ಚೊಚ್ಚಲ ಪಂದ್ಯದಲ್ಲೇ ದಾಖಲೆಗಳ ಮೇಲೆ ದಾಖಲೆ ಬರೆದ ಮಾನವ್ ಸುತಾರ್..! – Kannada News

ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸ್ಪಿನ್ ಬೌಲರ್‌ಗಳಿಗೆ ಯಾವಾಗಲೂ ವಿಶೇಷ ಗೌರವವಿದೆ. ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್, ಆರ್. ಅಶ್ವಿನ್ ಅವರಂತಹ ದಿಗ್ಗಜರು ಆಳಿದ ಈ ಸಾಮ್ರಾಜ್ಯಕ್ಕೆ ಈಗ ಮತ್ತೊಬ್ಬ ಯುವ ಮಾಂತ್ರಿಕ ಸ್ಪಿನ್ನರ್​ನ ಎಂಟ್ರಿಯಾಗಿದೆ. ಅವರೇ 23 ವರ್ಷದ ಎಡಗೈ ಸ್ಪಿನ್ನರ್ ಮಾನವ್ ಸುತಾರ್.

ಅಫ್ಘಾನಿಸ್ತಾನ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಈ ಯುವ ಆಟಗಾರ, ಕೇವಲ ವಿಕೆಟ್ ಬೇಟೆಯಾಡಲಿಲ್ಲ, ಬದಲಿಗೆ ಮೂರೂವರೆ ದಶಕಗಳಿಗೂ ಹೆಚ್ಚು ಹಳೆಯದಾದ ಐತಿಹಾಸಿಕ ದಾಖಲೆಗಳನ್ನು ಧೂಳೀಪಟ ಮಾಡಿದ್ದಾರೆ. ನ್ಯೂ ಚಂಡೀಗಢ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮಾನವ್ ಸುತಾರ್ ಬರೆದ ದಾಖಲೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

  1. 38 ವರ್ಷಗಳ ದಾಖಲೆ ಬ್ರೇಕ್: ಭಾರತದ ಪರ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಸ್ಪಿನ್ನರ್ ಒಬ್ಬರು ನೀಡಿದ ಅತ್ಯುತ್ತಮ ಪ್ರದರ್ಶನ (6/33) ಇದಾಗಿದೆ. 1988ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನರೇಂದ್ರ ಹಿರವಾನಿ (8/61) ಅವರ ಬಳಿಕ ಭರ್ಜರಿ ಪ್ರದರ್ಶನ ನೀಡಿದ ಮೊದಲ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಸುತಾರ್ ಪಾತ್ರರಾಗಿದ್ದಾರೆ.
  2. ಅಶ್ವಿನ್ ದಾಖಲೆ ಉಡೀಸ್: 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆರ್. ಅಶ್ವಿನ್ (6/47) ಬರೆದಿದ್ದ 21ನೇ ಶತಮಾನದ ಅತ್ಯುತ್ತಮ ಚೊಚ್ಚಲ ಪಂದ್ಯದ ಬೌಲಿಂಗ್ ದಾಖಲೆಯನ್ನು ಸುತಾರ್ ಮುರಿದಿದ್ದಾರೆ.
  3.  ಮೊದಲ ಓವರ್‌ನಲ್ಲೇ ವಿಕೆಟ್ ಬೇಟೆ: ತಮ್ಮ ಟೆಸ್ಟ್ ವೃತ್ತಿಜೀವನದ ಅತ್ಯಂತ ಮೊದಲ ಓವರ್‌ನಲ್ಲೇ (4ನೇ ಎಸೆತದಲ್ಲಿ ಅಬ್ದುಲ್ ಮಲಿಕ್) ವಿಕೆಟ್ ಪಡೆದ ಭಾರತದ 8ನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
  4.  25 ವರ್ಷಗಳ ಕಾಯುವಿಕೆಗೆ ಅಂತ್ಯ: 2001ರಲ್ಲಿ ಟಿನು ಯೋಹಾನನ್ ಬಳಿಕ, 21ನೇ ಶತಮಾನದಲ್ಲಿ ತಮ್ಮ ಮೊದಲ ಓವರ್‌ನಲ್ಲೇ ವಿಕೆಟ್ ಪಡೆದ ಕೇವಲ ಎರಡನೇ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.
  5. ಎಲೈಟ್ ‘ಫೈಫರ್’: ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ 5 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಭಾರತದ 10ನೇ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
  6.  ಎಡಗೈ ಸ್ಪಿನ್ನರ್ ಸಾಧನೆ: ಭಾರತದ ಪರ ಪದಾರ್ಪಣೆ ಪಂದ್ಯದಲ್ಲೇ 5 ವಿಕೆಟ್ ಗೊಂಚಲು ಪಡೆದ ಕೇವಲ 3ನೇ ಎಡಗೈ ಆರ್ಥೊಡಾಕ್ಸ್ ಸ್ಪಿನ್ನರ್ (ದಿಲೀಪ್ ದೋಷಿ ಮತ್ತು ಅಕ್ಷರ್ ಪಟೇಲ್ ನಂತರ) ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
  7.  ಅತ್ಯುತ್ತಮ ಎಕಾನಮಿ ರೇಟ್: ಕೇವಲ 1.50 ಎಕಾನಮಿ ರೇಟ್‌ನಲ್ಲಿ ಬೌಲಿಂಗ್ ಮಾಡುವ ಮೂಲಕ, ಚೊಚ್ಚಲ ಪಂದ್ಯದಲ್ಲಿ ಕನಿಷ್ಠ 20 ಓವರ್ ಬೌಲಿಂಗ್ ಮಾಡಿ ಅತೀ ಕಡಿಮೆ ರನ್ ಬಿಟ್ಟುಕೊಟ್ಟ ಭಾರತೀಯ ಬೌಲರ್‌ಗಳ ಸಾಲಿಗೆ ಸೇರಿದ್ದಾರೆ.

ಇದನ್ನೂ ಓದಿ: WTC ಫೈನಲ್​ಗೇರಲು ಭಾರತ ತಂಡ ಇನ್ನೆಷ್ಟು ಪಂದ್ಯ ಗೆಲ್ಲಬೇಕು?

ಒಟ್ಟಿನಲ್ಲಿ ಚೊಚ್ಚಲ ಟೆಸ್ಟ್ ಪಂಇದ್ಯದಲ್ಲೇ ಭರ್ಜರಿ ಪ್ರದರ್ಶನ ನೀಡುವ ಮೂಲಕ ಮಾನವ್ ಸುತಾರ್,  ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರಂತಹ ದಿಗ್ಗಜ ಸ್ಪಿನ್ನರ್‌ಗಳ ಯುಗದ ನಂತರ, ಭಾರತೀಯ ಟೆಸ್ಟ್ ಕ್ರಿಕೆಟ್ ಅನ್ನು ಮುನ್ನಡೆಸಬಲ್ಲೇ ಎಂಬ ಭರವಸೆ ಮೂಡಿಸಿದ್ದಾರೆ. ಈ ಭರವಸೆಯೊಂದಿಗೆ ಅವರು ಮುಂದಿನ ಸರಣಿಗಳಲ್ಲಿ ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Published On – 12:42 pm, Mon, 8 June 26

Source link

ವಿಧಾನ ಪರಿಷತ್ ಚುನಾವಣೆ: 5ನೇ ಅಭ್ಯರ್ಥಿಯ ಅವಿರೋಧ ಆಯ್ಕೆ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್​ಗೆ ಬಿಜೆಪಿ-ಜೆಡಿಎಸ್ ಶಾಕ್ – Kannada News

5ನೇ ಅಭ್ಯರ್ಥಿಯ ಅವಿರೋಧ ಆಯ್ಕೆ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್​ಗೆ ಬಿಜೆಪಿ-ಜೆಡಿಎಸ್ ಶಾಕ್Image Credit source: tv9

ಬೆಂಗಳೂರು, ಜೂನ್ 8: ಕರ್ನಾಟಕ ವಿಧಾನಪರಿಷತ್‌ನ 7 ಸ್ಥಾನಗಳಿಗೆ ನಡೆಯುವ ಚುನಾವಣೆ (Karnataka MLC Election) ತೀವ್ರ ಕುತೂಹಲ ಕೆರಳಿಸಿದೆ. ಜೆಡಿಎಸ್ (JDS) ಮತ್ತು ಬಿಜೆಪಿ (BJP) ಮೈತ್ರಿಕೂಟವು ಅಚ್ಚರಿಯ ನಡೆ ಪ್ರದರ್ಶಿಸಿದ್ದು, ಮೂರನೇ ಅಭ್ಯರ್ಥಿ ಗೋವಿಂದರಾಜು ಅವರನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್‌ನ 5ನೇ ಅಭ್ಯರ್ಥಿಯ ಅವಿರೋಧ ಆಯ್ಕೆಯ ಲೆಕ್ಕಾಚಾರಕ್ಕೆ ಭಾರಿ ತಿರುಗೇಟು ನೀಡಿದೆ. ಈ ಬೆಳವಣಿಗೆಯಿಂದಾಗಿ, 7 ಸ್ಥಾನಗಳಿಗೆ ಈಗ 8 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದು, ಚುನಾವಣೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

ಮುಖ್ಯಾಂಶಗಳು

  • ಕಾಂಗ್ರೆಸ್ ಅವಿರೋಧ ಆಯ್ಕೆ ತಂತ್ರಕ್ಕೆ ಮೈತ್ರಿಕೂಟದ ಬ್ರೇಕ್.
  • ಎನ್‌ಡಿಎ 3ನೇ ಅಭ್ಯರ್ಥಿಯಾಗಿ ಗೋವಿಂದರಾಜು ಕಣಕ್ಕೆ.
  • ಕ್ರಾಸ್ ವೋಟಿಂಗ್ ಭೀತಿಯಲ್ಲಿ ಕಾಂಗ್ರೆಸ್ ಪಾಳಯ.

ಕಾಂಗ್ರೆಸ್ ತನ್ನ 5ನೇ ಅಭ್ಯರ್ಥಿಯು ಸುಲಭವಾಗಿ, ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ ಎಂದು ನಿರೀಕ್ಷಿಸಿತ್ತು. ಆದರೆ, ಜೆಡಿಎಸ್ ಮತ್ತು ಬಿಜೆಪಿ ನಾಯಕರ ನಡುವೆ ನಡೆದ ವ್ಯಾಪಕ ಸಮಾಲೋಚನೆಯ ನಂತರ, ಎನ್‌ಡಿಎ ಮೈತ್ರಿಕೂಟದಿಂದ ಗೋವಿಂದರಾಜು ಅವರನ್ನು ಮೂರನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಹೆಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿ ಹೈಕಮಾಂಡ್ ಜೊತೆ ಮಾತುಕತೆ ನಡೆಸಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ.

ವಿಧಾನಪರಿಷತ್ ಬಲಾಬಲ ಹೇಗಿದೆ?

ವಿಧಾನಪರಿಷತ್ ಚುನಾವಣೆಯಲ್ಲಿ ಪ್ರತಿ ಅಭ್ಯರ್ಥಿಯ ಗೆಲುವಿಗೆ 28 ಶಾಸಕರ ಮತಗಳ ಅಗತ್ಯವಿದೆ. ಮೈತ್ರಿಕೂಟದ ಸಂಖ್ಯಾಬಲವನ್ನು ಪರಿಗಣಿಸಿದರೆ, ಜೆಡಿಎಸ್ ಪಕ್ಷದ 18 ಶಾಸಕರು ಮತ್ತು ಬಿಜೆಪಿಯ 62 ಶಾಸಕರ ಮತಗಳು ಲಭ್ಯವಿವೆ. ಇದರ ಜೊತೆಗೆ ಪಕ್ಷೇತರ ಶಾಸಕ ಜನಾರ್ದನ ರೆಡ್ಡಿ ಮತ್ತು ಉಚ್ಚಾಟಿತ ಶಾಸಕ ಯತ್ನಾಳ್ ಅವರ ಮತಗಳೂ ಸಹ ಲಭ್ಯವಾಗುವ ಸಾಧ್ಯತೆ ಇದೆ. ಈ ಲೆಕ್ಕಾಚಾರದಲ್ಲಿ, ಎನ್‌ಡಿಎ ಅಭ್ಯರ್ಥಿ ಗೋವಿಂದರಾಜು ಅವರ ಗೆಲುವಿಗೆ ಸುಮಾರು 4 ರಿಂದ 5 ಹೆಚ್ಚುವರಿ ಮತಗಳ ಕೊರತೆ ಎದುರಾಗಲಿದೆ.

ಈ ಕೊರತೆಯನ್ನು ನೀಗಿಸಲು ಜೆಡಿಎಸ್ ಮತ್ತು ಬಿಜೆಪಿ ನಾಯಕರು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಕಾಂಗ್ರೆಸ್‌ನ ಕೆಲವು ಶಾಸಕರನ್ನು ತಮ್ಮತ್ತ ಸೆಳೆಯುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಅವರ ನೇತೃತ್ವದಲ್ಲಿ ಸಭೆಗಳು ನಡೆಯುತ್ತಿದ್ದು, ಮುಂದಿನ ತಂತ್ರಗಾರಿಕೆಗಳನ್ನು ರೂಪಿಸಲಾಗುತ್ತಿದೆ. 4-5 ಹೆಚ್ಚುವರಿ ಮತಗಳನ್ನು ಕುಮಾರಸ್ವಾಮಿ ಮತ್ತು ಬಿಜೆಪಿ ನಾಯಕರು ಹೇಗೆ ನಿರ್ವಹಿಸುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ವಿಧಾನಪರಿಷತ್ ಸಂಖ್ಯಾಬಲ

  • ಒಬ್ಬ ಅಭ್ಯರ್ಥಿಯ ಗೆಲುವಿಗೆ ಬೇಕಿರುವ ಮತಗಳು – 28
  • ಜೆಡಿಎಸ್ ಶಾಸಕರ ಸಂಖ್ಯಾಬಲ – 18
  • ಬಿಜೆಪಿ ಶಾಸಕರ ಸಂಖ್ಯಾಬಲ – 62
  • ಜೆಡಿಎಸ್ ಶಾಸಕರು – 18
  • ಬಿಜೆಪಿ ಉಳಿಕೆ ಮತ – 4
  • ಪಕ್ಷೇತರ ಶಾಸಕ ಜನಾರ್ದನ ರೆಡ್ಡಿ – 01
  • ಉಚ್ಛಾಟಿತ ಯತ್ನಾಳ್ – 01
  • ಒಟ್ಟು ಮತ – 24
  • ಕೊರತೆ ಮತ- 02
  • ಇನ್ನುಳಿದ 4 ಮತಗಳಿಗಾಗಿ ತಂತ್ರಗಾರಿಕೆ ರೂಪಿಸುತ್ತಿರುವ ಜೆಡಿಎಸ್‌

ಇದನ್ನೂ ಓದಿ: ಹೆಚ್​ಡಿ ದೇವೇಗೌಡಗೆ ತಪ್ಪಿದ ಎನ್​ಡಿಎ ರಾಜ್ಯಸಭೆ ಟಿಕೆಟ್: ಪ್ರೊ ಎಂ ನಾಗರಾಜಗೆ ಬಿಜೆಪಿ ಮಣೆ

ಜೆಡಿಎಸ್-ಬಿಜೆಪಿ ಮೈತ್ರಿಕೂಟಕ್ಕೆ ತಮ್ಮ ಅಭ್ಯರ್ಥಿ ಸುಲಭವಾಗಿ ಗೆಲ್ಲುವುದಿಲ್ಲ ಎಂಬ ಅರಿವಿದ್ದರೂ, ಕಾಂಗ್ರೆಸ್‌ನ ಅವಿರೋಧ ಆಯ್ಕೆಗೆ ಬ್ರೇಕ್ ಹಾಕಿ, ಚುನಾವಣೆ ಕಣವನ್ನು ರಂಗೇರಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಈಗಾಗಲೇ ಕಾಂಗ್ರೆಸ್‌ನ ಒಂದಷ್ಟು ಶಾಸಕರನ್ನು ಸಂಪರ್ಕಿಸಲು ಜೆಡಿಎಸ್ ನಾಯಕರು ಮುಂದಾಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದ್ದು, ಈ ಮೂಲಕ ಕಾಂಗ್ರೆಸ್‌ನಲ್ಲಿ ಸದ್ಯದ ಮಟ್ಟಿಗೆ ಆತಂಕ ಶುರುವಾಗಿದೆ. ಈ ಅಚ್ಚರಿಯ ನಡೆ ಕರ್ನಾಟಕ ವಿಧಾನಪರಿಷತ್ ಚುನಾವಣೆಯ ಬಗ್ಗೆ ಕುತೂಹಲ ಹೆಚ್ಚಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:39 pm, Mon, 8 June 26

Source link

ಯಾರೋ ಫಾಲೋ ಮಾಡ್ತಿದ್ದಾರೆ, ಪ್ಲೀಸ್ ಸಹಾಯ ಮಾಡಿ, ಕೆನಡಾದಲ್ಲಿ ಭಾರತೀಯ ಯುವಕರು ಕ್ರಿಕೆಟ್ ಆಡುತ್ತಿದ್ದ ಗ್ರೌಂಡ್​ಗೆ ಬಂದು ಸಹಾಯ ಬೇಡಿದ ಯುವತಿ – Kannada News

ಟೊರೊಂಟೊ, ಜೂನ್ 08: ಅಪರಿಚಿತ ದೇಶದಲ್ಲೂ ಮಾನವೀಯತೆ ಮತ್ತು ಸಾರ್ವಜನಿಕ ಸುರಕ್ಷತೆಗೆ ಭಾರತೀಯರು ನೀಡುವ ಗೌರವವನ್ನು ಸಾಬೀತುಪಡಿಸುವ ರೋಮಾಂಚನಕಾರಿ ಘಟನೆಯೊಂದರ ವಿಡಿಯೋ ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ. ಕೆನಡಾದ ತೆರೆದ ಮೈದಾನವೊಂದರಲ್ಲಿ ಕ್ರಿಕೆಟ್ ಆಡುತ್ತಿದ್ದ ಭಾರತೀಯ ಯುವಕರ ಗುಂಪು, ಸಂಕಷ್ಟದಲ್ಲಿದ್ದ ಸ್ಥಳೀಯ ಯುವತಿಯೊಬ್ಬಳನ್ನು ವ್ಯಕ್ತಿಯಿಂದ ಅತ್ಯಂತ ಧೈರ್ಯ ಹಾಗೂ ಚಾಣಾಕ್ಷತನದಿಂದ ರಕ್ಷಿಸಿ ಜಾಗತಿಕ ಮಟ್ಟದಲ್ಲಿ ಭಾರಿ ಶ್ಲಾಘನೆಗೆ ಪಾತ್ರವಾಗಿದೆ.

ಯುವತಿಯೊಬ್ಬರು ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಪುರುಷರ ಗುಂಪಿನ ಬಳಿಗೆ ಓಡಿಬಂದು ತನ್ನನ್ನು ಯಾರೋ ಹಿಂಬಾಲಿಸುತ್ತಿದ್ದಾರೆ (Stalking) ಎಂದು ಹೇಳಿ ಸಹಾಯ ಕೋರುತ್ತಾರೆ. ತಕ್ಷಣವೇ ಅವಳನ್ನು ತಮ್ಮ ಬೆನ್ನ ಹಿಂದೆ ನಿಲ್ಲಿಸಿಕೊಂಡು ಆಟಗಾರರು ರಕ್ಷಣೆ ನೀಡುತ್ತಾರೆ. ಕೆಲವೇ ಕ್ಷಣಗಳಲ್ಲಿ, ಆಕೆಯನ್ನು ಹಿಂಬಾಲಿಸಿಕೊಂಡು ಬಂದ ಅಪರಿಚಿತ ಬಿಳಿಯ ವ್ಯಕ್ತಿಯೊಬ್ಬ ಮೈದಾನ ಪ್ರವೇಶಿಸಿ ನೇರವಾಗಿ ಮಹಿಳೆಯ ಕಡೆಗೆ ಹೆಜ್ಜೆ ಇಡುತ್ತಿರುವುದು ದೃಶ್ಯದಲ್ಲಿ ಕಂಡುಬರುತ್ತದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಭಾರತೀಯ ಕ್ರಿಕೆಟಿಗರು ತಕ್ಷಣವೇ ಆ ವ್ಯಕ್ತಿಯನ್ನು ಎದುರಿಸಿ, ಅವನ ಮತ್ತು ಮಹಿಳೆಯ ನಡುವೆ ಭದ್ರವಾದ ಗೋಡೆಯಂತೆ ನಿಲ್ಲುತ್ತಾರೆ. ಬಳಿಕ ಗದರಿಸಿ ಆತನನ್ನು ಅಲ್ಲಿಂದ ಕಳುಹಿಸುತ್ತಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Source link

7 ಕೋಟಿ ರೂ. ಸಿನಿಮಾ, ಗಳಿಸಿದ್ದು 1,700 ಕೋಟಿ; ಅಬ್ಬಬ್ಬಾ ಹೊಸ ದಾಖಲೆ – Kannada News

ಸದ್ಯ ಹಾರರ್ ಸಿನಿಮಾವೊಂದು ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಿದೆ. ನಿರ್ದೇಶಕ ಕರ್ರಿ ಬಾರ್ಕರ್ ಆ್ಯಕ್ಷನ್ ಕಟ್ ಹೇಳಿರುವ ಹಾಲಿವುಡ್​ನ ಸೂಪರ್‌ನ್ಯಾಚುರಲ್ ಸೈಕಲಾಜಿಕಲ್ ಹಾರರ್ ಸಿನಿಮಾ ‘ಒಬ್ಸೆಷನ್’ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಕೇವಲ ಕೋಟಿಗಳಲ್ಲಿ ತಯಾರಾದ ಈ ಸಿನಿಮಾ ಈಗ ಸಾವಿರಾರು ಕೋಟಿ ಕೊಳ್ಳೆ ಹೊಡೆಯುವತ್ತ ಮುನ್ನುಗ್ಗುತ್ತಿದೆ.

ಬಜೆಟ್‌ಗಿಂತ 230 ಪಟ್ಟು ಹೆಚ್ಚು ಗಳಿಕೆ!

ಹಾಲಿವುಡ್ ರಿಪೋರ್ಟರ್ ವರದಿಗಳ ಪ್ರಕಾರ, ‘ಒಬ್ಸೆಷನ್’ ಸಿನಿಮಾವನ್ನು ಕೇವಲ 7,50,000 ಡಾಲರ್ ಅಂದರೆ ಭಾರತೀಯ ಮೌಲ್ಯದಲ್ಲಿ ಸುಮಾರು 7.12 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಆದರೆ ಬಾಕ್ಸ್ ಆಫೀಸ್ ಗಳಿಕೆ ನೋಡೋದಾದರೆ ಈ ಚಿತ್ರ ಈಗಾಗಲೇ ಜಾಗತಿಕವಾಗಿ ಬರೋಬ್ಬರಿ 1,697.51 ಕೋಟಿ ರೂಪಾಯಿ (178.78 ಮಿಲಿಯನ್ ಡಾಲರ್) ಕಲೆಕ್ಷನ್ ಮಾಡಿ ಇತಿಹಾಸ ಸೃಷ್ಟಿಸಿದೆ. ಅಂದರೆ ತನ್ನ ಬಜೆಟ್‌ಗಿಂತ ಬರೋಬ್ಬರಿ 230 ಪಟ್ಟು ಹೆಚ್ಚು ಹಣವನ್ನು ಇದು ಬಾಚಿಕೊಂಡಿದೆ!

ಇನ್ನು ಭಾರತದಲ್ಲೂ ಈ ಹಾರರ್ ಚಿತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದು, ಸ್ಯಾಕ್ನಿಲ್ಕ್ ವರದಿ ಪ್ರಕಾರ ಭಾರತವೊಂದರಲ್ಲೇ ಒಟ್ಟು 34.15 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಚಿತ್ರದ ಲೈಫ್‌ಟೈಮ್ ಕಲೆಕ್ಷನ್ ವಿಶ್ವಾದ್ಯಂತ 3,000 ಕೋಟಿ ರೂಪಾಯಿ ದಾಟುವ ಸಾಧ್ಯತೆ ಇದೆ ಎಂದು ಟ್ರೇಡ್ ಅನಾಲಿಟಿಕ್ಸ್ ಅಂದಾಜಿಸಿದ್ದಾರೆ.

ಆರ್​ಜಿವಿ ಹೇಳಿದ್ದೇನು?

ಚಿತ್ರದ ಅಧಿಕೃತ ಬಜೆಟ್ 7 ಕೋಟಿ ರೂಪಾಯಿ ಎಂದು ವರದಿಯಾಗಿದ್ದರೆ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾತ್ರ ಇದನ್ನು ಒಪ್ಪುತ್ತಿಲ್ಲ. ಈ ಬಗ್ಗೆ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಾಕಿರುವ ಅವರು, ಚಿತ್ರದ ಬಜೆಟ್ ಅನ್ನು ಖಡಾಖಂಡಿತವಾಗಿ ಪ್ರಶ್ನಿಸಿದ್ದಾರೆ. ‘ಈ ಚಿತ್ರದ ಮೇಕಿಂಗ್ ವೆಚ್ಚ ಯಾವುದೇ ಕಾರಣಕ್ಕೂ 70 ಲಕ್ಷ ರೂಪಾಯಿಗಿಂತ ಹೆಚ್ಚಿರಲು ಸಾಧ್ಯವೇ ಇಲ್ಲ’ ಎಂದು ಆರ್​ಜಿವಿ ಹೇಳಿದ್ದಾರೆ.

ಇದನ್ನೂ ಓದಿ: 1 ಕೋಟಿ ಕೊಟ್ಟು ಗಣೇಶನ ಪುಟ್ಟ ಮೂರ್ತಿ ಖರೀದಿಸಿದ ಹಾಲಿವುಡ್ ಸ್ಟಾರ್

‘ಸಿನಿಮಾದ ತಾಂತ್ರಿಕ ಸಂಭಾವನೆಗಳನ್ನು ಹೊರತುಪಡಿಸಿ ನೋಡಿದರೆ, ಇದರ ಪ್ಯೂರ್ ಮೇಕಿಂಗ್ ಕಾಸ್ಟ್ 70 ಲಕ್ಷ ದಾಟಲ್ಲ. ಏಕೆಂದರೆ ಇಡೀ ಸಿನಿಮಾವನ್ನು ಕೇವಲ ಮೂರೇ ಮೂರು ಲೊಕೇಶನ್‌ಗಳಲ್ಲಿ ಚಿತ್ರೀಕರಿಸಲಾಗಿದೆ. ಹೀಗಿರುವಾಗ ಇದಕ್ಕೆ 7 ಕೋಟಿ ಖರ್ಚಾಗಲು ಹೇಗೆ ಸಾಧ್ಯ’ ಎಂದು ಆರ್​ಜಿವಿ ಪ್ರಶ್ನಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹೊಸ ಇನಿಂಗ್ಸ್ ಆರಂಭಿಸಿದ ಆಂಡ್ರ್ಯೂ ಫ್ಲಿಂಟಾಫ್! – Kannada News

ಇಂಗ್ಲೆಂಡ್ ತಂಡದ ಮಾಜಿ ಆಲ್​ರೌಂಡರ್ ಆಂಡ್ರ್ಯೂ ಫ್ಲಿಂಟಾಫ್ ಬಿಗ್ ಬ್ಯಾಷ್ ಲೀಗ್‌ನ (BBL) ಸಿಡ್ನಿ ಥಂಡರ್ ತಂಡದ ನೂತನ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಸಿಡ್ನಿ ಥಂಡರ್ ಫ್ರಾಂಚೈಸಿ ಫ್ಲಿಂಟಾಫ್​ರೊಂದಿಗೆ ಎರಡು ವರ್ಷಗಳ ಒಪ್ಪಂದ ಮಾಡಿಕೊಂಡಿದೆ. ಈ ಹಿಂದೆ ಸಿಡ್ನಿ ಥಂಡರ್ ತಂಡದ ಕೋಚ್ ಆಗಿ ಟ್ರೆವರ್ ಬೇಲಿಸ್ ಕಾಣಿಸಿಕೊಂಡಿದ್ದರು. ಇದೀಗ ಆ ಸ್ಥಾನಕ್ಕೆ ಫ್ಲಿಂಟಾಫ್ ಆಯ್ಕೆಯಾಗಿದ್ದಾರೆ.

ಈ ಹೈ-ಪ್ರೊಫೈಲ್ ಹುದ್ದೆಗಾಗಿ ಆಸ್ಟ್ರೇಲಿಯಾದ ಮಾಜಿ ಆಟಗಾರರಾದ ಶೇನ್ ವಾಟ್ಸನ್ ಮತ್ತು ಡಾನ್ ಕ್ರಿಶ್ಚಿಯನ್ ಅವರಂತಹ ಪ್ರಮುಖ ಹೆಸರುಗಳು ರೇಸ್‌ನಲ್ಲಿದ್ದವು. ಆದರೆ, ಫ್ರಾಂಚೈಸಿಯು ಫ್ಲಿಂಟಾಫ್ ಅವರ ಆಕ್ರಮಣಕಾರಿ ಶೈಲಿ ಮತ್ತು ನಾಯಕತ್ವದ ಗುಣಗಳಿಗೆ ಮಣೆ ಹಾಕಿದೆ.

ಫ್ಲಿಂಟಾಫ್ ಅನುಭವ:

ಆಂಡ್ರ್ಯೂ ಫ್ಲಿಂಟಾಫ್ ಈಗಾಗಲೇ ತಮ್ಮ ಕೋಚಿಂಗ್ ಕೆರಿಯರ್ ಆರಂಭಿಸಿದ್ದಾರೆ.  ಅಂದರೆ ದಿ ಹಂಡ್ರೆಡ್ ಲೀಗ್, ಇಂಗ್ಲೆಂಡ್ ಕಿರಿಯರ ತಂಡಗಳ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಇದಾಗ್ಯೂ ಯುನೈಟೆಡ್ ಕಿಂಗ್‌ಡಮ್ (UK) ಹೊರಗೆ ಫ್ಲಿಂಟಾಫ್ ಅವರಿಗೆ ಸಿಗುತ್ತಿರುವ ಮೊದಲ ಪ್ರಮುಖ ಫ್ರಾಂಚೈಸಿ ಕೋಚಿಂಗ್ ಜವಾಬ್ದಾರಿ ಇದಾಗಿದೆ.

  • ದಿ ಹಂಡ್ರೆಡ್: ‘ನಾರ್ದರ್ನ್ ಸೂಪರ್‌ಚಾರ್ಜರ್ಸ್’ ತಂಡದ ಮುಖ್ಯ ಕೋಚ್ ಆಗಿ ಎರಡು ಸೀಸನ್‌ಗಳ ಕಾಲ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ.
  • ಇಂಗ್ಲೆಂಡ್ ಲಯನ್ಸ್ : ಅಕ್ಟೋಬರ್ 2024 ರಿಂದ ಇಂಗ್ಲೆಂಡ್‌ನ ಕಿರಿಯರ ತಂಡದ ಮುಖ್ಯ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.
  •  ಇಂಗ್ಲೆಂಡ್ ಸೀನಿಯರ್ ತಂಡ: ಇಂಗ್ಲೆಂಡ್‌ನ ಸೀಮಿತ ಓವರ್‌ಗಳ ತಂಡಕ್ಕೆ ಕೆಲಕಾಲ ಸಲಹೆಗಾರರಾಗಿ  ಸೇವೆ ಸಲ್ಲಿಸಿದ್ದಾರೆ.

ಫ್ಲಿಂಟಾಫ್ ಮುಂದಿರುವ ಸವಾಲುಗಳು:

ಕಳೆದ ಬಿಬಿಎಲ್ ಸೀಸನ್‌ನಲ್ಲಿ ಸಿಡ್ನಿ ಥಂಡರ್ ತಂಡವು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿತ್ತು. ಹೀಗಾಗಿ ತಂಡವನ್ನು ಮತ್ತೆ ಬಲಿಷ್ಠಗೊಳಿಸುವುದು ಫ್ಲಿಂಟಾಫ್ ಮುಂದಿರುವ ಮೊದಲ ಸವಲಾಗಿದೆ.

ಸದ್ಯ ಥಂಡರ್ ತಂಡದಲ್ಲಿ ಡೇವಿಡ್ ವಾರ್ನರ್, ಸ್ಯಾಮ್ ಬಿಲ್ಲಿಂಗ್ಸ್, ತನ್ವೀರ್ ಸಂಘಾ ಮತ್ತು ಉದಯೋನ್ಮುಖ ತಾರೆ ಸ್ಯಾಮ್ ಕೊನ್​ಸ್ಟಾಸ್​ ಅವರಂತಹ ಪ್ರತಿಭಾವಂತ ಆಟಗಾರರಿದ್ದಾರೆ.

ಇದನ್ನೂ ಓದಿ: ಒಂದೇ ತಂಡವಾದ ಎರಡು ಟೀಮ್​​ಗಳು..!

ಆದಾಗ್ಯೂ ಕಳೆದ ಬಾರಿ ಸಂಪೂರ್ಣ ಕುಸಿತ ಕಂಡಂತಹ ಸಿಡ್ನಿ ಥಂಡರ್ ತಂಡಕ್ಕೆ ಮೇಜರ್ ಸರ್ಜರಿ ಮಾಡಬೇಕಾದ ಅನಿವಾರ್ಯತೆ ಆಂಡ್ರ್ಯೂ ಫ್ಲಿಂಟಾಫ್ ಮುಂದಿದೆ. ಈ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಫ್ಲಿಂಟಾಫ್ ಕೋಚಿಂಗ್ ಕೆರಿಯರ್​ನಲ್ಲಿ ಯಶಸ್ವಿಯಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Source link

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಭರ್ಜರಿ ಬೇಟೆ: ಬ್ಯಾಂಕಾಕ್‌ನಿಂದ ತಂದಿದ್ದ 2.33 ಕೋಟಿ ಮೌಲ್ಯದ ಗಾಂಜಾ ಜಪ್ತಿ! – Kannada News

ವಶಕ್ಕೆ ಪಡೆದುಕೊಂಡ ಹೈಡ್ರೋ ಗಾಂಜಾ

ದೇವನಹಳ್ಳಿ, ಜೂನ್ 08: ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (International Airport) ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದಿಳಿದ ಪ್ರಯಾಣಿಕನೊಬ್ಬನಿಂದ ಬರೋಬ್ಬರಿ 2.33 ಕೋಟಿ ರೂಪಾಯಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಮುಖ್ಯಾಂಶಗಳು

  • ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋಟ್ಯಂತರ ಮೌಲ್ಯದ ಗಾಂಜಾ ಜಪ್ತಿ ಮಾಡಲಾಗಿದೆ.
  • ಬ್ಯಾಂಕಾಕ್‌ನಿಂದ ಬಂದಿದ್ದ ಪ್ರಯಾಣಿಕನ ಲಗೇಜ್ ಬ್ಯಾಗ್‌ನಲ್ಲಿ ಗಾಂಜಾ ಪತ್ತೆಯಾಗಿದೆ.
  • 2.33 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಸಮೇತ ಆರೋಪಿಯನ್ನು ಬಂಧಿಸಲಾಗಿದೆ.

ಬ್ಯಾಗ್ ಪರಿಶೀಲನೆ ವೇಳೆ ಗಾಂಜಾ ಪತ್ತೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ವಿಮಾನ ನಿಲ್ದಾಣಕ್ಕೆ ಬ್ಯಾಂಕಾಕ್‌ನಿಂದ ಬಂದಿದ್ದ ವಿಮಾನದ ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ವಾಡಿಕೆಯಂತೆ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಒಬ್ಬ ಪ್ರಯಾಣಿಕನ ಲಗೇಜ್ ಬ್ಯಾಗ್ ಮೇಲೆ ಅಧಿಕಾರಿಗಳಿಗೆ ತೀವ್ರ ಅನುಮಾನ ಮೂಡಿದೆ. ತಕ್ಷಣವೇ ಆತನ ಬ್ಯಾಗ್‌ ಅನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಒಳಗೆ ಅಡಗಿಸಿಟ್ಟಿದ್ದ ದುಬಾರಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದೆ.

ಇದನ್ನೂ ಓದಿ ಪಾಕ್ ಉಗ್ರನ ಜೊತೆ ರಾಜ್ಯದ ಇಬ್ಬರ ಲಿಂಕ್: ಆರೋಪಿಗಳ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಯಲು!

6 ಕೆಜಿ ಗೂ ಹೆಚ್ಚು ತೂಕದ ಗಾಂಜಾ ವಶ

ವಶಪಡಿಸಿಕೊಳ್ಳಲಾದ ಈ ಗಾಂಜಾ ಒಟ್ಟು 6.66 ಕೆಜಿ ತೂಕವಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಸುಮಾರು 2.33 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಗಾಂಜಾ ಸಮೇತ ಸಿಕ್ಕಿಬಿದ್ದ ಆರೋಪಿಯನ್ನು ಕಸ್ಟಮ್ಸ್ ಅಧಿಕಾರಿಗಳು ತಕ್ಷಣವೇ ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಆರೋಪಿಯನ್ನು ರಹಸ್ಯ ಸ್ಥಳದಲ್ಲಿ ಇರಿಸಲಾಗಿದ್ದು, ಈ ಇಡೀ ಡ್ರಗ್ಸ್ ಜಾಲದ ಹಿಂದೆ ಯಾರಿದ್ದಾರೆ, ಬೆಂಗಳೂರಿನಲ್ಲಿ ಇದನ್ನು ಯಾರಿಗೆ ತಲುಪಿಸಲು ತರಲಾಗುತ್ತಿತ್ತು ಎಂಬ ಬಗ್ಗೆ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಾನವ ಇತಿಹಾಸದಲ್ಲೇ ಮೊದಲ ಟ್ರಿಲಿಯನೇರ್, ಇದು ಇಲಾನ್ ಮಸ್ಕ್ ಮ್ಯಾಜಿಕ್; ಇವರಿಗಿರುವ ಸಂಪತ್ತು ಎಷ್ಟು ಅಗಾಧ ಗೊತ್ತಾ? – Kannada News

ನವದೆಹಲಿ, ಜೂನ್ 8: ವಿಶ್ವದ ನಂಬರ್ ಒನ್ ಶ್ರೀಮಂತರೆನಿಸಿರುವ ಇಲಾನ್ ಮಸ್ಕ್ (Elon Musk) ಅವರು ಹೊಸ ಮೈಲಿಗಲ್ಲು ನಿರ್ಮಿಸುವ ಹೊಸ್ತಿಲಲ್ಲಿದ್ದಾರೆ. ಬಹಳ ಶೀಘ್ರದಲ್ಲೇ ಅವರು ವಿಶ್ವದ ಮೊದಲ ಟ್ರಿಲಿಯನೇರ್ (Trillionaire) ಎನಿಸಲಿದ್ದಾರೆ. ಫೋರ್ಬ್ಸ್ ಬಿಲಿಯನೇರ್ಸ್ ಪಟ್ಟಿ (Forbes) ಪ್ರಕಾರ ಇಲಾನ್ ಮಸ್ಕ್ ಸದ್ಯ 839 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತು ಹೊಂದಿದ್ದಾರೆ. ಬ್ಲೂಮ್​ಬರ್ಗ್ ಬಿಲಿಯನೇರ್ಸ್ ಪಟ್ಟಿ (Bloomberg Billionaire Index) ಪ್ರಕಾರ ಅವರು 703 ಬಿಲಿಯನ್ ಡಾಲರ್ ಸಂಪತ್ತಿನ ಒಡೆಯರಾಗಿದ್ದಾರೆ. ಆದರೆ, ಅವರ ಒಡೆತನದ ಸ್ಪೇಸ್​ಎಕ್ಸ್ (SpaceX) ಸಂಸ್ಥೆ ಐಪಿಒ ಮೂಲಕ ಷೇರು ಮಾರುಕಟ್ಟೆಗೆ ಪದಾರ್ಪಣೆ ಮಾಡುತ್ತಿದೆ. ಇದೇ ಜೂನ್ 12ಕ್ಕೆ ಐಪಿಒ ಡೇಟ್ ಇದೆ. ಸ್ಪೇಸ್​ಎಕ್ಸ್​ನಲ್ಲಿ ಮಸ್ಕ್ ಅವರು ಶೇ. 40ಕ್ಕಿಂತಲೂ ಹೆಚ್ಚು ಷೇರುಪಾಲು ಹೊಂದಿದ್ದಾರೆ. ಈ ಮೂಲಕ ಮಸ್ಕ್ ಅವರ ಈಗಿನ ಅಗಾಧ ಸಂಪತ್ತಿಗೆ ಇನ್ನೂ 800 ಬಿಲಿಯನ್ ಡಾಲರ್ ಸೇರ್ಪಡೆಯಾಗುತ್ತದೆ. ಈ ಮೂಲಕ ಅವರು ವಿಶ್ವದ ಮೊದಲ ಟ್ರಿಲಿಯನೇರ್ ಎನಿಸುವುದು ಖಚಿತವಾಗಿದೆ.

ಒಂದು ಟ್ರಿಲಿಯನ್ ಡಾಲರ್ ಅಂದರೆ ನಮ್ಮ ಭಾರತದ ಕರೆನ್ಸಿಯಲ್ಲಿ ಸುಮಾರು 94 ಲಕ್ಷ ಕೋಟಿ ರೂಪಾಯಿಗಳು. ಅಂದರೆ 1 ರ ಮುಂದೆ 12 ಸೊನ್ನೆಗಳು! ಒಂದೊಮ್ಮೆ ಸ್ಪೇಸ್​ಎಕ್ಸ್ ಐಪಿಒ ಮುಗಿದಾದ ಮೇಲೆ ಮಸ್ಕ್ ಅವರಿಗಿರುವ ಸಂಪತ್ತಿನ ಮುಂದೆ ಇತರ ದೊಡ್ಡ ಶ್ರೀಮಂತರ ಸಂಪತ್ತು ಗೌಣ ಎನಿಸುತ್ತವೆ. ಅಮೆರಿಕದ ಷೇರು ಮಾರುಕಟ್ಟೆ ನೆಲಸಿರುವ ಮನ್ಹಟನ್ ನಗರದ ಜಿಡಿಪಿಗಿಂತಲೂ ಮಸ್ಕ್ ಅವರ ಸಂಪತ್ತು ದೊಡ್ಡದಿರುತ್ತದೆ. ವಿಶ್ವದ ಹೆಚ್ಚಿನ ದೇಶಗಳ ಜಿಡಿಪಿ ಮಸ್ಕ್ ಅವರ ಸಂಪತ್ತಿಗಿಂತ ಕಡಿಮೆ. ಭಾರತದ ಜಿಡಿಪಿ ಸುಮಾರು 4 ಟ್ರಿಲಿಯನ್ ಡಾಲರ್​ನಷ್ಟು ಇರಬಹುದು. ಅಂದರೆ, ಶೇ. 25-30ರಷ್ಟು ಭಾರತದ ಜಿಡಿಪಿಗೆ ಮಸ್ಕ್ ಅವರ ಸಂಪತ್ತು ಸಮವಾಗಿರುತ್ತದೆ.

ಇದನ್ನೂ ಓದಿ: ಇಂಟರ್ನೆಟ್ ಬಳಕೆಯಲ್ಲಿ ಮನುಷ್ಯರನ್ನು ಮೀರಿಸಿವೆಯಂತೆ ಎಐ ಏಜೆಂಟ್​ಗಳು

ಭಾರತದ ಅತ್ಯಂತ ಶ್ರೀಮಂತರನ್ನು ಖರೀದಿಸಬಹುದು

ಭಾರತದ ಅತ್ಯಂತ ದೊಡ್ಡ ಉದ್ಯಮಿಗಳಾದ ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಇಬ್ಬರ ಒಟ್ಟು ಆಸ್ತಿಯನ್ನು ಒಟ್ಟಿಗೆ ಸೇರಿಸಿದರೂ ಅದು ಸುಮಾರು 160-180 ಬಿಲಿಯನ್ ಡಾಲರ್ ಆಗಬಹುದು. ಆದರೆ ಮಸ್ಕ್ ಹತ್ತಿರ ಇರುವ 1,000 ಬಿಲಿಯನ್ (1 ಟ್ರಿಲಿಯನ್) ಡಾಲರ್ ಹಣದಿಂದ ಅಂಬಾನಿ ಮತ್ತು ಅದಾನಿ ಅವರ ಇಡೀ ಸಾಮ್ರಾಜ್ಯವನ್ನು ಒಟ್ಟಿಗೆ ಖರೀದಿಸಬಹುದು!”

ಇಡೀ ಐಪಿಎಲ್ (IPL) ತಾವೇ ನಡೆಸಬಹುದು

ಮುಂಬೈ ಇಂಡಿಯನ್ಸ್, ಆರ್‌ಸಿಬಿ, ಸಿಎಸ್‌ಕೆ ಹೀಗೆ ಎಲ್ಲಾ 10 ಐಪಿಎಲ್ ತಂಡಗಳ ಒಟ್ಟು ಮೌಲ್ಯ ಹಾಗೂ ಇಡೀ ಐಪಿಎಲ್ ಟೂರ್ನಮೆಂಟ್‌ನ ಬೆಲೆ ಸುಮಾರು 15 ಬಿಲಿಯನ್ ಡಾಲರ್ ದಾಟಬಹುದು. ಮಸ್ಕ್ ಮನಸ್ಸು ಮಾಡಿದರೆ ಇಂತಹ 60 ಕ್ಕೂ ಹೆಚ್ಚು ಐಪಿಎಲ್ ಟೂರ್ನಮೆಂಟ್‌ಗಳನ್ನು ಮತ್ತು ಅದರಲ್ಲಿ ಆಡುವ ಎಲ್ಲಾ ಆಟಗಾರರನ್ನು ತಾನೊಬ್ಬನೇ ಕೊಂಡುಕೊಳ್ಳಬಹುದು!”

ಬೆಂಗಳೂರಿನ ಹೆಮ್ಮೆಯ ‘ಮೆಟ್ರೋ’ ಮತ್ತು ಮೂಲಸೌಕರ್ಯ

ನಮ್ಮ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಫೇಸ್-1 ಮತ್ತು ಫೇಸ್-2 ಕಟ್ಟಲು ಕೆಲವು ಸಾವಿರ ಕೋಟಿಗಳು ಬೇಕಾದವು. ಮಸ್ಕ್ ತನ್ನ ಆಸ್ತಿಯಿಂದ ಭಾರತದ ಪ್ರತಿಯೊಂದು ಪ್ರಮುಖ ನಗರಕ್ಕೂ (ಸುಮಾರು 100 ಕ್ಕೂ ಹೆಚ್ಚು ನಗರಗಳಿಗೆ) ಅತ್ಯಾಧುನಿಕ ಬುಲೆಟ್ ಟ್ರೈನ್ ಮತ್ತು ಮೆಟ್ರೋ ನೆಟ್‌ವರ್ಕ್ ಅನ್ನು ಯಾವುದೇ ಸಾಲವಿಲ್ಲದೆ ಸ್ವಂತ ಖರ್ಚಿನಲ್ಲೇ ನಿರ್ಮಿಸಿಕೊಡಬಹುದು.

ಇದನ್ನೂ ಓದಿ: ಬಲಿಷ್ಠ ಭಾರತದೊಂದಿಗೆ ಉತ್ತಮ ಸ್ನೇಹ ಸಂಬಂಧ ಬಯಸುತ್ತೇವೆ: ನೇಪಾಳ ವಿದೇಶಾಂಗ ಸಚಿವ ಶಿಶಿರ್ ಖನಾಲ್

ಪ್ರತಿಯೊಬ್ಬ ಭಾರತೀಯನಿಗೂ ಉಚಿತ ಐಫೋನ್

ಭಾರತದ ಜನಸಂಖ್ಯೆ 140 ಕೋಟಿಗಿಂತ ಹೆಚ್ಚಿದೆ. ಮಸ್ಕ್ ತನ್ನ 1 ಟ್ರಿಲಿಯನ್ ಡಾಲರ್ ಹಣವನ್ನು ಖರ್ಚು ಮಾಡಿದರೆ, ಭಾರತದ ಪ್ರತಿಯೊಬ್ಬ ಪ್ರಜೆಗೂ (ಬಡವ-ಶ್ರೀಮಂತ ಎನ್ನದೆ ಎಲ್ಲರಿಗೂ) ಒಂದು ಹೊಚ್ಚ ಹೊಸ ಐಫೋನ್ (iPhone) ಅನ್ನು ಉಚಿತವಾಗಿ ಉಡುಗೊರೆಯಾಗಿ ನೀಡಬಹುದು. ಅಷ್ಟು ನೀಡಿಯೂ ಅವರ ಬಳಿ ಇನ್ನೂ ನೂರಾರು ಕೋಟಿ ಹಣ ಉಳಿದಿರುತ್ತದೆ.

ಇಡೀ ದೇಶದ ಬಡತನವನ್ನೇ ನಿರ್ಮೂಲನೆ ಮಾಡಬಹುದಾ?

ಭಾರತದ ಒಂದು ವರ್ಷದ ಇಡೀ ದೇಶದ ಬಜೆಟ್ (Budget) ಸುಮಾರು 55 ಲಕ್ಷ ಕೋಟಿ ರೂ ಇದೆ. ಅಂದರೆ ಇಲಾನ್ ಮಸ್ಕ್ ಮನಸ್ಸು ಮಾಡಿದರೆ ಇಡೀ ಭಾರತ ದೇಶದ ಸರ್ಕಾರವನ್ನು ಯಾವುದೇ ತೆರಿಗೆಯಿಲ್ಲದೆ ಸತತ ಎರಡು ವರ್ಷಗಳ ಕಾಲ ತಾನೊಬ್ಬನೇ ನಡೆಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಇನ್ನೂ ಮುಗಿದಿಲ್ಲ ಖಾತೆ ಕ್ಯಾತೆ: ಹೈಕಮಾಂಡ್​ನಿಂದ ಸ್ಪಷ್ಟತೆ ಸಿಗುವ ವರೆಗೆ ಅಧಿಕಾರ ಸ್ವೀಕರಿಸಲ್ಲವೆಂದ ಕೃಷ್ಣಭೈರೇಗೌಡ! – Kannada News

ಬೆಂಗಳೂರು ನಗರಾಭಿವೃದ್ಧಿ ಖಾತೆಯಲ್ಲಿ ಬಿಡಿಎ, ಬಿಎಂಆರ್‌ಡಿಎ ಸೇರಿಸಲು ಕೃಷ್ಣಭೈರೇಗೌಡ ಪಟ್ಟುImage Credit source: tv9

ಬೆಂಗಳೂರು, ಜೂನ್ 8: ಸಿಎಂ ಡಿಕೆ ಶಿವಕುಮಾರ್ (DK Shivakumar) ನೇತೃತ್ವದ ನೂತನ ಸಚಿವ ಸಂಪುಟ ರಚನೆಯಾಗಿ ಮೂರ್ನಾಲ್ಕು ದಿನಗಳೇ ಕಳೆದರೂ ಖಾತೆ ಹಂಚಿಕೆ ಕುರಿತಂತೆ ಗೊಂದಲಗಳು ಮುಂದುವರಿದಿವೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ಪಡೆದಿರುವ ಸಚಿವ ಕೃಷ್ಣಭೈರೇಗೌಡರು (Krishna Byre Gowda), ಖಾತೆಯಲ್ಲಿ ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಮತ್ತು ಬಿಎಂಆರ್‌ಡಿಎ (ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ) ಇಲಾಖೆಗಳನ್ನು ಸೇರಿಸುವಂತೆ ಹೈಕಮಾಂಡ್ ಜತೆ ಪಟ್ಟು ಹಿಡಿದಿದ್ದಾರೆ. ಈ ಬೇಡಿಕೆ ಈಡೇರುವವರೆಗೂ ಖಾತೆಯ ಜವಾಬ್ದಾರಿ ವಹಿಸಿಕೊಳ್ಳುವುದಿಲ್ಲ ಎಂದು ಅವರು ತೀರ್ಮಾನಿಸಿದ್ದಾರೆ.

ಮುಖ್ಯಾಂಶಗಳು

  • ಬೆಂಗಳೂರು ನಗರಾಭಿವೃದ್ಧಿ ಖಾತೆಯಲ್ಲಿ ಬಿಡಿಎ, ಬಿಎಂಆರ್‌ಡಿಎ ಸೇರಿಸಲು ಕೃಷ್ಣಭೈರೇಗೌಡ ಪಟ್ಟು.
  • ಬೇಡಿಕೆ ಈಡೇರುವವರೆಗೂ ಅಧಿಕಾರ ಸ್ವೀಕರಿಸಲ್ಲವೆಂದು ನಿರ್ಧಾರ.
  • ಸುರ್ಜೇವಾಲ ಸಮ್ಮುಖದಲ್ಲೇ ತಾರತಮ್ಯದ ಪ್ರಶ್ನೆ ಎತ್ತಿದ ಸಚಿವ.

ಶನಿವಾರ ಖಾಸಗಿ ಹೋಟೆಲ್‌ನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಕೃಷ್ಣಭೈರೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಖಾತೆಯು ಬಿಡಿಎ ಮತ್ತು ಬಿಎಂಆರ್‌ಡಿಎ ಇಲ್ಲದೆ ಪರಿಪೂರ್ಣವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಖಾತೆಯು ಪ್ರಮುಖವಾಗಿ ಈ ಎರಡು ಪ್ರಾಧಿಕಾರಗಳಿಂದಲೇ ಪ್ರಬಲವಾಗಿದೆ. ಈ ಎರಡನ್ನೂ ಹೊರತುಪಡಿಸಿದರೆ, ಖಾತೆಯು ಕೇವಲ ಕಾರ್ಪೊರೇಷನ್ ವಿಷಯಗಳಿಗೆ ಸೀಮಿತವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಸಿದ್ದರಾಮಯ್ಯ ಸಂಪುಟದಲ್ಲಿ ಕಂದಾಯ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಿದ್ದೆ. ಆದರೂ ಈ ರೀತಿಯ ಅಪೂರ್ಣ ಖಾತೆ ನೀಡುವ ಮೂಲಕ ತಾರತಮ್ಯ ಮಾಡುತ್ತಿರುವುದು ಏಕೆ ಎಂದು ಅವರು ಸುರ್ಜೇವಾಲ ಬಳಿ ಪ್ರಶ್ನಿಸಿದ್ದಾರೆ ಎಂಬುದು ತಿಳಿದುಬಂದಿದೆ. ಹಿಂದೆ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದವರಿಗೆ ಬಿಡಿಎ ಮತ್ತು ಬಿಎಂಆರ್‌ಡಿಎ ಎರಡನ್ನೂ ಜವಾಬ್ದಾರಿಯನ್ನಾಗಿ ನೀಡಲಾಗುತ್ತಿತ್ತು. ಈಗ ಈ ಪದ್ಧತಿಯನ್ನು ಏಕೆ ಬದಲಾಯಿಸಲಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೆ, ತನಗೂ ಈ ಎರಡೂ ಪ್ರಾಧಿಕಾರಗಳ ಜವಾಬ್ದಾರಿಯನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಸ್ಪಷ್ಟತೆ ಸಿಗುವ ವರೆಗೂ ಅಧಿಕಾರ ವಹಿಸಲ್ಲ: ಕೃಷ್ಣಭೈರೇಗೌಡ

ಈ ವಿಷಯದ ಬಗ್ಗೆ ಹೈಕಮಾಂಡ್, ವಿಶೇಷವಾಗಿ ಸುರ್ಜೇವಾಲ ಅಥವಾ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಂದ ಸ್ಪಷ್ಟ ಸಂದೇಶ ಬರುವವರೆಗೂ ಖಾತೆಯ ಜವಾಬ್ದಾರಿಯನ್ನು ವಹಿಸಿಕೊಳ್ಳದಿರಲು ಕೃಷ್ಣಭೈರೇಗೌಡ ನಿರ್ಧರಿಸಿದ್ದಾರೆ. ಈ ಹಿಂದೆ ಇದೇ ಬೆಂಗಳೂರು ನಗರಾಭಿವೃದ್ಧಿ ಖಾತೆ ಬೇಕು ಎಂಬುದಾಗಿ ರಾಮಲಿಂಗಾ ರೆಡ್ಡಿ ಸಹ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ, ಅಸಲಿ ವಿಷಯವೆಂದರೆ ಕೃಷ್ಣಭೈರೇಗೌಡರು ಸಹ ಈ ಖಾತೆಯ ಬಗ್ಗೆ ಪೂರ್ಣ ಪ್ರಮಾಣದ ಸಮಾಧಾನ ಹೊಂದಿಲ್ಲ ಎಂಬುದು ಇದೀಗ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಜೋರಾಯ್ತು ಸಚಿವ ಸ್ಥಾನಕ್ಕಾಗಿ ಸರ್ಕಸ್: 20 ಸ್ಥಾನಗಳಿಗಾಗಿ 60ಕ್ಕೂ ಹೆಚ್ಚು ಶಾಸಕರಿಂದ ಮಹಾ ಲಾಬಿ

ಹೈಕಮಾಂಡ್ ಈ ಖಾತೆ ಖ್ಯಾತೆಯನ್ನು ಹೇಗೆ ಬಗೆಹರಿಸುತ್ತದೆ ಮತ್ತು ಕೃಷ್ಣಭೈರೇಗೌಡರ ಬೇಡಿಕೆಯನ್ನು ಈಡೇರಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಸದ್ಯಕ್ಕೆ, ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ವಿವಾದ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಕರುಪ್ಪು’ ಒಟಿಟಿ ಎಂಟ್ರಿಗೆ ಸಿಕ್ತು ದಿನಾಂಕ; ಡೇಟ್ ರಿವೀಲ್ – Kannada News

ಕಾಲಿವುಡ್ ಸ್ಟಾರ್ ನಟ ಸೂರ್ಯ ಅವರ ಬಹುನಿರೀಕ್ಷಿತ ‘ಕರುಪ್ಪು’ ಸಿನಿಮಾ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುವ ಮೂಲಕ ದೀರ್ಘ ದಿನಗಳ ನಂತರ ಅವರಿಗೆ ಒಂದು ಅದ್ಭುತ ಸೂಪರ್ ಹಿಟ್ ತಂದುಕೊಟ್ಟಿದೆ. ಕಳೆದ ಮೇ 15 ರಂದು ತಮಿಳಿನಲ್ಲಿ ‘ಕರುಪ್ಪು’ ಹಾಗೂ ತೆಲುಗಿನಲ್ಲಿ ‘ವೀರಭದ್ರಡು’ ಹೆಸರಿನಲ್ಲಿ ಬಿಡುಗಡೆಯಾದ ಈ ಫ್ಯಾಂಟಸಿ ಆಕ್ಷನ್ ಥ್ರಿಲ್ಲರ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಎನಿಸಿಕೊಂಡಿದೆ. ಇದು ನಟ ಸೂರ್ಯ ಅವರ ಇಡೀ ಚಿತ್ರಜೀವನದಲ್ಲೇ ಅತಿ ದೊಡ್ಡ ಹಿಟ್ ಸಿನಿಮಾವಾಗಿ ಹೊರಹೊಮ್ಮಿದ್ದು, ಬರೋಬ್ಬರಿ 300 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಬಿಡುಗಡೆಯಾಗಿ ಮೂರು ವಾರಗಳು ಕಳೆದಿದ್ದರೂ ಸಹ ತಮಿಳುನಾಡಿನ ಪ್ರಮುಖ ಚಿತ್ರಮಂದಿರಗಳಲ್ಲಿ ಇಂದಿಗೂ ಉತ್ತಮ ಕಲೆಕ್ಷನ್‌ನೊಂದಿಗೆ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.

ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ ಈ ಸಿನಿಮಾವನ್ನು ಒಟಿಟಿಯಲ್ಲಿ ವೀಕ್ಷಿಸಲು ಡಿಜಿಟಲ್ ಪ್ರೇಕ್ಷಕರು ಮತ್ತು ಸೂರ್ಯ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಇದೀಗ ಅವರ ಕಾಯುವಿಕೆಗೆ ತೆರೆ ಬಿದ್ದಿದ್ದು, ‘ಕರುಪ್ಪು’ ಚಿತ್ರದ ಒಟಿಟಿ ಸ್ಟ್ರೀಮಿಂಗ್ ದಿನಾಂಕ ಅಧಿಕೃತವಾಗಿ ಹೊರಬಿದ್ದಿದೆ. ವಿಶ್ವದ ಜನಪ್ರಿಯ ಒಟಿಟಿ ಸಂಸ್ಥೆಯಾದ ಅಮೆಜಾನ್ ಪ್ರೈಮ್ ವಿಡಿಯೋ (Amazon Prime Video) ಈ ಚಿತ್ರದ ಡಿಜಿಟಲ್ ಪ್ರಸಾರ ಹಕ್ಕುಗಳನ್ನು ಭಾರಿ ಮೊತ್ತಕ್ಕೆ ತನ್ನದಾಗಿಸಿಕೊಂಡಿದೆ. ಇತ್ತೀಚೆಗೆ ತನ್ನ ಆ್ಯಪ್‌ನಲ್ಲಿ ಈ ಬಗ್ಗೆ ಅಪ್ಡೇಟ್ ನೀಡಿರುವ ಅಮೆಜಾನ್ ಪ್ರೈಮ್, ಜೂನ್ 12 ರಿಂದ ಚಿತ್ರವನ್ನು ಪ್ರಸಾರ ಮಾಡುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ.

ಚಿತ್ರಮಂದಿರಗಳಲ್ಲಿ ಕೇವಲ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಮಾತ್ರ ಬಿಡುಗಡೆಯಾಗಿದ್ದ ಈ ಚಿತ್ರ, ಒಟಿಟಿ ವೀಕ್ಷಕರಿಗೆ ಮತ್ತೊಂದು ದೊಡ್ಡ ಬಿಗ್ ಸರ್ಪ್ರೈಸ್ ನೀಡುತ್ತಿದೆ. ಚಿತ್ರಮಂದಿರಕ್ಕೆ ಬರಲು ಸಾಧ್ಯವಾಗದ ಬೇರೆ ಭಾಷೆಯ ಪ್ರೇಕ್ಷಕರನ್ನು ತಲುಪುವ ಉದ್ದೇಶದಿಂದ, ಒಟಿಟಿಯಲ್ಲಿ ತಮಿಳು ಮತ್ತು ತೆಲುಗು ಭಾಷೆಗಳ ಜೊತೆಗೆ ಹಿಂದಿಯಲ್ಲೂ ಈ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ ಎಂದು ವರದಿಯಾಗಿದೆ. ಹೀಗಾಗಿ ಜೂನ್ 12 ರಿಂದ ಮೂರೂ ಭಾಷೆಗಳ ಪ್ರೇಕ್ಷಕರು ಒಟ್ಟಿಗೆ ಮನೆಯಲ್ಲೇ ಕುಳಿತು ಈ ಅದ್ಭುತ ಆಕ್ಷನ್ ಥ್ರಿಲ್ಲರ್ ಸಿನಿಮಾವನ್ನು ಕಣ್ಣುಂಬಿಕೊಳ್ಳಬಹುದಾಗಿದೆ.

ಡ್ರೀಮ್ ವಾರಿಯರ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅತ್ಯಂತ ಯಶಸ್ವಿ ನಿರ್ದೇಶಕ ಆರ್.ಜೆ. ಬಾಲಾಜಿ ಈ ‘ಕರುಪ್ಪು’ ಚಿತ್ರವನ್ನು ಅದ್ಧೂರಿಯಾಗಿ ನಿರ್ದೇಶಿಸಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್ ಈ ಚಿತ್ರದಲ್ಲಿ ಸೂರ್ಯ ಅವರಿಗೆ ನಾಯಕಿಯಾಗಿ ಜೋಡಿಯಾಗಿದ್ದು, ಸ್ವತಃ ನಿರ್ದೇಶಕ ಆರ್.ಜೆ. ಬಾಲಾಜಿ ಅವರೇ ಚಿತ್ರದಲ್ಲಿ ಮುಖ್ಯ ಖಳನಾಯಕನ ಪಾತ್ರದಲ್ಲಿ ಅಬ್ಬರಿಸಿದ್ದಾರೆ.

ಇದನ್ನೂ ಓದಿ: 300 ಕೋಟಿ ಗಳಿಸಿದ ಮೇಲೆ ‘ಕರುಪ್ಪು’ ವಿವಾದ; ಸೂರ್ಯಗೆ ಅವಮಾನ

ಇವರ ಜೊತೆಗೆ ಇಂದ್ರನ್ಸ್, ಅನಘಾ, ಮನ್ಸೂರ್ ಅಲಿ ಖಾನ್, ಜಾರ್ಜ್ ಮರಿಯನ್ ಹಾಗೂ ಆಡುಕಲಂ ನರೇನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಯುವ ಸಂಗೀತ ನಿರ್ದೇಶಕ ಸಾಯಿ ಅಭ್ಯಂಕರ್ ಅವರ ಹಿನ್ನೆಲೆ ಸಂಗೀತ ಚಿತ್ರದ ತೂಕವನ್ನು ಹೆಚ್ಚಿಸಿದೆ. ಒಂದು ವೇಳೆ ನೀವು ಈ ಚಿತ್ರವನ್ನು ಥಿಯೇಟರ್‌ನಲ್ಲಿ ಮಿಸ್ ಮಾಡಿಕೊಂಡಿದ್ದರೆ ಅಥವಾ ಮತ್ತೊಮ್ಮೆ ನೋಡಲು ಬಯಸಿದ್ದರೆ, ಇನ್ನು ಕೇವಲ ಮೂರೇ ದಿನ ಕಾಯಬೇಕಾಗಿದ್ದು, ಅಮೆಜಾನ್ ಪ್ರೈಮ್‌ನಲ್ಲಿ ನೋಡಿ ಆನಂದಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಭೋಪಾಲ್: ಮಹಾಮಾನ ರೈಲಿನಲ್ಲಿ ಸುಳ್ಳು ಅಪವಾದ ಹೊರಿಸಿ ಪ್ರಯಾಣಿಕನನ್ನು ರೈಲಿನಿಂದ ಹಾರುವಂತೆ ಮಾಡಿದ ಜನ – Kannada News

ರೈಲಿನಿಂದ ಹಾರಲು ಹೊರಟಿದ್ದ ವ್ಯಕ್ತಿ Image Credit source: Free Press Journal

ಭೋಪಾಲ್, ಜೂನ್ 08: ಮಹಾಮಾನ ಎಕ್ಸ್​ಪ್ರೆಸ್​ ರೈಲಿ(Train)ನಲ್ಲಿ ವ್ಯಕ್ತಿಯೊಬ್ಬರ ಮೇಲೆ ಸುಳ್ಳು ಅಪವಾದ ಹೊರಿಸಿ ಮಾನ ಕಳೆದು ರೈಲಿನಿಂದ ಹಾರುವಂತೆ ಮಾಡಿರುವ ಘಟನೆ ಮಧ್ಯಪ್ರದೇಶದ ಭೋಪಾಲ್​ನಲ್ಲಿ ನಡೆದಿದೆ. ರೈಲಿನ ಫುಟ್‌ಬೋರ್ಡ್‌ಗೆ ವ್ಯಕ್ತಿಯೊಬ್ಬ ನೇತಾಡಿಕೊಂಡು ಕಣ್ಣೀರಿಡುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ. ತನಿಖಾ ಸಂಸ್ಥೆಗಳು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ರೈಲ್ವೆ ರಕ್ಷಣಾ ಪಡೆ (RPF) ಮತ್ತು ಸ್ಥಳೀಯ ರೈಲ್ವೆ ಪೊಲೀಸರು ಜಂಟಿಯಾಗಿ ಸತ್ಯಾಸತ್ಯತೆ ತಿಳಿಯಲು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಈ ತ್ವರಿತ ಕಾನೂನು ಕ್ರಮವು ರೈಲ್ವೆ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸುವಲ್ಲಿ ಆಡಳಿತ ಮಂಡಳಿಯ ಬದ್ಧತೆಯನ್ನು ತೋರಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ರಘುವಂಶಿ ಎಂದು ಗುರುತಿಸಲಾದ ವ್ಯಕ್ತಿಯೊಬ್ಬರು ಚಲಿಸುವ ರೈಲಿನ ಬಾಗಿಲನ್ನು ಹಿಡಿದು ನೇತಾಡುತ್ತಿರುವುದು ಕಂಡುಬಂದಿದೆ. ರೈಲಿನ ಒಳಗಿದ್ದ ಪ್ರಯಾಣಿಕರು ಅವರೊಂದಿಗೆ ಮಾತನಾಡಲು ಪ್ರಯತ್ನಿಸಿದಾಗ, ಆತ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಅತ್ಯಂತ ಭಾವುಕನಾಗಿ ಕಣ್ಣೀರು ಹಾಕಿದ್ದಾರೆ.

ನನ್ನ ಮಗಳ ಮೇಲೆ ಆಣೆ ಇಡುತ್ತೇನೆ, ನಾನು ಏನೂ ತಪ್ಪು ಮಾಡಿಲ್ಲ. ನನ್ನ ತಂದೆಯ ಮೇಲೂ ಆಣೆ ಇಡುತ್ತೇನೆ. ನನ್ನ ಪಕ್ಕದಲ್ಲೇ ಕುಳಿತಿದ್ದ ಕೆಲವರು ನನ್ನ ವಿರುದ್ಧ ಸಂಪೂರ್ಣ ಸುಳ್ಳು ಆರೋಪ ಹೊರಿಸಿದ್ದಾರೆ. ತಪ್ಪಿತಸ್ಥನಾದವನು ಮಾತ್ರ ಹೆದರುತ್ತಾನೆ, ನಾನು ಯಾವುದೇ ತಪ್ಪು ಮಾಡದಿದ್ದರಿಂದ ನನಗೆ ಭಯವಿಲ್ಲ.

ಮತ್ತಷ್ಟು ಓದಿ: ರೈಲಿನ ಬೋರ್ಡ್​ ಬರೆಸಲು ಕೂಡ ಪಾಕಿಸ್ತಾನದ ಬಳಿ ಹಣವಿಲ್ಲ, ಸೀಮೆ ಸುಣ್ಣದಲ್ಲಿ ಮಾರ್ಗದ ಹೆಸರು ಬರೆದ ರೈಲ್ವೆ ಇಲಾಖೆ

ಸುರಕ್ಷಿತವಾಗಿ ಬದುಕುಳಿದ ಪ್ರಯಾಣಿಕ
ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ಬಳಕೆದಾರರು ರೈಲಿನೊಳಗೆ ಪ್ರಯಾಣಿಕರ ಗುಂಪೊಂದು ಆತನ ಮೇಲೆ ಹಲ್ಲೆ ನಡೆಸಿ, ಬಲವಂತವಾಗಿ ಕೆಳಗೆ ಜಿಗಿಯುವಂತೆ ಒತ್ತಾಯಿಸಿತು ಎಂದು ಆತಂಕ ವ್ಯಕ್ತಪಡಿಸಿದ್ದರು. ಆದರೆ, ಪ್ರಾಥಮಿಕ ವರದಿಗಳ ಪ್ರಕಾರ, ಬಲಿಪಶು ಈ ಭೀಕರ ಘಟನೆಯಿಂದ ಸುರಕ್ಷಿತವಾಗಿ ಬದುಕುಳಿದಿದ್ದಾನೆ ಎಂಬುದು ಅತ್ಯಂತ ಸಮಾಧಾನಕರ ಸಂಗತಿಯಾಗಿದೆ. ರೈಲಿನೊಳಗೆ ನಡೆದ ನಿಖರವಾದ ಘರ್ಷಣೆ ಮತ್ತು ಜಗಳಕ್ಕೆ ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ.

ವಿಡಿಯೋ

ಆರ್‌ಪಿಎಫ್‌ನಿಂದ ಸಮಗ್ರ ತನಿಖೆ ಮುಂದುವರಿಕೆ
ಘಟನೆಯ ವೀಡಿಯೊ ಮುನ್ನೆಲೆಗೆ ಬರುತ್ತಿದ್ದಂತೆ ಅಲರ್ಟ್ ಆಗಿರುವ ರೈಲ್ವೆ ಇಲಾಖೆಯು ಇಡೀ ಪ್ರಕರಣದ ಆಳವಾದ ತನಿಖೆಗೆ ಆದೇಶಿಸಿದೆ.

ಆರೋಪಿಗಳ ಪತ್ತೆಗೆ ಬಲೆ: ರೈಲಿನ ಬೋಗಿಯಲ್ಲಿದ್ದ ಇತರ ಪ್ರಯಾಣಿಕರನ್ನು ಸಂಪರ್ಕಿಸಲಾಗುತ್ತಿದ್ದು, ಆ ಸಮಯದಲ್ಲಿ ನಡೆದ ಸಂಭಾಷಣೆ ಹಾಗೂ ಗಲಾಟೆಯ ಹಿಂದಿನ ವ್ಯಕ್ತಿಗಳನ್ನು ಗುರುತಿಸಲು ಪೊಲೀಸರು ಮುಂದಾಗಿದ್ದಾರೆ.

ಭದ್ರತೆ ಹೆಚ್ಚಳ: ರೈಲ್ವೆ ಆಡಳಿತ ಮಂಡಳಿಯು ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಮುಂಬರುವ ದಿನಗಳಲ್ಲಿ ದೂರದ ಪ್ರಯಾಣದ ರೈಲುಗಳಲ್ಲಿ ಭದ್ರತಾ ಸಿಬ್ಬಂದಿ ಮತ್ತು ಜಾಗೃತಿಯನ್ನು ಮತ್ತಷ್ಟು ಹೆಚ್ಚಿಸುವುದಾಗಿ ಭರವಸೆ ನೀಡಿದೆ. ಪೊಲೀಸರ ತನಿಖೆ ಪೂರ್ಣಗೊಂಡ ತಕ್ಷಣ ಅಧಿಕೃತ ವರದಿ ಬಿಡುಗಡೆಯಾಗಲಿದ್ದು, ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version