ಬೆಂಗಳೂರು, ಏಪ್ರಿಲ್ 09: ‘ಎಂದೆಂದಿಗೂ ಬೆಂಗಳೂರು’ ಥೀಮ್ ಅಡಿಯಲ್ಲಿ 18 ಆವೃತ್ತಿಯ ಟಿಸಿಎಸ್ ವಿಶ್ವ 10 ಓಟವು ಏಪ್ರಿಲ್ 26ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಕಳೆದ ವರ್ಷ ರಸ್ತೆಗಳಲ್ಲಿ ಎಲ್ಲೆಡೆ ಗುಂಡಿಗಳೇ ತುಂಬಿದ್ದರಿಂದ ಓಟಗಾರರು ತೊಂದರೆ ಅನುಭವಿಸಿದ್ದರು. ಆದರೆ ಈ ಭಾರಿ ಹಾಗಾಗಬಾರದು. ಈ ನಿಟ್ಟಿನಲ್ಲಿ ರೇಸ್ ನಡೆಯುವ ಮಾರ್ಗದಲ್ಲಿನ ರಸ್ತೆ ಗುಂಡಿಗಳನ್ನು ಸರಿಪಡಿಸುವಂತೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸಿಎಂ, ಡಿಸಿಎಂ ಮತ್ತು ಜಿಬಿಎ ಆಯುಕ್ತರಿಗೆ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ. ಈ ರೇಸ್ ಬೆಂಗಳೂರಿನ ಹೆಮ್ಮೆ. ಭಾರತದಾದ್ಯಂತ ಓಟಗಾರರು ಭಾಗವಹಿಸುತ್ತಾರೆ. ಅವರಿಗೆ ನಿರಾಶೆಯಾಗಬಾರದು. ನಗರದ ಎಲ್ಲಾ ರಸ್ತೆಗಳನ್ನು ಸರಿಪಡಿಸುವುದು ನಿಮ್ಮಿಂದ ತುಂಬಾ ಕಷ್ಟ ಎಂದು ನಮಗೆ ಗೊತ್ತು, ಹಾಗಾಗಿ 10 ಕಿ.ಮೀ ರಸ್ತೆಯನ್ನು ದುರಸ್ತಿ ಮಾಡುವಂತೆ ಮನವಿ ಮಾಡಿದ್ದಾರೆ.
ಐಪಿಎಲ್ ನಡುವೆ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಅದರಂತೆ ಟೆಸ್ಟ್ ವಿಶ್ವಕಪ್ ಎಂದೇ ಬಿಂಬಿತವಾಗಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ (WTC) ಮಹತ್ವದ ಬದಲಾವಣೆ ಮಾಡಲು ಐಸಿಸಿ ನಿರ್ಧರಿಸಿದೆ. ವಾಸ್ತವವಾಗಿ ಜಯ್ ಶಾ (Jay Shah) ಅವರು ಐಸಿಸಿ (ICC) ಅಧ್ಯಕ್ಷರಾದ ಬಳಿಕ ಟೆಸ್ಟ್ ಕ್ರಿಕೆಟ್ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಇದೀಗ ಅದಕ್ಕೆ ಪೂರಕವಾಗಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ 9 ತಂಡಗಳ ಬದಲಿಗೆ 12 ತಂಡಗಳನ್ನು ಕಣಕ್ಕಿಣಿಸುವ ಯೋಜನೆಯನ್ನು ಐಸಿಸಿ ಹಾಕಿಕೊಂಡಿದೆ. ಅಂದರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಹೊಸದಾಗಿ 3 ತಂಡಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ.
ಆ ಹೊಸ 3 ತಂಡಗಳು ಯಾವುವು?
ಜಯ್ ಶಾ ನೇತೃತ್ವದ ಐಸಿಸಿ, ಜಿಂಬಾಬ್ವೆ, ಐರ್ಲೆಂಡ್ ಮತ್ತು ಅಫ್ಘಾನಿಸ್ತಾನವನ್ನು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಸೇರಿಸಲು ಯೋಚಿಸಿದೆ ಎಂದು ವರದಿಯಾಗಿದೆ. ಈ ಮೂರು ತಂಡಗಳು ಈಗ ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಇಂಗ್ಲೆಂಡ್, ಬಾಂಗ್ಲಾದೇಶ ಮತ್ತು ಶ್ರೀಲಂಕಾ ವಿರುದ್ಧ ಸ್ಪರ್ಧಿಸಲಿವೆ.
WTC ಯ ನಿಯಮಗಳು ಯಾವುವು?
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ, ಪ್ರತಿ ಎರಡು ವರ್ಷಗಳಿಗೊಮ್ಮೆ, ಪ್ರತಿ ತಂಡವು ತಮ್ಮ ಆಯ್ಕೆಯ ಆರು ತಂಡಗಳ ವಿರುದ್ಧ ತವರು ಮತ್ತು ವಿದೇಶ ಸರಣಿಯನ್ನು ಆಡುತ್ತದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ಗಳ ಪಟ್ಟಿಯಲ್ಲಿ ಹೆಚ್ಚು ಅಂಕಗಳನ್ನು ಹೊಂದಿರುವ ತಂಡವು ಫೈನಲ್ಗೆ ಮುನ್ನಡೆಯುತ್ತದೆ. ಮೂರು ಹೊಸ ತಂಡಗಳ ಸೇರ್ಪಡೆಯೊಂದಿಗೆ, ನಿಯಮಗಳು ಬದಲಾಗಬಹುದು. ಆದಾಗ್ಯೂ, ಹೊಸ ಮೂರು ತಂಡಗಳ ಸೇರ್ಪಡೆಗೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಪಂದ್ಯಾವಳಿಯಲ್ಲಿ ಮೂರು ಸಣ್ಣ ತಂಡಗಳನ್ನು ಸೇರಿಸುವ ಐಸಿಸಿ ಈ ನಿರ್ಧಾರವು ಈ ದೇಶಗಳಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ಪ್ರಯೋಜನಕಾರಿಯಾಗಲಿದೆ.
ಇಲ್ಲಿಯವರೆಗೆ ಮೂರು ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಗೆದ್ದಿವೆ. ನ್ಯೂಜಿಲೆಂಡ್ 2019-2021 ಟೆಸ್ಟ್ ಚಾಂಪಿಯನ್ಶಿಪ್ ಗೆದ್ದರೆ, ಆಸ್ಟ್ರೇಲಿಯಾ 2021-23 ಚಾಂಪಿಯನ್ಶಿಪ್ ಗೆದ್ದಿದೆ. ದಕ್ಷಿಣ ಆಫ್ರಿಕಾ 2023-25 ರಟೆಸ್ಟ್ ಚಾಂಪಿಯನ್ಶಿಪ್ ಗೆದ್ದಿದೆ. ಇನ್ನು ಭಾರತ ಎರಡೂ ಟೆಸ್ಟ್ ಚಾಂಪಿಯನ್ಶಿಪ್ಗಳಲ್ಲಿ ಫೈನಲ್ ತಲುಪಿದೆಯಾದರೂ ಚಾಂಪಿಯನ್ಶಿಪ್ ಗೆಲ್ಲಲು ಸಾಧ್ಯವಾಗಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಉದ್ಯಮಿ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ (Anant Ambani) ಏಪ್ರಿಲ್ 10ರಂದು ತಮ್ಮ 31ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗುಜರಾತ್ನ ಜಾಮ್ನಗರವು ಈಗ ದೇಶದ ಅತ್ಯಂತ ಹೈ-ಪ್ರೊಫೈಲ್ ತಾಣವಾಗಿ ಮಾರ್ಪಟ್ಟಿದೆ. ಕಳೆದ 24 ಗಂಟೆಗಳಲ್ಲಿ ಬಾಲಿವುಡ್ನ ಘಟಾನುಘಟಿ ನಟ-ನಟಿಯರು ಈ ಅದ್ದೂರಿ ಸಮಾರಂಭದಲ್ಲಿ ಭಾಗವಹಿಸಲು ಜಾಮ್ನಗರಕ್ಕೆ ಆಗಮಿಸಿದ್ದಾರೆ. ಶಾರುಖ್ ಖಾನ್, ರಣವೀರ್ ಸಿಂಗ್ (Ranveer Singh), ಸಲ್ಮಾನ್ ಖಾನ್ ಮುಂತಾದವರು ಬಂದಿದ್ದಾರೆ.
ಇತ್ತೀಚೆಗಷ್ಟೇ ‘ಧುರಂಧರ್ 2’ ಮೂಲಕ ಬಾಕ್ಸ್ ಆಫೀಸ್ನಲ್ಲಿ ಮೈಲಿಗಲ್ಲು ಸ್ಥಾಪಿಸಿರುವ ನಟ ರಣವೀರ್ ಸಿಂಗ್, ಜಾಮ್ನಗರದ ಪಾರ್ಟಿಯಲ್ಲಿ ಫುಲ್ ಜೋಶ್ನಲ್ಲಿ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮದ ನಡುವೆ ರಣವೀರ್ ಸಿಂಗ್ ಅವರ ಒಂದು ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ರಣವೀರ್ ಎನರ್ಜಿಗೆ ಫಿದಾ ಆಗಿದ್ದಾರೆ.
ಅನಂತ್ ಅಂಬಾನಿ ಅವರ ಹುಟ್ಟುಹಬ್ಬದ ಸಂಭ್ರಮಕ್ಕಾಗಿ ಮುಂಬೈನ ಖಾಸಗಿ ವಿಮಾನ ನಿಲ್ದಾಣಗಳಿಂದ ಸೆಲೆಬ್ರಿಟಿಗಳ ದಂಡೇ ಪ್ರಯಾಣ ಬೆಳೆಸಿದೆ. ಕಪ್ಪು ಶರ್ಟ್ ಮತ್ತು ನೀಲಿ ಡೆನಿಮ್ ಧರಿಸಿ ಸರಳ ಹಾಗೂ ಸ್ಟೈಲಿಶ್ ಲುಕ್ನಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಂಡರು. ಶಾರುಖ್ ಖಾನ್ ಅವರು ಪತ್ನಿ ಗೌರಿ ಖಾನ್, ಪುತ್ರ ಅಬ್ರಾಮ್ ಮತ್ತು ತಮ್ಮ ಮುದ್ದಿನ ನಾಯಿಯೊಂದಿಗೆ ಜಾಮ್ನಗರಕ್ಕೆ ಆಗಮಿಸಿದರು.
ಸೋಷಿಯಲ್ ಮೀಡಿಯಾ ಸೆನ್ಸೇಷನ್ ಓರ್ಹಾನ್ ಅವತ್ರಮಣಿ ಅಲಿಯಾಸ್ ಒರಿ ಕೂಡ ವಿಭಿನ್ನ ಏರ್ಪೋರ್ಟ್ ಲುಕ್ ಮೂಲಕ ಎಲ್ಲರ ಗಮನ ಸೆಳೆದರು. ಇನ್ನೂ ಅನೇಕ ಸೆಲೆಬ್ರಿಟಿಗಳು ಜಾಮ್ನಗರ್ಗೆ ಬಂದು ಸೇರಿದ್ದಾರೆ. ಎಲ್ಲ ಸ್ಟಾರ್ ಕಲಾವಿದರ ಆಗಮನದಿಂದಾಗಿ ಇಡೀ ಬಾಲಿವುಡ್ ಒಂದೆಡೆ ಸೇರಿದಂತಾಗಿದೆ. ಅನಂತ್ ಅಂಬಾನಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಎಲ್ಲರೂ ಎಂಜಾಯ್ ಮಾಡಲಿದ್ದಾರೆ.
ಅಂಬಾನಿ ಕುಟುಂಬದ ಯಾವುದೇ ದೊಡ್ಡ ಕಾರ್ಯಕ್ರಮಗಳಿರಲಿ, ಅದಕ್ಕೆ ಜಾಮ್ನಗರವೇ ಮೊದಲ ಆಯ್ಕೆ. ರಿಲಯನ್ಸ್ ಸಂಸ್ಥೆಯ ಬೃಹತ್ ಘಟಕಗಳು ಇಲ್ಲಿ ಇರುವುದರಿಂದ ಮತ್ತು ಭದ್ರತೆಯ ದೃಷ್ಟಿಯಿಂದ ಈ ಸ್ಥಳವನ್ನು ಕುಟುಂಬವು ಹೆಚ್ಚು ಇಷ್ಟಪಡುತ್ತದೆ. ಅನಂತ್ ಅಂಬಾನಿ ಅವರ ಈ ಬಾರಿಯ ಜನ್ಮದಿನದ ಸೆಲೆಬ್ರೇಷನ್ ಆಪ್ತರು ಮತ್ತು ಸೆಲೆಬ್ರಿಟಿಗಳ ಜೊತೆ ನಡೆಯುತ್ತಿದೆ. ಅದರ ವೈಭವ ಜೋರಾಗಿದೆ.
ಚೆನ್ನೈ, ಏಪ್ರಿಲ್ 9: ಜಾತ್ಯತೀತ ರಚನೆಯನ್ನು ಉಳಿಸಲು ಶ್ರಮಿಸುತ್ತಿರುವ ನಿಜವಾದ ಕಾಂಗ್ರೆಸ್ ಕಾರ್ಯಕರ್ತರು ನಮ್ಮ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ ಎಂದು ಟಿವಿಕೆ ಮುಖ್ಯಸ್ಥ ಹಾಗೂ ನಟ ವಿಜಯ್ ನೀಡಿದ್ದ ಹೇಳಿಕೆ ತಮಿಳುನಾಡಿನಲ್ಲಿ ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಸ್ಪಷ್ಟನೆ ನೀಡಿದ್ದಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಡಿಎಂಕೆಯೊಂದಿಗೆ ದೃಢವಾಗಿ ನಿಂತಿದೆ. ತಳಮಟ್ಟದ ಕಾಂಗ್ರೆಸ್ ಕಾರ್ಯಕರ್ತರು ಟಿವಿಕೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ವಿಜಯ್ ಹೇಳಿಕೆ ಸಂಪೂರ್ಣ ಸುಳ್ಳು ಎಂದಿದ್ದಾರೆ.
“ವಿಜಯ್ ಒಬ್ಬ ಅಪ್ರಬುದ್ಧ ರಾಜಕಾರಣಿ. ಆ ಟಿಎಂಸಿ (ತೃಣಮೂಲ ಕಾಂಗ್ರೆಸ್) ವಿಜಯ್ ಜೊತೆ ಇರಬಹುದು ಅನಿಸುತ್ತದೆ. ನಮ್ಮ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅವರ ಜೊತೆ ಇಲ್ಲ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಡಿಎಂಕೆ ಜೊತೆಗಿದೆ. ಈ ಬಾರಿ ನಮ್ಮ ಮೈತ್ರಿಕೂಟ ಮೂರನೇ ಎರಡರಷ್ಟು ಬಹುಮತವನ್ನು ಹೊಂದಲಿದೆ” ಎಂದು ಡಿಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಏಪ್ರಿಲ್ 09: 2025-26ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದುಮ ಶೇಕಡಾ 86.48ರಷ್ಟು ಮಕ್ಕಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಬರೆದಿದ್ದ 6,32,200 ಮಂದಿ ಪೈಕಿ 5,46,698 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ದಾಖಲೆ ಮಟ್ಟದಲ್ಲಿ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಏರಿಕೆ ಕಂಡಿದೆ. ಕಳೆದ ವರ್ಷ ಶೇಕಡಾ 73.45ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರೆ, ಪ್ರಸಕ್ತ ಸಾಲಿನಲ್ಲಿ ಶೇಕಡಾ 86ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದ ಸಚಿವ ಮಧು ಬಂಗಾರಪ್ಪ, ವಿದ್ಯಾರ್ಥಿಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ಕಳೆದಬಾರಿಗಿಂತ ಈ ಬಾರಿ ಶೇಕಡಾ 13ರಕ್ಕಿಂತಲೂ ಹೆಚ್ಚು ಪ್ರತಿಶತ ಫಲಿತಾಂಶದಲ್ಲಿ ಸುಧಾರಣೆ ಆಗಿದೆ ಎಂದಿದ್ದಾರೆ.
ಕಲಾ ವಿಭಾಗದಲ್ಲಿ ಶೇ.72.86, ವಾಣಿಜ್ಯ ವಿಭಾಗದಲ್ಲಿ ಶೇ.88.04 ಮತ್ತು ವಿಜ್ಞಾನ ವಿಭಾಗದಲ್ಲಿ ಶೇ.86.48 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಆ ಪೈಕಿ ಶೇ. 83.65ರಷ್ಟು ಬಾಲಕರು ಮತ್ತು ಶೇ. 88.70ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದಾರೆ. 44 ಸಾವಿರ ಮಕ್ಕಳು ಒಂದು ವಿಷಯದಲ್ಲಿ ಫೇಲ್ ಆಗಿದ್ದರೆ, ಎರಡು ಸಬ್ಜೆಕ್ಟ್ಗಳಲ್ಲಿ 18 ಸಾವಿರ ಮಕ್ಕಳು ಅನುತ್ತೀರ್ಣರಾಗಿದ್ದಾರೆ. ಹಾಗೆಯೇ ಎಲ್ಲ ವಿಷಯಗಳಲ್ಲಿಯೂ ಫೇಲ್ ಆದವರ ಸಂಖ್ಯೆ 1,772ಕ್ಕೆ ಇಳಿದಿದೆ ಎಂದು ಅವರು ತಿಳಿಸಿದ್ದಾರೆ. 1,70,529 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 2,95,385 ವಿದ್ಯಾರ್ಥಿಗಳು ಪ್ರಥಮ ದರ್ಜೆ 63,957 ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಮತ್ತು ಶೇಕಡಾ 50ಕ್ಕಿಂತ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳ ಸಂಖ್ಯೆ 63,957 ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಈ ಬಾರಿ ಮೂರನೇ ಪರಿಕ್ಷೆ ಇರುವುದಿಲ್ಲ ಎಂದೂ ಮಧು ಬಂಗಾರಪ್ಪ ತಿಳಿಸಿದ್ದಾರೆ.
ದಕ್ಷಿಣ ಕನ್ನಡದ ಕಾವೂರಿನ ದಿ ಲರ್ನಿಂಗ್ ಸೆಂಟರ್ ಪಿಯು ಕಾಲೇಜಿನ ಪ್ರಿನ್ಸಿಲ್ಲಾ 600ಕ್ಕೆ 599 ಅಂಕ ಪಡೆಯುವ ಮೂಲಕ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಸಾಧನೆ
600ಕ್ಕೆ 600 ಅಂಕ ಪಡೆದ ವಿದ್ಯಾರ್ಥಿಗಳು- 02
600ಕ್ಕೆ 599 ಅಂಕ ಪಡೆದ ವಿದ್ಯಾರ್ಥಿಗಳು- 02
600ಕ್ಕೆ 598 ಅಂಕ ಪಡೆದ ವಿದ್ಯಾರ್ಥಿಗಳು- 06
ಬೆಂಗಳೂರಿನ ವಿವಿ ಪುರಂನ ಎಸ್ಬಿ ಮಹಾವೀರ ಜೈನ್ ಪಿಯು ಕಾಲೇಜಿನ ಅದಿತಿ, ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ದಿಶಾ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕ ಪಡೆದಿದ್ದಾರೆ.
ಕಲಾ ವಿಭಾಗದಲ್ಲಿ ಸಾಧನೆ
600ಕ್ಕೆ 598 ಅಂಕ ಪಡೆದ ವಿದ್ಯಾರ್ಥಿಗಳು- 03
600ಕ್ಕೆ 595 ಅಂಕ ಪಡೆದ ವಿದ್ಯಾರ್ಥಿಗಳು- 05
600ಕ್ಕೆ 594 ಅಂಕ ಪಡೆದ ವಿದ್ಯಾರ್ಥಿಗಳು- 08
ಕೊಟ್ಟೂರಿನ ಇಂದು ಪಿಯು ಕಾಲೇಜಿನ ಅರ್ಚನಾ, ಸಂಗೀತಾ ಮತ್ತು ಕಲಬುರಗಿಯ ಎಸ್ಎಂವಿಟಿ ವಿಜಿ ಮಹಿಳಾ ಪಿಯು ಕಾಲೇಜಿನ ಶ್ರುತಿ 600ಕ್ಕೆ 598 ಅಂಕಗಳನ್ನು ಪಡೆಯುವ ಮೂಲಕ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸಿದ್ದಾರೆ.
ಬಾಲಿವುಡ್ ನಟ ಅರ್ಜುನ್ ಕಪೂರ್ (Arjun Kapoor) ಕಳೆದ ಕೆಲವು ಸಮಯದಿಂದ ಸೋಷಿಯಲ್ ಮೀಡಿಯಾದಲ್ಲಿ ಸತತವಾಗಿ ಟ್ರೋಲಿಂಗ್ ಮತ್ತು ನೆಗೆಟಿವಿಟಿಗೆ ಗುರಿಯಾಗುತ್ತಿದ್ದಾರೆ. ಇತ್ತೀಚೆಗಷ್ಟೇ ತಮ್ಮ ತಾಯಿಯ ಜನ್ಮದಿನದಂದು ಭಾವುಕ ಪೋಸ್ಟ್ ಹಂಚಿಕೊಂಡಿದ್ದ ಅವರು, ಜೀವನವು ತಮಗೆ ‘ಕ್ರೂರವಾಗಿ ವರ್ತಿಸುತ್ತಿದೆ’ ಎಂದು ಬರೆದುಕೊಂಡಿದ್ದರು. ಇದೀಗ ಅರ್ಜುನ್ ಹಂಚಿಕೊಂಡಿರುವ ಮತ್ತೊಂದು ಗೂಢಾರ್ಥದ ಸಂದೇಶವು ಅಭಿಮಾನಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ.
ಗುರುವಾರ (ಏಪ್ರಿಲ್ 9) ಅರ್ಜುನ್ ಕಪೂರ್ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಒಂದು ಸಾಲನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, ‘ಅಂತ್ಯವನ್ನು ಒಪ್ಪಿಕೊಳ್ಳಿ, ಅದು ನೀವು ಬಯಸಿದ ರೀತಿಯಲ್ಲಿ ಕೊನೆಗೊಳ್ಳದಿದ್ದರೂ ಸಹ’ ಎಂದು ಬರೆಯಲಾಗಿದೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಅರ್ಜುನ್ ಯಾವುದೋ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆಯೇ ಅಥವಾ ಅವರು ಮಾನಸಿಕವಾಗಿ ಕುಗ್ಗಿದ್ದಾರೆಯೇ ಎಂಬ ಚರ್ಚೆ ಆರಂಭವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಅರ್ಜುನ್ ಅವರ ಈ ಪೋಸ್ಟ್ ಬಗ್ಗೆ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. ನಟನ ಪರವಾಗಿ ಅನೇಕರು ಧ್ವನಿ ಎತ್ತಿದ್ದಾರೆ. ‘ಅರ್ಜುನ್ ಈ ವಿಷಪೂರಿತ ಚಿತ್ರರಂಗದಿಂದ ಹೊರಬಂದು ಲೈಮ್ಲೈಟ್ನಿಂದ ದೂರವಿರುವುದು ಅವರ ಆರೋಗ್ಯಕ್ಕೆ ಒಳ್ಳೆಯದು’ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬ ಅಭಿಮಾನಿ, ‘ಒಬ್ಬರನ್ನು ಟ್ರೋಲ್ ಮಾಡುವುದಕ್ಕೂ ಒಂದು ಮಿತಿ ಇರುತ್ತದೆ. ಕಂಪ್ಯೂಟರ್ ಪರದೆಯ ಹಿಂದೆ ಕುಳಿತು ಟೀಕಿಸುವುದು ಸುಲಭ. ನಿಮಗೆ ಅವರ ನಟನೆ ಇಷ್ಟವಿಲ್ಲದಿದ್ದರೆ ಸಿನಿಮಾ ನೋಡಬೇಡಿ. ಆದರೆ ಸತತವಾಗಿ ನಿಂದಿಸುವುದು ಸರಿಯಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ‘ಅವರು ಮಾನಸಿಕವಾಗಿ ಕಿರಿಕಿರಿ ಅನುಭವಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಅನಾಹುತ ಸಂಭವಿಸುವ ಮುನ್ನ ಟ್ರೋಲಿಂಗ್ ನಿಲ್ಲಿಸಿ’ ಎಂದು ಹಲವರು ಎಚ್ಚರಿಸಿದ್ದಾರೆ.
ಅರ್ಜುನ್ ಕಪೂರ್ ಅವರ ವೃತ್ತಿಜೀವನವು ಸದ್ಯಕ್ಕೆ ಸಂಕಷ್ಟದಲ್ಲಿದೆ. 2025ರಲ್ಲಿ ಬಿಡುಗಡೆಯಾದ ‘ಮೇರೆ ಹಸ್ಬೆಂಡ್ ಕಿ ಬಿವಿ’ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಹೀನಾಯವಾಗಿ ಸೋಲನುಭವಿಸಿತು. ಸುಮಾರು 12.85 ಕೋಟಿ ರೂಪಾಯಿ ಮಾತ್ರ ಗಳಿಸಿದ ಈ ಚಿತ್ರದ ನಂತರ ಅರ್ಜುನ್ ಯಾವುದೇ ಹೊಸ ಸಿನಿಮಾಗಳನ್ನು ಘೋಷಿಸಿಲ್ಲ. ಇದರಿಂದ ಅವರು ಕುಗ್ಗಿರುವ ಸಾಧ್ಯತೆ ಇದೆ.
ದಾವಣಗೆರೆ, (ಏಪ್ರಿಲ್ 09): ಕಾಂಗ್ರೆಸ್ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಉಪಚನಾವಣೆ (Davanagere south By Election) ಎದುರಾಗಿದ್ದು, ಇಂದು (ಏಪ್ರಿಲ್ 09) ಮತದಾನ ನಡೆದಿದೆ. ಮತದಾರರು ಸಹ ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿ ಓಟ್ ಮಾಡುತ್ತಿದ್ದಾರೆ. ಸಂಜೆ 5ರವರೆಗೆ ದಾವಣಗೆರೆ ದಕ್ಷಿಣದಲ್ಲಿ ಶೇಕಡಾ 63.04% ಮತದಾನವಾಗಿದೆ. ಇನ್ನು ಇದರ ಮಧ್ಯೆ ಮಸೀದಿಯಿಂದ ಮಹತ್ವದ ಸಂದೇಶವೊಂದು ಮೊಳಗಿದೆ.ಯಾರು ಮತದಾನ ಮಾಡಿಲ್ಲವೋ ಅವರು ಹೋಗಿ ಮತದಾನ ಮಾಡಿ ಎಂದು ಮಸೀದಿಯ ಮೈಕ್ನಲ್ಲಿ ಸಂದೇಶ ನೀಡಲಾಗಿದೆ. ದಾವಣಗೆರೆಯ ಆಜಾದ್ನಗರದ ಮಿಲ್ಲತ್ ಕಾಲೇಜು ಬಳಿಯಿರುವ ಮಸೀದಿ ಮೈಕ್ ಮೂಲಕ ಸಂದೇಶ ನೀಡಲಾಗಿದ್ದು, ಸಂಜೆ 6ರವರೆಗೆ ಮತದಾನಕ್ಕೆ ಅವಕಾಶವಿದೆ, ಎಲ್ಲರೂ ಮತದಾನ ಮಾಡಿ. ಮತದಾನ ಮಾಡದವರನ್ನು ಕರೆದುಕೊಂಡು ಹೋಗಿ ವೋಟ್ ಹಾಕಿಸಿ ಎಂದು ಮೈಕ್ನಲ್ಲಿ ಹೇಳಿರುವುದು ವಿಶೇಷ.
ವಾಷಿಂಗ್ಟನ್, ಏಪ್ರಿಲ್ 9: ಟ್ಯಾರಿಫ್ಗಳ ಬರೆ ಎಳೆದು ಜಗತ್ತನ್ನು ಅಲುಗಾಡಿಸಿದ್ದ ಅಮೆರಿಕದ ಆರ್ಥಿಕತೆ (US economy) ಮಂದಗೊಂಡಿದೆ. 2025ರ ಕ್ಯಾಲಂಡರ್ ವರ್ಷದ ಕೊನೆಯ ಕ್ವಾರ್ಟರ್ನಲ್ಲಿ (ಅಕ್ಟೋಬರ್-ಡಿಸೆಂಬರ್) ಅಮೆರಿಕದ ಜಿಡಿಪಿ ಶೇ. 0.50ರಷ್ಟು ಮಾತ್ರ ಹೆಚ್ಚಿದೆ. ಅಮೆರಿಕದ ವಾಣಿಜ್ಯ ಇಲಾಖೆ ನಿರೀಕ್ಷಿಸಿದುದಕ್ಕಿಂತಲೂ ಕಡಿಮೆ ವೇಗದಲ್ಲಿ ಆರ್ಥಿಕ ಬೆಳವಣಿಗೆ ದಾಖಲಾಗಿದೆ. ಇಲಾಖೆಯು ಈ ಅವಧಿಯಲ್ಲಿ ಶೇ. 0.7ರಷ್ಟು ಜಿಡಿಪಿ ದರದ ನಿರೀಕ್ಷೆ ಮಾಡಿತ್ತು.
ಭಾರತದ ಆರ್ಥಿಕತೆಯು ಇದೇ ಅವಧಿಯಲ್ಲಿ (ಅಕ್ಟೋಬರ್-ಡಿಸೆಂಬರ್) ಶೇ. 7.8ರಷ್ಟು ಬೆಳವಣಿಗೆ ಹೊಂದಿದ್ದು ಗಮನಾರ್ಹ. ಹಣಕಾಸು ವರ್ಷದ (2025-26) ಮೊದಲ ಮೂರು ಕ್ವಾರ್ಟರ್ಗಳಲ್ಲಿ ಭಾರತ ಕ್ರಮವಾಗಿ ಶೇ. 7.8, ಶೇ. 8.2 ಮತ್ತು ಶೇ. 7.8ರಷ್ಟು ಆರ್ಥಿಕ ಬೆಳವಣಿಗೆ ಪಡೆದಿದೆ. ಆದರೆ, ಅಮೆರಿಕ, ಯೂರೋಪ್ ಇತ್ಯಾದಿ ಮುಂದುವರಿದ ದೇಶಗಳ ಆರ್ಥಿಕತೆ ಬಹಳ ನಿಧಾನಗೊಂಡಿದೆ. ಚೀನಾದ ಜಿಡಿಪಿ ದರ ಶೇ. 4ರ ಆಸುಪಾಸಿನಲ್ಲಿದೆ.
ಅಮೆರಿಕದ ಸರಕು ಮತ್ತು ಸೇವೆಗಳ ಉತ್ಪನ್ನದ ಮೊತ್ತವು 2ನೇ ಕ್ವಾರ್ಟರ್ ಮತ್ತು 3ನೇ ಕ್ವಾರ್ಟರ್ನಲ್ಲಿ ಕ್ರಮವಾಗಿ ಶೇ. 3.8 ಮತ್ತು ಶೇ. 4.4ರಷ್ಟು ಹೆಚ್ಚಿತ್ತು. ಆದರೆ, ನಾಲ್ಕನೇ ಕ್ವಾರ್ಟರ್ನಲ್ಲಿ ಬಹಳ ಕಡಿಮೆಗೊಂಡಿದೆ.
ಸರ್ಕಾರದ ವೆಚ್ಚ ಮತ್ತು ಹೂಡಿಕೆ ಕೂಡ ಕಡಿಮೆಗೊಂಡಿದೆ. ಇದರಿಂದ ಜಿಡಿಪಿ ಬೆಳವಣಿಗೆಯಲ್ಲಿ ಶೇ. 1.16ರಷ್ಟು ನಷ್ಟ ಆಗಿರಬಹುದು ಎಂಬುದು ಸರ್ಕಾರದ ಎಣಿಕೆ. ಗ್ರಾಹಕ ವೆಚ್ಚವೂ ಕೂಡ ಶೇ. 1.9ರಷ್ಟು ಹೆಚ್ಚಿದೆ. ಹಿಂದಿನ ಕ್ವಾರ್ಟರ್ನಲ್ಲಿ ಇದು ಶೇ. 3.5 ಇತ್ತು.
2025ರಲ್ಲಿ ಅಮೆರಿಕದ ಆರ್ಥಿಕತೆ ಒಟ್ಟಾರೆಯಾಗಿ 2.1ರಷ್ಟು ಬೆಳವಣಿಗೆ ದಾಖಲಿಸಿದೆ. 2023 ಮತ್ತು 2024ರಲ್ಲಿ ಶೇ. 2.9 ಮತ್ತು ಶೇ. 2.8ರಷ್ಟು ಜಿಡಿಪಿ ಹೆಚ್ಚಳ ಕಂಡಿತ್ತು ಅಮೆರಿಕ. 2025ರಲ್ಲಿ ಮಂದ ಬೆಳವಣಿಗೆ ಕಂಡು ಬಂದಿದೆ. 2026ರ ಹೊರನೋಟವೂ ಆಶಾದಾಯಕವಾಗಿಲ್ಲ. ಇರಾನ್ ಯುದ್ಧಕ್ಕೆ ಕೈಹಾಕಿ ಅಮೆರಿಕ ಸಿಕ್ಕಾಪಟ್ಟೆ ನಷ್ಟ ಮಾಡಿಕೊಂಡಿದೆ. ಎಐ ಅಳವಡಿಕೆಯಿಂದ ಕಾರ್ಪೊರೇಟ್ ವಲಯವು ಲೇ ಆಫ್ ಮೇಲೆ ಲೇ ಆಫ್ ಮಾಡುತ್ತಿದೆ. ಇವೆಲ್ಲವೂ ಅಮೆರಿಕಕ್ಕೆ ಮತ್ತಷ್ಟು ಹಿನ್ನಡೆ ತರುವ ನಿರೀಕ್ಷೆ ಇದೆ.
ಇಂದು ಈಡನ್ ಗಾರ್ಡನ್ಸ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (KKR vs LSG) ಮುಖಾಮುಖಿಯಾಗಿವೆ. ಇದು ಈ ಆವೃತ್ತಿಯ 15 ನೇ ಪಂದ್ಯವಾಗಿದೆ. ಇಲ್ಲಿಯವರೆಗೆ ಆತಿಥೇಯ ಕೆಕೆಆರ್ ಒಂದೇ ಒಂದು ಪಂದ್ಯವನ್ನು ಗೆಲ್ಲದೆ ಗೆಲುವಿನ ಖಾತೆ ತೆರೆಯಲು ಎದುರು ನೋಡುತ್ತಿದೆ. ಇತ್ತ ಲಕ್ನೋ ತಂಡ ತನ್ನ ಕೊನೆಯ ಪಂದ್ಯವನ್ನು ಗೆದ್ದು ಆತ್ಮವಿಶ್ವಾಸದಲ್ಲಿ ಬೀಗುತ್ತಿದೆ. ಹೀಗಾಗಿ ಇಂದಿನ ಪಂದ್ಯ ಗೆಲುವಿನ ದೃಷ್ಟಯಿಂದ ಉಭಯ ತಂಡಗಳಿಗೂ ಅತ್ಯಂತ ಮಹತ್ವದಾಗಿದೆ. ಲಕ್ನೋಗೆ ಹೋಲಿಸಿದರೆ, ಕೆಕೆಆರ್ ತಂಡ ಎಲ್ಲಾ ವಿಭಾಗದಲ್ಲೂ ಕಳಪೆ ಪ್ರದರ್ಶನದಿಂದ ಸೊರುಗುತ್ತಿದೆ. ಹೀಗಾಗಿ ಕೆಕೆಆರ್ ತಂಡದ ಮೇಲೆ ಈ ಪಂದ್ಯದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಇಡಲಾಗಿದೆ.
ಟಾಸ್ ಗೆದ್ದ ಲಕ್ನೋ
ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ನಾಯಕ ರಿಷಭ್ ಪಂತ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆ ಬಳಿಕ ಪ್ಲೇಯಿಂಗ್ 11 ಬಗ್ಗೆ ಮಾತನಾಡಿದ ಪಂತ್ ಆಡುವ 11ರ ಬಳಗದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ ಎಂದಿದ್ದಾರೆ. ಅಂದರೆ ಕಳೆದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ತಂಡವೇ ಈ ಪಂದ್ಯದಲ್ಲೂ ಆಡುತ್ತಿದೆ. ಏತನ್ಮಧ್ಯೆ, ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಅಜಿಂಕ್ಯ ರಹಾನೆ ಬ್ಲೆಸಿಂಗ್ ಮುಜರಬಾನಿಗೆ ವಿಶ್ರಾಂತಿ ನೀಡಲಾಗಿದ್ದು, ಅವರ ಸ್ಥಾನದಲ್ಲಿ ಸುನಿಲ್ ನರೈನ್ ಆಡುತ್ತಿರುವುದಾಗಿ ಹೇಳಿದ್ದಾರೆ.
ಮುಖಾಮುಖಿ ದಾಖಲೆ
ಐಪಿಎಲ್ ಇತಿಹಾಸದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ಆರು ಪಂದ್ಯಗಳು ನಡೆದಿವೆ. ಇದರಲ್ಲಿ, ಲಕ್ನೋ ತಂಡವು ಸ್ಪಷ್ಟ ಪ್ರಾಬಲ್ಯವನ್ನು ಸಾಧಿಸಿರುವುದನ್ನು ಕಾಣಬಹುದಾಗಿದೆ. ಲಕ್ನೋ ತಂಡ ನಾಲ್ಕು ಪಂದ್ಯಗಳನ್ನು ಗೆದ್ದಿದ್ದರೆ, ಕೆಕೆಆರ್ ಕೇವಲ ಎರಡು ಪಂದ್ಯವನ್ನು ಗೆದ್ದಿದೆ. ಈಡನ್ ಗಾರ್ಡನ್ಸ್ಗೆ ಸಂಬಂಧಿಸಿದಂತೆ, ಇಲ್ಲಿ ನಡೆದ ಮೂರು ಪಂದ್ಯಗಳಲ್ಲಿ ಲಕ್ನೋ ಎರಡು ಬಾರಿ ಗೆದ್ದಿದೆ. ಅಂಕಿಅಂಶಗಳ ಪ್ರಕಾರ, ಲಕ್ನೋ, ಕೆಕೆಆರ್ ಮೇಲೆ ಪ್ರಾಬಲ್ಯ ಹೊಂದಿದೆ ಎಂಬುದನ್ನು ಗಮನಿಸಬಹುದಾಗಿದೆ.
ಬೆಂಗಳೂರು, (ಏಪ್ರಿಲ್ 09): ಪ್ರಸಕ್ತ 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ- 1 ರ ಫಲಿತಾಂಶ (Karnataka 2nd PUC Results 2026) ಏಪ್ರಿಲ್ 9ರ ಗುರುವಾರ ಮಧ್ಯಾಹ್ನ 3 ಗಂಟೆಗೆ ಆನ್ಲೈನ್ನಲ್ಲಿ ಪ್ರಕಟಗೊಂಡಿದ್ದು, ಬಳಿಕ ಇದೀಗ ಶಿಕ್ಷಣ ಸಚಿವ ಮಧುಬಂಗಾರಪ್ಪ (Madhu Bangarappa) ಅವರು ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಫಲಿತಾಂಶ ಪ್ರಕಟಿಸಿದ್ದು, ಈ ಬಾರಿ ದಾಖಲೆಯ ರಿಸಲ್ಟ್ ಬಂದಿದೆ. ಹೌದು…2025-26ನೇ ಸಾಲಿನ ಸೆಕೆಂಡ್ ಪಿಯುಸಿ ಪರೀಕ್ಷೆಯಲ್ಲಿ ಶೇ.86.48ರಷ್ಟು ಮಕ್ಕಳು ಉತ್ತೀರ್ಣರಾಗಿದ್ದಾರೆ. ಅಂದರೆ 7,10,363 ವಿದ್ಯಾರ್ಥಿಗಳ ಪೈಕಿ 6.10 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಳೆದ ವರ್ಷ ಶೇ.73.45ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಇದರೊಂದಿಗೆ ಈ ಬಾರಿ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ಇನ್ನು ಈ ಬಾರಿಯ ಫಲಿತಾಂಶದಲ್ಲಿ ಉಡುಪಿ ಪ್ರಥಮ ಸ್ಥಾನದಲ್ಲಿದ್ದರೆ, ಯಾದಗಿರಿಗೆ ಮತ್ತೆ ಕೊನೆ ಸ್ಥಾನ.
ದ್ವಿತೀಯ ಪಿಯು ಫಲಿತಾಂಶದ ವಿವರ
ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮತ್ತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ.88.07ರಷ್ಟು ವಿದ್ಯಾರ್ಥಿನಿಯರು ಪಾಸಾಗಿದ್ದರೆ, ಶೇಕಡಾ 83.65 ವಿದ್ಯಾರ್ಥಿಗಳು ಪಾಸಾಗಿದ್ದಾರೆ.ಇನ್ನು ಕಲಾ ವಿಭಾಗದಲ್ಲಿ ಶೇಕಡಾ 72.86ರಷ್ಟು ಫಲಿತಾಂಶ ಬಂದಿದ್ದರೆ, ವಾಣಿಜ್ಯ ವಿಭಾಗದಲ್ಲಿ ಶೇಕಡಾ 88.04ರಷ್ಟು ಫಲಿತಾಂಶ ಹಾಗೂ ವಿಜ್ಞಾನ ವಿಭಾಗದಲ್ಲಿ ಶೇಕಡಾ 91.69ರಷ್ಟು ಫಲಿತಾಂಶ ಬಂದಿದೆ ಎಂದು ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದರು.
ಯಾವ ಜಿಲ್ಲೆ ಎಷ್ಟನೇ ಸ್ಥಾನ?
ಕಳೆದ ಬಾರಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ಯಾದಗಿರಿ ಕೊನೆ ಸ್ಥಾನದಲ್ಲಿತ್ತು. ಈ ಬಾರಿಯೂ ಸಹ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಪ್ರಥಮ, ಯಾದಗಿರಿ ಕೊನೇ ಸ್ಥಾನದಲ್ಲಿದೆ. ಶೇಕಡಾ 9639 ಫಲಿತಾಂಶ ಪಡೆದು ಉಡುಪಿ ಜಿಲ್ಲೆ ರಾಜ್ಯಕ್ಕೆ ಮತ್ತೆ ಪ್ರಥಮ ಸ್ಥಾನ ಪಡೆದುಕೊಂಡರೆ, ಉತ್ತರ ಕನ್ನಡ ಜಿಲ್ಲೆ ಶೇಕಡಾ 96.35 ಫಲಿತಾಂಶದ ಮೂಲಕ ರಾಜ್ಯದಲ್ಲೇ ಎರಡನೇ ಸ್ಥಾನ ಪಡೆದಿದೆ. ಇನ್ನು ಹಾಸನ ಯಾದಗಿರಿ ಜಿಲ್ಲೆ ಶೇಕಡಾ 71.21 ಫಲಿತಾಂಶದ ಮೂಲಕ ರಾಜ್ಯಕ್ಕೆ ಕೊನೆಯ ಸ್ಥಾನದಲ್ಲಿದೆ.