ಪೇಂಟ್ ಹೊಡೆಯುವ ನೆಪದಲ್ಲಿ ಬಂದವರು ಕೇವಲ 5 ನಿಮಿಷದ ಗ್ಯಾಪ್‌ನಲ್ಲಿ 25 ಲಕ್ಷ ರೂ. ಮೌಲ್ಯ್​​ದ ಚಿನ್ನಾಭರಣದೊಂದಿಗೆ ಎಸ್ಕೇಪ್ – Kannada News

ಪೇಂಟ್ ಹೊಡೆಯುವ ನೆಪದಲ್ಲಿ ಚಿನ್ನ ದೋಚಿದ ಕಳ್ಳರು Image Credit source: Tv9 kannada

ಬೆಂಗಳೂರು, ಜೂ.8: ಮನೆಗೆ ಕೆಲಸಗಾರರನ್ನು ಸೇರಿಸಿಕೊಳ್ಳುವ ಮುನ್ನ ಹಲವು ಬಾರಿ ಯೋಚನೆ ಮಾಡಬೇಕು. ಇದೀಗ ಸಿಲಿಕಾನ್ ಸಿಟಿಯಲ್ಲಿ ನಡೆದ ಘಟನೆಯೊಂದು ಭಾರೀ ಅಘಾತಗೊಳಿಸಿದೆ. ಮನೆಗೆ ಬಣ್ಣ ಬಳಿಯುವ ನೆಪದಲ್ಲಿ ಬಂದ ಪೇಂಟರ್‌ಗಳು ಮಾಲೀಕರ ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡು ಬರೋಬ್ಬರಿ 25 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ರಾಮಾಂಜನೇಯ ಬಡಾವಣೆಯಲ್ಲಿ ನಡೆದಿದೆ. ಇಲ್ಲಿನ ನಿವಾಸಿಗಳಾದ ನಿತ್ಯಾ ಮತ್ತು ಚಂದ್ರಶೇಖರ್ ದಂಪತಿಗಳ ಮನೆಯಲ್ಲೇ ಈ ದರೋಡೆ ನಡೆದಿದ್ದು, ಕದೀಮರ ಕೈಚಳಕಕ್ಕೆ ದಂಪತಿಗಳು ಕಣ್ಣೀರಿಡುವಂತಾಗಿದೆ.

ನಿತ್ಯಾ ಹಾಗೂ ಚಂದ್ರಶೇಖರ್ ದಂಪತಿಗಳು ರಾಮಾಂಜನೇಯ ಬಡಾವಣೆಯಲ್ಲಿ ಎರಡು ಅಂತಸ್ತಿನ ಮನೆ ಕಟ್ಟಿಸಿದ್ದರು. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಇವರ ಮನೆಯ ಮೊದಲ ಮಹಡಿಯಲ್ಲಿದ್ದ ಬಾಡಿಗೆದಾರರು ಖಾಲಿ ಮಾಡಿದ್ದರು. ಇದನ್ನು ಗಮನಿಸಿದ್ದ ಪೇಂಟರ್ ಲಿಂಗರಾಜು ಎಂಬಾತ, ಮನೆ ಮಾಲೀಕ ಚಂದ್ರಶೇಖರ್ ಅವರನ್ನು ಭೇಟಿಯಾಗಿ, ನಿಮ್ಮ ಮನೆಗೆ ನಾವೇ ಕಡಿಮೆ ದರದಲ್ಲಿ ಪೇಂಟ್ ಮಾಡಿಕೊಡುತ್ತೇವೆ ಎಂದು ನಂಬಿಸಿ ತನ್ನ ಮೊಬೈಲ್ ನಂಬರ್ ನೀಡಿದ್ದನು. ಎರಡು ದಿನಗಳ ಬಳಿಕ ಚಂದ್ರಶೇಖರ್ ಅವರು ಲಿಂಗರಾಜುವಿಗೆ ಕರೆ ಮಾಡಿ ಬಣ್ಣ ಬಳಿಯಲು ಒಪ್ಪಿಗೆ ನೀಡಿದ್ದರು.

ಇನ್ನು ಕೆಲಸ ಆರಂಭಿಸಬೇಕು ಎಂದು ಲಿಂಗರಾಜು ತನ್ನ ಜೊತೆಗೆ ಪವನ್ ಕುಮಾರ್, ಮಂಜುನಾಥ್ ಮತ್ತು ವೆಂಕಟೇಶ್ ಎಂಬ ಮೂವರು ಕೆಲಸಗಾರರನ್ನು ಕರೆತಂದು ಮೊದಲ ಮಹಡಿಗೆ ಪೇಂಟ್ ಮಾಡಿಸಿದ್ದನು. ಕೆಲಸ ಚೆನ್ನಾಗಿ ಮಾಡಿದ್ದರಿಂದ, ಮಾಲೀಕರು ತಾವು ವಾಸವಿದ್ದ ಕೆಳಮಹಡಿಯ ಕಿಟಕಿಗಳಿಗೂ ಬಣ್ಣ ಬಳಿಯುವಂತೆ ತಿಳಿಸಿದರು. ನಂತರ ಪೇಂಟರ್‌ಗಳು ನಿತ್ಯಾ ದಂಪತಿಗಳು ವಾಸವಿದ್ದ ಬೆಡ್‌ರೂಂಗೆ ಪೇಂಟ್ ಮಾಡಲು ಹೋಗಿದ್ದಾರೆ. ಈ ವೇಳೆ ಬೆಡ್‌ ರೂಮ್​​​​ ಒಳಗಡೆ ಪೇಂಟ್ ನಡೆಯುತ್ತಿದ್ದಾಗ ಹೊರಗಡೆ ಮಗು ಜೋರಾಗಿ ಅಳುವ ಶಬ್ದ ಕೇಳಿಸಿದೆ. ತಾಯಿ ನಿತ್ಯಾ ಅವರು ಮಗುವನ್ನು ಸಮಾಧಾನಪಡಿಸಲು ರೂಮ್‌ನಿಂದ ಹೊರಗೆ ಹೋಗಿ ವಾಪಸ್ ಬರುವಷ್ಟರಲ್ಲಿ, ಪೇಂಟರ್‌ಗಳು ತಮ್ಮ ಕೈಚಳಕ ತೋರಿಸಿದ್ದರು. ಕೇವಲ ಐದಾರು ನಿಮಿಷಗಳ ಗ್ಯಾಪ್‌ನಲ್ಲಿ ಬೀರುವಿನಲ್ಲಿದ್ದ ಸುಮಾರು 254 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿ ಜಾಗ ಖಾಲಿ ಮಾಡಿದ್ದಾರೆ.

ಇದನ್ನೂ ಓದಿ: ಆಯುಷ್ಮಾನ್ ಹೆಸರಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡಿದರೆ ಖಾಸಗಿ ಆಸ್ಪತ್ರೆಗಳ ಪರವಾನಗಿ ರದ್ದು: ಸಚಿವ ಯು.ಟಿ.ಖಾದರ್ ಖಡಕ್ ಎಚ್ಚರಿಕೆ

ಕೆಲಸ ಮುಗಿಯುವ ಮುನ್ನವೇ ಪೇಂಟರ್‌ಗಳು ದಿಢೀರ್ ನಾಪತ್ತೆಯಾಗಿದ್ದನ್ನು ಕಂಡು ಅನುಮಾನಗೊಂಡ ನಿತ್ಯಾ ಅವರು ರೂಮ್​​​ನ ಬೀರು ಪರಿಶೀಲಿಸಿದಾಗ ಕಳ್ಳತನ ಬೆಳಕಿಗೆ ಬಂದಿದೆ. ಕದ್ದ ಆಭರಣಗಳ ಒಟ್ಟು ಮೌಲ್ಯ ಸುಮಾರು 25 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಇಡೀ ಕುಟುಂಬಸ್ಥರು ಕಣ್ಣೀರು ಹಾಕುತ್ತಾ ಕದ್ದ ಒಡವೆಗಳನ್ನು ಪತ್ತೆಹಚ್ಚಿ ಕೊಡುವಂತೆ ಪೊಲೀಸರ ಬಳಿ ಅಳಲು ತೋಡಿಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸದ್ಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಲಿಂಗರಾಜು ಮತ್ತು ಆತನ ಗ್ಯಾಂಗ್‌ಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಷ್ಯಾದಿಂದ ತೈಲ ಖರೀದಿಸಬೇಡಿ ಎಂದು ಭಾರತಕ್ಕೆ ಯಾರೂ ಹೇಳಿಲ್ಲ; ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟನೆ – Kannada News

ನವದೆಹಲಿ, ಜೂನ್ 8: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಅವರು ರಷ್ಯಾದಿಂದ ಕಚ್ಚಾ ತೈಲ ಖರೀದಿ ಮತ್ತು ಪಾಶ್ಚಿಮಾತ್ಯ ದೇಶಗಳ ನಿರ್ಬಂಧಗಳ ಕುರಿತು ನೀಡಿರುವ ಮಹತ್ವದ ಹೇಳಿಕೆ ನೀಡಿದ್ದಾರೆ. ‘ಭಾರತವು ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸಬಾರದು ಎಂದು ಯಾವುದೇ ದೇಶ ಅಥವಾ ಜಾಗತಿಕ ಶಕ್ತಿಯು ನಮಗೆ ಅಧಿಕೃತವಾಗಿ ಆದೇಶಿಸಿಲ್ಲ ಅಥವಾ ನಿರ್ಬಂಧ ಹೇರಿಲ್ಲ. ಭಾರತವು ಒಂದು ಸಾರ್ವಭೌಮ ರಾಷ್ಟ್ರವಾಗಿದ್ದು, ತನ್ನ ಇಂಧನ ಭದ್ರತೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ’ ಎಂದು ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟಪಡಿಸಿದ್ದಾರೆ.

‘ಪಾಶ್ಚಿಮಾತ್ಯ ದೇಶಗಳು ರಷ್ಯಾದ ಕೆಲವು ತೈಲ ಕಂಪನಿಗಳು ಅಥವಾ ಹಡಗುಗಳ ಮೇಲೆ ನಿರ್ಬಂಧಗಳನ್ನು ಹೇರಿದ್ದರೂ, ಭಾರತಕ್ಕೆ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವಲ್ಲಿ ಯಾವುದೇ ತಾಂತ್ರಿಕ ಅಥವಾ ಕಾನೂನು ಸಮಸ್ಯೆಗಳು ಎದುರಾಗಿಲ್ಲ ಎಂದು ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಪೂರೈಕೆಗೆ ಯಾವುದೇ ಧಕ್ಕೆಯಾಗದಂತೆ ಮತ್ತು ಭಾರತದ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಇಂಧನ ಸಿಗುವಂತೆ ನೋಡಿಕೊಳ್ಳಲು ಭಾರತವು ಎಲ್ಲಾ ಕಾನೂನು ಚೌಕಟ್ಟುಗಳಡಿಯೇ ವ್ಯಾಪಾರವನ್ನು ಮುಂದುವರಿಸಿದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ವಿದೇಶಿ ಒತ್ತಡಕ್ಕೆ ಭಾರತ ಬಗ್ಗುವುದಿಲ್ಲ; ರಷ್ಯಾದಿಂದ ತೈಲ ಖರೀದಿ ವಿಚಾರದಲ್ಲಿ ಟ್ರಂಪ್‌ಗೆ ಪುಟಿನ್ ತಿರುಗೇಟು

ಹಾಗೇ, ಭಾರತವು ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಖರೀದಿಸುತ್ತಿರುವುದನ್ನು ಸಚಿವ ಹರ್ದೀಪ್ ಸಿಂಗ್ ಪುರಿ ಸಮರ್ಥಿಸಿಕೊಂಡಿದ್ದಾರೆ. ‘ಭಾರತದಂತಹ ದೊಡ್ಡ ಜನಸಂಖ್ಯೆಯ ದೇಶದಲ್ಲಿ ಇಂಧನ ಬೆಲೆಗಳು ನಿಯಂತ್ರಣದಲ್ಲಿರಲು ಈ ಖರೀದಿ ಅತಿ ಅಗತ್ಯವಾಗಿದೆ. ಭಾರತವು ರಷ್ಯಾದ ತೈಲವನ್ನು ಖರೀದಿಸದಿದ್ದರೆ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಗಗನಕ್ಕೇರುತ್ತಿದ್ದವು. ಇದು ಪರೋಕ್ಷವಾಗಿ ಜಾಗತಿಕ ಇಂಧನ ಮಾರುಕಟ್ಟೆಯನ್ನು ಸ್ಥಿರವಾಗಿಡಲು ಸಹಾಯ ಮಾಡಿದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಗ್ರಾಹಕರನ್ನು ರಕ್ಷಿಸುವುದು ಪ್ರಧಾನಿ ಮೋದಿಯವರಿಗೆ ಕೇವಲ ರಾಜಕೀಯ ಘೋಷಣೆಯಲ್ಲ, ಅದೊಂದು ಅವರ ಪರಮ ಬದ್ಧತೆಯಾಗಿದೆ. ಜಾಗತಿಕ ನಾಯಕರೊಂದಿಗೆ ಪ್ರಧಾನಿ ಮೋದಿ ಹೊಂದಿರುವ ಅಪ್ರತಿಮ ರಾಜತಾಂತ್ರಿಕ ಸಂಬಂಧಗಳು ಮತ್ತು ವಿಶ್ವದಾದ್ಯಂತ ಇಂಧನ ಪಾಲುದಾರಿಕೆಯನ್ನು ವಿಸ್ತರಿಸಲು ಅವರು ನಡೆಸಿದ ಪ್ರಯತ್ನಗಳೇ ಇದಕ್ಕೆ ಕಾರಣ ಎಂದು ಪುರಿ ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ಇಂಧನ ಬಿಕ್ಕಟ್ಟಿನ ಮಧ್ಯೆ ಭಾರತಕ್ಕೆ ಗುಡ್ ನ್ಯೂಸ್: ಅಂಡಮಾನ್ ಸಮುದ್ರದಲ್ಲಿ ಬೃಹತ್ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆ

ಭಾರತದ ಇಂಧನ ನೀತಿಯು ಕೇವಲ ತನ್ನ ರಾಷ್ಟ್ರೀಯ ಹಿತಾಸಕ್ತಿ, ಬೆಲೆಯ ಅನುಕೂಲ ಮತ್ತು ದೇಶದ ಜನರ ಅಗತ್ಯಗಳನ್ನು ಆಧರಿಸಿದೆಯೇ ಹೊರತು ಯಾವುದೇ ಬಾಹ್ಯ ಒತ್ತಡಗಳಿಗೆ ಮಣಿಯುವುದಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಫೋಕ್ಸೋ ಕೇಸ್: ಬಿಎಸ್ ಯಡಿಯೂರಪ್ಪಗೆ ರಿಲೀಫ್ ನೀಡಿದ ಹೈಕೋರ್ಟ್​ – Kannada News

ಬೆಂಗಳೂರು, ಜೂನ್ 08): ಪೋಕ್ಸೋ ಪ್ರಕರಣಕ್ಕೆ  (pocso case) ಸಂಬಂಧಿಸಿದಂತೆ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ  (BS Yediyurappa) ಅವರಿಗೆ ಕರ್ನಾಟಕ ಹೈಕೋರ್ಟ್‌ (Karnataka High Court  ರಿಲೀಫ್ ನೀಡಿದೆ. ಜಾಮೀನು ನೀಡುವ ಸಂದರ್ಭದಲ್ಲಿ ಅನುಮತಿಯಿಲ್ಲದೇ ವ್ಯಾಪ್ತಿ ಬಿಟ್ಟು ತೆರಳದಂತೆ ವಿಧಿಸಿದ್ದ ಷರತ್ ಅನ್ನು ಸಡಿಲಿಸಿ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಈ ಸಡಿಲಿಕೆ ಸಿಕ್ಕಿರುವುದರಿಂದ ಬಿಎಸ್ ಯಡಿಯೂರಪ್ಪ ಅವರು ಯಾವುದೇ ಕಾನೂನಾತ್ಮಕ ಅಡೆತಡೆ ಅಥವಾ ಮುಂಚಿತ ಅನುಮತಿಯ ಕಿರಿಕಿರಿ ಇಲ್ಲದೇ ಮುಕ್ತಾವಾಗಿ ದೇಶಾದ್ಯಂತ ಪ್ರವಾಸ ಕೈಗೊಳ್ಳಬಹುದಾಗಿದೆ.

ಮುಖ್ಯಾಂಶಗಳು

  • ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧದ ಪೊಕ್ಸೊ ಕೇಸ್
  • ಜಾಮೀನು ಷರತ್ತು ಸಡಿಲಿಕೆ ಕೋರಿ ಬಿಎಸ್ ಯಡಿಯೂರಪ್ಪ ಮನವಿಯನ್ನು ಪುರಸ್ಕರಿಸಿದ ಕೋರ್ಟ್​
  • ಜಾಮೀನು ಸಂದರ್ಭದಲ್ಲಿ ಕೋರ್ಟ್ ಅನುಮತಿಯಿಲ್ಲದೇ ವ್ಯಾಪ್ತಿ ಬಿಟ್ಟು ತೆರಳದಂತೆ ಷರತ್ತು ವಿಧಿಸಲಾಗಿತ್ತು.
  • ಇದೀಗ ಕೋರ್ಟ್ ವ್ಯಾಪ್ತಿ ಬಿಟ್ಟು ತೆರಳದಂತೆ ವಿಧಿಸಿದ ಷರತ್ತು ಸಡಿಲಿಸಿದ ಹೈಕೋರ್ಟ್

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ  ದಾಖಲಾಗಿರುವ ಫೋಕ್ಸೋ ಪ್ರಕರಣ ಸಂಬಂಧ ಜಾಮೀನು ನೀಡುವ ಸಂದರ್ಭದಲ್ಲಿ ಕೋರ್ಟ್ ವ್ಯಾಪ್ತಿ ಬಿಟ್ಟು ತೆರಳದಂತೆ ವಿಧಿಸಿದ್ದ ಷರತ್ತು ಸಡಿಲಗೊಳಿಸಬೇಕೆಂದು ಕೋರಿ ಯಡಿಯೂರಪ್ಪ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದನ್ನು ವಿಚಾರಣೆ ನಡೆಸಿದ ಕೋರ್ಟ್, ಯಡಿಯೂರಪ್ಪನವರಿಗೆ ಕೋರ್ಟ್ ವ್ಯಾಪ್ತಿ ಬಿಟ್ಟು ತೆರಳದಂತೆ ವಿಧಿಸಲಾಗಿದ್ದ ಷರತ್ತು ಸಡಿಲಿಕೆ ಮಾಡಿ ಆದೇಶಿಸಿದೆ.

ಇದನ್ನೂ ಓದಿ: BS Yediyurappa: ಬಿ.ಎಸ್​. ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್​​; ಸುಪ್ರೀಂಕೋರ್ಟ್​​ನಿಂದ ಮಹತ್ವದ ಆದೇಶ

ಪ್ರಕರಣದ ಹಿನ್ನೆಲೆ

2024ರ ಫೆಬ್ರವರಿ 2ರಂದು ಬೆಂಗಳೂರಿನ ತಮ್ಮ ನಿವಾಸದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಬಾಲಕಿಯ ತಾಯಿ ಮಾರ್ಚ್ 14, 2024ರಂದು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹಳೆಯ ಲೈಂಗಿಕ ದೌರ್ಜನ್ಯ ಪ್ರಕರಣವೊಂದಕ್ಕೆ ನ್ಯಾಯ ಒದಗಿಸುವಂತೆ ಕೋರಿ ಬಾಲಕಿ ಮತ್ತು ಆಕೆಯ ತಾಯಿ ಯಡಿಯೂರಪ್ಪ ಅವರನ್ನು ಭೇಟಿಯಾಗಲು ತೆರಳಿದ್ದಾಗ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ದೂರು ದಾಖಲಾದ ನಂತರ ಈ ಪ್ರಕರಣವನ್ನು ಸಿಐಡಿ (CID) ತನಿಖೆಗೆ ವಹಿಸಲಾಗಿದ್ದು, ಯಡಿಯೂರಪ್ಪ ಸೇರಿದಂತೆ ನಾಲ್ವರ ವಿರುದ್ಧ ದೋಷಾರೋಪಣ ಪಟ್ಟಿ (Chargesheet) ಸಲ್ಲಿಸಲಾಗಿದ್ದು, ಈಗಾಗಲೇ ಕೋರ್ಟ್ ಸಹ ಜಾಮೀನು ನೀಡಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಕಿಕ್ ಮಾಡಿ

Source link

IND vs AFG: ಅಫ್ಘನ್ ವಿರುದ್ಧ ಭಾರತಕ್ಕೆ ಇನ್ನಿಂಗ್ಸ್ ಮತ್ತು 300 ರನ್​ಗಳ ಜಯ – Kannada News

ನ್ಯೂ ಚಂಡೀಗಢದ ಮುಲ್ಲನ್‌ಪುರದಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಏಕೈಕ ಟೆಸ್ಟ್ ಪಂದ್ಯದವನ್ನು ನಿರೀಕ್ಷಿಸಿದ್ದಂತೆಯೇ ಆತಿಥೇಯ ಟೀಂ ಇಂಡಿಯಾ ಏಕಪಕ್ಷೀಯವಾಗಿ ಗೆದ್ದುಕೊಂಡಿದೆ. ಪೂರ್ಣ ಮೂರು ದಿನವೂ ನಡೆಯದ ಈ ಪಂದ್ಯದಲ್ಲಿ ಗಿಲ್​ ಪಡೆ ಇನ್ನಿಂಗ್ಸ್ ಜಯ ದಾಖಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 8 ವಿಕೆಟ್ ಕಳೆದುಕೊಂಡು 564 ರನ್​ಗಳಿಸಿ ತನ್ನ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದಾದ ಬಳಿಕ ಬ್ಯಾಟಿಂಗ್‌ ಆರಂಭಿಸಿದ ಅಫ್ಘಾನಿಸ್ತಾನ 152 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿತು. ಹೀಗಾಗಿ ಮೊದಲ ಇನ್ನಿಂಗ್ಸ್​ನಲ್ಲಿ 412 ರನ್​ಗಳ ಮುನ್ನಡೆ ಸಾಧಿಸಿದ್ದ ಭಾರತ ಫಾಲೋ ಆನ್ ಹೇರಿತು. ಆದ್ದರಿಂದ ಮತ್ತೆ ಬ್ಯಾಟಿಂಗ್​ಗೆ ಇಳಿದ ಅಫ್ಘನ್ ಪಡೆ 112 ರನ್​ಗಳಿಗೆ ಆಲೌಟ್ ಆಗುವ ಮೂಲಕ ಇನ್ನಿಂಗ್ಸ್ ಮತ್ತು 300 ರನ್​ಗಳ ಹೀನಾಯ ಸೋಲು ಅನುಭವಿಸಿತು.

Published On – 3:04 pm, Mon, 8 June 26

Source link

ಮೈತುಂಬಾ ಒಡವೆ ಹಾಕೊಂಡಿರೋ ಫೋಟೊನಾ ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್ ಮಾಡಿದ ಮಹಿಳೆ, ಎಲ್ಲವನ್ನೂ ಕದ್ದೊಯ್ದ ಕಳ್ಳರು – Kannada News

ಶಿವಪುರಿ, ಜೂನ್ 08: ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ವೈಯಕ್ತಿಕ ಸಂಪತ್ತು, ಐಷಾರಾಮಿ ಜೀವನಶೈಲಿ ಮತ್ತು ಆಭರಣ(Jewellery)ಗಳನ್ನು ಅತಿಯಾಗಿ ಪ್ರದರ್ಶಿಸುವುದು ಎಷ್ಟು ದೊಡ್ಡ ಅಪಾಯವನ್ನು ತಂದೊಡ್ಡಬಹುದು ಎಂಬುದಕ್ಕೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ನಡೆದ ಭೀಕರ ಕಳ್ಳತನದ ಘಟನೆಯೇ ಸಾಕ್ಷಿಯಾಗಿದೆ. ಜಿಲ್ಲೆಯ ನರವರ್ ಪೊಲೀಸ್ ಠಾಣಾ ವ್ಯಾಪ್ತಿಯ ಮೋಹಾನಿ ಗ್ರಾಮದಲ್ಲಿ ವಾಸಿಸುವ ಪ್ರಸಿದ್ಧ ಮಹಿಳಾ ಯೂಟ್ಯೂಬರ್ ರಚನಾ ಗುರ್ಜರ್ ಅವರ ಮನೆಗೆ ಶನಿವಾರ ಬೆಳಗಿನ ಜಾವ ನುಗ್ಗಿದ ಮುಸುಕುಧಾರಿ ಕಳ್ಳರ ಗುಂಪೊಂದು ಸುಮಾರು 8 ರಿಂದ 10 ಲಕ್ಷ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ನಗದನ್ನು ದೋಚಿ ಪರಾರಿಯಾಗಿದೆ.

ಈ ಕಳ್ಳತನವು ಇಂಟರ್ನೆಟ್ ಬಳಕೆದಾರರಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅತಿಯಾದ ಮಾಹಿತಿ ಹಂಚಿಕೊಳ್ಳುವಿಕೆಯ ಅಪಾಯಗಳ ಬಗ್ಗೆ ಗಂಭೀರ ಎಚ್ಚರಿಕೆಯ ಸಂದೇಶ ನೀಡಿದೆ. ಪೊಲೀಸ್ ದೂರಿನ ಪ್ರಕಾರ, ಶನಿವಾರ ರಾತ್ರಿ ಸುಮಾರು 2 ಗಂಟೆಯ ಸುಮಾರಿಗೆ ರಚನಾ ಗುರ್ಜರ್ ಮತ್ತು ಅವರ ಪತಿ ಊದಲ್ ಸಿಂಗ್ ಗುರ್ಜರ್ ಸೇರಿದಂತೆ ಕುಟುಂಬದ ಸದಸ್ಯರು ಗಾಢ ನಿದ್ರೆಯಲ್ಲಿದ್ದಾಗ ಕಳ್ಳರು ಕಾಂಪೌಂಡ್‌ನ ತಂತಿ ಬೇಲಿಯನ್ನು ಕತ್ತರಿಸಿ ಒಳನುಗ್ಗಿದ್ದಾರೆ.

ಕಳ್ಳರು ಮೊದಲು ದಂಪತಿ ಮಲಗಿದ್ದ ಕೋಣೆಯ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿದ್ದಾರೆ. ಇದರಿಂದಾಗಿ ಕುಟುಂಬಸ್ಥರು ಒಳಗೆ ಸಿಕ್ಕಿಬಿದ್ದು ಹೊರಬರಲಾರದ ಸ್ಥಿತಿ ನಿರ್ಮಾಣವಾಯಿತು. ಮನೆಯೊಳಗೆ ಸಿಸಿಟಿವಿ ಕ್ಯಾಮೆರಾಗಳಿರುವುದನ್ನು ಅರಿತಿದ್ದ ಮುಸುಕುಧಾರಿ ಕಳ್ಳರು, ತಮ್ಮ ಮುಖಗಳು ಕಾಣದಂತೆ ತಡೆಯಲು ಕ್ಯಾಮರಾವನ್ನು ಕೋಲಿನ ಸಹಾಯದಿಂದ ಮೇಲ್ಮುಖವಾಗಿ ತಿರುಗಿಸಿದ್ದಾರೆ.

ಅಲ್ಮೇರಾಗಳ ಬೀಗವನ್ನು ಮುರಿದು 1.91 ಲಕ್ಷ ರೂ. ನಗದು, ಚಿನ್ನದ ಮಂಗಳಸೂತ್ರ, ನಾಲ್ಕು ಚಿನ್ನದ ಉಂಗುರಗಳು, ಬೆಳ್ಳಿಯ ಒಡ್ಯಾಣ ಮತ್ತು ಮನೆಯಲ್ಲಿದ್ದ ಪ್ರಮುಖ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ. ವಿಚಿತ್ರವೆಂದರೆ, ಕಳ್ಳರು ಹೋಗುವಾಗ ಮನೆಯಲ್ಲಿದ್ದ ಎನರ್ಜಿ ಡ್ರಿಂಕ್‌ನ (ರೆಡ್ ಬುಲ್) ಒಂದು ಇಡೀ ಪೆಟ್ಟಿಗೆಯನ್ನೂ ಸಹ ಹೊತ್ತೊಯ್ದಿದ್ದಾರೆ.

ಮತ್ತಷ್ಟು ಓದಿ: ಚಿನ್ನದ ಮೇಲೆ ಆಮದು ಸುಂಕ ಏರಿಕೆಯಾಗುತ್ತಾ? ಆಭರಣ ಪ್ರಿಯರಿಗೆ ನಿರಾಳ ತರುವ ಸುದ್ದಿ

ಬೆಳಗ್ಗೆ 4 ಗಂಟೆಯ ಸುಮಾರಿಗೆ ರಚನಾ ಅವರು ನೀರು ಕುಡಿಯಲು ಎದ್ದಾಗ ಬಾಗಿಲು ಹೊರಗಿನಿಂದ ಲಾಕ್ ಆಗಿರುವುದು ಗೊತ್ತಾಗಿದೆ. ತಕ್ಷಣ ಅವರು ಫೋನ್ ಮೂಲಕ ಸಂಬಂಧಿಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸಂಬಂಧಿಕರು ಮನೆಗೆ ಧಾವಿಸಿ ಬಂದು ಬಾಗಿಲು ತೆರೆದು ಅವರನ್ನು ರಕ್ಷಿಸಿದ್ದಾರೆ. ಹಾಗಾಗಿ ಎಂದೂ ಕೂಡ ನಿಮ್ಮ ವೈಯಕ್ತಿಕ ಮಾಹಿತಿಯಾಗಲೀ ಅಥವಾ ಒಡವೆ, ದುಡ್ಡಿನ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 3:05 pm, Mon, 8 June 26

Source link

‘2023ರ ಚುನಾವಣೆಯಲ್ಲಿ ನಾನು ಗೆದ್ದಿದ್ದರೆ ಸಿದ್ದರಾಮಯ್ಯ ಸಿಎಂ ಆಗುತ್ತಿರಲಿಲ್ಲ’: ಜಿ. ಪರಮೇಶ್ವರ್ – Kannada News

ಜಿ. ಪರಮೇಶ್ವರ್

ತುಮಕೂರು, ಜೂನ್ 08: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ (G Parameshwar) ಅವರು ಇತ್ತೀಚೆಗೆ ತುಮಕೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾವುಕರಾಗಿ ಮಾತನಾಡಿದ್ದು, ಮುಖ್ಯಮಂತ್ರಿ ಸ್ಥಾನವು ಮೂರು ಬಾರಿ ಕೈತಪ್ಪಿದ ಕುರಿತು ನೋವು ತೋಡಿಕೊಂಡಿದ್ದಾರೆ. ಇದು ತಮ್ಮ ಬಹುಕಾಲದ ಕನಸಾಗಿದ್ದು, ರಾಜಕೀಯ ಸನ್ನಿವೇಶಗಳಿಂದಾಗಿ ಕೈಗೂಡಿಲ್ಲ ಎಂದು ಅವರು ಹೇಳಿದ್ದಾರೆ.

ಮುಖ್ಯಾಂಶಗಳು

  • ಮೂರು ಬಾರಿ ಮುಖ್ಯಮಂತ್ರಿ ಹುದ್ದೆ ಕೈತಪ್ಪಿದ ಬಗ್ಗೆ ಪರಮೇಶ್ವರ್ ಭಾವುಕರಾಗಿದ್ದಾರೆ.
  • ನಾನು ಗೆದ್ದಿದ್ದರೆ 2013 ರಲ್ಲಿ ಸಿದ್ದರಾಮಯ್ಯ ಸಿಎಂ ಆಗುತ್ತಿರಲಿಲ್ಲ ಎಂದಿದ್ದಾರೆ.
  • 2026 ರಲ್ಲೂ ಸಿಎಂ ಹುದ್ದೆಯ ನಿರೀಕ್ಷೆ ಇತ್ತು ಎಂದು ನೋವು ಹಂಚಿಕೊಂಡಿದ್ದಾರೆ.

ಮುಖ್ಯಮಂತ್ರಿಯಾಗುವ ಅವಕಾಶ ಸಿಗಲಿಲ್ಲ

ಹಳೆಯ ನೆನಪುಗಳನ್ನು ಹಂಚಿಕೊಂಡ ಅವರು, 2013ರ ಚುನಾವಣೆಯಲ್ಲಿ ನಾನು ಸೋತಿದ್ದರಿಂದ ಮುಖ್ಯಮಂತ್ರಿ ಹುದ್ದೆ ಕೈತಪ್ಪಿತು. ಅಂದು ನಾನು ಗೆದ್ದಿದ್ದರೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ. ಮುಂದುವರಿದು, 2018ರಲ್ಲಿ ಕಾಂಗ್ರೆಸ್ 80 ಸ್ಥಾನಗಳನ್ನು ಗೆದ್ದಿದ್ದರೂ ಮೈತ್ರಿ ಸರ್ಕಾರದಲ್ಲಿ ಎಚ್. ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರು. ಅವತ್ತು ನನ್ನನ್ನೂ ಮುಖ್ಯಮಂತ್ರಿ ಮಾಡಬಹುದಿತ್ತು, ಆದರೆ ಆ ಅವಕಾಶ ಸಿಗಲಿಲ್ಲ ಎಂದು ಬೇಸರದಿಂದ ನುಡಿದಿದ್ದಾರೆ.

ಈ ಬಾರಿ ಸಿಎಂ ಹುದ್ದೆಯ ನಿರೀಕ್ಷೆಯಲ್ಲಿದ್ದ ಪರಮೇಶ್ವರ್

ಇನ್ನು 2026ರ ಪ್ರಸ್ತುತ ರಾಜಕೀಯ ವಿದ್ಯಮಾನಗಳಲ್ಲೂ ತಮಗೆ ಸಿಎಂ ಹುದ್ದೆಯ ನಿರೀಕ್ಷೆ ಇತ್ತು, ಆದರೆ ವಿವಿಧ ರಾಜಕೀಯ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲಎಂದು ಪರಮೇಶ್ವರ್ ಹೇಳಿದ್ದಾರೆ. ಹೈಕಮಾಂಡ್ ಜತೆಗಿನ ಚರ್ಚೆಯನ್ನು ಸ್ಮರಿಸಿದ ಅವರು, ನನಗೆ ಸಂಸ್ಥೆಯ ಶ್ರೇಯೋಭಿವೃದ್ಧಿ ಮುಖ್ಯ. ಕೊಡಲು ಸಾಧ್ಯವಿಲ್ಲ ಅಂದರೆ ನೇರವಾಗಿ ಹೇಳಿ, ನನಗೆ ಬಹಳ ದೊಡ್ಡ ಕೆಲಸಗಳಿವೆ, ನಾನು ವಾಪಸ್ ಹೋಗ್ತೀನಿ ಎಂದು ಹೇಳಿದ್ದೆ. ಕೊನೆಗೆ ಪಕ್ಷ ನನಗೆ ಉಪಮುಖ್ಯಮಂತ್ರಿ ಹುದ್ದೆಯ ಜವಾಬ್ದಾರಿ ನೀಡಿದೆಎಂದರು.

ಇದನ್ನೂ ಓದಿ ಶಿಸ್ತಿನ ಸಿಪಾಯಿಗಳಿಗೆ ಒಲಿದ ಅದೃಷ್ಟ: ಲಿಂಗರಾಜ್ ಪಾಟೀಲ್, ರಘು ಕೌಟಿಲ್ಯಗೆ ಪರಿಷತ್ ಟಿಕೆಟ್ ನೀಡಲು ಕಾರಣಗಳೇನು?

ಸದ್ಯ ತಮಗೆ ಸಿಕ್ಕಿರುವ ಜವಾಬ್ದಾರಿಯನ್ನು ಅತ್ಯಂತ ನಿಷ್ಠೆಯಿಂದ ನಿಭಾಯಿಸುವುದಾಗಿ ಹೇಳಿದ ಪರಮೇಶ್ವರ್, ಜನರು ನಮ್ಮನ್ನು ಸೂಕ್ಷ್ಮವಾಗಿ ನೋಡುತ್ತಾರೆ. ಆದ್ದರಿಂದ ಅತ್ಯಂತ ಜವಾಬ್ದಾರಿಯಿಂದ ನಡೆದುಕೊಳ್ಳುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು. ಸರ್ಕಾರದಲ್ಲಿ ಯಾವುದೇ ಕುಂದುಬರದಂತೆ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಜನರ ನಿರೀಕ್ಷೆಗಳನ್ನು ಪೂರೈಸಲು ಶ್ರಮಿಸುವುದಾಗಿ ಅವರು ಭರವಸೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಯುಷ್ಮಾನ್ ಹೆಸರಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡಿದರೆ ಖಾಸಗಿ ಆಸ್ಪತ್ರೆಗಳ ಪರವಾನಗಿ ರದ್ದು: ಸಚಿವ ಯು.ಟಿ.ಖಾದರ್ ಖಡಕ್ ಎಚ್ಚರಿಕೆ – Kannada News

ಮಂಗಳೂರು, ಜೂ.8: ಯುಟಿ ಖಾದರ್​​ ಅವರು ಅಧಿಕಾರ ಸ್ವೀಕಾರ ಮಾಡಿದ ನಂತರ ತಮ್ಮ ಆಡಳಿತಕ್ಕೆ ಚುರುಕು ನೀಡಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ಆಗಿರುವ ತಪ್ಪುಗಳನ್ನು ಹಾಗೂ ಕೆಲವೊಂದು ಬದಲಾವಣೆಗಳನ್ನು ಮಾಡಲು ಮುಂದಾಗಿದ್ದಾರೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನೆಗಾಗಿ ಮಂಗಳೂರಿನಲ್ಲಿ ಆರೋಗ್ಯ ಇಲಾಖೆಯ ಎಲ್ಲಾ ಉನ್ನತ ಅಧಿಕಾರಿಗಳು ಹಾಗೂ ವೈದ್ಯಕೀಯ ತಂಡದ ಪ್ರಮುಖ ಸಭೆಯನ್ನು ಆರೋಗ್ಯ ಸಚಿವ ಯು.ಟಿ. ಖಾದರ್ ನಡೆಸಿದ್ದಾರೆ. ಸಭೆಯ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳ ಬಲವರ್ಧನೆ ಮತ್ತು ಖಾಸಗಿ ಆಸ್ಪತ್ರೆಗಳ ಮನಸೋಇಚ್ಛೆ ವಸೂಲಾತಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಹಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.

“ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ಪಡೆಯುವ ಬಿಪಿಎಲ್ (BPL) ಕಾರ್ಡ್‌ ಹೊಂದಿರುವ ಸಾರ್ವಜನಿಕರಿಂದ ಯಾವುದೇ ಖಾಸಗಿ ಆಸ್ಪತ್ರೆಗಳು ಹೆಚ್ಚುವರಿ ಹಣವನ್ನು ವಸೂಲಿ ಮಾಡುವಂತಿಲ್ಲ. ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಆಸ್ಪತ್ರೆಗಳಲ್ಲಿರುವ ಸರ್ಕಾರದ ‘ಆರೋಗ್ಯ ಮಿತ್ರ’ರ ಪಾತ್ರ ಅತ್ಯಂತ ಪ್ರಮುಖವಾಗಿದೆ. ರೋಗಿಗಳಿಗೆ ನೆರವಾಗುವಲ್ಲಿ ಆರೋಗ್ಯ ಮಿತ್ರರು ವಿಫಲರಾದರೆ ಅಥವಾ ಕರ್ತವ್ಯ ಲೋಪ ಎಸಗಿದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಷ್ಟೇ ಅಲ್ಲದೆ, ಸರ್ಕಾರದ ಉಚಿತ ಆರೋಗ್ಯ ಯೋಜನೆಗಳನ್ನು ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ಪರವಾನಗಿಯನ್ನು (ಅನುಮತಿ) ಮುಲಾಜಿಲ್ಲದೆ ರದ್ದುಗೊಳಿಸಲಾಗುವುದು” ಎಂದು ಸಚಿವರು ಕಠಿಣ ಎಚ್ಚರಿಕೆ ನೀಡಿದರು. ಎಪಿಎಲ್ (APL) ಕಾರ್ಡ್‌ದಾರರಿಗೆ ಇದ್ದ 30-70 ಅನುಪಾತದ ಯೋಜನೆಯ ಬಗ್ಗೆಯೂ ಮರುಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಇದನ್ನೂ ಓದಿ: ಹೊಸ ವೈದ್ಯರಿಗೆ ಗುಡ್ ನ್ಯೂಸ್ ಕೊಟ್ಟ ಸಚಿವ ಖಾದರ್: ಇನ್ಮುಂದೆ ಡೈರೆಕ್ಟ್ ವಾಕ್-ಇನ್ ಇಂಟರ್ವ್ಯೂ

ರಾಜ್ಯದಲ್ಲಿ ಕಾಡುತ್ತಿರುವ ಸರ್ಕಾರಿ ವೈದ್ಯರ ಕೊರತೆಯ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದ್ದು, ವೈದ್ಯರನ್ನು ಸರ್ಕಾರಿ ಸೇವೆಯತ್ತ ಆಕರ್ಷಿಸಲು ಹೊಸ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು. “ಹಳ್ಳಿ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಕಷ್ಟಪಟ್ಟು ಸೇವೆ ಸಲ್ಲಿಸುತ್ತಿರುವ ಸರ್ಕಾರಿ ವೈದ್ಯರ ವೇತನವನ್ನು ಹೆಚ್ಚಿಸಲು ಇಲಾಖೆ ನಿರ್ಧರಿಸಿದೆ. ಇದರೊಂದಿಗೆ ಗುತ್ತಿಗೆ ಆಧಾರದ ಮೇಲೆ (Contractual) ಕಾರ್ಯನಿರ್ವಹಿಸುತ್ತಿರುವ ವೈದ್ಯರನ್ನು ಖಾಯಂ ಮಾಡುವ ಕುರಿತು ಮಹತ್ವದ ಚರ್ಚೆಗಳು ನಡೆಯುತ್ತಿವೆ. ಹಿಂದೆ ಮೂರು ವರ್ಷ ಸೇವೆ ಸಲ್ಲಿಸಿದ ಗುತ್ತಿಗೆ ವೈದ್ಯರನ್ನು ಖಾಯಂ ಮಾಡುವ ಪದ್ಧತಿ ಇತ್ತು. ಅದನ್ನು ಮುಂಬರುವ ದಿನಗಳಲ್ಲಿ ಮತ್ತೆ ಜಾರಿಗೆ ತರುವ ನಿಟ್ಟಿನಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು” ಎಂದು ಯು.ಟಿ. ಖಾದರ್ ಅವರು ಸ್ಪಷ್ಟಪಡಿಸಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚೆಸ್ ಚಾಂಪಿಯನ್ ಪ್ರಜ್ಞಾನಂದ ಜೊತೆ ಚೆಸ್ ಆಡಿ 50 ಲಕ್ಷ ರೂ. ಕೊಟ್ಟ ವಿಜಯ್ – Kannada News

ನಟ, ತಮಿಳುನಾಡು ಸಿಎಂ ದಳಪತಿ ವಿಜಯ್ ಅವರು ಭಾರತದ ಚೆಸ್ ಮಾಸ್ಟರ್ ಆರ್​. ಪ್ರಜ್ಞಾನಂದ ಅವರನ್ನು  (Praggnanandhaa) ಸನ್ಮಾನಿಸಿದ್ದಾರೆ. ಅವರಿಗೆ 50 ಲಕ್ಷ ರೂಪಾಯಿ ಬಹುಮಾನ ಮೊತ್ತವನ್ನು ಕೂಡ ನೀಡಿದ್ದಾರೆ. ನಾರ್ವೆ ಚೆಸ್ 2026 ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಬಳಿಕ ಅವರಿಗೆ ಈ ಗೌರವ ಸಿಕ್ಕಿದೆ. ವಿಶೇಷ ಎಂದರೆ ವಿಜಯ್ ಅವರು ಪ್ರಜ್ಞಾನಂದ ಜೊತೆ ಚೆಸ್ ಕೂಡ ಆಡಿದ್ದಾರೆ.

ಸಿಎಂ ವಿಜಯ್ ಅವರನ್ನು ಭೇಟಿ ಮಾಡಿದ ವಿಷಯವನ್ನು ಪ್ರಜ್ಞಾನಂದ ಅವರು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ. ‘ನನಗೆ ಚೆಸ್ ಬೋರ್ಡ್ ಜೊತೆ ಬರಲು ಹೇಳಲಾಗಿತ್ತು. ನಾನು ಸಿಎಂ ಜೊತೆ ಚೆಸ್ ಆಡಿದೆ. ಅವರು ನನ್ನ ಜೊತೆ ಚೆಸ್ ಆಡುತ್ತಾರೆ ಎಂದು ನಾನು ಭಾವಿಸಿರಲಿಲ್ಲ. 15 ನಿಮಿಷಗಳ ಕಾಲ ಚೆಸ್ ಆಡಿದೆವು. ಗೆದ್ದಿದ್ದು ನಾನೇ. ಅವರು ತುಂಬಾನೇ ಪ್ರೋತ್ಸಾಹದಾಯಕವಾಗಿದ್ದಾರೆ’ ಎಂದಿದ್ದಾರೆ ವಿಜಯ್.

ಇದನ್ನೂ ಓದಿ: ನಾರ್ವೆಯಲ್ಲಿ ಹೊಸ ಇತಿಹಾಸ ಬರೆದ ಆರ್ ಪ್ರಜ್ಞಾನಂದ

ತಮಿಳುನಾಡು ಸಿಎಂ ಕಚೇರಿ ಈ ಬಗ್ಗೆ ಟ್ವೀಟ್ ಮಾಡಿದೆ. ‘ತಮಿಳುನಾಡು ಸಿಎಂ ವಿಜಯ್ ಅವರು 50 ಲಕ್ಷ ರೂಪಾಯಿ ಹಣವನ್ನು ಪ್ರಜ್ಞಾನಂದಗೆ ನೀಡಿದ್ದಾರೆ. ನಾರ್ವೆ ಚೆಸ್ 2026 ಅಲ್ಲಿ ಈ ಸಾಧನೆ ಮಾಡಿ ಇತಿಹಾಸ ಬರೆದಿರುವುದರಿಂದ ಈ ಗೌರವ ನೀಡಲಾಗಿದೆ’ ಎಂದು ಬರೆದುಕೊಂಡಿದೆ.

ಕಳೆದ ವಾರ ನಡೆದ ಓಸ್ಲೋದಲ್ಲಿ ನಡೆದ ನಾರ್ವೆ ಚೆಸ್ 2026 ಟೂರ್ನಿಯಲ್ಲಿ ಅಂತಿಮ ಸುತ್ತಿನ ರೋಚಕ ಪಂದ್ಯದಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ವಿರುದ್ಧ ಪ್ರಜ್ಞಾನಂದ ಭರ್ಜರಿ ಜಯ ಸಾಧಿಸಿ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 2:42 pm, Mon, 8 June 26

Source link

ವೈಭವ್ ಸೂರ್ಯವಂಶಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಎಬಿ ಡಿವಿಲಿಯರ್ಸ್ – Kannada News

ಟೀಮ್ ಇಂಡಿಯಾದ 15 ವರ್ಷದ ಉದಯೋನ್ಮುಖ ತಾರೆ ವೈಭವ್ ಸೂರ್ಯವಂಶಿ ಅವರ ಟೆಸ್ಟ್​ ಕ್ರಿಕೆಟ್ ಭವಿಷ್ಯದ ಬಗ್ಗೆ ಸೌತ್ ಆಫ್ರಿಕಾ ಮಾಜಿ ದಿಗ್ಗಜ ಆಟಗಾರ ಎಬಿ ಡಿವಿಲಿಯರ್ಸ್ ದೊಡ್ಡ ಪ್ರಶ್ನೆಯೊಂದನ್ನು ಎತ್ತಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅಬ್ಬರಿಸುತ್ತಿರುವ ಈ ಯುವ ಆಟಗಾರನಿಗೆ ನಿಜವಾಗಿಯೂ ಟೆಸ್ಟ್ ಕ್ರಿಕೆಟ್ ಆಡುವ ಆಸೆ ಇದೆಯೇ? ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಡಿವಿಲಿಯರ್ಸ್,”ಅವನಿಗೆ ನಿಜವಾಗಿಯೂ ಟೆಸ್ಟ್ ಆಡಲು ಆಸೆಯಿದೆಯೇ?” ಸಾಮರ್ಥ್ಯವಿದೆ ನಿಜ. ಆದರೆ ರೆಡ್-ಬಾಲ್ ಕ್ರಿಕೆಟ್ ಆಡಲು ಅವನಿಗೆ ನಿಜವಾಗಿಯೂ ಮನಸಿದೆಯೇ? ಈ ಬಗ್ಗೆ ಅನುಮಾವಿದೆ. ಇದಕ್ಕೆ ಕಾಲವೇ ಉತ್ತರಿಸಬೇಕು” ಎಂದು ಡಿವಿಲಿಯರ್ಸ್ ಹೇಳಿದ್ದಾರೆ.

ಎಬಿಡಿ ಅನುಮಾನ ವ್ಯಕ್ತಪಡಿಸಲು ಕಾರಣವೇನು?

ವೈಭವ್ ಸೂರ್ಯವಂಶಿ ಇತ್ತೀಚಿನ ಐಪಿಎಲ್ 2026 ರಲ್ಲಿ ಭರ್ಜರಿ ಯಶಸ್ಸು, ಹಣ ಮತ್ತು ಪ್ರಸಿದ್ಧಿಯನ್ನು ಗಳಿಸಿದ್ದಾರೆ. ಅದು ಸಹ ಅಲ್ಪಾವಧಿಯಲ್ಲಿ. ಆದರೆ ಟೆಸ್ಟ್ ಕ್ರಿಕೆಟ್ ಎಂಬುದು ಕಠಿಣ ಸವಾಲು. ಇಲ್ಲಿ ಗಂಟೆಗಟ್ಟಲೆ ಕ್ರೀಸ್‌ನಲ್ಲಿ ನಿಲ್ಲುವ ತಾಳ್ಮೆ, ರಕ್ಷಣಾತ್ಮಕ ಆಟ ಮತ್ತು ತಾಂತ್ರಿಕ ಶಿಸ್ತು ಅಗತ್ಯವಿರುತ್ತದೆ.

ಆದರೆ ವೈಭವ್ ಕೇವಲ ಟಿ20 ಶೈಲಿಯ ಬಿರುಸಿನ ಬ್ಯಾಟಿಂಗ್ ಮತ್ತು ಪವರ್-ಹಿಟ್ಟಿಂಗ್ ನೆಚ್ಚಿಕೊಂಡಿದ್ದಾರೆ. ಹೀಗಾಗಿ ಟೆಸ್ಟ್ ಕ್ರಿಕೆಟ್‌ನ ಹಾದಿ ಸುಲಭವಲ್ಲ. ಟೆಸ್ಟ್ ಕ್ರಿಕೆಟ್‌ನಲ್ಲಿ ಯಶಸ್ವಿಯಾಗುವುದು ಕೂಡ ಸುಲಭದ ಮಾತಲ್ಲ. ಅದು ದೈಹಿಕ ಮತ್ತು ಮಾನಸಿಕವಾಗಿ ಕಠಿಣ ಸವಾಲುಗಳನ್ನು ತಂದೊಡ್ಡುತ್ತದೆ. ಕೇವಲ ಬಿರುಸಿನ ಬ್ಯಾಟಿಂಗ್‌ನಿಂದ ಅಲ್ಲಿ ಬದುಕುಳಿಯಲು ಸಾಧ್ಯವಿಲ್ಲ.

ಅಷ್ಟೇ ಅಲ್ಲದೆ ಈ ಹಿಂದೆ ಟಿ20 ಕ್ರಿಕೆಟ್​ನಲ್ಲಿ ಸಿಡಿಲಬ್ಬರದ ಪ್ರದರ್ಶನ ನೀಡುತ್ತಿದ್ದ ಹಲವು ಆಟಗಾರರು ಟೆಸ್ಟ್ ಕ್ರಿಕೆಟ್​ನಿಂದ ದೂರವೇ ಉಳಿದಿದ್ದರು. ಈ ಎಲ್ಲಾ ಕಾರಣಗಳಿಂದಾಗಿ ಎಬಿಡಿ ವೈಭವ್ ಸೂರ್ಯವಂಶಿಯ ಟೆಸ್ಟ್ ಇಂಟ್ರೆಸ್ಟ್​ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಟಿ20 ಸ್ಪೆಷಲಿಸ್ಟ್ ಆಗಿ ಉಳಿಯುವ ಭೀತಿ:

ವೈಭವ್ ಕೇವಲ ಶಾರ್ಟರ್ ಫಾರ್ಮ್ಯಾಟ್‌ಗೆ ಸೀಮಿತವಾದರೆ, ಅವರು ಭವಿಷ್ಯದಲ್ಲಿ ಕೇವಲ “ಟಿ20 ಸ್ಪೆಷಲಿಸ್ಟ್” ಆಗಿ ಉಳಿಯಬೇಕಾಗುತ್ತದೆ ಎಂದು ಎಬಿಡಿ ಡಿವಿಲಿಯರ್ಸ್ ಎಚ್ಚರಿಸಿದ್ದಾರೆ. ಹೀಗಾಗಿ ಮೂರು ಸ್ವರೂಪಗಳಲ್ಲೂ ಆಡುವ ಬಗ್ಗೆ ಆಸಕ್ತಿ ಹೊಂದಬೇಕು. ಸದ್ಯ ಟಿ20 ಕ್ರಿಕೆಟ್​ನಲ್ಲಿ ಕಣಕ್ಕಿಳಿಯುತ್ತಿರುವ ವೈಭವ್ ಸೂರ್ಯವಂಶಿ, ಟೆಸ್ಟ್​ ಆಡಲು ಸಿದ್ಧರಿದ್ದಾರೆಯೇ? ಟಿ20 ಜೊತೆ ಅವರು ರೆಡ್ ಬಾಲ್​ ಕ್ರಿಕೆಟ್ ಬಗ್ಗೆ ಆಸಕ್ತಿ ತೋರಬೇಕು ಎಂದು ಎಬಿಡಿ ಸಲಹೆ ನೀಡಿದ್ದಾರೆ.

ವೈಭವ್ ಸೂರ್ಯವಂಶಿ ಅವರ ಕನಸೇನು?

ಒಂದೆಡೆ ವೈಭವ್ ಸೂರ್ಯವಂಶಿಯ ಟೆಸ್ಟ್ ಕ್ರಿಕೆಟ್ ಇಂಟ್ರೆಸ್ಟ್ ಬಗ್ಗೆ ಎಬಿ ಡಿವಿಲಿಯರ್ಸ್ ಅನುಮಾನ ವ್ಯಕ್ತಪಡಿಸಿದರೆ, ಮತ್ತೊಂದೆಡೆ ವೈಭವ್ ಸೂರ್ಯವಂಶಿ ಮೂರು ಸ್ವರೂಪಗಳಲ್ಲೂ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ವೈಭವ್, ತನಗೆ ಟೀಮ್ ಇಂಡಿಯಾ ಪರ ಟೆಸ್ಟ್, ಟಿ20 ಹಾಗೂ ಏಕದಿನ ಪಂದ್ಯಗಳನ್ನಾಡಬೇಕೆಂಬ ಆಸೆಯಿದೆ.  ಅದರಲ್ಲೂ ಟೆಸ್ಟ್ ಕ್ರಿಕೆಟ್​ನಲ್ಲಿ ತಮ್ಮದೇ ಆದ ಛಾಪು ಮೂಡಿಸಿ 10-20 ವರ್ಷಗಳ ಕಾಲ ಕ್ರಿಕೆಟ್ ಜಗತ್ತನ್ನು ಆಳಬೇಕೆಂಬುದು ಕನಸು ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.

ಕುತೂಹಲಕಾರಿ ವಿಷಯ ಎಂದರೆ ವೈಭವ್ ಸೂರ್ಯವಂಶಿ ಈಗಾಗಲೇ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಕಣಕ್ಕಿಳಿದಿದ್ದಾರೆ. ಅಂದರೆ ಟೆಸ್ಟ್ ಮಾದರಿಯ ಪಂದ್ಯಗಳನ್ನಾಡಿದ್ದಾರೆ. ಬಿಹಾರ ಪರ 8 ರಣಜಿ ಮ್ಯಾಚ್​ಗಳನ್ನಾಡಿರುವ ವೈಭವ್ ಮೇಘಾಲಯ ವಿರುದ್ಧ 93 ರನ್ ಬಾರಿಸಿದ್ದರು.

ಇದನ್ನೂ ಓದಿ: ಚೊಚ್ಚಲ ಪಂದ್ಯದಲ್ಲೇ ದಾಖಲೆಗಳ ಮೇಲೆ ದಾಖಲೆ ಬರೆದ ಮಾನವ್ ಸುತಾರ್..!

ಹಾಗೆಯೇ 2024 ರಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 4 ದಿನಗಳ ಯೂತ್ ಟೆಸ್ಟ್ ಪಂದ್ಯದಲ್ಲಿ  ಬ್ಯಾಟ್ ಬೀಸಿದ್ದ ವೈಭವ್ ಕೇವಲ 58 ಎಸೆತಗಳಲ್ಲಿ ಶತಕ (104 ರನ್) ಸಿಡಿಸಿದ್ದರು. ಈ ಮೂಲಕ ಅಂಡರ್-19 ಟೆಸ್ಟ್ ಪಂದ್ಯದಲ್ಲಿ ಅತೀ ವೇಗದ ಶತಕ ಬಾರಿಸಿದ ಭಾರತೀಯ ಎಂಬ ದಾಖಲೆ ಬರೆದಿದ್ದರು. ಒಂದು ವೇಳೆ ವೈಭವ್ ಸೂರ್ಯವಂಶಿ ಟೆಸ್ಟ್ ಕ್ರಿಕೆಟ್​ನಲ್ಲಿ ಕಾಣಿಸಿಕೊಂಡರೆ ಅಲ್ಲೂ ಕೂಡ ಆರ್ಭಟದ ಬ್ಯಾಟಿಂಗ್ ಅನ್ನು ಎದುರು ನೋಡಬಹುದು.

Source link

ಶಿಸ್ತಿನ ಸಿಪಾಯಿಗಳಿಗೆ ಒಲಿದ ಅದೃಷ್ಟ: ಲಿಂಗರಾಜ್ ಪಾಟೀಲ್, ರಘು ಕೌಟಿಲ್ಯಗೆ ಪರಿಷತ್ ಟಿಕೆಟ್ ನೀಡಲು ಕಾರಣಗಳೇನು? – Kannada News

ಲಿಂಗರಾಜ್ ಪಾಟೀಲ್, ರಘು ಕೌಟಿಲ್ಯImage Credit source: Facebook and X accounts

ಬೆಂಗಳೂರು, ಜೂನ್ 08: ಬಿಜೆಪಿ (BJP) ಹೈಕಮಾಂಡ್ ಪ್ರಕಟಿಸಿರುವ ವಿಧಾನಪರಿಷತ್ ಚುನಾವಣೆಯ ಅಭ್ಯರ್ಥಿಗಳ ಪಟ್ಟಿ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದೆ. ಹುಬ್ಬಳ್ಳಿಯ ಹಿರಿಯ ಮುಖಂಡ ಲಿಂಗರಾಜ್ ಪಾಟೀಲ್ ಹಾಗೂ ಮೈಸೂರಿನ ಹಿಂದುಳಿದ ವರ್ಗಗಳ ನಾಯಕ ರಘು ಕೌಟಿಲ್ಯ ಅವರಿಗೆ ಈ ಬಾರಿ ಅದೃಷ್ಟ ಒಲಿದಿದ್ದು, ಅವರ ಆಯ್ಕೆಯ ಹಿಂದೆ ಹೈಕಮಾಂಡ್‌ನ ಮಹತ್ವದ ಲೆಕ್ಕಾಚಾರಗಳಿವೆ.

ಮುಖ್ಯಾಂಶಗಳು

  • ಬಿಜೆಪಿ ಹೈಕಮಾಂಡ್ ವಿಧಾನಪರಿಷತ್ ಚುನಾವಣೆಗೆ ಇಬ್ಬರು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
  • ಹುಬ್ಬಳ್ಳಿಯ ಲಿಂಗರಾಜ್ ಪಾಟೀಲ್ ಹಾಗೂ ರಘು ಕೌಟಿಲ್ಯಗೆ ಅದೃಷ್ಟ ಒಲಿದಿದೆ.
  • ಜಾತಿ ಲೆಕ್ಕಾಚಾರದ ಆಧಾರದ ಮೇಲೆ ಹೈಕಮಾಂಡ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ.

ಲಿಂಗರಾಜ್ ಪಾಟೀಲ್ ಆಯ್ಕೆಗೆ ಕಾರಣಗಳು

ಮೂಲತಃ ಹುಬ್ಬಳ್ಳಿಯವರಾದ ಲಿಂಗರಾಜ್ ಪಾಟೀಲ್ ಅವರು ಪಂಚಮಸಾಲಿ ಲಿಂಗಾಯತ ಸಮುದಾಯದ ಪ್ರಮುಖ ನಾಯಕರಾಗಿದ್ದಾರೆ. ಕಳೆದ ಬಾರಿ ಪಶ್ಚಿಮ ಪದವೀಧರ ಕ್ಷೇತ್ರ ಹಾಗೂ ವಿಧಾನಸಭೆಯಿಂದ ಪರಿಷತ್‌ಗೆ ನಡೆಯಬೇಕಿದ್ದ ಚುನಾವಣೆಯ ಸಂದರ್ಭದಲ್ಲಿ ಕೊನೆ ಕ್ಷಣದಲ್ಲಿ ಇವರಿಗೆ ಟಿಕೆಟ್ ಕೈತಪ್ಪಿತ್ತು. ಇದರಿಂದ ಬೇಸತ್ತು ಇವರು ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಸಂದರ್ಭದಲ್ಲಿ ಬಿ.ವೈ. ವಿಜಯೇಂದ್ರ ಮತ್ತು ಪ್ರಹ್ಲಾದ್ ಜೋಶಿ ಅವರ ಮನೆಗೆ ಭೇಟಿ ನೀಡಿ, ಮುಂದಿನ ದಿನಗಳಲ್ಲಿ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದರು. ಹುಬ್ಬಳ್ಳಿಯಲ್ಲಿ ಪಕ್ಷ ಸಂಘಟನೆ ಬಲಪಡಿಸಲು ಹಾಗೂ ಪಂಚಮಸಾಲಿ ಸಮುದಾಯವನ್ನು ಬೆಂಬಲಿಸಲು ಇವರಿಗೆ ಈ ಬಾರಿ ಪ್ರಹ್ಲಾದ್ ಜೋಶಿ ಮತ್ತು ಆರ್. ಅಶೋಕ್ ಅವರ ಸಂಪೂರ್ಣ ಬೆಂಬಲದೊಂದಿಗೆ ಟಿಕೆಟ್ ನೀಡಲಾಗಿದೆ.

ಇದನ್ನೂ ಓದಿ ರಾಜ್ಯಸಭೆಗೆ ಕಣಕ್ಕಿಳಿದ ಪ್ರೊ. ಎಂ. ನಾಗರಾಜ; ಮಾಜಿ ಪ್ರಧಾನಿ ದೇವೇಗೌಡರ ಸ್ಥಾನಕ್ಕೆ ಬಿಜೆಪಿ ಇವರನ್ನೇ ಆರಿಸಿದ್ದೇಕೆ?

ರಘು ಕೌಟಿಲ್ಯ ಆಯ್ಕೆಗೆ ಕಾರಣಗಳು

ರಘು ಕೌಟಿಲ್ಯ ಅವರು ಒಬಿಸಿ ಸಮುದಾಯದ ಅತ್ಯಂತ ಸಣ್ಣ ಜನಾಂಗವಾದ ‘ಮಡಿವಾಳ’ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಪ್ರಸ್ತುತ ರಾಜ್ಯ ಬಿಜೆಪಿ ಒಬಿಸಿ ಮೋರ್ಚಾದ ಅಧ್ಯಕ್ಷರಾಗಿರುವ ಇವರು, ಈ ಹಿಂದೆ ಮೈಸೂರಿನಿಂದ ಎಂಎಲ್‌ಸಿ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಇತ್ತೀಚೆಗೆ ಕಾಂಗ್ರೆಸ್ ತನ್ನ ನಾಲ್ಕೂ ಅಭ್ಯರ್ಥಿಗಳನ್ನು ಒಬಿಸಿ ಸಮುದಾಯಕ್ಕೆ ನೀಡಿರುವುದರಿಂದ, ಅದಕ್ಕೆ ಪ್ರತಿಯಾಗಿ ಬಿಜೆಪಿಯೂ ಒಬಿಸಿ ಮುಖವನ್ನು ಮುನ್ನೆಲೆಗೆ ತರಲು ಬಯಸಿದೆ. ಪ್ರಸ್ತುತ ಬಿಜೆಪಿಯಲ್ಲಿ ಲಿಂಗಾಯತ, ಒಕ್ಕಲಿಗ ಮತ್ತು ದಲಿತ ನಾಯಕತ್ವ ಮುಂಚೂಣಿಯಲ್ಲಿದ್ದು, ಒಬಿಸಿ ನಾಯಕನ ಹುಡುಕಾಟದಲ್ಲಿದ್ದ ಪಕ್ಷಕ್ಕೆ ರಘು ಕೌಟಿಲ್ಯ ಸೂಕ್ತ ಆಯ್ಕೆಯಾಗಿ ಕಂಡಿದ್ದಾರೆ. ಇವರ ಆಯ್ಕೆಗೆ ಬಿ.ವೈ. ವಿಜಯೇಂದ್ರ ಅವರು ಸಂಪೂರ್ಣ ಬೆಂಬಲ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version