ಲಾಕ್ ಡೌನ್ ಲವ್, 5 ವರ್ಷ ಪ್ರಿಯಕರನನ್ನು ಸಾಕಿದ್ದ ಪ್ರಿಯತಮೆ: ಮದುವೆಯಾದ ವರ್ಷದಲ್ಲೇ ಗಂಡ ಪರಸ್ತ್ರೀಯೊಂದಿಗೆ ಪರಾರಿ! – Kannada News | Mangaluru Love Story Turns Bitter: Woman Alleges Husband Eloped with Another Woman Leaving 10 Month Old Baby

ಮಂಗಳೂರು, ಜುಲೈ 21: ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿ ಜೋಡಿಯೊಂದು ಮದುವೆಯಾದ ಪ್ರಕರಣವೊಂದು, ಇದೀಗ ಗಂಡ ಪರಸ್ತ್ರೀಯೊಂದಿಗೆ ಪರಾರಿಯಾಗುವುದರೊಂದಿಗೆ ಕಲಹಕ್ಕೆ ಕಾರಣವಾಗಿದೆ. ಈ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಕಾವೂರು ನಿವಾಸಿ ಲೋಲಾಕ್ಷಿ ಅವರ ಪತಿ ಪ್ರಜ್ವಲ್, 10 ತಿಂಗಳ ಮಗು ಇರುವಾಗಲೇ ಬೇರೊಬ್ಬ ಮಹಿಳೆಯೊಂದಿಗೆ ಪರಾರಿಯಾಗಿದ್ದಾರೆ. ಕೋವಿಡ್ ಅವಧಿಯಲ್ಲಿ ಅಪಘಾತಕ್ಕೀಡಾಗಿದ್ದ ಪ್ರಜ್ವಲ್‌ಗೆ ಲೋಲಾಕ್ಷಿ ಐದು ವರ್ಷಗಳ ಕಾಲ ಚಿಕಿತ್ಸೆ ಕೊಡಿಸಿ, ತಮ್ಮ ಮನೆಯಲ್ಲೇ ಸಾಕಿ ನಂತರ 2025ರಲ್ಲಿ ಮದುವೆಯಾಗಿದ್ದರು.

ಆದರೆ, ಮದುವೆಯಾಗಿ ಸುಮಾರು ಒಂದೂವರೆ ವರ್ಷದಲ್ಲಿ, 10 ತಿಂಗಳ ಮಗು ಇರುವಾಗಲೇ ಪ್ರಜ್ವಲ್ ಬೇರೊಬ್ಬ ಮಹಿಳೆ ಶರ್ಮಿಳಾ ಜೊತೆ ಜೂನ್ 30ರಂದು ಪರಾರಿಯಾಗಿದ್ದಾರೆ. ಶರ್ಮಿಳಾ, ಪ್ರಜ್ವಲ್‌ಗೆ 2 ಲಕ್ಷ ರೂಪಾಯಿ ಹಣ ನೀಡಿದ್ದ ಬಗ್ಗೆಯೂ ಮಾಹಿತಿ ಇದೆ. ಲೋಲಾಕ್ಷಿ ಅವರು ತಮ್ಮ ಪತಿ ಪ್ರಜ್ವಲ್‌ನನ್ನು ಶರ್ಮಿಳಾ ಕರೆದುಕೊಂಡು ಹೋಗಿದ್ದಾರೆ ಎಂದು ಬಜಪೆ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಪೋಲಿಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಲೋಲಾಕ್ಷಿ ಆರೋಪಿಸಿದ್ದಾರೆ. ತಮಗೆ ಮತ್ತು ತಮ್ಮ ಮಗುವಿಗೆ ನ್ಯಾಯ ಒದಗಿಸಬೇಕು ಎಂದು ಲೋಲಾಕ್ಷಿ ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮದ್ಯದಂಗಡಿಗೆ ನುಗ್ಗಿದ ಚಿರತೆ, ಮೂವರ ಮೇಲೆ ಭೀಕರ ದಾಳಿ, 5 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ – Kannada News | Leopard attacks 3, enters liquor shop, 5 hour rescue ends terrifying ordeal

ಟೋಂಕ್, ಜುಲೈ 21: ಜನನಿಬಿಡ ಮಾರುಕಟ್ಟೆ ಪ್ರದೇಶಕ್ಕೆ ನುಗ್ಗಿದ ಚಿರತೆ(Leopard)ಯೊಂದು ಮೂವರ ಮೇಲೆ ದಾಳಿ ನಡೆಸಿ, ಮದ್ಯದಂಗಡಿಯೊಂದರ ಒಳಗಡೆ ಆಶ್ರಯ ಪಡೆದ ಆತಂಕಕಾರಿ ಘಟನೆ ರಾಜಸ್ಥಾನದ ಟೋಂಕ್ ಜಿಲ್ಲೆಯ ತೋಡರೈಸಿಂಗ್ ಪಟ್ಟಣದಲ್ಲಿ ನಡೆದಿದೆ. ಸುಮಾರು 5 ಗಂಟೆಗಳ ಕಾಲ ನಡೆದ ಸುದೀರ್ಘ ಕಾರ್ಯಾಚರಣೆಯ ನಂತರ ಅರಣ್ಯಾಧಿಕಾರಿಗಳು ಚಿರತೆಯನ್ನು ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ.

ಸೋಮವಾರ ಬೆಳಗ್ಗೆ 8.45 ರ ಸುಮಾರಿಗೆ ತೋಡರೈಸಿಂಗ್ ಪಟ್ಟಣದ ಸಮೀಪದ ಪೊದೆಗಳಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು. ವಿಷಯ ತಿಳಿದು ಸ್ಥಳವನ್ನು ಪರಿಶೀಲಿಸಲು ಬಂದ ಅರಣ್ಯ ಇಲಾಖೆಯ ಸ್ವಯಂಸೇವಕ ರಾಕೇಶ್ ಮಾಲಿ ಅವರ ಮೇಲೆ ಚಿರತೆ ತಕ್ಷಣವೇ ಎರಗಿ ಆತನ ಕಾಲಿಗೆ ಗಾಯಗೊಳಿಸಿತು. ಬಯಬೀತಗೊಂಡ ಚಿರತೆ ಅಲ್ಲಿಂದ ಸುಮಾರು 400 ಮೀಟರ್ ದೂರದಲ್ಲಿದ್ದ ಜನನಿಬಿಡ ಮಾರುಕಟ್ಟೆಗೆ ಓಡಿ ಬಂದಿದೆ.

ಮಾರುಕಟ್ಟೆಯಲ್ಲಿದ್ದ ‘ವೈನ್ ಶಾಪ್’ ಹೊರಗೆ ಕುಳಿತಿದ್ದ ಫತೇಹ್ ಲಾಲ್ ಕೋಲಿ ಅವರ ಮೇಲೆ ದಾಳಿ ಮಾಡಿದ ಚಿರತೆ, ನೇರವಾಗಿ ಮದ್ಯದಂಗಡಿಯೊಳಗೆ ನುಗ್ಗಿತು. ಅಂಗಡಿಯೊಳಗಿದ್ದ 25 ವರ್ಷದ ಮಾರಾಟಗಾರ ಸಂಜಯ್ ಗುರ್ಜರ್ ಅವರ ಮೂಗು ಮತ್ತು ಬೆನ್ನಿನ ಭಾಗಕ್ಕೆ ತೀವ್ರವಾಗಿ ಗಾಯಗೊಳಿಸಿತು. ಸಂಜಯ್ ಹೇಗೋ ಅಂಗಡಿಯಿಂದ ಹೊರಗೆ ಓಡಿಬಂದು ಪ್ರಾಣ ಉಳಿಸಿಕೊಂಡರು.

ಮತ್ತಷ್ಟು ಓದಿ: Leopard In Bengaluru: 5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು

ಚಿರತೆ ಅಂಗಡಿಯೊಳಗೆ ನುಗ್ಗುತ್ತಿದ್ದಂತೆ ಸಮಯಪ್ರಜ್ಞೆ ಮೆರೆದ ಸ್ಥಳೀಯ ನಿವಾಸಿಗಳು ಹೊರಗಿನಿಂದ ಶಟರ್ ಅನ್ನು ತಕ್ಷಣವೇ ಕೆಳಗೆ ಎಳೆದು, ಪ್ರಾಣಿ ಹೊರಬರದಂತೆ ಬಂದ್ ಮಾಡಿದ್ದರು. ಸುದ್ದಿ ತಿಳಿದ ತಕ್ಷಣ ಟೋಂಕ್ ಅರಣ್ಯಾಧಿಕಾರಿಗಳು ಹಾಗೂ ಜೈಪುರ ಮೃಗಾಲಯದ ವಿಶೇಷ ವೈದ್ಯಕೀಯ ತಂಡ ಸ್ಥಳಕ್ಕೆ ಧಾವಿಸಿತು.

ಗಾಯಗೊಂಡ ಮೂವರನ್ನೂ ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಯಿತು. ತೀವ್ರವಾಗಿ ಗಾಯಗೊಂಡಿದ್ದ ಸಂಜಯ್ ಮತ್ತು ಫತೇಹ್ ಅವರನ್ನು ಉನ್ನತ ವೈದ್ಯಕೀಯ ಕೇಂದ್ರಕ್ಕೆ ರವಾನಿಸಲಾಗಿದೆ. ವೈದ್ಯರ ತಂಡವು ಮದ್ಯದಂಗಡಿಯ ಶಟರ್ ಅಲ್ಪಪ್ರಮಾಣದಲ್ಲಿ ತೆರೆದು ಚಿರತೆಗೆ ನಿದ್ರಾಜನಕ ಮದ್ದು ನೀಡುವಲ್ಲಿ ಯಶಸ್ವಿಯಾಯಿತು. ಸುಮಾರು 5 ಗಂಟೆಗಳ ಸುದೀರ್ಘ ಪ್ರಯತ್ನದ ನಂತರ ಪ್ರಜ್ಞೆ ತಪ್ಪಿದ ಗಂಡು ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿಯಲಾಯಿತು.

ವಿಡಿಯೋ

ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಹಿರಿಯ ಪಶುವೈದ್ಯಾಧಿಕಾರಿ ಡಾ.ಅಶೋಕ್ ತನ್ವರ್ ಮಾತನಾಡಿ, ನನ್ನ ವೃತ್ತಿಜೀವನದಲ್ಲಿ 60 ಕ್ಕೂ ಹೆಚ್ಚು ವನ್ಯಜೀವಿ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಿದ್ದೇನೆ. ಆದರೆ, ಮದ್ಯದಂಗಡಿಯೊಳಗಿನಿಂದ ಚಿರತೆಯನ್ನು ರಕ್ಷಿಸಿದ್ದು ಇದೇ ಮೊದಲು ಎಂದು ವಿವರಿಸಿದ್ದಾರೆ.

ತೋಡರೈಸಿಂಗ್ ಸುತ್ತಮುತ್ತ ದಟ್ಟ ಅರಣ್ಯವಿದ್ದು, ಆಹಾರ ಅರಸಿ ಅಥವಾ ದಾರಿ ತಪ್ಪಿ ಚಿರತೆ ನಗರ ಪ್ರದೇಶಕ್ಕೆ ಬಂದಿರಬಹುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆ ಮುಗಿಯುವವರೆಗೆ ಪೊಲೀಸರು ಸ್ಥಳದಲ್ಲಿ ಭಾರಿ ಜನಸಮೂಹವನ್ನು ನಿಯಂತ್ರಿಸಿ ಭದ್ರತೆ ಒದಗಿಸಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಚೆನ್ನಮ್ಮ ಸಮಾಧಿ ಬಳಿ ವಿಷ್ಣು ಸಹಸ್ರನಾಮ ಪಠಿಸುತ್ತಿದ್ದಂತೆಯೇ ಪ್ರತ್ಯಕ್ಷವಾದ ಗರುಡ! – Kannada News | Garuda Circles Chennamma’s Memorial During Vishnu Sahasranama Chanting, Devotees Call It a Divine Sign

ಹಾಸನ, ಜುಲೈ 21: ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಅಂತ್ಯಸಂಸ್ಕಾರ ಹಾಸನದ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಬೆಟ್ಟದ ತಪ್ಪಲಿನ ಜಮೀನಿನಲ್ಲಿ ಸೋಮವಾರ ನಡೆದಿದೆ. ಅದಾದ ನಂತರ ಸಮಾಧಿ ಇರುವ ಜಾಗದಲ್ಲಿ ರುದ್ರ, ಚಮಕ, ಗಾಯಿತ್ರಿ ಮಂತ್ರ ಹಾಗೂ ವಿಷ್ಣು ಸಹಸ್ರನಾಮ ಪಠಣ ಮಾಡಲಾಗಿದೆ. ವಿಷ್ಣು ಸಹಸ್ರನಾಮ ಪಠಿಸುತ್ತಿರುವಾಗ ಗರುಡ ಕಾಣಿಸಿದ್ದು, ಸಮಾಧಿ ಮೇಲೆ ಪ್ರದಕ್ಷಿಣೆ ಹಾಕಿ ಹೋಗಿರುವುದು ಅಚ್ಚರಿ ಮೂಡಿಸಿದೆ. ಚೆನ್ನಮ್ಮ ಅಪಾರ ದೈವ ಭಕ್ತೆಯಾಗಿದ್ದರು. ಪ್ರತಿನಿತ್ಯ ದೇವರ ಪೂಜೆ ವೇಳೇ ಶ್ಲೋಕಗಳನ್ನು ಪಠಿಸುತ್ತಿದ್ದರು. ಹೀಗಾಗಿ ಅವರ ಸಮಾಧಿ ಬಳಿ ಅರ್ಚಕರಿಂದ ರುದ್ರ, ಚಮಕ, ಗಾಯಿತ್ರಿ ಮಂತ್ರ ಹಾಗೂ ವಿಷ್ಣು ಸಹಸ್ರನಾಮ ಪಠಣ ಮಾಡಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

TTD News: ತಿರುಪತಿಯಲ್ಲಿ ಭಕ್ತರಿಗೆ ಹೈಟೆಕ್ ‘ಕನ್ವೇಯರ್’ ಪ್ರಸಾದ ವಿತರಣೆ; TTDಯಿಂದ ಹೊಸ ಪ್ರಯೋಗ! – Kannada News | TTD’s New Tirumala Food Conveyor System: Faster Prasadam for Devotees

ಹೈಟೆಕ್ ‘ಕನ್ವೇಯರ್’ ಪ್ರಸಾದ ವಿತರಣೆ

ತಿರುಮಲ: ತಿರುಮಲಕ್ಕೆ ಆಗಮಿಸುವ ಲಕ್ಷಾಂತರ ಭಕ್ತಾದಿಗಳಿಗೆ ಶೀಘ್ರ ಹಾಗೂ ಸುಲಭವಾಗಿ ಆಹಾರ-ಪಾನೀಯ ತಲುಪಿಸಲು ತಿರುಮಲ ತಿರುಪತಿ ದೇವಸ್ಥಾನ ಮಂಡಳಿ (TTD) ಒಂದು ಹೊಸ ತಂತ್ರಜ್ಞಾನಾಧಾರಿತ ಹೆಜ್ಜೆಯನ್ನಿಟ್ಟಿದೆ. ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯುವ ಭಕ್ತರಿಗೆ ‘ಆಹಾರ ಪೂರೈಸುವ ಕನ್ವೇಯರ್ ವ್ಯವಸ್ಥೆ’ಯನ್ನು (Food Serving Conveyor System) ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಸಾಮಾನ್ಯ ದಿನಗಳಲ್ಲಿ ಹಾಗೂ ವಿಶೇಷ ಸಂದರ್ಭಗಳಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕಾಗಿ ಪ್ರತಿದಿನ ಲಕ್ಷಕ್ಕೂ ಹೆಚ್ಚು ಭಕ್ತರು ಕಿಲೋಮೀಟರ್‌ಗಟ್ಟಲೆ ಸಾಲಿನಲ್ಲಿ ನಿಲ್ಲುತ್ತಾರೆ. ಇಂತಹ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸರಳವಾಗಿ ಪ್ರಸಾದ ತಲುಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ದಿನಕ್ಕೆ 1 ಲಕ್ಷ ಭಕ್ತರಿಗೆ ನಿರಂತರ ಅನ್ನಪ್ರಸಾದ:

ಪ್ರಸ್ತುತ TTDಯ ಆಕ್ಟೋಪಸ್ ಕಟ್ಟಡದಿಂದ ಕೃಷ್ಣ ತೇಜ ಅತಿಥಿ ಗೃಹದವರೆಗೆ ಸುಮಾರು 3.5 ಕಿಲೋಮೀಟರ್ ಉದ್ದದ ಸರತಿ ಸಾಲಿನಲ್ಲಿ ಪ್ರತಿದಿನ ಬೆಳಿಗ್ಗೆ 6:00 ರಿಂದ ರಾತ್ರಿ 11:00 ರವರೆಗೆ ನಿರಂತರವಾಗಿ ಅನ್ನಪ್ರಸಾದ ವಿತರಿಸಲಾಗುತ್ತಿದೆ. ಸುಮಾರು 100 ಶ್ರೀವಾರಿ ಸೇವಕರು ಪ್ರತಿದಿನ ಭಕ್ತರಿಗೆ ಹಾಲು, ಮಜ್ಜಿಗೆ ಹಾಗೂ ಕುಡಿಯುವ ನೀರು, ಉಪ್ಮಾ, ಸಾಂಬಾರ್ ಅನ್ನ ಹಾಗೂ ಟೊಮೆಟೊ ಭಾತ್‌ಗಳನ್ನು ವಿತರಿಸುತ್ತಿದ್ದಾರೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಗೇಟ್ 45ರಲ್ಲಿ ಹೈಟೆಕ್ ‘ಕನ್ವೇಯರ್’ ಪ್ರಯೋಗ:

ಮಾನವ ಶ್ರಮವನ್ನು ಕಡಿಮೆ ಮಾಡಿ, ಯಂತ್ರಗಳ ಸಹಾಯದಿಂದ ಪ್ರಸಾದ ವಿತರಣೆಯನ್ನು ಇನ್ನಷ್ಟು ವೇಗಗೊಳಿಸಲು ದಾನಿಗಳ ನೆರವಿನಿಂದ ಈ ‘ಚಲಿಸುವ ಊಟದ’ (Food Conveyor) ವ್ಯವಸ್ಥೆಯನ್ನು ರೂಪಿಸಲಾಗಿದೆ. ಪ್ರಸ್ತುತ, ಶಿಲಾ ತೋರಣಂ ಬಳಿಯ ಗೇಟ್ 45ರಲ್ಲಿ ಈ ಕನ್ವೇಯರ್ ಯಂತ್ರದ ಕಾರ್ಯನಿರ್ವಹಣೆಯನ್ನು TTD ಅಧಿಕಾರಿಗಳು ಪ್ರಾಯೋಗಿಕವಾಗಿ ಪರಿಶೀಲಿಸುತ್ತಿದ್ದಾರೆ. ಶ್ರೀವಾರಿ ಸೇವಕರು ಈ ಯಂತ್ರದ ಸಹಾಯದಿಂದ ಭಕ್ತರಿಗೆ ಸಲೀಸಾಗಿ ಪ್ರಸಾದವನ್ನು ತಲುಪಿಸುತ್ತಿದ್ದಾರೆ.

3.50 ಲಕ್ಷ ರೂ. ವೆಚ್ಚದ ಯೋಜನೆ:

ಸುಮಾರು 3.50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಈ ಆಹಾರ ಸರ್ವಿಂಗ್ ಕನ್ವೇಯರ್‌ನ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾದರೆ, ಸರತಿ ಸಾಲಿನ ಉಳಿದ ಪ್ರಮುಖ ಪ್ರದೇಶಗಳಿಗೂ ಇದನ್ನು ವಿಸ್ತರಿಸಲು TTD ಯೋಜಿಸಿದೆ. ಈ ತಂತ್ರಜ್ಞಾನದ ಬಳಕೆಯಿಂದ ಭಕ್ತರಿಗೆ ತಡವಿಲ್ಲದೆ, ಅತ್ಯಂತ ತ್ವರಿತವಾಗಿ ಆಹಾರ ಪದಾರ್ಥಗಳನ್ನು ತಲುಪಿಸಬಹುದು ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟೀಮ್ ಇಂಡಿಯಾಗೆ ವಿವಿಎಸ್​ ಲಕ್ಷ್ಮಣ್ ಹೆಡ್ ಕೋಚ್! – Kannada News | VVS Laxman to coach India on Zimbabwe

ಭಾರತ ಹಾಗೂ ಝಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯು ಜುಲೈ 23, 2026 ರಿಂದ ಹರಾರೆಯಲ್ಲಿ ಆರಂಭವಾಗಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಕೋಚ್ ಆಗಿ ಕಾಣಿಸಿಕೊಳ್ಳುತ್ತಿರುವುದು ವಿವಿಎಸ್​ ಲಕ್ಷ್ಮಣ್. ಇಂಗ್ಲೆಂಡ್ ಪ್ರವಾಸದ ಸರಣಿ ಮುಗಿದ ಬೆನ್ನಲ್ಲೇ ಈ ಸರಣಿ ಆರಂಭವಾಗುತ್ತಿರುವುದರಿಂದ, ಬಿಸಿಸಿಐ ವಿಭಜಿತ-ಕೋಚಿಂಗ್ ಮಾದರಿಯನ್ನು ಅಳವಡಿಸಿಕೊಂಡಿದೆ.

ಇದರ ಅಡಿಯಲ್ಲಿ ನಿಯಮಿತ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮುಖ್ಯಸ್ಥರಾದ ವಿವಿಎಸ್ ಲಕ್ಷ್ಮಣ್ ಅವರು ಮತ್ತೊಮ್ಮೆ ಟೀಮ್ ಇಂಡಿಯಾದ ಹಂಗಾಮಿ ಮುಖ್ಯ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಲಕ್ಷ್ಮಣ್ ಕೋಚಿಂಗ್ ಸಾಧನೆಗಳು:

ವಿವಿಎಸ್ ಲಕ್ಷ್ಮಣ್ ಭಾರತ ತಂಡದ ಹಂಗಾಮಿ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದಾಗಲೆಲ್ಲಾ ಟೀಮ್ ಇಂಡಿಯಾ ಗೆಲುವು ದಾಖಲಿಸಿದೆ.

  • ಐರ್ಲೆಂಡ್ ಸರಣಿ (2022): ಲಕ್ಷ್ಮಣ್ ಮಾರ್ಗದರ್ಶನದಲ್ಲಿ ಭಾರತ ತಂಡವು ಐರ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು 2-0 ಅಂತರದಿಂದ ಜಯಿಸಿತ್ತು.
  • ಝಿಂಬಾಬ್ವೆ ಸರಣಿ (2022): ಝಿಂಬಾಬ್ವೆ ವಿರುದ್ಧ 2022 ರಲ್ಲಿ ನಡೆದ ಏಕದಿನ ಸರಣಿಯನ್ನು ಭಾರತ 3-0 ರಿಂದ ಕ್ಲೀನ್ ಸ್ವೀಪ್ ಮಾಡಿತ್ತು.
  • ನ್ಯೂಝಿಲೆಂಡ್ ಸರಣಿ (2022): ನ್ಯೂಝಿಲೆಂಡ್ 2022 ರಲ್ಲಿ ಆಡಲಾದ ಟಿ20 ಸರಣಿಯನ್ನು ಭಾರತ 1-0 ರಿಂದ ಗೆದ್ದುಕೊಂಡಿತ್ತು.
  • ಆಸ್ಟ್ರೇಲಿಯಾ ಸರಣಿ (2023): ಏಕದಿನ ವಿಶ್ವಕಪ್ ಮುಗಿದ ತಕ್ಷಣ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಲಕ್ಷ್ಮಣ್ ಮಾರ್ಗದರ್ಶನದ ಭಾರತ ತಂಡ 4-1 ಅಂತರದ ಭರ್ಜರಿ ಜಯ ಸಾಧಿಸಿತ್ತು.
  • ಏಷ್ಯನ್ ಗೇಮ್ಸ್ (2023): ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಲಕ್ಷ್ಮಣ್ ಕೋಚಿಂಗ್ ಅಡಿಯಲ್ಲಿ ಯುವ ಭಾರತ ತಂಡ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿತ್ತು.
  • ಝಿಂಬಾಬ್ವೆ ಸರಣಿ (2024): ಶುಭ್​ಮನ್ ಗಿಲ್ ನಾಯಕತ್ವದ ಯುವ ತಂಡವು 2024ರಲ್ಲಿ ಲಕ್ಷ್ಮಣ್ ಅವರ ಉಸ್ತುವಾರಿಯಲ್ಲೇ ಝಿಂಬಾಬ್ವೆ ವಿರುದ್ಧ 4-1 ರಿಂದ ಟಿ20 ಸರಣಿ ಗೆದ್ದಿತ್ತು.

ಇದೀಗ ಮತ್ತೊಮ್ಮೆ ವಿವಿಎಸ್​ ಲಕ್ಷ್ಮಣ್ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಝಿಂಬಾಬ್ವೆ ಪ್ರವಾಸ ಕೈಗೊಂಡಿದೆ. ಈ ಸರಣಿಯಲ್ಲೂ ಭಾರತ ತಂಡದಿಂದ ಭರ್ಜರಿ ಪ್ರದರ್ಶನ ನಿರೀಕ್ಷಿಸಬಹುದು.

ಭಾರತ ಮತ್ತು ಝಿಂಬಾಬ್ವೆ ಸರಣಿ ವೇಳಾಪಟ್ಟಿ:

  • ಮೊದಲ ಟಿ20 ಪಂದ್ಯ: ಜುಲೈ 23, 2026 (ಭಾರತೀಯ ಕಾಲಮಾನ ಸಂಜೆ 4:30)
  • ಎರಡನೇ ಟಿ20 ಪಂದ್ಯ: ಜುಲೈ 25, 2026 (ಭಾರತೀಯ ಕಾಲಮಾನ ಸಂಜೆ 4:30)
  • ಮೂರನೇ ಟಿ20 ಪಂದ್ಯ: ಜುಲೈ 26, 2026 (ಭಾರತೀಯ ಕಾಲಮಾನ ಸಂಜೆ 4:30)

ಇದನ್ನೂ ಓದಿ: ದಿ ಹಂಡ್ರೆಡ್ ಲೀಗ್​ನಲ್ಲಿ ಕಣಕ್ಕಿಳಿಯುವ 8 ತಂಡಗಳು ಹೀಗಿವೆ

ಝಿಂಬಾಬ್ವೆ ವಿರುದ್ಧದ ಸರಣಿಯ ಬಳಿಕ ಟೀಮ್ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ 2 ಮ್ಯಾಚ್​ಗಳ ಟೆಸ್ಟ್ ಸರಣಿಯನ್ನು ಆಡಲಿದೆ.

Source link

KIMS Recruitment 2026: ಕಿಮ್ಸ್ ಆಸ್ಪತ್ರೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ನಾಳೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನ – Kannada News | KIMS Bengaluru Recruitment 2026: 27 Technical and Clerk Jobs – Apply Now!

ಕಿಮ್ಸ್ ಆಸ್ಪತ್ರೆಯಲ್ಲಿ ಉದ್ಯೋಗವಕಾಶ

ಬೆಂಗಳೂರು: ರಾಜಧಾನಿ ಬೆಂಗಳೂರಿನ ವಿ.ವಿ.ಪುರಂನಲ್ಲಿರುವ ‘ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ’ (KIMSH) ಅರ್ಹ ಅಭ್ಯರ್ಥಿಗಳಿಂದ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ರಾಜ್ಯ ಒಕ್ಕಲಿಗರ ಸಂಘದ ಆಡಳಿತಕ್ಕೊಳಪಟ್ಟ ಈ ಆಸ್ಪತ್ರೆಯಲ್ಲಿ ಖಾಲಿ ಇರುವ ಒಟ್ಟು 27 ತಾಂತ್ರಿಕ ಹಾಗೂ ಕ್ಲರ್ಕ್ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳು, ಅಗತ್ಯ ಶೈಕ್ಷಣಿಕ ಅರ್ಹತೆ ಮತ್ತು ಅರ್ಜಿ ಸಲ್ಲಿಕೆಯ ಸಂಪೂರ್ಣ ವಿವರ ಇಲ್ಲಿದೆ.

ಖಾಲಿ ಇರುವ ಹುದ್ದೆಗಳು ಮತ್ತು ಅರ್ಹತೆಗಳು:

  • ಇಸಿಜಿ ಟೆಕ್ನಿಷಿಯನ್ (01 ಹುದ್ದೆ): B.Sc Echo/Cardiology ಪೂರ್ಣಗೊಳಿಸಿರಬೇಕು.
  • ಬೆಡ್ ಸೈಡ್ ಲ್ಯಾಬ್ ಟೆಕ್ನಿಷಿಯನ್ (08 ಹುದ್ದೆಗಳು): B.Sc ಅಥವಾ M.Sc ಲ್ಯಾಬ್ ಟೆಕ್ನಿಷಿಯನ್ ಅರ್ಹತೆ ಹೊಂದಿರಬೇಕು.
  • ಮ್ಯಾನಿಫೋಲ್ಡ್ ಆಪರೇಟರ್ಸ್ (04 ಹುದ್ದೆಗಳು): ಮ್ಯಾನಿಫೋಲ್ಡ್ ಆಪರೇಟರ್ ಸರ್ಟಿಫಿಕೇಟ್ ಕೋರ್ಸ್ ಮುಗಿಸಿರಬೇಕು.
  • ಇಇಜಿ/ಇಎನ್ಎಮ್‌ಜಿ ಟೆಕ್ನಿಷಿಯನ್ (01 ಹುದ್ದೆ): B.Sc EEG Technician/ Neurophysiology ಅರ್ಹತೆ ಹೊಂದಿರಬೇಕು.
  • ಒಟಿ / ಅನೆಸ್ಥೇಷಿಯಾ ಟೆಕ್ನಿಷಿಯನ್ (04 ಹುದ್ದೆಗಳು): B.Sc OT Technician ಓದಿರಬೇಕು.
  • ಕೋಡಿಂಗ್ ಕ್ಲರ್ಕ್ (03 ಹುದ್ದೆಗಳು): ಮೆಡಿಕಲ್ ಕೋಡಿಂಗ್‌ನಲ್ಲಿ 5 ವರ್ಷಗಳ ಅನುಭವದೊಂದಿಗೆ ಡಿಪ್ಲೊಮಾ ಹೊಂದಿರಬೇಕು.
  • ರೆಕಾರ್ಡ್ ಕ್ಲರ್ಕ್ (06 ಹುದ್ದೆಗಳು): ಮೆಡಿಕಲ್ ರೆಕಾರ್ಡ್ ಮ್ಯಾನೇಜ್‌ಮೆಂಟ್‌ನಲ್ಲಿ 5 ವರ್ಷಗಳ ಅನುಭವದೊಂದಿಗೆ ಪದವಿ (Degree) ಹೊಂದಿರಬೇಕು.

ವಯೋಮಿತಿ ಮತ್ತು ಆಯ್ಕೆ ಪ್ರಕ್ರಿಯೆ:

ಮ್ಯಾನಿಫೋಲ್ಡ್ ಆಪರೇಟರ್ ಹುದ್ದೆಯನ್ನು ಹೊರತುಪಡಿಸಿ, ಉಳಿದ ಎಲ್ಲಾ ಹುದ್ದೆಗಳಿಗೆ ಅಭ್ಯರ್ಥಿಗಳ ವಯಸ್ಸು 22 ರಿಂದ 30 ವರ್ಷಗಳ ಒಳಗಿರಬೇಕು. ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ, ಅರ್ಹರಾದವರಿಗೆ ದೂರವಾಣಿ ಅಥವಾ ಇ-ಮೇಲ್ ಮುಖಾಂತರ ಸಂದರ್ಶನದ (Interview) ದಿನಾಂಕ ಮತ್ತು ಸಮಯವನ್ನು ತಿಳಿಸಲಾಗುವುದು.

ಇದನ್ನೂ ಓದಿ: ಇಸ್ರೋದಲ್ಲಿ 460 ಅಪ್ರೆಂಟಿಸ್ ಹುದ್ದೆಗಳ ಭರ್ತಿ; ಲಿಖಿತ ಪರೀಕ್ಷೆಯಿಲ್ಲದೆ ನೇರ ಆಯ್ಕೆ!

ಅರ್ಜಿ ಸಲ್ಲಿಸುವ ವಿವರಗಳು:

ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡೇಟಾ ಮತ್ತು ಎಲ್ಲಾ ಅಗತ್ಯ ಶೈಕ್ಷಣಿಕ/ಅನುಭವ ಪ್ರಮಾಣಪತ್ರಗಳ ದೃಢೀಕರಿಸಿದ ನಕಲು ಪ್ರತಿಗಳನ್ನು (Attested Copies) ಭರ್ತಿ ಮಾಡಿ ನೇರವಾಗಿ ಜುಲೈ 22ರಂದು ಸಂಜೆ 05:00 ಗಂಟೆಯೊಳಗೆ ಕಿಮ್ಸ್ ಆಸ್ಪತ್ರೆಯ ಆಡಳಿತ ಕಚೇರಿಗೆ ತಲುಪಿಸಬೇಕಾಗುತ್ತದೆ.

ಅರ್ಜಿ ಸಲ್ಲಿಸಬೇಕಾದ ವಿಳಾಸ:

ಆಡಳಿತ ಕಚೇರಿ, ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ (KIMSH), ಕೆ.ಆರ್. ರಸ್ತೆ, ವಿ.ವಿ.ಪುರಂ, ಬೆಂಗಳೂರು – 560 004.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On – 1:08 pm, Tue, 21 July 26

Source link

Karnataka Dam Water Level: ಆಲಮಟ್ಟಿಗೆ ಹರಿದುಬಂತು ಭಾರಿ ನೀರು, ಕಾವೇರಿ-ಕೃಷ್ಣಾ ಕೊಳ್ಳದ ಪ್ರಮುಖ ಡ್ಯಾಂಗಳಲ್ಲಿನ ಸ್ಥಿತಿಗತಿ ಇಲ್ಲಿದೆ! – Kannada News | Karnataka dam water level today almatti inflow surges to 46000 cusecs krs kabini tb hemavathi status

ಬೆಂಗಳೂರು, ಜುಲೈ 21: ರಾಜ್ಯದಾದ್ಯಂತ ಮಳೆಯ ವಾತಾವರಣ ಮುಂದುವರಿದಿದ್ದು, ಪ್ರಮುಖ ಜಲಾಶಯಗಳಿಗೆ ನೀರಿನ ಹರಿವು ಏರಿಕೆಯಾಗುತ್ತಿದೆ. ಕೃಷ್ಣಾ ನದಿ ಕೊಳ್ಳದ ಆಲಮಟ್ಟಿ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದುಬರುತ್ತಿದ್ದರೆ, ಕಾವೇರಿ ಹಾಗೂ ತುಂಗಭದ್ರಾ ಕೊಳ್ಳದ ಜಲಾಶಯಗಳಲ್ಲಿ ನೀರಿನ ಮಟ್ಟ ಕ್ರಮೇಣ ಸ್ಥಿರಗೊಳ್ಳುತ್ತಿದೆ. ಜುಲೈ 21ರ ಬೆಳಗಿನ ಅಂಕಿ-ಅಂಶಗಳ ಪ್ರಕಾರ ರಾಜ್ಯದ ಪ್ರಮುಖ 5 ಜಲಾಶಯಗಳ ನೀರಿನ ಮಟ್ಟ ಮತ್ತು ಸಂಗ್ರಹ ವಿವರ ಹೀಗಿದೆ.

1. ಆಲಮಟ್ಟಿ ಜಲಾಶಯ (ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರ)

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಜಲಾಶಯಕ್ಕೆ ಒಳಹರಿವು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ನೀರಿನ ಮಟ್ಟ: 517.97 ಮೀಟರ್
  • ಒಳಹರಿವು: 46,848 ಕ್ಯೂಸೆಕ್
  • ಹೊರಹರಿವು: 16,351 ಕ್ಯೂಸೆಕ್

2. ಕೆ.ಆರ್.ಎಸ್. ಜಲಾಶಯ (ಕೃಷ್ಣರಾಜಸಾಗರ)

ಮಂಡ್ಯ ಜಿಲ್ಲೆಯಲ್ಲಿರುವ ಕಾವೇರಿ ನದಿಯ ಜೀವನಾಡಿ ಕೆಆರ್‌ಎಸ್ ಅಣೆಕಟ್ಟಿನಲ್ಲಿ ನೀರು ಕಾಯ್ದುಕೊಳ್ಳಲಾಗುತ್ತಿದ್ದು, ಸದ್ಯದ ಮಟ್ಟಿಗೆ ಹರಿವು ಸಾಧಾರಣವಾಗಿದೆ.

  • ಗರಿಷ್ಠ ಮಟ್ಟ: 124.80 ಅಡಿ
  • ಇಂದಿನ ನೀರಿನ ಮಟ್ಟ: 92.38 ಅಡಿ
  • ಒಳಹರಿವು: 775 ಕ್ಯೂಸೆಕ್
  • ಹೊರಹರಿವು: 2,391 ಕ್ಯೂಸೆಕ್
  • ಒಟ್ಟು ಸಂಗ್ರಹ ಸಾಮರ್ಥ್ಯ: 49.452 ಟಿಎಂಸಿ
  • ಇಂದಿನ ಸಂಗ್ರಹ: 17.407 ಟಿಎಂಸಿ

3. ಕಬಿನಿ ಜಲಾಶಯ

ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನಲ್ಲಿರುವ ಕಬಿನಿ ಜಲಾಶಯದ ಕೊಳ್ಳದಲ್ಲಿ ಕಳೆದ 24 ಗಂಟೆಗಳಲ್ಲಿ 15 ಮಿ.ಮೀ. ಮಳೆ ದಾಖಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣ ಕೊಂಚ ಕಡಿಮೆಯಿದೆ.

  • ಇಂದಿನ ನೀರಿನ ಮಟ್ಟ: 72.23 ಅಡಿ (ಕಳೆದ ವರ್ಷ: 83.68 ಅಡಿ)
  • ಇಂದಿನ ಸಂಗ್ರಹ: 12.80 ಟಿಎಂಸಿ (ಕಳೆದ ವರ್ಷ: 19.30 ಟಿಎಂಸಿ)
  • ಒಳಹರಿವು: 3,330 ಕ್ಯೂಸೆಕ್ (ಕಳೆದ ವರ್ಷ: 12,796 ಕ್ಯೂಸೆಕ್)
  • ನದಿಗೆ ಹೊರಹರಿವು: 500 ಕ್ಯೂಸೆಕ್ (ಕಳೆದ ವರ್ಷ: 10,042 ಕ್ಯೂಸೆಕ್)

4. ತುಂಗಭದ್ರಾ ಜಲಾಶಯ

ವಿಜಯನಗರ (ಹೊಸಪೇಟೆ) ವ್ಯಾಪ್ತಿಯ ತುಂಗಭದ್ರಾ ಜಲಾಶಯದಲ್ಲೂ ಒಳಹರಿವು ಮುಂದುವರಿದಿದೆ. ಕಳೆದ 10 ವರ್ಷಗಳ ಸರಾಸರಿಗೆ ಹೋಲಿಸಿದರೆ ಪ್ರಸ್ತುತ ಸಂಗ್ರಹ ಸಾಧಾರಣ ಮಟ್ಟದಲ್ಲಿದೆ.

  • ಗರಿಷ್ಠ ಮಟ್ಟ: 1633.00 ಅಡಿ
  • ಇಂದಿನ ನೀರಿನ ಮಟ್ಟ: 1603.10 ಅಡಿ (ಕಳೆದ ವರ್ಷ: 1625.96 ಅಡಿ)
  • ಒಟ್ಟು ಸಂಗ್ರಹ ಸಾಮರ್ಥ್ಯ: 105.788 ಟಿಎಂಸಿ
  • ಇಂದಿನ ಸಂಗ್ರಹ: 25.796 ಟಿಎಂಸಿ (ಕಳೆದ ವರ್ಷ: 79.665 ಟಿಎಂಸಿ)
  • ಸರಾಸರಿ ಒಳಹರಿವು (24 ಗಂಟೆ): 3,667 ಕ್ಯೂಸೆಕ್
  • ಒಳಹರಿವು: 4,100 ಕ್ಯೂಸೆಕ್
  • ಹೊರಹರಿವು : 3,254 ಕ್ಯೂಸೆಕ್

5. ಹೇಮಾವತಿ ಜಲಾಶಯ (ಗೊರೂರು)

ಹಾಸನ ಜಿಲ್ಲೆಯ ಗೊರೂರಿನಲ್ಲಿರುವ ಹೇಮಾವತಿ ಜಲಾಶಯದಲ್ಲಿ ನೀರಿನ ಸಂಗ್ರಹ ಉತ್ತಮವಾಗಿದ್ದು, ಕಳೆದ ವರ್ಷದ ಹೋಲಿಕೆಯಲ್ಲಿ ಸಮತೋಲನ ಕಾಯ್ದುಕೊಂಡಿದೆ.

  • ಗರಿಷ್ಠ ಮಟ್ಟ: 2922.00 ಅಡಿ
  • ಇಂದಿನ ನೀರಿನ ಮಟ್ಟ: 2904.45 ಅಡಿ (ಕಳೆದ ವರ್ಷ: 2921.00 ಅಡಿ)
  • ಒಟ್ಟು ಸಾಮರ್ಥ್ಯ: 37.103 ಟಿಎಂಸಿ
  • ಇಂದಿನ ಸಂಗ್ರಹ: 22.685 ಟಿಎಂಸಿ (ಕಳೆದ ವರ್ಷ: 36.137 ಟಿಎಂಸಿ)
  • ಒಳಹರಿವು: 1,399 ಕ್ಯೂಸೆಕ್ (ಕಳೆದ ವರ್ಷ: 6,828 ಕ್ಯೂಸೆಕ್)
  • ಒಟ್ಟು ಹೊರಹರಿವು: 300 ಕ್ಯೂಸೆಕ್ (ಕಳೆದ ವರ್ಷ: 6,765 ಕ್ಯೂಸೆಕ್)

ಕೃಷ್ಣಾ ನದಿ ಕೊಳ್ಳದ ಉತ್ತರ ಕರ್ನಾಟಕ ಭಾಗದಲ್ಲಿ ಆಲಮಟ್ಟಿಗೆ ಭಾರಿ ಒಳಹರಿವು ದಾಖಲಾಗಿರುವುದು ರೈತರಲ್ಲಿ ಮತ್ತು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ. ಇತ್ತ ದಕ್ಷಿಣ ಒಳನಾಡಿನ ಕಾವೇರಿ ಕೊಳ್ಳದ ಜಲಾಶಯಗಳಾದ ಕೆಆರ್‌ಎಸ್, ಕಬಿನಿ ಹಾಗೂ ಹೇಮಾವತಿಯಲ್ಲಿ ಮಲೆನಾಡು ಭಾಗದ ಮಳೆಯನ್ನು ಆಧರಿಸಿ ಮುಂಬರುವ ದಿನಗಳಲ್ಲಿ ಒಳಹರಿವು ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಂದು ರೈಲಿನಿಂದ ಇಳಿದು ಹಳಿ ದಾಟಲು ಹೋದಾಗ ಎದುರಿನಿಂದ ಬಂದೇ ಬಿಡ್ತು ಮತ್ತೊಂದು ರೈಲು – Kannada News | Vasai Road: Man Trapped Between Two Trains Miraculously Survives Viral Mumbai Incident

ಮುಂಬೈ, ಜುಲೈ 21: ಜೀವವನ್ನು ಪಣಕ್ಕಿಟ್ಟು ತೆಗೆದುಕೊಳ್ಳುವ ಒಂದು ನಿರ್ಧಾರವು ಎಷ್ಟು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಮಹಾರಾಷ್ಟ್ರದ ವಸಾಯಿ ರೋಡ್ ರೈಲು ನಿಲ್ದಾಣದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ನಿಂತಿದ್ದ ರೈಲಿನಿಂದ ಆಚೆ ಬಂದ ವ್ಯಕ್ತಿ ಲೋಹದ ಗ್ರಿಲ್ ದಾಟಿ ಮತ್ತೊಂದು ಕಡೆ ಇರುವ ಪ್ಲಾಟ್​ಫಾರ್ಮ್​ಗೆ ಹೋಗಲು ಯತ್ನಿಸಿದ್ದಾರೆ. ಆದರೆ ಗ್ರಿಲ್ ಮೇಲೆ ಹತ್ತುತ್ತಿದ್ದಂತೆಯೇ ಮತ್ತೊಂದು ಹಳಿಯಲ್ಲಿ ರೈಲು(Train) ಬಂದಿತ್ತು. ಆಗ ಎಲ್ಲೂ ಹೋಗಲಾಗದೆ ಸಂಕಟದಲ್ಲಿ ಸಿಲುಕಿದ್ದಾರೆ. ಅಷ್ಟೇ ಅಲ್ಲದೆ ಹಳಿಯಲ್ಲಿ ಚಲಿಸುತ್ತಿದ್ದಂತೆ ಗ್ರಿಲ್ ಮೇಲೆ ಹತ್ತಿದ್ದ ವ್ಯಕ್ತಿ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ. ಆದರೆ ಅದೃಷ್ಟವಶಾತ್ ಹಳಿಯ ಮೇಲೆ ಬಿದ್ದಿಲ್ಲ.

ವ್ಯಕ್ತಿಯೊಬ್ಬ ರೈಲಿನ ಹೊರಭಾಗದ ಕಬ್ಬಿಣದ ಗ್ರಿಲ್‌ಗಳನ್ನು ಹಿಡಿದುಕೊಂಡು ಅಪಾಯಕಾರಿಯಾಗಿ ಕುಳಿತಿದ್ದ. ಈ ವೇಳೆ ಪಕ್ಕದ ಹಳಿಯಲ್ಲಿ ಮತ್ತೊಂದು ರೈಲು ನಿಧಾನವಾಗಿ ಬರಲು ಪ್ರಾರಂಭಿಸಿತು. ಎರಡೂ ರೈಲುಗಳ ನಡುವಿನ ಜಾಗ ತೀವ್ರ ಕಿರಿದಾಗಿದ್ದರಿಂದ, ಆ ವ್ಯಕ್ತಿ ಅಲ್ಲಿಂದ ತಪ್ಪಿಸಿಕೊಳ್ಳಲಾಗದೆ ನಡುವಲ್ಲೇ ಸಿಲುಕಿಕೊಂಡಿದ್ದಾರೆ.

ಮತ್ತಷ್ಟು ಓದಿ: ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ವಿದ್ಯುತ್ ತಾಂತ್ರಿಕ ದೋಷ: ಯಶವಂತಪುರ – ಮಾದಾವರ ನಡುವೆ ರೈಲು ಸಂಚಾರ ವ್ಯತ್ಯಯ!

ಎದುರಿನ ರೈಲಿನಲ್ಲಿದ್ದ ಪ್ರಯಾಣಿಕರೊಬ್ಬರು ಈ ಸಂಪೂರ್ಣ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿಯುತ್ತಾ, ರೈಲು ಹತ್ತಿರ ಬರುತ್ತಿದೆ, ಸುರಕ್ಷಿತವಾಗಿರಿ ಎಂದು ನಿರಂತರವಾಗಿ ಕಿರುಚುತ್ತಾ ಎಚ್ಚರಿಕೆ ನೀಡುತ್ತಿರುವುದು ವೀಡಿಯೊದಲ್ಲಿದೆ. ಜನರ ಎಚ್ಚರಿಕೆಯ ಹೊರತಾಗಿಯೂ ಆ ವ್ಯಕ್ತಿ ಅಲ್ಲಿಂದ ಕದಲುವುದು ಸಾಧ್ಯವಾಗಲಿಲ್ಲ. ರೈಲು ಆತನ ಅತ್ಯಂತ ಸಮೀಪದಿಂದ ಹಾದುಹೋದಾಗ, ಗಾಬರಿಯಿಂದ ಆತ ತನ್ನ ಹಿಡಿತ ತಪ್ಪಿ ಗ್ರಿಲ್‌ನಿಂದ ಕೆಳಗೆ ಜಾರಿಬಿದ್ದಿದ್ದಾರೆ. ಆದರೆ, ಅತ್ಯಂತ ಅದೃಷ್ಟವಶಾತ್ ಕ್ಷಣಾರ್ಧದಲ್ಲಿ ತನ್ನ ಸಮತೋಲನವನ್ನು ಕಾಯ್ದುಕೊಂಡು, ರೈಲಿನ ಚಕ್ರಗಳ ಅಡಿಗೆ ಬೀಳದೆ ಬೃಹತ್ ದುರಂತದಿಂದ ಪಾರಾಗಿದ್ದಾರೆ.

ವಿಡಿಯೋ

ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೊ ಹಂಚಿಕೊಳ್ಳಲಾಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದು ಕೇವಲ ಅಪಾಯವಲ್ಲ, ಆತ ಜೀವಂತವಾಗಿ ಉಸಿರಾಡುತ್ತಿರುವುದೇ ಆತನ ಅದೃಷ್ಟ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಚಲಿಸುವ ರೈಲುಗಳ ಬಳಿ ಇಂತಹ ಬೇಜವಾಬ್ದಾರಿ ಸಾಹಸಗಳನ್ನು ಪ್ರದರ್ಶಿಸುವುದು ಎಷ್ಟು ಆಪಾಯಕಾರಿ ಎಂಬುದಕ್ಕೆ ಈ ವೀಡಿಯೊ ಕಣ್ಣು ತೆರೆಸುವಂತಿರೆಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಮನಮೋಹಕ’ ಮೂಲಕ ಕಮಾಲ್ ಮಾಡಿದ ಪ್ರಮೋದ್ ಮರವಂತೆ; ಸ್ಯಾಂಡಲ್‌ವುಡ್ ಸ್ಟಾರ್ ಲಿರಿಸಿಸ್ಟ್ ಜರ್ನಿ – Kannada News | Meet Pramod Maravante: The Genius Behind Manamohaka and Sandalwood Top Songs

ಒಂದು ಹಿಟ್ ಹಾಡು ಬಂತು ಎಂದರೆ, ಅದಕ್ಕೆ ಚಿತ್ರಸಾಹಿತಿಯ ಶ್ರಮ ಸಾಕಷ್ಟಿರುತ್ತದೆ. ಮೆಲೋಡಿ ಹಾಡು ಕೇಳುಗನಿಗೆ ಇಂಪೆನಿಸಬೇಕು. ಪೊಣಿಸುವ ಶಬ್ದಗಳು ಕೇಳುಗನ ಮನಮುಟ್ಟಬೇಕು. ಅದರಲ್ಲೂ ರೊಮ್ಯಾಂಟಿಕ್ ಹಾಡುಗಳಾದರೆ ಶೃಂಗಾರಭರಿತವಾಗಿರಬೇಕು. ಈ ಪ್ರಯತ್ನದಲ್ಲಿ ಗೀತಸಾಹಿತಿ ಪ್ರಮೋದ್ ಮರವಂತೆ ಪ್ರತಿ ಬಾರಿಯೂ ವಿಜಯ ಸಾಧಿಸುತ್ತಾರೆ. ಹೊಸ ಹೊಸ ರೀತಿಯ ಗೀತೆ ನೀಡಿ ಮನಗೆಲ್ಲುತ್ತಾರೆ. ಈಗ ‘ಟಾಕ್ಸಿಕ್’ ಚಿತ್ರದ ‘ಮನಮೋಹಕ’ ಹಾಡಿನ (Manamohaka Song) ಮೂಲಕ ಅವರು ಪ್ರೇಕ್ಷಕರ ಮನಗೆದ್ದಿದ್ದಾರೆ.

‘ಟಾಕ್ಸಿಕ್’ ಸಿನಿಮಾದ ಎರಡನೇ ಹಾಡು ‘ಮನಮೋಹಕ’ ಸದ್ಯ ಐದು ಭಾಷೆಗಳಲ್ಲಿ ಬಿಡುಗಡೆಯಾಗಿ ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸುತ್ತಿದೆ. ಈ ಅದ್ಭುತ ಮೆಲೋಡಿ ಪ್ರಣಯಗೀತೆಗೆ ಕನ್ನಡದಲ್ಲಿ ಅದ್ಭುತವಾಗಿ ಸಾಹಿತ್ಯ ಪೊಣಿಸಿದ್ದು ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ಸಾಹಿತ್ಯಗಾರ ಪ್ರಮೋದ್ ಮರವಂತೆ. ಯಶ್ ಮತ್ತು ತಾರಾ ಸುತಾರಿಯಾ ಜೋಡಿಯ ಕೆಮಿಸ್ಟ್ರಿಗೆ ಇವರ ಸಾಹಿತ್ಯದ ಸಾಲುಗಳು ಮತ್ತಷ್ಟು ಕಳೆ ಕಟ್ಟಿರುವುದು ಈಗ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.

ಕರಾವಳಿಯಿಂದ ಗಾಂಧಿನಗರದವರೆಗೆ ಮೂಡಿದ ‘ಮರವಂತೆ’ ಛಾಪು

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮರವಂತೆ ಮೂಲದ ಪ್ರಮೋದ್, ಕನ್ನಡ ಚಿತ್ರರಂಗದಲ್ಲಿ ಇಂದು ಮೋಸ್ಟ್ ವಾಂಟೆಡ್ ಲಿರಿಸಿಸ್ಟ್ ಆಗಿ ಹೊರಹೊಮ್ಮಿದ್ದಾರೆ. ಆರಂಭದ ದಿನಗಳಲ್ಲಿ ಸಾಕಷ್ಟು ಕಷ್ಟಪಟ್ಟು ಚಿತ್ರರಂಗದಲ್ಲಿ ನೆಲೆ ಕಂಡುಕೊಂಡ ಇವರು, ತಮ್ಮ ವಿಭಿನ್ನ ಶಬ್ದಗಳ ಬಳಕೆ ಮತ್ತು ಭಾವನಾತ್ಮಕ ಸಾಲುಗಳ ಮೂಲಕವೇ ಪ್ರೇಕ್ಷಕರ ಹೃದಯ ಗೆದ್ದವರು. ಕರಾವಳಿಯ ಸೊಗಡನ್ನು ತಮ್ಮ ಹೆಸರಿನಲ್ಲೇ ಇಟ್ಟುಕೊಂಡು ಗಾಂಧಿನಗರದ ದೊಡ್ಡ ದೊಡ್ಡ ಸ್ಟಾರ್ ಸಿನಿಮಾಗಳಿಗೆ ಸಾಹಿತ್ಯ ಬರೆಯುವ ಹಂತಕ್ಕೆ ಬೆಳೆದು ನಿಂತಿದ್ದಾರೆ.

ಹಿಟ್ ಸಿನಿಮಾಗಳ ಸರದಾರ

ಕೇವಲ ‘ಟಾಕ್ಸಿಕ್’ ಮಾತ್ರವಲ್ಲದೆ, ಕನ್ನಡದ ಹಲವು ಬ್ಲಾಕ್‌ಬಸ್ಟರ್ ಸಿನಿಮಾಗಳಿಗೆ ಪ್ರಮೋದ್ ಮರವಂತೆ ಹಿಟ್ ಗೀತೆಗಳನ್ನು ನೀಡಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ ಜಾಗತಿಕ ಮಟ್ಟದ ಯಶಸ್ಸು ಕಂಡ ‘ಕಾಂತಾರ’ ಚಿತ್ರದ ‘ಸಿಂಗಾರ ಸಿರಿಯೇ’ ಹಾಡಿಗೆ ಸಾಹಿತ್ಯ ಬರೆದಿದ್ದು ಇದೇ ಪ್ರಮೋದ್ ಮರವಂತೆ. ಈ ಹಾಡು ಇವರ ವೃತ್ತಿಜೀವನಕ್ಕೆ ದೊಡ್ಡ ಬ್ರೇಕ್ ನೀಡಿತ್ತು. ಸ್ಯಾಂಡಲ್‌ವುಡ್‌ನ ಪ್ರಮುಖ ತಾರೆಗಳಾದ ರಕ್ಷಿತ್ ಶೆಟ್ಟಿ, ರಾಜ್ ಬಿ. ಶೆಟ್ಟಿ ಸೇರಿದಂತೆ ಹಲವು ಸ್ಟಾರ್ ನಟ ಹಾಗೂ ನಿರ್ದೇಶಕರ ಸಿನಿಮಾಗಳಿಗೆ ಸಾಹಿತ್ಯ ಬರೆದು ಭರವಸೆಯ ಸಾಹಿತಿಯಾಗಿ ಗುರುತಿಸಿಕೊಂಡಿದ್ದಾರೆ.

ಮೆಲೋಡಿ ಮತ್ತು ಮಾಸ್ ಎರಡರಲ್ಲೂ ಸೈ

ಪ್ರಮೋದ್ ಮರವಂತೆ ಅವರ ಸಾಹಿತ್ಯದ ವಿಶೇಷತೆಯೆಂದರೆ ಅವರು ಕೇವಲ ಮೆಲೋಡಿ ಹಾಡುಗಳಿಗೆ ಮಾತ್ರ ಸೀಮಿತವಾಗಿಲ್ಲ. ಒಂದು ಕಡೆ ‘ಸಿಂಗಾರ ಸಿರಿಯೇ’ ಅಥವಾ ಈಗ ಬಂದಿರುವ ‘ಮನಮೋಹಕ’ದಂತಹ ಮಧುರ ಪ್ರಣಯಗೀತೆಗಳನ್ನು ಬರೆಯುವ ಇವರು, ಇನ್ನೊಂದೆಡೆ ಹಳ್ಳಿ ಸೊಗಡಿನ ಹಾಗೂ ಮಾಸ್ ಆಡಿಯನ್ಸ್ ಇಷ್ಟಪಡುವ ಹಾಡುಗಳನ್ನೂ ಬರೆದು ಸೈ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್’ ಚಿತ್ರದ ‘ಮನಮೋಹಕ..’ ಸಾಂಗ್; ಯಶ್-ತಾರಾ ಸುತಾರಿಯಾ ಕೆಮಿಸ್ಟ್ರಿಗೆ ಫ್ಯಾನ್ಸ್ ಫಿದಾ

ಈಗ ‘ಟಾಕ್ಸಿಕ್’ ಸಿನಿಮಾದ ದೊಡ್ಡ ಕ್ಯಾನ್ವಾಸ್‌ನಲ್ಲಿ ಇವರ ಸಾಹಿತ್ಯ ಮೂಡಿಬಂದಿರುವುದು ಅವರ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ ಇಟ್ಟಂತಾಗಿದೆ. ಮುಂಬರುವ ದಿನಗಳಲ್ಲಿ ಇವರಿಂದ ಮತ್ತಷ್ಟು ಅದ್ಭುತ ಕನ್ನಡ ಗೀತೆಗಳು ಮೂಡಿಬರಲಿ ಎಂಬುದು ಅಭಿಮಾನಿಗಳ ಆಶಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Income Tax Notice: ಆದಾಯ ತೆರಿಗೆ ನೋಟೀಸ್ ಬಂತಾ? ಅದು ವಂಚಕರ ಜಾಲವಾ? ಆನ್​ಲೈನ್​ನಲ್ಲೇ ಪರಿಶೀಲಿಸಿ – Kannada News | Income Tax Notice, steps to check the authenticity of the notice online

ನವದೆಹಲಿ, ಜುಲೈ 21: ಆದಾಯ ತೆರಿಗೆ ರಿಟರ್ನ್ಸ್ (ITR- Income Tax Returns) ಸಲ್ಲಿಸುವ ಸೀಸನ್ ಇದು. ಐಟಿಆರ್ ಸಲ್ಲಿಕೆ, ಅಧಿಕಾರಿಗಳಿಂದ ಪರಿಶೀಲನೆ, ರೀಫಂಡ್ ಇತ್ಯಾದಿ ಪ್ರಕ್ರಿಯೆಗಳು ಚಾಲೂ ಇವೆ. ಐಟಿ ರಿಟರ್ನ್ಸ್ (ITR) ಸಲ್ಲಿಕೆಗೆ ಜುಲೈ 31 ಕೊನೆಯ ದಿನಾಂಕವಾಗಿದೆ. ಈ ಸಮಯದಲ್ಲಿ ತೆರಿಗೆದಾರರಿಗೆ ಆದಾಯ ತೆರಿಗೆ ನೋಟೀಸ್ ಬಂದರೆ ಆತಂಕಪಡುವುದು ಸಹಜ. ಇದನ್ನು ಬಂಡವಾಳ ಮಾಡಿಕೊಳ್ಳುವ ಸೈಬರ್ ವಂಚಕರು, ನಕಲಿ ನೋಟೀಸ್‌ಗಳನ್ನು ಕಳುಹಿಸಿ ಹಣ ಅಥವಾ ಓಟಿಪಿ (OTP), ಬ್ಯಾಂಕ್ ವಿವರಗಳನ್ನು ಕದಿಯಲು ಯತ್ನಿಸುತ್ತಾರೆ. ಆದ್ದರಿಂದ, ಯಾವುದೇ ನೋಟೀಸ್‌ಗೆ ಪ್ರತಿಕ್ರಿಯಿಸುವ ಅಥವಾ ಹಣ ಪಾವತಿಸುವ ಮೊದಲು ಅದು ನಕಲಿಯೋ ಅಥವಾ ಅಸಲಿಯೋ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ.

ನೋಟೀಸ್​ನಲ್ಲಿ ಡಾಕ್ಯುಮೆಂಟ್ ಐಡೆಂಟಿಫಿಕೇಶನ್ ನಂಬರ್ ಇದೆಯಾ?

2019ರ ಅಕ್ಟೋಬರ್​ನಿಂದ ಜಾರಿಗೆ ಬಂದ ನಿಯಮದಂತೆ, ಆದಾಯ ತೆರಿಗೆ ಇಲಾಖೆಯು ನೀಡುವ ಪ್ರತಿಯೊಂದು ಅಧಿಕೃತ ನೋಟೀಸ್ ಅಥವಾ ಪತ್ರವು ಪ್ರತ್ಯೇಕ DIN (Document Identification Number) ಅನ್ನು ಹೊಂದಿರುತ್ತದೆ. DIN ಇಲ್ಲದ ಯಾವುದೇ ನೋಟೀಸ್ ಅಸಿಂಧುವಾಗಿರುತ್ತದೆ. ಸುಳ್ಳು ಡಿಐಎನ್ ಹಾಕಿದ್ದರೆ ಏನು ಮಾಡಬೇಕು? ಅದರ ಕ್ರಮ ಇಲ್ಲಿ ಕೆಳಕಂಡಂತೆ ಇರುತ್ತದೆ.

ಇದನ್ನೂ ಓದಿ: ಜಾತಿ ಪ್ರಮಾಣ ಪತ್ರದಲ್ಲಿನ ವಿಳಾಸ ಬದಲಾಯಿಸಬೇಕೇ? ಹಾಗಾದ್ರೆ ಹೀಗೆ ಮಾಡಿ

ಅಧಿಕೃತ ಪೋರ್ಟಲ್ ಮೂಲಕ ನೋಟೀಸ್ ಪರಿಶೀಲಿಸಿ

ತೆರಿಗೆದಾರರು ಆದಾಯ ತೆರಿಗೆ ಇಲಾಖೆಯ ಅಧಿಕೃತ ಇ-ಫೈಲಿಂಗ್ ಪೋರ್ಟಲ್‌ಗೆ (Income Tax e-filing portal) ಲಾಗ್-ಇನ್ ಆಗದೆಯೇ ನೋಟೀಸ್ ಪರಿಶೀಲಿಸಬಹುದು. ಪೋರ್ಟಲ್​ನ ಮುಖ್ಯಪುಟಕ್ಕೆ ಹೋದರೆ ಅಲ್ಲಿ ತುಸು ಕೆಳಗೆ ಸ್ಕ್ರೋಲ್ ಮಾಡಿದಾಗ ಕ್ವಿಕ್ ಲಿಂಕ್ಸ್ ಭಾಗ ಸಿಗುತ್ತದೆ. ಅದರಲ್ಲಿ ‘Authenticate the Notice/order issued by ITD’ ಅನ್ನು ಕ್ಲಿಕ್ ಮಾಡಬೇಕು. ಇಲ್ಲಿ ಪೋರ್ಟಲ್​ಗೆ ನೀವು ಲಾಗಿನ್ ಆಗುವ ಅವಶ್ಯಕತೆ ಇರುವುದಿಲ್ಲ.

ಈ ಹಂತದಲ್ಲಿ ನೋಟೀಸ್​ನ ಅಧಿಕೃತತೆ ಪರಿಶೀಲಿಸುವ ಮುಂದಿನ ಪ್ರಕ್ರಿಯೆಗೆ ಎರಡು ಆಯ್ಕೆಗಳು ಇರುತ್ತವೆ. ಪ್ಯಾನ್ ಮೂಲಕ, ಮತ್ತು ಡಿಐಎನ್ ಮೂಲಕ ಪರಿಶೀಲನೆ ಮಾಡಬಹುದು. ಮೊಬೈಲ್ ನಂಬರ್ ನೀಡುವಾಗ ಇಫೈಲಿಂಗ್​ಗೆ ನೊಂದಾಯಿತವಾದ ನಂಬರನ್ನೇ ನೀಡಬೇಕೆಂದಿಲ್ಲ. ನಿಮ್ಮ ಬಳಿ ಇರುವ ಯಾವುದೇ ಮೊಬೈಲ್ ನಂಬರ್ ಹಾಕಿ, ಅದರಿಂದ ಒಟಿಪಿ ಪಡೆದು ನಮೂದಿಸಿ ಈ ಕೆಲಸ ಮಾಡಬಹುದು. ನೋಟೀಸ್ ಪರಿಶೀಲಿಸುವಾಗ ನಿಮ್ಮ ಮೊಬೈಲ್ ಸಂಖ್ಯೆಗೆ 15 ನಿಮಿಷಗಳ ಕಾಲಾವಧಿಯ OTP ಬರುತ್ತದೆ, ತಾಳ್ಮೆ ಇರಲಿ.

ಇನ್ಕಮ್ ಟ್ಯಾಕ್ಸ್ ಇಫೈಲಿಂಗ್ ಪೋರ್ಟಲ್​ನ ವಿಳಾಸ ಇಂತಿದೆ: www.incometax.gov.in/iec/foportal

ನೋಟೀಸ್ ಅಥೆಂಟಿಕೇಟ್ ಮಾಡಲು ನೇರ ಲಿಂಕ್: eportal.incometax.gov.in/iec/foservices/#/pre-login/authenticate-notice-issued-by-itd

ಇದನ್ನೂ ಓದಿ: ನಿಮ್ಮ ಬಳಿ 20 ಲಕ್ಷ ರೂ ಇದ್ದರೆ ಎಲ್ಲಿ ಹೂಡಿಕೆ ಮಾಡಬೇಕು? ಇಲ್ಲಿದೆ ಮೂರು ಮಾದರಿಗಳು

ಸುರಕ್ಷತಾ ಸಲಹೆ: ಆದಾಯ ತೆರಿಗೆ ಇಲಾಖೆಯು ಎಂದಿಗೂ ಫೋನ್ ಕರೆ ಅಥವಾ ನಕಲಿ ಲಿಂಕ್‌ಗಳ ಮೂಲಕ ನಿಮ್ಮ ಬ್ಯಾಂಕ್ ಖಾತೆಯ PIN, CVV ಅಥವಾ OTP ಯನ್ನು ಕೇಳುವುದಿಲ್ಲ. ಯಾವುದೇ ನಕಲಿ ಬೆದರಿಕೆಗಳಿಗೆ ಹೆದರದೆ ಅಧಿಕೃತ ಪೋರ್ಟಲ್‌ನಲ್ಲಷ್ಟೇ ಮಾಹಿತಿ ಪರಿಶೀಲಿಸಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version