Father’s Day 2026: ಅಪ್ಪಂದಿರ ದಿನದಂದು ನಿಮ್ಮ ಪ್ರೀತಿಯ ತಂದೆಗೆ ಈ ಸ್ಪೆಷಲ್‌ ಉಡುಗೊರೆಗಳನ್ನು ನೀಡಿ – Kannada News | Father’s Day 2026: Here is a list of gifts you can give to your father on Father’s Day

ತಾಯಿಯಂತೆ ಮಕ್ಕಳ ಜೀವನದಲ್ಲಿ ತಂದೆಯೂ (Father) ಸಹ ಬಹುಮುಖ್ಯ ಪಾತ್ರವನ್ನು ವಹಿಸುತ್ತಾರೆ. ಮಕ್ಕಳ ಸಂತೋಷಕ್ಕಾಗಿ ತನ್ನ ಸಂತೋಷವನ್ನೇ ತ್ಯಾಗ ಮಾಡಿ ಹಗಲಿರುಳು ದುಡಿಯುವ ಶ್ರಮಜೀವಿ ತಂದೆಯೇ ಮಕ್ಕಳ ಪಾಲಿನ ರಿಯಲ್‌ ಹೀರೋ. ಮಕ್ಕಳ ಪಾಲಿನ ಈ ಸೂಪರ್‌ ಹೀರೋಗಳನ್ನು ಸಂಭ್ರಮಿಸಲು, ಅಪ್ಪಂದಿರ ಪ್ರೀತಿ, ತ್ಯಾಗವನ್ನು ಸ್ಮರಿಸಲು ಪ್ರತಿವರ್ಷ ಜೂನ್‌ ತಿಂಗಳ ಮೂರನೇ ಭಾನುವಾರದಂದು ವಿಶ್ವ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ. ಇದು ತಂದೆಯರ ಪಾಲಿಗಂತೂ ತುಂಬಾನೇ ವಿಶೇಷವಾದ ದಿನ. ಅನೇಕ ಜನರು ತಮ್ಮ ತಂದೆಯ ಸಲುವಾಗಿ ಈ ದಿನವನ್ನು ಸ್ಪೆಷಲ್‌ ಆಗಿ ಆಚರಿಸುತ್ತಾರೆ. ಈ ಬಾರಿ ಫಾದರ್ಸ್‌ ಡೇಯನ್ನು ಜೂನ್‌ 21 ರಂದು ಆಚರಿಸಲಾಗುತ್ತಿದ್ದು, ಈ ದಿನ ನಿಮ್ಮ ಪ್ರೀತಿಯ ತಂದೆಯ ಮುಖದಲ್ಲಿ ನಗು ತರಿಸಲು ಬಯಸಿದರೆ ಈ ಕೆಲವೊಂದು ವಿಶೇಷ ಉಡುಗೊರೆಗಳನ್ನು ನೀಡಿ.

ಫಾದರ್ಸ್‌ ಡೇ ದಿನ ತಂದೆಗೆ  ನೀಡಬಹುದಾದ ಉಡುಗೊರೆಗಳ ಪಟ್ಟಿ:

ನಿಮ್ಮ ತಂದೆಯೊಂದಿಗೆ ಸಮಯ ಕಳೆಯಿರಿ: ನೀವು ಎಷ್ಟೇ ದುಬಾರಿ ಉಡುಗೊರೆಯನ್ನು ಖರೀದಿಸಿದರೂ, ನಿಮ್ಮ ತಂದೆಗೆ ನೀವು ನೀಡಬಹುದಾದ ಅತ್ಯಂತ ಅಮೂಲ್ಯ ಉಡುಗೊರೆ ನಿಮ್ಮ ಸಮಯ. ಇಂದಿನ ಒತ್ತಡದ ಜೀವನದಲ್ಲಿ, ಹೆತ್ತವರೊಂದಿಗೆ ಸಮಯ ಕಳೆಯಲು ಯಾಗಿಗೂ ಟೈ ಇಲ್ಲ. ಹೀಗಿರುವಾಗ ಒಂದು ದಿನ ಬಿಡುವು ತೆಗೆದುಕೊಂಡು ತಂದೆ ತಾಯಿಯ ಜೊತೆ ಪಿಕ್ನಿಕ್‌ಗೆ ಹೋಗಿ ಅಮೂಲ್ಯ ಸಮೈವನ್ನು ಕಳೆಯಿರಿ. ಇಲ್ಲವೇ ಫಿಲ್ಮ್‌ಗೆ ಹೋಗಿ, ಇಲ್ಲವೇ ಮನೆಯಲ್ಲಿಯೇ ಇದ್ದು ನಿಮ್ಮ ತಂದೆಗೆ ಅವರಿಷ್ಟದ ಅಡುಗೆಗಳನ್ನು ನಿಮ್ಮ ಕೈಯಾರೆ ಮಾಡಿ ಉಣಬಡಿಸಿ, ಸ್ನೇಹಿತರಂತೆ ತಂದೆಯೊಂದಿಗೆ ಮನಬಿಚ್ಚಿ ಮಾತನಾಡಿ, ಖಂಡಿತವಾಗಿ ಈ ವಿಷಯ ನಿಮ್ಮ ತಂದೆಗೆ ತುಂಬಾ ಖುಷಿಯನ್ನು ನೀಡುತ್ತದೆ.

ಅವರು ಆನಂದಿಸುವ ವಿಷಯಗಳಿಗೆ ಸಮಯ ಮೀಸಲಿಡಿ: ತಂದೆಯಂದಿರು ಹೆಚ್ಚಾಗಿ ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುವುದರಲ್ಲಿಯೇ ಕಳೆದುಹೋಗುತ್ತಾರೆ. ಹೀಗಿರುವಾಗ ತಂದೆಯಂದಿರ ದಿನದಂದು, ಅವರು ಆನಂದಿಸುವ ಕೆಲಸಗಳನ್ನು ಮಾಡಲು ಅವರಿಗೆ ಅವಕಾಶ ನೀಡಿ. ಅವರು ವಿಶ್ರಾಂತಿ ಪಡೆಯಲಿ, ಅವರ ನೆಚ್ಚಿನ ಪುಸ್ತಕ, ಸಂಗೀತ ಅಥವಾ ಹವ್ಯಾಸಕ್ಕಾಗಿ ಸಮಯವನ್ನು ಕಂಡುಕೊಳ್ಳಲು ಅವರಿಗೆ ನೀವು ಸಹಾಯ ಮಾಡಿ.

ಹಳೆಯ ಸ್ನೇಹಿತರನ್ನು ಭೇಟಿ ಮಾಡಿಸಿ: ಕುಟುಂಬದ ಜವಾಬ್ದಾರಿಗಳಿಂದಾಗಿ, ತಂದೆಯಂದಿರು ಸ್ನೇಹಿತರಿಂದ ದೂರವಿರುತ್ತಾರೆ, ಅವರಿಗೆ ಅವರ ಹಳೆಯ ಸ್ನೇಹಿತರನ್ನು ಭೇಟಿಯಾಗಲು ಸಹ ಸಾಧ್ಯವಾಗುವುದಿಲ್ಲ. ಹೀಗಿರುವಾಗ ಅಪ್ಪಂದಿರ ದಿನದಂದು  ನಿಮ್ಮ ತಂದೆಯ  ಕ್ಲೋಸ್‌ ಫ್ರೆಂಡ್ಸ್‌, ಶಾಲಾ, ಕಾಲೇಜು ಸ್ನೇಹಿತರನ್ನು ಒಟ್ಟು ಸೇರಿಸಿ ಅವರಿಗಾಗಿ ಒಂದು ಸ್ನೇಹ ಕೂಟವನ್ನು ಆಯೋಜಿಸಿ. ಹಲವು ವರ್ಷಗಳ ನಂತರ ತಂದೆ ತಮ್ಮ ಹಳೆಯ ಸ್ನೇಹಿತರನ್ನು ನೋಡಿದಾಗ ಅವರ ಮುಖದಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವ ನಗು ಯಾವುದೇ ದುಬಾರಿ ಉಡುಗೊರೆಗಿಂತ ಹೆಚ್ಚು ಮೌಲ್ಯಯುತವಾಗಿರುತ್ತದೆ.

ಇದನ್ನೂ ಓದಿ: ಫ್ರೆಂಡ್ಸ್‌, ಫ್ಯಾಮಿಲಿ ಜೊತೆ ಪಿಕ್ನಿಕ್‌ ಹೋಗುವ ಖುಷಿಯೇ ಬೇರೆ

ಆರೋಗ್ಯ ಸಂಬಂಧಿತ ಉಡುಗೊರೆಗಳು: ವಯಸ್ಸಾದಂತೆ, ಅಪ್ಪಂದಿರಿಗೆ ವಿಶ್ರಾಂತಿ ಹೆಚ್ಚು ಬೇಕಾಗುತ್ತದೆ. ಅವರು ದೀರ್ಘ ದಿನದ ನಂತರ ದಣಿದಿದ್ದಾಗ, ಅವರಿಗೆ ರೆಸ್ಟ್‌ ಪಡೆಯಲು ನೀವು ಅವರಿಗೆ ಫೂಟ್ ಮಸಾಜ್ ಯಂತ್ರ ಅಥವಾ ಉತ್ತಮ ಮಸಾಜ್ ದಿಂಬನ್ನು ಉಡುಗೊರೆಯಾಗಿ ನೀಡಬಹುದು. ಸ್ಮಾರ್ಟ್ ವಾಚ್‌ ಉಡುಗೊರೆಯಾಗಿ ನೀಡಬಹುದು. ಇದಲ್ಲದೆ ಮಸಾಜ್ ಸೆಷನ್, ಆಕ್ಯುಪ್ರೆಶರ್ ಥೆರಪಿ ಅಥವಾ ಉತ್ತಮ ಕ್ಷೇಮ ಕೇಂದ್ರದಲ್ಲಿ ಯೋಗ/ಧ್ಯಾನ ತರಗತಿಗೆ ಒಂದು ತಿಂಗಳ ಚಂದಾದಾರಿಕೆಯನ್ನು ಉಡುಗೊರೆಯಾಗಿ ನೀಡಬಹುದು.  ಈ ಉಡುಗೊರೆಗಳು ಅವರು ತಮ್ಮ ಆರೋಗ್ಯವನ್ನು ಉತ್ತಮವಾಗಿ ನೋಡಿಕೊಳ್ಳುವಂತೆ ಮಾಡುತ್ತದೆ.

ನೆನಪುಗಳನ್ನು ಮರಳಿ ತರುವ ಉಡುಗೊರೆಗಳು: ನಿಮ್ಮ ತಂದೆಯ ಬಾಲ್ಯದ ಫೋಟೋಗಳು, ತಂದೆ ಅವರ ಸಹೋದರ, ಸಹೋದರಿಯರೊಂದಿಗಿರುವ ಫೋಟೋ ಅಥವಾ ನಿಮ್ಮ ಕುಟುಂಬದ ಮರೆಯಲಾದ ಕ್ಷಣದ ಫೋಟೋಗಳನ್ನು ಫೋಟೋ ಫ್ರೇಮ್‌ ಹಾಕಿಸಿ ತಂದೆಗೆ ಉಡುಗೊರೆಯಾಗಿ ನೀಡಬಹುದು.

ಪ್ರತಿದಿನ ಉಪಯೋಗಕ್ಕೆ ಬರುವ ವಸ್ತುಗಳು: ನಿಮ್ಮ ತಂದೆಗೆ ಅವರು ಪ್ರತಿದಿನ ಬಳಸುವ ವಸ್ತುಗಳನ್ನು ಸಹ ನೀವು ಗಿಫ್ಟ್‌ ಆಗಿ ನೀಡಬಹುದು. ವಾಚ್‌, ಶೇವಿಂಗ್‌ ಕಿಟ್, ಬಟ್ಟೆ, ವಾಕಿಂಗ್‌ ಶೂ, ಪರ್ಫ್ಯೂಮ್‌ ಇತ್ಯಾದಿ ವಸ್ತುಗಳನ್ನು ಉಡುಗೊರೆಯಾಗಿ ನೀಡಬಹುದು. ಇದಲ್ಲದೆ ಅಪ್ಪನಿಗೆ ಓಡಾಡಲು ದ್ವಿಚಕ್ರ ವಾಹನವನ್ನೂ ಗಿಫ್ಟ್‌ ಮಾಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದ ಡಿಫೆನ್ಸ್ ಸೆಕ್ಟರ್​ನಲ್ಲಿ ದಾಖಲೆಯ ₹1.78 ಲಕ್ಷ ಕೋಟಿ ಮೌಲ್ಯದ ಉತ್ಪಾದನೆ; ರಫ್ತು ಕೂಡ ಭರ್ಜರಿ ಏರಿಕೆ – Kannada News | India’s defence production and exports see big increase in 2025 26, says minister Rajnath Singh

ನವದೆಹಲಿ, ಜೂನ್ 18: ಭಾರತದ ರಕ್ಷಣಾ ಕ್ಷೇತ್ರ ಮಿಂಚಿನ ಸಂಚಾರ ನಡೆಸುತ್ತಿದೆ. ಸರ್ಕಾರದ ‘ಸ್ವಾವಲಂಬಿ ಭಾರತ’ (Aatmanirbhar Bharat) ಯೋಜನೆಗೆ ಭಾರಿ ಯಶಸ್ಸು ಸಿಕ್ಕಿದೆ. ದೇಶದ ವಾರ್ಷಿಕ ರಕ್ಷಣಾ ಉತ್ಪಾದನೆಯು 2025-26ರ ಹಣಕಾಸು ವರ್ಷದಲ್ಲಿ (FY26) ಸಾರ್ವಕಾಲಿಕ ದಾಖಲೆಯಾದ ₹1.78 ಲಕ್ಷ ಕೋಟಿ ತಲುಪಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನಾಯಕತ್ವದಲ್ಲಿ ಇದು ಸಾಧ್ಯವಾಗಿದ್ದನ್ನು ತಿಳಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರು, ರಕ್ಷಣಾ ಕ್ಷೇತ್ರದ ಉತ್ಪಾದನೆ, ರಫ್ತು ಇತ್ಯಾದಿ ಸಾಧನೆಗಳನ್ನು ಹಂಚಿಕೊಂಡಿದ್ದಾರೆ.

ಶೇ. 15.6 ರಷ್ಟು ಹೆಚ್ಚಿದ ರಕ್ಷಣಾ ಉತ್ಪಾದನೆ

ಕಳೆದ ಹಣಕಾಸು ವರ್ಷಕ್ಕೆ (2024-25) ಹೋಲಿಸಿದರೆ ಭಾರತದ ರಕ್ಷಣಾ ಉತ್ಪಾದನೆಯು ಈ ಬಾರಿ ಶೇ. 15.6 ರಷ್ಟು ಗಮನಾರ್ಹ ಬೆಳವಣಿಗೆ ಕಂಡಿದೆ. ಕಳೆದ ವರ್ಷ ಡಿಫೆನ್ಸ್ ಪ್ರೊಡಕ್ಷನ್​ನ ಮೊತ್ತವು ₹1.54 ಲಕ್ಷ ಕೋಟಿಯಷ್ಟಿತ್ತು. ಈಗ ಅದು ₹1.78 ಲಕ್ಷ ಕೋಟಿ ತಲುಪಿದೆ.

ದೀರ್ಘಾವಧಿಯ ಪ್ರಗತಿಯನ್ನು ಗಮನಿಸಿದರೆ, 2020-21ರ ಹಣಕಾಸು ವರ್ಷದಲ್ಲಿ ದೇಶದ ರಕ್ಷಣಾ ಉತ್ಪಾದನೆ ₹84,643 ಕೋಟಿಯಷ್ಟಿತ್ತು. ಅಲ್ಲಿಂದ ಇಂದಿನವರೆಗೆ ಅಂದರೆ ಕೇವಲ 5 ವರ್ಷಗಳಲ್ಲಿ ಉತ್ಪಾದನೆಯು ಶೇ. 110 ರಷ್ಟು ಬೃಹತ್ ಬೆಳವಣಿಗೆಯನ್ನು ದಾಖಲಿಸಿದೆ. ಇನ್ನು 2013-14ರ ಸಾಲಿಗೆ (₹43,746 ಕೋಟಿ) ಹೋಲಿಸಿದರೆ ಇದು ಸರಿಸುಮಾರು 4 ಪಟ್ಟು ಹೆಚ್ಚಾಗಿದೆ.

ಇದನ್ನೂ ಓದಿ: ಕ್ಯಾರಿ ಬ್ಯಾಗ್​ಗೆ ₹10 ವಸೂಲಿ; ಶೂ ಕಂಪನಿಗೆ ಬಿತ್ತು ₹8,000 ದಂಡ; ಇದು ವ್ಯಾಪಾರಿಗಳು, ಗ್ರಾಹಕರಿಗೆ ಕಣ್ತೆರೆಸುವ ಪ್ರಕರಣ

ಖಾಸಗಿ ವಲಯದ ಸಾರ್ವಕಾಲಿಕ ದಾಖಲೆಯ ಕೊಡುಗೆ

ರಕ್ಷಣಾ ಉತ್ಪಾದನೆಯಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಷ್ಟೇ ಅಲ್ಲದೆ, ಖಾಸಗಿ ಕಂಪನಿಗಳ ಪಾಲ್ಗೊಳ್ಳುವಿಕೆಯೂ ಹೆಚ್ಚಾಗಿದೆ. ರಕ್ಷಣಾ ಕ್ಷೇತ್ರದಲ್ಲಿನ ಒಟ್ಟು ಉತ್ಪಾದನೆಯಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಪಾಲು ಶೇ. 76ರಷ್ಟಿದೆ. ಖಾಸಗಿ ವಲಯದ ಕೊಡುಗೆ ಶೇ. 24 ಮಾತ್ರವೇ ಇದೆ. ಆದರೂ ಕೂಡ ಇತಿಹಾಸದಲ್ಲೇ ಈ ಸೆಕ್ಟರ್​ನ ಗರಿಷ್ಠ ಸಾಧನೆ ಎನಿಸಿದೆ. ಪ್ರೈವೇಟ್ ಸೆಕ್ಟರ್ ಕಂಪನಿಗಳ ಡಿಫೆನ್ಸ್ ಪ್ರೊಡಕ್ಷನ್​ನ ಒಟ್ಟು ಮೊತ್ತ ₹42,000 ಕೋಟಿಯಷ್ಟಿದೆ.

ದಾಖಲೆ ಬರೆದ ರಕ್ಷಣಾ ರಫ್ತು

ದೇಶೀಯವಾಗಿ ಉತ್ಪಾದನೆ ಹೆಚ್ಚಿರುವುದು ಭಾರತದ ರಫ್ತು ಸಾಮರ್ಥ್ಯವನ್ನೂ (Defence Exports) ಬಲಪಡಿಸಿದೆ. 2025-26ರ ಸಾಲಿನಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ದಾಖಲೆಯ ₹38,424 ಕೋಟಿ ಮೌಲ್ಯದ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡಿದೆ. ಇದು ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ರಕ್ಷಣಾ ಉತ್ಪನ್ನಗಳಿಗೆ ಇರುವ ಬೇಡಿಕೆಯನ್ನು ತೋರಿಸುತ್ತದೆ.

ಇದನ್ನೂ ಓದಿ: 2025-26ಕ್ಕೆ ಶೇ. 8.25 ಇಪಿಎಫ್ ಬಡ್ಡಿಗೆ ಅನುಮೋದನೆ; ಸಕ್ರಿಯವಲ್ಲದ ಇಪಿಎಫ್ ಖಾತೆಗಳಿಗೂ ಸಿಗುತ್ತಾ ಹಣ?

ರಕ್ಷಣಾ ಇಲಾಖೆ, ಸಾರ್ವಜನಿಕ ಸ್ವಾಮ್ಯದ ಉದ್ಯಮಗಳು (DPSUs), ಖಾಸಗಿ ಉದ್ಯಮಗಳು ಮತ್ತು ಸ್ಟಾರ್ಟ್‌ಅಪ್‌ಗಳ ಜಂಟಿ ಪರಿಶ್ರಮದಿಂದ ಈ ಮೈಲಿಗಲ್ಲು ಸಾಧ್ಯವಾಗಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಪೂರಕ ನೀತಿಗಳು ಮತ್ತು ರಫ್ತು ಸಾಮರ್ಥ್ಯದೊಂದಿಗೆ ಈ ವಲಯವು ಮತ್ತಷ್ಟು ವೇಗವಾಗಿ ಮುನ್ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವಿಷ ಸೇವಿಸಿ ಶಾಲಾ ಮುಖ್ಯಶಿಕ್ಷಕ ಆತ್ಮಹತ್ಯೆ ಪ್ರಕರಣ: ಐವರು ಶಿಕ್ಷಕರು ಸೇರಿ 10 ಮಂದಿ ವಿರುದ್ಧ ಎಫ್​​ಐಆರ್​ – Kannada News | Davanagere Headmaster Death Case: FIR Registered Against 10 for Alleged Caste Harassment and Mental Torture

ಮೃತ ಮುಖ್ಯ ಶಿಕ್ಷಕ ಜಯಪ್ಪImage Credit source: Tv9 Kannada

ದಾವಣಗೆರೆ, ಜೂನ್​​ 18: ವಿಷ ಸೇವಿಸಿ ಹರಿಹರ ತಾಲೂಕಿನ ಕೊಕ್ಕನೂರು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಜಯಪ್ಪ(54) ಆತ್ಮಹತ್ಯೆ ಪ್ರಕರಣ ಸಂಬಂಧ ಐವರು ಶಿಕ್ಷಕರು, ಬಿಸಿಯೂಟದ ನಾಲ್ವರು ಅಡುಗೆ ಸಿಬ್ಬಂದಿ, ಸಿಆರ್​​ಪಿ, ಬಿಆರ್​ಪಿ ಸೇರಿದಂತೆ 10 ಜನರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಮಾನಸಿಕ ಹಿಂಸೆ, ಕಿರುಕುಳ ಹಾಗೂ ಜಾತಿನಿಂದನೆ ಆರೋಪದಡಿ ಸಹ ಶಿಕ್ಷಕರಾದ ಶ್ರೀಕಾಂತಚಾರಿ, ವೆಂಕಟೇಶ್, ರಂಜನಿ, ಚೇತನಾ,ಮಹಾಂತೇಶ್ ಗೌಳಿ, ಅಡುಗೆ ಸಹಾಯಕರಾದ ಸುಮಾ, ಚೆನ್ನಮ್ಮ, ರೂಪಾ, ವಿಜಯಮ್ಮ ಸೇರಿದಂತೆ 10 ಜನರ ವಿರುದ್ಧ ಮಲೆಬೆನ್ನೂರು ಠಾಣೆಗೆ ಜಯಪ್ಪ ಪತ್ನಿ ಅಂಜನಮ್ಮ ದೂರು ನೀಡಿದ್ದರು.

ಅಂಜನಮ್ಮ ದೂರಿನಲ್ಲಿ ಏನಿದೆ?

ಕಳೆದ 10 ತಿಂಗಳಿಂದ ಕೊಕ್ಕನೂರು ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಪತಿ ಜಯಪ್ಪಗೆ ನಿತ್ಯವೂ ಹಿಂಸೆ ನೀಡಲಾಗುತ್ತಿತ್ತು. ನಾವು ಪರಿಶಿಷ್ಟ ಜಾತಿಗೆ ಸೇರಿದ್ದರಿಂದ ಜಾತಿ ನಿಂದನೆ ಮಾಡುತ್ತಿದ್ದರು. ಈ ವಿಚಾರವನ್ನು ಹತ್ತಾರು ಸಲ ಪತಿ ಜಯಪ್ಪ ತನಗೆ ಹೇಳಿದ್ದರು. ಇವರು ನೀಡಿದ ಮಾನಸಿಕ ಹಿಂಸೆಯೇ ತನ್ನ ಪತಿ ಆತ್ಮಹತ್ಯೆಗೆ ಕಾರಣ ಎಂದು ದೂರಿನಲ್ಲಿ ಅಂಜಿನಮ್ಮ ಉಲ್ಲೇಖಿಸಿದ್ದರು.

ಇದನ್ನೂ ಓದಿ: ಏಕಾಏಕಿ ಕುಸಿದು ಬಿದ್ದು ಬಾಡಿ ಬಿಲ್ಡರ್ ಸಾವು; ಹೆತ್ತ ತಾಯಿ ಕಣ್ಣೆದುರೇ ಮಗನ ದುರಂತ ಅಂತ್ಯ!

ಕೊಕ್ಕನೂರು ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ನಡುವೆ ಒಳಜಗಳದ ಆರೋಪ ಕೇಳಿಬಂದಿತ್ತು. ಸಹಶಿಕ್ಷಕರು, ಅಡುಗೆ ಸಹಾಯಕರು ಮತ್ತು ಮುಖ್ಯ ಶಿಕ್ಷಕನ ನಡುವೆ ಮನಸ್ಥಾಪದ ಹಿನ್ನೆಲೆ ಎಸ್​​ಡಿಎಂಸಿ ಹಾಗೂ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಸಂಧಾನ ಸಭೆ ನಡೆದಿತ್ತು. ಸಭೆ ಸೇರಿದ್ದ ವೇಳೆ ಶಾಲಾ ಶೌಚಾಲಯಕ್ಕೆ ಹೋಗಿ ಮುಖ್ಯ ಶಿಕ್ಷಕ ಜಯಪ್ಪ ವಿಷ ಸೇವಿಸಿದ್ದರು. ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದರು. ಮಲೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸಂಪೂರ್ಣ ಬತ್ತಿದ ಕಾವೇರಿ ನದಿ: ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಬರದ ಭೀತಿ – Kannada News | Cauvery River Faces Alarming Drought: June Flow Drastically Reduced in Kodagu

ಮಡಿಕೇರಿ, ಜೂನ್​​ 18: ರಾಜ್ಯದಲ್ಲಿ ಶೇಕಡ 60ರಷ್ಟು ಮಳೆ ಕೊರತೆ ಆತಂಕಕಾರಿ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಜೂನ್ ತಿಂಗಳಲ್ಲಿ ಧಾರಾಕಾರ ಮಳೆ ನಿರೀಕ್ಷಿಸಲಾಗಿದ್ದ ಕೊಡಗು ಜಿಲ್ಲೆಯ ಕಾವೇರಿ ನದಿ ಪಾತ್ರದಲ್ಲಿ, ನದಿ ಹರಿವು ಗಣನೀಯವಾಗಿ ಕುಸಿದಿದೆ. ಕೊಡಗು-ಮೈಸೂರು ಗಡಿಯಲ್ಲಿರುವ ಕೊಪ್ಪ ಸೇತುವೆ ಬಳಿ ಕಾವೇರಿ ನದಿಯ ಸ್ಥಿತಿಗತಿ ಪರಿಶೀಲಿಸಿದಾಗ, ಸಾಮಾನ್ಯವಾಗಿ 10-15 ಅಡಿ ಹರಿಯಬೇಕಿದ್ದ ನದಿ ಈಗ ಕೇವಲ ಅರ್ಧದಿಂದ ಒಂದು ಅಡಿ ನೀರಿಗೆ ಸೀಮಿತವಾಗಿದೆ. ನದಿಯ ಒಡಲು ಕಲ್ಲುಗಳಿಂದ ಕೂಡಿದ್ದು, ಜಲಮಾಪಕದಲ್ಲಿ ನೀರು ಶೂನ್ಯ ಮಟ್ಟವನ್ನು ತಲುಪಿದೆ. ಕಾವೇರಿ ಕೊಳ್ಳದಲ್ಲಿನ ಮಳೆಯ ತೀವ್ರ ಅಭಾವವೇ ಈ ಪರಿಸ್ಥಿತಿಗೆ ಕಾರಣವಾಗಿದ್ದು ಇದರಿಂದ ಬೆಂಗಳೂರು, ಮೈಸೂರು, ಮಂಡ್ಯ, ಕೊಡಗು ಸೇರಿದಂತೆ ಕಾವೇರಿ ನದಿ ನೀರನ್ನು ಅವಲಂಬಿಸಿರುವ ಪ್ರದೇಶಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಲಿದೆ. ಕೃಷಿ ಚಟುವಟಿಕೆಗಳಿಗೂ ನೀರು ಸಿಗದೆ ಬೆಳೆಗಳು ಒಣಗುವ ಭೀತಿ ಎದುರಾಗಿದೆ. ಕಾವೇರಿ ನದಿಯ ಪ್ರಮುಖ ಜಲಾಶಯಗಳಾದ ಕೆಆರ್‌ಎಸ್ ಮತ್ತು ಹಾರಂಗಿ ಸಹ ತುಂಬದೆ ಇರುವುದರಿಂದ ಮುಂಬರುವ ದಿನಗಳಲ್ಲಿ ಜಲಸಂಕಷ್ಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮಾವು ಬೆಲೆಯಲ್ಲಿ ಕುಸಿತ: ರಾಜ್ಯದ ರೈತರ ನೆರವಿಗೆ ಧಾವಿಸುವಂತೆ ಶಿವರಾಜ್ ಸಿಂಗ್ ಚೌಹಾಣ್​ಗೆ ಜೋಶಿ ಪತ್ರ – Kannada News | Karnataka Mango Growers Hit by Price Crash; Pralhad Joshi Writes to Shivraj Singh Chouhan

ಬೆಂಗಳೂರು, ಜೂನ್​​ 18: ಕರ್ನಾಟಕದ ಮಾವು ಬೆಳೆಗಾರರು (Mango growers) ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಮಾರುಕಟ್ಟೆಗಳಲ್ಲಿ ತೋತಾಪುರಿ ಮಾವಿನ ಬೆಲೆ ತೀವ್ರ ಕುಸಿತವಾಗಿದ್ದು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಸೇರಿದಂತೆ ಹಲವು ಭಾಗದ ರೈತರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಮಾವು ಬೆಳೆಗಾರರಿಗೆ ಪಿಡಿಪಿಎಸ್​ (PDPS) ಅಡಿಯಲ್ಲಿ ಸೂಕ್ತ ಪರಿಹಾರ ಒದಗಿಸುವಂತೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್​ಗೆ ಕೇಂದ್ರ ಸಚಿವ ಪ್ರಲ್ಹಾದ್​​ ಜೋಶಿ (Pralhad Joshi) ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ.

ಮುಖ್ಯಾಂಶಗಳು

  • ತೋತಾಪುರಿ ಮಾವಿನ ಬೆಲೆ ಕುಸಿತ
  • ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಬೆಳೆಗಾರರು
  • ಸಚಿವ ಶಿವರಾಜ್ ಸಿಂಗ್ ಚೌಹಾಣ್​ಗೆ ಪ್ರಲ್ಹಾದ್​​ ಜೋಶಿ ಪತ್ರ

ಕೇಂದ್ರ ಸಚಿವ ಪ್ರಲ್ಹಾದ್​​ ಜೋಶಿ ಬರೆದ ಪತ್ರದಲ್ಲಿ ಏನಿದೆ?

ರಾಜ್ಯದ ಹಲವು ಜಿಲ್ಲೆಗಳ ಲಕ್ಷಾಂತರ ರೈತರ ಜೀವನೋಪಾಯಕ್ಕೆ ಪ್ರಮುಖ ಆಧಾರವಾಗಿರುವ ಮಾವು ಬೆಳೆ ಪ್ರಸ್ತುತ ಸಂಕಷ್ಟದಲ್ಲಿದೆ. ಪ್ರಸಕ್ತ 2026ರ ಜೂನ್ ತಿಂಗಳಿನಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರದಂತಹ ಪ್ರಮುಖ ಮಾರುಕಟ್ಟೆಗಳಲ್ಲಿ ತೋತಾಪುರಿ ತಳಿಯ ಮಾವಿನ ಬೆಲೆಯು ರೈತರಿಗೆ ಸಿಗಬೇಕಾದ ಕನಿಷ್ಠ ಲಾಭದಾಯಕ ದರಕ್ಕಿಂತಲೂ ಗಣನೀಯವಾಗಿ ಕುಸಿದಿದ್ದು, ಇದು ಬೆಳೆಗಾರರನ್ನು ತೀವ್ರ ಕಷ್ಟಕ್ಕೆ ದೂಡಿದೆ.

ಇದನ್ನೂ ಓದಿ: ಮಾವು ಬೇಕೇ ಮಾವು! ಒಂದೇ ಸೂರಿನಡಿ ಬಗೆಬಗೆಯ ಮಾವಿನ ಹಣ್ಣುಗಳ ಮಾರಾಟ ಹೇಗಿದೆ ನೋಡಿ

ಈ ಬಾರಿ ಕಠಿಣ ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಮಾವಿನ ಉತ್ಪಾದನೆಯೂ ಕುಂಠಿತಗೊಂಡಿದೆ. ಒಂದೆಡೆ ಇಳುವರಿ ಕಡಿಮೆಯಾಗಿದ್ದರೆ, ಇನ್ನೊಂದೆಡೆ ಮಾರುಕಟ್ಟೆಯಲ್ಲಿ ತೀವ್ರ ಬೆಲೆ ಕುಸಿತ ಉಂಟಾಗಿರುವುದು ರೈತರಿಗೆ ದೊಡ್ಡ ಮಟ್ಟದ ಆರ್ಥಿಕ ನಷ್ಟವನ್ನು ಉಂಟುಮಾಡಿದೆ. ಈ ದ್ವಿಮುಖ ಹೊಡೆತದಿಂದಾಗಿ ತೋತಾಪುರಿ ಮಾವು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಕಬ್ಬನ್ ಪಾರ್ಕ್‌ನಲ್ಲಿ ಕಳೆಗಟ್ಟಿದ ಮಾವು ಮೇಳ, ಖರೀದಿಗೆ ಮುಗಿಬಿದ್ದ ಮಾವು ಪ್ರಿಯರು

ಈ ಹಿನ್ನೆಲೆಯಲ್ಲಿ ರೈತರ ಹಿತರಕ್ಷಣೆಯನ್ನು ಕಾಯುವ ಸಲುವಾಗಿ, ಕಳೆದ ವರ್ಷ ನೀಡಿದಂತೆಯೇ ಪ್ರಸಕ್ತ ವರ್ಷವೂ ‘ಬೆಲೆ ಕೊರತೆ ಪಾವತಿ ಯೋಜನೆ’ಯಡಿ (PDPS) ಮಾವು ಬೆಳೆಗಾರರಿಗೆ ತುರ್ತು ಆರ್ಥಿಕ ಬೆಂಬಲ ನೀಡುವಂತೆ ಪತ್ರದಲ್ಲಿ ಪ್ರಲ್ಹಾದ್​​ ಜೋಶಿ ಮನವಿ ಮಾಡಿದ್ದು, ಕೇಂದ್ರ ಸಚಿವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಕಾರಾತ್ಮಕವಾಗಿ ಸ್ಪಂದಿಸುವ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 6:29 pm, Thu, 18 June 26

Source link

‘ಸೈನಿಕ 2’: ಚಿತ್ರರಂಗಕ್ಕೆ ಕಾಲಿಡಲಿರುವ ಸಿಪಿ ಯೋಗೇಶ್ವರ್ ಪುತ್ರ – Kannada News | MLA CP Yogeshwar bringing his son Dhyan to Kannada movie industry

ಸಿಪಿ ಯೋಗೇಶ್ವರ್ (CP Yogeshwar), ನಟನಾಗಿ ಯಶಸ್ಸು ಗಳಿಸಿ, ಬಳಿಕ ರಾಜಕಾರಣಿಯಾಗಿ ಅಲ್ಲಿಯೂ ಯಶಸ್ಸು ಗಳಿಸಿದವರು. ಇದೀಗ ಅವರು ತಮ್ಮ ಪುತ್ರನನ್ನು ಚಿತ್ರರಂಗಕ್ಕೆ ಕರೆತರಲು ಸಜ್ಜಾಗಿದ್ದಾರೆ. ಕೆಲವು ರಾಜಕಾರಣಿಗಳು ತಮ್ಮ ಮಕ್ಕಳನ್ನು ಚಿತ್ರರಂಗಕ್ಕೆ ತಂದಿದ್ದಾರೆ. ಕೆಲವು ಸಿನಿಮಾಗಳಲ್ಲಿ ನಟಿಸಿದ ಬಳಿಕ ಅವರೂ ಸಹ ರಾಜಕಾರಣದತ್ತ ತಿರುಗುತ್ತಾರೆ. ಮಕ್ಕಳನ್ನು ರಾಜಕಾರಣಕ್ಕೆ ತರುವ ಮುನ್ನ ಸಿನಿಮಾ ರಂಗದಲ್ಲಿ ಜನಪ್ರಿಯತೆ ಸಿಗುವಂತೆ ಮಾಡಲಾಗುತ್ತದೆ. ಇದು ಒಂದು ರೀತಿಯ ಮಾಡೆಲ್ ಆಗಿಬಿಟ್ಟಿದೆ. ಅದರಂತೆ ಈಗ ಸಿಪಿ ಯೋಗೇಶ್ವರ್ ಸಹ ತಮ್ಮ ಮಗನನ್ನು ಸಿನಿಮಾ ರಂಗಕ್ಕೆ ತರುತ್ತಿದ್ದು, ರಾಜಕಾರಣಕ್ಕೆ ಸಿನಿಮಾ ರಂಗದಲ್ಲಿ ತಳಹದಿ ಹಾಕುತ್ತಿದ್ದಾರೆ.

ಸಿಪಿ ಯೋಗೇಶ್ವರ್ ಅವರ ಪುತ್ರ ಧ್ಯಾನ್ ಯೋಗೇಶ್ವರ್ ಅವರು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಯೋಗೇಶ್ವರ್ ಅವರಿಗೆ ಭಾರಿ ಹೆಸರು, ಖ್ಯಾತಿ, ಯಶಸ್ಸು ತಂದುಕೊಟ್ಟ ‘ಸೈನಿಕ’ ಸಿನಿಮಾದ ಹೆಸರನ್ನೇ ಇರಿಸಿಕೊಂಡು ಧ್ಯಾನ್ ಅವರು ಚಿತ್ರರಂಗಕ್ಕೆ ಬರುತ್ತಿದ್ದಾರೆ. ಧ್ಯಾನ್ ಅವರು ನಟಿಸುತ್ತಿರುವ ಮೊದಲ ಸಿನಿಮಾದ ಹೆಸರು ‘ಸೈನಿಕ 2’.

ಅಂದಹಾಗೆ ‘ಸೈನಿಕ’ ಸಿನಿಮಾನಲ್ಲಿ ಕೇವಲ ಮಗನಷ್ಟೇ ಅಲ್ಲ ಖುದ್ದು ಸಿಪಿ ಯೋಗೇಶ್ವರ್ ಅವರು ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದಾರೆ. ಯೋಗೇಶ್ವರ್ ಅವರು ಸಿನಿಮಾಕ್ಕಾಗಿ ಬಣ್ಣ ಹಚ್ಚಿ ವರ್ಷಗಳೇ ಆಗಿವೆ. ಇದೀಗ ಮಗನ ಸಿನಿಮಾಕ್ಕಾಗಿ ಮತ್ತೆ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ನಾಗಣ್ಣ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ಮಾಪಕ ಕೆಪಿ ಶ್ರೀಕಾಂತ್ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ಪ್ರಸ್ತುತ ಲೊಕೇಶನ್ ಹುಡುಕಾಟದ ಕೆಲಸಗಳು ಸಾಗುತ್ತಿವೆಯಂತೆ.

ಇದನ್ನೂ ಓದಿ:ನಮ್ಮಪ್ಪನೊಂದಿಗೆ ಇರೋದು ಆಸ್ತಿ ಕಲಹ ಅಲ್ಲವೇ ಅಲ್ಲ, ಹಾಗೆ ಬಿಂಬಿಸಲಾಗುತ್ತಿದೆ: ನಿಶಾ ಯೋಗೇಶ್ವರ್ 

ಬೆಂಗಳೂರು, ಬೀದರ್, ಗುಲ್ಬರ್ಗ ಸೇರಿದಂತೆ ಇನ್ನೂ ಕೆಲ ಭಾಗಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜಿಸುತ್ತಿದೆ. ಜುಲೈ 5ರಂದು ಸಿನಿಮಾದ ಮುಹೂರ್ತ ನಿಗದಿ ಮಾಡಲಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಸಿ.ಪಿ. ಯೋಗೇಶ್ವರ್ ಅವರ ಕುಟುಂಬದಿಂದ ಯಾವುದೇ ಅಧಿಕೃತ ಘೋಷಣೆ ಇನ್ನೂ ಹೊರಬಿದ್ದಿಲ್ಲ. ಸಿಪಿ ಯೋಗೇಶ್ವರ್ ಅವರ ಪುತ್ರಿ ನಿಶಾ ಸಹ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ದರ್ಶನ್ ಎದುರು ‘ಅಂಬರೀಶ’ ಸಿನಿಮಾದ ನಾಯಕಿಯಾಗಿ ಆಯ್ಕೆ ಆಗಿದ್ದರು ಆದರೆ ಬಳಿಕ ಆ ಸಿನಿಮಾದಿಂದ ಹೊರ ನಡೆದರು. ಬಳಿಕ ತೆಲುಗಿನ ಸಿನಿಮಾನಲ್ಲಿ ನಟಿಸುತ್ತಾರೆಂಬ ಸುದ್ದಿಯಾಗಿತ್ತು. ಬಳಿಕ ಅವರು ಸಹ ರಾಜಕೀಯದ ಕಡೆ ಗಮನ ಹರಿಸಿದರು. ಜೊತೆಗೆ ತಂದೆಯ ಜೊತೆಗೆ ವಿವಾದವನ್ನೂ ಮಾಡಿಕೊಂಡರು.

ಕುಮಾರಸ್ವಾಮಿ, ಜಮೀರ್ ಅಹ್ಮದ್, ಅಂಬರೀಶ್, ಎಚ್​​ಎಂ ರೇವಣ್ಣ, ಜನಾರ್ದನ ರೆಡ್ಡಿ ಇನ್ನೂ ಕೆಲವು ರಾಜಕಾರಣಿಗಳು ತಮ್ಮ ಮಕ್ಕಳನ್ನು ನಟರನ್ನಾಗಿ ಮಾಡಿದ್ದಾರೆ. ಬಳಿಕ ರಾಜಕೀಯಕ್ಕೂ ಕರೆತರುತ್ತಾರೆ. ಈಗ ಯೋಗೇಶ್ವರ್ ಸಹ ತಮ್ಮ ಮಗನನ್ನು ಸಿನಿಮಾಕ್ಕೆ ಕರೆತರುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Viral: 40 ಸಾವಿರ ರೂ ಮನೆ ಬಾಡಿಗೆ, 2.4 ಲಕ್ಷ ರೂ ಭದ್ರತಾ ಠೇವಣಿ; ಬೆಂಗಳೂರಿನಲ್ಲಿ ಮನೆ ಹುಡುಕುತ್ತಿದ್ದ ವ್ಯಕ್ತಿಗೆ ಫುಲ್ ಶಾಕ್ – Kannada News | Bengaluru: A man reveals his friend’s experience while looking for a house in Bengaluru

ಬೆಂಗಳೂರು, ಜೂನ್ 18: ಬೆಂಗಳೂರಿನಲ್ಲಿ (Bengaluru) ಬಾಡಿಗೆ ಮನೆ ಮಾಡಿ ನೆಮ್ಮದಿಯಿಂದ ಇರೋಣ ಅಂದ್ರೆ ಮನೆ ಮಾಲೀಕರ ಡಿಮ್ಯಾಂಡ್ ಹೆಚ್ಚಾಗಿದೆ. ದುಡ್ಡಿನ ಆಸೆಗೆ ಬಿದ್ದು ಮನೆ ಮಾಲೀಕರು ಬೇಕಾಬಿಟ್ಟಿ ಬಾಡಿಗೆ ಹಾಗೂ ಭದ್ರತಾ ಠೇವಣಿ ಕೇಳುತ್ತಿದ್ದಾರೆ. ನೀವೇನಾದ್ರೂ ಸಿಲಿಕಾನ್‌ ಸಿಟಿಯಲ್ಲಿ ಮನೆ ಹುಡುಕುತ್ತಿದ್ರೆ ಕಡಿಮೆ ಬಾಡಿಗೆ ಹಾಗೂ ಠೇವಣಿ ಇರುವ ಮನೆ ಸಿಗುತ್ತೆ ಅನ್ನೋದು ದೂರದ ಮಾತು. ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕಾಟ ವಿಚಾರದಲ್ಲಿ ತನ್ನ ಸ್ನೇಹಿತನಿಗಾದ ಅನುಭವವನ್ನು ಪೋಸ್ಟ್ ಮಾಡಿದ್ದಾರೆ. ಬೆಂಗಳೂರಿಗೆ ಸ್ಥಳಾಂತರಗೊಂಡ ತನ್ನ ಸ್ನೇಹಿತ ಫ್ಲಾಟ್‌ಗಾಗಿ ಹುಡುಕುತ್ತಿದ್ದಾಗ ಆತನಿಗೆ ಮನೆ ಮಾಲೀಕರು ಕೇಳಿದ ಬಾಡಿಗೆ ಹಾಗೂ ಠೇವಣಿ ಮೊತ್ತ ಕೇಳಿದ್ರೆ ನಿಮ್ಮದು ತಲೆ ಗಿರ್ ಅನ್ನುತ್ತೆ. ಹೌದು, 40,000 ರೂ ತಿಂಗಳ ಬಾಡಿಗೆ ಹಾಗೂ 2.4 ಲಕ್ಷ ರೂ ಭದ್ರತಾ ಠೇವಣಿಯಂತೆ. ಸದ್ಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

ಪರಿತಷ್ ಶರ್ಮಾ (Paritsh Shrrma) ತಮ್ಮ ಎಕ್ಸ್ ಖಾತೆಯಲ್ಲಿ ಬೆಂಗಳೂರಿಗೆ ಸ್ಥಳಾಂತರಗೊಂಡ ತನ್ನ ಸ್ನೇಹಿತನೊಬ್ಬನಿಗೆ ಮನೆ ಹುಡುಕುತ್ತಿದ್ದ ವೇಳೆ ಆದ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ನನ್ನ ಒಬ್ಬ ಸ್ನೇಹಿತ ಬೆಂಗಳೂರಿಗೆ ಸ್ಥಳಾಂತರಗೊಂಡು ಫ್ಲಾಟ್ ಹುಡುಕುತ್ತಿದ್ದ. ಅವನಿಗೆ ತಿಂಗಳಿಗೆ 40,000 ರೂ ಬಾಡಿಗೆ ಇರುವ ಗೆ ಫ್ಲಾಟ್ ಸಿಕ್ಕಿತು. ಮಾಲೀಕರು ಆರು ತಿಂಗಳ ಭದ್ರತಾ ಠೇವಣಿ 2.4 ಲಕ್ಷ ರೂ ಕೇಳುತ್ತಿದ್ದಾರೆ. ಅದರ ಜೊತೆಗೆ 40,000 ರೂ ಬ್ರೋಕರೇಜ್.

ವೈರಲ್ ಪೋಸ್ಟ್ ಇಲ್ಲಿದೆ

ಆರು ತಿಂಗಳ ಠೇವಣಿಯ ಹಿಂದಿನ ತರ್ಕವನ್ನು ಯಾರಾದರೂ ವಿವರಿಸಬಹುದೇ? ಬೇರೆ ಯಾವುದೇ ಪ್ರಮುಖ ನಗರದಲ್ಲಿ ಇದನ್ನು ಸಾಮಾನ್ಯ ಅಭ್ಯಾಸವಾಗಿ ನಾನು ನೋಡಿಲ್ಲ. ಅನೇಕ ಸಂದರ್ಭಗಳಲ್ಲಿ, ಮನೆ ಮಾಲೀಕರು ಕೊನೆಯಲ್ಲಿ ಪೂರ್ಣ ಠೇವಣಿಯನ್ನು ಹಿಂದಿರುಗಿಸುವುದಿಲ್ಲ. ಬೆಂಗಳೂರಿನ ಬಾಡಿಗೆ ಮಾರುಕಟ್ಟೆ ತುಂಬಾ ಉತ್ಸುಕವಾಗಿ ಕಾಣುತ್ತದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಎಚ್ಎಸ್ಆರ್ ಲೇಔಟ್‌ನ 1BHK ನಲ್ಲಿ ವಾಸಿಸುವ ಮಹಿಳೆಯ ತಿಂಗಳ ಖರ್ಚು ಎಷ್ಟು ಗೊತ್ತಾ?

ಈ ಪೋಸ್ಟ್ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಟೈಯರ್ 1 ಹಾಗೂ ಮೆಟ್ರೋ ಸಿಟಿಗಳಲ್ಲಿ ಆರು ತಿಂಗಳ ಠೇವಣಿ ಸರ್ವೇ ಸಾಮಾನ್ಯ ಎಂದಿದ್ದಾರೆ. ಇನ್ನೊಬ್ಬರು, ಆರು ತಿಂಗಳ ಭದ್ರತಾ ಠೇವಣಿ ಪಡೆದಿರುವುದಕ್ಕೆ ನಿಮ್ಮ ಸ್ನೇಹಿತ ನಿಜಕ್ಕೂ ಅದೃಷ್ಟವಂತ. ಕೆಲವು ಕಡೆಗಳಲ್ಲಿ 12 ತಿಂಗಳ ಭದ್ರತಾ ಠೇವಣಿಯಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ದಯವಿಟ್ಟು ಬ್ರೋಕರೇಜ್ ಕೊಡಬೇಡಿ ಎಂದು ಸಲಹೆ ನೀಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:15 pm, Thu, 18 June 26

Source link

ಕ್ಯಾರಿ ಬ್ಯಾಗ್​ಗೆ ₹10 ವಸೂಲಿ; ಶೂ ಕಂಪನಿಗೆ ಬಿತ್ತು ₹8,000 ದಂಡ; ಇದು ವ್ಯಾಪಾರಿಗಳು, ಗ್ರಾಹಕರಿಗೆ ಕಣ್ತೆರೆಸುವ ಪ್ರಕರಣ – Kannada News | Carrybag charge by Red Tape, consumer wins case in Haryana court, footwear company gets huge fine

ನವದೆಹಲಿ, ಜೂನ್ 18: ಖ್ಯಾತ ಶೂ ಬ್ರ್ಯಾಂಡ್ ಆದ ‘ರೆಡ್ ಟೇಪ್’ (Red Tape Ltd) ಗ್ರಾಹಕರೊಬ್ಬರಿಗೆ ಕ್ಯಾರಿ ಬ್ಯಾಗ್ ನೀಡಲು ₹10 ಹೆಚ್ಚುವರಿ ಶುಲ್ಕ ವಸೂಲಿ ಮಾಡಿದ್ದಕ್ಕಾಗಿ ಹರಿಯಾಣದ ಗ್ರಾಹಕ ನ್ಯಾಯಾಲಯವು ಕಂಪನಿಗೆ ಭಾರಿ ದಂಡ ವಿಧಿಸಿದೆ. ಈ ₹10 ಮೊತ್ತವನ್ನು ಗ್ರಾಹಕನಿಗೆ ವಾಪಸ್ ನೀಡುವಂತೆ ಮತ್ತು ಮಾನಸಿಕ ಕಿರಿಕಿರಿ ಹಾಗೂ ಕಾನೂನು ವೆಚ್ಚಕ್ಕಾಗಿ ಒಟ್ಟು ₹8,000 ಪರಿಹಾರ ನೀಡುವಂತೆ ಆದೇಶಿಸಿದೆ.

ಹರಿಯಾಣದ ರೋಹ್ಟಕ್ ನಿವಾಸಿಯಾದ 27 ವರ್ಷದ ಅನಿಲ್ ಕುಮಾರ್ ಎಂಬ ಗ್ರಾಹಕರು ಏಪ್ರಿಲ್ 1, 2023 ರಂದು ಸ್ಥಳೀಯ ರೆಡ್ ಟೇಪ್ ಶೋರೂಮ್‌ನಿಂದ ₹2,069.70 ಮೌಲ್ಯದ ಕಪ್ಪು ಬಣ್ಣದ ಶೂಗಳನ್ನು ಖರೀದಿಸಿದ್ದರು. ಬಿಲ್ ಮಾಡುವಾಗ ಶೋರೂಮ್ ಸಿಬ್ಬಂದಿ ಕ್ಯಾರಿ ಬ್ಯಾಗ್‌ಗಾಗಿ ಪ್ರತ್ಯೇಕವಾಗಿ ₹10 ವಸೂಲಿ ಮಾಡಿದ್ದರು. ಗ್ರಾಹಕರು ಉಚಿತವಾಗಿ ಬ್ಯಾಗ್ ನೀಡುವಂತೆ ವಿನಂತಿಸಿದರೂ, ಇದು ‘ಕಂಪನಿ ಪಾಲಿಸಿ’ ಎಂದು ಸಿಬ್ಬಂದಿ ನಿರಾಕರಿಸಿದ್ದರು. ಇದರಿಂದ ಅಸಮಾಧಾನಗೊಂಡ ಗ್ರಾಹಕರು ಗ್ರಾಹಕ ವೇದಿಕೆಯ ಮೆಟ್ಟಿಲೇರಿದ್ದರು.

ನ್ಯಾಯಾಲಯದ ತೀರ್ಪಿನ ಮುಖ್ಯಾಂಶಗಳು

ರೋಹ್ಟಕ್‌ನ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗದ (District Consumer Commission) ಅಧ್ಯಕ್ಷ ನಾಗೇಂದರ್ ಸಿಂಗ್ ಕಾಡಿಯನ್ ನೇತೃತ್ವದ ಪೀಠವು ಜೂನ್ 12 ರಂದು ಈ ಮಹತ್ವದ ತೀರ್ಪನ್ನು ನೀಡಿದೆ:

ಗ್ರಾಹಕರಿಂದ ಕ್ಯಾರಿ ಬ್ಯಾಗ್‌ಗಾಗಿ ಪ್ರತ್ಯೇಕವಾಗಿ ₹10 ವಸೂಲಿ ಮಾಡಿರುವುದು ‘ಸೇವೆಯಲ್ಲಿನ ನ್ಯೂನತೆ’ (Deficiency in Service) ಮತ್ತು ‘ಅನ್ಯಾಯದ ವ್ಯಾಪಾರ ಪದ್ಧತಿ’ (Unfair Trade Practice) ಎಂದು ನ್ಯಾಯಾಲಯ ಖಂಡಿಸಿದೆ.

ಇದನ್ನೂ ಓದಿ: 2025-26ಕ್ಕೆ ಶೇ. 8.25 ಇಪಿಎಫ್ ಬಡ್ಡಿಗೆ ಅನುಮೋದನೆ; ಸಕ್ರಿಯವಲ್ಲದ ಇಪಿಎಫ್ ಖಾತೆಗಳಿಗೂ ಸಿಗುತ್ತಾ ಹಣ?

ಗ್ರಾಹಕರು ಖರೀದಿಸಿದ ವಸ್ತುವನ್ನು ಸುಲಭವಾಗಿ ಕೊಂಡೊಯ್ಯುವ ಸ್ಥಿತಿಯಲ್ಲಿ (Deliverable State) ಒದಗಿಸುವುದು ವ್ಯಾಪಾರಿಗಳು ಮತ್ತು ಕಂಪನಿಗಳ ಮೂಲಭೂತ ಕರ್ತವ್ಯವಾಗಿದೆ. ಈ ಬ್ಯಾಗ್‌ಗಳ ವೆಚ್ಚವನ್ನು ಕಂಪನಿಗಳೇ ತಮ್ಮ ವ್ಯವಹಾರದ ನಿರ್ವಹಣಾ ವೆಚ್ಚವಾಗಿ ಭರಿಸಬೇಕೇ ವಿನಃ ಗ್ರಾಹಕರ ಮೇಲೆ ಹೇರಬಾರದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ರೆಡ್ ಟೇಪ್ ಕಂಪನಿಯ ವಾದವೇನಿತ್ತು?

ಪರಿಸರ ಸ್ನೇಹಿ ಅಭ್ಯಾಸಗಳನ್ನು ಉತ್ತೇಜಿಸಲು ಮತ್ತು ಪ್ಲಾಸ್ಟಿಕ್/ಬ್ಯಾಗ್‌ಗಳ ಅನಗತ್ಯ ಬಳಕೆಯನ್ನು ಕಡಿಮೆ ಮಾಡಲು ಈ ಶುಲ್ಕವನ್ನು ವಿಧಿಸಲಾಗುತ್ತಿದೆ. ಹಾಗೂ ಗ್ರಾಹಕರು ತಮ್ಮ ಸ್ವಂತ ಬ್ಯಾಗ್ ತರಲು ಮುಂಚಿತವಾಗಿ ತಿಳಿಸಲಾಗುತ್ತದೆ ಎಂದು ರೆಡ್ ಟೇಪ್ ಕಂಪನಿಯು ತನ್ನ ಸಮರ್ಥನೆಯಲ್ಲಿ ವಾದಿಸಿತ್ತು. ಆದರೆ, ಕಂಪನಿಯು ಸಲ್ಲಿಸಿದ ಅಫಿಡವಿಟ್‌ನಲ್ಲೇ ಈ ಶುಲ್ಕ ಅನಗತ್ಯವಾಗಿತ್ತು ಎಂಬುದನ್ನು ಒಪ್ಪಿಕೊಳ್ಳುವಂತಹ ಹೇಳಿಕೆಗಳಿದ್ದವು ಎಂಬುದನ್ನು ಕಮಿಷನ್ ಗಮನಿಸಿದೆ.

ಗ್ರಾಹಕ ನ್ಯಾಯಾಲಯ ನೀಡಿದ ತೀರ್ಪು

ಮೂರು ವರ್ಷಗಳ ಕಾನೂನು ಪ್ರಕ್ರಿಯೆಯ ನಂತರ ಗ್ರಾಹಕನ ಪರವಾಗಿ ತೀರ್ಪು ಬಂದಿದ್ದು, ರೆಡ್ ಟೇಪ್ ಕಂಪನಿಗೆ ಈ ಕೆಳಗಿನ ನಿರ್ದೇಶನಗಳನ್ನು ನೀಡಲಾಗಿದೆ:

  • ಗ್ರಾಹಕರಿಂದ ಪಡೆದ ₹10 ಕ್ಯಾರಿ ಬ್ಯಾಗ್ ವೆಚ್ಚವನ್ನು ತಕ್ಷಣವೇ ಹಿಂತಿರುಗಿಸಬೇಕು.
  • ಸೇವೆಯಲ್ಲಿನ ನ್ಯೂನತೆಗಾಗಿ ₹4,000 ಪರಿಹಾರ ನೀಡಬೇಕು.
  • ಗ್ರಾಹಕನ ಕಾನೂನು ಹೋರಾಟದ ವೆಚ್ಚವಾಗಿ (Litigation Expenses) ಹೆಚ್ಚುವರಿ ₹4,000 ನೀಡಬೇಕು.

ಕೋರ್ಟ್ ಈ ಆದೇಶವನ್ನು 30 ದಿನಗಳ ಒಳಗಾಗಿ ಪಾಲಿಸುವಂತೆ ಕಂಪನಿಗೆ ಗಡುವು ನೀಡಿದೆ. ಒಂದು ವೇಳೆ ವಿಳಂಬ ಮಾಡಿದರೆ, ಗ್ರಾಹಕನಿಗೆ ಪ್ರತಿ ವಾರಕ್ಕೆ ₹50 ರಂತೆ ಹೆಚ್ಚುವರಿ ದಂಡವನ್ನು ಕಂಪನಿ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: ಪಿಎಂ ಕಿಸಾನ್ 23ನೇ ಕಂತು ಬಿಡುಗಡೆ ದಿನಾಂಕ ಪ್ರಕಟ; ಇನ್ನೆರಡು ದಿನದಲ್ಲಿ ರೈತರ ಖಾತೆಗೆ ಬರಲಿದೆ 2,000 ರೂ

ದೊಡ್ಡ ಬ್ರ್ಯಾಂಡ್‌ಗಳು ಮತ್ತು ಮಾಲ್‌ಗಳು ಬ್ರಾಂಡಿಂಗ್ ಹೊಂದಿರುವ ಕ್ಯಾರಿ ಬ್ಯಾಗ್‌ಗಳಿಗೆ ಗ್ರಾಹಕರಿಂದ ಕಡ್ಡಾಯವಾಗಿ ಹಣ ವಸೂಲಿ ಮಾಡುವುದು ಕಾನೂನುಬಾಹಿರ ಎಂಬುದನ್ನು ಈ ತೀರ್ಪು ಮತ್ತೊಮ್ಮೆ ಸಾಬೀತುಪಡಿಸಿದೆ. ಬೆಂಗಳೂರು ಸೇರಿದಂತೆ ದೇಶಾದ್ಯಂತ ಬಹುತೇಕ ಎಲ್ಲಾ ಮಾಲ್​ಗಳು, ದೊಡ್ಡ ಅಂಗಡಿಗಳಲ್ಲಿ ಕ್ಯಾರಿ ಬ್ಯಾಗ್​ಗಳಿಗೆ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ. ರೋಹ್ಟಕ್​ನ ಗ್ರಾಹಕ ನ್ಯಾಯಾಲಯದ ನೀಡಿದ ತೀರ್ಪು ಬಿಗ್ ಬಜಾರ್ ಇತ್ಯಾದಿ ಈ ಅಂಗಡಿ ಮುಂಗಟ್ಟುಗಳಿಗೆ ಎಚ್ಚರಿಕೆಯ ಪಾಠವಾಗಬಹುದು, ಗ್ರಾಹಕರಿಗೆ ಅರಿವು ಮೂಡಿಸಲು ಸಹಾಯವಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ಹೆಚ್​​. ಡಿ. ರೇವಣ್ಣ – Kannada News | Revanna Bats for Sumalatha Ambareesh, Makes Surprise Political Remark

ಬೆಂಗಳೂರು, ಜೂನ್​​ 18: ಹೆಚ್​.ಡಿ. ದೇವೇಗೌಡರಿಗೆ ರಾಜ್ಯಸಭಾ ಸ್ಥಾನ ಕೈತಪ್ಪಿದ ಬಗ್ಗೆ ಪ್ರತಿಕ್ರಿಯಿಸಿರುವ ಹೆಚ್​​.ಡಿ. ರೇವಣ್ಣ, ದೇವೇಗೌಡರು ಅಧಿಕಾರಕ್ಕಾಗಿ ಎಂದಿಗೂ ಯಾರ ಬಾಗಿಲಿಗೂ ಹೋಗಿಲ್ಲ. ಪ್ರಧಾನಮಂತ್ರಿ ಹುದ್ದೆಯನ್ನೇ ಅವರು ತ್ಯಾಗ ಮಾಡಿದ್ದರು ಎಂಬುದನ್ನು ಅವರು ನೆನಪಿಸಿದ್ದಾರೆ. ರಾಜ್ಯಸಭಾ ಸ್ಥಾನಕ್ಕಾಗಿ ದೇವೇಗೌಡರು ಅಥವಾ ಕುಮಾರಸ್ವಾಮಿಯವರು ಯಾರನ್ನೂ ಕೇಳಿರಲಿಲ್ಲ. ರಾಜ್ಯಸಭಾ ಸ್ಥಾನಕ್ಕೆ ಮೊದಲು ದೇವೇಗೌಡರು ಮತ್ತು ಸದಾನಂದಗೌಡರ ಹೆಸರುಗಳು ಕೇಳಿಬಂದಿದ್ದವು. ನಂತರ ಮಂಡ್ಯದ ಮೇಡಂ ಎಂದು ಸುಮಲತಾ ಅಂಬರೀಶ್ ಅವರ ಹೆಸರನ್ನು ಪ್ರಸ್ತಾಪಿಸಿದ ರೇವಣ್ಣ, ಅವರಿಗೂ ಟೋಪಿ ಹಾಕಲಾಯಿತು ಎಂದು ಆರೋಪಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

30 ವರ್ಷ ದಾಟಿದ ಬಳಿಕ ಪ್ರತಿಯೊಬ್ಬ ಮಹಿಳೆಯೂ ತಪ್ಪದೇ ಈ ಅಭ್ಯಾಸಗಳನ್ನು ಪಾಲಿಸಬೇಕು – Kannada News | Women Over 30 should follow these habits to stay healthy and look young

ಒಬ್ಬ ಮಹಿಳೆ (Women) ತನ್ನ ಜೀವನದುದ್ದಕ್ಕೂ ಹಲವು ಹಂತಗಳನ್ನು ದಾಟುತ್ತಾಳೆ. ಹದಿಹರೆಯದಿಂದ ಹಿಡಿದು  ವೃದ್ಧಾಪ್ಯದವರೆಗೆ ಆಕೆ ಅನೇಕ ವಿಷಯಗಳನ್ನು ಎದುರಿಸಬೇಕಾಗುತ್ತದೆ. ವಯಸ್ಸಾದಂತೆ, ಅವಳ ದೇಹವು ನಿರಂತರವಾಗಿ ಬದಲಾಗಲು ಪ್ರಾರಂಭಿಸುತ್ತದೆ. ಈ ಬದಲಾವಣೆಗಳು ಬಾಹ್ಯವಾಗಿ ಮಾತ್ರವಲ್ಲದೆ ಆಂತರಿಕವಾಗಿಯೂ ಸಂಭವಿಸುತ್ತವೆ. ವಿಶೇಷವಾಗಿ 30 ವರ್ಷದ ನಂತರ, ಮಹಿಳೆಯರ ದೇಹದಲ್ಲಿ ಅನೇಕ ಬದಲಾವಣೆಗಳು ಸಂಭವಿಸುತ್ತವೆ. ದೈನಂದಿನ ಜೀವನ ಮತ್ತು ಕುಟುಂಬದ ಜವಾಬ್ದಾರಿಗಳ ದೈನಂದಿನ ಗಡಿಬಿಡಿಯ ನಡುವೆ, ಅನೇಕ ಮಹಿಳೆಯರು ತಮ್ಮ ಬಗ್ಗೆ ಹಾಗೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ನಿರ್ಲಕ್ಷಿಸುತ್ತಾರೆ. ಈ ನಿರ್ಲಕ್ಷ್ಯ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹಾಗಾಗಿ ವಯಸ್ಸಾದ ಮೇಲೂ ಫಿಟ್‌ ಆಂಡ್‌ ಫೈನ್‌ ಆಗಿರಲು, ಹೆಲ್ತಿ ಮತ್ತು ಯಂಗ್‌ ಆಗಿರಲು 30 ವರ್ಷದ ಬಳಿಕ ಪ್ರತಿಯೊಬ್ಬ ಮಹಿಳೆಯೂ ಈ ಕೆಲವೊಂದಿಷ್ಟು ವಿಚಾರಗಳ ಬಗ್ಗೆ ತುಸು ಹೆಚ್ಚು ಗಮನಕೊಡಬೇಕು.

30 ವರ್ಷ ದಾಟಿದ ಬಳಿಕ ಪ್ರತಿಯೊಬ್ಬ ಮಹಿಳೆಯೂ ಈ ಅಭ್ಯಾಸಗಳನ್ನು ಪಾಲಿಸಬೇಕು:

ಆರೋಗ್ಯಕರ ಅಭ್ಯಾಸಗಳೊಂದಿಗೆ ದಿನವನ್ನು ಪ್ರಾರಂಭಿಸುವುದು: ನೀವು 30 ವರ್ಷ ದಾಟಿದ ನಂತರ, ನಿಮ್ಮ ದಿನವನ್ನು ಆತುರದಿಂದ ಅಲ್ಲ, ಸಮತೋಲಿತ ರೀತಿಯಲ್ಲಿ ಪ್ರಾರಂಭಿಸಬೇಕು. ಬೆಳಿಗ್ಗೆ ಎದ್ದ ನಂತರ, ಸಾಕಷ್ಟು ನೀರು ಕುಡಿಯಿರಿ, ಸ್ವಲ್ಪ ಸ್ಟ್ರೆಚಿಂಗ್ ಮಾಡಿ ಮತ್ತು ಕೆಲವು ನಿಮಿಷಗಳ ಕಾಲ ಧ್ಯಾನ ಮತ್ತು ಆಳವಾದ ಉಸಿರಾಟ ಅಭ್ಯಾಸ ಮಾಡಿ. ಇದನ್ನು ಮಾಡುವುದರಿಂದ ನಿಮ್ಮ ದೇಹ ಮತ್ತು ಮನಸ್ಸು ಉಲ್ಲಾಸಗೊಳ್ಳುತ್ತದೆ. ಈ ಸರಳ ಅಭ್ಯಾಸವು ದಿನವಿಡೀ ಚೈತನ್ಯಶೀಲವಾಗಿರಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ನಿಮಗೆ ಸಹಾಯ ಮಾಡುತ್ತದೆ.

ಆಹಾರಕ್ರಮದ ಬಗ್ಗೆ ವಿಶೇಷ ಗಮನ ಕೊಡಿ: 30 ವರ್ಷದ ನಂತರ, ನಿಮ್ಮ ದೇಹದ ಚಯಾಪಚಯ ಕ್ರಿಯೆ ಗಣನೀಯವಾಗಿ ನಿಧಾನಗೊಳ್ಳುತ್ತದೆ. ಆದ್ದರಿಂದ, ನಿಮ್ಮ ಆಹಾರ ಮತ್ತು ಪೋಷಣೆಯ ಬಗ್ಗೆ ಕಾಳಜಿ ವಹಿಸುವುದು ಇನ್ನೂ ಮುಖ್ಯವಾಗುತ್ತದೆ. ಆರೋಗ್ಯಕರ ಚಯಾಪಚಯ ಕ್ರಿಯೆಯನ್ನು ಕಾಪಾಡಿಕೊಳ್ಳಲು, ಹಸಿರು ತರಕಾರಿಗಳು, ಹಣ್ಣುಗಳು, ಧಾನ್ಯಗಳು, ದ್ವಿದಳ ಧಾನ್ಯಗಳು, ಹಾಲು ಮತ್ತು ಪ್ರೋಟೀನ್ ಭರಿತ ಆಹಾರಗಳನ್ನು ಸೇವಿಸಿ. ಹೆಚ್ಚುವರಿಯಾಗಿ, ನೀವು ಅತಿಯಾಗಿ ಹುರಿದ ಮತ್ತು ಸಂಸ್ಕರಿಸಿದ ಆಹಾರಗಳ ಸೇವನೆಯನ್ನು ತಪ್ಪಿಸಿ.

ನಿಯಮಿತ ವ್ಯಾಯಾಮ ಮಾಡಿ: ಅನೇಕ ಮಹಿಳೆಯರು ಕೆಲಸ ಮತ್ತು ಕುಟುಂಬದ ಜವಾಬ್ದಾರಿಗಳಲ್ಲಿ ಸಿಲುಕಿಕೊಳ್ಳುವುದರಿಂದ ತಮ್ಮ ಫಿಟ್‌ನೆಸ್ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ. ನೀವು 30 ವರ್ಷ ದಾಟಿದ ಬಳಿಕ ಫಿಟ್‌ನೆಸ್‌ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲೇಬಾರದು. ನೀವು ಖಂಡಿತವಾಗಿಯೂ ನಿಮ್ಮ ದೈನಂದಿನ ದಿನಚರಿಯಲ್ಲಿ ವ್ಯಾಯಾಮವನ್ನು ಅಭ್ಯಾಸ ಮಾಡಬೇಕು. ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ನಡೆಯಿರಿ, ಯೋಗ ಮಾಡಿ, ಸೈಕ್ಲಿಂಗ್ ಮಾಡಿ ಅಥವಾ ಇತರ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ಇದರಿಂದ ನಿಮ್ಮ ದೇಹವನ್ನು ಸಕ್ರಿಯವಾಗಿ ಮತ್ತು ಬಲವಾಗಿ ಇರಿಸಬಹುದು. ಈ ಎಲ್ಲಾ ಚಟುವಟಿಕೆಗಳು ತೂಕ ಹೆಚ್ಚಾಗುವುದನ್ನು ತಡೆಯಲು ಮತ್ತು ನಿಮ್ಮ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ನಿದ್ರೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳಬೇಡಿ: ನೀವು ಉತ್ತಮ ಆರೋಗ್ಯವನ್ನು ಬಯಸಿದರೆ, ನೀವು ಸಾಕಷ್ಟು ನಿದ್ರೆ ಪಡೆಯುವುದನ್ನು ಖಚಿತಪಡಿಸಿಕೊಳ್ಳಬೇಕು. 30 ವರ್ಷ ವಯಸ್ಸಿನ ನಂತರ ನೀವು ಸಾಕಷ್ಟು ನಿದ್ರೆ ಪಡೆಯದಿದ್ದರೆ, ನೀವು ಆಯಾಸ, ಒತ್ತಡ ಮತ್ತು ಇತರ ಅನೇಕ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುವ ಸಾಧ್ಯತೆ ಹೆಚ್ಚು. ಹಾಗಾಗಿ 7 ರಿಂದ 8 ಗಂಟೆಗಳ ಕಾಲ ಉತ್ತಮ ನಿದ್ರೆ ಪಡೆಯಿರಿ ಮತ್ತು ಮಲಗುವ ಮುನ್ನ ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್ ಬಳಸುವುದನ್ನು ತಪ್ಪಿಸಿ.

ಇದನ್ನೂ ಓದಿ: ವ್ಯಾಯಾಮದ ಮೊದಲು ವಾರ್ಮ್‌ಅಪ್‌ ಮಾಡೋದು ಎಷ್ಟು ಮುಖ್ಯ? ಅದರ ಪ್ರಯೋಜನಗಳೇನು?

ಚರ್ಮ ಮತ್ತು ಕೂದಲಿನ ಆರೈಕೆ ವಹಿಸಿ:  30 ವರ್ಷದ ಬಳಿಕ ನಿಮ್ಮ ಚರ್ಮವು ತೇವಾಂಶವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ ಮತ್ತು ಇದು ವಯಸ್ಸಾದ ಲಕ್ಷಣಗಳಿಗೆ ಕಾರಣವಾಗಬಹುದು. ನಿಮ್ಮ ಚರ್ಮವನ್ನು ಯೌವ್ವನದಿಂದ ಮತ್ತು ಹೊಳೆಯುವಂತೆ ಇರಿಸಿಕೊಳ್ಳಲು ಬಯಸಿದರೆ, ತ್ವಚೆಯ ಆರೈಕೆಯ ಬಗ್ಗೆ ಗಮನ ಹರಿಸಿ. ನಿಮ್ಮ ಚರ್ಮವನ್ನು ಯಾವಾಗಲೂ ಸ್ವಚ್ಛವಾಗಿಡಿ, ಮಾಯಿಶ್ಚರೈಸರ್ ಬಳಸಿ ಮತ್ತು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವ ಮೊದಲು ಉತ್ತಮ ಸನ್‌ಸ್ಕ್ರೀನ್ ಹಚ್ಚಿ. ಹೆಚ್ಚುವರಿಯಾಗಿ, ನೀವು ಸಮತೋಲಿತ ಆಹಾರವನ್ನು ಸೇವಿಸಲು ಮತ್ತು ಸಾಕಷ್ಟು ಪ್ರಮಾಣದ ನೀರನ್ನು ಕುಡಿಯಲು ಪ್ರಾರಂಭಿಸಬೇಕು. ಈ ಅಭ್ಯಾಸಗಳು ನಿಮ್ಮ ಚರ್ಮ ಮತ್ತು ಕೂದಲಿಗೆ ಅತ್ಯಂತ ಪ್ರಯೋಜನಕಾರಿಯಾಗಬಹುದು.

ಮಾನಸಿಕ ಆರೋಗ್ಯಕ್ಕೂ ಆದ್ಯತೆ ನೀಡಿ: ಆಗಾಗ್ಗೆ, ನಿಮ್ಮ ಕೆಲಸ ಮತ್ತು ಇತರ ಜವಾಬ್ದಾರಿಗಳ ನಡುವೆ ನೀವು ನಿಮ್ಮನ್ನು ನೋಡಿಕೊಳ್ಳುವುದನ್ನು ನಿರ್ಲಕ್ಷಿಸುತ್ತೀರಿ. ಮಾನಸಿಕ ಆರೋಗ್ಯದ ಬಗ್ಗೆಯೂ ನಿರ್ಲಕ್ಷ್ಯ ತೋರುತ್ತೀರಿ. ಆದರೆ ಇದು ಒಳ್ಳೆಯ ಅಭ್ಯಾಸವಲ್ಲ. ಪ್ರತಿದಿನ ನಿಮಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳಿ, ನಿಮ್ಮ ನೆಚ್ಚಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ, ಕುಟುಂಬ ಮತ್ತು ಸ್ನೇಹಿತರೊಂದಿಗೆ ಸ್ವಲ್ಪ ಸಮಯ ಕಳೆಯಿರಿ ಮತ್ತು ಅಗತ್ಯವಿದ್ದರೆ, ನಿಮ್ಮ ಭಾವನೆಗಳನ್ನು ಇತರರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಿ. ನೀವು ಇದನ್ನು ಮಾಡಿದಾಗ, ನಿಮ್ಮ ಮಾನಸಿಕ ಆರೋಗ್ಯವು ಸಮತೋಲನದಲ್ಲಿರುತ್ತದೆ.

ನಿಯಮಿತವಾಗಿ ಆರೋಗ್ಯ ತಪಾಸಣೆಗಳನ್ನು ಮಾಡಿ: 30 ವರ್ಷ ವಯಸ್ಸಿನ ನಂತರ, ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚೇ ಕಾಳಜಿ ವಹಿಸಬೇಕಾಗತ್ತದೆ. ನಿಯಮಿತವಾಗಿ ಆರೋಗ್ಯ ತಪಾಸಣೆಗಳನ್ನು ಮಾಡಿಕೊಳ್ಳುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ನಿಮ್ಮ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ, ಥೈರಾಯ್ಡ್ ಮತ್ತು ಇತರ ಪ್ರಮುಖ ತಪಾಸಣೆಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ. ನಿಯಮಿತ ಆರೋಗ್ಯ ತಪಾಸಣೆಗಳು ಯಾವುದೇ ಸಮಸ್ಯೆಗಳನ್ನು ಮೊದಲೇ ಪತ್ತೆಹಚ್ಚಲು ಸಹಾಯ ಮಾಡುತ್ತದೆ, ಇದು ಸಕಾಲಿಕ ಚಿಕಿತ್ಸೆ ಮತ್ತು ಆರೈಕೆಗೆ ಅನುವು ಮಾಡಿಕೊಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version