ಗುವಾಹಟಿ, ಏಪ್ರಿಲ್ 8: ಅಸ್ಸಾಂನಲ್ಲಿ ಮತದಾನಕ್ಕೆ (Assam Assembly Elections) ಕೆಲವೇ ಗಂಟೆಗಳು ಬಾಕಿ ಇರುವಾಗ ಉದಲ್ಗುರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುರೇನ್ ಡೈಮರಿ ಪಕ್ಷವನ್ನು ತೊರೆಯುವುದಾಗಿ ಘೋಷಿಸಿದ್ದಾರೆ. ಅವರು ಕಾಂಗ್ರೆಸ್ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಆದರೆ, ಅವರು ಇನ್ನೂ ತಮ್ಮ ರಾಜೀನಾಮೆ ಪತ್ರವನ್ನು ಪಕ್ಷಕ್ಕೆ ಸಲ್ಲಿಸಿಲ್ಲ ಎಂದು ಕಾಂಗ್ರೆಸ್ ತಿಳಿಸಿದೆ. ಸುರೇನ್ ಅವರ ಈ ನಿರ್ಧಾರದಿಂದ ಕಾಂಗ್ರೆಸ್ಗೆ ದೊಡ್ಡ ಶಾಕ್ ಉಂಟಾಗಿದೆ.
ಈ ಬಗ್ಗೆ ಚುನಾವಣಾ ಆಯೋಗದ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದು, ಪಕ್ಷಕ್ಕೆ ರಾಜೀನಾಮೆ ನೀಡಿದರೂ ಸುರೇನ್ ಡೈಮರಿ ಅವರ ಹೆಸರು ಇವಿಎಂನಲ್ಲಿ ಇರಲಿದೆ. ನಾಮಪತ್ರ ಹಿಂತೆಗೆದುಕೊಳ್ಳುವ ಗಡುವು ಬಹಳ ಹಿಂದೆಯೇ ಮುಗಿದಿರುವುದರಿಂದ ಜನರು ನಾಳೆ ಅವರಿಗೆ ಮತ ಚಲಾಯಿಸಬಹುದು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷವು ತನ್ನ ಪರವಾಗಿ ಪ್ರಚಾರವನ್ನು ನಿರ್ಲಕ್ಷಿಸಿದೆ ಎಂದು ಸುರೇನ್ ಡೈಮರಿ ಆರೋಪಿಸಿದ್ದಾರೆ. ಈ ಬಗ್ಗೆ ವರದಿಗಾರರೊಂದಿಗೆ ಮಾತನಾಡಿದ ಸುರೇನ್ ಡೈಮರಿ, ತಮ್ಮ ಉಮೇದುವಾರಿಕೆಯ ಉದ್ದಕ್ಕೂ ಕಾಂಗ್ರೆಸ್ ಪಕ್ಷದ ನಾಯಕರು ಅಗತ್ಯ ಬೆಂಬಲ ಒದಗಿಸಿಲ್ಲ ಎಂದು ಆರೋಪಿಸಿದ್ದಾರೆ.
“ನನಗೆ ಪಕ್ಷ ಅಥವಾ ಅದರ ನಾಯಕರಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಆದ್ದರಿಂದ ನಾನು ಪಕ್ಷ ಬಿಟ್ಟು ಹೊರಟಿದ್ದೇನೆ. ನನಗೆ ಯಾವುದೇ ಬೆಂಬಲ ಸಿಗಲಿಲ್ಲ. ಅದಕ್ಕಾಗಿಯೇ ನಾನು ಹಿಂದೆ ಸರಿದಿದ್ದೇನೆ. ಪಕ್ಷದ ನಾಯಕರನ್ನು ಸಂಪರ್ಕಿಸಲು ನಾನು ಪದೇ ಪದೇ ಪ್ರಯತ್ನಗಳನ್ನು ಮಾಡಿದರೂ ಉತ್ತರ ಸಿಗಲಿಲ್ಲ” ಎಂದು ಅವರು ಹೇಳಿದ್ದಾರೆ.
ಅಸ್ಸಾಂನಲ್ಲಿ ನಾಳೆ ಅಂದರೆ ಏಪ್ರಿಲ್ 9ರಂದು ಮತದಾನ ನಡೆಯಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕಾಲಿವುಡ್ ಸೂಪರ್ಸ್ಟಾರ್ ರಜನಿಕಾಂತ್ (Rajinikanth) ಅವರು ಸದ್ಯ ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶನದ ‘ಜೈಲರ್ 2’ (Jailer 2) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಚಿತ್ರದ ಶೂಟಿಂಗ್ ಹೇಗೆ ನಡೆಯುತ್ತಿದೆ ಹಾಗೂ ತಮ್ಮ ಮುಂದಿನ ಪ್ರಾಜೆಕ್ಟ್ಗಳ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ದಳಪತಿ ವಿಜಯ್ ನಟನೆಯ ‘ಜಗ ನಾಯಗನ್’ (Jana Nayagan) ಸಿನಿಮಾದ ವಿಳಂಬದ ಬಗ್ಗೆ ಅವರಿಗೆ ಪ್ರಶ್ನೆ ಎದುರಾಯಿತು.
ಸಿನಿಮಾ ಪ್ರೇಮಿಗಳಲ್ಲಿ ಭಾರೀ ಕುತೂಹಲ ಮೂಡಿಸಿರುವ ‘ಜೈಲರ್ 2’ ಬಗ್ಗೆ ಮಾತನಾಡಿದ ರಜನಿಕಾಂತ್, ‘ಜೈಲರ್ 2 ಚಿತ್ರದ ಚಿತ್ರೀಕರಣಕ್ಕೆ ಇನ್ನು ಕೇವಲ 2ರಿಂದ 3 ದಿನಗಳ ಕೆಲಸ ಮಾತ್ರ ಬಾಕಿ ಇದೆ. ಶೀಘ್ರದಲ್ಲೇ ಶೂಟಿಂಗ್ ಮುಕ್ತಾಯವಾಗಲಿದೆ’ ಎಂದು ತಿಳಿಸಿದರು. ಈ ಚಿತ್ರದಲ್ಲಿ ಅವರು ಮತ್ತೆ ಟೈಗರ್ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಬಹಳ ವರ್ಷಗಳ ನಂತರ ರಜನಿಕಾಂತ್ ಮತ್ತು ಕಮಲ್ ಹಾಸನ್ ಒಂದೇ ಸಿನಿಮಾದಲ್ಲಿ (KHxRK) ಕಾಣಿಸಿಕೊಳ್ಳುತ್ತಿದ್ದು, ಆ ಚಿತ್ರದ ಬಗ್ಗೆಯೂ ತಲೈವಾ ಮಾತನಾಡಿದ್ದಾರೆ. ಚಿತ್ರದ ಕಥೆ ಈಗಾಗಲೇ ಫೈನಲ್ ಆಗಿದೆ. ಆಗಸ್ಟ್ ತಿಂಗಳಿಂದ ಶೂಟಿಂಗ್ ಆರಂಭವಾಗಲಿದೆ. ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ನಿರ್ಮಾಣ ಸಂಸ್ಥೆಗಳೇ ಅಧಿಕೃತವಾಗಿ ತಿಳಿಸಲಿವೆ ಎಂದು ಅವರು ಹೇಳಿದ್ದಾರೆ.
ಈ ಎಲ್ಲ ವಿಚಾರಗಳ ಬಗ್ಗೆ ಮಾತನಾಡಿದ ರಜನಿಕಾಂತ್ ಅವರು ‘ಜನ ನಾಯಗನ್’ ಬಗ್ಗೆ ಮೌನ ತಾಳಿದರು. ಈ ಸಿನಿಮಾ ವಿಳಂಬ ಆಗುತ್ತಿರುವ ಬಗ್ಗೆ ಪ್ರಶ್ನಿಸಿದ್ದಕ್ಕೆ ತುಸು ಗಂಭೀರವಾಗಿಯೇ ಅವರು ಪ್ರತಿಕ್ರಿಯಿಸಿದರು. ‘ಕ್ಷಮಿಸಿ, ಈ ಪ್ರಶ್ನೆಗೆ ಉತ್ತರಿಸಲು ನಾನು ಇಷ್ಟಪಡುವುದಿಲ್ಲ’ ಎಂದು ಹೇಳಿ ಅಲ್ಲಿಂದ ಹೊರಟುಹೋದರು. ಹಾಗಾಗಿ ಅವರ ನಿಲುವು ಏನು ಎಂಬುದು ಸ್ಪಷ್ಟವಾಗಿಲ್ಲ.
ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರವು ಈ ವರ್ಷದ ಜನವರಿ 9ರಂದು ಸಂಕ್ರಾಂತಿ ಹಬ್ಬದ ಸಮಯದಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರ ಸಿಗದ ಕಾರಣ ಸಿನಿಮಾ ಬಿಡುಗಡೆ ವಿಳಂಬವಾಗಿದೆ. ಸದ್ಯ ಈ ಚಿತ್ರವು ಜೂನ್ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ವಿಳಂಬ ಆಗಿದ್ದರ ಹಿಂದೆ ರಾಜಕೀಯ ಪಿತೂರಿ ಇದೆ ಎಂಬ ಆರೋಪ ಎದುರಾಗಿದೆ.
ಕೋಲಾರ, ಏಪ್ರಿಲ್ 08: ವೃದ್ಧಾಪ್ಯ, ಅಂಗವಿಕಲ, ವಿಧವಾ ವೇತನ (pension)ಇವೆಲ್ಲವೂ ಸರ್ಕಾರ ಮನೆ ಬಾಗಿಲಿಗೆ ತಲುಪಬೇಕಾದ ಯೋಜನೆಗಳು. ಆ ಹಣವನ್ನೇ ನಂಬಿ ಹಿರಿಯ ಜೀವಗಳು ಬದುಕುತ್ತಿವೆ. ಆದರೆ ತಮ್ಮ ಹಣಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸುಡುಬಿಸಿಲಿನಲ್ಲಿ ಅಂಚೆ ಕಚೇರಿ ಬಳಿ ಕಾದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಅಷ್ಟೇ ಅಲ್ಲದೆ ಕಮಿಷನ್ ಕೊಟ್ಟರು ಹಣ ಮಾತ್ರ ಸರಿಯಾದ ಸಮಯಕ್ಕೆ ಸಿಗದಿರುವುದು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.
ಎಲ್ಲಾ ರೀತಿಯ ಪಿಂಚಣಿದಾರರಿಗೆ ಮನೆ ಬಾಗಿಲಿಗೆ ಪಿಂಚಣಿ ಹಣ ತಿಂಗಳ ಒಳಗಾಗಿ ತಲುಪಿಸುತ್ತಿದ್ದೇವೆ, ಜೊತೆಗೆ ಗ್ಯಾರಂಟಿಗಳ ಮೂಲಕ ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಅನುಕೂಲ ಮಾಡಿಕೊಟ್ಟಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಇಲ್ಲಿ ತಮ್ಮ ಖಾತೆಯಲ್ಲಿರುವ ಹಣಕ್ಕಾಗಿ ದಿನಗಟ್ಟಲೇ ಕಾದು ವಾಪಸ್ ಹೋಗಬೇಕಿದೆ. ಕೋಲಾರ ಹೊರ ವಲಯದಲ್ಲಿರುವ ಆರೋಗ್ಯಾಧಿಕಾರಿ ಕಚೇರಿ ಆವರಣದಲ್ಲಿ ಅಂಚೆ ಕಚೇರಿ ಶಾಖೆ ಇದೆ. ಇಲ್ಲಿ ರಮೇಶ್ ಎಂಬ ಪೋಸ್ಟ್ ಮಾಸ್ಟರ್ ಜೊತೆಗೆ ಒಂದಷ್ಟು ಜನ ಕೆಲಸ ಮಾಡುತ್ತಾರೆ.
ಕೋಲಾರ ತಾಲ್ಲೂಕಿನ ವಿನೋಭ ನಗರ, ದೊಡ್ಡ ಹಸಾಳ, ಚಿಕ್ಕ ಹಸಾಳ, ಗಾಜದಿನ್ನೆ, ಪಾಕರಹಳ್ಳಿ, ಈಕಂಬಳ್ಳಿ ಸೇರಿ ಒಂದಷ್ಟು ಗ್ರಾಮಗಳ ಜನರು ಇದೆ ಅಂಚೆ ಕಚೇರಿಗೆ ಬರಬೇಕು. ಆದರೆ ಇಲ್ಲಿ ಕೆಲಸ ಮಾಡುವವರು ಸರಿಯಾದ ಸಮಯಕ್ಕೆ ವೃದ್ಧರು, ಅಂಗವಿಕಲರು, ಮಹಿಳೆಯರಿಗೆ ಪಿಂಚಣಿ ಹಣ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ದಿನಗಟ್ಟಲೇ ಕಾದು ಕುಳಿತರೂ ಹಣ ಇಲ್ಲ ಎಂದು ವಾಪಸ್ ಕಳುಹಿಸುತ್ತಾರೆ.
ಪಿಂಚಣಿದಾರರು ಹೇಳುವುದೇನು?
ಇದು ಪ್ರತಿ ತಿಂಗಳು ನಡೆದುಕೊಂಡು ಬರುತ್ತಿರುವ ಸಂಪ್ರದಾಯವಾಗಿದೆ. ಹಾಗಾಗಿ ಪ್ರತಿನಿತ್ಯ ಇಳಿ ವಯಸ್ಸಿನ ಜೀವಗಳು ಕಚೇರಿಗೆ ಬರುವುದು, ವಾಪಸ್ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ತಮಗೆ ಬರುವ ಒಂದು ಸಾವಿರ ರೂ. ಪಿಂಚಣಿ ಹಣ ಪಡೆಯಲು ನಿತ್ಯ ಪರದಾಟ ಮಾಡಬೇಕಿದೆ ಎಂಬುವುದು ನಂಜಪ್ಪ ಅವರ ಮಾತು.
ಪ್ರತಿ ತಿಂಗಳು ವಿವಿಧ ಪಿಂಚಣಿದಾರರ ಖಾತೆಗಳಿಗೆ ಸರ್ಕಾರದಿಂದ ಹಣ ಹಾಕಲಾಗುತ್ತದೆ. ಹೀಗೆ ಖಾತೆಗಳಿಗೆ ಹಾಕಲಾದ ಹಣವನ್ನು ತೆಗೆದುಕೊಳ್ಳು ಅಂಚೆ ಕಚೇರಿಗೆ ಬರುವ ಪಿಂಚಣಿದಾರರಿಗೆ ಇಲ್ಲಿನ ಅಂಚೆ ಕಚೇರಿಯ ಸಿಬ್ಬಂದಿಗಳು ಹಣ ಇಲ್ಲ, ನಾಳೆ ಬನ್ನಿ, ನಾಡಿದ್ದು ಬನ್ನಿ ಎಂದು ಸಬೂಬು ಹೇಳಿ ಕಳಿಸುತ್ತಾರೆ. ಇಳಿವಯಸ್ಸಿನ ವೃದ್ದರು ಅಂಗವಿಕಲರು ತಮ್ಮ ಹಣಕ್ಕಾಗಿ ಅಂಚೆ ಕಚೇರಿಗೆ ಅಲೆದಾಡಬೇಕು. ಒಮ್ಮೊಮ್ಮೆ ಅವರು ಅಂಚೆ ಕಚೇರಿಯಲ್ಲಿ ಇಲ್ಲ ಅಂದರೆ ಅವರು ಬರುವವರೆಗೂ ಕಾಯಬೇಕು. ಅಂಚೆ ಕಚೇರಿಯ ಸುತ್ತಮುತ್ತ ಇರುವ ಮರಗಳ ಕೆಳಗೆ, ಆವರಣದಲ್ಲಿ ಹೀಗೆ ಎಲ್ಲೆಂದರಲ್ಲಿ ಚಾತಕ ಪಕ್ಷಿಗಳಂತೆ ಕಾದು ಕುಳಿತುಕೊಳ್ಳಬೇಕು.
30ರಿಂದ 50 ರೂ ಕಮಿಷನ್
ಸರ್ಕಾರ ಕೊಡುವ ಹಣವನ್ನು ಪಡೆಯಲು ಹಿರಿಯ ಜೀವಗಳು ಪರದಾಡುವ ಸ್ಥಿತಿಯನ್ನು ಕಂಡರೆ ನಿಜಕ್ಕೂ ಅಯ್ಯೋ ಎನ್ನಿಸುತ್ತದೆ. ನಮಗೆ ಇಲ್ಲಿ ಬಂದು ಕಾಯೋದು ಕಷ್ಟವಾಗುತ್ತಿದೆ. ಇಲ್ಲಿ ಕುಡಿಯೋದಕ್ಕೆ ಕನಿಷ್ಟ ನೀರು ಇಲ್ಲ. ನಮ್ಮ ಗ್ರಾಮಗಳಿಗೆ ಬಂದು ಹಣ ಕೊಟ್ಟರೆ ಅನುಕೂಲವಾಗುತ್ತೆ. ಆದರೆ ಅಂಚೆ ಕಚೇರಿ ಬಳಿಗೆ ಬಂದರೆ 1200 ಪಿಂಚಣಿಗೆ 30 ರೂ ಕಮಿಷನ್ ಹಾಗೂ ಗ್ರಾಮಗಳಿಗೆ ಅವರೇ ಬಂದು ಕೊಟ್ಟರೆ 50 ರೂ ಕಮಿಷನ್ ಕೊಡಬೇಕಿದೆ. ನಿತ್ಯ ಅಂಚೆ ಕಚೇರಿಗೆ ಬೆಳ್ಳಿಗ್ಗೆ 9 ಗಂಟೆಗೆ ಬಂದು ಕುಳಿತರೆ ಅಂಚೆ ಕಚೇರಿ ಸಿಬ್ಬಂದಿ 12 ಗಂಟೆಗೆ ಹಣ ಇಲ್ಲ ಎಂದು ನೆಪ ಹೇಳುತ್ತಾರೆ. ಹಣ ಸಿಗದೆ ಪಿಂಚಣಿದಾರರು ನಿರಾಸೆಯಿಂದ ವಾಪಸ್ ತೆರಳುತ್ತಾರೆ.
ಪ್ರತಿ ತಿಂಗಳು ಸರ್ಕಾರ ಕೊಡುವ ಸಾವಿರ ರೂ ಸಣ್ಣ ಹಣವಾಗಿದ್ದರೂ ಅದನ್ನೇ ನಂಬಿಕೊಂಡು ಗಂಜಿ ಕುಡಿಯುವ ಜೀವಕ್ಕೆ ಅದು ದೊಡ್ಡ ಮೊತ್ತ. ಹಾಗಾಗಿ ಇಂತಹ ಹಿರಿಯ, ಅಂಗವಿಕಲರನ್ನ ಅಲೆದಾಡಿಸುವ ಅಂಚೆ ಕಚೇರಿಗಳು, ಪೋಸ್ಟ್ ಮಾಸ್ಟರ್ಗಳ ವಿರುದ್ಧ ಕ್ರಮಕೈಗೊಂಡು ಇವರ ಆತಂಕ ನಿವಾರಿಸಬೇಕಿದೆ.
ಚಿಕ್ಕಬಳ್ಳಾಪುರ, (ಏಪ್ರಿಲ್ 08): ಸೆಪ್ಟೆಂಬರ್ 2025ರವರೆಗೆ ಕರ್ನಾಟಕದಲ್ಲಿ ಒಟ್ಟು 195.27 ಲಕ್ಷ ಬಾಕ್ಸ್ ಬಿಯರ್ (Beer) ಮಾರಾಟವಾಗಿದೆ. ಇದು ಕಳೆದ ವರ್ಷದ ಇದೇ ಅವಧಿಗಿಂತ 47.46 ಲಕ್ಷ ಬಾಕ್ಸ್ ಕಡಿಮೆಯಾಗಿದ್ದು ಶೇ. 19.55ರಷ್ಟು ಕುಸಿತ ಕಂಡಿದೆ. ಮಳೆ, ಚಳಿಯಿಂದಾಗಿ ರಾಜ್ಯದಲ್ಲಿ ಬಿಯರ್ ಮಾರಾಟ ಗಣನೀಯ ಕುಸಿತ ಕಂಡಿತ್ತು. ಇದನ್ನು ಸ್ವತಃ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಹೇಳಿದ್ದರು. ಆದ್ರೆ, ಇದೀಗ ಬೇಸಿಗೆಯ ಬಿಸಿಲು ಏರುತ್ತಿದ್ದಂತೆಯೇ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯಲ್ಲಿ ಬಿಯರ್ಗೆ ಬೇಡಿಕೆ ಹೆಚ್ಚಾಗಿದೆ. ಹೌದು… ಬಿಸಿಲಿನ ತಾಪಮಾನದಿಂದ ಬಚಾವ್ ಆಗಲು, ಮದ್ಯ ಪ್ರಿಯರು ಹಾಟ್ ಡ್ರಿಂಕ್ಸ್ ಬದಲು ಬಿಯರ್ ಮೊರೆ ಹೋಗಿದ್ದಾರೆ.
ಬೇಸಿಗೆಯಲ್ಲಿ ದೇಹ ತಂಪಾಗಿರುತ್ತೆ ಎಂದು ಮದ್ಯಪ್ರಿಯರು ಬಿಯರ್ ನತ್ತ ಮುಖ ಮಾಡಿದ್ದರಿಂದ ಮಾರಾಟದಲ್ಲಿ ಹೆಚ್ಚಳವಾಗಿದೆ. ಆದ್ರೆ ಬಾರ್ ಗಳಲ್ಲಿ ಬಿಯರ್ ಸ್ಟಾರ್ ಇಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲಿ ಕಳೆದ ಪೆಬ್ರುವರಿಯಿಂದ ಮಾರ್ಚ ತಿಂಗಳಿಗೆ ಹೊಲಿಸಿದ್ರೆ. ಬಿಯರ್ ಬೇಡಿಕೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಬೇಸಿಗೆಯ ಬಿಸಿಲು ಹೇಗೆ ಏರಿಕೆಯಾಗುತ್ತಿದೆಯೂ ಪ್ರತಿ ತಿಂಗಳು ಬಿಯರ್ ಮಾರಾಟದಲ್ಲೂ ಹೆಚ್ಚಳವಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಜನವರಿಯಿಂದ ಮಾರ್ಚ್ ವರೆಗೂ ಎಷ್ಟು ಬಿಯರ್ ಮಾರಾಟವಾಗಿದೆ ಎನ್ನುವುದನ್ನು ನೋಡುವುದಾದರೆ, ಜನವರಿಯಲ್ಲಿ 50,272 ಬಾಕ್ಸ್ ಬಿಯರ್ ಮಾರಾಟವಾಗಿದ್ದರೆ ಪೆಬ್ರವರಿಯಲ್ಲಿ 63,372 ಬಾಕ್ಸ್. ಇನ್ನು ಮಾರ್ಚ್ ತಿಂಗಳಲ್ಲಿ 88,523 ಬಾಕ್ಸ್ ಬಿಯರ್ ಮಾರಾಟವಾಗಿದೆ. ಈ ಅಂಕಿ ಸಂಖ್ಯೆ ನೋಡುತ್ತಿದ್ದರೆ ಬೇಸಿಗೆಯ ಬಿಸಿಲು ಏರಿಕೆಯಾಗುತ್ತಿದ್ದಂತೆಯೇ ಪ್ರತಿ ತಿಂಗಳು ಬಿಯರ್ ಮಾರಾಟದಲ್ಲೂ ಸಹ ಏರಿಕೆಯಾಗಿದೆ. ಆದ್ರೆ, ಬಾರ್ ಗಳಲ್ಲಿ ಬಿಯರ್ ಬೇಡಿಕೆ ಹೆಚ್ಚಾಗುತ್ತಿದ್ದರೆ, ಇನ್ನೊಂದೆಡೆ ಬಾರ್ಗಳಿಗೆ ಸರಿಯಾಗಿ ಬಿಯರ್ ಸಪ್ಲೈ ಆಗುತ್ತಿಲ್ಲ.
ಬಡ್ ವೈಸರ್ ಬಿಯರ್ ನಿಂದ ಹಿಡಿದು ಕೆಎಫ್, ಟೂಬರ್ಗ, ಆರ್.ಸಿ, ಬೂಲೆಟ್, ಸನಿಬೀಚ್ ಸೇರಿದಂತೆ ವಿವಿಧ ಬ್ರ್ಯಾಂಡ್ ಗಳ ಬಿಯರ್ ಗಳನ್ನು ಕೇಳುತ್ತಿದ್ದಾರೆ. ಈ ಸಂಬಂಧ ಬಾರ್ ಮಾಲೀಕರು ಸಹ ಹೆಚ್ಚು ಬಿಯರ್ ಕೊಡಿ ಎಂದು ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತಕ್ಕೆ ಬೇಡಿಕೆ ಇಟ್ಟಿದ್ದಾರೆ. ಆದರೂ ಸಹ ಕೇಳಿದಷ್ಟು ಬಿಯರ್ ಸರಬರಾಜು ಮಾಡುತ್ತಿಲ್ಲ ಎನ್ನುವುದು ಬಾರ್ ಮಾಲೀಕರ ಅಳಲು. ಇನ್ನು ಬಾರ್ ನಲ್ಲಿ ಬಿಯರ್ ಸ್ಟಾಕ್ ಇಲ್ಲದಿದ್ದಾಗ ಗ್ರಾಹಕರನ್ನು ಸಮಾಧಾನಪಡಿಸುವುದೇ ಒಂದು ಚಾಲೆಂಜ್ ಆಗಿದೆ ಎಂದು ಬಾರ್ ಮಾಲೀಕರು ಹೇಳುತ್ತಿದ್ದಾರೆ. ಒಟ್ನಲ್ಲಿ ಬೇಸಿಗೆ ಬಿಸಿಯಿಂದ ಆಚೆ ಬರಲು ಮದ್ಯ ಪ್ರಿಯರು, ಕೂಲ್ ಕೂಲ್ ಬಿಯರ್ ಗಳ ಮೊರೆ ಹೋಗಿದ್ದು, ಬಿಯರ್ ಗೆ ಭಾರಿ ಬೇಡಿಕೆ ಬಂದಿದೆ. ಆದ್ರೆ ಅಬಕಾರಿ ಇಲಾಖೆಯಿಂದ ಬೇಡಿಕೆಗೆ ತಕ್ಕಂತೆ ಬಿಯರ್ ಸರಬರಾಜು ಮಾಡಲು ಆಗುತ್ತಿಲ್ಲ. ಇದರಿಂದ ಬಾರ್ ಮಾಲೀಕರು ಸಹ ಬಿಯರ್ ಗಾಗಿ ಪರದಾಡುವಂತಾಗಿದೆ.
ಚಿತ್ರದುರ್ಗ, ಏಪ್ರಿಲ್ 08: ಮಹಾರಾಷ್ಟ್ರದ ಪುಣೆ ಮೂಲದ ಉದ್ಯಮಿಯಿಂದ ಹಣ ಸುಲಿಗೆ ಮಾಡಿದ ಪ್ರಕರಣ ಸಂಬಂಧ ಚಿತ್ರದುರ್ಗಪೊಲೀಸರು ನಗರಸಭೆಯ ಮಾಜಿ ಸದಸ್ಯ ಚಂದ್ರಶೇಖರ್ ಅಲಿಯಾಸ್ ಖೋಟಾ ನೋಟು ಚಂದ್ರನನ್ನು ಬಂಧಿಸಿದ್ದಾರೆ. ಈತನಿಗ ಸಾಥ್ ನೀಡಿದ್ದ ಮಂಗಳೂರು ಮೂಲದ ಕುಖ್ಯಾತ ವಂಚಕ ರೋಷನ್ ಸಾಲ್ಡಾನ ಎಂಬಾತನನ್ನೂ ವಶಕ್ಕೆ ಪಡೆಯಲಾಗಿದ್ದು, ಆರೋಪಿ ಚಂದ್ರನಿಗೆ ಸಂಬಂಧಿತ ಬ್ಯಾಂಕ್ ಅಕೌಂಟ್ನಲ್ಲಿದ್ದ 50 ಲಕ್ಷ ರೂಪಾಯಿ ಹಣವನ್ನು ಫ್ರೀಜ್ ಮಾಡಿಸಲಾಗಿದೆ. ಆ ಮೂಲಕ ರಾಜ್ಯ, ಹೊರರಾಜ್ಯದ ಉದ್ಯಮಿಗಳಿಗೆ ವಂಚಿಸುತ್ತಿದ್ದ ಜಾಲ ಬೇಧಿಸಿರುವ ಪೊಲೀಸರು, ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ಚಿತ್ರದುರ್ಗ ನಗರಸಭೆಗೆ ಸತತ ಎರಡು ಸಲ ಜೆಡಿಎಸ್ನಿಂದ ಸದಸ್ಯನಾಗಿ ಆಯ್ಕೆ ಆಗಿದ್ದ ಚಂದ್ರಶೇಖ ಅಸಲಿ ದಂಧೆಯೇ ವಂಚನೆ. ಖೋಟಾ ನೋಟು, ಹಣ ಡಬ್ಲಿಂಗ್ ದಂಧೆಯ ಕಿಂಗ್ ಪಿನ್ ಆಗಿರುವ ಈ ಚಂದ್ರ, ಅನೇಕ ಪ್ರಕರಣಗಳ ಆರೋಪಿ ಕೂಡ ಹೌದು. ಇದೇ ವಿಚಾರವಾಗಿ ಅನೇಕ ಸಲ ಜೈಲಿಗೆ ಹೋಗಿ ಬಂದರೂ ಈತ ತನ್ನ ಕರಾಳ ದಂಧೆ ಮಾತ್ರ ಬಿಟ್ಟಿರಲಿಲ್ಲ. ಇದೀಗ ಹೊಸ ರೀತಿಯ ವಂಚನೆಗೆ ಮುಂದಾಗಿದ್ದ ಆರೋಪಿ, ಕಡಿಮೆ ಬಡ್ಡಿ ದರದಲ್ಲಿ ಕೋಟಿಗಟ್ಟಲೆ ಹಣ ಸಾಲ ನೀಡುವುದಾಗಿ ನಂಬಿಸಿ ಉದ್ಯಮಿಗಳನ್ನು ಬುಟ್ಟಿಗೆ ಬೀಳಿಸುತ್ತಿದ್ದ. ವರ್ಷಕ್ಕೆ ಶೇ.3ರ ಬಡ್ಡಿ ದರದಲ್ಲಿ ಐವತ್ತು ಕೋಟಿ, ನೂರು ಕೋಟಿ ಫೈನಾನ್ಸ್ ನೀಡುವುದಾಗಿ ನಂಬಿಸಲು ಏಜಂಟರನ್ನೇ ನೇಮಿಸಿಕೊಂಡಿದ್ದ.
ಇನ್ನು ಇದೇ ರೀತಿ ಪುಣೆ ಮೂಲದ ಉದ್ಯಮಿ ಗುರುರಾಜ್ ಚರಂತಿಮಠ ಎಂಬುವರಿಗೆ ಕರೆ ಮಾಡಿದ್ದ ಈತನ ಸಹಚರ ರೋಷನ್ ಸಾಲ್ಡಾನ, ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿದ್ದ. 52 ಕೋಟಿ ರೂ.ಫೈನಾನ್ಸ್ ಮಾಡಲು ಕಾಗದಪತ್ರ ಮತ್ತು ಭದ್ರತೆಗಾಗಿ 75 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದ. ಅದರಂತೆ 50 ಲಕ್ಷ ರೂಪಾಯಿಯನ್ನು RTGS ಮೂಲಕ ಗುರುರಾಜ್ ನೀಡಿದ್ದರು. ಬಳಿಕ 25 ಲಕ್ಷ ರೂಪಾಯಿ ನಗದು ನೀಡಲೆಂದು ಆಗಮಿಸಿದವರನ್ನು ಚಿತ್ರದುರ್ಗದ ಕೋಟೆ ರಸ್ತೆಯಲ್ಲಿರುವ ಚಂದ್ರಶೇಖರ್ ಮನೆಗೆ ಕರೆಸಿಕೊಳ್ಳಲಾಗಿತ್ತು. ಅಲ್ಲಿ ಚಾಕು ತೋರಿಸಿ ಬೆದರಿಸಿದ್ದ ಆರೋಪಿಗಳು ಹಣ ಕಿತ್ತುಕೊಂಡು ಕಳುಹಿಸಿದ್ದರು. 2023ರ ಮೇ ತಿಂಗಳ 26ರಂದು ಈ ಘಟನೆ ನಡೆದಿತ್ತಾದ್ದರೂ ನಿನ್ನೆ ಅಂದರೆ 2026ರ ಏಪ್ರಿಲ್ 07ರಂದು ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಪಿಪಿಎಫ್ (PPF) ದೀರ್ಘಕಾಲದ ಸ್ಮಾಲ್ ಸೇವಿಂಗ್ಸ್ ಸ್ಕೀಮ್ ಆಗಿದೆ. 15 ವರ್ಷದ ಪಾವತಿ ಅವಧಿ, 21 ವರ್ಷಕ್ಕೆ ಮೆಚ್ಯೂರಿಟಿ ಇರುವ ಸ್ಕೀಮ್. ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗೆ ಹೂಡಿಕೆಗೆ ಅವಕಾಶ ಇರುತ್ತದೆ. ಸದ್ಯ ಶೇ. 7.1ರಷ್ಟು ವಾರ್ಷಿಕ ಬಡ್ಡಿ ಸಿಗುತ್ತದೆ. ದೀರ್ಘಾವಧಿ ಹೂಡಿಕೆಗೆ ಅವಕಾಶ ಕೊಡುವ ಸಣ್ಣ ಉಳಿತಾಯ ಯೋಜನೆ ಇದು. ಬ್ಯಾಂಕುಗಳ ಫಿಕ್ಸೆಡ್ ಡೆಪಾಸಿಟ್ ಮಟ್ಟದಷ್ಟು ಬಡ್ಡಿ, ಜೊತೆಗೆ ಟ್ಯಾಕ್ಸ್ ಬೆನಿಫಿಟ್ ಅನ್ನೂ ಇದು ನೀಡುತ್ತದೆ.
ಎಲ್ಐಸಿ ಪಾಲಿಸಿ, ಮ್ಯೂಚುವಲ್ ಫಂಡ್, ಹಾಗೂ ಫಿಕ್ಸೆಡ್ ಡೆಪಾಸಿಟ್ಗಳನ್ನೂ ಬಳಸಿ ಸಾಲ ಪಡೆಯಬಹುದು. ಇದೇ ಸೌಲಭ್ಯವು ಪಿಪಿಎಫ್ನಲ್ಲೂ ಸಿಗುತ್ತದೆ. ಆದರೆ, ಸಾಲ ಪಡೆಯಲು ಒಂದಷ್ಟು ನಿಬಂಧನೆಗಳಿವೆ. ಈ ಬಗ್ಗೆ ಒಂದಷ್ಟು ಮಾಹಿತಿ…
ಅವಧಿಗೆ ಮುಂಚೆ ಪಿಪಿಎಫ್ ಅನ್ನು ವಿತ್ಡ್ರಾ ಮಾಡಲು ಅವಕಾಶ ಇದೆ. ಅಕೌಂಟ್ ತೆರೆದು 7ನೇ ಹಣಕಾಸು ವರ್ಷದಿಂದ ಈ ಅವಕಾಶ ಸಿಗುತ್ತದೆ. ಆದರೆ, ಅಷ್ಟರೊಳಗೆ ನಿಮಗೆ ಸಾಲ ಬೇಕಿದ್ದರೆ ಪಡೆಯಬಹುದು. ಪಿಪಿಎಫ್ ಅಕೌಂಟ್ ತೆರೆದು 3 ಹಣಕಾಸು ವರ್ಷಗಳಾಗಿರಬೇಕು. 2023-24ರಲ್ಲಿ ನೀವು ಪಿಪಿಎಫ್ ಅಕೌಂಟ್ ತೆರೆದಿದ್ದರೆ ಸಾಲ ಪಡೆಯಲು 2025ರ ಏಪ್ರಿಲ್ 1ರಿಂದ ಅವಕಾಶ ಇರುತ್ತದೆ. 2028ರ ಮಾರ್ಚ್ 31ರವರೆಗೂ ನಿಮಗೆ ಅವಕಾಶ ಇರುತ್ತದೆ. ಅಂದರೆ, ಮೂರು ವರ್ಷದ ಅವಧಿಯಲ್ಲಿ ನೀವು ಪಿಪಿಎಫ್ ಸಾಲ ಪಡೆಯಬಹುದು.
ಶೇ. 25 ಮಾತ್ರವೇ ಸಾಲ
ಪಿಪಿಎಫ್ ಸಾಲ ಪಡೆಯಲು ಇನ್ನೂ ಕೆಲ ಸಂಕೀರ್ಣ ನಿಯಮಗಳಿವೆ. ನೀವು ಸಾಲ ಪಡೆಯಲಾಗುತ್ತಿರುವ ವರ್ಷದ ಹಿಂದಿನ ವರ್ಷದ ಕೊನೆಯಲ್ಲಿ ನಿಮ್ಮ ಪಿಪಿಎಫ್ ಅಕೌಂಟ್ನಲ್ಲಿ ಎಷ್ಟು ಬ್ಯಾಲನ್ಸ್ ಇದೆಯೋ ಅದರ ಶೇ. 25ರಷ್ಟನ್ನು ಮಾತ್ರವೇ ಸಾಲವಾಗಿ ಪಡೆಯಬಹುದು.
ನೀವು ಮೂರು ವರ್ಷ ಗರಿಷ್ಠ 4.5 ಲಕ್ಷ ರೂ ಹೂಡಿಕೆ ಮಾಡಿದ್ದರೆ 1,12,500 ರೂ ಅನ್ನು ಮಾತ್ರವೇ ಸಾಲವಾಗಿ ಪಡೆಯಬಹುದು.
ಬಡ್ಡಿ ಶೇ. 1 ಮಾತ್ರ, ಆದರೆ…
ಪಿಪಿಎಫ್ನಲ್ಲಿ ನೀವು ಪಡೆಯುವ ಸಾಲಕ್ಕೆ ಬಡ್ಡಿದರ ವಾರ್ಷಿಕ ಶೇ. 1 ಮಾತ್ರ. ನೀವು 36 ತಿಂಗಳೊಳಗೆ ಅದನ್ನು ತೀರಿಸಿದರೆ ಮಾತ್ರ ಇಷ್ಟು ಕಡಿಮೆ ಬಡ್ಡಿ. ಒಂದು ವೇಳೆ 36 ತಿಂಗಳಲ್ಲಿ ಸಾಲ ವಾಪಸ್ ಮಾಡದಿದ್ದರೆ ಬಡ್ಡಿದರ ಶೇ 6 ಅನ್ವಯ ಆಗುತ್ತದೆ. ಗಮನಿಸಬೇಕಾದ ಸಂಗತಿ ಎಂದರೆ ನೀವು ಸಾಲ ಪಡೆದಿರುವ ಅವಧಿಯಲ್ಲಿ ನಿಮ್ಮ ಪಿಪಿಎಫ್ ಹಣಕ್ಕೆ ಯಾವ ಬಡ್ಡಿ ಆದಾಯ ಸಿಗುವುದಿಲ್ಲ. ಅಂದರೆ, ಪಿಪಿಎಫ್ ಮೊತ್ತಕ್ಕೆ ಸರ್ಕಾರ ವಾರ್ಷಿಕವಾಗಿ ನೀಡುವ ಶೇ. 7.1 ಬಡ್ಡಿ ಈ ಸಂದರ್ಭದಲ್ಲಿ ಜಮೆಯಾಗುವುದಿಲ್ಲ. ಸಾಲ ವಾಪಸ್ ಮಾಡುವವರೆಗೂ ಹೀಗೇ ಇರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಐಪಿಎಲ್ 19 (IPL 2026) ನೇ ಸೀಸನ್ನ 14ನೇ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟಾನ್ಸ್ (DC vs GT) ತಂಡಗಳ ನಡುವೆ ನಡೆಯುತ್ತಿದೆ. ಈ ಆವೃತ್ತಿಯಲ್ಲಿ ಎರಡೂ ತಂಡಗಳ ಮೂರನೇ ಪಂದ್ಯ ಇದಾಗಿದೆ. ಈ ಆವೃತ್ತಿಯಲ್ಲಿ ಡೆಲ್ಲಿ ಅಜೇಯವಾಗಿದ್ದು, ಆಲ್ ರೌಂಡರ್ ಅಕ್ಷರ್ ಪಟೇಲ್ ನೇತೃತ್ವದಲ್ಲಿ, ಡೆಲ್ಲಿ ತನ್ನ ಎರಡೂ ಪಂದ್ಯಗಳನ್ನು ಗೆದ್ದಿದೆ. ಡೆಲ್ಲಿ ತನ್ನ ಮೊದಲ 2 ಪಂದ್ಯಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳನ್ನು ಸೋಲಿಸಿದೆ. ಮತ್ತೊಂದೆಡೆ, ಗುಜರಾತ್ ಟೈಟಾನ್ಸ್ ಇನ್ನೂ ತಮ್ಮ ಮೊದಲ ಗೆಲುವಿಗಾಗಿ ಕಾಯುತ್ತಿದೆ. ಗುಜರಾತ್ ತನ್ನ ಅಭಿಯಾನದ ಮೊದಲ 2 ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತಿದೆ. ಆದ್ದರಿಂದ, ಗುಜರಾತ್ ತನ್ನ ಮೂರನೇ ಪಂದ್ಯದಲ್ಲಿ ಹ್ಯಾಟ್ರಿಕ್ ಸೋಲುಗಳನ್ನು ತಪ್ಪಿಸಲು ಮತ್ತು ದೆಹಲಿ ತನ್ನ ಸತತ ಮೂರನೇ ಪಂದ್ಯವನ್ನು ಗೆಲ್ಲುವುದನ್ನು ತಡೆಯುವ ಡಬಲ್ ಸವಾಲನ್ನು ಎದುರಿಸಲಿದೆ.
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್
ಡೆಲ್ಲಿ ಕ್ಯಾಪಿಟಲ್ಸ್ ತಂಡ ಸತತ ಮೂರನೇ ಬಾರಿಗೆ ಟಾಸ್ ಗೆದ್ದಿದ್ದು, ನಾಯಕ ಅಕ್ಷರ್ ಪಟೇಲ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗೆಯೇ ಡೆಲ್ಲಿ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇತ್ತ ಹಿಂದಿನ ಪಂದ್ಯದಲ್ಲಿ ಕುತ್ತಿಗೆ ನೋವಿನಿಂದ ಬಳಲುತ್ತಿದ್ದ ಗುಜರಾತ್ ನಾಯಕ ಶುಭ್ಮನ್ ಗಿಲ್ ತಂಡಕ್ಕೆ ಮರಳಿದ್ದು, ಟಾಸ್ ಗೆದ್ದಿದ್ದರೆ ಮೊದಲು ಬ್ಯಾಟಿಂಗ್ ಮಾಡುವುದಾಗಿ ಹೇಳಿದರು.
ಹೆಡ್ ಟು ಹೆಡ್ ದಾಖಲೆ
ಐಪಿಎಲ್ನಲ್ಲಿ ಇದುವರೆಗೆ ಗುಜರಾತ್ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಒಟ್ಟು 7 ಪಂದ್ಯಗಳು ನಡೆದಿವೆ. ಈ ಪೈಕಿ ಗುಜರಾತ್ ಟೈಟಾನ್ಸ್ 4 ಪಂದ್ಯಗಳಲ್ಲಿ ಗೆದ್ದಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ 3 ಪಂದ್ಯಗಳಲ್ಲಿ ಗೆದ್ದಿದೆ. ಇದರರ್ಥ ಎರಡೂ ತಂಡಗಳ ನಡುವೆ ಕಠಿಣ ಸ್ಪರ್ಧೆಯನ್ನು ನಿರೀಕ್ಷಿಸಲಾಗಿದೆ. ಆದಾಗ್ಯೂ, ಇತ್ತೀಚಿನ ಫಾರ್ಮ್ ಅನ್ನು ಆಧರಿಸಿ, ಡೆಲ್ಲಿ ಮೇಲುಗೈ ಸಾಧಿಸಿದೆ ಎಂದು ತೋರುತ್ತದೆ. ಇನ್ನು ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಉಭಯ ತಂಡಗಳ ಸ್ಥಾನವನ್ನು ನೋಡುವುದಾದರೆ.. ಡೆಲ್ಲಿ ಕ್ಯಾಪಿಟಲ್ಸ್ 4 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ, ಗುಜರಾತ್ ಒಂಬತ್ತನೇ ಸ್ಥಾನದಲ್ಲಿದೆ.
ಕೆಲಸದ ಸ್ಥಳಗಳಲ್ಲಿ ಕೆಲ ಉದ್ಯೋಗಿಗಳು (employees) ಅನುಭವಿಸುವ ಒತ್ತಡ ಹೇಳಲಾಗದು. ಆದರೆ ಏನ್ ಮಾಡೋದು, ಕೆಲಸ ಮಾಡದೇ ಇದ್ದರೆ ವಿಧಿಯಿಲ್ಲ. ಅದರಲ್ಲೂ ಈ ಕಾರ್ಪೊರೇಟ್ ಜಗತ್ತಿನಲ್ಲಿ ಒತ್ತಡ ಡಬಲ್ ಆಗಿರುತ್ತದೆ. ಇದಕ್ಕೆ ಸಾಕ್ಷಿಯೆನ್ನುವಂತಿದೆ ಈ ದೃಶ್ಯ. ವ್ಯಕ್ತಿಯೊಬ್ಬ ರಾತ್ರಿ 12 ಗಂಟೆಯಾದ್ರು ಮನೆಗೆ ಹೋಗದೇ ಬೈಕ್ನಲ್ಲಿ ಲ್ಯಾಪ್ ಟಾಪ್ ಹಿಡಿದು ಕುಳಿತು ಆಫೀಸ್ ಕೆಲಸ ಮಾಡುತ್ತಿರುವ ದೃಶ್ಯ ವೈರಲ್ ಆಗಿದೆ. ಈ ವಿಡಿಯೋ ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ.
@ravi_bhojane ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ನಗರದ ಹೆಚ್ಚಿನ ಜನರು ನಿದ್ರಿಸುತ್ತಿರುವ ಸಮಯದಲ್ಲಿ ಅಂದರೆ ತಡರಾತ್ರಿ 12:15 ಕ್ಕೆ ವ್ಯಕ್ತಿಯೊಬ್ಬ ಬೈಕ್ನಲ್ಲಿ ಲ್ಯಾಪ್ ಟಾಪ್ ತೆರೆದು ಕುಳಿತು ಕೆಲಸ ಮಾಡುತ್ತಿರುವುದನ್ನು ಕಾಣಬಹುದು. ಈ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ವ್ಯಕ್ತಿಯೊಬ್ಬ ಸೆರೆ ಹಿಡಿದಿದ್ದು, ಕೆಲಸದಲ್ಲಿ ಬ್ಯುಸಿಯಾಗಿರುವ ವ್ಯಕ್ತಿಯನ್ನು ಮಾತನಾಡಿಸಿದ್ದಾನೆ. ಕೆಲಸ ಮಾಡುತ್ತಿರುವ ಬಗ್ಗೆ ವಿಚಾರಿಸಿದಾಗ ಲ್ಯಾಪ್ ಟಾಪ್ ಹಿಡಿದು ಕುಳಿತ ವ್ಯಕ್ತಿಯೂ ಏನು ಮಾತನಾಡದೇ ನಕ್ಕಿದ್ದಾನೆ.
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇದು ಕಾರ್ಪೋರೆಟ್ ಜಗತ್ತು ಎಂದು ಹೇಳಿದ್ದಾರೆ. ಇನ್ನೊಬ್ಬರು, ಅಣ್ಣ ಮನೆಗೆ ಹೋಗಿ ಮಲಗು ಎಂದಿದ್ದಾರೆ. ಮತ್ತೊಬ್ಬರು, ಕಳೆದ ವಾರ ನನ್ನ ಪರಿಸ್ಥಿತಿ ಇದೇ ಆಗಿತ್ತು ಎಂದು ವಾಸ್ತವ ಸ್ಥಿತಿ ವಿವರಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಭಾರತದಲ್ಲಿ ಪ್ರತಿವರ್ಷ ಡೆಂಗ್ಯೂ (Dengue) ಪ್ರಕರಣಗಳು ಹೆಚ್ಚುತ್ತಿದ್ದು, ಅನೇಕ ಮಂದಿ ಇದರ ಪರಿಣಾಮವಾಗಿ ಸಾವನ್ನಪ್ಪುತ್ತಿದ್ದಾರೆ. ಇದುವರೆಗೆ ಡೆಂಗ್ಯೂಗೆ ನಿರ್ದಿಷ್ಟ ಲಸಿಕೆ ಲಭ್ಯವಿರಲಿಲ್ಲ. ಆದರೆ ಈಗ ದೇಶದಲ್ಲಿ ಶೀಘ್ರದಲ್ಲೇ ಡೆಂಗ್ಯೂ ಲಸಿಕೆ ಲಭ್ಯವಾಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಹೌದು, ‘Qdenga’ ಲಸಿಕೆಯ ಅಂತಿಮ ಹಂತದ ಟ್ರಯಲ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಲಸಿಕೆಯನ್ನು ಜಪಾನ್ನ ಪ್ರಸಿದ್ಧ ಔಷಧ ಕಂಪನಿ ಟಕೆಡಾ ಫಾರ್ಮಾಸ್ಯುಟಿಕಲ್ಸ್ (Takeda Pharmaceutical Company) ಅಭಿವೃದ್ಧಿಪಡಿಸಿದ್ದು, ಹೈದರಾಬಾದ್ನ ಬಯೋಲಾಜಿಕಲ್ ಇ (Biological E) ಸಂಸ್ಥೆಯೊಂದಿಗೆ ಸಹಭಾಗಿತ್ವದಲ್ಲಿ ಲಭ್ಯವಾಗುವ ಸಾಧ್ಯತೆ ಇದೆ. ಇದೇ ವರ್ಷ ಈ ಲಸಿಕೆ ದೊರಕುವ ನಿರೀಕ್ಷೆಯಿದೆ. ಹಾಗಾದರೆ ಈ ಲಸಿಕೆ ಹೇಗೆ ಕಾರ್ಯ ನಿರ್ವಹಿಸುತ್ತದೆ, ಯಾರು ಯಾವಾಗ ತೆಗೆದುಕೊಳ್ಳಬೇಕು, ನಿಜವಾಗಿಯೂ ಇದು ಕೆಲಸ ಮಾಡುತ್ತದೆಯೇ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
Qdenga (TAK-003) ಎಂಬುದು 4 ರಿಂದ 60 ವರ್ಷ ವಯಸ್ಸಿನವರಿಗೆ ಡೆಂಗ್ಯೂ ತಡೆಗಟ್ಟಲು ಅನುಮೋದಿಸಲಾದ ಟೆಟ್ರಾವಲೆಂಟ್ ಲಸಿಕೆಯಾಗಿದೆ. ಇದು ಎಲ್ಲಾ 4 ಡೆಂಗ್ಯೂ ತಳಿಗಳ ವಿರುದ್ಧ ರಕ್ಷಣೆ ನೀಡುತ್ತದೆ. 3 ತಿಂಗಳ ಅಂತರದಲ್ಲಿ ಎರಡು ಡೋಸ್ಗಳನ್ನು ನೀಡಲಾಗುವ ಈ ಲಸಿಕೆ, 2026 ರಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದು ಲೈವ್ ಅಟೆನ್ಯೂಯೇಟೆಡ್ ಲಸಿಕೆಯಾಗಿದ್ದು, ತೀವ್ರವಾದ ಡೆಂಗ್ಯೂ ಸೋಂಕು ಮತ್ತು ಆಸ್ಪತ್ರೆಗೆ ದಾಖಲಾಗುವ ಪ್ರಕರಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಲಸಿಕೆಯನ್ನು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ದ ವಿಷಯ ತಜ್ಞರ ಸಮಿತಿಯು ಭಾರತದಲ್ಲಿ ಬಳಸಲು ಶಿಫಾರಸು ಮಾಡಿದೆ.
40ಕ್ಕೂ ಹೆಚ್ಚು ದೇಶಗಳಲ್ಲಿ ಅನುಮತಿ
ಜಾಗತಿಕವಾಗಿ 28,000 ಕ್ಕೂ ಹೆಚ್ಚು ಜನರ ಮೇಲೆ ಪರೀಕ್ಷಿಸಲಾದ ಈ ಲಸಿಕೆಯನ್ನು ಈಗಾಗಲೇ ಯೂರೋಪ್, ಬ್ರಿಟನ್, ಇಂಡೋನೇಷಿಯಾ ಮತ್ತು ಬ್ರೆಜಿಲ್ ಸೇರಿದಂತೆ 40ಕ್ಕೂ ಹೆಚ್ಚು ದೇಶಗಳಲ್ಲಿ ಬಳಸಲಾಗುತ್ತಿದೆ. ಜೊತೆಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಯಿಂದ ಪ್ರೀಕ್ವಾಲಿಫಿಕೇಶನ್ ಕೂಡ ಸಿಕ್ಕಿದೆ. ಇದರಿಂದ ಈ ಲಸಿಕೆ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ ಎಂಬುದಕ್ಕೆ ದೃಢತೆ ಸಿಕ್ಕಿದೆ. ಇದು ಭಾರತದಲ್ಲಿ ಬಿಡುಗಡೆಯಾಗುವಾಗ ಲಸಿಕೆಯ ಬೆಲೆಯನ್ನು ನಿರ್ಧರಿಸಲಾಗುತ್ತದೆ.
ಭಾರತದಲ್ಲಿ ಪ್ರತಿವರ್ಷ ಸಾವಿರಾರು ಡೆಂಗ್ಯೂ ಪ್ರಕರಣಗಳು ದಾಖಲಾಗುತ್ತವೆ. ಹಲವಾರು ಮಂದಿ ಈ ರೋಗದಿಂದ ಸಾವನ್ನಪ್ಪುತ್ತಾರೆ. ಲಸಿಕೆ ಲಭ್ಯವಾದ ಬಳಿಕ, ಮುನ್ನೆಚ್ಚರಿಕೆಯಾಗಿ ಲಸಿಕೆ ನೀಡುವ ಮೂಲಕ ಡೆಂಗ್ಯೂ ಸೋಂಕನ್ನು ತಡೆಯಲು ಸಾಧ್ಯವಾಗುತ್ತದೆ. ಈ ಲಸಿಕೆಯ ವಿಶೇಷತೆಯೆಂದರೆ, ಈಗಾಗಲೇ ಡೆಂಗ್ಯೂ ಆಗಿರುವವರ ಮೇಲೂ ಇದು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬಹುದು ಎಂದು ಹೇಳಲಾಗುತ್ತಿದೆ. ಪ್ರಸ್ತುತ ಪರೀಕ್ಷಾ ಹಂತದಲ್ಲಿರುವುದರಿಂದ ಜೊತೆಗೆ ಭಾರತದಲ್ಲಿ ಯಾವುದೇ ಲಸಿಕೆಯನ್ನು ಸಾರ್ವಜನಿಕ ಬಳಕೆಗೆ ಮುನ್ನ ಕೇಂದ್ರೀಯ ಔಷಧಗಳ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಯ ಅನುಮತಿ ಅಗತ್ಯವಿದೆ. ಹಾಗಾಗಿ ಈ ಲಸಿಕೆಗೆ ಇನ್ನೂ ಅಂತಿಮ ಅನುಮೋದನೆ ದೊರಕಿಲ್ಲ. ಅನುಮತಿ ಸಿಕ್ಕ ನಂತರವೇ ಸಾಮಾನ್ಯ ಜನರಿಗೆ ಲಸಿಕೆ ನೀಡಲಾಗುತ್ತದೆ. ಈ ಡೆಂಗ್ಯೂ ಲಸಿಕೆ ಭಾರತದಲ್ಲಿ ಲಭ್ಯವಾದರೆ, ಇದು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಬಹುದು. ಲಸಿಕೆ ಜೊತೆಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವುದರಿಂದ ಡೆಂಗ್ಯೂ ವಿರುದ್ಧ ಹೋರಾಟದಲ್ಲಿ ದೊಡ್ಡ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ.
ಜಬಲ್ಪುರ, ಏಪ್ರಿಲ್ 8: ‘ನೀರೊಳಗಿರ್ದುಂ ಬೆಮರ್ತನುರಗಪತಾಕಂ’ ಎಂಬುದು ರನ್ನನ ಗದಾಯುದ್ಧ ಕಾವ್ಯದಲ್ಲಿ ಬರುವ ಮುಖ್ಯವಾದ ಸಾಲು. ಮಹಾಭಾರತದ ಕುರುಕ್ಷೇತ್ರ ಯುದ್ಧದ ಅಂತಿಮ ಘಟ್ಟದಲ್ಲಿ ಭೀಮನಿಂದ ತಪ್ಪಿಸಿಕೊಳ್ಳುವ ಸಲುವಾಗಿ ದುರ್ಯೋಧನ ವೈಶಂಪಾಯನ ಸರೋವರದ ಕೆಳಗೆ ಅಡಗಿರುತ್ತಾನೆ. ಆಗ ಭೀಮನ ಸಿಂಹಘರ್ಜನೆಯನ್ನು ಕೇಳಿ ತಂಪಾದ ನೀರಿನೊಳಗಿದ್ದರೂ ಬೆವರುತ್ತಿರುತ್ತಾನೆ ಎಂದು ರನ್ನ ವರ್ಣಿಸಿದ್ದಾರೆ. ಅದೆಲ್ಲ ಮಹಾಭಾರತದ ಕತೆಯಾದರೆ ಮಧ್ಯಪ್ರದೇಶದಲ್ಲೊಬ್ಬ ಕಳ್ಳ ಕೂಡ ದುರ್ಯೋಧನ ಭೀಮನಿಂದ ತಪ್ಪಿಸಿಕೊಳ್ಳಲು ಮಾಡಿದ ಸಾಹಸದ ರೀತಿಯಲ್ಲೇ ಪೊಲೀಸರಿಂದ ತಪ್ಪಿಸಿಕೊಳ್ಳಲು ಕೊಳದೊಳಗೆ ಬರೋಬ್ಬರಿ 5 ಗಂಟೆ ಅಡಗಿ ಕುಳಿತಿದ್ದಾನೆ!
ನೀರು ತುಂಬಿದ್ದ ಕೊಳದೊಳಗೆ ಅಡಗಿದ್ದ ಆತ ಉಸಿರಾಡಲು ಕಷ್ಟವಾದಾಗ ಟೊಳ್ಳಾಗಿರುವ ತಾವರೆ ಹೂವಿನ ಕಾಂಡವನ್ನು ನೀರಿನಿಂದ ಮೇಲಕ್ಕೆ ಹಿಡಿದು, ನೀರಿನೊಳಗಿಂದ ಆ ಕಾಂಡದ ಮೂಲಕ ಗಾಳಿಯನ್ನು ಉಸಿರಾಡುವ ಪ್ಲಾನ್ ಮಾಡಿದ್ದಾನೆ. ಆತ ಅಲ್ಲಿ ಅಡಗಿದ್ದು ಪೊಲೀಸರಿಗೆ ಗೊತ್ತಾಗಿದ್ದು ಹೇಗೆ? ಆತನನ್ನು ಸೆರೆಹಿಡಿದಿದ್ದು ಹೇಗೆ? ಎಂಬ ಕತೆ ಯಾವ ಸಿನಿಮಾಗೂ ಕಡಿಮೆಯೇನಿಲ್ಲ.
ಈ ಘಟನೆ ನಡೆದಿದ್ದು ಏಪ್ರಿಲ್ 6ರ ಮುಂಜಾನೆ. ಜಬಲ್ಪುರ್ ವಿಭಾಗದ ಸಿಹೋರಾ ರೈಲ್ವೆ ನಿಲ್ದಾಣದಲ್ಲಿ ಬೆಳಗಿನ ಜಾವ 4.50ರ ಸುಮಾರಿಗೆ ಕರ್ತವ್ಯದಲ್ಲಿದ್ದ RPF ಸಿಬ್ಬಂದಿ ರೈಲು ಸಂಖ್ಯೆ 11753 ರೈಲು ನಿಲ್ದಾಣದಿಂದ ಇಳಿಯುತ್ತಿರುವ ಅನುಮಾನಾಸ್ಪದ ವ್ಯಕ್ತಿಯನ್ನು ಗಮನಿಸಿದರು. ಅವರು ನೋಡುತ್ತಿದ್ದಾಗಲೇ ಆ ವ್ಯಕ್ತಿ ಮಹಿಳೆಯೊಬ್ಬರ ಪರ್ಸ್ ಕದಿಯಲು ಪ್ರಯತ್ನಿಸಿದ್ದ. ಬಳಿಕ ಅಲ್ಲಿಂದ ಓಡಿಹೋಗಲು ಪ್ರಯತ್ನಿಸಿದನು. ಆತನನ್ನು ಹಿಂಬಾಲಿಸಿಕೊಂಡು ಅಧಿಕಾರಿಗಳು ಬರುತ್ತಿದ್ದಂತೆ, ಆ ಆರೋಪಿ ಸ್ಥಳೀಯ ಮಾರುಕಟ್ಟೆಯ ಬಳಿಯ ಹತ್ತಿರದ ಪಾಚಿಯಿಂದ ಆವೃತವಾದ ಕೊಳಕ್ಕೆ ಹಾರಿದನು. ಪೊಲೀಸರಿಂದ ತಪ್ಪಿಸಿಕೊಳ್ಳಲು ಅವನು 5 ಗಂಟೆ ಆ ಕೆಸರು ತುಂಬಿದ ಕೊಳದ ನೀರಿನ ಅಡಿಯಲ್ಲಿ ಅಡಗಿಕೊಂಡಿದ್ದನು. ತಾನೆಲ್ಲಿದ್ದೇನೆಂದು ಯಾರೂ ಪತ್ತೆಹಚ್ಚಬಾರದು ಎಂದು ನೀರೊಳಗಿಂದ ಉಸಿರಾಡಲು ಟೊಳ್ಳಾದ ಕಮಲದ ಕಾಂಡವನ್ನು ಬಳಸಿದನು.
ಅವನನ್ನು ತಪ್ಪಿಸಿಕೊಳ್ಳಲು ಬಿಡಬಾರದು ಎಂದು ನಿರ್ಧರಿಸಿದ ಆರ್ಪಿಎಫ್ ಸಿಬ್ಬಂದಿ ಅಷ್ಟೂ ಹೊತ್ತು ದಡದಲ್ಲೇ ಕಾದಿದ್ದರು. ಕೊನೆಗೆ ಸ್ಥಳೀಯ ಪೊಲೀಸರೊಂದಿಗೆ ಅವರು ಆ ಕೊಳವನ್ನು ಸ್ವಚ್ಛಗೊಳಿಸಲು ಡೈವರ್ಗಳನ್ನು ನಿಯೋಜಿಸಿದರು. ದೀರ್ಘಕಾಲದ ಶೋಧ ಕಾರ್ಯಾಚರಣೆಯ ನಂತರ 5 ಗಂಟೆಗಳ ಕಾಲ ನೀರೊಳಗೆ ಅಡಗಿದ್ದ ಆ ಆರೋಪಿಯನ್ನು ಕೊನೆಗೂ ಪತ್ತೆಹಚ್ಚಿ, ನೀರಿನ ಒಳಗಿಂದ ಹೊರಗೆ ಎಳೆದುಕೊಂಡು ಹೋಗಲಾಯಿತು.
ಆಗಲೂ, ಅವನು ಕೊನೆಯ ಬಾರಿಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದನು. ಆದರೆ, ಪೊಲೀಸರ ತಂಡ ಆತನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಯಿತು. ಈ ಗಲಾಟೆಯ ಸಮಯದಲ್ಲಿ ಪೊಲೀಸರಿಗೆ ಸಣ್ಣಪುಟ್ಟ ಗಾಯಗಳೂ ಆದವು. ಪೊಲೀಸರನ್ನು ಇಷ್ಟೆಲ್ಲ ಸತಾಯಿಸಿದ ಆರೋಪಿ ಉತ್ತರ ಪ್ರದೇಶದ ಬಿಜ್ನೋರ್ ನಿವಾಸಿ ಹರ್ವಿಂದರ್ ಸಿಂಗ್. 32 ವರ್ಷದ ಹರ್ವಿಂದರ್ ಸಿಂಗ್ ಓರ್ವ ಅಂತರರಾಜ್ಯ ಅಪರಾಧಿ. ರೈಲು ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡಿದ್ದ ಹಲವು ಆರೋಪಗಳು ಇವನ ಮೇಲಿದೆ. ಆತ ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಳ್ಳತನ ನಡೆಸಿದ್ದ. ಕೊನೆಗೂ ಆತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ