ಬಾಂಡ್ ಮಾರುಕಟ್ಟೆಯಲ್ಲಿ ವಿದೇಶೀ ಹೂಡಿಕೆದಾರರಿಗೆ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಹೊರೆ ಇಲ್ಲ – Kannada News

ನವದೆಹಲಿ, ಜೂನ್ 5: ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಭಾರತ ಸರ್ಕಾರದ ಬಾಂಡ್‌ಗಳಲ್ಲಿ ಹೂಡಿಕೆ ಮಾಡಿ ಗಳಿಸುವ ಲಾಭದ ಮೇಲಿನ ‘ಬಂಡವಾಳ ಗಳಿಕೆ ತೆರಿಗೆ’ಯನ್ನು (Capital Gains Tax) ಕೇಂದ್ರ ಸರ್ಕಾರ ಸಂಪೂರ್ಣವಾಗಿ ತೆಗೆದುಹಾಕಿದೆ. ಜಾಗತಿಕ ಬಾಂಡ್ ಸೂಚ್ಯಂಕಗಳಲ್ಲಿ (Global Bond Indices – ಉದಾಹರಣೆಗೆ ಜೆ.ಪಿ. ಮಾರ್ಗನ್ ಎಮರ್ಜಿಂಗ್ ಮಾರ್ಕೆಟ್ ಬಾಂಡ್ ಇಂಡೆಕ್ಸ್) ಭಾರತೀಯ ಸರ್ಕಾರಿ ಬಾಂಡ್‌ಗಳನ್ನು ಸೇರ್ಪಡೆಗೊಳಿಸಿದ ನಂತರ ವಿದೇಶಿ ಹೂಡಿಕೆಯನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಆಕರ್ಷಿಸುವುದು ಈ ನಿರ್ಧಾರದ ಪ್ರಮುಖ ಗುರಿಯಾಗಿದೆ.

ಈ ಹಿಂದೆ ವಿದೇಶಿ ಹೂಡಿಕೆದಾರರು ಭಾರತದ ಬಾಂಡ್‌ಗಳನ್ನು ಮಾರಾಟ ಮಾಡಿ ಲಾಭ ಗಳಿಸಿದಾಗ ತೆರಿಗೆ ಪಾವತಿಸಬೇಕಾಗಿತ್ತು. ಇದು ಅವರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಇದ್ದ ಒಂದು ದೊಡ್ಡ ಆತಂಕ ಅಥವಾ ಅಡೆತಡೆಯಾಗಿತ್ತು. ಈಗ ತೆರಿಗೆ ಮುಕ್ತಗೊಳಿಸಿರುವುದರಿಂದ ವಿದೇಶಿ ನಿಧಿಗಳು ಭಾರತದ ಕಡೆಗೆ ಹರಿಯಲು ಸುಲಭವಾಗುತ್ತದೆ.

ಇದನ್ನೂ ಓದಿ: ಅಮೆರಿಕಕ್ಕೆ ಹೋಗಿ ದೊಡ್ಡ ಉದ್ಯಮಗಳನ್ನು ಕಟ್ಟಿದ ವಲಸಿಗರಲ್ಲಿ ಭಾರತೀಯರೇ ಅತಿಹೆಚ್ಚು

ಭಾರತದ ಆರ್ಥಿಕತೆಗೆ ಆಗುವ ಅನುಕೂಲಗಳೇನು?

  • ಹೆಚ್ಚಿನ ವಿದೇಶಿ ಹಣದ ಒಳಹರಿವು (Foreign Capital Inflow): ಜಾಗತಿಕ ಹೂಡಿಕೆದಾರರು ಮತ್ತು ದೊಡ್ಡ ಸಂಸ್ಥೆಗಳು (ಪೆನ್ಷನ್ ಫಂಡ್‌ಗಳು, ಹೆಡ್ಜ್ ಫಂಡ್‌ಗಳು) ಯಾವುದೇ ತೆರಿಗೆ ಜಂಜಾಟವಿಲ್ಲದೆ ಭಾರತ ಸರ್ಕಾರದ ಸಾಲಪತ್ರಗಳಲ್ಲಿ (Bonds) ಶತಕೋಟಿ ಡಾಲರ್ ಹೂಡಿಕೆ ಮಾಡಲು ಇದು ಪ್ರೇರೇಪಿಸುತ್ತದೆ.
  • ರೂಪಾಯಿ ಮೌಲ್ಯಕ್ಕೆ ಬಲ: ಭಾರತಕ್ಕೆ ವಿದೇಶಿ ಡಾಲರ್ ಹರಿವು ಹೆಚ್ಚಾದಂತೆ, ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ರೂಪಾಯಿಯ ಮೌಲ್ಯವು ಸ್ಥಿರಗೊಳ್ಳಲು ಮತ್ತು ಬಲಗೊಳ್ಳಲು ಸಹಾಯವಾಗುತ್ತದೆ.
  • ಸರ್ಕಾರದ ಸಾಲದ ವೆಚ್ಚ ಇಳಿಕೆ: ಸರ್ಕಾರಕ್ಕೆ ಹೆಚ್ಚಿನ ಹೂಡಿಕೆದಾರರು ಸಿಗುವುದರಿಂದ ಬಾಂಡ್‌ಗಳ ಮೇಲಿನ ಬಡ್ಡಿ ದರ (Yields) ಕಡಿಮೆಯಾಗಬಹುದು. ಇದು ಸರ್ಕಾರ ಕಡಿಮೆ ವೆಚ್ಚದಲ್ಲಿ ಸಾಲವನ್ನು ಪಡೆಯಲು ನೆರವಾಗುತ್ತದೆ.
  • ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಸ್ಥಾನ: ಈ ಕ್ರಮವು ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿ ಭಾರತವು ಹೂಡಿಕೆಗೆ ಅತ್ಯಂತ ಸೂಕ್ತ ಹಾಗೂ ಆಕರ್ಷಕ ದೇಶ ಎಂಬ ಸಂದೇಶವನ್ನು ರವಾನಿಸುತ್ತದೆ.

ಇದನ್ನೂ ಓದಿ: RBI MPC: ರೆಪೋ ದರ ಶೇ. 5.25, ಜಿಡಿಪಿ ದರ ಶೇ. 6.6, ಹಣದುಬ್ಬರ ಶೇ. 5.1 ಸಾಧ್ಯತೆ; ಆರ್​ಬಿಐ ಎಂಪಿಸಿ ಪ್ರಕಟಣೆ

ಆರ್ಥಿಕ ತಜ್ಞರ ಪ್ರಕಾರ, ಭಾರತೀಯ ಬಾಂಡ್‌ಗಳು ಜಾಗತಿಕ ಸೂಚ್ಯಂಕಗಳಿಗೆ ಸೇರಿದ ಬೆನ್ನಲ್ಲೇ ತೆರಿಗೆ ನಿಯಮಗಳನ್ನು ಸರಳಗೊಳಿಸಿರುವ ಈ ಐತಿಹಾಸಿಕ ನಿರ್ಧಾರವು ದೇಶದ ಸಾಲದ ಮಾರುಕಟ್ಟೆಯನ್ನು (Debt Market) ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 11:11 am, Fri, 5 June 26

Source link

ಕಂಗನಾ ಕಾರಣಕ್ಕೆ ಕುಸಿಯಿತು ನಟಿ ಗಿರಿಜಾ ಇನ್​​ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ – Kannada News

ನಟಿ ಗಿರಿಜಾ ಓಕ್ ಶೀಘ್ರದಲ್ಲೇ ‘ಭಾರತ್ ಭಾಗ್ಯ ವಿಧಾತ’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ನಟಿ ಮತ್ತು ಸಂಸದೆ ಕಂಗನಾ ರಣಾವತ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಈ ವಿಶೇಷ ಸಂದರ್ಭದಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಗಿರಿಜಾ ತಮಗೆ ಎದುರಾದ ಒಂದು ವಿಚಿತ್ರ ಘಟನೆಯನ್ನು ಹಂಚಿಕೊಂಡಿದ್ದಾರೆ. ಕಂಗನಾ ರನೌತ್ ಅವರ ಪೋಸ್ಟ್‌ಗಳಲ್ಲಿ ಒಂದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ತಕ್ಷಣ, ತಮ್ಮ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ದಿಢೀರನೆ ಕಡಿಮೆಯಾಯಿತು ಎಂದು ಅವರು ಬಹಿರಂಗಪಡಿಸಿದ್ದಾರೆ. ‘ನಾವು ಎಂದಿಗೂ ಎಲ್ಲರನ್ನೂ ಸಂತೋಷವಾಗಿಡಲು ಸಾಧ್ಯವಿಲ್ಲ’ ಎಂಬ ಸ್ಪಷ್ಟ ನಿಲುವನ್ನು ಅವರು ವ್ಯಕ್ತಪಡಿಸಿದ್ದಾರೆ.

ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಸವಿಸ್ತಾರವಾಗಿ ಮಾತನಾಡಿದ ಗಿರಿಜಾ ಓಕ್, ‘ನನ್ನ ನಟನೆಯ ಭಾರತ್ ಭಾಗ್ಯ ವಿಧಾತ ಸಿನಿಮಾ ಜೂನ್ 12ರಂದು ತೆರೆಕಾಣುತ್ತಿದೆ. ಈ ಚಿತ್ರವು ನಮ್ಮ ದೈನಂದಿನ ಜೀವನದಲ್ಲಿ ಕೆಲಸ ಮಾಡುವ ಸಾಮಾನ್ಯ ಜನರನ್ನು, ಅಂದರೆ ನಮ್ಮ ಸಹೋದ್ಯೋಗಿಗಳು, ನೈರ್ಮಲ್ಯ ಕಾರ್ಮಿಕರು, ಪೊಲೀಸರು ಮತ್ತು ದಾದಿಯರ (ನರ್ಸ್) ಸೇವೆಯನ್ನು ಕೊಂಡಾಡುತ್ತದೆ. ಮುಖ್ಯವಾಗಿ ಇದು ಮುಂಬೈನ ಆಸ್ಪತ್ರೆಯ ದಾದಿಯರ ಕಥೆಯಾಗಿದ್ದು, 26/11 ಭಯೋತ್ಪಾದನಾ ದಾಳಿಯ ಸಮಯದಲ್ಲಿ ಆಸ್ಪತ್ರೆಯಲ್ಲಿ ಸೃಷ್ಟಿಯಾಗಿದ್ದ ಗಂಭೀರ ಪರಿಸ್ಥಿತಿಯನ್ನು ಈ ಸಿನಿಮಾ ಪ್ರತಿಬಿಂಬಿಸುತ್ತದೆ. ನಾನು ಈ ಚಿತ್ರದ ವಿವಿಧ ಪೋಸ್ಟರ್‌ಗಳು ಮತ್ತು ಮಾಹಿತಿಯನ್ನು ನನ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ನಿರಂತರವಾಗಿ ಹಂಚಿಕೊಳ್ಳುತ್ತಿದ್ದೇನೆ’ ಎಂದು ಹೇಳಿದ್ದಾರೆ.

‘ಈ ಚಿತ್ರವನ್ನು ಕಂಗನಾ ಅವರೇ ನಿರ್ಮಿಸಿದ್ದು, ಅದರಲ್ಲಿ ಒಂದು ಅತ್ಯುತ್ತಮ ಪಾತ್ರವನ್ನೂ ಮಾಡಿದ್ದಾರೆ. ಸಿನಿಮಾ ಪ್ರಚಾರದ ಭಾಗವಾಗಿ ನಾನು ಇತ್ತೀಚೆಗೆ ಕಂಗನಾ ಅವರ ಒಂದು ಪೋಸ್ಟ್ ಅನ್ನು ನನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದೆ. ಆದರೆ ನಾನು ಅವರ ಫೋಟೋ ಪೋಸ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ, ನನ್ನ ಇನ್‌ಸ್ಟಾಗ್ರಾಮ್ ಅನುಯಾಯಿಗಳ ಸಂಖ್ಯೆ ಸಾವಿರಾರು ಪ್ರಮಾಣದಲ್ಲಿ ಕುಸಿತ ಕಂಡಿತು’ ಎಂದು ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: 26/11 ಮುಂಬೈ ಉಗ್ರರ ದಾಳಿ ನಡೆದಾಗ ಪಾರ್ಟಿ ಮಾಡುತ್ತಿದ್ದ ನಟಿ ಕಂಗನಾ ರಣಾವತ್

ಈ ಇಡೀ ಘಟನೆಯ ಬಗ್ಗೆ ಗಿರಿಜಾ ಅವರು ತಮ್ಮದೇ ಆದ ಪಕ್ವವಾದ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ‘ಇದಾಗಿ ಸ್ವಲ್ಪ ಸಮಯದ ನಂತರ ನಾನು ಮತ್ತೊಂದು ಪೋಸ್ಟ್ ಹಂಚಿಕೊಂಡಾಗ, ನನ್ನ ಫಾಲೋವರ್ಸ್ ಸಂಖ್ಯೆ ಮತ್ತೆ ಎಂದಿನಂತೆ ಹೆಚ್ಚಾಯಿತು. ಇದರಿಂದ ತಿಳಿಯುವ ವಿಷಯವೇನೆಂದರೆ, ನೀವು ಈ ಪ್ರಪಂಚದಲ್ಲಿ ಎಲ್ಲರನ್ನೂ ಒಪ್ಪಿಸಲು ಅಥವಾ ಮೆಚ್ಚಿಸಲು ಸಾಧ್ಯವಿಲ್ಲ. ನಿಮ್ಮ ಪೋಸ್ಟ್ ಅನ್ನು ಎಷ್ಟು ಜನರು ನೋಡಿದ್ದಾರೆ ಅಥವಾ ಫಾಲೋವರ್ಸ್ ಸಂಖ್ಯೆ ಹೆಚ್ಚಿದೆಯೋ ಇಲ್ಲವೋ ಎಂಬುದು ಕೊನೆಯಲ್ಲಿ ಮುಖ್ಯವಾಗುವುದಿಲ್ಲ. ದಿನದ ಕೊನೆಯಲ್ಲಿ ನೀವು ಸರಿ ಎಂದು ಭಾವಿಸುವ ನಿರ್ಧಾರವನ್ನು ತೆಗೆದುಕೊಳ್ಳಬೇಕು ಮತ್ತು ನಿಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾ ಸಾಗಬೇಕು’ ಎಂದು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಾಲಿವುಡ್ ನಿರ್ದೇಶಕರ ಬಗ್ಗೆ ಹೃತಿಕ್ ರೋಷನ್ ಬೇಸರ; ವಿಲನ್ ಪಾತ್ರ ಕೇಳಿದ ನಟ – Kannada News

ಬಾಲಿವುಡ್‌ ನಟ ಹೃತಿಕ್ ರೋಷನ್ (Hrithik Roshan) ಚಿತ್ರರಂಗದ ಖ್ಯಾತ ಹೀರೋಗಳಲ್ಲಿ ಒಬ್ಬರು. ಆದರೆ, ಅವರು ವರ್ಷಕ್ಕೆ ಕೇವಲ ಒಂದೊಂದೇ ಸಿನಿಮಾ ಮಾಡುತ್ತಾ ಇದ್ದು, ಈ ಬಗ್ಗೆ ಅಭಿಮಾನಿಗಳಿಗೆ ಬೇಸರವಿದೆ. ಇದೀಗ ಹೃತಿಕ್ ರೋಷನ್ ತಾವೇಕೆ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂಬ ಅಸಲಿ ರಹಸ್ಯವನ್ನು ಬಿಚ್ಚಿಟ್ಟಿದ್ದು, ಬಾಲಿವುಡ್ ನಿರ್ದೇಶಕರ ಧೋರಣೆಯ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಇತ್ತೀಚೆಗೆ ಪ್ಯಾರಿಸ್‌ನ ಐಫೆಲ್ ಟವರ್ ಮುಂದೆ ನಿಂತು ಸೆಲ್ಫಿ ಹಂಚಿಕೊಂಡಿರುವ ಹೃತಿಕ್, ‘ನನಗೆ ಯಾವ ರೀತಿಯ ಪಾತ್ರ ಬೇಕು ಎಂದು ಯಾರೋ ಕೇಳಿದರು. ಆಗ ನನಗೇ ಅಚ್ಚರಿಯಾಯಿತು. ‘ಲಕ್ ಬೈ ಚಾನ್ಸ್’ ಸಿನಿಮಾದ ಜಫರ್ ಪಾತ್ರ ನೆನಪಿದೆಯೇ? ಆ ತರಹದ ನೆಗೆಟಿವ್ ಶೇಡ್ ಇರೋ ಪಾತ್ರ ಸಿಕ್ಕರೆ ನಾನು ತಕ್ಷಣ ಒಪ್ಪಿಕೊಳ್ಳುತ್ತೇನೆ. ಆದರೆ ಬಾಲಿವುಡ್ ನಿರ್ದೇಶಕರಿಗೆ ನಾನು ಯಾವಾಗಲೂ ಕೇವಲ ಒಳ್ಳೆಯವನಾಗಿ (ಹೀರೋ) ನಟಿಸುವುದು ಮಾತ್ರ ಇಷ್ಟ. ಇದು ನಿಜಕ್ಕೂ ಬೇಸರದ ಸಂಗತಿ’ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನಿರ್ದೇಶಕಿ ಜೋಯಾ ಅಖ್ತರ್, ‘ಬನ್ನಿ, ಕಾಫಿ ಕುಡಿಯುತ್ತಾ ಚರ್ಚಿಸೋಣ’ ಎಂದು ಕಮೆಂಟ್ ಮಾಡಿದ್ದಾರೆ.

ಏನಿದು ‘ಜಫರ್’ ಪಾತ್ರ?

2009ರಲ್ಲಿ ತೆರೆಕಂಡ ‘ಲಕ್ ಬೈ ಚಾನ್ಸ್’ ಚಿತ್ರದಲ್ಲಿ ಹೃತಿಕ್ ರೋಷನ್ ಜಫರ್ ಖಾನ್’ ಎಂಬ ಸೂಪರ್‌ಸ್ಟಾರ್ ಪಾತ್ರದಲ್ಲಿ ಅತಿಥಿ ನಟನಾಗಿ ಕಾಣಿಸಿಕೊಂಡಿದ್ದರು. ಮೇಲ್ನೋಟಕ್ಕೆ ಅದ್ಭುತ ವ್ಯಕ್ತಿಯಾಗಿ, ಒಳಗಡೆ ಅತ್ಯಂತ ಸ್ವಾರ್ಥ ಹಾಗೂ ಅವಕಾಶವಾದಿ ಬುದ್ಧಿ ಹೊಂದಿರುವ ವಿಭಿನ್ನ ನೆಗೆಟಿವ್ ಪಾತ್ರ ಅದಾಗಿತ್ತು. ಅಭಿಮಾನಿಗಳು ಇಂದಿಗೂ ಆ ನಟನೆಯನ್ನು ಮೆಚ್ಚಿಕೊಳ್ಳುತ್ತಾರೆ.

ಇದನ್ನೂ ಓದಿ: ಹೃತಿಕ್ ವಿಚ್ಛೇದನದ ಬಗ್ಗೆ ಮಾತನಾಡಿದ ಸುಸ್ಸಾನೆ ಖಾನ್ ಸಹೋದರ 

ಬಾಲಿವುಡ್‌ನ ಸ್ಟಾರ್ ಸಿಸ್ಟಮ್‌ನಲ್ಲಿ ಒಮ್ಮೆ ನಟನಿಗೆ ದೊಡ್ಡ ಕಮರ್ಷಿಯಲ್ ಇಮೇಜ್ ಬಂದರೆ, ನಿರ್ದೇಶಕರು ಅದೇ ಮಾದರಿಯ ಕಥೆ ಮಾಡಿಕೊಂಡು ಬರುತ್ತಾರೆ ಎಂಬ ನಂಬಿಕೆ ಹೃತಿಕ್ ಅವರದ್ದು. ಅವರಿಗೆ ಒಂದೇ ರೀತಿಯ ಹೀರೋ ಪಾತ್ರಗಳು ಬರುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಹೃತಿಕ್ ರೋಷನ್ ಇತ್ತೀಚೆಗೆ ಜೂನಿಯರ್ ಎನ್‌ಟಿಆರ್ ಜೊತೆ ‘ವಾರ್ 2’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಫ್ಲಾಪ್ ಆಯಿತು. ಸದ್ಯ ಅವರು ‘ಕ್ರಿಶ್ 4’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

KSLSA Recruitment 2026: ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ; ಚಾಲಕರ ನೇಮಕಾತಿ, 67,600 ರೂ. ವೇತನ – Kannada News

ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶImage Credit source: Pinterest

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (KSLSA) ವಾಹನ ಚಾಲಕ (Driver) ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಸಂಬಂಧ ಅಧಿಕೃತ ಅಧಿಸೂಚನೆ ಪ್ರಕಟವಾಗಿದ್ದು, ಒಟ್ಟು 2 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ನಿರ್ಧರಿಸಲಾಗಿದೆ. ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.

ಆಕರ್ಷಕ ವೇತನ:

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರದ ವೇತನ ಶ್ರೇಣಿಯ ಪ್ರಕಾರ 34,100 ರಿಂದ 67,600 ರೂ. ವರೆಗೆ ವೇತನ ದೊರೆಯಲಿದೆ. ಇದರೊಂದಿಗೆ ನಿಯಮಾನುಸಾರ ಇತರೆ ಭತ್ಯೆಗಳು ಸಹ ಲಭ್ಯವಾಗಲಿವೆ.

ವಯೋಮಿತಿ ಎಷ್ಟು?

2026ರ ಮೇ 27 ಕ್ಕೆ ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯಸ್ಸು ತುಂಬಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ. ಪ್ರವರ್ಗ-2A, 2B, 3A, 3B ಹಾಗೂ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ 45 ವರ್ಷ ಎಂದು ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕದ ವಿವರ:

ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿಗದಿತ ಖಾತೆಗೆ ಪಾವತಿಸಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 500 ರೂ. ಮತ್ತು ಪ್ರವರ್ಗ 2A, 2B, 3A, 3B ಹಾಗೂ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 250ರೂ. ಎಂದು ನಿಗದಿಪಡಿಸಲಾಗಿದೆ. ಅರ್ಜಿ ಶುಲ್ಕವನ್ನು ಡಿಮ್ಯಾಂಡ್ ಡ್ರಾಫ್ಟ್ (DD) ಅಥವಾ ಬ್ಯಾಂಕ್ ಮೂಲಕ ಪಾವತಿಸಿ, ಅದರ ಪಾವತಿ ರಸೀದಿಯನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.

ಇದನ್ನೂ ಓದಿ: Kerala: ನಿವೃತ್ತಿಯಾಗುವ ವಯಸ್ಸಲ್ಲಿ ಸಿಕ್ತು ಸರ್ಕಾರಿ ಕೆಲಸ; ಪರೀಕ್ಷೆ ಬರೆದ 20 ವರ್ಷಗಳ ನಂತರ ಬಂದ ನೇಮಕಾತಿ ಪತ್ರ!

ಅರ್ಜಿ ಸಲ್ಲಿಸುವ ವಿಧಾನ:

ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಆಫ್‌ಲೈನ್ ಮೂಲಕ ಸಲ್ಲಿಸಬೇಕು. ಅರ್ಜಿ ನಮೂನೆಯನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧಿಕೃತ ಪ್ರಕಟಣೆಯಿಂದ ಪಡೆಯಬಹುದು. ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 25 ಆಗಿದೆ. ನಿಗದಿತ ದಿನಾಂಕದ ನಂತರ ಬಂದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಅಧಿಕೃತ ಅಧಿಸೂಚನೆ

ಅಭ್ಯರ್ಥಿಗಳು ಗಮನಿಸಬೇಕಾದ ಅಂಶಗಳು:

  • ಅರ್ಜಿಯೊಂದಿಗೆ ಅಗತ್ಯ ದಾಖಲೆಗಳ ಸ್ವಯಂ ದೃಢೀಕೃತ ಪ್ರತಿಗಳನ್ನು ಲಗತ್ತಿಸಬೇಕು.
  • ಅಪೂರ್ಣ ಹಾಗೂ ತಪ್ಪು ಮಾಹಿತಿಯುಳ್ಳ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.
  • ಅರ್ಜಿ ಶುಲ್ಕ ಪಾವತಿಸದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
  • ಕೊನೆಯ ದಿನಾಂಕದ ನಂತರ ಸ್ವೀಕರಿಸಲಾದ ಅರ್ಜಿಗಳಿಗೆ ಅವಕಾಶ ಇರುವುದಿಲ್ಲ.

ಸರ್ಕಾರಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸುವುದು ಉತ್ತಮ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:50 am, Fri, 5 June 26

Source link

ಟಾಯ್ಲೆಟ್ ಕ್ಲೀನರ್‌ಗಳ ಖತರ್ನಾಕ್ ಸ್ಕೆಚ್: ಒಂದೇ ರಾತ್ರಿಯಲ್ಲಿ ಕೋಟ್ಯಾಧೀಶರಾಗಲು ಚಿನ್ನದಂಗಡಿಗೇ ಕನ್ನ! – Kannada News

ಬೆಂಗಳೂರು, ಜೂನ್ 05: ಶೌಚಾಲಯದ ಕಿಟಕಿ ಮೂಲಕ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ (Gold Jewelry) ಕಳ್ಳತನ ಮಾಡಿದ್ದ ಮೂವರು ಖತರ್ನಾಕ್ ಖದೀಮರನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ. ಆದರೆ, ಬಂಧನದ ಬಳಿಕ ಆರೋಪಿಗಳ ಹಿನ್ನೆಲೆ ಹಾಗೂ ಅವರು ಕಳ್ಳತನಕ್ಕೆ ಸ್ಕೆಚ್ ಹಾಕಿದ ರೋಚಕ ಕತೆಯನ್ನು ಕೇಳಿ ಸ್ವತಃ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಶ್ರೀರಾಮಪುರ ಪೊಲೀಸ್ ಠಾಣೆಯ ರೌಡಿ ಶೀಟರ್ ‘ಆರ್ ಎಕ್ಸ್ ನಾಗ’ ಸೇರಿದಂತೆ ಅರ್ಜುನ್ ಅಲಿಯಾಸ್ ರೋಲೆಕ್ಸ್ ಮತ್ತು ರಾಕ್ ಬಂಧಿತ ಆರೋಪಿಗಳಾಗಿದ್ದಾರೆ.

ಮುಖ್ಯಾಂಶಗಳು

  • ನಗರತ್ ಪೇಟೆಯಲ್ಲಿ ಶೌಚಾಲಯದ ಕಿಟಕಿ ಮೂಲಕ ನುಗ್ಗಿ ಚಿನ್ನದ ಗಟ್ಟಿ ಕಳ್ಳತನ.
  • ಕೊಳಚೆ ನೀರಿನಲ್ಲಿ ವೇಸ್ಟೇಜ್ ಚಿನ್ನ ಹುಡುಕುತ್ತಿದ್ದ ಶೌಚಾಲಯ ಕ್ಲೀನರ್‌ಗಳಿಂದಲೇ ಕೃತ್ಯ.
  • ರೌಡಿ ಶೀಟರ್ ಸೇರಿ ಮೂವರ ಬಂಧನ; 12 ಲಕ್ಷದ ಚಿನ್ನ ವಶ.

ನಗರತ್ ಪೇಟೆಯ ಜ್ಯುವೆಲ್ಲರ್ಸ್‌ನಲ್ಲಿ ನಡೆದಿದ್ದ ಘಟನೆ

ಕಳೆದ ಮೇ 6 ರಂದು ನಗರತ್ ಪೇಟೆಯ ಪ್ರಸಿದ್ಧ ‘ಆರುಮ್ ಜ್ಯುವೆಲ್ಲರ್ಸ್’ನ 5ನೇ ಮಹಡಿಯಲ್ಲಿ ಈ ಕಳ್ಳತನ ನಡೆದಿತ್ತು. ಖದೀಮರು ಕಟ್ಟಡದ ಶೌಚಾಲಯದ ಕಿಟಕಿ ಮೂಲಕ ಅತ್ಯಂತ ಚಾಣಾಕ್ಷತನದಿಂದ ಒಳನುಗ್ಗಿ, ಅಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಗಟ್ಟಿಗಳನ್ನು ಕದ್ದು ಪರಾರಿಯಾಗಿದ್ದರು. ಈ ಬಗ್ಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಆರೋಪಿಗಳು ಕಳ್ಳತನ ಮಾಡಿ ಎಸ್ಕೇಪ್ ಆಗುವ ದೃಶ್ಯಗಳು ಸೆರೆಯಾಗಿದ್ದವು.

ಕೊಳಚೆಯಲ್ಲಿ ಚಿನ್ನ ಹುಡುಕುತ್ತಿದ್ದವ ಪ್ಲಾನ್

ಸಿಸಿಟಿವಿ ಆಧರಿಸಿ ಪೊಲೀಸರು ತನಿಖೆ ತೀವ್ರಗೊಳಿಸಿದಾಗ ನಗರತ್ ಪೇಟೆಯ ಶೌಚಾಲಯಗಳನ್ನು ಸ್ವಚ್ಛಗೊಳಿಸುವವರ ಮೇಲೆ ಅನುಮಾನ ಮೂಡಿದೆ. ತಕ್ಷಣವೇ ಶ್ರೀರಾಮಪುರ ನಿವಾಸಿಗಳಾದ ಮೂವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಹೊರಬಿದ್ದಿದೆ. ಆರೋಪಿಗಳು ಕೇವಲ ಶೌಚಾಲಯ ಕ್ಲೀನ್ ಮಾಡುತ್ತಿರಲಿಲ್ಲ, ಅದರ ಜೊತೆಗೆ ಚಿನ್ನ ಹುಡುಕುವ ಕಾಯಕವನ್ನೂ ಮಾಡುತ್ತಿದ್ದರು. ನಗರತ್ ಪೇಟೆಯ ಚಿನ್ನದ ಅಂಗಡಿಗಳ ವಾಶ್‌ರೂಮ್ ಹಾಗೂ ಚರಂಡಿಗಳಿಂದ ಬರುವ ಕೊಳಚೆ ನೀರನ್ನು ಶೇಖರಿಸಿ, ಅದರಲ್ಲಿ ಕೊಚ್ಚಿಹೋಗುತ್ತಿದ್ದ ಸಣ್ಣ ಸಣ್ಣ ವೇಸ್ಟೇಜ್ ಚಿನ್ನದ ಕಣಗಳನ್ನು ಹುಡುಕಿ ಮಾರುವುದು ಇವರ ಕೆಲಸವಾಗಿತ್ತು.

ಇದನ್ನೂ ಓದಿ ತುಮಕೂರು: ವಿದೇಶಿ ಉಗ್ರನ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಯುವಕನ ಬಂಧನ

ದಿನಾಲೂ ಕಷ್ಟಪಟ್ಟು ಚಿನ್ನದ ಕಣ ಹುಡುಕುವ ಬದಲಿಗೆ, ಒಂದೇ ಸಲ ದೊಡ್ಡ ಮಟ್ಟದಲ್ಲಿ ಹಣ ಮಾಡಬೇಕೆಂದು ಜ್ಯುವೆಲ್ಲರಿ ಶಾಪ್‌ನ ಶೌಚಾಲಯದ ಕಿಟಕಿಯ ಮೂಲಕವೇ ಬಂದು ಚಿನ್ನದ ಗಟ್ಟಿ ಕದ್ದಿದ್ದರು. ಬಂಧಿತರ ಪೈಕಿ ನಾಗರಾಜು ಅಲಿಯಾಸ್ ಆರ್ ಎಕ್ಸ್ ನಾಗ ಶ್ರೀರಾಮಪುರದ ರೌಡಿ ಶೀಟರ್ ಆಗಿದ್ದು, ಉಳಿದ ಇಬ್ಬರೂ ಆತನ ಸಹಚರರಾಗಿದ್ದಾರೆ. ಸದ್ಯ ಬಂಧಿತ ಆರೋಪಿಗಳಿಂದ ಪೊಲೀಸರು ಸುಮಾರು 12 ಲಕ್ಷ ರೂ. ಮೌಲ್ಯದ 84 ಗ್ರಾಂ ತೂಕದ ಚಿನ್ನದ ಗಟ್ಟಿಯನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೃಢ ಸಂಕಲ್ಪಕ್ಕೆ ಸಂದ ಜಯ: ವಿಚ್ಛೇದನ, 23 ವರ್ಷಗಳ ಸುದೀರ್ಘ ಹೋರಾಟದ ಬಳಿಕ 85 ಕೋಟಿ ರೂ. ಜೀವನಾಂಶ ಪಡೆದ ವರ್ಷಾ – Kannada News

ಲಂಡನ್, ಜೂನ್ 05: ಬ್ರಿಟನ್​ನಲ್ಲಿ ನೆಲೆಸಿರುವ ಭಾರತ ಮೂಲದ ಮಹಿಳೆ ವರ್ಷಾ ಗೋಹಿಲ್ ವಿಚ್ಛೇದನ(Divorce)ದ ಬಳಿಕ ತಮ್ಮ ಹಕ್ಕು ಮತ್ತು ನ್ಯಾಯಕ್ಕಾಗಿ ಕಳೆದ 23 ವರ್ಷಗಳಿಂದ ನಡೆಸಿದ ಹೋರಾಟಕ್ಕೆ ಅಂತೂ ಜಯ ಸಿಕ್ಕಿದೆ. ಪತಿಯು ಮುಚ್ಚಿಟ್ಟಿದ್ದ ಸಂಪತ್ತನ್ನು ಕಾನೂನುಬದ್ಧವಾಗಿ ಪತ್ತೆಹಚ್ಚುವಲ್ಲಿ ಯಶಸ್ವಿಯಾದ ವರ್ಷಾ ಅವರಿಗೆ ಯುಕೆ (UK) ನ್ಯಾಯಾಲಯವು ಸುಮಾರು 6.6 ಮಿಲಿಯನ್ ಪೌಂಡ್‌ಗಳು ಅಂದರೆ ಭಾರತೀಯ ಕರೆನ್ಸಿಯಲ್ಲಿ ಸರಿಸುಮಾರು 85 ಕೋಟಿ ರೂ.ವನ್ನು ನೀಡುವಂತೆ ಆದೇಶಿಸಿದೆ.

ಈ ತೀರ್ಪು ಜಾಗತಿಕ ಮಟ್ಟದಲ್ಲಿ ಕೌಟುಂಬಿಕ ನ್ಯಾಯ ಮತ್ತು ಆರ್ಥಿಕ ಪಾರದರ್ಶಕತೆಯ ಕಾನೂನಿಗೆ ಒಂದು ಅತ್ಯಂತ ಮಹತ್ವದ ಮೈಲಿಗಲ್ಲಾಗಿ ಹೊರಹೊಮ್ಮಿದೆ. ಈ ಕಥೆ ಆರಂಭವಾದದ್ದು 2002 ರಲ್ಲಿ. ವರ್ಷಾ ಗೋಹಿಲ್ ಅವರು ತಮ್ಮ ಪತಿಯಿಂದ ವಿಚ್ಛೇದನ ಪಡೆದಾಗ ಆರಂಭಿಕ ಒಪ್ಪಂದದಂತೆ ಕೆಲವು ಆಸ್ತಿ ಮತ್ತು ಆರ್ಥಿಕ ಸಹಾಯವನ್ನು ಪಡೆದುಕೊಂಡಿದ್ದರು. ಆದರೆ, ತನ್ನ ಮಾಜಿ ಪತಿ ತನ್ನ ಸಂಪೂರ್ಣ ಆಸ್ತಿಯ ವಿವರಗಳನ್ನು ನ್ಯಾಯಾಲಯಕ್ಕೆ ಹಂಚಿಕೊಳ್ಳದೆ ಮುಚ್ಚಿಟ್ಟಿದ್ದಾರೆ ಎಂಬ ಬಲವಾದ ಅನುಮಾನ ವರ್ಷಾ ಅವರಿಗೆ ಇತ್ತು. ಆರಂಭದಲ್ಲಿ ಯಾವುದೇ ಪುರಾವೆಗಳಿಲ್ಲದಿದ್ದರೂ, ಅವರು ತಮ್ಮ ನ್ಯಾಯಸಮ್ಮತ ಹೋರಾಟವನ್ನು ಎಂದಿಗೂ ಕೈಬಿಡಲಿಲ್ಲ.

 ತನಿಖೆಯಲ್ಲಿ ಬಯಲಾದ ರಹಸ್ಯ ಆಸ್ತಿ
ಕೆಲವು ವರ್ಷಗಳ ನಂತರ, ವರ್ಷಾ ಅವರ ಮಾಜಿ ಪತಿಯ ಹೆಸರು  ಅಕ್ರಮ ಹಣ ವರ್ಗಾವಣೆ ಮತ್ತು ಆರ್ಥಿಕ ಅಕ್ರಮಗಳ ಪ್ರಕರಣದಲ್ಲಿ ಸಿಲುಕಿಕೊಂಡಾಗ ಇಡೀ ಕಥೆಗೆ ದೊಡ್ಡ ತಿರುವು ಸಿಕ್ಕಿತ್ತು. ಅಪರಾಧ ತನಿಖಾ ವಿಭಾಗದ ಅಧಿಕಾರಿಗಳು ಪತಿಯನ್ನು ತನಿಖೆ ನಡೆಸಿದಾಗ, ಆತ ವಿಚ್ಛೇದನದ ಸಮಯದಲ್ಲಿ ಮುಚ್ಚಿಟ್ಟಿದ್ದ ಲಕ್ಷಾಂತರ ಪೌಂಡ್‌ ಮೌಲ್ಯದ ರಹಸ್ಯ ಬ್ಯಾಂಕ್ ಖಾತೆಗಳು ಮತ್ತು ಬೇನಾಮಿ ಆಸ್ತಿಗಳನ್ನು ಪತ್ತೆಹಚ್ಚಿದರು. ಇದು ವರ್ಷಾ ಅವರ 23 ವರ್ಷಗಳ ದೀರ್ಘಾವಧಿಯ ಅನುಮಾನ ನಿಜ ಎಂಬುದನ್ನು ಜಗತ್ತಿಗೆ ಸಾಬೀತುಪಡಿಸಿತು.

ಮತ್ತಷ್ಟು ಓದಿ: ಅಮೆರಿಕ: ವಿಚ್ಛೇದನ ಕೊಡ್ತೀನಿ ಎಂದಿದ್ದಕ್ಕೆ ಹೆಂಡತಿ ಮಕ್ಕಳು ಮನೆಯಲ್ಲಿರುವಾಗಲೇ ಬುಲ್ಡೋಜರ್​ನಿಂದ ಮನೆ ಕೆಡವಲು ಯತ್ನಿಸಿದ ವ್ಯಕ್ತಿ

ಯುಕೆ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪು
ವರ್ಷಾ ಗೋಹಿಲ್ ಅವರು ಹಳೆಯ ಒಪ್ಪಂದವನ್ನು ಪ್ರಶ್ನಿಸಿ ಬ್ರಿಟನ್‌ನ ಅತ್ಯುನ್ನತ ನ್ಯಾಯಾಲಯವಾದ ಯುಕೆ ಸುಪ್ರೀಂ ಕೋರ್ಟ್ (UK Supreme Court) ಮೆಟ್ಟಿಲೇರಿದರು. ಈ ವೇಳೆ ಪ್ರಕರಣವು ಅತ್ಯಂತ ಜಟಿಲವಾಯಿತು, ಏಕೆಂದರೆ ವಶಪಡಿಸಿಕೊಂಡ ಆಸ್ತಿಯು ಅಪರಾಧ ಚಟುವಟಿಕೆಗೆ ಸೇರಿದ್ದು ಎಂದು ಸರ್ಕಾರಿ ಸಂಸ್ಥೆಗಳು ವಾದಿಸಿದರೆ, ವರ್ಷಾ ಅವರು ಆಸ್ತಿಯ ಒಂದು ಭಾಗ ತನ್ನ ಪತಿಯ ಕಾನೂನುಬದ್ಧ ಗಳಿಕೆಯಾಗಿದ್ದು ವೈವಾಹಿಕ ಹಕ್ಕಿನಂತೆ ತನಗೆ ಸೇರಬೇಕೆಂದು ದೃಢವಾಗಿ ಪ್ರತಿಪಾದಿಸಿದರು.

ವಿಚ್ಛೇದನದ ಸಮಯದಲ್ಲಿ ಸಂಗಾತಿಯು ತನ್ನ ಆಸ್ತಿಗಳ ಸಂಪೂರ್ಣ ವಿವರಗಳನ್ನು ಪ್ರಾಮಾಣಿಕವಾಗಿ ಬಹಿರಂಗಪಡಿಸದಿದ್ದರೆ, ಹಳೆಯ ಒಪ್ಪಂದಗಳನ್ನು ಮರುಪರಿಶೀಲಿಸಬಹುದು ಎಂದು ಸುಪ್ರೀಂ ಕೋರ್ಟ್ ಅತ್ಯಂತ ಪ್ರಬುದ್ಧ ತೀರ್ಪು ನೀಡಿತು.

ಅಂತಿಮವಾಗಿ ಸುದೀರ್ಘ ವಿಚಾರಣೆಗಳ ನಂತರ, ನ್ಯಾಯಾಲಯವು ಆಸ್ತಿಯ ಕೆಲವು ಭಾಗಗಳನ್ನು ಕಾನೂನುಬದ್ಧ ವೈವಾಹಿಕ ಆಸ್ತಿ ಎಂದು ಪರಿಗಣಿಸಿ, ವರ್ಷಾ ಗೋಹಿಲ್ ಅವರಿಗೆ 85 ಕೋಟಿ ರೂ.ಗಳನ್ನು ಹಸ್ತಾಂತರಿಸಲು ಆದೇಶಿಸಿತು. ಯಾವುದೇ ಕಠಿಣ ಪರಿಸ್ಥಿತಿಯಲ್ಲೂ ಧೃತಿಗೆಡದೆ, ಸತ್ಯ ಮತ್ತು ನ್ಯಾಯದ ಪರವಾಗಿ ನಿಂತು ಹೋರಾಡಿದ ವರ್ಷಾ ಅವರ ಈ ಗೆಲುವು ಜಗತ್ತಿನಾದ್ಯಂತ ಲಕ್ಷಾಂತರ ಮಹಿಳೆಯರ ಆತ್ಮವಿಶ್ವಾಸ ಮತ್ತು ಸ್ವಾಭಿಮಾನಕ್ಕೆ ಸಂದ ಜಯವಾಗಿದೆ ಎಂದು ಕಾನೂನು ತಜ್ಞರು ಬಣ್ಣಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ ಕಾರಣ ಏನು? ಇಲ್ಲಿದೆ ನೋಡಿ – Kannada News

ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರImage Credit source: tv9

ಬೆಂಗಳೂರು, ಜೂನ್ 5: ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಸಂಪುಟಕ್ಕೆ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ (Ramalinga Reddy) ನೀಡಿರುವ ದಿಢೀರ್ ರಾಜೀನಾಮೆ ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿದೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ಕೈತಪ್ಪಿ ಜಲಸಂಪನ್ಮೂಲ ಇಲಾಖೆ ಸಿಕ್ಕಿದ್ದಕ್ಕೆ ತೀವ್ರ ಅಸಮಾಧಾನಗೊಂಡಿದ್ದ ಅವರು, ಶುಕ್ರವಾರ ಬೆಳಿಗ್ಗೆ ಅಧಿಕೃತ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿಗಳಿಗೆ ರವಾನಿಸಿದ್ದಾರೆ.

ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರದಲ್ಲೇನಿದೆ?

‘ನನಗೆ ತಮ್ಮ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಿದ್ದಕ್ಕೆ ತಮಗೂ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಧನ್ಯವಾದಗಳು. ನಾನು ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದ ಕಾರಣ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ನನ್ನ ರಾಜೀನಾಮೆಯನ್ನು ಅಂಗೀಕರಿಸಬೇಕೆಂದು ಕೋರುತ್ತೇನೆ. ನಾನು ಶಾಸಕನಾಗಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ’ ಎಂದು ರಾಜೀನಾಮೆ ಪತ್ರದಲ್ಲಿ ರಾಮಲಿಂಗಾ ರೆಡ್ಡಿ ಉಲ್ಲೇಖಿಸಿದ್ದಾರೆ.

ಆತ್ಮಸಾಕ್ಷಿ ಅಸ್ತ್ರ ಬಳಸಿದ ಹಿರಿಯ ನಾಯಕ

ಈ ಹಿಂದೆ ನೀಡಿದ್ದ ಭರವಸೆ ಈಡೇರದಿರುವ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ಹೊರಹಾಕಿರುವ ರಾಮಲಿಂಗಾ ರೆಡ್ಡಿ, ನಾನಾಗಿ ಬೆಂಗಳೂರು ಅಭಿವೃದ್ಧಿ ಖಾತೆ ಕೇಳಿರಲಿಲ್ಲ. ಆದರೂ 2023ರಲ್ಲಿ ಡಿಕೆ ಶಿವಕುಮಾರ್ ಹಾಗೂ ಅವರ ಸಹೋದರ ಡಿಕೆ ಸುರೇಶ್ ನನ್ನ ಮನೆಗೆ ಬಂದು ಭರವಸೆ ನೀಡಿದ್ದರು. ಎರಡೂವರೆ ವರ್ಷದ ಬಳಿಕ ಸಿಎಂ ಆದಾಗ ನಿಮಗೇ ಆ ಖಾತೆಯನ್ನು ಕೊಡುವುದಾಗಿ ಹೇಳಿದ್ದರು. ಆದರೆ, ಇದೀಗ ಬೇರೆ ಖಾತೆ ಕೊಟ್ಟಿದ್ದಾರೆ. ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳಲಾರೆ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಅಲ್ಲದೆ, ‘ಆತ್ಮಸಾಕ್ಷಿ’ ವಿಚಾರವನ್ನು ರಾಜೀನಾಮೆ ಪತ್ರದಲ್ಲೂ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ, ಡಿಕೆಶಿ ಸಂಪುಟದ ಮೊದಲ ವಿಕೆಟ್ ಪತನ

ಸಚಿವ ಸ್ಥಾನ ತ್ಯಜಿಸಿದರೂ ತಾವು ಕಾಂಗ್ರೆಸ್ ಪಕ್ಷದ ಶಾಸಕನಾಗಿ ಹಾಗೂ ಸಾಮಾನ್ಯ ಕಾರ್ಯಕರ್ತನಾಗಿ ಮುಂದುವರಿಯುವುದಾಗಿ ಪತ್ರದಲ್ಲಿ ಸ್ಪಷ್ಟಪಡಿಸುವ ಮೂಲಕ ಹೈಕಮಾಂಡ್‌ಗೆ ತಮ್ಮ ನಿಷ್ಠೆಯನ್ನು ಸಾಬೀತುಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:26 am, Fri, 5 June 26

Source link

RBI MPC: ರೆಪೋ ದರ ಶೇ. 5.25, ಜಿಡಿಪಿ ದರ ಶೇ. 6.6, ಹಣದುಬ್ಬರ ಶೇ. 5.1 ಸಾಧ್ಯತೆ; ಆರ್​ಬಿಐ ಎಂಪಿಸಿ ಪ್ರಕಟಣೆ – Kannada News

ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾImage Credit source: RBI Youtube

ನವದೆಹಲಿ, ಜೂನ್ 5: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಿದೆ. ಮೊನ್ನೆಯಿಂದ ನಡೆದ ಎಂಪಿಸಿ ಸಭೆಯ ನಂತರ ಇವತ್ತು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, ರೆಪೋ ದರವನ್ನು ಶೇ. 5.25ರಲ್ಲಿ ಮುಂದುವರಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಎಸ್​ಟಿಎಫ್ ದರ ಶೇ. 5, ಎಂಎಸ್​ಎಫ್ ಮತ್ತು ಬ್ಯಾಂಕ್ ರೇಟ್ ಶೇ. 5.5 ನಲ್ಲಿ ಮುಂದುವರಿಯಲಿವೆ. ಹಾಗೆಯೇ, ಆರ್​ಬಿಐನ ಪಾಲಿಸಿ ತಟಸ್ಥ ನೀತಿಯಲ್ಲಿ ಮುಂದುವರಿಯಲಿದೆ. ಅಂದರೆ, ಅಗತ್ಯಬಿದ್ದಾಗ ರೆಪೋ ದರ ಏರಿಸಬಹುದು, ಅಥವಾ ಇಳಿಸಬಹುದು.

(ಇನ್ನಷ್ಟು ವಿವರಗಳನ್ನು ನಿರೀಕ್ಷಿಸಿ..)

Source link

Treasure: ಗುಪ್ತ ನಿಧಿಯನ್ನು ಹಾವುಗಳು ಕಾಯುವುದು ನಿಜವೇ? ಪುರಾಣಗಳ ಬೆನ್ನತ್ತಿದ ವಿಜ್ಞಾನ! – Kannada News

ಗುಪ್ತ ನಿಧಿಯನ್ನು ಹಾವುಗಳು ಕಾಯುವುದು ನಿಜವೇ?Image Credit source: Pinterest

ಗುಪ್ತ ನಿಧಿಯನ್ನು ಕಾಪಾಡುವ ಹಾವುಗಳ ಕಥೆಗಳು ಶತಮಾನಗಳಿಂದಲೂ ಭಾರತೀಯ ಜಾನಪದ, ಚಲನಚಿತ್ರಗಳು ಮತ್ತು ಪುರಾಣಗಳಲ್ಲಿ ಹಾಸುಹೊಕ್ಕಾಗಿವೆ. ಚಿನ್ನ ಅಥವಾ ಬೆಲೆಬಾಳುವ ವಸ್ತುಗಳನ್ನು ನೆಲದಲ್ಲಿ ಹೂತುಹಾಕಿದಾಗಲೆಲ್ಲಾ, ಹಾವುಗಳು ಅಲ್ಲಿಗೆ ಬಂದು ಯಾವುದೋ ನಿಗೂಢ ಶಕ್ತಿಯಿಂದ ಅವುಗಳನ್ನು ರಕ್ಷಿಸುತ್ತವೆ ಎಂದು ಅನೇಕ ಜನರು ಇಂದಿಗೂ ನಂಬುತ್ತಾರೆ. ಆದರೆ, ಈ ನಂಬಿಕೆಯ ಹಿಂದಿರುವ ಅಸಲಿ ಸತ್ಯವೇನು? ವನ್ಯಜೀವಿ ಜೀವಶಾಸ್ತ್ರಜ್ಞರು ಮತ್ತು ಇತಿಹಾಸಕಾರರು ಈ ಬಗ್ಗೆ ಏನು ಹೇಳುತ್ತಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಪುರಾಣಗಳು ಮತ್ತು ಜಾನಪದ ಕಥೆ:

ಭಾರತೀಯ ಪುರಾಣಗಳಲ್ಲಿ ಸರ್ಪ ದೇವತೆಗಳು ಅಥವಾ ನಾಗಗಳನ್ನು ಹೆಚ್ಚಾಗಿ ಗುಪ್ತ ನಿಧಿಗಳ ರಕ್ಷಕರಾಗಿ ಚಿತ್ರಿಸಲಾಗಿದೆ. ಹಿಂದೂ ಪುರಾಣಗಳ ಪ್ರಕಾರ, ನಾಗಗಳು ಭೂಗತ ಅಥವಾ ನೀರೊಳಗಿನ ಲೋಕಗಳಲ್ಲಿ ವಾಸಿಸುತ್ತಾರೆ ಮತ್ತು ರತ್ನಗಳು, ಚಿನ್ನ ಹಾಗೂ ದಿವ್ಯ ನಿಧಿಗಳನ್ನು ಕಾಪಾಡುತ್ತಾರೆ ಎಂಬ ನಂಬಿಕೆಯಿದೆ. ಕಾಲಾನಂತರದಲ್ಲಿ ಮೂಡಿಬಂದ ಕಥೆಗಳು, ಜಾನಪದ ಕಥೆಗಳು, ಚಲನಚಿತ್ರಗಳು ಮತ್ತು ಕಾದಂಬರಿಗಳು ಸಾರ್ವಜನಿಕರಲ್ಲಿ ಈ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದವು.

ನಿಧಿ ಇರುವ ಜಾಗಗಳೇ ಹಾವುಗಳಿಗೆ ನೆಚ್ಚಿನ ಆವಾಸಸ್ಥಾನ:

ಪ್ರಾಚೀನ ಕಾಲದಲ್ಲಿ, ರಾಜರು ಅಥವಾ ಶ್ರೀಮಂತರು ತಮ್ಮ ನಿಧಿಗಳನ್ನು ಹೆಚ್ಚಾಗಿ ಭೂಗತ ಕೋಣೆಗಳು, ಹಳೆಯ ಕಟ್ಟಡಗಳ ಅವಶೇಷಗಳು, ಪಾಳುಬಿದ್ದ ಬಾವಿಗಳು ಅಥವಾ ರಹಸ್ಯ ಸುರಂಗಗಳಲ್ಲಿ ಮರೆಮಾಡುತ್ತಿದ್ದರು. ಈ ಸ್ಥಳಗಳನ್ನು ಸಾಮಾನ್ಯವಾಗಿ ವರ್ಷಗಳ ಕಾಲ ಮುಚ್ಚಿಡಲಾಗುತ್ತಿತ್ತು ಮತ್ತು ಅಲ್ಲಿ ಯಾವುದೇ ಮಾನವ ಸಂಚಾರ ಇರುತ್ತಿರಲಿಲ್ಲ. ಇದರ ಪರಿಣಾಮವಾಗಿ, ಅಲ್ಲಿ ತಂಪಾದ, ಕತ್ತಲೆಯಾದ ಮತ್ತು ಅತ್ಯಂತ ಸುರಕ್ಷಿತವಾದ ವಾತಾವರಣ ಸೃಷ್ಟಿಯಾಗುತ್ತಿತ್ತು. ಇಂತಹ ಪರಿಸರ ಎಂದರೆ ಹಾವುಗಳಿಗೆ ಪಂಚಪ್ರಾಣ. ಹೀಗಾಗಿ ಪ್ರಕೃತಿ ಸಹಜವಾಗಿಯೇ ಹಾವುಗಳು ಇಂತಹ ಸ್ಥಳಗಳನ್ನು ತಮ್ಮ ವಾಸಸ್ಥಾನವನ್ನಾಗಿ ಮಾಡಿಕೊಳ್ಳುತ್ತವೆ ಎಂದು ವನ್ಯಜೀವಿ ಜೀವಶಾಸ್ತ್ರಜ್ಞರು ಹೇಳುತ್ತಾರೆ.

ಆಹಾರ ಮತ್ತು ದೇಹದ ಉಷ್ಣತೆಯ ಸಮತೋಲನ:

ಹಾವುಗಳು ನಿಧಿ ಇರುವ ಜಾಗಕ್ಕೆ ಬರಲು ಕೇವಲ ಶಾಂತ ವಾತಾವರಣವಷ್ಟೇ ಕಾರಣವಲ್ಲ, ಅಲ್ಲಿ ಅವುಗಳಿಗೆ ಸಿಗುವ ಆಹಾರವೂ ಮುಖ್ಯ ಕಾರಣವಾಗಿದೆ. ಹಳೆಯ ಅವಶೇಷಗಳು ಮತ್ತು ಭೂಗತ ಸ್ಥಳಗಳು ಹೆಚ್ಚಾಗಿ ದಂಶಕಗಳು (ಇಲಿಗಳು), ಹಲ್ಲಿಗಳು ಮತ್ತು ಕೀಟಗಳಿಗೆ ಆಶ್ರಯ ತಾಣಗಳಾಗಿರುತ್ತವೆ. ಇಲಿಗಳು ಹಾವುಗಳಿಗೆ ಮುಖ್ಯ ಆಹಾರವಾಗಿರುವುದರಿಂದ, ಅವು ಬೇಟೆಯಾಡಲು ನೈಸರ್ಗಿಕವಾಗಿ ಅಂತಹ ಪ್ರದೇಶಗಳಿಗೆ ಆಕರ್ಷಿತವಾಗುತ್ತವೆ.

ಮತ್ತೊಂದು ಪ್ರಮುಖ ಅಂಶವೆಂದರೆ, ಹಾವುಗಳು ಶೀತ-ರಕ್ತದ (Cold-blooded) ಪ್ರಾಣಿಗಳು. ಇದರರ್ಥ ಅವು ತಮ್ಮ ದೇಹದ ಉಷ್ಣತೆಯನ್ನು ತಾವಾಗಿಯೇ ನಿಯಂತ್ರಿಸಿಕೊಳ್ಳಲು ಸಾಧ್ಯವಿಲ್ಲ. ತೀವ್ರವಾದ ಶಾಖ ಅಥವಾ ಶೀತದ ವಾತಾವರಣವಿದ್ದಾಗ, ಅವು ತಮ್ಮ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಭೂಗತ ಸುರಂಗಗಳು, ಬಿಲಗಳು ಅಥವಾ ರಹಸ್ಯ ಕೋಣೆಗಳಿಗೆ ಹಿಮ್ಮೆಟ್ಟುತ್ತವೆ.

ವಿಜ್ಞಾನಿಗಳ ಸ್ಪಷ್ಟನೆ:

ಹಾವುಗಳು ಚಿನ್ನ, ಬೆಳ್ಳಿ ಅಥವಾ ಯಾವುದೇ ಗುಪ್ತ ನಿಧಿಗೆ ಆಕರ್ಷಿತವಾಗುವುದಿಲ್ಲ. ನಿಧಿಯ ಬಳಿ ಅವುಗಳ ಉಪಸ್ಥಿತಿಯು ಸಂಪೂರ್ಣವಾಗಿ ಕಾಕತಾಳೀಯವಾಗಿದ್ದು, ಅದು ಕೇವಲ ಅವುಗಳ ಆವಾಸಸ್ಥಾನ ಮತ್ತು ಆಹಾರದ ಲಭ್ಯತೆಗೆ ಸಂಬಂಧಿಸಿದ್ದಾಗಿದೆ.

ಕಳ್ಳರನ್ನು ಹೆದರಿಸಲು ಹರಡಿದ ರಾಜತಾಂತ್ರಿಕ ವದಂತಿಗಳು:

ಇತಿಹಾಸಕಾರರ ಪ್ರಕಾರ, ಈ ಪುರಾಣಗಳ ಹಿಂದೆ ರಾಜರ ಒಂದು ಚಾಣಾಕ್ಷ ತಂತ್ರ ಅಡಗಿತ್ತು. ರಾಜರು ಮತ್ತು ಶ್ರೀಮಂತರು ತಾವು ನಿಧಿ ಬೀರಿದ ಸ್ಥಳದಿಂದ ಕಳ್ಳತನವಾಗುವುದನ್ನು ತಡೆಯಲು ತಾವಾಗಿಯೇ ಇಂತಹ ವದಂತಿಗಳನ್ನು ಹರಡುತ್ತಿದ್ದರು. “ಅಲ್ಲಿ ನಿಧಿಯಿದೆ, ಅದನ್ನು ನಾಗರಹಾವು ಕಾಯುತ್ತಿದೆ” ಎಂದು ಹೆದರಿಸಿದರೆ ಕಳ್ಳರು ಆ ಜಾಗಕ್ಕೆ ಹೋಗಲು ಹೆದರುತ್ತಾರೆ ಎಂಬುದು ಅವರ ಯೋಜನೆಯಾಗಿತ್ತು.

ಇದನ್ನೂ ಓದಿ: ಬೃಂದಾವನದಲ್ಲಿ ವಿರಾಟ್-ಅನುಷ್ಕಾ; ಪ್ರೇಮಾನಂದ್ ಗುರೂಜಿ ಬಳಿ ಈ ಜೋಡಿ ಪದೇ ಪದೇ ಹೋಗುವುದೇಕೆ ಗೊತ್ತಾ?

ಕೆಲವು ಸಂದರ್ಭಗಳಲ್ಲಿ, ನಿಧಿಗಳನ್ನು ರಕ್ಷಿಸಲು ವಿಷಪೂರಿತ ಹಾವುಗಳನ್ನು ಉದ್ದೇಶಪೂರ್ವಕವಾಗಿ ಆ ರಹಸ್ಯ ಸ್ಥಳದ ಸುತ್ತಲೂ ಬಿಡುಗಡೆ ಮಾಡಿದ ಇತಿಹಾಸವೂ ಇದೆ. ಬಾವಿಗಳು ಮತ್ತು ಗುಹೆಗಳಲ್ಲಿ ಚಿನ್ನವನ್ನು ಮರೆಮಾಡಿದಾಗ, ಅದನ್ನು ಅಗೆಯುವಾಗ ಅಲ್ಲಿ ಸಹಜವಾಗಿಯೇ ವಾಸವಿದ್ದ ಹಾವುಗಳು ಹೊರಹೊಮ್ಮುತ್ತಿದ್ದವು. ಈ ಘಟನೆಗಳು ಜನರ ಕಣ್ಣಿಗೆ ಬಿದ್ದಾಗ “ಹಾವು ನಿಧಿಯನ್ನು ಕಾಯುತ್ತಿದೆ” ಎಂಬ ಪುರಾಣಕ್ಕೆ ಮತ್ತಷ್ಟು ಸಾಕ್ಷಿಯಾಯಿತು.

ಸರ್ಪಗಳು ಅಥವಾ ನಾಗಗಳ ಮೇಲಿನ ಭಕ್ತಿ ಮತ್ತು ಪೂಜೆ ಧಾರ್ಮಿಕ ನಂಬಿಕೆಯಾಗಿದ್ದರೂ, ಹಾವುಗಳು ಚಿನ್ನವನ್ನು ಕಾಯುತ್ತವೆ ಎಂಬ ಕಲ್ಪನೆಯನ್ನು ವಿಜ್ಞಾನ ಮತ್ತು ಇತಿಹಾಸ ಕೇವಲ ಒಂದು ವ್ಯವಸ್ಥಿತ ಪ್ರಚಾರ ಹಾಗೂ ಮೂಢನಂಬಿಕೆ ಎಂದು ತಳ್ಳಿಹಾಕಿವೆ. ಹಾವುಗಳಿಗೆ ಬೇಕಾಗಿರುವುದು ಕೇವಲ ಸುರಕ್ಷಿತ ಆಶ್ರಯ ಮತ್ತು ಆಹಾರವೇ ಹೊರತು ಚಿನ್ನ-ಬೆಳ್ಳಿಯಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:04 am, Fri, 5 June 26

Source link

Monsoon Rain 2026: ಭಾರತಕ್ಕೆ ಮುಂಗಾರುಅಧಿಕೃತ ಪ್ರವೇಶ, ಕರ್ನಾಟಕ ಸೇರಿ 19 ರಾಜ್ಯಗಳಲ್ಲಿ ವಿಪರೀತ ಗಾಳಿ, ಮಳೆ – Kannada News

ನವದೆಹಲಿ, ಜೂನ್ 05: ಇಡೀ ದೇಶವೇ ಅತ್ಯಂತ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ನೈಋತ್ಯ ಮುಂಗಾರು(Monsoon) ಕೊನೆಗೂ ಕೇರಳಕ್ಕೆ ಆಗಮಿಸಿದೆ. ಭಾರತೀಯ ಹವಾಮಾನ ಇಲಾಖೆ (IMD) ಜೂನ್ 4 ರ ಗುರುವಾರ ಬೆಳಗ್ಗೆ 11 ಗಂಟೆಗೆ ಮುಂಗಾರು ಮಾರುತಗಳ ಅಧಿಕೃತ ಆಗಮನವನ್ನು ಘೋಷಿಸಿದೆ. ಕೇವಲ ಒಂದು ವಾರದ ತಾಂತ್ರಿಕ ವಿಳಂಬವನ್ನು ಹೊರತುಪಡಿಸಿ, ಪ್ರಸ್ತುತ ಮುಂಗಾರು ಅತ್ಯಂತ ಸಕ್ರಿಯವಾಗಿದ್ದು, ದೇಶದ ಕೃಷಿ ಚಟುವಟಿಕೆಗಳು ಭಾರಿ ಚುರುಕಾಗಿವೆ. ಈ ಭರವಸೆಯ ಮಳೆಯು ಲಕ್ಷದ್ವೀಪ, ಕೇರಳ, ಮಾಹೆ ಸೇರಿದಂತೆ ಕರ್ನಾಟಕ ಮತ್ತು ತಮಿಳುನಾಡಿನ ಪ್ರಮುಖ ಭಾಗಗಳನ್ನು ಯಶಸ್ವಿಯಾಗಿ ಆವರಿಸಿಕೊಂಡಿದೆ.

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ವರದಾನವಾಗಲಿರುವ ಮುಂಗಾರು
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ದಕ್ಷಿಣ ಮತ್ತು ಈಶಾನ್ಯ ಭಾರತದಲ್ಲಿ ಮುಂಗಾರು ಅತ್ಯಂತ ವೇಗವಾಗಿ ಪ್ರಗತಿ ಹೊಂದುತ್ತಿದೆ. ಜೂನ್ 5 ರಿಂದ ಮುಂದಿನ 5-7 ದಿನಗಳವರೆಗೆ ಕರ್ನಾಟಕ, ಕೇರಳ ಮತ್ತು ಈಶಾನ್ಯ ಭಾರತದ ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ವಿಶೇಷವಾಗಿ ಉತ್ತರ ಒಳನಾಡಿನ ಕರ್ನಾಟಕದ ಪ್ರತ್ಯೇಕ ಸ್ಥಳಗಳಲ್ಲಿ ಉತ್ತಮ ಮಳೆಯಾಗಲಿದ್ದು, ಇದು ಮುಂಗಾರು ಬಿತ್ತನೆಗೆ ಸಜ್ಜಾಗಿರುವ ನಮ್ಮ ರೈತರಿಗೆ ಅತ್ಯಂತ ವರದಾನವಾಗಲಿದೆ.

ಪೆಸಿಫಿಕ್ ಮಹಾಸಾಗರದಲ್ಲಿ ಎಲ್ ನಿನೋ ಪರಿಸ್ಥಿತಿಗಳು ಕಂಡುಬರುತ್ತಿದ್ದರೂ, ಹಿಂದೂ ಮಹಾಸಾಗರದಲ್ಲಿ ಸೃಷ್ಟಿಯಾಗುತ್ತಿರುವ ‘ದುರ್ಬಲ ಧನಾತ್ಮಕ ಐಓಡಿ’ (Positive Indian Ocean Dipole) ಮುಂಗಾರು ಮಳೆಗೆ ಪೂರಕ ಶಕ್ತಿಯನ್ನು ನೀಡಲಿದೆ. ಜೂನ್ 11–17ರ ಅವಧಿಯಲ್ಲಿ ಕರ್ನಾಟಕ, ಕೊಂಕಣ-ಗೋವಾ, ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲಿ ಸಾಮಾನ್ಯ ಅಥವಾ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಆಶಾದಾಯಕ ಮುನ್ಸೂಚನೆ ಇದೆ.

ಉತ್ತರ ಭಾರತ ಹಾಗೂ ದೆಹಲಿ-ಎನ್‌ಸಿಆರ್‌ಗೆ ತಂಪೆರೆದ ಮಳೆ
ಕೇರಳ ಪ್ರವೇಶಿಸಿರುವ ಮಾನ್ಸೂನ್ ಮುಂದಿನ 10-15 ದಿನಗಳಲ್ಲಿ ಮಧ್ಯ ಮತ್ತು ಪೂರ್ವ ಭಾರತಕ್ಕೂ ವ್ಯಾಪಿಸಲಿದೆ. ತೀವ್ರ ಬೇಸಿಗೆಯಿಂದ ಕಂಗಾಲಾಗಿದ್ದ ದೆಹಲಿ ಮತ್ತು ಸುತ್ತಮುತ್ತಲಿನ (Delhi-NCR) ಪ್ರದೇಶಗಳಲ್ಲಿ ಜೂನ್ 5 ರಂದು ಎರಡು ಹಂತಗಳಲ್ಲಿ ಹಗುರ ಮಳೆ ಮತ್ತು ಗುಡುಗು ಸಹಿತ ತಂಗಾಳಿ ಬೀಸಲಿದ್ದು, ತಾಪಮಾನ ಗಣನೀಯವಾಗಿ ಇಳಿಕೆಯಾಗಲಿದೆ.

ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಗುಡ್ಡಗಾಡು ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯಾಗಲಿದ್ದು, ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಬಿಹಾರದ ಬಯಲು ಸೀಮೆಯಲ್ಲೂ ಚದುರಿದ ಮಳೆಯಾಗಿ ಇಡೀ ವಾತಾವರಣ ತಂಪಾಗಲಿದೆ.

ಒಡಿಶಾ, ಕರಾವಳಿ ಆಂಧ್ರಪ್ರದೇಶ ಮತ್ತು ಬಿಹಾರದ ಕೆಲವು ಭಾಗಗಳಲ್ಲಿ ಜೂನ್ 6 ರವರೆಗೆ ಸಾಧಾರಣ ತೇವಾಂಶದ ಒಣ ಹವಾಮಾನ ಇರಲಿದ್ದರೂ, ದೇಶಾದ್ಯಂತ ವೇಗವಾಗಿ ವಿಸ್ತರಿಸುತ್ತಿರುವ ಮುಂಗಾರು ಮಳೆಯು ಮುಂದಿನ ಕೆಲವು ದಿನಗಳಲ್ಲಿ ಇಡೀ ಭಾರತದಾದ್ಯಂತ ಕರಾವಳಿ ಹಾಗೂ ಒಳನಾಡುಗಳನ್ನು ತಂಪಾಗಿಸಿ, ಪ್ರಕೃತಿಗೆ ಹಸಿರು ಹೊದಿಕೆಯನ್ನು ನೀಡಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 9:46 am, Fri, 5 June 26

Source link

Exit mobile version