Video: ಐಸ್ ಕ್ರೀಮ್ ಬೇಕೆಂದು ಹಠ ಹಿಡಿದ ಪುಟಾಣಿ, ವೈರಲ್ ಆಯ್ತು ದೃಶ್ಯ – Kannada News

ಚಿಕ್ಕ ಮಕ್ಕಳಿಗೆ (little kids) ಐಸ್ ಕ್ರೀಮ್ ಅಂದ್ರೆ ತುಂಬಾನೇ ಇಷ್ಟ. ಹೆತ್ತವರು ಹೇಳಿದ ಮಾತನ್ನು ಕೇಳದದ್ದಿದರೆ ಐಸ್ ಕ್ರೀಮ್ ಕೊಡಿಸುವೆ ಅಂದ್ರೆ ಸಾಕು, ಮರು ಮಾತಾಡದೇ ದಾರಿಗೆ ಬರುತ್ತಾರೆ. ಆದರೆ ಈ ಪುಟಾಣಿಗಳು ಐಸ್ ಕ್ರೀಮ್ (ice cream) ಬೇಕೆಂದು ಹಠ ಹಿಡಿಯುವುದನ್ನು ನೀವು ನೋಡಿರಬಹುದು. ಶಾಲಾ ಸಮವಸ್ತ್ರ ಧರಿಸಿರುವ ಈ ಪುಟ್ಟ ಹುಡುಗಿ ಐಸ್ ಕ್ರೀಮ್ ಬೇಕೆಂದು ಹಠ ಹಿಡಿದಿದ್ದು, ಜೋರಾಗಿ ಅಳುತ್ತಿದೆ. ಈ ಕ್ಯೂಟ್ ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ.

Neyha limbu ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಪುಟಾಣಿಯ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಪುಟಾಣಿ ಸಮವಸ್ತ್ರ ಧರಿಸಿ ಸ್ಕೂಲ್ ಗೆ ಹೊರಟಂತಿದೆ. ಇದೇ ವೇಳೆ ನನಗೆ ಐಸ್ ಕ್ರೀಮ್ ಬೇಕೆಂದು ಹಠ ಹಿಡಿದು ಜೋರಾಗಿ ಅಳಲು ಶುರು ಮಾಡಿರುವ ಪುಟಾಣಿಯನ್ನು ನೀವು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಗೊಂಬೆಗೆ ಸ್ನಾನ ಮಾಡಿಸಿ ಆರೈಕೆ ಮಾಡಿದ ಪುಟಾಣಿ, ವೈರಲ್‌ ಆಯ್ತು ದೃಶ್ಯ

ಈ ವಿಡಿಯೋ ಒಂದು ಲಕ್ಷ ಅರವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿವೆ. ಒಬ್ಬ ಬಳಕೆದಾರ ದಯವಿಟ್ಟು ಯಾರಾದ್ರೂ ಅವಳಿಗೆ ಐಸ್ ಕ್ರೀಮ್ ತೆಗಿಸಿ ಕೊಡಿ ಎಂದು ಹೇಳಿದ್ದಾರೆ. ಇನ್ನೊಬ್ಬರು, ನನ್ನ ಬಾಲ್ಯದ ದಿನಗಳನ್ನು ನೆನಪಿಸಿದಂತಾಯಿತು ಎಂದು ಕಾಮೆಂಟ್ ನಲ್ಲಿ ಹೇಳಿದ್ದಾರೆ. ಮತ್ತೊಬ್ಬರು, ಬಾಲ್ಯವೇ ಚಂದ. ಅಳುತ್ತಲೇ ಎಲ್ಲವನ್ನೂ ಪಡೆಯುತ್ತಿದ್ದೆವು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಜಯಪುರ: ಎಸ್ಪಿ ಲಕ್ಷ್ಮಣ ನಿಂಬರಗಿ ಹೆಸರಲ್ಲೇ ನಕಲಿ ಫೇಸ್‌ಬುಕ್ ಖಾತೆ! ಲಕ್ಷ ಲಕ್ಷ ಪೀಕಿದ್ದ ಕಿಲಾಡಿ ಅಂದರ್ – Kannada News

ವಿಜಯಪುರ, ಜೂನ್ 8: ವಿಜಯಪುರ (Vijayapura) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಲಕ್ಷ್ಮಣ ನಿಂಬರಗಿ ಅವರ ಹೆಸರಿನಲ್ಲೇ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ, ಸಾರ್ವಜನಿಕರಿಗೆ ಸರ್ಕಾರಿ ನೌಕರಿ ಕೊಡಿಸುವ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಅಂತರಜಿಲ್ಲಾ ಸೈಬರ್ ವಂಚಕನನ್ನು ವಿಜಯಪುರ ಸಿಇಎನ್ (CEN) ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ದುರದುಂಡಿ ಗ್ರಾಮದ ಹಣಮಂತ ಭಜಂತ್ರಿ ಎಂದು ಗುರುತಿಸಲಾಗಿದೆ.

ಮುಖ್ಯಾಂಶಗಳು

  • ಎಸ್ಪಿ ಹೆಸರಿನಲ್ಲಿ ನಕಲಿ ಫೇಸ್​ಬುಕ್ ಐಡಿ ಸೃಷ್ಟಿಸಿ ವಂಚನೆ.
  • ಪಿಡಬ್ಲ್ಯೂಡಿ ನೌಕರಿಯ ಆಮಿಷವೊಡ್ಡಿ ಹಣ ಪೀಕಿದ್ದ ಕಿಲಾಡಿ.
  • ಆರೋಪಿಯನ್ನು ಬಂಧಿಸಿದ ಸಿಇಎನ್ ಸೈಬರ್ ಪೊಲೀಸರು.

ಎಸ್ಡಿಎ ಹುದ್ದೆಯ ಆಮಿಷ: 5 ಲಕ್ಷ ರೂ.ಗೂ ಅಧಿಕ ಹಣ ಪಡೆದು ವಂಚನೆ

ಬಂಧಿತ ಹಣಮಂತ ಭಜಂತ್ರಿ, ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ತಿಗಣಿ ಬಿದರಿ ಗ್ರಾಮದ ನಿವಾಸಿ ಸುರೇಶ್ ಅಥಣಿ ಎಂಬುವವರಿಗೆ ಲೋಕೋಪಯೋಗಿ ಇಲಾಖೆಯಲ್ಲಿ (PWD) ಎಸ್‌ಡಿಸಿ (SDA) ಹುದ್ದೆ ಕೊಡಿಸುವುದಾಗಿ ನಂಬಿಸಿದ್ದ. ಇದಕ್ಕಾಗಿ ಸುರೇಶ್ ಅವರಿಂದ ಹಂತ ಹಂತವಾಗಿ ಒಟ್ಟು 5,04,600 ರೂಪಾಯಿ ಹಣವನ್ನು ಪಡೆದು ವಂಚಿಸಿದ್ದ. ವರ್ಷಗಳೇ ಕಳೆದರೂ ಕೆಲಸವೂ ಸಿಗದೆ, ಹಣವೂ ವಾಪಸ್ ಬರದೇ ಇದ್ದಾಗ ತಾನು ವಂಚನೆಗೆ ಒಳಗಾಗಿರುವುದು ಸುರೇಶ್‌ಗೆ ಮನವರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಅವರು ವಿಜಯಪುರ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇಮೇಲ್ ಬಳಸಿ ನಕಲಿ ಖಾತೆ ಸೃಷ್ಟಿ

ಪ್ರಕರಣ ದಾಖಲಿಸಿಕೊಂಡು ಸೈಬರ್ ಪೊಲೀಸರು ತಾಂತ್ರಿಕ ತನಿಖೆ ನಡೆಸಿದಾಗ ಸತ್ಯ ಬಯಲಾಗಿದೆ. ಆರೋಪಿ ಹಣಮಂತ, ವಿಜಯಪುರ ಎಸ್ಪಿಯವರ ಹೆಸರನ್ನೇ ಬಳಸಿಕೊಂಡು nimbaragilakshman29@gmail.com ಎಂಬ ನಕಲಿ ಇಮೇಲ್ ಐಡಿ ಸೃಷ್ಟಿಸಿದ್ದ. ಅದರ ಮೂಲಕ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಸಾರ್ವಜನಿಕರನ್ನು ಸಂಪರ್ಕಿಸುತ್ತಿದ್ದ. ಜಿಲ್ಲೆಯ ಅತ್ಯುನ್ನತ ಪೊಲೀಸ್ ಅಧಿಕಾರಿಯ ಅಧಿಕೃತ ಖಾತೆ ಇರಬಹುದೆಂದು ನಂಬಿ ಸಾರ್ವಜನಿಕರು ಆತನ ಜಾಲಕ್ಕೆ ಬಲಿಯಾಗುತ್ತಿದ್ದರು.

ವಿಚಾರಣೆ ವೇಳೆ ಕೃತ್ಯ ಒಪ್ಪಿಕೊಂಡ ಆರೋಪಿ

ಸದ್ಯ ಆರೋಪಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಆತ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಆರೋಪಿ ಇದೇ ಮಾದರಿಯಲ್ಲಿ ರಾಜ್ಯದ ಇತರ ಪ್ರಭಾವಿ ಅಧಿಕಾರಿಗಳು ಅಥವಾ ರಾಜಕಾರಣಿಗಳ ಹೆಸರನ್ನು ಬಳಸಿ ಬೇರೆಯವರಿಗೂ ವಂಚಿಸಿರುವ ಸಾಧ್ಯತೆಗಳಿದ್ದು, ಆ ನಿಟ್ಟಿನಲ್ಲಿ ತನಿಖೆ ಮುಂದುವರಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಭರ್ಜರಿ ಬೇಟೆ: ಬ್ಯಾಂಕಾಕ್‌ನಿಂದ ತಂದಿದ್ದ 2.33 ಕೋಟಿ ಮೌಲ್ಯದ ಗಾಂಜಾ ಜಪ್ತಿ!

ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ನಕಲಿ ಖಾತೆಗಳ ಬಗ್ಗೆ ಸಾರ್ವಜನಿಕರು ತೀವ್ರ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟಿಎಂಸಿ ನಾಯಕ ಜಹಾಂಗೀರ್ ಖಾನ್ ಬಂಧನ, ಟಿಎಂಸಿ ಕಚೇರಿಗಳ ಮೇಲೆ ದಾಳಿ ಸೇರಿ ಪಶ್ಚಿಮ ಬಂಗಾಳದಲ್ಲಿ ಪ್ರಮುಖ ರಾಜಕೀಯ ಬೆಳವಣಿಗೆಗಳು – Kannada News

ಕೋಲ್ಕತ್ತಾ, ಜೂನ್ 08: ಪಶ್ಚಿಮ ಬಂಗಾಳ(West Bengal)ದಲ್ಲಿ ಕಳೆದ ಒಂದು ತಿಂಗಳಿಂದೀಚೆಗೆ ಸಾಕಷ್ಟು ರಾಜಕೀಯ ಬೆಳವಣಿಗೆಗಳು ನಡೆದಿವೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿ ಟಿಎಂಸಿಯನ್ನು ಅಧಿಕಾರದಿಂದ ಕಿತ್ತೊಗೆದಿತ್ತು.  ಟಿಎಂಸಿ ವಿರೋಧಿಗಳ ಜತೆ ಕಾದಾಡುವುದು ಹಾಗಿರಲಿ, ಪಕ್ಷದೊಳಗೆ ಭಿನ್ನಾಭಿಪ್ರಾಯಗಳಿವೆ. ಇದೀಗ ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ ಆ ಕುರಿತು ಮಾಹಿತಿ ಇಲ್ಲಿದೆ.

ಟಿಎಂಸಿ ಪ್ರಭಾವಿ ನಾಯಕ ಜಹಾಂಗೀರ್ ಖಾನ್ ಬಂಧನ
ಕಳೆದ ತಿಂಗಳು ನಡೆದ ಫಾಲ್ಟಾ ವಿಧಾನಸಭಾ ಉಪಚುನಾವಣೆಯ ವೇಳೆ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಟಿಎಂಸಿ ಪಕ್ಷದ ಪ್ರಭಾವಿ ನಾಯಕ ಜಹಾಂಗೀರ್ ಖಾನ್ ಅವರನ್ನು ರಾಜ್ಯ ಪೊಲೀಸರ ವಿಶೇಷ ಕಾರ್ಯಪಡೆ (STF) ಇಂದು ಮುಂಜಾನೆ ನೇಪಾಳ ಗಡಿಯ ಬಳಿ ಬಂಧಿಸಿದೆ.

ಚುನಾವಣಾ ಅಕ್ರಮಗಳು, ಭೂಸ್ವಾಧೀನ ಮತ್ತು ವಸೂಲಿ  ಆರೋಪಗಳ ಎದುರಿಸುತ್ತಿದ್ದ ಜಹಾಂಗೀರ್ ಖಾನ್ ಗೆ ಕೋಲ್ಕತ್ತಾ ಹೈಕೋರ್ಟ್ ನೀಡಿದ್ದ ಮಧ್ಯಂತರ ರಕ್ಷಣೆಯನ್ನು ಇತ್ತೀಚೆಗೆ ಹಿಂಪಡೆದಿತ್ತು. ಮುಖ್ಯಮಂತ್ರಿ ಸುವೇಂದು ಅಧಿಕಾರಿ ಖಾನ್ ವಿರುದ್ಧ ಕಟ್ಟುನಿಟ್ಟಿನ ಕ್ರಮದ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಬಂಧನ ನಡೆದಿದೆ.

ಹೈಕೋರ್ಟ್‌ನಿಂದ ಬಂಧನ ಭೀತಿ ಎದುರಿಸುತ್ತಿದ್ದ ಖಾನ್, ದೇಶ ಬಿಟ್ಟು ನೇಪಾಳಕ್ಕೆ ಓಡಿಹೋಗಲು ಯತ್ನಿಸುತ್ತಿದ್ದಾಗ ರಹಸ್ಯ ಮಾಹಿತಿಯ ಆಧಾರದ ಮೇಲೆ ಎಸ್‌ಟಿಎಫ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದ್ದಾರೆ. ಪ್ರಸ್ತುತ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಕೋಲ್ಕತ್ತಾಕ್ಕೆ ಕರೆತರಲಾಗುತ್ತಿದೆ.

ಟಿಎಂಸಿ ಕಚೇರಿಗಳ ಮೇಲೆ ದಾಳಿ
ಜಹಾಂಗೀರ್ ಖಾನ್ ಬಂಧನದ ಜೊತೆಯಲ್ಲೇ, ರಾಜ್ಯದ ವಿವಿಧೆಡೆ ತನಿಖಾ ಸಂಸ್ಥೆಗಳು ಟಿಎಂಸಿ ನಾಯಕರಿಗೆ ಸೇರಿದ ಜಾಗಗಳ ಮೇಲೆ ದಾಳಿ ನಡೆಸಿವೆ. ಇತ್ತೀಚೆಗಷ್ಟೇ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಸ್ಥಳೀಯ ಪೊಲೀಸರು ಜಂಟಿಯಾಗಿ ಟಿಎಂಸಿ ನಾಯಕರ ಕಚೇರಿ ಮತ್ತು ನಿವಾಸಗಳ ಮೇಲೆ ದಾಳಿ ನಡೆಸಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ವಸ್ತುಗಳು ಹಾಗೂ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ದಾಳಿಗಳು ಪಕ್ಷದ ಆಂತರಿಕ ವಲಯದಲ್ಲಿ ಭಾರಿ ಸಂಚಲನ ಮೂಡಿಸಿವೆ.

ಟಿಎಂಸಿ ನಾಯಕ ರಾಬಿನ್ ದಾಸ್ ಮೇಲ್ ಎಸ್​ಟಿಎಫ್ ದಾಳಿ
ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ವಿವಾದಿತ ಜಾಗವಾದ ಸಂದೇಶಖಾಲಿಯಲ್ಲಿ ರಾಜ್ಯ ಪೊಲೀಸ್ ಇಲಾಖೆಯ ವಿಶೇಷ ಕಾರ್ಯಪಡೆ (STF) ಭರ್ಜರಿ ಕಾರ್ಯಾಚರಣೆಯೊಂದನ್ನು ನಡೆಸಿದೆ. ತೃಣಮೂಲ ಕಾಂಗ್ರೆಸ್ ಪಕ್ಷದ ಮಾಜಿ ಪ್ರಾದೇಶಿಕ ಅಧ್ಯಕ್ಷ ರಾಬಿನ್ ದಾಸ್ ಅವರ ನಿವಾಸಕ್ಕೆ ಹೊಂದಿಕೊಂಡಿರುವ ಖಾಸಗಿ ಕೊಳದಿಂದ (ಕೆರೆ) ಪೊಲೀಸರು ಭಾರಿ ಪ್ರಮಾಣದ ಕಾನೂನುಬಾಹಿರ ಬಂದೂಕುಗಳು ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಮರುಸ್ಥಾಪಿಸಲು ಹೊಸ ಸರ್ಕಾರವು ಆರಂಭಿಸಿರುವ ವಿಶೇಷ ಭದ್ರತಾ ಕಾರ್ಯಾಚರಣೆಯ ಭಾಗವಾಗಿ ಈ ಐತಿಹಾಸಿಕ ದಾಳಿ ನಡೆದಿದೆ.

ಮತ್ತಷ್ಟು ಓದಿ: ಪಶ್ಚಿಮ ಬಂಗಾಳ: 4,800 ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರು, ಗಡಿ ಭದ್ರತೆ ನಮ್ಮ ಆದ್ಯತೆ ಎಂದ ಸಿಎಂ ಸುವೇಂದು

ಟಿಎಂಸಿ ಪಕ್ಷದಲ್ಲಿ ಬಂಡಾಯ ಮತ್ತು ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ
ರಾಜ್ಯ ವಿಧಾನಸಭಾ ಚುನಾವಣೆಯ ಸೋಲಿನ ನಂತರ ತೃಣಮೂಲ ಕಾಂಗ್ರೆಸ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಆಂತರಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ.

ಬಂಡಾಯ ನಾಯಕನಿಗೆ ಮಾನ್ಯತೆ: ಟಿಎಂಸಿ ಪಕ್ಷದ 58 ಬಂಡಾಯ ಶಾಸಕರು ಒಟ್ಟಾಗಿ ಪಕ್ಷದಿಂದ ಉಚ್ಛಾಟಿತಗೊಂಡಿದ್ದ ನಾಯಕ ರಿತಬ್ರತಾ ಬ್ಯಾನರ್ಜಿ ಅವರನ್ನು ತಮ್ಮ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದ್ದರು. ಇದಕ್ಕೆ ವಿಧಾನಸಭಾ ಸ್ಪೀಕರ್ ಅವರು ಮಾನ್ಯತೆ ನೀಡಿ, ಅವರನ್ನು ವಿಧಾನಸಭೆಯ ಅಧಿಕೃತ ಪ್ರತಿಪಕ್ಷ ನಾಯಕ ಎಂದು ಘೋಷಿಸಿದ್ದಾರೆ.

ಸ್ಪೀಕರ್ ಅವರ ಈ ನಿರ್ಧಾರವನ್ನು ಕಾನೂನುಬಾಹಿರ ಎಂದು ಕರೆದಿರುವ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಹೈಕಮಾಂಡ್, ಇದರ ವಿರುದ್ಧ ಇಂದು ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ. ಸ್ಪೀಕರ್ ನಿರ್ಧಾರ ಸಂಸದೀಯ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ತಿಳಿಸಿದ್ದಾರೆ.

ದೆಹಲಿಯಲ್ಲಿ ಇಂಡಿ ಒಕ್ಕೂಟದ ಸಭೆಯಲ್ಲಿ ಮಮತಾ ಭಾಗಿ
ರಾಜ್ಯದಲ್ಲಿ ಇಷ್ಟೆಲ್ಲಾ ಆಂತರಿಕ ಬಿಕ್ಕಟ್ಟು ಮತ್ತು ಬಂಧನಗಳು ನಡೆಯುತ್ತಿದ್ದರೂ, ರಾಷ್ಟ್ರ ರಾಜಕಾರಣದಲ್ಲಿ ಟಿಎಂಸಿ ಸಕ್ರಿಯವಾಗಿದೆ. ನವದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಇಂದು ಆಯೋಜಿಸಲಾಗಿರುವ ‘ಇಂಡಿ’ ಒಕ್ಕೂಟದ ಪ್ರಮುಖ ಸಭೆಯಲ್ಲಿ ಭಾಗವಹಿಸಲು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ದೆಹಲಿ ತಲುಪಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಜಂಟಿ ಹೋರಾಟ ರೂಪಿಸಲು 23 ಪಕ್ಷಗಳು ಒಟ್ಟಾಗಿರುವ ಈ ಸಭೆಗೆ ಟಿಎಂಸಿ ತನ್ನ ಸಂಪೂರ್ಣ ಬೆಂಬಲವನ್ನು ಸೂಚಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 1:09 pm, Mon, 8 June 26

Source link

‘ಕೆಡಿ’ ರಿಲೀಸ್ ಆದರೂ ಕಡಿಮೆ ಆಗಿಲ್ಲ ಶಿಲ್ಪಾ ಶೆಟ್ಟಿ ಕೊರಗು – Kannada News

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಇತ್ತೀಚೆಗೆ ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಈಗ ಅವರು ಬಾಲಿವುಡ್ ಬಿಗ್ ಸ್ಕ್ರೀನ್ ಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ. ಈ ಬಾರಿ ಅವರು ಥಿಯೇಟರ್ ರಿಲೀಸ್ ಸಿನಿಮಾಗಳನ್ನೇ ಮಾಡಲು ಬಯಸುತ್ತಿರುವುದರ ಹಿಂದೆ ಒಂದು ವಿಶೇಷವಾದ ಮತ್ತು ವೈಯಕ್ತಿಕವಾದ ಕಾರಣವಿದೆ. ತಮ್ಮ ಇಬ್ಬರು ಮಕ್ಕಳಾದ ಸಮಿಶಾ ಮತ್ತು ವಿಯಾನ್ ಇದುವರೆಗೂ ತಮ್ಮನ್ನು ಚಿತ್ರಮಂದಿರದ ದೊಡ್ಡ ಪರದೆಯ ಮೇಲೆ ನೋಡಿಲ್ಲ ಎಂದು ಶಿಲ್ಪಾ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಮಾಧ್ಯಮವೊಂದರ ಜೊತೆ ಮಾತನಾಡಿರುವ ಅವರು, ‘ನನ್ನ ಮಕ್ಕಳು ನನ್ನನ್ನು ಎಂದಿಗೂ ಚಿತ್ರಮಂದಿರದ ದೊಡ್ಡ ಪರದೆಯ ಮೇಲೆ ನೋಡಿಯೇ ಇಲ್ಲ. ಹಾಗಾಗಿ ಅವರಿಗಾಗಿಯಾದರೂ ನಾನು ಥಿಯೇಟರ್‌ನಲ್ಲಿ ಬಿಡುಗಡೆಯಾಗುವ ಸಿನಿಮಾವೊಂದನ್ನು ಮಾಡಬೇಕು ಎಂಬ ಹಂಬಲವಿದೆ’ ಎಂದು ತಮ್ಮ ಇಚ್ಛೆಯನ್ನು ಹಂಚಿಕೊಂಡಿದ್ದಾರೆ.

2023ರಲ್ಲಿ ತೆರೆಕಂಡ ಶಿಲ್ಪಾ ಅವರ ‘ಸುಖಿ’ ಸಿನಿಮಾವನ್ನು ಅವರ ಮಗ ವಿಯಾನ್ ನೋಡಿದ್ದನಾದರೂ, ಅದು ಪ್ರಿವ್ಯೂ ಥಿಯೇಟರ್‌ನಲ್ಲಿ ಮಾತ್ರ ಸಾಧ್ಯವಾಗಿತ್ತು. ಸುಖಿ ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ನಮಗೆ ಸೂಕ್ತ ಪ್ರಮಾಣದಲ್ಲಿ ಚಿತ್ರಮಂದಿರಗಳು ಸಿಗಲಿಲ್ಲ. ಅದು ಆ ಚಿತ್ರಕ್ಕೆ ಮಾಡಿದ ಅನ್ಯಾಯವಾಗಿತ್ತು. ಆದಾಗ್ಯೂ ಒಟಿಟಿ ಒಂದು ಅದ್ಭುತ ವೇದಿಕೆಯಾಗಿದೆ. ಪ್ರೇಕ್ಷಕರು ತಮಗೆ ಬಿಡುವು ಸಿಕ್ಕಾಗ ಸಿನಿಮಾಗಳನ್ನು ಹುಡುಕಿ ನೋಡಲು ಇದು ಸಹಾಯ ಮಾಡುತ್ತದೆ. ಆದರೆ ಈಗ ನನ್ನ ಗುರಿ ಏನಿದ್ದರೂ ಥಿಯೇಟರ್ ರಿಲೀಸ್ ಚಿತ್ರಗಳ ಮೇಲಿದೆ’ ಎಂದು ಅವರು ಹೇಳಿದ್ದಾರೆ.

ಸಿನಿಮಾಗಳನ್ನು ಆಯ್ಕೆ ಮಾಡುವಾಗ ತಮಗೆ ಪಾತ್ರದ ಉದ್ದ ಅಥವಾ ಲೆಂತ್ ಎಂದಿಗೂ ಮಾನದಂಡವಾಗಿರಲಿಲ್ಲ ಎಂದು ಶಿಲ್ಪಾ ಸ್ಪಷ್ಟಪಡಿಸಿದ್ದಾರೆ. ‘ನಾನು ಈ ಹಿಂದೆ ಹಲವು ಬಿಗ್ ಬಜೆಟ್ ಸಿನಿಮಾಗಳನ್ನು ತಿರಸ್ಕರಿಸಿದ್ದೇನೆ. ಅದಕ್ಕೆ ನನ್ನದೇ ಆದ ಸಮರ್ಥನೀಯ ಕಾರಣಗಳಿದ್ದವು. ಆ ನಿರ್ಧಾರಗಳು ನನಗೂ ಮತ್ತು ಚಿತ್ರದ ನಿರ್ಮಾಪಕರಿಗಷ್ಟೇ ಗೊತ್ತು. ಆ ಬಗ್ಗೆ ನಾನು ಎಲ್ಲೂ ಮಾತನಾಡುವುದಿಲ್ಲ ಮತ್ತು ನನ್ನ ಯಾವುದೇ ನಿರ್ಧಾರಗಳ ಬಗ್ಗೆ ನನಗೆ ಎಂದಿಗೂ ಪಶ್ಚಾತ್ತಾಪವಿಲ್ಲ’ ಎಂದು ಅವರು ಖಡಕ್ ಆಗಿ ನುಡಿದಿದ್ದಾರೆ.

ಇದನ್ನೂ ಓದಿ: 50ನೇ ವಯಸ್ಸಿನಲ್ಲೂ ಶಿಲ್ಪಾ ಶೆಟ್ಟಿ ಫಿಟ್ನೆಸ್; ಇದರ ಹಿಂದಿದೆ ಶಿಸ್ತು, ನಿರಂತರ ಪರಿಶ್ರಮ

ಶಿಲ್ಪಾ ಶೆಟ್ಟಿ ಅವರು ಇತ್ತೀಚೆಗೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ, ಬಹುನಿರೀಕ್ಷಿತ ಕನ್ನಡದ ‘ಕೆಡಿ: ದಿ ಡೆವಿಲ್’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಥಿಯೇಟರ್​ನಲ್ಲೇ ರಿಲೀಸ್ ಆಗಿತ್ತು. ಆದರೆ, ಸಿನಿಮಾ ಕನ್ನಡದಲ್ಲಿ ಇದ್ದಿದ್ದರಿಂದ ಅವರ ಮಕ್ಕಳಿಗೆ ನೋಡೋಕೆ ಸಾಧ್ಯವಾಗಿಲ್ಲ. ಹೀಗಾಗಿ, ಶಿಲ್ಪಾ ಶೆಟ್ಟಿ ಅವರ ಕೊರಗು ಕಡಿಮೆ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದೇವನಹಳ್ಳಿಯಲ್ಲಿ ಸದ್ಯದಲ್ಲೇ ಗಿಗಾ ಫ್ಯಾಕ್ಟರಿ; ಸೋಲಾರ್ ಇಂಗಾಟ್ಸ್, ಸಿಲಿಕಾನ್ ವೇಫರ್ಸ್ ತಯಾರಿಸಲಿರುವ ಎಮ್ಮೀ ಗ್ರೂಪ್ – Kannada News

ಸೌರ ಘಟಕದ ಸಾಂದರ್ಭಿಕ ಚಿತ್ರImage Credit source: iStock

ಬೆಂಗಳೂರು, ಜೂನ್ 8: ಬೆಂಗಳೂರು ಮೂಲದ ಪ್ರಮುಖ ಹಸಿರು ಇಂಧನ ಸಂಸ್ಥೆಯಾದ ಎಮ್ಮೀ ಗ್ರೂಪ್ (Emmvee Group), ಬೆಂಗಳೂರಿನ ದೇವನಹಳ್ಳಿಯಲ್ಲಿ ಬರೋಬ್ಬರಿ 5,500 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಬೃಹತ್ ‘ಗಿಗಾ ಫ್ಯಾಕ್ಟರಿ’ (Gigafactory) ಸ್ಥಾಪಿಸಲು ಮುಂದಾಗಿದೆ. ಈ ಹೊಸ ಪ್ಲಾಂಟ್ ಸದ್ಯದ ಫ್ಯಾಕ್ಟರಿಗಿಂತ 5 ಪಟ್ಟು ದೊಡ್ಡದಾಗಿದ್ದು, ಸುಮಾರು 100 ಎಕರೆ ಪ್ರದೇಶದಲ್ಲಿ ವಿಸ್ತರಿಸಲಿದೆ. ಸಂಸ್ಥೆಯ ಛೇರ್ಮನ್ ಡಿ.ವಿ. ಮಂಜುನಾಥ ದೊಂತಿ ಅವರು ಸ್ವತಃ ಈ ಮಾಹಿತಿಯನ್ನು ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್​ಗೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಅವರು ನೀಡಿರುವ ಮಾಹಿತಿಯ ಕೆಲ ಮುಖ್ಯಾಂಶಗಳು ಇಲ್ಲಿವೆ.

1992ರಲ್ಲಿ ಭಾರತದ ಮೊದಲ ಸೋಲಾರ್ ವಾಟರ್ ಹೀಟರ್ಸ್ ತಯಾರಿಸಿದ ಸಾಧನೆ ಹೊಂದಿರುವ ಎಮ್ವೀ ಗ್ರೂಪ್, ಭಾರತದ ಅಗ್ರಗಣ್ಯ ಸೋಲಾರ್ ಮಾಡ್ಯೂಲ್ ತಯಾರಿಸುವ ಕಂಪನಿ. ಇದೀಗ ದೇವನಹಳ್ಳಿಯ ಹೊಸ ಘಟಕದಲ್ಲಿ ಇಂಗಾಟ್ಸ್ ಮತ್ತು ಸಿಲಿಕಾನ್ ವೇಫರ್​ಗಳನ್ನು ತಯಾರಿಸಲಿದೆ. ಸೋಲಾರ್ ಮಾಡ್ಯೂಲ್​ಗಳ ತಯಾರಿಕೆಯಲ್ಲಿ ಈ ಇಂಗಾಟ್ಸ್ ಮತ್ತು ವೇಫರ್​ಗಳು ಪ್ರಮುಖ ಕಚ್ಛಾ ವಸ್ತುಗಳೆನಿಸಿವೆ. ಹೀಗಾಗಿ, ದೇವನಹಳ್ಳಿಯ 5,500 ಕೋಟಿ ರೂ ಹೂಡಿಕೆಯಲ್ಲಿ ಎಮ್​ವೀ ಗ್ರೂಪ್ ನಿರ್ಮಿಸುತ್ತಿರುವ ಬೃಹತ್ ಗಿಗಾ ಫ್ಯಾಕ್ಟರಿಯು ಭಾರತದ ಸೋಲಾರ್ ಸ್ವಾವಲಂಬನೆಯಲ್ಲಿ ಪ್ರಮುಖ ಕೊಂಡಿ ಎಂದು ಬಣ್ಣಿಸಲಾಗುತ್ತಿದೆ.

ಸ್ವಾವಲಂಬನೆಯತ್ತ ಹೆಜ್ಜೆ

ಭಾರತದಲ್ಲಿ ಸದ್ಯಕ್ಕೆ ಸೋಲಾರ್ ಪ್ಯಾನಲ್‌ಗಳನ್ನು ತಯಾರಿಸಿದರೂ, ಅದಕ್ಕೆ ಬೇಕಾದ ಕಚ್ಚಾ ವಸ್ತುಗಳನ್ನು (ವೇಫರ್ ಮತ್ತು ಇಂಗಾಟ್ಸ್) ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ, ಎಮ್ಮೀ ಗ್ರೂಪ್ 2028ರ ವೇಳೆಗೆ ಈ ಗಿಗಾ ಫ್ಯಾಕ್ಟರಿಯಲ್ಲಿ ಸ್ವತಃ ಅತ್ಯಂತ ಪ್ರಮುಖವಾದ ‘ಸಿಲಿಕಾನ್ ವೇಫರ್ಸ್’ ಮತ್ತು ‘ಇಂಗಾಟ್ಸ್’ (Ingots and Wafers) ಉತ್ಪಾದನೆ ಆರಂಭಿಸಲಿದೆ. ಇದರಿಂದ ಭಾರತದ ಸೌರಶಕ್ತಿ ಕ್ಷೇತ್ರಕ್ಕೆ ದೊಡ್ಡ ಬಲ ಸಿಗಲಿದೆ.

ಇದನ್ನೂ ಓದಿ: ಮಾನವ ಇತಿಹಾಸದಲ್ಲೇ ಮೊದಲ ಟ್ರಿಲಿಯನೇರ್, ಇದು ಇಲಾನ್ ಮಸ್ಕ್ ಮ್ಯಾಜಿಕ್; ಇವರಿಗಿರುವ ಸಂಪತ್ತು ಎಷ್ಟು ಅಗಾಧ ಗೊತ್ತಾ?

ಉತ್ಪಾದನಾ ಸಾಮರ್ಥ್ಯದ ಹೆಚ್ಚಳ

ಸದ್ಯಕ್ಕೆ ಸಂಸ್ಥೆಯು 2.9 ಗಿಗಾವ್ಯಾಟ್ (GW) ಸೋಲಾರ್ ಸೆಲ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, ಮಾರ್ಚ್ 2027ರ ವೇಳೆಗೆ ಇದನ್ನು 8.90 ಗಿಗಾವ್ಯಾಟ್‌ಗೆ (ಸುಮಾರು ಮೂರು ಪಟ್ಟು) ಹೆಚ್ಚಿಸಲಿದೆ. ಸೋಲಾರ್ ಮಾಡ್ಯೂಲ್ ಉತ್ಪಾದನೆಯನ್ನು ಈ ವರ್ಷದ (2026) ಡಿಸೆಂಬರ್ ವೇಳೆಗೆ 10.3 ಗಿಗಾವ್ಯಾಟ್‌ನಿಂದ 16.3 ಗಿಗಾವ್ಯಾಟ್‌ಗೆ ಏರಿಸಲಾಗುವುದು.

ಎಮ್​ವೀ ಗ್ರೂಪ್​ನ ಹಣಕಾಸು ಹೂಡಿಕೆ ಹೇಗೆ?

ಈ 5,500 ಕೋಟಿ ರೂ ಯೋಜನೆಯಲ್ಲಿ 40% ರಷ್ಟು (2,200 ಕೋಟಿ ರೂ.) ಮೊತ್ತವನ್ನು ಕಂಪನಿಯು ತನ್ನ ಸ್ವಂತ ಈಕ್ವಿಟಿ ಮೂಲಕ ಹೂಡಿಕೆ ಮಾಡುತ್ತಿದೆ. ಉಳಿದ 3,300 ಕೋಟಿ ರೂಪಾಯಿ ಸಾಲವನ್ನು ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ (IREDA) ನೀಡುತ್ತಿದೆ. ಸಂಸ್ಥೆಯು ಸಂಪೂರ್ಣವಾಗಿ ಶೂನ್ಯ ಸಾಲದ (Zero-debt) ಕಂಪನಿಯಾಗಿದೆ ಎಂದು ಮಂಜುನಾಥ ದೊಂತಿ ತಿಳಿಸಿದ್ದಾರೆ.

ಜಾಗತಿಕ ಮಟ್ಟದ ಗುಣಮಟ್ಟ: ಚೀನಾ ಸೋಲಾರ್ ಪ್ಯಾನಲ್‌ಗಳಿಗೆ ಹೋಲಿಸಿದರೆ ಎಮ್ಮೀ ಸಂಸ್ಥೆಯ ಉತ್ಪನ್ನಗಳ ‘ಕ್ಲೈಮ್ ರೇಶಿಯೋ’ (ದೋಷಗಳ ಪ್ರಮಾಣ) ಕೇವಲ 0.008 ರಷ್ಟಿದ್ದು, ಇದು ಜಗತ್ತಿನಲ್ಲೇ ಅತ್ಯಂತ ಕಡಿಮೆ ಹಾಗೂ ಅತ್ಯುತ್ತಮ ಗುಣಮಟ್ಟದ್ದಾಗಿದೆ ಎಂದೂ ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಇಂಟರ್ನೆಟ್ ಬಳಕೆಯಲ್ಲಿ ಮನುಷ್ಯರನ್ನು ಮೀರಿಸಿವೆಯಂತೆ ಎಐ ಏಜೆಂಟ್​ಗಳು

ಚೀನಾಗಿಂತ ನಾವೇನೂ ಕಮ್ಮಿ ಇಲ್ಲ: ದೊಂತಿ

ಚೀನಾ ಬೇರೆ ಮಟ್ಟದಲ್ಲಿದೆ. ಅದರ ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಮತ್ತು ರಕ್ಷಣೆಯನ್ನು ಇತರ ದೇಶಗಳಿಗೆ ಸರಿಗಟ್ಟಲು ಆಗುವುದಿಲ್ಲ. ಎಲ್ಲಾ ಕಚ್ಚಾ ವಸ್ತು ಸ್ಥಳೀಯವಾಗಿಯೇ ಲಭ್ಯವಾದರೆ, ಮತ್ತು ಚೀನೀ ಕಂಪನಿಗಳಿಗೆ ಸಿಗುವಂತಹ ರೀತಿಯ ರಕ್ಷಣೆ ನಮಗೂ ಸಿಕ್ಕರೆ ನಾವೂ ಕೂಡ ಬೆಲೆ ವಿಚಾರದಲ್ಲಿ ಚೀನೀ ಉತ್ಪನ್ನಗಳನ್ನು ಮೀರಿಸಬಲ್ಲೆವು. ಸರ್ಕಾರ ಹಣಕಾಸು ಬೆಂಬಲ ನೀಡದಿದ್ದರೂ ಚಿಂತೆ ಇಲ್ಲ, ಆದರೆ, ಅಪಾಯ ಎದುರಿಸಲು ಸರ್ಕಾರದ ವಿಶ್ವಾಸ ಅಗತ್ಯ ಇದೆ ಎಂದು ಎಮ್​ವೀ ಗ್ರೂಪ್​ನ ಛೇರ್ಮನ್ ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಎಮ್​ವೀ ಗ್ರೂಪ್​ನ ಅಮೋಘ ಹಾದಿ

1992 ರಲ್ಲೇ ‘ಸೋಲಾರೈಜರ್’ (Solarizer) ಬ್ರ್ಯಾಂಡ್ ಅಡಿಯಲ್ಲಿ ದೇಶದ ಮೊದಲ ಸೋಲಾರ್ ವಾಟರ್ ಹೀಟರ್ ಪರಿಚಯಿಸಿದ ಹೆಗ್ಗಳಿಕೆ ಈ ಸಂಸ್ಥೆಯದ್ದು. 2006 ರಲ್ಲಿ ಸೋಲಾರ್ ಪವರ್ ಉತ್ಪಾದನೆ ಆರಂಭಿಸಿದಾಗ ಭಾರತದಲ್ಲಿ ಮಾರುಕಟ್ಟೆ ಇಲ್ಲದ ಕಾರಣ 2014 ರವರೆಗೆ ತನ್ನ 100% ಉತ್ಪನ್ನಗಳನ್ನು ಯುರೋಪ್ (ಮುಖ್ಯವಾಗಿ ಜರ್ಮನಿ) ದೇಶಗಳಿಗೆ ರಫ್ತು ಮಾಡುತ್ತಿತ್ತು. ಆದರೆ ಈಗ ಭಾರತ ಸರ್ಕಾರ ಸೌರಶಕ್ತಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ, ದೇಶಿಯ ಮಾರುಕಟ್ಟೆಯಲ್ಲೇ ಇವರ ಉತ್ಪನ್ನಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ.

ಈ ಗಿಗಾ ಫ್ಯಾಕ್ಟರಿ ಆರಂಭವಾಗುವುದರಿಂದ ಬೆಂಗಳೂರಿನ ದೇವನಹಳ್ಳಿ ಭಾಗದಲ್ಲಿ ದೊಡ್ಡ ಮಟ್ಟದ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಹಾಗೂ ಭಾರತವು ಸೌರಶಕ್ತಿ ವಲಯದಲ್ಲಿ ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಲು ನೆರವಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕೇರಳದ ಕೊಟ್ಟಿಯೂರು ದೇಗುಲದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ; ಮಹಿಳಾ ಭಕ್ತರ ಮೇಲೆ ಕಾಲಿನಿಂದ ನೀರೆರಚಿ ಸಿಬ್ಬಂದಿ ವಿಕೃತಿ! – Kannada News

ಕೇರಳದ ಕೊಟ್ಟಿಯೂರು ಶಿವ ದೇವಸ್ಥಾನದಲ್ಲಿ ಕನ್ನಡಿಗ ಭಕ್ತರ ಮೇಲೆ ದೌರ್ಜ

ಬೆಂಗಳೂರು, ಜೂನ್ 08: ಕೇರಳದ ಪ್ರಸಿದ್ಧ ಕೊಟ್ಟಿಯೂರು ಶಿವ ದೇವಸ್ಥಾನದಲ್ಲಿ ವೈಶಾಖ ಮಹೋತ್ಸವದ ವೇಳೆ ಕರ್ನಾಟಕದ ಭಕ್ತರ ಮೇಲೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಭದ್ರತಾ ಸಿಬ್ಬಂದಿ ತೀವ್ರ ದೌರ್ಜನ್ಯ ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ವಿಶೇಷವಾಗಿ ಮಹಿಳಾ ಭಕ್ತರನ್ನು ತಳ್ಳಾಡಿ, ಅವರ ಮೇಲೆ ಕಾಲಿನಿಂದ ನೀರು ಎರಚಿ ವಿಕೃತಿ ಮೆರೆದಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಕನ್ನಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಮುಖ್ಯಾಂಶಗಳು

  • ಕೇರಳದ ಕೊಟ್ಟಿಯೂರು ಶಿವ ದೇವಸ್ಥಾನದಲ್ಲಿ ಕನ್ನಡಿಗ ಭಕ್ತರ ಮೇಲೆ ದೌರ್ಜನ್ಯ ನಡೆದಿದೆ.
  • ಮಹಿಳಾ ಭಕ್ತರನ್ನು ತಳ್ಳಾಡಿ ದೇವಸ್ಥಾನದ ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
  • ಯಾರೂ ಕೊಟ್ಟಿಯೂರಿಗೆ ಬರಬೇಡಿ ಎಂದು ಅಲ್ಲಿಗೆ ಹೋಗಿರುವ ಕನ್ನಡಿಗರು ಮನವಿ ಮಾಡಿದ್ದಾರೆ.

ಕೊಟ್ಟಿಯೂರು ಶಿವ ದೇವಸ್ಥಾನದಲ್ಲಿ ವರ್ಷಕ್ಕೊಮ್ಮೆ ವೈಶಾಖ ಮಹೋತ್ಸವ ನಡೆಯುತ್ತದೆ. ಈ ವೇಳೆ ಮೇ ಅಥವಾ ಜೂನ್ ಒಂದು ತಿಂಗಳು ಮಾತ್ರ ಈ ದೇವಸ್ಥಾನ ತೆರೆದಿರುತ್ತದೆ. ವರ್ಷದ ಇನ್ನುಳಿದ ಕಾಲ ದೇವರ ದರ್ಶನವಿರುವುದಿಲ್ಲ. ಕಳೆದ ವರ್ಷ ಸೋಶಿಯಲ್ ಮೀಡಿಯಾ ರೀಲ್ಸ್‌ಗಳ ಮೂಲಕ ಈ ಕ್ಷೇತ್ರ ವೈರಲ್ ಆಗಿದ್ದರಿಂದ, ಈ ಬಾರಿ ಕರ್ನಾಟಕದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಕನ್ನಡಿಗರು ಬಸ್, ಕಾರುಗಳ ಮೂಲಕ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಆದರೆ ಅಲ್ಲಿ ಕನ್ನಡಿಗರಿಗೆ ಕನಿಷ್ಠ ಗೌರವವೂ ಸಿಗುತ್ತಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಅಳಲು ತೋಡಿಕೊಂಡಿದ್ದಾರೆ.

ಮಹಿಳೆಯರ ಮೇಲೆ ದೌರ್ಜನ್ಯ ಮತ್ತು ವಿಐಪಿ ಟಿಕೆಟ್ ಸ್ಕ್ಯಾಮ್

ಶಿವನ ದರ್ಶನಕ್ಕೆ 8 ರಿಂದ 10 ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿ ಇದ್ದು, ಇಲ್ಲಿ 1,000 ರೂಪಾಯಿ ಮುಖಬೆಲೆಯ ವಿಐಪಿ ಟಿಕೆಟ್ ಹೆಸರಿನಲ್ಲಿ ದೊಡ್ಡ ಸ್ಕ್ಯಾಮ್ ನಡೆಯುತ್ತಿದೆ. ಹಣ ಕೊಟ್ಟರೂ ಸರಿಯಾಗಿ ದರ್ಶನ ಭಾಗ್ಯ ಸಿಗುತ್ತಿಲ್ಲ. ಹೆಣ್ಣುಮಕ್ಕಳು ಗಂಟೆಗಟ್ಟಲೆ ಸಾಲಿನಲ್ಲಿ ನಿಂತಿದ್ದರೂ ಮುಂದೆ ಹೋಗಲು ಬಿಡದೆ, ಕೈ ಹಿಡಿದು ಕೆಟ್ಟದಾಗಿ ನೂಕುತ್ತಿದ್ದಾರೆ ಎಂದು ಕರ್ನಾಟಕದ ಭಕ್ತರು ಅಳಲು ತೋಡಿಕೊಂಡಿದ್ದಾರೆ. ಇದೇ ವೇಳೆ ದೇವಸ್ಥಾನದ ಸಿಬ್ಬಂದಿ ಮಹಿಳೆಯರ ಮೇಲೆ ಕಾಲಿನಿಂದ ನೀರು ಎರಚುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ.

ಕೊಟ್ಟಿಯೂರಿಗೆ ಕನ್ನಡಿಗರು ಬರಬೇಡಿ ಎಂದು ಭಕ್ತರ ಮನವಿ

ಮಲಯಾಳಂ ಭಾಷೆ ಬಾರದ ಕನ್ನಡಿಗರನ್ನು ಗುರಿಯಾಗಿಸಿಕೊಂಡು ಅಲ್ಲಿನ ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ ಎಂದು ಭಕ್ತರು ಆಕ್ರೋಶ ಹೊರಹಾಕಿದ್ದಾರೆ. ಕೇರಳದ ಭಕ್ತರು ನಮ್ಮ ಧರ್ಮಸ್ಥಳ, ಉಡುಪಿಗೆ ಬಂದಾಗ ನಾವು ಅವರನ್ನು ಗೌರವದಿಂದ ನಡೆಸಿಕೊಳ್ಳುತ್ತೇವೆ. ಆದರೆ ಇಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಹೀಗಾಗಿ ಯಾರೂ ಕೊಟ್ಟಿಯೂರಿಗೆ ಬರಬೇಡಿ ಎಂದು ಅಲ್ಲಿಗೆ ಹೋಗಿರುವ ಭಕ್ತರೇ ವಿಡಿಯೋ ಮಾಡಿ ಕನ್ನಡಿಗರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಭರ್ಜರಿ ಬೇಟೆ: ಬ್ಯಾಂಕಾಕ್‌ನಿಂದ ತಂದಿದ್ದ 2.33 ಕೋಟಿ ಮೌಲ್ಯದ ಗಾಂಜಾ ಜಪ್ತಿ!

ದರ್ಶನಕ್ಕೆ ವ್ಯವಸ್ಥಿತ ಮಾರ್ಗವಿಲ್ಲದೆ ಭಕ್ತರು ಗೇಟ್ ಬಳಿಯೇ ಪರದಾಡುವಂತಾಗಿದ್ದು, ತಮಗೆ ಬೇಕಾದವರನ್ನು ಮಾತ್ರ ಒಳಗೆ ಬಿಡಲಾಗುತ್ತಿದೆ ಎಂಬ ದೂರು ಕೇಳಿಬಂದಿದೆ. ದೇವರ ಸನ್ನಿಧಿಯಲ್ಲಿ ನಡೆದಿರುವ ಈ ಅಮಾನವೀಯ ವರ್ತನೆಗೆ ಕನ್ನಡಿಗರು ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚೊಚ್ಚಲ ಪಂದ್ಯದಲ್ಲೇ ದಾಖಲೆಗಳ ಮೇಲೆ ದಾಖಲೆ ಬರೆದ ಮಾನವ್ ಸುತಾರ್..! – Kannada News

ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸ್ಪಿನ್ ಬೌಲರ್‌ಗಳಿಗೆ ಯಾವಾಗಲೂ ವಿಶೇಷ ಗೌರವವಿದೆ. ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್, ಆರ್. ಅಶ್ವಿನ್ ಅವರಂತಹ ದಿಗ್ಗಜರು ಆಳಿದ ಈ ಸಾಮ್ರಾಜ್ಯಕ್ಕೆ ಈಗ ಮತ್ತೊಬ್ಬ ಯುವ ಮಾಂತ್ರಿಕ ಸ್ಪಿನ್ನರ್​ನ ಎಂಟ್ರಿಯಾಗಿದೆ. ಅವರೇ 23 ವರ್ಷದ ಎಡಗೈ ಸ್ಪಿನ್ನರ್ ಮಾನವ್ ಸುತಾರ್.

ಅಫ್ಘಾನಿಸ್ತಾನ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಈ ಯುವ ಆಟಗಾರ, ಕೇವಲ ವಿಕೆಟ್ ಬೇಟೆಯಾಡಲಿಲ್ಲ, ಬದಲಿಗೆ ಮೂರೂವರೆ ದಶಕಗಳಿಗೂ ಹೆಚ್ಚು ಹಳೆಯದಾದ ಐತಿಹಾಸಿಕ ದಾಖಲೆಗಳನ್ನು ಧೂಳೀಪಟ ಮಾಡಿದ್ದಾರೆ. ನ್ಯೂ ಚಂಡೀಗಢ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮಾನವ್ ಸುತಾರ್ ಬರೆದ ದಾಖಲೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

  1. 38 ವರ್ಷಗಳ ದಾಖಲೆ ಬ್ರೇಕ್: ಭಾರತದ ಪರ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಸ್ಪಿನ್ನರ್ ಒಬ್ಬರು ನೀಡಿದ ಅತ್ಯುತ್ತಮ ಪ್ರದರ್ಶನ (6/33) ಇದಾಗಿದೆ. 1988ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನರೇಂದ್ರ ಹಿರವಾನಿ (8/61) ಅವರ ಬಳಿಕ ಭರ್ಜರಿ ಪ್ರದರ್ಶನ ನೀಡಿದ ಮೊದಲ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಸುತಾರ್ ಪಾತ್ರರಾಗಿದ್ದಾರೆ.
  2. ಅಶ್ವಿನ್ ದಾಖಲೆ ಉಡೀಸ್: 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆರ್. ಅಶ್ವಿನ್ (6/47) ಬರೆದಿದ್ದ 21ನೇ ಶತಮಾನದ ಅತ್ಯುತ್ತಮ ಚೊಚ್ಚಲ ಪಂದ್ಯದ ಬೌಲಿಂಗ್ ದಾಖಲೆಯನ್ನು ಸುತಾರ್ ಮುರಿದಿದ್ದಾರೆ.
  3.  ಮೊದಲ ಓವರ್‌ನಲ್ಲೇ ವಿಕೆಟ್ ಬೇಟೆ: ತಮ್ಮ ಟೆಸ್ಟ್ ವೃತ್ತಿಜೀವನದ ಅತ್ಯಂತ ಮೊದಲ ಓವರ್‌ನಲ್ಲೇ (4ನೇ ಎಸೆತದಲ್ಲಿ ಅಬ್ದುಲ್ ಮಲಿಕ್) ವಿಕೆಟ್ ಪಡೆದ ಭಾರತದ 8ನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
  4.  25 ವರ್ಷಗಳ ಕಾಯುವಿಕೆಗೆ ಅಂತ್ಯ: 2001ರಲ್ಲಿ ಟಿನು ಯೋಹಾನನ್ ಬಳಿಕ, 21ನೇ ಶತಮಾನದಲ್ಲಿ ತಮ್ಮ ಮೊದಲ ಓವರ್‌ನಲ್ಲೇ ವಿಕೆಟ್ ಪಡೆದ ಕೇವಲ ಎರಡನೇ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.
  5. ಎಲೈಟ್ ‘ಫೈಫರ್’: ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ 5 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಭಾರತದ 10ನೇ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
  6.  ಎಡಗೈ ಸ್ಪಿನ್ನರ್ ಸಾಧನೆ: ಭಾರತದ ಪರ ಪದಾರ್ಪಣೆ ಪಂದ್ಯದಲ್ಲೇ 5 ವಿಕೆಟ್ ಗೊಂಚಲು ಪಡೆದ ಕೇವಲ 3ನೇ ಎಡಗೈ ಆರ್ಥೊಡಾಕ್ಸ್ ಸ್ಪಿನ್ನರ್ (ದಿಲೀಪ್ ದೋಷಿ ಮತ್ತು ಅಕ್ಷರ್ ಪಟೇಲ್ ನಂತರ) ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
  7.  ಅತ್ಯುತ್ತಮ ಎಕಾನಮಿ ರೇಟ್: ಕೇವಲ 1.50 ಎಕಾನಮಿ ರೇಟ್‌ನಲ್ಲಿ ಬೌಲಿಂಗ್ ಮಾಡುವ ಮೂಲಕ, ಚೊಚ್ಚಲ ಪಂದ್ಯದಲ್ಲಿ ಕನಿಷ್ಠ 20 ಓವರ್ ಬೌಲಿಂಗ್ ಮಾಡಿ ಅತೀ ಕಡಿಮೆ ರನ್ ಬಿಟ್ಟುಕೊಟ್ಟ ಭಾರತೀಯ ಬೌಲರ್‌ಗಳ ಸಾಲಿಗೆ ಸೇರಿದ್ದಾರೆ.

ಇದನ್ನೂ ಓದಿ: WTC ಫೈನಲ್​ಗೇರಲು ಭಾರತ ತಂಡ ಇನ್ನೆಷ್ಟು ಪಂದ್ಯ ಗೆಲ್ಲಬೇಕು?

ಒಟ್ಟಿನಲ್ಲಿ ಚೊಚ್ಚಲ ಟೆಸ್ಟ್ ಪಂಇದ್ಯದಲ್ಲೇ ಭರ್ಜರಿ ಪ್ರದರ್ಶನ ನೀಡುವ ಮೂಲಕ ಮಾನವ್ ಸುತಾರ್,  ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರಂತಹ ದಿಗ್ಗಜ ಸ್ಪಿನ್ನರ್‌ಗಳ ಯುಗದ ನಂತರ, ಭಾರತೀಯ ಟೆಸ್ಟ್ ಕ್ರಿಕೆಟ್ ಅನ್ನು ಮುನ್ನಡೆಸಬಲ್ಲೇ ಎಂಬ ಭರವಸೆ ಮೂಡಿಸಿದ್ದಾರೆ. ಈ ಭರವಸೆಯೊಂದಿಗೆ ಅವರು ಮುಂದಿನ ಸರಣಿಗಳಲ್ಲಿ ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Published On – 12:42 pm, Mon, 8 June 26

Source link

ವಿಧಾನ ಪರಿಷತ್ ಚುನಾವಣೆ: 5ನೇ ಅಭ್ಯರ್ಥಿಯ ಅವಿರೋಧ ಆಯ್ಕೆ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್​ಗೆ ಬಿಜೆಪಿ-ಜೆಡಿಎಸ್ ಶಾಕ್ – Kannada News

5ನೇ ಅಭ್ಯರ್ಥಿಯ ಅವಿರೋಧ ಆಯ್ಕೆ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್​ಗೆ ಬಿಜೆಪಿ-ಜೆಡಿಎಸ್ ಶಾಕ್Image Credit source: tv9

ಬೆಂಗಳೂರು, ಜೂನ್ 8: ಕರ್ನಾಟಕ ವಿಧಾನಪರಿಷತ್‌ನ 7 ಸ್ಥಾನಗಳಿಗೆ ನಡೆಯುವ ಚುನಾವಣೆ (Karnataka MLC Election) ತೀವ್ರ ಕುತೂಹಲ ಕೆರಳಿಸಿದೆ. ಜೆಡಿಎಸ್ (JDS) ಮತ್ತು ಬಿಜೆಪಿ (BJP) ಮೈತ್ರಿಕೂಟವು ಅಚ್ಚರಿಯ ನಡೆ ಪ್ರದರ್ಶಿಸಿದ್ದು, ಮೂರನೇ ಅಭ್ಯರ್ಥಿ ಗೋವಿಂದರಾಜು ಅವರನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್‌ನ 5ನೇ ಅಭ್ಯರ್ಥಿಯ ಅವಿರೋಧ ಆಯ್ಕೆಯ ಲೆಕ್ಕಾಚಾರಕ್ಕೆ ಭಾರಿ ತಿರುಗೇಟು ನೀಡಿದೆ. ಈ ಬೆಳವಣಿಗೆಯಿಂದಾಗಿ, 7 ಸ್ಥಾನಗಳಿಗೆ ಈಗ 8 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದು, ಚುನಾವಣೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

ಮುಖ್ಯಾಂಶಗಳು

  • ಕಾಂಗ್ರೆಸ್ ಅವಿರೋಧ ಆಯ್ಕೆ ತಂತ್ರಕ್ಕೆ ಮೈತ್ರಿಕೂಟದ ಬ್ರೇಕ್.
  • ಎನ್‌ಡಿಎ 3ನೇ ಅಭ್ಯರ್ಥಿಯಾಗಿ ಗೋವಿಂದರಾಜು ಕಣಕ್ಕೆ.
  • ಕ್ರಾಸ್ ವೋಟಿಂಗ್ ಭೀತಿಯಲ್ಲಿ ಕಾಂಗ್ರೆಸ್ ಪಾಳಯ.

ಕಾಂಗ್ರೆಸ್ ತನ್ನ 5ನೇ ಅಭ್ಯರ್ಥಿಯು ಸುಲಭವಾಗಿ, ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ ಎಂದು ನಿರೀಕ್ಷಿಸಿತ್ತು. ಆದರೆ, ಜೆಡಿಎಸ್ ಮತ್ತು ಬಿಜೆಪಿ ನಾಯಕರ ನಡುವೆ ನಡೆದ ವ್ಯಾಪಕ ಸಮಾಲೋಚನೆಯ ನಂತರ, ಎನ್‌ಡಿಎ ಮೈತ್ರಿಕೂಟದಿಂದ ಗೋವಿಂದರಾಜು ಅವರನ್ನು ಮೂರನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಹೆಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿ ಹೈಕಮಾಂಡ್ ಜೊತೆ ಮಾತುಕತೆ ನಡೆಸಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ.

ವಿಧಾನಪರಿಷತ್ ಬಲಾಬಲ ಹೇಗಿದೆ?

ವಿಧಾನಪರಿಷತ್ ಚುನಾವಣೆಯಲ್ಲಿ ಪ್ರತಿ ಅಭ್ಯರ್ಥಿಯ ಗೆಲುವಿಗೆ 28 ಶಾಸಕರ ಮತಗಳ ಅಗತ್ಯವಿದೆ. ಮೈತ್ರಿಕೂಟದ ಸಂಖ್ಯಾಬಲವನ್ನು ಪರಿಗಣಿಸಿದರೆ, ಜೆಡಿಎಸ್ ಪಕ್ಷದ 18 ಶಾಸಕರು ಮತ್ತು ಬಿಜೆಪಿಯ 62 ಶಾಸಕರ ಮತಗಳು ಲಭ್ಯವಿವೆ. ಇದರ ಜೊತೆಗೆ ಪಕ್ಷೇತರ ಶಾಸಕ ಜನಾರ್ದನ ರೆಡ್ಡಿ ಮತ್ತು ಉಚ್ಚಾಟಿತ ಶಾಸಕ ಯತ್ನಾಳ್ ಅವರ ಮತಗಳೂ ಸಹ ಲಭ್ಯವಾಗುವ ಸಾಧ್ಯತೆ ಇದೆ. ಈ ಲೆಕ್ಕಾಚಾರದಲ್ಲಿ, ಎನ್‌ಡಿಎ ಅಭ್ಯರ್ಥಿ ಗೋವಿಂದರಾಜು ಅವರ ಗೆಲುವಿಗೆ ಸುಮಾರು 4 ರಿಂದ 5 ಹೆಚ್ಚುವರಿ ಮತಗಳ ಕೊರತೆ ಎದುರಾಗಲಿದೆ.

ಈ ಕೊರತೆಯನ್ನು ನೀಗಿಸಲು ಜೆಡಿಎಸ್ ಮತ್ತು ಬಿಜೆಪಿ ನಾಯಕರು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಕಾಂಗ್ರೆಸ್‌ನ ಕೆಲವು ಶಾಸಕರನ್ನು ತಮ್ಮತ್ತ ಸೆಳೆಯುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಅವರ ನೇತೃತ್ವದಲ್ಲಿ ಸಭೆಗಳು ನಡೆಯುತ್ತಿದ್ದು, ಮುಂದಿನ ತಂತ್ರಗಾರಿಕೆಗಳನ್ನು ರೂಪಿಸಲಾಗುತ್ತಿದೆ. 4-5 ಹೆಚ್ಚುವರಿ ಮತಗಳನ್ನು ಕುಮಾರಸ್ವಾಮಿ ಮತ್ತು ಬಿಜೆಪಿ ನಾಯಕರು ಹೇಗೆ ನಿರ್ವಹಿಸುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ವಿಧಾನಪರಿಷತ್ ಸಂಖ್ಯಾಬಲ

  • ಒಬ್ಬ ಅಭ್ಯರ್ಥಿಯ ಗೆಲುವಿಗೆ ಬೇಕಿರುವ ಮತಗಳು – 28
  • ಜೆಡಿಎಸ್ ಶಾಸಕರ ಸಂಖ್ಯಾಬಲ – 18
  • ಬಿಜೆಪಿ ಶಾಸಕರ ಸಂಖ್ಯಾಬಲ – 62
  • ಜೆಡಿಎಸ್ ಶಾಸಕರು – 18
  • ಬಿಜೆಪಿ ಉಳಿಕೆ ಮತ – 4
  • ಪಕ್ಷೇತರ ಶಾಸಕ ಜನಾರ್ದನ ರೆಡ್ಡಿ – 01
  • ಉಚ್ಛಾಟಿತ ಯತ್ನಾಳ್ – 01
  • ಒಟ್ಟು ಮತ – 24
  • ಕೊರತೆ ಮತ- 02
  • ಇನ್ನುಳಿದ 4 ಮತಗಳಿಗಾಗಿ ತಂತ್ರಗಾರಿಕೆ ರೂಪಿಸುತ್ತಿರುವ ಜೆಡಿಎಸ್‌

ಇದನ್ನೂ ಓದಿ: ಹೆಚ್​ಡಿ ದೇವೇಗೌಡಗೆ ತಪ್ಪಿದ ಎನ್​ಡಿಎ ರಾಜ್ಯಸಭೆ ಟಿಕೆಟ್: ಪ್ರೊ ಎಂ ನಾಗರಾಜಗೆ ಬಿಜೆಪಿ ಮಣೆ

ಜೆಡಿಎಸ್-ಬಿಜೆಪಿ ಮೈತ್ರಿಕೂಟಕ್ಕೆ ತಮ್ಮ ಅಭ್ಯರ್ಥಿ ಸುಲಭವಾಗಿ ಗೆಲ್ಲುವುದಿಲ್ಲ ಎಂಬ ಅರಿವಿದ್ದರೂ, ಕಾಂಗ್ರೆಸ್‌ನ ಅವಿರೋಧ ಆಯ್ಕೆಗೆ ಬ್ರೇಕ್ ಹಾಕಿ, ಚುನಾವಣೆ ಕಣವನ್ನು ರಂಗೇರಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಈಗಾಗಲೇ ಕಾಂಗ್ರೆಸ್‌ನ ಒಂದಷ್ಟು ಶಾಸಕರನ್ನು ಸಂಪರ್ಕಿಸಲು ಜೆಡಿಎಸ್ ನಾಯಕರು ಮುಂದಾಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದ್ದು, ಈ ಮೂಲಕ ಕಾಂಗ್ರೆಸ್‌ನಲ್ಲಿ ಸದ್ಯದ ಮಟ್ಟಿಗೆ ಆತಂಕ ಶುರುವಾಗಿದೆ. ಈ ಅಚ್ಚರಿಯ ನಡೆ ಕರ್ನಾಟಕ ವಿಧಾನಪರಿಷತ್ ಚುನಾವಣೆಯ ಬಗ್ಗೆ ಕುತೂಹಲ ಹೆಚ್ಚಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:39 pm, Mon, 8 June 26

Source link

ಯಾರೋ ಫಾಲೋ ಮಾಡ್ತಿದ್ದಾರೆ, ಪ್ಲೀಸ್ ಸಹಾಯ ಮಾಡಿ, ಕೆನಡಾದಲ್ಲಿ ಭಾರತೀಯ ಯುವಕರು ಕ್ರಿಕೆಟ್ ಆಡುತ್ತಿದ್ದ ಗ್ರೌಂಡ್​ಗೆ ಬಂದು ಸಹಾಯ ಬೇಡಿದ ಯುವತಿ – Kannada News

ಟೊರೊಂಟೊ, ಜೂನ್ 08: ಅಪರಿಚಿತ ದೇಶದಲ್ಲೂ ಮಾನವೀಯತೆ ಮತ್ತು ಸಾರ್ವಜನಿಕ ಸುರಕ್ಷತೆಗೆ ಭಾರತೀಯರು ನೀಡುವ ಗೌರವವನ್ನು ಸಾಬೀತುಪಡಿಸುವ ರೋಮಾಂಚನಕಾರಿ ಘಟನೆಯೊಂದರ ವಿಡಿಯೋ ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ. ಕೆನಡಾದ ತೆರೆದ ಮೈದಾನವೊಂದರಲ್ಲಿ ಕ್ರಿಕೆಟ್ ಆಡುತ್ತಿದ್ದ ಭಾರತೀಯ ಯುವಕರ ಗುಂಪು, ಸಂಕಷ್ಟದಲ್ಲಿದ್ದ ಸ್ಥಳೀಯ ಯುವತಿಯೊಬ್ಬಳನ್ನು ವ್ಯಕ್ತಿಯಿಂದ ಅತ್ಯಂತ ಧೈರ್ಯ ಹಾಗೂ ಚಾಣಾಕ್ಷತನದಿಂದ ರಕ್ಷಿಸಿ ಜಾಗತಿಕ ಮಟ್ಟದಲ್ಲಿ ಭಾರಿ ಶ್ಲಾಘನೆಗೆ ಪಾತ್ರವಾಗಿದೆ.

ಯುವತಿಯೊಬ್ಬರು ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಪುರುಷರ ಗುಂಪಿನ ಬಳಿಗೆ ಓಡಿಬಂದು ತನ್ನನ್ನು ಯಾರೋ ಹಿಂಬಾಲಿಸುತ್ತಿದ್ದಾರೆ (Stalking) ಎಂದು ಹೇಳಿ ಸಹಾಯ ಕೋರುತ್ತಾರೆ. ತಕ್ಷಣವೇ ಅವಳನ್ನು ತಮ್ಮ ಬೆನ್ನ ಹಿಂದೆ ನಿಲ್ಲಿಸಿಕೊಂಡು ಆಟಗಾರರು ರಕ್ಷಣೆ ನೀಡುತ್ತಾರೆ. ಕೆಲವೇ ಕ್ಷಣಗಳಲ್ಲಿ, ಆಕೆಯನ್ನು ಹಿಂಬಾಲಿಸಿಕೊಂಡು ಬಂದ ಅಪರಿಚಿತ ಬಿಳಿಯ ವ್ಯಕ್ತಿಯೊಬ್ಬ ಮೈದಾನ ಪ್ರವೇಶಿಸಿ ನೇರವಾಗಿ ಮಹಿಳೆಯ ಕಡೆಗೆ ಹೆಜ್ಜೆ ಇಡುತ್ತಿರುವುದು ದೃಶ್ಯದಲ್ಲಿ ಕಂಡುಬರುತ್ತದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಭಾರತೀಯ ಕ್ರಿಕೆಟಿಗರು ತಕ್ಷಣವೇ ಆ ವ್ಯಕ್ತಿಯನ್ನು ಎದುರಿಸಿ, ಅವನ ಮತ್ತು ಮಹಿಳೆಯ ನಡುವೆ ಭದ್ರವಾದ ಗೋಡೆಯಂತೆ ನಿಲ್ಲುತ್ತಾರೆ. ಬಳಿಕ ಗದರಿಸಿ ಆತನನ್ನು ಅಲ್ಲಿಂದ ಕಳುಹಿಸುತ್ತಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Source link

7 ಕೋಟಿ ರೂ. ಸಿನಿಮಾ, ಗಳಿಸಿದ್ದು 1,700 ಕೋಟಿ; ಅಬ್ಬಬ್ಬಾ ಹೊಸ ದಾಖಲೆ – Kannada News

ಸದ್ಯ ಹಾರರ್ ಸಿನಿಮಾವೊಂದು ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಿದೆ. ನಿರ್ದೇಶಕ ಕರ್ರಿ ಬಾರ್ಕರ್ ಆ್ಯಕ್ಷನ್ ಕಟ್ ಹೇಳಿರುವ ಹಾಲಿವುಡ್​ನ ಸೂಪರ್‌ನ್ಯಾಚುರಲ್ ಸೈಕಲಾಜಿಕಲ್ ಹಾರರ್ ಸಿನಿಮಾ ‘ಒಬ್ಸೆಷನ್’ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಕೇವಲ ಕೋಟಿಗಳಲ್ಲಿ ತಯಾರಾದ ಈ ಸಿನಿಮಾ ಈಗ ಸಾವಿರಾರು ಕೋಟಿ ಕೊಳ್ಳೆ ಹೊಡೆಯುವತ್ತ ಮುನ್ನುಗ್ಗುತ್ತಿದೆ.

ಬಜೆಟ್‌ಗಿಂತ 230 ಪಟ್ಟು ಹೆಚ್ಚು ಗಳಿಕೆ!

ಹಾಲಿವುಡ್ ರಿಪೋರ್ಟರ್ ವರದಿಗಳ ಪ್ರಕಾರ, ‘ಒಬ್ಸೆಷನ್’ ಸಿನಿಮಾವನ್ನು ಕೇವಲ 7,50,000 ಡಾಲರ್ ಅಂದರೆ ಭಾರತೀಯ ಮೌಲ್ಯದಲ್ಲಿ ಸುಮಾರು 7.12 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಆದರೆ ಬಾಕ್ಸ್ ಆಫೀಸ್ ಗಳಿಕೆ ನೋಡೋದಾದರೆ ಈ ಚಿತ್ರ ಈಗಾಗಲೇ ಜಾಗತಿಕವಾಗಿ ಬರೋಬ್ಬರಿ 1,697.51 ಕೋಟಿ ರೂಪಾಯಿ (178.78 ಮಿಲಿಯನ್ ಡಾಲರ್) ಕಲೆಕ್ಷನ್ ಮಾಡಿ ಇತಿಹಾಸ ಸೃಷ್ಟಿಸಿದೆ. ಅಂದರೆ ತನ್ನ ಬಜೆಟ್‌ಗಿಂತ ಬರೋಬ್ಬರಿ 230 ಪಟ್ಟು ಹೆಚ್ಚು ಹಣವನ್ನು ಇದು ಬಾಚಿಕೊಂಡಿದೆ!

ಇನ್ನು ಭಾರತದಲ್ಲೂ ಈ ಹಾರರ್ ಚಿತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದು, ಸ್ಯಾಕ್ನಿಲ್ಕ್ ವರದಿ ಪ್ರಕಾರ ಭಾರತವೊಂದರಲ್ಲೇ ಒಟ್ಟು 34.15 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಚಿತ್ರದ ಲೈಫ್‌ಟೈಮ್ ಕಲೆಕ್ಷನ್ ವಿಶ್ವಾದ್ಯಂತ 3,000 ಕೋಟಿ ರೂಪಾಯಿ ದಾಟುವ ಸಾಧ್ಯತೆ ಇದೆ ಎಂದು ಟ್ರೇಡ್ ಅನಾಲಿಟಿಕ್ಸ್ ಅಂದಾಜಿಸಿದ್ದಾರೆ.

ಆರ್​ಜಿವಿ ಹೇಳಿದ್ದೇನು?

ಚಿತ್ರದ ಅಧಿಕೃತ ಬಜೆಟ್ 7 ಕೋಟಿ ರೂಪಾಯಿ ಎಂದು ವರದಿಯಾಗಿದ್ದರೆ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾತ್ರ ಇದನ್ನು ಒಪ್ಪುತ್ತಿಲ್ಲ. ಈ ಬಗ್ಗೆ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಾಕಿರುವ ಅವರು, ಚಿತ್ರದ ಬಜೆಟ್ ಅನ್ನು ಖಡಾಖಂಡಿತವಾಗಿ ಪ್ರಶ್ನಿಸಿದ್ದಾರೆ. ‘ಈ ಚಿತ್ರದ ಮೇಕಿಂಗ್ ವೆಚ್ಚ ಯಾವುದೇ ಕಾರಣಕ್ಕೂ 70 ಲಕ್ಷ ರೂಪಾಯಿಗಿಂತ ಹೆಚ್ಚಿರಲು ಸಾಧ್ಯವೇ ಇಲ್ಲ’ ಎಂದು ಆರ್​ಜಿವಿ ಹೇಳಿದ್ದಾರೆ.

ಇದನ್ನೂ ಓದಿ: 1 ಕೋಟಿ ಕೊಟ್ಟು ಗಣೇಶನ ಪುಟ್ಟ ಮೂರ್ತಿ ಖರೀದಿಸಿದ ಹಾಲಿವುಡ್ ಸ್ಟಾರ್

‘ಸಿನಿಮಾದ ತಾಂತ್ರಿಕ ಸಂಭಾವನೆಗಳನ್ನು ಹೊರತುಪಡಿಸಿ ನೋಡಿದರೆ, ಇದರ ಪ್ಯೂರ್ ಮೇಕಿಂಗ್ ಕಾಸ್ಟ್ 70 ಲಕ್ಷ ದಾಟಲ್ಲ. ಏಕೆಂದರೆ ಇಡೀ ಸಿನಿಮಾವನ್ನು ಕೇವಲ ಮೂರೇ ಮೂರು ಲೊಕೇಶನ್‌ಗಳಲ್ಲಿ ಚಿತ್ರೀಕರಿಸಲಾಗಿದೆ. ಹೀಗಿರುವಾಗ ಇದಕ್ಕೆ 7 ಕೋಟಿ ಖರ್ಚಾಗಲು ಹೇಗೆ ಸಾಧ್ಯ’ ಎಂದು ಆರ್​ಜಿವಿ ಪ್ರಶ್ನಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version