ಅಣ್ಣಾಮಲೈ ಪಕ್ಷದಲ್ಲಿ ಸ್ಥಾನ ಬೇಕೆಂದರೆ ಈ ತರಬೇತಿಯಲ್ಲಿ ಪಾಸ್ ಆಗಬೇಕು! – Kannada News

ಚೆನ್ನೈ, ಜೂನ್ 6: ಭಾರತೀಯ ಜನತಾ ಪಕ್ಷ (ಬಿಜೆಪಿ) ತೊರೆದು ಹೊಸ ಆಂದೋಲನವನ್ನು ಆರಂಭಿಸಿರುವ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ , ತಮ್ಮ ಆಂದೋಲನದ ಮುಂದಿನ ಹೆಜ್ಜೆಗಳು ಮತ್ತು ಪಕ್ಷದ ನಿಲುವುಗಳ ಬಗ್ಗೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಬಿಜೆಪಿ ತೊರೆದ ಅಣ್ಣಾಮಲೈ (Annamalai) ನಿನ್ನೆ ಹೊಸ ರಾಜಕೀಯ ಆಂದೋಲನವನ್ನು ಪ್ರಾರಂಭಿಸುವುದಾಗಿ ಘೋಷಿಸಿದರು. ಈ ಆಂದೋಲನ ಪ್ರಾರಂಭವಾದ ಅಲ್ಪಾವಧಿಯಲ್ಲಿಯೇ, ತಮಿಳುನಾಡು ಮಾತ್ರವಲ್ಲದೆ ಭಾರತದಾದ್ಯಂತ 12 ಲಕ್ಷಕ್ಕೂ ಹೆಚ್ಚು ಜನರು ಇದಕ್ಕೆ ಸೇರಿದ್ದಾರೆ. ಮುಂದಿನ 3 ಅಥವಾ 4 ತಿಂಗಳಲ್ಲಿ ಈ ಆಂದೋಲನವನ್ನು ಪೂರ್ಣ ಪ್ರಮಾಣದ ರಾಜಕೀಯ ಪಕ್ಷವಾಗಿ ಪರಿವರ್ತಿಸುವುದಾಗಿ ಅಣ್ಣಾಮಲೈ ನಿನ್ನೆ ಘೋಷಿಸಿದರು.

ಅಂದಹಾಗೆ, ಅಣ್ಣಾಮಲೈ ಹೊಸದಾಗಿ ಆರಂಭಿಸಲಿರುವ ರಾಜಕೀಯ ಪಕ್ಷದಲ್ಲಿ ಸಾಂಪ್ರದಾಯಿಕ ರಾಜಕೀಯ ಶೈಲಿಯನ್ನು ಅನುಸರಿಸದೆ ಹೊಸ ಷರತ್ತು ವಿಧಿಸಿದ್ದಾರೆ. ಅದರಂತೆ, ಅಣ್ಣಾಮಲೈ ಅವರ ಹೊಸ ಪಕ್ಷದಲ್ಲಿ ಸ್ಥಾನ ಪಡೆಯಲು ಬಯಸುವವರು ‘ಕೌಶಲ್ಯ ತರಬೇತಿ’ ಪಡೆದು ಅದರಲ್ಲಿ ಉತ್ತೀರ್ಣರಾಗಬೇಕು. ಇದಕ್ಕಾಗಿ, “ಎಪಿಜೆ ಅಬ್ದುಲ್ ಕಲಾಂ ಸೆಂಟರ್ ಫಾರ್ ಎಥಿಕ್ಸ್ ಆ್ಯಂಡ್ ಪಾಲಿಟಿಕ್ಸ್” ಎಂಬ ಹೊಸ ತರಬೇತಿ ಸಂಸ್ಥೆ ಕೊಯಮತ್ತೂರಿನಲ್ಲಿ ಕಾರ್ಯನಿರ್ವಹಿಸಲಿದೆ.

ಇದನ್ನೂ ಓದಿ: ಅಣ್ಣಾಮಲೈ ರಾಜೀನಾಮೆಯಿಂದ ಪಕ್ಷಕ್ಕೇನೂ ನಷ್ಟವಿಲ್ಲ; ತಮಿಳುನಾಡು ಬಿಜೆಪಿ ಮುಖ್ಯಸ್ಥ ಲೇವಡಿ

ಯಾರು ತರಬೇತಿ ಪಡೆಯಬೇಕು?:

ಪಕ್ಷದ ಸಾಮಾನ್ಯ ಶಾಖೆಯ ಉಸ್ತುವಾರಿಗಳಿಂದ ಹಿಡಿದು ರಾಜ್ಯ ಮಟ್ಟದಲ್ಲಿ ಉನ್ನತ ಹುದ್ದೆಗಳಿಗೆ ಆಯ್ಕೆಯಾದವರವರೆಗೆ ಎಲ್ಲರೂ ಈ ಸಂಸ್ಥೆಯಲ್ಲಿ ತರಬೇತಿ ಪಡೆಯಬೇಕು. ಅಣ್ಣಾಮಲೈ ರಾಜಕೀಯದಲ್ಲಿ ಎಲ್ಲಿಗೆ ಹೋಗಲು ಬಯಸುತ್ತಾರೆ, ತಮಿಳುನಾಡಿನಲ್ಲಿ ಅವರು ಯಾವ ರೀತಿಯ ಬದಲಾವಣೆಗಳನ್ನು ತರಲು ಯೋಜಿಸಿದ್ದಾರೆ ಮತ್ತು ಅವರೊಂದಿಗೆ ಪ್ರಯಾಣಿಸುವ ಕಾರ್ಯನಿರ್ವಾಹಕರು ಯಾವ ಅರ್ಹತೆಗಳನ್ನು ಹೊಂದಿರಬೇಕು ಎಂಬುದನ್ನು ಈ ತರಬೇತಿಯು ವಿವರಿಸುತ್ತದೆ. ಇದರಲ್ಲಿ ಭಾಗವಹಿಸಿ ಅರ್ಹತೆ ಮತ್ತು ಉತ್ತೀರ್ಣತೆಯನ್ನು ಹೊಂದಿದವರಿಗೆ ಮಾತ್ರ ಹೊಸ ಪಕ್ಷದಲ್ಲಿ ಸ್ಥಾನಗಳನ್ನು ನೀಡಲಾಗುವುದು ಎಂದು ಅಣ್ಣಾಮಲೈ ಚಳುವಳಿ ನಿರ್ಧರಿಸಿದೆ.

ಇದನ್ನೂ ಓದಿ: ಅಣ್ಣಾಮಲೈ ನಮ್ಮ ಪಕ್ಷದ ಕಾರ್ಯಕರ್ತರ ಬ್ರೈನ್ ವಾಶ್ ಮಾಡುತ್ತಿದ್ದಾರೆ; ತಮಿಳುನಾಡು ಬಿಜೆಪಿ ಮುಖ್ಯಸ್ಥ ಆರೋಪ

ಅಣ್ಣಾಮಲೈ ಅವರ ಹೊಸ ಚಳುವಳಿ ಅಥವಾ ಪಕ್ಷವು ತಮಿಳುನಾಡಿನ 5 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದೆ. ಬದಲಾಗಿ, ಮುಂದಿನ ಕೆಲವು ತಿಂಗಳುಗಳಲ್ಲಿ ಆಂದೋಲನವನ್ನು ಪಕ್ಷವಾಗಿ ಬಲಪಡಿಸಲು, ಕೌಶಲ್ಯ ತರಬೇತಿಯ ಮೂಲಕ ಅರ್ಹ ಕಾರ್ಯನಿರ್ವಾಹಕರನ್ನು ಆಯ್ಕೆ ಮಾಡಲು ಮತ್ತು ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಅಣ್ಣಾಮಲೈ ಯೋಜಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

IND vs AFG: ಗಂಭೀರ್ ದಾಖಲೆ ಸರಿಗಟ್ಟಿ, ಧೋನಿ, ಗಂಗೂಲಿ ದಾಖಲೆ ಮುರಿದ ಗಿಲ್

Source link

ಬೆಳಗಾವಿಯಲ್ಲಿ ಬಹುಕೋಟಿ ವಂಚನೆ ಕೇಸ್: 6 ಜನರ ವಿರುದ್ಧ FIR; ಸಿಐಡಿಗೆ ಹಸ್ತಾಂತರಿಸಲು ಮುಂದಾದ ಪೊಲೀಸರು – Kannada News

ಆದಿತ್ಯರಾಜ್ ಕ್ಯಾಪಿಟಲ್ ಪ್ರೈ.ಲಿImage Credit source: tv9 kannada

ಬೆಳಗಾವಿ, ಜೂನ್​​ 06: ನಗರದಲ್ಲಿ ಇತ್ತೀಚೆಗಷ್ಟೇ 4500 ಕೋಟಿ ರೂ ವಂಚನೆ ಕೇಸ್​ನಲ್ಲಿ ಶಿವಾನಂದ ನೀಲಣ್ಣನವರ್ ಅಕ್ರಮ ಬಯಲಾಗಿತ್ತು. ಇದಾದ ಬೆನ್ನಲ್ಲೇ, ಮತ್ತೊಂದು ಕಂಪನಿ ಸಾವಿರಾರು ಕೋಟಿ ಹೂಡಿಕೆ (Multi-Crore Scam) ಮಾಡಿರೋದು ಪತ್ತೆಯಾಗಿದೆ. ಬೆಳಗಾವಿಯ (belagavi) ಭಾಗ್ಯ ನಗರದಲ್ಲಿರುವ ಆದಿತ್ಯರಾಜ್ ಕ್ಯಾಪಿಟಲ್ ಪ್ರೈವೆಟ್ ಲಿಮಿಟಿಡ್ ಕಂಪನಿ, 6 ಸಾವಿರ ಜನರಿಂದ ಠೇವಣಿ ರೂಪದಲ್ಲಿ ಸಾವಿರಾರು ಕೋಟಿ ಹಣ ಸಂಗ್ರಹಿಸಿರುವ ಆರೋಪ ಕೇಳಿ ಬಂದಿದೆ. ಕಂಪನಿ ಆರ್​ಬಿಐ ಸೇರಿ ಯಾರಿಂದಲೂ ಹೂಡಿಕೆ ಬಗ್ಗೆ ಅನುಮತಿ ಪಡೆದಿಲ್ಲ. ಬರ್ಡ್ಸ್ ಮತ್ತು ಕೆಪಿಐಡಿ ಕಾಯ್ದೆ ಅನ್ವಯ ಮಾಹಿತಿ ಸಂಗ್ರಹಿಸಿದ ನಗರ ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿಗಳ ಅನುಮತಿ ಮೇರೆಗೆ ದಾಳಿ ನಡೆಸಿದ್ದರು. ಹಲವು ಮಹತ್ವದ ದಾಖಲೆಗಳನ್ನ ಪರಿಶೀಲಿಸಿದ್ದರು. ಆದಿತ್ಯರಾಜ್ ಕ್ಯಾಪಿಟಲ್ ಪ್ರೈವೆಟ್ ಲಿಮಿಟಡ್ ಸೇರಿ 3 ಕಂಪನಿ ಮತ್ತು ಸಿಇಓ ಬಾಲರಾಜ್ ಮಾನೆ ಸೇರಿ 6 ಜನರ ಮೇಲೆ ಎಫ್​​ಐಆರ್​ ದಾಖಲಾಗಿದೆ.

ಮುಖ್ಯಾಂಶಗಳು

  • ಬೆಳಗಾವಿಯಲ್ಲಿ ಆದಿತ್ಯರಾಜ್ ಕ್ಯಾಪಿಟಲ್ ಪ್ರೈ.ಲಿ. ಮೇಲೆ ದಾಳಿ
  • ಆದಿತ್ಯರಾಜ್ ಕ್ಯಾಪಿಟಲ್ ಸಂಸ್ಥೆ ವಿರುದ್ಧ ಎಫ್ಐಆರ್ ದಾಖಲು
  • ತನಿಖೆ ಸಿಐಡಿಗೆ ಹಸ್ತಾಂತರ ಮಾಡಲಾಗುವುದು ಎಂದ ಜಿಲ್ಲಾಧಿಕಾರಿ

4 ಬ್ಯಾಂಕ್ ಅಕೌಂಟ್ ಸೀಜ್: 200 ಕೋಟಿಗೂ ಹೆಚ್ಚು ಹಣ ಫ್ರೀಜ್ 

ಇನ್ನೂ ಆದಿತ್ಯರಾಜ್ ಕ್ಯಾಪಿಟಲ್ ಸಂಸ್ಥೆ 6,500 ಹೆಚ್ಚು ಜನರಿಂದ ಸಾವಿರಾರು ಕೋಟಿ ಹೂಡಿಕೆ ಹಣ ಸಂಗ್ರಹಿಸಿದೆ. ಎಸಿ ದಾಳಿ ವೇಳೆಯಲ್ಲಿ ಕಚೇರಿ ಸಿಬ್ಬಂದಿ ಸರಿಯಾಗಿ ಸ್ಪಂದಿಸಿಲ್ಲ. ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ಗಳಲ್ಲಿನ ಡಾಟಾ ಡಿಲೀಟ್ ಮಾಡಿದ್ದಾರೆ. ದಾಳಿ ವೇಳೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಗುಂಪು ಕಟ್ಟಿಕೊಂಡು ಬಂದು ಮಾಧ್ಯಮದವರ ಮೇಲೆ ಗೂಂಡಾವರ್ತನೆ ತೋರಿದ್ದರು. ಸಿಇಒ ಬಾಲರಾಜ್ ಮಾನೆ ಬಂಧನಕ್ಕೆ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ. 4 ಬ್ಯಾಂಕ್ ಅಕೌಂಟ್ ಸೀಜ್ ಮಾಡಿ, 200 ಕೋಟಿಗೂ ಹೆಚ್ಚು ಹಣ ಫ್ರೀಜ್ ಮಾಡಿದ್ದಾರೆ.

ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದ್ದಿಷ್ಟು

ಈ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್​ ಪ್ರತಿಕ್ರಿಯಿಸಿದ್ದು, 2 ದಿನದಿಂದ ಕೆಪಿಐಡಿ, ಬರ್ಡ್ ಆ್ಯಕ್ಟ್ ಅಡಿ ದಾಳಿ ನಡೆಸಿ ಪರಿಶೀಲನೆ ಮಾಡಿದ್ದು, ಆದಿತ್ಯರಾಜ್ ಕ್ಯಾಪಿಟಲ್ ಸಂಸ್ಥೆ ವಿರುದ್ಧ ಎಫ್ಐಆರ್ ದಾಖಲಿಸಿದ್ದೇವೆ. ನನ್ನ ಆದೇಶದ ಮೇರೆಗೆ ಎಸಿ ಶ್ರವಣ್ ನಾಯಕ್ ದಾಳಿ ನಡೆಸಿದ್ದರು. ಆದಿತ್ಯರಾಜ್ ಕ್ಯಾಪಿಟಲ್ ಪ್ರೈ.ಲಿ. 2 ರೀತಿಯ ಕೆಲಸ ಮಾಡಿದೆ. ಯಾವುದೇ ಅನುಮತಿ ಪಡೆಯದೆ ಹಣ ಸಂಗ್ರಹ ಮಾಡಿದ್ದಾರೆ ಮತ್ತು ಹೂಡಿಕೆದಾರರಿಗೆ ಮಾಸಿಕ 5% ಬಡ್ಡಿ ನೀಡುವ ಆಮಿಷವೊಡ್ಡಿದ್ದಾರೆ ಎಂದರು.

ಇದನ್ನೂ ಓದಿ: ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ: ದಾಳಿ ವೇಳೆ ಕಂಪನಿಯ ಸರ್ವರ್​​ ಡೌನ್​​ ಮಾಡಿ ಕಳ್ಳಾಟ?

ಠೇವಣಿದಾರರ ಜತೆ ಎಲ್ಎಫ್ಎ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ. ಶೇಕಡಾ 5ರಷ್ಟು ಬಡ್ಡಿ, ಶೇಕಡಾ 5ರಷ್ಟು ಅಸಲು ನೀಡಲು ಒಪ್ಪಂದ ಮಾಡಿಕೊಳ್ಳುವಾಗ ರಿಸ್ಕ್ ಬಗ್ಗೆ ಎಲ್ಲೂ ಉಲ್ಲೇಖಮಾಡಿಲ್ಲ. ಈ ಪ್ರಕರಣ ಪಾಂಜಿ ಸ್ಕೀಮ್​ಗೆ ಮಾದರಿಯಾಗಿದೆ. 7 ಸಾವಿರ ಜನರು ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದಾರೆ. ಇದು 50 ಕೋಟಿ ಮೀರಿದ ಪ್ರಕರಣವಾಗಿದ್ದರಿಂದ ಸಿಐಡಿ ತನಿಖೆ ಹಸ್ತಾಂತರ ಮಾಡಲಾಗುವುದು. ಜನರಿಂದ ಪಡೆದ ಹಣ ಎಲ್ಲಿ ಹೂಡಿಕೆ ಮಾಡುತ್ತಾರೆಂದು ಹೇಳಿಲ್ಲ. ಆದಿತ್ಯರಾಜ್ ಕ್ಯಾಪಿಟಲ್ ಸಿಬ್ಬಂದಿ ಹೂಡಿಕೆದಾರರಿಗೆ ಚೆಕ್ ನೀಡಿದ್ದಾರೆ. ಸಿಇಒ ಬಲರಾಮ್ ಮಾನೆ ವಿರುದ್ಧ ಲುಕ್​ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ದೇಶ ತೊರೆಯದಂತೆ ಕ್ರಮಕೈಗೊಳ್ಳಲಾಗಿದ್ದು, ಏರ್​ಪೋರ್ಟ್​ಗಳಿಗೆ ಮಾಹಿತಿ ರವಾನಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಬೆಳಗಾವಿಯಲ್ಲಿ 4,500 ಕೋಟಿ ರೂ. ವಂಚನೆ ಪ್ರಕರಣ: ಹೂಡಿಕೆಗಿಂತ ಹೆಚ್ಚಿನ ಲಾಭ ಪಡೆದವರಿಗೂ ಶುರುವಾಯ್ತು ನಡುಕ

ಸದ್ಯ ಬಹುಕೋಟಿ ಹೂಡಿಕೆ ಕೇಸ್, ಸಿಐಡಿಗೆ ಹಸ್ತಾಂತರಿಸಲು ಪೊಲೀಸರು ಪತ್ರ ಬರೆದಿದ್ದಾರೆ. ಇನ್ನು ಕಂಪನಿಯ ಸಿಇಒ ಪತ್ತೆಗೆ ವಿಶೇಷ ತಂಡ ಹುಡುಕಾಟ ನಡೆಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಪೆದ್ದಿ’: ಜಾನ್ಹವಿ ಕಪೂರ್ ಮಾದಕ ದೃಶ್ಯಗಳಿಗೆ ಕತ್ತರಿ ಹಾಕಲು ನಿರ್ಧಾರ – Kannada News

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಜೂನ್ 4 ರಂದು ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ಸಾಕಷ್ಟು ಧನಾತ್ಮಕ ಅಭಿಪ್ರಾಯಗಳು ವ್ಯಕ್ತವಾಗಿವೆ. ಸಿನಿಮಾ ಗ್ರಾಮೀಣ ಭಾಗದ ಕ್ರೀಡಾಪಟುವಿನ ಕತೆಯನ್ನು ಒಳಗೊಂಡಿದೆ. ಯುವಕನೊಬ್ಬ ಕ್ರೀಡೆಯನ್ನು ಬಳಸಿ ಹೇಗೆ ತಮ್ಮ ಹೆಸರಿಲ್ಲದ ಊರಿಗೆ ಗುರುತು ತಂದುಕೊಡುತ್ತಾನೆ ಎಂಬುದು ಸಿನಿಮಾದ ಕತೆ. ಸಿನಿಮಾನಲ್ಲಿ ಸಾಕಷ್ಟು ಧನಾತ್ಮಕ ಅಂಶಗಳು, ಒಳ್ಳೆಯ ಸಂದೇಶಗಳು ಇವೆ. ಆದರೆ ಇವೆಲ್ಲವೂ ಇದ್ದಾಗಿಯೂ ಸಹ ಸಿನಿಮಾನಲ್ಲಿ ನಾಯಕಿಯನ್ನು ತೋರಿಸಿರುವ ರೀತಿಯ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದೆ. ನಾಯಕಿ ಜಾನ್ಹವಿ ಕಪೂರ್ ಅವರ ‘ಅಂಗಾಂಗ’ಗಳಿಗೆ ಜೂಮ್ ಹಾಕಿ ಅಶ್ಲೀಲವಾಗಿ ಚಿತ್ರಿಸಲಾಗಿದೆ. ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಇದೀಗ ನಿರ್ದೇಶಕರು ನಾಯಕಿಯ ದೃಶ್ಯಗಳನ್ನು ಕತ್ತರಿಸಲು ನಿರ್ಧರಿಸಿದ್ದಾರೆ.

ನಾಯಕಿಯನ್ನು ಅತಿಯಾಗಿ ಗ್ಲಾಮರೈಸ್ ಮಾಡಿರುವ ಬಗ್ಗೆ ತೀವ್ರ ಟೀಕೆ ವ್ಯಕ್ತವಾದ ಬೆನ್ನಲ್ಲೆ ನಿರ್ದೇಶಕ ಬುಚ್ಚಿಬಾಬು ಸನಾ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ‘ಒಬ್ಬ ಚಲನಚಿತ್ರ ನಿರ್ದೇಶಕನಾಗಿ, ಸಿನಿಮಾ ಎಂಬುದು ಪ್ರೇಕ್ಷಕರಿಗೆ ಮನರಂಜನೆ ನೀಡಬೇಕು, ಪ್ರೇರಣೆ ನೀಡಬೇಕು ಮತ್ತು ಅವರೊಂದಿಗೆ ಕನೆಕ್ಟ್ ಆಗಬೇಕು ಎಂದು ನಾನು ನಂಬುತ್ತೇನೆ. ಅದು ಯಾರಿಗೂ ಮುಜುಗರ ಉಂಟುಮಾಡಬಾರದು ಅಥವಾ ಗೌರವಕ್ಕೆ ಧಕ್ಕೆ ತರಬಾರದು. ‘ಪೆದ್ದಿ’ ಚಿತ್ರದ ಕೆಲವು ದೃಶ್ಯಗಳ ಬಗ್ಗೆ ಬಂದಿರುವ ಪ್ರತಿಕ್ರಿಯೆಗಳನ್ನು ನಾವು ಕೇಳಿದ್ದೇವೆ ಮತ್ತು ಅದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.

ಮುಂದುವರಿದು, ‘ತೆರೆಯ ಮೇಲೆಯೂ ಮತ್ತು ನಿಜ ಜೀವನದಲ್ಲಿಯೂ ನನಗೆ ಮಹಿಳೆಯರ ಬಗ್ಗೆ ಯಾವಾಗಲೂ ಅಪಾರ ಗೌರವವಿದೆ. ಯಾವುದೇ ಮಹಿಳಾ ಪಾತ್ರವನ್ನು ಕೇವಲ ಭೋಗ ವಸ್ತುವಿನಂತೆ ಬಿಂಬಿಸುವುದು ಅಥವಾ ಗೌರವ ಕಮ್ಮಿ ಮಾಡುವುದು ನಮ್ಮ ಉದ್ದೇಶವಾಗಿರಲಿಲ್ಲ. ಚಿತ್ರದ ಯಾವುದೇ ಭಾಗವನ್ನು ಆ ರೀತಿ ಅರ್ಥೈಸಿಕೊಂಡಿದ್ದರೆ, ನಾವು ಆ ಭಾವನೆಗಳನ್ನು ಗೌರವಿಸುತ್ತೇವೆ, ವ್ಯಕ್ತವಾಗಿರುವ ಕಳಕಳಿಯನ್ನು ಅರ್ಥಮಾಡಿಕೊಳ್ಳುತ್ತೇವೆ ಮತ್ತು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಬಂದಿರುವ ಪ್ರತಿಕ್ರಿಯೆಗಳನ್ನು ಪರಿಶೀಲಿಸಿದ ನಂತರ, ನಾವು ಸಂಬಂಧಪಟ್ಟ ದೃಶ್ಯಗಳಲ್ಲಿ ಬದಲಾವಣೆಗಳನ್ನು ಮಾಡಲು ನಿರ್ಧರಿಸಿದ್ದೇವೆ. ಸಿನಿಮಾ ಬೆಳೆಯುವುದು ಪ್ರೇಕ್ಷಕರೊಂದಿಗಿನ ಸಂಪರ್ಕದಿಂದ. ಕಥೆಗಾರರಾಗಿ, ಬದಲಾಗುತ್ತಿರುವ ದೃಷ್ಟಿಕೋನಗಳು ಮತ್ತು ಸೂಕ್ಷ್ಮತೆಗಳ ಬಗ್ಗೆ ಗಮನ ಹರಿಸುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದಿದ್ದಾರೆ.

ಇದನ್ನೂ ಓದಿ:ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರದ ಬಜೆಟ್ ಮತ್ತು ತಾರಾಗಣದ ಸಂಭಾವನೆ ವಿವರ ಇಲ್ಲಿದೆ

ಜಾನ್ಹವಿ ಕಪೂರ್ ಅವರ ಪಾತ್ರವನ್ನು ಅತಿಯಾಗಿ ಗ್ಲಾಮರೈಸ್ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಮಂದಿ ಟೀಕೆ ವ್ಯಕ್ತಪಡಿಸಿದ್ದಾರೆ. ಕೆಲವು ಸಿನಿಮಾ ಮಂದಿ, ಮಾಜಿ ನಟಿಯರು ಸಹ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಖುದ್ದು ಜಾನ್ಹವಿ ಸಹ, ಇಂಥಹಾ ಒಂದು ಸಾಮಾಜಿಕ ಜಾಲತಾಣ ಪೋಸ್ಟ್​​ಗೆ ಲೈಕ್ ಒತ್ತುವ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

ಸಿನಿಮಾನಲ್ಲಿ ಜಾನ್ಹವಿ ಕಪೂರ್ ಅವರು ಅಚ್ಚಯ್ಯಮ್ಮ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಮೊದಲಾರ್ಧದಲ್ಲಿ ಜಾನ್ಹವಿಯ ಪಾತ್ರವನ್ನು ಕೇವಲ ಗ್ಲಾಮರ್​​​ಗಾಗಿ ಮಾತ್ರವೇ ಬಳಸಿಕೊಳ್ಳಲಾಗಿದೆ. ಕಡಿಮೆ ಬಟ್ಟೆಗಳನ್ನು ತೊಡಿಸಿರುವುದು, ಎದೆ ಭಾಗ, ಸೊಂಟದ ಭಾಗದ ಮೇಲೆ ಅತಿಯಾಗಿ ಫೋಕಸ್ ಮಾಡಿರುವುದು ಮಾಡಲಾಗಿದೆ. ಸಿನಿಮಾವನ್ನು ಬುಚ್ಚಿಬಾಬು ಸನಾ ನಿರ್ದೇಶಿಸಿದ್ದು, ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:54 pm, Sat, 6 June 26

Source link

ಸಿಎಂ ಡಿಕೆ ಶಿವಕುಮಾರ್​​​ ಹೇಳಿದ ಆ ಒಂದು ಮಾತು ನನ್ನ ನಿರ್ಧಾರ ಬದಲಿಸಿದೆ ಎಂದ ರಾಮಲಿಂಗಾರೆಡ್ಡಿ – Kannada News

ಬೆಂಗಳೂರು, ಜೂ.6 : ನೂತನ ಸಚಿವರಾದ ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ಜಟಾಪಟಿಯು ಬಹುತೇಕ ಇತ್ಯರ್ಥಗೊಂಡಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಮಲಿಂಗಾರೆಡ್ಡಿ ಅವರ ರಾಜೀನಾಮೆಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಈ ಕುರಿತು ಟಿವಿ9 ಜೊತೆ ಮಾತನಾಡಿರುವ ರಾಮಲಿಂಗಾರೆಡ್ಡಿ, “ನೆನ್ನೆ ರಾತ್ರಿ ನಾನು ಮತ್ತು ಮುಖ್ಯಮಂತ್ರಿಗಳು ಭೇಟಿಯಾಗಿ ಮಾತುಕತೆ ನಡೆಸಿದೆವು. ನನ್ನ ರಾಜೀನಾಮೆಯನ್ನು ಯಾವುದೇ ಕಾರಣಕ್ಕೂ ತಗೊಳ್ಳೋದಿಲ್ಲ, ನಾನು ಅದನ್ನು ಸ್ವೀಕರಿಸುವುದಿಲ್ಲ ಎಂದು ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ. ಇನ್ನು ಎರಡು ವರ್ಷ ಕಾಲ ನಮ್ಮ ಜೊತೆ ಇದ್ದು ಕೆಲಸ ಮಾಡಬೇಕು ಎಂದು ಅವರು ಹೇಳಿದ್ದಾರೆ” ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿಗಳು ರಾಜೀನಾಮೆಯನ್ನು ಸ್ವೀಕರಿಸದಿರುವುದರಿಂದ ಅದು ತಿರಸ್ಕೃತಗೊಂಡಿದೆ ಎಂದೇ ಅರ್ಥ. ಖಾತೆ ವಿಚಾರದ ಬಗ್ಗೆ ಮುಂದಕ್ಕೆ ಮುಖ್ಯಮಂತ್ರಿಗಳು ಮತ್ತು ವರಿಷ್ಠರು ನೋಡಿಕೊಳ್ಳುತ್ತಾರೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಯಾವುದೇ ನಿರ್ದಿಷ್ಟ ಬೇಡಿಕೆಗಳನ್ನು ಇಟ್ಟಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ರಣ್‌ದೀಪ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ಹಿರಿಯ ನಾಯಕರು ತಮ್ಮ ನಿರ್ಧಾರವನ್ನು ವಾಪಸ್ ಪಡೆಯುವಂತೆ ಕರೆ ಮಾಡಿ ಮನವಿ ಮಾಡಿದ್ದರು ಎಂದು ರೆಡ್ಡಿ ವಿವರಿಸಿದ್ದಾರೆ. ಪಕ್ಷದ ಶಿಸ್ತಿನ ಸಿಪಾಯಿಯಾಗಿ ತಾವು ವರಿಷ್ಠರ ಮಾತಿಗೆ ಬದ್ಧರಾಗಿರುವುದಾಗಿ ತಿಳಿಸುವ ಮೂಲಕ ರಾಜೀನಾಮೆ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಯಗೊಂಡಾಗ ಕೈ ಕಾಲುಗಳು ನಡುಗುವುದೇಕೆ? ಇದರ ಹಿಂದಿನ ಕಾರಣವೇನು ಗೊತ್ತಾ? – Kannada News

ಚಳಿಯಾದಾಗ ಮಾತ್ರವಲ್ಲ ಭಯಗೊಂಡಾಗಲು ದೇಹದಲ್ಲಿ ನಡುಕ (trembling) ಉಂಟಾಗುತ್ತವೆ. ಹೌದು ಯಾವುದೋ ದುಸ್ವಪ್ನ ಕಂಡಾಗ, ಕತ್ತಲಲ್ಲಿ ಓಡಾಡಿದಾಗ ಅಥವಾ ಸಡನ್‌ ಆಗಿ ಏನಾದ್ರು ಸಂಗತಿಯನ್ನು ಕಂಡಾಗ ನಾವು ತಕ್ಷಣಕ್ಕೆ ಭಯಗೊಳ್ಳುತ್ತೇವೆ. ಭಯ ಎನ್ನುವಂತಹದ್ದು ಮನಸ್ಸಿನ ಭಾವನೆಯಾಗಿದ್ದು, ಈ ರೀತಿ ಭಯಗೊಂಡಾಗ ದೇಹ, ಕೈ ಕಾಲು ನಡುಗಲು ಪ್ರಾರಂಭವಾಗುತ್ತದೆ. ಈ ರೀತಿ ಭಯಗೊಂಡಾಗ ಕೈಕಾಲುಗಳಲ್ಲಿ ನಡುಕ ಉಂಟಾಗುವುದರ ಹಿಂದೆಯೂ ವೈಜ್ಞಾನಿಕ ಕಾರಣವಿದೆಯಂತೆ. ಅದೇನೆಂಬುದನ್ನು ನೋಡೋಣ ಬನ್ನಿ.

ಭಯಗೊಂಡಾಗ ಕೈಕಾಲು ನಡುಗುವುದೇಕೆ?

ವೈಜ್ಞಾನಿಕ ಸಂಶೋಧನೆಯ ಪ್ರಕಾರ, ಒಬ್ಬ ವ್ಯಕ್ತಿಯು ಬೆದರಿಕೆಯನ್ನು ಅನುಭವಿಸಿದಾಗ, ಅವರ ಮೆದುಳಿನ ‘ಅಮಿಗ್ಡಾಲಾ’ ಭಾಗವು ಸಕ್ರಿಯಗೊಳ್ಳುತ್ತದೆ. ಈ ಭಾಗವು ಸಕ್ರಿಯಗೊಂಡ ತಕ್ಷಣ, ದೇಹವು ಸಕ್ರಿಯಗೊಳ್ಳುತ್ತದೆ, ಇದು ಸ್ವಯಂ ಸಂರಕ್ಷಣೆಯ ಪ್ರತಿಕ್ರಿಯೆಯಾಗಿದೆ.  ಇದಲ್ಲದೆ, ಭಯ ಅನುಭವಿಸಿದಾಗ, ದೇಹದಲ್ಲಿ ಅಡ್ರಿನಾಲಿನ್ ಹಾರ್ಮೋನ್ ವೇಗವಾಗಿ ಹೆಚ್ಚಾಗುತ್ತದೆ. ಈ ಹೆಚ್ಚಳವು ದೇಹದಲ್ಲಿ ವಿವಿಧ ಪ್ರತಿಕ್ರಿಯೆಗಳಿಗೆ ಕಾರಣವಾಗಬಹುದು, ಉದಾಹರಣೆಗೆ ತ್ವರಿತ ಹೃದಯ ಬಡಿತ, ತ್ವರಿತ ಉಸಿರಾಟ ಅಥವಾ ಸ್ನಾಯುಗಳ ಒತ್ತಡ. ಈ ಒತ್ತಡವು ದೇಹವನ್ನು ನಡುಗಿಸಲು ಕಾರಣವಾಗಬಹುದು.   ಒಬ್ಬ ವ್ಯಕ್ತಿಯ ದೇಹವು ನಡುಗುತ್ತದೆ ಎಂದಾದರೆ, ದೇಹವು ಅಪಾಯವನ್ನು ಎದುರಿಸಲು ತನ್ನನ್ನು ತಾನು ಸಿದ್ಧಪಡಿಸಿಕೊಳ್ಳುತ್ತಿದೆ ಎಂದರ್ಥ. ಇದು ದೇಹದಲ್ಲಿ ಶಕ್ತಿಯನ್ನು ವೇಗವಾಗಿ ಸಕ್ರಿಯಗೊಳಿಸುತ್ತದೆ.

ಅಡ್ರಿನಾಲಿನ್ ಹಾರ್ಮೋನ್‌ ಭಯಗೊಂಡಾಗ ದೇಹ ನಡುಗಲು ಕಾರಣ:

ನಾವು ಭಯಭೀತರಾದಾಗ, ದೇಹದಲ್ಲಿ ‘ಅಡ್ರಿನಾಲಿನ್’ ಎಂಬ ಹಾರ್ಮೋನ್ ಮಟ್ಟವು ವೇಗವಾಗಿ ಹೆಚ್ಚಾಗುತ್ತದೆ. ಈ ಹಾರ್ಮೋನ್ ಹೆಚ್ಚಳದಿಂದಾಗಿ, ಹೃದಯ ಬಡಿತ ವೇಗವಾಗಿ ಬಡಿಯಲು ಪ್ರಾರಂಭಿಸುತ್ತದೆ, ಉಸಿರಾಟದ ಪ್ರಮಾಣ ಹೆಚ್ಚಾಗುತ್ತದೆ ಮತ್ತು ಸ್ನಾಯುಗಳಲ್ಲಿ ಸಾಕಷ್ಟು ಒತ್ತಡ ಉಂಟಾಗುತ್ತದೆ. ಸ್ನಾಯುಗಳಲ್ಲಿನ ಈ ಹಠಾತ್ ಒತ್ತಡದ ಹೆಚ್ಚಳದಿಂದಾಗಿ, ದೇಹವು ನಡುಗಲು ಪ್ರಾರಂಭಿಸುತ್ತದೆ. ಈ ನಡುಕವು ದೇಹವು ಸಂಭಾವ್ಯ ಬೆದರಿಕೆಯ ವಿರುದ್ಧ ಹೋರಾಡಲು ತನ್ನನ್ನು ತಾನು ಸಿದ್ಧಪಡಿಸಿಕೊಳ್ಳುತ್ತಿದೆ ಎಂಬುದರ ಸಂಕೇತವಾಗಿದೆ. ಇದರಿಂದಾಗಿ ದೇಹದಲ್ಲಿ ಬಹಳಷ್ಟು ಶಕ್ತಿಯು ಸಕ್ರಿಯಗೊಳ್ಳುತ್ತದೆ.

ಭಯದ ಮಟ್ಟವು ತುಂಬಾ ಹೆಚ್ಚಾದಾಗ, ಮಾನಸಿಕ ಮತ್ತು ದೈಹಿಕ ಪ್ರತಿಕ್ರಿಯೆಗಳು ಹೆಚ್ಚು ತೀವ್ರವಾಗುತ್ತವೆ. ಅಂತಹ ಸಮಯದಲ್ಲಿ, ಅತಿಯಾದ ಬೆವರುವುದು, ತಲೆತಿರುಗುವಿಕೆ ಅಥವಾ ಹೆಚ್ಚಿದ ಚಡಪಡಿಕೆ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಲವರು ತೀವ್ರ ಭಯಗೊಂಡಾಗ ಮೂರ್ಛೆ ಹೋಗುವ ಸಾಧ್ಯತೆಯೂ ಇರುತ್ತದೆ.

ಇದನ್ನೂ ಓದಿ: ಮಹಿಳೆಯರೇ… ಗಾಜಿನ ಧರಿಸೋದು ಎಷ್ಟು ಪ್ರಯೋಜನಕಾರಿ ಗೊತ್ತೇ?

ಭಯವಾದಾಗ ಏನು ಮಾಡಬೇಕು?

ಒಬ್ಬ ವ್ಯಕ್ತಿಯು ತೀವ್ರವಾದ ಭಯವನ್ನು ಅನುಭವಿಸಿದಾಗ, ಅವನ ದೇಹವು ಒಂದು ನಿರ್ದಿಷ್ಟ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ. ಇದರಲ್ಲಿ  ದೇಹದ ನಡುಕವೂ ಒಂದು. ಅಂತಹ ಪರಿಸ್ಥಿತಿಯಲ್ಲಿ, ಮನಸ್ಸನ್ನು ನಿಯಂತ್ರಿಸುವುದು ಅಥವಾ ಮನಸ್ಸನ್ನು ಶಾಂತವಾಗಿರಿಸುವುದು ತುಂಬಾನೇ ಮುಖ್ಯ. ನೀವು ಭಯವನ್ನು ಅನುಭವಿಸಿದರೆ, ಭಯಭೀತರಾಗಬೇಡಿ ಆಳವಾದ ಉಸಿರನ್ನು ತೆಗೆದುಕೊಳ್ಳಿ. ನಿಮ್ಮ ಮನಸ್ಸನ್ನು ಶಾಂತವಾಗಿಡಲು ಪ್ರಯತ್ನಿಸಿ ಮತ್ತು ಸಕಾರಾತ್ಮಕ ಆಲೋಚನೆಗಳೊಂದಿಗೆ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಿ. ಇದು ಭಯವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಆದ ಮೊದಲ ಬಾರಿಗೆ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ: ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್​ – Kannada News

ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಸಿಎಂ ಡಿಕೆ ಶಿವಕುಮಾರ್​

ತುಮಕೂರು, ಜೂನ್​​ 06: ಗಂಗಾಧರನ ಅಜ್ಜನ ಹೆಸರಲ್ಲೇ ಪ್ರಮಾಣ ವಚನ ಸ್ವೀಕರಿಸಿದ್ದ ಡಿ.ಕೆ ಶಿವಕುಮಾರ್‌ (DK Shivakumar), ಇಂದು ಅದೇ ಅಜ್ಜನ ಸನ್ನಿಧಿಗೆ ಮುಖ್ಯಮಂತ್ರಿ ಆದ ಬಳಿಕ ಮೊದಲ ಭಾರಿಗೆ ಭೇಟಿ ನೀಡಿದರು. ಜಿಲ್ಲೆಯ ತಿಪಟೂರು ತಾಲ್ಲೂಕಿನ ನೊಣವಿಕೆರೆಯಲ್ಲಿರುವ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ಕೊಟ್ಟು ಅಜ್ಜಯ್ಯನ ಆಶೀರ್ವಾದ ಪಡೆದರು. ಶಿವಯೋಗೀಶ್ವರ ಶ್ರೀಗಳ ಸಮ್ಮುಖದಲ್ಲಿ ಮಠದ ಗದ್ದುಗೆಯಲ್ಲಿ 20 ನಿಮಿಷ ವಿಶೇಷ ಪೂಜೆ ನೆರವೇರಿತು. ಇದಕ್ಕೂ ಮುನ್ನ ತುಮಕೂರಿನ ಮಲ್ಲಾಘಟ್ಟ ಕೆರೆ ಬಳಿಯಲ್ಲಿರುವ ಗಂಗಾಧರೇಶ್ವರ ದೇಗುಲಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸದರು.

ಮುಖ್ಯಾಂಶಗಳು

  • ಸಿಎಂ ಡಿಕೆ ಶಿವಕುಮಾರ್​ ಮೊದಲ ತುಮಕೂರು ಕ್ಷೇತ್ರ ದರ್ಶನ
  • ನೊಣವಿನಕೆರೆಯ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ
  • ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್​

ನೊಣವಿನಕೆರೆಯ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದ ಸಿಎಂ ಡಿಕೆ ಶಿವಕುಮಾರ್​ ನೇರವಾಗಿ ಗವಿ ಬಳಿ ತೆರಳಿ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿಗಳ ಸಮ್ಮುಖದಲ್ಲಿ ಅಜ್ಜಯ್ಯನಿಗೆ 20 ನಿಮಿಷ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವಸ್ಥಾನದ ಆವರಣದಲ್ಲಿ ಈಡುಗಾಯಿ ಹೊಡೆದರು. ಬಳಿಕ ಆನೆ ಲಕ್ಷ್ಮೀಯಿಂದ ಆಶಿರ್ವಾದ ಪಡೆದರು. ಕೆಲಕಾಲ ಮಠದ ಆವರಣದಲ್ಲಿ ಓಡಾಡಿದ ಸಿಎಂ, ಬಂದ ಅಭಿಮಾನಿಗಳತ್ತ ಕೈಬೀಸಿದರು.

ಮುಖ್ಯಮಂತ್ರಿ ಆಗಿ ಬಂದಿಲ್ಲ, ಭಕ್ತನಾಗಿ ಬಂದಿದ್ದೇನೆ: ಡಿಕೆ ಶಿವಕುಮಾರ್

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್​, ಮಠಕ್ಕೆ ಮುಖ್ಯಮಂತ್ರಿ ಆಗಿ ಬಂದಿಲ್ಲ, ಭಕ್ತನಾಗಿ ಬಂದಿದ್ದೇನೆ. ಮಠದ ಭಕ್ತನಾಗಿ ಬಂದು ನಾನು ಪ್ರಾರ್ಥನೆ ಮಾಡಿದ್ದೇ‌ನೆ. ಭಕ್ತನಿಗೂ ಹಾಗೂ ಭಗವಂತನಿಗೂ ಇರುವ ಸಂಬಂಧವಿದು. 24 ವರ್ಷದಿಂದ ನಾನು ಕಾಡಸಿದ್ದೇಶ್ವರ ಮಠಕ್ಕೆ ಬರ್ತಿದ್ದೇನೆ. ಮಠಕ್ಕೆ ಬಂದು ದರ್ಶನ, ಮಾರ್ಗದರ್ಶನವನ್ನ ಪಡೆದಿದ್ದೇನೆ. ನನಗೂ ಸೇರಿದಂತೆ ರಾಜ್ಯಕ್ಕೆ ಒಳ್ಳೆದಾಗಲೆಂದು ಪ್ರಾರ್ಥಿಸಿದ್ದೇನೆ ಎಂದರು.

ಸಿಎಂ ಆದ ನಂತರ ಮೊದಲ ಬಾರಿಗೆ ಈ ಸನ್ನಿಧಿಗೆ ಭೇಟಿ ನೀಡಿದ್ದೇನೆ

ಇನ್ನು ಇದಕ್ಕೂ ಮುನ್ನ ತುಮಕೂರಿನ ಮಲ್ಲಾಘಟ್ಟ ಕೆರೆ ಬಳಿಯಲ್ಲಿರುವ ಗಂಗಾಧರೇಶ್ವರ ದೇಗುಲಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್​, ಸಿಎಂ ಆದ ನಂತರ ಮೊದಲ ಬಾರಿಗೆ ಈ ಸನ್ನಿಧಿಗೆ ಭೇಟಿ ನೀಡಿದ್ದೇನೆ. ಐತಿಹಾಸಿಕ  ಮತ್ತು ಪವಿತ್ರ ಮಲ್ಲಘಟ್ಟ ಕೆರೆಗೆ 3-4 ಬಾರಿ ಬಂದಿದ್ದೇನೆ. ಎಲ್ಲಾ ದೇವರನ್ನು ಇಲ್ಲಿಗೆ ಕತೆರಂದು ಸ್ನಾನಮಾಡಿಸಿ ಪೂಜೆ ಮಾಡಿತ್ತಾರೆ. ನಮ್ಮ ಗೃಹಪ್ರವೇಶದ ವೇಳೆ ಮಲ್ಲಘಟ್ಟ ಕೆರೆ ಸೇರಿದಂತೆ 5 ಕಡೆಯಿಂದ ನೀರು ತಂದಿದ್ದೆವು ಎಂದು ಹೇಳಿದ್ದಾರೆ.

ಇದನ್ನೂ ಓದಿ: ನೂತನ ಸಿಎಂ ಡಿಕೆ ಶಿವಕುಮಾರ್​​ಗೆ ಶುಭ ಹಾರೈಸಿದ ಲಿಂಗಾಯತ ಸ್ವಾಮೀಜಿಗಳು

ಮಲ್ಲಘಟ್ಟ ಕೆರೆ ಯಾವಾಗಲೂ ತುಂಬಿತುಳುಕುತ್ತಾ ಇರುತ್ತದೆ. ಕಳೆದ 25 ವರ್ಷಗಳಿಂದ ನಾನು ಈ ಜಾಗ ಗಮನಿಸುತ್ತಾ ಇದ್ದೀನಿ. ಈ ಪವಿತ್ರ ಕ್ಷೇತ್ರಕ್ಕೆ ಬಂದರೆ ಬಹಳ ಸಂತಸ, ನೆಮ್ಮದಿ ಸಿಗುತ್ತದೆ. ಈ ಭಾಗದಲ್ಲಿ 35 ಕೋಟಿ ರೂ ವೆಚ್ಚದಲ್ಲಿ ವಿವಿಧ ಕಾಮಗಾರಿ ನಡೆಯುತ್ತಿದೆ. ಸೋಪಾನ ಮಂಟಪ, ಗೆಸ್ಟ್ ಹೌಸ್ ಸೇರಿ ಸುಮಾರು ಖರ್ಚುಮಾಡಿದೆ. ಅಕ್ಕಪಕ್ಕದ ರೈತರಿಗೆ ಅನುಕೂಲವಾಗಲಿ ಎಂದು ಕಾಲುವೆ ನಿರ್ಮಿಸಲಾಗುವುದು. ಅಜ್ಜಯ್ಯನವರು, ಸ್ಥಳೀಯ ಸಂಸ್ಥೆಯನ್ನು ಕೇಳಿ ಅಭಿವೃದ್ಧಿ ಮಾಡುತ್ತೇವೆ ಎಂದಿದ್ದಾರೆ.

ಹರಕೆ ಏನಿಲ್ಲ, ನನ್ನ ಭಾವನೆ ನನ್ನ ಭಕ್ತಿ ಎಂದ ಸಿಎಂ

ಇನ್ನು ಹರಕೆ ವಿಚಾರವಾಗಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್​, ಮಲ್ಲಘಟ್ಟದ ಗಂಗಾಧರೇಶ್ವರನಿಗೆ ಹರಕೆ ಏನಿಲ್ಲ, ನನ್ನ ಭಾವನೆ ನನ್ನ ಭಕ್ತಿ. ಲೋಕಕಲ್ಯಾಣಕ್ಕಾಗಿ ಜನರಿಗೆ ಒಳ್ಳೆಯದಾಗಲಿ ಎಂದು ಬಂದಿದ್ದೇನೆ. ನನಗೆ ಸಿಕ್ಕಿರುವ ಅಧಿಕಾರ ಜನರಿಗೆ ಸಮರ್ಪಿಸಬೇಕೆಂದು ಬಂದಿರುವೆ. ಜನರು ನೆಮ್ಮದಿ, ಶಾಂತಿಯಿಂದ ಇರಬೇಕು, ಮಳೆ ಬೆಳೆ ಆಗಬೇಕು. ಈ ಭಾಗದ ಕೆರೆ ಕಟ್ಟೆಗಳು ಯಾವಾಗಲೂ ತುಂಬಿ ತುಳುಕಬೇಕು ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 7:26 pm, Sat, 6 June 26

Source link

ಮೊದಲ ಮಳೆಗೆ ಕೊಚ್ಚಿಹೋಯ್ತು ರಾಷ್ಟ್ರೀಯ ಹೆದ್ದಾರಿ!: ಮೂಡುಬಿದಿರೆ ಮಿಜಾರಿನಲ್ಲಿ NH-169 ರಸ್ತೆ ಕುಸಿತ – Kannada News

ಮಂಗಳೂರು, ಜೂ.6: ಕರಾವಳಿಯಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಈ ಮೊದಲು ಮಳೆಗೆ ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿ-169ರ (NH-169) ಅಭಿವೃದ್ಧಿ ಕಾಮಗಾರಿಯ ಅಸಲಿ ಗುಣಮಟ್ಟ ಬಯಲಾಗಿದೆ. ಮಂಗಳೂರಿನ ಮೂಡುಬಿದಿರೆ ಸಮೀಪದ ಮಿಜಾರು ಎಂಬಲ್ಲಿ ನೆನ್ನೆ (ಜೂ.5) ಸುರಿದ ಮಳೆಗೆ ಹೆದ್ದಾರಿಯ ಒಂದು ಭಾಗ ಸಂಪೂರ್ಣವಾಗಿ ಕೊಚ್ಚಿ ಹೋಗಿದ್ದು, ವಾಹನ ಸವಾರರು ಮತ್ತು ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ಕಾಮಗಾರಿಯು ತೀರಾ ಕಳಪೆ ಹಾಗೂ ಅವೈಜ್ಞಾನಿಕವಾಗಿ ನಡೆದಿರುವುದೇ ಇದಕ್ಕೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸ್ಥಳೀಯರ ಪ್ರಕಾರ, ಮಳೆನೀರಿನ ಭಾರಿ ಹರಿವನ್ನು ತಡೆದುಕೊಳ್ಳಲು ಈ ಸ್ಥಳದಲ್ಲಿ ದೊಡ್ಡ ಕಲ್ವರ್ಟ್ (ಚರಂಡಿ ಸೇತುವೆ) ನಿರ್ಮಿಸಬೇಕಾಗಿತ್ತು. ಆದರೆ, ಗುತ್ತಿಗೆ ಸಂಸ್ಥೆಯು ನಿಯಮಗಳನ್ನು ಗಾಳಿಗೆ ತೂರಿ ಅತ್ಯಂತ ಸಣ್ಣ ಕಲ್ವರ್ಟ್ ಅಳವಡಿಸಿದ್ದರಿಂದ ನೀರು ಸರಾಗವಾಗಿ ಹರಿದು ಹೋಗಲು ಜಾಗವಿಲ್ಲದಂತಾಗಿದೆ. ಪರಿಣಾಮವಾಗಿ, ಅಪಾರ ಪ್ರಮಾಣದ ಮಳೆನೀರು ರಸ್ತೆಯ ಪಕ್ಕದಲ್ಲಿ ಶೇಖರಣೆಗೊಂಡು, ಹೆದ್ದಾರಿಯ ಅಡಿಯಲ್ಲಿದ್ದ ಮಣ್ಣು ಮತ್ತು ಜಲ್ಲಿಕಲ್ಲುಗಳನ್ನು ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಇದರಿಂದಾಗಿ ರಸ್ತೆಯ ಒಂದು ಭಾಗ ಕುಸಿದು ಬಿದ್ದಿದೆ. ತೆಂಕಮಿಜಾರು ಭಾಗದ ಇನ್ನು ಮೂರು ಕಡೆಗಳಲ್ಲಿ ಇಂತಹದ್ದೇ ಗಂಭೀರ ಸಮಸ್ಯೆಗಳು ಸೃಷ್ಟಿಯಾಗಿದ್ದು, ಹೆದ್ದಾರಿ ಕಾಮಗಾರಿಯ ಗುಣಮಟ್ಟದ ವಿರುದ್ಧ ದೊಡ್ಡ ಪ್ರಶ್ನೆಗಳು ಎದ್ದಿವೆ.

ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ದಿಢೀರ್ ಮಳೆರಾಯನ ಆರ್ಭಟ!: ಮಲ್ಲೇಶ್ವರಂ, ವಿಜಯನಗರದಲ್ಲಿ ಧಾರಾಕಾರ ಮಳೆ: ಜೂನ್ 11ರವರೆಗೆ ಈ ಭಾಗದಲ್ಲೂ ಭಾರಿ ಮಳೆ

ಮುಖ್ಯಾಂಶಗಳು:

  • ಮಂಗಳೂರಿನಲ್ಲಿ ಅಭಿವೃದ್ಧಿ ಕಾಮಗಾರಿಯ ಅಸಲಿ ಗುಣಮಟ್ಟ ಬಯಲಾಗಿದೆ
  • ನೆನ್ನೆ ಸುರಿದ ಮಳೆಗೆ ಹೆದ್ದಾರಿಯ ಒಂದು ಭಾಗ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ
  • ಈ ಅವೈಜ್ಞಾನಿಕ ಕಾಮಗಾರಿಗೆ ಹೆದ್ದಾರಿ ನಿರ್ಮಾಣದ ಉಸ್ತುವಾರಿ ಹೊತ್ತಿರುವ ‘ಡಿಬಿಎಲ್ ಕಂಪನಿ
  • ಹೆದ್ದಾರಿ ಕಾಮಗಾರಿಯ ಗುಣಮಟ್ಟದ ವಿರುದ್ಧ ದೊಡ್ಡ ಪ್ರಶ್ನೆಗಳು ಎದ್ದಿವೆ

ರಸ್ತೆಯ ಪಾಯವೇ ಕೊಚ್ಚಿಹೋಗಿ ಹೆದ್ದಾರಿ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದ್ದರೂ, ಅದೇ ಮಾರ್ಗದಲ್ಲಿ ಲಘು ಹಾಗೂ ವಾಣಿಜ್ಯ ವಾಹನಗಳ ಸಂಚಾರ ಮುಂದುವರಿದಿದೆ. ಹರಿಯುವ ನೀರಿನ ಮಧ್ಯೆಯೇ ಸವಾರರು ಪ್ರಾಣದ ಹಂಗು ತೊರೆದು ವಾಹನ ಚಲಾಯಿಸುತ್ತಿದ್ದಾರೆ. ಮಳೆ ಹೀಗೆಯೇ ಮುಂದುವರಿದರೆ ಈ ರಸ್ತೆಯಲ್ಲಿ ದೊಡ್ಡ ದುರಂತ ನಡೆಯಲಿದೆ. ಈ ಅವೈಜ್ಞಾನಿಕ ಕಾಮಗಾರಿಗೆ ಹೆದ್ದಾರಿ ನಿರ್ಮಾಣದ ಉಸ್ತುವಾರಿ ಹೊತ್ತಿರುವ ‘ಡಿಬಿಎಲ್ ಕಂಪನಿ’ಯೇ ನೇರ ಹೊಣೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಕ್ಷಣ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು, ಮಳೆಗಾಲದ ಅವಧಿಯಲ್ಲಿ ಸಂಭವಿಸಬಹುದಾದ ಭೀಕರ ಅಪಘಾತಗಳನ್ನು ತಪ್ಪಿಸಲು ತುರ್ತು ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಣ್ಣಾಮಲೈ ನಮ್ಮ ಪಕ್ಷದ ಕಾರ್ಯಕರ್ತರ ಬ್ರೈನ್ ವಾಶ್ ಮಾಡುತ್ತಿದ್ದಾರೆ; ತಮಿಳುನಾಡು ಬಿಜೆಪಿ ಮುಖ್ಯಸ್ಥ ಆರೋಪ – Kannada News

ಚೆನ್ನೈ, ಜೂನ್ 6: ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಮಾಜಿ ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ (Annamalai) ಅವರು ಬಿಜೆಪಿಗೆ ರಾಜೀನಾಮೆ ನೀಡಿದ ಮರುದಿನವೇ ತಮಿಳುನಾಡು ಬಿಜೆಪಿ ನೂತನ ಅಧ್ಯಕ್ಷ ನೈನಾರ್ ನಾಗೇಂದ್ರನ್ ಅವರು ತೀವ್ರ ಆಪಾದನೆ ಮಾಡಿದ್ದಾರೆ. ಅಣ್ಣಾಮಲೈ ಬಿಜೆಪಿಯ ಕೆಲವು ಸದಸ್ಯರ ಬ್ರೈನ್‌ವಾಶ್ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಮಾಜಿ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ ರಾಜೀನಾಮೆಯ ನಂತರ ಯಾರೊಬ್ಬರಿಗೂ ಪಕ್ಷ ತೊರೆಯಲು ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೈನಾರ್ ನಾಗೇಂದ್ರನ್, ಬಿಜೆಪಿ ಕಾರ್ಯಕರ್ತರು ಯಾವುದೇ ವದಂತಿಗಳನ್ನು ನಂಬಬಾರದು ಎಂದು ಮನವಿ ಮಾಡಿದರು. “ಅಣ್ಣಾಮಲೈ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದು, ಅದನ್ನು ಪಕ್ಷವು ಅಂಗೀಕರಿಸಿದೆ. ಆದರೆ, ತಮಗೆ ಪ್ರಧಾನಿ ಮೋದಿ ಅಥವಾ ಅಮಿತ್ ಶಾ ಅವರ ಆಶೀರ್ವಾದವಿದೆ ಎಂದು ಹೇಳಿಕೊಂಡು ರಾಜೀನಾಮೆ ನೀಡುವಂತೆ ನಮ್ಮ ಪಕ್ಷದ ಕೆಲವು ಸದಸ್ಯರ ಬ್ರೈನ್ ವಾಶ್ ಮಾಡಲಾಗುತ್ತಿದೆ. ಆದರೆ, ಯಾರೊಬ್ಬರಿಗೂ ರಾಜೀನಾಮೆ ನೀಡಲು ಹೈಕಮಾಂಡ್ ಅನುಮತಿ ನೀಡಿಲ್ಲ ಎಂದು ನಾನು ಸ್ಪಷ್ಟಪಡಿಸುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿಗೆ ರಾಜೀನಾಮೆ ನೀಡಿ ಬಂದ ಅಣ್ಣಾಮಲೈಗೆ ಭರ್ಜರಿ ಸ್ವಾಗತ, ಫ್ಯಾನ್ಸ್ ಹರ್ಷೋದ್ಘಾರ ಹೇಗಿದೆ ನೋಡಿ

ಬಿಜೆಪಿ ಕಾರ್ಯಕರ್ತರು ಯಾರ ಮಾತಿಗೂ ಮರುಳಾಗದೆ ರಾಜೀನಾಮೆ ನೀಡುವುದರಿಂದ ದೂರವಿರಬೇಕು ಎಂದು ನಾಗೇಂದ್ರನ್ ಮನವಿ ಮಾಡಿದ್ದಾರೆ. “ಬೇರೆ ಯಾವುದೇ ಮೂವ್‌ಮೆಂಟ್ ಅಥವಾ ಪಕ್ಷದ ಭಾಗವಾಗುವವರು ಬಿಜೆಪಿಯ ಸದಸ್ಯರಾಗಿ ಮುಂದುವರಿಯಲು ಸಾಧ್ಯವಿಲ್ಲ. ಅಣ್ಣಾಮಲೈ ರಾಜೀನಾಮೆಯಿಂದ ಪಕ್ಷಕ್ಕೆ ಯಾವುದೇ ಹಿನ್ನಡೆಯಾಗಿಲ್ಲ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಅಣ್ಣಾಮಲೈ ರಾಜೀನಾಮೆಯಿಂದ ಪಕ್ಷಕ್ಕೇನೂ ನಷ್ಟವಿಲ್ಲ; ತಮಿಳುನಾಡು ಬಿಜೆಪಿ ಮುಖ್ಯಸ್ಥ ಲೇವಡಿ

ಬಿಜೆಪಿ ಮುಖಂಡ ನಿತಿನ್ ನಬಿನ್ ಅವರು ಅಣ್ಣಾಮಲೈ ಅವರ ಪಕ್ಷದ ಪ್ರಾಥಮಿಕ ಸದಸ್ಯತ್ವದ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ತಮ್ಮ ರಾಜೀನಾಮೆ ಪತ್ರದಲ್ಲಿ ಅಣ್ಣಾಮಲೈ ಅವರು ಇಷ್ಟು ವರ್ಷಗಳ ಕಾಲ ತಮಗೆ ಬೆಂಬಲ ನೀಡಿದ ಬಿಜೆಪಿ ನಾಯಕತ್ವಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ತಮಿಳುನಾಡಿನ ಹಿತಾಸಕ್ತಿಗಳ ಕುರಿತು ಪಕ್ಷದೊಂದಿಗೆ ಹೊಂದಿದ್ದ ಭಿನ್ನಾಭಿಪ್ರಾಯಗಳೇ ತಾವು ಪಕ್ಷದಿಂದ ಹೊರಬರಲು ಪ್ರಮುಖ ಕಾರಣ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರೂಂ ಬಿಲ್ ಪಾವತಿಸಲು ಹಣವಿರಲಿಲ್ಲ; ಅರ್ಹತಾ ಸುತ್ತನ್ನಾಡಿ ಫೈನಲ್​ಗೇರಿದ ಚ್ವಾಲಿನ್ಸ್ಕ ಯಶೋಗಾಥೆ – Kannada News

2026 ರ ಫ್ರೆಂಚ್ ಓಪನ್ (French Open 2026) ಅಂತಿಮ ಹಂತಕ್ಕೆ ಬಂದು ನಿಂತಿದೆ. ಇಂದು ನಡೆಯಲಿರುವ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ 24 ವರ್ಷದ ಪೋಲಿಷ್ ಟೆನಿಸ್ ಆಟಗಾರ್ತಿ ಮಜಾ ಚ್ವಾಲಿನ್ಸ್ಕ (Maja Chwalinska), ರಷ್ಯಾದ ಮೀರಾ ಆಂಡ್ರೀವಾ ಅವರನ್ನು ಎದುರಿಸಲಿದ್ದಾರೆ. ಇದಕ್ಕೂ ಮುನ್ನ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ರಷ್ಯಾದ ಡಯಾನಾ ಶ್ನೈಡರ್ ಅವರನ್ನು 7-6(4), 6-4 ಸೆಟ್‌ಗಳಿಂದ ಸೋಲಿಸುವ ಮೂಲಕ ತಮ್ಮ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಫೈನಲ್​ಗೇರಿರುವ ಚ್ವಾಲಿನ್ಸ್ಕ, ತಮ್ಮ ಅದ್ಭುತ ಪ್ರದರ್ಶನದ ಮೂಲಕ ಟೆನಿಸ್ ಲೋಕದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅರ್ಹತಾ ಪಂದ್ಯಗಳನ್ನಾಡುವ ಮೂಲಕ ಫ್ರೆಂಚ್ ಓಪನ್‌ಗೆ ಅರ್ಹತೆ ಪಡೆದಿದ್ದ ಚ್ವಾಲಿನ್ಸ್ಕ ಈ ಹಂತಕ್ಕೆ ಬರಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆಕೆ ತನ್ನ ವೃತ್ತಿಜೀವನದಲ್ಲಿ ನಡೆದು ಬಂದ ಹಾದಿ ಸಾಧನೆಯ ಹಾದಿಯಲ್ಲಿರುವ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗಿದೆ.

ಯಾರು ಪ್ರಾಯೋಜಕರಿರಲಿಲ್ಲ

ಫ್ರೆಂಚ್ ಓಪನ್ ಆಡುವ ಸಲುವಾಗಿ ಕಳೆದ ವಾರವಷ್ಟೆ ಪ್ಯಾರಿಸ್​ಗೆ ಬಂದಿಳಿದಿದ್ದ 114ನೇ ಶ್ರೇಯಾಂಕಿತ ಚ್ವಾಲಿನ್ಸ್ಕ ಅವರಿಗೆ ಯಾರು ಪ್ರಾಯೋಜಕರಿರಲಿಲ್ಲ. ಒಂದೊಳ್ಳೆ ಆದಾಯದ ಮೂಲವೂ ಇರಲಿಲ್ಲ. ಇದೆಲ್ಲದರಕ್ಕಿಂತ ಮಿಗಿಲಾಗಿ ಆಕೆಯ ಬಳಿ ತಾನು ತಂಗುವ ಹೋಟೆಲ್​ ರೂಮ್​ನ ಬಿಲ್ ಪಾವತಿಸಲು ಸಹ ಹಣವಿರಲಿಲ್ಲ. ಈ ಎಲ್ಲಾ ತೊಂದರೆಗಳ ನಡುವೆ ಚ್ವಾಲಿನ್ಸ್ಕ ಫ್ರೆಂಚ್ ಓಪನ್ ಕಣಕ್ಕಿಳಿಯಬೇಕಾದರೆ, ಅರ್ಹತಾ ಪಂದ್ಯಗಳನ್ನು ಗೆಲ್ಲಲೇಬೇಕಿತ್ತು. ಈ ಅರ್ಹತಾ ಪಂದ್ಯಗಳನ್ನು ಗೆದ್ದರೂ ಆಕೆಗೆ ಪಂದ್ಯಾವಳಿ ಮುಗಿದ ಬಳಿಕವಷ್ಟೇ ಬಹುಮಾನದ ಹಣ ಸಿಗುತ್ತಿತ್ತು. ಹೀಗಾಗಿ ಹೋಟೆಲ್​ ರೂಮ್ ಬಿಲ್ ಪಾವತಿಸಲು ಕಷ್ಟಪಡುತ್ತಿದ್ದ ಚ್ವಾಲಿನ್ಸ್ಕ ನೆರವಿಗೆ ಬಂದಿದ್ದ ಪೋಲಿಷ್ ಕ್ರೀಡಾ ಪಾನೀಯ ಬ್ರ್ಯಾಂಡ್ ಹೋಟೆಲ್ ಬಿಲ್ ಪಾವತಿಸಿತ್ತು.

ಇತಿಹಾಸ ಸೃಷ್ಟಿಸುವ ಸನಿಹದಲ್ಲಿ ಚ್ವಾಲಿನ್ಸ್ಕ

ಈ ಪಂದ್ಯಾವಳಿಗೂ ಮೊದಲು ತಮ್ಮ ಇಡೀ ವೃತ್ತಿಜೀವನದಲ್ಲಿ ಚ್ವಾಲಿನ್ಸ್ಕ, ಏಕೈಕ ಗ್ರ್ಯಾಂಡ್ ಸ್ಲ್ಯಾಮ್ ಮುಖ್ಯ ಡ್ರಾ ಪಂದ್ಯವನ್ನು ಗೆದ್ದಿದ್ದರು. 2021 ರಲ್ಲಿ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದ ಚ್ವಾಲಿನ್ಸ್ಕ, 2022 ರಲ್ಲಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಆ ಬಳಿಕ ತನ್ನ ವೃತ್ತಿಜೀವನವನ್ನು ಕಟ್ಟಿಕೊಳ್ಳುವ ಸಲುವಾಗಿ ಯುರೋಪಿನಾದ್ಯಂತ ಸಣ್ಣ ಪಂದ್ಯಾವಳಿಗಳನ್ನು ಆಡುತ್ತಿದ್ದ ಚ್ವಾಲಿನ್ಸ್ಕ ಇದೀಗ ಪ್ಯಾರಿಸ್ ನೆಲದಲ್ಲಿ ಇತಿಹಾಸ ಸೃಷ್ಟಿಸುವ ಸನಿಹದಲ್ಲಿದ್ದಾರೆ.

ಈ ಸಾಧನೆ ಮಾಡಿದ ಎರಡನೇ ಆಟಗಾರ್ತಿ

ಈ ಪಂದ್ಯಾವಳಿಯಲ್ಲಿ ಚ್ವಾಲಿನ್ಸ್ಕ ಇದುವರೆಗೆ ಒಟ್ಟು ಒಂಬತ್ತು ಪಂದ್ಯಗಳನ್ನು ಗೆದ್ದಿದ್ದಾರೆ. ಇದರಲ್ಲಿ ಅರ್ಹತಾ ಸುತ್ತಿನಲ್ಲಿ ಮೂರು ಪಂದ್ಯಗಳು ಮತ್ತು ಮುಖ್ಯ ಡ್ರಾದಲ್ಲಿ ಆರು ಪಂದ್ಯಗಳು ಸೇರಿವೆ. ಈ ಮೂಲಕ ಚ್ವಾಲಿನ್ಸ್ಕ ಅರ್ಹತಾ ಪಂದ್ಯಗಳನ್ನಾಡುವ ಮೂಲಕ ಗ್ರ್ಯಾಂಡ್ ಸ್ಲ್ಯಾಮ್ ಫೈನಲ್ ತಲುಪಿದ ಎರಡನೇ ಆಟಗಾರ್ತಿ ಎಂಬ ದಾಖಲೆ ಬರೆದಿದ್ದಾರೆ. ಇವರಿಗಿಂತ ಮೊದಲು, ಬ್ರಿಟನ್‌ನ ಎಮ್ಮಾ ರಾಡುಕಾನು 2021 ರ ಯುಎಸ್ ಓಪನ್‌ನಲ್ಲಿ ಈ ಸಾಧನೆ ಮಾಡುವುದರ ಜೊತೆಗೆ ಪ್ರಶಸ್ತಿಯನ್ನು ಗೆದ್ದಿದ್ದರು.

14 ನೇ ಸ್ಥಾನಕ್ಕೇರುವ ಅವಕಾಶ

ಇದೀಗ ಫೈನಲ್ ಪಂದ್ಯದಲ್ಲಿ ಚ್ವಾಲಿನ್ಸ್ಕ ಎಂಟನೇ ಶ್ರೇಯಾಂಕದ ಮೀರಾ ಆಂಡ್ರೀವಾ ಅವರನ್ನು ಎದುರಿಸಲಿದ್ದಾರೆ. ಇದು ಇಬ್ಬರು ಆಟಗಾರ್ತಿಯರ ನಡುವಿನ ಮೊದಲ ಮುಖಾಮುಖಿಯಾಗಲಿದೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿಯೆಂದರೆ ಚ್ವಾಲಿನ್ಸ್ಕ, 2026 ರ ಫ್ರೆಂಚ್ ಓಪನ್ ಪ್ರಾರಂಭವಾಗುವ ಮೊದಲು ಮಹಿಳಾ ಸಿಂಗಲ್ಸ್ ವಿಶ್ವ ಶ್ರೇಯಾಂಕದಲ್ಲಿ 114 ನೇ ಸ್ಥಾನದಲ್ಲಿದ್ದರು. ಇದೀಗ ಅವರು ಫ್ರೆಂಚ್ ಓಪನ್ ಗೆದ್ದರೆ, ತಮ್ಮ ಶ್ರೇಯಾಂಕದಲ್ಲಿ 100 ಸ್ಥಾನಗಳನ್ನು ಜಿಗಿದು 14 ನೇ ಸ್ಥಾನಕ್ಕೇರಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:10 pm, Sat, 6 June 26

Source link

Exit mobile version