ಐದನೇ ಆವೃತ್ತಿಯ ಮಹಾರಾಜ ಟಿ20 ಟ್ರೋಫಿ ಇದೇ ಜೂನ್ 20 ರಿಂದ ಆರಂಭವಾಗಲಿದ್ದು, ಜುಲೈ 12 ರವರೆಗೆ ನಡೆಯಲಿದೆ. ಈ ಟೂರ್ನಿಗೆ ಇಂದು ಹರಾಜು ಕೂಡ ನಡೆದಿದೆ. ಹರಾಜಿನಲ್ಲಿ ಕರ್ನಾಟಕದ ಸ್ಟಾರ್ ಆಟಗಾರರು ದೊಡ್ಡ ಮೊತ್ತಕ್ಕೆ ಹೊಸ ತಂಡಗಳನ್ನು ಸೇರಿಕೊಂಡಿದ್ದಾರೆ. ಹರಾಜಿನಲ್ಲಿ 150ಕ್ಕೂ ಹೆಚ್ಚು ಆಟಗಾರರು ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಎಲ್ಲಾ 6 ತಂಡಗಳು ತಲಾ 60 ಲಕ್ಷ ರೂ. ಹಣದೊಂದಿಗೆ ಆಟಗಾರರ ಖರೀದಿಗಿಳಿದಿವೆ. ಅದರಂತೆ ಐಪಿಎಲ್ನಲ್ಲಿ ಆರ್ಸಿಬಿ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ದೇವದತ್ ಪಡಿಕ್ಕಲ್ ಇದೀಗ ಹೊಸ ತಂಡವನ್ನು ಸೇರಿಕೊಂಡಿದ್ದಾರೆ. ಹರಾಜಿನಲ್ಲಿ ಮೈಸೂರ್ ವಾರಿಯರ್ಸ್ ಫ್ರಾಂಚೈಸಿ ಪಡಿಕ್ಕಲ್ಗೆ 2 ಲಕ್ಷ 60 ಸಾವಿರ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ.
ಶ್ರೀ ಜಗದ್ಗುರು ಬೂದೀಶ್ವರ ಸಂಸ್ಥಾನ ಮಠImage Credit source: tv9 kannada
ರಾಮನಗರ, ಜೂನ್ 05: ಲೋಕ ಕಲ್ಯಾಣ, ವಿಶ್ವಶಾಂತಿ ಹಾಗೂ ಸಕಾಲದಲ್ಲಿ ಮಳೆ-ಬೆಳೆ ಉತ್ತಮವಾಗಿ ಬರಲಿ ಎಂಬ ಸಂಕಲ್ಪದೊಂದಿಗೆ ಗದಗ (gadag) ತಾಲೂಕಿನ ಅಂತೂರು ಬೆಂತೂರು ಗ್ರಾಮದ ಶ್ರೀ ಜಗದ್ಗುರು ಬೂದೀಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ‘ಶಿವಯೋಗ ಸಮಾಧಿ’ (Shiva Yoga Samadhi) ತಪಸ್ಸನ್ನು ಆರಂಭಿಸಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲೂ ಅಧ್ಯಾತ್ಮದ ಶಕ್ತಿ ಎಷ್ಟರ ಮಟ್ಟಿಗೆ ಪ್ರಭಾವ ಬೀರಬಲ್ಲದು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ. ಶ್ರೀ ಮಠದ ಗರ್ಭಗುಡಿಯನ್ನು ಬಂದ್ ಮಾಡಿಕೊಂಡು ಸಮಾಧಿ ಯೋಗದಲ್ಲಿ ಮಗ್ನರಾಗಿದ್ದಾರೆ. ಸದ್ಯ ಮಠದಲ್ಲಿ ಭಕ್ತರಿಂದ 24 ಗಂಟೆ ಶಿವನಾಮಸ್ಮರಣೆ ನಡೆದಿದೆ.
ಮುಖ್ಯಾಂಶಗಳು
ಲೋಕ ಕಲ್ಯಾಣಕ್ಕಾಗಿ ಕಠಿಣ ಶಿವಯೋಗ ಸಮಾಧಿ ಅನುಷ್ಠಾನ
775 ಗಂಟೆ ಅಂದರೆ 33 ದಿನಗಳ ಕಾಲ ಶಿವಯೋಗ ಸಮಾಧಿ
ಗದಗ ತಾಲೂಕಿನ ಅಂತೂರು ಬೆಂತೂರು ಗ್ರಾಮದಲ್ಲಿ ಸಂಭ್ರಮದ ವಾತಾವರಣ
33 ದಿನಗಳ ಕಾಲ ಶಿವಯೋಗ ಸಮಾಧಿ
ಶ್ರೀ ಬೂದೀಶ್ವರ ಮಠದ ಪೀಠಾಧಿಪತಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಕಠಿಣವಾದ ಶಿವಯೋಗ ಸಮಾಧಿ ಯೋಗವನ್ನು ಮಾಡುತ್ತಿದ್ದಾರೆ. ಒಂದು ತಿಂಗಳು ಮೌನಾನುಷ್ಠಾನ ಮಾಡಿದ್ದು, ಜೂನ್ 3ರಂದು ಮಧ್ಯರಾತ್ರಿ 3 ಗಂಟೆಗೆ, ಗರ್ಭಗುಡಿ ಪ್ರವೇಶ ಮಾಡಿದ್ದಾರೆ. ಶ್ರೀಗಳು ಗರ್ಭಗುಡಿ ಪ್ರವೇಶ ಮಾಡಿದ ನಂತರ ಬಾಗಿಲು ಬಂದ್ ಮಾಡಿ ಇಟ್ಟಿಗೆ, ಸಿಮೆಂಟ್ನಿಂದ ಕ್ಲೋಸ್ ಮಾಡಲಾಗಿದೆ. ಗರ್ಭಗುಡಿಯಲ್ಲಿ ಯಾವುದೇ ಬೆಳಕು, ಗಾಳಿ, ನೀರು ಇಲ್ಲದೆ 33 ದಿನಗಳು ಇರಲಿದ್ದಾರೆ. ರಾಚೋಟೇಶ್ವರ ಸ್ವಾಮೀಜಿಗಳು ಲೋಕ ಕಲ್ಯಾಣಕ್ಕಾಗಿ ಈ ಹಿಂದೆ ಕೂಡ ಹಲವು ಶಿವಯೋಗ ಸಮಾಧಿ ವ್ರತ ಮಾಡಿದ್ದಾರೆ. ಈ ಬಾರಿ ಕೂಡ ಮಾಡುತ್ತಿದ್ದಾರೆ. ಸದ್ಯ ಶ್ರೀಗಳು ಗರ್ಭಗುಡಿಯಲ್ಲಿನ ಶಿವಲಿಂಗದ ಮುಂದೆ ಕಠಿಣ ತಪಸ್ಸು ಮಾಡುತ್ತಿದ್ದಾರೆ.
ಅಂತೂರು ಬೆಂತೂರು ಗ್ರಾಮ ಸೇರಿದಂತೆ ಹಲವು ಗ್ರಾಮದ ಭಕ್ತರು ಶ್ರೀ ಮಠಕ್ಕೆ ಬಂದು ದರ್ಶನ ಪಡೆಯುತ್ತಿದ್ದಾರೆ. 775 ಗಂಟೆಗಳ ಕಾಲ, ಅಂದರೆ 33 ದಿನಗಳವರೆಗೆ ನಿರಂತರವಾಗಿ ಶಿವಯೋಗ ಸಮಾಧಿಯಲ್ಲಿ ತೊಡಗಿರುವ ಸ್ವಾಮೀಜಿಗಳು, ಮಠದ ಗರ್ಭಗುಡಿಯಲ್ಲಿ ಶಿವಲಿಂಗದ ಸನ್ನಿಧಿಯಲ್ಲಿ ತಪಸ್ಸು ಮಾಡುತ್ತಿದ್ದಾರೆ. ವಿಶ್ವಶಾಂತಿ, ಮಧ್ಯ ಪ್ರಾಚ್ಯ ಯುದ್ಧದ ವಾತಾವರಣ, ಮಳೆ-ಬೆಳೆ ಚೆನ್ನಾಗಿ ಬಂದು ಸಮೃದ್ಧಿ ಫಲಿಸಲಿ ಎಂದು ಶಿವಯೋಗ ಸಮಾಧಿ ಯೋಗ ಮಾಡುತ್ತಿದ್ದಾರೆ. ಸ್ವಾಮೀಜಿಗಳು ಕಠಿಣ ವ್ರತಕೈಗೊಂಡ ನಂತರ ಗ್ರಾಮದಲ್ಲಿ ಮಳೆ ಆಗಿದ್ದು, ಭಕ್ತರು ಸಂತಸಗೊಂಡಿದ್ದಾರೆ.
ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿ ಇಂತಹ ಅಪರೂಪದ ಯೋಗ ಸಾಧನೆ ಕುತೂಹಲಕ್ಕೆ ಕಾರಣವಾಗಿದೆ. ವಿಶ್ವಶಾಂತಿ ಹಾಗೂ ಲೋಕ ಕಲ್ಯಾಣಕ್ಕಾಗಿ ಕೈಗೊಂಡಿರುವ ಈ 33 ದಿನಗಳ ಶಿವಯೋಗ ಸಮಾಧಿ ಭಕ್ತರಲ್ಲಿ ಆಧ್ಯಾತ್ಮಿಕ ಚೈತನ್ಯ ಮೂಡಿಸಿದೆ. 33 ದಿನಗಳ ನಂತರ ಸ್ವಾಮೀಜಿ ಹೊರಗಡೆ ಬಂದು, ದರ್ಶನ ನೀಡಲಿದ್ದಾರೆ. ಸ್ವಾಮೀಜಿಗಳ ಈ ನಡೆ ಭಕ್ತರಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಬೆಂಗಳೂರು, ಜೂ.5: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ರಚನೆಯ ಬೆನ್ನಲ್ಲೇ ಉಂಟಾಗಿರುವ ಭಿನ್ನಾಭಿಪ್ರಾಯ ಹಾಗೂ ರಾಜೀನಾಮೆ ಗದ್ದಲದ ನಡುವೆ, ಸಚಿವ ಸತೀಶ್ ಜಾರಕಿಹೊಳಿ (Satish Jarakiholi) ಅವರು ಅತ್ಯಂತ ಸಮಚಿತ್ತದ ಹಾಗೂ ವಾಸ್ತವಿಕ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಹಿರಿಯ ನಾಯಕರ ಅಸಮಾಧಾನದ ಬೆಂಕಿಯನ್ನು ನಂದಿಸುವ ಸಂಪೂರ್ಣ ಸಾಮರ್ಥ್ಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೆ ಎಂದು ಅವರು ಬಲವಾಗಿ ಪ್ರತಿಪಾದಿಸಿದ್ದಾರೆ. ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರ ಸಚಿವ ಸ್ಥಾನದ ರಾಜೀನಾಮೆ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅತ್ಯಂತ ಹಗುರವಾಗಿ ಉತ್ತರಿಸಿದ ಜಾರಕಿಹೊಳಿ, “ಅವರು ರಾಜೀನಾಮೆ ಕೊಟ್ಟಿದ್ದಾರೆ ಅಷ್ಟೇ. ಆದರೆ ಈ ಇಡೀ ಪರಿಸ್ಥಿತಿಯನ್ನು ಸಮಾಧಾನಪಡಿಸುವ ಹಾಗೂ ಪರ್ಯಾಯ ವ್ಯವಸ್ಥೆ ಮಾಡುವ ಸಂಪೂರ್ಣ ಸಾಮರ್ಥ್ಯ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಇದೆ. ಮುಂದಿನ ಒಂದು ಅಥವಾ ಎರಡು ದಿನಗಳಲ್ಲಿ ಈ ಎಲ್ಲ ಸಮಸ್ಯೆಗಳು ಸರಿಹೋಗುತ್ತವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಸಚಿವ ಕೆ.ಎಚ್. ಮುನಿಯಪ್ಪ ಅವರ ಅಸಮಾಧಾನದ ಕುರಿತು ಮಾತನಾಡಿದ ಅವರು, “ರಾಜಕಾರಣದಲ್ಲಿ ಪ್ರಮೋಷನ್ ಅಥವಾ ಉನ್ನತ ಹುದ್ದೆಗಳ ಬಯಕೆ ಇರುವುದು ತೀರಾ ಸಾಮಾನ್ಯ. ಆದರೆ ಎಲ್ಲರಿಗೂ ಉನ್ನತ ಸ್ಥಾನಗಳನ್ನು ನೀಡಲು ಸಾಧ್ಯವಿಲ್ಲ, ಕೆಲವರಿಗೆ ಮಾತ್ರ ಅದು ಲಭ್ಯವಾಗುತ್ತದೆ. ಈ ಎಲ್ಲ ಗೊಂದಲಗಳನ್ನು ಸಿಎಂ ಬಗೆಹರಿಸಲಿದ್ದಾರೆ, ಅಲ್ಲಿಯವರೆಗೆ ಒಂದು-ಎರಡು ದಿನ ಕಾಯೋಣ” ಎಂದು ಹೇಳಿದ್ದಾರೆ.
ನಿಮಗೆ ಡಿಸಿಎಂ (DCM) ಸ್ಥಾನ ಅಥವಾ ಕೆಪಿಸಿಸಿ (KPCC) ಅಧ್ಯಕ್ಷ ಸ್ಥಾನ ಸಿಗದಿರುವುದು ಅಸಮಾಧಾನ ತಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಆಸೆ ಇತ್ತು, ಆದರೆ ಏನು ಮಾಡಲಿಕ್ಕೆ ಆಗಲ್ಲ. ಸಿಕ್ಕಿದ್ದಕ್ಕೆ ಸಮಾಧಾನ, ತೃಪ್ತಿ ಪಡಬೇಕು ಅಷ್ಟೇ” ಎಂದು ತಮ್ಮ ವೈಯಕ್ತಿಕ ಮಹತ್ವಾಕಾಂಕ್ಷೆಗಳ ಬಗ್ಗೆ ಹೇಳಿದ್ದಾರೆ. ಅಲ್ಲದೆ, ತಾವು ರಾಜೀನಾಮೆ ನೀಡುವ ಬಗ್ಗೆ ಸ್ಪಷ್ಟವಾಗಿ ನಿರಾಕರಿಸಿದ ಸಚಿವರು, “ರಾಜೀನಾಮೆ ಯಾಕೆ ಕೊಡಬೇಕು? ಅದರ ಅವಶ್ಯಕತೆ ಇಲ್ಲ. ನಮಗೆ ಯಾವ ಖಾತೆ ಇದೆಯೋ, ಅದನ್ನೇ ಮುಂದುವರಿಸಿದ್ದಾರೆ, ನಾನು ಕೆಲಸ ಮಾಡುತ್ತೇನೆ” ಎಂದರು.
ಸಚಿವರುಗಳಲ್ಲಿ ಮೊದಲು ನೊಂದವರು ನೀವು ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಯಾವುದೇ ನೋವೂ ಇಲ್ಲ, ಸಂತೋಷವೂ ಇಲ್ಲ, ದುಃಖವೂ ಇಲ್ಲ ಎಂದು ಹೇಳುವ ಮೂಲಕ ಪ್ರಸ್ತುತ ರಾಜಕೀಯ ಹೈಡ್ರಾಮಾದ ನಡುವೆ ತಾವು ಸಂಪೂರ್ಣ ಸಮಚಿತ್ತದಿಂದ ಇರುವುದಾಗಿ ಈ ಮೂಲಕ ಹೇಳಿಕೊಂಡಿದ್ದಾರೆ. ಜಾರಕಿಹೊಳಿ ಅವರ ಈ ನಡೆ ಸಂಪುಟದ ಇತರ ರೆಬೆಲ್ ನಾಯಕರಿಗೆ ಪರೋಕ್ಷ ಸಂದೇಶ ರವಾನಿಸಿದಂತಿದೆ.
ಕನ್ನಡ ಚಿತ್ರರಂಗಕ್ಕೆ ಹೊಸ ಹೀರೋ ಸಂಚಿತ್ ಸಂಜೀವ್ (Sanchith Sanjeev) ಎಂಟ್ರಿ ಆಗಿದೆ. ಕಿಚ್ಚ ಸುದೀಪ್ ಅವರ ಕುಟುಂಬದ ಹುಡುಗ ಎಂಬ ಕಾರಣಕ್ಕೆ ಪ್ರೇಕ್ಷಕರಿಗೆ ಸಂಚಿತ್ ಮೇಲೆ ವಿಶೇಷ ನಿರೀಕ್ಷೆ ಇತ್ತು. ‘ಮ್ಯಾಂಗೋ ಪಚ್ಚ’ (Mango Pachcha) ಸಿನಿಮಾ ಮೂಲಕ ಅವರು ಹೀರೋ ಆಗಿದ್ದಾರೆ. ಹೀರೋ ಹೊಸಬನಾದರೂ ಈ ಸಿನಿಮಾದಲ್ಲಿ ತೋರಿಸಿರುವ ಕಥೆ ಹಳೇ ಮೈಸೂರಿನದ್ದು. ಆ ಕಾಲದ ಮೈಸೂರಿನ ಮಾಫಿಯಾ ಯಾವ ರೀತಿ ಇತ್ತು ಎಂಬುದರ ಚಿತ್ರಣ ಈ ಸಿನಿಮಾದಲ್ಲಿದೆ. ‘ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ’ ಮತ್ತು ‘ಕೆಆರ್ಜಿ ಸ್ಟುಡಿಯೋಸ್’ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿವೆ. ಒಟ್ಟಾರೆ ಸಿನಿಮಾ ಹೇಗಿದೆ ಎಂಬುದನ್ನು ತಿಳಿಯಲು ಈ ವಿಮರ್ಶೆ ಓದಿ.
ಸಂಚಿತ್ ಸಂಜೀವ್ ಅವರು ಪಕ್ಕಾ ಮಾಸ್ ಸಿನಿಮಾಗೆ ಸೂಕ್ತ ಆಗುವಂತಹ ನಟ. ಅವರಿಗೆ ತಕ್ಕಂತೆಯೇ ‘ಮ್ಯಾಂಗೋ ಪಚ್ಚ’ ಸಿನಿಮಾದ ಕಥೆ ಇದೆ. ನೈಜ ಘಟನೆಗಳನ್ನು ಆಧರಿಸಿ ಈ ಚಿತ್ರದ ಕಥೆ ಸಿದ್ಧವಾಗಿದೆ. 2000ನೇ ಇಸವಿ ಸಂದರ್ಭದಲ್ಲಿ ಮೈಸೂರಿನಲ್ಲಿ ಹಬ್ಬಿದ್ದ ಮಾದಕ ವಸ್ತು ಜಾಲದ ಬಗ್ಗೆ ಈ ಸಿನಿಮಾದಲ್ಲಿ ತೋರಿಸಲಾಗಿದೆ.
ನಿರ್ದೇಶಕ ವಿವೇಕ ಅವರು ಕಟ್ಟಿಕೊಟ್ಟಿರುವ ‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಒಂದು ಡಿಫರೆಂಟ್ ಫ್ಲೇವರ್ ಇದೆ. ಕಥೆಯಲ್ಲಿ ಅತಿ ಸಣ್ಣ ವಿವರಗಳ ಕಡೆಗೆ ಅವರು ಗಮನ ಹರಿಸಿಲ್ಲ. ಬದಲಿಗೆ, ಎಲ್ಲವನ್ನೂ ಮೇಲ್ಮಟ್ಟದಲ್ಲೇ ತೋರಿಸುತ್ತಾ ಸಾಗಿದ್ದಾರೆ. ಇದರಿಂದಾಗಿ ಸಿನಿಮಾದ ಅವಧಿ ಕೇವಲ 1 ಗಂಟೆ 35 ನಿಮಿಷ ಇದೆ. ಅಷ್ಟು ಸಮಯದ ಒಳಗೆ ಅವರು ಮ್ಯಾಂಗೋ ಪಚ್ಚನ ಕಹಾನಿಯನ್ನು ವಿವರಿಸಲು ಪ್ರಯತ್ನಿಸಿದ್ದಾರೆ.
ಹೊಸ ಹೀರೋ ಸಂಚಿತ್ ಅವರ ಪ್ರತಿಭೆ ಏನು ಎಂಬುದನ್ನು ಪ್ರೇಕ್ಷಕರಿಗೆ ಪರಿಚಯಿಸಲು ಅನುಕೂಲ ಆಗುವಂತಹ ಹಲವು ದೃಶ್ಯಗಳು ಈ ಸಿನಿಮಾದಲ್ಲಿವೆ. ಆ್ಯಂಗ್ರಿ ಯಂಗ್ ಮ್ಯಾನ್ ಆಗಿ ಅವರು ಕಾಣಿಸಿಕೊಂಡಿದ್ದಾರೆ. ಆ ಪಾತ್ರಕ್ಕೆ ತಾಳ್ಮೆ ಮತ್ತು ಆವೇಗ ಎರಡೂ ಇದೆ. ಅದೇ ರೀತಿ ಇತಿ-ಮಿತಿಗಳು ಕೂಡ ಇವೆ. ಎಲ್ಲವನ್ನೂ ಸಂಚಿತ್ ಅವರು ಚೆನ್ನಾಗಿ ನಿಭಾಯಿಸಿದ್ದಾರೆ. ಆ್ಯಕ್ಷನ್ ದೃಶ್ಯಗಳಲ್ಲಿ ಗಮನ ಸೆಳೆದಿದ್ದಾರೆ.
ಲವರ್ ಬಾಯ್ ಆಗಿಯೂ ಸಂಚಿತ್ ಅವರು ಕಾಣಿಸಿಕೊಂಡಿದ್ದಾರೆ. ಅವರಿಗೆ ಜೋಡಿಯಾಗಿ ಕಾಜಲ್ ಕುಂದರ್ ನಟಿಸಿದ್ದಾರೆ. ಆದರೆ ಅವರಿಬ್ಬರ ಪ್ರೇಮಕಥೆಗೆ ಇನ್ನಷ್ಟು ಒತ್ತು ಸಿಗಬೇಕಿತ್ತು ಅನಿಸುತ್ತದೆ. ತಾಯಿಯ ಪಾತ್ರದಲ್ಲಿ ಹರಿಣಿ ಶ್ರೀಕಾಂತ್ ಅವರು ಅಭಿನಯಿಸಿದ್ದಾರೆ. ಅಲ್ಲಿಯೂ ಕೂಡ ಸೆಂಟಿಮೆಂಟ್ ಮತ್ತಷ್ಟು ಹೆಚ್ಚಿದ್ದರೆ ಚೆನ್ನಾಗಿ ಇರುತ್ತಿತ್ತು. ಇನ್ನುಳಿದ ಪ್ರಮುಖ ಪಾತ್ರಗಳಲ್ಲಿ ಪ್ರಶಾಂತ್ ಹಿರೇಮಠ್, ಮ್ಯಾಕ್ಸ್ ಮಂಜು, ಹಂಸಾ, ಮಯೂರ್ ಪಟೇಲ್, ಜೈ ಮುಂತಾದವರು ಉತ್ತಮ ಅಭಿನಯ ನೀಡಿದ್ದಾರೆ. ಪ್ರಶಾಂತ್ ಹಿರೇಮಠ್ ಅವರಿಗೆ ಹೆಚ್ಚು ಚಪ್ಪಾಳೆ ಸಲ್ಲಬೇಕು.
2000ನೇ ಇಸವಿಯ ಆಸುಪಾಸಿನಲ್ಲಿದ್ದ ಮೈಸೂರನ್ನು ತೋರಿಸುವುದು ಅಷ್ಟು ಸುಲಭವಲ್ಲ. ಕಲಾ ನಿರ್ದೇಶಕ ವಿಶ್ವಾಸ್ ಕಶ್ಯಪ್ ಅವರ ತಂಡ ಆ ವಿಚಾರದಲ್ಲಿ ಉತ್ತಮವಾಗಿ ಕೆಲಸ ಮಾಡಿದೆ. ಚರಣ್ ರಾಜ್ ಅವರ ಹಿನ್ನೆಲೆ ಸಂಗೀತದಿಂದ ಸಿನಿಮಾದ ಮೆರುಗು ಹೆಚ್ಚಿದೆ. ಶೇಖರ್ ಚಂದ್ರ ಅವರ ಛಾಯಾಗ್ರಹಣ ಕೂಡ ಮೆಚ್ಚುವಂತಿದೆ. ತಾಂತ್ರಿಕವಾಗಿ ಈ ಸಿನಿಮಾ ಉತ್ತಮವಾಗಿ ಮೂಡಿಬಂದಿದೆ.
ಈ ಚಿತ್ರದಲ್ಲಿ ತೀರಾ ಹೊಸತನವನ್ನು ನಿರೀಕ್ಷಿಸುವಂತಿಲ್ಲ. ಸಾಮಾನ್ಯ ಹುಡುಗನೊಬ್ಬ ಮಾಫಿಯಾದೊಳಗೆ ಎಂಟ್ರಿ ನೀಡಿ, ತನ್ನದೇ ಸಾಮ್ರಾಜ್ಯ ಕಟ್ಟುವ ಕಥೆ ಇಲ್ಲಿದೆ. ಆದರೆ ಇದು ಮೈಸೂರಿನ ನೆಲದ ಕಥೆ ಎಂಬ ಕಾರಣಕ್ಕೆ ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತದೆ. ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಒಂದಷ್ಟು ವಿಶೇಷತೆಗಳಿವೆ. ಚಿತ್ರತಂಡ ಗೌಪ್ಯವಾಗಿ ಇಟ್ಟಿದ್ದ ಒಂದು ಸ್ಪೆಷಲ್ ಪಾತ್ರದ ಎಂಟ್ರಿ ಕೂಡ ಕೊನೆಯಲ್ಲಿ ಆಗುತ್ತದೆ. ಮ್ಯಾಂಗೋ ಪಚ್ಚನ ಕಥೆ ಇನ್ನೂ ಮುಂದುವರಿಯುತ್ತದೆ ಎಂಬುದರ ಸುಳಿವು ಅಲ್ಲಿ ಸಿಕ್ಕಿದೆ.
ಬೆಂಗಳೂರು, (ಜೂನ್ 05): ಕರ್ನಾಟಕ ಸಚಿವ ಸಂಪುಟ (Karnataka Cabinet) ರಚನೆಯಾಗುವಾಗ ಅಥವಾ ಖಾತೆ ಹಂಚಿಕೆಯಾಗುವಾಗ ಸದಾ ಮುಂಚೂಣಿಯಲ್ಲಿ ಕೇಳಿಬರುವ ಹೆಸರೇ “ಬೆಂಗಳೂರು ನಗರಾಭಿವೃದ್ಧಿ ಇಲಾಖೆ” (Bengaluru Development portfolio). ಪ್ರಸ್ತುತ ಡಿಕೆ ಶಿವಕುಮಾರ್ ಸಂಪುಟದಲ್ಲೂ ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಇದೀಗ ಹಿರಿಯ ಶಾಸಕ ರಾಜೀನಾಮೆ ಹಂತಕ್ಕೆ ಹೋಗಿದೆ. ಹೌದು..ಕರ್ನಾಟಕದಲ್ಲಿ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದು ಕೇವಲ ಮೂರು ದಿನ ಆಗಿದೆ ಅಷ್ಟೇ. ಆಗಲೇ ಸಚಿವರ ಖಾತೆಗಳ ಕ್ಯಾತೆ ಶುರುವಾಗಿದ್ದು, ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಕೃಷ್ಣಭೈರೇಗೌಡಗೆ ನೀಡಲಾಗಿದೆ. ಇದರಿಂದ ಅಸಮಾಧಾನಗೊಂಡಿರುವ ರಾಮಲಿಂಗಾರೆಡ್ಡಿ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬೆಂಗಳೂರು ಕೇವಲ ರಾಜ್ಯ ರಾಜಧಾನಿ ಮಾತ್ರವಲ್ಲ, ಇದು ಜಾಗತಿಕ ಮಟ್ಟದ ಐಟಿ ಹಬ್ ಆಗಿದ್ದು, ಅಧಿಕಾರದ ಅಕ್ಷಯಪಾತ್ರೆ. ಒಂದು ರೀತಿ ಬಂಗಾರದ ಖನಿಜ ಎಂದೇ ಹೇಳಬಹುದು.
ಬೆಂಗಳೂರು ನಗರವು ಇಡೀ ಕರ್ನಾಟಕಕ್ಕೆ ಅತಿ ಹೆಚ್ಚು ರಾಜಸ್ವ (Revenue) ತಂದುಕೊಡುವ ಆರ್ಥಿಕ ಎಂಜಿನ್ ಆಗಿದೆ.ಇಲ್ಲಿ ಕೈಗೊಳ್ಳುವ ನಿರ್ಧಾರಗಳು ಜಾಗತಿಕ ಮಟ್ಟದಲ್ಲಿ “ಬ್ರ್ಯಾಂಡ್ ಬೆಂಗಳೂರು” ಇಮೇಜ್ ಮೇಲೆ ಪ್ರಭಾವ ಬೀರುವುದರಿಂದ, ಈ ಖಾತೆಯನ್ನು ನಿಭಾಯಿಸುವ ನಾಯಕರಿಗೆ ಪಕ್ಷದಲ್ಲಿ ಮತ್ತು ಸರ್ಕಾರದಲ್ಲಿ ಮುಖ್ಯಮಂತ್ರಿಯ ನಂತರದ ಅತ್ಯುನ್ನತ ಸ್ಥಾನಮಾನ ಸಿಗುತ್ತದೆ. ಹೀಗಾಗಿ ಈ ಖಾತೆಗೆ ಹೆಚ್ಚಾಗಿ ಬೇಡಿಕೆ ಇರುತ್ತೆ.
ಬೆಂಗಳೂರು ಕೇವಲ ಕರ್ನಾಟಕದ ರಾಜಧಾನಿಯಲ್ಲ, ಅದು ಇಡೀ ರಾಜ್ಯದ ರಾಜಕೀಯ ಮತ್ತು ಆರ್ಥಿಕತೆಯ ಶಕ್ತಿ ಕೇಂದ್ರವಾಗಿದೆ. ಇಡೀ ದೇಶದ ಸಿಲಿಕಾನ್ ವ್ಯಾಲಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನಿಂದ ಬರುವ ಆದಾಯವೇ ರಾಜ್ಯದ ಬೊಕ್ಕಸಕ್ಕೆ ದೊಡ್ಡ ಆಸರೆ. ಇಂತಹ ಜಾಗತಿಕ ಮಟ್ಟದ ನಗರದ ಉಸ್ತುವಾರಿ ವಹಿಸಿಕೊಳ್ಳುವುದು ಯಾವುದೇ ಒಬ್ಬ ರಾಜಕಾರಣಿಗೆ ಅತ್ಯುನ್ನತ ರಾಜಕೀಯ ಗೌರವ ಮತ್ತು ಶಕ್ತಿಯನ್ನು ತಂದುಕೊಡುತ್ತದೆ. ಹೀಗಾಗಿಯೇ ಈ ಇಲಾಖೆಗೆ ಇಷ್ಟೊಂದು ಮಹತ್ವ ಇದೆ.
ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ವ್ಯಾಪ್ತಿಗೆ ಬರುವ ಬಜೆಟ್ ಗಾತ್ರ ಸಾಮಾನ್ಯವಾದುದಲ್ಲ. ಸಾವಿರಾರು ಕೋಟಿ ರೂಪಾಯಿಗಳ ಬೃಹತ್ ಬಜೆಟ್ ಮತ್ತು ಅಭಿವೃದ್ಧಿ ಯೋಜನೆಗಳು ಈ ಇಲಾಖೆಯ ಮೂಲಕವೇ ಹಾದುಹೋಗುತ್ತವೆ. ನಮ್ಮ ಮೆಟ್ರೋ ವಿಸ್ತರಣೆ, ಮೇಲ್ಸೇತುವೆಗಳು, ಸುರಂಗ ಮಾರ್ಗಗಳು (ಟನಲ್ ರೋಡ್ಸ್), ರಾಜಕಾಲುವೆ ಹಾಗೂ ಕೆರೆಗಳ ಅಭಿವೃದ್ಧಿ, ಮತ್ತು ನಗರದ ಟ್ರಾಫಿಕ್ ನಿರ್ವಹಣೆಯಂತಹ ಬಿಲಿಯನ್ ಡಾಲರ್ ಯೋಜನೆಗಳ ಮೇಲ್ವಿಚಾರಣೆ ಮಾಡುವ ನೇರ ಅವಕಾಶ ಈ ಖಾತೆಯ ಸಚಿವರಿಗೆ ಇರುತ್ತೆ.
ಬೆಂಗಳೂರಿನ ಭವಿಷ್ಯವನ್ನು ರೂಪಿಸುವ ಮತ್ತು ಅತ್ಯಂತ ಪ್ರಭಾವಶಾಲಿ ಎನಿಸಿಕೊಂಡಿರುವ ಪ್ರಮುಖ ಸರ್ಕಾರಿ ಸಂಸ್ಥೆಗಳು ಈ ಇಲಾಖೆಯ ಅಡಿಯಲ್ಲೇ ಕಾರ್ಯನಿರ್ವಹಿಸುತ್ತವೆ. BDA (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ), BWSSB (ಬೆಂಗಳೂರು ಜಲಮಂಡಳಿ), GBA (ಗ್ರೇಟರ್ ಬೆಂಗಳೂರು ಅಥಾರಿಟಿ) ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳ ನಿರ್ಧಾರಗಳು, ನೇಮಕಾತಿಗಳು ಮತ್ತು ಒಟ್ಟಾರೆ ಆಡಳಿತದ ಮೇಲೆ ಸಂಪೂರ್ಣ ನಿಯಂತ್ರಣವಿರುತ್ತೆ.
ಬೆಂಗಳೂರಿನ ಮೂಲಸೌಕರ್ಯ ಹೆಚ್ಚುಸವು ದೃಷ್ಟಿಯಿಂದ ವರ್ಷದಿಂದ ವರ್ಷಕ್ಕೆ ರಾಜ್ಯ ಸರ್ಕಾರ ಅನುದಾನವನ್ನು ಹೆಚ್ಚಿಸುತ್ತಲೇ ಇದೆ. ಜತೆಗೆ ಬೆಳೆಯುತ್ತುರುವ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಮವೂ ನಾಗಾಲೋಟದಲ್ಲಿ ಓಡುತ್ತಿದೆ. ಇಲ್ಲಿ ಹಣ ಹೂಡಿದರೆ ಚಿನ್ನದ ಮಳೆ ಗ್ಯಾರಂಟಿ ಎಂದಯ ದೇಶದ ಬಹಳಷ್ಟು ಉದ್ಯಮಿಗಳು ಬೆಂಗಳೂರಿನಲ್ಲಿ ಹೂಡಿಕೆ ಮಾಡಲು ಓಡೋಡಿ ಬರುತ್ತಾರೆ.
ಇದೇ ಖಾತೆ ಬೇಕೆನ್ನಲು ಪ್ರಮುಖ ಕಾರಣಗಳು
ಸರ್ಕಾರದ ವಿಶೇಷ ಅನುದಾನ: ಕರ್ನಾಟಕ ಬಜೆಟ್ ಪ್ರಕಾರ, ಬೆಂಗಳೂರಿನ ಅಭಿವೃದ್ಧಿಗಾಗಿ ವಾರ್ಷಿಕವಾಗಿ 7,000 ಕೋಟಿಗೂ ಹೆಚ್ಚಿನ ವಿಶೇಷ ಅನುದಾನವನ್ನು ನೀಡಲಾಗುತ್ತದೆ.
ಈ ಇಲಾಖೆಯ ಸಚಿವರು ನಗರದ ಭವಿಷ್ಯವನ್ನು ನಿರ್ಧರಿಸುವ ಅತ್ಯಂತ ಪ್ರಭಾವಶಾಲಿ ಸ್ವಾಯತ್ತ ಸಂಸ್ಥೆಗಳ ಮೇಲೆ ನೇರ ನಿಯಂತ್ರಣ ಹೊಂದಿರುತ್ತಾರೆ.
ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಮತ್ತು 5 ಪಾಲಿಕೆಗಳು: ಇಡೀ ನಗರದ ಆಡಳಿತ ಮತ್ತು ನಾಗರಿಕ ಸೌಲಭ್ಯಗಳ ಮೇಲ್ವಿಚಾರಣೆ.
ಬಿಡಿಎ (BDA) ಮತ್ತು ಬಿಎಂಆರ್ಡಿಎ (BMRDA): ನಗರದ ಭೂ ನಿಯಂತ್ರಣ, ಹೊಸ ಲೇಔಟ್ಗಳ ರಚನೆ ಮತ್ತು ವಾಣಿಜ್ಯ ಯೋಜನೆಗಳ ಅನುಮೋದನೆ.
ಬಿಡಬ್ಲ್ಯೂಎಸ್ಎಸ್ಬಿ (BWSSB): ಕೋಟ್ಯಂತರ ಜನರಿಗೆ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯ ಜವಾಬ್ದಾರಿ.
2026ರಿಂದ 2019ರವರೆಗೆ ವಾರ್ಷಿಕ ಸರಾಸರಿ 5 ಸಾವಿರ ಕೋಟಿಯಿಂದ 7.300 ಕೋಟಿಯಷ್ಟು ಅನುದಾನವನ್ನು ಬೆಂಗಳೂರು ಅಭಿವೃದ್ಧಿಗೆ ನೀಡಲಾಗಿದೆ. ಟೆಂಡರ್ ಶೂರ್ ರಸ್ತೆಗಳು, ನಮ್ಮ ಮೆಟ್ರೋ ಎರಡನೇ ಹಂತ ಸೇರಿದಂತೆ ಹಲವು ಯೋಜನೆಗಳಿಗೆ ಸಾಕಷ್ಟು ಅನುದಾನ ನೀಡಲಾಗಿದೆ.
2019ರಿಂದ 2021ರವರೆಗೆ ಮುಖ್ಯಮಂತ್ರಿ ಅವರ ನವ ನಗರೋತ್ಥಾನ ಯೋಜನೆಯಡಿಯಲ್ಲಿ ನಗರ ಸಮಗ್ರ ಅಭಿವೃದ್ಧಿಗೆ ಸುಮಾರು 8300 ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು.
ಇನ್ನು 2022ರಿಂದ-23ರಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಂಗಳೂರಿನ ರಸ್ತೆಗಳ ನವೀಕರಣಕ್ಕೆ ಸೇರಿದಂತೆ ಇತರೆ ಕೆಲಸಗಳಿಗೆ 8 409 ಕೋಟಿ ರೂ ಹಂಚಿಕೆ ಮಾಡಲಾಗಿತ್ತು.
2024-25ರಲ್ಲಿ ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಸುರಂಗ ರಸ್ತೆಗಳು ಮತ್ತು ವೈಟ್ ಟಾಪಿಂಗ್ ಯೋಜನೆಗಳಿಗೆ 12 ಸಾವಿರ ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು. ಇನ್ನು 2026-27ನೇ ಸಾಲಿನಲ್ಲಿ ಬೆಂಗಳೂರಿಗೆ 7 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ.
ಬೆಂಗಳೂರು ಶಾಸಕರಿಗೆ ಇದೇ ಖಾತೆ ಅಚ್ಚುಮೆಚ್ಚು ಏಕೆ?
ಇನ್ನು ಮುಖ್ಯವಾಗಿ ಗಮನಿಸಿದಬೇಕಾದ ಅಂಶ ಅಂದ್ರೆ, ಈ ಬೆಂಗಳೂರು ನಗರಾಭಿವೃದ್ಧಿ ಖಾತೆ ಮೇಲೆ ಬೆಂಗಳೂರು ಲೋಕಲ್ ಶಾಸಕರ ಕಣ್ಣಿರುತ್ತೆ. ಉತ್ತರ ಕರ್ನಾಟಕ, ಮಧ್ಯ ಕರ್ನಾಟಕದ ಶಾಸಕರು ಅಷ್ಟಾಗಿ ಈ ಖಾತೆ ಪಡೆಯಲು ಇಷ್ಟಪಡಲ್ಲ. ಯಾಕಾಂದ್ರೆ ಈ ಖಾತೆ ಬೆಂಗಳೂರು ನಗರಕ್ಕೆ ಮಾತ್ರ ಸೀಮಿತ. ಹೀಗಾಗಿ ಬೆಂಗಳೂರು ಶಾಸಕರೇ ಹೆಚ್ಚಾಗಿ ಇದೇ ಖಾತೆ ಬೇಕೆಂದು ಬೇಡಿಕೆ ಇಡುತ್ತಾರೆ . ಈ ಖಾತೆ ಒಂದು ರೀತಿ ಲೋಕಲ್ ಇದ್ದಂತೆ. ರಾಜ್ಯಾದ್ಯಂತ ಸುತ್ತಾಟ ಇರುವುದಿಲ್ಲ. ಕ್ಷೇತ್ರದಲ್ಲೇ ಇದ್ದುಕೊಂಡು ಇಲಾಖೆಯನ್ನು ನಿರ್ವಹಿಸಬಹುದು. ಇದರೊಂದಿಗೆ ಕ್ಷೇತ್ರದಲ್ಲಿ ಹಿಡಿತ ಸಾಧಿಸಬಹುದಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಜೂನ್ 5: ಭಾರತದಲ್ಲಿರುವ ಎಟಿಎಂಗಳಲ್ಲಿ ಅಗತ್ಯ ಕ್ಯಾಷ್ ಪೂರೈಕೆ (Cash supply) ಆಗುತ್ತಿಲ್ಲ ಎನ್ನುವಂತಹ ವರದಿಯೊಂದು ಬಂದಿದೆ. ಎಟಿಎಂ ಯಂತ್ರಗಳಲ್ಲಿ ಕ್ಯಾಷ್ ಕೊರತೆ ಎದುರಾಗಿದೆ. ಈ ವಿಚಾರದ ಬಗ್ಗೆ ಎಟಿಎಂ ಉದ್ಯಮದ ಮಹಾಒಕ್ಕೂಟವಾದ ಸಿಎಟಿಎಂಐ (CATMi) ಭಾರತೀಯ ಬ್ಯಾಂಕುಗಳ ಸಂಸ್ಥೆಯ (ಐಬಿಎ) ಗಮನಕ್ಕೆ ತಂದಿದೆ ಎಂದು ಬ್ಯುಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆ ವರದಿ ಮಾಡಿದೆ. ಭಾರತದ ಆರ್ಥಿಕತೆಯೊಳಗೆ ಅತಿಹೆಚ್ಚು ಕ್ಯಾಷ್ ಹರಿವು ಇರುವ ಸಂದರ್ಭದಲ್ಲೇ ಎಟಿಎಂಗಳಲ್ಲಿ ಕ್ಯಾಷ್ ಕ್ರಂಚ್ ಪರಿಸ್ಥಿತಿ ಉದ್ಭವವಾಗಿರುವುದು ಅಚ್ಚರಿಯ ಸಂಗತಿ.
ಈ ವರದಿ ಪ್ರಕಾರ ಭಾರತದಾದ್ಯಂತ ಎಟಿಎಂಗಳಲ್ಲಿ 94,000 ಕೋಟಿ ರೂ ಮೊತ್ತದ ಕ್ಯಾಷ್ ಇರಬೇಕಿತ್ತು. ಆದರೆ, ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಎಲ್ಲಾ ಎಟಿಎಂಗಳಲ್ಲಿದ್ದ ನಗದು ಹಣ ಕ್ರಮವಾಗಿ 54,000 ಕೋಟಿ ರೂ ಮತ್ತು 61,000 ಕೋಟಿ ರೂ ಎನ್ನಲಾಗಿದೆ. ಅಂದರೆ, ಎಟಿಎಂಗಳಲ್ಲಿ ಸರಾಸರಿಯಾಗಿ ಕ್ಯಾಷ್ ಭರ್ತಿಯಾಗಿರುವುದು ಶೇ 60ರ ಆಸುಪಾಸು ಮಾತ್ರ.
ಕರ್ನಾಟಕದಲ್ಲಿ ಅತಿಹೆಚ್ಚು ಕೊರತೆ…
ದೇಶಾದ್ಯಂತ ಸರಾಸರಿಯಾಗಿ ಎಟಿಎಂಗಳಲ್ಲಿ ಶೇ 60ರಷ್ಟು ಕ್ಯಾಷ್ ಇದ್ದರೆ, ಕರ್ನಾಟಕದಲ್ಲಿ ಇದು ಶೇ. 36 ಮಾತ್ರವೇ. ಅಂದರೆ, ಕರ್ನಾಟಕದಲ್ಲಿರುವ ಎಟಿಎಂಗಳಲ್ಲಿ ಕ್ಯಾಷ್ ಕೊರತೆ ಅತಿ ಹೆಚ್ಚು ಇದೆ. ಆಂಧ್ರ ಮತ್ತು ತೆಲಂಗಾಣದಲ್ಲೂ ಎಟಿಎಂಗಳಲ್ಲಿ ಇರುವ ಕ್ಯಾಷ್ ಶೇ. 39, ಶೇ. 41ರಷ್ಟು ಮಾತ್ರವೇ ಎಂದು ಈ ವರದಿ ಹೇಳುತ್ತದೆ.
ಆರ್ಥಿಕತೆಯಲ್ಲಿ ಭಾರೀ ಪ್ರಮಾಣದಲ್ಲಿ ನಗದು ಹಣ ಇದ್ದರೂ ಎಟಿಎಂಗಳಲ್ಲಿ ಕ್ಯಾಷ್ ಕೊರತೆ ಯಾಕೆ ಕಾಡುತ್ತಿದೆ? ಇದಕ್ಕೆ ಹಲವು ಕಾರಣಗಳನ್ನು ಗುರುತಿಸಲಾಗಿದೆ. ಅದರಲ್ಲಿ ಎಟಿಎಂ ಇಂಟರ್ಚೇಂಜ್ ಶುಲ್ಕ ಮೊದಲಾದ ಸಮಸ್ಯೆಗಳು ಒಳಗೊಂಡಿವೆ.
ಎಟಿಎಂ ಇಂಟರ್ಚೇಂಜ್ ಫೀ ಎಂಬುದು ಒಂದು ಬ್ಯಾಂಕು ತನ್ನ ಗ್ರಾಹಕ ಬೇರೊಂದು ಬ್ಯಾಂಕಿನ ಎಟಿಎಂ ಬಳಸಿದಾಗ ಆ ಬ್ಯಾಂಕಿಗೆ ತೆರಬೇಕಾದ ಶುಲ್ಕ. ಎಟಿಎಂನಲ್ಲಿ ಕ್ಯಾಷ್ ತುಂಬಿಸುವುದು, ಭದ್ರತೆ ಒದಗಿಸುವುದು ಇತ್ಯಾದಿ ಕೆಲಸಗಳಿಗೆ ಸಾಕಷ್ಟು ವ್ಯಯವಾಗುತ್ತದೆ. ಇದನ್ನು ಭರಿಸುವಷ್ಟು ಪ್ರಮಾಣದ ಇಂಟರ್ಚೇಂಜ್ ಫೀ ಇಲ್ಲ ಎನ್ನುವುದು ಉದ್ಯಮದ ಅಳಲು. ಸರ್ಕಾರ ಇತ್ತೀಚೆಗಷ್ಟೇ ಈ ಇಂಟರ್ಚೇಂಜ್ ಫೀ ಅನ್ನು 17 ರೂನಿಂದ 19 ರೂಗೆ ಏರಿಸಿದೆ. ಆದರೆ, ಇದು ಸಾಕಾಗುವುದಿಲ್ಲ ಎಂದು ಈ ಉದ್ಯಮದವರು ಹೇಳುತ್ತಿದ್ದಾರೆ.
ಎಟಿಎಂ ಬಳಕೆಯಲ್ಲೂ ಇಳಿಮುಖ
ಭಾರತದಾದ್ಯಂತ ಎಟಿಎಂ ಬಳಸುವವರ ಸಂಖ್ಯೆ ಕಡಿಮೆ ಆಗುತ್ತಿದೆ. 2025ರ ಮೇ ತಿಂಗಳಲ್ಲಿ ಹತ್ತಿರಹತ್ತಿರ 50 ಕೋಟಿ ಸಂಖ್ಯೆಯಷ್ಟು ಎಟಿಎಂ ಟ್ರಾನ್ಸಾಕ್ಷನ್ಸ್ ಆಗಿದ್ದವು. ಈ ವರ್ಷದ ಮೇ ತಿಂಗಳಲ್ಲಿ ಅದು 44.6 ಕೋಟಿಗೆ ಇಳಿಕೆ ಆಗಿದೆ.
ಈ ಇಳಿಕೆಗೆ ವಿವಿಧ ಕಾರಣಗಳಿವೆ. ಎಟಿಎಂನಿಂದ ಫ್ರೀ ಲಿಮಿಟ್ ದಾಟಿ ಮಾಡಲಾಗುವ ಟ್ರಾನ್ಸಾಕ್ಷನ್ಗೆ 23 ರೂ ವಿಧಿಸಲಾಗುತ್ತದೆ. ಇದರಿಂದ ಗ್ರಾಹಕರು ಎಟಿಎಂನಿಂದ ದೂರವಾಗುತ್ತಿರಬಹುದು.
ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ದೊಡ್ಡ ಹೊಡೆತ
ಒಂದು ಅಂದಾಜು ಪ್ರಕಾರ, ಎಟಿಎಂಗಳನ್ನು ಈಗ ಅತಿಹೆಚ್ಚು ಬಳಸುವುದು ಡಿಬಿಟಿ ಸ್ಕೀಮ್ನ ಫಲಾನುಭವಿಗಳು. ಪಿಎಂ ಕಿಸಾನ್ ಯೋಜನೆಯಂತಹ ಸ್ಕೀಮ್ಗಳಲ್ಲಿ ಸರ್ಕಾರವು ಡಿಬಿಟಿ ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುತ್ತದೆ. ಇವರು ಎಟಿಎಂ ಮೂಲಕ ಹಣ ವಿತ್ಡ್ರಾ ಮಾಡುತ್ತಾರೆ. ಈಗ ಎಟಿಎಂಗಳಲ್ಲಿ ಉಂಟಾಗಿರುವ ಕ್ಯಾಷ್ ಕೊರತೆಯಿಂದ ಅತಿಹೆಚ್ಚು ಬಾಧಿತವಾಗುವುದು ಈ ವರ್ಗದ ಜನರೇ. ಅದರಲ್ಲೂ ಕರ್ನಾಟಕದಲ್ಲಿರುವ ಫಲಾನುಭವಿಗಳು ಈ ಸಂಕಷ್ಟ ಎದುರಿಸುವಂತಾಗಿದೆ.
ಭಾರತದ ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾದ UPSC (ನಾಗರಿಕ ಸೇವೆಗಳ ಪರೀಕ್ಷೆ) ಉತ್ತೀರ್ಣರಾಗುವುದು ಲಕ್ಷಾಂತರರ ಜನರ ಕನಸು. ಈ ಪರೀಕ್ಷೆಯಲ್ಲಿ ಗೆಲ್ಲಲು ದುಬಾರಿ ತರಬೇತಿ ಸಂಸ್ಥೆಗಳು ಹಾಗೂ ಲಕ್ಷಾಂತರ ರೂಪಾಯಿ ಹಣ ಬೇಕೇಬೇಕು ಎಂಬ ಬಲವಾದ ನಂಬಿಕೆ ಸಮಾಜದಲ್ಲಿದೆ. ಆದರೆ, ಸರಿಯಾದ ಯೋಜನೆ, ಕಟ್ಟುನಿಟ್ಟಾದ ಶಿಸ್ತು ಮತ್ತು ಸಮರ್ಪಣಾ ಮನೋಭಾವವಿದ್ದರೆ ಯಾವುದೇ ಕೋಚಿಂಗ್ ಇಲ್ಲದೆಯೂ ಇತಿಹಾಸ ಸೃಷ್ಟಿಸಬಹುದು ಎಂದು ಮಹಾರಾಷ್ಟ್ರದ ಯುವ ಅಧಿಕಾರಿ ಅಭಿಜೀತ್ ಪಾಟೀಲ್ ಸಾಬೀತುಪಡಿಸಿದ್ದಾರೆ. ಕೇವಲ 22ನೇ ವಯಸ್ಸಿನಲ್ಲಿ, ತಮ್ಮ ಮೊದಲ ಪ್ರಯತ್ನದಲ್ಲೇ ಅಖಿಲ ಭಾರತ ಮಟ್ಟದಲ್ಲಿ 470ನೇ ಶ್ರೇಣಿ (AIR 470) ಪಡೆಯುವ ಮೂಲಕ ಅವರು IPS ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.
ಪ್ರತಿಭಾವಂತ ಯುವಕನ ಕೌಟುಂಬಿಕ ಹಿನ್ನೆಲೆ:
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿ ಪ್ರದೇಶದವರಾದ ಅಭಿಜೀತ್ ಪಾಟೀಲ್ ಬಾಲ್ಯದಿಂದಲೂ ಶೈಕ್ಷಣಿಕವಾಗಿ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿ. ಇವರ ತಂದೆ ತುಳಸಿರಾಮ್ ಪಾಟೀಲ್ ಅವರು ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ನಲ್ಲಿ ಮುಖ್ಯ ಲೆಕ್ಕಪರಿಶೋಧಕರಾಗಿ ಹಾಗೂ ತಾಯಿ ಮಹಾರಾಷ್ಟ್ರ ನೀರಾವರಿ ಇಲಾಖೆಯಲ್ಲಿ ಉದ್ಯೋಗಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುವ ಇಂತಹದೊಂದು ಪ್ರಬುದ್ಧ ಕೌಟುಂಬಿಕ ವಾತಾವರಣವೇ ಅಭಿಜೀತ್ ಅವರ ಯಶಸ್ಸಿಗೆ ಭದ್ರವಾದ ಅಡಿಪಾಯವಾಯಿತು.
ಯೂಟ್ಯೂಬ್ ವೀಡಿಯೋದಿಂದ ಬದಲಾದ ಬದುಕಿನ ಹಾದಿ:
ಅಭಿಜೀತ್ ಅವರು ಬಿ.ಟೆಕ್ ಎಂಜಿನಿಯರಿಂಗ್ ಪದವೀಧರರು. ಆರಂಭದಲ್ಲಿ ಅವರಿಗೆ ನಾಗರಿಕ ಸೇವೆಗಳಿಗೆ ಸೇರಬೇಕು ಅಥವಾ ದೇಶದ ಅತ್ಯುನ್ನತ ಪರೀಕ್ಷೆ ಬರೆಯಬೇಕು ಎಂಬ ಯಾವುದೇ ನಿರ್ದಿಷ್ಟ ಯೋಜನೆ ಇರಲಿಲ್ಲ. ಆದರೆ, ಎಂಜಿನಿಯರಿಂಗ್ ಓದುತ್ತಿದ್ದ ದಿನಗಳಲ್ಲಿ ಯೂಟ್ಯೂಬ್ನಲ್ಲಿ ಯುವ ಯುಪಿಎಸ್ಸಿ ಟಾಪರ್ ಒಬ್ಬರ ಸಂದರ್ಶನದ ವೀಡಿಯೋ ನೋಡಿದ ತಕ್ಷಣ ಅವರ ಆಲೋಚನೆ ಸಂಪೂರ್ಣವಾಗಿ ಬದಲಾಯಿತು. ನಾಗರಿಕ ಅಧಿಕಾರಿಗಳು ಸಮಾಜದ ಮೇಲೆ ಬೀರುವ ಸಕಾರಾತ್ಮಕ ಪ್ರಭಾವ ಮತ್ತು ಅವರಿಗಿರುವ ಜವಾಬ್ದಾರಿಗಳಿಂದ ಪ್ರೇರಿತರಾದ ಅಭಿಜೀತ್, ತಾವೂ ಒಬ್ಬ ಐಪಿಎಸ್ ಅಧಿಕಾರಿಯಾಗಬೇಕೆಂದು ಆ ಕ್ಷಣದಲ್ಲೇ ದೃಢ ನಿರ್ಧಾರ ಮಾಡಿದರು. ಆ ನಿರ್ಧಾರದ ನಂತರ ಅವರು ಎಂದೂ ಹಿಂತಿರುಗಿ ನೋಡಲಿಲ್ಲ. ತಮ್ಮ ಕಾಲೇಜಿನ ಕೊನೆಯ ಸೆಮಿಸ್ಟರ್ ಫಲಿತಾಂಶ ಬರುವ ಮೊದಲೇ ಅವರು ಯುಪಿಎಸ್ಸಿ ಪ್ರಿಲಿಮ್ಸ್ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದರು.
ಸ್ವಯಂ ಅಧ್ಯಯನದ ಶಕ್ತಿ:
ಇಂದಿನ ದಿನಗಳಲ್ಲಿ UPSC ತರಬೇತಿಗಾಗಿ ಲಕ್ಷಾಂತರ ರೂಪಾಯಿ ಸುರಿಯುವವರ ನಡುವೆ, ಅಭಿಜೀತ್ ಕೇವಲ NCERT ಪಠ್ಯಪುಸ್ತಕಗಳು, ಗೂಗಲ್ ಮತ್ತು ಯೂಟ್ಯೂಬ್ನಂತಹ ಉಚಿತ ಆನ್ಲೈನ್ ಸಂಪನ್ಮೂಲಗಳನ್ನು ಬಳಸಿಕೊಂಡು ಮನೆಯಲ್ಲೇ ಓದಿ ದೇಶಕ್ಕೆ ಮಾದರಿಯಾಗಿದ್ದಾರೆ.
ದಿನಕ್ಕೆ 8 ಗಂಟೆಗಳ ಕಟ್ಟುನಿಟ್ಟಾದ ಶಿಸ್ತಿನ ತಪಸ್ಸು:
ಅಭಿಜೀತ್ ಪಾಟೀಲ್ ಅವರ ಯಶಸ್ಸಿನ ಅಸಲಿ ರಹಸ್ಯ ಇರುವುದು ಅವರ ಶಿಸ್ತಿನ ದಿನಚರಿಯಲ್ಲಿ. ಅವರು ಸುಮಾರು ಎಂಟು ತಿಂಗಳ ಕಾಲ ದಿನಕ್ಕೆ ಕಟ್ಟುನಿಟ್ಟಾಗಿ 8 ಗಂಟೆಗಳ ಕಾಲ ಸಂಪೂರ್ಣ ಏಕಾಗ್ರತೆಯಿಂದ ಅಧ್ಯಯನ ಮಾಡಿದರು. ಯಾವುದೇ ಕೋಚಿಂಗ್ ಸೆಂಟರ್ ಮೆಟ್ಟಿಲು ಹತ್ತದಿದ್ದರೂ, ತಮ್ಮ ಗುರಿಯತ್ತ ಮಾತ್ರ ಗಮನ ನೆಟ್ಟಿದ್ದರು. ದಿನಕ್ಕೆ 15-18 ಗಂಟೆಗಳು ಓದುವುದಕ್ಕಿಂತ, ಓದುವ 8 ಗಂಟೆಗಳ ಅವಧಿಯನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯ ಎಂದು ಅವರು ತೋರಿಸಿಕೊಟ್ಟರು. ಈ ನಿರಂತರ ಪರಿಶ್ರಮದ ಫಲವಾಗಿ, ಕೇವಲ 22ನೇ ವಯಸ್ಸಿಗೆ ಅವರು ದೇಶದ ಅತ್ಯಂತ ಕಿರಿಯ ಐಪಿಎಸ್ ಅಧಿಕಾರಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದರು.
UPSC ಆಕಾಂಕ್ಷಿಗಳಿಗೆ IPS ಅಭಿಜೀತ್ ನೀಡುವ ಸುವರ್ಣ ಸಲಹೆಗಳು:
ತಮ್ಮ ಯಶಸ್ಸಿನ ಪಯಣದ ಆಧಾರದ ಮೇಲೆ ಅಭಿಜೀತ್ ಪಾಟೀಲ್ ಮುಂಬರುವ ಅಭ್ಯರ್ಥಿಗಳಿಗೆ ಕೆಲವು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ.
ಪಠ್ಯಕ್ರಮದ ಸ್ಪಷ್ಟತೆ: ಯುಪಿಎಸ್ಸಿ ಪರೀಕ್ಷೆಯ ಪಠ್ಯಕ್ರಮವನ್ನು (Syllabus) ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಯಶಸ್ಸಿನ ಮೊದಲ ಹೆಜ್ಜೆ. ಪರೀಕ್ಷೆಗೆ ಏನು ಓದಬೇಕು ಎಂಬ ಸ್ಪಷ್ಟತೆ ಇರಬೇಕು.
ಗುಣಮಟ್ಟದ ಓದು ಮುಖ್ಯ: ದಿನಕ್ಕೆ 15 ಗಂಟೆಗಳ ಕಾಲ ಸುಮ್ಮನೆ ಪುಸ್ತಕ ಹಿಡಿದು ಕೂರುವುದಕ್ಕಿಂತ, 6 ರಿಂದ 8 ಗಂಟೆಗಳ ಕಾಲ ಪೂರ್ಣ ಏಕಾಗ್ರತೆಯಿಂದ ಓದುವುದು ಹೆಚ್ಚು ಫಲಿತಾಂಶ ನೀಡುತ್ತದೆ.
ಸಾಮಾಜಿಕ ಜಾಲತಾಣಗಳ ಮಿತ ಬಳಕೆ: ಸೋಶಿಯಲ್ ಮೀಡಿಯಾಗಳಲ್ಲಿ ರೀಲ್ಸ್ ನೋಡಿ ಸಮಯ ವ್ಯರ್ಥ ಮಾಡುವ ಬದಲು, ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಗೂಗಲ್ ಮತ್ತು ಯೂಟ್ಯೂಬ್ನಂತಹ ವೇದಿಕೆಗಳನ್ನು ಡಿಜಿಟಲ್ ಆಯುಧಗಳಾಗಿ ಬಳಸಿಕೊಳ್ಳಿ.
ನಿರಂತರತೆ ಮತ್ತು ಆತ್ಮವಿಶ್ವಾಸ: ನಿರಂತರ ಶಿಸ್ತು, ನಿಮ್ಮ ಮೇಲೆ ನಿಮಗಿರುವ ಆತ್ಮವಿಶ್ವಾಸ ಮತ್ತು ಸರಿಯಾದ ಕಾರ್ಯತಂತ್ರ ಇದ್ದರೆ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ತೇರ್ಗಡೆಯಾಗುವುದು ಅಸಾಧ್ಯವೇನಲ್ಲ.
ಪ್ರತಿಯೊಬ್ಬರಿಗೂ ಸ್ಪೂರ್ತಿ ಈ ಯುವ ಅಧಿಕಾರಿ:
ಅಭಿಜೀತ್ ಪಾಟೀಲ್ ಅವರ ಈ ಯಶೋಗಾಥೆಯು ಒಂದು ಸತ್ಯವನ್ನು ಸಾರುತ್ತದೆ. ಯುಪಿಎಸ್ಸಿಯಲ್ಲಿ ಯಶಸ್ವಿಯಾಗಲು ದುಬಾರಿ ತರಬೇತಿಗಿಂತ ಕಠಿಣ ಪರಿಶ್ರಮ, ಶಿಸ್ತು ಮತ್ತು ಸರಿಯಾದ ದಿಕ್ಕಿನಲ್ಲಿ ಪ್ರಯತ್ನ ಮಾಡುವುದು ಮುಖ್ಯ. ಸಾಮಾನ್ಯ ಮಧ್ಯಮ ವರ್ಗದ ಕುಟುಂಬದ ಯುವಕನೊಬ್ಬ ಕೇವಲ ಸ್ವ-ಅಧ್ಯಯನದ (Self-Study) ಮೂಲಕ ದೇಶದ ಅತ್ಯಂತ ಪ್ರತಿಷ್ಠಿತ ಸೇವೆಯಾದ ಐಪಿಎಸ್ ತಲುಪಿರುವುದು ಇಂದಿನ ತಲೆಮಾರಿನ ಪ್ರತಿಯೊಬ್ಬ ವಿದ್ಯಾರ್ಥಿಗೂ ಅತ್ಯಂತ ಸ್ಪೂರ್ತಿದಾಯಕವಾಗಿದೆ.
ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಪಾಕಿಸ್ತಾನದ ಪ್ರವಾಸ ಮಾಡಿದ್ದ ಆಸ್ಟ್ರೇಲಿಯಾ (Pakistan vs Australia) ತಂಡ 2-1 ಅಂತರದಿಂದ ಸರಣಿ ಕಳೆದುಕೊಂಡು ಬರಿ ಕೈಯಲ್ಲಿ ತನ್ನ ತವರಿಗೆ ವಾಪಸ್ ಮರಳಿದೆ. ಆತಿಥೇಯ ಪಾಕಿಸ್ತಾನ ತಂಡ ಜೂನ್ 4 ರಂದು ಲಾಹೋರ್ನಲ್ಲಿ ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯವನ್ನು ನಾಲ್ಕು ವಿಕೆಟ್ಗಳಿಂದ ಗೆಲ್ಲುವ ಮೂಲಕ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿತು. ಈ ಸರಣಿ ಗೆಲುವಿನೊಂದಿಗೆ ಪಾಕಿಸ್ತಾನ ವಿಶೇಷ ದಾಖಲೆಯನ್ನು ನಿರ್ಮಿಸಿತು. ಆಸ್ಟ್ರೇಲಿಯಾ ವಿರುದ್ಧ ಸತತ ಮೂರು ಏಕದಿನ ಸರಣಿಗಳನ್ನು ಗೆದ್ದ ಮೊದಲ ಏಷ್ಯನ್ ತಂಡ ಎಂಬ ಹೆಗ್ಗಳಿಕೆಗೆ ಇದೀಗ ಪಾಕಿಸ್ತಾನ ಪಾತ್ರವಾಗಿದೆ. ಮಾತ್ರವಲ್ಲದೆ ಈ ಸಾಧನೆ ಮಾಡಿದ ವಿಶ್ವದ ಎರಡನೇ ತಂಡವೆಂಬ ದಾಖಲೆಯೂ ಪಾಕ್ ಪಾಲಾಗಿದೆ.
38 ರನ್ಗೆ 7 ವಿಕೆಟ್ ಪತನ
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ತನ್ನ ಕೊನೆಯ ಏಳು ವಿಕೆಟ್ಗಳನ್ನು ಕೇವಲ 38 ರನ್ಗಳಿಗೆ ಕಳೆದುಕೊಂಡಿತು. ಇತ್ತ ತಂಡಕ್ಕೆ ಉತ್ತಮ ಆರಂಭವೂ ಸಿಗಲಿಲ್ಲ. ಶೂನ್ಯಕ್ಕೆ ಮೊದಲ ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾ, 42 ರನ್ಗಳಿಗೆ ತನ್ನ ಎರಡನೇ ವಿಕೆಟ್ ಕಳೆದುಕೊಂಡಿತು. 100 ರನ್ಗಳ ಒಳಗೆ ಮೂರನೇ ವಿಕೆಟ್ ಕೂಡ ಪತನವಾಯಿತು. ಆದಾಗ್ಯೂ ನಾಯಕ ಜೋಶ್ ಇಂಗ್ಲಿಸ್ ಒಂದು ತುದಿಯನ್ನು ದೃಢವಾಗಿ ನಿಂತು 65 ರನ್ಗಳ ಇನ್ನಿಂಗ್ಸ್ ಆಡಿದರು. ಇಂಗ್ಲಿಸ್ ಕ್ರೀಸ್ನಲ್ಲಿದ್ದ ತನಕ, ಆಸ್ಟ್ರೇಲಿಯಾ ದೊಡ್ಡ ಸ್ಕೋರ್ ದಾಖಲಿಸುವಂತೆ ತೋರುತ್ತಿತ್ತು. ಆದರೆ ಶಾಹೀನ್ ಶಾ ಅಫ್ರಿದಿ ಇಂಗ್ಲಿಸ್ ಅವರನ್ನು ಔಟ್ ಮಾಡಿದ ತಕ್ಷಣ, ಇಡೀ ಆಸ್ಟ್ರೇಲಿಯನ್ ಇನ್ನಿಂಗ್ಸ್ ತರಗೆಲೆಗಳಂತೆ ಉದುರಿತು.
157 ರನ್ಗಳಿಗೆ ಆಲೌಟ್
ಒಂದು ಹಂತದಲ್ಲಿ ಆಸ್ಟ್ರೇಲಿಯಾ 26 ಓವರ್ಗಳಲ್ಲಿ 3 ವಿಕೆಟ್ಗಳ ನಷ್ಟಕ್ಕೆ 119 ರನ್ ಗಳಿಸಿತ್ತು. ಆದರೆ ಜೋಶ್ ಇಂಗ್ಲಿಸ್ ಔಟಾದ ಬಳಿಕ ಆಸ್ಟ್ರೇಲಿಯಾದ ಯಾವುದೇ ಬ್ಯಾಟ್ಸ್ಮನ್ಗೆ ಕ್ರೀಸ್ನಲ್ಲಿ ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ. ತಂಡವು 157 ರನ್ ತಲುಪುವ ಹೊತ್ತಿಗೆ, ಉಳಿದ 6 ವಿಕೆಟ್ಗಳನ್ನು ಕಳೆದುಕೊಂಡಿತು. ಜೋಶ್ ಇಂಗ್ಲಿಸ್ ಹೊರತುಪಡಿಸಿ, ಬೇರೆ ಯಾವುದೇ ಬ್ಯಾಟ್ಸ್ಮನ್ಗೂ 20 ರನ್ ಗಳಿಸಲು ಸಾಧ್ಯವಾಗಲಿಲ್ಲ. ಮಾರ್ನಸ್ ಲಬುಶೇನ್ ಮತ್ತು ಅಲೆಕ್ಸ್ ಕ್ಯಾರಿ ತಲಾ 19 ರನ್ ಗಳಿಸಿದರೆ, ಕೊನೆಯಲ್ಲಿ ಆಡಮ್ ಜಂಪಾ 10 ರನ್ ಗಳಿಸಿದರು. ಬೇರೆ ಯಾವುದೇ ಆಟಗಾರನಿಗೆ ಎರಡಂಕಿ ತಲುಪಲು ಸಾಧ್ಯವಾಗಲಿಲ್ಲ.
4 ವಿಕೆಟ್ಗಳಿಂದ ಗೆದ್ದ ಪಾಕ್
158 ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ಪಾಕಿಸ್ತಾನ 41.5 ಓವರ್ಗಳಲ್ಲಿ ಕೇವಲ ಆರು ವಿಕೆಟ್ಗಳ ನಷ್ಟಕ್ಕೆ ಗೆಲುವಿನ ದಡ ಮುಟ್ಟಿತು. ಈ ರನ್ ಚೇಸ್ನಲ್ಲಿ ಪಾಕಿಸ್ತಾನದ ಪರ ಬಾಬರ್ ಆಝಂ 40 ರನ್ಗಳ ಗೆಲುವಿನ ಇನ್ನಿಂಗ್ಸ್ ಆಡಿದರು. ಹಾಗೆಯೇ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಶದಾಬ್ ಖಾನ್ ಕೂಡ 29 ರನ್ ಬಾರಿಸಿ ಅಜೇಯರಾಗಿ ಉಳಿದರು. ಆರಂಭಿಕ ಆಟಗಾರ ಮಾಜ್ ಸದಾಕತ್ ಕೂಡ 27 ರನ್ಗಳ ಕಾಣಿಕೆ ನೀಡಿದರು. ಈ ಮೂಲಕ ಪಾಕಿಸ್ತಾನ ತಂಡವು ಮೂರನೇ ಏಕದಿನ ಪಂದ್ಯವನ್ನು ಇನ್ನೂ 49 ಎಸೆತಗಳು ಬಾಕಿ ಇರುವಂತೆ 4 ವಿಕೆಟ್ಗಳಿಂದ ಗೆದ್ದು ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿತು.
ಇದು ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನದ ಸತತ ಮೂರನೇ ಏಕದಿನ ಸರಣಿ ಗೆಲುವು. ಇದಕ್ಕೂ ಮೊದಲು, 2022 ರಲ್ಲಿ ತವರು ನೆಲದಲ್ಲಿ ನಡೆದ ಏಕದಿನ ಸರಣಿಯಲ್ಲಿ ಪಾಕಿಸ್ತಾನ ತಂಡವು ಆಸ್ಟ್ರೇಲಿಯಾವನ್ನು 2-1 ಅಂತರದಿಂದ ಸೋಲಿಸಿತ್ತು. ನಂತರ, 2024 ರಲ್ಲಿ, ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು 1-2 ಅಂತರದಿಂದ ಗೆದ್ದುಕೊಂಡಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಜೂ5: ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಆರಂಭವಾಗಿದ್ದು, ಮುಂದಿನ ಒಂದು ವಾರದ ಕಾಲ ವಿವಿಧ ಜಿಲ್ಲೆಗಳಲ್ಲಿ ವರುಣನ ಆರ್ಭಟ ಜೋರಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಜೂನ್ 5 ರಿಂದ ಅಂದರೆ ಇಂದಿನಿಂದಲ್ಲೇ ಜೂನ್ 11 ರವರೆಗೆ ಕರ್ನಾಟಕದ ಒಳನಾಡು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಹವಾಮಾನ ಇಲಾಖೆಯ ವರದಿಯ ಪ್ರಕಾರ, ಒಳನಾಡಿನ ಜಿಲ್ಲೆಗಳ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಕನಿಷ್ಠ 64.5 ಮಿಲಿಮೀಟರ್ನಿಂದ ಗರಿಷ್ಠ 115.4 ಮಿಲಿಮೀಟರ್ನಷ್ಟು ಭಾರಿ ಪ್ರಮಾಣದ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಮಳೆಯ ತೀವ್ರತೆ ಹೆಚ್ಚಿರಲಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಮುನ್ನೆಚ್ಚರಿಕೆಯಾಗಿ ಈ ಭಾಗಗಳಲ್ಲಿ ‘ಯೆಲ್ಲೋ ಅಲರ್ಟ್’ ಘೋಷಿಸಿದೆ.
ಧಾರಾಕಾರ ಮಳೆಯ ಜೊತೆಗೆ ಸಿಡಿಲು, ಮಿಂಚು ಹಾಗೂ ಬಿರುಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮತ್ತು ರೈತರು ಅನಗತ್ಯವಾಗಿ ಹೊರಗಡೆ ತಿರುಗಾಡದಂತೆ ಹಾಗೂ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಕೋರಲಾಗಿದೆ. ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನ ಹಾಗೂ ನದಿ, ಹಳ್ಳ-ಕೊಳ್ಳಗಳ ಪಕ್ಕದಲ್ಲಿರುವ ನಾಗರಿಕರು ಹವಾಮಾನ ಇಲಾಖೆಯ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿ ಎಂದು ಹೇಳಿದೆ.
ಇನ್ನು ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮಿತಿಮೀರಲಿದ್ದು, ಜೂನ್ 5 ರಿಂದ ಜೂನ್ 11 ರವರೆಗೆ ಭಾರಿ ಹಾಗೂ ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಮುನ್ಸೂಚನೆ ನೀಡಿದೆ. ಕರಾವಳಿ ತೀರದಲ್ಲಿ ಹವಾಮಾನದ ಏರುಪೇರು ತೀವ್ರವಾಗಿರಲಿರುವ ಕಾರಣ ಮುನ್ನೆಚ್ಚರಿಕೆಯಾಗಿ ಈ ಭಾಗಗಳಲ್ಲಿ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಕನಿಷ್ಠ 64.5 ಮಿಲಿಮೀಟರ್ನಿಂದ ಆರಂಭವಾಗಿ, ಗರಿಷ್ಠ 204.4 ಮಿಲಿಮೀಟರ್ನಷ್ಟು ಅತ್ಯಂತ ಭಾರಿ ಪ್ರಮಾಣದ ಮಳೆಯಾಗುವ ಅಪಾಯವಿದೆ. ಬಿರುಗಾಳಿಯ ವೇಗವು ಹೆಚ್ಚಿರಲಿದ್ದು, ಕಡಲ ತೀರದಲ್ಲಿ ಅಲೆಗಳ ಅಬ್ಬರ ಜೋರಾಗಿರಲಿದೆ.
ಮೀನುಗಾರರು ಹಾಗೂ ಸಾರ್ವಜನಿಕರಿಗೆ ಹವಾಮಾನ ಇಲಾಖೆ ನೀಡಿದ ಪ್ರಮುಖ ಸೂಚನೆಗಳು:
ಸಮುದ್ರದಲ್ಲಿ ಗಾಳಿಯ ವೇಗ ಮತ್ತು ಅಲೆಗಳ ಅಬ್ಬರ ಜೋರಾಗಿರುವುದರಿಂದ ಜೂನ್ 11 ರವರೆಗೆ ಮೀನುಗಾರರು ಯಾವುದೇ ಕಾರಣಕ್ಕೂ ಕಡಲಿಗೆ ಇಳಿಯಬಾರದು ಎಂದು ಸೂಚಿಸಲಾಗಿದೆ.
ಧಾರಾಕಾರ ಮಳೆಯಿಂದಾಗಿ ಹಠಾತ್ ಪ್ರವಾಹದ ಭೀತಿ ಎದುರಾಗುವ ಸಾಧ್ಯತೆ ಇರುವುದರಿಂದ ನದಿ ಪಾತ್ರದ ಹಾಗೂ ತಗ್ಗು ಪ್ರದೇಶಗಳ ನಿವಾಸಿಗಳು ತಕ್ಷಣವೇ ಸುರಕ್ಷಿತ ಸ್ಥಳಗಳತ್ತ ಗಮನ ಹರಿಸಬೇಕಾಗಿ ವಿನಂತಿಸಲಾಗಿದೆ.
ಕರಾವಳಿಯ ಪ್ರಸಿದ್ಧ ಬೀಚ್ಗಳಿಗೆ ಭೇಟಿ ನೀಡುವ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಜಾಗರೂಕತೆ ವಹಿಸಲು ಮತ್ತು ಸ್ಥಳೀಯ ಜಿಲ್ಲಾಡಳಿತದ ನಿಯಮಗಳನ್ನು ಪಾಲಿಸಲು ಕೋರಲಾಗಿದೆ.
ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಕರಾವಳಿ ಜಿಲ್ಲೆಗಳ ಜಿಲ್ಲಾಡಳಿತಗಳು ಮತ್ತು ವಿಪತ್ತು ನಿರ್ವಹಣಾ ತಂಡಗಳು ಸಂಪೂರ್ಣ ಸನ್ನದ್ಧವಾಗಿವೆ.
‘ಧುರಂಧರ್’ (Dhurandhar) ಮತ್ತು ‘ಧುರಂಧರ್ 2’ ಸಿನಿಮಾ ಭಾರತದ ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದಿದೆ. ಮಾತ್ರವಲ್ಲದೆ, ಅಮೆರಿಕ ಸೇರಿದಂತೆ ಇತರೆ ಕೆಲವು ದೇಶಗಳಲ್ಲಿಯೂ ಸಹ ದೊಡ್ಡ ಮೊತ್ತದ ಗಳಿಕೆ ಮಾಡಿದ್ದು, ವಿದೇಶದಲ್ಲಿ ಹೆಚ್ಚು ಹಣ ಬಾಚಿದ ಭಾರತದ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿದೆ. ಇದೀಗ ‘ಧುರಂಧರ್ 2’ ಸಿನಿಮಾ ಒಟಿಟಿಗೆ ಸಹ ಬಂದಿದ್ದಾಗಿದೆ. ಆದರೆ ಇದೀಗ 2025 ರಲ್ಲಿ ಬಿಡುಗಡೆ ಆಗಿದ್ದ ‘ಧುರಂಧರ್’ ಸಿನಿಮಾ, ಜಪಾನಿನಲ್ಲಿ ಬಿಡುಗಡೆ ಆಗಲು ಮುಂದಾಗಿದೆ. ಜಪಾನಿನಲ್ಲಿ ಭಾರತೀಯ ಸಿನಿಮಾಗಳಿಗೆ ದೊಡ್ಡ ಮಾರುಕಟ್ಟೆ ಇದ್ದು, ಇಲ್ಲಿ ‘ಧುರಂಧರ್’ ಹೇಗೆ ಸದ್ದು ಮಾಡಲಿದೆ ಎಂಬ ಕುತೂಹಲ ಸಿನಿಮಾ ಪ್ರೇಮಿಗಳಿಗಿದೆ.
‘ಧುರಂಧರ್’ ಸಿನಿಮಾವು ಜಪಾನಿನಲ್ಲಿ ಅಲ್ಲಿನ ಮೂಲ ಭಾಷೆಯಲ್ಲಿ ಜುಲಯ 10 ರಂದು ತೆರೆಗೆ ಬರಲಿದೆ. ಜಪಾನಿನಲ್ಲಿ ದಶಕಗಳಿಂದಲೂ ಭಾರತೀಯ ಸಿನಿಮಾಗಳು ದೊಡ್ಡ ಗಳಿಕೆ ಮಾಡುತ್ತಾ ಬಂದಿವೆ. ಬಾಲಿವುಡ್ ಮಾತ್ರವಲ್ಲದೆ ತಮಿಳು, ತೆಲುಗು ಸಿನಿಮಾಗಳು ಸಹ ಜಪಾನಿನಲ್ಲಿ ದೊಡ್ಡ ಕಲೆಕ್ಷನ್ ಕಾಣುತ್ತವೆ. 2024 ರಲ್ಲಿ ಬಿಡುಗಡೆ ಆಗಿದ್ದ ತಮಿಳಿನ ‘ಮಹಾರಾಜ’ ಸಿನಿಮಾ 2025 ರಲ್ಲಿ ಜಪಾನಿನಲ್ಲಿ ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿತ್ತು. ಅದಾದ ಬಳಿಕ ಕೆಲ ಭಾರತೀಯ ಸಿನಿಮಾಗಳು ಜಪಾನಿನಲ್ಲಿ ಬಿಡುಗಡೆ ಆಗಿದ್ದವಾದರೂ ದೊಡ್ಡ ಹಿಟ್ ಆಗಿರಲಿಲ್ಲ. ಇದೀಗ ‘ಧುರಂಧರ್’ ಸಿನಿಮಾ ಜಪಾನಿನಲ್ಲಿ ಬಿಡುಗಡೆ ಆಗಲಿದ್ದು, ಅದು ಹೇಗೆ ಮ್ಯಾಜಿಕ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಜಪಾನಿನಲ್ಲಿ ರಜನೀಕಾಂತ್ ನಟನೆಯ ‘ಮುತ್ತು’ ಸಿನಿಮಾ ಬಹು ದೊಡ್ಡ ಹಿಟ್ ಆಗಿತ್ತು. ‘ಮುತ್ತು’ ಸಿನಿಮಾದ ಕಲೆಕ್ಷನ್ ದಾಖಲೆಯನ್ನು ದಶಕಗಳ ಕಾಲ ಯಾವ ಸಿನಿಮಾ ಸಹ ಮುರಿಯಲಾಗಿರಲಿಲ್ಲ. ಆ ಬಳಿಕ ‘ಈಗ’, ‘3 ಇಡಿಯಟ್ಸ್’, ‘ಆರ್ಆರ್ಆರ್’ ಸಿನಿಮಾಗಳು ಸಹ ಜಪಾನಿನಲ್ಲಿ ಭಾರಿ ಕಲೆಕ್ಷನ್ ಮಾಡಿರುವ ಭಾರತೀಯ ಸಿನಿಮಾಗಳಾಗಿವೆ. ಇದೀಗ ‘ಧುರಂಧರ್’ ಸಿನಿಮಾ ಬಿಡುಗಡೆ ಆಗುತ್ತಿದ್ದು, ಅಮೆರಿಕ, ಬ್ರಿಟನ್ಗಳಲ್ಲಿ ಬರೆದಿರುವ ದಾಖಲೆಯನ್ನು ಜಪಾನಿನಲ್ಲೂ ಪುನರಾವರ್ತನೆ ಮಾಡುವ ನಿರೀಕ್ಷೆ ಸಿನಿಮಾ ಅಭಿಮಾನಿಗಳದ್ದು.
‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳು ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಭಾರಿ ದೊಡ್ಡ ಮೊತ್ತ ಗಳಿಕೆ ಮಾಡಿದ್ದರೂ ಸಹ ಭಾರತದ ಅತಿ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ ಸಿನಿಮಾಗಳು ಎನಿಸಿಕೊಂಡಿಲ್ಲ. ಆ ದಾಖಲೆ ಈಗಲೂ ‘ದಂಗಲ್’ ಹೆಸರಿನಲ್ಲೇ ಇದೆ. ಒಂದೊಮ್ಮೆ ‘ಧುರಂಧರ್’ ಸಿನಿಮಾ ಜಪಾನಿನಲ್ಲಿ ಯಶಸ್ಸು ಗಳಿಸಿದರೆ ‘ದಂಗಲ್’ ಸಿನಿಮಾದ ದಾಖಲೆ ಅಳಿಸಿ ಹೋಗುವ ಸಾಧ್ಯತೆ ಇದೆ.
‘ಧುರಂಧರ್’ 2025 ರಲ್ಲಿ ಬಿಡುಗಡೆ ಆದ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ರಣ್ವೀರ್ ಸಿಂಗ್ ನಟಿಸಿದ್ದಾರೆ. ಜೊತೆಗೆ ಅಕ್ಷಯ್ ಖನ್ನಾ, ಆರ್ ಮಾಧವನ್, ಅರ್ಜುನ್ ರಾಂಪಾಲ್, ಸಂಜಯ್ ದತ್ ಇನ್ನೂ ಇತರರು ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಆದಿತ್ಯ ಧರ್.