ನೆಲ್ಲೈ, ಏಪ್ರಿಲ್ 8: ತಮಿಳುನಾಡು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ತಮಿಳುನಾಡು ವಿಕ್ಟರಿ ಪಕ್ಷದ (ಟಿವಿಕೆ) ನಾಯಕ ವಿಜಯ್ (Vijay) ಪ್ರತಿ ಜಿಲ್ಲೆಯಲ್ಲಿಯೂ ಪ್ರಚಾರ ನಡೆಸುತ್ತಿದ್ದಾರೆ. ಇಂದು ಸುಮಾರು 11 ಕಿಲೋಮೀಟರ್ಗಳ ಕಾಲ ನಡೆದ ಚುನಾವಣಾ ರ್ಯಾಲಿಯಲ್ಲಿ ನಟ ವಿಜಯ್ ಅವರನ್ನು ದಾರಿಯುದ್ದಕ್ಕೂ ಸಾರ್ವಜನಿಕರು ಉತ್ಸಾಹದಿಂದ ಸ್ವಾಗತಿಸಿದರು. ವಿಜಯ್ ತಿರುಚ್ಚಿ ಪೂರ್ವ ಮತ್ತು ಪೆರಂಬೂರು ಎಂಬ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಎಲ್ಲಾ 234 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ತಮಿಳುನಾಡು ವಿಕ್ಟರಿ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಅವರು ತಮ್ಮ ಪ್ರಚಾರವನ್ನು ಮುಂದುವರೆಸುತ್ತಿದ್ದಾರೆ.
ಇಂದು ನೆಲ್ಲೈನಲ್ಲಿ ಸಾರ್ವಜನಿಕ ಸಭೆಗೆ ಅನುಮತಿ ನೀಡಿದ ನಂತರ ವಿಜಯ್ ಅವರು ಚೆನ್ನೈನಿಂದ ಬೆಳಗಿನ ವಿಮಾನದ ಮೂಲಕ ತೂತುಕುಡಿ ವಿಮಾನ ನಿಲ್ದಾಣವನ್ನು ತಲುಪಿದರು. ನಂತರ ಅವರು ನೆಲ್ಲೈ ಜಿಲ್ಲೆಯ ಕೆ.ಟಿ.ಸಿ. ನಗರ ಪ್ರದೇಶದ ಪಳಯಂಕೊಟ್ಟೈನಲ್ಲಿರುವ ಪ್ರಚಾರ ಸ್ಥಳಕ್ಕೆ ರಸ್ತೆ ಮೂಲಕ ಹೋದರು. ತಲೈಯುತ್ತು, ಥಚನಲ್ಲೂರು, ವಾಷರ್ಮನ್ಪೇಟೆ ಮತ್ತು ಪಳಯಂಕೊಟ್ಟೈ ಮೂಲಕ ಸುಮಾರು 11 ಕಿಲೋಮೀಟರ್ ದೂರವನ್ನು ಕ್ರಮಿಸಿ ರೋಡ್ ಶೋ ನಡೆಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕೊಡಗು, (ಏಪ್ರಿಲ್ 08): ಜಿಲ್ಲೆಯ ಅತ್ಯಂತ ಎತ್ತರದ ಶಿಖರ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ಹೋಗಿ ನಾಪತ್ತೆಯಾಗಿದ್ದ ಕೇರಳದ ಯುವತಿ ಶರಣ್ಯಾ ಕೊನೆಗೂ 4 ದಿನದ ಬಳಿಕ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ನಾಲ್ಕು ದಿನಗಳಿಂದ ದಟ್ಟಾರಣ್ಯದಲ್ಲಿ ಆಹಾರವಿಲ್ಲದೆ, ಕೇವಲ ಒಂದು ಬಾಟಲಿ ನೀರಿನ ಸಹಾಯದಿಂದ ಬದುಕುಳಿದಿದ್ದ ಈ ಸಾಹಸಿ ಯುವತಿಯನ್ನು ಏಪ್ರಿಲ್ 05ರಂದು ಪತ್ತೆ ಮಾಡಿ ಕಾಡಿನಿಂದ ಹೊರಗೆ ಕರೆದುಕೊಂಡು ಬರಲಾಗಿದೆ. ಇನ್ನು ದಟ್ಟಾರಣ್ಯದಲ್ಲಿ ಶರಣ್ಯಾ ದಾರಿ ತಪ್ಪಿದ್ದಿದ್ಹೇಗೆ? ಒಂದೇ ಬಾಟಲಿ ನೀರಿನಿಂದ ನಾಲ್ಕು ದಿನ ಬದುಕುಳಿದಿದ್ಹೆಗೆ? ನಾಲ್ಕು ದಿನದ ವನವಾಸವನ್ನು ಶರಣ್ಯಾ ಟಿವಿ9ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಸಾಮಾನ್ಯವಾಗಿ ಉಪ್ಪಿನ ಪ್ರಮಾಣ ಹೆಚ್ಚಿರುವ ಆಹಾರಗಳು ಆರೋಗ್ಯಕ್ಕೆ ಹಾನಿಕಾರಕವೆಂಬುದು ತಿಳಿದಿರುವ ವಿಚಾರ. ವಿಶೇಷವಾಗಿ ಹೈ ಬ್ಲಡ್ ಪ್ರೆಷರ್ (High Blood Pressure) ಸಮಸ್ಯೆ ಇರುವವರಿಗೆ ಉಪ್ಪು ಕಡಿಮೆ ಸೇವಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ಆದರೆ, ನಮಗೆ ಆರೋಗ್ಯಕರವಾಗಿ ಕಾಣುವ ಕೆಲವು ಆಹಾರಗಳಲ್ಲಿ ಕೂಡ ‘ಹಿಡನ್ ಸೋಡಿಯಂ’ ಇರುವುದರಿಂದ ಇದು ದೀರ್ಘಕಾಲದಲ್ಲಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಹಾಗಾದರೆ ಯಾವ ಆಹಾರಗಳಲ್ಲಿ ಈ ರೀತಿಯ ಹಿಡನ್ ಸೋಡಿಯಂ ಇರುತ್ತದೆ, ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಉಪ್ಪಿನ ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.
ಹಿಡನ್ ಸೋಡಿಯಂ ಎಂದರೇನು?
ಎಲ್ಲಾ ಉಪ್ಪಿನ ರುಚಿ ಇರುವ ಆಹಾರಗಳಲ್ಲಿ ಮಾತ್ರ ಸೋಡಿಯಂ ಇರುತ್ತದೆ ಎನ್ನುವುದು ತಪ್ಪು ಕಲ್ಪನೆ. ನಾವು ದಿನನಿತ್ಯ ಸೇವಿಸುವ ಕೆಲವು ಆಹಾರಗಳಲ್ಲಿ ಉಪ್ಪಿನ ರುಚಿ ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗದಿದ್ದರೂ, ಅವುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸೋಡಿಯಂ ಇರುತ್ತದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು “ಹಿಡನ್ ಸೋಡಿಯಂ” ಎಂದು ಕರೆಯಲಾಗುತ್ತದೆ. ಇದು ನಿಧಾನವಾಗಿ ದೇಹದಲ್ಲಿ ಜಮೆಯಾಗುತ್ತಾ ಬಿಪಿ ಮತ್ತು ಹೃದಯ ಸಂಬಂಧಿ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ.
ಹೆಚ್ಚಿನ ಜನರು ಬ್ರೆಡ್ ಅನ್ನು ಲಘು ಮತ್ತು ಆರೋಗ್ಯಕರ ಆಹಾರವೆಂದು ಭಾವಿಸುತ್ತಾರೆ. ಆದರೆ, ಒಂದು ಬ್ರೆಡ್ ಸ್ಲೈಸ್ನಲ್ಲೇ 150 ರಿಂದ 230 ಮಿಲಿಗ್ರಾಂ ಸೋಡಿಯಂ ಇರಬಹುದು. ಬೆಳಗಿನ ಉಪಾಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬ್ರೆಡ್ ಸೇವಿಸಿದರೆ ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಇದೇ ರೀತಿ, ಸಂಸ್ಕರಿಸಿದ ತಿಂಡಿಗಳಲ್ಲಿ ಉಪ್ಪು ಇರುತ್ತದೆ. ಇವು ಆರೋಗ್ಯಕರವೆಂದು ಭಾವಿಸಿ ಹೆಚ್ಚು ಸೇವಿಸುವುದರಿಂದ ಅನಾರೋಗ್ಯದ ಅಪಾಯ ಹೆಚ್ಚಬಹುದು ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದ ಪ್ಯಾಕೆಟ್ ಮೇಲಿರುವ ಸೋಡಿಯಂ ಪ್ರಮಾಣವನ್ನು ಗಮನಿಸಿ ಆಹಾರವನ್ನು ಆಯ್ಕೆ ಮಾಡುವುದು ಅತ್ಯಂತ ಮುಖ್ಯ.
ತಜ್ಞರ ಪ್ರಕಾರ, ಒಬ್ಬ ವ್ಯಕ್ತಿ ದಿನಕ್ಕೆ 5 ಗ್ರಾಂ ಗಿಂತ ಹೆಚ್ಚು ಉಪ್ಪು ಸೇವಿಸಬಾರದು. ಆದರೆ ಜನರು ಅರಿವಿಲ್ಲದೆ ಇದಕ್ಕಿಂತ ಹೆಚ್ಚು ಉಪ್ಪು ಸೇವಿಸುತ್ತಿದ್ದಾರೆ. ಬ್ರೆಡ್, ಸೀರಿಯಲ್ಗಳಂತಹ ಆಹಾರಗಳಿಂದಲೇ ಹೆಚ್ಚುವರಿ ಉಪ್ಪು ದೇಹಕ್ಕೆ ಸೇರುತ್ತಿದೆ. ಈ ರೀತಿ ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾದರೆ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ ಬಿಪಿ ಸಮಸ್ಯೆ ಇರುವವರು ಹೆಚ್ಚು ಉಪ್ಪು ಸೇವಿಸಿದರೆ ಅವರ ಆರೋಗ್ಯ ಇನ್ನಷ್ಟು ಹದಗೆಡಬಹುದು. ಹೆಲ್ತಿಯಾಗಿ ಕಾಣುವ ಆಹಾರಗಳಲ್ಲಿಯೂ ಹಿಡನ್ ಸೋಡಿಯಂ ಇರುವ ಸಾಧ್ಯತೆ ಇದೆ. ಆದ್ದರಿಂದ ಆಹಾರ ಸೇವಿಸುವಾಗ ಜಾಗ್ರತೆ ವಹಿಸಿ, ಲೇಬಲ್ ಪರಿಶೀಲಿಸುವ ಅಭ್ಯಾಸ ಬೆಳೆಸಿಕೊಳ್ಳುವುದು ಅತ್ಯಗತ್ಯ. ಇದು ಬಿಪಿ ಮತ್ತು ಹೃದಯ ಸಂಬಂಧಿ ಸಮಸ್ಯೆಗಳನ್ನು ತಪ್ಪಿಸಲು ಸಹಾಯಕವಾಗುತ್ತದೆ.
ಐಪಿಎಲ್ 2026 ರ 14 ನೇ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡದ ಪರ ಜೋಸ್ ಬಟ್ಲರ್ ಅಬ್ಬರದ ಬ್ಯಾಟಿಂಗ್ ಮಾಡಿ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಹಾಗೆಯೇ ಟಿ20 ಕ್ರಿಕೆಟ್ನಲ್ಲಿ 600 ಸಿಕ್ಸರ್ಗಳ ಗಡಿಯನ್ನು ದಾಟಿದರು.
ಜೋಸ್ ಬಟ್ಲರ್ ಕೇವಲ 27 ಎಸೆತಗಳಲ್ಲಿ 52 ರನ್ಗಳ ಬಿರುಸಿನ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್ನಲ್ಲಿ, ಬಟ್ಲರ್ ಕೇವಲ 24 ಎಸೆತಗಳಲ್ಲಿ ಅರ್ಧಶತಕ ತಲುಪಿದರು. 192.59 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ ಬಟ್ಲರ್ ಮೂರು ಬೌಂಡರಿಗಳು ಮತ್ತು ಐದು ಸಿಕ್ಸರ್ಗಳನ್ನು ಹೊಡೆದರು.
ಈ ಇನ್ನಿಂಗ್ಸ್ನಲ್ಲಿ, ಜೋಸ್ ಬಟ್ಲರ್ ಮತ್ತೊಂದು ಪ್ರಮುಖ ದಾಖಲೆಯನ್ನು ಸೃಷ್ಟಿಸಿದರು. ಈ ಪಂದ್ಯದಲ್ಲಿ 5 ಸಿಕ್ಸರ್ಗಳನ್ನು ಬಾರಿಸಿದ ಬಟ್ಲರ್ ಟಿ20 ಕ್ರಿಕೆಟ್ನಲ್ಲಿ ಒಟ್ಟು 600 ಸಿಕ್ಸರ್ಗಳ ಗಡಿ ದಾಟಿದರು. ಈ ಸಾಧನೆಯೊಂದಿಗೆ, ಅವರು ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ತಲುಪಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನೊಯ್ಡಾ, ಏಪ್ರಿಲ್ 8: ಉತ್ತರ ಪ್ರದೇಶದ ನೊಯ್ಡಾದಲ್ಲಿ (Noida) ನೀರು ತುಂಬಿದ ಗುಂಡಿಯಲ್ಲಿ ಬಿದ್ದು ಕಾಲೇಜು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ದುರಂತ ಘಟನೆ ನಡೆದಿದೆ. ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಆತನ ಮೂವರು ಸ್ನೇಹಿತರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತನನ್ನು ಗಾಜಿಯಾಬಾದ್ನ ಇಂದಿರಾಪುರಂ ನಿವಾಸಿ ಹರ್ಷಿತ್ ಭಟ್ ಎಂದು ಗುರುತಿಸಲಾಗಿದೆ.
ನೊಯ್ಡಾದ ಅಮಿಟಿ ವಿಶ್ವವಿದ್ಯಾಲಯದ ನಾಲ್ವರು ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಳ ನಂತರ ಪಾರ್ಟಿಗಾಗಿ ಸೂಪರ್ನೋವಾ ಬಳಿಯ ನಿರ್ಜನ ಜಾಗಕ್ಕೆ ಹೋಗಿದ್ದರು. ಆಗ ಜಮೀನಿನಲ್ಲಿ ಹರ್ಷಿತ್ ಸ್ನಾನ ಮಾಡಲು ನೀರು ತುಂಬಿದ ಹೊಂಡದ ಬಳಿ ಹೋದ. ಆಗ ಇದ್ದಕ್ಕಿದ್ದಂತೆ ಆಳವಾದ ನೀರಿಗೆ ಜಾರಿ ಆತ ಮುಳುಗಲು ಪ್ರಾರಂಭಿಸಿದ. ಆತನನ್ನು ಉಳಿಸಲು ಇತರ ಮೂವರು ಸ್ನೇಹಿತರು ಸಹ ನೀರಿಗೆ ಇಳಿದರು.
ಅವರೆಲ್ಲರೂ ಜೋರಾಗಿ ಕಿರುಚಾಡಿದ್ದರಿಂದ ಅಕ್ಕಪಕ್ಕದ ಜಮೀನಿನವರು ಪೊಲೀಸರಿಗೆ ವಿಷಯ ತಿಳಿಸಿದರು. ಸ್ಥಳೀಯ ಡೈವರ್ಗಳೊಂದಿಗೆ ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿದವು. ಕಾರ್ಯಾಚರಣೆಯನ್ನು ಕೈಗೊಳ್ಳಲು ಅಗ್ನಿಶಾಮಕ ಇಲಾಖೆ, ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ಸೇರಿದಂತೆ ಬಹು ಸಂಸ್ಥೆಗಳ ರಕ್ಷಣಾ ತಂಡಗಳನ್ನು ಸಜ್ಜುಗೊಳಿಸಲಾಯಿತು. ಹರ್ಷಿತ್ ಭಟ್ನನ್ನು ನೀರಿನಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಿದರು.
ಆತನನ್ನು ಉಳಿಸುವ ಪ್ರಯತ್ನದಲ್ಲಿ ನೀರಿಗೆ ಇಳಿದಿದ್ದ ಮೂವರು ಸ್ನೇಹಿತರನ್ನು ಯಶಸ್ವಿಯಾಗಿ ರಕ್ಷಿಸಲಾಯಿತು. ಅವರ ಸ್ಥಿತಿ ಸ್ಥಿರವಾಗಿದೆ. ಈ ಘಟನೆಗೆ ಕಾರಣವಾದ ನಿಖರವಾದ ಸಂದರ್ಭಗಳನ್ನು ಕಂಡುಹಿಡಿಯಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಏಪ್ರಿಲ್ 08:ಅಮೆರಿಕ-ಇಸ್ರೇಲ್(Israel) ಮತ್ತು ಅಮೆರಿಕದ ನಡುವಿನ ಕದನ ವಿರಾಮದ ಕುರಿತು ಭಾರತ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದೆ. ನಾವು ಕದನ ವಿರಾಮವನ್ನು ಸ್ವಾಗತಿಸುತ್ತೇವೆ ಮತ್ತು ಅದು ಪಶ್ಚಿಮ ಏಷ್ಯಾದಲ್ಲಿ ಶಾಶ್ವತ ಶಾಂತಿಯನ್ನು ಸ್ಥಾಪಿಸುತ್ತದೆ ಎಂದು ಆಶಿಸುತ್ತೇವೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ನಾವು ಹಿಂದೆ ಪದೇ ಪದೇ ಹೇಳಿದಂತೆ, ನಡೆಯುತ್ತಿರುವ ಸಂಘರ್ಷವನ್ನು ಸಾಧ್ಯವಾದಷ್ಟು ಬೇಗ ಕೊನೆಗೊಳಿಸಲು ಉದ್ವಿಗ್ನತೆಯನ್ನು ಕಡಿಮೆ ಮಾಡುವುದು, ಸಂವಾದ ಮತ್ತು ರಾಜತಾಂತ್ರಿಕತೆ ಅತ್ಯಗತ್ಯ ಎಂದು ಸಚಿವಾಲಯ ಹೇಳಿದೆ.
ಈ ಸಂಘರ್ಷ ಈಗಾಗಲೇ ಜನರಿಗೆ ಅಪಾರ ನೋವನ್ನುಂಟು ಮಾಡಿದೆ ಮತ್ತು ಜಾಗತಿಕ ಇಂಧನ ಪೂರೈಕೆ ಮತ್ತು ವ್ಯಾಪಾರ ಜಾಲಗಳಿಗೆ ಅಡ್ಡಿಪಡಿಸಿದೆ. ಹಾರ್ಮುಜ್ ಜಲಸಂಧಿಯ ಮೂಲಕ ಸಂಚಾರ ಮೊದಲಿನಂತೆಯೇ ಯಾವುದೇ ಅಡೆತಡೆ ಇಲ್ಲದೆ ನಡೆಯುತ್ತದೆ ಎಂದು ಭಾವಿಸಿದ್ದೇವೆ ಎಂದು ತಿಳಿಸಲಾಗಿದೆ.
ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಕದನ ವಿರಾಮದಿಂದ ಮಧ್ಯಪ್ರಾಚ್ಯದಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ನಡೆಯುತ್ತಿದ್ದ ಹೋರಾಟ ನಿಂತಿದೆ. ಇರಾನ್ ಐತಿಹಾಸಿಕ ವಿಜಯ ಸಾಧಿಸಿದೆ. ಡೊನಾಲ್ಡ್ ಟ್ರಂಪ್ ತಮ್ಮ ಬೆದರಿಕೆ ದಾಳಿಗಳಿಂದ ಹಿಂದೆ ಸರಿದು ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಕೊಂಡ ನಂತರ ಇರಾನ್ ಈ ಹೇಳಿಕೆ ನೀಡಿದೆ. ಟೆಹ್ರಾನ್ 10 ಅಂಶಗಳ ಪ್ರಸ್ತಾವನೆಯನ್ನು ಸಹ ಮಂಡಿಸಿದೆ, ಅದನ್ನು ಅಮೆರಿಕ ಅದನ್ನು ಒಪ್ಪಿಕೊಂಡಿದೆ ಎಂದು ಹೇಳಿದೆ.
ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಟೆಹ್ರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾರತೀಯ ನಾಗರಿಕರು ತಕ್ಷಣ ದೇಶವನ್ನು ತೊರೆಯುವಂತೆ ಸೂಚಿಸಿದೆ. ಇದಕ್ಕೂ ಮೊದಲು, ಏಪ್ರಿಲ್ 7 ರಂದು ಹೊರಡಿಸಲಾದ ಹಿಂದಿನ ಸಲಹೆಯಲ್ಲಿ, ಜನರು ಜಾಗರೂಕರಾಗಿರಿ ಮತ್ತು ಸುರಕ್ಷಿತ ಸ್ಥಳಗಳಲ್ಲಿ ಉಳಿಯುವಂತೆ ಸೂಚಿಸಲಾಗಿತ್ತು.
ಭಾರತೀಯ ನಾಗರಿಕರು ರಾಯಭಾರ ಕಚೇರಿ ಅಧಿಕಾರಿಗಳನ್ನು ಸಂಪರ್ಕಿಸಬೇಕು ಮತ್ತು ಅವರು ಸೂಚಿಸಿದ ಸುರಕ್ಷಿತ ಮಾರ್ಗಗಳ ಮೂಲಕ ಮಾತ್ರ ಇರಾನ್ನಿಂದ ಹೊರಡಬೇಕು ಎಂದು ರಾಯಭಾರ ಕಚೇರಿ ಹೇಳಿದೆ. ಯಾವುದೇ ಭಾರತೀಯ ನಾಗರಿಕರು ಪೂರ್ವ ಸಮಾಲೋಚನೆ ಇಲ್ಲದೆ ಯಾವುದೇ ಅಂತಾರಾಷ್ಟ್ರೀಯ ಗಡಿಯನ್ನು ದಾಟಲು ಪ್ರಯತ್ನಿಸಬಾರದು ಎಂದು ರಾಯಭಾರ ಕಚೇರಿ ಕಟ್ಟುನಿಟ್ಟಾಗಿ ಸೂಚಿಸಿದೆ. ಯಾವುದೇ ಗಡಿಯನ್ನು ದಾಟುವ ಮೊದಲು ರಾಯಭಾರ ಕಚೇರಿ ಸಂಪರ್ಕಿಸುವುದು ಒಳಿತು.
ತುಮಕೂರು, (ಏಪ್ರಿಲ್ 08): ನಿವೇಶನ ಮಂಜೂರಾಗಿದ್ದರೂ ಸಹ ಹಕ್ಕುಪತ್ರ ನೀಡದ್ದಕ್ಕೆ ಮಹಿಳೆಯೋರ್ವಳು ಜಿಲ್ಲಾ ಉಸ್ತುವಾರಿ ಸಚಿವರ ಜನ ಸ್ಪಂದನಾ ಕಾರ್ಯಕ್ರಮದ ವೇದಿಕೆ ಮೇಲೆ ದಯಾಮರಣ ಕೋರಿದ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ. ಹಕ್ಕುಪತ್ರ ನೀಡದ್ದಕ್ಕೆ ವೇದಿಕೆಯಲ್ಲಿ ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಶಿರಾದ ರಾಬಿಯಾ ಅಸ್ಲಾಂ ಪಾಷ ಎಂಬ ಮಹಿಳೆ ಬೇಸರ ವ್ಯಕ್ತಪಡಿಸಿದ್ದಾಳೆ. ಸಚಿವರು, ಡಿಸಿಗೆ , ಡಿಸಿ ಕಮಿಷನರ್ ಕಡೆಗೆ ಕಳುಹಿಸುತ್ತಾರೆ. ಹೀಗೆ 15 ದಿನಕ್ಕೊಮ್ಮೆ ಅಲೆದಾಡುತ್ತಿದ್ದೇನೆ. ಜನಸಂಪರ್ಕ ಸಭೆಯಲ್ಲಿ ಸ್ಪಂದನೆಯಿಲ್ಲ. ಹಕ್ಕುಪತ್ರಕ್ಕೆ 25 ಸಾವಿರ ರೂ ಕೇಳುತ್ತಿದ್ದಾರೆ ಎಂದು ಕಣ್ಣಿರಿಟ್ಟಿದ್ದಾರೆ.
ಇನ್ನು ಇದೇ ವೇಳೆ ಮಹಿಳೆ ಹಾಡಿನ ಮೂಲಕ ಸಿಎಂ ಸಿದ್ದರಾಮಯ್ಯಗೆ (Siddaramaiah) ಮನವಿ ಮಾಡಿದ್ದಾಳೆ. ಬಾರಯ್ಯ ಸಿದ್ದಯ್ಯ, ಬಾರಯ್ಯ ರಾಮಯ್ಯ ನಮ್ಮ ಮನವಿ ಆಲಿಸಯ್ಯಾ. ಗೃಹಲಕ್ಷ್ಮಿ ಬೇಡಯ್ಯ ಗೃಹವನ್ನ ನೀಡಯ್ಯ ಎಂದು ಹಾಡಿನ ಮೂಲಕ ಸಿಎಂ ಸಿದ್ದರಾಮಯ್ಯಗೆ ಹಕ್ಕುಪತ್ರ ನೀಡುವಂತೆ ಮನವಿ ಮಾಡಿದ್ದಾಳೆ. ಅಲ್ಲದೇ 2024ರಲ್ಲಿ ಸಿಎಂ ಸಿದ್ದರಾಮಯ್ಯನವರು ತುಮಕೂರಿಗೆ ಬಂದಿದ್ದ ವೆಳೆ ಇದೇ ಮಹಿಳೆಗೆ 20/30ಜಾಗ ನೀಡುವುದಾಗಿ ಭರವಸೆ ನೀಡಿದ್ದರು. ಆದರೇ ಈವರೆಗೂ ಆ ಜಾಗ ಹೇಳಿಲ್ಲ. ಹಕ್ಕು ಪತ್ರ ನೀಡಿಲ್ಲ ಎಂದು ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, (ಏಪ್ರಿಲ್ 08): ನಗರದ ಡಿಜೆ ಹಳ್ಳಿ (DJ Halli) ಬಳಿ ಇರುವ ಶಾಂಪುರ ರಸ್ತೆಯಲ್ಲಿ ನಿನ್ನೆ (ಏಪ್ರಿಲ್ 07) ಅಗ್ನಿ ದುರಂತವೊಂದು ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಆರು ಹಸುಗಳು (Cows) ಸಾವನ್ನಪ್ಪಿದ್ದವು. ಶೆಡ್ನಲ್ಲಿದ್ದ 20 ಹಸುಗಳ ಪೈಕಿ ಆರು ಮೂಕಜೀವಿಗಳು ಬೆಂಕಿಯ (Fire) ಜ್ವಾಲೆಗೆ ನರಳಿ ಪ್ರಾಣ ಬಿಟ್ಟಿದ್ದಾವೆ. ಮೊದಲು ಆಕಸ್ಮಿಕವಾಗಿ ಬೆಂಕಿ ತಗುಲಿ ಈ ಅವಘಡ ನಡೆದಿದೆ ಎನ್ನಲಾಗಿತ್ತು. ಆದರೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಬೇಕಂತಲೇ ಕಿರಾತಕನೊಬ್ಬ ಹಸುಗಳಿದ್ದ ಶೆಡ್ಗೆ ಬೆಂಕಿ ಇಟ್ಟು ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. . ಸದ್ಯ ಘಟನೆ ಸಂಬಂಧ ಡಿಜೆ ಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದು, ಬೆಂಕಿ ಇಟ್ಟು ಮೂಕಪ್ರಾಣಿಗಳನ್ನ ಬಲಿಪಡೆದ ವಿಕೃತನಿಗೆ ಬಲೆ ಬೀಸಿದ್ದಾರೆ.
ಬೀದರ್, ಏಪ್ರಿಲ್ 08: ಗಲ್ಫ್ ರಾಷ್ಟ್ರದಲ್ಲಿ ನಡೆಯುತ್ತಿರುವ ಯುದ್ಧಕ್ಕೆ (Gulf War) ಸದ್ಯ ಎರಡು ವಾರಗಳ ಕಾಲ ಕದನ ವಿರಾಮ ಘೋಷಿಸಲಾಗಿದೆ. ಆದರೆ ಯುದ್ಧದ ಎಫೆಕ್ಟ್ ಈರುಳ್ಳಿ ಬೀಜ ಬೆಳೆಗಾರರಿಗೂ ತಟ್ಟಿದೆ. ಈರುಳ್ಳಿ ಬೀಜದ ದರ ಅರ್ಧದಷ್ಟು ಇಳಿಕೆಯಾಗಿದ್ದು, ರೈತರಿಗೆ ಸಂಕಷ್ಟ ತಂದೊಡ್ಡಿದೆ. ಯುದ್ಧದ ಪರಿಣಾಮದಿಂದಾಗಿ ಬೆಳೆಗಳ ದರ ಕುಸಿಯುತ್ತಿದ್ದು, ರೈತರನ್ನು ಕಂಗಾಲು ಮಾಡಿದೆ.
ಕ್ವಿಂಟಾಲ್ಗೆ 80 ಸಾವಿರ ರೂ ಕುಸಿತ
ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಈರುಳ್ಳಿ ಬೆಳೆಗಾರರು ಸಂಕಷ್ಟಕ್ಕೆ ಸಿಲಿಕಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಈರುಳ್ಳಿ ಬೀಜ ಬೆಳೆಗಾರರು ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಕಳೆದ ವರ್ಷ ಒಂದು ಕ್ವಿಂಟಾಲ್ ಈರುಳ್ಳಿ ಬೀಜ ಮಾರುಕಟ್ಟೆಯಲ್ಲಿ 1 ಲಕ್ಷ 20 ಸಾವಿರ ರೂ ಮಾರಾಟವಾಗುತ್ತಿತ್ತು. ಆದರೆ ಈ ವರ್ಷ ಕ್ವಿಂಟಾಲ್ಗೆ 80 ಸಾವಿರ ರೂ ಕುಸಿತವಾಗಿದ್ದು, ರೈತರನ್ನ ನಷ್ಟಕ್ಕೆ ತಳ್ಳಿದೆ.
ಬೀದರ್ ಜಿಲ್ಲೆಯಲ್ಲಿ ಗುಣಮಟ್ಟದ ಈರುಳ್ಳಿ ಬೀಜ ಬೆಳೆಯಲಾಗುತ್ತದೆ. ಹೀಗಾಗಿ ಹೈದರಾಬಾದ್ ಮಾರುಕಟ್ಟೆಯಲ್ಲಿ ಜಿಲ್ಲೆಯ ಈರುಳ್ಳಿ ಬೀಜಕ್ಕೆ ಭಾರೀ ಬೇಡಿಕೆಯಿದೆ. ಹೈದರಾಬಾದ್ನಿಂದ ದಲ್ಲಾಳಿಗಳು ರೈತರಿಂದ ಈರುಳ್ಳಿ ಬೀಜ ಖರೀದಿಸಿ ವಿದೇಶಕ್ಕೆ ರಫ್ತು ಮಾಡುತ್ತಿದ್ದರು. ಆದರೆ ಯುದ್ಧದಿಂದ ರಫ್ತಿನಲ್ಲಿ ತೊಂದರೆ ಉಂಟಾಗಿದ್ದು, ದಲ್ಲಾಳಿಗಳು ಬೆಲೆ ಕಡಿಮೆ ಮಾಡಿ ರೈತರಿಂದ ಈರುಳ್ಳಿ ಬೀಜ ಖರೀದಿಸುತ್ತಿದ್ದಾರೆ. ಇದು ಸಹಜವಾಗಿಯೇ ರೈತರಿಗೆ ಸಂಕಷ್ಟ ತಂದಿದೆ.
ಜಿಲ್ಲೆಯೊಂದರಲ್ಲಿಯೇ ಸುಮಾರು 5 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೀಜವನ್ನ ಬೆಳೆಯುತ್ತಿದ್ದಾರೆ. ಔಷಧಿ ಗುಣಲಕ್ಷಣ ಹಾಗೂ ಪೌಷ್ಟಿಕಾಂಶ ಇರುವ ಈರುಳ್ಳಿ ಬೀಜ ಗಲ್ಫ್ ರಾಷ್ಟ್ರಕ್ಕೆ ಹೆಚ್ಚಾಗಿ ರಫ್ತಾಗುತ್ತಿತ್ತು.
ಬೆಲೆ ಕುಸಿತ ನಮ್ಮನ್ನು ಹೈರಾಣು ಮಾಡಿದೆ ಎಂದ ರೈತ
ಈ ಬೆಳೆ ಜಾನುವಾರು ಅಥವಾ ಕಾಡುಪ್ರಾಣಿಗಳ ಹಾವಳಿ ಇಲ್ಲದೆ ನೆಮ್ಮದಿಯಿಂದ ರೈತ ಬೆಳೆಯಬಹುದಾಗಿದೆ. ಇನ್ನೂ ಈರುಳ್ಳಿ ಬೀಜಕ್ಕೆ ದೇಶ ಸೇರಿದಂತೆ ಅಂತಾರಾಷ್ಟ್ರಿಯ ಮಟ್ಟದಲ್ಲಿ ಬಹು ಬೇಡಿಕೆಯಿದೆ. ಒಂದು ಎಕರೆ ಪ್ರದೇಶಕ್ಕೆ 70 ರಿಂದ 80 ಸಾವಿರ ರೂ ಖರ್ಚು ಮಾಡಿ ರೈತರು ಈರುಳ್ಳಿ ಬೀಜ ಬೆಳೆಯುತ್ತಾರೆ. ಕಡಿಮೆ ನೀರು ಇದ್ದರೂ ಸಾಕು ಬೆಳೆಯಬಹುದಾಗಿದೆ. ಹೀಗಾಗಿ ಬೀದರ್ ಬಯಲು ಸೀಮೆಯಾಗಿದ್ದರಿಂದ ಇಲ್ಲಿ ನೀರಾವರಿ ಹೆಚ್ಚಾಗಿಲ್ಲ. ಹೀಗಾಗಿ ಕಡಿಮೆ ನೀರು ಸೌಲಭ್ಯ ಹೊಂದಿರುವ ರೈತರು ಈರುಳ್ಳಿ ಬೀಜ ಬೆಳೆ ಕಡೆಗೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ. ಆದರೆ ಬೆಲೆ ಕುಸಿತ ನಮ್ಮನ್ನು ಹೈರಾಣು ಮಾಡಿದೆ ಎಂದು ರೈತ ಬಸವರಾಜ್ ಅಳಲು ತೋಡಿಕೊಂಡಿದ್ದಾರೆ.
ಜಿಲ್ಲೆಯ ಬಹುತೇಕ ರೈತರು ಈರುಳ್ಳಿ ಬೀಜ ಕೃಷಿಯಲ್ಲಿ ತೊಡಗಿದ್ದಾರೆ. ಒಮ್ಮೆ ನಾಟಿ ಮಾಡಿದ ನಂತರ ಯಾವುದೇ ಖರ್ಚು ಇಲ್ಲದೇ ಶೂನ್ಯ ಬಂಡವಾಳದಲ್ಲಿ ಬೆಳೆಯಬಹುದಾಗಿದೆ. ಆದರೆ ಯುದ್ದದಿಂದಾಗಿ ದರ ಕುಸಿತವಾಗಿದ್ದು, ರೈತರನ್ನ ಕಂಗಾಲು ಮಾಡಿದೆ.
ಟೆಹ್ರಾನ್, ಏಪ್ರಿಲ್ 8: ಇರಾನ್ ಮತ್ತು ಅಮೆರಿಕ ನಡುವಿನ ಎರಡು ವಾರಗಳ ಕದನ ವಿರಾಮ ಜಾರಿಗೆ ಬಂದ ಕೆಲವೇ ಗಂಟೆಗಳಲ್ಲಿ ಇರಾನ್ (Iran War) ಮೇಲೆ ದಾಳಿ ನಡೆದಿದೆ. ಇದರಿಂದ ಇರಾನ್ನ ಲವನ್ ದ್ವೀಪದಲ್ಲಿರುವ ತೈಲ ಸಂಸ್ಕರಣಾಗಾರಕ್ಕೆ ಹಾನಿಯಾಗಿದೆ. ಇಂದು ಸ್ಥಳೀಯ ಸಮಯ 10 ಗಂಟೆಯ ಸುಮಾರಿಗೆ ಇರಾನ್ನ ತೈಲ ಸಂಸ್ಕರಣಾಗಾರದ ಮೇಲೆ ದಾಳಿ ನಡೆದಿದೆ. ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಬೆಂಕಿಯನ್ನು ನಿಯಂತ್ರಿಸಲು ಮತ್ತು ಸ್ಥಳವನ್ನು ಸುರಕ್ಷಿತಗೊಳಿಸಲು ಅಗ್ನಿಶಾಮಕ ತಂಡಗಳನ್ನು ತಕ್ಷಣವೇ ನಿಯೋಜಿಸಲಾಯಿತು. ಅದಾದ ಒಂದು ಗಂಟೆಯೊಳಗೆ ಇರಾನ್ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಕುವೈತ್ ವಿರುದ್ಧ ಪ್ರತೀಕಾರದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿತು.
ಯುನೈಟೆಡ್ ಸ್ಟೇಟ್ಸ್ ಮತ್ತು ಇರಾನ್ ನಡುವೆ ಮಂಗಳವಾರ ಘೋಷಿಸಲಾದ ಕದನ ವಿರಾಮ ಒಪ್ಪಂದದ ಹೊರತಾಗಿಯೂ ಈ ದಾಳಿ ಸಂಭವಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ ನಂತರ ಸಂಪೂರ್ಣ ವಿನಾಶವನ್ನು ತಡೆಗಟ್ಟುವ ಪ್ರಯತ್ನದಲ್ಲಿ ಈ ಒಪ್ಪಂದಕ್ಕೆ ಬರಲಾಯಿತು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ