Video: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹುಟ್ಟುಹಬ್ಬ, 54 ಕೆಜಿ ಲಡ್ಡು ಕೇಕ್ ಕತ್ತರಿಸಿ ಅಭಿಮಾನಿಗಳ ಸಂಭ್ರಮ

ವಾರಾಣಸಿ, ಜೂನ್ 05: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ 54ನೇ ಜನ್ಮದಿನದ ಅಂಗವಾಗಿ ಶುಕ್ರವಾರ ವಾರಾಣಸಿಯಲ್ಲಿ ಅವರ ಬೆಂಬಲಿಗರು ಮತ್ತು ಅಭಿಮಾನಿಗಳು ವಿಭಿನ್ನವಾಗಿ ಸಂಭ್ರಮಿಸಿದ್ದಾರೆ. ಮುಖ್ಯಮಂತ್ರಿಗಳ ವಯಸ್ಸನ್ನು ಸಂಕೇತಿಸುವಂತೆ ಭರ್ಜರಿ 54 ಕೆಜಿಯ ವಿಶೇಷ ಲಡ್ಡು ಕೇಕ್ ಅನ್ನು ಸಿದ್ಧಪಡಿಸಿ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಂಘಟಕರು ಹಾಗೂ ಬೆಂಬಲಿಗರು ಜಂಟಿಯಾಗಿ 54 ಸಸ್ಯಗಳನ್ನು ನೆಟ್ಟು ಪರಿಸರ ಪ್ರೇಮ ಮೆರೆದಿದ್ದಾರೆ. ಯೋಗಿ ಆದಿತ್ಯನಾಥ್ ಅವರ ದೀರ್ಘಾಯುಷ್ಯ ಮತ್ತು ಯಶಸ್ಸಿಗಾಗಿ ಅಭಿಮಾನಿಗಳು ವಿಶೇಷ ಪ್ರಾರ್ಥನೆ ಸಲ್ಲಿಸಿ, ಸಿಹಿ ಹಂಚಿ ಸೌಹಾರ್ದತೆಯಿಂದ ದಿನವನ್ನು ಆಚರಿಸಿದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಹೊಸ ವೈದ್ಯರಿಗೆ ಗುಡ್ ನ್ಯೂಸ್ ಕೊಟ್ಟ ಸಚಿವ ಖಾದರ್: ಇನ್ಮುಂದೆ ಡೈರೆಕ್ಟ್ ವಾಕ್-ಇನ್ ಇಂಟರ್ವ್ಯೂ – Kannada News

ಬೆಂಗಳೂರು, ಜೂ.5: ಕರ್ನಾಟಕದ ಆರೋಗ್ಯ ಸಚಿವ ಯು.ಟಿ. ಖಾದರ್ (U.T. Khader) ಅವರು ರಾಜ್ಯದ ಆರೋಗ್ಯ ಕ್ಷೇತ್ರವನ್ನು ಬಲಪಡಿಸಲು ಮತ್ತು ಜನರಿಗೆ ಇನ್ನಷ್ಟು ಹತ್ತಿರವಾಗಿಸಲು ಹಲವು ಮಹತ್ವದ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಆರೋಗ್ಯ ಇಲಾಖೆಯು ದೊಡ್ಡ ಖಾತೆಯಾಗಿದ್ದು, ಡಾಕ್ಟರ್‌ಗಳ ನೇಮಕಾತಿಯಿಂದ ಹಿಡಿದು ನೀತಿ ರೂಪಿಸುವಿಕೆ ಮತ್ತು ಯೋಜನೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವಲ್ಲಿ ಆದ್ಯತೆ ನೀಡುವುದಾಗಿ ಅವರು ತಿಳಿಸಿದ್ದಾರೆ. ಹಿಂದಿನ ಸಚಿವರಾದ ದಿನೇಶ್ ಗುಂಡು ರಾವ್ ಅವರು ಮಾಡಿದ ಉತ್ತಮ ಕೆಲಸಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸಿಕೊಂಡು ಹೋಗಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಖಾದರ್ ಹೇಳಿದ್ದಾರೆ.

ಸಚಿವರು ಆಯುಷ್ಮಾನ್ ಕರ್ನಾಟಕ ಯೋಜನೆಯ ಅನುಷ್ಠಾನದ ಬಗ್ಗೆ ವಿಮರ್ಶಾ ಸಭೆ ನಡೆಸಿದ್ದು, ಈ ಯೋಜನೆಯಡಿ ಯಾವುದೇ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಯೋಜನೆಯಲ್ಲಿ ನಿಗದಿಪಡಿಸಿದ ಹಣಕ್ಕಿಂತ ಹೆಚ್ಚುವರಿಯಾಗಿ ಹಣ ಪಡೆಯುವ ಅವಕಾಶವಿಲ್ಲ. ಒಂದು ವೇಳೆ ಆಸ್ಪತ್ರೆಗಳು ಹೆಚ್ಚುವರಿ ಹಣ ಪಡೆದರೆ, ಅದರ ಮಾಹಿತಿಯನ್ನು ಜಿಲ್ಲಾ ಮಟ್ಟದ ಆರೋಗ್ಯ ಮಿತ್ರರ ಮೂಲಕ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ನೀಡುವಂತೆ ಖಾದರ್ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಅಂತಹ ಆಸ್ಪತ್ರೆಗಳ ವಿರುದ್ಧ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

ಇನ್ನು ಎಂಬಿಬಿಎಸ್ ಪದವಿ ಮುಗಿಸಿದ ವೈದ್ಯರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ ಲಭಿಸಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ಇಚ್ಛಿಸುವ ಎಂಬಿಬಿಎಸ್ ಪದವೀಧರರು ನೇರವಾಗಿ ವಾಕ್-ಇನ್ ಸಂದರ್ಶನದ ಮೂಲಕ ಜಿಲ್ಲಾ ಆರೋಗ್ಯ ಅಧಿಕಾರಿಗೆ ಪತ್ರ ನೀಡಬಹುದು. ಪತ್ರ ನೀಡಿದ ಒಂದು ವಾರದೊಳಗೆ ಅವರನ್ನು ನೇಮಕಾತಿ ಮಾಡಿಕೊಂಡು ಕೆಲಸ ನೀಡಬೇಕು ಎಂದು ಸಚಿವರು ಆದೇಶಿಸಿದ್ದಾರೆ. ಈ ವೈದ್ಯರಿಗೆ 60,000 ರೂ. ವೇತನವನ್ನು ನಿಗದಿಪಡಿಸಲಾಗಿದೆ. ಈ ಬಗ್ಗೆ ಇನ್ನಷ್ಟು ಪರಿಣಾಮಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಜನರಿಂದ ಮತ್ತು ವೈದ್ಯರಿಂದ ಸಲಹೆಗಳನ್ನು ಆಹ್ವಾನಿಸುವುದಾಗಿ ಯು.ಟಿ. ಖಾದರ್ ತಿಳಿಸಿದ್ದಾರೆ.

ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಹೈವೋಲ್ಟೇಜ್ ಮೀಟಿಂಗ್!: ಮುನಿಯಪ್ಪ ಮನವೊಲಿಕೆಗೆ ಮುಂದಾದ ರಾಹುಲ್, ಸಿದ್ದು, ಡಿಕೆಶಿ

ತಮ್ಮ ಖಾತೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ನಮಗೆ ಖಾತೆ ಕೊಟ್ಟಾಗ ನಾವು ಕೆಲಸ ಮಾಡಬೇಕು, ಅದು ನಮ್ಮ ಜವಾಬ್ದಾರಿ. ಇದರಲ್ಲಿ ಸಮಾಧಾನ ಮತ್ತು ತೃಪ್ತಿ ಸಿಗುತ್ತದೆ. ನಾನು ಸಮಾಧಾನದಿಂದ ಇದ್ದೇನೆ, ಖುಷಿಯಿಂದ ಇದ್ದೇನೆ, ಆ ಕೆಲಸ ಮಾಡುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:32 pm, Fri, 5 June 26

Source link

ಕ್ರಿಸ್ಟೋಫರ್ ನೋಲನ್ ಹೊಸ ಸಿನಿಮಾ ಟಿಕೆಟ್ ಬರೋಬ್ಬರಿ 1.4 ಲಕ್ಷ ರೂ.ಗೆ ಮಾರಾಟ – Kannada News

ವಿಶ್ವಪ್ರಸಿದ್ಧ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಸಿನಿಮಾ ಬರ್ತಿದೆ ಎಂದರೆ ಸಾಕು, ಜಗತ್ತಿನಾದ್ಯಂತ ಸಿನಿರಸಿಕರಲ್ಲಿ ಭಾರಿ ಕುತೂಹಲ ಮತ್ತು ಹೈಪ್ ಸೃಷ್ಟಿಯಾಗುವುದು ತೀರಾ ಮಾಮೂಲಿ. ಆದರೆ, ಅವರ ಮುಂಬರುವ ಹೊಸ ಸಿನಿಮಾ ‘ದಿ ಒಡಿಸ್ಸಿ’ (The Odyssey) ವಿಷಯದಲ್ಲಿ ಮಾತ್ರ ಈ ಕ್ರೇಜ್ ಈಗ ಎಲ್ಲ ಎಲ್ಲೆಗಳನ್ನೂ ಮೀರಿ ನಿಂತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿದೆ.

ಹಾಲಿವುಡ್ ಮಾಧ್ಯಮಗಳ ಇತ್ತೀಚಿನ ವರದಿಗಳ ಪ್ರಕಾರ, ಇಬೇ ವೆಬ್‌ಸೈಟ್‌ನಲ್ಲಿ ‘ದಿ ಒಡಿಸ್ಸಿ’ ಸಿನಿಮಾದ ಬ್ಲ್ಯಾಕ್ ಟಿಕೆಟ್‌ಗಳು ಬರೋಬ್ಬರಿ 1500 ಡಾಲರ್‌ಗೆ ಮಾರಾಟವಾಗುತ್ತಿವೆ. ಇದನ್ನು ಭಾರತೀಯ ರೂಪಾಯಿಗಳಿಗೆ ಕನ್ವರ್ಟ್ ಮಾಡಿದರೆ ಅಂದಾಜು 1.4 ಲಕ್ಷ ರೂಪಾಯಿ ಆಗುತ್ತದೆ. ಒಂದೇ ಒಂದು ಟಿಕೆಟ್‌ಗೆ ಜನರು ಇಷ್ಟೊಂದು ದೊಡ್ಡ ಮೊತ್ತ ನೀಡುತ್ತಿರುವುದು ನೋಲನ್ ಸಿನಿಮಾಗಳ ಮೇಲಿರುವ ಗರಿಷ್ಠ ಮಟ್ಟದ ನಿರೀಕ್ಷೆಯನ್ನು ಸಾಬೀತುಪಡಿಸಿದೆ.

‘ದಿ ಒಡಿಸ್ಸಿ’ ಸಿನಿಮಾವನ್ನು ಸಂಪೂರ್ಣವಾಗಿ ಅತ್ಯಾಧುನಿಕ ಐಮ್ಯಾಕ್ಸ್ (IMAX) ಕ್ಯಾಮೆರಾಗಳಲ್ಲೇ ಚಿತ್ರೀಕರಿಸಲಾಗಿದೆ. ಇದನ್ನು 1.43:1 ರೇಶಿಯೋದ 70ಎಂಎಂ ಐಮ್ಯಾಕ್ಸ್ ಪರದೆಯ ಮೇಲೆ ನೋಡುವುದೇ ಒಂದು ಅದ್ಭುತ ದೃಶ್ಯ ವೈಭವ. ಇದೇ ಕಾರಣಕ್ಕೆ, ಚಿತ್ರಮಂದಿರದ ಅತ್ಯುತ್ತಮ ಐಮ್ಯಾಕ್ಸ್ ಸ್ಕ್ರೀನ್‌ನಲ್ಲಿ ಈ ಮ್ಯಾಜಿಕ್ ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಮುಗಿಬಿದ್ದಿದ್ದು, ಒಂದು ಟಿಕೆಟ್‌ಗೆ ಲಕ್ಷ ಲಕ್ಷ ಹಣ ಚೆಲ್ಲಲು ರೆಡಿಯಾಗಿದ್ದಾರೆ.

ಇದನ್ನೂ ಓದಿ: ಯಶ್ ನಟನೆಯ ‘ರಾಮಾಯಣ’ ಸಿನಿಮಾಗೆ ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಸಾಥ್?

ಬಿಡುಗಡೆಗೂ ಮುನ್ನವೇ ಇಷ್ಟೊಂದು ಸೌಂಡ್ ಮಾಡುತ್ತಿರುವ ಈ ಸಿನಿಮಾ, ತೆರೆಕಂಡ ಮೇಲೆ ಬಾಕ್ಸ್ ಆಫೀಸ್‌ನಲ್ಲಿ ಇನ್ನೆಷ್ಟು ದಾಖಲೆಗಳನ್ನು ಉಡೀಸ್ ಮಾಡಲಿದೆಯೋ ಎಂಬ ಪ್ರಶ್ನೆ ಸಿನಿರಸಿಕರಲ್ಲಿ ಮೂಡಿದೆ.
ಹೋಮರ್ ಬರೆದಿರುವ ಗ್ರೀಕ್ ಮಹಾಕಾವ್ಯದ ಹಿನ್ನೆಲೆಯುಳ್ಳ ‘ದಿ ಒಡಿಸ್ಸಿ’ ಸಿನಿಮಾ ಜುಲೈ 17 ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಮ್ಯಾಟ್ ಡಾಮನ್, ಟಾಮ್ ಹಾಲೆಂಡ್, ಆನ್ ಹ್ಯಾಥ್‌ವೇ, ರಾಬರ್ಟ್ ಪ್ಯಾಟಿನ್ಸನ್, ಝೆಂಡಾಯಾ ಮತ್ತು ಚಾರ್ಲಿಜ್ ಥೆರಾನ್ ಸೇರಿದಂತೆ ಹಾಲಿವುಡ್‌ನ ದಿಗ್ಗಜ ಕಲಾವಿದರ ದಂಡೇ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನೇರಳೆ ಹಣ್ಣು ಮಧುಮೇಹ, ಜೀರ್ಣಕ್ರಿಯೆಗೆ ರಾಮಬಾಣ; ಸಂಪೂರ್ಣ ಆರೋಗ್ಯ ಲಾಭಗಳ ಬಗ್ಗೆ ಇಲ್ಲಿದೆ ಮಾಹಿತಿ – Kannada News

ನೇರಳೆ ಹಣ್ಣು ಭಾರತೀಯ ಸಾಂಪ್ರದಾಯಿಕ ವೈದ್ಯಕೀಯ ಪರಂಪರೆಯಲ್ಲಿ ಅತ್ಯಂತ ಮಹತ್ವದ ಔಷಧೀಯ ಫಲಗಳಲ್ಲಿ ಒಂದಾಗಿದೆ. ಸಂಸ್ಕೃತದಲ್ಲಿ ಇದನ್ನು “ಜಂಬೂ”, ಕನ್ನಡದಲ್ಲಿ “ನೇರಳೆ” ಮತ್ತು ಹಿಂದಿಯಲ್ಲಿ “ಜಾಮುನ್” ಎಂದು ಕರೆಯುತ್ತಾರೆ. ಇದರ ವೈಜ್ಞಾನಿಕ ಹೆಸರು Syzygium cumini. ಈ ಅದ್ಭುತ ಮರದ ಹಣ್ಣು, ಬೀಜ, ಎಲೆ, ತೊಗಟೆ ಮತ್ತು ಬೇರು—ಹೀಗೆ ಪ್ರತಿಯೊಂದು ಭಾಗವೂ ತನ್ನದೇ ಆದ ವಿಶಿಷ್ಟ ಔಷಧೀಯ ಗುಣಗಳನ್ನು ಹೊಂದಿದೆ. ಆಯುರ್ವೇದದ ಪ್ರಕಾರ ನೇರಳೆ ಹಣ್ಣು ಕಷಾಯ (ಒಗರು) ರಸ ಹಾಗೂ ಶೀತ ಸ್ವಭಾವವನ್ನು ಹೊಂದಿದೆ. ವಿಶೇಷವಾಗಿ ಮಧುಮೇಹ, ಜೀರ್ಣಕ್ರಿಯೆ, ರಕ್ತಶುದ್ಧಿ ಮತ್ತು ಬಾಯಿಯ ಆರೋಗ್ಯದ ವಿಷಯಗಳಲ್ಲಿ ಇದರ ಬಳಕೆ ಶತಮಾನಗಳಿಂದ ನಡೆದುಕೊಂಡು ಬಂದಿದೆ.

ಅದ್ಭುತ ಆರೋಗ್ಯ ನೀಡುವ ನೇರಳೆ ಹಣ್ಣಿನ ಉಪಯೋಗಗಳು:

ನೇರಳೆ ಹಣ್ಣು ಮತ್ತು ಅದರ ಬೀಜಗಳು ಮಧುಮೇಹ (ಡಯಾಬಿಟಿಸ್) ನಿಯಂತ್ರಣಕ್ಕೆ ರಾಮಬಾಣ ಎಂದು ಪ್ರಾಚೀನ ವೈದ್ಯಕೀಯ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಒಣಗಿಸಿದ ಬೀಜದ ಪುಡಿಯನ್ನು ಮಿತ ಪ್ರಮಾಣದಲ್ಲಿ ನೀರಿನೊಂದಿಗೆ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ. ಇದರೊಂದಿಗೆ ಅಜೀರ್ಣ, ಹೊಟ್ಟೆ ನೋವು, ಭೇದಿ ಮತ್ತು ಅತಿಸಾರದಂತಹ ಸಮಸ್ಯೆಗಳಲ್ಲಿ ನೇರಳೆ ಹಣ್ಣು ಉಪಯುಕ್ತವೆಂದು ಪರಿಗಣಿಸಲಾಗಿದೆ. ಊಟದ ನಂತರ ಸ್ವಲ್ಪ ಪ್ರಮಾಣದಲ್ಲಿ ಇದನ್ನು ಸೇವಿಸಿದರೆ ಜೀರ್ಣಶಕ್ತಿ ವೃದ್ಧಿಯಾಗುತ್ತದೆ. ಅಲ್ಲದೆ, ನೇರಳೆಯಲ್ಲಿರುವ ಹೇರಳವಾದ ಕಬ್ಬಿಣಾಂಶ ಮತ್ತು ವಿಟಮಿನ್ C ರಕ್ತ ಉತ್ಪಾದನೆಗೆ ನೆರವಾಗುವ ಮೂಲಕ ರಕ್ತಹೀನತೆಯನ್ನು (Anemia) ಕಡಿಮೆ ಮಾಡಿ ರಕ್ತವನ್ನು ಶುದ್ಧಗೊಳಿಸುತ್ತದೆ.

ಬೀಜ ಮತ್ತು ತೊಗಟೆಯ ಔಷಧೀಯ ರಹಸ್ಯಗಳು:

ನೇರಳೆ ಹಣ್ಣಿನ ಬೀಜಗಳನ್ನು ಒಣಗಿಸಿ ಸಿದ್ಧಪಡಿಸುವ ಪುಡಿಯನ್ನು ಮಧುಮೇಹ ಮಾತ್ರವಲ್ಲದೆ ಅತಿಸಾರ ಮತ್ತು ಮೂತ್ರ ಸಂಬಂಧಿತ ತೊಂದರೆಗಳಿಗೂ ಬಳಸಲಾಗುತ್ತದೆ. ಇದರ ಬೀಜದ ಕಷಾಯವು ಮೂತ್ರದ ಸೋಂಕು (UTI), ಮೂತ್ರದ ಉರಿ ಹಾಗೂ ಮೂತ್ರಪಿಂಡದ (ಕಿಡ್ನಿ) ಆರೋಗ್ಯಕ್ಕೆ ಒಳ್ಳೆಯದು. ಇನ್ನು ಗ್ರಾಮೀಣ ಭಾರತದಲ್ಲಿ ನೇರಳೆ ಮರದ ತೊಗಟೆಯನ್ನು ಒಣಗಿಸಿ ಪುಡಿ ಮಾಡಿ ಹಲ್ಲುಜ್ಜಲು ಬಳಸುವ ಪದ್ಧತಿ ಇಂದಿಗೂ ಇದೆ. ಇದು ವಸಡುಗಳನ್ನು ಗಟ್ಟಿಗೊಳಿಸಿ ರಕ್ತಸ್ರಾವವನ್ನು ಕಡಿಮೆ ಮಾಡುತ್ತದೆ. ಈ ತೊಗಟೆಯ ಕಷಾಯದಿಂದ ಮುಖ ತೊಳೆಯುವುದರಿಂದ ಮೊಡವೆಗಳು ಕಡಿಮೆಯಾಗಿ ಚರ್ಮದ ಕಾಂತಿ ಹೆಚ್ಚುತ್ತದೆ.

ಎಲೆಗಳಲ್ಲಿದೆ ಬಾಯಿ ದುರ್ಗಂಧ ಹಾಗೂ ಗಾಯ ವಾಸಿ ಮಾಡುವ ಗುಣ:

ತಾಜಾ ನೇರಳೆ ಎಲೆಗಳನ್ನು ಪ್ರತಿದಿನ ಅಗಿಯುವುದರಿಂದ ಬಾಯಿಯ ದುರ್ಗಂಧ ದೂರವಾಗುತ್ತದೆ ಮತ್ತು ಒಸಡುಗಳ ಆರೋಗ್ಯ ಸುಧಾರಿಸುತ್ತದೆ. ಕೆಲವು ಪ್ರಾಚೀನ ಗ್ರಂಥಗಳಲ್ಲಿ ನೇರಳೆ ಎಲೆಯ ರಸವನ್ನು ಮಧುಮೇಹ ನಿರ್ವಹಣೆಗೆ ಸಹಾಯಕವಾಗಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲದೆ, ಹಳ್ಳಿಗಳಲ್ಲಿ ಎಲೆಯ ರಸ ಅಥವಾ ಎಲೆಗಳ ಲೇಪನವನ್ನು ಸಣ್ಣಪುಟ್ಟ ಗಾಯಗಳ ಮೇಲೆ ಹಚ್ಚುವ ಸಂಪ್ರದಾಯವಿದೆ. ಇದು ಆಂಟಿಸೆಪ್ಟಿಕ್ ತರಹ ಕೆಲಸ ಮಾಡಿ ಗಾಯಗಳು ಬೇಗ ವಾಸಿಯಾಗಲು ಸಹಕರಿಸುತ್ತದೆ.

ನೇರಳೆ ಹಣ್ಣಿನ ಅಡ್ಡ ಪರಿಣಾಮಗಳು ಮತ್ತು ಅಗತ್ಯ ಎಚ್ಚರಿಕೆಗಳು:

ನೇರಳೆ ಹಣ್ಣು ಆರೋಗ್ಯಕರವಾಗಿದ್ದರೂ, ಇದನ್ನು ಅತಿಯಾಗಿ ಅಥವಾ ತಪ್ಪು ಕ್ರಮದಲ್ಲಿ ಸೇವಿಸಿದರೆ ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು:

  • ರಕ್ತದ ಸಕ್ಕರೆ ಕುಸಿತ: ಮಧುಮೇಹಕ್ಕೆ ಈಗಾಗಲೇ ಔಷಧಿ ಸೇವಿಸುವವರು ಹೆಚ್ಚಿನ ಪ್ರಮಾಣದಲ್ಲಿ ನೇರಳೆ ಬೀಜದ ಪುಡಿ ಬಳಸಿದರೆ ಸಕ್ಕರೆ ಮಟ್ಟ ಅಪಾಯಕಾರಿಯಾಗಿ ಇಳಿಯುವ (Hypoglycemia) ಸಾಧ್ಯತೆ ಇರುತ್ತದೆ.
  • ಹೊಟ್ಟೆಯ ತೊಂದರೆ: ನೇರಳೆ ಹಣ್ಣನ್ನು ಎಂದಿಗೂ ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ಹಾಗೆ ಮಾಡುವುದರಿಂದ ವಾಕರಿಕೆ, ಅಸಿಡಿಟಿ ಅಥವಾ ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು. ಅತಿಯಾಗಿ ತಿಂದರೆ ಮಲಬದ್ಧತೆಯೂ ಉಂಟಾಗಬಹುದು.
  • ಹಾಲಿನ ಜೊತೆ ಬಳಕೆ ಬೇಡ: ನೇರಳೆ ಹಣ್ಣು ತಿಂದ ತಕ್ಷಣ ಅಥವಾ ಅದರ ಜೊತೆಯಲ್ಲಿ ಹಾಲು ಮತ್ತು ಮೊಸರನ್ನು ಸೇವಿಸಬಾರದು, ಇದು ವಿರುದ್ಧ ಆಹಾರವಾಗುತ್ತದೆ.

ಗರ್ಭಿಣಿಯರು ಮತ್ತು ಅಲರ್ಜಿ:

ಕೆಲವರಲ್ಲಿ ಇದು ಚರ್ಮದ ತುರಿಕೆ ಅಥವಾ ಉಸಿರಾಟದ ತೊಂದರೆಯಂತಹ ಅಲರ್ಜಿ ಉಂಟುಮಾಡಬಹುದು. ಗರ್ಭಿಣಿಯರು ಇದನ್ನು ಸಾಮಾನ್ಯ ಆಹಾರದ ಪ್ರಮಾಣದಲ್ಲಿ ಸೇವಿಸುವುದು ಸುರಕ್ಷಿತವಾದರೂ, ವೈದ್ಯಕೀಯ ಉದ್ದೇಶಕ್ಕೆ ಬಳಸುವ ಮುನ್ನ ತಜ್ಞರ ಸಲಹೆ ಪಡೆಯುವುದು ಕಡ್ಡಾಯ. ದಿನಕ್ಕೆ 100 ರಿಂದ 150 ಗ್ರಾಂ ಮಿತಿಯಲ್ಲಿ ಹಣ್ಣನ್ನು ತಿನ್ನುವುದು ಅತ್ಯುತ್ತಮ.

ಇದನ್ನೂ ಓದಿ: ನಿಮ್ಮ ಹಾಸಿಗೆ ಮೇಲೊಂದು ಟೈಮ್ ಬಾಂಬ್; ಮೊಬೈಲ್ ಪಕ್ಕದಲ್ಲಿಟ್ಟುಕೊಂಡು ನಿದ್ರೆ ಮಾಡುತ್ತೀರಾ?

ನೇರಳೆ ಹಣ್ಣನ್ನು ಉಪ್ಪಿನ ಜೊತೆ ತಿನ್ನುವ ಸಾಂಪ್ರದಾಯಿಕ ಪದ್ಧತಿ:

ನೇರಳೆ ಹಣ್ಣು ಸ್ವಭಾವತಃ ಒಗರು ಮತ್ತು ಹುಳಿ ರುಚಿ ಹೊಂದಿದೆ. ಉಪ್ಪು ಹಾಕಿ ತಿಂದಾಗ ಆ ಒಗರು ಕಡಿಮೆಯಾಗಿ ಹಣ್ಣಿನ ನೈಸರ್ಗಿಕ ಸಿಹಿ ಹೆಚ್ಚುತ್ತದೆ. ಇದು ಭಾರತದಾದ್ಯಂತ ಶತಮಾನಗಳಿಂದ ನಡೆದುಬಂದ ಸಂಪ್ರದಾಯವಾಗಿದೆ. ಸ್ವಲ್ಪ ಉಪ್ಪು (ವಿಶೇಷವಾಗಿ ಸೈಂಧವ ಲವಣ ಅಥವಾ ಕಲ್ಲುಪ್ಪು) ಸೇರಿಸಿ ತಿನ್ನುವುದರಿಂದ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ ಹಾಗೂ ಹೊಟ್ಟೆ ಉಬ್ಬರ ಮತ್ತು ಅಜೀರ್ಣ ಕಡಿಮೆಯಾಗುತ್ತದೆ. ಕಷಾಯ ರಸ ಪ್ರಧಾನವಾದ ನೇರಳೆ ಹಾಗೂ ಲವಣ ರಸವಾದ ಉಪ್ಪು ಸೇರಿದಾಗ ರುಚಿಯ ಸಮತೋಲನ ಉಂಟಾಗುತ್ತದೆ. ಆದರೆ ನೆನಪಿಡಿ, ಕೇವಲ ರುಚಿಗಾಗಿ ಸ್ವಲ್ಪ ಮಾತ್ರ ಉಪ್ಪು ಬಳಸಬೇಕು. ಮಧುಮೇಹಿಗಳು ಮತ್ತು ಅಧಿಕ ರಕ್ತದೊತ್ತಡ (BP) ಇರುವವರು ಉಪ್ಪಿಲ್ಲದೆ ತಿನ್ನುವುದೇ ಆರೋಗ್ಯಕ್ಕೆ ಒಳ್ಳೆಯದು.

ನಮ್ಮ ಸಾಂಸ್ಕೃತಿಕ ಇತಿಹಾಸದ ಹೆಮ್ಮೆ ‘ಜಂಬೂದ್ವೀಪ’:

ನೇರಳೆ ಕೇವಲ ಒಂದು ಹಣ್ಣು ಮಾತ್ರವಲ್ಲ; ಅದು ಭಾರತದ ಸಂಸ್ಕೃತಿ ಮತ್ತು ಭವ್ಯ ಇತಿಹಾಸದ ಅವಿಭಾಜ್ಯ ಅಂಗವಾಗಿದೆ. ಪುರಾಣಗಳ ಪ್ರಕಾರ, “ಜಂಬೂ” (ನೇರಳೆ) ಎಂಬ ವಿಶಿಷ್ಟ ವೃಕ್ಷಗಳು ಯೆಥೇಚ್ಛವಾಗಿ ಬೆಳೆಯುತ್ತಿದ್ದ ಕಾರಣಕ್ಕಾಗಿಯೇ ಭಾರತವನ್ನು ಪ್ರಾಚೀನ ಕಾಲದಲ್ಲಿ “ಜಂಬೂದ್ವೀಪ” ಎಂದು ಕರೆಯಲಾಗುತ್ತಿತ್ತು. ಆದ್ದರಿಂದ ನೇರಳೆ ಹಣ್ಣು ಕೇವಲ ದೈಹಿಕ ಆರೋಗ್ಯ ನೀಡುವುದಲ್ಲದೆ, ನಮ್ಮ ಸಾಂಸ್ಕೃತಿಕ ಪರಂಪರೆಯ ಹೆಮ್ಮೆಯ ಸಂಕೇತವೂ ಆಗಿದೆ. ಹಣ್ಣು ಆರೋಗ್ಯ ನೀಡಿದರೆ, ಬೀಜ ಔಷಧಿಯಾಗುತ್ತದೆ, ಮರ ಪರಿಸರವನ್ನು ಕಾಪಾಡುತ್ತದೆ. ಪ್ರಕೃತಿ ನಮಗೆ ನೀಡಿರುವ ಈ ರುಚಿಕರ ಹಾಗೂ ಪೌಷ್ಟಿಕ ಕೊಡುಗೆಯನ್ನು ಮಿತವಾಗಿ ಬಳಸಿ ಆರೋಗ್ಯ ರಕ್ಷಿಸಿಕೊಳ್ಳೋಣ.

ಲೇಖನ: ಡಾ ರವಿಕಿರಣ ಪಟವರ್ಧನ, ಪಟವರ್ಧನ ಆಯುರ್ವೇದ ಕ್ಲಿನಿಕ್, ಶಿರಸಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲೋಕಸಭೆಯತ್ತ ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಹೆಜ್ಜೆ, ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ – Kannada News

ಕೋಲ್ಕತ್ತಾ, ಜೂನ್ 05: ಭಾರತ ರಾಜಕಾರಣದ ಅತ್ಯಂತ ಪ್ರಭಾವಶಾಲಿ ಹಾಗೂ ಧೀಮಂತ ಮಹಿಳಾ ನಾಯಕಿಯಾಗಿರುವ ತೃಣಮೂಲ ಕಾಂಗ್ರೆಸ್ (TMC) ಮುಖ್ಯಸ್ಥೆ ಮಮತಾ ಬ್ಯಾನರ್ಜಿ(Mamata Banerjee) ಪ್ರಸ್ತುತ ರಾಷ್ಟ್ರ ರಾಜಕಾರಣದಲ್ಲಿ ಮತ್ತೊಮ್ಮೆ ಸಕ್ರಿಯ ಪಾತ್ರ ವಹಿಸಲು ಸಜ್ಜಾಗುತ್ತಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ನಂತರ, ದೇಶದ ಕೆಳಮನೆಯಾದ ಲೋಕಸಭೆಯನ್ನು ಪ್ರವೇಶಿಸುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ವಿರೋಧ ಪಕ್ಷಗಳನ್ನು ಮುನ್ನಡೆಸಲು ಅವರು ಗಂಭೀರ ಆಲೋಚನೆ ನಡೆಸಿದ್ದಾರೆ ಎಂದು ದೆಹಲಿ ಮತ್ತು ಕೋಲ್ಕತ್ತಾದ ರಾಜಕೀಯ ಮೂಲಗಳು ವರದಿ ಮಾಡಿವೆ. ಈ ತಂತ್ರವು ಕೇಂದ್ರ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳ ಧ್ವನಿಯನ್ನು ಮತ್ತಷ್ಟು ಬಲಪಡಿಸಲಿದೆ ಎಂದು ವಿಶ್ಲೇಷಕರು ಆಶಾವಾದ ವ್ಯಕ್ತಪಡಿಸಿದ್ದಾರೆ.

ಮಮತಾ ಬ್ಯಾನರ್ಜಿ ಅವರಿಗೆ ಲೋಕಸಭೆಯು ಹೊಸದೇನಲ್ಲ. 2011 ರಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ರಾಜ್ಯ ರಾಜಕಾರಣಕ್ಕೆ ಬರುವ ಮುನ್ನ, ಅವರು ದೀರ್ಘಕಾಲದವರೆಗೆ ಲೋಕಸಭಾ ಸದಸ್ಯರಾಗಿ ಕೋಲ್ಕತ್ತಾ ದಕ್ಷಿಣ ಕ್ಷೇತ್ರವನ್ನು ಅತ್ಯಂತ ಯಶಸ್ವಿಯಾಗಿ ಪ್ರತಿನಿಧಿಸಿದ್ದರು. ಅಲ್ಲದೆ, ಕೇಂದ್ರ ರೈಲ್ವೆ ಸಚಿವೆಯಾಗಿಯೂ ದೇಶಾದ್ಯಂತ ಭಾರಿ ಜನಪ್ರಿಯತೆ ಗಳಿಸಿದ್ದರು. ಈಗ ಮತ್ತೊಮ್ಮೆ ಅವರು ಸಂಸತ್ತನ್ನು ಪ್ರವೇಶಿಸುತ್ತಿರುವುದು ರಾಷ್ಟ್ರ ಮಟ್ಟದಲ್ಲಿ ಟಿಎಂಸಿ ಪಕ್ಷಕ್ಕೆ ಆನೆಬಲ ತಂದಂತಾಗಲಿದೆ.

ವರದಿಗಳ ಪ್ರಕಾರ, ಮಮತಾ ಬ್ಯಾನರ್ಜಿ ಅವರ ಸಂಸತ್ ಪ್ರವೇಶಕ್ಕೆ ದಾರಿ ಸುಗಮಗೊಳಿಸಲು ಟಿಎಂಸಿಯ ಪ್ರಸ್ತುತ ಬಹರಂಪುರ ಲೋಕಸಭಾ ಸದಸ್ಯ ಹಾಗೂ ಭಾರತದ ಮಾಜಿ ಸ್ಟಾರ್ ಕ್ರಿಕೆಟಿಗ ಯೂಸುಫ್ ಪಠಾಣ್ ಅವರು ತಮ್ಮ ಸ್ಥಾನವನ್ನು ಬಿಟ್ಟುಕೊಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಓದಿ: ಮಮತಾ ಬ್ಯಾನರ್ಜಿಗೆ ಟಿಎಂಸಿ ನಾಯಕರಿಂದಲೇ ಮುಖಭಂಗ; ಪ್ರತಿಭಟನೆಯಲ್ಲಿ ಕೇವಲ 5 ಶಾಸಕರು, 3 ಸಂಸದರು ಭಾಗಿ!

ಐತಿಹಾಸಿಕ ಜಯದ ಕ್ಷೇತ್ರ: 2011 ರ ವಿಶ್ವಕಪ್ ವಿಜೇತ ಕ್ರಿಕೆಟಿಗ ಯೂಸುಫ್ ಪಠಾಣ್ ಅವರು 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಹರಂಪುರ ಕ್ಷೇತ್ರದಿಂದ ಸ್ಪರ್ಧಿಸಿ, ಕಾಂಗ್ರೆಸ್‌ನ ಹಿರಿಯ ಧುರೀಣ ಅಧೀರ್ ರಂಜನ್ ಚೌಧರಿ ಅವರನ್ನು ಸುಮಾರು 85,000 ಮತಗಳ ಭಾರಿ ಅಂತರದಿಂದ ಸೋಲಿಸಿ ಇತಿಹಾಸ ಸೃಷ್ಟಿಸಿದ್ದರು.

ಭವಿಷ್ಯದ ರಾಜಕೀಯಕ್ಕೆ ಹೊಸ ಮೈಲಿಗಲ್ಲು
ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು 80 ಸ್ಥಾನಗಳಿಗೆ ಸೀಮಿತವಾಗಿದ್ದರೂ, ಮಮತಾ ಬ್ಯಾನರ್ಜಿ ಅವರು ಧೃತಿಗೆಡದೆ ದೆಹಲಿ ರಾಜಕಾರಣದತ್ತ ಮುಖ ಮಾಡಿರುವುದು ಅವರ ಅದಮ್ಯ ಹೋರಾಟದ ಗುಣಕ್ಕೆ ಸಾಕ್ಷಿಯಾಗಿದೆ. ಯೂಸುಫ್ ಪಠಾಣ್ ಅವರಂತಹ ನಿಷ್ಠಾವಂತ ನಾಯಕರ ಬೆಂಬಲದೊಂದಿಗೆ ಬಹರಂಪುರ ಸುರಕ್ಷಿತ ಕ್ಷೇತ್ರದಿಂದ ಮಮತಾ ಬ್ಯಾನರ್ಜಿ ಲೋಕಸಭೆ ಪ್ರವೇಶಿಸಿದರೆ, ಮುಂಬರುವ ದಿನಗಳಲ್ಲಿ ಸಂಸತ್ತಿನ ಒಳಗಿನ ಚರ್ಚೆಗಳು ಮತ್ತಷ್ಟು ರೋಚಕ ಹಾಗೂ ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಹೆಚ್ಚು ಸಶಕ್ತವಾಗಲಿವೆ ಎಂದು ರಾಜಕೀಯ ವಲಯ ನಂಬಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಂಡವಾಳ ಆಕರ್ಷಿಸಲು ಬ್ಯಾಂಕುಗಳಿಗೆ ಹೆಡ್ಡಿಂಗ್ ಸಪೋರ್ಟ್​ನಿಂದ ಹಿಡಿದು ಎನ್​ಆರ್​ಐ ಹೂಡಿಕೆ ಮಿತಿ ಹೆಚ್ಚಳದವರೆಗೆ ಆರ್​ಬಿಐನಿಂದ 5 ಕ್ರಮಗಳು – Kannada News

ನವದೆಹಲಿ, ಜೂನ್ 5: ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು (Forex Reserve) ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಯತ್ನ ಮುಂದುವರಿಸಿದೆ. ಈ ನಿಟ್ಟಿನಲ್ಲಿ ದೇಶಕ್ಕೆ ವಿದೇಶಿ ಬಂಡವಾಳದ ಒಳಹರಿವನ್ನು ಹೆಚ್ಚಿಸಲು 5 ಪ್ರಮುಖ ಕ್ರಮಗಳನ್ನು ಪ್ರಕಟಿಸಿದೆ. ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಹಣಕಾಸು ನೀತಿ ಸಮಿತಿ (MPC) ಸಭೆಯ ನಂತರ ಈ ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಆರ್‌ಬಿಐ ಪ್ರಕಟಿಸಿದ ಆ 5 ಪ್ರಮುಖ ಕ್ರಮಗಳ ವಿವರ ಮುಂದಿದೆ.

ಷೇರು ಮಾರುಕಟ್ಟೆಯಲ್ಲಿ ಎನ್‌ಆರ್‌ಐ/ಒಸಿಐ ಹೂಡಿಕೆ ಮಿತಿ ಹೆಚ್ಚಳ

ಅನಿವಾಸಿ ಭಾರತೀಯರು (NRI) ಮತ್ತು ಸಾಗರೋತ್ತರ ಭಾರತೀಯ ನಾಗರಿಕರು (OCI) ಸೆಬಿ (SEBI) ನೋಂದಣಿ ಇಲ್ಲದೆಯೇ ಭಾರತದ ಲಿಸ್ಟೆಡ್ ಷೇರುಗಳಲ್ಲಿ ಹೂಡಿಕೆ ಮಾಡಲು ಇರುವ ಮಿತಿಯನ್ನು ಆರ್‌ಬಿಐ ಹೆಚ್ಚಿಸಿದೆ. ಈ ಸೌಲಭ್ಯವನ್ನು ವಿದೇಶದಲ್ಲಿರುವ ಎಲ್ಲಾ ಭಾರತೀಯ ನಿವಾಸಿಗಳಿಗೂ ವಿಸ್ತರಿಸಲಾಗಿದೆ.

ಬ್ಯಾಂಕುಗಳಿಗೆ ಹೆಡ್ಜಿಂಗ್ ವೆಚ್ಚದ ಬೆಂಬಲ (Hedging Support)

ವಿದೇಶಿ ಕರೆನ್ಸಿ ಅನಿವಾಸಿ (FCNR-B) ಠೇವಣಿಗಳನ್ನು 3 ರಿಂದ 5 ವರ್ಷಗಳ ಅವಧಿಗೆ ಕ್ರೋಢೀಕರಿಸುವ ಬ್ಯಾಂಕುಗಳಿಗೆ, ಆರ್‌ಬಿಐ ಸೆಪ್ಟೆಂಬರ್ 30 ರವರೆಗೆ ಸಂಪೂರ್ಣ ಹೆಡ್ಜಿಂಗ್-ವೆಚ್ಚದ ಬೆಂಬಲವನ್ನು (ವಿದೇಶಿ ವಿನಿಮಯ ದರ ಏರಿಳಿತದ ನಷ್ಟದಿಂದ ರಕ್ಷಣೆ) ಮುಂದುವರಿಸಲು ನಿರ್ಧರಿಸಿದೆ.

ಇದನ್ನೂ ಓದಿ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸೆಬಿ ನೊಂದಣಿ ಇಲ್ಲದೇ ಎನ್​ಆರ್​ಐಗಳಿಗೆ ಹೂಡಿಕೆ ಮಿತಿ ಹೆಚ್ಚಳ

ರಫ್ತು ಆದಾಯ ತರುವ ಅವಧಿ 9 ತಿಂಗಳಿಗೆ ಕಡಿತ

ಜಾಗತಿಕ ಆರ್ಥಿಕ ಅನಿಶ್ಚಿತತೆಯ ಸಮಯದಲ್ಲಿ ರಫ್ತುದಾರರಿಗೆ ನೆರವಾಗಲು ಈ ಹಿಂದೆ ರಫ್ತು ಆದಾಯವನ್ನು ಭಾರತಕ್ಕೆ ತರಲು 15 ತಿಂಗಳ ಕಾಲಾವಕಾಶ ನೀಡಲಾಗಿತ್ತು. ಈಗ ಜಾಗತಿಕ ಪರಿಸ್ಥಿತಿ ಸುಧಾರಿಸುತ್ತಿರುವುದರಿಂದ, ರಫ್ತುದಾರರು ತಮ್ಮ ಸರಕುಗಳನ್ನು ಕಳುಹಿಸಿದ (Shipment) ದಿನಾಂಕದಿಂದ 9 ತಿಂಗಳ ಒಳಗಾಗಿ ಆ ಹಣವನ್ನು ಭಾರತಕ್ಕೆ ತರುವುದನ್ನು ಆರ್‌ಬಿಐ ಕಡ್ಡಾಯಗೊಳಿಸಿದೆ.

ಸಾರ್ವಜನಿಕ ವಲಯದ ಇಸಿಬಿಗಳಿಗೆ ರಿಯಾಯಿತಿ ದರದ ಸ್ವಾಪ್ ವಿಂಡೋ ವಿಸ್ತರಣೆ

ಸಾರ್ವಜನಿಕ ವಲಯದ ಉದ್ಯಮಗಳು (PSU) ವಿದೇಶದಿಂದ ಪಡೆಯುವ ಬಾಹ್ಯ ವಾಣಿಜ್ಯ ಸಾಲಗಳಿಗಾಗಿ (ECB) ನೀಡಲಾಗುವ ರಿಯಾಯಿತಿ ದರದ ಫಾರೆಕ್ಸ್ ಸ್ವಾಪ್ ವಿಂಡೋ (Concessional Forex Swap Window) ಸೌಲಭ್ಯವನ್ನು ಸೆಪ್ಟೆಂಬರ್ 30, 2026 ರವರೆಗೆ ಆರ್‌ಬಿಐ ವಿಸ್ತರಿಸಿದೆ. ಇದರಿಂದ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಕಡಿಮೆ ವೆಚ್ಚದಲ್ಲಿ ವಿದೇಶಿ ಸಾಲ ಪಡೆಯಲು ಮತ್ತು ರಿಸ್ಕ್ ನಿರ್ವಹಿಸಲು ಸಾಧ್ಯವಾಗುತ್ತದೆ.

ದೀರ್ಘಾವಧಿ ಸರ್ಕಾರಿ ಬಾಂಡ್‌ಗಳಿಗೂ ‘ಫಾರ್’ (FAR) ಮುಕ್ತ ಅವಕಾಶ

ವಿದೇಶಿ ಹೂಡಿಕೆದಾರರು ಭಾರತದ ಸಾರ್ವಜನಿಕ ಸಾಲ ಮಾರುಕಟ್ಟೆಯಲ್ಲಿ ಸುಲಭವಾಗಿ ಭಾಗವಹಿಸಲು ಅನುವಾಗುವಂತೆ, ಹೊಸದಾಗಿ ಬಿಡುಗಡೆ ಮಾಡಲಾದ 15-ವರ್ಷ, 30-ವರ್ಷ ಮತ್ತು 40-ವರ್ಷಗಳ ಸರ್ಕಾರಿ ಭದ್ರತಾ ಪತ್ರಗಳನ್ನು (G-Secs) ಆರ್‌ಬಿಐ ‘ಫುಲ್ಲಿ ಅಕ್ಸೆಸಿಬಲ್ ರೂಟ್’ (Fully Accessible Route – FAR) ಅಡಿಯಲ್ಲಿ ಸೇರಿಸಿದೆ. ಇದರಿಂದ ವಿದೇಶಿ ಹೂಡಿಕೆದಾರರು ಯಾವುದೇ ನಿರ್ಬಂಧವಿಲ್ಲದೆ ದೀರ್ಘಾವಧಿ ಬಾಂಡ್‌ಗಳಲ್ಲಿ ಹೂಡಿಕೆ ಮಾಡಬಹುದು.

ಇದನ್ನೂ ಓದಿ: ಬಾಂಡ್ ಮಾರುಕಟ್ಟೆಯಲ್ಲಿ ವಿದೇಶೀ ಹೂಡಿಕೆದಾರರಿಗೆ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಹೊರೆ ಇಲ್ಲ

ಜಾಗತಿಕವಾಗಿ ಇರಾನ್-ಅಮೆರಿಕ ಯುದ್ಧದ ಆತಂಕದಿಂದಾಗಿ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯದಂತೆ ತಡೆಯಲು ಮತ್ತು ಭಾರತದ ಫಾರೆಕ್ಸ್ ಮಾರುಕಟ್ಟೆಯಲ್ಲಿ ಲಿಕ್ವಿಡಿಟಿ (ಹಣದ ಹರಿವು) ಕಾಯ್ದುಕೊಳ್ಳಲು ಆರ್‌ಬಿಐ ಈ ರಕ್ಷಣಾತ್ಮಕ ಮತ್ತು ಆಕ್ರಮಣಕಾರಿ ಆರ್ಥಿಕ ಕ್ರಮಗಳನ್ನು ಕೈಗೊಂಡಿದೆ. ಅಲ್ಲದೆ, ಪ್ರಸ್ತುತ ರೆಪೊ ದರವನ್ನು (Repo Rate) ಯಾವುದೇ ಬದಲಾವಣೆಯಿಲ್ಲದೆ 5.25% ರಷ್ಟೇ ಮುಂದುವರಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವನ್ಯಜೀವಿ ಬೇಟೆಗಾರರನ್ನು ಬಂಧಿಸಲು ಹೋದ ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ! ನಾಲ್ವರ ಬಂಧನ – Kannada News

ವನ್ಯಜೀವಿ ಬೇಟೆಗಾರರನ್ನು ಬಂಧಿಸಲು ಹೋದ ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ!

ಯಾದಗಿರಿ, ಜೂನ್ 05: ಕಾಡುಹಂದಿ ಬೇಟೆಯಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದ್ದ ಆರೋಪಿಗಳನ್ನು ಬಂಧಿಸಲು ಹೋಗಿದ್ದ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಬೇಟೆಗಾರರ ಗ್ಯಾಂಗ್ ಭೀಕರ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ (Yadagiri) ಸುರಪುರ ತಾಲೂಕಿನ ಕಕ್ಕೇರ ಬಳಿಯ ಅರಣ್ಯ ಪ್ರದೇಶದಲ್ಲಿ ಮೂರು ದಿನಗಳ ಹಿಂದೆ ಈ ಕೃತ್ಯ ನಡೆದಿದೆ.

ಮುಖ್ಯಾಂಶಗಳು

  • ಕಾಡುಹಂದಿ ಬೇಟೆಯಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದ ಕಿಡಿಗೇಡಿಗಳ ಬಂಧನಕ್ಕೆ ಹೋದಾಗ ಹಲ್ಲೆ.
  • ಆರ್‌ಎಫ್‌ಒ ಸೇರಿ ಮೂವರು ಅಧಿಕಾರಿಗಳನ್ನು ಮರಕ್ಕೆ ಕಟ್ಟಿಹಾಕಿ ದೊಣ್ಣೆಗಳಿಂದ ಭೀಕರ ಹಲ್ಲೆ.
  • ಕೊಡೇಕಲ್ ಠಾಣೆಯಲ್ಲಿ 11 ಜನರ ವಿರುದ್ಧ ಕೇಸ್; ನಾಲ್ವರ ಬಂಧನ, ಆಸ್ಪತ್ರೆಗೆ ಆರ್‌ಎಫ್‌ಒ ದಾಖಲು.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ವೀಡಿಯೋ

ಆರೋಪಿಗಳು ಕಾಡುಹಂದಿಯನ್ನು ಬೇಟೆಯಾಡಿ ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದರು. ಇದರ ಆಧಾರದ ಮೇಲೆ ದಾಳಿ ನಡೆಸಿದ ಆರ್‌ಎಫ್‌ಒ (RFO) ಭಾಗಪ್ಪಗೌಡ, ಗಸ್ತುಪಾಲಕರಾದ ಲಾಲ್ ಅಹ್ಮದ್ ಹಾಗೂ ಕಾಶಿನಾಥ್ ರಾಠೋಡ್ ಅವರನ್ನೇ ಬೇಟೆಗಾರರ ಜಾಲ ಹಿಡಿದು ಕೂಡಿಹಾಕಿದೆ. ಅಧಿಕಾರಿಗಳನ್ನು ಜಾಲಿ ಗಿಡಕ್ಕೆ ಕಟ್ಟಿಹಾಕಿ, ದೊಣ್ಣೆಗಳಿಂದ ಮನಬಂದಂತೆ ಹಲ್ಲೆ ನಡೆಸಲಾಗಿದೆ. ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಆರ್‌ಎಫ್‌ಒ ಭಾಗಪ್ಪಗೌಡ ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಈ ಮರುಕಳಿಸದ ಘಟನೆಗೆ ಸಂಬಂಧಿಸಿದಂತೆ ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ಒಟ್ಟು 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆ ನಡೆಸಿರುವ ಪೊಲೀಸರು ಸದ್ಯ ನಾಲ್ಕು ಮಂದಿ ಪ್ರಮುಖ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದು, ತಲೆಮರೆಸಿಕೊಂಡಿರುವ ಉಳಿದ ಖದೀಮರಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಣ್ಣಾಮಲೈ ರಾಜೀನಾಮೆಯಿಂದ ಪಕ್ಷಕ್ಕೇನೂ ನಷ್ಟವಿಲ್ಲ; ತಮಿಳುನಾಡು ಬಿಜೆಪಿ ಮುಖ್ಯಸ್ಥ ಲೇವಡಿ – Kannada News

ಚೆನ್ನೈ, ಜೂನ್ 5: ತಮಿಳುನಾಡು ಮಾಜಿ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ (Annamalai) ಅವರು ಪಕ್ಷವನ್ನು ತೊರೆಯುವುದಾಗಿ ಘೋಷಿಸಿದ ಬೆನ್ನಲ್ಲೇ, ರಾಜ್ಯ ಬಿಜೆಪಿ ನಾಯಕತ್ವದಿಂದ ಅಚ್ಚರಿಯ ಮತ್ತು ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗತೊಡಗಿವೆ. ಅಣ್ಣಾಮಲೈ ಅವರ ರಾಜೀನಾಮೆಯಿಂದ ತಮಿಳುನಾಡಿನಲ್ಲಿ ಬಿಜೆಪಿಗೆ ಯಾವುದೇ ನಷ್ಟವಿಲ್ಲ. ಪಕ್ಷವು ಎಂದಿನಂತೆ ಸದೃಢವಾಗಿ ಮುನ್ನಡೆಯಲಿದೆ ಎಂದು ತಮಿಳುನಾಡು ಬಿಜೆಪಿಯ ಮುಖ್ಯಸ್ಥ ನೈನಾರ್ ನಾಗೇಂದ್ರನ್ ಹೇಳಿಕೆ ನೀಡಿದ್ದಾರೆ.

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ತೊರೆದು ಹೊಸ ಚಳವಳಿ ಶುರು ಮಾಡಿದ ಅಣ್ಣಾಮಲೈ
  • ಅಣ್ಣಾಮಲೈ ರಾಜೀನಾಮೆಯಿಂದ ಪಕ್ಷಕ್ಕೆ ನಷ್ಟವಿಲ್ಲ ಎಂದ ಬಿಜೆಪಿ
  • ತಮಿಳುನಾಡಿನ ಬಿಜೆಪಿ ನಾಯಕರ ಭಿನ್ನಾಭಿಪ್ರಾಯ ಸ್ಫೋಟ

ಅಣ್ಣಾಮಲೈ ಅವರ ರಾಜೀನಾಮೆ ವದಂತಿಗಳ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ತಮಿಳುನಾಡು ಬಿಜೆಪಿಯ ಮುಖ್ಯಸ್ಥ ನೈನಾರ್ ನಾಗೇಂದ್ರನ್, “ಬಿಜೆಪಿ ಎಂಬುದು ಕೇವಲ ಒಬ್ಬ ವ್ಯಕ್ತಿಯ ಸುತ್ತ ನಿರ್ಮಾಣವಾಗಿರುವ ಪಕ್ಷವಲ್ಲ. ಇದು ಸಿದ್ದಾಂತ ಮತ್ತು ಲಕ್ಷಾಂತರ ಕಾರ್ಯಕರ್ತರ ಬಲದ ಮೇಲೆ ನಿಂತಿರುವ ರಾಷ್ಟ್ರೀಯ ಪಕ್ಷ. ಯಾರೋ ಒಬ್ಬರು ಹೋದ ತಕ್ಷಣ ಪಕ್ಷಕ್ಕೆ ಯಾವುದೇ ಹಿನ್ನಡೆಯಾಗುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ರಾಜಕೀಯದಲ್ಲಿ ನಾಯಕರು ಬರುವುದು ಮತ್ತು ಹೋಗುವುದು ಸಹಜ ಪ್ರಕ್ರಿಯೆ. ಅಣ್ಣಾಮಲೈ ಅವರ ನಿರ್ಧಾರ ಅವರ ವೈಯಕ್ತಿಕ ಆಯ್ಕೆಯಾಗಿದೆ. ಪಕ್ಷವು ತಮಿಳುನಾಡಿನಲ್ಲಿ ಈಗಾಗಲೇ ಪ್ರಬಲ ತಳಹದಿಯನ್ನು ಹೊಂದಿದ್ದು, ಮುಂಬರುವ ದಿನಗಳಲ್ಲಿ ಮತ್ತೊಬ್ಬ ಸಮರ್ಥ ನಾಯಕನ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಕೆ ಅಣ್ಣಾಮಲೈ ಹುಟ್ಟುಹಬ್ಬ: ಕರ್ನಾಟಕದಲ್ಲಿ ವೃತ್ತಿಜೀವನ, ರಾಜೀನಾಮೆ ಮತ್ತು ಬಿಜೆಪಿ ಪಯಣದ ಸಮಗ್ರ ನೋಟ

ಅಣ್ಣಾಮಲೈ ಅವರ ನಿರ್ಗಮನವನ್ನು ತಮಿಳುನಾಡು ಬಿಜೆಪಿಯ ಒಂದು ವರ್ಗದ ನಾಯಕರು ಅತ್ಯಂತ ಹಗುರವಾಗಿ ಪರಿಗಣಿಸಿರುವುದು ಪಕ್ಷದೊಳಗಿದ್ದ ಆಂತರಿಕ ಭಿನ್ನಾಭಿಪ್ರಾಯಗಳನ್ನು ಎತ್ತಿ ತೋರಿಸುತ್ತದೆ. ಅಣ್ಣಾಮಲೈ ಅವರ ಆಕ್ರಮಣಕಾರಿ ಶೈಲಿ ಮತ್ತು ಏಕಪಕ್ಷೀಯ ನಿರ್ಧಾರಗಳ ಬಗ್ಗೆ ರಾಜ್ಯದ ಹಿರಿಯ ನಾಯಕರಲ್ಲಿ ಮೊದಲಿನಿಂದಲೂ ಅಸಮಾಧಾನವಿತ್ತು ಎನ್ನಲಾಗಿದ್ದು, ಅದು ಹಲವು ಸಂದರ್ಭಗಳಲ್ಲಿ ಬಹಿರಂಗವಾಗಿತ್ತು.

ಬಿಜೆಪಿಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಕೆ. ಅಣ್ಣಾಮಲೈ ‘ಅಣ್ಣಾಮಲೈ ಮಕ್ಕಳ್ ಇಯಕ್ಕಂ’ (AMI) ಎಂಬ ಹೊಸ ರಾಜಕೀಯ ಚಳುವಳಿಯನ್ನು ಆರಂಭಿಸಿದ್ದಾರೆ. ಇದಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈಗಾಗಲೇ 3,000ಕ್ಕೂ ಹೆಚ್ಚು ಜನರು ಸ್ವಯಂಸೇವಕರಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಈ ಕುರಿತು ಎಕ್ಸ್​ನಲ್ಲಿ ಬರೆದುಕೊಂಡಿರುವ ಅವರು, “ಜನರ ಬೆಂಬಲವು ನನ್ನ ನಿರೀಕ್ಷೆಯನ್ನು ಮೀರಿದ್ದು, ಈ ಉಪಕ್ರಮದ ಮೇಲಿರುವ ಸಾರ್ವಜನಿಕ ಹಿತಾಸಕ್ತಿಯನ್ನು ಇದು ಪ್ರತಿಬಿಂಬಿಸುತ್ತದೆ” ಎಂದು ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೆ, ತಮ್ಮ ಹೊಸ ಪಕ್ಷವು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: K Annamalai: ಹೊಸ ರಾಜಕೀಯ ಆಂದೋಲನ ಆರಂಭಿಸುವುದಾಗಿ ಘೋಷಿಸಿದ ಕೆ ಅಣ್ಣಾಮಲೈ, ಮುಂದಿನ ಚುನಾವಣೆಯಲ್ಲಿ ಸ್ವತಂತ್ರ ಸ್ಪರ್ಧೆ

ತಮ್ಮ ಸಾಮಾಜಿಕ ಮಾಧ್ಯಮದ ಭಾಷಣದಲ್ಲಿ ಅಣ್ಣಾಮಲೈ ಅವರು, “ನಾನು ಪಕ್ಷದಿಂದ ದೂರ ಸರಿಯುವ ನಿರ್ಧಾರವನ್ನು ಮೊದಲ ಬಾರಿಗೆ 2025ರ ಡಿಸೆಂಬರ್ 4ರಂದೇ ಬಿಜೆಪಿಯ ಕೇಂದ್ರ ನಾಯಕತ್ವಕ್ಕೆ ತಿಳಿಸಿದ್ದೆ. ಆದರೆ, ಚುನಾವಣೆಗೆ ಸಂಬಂಧಿಸಿದ ಜವಾಬ್ದಾರಿಗಳನ್ನು ಪೂರ್ಣಗೊಳಿಸುವಂತೆ ಪಕ್ಷವು ಕೇಳಿಕೊಂಡಿದ್ದರಿಂದ ನಾನು ಅಲ್ಲಿಯವರೆಗೆ ಮುಂದುವರಿದಿದ್ದೆ. ಆ ಎಲ್ಲಾ ಕರ್ತವ್ಯಗಳನ್ನು ಮುಗಿಸಿದ ನಂತರವೇ ಈಗ ಅಧಿಕೃತವಾಗಿ ಹೊರಬಂದಿದ್ದೇನೆ” ಎಂದು ಹೇಳಿದ್ದಾರೆ.

ತಮಿಳುನಾಡಿನಲ್ಲಿ ಬಿಜೆಪಿಯ ಭವಿಷ್ಯದ ದಿಕ್ಕು ಮತ್ತು ರಾಜಕೀಯ ಕಾರ್ಯತಂತ್ರದ ಕುರಿತು ಉಂಟಾದ ಭಿನ್ನಾಭಿಪ್ರಾಯಗಳ ನಡುವೆ ಪಕ್ಷಕ್ಕೆ ಯಾವುದೇ ತೊಂದರೆ ಅಥವಾ ಹೊರೆಯಾಗಬಾರದು ಎಂಬ ಕಾರಣಕ್ಕೆ ತಾವು ಈ ನಿರ್ಧಾರ ಕೈಗೊಂಡಿರುವುದಾಗಿ ಅಣ್ಣಾಮಲೈ ವಿವರಿಸಿದ್ದಾರೆ. “ನಾನು ಪಕ್ಷದಿಂದ ಹೊರಬಂದಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನನಗೆ ಅತ್ಯುನ್ನತ ಗೌರವವಿದೆ. ನನ್ನ ರಾಜಕೀಯ ಪಯಣದಲ್ಲಿ ಪಕ್ಷದ ನಾಯಕತ್ವ ನನ್ನ ಮೇಲಿಟ್ಟ ನಂಬಿಕೆ ಮತ್ತು ನೀಡಿದ ಅವಕಾಶಗಳಿಗೆ ನಾನು ಸದಾ ಕೃತಜ್ಞನಾಗಿರುತ್ತೇನೆ” ಎಂದು ಅವರು ಹೇಳಿದ್ದಾರೆ.

ಬಿಜೆಪಿ ಸೇರಿದ್ದಕ್ಕೆ ಕಾರಣ:

ತಾವು ಬಿಜೆಪಿಗೆ ಸೇರ್ಪಡೆಯಾದ ಹಿನ್ನೆಲೆಯ ಬಗ್ಗೆ ಇದ್ದ ವದಂತಿಗಳಿಗೆ ತೆರೆ ಎಳೆದಿರುವ ಅಣ್ಣಾಮಲೈ, “ಬಿಜೆಪಿಯ ಹಿರಿಯ ನಾಯಕ ಬಿ.ಎಲ್. ಸಂತೋಷ್ ಅವರು ನೀಡಿದ ಭರವಸೆ ಮತ್ತು ಬದ್ಧತೆಯ ಆಧಾರದ ಮೇಲೆಯೇ ನಾನು ಬಿಜೆಪಿಗೆ ಸೇರಿದ್ದೆ. ನನ್ನ ಪಕ್ಷದ ಸೇರ್ಪಡೆ ಕುರಿತಾದ ಎಲ್ಲಾ ಊಹಾಪೋಹಗಳಿಗೆ ಮುಕ್ತಾಯ ಹಾಡಲು ನಾನು ಈಗ ಈ ವಿಷಯವನ್ನು ಬಹಿರಂಗಪಡಿಸುತ್ತಿದ್ದೇನೆ” ಎಂದು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರೇಯಸಿಯರಿಗೆ ಐಫೋನ್ ಗಿಫ್ಟ್ ನೀಡಲು 6.5 ಲಕ್ಷ ರೂ. ಮೌಲ್ಯದ ನಲ್ಲಿ ಕದ್ದ ಯುವಕರು! – Kannada News

ನಾಗಪುರ, ಜೂನ್ 5: ಪ್ರೇಮಪಾಶಕ್ಕೆ ಬಿದ್ದ ಯುವಕರು ತಮ್ಮ ಗರ್ಲ್‌ಫ್ರೆಂಡ್‌ಗಳನ್ನು ಮೆಚ್ಚಿಸಲು ಏನೆಲ್ಲಾ ಮಾಡುತ್ತಾರೆ ಎಂಬುದಕ್ಕೆ ಉದಾಹರಣೆಯಾಗಿ ಮಹಾರಾಷ್ಟ್ರದ ನಾಗಪುರದಲ್ಲಿ ಒಂದು ವಿಚಿತ್ರ ಮತ್ತು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ತಮ್ಮ ಪ್ರೇಯಸಿಯರಿಗೆ ದುಬಾರಿ ಬೆಲೆಯ ಐಫೋನ್ (iPhone) ಮೊಬೈಲ್‌ಗಳನ್ನು ಉಡುಗೊರೆಯಾಗಿ ನೀಡಲು ಹಣವಿಲ್ಲದೆ, ಮೂವರು ಯುವಕರು ಸೇರಿ ಅಂಗಡಿ ಮತ್ತು ಐಷಾರಾಮಿ ಬಂಗಲೆಗಳಿಂದ ಬರೋಬ್ಬರಿ 6.5 ಲಕ್ಷ ರೂಪಾಯಿ ಮೌಲ್ಯದ ನೀರಿನ ಕದ್ದಿದ್ದಾರೆ. ಈ ಮೂವರನ್ನು ನಾಗಪುರ ಪೊಲೀಸರು ಬಂಧಿಸಿದ್ದಾರೆ.

‘ರಾಹುಲ್ ಸೆರಾಮಿಕ್ಸ್ ಪ್ರೈವೇಟ್ ಲಿಮಿಟೆಡ್’ ಹೆಸರಿನ ಗೋದಾಮಿನ ಮಾಲೀಕರಾದ ರಾಹುಲ್ ಜಯಚಂದ್ ಬಾತ್ರಾ ಅವರು ಪೊಲೀಸರಿಗೆ ದೂರು ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಬಂಧಿತ ಯುವಕರು ನಾಗಪುರದ ಹಜಾರಿಪಹಾಡ್ ಮತ್ತು ಸೆಮಿನರಿ ಹಿಲ್ಸ್‌ನಂತಹ ಗಣ್ಯರು ವಾಸಿಸುವ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿದ್ದರು. ಇಲ್ಲಿನ ಗೋಡೌನ್, ದೊಡ್ಡ ದೊಡ್ಡ ಬಂಗಲೆಗಳು ಮತ್ತು ಅಪಾರ್ಟ್‌ಮೆಂಟ್‌ಗಳಿಗೆ ನುಗ್ಗಿ, ಅಲ್ಲಿ ಅಳವಡಿಸಲಾಗಿದ್ದ ಅತ್ಯಂತ ದುಬಾರಿ ಮೌಲ್ಯದ ಹಿತ್ತಾಳೆ ಮತ್ತು ಕರಕುಶಲ ವಿನ್ಯಾಸದ ನಲ್ಲಿಗಳನ್ನು ಬಿಚ್ಚಿ ಕದಿಯುತ್ತಿದ್ದರು. ಕದ್ದ ಸಾಮಗ್ರಿಗಳ ಒಟ್ಟು ಮೌಲ್ಯ 6.5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿತ್ತು.

ಇದನ್ನೂ ಓದಿ: Video: ಗರ್ಲ್​ಫ್ರೆಂಡ್​ ಜತೆ ಸ್ಕೂಟಿಯಲ್ಲಿ ಸುತ್ತುತ್ತಿದ್ದ ಮಗ, ರಸ್ತೆಯಲ್ಲೇ ಇಬ್ಬರಿಗೂ ಬಿತ್ತು ಏಟು

ಈ ಬಗ್ಗೆ ದೂರು ದಾಖಸಿಕೊಂಡ ಗಿಟ್ಟಿಖಾದನ್ ಪೊಲೀಸ್ ಠಾಣೆಯ ಅಧಿಕಾರಿಗಳು ತನಿಖೆ ಆರಂಭಿಸಿ, ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಈ ವೇಳೆ ಮೂವರು ಯುವಕರು ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಪತ್ತೆಯಾಯಿತು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಡೀ ಕಥೆ ಹೊರಬಿದ್ದಿದೆ. ಯುವಕರು ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.

ಕದ್ದ ಹಣದಲ್ಲಿ ಐಫೋನ್ ಖರೀದಿ!

ಪೊಲೀಸರ ವಿಚಾರಣೆಯ ವೇಳೆ ಯುವಕರು ನೀಡಿದ ಕಾರಣ ಕೇಳಿ ಅಧಿಕಾರಿಗಳೇ ಒಂದು ಕ್ಷಣ ದಂಗಾಗಿದ್ದಾರೆ. ತಮಗೆ ಯಾವುದೇ ದುರಭ್ಯಾಸಗಳಿರಲಿಲ್ಲ, ಆದರೆ ತಮ್ಮ ಗರ್ಲ್‌ಫ್ರೆಂಡ್‌ಗಳು ಐಫೋನ್ ಬೇಕೆಂದು ಹಠ ಹಿಡಿದಿದ್ದರು. ಅದನ್ನು ಕೊಡಿಸಲು ಹಣವಿಲ್ಲದ ಕಾರಣ ಅತ್ಯಂತ ಸುಲಭವಾಗಿ ಕಳವು ಮಾಡಬಹುದಾದ ಮತ್ತು ಮಾರುಕಟ್ಟೆಯಲ್ಲಿ ಭಾರೀ ಬೆಲೆ ಬಾಳುವ ಐಷಾರಾಮಿ ನಲ್ಲಿಗಳನ್ನು ಕದ್ದಿದ್ದಾಗಿ ಅವರು ತಿಳಿಸಿದ್ದಾರೆ. ಕದ್ದ ನಲ್ಲಿಗಳನ್ನು ಗುಜರಿ ಅಂಗಡಿಗೆ ಮಾರಿ ಬಂದ ಹಣದಲ್ಲಿ ಈಗಾಗಲೇ ಐಫೋನ್‌ಗಳನ್ನು ಖರೀದಿಸಿ ಗೆಳತಿಯರಿಗೆ ಉಡುಗೊರೆ ನೀಡಿದ್ದರು!

ಪೊಲೀಸರು ಯುವಕರಿಂದ ಕದ್ದ ನಲ್ಲಿಗಳು, ಕಳ್ಳತನಕ್ಕೆ ಬಳಸಿದ ಬೈಕ್ ಹಾಗೂ ಗೆಳತಿಯರಿಗೆ ನೀಡಿದ್ದ ಐಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಜೈಲಿಗಟ್ಟಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 1:16 pm, Fri, 5 June 26

Source link

ಮಹರಾಜ ಲೀಗ್​​ನಲ್ಲಿ ಅನ್​​ಸೋಲ್ಡ್ ಆದ ಕೆಎಲ್ ರಾಹುಲ್; ಕಾರಣ ಇಲ್ಲಿದೆ – Kannada News

ಮಹಾರಾಜ ಟ್ರೋಫಿ ಕೆಎಸ್​​ಸಿಎ ಟಿ20 ಲೀಗ್ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಕನ್ನಡಿಗ ಕೆಎಲ್ ರಾಹುಲ್ ಅವರು 2 ಲಕ್ಷ ರೂಪಾಯಿ ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದಿದ್ದಾರೆ. ಆದಾಗ್ಯೂ ಅವರು ಅನ್​​ಸೋಲ್ಡ್ ಆಗಿದ್ದಾರೆ. ಇದಕ್ಕೆ ಕಾರಣವೂ ಇದೆ.

ಪ್ರಸ್ತುತ ರಾಹುಲ್ ಅಫ್ಘಾನಿಸ್ತಾನ ವಿರುದ್ಧದ ಸರಣಿ ಹಾಗೂ ಮುಂಬರುವ ಇಂಗ್ಲೆಂಡ್ ಪ್ರವಾಸದಂತಹ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಬೇಕಿದೆ. ಹೀಗಾಗಿ, ಅವರಿಗೆ ಮಹರಾಜ ಟ್ರೋಫಿ ಆಡಲು ಸಾಧ್ಯವಿಲ್ಲ. ಆಡಲು ಸಾಧ್ಯವಿಲ್ಲದಿದ್ದರೂ ರಾಹುಲ್ ಹರಾಜಿಗೆ ಹೆಸರು ನೋಂದಾಯಿಸಿದ್ದು ಏಕೆ ಎಂಬ ಪ್ರಶ್ನೆ ಮೂಡಿದೆ.

ರಾಜ್ಯ ಕ್ರಿಕೆಟ್ ಮಂಡಳಿ (KSCA) ನಿಯಮಾವಳಿಗಳ ಪ್ರಕಾರ, ರಾಜ್ಯದ ಪ್ರಮುಖ ಅಂತಾರಾಷ್ಟ್ರೀಯ ಆಟಗಾರರನ್ನು ಹರಾಜಿನ ಮಾರ್ಕ್ಯೂ ಪಟ್ಟಿಯಲ್ಲಿ ಹೆಸರಿಸುವುದು ಕಡ್ಡಾಯ ಪ್ರಕ್ರಿಯೆಯಾಗಿದೆ. ಆಟಗಾರರು ಅಂತಿಮ ಹಂತದಲ್ಲಿ ಲಭ್ಯರಾಗುವ ಸಣ್ಣ ಅವಕಾಶವಿದ್ದರೂ ಅಥವಾ ತಾಂತ್ರಿಕ ಪ್ರಕ್ರಿಯೆಯ ಭಾಗವಾಗಿಯೋ ಈ ಹೆಸರನ್ನು ಸೇರಿಸಲಾಗುತ್ತದೆ.

ಮಹಾರಾಜ ಟ್ರೋಫಿ 2026 ವಿವರಗಳು ಟೂರ್ನಿ ಅವಧಿ ಜೂನ್ 20ರಿಂದ ಜುಲೈ 12ರವರೆಗೆ ನಡೆಯಲಿದೆ. ಮೈಸೂರು, ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ಪಂದ್ಯಗಳು ನಡೆಯಲಿವೆ.

 

ಹೆಚ್ಚಿನ ಕ್ರೀಡಾ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version