ಮೈಸೂರು, ಏಪ್ರಿಲ್ 08: ಜಿಲ್ಲೆಯ ಕಬಿನಿ ಹಿನ್ನೀರು ಪ್ರದೇಶದಲ್ಲಿ ಹುಲಿಯೊಂದು ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದೆ. ಹೆಚ್.ಡಿ. ಕೋಟೆ ತಾಲ್ಲೂಕಿನ ದಮ್ಮನಕಟ್ಟೆ ಅರಣ್ಯ ವಲಯದಲ್ಲಿ ಕಾಣಿಸಿಕೊಂಡ ಈ ಹುಲಿ, ಗಾಂಭೀರ್ಯದಿಂದ ನಡೆದು ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸಿದೆ. ಪ್ರವಾಸಿಗರತ್ತ ದಿಟ್ಟಿಸಿ ನೋಡುತ್ತಲೇ ಸಾಗಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಫಾರಿ ಪ್ರಿಯರಿಗೆ ಭರ್ಜರಿ ಅನುಭವ ನೀಡಿದೆ.
ಕಳೆದ ಕೆಲ ವರ್ಷಗಳಿಂದ ಭಾರತದಲ್ಲಿ ಬಲು ವೇಗವಾಗಿ ಬೆಳೆಯುತ್ತಿರುವ ಸ್ಟಾಂಡಪ್ ಕಾಮಿಡಿ ಕ್ಷೇತ್ರದಲ್ಲಿ ದೊಡ್ಡ ಹೆಸರು ಸಮಯ್ ರೈನಾ (Samai Raina) ಅವರದ್ದು. ಚೆಸ್ ಸ್ಟ್ರೀಮರ್ ಆಗಿ ಬಳಿಕ ಯೂಟ್ಯೂಬ್ ಸ್ಟ್ರೀಮರ್, ಸ್ಟಾಂಡಪ್ ಕಮಿಡಿಯನ್, ಯೂಟ್ಯೂಬ್ ಶೋ ಹೋಸ್ಟ್ ಆಗಿ ಗುರುತಿಸಿಕೊಂಡಿದ್ದ ಸಮಯ್ ರೈನಾ, ಯೂಟ್ಯೂಬ್ನಲ್ಲಿ ಆರಂಭಿಸಿದ್ದ ‘ಇಂಡಿಯಾ ಗಾಟ್ ಲೇಟೆಂಟ್’ ಶೋ ಭಾರಿ ದೊಡ್ಡ ಹಿಟ್ ಆಗಿತ್ತು. ಒಂದೇ ದಿನಕ್ಕೆ ಕೋಟ್ಯಂತರ ವೀವ್ಸ್ ಅನ್ನು ಈ ಶೋ ಗಳಿಸುತ್ತಿತ್ತು. ಆದರೆ ಯಾರೋ ಮಾಡಿದ ತಪ್ಪಿನಿಂದಾಗಿ ಶೋ ಅನ್ನು ಬಂದ್ ಮಾಡಿದ್ದು, ಮಾತ್ರವಲ್ಲದೆ ಹಳೆಯ ಎಲ್ಲ ವಿಡಿಯೋಗಳನ್ನು ಡಿಲೀಟ್ ಮಾಡಬೇಕಾಯ್ತು ಸಮಯ್ ರೈನಾ. ಪೊಲೀಸ್ ಎಫ್ಐಆರ್, ಹಲವು ಕೇಸುಗಳ ಬಳಿಕ ಈ ಶೋ ಮತ್ತೆ ಪ್ರಾರಂಭವೇ ಆಗುವುದಿಲ್ಲ ಎಂದುಕೊಳ್ಳಲಾಗಿತ್ತು. ಆದರೆ ಇದೀಗ ಸ್ವತಃ ಸಮಯ್ ರೈನಾ, ‘ಇಂಡಿಯಾ ಗಾಟ್ ಲೇಟೆಂಟ್’ ಅನ್ನು ಮತ್ತೆ ಪ್ರಾರಂಭಿಸುವುದಾಗಿ ಹೇಳಿದ್ದಾರೆ.
ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ‘ಇಂಡಿಯಾ ಗಾಟ್ ಲೇಟೆಂಟ್’ ಮೇಲೆ ಕೇಸು ದಾಖಲಾಗಿತ್ತು. ಶೋಗೆ ಅತಿಥಿಯಾಗಿ ಆಗಮಿಸಿದ್ದ ಮತ್ತೊಬ್ಬ ಯೂಟ್ಯೂಬರ್ ರಣ್ವೀರ್ ಅಲ್ಹಾಬಾದಿಯಾ ಹೇಳಿದ್ದ ಒಂದು ಕೆಟ್ಟ ಜೋಕಿನಿಂದಾಗಿ ಶೋ ಮೇಲೆ ಹಾಗೂ ಶೋನಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಹಲವರ ಮೇಲೆ ಹಲವಾರು ಕೇಸುಗಳು ದಾಖಲಾಗಿದ್ದವು. ಸಮಯ್ ರೈನಾ, ಸಹ ಆಗಿನಿಂದ ‘ಇಂಡಿಯಾ ಗಾಟ್ ಲೇಟೆಂಟ್’ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ, ಆದರೆ ಇದೀಗ ತಮ್ಮ ಹೊಸ ಸ್ಟಾಂಡಪ್ ನಲ್ಲಿ ‘ಇಂಡಿಯಾ ಗಾಟ್ ಲೇಟೆಂಟ್’ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
‘ನಾನು ಬಯಸಿದ್ದರೂ ಸಹ ‘ಇಂಡಿಯಾ ಗಾಟ್ ಲೇಟೆಂಟ್’ ಅನ್ನು ಅದು ಅಷ್ಟು ಜನಪ್ರಿಯತೆ ಇದ್ದಾಗ ಮುಕ್ತಾಯ ಮಾಡಲು ಆಗುತ್ತಿರಲಿಲ್ಲ, ಆದರೆ ಈಗ ಮುಕ್ತಾಯ ಆಗಿರುವುದು ಸೀಸನ್ 1 ಮಾತ್ರ’ ಎಂದಿದ್ದಾರೆ. ಆ ಮೂಲಕ ‘ಇಂಡಿಯಾ ಗಾಟ್ ಲೇಟೆಂಟ್ ಸೀಸನ್ 2’ ಬರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ ಸಮಯ್ ರೈನಾ.
‘ಇಂಡಿಯಾ ಗಾಟ್ ಲೇಟೆಂಟ್’ ವಿವಾದ ಆದಾಗ ಅನುಭವಿಸಿದ ಕಷ್ಟಗಳ ಬಗ್ಗೆಯೂ ಮಾತನಾಡಿರುವ ಸಮಯ್ ರೈನಾ, ‘ನಾನು ಅಪ್ಲೋಡ್ ಮಾಡಿದ ವಿಡಿಯೋದಿಂದ ಹಲವಾರು ಮಂದಿ ತೊಂದರೆಗೆ ಒಳಗಾದರು. ಶೋ ನಡೆದ ಹ್ಯಾಬಿಟಾಟ್ ಜಾಗದ ಮಾಲೀಕ ಬಲರಾಜ್ ಮತ್ತು ಅವರ ವಯ್ಯಸ್ಸಾದ ಪೋಷಕರು ಪೊಲೀಸರಿಂದ ತೀವ್ರ ಕಷ್ಟ ಅನುಭವಿಸುವಂತಾಯ್ತು. ರಣ್ವೀರ್ ಅವರ ತಾಯಿಯ ಕ್ಲಿನಿಕ್ ಮೇಲೆ ದಾಳಿ ಮಾಡಲಾಯ್ತು, ಅಪೂರ್ವಗೆ ಕೊಲೆ ಬೆದರಿಕೆಗಳು ಬಂದವು. ನನ್ನ ಮೇಲೆ ಹಲವಾರು ಎಫ್ಐಆರ್ಗಳು ದಾಖಲಾದವು, ಹ್ಯಾಬಿಟಾಟ್ ಅನ್ನು ಒಡೆದು ಹಾಕಿದರು’ ಎಂದೆಲ್ಲ ನೋವಿನಿಂದ ಸಮಯ್ ರೈನಾ ಹೇಳಿದ್ದಾರೆ.
ಆ ಕಷ್ಟದ ಸಮಯದಲ್ಲಿ ತಮ್ಮ ವಿರುದ್ಧ ತಿರುಗಿ ಬಿದ್ದಿದ್ದ ಮೀಡಿಯಾದವರು, ರಾಜಕಾರಣಿಗಳು ವಿಶೇಷವಾಗಿ ನ್ಯೂಸ್ ಚಾನೆಲ್ಗಳವರಿಗೆ ಸಮಯ್ ರೈನಾ ತಮ್ಮ ಹೊಸ ಸ್ಟಾಂಡಪ್ನಲ್ಲಿ ತಿರುಗೇಟು ನೀಡಿದ್ದಾರೆ. ಸಮಯ್ ರೈನಾ, ‘ಇಂಡಿಯಾ ಗಾಟ್ ಲೇಟೆಂಟ್ 2’ ಮಾಡುತ್ತಿರುವುದನ್ನು ನೆಟ್ಟಿಗರು ಸ್ವಾಗತಿಸಿದ್ದಾರೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೊಸ ಯುಗ ಆರಂಭವಾಗಿದೆ. ಈ ಯುಗಕ್ಕೆ ನಾಂದಿಯಾಡಿರುವುದು ವೈಭವ್ ಸೂರ್ಯವಂಶಿ. ಅದು ಸಹ ಜಸ್ಪ್ರೀತ್ ಬುಮ್ರಾ (Jasprit bumrah) ಅವರ ಒಂದೇ ಓವರ್ನಲ್ಲಿ 2 ಸಿಕ್ಸ್ ಸಿಡಿಸುವ ಮೂಲಕ. ಈ ಮೂಲಕ ಬುಮ್ರಾಗೆ ಪವರ್ಪ್ಲೇನಲ್ಲಿ 2 ಸಿಕ್ಸ್ ಬಾರಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಇತ್ತ ಬುಮ್ರಾ ಓವರ್ನಲ್ಲಿ ವೈಭವ್ 2 ಸಿಕ್ಸ್ ಸಿಡಿಸುತ್ತಿದ್ದಂತೆ, ಅತ್ತ ಜಸ್ಪ್ರೀತ್ ವಿರುದ್ಧ ಐಪಿಎಲ್ನಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟರ್ ಯಾರು ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಇಲ್ಲಿದೆ ಉತ್ತರ…
ಎಬಿ ಡಿವಿಲಿಯರ್ಸ್: ಜಸ್ಪ್ರೀತ್ ಬುಮ್ರಾ ಓವರ್ನಲ್ಲಿ ಐಪಿಎಲ್ನಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ದಾಖಲೆ ಆರ್ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಹೆಸರಿನಲ್ಲಿದೆ. 13 ಇನಿಂಗ್ಸ್ಗಳಲ್ಲಿ ಬುಮ್ರಾರನ್ನು ಎದುರಿಸಿದ್ದ ಎಬಿಡಿ ಒಟ್ಟು 8 ಸಿಕ್ಸ್ ಸಿಡಿಸಿ ಈ ದಾಖಲೆ ನಿರ್ಮಿಸಿದ್ದಾರೆ.
ವಿರಾಟ್ ಕೊಹ್ಲಿ: ಎಬಿಡಿ ಬಳಿಕ ಬುಮ್ರಾ ಎಸೆತಗಳಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ್ದು ವಿರಾಟ್ ಕೊಹ್ಲಿ. ಕಿಂಗ್ ಕೊಹ್ಲಿ 17 ಇನಿಂಗ್ಸ್ಗಳಲ್ಲಿ ಬುಮ್ರಾ ಅವರನ್ನು ಎದುರಿಸಿದ್ದಾರೆ. ಈ ವೇಳೆ 6 ಸಿಕ್ಸ್ ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.
ಜೆಪಿ ಡುಮಿನಿ: ಸೌತ್ ಆಫ್ರಿಕಾದ ಸ್ಫೋಟಕ ದಾಂಡಿಗ ಜೆಪಿ ಡುಮಿನಿ ಐಪಿಎಲ್ನಲ್ಲಿ ಜಸ್ಪ್ರೀತ್ ಬುಮ್ರಾ ಅವರನ್ನು 4 ಇನಿಂಗ್ಸ್ಗಳಲ್ಲಿ ಎದುರಿಸಿದ್ದಾರೆ. ಈ ವೇಳೆ 6 ಸಿಕ್ಸ್ ಸಿಡಿಸಿದ್ದಾರೆ. ಈ ಮೂಲಕ ಬುಮ್ರಾ ಎಸೆತಗಳಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಬೆಂಗಳೂರು, ಏಪ್ರಿಲ್ 08: ಹೆಂಡತಿಯ ಅಕ್ರಮ ಸಂಬಂಧಕ್ಕೆ (Extramarital Affair)ಗಂಡ ಬಲಿಯಾದ ಘಟನೆ ಮಾರ್ಚ್ 26 ರಂದು ಬೊಮ್ಮಸಂದ್ರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪತ್ನಿಯ ಪ್ರಿಯಕರ ಆಕೆಯ ಪತಿಯೊಂದಿಗೆ ಸ್ನೇಹ ಬೆಳೆಸಿ, ಮಧ್ಯಪಾನ ಮಾಡಿಸಿ ಕೊನೆಗೆ ಚಾಕುವಿನಿಂದ ಕತ್ತು ಸೀಳಿ ಆತನ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮದ್ಯಪಾನ ಮಾಡಿಸಿ ಕತ್ತು ಸೀಳಿದ
ಮೃತ ವ್ಯಕ್ತಿಯನ್ನು 42 ವರ್ಷದ ಸುನಿಲ್ ನಾಯಕ್ ಎಂದು ಗುರುತಿಸಲಾಗಿದೆ. ಆರೋಪಿ ಬಸುದೇವ್ ಮಲಿಕ್ ಮತ್ತು ಸುನಿಲ್ ನಾಯಕ್ ಅವರ ಪತ್ನಿ ಪುಷ್ಪ ನಡುವೆ ಅಕ್ರಮ ಸಂಬಂಧವಿತ್ತು ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಮಲಿಕ್, ಸುನಿಲ್ ನಾಯಕ್ ಜೊತೆ ಸ್ನೇಹ ಬೆಳೆಸಿ, ಅವರೊಂದಿಗೆ ಮದ್ಯಪಾನ ಮಾಡುತ್ತಿದ್ದನು. ಬಳಿಕ ಸೂಕ್ತ ಸಂದರ್ಭ ನೋಡಿಕೊಂಡು ಸುನಿಲ್ ನಾಯಕ್ ಮೇಲೆ ದಾಳಿ ನಡೆಸಿ, ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಮಾರ್ಚ್ 26ರಂದು ಘಟನೆ ನಡೆದಿದ್ದು, ಮಾಲಿಕ್ ಚಾಕುವಿನಿಂದ ಸುನಿಲ್ ನಾಯಕ್ ಅವರ ಕತ್ತು ಕತ್ತರಿಸಿ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ, ಬೆಂಗಳೂರು ನಗರದ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಸಮೀಪದ ಬಾರ್ ಬಳಿ ಎಸೆದು ಪರಾರಿಯಾಗಿದ್ದಾನೆ. ಘಟನೆ ಬೆಳಕಿಗೆ ಬಂದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103(1) ಅಡಿಯಲ್ಲಿ ಹತ್ಯೆ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಹತ್ಯೆಗೆ ಬಳಸಿದ ಆಯುಧವನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿರುವ ಸಾಧ್ಯತೆ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ.
ನವದೆಹಲಿ, ಏಪ್ರಿಲ್ 8: ಭಾರತೀಯ ರಿಸರ್ವ್ ಬ್ಯಾಂಕ್ನ ಮಾನಿಟರಿ ಪಾಲಿಸಿ ಸಮಿತಿಯು (RBI MPC meeting) ನಿರೀಕ್ಷೆಯಂತೆ ರಿಪೋ ದರದ ಯಥಾಸ್ಥಿತಿ ಮುಂದುವರಿಸಲು ನಿರ್ಧರಿಸಿದೆ. ಮೊನ್ನೆಯಿಂದ ನಡೆದ ಆರ್ಬಿಐ ಎಂಪಿಸಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರೊಂದಿಗೆ ಆರ್ಬಿಐನ ರಿಪೋ ದರ ಅಥವಾ ಬಡ್ಡಿದರವು (Repo Rate) ಶೇ. 5.25ರಲ್ಲಿ ಮುಂದುವರಿಯಲಿದೆ. ಪಶ್ಚಿಮ ಏಷ್ಯಾ ಯುದ್ಧದ ಪರಿಣಾಮ ಹಣದುಬ್ಬರ ಏರಿಕೆಯಾಗುವ ಸಾಧ್ಯತೆ ಇದ್ದರಿಂದ ಬಡ್ಡಿದರ ಇಳಿಸದೇ ಇರುವ ತೀರ್ಮಾನವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಎಂಪಿಸಿ ಸಭೆ ಬಳಿಕ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಪತ್ರಿಕಾಗೋಷ್ಠಿ ಕರೆದು ಪಾಲಿಸಿ ನಿರ್ಧಾರಗಳನ್ನು ಪ್ರಕಟಿಸಿದರು. ಹಾಗೆಯೇ, 2026-27ರ ವರ್ಷಕ್ಕೆ ಜಿಡಿಪಿ ಬೆಳವಣಿಗೆ ಮತ್ತು ಹಣದುಬ್ಬರ ಎಷ್ಟಾಗಬಹುದು ಎಂದು ಮಾಡಲಾಗಿರುವ ಅಂದಾಜನ್ನೂ ಬಹಿರಂಗಪಡಿಸಿದರು.
ಈ ಹಣಕಾಸು ವರ್ಷದಲ್ಲಿ (2026-27) ಹಣದುಬ್ಬರ ಶೇ. 4.6 ಇರಬಹುದು ಎಂದು ಆರ್ಬಿಐ ಪ್ರೊಜೆಕ್ಟ್ ಮಾಡಿದೆ. ಮೊದಲ ಕ್ವಾರ್ಟರ್ನಲ್ಲಿ ಶೇ. 4, ಎರಡನೇ ಕ್ವಾರ್ಟರ್ನಲ್ಲಿ ಶೇ. 4.4, ಮೂರನೇ ಕ್ವಾರ್ಟರ್ನಲ್ಲಿ ಶೇ. 5.2, ನಾಲ್ಕನೇ ಕ್ವಾರ್ಟರ್ನಲ್ಲಿ ಶೇ. 4.7ರಷ್ಟು ಹಣದುಬ್ಬರ ಇರಬಹುದು ಎನ್ನುವುದು ಆರ್ಬಿಐ ಎಂಪಿಸಿಯಲ್ಲಿ ಬಂದಿರುವ ಅಭಿಪ್ರಾಯ.
ಬೆಂಗಳೂರು, ಏ.8: ನಗರದಲ್ಲಿ ಹೆಚ್ಚುತ್ತಿರುವ ಬೇಸಿಗೆಯ ಶಾಖದಿಂದ ಪಾರಾಗಲು ಮನೆಯ ಮುಖ್ಯ ಬಾಗಿಲನ್ನು ತೆರೆದಿಟ್ಟಿದ್ದೇ ಮಹಿಳೆಯೊಬ್ಬರಿಗೆ ಮುಳುವಾಗಿದೆ. ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆನೆಪಾಳ್ಯದಲ್ಲಿ ಈ ಘಟನೆ ನಡೆದಿದ್ದು, ಕಳ್ಳರು ಮಾಂಗಲ್ಯ ಸರ ಮತ್ತು ಮೊಬೈಲ್ಗಳನ್ನು ದೋಚಿದ್ದಾರೆ.
ಅಶೋಕನಗರದ ನಿವಾಸಿ ಶೈಲಜಾ ಎಂಬುವವರು ಅನಾರೋಗ್ಯದಿಂದ ಬಳಲುತ್ತಿದ್ದರು. ಶನಿವಾರ ಮುಂಜಾನೆ ಸುಮಾರು 2:30ರ ಸುಮಾರಿಗೆ ಮನೆಯೊಳಗೆ ಗಾಳಿ ಬರಲಿ ಎಂಬ ಕಾರಣಕ್ಕೆ ಮುಖ್ಯ ಬಾಗಿಲನ್ನು ತೆರೆದಿಟ್ಟು ಗಾಢ ನಿದ್ರೆಗೆ ಜಾರಿದ್ದರು. ಇದೇ ಸಮಯಕ್ಕೆ ಹೊಂಚು ಹಾಕುತ್ತಿದ್ದ ಕಳ್ಳರು ಮನೆಯೊಳಗೆ ನುಗ್ಗಿ, ಅವರ ಪಕ್ಕದಲ್ಲೇ ಇದ್ದ 18 ಗ್ರಾಂ ತೂಕದ ಮಾಂಗಲ್ಯ ಸರ ಮತ್ತು ಎರಡು ಮೊಬೈಲ್ ಫೋನ್ಗಳನ್ನು ಅಪಹರಿಸಿದ್ದಾರೆ. ಕಳುವಾದ ಒಟ್ಟು ಮೌಲ್ಯ ಸುಮಾರು 1.5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಬೆಳಿಗ್ಗೆ 6 ಗಂಟೆಗೆ ಎದ್ದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಮುಂಜಾನೆ 2:25ರ ಸುಮಾರಿಗೆ ಬರಿಗಾಲಿನಲ್ಲಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬ ಸಾಲು ಸಾಲು ಮನೆಗಳ ಬಾಗಿಲನ್ನು ತಳ್ಳುತ್ತಿರುವುದು ಕಂಡುಬಂದಿದೆ. ಶೈಲಜಾ ಅವರ ಮನೆಯ ಬಾಗಿಲು ತೆರೆದಿದ್ದರಿಂದ ಸುಲಭವಾಗಿ ಒಳನುಗ್ಗಿ ಕೃತ್ಯ ಎಸಗಿದ್ದಾನೆ.
ಘಟನೆ ನಡೆದ ಕೂಡಲೇ ನಾನು ಪೊಲೀಸರಿಗೆ ಮಾಹಿತಿ ನೀಡಿದೆ. ಆದರೆ ಎಫ್ಐಆರ್ (FIR) ದಾಖಲಿಸಲು ಪೊಲೀಸರು ಒಂದು ದಿನ ಇಡೀ ಕಾಯುವಂತೆ ಮಾಡಿದರು ಎಂದು ಶೈಲಜಾ ಅವರು ಪೊಲೀಸರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶೈಲಜಾ ಅವರು ಈ ಹಿಂದೆ ಸ್ಕಿನ್ಕೇರ್ ಕಂಪನಿಯಲ್ಲಿ ಟೀಮ್ ಲೀಡರ್ ಆಗಿ ಕೆಲಸ ಮಾಡುತ್ತಿದ್ದರು, ಇತ್ತೀಚೆಗೆ ಆರೋಗ್ಯದ ಕಾರಣದಿಂದ ಕೆಲಸ ಬಿಟ್ಟಿದ್ದರು.
ಇನ್ನು ಈ ಬಗ್ಗೆ ಪೊಲೀಸರು ಸಾರ್ವಜನಿಕರಿಗೆ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ರಾತ್ರಿ ವೇಳೆ ಎಷ್ಟೇ ಸೆಖೆಯಿದ್ದರೂ ಮನೆಯ ಮುಖ್ಯ ಬಾಗಿಲನ್ನು ಲಾಕ್ ಮಾಡುವುದನ್ನು ಮರೆಯಬೇಡಿ ಎಂದು ಹೇಳಿದ್ದಾರೆ. ಕಿಟಕಿಗಳಿಗೆ ಗಟ್ಟಿಮುಟ್ಟಾದ ಗ್ರಿಲ್ ಅಳವಡಿಸಿ. ಬೆಲೆಬಾಳುವ ಚಿನ್ನಾಭರಣ ಮತ್ತು ಮೊಬೈಲ್ಗಳನ್ನು ಮಲಗುವಾಗ ನಿಮ್ಮ ಪಕ್ಕದಲ್ಲಿ ಅಥವಾ ಕಿಟಕಿಯ ಹತ್ತಿರ ಇಡಬೇಡಿ. ಮನೆಯ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು ಸುರಕ್ಷಿತ ಎಂದು ಸಲಹೆಗಳನ್ನು ನೀಡಿದ್ದಾರೆ.
ಕಸ ಗುಡಿಸುವುದು ಕೇವಲ ಸ್ವಚ್ಛತೆಯಲ್ಲ, ಅದು ಮನೆಗೆ ಧನಾತ್ಮಕ ಶಕ್ತಿಯನ್ನು ಆಕರ್ಷಿಸುವ ಒಂದು ಪ್ರಮುಖ ಕ್ರಿಯೆಯಾಗಿದೆ. ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಮತ್ತು ಧನ ಸಂಪತ್ತು ನೆಲೆಸಲು ಕಸ ಗುಡಿಸುವ ದಿಕ್ಕು ಮತ್ತು ಸಮಯ ಅತ್ಯಂತ ಮಹತ್ವದ್ದಾಗಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಗೆ ನಾಲ್ಕು ಮುಖ್ಯ ದಿಕ್ಕುಗಳು (ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ) ಮತ್ತು ನಾಲ್ಕು ಉಪ ದಿಕ್ಕುಗಳು (ಈಶಾನ್ಯ, ಆಗ್ನೇಯ, ವಾಯುವ್ಯ, ನೈರುತ್ಯ) ಇರುತ್ತವೆ. ಬ್ರಹ್ಮಸ್ಥಾನದ ಜೊತೆಗೆ, ಈ ಎಲ್ಲಾ ದಿಕ್ಕುಗಳು ವಿಭಿನ್ನ ಧನಾಕರ್ಷಣ ಶಕ್ತಿಗಳನ್ನು ಹೊಂದಿರುತ್ತವೆ.
ಗುರೂಜಿಯವರು ಹೇಳುವಂತೆ, ಮನೆಯಲ್ಲಿ ಕಸ ಗುಡಿಸುವಾಗ ಈಶಾನ್ಯ (North-East) ದಿಕ್ಕಿನಿಂದ ಪ್ರಾರಂಭಿಸಬೇಕು. ನಂತರ ಆಗ್ನೇಯ (South-East) ದಿಕ್ಕಿಗೆ ಸಾಗಿ, ವಾಯುವ್ಯ (North-West) ದಿಕ್ಕಿನ ಮೂಲಕ ಕಸ ಗುಡಿಸುವುದನ್ನು ನೈರುತ್ಯ (South-West) ದಿಕ್ಕಿನಲ್ಲಿ ಪೂರ್ಣಗೊಳಿಸಬೇಕು. ಈ ನಿರ್ದಿಷ್ಟ ವಿಧಾನವು ಮನೆಗೆ ಅದೃಷ್ಟ, ನೆಮ್ಮದಿ, ಸುಖ, ಶಾಂತಿ ಮತ್ತು ಧನಯೋಗವನ್ನು ತರುತ್ತದೆ ಎಂದು ಹೇಳಲಾಗುತ್ತದೆ. ನಿಮ್ಮ ಮನೆಯ ಬಾಗಿಲು ಯಾವುದೇ ದಿಕ್ಕಿಗೆ ಇದ್ದರೂ, ಈಶಾನ್ಯದಿಂದ ಪ್ರಾರಂಭಿಸಿ ನೈರುತ್ಯದಲ್ಲಿ ಕಸ ಗುಡಿಸುವುದನ್ನು ಮುಗಿಸಬೇಕು. ಗುಡಿಸಿದ ಕಸವನ್ನು ಎಂದಿಗೂ ಮುಖ್ಯ ದ್ವಾರದ ಬಳಿ ಹಾಕಬಾರದು.
ಕಸ ಗುಡಿಸುವ ಸಮಯದ ಕುರಿತು ಸಹ ಶಾಸ್ತ್ರಗಳಲ್ಲಿ ನಿರ್ದಿಷ್ಟ ನಿಯಮಗಳಿವೆ. ಬೆಳಗಿನ ಜಾವ ಸೂರ್ಯೋದಯಕ್ಕೆ ಮುಂಚೆ ಕಸ ಗುಡಿಸುವುದು ಅತ್ಯಂತ ಶುಭ. ಸೂರ್ಯೋದಯದ ನಂತರ ಕಸ ಗುಡಿಸುವುದು ಅಷ್ಟು ಶುಭಕರವಲ್ಲ. ಹಾಗೆಯೇ, ಸಂಧ್ಯಾಕಾಲದಲ್ಲಿ, ಸೂರ್ಯಾಸ್ತದ ನಂತರ ಮನೆಯಲ್ಲಿ ಕಸ ಗುಡಿಸಬಾರದು. ಸಂಜೆ ಮಹಾಲಕ್ಷ್ಮಿಯು ಮನೆಗೆ ಆಗಮಿಸುವ ಸಮಯವೆಂದು ನಂಬಲಾಗಿದೆ. ಈ ಸಮಯದಲ್ಲಿ ಕಸ ಗುಡಿಸುವುದು ಒಳ್ಳೆಯದಲ್ಲ. ಅನಿವಾರ್ಯ ಅಥವಾ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಈ ನಿಯಮಗಳನ್ನು ಸಡಿಲಗೊಳಿಸಬಹುದು.
ಪೊರಕೆಯ ಬಳಕೆ ಮತ್ತು ನಿರ್ವಹಣೆ ಕುರಿತು ಸಹ ಕೆಲವು ನಿಯಮಗಳಿವೆ. ಪೊರಕೆಯನ್ನು ಎಂದಿಗೂ ತುಳಿಯಬಾರದು. ಅದನ್ನು ಗೋಡೆಗೆ ಒರಗಿಸಿ ನಿಲ್ಲಿಸುವುದು ಅಥವಾ ಮೇಲ್ಮುಖವಾಗಿ ಇಡುವುದು ಶುಭವಲ್ಲ. ಬದಲಿಗೆ, ಪೊರಕೆಯನ್ನು ಅಡ್ಡಲಾಗಿ, ಯಾರಿಗೂ ಕಾಣಿಸದ ಸ್ಥಳದಲ್ಲಿ ಇಡಬೇಕು. ಅರ್ಧ ಮುರಿದ ಅಥವಾ ಹಳೆಯದಾದ ಪೊರಕೆಯನ್ನು ಬಳಸಿ ಕಸ ಗುಡಿಸುವುದು ಅಶುಭಕರ.
ವಾಸ್ತು ಪ್ರಕಾರ, ಸಾಮಾನ್ಯವಾಗಿ ಮನೆಯಲ್ಲಿ ನೀರು ಹರಿಯುವ ದಿಕ್ಕು (ನೈರುತ್ಯದಿಂದ ಈಶಾನ್ಯಕ್ಕೆ) ಅಥವಾ ಎತ್ತರದ ಪ್ರದೇಶಗಳು (ದಕ್ಷಿಣ ಮತ್ತು ಪಶ್ಚಿಮದಲ್ಲಿ ಹೆಚ್ಚು ಎತ್ತರ, ಉತ್ತರ ಮತ್ತು ಪೂರ್ವದಲ್ಲಿ ಕಡಿಮೆ ಎತ್ತರ) ಬೇರೆ ನಿಯಮಗಳನ್ನು ಹೊಂದಿದ್ದರೂ, ಕಸ ಗುಡಿಸುವ ವಿಷಯದಲ್ಲಿ ಈಶಾನ್ಯದಿಂದ ಪ್ರಾರಂಭಿಸಿ ನೈರುತ್ಯದಲ್ಲಿ ಪೂರ್ಣಗೊಳಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಏ. 8: ಬೆಂಗಳೂರಿನ ರಸ್ತೆಗಳಲ್ಲಿ ಪ್ರತಿದಿನ ಸುಮಾರು 2,000 ಹೊಸ ವಾಹನಗಳು ಸೇರ್ಪಡೆಯಾಗುತ್ತಿವೆ. ಈ ಹೆಚ್ಚುತ್ತಿರುವ ಒತ್ತಡವನ್ನು ನಿಭಾಯಿಸಲು ಬೆಂಗಳೂರು ಸಂಚಾರ ಪೊಲೀಸರು 35 ಫ್ಲೈಓವರ್ಗಳು, 25 ಅಂಡರ್ಪಾಸ್ಗಳು ಮತ್ತು 101 ಸ್ಕೈವಾಕ್ಗಳನ್ನು ಒಳಗೊಂಡ ಬೃಹತ್ ಯೋಜನೆಯನ್ನು ಬೃಹತ್ ಬೆಂಗಳೂರು ಪ್ರಾಧಿಕಾರಕ್ಕೆ (GBA) ಸಲ್ಲಿಸಿದ್ದಾರೆ.
ಪೂರ್ವ ಬೆಂಗಳೂರಿನ ಮಹದೇವಪುರ ಮತ್ತು ವೈಟ್ಫೀಲ್ಡ್ ಭಾಗಗಳಲ್ಲಿ ಅತಿ ಹೆಚ್ಚು ಟ್ರಾಫಿಕ್ ಒತ್ತಡವಿದ್ದು, ಇಲ್ಲಿ ಹೆಚ್ಚಿನ ಫ್ಲೈಓವರ್ ಮತ್ತು ಪಾದಚಾರಿ ಮೂಲಸೌಕರ್ಯಗಳಿಗೆ ಒತ್ತು ನೀಡಲಾಗಿದೆ. ಹೆಬ್ಬಾಳ, ಸಾರಕ್ಕಿ ಸರ್ಕಲ್ ಮತ್ತು ಬನ್ನೇರುಘಟ್ಟ ರಸ್ತೆಯ ದಾಲ್ಮಿಯಾ ಜಂಕ್ಷನ್ ಸೇರಿದಂತೆ 25 ಪ್ರಮುಖ ಜಂಕ್ಷನ್ಗಳನ್ನು ಅಂಡರ್ಪಾಸ್ ಮೂಲಕ ಸಿಗ್ನಲ್ ಮುಕ್ತಗೊಳಿಸಲು ಯೋಜಿಸಲಾಗಿದೆ.
ವರ್ತೂರು ಕೋಡಿ, ದೊಮ್ಮಸಂದ್ರ, ಗುಂಜೂರು, ಎಚ್ಎಎಲ್ ಹಳೇ ವಿಮಾನ ನಿಲ್ದಾಣ ರಸ್ತೆ ಮತ್ತು ಯಲಹಂಕ ಭಾಗಗಳಲ್ಲಿ ಹೊಸ ಫ್ಲೈಓವರ್ಗಳನ್ನು ಪ್ರಸ್ತಾಪಿಸಲಾಗಿದೆ. ನಗರದಲ್ಲಿ ವಾರ್ಷಿಕವಾಗಿ ಸುಮಾರು 200 ಪಾದಚಾರಿಗಳು ಅಪಘಾತದಲ್ಲಿ ಬಲಿಯಾಗುತ್ತಿದ್ದಾರೆ. ಇದನ್ನು ತಡೆಯಲು 101 ಹೊಸ ಸ್ಕೈವಾಕ್ಗಳು ಅನಿವಾರ್ಯ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇತರ ಸಣ್ಣ ಬದಲಾವಣೆಗಳು:
2,340 ಹೊಸ ಟ್ರಾಫಿಕ್ ಸೈನ್ಬೋರ್ಡ್ಗಳ ಅಳವಡಿಕೆ.
103 ಬಸ್ ನಿಲ್ದಾಣಗಳ ಸ್ಥಳಾಂತರ ಮತ್ತು 63 ಹೊಸ ಬಸ್ ಬೇಗಳ ನಿರ್ಮಾಣ.
ಅವೈಜ್ಞಾನಿಕವಾಗಿರುವ 84 ಸ್ಪೀಡ್ ಬ್ರೇಕರ್ಗಳ ತೆರವು.
ನೀರು ನಿಲ್ಲುವ 137 ಸ್ಥಳಗಳಲ್ಲಿ ಚರಂಡಿ ವ್ಯವಸ್ಥೆ ಸುಧಾರಣೆ.
ಬೃಹತ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಮಾತನಾಡಿ, “ಇದು ಅತ್ಯಂತ ವಿವರವಾದ ಆಡಿಟ್ ವರದಿಯಾಗಿದೆ. ಆದರೆ ಇಷ್ಟೊಂದು ದೊಡ್ಡ ಮಟ್ಟದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಭೂಸ್ವಾಧೀನ ಮತ್ತು ಹಣಕಾಸಿನ ಯೋಜನೆ ಬಹಳ ಮುಖ್ಯ. ಮೆಟ್ರೋ ಮತ್ತು ಉಪನಗರ ರೈಲು ಯೋಜನೆಗಳೊಂದಿಗೆ ಸಮನ್ವಯ ಸಾಧಿಸಿ ಕಾಮಗಾರಿ ನಡೆಸಲಾಗುವುದು,” ಎಂದು ತಿಳಿಸಿದ್ದಾರೆ.
ಟೆಹ್ರಾನ್, ಏಪ್ರಿಲ್ 08: ಅಮೆರಿಕ-ಇರಾನ್(Iran) ಅಂತೂ ಕದನವಿರಾಮಕ್ಕೆ ಒಪ್ಪಿಗೆ ನೀಡಿವೆ. ಇದರ ಪರಿಣಾಮವಾಗಿ ಹಾರ್ಮುಜ್ ಜಲಸಂಧಿಯನ್ನೂ ತೆರೆಯಲಾಗಿದೆ. ದ್ವಿಪಕ್ಷೀಯ ಕದನ ವಿರಾಮದಿಂದಾಗಿ ಇರಾನ್ ಮೇಲಿನ ಸಂಭಾವ್ಯ ದಾಳಿಗಳನ್ನು ಎರಡು ವಾರಗಳ ಕಾಲ ತಡೆಹಿಡಿಯಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಟ್ರಂಪ್ ಅವರ ನಿರ್ಧಾರಕ್ಕೆ ಅನುಗುಣವಾಗಿ ಅಮೆರಿಕ ಸೇನೆಯು ಇರಾನ್ ವಿರುದ್ಧದ ಎಲ್ಲಾ ಆಕ್ರಮಣಕಾರಿ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದೆ.
ಚೀನಾ ಮತ್ತು ಪಾಕಿಸ್ತಾನ ಜಂಟಿಯಾಗಿ ಅಮೆರಿಕದೊಂದಿಗೆ ಕದನ ವಿರಾಮಕ್ಕೆ ದಾರಿ ಕಂಡುಕೊಳ್ಳಲು ಇರಾನ್ಗೆ ಪ್ರೋತ್ಸಾಹ ನೀಡಿವೆ. ಮಾತುಕತೆ ನಡೆಯುತ್ತಿರುವಾಗ ಚೀನಾದ ಅಧಿಕಾರಿಗಳು ಇರಾನಿನ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದರು ಎಂದು ಮೂಲಗಳು ಸೂಚಿಸುತ್ತವೆ. ಪಾಕಿಸ್ತಾನ, ಟರ್ಕಿ ಮತ್ತು ಈಜಿಪ್ಟ್ ಸೇರಿದಂತೆ ಮಧ್ಯವರ್ತಿಗಳ ಮೂಲಕ ಚೀನಾ ಕೂಡ ಪ್ರಭಾವ ಬೀರಲು ಪ್ರಯತ್ನಿಸಿತು.
ಚೀನಾದ ವಿದೇಶಾಂಗ ಸಚಿವಾಲಯವು ಈ ವಿಷಯದ ಬಗ್ಗೆ ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಮಪ್ ಪಾಕಿಸ್ತಾನದಿಂದಲೇ ನಾವು ಕದನ ವಿರಾಮಕ್ಕೆ ಒಪ್ಪಿಗೆ ನೀಡಿರುವುದಾಗಿ ಹೇಳಿದ್ದಾರೆ.
ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಮತ್ತು ಪಾಕಿಸ್ತಾನಿ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರೊಂದಿಗೆ ಮಾತುಕತೆ ನಡೆಸಿದ ನಂತರವೇ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.
ಅಸೋಸಿಯೇಟೆಡ್ ಪ್ರೆಸ್ ಪ್ರಕಾರ, ಪಾಕಿಸ್ತಾನ, ಟರ್ಕಿ ಮತ್ತು ಈಜಿಪ್ಟ್ ಸೇರಿದಂತೆ ಮಧ್ಯವರ್ತಿಗಳ ಮೂಲಕ ಟೆಹ್ರಾನ್ ಅನ್ನು ಕದನ ವಿರಾಮದ ಹಾದಿಯತ್ತ ತಳ್ಳುವ ಮೂಲಕ ಚೀನಾ ಶಾಂತ ಆದರೆ ಪ್ರಭಾವಶಾಲಿ ಪಾತ್ರವನ್ನು ವಹಿಸಿದೆ. ಒಟ್ಟಾರೆಯಾಗಿ ತೆಗೆದುಕೊಂಡರೆ, ಕದನ ವಿರಾಮದ ಒತ್ತಡವು ಒಬ್ಬ ವ್ಯಕ್ತಿಯ ಪರಿಣಾಮವಾಗಿರಲಿಲ್ಲ, ಪಾಕಿಸ್ತಾನದ ಕೊನೆಯ ನಿಮಿಷದ ಮಧ್ಯಸ್ಥಿಕೆ, ಚೀನಾದ ಶಾಂತ ಒತ್ತಡದ ಪರಿಣಾಮ ಈಗೊಂದು ನಿರ್ಧಾರಕ್ಕೆ ಬರಲಾಗಿದೆ.
ಚೀನಾ ತನ್ನ ಒಳಗೊಳ್ಳುವಿಕೆಯ ಬಗ್ಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸದಿದ್ದರೂ, ಇರಾನ್ ಮೇಲೆ ತನ್ನ ಪ್ರಭಾವವನ್ನು ಬಳಸಿಕೊಳ್ಳಲು ಬೀಜಿಂಗ್ ಪಾಕಿಸ್ತಾನ, ಟರ್ಕಿ ಮತ್ತು ಈಜಿಪ್ಟ್ ಸೇರಿದಂತೆ ಮಧ್ಯವರ್ತಿಗಳ ಮೂಲಕ ಕೆಲಸ ಮಾಡುತ್ತಿದೆ ಎಂದು ಅಧಿಕಾರಿಯೊಬ್ಬರು ಬಹಿರಂಗಪಡಿಸಿದರು.
ಇಲ್ಲಿಯವರೆಗೆ, ಚೀನಾದ ವಿದೇಶಾಂಗ ಸಚಿವಾಲಯವು ಬೀಜಿಂಗ್ ಪಾತ್ರದ ಕುರಿತು ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಆದರೆ ವಾಷಿಂಗ್ಟನ್ನಲ್ಲಿರುವ ಚೀನೀ ರಾಯಭಾರ ಕಚೇರಿಯು, ಯುದ್ಧ ಪ್ರಾರಂಭವಾದಾಗಿನಿಂದ ಬೀಜಿಂಗ್ ಕೆಲಸ ಮಾಡುತ್ತಿದೆ ಎಂದು ಹೇಳಿದೆ.
ದೇಶದ ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳ ಮೇಲಿನ ದಾಳಿಯ ಬೆದರಿಕೆಯಿಂದ ಟ್ರಂಪ್ ಹಿಂದೆ ಸರಿದಿದ್ದಾರೆ. ಮೂವರು ಇರಾನಿನ ಅಧಿಕಾರಿಗಳ ಪ್ರಕಾರ, ಇರಾನ್ನ ಪ್ರಮುಖ ಮಿತ್ರ ರಾಷ್ಟ್ರವಾದ ಚೀನಾದ ಕೊನೆಯ ಕ್ಷಣದ ಹಸ್ತಕ್ಷೇಪದ ನಂತರ ಇರಾನ್ ಪಾಕಿಸ್ತಾನದ ಎರಡು ವಾರಗಳ ಕದನ ವಿರಾಮ ಪ್ರಸ್ತಾಪವನ್ನು ಒಪ್ಪಿಕೊಂಡಿತು ಎಂದು ಹೇಳಿದ್ದಾರೆ.
IPL 2026: ಐಪಿಎಲ್ 2026ರ ಬಹುನಿರೀಕ್ಷಿತ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ತಂಡವು ರಾಜಸ್ಥಾನ್ ರಾಯಲ್ಸ್ (RR) ವಿರುದ್ಧ 27 ರನ್ಗಳ ಸೋಲನುಭವಿಸಿದೆ. ಮಳೆಯ ಕಾರಣ ಕೇವಲ 11 ಓವರ್ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ಬರೋಬ್ಬರಿ 150 ರನ್ ಕಲೆಹಾಕಿದ್ದರು. ಈ ಕಠಿಣ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ 11 ಓವರ್ಗಳಲ್ಲಿ 123 ರನ್ಗಳಿಸಿ, 27 ರನ್ಗಳಿಂದ ಸೋಲೊಪ್ಪಿಕೊಂಡರು.
ಈ ಸೋಲಿನ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಐದಾರು ಎಸೆತಗಳನ್ನು ನಾವು ಉತ್ತಮವಾಗಿ ಎಸೆದಿದ್ದರೆ ಪಂದ್ಯ ಗೆಲ್ಲಬಹುದಿತ್ತು ಎಂದಿದ್ದರು. ಅಲ್ಲದೆ ಸೋಲಿಗೆ ಬೌಲರ್ಗಳ ಕಳಪೆ ಪ್ರದರ್ಶನ ಕಾರಣ ಎಂದಿದ್ದರು. ಅಷ್ಟಕ್ಕೂ ಈ ಸೋಲಿಗೆ ಕಾರಣಗಳೇನು ಎಂದು ನೋಡುವುದಾದರೆ…
ಬೌಲಿಂಗ್ ವಿಭಾಗದ ಸಂಪೂರ್ಣ ವೈಫಲ್ಯ: ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ವಿಭಾಗವು ಈ ಪಂದ್ಯದಲ್ಲಿ ಅತ್ಯಂತ ದುಬಾರಿಯಾಯಿತು. ಕೇವಲ 11 ಓವರ್ಗಳಲ್ಲಿ 150 ರನ್ ಬಿಟ್ಟುಕೊಟ್ಟಿದ್ದು (ಅಂದರೆ ಪ್ರತಿ ಓವರ್ಗೆ ಸರಾಸರಿ 13.63 ರನ್) ಸೋಲಿಗೆ ಮೊದಲ ಮತ್ತು ಮುಖ್ಯ ಕಾರಣ. ಜಸ್ಪ್ರೀತ್ ಬುಮ್ರಾ ಅಂತಹ ಅನುಭವಿ ಬೌಲರ್ ಕೂಡ 3 ಓವರ್ಗಳಲ್ಲಿ 32 ರನ್ ನೀಡಿ ವಿಕೆಟ್ ಪಡೆಯಲು ವಿಫಲರಾದರು. ದೀಪಕ್ ಚಹರ್ ಮತ್ತು ಟ್ರೆಂಟ್ ಬೌಲ್ಟ್ ತಮ್ಮ ತಲಾ ಒಂದು ಓವರ್ನಲ್ಲಿ 22 ರನ್ಗಳನ್ನು ಬಿಟ್ಟುಕೊಟ್ಟಿದ್ದು ತಂಡಕ್ಕೆ ದೊಡ್ಡ ಹೊಡೆತ ನೀಡಿತು.
ಪವರ್ಪ್ಲೇನಲ್ಲಿ ರಾಜಸ್ಥಾನ್ ಅಬ್ಬರ: ಪಂದ್ಯವು 11 ಓವರ್ಗಳಿಗೆ ಸೀಮಿತವಾಗಿದ್ದರಿಂದ ಮೊದಲ 3.2 ಓವರ್ಗಳು ಪವರ್ಪ್ಲೇ ಆಗಿತ್ತು. ಈ ಅವಧಿಯಲ್ಲಿ ರಾಜಸ್ಥಾನ್ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು 15 ವರ್ಷದ ವೈಭವ್ ಸೂರ್ಯವಂಶಿ ಮುಂಬೈ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. ಕೇವಲ 20 ಎಸೆತಗಳಲ್ಲಿ 59 ರನ್ ಚಚ್ಚಿದ ಈ ಜೋಡಿ, ಮುಂಬೈ ತಂಡವನ್ನು ಮಾನಸಿಕವಾಗಿ ಕುಗ್ಗಿಸಿತು.
ಆರಂಭಿಕ ಬ್ಯಾಟಿಂಗ್ ಕುಸಿತ: 151 ರನ್ಗಳ ಬೃಹತ್ ಗುರಿ ಬೆನ್ನಟ್ಟುವಾಗ ತಂಡಕ್ಕೆ ಭರ್ಜರಿ ಆರಂಭದ ಅಗತ್ಯವಿತ್ತು. ಆದರೆ ಮುಂಬೈ ಇಂಡಿಯನ್ಸ್ ತಂಡದ ಅನುಭವಿ ಆಟಗಾರರಾದ ರೋಹಿತ್ ಶರ್ಮಾ (5), ಸೂರ್ಯಕುಮಾರ್ ಯಾದವ್ (6) ಮತ್ತು ರಯಾನ್ ರಿಕೆಲ್ಟನ್ (8) ಕೇವಲ 23 ರನ್ ಆಗುವಷ್ಟರಲ್ಲಿ ಪೆವಿಲಿಯನ್ ಸೇರಿದರು. ಈ ಆರಂಭಿಕ ಕುಸಿತದಿಂದಾಗಿ ಮಧ್ಯಮ ಕ್ರಮಾಂಕದ ಮೇಲೆ ಒತ್ತಡ ಹೆಚ್ಚಾಯಿತು.
ದೊಡ್ಡ ಜೊತೆಯಾಟಗಳ ಕೊರತೆ: ಟಿ20 ಪಂದ್ಯಗಳಲ್ಲಿ ಕನಿಷ್ಠ ಒಂದು ದೊಡ್ಡ ಜೊತೆಯಾಟದ ಅಗತ್ಯವಿರುತ್ತದೆ. ಆದರೆ ಮುಂಬೈ ಇಂಡಿಯನ್ಸ್ ಪರ ಆರಂಭದಲ್ಲಿ ಅಂತಹ ಯಾವುದೇ ಜೊತೆಯಾಟ ಮೂಡಿಬಂದಿರಲಿಲ್ಲ. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ನಮನ್ ಧೀರ್ ಮತ್ತು ಶೆರ್ಫೇನ್ ರದರ್ಫೋರ್ಡ್ 17 ಎಸೆತಗಳಲ್ಲಿ 47 ರನ್ ಚಚ್ಚಿದ್ದರು. ಒಂದು ವೇಳೆ ಆರಂಭದಲ್ಲಿ ದೊಡ್ಡ ಜೊತೆಯಾಟ ಮೂಡಿಬಂದಿದ್ದರೆ ಅಂತಿಮ ಓವರ್ಗಳ ವೇಳೆ ಕಡಿಮೆ ಗುರಿ ಪಡೆಯಬಹುದಿತ್ತು.
ರಾಜಸ್ಥಾನ್ ಬೌಲರ್ಗಳ ಶಿಸ್ತುಬದ್ಧ ದಾಳಿ: ಮುಂಬೈ ಇಂಡಿಯನ್ಸ್ ಬ್ಯಾಟರ್ಗಳು ಒತ್ತಡದಲ್ಲಿದ್ದರೆ, ರಾಜಸ್ಥಾನ್ ರಾಯಲ್ಸ್ ಬೌಲರ್ಗಳು ಅದನ್ನು ಸಮರ್ಥವಾಗಿ ಬಳಸಿಕೊಂಡರು. ನಾಂಡ್ರೆ ಬರ್ಗರ್ (2/21) ಮತ್ತು ಸಂದೀಪ್ ಶರ್ಮಾ (2/26) ಅವರು ರನ್ ವೇಗಕ್ಕೆ ಕಡಿವಾಣ ಹಾಕಿದ್ದಲ್ಲದೆ, ಸಮಯಕ್ಕೆ ಸರಿಯಾಗಿ ವಿಕೆಟ್ ಪಡೆದರು. ರವಿ ಬಿಷ್ಣೋಯ್ ಅವರ ಸ್ಪಿನ್ ದಾಳಿಯು ಮುಂಬೈ ಬ್ಯಾಟರ್ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.
ಪವರ್ ಇಲ್ಲದ ಪವರ್ಪ್ಲೇ: ಈ ಪಂದ್ಯದಲ್ಲಿ ಪವರ್ಪ್ಲೇ 3.2 ಓವರ್ಗಳಿಗೆ ಸೀಮಿತವಾಗಿತ್ತು. ಇತ್ತ ರಾಜಸ್ಥಾನ್ ರಾಯಲ್ಸ್ ತಂಡವು ಪವರ್ಪ್ಲೇನಲ್ಲಿ ಕಲೆಹಾಕಿದ್ದು ಬರೋಬ್ಬರಿ 58 ರನ್ಗಳು. ಅದೇ ವೇಳೆ ಮುಂಬೈ ಇಂಡಿಯನ್ಸ್ ಕೇವಲ 34 ರನ್ಗಳು ಮಾತ್ರ. ಅಷ್ಟೇ ಅಲ್ಲದೆ ಮೊದಲ 5 ಓವರ್ಗಳಲ್ಲಿ ರಾಜಸ್ಥಾನ್ 80 ರನ್ ಗಳಿಸಿದರೆ, ಮುಂಬೈ ಇಂಡಿಯನ್ಸ್ ಕೇವಲ 46 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಅಂದರೆ ಮೊದಲ ಐದು ಓವರ್ಗಳಲ್ಲಿನ ರನ್ ವ್ಯತ್ಯಾಸವು ಮುಂಬೈ ಇಂಡಿಯನ್ಸ್ ಸೋಲಿಗೆ ಪ್ರಮುಖ ಕಾರಣವಾಯಿತು ಎಂದರೆ ತಪ್ಪಾಗಲಾರದು.