ಕಾಂಗ್ರೆಸ್ ನಾಯಕ ಪವನ್ ಖೇರಾಗೆ ಒಂದು ವಾರದ ನಿರೀಕ್ಷಣಾ ಜಾಮೀನು ಮಂಜೂರು

ಕಾಂಗ್ರೆಸ್ ನಾಯಕ ಪವನ್ ಖೇರಾಗೆ ಒಂದು ವಾರದ ನಿರೀಕ್ಷಣಾ ಜಾಮೀನು ಮಂಜೂರು

ಹೈದರಾಬಾದ್, ಏಪ್ರಿಲ್ 10: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ದಾಖಲಿಸಿದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ತೆಲಂಗಾಣ ಹೈಕೋರ್ಟ್ ಶುಕ್ರವಾರ (ಏಪ್ರಿಲ್ 10) ಕಾಂಗ್ರೆಸ್ ನಾಯಕ ಪವನ್ ಖೇರಾ(Pawan Khera) ಅವರಿಗೆ ಒಂದು ವಾರದ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಸಂಬಂಧಿತ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಲು ಅರ್ಜಿದಾರರಿಗೆ ಒಂದು ವಾರ ಕಾಲಾವಕಾಶ ನೀಡಲಾಗಿದೆ. ಖೇರಾ ಅವರ ನಿವಾಸವಿರುವ ಹೈದರಾಬಾದ್‌ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಲ್ಲಿಸಲಾಗಿದೆ.

ಗುರುವಾರ ತೆಲಂಗಾಣ ಹೈಕೋರ್ಟ್ ಹಿರಿಯ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿತು. ತಕ್ಷಣದ ಪರಿಹಾರ ನೀಡುವ ಬದಲು, ನ್ಯಾಯಾಲಯವು ತನ್ನ ಆದೇಶವನ್ನು ಶುಕ್ರವಾರಕ್ಕೆ ಕಾಯ್ದಿರಿಸಿತ್ತು.ಏಪ್ರಿಲ್ 5 ರಂದು ಪತ್ರಿಕಾಗೋಷ್ಠಿಯಲ್ಲಿ ಪವನ್ ಖೇರಾ ಅವರು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದಾಗ ವಿವಾದ ಭುಗಿಲೆದ್ದಿತ್ತು.

ಬಹು ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ ಮತ್ತು ವಿದೇಶದಲ್ಲಿ ಆಸ್ತಿ ಹೊಂದಿದ್ದಾರೆಂದು ಹೇಳಿಕೊಂಡಿದ್ದಾರೆ, ಆದರೆ ಅವುಗಳನ್ನು ಅವರ ಚುನಾವಣಾ ಅಫಿಡವಿಟ್‌ನಲ್ಲಿ ಬಹಿರಂಗಪಡಿಸಿಲ್ಲ ಎಂದಿದ್ದರು. ಶರ್ಮಾ ಕುಟುಂಬವು ಈ ಆರೋಪಗಳನ್ನು ತೀವ್ರವಾಗಿ ತಿರಸ್ಕರಿಸಿತು, ಅವುಗಳನ್ನು ಸುಳ್ಳು, ಕಟ್ಟುಕಥೆ ಮತ್ತು ದುರುದ್ದೇಶಪೂರಿತ ಎಂದು ಕರೆದಿದೆ.

ಮತ್ತಷ್ಟು ಓದಿ: ಬೆಂಗಳೂರಿನ 1 ಲಕ್ಷ ನಕಲಿ ಮತದಾರರಿಗೇಕೆ ನೋಟಿಸ್ ನೀಡಿಲ್ಲ? ಚುನಾವಣಾ ಆಯೋಗಕ್ಕೆ ಪವನ್ ಖೇರಾ ಪ್ರಶ್ನೆ

ರಿನಿಕಿ ಭುಯಾನ್ ಶರ್ಮಾ ಅವರ ದೂರಿನ ನಂತರ, ಖೇಡಾ ವಿರುದ್ಧ ಗುವಾಹಟಿ ಅಪರಾಧ ಶಾಖೆಯಲ್ಲಿ ಹಲವಾರು ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ಪ್ರಕರಣ ದಾಖಲಾದ ನಂತರ, ಅಸ್ಸಾಂ ಪೊಲೀಸರ ತಂಡವು ಖೇಡಾ ಅವರ ದೆಹಲಿ ನಿವಾಸಕ್ಕೆ ವಿಚಾರಣೆಗಾಗಿ ಆಗಮಿಸಿತು.ಆದರೆ ಅವರು ಹಾಜರಿರಲಿಲ್ಲ.

ಖೇಡಾ ತಮ್ಮ ನಿರೀಕ್ಷಣಾ ಜಾಮೀನು ಅರ್ಜಿಯಲ್ಲಿ, ತಾವು ಕಾನೂನು ಪಾಲಿಸುವ ನಾಗರಿಕ, ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿಲ್ಲ ಮತ್ತು ತನಿಖೆಗೆ ಸಂಪೂರ್ಣವಾಗಿ ಸಹಕರಿಸುವುದಾಗಿ ನ್ಯಾಯಾಲಯಕ್ಕೆ ಸಂಪೂರ್ಣವಾಗಿ ಸಹಕರಿಸುವುದಾಗಿ ತಿಳಿಸಿದ್ದಾರೆ. ಬಂಧನ ಪೂರ್ವ ಜಾಮೀನು ನೀಡುವಂತೆ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

 

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

SSLC ತೃತೀಯ ಭಾಷೆಗೆ ಅಂಕದ ಬದಲಾಗಿ ಗ್ರೇಡ್​​ ಪ್ರಶ್ನಿಸಿ PIL: ಅರ್ಜಿದಾರರಿಗೆ ಬಿಗ್​​ ಶಾಕ್​​ ಕೊಟ್ಟ ಹೈಕೋರ್ಟ್​

ಬೆಂಗಳೂರು, ಏಪ್ರಿಲ್​​ 10: ಎಸ್​​ಎಸ್​​ಎಲ್​​ಸಿ ತೃತೀಯ ಭಾಷೆ ಪರೀಕ್ಷೆಗೆ ಅಂಕಗಳ ಬದಲು ಗ್ರೇಡ್​​ ನೀಡುವ ನಿರ್ಧಾರ ಭಾರಿ ಪರ-ವಿರೋಧ ಚರ್ಚೆಗೆ ಕಾರಣವಾಗಿತ್ತು. ಈ ನಡುವೆ ರಾಜ್ಯ ಸರ್ಕಾರದ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್​​ಗೆ ಹೆಚ್.ಎನ್. ಚಂದನಾ ಮತ್ತು ಎಸ್.ವೆಂಕಟೇಶ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು. ಪರೀಕ್ಷೆಯ ಕೊನೆಯ ಹಂತದಲ್ಲಿ ಸರ್ಕಾರದ ತೆಗೆದುಕೊಂಡಿರುವ ಈ ನಿರ್ಧಾರ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಆರೋಪಿಸಲಾಗಿತ್ತು. ಆದರೆ ಅರ್ಜಿದಾರರಿಗೆ ಹೈಕೋರ್ಟ್​​ ಈಗ ಬಿಗ್​​ ಶಾಕ್​​ ಕೊಟ್ಟಿದೆ.

ಅರ್ಜಿದಾರರಿಗೆ 1 ಲಕ್ಷ ದಂಡ!

ರಾಜ್ಯ ಸರ್ಕಾರದ ನಿರ್ಧಾರ ಪ್ರಶ್ನಿಸಿ ಪಿಐಎಲ್​ ಸಲ್ಲಿಕೆ ಮಾಡಿರುವವರು, ಸರ್ಕಾರದ ಆದೇಶದ ವಿವರ ಒದಗಿಸದೇ ಕೇವಲ ಪತ್ರಿಕೆ ವರದಿ ಆಧರಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಹಿನ್ನೆಲೆ ಅರ್ಜಿದಾರರಾದ ಹೆಚ್.ಎನ್.ಚಂದನಾ ಮತ್ತು ಎಸ್.ವೆಂಕಟೇಶ್​​ಗೆ 1 ಲಕ್ಷ ರೂಪಾಯಿ ದಂಡ ವಿಧಿಸಿರುವ ಹೈಕೋರ್ಟ್​​, ಪಿಐಎಲ್ ವಜಾಗೊಳಿಸಿ ಆದೇಶಿಸಿದೆ. ಆ ಮೂಲಕ ಅರ್ಜಿದಾರರಿಗೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ.

ಇದನ್ನೂ ಓದಿ: SSLC ತೃತೀಯ ಭಾಷೆಗೆ ಗ್ರೇಡ್​​ ವಿವಾದ; ರಾಜ್ಯಪಾಲರ ನಿಲುವಿಗೆ ಕರವೇ ಕೆಂಡ

SSLC ತೃತೀಯ ಭಾಷೆಗಳ ಪರೀಕ್ಷೆಗೆ ಅಂಕಗಳ ಬದಲು ಗ್ರೇಡ್​ ನೀಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಕನ್ನಡಪರ ಸಂಘಟನೆಗಳು ಸ್ವಾಗತಿಸಿದ್ದವಾದರೂ, ಬಿಜೆಪಿಯ ಕೆಲವು ನಾಯಕರು ಸೇರಿ ಹಲವರಿಂದ ವಿರೋಧ ವ್ಯಕ್ತವಾಗಿತ್ತು. ಈ ವಿಚಾರವಾಗಿ ಸ್ವತಃ ಮಧ್ಯಪ್ರವೇಶ ಮಾಡಿದ್ದ ರಾಜ್ಯಪಾಲರು, ಸರ್ಕಾರದ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಮುಖ್ಯ ಕಾರ್ಯದರ್ಶಿ ಶಾಲನೀಶ್​​ಗೆ ಪತ್ರ ಕೂಡ ಬರೆದಿದ್ದರು. ಗವರ್ನರ್​​ ಈ ನಡೆ ವಿರುದ್ಧ ಸಿಡಿದೆದ್ದಿದ್ದ ಕರವೇ, ಈ ಹಸ್ತಕ್ಷೇಪ ಒಕ್ಕೂಟ ವ್ಯವಸ್ಥೆಯನ್ನು ಅಣಕಿಸುವಂತಿದೆ. ನಿಮ್ಮ ಅಧಿಕಪ್ರಸಂಗವನ್ನು ಕರ್ನಾಟಕದ ಜನತೆ ಒಪ್ಪಿಕೊಳ್ಳುವುದಿಲ್ಲ. ರಾಜ್ಯಪಾಲರು ಸರ್ಕಾರದ ಪದನಿಮಿತ್ತ ಮುಖ್ಯಸ್ಥರು ಎಂಬುದನ್ನು ನೀವು ಮರೆತಿದ್ದೀರಿ. ನೀವು ನಮ್ಮಿಂದ ನೇರವಾಗಿ ಆಯ್ಕೆಯಾದ ಜನಪ್ರತಿನಿಧಿಯಲ್ಲ. ಒಂದು ಸರ್ಕಾರ ಬಹುಮತದೊಂದಿಗೆ ಸದೃಢವಾಗಿ ಕಾರ್ಯ ನಿರ್ವಹಿಸುತ್ತಿರುವಾಗ ಈ ರೀತಿ ಮಾಡೋದು ತಪ್ಪು. ದೈನಂದಿನ ಆಡಳಿತದಲ್ಲಿ ಮೂಗು ತೂರಿಸಲು ನಿಮಗೆ ಯಾವುದೇ ನೈತಿಕ ಅಧಿಕಾರವಿಲ್ಲ, ಸಾಂವಿಧಾನಿಕ ಹೊಣೆಗಾರಿಕೆಯಿಲ್ಲ. ಅದು ನಿಮ್ಮ ವ್ಯಾಪ್ತಿಯ ಕೆಲಸವೂ ಅಲ್ಲ ಎಂದು ವಾಗ್ದಾಳಿ ನಡೆಸಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಲೆಬನಾನ್‌ನಲ್ಲಿ ಶಾಂತಿ ಸ್ಥಾಪನೆಯಾಗುವವರೆಗೆ ಚರ್ಚೆ ಇಲ್ಲ, ಅಮೆರಿಕದೊಂದಿಗೆ ಮಾತುಕತೆ ಸ್ಥಗಿತಗೊಳಿಸುವುದಾಗಿ ಇರಾನ್ ಎಚ್ಚರಿಕೆ

ಟೆಹ್ರಾನ್, ಏಪ್ರಿಲ್ 10: ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಆಶಾಕಿರಣವಾಗಿದ್ದ ಅಮೆರಿಕ-ಇರಾನ್(Iran) ಕದನ ವಿರಾಮ ಒಪ್ಪಂದವು ಈಗ ಸಂಪೂರ್ಣ ಕುಸಿತದ ಅಂಚಿಗೆ ಬಂದು ನಿಂತಿದೆ. ನಾಳೆ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ನಿರ್ಣಾಯಕ ಮಾತುಕತೆಯಿಂದ ಹಿಂದೆ ಸರಿಯುವುದಾಗಿ ಇರಾನ್ ಘೋಷಿಸಿದ್ದು, ಜಾಗತಿಕ ರಾಜಕೀಯದಲ್ಲಿ ಮತ್ತೆ ಆತಂಕದ ಕಾರ್ಮೋಡ ಕವಿಯುವಂತೆ ಮಾಡಿದೆ. ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿದ್ದ 14 ದಿನಗಳ ಕದನ ವಿರಾಮವು ಮುರಿದುಬೀಳುವ ಹಂತಕ್ಕೆ ತಲುಪಿದೆ. ಲೆಬನಾನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ಭೀಕರ ದಾಳಿಗಳನ್ನು ನಿಲ್ಲಿಸದ ಹೊರತು ನಾವು ಯಾವುದೇ ಮಾತುಕತೆಗೆ ಬರುವುದಿಲ್ಲ ಎಂದು ಇರಾನ್ ಹೇಳಿದೆ.

ಇರಾನ್‌ನ ಉನ್ನತ ಮಟ್ಟದ ನಿಯೋಗವು ಈಗಾಗಲೇ ಪಾಕಿಸ್ತಾನಕ್ಕೆ ತಲುಪಿದೆ ಎಂದು ಹರಡಿದ್ದ ವರದಿಗಳನ್ನು ಇರಾನ್ ಸರ್ಕಾರಿ ಸಂಸ್ಥೆಗಳಾದ ‘ಫಾರ್ಸ್’ ಮತ್ತು ‘ತಸ್ನಿಮ್’ ಸಂಪೂರ್ಣವಾಗಿ ನಿರಾಕರಿಸಿವೆ. ಇರಾನ್ ನಿಯೋಗವು ಇಸ್ಲಾಮಾಬಾದ್‌ಗೆ ಹೋಗಿದೆ ಎಂಬ ಸುದ್ದಿ ಸಂಪೂರ್ಣವಾಗಿ ಸುಳ್ಳು. ಲೆಬನಾನ್‌ನಲ್ಲಿ ಕದನ ವಿರಾಮ ಜಾರಿಯಾಗುವವರೆಗೂ ನಾವು ಅಮೆರಿಕದೊಂದಿಗೆ ಮಾತುಕತೆ ನಡೆಸುವ ಯಾವುದೇ ಯೋಜನೆ ಹೊಂದಿಲ್ಲ,ಎಂದು ಅಧಿಕೃತ ಮೂಲಗಳು ಸ್ಪಷ್ಟಪಡಿಸಿವೆ.

ಲೆಬನಾನ್ ರಕ್ತಪಾತ: ಟೆಹ್ರಾನ್ ಕೆಂಗಣ್ಣು
ಬುಧವಾರ ಇಸ್ರೇಲ್ ನಡೆಸಿದ ದಾಳಿಗಳಲ್ಲಿ ಲೆಬನಾನ್‌ನಲ್ಲಿ ಕನಿಷ್ಠ 182 ಜನರು ಮೃತಪಟ್ಟಿದ್ದಾರೆ. ಇಸ್ರೇಲ್‌ನ ಈ ಆಕ್ರಮಣಕಾರಿ ನಡೆಯಿಂದ ಕೆರಳಿರುವ ಇರಾನ್, ಪ್ರತೀಕಾರವಾಗಿ ಜಾಗತಿಕ ತೈಲ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಮತ್ತೆ ಮುಚ್ಚಿದೆ. ಇದು ಈಗಾಗಲೇ ದುರ್ಬಲವಾಗಿದ್ದ ಶಾಂತಿ ಒಪ್ಪಂದವನ್ನು ಮರಣಶಯ್ಯೆಗೆ ತಳ್ಳಿದೆ.

ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಪ್ರಕಾರ, ಲೆಬನಾನ್‌ನಲ್ಲಿ ಯುದ್ಧವನ್ನು ನಿಲ್ಲಿಸುವುದು ಅಮೆರಿಕಕ್ಕೆ ನೀಡಿದ 10 ಅಂಶಗಳ ಪ್ರಸ್ತಾವನೆಯ ಭಾಗವಾಗಿತ್ತು. ಆದರೆ ಡೊನಾಲ್ಡ್ ಟ್ರಂಪ್ ಮತ್ತು ಬೆಂಜಮಿನ್ ನೆತನ್ಯಾಹು ಇದನ್ನು ತಳ್ಳಿಹಾಕಿದ್ದಾರೆ. ಲೆಬನಾನ್ ವಿಷಯವು ಈ ಒಪ್ಪಂದದಲ್ಲಿ ಇರಲೇ ಇಲ್ಲ ಎಂಬುದು ಅವರ ವಾದ.

ಮತ್ತಷ್ಟು ಓದಿ: ಲೆಬನಾನ್ ಮೇಲಿನ ದಾಳಿಗೆ ಪ್ರತೀಕಾರ; ಮತ್ತೆ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ ಇರಾನ್

ಹೊಸ ಹತ್ಯೆ ಮತ್ತು ಇಸ್ರೇಲ್ ನಡೆ
ಒಂದೆಡೆ ಮಾತುಕತೆಯ ಗೊಂದಲವಿದ್ದರೆ, ಇನ್ನೊಂದೆಡೆ ಇಸ್ರೇಲ್ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಹಿಜ್ಬುಲ್ಲಾ ನಾಯಕ ನಯೀಮ್ ಖಾಸಿಮ್ ಅವರ ಆಪ್ತ ಸಹಾಯಕ ಅಲಿ ಯೂಸುಫ್ ಹರ್ಷಿಯನ್ನು ಕೊಂದಿರುವುದಾಗಿ ಇಸ್ರೇಲ್ ಗುರುವಾರ ಘೋಷಿಸಿದೆ. ಹಿಜ್ಬುಲ್ಲಾ ನಾಗರಿಕ ಪ್ರದೇಶಗಳನ್ನು ಬಳಸಿಕೊಂಡು ದಾಳಿ ಮಾಡುತ್ತಿದೆ ಎಂದು ಇಸ್ರೇಲ್ ಆರೋಪಿಸಿದ್ದರೆ, ಸ್ಥಳೀಯ ಅಧಿಕಾರಿಗಳು ಇದನ್ನು ನಿರಾಕರಿಸುತ್ತಿದ್ದಾರೆ.

ಇರಾನ್‌ನ ಈ ಕಠಿಣ ನಿಲುವು ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದ್ದ ರಾಜತಾಂತ್ರಿಕ ಪ್ರಯತ್ನಗಳಿಗೆ ದೊಡ್ಡ ಪೆಟ್ಟು ನೀಡಿದೆ. ನಮ್ಮ ಷರತ್ತುಗಳು ಈಡೇರದ ಹೊರತು ನಾವು ಹೆಜ್ಜೆ ಇಡುವುದಿಲ್ಲ ಎಂದು ಇರಾನ್ ಪಟ್ಟು ಹಿಡಿದಿದ್ದು, ಅಮೆರಿಕ ಮತ್ತು ಇಸ್ರೇಲ್ ಈ ಒತ್ತಡಕ್ಕೆ ಮಣಿಯುತ್ತದೆಯೇ ಅಥವಾ ಯುದ್ಧದ ಜ್ವಾಲೆ ಮತ್ತಷ್ಟು ವ್ಯಾಪಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಒಟ್ಟಾರೆಯಾಗಿ, ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಯು ಈಗ ಲೆಬನಾನ್‌ನ ರಣಾಂಗಣದಲ್ಲಿ ಸಿಲುಕಿಕೊಂಡಿದೆ. ಹಾರ್ಮುಜ್ ಜಲಸಂಧಿಯ ಮುಚ್ಚುವಿಕೆಯು ಜಾಗತಿಕ ಮಟ್ಟದಲ್ಲಿ ತೈಲ ಬಿಕ್ಕಟ್ಟನ್ನು ಸೃಷ್ಟಿಸುವ ಭೀತಿಯನ್ನು ಹುಟ್ಟುಹಾಕಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಮಹಾ ಎಡವಟ್ಟು! 600ಕ್ಕೆ 683 ಅಂಕ ನೀಡಿದ ಬೋರ್ಡ್​!

ಬೆಂಗಳೂರು, ಏಪ್ರಿಲ್ 10: ಗುರುವಾರ ದ್ವಿತೀಯ ಪಿಯುಸಿ ಪರೀಕ್ಷೆಯ ಪಲಿತಾಂಶ (2nd PUC result) ಪ್ರಕಟವಾಗಿದೆ. ಹಲವಾರು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. 600ಕ್ಕೆ 600 ಅಂಕವನ್ನೂ ಪಡೆದವರಿದ್ದಾರೆ. ಆದರೆ ಕರ್ನಾಟಕ ಸರ್ಕಾರದ ಅಧಿಕೃತ ಫಲಿತಾಂಶ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಅಂಕಪಟ್ಟಿಯಲ್ಲಿಯೇ ಗಂಭೀರ ಲೋಪವೊಂದು ಕಂಡುಬಂದಿದೆ. 600 ಅಂಕಗಳ ಪರೀಕ್ಷೆಗೆ 683 ಅಂಕಗಳನ್ನು ನೀಡಿದ ಬೋರ್ಡ್​ನ ಎಡವಟ್ಟು ಬೆಳಕಿಗೆ ಬಂದಿದೆ.

ಆರೂ ವಿಷಯಗಳಲ್ಲೂ 100ಕ್ಕೂ ಹೆಚ್ಚು ಅಂಕ!

ಕಳೆದ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದ ಕೆಲ ವಿದ್ಯಾರ್ಥಿಗಳು ಈ ವರ್ಷ ಮರು ಪರೀಕ್ಷೆ ಬರೆದಿದ್ದರು. ಈ ವಿದ್ಯಾರ್ಥಿಗಳ ಫಲಿತಾಂಶವೂ ನಿನ್ನೆ ಪ್ರಕಟವಾಗಿದ್ದು, ಅಧಿಕೃತ ವೆಬ್‌ಸೈಟ್‌ನಲ್ಲಿಯೇ ಈ ರೀತಿಯ ಎಡವಟ್ಟು ನಡೆದಿರುವುದು ಮುಜುಗರ ತಂದಿದೆ. ಕೆಲ ವಿದ್ಯಾರ್ಥಿಗಳಿಗೆ ಆರು ವಿಷಯಗಳಲ್ಲೂ 100ಕ್ಕೂ ಹೆಚ್ಚು ಅಂಕಗಳನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ ತಾಯಿ ಸತ್ತ ನೋವಲ್ಲೂ ಪರೀಕ್ಷೆ ಬರೆದ ವಿದ್ಯಾರ್ಥಿ ಈಗ ಟಾಪರ್! ಸಾಧನೆಗೆ ಅಮ್ಮನ ಮಾತುಗಳೇ ಸ್ಪೂರ್ತಿಯಾಗಿದ್ದು ಹೇಗೆ?

ಡಿಜಿ ಲಾಕರ್​ನಲ್ಲಿ ಸರಿಯಾಗೇ ಇದೆ ರಿಸಲ್ಟ್!

Karresults.nic.in ವೆಬ್​ಸೈಟ್​ನಲ್ಲಿ ಪ್ರಕಟವಾದ ಫಲಿತಾಂಶದಲ್ಲಿ ಮಾತ್ರ ಈ ಲೋಪ ಕಾಣಿಸಿದೆ. ಆದರೆ ಡಿಜಿ ಲಾಕರ್‌ನಲ್ಲಿ ಲಭ್ಯವಿರುವ ಅದೇ ವಿದ್ಯಾರ್ಥಿಗಳ ಅಧಿಕೃತ ಅಂಕಪಟ್ಟಿಯಲ್ಲಿ ಅಂಕಗಳು ಸರಿಯಾಗಿರುವುದು ಗಮನಾರ್ಹವಾಗಿದೆ. ಇದರಿಂದ ವೆಬ್‌ಸೈಟ್ ಡೇಟಾ ಅಪ್‌ಲೋಡ್ ವೇಳೆ ತಾಂತ್ರಿಕ ದೋಷ ಸಂಭವಿಸಿರುವ ಸಾಧ್ಯತೆ ವ್ಯಕ್ತವಾಗಿದೆ. ಈ ಎಡವಟ್ಟಿನಿಂದ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಮೂಡಿದ್ದು, ಫಲಿತಾಂಶದ ನಿಖರತೆ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಡಿಕ್ಕಲ್, ಕೊಹ್ಲಿ ಬಾಲ್ಯದಲ್ಲಿ ಹೇಗಿದ್ರು ನೋಡಿ

ಸೆಲೆಬ್ರಿಟಿಗಳ ಬಾಲ್ಯದ ಫೋಟೋಗಳು ಆಗಾಗ ವೈರಲ್ ಆಗುತ್ತವೆ. ಈಗ ವಿರಾಟ್ ಕೊಹ್ಲಿ, ಪಡಿಕ್ಕಲ್ ಅವರ ಬಾಲ್ಯದ ಫೋಟೋ ಗಮನ ಸೆಳೆದಿದೆ. ಸೆಷನ್ ಒಂದನ್ನು ನಡೆಸಿ ಇದರಲ್ಲಿ ಬಾಲ್ಯದ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಕೊಹ್ಲಿ ಹಾಗೂ ಇಶಾನ್ ಶರ್ಮಾ ಒಂದೇ ಫೋಟೋದಲ್ಲಿ ಇದ್ದರು. ಪಡಿಕ್ಕಲ್ ಅವರು ಸಣ್ಣ ವಯಸ್ಸಿನಲ್ಲೇ ಕ್ರಿಕೆಟ್ ಬಗ್ಗೆ ಆಸಕ್ತಿ ಹೊಂದಿದ್ದರು. ಆ ಬಗ್ಗೆ ಇಲ್ಲಿದೆ ವಿವರ.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶ್ರೀನಂದಾ ಸಾವು ಕಾಲು ಜಾರಿ ಬಿದ್ದಿದ್ದಾ ಅಥವಾ ಕೊಲೆಯೇ?: ಡ್ರೋನ್​​ನಲ್ಲಿ ಪತ್ತೆಯಾಯಿತು ಕೇರಳಂ ಹುಡುಗಿಯ ಶವ

ಚಿಕ್ಕಮಗಳೂರು, ಏ.10: ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಜಲಪಾತದ ಬಳಿ ಮೂರು ದಿನಗಳಿಂದ ನಾಪತ್ತೆಯಾಗಿದ್ದ 14 ವರ್ಷದ ಬಾಲಕಿ ಶ್ರೀನಂದಾ ಮೃತದೇಹ 2 ಸಾವಿರ ಅಡಿ ಆಳದ ಪ್ರಪಾತದಲ್ಲಿ ಪತ್ತೆಯಾಗಿದೆ. ಇದೀಗ ಈ ಸಾವಿನ ಸುತ್ತು ಹಲವು ಅನುಮಾನಗಳನ್ನು ಮೂಡಿದೆ. ಇದು ಕೊಲೆಯೋ? ಆತ್ಮಹತ್ಯೆಯೋ ಅಥವಾ ಕಾಲು ಜಾರಿ ಬಿದ್ದಿರುವುದಾ? ಎಂಬೆಲ್ಲ ಪ್ರಶ್ನೆಗಳು ಮೂಡಿದೆ. ಇನ್ನು ಬಾಲಕಿಯನ್ನು ಮೃತದೇಹವನ್ನು ಡ್ರೋನ್​​ ಮೂಲಕ ಪತ್ತೆ ಮಾಡಲಾಗಿದೆ. ದೇಹವೂ ಗಾಯಗಳಿಂದ ಕೂಡಿದೆ. ಬಾಲಕಿ ಏಪ್ರಿಲ್ 7ರಂದು ನಾಪತ್ತೆಯಾದಾಗ ಯಾವ ಬಟ್ಟೆಯನ್ನು ಧರಿಸಿದ್ದಳೋ, ಅದೇ ಬಟ್ಟೆಯಲ್ಲಿ ಮೃತದೇಹ ಪತ್ತೆಯಾಗಿದೆ. ಇದು ಬಾಲಕಿ ನಾಪತ್ತೆಯಾದ ಕೆಲವೇ ಹೊತ್ತಿನಲ್ಲಿ ಮೃತಪಟ್ಟಿರಬಹುದು ಎಂಬ ಶಂಕೆಯನ್ನು ಬಲಪಡಿಸಿದೆ. ಬಹಳ ಕಡಿದಾದ ಮತ್ತು ಮನುಷ್ಯರು ಸುಲಭವಾಗಿ ತಲುಪಲಾಗದ 2 ಸಾವಿರ ಅಡಿ ಆಳದ ಪ್ರಪಾತದಲ್ಲಿ ಬಾಲಕಿಯ ಶವವಿದ್ದ ಕಾರಣ, ಡ್ರೋನ್ ಕ್ಯಾಮೆರಾಗಳು ಶವ ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಸದ್ಯಕ್ಕೆ ಶವವನ್ನು ಮೇಲೆತ್ತುವ ಕಾರ್ಯಾಚರಣೆ ಮುಂದುವರಿದಿದ್ದು, ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಇದು ಕೊಲೆಯೋ ಅಥವಾ ಅಪಘಾತವೋ ಎಂಬ ಸತ್ಯ ಹೊರಬರಲಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Yashwant Varma: ಮನೆಯಲ್ಲಿ ಕಂತೆ ಕಂತೆ ನಗದು ಪತ್ತೆ ಪ್ರಕರಣ, ಅಲಹಾಬಾದ್ ಹೈಕೋರ್ಟ್​ ನ್ಯಾ. ಯಶವಂತ್ ವರ್ಮಾ ರಾಜೀನಾಮೆ

ನವದೆಹಲಿ, ಏಪ್ರಿಲ್ 10: ಮನೆಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾಗಿದ್ದ ಪ್ರಕರಣದಲ್ಲಿ ಸಿಲುಕಿದ್ದ ಅಲಾಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ(Yashwant Varma) ರಾಜೀನಾಮೆ ನೀಡಿದ್ದಾರೆ. ರಾಷ್ಟ್ರಪತಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿರುವ ಅವರು, ಸುದೀರ್ಘ ಕಾನೂನು ಸಂಘರ್ಷದ ಬಳಿಕ ಅಂತಿಮವಾಗಿ ಈ ನಿರ್ಧಾರ ಕೈಗೊಂಡಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಗೆ ನಾಂದಿ ಹಾಡಿದ್ದು ಮಾರ್ಚ್ 14, 2025ರಂದು ನಡೆದ ಒಂದು ಸಣ್ಣ ಘಟನೆ. ಅಂದು ದೆಹಲಿಯಲ್ಲಿದ್ದ ನ್ಯಾಯಮೂರ್ತಿ ವರ್ಮಾ ಅವರ ಅಧಿಕೃತ ನಿವಾಸದ ಸ್ಟೋರ್ ರೂಂನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತ್ತು.

ಬೆಂಕಿ ನಂದಿಸಲು ಹೋದ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಅಲ್ಲಿ ಕಂಡ ದೃಶ್ಯ ದಂಗು ಬಡಿಸಿತ್ತು. ಅಲ್ಲಿ ಅಪಾರ ಪ್ರಮಾಣದ 500 ರೂಪಾಯಿ ಮುಖಬೆಲೆಯ ನೋಟುಗಳ ಕಂತೆಗಳಿದ್ದವು. ಬೆಂಕಿಯ ಜ್ವಾಲೆಯಲ್ಲಿ ಕೆಲವು ನೋಟುಗಳು ಈಗಾಗಲೇ ಸುಟ್ಟು ಬೂದಿಯಾಗಿದ್ದರೆ, ಕೆಲವು ಭಾಗಶಃ ಸುಟ್ಟಿದ್ದವು. ಈ ಸುಟ್ಟ ನೋಟುಗಳ ವಿಡಿಯೋ ಇಡೀ ದೇಶಾದ್ಯಂತ ವೈರಲ್ ಆಗಿ ಸಂಚಲನ ಮೂಡಿಸಿತ್ತು.

ನಗದು ಪತ್ತೆಯಾದ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಆಂತರಿಕ ತನಿಖಾ ಸಮಿತಿಯನ್ನು ರಚಿಸಿದರು. ಆ ಸಮಿತಿಯು ವರ್ಮಾ ಅವರನ್ನು ವಜಾಗೊಳಿಸಲು ಶಿಫಾರಸು ಮಾಡಿತು. ವರ್ಮಾ ಅವರು ರಾಜೀನಾಮೆ ನೀಡಲು ನಿರಾಕರಿಸಿದಾಗ, ಅವರ ವಿರುದ್ಧ ಸಂಸತ್ತಿನಲ್ಲಿ ಮಹಾಭಿಯೋಗ ಪ್ರಕ್ರಿಯೆ ಆರಂಭವಾಯಿತು. ಲೋಕಸಭೆಯ 146 ಸದಸ್ಯರು ಇದಕ್ಕೆ ಸಹಿ ಹಾಕಿದ್ದರು. ಲೋಕಸಭೆಯ ಸ್ಪೀಕರ್ ಅವರು ನ್ಯಾಯಾಧೀಶರ ತನಿಖಾ ಕಾಯ್ದೆಯಡಿ ಮೂವರು ಸದಸ್ಯರ ಸಮಿತಿಯನ್ನು ರಚಿಸಿ ತನಿಖೆ ಮುಂದುವರೆಸಿದ್ದರು.

ವರ್ಗಾವಣೆ ಮತ್ತು ಅಂತಿಮ ನಿರ್ಗಮನ
ವಿವಾದ ಉಲ್ಬಣಗೊಂಡ ಕಾರಣ ಮಾರ್ಚ್ ಅಂತ್ಯದಲ್ಲಿ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಅಲಾಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು. ಏಪ್ರಿಲ್ 5, 2025 ರಂದು ಅಲ್ಲಿ ಪ್ರಮಾಣವಚನ ಸ್ವೀಕರಿಸಿದರಾದರೂ, ವರ್ಗಾವಣೆಯ ಬಗ್ಗೆಯೂ ಕಾನೂನು ವಲಯದಲ್ಲಿ ವ್ಯಾಪಕ ಟೀಕೆಗಳು ಕೇಳಿಬಂದವು. ಸಂಸದೀಯ ಸಮಿತಿಯ ತನಿಖೆ ಬಿಗಿಯಾಗುತ್ತಿದ್ದಂತೆ ಮತ್ತು ವಜಾಗೊಳ್ಳುವ ಭೀತಿ ಎದುರಾದಾಗ, ಅವರು ಶುಕ್ರವಾರ ತಮ್ಮ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿಗಳಿಗೆ ರವಾನಿಸಿದರು.

ತಮ್ಮ ರಾಜೀನಾಮೆ ಪತ್ರದಲ್ಲಿ ವರ್ಮಾ ಅವರು ಕಾರಣಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. ನನ್ನನ್ನು ಈ ನಿರ್ಧಾರಕ್ಕೆ ಒತ್ತಾಯಿಸಿದ ಕಾರಣಗಳನ್ನು ನಾನು ಬಹಿರಂಗಪಡಿಸಲು ಬಯಸುವುದಿಲ್ಲ. ಅಲಾಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ಕೆಲಸ ಮಾಡಿದ್ದು ಒಂದು ಗೌರವ, ಆದರೆ ತೀವ್ರ ವಿಷಾದದೊಂದಿಗೆ ನಾನು ಈ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ಬರೆದಿದ್ದಾರೆ.

ಮತ್ತಷ್ಟು ಓದಿ: ಮನೆಯಲ್ಲಿ ಅಕ್ರಮ ಹಣ ಪತ್ತೆ; ನ್ಯಾಯಮೂರ್ತಿ ಯಶವಂತ್ ವರ್ಮಾ ಪ್ರಕರಣದ ತನಿಖೆಗೆ ಸಿಜೆಐ ಸಂಜೀವ್ ಖನ್ನಾ ಆದೇಶ

ಭ್ರಷ್ಟಾಚಾರದ ಆರೋಪ ಹೊತ್ತ ನ್ಯಾಯಮೂರ್ತಿಯೊಬ್ಬರು ಸಂಸತ್ತಿನ ದೋಷಾರೋಪಣೆ ಪ್ರಕ್ರಿಯೆಯ ಮಧ್ಯದಲ್ಲಿಯೇ ಅಧಿಕಾರ ತ್ಯಜಿಸಿರುವುದು ನ್ಯಾಯಾಂಗ ವ್ಯವಸ್ಥೆಯ ಪಾರದರ್ಶಕತೆಯ ಬಗ್ಗೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಪಿತೂರಿ ಎಂದು ಆರೋಪಗಳನ್ನು ತಳ್ಳಿಹಾಕಿದ್ದ ವರ್ಮಾ, ಅಂತಿಮವಾಗಿ ಕಾನೂನು ಮತ್ತು ಸಂಸದೀಯ ಒತ್ತಡಕ್ಕೆ ಮಣಿದು ನಿರ್ಗಮಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅನಂತ್ ಅಂಬಾನಿಗೆ ಕಂಡ್ರೆ ಸಲ್ಲುಗೆ ಸಖತ್ ಪ್ರೀತಿ; ಈ ಪೋಟೋನೇ ಸಾಕ್ಷಿ

ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ತಮ್ಮ ಎರಡು ಯೋಜನೆಗಳ ಬಗ್ಗೆ ಬಹಳ ಸಮಯದಿಂದ ಸುದ್ದಿಯಲ್ಲಿದ್ದಾರೆ. ಮೊದಲನೆಯದು ಮಾತೃಭೂಮಿ, ಇದು ಈ ವರ್ಷ ಬಿಡುಗಡೆಯಾಗಲಿದೆ. ಮತ್ತೊಂದು ವಂಶಿ ಪೈಡಿಪಲ್ಲಿ ಮಾಡುತ್ತಿರುವ ಸಿನಿಮಾ. ಇತ್ತೀಚೆಗೆ ಉದ್ಯಮಿ ಮುಖೇಶ್ ಅಂಬಾನಿ ಅವರ ಕಿರಿಯ ಮಗ ಅನಂತ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸಲ್ಮಾನ್ ಕಾಣಿಸಿಕೊಂಡರು. ಸಲ್ಮಾನ್ ಈಗ ಅನಂತ್ ಅಂಬಾನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ, ಮತ್ತು ಅದು ಕೂಡ ತುಂಬಾ ವಿಭಿನ್ನ ಶೈಲಿಯಲ್ಲಿ. ಅವರ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್ ವೈರಲ್ ಆಗುತ್ತಿದೆ.

ಸಲ್ಮಾನ್ ಖಾನ್ ಅನಂತ್ ಅಂಬಾನಿಗಾಗಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದು, ಅವರನ್ನು ತಮ್ಮ ಕಿರಿಯ ಸಹೋದರ ಎಂದು ಕರೆದಿದ್ದಾರೆ. ಈ ಚಿತ್ರದಲ್ಲಿ ಅವರು ಕುರ್ಚಿಯ ಮೇಲೆ ಕುಳಿತಿರುವಾಗ ಅನಂತ್ ಅಂಬಾನಿಯನ್ನು ತಬ್ಬಿದ್ದಾರೆ. ನಟ ಕೂಡ ಅವರನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾರೆ. ಅವರು ಇದಕ್ಕೆ ಸುಂದರ ಕ್ಯಾಪ್ಶನ್ ನೀಡಿದ್ದಾರೆ.

ಸಲ್ಮಾನ್ ಖಾನ್ ಅನಂತ್ ಅಂಬಾನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಹೊಗಳಿದ್ದಾರೆ. ‘ನಿಮಗೆ ನನೆಪಿನ ಶಕ್ತಿ ಕಡಿಮೆ ಇದ್ದರೆ ಅದನ್ನು ಬರೆದಿಟ್ಟುಕೊಳ್ಳಿ. ಈ ವ್ಯಕ್ತಿ ದೇಶವನ್ನು ಎತ್ತಿ ಹಿಡಿಯುತ್ತಾನೆ. ನನ್ನ ಕಿರಿಯ ಸಹೋದರ ಅನಂತ್. ಅವರದ್ದು ಶುದ್ಧ ಆತ್ಮ, ಅವರಿಗೆ ಒಳ್ಳೆಯದಾಗಲಿ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಲ್ಮಾನ್ ಖಾನ್ ಸಿನಿಮಾ ಸೇರಿದ ಮತ್ತೊಬ್ಬ ದಕ್ಷಿಣದ ಜನಪ್ರಿಯ ನಟ

ಅನಂತ್ ಭುಜದ ಮೇಲೆ ಸಲ್ಮಾನ್ ಖಾನ್ ಕುಳಿತಿರುವುದನ್ನು ನೋಡಿ ಜನರು ಈ ಫೋಟೋಗೆ ಪ್ರೀತಿಯಿಂದ ಸುರಿಮಳೆಗೈಯುತ್ತಿದ್ದಾರೆ. ಸಲ್ಮಾನ್ ಖಾನ್ ಯಾವಾಗಲೂ ಅನಂತ್ ಅಂಬಾನಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ರಣಬೀರ್ ಕಪೂರ್ ಮತ್ತು ಆಕಾಶ್ ಅಂಬಾನಿ ತುಂಬಾ ಒಳ್ಳೆಯ ಸ್ನೇಹಿತರಾಗಿದ್ದರೂ, ಬಾಲಿವುಡ್‌ನ ಖಾನ್‌ಗಳು ಸಹ ಅಂಬಾನಿ ಕುಟುಂಬದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ.

ಇತ್ತೀಚೆಗೆ ಸಲ್ಮಾನ್ ಖಾನ್ ಅವರ ಹೊಸ ಚಿತ್ರದಲ್ಲಿ ರಾಜ್‌ಪಾಲ್ ಯಾದವ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿತ್ತು. ಕೆಲವು ದಿನಗಳ ಹಿಂದೆ ನಟ ರಾಜ್‌ಪಾಲ್ ಯಾದವ್ ಅವರನ್ನು ಬೆಂಬಲಿಸಿದ್ದರು. ಎಲ್ಲರೂ ‘ಮಾತೃಭೂಮಿ’ ಬಿಡುಗಡೆ ದಿನಾಂಕಕ್ಕಾಗಿ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಜನ ನಾಯಗನ್’ ಸಿನಿಮಾ ಲೀಕ್, ದಿಟ್ಟ ಹೆಜ್ಜೆಗೆ ಮುಂದಾದ ಕೆವಿಎನ್?

ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾಕ್ಕೆ ಆಗುತ್ತಿರುವ ಅನ್ಯಾಯ, ಕಳೆದ ಕೆಲ ವರ್ಷಗಳಲ್ಲಿ ಇನ್ಯಾವ ಸಿನಿಮಾಕ್ಕೂ ಆಗಿಲ್ಲ. ಕೇವಲ ರಾಜಕೀಯ ಉದ್ದೇಶದಿಂದಾಗಿ ಸಿಬಿಎಫ್​​ಸಿ, ಕ್ಷುಲ್ಲಕ ಕಾರಣ ನೀಡಿ ‘ಜನ ನಾಯಗನ್’ ಸಿನಿಮಾ ಬಿಡುಗಡೆ ಆಗದಂತೆ ತಡೆದು ನಿಲ್ಲಿಸಿದೆ. ವಿಜಯ್ ಅವರು ರಾಜಕೀಯಕ್ಕೆ ಸ್ಪರ್ಧಿಸಿ, ಇದು ತಮ್ಮ ಕೊನೆಯ ಸಿನಿಮಾ ಎಂದು ಹೇಳಿದ್ದು, ಈ ಸಿನಿಮಾವನ್ನು ತಮ್ಮ ರಾಜಕೀಯ ಪಕ್ಷದ ಪರೋಕ್ಷ ಪ್ರಚಾರಕ್ಕೆ ಬಳಸಿರುವ ಸಾಧ್ಯತೆ ಇದೆಯೆಂಬ ಕಾರಣಕ್ಕೆ ವಿಜಯ್ ಅವರ ರಾಜಕೀಯ ಎದುರಾಳಿಗಳು ಪ್ರಭಾವ ಬಳಸಿ ಸಿನಿಮಾ ಬಿಡುಗಡೆ ಆಗದಂತೆ ತಡೆದಿದ್ದಾರೆ.

‘ಜನ ನಾಯಗನ್’ ಬಿಡುಗಡೆಯನ್ನು ಅನ್ಯಾಯವಾಗಿ ತಡೆದ ಬೆನ್ನಲ್ಲೆ ಇದೀಗ ಸಿನಿಮಾವನ್ನು ಆನ್​​ಲೈನ್​​ನಲ್ಲಿ ಲೀಕ್ ಮಾಡಿ, ಸಿನಿಮಾಕ್ಕೆ ಭಾರಿ ಪೆಟ್ಟು ನೀಡಲಾಗಿದೆ. ಸಿನಿಮಾದ ಹಲವು ದೃಶ್ಯಗಳು ಬಿಡಿ-ಬಿಡಿಯಾಗಿ ಹಾಗೂ ಕೆಲವು ಸೈಟ್​​ಗಳಲ್ಲಿ ಸಿನಿಮಾದ ಇಡೀ ಲಿಂಕ್ ಅನ್ನು ಪೋಸ್ಟ್ ಮಾಡಿ ಲೀಕ್ ಮಾಡಲಾಗಿದೆ. ಇದು ಚಿತ್ರತಂಡಕ್ಕೆ ಆತಂಕ ತಂದಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿನಿಮಾದ ನಿರ್ದೇಶಕ ಎಚ್ ವಿನೋದ್, ಸಿನಿಮಾದ ಲೀಕ್ ಆಗಿರುವ ದೃಶ್ಯಗಳನ್ನು ಶೇರ್ ಮಾಡದಂತೆ ಮನವಿ ಮಾಡಿದ್ದಾರೆ. ಸಿನಿಮಾದ ನಿರ್ಮಾಣ ಸಂಸ್ಥೆ ಕೆವಿಎನ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸಿನಿಮಾದ ಲೀಕ್ ಹಿಂದೆ ಸೆನ್ಸಾರ್ ಮಂಡಳಿ ಇದೆ ಎಂದು ವಿಜಯ್ ಅವರ ಅಭಿಮಾನಿಗಳು ಆರೋಪಿಸುತ್ತಿದ್ದಾರೆ. ಇನ್ನು ಕೆಲವರು, ಚುನಾವಣೆ ಪ್ರಚಾರ ಸಿಗಲೆಂದು ವಿಜಯ್ ಅಭಿಮಾನಿಗಳೇ ‘ಜನ ನಾಯಗನ್’ ಸಿನಿಮಾ ಲೀಕ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಒಟ್ಟಾರೆ ಸಿನಿಮಾ ಲೀಕ್ ಆಗಿದೆ, ಇದರಿಂದ ಯಾರಿಗೆ ಲಾಭವಾಗುತ್ತದೆಯೋ ತಿಳಿಯದು ಆದರೆ ನಿರ್ಮಾಪಕರಿಗಂತೂ ಭಾರಿ ನಷ್ಟವೇ ಆಗಲಿದೆ.

ಇದನ್ನೂ ಓದಿ:ದಳಪತಿ ವಿಜಯ್​​ಗೆ ಕೂಲ್​​ಡ್ರಿಂಗ್ ಕೊಟ್ಟ ಅಭಿಮಾನಿ: ವಿಡಿಯೋ ನೋಡಿ

ಸಿನಿಮಾ ಲೀಕ್ ಆಗಿರುವ ಕಾರಣ, ಹೆಚ್ಚಿನ ಡ್ಯಾಮೇಜ್ ಆಗುವ ಮುಂಚೆ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲು ನಿರ್ಮಾಣ ಸಂಸ್ಥೆ ಮುಂದಾಗಿದೆ ಎನ್ನಲಾಗುತ್ತಿದೆ. ಆದರೆ ಒಟಿಟಿ ಬಿಡುಗಡೆಗೂ ಸಹ ಚುನಾವಣಾ ನೀತಿ ಸಂಹಿತೆ ಅಡ್ಡ ಬರುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಕೆವಿಎನ್ ನಿರ್ಮಾಣ ಸಂಸ್ಥೆಯು ‘ಜನ ನಾಯಗನ್’ ಸಿನಿಮಾದ ಮೇಲೆ ಸುಮಾರು 400 ಕೋಟಿ ಹೂಡಿಕೆ ಮಾಡಿದೆ. ಜನವರಿ ತಿಂಗಳಲ್ಲೇ ಈ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಸಿಬಿಎಫ್​​ಸಿಯು ಕ್ಷುಲ್ಲಕ ಕಾರಣ ನೀಡಿ ಸಿನಿಮಾಕ್ಕೆ ಸಿಬಿಎಫ್​​ಸಿ ಪ್ರಮಾಣ ಪತ್ರ ನೀಡಲಿಲ್ಲ. ಬಳಿಕ ನ್ಯಾಯಾಲಯದಲ್ಲಿಯೂ ಸಹ ಕೆವಿಎನ್​​ಗೆ ‘ನ್ಯಾಯ’ ದೊರಕಲಿಲ್ಲ. ಇದೀಗ ಚುನಾವಣೆ ಬಂದಿರುವ ಕಾರಣ ನೀತಿ ಸಂಹಿತೆ ಜಾರಿಯಲ್ಲಿದ್ದು, ಸಿನಿಮಾದ ಬಿಡುಗಡೆ ಇನ್ನಷ್ಟು ತಡವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Apply Now: ಉತ್ತರ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಉದ್ಯೋಗಾವಕಾಶ; ಯಾವೆಲ್ಲಾ ಹುದ್ದೆಗಳಿವೆ? ಅರ್ಹತೆಗಳೇನು? ಇಲ್ಲಿದೆ ಮಾಹಿತಿ

ಉತ್ತರ ಕನ್ನಡ ಜಿಲ್ಲೆಯ ಆರೋಗ್ಯ ಸೇವೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘವು ಮಹತ್ವದ ಹೆಜ್ಜೆ ಇಟ್ಟಿದೆ. ಅಧಿಕೃತ ಅಧಿಸೂಚನೆಯಂತೆ, ಜಿಲ್ಲೆಯಲ್ಲಿ ಖಾಲಿ ಇರುವ ಒಟ್ಟು 12 ತಜ್ಞ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಸರ್ಕಾರದಲ್ಲಿ ವೃತ್ತಿಜೀವನವನ್ನು ಆರಂಭಿಸಲು ಅಥವಾ ಮುಂದುವರಿಸಲು ಬಯಸುವ ವೈದ್ಯಕೀಯ ಪದವೀಧರರಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ವೇದಿಕೆ ಲಭ್ಯವಿದೆ.

ಈ ನೇಮಕಾತಿ ಪ್ರಕ್ರಿಯೆಯಲ್ಲಿ ಮುಖ್ಯವಾಗಿ ಎರಡು ವಿಭಾಗಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ವೈದ್ಯರು ಅಥವಾ ಶಿಶುವೈದ್ಯರ (Pediatricians) 4 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಇವರಿಗೆ ಮಾಸಿಕ 1,30,000 ರೂ.ಗಳವರೆಗೆ ಆಕರ್ಷಕ ವೇತನವನ್ನು ನಿಗದಿಪಡಿಸಲಾಗಿದೆ. ಇನ್ನುಳಿದಂತೆ 8 ತುರ್ತು ವೈದ್ಯಕೀಯ ಅಧಿಕಾರಿ (Emergency Medical Officers) ಹುದ್ದೆಗಳಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 60,000 ರೂ.ಗಳ ವೇತನ ದೊರೆಯಲಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸೇರಿದಂತೆ ವಿವಿಧ ಭಾಗಗಳಲ್ಲಿ ಈ ನೇಮಕಾತಿಗಳು ನಡೆಯಲಿವೆ.

ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದಂತೆ, ವೈದ್ಯರು ಅಥವಾ ಶಿಶುವೈದ್ಯರ ಹುದ್ದೆಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು (Post Graduation) ಪೂರ್ಣಗೊಳಿಸಿರಬೇಕು. ತುರ್ತು ವೈದ್ಯಕೀಯ ಅಧಿಕಾರಿ ಹುದ್ದೆಗಳಿಗೆ ಕನಿಷ್ಠ ಎಂಬಿಬಿಎಸ್ (MBBS) ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. ವಯೋಮಿತಿಯ ಸಡಿಲಿಕೆಯು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ ಅನ್ವಯವಾಗಲಿದ್ದು, ಅರ್ಹತೆಯ ಪೂರ್ಣ ವಿವರಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸಬಹುದಾಗಿದೆ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆಫ್‌ಲೈನ್ (Offline) ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅದರೊಂದಿಗೆ ಅಗತ್ಯವಿರುವ ಶೈಕ್ಷಣಿಕ ದಾಖಲೆಗಳು, ಐಡಿ ಪ್ರೂಫ್, ಇತ್ತೀಚಿನ ಭಾವಚಿತ್ರ ಮತ್ತು ಅನುಭವದ ಪ್ರಮಾಣಪತ್ರಗಳನ್ನು ಸ್ವಯಂ ದೃಢೀಕರಿಸಿ ಲಗತ್ತಿಸಬೇಕು. ಭರ್ತಿ ಮಾಡಿದ ಅರ್ಜಿಯನ್ನು ‘ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಕಚೇರಿ, ಕಾರವಾರ, ಉತ್ತರ ಕನ್ನಡ’ ಎಂಬ ವಿಳಾಸಕ್ಕೆ ರಿಜಿಸ್ಟರ್ ಪೋಸ್ಟ್ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿಕೊಡಲು ಸೂಚಿಸಲಾಗಿದೆ. ಅರ್ಜಿ ಸಲ್ಲಿಸುವ ದಿನಾಂಕಗಳ ಕುರಿತಾದ ನವೀಕೃತ ಮಾಹಿತಿಗಾಗಿ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ ಗಮನಿಸಿ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version