ಗಂಡ-ಹೆಂಡತಿ ಪರಸ್ಪರ ಈ ವಿಷಯಗಳನ್ನು ಮುಚ್ಚಿಡಲೇಬಾರದು; ಏಕೆ ಗೊತ್ತಾ? – Kannada News

ಗಂಡ ಹೆಂಡತಿಯ ಸಂಬಂಧ (Relationship) ಪ್ರೀತಿ, ನಂಬಿಕೆ, ಗೌರವ, ಪ್ರಾಮಾಣಿಕತಯ ಮೇಲೆ ನಿಂತಿರುವ ಪವಿತ್ರ ಬಂಧ. ಈ ಸಂಬಂಧ ಶಾಶ್ವತವಾಗಿ ಗಟ್ಟಿಯಾಗಿರಬೇಕೆಂದರೆ ಪತಿ ಪತ್ನಿಯರ ನಡುವೆ ಯಾವುದೇ ರೀತಿಯ ಮುಚ್ಚುಮರೆ ಎನ್ನುವಂತಹದ್ದು ಇರಬಾರದು. ಯಾವುದೇ ವಿಚಾರಗಳನ್ನು ಒಬ್ಬರಿಗೊಬ್ಬರು ರಹಸ್ಯವಾಗಿಡಬಾರದು. ಮನಸ್ಸಿನಲ್ಲಿರುವ ಎಲ್ಲವನ್ನೂ  ಮುಕ್ತವಾಗಿ ಹಂಚಿಕೊಳ್ಳಬೇಕು. ಬಹಳಷ್ಟು ವಿಷಯಗಳನ್ನು ಮನಸ್ಸಿನಲ್ಲೇ ಇಟ್ಟುಕೊಂಡರೆ ಅಥವಾ ಸುಳ್ಳು ಹೇಳಿದರೆ ಕಾಲ ಕಳೆದಂತೆ ಸಂಬಂಧದಲ್ಲಿ ಬಿರುಕು ಮೂಡಲು ಪ್ರಾರಂಭವಾಗುತ್ತದೆ. ಹಾಗಾಗಿ ಯಾವುದೇ ಸಮಸ್ಯೆಗಳಿದ್ದರೂ, ಏನನ್ನೂ ಮರೆಮಾಡದೆ ಎಲ್ಲವನ್ನೂ ಸಂಗಾತಿಯೊಂದಿಗೆ ಹಂಚಿಕೊಳ್ಳಬೇಕು. ಅದರಲ್ಲೂ ಈ ಕೆಲವು ವಿಚಾರಗಳನ್ನು ಗಂಡ ಹೆಂಡತಿ ಪರಸ್ಪರ ಮರೆಮಾಡಲೇಬಾರದು.

ದಂಪತಿಗಳು ಯಾವ ಸಂಗತಿಗಳನ್ನು ಪರಸ್ಪರ ಮುಚ್ಚಿಡಬಾರದು?

ಆರ್ಥಿಕ ಪರಿಸ್ಥಿತಿ ಅಥವಾ ಸಾಲಗಳು: ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ನಿಮ್ಮ ಸಂಗಾತಿಯಿಂದ ಮರೆಮಾಡುವುದು ದೊಡ್ಡ ತಪ್ಪಾಗಿರಬಹುದು. ನೀವು ಯಾವುದೇ ಉದ್ದೇಶಕ್ಕಾಗಿ ಬೇರೆಯವರಿಂದ ಹಣವನ್ನು ಸಾಲ ಪಡೆದರೆ, ನೀವು ಅದನ್ನು ನಿಮ್ಮ ಸಂಗಾತಿಗೆ ಬಹಿರಂಗವಾಗಿ ಹಂಚಿಕೊಳ್ಳಿ. ಅನೇಕ ಜನರು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಸುಳ್ಳು ಹೇಳುತ್ತಾರೆ. ಆದರೆ ಸತ್ಯ ಹೊರಬಂದಾಗ, ಸಂಗಾತಿಯ ಮೇಲಿನ ನಂಬಿಕೆ ಕಳೆದು ಹೋಗುವ ಸಾಧ್ಯತೆ ಇರುತ್ತದೆ. ಆರ್ಥಿಕ ಪರಿಸ್ಥಿತಿಯ ಬಗ್ಗೆ ಮುಕ್ತವಾಗಿ ಹಂಚಿಕೊಳ್ಳುವುದರಿಂದ ನಿಮ್ಮ ಸಂಗಾತಿಯೂ ನಿಮಗೆ ಹೆಗಲಾಗಿ ನಿಲ್ಲುತ್ತಾರೆ. ಇದು ನಿಮ್ಮ ಸಂಬಂಧವನ್ನು ಮತ್ತಷ್ಟು ಗಾಢವಾಗಿಸುತ್ತದೆ.

ಆರೋಗ್ಯ ಸಂಬಂಧಿತ ಸಮಸ್ಯೆಗಳು: ನಿಮಗೆ ಯಾವುದೇ ಆರೋಗ್ಯ ಸಮಸ್ಯೆಗಳು ಅಥವಾ ಭಯಗಳಿದ್ದರೆ, ನೀವು ಖಂಡಿತವಾಗಿಯೂ ನಿಮ್ಮ ಸಂಗಾತಿಗೆ ಅವುಗಳ ಬಗ್ಗೆ ಹೇಳಬೇಕು. ಉದಾಹರಣೆಗೆ, ನಿಮಗೆ ದೀರ್ಘಕಾಲದ ಕಾಯಿಲೆ, ಅಲರ್ಜಿಗಳು ಅಥವಾ ಇನ್ನಾವುದೇ ಆರೋಗ್ಯ ಸಮಸ್ಯೆಗಳಿದ್ದರೆ ನೀವು ಅವುಗಳನ್ನು ನಿಮ್ಮ ಸಂಗಾತಿಯಿಂದ ಮರೆಮಾಡಬಾರದು. ನಿಮ್ಮ ಸಂಗಾತಿಗೆ ನಿಮ್ಮ ಬಗ್ಗೆ ತಿಳಿದಿದ್ದರೆ, ಅವರು ನಿಮ್ಮನ್ನು ಸರಿಯಾಗಿ ನೋಡಿಕೊಳ್ಳಬಹುದು, ಇದು ನಿಮ್ಮ ಆರೋಗ್ಯ ಸುಧಾರಿಸಲು ಮತ್ತಷ್ಟು ಸಹಾಯ ಮಾಡುತ್ತದೆ.

ಮಾನಸಿಕ ಸ್ಥಿತಿಗತಿ: ಹೆಚ್ಚಿನವರು ತಮಗಾಗುವ ಒತ್ತಡ, ಮಾನಸಿಕ ಹಿಂಸೆಯ ಬಗ್ಗೆ ತಮ್ಮ ಸಂಗಾತಿಯ ಬಳಿ ಹಂಚಿಕೊಳ್ಳುವುದಿಲ್ಲ. ಇದು ಒತ್ತಡ ಮತ್ತಷ್ಟು ಹೆಚ್ಚಲು ಕಾರಣವಾಗುತ್ತದೆ. ಅದೇ ಗಂಡ ಹೆಂಡತಿ ಚಿಂತೆ ಮತ್ತು ಒತ್ತಡಗಳನ್ನು ಪರಸ್ಪರ ಹಂಚಿಕೊಂಡಾಗ ಮನಸ್ಸು ನಿರಾಳವಾಗುತ್ತದೆ. ಅಲ್ಲದೆ ಬೆಂಬಲಕ್ಕೆ ಸಹಾಯಾಸ್ತವು ಸಿಕ್ಕಂತಾಗುತ್ತದೆ. ಅಲ್ಲದೆ ಇಂತಹ ಕಠಿಣ ಪರಿಸ್ಥಿತಿಗಳು ಗಂಡ ಹೆಂಡತಿಯ ನಡುವಿನ ಸಂಬಂಧವನ್ನು ಮತ್ತಷ್ಟು ಬಲಗೊಳಿಸುತ್ತದೆ.

ಇದನ್ನೂ ಓದಿ: ಗಂಡ ಹೆಂಡತಿ ನಡುವಿನ ಜಗಳಗಳಿಗೆ ನಿಜವಾದ ಕಾರಣವೇ ಅಂಶಗಳು

ನಿರೀಕ್ಷೆಗಳು, ಅಭ್ಯಾಸಗಳು: ಸಂಗಾತಿಯಿಂದ ನೀವು ಏನು ನಿರೀಕ್ಷಿಸುತ್ತೀರಿ ಮತ್ತು ಮುಖ್ಯವಾಗಿ ನಿಮ್ಮ ನಿರೀಕ್ಷೆಗಳೇನು ಅದನ್ನು ಸಂಗಾತಿಯೊಂದಿಗೆ ಮುಕ್ತವಾಗಿ ಹಂಚಿಕೊಳ್ಳಿ. ಇದಲ್ಲದೆ ಡ್ರಿಂಕ್ಸ್‌, ಸ್ಮೋಕ್‌ ಯಾವುದೇ ನಿಮ್ಮ ಅಭ್ಯಾಸಗಳಿದ್ದರೂ ಅದರ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳಿ. ಇದು ಮೂರನೇ ವ್ಯಕ್ತಿಯ ಮೂಲಕ ನಿಮ್ಮ ಸಂಗಾತಿಗೆ ತಿಳಿದರೆ ಮನಸ್ತಾಪ ಎರ್ಪಡಲು ಕಾರಣವಾಗುತ್ತದೆ.

ಅಭದ್ರತೆ: ನಿಮ್ಮ ಸಂಗಾತಿಯ ನಡವಳಿಕೆಯು ನಿಮಗೆ ಅಸುರಕ್ಷಿತ ಭಾವನೆಯನ್ನುಂಟುಮಾಡಿದರೆ, ಅದರ ಬಗ್ಗೆ ಮೌನವಾಗಿರುವುದು ತಪ್ಪು. ಅನೇಕ ಜನರು ಈ ವಿಷಯದ ಬಗ್ಗೆ ಮುಕ್ತವಾಗಿ ಮಾತನಾಡುವುದಿಲ್ಲ. ಇದು ಸಂಬಂಧವನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ, ಅಭದ್ರತೆಯ ಭಾವನೆ ಮೂಡಿದರೆ ಈ ಬಗ್ಗೆ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಿ, ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಿ.

ನಿಮ್ಮ ಕನಸಿನ ಬಗ್ಗೆ ಹೇಳಿಕೊಳ್ಳಿ: ನಿಮ್ಮ ಸಂಗಾತಿಗೆ ನೀವು ಜೀವನದಲ್ಲಿ ಏನನ್ನು ಕನಸು ಕಾಣುತ್ತಿದ್ದೀರಿ ಅಥವಾ ಏನನ್ನು ಸಾಧಿಸಲು ಬಯಸುತ್ತೀರಿ ಎಂಬುದನ್ನು ಹೇಳುವುದು ಮುಖ್ಯ. ನಿಮ್ಮ ಕನಸುಗಳನ್ನು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಂಡಾಗ ಅವರು ಆ ಕನಸುಗಳನ್ನು ನನಸಾಗಿಸಲು ನಿಮಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ.

ಇದಲ್ಲದೆ ಹಿಂದಿನ ಸಂಬಂಧ, ಕುಟುಂಬ ಪರಿಸ್ಥಿತಿ, ಆರ್ಥಿಕ ಸ್ಥಿತಿ ಇವೆಲ್ಲವನ್ನೂ ಮೊದಲೇ ಸಂಗಾತಿ ಹೇಳಬೇಕು. ಇಲ್ಲದಿದ್ದರೆ ಈ ಕಾರಣದಿಂದ ಭವಿಷ್ಯದಲ್ಲಿ ತೊಂದರೆಗಳು ಎದುರಾಗುವ ಸಾಧ್ಯತೆ ಇರುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹರಿಹರ ಪಂಚಮಸಾಲಿ ಮಠಕ್ಕೆ ಭಕ್ತರು ನೀಡಿದ್ದ 1 ಕೆ.ಜಿ ಚಿನ್ನ ನಾಪತ್ತೆ: ಟ್ರಸ್ಟಿಗಳ ಮೇಲೆ ಸೋಮಣ್ಣ ಬೇವಿನಮರ ಗಂಭೀರ ಆರೋಪ – Kannada News

ದಾವಣಗೆರೆ, ಜೂ.6: ಜಿಲ್ಲೆಯ ಹರಿಹರ ತಾಲ್ಲೂಕಿನ ಹನಗವಾಡಿ ಬಳಿಯ ಖಾಸಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಗಡಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ಸೋಮಣ್ಣ ಬೇವಿನಮರದ ಅವರು ಹರಿಹರ ಪಂಚಮಸಾಲಿ ಮಠದ ಆಡಳಿತ ಮಂಡಳಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮಠಕ್ಕೆ ಸೇರಿದ ಸುಮಾರು ಒಂದೂವರೆ ಕೆಜಿ ಚಿನ್ನಾಭರಣಗಳ ಲೆಕ್ಕವೇ ನಾಪತ್ತೆಯಾಗಿದ್ದು, ಟ್ರಸ್ಟಿಗಳು ಈ ಸತ್ಯವನ್ನು ಮುಚ್ಚಿಟ್ಟಿದ್ದಾರೆ ಎಂದು ಅವರು ದೂರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೋಮಣ್ಣ ಬೇವಿನಮರದ, “2008ರ ಫೆಬ್ರವರಿ 18ರಂದು ಹರಿಹರದ ಪಂಚಮಸಾಲಿ ಮಠ ಸ್ಥಾಪನೆಯಾಗಿತ್ತು. ಆ ದಿನ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಮಠದ ಶ್ರೀಗಳಿಗೆ ಚಿನ್ನದ ಉಂಗುರ, ಚಿನ್ನದ ಕಡಗ ಹಾಗೂ ಭವ್ಯವಾದ ಚಿನ್ನದ ಕಿರೀಟ ಸೇರಿದಂತೆ ಸುಮಾರು ಒಂದೂವರೆ ಕೆಜಿ ಚಿನ್ನಾಭರಣಗಳನ್ನು ದಾನವಾಗಿ ನೀಡಿದ್ದರು. ಇತ್ತೀಚೆಗೆ ನಾವು ರಾಜ್ಯ ಹಾಗೂ ಹೊರರಾಜ್ಯಗಳ ವಿವಿಧ ಭಾಗಗಳಿಗೆ ಪ್ರವಾಸ ಕೈಗೊಂಡಾಗ ಅಂದು ದಾನ ನೀಡಿದ್ದ ಭಕ್ತರು ಈ ವಿಷಯವನ್ನು ನಮ್ಮ ಗಮನಕ್ಕೆ ತಂದಿದ್ದಾರೆ. ಸ್ವಾಮೀಜಿಯವರಿಗೆ ನೀಡಲಾಗಿದ್ದ ಈ ಎಲ್ಲ ಆಭರಣಗಳನ್ನು ಸದ್ಯ ಮಠದ ಟ್ರಸ್ಟ್‌ನವರೇ ತಮ್ಮ ವಶದಲ್ಲಿ ಇಟ್ಟುಕೊಂಡಿದ್ದಾರೆ” ಎಂದು ಆರೋಪಿಸಿದ್ದಾರೆ.

ಮುಖ್ಯಾಂಶಗಳು:

  • ಮಠಕ್ಕೆ ಸೇರಿದ ಸುಮಾರು ಒಂದೂವರೆ ಕೆಜಿ ಚಿನ್ನಾಭರಣಗಳ ಲೆಕ್ಕವೇ ನಾಪತ್ತೆ
  • ಭಕ್ತರು ಮಠದ ಶ್ರೀಗಳಿಗೆ ಚಿನ್ನದ ಉಂಗುರ, ಚಿನ್ನದ ಕಡಗ ಹಾಗೂ ಭವ್ಯವಾದ ಚಿನ್ನದ ಕಿರೀಟ
  • ಟ್ರಸ್ಟ್‌ನವರು ಸದ್ಯ ಕೇವಲ 27 ಕೋಟಿ ರೂಪಾಯಿಗಳ ನಗದು ಲೆಕ್ಕವನ್ನು ಮಾತ್ರ ಸಮಾಜದ ಮುಂದೆ ಇಟ್ಟಿದ್ದಾರೆ.

ಇದನ್ನೂ ಓದಿ:ವಚನಾನಂದ ಶ್ರೀಗಳಿಗೆ ಹೆಚ್ಚಿದ ಬಂಧನದ ಭೀತಿ: ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಕೋರ್ಟ್‌ಗೆ ಹರಿಹರ ಪೊಲೀಸರ ಅರ್ಜಿ!

ಮಠದ ಆಸ್ತಿ ವಿವರಗಳ ಕುರಿತು ಅಸಮಾಧಾನ ಹೊರಹಾಕಿದ ಅವರು, “ಈಗಾಗಲೇ ಪಂಚಮಸಾಲಿ ಮಠದ ಆಂತರಿಕ ವಿಚಾರವಾಗಿ ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿ ಪ್ರಮುಖ ಸಭೆಗಳು ನಡೆದಿವೆ. ಟ್ರಸ್ಟ್‌ನವರು ಸದ್ಯ ಕೇವಲ 27 ಕೋಟಿ ರೂಪಾಯಿಗಳ ನಗದು ಲೆಕ್ಕವನ್ನು ಮಾತ್ರ ಸಮಾಜದ ಮುಂದೆ ಇಟ್ಟಿದ್ದಾರೆ. ಆದರೆ, ಈ ಬಂಗಾರದ ವಿಚಾರವನ್ನು ಸಂಪೂರ್ಣವಾಗಿ ಮುಚ್ಚಿಟ್ಟಿದ್ದಾರೆ. ಮಠದ ಹೆಸರಿನಲ್ಲಿರುವ ಒಟ್ಟು ಬೆಳ್ಳಿ, ಬಂಗಾರ ಎಷ್ಟು? ಮಠಕ್ಕೆ ಸೇರಿದ ಜಮೀನು ಎಲ್ಲೆಲ್ಲಿದೆ? ಈ ಎಲ್ಲ ಅಧಿಕೃತ ದಾಖಲೆಗಳನ್ನು ಟ್ರಸ್ಟ್‌ನವರು ತಕ್ಷಣವೇ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು” ಎಂದು ಆಗ್ರಹಿಸಿದ್ದಾರೆ. ಈ ಸ್ಪೋಟಕ ಹೇಳಿಕೆಯು ಪಂಚಮಸಾಲಿ ಸಮುದಾಯ ಹಾಗೂ ಧಾರ್ಮಿಕ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಪರೇಷನ್ ಬ್ಲೂ ಸ್ಟಾರ್ ವರ್ಷಾಚರಣೆ; ಗೋಲ್ಡನ್ ಟೆಂಪಲ್​ನಲ್ಲಿ ಖಲಿಸ್ತಾನ್ ಪರ ಘೋಷಣೆ, ಪೋಸ್ಟರ್ ಪ್ರದರ್ಶನ – Kannada News

ಅಮೃತಸರ, ಜೂನ್ 6: ಅಮೃತಸರದ ಸುವರ್ಣ ಮಂದಿರದಲ್ಲಿ (Golden Temple) ಇಂದು ಆಚರಿಸಲಾದ ‘ಆಪರೇಷನ್ ಬ್ಲೂ ಸ್ಟಾರ್’ನ 42ನೇ ವರ್ಷಾಚರಣೆಯ ಸಂದರ್ಭದಲ್ಲಿ ಖಲಿಸ್ತಾನ್ ಪರ ಘೋಷಣೆಗಳು ಮತ್ತು ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಪೋಸ್ಟರ್‌ಗಳನ್ನು ಪ್ರದರ್ಶಿಸಲಾಗಿದೆ. ಗೋಲ್ಡನ್ ಟೆಂಪಲ್ ಸಂಕೀರ್ಣದಲ್ಲಿ ನೆರೆದಿದ್ದ ನೂರಾರು ಸಿಖ್ ಧರ್ಮದವರು ‘ಖಲಿಸ್ತಾನ್ ಜಿಂದಾಬಾದ್’ ಎಂಬ ದೇಶವಿರೋಧಿ ಘೋಷಣೆಗಳನ್ನು ಕೂಗಿದರು. 1984ರ ಮಿಲಿಟರಿ ಕಾರ್ಯಾಚರಣೆಯಲ್ಲಿ ಹತನಾದ ಉಗ್ರಗಾಮಿ ಸಂಘಟನೆ ದಮ್ದಮಿ ತಕ್ಸಾಲ್‌ನ ಮುಖ್ಯಸ್ಥ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ, ಭಾಯ್ ಅಂಬ್ರಿಕ್ ಸಿಂಗ್ ಮತ್ತು ಮೇಜರ್ ಜನರಲ್ ಶಬೇಗ್ ಸಿಂಗ್ ಅವರ ಪೋಸ್ಟರ್‌ಗಳನ್ನು ಹಿಡಿದು ಪ್ರದರ್ಶಿಸಲಾಯಿತು ಹಾಗೂ ಸಾರ್ವಜನಿಕರಿಗೆ ವಿತರಿಸಲಾಯಿತು.

ಈ ಘೋಷಣೆ ಕೂಗುವ ವೇಳೆ ಕೆಲವು ಯುವಕರು ಸಾಂಪ್ರದಾಯಿಕ ಖಡ್ಗಗಳನ್ನು ಗಾಳಿಯಲ್ಲಿ ಬೀಸಿ ಪ್ರದರ್ಶನ ನಡೆಸಿದರು. ಅಕಾಲ ತಖ್ತ್‌ನ ಜತೇದಾರ್ ಆಗಿರುವ ಗಿಯಾನಿ ಕುಲದೀಪ್ ಸಿಂಗ್ ಗರಗಜ್ ಅವರು ಈ ಸಂದರ್ಭದಲ್ಲಿ ಸಿಖ್ ಸಮುದಾಯವನ್ನುದ್ದೇಶಿಸಿ ಸಂದೇಶ ನೀಡಿದರು. ವಿದೇಶಗಳಲ್ಲಿ ನೆಲೆಸಿರುವ ಸಿಖ್ ಸಮುದಾಯದವರು ಪಂಜಾಬ್‌ನೊಂದಿಗೆ ತಮ್ಮ ಸಂಪರ್ಕವನ್ನು ಕಾಯ್ದುಕೊಳ್ಳಬೇಕು ಮತ್ತು ಬೇರೆಡೆ ನೆಲೆಸಿದ್ದರೂ ಪಂಜಾಬ್‌ನಲ್ಲಿರುವ ತಮ್ಮ ಜಮೀನುಗಳನ್ನು ಮಾರಾಟ ಮಾಡಬಾರದು ಎಂದು ಮನವಿ ಮಾಡಿದರು.

ಇದನ್ನೂ ಓದಿ: ಆಪರೇಷನ್ ಬ್ಲೂ ಸ್ಟಾರ್ ಒಂದು ಮಿಸ್ಟೇಕ್, ಇಂದಿರಾ ಗಾಂಧಿ ತಮ್ಮ ಜೀವವನ್ನೇ ತೆತ್ತರು; ಪಿ. ಚಿದಂಬರಂ

1984ರಲ್ಲಿ ಭಾರತೀಯ ಸೇನೆಯು ಗೋಲ್ಡನ್ ಟೆಂಪಲ್ ಒಳಗೆ ಟ್ಯಾಂಕ್ ಮತ್ತು ಆಯುಧಗಳನ್ನು ಬಳಸಿ ದಾಳಿ ನಡೆಸಿದ್ದು ಸಿಖ್ ಇತಿಹಾಸದ ಕಪ್ಪು ಅಧ್ಯಾಯ ಎಂದು ಆರೋಪಿಸಿದರು

ಆಪರೇಷನ್ ಬ್ಲೂ ಸ್ಟಾರ್ ಎಂದರೇನು?:

ಜೂನ್ 1984ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಆದೇಶದ ಮೇರೆಗೆ ಭಾರತೀಯ ಸೇನೆಯು ಅಮೃತಸರದ ಸುವರ್ಣ ಮಂದಿರದೊಳಗೆ ಅಡಗಿದ್ದ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಮತ್ತು ಆತನ ಸಶಸ್ತ್ರ ಉಗ್ರಗಾಮಿಗಳನ್ನು ಹೊರಹಾಕಲು ‘ಆಪರೇಷನ್ ಬ್ಲೂ ಸ್ಟಾರ್’ ಕಾರ್ಯಾಚರಣೆ ನಡೆಸಿತ್ತು. ಭಿಂದ್ರನ್‌ವಾಲೆ ಸುವರ್ಣ ಮಂದಿರದ ಆವರಣದಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟಿದ್ದನೆಂದು ವರದಿಯಾಗಿತ್ತು. ಈ ಕಾರ್ಯಾಚರಣೆಯ ಸಮಯದಲ್ಲಿ ಆತ ಮತ್ತು ಆತನ ಸಶಸ್ತ್ರ ಬೆಂಬಲಿಗರು ಹತರಾಗಿದ್ದ. ಆದರೆ, ಈ ದಾಳಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು.

ಇದನ್ನೂ ಓದಿ: Watch ಆಪರೇಷನ್ ಬ್ಲೂಸ್ಟಾರ್​​ನ 38ನೇ ವಾರ್ಷಿಕೋತ್ಸವ ವೇಳೆ ಸ್ವರ್ಣ ಮಂದಿರದಲ್ಲಿ ಖಲಿಸ್ತಾನ್ ಪರ ಘೋಷಣೆ

ಈ ಜೂನ್ 6ರಂದು ಭಿಂದ್ರನ್‌ವಾಲೆ ಹತನಾಗಿದ್ದ ದಿನವನ್ನು ಪ್ರತಿ ವರ್ಷ ಸಿಖ್ ಹಾರ್ಡ್‌ಲೈನರ್‌ಗಳು ಆಚರಿಸುತ್ತಾ ಬಂದಿದ್ದಾರೆ. ಇದಾಗಿ ಕೆಲವೇ ತಿಂಗಳುಗಳ ನಂತರ, ಅಂದರೆ ಅಕ್ಟೋಬರ್ 31, 1984ರಂದು ಪ್ರಧಾನಿ ಇಂದಿರಾ ಗಾಂಧಿ ಅವರನ್ನು ನವದೆಹಲಿಯ ಅವರ ಅಧಿಕೃತ ನಿವಾಸದಲ್ಲಿ ಅವರದೇ ಇಬ್ಬರು ಸಿಖ್ ಅಂಗರಕ್ಷಕರಾದ ಬೀಯಂತ್ ಸಿಂಗ್ ಮತ್ತು ಸತ್ವಂತ್ ಸಿಂಗ್ ಗುಂಡಿಕ್ಕಿ ಹತ್ಯೆ ಮಾಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಮ್ಯಾಂಗೊ ಪಚ್ಚ’ ಕಟೌಟ್​​ನಲ್ಲಿ ನಟ ದರ್ಶನ್ ಚಿತ್ರ: ಸುದೀಪ್ ಹೇಳಿದ್ದೇನು?

ಸುದೀಪ್ (Sudeep) ಅವರ ಅಕ್ಕನ ಮಗ ಸಂಚಿತ್ ಸಂಜಯ್ ನಟನೆಯ ‘ಮ್ಯಾಂಗೊ ಪಚ್ಚ’ ಸಿನಿಮಾ ಬಿಡುಗಡೆ ಆಗಿದೆ. ಸಿನಿಮಾದ ಕಟೌಟ್​​ನಲ್ಲಿ ಕನ್ನಡ ಚಿತ್ರರಂಗದ ಎಲ್ಲ ಪ್ರಮುಖ ನಟರ ಚಿತ್ರಗಳನ್ನು ಹಾಕಲಾಗಿದ್ದು, ಕಟೌಟ್​​ನಲ್ಲಿ ದರ್ಶನ್ ಜೊತೆಗೆ ಸುದೀಪ್ ಅವರ ಚಿತ್ರವೂ ಇದೆ. ಈ ಕುರಿತು ನಟ ಸುದೀಪ್ ಅವರಿಗೆ ಪ್ರಶ್ನೆ ಎದುರಾಯ್ತು. ಉತ್ತರ ನೀಡಿದ ಸುದೀಪ್, ಕಟೌಟ್​​ನಲ್ಲಿ ದರ್ಶನ್ ಚಿತ್ರ ಹಾಕಬೇಕೆಂಬುದು ತಮ್ಮದೇ ಐಡಿಯಾ ಎಂದರು. ಮತ್ತು ಏಕೆ ಕಟೌಟ್​​ನಲ್ಲಿ ದರ್ಶನ್ ಮಾತ್ರವಲ್ಲದೆ ಎಲ್ಲರ ಚಿತ್ರಗಳನ್ನೂ ಹಾಕಿಸಿದ್ದು ಎಂಬುದಕ್ಕೂ ಸಹ ಸೂಕ್ತ ವಿವರಣೆಯನ್ನು ನೀಡಿದರು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Source link

ನೂತನ ಸಿಎಂ ಡಿಕೆ ಶಿವಕುಮಾರ್​​ಗೆ ಶುಭ ಹಾರೈಸಿದ ಲಿಂಗಾಯತ ಸ್ವಾಮೀಜಿಗಳು – Kannada News

ಬೆಂಗಳೂರು, ಜೂನ್​​ 06: ಸಿಎಂ ಡಿಕೆ ಶಿವಕುಮಾರ್​​ರ ಬೆಂಗಳೂರಿನಲ್ಲಿರುವ ನಿವಾಸಕ್ಕೆ ಲಿಂಗಾಯತ ಸ್ವಾಮೀಜಿಗಳು ಇಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸ್ವಾಮೀಜಿಗಳು ಡಿಕೆ ಶಿವಕುಮಾರ್​​​ಗೆ ಆಶೀರ್ವಾದ ಮಾಡಿ ಶುಭ ಹಾರೈಸಿದರು. ಧಾರವಾಡ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಿಂದಗಿಯ ಡಾಕ್ಟರ್ ಪ್ರಭು ಸಾರಂಗದೇವ ಸ್ವಾಮೀಜಿ, ಸೊಲ್ಲಾಪುರದ ಶ್ರೀಕಂಠ ಶಿವಾಚಾರ್ಯರು, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯರು, ಶಿವಗಂಗಿಯ ಡಾಕ್ಟರ್ ಮಲೆಯ ಶಾಂತಮುನಿ ಶಿವಾಚಾರ್ಯರು, ಬೆಂಗಳೂರಿನ ಡಾಕ್ಟರ್ ಮಹಾಂತಲಿಂಗ ಶಿವಾಚಾರ್ಯರು ಮತ್ತು ಶಹಾಪುರದ ಶ್ರೀ ಸುಗೂರೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಉಪಸ್ಥಿತರಿದ್ದರು. ಸ್ವಾಮೀಜಿಗಳು ಡಿಕೆ ಶಿವಕುಮಾರ್​ಗೆ ಸನ್ಮಾನ ಮಾಡಿದರು. ಈ ವೇಳೆ ಸಚಿವ ಈಶ್ವರ್ ಖಂಡ್ರೆ ಮತ್ತು ಶಾಸಕ ವಿಜಯಾನಂದ ಕಾಶಪ್ಪನವರ್​​ ಭಾಗಿಯಾಗಿದ್ದರು.

ವರದಿ: ಈರಣ್ಣ ಬಸವ 

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಒಟಿಟಿಗೆ ಈ ವಾರ ಭರ್ಜರಿ ಸಿನಿಮಾಗಳು, ನೋಡಿ ನೋಡಿ ಮರುಳಾಗಿ

Source link

ಜಸ್ಟ್‌ ಐಸ್‌ಕ್ಯೂಬ್‌ನಿಂದ ಟಾಯ್ಲೆಟ್‌ ಕಲೆ, ವಾಸನೆಯನ್ನು ಹೋಗಲಾಡಿಸಬಹುದು; ಅದು ಹೇಗೆ ಗೊತ್ತಾ? – Kannada News

ಮನೆಯ ವಾತಾವರಣ ಆರೋಗ್ಯಕರವಾಗಿರಬೇಕೆಂದರೆ ಬಾತ್‌ರೂಮ್‌ ಮತ್ತು ಟಾಯ್ಲೆಟ್‌ ತುಂಬಾನೇ ಕ್ಲೀನ್‌ ಆಗಿರಬೇಕು. ಅದರಲ್ಲೂ ಶೌಚಾಲಯದ (toilet) ನೈರ್ಮಲ್ಯದ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸಬೇಕು ಇಲ್ಲದಿದ್ದರೆ ರೋಗಾಣುಗಳು ಹರಡುವ ಸಾಧ್ಯತೆ ಇರುತ್ತದೆ. ಇದಕ್ಕಾಗಿಯೇ ಪ್ರತಿಯೊಬ್ಬರೂ ಪ್ರತಿನಿತ್ಯ ಶೌಚಾಲಯವನ್ನು ಕ್ಲೀನ್‌ ಮಾಡುತ್ತಾರೆ. ಟಾಯ್ಲೆಟ್‌ ಅನ್ನು ನಿತ್ಯ ಕ್ಲೀನ್‌ ಮಾಡಿದರೂ, ದುಬಾರಿ ಕ್ಲೀನರ್‌ಗಳನ್ನು ಬಳಸಿ ತಿಕ್ಕಿ ತೊಳೆದರೂ ಹಳದಿ ಕಲೆ, ವಾಸನೆ ಹೋಗೋದೆ ಇಲ್ಲ. ಹೀಗಿರುವಾಗ ಶೌಚಾಲಯವನ್ನು ಐಸ್ ಕ್ಯೂಬ್‌ಗಳಿಂದ ಬಹಳ ಸುಲಭವಾಗಿ ಸ್ವಚ್ಛಗೊಳಿಸಬಹುದು. ಈ ಐಸ್‌ಕ್ಯೂಬ್‌ ಟ್ರಿಕ್ಸ್‌ ಟಾಯ್ಲೆಟ್‌ನ ಕಲೆ, ವಾಸನೆಯನ್ನು ತೆಗೆದುಹಾಕಲು ಹೇಗೆ ಸಹಕಾರಿ ಎಂಬುದನ್ನು ನೋಡೋಣ ಬನ್ನಿ.

ಟಾಯ್ಲೆಟ್‌ ಸ್ವಚ್ಛಗೊಳಿಸಲು ಐಸ್‌ಕ್ಯೂಬ್‌ ಹೇಗೆ ಸಹಕಾರಿ?

ಈ ಟ್ರಿಕ್ ಶೌಚಾಲಯ ಸ್ವಚ್ಛಗೊಳಿಸುವಿಕೆಯನ್ನು ಸುಲಭಗೊಳಿಸುವುದಲ್ಲದೆ ನಿಮ್ಮ ಸಮಯ ಮತ್ತು ಹಣ ಎರಡನ್ನೂ ಉಳಿಸುತ್ತದೆ. ಐಸ್ ಕ್ಯೂಬ್‌ ಶೌಚಾಲಯದ ಮೇಲ್ಮೈಯಿಂದ ಕೊಳಕು ಮತ್ತು ವಾಸನೆಯನ್ನು ಸಡಿಲಗೊಳಿಸಲು ಸಹಾಯ ಮಾಡುತ್ತವೆ. ಶೀತ ತಾಪಮಾನವು ಪೈಪ್‌ಗಳು ಮತ್ತು ಕಮೋಡ್‌ಗಳಲ್ಲಿ ಸಂಗ್ರಹವಾದ ಕೊಳೆಯನ್ನು ದುರ್ಬಲಗೊಳಿಸುತ್ತದೆ. ಇದರಿಂದ ಕಲೆಗಳು ಬೇಗನೆ ನಿವಾರಣೆಯಾಗುತ್ತವೆ.  ಐಸ್‌ಗೆ ಸ್ವಲ್ಪ ಅಡಿಗೆ ಸೋಡಾ ಅಥವಾ ನಿಂಬೆ ರಸವನ್ನು ಸೇರಿಸುವುದರಿಂದ ಶುಚಿಗೊಳಿಸುವಿಕೆ ಇನ್ನಷ್ಟು ಪರಿಣಾಮಕಾರಿಯಾಗುತ್ತದೆ.

ಟಾಯ್ಲೆಟ್‌ ಕ್ಲೀನ್‌ ಮಾಡಲು ಐಸ್‌ ಕ್ಯೂಬ್‌ ಅನ್ನು ಬಳಸುವುದೇಗೆ?

ಮೊದಲು, ಸಣ್ಣ ಗಾತ್ರದ ಸುಮಾರು 2 ಕಪ್ ಐಸ್ ಕ್ಯೂಬ್‌ಗಳನ್ನು ತೆಗೆದುಕೊಂಡು ಅವುಗಳನ್ನು ನೇರವಾಗಿ ಟಾಯ್ಲೆಟ್ ಬೌಲ್‌ಗೆ ಸುರಿಯಿರಿ. ನಂತರ, ಟಾಯ್ಲೆಟ್ ಕ್ಲೀನರ್, ಅಡುಗೆ ಸೋಡಾ, ನಿಂಬೆ ರಸ ಅಥವಾ ಬಿಳಿ ವಿನೆಗರ್ ಅನ್ನು ಮೇಲೆ ಸುರಿಯಿರಿ ಮತ್ತು ಅದನ್ನು 10 ರಿಂದ 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ಅಂತಿಮವಾಗಿ ಟಾಯ್ಲೆಟ್‌ ಅನ್ನು ನಿಧಾನವಾಗಿ ಬ್ರಷ್ ಮಾಡಿ ಮತ್ತು ಫ್ಲಶ್ ಮಾಡಿ. ಈ ರೀತಿ ಮಾಡುವುದರಿಂದ ಹೆಚ್ಚಿನ ಶ್ರಮವಿಲ್ಲದೆ ಸುಲಭವಾಗಿ ಟಾಯ್ಲೆಟ್‌ ಕಲೆ ಮತ್ತು ವಾಸನೆಯನ್ನು ಹೋಗಲಾಡಿಸಬಹುದು.

ಇದನ್ನೂ ಓದಿ: ವಸ್ತುಗಳನ್ನು ಗ್ಯಾಸ್‌ ಒಲೆ ಪಕ್ಕ ಇಡಲೇಬೇಡಿ; ಯಾಕೆ ಗೊತ್ತಾ?

ಈ ತಂತ್ರವು ಶೌಚಾಲಯದಲ್ಲಿ ಅಂಟಿರುವ ಕಲೆಗಳನ್ನು ಸುಲಭವಾಗಿ ತೆಗೆದು ಹಾಕುತ್ತದೆ ಮತ್ತು ವಾಸನೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಅಲ್ಲದೆ ಐಸ್‌ಕ್ಯೂಬ್ ನೈಸರ್ಗಿಕ ಸ್ಕ್ರಬ್ ಆಗಿ ಕಾರ್ಯನಿರ್ವಹಿಸುತ್ತದೆ. ನೀವು ಫ್ಲಶ್ ಮಾಡಿದಾಗ, ಐಸ್ ಕ್ಯೂಬ್‌ಗಳು ನೀರಿನೊಂದಿಗೆ ವೇಗವಾಗಿ ಚಲಿಸುತ್ತವೆ. ಇದು ಶೌಚಾಲಯದ ಮೇಲ್ಮೈಯಲ್ಲಿರುವ ಕೊಳಕು, ಪಾಚಿ ತೆಗೆದು ಹಾಕುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿಕೆಶಿ-ಸಿದ್ದು ಕೈಲಾಗದ ಸಂಧಾನ ಸುರ್ಜೇವಾಲ ಸಮ್ಮುಖದಲ್ಲಿ ಸಕ್ಸಸ್ ಆಗಿದ್ದೇಗೆ?: ರಾಮಲಿಂಗಾರೆಡ್ಡಿ ಮನವೊಲಿಕೆಗೆ ನೀಡಿದ ಆಫರ್ ಏನು? – Kannada News

ರಾಮಲಿಂಗಾ ರೆಡ್ಡಿ ರಾಜೀನಾಮೆ ವಾಪಸ್

ಬೆಂಗಳೂರು, ಜೂ.6: ಸಚಿವ ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆಯಾದರೂ, ಈ ಸಂಧಾನದ ಹಿಂದೆ ನಡೆದಿರುವ ಹೈಡ್ರಾಮಾ ಈಗ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಡೆಸಿದ ಸರಣಿ ಮನವೊಲಿಕೆ ಪ್ರಯತ್ನಗಳಿಗೆ ಕರಗದ ರಾಮಲಿಂಗಾರೆಡ್ಡಿ ಅವರನ್ನು ಶಾಂತಗೊಳಿಸಲು ಕೊನೆಗೂ ಎಐಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರೇ ಅಖಾಡಕ್ಕೆ ಇಳಿಯಬೇಕಾಯಿತು.

ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದ ರಾಮಲಿಂಗಾರೆಡ್ಡಿ ಅವರನ್ನು ಸಮಾಧಾನಪಡಿಸಲು ನಿನ್ನೆ ತಡರಾತ್ರಿಯವರೆಗೂ ಸಿಎಂ ಮತ್ತು ಡಿಸಿಎಂ ಕಸರತ್ತು ನಡೆಸಿದ್ದರೂ ಯಾವುದೇ ಫಲ ಸಿಕ್ಕಿರಲಿಲ್ಲ. ಆದರೆ, ಇಂದು ರಣದೀಪ್ ಸಿಂಗ್ ಸುರ್ಜೇವಾಲ ಅವರು ರಾಮಲಿಂಗಾರೆಡ್ಡಿ ಅವರೊಂದಿಗೆ ಸತತ ಒಂದೂವರೆ ಗಂಟೆಗೂ ಅಧಿಕ ಕಾಲ ನಡೆಸಿದ ಸುದೀರ್ಘ ಗುಪ್ತ ಮಾತುಕತೆಯ ಬಳಿಕ ಬಿಕ್ಕಟ್ಟು ಶಮನವಾಗಿದೆ. ಹೈಕಮಾಂಡ್ ಸದ್ಯದ ಖಾತೆಯ ಜೊತೆಗೆ ಜಲಸಂಪನ್ಮೂಲ ಅಥವಾ ಸಣ್ಣ ನೀರಾವರಿ ಇಲಾಖೆಯ ಹೆಚ್ಚುವರಿ ಜವಾಬ್ದಾರಿಯ ಭರವಸೆ ನೀಡಿದೆ ಎನ್ನಲಾಗಿದೆ. ಆದರೆ ಸುದ್ದಿಗೋಷ್ಠಿಯಲ್ಲಿ ಸುರ್ಜೇವಾಲ ಅವರು ಕೇವಲ ರಾಜೀನಾಮೆ ವಾಪಸಾತಿ ಬಗ್ಗೆ ಮಾತ್ರ ತಿಳಿಸಿದ್ದಾರೆ, ಖಾತೆ ಬದಲಾವಣೆಯ ಗೊಂದಲಗಳಿಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

ಇದೇ ವೇಳೆ ಬಿಜೆಪಿ ನಾಯಕರಾದ ಬಿ.ವೈ. ವಿಜಯೇಂದ್ರ ಮತ್ತು ಆರ್. ಅಶೋಕ್ ಅವರ ಟೀಕೆಗಳಿಗೆ ತಿರುಗೇಟು ನೀಡಿದ ಅವರು, “ನಮ್ಮ ಪಕ್ಷದ ಆಂತರಿಕ ವಿಚಾರವನ್ನು ಇಟ್ಟುಕೊಂಡು ಬಿಜೆಪಿ ಸಾಕಷ್ಟು ಗೊಂದಲ ನಿರ್ಮಾಣ ಮಾಡಲು ಯತ್ನಿಸಿತು ಮತ್ತು ದೊಡ್ಡ ಬಂಡಾಯ ಆಯಿತು ಎಂದು ಸಂಭ್ರಮ ಪಟ್ಟಿತು. ಆದರೆ ಸದ್ಯಕ್ಕೆ ಅವರ ಸಂಭ್ರಮ ಮುಗಿದಿದೆ” ಎಂದು ಲೇವಡಿ ಮಾಡಿದರು.

ಸರ್ಕಾರದ ಸಾಧನೆಯನ್ನು ಮುಂದಿಟ್ಟ ಸುರ್ಜೇವಾಲ, “ನಾವು ಕನ್ನಡಿಗರಿಗಾಗಿ ಕೊಟ್ಟ ಮಾತಿನಂತೆ ಐದು ಗ್ಯಾರೆಂಟಿಗಳನ್ನು ಯಶಸ್ವಿಯಾಗಿ ನೀಡಿದ್ದೇವೆ. ಗೃಹಲಕ್ಷ್ಮಿ, ಗೃಹಜ್ಯೋತಿ, 10 ಕೆ.ಜಿಯ ಅನ್ನಭಾಗ್ಯ, ಯುವನಿಧಿ ಹಾಗೂ ವಿದ್ಯಾರ್ಥಿ-ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ನಿರಂತರವಾಗಿ ತಲುಪುತ್ತಿದೆ. ನಮ್ಮ ಗಮನ ಜನರ ಕಲ್ಯಾಣದ ಮೇಲಿದೆಯೇ ಹೊರತು ವಿಪಕ್ಷಗಳ ಟೀಕೆಗಳ ಮೇಲಲ್ಲ” ಎಂದು ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಕೇವಲ ರಾಜೀನಾಮೆ ಗೊಂದಲಕ್ಕೆ ಸ್ಪಷ್ಟೀಕರಣ ನೀಡಿದ ಸುರ್ಜೇವಾಲ, ಮಾಧ್ಯಮಗಳ ಬೇರೆ ಯಾವುದೇ ರಾಜಕೀಯ ಪ್ರಶ್ನೆಗಳಿಗೆ ಉತ್ತರಿಸದೆ ಅಲ್ಲಿಂದ ನಿರ್ಗಮಿಸಿದರು.

ಇದನ್ನೂ ಓದಿ: ರಾಜೀನಾಮೆ ವಾಪಸ್ ಪಡೆದ ರಾಮಲಿಂಗಾರೆಡ್ಡಿ: ಸಚಿವ ಸಂಪುಟದಲ್ಲಿ ಮುಂದುವರಿಯಲಿದ್ದಾರೆ ಎಂದ ಸುರ್ಜೇವಾಲ

ಇತ್ತ ಕೋಲಾರದಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಮುಳಬಾಗಿಲು ಶಾಸಕ ಕೊತ್ತೂರು ಮಂಜುನಾಥ್, ಸಚಿವ ರಾಮಲಿಂಗಾರೆಡ್ಡಿ ಅವರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. “ಇಲ್ಲಿಯವರೆಗೆ ಇದ್ದ ಸಚಿವರ ಪೈಕಿ ರಾಮಲಿಂಗಾರೆಡ್ಡಿ ಅವರೇ ಬೆಸ್ಟ್ ಮಿನಿಸ್ಟರ್. ಅವರಿಗೆ ಯಾವುದೇ ಗನ್‌ಮ್ಯಾನ್ ಇಲ್ಲ, ಪಿಎ ಹಮ್ಮುಬಿಮ್ಮು ಇಲ್ಲ. ಯಾರು ಫೋನ್ ಮಾಡಿದರೂ 100% ತಾವೇ ರಿಸೀವ್ ಮಾಡುತ್ತಾರೆ, ಒಂದು ವೇಳೆ ಬ್ಯುಸಿ ಇದ್ದರೆ ಕಡ್ಡಾಯವಾಗಿ ಕಾಲ್‌ಬ್ಯಾಕ್ ಮಾಡುತ್ತಾರೆ. ಅವರು ಅತ್ಯಂತ ಬುದ್ಧಿವಂತರು. ಆದರೆ ಮಂತ್ರಿಯಾದವರಿಗೆ ಕೆಲಸ ಮಾಡಲು ಯಾವ ಖಾತೆ ಆದರೇನು? ಇಂತಹುದೇ ಖಾತೆ ಬೇಕು ಎಂದು ಪಟ್ಟು ಹಿಡಿಯುವುದು ತಪ್ಪು ಎಂದು ಹೇಳಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs AFG: ಮೊದಲ ದಿನವೇ 2 ಶತಕ, 2 ಅರ್ಧಶತಕ; ಬೃಹತ್ ಮೊತ್ತದತ್ತ ಟೀಂ ಇಂಡಿಯಾ – Kannada News

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನದಾಟ ಅಂತ್ಯವಾಗಿದೆ. ನ್ಯೂ ಚಂಡೀಗಢದ ಮುಲ್ಲನ್‌ಪುರದಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆತಿಥೇಯ ಟೀಂ ಇಂಡಿಯಾ ಮೊದಲ ದಿನದಾಟದಂತ್ಯಕ್ಕೆ ಮೂರು ವಿಕೆಟ್​ಗಳನ್ನು ಕಳೆದುಕೊಂಡು 368 ರನ್ ಕಲೆಹಾಕಿದೆ. ಮೊದಲ ದಿನದಂದು ತಂಡದ ಪರ ಎರಡು ಶತಕಗಳು ಹಾಗೂ ಎರಡು ಅರ್ಧಶತಕಗಳು ದಾಖಲಾಗಿವೆ. ಆರಂಭಿಕ ಕೆಎಲ್ ರಾಹುಲ್ ಹಾಗೂ ನಾಯಕ ಶುಭ್​ಮನ್ ಗಿಲ್ ಶತಕ ಬಾರಿಸಿದರೆ, ಸಾಯಿ ಸುದರ್ಶನ್ ಹಾಗೂ ರಿಷಭ್ ಪಂತ್ ಅರ್ಧಶತಕದ ಇನ್ನಿಂಗ್ಸ್ ಆಡಿದ್ದಾರೆ. ದಿನದಾಟದಂತ್ಯಕ್ಕೆ ನಾಯಕ ಗಿಲ್ 103 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದರೆ, ರಿಷಭ್ ಪಂತ್ ಕೂಡ 50 ರನ್ ಬಾರಿಸಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

Published On – 5:08 pm, Sat, 6 June 26

Source link

ರಾಜೀನಾಮೆ ವಾಪಸ್ ಪಡೆದ ರಾಮಲಿಂಗಾರೆಡ್ಡಿ: ಸಚಿವ ಸಂಪುಟದಲ್ಲಿ ಮುಂದುವರಿಯಲಿದ್ದಾರೆ ಎಂದ ಸುರ್ಜೇವಾಲ – Kannada News

ಬೆಂಗಳೂರು, ಜೂನ್​​ 06: ತೀವ್ರ ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ, ರಾಮಲಿಂಗಾರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ಹೈಡ್ರಾಮಾಗೆ ಕೊನೆಗೂ ತೆರೆ ಬಿದ್ದಿದೆ. ಸಾಲು ಸಾಲು ಸಭೆಗಳ ಬಳಿಕ ರಾಮಲಿಂಗಾರೆಡ್ಡಿ ತಮ್ಮ ರಾಜೀನಾಮೆಯನ್ನು ವಾಪಸ್ ಪಡೆದಿದ್ದಾರೆ. ಅಲ್ಲಿಗೆ ಸಿಎಂ ಡಿಕೆ ಶಿವಕುಮಾರ್​ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ರಾಮಲಿಂಗಾರೆಡ್ಡಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ರಣದೀಪ್ ಸಿಂಗ್ ಸುರ್ಜೇವಾಲ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ ರಾಮಲಿಂಗಾರೆಡ್ಡಿ ಮತ್ತು ಕೃಷ್ಣ ಭೈರೇಗೌಡ ಜೊತೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಇಂದು ಚರ್ಚೆ ಮಾಡಿದ್ದಾರೆ. ಸುಮಾರು 1 ಗಂಟೆ ಕಾಲ ಸಮಾಲೋಚನೆ ಮಾಡಲಾಗಿದೆ. ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ, ರಾಮಲಿಂಗಾರೆಡ್ಡಿ ತಮ್ಮ ರಾಜೀನಾಮೆ ವಾಪಸ್ ಪಡೆದುಕೊಂಡಿದ್ದಾರೆ. ಅವರು ಸಚಿವ ಸಂಪುಟದಲ್ಲಿ ಮುಂದುವರಿಯಲಿದ್ದಾರೆ ಎಂದು ಹೇಳಿದ್ದಾರೆ.

ರಾಮಲಿಂಗಾರೆಡ್ಡಿ ಪಕ್ಷದ ಹಿರಿಯ ನಾಯಕರು. ಹಲವು ಸಲ ಸಚಿವರಾಗಿ ಕೆಲಸ ಮಾಡಿದ್ದಾರೆ. ಸಿಎಂ ಡಿಕೆ ಶಿವಕುಮಾರ್​, ಕೆಪಿಸಿಸಿ ಅಧ್ಯಕ್ಷರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅವರು ಕಾಂಗ್ರೆಸ್​​ ಆಸ್ತಿ. ಅವರು ರಾಜೀನಾಮೆ ನೀಡಿದ ಬಳಿಕ ನಾವು ಮಾತಾಡಿದ್ದೇವೆ. ಸ್ವಲ್ಪ ತಪ್ಪು ತಿಳುವಳಿಕೆ ಆಗಿತ್ತು. ಇದೀಗ ರಾಜೀನಾಮೆ ವಾಪಸ್ ಪಡೆದಿದ್ದಾರೆ ಎಂದು ಸುರ್ಜೇವಾಲ ಸ್ಪಷ್ಟನೆ ನೀಡಿದ್ದಾರೆ.

ಮತ್ತಷ್ಟು ಮಾಹಿತಿ ಅಪ್​ಡೇಟ್​ ಆಗಲಿದೆ.

Published On – 4:33 pm, Sat, 6 June 26

Source link

Exit mobile version