IND vs AFG: 11ನೇ ಟೆಸ್ಟ್ ಶತಕ ಬಾರಿಸಿದ ನಾಯಕ ಶುಭ್​ಮನ್ ಗಿಲ್

ಅಫ್ಘಾನಿಸ್ತಾನದ ವಿರುದ್ಧ ಇಂದಿನಿಂದ ನ್ಯೂ ಚಂಡೀಗಢದ ಮುಲ್ಲನ್‌ಪುರದಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ಆರಂಭವಾಗಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡುತ್ತಿರುವ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿದೆ. ತಂಡದ ಪರ ಆರಂಭಿಕ ಕೆಎಲ್ ರಾಹುಲ್ ಶತಕ ಬಾರಿಸುವುದರ ಜೊತೆಗೆ ನಾಯಕ ಶುಭ್​ಮನ್ ಗಿಲ್ ಕೂಡ ಶತಕ ಸಿಡಿಸಿ ಮಿಂಚಿದ್ದಾರೆ. ಇದು ಗಿಲ್ ಅವರ ಟೆಸ್ಡ್ ವೃತ್ತಿಜೀವನದ 11ನೇ ಶತಕವಾಗಿದೆ. ತಮ್ಮ ಶತಕದ ಇನ್ನಿಂಗ್ಸ್​ನಲ್ಲಿ 138 ಎಸೆತಗಳನ್ನು ಎದುರಿಸಿದ ಗಿಲ್ 11 ಬೌಂಡರಿ ಹಾಗೂ 1 ಸಿಕ್ಸರ್ ಸಹ ಬಾರಿಸಿದರು. ಗಿಲ್ ಈ ಶತಕದ ಜೊತೆಗೆ ರಿಷಭ್ ಪಂತ್ ಜೊತೆಗೂಡಿ 4ನೇ ವಿಕೆಟ್​ಗೆ ಶತಕದ ಜೊತೆಯಾಟವನ್ನು ಕಟ್ಟಿದರು. ಇದಕ್ಕೂ ಮುನ್ನ ಗಿಲ್, ರಾಹುಲ್ ಜೊತೆಗೂ 67 ರನ್​ಗಳ ಜೊತೆಯಾಟವನ್ನಾಡಿದ್ದರು.

Source link

‘ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ’; ಹಾನಗಲ್‌ನಲ್ಲಿ ಮುಸ್ಲಿಂ ಸಮುದಾಯದಿಂದ ಸರ್ಕಾರಕ್ಕೆ ಮನವಿ – Kannada News

‘ಹಸುವನ್ನು ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸುವಂತೆ ಆಗ್ರಹಿಸಿ ಪ್ರತಿಭಟನೆ

ಹಾವೇರಿ, ಜೂ.6: ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್‌ಗಿರಿಗೆ ಬ್ರೇಕ್ ಹಾಕಲು ಹಾಗೂ ಗೋಸಂರಕ್ಷಣೆಗೆ ಕಾನೂನಾತ್ಮಕ ಬಲ ತುಂಬಲು ‘ಹಸುವನ್ನು ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸಬೇಕು ಎಂದು ಆಗ್ರಹಿಸಿ ಮುಸ್ಲಿಂ ಸಮುದಾಯದ ನೂರಾರು ಜನರು ಹಾವೇರಿ ಜಿಲ್ಲೆಯಲ್ಲಿ ಹಠಾತ್ ಪ್ರತಿಭಟನೆ ನಡೆಸಿದ್ದಾರೆ.

ಜಿಲ್ಲೆಯ ಹಾನಗಲ್‌ ಪಟ್ಟಣದ ಪ್ರಮುಖ ಕೇಂದ್ರವಾದ ಎಂ.ಜೆ ಸರ್ಕಲ್‌ನಲ್ಲಿ ಜಮಾಯಿಸಿದ ಅಂಜುಮನ್-ಎ-ಇಸ್ಲಾಂ ಕಮಿಟಿಯ ಪದಾಧಿಕಾರಿಗಳು, ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ನೂರಾರು ಸಾರ್ವಜನಿಕರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗದೆ, ವಿಶಿಷ್ಟವಾಗಿ ತಮ್ಮ ಬೇಡಿಕೆಗಳನ್ನು ಮಂಡಿಸಿದರು. ಬಳಿಕ ಪಟ್ಟಣದ ತಹಶೀಲ್ದಾರ್ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಜಂಟಿ ಮನವಿ ಪತ್ರವನ್ನು ರವಾನಿಸಿದರು.

ಇದನ್ನೂ ಓದಿ: ‘ಲಕ್ಷಾಂತರ ರೂ. ಅನುದಾನ ಕೊಟ್ಟರೂ ಜಿಲ್ಲೆಯಲ್ಲಿ ಗಾಂಜಾ, ಬೆಟ್ಟಿಂಗ್ ನಿಂತಿಲ್ಲ ಯಾಕೆ’?: ಕೋಲಾರ ಎಸ್ಪಿಗೆ ಶಾಸಕ ಸಮೃದ್ಧಿ ಮಂಜುನಾಥ್ ತರಾಟೆ

ಇಲ್ಲಿದೆ ನೋಡಿ ವಿಡಿಯೋ

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಮುದಾಯದ ಮುಖಂಡರು, “ದೇಶದ ಕೆಲವು ಭಾಗಗಳಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಂಡು ನೈತಿಕ ಪೊಲೀಸ್‌ಗಿರಿ ನಡೆಸಲಾಗುತ್ತಿದೆ. ಸಮಾಜದ ಶಾಂತಿ ಕದಡಲು ಯತ್ನಿಸುತ್ತಿರುವ ಕೆಲವು ಉಗ್ರ ಹಿಂದುತ್ವವಾದಿ ಸಂಘಟನೆಗಳ ನಡೆ ಖಂಡನೀಯ. ಒಂದು ವೇಳೆ ಕೇಂದ್ರ ಸರ್ಕಾರವೇ ಹಸುವನ್ನು ಅಧಿಕೃತವಾಗಿ ‘ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸಿದರೆ, ಗೋಸಂರಕ್ಷಣೆಗೆ ಸರ್ಕಾರದ ಮಟ್ಟದಲ್ಲೇ ಹೆಚ್ಚಿನ ಒತ್ತು ಸಿಗುತ್ತದೆ. ಜೊತೆಗೆ ಗೋವಿನ ಹೆಸರಿನಲ್ಲಿ ನಡೆಯುವ ಗಲಾಟೆಗಳು ಹಾಗೂ ರಾಜಕೀಯಕ್ಕೆ ಕಾಯಂ ತೆರೆ ಬೀಳಲಿದೆ” ಎಂದು ಹೇಳಿದ್ದಾರೆ . ಮುಸ್ಲಿಂ ಸಮುದಾಯವೇ ಮುಂಚೂಣಿಗೆ ನಿಂತು ಹಸುವಿನ ರಕ್ಷಣೆಗಾಗಿ ಧ್ವನಿ ಎತ್ತಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ವರದಿ: ಅಣ್ಣಪ್ಪ ಬಾರ್ಕಿ

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:45 pm, Sat, 6 June 26

Source link

ವಿಜಯ್ ಕ್ಷೇತ್ರದಿಂದ ಕಣಕ್ಕಿಳಿಯಲಿರುವ ಮತ್ತೊಬ್ಬ ಸ್ಟಾರ್ ನಟ – Kannada News

ತಮಿಳುನಾಡಿನ ಸಿಎಂ ಆಗಿ ವಿಜಯ್ (Vijay) ಪ್ರಮಾಣ ವಚನ ಸ್ವೀಕರಿಸಿ ತಿಂಗಳಾಗುತ್ತಾ ಬರುತ್ತಿದೆ. ತಮಿಳುನಾಡು ವಿಧಾನಸಭೆಗೆ ಎರಡು ಕ್ಷೇತ್ರಗಳಿಂದ ವಿಜಯ್ ಸ್ಪರ್ಧಿಸಿದ್ದರು. ಪೆರಂಬೂರು ಮತ್ತು ತಿರುಚ್ಚಿ ಈಸ್ಟ್. ಎರಡೂ ಕ್ಷೇತ್ರಗಳಲ್ಲಿಯೂ ವಿಜಯ್ ದೊಡ್ಡ ಗೆಲುವು ಸಾಧಿಸಿದ್ದರು. ಆದರೆ ನಿಯಮದ ಅನ್ವಯ ಒಂದು ಕ್ಷೇತ್ರವನ್ನಷ್ಟೆ ಅವರು ಉಳಿಸಿಕೊಳ್ಳಬೇಕಿತ್ತು. ವಿಜಯ್ ಅವರು ತಿರುಚ್ಚಿ ಈಸ್ಟ್ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಪೆರಂಬೂರು ಕ್ಷೇತ್ರದ ಎಂಎಲ್​​ಎ ಎನಿಸಿಕೊಂಡು ಬಳಿಕ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಇದೀಗ ವಿಜಯ್ ರಾಜಿನಾಮೆ ಕೊಟ್ಟ ತಿರುಚ್ಚಿ ಈಸ್ಟ್ ಕ್ಷೇತ್ರದಿಂದ ತಮಿಳಿನ ಮತ್ತೊಬ್ಬ ಸ್ಟಾರ್ ನಟ, ನಿರ್ದೇಶಕ ವಿಜಯ್ ಅವರ ಪಕ್ಷದಿಂದಲೇ ಕಣಕ್ಕೆ ಇಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ವಿಜಯ್ ರಾಜೀನಾಮೆಯಿಂದ ತೆರವಾಗಿರುವ ತಿರುಚ್ಚಿ ಈಸ್ಟ್ ಕ್ಷೇತ್ರದಿಂದ ತಮಿಳಿನ ಜನಪ್ರಿಯ ನಟ, ನಿರ್ದೇಶಕ ಮತ್ತು ಖ್ಯಾತ ಡ್ಯಾನ್ಸ್ ಕೊರಿಯಾಗ್ರಫರ್ ಸಹ ಆಗಿರುವ ರಾಘವ್ ಲಾರೆನ್ಸ್ ಕಣಕ್ಕೆ ಇಳಿಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ವಿಜಯ್ ಹಾಗೂ ರಾಘವ್ ಲಾರೆನ್ಸ್ ಅವರ ಅಭಿಮಾನಿಗಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ವಿಜಯ್ ಜೊತೆ ದುನಿಯಾ ವಿಜಯ್: ತೆಲುಗು ಸಿನಿಮಾ ಅಪ್​​ಡೇಟ್

ರಾಘವ್ ಲಾರೆನ್ಸ್, ನಟ, ನಿರ್ದೇಶಕ ಮತ್ತು ಖ್ಯಾತ ಕೊರಿಯೋಗ್ರಾಫರ್ ಆಗಿರುವ ಜೊತೆಗೆ ದಶಕಕ್ಕೂ ಹೆಚ್ಚು ಸಮಯದಿಂದಲೂ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ವಿಶೇಷವಾಗಿ ವಿಕಲಚೇತನರು, ಅನಾಥರು, ವೃದ್ಧರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರಾಘವ್ ಲಾರೆನ್ಸ್, ನೂರಾರು ಅನಾಥ ಮಕ್ಕಳಿಗೆ ಉತ್ತಮ ಶಿಕ್ಷಣ, ಜೀವನವನ್ನು ಅವರು ಕೊಡಿಸಿದ್ದಾರೆ. ರಾಘವ್ ಅವರ ಸಮಾಜ ಸೇವೆಯ ಬಗ್ಗೆ ಸಾರ್ವಜನಕವಾಗಿ ಬಹಳ ಒಳ್ಳೆಯ ಅಭಿಪ್ರಾಯವಿದೆ. ಈಗ ಅವರು ವಿಜಯ್ ಅವರ ಕ್ಷೇತ್ರದಿಂದ ಟಿವಿಕೆ ಪಕ್ಷದ ಪರವಾಗಿ ಚುನಾವಣೆ ಸ್ಪರ್ಧಿಸಿದಲ್ಲಿ ಗೆಲುವು ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ.

ಅಂದಹಾಗೆ ಅದೇ ಈಸ್ಟ್ ತಿರುಚ್ಚಿ ಕ್ಷೇತ್ರದಿಂದ, ವಿಜಯ್ ಅವರ ಆಪ್ತರೂ ಆಗಿರುವ ನಟಿ ತ್ರಿಷಾ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಅದು ಸುಳ್ಳು ಎನ್ನಲಾಗುತ್ತಿದೆ. ಈಗ ಹರಿದಾಡುತ್ತಿರುವ ರಾಘವ್ ಲಾರೆನ್ಸ್ ಸ್ಪರ್ಧೆ ಮಾಡುವ ಸುದ್ದಿ ಸಹ ಇನ್ನೂ ಖಾತ್ರಿ ಆಗಿಲ್ಲ. ಇನ್ನೂ ತಿರುಚ್ಚಿ ಈಸ್ಟ್ ಕ್​ಷೇತ್ರದ ಚುನಾವಣೆ ಘೋಷಣೆ ಆಗಿಲ್ಲವಾದ್ದರಿಂದ ಅಭ್ಯರ್ಥಿ ಘೋಷಣೆಗೆ ಇನ್ನೂ ಸಮಯವಿದೆ. ವಿಜಯ್ ಅವರು ತಮ್ಮ ಆಪ್ತರನ್ನೇ ಈ ಕ್ಷೇತ್ರದಿಂದ ಅಭ್ಯರ್ಥಿ ಮಾಡುತ್ತಾರೆ ಎಂಬ ಸುದ್ದಿ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವಿದೇಶಿ ಒತ್ತಡಕ್ಕೆ ಭಾರತ ಬಗ್ಗುವುದಿಲ್ಲ; ರಷ್ಯಾದಿಂದ ತೈಲ ಖರೀದಿ ವಿಚಾರದಲ್ಲಿ ಟ್ರಂಪ್‌ಗೆ ಪುಟಿನ್ ತಿರುಗೇಟು – Kannada News

ಮಾಸ್ಕೋ, ಜೂನ್ 6: ರಷ್ಯಾದ ಜೊತೆಗಿನ ಸಹಕಾರವನ್ನು ಕಡಿಮೆ ಮಾಡುವಂತೆ ಭಾರತದ ಮೇಲೆ ನಿರಂತರ ಒತ್ತಡ ಹೇರುತ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತೀಕ್ಷ್ಣ ಸಂದೇಶ ರವಾನಿಸಿದ್ದಾರೆ. “ಭಾರತ ಎಂದಿಗೂ ಯಾವುದೇ ವಿದೇಶಿ ಶಕ್ತಿಯ ಆದೇಶಗಳಿಗೆ ಬಗ್ಗುವುದಿಲ್ಲ. ಭಾರತ ಸಾರ್ವಭೌಮ ರಾಷ್ಟ್ರವಾಗಿಯೇ ತನ್ನ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ” ಎಂದು ಪುಟಿನ್ ಭಾರತದ ಪರ ಬ್ಯಾಟಿಂಗ್ ಮಾಡಿದ್ದಾರೆ.

ಪ್ರಮುಖ ಮುಖ್ಯಾಂಶಗಳು:

  • ವಿದೇಶಿ ಆದೇಶಗಳಿಗೆ ಭಾರತ ಬಗ್ಗುವುದಿಲ್ಲ ಎಂದ ಪುಟಿನ್
  • ಭಾರತವು ಸದಾ ತನ್ನ ರಾಷ್ಟ್ರೀಯ ಹಿತಾಸಕ್ತಿಗಳಿಗನುಗುಣವಾಗಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದ ರಷ್ಯಾ
  • ಭಾರತದ ಪರ ಪುಟಿನ್ ಬ್ಯಾಟಿಂಗ್

ಸೇಂಟ್ ಪೀಟರ್ಸ್‌ಬರ್ಗ್ ಅಂತಾರಾಷ್ಟ್ರೀಯ ಆರ್ಥಿಕ ವೇದಿಕೆಯಲ್ಲಿ (SPIEF) ಮಾತನಾಡಿದ ಪುಟಿನ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಇದೇ ವೇಳೆ, ಭಾರತದ ಮೇಲೆ ಟ್ರಂಪ್ ಹೇರಿದ್ದ ನಿರ್ಬಂಧಗಳು ಅಮೆರಿಕಕ್ಕೇ ತಿರುಗುಬಾಣ ಆಗಲಿವೆ ಎಂದು ಎಚ್ಚರಿಸಿದರು. “ಭಾರತವು ಯಾವಾಗಲೂ ತನ್ನ ರಾಷ್ಟ್ರೀಯ ಹಿತಾಸಕ್ತಿ, ಸೂಕ್ತ ಬೆಲೆ ಮತ್ತು ತಂತ್ರಜ್ಞಾನದ ಲಾಭವನ್ನು ಆಧರಿಸಿಯೇ ತನ್ನ ಪಾಲುದಾರರನ್ನು ಆಯ್ಕೆ ಮಾಡಿಕೊಳ್ಳುತ್ತದೆ” ಎಂದು ಅವರು ಅಭಿಪ್ರಾಯವ್ಯಕ್ತಪಡಿಸಿದರು.

ಇದನ್ನೂ ಓದಿ: ಅಂದು ನಾನು ಇಲ್ಲದೇ ಹೋಗಿದ್ದರೆ ನೀವು ಜೈಲಿನಲ್ಲಿ ಇರುತ್ತಿದ್ದಿರಿ, ಈಗ ಎಲ್ಲರೂ ನಿಮ್ಮನ್ನು ದ್ವೇಷಿಸುತ್ತಿದ್ದಾರೆ, ನೆತನ್ಯಾಹು ಕೆಣಕಿದ ಟ್ರಂಪ್

ಭಾರತವು ಪ್ರಸ್ತುತ ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಭಾರತ ಸರ್ಕಾರದ ಕಠಿಣ ಪರಿಶ್ರಮದ ಫಲ ಎಂದು ಪುಟಿನ್ ಬಣ್ಣಿಸಿದ್ದಾರೆ. ಡಿಜಿಟಲ್ ಆರ್ಥಿಕತೆ ಮತ್ತು ಸಾಫ್ಟ್‌ವೇರ್ ಉದ್ಯಮದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಅವರು ಗೌರವಿಸಿದ್ದಾರೆ. ಅಲ್ಲದೆ ಮುಂಬರುವ ದಿನಗಳಲ್ಲಿ ಭಾರತ ಮತ್ತು ರಷ್ಯಾ ನಡುವಿನ ವ್ಯಾಪಾರ ವಹಿವಾಟು 100 ಬಿಲಿಯನ್ ಡಾಲರ್ ತಲುಪುವ ಗುರಿ ಹೊಂದಿದೆ ಎಂದು ತಿಳಿಸಿದ್ದಾರೆ.

“ರಷ್ಯಾ ಜೊತೆಗಿನ ಸಹಕಾರ ಸೇರಿದಂತೆ ಕೆಲವು ವಿಷಯಗಳಲ್ಲಿ ಅಮೆರಿಕವು ಭಾರತದ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದೆ. ಆದರೆ ,150 ಕೋಟಿ ಜನಸಂಖ್ಯೆ ಹೊಂದಿರುವ ದೇಶವನ್ನು ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ಹೇರಲು ಯತ್ನಿಸುವುದು ಸಂಪೂರ್ಣ ವ್ಯರ್ಥ ಶ್ರಮ ಎಂಬುದು ಈಗಲಾದರೂ ಎಲ್ಲರಿಗೂ ಅರ್ಥವಾಗಬೇಕು” ಎಂದು ಪುಟಿನ್ ಹೇಳಿದ್ದಾರೆ.

ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧಕ್ಕೆ ಬೀಳುತ್ತಾ ತೆರೆ? ಶಾಂತಿ ಮಾತುಕತೆಯ ಸುಳಿವು ನೀಡಿದ ಪುಟಿನ್

ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸುತ್ತಿರುವುದಕ್ಕಾಗಿ ಭಾರತದ ಮೇಲೆ ಟ್ರಂಪ್ ಸರ್ಕಾರ ವಿಧಿಸಿದ್ದ ನಿರ್ಬಂಧಗಳಿಗೆ ಪ್ರತಿಕ್ರಿಯೆಯಾಗಿ ಪುಟಿನ್ ಈ ಕಠಿಣ ಹೇಳಿಕೆಗಳನ್ನು ನೀಡಿದ್ದಾರೆ. ಭಾರತವು ರಷ್ಯಾದ ತೈಲವನ್ನು ಖರೀದಿಸುವ ಮೂಲಕ ಉಕ್ರೇನ್ ಯುದ್ಧಕ್ಕೆ ಧನಸಹಾಯ ನೀಡುತ್ತಿದೆ ಎಂದು ಆರೋಪಿಸಿದ್ದ ಟ್ರಂಪ್, ಭಾರತದ ಉತ್ಪನ್ನಗಳ ಮೇಲೆ ಶೇ. 25ರಷ್ಟು ಸುಂಕವನ್ನು ಹೇರಿದ್ದರು. ಆದರೆ, ಭಾರತವು ಈ ಆರೋಪವನ್ನು ಮೊದಲಿನಿಂದಲೂ ನಿರಾಕರಿಸುತ್ತಾ ಬಂದಿದೆ ಹಾಗೂ ಪಾಶ್ಚಿಮಾತ್ಯ ದೇಶಗಳೇ ಸ್ವತಃ ರಷ್ಯಾದಿಂದ ಗ್ಯಾಸ್ ಮತ್ತು ತೈಲವನ್ನು ಖರೀದಿಸುತ್ತಿರುವುದನ್ನು ಭಾರತ ಹಲವು ಬಾರಿ ಜಾಗತಿಕ ವೇದಿಕೆಯಲ್ಲಿ ಎತ್ತಿ ತೋರಿಸಿದೆ.

ಜಾಗತಿಕ ಒತ್ತಡಗಳ ನಡುವೆಯೂ ಭಾರತದ ವಿದೇಶಾಂಗ ಸಚಿವಾಲಯವು ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದು, ಭಾರತದ ಇಂಧನ ಭದ್ರತೆ ಮತ್ತು ದೇಶದ ಜನರಿಗೆ ಕೈಗೆಟುಕುವ ದರದಲ್ಲಿ ಇಂಧನ ನೀಡುವುದು ಭಾರತದ ಮೊದಲ ಆದ್ಯತೆಯಾಗಿದೆ ಎಂದಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Gayatri Mantra: ಗಾಯತ್ರಿ ಮಂತ್ರ ಜಪಿಸುವಾಗ ಈ ತಪ್ಪುಗಳಾಗದಿರಲಿ; ಮಂತ್ರ ಸಿದ್ಧಿಗೆ ಶಾಸ್ತ್ರಗಳಲ್ಲಿರುವ ನಿಯಮಗಳೇನು? – Kannada News

ಹಿಂದೂ ಧರ್ಮದಲ್ಲಿ ಗಾಯತ್ರಿ ಮಂತ್ರವನ್ನು ಅತ್ಯಂತ ಪವಿತ್ರ, ಶಕ್ತಿಶಾಲಿ ಮತ್ತು ಮಂತ್ರಗಳ ಮಾತೆ ಎಂದು ಪರಿಗಣಿಸಲಾಗುತ್ತದೆ. ಈ ಮಂತ್ರವು ಕೇವಲ ಶಬ್ದಗಳ ಉಚ್ಚಾರಣೆಯಲ್ಲ, ಇದು ಮನುಷ್ಯನನ್ನು ಬ್ರಹ್ಮಾಂಡದ ಸಾರ್ವತ್ರಿಕ ಪ್ರಜ್ಞೆಯೊಂದಿಗೆ ಸಂಪರ್ಕಿಸುವ ಒಂದು ದೈವಿಕ ಶಕ್ತಿಯಾಗಿದೆ. ಗಾಯತ್ರಿ ಮಂತ್ರವನ್ನು ನಿಯಮಿತವಾಗಿ ಜಪಿಸುವುದರಿಂದ ಮಾನಸಿಕ ಶಾಂತಿ ಸಿಗುವುದಲ್ಲದೆ, ಜೀವನದಲ್ಲಿನ ಆರ್ಥಿಕ ತೊಂದರೆಗಳು ಮತ್ತು ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ.

ಆದರೆ, ಈ ಮಹಾ ಮಂತ್ರದ ಸಂಪೂರ್ಣ ಫಲಿತಾಂಶ ನಿಮಗೆ ಸಿಗಬೇಕಾದರೆ, ಇದನ್ನು ಜಪಿಸುವಾಗ ಕೆಲವು ಕಠಿಣ ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ. ಆ ನಿಯಮಗಳು ಮತ್ತು ಪ್ರಯೋಜನಗಳು ಯಾವುವು ಎಂಬುದರ ಮಾಹಿತಿ ಇಲ್ಲಿದೆ.

ಗಾಯತ್ರಿ ಮಂತ್ರ ಪಠಣೆಗೆ ಸೂಕ್ತ ಸಮಯ ಯಾವುದು?

ಶಾಸ್ತ್ರಗಳ ಪ್ರಕಾರ, ಗಾಯತ್ರಿ ಮಂತ್ರವನ್ನು ದಿನದ ಮೂರು ಸಮಯಗಳಲ್ಲಿ (ತ್ರಿಕಾಲ ಸಂಧ್ಯಾವಂದನೆ ಸಮಯ) ಜಪಿಸುವುದು ಅತ್ಯಂತ ಶ್ರೇಷ್ಠ:

  • ಬೆಳಗಿನ ಸಮಯ: ಸೂರ್ಯೋದಯಕ್ಕೆ ಸ್ವಲ್ಪ ಮುಂಚಿತವಾಗಿ ಜಪಿಸಲು ಪ್ರಾರಂಭಿಸಿ, ಸೂರ್ಯೋದಯದ ನಂತರ ಮುಗಿಸಬೇಕು.
  • ಮಧ್ಯಾಹ್ನದ ಸಮಯ: ಮಧ್ಯಾಹ್ನದ ವೇಳೆಯಲ್ಲೂ ಈ ಮಂತ್ರವನ್ನು ಜಪಿಸಬಹುದು.
  • ಸಂಜೆಯ ಸಮಯ: ಸೂರ್ಯಾಸ್ತಕ್ಕೆ ಸ್ವಲ್ಪ ಮುಂಚೆ ಜಪಿಸಲು ಆರಂಭಿಸಿ, ಸೂರ್ಯಾಸ್ತದ ನಂತರ ಮುಗಿಸಬೇಕು.

ಗಮನಿಸಿ:

ಒಂದು ವೇಳೆ ಸೂರ್ಯಾಸ್ತದ ನಂತರ ಅಥವಾ ಬೇರೆ ಸಮಯದಲ್ಲಿ ಮಂತ್ರ ಪಠಿಸಬೇಕಾದರೆ, ಅದನ್ನು ಜೋರಾಗಿ ಉಚ್ಚರಿಸದೇ ಮನಸ್ಸಿನಲ್ಲೇ ಮೌನವಾಗಿ (ಮಾನಸಿಕ ಜಪ) ಜಪಿಸುವುದು ಉತ್ತಮ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಜಪಿಸುವಾಗ ಪಾಲಿಸಬೇಕಾದ ಮುಖ್ಯ ನಿಯಮಗಳು:

  • ಆಸನ ಮತ್ತು ಭಂಗಿ: ಜಪ ಮಾಡುವ ಮುನ್ನ ಒಂದು ಶಾಂತವಾದ ಸ್ಥಳವನ್ನು ಆರಿಸಿಕೊಳ್ಳಿ. ನೇರವಾಗಿ ನೆಲದ ಮೇಲೆ ಕುಳಿತುಕೊಳ್ಳದೆ ಶುಚಿಯಾದ ಆಸನದ (ಚಾಪೆ ಅಥವಾ ಬಟ್ಟೆ) ಮೇಲೆ ಬೆನ್ನುಮೂಳೆಯನ್ನು ನೆಟ್ಟಗಾಗಿಸಿ ಕುಳಿತುಕೊಳ್ಳಬೇಕು.
  • ಧ್ಯಾನ: ಮಂತ್ರ ಪಠಣ ಆರಂಭಿಸುವ ಮುನ್ನ ಕಣ್ಣುಗಳನ್ನು ಮುಚ್ಚಿ, ತಾಯಿ ಗಾಯತ್ರಿ ದೇವಿಯನ್ನು ಮನಸ್ಸಿನಲ್ಲಿ ಸ್ಮರಿಸಿ ಧಾನ್ಯ ಮಾಡಬೇಕು.
  • ರುದ್ರಾಕ್ಷಿ ಮಾಲೆ: ಗಾಯತ್ರಿ ಮಂತ್ರವನ್ನು ಜಪಿಸಲು ರುದ್ರಾಕ್ಷಿ ಮಾಲೆಯನ್ನು ಬಳಸುವುದು ಅತ್ಯಂತ ಶುಭ. ಪ್ರತಿ ಬಾರಿಯೂ ಕನಿಷ್ಠ 108 ಬಾರಿ ಮಂತ್ರವನ್ನು ಪಠಿಸಲು ಪ್ರಯತ್ನಿಸಬೇಕು.
  • ಗುರು ದೀಕ್ಷೆ: ಈ ಮಂತ್ರದ ತೀವ್ರತೆ ಹೆಚ್ಚಿರುವುದರಿಂದ, ಮಂತ್ರ ಸಾಧನೆ ಮಾಡಬಯಸುವವರು ಸಮರ್ಥ ಗುರುಗಳಿಂದ ದೀಕ್ಷೆ ಪಡೆದು, ಅವರು ಸೂಚಿಸಿದ ವಿಧಾನದಂತೆ ಅಭ್ಯಾಸ ಮಾಡುವುದು ಹೆಚ್ಚು ಉತ್ತಮ.

ಇದನ್ನೂ ಓದಿ: ಅನುಷ್ಕಾ ಶರ್ಮಾ ಕತ್ತಿನಲ್ಲಿರುವ ತುಳಸಿ ಮಾಲೆ ಗಮನಿಸಿದ್ದೀರಾ? ಧರಿಸುವುದರ ಹಿಂದಿನ ಅಸಲಿ ಕಾರಣ ಇಲ್ಲಿದೆ

ಗಾಯತ್ರಿ ಮಂತ್ರ ಜಪಿಸುವುದರಿಂದಾಗುವ ಅದ್ಭುತ ಪ್ರಯೋಜನಗಳು:

ಮಕ್ಕಳ ಕೈಯಲ್ಲಿ ಈ ಮಂತ್ರವನ್ನು ನಿಯಮಿತವಾಗಿ ಪಠಿಸುವುದರಿಂದ ಅವರಲ್ಲಿ ಏಕಾಗ್ರತೆ (Concentration) ಮತ್ತು ಜ್ಞಾಪಕ ಶಕ್ತಿ ಅದ್ಭುತವಾಗಿ ಹೆಚ್ಚುತ್ತದೆ. ವಿದ್ಯಾಭ್ಯಾಸದಲ್ಲಿ ಬರುವ ಅಡೆತಡೆಗಳು ನಿವಾರಣೆಯಾಗುತ್ತವೆ. ಈ ಮಂತ್ರದ ಕಂಪನಗಳು ಮೆದುಳನ್ನು ಶಾಂತಗೊಳಿಸುತ್ತವೆ. ಇದರಿಂದ ಸಕಾರಾತ್ಮಕ ಆಲೋಚನೆಗಳು ಹೆಚ್ಚಾಗಿ, ಒತ್ತಡ ನಿವಾರಣೆಯಾಗುತ್ತದೆ ಮತ್ತು ಧನಾತ್ಮಕ ಶಕ್ತಿ ವೃದ್ಧಿಸುತ್ತದೆ. ಶುದ್ಧ ಮನಸ್ಸು, ಇಚ್ಛಾಶಕ್ತಿ ಮತ್ತು ಭಕ್ತಿಯಿಂದ ಗಾಯತ್ರಿ ಮಂತ್ರವನ್ನು ಜಪಿಸುವ ವ್ಯಕ್ತಿಯು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಸಾಧಿಸುತ್ತಾನೆ ಹಾಗೂ ಆರ್ಥಿಕ ಕಷ್ಟಗಳಿಂದ ಮುಕ್ತಿ ಪಡೆಯುತ್ತಾನೆ.

ಗಾಯತ್ರಿ ಮಂತ್ರವು ಸೂರ್ಯನ ತೇಜಸ್ಸನ್ನು ನಮ್ಮೊಳಗೆ ತುಂಬುವ ಶಕ್ತಿಯಾಗಿದೆ. ಆದ್ದರಿಂದ, ನಿಮ್ಮ ದೈನಂದಿನ ಜೀವನದಲ್ಲಿ ಕೇವಲ ಹತ್ತು ನಿಮಿಷಗಳನ್ನು ಈ ಮಂತ್ರ ಜಪಕ್ಕೆ ಮೀಸಲಿಟ್ಟು, ಸರಿಯಾದ ನಿಯಮಗಳೊಂದಿಗೆ ಅಭ್ಯಾಸ ಮಾಡಿ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಕಾಣಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಇಟಿ ಫಲಿತಾಂಶ ಪ್ರಕಟ ಬೆನ್ನಲ್ಲೇ ತಾಂತ್ರಿಕ ಸಮಸ್ಯೆ: ರಿಸಲ್ಟ್​​ ನೋಡಲು ಸಾಧ್ಯವಾಗದೆ ವಿದ್ಯಾರ್ಥಿಗಳು ಪರದಾಟ – Kannada News

ಪ್ರಾತಿನಿಧಿಕ ಚಿತ್ರImage Credit source: jagranjosh.com

ಬೆಂಗಳೂರು, ಜೂನ್​​ 06: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (UGCET) ಫಲಿತಾಂಶವನ್ನು ಇಂದು ಪ್ರಕಟಿಸಿದೆ. ಈ ಬಾರಿ ಕೂಡ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಆದರೆ ಇದೀಗ ತಾಂತ್ರಿಕ ಸಮಸ್ಯೆ ಒಂದು ಎದುರಾಗಿದೆ. ಮಧ್ಯಾಹ್ನ 2 ಗಂಟೆಯ ನಂತರ ಫಲಿತಾಂಶ ನೋಡಬಹುದು ಎಂದು ಕೆಇಎ ಹೇಳಿತ್ತು, ಆದರೆ ತಾಂತ್ರಿಕ ಸಮಸ್ಯೆಯಿಂದ ಸಿಇಟಿ ಫಲಿತಾಂಶ ನೋಡಲು ಸಾಧ್ಯವಾಗದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಮುಖ್ಯಾಂಶಗಳು

  • ಸಿಇಟಿ ಫಲಿತಾಂಶ ಪ್ರಕಟ ಬೆನ್ನಲ್ಲೇ ತಾಂತ್ರಿಕ ಸಮಸ್ಯೆ
  • ಸಿಇಟಿ ಫಲಿತಾಂಶ ನೋಡಲು ಸಾಧ್ಯವಾಗದೆ ವಿದ್ಯಾರ್ಥಿಗಳು ಪರದಾಟ
  • ವಾಟ್ಸಾಪ್ ಮೂಲಕ ಫಲಿತಾಂಶ ಕಳುಹಿಸುವುದಾಗಿ KEA ಭರವಸೆ

ವಾಟ್ಸಾಪ್ ಮೂಲಕ ಫಲಿತಾಂಶ: KEA ಭರವಸೆ

ಸದ್ಯ ತಾಂತ್ರಿಕ ಸಮಸ್ಯೆಯಿಂದಾಗಿ ಲಾಗಿನ್ ಪ್ರಕ್ರಿಯೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೆಲವು ಗಂಟೆ ವೆಬ್​ಸೈಟ್​ಗೆ ಲಾಗಿನ್ ಆಗದಂತೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಅವರು ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದಾರೆ. ಅಲ್ಲದೆ, ಪರ್ಯಾಯ ವ್ಯವಸ್ಥೆಯಾಗಿ ಪ್ರತಿ ವಿದ್ಯಾರ್ಥಿಯ ಫಲಿತಾಂಶವನ್ನು ಅವರ ವಾಟ್ಸಾಪ್​​ಗೆ ನೇರವಾಗಿ ಕಳುಹಿಸಿಕೊಡುವುದಾಗಿ ಪ್ರಾಧಿಕಾರ ಭರವಸೆ ನೀಡಿದೆ.

ಇದನ್ನೂ ಓದಿ: KCET Result 2026: ಕೆಸಿಇಟಿ ಫಲಿತಾಂಶ ಪ್ರಕಟ; ರಿಸಲ್ಟ್ ನೋಡಲು ಡೈರೆಕ್ಟ್ ಲಿಂಕ್‌ ಇಲ್ಲಿದೆ..

ಏಪ್ರಿಲ್​​ 22 ರಿಂದ 24ರವರೆಗೆ ನಡೆದಿದ್ದ ಯುಜಿ ಸಿಇಟಿ 2026ರ ಫಲಿತಾಂಶ ಇಂದು ಹೊರಬಿದ್ದಿದೆ. ಕೃಷಿ ವಿಭಾಗದಲ್ಲಿ ಬೆಂಗಳೂರಿನ ಜಯನಗರದ ಆರ್.ವಿ. ಪಿಯು ಕಾಲೇಜಿನ ವಿದ್ಯಾರ್ಥಿ ನಿನಾದ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಧಾರವಾಡದ ಅರ್ಜುನ್ ಸೈನ್ಸ್ ಕಾಲೇಜಿನ ಅನ್ಮೋಲ್ ದ್ವಿತೀಯ ಸ್ಥಾನ ಗಳಿಸಿದರೆ, ಮಂಗಳೂರಿನ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಎ.ಎಸ್. ಸಮಯ್ ತೃತೀಯ ಸ್ಥಾನವನ್ನು ಪಡೆದಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್​​ ಹೇಳಿದ್ದಿಷ್ಟು

ಇನ್ನು ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್​​ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು,​ ಈ ವರ್ಷ ಒಟ್ಟು 3.36 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಇವರಲ್ಲಿ 3,09,014 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಒಟ್ಟು 2,92,782 ವಿದ್ಯಾರ್ಥಿಗಳು ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ಅರ್ಹತೆ ಪಡೆದಿದ್ದಾರೆ. ಜೊತೆಗೆ ಈ ಬಾರಿಯ ಪರೀಕ್ಷೆಯ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳಲ್ಲಿ ಅಭ್ಯರ್ಥಿಗಳಿಗೆ ತಲಾ ಒಂದು ಕೃಪಾಂಕವನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs AFG: ಏಕದಿನ ಸರಣಿಯಿಂದ ಕೊಹ್ಲಿ ಔಟ್..! ಬದಲಿ ಆಟಗಾರನನ್ನು ಘೋಷಿಸಿದ ಬಿಸಿಸಿಐ

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯ ಇಂದಿನಿಂದ ಆರಂಭವಾಗಿದೆ. ಇದಾದ ಬಳಿಕ ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಈ ಸರಣಿಗಾಗಿ ಬಿಸಿಸಿಐ ತಂಡವನ್ನು ಪ್ರಕಟಿಸಿತ್ತು. ಆದರೀಗ ಆ ತಂಡಕ್ಕೆ ಬದಲಿ ಆಟಗಾರನಾಗಿ ಯಶಸ್ವಿ ಜೈಸ್ವಾಲ್ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ. ವಾಸ್ತವವಾಗಿ ತಂಡದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರನ್ನು ಈ ಸರಣಿಯಿಂದ ಹೊರಗಿಡಲಾಗಿದೆ. ಅವರ ಬದಲಿಯಾಗಿ ಜೈಸ್ವಾಲ್​ಗೆ ಅವಕಾಶ ನೀಡಲಾಗಿದೆ. ಕೊಹ್ಲಿ ಸರಣಿಯಲ್ಲಿ ಆಡುತ್ತಿಲ್ಲ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿತ್ತು. ಆದರೀಗ ಅಧಿಕೃತ ಮಾಹಿತಿ ನೀಡಿರುವ ಬಿಸಿಸಿಐ, ಕೊಹ್ಲಿ ಚೇತರಿಕೆಗೆ ಸಮಯಾವಕಾಶ ಮಾಡಿಕೊಟ್ಟಿದೆ.

Source link

ವಿಜಯ್ ಜೊತೆ ದುನಿಯಾ ವಿಜಯ್: ತೆಲುಗು ಸಿನಿಮಾ ಅಪ್​​ಡೇಟ್ – Kannada News

ದುನಿಯಾ ವಿಜಯ್ (Duniya Vijay) ಕನ್ನಡದ ಸ್ಟಾರ್ ನಟರುಗಳಲ್ಲಿ ಒಬ್ಬರು. ಅವರ ಅದ್ಭುತ ಮೈಕಟ್ಟು ಅದ್ಭುತ ನಟನೆಯಿಂದಾಗಿ ಅವರಿಗೆ ಪರ ಭಾಷೆಗಳಲ್ಲಿಯೂ ಬೇಡಿಕೆ ಇದೆ. ಈಗಾಗಲೇ ತೆಲುಗಿನಲ್ಲಿ ನಂದಮೂರಿ ಬಾಲಕೃಷ್ಣ ಜೊತೆಗೆ ನಟಿಸಿ ಬಂದಿರುವ ದುನಿಯಾ ವಿಜಿ, ಈಗ ತಮಿಳಿನಲ್ಲಿ ನಯನತಾರಾ ನಟನೆಯ ‘ಮೂಕುತ್ತಿ ಅಮ್ಮನ್’ ಸಿನಿಮಾನಲ್ಲಿಯೂ ನಟಿಸಿ ಬಂದಿದ್ದಾರೆ. ಇವು ಮಾತ್ರವೇ ಅಲ್ಲದೆ ಇತ್ತೀಚೆಗಷ್ಟೆ ತೆಲುಗಿನ ಮತ್ತೊಂದು ಪ್ರಮುಖ ಸಿನಿಮಾನಲ್ಲಿ ದುನಿಯಾ ವಿಜಯ್ ನಟಿಸಿದ್ದು, ಸಿನಿಮಾದ ಅಪ್​​ಡೇಟ್ ಒಂದು ಹೊರಬಿದ್ದಿದೆ.

ಖ್ಯಾತ ನಟ ವಿಜಯ್ ಸೇತುಪತಿ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಸ್ಲಂ ಡಾಗ್’ ಸಿನಿಮಾನಲ್ಲಿ ದುನಿಯಾ ವಿಜಯ್ ಸಹ ಮಹತ್ವದ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನ ಮಾಡಿದ್ದು, ಸಿನಿಮಾ ಬಿಡುಗಡೆ ಆಗುವ ಮುಂಚೆಯೇ ಸಿನಿಮಾದ ಬಗ್ಗೆ ಸಾಕಷ್ಟು ಧನಾತ್ಮಕ ಅಭಿಪ್ರಾಯಗಳು ತೆಲುಗು ಚಿತ್ರರಂಗದಲ್ಲಿ ಕೇಳಿ ಬರುತ್ತಿವೆ. ಮಾತ್ರವಲ್ಲದೆ, ಈ ಸಿನಿಮಾನಲ್ಲಿ ದುನಿಯಾ ವಿಜಯ್ ಅವರದ್ದು ಬಹಳ ವಿಭಿನ್ನ ರೀತಿಯ ಪಾತ್ರ ಎನ್ನಲಾಗುತ್ತಿದೆ.

ಇದೀಗ ಈ ಸಿನಿಮಾದ ಅಪ್​​ಡೇಟ್ ಹೊರಬಿದ್ದಿದ್ದು, ಸಿನಿಮಾದ ಮೊದಲ ಟೀಸರ್ ಜೂನ್ 8 ರಂದು ಬಿಡುಗಡೆ ಆಗಲಿದೆ. ಈ ಕುರಿತು ಚಿತ್ರತಂಡ ಘೋಷಣೆ ಮಾಡಿದ್ದು, ವಿಜಯ್ ಸೇತುಪತಿ ಅವರು ರಕ್ತ ಸಿಕ್ತ ಆಯುಧವೊಂದನ್ನು ಹಿಡಿದಿರುವ ಪೋಸ್ಟರ್ ಅನ್ನು ಸಹ ಚಿತ್ರತಂಡ ಹಂಚಿಕೊಂಡಿದೆ. ಸಿನಿಮಾದ ಹೆಸರೇ ಸೂಚಿಸುತ್ತಿರುವಂತೆ ಸ್ಲಂನಲ್ಲಿ ನಡೆಯುವ ಕತೆಯನ್ನು ಸಿನಿಮಾ ಒಳಗೊಂಡಿದ್ದು, ಭಿಕ್ಷುಕ ಮಾಫಿಯಾದ ಕತೆಯನ್ನು ಈ ಸಿನಿಮಾ ಹೊಂದಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:‘ಸೆಟ್​​ನಲ್ಲಿ ಮೋನಿಷಾನ ಮಗಳು ಅಂತ ನಾನು ಯಾವಾಗಲೂ ನೋಡಿಲ್ಲ’; ದುನಿಯಾ ವಿಜಯ್

ಈ ಹಿಂದೆ ಸಿನಿಮಾ ತಂಡವು ವಿಜಯ್ ಅವರ ಚಿತ್ರವೊಂದನ್ನು ಸಹ ಹಂಚಿಕೊಂಡಿತ್ತು. ಚಿತ್ರದಲ್ಲಿ ವಿಜಯ್ ಅವರು ಬಲು ಕಲರ್​ಫುಲ್ ಆದ ಉಡುಗೆ ಮತ್ತು ಟೋಪಿ ಧರಿಸಿ ಕಾಣಿಸಿಕೊಂಡಿದ್ದರು. ಪೋಸ್ಟರ್ ನೋಡಿದವರಿಗೆ ವಿಜಯ್ ಅವರು ವಿಲನ್ನಾ ಅಥವಾ ಬೇರೆ ರೀತಿಯ ಪಾತ್ರವಾ ಎಂಬ ಅನುಮಾನವೂ ಮೂಡಿತ್ತು. ಈಗ ಜೂನ್ 8 ರಂದು ಸಿನಿಮಾದ ಟೀಸರ್ ರಿಲೀಸ್ ಆಗಲಿದ್ದು, ಆ ದಿನ ಅನುಮಾನಗಳಿಗೆ ಉತ್ತರ ಸಿಗುವ ಸಾಧ್ಯತೆ ಇದೆ.

ತೆಲುಗು ಚಿತ್ರರಂಗದ ಸ್ಟಾರ್ ನಿರ್ದೇಶಕ ಎನಿಸಿಕೊಂಡಿದ್ದ ಪುರಿ ಜಗನ್ನಾಥ್ ಕಳೆದ ಕೆಲ ವರ್ಷಗಳಿಂದ ಒಂದೇ ಒಂದು ಹಿಟ್ ಸಿನಿಮಾ ನೀಡಿಲ್ಲ. ಈಗ ಅವರು ‘ಸ್ಲಂ ಡಾಗ್’ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಈ ಸಿನಿಮಾ ಅವರ ಪಾಲಿಗೆ ಮಾಡು-ಮಡಿ ಸಿನಿಮಾ ಆಗಿದೆ. ಇದೇ ಕಾರಣಕ್ಕೆ ಅವರು ಬಲು ಗಟ್ಟಿಯಾದ ಕತೆಯನ್ನು ಸಿನಿಮಾಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಸಿನಿಮಾಕ್ಕೆ ಪುರಿ ಜಗನ್ನಾಥ್ ಮತ್ತು ಅವರ ಗೆಳತಿ ಚಾರ್ಮಿ ಅವರೇ ಬಂಡವಾಳ ಹೂಡಿದ್ದಾರೆ. ಸಿನಿಮಾನಲ್ಲಿ ಖ್ಯಾತ ನಟಿ ಟಬು ಅವರು ನಾಯಕಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನೆಹರು ದಾಖಲೆ ಮುರಿಯಲು ಸಜ್ಜಾದ ಮೋದಿ; ಇಬ್ಬರೂ ಪ್ರಧಾನಿಗಳ ಅಧಿಕಾರಾವಧಿಯ ನಡುವಿನ ಹೋಲಿಕೆಗಳೇನು? – Kannada News

ನವದೆಹಲಿ, ಜೂನ್ 6: ಬರುವ ಜೂನ್ 10ರಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಜವಾಹರಲಾಲ್ ನೆಹರು ಅವರ ದಾಖಲೆಯನ್ನು ಮೀರಿ, ಭಾರತದ ಇತಿಹಾಸದಲ್ಲೇ ಅತ್ಯಂತ ದೀರ್ಘಾವಧಿಗೆ ಸತತವಾಗಿ ಅಧಿಕಾರ ನಡೆಸಿದ ಪ್ರಜಾಸತ್ತಾತ್ಮಕ ಪ್ರಧಾನಿ ಎಂಬ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಇತಿಹಾಸದಲ್ಲಿ ಸುದೀರ್ಘ ಅವಧಿಗೆ ದೇಶವನ್ನು ಮುನ್ನಡೆಸಿದ ಪ್ರಮುಖ ಪ್ರಧಾನಿಗಳು. ಆದರೆ, ಇಬ್ಬರ ನಾಯಕತ್ವದ ಶೈಲಿ, ಸಿದ್ಧಾಂತ ಮತ್ತು ಅವರು ಆಡಳಿತ ನಡೆಸಿದ ಕಾಲಘಟ್ಟಗಳು ಸಂಪೂರ್ಣವಾಗಿ ಭಿನ್ನವಾಗಿವೆ. ಇಬ್ಬರ ನಾಯಕತ್ವದ ನಡುವಿನ ಪ್ರಮುಖ ವ್ಯತ್ಯಾಸಗಳು ಹಾಗೂ ಹೋಲಿಕೆಗಳು ಇಲ್ಲಿವೆ.

ಆಡಳಿತದ ಮಾದರಿ ಹೇಗಿತ್ತು?:

ನೆಹರು ಅವರ ಆಡಳಿತವು ಹೆಚ್ಚಾಗಿ ಕೇಂದ್ರೀಕೃತವಾಗಿತ್ತು. ರಾಜಕೀಯ ಗಣ್ಯರು, ತಜ್ಞರು ಮತ್ತು ಆಯ್ದ ಅಧಿಕಾರಿಗಳ ಮೂಲಕ ಮೇಲಿಂದ ಕೆಳಮಟ್ಟಕ್ಕೆ ನಿರ್ಧಾರಗಳು ಹರಿದು ಬರುತ್ತಿದ್ದವು. ಆದರೆ, ಪ್ರಧಾನಿ ಮೋದಿ ಅವರ “ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ಪ್ರಯಾಸ್” ತತ್ವವು ಆಡಳಿತವನ್ನು ಕೇವಲ ಸರ್ಕಾರದ ಕಾರ್ಯಕ್ರಮವಾಗಿಸದೆ, ಸಾರ್ವಜನಿಕರ ಸಾಮೂಹಿಕ ಭಾಗವಹಿಸುವಿಕೆಯ ‘ಜನ ಚಳುವಳಿ’ಯನ್ನಾಗಿ ಮಾರ್ಪಡಿಸಿದೆ. ಸ್ವಚ್ಛ ಭಾರತ ಅಭಿಯಾನ ಅದಕ್ಕೆ ಉದಾಹರಣೆ.

ಇದನ್ನೂ ಓದಿ: ಜೂನ್ 10 ಕ್ಕೆ ಪ್ರಧಾನಿ ಮೋದಿ ಹೆಸರಿಗೆ ಹೊಸ ದಾಖಲೆ, ನೆಹರು ಅಧಿಕಾರಾವಧಿ ಹಿಂದಿಕ್ಕಲಿರುವ ನವ ಭಾರತದ ಸಾರಥಿ

ನೆಹರು ಅವರು ಸೋವಿಯತ್ ಮಾದರಿಯ ಸಮಾಜವಾದಿ ಆರ್ಥಿಕತೆಗೆ ಆದ್ಯತೆ ನೀಡಿದರು. ಭಾರಿ ಉದ್ಯಮಗಳು, ಅಣೆಕಟ್ಟುಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಸರ್ಕಾರದ ಸಂಪೂರ್ಣ ನಿಯಂತ್ರಣದಲ್ಲಿ ಸ್ಥಾಪಿಸಲು ಒತ್ತು ನೀಡಿದರು. ಖಾಸಗಿ ಬಂಡವಾಳಕ್ಕೆ ಮಿತಿ ಇತ್ತು. ಪ್ರಧಾನಿ ಮೋದಿ ಅವರ ಮಾದರಿಯು ‘ಆತ್ಮನಿರ್ಭರ ಭಾರತ’ ಮತ್ತು ಮುಕ್ತ ಮಾರುಕಟ್ಟೆಗೆ ಆದ್ಯತೆ ನೀಡುತ್ತದೆ. ಸ್ಟಾರ್ಟ್‌ಅಪ್‌ಗಳು, ಡಿಜಿಟಲ್ ಆರ್ಥಿಕತೆ (UPI), ಮೇಕ್ ಇನ್ ಇಂಡಿಯಾ ಮತ್ತು ಖಾಸಗಿ ಉದ್ಯಮಿಗಳನ್ನು ದೇಶದ ಪ್ರಗತಿಯ ಸಹಭಾಗಿಗಳನ್ನಾಗಿ ನೋಡಲಾಗುತ್ತದೆ. ಬಡತನ ನಿರ್ಮೂಲನೆಗೆ ನೇರ ನಗದು ವರ್ಗಾವಣೆ (DBT) ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.

ರಾಜತಾಂತ್ರಿಕತೆ ಮತ್ತು ವಿದೇಶಾಂಗ ನೀತಿ:

ಶೀತಲ ಸಮರದ ಕಾಲದಲ್ಲಿ ನೆಹರು ಅವರು ಯಾವುದೇ ಜಾಗತಿಕ ಬಣಕ್ಕೆ (ಅಮೆರಿಕ ಅಥವಾ ರಷ್ಯಾ) ಸೇರದೆ ‘ಅಲಿಪ್ತ ನೀತಿ’ಯನ್ನು ಅನುಸರಿಸಿದರು. ಇದು ನೈತಿಕ ಮತ್ತು ಬೌದ್ಧಿಕ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದರೂ, ಕೆಲವು ನಿರ್ಣಾಯಕ ಸಮಯದಲ್ಲಿ ಭಾರತ ಜಾಗತಿಕವಾಗಿ ಒಂಟಿಯಾಗುವಂತೆ ಮಾಡಿತು. ಮೋದಿ ಅವರ ವಿದೇಶಾಂಗ ನೀತಿಯು ಭಾರತದ ರಾಷ್ಟ್ರೀಯ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡುತ್ತದೆ. ಭಾರತವು ಅಮೆರಿಕ, ರಷ್ಯಾ, ಯುರೋಪ್ ಹಾಗೂ ಗಲ್ಫ್ ರಾಷ್ಟ್ರಗಳೊಂದಿಗೆ ಏಕಕಾಲದಲ್ಲಿ ಬಲಿಷ್ಠ ಮತ್ತು ಸಮಾನ ರಾಜತಾಂತ್ರಿಕ ಹಾಗೂ ರಕ್ಷಣಾತ್ಮಕ ಸಂಬಂಧವನ್ನು ಕಾಯ್ದುಕೊಂಡಿದೆ. ಇಂದು ಭಾರತವು ಜಾಗತಿಕ ನಿರ್ಧಾರಗಳನ್ನು ನಿಯಂತ್ರಿಸುವ ಶಕ್ತಿಯಾಗಿ ಹೊರಹೊಮ್ಮಿದೆ.

ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ಗುರುತು:

ನೆಹರು ಅವರ ರಾಜಕಾರಣವು ಪಾಶ್ಚಿಮಾತ್ಯ ಆಧುನಿಕತೆ ಮತ್ತು ಪ್ರಗತಿಪರ ಚಿಂತನೆಗಳಿಂದ ಪ್ರಭಾವಿತವಾಗಿತ್ತು. ಅವರು ಸಾರ್ವಜನಿಕ ಜೀವನದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಗುರುತುಗಳಿಂದ ಅಂತರ ಕಾಯ್ದುಕೊಳ್ಳಲು ಬಯಸಿದ್ದರು. ಪ್ರಧಾನಿ ಮೋದಿ ಭಾರತೀಯ ನಾಗರಿಕತೆಯ ಪ್ರಜ್ಞೆ, ಸಾಂಸ್ಕೃತಿಕ ಹೆಮ್ಮೆ ಮತ್ತು ಐತಿಹಾಸಿಕ ಗುರುತನ್ನು ರಾಷ್ಟ್ರೀಯ ರಾಜಕಾರಣದ ಕೇಂದ್ರಬಿಂದುವಾಗಿಸಿದ್ದಾರೆ. ದೇವಸ್ಥಾನಗಳ ಜೀರ್ಣೋದ್ಧಾರ ಮತ್ತು ಜಾಗತಿಕ ಮಟ್ಟದಲ್ಲಿ ಅಂತರರಾಷ್ಟ್ರೀಯ ಯೋಗ ದಿನದಂತಹ ಭಾರತದ ಸಾಂಸ್ಕೃತಿಕ ರಾಯಭಾರತ್ವಕ್ಕೆ ಇವರ ಆಡಳಿತದಲ್ಲಿ ಹೆಚ್ಚಿನ ಒತ್ತು ಸಿಕ್ಕಿದೆ.

ಇದನ್ನೂ ಓದಿ: ಜವಾಹರಲಾಲ್ ನೆಹರು- ನರೇಂದ್ರ ಮೋದಿ ಅವಧಿಯ ವ್ಯತ್ಯಾಸಗಳೇನು? ಇಬ್ಬರ ನಾಯಕತ್ವದ ಅವಲೋಕನ ಇಲ್ಲಿದೆ

ರಾಜಕೀಯ ಹಿನ್ನೆಲೆ ಮತ್ತು ಸವಾಲುಗಳು;

ನೆಹರು ಸ್ವಾತಂತ್ರ್ಯ ಹೋರಾಟದ ನಾಯಕತ್ವದ ಹಿನ್ನೆಲೆ, ಮಹಾತ್ಮ ಗಾಂಧೀಜಿಯವರ ಬೆಂಬಲ ಹಾಗೂ ಕಾಂಗ್ರೆಸ್ ಪಕ್ಷದ ಏಕಸ್ವಾಮ್ಯದ ಅಲೆಯಲ್ಲಿ ನೆಹರು ನೇರವಾಗಿ ಅಧಿಕಾರಕ್ಕೆ ಬಂದರು. ಅವರಿಗೆ ದೇಶದ ಒಳಗಡೆ ರಾಜಕೀಯ ಪೈಪೋಟಿ ತೀರಾ ಕಡಿಮೆ ಇತ್ತು. ಆದರೆ ಮೋದಿ ಯಾವುದೇ ರಾಜಕೀಯ ಗಾಡ್‌ಫಾದರ್ ಇಲ್ಲದೆ, ದಶಕಗಳ ಕಾಲ ತಳಮಟ್ಟದ ಸಾಂಸ್ಥಿಕ ಹೋರಾಟ ಮತ್ತು ಸುದೀರ್ಘ ಅವಧಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಆಡಳಿತಾತ್ಮಕ ಅನುಭವ ಪಡೆದ ನಂತರ ಪ್ರಧಾನಿ ಹುದ್ದೆಗೇರಿದ್ದಾರೆ. ಪ್ರಾದೇಶಿಕ ಪಕ್ಷಗಳ ಭಾರಿ ಪೈಪೋಟಿ, ತೀವ್ರ ರಾಜಕೀಯ ಸ್ಪರ್ಧೆ ಮತ್ತು ಸೋಷಿಯಲ್ ಮೀಡಿಯಾದ ಕಣ್ಗಾವಲಿನ ಯುಗದಲ್ಲಿ ಇವರು ಆಡಳಿತ ನಡೆಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:41 pm, Sat, 6 June 26

Source link

Bhanu Saptami 2026: ಜೂ.7 ಭಾನು ಸಪ್ತಮಿ; ಈ ದಿನ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ – Kannada News

ಆತ್ಮವಿಶ್ವಾಸ, ಗೌರವ, ನಾಯಕತ್ವದ ಗುಣಗಳು ಮತ್ತು ಜೀವನದಲ್ಲಿ ಅಪಾರ ಯಶಸ್ಸನ್ನು ಬಯಸುವವರಿಗೆ ‘ಭಾನು ಸಪ್ತಮಿ’ ಅತ್ಯಂತ ವಿಶೇಷವಾದ ದಿನವಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯ ದೇವನನ್ನು ನವಗ್ರಹಗಳ ಅಧಿಪತಿ ಎಂದು ಕರೆಯಲಾಗುತ್ತದೆ. ವ್ಯಕ್ತಿಯ ಆರೋಗ್ಯ, ಉದ್ಯೋಗ, ಸಾಮಾಜಿಕ ಗೌರವ ಮತ್ತು ವ್ಯಕ್ತಿತ್ವ ವಿಕಸನದ ಮೇಲೆ ಸೂರ್ಯನ ಪ್ರಭಾವ ಅಪಾರವಾಗಿರುತ್ತದೆ.

ವಿಶೇಷವೆಂದರೆ, 2026ರ ಅಧಿಕ ಮಾಸದಲ್ಲಿ ಬರುವ ಈ ಅಪರೂಪದ ಭಾನು ಸಪ್ತಮಿಯನ್ನು ಜೂನ್ 7 ರಂದು ಆಚರಿಸಲಾಗುತ್ತಿದೆ. ಈ ದಿನ ಸೂರ್ಯ ದೇವನನ್ನು ಭಕ್ತಿಯಿಂದ ಆರಾಧಿಸುವುದರಿಂದ ಜಾತಕದಲ್ಲಿ ಸೂರ್ಯ ಗ್ರಹವು ಬಲಗೊಂಡು, ಜೀವನದ ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತವೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.

ಭಾನು ಸಪ್ತಮಿ ಎಂದರೇನು? ಇದರ ಮಹತ್ವವೇನು?

ಚಾಂದ್ರಮಾನ ಕ್ಯಾಲೆಂಡರ್ ಪ್ರಕಾರ, ಸಪ್ತಮಿ ತಿಥಿಯು ಭಾನುವಾರದಂದು ಬಂದರೆ ಅದನ್ನು ‘ಭಾನು ಸಪ್ತಮಿ’ ಎಂದು ಕರೆಯಲಾಗುತ್ತದೆ. ಈ ದಿನ ಸಂಪೂರ್ಣವಾಗಿ ಸೂರ್ಯ ದೇವನಿಗೆ ಸಮರ್ಪಿತವಾಗಿದೆ. ಜಾತಕದಲ್ಲಿ ಸೂರ್ಯನು ದುರ್ಬಲನಾಗಿದ್ದರೆ ಉದ್ಯೋಗದಲ್ಲಿ ಸಮಸ್ಯೆ, ಆತ್ಮವಿಶ್ವಾಸದ ಕೊರತೆ ಮತ್ತು ಅಪಕೀರ್ತಿ ಎದುರಾಗಬಹುದು. ಅಂತಹ ದೋಷಗಳ ನಿವಾರಣೆಗೆ ಭಾನು ಸಪ್ತಮಿಯ ಪೂಜೆ ರಾಮಬಾಣವಾಗಿದೆ. ಅದರಲ್ಲೂ ಈ ಬಾರಿ ಅಧಿಕ ಮಾಸದಲ್ಲಿ ಇದು ಬಂದಿರುವುದರಿಂದ, ಈ ದಿನ ಮಾಡುವ ಜಪ-ತಪ ಮತ್ತು ದಾನಗಳಿಗೆ ನೂರು ಪಟ್ಟು ಹೆಚ್ಚಿನ ಪುಣ್ಯ ಲಭಿಸಲಿದೆ.

ಭಾನು ಸಪ್ತಮಿಯಂದು ಮಾಡಬಾರದ 5 ತಪ್ಪುಗಳು:

ಈ ಪವಿತ್ರ ದಿನದಂದು ನಕಾರಾತ್ಮಕ ಫಲಗಳನ್ನು ತಪ್ಪಿಸಲು ಕೆಳಗಿನ ತಪ್ಪುಗಳನ್ನು ಮಾಡದಂತೆ ಎಚ್ಚರ ವಹಿಸಿ:

  • ಸೂರ್ಯದೇವನು ಶಿಸ್ತಿನ ಸಂಕೇತ. ಆದ್ದರಿಂದ ಭಾನು ಸಪ್ತಮಿಯಂದು ಬೆಳಿಗ್ಗೆ ತಡವಾಗಿ ಏಳಬಾರದು. ಸೂರ್ಯೋದಯಕ್ಕೂ ಮುನ್ನವೇ ಎದ್ದು ಸ್ನಾನ ಮುಗಿಸಬೇಕು.
  • ಈ ದಿನ ಮಾಂಸಾಹಾರ, ಮದ್ಯಪಾನ, ಹಾಗೂ ಈರುಳ್ಳಿ-ಬೆಳ್ಳುಳ್ಳಿಯಂತಹ ತಾಮಸಿಕ ಆಹಾರಗಳಿಂದ ದೂರವಿರಬೇಕು. ಸಂಪೂರ್ಣ ಸಾತ್ವಿಕ ಆಹಾರ ಸೇವನೆ ಮಾಡುವುದು ಕಡ್ಡಾಯ.
  • ಸೂರ್ಯನು ಕೀರ್ತಿ ಮತ್ತು ಗೌರವದ ಕಾರಕ. ಈ ದಿನ ಯಾರನ್ನೂ ಕಟು ಶಬ್ದಗಳಿಂದ ನಿಂದಿಸಬಾರದು, ಕೋಪ ಮಾಡಿಕೊಳ್ಳಬಾರದು ಮತ್ತು ಹಿರಿಯರನ್ನು ಅವಮಾನಿಸಬಾರದು.
  • ಈ ದಿನ ಮನೆಗೆ ಬಂದ ಬಡವರಿಗೆ ಅಥವಾ ಅಗತ್ಯವಿರುವವರಿಗೆ ದಾನ ನೀಡದೆ ಬರಿಗೈಲಿ ಕಳುಹಿಸುವುದು ಮಹಾ ತಪ್ಪು.
  • ಭಾನು ಸಪ್ತಮಿಯಂದು ಸೂರ್ಯ ದೇವನಿಗೆ ಅರ್ಘ್ಯ ಅರ್ಪಿಸದೇ ಇರುವುದು ಪೂಜೆಯನ್ನು ಅಪೂರ್ಣಗೊಳಿಸುತ್ತದೆ.

ಇದನ್ನೂ ಓದಿ: ಮೊದಲ ಮಗು ಹೆಣ್ಣು ಜನಿಸಿದರೆ ತಂದೆಯ ಅದೃಷ್ಟವೇ ಬದಲಾಗುತ್ತಾ? ಶಾಸ್ತ್ರಗಳು ಹೇಳುವುದೇನು?

ಸೂರ್ಯನ ಕೃಪೆಗೆ ಈ ದಿನ ಮಾಡಬೇಕಾದ ಶುಭ ಕಾರ್ಯಗಳು:

ಜೂನ್ 7 ರ ಭಾನು ಸಪ್ತಮಿಯಂದು ನಿಮ್ಮ ಜಾತಕದಲ್ಲಿ ಸೂರ್ಯನನ್ನು ಬಲಪಡಿಸಲು ಈ ಕೆಳಗಿನ ಪರಿಹಾರಗಳನ್ನು ಮಾಡಿ:

  • ತಾಮ್ರದ ಪಾತ್ರೆಯಲ್ಲಿ ಶುದ್ಧ ನೀರನ್ನು ತೆಗೆದುಕೊಂಡು, ಅದಕ್ಕೆ ಕೆಂಪು ಹೂವು ಮತ್ತು ಅಕ್ಷತೆಯನ್ನು ಹಾಕಿ ಉದಯಿಸುತ್ತಿರುವ ಸೂರ್ಯನಿಗೆ ಅರ್ಪಿಸಿ.
  • ಸೂರ್ಯನಿಗೆ ಅರ್ಘ್ಯ ಕೊಡುವಾಗ ಅಥವಾ ಪೂಜೆ ಮಾಡುವಾಗ “ಓಂ ಘೃಣಿ ಸೂರ್ಯಾಯ ನಮಃ” ಎಂಬ ಮಂತ್ರವನ್ನು ಕನಿಷ್ಠ 108 ಬಾರಿ ಜಪಿಸಿ. ಇದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
  • ಸೂರ್ಯ ದೇವರ ಅತ್ಯಂತ ಶಕ್ತಿಶಾಲಿ ಸ್ತೋತ್ರವಾದ ‘ಆದಿತ್ಯ ಹೃದಯ ಸ್ತೋತ್ರ’ವನ್ನು ಈ ದಿನ ಪಠಿಸುವುದರಿಂದ ಸಕಲ ಕಾರ್ಯಗಳಲ್ಲೂ ಜಯ ಸಿಗುತ್ತದೆ.
  • ಸೂರ್ಯನಿಗೆ ಪ್ರಿಯವಾದ ಕೆಂಪು ಬಣ್ಣದ ಬಟ್ಟೆ, ಗೋಧಿ, ಬೆಲ್ಲ ಮತ್ತು ತಾಮ್ರದ ವಸ್ತುಗಳನ್ನು ಬಡವರಿಗೆ ಅಥವಾ ಬ್ರಾಹ್ಮಣರಿಗೆ ದಾನ ಮಾಡಿ.

ಜ್ಯೋತಿಷ್ಯದ ಪ್ರಕಾರ, ಯಾರ ಜಾತಕದಲ್ಲಿ ಸೂರ್ಯ ಬಲಿಷ್ಠನಾಗಿರುತ್ತಾನೋ ಅವರು ಸಮಾಜದಲ್ಲಿ ಉತ್ತಮ ಉನ್ನತ ಹುದ್ದೆ, ನಾಯಕತ್ವ ಗುಣ ಮತ್ತು ಕೀರ್ತಿಯನ್ನು ಪಡೆಯುತ್ತಾರೆ. ಆದ್ದರಿಂದ, ಭಾನು ಸಪ್ತಮಿಯನ್ನು ಕೇವಲ ಒಂದು ಹಬ್ಬ ಎಂದು ಪರಿಗಣಿಸದೇ, ಜೀವನದಲ್ಲಿ ಸ್ವಯಂ ಶಿಸ್ತು ಮತ್ತು ಸಕಾರಾತ್ಮಕತೆಯನ್ನು ಅಳವಡಿಸಿಕೊಳ್ಳಲು ಸಿಗುವ ಉತ್ತಮ ಅವಕಾಶ ಎಂದು ಭಾವಿಸಿ ಸೂರ್ಯಾರಾಧನೆ ಮಾಡಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version