ಮಹಿಳಾ ಪ್ರೀಮಿಯರ್ ಲೀಗ್ನ ನಾಲ್ಕನೇ ಸೀಸನ್ನ ಲೀಗ್ ಹಂತದ 20ನೇ ಮತ್ತು ಅಂತಿಮ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಯುಪಿ ವಾರಿಯರ್ಸ್ ಪರಸ್ಪರ ಮುಖಾಮುಖಿಯಾಗಿದ್ದವು. ಬರೋಡಾದ ಕೋಟಂಬಿಯಲ್ಲಿರುವ ಬಿಸಿಎ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವನ್ನು ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಎಲಿಮಿನೇಟರ್ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. ಡೆಲ್ಲಿ ತಂಡದ ಈ ಗೆಲುವಿನೊಂದಿಗೆ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಲೀಗ್ ಹಂತದಲ್ಲೇ ತನ್ನ ಪ್ರಯಾಣ ಮುಗಿಸಿದೆ. ವಾಸ್ತವವಾಗಿ ಮುಂಬೈ ತಂಡ ಎಲಿಮಿನೇಟರ್ಗೆ ಅರ್ಹತೆ ಪಡೆಯಬೇಕಿದ್ದರೆ, ಈ ಪಂದ್ಯದಲ್ಲಿ ಡೆಲ್ಲಿ ಸೋಲಬೇಕಿತ್ತು. ಆದರೆ ಅದು ನಡೆಯಲಿಲ್ಲ. ಹೀಗಾಗಿ ಎಲಿಮಿನೇಟರ್ನಲ್ಲಿ ಗುಜರಾತ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿವೆ.
ಚಾಮರಾಜನಗರ, (ಫೆಬ್ರವರಿ 01): ಕೊಳ್ಳೇಗಾಲದಲ್ಲಿ (Kollegala) ಕಲ್ಯಾಣ ಮಂಟಪಕ್ಕೆ ತೆರಳುತ್ತಿದ್ದ ವರ ರವೀಶ್ ಗೆ ಚಾಕು ಇರಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ರವೀಶ್ನ ಮದ್ವೆಯಾಗಬೇಕಿದ್ದ ವಧು ನಯನಾ, ಪ್ರಿಯಕರ ದರ್ಶನ್, ಓರ್ವ ಅಪ್ರಾಪ್ತನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಅಸಲಿಯತ್ತು ಬಯಲಾಗಿದೆ. ಮದುವೆ ನಿಲ್ಲಿಸಲು ಪ್ರಿಯಕರನ ಜೊತೆ ಸೇರಿ ನಯನಾ (ರವೀಶ್ನ ಮದ್ವೆಯಾಗಬೇಕಿದ್ದ ಯುವತಿ) ಈ ರೀತಿ ಪ್ಲ್ಯಾನ್ ಮಾಡಿದ್ದಾಳೆ ಎನ್ನುವುದು ಕೊಳ್ಳೇಗಾಲ ಪೊಲೀಸ್ ತನಿಖೆಯಲ್ಲಿ ಬಟಾಬಯಲಾಗಿದೆ.
ತಮಟೆ ಹೊಡೆಯುವ ಕೆಲಸ ಮಾಡ್ತಿದ್ದ ದರ್ಶನ್ ಎನ್ನುವಾತನನ್ನು ನಯನಾ ಲವ್ ಮಾಡುತ್ತಿದ್ದಳು. ಆದ್ರೆ, ದರ್ಶನ್ ಕೆಲಸದ ಬಗ್ಗೆ ಮನೆಯಲ್ಲಿ ಹೇಳಲು ಹೆದರಿದ್ದಳು. ಹೀಗಾಗಿ ಈ ಮದುವೆ ನೀನೇ ನಿಲ್ಲಿಸು ಎಂದು ನಯನಾ, ಪ್ರಿಯಕರ ದರ್ಶನ್ಗೆ ಹೇಳಿದ್ದಳು. ಅದರಂತೆ ಪ್ರಿಯಕರ ದರ್ಶನ್ ಗ್ಯಾಂಗ್, ಜನವರಿ 27ರಂದು ರವೀಶ್ ಕೊಳ್ಳೇಗಾಲದ ಕಲ್ಯಾಣ ಮಂಟಪ್ಪಕ್ಕೆ ತೆರಳುತ್ತಿದ್ದ ಮಾರ್ಗಮಧ್ಯೆಯೇ ಕಾರು ಅಡ್ಡಗಟ್ಟಿದ್ದು, ನೀನು ಮದ್ವೆ ಮನೆಗಲ್ಲ ಸ್ಮಶಾನಕ್ಕೆ ತೆರಳಬೇಕೆಂದು ಚಾಕು, ಡ್ರ್ಯಾಗರ್ನಿಂದ ಹಲ್ಲೆ ಪರಾರಿಯಾಗಿತ್ತು. ಬಳಿಕ ರವೀಶ್ ದಾಖಲಾಗಿದ್ದ ಆಸ್ಪತ್ರೆಗೆ ನಯನಾ ಬಂದು ತನ್ನ ಮದುವೆಯಾಗು ಎಂದು ನಾಟಕವಾಡಿದ್ದಳು. ಆದಾಗಲೇ ರವೀಶ್ಗೂ ಸಹ ಅನುಮಾನ ಬಂದಿದ್ದರಿಂದ ನಯನಾಳನ್ನು ಮದುವೆಯಾಗಲು ನಿರಾಕರಿಸಿದ್ದ. ಇದೀಗ ನಯನಾಳ ಅಸಲಿ ನೌಟಂಕಿ ಆಟ ಬಯಲಾಗಿದೆ.
ಎಲೂರು, ಫೆಬ್ರವರಿ 1: ಆಂಧ್ರಪ್ರದೇಶದ ಎಲೂರಿನಲ್ಲಿ ತನ್ನ ಮಾಲೀಕ ತನ್ನ ಹೆಂಡತಿಗೆ ಮಾಡಿದ ಅವಮಾನದಿಂದ ಬೇಸತ್ತು ಉಮಾಮಹೇಶ್ ಎಂಬ ವ್ಯಕ್ತಿ ಸೇಡು ತೀರಿಸಿಕೊಳ್ಳಲು 7 ಕೋಟಿ ರೂ. ಮೌಲ್ಯದ ಚಿನ್ನವನ್ನು (Gold Theft) ಕದ್ದಿದ್ದಾರೆ. ಕನಕದುರ್ಗಾ ಫೈನಾನ್ಸ್ ಕಂಪನಿಯಲ್ಲಿ ನಡೆದ ಈ ಬೃಹತ್ ಕಳ್ಳತನದ ಹಿಂದಿನ ಉದ್ದೇಶ ಸೇಡು. ವೃತ್ತಿಯಲ್ಲಿ ಕಳ್ಳನಲ್ಲದಿದ್ದರೂ ಮಹೇಶ್ ತನ್ನ ಮಾಲೀಕನಿಗೆ ತೊಂದರೆಯನ್ನುಂಟುಮಾಡಲು ಈ ನಿರ್ಧಾರ ಮಾಡಿದರು.
ಅದಾಗಿ 4 ತಿಂಗಳ ನಂತರ ಪೊಲೀಸರು ಆತನನ್ನು ಬಂಧಿಸಿ, ಚಿನ್ನವನ್ನು ವಶಪಡಿಸಿಕೊಂಡರು. ಆಂಧ್ರಪ್ರದೇಶದ ಎಲೂರಿನ ಚಿಂತಲಪುಡಿಯಲ್ಲಿ ಈ ಘಟನೆ ನಡೆದಿದೆ. ಸೆಪ್ಟೆಂಬರ್ 9, 2025ರಂದು ಚಿಂತಲಪುಡಿಯ ಕನಕ ದುರ್ಗಾ ಫೈನಾನ್ಸ್ ಕಂಪನಿಯಲ್ಲಿ ಒಂದು ದೊಡ್ಡ ಕಳ್ಳತನ ನಡೆದಿತ್ತು. ಆ ಕಂಪನಿಯು ತನ್ನ ಗ್ರಾಹಕರಿಗೆ ಚಿನ್ನದ ಆಭರಣಗಳ ಅಡಮಾನದ ಮೇಲೆ ಸಾಲ ನೀಡುತ್ತದೆ. ವಡಲ್ಮುಡಿ ಉದ್ಯೋಗಿ ಉಮಾ ಮಹೇಶ್ ಒತ್ತೆ ಇಟ್ಟ ಚಿನ್ನವನ್ನು ಲೆಕ್ಕಪರಿಶೋಧಿಸುತ್ತಿದ್ದಾಗ ತನ್ನೊಂದಿಗೆ ತಂದಿದ್ದ ಚೀಲದಲ್ಲಿ ನಾಲ್ಕೂವರೆ ಕೆಜಿ ಚಿನ್ನವನ್ನು ಕದ್ದು ಪರಾರಿಯಾಗಿದ್ದರು. ಕಂಪನಿಯ ವ್ಯವಸ್ಥಾಪಕರು ಆ ರಾತ್ರಿ ಪೊಲೀಸ್ ದೂರು ದಾಖಲಿಸಿದರು. ಚಿಂತಲಪುಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಿದರು. ಆ ಸಮಯದಲ್ಲಿ ಶೋಧ ನಡೆಸಿದರೂ, ಆರೋಪಿಗಳು ಪತ್ತೆಯಾಗಲಿಲ್ಲ.
ಆದರೆ, ಕೊನೆಗೂ ಕಳ್ಳತನದ ನಂತರ ತಲೆಮರೆಸಿಕೊಂಡಿದ್ದ ಉಮಾಮಹೇಶ್ನನ್ನು ಪೊಲೀಸರು ಬಂಧಿಸಿದ್ದಾರೆ. ಕದ್ದ ಚಿನ್ನದ ಒಟ್ಟು ಮೌಲ್ಯ ಸುಮಾರು 7 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಆದರೆ, ಮಹೇಶ್ ತನ್ನ ವೈಯಕ್ತಿಕ ಬಳಕೆಗಾಗಿ ಕೇವಲ 6 ಗ್ರಾಂ ಉಂಗುರವನ್ನು ಮಾತ್ರ ಬಳಸಿದ್ದರು. ಪೊಲೀಸರು ಆರೋಪಿಯಿಂದ ಉಳಿದ ಚಿನ್ನವನ್ನು ವಶಪಡಿಸಿಕೊಂಡರು. ಈ ಕಳ್ಳತನದ ಹಿಂದಿನ ಕಾರಣದ ಬಗ್ಗೆ ಪೊಲೀಸರು ಮಹೇಶ್ನನ್ನು ಪ್ರಶ್ನಿಸಿದಾಗ ಅದು ತುಂಬಾ ವಿಚಿತ್ರವಾಗಿತ್ತು.
ಮಹೇಶ್ ಅವರ ಸ್ವಂತ ಜಿಲ್ಲೆ ನೆಲ್ಲೂರು. ಅವರ ಪತ್ನಿ ಕೂಡ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ಕಂಪನಿ ಮಾಲೀಕರು ಆತನ ಪತ್ನಿಯೊಂದಿಗೆ ಅಸಭ್ಯವಾಗಿ ಮಾತನಾಡಿದಾಗ ಮಹೇಶ್ ಕೋಪಗೊಂಡು ಕಳ್ಳತನಕ್ಕೆ ಮುಂದಾದರು. ತನ್ನ ಹೆಂಡತಿಗೆ ಮಾಡಿದ ಅವಮಾನದಿಂದ ಅವರು ಒತ್ತಡಕ್ಕೊಳಗಾಗಿದ್ದರು. ಹೀಗಾಗಿ, ಅವರು ಕಂಪನಿಗೆ ನಷ್ಟ ಉಂಟುಮಾಡಿ ತೊಂದರೆಯಲ್ಲಿ ಸಿಲುಕಿಸಲು 4 ಕೆಜಿ ಚಿನ್ನ ಕದ್ದಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
2026 ರ ಐಸಿಸಿ ಅಂಡರ್-19 ವಿಶ್ವಕಪ್ನ ಸೂಪರ್ ಸಿಕ್ಸ್ ಹಂತದಲ್ಲಿ, ಭಾರತ ಅಂಡರ್-19 ತಂಡವು ಪಾಕಿಸ್ತಾನ ಅಂಡರ್-19 ತಂಡದ ವಿರುದ್ಧ 58 ರನ್ಗಳ ಭರ್ಜರಿ ಜಯ ಸಾಧಿಸಿದೆ. ಸೆಮಿಫೈನಲ್ನಲ್ಲಿ ಸ್ಥಾನ ಪಡೆಯುವ ನಿಟ್ಟಿನಲ್ಲಿ ಈ ಪಂದ್ಯ ಎರಡೂ ತಂಡಗಳಿಗೆ ನಿರ್ಣಾಯಕವಾಗಿತ್ತು. ಅದರಂತೆ ಟೀಂ ಇಂಡಿಯಾ ಪಾಕಿಸ್ತಾನವನ್ನು ಭಾರಿ ಅಂತರದಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಸೆಮಿಫೈನಲ್ ತಲುಪಿದರೆ, ಇತ್ತ ಪಾಕಿಸ್ತಾನ ಟೂರ್ನಿಯಿಂದ ಹೊರಬಿದ್ದಿದೆ. ಸೂಪರ್ ಸಿಕ್ಸ್ ಹಂತದಲ್ಲಿ ಆಡಿದ 3 ಪಂದ್ಯಗಳನ್ನು ಗೆದ್ದುಕೊಂಡಿರುವ ಟೀಂ ಇಂಡಿಯಾ 2ನೇ ಗುಂಪಿನಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದು, ಸೆಮಿಫೈನಲ್ ಸುತ್ತಿನಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ.
ವೇದಾಂತ್ ತ್ರಿವೇದಿ ಅರ್ಧಶತಕ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಅಂಡರ್-19 ತಂಡ 49.5 ಓವರ್ಗಳಲ್ಲಿ 252 ರನ್ಗಳಿಗೆ ಆಲೌಟ್ ಆಯಿತು. ವೈಭವ್ ಸೂರ್ಯವಂಶಿ 22 ಎಸೆತಗಳಲ್ಲಿ 30 ರನ್ ಗಳಿಸುವ ಮೂಲಕ ತಂಡಕ್ಕೆ ತ್ವರಿತ ಆರಂಭ ನೀಡಿದರು. ವೈಭವ್ ಔಟಾದ ಬಳಿಕ ತಂಡದ ಇನ್ನಿಂಗ್ಸ್ ಕುಸಿಯಿತು. ಇದರ ಪರಿಣಾಮವಾಗಿ ಕೇವಲ ಒಂಬತ್ತು ಓವರ್ಗಳಲ್ಲಿ ಪ್ರಮುಖ ಮೂರು ವಿಕೆಟ್ಗಳನ್ನು ಕಳೆದುಕೊಂಡಿತು. ಈ ಹಂತದಲ್ಲಿ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದ ವೇದಾಂತ್ ತ್ರಿವೇದಿ 98 ಎಸೆತಗಳಲ್ಲಿ 68 ರನ್ ಗಳಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.
ಇತ್ತ ಕನಿಷ್ಕ್ ಚೌಹಾಣ್ ಕೂಡ 29 ಎಸೆತಗಳಲ್ಲಿ 35 ರನ್ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರು. ಆರ್ಎಸ್ ಅಂಬ್ರೀಶ್ 38 ಎಸೆತಗಳಲ್ಲಿ 29 ರನ್ಗಳ ಕಾಣಿಕೆ ನೀಡಿದರು. ಕೊನೆಯ ಓವರ್ಗಳಲ್ಲಿ ಕನಿಷ್ಕ್ ಚೌಹಾಣ್ ಮತ್ತು ಖಿಲನ್ ಪಟೇಲ್ ನಡುವಿನ 50 ರನ್ಗಳ ಪಾಲುದಾರಿಕೆಯು ಸ್ಕೋರ್ ಅನ್ನು 250 ರ ಗಡಿ ದಾಟಿಸಿತು. ಪಾಕಿಸ್ತಾನ ಪರ, ಅಬ್ದುಲ್ ಸುಭಾನ್ 9.5 ಓವರ್ಗಳಲ್ಲಿ ಮೂರು ವಿಕೆಟ್ಗಳನ್ನು ಪಡೆದರೆ, ಮೊಹಮ್ಮದ್ ಸಯ್ಯಮ್ ಎರಡು ವಿಕೆಟ್ಗಳನ್ನು ಪಡೆದರು.
ಪಾಕಿಸ್ತಾನ 194 ರನ್ಗಳಿಗೆ ಆಲೌಟ್
253 ರನ್ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ಅಂಡರ್-19 ತಂಡವು ಉತ್ತಮ ಆರಂಭ ಪಡೆದುಕೊಂಡಿತು. ಆದರೆ ಮಧ್ಯಮ ಓವರ್ಗಳಲ್ಲಿ ಭಾರತೀಯ ಬೌಲರ್ಗಳು ಪಾಕ್ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಉಸ್ಮಾನ್ ಖಾನ್ 92 ಎಸೆತಗಳಲ್ಲಿ 66 ರನ್ ಗಳಿಸಿದರೆ, ಹಮ್ಜಾ ಜಹೂರ್ 49 ಎಸೆತಗಳಲ್ಲಿ 42 ರನ್ ಗಳಿಸಿದರು. ಫರ್ಹಾನ್ ಯೂಸುಫ್ ಕೂಡ 39 ಎಸೆತಗಳಲ್ಲಿ 38 ರನ್ಗಳ ಕಾಣಿಕೆ ನೀಡಿದರು. ಆದಾಗ್ಯೂ, ಪಾಕಿಸ್ತಾನ 46.2 ಓವರ್ಗಳಲ್ಲಿ 194 ರನ್ಗಳಿಗೆ ಆಲೌಟ್ ಆಗಿ ಪಂದ್ಯವನ್ನು ಸೋತಿದಲ್ಲದೆ ಟೂರ್ನಿಯಿಂದ ಹೊರಬಿತ್ತು. ಭಾರತದ ಪರ ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಖಿಲನ್ ಪಟೇಲ್ ಮತ್ತು ಆಯುಷ್ ಮ್ಹಾತ್ರೆ ತಲಾ ಮೂರು ವಿಕೆಟ್ಗಳನ್ನು ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬಾಲಿವುಡ್ (Bollywood) ಮತ್ತು ಭೂಗತ ಜಗತ್ತಿನ ನಂಟು ಬಹಳ ಹಳೆಯದ್ದು. ದಾವೂದ್ ಇಬ್ರಾಹಿಂಗಿಂತಲೂ ಮುಂಚಿನಿಂದಲೂ ಭೂತದ ಪಾತಕಿಗಳು ಬಾಲಿವುಡ್ ಜೊತೆಗೆ ಸಕ್ರಿಯ ನಂಟು ಹೊಂದಿದ್ದಾರೆ. ಬಾಲಿವುಡ್ನಲ್ಲಿರುವ ರಾಶಿ-ರಾಶಿ ಹಣ ಭೂಗತ ಜಗತ್ತನ್ನು ಅದರತ್ತ ಸೆಳೆದಿದೆ. ದಾವೂದ್ ಕಾಲದಿಂದಲೂ ಸಿನಿಮಾಗಳ ನಿರ್ಮಾಣ, ನಟ-ನಟಿಯರ ಆಯ್ಕೆ, ಹಫ್ತಾ ವಸೂಲಿ, ಲಾಭ ಹಂಚಿಕೆ, ಸಿನಿಮಾ ಫೈನ್ಯಾನ್ಸ್ ಇನ್ನೂ ಹಲವು ವಿಷಯಗಳಲ್ಲಿ ಭೂಗತ ಲೋಕದವರು ಬಾಲಿವುಡ್ ಮೇಲೆ ಪ್ರಭಾವ ಬೀರುತ್ತಲೇ ಬರುತ್ತಿದ್ದಾರೆ.
ಬಾಲಿವುಡ್ನ ಹಲವಾರು ನಟ-ನಟಿ, ನಿರ್ಮಾಪಕ, ನಿರ್ದೇಶಕರುಗಳು ಭೂಗತ ಪಾತಕಿಗಳಿಂದ ಬೆದರಿಕೆ ಎದರಿಸಿದ್ದಾರೆ. ಕೆಲವು ನಟ-ನಟಿಯರು ಈ ಪಾತಕಿಗಳೊಟ್ಟಿಗೆ ಆತ್ಮೀಯ ಬಂಧವನ್ನೂ ಇರಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಂಡಿದ್ದಿದೆ. ಕೆಲವರು ಈ ಪಾತಕಿಗಳ ಮನೆ ಕಾರ್ಯಕ್ರಮಗಳಲ್ಲಿ ಡ್ಯಾನ್ಸ್ ಮಾಡಿದ್ದೂ ಸಹ ಇದೆ. ಕೆಲವು ಸೆಲೆಬ್ರಿಟಿಗಳ ಕೊಲೆಯನ್ನೂ ಸಹ ಭೂಗತ ಪಾತಕಿಗಳು ಮಾಡಿದ್ದಾರೆ. ಆದರೆ ಕಳೆದ ಒಂದು ದಶಕದಿಂದ ಬಾಲಿವುಡ್ಗೆ ಭೂಗತ ಪಾತಕಿಗಳ ಕಾಟ ತುಸು ತಪ್ಪಿತ್ತು. ಆದರೆ ಈಗ ಮತ್ತೆ ಶುರುವಾಗಿದೆ.
ಕಳೆದ ಕೆಲವಾರು ವರ್ಷಗಳಿಂದ ಬಾಲಿವುಡ್ ಮೇಲೆ ಮತ್ತೆ ಭೂಗತ ಪಾತಕಿಗಳ ಕಣ್ಣು ಬಿದ್ದಿದೆ. ಸಲ್ಮಾನ್ ಖಾನ್ ಮನೆ ಮೇಲೆ ಹಲವು ಬಾರಿ ದಾಳಿ ಮಾಡಲಾಯ್ತು. ಈ ಸಂಬಂಧ ಕೆಲವರ ಬಂಧನವೂ ಆಯ್ತು. ಖ್ಯಾತ ಕಮಿಡಿಯನ್ ಕಪಿಲ್ ಶರ್ಮಾಗೆ ಸೇರಿದ ರೆಸ್ಟೊರೆಂಟ್ ಮೇಲೆ ಸತತ ದಾಳಿಗಳು ನಡೆದಿವೆ. ನಿರ್ಮಾಪಕ, ರಾಜಕಾರಣಿ ಹಾಗೂ ಸಲ್ಮಾನ್, ಶಾರುಖ್ ಅವರಿಗೆ ಆಪ್ತವಾಗಿದ್ದ ಬಾಬಾ ಸಿದ್ಧಿಖಿಯನ್ನು ಕೊಲೆ ಮಾಡಲಾಯ್ತು. ಗಾಯಕ ಅರಿಜಿತ್ ಸಿಂಗ್ಗೆ ಕೊಲೆ ಬೆದರಿಕೆ ಹಾಕಲಾಗಿತ್ತು. ಈ ಬಗ್ಗೆ ದೂರು ಸಹ ದಾಖಲಾಗಿದೆ. ಗಾಯಕ ಹನಿ ಸಿಂಗ್ ಅವರಿಗೂ ಕೊಲೆ ಬೆದರಿಕೆಗಳು ಬಂದಿವೆ. ಗಾಯಕ ದಿಲ್ಜೀತ್ ದೊಸ್ಸಾಂಜ್ ಅವರಿಗೂ ಬೆದರಿಕೆ ಬಂದಿವೆ.
ಇಂದು ಬೆಳ್ಳಂಬೆಳಿಗ್ಗೆ ಖ್ಯಾತ ನಿರ್ದೇಶಕ, ನಿರ್ಮಾಪಕರೂ ಆಗಿರುವ ರೋಹಿತ್ ಶೆಟ್ಟಿ ಮನೆ ಮೇಲೆ ದಾಳಿ ಮಾಡಲಾಗಿದೆ. ಕೆಲವರು ರೋಹಿತ್ ಶೆಟ್ಟಿ ಮನೆ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಆದರೆ ರೋಹಿತ್ ಶೆಟ್ಟಿ ಮನೆ ಮೇಲೆ ದಾಳಿ ಮಾಡಿದ್ದಕ್ಕೆ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಇವರಷ್ಟೆ ಅಲ್ಲದೆ, ಬಾಲಿವುಡ್ನ ಇನ್ನೂ ಕೆಲವು ನಟ, ನಿರ್ಮಾಪಕರುಗಳಿಗೆ ಸಹ ಭೂಗತ ಪಾತಕಿಗಳ ಬೆದರಿಕೆಗಳು ಬಂದಿವೆ. ಒಟ್ಟಾರೆ ಮತ್ತೆ ಭೂಗತ ಜಗತ್ತು ಬಾಲಿವುಡ್ ಮೇಲೆ ಕಣ್ಣು ಹಾಕಿದೆ. ಇದು ಬಾಲಿವುಡ್ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಕಾದು ನೋಡಬೇಕಿದೆ.
ವಿಜಯನಗರ, (ಫೆಬ್ರವರಿ 01): ಭರತ್ ಹುಣ್ಣಿಮೆ ನಿಮಿತ್ತ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಹರಪನಹಳ್ಳಿy ದೊಡ್ಡ ಮೈಲಾರ ಮೈಲಾರ ಲಿಂಗೇಶ್ವರನ ಈ ವರ್ಷದ ಕಾರ್ಣಿಕ ಹೊರಬಿದ್ದಿದ್ದು, “ಅಂಬಲಿ ರಾಶಿ ಮುದ್ದಿನ ಗಿಣಿ ಸಮೃದ್ಧಿ ಐತಲೆ ಪರಾಕ್’ ಎಂದು ಗೊರವಪ್ಪ ನುಡಿದಿದ್ದಾನೆ. ಭಕ್ತರ ಜಯಘೋಷದ ನಡುವೆ ಬಿಲ್ಲನ್ನೇರಿದ ಗೊರವಯ್ಯ ಶೂನ್ಯವನ್ನು ದಿಟ್ಟಿಸಿ ನೋಡುತ್ತಾ, ಈ ವರ್ಷದ ಕಾರಣಿಕ ನುಡಿದರು. ಈ ವರ್ಷ ಗೊರವಯ್ಯ “ಅಂಬಲಿ ರಾಶಿ ಮುದ್ದಿನ ಗಿಣಿ ಸಮೃದ್ಧಿ ಐತಲೆ ಪರಾಕ್’ ಎಂಬ ಕಾರಣಿಕ ಹೇಳಿದ್ದಾರೆ. ಈ ಕಾರಣಿಕವನ್ನು ಹಲವು ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ. ಹಲವು ವರ್ಷಗಳಿಂದ ಭರತ ಹುಣ್ಣಿಮೆಯಂದು ಕಾರಣಿಕ ನುಡಿಯುವ ಸಂಪ್ರದಾಯ ಇಲ್ಲಿದೆ. ಇಲ್ಲಿಯ ಕಾರಣಿಕದ ನಂತರ ಮೈಲಾರದಲ್ಲಿ ಕಾರಣಿಕವಾಗುತ್ತದೆ. ‘ಈ ಬಾರಿ ಮಳೆಬೆಳೆಯಾಗಿ ರಾಜ್ಯದ ಜನರು ಸುಖದಿಂದ ಇರುತ್ತಾರೆ’ ಎಂದು ಹಲವಾರು ಜನರು ಕಾರಣಿಕವನ್ನು ವಿವರಿಸಿದ್ದಾರೆ. ಇಲ್ಲಿನ ಕಾರಣಿಕ ಸತ್ಯವಾಗುತ್ತದೆ ಎಂದು ಜನರು ನಂಬುತ್ತಾರೆ.
ಯಾದಗಿರಿ, ಫೆಬ್ರವರಿ 01: ಅದು ಬರದ ನಾಡು. ಮಳೆ ಬಂದರೆ ಬೆಳೆ, ಇಲ್ಲವೆಂದರೆ ಬರಗಾಲ ಎನ್ನುವಂತಿದೆ. ಹೀಗಾಗಿ ಬಹುತೇಕ ರೈತರು ಮಳೆ ಆಶ್ರಿತ ಬೆಳೆಗಳನ್ನ ಹೆಚ್ಚಾಗಿ ಬೆಳೆಯುತ್ತಾರೆ. ಅನೇಕ ರೈತರು ನಷ್ಟ ಅನುಭವಿಸುತ್ತಾರೆ. ಆದರೆ ಆ ಯುವ ರೈತ (Farmer) ಮಾತ್ರ ಇದಕ್ಕೆ ವಿರೋಧ ಎನ್ನುವ ಹಾಗೆ ತೋಟಗಾರಿಕೆ ಬೆಳೆಯನ್ನ ಬೆಳೆದು ಭರ್ಜರಿ ಲಾಭ ಗಳಿಸಿದ್ದಾರೆ. ಕೇವಲ ಮೂರುವರೆ ಎಕರೆ ಜಮೀನಿನಲ್ಲಿ ಕಲ್ಲಂಗಡಿ (Watermelon) ಬೆಳೆಯನ್ನ ಬೆಳೆದು ಲಕ್ಷಾಂತರ ರೂ. ಲಾಭ ಪಡೆದು ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.
ಯಾದಗಿರಿ ಜಿಲ್ಲೆಯ ಅಂದರೆ ಸಾಕು ಬರದ ನಾಡು ಅಂತಲೇ ಕರೆಯಲಾಗುತ್ತೆ. ಏಕೆಂದರೆ ಜಿಲ್ಲೆಯಲ್ಲಿ ಅನ್ನದಾತರ ಸ್ಥಿತಿ ಹೇಗಿದೆ ಅಂದರೆ ಮಳೆ ಬಂದರೆ ಬೆಳೆ, ಇಲ್ಲವೆಂದರೆ ಬರಗಾಲ ಎನ್ನುವಂತ ಸ್ಥಿತಿಯಿದೆ. ಅದರಲ್ಲೂ ಬಹುತೇಕ ರೈತರು ಸಂಪ್ರದಾಯಿಕ ಬೆಳೆಗಳಾದ ತೊಗರಿ, ಹತ್ತಿ, ಸಜ್ಜೆ ಇನ್ನಿತರ ಬೆಳೆಗಳನ್ನ ಬೆಳೆದು ಮಳೆ ಮೇಲೆ ಬಾರ ಹಾಕಿಕೊಂಡು ಕುಳಿತುಕೊಳ್ಳುತ್ತಾರೆ. ಮಳೆ ಬಂದರೆ ಬೆಳೆ ಸಿಗುತ್ತೆ ಇಲ್ಲಂದ್ರೆ ಮೈತುಂಬಾ ಸಾಲ ಮಾಡಿಕೊಂಡು ಊರು ಬಿಟ್ಟು ಹೊಟ್ಟೆ ಪಾಡಿಗಾಗಿ ಮಹಾನಗರಗಳಿಗೆ ಹೋಗಬೇಕು.
ಇಂತಹ ಪರಿಸ್ಥಿಯಲ್ಲಿ ಯಾದಗಿರಿ ತಾಲೂಕಿನ ಅಶೋಕ್ ನಗರದ ತಾಂಡದ ಯುವ ರೈತ ಮಲ್ಲಿಕಾರ್ಜುನ ತೋಟಗಾರಿಕೆ ಬೆಳೆಯನ್ನ ಬೆಳೆದು ಎಲ್ಲಾ ರೈತರಿಗೆ ಮಾದರಿಯಾಗಿದ್ದಾರೆ. 20 ಸಾವಿರ ರೂ ಕೊಟ್ಟು ಮೂರುವರೆ ಎಕರೆ ಜಮೀನು ಲೀಸ್ ಗೆ ಪಡೆದು ಕಲ್ಲಂಗಡಿ ಬೆಳೆಯನ್ನ ಬೆಳೆದು ಲಕ್ಷಾಂತರ ರೂ. ಲಾಭ ಗಳಿಸಿದ್ದಾರೆ. ಕೇವಲ ಎರಡು ತಿಂಗಳಲ್ಲೇ 20 ಲಕ್ಷ ರೂ ಲಾಭ ಪಡೆದು ಸಾಧನೆ ಮಾಡಿದ್ದಾರೆ.
ಇನ್ನು ರೈತ ಮಲ್ಲಿಕಾರ್ಜುನ ಬೋರವೆಲ್ ನೀರು ಸೇರಿದಂತೆ ಜಮೀನಿನಲ್ಲಿ ಯಾವುದೇ ನೀರು ಇಲ್ಲದ ಜಮೀನು ಲೀಸ್ ಪಡೆದಿದ್ದರು. ಮೂರುವರೆ ಎಕರೆಯಲ್ಲಿ ಹೇಗಾದರೂ ಮಾಡಿ ತೋಟಗಾರಿಕೆ ಬೆಳೆಯನ್ನ ಬೆಳೆಯಬೇಕು ಎಂದು ನಿರ್ಧರಿಸಿ ಕಲ್ಲಂಗಡಿ ಬೆಳೆಯೋಕೆ ಪ್ಲಾನ್ ಮಾಡಿದ್ದರು. ಜಮೀನಿನಲ್ಲಿ ನೀರು ಇಲ್ಲದ ಕಾರಣಕ್ಕೆ ಇದು ಅಸಾಧ್ಯವಾಗಿತ್ತು. ಆದರೆ ಪಕ್ಕದ ಜಮೀನಿನಲ್ಲಿರುವ ಬೋರವೆಲ್ ನೀರು ಬಾಡಿಗೆಗೆ ಪಡೆದು ಕಲ್ಲಂಗಡಿ ಬೆಳೆದಿದ್ದಾರೆ.
ಕೊಪ್ಪಳದಿಂದ ಕಲ್ಲಂಗಡಿ ಬೆಳೆಯ ಮೆಲೊಡಿ ತಳಿಯ ಸಸಿಗಳನ್ನ ತಂದು ಹಾಕಿದ್ದಾರೆ. ಜೊತೆಗೆ ತೋಟಗಾರಿಕೆ ಇಲಾಖೆಯ ಯಾವುದೇ ಸಹಾಯವಿಲ್ಲದೆ ತಾವೇ ಸ್ವಂತ ದುಡ್ಡು ಖರ್ಚು ಮಾಡಿ ಸ್ಪಿಂಕ್ಲರ್ ಪೈಪ್ಗಳನ್ನ ತಂದು ಅಳವಡಿಕೆ ಮಾಡಿದ್ದಾರೆ. ಬಳಿಕ ಇಡೀ ಕುಟುಂಬಸ್ಥರೊಂದಿಗೆ ಜಮೀನಿನಲ್ಲಿ ದುಡಿದ ಕಾರಣ ಎರಡೇ ತಿಂಗಳಲ್ಲಿ ಭರ್ಜರಿ ಬೆಳೆ ಕೈಗೆ ಬಂದಿದೆ.
ಬರೋಬರಿ 16 ಲಕ್ಷ ರೂ ಲಾಭ
ಮೊದಲ ಫಸಲು 22 ಟನ್ ಬಂದಿದ್ದು, ಸುಮಾರು 22 ರೂ. ಕೆಜಿ ಮಾರಾಟ ಮಾಡಿ ಸುಮಾರು 15 ಲಕ್ಷ ರೂ ಲಾಭ ಗಳಿಸಿದ್ದಾರೆ. ಇನ್ನು ಎರಡನೇ ಕಟಾವು 12 ಟನ್ ಬಂದಿದ್ದು ಸ್ವಲ್ಪ ಬೆಲೆ ಕಡಿಮೆ ಸಿಕ್ಕ ಕಾರಣಕ್ಕೆ 4 ಲಕ್ಷ ರೂ ಲಾಭ ಸಿಕ್ಕಿದೆ. ಕೊನೆಯ ಕಾಟಾವಿನಿಂದ ಸುಮಾರು ಒಂದು ಲಕ್ಷಕ್ಕೂ ಅಧಿಕ ಲಾಭ ಸಿಕ್ಕಿದೆ. ಈ ಬೆಳೆಯನ್ನ ಬೆಳೆಯೋಕೆ ಸುಮಾರು 4 ಲಕ್ಷ ರೂ ಖರ್ಚು ಮಾಡಿದ್ದು, ಖರ್ಚು ತೆಗೆದು ಬರೋಬರಿ 16 ಲಕ್ಷ ರೂ ಮಲ್ಲಿಕಾರ್ಜುನ ಅವರಿಗೆ ಲಾಭವಾಗಿದೆ. ಕೇವಲ ಎರಡೇ ತಿಂಗಳಲ್ಲಿ ಇಷ್ಟು ಲಾಭ ಆಗಿದ್ದಕ್ಕೆ ತಾಂಡದ ನಿವಾಸಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಯುವ ರೈತ ಮಲ್ಲಿಕಾರ್ಜುನ ಕೇವಲ ಮೂರುವರೆ ಎಕರೆ ಜಮೀನಿನಲ್ಲಿ ಖರ್ಚು ತೆಗೆದು ಬರೋಬರಿ 16 ಲಕ್ಷ ರೂ ಲಾಭ ಪಡೆದಿದ್ದು ಸಾಂಪ್ರದಾಯಿಕ ಬೆಳೆಯನ್ನ ಬೆಳೆದು ನಷ್ಟ ಅನುಭವಿಸುವ ರೈತರಿಗೆ ಮಾದರಿಯಾಗಿದ್ದಾರೆ. ಹೀಗಾಗಿ ರೈತರು ತೋಟಗಾರಿಕೆ ಇಲಾಖೆಯಿಂದ ಸವಲತ್ತು ಪಡೆದು ಈ ರೀತಿಯ ಬೆಳೆಗಳನ್ನ ಬೆಳೆದು ಲಾಭ ಪಡೆಯಬೇಕಾಗಿದೆ.
ನವದೆಹಲಿ, ಫೆಬ್ರವರಿ 1: ಪ್ರಧಾನಿ ನರೇಂದ್ರ ಮೋದಿ (PM Modi) ಇಂದು ಪಂಜಾಬ್ನ ಆದಂಪುರ ವಿಮಾನ ನಿಲ್ದಾಣಕ್ಕೆ ಹೊಸ ಹೆಸರನ್ನು ಅನಾವರಣಗೊಳಿಸಿದ್ದಾರೆ. ಸಂತ ರವಿದಾಸ್ ಅವರ 649ನೇ ಜನ್ಮ ದಿನಾಚರಣೆಯ ಪ್ರಯುಕ್ತ ಈ ವಿಮಾನ ನಿಲ್ದಾಣಕ್ಕೆ ಸಂತ ಗುರು ರವಿದಾಸ್ ವಿಮಾನ ನಿಲ್ದಾಣ ಎಂದು ಮರುನಾಮಕರಣ ಮಾಡಲಾಗಿದೆ. ಇದರ ಜೊತೆಗೆ, ಪ್ರಧಾನಿ ಮೋದಿ ಲುಧಿಯಾನದ ಹಲ್ವಾರ ವಿಮಾನ ನಿಲ್ದಾಣದಲ್ಲಿ ಹೊಸದಾಗಿ ನಿರ್ಮಿಸಲಾದ ಟರ್ಮಿನಲ್ ಅನ್ನು ವರ್ಚುವಲ್ ಆಗಿ ಉದ್ಘಾಟಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದ ಟೀಸರ್ ಕೆಲ ವಾರಗಳ ಹಿಂದೆ ಬಿಡುಗಡೆ ಆಗಿ ಭಾರಿ ವೈರಲ್ ಆಗಿತ್ತು. ಅತ್ಯಂತ ಕಡಿಮೆ ಅವಧಿಯಲ್ಲಿ ದಾಖಲೆ ಸಂಖ್ಯೆಯ ವೀಕ್ಷಣೆಗಳನ್ನು ‘ಟಾಕ್ಸಿಕ್’ ಸಿನಿಮಾ ಟೀಸರ್ ಗಳಿಸಿಕೊಂಡಿತ್ತು. ಸಿನಿಮಾದ ಟೀಸರ್ ನೋಡಿದವರು ಸಿನಿಮಾದ ರಿಚ್ಬೆಸ್, ಬೋಲ್ಡ್ನೆಸ್ ಅನ್ನು ಕೊಂಡಾಡಿದ್ದರು. ಆದರೆ ಇನ್ನು ಕೆಲವರು ಸಿನಿಮಾದ ಟೀಸರ್ನಲ್ಲಿರುವ ಕೆಲ ದೃಶ್ಯಗಳಿಗೆ ಆಕ್ಷೇಪ ಎತ್ತಿದ್ದರು. ‘ಟಾಕ್ಸಿಕ್’ ಸಿನಿಮಾದ ಟೀಸರ್ ಅಶ್ಲೀಲವಾಗಿದೆ, ಪುರುಷ ಅಹಂಕಾರದಿಂದ ತುಂಬಿದೆ ಎಂದೆಲ್ಲ ವಿಮರ್ಶೆ ಮಾಡಲಾಗಿತ್ತು. ಇದೀಗ ಬಾಲಿವುಡ್ನ ಜನಪ್ರಿಯ ನಿರ್ದೇಶಕ ಅನುರಾಗ್ ಕಶ್ಯಪ್ ‘ಟಾಕ್ಸಿಕ್’ ಟೀಸರ್ ಬಗ್ಗೆ ಮಾತನಾಡಿದ್ದಾರೆ.
ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಏರ್ಪಡಿಸಲಾಗಿದ್ದ ಸಂವಾದದಲ್ಲಿ ಮಾತನಾಡಿದ ಅನುರಾಗ್ ಕಶ್ಯಪ್ ಅವರು, ‘ಟಾಕ್ಸಿಕ್’ ಸಿನಿಮಾದ ಟೀಸರ್ ಅನ್ನು ‘ಒಂದು ಧೈರ್ಯಶಾಲಿ ಯತ್ನ’ ಎಂದು ಬಣ್ಣಿಸಿದ್ದಾರೆ. ‘ಟೀಸರ್ ವಿರುದ್ಧ ವ್ಯಕ್ತವಾಗಿರುವ ಆಕ್ರೋಶ ನಮ್ಮ ಸಮಾಜದ ಸಾಂಸ್ಕೃತಿಕ ಬೂಟಾಟಿಕೆಯನ್ನು ಬಹಿರಂಗಪಡಿಸುತ್ತಿದೆ. ಪುರುಷ ನಟರು ಪರದೆಯ ಮೇಲೆ ಶರ್ಟ್ ಧರಿಸದೆ ಬರಿಮೈಯಲ್ಲಿ ಕಾಣಿಸಿಕೊಂಡಾಗ ಅಥವಾ ಅತಿಯಾದ ಪುರುಷತ್ವವನ್ನು ಪ್ರದರ್ಶಿಸಿದಾಗ, ಯಾರೂ ಅದನ್ನು ಪ್ರಶ್ನಿಸುವುದಿಲ್ಲ. ಆದರೆ ಒಬ್ಬ ಮಹಿಳೆ ತನ್ನ ಲೈಂಗಿಕತೆಯನ್ನು ಆಚರಿಸಿದಾಗ, ಅದನ್ನು ಒಪ್ಪಿಕೊಳ್ಳುವುದಿಲ್ಲ’ ಎಂದು ಕಶ್ಯಪ್ ಹೇಳಿದ್ದಾರೆ.
‘ಟಾಕ್ಸಿಕ್’ ಸಿನಿಮಾದ ಟೀಸರ್ ಬಿಡುಗಡೆ ಆದ ಬಳಿಕ ಕೆಲವರು ಟೀಸರ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ದಾಖಲಿಸಿದ್ದು, ಟೀಸರ್ನಲ್ಲಿ ಮಹಿಳೆಯರನ್ನು ಭೋಗದ ವಸ್ತುಗಳನ್ನಾಗಿ ತೋರಿಸಲಾಗಿದೆ ಎಂದಿದ್ದಾರೆ. ಒಬ್ಬ ಸಾಮಾಜಿಕ ಕಾರ್ಯಕರ್ತರಂತೂ ಸಿಬಿಎಫ್ಸಿಗೆ ದೂರು ನೀಡಿದ್ದು, ‘ಟಾಕ್ಸಿಕ್’ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಬಾರದು ಎಂದು ಆಗ್ರಹಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಹ ಹಲವಾರು ಮಂದಿ ‘ಟಾಕ್ಸಿಕ್’ ನಿಜಕ್ಕೂ ಟಾಕ್ಸಿಕ್ ಆಗಿದೆ ಎಂದು ಮೂಗು ಮುರಿದಿದ್ದಾರೆ.
‘ಟಾಕ್ಸಿಕ್’ ಟೀಸರ್ನಲ್ಲಿ ಯಶ್, ಮಹಿಳೆಯೊಬ್ಬರೊಟ್ಟಿಗೆ ಲೈಂಗಿಕತೆಯಲ್ಲಿ ತೊಡಗಿರುವ ದೃಶ್ಯವಿದೆ. ಇದು ಹಲವರ ಟೀಕೆಗೆ ಕಾರಣವಾಗಿದೆ. ಆದರೆ ಇನ್ನು ಕೆಲವರು ಸಿನಿಮಾನಲ್ಲಿ ಇದೆಲ್ಲ ಸಾಮಾನ್ಯ ಎಂದಿದ್ದಾರೆ. ಟೀಸರ್ ನೋಡಿ, ಸಿನಿಮಾ ಹೀಗೆಯೇ ಇರಲಿದೆ ಎಂದು ಊಹಿಸುವಂತಿಲ್ಲ ಎಂದಿದ್ದಾರೆ.
‘ಟಾಕ್ಸಿಕ್’ ಸಿನಿಮಾವನ್ನು ಗೀತು ಮೋಹನ್ದಾಸ್ ನಿರ್ದೇಶನ ಮಾಡಿದ್ದು, ಸಿನಿಮಾನಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ. ಹಲವು ಹಾಲಿವುಡ್ ನಟ-ನಟಿಯರು ಸಹ ಈ ಸಿನಿಮಾನಲ್ಲಿದ್ದಾರೆ. ಸಿನಿಮಾಕ್ಕೆ ಕೆವಿಎನ್ ಮತ್ತು ಯಶ್ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.
ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ (Pakistan vs Australia) ನಡುವಿನ ಟಿ20 ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯ ಫೆಬ್ರವರಿ 1 ರ ಭಾನುವಾರ ಲಾಹೋರ್ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯವನ್ನು ಆತಿಥೇಯ ಪಾಕಿಸ್ತಾನ ಬರೋಬ್ಬರಿ 111 ರನ್ಗಳಿಂದ ಗೆದ್ದುಕೊಳ್ಳುವ ಮೂಲಕ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿದೆ. ಅಂದರೆ ಈ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಒಂದೇ ಒಂದು ಪಂದ್ಯವನ್ನು ಗೆಲ್ಲಲಾಗದೆ ಕ್ಲೀನ್ ಸ್ವೀಪ್ ಮುಜುಗರಕ್ಕೊಳಗಾಗಿದೆ. ಟಿ20 ವಿಶ್ವಕಪ್ಗೂ (T20 World Cup) ಮುನ್ನ ಆಸೀಸ್ ತಂಡದ ಈ ಹೀನಾಯ ಪ್ರದರ್ಶನ ತಂಡದ ಮನೋಬಲವನ್ನು ಕುಗ್ಗಿಸಿದರೆ, ಇತ್ತ ಪಾಕಿಸ್ತಾನ ಸರಣಿ ಗೆಲುವಿನ ಆತ್ಮಸ್ಥೈರ್ಯದೊಂದಿಗೆ ವಿಶ್ವಕಪ್ಗೆ ಪ್ರವೇಶಿಸುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಗೆಲ್ಲಲು 208 ರನ್ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 96 ರನ್ಗಳಿಗೆ ಆಲೌಟ್ ಆಯಿತು.
207 ರನ್ ಕಲೆಹಾಕಿದ ಪಾಕಿಸ್ತಾನ
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಪರ ಮಾಜಿ ನಾಯಕ ಬಾಬರ್ ಆಝಂ 36 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ಅಜೇಯ 50 ರನ್ ಗಳಿಸಿದರೆ, ಸ್ಯಾಮ್ ಅಯೂಬ್ ಕೂಡ 37 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 56 ರನ್ ಗಳಿಸಿದರು. ಶಾದಾಬ್ ಖಾನ್ 19 ಎಸೆತಗಳಲ್ಲಿ 2 ಬೌಂಡರಿ ಮತ್ತು 5 ಸಿಕ್ಸರ್ ನೆರವಿನಿಂದ 46 ರನ್ಗಳ ಕಾಣಿಕೆ ನೀಡಿದರು. ಈ ಮೂವರ ಆಟದಿಂದಾಗಿ ಪಾಕಿಸ್ತಾನ ತನ್ನ 20 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 207 ರನ್ ಗಳಿಸಿತು. ಆಸ್ಟ್ರೇಲಿಯಾದ ಬೌಲರ್ಗಳ ಬಗ್ಗೆ ಹೇಳುವುದಾದರೆ, ಬೆನ್ ದ್ವಾರ್ಶುಯಿಸ್ 4 ಓವರ್ಗಳಲ್ಲಿ 39 ರನ್ಗಳಿಗೆ 2 ವಿಕೆಟ್ ಪಡೆದರೆ, ಮ್ಯಾಥ್ಯೂ ಕುಹ್ನೆಮನ್, ಮ್ಯಾಥ್ಯೂ ಶಾರ್ಟ್, ಕೂಪರ್ ಕಾನೊಲಿ ಮತ್ತು ಕ್ಯಾಮರೂನ್ ಗ್ರೀನ್ ತಲಾ ಒಂದು ವಿಕೆಟ್ ಪಡೆದರು.
96 ರನ್ಗಳಿಗೆ ಆಸೀಸ್ ಆಲೌಟ್
ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಕಳೆದೆರಡು ಪಂದ್ಯಗಳಂತೆ ಕಳಪೆ ಆರಂಭ ಪಡೆದುಕೊಂಡಿತು. ಪವರ್ಪ್ಲೇನಲ್ಲಿಯೇ ತಂಡವು ಮೂರು ವಿಕೆಟ್ಗಳನ್ನು ಕಳೆದುಕೊಂಡಿತು. ತಂಡದ ಪರ ಕ್ಯಾಮರೂನ್ ಗ್ರೀನ್ 24 ಎಸೆತಗಳಲ್ಲಿ 22 ರನ್ ಗಳಿಸಿದರೆ,ಮಾರ್ಕಸ್ ಸ್ಟೊಯಿನಿಸ್ 22 ಎಸೆತಗಳಲ್ಲಿ 23 ರನ್ ಗಳಿಸಿದರು. ಬೇರೆ ಯಾವುದೇ ಆಟಗಾರನಿಗೂ 20 ರನ್ ಗಳಿಸಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ, ಆಸ್ಟ್ರೇಲಿಯಾ 16.5 ಓವರ್ಗಳಲ್ಲಿ 96 ರನ್ಗಳಿಗೆ ಆಲೌಟ್ ಆಯಿತು. ಆದಾಗ್ಯೂ, ಆಡಮ್ ಜಂಪಾ ಗಾಯದಿಂದಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ.
3ನೇ ಬಾರಿಗೆ ಕ್ಲೀನ್ ಸ್ವೀಪ್ ಅವಮಾನ
ಮತ್ತೊಂದೆಡೆ, ಪಾಕಿಸ್ತಾನದ ಬೌಲರ್ಗಳು ಅದ್ಭುತ ಪ್ರದರ್ಶನ ನೀಡಿದರು. ಮೊಹಮ್ಮದ್ ನವಾಜ್ 4 ಓವರ್ಗಳಲ್ಲಿ 18 ರನ್ಗಳಿಗೆ 5 ವಿಕೆಟ್ಗಳನ್ನು ಕಬಳಿಸಿ ಪಂದ್ಯದ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು. ಶಾಹೀನ್ ಶಾ ಅಫ್ರಿದಿ ಕೂಡ 3 ಓವರ್ಗಳಲ್ಲಿ 16 ರನ್ಗಳಿಗೆ 2 ವಿಕೆಟ್ಗಳನ್ನು ಕಬಳಿಸಿದರು. ನಸೀಮ್ ಶಾ ಮತ್ತು ಅಬ್ರಾರ್ ಅಹ್ಮದ್ ಕೂಡ ತಲಾ ಒಂದು ವಿಕೆಟ್ ಪಡೆದರು. ಪಾಕಿಸ್ತಾನ ಈ ಹಿಂದೆ 2018 ರಲ್ಲಿ 3 ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾವನ್ನು 3-0 ಅಂತರದಿಂದ ಸೋಲಿಸಿತ್ತು. ಇತ್ತ 3 ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ಕ್ಲೀನ್ ಸ್ವೀಪ್ ಎದುರಿಸಿದ್ದು ಇದು ಕೇವಲ ಮೂರನೇ ಬಾರಿ. ಪಾಕಿಸ್ತಾನವನ್ನು ಹೊರತುಪಡಿಸಿ, ಭಾರತ ಕೂಡ ಒಮ್ಮೆ ಈ ಸಾಧನೆ ಮಾಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ