Video: ಮಗಳ ಡ್ಯಾನ್ಸ್‌ನ್ನು ಕೀಪ್ಯಾಡ್ ಮೊಬೈಲ್‌ನಲ್ಲಿ ಸೆರೆಹಿಡಿದ ತಂದೆ, ವೈರಲ್‌ ಆಯ್ತು ದೃಶ್ಯ – Kannada News | Father records video of daughter dancing on stage with keypad mobile phone

ಮಗಳ ಪಾಲಿಗೆ ಅಪ್ಪ (father) ಎಲ್ಲವೂ ಆಗಿರುತ್ತಾನೆ. ಇತ್ತ ಕಷ್ಟಪಟ್ಟು ದುಡಿದು ಮಗಳ ಇಷ್ಟಗಳನ್ನು ಈಡೇರಿಸುವ ಅಪ್ಪನಿಗೆ ಆಕೆಗಿಂತ ದೊಡ್ಡ ಪ್ರಪಂಚ ಮತ್ತೊಂದಿಲ್ಲ. ಮಗಳ ಖುಷಿಯಲ್ಲೇ ತನ್ನ ಖುಷಿ ಕಾಣುವ ತಂದೆಯ ಹೃದಯ ಸ್ಪರ್ಶಿ ವಿಡಿಯೋ ವೈರಲ್ ಆಗಿದೆ. ಗಣರಾಜ್ಯೋತ್ಸವ ದಿನ ತನ್ನ ಮಗಳು ಸ್ಟೇಜ್‌ನಲ್ಲಿ ಡ್ಯಾನ್ಸ್ ಮಾಡುತ್ತಿದ್ದರೆ, ಇತ್ತ ತಂದೆ ಕೀಪ್ಯಾಡ್ ಫೋನ್‌ನಲ್ಲಿ ರೆಕಾರ್ಡ್ ಮಾಡಲು ನಿಂತುಕೊಂಡಿದ್ದು, ಈ ವಿಡಿಯೋ ಸದ್ಯ ವೈರಲ್ ಆಗಿದೆ.

ಜಿತೇಂದರ್ ಸರಸ್ವತ್ (Jitendar Sarswat) ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಪುಟ್ಟ ಹುಡುಗಿಯೊಬ್ಬಳು ಸ್ಟೇಜ್ ಮೇಲೆ ಡ್ಯಾನ್ಸ್ ಮಾಡುತ್ತಿದ್ದಾಳೆ. ಮಕ್ಕಳ ಗುಂಪಿನ ನಡುವೆ ನಿಂತಿರುವ ವ್ಯಕ್ತಿಯೂ ಮಗಳ ಡ್ಯಾನ್ಸ್‌ನ್ನು ಕೀಪ್ಯಾಡ್ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಲು ಪ್ರಯತ್ನಿಸುತ್ತಿದ್ದಾನೆ. ತನ್ನ ಬಳಿ ಸ್ಮಾರ್ಟ್ ಫೋನ್ ಇಲ್ಲದಿದ್ದರೆ ಮಗಳ ಡ್ಯಾನ್ಸ್ ಅನ್ನು ಸೆರೆ ಹಿಡಿಯಬೇಕೆನ್ನುವ ತಂದೆಯ ಪ್ರಯತ್ನವು ಈ ವಿಡಿಯೋದಲ್ಲಿ ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಕೆಟ್ಟ ಅಭ್ಯಾಸಗಳಿಗೆ ಅಪ್ಪನ ಹಣವೆಲ್ಲಾ ಖರ್ಚು ಮಾಡಿ, ತಂದೆಯನ್ನೇ ನಿರ್ದಯಿಯಾಗಿ ಥಳಿಸಿದ ಮಗಳು

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಮಗಳ ಖುಷಿಯಲ್ಲಿ ಅಡಗಿದೆ ತಂದೆಯ ನಗು ಎಂದಿದ್ದಾರೆ. ಇನ್ನೊಬ್ಬರು, ಇರುವುದರಲ್ಲಿ ಖುಷಿ ಕಾಣುವುದು ಅಂದ್ರೆ ಇದೇನೇ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ತಂದೆಗೆ ಮಗಳೇ ಪ್ರಪಂಚವಾಗಿರುತ್ತಾಳೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗುಡಿಬಂಡೆ ಬಳಿ ಇದೆಯಾ ಚಿನ್ನದ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ನಡೆಯಿತು ಶೋಧಕಾರ್ಯ – Kannada News | Geological Survey of India Conducts Aerial Search for Gold in Gudibande KGF Hills, Chikkaballapura

ಚಿಕ್ಕಬಳ್ಳಾಪುರ, ಫೆಬ್ರವರಿ 2: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚಿನ್ನ ಹಾಗೂ ನಿಧಿ ನಿಕ್ಷೇಪಗಳ ಶೋಧ ಕಾರ್ಯ ತೀವ್ರಗೊಂಡಿದೆ. ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯು (GSI) ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ಬಳಿ ಹೆಲಿಕಾಪ್ಟರ್ ಮೂಲಕ ವೈಮಾನಿಕ ಸಮೀಕ್ಷೆ ನಡೆಸಿದೆ. ಕೆಜಿಎಫ್ ಗೋಲ್ಡ್ ಮೈನಿಂಗ್ ಬೆಟ್ಟದ ಸಾಲಿನಲ್ಲಿ ಇರುವ ಈ ಪ್ರದೇಶದಲ್ಲಿ ತಜ್ಞರು ಚಿನ್ನದ ಲಭ್ಯತೆಯನ್ನು ಪತ್ತೆಹಚ್ಚಲು ಶೋಧ ನಡೆಸುತ್ತಿದ್ದಾರೆ. ಈ ಹಿಂದೆಯೂ ಚಿಕ್ಕಬಳ್ಳಾಪುರ ಜಿಲ್ಲೆಯ ಮಣ್ಣಿನಲ್ಲಿ ಚಿನ್ನದ ಕಣಗಳು ಪತ್ತೆಯಾಗಿದ್ದವು. ನಿರ್ದಿಷ್ಟವಾಗಿ ಹೇಳುವುದಾದರೆ, ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕಿನ ರೈತರ ಜಮೀನುಗಳಲ್ಲಿ ಬಂಗಾರದ ಕಣಗಳು ಸಿಕ್ಕಿರುವುದು ದೃಢಪಟ್ಟಿತ್ತು.

ಹೆಲಿಕಾಪ್ಟರ್ ಬಳಸಿ ನಡೆಸುತ್ತಿರುವ ಈ ವೈಮಾನಿಕ ಸರ್ವೇ ಕಾರ್ಯವು ಪ್ರದೇಶದಲ್ಲಿ ಅಡಗಿರುವ ಚಿನ್ನ ಮತ್ತು ಇತರ ನಿಧಿ ನಿಕ್ಷೇಪಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಸಂಗ್ರಹಿಸಲು ಸಹಕಾರಿಯಾಗಲಿದೆ. ಈ ಸಮೀಕ್ಷೆಯ ಫಲಿತಾಂಶಗಳು ಭವಿಷ್ಯದ ಗಣಿಗಾರಿಕೆ ಚಟುವಟಿಕೆಗಳಿಗೆ ಪ್ರಮುಖ ಮಾರ್ಗದರ್ಶನ ನೀಡುವ ನಿರೀಕ್ಷೆಯಿದೆ. ಈ ಮೂಲಕ ಈ ಐತಿಹಾಸಿಕ ಚಿನ್ನದ ಗಣಿಗಾರಿಕೆ ಪ್ರದೇಶದಲ್ಲಿ ಹೊಸ ಚಿನ್ನದ ನಿಕ್ಷೇಪಗಳು ಪತ್ತೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

VIDEO: ಕೋಪ-ತಾಪ… ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ – Kannada News | Vaibhav suryavanshi sledges pakistan player

ಅಂಡರ್-19 ವಿಶ್ವಕಪ್​ನ 12ನೇ ಪಂದ್ಯವು ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 49.5 ಓವರ್​ಗಳಲ್ಲಿ ಕಲೆಹಾಕಿದ್ದು 252 ರನ್​ಗಳು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡವು 35 ಓವರ್​ಗಳಲ್ಲಿ 168 ರನ್ ಕಲೆಹಾಕಿದ್ದರು.

ಇದರ ನಡುವೆ ಉಭಯ ತಂಡಗಳ ಆಟಗಾರರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ಅದರಲ್ಲೂ ವಿಹಾನ್ ಮಲ್ಹೋತ್ರ ಎಸೆದ 37ನೇ ಓವರ್​ನ ಕೊನೆಯ ಎಸೆತದಲ್ಲಿ ಅಲಿ ಹಸನ್ ಬಲೂಚ್ ವಿಕೆಟ್ ಒಪ್ಪಿಸಿದ್ದರು. ಅತ್ತ ಅಲಿ ಹಸನ್ ಔಟಾಗುತ್ತಿದ್ದಂತೆ ವೈಭವ್ ಸೂರ್ಯವಂಶಿ ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದಿದ್ದಾರೆ.

ಅಲಿ ಹಸನ್ ಬಲೂಚ್​ನನ್ನು ಗುರಿಯಾಗಿಸಿ ವಾಗ್ದಾಳಿ ಆರಂಭಿಸಿದ್ದ ವೈಭವ್​ನನ್ನು ಸಹ ಆಟಗಾರರು ಬಂದು ತಡೆದಿದ್ದಾರೆ. ಈ ಮೂಲಕ ಇಬ್ಬರ ನಡುವಣ ವಾಕ್ಸಮರವನ್ನು ತಡೆದಿದ್ದಾರೆ. ಇದೀಗ ವೈಭವ್ ಸೂರ್ಯವಂಶಿಯ ಕೋಪ-ತಾಪದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ 253 ರನ್​ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ್ 46.2 ಓವರ್​ಗಳಲ್ಲಿ 194 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ 58 ರನ್​ಗಳ ಜಯದೊಂದಿಗೆ ಟೀಮ್ ಇಂಡಿಯಾ ಸೆಮಿಫೈನಲ್​ಗೆ ಪ್ರವೇಶಿಸಿದೆ.

 

Source link

ನೂರು ಮೊಮೊ ಅಂಗಡಿಗಳನ್ನು ಕೊಳ್ಳಬಹುದಿತ್ತು, ಮೊಮೊ ತಿನ್ನುವ ಆಸೆಗೆ ಬಾಲಕ ಮಾಡಿದ್ದೇನು ನೋಡಿ – Kannada News | UP Teen Hands Over Family Jewellery to Momo Vendor, Case Raises Eyebrows

ಸಾಮಾನ್ಯವಾಗಿ ಮಕ್ಕಳಿಗೆ ಬೇಕರಿ ತಿನಿಸುಗಳು, ಪಾನಿಪುರಿ, ಮೊಮೊ, ಸಿಹಿ ತಿನಿಸುಗಳೆಂದರೆ ಇಷ್ಟ. ಒಂದೊಮ್ಮೆ ಮನೆಯಲ್ಲಿ ಹಣ ಕೊಟ್ಟಿಲ್ಲವೆಂದರೆ ಅಲ್ಲೇ ಅಪ್ಪನ ಜೇಬಿನಲ್ಲಿದ್ದ ಐದೋ ಹತ್ತೋ ರೂಪಾಯಿ ಕದ್ದು ತಮಗಿಷ್ಟದ ತಿನಿಸನ್ನು ತಿನ್ನುವುದು ಸರ್ವೇ ಸಾಮಾನ್ಯ. ಆದರೆ ಮೊಮೊ ತಿನ್ನಲು ಬಾಲಕನೊಬ್ಬ ಮನೆಯಲ್ಲಿರುವ 85 ಲಕ್ಷ ರೂ. ಬೆಲೆ ಬಾಳುವ ಆಭರಣ(Jewellery)ವನ್ನೇ ಕೊಟ್ಟಿರುವ ವಿಚಿತ್ರ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ, 7ನೇ ತರಗತಿ ಬಾಲಕ ಮೊಮೊ ತಿನ್ನುವ ಪ್ರೀತಿ ಅನಿರೀಕ್ಷಿತ ಮತ್ತು ಆಘಾತಕಾರಿ ತಿರುವು ಪಡೆದುಕೊಂಡಿತ್ತು. ಮನೆಯ ಹತ್ತಿರ ಮೊಮೊ ಅಂಗಡಿ ನಡೆಸುತ್ತಿದ್ದ ಮೂವರು ಬಾಲಕನಿಗೆ ಉಚಿತವಾಗಿ ಮೊಮೊ ಕೊಡುವ ಆಮಿಷವೊಡ್ಡಿ ಆತನಿಂದ ಮನೆಯಿಂದ ಒಂದೊಂದೇ ಆಭರಣವನ್ನು ತರಿಸಿಕೊಂಡಿದ್ದಾರೆ.

ಈ ಪ್ರಕರಣ ಉತ್ತರ ಪ್ರದೇಶದ ಡಿಯೋರಿಯಾ ನಗರದಲ್ಲಿ ನಡೆದಿದೆ. ದೂರಿನ ಪ್ರಕಾರ, ವಾರಾಣಸಿಯ ದೇವಾಲಯದ ಅರ್ಚಕ ವಿಮ್ಲೇಶ್ ಮಿಶ್ರಾ, ತಮ್ಮ ಮಗನಿಗೆ ಮೊಮೊ ತುಂಬಾ ಇಷ್ಟ ಎಂದು ಹೇಳಿದ್ದಾರೆ. ಮೊಮೊ ಅಂಗಡಿ ನಡೆಸುವ ಮೂವರು ವ್ಯಕ್ತಿಗಳು ಇದನ್ನು ಬಳಸಿಕೊಂಡು ಹುಡುಗನನ್ನು ಮೋಸಗೊಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಅಂಗಡಿಯ ಮಾಲೀಕರು ತಮ್ಮ ಮಗನಿಗೆ ಮನೆಯಿಂದ ಆಭರಣ ತಂದರೆ ಉಚಿತವಾಗಿ ಮೊಮೊ ನೀಡುವುದಾಗಿ ಹೇಳಿದ್ದರು ಎಂದು ವಿಮ್ಲೇಶ್ ಆರೋಪಿಸಿದ್ದಾರೆ. ನಿಧಾನವಾಗಿ, ಹುಡುಗ ತನ್ನ ಮನೆಯಿಂದ ಆಭರಣಗಳನ್ನು ತೆಗೆದುಕೊಂಡು ಎಲ್ಲವನ್ನೂ ಮೂವರಿಗೆ ಒಪ್ಪಿಸಿದ್ದ. ವಿಮಲೇಶ್ ಅವರ ಸಹೋದರಿ ಅವರ ಮನೆಗೆ ಭೇಟಿ ನೀಡಿ ಅವರ ಆಭರಣಗಳನ್ನು ಕೇಳಿದಾಗ ಸತ್ಯ ಹೊರಬಂದಿತ್ತು.

ಮತ್ತಷ್ಟು ಓದಿ: ಬೆಂಗಳೂರಲ್ಲಿ ಮನೆಗೆಲಸದವರಿಂದಲೇ ಬಿಲ್ಡರ್​​ ಮನೆಗೆ ಕನ್ನ: ದೋಚಿದ್ದು 18 ಕೋಟಿ ಮೌಲ್ಯದ ಸಂಪತ್ತು!

ಕುಟುಂಬವು ಕಪಾಟು ತೆರೆದ ತಕ್ಷಣ, ಎಲ್ಲವೂ ಕಾಣೆಯಾಗಿರುವುದನ್ನು ಕಂಡು ಆಘಾತಕ್ಕೊಳಗಾಯಿತು. ಅವರು ಬಾಲಕನನ್ನು ವಿಚಾರಿಸಿದಾಗ, ಅವನು ಆಭರಣಗಳನ್ನು ಮೊಮೊ ಮಾರಾಟಗಾರರಿಗೆ ನೀಡಿದ್ದೇನೆ ಎಂದು ಹೇಳಿದ್ದಾನೆ, ಆದ್ದರಿಂದ ತಾನು ನಿತ್ಯವೂ ಉಚಿತವಾಗಿ ಮೋಮೋ ತಿನ್ನಬಹುದು ಎಂದಿದ್ದಾನೆ.
ನಂತರ ವಿಮಲೇಶ್ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿ, ಮೂವರು ಆರೋಪಿಗಳ ಹೆಸರನ್ನು ಕೊಟ್ಟಿದ್ದಾರೆ. ಆಭರಣದ ಪ್ರಸ್ತುತ ಮೌಲ್ಯ 85 ಲಕ್ಷ ರೂ. ಎಂದು ಅವರು ಹೇಳಿದ್ದಾರೆ. ದೂರಿನ ನಂತರ, ಪೊಲೀಸರು ಈ ವಿಷಯದ ಬಗ್ಗೆ ಸಂಪೂರ್ಣ ತನಿಖೆ ಆರಂಭಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪಂದ್ಯ ಬಹಿಷ್ಕಾರದ ಹಿಂದಿದೆ ಪಾಕಿಸ್ತಾನದ 200 ಕೋಟಿ ನಷ್ಟದ ಲೆಕ್ಕಾಚಾರ! – Kannada News | ICC may suffer loss upto 200 crores if India vs Pakistan match gets cancelled

ಭಾರತ ಮತ್ತು ಪಾಕಿಸ್ತಾನ್ ನಡುವಣ ಟಿ20 ವಿಶ್ವಕಪ್ ಪಂದ್ಯ ನಡೆಯಲಿದೆಯಾ? ಈ ಪ್ರಶ್ನೆಗೆ ಉತ್ತರ ಸಿಗಲು ಇನ್ನೊಂದಷ್ಟು ದಿನಗಳವರೆಗೆ ಕಾಯಲೇಬೇಕು. ಏಕೆಂದರೆ ಟಿ20 ವಿಶ್ವಕಪ್​ ಆರಂಭಕ್ಕೆ ದಿನಗಳು ಮಾತ್ರ ಉಳಿದಿರುವಾಗ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ಬೆದರಿಕೆಯೊಡ್ಡಿದೆ. ಇದಕ್ಕೆ ಪಾಕಿಸ್ತಾನ್ ಸರ್ಕಾರ ಕೂಡ ಸಂಪೂರ್ಣ ಬೆಂಬಲ ನೀಡಿದೆ. ಹೀಗಾಗಿ ಫೆಬ್ರವರಿ 15 ರಂದು ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯ ನಡೆಯಲಿದೆಯಾ ಎಂಬುದೇ ಈಗ ದೊಡ್ಡ ಪ್ರಶ್ನೆ.

ಇತ್ತ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದರೆ ಪಾಕಿಸ್ತಾನಕ್ಕೇನು ಲಾಭ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ 200 ಕೋಟಿ ರೂ. ನಷ್ಟದ ಲೆಕ್ಕಾಚಾರವೊಂದು ಉತ್ತರವಾಗಿ ಸಿಗುತ್ತದೆ. ಅಂದರೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಐಸಿಸಿ ಹಾಗೂ ಬಿಸಿಸಿಐ ಅನ್ನು ಇಕ್ಕಟಿಗೆ ಸಿಲುಕಿಸಲೆಂದೇ ಪಂದ್ಯ ಬಹಿಷ್ಕಾರದ ಬೆದರಿಕೆಯೊಡ್ಡಿದೆ.

200 ಕೋಟಿ ರೂ. ನಷ್ಟದ ಲೆಕ್ಕಾಚಾರ!

ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯ ನಡೆಯದೇ ಇದ್ದರೆ ಐಸಿಸಿ ಆದಾಯಕ್ಕೆ ಹೊಡೆತ ಬೀಳುವುದು ಖಚಿತ. ಇತ್ತ ಈ ಬಾರಿ ಟಿ20 ವಿಶ್ವಕಪ್ ಅನ್ನು ಶ್ರೀಲಂಕಾ ಜೊತೆಗೂಡಿ ಬಿಸಿಸಿಐ ಆಯೋಜಿಸುತ್ತಿದೆ. ಹೀಗಾಗಿ ಬಿಸಿಸಿಐ ಕೂಡ ಈ ನಷ್ಟದ ಪರಿಣಾಮವನ್ನು ಎದುರಿಸಬೇಕಾಗುತ್ತದೆ.

ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಯಾವುದೇ ಐಸಿಸಿ ಪಂದ್ಯಾವಳಿಯಲ್ಲಿ ಭಾರತದ ಪಂದ್ಯಗಳು ಸುಮಾರು 100 ಕೋಟಿ ರೂ. ಗಳಿಸುತ್ತವೆ. ಇದೇ ವೇಳೆ ಭಾರತ-ಪಾಕಿಸ್ತಾನ್​ ನಡುವಣ ಪಂದ್ಯಗಳಲ್ಲಿ ಈ ಆದಾಯವು ಬಹುತೇಕ ದ್ವಿಗುಣಗೊಳ್ಳುತ್ತದೆ. ಅಂದರೆ ಕನಿಷ್ಠ 200 ಕೋಟಿ ರೂ. ಆದಾಯ ಸೃಷ್ಟಿಯಾಗುತ್ತದೆ.

ಈ ಆದಾಯದ ಮುಖ್ಯ ಮೂಲ ಜಾಹೀರಾತು. ಅದರಲ್ಲೂ ಪಂದ್ಯದ ನೇರ ಪ್ರಸಾರಕರು  ಭಾರತ-ಪಾಕಿಸ್ತಾನ್ ನಡುವಣ ಪಂದ್ಯದ ಪ್ರತಿ 10-ಸೆಕೆಂಡ್ ಜಾಹೀರಾತಿಗೆ ಸಾಮಾನ್ಯವಾಗಿ 25 ಲಕ್ಷದಿಂದ 40 ಲಕ್ಷ ರೂ.ಗಳನ್ನು ನಿಗದಿ ಮಾಡುತ್ತಾರೆ.

ಒಂದು ವೇಳೆ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯ ರದ್ದಾದರೆ, ಜಾಹೀರಾತಿನ ಆದಾಯದ ಮೇಲೆ ನೇರ ಪರಿಣಾಮ ಬೀರಲಿದೆ. ಇದಲ್ಲದೆ ಟಿಕೆಟ್ ಮಾರಾಟ, ಇತರೆ ಮೂಲಗಳಿಂದ ಬರುವ ಆದಾಯಕ್ಕೂ ಹೊಡೆತ ಬೀಳಲಿದೆ.

ಇತ್ತ ಬಿಸಿಸಿಐ ಹಾಗೂ ಐಸಿಸಿ ಗಳಿಸಲಿರುವ ಆದಾಯಕ್ಕೆ ಹೊಡೆತ ನೀಡುವ ಸಲುವಾಗಿಯೇ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಇದೀಗ ಭಾರತದ ವಿರುದ್ಧದ ಪಂದ್ಯದ ಬಹಿಷ್ಕಾರಕ್ಕೆ ಪ್ಲ್ಯಾನ್ ರೂಪಿಸಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನವೇ ಆಸ್ಟ್ರೇಲಿಯಾಗೆ ಆಘಾತ

ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್​ನ ಈ ನಡೆಯನ್ನು ಗಂಭೀರವಾಗಿ ಪರಿಗಣಿಸಿರುವ ಐಸಿಸಿ ತುರ್ತು ಸಭೆ ಕರೆದಿದೆ. ಅಲ್ಲದೆ ಪಿಸಿಬಿಗೆ ತನ್ನ ನಿಲುವನ್ನು ಬದಲಿಸುವಂತೆ ಮನವಿ ಮಾಡಿದೆ. ಇದಾಗ್ಯೂ ಪಾಕ್ ಕ್ರಿಕೆಟ್ ಮಂಡಳಿ ತನ್ನ ನಿರ್ಧಾರವನ್ನು ಬದಲಿಸದೇ ಇದ್ದರೆ ಐಸಿಸಿ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

Published On – 1:54 pm, Mon, 2 February 26

Source link

Video: ಹೈವೇ ಮಧ್ಯದಲ್ಲಿ ಕಪಲ್ ಫೋಟೊಶೂಟ್, ವೇಗವಾಗಿ ಬಂದ ಕಾರು, ಆಮೇಲೇನಾಯ್ತು? – Kannada News | Risky Highway Photoshoot by Couple Triggers Online Backlash

ಹೆದ್ದಾರಿಯಲ್ಲಿ ಪಕ್ಕಕ್ಕೆ ಬೈಕ್ ನಿಲ್ಲಿಸಿಕೊಂಡು ನಡು ರಸ್ತೆಯಲ್ಲಿ ದಂಪತಿ ಫೋಟೊಶೂಟ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಕಾರೊಂದು ವೇಗವಾಗಿ ಬರುತ್ತಿರುತ್ತದೆ. ರಸ್ತೆ ಸ್ವಲ್ಪ ಇಳಿಜಾರಿರುತ್ತದೆ, ಅದೇ ವೇಗದಲ್ಲಿ ಮುಂದೆ ಬಂದಾಗ ಎದುರಿಗೆ ನಡುರಸ್ತೆಯಲ್ಲಿ ಕುಳಿತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದಂಪತಿಯನ್ನು ನೋಡಿ ಬ್ರೇಕ್ ಹಾಕಿದ್ದಾರೆ. ಒಂದು ಸೆಕೆಂಡ್ ಹೆಚ್ಚು ಕಡಿಮೆಯಾಗಿದ್ದರೂ ಅವರ ಪ್ರಾಣವೇ ಹೋಗುತ್ತಿತ್ತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ಪಿಜಿಗಳಿಗೆ ಜಿಬಿಎ ಶಾಕ್! 500ಕ್ಕೂ ಹೆಚ್ಚು ಪಿಜಿಗಳಿಗೆ ನೋಟಿಸ್ – Kannada News | Bangalore PG Crackdown: GBA Seals 8 Unsafe Accommodations, Fines Rs 3 Lakh

ಬೆಂಗಳೂರಿನ ಪಿಜಿಗಳಿಗೆ ಜಿಬಿಎ ಶಾಕ್! 574 ಪಿಜಿಗಳಿಗೆ ನೋಟಿಸ್

ಬೆಂಗಳೂರು, ಫೆಬ್ರುವರಿ 02: ನಗರದಲ್ಲಿ ವಿವಿಧ ರಾಜ್ಯಗಳಿಂದ ಉದ್ಯೋಗ, ಶಿಕ್ಷಣ ಸೇರಿದಂತೆ ಹಲವು ಕಾರಣಗಳಿಂದ ವಾಸವಾಗಿರುವ ಜನರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪೇಯಿಂಗ್ ಗೆಸ್ಟ್ (Bengaluru PG) ವಸತಿಗೃಹಗಳ ಸಂಖ್ಯೆಯೂ ಅಪಾರವಾಗಿ ಹೆಚ್ಚಾಗಿದೆ. ಆದರೆ ಅನೇಕ ಪಿಜಿಗಳು ಮೂಲಭೂತ ನಿಯಮಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಅಸುರಕ್ಷಿತ ಪಿಜಿಗಳ ವಿರುದ್ಧ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಅಧಿಕಾರಿಗಳು ಕಟ್ಟುನಿಟ್ಟಿನ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಈಗಾಗಲೇ 8 ಪಿಜಿಗಳಿಗೆ ಬೀಗ!

ಜನವರಿ ತಿಂಗಳಲ್ಲೇ ಶಾಂತಿನಗರ, ಸಿ.ವಿ.ರಾಮನ್‌ನಗರ, ಗಾಂಧಿನಗರ, ಶಿವಾಜಿನಗರ, ಚಾಮರಾಜಪೇಟೆ ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ತಪಾಸಣೆ ನಡೆಸಿದ ಆರೋಗ್ಯಾಧಿಕಾರಿಗಳು 574 ಪಿಜಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಅಡುಗೆ ಕೋಣೆ ಶುಚಿತ್ವ, ಶುದ್ಧ ಕುಡಿಯುವ ನೀರು, ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಇದ್ದ 8 ಪಿಜಿಗಳಿಗೆ ಬೀಗ ಹಾಕಲಾಗಿದ್ದು, ಇತರೆ ನಿಯಮ ಉಲ್ಲಂಘನೆಗಳಿಗೆ ಒಟ್ಟೂ 3.09 ಲಕ್ಷ ರೂ. ದಂಡ ವಿಧಿಸಲಾಗಿದೆ.

ಪಿಜಿ ಮಾಲೀಕರಿಗೆ ಅಧಿಕಾರಿಗಖ ಖಡಕ್ ವಾರ್ನಿಂಗ್

ಪಿಜಿ ಮಾಲೀಕರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ಏಕಾಏಕಿ ನಡೆಯುತ್ತಿರುವ ಕಾರ್ಯಾಚರಣೆಯಿಂದ ಮಾಲೀಕರು ಕಳವಳಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇತ್ತ ವಿಲ್ಸನ್ ಗಾರ್ಡನ್‌ನ ಪಿಜಿ ಮಾಲೀಕ ಶರಣೇಶ್ ಪ್ರತಿಕ್ರಿಯಿಸಿ, ನಿಯಮ ಪಾಲನೆ ಜೊತೆಗೆ ಅಧಿಕಾರಿಗಳಿಗೆ ಸಹಕರಿಸುವುದು ನಮ್ಮ ಜವಾಬ್ದಾರಿ ಎಂದು ಹೇಳಿದ್ದಾರೆ. ಪರಿಶೀಲನೆಗೆ ಒಳಪಟ್ಟ ಎಲ್ಲಾ ಪಿಜಿಗಳಿಗೆ ಎಚ್ಚರಿಕೆ ನೀಡಲಾಗಿದ್ದು, ನ್ಯೂನ್ಯತೆ ಸರಿಪಡಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಪಿಜಿಗಳಿಗೆ ಬೀಗ ಬೀಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಲಕ್ಷ್ಮಿ ನರಸಿಂಹ , ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಇನ್ಮುಂದೆ ಸರ್ಕಾರಿ ಅಧಿಕಾರಿಗಳು ತಿಂಗಳ ಮೊದಲ ಶನಿವಾರ ಖಾದಿ ಧರಿಸಲೇಬೇಕು: ಕರ್ನಾಟಕ ಸರ್ಕಾರದಿಂದ ಆದೇಶ – Kannada News | Khadi Push in Karnataka: Govt Employees to Wear Khadi Monthly, Get Special Discounts

ಬೆಂಗಳೂರು, ಫೆ.2: ರಾಜ್ಯದ ಖಾದಿ ಬಟ್ಟೆಗಳಿಗೆ (Khadi Push in Karnataka) ಹೆಚ್ಚಿನ ಪ್ರಾಮುಖ್ಯತೆ ನೀಡುವ ಉದ್ದೇಶದಿಂದ ಸರ್ಕಾರ ತನ್ನ ಅಧಿಕಾರಿಗಳಿಗೆ ಹೊಸ ಆದೇಶವೊಂದನ್ನು ನೀಡಿದೆ. ಪ್ರತಿ ತಿಂಗಳ ಮೊದಲ ಶನಿವಾರದಂದು ಎಲ್ಲಾ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಕಡ್ಡಾಯವಾಗಿ ಖಾದಿ ಉಡುಪುಗಳನ್ನು ಧರಿಸಿ ಕಚೇರಿಗೆ ಬರಬೇಕು ಎಂಬ ಆದೇಶವನ್ನು ನೀಡಲಾಗಿದೆ. ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು, ಮಂಡಳಿಗಳು, ನಿಗಮಗಳು ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ನೌಕರರಿಗೆ ಈ ನಿಯಮ ಅನ್ವಯಿಸುತ್ತದೆ ಎಂದು ಹೇಳಿದೆ. ದೇಶೀಯವಾಗಿ ತಯಾರಿಸಿದ ಖಾದಿ ಬಟ್ಟೆಗಳಿಗೆ ಉತ್ತೇಜನ ನೀಡುವುದು ಮತ್ತು ಖಾದಿ ಗ್ರಾಮೋದ್ಯೋಗ ವಲಯವನ್ನು ಆರ್ಥಿಕವಾಗಿ ಬಲಪಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಸರ್ಕಾರಿ ನೌಕರರು ಖಾದಿ ಬಟ್ಟೆಗಳನ್ನು ಖರೀದಿಸಲು ಅನುಕೂಲವಾಗುವಂತೆ, ಸರ್ಕಾರಿ ಖಾದಿ ಮಳಿಗೆಗಳಲ್ಲಿ ಈಗಿರುವ ರಿಯಾಯಿತಿಯ ಜೊತೆಗೆ ಹೆಚ್ಚುವರಿಯಾಗಿ 5% ವಿಶೇಷ ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ. ಈ ನಿಯಮವನ್ನು ಅಧಿಕೃತವಾಗಿ ಏಪ್ರಿಲ್ 21, 2026ರಂದು (ಸರ್ಕಾರಿ ನೌಕರರ ದಿನಾಚರಣೆ) ಚಾಲನೆ ನೀಡಲಾಗುವುದು ಎಂದು ಹೇಳಲಾಗಿದೆ.ರಕ್ಷಣಾ ಇಲಾಖೆಯ (Military Canteen) ಮಾದರಿಯಲ್ಲೇ ರಾಜ್ಯ ಸರ್ಕಾರಿ ನೌಕರರಿಗೂ ರಿಯಾಯಿತಿ ದರದಲ್ಲಿ ಅಗತ್ಯ ವಸ್ತುಗಳನ್ನು ಪೂರೈಸಲು MSIL ಮೂಲಕ ಕ್ಯಾಂಟೀನ್ ಸ್ಥಾಪಿಸುವ ಪ್ರಸ್ತಾವನೆಯೂ ಬಜೆಟ್‌ನಲ್ಲಿ ಸೇರುವ ಸಾಧ್ಯತೆಯಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರೇ ಎಚ್ಚರ: ನಿಮ್ಮೇಲೆ ಇರಲಿದೆ ವಿಶೇಷ ಸಿಬ್ಬಂದಿಗಳ ಕಣ್ಣು, ಈ ತಪ್ಪುಗಳನ್ನು ಮಾಡಬೇಡಿ

ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ (KSIC) ವತಿಯಿಂದ ರೇಷ್ಮೆ ಸೀರೆ ಮತ್ತು ಬಟ್ಟೆಗಳ ಖರೀದಿಯ ಮೇಲೆ ಎಲ್ಲಾ ನೌಕರರಿಗೆ ವಿಶೇಷ ರಿಯಾಯಿತಿ ವಿಸ್ತರಿಸಲು ಚರ್ಚಿಸಲಾಗಿದೆ. ಈ ನಿರ್ಧಾರವು ರಾಜ್ಯದ ಸಾವಿರಾರು ನೇಕಾರರಿಗೆ ಮತ್ತು ಖಾದಿ ಉದ್ಯಮಕ್ಕೆ ದೊಡ್ಡ ಮಟ್ಟದ ಬೆಂಬಲ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಪುರುಷ ಉದ್ಯೋಗಿಗಳಿಗೆ ಸೂಚಿಸಲಾದ ಉಡುಪು ಖಾದಿ ಶರ್ಟ್‌ಗಳು, ಪ್ಯಾಂಟ್‌ಗಳು, ಓವರ್‌ಕೋಟ್‌ಗಳು ಮತ್ತು ಇತರ ಔಪಚಾರಿಕ ಉಡುಪುಗಳನ್ನು ಧರಿಸಬಹುದು, ಮಹಿಳಾ ಉದ್ಯೋಗಿಗಳು ಖಾದಿ ರೇಷ್ಮೆ ಸೀರೆಗಳು, ಚೂಡಿದಾರ್‌ಗಳು ಮತ್ತು ಇತರ ಔಪಚಾರಿಕ ಉಡುಪುಗಳನ್ನು ಧರಿಸಬಹುದು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿಂತು ಹೋಗಿದ್ದ ಬಿಗ್ ಬಜೆಟ್ ಚಿತ್ರ ಕೈಗೆತ್ತಿಕೊಂಡ ರಿಷಬ್? ನಟನೆಯ ಜೊತೆಗೆ ನಿರ್ದೇಶನ – Kannada News | Rishab Shetty Revives Stalled Big Budget Film? Directing and Acting in Randamoozham

ರಿಷಬ್ ಶೆಟ್ಟಿ (Rishab Shetty) ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಗೆಲುವಿನ ಬಳಿಕ ಬ್ರೇಕ್ ಪಡೆದಿದ್ದಾರೆ. ಕುಟುಂಬದ ಜೊತೆ ಸಾಕಷ್ಟು ಸಮಯ ಕಳೆಯುತ್ತಿದ್ದಾರೆ. ಈಗ ರಿಷಬ್ ಶೆಟ್ಟಿ ಅವರು ನಟನೆಯ ಕಡೆ ಗಮನ ಹರಿಸುತ್ತಿದ್ದಾರೆ. ಒಪ್ಪಿಕೊಂಡ ಸಿನಿಮಾಗಳ ಶೂಟ್​​ನ ಅವರು ಪೂರ್ಣಗೊಳಿಸಬೇಕಿದೆ. ಈ ಮಧ್ಯೆ ಅವರು ಹೊಸ ಸಿನಿಮಾ ಕೈಗೆತ್ತಿಕೊಂಡರೇ ಎನ್ನುವ ಪ್ರಶ್ನೆ ಮೂಡಿದೆ. ಅದು ಕೂಡ ನಿಂತು ಹೋದ ಬಿಗ್ ಬಜೆಟ್ ಚಿತ್ರ ಎಂಬ ವದಂತಿ ಹರಿದಾಡಿದೆ.

ಮಲಯಾಳಂ ಚಿತ್ರರಂಗದಲ್ಲಿ ‘ರಂಡಮೂಳಂ’ ಎಂಬ ಸಿನಿಮಾ ಸೆಟ್ಟೇರಬೇಕಿತ್ತು. ಎಂಟಿ ವಾಸುದೇವ್ ನಾಯರ್ ಬರೆದ ‘ರಂಡಮೂಳಂ’ ಕಾದಂಬರಿಯನ್ನು ಆಧರಿಸಿ ಸಿನಿಮಾ ಸಿದ್ಧಗೊಳ್ಳಬೇಕಿತ್ತು. ಆದರೆ, ಸಿನಿಮಾ ಸೆಟ್ಟೇರಿರಲಿಲ್ಲ. ಈಗ ಇದಕ್ಕೆ ರಿಷಬ್ ಶೆಟ್ಟಿ ಅವರು ಮರುಜೀವ ತುಂಬಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಚಿತ್ರವನ್ನು ಅವರೇ ನಿರ್ದೇಶನ ಮಾಡಲಿದ್ದು, ನಟನೆ ಕೂಡ ಅವರದ್ದೇ ಎಂದು ಮಲಯಾಳಂನ ‘ಮಾತೃಭೂಮಿ’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಮೊದಲು ‘ರಂಡಮೂಳನ್’ ಕಥೆಯನ್ನು ಸಿನಿಮಾ ಮಾಡುವ ಸಾಕಷ್ಟು ಪ್ರಯತ್ನಗಳು ನಡೆದವು. ಸಾಕಷ್ಟು ದೊಡ್ಡ ನಿರ್ಮಾಣ ಸಂಸ್ಥೆಗಳು ಇದನ್ನು ಮಾಡಲು ಆಸಕ್ತಿ ತೋರಿಸಿ ಸುಮ್ಮನಾದರು. ನಿರ್ದೇಶಕ ಶ್ರೀಕುಮಾರ್ ಮೆನನ್ ಕಾಂಟ್ರ್ಯಾಕ್ಟ್ ಕೂಡ ಸಹಿ ಮಾಡಿದ್ದರು. ಆದರೆ, ಅವರು ಸಿನಿಮಾದಿಂದ ಹಿಂದೆ ಸರಿದಿದ್ದಾರೆ.

ಇದನ್ನೂ ಓದಿ: ದರ್ಶನ್ ನಟನೆಯ ‘ಡೆವಿಲ್’ ಚಿತ್ರಕ್ಕೆ ಪ್ರೀತಿಯಿಂದ ವಿಶ್ ಮಾಡಿದ ರಿಷಬ್ ಶೆಟ್ಟಿ

ಎಂ.ಟಿ. ವಾಸುದೇವನ್ ನಾಯರ್ ಅವರ ಪುತ್ರಿ ಅಶ್ವತಿ ಇತ್ತೀಚೆಗೆ ಒಂದು ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದರು. ‘ಕಳೆದ ಎರಡು ವರ್ಷಗಳ ಹಿಂದೆ ನಾನು ಈ ಪ್ರಾಜೆಕ್ಟ್​​ನ ಕೈಗೆತ್ತಿಕೊಂಡಿದ್ದೇನೆ ಮತ್ತು ಸಂಪೂರ್ಣವಾಗಿ ನನ್ನನ್ನು ನಾಉ ತೊಡಗಿಸಿಕೊಂಡಿದ್ದೇನೆ. ಇದು ಒಂದು ದೊಡ್ಡ ತಂಡ. ತಂಡ ಕಟ್ಟುವ ಕೆಲಸ ಬಹುತೇಕ ಪೂರ್ಣಗೊಂಡಿದೆ’ ಎಂದು ಹೇಳಿದ್ದರು. ‘ಒಂದು ದೊಡ್ಡ ನಿರ್ಮಾಣ ಸಂಸ್ಥೆ ಮತ್ತು ಈ ಚಿತ್ರವನ್ನು ಚೆನ್ನಾಗಿ ನಿರ್ಮಿಸುವ ಸಾಮರ್ಥ್ಯವಿರುವ ತಂಡವಿದೆ’ ಎಂದಿದ್ದರು ಅವರು. ಈ ತಂಡದ ಕ್ಯಾಪ್ಟನ್ ರಿಷಬ್ ಆಗುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪೆನ್ನಾರ್​ ನದಿ ನೀರು ಹಂಚಿಕೆ ವಿವಾದ: ಸುಪ್ರೀಂಕೋರ್ಟ್​​ನಲ್ಲಿ ಕರ್ನಾಟಕಕ್ಕೆ ಹಿನ್ನಡೆ – Kannada News | Pennar River Water Dispute Between Karnataka and Tamil Nadu: Supreme Court Orders Tribunal

ನವದೆಹಲಿ, ಫೆಬ್ರವರಿ 02: ಕರ್ನಾಟಕ-ತಮಿಳುನಾಡು ನಡುವಿನ ಪೆನ್ನಾರ್​ ನದಿ ನೀರು ಹಂಚಿಕೆ ವಿವಾದ ಸಂಬಂಧ ಸುಪ್ರೀಂಕೋರ್ಟ್​​ ಮಹತ್ವದ ಆದೇಶ ನೀಡಿದ್ದು, ನ್ಯಾಯಾಧೀಕರಣ ರಚನೆಗೆ ಸೂಚಿಸಿದೆ. ಈ ಬಗ್ಗೆ ತೀರ್ಪು ನೀಡಿರುವ ನ್ಯಾ. ವಿಕ್ರಮ್ ನಾಥ್ ಮತ್ತು ನ್ಯಾ.ಎನ್.ವಿ. ಅಂಜಾರಿಯಾ ಪೀಠ, 1 ತಿಂಗಳ ಒಳಗೆ ನ್ಯಾಯಾಧೀಕರಣ ರಚನೆ ಮಾಡುವಂತೆ ಕೇಂದ್ರಕ್ಕೆ ತಿಳಿಸಿದೆ. ಕಳೆದ ಡಿಸೆಂಬರ್​​ನಲ್ಲಿ ಈ ಬಗ್ಗೆ ವಿಚಾರಣೆ ನಡೆಸಿದ್ದ ಕೋರ್ಟ್​​ ತೀರ್ಪನ್ನು ಕಾಯ್ದಿರಿಸಿತ್ತು.

ಕರ್ನಾಟಕದ ವಾದ ಪುರಸ್ಕರಿಸದ ಕೋರ್ಟ್

ಇನ್ನು ನ್ಯಾಯಾಧೀಕರಣ ರಚನೆಗೆ ಆದೇಶಿಸುವ ಮೂಲಕ ಕರ್ನಾಟಕ ಸರ್ಕಾರದ ವಾದವನ್ನು ಕೋರ್ಟ್ ತಿರಸ್ಕರಿಸಿದೆ. ನ್ಯಾಯಾಧೀಕರಣ ರಚನೆ ಬೇಡ, ಮಾತುಕತೆ ಮೂಲಕ ವಿವಾದ ಬಗೆಹರಿಸುಕೊಳ್ಳುತ್ತೇವೆ ಎಂದು ಕರ್ನಾಟಕ ಹೇಳಿತ್ತು. ಆದರೆ ನ್ಯಾಯಾಧೀಕರಣ ರಚಿಸುವಂತೆ ತಮಿಳುನಾಡು ವಾದಿಸಿತ್ತು. ತಮಿಳುನಾಡು ಸರ್ಕಾರದ ವಾದ ಪುರಸ್ಕರಿಸಿರುವ ಸುಪ್ರೀಂಕೋರ್ಟ್​​ ಈ ಬಗ್ಗೆ ಆದೇಶ ಪ್ರಕಟಿಸಿದೆ.

ಇದನ್ನೂ ಓದಿ: ಎಲ್ಲ ಶಾಲೆಗಳಲ್ಲಿ ಬಾಲಕಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್‌ ನೀಡುವುದು ಕಡ್ಡಾಯ; ಸುಪ್ರೀಂ ಕೋರ್ಟ್ ಆದೇಶ

ವಿವಾದ ಏನು?

ಪೆನ್ನಾರ್ ನದಿಯ ಉಪನದಿಯಾದ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಕರ್ನಾಟಕದಿಂದ ಚೆಕ್ ಡ್ಯಾಮ್‌ಗಳು ಮತ್ತು ಜಲಾಶಯಗಳ ನಿರ್ಮಾಣಕ್ಕೆ ನೆರೆ ರಾಜ್ಯ ತಮಿಳುನಾಡು ಆಕ್ಷೇಪಿಸಿತ್ತು. ಇದು ತಮಿಳುನಾಡಿನ ಉತ್ತರ ಜಿಲ್ಲೆಗಳಾದ ಕೃಷ್ಣಗಿರಿ, ಧರ್ಮಪುರಿ ಮುಂತಾದ ಕಡೆ ನೀರಿನ ಹರಿವನ್ನು ಕುಂಠಿತಗೊಳಿಸುತ್ತದೆ ಎಂದು ವಾದಿಸಿತ್ತು. 1892ರ ಮೈಸೂರು-ಮದ್ರಾಸ್ ಒಪ್ಪಂದದ ಪ್ರಕಾರ, ಕರ್ನಾಟಕವು ಕೆಳಭಾಗದ ರಾಜ್ಯದ ಅನುಮತಿಯಿಲ್ಲದೆ ಯಾವುದೇ ಹೊಸ ಯೋಜನೆಗಳನ್ನು ಕೈಗೊಳ್ಳುವಂತಿಲ್ಲ ಎಂದು ತಮಿಳುನಾಡು ಪ್ರತಿಪಾದಿಸಿತ್ತು. ಆದರೆ ಇದಕ್ಕೆ ಕೌಂಟರ್​ ಕೊಟ್ಟಿದ್ದ ಕರ್ನಾಟಕ, ಕುಡಿಯುವ ನೀರಿನ ಉದ್ದೇಶಕ್ಕಾಗಿ ಈ ಯೋಜನೆಗಳು ಇರುವುದರಿಂದ 1892ರ ಒಪ್ಪಂದದ ಉಲ್ಲಂಘನೆಯಾಗುವುದಿಲ್ಲ ಮತ್ತು ರಾಜ್ಯಕ್ಕೆ ತನ್ನ ಪಾಲಿನ ನೀರನ್ನು ಬಳಸುವ ಹಕ್ಕಿದೆ ಎಂದು ಹೇಳಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 1:15 pm, Mon, 2 February 26

Source link

Exit mobile version