SIR ಪ್ರಕ್ರಿಯೆ ವೇಳೆ ಕರ್ತವ್ಯನಿರತ ಸಿಬ್ಬಂದಿಗೆ ನಿಂದನೆ, ಬೆದರಿಕೆ: FIR ದಾಖಲು! – Kannada News | FIR Filed in Nanjangud After SIR Duty Staff Threaten and Abuse Allegation

ಮೈಸೂರು, ಜುಲೈ 21: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನಿರತರಾಗಿದ್ದ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮನೆಗೆ ನುಗ್ಗಿ ಬೆದರಿಕೆಯೊಡ್ಡಿ ಅನುಚಿತವಾಗಿ ವರ್ತಿಸಿದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬಿಳಿಗೆರೆ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ಮುಳ್ಳೂರು ಗ್ರಾಮದ ನಿವಾಸಿ ಮಹೇಂದ್ರ ಕುಮಾರ್ ಎಂಬಾತನ ವಿರುದ್ಧ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.

ನಡೆದಿದ್ದೇನು?

ಮತದಾರರ ಪಟ್ಟಿ ಪರಿಷ್ಕರಣೆಯ (SIR) ಕರ್ತವ್ಯದಲ್ಲಿದ್ದ ಸಿಬ್ಬಂದಿ ಲತಾ ಎಂಬುವರ ಮನೆಗೆ ಜುಲೈ 13ರಂದು ರಾತ್ರಿ ಕುಡಿದು ಬಂದಿದ್ದ ಮಹೇಂದ್ರ ಕುಮಾರ್, ಅಕ್ರಮವಾಗಿ ಮನೆಗೆ ನುಗ್ಗಿದ್ದಾನೆ. ಈ ವೇಳೆ ಲತಾ ಅವರ ಕೈ ಹಿಡಿದು ಎಳೆದಾಡಿ, ಅನುಚಿತವಾಗಿ ವರ್ತಿಸಿದ್ದಾನೆ. ಅಲ್ಲದೆ, ನೀನು 300 ಜನರ ಮತಗಳನ್ನು ಹಾಳು ಮಾಡಿದ್ದೀಯಾ, ನಮ್ಮ ಗ್ರಾಮದಲ್ಲಿ ನೀನು ಹೇಗೆ ಕೆಲಸ ಮಾಡುತ್ತೀಯಾ ನೋಡುತ್ತೇನೆ? ನಿನ್ನನ್ನು ಕೆಲಸದಿಂದಲೇ ತೆಗೆದುಹಾಕಿಸುತ್ತೇನೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ. ಸಿಬ್ಬಂದಿ ನೀಡಿದ ದೂರಿನನ್ವಯ ಬಿಳಿಗೆರೆ ಪೊಲೀಸರು ಮಹೇಂದ್ರ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಹಿಂದೆಯೂ ನಡೆದಿತ್ತು ಇದೇ ರೀತಿಯ ಘಟನೆ

SIR ಪ್ರಕ್ರಿಯೆಯ ವೇಳೆ ಕರ್ತವ್ಯನಿರತ ಸಿಬ್ಬಂದಿ ಹಾಗೂ ಬಿಎಲ್‌ಒ (BLO)ಗಳ ಮೇಲೆ ಇಂತಹ ದೌರ್ಜನ್ಯ ನಡೆದಿರುವುದು ಇದೇ ಮೊದಲೇನಲ್ಲ. ಇತ್ತೀಚೆಗಷ್ಟೇ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದಲ್ಲೂ ಇಂತಹುದೇ ಅಮಾನವೀಯ ಘಟನೆ ವರದಿಯಾಗಿತ್ತು.

ಅಲ್ಲಿ ದಲಿತ ಸಮುದಾಯಕ್ಕೆ ಸೇರಿದ ಬಿಎಲ್‌ಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಶಿರ್ಲಾಲು ಗ್ರಾಮದ ಕಾಳಿಕಾಂಬ ನಿವಾಸಿ ಯಶೋಧ ಆಚಾರಿ ಎಂಬುವರ ಮನೆಗೆ ಎಸ್‌ಐಆರ್ ಪ್ರಕ್ರಿಯೆಗೆಂದು ತೆರಳಿದ್ದರು. ಆದರೆ, ಆ ಸಮಯದಲ್ಲಿ ಮನೆಮಾಲಿಕರು ನಿಮ್ಮ ಜಾತಿಯವರು ಒಳಗೆ ಬರಬಾರದು ಎಂದು ಜಾತಿ ನಿಂದನೆ ಮಾಡಿ, ಅವರನ್ನು ಅಂಗಳದಲ್ಲೇ ನಿಲ್ಲಿಸಿ ತೀವ್ರವಾಗಿ ಅಪಮಾನಿಸಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಂದಾಯ ಇಲಾಖೆಯ ರೆಕಾರ್ಡ್ ರೂಂನಲ್ಲಿ ಕೋತಿಗಳದ್ದೇ ಕಾರುಬಾರು! ವಿಡಿಯೋ ವೈರಲ್ – Kannada News | Monkeys Enter Revenue Record Room in Mulbagal Taluk Office, Viral Video Raises Safety Concerns

ಕೋಲಾರ, ಜುಲೈ 21: ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕು ಕಚೇರಿಯ ಕಂದಾಯ ಇಲಾಖೆಯ ರೆಕಾರ್ಡ್ ರೂಂನಲ್ಲಿ ಕೋತಿಗಳು ನಿರ್ಬಂಧವಿಲ್ಲದೆ ಓಡಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಪ್ರಮುಖ ಸರ್ಕಾರಿ ಕಂದಾಯ ದಾಖಲೆಗಳನ್ನು ಸಂರಕ್ಷಿಸಬೇಕಾದ ಕೊಠಡಿಯಲ್ಲೇ ಈ ರೀತಿಯ ಅವ್ಯವಸ್ಥೆ ಕಂಡುಬಂದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಜಿಲ್ಲೆಯ ಹಲವು ಭಾಗಗಳಲ್ಲಿ ನಕಲಿ ದಾಖಲೆಗಳ ಮೂಲಕ ಭೂಮಿ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಸಂದರ್ಭದಲ್ಲೇ ದಾಖಲೆಗಳ ಸುರಕ್ಷತೆ ಪ್ರಶ್ನಾರ್ಹವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ತಾಲ್ಲೂಕು ಕಚೇರಿ ಸಿಬ್ಬಂದಿ ನಿರ್ಲಕ್ಷ್ಯದ ವಿರುದ್ಧ ಕ್ರಮ ಕೈಗೊಂಡು, ದಾಖಲೆಗಳ ಭದ್ರತೆ ಖಚಿತಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಸೂಪರ್ ಜೈಂಟ್ಸ್’ ಪರ ಕಣಕ್ಕಿಳಿಯಲಿದ್ದಾರೆ ಸ್ಮೃತಿ ಮಂಧಾನ! – Kannada News | Smriti Mandhana is ready for The Hundred with Manchester Super Giants

ಬಹುನಿರೀಕ್ಷಿತ ‘ದಿ ಹಂಡ್ರೆಡ್ ವುಮೆನ್ಸ್’ ಕ್ರಿಕೆಟ್ ಟೂರ್ನಿ ಇಂದಿನಿಂದ (ಜುಲೈ 21) ಶುರುವಾಗಲಿದೆ. ಈ ಟೂರ್ನಿಯಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ‘ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್’ ಪರ ಕಣಕ್ಕಿಳಿಯಲಿದ್ದಾರೆ. ಕಳೆದ ಬಾರಿ ಮ್ಯಾಂಚೆಸ್ಟರ್ ಒರಿಜಿನಲ್ಸ್ ತಂಡಕ್ಕೆ ಆಯ್ಕೆಯಾಗಿದ್ದ ಸ್ಮೃತಿ ವೈಯುಕ್ತಿಕ ಕಾರಣಗಳಿಂದಾಗಿ ಟೂರ್ನಿಯಿಂದ ಹಿಂದೆ ಸರಿದಿದ್ದರು. ಇದೀಗ ನೇರ ಒಪ್ಪಂದ ಮೂಲಕ ಸ್ಮೃತಿ ‘ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್’ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಸ್ಟಾರ್ ಆಟಗಾರ್ತಿಯರ ದಂಡು:

ಈ ಬಾರಿಯ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡದಲ್ಲಿ ಮಹಿಳಾ ಕ್ರಿಕೆಟ್‌ನ ಸ್ಟಾರ್ ಆಟಗಾರ್ತಿಯರ ದಂಡೇ ಕಾಣಿಸಿಕೊಂಡಿದೆ. ಸ್ಮೃತಿ ಮಂಧಾನ ಅವರೊಂದಿಗೆ ಆಸ್ಟ್ರೇಲಿಯಾದ ಯಶಸ್ವಿ ಮಾಜಿ ನಾಯಕಿ ಮೆಗ್ ಲ್ಯಾನಿಂಗ್ ಮತ್ತು ಇಂಗ್ಲೆಂಡ್‌ನ ವಿಶ್ವದ ನಂ.1 ಸ್ಪಿನ್ನರ್ ಸೋಫಿ ಎಕ್ಲಿಸ್ಟೋನ್ ಜೊತೆಯಾಗಿ ಕಣಕ್ಕಿಳಿಯಲಿದ್ದಾರೆ.

ಇವರೊಂದಿಗೆ ಟೀಮ್ ಇಂಡಿಯಾದ ಸ್ಫೋಟಕ ವಿಕೆಟ್ ಕೀಪರ್-ಬ್ಯಾಟರ್ ರಿಚಾ ಘೋಷ್ ಕೂಡ ಆಯ್ಕೆಯಾಗಿದ್ದಾರೆ. ಅಂದರೆ ಸ್ಮೃತಿ ಮಂಧಾನ-ರಿಚಾ ಘೋಷ್ ಜೋಡಿಯು ಜೊತೆಯಾಗಿ ಕಣಕ್ಕಿಳಿಯಲಿದ್ದಾರೆ.

ಫ್ರಾಂಚೈಸಿ ಮರುನಾಮಕರಣ:

ಐಪಿಎಲ್‌ನ ಲಕ್ನೋ ಸೂಪರ್ ಜೈಂಟ್ಸ್ ಮಾಲೀಕರಾದ ಆರ್‌ಪಿಎಸ್‌ಜಿ (RPSG) ಗ್ರೂಪ್ ಈ ಮ್ಯಾಂಚೆಸ್ಟರ್ ಫ್ರಾಂಚೈಸಿಯಲ್ಲಿ ಹೂಡಿಕೆ ಮಾಡಿದೆ. ಈ ಖಾಸಗೀಕರಣದ ಬೆನ್ನಲ್ಲೇ ತಂಡದ ಹೆಸರನ್ನು ‘ಮ್ಯಾಂಚೆಸ್ಟರ್ ಒರಿಜಿನಲ್ಸ್’ ತಂಡದ ಹೆಸರನ್ನು ‘ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್’ ಎಂದು ಬದಲಾಯಿಸಲಾಗಿದೆ.

‘ದಿ ಹಂಡ್ರೆಡ್’ ಟೂರ್ನಿಯಲ್ಲಿ ಸ್ಮೃತಿ ದಾಖಲೆ:

‘ದಿ ಹಂಡ್ರೆಡ್ ವುಮೆನ್ಸ್ ‘ ಲೀಗ್ ಇತಿಹಾಸದಲ್ಲೇ ಅತಿ ವೇಗವಾಗಿ 500 ರನ್ ರನ್​ ಕಲೆಹಾಕಿದ ಆಟಗಾರ್ತಿ ಎಂಬ ದಾಖಲೆ ಸ್ಮೃತಿ ಮಂಧಾನ ಹೆಸರಿನಲ್ಲಿದೆ. ಈ ಹಿಂದೆ ಸದರ್ನ್ ಬ್ರೇವ್ ತಂಡದ ಪರ ಆಡಿದ್ದ ಸ್ಮೃತಿ, 29 ಇನ್ನಿಂಗ್ಸ್‌ಗಳಲ್ಲಿ 139.09ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 676 ರನ್ ಕಲೆಹಾಕಿದ್ದಾರೆ.

ಇದನ್ನೂ ಓದಿ: ಓವರ್ ಇಲ್ಲ, ಸೂಪರ್ ಫೈವ್, ಬೋನಸ್ ರನ್: ದಿ ಹಂಡ್ರೆಡ್ ಲೀಗ್ ಹೊಸ ನಿಯಮ

ಇದೀಗ ಇಂಗ್ಲೆಂಡ್‌ನ ಖ್ಯಾತ ಎಡಗೈ ಸ್ಪಿನ್ನರ್ ಸೋಫಿ ಎಕ್ಲಿಸ್ಟೋನ್ ಮುಂದಾಳತ್ವದಲ್ಲಿ ಸ್ಮೃತಿ ಮಂಧಾನ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಪರ ಹೊಸ ಇನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ.

Source link

Shani Sade Sati: ಶನಿ ಸಾಡೇ ಸಾತಿಯ ಯಾವ ಹಂತ ಅತ್ಯಂತ ಕಷ್ಟಕರ? ಇಲ್ಲಿದೆ ಪೂರ್ಣ ಮಾಹಿತಿ – Kannada News | Shani Sade Sati: Understand Its 3 Phases and Remedies for a Peaceful 7.5 Years

ಶನಿ ದೇವರೆಂದರೆ ಅನೇಕರಲ್ಲಿ ಒಂದು ರೀತಿಯ ಭಯ ಮೂಡುವುದು ಸಹಜ. ಅದರಲ್ಲೂ ‘ಶನಿ ಸಾಡೇ ಸಾತಿ’ ಎಂಬ ಹೆಸರು ಕೇಳಿದ ತಕ್ಷಣ ಭವಿಷ್ಯದ ಬಗ್ಗೆ ಚಿಂತೆ ಪ್ರಾರಂಭವಾಗುತ್ತದೆ. ಆದರೆ, ಸಾಡೇ ಸಾತಿಯ ಬಗ್ಗೆ ಸರಿಯಾದ ತಿಳುವಳಿಕೆ ಇದ್ದರೆ, ಈ ಅವಧಿಯನ್ನು ಸುಲಭವಾಗಿ ಮತ್ತು ಧೈರ್ಯವಾಗಿ ಎದುರಿಸಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಾಡೇ ಸಾತಿಯು ಪ್ರತಿಯೊಬ್ಬ ವ್ಯಕ್ತಿಯ ಜೀವಿತಾವಧಿಯಲ್ಲಿ ಕನಿಷ್ಠ ಒಮ್ಮೆ ಅಥವಾ ಅದಕ್ಕಿಂತ ಹೆಚ್ಚು ಬಾರಿ ಬರುತ್ತದೆ. ‘ಸಾಡೇ ಸಾತಿ’ ಎಂದರೆ ಅಕ್ಷರಶಃ ಏಳೂವರೆ ವರ್ಷಗಳು ಎಂದರ್ಥ.

ಸಾಡೇ ಸಾತಿ ಹೇಗೆ ಪ್ರಾರಂಭವಾಗುತ್ತದೆ?

ಶನಿ ಗ್ರಹವು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾಗಿದ್ದು, ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚರಿಸಲು ಸುಮಾರು ಎರಡೂವರೆ ವರ್ಷಗಳನ್ನು (2.5 ವರ್ಷ) ತೆಗೆದುಕೊಳ್ಳುತ್ತದೆ. ಯಾವಾಗ ಶನಿಯು ನಿಮ್ಮ ಜನ್ಮ ಚಂದ್ರ ರಾಶಿಗಿಂತ ಒಂದು ರಾಶಿ ಹಿಂದೆ (12ನೇ ಮನೆ) ಪ್ರವೇಶಿಸುತ್ತದೆಯೋ, ಅಂದಿನಿಂದ ಸಾಡೇ ಸಾತಿ ಪ್ರಾರಂಭವಾಗುತ್ತದೆ. ಅಲ್ಲಿಂದ ಮುಂದಿನ ಮೂರು ರಾಶಿಗಳನ್ನು ದಾಟಲು ಶನಿಗೆ ಒಟ್ಟು 7.5 ವರ್ಷಗಳು ಬೇಕಾಗುತ್ತವೆ. ಈ ಸಂಪೂರ್ಣ ಅವಧಿಯನ್ನೇ ‘ಸಾಡೇ ಸಾತಿ’ ಎಂದು ಕರೆಯಲಾಗುತ್ತದೆ.

ಸಾಡೇ ಸಾತಿಯ 3 ಹಂತಗಳು:

ಸಾಡೇ ಸಾತಿಯ ಏಳೂವರೆ ವರ್ಷಗಳನ್ನು ಮೂರು ಪ್ರತ್ಯೇಕ ಹಂತಗಳಾಗಿ ವಿಂಗಡಿಸಲಾಗಿದೆ:

ಮೊದಲ ಹಂತ ಆರಂಭಿಕ ಒತ್ತಡ (12ನೇ ಮನೆ):

ಶನಿಯು ಚಂದ್ರ ರಾಶಿಯಿಂದ 12ನೇ ಮನೆಗೆ ಬಂದಾಗ ಮೊದಲ ಹಂತ ಶುರುವಾಗುತ್ತದೆ. 12ನೇ ಮನೆಯು ವೆಚ್ಚ, ಒಂಟಿತನ ಮತ್ತು ಮಾನಸಿಕ ಅಶಾಂತಿಯನ್ನು ಸೂಚಿಸುತ್ತದೆ. ಧನ ನಷ್ಟ, ಹಠಾತ್ ವೆಚ್ಚಗಳು ಹೆಚ್ಚಾಗುವುದು, ನಿದ್ರಾಹೀನತೆ, ಮಾನಸಿಕ ಗೊಂದಲ ಮತ್ತು ಉದ್ಯೋಗ ಬದಲಾವಣೆಯಂತಹ ಸವಾಲುಗಳು ಎದುರಾಗಬಹುದು.

ಎರಡನೇ ಹಂತ ಅತ್ಯಂತ ಕಷ್ಟಕರ ಸಮಯ (ಚಂದ್ರ ರಾಶಿಯ ಮೇಲೆ):

ಶನಿಯು ನೇರವಾಗಿ ನಿಮ್ಮ ಚಂದ್ರ ರಾಶಿಯ ಮೇಲೆಯೇ ಸಂಚರಿಸುವಾಗ ಎರಡನೇ ಹಂತ ಪ್ರಾರಂಭವಾಗುತ್ತದೆ. ಚಂದ್ರನು ಮನಸ್ಸು ಮತ್ತು ಭಾವನೆಗಳ ಸಂಕೇತ. ಇದನ್ನು ಸಾಡೇ ಸಾತಿಯ ಅತ್ಯಂತ ಪ್ರಭಾವಶಾಲಿ ಮತ್ತು ಕಷ್ಟಕರ ಹಂತ ಎಂದು ಪರಿಗಣಿಸಲಾಗುತ್ತದೆ. ತೀವ್ರ ಭಾವನಾತ್ಮಕ ಒತ್ತಡ, ಆತ್ಮವಿಶ್ವಾಸದ ಕೊರತೆ, ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಮತ್ತು ಆಪ್ತರಿಂದಲೇ ನಿರಾಕರಣೆ ಅಥವಾ ನಿರ್ಲಕ್ಷ್ಯವನ್ನು ಅನುಭವಿಸಬೇಕಾಗಬಹುದು.

ಮೂರನೇ ಹಂತ ಕರ್ಮಫಲ ಮತ್ತು ಪರಿಹಾರ (2ನೇ ಮನೆ):

ಶನಿಯು ಚಂದ್ರ ರಾಶಿಯಿಂದ 2ನೇ ಮನೆಗೆ ಪ್ರವೇಶಿಸಿದಾಗ ಕೊನೆಯ ಹಂತ ಪ್ರಾರಂಭವಾಗುತ್ತದೆ. ಇದು ಎರಡನೇ ಹಂತಕ್ಕಿಂತ ಕೊಂಚ ಸಮಾಧಾನಕರವಾಗಿರುತ್ತದೆ. ಶನಿಯು ನಿಮ್ಮ ಸತ್ಕರ್ಮಗಳಿಗೆ ತಕ್ಕ ಫಲವನ್ನು ನೀಡುವ ಸಮಯವಿದು. ನೀವು ಜೀವನದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡಿದ್ದರೆ, ಉತ್ತಮ ಫಲಿತಾಂಶಗಳು ಸಿಗುತ್ತವೆ. ಕುಟುಂಬ ಮತ್ತು ಉದ್ಯೋಗದಲ್ಲಿದ್ದ ಅಡೆತಡೆಗಳು ನಿಧಾನವಾಗಿ ದೂರವಾಗಿ, ಸ್ಥಿರತೆ ತಲುಪುತ್ತೀರಿ.

ಅತ್ಯಂತ ನೋವಿನ ಹಂತ ಯಾವುದು?

ಜ್ಯೋತಿಷ್ಯದ ಪ್ರಕಾರ, ಸಾಡೇ ಸಾತಿಯ ಎರಡನೇ ಹಂತವು ಅತ್ಯಂತ ಕಷ್ಟಕರವಾದದ್ದು. ಏಕೆಂದರೆ ಈ ಸಮಯದಲ್ಲಿ ಶನಿಯ ಪ್ರಭಾವವು ನೇರವಾಗಿ ಮನಸ್ಸಿನ (ಚಂದ್ರ) ಮೇಲೆ ಬೀರುವುದರಿಂದ ವ್ಯಕ್ತಿಯು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಹೆಚ್ಚಿನ ಸವಾಲುಗಳನ್ನು ಎದುರಿಸಬೇಕಾಗುತ್ತದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಸಾಡೇ ಸಾತಿಯ ಕಷ್ಟಗಳನ್ನು ಕಡಿಮೆ ಮಾಡಲು ಸರಳ ಪರಿಹಾರಗಳು:

ಶನಿಯು ಕೇವಲ ಶಿಕ್ಷಿಸುವ ಗ್ರಹವಲ್ಲ, ಬದಲಿಗೆ ಶಿಸ್ತು ಮತ್ತು ಸರಿಯಾದ ಹಾದಿಯನ್ನು ಕಲಿಸುವ ‘ಕರ್ಮಫಲ ದಾತ’. ಸಾಡೇ ಸಾತಿಯ ನಕಾರಾತ್ಮಕ ಪ್ರಭಾವವನ್ನು ಕಡಿಮೆ ಮಾಡಲು ಈ ಕೆಳಗಿನ ಪರಿಹಾರಗಳನ್ನು ಮಾಡಬಹುದು:

  • ಪ್ರತಿ ಶನಿವಾರ ಶನಿ ದೇವಾಲಯಕ್ಕೆ ತೆರಳಿ ಶನಿ ದೇವರಿಗೆ ಸಾಸಿವೆ ಎಣ್ಣೆಯನ್ನು ಅರ್ಪಿಸಿ.
  • ನಿಯಮಿತವಾಗಿ ‘ಹನುಮಾನ್ ಚಾಲೀಸಾ’ ಪಠಿಸುವುದರಿಂದ ಶನಿ ದೋಷದ ಪ್ರಭಾವ ಶಮನವಾಗುತ್ತದೆ.
  • ಜೀವನದಲ್ಲಿ ಪ್ರಾಮಾಣಿಕತೆ, ಶಿಸ್ತು ಮತ್ತು ಒಳ್ಳೆಯ ಕಾರ್ಯಗಳನ್ನು ಕಾಯ್ದುಕೊಳ್ಳುವುದು ಶನಿಯ ಶುಭ ದೃಷ್ಟಿಗೆ ಕಾರಣವಾಗುತ್ತದೆ.

ಸಾಡೇ ಸಾತಿಯು ನಿಮ್ಮನ್ನು ಕುಗ್ಗಿಸುವುದಕ್ಕಲ್ಲ, ಬದಲಿಗೆ ಜೀವನದಲ್ಲಿ ಪ್ರಬುದ್ಧತೆ ಮತ್ತು ಶಿಸ್ತನ್ನು ಕಲಿಸಿಕೊಡಲು ಬರುತ್ತದೆ. ಧೈರ್ಯ ಮತ್ತು ಪರಿಹಾರ ಮಾರ್ಗಗಳ ಮೂಲಕ ಈ ಅವಧಿಯನ್ನು ಸುಲಭವಾಗಿ ದಾಟಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೆಹಲಿಯಲ್ಲಿ ಮುಂದುವರೆದ ಕಾಕ್ರೋಚ್ ಜನತಾ ಪಾರ್ಟಿ ಭಾರಿ ಪ್ರತಿಭಟನೆ – Kannada News | Delhi CJP Protest Continues: Demands NEET Justice and Sonam Wangchuk Release

ನವದೆಹಲಿ, ಜುಲೈ 21: ಕಾಕ್ರೋಚ್ ಜನತಾ ಪಾರ್ಟಿ(Cockroach Janta Party)ಯ ಪ್ರತಿಭಟನೆ ಮಂಗಳವಾರ ಕೂಡಾ ಮುಂದುವರೆದಿದೆ. ಜುಲೈ 20ರಂದು ನಡೆದ ಭಾರಿ ನೂಕಾಟ, ತಳ್ಳಾಟ, ಲಾರ್ಟಿಚಾರ್ಜ್​ ಬಳಿಕವೂ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಪೊಲೀಸರು ನಿನ್ನೆ ಜಂತರ್ ಮಂತರ್‌ನಲ್ಲಿದ್ದ ಟೆಂಟ್ ಹಾಗೂ ವೇದಿಕೆಗಳನ್ನು ತೆರವುಗೊಳಿಸಿದ್ದರಾದರೂ, ಪ್ರತಿಭಟನಾಕಾರರು ಮಂಗಳವಾರ ಬೆಳಗ್ಗೆ ಸ್ಥಳಕ್ಕೆ ಮರಳಿ ತಮ್ಮ ಪ್ರತಿಭಟನೆಯನ್ನು ಮುಂದುವರರೆಸಿದ್ದಾರೆ.

ಸಾಧ್ಯವಿರುವ ಎಲ್ಲೆಡೆ ಪೊಲೀಸರು ಮತ್ತು ಕ್ಷಿಪ್ರ ಕಾರ್ಯಪಡೆ (RAF) ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಪೊಲೀಸ್ ಪಡೆ ತೀವ್ರ ಕಟ್ಟೆಚ್ಚರ ವಹಿಸಿದೆ. ಸಂಸತ್ತಿನ ಸಮೀಪಕ್ಕೆ ಬಂದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿಪ್ರಹಾರ ಹಾಗೂ ಅಶ್ರುವಾಯು ಪ್ರಯೋಗಿಸಿದರು. ಈ ಘರ್ಷಣೆಯಲ್ಲಿ 100 ಕ್ಕೂ ಹೆಚ್ಚು ಪೊಲೀಸರು ಹಾಗೂ 60 ಕ್ಕೂ ಹೆಚ್ಚು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ.

ಪೊಲೀಸರ ಮೇಲೆ ದಾಳಿ ಮತ್ತು ಆಸ್ತಿ ಪಾಸ್ತಿ ಹಾನಿ ಆರೋಪದ ಮೇಲೆ ದೆಹಲಿ ಪೊಲೀಸರು 70 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿದ್ದು, ಅಪರಿಚಿತರ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದ್ದಾರೆ. ಉದ್ವಿಗ್ನತೆ ಹೆಚ್ಚುತ್ತಿದ್ದಂತೆ ಕೇಂದ್ರ ಸರ್ಕಾರ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಲು ಮುಂದಾಗಿದೆ. ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಸಿಜೆಪಿ ವಕ್ತಾರರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ತಮ್ಮ ನಿವಾಸದಲ್ಲಿ ಭೇಟಿಯಾಗಿ ಚರ್ಚಿಸಿದ್ದಾರೆ.

ಮತ್ತಷ್ಟು ಓದಿ: ಕೇಂದ್ರ ಸಚಿವ ಜೆ.ಪಿ. ನಡ್ಡಾಗೆ 3 ಬೇಡಿಕೆ ಸಲ್ಲಿಸಿದ ಸಿಜೆಪಿ ನಾಯಕರು; ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪಟ್ಟು

ಬೇಡಿಕೆಗಳೇನು?

-ಸೋನಮ್ ವಾಗ್ಚುಕ್ ಅವರನ್ನು ಯಾವುದೇ ನಿರ್ಬಂಧವಿಲ್ಲದೆ ತಕ್ಷಣ ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕು.

-ನೀಟ್ ಪೇಪರ್ ಸೋರಿಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು.

-ನೀಟ್ (NEET) ಪೇಪರ್ ಸೋರಿಕೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಅಭ್ಯರ್ಥಿಗಳ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡಬೇಕು.

ಸಭೆಯ ನಂತರ ಮಾತನಾಡಿದ ಸಿಜೆಪಿ ವಕ್ತಾರರು, ಸಚಿವರು ಬೇಡಿಕೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದ್ದಾರೆ. ಆದರೆ ಲಿಖಿತ ಭರವಸೆ ಸಿಗುವವರೆಗೆ ನಮ್ಮ ಶಾಂತಿಯುತ ಪ್ರತಿಭಟನೆ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಮುಂದುವರಿಕೆ
ಇನ್ನೊಂದೆಡೆ, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ತಮ್ಮ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುವುದಾಗಿ ಘೋಷಿಸಿದ್ದಾರೆ.

ಅವರ ಪತ್ನಿ ಗೀತಾಂಜಲಿ ಆಂಗ್ಮೋ ಸೋನಮ್ ಅವರ ಕೈಬರಹದ ಸಂದೇಶವನ್ನು ಹಂಚಿಕೊಂಡಿದ್ದು, ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ಯುವಕರ ಮೇಲಿನ ಪೋಲಿಸ್ ಕ್ರೌರ್ಯವನ್ನು ನೋಡಿ ಮನನೊಂದಿದ್ದೇನೆ. ಯುವ ನಾಯಕರಿಗೆ ಸಂಸದರನ್ನು ಸಂಸತ್ತಿನಲ್ಲಿ ಅಥವಾ ಆಸ್ಪತ್ರೆಯಲ್ಲಿ ಭೇಟಿಯಾಗಲು ಅವಕಾಶ ನೀಡುವವರೆಗೆ ನನ್ನ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸುತ್ತೇನೆ ಎಂದು ವಾಂಗ್ಚುಕ್ ಹೇಳಿರುವುದಾಗಿ ಆ ಸಂದೇಶದಲ್ಲಿ ಬರೆಯಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವಿಮೆ ಆಸೆಗೆ ತನ್ನದೇ ಅಂಗಡಿಯಲ್ಲಿ ಕಳ್ಳತನ ಮಾಡಿದ ಚಿನ್ನದಂಗಡಿ ಮಾಲೀಕ! ಕೊನೆಗೂ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ? – Kannada News | Belagavi Gold Shop Owner Arrested for Staging Theft to Claim Insurance, CCTV Exposes Plot

ವೇರ್ಣೇಕರ ಆಂಡ್ ಸನ್ಸ್ ಚಿನ್ನದಂಗಡಿImage Credit source: tv9

ಬೆಳಗಾವಿ, ಜುಲೈ 21: ಬೆಳಗಾವಿ (Belagavi) ನಗರದ ರಾಮದೇವ ಗಲ್ಲಿಯಲ್ಲಿರುವ ವಿಪಿ ವೇರ್ಣೇಕರ ಆಂಡ್ ಸನ್ಸ್ ಚಿನ್ನದಂಗಡಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಅಚ್ಚರಿಯ ತಿರುವು ಸಿಕ್ಕಿದೆ. ಅಂಗಡಿಯ ಮಾಲೀಕ ಕೃಷ್ಣಾನಂದ ವೇರ್ಣೇಕರ ಅವರೇ ವಿಮೆ ಹಣ ಪಡೆಯುವ ಉದ್ದೇಶದಿಂದ ಹಾಗೂ ಅಡವಿಟ್ಟಿದ್ದ ಚಿನ್ನವನ್ನು ಅಕ್ರಮವಾಗಿ ತಮ್ಮ ವಶಕ್ಕೆ ಪಡೆಯಲು ಕಳ್ಳತನದ ನಾಟಕ ರೂಪಿಸಿದ್ದಾಗಿ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ತನ್ನದೇ ಅಂಗಡಿಯಿಂದ 65.95 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ

ಆರೋಪಿ ಕೃಷ್ಣಾನಂದ ವೇರ್ಣೇಕರ ತನ್ನ ಅಂಗಡಿಯಿಂದ ಸುಮಾರು 65.95 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ ನಗದು ಕಳುವಾಗಿದೆ ಎಂದು ಖಡೇಬಜಾರ್ ಠಾಣೆಗೆ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶ್ವಾನದಳದೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ.

ಕಳ್ಳತನಕ್ಕೂ ಮುನ್ನ ಸಿಸಿಟಿವಿ ಸ್ಥಗಿತಗೊಳಿಸಲು ಯತ್ನಿಸಿದ್ದ ಆರೋಪಿ

ಕಳ್ಳತನಕ್ಕೂ ಮುನ್ನ ಸಿಸಿಟಿವಿ ಸ್ಥಗಿತಗೊಳಿಸಲು ಆರೋಪಿ ಯತ್ನಿಸಿದ್ದ. ಆದರೆ ಡಿಸ್‌ಪ್ಲೇ ಮಾತ್ರ ಆಫ್ ಆಗಿ, ಕ್ಯಾಮೆರಾ ರೆಕಾರ್ಡಿಂಗ್ ಮುಂದುವರಿದ ಕಾರಣ, ಚಿನ್ನಾಭರಣ ಮತ್ತು ನಗದನ್ನು ತೆಗೆದು ತನ್ನ ಸ್ಕೂಟಿಯ ಡಿಕ್ಕಿಯಲ್ಲಿ ಇಡುತ್ತಿರುವ ದೃಶ್ಯಗಳು ಸೆರೆಯಾಗಿವೆ. ಈ ಸಾಕ್ಷ್ಯದ ಆಧಾರದ ಮೇಲೆ ವಿಚಾರಣೆ ನಡೆಸಿದಾಗ ಆರೋಪಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.

ಇದನ್ನೂ ಓದಿ: ಮೊಬೈಲ್ ವಾಪಸ್ ನೀಡಿಲ್ಲವೆಂದು ದೇವಸ್ಥಾನದಲ್ಲೇ ಗೆಳೆಯನ ಕೊಲೆ! ಆರೋಪಿ ಅರೆಸ್ಟ್

ಆರೋಪಿಯಿಂದ 519.8 ಗ್ರಾಂ ಚಿನ್ನಾಭರಣ (₹62.60 ಲಕ್ಷ), 31 ಗ್ರಾಂ ಬೆಳ್ಳಿ ಆಭರಣ (₹60 ಸಾವಿರ), ₹2.83 ಲಕ್ಷ ನಗದು ಹಾಗೂ ₹45 ಸಾವಿರ ಮೌಲ್ಯದ ಬೈಕ್ ಸೇರಿದಂತೆ ಒಟ್ಟು ಸುಮಾರು ₹65.95 ಲಕ್ಷ ಮೌಲ್ಯದ ಸ್ವತ್ತುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಡೇಬಜಾರ್ ಠಾಣೆ ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

23 ವರ್ಷಗಳ ಬಳಿಕ ಸರಣಿ: ಆಸ್ಟ್ರೇಲಿಯಾ ಟೆಸ್ಟ್ ತಂಡ ಪ್ರಕಟ – Kannada News | Australia Test Squad For Bangladesh Test Series

ಬಾಂಗ್ಲಾದೇಶ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. ತವರಿನಲ್ಲಿ ನಡೆಯಲಿರುವ ಈ ಸರಣಿಗಾಗಿ 13 ಸದಸ್ಯರುಗಳ ತಂಡವನ್ನು ಘೋಷಿಸಲಾಗಿದ್ದು, ತಂಡದ ನಾಯಕನಾಗಿ ಪ್ಯಾಟ್ ಕಮಿನ್ಸ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಗಾಯದ ಕಾರಣ ಕಳೆದ ಕೆಲ ಸರಣಿಗಳಿಂದ ಹೊರಗುಳಿದಿದ್ದ ಪ್ರಮುಖ ಆಟಗಾರರು ಈ ಸರಣಿ ಮೂಲಕ ಕಂಬ್ಯಾಕ್ ಮಾಡಲಿದ್ದಾರೆ.

 ಸ್ಟಾರ್ ಆಟಗಾರರ ಕಂಬ್ಯಾಕ್:

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿರುವ ಈ ಸರಣಿಯ ಮೂಲಕ ಅನುಭವಿ ವೇಗಿ ಜೋಶ್ ಹೇಝಲ್​ವುಡ್ ಮತ್ತು ಹಿರಿಯ ಸ್ಪಿನ್ನರ್ ನಾಥನ್ ಲಿಯಾನ್ ಕಂಬ್ಯಾಕ್ ಮಾಡಲಿದ್ದಾರೆ. ಈ ಇಬ್ಬರು ಗಾಯದ ಕಾರಣ ಕೆಲ ಸರಣಿಗಳಿಂದ ಹೊರಗುಳಿದಿದ್ದರು. ಇದೀಗ ಅನುಭವಿ ಬೌಲರ್​ಗಳ ಆಗಮನದೊಂದಿಗೆ ಆಸೀಸ್ ಪಡೆ ಮತ್ತಷ್ಟು ಬಲಿಷ್ಠವಾಗಿದೆ.

ಉಸ್ಮಾನ್ ಖ್ವಾಜಾ ನಿವೃತ್ತಿ:

ಆಸ್ಟ್ರೇಲಿಯಾ ತಂಡದ  ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾ ಈಗಾಗಲೇ ನಿವೃತ್ತಿ ಘೋಷಿಸಿದ್ದಾರೆ. ಅವರ ನಿವೃತ್ತಿಯ ನಂತರ ಆಸ್ಟ್ರೇಲಿಯಾ ಆಡುತ್ತಿರುವ ಮೊದಲ ಟೆಸ್ಟ್ ಸರಣಿ ಇದಾಗಿದೆ. ಅವರ ಸ್ಥಾನಕ್ಕೆ ದೇಶೀಯ ಅಂಗಳದ ಅನುಭವಿ ದಾಂಡಿಗ ಜೇಕ್ ವೆದರಾಲ್ಡ್ ಅವರನ್ನು ಆಯ್ಕೆ ಮಾಡಲಾಗಿದೆ.

ಇನ್ನು ತಂಡದಲ್ಲಿ ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಕ್ಯಾಮರೋನ್ ಗ್ರೀನ್, ಮಿಚೆಲ್ ಸ್ಟಾರ್ಕ್​ನಂತಹ ಸ್ಟಾರ್ ಆಟಗಾರರ ದಂಡೇ ಇದೆ. ಅದರಂತೆ ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ತಂಡ ಈ ಕೆಳಗಿನಂತಿದೆ…

ಆಸ್ಟ್ರೇಲಿಯಾ ಟೆಸ್ಟ್ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಟ್ರಾವಿಸ್ ಹೆಡ್, ಕ್ಯಾಮರೋನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಜೋಶ್ ಇಂಗ್ಲಿಸ್, ಮಿಚೆಲ್ ಸ್ಟಾರ್ಕ್​, ಜೋಶ್ ಹೇಝಲ್​ವುಡ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್, ಜೇಕ್ ವೆದರಾಲ್ಡ್, ಬ್ಯೂ ವೆಬ್​​ಸ್ಟರ್.

  • ಆಸ್ಟ್ರೇಲಿಯಾದಲ್ಲಿ ಬಾಂಗ್ಲಾದೇಶ್ ಕೊನೆಯ ಟೆಸ್ಟ್ ಸರಣಿ ಆಡಿದ್ದು 2003 ರಲ್ಲಿ.
  • 23 ವರ್ಷಗಳ ಬಳಿಕ ಕಾಂಗರೂನಾಡಿನಲ್ಲಿ ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ್ ಮುಖಾಮುಖಿ.

ಆಸ್ಟ್ರೇಲಿಯಾ-ಬಾಂಗ್ಲಾದೇಶ್ ಟೆಸ್ಟ್ ಸರಣಿ ವೇಳಾಪಟ್ಟಿ:

ಪಂದ್ಯ ದಿನಾಂಕ ಮೈದಾನ
ಮೊದಲ ಟೆಸ್ಟ್ ಆಗಸ್ಟ್ 13–17, 2026 ಮರಾರಾ ಕ್ರಿಕೆಟ್ ಮೈದಾನ, ಡಾರ್ವಿನ್
ಎರಡನೇ ಟೆಸ್ಟ್ ಆಗಸ್ಟ್ 22–26, 2026 ಗ್ರೇಟ್ ಬ್ಯಾರಿಯರ್ ರೀಫ್ ಅರೆನಾ, ಮಕಾಯ್

ಇದನ್ನೂ ಓದಿ: ಒಂದೇ ಒಂದು ಗೋಲು… ಎಲ್ಲಾ ತಂಡಗಳಿಗೆ ಪೇನ್ ನೀಡಿದ ಸ್ಪೇನ್!

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ರೇಸ್‌ನಲ್ಲಿ ಮುನ್ನಡೆಯಲು ಆಸ್ಟ್ರೇಲಿಯಾ ತಂಡಕ್ಕೆ ಈ ತವರಿನ ಸರಣಿ ಅತ್ಯಂತ ನಿರ್ಣಾಯಕವಾಗಿದೆ. ಏಕೆಂದರೆ ಈ ಸರಣಿಯಲ್ಲಿ 2 ಪಂದ್ಯಗಳನ್ನು ಗೆದ್ದರೆ ಆಸ್ಟ್ರೇಲಿಯಾ ತಂಡವು ಮುಂದಿನ 12 ಪಂದ್ಯಗಳಲ್ಲಿ 4 ಮ್ಯಾಚ್​ ಗೆದ್ದರೆ ಫೈನಲ್​ ಆಡುವುದು ಬಹುತೇಕ ಖಚಿತವಾಗಲಿದೆ.

ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ನಡುವೆ ಟೆಸ್ಟ್ ಸರಣಿ ನಡೆಯುತ್ತಿರುವುದು ಬರೋಬ್ಬರಿ 9 ವರ್ಷಗಳ (nearly a decade) ಬಳಿಕವಾಗಿದೆ.

Published On – 10:01 am, Tue, 21 July 26

Source link

‘ಡ್ರ್ಯಾಗನ್’ಗೂ ಮುನ್ನ ಪ್ರಶಾಂತ್ ನೀಲ್ ಹೊಸ ಸಾಹಸ; ಹಾರರ್ ಸಿನಿಮಾ ಪ್ರೆಸೆಂಟರ್ ಆದ ನಿರ್ದೇಶಕ – Kannada News | Prashanth Neel Presents 418 Horror Film Amidst Jr NTR Dragon Production

ಕೆಜಿಎಫ್ ಮತ್ತು ಸಲಾರ್ ಚಿತ್ರಗಳ ಮೂಲಕ ಪ್ರಶಾಂತ್ ನೀಲ್ ಭಾರತೀಯ ಚಿತ್ರರಂಗದ ಬಿಗ್ ಡೈರೆಕ್ಟರ್ ಆಗಿ ಗುರುತಿಸಿಕೊಂಡಿದ್ದಾರೆ. ಸದ್ಯ ಅವರು ಜೂನಿಯರ್ ಎನ್‌ಟಿಆರ್ ನಟನೆಯ ‘ಡ್ರಾಗನ್’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ ಪ್ರಶಾಂತ್ ನೀಲ್ ಈಗ ಹೊಸದೊಂದು ಸಣ್ಣ ಸಿನಿಮಾಗೆ ಪ್ರೆಸೆಂಟರ್ ಆಗಿ ಸಾಥ್ ನೀಡಿದ್ದಾರೆ. ಆ ಚಿತ್ರದ ಹೆಸರು ‘418’. ಪ್ರಶಾಂತ್ ನೀಲ್ ಈ ಸಿನಿಮಾ ಒಪ್ಪಿಕೊಂಡಿದ್ದಾರೆ ಎಂದರೆ ಅದರಲ್ಲಿ ಏನೋ ವಿಶೇಷತೆ ಇರಲೇಬೇಕು ಎಂಬುದು ಅನೇಕರ ಕುತೂಹಲ.

‘ಪುಷ್ಪ’ ಸಿನಿಮಾ ಖ್ಯಾತಿಯ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಜೊತೆ ಸೇರಿ ಪ್ರಶಾಂತ್ ನೀಲ್ ಈ ಹಾರರ್ ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿದ್ದಾರೆ. ಜುಲೈ 19ರ ಭಾನುವಾರ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮತ್ತು ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದೆ. ಜುಲೈ 31ರಂದು ಈ ಸಿನಿಮಾ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ರೂಮ್ ಒಳಗಡೆ ಹುಡುಗಿ ದೆವ್ವದ ಅವಾತರದಲ್ಲಿ ಕುಳಿತಿರುವ ಫಸ್ಟ್ ಲುಕ್ ಪೋಸ್ಟರ್ ಹಾರರ್ ವೈಬ್ಸ್ ನೀಡುತ್ತಿದೆ.

ಈ ಚಿತ್ರವನ್ನು ಕೀರ್ತನ್ ನಾಡಗೌಡ ನಿರ್ದೇಶನ ಮಾಡಿದ್ದಾರೆ. ಇವರು ಈ ಹಿಂದೆ ಪ್ರಶಾಂತ್ ನೀಲ್ ಅವರ ಬಳಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು. ಇದು ಇವರ ಮೊದಲ ನಿರ್ದೇಶನದ ಸಿನಿಮಾವಾಗಿದೆ. ಚಿತ್ರದಲ್ಲಿ ಸೂರ್ಯ ರಾಜ್, ಚರಣ್ ಲಕ್ಕರಾಜು ಮತ್ತು ಪ್ರೀತಿ ಪಗಡಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವೆಂಕಿ ಜಿಜಿ ಈ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಸಿನಿಮಾ ರಿಲೀಸ್ ಹತ್ತಿರ ಇರುವುದರಿಂದ ಮುಂದಿನ ಒಂದೆರಡು ದಿನಗಳಲ್ಲಿ ಟ್ರೈಲರ್ ಬರುವ ನಿರೀಕ್ಷೆ ಇದೆ.

ಇದನ್ನೂ ಓದಿ: ಸದ್ಯಕ್ಕಂತೂ ಸೆಟ್ಟೇರಲ್ಲ ಮಹೇಶ್​ ಬಾಬು-ಪ್ರಶಾಂತ್ ನೀಲ್ ಸಿನಿಮಾ; ಇಲ್ಲಿದೆ ಕಾರಣಗಳ ಪಟ್ಟಿ

ಭಾರೀ ಕುತೂಹಲ ಮೂಡಿಸಿರುವ ‘ಡ್ರ್ಯಾಗನ್’ ಸಿನಿಮಾ

ಇನ್ನು ಪ್ರಶಾಂತ್ ನೀಲ್ ಡೈರೆಕ್ಟ್ ಮಾಡುತ್ತಿರುವ ಬಿಗ್ ಬಜೆಟ್ ಆ್ಯಕ್ಷನ್ ಸಿನಿಮಾ ‘ಡ್ರ್ಯಾಗನ್’ ಮೇಲೆ ಸಿನಿಪ್ರೀಕ್ಷಕರು ಕಣ್ಣಿಟ್ಟಿದ್ದಾರೆ. ಈ ಚಿತ್ರದಲ್ಲಿ ಮ್ಯಾನ್ ಆಫ್ ಮಾಸಸ್ ಜೂನಿಯರ್ ಎನ್‌ಟಿಆರ್ ನಾಯಕರಾಗಿ ಅಬ್ಬರಿಸಲಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್, ಸ್ಯಾಂಡಲ್‌ವುಡ್ ಬ್ಯೂಟಿ ರುಕ್ಮಿಣಿ ವಸಂತ್, ಬಿಜು ಮೆನನ್ ಹಾಗೂ ಅಶುತೋಷ್ ರಾಣಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಬಿರುಸಿನ ಶೂಟಿಂಗ್ ಹಂತದಲ್ಲಿರುವ ಈ ಹೈ-ವೋಲ್ಟೇಜ್ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ 2027ರ ಜೂನ್ 11ರಂದು ವಿಶ್ವಾದ್ಯಂತ ಭರ್ಜರಿಯಾಗಿ ತೆರೆಗೆ ಬರಲು ಸಜ್ಜಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಿಶ್ಚಿತಾರ್ಥ ಮುಗಿದು ವಾರವಷ್ಟೇ ಕಳೆದಿತ್ತು, ರಷ್ಯಾದ ಕ್ಷಿಪಣಿ ದಾಳಿಗೆ ಉಕ್ರೇನ್ ಕರಾವಳಿಯಲ್ಲಿ ಕೇರಳದ ನಾವಿಕ ಬಲಿ – Kannada News | Kerala Sailor Killed by Russian Missile in Ukraine: Akhil Joyan’s Tragic End After Engagement

ಟೆಹ್ರಾನ್, ಜುಲೈ 21: ನಿಶ್ಚಿತಾರ್ಥ ಮುಗಿದು ಕೇವಲ ಒಂದು ವಾರವಷ್ಟೇ ಆಗಿತ್ತು, ಕೆಲವೇ ತಿಂಗಳುಗಳಲ್ಲಿ ಮದುವೆಯಾಗುವುದು ಕೂಡ ನಿಶ್ಚಯವಾಗಿತ್ತು. ಹೊಸ ಕನಸುಗಳು, ಹೊಸ ಕನಸುಗಳು, ಹೊಸ ಮನೆ ಮತ್ತು ಕುಟುಂಬಕ್ಕೆ ಉತ್ತಮ ಭವಿಷ್ಯ ಕಟ್ಟಿಕೊಡುವ ಹಂಬಲ. ಆದರೆ ವಿಧಿ ಆಟವೇ ಬೇರೆಯಾಗಿತ್ತು. ಸಾವಿರಾರು ಮೈಲಿಗಳ ದೂರದಲ್ಲಿ ನಡೆಯುತ್ತಿರುವ ರಷ್ಯಾ-ಉಕ್ರೇನ್(Ukraine) ಯುದ್ಧದ ಜ್ವಾಲೆಗೆ ಕೇರಳದ 26 ವರ್ಷದ ಅಮಾಯಕರೊಬ್ಬರು ಬಲಿಯಾಗಿದ್ದಾರೆ.

ಕೇರಳದ ಕಾಸರಗೋಡು ಜಿಲ್ಲೆಯ ವೆಲ್ಲರಿಕ್ಕುಂಡು ನಿವಾಸಿ, ನಾವಿಕ ಅಖಿಲ್ ಜೋಯನ್ ಉಕ್ರೇನ್‌ನ ಒಡೆಸಾ ಬಂದರು ಕರಾವಳಿಯಲ್ಲಿ ರಷ್ಯಾದ ಕ್ಷಿಪಣಿ ದಾಳಿಗೆ ಬಲಿಯಾದ ನಾಲ್ವರು ಭಾರತೀಯರಲ್ಲಿ ಒಬ್ಬರು.

ನಿಶ್ಚಿತಾರ್ಥವಾಗಿ ತಿಂಗಳು ಕಳೆಯುವಷ್ಟರಲ್ಲೇ ವಾಪಸ್ ಹೊರಟಿದ್ದ ಅಖಿಲ್
ಅಖಿಲ್ ಜೋಯನ್ ಕೇವಲ 19 ನೇ ವಯಸ್ಸಿನಲ್ಲಿಯೇ ಮರ್ಚೆಂಟ್ ನೇವಿಗೆ ಸೇರಿದ್ದರು. ಕಳೆದ 6 ವರ್ಷಗಳಿಂದ ಹಡಗಿನಲ್ಲಿ ನಾವಿಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಖಿಲ್, ತಮ್ಮ ಶ್ರಮದಿಂದಲೇ ಇತ್ತೀಚೆಗಷ್ಟೇ ಸುಂದರವಾದ ಹೊಸ ಮನೆಯೊಂದನ್ನು ಕಟ್ಟಿದ್ದರು. ಎಲೆಕ್ಟ್ರಿಕಲ್ ಅಂಗಡಿ ನಡೆಸುವ ತಂದೆ ಜೋಯನ್ ಮತ್ತು ವಿಮಾ ಏಜೆಂಟ್ ತಾಯಿ ಸ್ಯಾಲಿ ದಂಪತಿಗೆ ಅಖಿಲ್ ಏಕೈಕ ಪುತ್ರ.

ಕೆಲವೇ ದಿನಗಳ ಹಿಂದೆಯಷ್ಟೇ ಆಲಪ್ಪುಳ ಮೂಲದ ಯುವತಿಯೊಂದಿಗೆ ಅಖಿಲ್ ಅವರ ನಿಶ್ಚಿತಾರ್ಥ ವೈಭವದಿಂದ ನೆರವೇರಿತ್ತು. ಇನ್ನೆರಡು ತಿಂಗಳಲ್ಲಿ ಮದುವೆ ನಿಗದಿಯಾಗಿತ್ತು. ಮದುವೆಯ ನಂತರ ಈ ಅಪಾಯಕಾರಿ ಹಡಗಿನ ಕೆಲಸ ತೊರೆದು ಬೇರೆಡೆ ಹೊಸ ಕೆಲಸಕ್ಕೆ ಸೇರಬೇಕೆಂಬುದು ಅವರ ಕನಸಾಗಿತ್ತು. ಆದರೆ, ನಿಶ್ಚಿತಾರ್ಥ ಮುಗಿಸಿ ಕೆಲಸಕ್ಕೆ ಮರಳಿದ ಕೇವಲ ಒಂದು ತಿಂಗಳಿನಲ್ಲೇ ಈ ಭೀಕರ ದುರಂತ ಸಂಭವಿಸಿದೆ.

ಮತ್ತಷ್ಟು ಓದಿ: ರಷ್ಯಾಗೆ ಮತ್ತೊಂದು ಹೊಡೆತ; ಕ್ರಿಮಿಯನ್ ಸೇತುವೆ ಸ್ಫೋಟಗೊಳಿಸಿದ ಉಕ್ರೇನ್

ಕತ್ತಲೆಯಲ್ಲಿ ಮುಳುಗಿದ ಹುಟ್ಟೂರು: ಇ-ಮೇಲ್ ಮೂಲಕ ಬಂದ ಆಘಾತಕಾರಿ ಸುದ್ದಿ
ಸೋಮವಾರ ಸಂಜೆ ಅಖಿಲ್ ಕೆಲಸ ಮಾಡುತ್ತಿದ್ದ ಶಿಪ್ಪಿಂಗ್ ಕಂಪನಿಯಿಂದ ಕುಟುಂಬಕ್ಕೆ ಬಂದ ಒಂದೇ ಒಂದು ಇಮೇಲ್ ಇಡೀ ಕುಟುಂಬದ ಕನಸುಗಳನ್ನು ನುಚ್ಚುನೂರು ಮಾಡಿತು. ಅಖಿಲ್ ತಮ್ಮ ಹುಟ್ಟೂರಿನಲ್ಲಿ ಅತ್ಯಂತ ಜನಪ್ರಿಯ ಮತ್ತು ಶಿಸ್ತಿನ ಯುವಕನಾಗಿದ್ದರು.

ಉಕ್ರೇನ್‌ನ ‘ಒಡೆಸಾ’ ಕರಾವಳಿಯಲ್ಲಿ ನಡೆದಿದ್ದೇನು?
ವಿದೇಶಿ ಮಾಧ್ಯಮಗಳ ಪ್ರಕಾರ, ಪಶ್ಚಿಮ ಆಫ್ರಿಕಾದ ಧ್ವಜವನ್ನು ಹೊಂದಿದ್ದ ‘ಎಂವಿ ಗೋಲ್ಡನ್ ಲಿಯೋ’ ಎಂಬ ಸರಕು ಸಾಗಣೆ ಹಡಗು ಉಕ್ರೇನಿಯನ್ ಜೋಳವನ್ನು ಹೊತ್ತು ಒಡೆಸಾ ಬಂದರಿನಿಂದ ಹೊರಟಿತ್ತು. ಈ ವೇಳೆ ರಷ್ಯಾದ ಪಡೆಗಳು ನಡೆಸಿದ ಭಾರಿ ದಾಳಿಗೆ ಹಡಗು ಸಿಲುಕಿ, ಭಾರತದ ನಾಲ್ವರು ಹಾಗೂ ಸಿರಿಯಾದ ಐವರು ನಾವಿಕರು ಸೇರಿದಂತೆ ಒಟ್ಟು 10 ಸಿಬ್ಬಂದಿ ದುರಂತ ಅಂತ್ಯ ಕಂಡಿದ್ದಾರೆ.

ಸದ್ಯ ಅಖಿಲ್ ಅವರ ಭೌತಿಕ ಶರೀರವನ್ನು ಸ್ವದೇಶಕ್ಕೆ ತರಲು ಕೇರಳ ಮುಖ್ಯಮಂತ್ರಿ ಕಚೇರಿ ಹಾಗೂ ನೋರ್ಕಾ ಇಲಾಖೆಯು ರಷ್ಯಾದ ಕಾನ್ಸುಲೇಟ್ ಮತ್ತು ಭಾರತದ ವಿದೇಶಾಂಗ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 9:36 am, Tue, 21 July 26

Source link

ಒಂದೇ ಒಂದು ಗೋಲು… ಎಲ್ಲಾ ತಂಡಗಳಿಗೆ ಪೇನ್ ನೀಡಿದ ಸ್ಪೇನ್! – Kannada News | Just One Goal: Spain Inflicts Maximum Pain

ಒಂದೇ ಒಂದು ಗೋಲು… ಫಿಫಾ ವಿಶ್ವಕಪ್​ ಅನ್ನು ಹೀಗೂ ಗೆಲ್ಲಬಹುದಾ? ಅದು ಕೂಡ ಒಂದು ಗೋಲು ಬಾರಿಸಿ, ಒಂದು ಗೋಲು ಹೊಡೆಸಿಕೊಂಡು… ಅಚ್ಚರಿ ಎನಿಸಿದರೂ ಇದುವೇ ಸತ್ಯ. ಫುಟ್‌ಬಾಲ್ ಇತಿಹಾಸದ ಸಕಲ ದಾಖಲೆಗಳನ್ನು ಧೂಳೀಪಟ ಮಾಡಿ ಸ್ಪೇನ್ ಪಡೆ ವಿಶ್ವ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದೆ. ಅದು ಸಹ ಎದುರಾಳಿಗಳ ಆಕ್ರಮಣಕ್ಕೆ ಬಂಡೆಯಂತೆ ಎದುರಾಗಿ ನಿಂತು ಎಂಬುದು ವಿಶೇಷ.

ಏಕೆಂದರೆ ಈ ಬಾರಿಯ ಟೂರ್ನಿಯಲ್ಲಿ ಸ್ಪೇನ್ ನೆಟ್ ಒಳಗೆ ನುಗ್ಗಿದ್ದು ಕೇವಲ ಒಂದೇ ಒಂದು ಗೋಲು ಎಂದರೆ ನೀವು ನಂಬಲೇಬೇಕು. ಅಂದರೆ, ಮೈದಾನದಲ್ಲಿ ಟಿಕಿ-ಟಾಕಾ ಜಾದೂ ಪ್ರದರ್ಶಿಸಿದ ‘ಲಾ ರೋಜಾ’ ಪಡೆ, ರಕ್ಷಣಾ ವಿಭಾಗದಲ್ಲಿಇಡೀ ಜಗತ್ತೇ ಬೆರಗಾಗುವಂತಹ ಪಾರುಪತ್ಯ ಮೆರೆಯಿತು. ಈ ಮೂಲಕ ವಿಶ್ವಕಪ್ ಫುಟ್‌ಬಾಲ್ ಇತಿಹಾಸದಲ್ಲೇ ಅಪ್ರತಿಮ ರಕ್ಷಣಾತ್ಮಕ ಶೈಲಿಯಲ್ಲಿ ವಿಶ್ವ ಕಿರಿಟ ಮುಡಿಗೇರಿಸಿಕೊಂಡ ತಂಡವೆಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿತು.

ಟಿಕಿ-ಟಾಕಾ ಫೈನಲ್:

ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾವನ್ನು ಹೆಚ್ಚುವರಿ ಸಮಯದಲ್ಲಿ 1-0 ಗೋಲಿನಿಂದ ಮಣಿಸಿದ ಸ್ಪೇನ್, 2026ರ ಫಿಫಾ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕೋಚ್ ಲೂಯಿಸ್ ಡಿ ಲಾ ಫ್ಯುಯೆಂಟೆ ನೇತೃತ್ವದ ‘ಲಾ ರೋಜಾ’ (ಸ್ಪೇನ್), ಆಧುನಿಕ ಟ್ಯಾಕ್ಟಿಕಲ್ ಶೈಲಿ ಮತ್ತು ಅಪ್ರತಿಮ ಪಾಸಿಂಗ್ ಆಟದ ಮೂಲಕ ಹಾಲಿ ಚಾಂಪಿಯನ್ ಅರ್ಜೆಂಟೀನಾವನ್ನು ಸಂಪೂರ್ಣವಾಗಿ ಕಟ್ಟಿಹಾಕಿತು. ಈ ಮೂಲಕ ಲಿಯೋನೆಲ್ ಮೆಸ್ಸಿಯವರ ವಿಶ್ವಕಪ್ ವಿದಾಯದ ಪಂದ್ಯಕ್ಕೆ ಸ್ಪೇನ್ ಶಾಕ್ ನೀಡಿತು.

ಸ್ಪೇನ್ ತಂಡದ ಈ ಗೆಲುವು ಕೇವಲ ಅದೃಷ್ಟದ್ದಲ್ಲ, ಅದು ಅವರ ಅತ್ಯುತ್ತಮ ಆಟದ ತಂತ್ರಕ್ಕೆ ಸಿಕ್ಕ ಪ್ರತಿಫಲವಾಗಿತ್ತು. ಏಕೆಂದರೆ  ಫೈನಲ್​ ಪಂದ್ಯದಲ್ಲಿ ಸ್ಪೇನ್ ಬರೋಬ್ಬರಿ 853 ಪಾಸ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು. ಅರ್ಜೆಂಟೀನಾ ಆಟಗಾರರಿಗಿಂತ 400ಕ್ಕೂ ಹೆಚ್ಚು ಬಾರಿ ಸ್ಪೇನ್ ಚೆಂಡನ್ನು ತನ್ನ ಬಳಿಯೇ ಇಟ್ಟುಕೊಳ್ಳುವ ಮೂಲಕ ಎದುರಾಳಿಗಳಿಗೆ ಆಕ್ರಮಣ ಮಾಡಲು ಅವಕಾಶವನ್ನೇ ನೀಡಲಿಲ್ಲ.

ಬಲಿಷ್ಠ ರಕ್ಷಣಾ ಕೋಟೆ:

2026ರ ಫಿಫಾ ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಸ್ಪೇನ್ ಎದುರಾಳಿಗಳಿಗೆ ಬಿಟ್ಟುಕೊಟ್ಟಿದ್ದು ಕೇವಲ ಒಂದೇ ಒಂದು ಗೋಲು. ಈ ಮೂಲಕ ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಬಲಿಷ್ಠ ರಕ್ಷಣಾತ್ಮಕ ಆಟ ಆಡಿದ ಐತಿಹಾಸಿಕ ದಾಖಲೆಯನ್ನು ಸ್ಪೇನ್ ತನ್ನದಾಗಿಸಿಕೊಂಡಿದೆ.

ಇಡೀ ಟೂರ್ನಿಯಲ್ಲಿ ಸ್ಪೇನ್ ವಿರುದ್ಧ ಗೋಲು ಬಾರಿಸಲು ಸಾಧ್ಯವಾಗಿದ್ದು ಬೆಲ್ಜಿಯಂ ತಂಡಕ್ಕೆ ಮಾತ್ರ (ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ). ಅದನ್ನು ಬಿಟ್ಟರೆ ಉಳಿದ ಯಾವುದೇ ತಂಡಕ್ಕೂ ಸ್ಪೇನ್ ವಿರುದ್ಧ ಗೋಲು ಹೊಡೆಯಲು ಸಾಧ್ಯವಾಗಲಿಲ್ಲಎಂಬುದೇ ಅಚ್ಚರಿ.

ಉನೈ ಸಿಮನ್ ವಿಶ್ವ ದಾಖಲೆ:

ಸ್ಪೇನ್ ತಂಡದ ಗೋಲ್‌ಕೀಪರ್ ಉನೈ ಸಿಮನ್ ಸತತ 650 ನಿಮಿಷಗಳ ಕಾಲ ಎದುರಾಳಿಗಳಿಗೆ ಒಂದೂ ಗೋಲು ಬಿಟ್ಟುಕೊಡದೆ ವಿಶ್ವಕಪ್ ಇತಿಹಾಸದಲ್ಲೇ ಸುದೀರ್ಘ ಸಮಯ ಕ್ಲೀನ್ ಶೀಟ್ ಸಾಧಿಸಿದ ಹೊಸ ದಾಖಲೆ ಬರೆದಿದ್ದಾರೆ. ಅಂದರೆ ವಿಶ್ವಕಪ್ ಇತಿಹಾಸದಲ್ಲೇ ಯಾವುದೇ ಗೋಲ್ ಕೀಪರ್ ಇಷ್ಟೊತ್ತು ನಿಂತು ಕೇವಲ ಒಂದು ಗೋಲು ಬಿಟ್ಟು ಕೊಟ್ಟಿರುವುದು ಇದೇ ಮೊದಲು.

ಸ್ಪೇನ್ ಆಡಿದ ಒಟ್ಟು 8 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಎದುರಾಳಿಗಳಿಗೆ ಒಂದು ಗೋಲನ್ನೂ ಬಿಟ್ಟುಕೊಡದೆ ಟೂರ್ನಿ ಮುಗಿಸಿದೆ. ಅದರಲ್ಲೂ ಸೆಮಿಫೈನಲ್‌ನಲ್ಲಿ ಬಲಿಷ್ಠ ಫ್ರಾನ್ಸ್ ಮತ್ತು ಫೈನಲ್‌ನಲ್ಲಿ ಅರ್ಜೆಂಟೀನಾದಂತಹ ತಂಡಗಳನ್ನೂ ಸ್ಪೇನ್ ಶೂನ್ಯಕ್ಕೆ ಕಟ್ಟಿಹಾಕಿ ಇಡೀ ವಿಶ್ವವೇ ನಿಬ್ಬೆರಗಾಗುವಂತೆ ಮಾಡಿದೆ.

ಐತಿಹಾಸಿಕ ಸಾಧನೆ:

ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಗೋಲು ಹೊಡೆಸಿಕೊಂಡ ಚಾಂಪಿಯನ್ ಪಟ್ಟ ಅಲಂಕರಿಸಿದ ವಿಶ್ವ ದಾಖಲೆ ಸ್ಪೇನ್ ತಂಡದ ಹೆಸರಿನಲ್ಲಿತ್ತು. ಇದೀಗ ತನ್ನದೇ ದಾಖಲೆಯನ್ನು ಮುರಿದು ‘ಲಾ ರೋಜಾ’ ಪಡೆ ಹೊಸ ಇತಿಹಾಸ ನಿರ್ಮಿಸಿದೆ.

  • 2010ರ ವಿಶ್ವಕಪ್​ನಲ್ಲಿ ಸ್ಪೇನ್ ತಂಡವು ಕೇವಲ 2 ಗೋಲು ಹೊಡೆಸಿಕೊಂಡು ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು.
  • 2026 ರಲ್ಲಿ ಕೇವಲ ಒಂದು ಗೋಲು ಮಾತ್ರ ಹೊಡೆಸಿಕೊಂಡು ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಸ್ಪೇನ್ ಪಡೆ ತನ್ನದೇ ವಿಶ್ವ ದಾಖಲೆಯನ್ನು ಮುರಿದಿದೆ.

ಅತೀ ಕಡಿಮೆ ಹೊಡೆಸಿಕೊಂಡು ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡ:

  • ಸ್ಪೇನ್ (2026): 1 ಗೋಲು
  • ಸ್ಪೇನ್ (2010): 2 ಗೋಲುಗಳು
  • ಇಟಲಿ (2006): 2 ಗೋಲುಗಳು
  • ಫ್ರಾನ್ಸ್ (1998): 2 ಗೋಲುಗಳು

ಒಟ್ಟಾರೆಯಾಗಿ ಹೇಳುವುದಾದರೆ, 2026ರ ಫಿಫಾ ವಿಶ್ವಕಪ್ ಸ್ಪೇನ್ ತಂಡದ ಅದ್ಭುತ ರಕ್ಷಣಾತ್ಮಕ ಶಿಸ್ತು ಮತ್ತು ಟ್ಯಾಕ್ಟಿಕಲ್ ಪ್ರಾಬಲ್ಯಕ್ಕೆ ಸಿಕ್ಕ ಐತಿಹಾಸಿಕ ಜಯ ಎನ್ನಬಹುದು. ಏಕೆಂದರೆ ತಂಡಗಳ ಸಂಖ್ಯೆ ಹೆಚ್ಚಾದಾಗ, ಪಂದ್ಯಗಳ ಸಂಖ್ಯೆ ಬೆಳೆದಾಗ ಆಟಗಾರರ ದಣಿವು ಮತ್ತು ರಕ್ಷಣಾ ವಿಭಾಗದ ತಪ್ಪುಗಳು ಹೆಚ್ಚಾಗುವುದು ಸಹಜ. ಆದರೆ ಸ್ಪೇನ್ ಪಡೆ ಮಾತ್ರ ರಣರಂಗದಲ್ಲಿ ಶಿಸ್ತಿನ ಸಿಪಾಯಿಗಳಂತೆ ಹೋರಾಡಿತು.

ಇದನ್ನೂ ಓದಿ: ಓವರ್ ಇಲ್ಲ, ಸೂಪರ್ ಫೈವ್, ಬೋನಸ್ ರನ್: ದಿ ಹಂಡ್ರೆಡ್ ಲೀಗ್ ಹೊಸ ನಿಯಮ

48 ತಂಡಗಳ ಈ ಸುದೀರ್ಘ ಹಾಗೂ ಕಠಿಣ ವಿಶ್ವಕಪ್ ಮಹಾಸಮರದಲ್ಲಿ, ಎದುರಾಳಿಗಳು ಎಷ್ಟೇ ತಂತ್ರ ಹೂಡಿದರೂ ಸ್ಪೇನ್‌ನ ರಕ್ಷಣಾ ಕೋಟೆಯನ್ನು ಭೇದಿಸಲು ಸಾಧ್ಯವಾಗಲೇ ಇಲ್ಲ. ಕೇವಲ ಒಂದು ಗೋಲು ಒಪ್ಪಿಕೊಂಡು ವಿಶ್ವಕಿರಿಟ ಧರಿಸಿದ ಈ ‘ಲಾ ರೋಜಾ’ ಪಡೆಯ ಅಪರೂಪದ ದಾಖಲೆ, ಮುಂಬರುವ ತಲೆಮಾರುಗಳ ಫುಟ್‌ಬಾಲ್ ಪ್ರೇಮಿಗಳು ಸದಾ ಕಾಲ ನೆನಪಿಸಿಕೊಳ್ಳುವಂತಹ ಅದ್ಭುತ ಮೈಲಿಗಲ್ಲಾಗಿ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿಯಲಿದೆ.

Source link

Exit mobile version