ಮಾವು ತಿಂದರೆ ಶುಗರ್ ಹೆಚ್ಚಾಗುತ್ತಾ? ಮಧುಮೇಹಿಗಳು ಈ ಹಣ್ಣನ್ನು ಯಾವಾಗ ಸೇವನೆ ಮಾಡಬೇಕು? – Kannada News | Diabetes and Mango: Tips to Prevent Sugar Spikes

ಬೇಸಿಗೆ ಆರಂಭವಾದ ಕೂಡಲೇ ಮಾವಿನ ಹಣ್ಣುಗಳ (Mango) ಸೀಸನ್ ಶುರುವಾಗುತ್ತದೆ. ಮಾವು ಬಹುತೇಕ ಎಲ್ಲರಿಗೂ ಇಷ್ಟವಾದ ಹಣ್ಣು. ಆದರೆ, ವಿಶೇಷವಾಗಿ ಮಧುಮೇಹ (Diabetes) ಇರುವವರು ಮಾವು ತಿನ್ನುವುದಕ್ಕೆ ಹಿಂದೇಟು ಹಾಕುತ್ತಾರೆ. ಎಲ್ಲಿ ಮಾವಿನಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತದೆಯೋ ಎಂಬ ಭಯ ಇದ್ದೆ ಇರುತ್ತದೆ. ಈ ಗೊಂದಲದಲ್ಲಿ ಮಾವಿನಹಣ್ಣು ಇಷ್ಟವಾದರೂ ತಿನ್ನುವ ಗೋಜಿಗೆ ಹೋಗುವುದಿಲ್ಲ. ಹಾಗಾದರೆ ನಿಜವಾಗಿಯೂ ಮಾವು ತಿಂದರೆ ಶುಗರ್ ಹೆಚ್ಚಾಗುತ್ತದೆಯೇ, ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಾವಿನ ಗ್ಲೈಸೆಮಿಕ್ ಇಂಡೆಕ್ಸ್ ಏನು ಹೇಳುತ್ತದೆ?

ಮಾವಿನ ಗ್ಲೈಸೆಮಿಕ್ ಇಂಡೆಕ್ಸ್ (GI) ಸಾಮಾನ್ಯವಾಗಿ 51 ರಿಂದ 60 ರ ನಡುವೆ ಇರುತ್ತದೆ. ಇದು ಮಧ್ಯಮ ಮಟ್ಟವಾಗಿದ್ದು, ಮಾವು ತಕ್ಷಣವೇ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಏರಿಸುವುದಿಲ್ಲ. ಆದರೆ, ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ ಶುಗರ್ ಮಟ್ಟ ಏರಿಕೆಯಾಗುವ ಸಾಧ್ಯತೆ ಇದೆ. ಹಾಗಾಗಿ ತಜ್ಞರ ಪ್ರಕಾರ, ಮಾವನ್ನು ಸರಿಯಾದ ರೀತಿಯಲ್ಲಿ ಮತ್ತು ಮಿತವಾಗಿ ತಿಂದರೆ ಆರೋಗ್ಯಕ್ಕೆ ಹಾನಿ ಆಗುವುದಿಲ್ಲ.

ಮಾವು ತಿಂದರೆ ಶುಗರ್ ಹೆಚ್ಚುತ್ತದೆಯೇ?

ತಜ್ಞರ ಪ್ರಕಾರ, ಮಾವಿನಲ್ಲಿ ನೈಸರ್ಗಿಕ ಸಕ್ಕರೆ ಅಂಶ ಇರುವುದರಿಂದ ಹೆಚ್ಚು ತಿಂದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಬಹುದು. ಆದ್ದರಿಂದ ಮಿತವಾಗಿ ಸೇವಿಸುವುದು ಮುಖ್ಯ. ಸಾಮಾನ್ಯವಾಗಿ ದಿನಕ್ಕೆ ಒಂದು ಮಾವು ಸೇವಿಸುವುದು ಸುರಕ್ಷಿತ ಎಂದು ಪರಿಗಣಿಸಲಾಗಿದೆ. ಜೊತೆಗೆ ಮಾವನ್ನು ತಿನ್ನುವ ಮೊದಲು ವೈದ್ಯರು ಅಥವಾ ಡೈಟಿಷಿಯನ್ ಸಲಹೆ ಪಡೆಯುವುದು ಉತ್ತಮ. ಪ್ರತಿಯೊಬ್ಬರ ದೇಹದ ಸ್ಥಿತಿ ವಿಭಿನ್ನವಾಗಿರುವುದರಿಂದ, ವೈಯಕ್ತಿಕ ಆಹಾರ ಕ್ರಮ ಬಹಳ ಮುಖ್ಯ.

ಇದನ್ನೂ ಓದಿ: ಪದೇ ಪದೇ ಹಸಿವಾಗುವುದು ಮಧುಮೇಹದ ಆರಂಭಿಕ ಲಕ್ಷಣವೇ? ಇಲ್ಲಿದೆ ತಜ್ಞರ ಉತ್ತರ

ಮಧುಮೇಹ ಇರುವವರು ಯಾವ ರೀತಿ ಸೇವನೆ ಮಾಡಬೇಕು?

ಮಧುಮೇಹ ಇರುವವರು ಮಾವನ್ನು ಸಂಪೂರ್ಣವಾಗಿ ಬಿಟ್ಟು ಬಿಡುವ ಅಗತ್ಯವಿಲ್ಲ. ಆದರೆ ಕೆಲವು ನಿಯಮಗಳನ್ನು ಪಾಲಿಸುವುದು ಮುಖ್ಯ:

  • ಒಂದೇ ಬಾರಿ 100 ಗ್ರಾಂ ಗಿಂತ ಹೆಚ್ಚು ಮಾವು ತಿನ್ನಬಾರದು
  • ಖಾಲಿ ಹೊಟ್ಟೆಯಲ್ಲಿ ತಿನ್ನುವುದನ್ನು ತಪ್ಪಿಸಬೇಕು
  • ಮಾವಿನ ಜ್ಯೂಸ್ ಅಥವಾ ಶೇಕ್ ಮಾಡದೆ ಹಣ್ಣನ್ನೇ ಸೇವಿಸಬೇಕು
  • ನಟ್‌ಗಳು ಅಥವಾ ಫೈಬರ್ ಇರುವ ಆಹಾರಗಳ ಜೊತೆ ಸೇವಿಸುವುದು ಉತ್ತಮ
  • ಇವು ರಕ್ತದಲ್ಲಿನ ಸಕ್ಕರೆ ಏರಿಕೆಯನ್ನು ನಿಯಂತ್ರಿಸಲು ಸಹಕಾರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

110 ಕೆಜಿ ತೂಕವಿದ್ದರೂ ನೀರಿನಲ್ಲಿ ಮುಳುಗಲ್ಲ ಈ ವ್ಯಕ್ತಿ! ಬಲರಾಮ್ ಅವರ ‘ತೇಲುವ ವಿದ್ಯೆ’ ಕಂಡು ಮಲೆನಾಡಿಗರು ಫಿದಾ – Kannada News | Shivamogga’s Balaram Floats Effortlessly for 30 Mins: A Swimming Miracle

ಶಿವಮೊಗ್ಗ, ಏ.21 : ಸಾಮಾನ್ಯವಾಗಿ ಅತಿ ಹೆಚ್ಚು ದೇಹದ ತೂಕ ಇರುವವರಿಗೆ ನಡೆಯುವುದೇ ಕಷ್ಟ, ಇನ್ನು ನೀರಿನಲ್ಲಿ ಈಜುವುದು ಅಸಾಧ್ಯದ ಮಾತು. ಜತೆಗೆ ಮುಳುಗುವುದು ಗ್ಯಾರಂಟಿ. ಆದರೆ ಮಲೆನಾಡಿನ ಈ ವ್ಯಕ್ತಿ ಮಾತ್ರ ಇದಕ್ಕೆ ವಿರೋಧವಾಗಿದ್ದಾರೆ. ಬರೋಬ್ಬರಿ 110 ಕೆಜಿ ತೂಕವಿದ್ದರೂ ನೀರಿನಲ್ಲಿ ಸುಮಾರು ಅರ್ಧ ಗಂಟೆ ಕಾಲ ಸಲೀಸಾಗಿ ತೇಲುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.ಶಿವಮೊಗ್ಗದ ಬಲರಾಮ್ (55) ಕಳೆದ ಐದಾರು ವರ್ಷಗಳಿಂದ ವಿದ್ಯಾನಗರದ ಕಂಟ್ರಿ ಕ್ಲಬ್ ಸ್ವಿಮ್ಮಿಂಗ್ ಪೂಲ್‌ನಲ್ಲಿ ನಿಯಮಿತವಾಗಿ ಈಜು ಅಭ್ಯಾಸ ಮಾಡುತ್ತಿದ್ದಾರೆ. ದಢೂತಿ ದೇಹವಿರುವ ಕಾರಣ ಸತತವಾಗಿ ಈಜುವುದು ಇವರಿಗೆ ಕಷ್ಟವಾಗುತ್ತಿತ್ತು. ಈ ಸವಾಲನ್ನು ಮೆಟ್ಟಿ ನಿಲ್ಲಲು ಬಲರಾಮ್ ಕಂಡುಕೊಂಡ ದಾರಿಯೇ ‘ನೀರಿನಲ್ಲಿ ತೇಲುವ ಕಲೆ’.

ಬಲರಾಮ್ ಅವರ ಈ ಅಚ್ಚರಿಯ ಕಲೆಯ ಹಿಂದೆ ಈಜು ಗುರು ಬಾಬು ಅವರ ಶ್ರಮವಿದೆ. ಉಸಿರಾಟವನ್ನು ಬಿಗಿಹಿಡಿದು, ದೇಹವನ್ನು ಹಗುರವಾಗಿ ಇಟ್ಟುಕೊಂಡು ನೀರಿನ ಮೇಲೆ ಮಲಗುವ ವಿದ್ಯೆಯನ್ನು ಬಲರಾಮ್ ಕರಗತ ಮಾಡಿಕೊಂಡಿದ್ದಾರೆ. ಒಮ್ಮೆ ನೀರಿನಲ್ಲಿ ಮಲಗಿದರೆ ಸಾಕು, ಯಾವುದೇ ಕೈ-ಕಾಲು ಆಡಿಸದೆ ಅರ್ಧ ಗಂಟೆ ಕಾಲ ಬಲರಾಮ್ ತೇಲಬಲ್ಲರು. ಪ್ರತಿನಿತ್ಯ ಇವರೊಂದಿಗೆ ಈಜಲು ಬರುವ ರಮೇಶ್ ಮತ್ತು ಮುತ್ತಪ್ಪ ಅವರು ಬಲರಾಮ್ ಸಾಧನೆ ಕಂಡು ಹೆಮ್ಮೆ ವ್ಯಕ್ತಪಡಿಸುತ್ತಾರೆ. ಸಂಕಷ್ಟದ ಸಮಯದಲ್ಲಿ ಅಥವಾ ದೋಣಿ ಅಪಘಾತಗಳಂತಹ ತುರ್ತು ಪರಿಸ್ಥಿತಿಯಲ್ಲಿ ಈ ‘ತೇಲುವ ವಿದ್ಯೆ’ ಜೀವ ಉಳಿಸಲು ಸಹಕಾರಿ ಎಂಬುದು ಇವರ ಅಭಿಪ್ರಾಯ.

ಇದನ್ನೂ ಓದಿ: ಬಿಸಿಲಿನಿಂದ ಪಾರಾಗಲು ಹೊಸ ಮಾರ್ಗ ಕಂಡುಕೊಂಡ ಬೆಂಗಳೂರಿನ ಯುವತಿ

ಬಲರಾಮ್ ಅವರ ಈ ವಿಶಿಷ್ಟ ಕಲೆ ಈಗ ಮಲೆನಾಡಿನ ಜನರ ಗಮನ ಸೆಳೆಯುತ್ತಿದೆ. ಪೂಲ್‌ಗೆ ಬರುವ ಇತರ ಈಜುಗಾರರು ಬಲರಾಮ್ ಅವರನ್ನು ಕಂಡು ತಾವೂ ಇಂತಹ ವಿದ್ಯೆ ಕಲಿಯಬೇಕು ಎಂದು ಉತ್ಸುಕರಾಗುತ್ತಿದ್ದಾರೆ. 110 ಕೆಜಿ ದೇಹವಿದ್ದರೂ ಆತ್ಮವಿಶ್ವಾಸವಿದ್ದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಬಲರಾಮ್ ಈಗ ಸಾಕ್ಷಿಯಾಗಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಂಕೇತ ಭಾಷೆಯಲ್ಲೂ ಬಿಡುಗಡೆ ಆಗಲಿದೆ ಆರ್​ಎಸ್​ಎಸ್​ ಕುರಿತ ‘ಆಖ್ರಿ ಸವಾಲ್’ ಸಿನಿಮಾ – Kannada News | Sanjay Dutt Aakhri Sawal first Hindi movie in Indian Sign Language ISL

ಬಾಲಿವುಡ್‌ ನಟ ಸಂಜಯ್ ದತ್ ಅಭಿನಯದ ಬಹುನಿರೀಕ್ಷಿತ ‘ಆಖ್ರಿ ಸವಾಲ್’ (Aakhri Sawal) ಸಿನಿಮಾ ಈಗ ಭಾರತೀಯ ಚಿತ್ರರಂಗದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಲು ಸಿದ್ಧವಾಗಿದೆ. ಇತ್ತೀಚೆಗಷ್ಟೇ ಹನುಮಾನ್ ಜಯಂತಿಯ ಶುಭ ಸಂದರ್ಭದಲ್ಲಿ ಚಿತ್ರದ ಟೀಸರ್ ಬಿಡುಗಡೆ ಮಾಡಿ ಸದ್ದು ಮಾಡಿದ್ದ ಚಿತ್ರತಂಡ, ಇದೀಗ ಮತ್ತೊಂದು ವಿಶೇಷ ಸುದ್ದಿಯೊಂದಿಗೆ ಬಂದಿದೆ. ಈ ಚಿತ್ರವು ಭಾರತೀಯ ಸೈನ್ ಲ್ಯಾಂಗ್ವೇಜ್ (Indian Sign Language) ಅಥವಾ ಸಂಕೇತ ಭಾಷೆಯಲ್ಲಿ ಬಿಡುಗಡೆ ಆಗಲಿರುವ ಭಾರತದ ಮೊದಲ ಹಿಂದಿ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಚಿತ್ರರಂಗದಲ್ಲಿ ಇದು ಹೊಸ ಪ್ರಯತ್ನ. ಸಾಮಾನ್ಯವಾಗಿ ಸಿನಿಮಾಗಳು ಎಲ್ಲರಿಗೂ ಲಭ್ಯವಿರುತ್ತವೆ. ಆದರೆ ಶ್ರವಣ ದೋಷವಿರುವವರಿಗೆ ಸಿನಿಮಾ ಅನುಭವ ಅಷ್ಟು ಸುಲಭವಲ್ಲ. ಈ ಕೊರತೆಯನ್ನು ನೀಗಿಸಲು ‘ಆಖ್ರಿ ಸವಾಲ್’ ತಂಡ ಮುಂದಾಗಿದೆ. ಭಾರತದಲ್ಲಿ ಸುಮಾರು 4ರಿಂದ 5 ಕೋಟಿ ಜನರು ದೃಷ್ಟಿ ಮತ್ತು ಶ್ರವಣ ದೋಷದ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಚಿತ್ರವು ಅವರಿಗೂ ಲಭ್ಯವಾಗಲಿ ಎಂಬ ಉದ್ದೇಶದಿಂದ ದೊಡ್ಡ ಹೆಜ್ಜೆ ಇಟ್ಟಿದೆ.

ಸಿನಿಮಾ ಬಿಡುಗಡೆಯಾದ ಮೊದಲ ದಿನದಿಂದಲೇ ಭಾರತೀಯ ಸಂಕೇತ ಭಾಷೆಯ ಆವೃತ್ತಿಯು ಚಿತ್ರಮಂದಿರಗಳಲ್ಲಿ ಲಭ್ಯವಿರಲಿದೆ. ‘ಸಿನಿಮಾ ಎಂಬುದು ಕೇವಲ ಮನರಂಜನೆಯಲ್ಲ. ಅದು ಎಲ್ಲರಿಗೂ ತಲುಪುವ ಮಾಧ್ಯಮವಾಗಬೇಕು. ಈ ಚಿತ್ರದ ಮೂಲಕ ನಾವು ಕೋಟ್ಯಂತರ ವಿಶೇಷ ಚೇತನ ಪ್ರೇಕ್ಷಕರಿಗೆ ಹತ್ತಿರವಾಗುತ್ತಿದ್ದೇವೆ’ ಎಂದು ಚಿತ್ರತಂಡ ತಿಳಿಸಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಇತಿಹಾಸ ಮತ್ತು ಕಾರ್ಯವೈಖರಿಯನ್ನು ಆಧರಿಸಿದ ‘ಆಖ್ರಿ ಸವಾಲ್’ ಚಿತ್ರವು ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಅಭಿಜೀತ್ ಮೋಹನ್ ವಾರಂಗ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ನಿಖಿಲ್ ನಂದಾ ಮತ್ತು ಸಂಜಯ್ ದತ್ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಪುನೀತ್ ನಂದಾ, ಡಾ. ದೀಪಕ್ ಸಿಂಗ್, ಗೌರವ್ ದುಬೆ ಮತ್ತು ಉಜ್ವಲ್ ಆನಂದ್ ಅವರು ಸಹ-ನಿರ್ಮಾಪಕರು.

ಇದನ್ನೂ ಓದಿ: ಗಾಂಧಿ ಹತ್ಯೆ ಹಿಂದೆ ಆರ್​​​ಎಸ್​​ಎಸ್ ಕೈವಾಡ​ ಇತ್ತಾ? ಇದು ‘ಆಖ್ರಿ ಸವಾಲ್’

ಉತ್ಕರ್ಷ್ ನೈತಾನಿ ಅವರು ಈ ಸಿನಿಮಾಗೆ ಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಮೇ 8ರಂದು ಈ ಚಿತ್ರ ಬಿಡುಗಡೆ ಆಗಲಿದೆ. ಸಂಕೇತ ಭಾಷೆಯಲ್ಲಿ ಬಿಡುಗಡೆ ಮಾಡುತ್ತಿರುವ ಚಿತ್ರತಂಡದ ಪ್ರಯತ್ನಕ್ಕೆ ಯಾವ ರೀತಿ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕು. ಈಗಾಗಲೇ ಚಿತ್ರದ ಟೀಸರ್ ಕೂಡ ಶ್ರವಣ ಭಾಷೆಯಲ್ಲಿ ಬಿಡುಗಡೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL 2026: ಮುಂಬೈ, ಸಿಎಸ್​ಕೆ ತಂಡಕ್ಕೆ ಇಬ್ಬರು ಸ್ಟಾರ್ ಆಟಗಾರರ ಆಗಮನ

Source link

ಯಾರ ಬದಲಿಗೆ ಆಯ್ಕೆಯಾಗಲಿದ್ದಾರೆ ವೈಭವ್ ಸೂರ್ಯವಂಶಿ? – Kannada News | Coach Backs Vaibhav to Replace ‘Inconsistent’ Abhishek Sharma

ಭಾರತೀಯ ಕ್ರಿಕೆಟ್​ನ ಹೊಸ ಸೆನ್ಸೇಷನ್​ ವೈಭವ್ ಸೂರ್ಯವಂಶಿ (Vaibhav Sooryavanshi) ಆರ್ಭಟಕ್ಕೆ ಟೀಮ್ ಇಂಡಿಯಾದ ಸ್ಟಾರ್ ಓಪನರ್ ಸ್ಥಾನಕ್ಕೆ ಕುತ್ತು ಬಂದಿದೆಯೇ? ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿಯಲು ಸಜ್ಜಾಗಿರುವ ಈ ‘ವಂಡರ್ ಕಿಡ್’ ಎಂಟ್ರಿಯಿಂದ ಅಭಿಷೇಕ್ ಶರ್ಮಾ ಹೊರಬೀಳುತ್ತಾರಾ? ಇಂತಹ ಪ್ರಶ್ನೆಗಳು ಹುಟ್ಟಿಕೊಳ್ಳಲು ಮುಖ್ಯ ಕಾರಣ ಇತ್ತೀಚೆಗೆ ವೈಭವ್ ಸೂರ್ಯವಂಶಿ ಅವರ ಬಾಲ್ಯದ ಕೋಚ್ ಮನೀಶ್ ಓಜಾ ನೀಡಿದ ಹೇಳಿಕೆಗಳು.

ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅಬ್ಬರಿಸುತ್ತಿರುವ ಈ ಯುವ ಆಟಗಾರ, ಶೀಘ್ರದಲ್ಲೇ ಟೀಮ್ ಇಂಡಿಯಾದಲ್ಲಿ ಸ್ಫೋಟಕ ಓಪನರ್ ಆಗಿ ಸ್ಥಾನ ಪಡೆಯಲಿದ್ದಾರೆ. ಅದು ಸಹ ಅಭಿಷೇಕ್ ಶರ್ಮಾ ಅವರನ್ನು ಸ್ಥಾನವನ್ನು ಆಕ್ರಮಿಸಿಕೊಳ್ಳುವ ಮೂಲಕ..!

ಈ ಬಗ್ಗೆ ಮಾತನಾಡಿದ ವೈಭವ್ ಅವರ ಬಾಲ್ಯದ ಕೋಚ್ ಮನೀಶ್ ಓಜಾ, ದೊಡ್ಡ ಆಟಗಾರರು ತಮ್ಮ ಸ್ಥಾನವನ್ನು ತಾವೇ ಸೃಷ್ಟಿಸಿಕೊಳ್ಳುತ್ತಾರೆ. ಅತ್ತ ಅಭಿಷೇಕ್ ಶರ್ಮಾ ‘ಅಸ್ಥಿರ ಪ್ರದರ್ಶನ’ ನೀಡುತ್ತಿದ್ದಾರೆ. ಹೀಗಾಗಿ ಮುಂಬರುವ ಐರ್ಲೆಂಡ್ ಮತ್ತು ಝಿಂಬಾಬ್ವೆ ಸರಣಿಗಳಲ್ಲಿ ವೈಭವ್ ಅವರನ್ನು ಸಂಜು ಸ್ಯಾಮ್ಸನ್ ಅಥವಾ ಇಶಾನ್ ಕಿಶನ್ ಜೊತೆ ಆರಂಭಿಕರಾಗಿ ಕಣಕ್ಕಿಳಿಸಬೇಕು ಎಂಬುದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಭಿಷೇಕ್ ಶರ್ಮಾಗೆ ಸಂಕಷ್ಟ?

ಸನ್ ರೈಸರ್ಸ್ ಹೈದರಾಬಾದ್ ಪರ ಅದ್ಭುತ ದಾಖಲೆಗಳನ್ನು ಬರೆಯುತ್ತಿರುವ ಅಭಿಷೇಕ್ ಶರ್ಮಾ, ಇತ್ತೀಚೆಗಷ್ಟೇ ಅತಿ ವೇಗವಾಗಿ 2,000 ಐಪಿಎಲ್ ರನ್ ಪೂರೈಸಿದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದರೆ, ವೈಭವ್ ಸೂರ್ಯವಂಶಿ ಅವರ ಅದ್ಭುತ ಫಾರ್ಮ್ ಮತ್ತು ಅವರ ವಯಸ್ಸು (ಕೇವಲ 15 ವರ್ಷ) ಆಯ್ಕೆಗಾರರ ಗಮನ ಸೆಳೆದಿದೆ.

ಒಂದು ವೇಳೆ ಜೂನ್‌ನಲ್ಲಿ ನಡೆಯಲಿರುವ ಐರ್ಲೆಂಡ್ ಸರಣಿಗೆ ವೈಭವ್ ಆಯ್ಕೆಯಾದರೆ, ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದು ಭಾರತದ ಅತ್ಯಂತ ಕಿರಿಯ ಪದಾರ್ಪಣೆ ಆಟಗಾರ ಎನಿಸಿಕೊಳ್ಳಲಿದ್ದಾರೆ.

ಅತ್ತ ಅಭಿಷೇಕ್ ಶರ್ಮಾ ಉತ್ತಮವಾಗಿ ಬ್ಯಾಟ್ ಬೀಸಿದರೂ ಸ್ಥಿರ ಪ್ರದರ್ಶನ ನೀಡುತ್ತಿಲ್ಲ ಎಂಬುದೇ ಸತ್ಯ. ಇದೇ ವೇಳೆ ವೈಭವ್ ಸೂರ್ಯವಂಶಿ ಸ್ಥಿರ ಪ್ರದರ್ಶನದೊಂದಿಗೆ ಅಬ್ಬರಿಸುತ್ತಿದ್ದಾರೆ. ಹೀಗಾಗಿ ಅಭಿಷೇಕ್ ಶರ್ಮಾ ಸ್ಥಾನಕ್ಕೆ ವೈಭವ್ ಸೂರ್ಯವಂಶಿ ಆಯ್ಕೆಯಾದರೂ ಅಚ್ಚರಿಪಡಬೇಕಿಲ್ಲ.

ಕೋಚ್ ಉವಾಚ:

ವೈಭವ್ ಸೂರ್ಯವಂಶಿ ಅವರ ಬಾಲ್ಯದ ತರಬೇತುದಾರ ಮನೀಶ್ ಓಜಾ ಅವರು ಅಭಿಷೇಕ್ ಶರ್ಮಾ ಅವರ ಸ್ಥಾನದ ಬಗ್ಗೆ ಮಾತ್ರವಲ್ಲದೆ, ವೈಭವ್ ಅವರ ಕ್ರಿಕೆಟ್ ಭವಿಷ್ಯ ಮತ್ತು ಅವರಲ್ಲಿರುವ ವಿಶೇಷ ಗುಣಗಳ ಬಗ್ಗೆ ಹಲವು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ:

ಅಭಿಷೇಕ್ ಶರ್ಮಾ ಅವರ ಇತ್ತೀಚಿನ ಪ್ರದರ್ಶನಗಳಲ್ಲಿ ಸ್ಥಿರತೆ ಇಲ್ಲ. ಟೀಮ್ ಇಂಡಿಯಾ ಆರಂಭಿಕರಿಗಾಗಿ ಹುಡುಕಾಟ ನಡೆಸುತ್ತಿರುವಾಗ, ವೈಭವ್ ಅವರಂತಹ ಆಕ್ರಮಣಕಾರಿ ಆಟಗಾರನಿಗೆ ಇದು ಒಂದು ಸುವರ್ಣ ಅವಕಾಶ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಏಕೆಂದರೆ  ವೈಭವ್ ಒಬ್ಬ ‘ಗಾಡ್ ಗಿಫ್ಟೆಡ್’ ಆಟಗಾರ. ಅವರು ಎಷ್ಟೇ ಕ್ಲಿಷ್ಟಕರವಾದ ತಾಂತ್ರಿಕ ವಿಷಯವನ್ನಾದರೂ ಒಮ್ಮೆ ಹೇಳಿದರೆ ಸಾಕು, ತಕ್ಷಣವೇ ಅದನ್ನು ಕಲಿಯುವ ಅದ್ಭುತ ಸಾಮರ್ಥ್ಯ ಹೊಂದಿದ್ದಾರೆ. ಈಗ ಅವರು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲು ಸಿದ್ಧರಾಗಿದ್ದಾರೆ.

ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಅಥವಾ ಎಂ.ಎಸ್. ಧೋನಿಯಂತೆ ವೈಭವ್ ಕೂಡ ಭಾರತದ ಕ್ರಿಕೆಟ್ ಇತಿಹಾಸದಲ್ಲಿ ದೊಡ್ಡ ಹೆಸರು ಮಾಡಲಿದ್ದಾರೆ ಎಂಬ ನಂಬಿಕೆ ಇದೆ ಕೋಚ್ ಮನೀಶ್ ಓಜಾ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವಿರಾಟ್ ಕೊಹ್ಲಿಗಾಗಿ ಬ್ಯಾಟ್ ಹಿಡಿಯಲಿದ್ದಾರೆ ನೊವಾಕ್ ಜೋಕೊವಿಚ್!

ಮುಂಬರುವ ಝಿಂಬಾಬ್ವೆ ಅಥವಾ ಐರ್ಲೆಂಡ್ ಪ್ರವಾಸಗಳಂತಹ ಸರಣಿಗಳಲ್ಲಿ ಬೌನ್ಸಿ ಪಿಚ್‌ಗಳು ವೈಭವ್ ಅವರಿಗೆ ಹೆಚ್ಚು ಅನುಕೂಲಕರವಾಗಲಿವೆ. ಏಕೆಂದರೆ ಅವರು ಹಾರಿಜಾಂಟಲ್-ಬ್ಯಾಟ್ ಶಾಟ್‌ಗಳನ್ನು (ಪುಲ್ ಮತ್ತು ಕಟ್ ಶಾಟ್) ಬಹಳ ಸಮರ್ಥವಾಗಿ ಆಡುತ್ತಾರೆ ಎಂದು ಓಜಾ ವಿವರಿಸಿದ್ದಾರೆ. ಹೀಗಾಗಿ ವೈಭವ್ ಸೂರ್ಯವಂಶಿ ಅವರನ್ನು ಈ ಸರಣಿಗಳಿಗೆ ಆಯ್ಕೆ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

Source link

Guru Pushya Yoga 2026: ಗುರು ಪುಷ್ಯ ಯೋಗ; ಈ ಮೂರು ರಾಶಿಗೆ ಒಲಿದು ಬರಲಿದೆ ಅನಿರೀಕ್ಷಿತ ಅದೃಷ್ಟ! – Kannada News | Guru Pushya Yoga 2026: Top 3 Lucky Zodiac Signs to Expect Wealth, Career and Happiness

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗತಿಗಳ ಬದಲಾವಣೆಯು ಮಾನವನ ಜೀವನದ ಮೇಲೆ ಅಪಾರ ಪ್ರಭಾವ ಬೀರುತ್ತದೆ. ಅದರಲ್ಲಿಯೂ ಗುರುವಾರ ಮತ್ತು ಪುಷ್ಯ ನಕ್ಷತ್ರದ ಸಮ್ಮಿಲನದಿಂದ ಉಂಟಾಗುವ ‘ಗುರು ಪುಷ್ಯ ಯೋಗ’ ಅತ್ಯಂತ ಶ್ರೇಷ್ಠವಾದುದು. ಈ ಯೋಗವು ರೂಪುಗೊಂಡಾಗ ಕೆಲವು ರಾಶಿಗಳ ಜೀವನದಲ್ಲಿ ಆರ್ಥಿಕ ಚೇತರಿಕೆ, ವೃತ್ತಿಜೀವನದಲ್ಲಿ ಪ್ರಗತಿ ಮತ್ತು ಕೌಟುಂಬಿಕ ಸುಖ ಲಭಿಸಲಿದೆ. ಆ ಅದೃಷ್ಟವಂತ ರಾಶಿಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

ಧನು ರಾಶಿ:

ಧನು ರಾಶಿಯವರಿಗೆ ಗುರು ಪುಷ್ಯ ಯೋಗವು ವರದಾನವಾಗಲಿದೆ. ಈ ರಾಶಿಯ ಅಧಿಪತಿ ಗುರು ಆಗಿರುವುದರಿಂದ, ಈ ಯೋಗದ ಸಮಯದಲ್ಲಿ ಇವರ ಆದಾಯದಲ್ಲಿ ಭಾರಿ ಏರಿಕೆ ಕಂಡುಬರಲಿದೆ. ಹಣದ ಕೊರತೆಯಿಂದ ಸ್ಥಗಿತಗೊಂಡಿದ್ದ ಕೆಲಸಗಳು ಪುನಃ ಆರಂಭವಾಗಲಿವೆ. ಅನಿರೀಕ್ಷಿತವಾಗಿ ಹಳೆಯ ಹೂಡಿಕೆಗಳಿಂದ ಲಾಭ ಸಿಗುವ ಸಾಧ್ಯತೆ ಇದ್ದು, ಆರ್ಥಿಕ ಸ್ಥಿತಿ ಸದೃಢವಾಗಲಿದೆ. ಹೊಸ ಉದ್ಯಮ ಆರಂಭಿಸಲು ಇದು ಸುಸಮಯ.

ಸಿಂಹ ರಾಶಿ:

ಸಿಂಹ ರಾಶಿಯವರಿಗೆ ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುವ ಕಾಲವಿದು. ವಿಶೇಷವಾಗಿ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಶುಭ ವಾರ್ತೆ ಕೇಳಿಬರಲಿದೆ. ಉದ್ಯೋಗಸ್ಥರಿಗೆ ಕಚೇರಿಯಲ್ಲಿ ಮೇಲಧಿಕಾರಿಗಳ ಪ್ರೋತ್ಸಾಹ ಸಿಗಲಿದ್ದು, ಬಡ್ತಿ ಅಥವಾ ಸಂಬಳ ಹೆಚ್ಚಳವಾಗುವ ಸಾಧ್ಯತೆ ಇದೆ. ಕುಟುಂಬದ ಸದಸ್ಯರೊಂದಿಗೆ ಇದ್ದ ಮನಸ್ತಾಪಗಳು ದೂರವಾಗಿ ಆನಂದಮಯ ವಾತಾವರಣ ನಿರ್ಮಾಣವಾಗಲಿದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಕರ್ಕಾಟಕ ರಾಶಿ:

ಕರ್ಕಾಟಕ ರಾಶಿಯವರಿಗೆ ಈ ಯೋಗವು ಅದ್ಭುತ ಫಲಿತಾಂಶಗಳನ್ನು ನೀಡಲಿದೆ. ಶನಿಯು ಪುಷ್ಯ ನಕ್ಷತ್ರದ ಅಧಿಪತಿಯಾಗಿದ್ದು, ಕರ್ಕಾಟಕ ರಾಶಿಯ ಅಧಿಪತಿ ಚಂದ್ರನಾಗಿರುವುದರಿಂದ ಇವರಿಗೆ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಉತ್ತಮ ಲಾಭಗಳು ದೊರೆಯಲಿವೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ಗುಣಮುಖರಾಗುವ ಕಾಲ ಹತ್ತಿರವಾಗಲಿದೆ. ಆರ್ಥಿಕವಾಗಿ ನೀವು ಮಾಡುವ ಪ್ರತಿಯೊಂದು ಹೂಡಿಕೆಯೂ ಲಾಭದಾಯಕವಾಗಿ ಪರಿಣಮಿಸಲಿದೆ.

ಗುರು ಪುಷ್ಯ ಯೋಗದ ಈ ಪವಿತ್ರ ಸಮಯದಲ್ಲಿ ಈ ಮೂರು ರಾಶಿಗಳವರು ಹಿರಿಯರ ಆಶೀರ್ವಾದ ಪಡೆಯುವುದು ಮತ್ತು ವಿಷ್ಣು ಸಹಸ್ರನಾಮ ಪಠಿಸುವುದು ಮತ್ತಷ್ಟು ಶುಭ ಫಲಗಳನ್ನು ನೀಡುತ್ತದೆ. ಬಾಕಿ ಇರುವ ಕಾನೂನು ಪ್ರಕ್ರಿಯೆಗಳು ಅಥವಾ ಆಸ್ತಿ ವಿವಾದಗಳು ನಿಮ್ಮ ಪರವಾಗಿ ಬಗೆಹರಿಯುವ ಸಾಧ್ಯತೆ ಹೆಚ್ಚಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾಯಕರೊಂದಿಗೆ ಹಾಸಿಗೆ ಹಂಚಿಕೊಳ್ಳದೆ ಮಹಿಳೆಯರು ರಾಜಕೀಯಕ್ಕೆ ಬರುವುದು ಅಸಾಧ್ಯ; ನಾಲಿಗೆ ಹರಿಬಿಟ್ಟ ಪಪ್ಪು ಯಾದವ್ – Kannada News | Women cannot enter politics without entering Male Leader Room Pappu Yadav controversial remarks

ನವದೆಹಲಿ, ಏಪ್ರಿಲ್ 21: ಸ್ವತಂತ್ರವಾಗಿ ಸ್ಪರ್ಧಿಸಿ ಬಿಹಾರದ ಸಂಸದರಾಗಿರುವ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ (Pappu Yadav) ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಭಾರೀ ಸುದ್ದಿಯಲ್ಲಿದ್ದಾರೆ. ಮಹಿಳೆಯರು ರಾಜಕೀಯಕ್ಕೆ ಬರುವುದು ಬಹಳ ಕಷ್ಟ. ಶೇ. 90ರಷ್ಟು ಮಹಿಳೆಯರು ಹಿರಿಯ ನಾಯಕರ ರೂಂನೊಳಗೆ ಹೋಗಿ ಅವರೊಂದಿಗೆ ಮಂಚ ಹಂಚಿಕೊಳ್ಳದೆ ರಾಜಕಾರಣಿಯಾಗಲು ಸಾಧ್ಯವಿಲ್ಲ. ಬಹುತೇಕ ಮಹಿಳೆಯರು ಹಿರಿಯರ ರಾಜಕಾರಣಿಗಳೊಂದಿಗೆ ಲೈಂಗಿಕತೆಯ ರಾಜಿ ಮಾಡಿಕೊಂಡಿರುತ್ತಾರೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪಪ್ಪು ಯಾದವ್ ಅವರಿಗೆ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ.

ಮಹಿಳೆಯರು ರಾಜಕೀಯ ಜೀವನವನ್ನು ಹೇಗೆ ಪ್ರವೇಶಿಸುತ್ತಾರೆ ಎಂಬುದರ ಕುರಿತು ವಿವಾದಾತ್ಮಕ ಹೇಳಿಕೆಗಳನ್ನು ಒಳಗೊಂಡಿರುವ ಈ ಹೇಳಿಕೆಗಳಿಗೆ ವಿವಿಧ ವಲಯಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಶೇ. 90ರಷ್ಟು ಮಹಿಳಾ ರಾಜಕಾರಣಿಗಳ ವೃತ್ತಿಜೀವನವು ಹಿರಿಯ ನಾಯಕರ ರೂಂನಿಂದ ಪ್ರಾರಂಭವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸಲ್ಮಾನ್ ಖಾನ್​ ಕೇಸ್​ನಿಂದ ದೂರವಿರು; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ನಿಂದ ಪಪ್ಪು ಯಾದವ್​ಗೆ ಜೀವ ಬೆದರಿಕೆ

ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವ ಮತ್ತು ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 816ಕ್ಕೆ ಹೆಚ್ಚಿಸುವ ಸರ್ಕಾರದ ಸಂವಿಧಾನ (131 ನೇ ತಿದ್ದುಪಡಿ) ಮಸೂದೆ ಕಳೆದ ಶುಕ್ರವಾರ ಲೋಕಸಭೆಯಲ್ಲಿ ಸೋತ ನಂತರ ಅವರ ಈ ಹೇಳಿಕೆ ಬಂದಿದೆ.

ಮಾಧ್ಯಮ ಸಂವಾದದ ಸಂದರ್ಭದಲ್ಲಿ ರಾಜಕೀಯದಲ್ಲಿರುವ ಮಹಿಳೆಯರ ಬಗ್ಗೆ ಈ ರೀತಿ ಅವಮಾನಕರ ಹೇಳಿಕೆ ನೀಡಿದ್ದಕ್ಕಾಗಿ ಬಿಹಾರದ ರಾಜ್ಯ ಮಹಿಳಾ ಆಯೋಗವು ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಅವರಿಗೆ ನೋಟಿಸ್ ನೀಡಿದೆ. “ಪೂರ್ನಿಯಾ ಸಂಸದರು ನೀಡಿದ ಆಕ್ಷೇಪಾರ್ಹ ಹೇಳಿಕೆಗಳನ್ನು ನಾವು ಸ್ವಯಂಪ್ರೇರಿತವಾಗಿ ಸ್ವೀಕರಿಸಿದ್ದೇವೆ. ಅವರಿಂದ ಉತ್ತರ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಆಯೋಗದ ಅಧ್ಯಕ್ಷೆ ಅಪ್ಸರಾ ಹೇಳಿದ್ದಾರೆ.

ಇದನ್ನೂ ಓದಿ: ಮಹಿಳಾ ಮೀಸಲಾತಿಗೆ ವಿರೋಧಿಸಿದ್ದಕ್ಕೆ ವಿಪಕ್ಷ ಬೆಲೆ ತೆರಬೇಕಾಗುತ್ತದೆ; ಪಿಎಂ ಮೋದಿ ವಾಗ್ದಾಳಿ

“ರಾಜಕೀಯದಲ್ಲಿ ಕೆಲಸ ಮಾಡುವ ಮಹಿಳೆಯರು ರಾಜಕಾರಣಿಯೊಂದಿಗೆ ಹಾಸಿಗೆ ಹಂಚಿಕೊಳ್ಳುವುದರಿಂದ ಮಾತ್ರ ರಾಜಕೀಯಕ್ಕೆ ಪ್ರವೇಶ ಪಡೆಯಲು ಸಾಧ್ಯ ಎಂದು ನೀವು ಹೇಳಿದ್ದೀರಿ. ಇದು ಮಹಿಳೆಯರ ಆತ್ಮಗೌರವ ಮತ್ತು ಸಾಮಾಜಿಕ ಘನತೆಗೆ ತೀವ್ರ ಹಾನಿಯನ್ನುಂಟುಮಾಡುತ್ತದೆ” ಎಂದು ಆಯೋಗದ ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, ಸಂಸದ ಪಪ್ಪು ಯಾದವ್ ಅವರಿಂದ ವಿವರಣೆಯನ್ನು ಕೋರಿದೆ. ಪಪ್ಪು ಯಾದವ್‌ಗೆ ನೀಡಿದ ನೋಟಿಸ್‌ನಲ್ಲಿ ಆಯೋಗವು ಲೋಕಸಭಾ ಸ್ಪೀಕರ್‌ಗೆ ಅವರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಏಕೆ ಶಿಫಾರಸು ಮಾಡಬಾರದು ಎಂದು ಕೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:13 pm, Tue, 21 April 26

Source link

ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಕೇಸ್: ಮತ್ತೋರ್ವನಿಗೆ 6 ವರ್ಷ ಜೈಲು ಶಿಕ್ಷೆ ವಿಧಿಸಿದ ಎನ್​​ಐಎ ಕೋರ್ಟ್ – Kannada News | Shivamogga Trial blast case: convicted arafat gets 6 years Jail

ಶಿವಮೊಗ್ಗ, (ಏಪ್ರಿಲ್ 21): ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣಕ್ಕೆ  (shivamogga Trial blast case) ಸಂಬಂಧಿಸಿದಂತೆ ಅಪರಾಧಿ ಅರಾಫತ್ ಗೆ ಆರು ವರ್ಷ ಜೈಲು ಶಿಕ್ಷೆಯಾಗಿದೆ. ಟ್ರಯಲ್ ಬ್ಲಾಸ್ಟ್ ಕೇಸ್‌ನ 3ನೇ ಆರೋಪಿ ಅರಾಫತ್ ಅಲಿ  ಆರೋಪ ಸಾಬೀತಾಗಿದ್ದು, ಈ ಸಂಬಂಧ ಇಂದು ಏಪ್ರಿಲ್ 21) ಅರಾಫತ್ ಗೆ ಆರು ವರ್ಷ ಜೈಲು ಶಿಕ್ಷೆ ವಿಧಿಸಿ ಎನ್ ಐಎ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ಇದರೊಂದಿಗೆ ಪ್ರಕರಣ ಸಂಬಂಧ 12 ಜನ ಆರೋಪಿಗಳ ಪೈಕಿ ಮೂವರಿಗೆ ಶಿಕ್ಷೆಯಾಗಿದ್ದು, ಇನ್ನುಳಿದ 9 ಜನ ಆರೋಪಿಗಳ ವಿಚಾರಣೆ ಮುಂದುವರೆದಿದೆ.

Published On – 8:59 pm, Tue, 21 April 26

Source link

ಕೋಲಾರ: ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 10 ಕಾರ್ಮಿಕರ ರಕ್ಷಣೆ; ಬಾಲ ಕಾರ್ಮಿಕ ಪದ್ಧತಿ ವಿರುದ್ಧ ಅಧಿಕಾರಿಗಳ ಭರ್ಜರಿ ದಾಳಿ! – Kannada News | Malur NKN Brick Factory Raid: 10 Bonded and Child Laborers Freed in Kolar Operation

ಕೋಲಾರ, ಏ.21: ಜಿಲ್ಲೆಯ ಮಾಲೂರು ತಾಲೂಕಿನ ಶಿವಾರಪಟ್ಟಣ ಬಳಿ ಇರುವ ‘ಎನ್.ಕೆ.ಎನ್’ (NKN) ಇಟ್ಟಿಗೆ ಫ್ಯಾಕ್ಟರಿಯ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳ ತಂಡ, ಜೀತಕ್ಕಿದ್ದ ಇಬ್ಬರು ಬಾಲಕರು ಸೇರಿದಂತೆ ಒಟ್ಟು 10 ಜನರನ್ನು ರಕ್ಷಿಸಿದೆ. ಕೋಲಾರ ಉಪ ವಿಭಾಗಾಧಿಕಾರಿ (AC) ಜಂಬಗಿ ರೇಣುಕಾ ಪ್ರಸಾದ್ ದಿಲೀಪ್ ಅವರ ನೇತೃತ್ವದಲ್ಲಿ ಮಂಗಳವಾರ ಸಂಜೆ ಈ ಭರ್ಜರಿ ಕಾರ್ಯಾಚರಣೆ ನಡೆದಿದೆ. ಮಾಲೀಕ ಮೊಹ್ಮದ್ ಇಬ್ರಾಹಿಂ ಖಾನ್ ಎಂಬುವವರಿಗೆ ಸೇರಿದ ಈ ಕಾರ್ಖಾನೆಯಲ್ಲಿ ಕಾರ್ಮಿಕರನ್ನು ಕಾನೂನುಬಾಹಿರವಾಗಿ ಜೀತಕ್ಕೆ ಇರಿಸಿಕೊಳ್ಳಲಾಗಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಈ ದಾಳಿ ನಡೆಸಲಾಗಿತ್ತು.ಒಡಿಶಾ ಮೂಲದ ಎಂಟು ಮಂದಿ ಕಾರ್ಮಿಕರು ಹಾಗೂ ಇಬ್ಬರು ಬಾಲ ಕಾರ್ಮಿಕರನ್ನು ರಕ್ಷಿಸಲಾಗಿದೆ. ರಕ್ಷಿಸಲ್ಪಟ್ಟ 10 ಜನರನ್ನು ಸದ್ಯ ಅಧಿಕಾರಿಗಳ ವಶಕ್ಕೆ ಪಡೆದಿದ್ದು, ಅವರಿಗೆ ಇಲಾಖೆಯಿಂದ ‘ರಿಲಿವ್ ಸರ್ಟಿಫಿಕೇಟ್‌’ (ಬಿಡುಗಡೆ ಪತ್ರ) ನೀಡಲು ಕ್ರಮ ಕೈಗೊಳ್ಳಲಾಗಿದೆ. ಮಾಲೂರು ಇಓ ಕೃಷ್ಣಪ್ಪ, ಸಿಡಿಪಿಓ ಶೋಭ, ಕಾರ್ಮಿಕ ಅಧಿಕಾರಿ ರೇಣುಕಾ ಪ್ರಸನ್ನ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ್ ಅವರು ಈ ಜಂಟಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಜೀತ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆಯಡಿ ಕಾರ್ಖಾನೆಯ ಮಾಲೀಕ ಮೊಹ್ಮದ್ ಇಬ್ರಾಹಿಂ ಖಾನ್ ವಿರುದ್ಧ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಕ್ಷಿಸಲ್ಪಟ್ಟ ಕಾರ್ಮಿಕರಿಗೆ ಅವರವರ ಊರುಗಳಿಗೆ ಮರಳಲು ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಕೇರಳದ ತ್ರಿಶೂರ್‌ನಲ್ಲಿ ಪಟಾಕಿಗಳ ಸ್ಫೋಟ; 10 ಜನ ಸಾವು, ಹಲವರಿಗೆ ಗಾಯ – Kannada News | Firecracker explosion in Kerala’s Thrissur, 10 people dead, several injured

ತ್ರಿಶೂರ್, ಏಪ್ರಿಲ್ 21: ಕೇರಳದ ತ್ರಿಶೂರ್ ಜಿಲ್ಲೆಯ ಮುಂಡತ್ತಿಕೋಡ್‌ನಲ್ಲಿ ಇಂದು ಸಂಭವಿಸಿದ ಪಟಾಕಿಗಳ ಸ್ಫೋಟದಲ್ಲಿ (Firecracker Explosion) 10 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಈ ಸ್ಫೋಟ ಸಂಭವಿಸಿದ ತಿರುವಾಂಬಾಡಿ ದೇವಸ್ಥಾನದ ಬಳಿ ಪಟಾಕಿಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಇದರಿಂದ ಸ್ಫೋಟ ಉಂಟಾಗಿ ಸುತ್ತಲೂ ಬೆಂಕಿ ಆವರಿಸಿದೆ. ಬೆಂಕಿ ಹೊತ್ತಿಕೊಂಡ ಕೂಡಲೆ ಸಾಲುಸಾಲಾಗಿ ಪಟಾಕಿಗಳು ಸ್ಫೋಟಗೊಳ್ಳುವ ಸದ್ದು ಇಡೀ ಊರನ್ನು ಆವರಿಸಿತು.

ಇಲ್ಲಿಯವರೆಗೆ ಸುಮಾರು 13 ಜನರನ್ನು ರಕ್ಷಿಸಲಾಗಿದೆ. ಗಾಯಾಳುಗಳಲ್ಲಿ 8 ಜನ ಗಂಭೀರ ಸ್ಥಿತಿಯಲ್ಲಿದ್ದಾರೆ. ಕನಿಷ್ಠ 40 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ನ್ಯೂಸ್ 18 ವರದಿ ಮಾಡಿದೆ. ಪೂರಂಗಾಗಿ ಸಿದ್ಧತೆ ನಡೆಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಪೂರಂಗಾಗಿ ಪಟಾಕಿ ಸಾಮಗ್ರಿಗಳನ್ನು ಅಲ್ಲಿ ಸಂಗ್ರಹಿಸಲಾಗಿತ್ತು. ಸ್ಥಳಕ್ಕೆ ತುರ್ತು ಸೇವೆಗಳನ್ನು ನಿಯೋಜಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಸ್ಫೋಟದ ನಿಖರವಾದ ಕಾರಣವನ್ನು ಅಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ.

ಇದನ್ನೂ ಓದಿ: ಶಾರ್ಟ್​ ಸರ್ಕ್ಯೂಟ್​ನಿಂದ ಪಿಎಸ್​ಐ ಮನೆಯಲ್ಲಿದ್ದ ಫ್ರಿಡ್ಜ್ ಸ್ಫೋಟ

ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಪಟಾಕಿ ಸ್ಫೋಟದಲ್ಲಿ ಗಾಯಗೊಂಡವರಿಗೆ ತಕ್ಷಣ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಲು ನಿರ್ದೇಶಿಸಿದ್ದಾರೆ. ಅವರ ಚಿಕಿತ್ಸೆಗಾಗಿ ತ್ರಿಶೂರ್ ವೈದ್ಯಕೀಯ ಕಾಲೇಜಿನಲ್ಲಿ ಅಗತ್ಯವಿರುವ ವ್ಯವಸ್ಥೆಗಳನ್ನು ಮಾಡಬೇಕೆಂದು ಅವರು ಸೂಚನೆ ನೀಡಿದ್ದಾರೆ.

ಇಂದು ಮಧ್ಯಾಹ್ನ 3.30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಹಲವಾರು ಕಾರ್ಮಿಕರಿಗೆ ಸುಟ್ಟ ಗಾಯಗಳಾಗಿವೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ವಿವಿಧ ಸ್ಥಳಗಳಲ್ಲಿ ದೇಹದ ಭಾಗಗಳು ಪತ್ತೆಯಾಗಿವೆ. 18 ಜನರನ್ನು ತ್ರಿಶೂರ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:29 pm, Tue, 21 April 26

Source link

Exit mobile version