ಆರ್ಥಿಕತೆಯಲ್ಲಿ ಭರ್ಜರಿ ಕ್ಯಾಷ್ ಇದ್ದರೂ ಎಟಿಎಂಗಳಲ್ಲಿ ಇಲ್ಲ ಹೆಚ್ಚು ನೋಟು; ಕರ್ನಾಟಕದಲ್ಲೇ ಅತಿಹೆಚ್ಚು ಕೊರತೆ; ಯಾಕೆ ಈ ಕಥೆ? – Kannada News

ನವದೆಹಲಿ, ಜೂನ್ 5: ಭಾರತದಲ್ಲಿರುವ ಎಟಿಎಂಗಳಲ್ಲಿ ಅಗತ್ಯ ಕ್ಯಾಷ್ ಪೂರೈಕೆ (Cash supply) ಆಗುತ್ತಿಲ್ಲ ಎನ್ನುವಂತಹ ವರದಿಯೊಂದು ಬಂದಿದೆ. ಎಟಿಎಂ ಯಂತ್ರಗಳಲ್ಲಿ ಕ್ಯಾಷ್ ಕೊರತೆ ಎದುರಾಗಿದೆ. ಈ ವಿಚಾರದ ಬಗ್ಗೆ ಎಟಿಎಂ ಉದ್ಯಮದ ಮಹಾಒಕ್ಕೂಟವಾದ ಸಿಎಟಿಎಂಐ (CATMi) ಭಾರತೀಯ ಬ್ಯಾಂಕುಗಳ ಸಂಸ್ಥೆಯ (ಐಬಿಎ) ಗಮನಕ್ಕೆ ತಂದಿದೆ ಎಂದು ಬ್ಯುಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆ ವರದಿ ಮಾಡಿದೆ. ಭಾರತದ ಆರ್ಥಿಕತೆಯೊಳಗೆ ಅತಿಹೆಚ್ಚು ಕ್ಯಾಷ್ ಹರಿವು ಇರುವ ಸಂದರ್ಭದಲ್ಲೇ ಎಟಿಎಂಗಳಲ್ಲಿ ಕ್ಯಾಷ್ ಕ್ರಂಚ್ ಪರಿಸ್ಥಿತಿ ಉದ್ಭವವಾಗಿರುವುದು ಅಚ್ಚರಿಯ ಸಂಗತಿ.

ಈ ವರದಿ ಪ್ರಕಾರ ಭಾರತದಾದ್ಯಂತ ಎಟಿಎಂಗಳಲ್ಲಿ 94,000 ಕೋಟಿ ರೂ ಮೊತ್ತದ ಕ್ಯಾಷ್ ಇರಬೇಕಿತ್ತು. ಆದರೆ, ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಎಲ್ಲಾ ಎಟಿಎಂಗಳಲ್ಲಿದ್ದ ನಗದು ಹಣ ಕ್ರಮವಾಗಿ 54,000 ಕೋಟಿ ರೂ ಮತ್ತು 61,000 ಕೋಟಿ ರೂ ಎನ್ನಲಾಗಿದೆ. ಅಂದರೆ, ಎಟಿಎಂಗಳಲ್ಲಿ ಸರಾಸರಿಯಾಗಿ ಕ್ಯಾಷ್ ಭರ್ತಿಯಾಗಿರುವುದು ಶೇ 60ರ ಆಸುಪಾಸು ಮಾತ್ರ.

ಕರ್ನಾಟಕದಲ್ಲಿ ಅತಿಹೆಚ್ಚು ಕೊರತೆ…

ದೇಶಾದ್ಯಂತ ಸರಾಸರಿಯಾಗಿ ಎಟಿಎಂಗಳಲ್ಲಿ ಶೇ 60ರಷ್ಟು ಕ್ಯಾಷ್ ಇದ್ದರೆ, ಕರ್ನಾಟಕದಲ್ಲಿ ಇದು ಶೇ. 36 ಮಾತ್ರವೇ. ಅಂದರೆ, ಕರ್ನಾಟಕದಲ್ಲಿರುವ ಎಟಿಎಂಗಳಲ್ಲಿ ಕ್ಯಾಷ್ ಕೊರತೆ ಅತಿ ಹೆಚ್ಚು ಇದೆ. ಆಂಧ್ರ ಮತ್ತು ತೆಲಂಗಾಣದಲ್ಲೂ ಎಟಿಎಂಗಳಲ್ಲಿ ಇರುವ ಕ್ಯಾಷ್ ಶೇ. 39, ಶೇ. 41ರಷ್ಟು ಮಾತ್ರವೇ ಎಂದು ಈ ವರದಿ ಹೇಳುತ್ತದೆ.

ಇದನ್ನೂ ಓದಿ: ಬಂಡವಾಳ ಆಕರ್ಷಿಸಲು ಬ್ಯಾಂಕುಗಳಿಗೆ ಹೆಡ್ಡಿಂಗ್ ಸಪೋರ್ಟ್​ನಿಂದ ಹಿಡಿದು ಎನ್​ಆರ್​ಐ ಹೂಡಿಕೆ ಮಿತಿ ಹೆಚ್ಚಳದವರೆಗೆ ಆರ್​ಬಿಐನಿಂದ 5 ಕ್ರಮಗಳು

ಆರ್ಥಿಕತೆಯಲ್ಲಿ ಭಾರೀ ಪ್ರಮಾಣದಲ್ಲಿ ನಗದು ಹಣ ಇದ್ದರೂ ಎಟಿಎಂಗಳಲ್ಲಿ ಕ್ಯಾಷ್ ಕೊರತೆ ಯಾಕೆ ಕಾಡುತ್ತಿದೆ? ಇದಕ್ಕೆ ಹಲವು ಕಾರಣಗಳನ್ನು ಗುರುತಿಸಲಾಗಿದೆ. ಅದರಲ್ಲಿ ಎಟಿಎಂ ಇಂಟರ್​ಚೇಂಜ್ ಶುಲ್ಕ ಮೊದಲಾದ ಸಮಸ್ಯೆಗಳು ಒಳಗೊಂಡಿವೆ.

ಎಟಿಎಂ ಇಂಟರ್​ಚೇಂಜ್ ಫೀ ಎಂಬುದು ಒಂದು ಬ್ಯಾಂಕು ತನ್ನ ಗ್ರಾಹಕ ಬೇರೊಂದು ಬ್ಯಾಂಕಿನ ಎಟಿಎಂ ಬಳಸಿದಾಗ ಆ ಬ್ಯಾಂಕಿಗೆ ತೆರಬೇಕಾದ ಶುಲ್ಕ. ಎಟಿಎಂನಲ್ಲಿ ಕ್ಯಾಷ್ ತುಂಬಿಸುವುದು, ಭದ್ರತೆ ಒದಗಿಸುವುದು ಇತ್ಯಾದಿ ಕೆಲಸಗಳಿಗೆ ಸಾಕಷ್ಟು ವ್ಯಯವಾಗುತ್ತದೆ. ಇದನ್ನು ಭರಿಸುವಷ್ಟು ಪ್ರಮಾಣದ ಇಂಟರ್​ಚೇಂಜ್ ಫೀ ಇಲ್ಲ ಎನ್ನುವುದು ಉದ್ಯಮದ ಅಳಲು. ಸರ್ಕಾರ ಇತ್ತೀಚೆಗಷ್ಟೇ ಈ ಇಂಟರ್​ಚೇಂಜ್ ಫೀ ಅನ್ನು 17 ರೂನಿಂದ 19 ರೂಗೆ ಏರಿಸಿದೆ. ಆದರೆ, ಇದು ಸಾಕಾಗುವುದಿಲ್ಲ ಎಂದು ಈ ಉದ್ಯಮದವರು ಹೇಳುತ್ತಿದ್ದಾರೆ.

ಎಟಿಎಂ ಬಳಕೆಯಲ್ಲೂ ಇಳಿಮುಖ

ಭಾರತದಾದ್ಯಂತ ಎಟಿಎಂ ಬಳಸುವವರ ಸಂಖ್ಯೆ ಕಡಿಮೆ ಆಗುತ್ತಿದೆ. 2025ರ ಮೇ ತಿಂಗಳಲ್ಲಿ ಹತ್ತಿರಹತ್ತಿರ 50 ಕೋಟಿ ಸಂಖ್ಯೆಯಷ್ಟು ಎಟಿಎಂ ಟ್ರಾನ್ಸಾಕ್ಷನ್ಸ್ ಆಗಿದ್ದವು. ಈ ವರ್ಷದ ಮೇ ತಿಂಗಳಲ್ಲಿ ಅದು 44.6 ಕೋಟಿಗೆ ಇಳಿಕೆ ಆಗಿದೆ.

ಇದನ್ನೂ ಓದಿ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸೆಬಿ ನೊಂದಣಿ ಇಲ್ಲದೇ ಎನ್​ಆರ್​ಐಗಳಿಗೆ ಹೂಡಿಕೆ ಮಿತಿ ಹೆಚ್ಚಳ

ಈ ಇಳಿಕೆಗೆ ವಿವಿಧ ಕಾರಣಗಳಿವೆ. ಎಟಿಎಂನಿಂದ ಫ್ರೀ ಲಿಮಿಟ್ ದಾಟಿ ಮಾಡಲಾಗುವ ಟ್ರಾನ್ಸಾಕ್ಷನ್​ಗೆ 23 ರೂ ವಿಧಿಸಲಾಗುತ್ತದೆ. ಇದರಿಂದ ಗ್ರಾಹಕರು ಎಟಿಎಂನಿಂದ ದೂರವಾಗುತ್ತಿರಬಹುದು.

ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ದೊಡ್ಡ ಹೊಡೆತ

ಒಂದು ಅಂದಾಜು ಪ್ರಕಾರ, ಎಟಿಎಂಗಳನ್ನು ಈಗ ಅತಿಹೆಚ್ಚು ಬಳಸುವುದು ಡಿಬಿಟಿ ಸ್ಕೀಮ್​ನ ಫಲಾನುಭವಿಗಳು. ಪಿಎಂ ಕಿಸಾನ್ ಯೋಜನೆಯಂತಹ ಸ್ಕೀಮ್​ಗಳಲ್ಲಿ ಸರ್ಕಾರವು ಡಿಬಿಟಿ ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುತ್ತದೆ. ಇವರು ಎಟಿಎಂ ಮೂಲಕ ಹಣ ವಿತ್​ಡ್ರಾ ಮಾಡುತ್ತಾರೆ. ಈಗ ಎಟಿಎಂಗಳಲ್ಲಿ ಉಂಟಾಗಿರುವ ಕ್ಯಾಷ್ ಕೊರತೆಯಿಂದ ಅತಿಹೆಚ್ಚು ಬಾಧಿತವಾಗುವುದು ಈ ವರ್ಗದ ಜನರೇ. ಅದರಲ್ಲೂ ಕರ್ನಾಟಕದಲ್ಲಿರುವ ಫಲಾನುಭವಿಗಳು ಈ ಸಂಕಷ್ಟ ಎದುರಿಸುವಂತಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 3:39 pm, Fri, 5 June 26

Source link

Abhijit Patil: ಕೋಚಿಂಗ್ ಇಲ್ಲದೆ, ಮೊದಲ ಪ್ರಯತ್ನದಲ್ಲೇ IPS ಅಧಿಕಾರಿಯಾದ 22 ವರ್ಷದ ಯುವಕ; ಅಭಿಜೀತ್ ಪಾಟೀಲ್ ಯಶೋಗಾಥೆ – Kannada News

ಅಭಿಜೀತ್ ಪಾಟೀಲ್Image Credit source: Instagram/Abhijeet Patil

ಭಾರತದ ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾದ UPSC (ನಾಗರಿಕ ಸೇವೆಗಳ ಪರೀಕ್ಷೆ) ಉತ್ತೀರ್ಣರಾಗುವುದು ಲಕ್ಷಾಂತರರ ಜನರ ಕನಸು. ಈ ಪರೀಕ್ಷೆಯಲ್ಲಿ ಗೆಲ್ಲಲು ದುಬಾರಿ ತರಬೇತಿ ಸಂಸ್ಥೆಗಳು ಹಾಗೂ ಲಕ್ಷಾಂತರ ರೂಪಾಯಿ ಹಣ ಬೇಕೇಬೇಕು ಎಂಬ ಬಲವಾದ ನಂಬಿಕೆ ಸಮಾಜದಲ್ಲಿದೆ. ಆದರೆ, ಸರಿಯಾದ ಯೋಜನೆ, ಕಟ್ಟುನಿಟ್ಟಾದ ಶಿಸ್ತು ಮತ್ತು ಸಮರ್ಪಣಾ ಮನೋಭಾವವಿದ್ದರೆ ಯಾವುದೇ ಕೋಚಿಂಗ್ ಇಲ್ಲದೆಯೂ ಇತಿಹಾಸ ಸೃಷ್ಟಿಸಬಹುದು ಎಂದು ಮಹಾರಾಷ್ಟ್ರದ ಯುವ ಅಧಿಕಾರಿ ಅಭಿಜೀತ್ ಪಾಟೀಲ್ ಸಾಬೀತುಪಡಿಸಿದ್ದಾರೆ. ಕೇವಲ 22ನೇ ವಯಸ್ಸಿನಲ್ಲಿ, ತಮ್ಮ ಮೊದಲ ಪ್ರಯತ್ನದಲ್ಲೇ ಅಖಿಲ ಭಾರತ ಮಟ್ಟದಲ್ಲಿ 470ನೇ ಶ್ರೇಣಿ (AIR 470) ಪಡೆಯುವ ಮೂಲಕ ಅವರು IPS ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.

ಪ್ರತಿಭಾವಂತ ಯುವಕನ ಕೌಟುಂಬಿಕ ಹಿನ್ನೆಲೆ:

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿ ಪ್ರದೇಶದವರಾದ ಅಭಿಜೀತ್ ಪಾಟೀಲ್ ಬಾಲ್ಯದಿಂದಲೂ ಶೈಕ್ಷಣಿಕವಾಗಿ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿ. ಇವರ ತಂದೆ ತುಳಸಿರಾಮ್ ಪಾಟೀಲ್ ಅವರು ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ನಲ್ಲಿ ಮುಖ್ಯ ಲೆಕ್ಕಪರಿಶೋಧಕರಾಗಿ ಹಾಗೂ ತಾಯಿ ಮಹಾರಾಷ್ಟ್ರ ನೀರಾವರಿ ಇಲಾಖೆಯಲ್ಲಿ ಉದ್ಯೋಗಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುವ ಇಂತಹದೊಂದು ಪ್ರಬುದ್ಧ ಕೌಟುಂಬಿಕ ವಾತಾವರಣವೇ ಅಭಿಜೀತ್ ಅವರ ಯಶಸ್ಸಿಗೆ ಭದ್ರವಾದ ಅಡಿಪಾಯವಾಯಿತು.

ಯೂಟ್ಯೂಬ್ ವೀಡಿಯೋದಿಂದ ಬದಲಾದ ಬದುಕಿನ ಹಾದಿ:

ಅಭಿಜೀತ್ ಅವರು ಬಿ.ಟೆಕ್ ಎಂಜಿನಿಯರಿಂಗ್ ಪದವೀಧರರು. ಆರಂಭದಲ್ಲಿ ಅವರಿಗೆ ನಾಗರಿಕ ಸೇವೆಗಳಿಗೆ ಸೇರಬೇಕು ಅಥವಾ ದೇಶದ ಅತ್ಯುನ್ನತ ಪರೀಕ್ಷೆ ಬರೆಯಬೇಕು ಎಂಬ ಯಾವುದೇ ನಿರ್ದಿಷ್ಟ ಯೋಜನೆ ಇರಲಿಲ್ಲ. ಆದರೆ, ಎಂಜಿನಿಯರಿಂಗ್ ಓದುತ್ತಿದ್ದ ದಿನಗಳಲ್ಲಿ ಯೂಟ್ಯೂಬ್‌ನಲ್ಲಿ ಯುವ ಯುಪಿಎಸ್‌ಸಿ ಟಾಪರ್ ಒಬ್ಬರ ಸಂದರ್ಶನದ ವೀಡಿಯೋ ನೋಡಿದ ತಕ್ಷಣ ಅವರ ಆಲೋಚನೆ ಸಂಪೂರ್ಣವಾಗಿ ಬದಲಾಯಿತು. ನಾಗರಿಕ ಅಧಿಕಾರಿಗಳು ಸಮಾಜದ ಮೇಲೆ ಬೀರುವ ಸಕಾರಾತ್ಮಕ ಪ್ರಭಾವ ಮತ್ತು ಅವರಿಗಿರುವ ಜವಾಬ್ದಾರಿಗಳಿಂದ ಪ್ರೇರಿತರಾದ ಅಭಿಜೀತ್, ತಾವೂ ಒಬ್ಬ ಐಪಿಎಸ್ ಅಧಿಕಾರಿಯಾಗಬೇಕೆಂದು ಆ ಕ್ಷಣದಲ್ಲೇ ದೃಢ ನಿರ್ಧಾರ ಮಾಡಿದರು. ಆ ನಿರ್ಧಾರದ ನಂತರ ಅವರು ಎಂದೂ ಹಿಂತಿರುಗಿ ನೋಡಲಿಲ್ಲ. ತಮ್ಮ ಕಾಲೇಜಿನ ಕೊನೆಯ ಸೆಮಿಸ್ಟರ್ ಫಲಿತಾಂಶ ಬರುವ ಮೊದಲೇ ಅವರು ಯುಪಿಎಸ್‌ಸಿ ಪ್ರಿಲಿಮ್ಸ್ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದರು.

ಸ್ವಯಂ ಅಧ್ಯಯನದ ಶಕ್ತಿ:

ಇಂದಿನ ದಿನಗಳಲ್ಲಿ UPSC ತರಬೇತಿಗಾಗಿ ಲಕ್ಷಾಂತರ ರೂಪಾಯಿ ಸುರಿಯುವವರ ನಡುವೆ, ಅಭಿಜೀತ್ ಕೇವಲ NCERT ಪಠ್ಯಪುಸ್ತಕಗಳು, ಗೂಗಲ್ ಮತ್ತು ಯೂಟ್ಯೂಬ್‌ನಂತಹ ಉಚಿತ ಆನ್‌ಲೈನ್ ಸಂಪನ್ಮೂಲಗಳನ್ನು ಬಳಸಿಕೊಂಡು ಮನೆಯಲ್ಲೇ ಓದಿ ದೇಶಕ್ಕೆ ಮಾದರಿಯಾಗಿದ್ದಾರೆ.

ದಿನಕ್ಕೆ 8 ಗಂಟೆಗಳ ಕಟ್ಟುನಿಟ್ಟಾದ ಶಿಸ್ತಿನ ತಪಸ್ಸು:

ಅಭಿಜೀತ್ ಪಾಟೀಲ್ ಅವರ ಯಶಸ್ಸಿನ ಅಸಲಿ ರಹಸ್ಯ ಇರುವುದು ಅವರ ಶಿಸ್ತಿನ ದಿನಚರಿಯಲ್ಲಿ. ಅವರು ಸುಮಾರು ಎಂಟು ತಿಂಗಳ ಕಾಲ ದಿನಕ್ಕೆ ಕಟ್ಟುನಿಟ್ಟಾಗಿ 8 ಗಂಟೆಗಳ ಕಾಲ ಸಂಪೂರ್ಣ ಏಕಾಗ್ರತೆಯಿಂದ ಅಧ್ಯಯನ ಮಾಡಿದರು. ಯಾವುದೇ ಕೋಚಿಂಗ್ ಸೆಂಟರ್ ಮೆಟ್ಟಿಲು ಹತ್ತದಿದ್ದರೂ, ತಮ್ಮ ಗುರಿಯತ್ತ ಮಾತ್ರ ಗಮನ ನೆಟ್ಟಿದ್ದರು. ದಿನಕ್ಕೆ 15-18 ಗಂಟೆಗಳು ಓದುವುದಕ್ಕಿಂತ, ಓದುವ 8 ಗಂಟೆಗಳ ಅವಧಿಯನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯ ಎಂದು ಅವರು ತೋರಿಸಿಕೊಟ್ಟರು. ಈ ನಿರಂತರ ಪರಿಶ್ರಮದ ಫಲವಾಗಿ, ಕೇವಲ 22ನೇ ವಯಸ್ಸಿಗೆ ಅವರು ದೇಶದ ಅತ್ಯಂತ ಕಿರಿಯ ಐಪಿಎಸ್ ಅಧಿಕಾರಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದರು.

ಇದನ್ನೂ ಓದಿ: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ

UPSC ಆಕಾಂಕ್ಷಿಗಳಿಗೆ IPS ಅಭಿಜೀತ್ ನೀಡುವ ಸುವರ್ಣ ಸಲಹೆಗಳು:

ತಮ್ಮ ಯಶಸ್ಸಿನ ಪಯಣದ ಆಧಾರದ ಮೇಲೆ ಅಭಿಜೀತ್ ಪಾಟೀಲ್ ಮುಂಬರುವ ಅಭ್ಯರ್ಥಿಗಳಿಗೆ ಕೆಲವು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ.

  • ಪಠ್ಯಕ್ರಮದ ಸ್ಪಷ್ಟತೆ: ಯುಪಿಎಸ್‌ಸಿ ಪರೀಕ್ಷೆಯ ಪಠ್ಯಕ್ರಮವನ್ನು (Syllabus) ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಯಶಸ್ಸಿನ ಮೊದಲ ಹೆಜ್ಜೆ. ಪರೀಕ್ಷೆಗೆ ಏನು ಓದಬೇಕು ಎಂಬ ಸ್ಪಷ್ಟತೆ ಇರಬೇಕು.
  • ಗುಣಮಟ್ಟದ ಓದು ಮುಖ್ಯ: ದಿನಕ್ಕೆ 15 ಗಂಟೆಗಳ ಕಾಲ ಸುಮ್ಮನೆ ಪುಸ್ತಕ ಹಿಡಿದು ಕೂರುವುದಕ್ಕಿಂತ, 6 ರಿಂದ 8 ಗಂಟೆಗಳ ಕಾಲ ಪೂರ್ಣ ಏಕಾಗ್ರತೆಯಿಂದ ಓದುವುದು ಹೆಚ್ಚು ಫಲಿತಾಂಶ ನೀಡುತ್ತದೆ.
  • ಸಾಮಾಜಿಕ ಜಾಲತಾಣಗಳ ಮಿತ ಬಳಕೆ: ಸೋಶಿಯಲ್ ಮೀಡಿಯಾಗಳಲ್ಲಿ ರೀಲ್ಸ್ ನೋಡಿ ಸಮಯ ವ್ಯರ್ಥ ಮಾಡುವ ಬದಲು, ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಗೂಗಲ್ ಮತ್ತು ಯೂಟ್ಯೂಬ್‌ನಂತಹ ವೇದಿಕೆಗಳನ್ನು ಡಿಜಿಟಲ್ ಆಯುಧಗಳಾಗಿ ಬಳಸಿಕೊಳ್ಳಿ.
  • ನಿರಂತರತೆ ಮತ್ತು ಆತ್ಮವಿಶ್ವಾಸ: ನಿರಂತರ ಶಿಸ್ತು, ನಿಮ್ಮ ಮೇಲೆ ನಿಮಗಿರುವ ಆತ್ಮವಿಶ್ವಾಸ ಮತ್ತು ಸರಿಯಾದ ಕಾರ್ಯತಂತ್ರ ಇದ್ದರೆ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ತೇರ್ಗಡೆಯಾಗುವುದು ಅಸಾಧ್ಯವೇನಲ್ಲ.

ಪ್ರತಿಯೊಬ್ಬರಿಗೂ ಸ್ಪೂರ್ತಿ ಈ ಯುವ ಅಧಿಕಾರಿ:

ಅಭಿಜೀತ್ ಪಾಟೀಲ್ ಅವರ ಈ ಯಶೋಗಾಥೆಯು ಒಂದು ಸತ್ಯವನ್ನು ಸಾರುತ್ತದೆ. ಯುಪಿಎಸ್‌ಸಿಯಲ್ಲಿ ಯಶಸ್ವಿಯಾಗಲು ದುಬಾರಿ ತರಬೇತಿಗಿಂತ ಕಠಿಣ ಪರಿಶ್ರಮ, ಶಿಸ್ತು ಮತ್ತು ಸರಿಯಾದ ದಿಕ್ಕಿನಲ್ಲಿ ಪ್ರಯತ್ನ ಮಾಡುವುದು ಮುಖ್ಯ. ಸಾಮಾನ್ಯ ಮಧ್ಯಮ ವರ್ಗದ ಕುಟುಂಬದ ಯುವಕನೊಬ್ಬ ಕೇವಲ ಸ್ವ-ಅಧ್ಯಯನದ (Self-Study) ಮೂಲಕ ದೇಶದ ಅತ್ಯಂತ ಪ್ರತಿಷ್ಠಿತ ಸೇವೆಯಾದ ಐಪಿಎಸ್ ತಲುಪಿರುವುದು ಇಂದಿನ ತಲೆಮಾರಿನ ಪ್ರತಿಯೊಬ್ಬ ವಿದ್ಯಾರ್ಥಿಗೂ ಅತ್ಯಂತ ಸ್ಪೂರ್ತಿದಾಯಕವಾಗಿದೆ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

PAK vs AUS: ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆದ್ದು ದಾಖಲೆ ಬರೆದ ಪಾಕಿಸ್ತಾನ – Kannada News

ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಪಾಕಿಸ್ತಾನದ ಪ್ರವಾಸ ಮಾಡಿದ್ದ ಆಸ್ಟ್ರೇಲಿಯಾ (Pakistan vs Australia) ತಂಡ 2-1 ಅಂತರದಿಂದ ಸರಣಿ ಕಳೆದುಕೊಂಡು ಬರಿ ಕೈಯಲ್ಲಿ ತನ್ನ ತವರಿಗೆ ವಾಪಸ್ ಮರಳಿದೆ. ಆತಿಥೇಯ ಪಾಕಿಸ್ತಾನ ತಂಡ ಜೂನ್ 4 ರಂದು ಲಾಹೋರ್‌ನಲ್ಲಿ ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯವನ್ನು ನಾಲ್ಕು ವಿಕೆಟ್‌ಗಳಿಂದ ಗೆಲ್ಲುವ ಮೂಲಕ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿತು. ಈ ಸರಣಿ ಗೆಲುವಿನೊಂದಿಗೆ ಪಾಕಿಸ್ತಾನ ವಿಶೇಷ ದಾಖಲೆಯನ್ನು ನಿರ್ಮಿಸಿತು. ಆಸ್ಟ್ರೇಲಿಯಾ ವಿರುದ್ಧ ಸತತ ಮೂರು ಏಕದಿನ ಸರಣಿಗಳನ್ನು ಗೆದ್ದ ಮೊದಲ ಏಷ್ಯನ್ ತಂಡ ಎಂಬ ಹೆಗ್ಗಳಿಕೆಗೆ ಇದೀಗ ಪಾಕಿಸ್ತಾನ ಪಾತ್ರವಾಗಿದೆ. ಮಾತ್ರವಲ್ಲದೆ ಈ ಸಾಧನೆ ಮಾಡಿದ ವಿಶ್ವದ ಎರಡನೇ ತಂಡವೆಂಬ ದಾಖಲೆಯೂ ಪಾಕ್ ಪಾಲಾಗಿದೆ.

38 ರನ್‌ಗೆ 7 ವಿಕೆಟ್ ಪತನ

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ತನ್ನ ಕೊನೆಯ ಏಳು ವಿಕೆಟ್‌ಗಳನ್ನು ಕೇವಲ 38 ರನ್‌ಗಳಿಗೆ ಕಳೆದುಕೊಂಡಿತು. ಇತ್ತ ತಂಡಕ್ಕೆ ಉತ್ತಮ ಆರಂಭವೂ ಸಿಗಲಿಲ್ಲ. ಶೂನ್ಯಕ್ಕೆ ಮೊದಲ ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾ, 42 ರನ್​ಗಳಿಗೆ ತನ್ನ ಎರಡನೇ ವಿಕೆಟ್ ಕಳೆದುಕೊಂಡಿತು. 100 ರನ್​ಗಳ ಒಳಗೆ ಮೂರನೇ ವಿಕೆಟ್ ಕೂಡ ಪತನವಾಯಿತು. ಆದಾಗ್ಯೂ ನಾಯಕ ಜೋಶ್ ಇಂಗ್ಲಿಸ್ ಒಂದು ತುದಿಯನ್ನು ದೃಢವಾಗಿ ನಿಂತು 65 ರನ್​ಗಳ ಇನ್ನಿಂಗ್ಸ್ ಆಡಿದರು. ಇಂಗ್ಲಿಸ್ ಕ್ರೀಸ್‌ನಲ್ಲಿದ್ದ ತನಕ, ಆಸ್ಟ್ರೇಲಿಯಾ ದೊಡ್ಡ ಸ್ಕೋರ್‌ ದಾಖಲಿಸುವಂತೆ ತೋರುತ್ತಿತ್ತು. ಆದರೆ ಶಾಹೀನ್ ಶಾ ಅಫ್ರಿದಿ ಇಂಗ್ಲಿಸ್ ಅವರನ್ನು ಔಟ್ ಮಾಡಿದ ತಕ್ಷಣ, ಇಡೀ ಆಸ್ಟ್ರೇಲಿಯನ್ ಇನ್ನಿಂಗ್ಸ್ ತರಗೆಲೆಗಳಂತೆ ಉದುರಿತು.

157 ರನ್​ಗಳಿಗೆ ಆಲೌಟ್

ಒಂದು ಹಂತದಲ್ಲಿ ಆಸ್ಟ್ರೇಲಿಯಾ 26 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 119 ರನ್ ಗಳಿಸಿತ್ತು. ಆದರೆ ಜೋಶ್ ಇಂಗ್ಲಿಸ್ ಔಟಾದ ಬಳಿಕ ಆಸ್ಟ್ರೇಲಿಯಾದ ಯಾವುದೇ ಬ್ಯಾಟ್ಸ್‌ಮನ್​ಗೆ ಕ್ರೀಸ್‌ನಲ್ಲಿ ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ. ತಂಡವು 157 ರನ್ ತಲುಪುವ ಹೊತ್ತಿಗೆ, ಉಳಿದ 6 ವಿಕೆಟ್‌ಗಳನ್ನು ಕಳೆದುಕೊಂಡಿತು. ಜೋಶ್ ಇಂಗ್ಲಿಸ್ ಹೊರತುಪಡಿಸಿ, ಬೇರೆ ಯಾವುದೇ ಬ್ಯಾಟ್ಸ್‌ಮನ್​ಗೂ 20 ರನ್ ಗಳಿಸಲು ಸಾಧ್ಯವಾಗಲಿಲ್ಲ. ಮಾರ್ನಸ್ ಲಬುಶೇನ್ ಮತ್ತು ಅಲೆಕ್ಸ್ ಕ್ಯಾರಿ ತಲಾ 19 ರನ್ ಗಳಿಸಿದರೆ, ಕೊನೆಯಲ್ಲಿ ಆಡಮ್ ಜಂಪಾ 10 ರನ್ ಗಳಿಸಿದರು. ಬೇರೆ ಯಾವುದೇ ಆಟಗಾರನಿಗೆ ಎರಡಂಕಿ ತಲುಪಲು ಸಾಧ್ಯವಾಗಲಿಲ್ಲ.

4 ವಿಕೆಟ್‌ಗಳಿಂದ ಗೆದ್ದ ಪಾಕ್

158 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಪಾಕಿಸ್ತಾನ 41.5 ಓವರ್‌ಗಳಲ್ಲಿ ಕೇವಲ ಆರು ವಿಕೆಟ್‌ಗಳ ನಷ್ಟಕ್ಕೆ ಗೆಲುವಿನ ದಡ ಮುಟ್ಟಿತು. ಈ ರನ್ ಚೇಸ್‌ನಲ್ಲಿ ಪಾಕಿಸ್ತಾನದ ಪರ ಬಾಬರ್ ಆಝಂ 40 ರನ್​ಗಳ ಗೆಲುವಿನ ಇನ್ನಿಂಗ್ಸ್ ಆಡಿದರು. ಹಾಗೆಯೇ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಶದಾಬ್ ಖಾನ್ ಕೂಡ 29 ರನ್‌ ಬಾರಿಸಿ ಅಜೇಯರಾಗಿ ಉಳಿದರು. ಆರಂಭಿಕ ಆಟಗಾರ ಮಾಜ್ ಸದಾಕತ್ ಕೂಡ 27 ರನ್​ಗಳ ಕಾಣಿಕೆ ನೀಡಿದರು. ಈ ಮೂಲಕ ಪಾಕಿಸ್ತಾನ ತಂಡವು ಮೂರನೇ ಏಕದಿನ ಪಂದ್ಯವನ್ನು ಇನ್ನೂ 49 ಎಸೆತಗಳು ಬಾಕಿ ಇರುವಂತೆ 4 ವಿಕೆಟ್‌ಗಳಿಂದ ಗೆದ್ದು ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿತು.

IND vs AFG: ಭಾರತ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಸರಣಿಗೆ ಅಫ್ಘಾನಿಸ್ತಾನ ತಂಡ ಪ್ರಕಟ

ಹ್ಯಾಟ್ರಿಕ್ ಸರಣಿ ಜಯ

ಇದು ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನದ ಸತತ ಮೂರನೇ ಏಕದಿನ ಸರಣಿ ಗೆಲುವು. ಇದಕ್ಕೂ ಮೊದಲು, 2022 ರಲ್ಲಿ ತವರು ನೆಲದಲ್ಲಿ ನಡೆದ ಏಕದಿನ ಸರಣಿಯಲ್ಲಿ ಪಾಕಿಸ್ತಾನ ತಂಡವು ಆಸ್ಟ್ರೇಲಿಯಾವನ್ನು 2-1 ಅಂತರದಿಂದ ಸೋಲಿಸಿತ್ತು. ನಂತರ, 2024 ರಲ್ಲಿ, ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು 1-2 ಅಂತರದಿಂದ ಗೆದ್ದುಕೊಂಡಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಂದಿನಿಂದ ಜೂನ್ 11 ರವರೆಗೆ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ವರುಣನ ಅಬ್ಬರ: ಮೀನುಗಾರರಿಗೆ, ಪ್ರವಾಸಿಗರಿಗೆ ಬಿಗ್​​​ ಅಲರ್ಟ್ – Kannada News

ಬೆಂಗಳೂರು, ಜೂ5: ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಆರಂಭವಾಗಿದ್ದು, ಮುಂದಿನ ಒಂದು ವಾರದ ಕಾಲ ವಿವಿಧ ಜಿಲ್ಲೆಗಳಲ್ಲಿ ವರುಣನ ಆರ್ಭಟ ಜೋರಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಜೂನ್ 5 ರಿಂದ ಅಂದರೆ ಇಂದಿನಿಂದಲ್ಲೇ ಜೂನ್ 11 ರವರೆಗೆ ಕರ್ನಾಟಕದ ಒಳನಾಡು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಹವಾಮಾನ ಇಲಾಖೆಯ ವರದಿಯ ಪ್ರಕಾರ, ಒಳನಾಡಿನ ಜಿಲ್ಲೆಗಳ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಕನಿಷ್ಠ 64.5 ಮಿಲಿಮೀಟರ್‌ನಿಂದ ಗರಿಷ್ಠ 115.4 ಮಿಲಿಮೀಟರ್‌ನಷ್ಟು ಭಾರಿ ಪ್ರಮಾಣದ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಮಳೆಯ ತೀವ್ರತೆ ಹೆಚ್ಚಿರಲಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಮುನ್ನೆಚ್ಚರಿಕೆಯಾಗಿ ಈ ಭಾಗಗಳಲ್ಲಿ ‘ಯೆಲ್ಲೋ ಅಲರ್ಟ್’ ಘೋಷಿಸಿದೆ.

ಧಾರಾಕಾರ ಮಳೆಯ ಜೊತೆಗೆ ಸಿಡಿಲು, ಮಿಂಚು ಹಾಗೂ ಬಿರುಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮತ್ತು ರೈತರು ಅನಗತ್ಯವಾಗಿ ಹೊರಗಡೆ ತಿರುಗಾಡದಂತೆ ಹಾಗೂ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಕೋರಲಾಗಿದೆ. ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನ ಹಾಗೂ ನದಿ, ಹಳ್ಳ-ಕೊಳ್ಳಗಳ ಪಕ್ಕದಲ್ಲಿರುವ ನಾಗರಿಕರು ಹವಾಮಾನ ಇಲಾಖೆಯ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿ ಎಂದು ಹೇಳಿದೆ.

ಇನ್ನು ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮಿತಿಮೀರಲಿದ್ದು, ಜೂನ್ 5 ರಿಂದ ಜೂನ್ 11 ರವರೆಗೆ ಭಾರಿ ಹಾಗೂ ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಮುನ್ಸೂಚನೆ ನೀಡಿದೆ. ಕರಾವಳಿ ತೀರದಲ್ಲಿ ಹವಾಮಾನದ ಏರುಪೇರು ತೀವ್ರವಾಗಿರಲಿರುವ ಕಾರಣ ಮುನ್ನೆಚ್ಚರಿಕೆಯಾಗಿ ಈ ಭಾಗಗಳಲ್ಲಿ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಕನಿಷ್ಠ 64.5 ಮಿಲಿಮೀಟರ್‌ನಿಂದ ಆರಂಭವಾಗಿ, ಗರಿಷ್ಠ 204.4 ಮಿಲಿಮೀಟರ್‌ನಷ್ಟು ಅತ್ಯಂತ ಭಾರಿ ಪ್ರಮಾಣದ ಮಳೆಯಾಗುವ ಅಪಾಯವಿದೆ. ಬಿರುಗಾಳಿಯ ವೇಗವು ಹೆಚ್ಚಿರಲಿದ್ದು, ಕಡಲ ತೀರದಲ್ಲಿ ಅಲೆಗಳ ಅಬ್ಬರ ಜೋರಾಗಿರಲಿದೆ.

ಇದನ್ನೂ ಓದಿ: ರಾಜ್ಯದ ಹಲವೆಡೆ ವರುಣನ ಅಬ್ಬರ, ವಿವಿಧ ಜಿಲ್ಲೆಗಳಿಗೆ ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಣೆ!

ಮೀನುಗಾರರು ಹಾಗೂ ಸಾರ್ವಜನಿಕರಿಗೆ ಹವಾಮಾನ ಇಲಾಖೆ ನೀಡಿದ ಪ್ರಮುಖ ಸೂಚನೆಗಳು:

  • ಸಮುದ್ರದಲ್ಲಿ ಗಾಳಿಯ ವೇಗ ಮತ್ತು ಅಲೆಗಳ ಅಬ್ಬರ ಜೋರಾಗಿರುವುದರಿಂದ ಜೂನ್ 11 ರವರೆಗೆ ಮೀನುಗಾರರು ಯಾವುದೇ ಕಾರಣಕ್ಕೂ ಕಡಲಿಗೆ ಇಳಿಯಬಾರದು ಎಂದು ಸೂಚಿಸಲಾಗಿದೆ.
  • ಧಾರಾಕಾರ ಮಳೆಯಿಂದಾಗಿ ಹಠಾತ್ ಪ್ರವಾಹದ ಭೀತಿ ಎದುರಾಗುವ ಸಾಧ್ಯತೆ ಇರುವುದರಿಂದ ನದಿ ಪಾತ್ರದ ಹಾಗೂ ತಗ್ಗು ಪ್ರದೇಶಗಳ ನಿವಾಸಿಗಳು ತಕ್ಷಣವೇ ಸುರಕ್ಷಿತ ಸ್ಥಳಗಳತ್ತ ಗಮನ ಹರಿಸಬೇಕಾಗಿ ವಿನಂತಿಸಲಾಗಿದೆ.
  • ಕರಾವಳಿಯ ಪ್ರಸಿದ್ಧ ಬೀಚ್‌ಗಳಿಗೆ ಭೇಟಿ ನೀಡುವ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಜಾಗರೂಕತೆ ವಹಿಸಲು ಮತ್ತು ಸ್ಥಳೀಯ ಜಿಲ್ಲಾಡಳಿತದ ನಿಯಮಗಳನ್ನು ಪಾಲಿಸಲು ಕೋರಲಾಗಿದೆ.
  • ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಕರಾವಳಿ ಜಿಲ್ಲೆಗಳ ಜಿಲ್ಲಾಡಳಿತಗಳು ಮತ್ತು ವಿಪತ್ತು ನಿರ್ವಹಣಾ ತಂಡಗಳು ಸಂಪೂರ್ಣ ಸನ್ನದ್ಧವಾಗಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಪಾನಿನಲ್ಲಿ ಬಿಡುಗಡೆಗೆ ಸಜ್ಜಾದ ‘ಧುರಂಧರ್’, ಮುರಿಯುತ್ತಾ ‘ದಂಗಲ್’ ದಾಖಲೆ – Kannada News

ಧುರಂಧರ್’ (Dhurandhar) ಮತ್ತು ‘ಧುರಂಧರ್ 2’ ಸಿನಿಮಾ ಭಾರತದ ಬಾಕ್ಸ್ ಆಫೀಸ್​​ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದಿದೆ. ಮಾತ್ರವಲ್ಲದೆ, ಅಮೆರಿಕ ಸೇರಿದಂತೆ ಇತರೆ ಕೆಲವು ದೇಶಗಳಲ್ಲಿಯೂ ಸಹ ದೊಡ್ಡ ಮೊತ್ತದ ಗಳಿಕೆ ಮಾಡಿದ್ದು, ವಿದೇಶದಲ್ಲಿ ಹೆಚ್ಚು ಹಣ ಬಾಚಿದ ಭಾರತದ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿದೆ. ಇದೀಗ ‘ಧುರಂಧರ್ 2’ ಸಿನಿಮಾ ಒಟಿಟಿಗೆ ಸಹ ಬಂದಿದ್ದಾಗಿದೆ. ಆದರೆ ಇದೀಗ 2025 ರಲ್ಲಿ ಬಿಡುಗಡೆ ಆಗಿದ್ದ ‘ಧುರಂಧರ್’ ಸಿನಿಮಾ, ಜಪಾನಿನಲ್ಲಿ ಬಿಡುಗಡೆ ಆಗಲು ಮುಂದಾಗಿದೆ. ಜಪಾನಿನಲ್ಲಿ ಭಾರತೀಯ ಸಿನಿಮಾಗಳಿಗೆ ದೊಡ್ಡ ಮಾರುಕಟ್ಟೆ ಇದ್ದು, ಇಲ್ಲಿ ‘ಧುರಂಧರ್’ ಹೇಗೆ ಸದ್ದು ಮಾಡಲಿದೆ ಎಂಬ ಕುತೂಹಲ ಸಿನಿಮಾ ಪ್ರೇಮಿಗಳಿಗಿದೆ.

‘ಧುರಂಧರ್’ ಸಿನಿಮಾವು ಜಪಾನಿನಲ್ಲಿ ಅಲ್ಲಿನ ಮೂಲ ಭಾಷೆಯಲ್ಲಿ ಜುಲಯ 10 ರಂದು ತೆರೆಗೆ ಬರಲಿದೆ. ಜಪಾನಿನಲ್ಲಿ ದಶಕಗಳಿಂದಲೂ ಭಾರತೀಯ ಸಿನಿಮಾಗಳು ದೊಡ್ಡ ಗಳಿಕೆ ಮಾಡುತ್ತಾ ಬಂದಿವೆ. ಬಾಲಿವುಡ್ ಮಾತ್ರವಲ್ಲದೆ ತಮಿಳು, ತೆಲುಗು ಸಿನಿಮಾಗಳು ಸಹ ಜಪಾನಿನಲ್ಲಿ ದೊಡ್ಡ ಕಲೆಕ್ಷನ್ ಕಾಣುತ್ತವೆ. 2024 ರಲ್ಲಿ ಬಿಡುಗಡೆ ಆಗಿದ್ದ ತಮಿಳಿನ ‘ಮಹಾರಾಜ’ ಸಿನಿಮಾ 2025 ರಲ್ಲಿ ಜಪಾನಿನಲ್ಲಿ ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿತ್ತು. ಅದಾದ ಬಳಿಕ ಕೆಲ ಭಾರತೀಯ ಸಿನಿಮಾಗಳು ಜಪಾನಿನಲ್ಲಿ ಬಿಡುಗಡೆ ಆಗಿದ್ದವಾದರೂ ದೊಡ್ಡ ಹಿಟ್ ಆಗಿರಲಿಲ್ಲ. ಇದೀಗ ‘ಧುರಂಧರ್’ ಸಿನಿಮಾ ಜಪಾನಿನಲ್ಲಿ ಬಿಡುಗಡೆ ಆಗಲಿದ್ದು, ಅದು ಹೇಗೆ ಮ್ಯಾಜಿಕ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಜಪಾನಿನಲ್ಲಿ ರಜನೀಕಾಂತ್ ನಟನೆಯ ‘ಮುತ್ತು’ ಸಿನಿಮಾ ಬಹು ದೊಡ್ಡ ಹಿಟ್ ಆಗಿತ್ತು. ‘ಮುತ್ತು’ ಸಿನಿಮಾದ ಕಲೆಕ್ಷನ್ ದಾಖಲೆಯನ್ನು ದಶಕಗಳ ಕಾಲ ಯಾವ ಸಿನಿಮಾ ಸಹ ಮುರಿಯಲಾಗಿರಲಿಲ್ಲ. ಆ ಬಳಿಕ ‘ಈಗ’, ‘3 ಇಡಿಯಟ್ಸ್’, ‘ಆರ್​​ಆರ್​​ಆರ್’ ಸಿನಿಮಾಗಳು ಸಹ ಜಪಾನಿನಲ್ಲಿ ಭಾರಿ ಕಲೆಕ್ಷನ್ ಮಾಡಿರುವ ಭಾರತೀಯ ಸಿನಿಮಾಗಳಾಗಿವೆ. ಇದೀಗ ‘ಧುರಂಧರ್’ ಸಿನಿಮಾ ಬಿಡುಗಡೆ ಆಗುತ್ತಿದ್ದು, ಅಮೆರಿಕ, ಬ್ರಿಟನ್​​ಗಳಲ್ಲಿ ಬರೆದಿರುವ ದಾಖಲೆಯನ್ನು ಜಪಾನಿನಲ್ಲೂ ಪುನರಾವರ್ತನೆ ಮಾಡುವ ನಿರೀಕ್ಷೆ ಸಿನಿಮಾ ಅಭಿಮಾನಿಗಳದ್ದು.

‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳು ಭಾರತೀಯ ಬಾಕ್ಸ್ ಆಫೀಸ್​​ನಲ್ಲಿ ಭಾರಿ ದೊಡ್ಡ ಮೊತ್ತ ಗಳಿಕೆ ಮಾಡಿದ್ದರೂ ಸಹ ಭಾರತದ ಅತಿ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ ಸಿನಿಮಾಗಳು ಎನಿಸಿಕೊಂಡಿಲ್ಲ. ಆ ದಾಖಲೆ ಈಗಲೂ ‘ದಂಗಲ್’ ಹೆಸರಿನಲ್ಲೇ ಇದೆ. ಒಂದೊಮ್ಮೆ ‘ಧುರಂಧರ್’ ಸಿನಿಮಾ ಜಪಾನಿನಲ್ಲಿ ಯಶಸ್ಸು ಗಳಿಸಿದರೆ ‘ದಂಗಲ್’ ಸಿನಿಮಾದ ದಾಖಲೆ ಅಳಿಸಿ ಹೋಗುವ ಸಾಧ್ಯತೆ ಇದೆ.

‘ಧುರಂಧರ್’ 2025 ರಲ್ಲಿ ಬಿಡುಗಡೆ ಆದ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ರಣ್ವೀರ್ ಸಿಂಗ್ ನಟಿಸಿದ್ದಾರೆ. ಜೊತೆಗೆ ಅಕ್ಷಯ್ ಖನ್ನಾ, ಆರ್ ಮಾಧವನ್, ಅರ್ಜುನ್ ರಾಂಪಾಲ್, ಸಂಜಯ್ ದತ್ ಇನ್ನೂ ಇತರರು ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಆದಿತ್ಯ ಧರ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪ್ರತ್ಯೇಕ ಘಟನೆ: ಕೊಡಗಿನಲ್ಲಿ ಕಾಡಾನೆ ದಾಳಿಗೆ ನಿವೃತ್ತ ಐಜಿಪಿ ಪತ್ನಿ ಬಲಿ; ಹಾಸನದಲ್ಲಿ ನಾಲ್ವರ ಮೇಲೆ‌ ಚಿರತೆ ದಾಳಿ – Kannada News

ಕೊಡಗು, ಜೂನ್​​ 05: ಕಾಡಾನೆ (Elephant) ದಾಳಿಗೆ ನಿವೃತ್ತ ಐಜಿಪಿ ಪತ್ನಿ ಸಾವನ್ನಪ್ಪಿರುವಂತಹ (death) ಘಟನೆ ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕೋಣನಕಟ್ಟೆಯಲ್ಲಿ ನಡೆದಿದೆ. ಆ ಮೂಲಕ ಕಾಡಾನೆ ದಾಳಿಗೆ ಮತ್ತೊಂದು ಬಲಿ ಆಗಿದೆ. ನಿವೃತ್ತ ಐಜಿಪಿ ಅಣ್ಣಳಮಾಡ ಸುನೀಲ್ ಅಚ್ಚಯ್ಯ ಪತ್ನಿ ಸಂಧ್ಯಾ(60) ಮೃತ ದುರ್ದೈವಿ. ನಿನ್ನೆಯಷ್ಟೇ ಸಂಧ್ಯಾ ಕುಟುಂಬ ದೆಹಲಿಯಿಂದ‌ ಸ್ವಗ್ರಾಮಕ್ಕೆ ಬಂದಿದ್ದರು.

ನಡೆದಿದ್ದೇನು?

ಬೆಳಗ್ಗೆ 9 ಗಂಟೆಗೆ ತಮ್ಮ ಸ್ವಂತ ಎಸ್ಟೇಟ್​ಗೆ ತೆರಳಿದ್ದ ವೇಳೆ ಕಾಡಾನೆ ಏಕಾಏಕಿ ದಾಳಿ ಮಾಡಿದೆ. ಗಾಯಗೊಂಡ ಸಂಧ್ಯಾರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಕಾರ್ಮಿಕರಿಗೂ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಾಸನದಲ್ಲಿ ನಾಲ್ವರ ಮೇಲೆ‌ ಚಿರತೆ ದಾಳಿ‌

ಇನ್ನು ಹಾಸನ ಹೊಳೆನರಸೀಪುರ ತಾಲೂಕಿನ ಅಂಕವಳ್ಳಿಯಲ್ಲಿ ನಾಲ್ವರ ಮೇಲೆ‌ ಚಿರತೆ ದಾಳಿ‌ ಮಾಡಿದೆ. ಬೆಳಿಗ್ಗೆ ಜಮೀನಿನಲ್ಲಿ ಕೆಲಸಕ್ಕೆ ತೆರಳಿದ್ದ ವೇಳೆ ಏಕಾಏಕಿ ಚಿರತೆ ದಾಳಿ ಮಾಡಿದೆ. ಗ್ರಾಮದ ರೈತ ನವೀನ್(40), ನಾಗರಾಜ್(55) ಮತ್ತು ಜಯಮ್ಮ(70) ಮೇಲೆ ದಾಳಿ ಮಾಡಿದ್ದು, ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಗಾಯಾಳು ರೈತರನ್ನು ಹೊಳೆನರಸೀಪುರ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ದುಬಾರೆಯಲ್ಲಿ ಪ್ರವಾಸಿ ಮಹಿಳೆ ಮತ್ತು ಆನೆ ಸಾವು ಪ್ರಕರಣ: ತಜ್ಞರ ಸಮಿತಿ ವರದಿಯನ್ನು ನಿರ್ಲಕ್ಷಿಸಿದ್ದ ಅರಣ್ಯ ಇಲಾಖೆ!

ಗ್ರಾಮದಲ್ಲಿ ಚಿರತೆ ಇರುವ ಬಗ್ಗೆ ಮಾಹಿತಿ ನೀಡಿದ್ದರು ಅರಣ್ಯ ಇಲಾಖೆ ನಿರ್ಲಕ್ಷಿಸಿರುವ ಆರೋಪ ಕೇಳಿಬಂದಿದೆ. ಸದ್ಯ ರೈತರು ಜಮೀನು ಕೆಲಸಕ್ಕೆ ತೆರಳಲು ರೈತರಿಗೆ ಜೀವಭಯದ ಆತಂಕ ಶುರುವಾಗಿದೆ. ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭ

ಅಂಕವಳ್ಳಿಯಿಂದ ಬೂವನಹಳ್ಳಿ ಕಡೆಗೆ ಓಡಿದ ಚಿರತೆ ವಸಂತಮ್ಮ ಎನ್ನುವವರ ಮೇಲೂ ದಾಳಿ ಮಾಡಿದೆ. ಕೂಡಲೇ ಮಹಿಳೆ ಕೂಗಾಡಿದ್ದರಿಂದ ಗಾಬರಿಯಿಂದ ಚಿರತೆ ದನದ ಕೊಟ್ಟಿಗೆ ಸೇರಿಕೊಂಡಿದೆ. ಕೂಡಲೇ ಎಚ್ಚೆತ್ತ ಗ್ರಾಮಸ್ಥರು ಕೊಟ್ಟಿಗೆ ಬಾಗಿಲು ಮುಚ್ಚಿದ್ದಾರೆ. ಸದ್ಯ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಮೈಸೂರಿನ ವನ್ಯಜೀವಿ ವೈದ್ಯ ಡಾ ಆದರ್ಶ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಸ್ಥಳದಲ್ಲಿ ಸಿಸಿಎಫ್ ಏಡುಕೊಂಡಲು ಮೊಕ್ಕಾಂ ಹೂಡಿದ್ದಾರೆ. ಅರವಳಿಕೆ‌ ಮದ್ದು ನೀಡಿ ಚಿರತೆ ಸೆರೆಗೆ ಕಾರ್ಯಾಚರಣೆ ನಡೆದಿದೆ.

ಡಿಸಿ ಲತಾ ಕುಮಾರಿ ಹೇಳಿದಿಷ್ಟು

ಇನ್ನು ಈ ಬಗ್ಗೆ ಡಿಸಿ ಲತಾ ಕುಮಾರಿ ಪ್ರತಿಕ್ರಿಯಿಸಿದ್ದು, ಈಗಾಗಲೇ ಚಿರತೆ ಇರುವ ಸ್ಥಳ ಗುರುತು ಮಾಡಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಟ್ಯಾಕ್ ಮಾಡಿದ ಚಿರತೆಯನ್ನ ಸೆರೆ ಹಿಡಿಯಲಾಗುತ್ತೆ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಮಲ್ಲಿಕಾರ್ಜುನ್ ಖರ್ಗೆ – Kannada News

ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಮಲ್ಲಿಕಾರ್ಜುನ್ ಖರ್ಗೆ

ಬೆಂಗಳೂರು, ಜೂನ್ 05: ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಚುರುಕುಗೊಂಡಿದೆ. ಜೂನ್ 18 ರಂದು ಕರ್ನಾಟಕದ 4 ಸ್ಥಾನಗಳು ಸೇರಿದಂತೆ ಒಟ್ಟು 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್​ನ ಹಿರಿಯ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಇಂದು  ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಮುಖ್ಯಾಂಶಗಳು

  • ಜೂನ್ 18ರ ರಾಜ್ಯಸಭೆ ಚುನಾವಣೆಗೆ ಮಲ್ಲಿಕಾರ್ಜುನ ಖರ್ಗೆ ಅವರಿಂದ ನಾಮಪತ್ರ ಸಲ್ಲಿಕೆ.
  • ಚುನಾವಣಾಧಿಕಾರಿ ವಿಶಾಲಾಕ್ಷಿ ಅವರಿಗೆ ನಾಮಪತ್ರ ಸಲ್ಲಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ.
  • ರಾಹುಲ್ ಗಾಂಧಿ, ಸಿಎಂ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ನಾಯಕರ ಒಗ್ಗಟ್ಟು ಪ್ರದರ್ಶನ.

ಕಾಂಗ್ರೆಸ್ ವರಿಷ್ಠರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ

ವಿಧಾನಸಭೆ ಕಾರ್ಯದರ್ಶಿಯೂ ಆಗಿರುವ ಚುನಾವಣಾಧಿಕಾರಿ ವಿಶಾಲಾಕ್ಷಿ ಅವರಿಗೆ ಖರ್ಗೆ ನಾಮಪತ್ರವನ್ನು ಸಲ್ಲಿಸಿದ್ದಾರೆ. ಪಕ್ಷದ ಹೈಕಮಾಂಡ್ ಮತ್ತು ರಾಜ್ಯ ನಾಯಕರ ದಂಡೇ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹಿರಿಯ ಸಚಿವರಾದ ಎಂ.ಬಿ. ಪಾಟೀಲ್, ಕೆ.ಜೆ. ಜಾರ್ಜ್, ಕೆ.ಹೆಚ್. ಮುನಿಯಪ್ಪ, ಭೈರತಿ ಸುರೇಶ್ ಮತ್ತು ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ನಮ್ಮ ಎಲ್ಲಾ ಶಾಸಕರು ಮತ್ತು ನಾಯಕರು ನನ್ನನ್ನು ಒಮ್ಮತದಿಂದ ಆಯ್ಕೆ ಮಾಡಿದ್ದಾರೆ. ಜೂನ್ 18 ರ ಚುನಾವಣೆಯಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:48 pm, Fri, 5 June 26

Source link

ಭಾರತೀಯ ವಾಯುಪಡೆಯ ನೂತನ ಉಪ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ನೇಮಕ – Kannada News

ನವದೆಹಲಿ, ಜೂನ್ 5: ಭಾರತೀಯ ವಾಯುಪಡೆಯ (IAF) ನೂತನ ಉಪ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ನೇಮಕಗೊಂಡಿದ್ದಾರೆ. ಜುಲೈ 1ರಿಂದ ಅವರು ಈ ನೂತನ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಪ್ರಸ್ತುತ ಅವರು ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್‌ನ ಪ್ರಧಾನ ಕಚೇರಿಯಲ್ಲಿ ಚೀಫ್ ಆಫ್ ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ (CISC) ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಏರ್ ಹೆಡ್‌ಕ್ವಾರ್ಟರ್ಸ್‌ನಲ್ಲಿ ತಮ್ಮ ವಿವಿಧ ಅಧಿಕಾರಾವಧಿಯಲ್ಲಿ ವಾಯುಪಡೆಯ ಆಧುನೀಕರಣ ಮತ್ತು ವಾಯುಪಡೆಯಲ್ಲಿ ದೇಶೀಯ ಫೈಟರ್ ಜೆಟ್ ಯೋಜನೆಗಳನ್ನು ಉತ್ತೇಜಿಸುವಲ್ಲಿ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಪ್ರಮುಖ ಕೊಡುಗೆ ನೀಡಿದ್ದಾರೆ. ಅಲ್ಲದೆ, ಮೀಡಿಯಂ ಮಲ್ಟಿ-ರೋಲ್ ಕಾಂಬ್ಯಾಟ್ ಏರ್‌ಕ್ರಾಫ್ಟ್ (MMRCA) ಪ್ರಯೋಗಗಳ ಯೋಜನೆ ಮತ್ತು ನಿರ್ವಹಣೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಇವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (NDA) ಖಡಕ್ವಾಸ್ಲಾ, ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜ್ (ಬಾಂಗ್ಲಾದೇಶ) ಮತ್ತು ನವದೆಹಲಿಯ ನ್ಯಾಷನಲ್ ಡಿಫೆನ್ಸ್ ಕಾಲೇಜ್‌ನ ಹಳೆಯ ವಿದ್ಯಾರ್ಥಿಯಾಗಿದ್ದಾರೆ.

ಇದನ್ನೂ ಓದಿ: Agniveer Vayu Recruitment 2026: ಭಾರತೀಯ ವಾಯುಪಡೆಯಲ್ಲಿ ಅಗ್ನಿವೀರ್ ನೇಮಕಾತಿ; ಪಿಯುಸಿ ಪಾಸಾಗಿದ್ರೆ ಸಾಕು!

ಇವರು ಅರ್ಹ ಫ್ಲೈಯಿಂಗ್ ಇನ್ಸ್ಟ್ರಕ್ಟರ್ ಮತ್ತು ಎಕ್ಸ್‌ಪೆರಿಮೆಂಟಲ್ ಟೆಸ್ಟ್ ಪೈಲಟ್ ಆಗಿದ್ದು, ಮಿರಾಜ್-2000 (Mirage-2000), ಮಿಗ್-21 (MiG-21) ಮತ್ತು ಜಾಗ್ವಾರ್ (Jaguar) ಸೇರಿದಂತೆ 20ಕ್ಕೂ ಹೆಚ್ಚು ವಿವಿಧ ಮಾದರಿಯ ವಿಮಾನಗಳಲ್ಲಿ 3,300ಕ್ಕೂ ಹೆಚ್ಚು ಗಂಟೆಗಳ ಹಾರಾಟದ ಅಪಾರ ಅನುಭವವನ್ನು ಹೊಂದಿದ್ದಾರೆ. ದಕ್ಷಿಣ ವಲಯದ ಪ್ರಮುಖ ಫೈಟರ್ ಟ್ರೈನಿಂಗ್ ಬೇಸ್‌ನ ಕಮಾಂಡರ್ ಆಗಿಯೂ ಕಾರ್ಯನಿರ್ವಹಿಸಿದ್ದ ಇವರ ಅತ್ಯುತ್ತಮ ನಾಯಕತ್ವದ ಪರಿಣಾಮವಾಗಿ ಆ ಬೇಸ್ ಇಡೀ ಕಮಾಂಡ್‌ನಲ್ಲೇ ‘ಅತ್ಯುತ್ತಮ ಬೇಸ್’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇವರ ಈ ಸುದೀರ್ಘ ಅನುಭವವು ಭಾರತೀಯ ವಾಯುಪಡೆಯನ್ನು ಮತ್ತಷ್ಟು ಬಲಪಡಿಸಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಪ್ರತಿಷ್ಠಿತ ಅರ್ಥ್ ಪ್ರಶಸ್ತಿ ಗೆದ್ದ ಭಾರತೀಯ ಮೂವರು ವಿದ್ಯಾರ್ಥಿಗಳು; ಇವರ ಸಾಧನೆ ಏನು ಗೊತ್ತಾ?

ಮೈಕ್ರೋಪ್ಲಾಸ್ಟಿಕ್ ಸಮಸ್ಯೆಗೆ ಹುಣಸೆ ಬೀಜದಿಂದ ಪರಿಹಾರ ಕಂಡುಕೊಂಡ ಮೂವರು ಭಾರತೀಯ ವಿದ್ಯಾರ್ಥಿಗಳಾದ ವಿವಾನ್, ಅರಿಯಾನ್ ಅಗರ್‌ವಾಲ್ ಮತ್ತು ಅವ್ಯಾನ ಮೆಹ್ತಾ 2026ರ ಪ್ರತಿಷ್ಠಿತ ಅರ್ಥ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ರಾಜಸ್ಥಾನದ ಜೈಪುರದ ಜಯಶ್ರೀ ಪೆರಿವಾಲ್ ಇಂಟರ್ನ್ಯಾಷನಲ್ ಸ್ಕೂಲ್‌ನ ಈ 16 ವರ್ಷದ ವಿದ್ಯಾರ್ಥಿಗಳು ತಮ್ಮ ಪ್ಲಾಸ್-ಸ್ಟಿಕ್ ಆವಿಷ್ಕಾರಕ್ಕಾಗಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಹುಣಸೆ ಬೀಜದಲ್ಲಿರುವ ನೈಸರ್ಗಿಕ ಅಂಟಿನ ಗುಣವು ನೀರಿನಲ್ಲಿರುವ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳನ್ನು ಆಕರ್ಷಿಸಿ ಹೆಪ್ಪುಗಟ್ಟುವಂತೆ ಮಾಡುತ್ತದೆ. ನಂತರ ಅವುಗಳನ್ನು ಸುಲಭವಾಗಿ ಬೇರ್ಪಡಿಸಬಹುದು. ಈ ರಾಸಾಯನಿಕ ಮುಕ್ತ ಮತ್ತು ಕಡಿಮೆ ವೆಚ್ಚದ ವಿಧಾನವು ಕುಡಿಯುವ ನೀರನ್ನು ಶುದ್ಧೀಕರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅವರ ಈ ಪರಿಸರ ಸ್ನೇಹಿ ಆವಿಷ್ಕಾರಕ್ಕೆ 23,000ಕ್ಕೂ ಹೆಚ್ಚು ಜಾಗತಿಕ ತಜ್ಞರು ಮತ್ತು ಸಾರ್ವಜನಿಕರು ಮತ ಚಲಾಯಿಸಿದ್ದಾರೆ. ಭಾರತೀಯರಿಗೆ ಮೊದಲ ಬಾರಿಗೆ ಈ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Source link

ಸತತ 2ನೇ ಪಂದ್ಯದಲ್ಲೂ ಸೂರ್ಯ ಫೇಲ್; ತಂಡಕ್ಕೆ ಗೆಲುವು ತಂದ ಶ್ರೇಯಸ್ ಅಯ್ಯರ್ – Kannada News

ಕಳೆದ ಮೂರು ವರ್ಷಗಳಿಂದ ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav)​ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಈ ನಡುವೆ ತಮ್ಮ ಹಳೆಯ ಫಾರ್ಮ್​ಗೆ ಮರಳಲು ಮುಂಬೈನ ಟಿ20 ಲೀಗ್‌ನಲ್ಲಿ ಆಡುತ್ತಿರುವ ಸೂರ್ಯಕುಮಾರ್ ಯಾದವ್​ಗೆ ಈ ಲೀಗ್​ನಲ್ಲೂ ಯಶಸ್ಸು ಸಿಕ್ಕಿಲ್ಲ. ಐಪಿಎಲ್‌ನಲ್ಲಿ ರನ್ ಬರ ಎದುರಿಸಿದ್ದ ಸೂರ್ಯ ಇದೀಗ ಮುಂಬೈ ಟಿ20 ಲೀಗ್​ನಲ್ಲೂ ಅದನ್ನೇ ಮುಂದುವರೆಸಿದ್ದಾರೆ. ಸೂರ್ಯ ರನ್ ಬರ ಎದುರಿಸುವುದರ ಜೊತೆಗೆ ತಮ್ಮ ನಾಯಕತ್ವದಲ್ಲಿ ತಂಡವನ್ನು ಸೋಲಿನ ದವಡೆಗೆ ತಳ್ಳಿದ್ದಾರೆ.

ಶ್ರೇಯಸ್ ತಂಡಕ್ಕೆ ಮೊದಲ ಜಯ

ಮತ್ತೊಂದೆಡೆ, ಭಾರತ ಟಿ20 ತಂಡದ ನೂತನ ನಾಯಕನ ಸ್ಥಾನಕ್ಕೆ ಆಯ್ಕೆಯಾಗುತ್ತಿರುವ ಶ್ರೇಯಸ್ ಅಯ್ಯರ್ ಕೂಡ ಮುಂಬೈ ಟಿ20 ಲೀಗ್‌ನಲ್ಲಿ ಆಡುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಅಯ್ಯರ್ ತಂಡಕ್ಕೆ ಗೆಲುವು ಧಕ್ಕಿರಲಿಲ್ಲ. ಆದರೆ ಎರಡನೇ ಪಂದ್ಯದಲ್ಲಿ ತಂಡಕ್ಕೆ ಮೊದಲ ಗೆಲುವು ಸಿಕ್ಕಿದೆ. ಈ ಇಬ್ಬರು ಆಟಗಾರರ ತಂಡಗಳ ಪಂದ್ಯಗಳು ಜೂನ್ 4 ರಂದು ನಡೆದವು. ಈ ಆವೃತ್ತಿಯ 7 ನೇ ಪಂದ್ಯದಲ್ಲಿ, ಶ್ರೇಯಸ್ ಅಯ್ಯರ್ ಪ್ರತಿನಿಧಿಸುವ ಸೋಬೊ ಮುಂಬೈ ಫಾಲ್ಕನ್ಸ್ ತಂಡ ಎಂಎಸ್‌ಸಿ ಮರಾಠಾ ರಾಯಲ್ಸ್ ತಂಡವನ್ನು ಎದುರಿಸಿದರೆ, 8 ನೇ ಪಂದ್ಯ ಸೂರ್ಯಕುಮಾರ್ ಯಾದವ್ ನಾಯಕತ್ವದ ಟ್ರಯಂಫ್ ನೈಟ್ ಎಂಎಸ್‌ಸಿ ಮತ್ತು ಬಾಂದ್ರಾ ಬ್ಲಾಸ್ಟರ್ಸ್ ನಡುವೆ ನಡೆಯಿತು.

ಶ್ರೇಯಸ್ ಅಯ್ಯರ್ ಪ್ರತಿನಿಧಿಸುವ ಸೋಬೊ ಮುಂಬೈ ಫಾಲ್ಕನ್ಸ್ ತಂಡ, ಎಂಎಸ್‌ಸಿ ಮರಾಠಾ ರಾಯಲ್ಸ್ ತಂಡವನ್ನು 3 ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಎಂಎಸ್‌ಸಿ ಮರಾಠಾ ರಾಯಲ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 152 ರನ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಸೊಬೊ ಮುಂಬೈ ಫಾಲ್ಕನ್ಸ್ 19.1 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು ಐದು ಎಸೆತಗಳು ಬಾಕಿ ಇರುವಂತೆಯೇ ಗುರಿ ತಲುಪಿತು.

ಈ ಗೆಲುವಿನ ರನ್ ಚೇಸ್‌ನಲ್ಲಿ ಶ್ರೇಯಸ್ ಅಯ್ಯರ್ ಅವರ ಕೊಡುಗೆ 30 ರನ್‌ಗಳಾಗಿದ್ದು, ಇದರಲ್ಲಿ ಎರಡು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳು ಸೇರಿದ್ದವು. ಈ ಮೂಲಕ ಸೋಬೊ ಮುಂಬೈ ಫಾಲ್ಕನ್ಸ್, 2026 ರ ಟಿ20 ಮುಂಬೈ ಲೀಗ್‌ನಲ್ಲಿ ಇದುವರೆಗೆ ಆಡಿದ ಎರಡು ಪಂದ್ಯಗಳಲ್ಲಿ ಇದು ಮೊದಲ ಗೆಲುವು ದಾಖಲಿಸಿತು. ಮೊದಲ ಪಂದ್ಯದಲ್ಲಿ, ಎಆರ್‌ಸಿಎಸ್ ಅಂಧೇರಿ ತಂಡ, ಸೋಬೊ ಮುಂಬೈ ಫಾಲ್ಕನ್ಸ್ ತಂಡವನ್ನು ಐದು ವಿಕೆಟ್‌ಗಳಿಂದ ಸೋಲಿಸಿತ್ತು. ಆ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಕೇವಲ ಐದು ರನ್‌ ಕಲೆಹಾಕಲಷ್ಟೇ ಶಕ್ತರಾದರು.

ನಾಯಕತ್ವದ ಜೊತೆಗೆ ಟಿ20 ತಂಡದಿಂದಲೂ ಸೂರ್ಯಕುಮಾರ್​ಗೆ ಗೇಟ್​ಪಾಸ್

ಸತತ 2ನೇ ಪಂದ್ಯದಲ್ಲೂ ಸೂರ್ಯ ಫೇಲ್

ಜೂನ್ 4 ರಂದು ನಡೆದ ತನ್ನ ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟ್ರಯಂಫ್ ನೈಟ್ಸ್ ಎಂಎಸ್‌ಸಿ ತಂಡವು ಬಾಂದ್ರಾ ಬ್ಲಾಸ್ಟರ್ಸ್ ವಿರುದ್ಧ 4 ವಿಕೆಟ್‌ಗಳಿಂದ ಸೋತಿತು. ಮೊದಲು ಬ್ಯಾಟಿಂಗ್ ಮಾಡಿದ ಟ್ರಯಂಫ್ ನೈಟ್ಸ್ ಎಂಎಸ್‌ಸಿ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 178 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ಬಾಂದ್ರಾ ಬ್ಲಾಸ್ಟರ್ಸ್ ತಂಡವು 19.3 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 179 ರನ್ ಗಳಿಸಿ ಇನ್ನೂ 3 ಎಸೆತಗಳು ಬಾಕಿ ಇರುವಾಗಲೇ ಗುರಿ ತಲುಪಿತು. ಸೂರ್ಯಕುಮಾರ್ ಈ ಪಂದ್ಯದಲ್ಲಿ 6 ಎಸೆತಗಳನ್ನು ಎದುರಿಸಿ 4 ರನ್ ಗಳಿಸಿ ಔಟಾದರು.

2026 ರ ಟಿ20 ಮುಂಬೈ ಲೀಗ್‌ನಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟ್ರಯಂಫ್ ನೈಟ್ಸ್ ಎಂಎಸ್‌ಸಿಗೆ ಇದು ಸತತ ಎರಡನೇ ಸೋಲು. ಇದಕ್ಕೂ ಮೊದಲು, ಜೂನ್ 2 ರಂದು ನಡೆದಿದ್ದ ಪಂದ್ಯದಲ್ಲಿ ನಾರ್ತ್ ಮುಂಬೈ ಪ್ಯಾಂಥರ್ಸ್ ವಿರುದ್ಧ 21 ರನ್‌ಗಳ ಸೋಲನ್ನು ಅನುಭವಿಸಿತ್ತು. ಸೂರ್ಯಕುಮಾರ್ ಯಾದವ್ ಆ ಪಂದ್ಯದಲ್ಲೂ ಕೇವಲ 19 ರನ್‌ ಬಾರಿಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version