋಇಚ್ಛೆ ವಸೂಲಾತಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಹಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.

“ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ಪಡೆಯುವ ಬಿಪಿಎಲ್ (BPL) ಕಾರ್ಡ್‌ ಹೊಂದಿರುವ ಸಾರ್ವಜನಿಕರಿಂದ ಯಾವುದೇ ಖಾಸಗಿ ಆಸ್ಪತ್ರೆಗಳು ಹೆಚ್ಚುವರಿ ಹಣವನ್ನು ವಸೂಲಿ ಮಾಡುವಂತಿಲ್ಲ. ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಆಸ್ಪತ್ರೆಗಳಲ್ಲಿರುವ ಸರ್ಕಾರದ ‘ಆರೋಗ್ಯ ಮಿತ್ರ’ರ ಪಾತ್ರ ಅತ್ಯಂತ ಪ್ರಮುಖವಾಗಿದೆ. ರೋಗಿಗಳಿಗೆ ನೆರವಾಗುವಲ್ಲಿ ಆರೋಗ್ಯ ಮಿತ್ರರು ವಿಫಲರಾದರೆ ಅಥವಾ ಕರ್ತವ್ಯ ಲೋಪ ಎಸಗಿದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಷ್ಟೇ ಅಲ್ಲದೆ, ಸರ್ಕಾರದ ಉಚಿತ ಆರೋಗ್ಯ ಯೋಜನೆಗಳನ್ನು ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ಪರವಾನಗಿಯನ್ನು (ಅನುಮತಿ) ಮುಲಾಜಿಲ್ಲದೆ ರದ್ದುಗೊಳಿಸಲಾಗುವುದು” ಎಂದು ಸಚಿವರು ಕಠಿಣ ಎಚ್ಚರಿಕೆ ನೀಡಿದರು. ಎಪಿಎಲ್ (APL) ಕಾರ್ಡ್‌ದಾರರಿಗೆ ಇದ್ದ 30-70 ಅನುಪಾತದ ಯೋಜನೆಯ ಬಗ್ಗೆಯೂ ಮರುಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಇದನ್ನೂ ಓದಿ: ಹೊಸ ವೈದ್ಯರಿಗೆ ಗುಡ್ ನ್ಯೂಸ್ ಕೊಟ್ಟ ಸಚಿವ ಖಾದರ್: ಇನ್ಮುಂದೆ ಡೈರೆಕ್ಟ್ ವಾಕ್-ಇನ್ ಇಂಟರ್ವ್ಯೂ

ರಾಜ್ಯದಲ್ಲಿ ಕಾಡುತ್ತಿರುವ ಸರ್ಕಾರಿ ವೈದ್ಯರ ಕೊರತೆಯ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದ್ದು, ವೈದ್ಯರನ್ನು ಸರ್ಕಾರಿ ಸೇವೆಯತ್ತ ಆಕರ್ಷಿಸಲು ಹೊಸ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು. “ಹಳ್ಳಿ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಕಷ್ಟಪಟ್ಟು ಸೇವೆ ಸಲ್ಲಿಸುತ್ತಿರುವ ಸರ್ಕಾರಿ ವೈದ್ಯರ ವೇತನವನ್ನು ಹೆಚ್ಚಿಸಲು ಇಲಾಖೆ ನಿರ್ಧರಿಸಿದೆ. ಇದರೊಂದಿಗೆ ಗುತ್ತಿಗೆ ಆಧಾರದ ಮೇಲೆ (Contractual) ಕಾರ್ಯನಿರ್ವಹಿಸುತ್ತಿರುವ ವೈದ್ಯರನ್ನು ಖಾಯಂ ಮಾಡುವ ಕುರಿತು ಮಹತ್ವದ ಚರ್ಚೆಗಳು ನಡೆಯುತ್ತಿವೆ. ಹಿಂದೆ ಮೂರು ವರ್ಷ ಸೇವೆ ಸಲ್ಲಿಸಿದ ಗುತ್ತಿಗೆ ವೈದ್ಯರನ್ನು ಖಾಯಂ ಮಾಡುವ ಪದ್ಧತಿ ಇತ್ತು. ಅದನ್ನು ಮುಂಬರುವ ದಿನಗಳಲ್ಲಿ ಮತ್ತೆ ಜಾರಿಗೆ ತರುವ ನಿಟ್ಟಿನಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು” ಎಂದು ಯು.ಟಿ. ಖಾದರ್ ಅವರು ಸ್ಪಷ್ಟಪಡಿಸಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚೆಸ್ ಚಾಂಪಿಯನ್ ಪ್ರಜ್ಞಾನಂದ ಜೊತೆ ಚೆಸ್ ಆಡಿ 50 ಲಕ್ಷ ರೂ. ಕೊಟ್ಟ ವಿಜಯ್ – Kannada News

ನಟ, ತಮಿಳುನಾಡು ಸಿಎಂ ದಳಪತಿ ವಿಜಯ್ ಅವರು ಭಾರತದ ಚೆಸ್ ಮಾಸ್ಟರ್ ಆರ್​. ಪ್ರಜ್ಞಾನಂದ ಅವರನ್ನು  (Praggnanandhaa) ಸನ್ಮಾನಿಸಿದ್ದಾರೆ. ಅವರಿಗೆ 50 ಲಕ್ಷ ರೂಪಾಯಿ ಬಹುಮಾನ ಮೊತ್ತವನ್ನು ಕೂಡ ನೀಡಿದ್ದಾರೆ. ನಾರ್ವೆ ಚೆಸ್ 2026 ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಬಳಿಕ ಅವರಿಗೆ ಈ ಗೌರವ ಸಿಕ್ಕಿದೆ. ವಿಶೇಷ ಎಂದರೆ ವಿಜಯ್ ಅವರು ಪ್ರಜ್ಞಾನಂದ ಜೊತೆ ಚೆಸ್ ಕೂಡ ಆಡಿದ್ದಾರೆ.

ಸಿಎಂ ವಿಜಯ್ ಅವರನ್ನು ಭೇಟಿ ಮಾಡಿದ ವಿಷಯವನ್ನು ಪ್ರಜ್ಞಾನಂದ ಅವರು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ. ‘ನನಗೆ ಚೆಸ್ ಬೋರ್ಡ್ ಜೊತೆ ಬರಲು ಹೇಳಲಾಗಿತ್ತು. ನಾನು ಸಿಎಂ ಜೊತೆ ಚೆಸ್ ಆಡಿದೆ. ಅವರು ನನ್ನ ಜೊತೆ ಚೆಸ್ ಆಡುತ್ತಾರೆ ಎಂದು ನಾನು ಭಾವಿಸಿರಲಿಲ್ಲ. 15 ನಿಮಿಷಗಳ ಕಾಲ ಚೆಸ್ ಆಡಿದೆವು. ಗೆದ್ದಿದ್ದು ನಾನೇ. ಅವರು ತುಂಬಾನೇ ಪ್ರೋತ್ಸಾಹದಾಯಕವಾಗಿದ್ದಾರೆ’ ಎಂದಿದ್ದಾರೆ ವಿಜಯ್.

ಇದನ್ನೂ ಓದಿ: ನಾರ್ವೆಯಲ್ಲಿ ಹೊಸ ಇತಿಹಾಸ ಬರೆದ ಆರ್ ಪ್ರಜ್ಞಾನಂದ

ತಮಿಳುನಾಡು ಸಿಎಂ ಕಚೇರಿ ಈ ಬಗ್ಗೆ ಟ್ವೀಟ್ ಮಾಡಿದೆ. ‘ತಮಿಳುನಾಡು ಸಿಎಂ ವಿಜಯ್ ಅವರು 50 ಲಕ್ಷ ರೂಪಾಯಿ ಹಣವನ್ನು ಪ್ರಜ್ಞಾನಂದಗೆ ನೀಡಿದ್ದಾರೆ. ನಾರ್ವೆ ಚೆಸ್ 2026 ಅಲ್ಲಿ ಈ ಸಾಧನೆ ಮಾಡಿ ಇತಿಹಾಸ ಬರೆದಿರುವುದರಿಂದ ಈ ಗೌರವ ನೀಡಲಾಗಿದೆ’ ಎಂದು ಬರೆದುಕೊಂಡಿದೆ.

ಕಳೆದ ವಾರ ನಡೆದ ಓಸ್ಲೋದಲ್ಲಿ ನಡೆದ ನಾರ್ವೆ ಚೆಸ್ 2026 ಟೂರ್ನಿಯಲ್ಲಿ ಅಂತಿಮ ಸುತ್ತಿನ ರೋಚಕ ಪಂದ್ಯದಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ವಿರುದ್ಧ ಪ್ರಜ್ಞಾನಂದ ಭರ್ಜರಿ ಜಯ ಸಾಧಿಸಿ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 2:42 pm, Mon, 8 June 26

Source link

ವೈಭವ್ ಸೂರ್ಯವಂಶಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಎಬಿ ಡಿವಿಲಿಯರ್ಸ್ – Kannada News

ಟೀಮ್ ಇಂಡಿಯಾದ 15 ವರ್ಷದ ಉದಯೋನ್ಮುಖ ತಾರೆ ವೈಭವ್ ಸೂರ್ಯವಂಶಿ ಅವರ ಟೆಸ್ಟ್​ ಕ್ರಿಕೆಟ್ ಭವಿಷ್ಯದ ಬಗ್ಗೆ ಸೌತ್ ಆಫ್ರಿಕಾ ಮಾಜಿ ದಿಗ್ಗಜ ಆಟಗಾರ ಎಬಿ ಡಿವಿಲಿಯರ್ಸ್ ದೊಡ್ಡ ಪ್ರಶ್ನೆಯೊಂದನ್ನು ಎತ್ತಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅಬ್ಬರಿಸುತ್ತಿರುವ ಈ ಯುವ ಆಟಗಾರನಿಗೆ ನಿಜವಾಗಿಯೂ ಟೆಸ್ಟ್ ಕ್ರಿಕೆಟ್ ಆಡುವ ಆಸೆ ಇದೆಯೇ? ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಡಿವಿಲಿಯರ್ಸ್,”ಅವನಿಗೆ ನಿಜವಾಗಿಯೂ ಟೆಸ್ಟ್ ಆಡಲು ಆಸೆಯಿದೆಯೇ?” ಸಾಮರ್ಥ್ಯವಿದೆ ನಿಜ. ಆದರೆ ರೆಡ್-ಬಾಲ್ ಕ್ರಿಕೆಟ್ ಆಡಲು ಅವನಿಗೆ ನಿಜವಾಗಿಯೂ ಮನಸಿದೆಯೇ? ಈ ಬಗ್ಗೆ ಅನುಮಾವಿದೆ. ಇದಕ್ಕೆ ಕಾಲವೇ ಉತ್ತರಿಸಬೇಕು” ಎಂದು ಡಿವಿಲಿಯರ್ಸ್ ಹೇಳಿದ್ದಾರೆ.

ಎಬಿಡಿ ಅನುಮಾನ ವ್ಯಕ್ತಪಡಿಸಲು ಕಾರಣವೇನು?

ವೈಭವ್ ಸೂರ್ಯವಂಶಿ ಇತ್ತೀಚಿನ ಐಪಿಎಲ್ 2026 ರಲ್ಲಿ ಭರ್ಜರಿ ಯಶಸ್ಸು, ಹಣ ಮತ್ತು ಪ್ರಸಿದ್ಧಿಯನ್ನು ಗಳಿಸಿದ್ದಾರೆ. ಅದು ಸಹ ಅಲ್ಪಾವಧಿಯಲ್ಲಿ. ಆದರೆ ಟೆಸ್ಟ್ ಕ್ರಿಕೆಟ್ ಎಂಬುದು ಕಠಿಣ ಸವಾಲು. ಇಲ್ಲಿ ಗಂಟೆಗಟ್ಟಲೆ ಕ್ರೀಸ್‌ನಲ್ಲಿ ನಿಲ್ಲುವ ತಾಳ್ಮೆ, ರಕ್ಷಣಾತ್ಮಕ ಆಟ ಮತ್ತು ತಾಂತ್ರಿಕ ಶಿಸ್ತು ಅಗತ್ಯವಿರುತ್ತದೆ.

ಆದರೆ ವೈಭವ್ ಕೇವಲ ಟಿ20 ಶೈಲಿಯ ಬಿರುಸಿನ ಬ್ಯಾಟಿಂಗ್ ಮತ್ತು ಪವರ್-ಹಿಟ್ಟಿಂಗ್ ನೆಚ್ಚಿಕೊಂಡಿದ್ದಾರೆ. ಹೀಗಾಗಿ ಟೆಸ್ಟ್ ಕ್ರಿಕೆಟ್‌ನ ಹಾದಿ ಸುಲಭವಲ್ಲ. ಟೆಸ್ಟ್ ಕ್ರಿಕೆಟ್‌ನಲ್ಲಿ ಯಶಸ್ವಿಯಾಗುವುದು ಕೂಡ ಸುಲಭದ ಮಾತಲ್ಲ. ಅದು ದೈಹಿಕ ಮತ್ತು ಮಾನಸಿಕವಾಗಿ ಕಠಿಣ ಸವಾಲುಗಳನ್ನು ತಂದೊಡ್ಡುತ್ತದೆ. ಕೇವಲ ಬಿರುಸಿನ ಬ್ಯಾಟಿಂಗ್‌ನಿಂದ ಅಲ್ಲಿ ಬದುಕುಳಿಯಲು ಸಾಧ್ಯವಿಲ್ಲ.

ಅಷ್ಟೇ ಅಲ್ಲದೆ ಈ ಹಿಂದೆ ಟಿ20 ಕ್ರಿಕೆಟ್​ನಲ್ಲಿ ಸಿಡಿಲಬ್ಬರದ ಪ್ರದರ್ಶನ ನೀಡುತ್ತಿದ್ದ ಹಲವು ಆಟಗಾರರು ಟೆಸ್ಟ್ ಕ್ರಿಕೆಟ್​ನಿಂದ ದೂರವೇ ಉಳಿದಿದ್ದರು. ಈ ಎಲ್ಲಾ ಕಾರಣಗಳಿಂದಾಗಿ ಎಬಿಡಿ ವೈಭವ್ ಸೂರ್ಯವಂಶಿಯ ಟೆಸ್ಟ್ ಇಂಟ್ರೆಸ್ಟ್​ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಟಿ20 ಸ್ಪೆಷಲಿಸ್ಟ್ ಆಗಿ ಉಳಿಯುವ ಭೀತಿ:

ವೈಭವ್ ಕೇವಲ ಶಾರ್ಟರ್ ಫಾರ್ಮ್ಯಾಟ್‌ಗೆ ಸೀಮಿತವಾದರೆ, ಅವರು ಭವಿಷ್ಯದಲ್ಲಿ ಕೇವಲ “ಟಿ20 ಸ್ಪೆಷಲಿಸ್ಟ್” ಆಗಿ ಉಳಿಯಬೇಕಾಗುತ್ತದೆ ಎಂದು ಎಬಿಡಿ ಡಿವಿಲಿಯರ್ಸ್ ಎಚ್ಚರಿಸಿದ್ದಾರೆ. ಹೀಗಾಗಿ ಮೂರು ಸ್ವರೂಪಗಳಲ್ಲೂ ಆಡುವ ಬಗ್ಗೆ ಆಸಕ್ತಿ ಹೊಂದಬೇಕು. ಸದ್ಯ ಟಿ20 ಕ್ರಿಕೆಟ್​ನಲ್ಲಿ ಕಣಕ್ಕಿಳಿಯುತ್ತಿರುವ ವೈಭವ್ ಸೂರ್ಯವಂಶಿ, ಟೆಸ್ಟ್​ ಆಡಲು ಸಿದ್ಧರಿದ್ದಾರೆಯೇ? ಟಿ20 ಜೊತೆ ಅವರು ರೆಡ್ ಬಾಲ್​ ಕ್ರಿಕೆಟ್ ಬಗ್ಗೆ ಆಸಕ್ತಿ ತೋರಬೇಕು ಎಂದು ಎಬಿಡಿ ಸಲಹೆ ನೀಡಿದ್ದಾರೆ.

ವೈಭವ್ ಸೂರ್ಯವಂಶಿ ಅವರ ಕನಸೇನು?

ಒಂದೆಡೆ ವೈಭವ್ ಸೂರ್ಯವಂಶಿಯ ಟೆಸ್ಟ್ ಕ್ರಿಕೆಟ್ ಇಂಟ್ರೆಸ್ಟ್ ಬಗ್ಗೆ ಎಬಿ ಡಿವಿಲಿಯರ್ಸ್ ಅನುಮಾನ ವ್ಯಕ್ತಪಡಿಸಿದರೆ, ಮತ್ತೊಂದೆಡೆ ವೈಭವ್ ಸೂರ್ಯವಂಶಿ ಮೂರು ಸ್ವರೂಪಗಳಲ್ಲೂ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ವೈಭವ್, ತನಗೆ ಟೀಮ್ ಇಂಡಿಯಾ ಪರ ಟೆಸ್ಟ್, ಟಿ20 ಹಾಗೂ ಏಕದಿನ ಪಂದ್ಯಗಳನ್ನಾಡಬೇಕೆಂಬ ಆಸೆಯಿದೆ.  ಅದರಲ್ಲೂ ಟೆಸ್ಟ್ ಕ್ರಿಕೆಟ್​ನಲ್ಲಿ ತಮ್ಮದೇ ಆದ ಛಾಪು ಮೂಡಿಸಿ 10-20 ವರ್ಷಗಳ ಕಾಲ ಕ್ರಿಕೆಟ್ ಜಗತ್ತನ್ನು ಆಳಬೇಕೆಂಬುದು ಕನಸು ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.

ಕುತೂಹಲಕಾರಿ ವಿಷಯ ಎಂದರೆ ವೈಭವ್ ಸೂರ್ಯವಂಶಿ ಈಗಾಗಲೇ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಕಣಕ್ಕಿಳಿದಿದ್ದಾರೆ. ಅಂದರೆ ಟೆಸ್ಟ್ ಮಾದರಿಯ ಪಂದ್ಯಗಳನ್ನಾಡಿದ್ದಾರೆ. ಬಿಹಾರ ಪರ 8 ರಣಜಿ ಮ್ಯಾಚ್​ಗಳನ್ನಾಡಿರುವ ವೈಭವ್ ಮೇಘಾಲಯ ವಿರುದ್ಧ 93 ರನ್ ಬಾರಿಸಿದ್ದರು.

ಇದನ್ನೂ ಓದಿ: ಚೊಚ್ಚಲ ಪಂದ್ಯದಲ್ಲೇ ದಾಖಲೆಗಳ ಮೇಲೆ ದಾಖಲೆ ಬರೆದ ಮಾನವ್ ಸುತಾರ್..!

ಹಾಗೆಯೇ 2024 ರಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 4 ದಿನಗಳ ಯೂತ್ ಟೆಸ್ಟ್ ಪಂದ್ಯದಲ್ಲಿ  ಬ್ಯಾಟ್ ಬೀಸಿದ್ದ ವೈಭವ್ ಕೇವಲ 58 ಎಸೆತಗಳಲ್ಲಿ ಶತಕ (104 ರನ್) ಸಿಡಿಸಿದ್ದರು. ಈ ಮೂಲಕ ಅಂಡರ್-19 ಟೆಸ್ಟ್ ಪಂದ್ಯದಲ್ಲಿ ಅತೀ ವೇಗದ ಶತಕ ಬಾರಿಸಿದ ಭಾರತೀಯ ಎಂಬ ದಾಖಲೆ ಬರೆದಿದ್ದರು. ಒಂದು ವೇಳೆ ವೈಭವ್ ಸೂರ್ಯವಂಶಿ ಟೆಸ್ಟ್ ಕ್ರಿಕೆಟ್​ನಲ್ಲಿ ಕಾಣಿಸಿಕೊಂಡರೆ ಅಲ್ಲೂ ಕೂಡ ಆರ್ಭಟದ ಬ್ಯಾಟಿಂಗ್ ಅನ್ನು ಎದುರು ನೋಡಬಹುದು.

Source link

ಶಿಸ್ತಿನ ಸಿಪಾಯಿಗಳಿಗೆ ಒಲಿದ ಅದೃಷ್ಟ: ಲಿಂಗರಾಜ್ ಪಾಟೀಲ್, ರಘು ಕೌಟಿಲ್ಯಗೆ ಪರಿಷತ್ ಟಿಕೆಟ್ ನೀಡಲು ಕಾರಣಗಳೇನು? – Kannada News

ಲಿಂಗರಾಜ್ ಪಾಟೀಲ್, ರಘು ಕೌಟಿಲ್ಯImage Credit source: Facebook and X accounts

ಬೆಂಗಳೂರು, ಜೂನ್ 08: ಬಿಜೆಪಿ (BJP) ಹೈಕಮಾಂಡ್ ಪ್ರಕಟಿಸಿರುವ ವಿಧಾನಪರಿಷತ್ ಚುನಾವಣೆಯ ಅಭ್ಯರ್ಥಿಗಳ ಪಟ್ಟಿ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದೆ. ಹುಬ್ಬಳ್ಳಿಯ ಹಿರಿಯ ಮುಖಂಡ ಲಿಂಗರಾಜ್ ಪಾಟೀಲ್ ಹಾಗೂ ಮೈಸೂರಿನ ಹಿಂದುಳಿದ ವರ್ಗಗಳ ನಾಯಕ ರಘು ಕೌಟಿಲ್ಯ ಅವರಿಗೆ ಈ ಬಾರಿ ಅದೃಷ್ಟ ಒಲಿದಿದ್ದು, ಅವರ ಆಯ್ಕೆಯ ಹಿಂದೆ ಹೈಕಮಾಂಡ್‌ನ ಮಹತ್ವದ ಲೆಕ್ಕಾಚಾರಗಳಿವೆ.

ಮುಖ್ಯಾಂಶಗಳು

  • ಬಿಜೆಪಿ ಹೈಕಮಾಂಡ್ ವಿಧಾನಪರಿಷತ್ ಚುನಾವಣೆಗೆ ಇಬ್ಬರು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
  • ಹುಬ್ಬಳ್ಳಿಯ ಲಿಂಗರಾಜ್ ಪಾಟೀಲ್ ಹಾಗೂ ರಘು ಕೌಟಿಲ್ಯಗೆ ಅದೃಷ್ಟ ಒಲಿದಿದೆ.
  • ಜಾತಿ ಲೆಕ್ಕಾಚಾರದ ಆಧಾರದ ಮೇಲೆ ಹೈಕಮಾಂಡ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ.

ಲಿಂಗರಾಜ್ ಪಾಟೀಲ್ ಆಯ್ಕೆಗೆ ಕಾರಣಗಳು

ಮೂಲತಃ ಹುಬ್ಬಳ್ಳಿಯವರಾದ ಲಿಂಗರಾಜ್ ಪಾಟೀಲ್ ಅವರು ಪಂಚಮಸಾಲಿ ಲಿಂಗಾಯತ ಸಮುದಾಯದ ಪ್ರಮುಖ ನಾಯಕರಾಗಿದ್ದಾರೆ. ಕಳೆದ ಬಾರಿ ಪಶ್ಚಿಮ ಪದವೀಧರ ಕ್ಷೇತ್ರ ಹಾಗೂ ವಿಧಾನಸಭೆಯಿಂದ ಪರಿಷತ್‌ಗೆ ನಡೆಯಬೇಕಿದ್ದ ಚುನಾವಣೆಯ ಸಂದರ್ಭದಲ್ಲಿ ಕೊನೆ ಕ್ಷಣದಲ್ಲಿ ಇವರಿಗೆ ಟಿಕೆಟ್ ಕೈತಪ್ಪಿತ್ತು. ಇದರಿಂದ ಬೇಸತ್ತು ಇವರು ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಸಂದರ್ಭದಲ್ಲಿ ಬಿ.ವೈ. ವಿಜಯೇಂದ್ರ ಮತ್ತು ಪ್ರಹ್ಲಾದ್ ಜೋಶಿ ಅವರ ಮನೆಗೆ ಭೇಟಿ ನೀಡಿ, ಮುಂದಿನ ದಿನಗಳಲ್ಲಿ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದರು. ಹುಬ್ಬಳ್ಳಿಯಲ್ಲಿ ಪಕ್ಷ ಸಂಘಟನೆ ಬಲಪಡಿಸಲು ಹಾಗೂ ಪಂಚಮಸಾಲಿ ಸಮುದಾಯವನ್ನು ಬೆಂಬಲಿಸಲು ಇವರಿಗೆ ಈ ಬಾರಿ ಪ್ರಹ್ಲಾದ್ ಜೋಶಿ ಮತ್ತು ಆರ್. ಅಶೋಕ್ ಅವರ ಸಂಪೂರ್ಣ ಬೆಂಬಲದೊಂದಿಗೆ ಟಿಕೆಟ್ ನೀಡಲಾಗಿದೆ.

ಇದನ್ನೂ ಓದಿ ರಾಜ್ಯಸಭೆಗೆ ಕಣಕ್ಕಿಳಿದ ಪ್ರೊ. ಎಂ. ನಾಗರಾಜ; ಮಾಜಿ ಪ್ರಧಾನಿ ದೇವೇಗೌಡರ ಸ್ಥಾನಕ್ಕೆ ಬಿಜೆಪಿ ಇವರನ್ನೇ ಆರಿಸಿದ್ದೇಕೆ?

ರಘು ಕೌಟಿಲ್ಯ ಆಯ್ಕೆಗೆ ಕಾರಣಗಳು

ರಘು ಕೌಟಿಲ್ಯ ಅವರು ಒಬಿಸಿ ಸಮುದಾಯದ ಅತ್ಯಂತ ಸಣ್ಣ ಜನಾಂಗವಾದ ‘ಮಡಿವಾಳ’ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಪ್ರಸ್ತುತ ರಾಜ್ಯ ಬಿಜೆಪಿ ಒಬಿಸಿ ಮೋರ್ಚಾದ ಅಧ್ಯಕ್ಷರಾಗಿರುವ ಇವರು, ಈ ಹಿಂದೆ ಮೈಸೂರಿನಿಂದ ಎಂಎಲ್‌ಸಿ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಇತ್ತೀಚೆಗೆ ಕಾಂಗ್ರೆಸ್ ತನ್ನ ನಾಲ್ಕೂ ಅಭ್ಯರ್ಥಿಗಳನ್ನು ಒಬಿಸಿ ಸಮುದಾಯಕ್ಕೆ ನೀಡಿರುವುದರಿಂದ, ಅದಕ್ಕೆ ಪ್ರತಿಯಾಗಿ ಬಿಜೆಪಿಯೂ ಒಬಿಸಿ ಮುಖವನ್ನು ಮುನ್ನೆಲೆಗೆ ತರಲು ಬಯಸಿದೆ. ಪ್ರಸ್ತುತ ಬಿಜೆಪಿಯಲ್ಲಿ ಲಿಂಗಾಯತ, ಒಕ್ಕಲಿಗ ಮತ್ತು ದಲಿತ ನಾಯಕತ್ವ ಮುಂಚೂಣಿಯಲ್ಲಿದ್ದು, ಒಬಿಸಿ ನಾಯಕನ ಹುಡುಕಾಟದಲ್ಲಿದ್ದ ಪಕ್ಷಕ್ಕೆ ರಘು ಕೌಟಿಲ್ಯ ಸೂಕ್ತ ಆಯ್ಕೆಯಾಗಿ ಕಂಡಿದ್ದಾರೆ. ಇವರ ಆಯ್ಕೆಗೆ ಬಿ.ವೈ. ವಿಜಯೇಂದ್ರ ಅವರು ಸಂಪೂರ್ಣ ಬೆಂಬಲ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಐಸ್ ಕ್ರೀಮ್ ಬೇಕೆಂದು ಹಠ ಹಿಡಿದ ಪುಟಾಣಿ, ವೈರಲ್ ಆಯ್ತು ದೃಶ್ಯ – Kannada News

ಚಿಕ್ಕ ಮಕ್ಕಳಿಗೆ (little kids) ಐಸ್ ಕ್ರೀಮ್ ಅಂದ್ರೆ ತುಂಬಾನೇ ಇಷ್ಟ. ಹೆತ್ತವರು ಹೇಳಿದ ಮಾತನ್ನು ಕೇಳದದ್ದಿದರೆ ಐಸ್ ಕ್ರೀಮ್ ಕೊಡಿಸುವೆ ಅಂದ್ರೆ ಸಾಕು, ಮರು ಮಾತಾಡದೇ ದಾರಿಗೆ ಬರುತ್ತಾರೆ. ಆದರೆ ಈ ಪುಟಾಣಿಗಳು ಐಸ್ ಕ್ರೀಮ್ (ice cream) ಬೇಕೆಂದು ಹಠ ಹಿಡಿಯುವುದನ್ನು ನೀವು ನೋಡಿರಬಹುದು. ಶಾಲಾ ಸಮವಸ್ತ್ರ ಧರಿಸಿರುವ ಈ ಪುಟ್ಟ ಹುಡುಗಿ ಐಸ್ ಕ್ರೀಮ್ ಬೇಕೆಂದು ಹಠ ಹಿಡಿದಿದ್ದು, ಜೋರಾಗಿ ಅಳುತ್ತಿದೆ. ಈ ಕ್ಯೂಟ್ ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ.

Neyha limbu ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಪುಟಾಣಿಯ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಪುಟಾಣಿ ಸಮವಸ್ತ್ರ ಧರಿಸಿ ಸ್ಕೂಲ್ ಗೆ ಹೊರಟಂತಿದೆ. ಇದೇ ವೇಳೆ ನನಗೆ ಐಸ್ ಕ್ರೀಮ್ ಬೇಕೆಂದು ಹಠ ಹಿಡಿದು ಜೋರಾಗಿ ಅಳಲು ಶುರು ಮಾಡಿರುವ ಪುಟಾಣಿಯನ್ನು ನೀವು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಗೊಂಬೆಗೆ ಸ್ನಾನ ಮಾಡಿಸಿ ಆರೈಕೆ ಮಾಡಿದ ಪುಟಾಣಿ, ವೈರಲ್‌ ಆಯ್ತು ದೃಶ್ಯ

ಈ ವಿಡಿಯೋ ಒಂದು ಲಕ್ಷ ಅರವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿವೆ. ಒಬ್ಬ ಬಳಕೆದಾರ ದಯವಿಟ್ಟು ಯಾರಾದ್ರೂ ಅವಳಿಗೆ ಐಸ್ ಕ್ರೀಮ್ ತೆಗಿಸಿ ಕೊಡಿ ಎಂದು ಹೇಳಿದ್ದಾರೆ. ಇನ್ನೊಬ್ಬರು, ನನ್ನ ಬಾಲ್ಯದ ದಿನಗಳನ್ನು ನೆನಪಿಸಿದಂತಾಯಿತು ಎಂದು ಕಾಮೆಂಟ್ ನಲ್ಲಿ ಹೇಳಿದ್ದಾರೆ. ಮತ್ತೊಬ್ಬರು, ಬಾಲ್ಯವೇ ಚಂದ. ಅಳುತ್ತಲೇ ಎಲ್ಲವನ್ನೂ ಪಡೆಯುತ್ತಿದ್ದೆವು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಜಯಪುರ: ಎಸ್ಪಿ ಲಕ್ಷ್ಮಣ ನಿಂಬರಗಿ ಹೆಸರಲ್ಲೇ ನಕಲಿ ಫೇಸ್‌ಬುಕ್ ಖಾತೆ! ಲಕ್ಷ ಲಕ್ಷ ಪೀಕಿದ್ದ ಕಿಲಾಡಿ ಅಂದರ್ – Kannada News

ವಿಜಯಪುರ, ಜೂನ್ 8: ವಿಜಯಪುರ (Vijayapura) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಲಕ್ಷ್ಮಣ ನಿಂಬರಗಿ ಅವರ ಹೆಸರಿನಲ್ಲೇ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ, ಸಾರ್ವಜನಿಕರಿಗೆ ಸರ್ಕಾರಿ ನೌಕರಿ ಕೊಡಿಸುವ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಅಂತರಜಿಲ್ಲಾ ಸೈಬರ್ ವಂಚಕನನ್ನು ವಿಜಯಪುರ ಸಿಇಎನ್ (CEN) ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ದುರದುಂಡಿ ಗ್ರಾಮದ ಹಣಮಂತ ಭಜಂತ್ರಿ ಎಂದು ಗುರುತಿಸಲಾಗಿದೆ.

ಮುಖ್ಯಾಂಶಗಳು

  • ಎಸ್ಪಿ ಹೆಸರಿನಲ್ಲಿ ನಕಲಿ ಫೇಸ್​ಬುಕ್ ಐಡಿ ಸೃಷ್ಟಿಸಿ ವಂಚನೆ.
  • ಪಿಡಬ್ಲ್ಯೂಡಿ ನೌಕರಿಯ ಆಮಿಷವೊಡ್ಡಿ ಹಣ ಪೀಕಿದ್ದ ಕಿಲಾಡಿ.
  • ಆರೋಪಿಯನ್ನು ಬಂಧಿಸಿದ ಸಿಇಎನ್ ಸೈಬರ್ ಪೊಲೀಸರು.

ಎಸ್ಡಿಎ ಹುದ್ದೆಯ ಆಮಿಷ: 5 ಲಕ್ಷ ರೂ.ಗೂ ಅಧಿಕ ಹಣ ಪಡೆದು ವಂಚನೆ

ಬಂಧಿತ ಹಣಮಂತ ಭಜಂತ್ರಿ, ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ತಿಗಣಿ ಬಿದರಿ ಗ್ರಾಮದ ನಿವಾಸಿ ಸುರೇಶ್ ಅಥಣಿ ಎಂಬುವವರಿಗೆ ಲೋಕೋಪಯೋಗಿ ಇಲಾಖೆಯಲ್ಲಿ (PWD) ಎಸ್‌ಡಿಸಿ (SDA) ಹುದ್ದೆ ಕೊಡಿಸುವುದಾಗಿ ನಂಬಿಸಿದ್ದ. ಇದಕ್ಕಾಗಿ ಸುರೇಶ್ ಅವರಿಂದ ಹಂತ ಹಂತವಾಗಿ ಒಟ್ಟು 5,04,600 ರೂಪಾಯಿ ಹಣವನ್ನು ಪಡೆದು ವಂಚಿಸಿದ್ದ. ವರ್ಷಗಳೇ ಕಳೆದರೂ ಕೆಲಸವೂ ಸಿಗದೆ, ಹಣವೂ ವಾಪಸ್ ಬರದೇ ಇದ್ದಾಗ ತಾನು ವಂಚನೆಗೆ ಒಳಗಾಗಿರುವುದು ಸುರೇಶ್‌ಗೆ ಮನವರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಅವರು ವಿಜಯಪುರ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇಮೇಲ್ ಬಳಸಿ ನಕಲಿ ಖಾತೆ ಸೃಷ್ಟಿ

ಪ್ರಕರಣ ದಾಖಲಿಸಿಕೊಂಡು ಸೈಬರ್ ಪೊಲೀಸರು ತಾಂತ್ರಿಕ ತನಿಖೆ ನಡೆಸಿದಾಗ ಸತ್ಯ ಬಯಲಾಗಿದೆ. ಆರೋಪಿ ಹಣಮಂತ, ವಿಜಯಪುರ ಎಸ್ಪಿಯವರ ಹೆಸರನ್ನೇ ಬಳಸಿಕೊಂಡು nimbaragilakshman29@gmail.com ಎಂಬ ನಕಲಿ ಇಮೇಲ್ ಐಡಿ ಸೃಷ್ಟಿಸಿದ್ದ. ಅದರ ಮೂಲಕ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಸಾರ್ವಜನಿಕರನ್ನು ಸಂಪರ್ಕಿಸುತ್ತಿದ್ದ. ಜಿಲ್ಲೆಯ ಅತ್ಯುನ್ನತ ಪೊಲೀಸ್ ಅಧಿಕಾರಿಯ ಅಧಿಕೃತ ಖಾತೆ ಇರಬಹುದೆಂದು ನಂಬಿ ಸಾರ್ವಜನಿಕರು ಆತನ ಜಾಲಕ್ಕೆ ಬಲಿಯಾಗುತ್ತಿದ್ದರು.

ವಿಚಾರಣೆ ವೇಳೆ ಕೃತ್ಯ ಒಪ್ಪಿಕೊಂಡ ಆರೋಪಿ

ಸದ್ಯ ಆರೋಪಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಆತ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಆರೋಪಿ ಇದೇ ಮಾದರಿಯಲ್ಲಿ ರಾಜ್ಯದ ಇತರ ಪ್ರಭಾವಿ ಅಧಿಕಾರಿಗಳು ಅಥವಾ ರಾಜಕಾರಣಿಗಳ ಹೆಸರನ್ನು ಬಳಸಿ ಬೇರೆಯವರಿಗೂ ವಂಚಿಸಿರುವ ಸಾಧ್ಯತೆಗಳಿದ್ದು, ಆ ನಿಟ್ಟಿನಲ್ಲಿ ತನಿಖೆ ಮುಂದುವರಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಭರ್ಜರಿ ಬೇಟೆ: ಬ್ಯಾಂಕಾಕ್‌ನಿಂದ ತಂದಿದ್ದ 2.33 ಕೋಟಿ ಮೌಲ್ಯದ ಗಾಂಜಾ ಜಪ್ತಿ!

ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ನಕಲಿ ಖಾತೆಗಳ ಬಗ್ಗೆ ಸಾರ್ವಜನಿಕರು ತೀವ್ರ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟಿಎಂಸಿ ನಾಯಕ ಜಹಾಂಗೀರ್ ಖಾನ್ ಬಂಧನ, ಟಿಎಂಸಿ ಕಚೇರಿಗಳ ಮೇಲೆ ದಾಳಿ ಸೇರಿ ಪಶ್ಚಿಮ ಬಂಗಾಳದಲ್ಲಿ ಪ್ರಮುಖ ರಾಜಕೀಯ ಬೆಳವಣಿಗೆಗಳು – Kannada News

ಕೋಲ್ಕತ್ತಾ, ಜೂನ್ 08: ಪಶ್ಚಿಮ ಬಂಗಾಳ(West Bengal)ದಲ್ಲಿ ಕಳೆದ ಒಂದು ತಿಂಗಳಿಂದೀಚೆಗೆ ಸಾಕಷ್ಟು ರಾಜಕೀಯ ಬೆಳವಣಿಗೆಗಳು ನಡೆದಿವೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿ ಟಿಎಂಸಿಯನ್ನು ಅಧಿಕಾರದಿಂದ ಕಿತ್ತೊಗೆದಿತ್ತು.  ಟಿಎಂಸಿ ವಿರೋಧಿಗಳ ಜತೆ ಕಾದಾಡುವುದು ಹಾಗಿರಲಿ, ಪಕ್ಷದೊಳಗೆ ಭಿನ್ನಾಭಿಪ್ರಾಯಗಳಿವೆ. ಇದೀಗ ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ ಆ ಕುರಿತು ಮಾಹಿತಿ ಇಲ್ಲಿದೆ.

ಟಿಎಂಸಿ ಪ್ರಭಾವಿ ನಾಯಕ ಜಹಾಂಗೀರ್ ಖಾನ್ ಬಂಧನ
ಕಳೆದ ತಿಂಗಳು ನಡೆದ ಫಾಲ್ಟಾ ವಿಧಾನಸಭಾ ಉಪಚುನಾವಣೆಯ ವೇಳೆ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಟಿಎಂಸಿ ಪಕ್ಷದ ಪ್ರಭಾವಿ ನಾಯಕ ಜಹಾಂಗೀರ್ ಖಾನ್ ಅವರನ್ನು ರಾಜ್ಯ ಪೊಲೀಸರ ವಿಶೇಷ ಕಾರ್ಯಪಡೆ (STF) ಇಂದು ಮುಂಜಾನೆ ನೇಪಾಳ ಗಡಿಯ ಬಳಿ ಬಂಧಿಸಿದೆ.

ಚುನಾವಣಾ ಅಕ್ರಮಗಳು, ಭೂಸ್ವಾಧೀನ ಮತ್ತು ವಸೂಲಿ  ಆರೋಪಗಳ ಎದುರಿಸುತ್ತಿದ್ದ ಜಹಾಂಗೀರ್ ಖಾನ್ ಗೆ ಕೋಲ್ಕತ್ತಾ ಹೈಕೋರ್ಟ್ ನೀಡಿದ್ದ ಮಧ್ಯಂತರ ರಕ್ಷಣೆಯನ್ನು ಇತ್ತೀಚೆಗೆ ಹಿಂಪಡೆದಿತ್ತು. ಮುಖ್ಯಮಂತ್ರಿ ಸುವೇಂದು ಅಧಿಕಾರಿ ಖಾನ್ ವಿರುದ್ಧ ಕಟ್ಟುನಿಟ್ಟಿನ ಕ್ರಮದ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಬಂಧನ ನಡೆದಿದೆ.

ಹೈಕೋರ್ಟ್‌ನಿಂದ ಬಂಧನ ಭೀತಿ ಎದುರಿಸುತ್ತಿದ್ದ ಖಾನ್, ದೇಶ ಬಿಟ್ಟು ನೇಪಾಳಕ್ಕೆ ಓಡಿಹೋಗಲು ಯತ್ನಿಸುತ್ತಿದ್ದಾಗ ರಹಸ್ಯ ಮಾಹಿತಿಯ ಆಧಾರದ ಮೇಲೆ ಎಸ್‌ಟಿಎಫ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದ್ದಾರೆ. ಪ್ರಸ್ತುತ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಕೋಲ್ಕತ್ತಾಕ್ಕೆ ಕರೆತರಲಾಗುತ್ತಿದೆ.

ಟಿಎಂಸಿ ಕಚೇರಿಗಳ ಮೇಲೆ ದಾಳಿ
ಜಹಾಂಗೀರ್ ಖಾನ್ ಬಂಧನದ ಜೊತೆಯಲ್ಲೇ, ರಾಜ್ಯದ ವಿವಿಧೆಡೆ ತನಿಖಾ ಸಂಸ್ಥೆಗಳು ಟಿಎಂಸಿ ನಾಯಕರಿಗೆ ಸೇರಿದ ಜಾಗಗಳ ಮೇಲೆ ದಾಳಿ ನಡೆಸಿವೆ. ಇತ್ತೀಚೆಗಷ್ಟೇ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಸ್ಥಳೀಯ ಪೊಲೀಸರು ಜಂಟಿಯಾಗಿ ಟಿಎಂಸಿ ನಾಯಕರ ಕಚೇರಿ ಮತ್ತು ನಿವಾಸಗಳ ಮೇಲೆ ದಾಳಿ ನಡೆಸಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ವಸ್ತುಗಳು ಹಾಗೂ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ದಾಳಿಗಳು ಪಕ್ಷದ ಆಂತರಿಕ ವಲಯದಲ್ಲಿ ಭಾರಿ ಸಂಚಲನ ಮೂಡಿಸಿವೆ.

ಟಿಎಂಸಿ ನಾಯಕ ರಾಬಿನ್ ದಾಸ್ ಮೇಲ್ ಎಸ್​ಟಿಎಫ್ ದಾಳಿ
ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ವಿವಾದಿತ ಜಾಗವಾದ ಸಂದೇಶಖಾಲಿಯಲ್ಲಿ ರಾಜ್ಯ ಪೊಲೀಸ್ ಇಲಾಖೆಯ ವಿಶೇಷ ಕಾರ್ಯಪಡೆ (STF) ಭರ್ಜರಿ ಕಾರ್ಯಾಚರಣೆಯೊಂದನ್ನು ನಡೆಸಿದೆ. ತೃಣಮೂಲ ಕಾಂಗ್ರೆಸ್ ಪಕ್ಷದ ಮಾಜಿ ಪ್ರಾದೇಶಿಕ ಅಧ್ಯಕ್ಷ ರಾಬಿನ್ ದಾಸ್ ಅವರ ನಿವಾಸಕ್ಕೆ ಹೊಂದಿಕೊಂಡಿರುವ ಖಾಸಗಿ ಕೊಳದಿಂದ (ಕೆರೆ) ಪೊಲೀಸರು ಭಾರಿ ಪ್ರಮಾಣದ ಕಾನೂನುಬಾಹಿರ ಬಂದೂಕುಗಳು ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಮರುಸ್ಥಾಪಿಸಲು ಹೊಸ ಸರ್ಕಾರವು ಆರಂಭಿಸಿರುವ ವಿಶೇಷ ಭದ್ರತಾ ಕಾರ್ಯಾಚರಣೆಯ ಭಾಗವಾಗಿ ಈ ಐತಿಹಾಸಿಕ ದಾಳಿ ನಡೆದಿದೆ.

ಮತ್ತಷ್ಟು ಓದಿ: ಪಶ್ಚಿಮ ಬಂಗಾಳ: 4,800 ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರು, ಗಡಿ ಭದ್ರತೆ ನಮ್ಮ ಆದ್ಯತೆ ಎಂದ ಸಿಎಂ ಸುವೇಂದು

ಟಿಎಂಸಿ ಪಕ್ಷದಲ್ಲಿ ಬಂಡಾಯ ಮತ್ತು ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ
ರಾಜ್ಯ ವಿಧಾನಸಭಾ ಚುನಾವಣೆಯ ಸೋಲಿನ ನಂತರ ತೃಣಮೂಲ ಕಾಂಗ್ರೆಸ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಆಂತರಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ.

ಬಂಡಾಯ ನಾಯಕನಿಗೆ ಮಾನ್ಯತೆ: ಟಿಎಂಸಿ ಪಕ್ಷದ 58 ಬಂಡಾಯ ಶಾಸಕರು ಒಟ್ಟಾಗಿ ಪಕ್ಷದಿಂದ ಉಚ್ಛಾಟಿತಗೊಂಡಿದ್ದ ನಾಯಕ ರಿತಬ್ರತಾ ಬ್ಯಾನರ್ಜಿ ಅವರನ್ನು ತಮ್ಮ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದ್ದರು. ಇದಕ್ಕೆ ವಿಧಾನಸಭಾ ಸ್ಪೀಕರ್ ಅವರು ಮಾನ್ಯತೆ ನೀಡಿ, ಅವರನ್ನು ವಿಧಾನಸಭೆಯ ಅಧಿಕೃತ ಪ್ರತಿಪಕ್ಷ ನಾಯಕ ಎಂದು ಘೋಷಿಸಿದ್ದಾರೆ.

ಸ್ಪೀಕರ್ ಅವರ ಈ ನಿರ್ಧಾರವನ್ನು ಕಾನೂನುಬಾಹಿರ ಎಂದು ಕರೆದಿರುವ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಹೈಕಮಾಂಡ್, ಇದರ ವಿರುದ್ಧ ಇಂದು ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ. ಸ್ಪೀಕರ್ ನಿರ್ಧಾರ ಸಂಸದೀಯ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ತಿಳಿಸಿದ್ದಾರೆ.

ದೆಹಲಿಯಲ್ಲಿ ಇಂಡಿ ಒಕ್ಕೂಟದ ಸಭೆಯಲ್ಲಿ ಮಮತಾ ಭಾಗಿ
ರಾಜ್ಯದಲ್ಲಿ ಇಷ್ಟೆಲ್ಲಾ ಆಂತರಿಕ ಬಿಕ್ಕಟ್ಟು ಮತ್ತು ಬಂಧನಗಳು ನಡೆಯುತ್ತಿದ್ದರೂ, ರಾಷ್ಟ್ರ ರಾಜಕಾರಣದಲ್ಲಿ ಟಿಎಂಸಿ ಸಕ್ರಿಯವಾಗಿದೆ. ನವದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಇಂದು ಆಯೋಜಿಸಲಾಗಿರುವ ‘ಇಂಡಿ’ ಒಕ್ಕೂಟದ ಪ್ರಮುಖ ಸಭೆಯಲ್ಲಿ ಭಾಗವಹಿಸಲು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ದೆಹಲಿ ತಲುಪಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಜಂಟಿ ಹೋರಾಟ ರೂಪಿಸಲು 23 ಪಕ್ಷಗಳು ಒಟ್ಟಾಗಿರುವ ಈ ಸಭೆಗೆ ಟಿಎಂಸಿ ತನ್ನ ಸಂಪೂರ್ಣ ಬೆಂಬಲವನ್ನು ಸೂಚಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 1:09 pm, Mon, 8 June 26

Source link

‘ಕೆಡಿ’ ರಿಲೀಸ್ ಆದರೂ ಕಡಿಮೆ ಆಗಿಲ್ಲ ಶಿಲ್ಪಾ ಶೆಟ್ಟಿ ಕೊರಗು – Kannada News

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಇತ್ತೀಚೆಗೆ ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಈಗ ಅವರು ಬಾಲಿವುಡ್ ಬಿಗ್ ಸ್ಕ್ರೀನ್ ಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ. ಈ ಬಾರಿ ಅವರು ಥಿಯೇಟರ್ ರಿಲೀಸ್ ಸಿನಿಮಾಗಳನ್ನೇ ಮಾಡಲು ಬಯಸುತ್ತಿರುವುದರ ಹಿಂದೆ ಒಂದು ವಿಶೇಷವಾದ ಮತ್ತು ವೈಯಕ್ತಿಕವಾದ ಕಾರಣವಿದೆ. ತಮ್ಮ ಇಬ್ಬರು ಮಕ್ಕಳಾದ ಸಮಿಶಾ ಮತ್ತು ವಿಯಾನ್ ಇದುವರೆಗೂ ತಮ್ಮನ್ನು ಚಿತ್ರಮಂದಿರದ ದೊಡ್ಡ ಪರದೆಯ ಮೇಲೆ ನೋಡಿಲ್ಲ ಎಂದು ಶಿಲ್ಪಾ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಮಾಧ್ಯಮವೊಂದರ ಜೊತೆ ಮಾತನಾಡಿರುವ ಅವರು, ‘ನನ್ನ ಮಕ್ಕಳು ನನ್ನನ್ನು ಎಂದಿಗೂ ಚಿತ್ರಮಂದಿರದ ದೊಡ್ಡ ಪರದೆಯ ಮೇಲೆ ನೋಡಿಯೇ ಇಲ್ಲ. ಹಾಗಾಗಿ ಅವರಿಗಾಗಿಯಾದರೂ ನಾನು ಥಿಯೇಟರ್‌ನಲ್ಲಿ ಬಿಡುಗಡೆಯಾಗುವ ಸಿನಿಮಾವೊಂದನ್ನು ಮಾಡಬೇಕು ಎಂಬ ಹಂಬಲವಿದೆ’ ಎಂದು ತಮ್ಮ ಇಚ್ಛೆಯನ್ನು ಹಂಚಿಕೊಂಡಿದ್ದಾರೆ.

2023ರಲ್ಲಿ ತೆರೆಕಂಡ ಶಿಲ್ಪಾ ಅವರ ‘ಸುಖಿ’ ಸಿನಿಮಾವನ್ನು ಅವರ ಮಗ ವಿಯಾನ್ ನೋಡಿದ್ದನಾದರೂ, ಅದು ಪ್ರಿವ್ಯೂ ಥಿಯೇಟರ್‌ನಲ್ಲಿ ಮಾತ್ರ ಸಾಧ್ಯವಾಗಿತ್ತು. ಸುಖಿ ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ನಮಗೆ ಸೂಕ್ತ ಪ್ರಮಾಣದಲ್ಲಿ ಚಿತ್ರಮಂದಿರಗಳು ಸಿಗಲಿಲ್ಲ. ಅದು ಆ ಚಿತ್ರಕ್ಕೆ ಮಾಡಿದ ಅನ್ಯಾಯವಾಗಿತ್ತು. ಆದಾಗ್ಯೂ ಒಟಿಟಿ ಒಂದು ಅದ್ಭುತ ವೇದಿಕೆಯಾಗಿದೆ. ಪ್ರೇಕ್ಷಕರು ತಮಗೆ ಬಿಡುವು ಸಿಕ್ಕಾಗ ಸಿನಿಮಾಗಳನ್ನು ಹುಡುಕಿ ನೋಡಲು ಇದು ಸಹಾಯ ಮಾಡುತ್ತದೆ. ಆದರೆ ಈಗ ನನ್ನ ಗುರಿ ಏನಿದ್ದರೂ ಥಿಯೇಟರ್ ರಿಲೀಸ್ ಚಿತ್ರಗಳ ಮೇಲಿದೆ’ ಎಂದು ಅವರು ಹೇಳಿದ್ದಾರೆ.

ಸಿನಿಮಾಗಳನ್ನು ಆಯ್ಕೆ ಮಾಡುವಾಗ ತಮಗೆ ಪಾತ್ರದ ಉದ್ದ ಅಥವಾ ಲೆಂತ್ ಎಂದಿಗೂ ಮಾನದಂಡವಾಗಿರಲಿಲ್ಲ ಎಂದು ಶಿಲ್ಪಾ ಸ್ಪಷ್ಟಪಡಿಸಿದ್ದಾರೆ. ‘ನಾನು ಈ ಹಿಂದೆ ಹಲವು ಬಿಗ್ ಬಜೆಟ್ ಸಿನಿಮಾಗಳನ್ನು ತಿರಸ್ಕರಿಸಿದ್ದೇನೆ. ಅದಕ್ಕೆ ನನ್ನದೇ ಆದ ಸಮರ್ಥನೀಯ ಕಾರಣಗಳಿದ್ದವು. ಆ ನಿರ್ಧಾರಗಳು ನನಗೂ ಮತ್ತು ಚಿತ್ರದ ನಿರ್ಮಾಪಕರಿಗಷ್ಟೇ ಗೊತ್ತು. ಆ ಬಗ್ಗೆ ನಾನು ಎಲ್ಲೂ ಮಾತನಾಡುವುದಿಲ್ಲ ಮತ್ತು ನನ್ನ ಯಾವುದೇ ನಿರ್ಧಾರಗಳ ಬಗ್ಗೆ ನನಗೆ ಎಂದಿಗೂ ಪಶ್ಚಾತ್ತಾಪವಿಲ್ಲ’ ಎಂದು ಅವರು ಖಡಕ್ ಆಗಿ ನುಡಿದಿದ್ದಾರೆ.

ಇದನ್ನೂ ಓದಿ: 50ನೇ ವಯಸ್ಸಿನಲ್ಲೂ ಶಿಲ್ಪಾ ಶೆಟ್ಟಿ ಫಿಟ್ನೆಸ್; ಇದರ ಹಿಂದಿದೆ ಶಿಸ್ತು, ನಿರಂತರ ಪರಿಶ್ರಮ

ಶಿಲ್ಪಾ ಶೆಟ್ಟಿ ಅವರು ಇತ್ತೀಚೆಗೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ, ಬಹುನಿರೀಕ್ಷಿತ ಕನ್ನಡದ ‘ಕೆಡಿ: ದಿ ಡೆವಿಲ್’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಥಿಯೇಟರ್​ನಲ್ಲೇ ರಿಲೀಸ್ ಆಗಿತ್ತು. ಆದರೆ, ಸಿನಿಮಾ ಕನ್ನಡದಲ್ಲಿ ಇದ್ದಿದ್ದರಿಂದ ಅವರ ಮಕ್ಕಳಿಗೆ ನೋಡೋಕೆ ಸಾಧ್ಯವಾಗಿಲ್ಲ. ಹೀಗಾಗಿ, ಶಿಲ್ಪಾ ಶೆಟ್ಟಿ ಅವರ ಕೊರಗು ಕಡಿಮೆ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದೇವನಹಳ್ಳಿಯಲ್ಲಿ ಸದ್ಯದಲ್ಲೇ ಗಿಗಾ ಫ್ಯಾಕ್ಟರಿ; ಸೋಲಾರ್ ಇಂಗಾಟ್ಸ್, ಸಿಲಿಕಾನ್ ವೇಫರ್ಸ್ ತಯಾರಿಸಲಿರುವ ಎಮ್ಮೀ ಗ್ರೂಪ್ – Kannada News

ಸೌರ ಘಟಕದ ಸಾಂದರ್ಭಿಕ ಚಿತ್ರImage Credit source: iStock

ಬೆಂಗಳೂರು, ಜೂನ್ 8: ಬೆಂಗಳೂರು ಮೂಲದ ಪ್ರಮುಖ ಹಸಿರು ಇಂಧನ ಸಂಸ್ಥೆಯಾದ ಎಮ್ಮೀ ಗ್ರೂಪ್ (Emmvee Group), ಬೆಂಗಳೂರಿನ ದೇವನಹಳ್ಳಿಯಲ್ಲಿ ಬರೋಬ್ಬರಿ 5,500 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಬೃಹತ್ ‘ಗಿಗಾ ಫ್ಯಾಕ್ಟರಿ’ (Gigafactory) ಸ್ಥಾಪಿಸಲು ಮುಂದಾಗಿದೆ. ಈ ಹೊಸ ಪ್ಲಾಂಟ್ ಸದ್ಯದ ಫ್ಯಾಕ್ಟರಿಗಿಂತ 5 ಪಟ್ಟು ದೊಡ್ಡದಾಗಿದ್ದು, ಸುಮಾರು 100 ಎಕರೆ ಪ್ರದೇಶದಲ್ಲಿ ವಿಸ್ತರಿಸಲಿದೆ. ಸಂಸ್ಥೆಯ ಛೇರ್ಮನ್ ಡಿ.ವಿ. ಮಂಜುನಾಥ ದೊಂತಿ ಅವರು ಸ್ವತಃ ಈ ಮಾಹಿತಿಯನ್ನು ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್​ಗೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಅವರು ನೀಡಿರುವ ಮಾಹಿತಿಯ ಕೆಲ ಮುಖ್ಯಾಂಶಗಳು ಇಲ್ಲಿವೆ.

1992ರಲ್ಲಿ ಭಾರತದ ಮೊದಲ ಸೋಲಾರ್ ವಾಟರ್ ಹೀಟರ್ಸ್ ತಯಾರಿಸಿದ ಸಾಧನೆ ಹೊಂದಿರುವ ಎಮ್ವೀ ಗ್ರೂಪ್, ಭಾರತದ ಅಗ್ರಗಣ್ಯ ಸೋಲಾರ್ ಮಾಡ್ಯೂಲ್ ತಯಾರಿಸುವ ಕಂಪನಿ. ಇದೀಗ ದೇವನಹಳ್ಳಿಯ ಹೊಸ ಘಟಕದಲ್ಲಿ ಇಂಗಾಟ್ಸ್ ಮತ್ತು ಸಿಲಿಕಾನ್ ವೇಫರ್​ಗಳನ್ನು ತಯಾರಿಸಲಿದೆ. ಸೋಲಾರ್ ಮಾಡ್ಯೂಲ್​ಗಳ ತಯಾರಿಕೆಯಲ್ಲಿ ಈ ಇಂಗಾಟ್ಸ್ ಮತ್ತು ವೇಫರ್​ಗಳು ಪ್ರಮುಖ ಕಚ್ಛಾ ವಸ್ತುಗಳೆನಿಸಿವೆ. ಹೀಗಾಗಿ, ದೇವನಹಳ್ಳಿಯ 5,500 ಕೋಟಿ ರೂ ಹೂಡಿಕೆಯಲ್ಲಿ ಎಮ್​ವೀ ಗ್ರೂಪ್ ನಿರ್ಮಿಸುತ್ತಿರುವ ಬೃಹತ್ ಗಿಗಾ ಫ್ಯಾಕ್ಟರಿಯು ಭಾರತದ ಸೋಲಾರ್ ಸ್ವಾವಲಂಬನೆಯಲ್ಲಿ ಪ್ರಮುಖ ಕೊಂಡಿ ಎಂದು ಬಣ್ಣಿಸಲಾಗುತ್ತಿದೆ.

ಸ್ವಾವಲಂಬನೆಯತ್ತ ಹೆಜ್ಜೆ

ಭಾರತದಲ್ಲಿ ಸದ್ಯಕ್ಕೆ ಸೋಲಾರ್ ಪ್ಯಾನಲ್‌ಗಳನ್ನು ತಯಾರಿಸಿದರೂ, ಅದಕ್ಕೆ ಬೇಕಾದ ಕಚ್ಚಾ ವಸ್ತುಗಳನ್ನು (ವೇಫರ್ ಮತ್ತು ಇಂಗಾಟ್ಸ್) ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ, ಎಮ್ಮೀ ಗ್ರೂಪ್ 2028ರ ವೇಳೆಗೆ ಈ ಗಿಗಾ ಫ್ಯಾಕ್ಟರಿಯಲ್ಲಿ ಸ್ವತಃ ಅತ್ಯಂತ ಪ್ರಮುಖವಾದ ‘ಸಿಲಿಕಾನ್ ವೇಫರ್ಸ್’ ಮತ್ತು ‘ಇಂಗಾಟ್ಸ್’ (Ingots and Wafers) ಉತ್ಪಾದನೆ ಆರಂಭಿಸಲಿದೆ. ಇದರಿಂದ ಭಾರತದ ಸೌರಶಕ್ತಿ ಕ್ಷೇತ್ರಕ್ಕೆ ದೊಡ್ಡ ಬಲ ಸಿಗಲಿದೆ.

ಇದನ್ನೂ ಓದಿ: ಮಾನವ ಇತಿಹಾಸದಲ್ಲೇ ಮೊದಲ ಟ್ರಿಲಿಯನೇರ್, ಇದು ಇಲಾನ್ ಮಸ್ಕ್ ಮ್ಯಾಜಿಕ್; ಇವರಿಗಿರುವ ಸಂಪತ್ತು ಎಷ್ಟು ಅಗಾಧ ಗೊತ್ತಾ?

ಉತ್ಪಾದನಾ ಸಾಮರ್ಥ್ಯದ ಹೆಚ್ಚಳ

ಸದ್ಯಕ್ಕೆ ಸಂಸ್ಥೆಯು 2.9 ಗಿಗಾವ್ಯಾಟ್ (GW) ಸೋಲಾರ್ ಸೆಲ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, ಮಾರ್ಚ್ 2027ರ ವೇಳೆಗೆ ಇದನ್ನು 8.90 ಗಿಗಾವ್ಯಾಟ್‌ಗೆ (ಸುಮಾರು ಮೂರು ಪಟ್ಟು) ಹೆಚ್ಚಿಸಲಿದೆ. ಸೋಲಾರ್ ಮಾಡ್ಯೂಲ್ ಉತ್ಪಾದನೆಯನ್ನು ಈ ವರ್ಷದ (2026) ಡಿಸೆಂಬರ್ ವೇಳೆಗೆ 10.3 ಗಿಗಾವ್ಯಾಟ್‌ನಿಂದ 16.3 ಗಿಗಾವ್ಯಾಟ್‌ಗೆ ಏರಿಸಲಾಗುವುದು.

ಎಮ್​ವೀ ಗ್ರೂಪ್​ನ ಹಣಕಾಸು ಹೂಡಿಕೆ ಹೇಗೆ?

ಈ 5,500 ಕೋಟಿ ರೂ ಯೋಜನೆಯಲ್ಲಿ 40% ರಷ್ಟು (2,200 ಕೋಟಿ ರೂ.) ಮೊತ್ತವನ್ನು ಕಂಪನಿಯು ತನ್ನ ಸ್ವಂತ ಈಕ್ವಿಟಿ ಮೂಲಕ ಹೂಡಿಕೆ ಮಾಡುತ್ತಿದೆ. ಉಳಿದ 3,300 ಕೋಟಿ ರೂಪಾಯಿ ಸಾಲವನ್ನು ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ (IREDA) ನೀಡುತ್ತಿದೆ. ಸಂಸ್ಥೆಯು ಸಂಪೂರ್ಣವಾಗಿ ಶೂನ್ಯ ಸಾಲದ (Zero-debt) ಕಂಪನಿಯಾಗಿದೆ ಎಂದು ಮಂಜುನಾಥ ದೊಂತಿ ತಿಳಿಸಿದ್ದಾರೆ.

ಜಾಗತಿಕ ಮಟ್ಟದ ಗುಣಮಟ್ಟ: ಚೀನಾ ಸೋಲಾರ್ ಪ್ಯಾನಲ್‌ಗಳಿಗೆ ಹೋಲಿಸಿದರೆ ಎಮ್ಮೀ ಸಂಸ್ಥೆಯ ಉತ್ಪನ್ನಗಳ ‘ಕ್ಲೈಮ್ ರೇಶಿಯೋ’ (ದೋಷಗಳ ಪ್ರಮಾಣ) ಕೇವಲ 0.008 ರಷ್ಟಿದ್ದು, ಇದು ಜಗತ್ತಿನಲ್ಲೇ ಅತ್ಯಂತ ಕಡಿಮೆ ಹಾಗೂ ಅತ್ಯುತ್ತಮ ಗುಣಮಟ್ಟದ್ದಾಗಿದೆ ಎಂದೂ ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಇಂಟರ್ನೆಟ್ ಬಳಕೆಯಲ್ಲಿ ಮನುಷ್ಯರನ್ನು ಮೀರಿಸಿವೆಯಂತೆ ಎಐ ಏಜೆಂಟ್​ಗಳು

ಚೀನಾಗಿಂತ ನಾವೇನೂ ಕಮ್ಮಿ ಇಲ್ಲ: ದೊಂತಿ

ಚೀನಾ ಬೇರೆ ಮಟ್ಟದಲ್ಲಿದೆ. ಅದರ ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಮತ್ತು ರಕ್ಷಣೆಯನ್ನು ಇತರ ದೇಶಗಳಿಗೆ ಸರಿಗಟ್ಟಲು ಆಗುವುದಿಲ್ಲ. ಎಲ್ಲಾ ಕಚ್ಚಾ ವಸ್ತು ಸ್ಥಳೀಯವಾಗಿಯೇ ಲಭ್ಯವಾದರೆ, ಮತ್ತು ಚೀನೀ ಕಂಪನಿಗಳಿಗೆ ಸಿಗುವಂತಹ ರೀತಿಯ ರಕ್ಷಣೆ ನಮಗೂ ಸಿಕ್ಕರೆ ನಾವೂ ಕೂಡ ಬೆಲೆ ವಿಚಾರದಲ್ಲಿ ಚೀನೀ ಉತ್ಪನ್ನಗಳನ್ನು ಮೀರಿಸಬಲ್ಲೆವು. ಸರ್ಕಾರ ಹಣಕಾಸು ಬೆಂಬಲ ನೀಡದಿದ್ದರೂ ಚಿಂತೆ ಇಲ್ಲ, ಆದರೆ, ಅಪಾಯ ಎದುರಿಸಲು ಸರ್ಕಾರದ ವಿಶ್ವಾಸ ಅಗತ್ಯ ಇದೆ ಎಂದು ಎಮ್​ವೀ ಗ್ರೂಪ್​ನ ಛೇರ್ಮನ್ ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಎಮ್​ವೀ ಗ್ರೂಪ್​ನ ಅಮೋಘ ಹಾದಿ

1992 ರಲ್ಲೇ ‘ಸೋಲಾರೈಜರ್’ (Solarizer) ಬ್ರ್ಯಾಂಡ್ ಅಡಿಯಲ್ಲಿ ದೇಶದ ಮೊದಲ ಸೋಲಾರ್ ವಾಟರ್ ಹೀಟರ್ ಪರಿಚಯಿಸಿದ ಹೆಗ್ಗಳಿಕೆ ಈ ಸಂಸ್ಥೆಯದ್ದು. 2006 ರಲ್ಲಿ ಸೋಲಾರ್ ಪವರ್ ಉತ್ಪಾದನೆ ಆರಂಭಿಸಿದಾಗ ಭಾರತದಲ್ಲಿ ಮಾರುಕಟ್ಟೆ ಇಲ್ಲದ ಕಾರಣ 2014 ರವರೆಗೆ ತನ್ನ 100% ಉತ್ಪನ್ನಗಳನ್ನು ಯುರೋಪ್ (ಮುಖ್ಯವಾಗಿ ಜರ್ಮನಿ) ದೇಶಗಳಿಗೆ ರಫ್ತು ಮಾಡುತ್ತಿತ್ತು. ಆದರೆ ಈಗ ಭಾರತ ಸರ್ಕಾರ ಸೌರಶಕ್ತಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ, ದೇಶಿಯ ಮಾರುಕಟ್ಟೆಯಲ್ಲೇ ಇವರ ಉತ್ಪನ್ನಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ.

ಈ ಗಿಗಾ ಫ್ಯಾಕ್ಟರಿ ಆರಂಭವಾಗುವುದರಿಂದ ಬೆಂಗಳೂರಿನ ದೇವನಹಳ್ಳಿ ಭಾಗದಲ್ಲಿ ದೊಡ್ಡ ಮಟ್ಟದ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಹಾಗೂ ಭಾರತವು ಸೌರಶಕ್ತಿ ವಲಯದಲ್ಲಿ ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಲು ನೆರವಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version