ಪತ್ನಿಯಿಂದ ಬೇರೆಯಾದ ನಂತರವೂ ಒತ್ತಾಯದ ದೈಹಿಕ ಸಂಪರ್ಕ: ಪತಿಗೆ ಶಾಕ್​​ ಕೊಟ್ಟ ಹೈಕೋರ್ಟ್​​

ಪತ್ನಿಯಿಂದ ಬೇರೆಯಾದ ನಂತರವೂ ಒತ್ತಾಯದ ದೈಹಿಕ ಸಂಪರ್ಕ: ಪತಿಗೆ ಶಾಕ್​​ ಕೊಟ್ಟ ಹೈಕೋರ್ಟ್​​

ಬೆಂಗಳೂರು, ಏಪ್ರಿಲ್​​ 08: ಪತ್ನಿಯಿಂದ ಬೇರೆಯಾದ ನಂತರವೂ ಒತ್ತಾಯದಿಂದ ಆಕೆಯ ಜೊತೆಗೆ ದೈಹಿಕ ಸಂಪರ್ಕ ಬೆಳಸಿರುವ ಪ್ರಕರಣ ಸಂಬಂಧ ಪತಿಯ ವಿರುದ್ಧದ ಕೇಸ್ ರದ್ದುಪಡಿಸಲು ಸಾಧ್ಯವಿಲ್ಲ ಎಂದಯ ಕರ್ನಾಟಕ ಹೈಕೋರ್ಟ್ ತಿಳಿಸಿದೆ. ಅದಾಗಲೇ ದಂಪತಿ ಬೇರೆಯಾಗಿದ್ದರೂ ಪತ್ನಿಯ ಇಚ್ಛೆಗೆ ವಿರುದ್ಧವಾಗಿ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ ಕಾರಣ ಪತಿಯ ವಿರುದ್ಧ ಐಪಿಸಿ ಸೆ. 376(ಬಿ) ಅಡಿ ಕೇಸ್ ದಾಖಲಾಗಿತ್ತು. ಪತ್ನಿ ದಾಖಲಿಸಿದ್ದ ಕೇಸ್ ರದ್ದು ಕೋರಿ ಹೈಕೋರ್ಟ್​ಗೆ ಪತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ.

ಪತಿ ಪರ ವಕೀಲರ ವಾದವೇನು?

ಸಾಂಸಾರಿಕ ವೈಮನಸ್ಸಿನಿಂದ 2019ರಿಂದಲೇ ಪತ್ನಿಯಿಂದ ಪತಿ ಪ್ರತ್ಯೇಕವಾಗಿದ್ದರು. ಹೀಗಿದ್ದರೂ 2021ರಲ್ಲಿ ಪತ್ನಿ ಮನೆಗೆ ಬಂದು ಒತ್ತಾಯದ ದೈಹಿಕ ಸಂಪರ್ಕ ನಡೆಸಿದ್ದು, ರಾಜಿ ಸಂಧಾನಕ್ಕೆಂದು ಮನೆಗೆ ಆಹ್ವಾನಿಸಿ ದೈಹಿಕ ಸಂಪರ್ಕ ನಡೆಸಿರೋದಾಗಿ ದೂರಲಾಗಿತ್ತು. ಆದರೆ ಆರೋಪ ನಿರಾಕರಿಸಿದ್ದ ಪತಿ ಪರ ವಕೀಲರು, ಆರೋಪಿಸಿರುವಂತೆ ಯಾವುದೇ ದೈಹಿಕ ಸಂಪರ್ಕ ನಡೆದಿರಲಿಲ್ಲ ಎಂದು ವಾದಿಸಿದ್ದರು.

ಇದನ್ನೂ ಓದಿ: ಹಿಂದೂ ಯುವತಿ ಜೊತೆ ವಿವಾಹಿತ ಮುಸ್ಲಿಂ ವ್ಯಕ್ತಿ ಪರಾರಿ; ಲವ್​​ ಜಿಹಾದ್​​ಗೆ ಒಳಗಾದ ಮಗಳನ್ನು ಹುಡುಕಿಕೊಡಿ ಎಂದು ತಾಯಿಯ ಅಳಲು

ಸ್ವತಃ ವಾದ ಮಂಡಿಸಿದ್ದ ಪತ್ನಿ

ಇನ್ನು ಪತಿ ವಿರುದ್ಧ ದೂರು ದಾಖಲಿಸಿದ್ದ ಪತ್ನಿಯೇ ಸ್ವತಃ ಹೈಕೋರ್ಟ್​​ನಲ್ಲಿ ತನ್ನ ಪರವಾಗಿ ವಾದಿಸಿಕೊಂಡಿದ್ದು, ತನ್ನ ಮೇಲೆ ನಡೆದಿರುವ ದೌರ್ಜನ್ಯವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಅಲ್ಲದೆ ಪತಿಯ ಅರ್ಜಿ ತಿರಸ್ಕರಿಸುವಂತೆ ಕೋರ್ಟ್​ನ ಮನವಿ ಮಾಡಿದ್ದರು. ಎರಡೂ ಕಡೆಯವರ ಪರ ಮತ್ತು ವಿರೋಧ ವಾದ ಆಲಿಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಪೀಠ ಅಂತಿಮವಾಗಿ ಪತಿಯ ಅರ್ಜಿಯನ್ನು ತಿರಸ್ಕೃತಗೊಳಿಸಿದೆ. ಆ ಮೂಲಕ ಪತ್ನಿಯಿಂದ ಬೇರೆಯಾದ ನಂತರವೂ ಒತ್ತಾಯದಿಂದ ಆಕೆಯ ಜೊತೆಗೆ ದೈಹಿಕ ಸಂಪರ್ಕ ಬೆಳಸಿರುವ ಈ ಪ್ರಕರಣದ ವಿಚಾರಣೆ ಅಗತ್ಯವಿದೆ ಎಂಬ ಸಂದೇಶ ನೀಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಚುನಾವಣೆ ಹತ್ತಿರ ಆದಾಗಲೇ ಡಿವೋರ್ಸ್ ವಿಷಯ ಬಹಿರಂಗ ಮಾಡಿದ್ದಕ್ಕೆ ದಳಪತಿ ವಿಜಯ್ ಗರಂ

ತಮಿಳುನಾಡು ಚುನಾವಣೆಯ (Tamil Nadu Elections) ಕಾವು ಏರುತ್ತಿರುವ ಬೆನ್ನಲ್ಲೇ, ನಟ ಮತ್ತು ರಾಜಕಾರಣಿ ದಳಪತಿ ವಿಜಯ್ ಅವರು ಬುಧವಾರ (ಏಪ್ರಿಲ್ 8) ತಿರುನಲ್ವೇಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾವೇಶದಲ್ಲಿ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ತಮ್ಮ ವೈಯಕ್ತಿಕ ಜೀವನದ ಏರಿಳಿತಗಳು ಮತ್ತು ತಮ್ಮ ಕೊನೆಯ ಸಿನಿಮಾ ‘ಜನ ನಾಯಕನ್’ ಎದುರಿಸುತ್ತಿರುವ ಸೆನ್ಸಾರ್ ಸಮಸ್ಯೆಗಳ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂದು ಅವರು ಆರೋಪಿಸಿದ್ದಾರೆ. ವಿಚ್ಛೇದನದ ಸುದ್ದಿ ಹೊರಬಂದಿದ್ದರ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ದಳಪತಿ ವಿಜಯ್ (Thalapathy Vijay) ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಇನ್ನೂ ಪ್ರಮಾಣಪತ್ರ ಸಿಕ್ಕಿಲ್ಲ. ಈ ಬಗ್ಗೆ ಮಾತನಾಡಿದ ಅವರು, ‘ನನ್ನನ್ನು ಜನರಿಂದ ದೂರವಿಡಲು ವಿರೋಧಿಗಳು ಒಂದಲ್ಲ ಒಂದು ದಾರಿ ಹುಡುಕುತ್ತಿದ್ದಾರೆ. ಮೊದಲು ಕರೂರ್ ಘಟನೆಯನ್ನು ನನ್ನ ಮೇಲೆ ಹಾಕಲು ನೋಡಿದರು. ಈಗ ನನ್ನ ಸಿನಿಮಾದ ಬಿಡುಗಡೆಯನ್ನು ತಡೆಯುತ್ತಿದ್ದಾರೆ. ನಾನು ಜನರನ್ನು ಭೇಟಿ ಮಾಡಬಾರದು ಎಂದು ಹೊಸ ನಿಯಮಗಳನ್ನು ರೂಪಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಕೆಲವು ತಿಂಗಳುಗಳಿಂದ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಂ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದ್ದವು. ಅಷ್ಟೇ ಅಲ್ಲದೇ, ನಟಿ ತ್ರಿಶಾ ಕೃಷ್ಣನ್ ಅವರೊಂದಿಗೆ ವಿಜಯ್ ಹೆಸರು ಕೇಳಿಬಂದಿತ್ತು. ಈ ಬಗ್ಗೆ ಮೌನ ಮುರಿದ ವಿಜಯ್, ‘ಚುನಾವಣೆಗೆ 30 ದಿನ ಬಾಕಿ ಇರುವಾಗ ನನ್ನ ಆಪ್ತರ ಬಗ್ಗೆ ಇಲ್ಲಸಲ್ಲದ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಏನೇ ಆದರೂ ನೀವು ನನ್ನನ್ನು ಜನರಿಂದ ಬೇರ್ಪಡಿಸಲು ಸಾಧ್ಯವಿಲ್ಲ’ ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.

‘ನನ್ನ ಮೇಲೆ ಎಷ್ಟೇ ಆರೋಪಗಳನ್ನು ಹೊರಿಸಿದರೂ ಜನರು ನನ್ನ ಜೊತೆಗಿದ್ದಾರೆ. ಈ ಪವಾಡವನ್ನು ನೋಡಿ ವಿರೋಧಿಗಳಿಗೆ ತಡೆಯಲು ಸಾಧ್ಯವಾಗುತ್ತಿಲ್ಲ’ ಎಂದು ವಿಜಯ್ ತಮ್ಮ ಭಾಷಣದಲ್ಲಿ ಗುಡುಗಿದ್ದಾರೆ. ವಿಜಯ್ ಅವರು ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದರಿಂದ ಅವರ ಅಭಿಮಾನಿಗಳಲ್ಲಿ ಕುತೂಹಲ ತೀವ್ರವಾಗಿದೆ.

ಇದನ್ನೂ ಓದಿ: ದಳಪತಿ ವಿಜಯ್ 603 ಕೋಟಿ ರೂಪಾಯಿ ಆಸ್ತಿ ವಿವರ ಬಹಿರಂಗ: ಪತ್ನಿ ಬಳಿ ಎಷ್ಟಿದೆ?

ಈ ವರ್ಷ ಫೆಬ್ರವರಿಯಲ್ಲಿ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಹೊರಬಂದಿತ್ತು. ಮಾರ್ಚ್ನಲ್ಲಿ ನಟಿ ತ್ರಿಶಾ ಅವರೊಂದಿಗೆ ವಿಜಯ್ ಮದುವೆಯೊಂದರಲ್ಲಿ ಕಾಣಿಸಿಕೊಂಡಿದ್ದರಿಂದ ವದಂತಿಗಳಿಗೆ ಮತ್ತಷ್ಟು ತುಪ್ಪ ಸುರಿದಿತ್ತು. ಅವರ ವೈಯಕ್ತಿಕ ಜೀವನದ ವಿಚಾರವನ್ನು ರಾಜಕೀಯದಲ್ಲಿ ಎಳೆದುತಂದಿದ್ದಕ್ಕೆ ವಿಜಯ್ ಗರಂ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸೌರ ಯುಗಾದಿಯ ಪರಿಣಾಮದಿಂದ ಏನೆಲ್ಲ ಬದಲಾವಣೆಯಾಗಲಿದೆ…

ಸೌರಮಾನ ಯುಗಾದಿಯು ಏಪ್ರಿಲ್ 14ರಂದು ಆಗಲಿದ್ದು ಸಂದರ್ಭದಲ್ಲಿ ಗ್ರಹಗಳ ಸ್ಥಿತಿಗತಿಗಳು ಕೇವಲ ವೈಯಕ್ತಿಕ ಜೀವನದ ಮೇಲಲ್ಲದೆ, ಇಡೀ ಸಮಾಜದ ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಮಗ್ಗಲುಗಳ ಮೇಲೆ ಗಾಢವಾದ ಪರಿಣಾಮ ಬೀರಲಿವೆ. ಈ ಸಂಧಿಕಾಲದ ಕುರಿತು ಅವಲೋಕನ ಅಗತ್ಯ.

​ಸೌರಮಾನ ಯುಗಾದಿಯ ದಿನದಂದು ಗ್ರಹಗಳ ಸಂಯೋಜನೆಯು ಸಾಮಾಜಿಕವಾದ ಅನೇಕ ಬದಲಾವಣೆಗೆ ಕಾರಣವೂ ಆಗಲಿದೆ. ​ಈ ಬಾರಿಯ ಯುಗಾದಿಯು ಪರಿವರ್ತನೆಯ ಕಾಲ ಎಂದು ಕರೆಯಲ್ಪಡಲು ಪ್ರಮುಖ ಕಾರಣವೆಂದರೆ ಬೃಹತ್ ಗ್ರಹಗಳಾದ ಶನಿ, ರಾಹು ಮತ್ತು ಗುರುವಿನ ವಿಶಿಷ್ಟ ನಡೆ.

​ಶನಿ-ರಾಹಗಳ ಬದಲಾವಣೆ: ಸಾಮಾಜಿಕ ಮಥನ:

ಕುಂಭದಲ್ಲಿ ರಾಹುವಿನ ಸ್ಥಿತಿಯು ಸಮಾಜದಲ್ಲಿ ಒಂದು ಬಗೆಯ ಕ್ರಾಂತಿಕಾರಿ ಬದಲಾವಣೆಗೆ ಮುನ್ನುಡಿ ಬರೆಯಲಿದೆ. ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ಲೋಕದಲ್ಲಿ ಅಭೂತಪೂರ್ವ ಬದಲಾವಣೆಗಳು ಕಂಡುಬರುತ್ತವೆ. ಇದು ಉದ್ಯೋಗ ಮಾರುಕಟ್ಟೆಯಲ್ಲಿ ಹೊಸ ಸವಾಲುಗಳನ್ನು ತಂದರೂ, ದೀರ್ಘಕಾಲಿಕವಾಗಿ ಸಮಾಜವನ್ನು ಆಧುನೀಕರಣದತ್ತ ಕೊಂಡೊಯ್ಯುತ್ತದೆ. ಕೆಳವರ್ಗಗಳ ಧ್ವನಿಯು ಬಲವಾಗುವ ಸಾಧ್ಯತೆ ಇದೆ. ಹಳೆಯ ಕಾನೂನುಗಳಲ್ಲಿ ತಿದ್ದುಪಡಿ ಅಥವಾ ಹೊಸ ಸಾಮಾಜಿಕ ನಿಯಮಗಳ ಜಾರಿಗೆ ಈ ಕಾಲ ಪೂರಕವಾಗಿದೆ.

ಜ್ಞಾನಾರ್ಜನೆ:

ಬೃಹಸ್ಪತಿಯು ಮಿಥುನ ರಾಶಿಯಲ್ಲಿ ಇರುವುದು ಸಮಾಜದ ಬೌದ್ಧಿಕ ಮಟ್ಟವನ್ನು ಹೆಚ್ಚಿಸಲಿದೆ. ಸಂಶೋಧನೆ ಮತ್ತು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ದೊರೆಯಲಿದೆ. ವಿಶೇಷವಾಗಿ ವೇದ-ಪುರಾಣಗಳಂತಹ ಪ್ರಾಚೀನ ಜ್ಞಾನವನ್ನು ಆಧುನಿಕ ವಿಜ್ಞಾನದೊಂದಿಗೆ ಸಮೀಕರಿಸುವ ಪ್ರಯತ್ನಗಳು ಸಮಾಜದಲ್ಲಿ ಮನ್ನಣೆ ಪಡೆಯುತ್ತವೆ. ಮಾಧ್ಯಮ ಕ್ಷೇತ್ರದಲ್ಲಿ ಸತ್ಯಾಸತ್ಯತೆಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆಯಲಿದ್ದು, ಜವಾಬ್ದಾರಿಯುತ ಪತ್ರಿಕೋದ್ಯಮಕ್ಕೆ ಒತ್ತು ಸಿಗಲಿದೆ.

ಆರ್ಥಿಕ ಮತ್ತು ಕೃಷಿ ಸ್ಥಿತಿಗತಿ:

ಸೌರಮಾನ ಯುಗಾದಿಯಂದು ಸೂರ್ಯನು ಮೇಷ ರಾಶಿಯಲ್ಲಿ ಉಚ್ಚನಾಗಿರುವುದರಿಂದ ಆಡಳಿತ ಮಂಡಳಿಗಳು ಕಠಿಣ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಶನಿಯ ಪ್ರಭಾವದಿಂದ ಸಾಂಪ್ರದಾಯಿಕ ಕೃಷಿಗಿಂತ ತಾಂತ್ರಿಕ ಕೃಷಿಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಅಡಿಕೆ, ತೆಂಗಿನಂತಹ ವಾಣಿಜ್ಯ ಬೆಳೆಗಳ ಮಾರುಕಟ್ಟೆಯಲ್ಲಿ ಏರಿಳಿತಗಳು ಕಂಡುಬಂದರೂ, ವರ್ಷದ ದ್ವಿತೀಯಾರ್ಧದಲ್ಲಿ ಸ್ಥಿರತೆ ಬರಲಿದೆ. ಆರಂಭಿಕ ಹಂತದಲ್ಲಿ ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರಿಗೆ ತಟ್ಟಬಹುದು, ಆದರೆ ಜೂನ್ ಅನಂತರ ಆರ್ಥಿಕ ಸ್ಥಿತಿ ಸುಧಾರಿಸುವ ಲಕ್ಷಣಗಳಿವೆ.

ರಾಜಕೀಯಯ ಹಳೆಯ ಮೈತ್ರಿಗಳು ಮುರಿದು ಹೊಸ ರಾಜಕೀಯ ಸಮೀಕರಣಗಳು ಸೃಷ್ಟಿಯಾಗುತ್ತವೆ. ಆರೋಗ್ಯದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಸಮಾಜದಲ್ಲಿ ಹೆಚ್ಚಿನ ಜಾಗೃತಿ ಮತ್ತು ಚಿಕಿತ್ಸಾ ಪದ್ಧತಿಗಳ ಅಭಿವೃದ್ಧಿ. ಧರ್ಮ, ಆಧ್ಯಾತ್ಮಿಕ ಕೇಂದ್ರಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಳ; ಸಂಪ್ರದಾಯದ ಪುನರುತ್ಥಾನ. ಪರಿಸರದ ಭೂಮಿಯ ಉಷ್ಣಾಂಶ ಏರಿಕೆಯಿಂದಾಗಿ ಜಲ ಸಂರಕ್ಷಣೆಯ ಬಗ್ಗೆ ಜನರಲ್ಲಿ ಗಂಭೀರ ಚಿಂತನೆ.

ಈ ಕಾಲಘಟ್ಟವು ಕ್ಷೋಭೆ ಮತ್ತು ಸೃಷ್ಟಿ ಎರಡನ್ನೂ ಒಳಗೊಂಡಿದೆ. ಸಮಾಜವು ಹಳೆಯ ಜಡತ್ವವನ್ನು ಬಿಟ್ಟು ಹೊಸ ಆಲೋಚನೆಗಳನ್ನು ಅಪ್ಪಿಕೊಳ್ಳುವ ಪ್ರಕ್ರಿಯೆಯೇ ಈ ಯುಗಾದಿಯ ಫಲ.
​ಈ ಗ್ರಹಗತಿಗಳು ಸಮಾಜದಲ್ಲಿ ಸತ್ಯ ಮತ್ತು ಪಾರದರ್ಶಕತೆಯನ್ನು ಬಯಸುತ್ತವೆ. ಯಾರೂ ಎಣಿಸದಂತಹ ಆಕಸ್ಮಿಕ ಬದಲಾವಣೆಗಳು ಈ ಸಂವತ್ಸರದಲ್ಲಿ ಸಂಭವಿಸುವ ಸಾಧ್ಯತೆಗಳಿವೆ.

– ಲೋಹಿತ ಹೆಬ್ಬಾರ್

Source link

ಟಾಟಾ ಏಸ್, ಕಾರಿನ ನಡುವೆ ಭೀಕರ ಅಪಘಾತ: ಮೂವರ ಸ್ಥಿತಿ ಗಂಭೀರ

ಹಾವೇರಿ, ಏಪ್ರಿಲ್​​ 08: ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಂಬೀಡ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಟಾಟಾ ಏಸ್ ವಾಹನ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅರೇಮಲ್ಲಾಪುರ ಗ್ರಾಮದಿಂದ ಹಾನಗಲ್ ಕಡೆಗೆ ಮದುವೆ ಸಮಾರಂಭದ ಅಡುಗೆ ಮಾಡಲು ತೆರಳುತ್ತಿದ್ದ ಟಾಟಾ ಏಸ್ ವಾಹನಕ್ಕೆ ಎದುರಿನಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಆಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಆತನಿಗೆ ಮಹಿಳೆಯರ ಒಳ ಉಡುಪು ಮಾತ್ರ ಬೇಕು: ನಮಗೆ ತುಂಬಾ ಭಯ ಆಗ್ತಿದೆ ಎಂದ ಗೃಹಿಣಿ

ಚಾಮರಾಜನಗರ, ಏ.8: ಜಿಲ್ಲೆಯಲ್ಲಿ ಮಹಿಳೆಯರ ಒಳ ಉಡುಪುಗಳನ್ನು ಕದಿಯುವ ಸೈಕೋಪಾತ್ ಒಬ್ಬನ ಉಪಟಳದಿಂದ ಸ್ಥಳೀಯ ನಿವಾಸಿಗಳು, ವಿಶೇಷವಾಗಿ ಗೃಹಿಣಿಯರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಹೌಸಿಂಗ್ ಬೋರ್ಡ್ ಕಾಲೋನಿ, ಇಂದಿರಾನಗರ ಮತ್ತು ಕರಿನಂಜಿಪುರ ಸುತ್ತಮುತ್ತಲ ಪ್ರದೇಶಗಳಲ್ಲಿ ಸುಮಾರು ಒಂದೂವರೆ ತಿಂಗಳಿನಿಂದ ಈ ವಿಚಿತ್ರ ಕೃತ್ಯಗಳು ವರದಿಯಾಗುತ್ತಿವೆ. ರಾತ್ರಿ 12 ರಿಂದ ಬೆಳಗಿನ ಜಾವ 3 ಗಂಟೆಯ ನಡುವೆ, ಒಬ್ಬ ಅಪರಿಚಿತ ವ್ಯಕ್ತಿ ಮಹಿಳೆಯರ ವೇಷಧರಿಸಿ ಮನೆಗಳ ಮುಂದೆ ಒಣಗಲು ಹಾಕಿರುವ ಮಹಿಳೆಯರ ಒಳ ಉಡುಪುಗಳನ್ನು ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದಾನೆ. ಈ ಸೈಕೋಪಾತ್ ಕದ್ದ ಒಳ ಉಡುಪುಗಳನ್ನು ತಾನೇ ಧರಿಸಿ ಒಂದು ವಿಕೃತಿಯನ್ನು ಮೆರೆಯುತ್ತಿದ್ದಾನೆ ಎಂದು ತಿಳಿದುಬಂದಿದೆ. ಈತನ ಕೃತ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸ್ಪಷ್ಟವಾಗಿ ದಾಖಲಾಗಿದ್ದು, ಇವು ಬೆಳಕಿಗೆ ಬಂದ ನಂತರ ಸ್ಥಳೀಯರಲ್ಲಿ ಭೀತಿ ಹೆಚ್ಚಾಗಿದೆ. ಈ ಪ್ರದೇಶದ ಮಹಿಳೆಯರು ಮತ್ತು ಪೋಷಕರು ತಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಒಬ್ಬ ಗೃಹಿಣಿ ಈ ಬಗ್ಗೆ ಮಾತನಾಡಿದ್ದು, ಸಾಮಾನ್ಯವಾಗಿ ಚಾಮರಾಜನಗರವನ್ನು ಸುರಕ್ಷಿತ ಪ್ರದೇಶವೆಂದು ಪರಿಗಣಿಸಲಾಗುತ್ತಿತ್ತು, ಆದರೆ ಇಂತಹ ಘಟನೆಗಳಿಂದ ಪ್ರಸ್ತುತ ನಿರ್ಜನ ಪ್ರದೇಶವೆನ್ನಿಸುವ ವಾಸಸ್ಥಳದಲ್ಲಿ ಒಂಟಿಯಾಗಿರುವ ಮಹಿಳೆಯರು ಮತ್ತು ಮಕ್ಕಳು ಭಯಭೀತರಾಗಿದ್ದಾರೆ ಎಂದು ತಿಳಿಸಿದ್ದಾರೆ. ಈ ವ್ಯಕ್ತಿಯ ಮನಸ್ಥಿತಿ ಯಾವ ರೀತಿ ಇದೆ ಎಂಬುದು ತಿಳಿದಿಲ್ಲ. ಮುಂದೆ ಈತನಿಂದ ಬೇರೆ ಯಾವುದೇ ಅನಾಹುತಗಳಾಗುವ ಸಾಧ್ಯತೆಗಳಿರುವುದರಿಂದ ಕೂಡಲೇ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಬೇಸಿಗೆ ರಜೆ ಇರುವುದರಿಂದ ಮಕ್ಕಳು ಮನೆಯಲ್ಲಿ ಒಬ್ಬಂಟಿಯಾಗಿರುವಾಗ ಈ ಸೈಕೋಪಾತ್ ಮಕ್ಕಳ ಮೇಲೆ ದುಷ್ಕೃತ್ಯ ಎಸಗುವ ಸಾಧ್ಯತೆಗಳ ಬಗ್ಗೆ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಚಿನ್ನಾಭರಣ ಕಳ್ಳತನದಂತಹ ಪ್ರಕರಣಗಳನ್ನು ಕಂಡಿದ್ದೇವೆ, ಆದರೆ ಒಳ ಉಡುಪುಗಳನ್ನು ಕದ್ದು ಧರಿಸುವ ಇಂತಹ ವಿಕೃತಕಾಮಿಯ ಕೃತ್ಯವು ತೀರಾ ವಿಚಿತ್ರವಾಗಿದೆ. ಈತನಿಂದ ಯಾವುದೇ ಆಪತ್ತು ಸಂಭವಿಸುವ ಮುನ್ನವೇ ಪೊಲೀಸರು ಎಚ್ಚೆತ್ತುಕೊಂಡು, ಬಂಧನ ಮಾಡುವ ಕಾರ್ಯಕ್ಕೆ ಮುಂದಾಗಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ. ಕರ್ನಾಟಕ ಸರ್ಕಾರವು ಜನಸ್ನೇಹಿ ಪೊಲೀಸ್, ಒಬವ್ವ ಪಡೆ ಮತ್ತು ಅಕ್ಕಪಡೆಗಳಂತಹ ಮಹಿಳೆಯರ ಸುರಕ್ಷತೆಗಾಗಿ ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಇಂತಹ ಘಟನೆಗಳು ನಡೆಯುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಚಾಮರಾಜನಗರ ಜಿಲ್ಲಾ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸೈಕೋಪಾತ್‌ನನ್ನು ಶೀಘ್ರವಾಗಿ ಬಂಧಿಸಿ ಮಹಿಳೆಯರಲ್ಲಿ ಸುರಕ್ಷತಾ ಭಾವನೆಯನ್ನು ಮೂಡಿಸಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

14 ತಿಂಗಳು ಕೋಮಾದಲ್ಲಿದ್ದ ಅಮೆರಿಕದ ಭಾರತೀಯ ವಿದ್ಯಾರ್ಥಿನಿಯ ದುರಂತ ಅಂತ್ಯ

ಮುಂಬೈ, ಏಪ್ರಿಲ್ 8: ಆಕೆ ಎಷ್ಟು ಸುಂದರಿಯೋ ಅಷ್ಟೇ ಜಾಣೆ. ಹೀಗಾಗಿಯೇ ತನ್ನ 35ನೇ ವಯಸ್ಸಿನಲ್ಲೂ ಹೊಸತೇನಾದರೂ ಕಲಿಯಬೇಕೆಂಬ ಬಯಕೆಯಿಂದ ಅವರು ಅಮೆರಿಕಕ್ಕೆ ಹಾರಿದ್ದರು. ಆದರೆ, ಅದೊಂದು ಅಪಘಾತ ಆಕೆಯ ಕನಸನ್ನು ನುಚ್ಚುನೂರು ಮಾಡಿಬಿಟ್ಟಿತ್ತು. ಮಗಳು ವಿದೇಶದಲ್ಲಿ ಓದಿ ಜೀವನದಲ್ಲಿ ಹೆಚ್ಚೆಚ್ಚು ಸಾಧನೆ ಮಾಡುತ್ತಾಳೆ ಎಂಬ ಕನಸು ಕಂಡಿದ್ದ ಆಕೆಯ ತಂದೆ ತಮ್ಮ ಮಗಳ ಸ್ಥಿತಿಯನ್ನು ನೋಡಿ ಮಮ್ಮಲ ಮರುಗಿದ್ದರು. ಭೀಕರ ಕಾರು ಅಪಘಾತದಲ್ಲಿ (Car Accident) ಗಾಯಗೊಂಡಿದ್ದ ನೀಲಂ ಶಿಂಧೆ (Neelam Tanaji Shinde) ಎಂಬ ಮಹಾರಾಷ್ಟ್ರದ ಮಹಿಳೆ ಕೋಮಾಗೆ ಜಾರಿದ್ದರು.

ಒಂದಲ್ಲ, ಎರಡಲ್ಲ… ಬರೋಬ್ಬರಿ 14 ತಿಂಗಳು ಕೋಮಾದಲ್ಲಿದ್ದ ಆಕೆಯನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂದು ಆಕೆಯ ಕುಟುಂಬ ಮಾಡಿದ ಪ್ರಯತ್ನ ಒಂದೆರಡಲ್ಲ. ಆದರೆ, ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ಹೋದ ಆ ಮಹಿಳೆ ಮತ್ತೆ ಭಾರತಕ್ಕೆ ಬರಲೇ ಇಲ್ಲ. ಕೋಮಾದಲ್ಲಿರುವಾಗಲೇ ಆಕೆ ದುರಂತ ಅಂತ್ಯ ಕಂಡಿದ್ದಾರೆ. ನೀಲಂ ಶಿಂಧೆಯ ಕೊನೆಯ ಆಸೆಯಂತೆ ಆಕೆಯ ಅಂಗಾಂಗಗಳನ್ನು ಅವರ ಕುಟುಂಬಸ್ಥರು ದಾನ ಮಾಡಿದ್ದಾರೆ. ಈ ಮೂಲಕ ನೀಲಂ ಸಾವಿನಲ್ಲೂ ಸಾರ್ಥಕತೆ ಮೆರೆದಿದಿದ್ದಾರೆ.

ಮಹಾರಾಷ್ಟ್ರದ ಸತಾರಾ ಜಿಲ್ಲೆಯ ವಡ್ಗಾಂವ್​ನ 35 ವರ್ಷದ ನೀಲಂ ತಾನಾಜಿ ಶಿಂಧೆ ಅಮೆರಿಕದಲ್ಲಿ ವಿದ್ಯಾರ್ಥಿನಿಯಾಗಿದ್ದರು. ಕ್ಯಾಲಿಫೋರ್ನಿಯಾದಲ್ಲಿ ನಡೆದ ಭೀಕರ ಅಪಘಾತದ ನಂತರ 14 ತಿಂಗಳಿಂದ ಕೋಮಾ ಸ್ಥಿತಿಯಲ್ಲಿದ್ದ ನೀಲಂ ಅಮೆರಿಕದಲ್ಲಿ ನಿಧನರಾಗಿದ್ದಾರೆ. 2025ರ ಫೆಬ್ರವರಿ 14ರಂದು ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೋದಲ್ಲಿ ನಡೆದ ಹಿಟ್ ಆ್ಯಂಡ್ ರನ್ ಘಟನೆಯಲ್ಲಿ ಆಕೆಗೆ ಗಂಭೀರ ಗಾಯಗಳಾಗಿದ್ದವು. ಶಸ್ತ್ರಚಿಕಿತ್ಸೆಗೆ ಒಳಗಾಗಿ ದೀರ್ಘಕಾಲದ ವೈದ್ಯಕೀಯ ಆರೈಕೆಯನ್ನು ಪಡೆದಿದರೂ ಆಕೆಗೆ ಪ್ರಜ್ಞೆ ಮರಳಿ ಬರಲಿಲ್ಲ. ನೀಲಂ ಅಪಘಾತಕ್ಕೀಡಾಡಗುವ ಸ್ವಲ್ಪ ಮುಂಚೆ ಅವರ ತಾಯಿ ಕೂಡ ನಿಧನರಾಗಿದ್ದರು. ಹೀಗಾಗಿ, ಅವರ ಕುಟುಂಬದಲ್ಲಿ ಎರಡೆರಡು ಸಾವಿನ ಸಂಕಟ ಮಡುಗಟ್ಟಿದೆ.

ಇದನ್ನೂ ಓದಿ: ಕಾಲೇಜು ವಿದ್ಯಾರ್ಥಿ ಸಾವಿನ ಸುತ್ತ ಹತ್ತಾರು ಅನುಮಾನ: ಸ್ಫೋಟಕ ಆರೋಪ ಮಾಡಿದ ಮೃತನ ತಂದೆ

ನೀಲಂ ಅವರಿಗೆ ತಮ್ಮ ಅಂಗಾಂಗಗಳನ್ನು ದಾನ ಮಾಡಬೇಕೆನ್ನುವ ಆಸೆಯಿತ್ತು. ಅವರ ಕೊನೆಯಾಸೆಯಂತೆ ಅವರ ಕುಟುಂಬಸ್ಥರು ಅಂಗಾಂಗ ದಾನ ಮಾಡಿದ್ದಾರೆ. ಆಕೆಯ ಸಾವು ಆಕೆಯ ಕುಟುಂಬ ಮತ್ತು ಸಮುದಾಯವನ್ನು ತೀವ್ರ ಶೋಕದಲ್ಲಿ ಮುಳುಗಿಸಿದೆ. ಅಪಘಾತದಿಂದ ಗಂಭೀರ ಗಾಯಗಳಾಗಿ ನೀಲಂ ಅವರ ತಲೆಗೆ ತೀವ್ರ ಪೆಟ್ಟಾಗಿತ್ತು. ಜೊತೆಗೆ ಅವರ ಕೈಗಳು, ಕಾಲುಗಳು ಮತ್ತು ಎದೆಗೂ ಗಾಯಗಳಾಗಿದ್ದವು.

ತಲೆಯ ಗಾಯವನ್ನು ಸರಿಪಡಿಸಲು ವೈದ್ಯರು ತಕ್ಷಣದ ಶಸ್ತ್ರಚಿಕಿತ್ಸೆ ನಡೆಸಿದರು. ಆದರೂ ಅವರ ಸ್ಥಿತಿ ಗಂಭೀರವಾಗಿಯೇ ಇತ್ತು. ಅವರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಯಿತು. ಅಲ್ಲಿ ಅವರು ಹಲವು ತಿಂಗಳುಗಳ ಚಿಕಿತ್ಸೆ ಪಡೆಯುತ್ತಿದ್ದರು. ಆದರೂ ಅವರಲ್ಲಿ ಚೇತರಿಕೆ ಕಂಡುಬರಲಿಲ್ಲ. ಅವರ ಚಿಕಿತ್ಸೆಯ ಸಮಯದಲ್ಲಿ, ಫೀಡಿಂಗ್ ಟ್ಯೂಬ್‌ಗೆ ಸಂಬಂಧಿಸಿದ ಸೋಂಕು ಸೇರಿದಂತೆ ತೊಡಕುಗಳು ಉಂಟಾದವು.

ಇದನ್ನೂ ಓದಿ: ತಮಿಳುನಾಡಿನ 9 ಪೊಲೀಸರಿಗೆ ಗಲ್ಲು ಶಿಕ್ಷೆಯಾಗಲು ಈ ಮಹಿಳಾ ಕಾನ್​ಸ್ಟೆಬಲ್ ಕೂಡ ಕಾರಣ!

ಅವರ ಆರೋಗ್ಯ ಕ್ಷೀಣಿಸುತ್ತಲೇ ಇತ್ತು. ಹೀಗಾಗಿ, ಮಾರ್ಚ್ 28ರಂದು ಜೀವರಕ್ಷಕ ಬೆಂಬಲವನ್ನು ತೆಗೆದುಹಾಕಲು ವೈದ್ಯರು ನಿರ್ಧರಿಸಿದರು. ನಂತರ ಅವರ ಸ್ಥಿತಿ ವೇಗವಾಗಿ ಹದಗೆಟ್ಟಿತು. ಬಳಿಕ ಅವರು ಸಾವನ್ನಪ್ಪಿದರು.ಅವರ ತಂದೆ ಆನಂದ್ ಶಿಂಧೆ ಅಮೆರಿಕಕ್ಕೆ ಪ್ರಯಾಣಿಸಲು ತುರ್ತು ವೀಸಾ ಪಡೆಯುವಲ್ಲಿ ಭಾರೀ ತೊಂದರೆ ಎದುರಿಸಿದರು. ಮುಂಬೈ ವೀಸಾ ಕಚೇರಿಯಲ್ಲಿ ಪದೇ ಪದೇ ಮನವಿಗಳು ಮತ್ತು ಪ್ರಯತ್ನಗಳ ಹೊರತಾಗಿಯೂ ವಿಳಂಬ ಮುಂದುವರೆಯಿತು. ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಮಾಡಿದ ನಂತರ ರಾಜಕೀಯ ನಾಯಕರು ಮತ್ತು ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಕೊನೆಗೂ ನೀಲಂ ಅವರ ತಂದೆ ಮತ್ತು ಸಹೋದರನಿಗೆ ವೀಸಾ ದೊರಕಿತು. ಆದರೂ ಇರಾನ್ ಯುದ್ಧದ ಕಾರಣದಿಂದ ಅವರು ಅಮೆರಿಕಕ್ಕೆ ಪ್ರಯಾಣಿಸಲು ತೊಂದರೆಯಾಯಿತು. ಕೊನೆಗೂ ಬಹಳ ವಿಳಂಬವಾಗಿಯಾದರೂ ಅವರು ಅಮೆರಿಕಕ್ಕೆ ಹೋಗಲು ಸಾಧ್ಯವಾಯಿತು. ಆದರೆ, ಆಕೆಯ ಕೊನೆಯ ದಿನಗಳಲ್ಲಿ ನೀಲಂಳನ್ನು ನೋಡಲು ಅವರಿಗೆ ಸಾಧ್ಯವಾಗಲಿಲ್ಲ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

2nd PUC Result: ಸರ್ವರ್ ಕಿರಿಕಿರಿಗೆ ಬೈ ಹೇಳಿ, ವೆಬ್‌ಸೈಟ್‌ಗಿಂತಲೂ ಮೊದಲೇ ದ್ವಿತೀಯ PUC ರಿಸಲ್ಟ್​ ನೋಡಿ

ಬೆಂಗಳೂರು, (ಏಪ್ರಿಲ್ 08): ದ್ವಿತೀಯ ಪಿಯುಸಿ ಫಲಿತಾಂಶದ (2nd PUC Results) ದಿನಾಂಕದ ಗೊಂದಲಕ್ಕೆ ತೆರೆ ಬಿದ್ದಿದ್ದು, ನಾಳೆ ಅಂದರೆ ಏಪ್ರಿಲ್​​ 9 ರಂದು ಫಲಿತಾಂಶ ಪ್ರಕಟಣೆಯಾಗಲಿದೆ ಎಂದು ಪರೀಕ್ಷಾ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಅವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಲಿದ್ದಾರೆ. ನಂತರ ಮಧ್ಯಾಹ್ನ 3ಗಂಟೆಗೆ ಅಧಿಕೃತ ವೆಬ್‌ಸೈಟ್​​ನಲ್ಲಿ ರಿಸಲ್ಟ್​ ನೋಡಬಹುದಾಗಿದೆ. ಇನ್ನು ವಿಶೇಷ ಅಂದ್ರೆ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಫಲಿತಾಂಶದ ಅಂಕಪಟ್ಟಿಯನ್ನು (Marks Card) ಡಿಜಿಲಾಕರ್ ಮೂಲಕ ಲಭ್ಯವಾಗಲಿದೆ. ಒಂದು ವೇಳೆ ವೆಬ್​​ಸೈಟ್​​ನಲ್ಲಿ ರಿಸಲ್ಟ್ ನೋಡುವಾಗ ಸರ್ವರ್ ಸಮಸ್ಯೆ ಎದುರಾದರೆ ಡಿಜಿಲಾಕರ್ (DigiLocker) ಮೂಲಕವೇ ಮಾರ್ಕ್ಸ್ ಕಾರ್ಡ್ ಪಡೆದುಕೊಳ್ಳಬಹುದು. ಹಾಗಾದ್ರೆ, ಡಿಜಿಲಾಕರ್​​ನಿಂದ ಅಂಕಪಟ್ಟಿಯನ್ನು ಹೇಗೆ ಡೌನ್​ ಲೋಡ್ ಮಾಡಿಕೊಳ್ಳಬೇಕು ಎನ್ನುವುದು ಈ ಕೆಳಗಿನಂತಿರುವ ಪ್ರಕ್ರಿಯೆಯನ್ನು ಅನುಸರಿಸಬೇಕು.

 ಫಲಿತಾಂಶ ಡಿಜಿ ಲಾಕರ್‌ನಲ್ಲೂ ಲಭ್ಯ

ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವು ಕೇಂದ್ರ ಸರ್ಕಾರದ ಅಧಿಕೃತ ಅಪ್ಲಿಕೇಶನ್‌ ಆದ ಡಿಜಿಲಾಕರ್‌ನಲ್ಲಿ ಲಭ್ಯವಾಗಲಿದೆ. ಫಲಿತಾಂಶ ಚೆಕ್ ಮಾಡಿಕೊಳ್ಳಲು ಸೈಬರ್ ಸೆಂಟರ್​​ನಲ್ಲಿ ಸಾಲುಗಟ್ಟಿ ನಿಲ್ಲುವ ಅಗತ್ಯವಿಲ್ಲ, ಯಾವುದೇ ಕಾಗದಪತ್ರಗಳ ಜಂಜಾಟವಿಲ್ಲ. ಸರ್ವರ್ ಸಮಸ್ಯೆ ಇಲ್ಲದೇ ನಿಮ್ಮ ಫಲಿತಾಂಶ ಅತ್ಯಂತ ಸುರಕ್ಷಿತವಾಗಿ ಪಡೆದುಕೊಳ್ಳಬಹುದು.

ಇದನ್ನೂ ಓದಿ: Karnataka 2nd PUC Result 2026: ನಾಳೆ ಮಧ್ಯಾಹ್ನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ 

ಸಾಮಾನ್ಯವಾಗಿ ಫಲಿತಾಂಶ ಪ್ರಕಟವಾದ ತಕ್ಷಣ ಲಕ್ಷಾಂತರ ಮಂದಿ ಒಮ್ಮೆಗೆ ಅಧಿಕೃತ ವೆಬ್‌ಸೈಟ್‌ಗಳ ಮೇಲೆ ಮುಗಿಬೀಳುತ್ತಾರೆ. ಇದರಿಂದ ಸರ್ವರ್ ಕ್ರ್ಯಾಶ್ ಆಗುವುದು ಅಥವಾ ಪೇಜ್ ಲೋಡ್ ಆಗಲು ಬಹಳ ಸಮಯ ತೆಗೆದುಕೊಳ್ಳುವುದು ಮಾಮೂಲಿ.  ಆದರೆ ಈ ಬಾರಿ ನೀವು ವೆಬ್‌ಸೈಟ್ ಓಪನ್ ಆಗುವವರೆಗೆ ಕಾಯಬೇಕಾದ ಅಗತ್ಯವಿಲ್ಲ. ಡಿಜಿಲಾಕರ್ ಮೂಲಕವೇ ನೇರವಾಗಿ ಅಂಕಪಟ್ಟಿ ಡೌನ್ ಲೋಡ್ ಮಾಡಿಕೊಂಡು ನಿಮ್ಮ ಫಲಿತಾಂಶ ನೋಡಿಕೊಳ್ಳಬಹುದು.

ಡಿಜಿಲಾಕರ್​​ ಮೂಲಕ ಅಂಕಪಟ್ಟಿ ಪಡೆಯುವುದ್ಹೇಗೆ?

ಹಂತ 1: ವೆಬ್‌ಸೈಟ್‌ಗಿಂತಲೂ ವೇಗವಾಗಿ ಮತ್ತು ಸುಲಭವಾಗಿ ನಿಮ್ಮ ಅಂಕಪಟ್ಟಿ ಪಡೆಯಲು ನೀವು ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಬೇಕು ಅಷ್ಟೇ. ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಿಂದ ‘DigiLocker’ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ. ಅಪ್ಲಿಕೇಶನ್ ಇಲ್ಲದಿದ್ದರೆ ನೇರವಾಗಿ digilocker.gov.in ವೆಬ್‌ಸೈಟ್‌ಗೂ ಭೇಟಿ ನೀಡಬಹುದು.

ಹಂತ 2:  ಅಪ್ಲಿಕೇಶನ್ ತೆರೆದ ನಂತರ ಮುಖಪುಟದಲ್ಲಿ ಕಾಣುವ ‘ಡಾಕ್ಯುಮೆಂಟ್ ವರ್ಗಗಳ’ (Document Categories) ಅಡಿಯಲ್ಲಿ ‘ಶಿಕ್ಷಣ ಮತ್ತು ಕಲಿಕೆ’ (Education and Learning) ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಹಲವಾರು ಶಿಕ್ಷಣ ಮಂಡಳಿಗಳ ಪಟ್ಟಿ ಕಾಣಿಸುತ್ತದೆ. ಅದರಲ್ಲಿ ನಮ್ಮ ರಾಜ್ಯದ ‘ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ’ (KSEAB) ಅನ್ನು ಹುಡುಕಿ ಆಯ್ಕೆ ಮಾಡಿ.

ಹಂತ 3: ನಂತರದ ಸ್ಕ್ರೀನ್‌ನಲ್ಲಿ ನಿಮಗೆ ‘Class XII Marksheet’ ಅಥವಾ ‘2nd PUC Marksheet’ ಎಂಬ ಆಯ್ಕೆ ಕಾಣಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ಪಿಯುಸಿ ನೋಂದಣಿ ಸಂಖ್ಯೆ (Roll Number/Registration Number) ಮತ್ತು ಪರೀಕ್ಷೆ ಬರೆದ ವರ್ಷವನ್ನು (2026) ನಮೂದಿಸಿ. ಆಧಾರ್ ಕಾರ್ಡ್‌ನಲ್ಲಿರುವಂತೆ ನಿಮ್ಮ ವಿವರಗಳನ್ನು ಗಮನಿಸಿ ನೋಡಿ ಸಬ್‌ಮಿಟ್ ಮಾಡಿ.

ಹಂತ 4: ಬಳಿಕ ಕರ್ನಾಟಕ ಪಿಯುಸಿ 2 ಫಲಿತಾಂಶ ಪರದೆಯ ಮೇಲೆ ಮೂಡುತ್ತದೆ. ಇದರಲ್ಲಿ ನಿಮ್ಮ ವಿಷಯವಾರು ಅಂಕಗಳು ಲಭ್ಯವಿರುತ್ತವೆ. ಅಲ್ಲಿರುವ ಡೌನ್‌ಲೋಡ್ ಬಟನ್ ಕ್ಲಿಕ್ ಮಾಡುವ ಮೂಲಕ ಪಿಡಿಎಫ್ (PDF) ರೂಪದಲ್ಲಿ ನಿಮ್ಮ ಅಂಕಪಟ್ಟಿಯನ್ನು ಪಡೆದುಕೊಳ್ಳಬಹುದಾಗಿದೆ.

ಅಂಕಪಟ್ಟಿ ಕೈಸೇರುವವರೆಗೂ ಕಾಯುವ ಅಗತ್ಯವಿಲ್ಲ

ಇಂಟರ್ನೆಟ್ ಕೆಫೆಗಳಿಗೆ ಅಲೆಯುವ ಅಥವಾ ಸ್ಲೋ ಇರುವ ವೆಬ್‌ಸೈಟ್‌ಗಳನ್ನು ಪದೇ ಪದೇ ರಿಫ್ರೆಶ್ ಮಾಡುವ ಕಿರಿಕಿರಿ ಇಲ್ಲದೆಯೇ ನಿಮ್ಮ ಅಂಕಪಟ್ಟಿಯನ್ನು ನೇರವಾಗಿ ನಿಮ್ಮ ಮೊಬೈಲ್‌ನಲ್ಲೇ ಪಡೆಯಬಹುದು. ಕೇಂದ್ರ ಸರ್ಕಾರದ ‘ಡಿಜಿಲಾಕರ್’ ಸೌಲಭ್ಯದ ಮೂಲಕ ಫಲಿತಾಂಶ ಘೋಷಣೆಯಾದ ಕೆಲವೇ ಕ್ಷಣಗಳಲ್ಲಿ ನಿಮ್ಮ ಅಂಕಪಟ್ಟಿ ಡಿಜಿಟಲ್ ರೂಪದಲ್ಲಿ ನಿಮ್ಮ ಕೈ ಸೇರಲಿದೆ. ಇದು ಕೇವಲ ಫಲಿತಾಂಶ ನೋಡುವುದಕ್ಕೆ ಮಾತ್ರವಲ್ಲದೆ, ಅಧಿಕೃತ ಅಂಕಪಟ್ಟಿಯಾಗಿ  ಕೂಡ ಎಲ್ಲೆಡೆ ಮಾನ್ಯತೆ ಪಡೆಯುತ್ತದೆ ಎಂಬುದು ವಿಶೇಷ.

ಸಾಮಾನ್ಯವಾಗಿ ಫಲಿತಾಂಶ ಪ್ರಕಟವಾದ ತಕ್ಷಣ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಸರ್ವರ್‌ ಸಮಸ್ಯೆ ಉಂಟಾಗಿ ವಿದ್ಯಾರ್ಥಿಗಳು ಪರದಾಡುವುದು ಸಾಮಾನ್ಯ. ಆದರೆ ಡಿಜಿಲಾಕರ್‌ ಮೂಲಕ ವಿದ್ಯಾರ್ಥಿಗಳು ಯಾವುದೇ ಅಡೆತಡೆಯಿಲ್ಲದೆ, ಸುಲಭವಾಗಿ ತಮ ಅಂಕಪಟ್ಟಿಯನ್ನು ವೀಕ್ಷಿಸಬಹುದು ಮತ್ತು ಅದರ ಡಿಜಿಟಲ್‌ ಪ್ರತಿಯನ್ನು ತಕ್ಷಣವೇ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಇನ್ನು ಮುಂದಿನ ವ್ಯಾಸಂಗಕ್ಕೆ ಪ್ರವೇಶಾತಿ ಪಡೆಯಲು ಅಥವಾ ಇತರ ಯಾವುದೇ ಅಧಿಕೃತ ಕೆಲಸಗಳಿಗೆ ಈ ಡಿಜಿಟಲ್‌ ಅಂಕಪಟ್ಟಿಯನ್ನು ನೇರವಾಗಿ ಬಳಸಿಕೊಳ್ಳಬಹುದು. ಶಾಲೆಯಿಂದ ಅಥವಾ ಕಾಲೇಜಿನಿಂದ ಮೂಲ ಅಂಕಪಟ್ಟಿ ಕೈಸೇರುವವರೆಗೂ ಕಾಯುವ ಅಗತ್ಯ ಇರುವುದಿಲ್ಲ. ತಂತ್ರಜ್ಞಾನದ ಬಳಕೆಯೊಂದಿಗೆ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳಿಗೆ ಫಲಿತಾಂಶದ ಲಭ್ಯತೆಯನ್ನು ಮತ್ತಷ್ಟು ಸುಗಮ ಹಾಗೂ ಪಾರದರ್ಶಕಗೊಳಿಸಿದೆ. ವಿದ್ಯಾರ್ಥಿಗಳು ಈಗಲೇ ತಮ್ಮ ಡಿಜಿಲಾಕರ್‌ ಖಾತೆಯನ್ನು ಸಕ್ರಿಯಗೊಳಿಸಿಕೊಂಡು, ಫಲಿತಾಂಶ ಪ್ರಕಟವಾದ ತಕ್ಷಣ ಸುಲಭವಾಗಿ ಅಂಕಪಟ್ಟಿ ಪಡೆಯಬಹುದು.

ಮತ್ತಷ್ಟು ಶಿಕ್ಷಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೀಸ್​ಫೈರ್ ಮಾತ್ರವಲ್ಲ, ಭಾರತದ ಷೇರು ಮಾರುಕಟ್ಟೆ ಗರಿಗೆದರಲು ಇಲ್ಲಿವೆ 7 ಕಾರಣಗಳು

ನವದೆಹಲಿ, ಏಪ್ರಿಲ್ 8: ಭಾರತದ ಷೇರು ಮಾರುಕಟ್ಟೆಯ (Stock market) ಪ್ರಮುಖ ಸೂಚ್ಯಂಕಗಳು ಇಂದು ಬುಧವಾರ ಸಿಕ್ಕಾಪಟ್ಟೆ ಹಿಗ್ಗಿವೆ. ನಿಫ್ಟಿ ಮತ್ತು ಸೆನ್ಸೆಕ್ಸ್ ಸೂಚ್ಯಂಕಗಳು ಹತ್ತಿರ ಹತ್ತಿರ ಶೇ. 4ರಷ್ಟು ಹೆಚ್ಚಿವೆ. ಬಿಎಸ್​ಇ ಸೆನ್ಸೆಕ್ಸ್ 2,946.32 ಅಂಕಗಳಷ್ಟು (ಶೇ. 3.95) ಅಧಿಕಗೊಂಡು 77,562.90 ಮಟ್ಟ ಮುಟ್ಟಿದೆ. ಎನ್​ಎಸ್​ಇ ನಿಫ್ಟಿ ಸೂಚ್ಯಂಕವು 873.70 ಅಂಕಗಳಷ್ಟು (ಶೇ 3.78) ಏರಿಕೆ ಕಂಡು 23,997.35 ಮಟ್ಟ ಮುಟ್ಟಿದೆ. ಮಾರುಕಟ್ಟೆಯಲ್ಲಿ ಇವತ್ತು ಹಿನ್ನಡೆ ಕಂಡ ಷೇರುಗಳ ಸಂಖ್ಯೆ 498 ಮಾತ್ರ. ಬರೋಬ್ಬರಿ 3,705 ಷೇರುಗಳು ಪಾಸಿಟಿವ್ ಆಗಿವೆ. ಐಟಿ ಮತ್ತು ಫಾರ್ಮಾ ಬಿಟ್ಟರೆ ಬೇರೆ 16 ಪ್ರಮುಖ ಸೆಕ್ಟರ್​ಗಳ ಸೂಚ್ಯಂಕಗಳು ಪಾಸಿಟಿವ್ ಇವೆ. ಇವತ್ತು ಭಾರತದ ಈಕ್ವಿಟಿ ಮಾರುಕಟ್ಟೆ ಗರಿಗೆದರಲು ಕೆಲ ಮುಖ್ಯಕಾರಣಗಳು ಇಂತಿವೆ:

ಅಮೆರಿಕ ಇರಾನ್ ಕದನ ವಿರಾಮ

ಅಮೆರಿಕ ಮತ್ತು ಇರಾನ್ ನಡುವೆ ಅತಿರೇಕಕ್ಕೆ ಹೋಗುವಂತಿದ್ದ ಯುದ್ಧಕ್ಕೆ ಅಲ್ಪ ವಿರಾಮ ಬಂದಿದೆ. ಎರಡೂ ದೇಶಗಳು ಎರಡು ವಾರಗಳಿಗೆ ಕದನ ವಿರಾಮ ಘೋಷಿಸಿವೆ. ಈ ಬೆಳವಣಿಗೆ ಜಾಗತಿಕವಾಗಿ ಒಟ್ಟಾರೆ ಪಾಸಿಟಿವ್ ವಾತಾವರಣ ನಿರ್ಮಿಸಿಕೊಟ್ಟಿದೆ.

ಕಚ್ಚಾ ತೈಲ ಬೆಲೆ ಇಳಿಕೆ

ಬ್ಯಾರಲ್​ಗೆ 110 ಡಾಲರ್ ದಾಟಿ ಹೋಗಿದ್ದ ಕಚ್ಛಾ ತೈಲ ಬೆಲೆ ಎರಡಂಕಿ ಡಾಲರ್ ಮೊತ್ತಕ್ಕೆ ಇಳಿದಿದೆ. ಕದನ ವಿರಾಮದ ಪರಿಣಾಮಗಳಲ್ಲಿ ಇದೂ ಒಂದು.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಹಡಗುಳಿಂದ ಟೋಲ್ ವಸೂಲಿಗೆ ಇರಾನ್ ಯೋಜನೆ; ಅಂತಾರಾಷ್ಟ್ರೀಯ ನಿಯಮಗಳು ಏನು ಹೇಳುತ್ತವೆ?

ಜಾಗತಿಕ ಮಾರುಕಟ್ಟೆಗಳಿಗೂ ಹಿಗ್ಗು

ವಿಶ್ವದ ಇತರ ಷೇರು ಮಾರುಕಟ್ಟೆಯಲ್ಲಾಗುವ ಬದಲಾವಣೆಗಳ ಪರಿಣಾಮ ಭಾರತದ ಈಕ್ವಿಟಿ ಕ್ಷೇತ್ರದ ಮೇಲೂ ಆಗುತ್ತದೆ. ಏಷ್ಯನ್ ಮಾರುಕಟ್ಟೆಗಳಾದ ಜಪಾನ್, ಚೀನಾ, ಸೌತ್ ಕೊರಿಯಾ, ಹಾಂಕಾಂಗ್​ನ ಈಕ್ವಿಟಿ ಸೂಚ್ಯಂಕಗಳು ಇಂದು ಉತ್ತಮ ಫಲ ಕೊಟ್ಟಿವೆ. ಈ ಪಾಸಿಟಿವ್ ವಾತಾವರಣವು ಭಾರತದ ಮಾರುಕಟ್ಟೆಯನ್ನೂ ಸವರಿಕೊಂಡು ಹೋಗಿದೆ.

ರುಪಾಯಿ ಮೌಲ್ಯ ಹೆಚ್ಚಳ

ಅಮೆರಿಕನ್ ಡಾಲರ್ ಎದುರು ಭಾರತೀಯ ರುಪಾಯಿ ಮೌಲ್ಯ 50 ಪೈಸೆಗಳಷ್ಟು ಹೆಚ್ಚಿದೆ. ಇದರಿಂದಲೂ ಈಕ್ವಿಟಿ ಮಾರುಕಟ್ಟೆಗೆ ಅನುಕೂಲವಾಗಿದೆ.

ಆರ್​​ಬಿಐ ರಿಪೋ ದರ

ಆರ್​ಬಿಐ ಎಂಪಿಸಿ ಸಭೆಯಲ್ಲಿ ರಿಪೋ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿಕೊಂಡು ಹೋಗಲು ನಿರ್ಧರಿಸಲಾಗಿದೆ. ಈ ಹಣಕಾಸು ವರ್ಷಕ್ಕೆ ಭಾರತ ಉತ್ತಮ ಎನಿಸುವ ಹಣದುಬ್ಬರ ಮತ್ತು ಜಿಡಿಪಿ ಸ್ಥಿತಿ ಹೊಂದಿರಬಹುದು ಎಂದು ಆರ್​ಬಿಐ ಅಂದಾಜಿಸಿದೆ. ಇದು ಮಾರುಕಟ್ಟೆಗೆ ಸಕಾರಾತ್ಮಕ ಎನಿಸಿರಬಹುದು.

ಇದನ್ನೂ ಓದಿ: ಯುಎಇಗೆ ಸಾಲ ವಾಪಸ್ ಕೊಟ್ಟರೆ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಏನಾಗಬಹುದು? ಇಲ್ಲಿದೆ ಇಂಟರೆಸ್ಟಿಂಗ್ ಲೆಕ್ಕಾಚಾರ

ಬ್ಯಾಂಕ್ ಷೇರುಗಳಿಗೆ ಡಿಮ್ಯಾಂಡ್

ಇವತ್ತು ಬ್ಯಾಂಕಿಂಗ್ ಕ್ಷೇತ್ರದ ಷೇರುಗಳಿಗೆ ಬಹಳ ಬೇಡಿಕೆ ಇತ್ತು. ಅದರಲ್ಲೂ ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಷೇರುಗಳ ಬೆಲೆ ಶೇ. 9ರಷ್ಟು ಏರಿದೆ. ನಿಫ್ಟಿ ಬ್ಯಾಂಕ್ ಸೂಚ್ಯಂಕ ಶೇ. 6ರಷ್ಟು ಹೆಚ್ಚಿದೆ.

ವಿಐಎಕ್ಸ್ ಇಳಿಕೆ

ಮಾರುಕಟ್ಟೆಯ ಪ್ರಕ್ಷುಬ್ದತೆಯ ಏರಿಳಿತವನ್ನು ಸೂಚಿಸುವ ಇಂಡಿಯಾ ವಿಐಎಕ್ಸ್ ಶೇ. 5ರಷ್ಟು ಕಡಿಮೆ ಆಗಿ 19.85ಕ್ಕೆ ಬಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ದಾವಣಗೆರೆ ದಕ್ಷಿಣ ಕ್ಷೇತ್ರದ ಆಳ ಅಗಲ: ಕಣದಲ್ಲಿ 25 ಅಭ್ಯರ್ಥಿಗಳು; ಮಹಿಳಾ ಮತದಾರರೇ ಹೆಚ್ಚು

ದಾವಣಗೆರೆ, ಏಪ್ರಿಲ್​ 08: ಅಬ್ಬರದ ಪ್ರಚಾರ, ಜಿದ್ದಾಜಿದ್ದಿ ಸ್ಪರ್ಧೆಯಿಂದ ದಾವಣಗೆರೆ ದಕ್ಷಿಣ ಕ್ಷೇತ್ರ (Davanagere Bypoll) ರಾಜ್ಯದ ಗಮನ ಸೆಳೆದಿದೆ. ಕ್ಷೇತ್ರಕ್ಕೆ ನಾಳೆ ಮತದಾನ ನಡೆಯಲಿದೆ. ಕಾಂಗ್ರೆಸ್, ಬಿಜೆಪಿ ಸೇರಿ ಬರೋಬ್ಬರಿ 25 ಜನ ಕಣದಲ್ಲಿದ್ದಾರೆ. ಮೇಲಾಗಿ ಅಲ್ಪಸಂಖ್ಯಾಂತರೇ ಅಧಿಕ ಇರುವ ಕ್ಷೇತ್ರವಾದ ಹಿನ್ನೆಲೆ ಆ ಸಮುದಾಯ ಅಭ್ಯರ್ಥಿಗಳೇ ಎಸ್​​ಡಿಪಿಐ ಸೇರಿ 14 ಜನ ಇದ್ದಾರೆ. ಇನ್ನೇನು ಮತದಾನಕ್ಕೆ ಕೆಲವೇ ಗಂಟೆ ಬಾಕಿಯಿದ್ದು, ಅಂತಿಮ ಹಂತದ ಸಿದ್ಧತೆಗಳು ಭರ್ಜರಿಯಾಗಿ ನಡೆದಿವೆ.

ಶಿಗ್ಗಾಂವಿ, ಸಂಡೂರ್ ಹಾಗೂ ಚನ್ನಪಟ್ಟಣ ಮೂರು ಉಪ ಚುನಾವಣೆ ಗೆದ್ದು ಬೀಗುತ್ತಿರು ಕಾಂಗ್ರೆಸ್​​ ಇದೀಗ ಮತ್ತೊಂದು ಸತ್ವ ಪರೀಕ್ಷೆಗೆ ಸಜ್ಜಾಗಿದೆ. ಮೇಲಾಗಿ ಕಾಂಗ್ರೆಸ್ಸಿನ ಇಬ್ಬರು ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ ಹಾಗೂ ಹೆಚ್ ವೈ ಮೇಟಿ ನಿಧನದಿಂದ ತೆರವಾದ ಕ್ಷೇತ್ರಗಳು. ಇನ್ನೊಂದು ಶಿಗ್ಗಾಂವಿ ಹಾಗೂ ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಮಕ್ಕಳನ್ನ ಸೋಲಿಸಿದ್ದೇವೆ, ಇದ್ಯಾವ ಲೆಕ್ಕ ಎನ್ನುತ್ತಿರುವ ಕಾಂಗ್ರೆಸ್​​ ನಾಯಕ ಅಲ್ಪ ಸಂಖ್ಯಾತರ ಬಗ್ಗೆ ಅಳಕು ಇದೆ. ಇನ್ನೊಂದು ಕಡೆ ಹಮಾಲಿ ಮಾಡುವ ವ್ಯಕ್ತಿಯ ಮಗನಿಗೆ ಟಿಕೆಟ್​ ನೀಡಿ ಹೊಸ ಪ್ರಯೋಗ ಮಾಡಿದೆ ಬಿಜೆಪಿ.

ಇದನ್ನೂ ಓದಿ: ದಾವಣಗೆರೆ: ಮತದಾನಕ್ಕೆ ಸಿದ್ಧತೆ ಜೋರು, ಮತಗಟ್ಟೆಗೆ ಬಂದ ಚುನಾವಣಾ ಸಿಬ್ಬಂದಿಗೆ ಸ್ಥಳದಲ್ಲೇ ಹೆಲ್ತ್ ಚೆಕಪ್

ಇತ್ತ ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡಿರುವ ಕಾಂಗ್ರೆಸ್. ತಂದೆ ಮಂತ್ರಿ, ತಾಯಿ ಸಂಸದೆ, ಮಗಾ ಏಕೆ ಶಾಸಕ ಎಂಬ ಪ್ರಶ್ನೆ ಕೇಳಿ ಬರುತ್ತಿವೆ. ಏನೇ ಆಗಲಿ ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಮತದಾನಕ್ಕೆ ಅಂತಿಮ ಹಂತದ ಸಿದ್ದತೆಗಳು ನಡೆಯುತ್ತಿವೆ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ‌ ನಡೆಯಲಿದೆ. ಮತದಾನ ಹಿನ್ನೆಲೆ ದಾವಣಗೆರೆ ನಗರದ ಪಿಬಿ ರಸ್ತೆಯ ಬಳಿ ಇರುವ ಡಿಆರ್​ಆರ್​ ಸ್ಕೂಲ್​ನಲ್ಲಿ ಅಂತಿಮ ಹಂತದ ಸಿದ್ದತೆ ಹಾಗೂ ಮಸ್ಟರಿಂಗ್ ಕಾರ್ಯ ನಡೆದಿದ್ದು, 1425 ಚುನಾವಣಾ ಸಿಬ್ಬಂದಿ ಭಾಗಿಯಾಗಿದ್ದಾರೆ.

284 ಮತಗಟ್ಟೆಗಳ ಸ್ಥಾಪನೆ

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಒಟ್ಟು 284 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ. ಇದರಲ್ಲಿ76 ಮತಗಟ್ಟೆಗಳನ್ನ ಅತಿ ಸೂಕ್ಷ್ಮ ಎಂದು ಗುರ್ತಿಸಲಾಗಿದೆ. 244 ಮತಗಟ್ಟೆ ಅಧಿಕಾರಿಗಳು, ಎಲ್ಲ ಮತಗಟ್ಟೆಯಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಇನ್ನು ಕಾಂಗ್ರೆಸ್ ಮತ್ತು ಬಿಜೆಪಿ ಸೇರಿ 25 ಅಭ್ಯರ್ಥಿ ಕಣದಲ್ಲಿದ್ದಾರೆ.  ಪ್ರಜಾಪ್ರಭುತ್ವದ ಮಹತ್ವದ ಕಾರ್ಯಕ್ಕೆ ಸಿಬ್ಬಂದಿಗಳು ಸಜ್ಜಾಗಿದ್ದಾರೆ.

ಎಲ್ಲಾ ಮತಗಟ್ಟೆಯಲ್ಲಿ ವೆಬ್ ಕಾಸ್ಟಿಂಗ್ ಇದೆ. ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳಿಗೆ ಒಂದು ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಒಟ್ಟು ಮತದಾರರು 231072. ಮಹಿಳಾ ಮತದಾರರ ಸಂಖ್ಯೆ 1,17690, ಪುರುಷ ಮತದಾರರ ಸಂಖ್ಯೆ 1,13399 ಹಾಗೂ ತೃತೀಯ ಲಿಂಗಿಗಳು 43 ಗಳಿದ್ದಾರೆ. ಪೊಲೀಸ್ ಇಲಾಖೆಯಿಂದ 38 ಸಶಸ್ತ್ರ ಮೀಸಲು ಪಡೆಯ ತುಕಡಿಗಳು, 37 ಎಎಸ್​ಐಗಳು, 164 ಪ್ರೊಬೇಷನರಿ ಪಿಎಸ್ ಐಗಳು, 47 ಹೆಡ್ ಕಾನ್ಸ್ ಸ್ಟೇಬರ್, 284 ಕಾನ್ಸ್ ಸ್ಟೇಬಲ್ ಹಾಗೂ 212 ಮಹಿಳಾ ಕಾನ್ಸ್ ಸ್ಟೇಬಲ್​ಗಳನ್ನ ಭದ್ರತೆ ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ: ಉಪ ಚುನಾವಣೆ ನಡೆಯುತ್ತಿರುವ ಜಿಲ್ಲೆಗಳ ಗ್ಯಾರಂಟಿ ಯೋಜನೆಗಳ ಅನುದಾನದ ವಿವರ ಕೇಳಿದ ಆಯೋಗ

ಚುನಾವಣಾ ಕಾರ್ಯಕ್ಕೆ ತೆರಳುವ ಸಿಬ್ಬಂದಿಗೆ ವೈದ್ಯಕೀಯ ಪರೀಕ್ಷೆ ಕಡ್ಡಾಯ ಮಾಡಲಾಗಿದೆ. ಗಂಭೀರ ಸಮಸ್ಯೆ ಇದ್ದವರಿಗೆ ಚುನಾವಣೆ ಸೇವೆಯಿಂದ ಬಿಡುಗಡೆಗೆ ಕ್ರಮಕೈಗೊಳ್ಳಲಾಗುತ್ತಿದೆ.‌ ಕೆಲವರು ಅನಾರೋಗ್ಯದ ಕಾರಣ ಹೇಳಿಕೆ ಚುನಾವಣಾ ಕಾರ್ಯದಿಂದ ಜಾರಿಕೊಳ್ಳುವ ಸಿಬ್ಬಂದಿಗೆ ವೈದ್ಯಕೀಯ ಪರೀಕ್ಷೆ ಕಡ್ಡಾಯ. ಇಂತವರಿಗೆ ತೊಂದರೆ ಇದೆ ಎಂದು ವೈದ್ಯರೇ ಹೇಳಬೇಕು, ಆಗ ಅವರನ್ನ ಹಿರಿಯ ಅಧಿಕಾರಿಗಳು ಚುನಾವಣೆ ಸೇವೆಯಿಂದ ಬಿಡುಗಡೆಗೊಳಿಸಲಿದ್ದಾರೆ.

ಮಹಿಳಾ ಮತದಾರರೇ ಹೆಚ್ಚು 

ಇನ್ನು ವಿಶೇಷವಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದಕ್ಕೆ ಸಖಿ ಮತಗಟ್ಟೆಗಳನ್ನ ಸಹ ಮಾಡಲಾಗಿದೆ. ಈ ಹಿಂದೆ ಕೆಲ ಬೂತಗಳಲ್ಲಿ ರಾತ್ರಿಯವರೆಗೂ ಮತದಾನ ನಡೆದ ಬಗ್ಗೆ ಮಾಹಿತಿಗಳಿದ್ದು, ಅಂತಹ ಬೂತ್​ಗಳ ಮೇಲೆ ನಿಗಾ ಇಡಲು ಚುನಾವಣಾ ಆಯೋಗ ನಿರ್ಧರಿಸಿದೆ. ನ್ಯಾಯ ಸಮ್ಮತ ಚುನಾವಣೆಗೆ ಜಿಲ್ಲಾಡಳಿತ ಸಜ್ಜಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬೆಳಗಾವಿ ಸಿದ್ದೇಶ್ವರ ಜಾತ್ರೆಯಲ್ಲಿ ರಕ್ತದೊಕುಳಿ: ಮನೆ ಮುಂದೆ ಕುಣಿದಿದ್ದಕ್ಕೆ ವ್ಯಕ್ತಿಯ ಬರ್ಬರ ಹತ್ಯೆ

ಬೆಳಗಾವಿ, ಏಪ್ರಿಲ್​ 08: ಸಿದ್ದೇಶ್ವರ ಜಾತ್ರೆಯಲ್ಲಿ ಮನೆ ಮುಂದೆ ಕುಣಿದಿದ್ದಕ್ಕೆ ವ್ಯಕ್ತಿಯ ಕೊಲೆ (Murder) ನಡೆದಿರುವಂತಹ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿಯಲ್ಲಿ ನಡೆದಿದೆ. ಸಂಗನಗೌಡ(50) ಕೊಲೆಯಾದ ವ್ಯಕ್ತಿ. ಪ್ರಕರಣ ಸಂಬಂಧ ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಘಟನೆ ಸಂಬಂಧ ನೇಸರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಸಂಗನಗೌಡ ಮತ್ತು ಆರೋಪಿಗಳ ಎರಡು ಕುಟುಂಬಗಳ ಮಧ್ಯೆ ಕೆಲವು ವರ್ಷಗಳಿಂದ ವೈಷಮ್ಯ ಇತ್ತು. ಸಿದ್ದೇಶ್ವರ ಜಾತ್ರೆ ವೇಳೆ ರಾಜಕೀಯ ವಿರೋಧಿಗಳ ಮನೆ ಮುಂದೆ ಸಂಗನಗೌಡ ಪಾಟೀಲ್ ಕುಣಿಯುತ್ತಿದ್ದ. ಈ ವೇಳೆ ಮನೆಯ ಮುಂದೆ ಕುಣಿಯಬೇಡ ಎಂದು ಆರೋಪಿಗಳು ಹೇಳಿದ್ದಾರೆ. ಈ ನಡುವೆ ಗಲಾಟೆ ನಡೆದಿದ್ದು, ಬಳಿಕ ಕೊಲೆಗೈಯಲಾಗಿದೆ. ಕುಡಗೋಲು, ಕೊಡಲಿ, ಕಬ್ಬಿಣದ ರಾಡ್ ನಿಂದು ಹೊಡೆದು ಹತ್ಯೆ ಮಾಡಲಾಗಿದೆ.

ಇದನ್ನೂ ಓದಿ: ರಾತ್ರಿ ಮಲಗಿದ್ದವರ ಮೇಲೆ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ! ಆರು ಜನರ ಸ್ಥಿತಿ ಗಂಭೀರ

ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಸಂಗನಗೌಡ ಪಾಟೀಲ್ ಮೃತಪಟ್ಟಿದ್ದಾರೆ. ದೇಮಪ್ಪ ಬಳಗನ್ನವರ, ಮಂಜುನಾಥ ಬಳಗನ್ನವರ, ರುದ್ರಪ್ಪ, ವಿಜಯ್, ಸೂರಪ್ಪ, ಸಿದ್ದಪ್ಪ, ನಾಗರಾಜ,‌ ಬಸವಂತಪ್ಪ ಬಂಧಿತ ಆರೋಪಿಗಳು.

ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ: ಲಾರಿ ಚಾಲಕ ದುರ್ಮರಣ

ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಲಾರಿ ಚಾಲಕ ದುರ್ಮರಣ ಹೊಂದಿರುವಂತಹ ಘಟನೆ ಮೈಸೂರು ರಸ್ತೆ ಸಾಟ್​​ಲೈಟ್​ ಬಸ್ ನಿಲ್ದಾಣದ ಸಿಗ್ನಲ್​ನಲ್ಲಿ ನಡೆದಿದೆ. ಸಿಗ್ನಲ್​ನಲ್ಲಿದ್ದ ಲಾರಿಗೆ ಹಿಂಬಂದಿಯಿಂದ ಮತ್ತೊಂದು ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಚಾಲಕ ವಿಜಯ್ ಕುಮಾರ್(60) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಹಿಂದೂ ಯುವತಿ ಜೊತೆ ವಿವಾಹಿತ ಮುಸ್ಲಿಂ ವ್ಯಕ್ತಿ ಪರಾರಿ: ಲವ್​​ ಜಿಹಾದ್​​ಗೆ ಒಳಗಾದ ಮಗಳನ್ನು ಹುಡುಕಿಕೊಡಿ ಎಂದು ತಾಯಿಯ ಅಳಲು

ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಕೋಲಾರ ಜಿಲ್ಲೆಯ ಮಾಲೂರಿನಿಂದ ಆರ್​.ಆರ್​.ನಗರಕ್ಕೆ ಲಾರಿ ಬರುತ್ತಿತ್ತು. ಸದ್ಯ ಬ್ಯಾಟರಾಯನಪುರ ಸಂಚಾರಿ ಪೊಲೀಸರು ವಾಹನ ತೆರವು ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version