ಈ ವರ್ಷ ಬರಲಿದೆ ಇಪಿಎಫ್​ಒ 3.0; ಹಣ ಹಿಂಪಡೆಯುವ ಪ್ರಕ್ರಿಯೆ ಮತ್ತಷ್ಟು ಸುಗಮ

ಈ ವರ್ಷ ಬರಲಿದೆ ಇಪಿಎಫ್​ಒ 3.0; ಹಣ ಹಿಂಪಡೆಯುವ ಪ್ರಕ್ರಿಯೆ ಮತ್ತಷ್ಟು ಸುಗಮ

ನವದೆಹಲಿ, ಏಪ್ರಿಲ್ 7: ಭಾರತದಲ್ಲಿ ಹೆಚ್ಚಿನ ಉದ್ಯೋಗಿಗಳಿಗೆ ರಿಟೈರ್ಮೆಂಟ್ ಸ್ಕೀಮ್ ಆಗಿ ಇಪಿಎಫ್ (EPF) ಇದೆ. ಕಳೆದ ಒಂದು ದಶಕದಲ್ಲಿ ಇಪಿಎಫ್ ಸಿಸ್ಟಂನಲ್ಲಿ ಗಮನಾರ್ಹ ಮಾರ್ಪಾಡುಗಳಾಗಿವೆ. ಆನ್​ಲೈನ್​ನಲ್ಲೇ ಹೆಚ್ಚಿನ ಕಾರ್ಯಗಳು ನಡೆಯುತ್ತಿವೆ. ಇಡೀ ಸಿಸ್ಟಂ ಅನ್ನು ತಕ್ಕಮಟ್ಟಿಗೆ ಸ್ಟ್ರೀಮ್​ಲೈನ್ ಮಾಡಲಾಗಿದೆ. ಮೂಲ ಇಪಿಎಫ್​ಒನಲ್ಲಿದ್ದ ಸಿಸ್ಟಂಗೂ ಇಪಿಎಫ್​ಒ 2.0ಗೂ ಅಜಗಜಾಂತರ ವ್ಯತ್ಯಾಸ ಗುರುತಿಸಬಹುದು. ಹಣ ವಿತ್​ಡ್ರಾ ಮಾಡುವುದು, ಯುಎಎನ್ ಅಡಿಯಲ್ಲಿ ಅಕೌಂಟ್​ಗಳನ್ನು ಸೇರಿಸುವುದು, ವಿಲೀನಗೊಳಿಸುವುದು ಇವೆಲ್ಲಾ ಪ್ರಕ್ರಿಯೆಗಳು ಸರಳಗೊಂಡಿವೆ. ಇದೇ ಹೊತ್ತಲ್ಲಿ ಸರ್ಕಾರ ಇಪಿಎಫ್​ಒ 3.0 ಅನ್ನು ಜಾರಿಗೆ ತರಲು ಹೊರಟಿದೆ.

ಇದು ಪ್ರಾವಿಡೆಂಟ್ ಫಂಡ್ ಸಿಸ್ಟಂಗಳನ್ನು ಮತ್ತಷ್ಟು ಸರಳಗೊಳಿಸುವ ಉದ್ದೇಶ ಹೊಂದಿದೆ. ಇಪಿಎಫ್​ಒ 3.0ದ ಅನೇಕ ಫೀಚರ್​ಗಳನ್ನು ಹಂತ ಹಂತವಾಗಿ ಜಾರಿಗೊಳಿಸುತ್ತಾ ಬರಲಾಗುತ್ತಿದೆ. ಈಗಾಗಲೇ ಕೆಲವು ಅಳವಡಿಕೆ ಆಗಿವೆ. ಮುಂಬರುವ ತಿಂಗಳುಗಳಲ್ಲಿ ಇಪಿಎಫ್​ಒ 3.0 ಅನ್ನು ಪೂರ್ಣವಾಗಿ ಜಾರಿಗೆ ತರಲಾಗುತ್ತದೆ.

ಇದನ್ನೂ ಓದಿ: ಪಶ್ಚಿಮ ಏಷ್ಯಾ ಬಿಕ್ಕಟ್ಟಿಗೆ ಸಿಲುಕಿರುವ ಸಣ್ಣ ಉದ್ದಿಮೆಗಳಿಗೆ ಸರ್ಕಾರದಿಂದ 2.5 ಲಕ್ಷ ಕೋಟಿ ರೂ ಸಾಲ ಖಾತ್ರಿ ಯೋಜನೆ ನೆರವು

ಇಪಿಎಫ್ ಹಣ ಬೇಗ ಕ್ಲೇಮ್ ಮಾಡಲು ಸಾಧ್ಯ

ಇಪಿಎಫ್​ಒ 2.0 ಮುಂಚಿನ ವ್ಯವಸ್ಥೆಯಲ್ಲಿ ಪಿಎಫ್ ಹಣ ಹಿಂಪಡೆಯಲು ಅನೇಕ ಕಟ್ಟುಪಾಡುಗಳಿದ್ದವು. ಪಿಎಫ್ ಕಚೇರಿಗೆ ಸಾಕಷ್ಟು ಬಾರಿ ಅಲೆದಾಡಬೇಕಿತ್ತು. ಆದರೆ, ವಿವಿಧ ಸುಧಾರಣಾ ಕ್ರಮಗಳನ್ನು ತಂದು, ಪಿಎಫ್ ಹಣ ವಿತ್​ಡ್ರಾ ಮಾಡುವ ಪ್ರಕ್ರಿಯೆಗಳನ್ನು ಸರಳಗೊಳಿಸಲಾಯಿತು. ಆನ್​ಲೈನ್​ನಲ್ಲಿ ಕ್ಲೇಮ್​ಗೆ ಅರ್ಜಿ ಸಲ್ಲಿಸುವ ಅವಕಾಶ ನೀಡಲಾಯಿತು. ಕೆಲ ವಾರಗಳಲ್ಲಿ ಹಣ ಬ್ಯಾಂಕ್ ಅಕೌಂಟ್​ಗೆ ಜಮೆ ಆಗುತ್ತದೆ.

ಈಗ ಇಪಿಎಫ್​ಒ 3.0 ವ್ಯವಸ್ಥೆಯಲ್ಲಿ ಪಿಎಫ್ ಹಣಕ್ಕೆ ಕ್ಲೇಮ್ ಮಾಡುವ ಮಿತಿಯನ್ನು 5 ಲಕ್ಷ ರೂಗೆ ಏರಿಸಲಾಗಿದೆ. ಇಷ್ಟು ಮೊತ್ತದ ಹಣಕ್ಕೆ ಸಲ್ಲಿಸುವ ಮನವಿಯನ್ನು ಆಟೊಮ್ಯಾಟಿಕ್ ಆಗಿ ಪ್ರೋಸಸ್ ಮಾಡಲಾಗುತ್ತದೆ. ಮ್ಯಾನುಯಲ್ ಆಗಿ ಅಧಿಕಾರಿಗಳು ಅನುಮೋದನೆ ಮಾಡುವ ಅಗತ್ಯ ಇರುವುದಿಲ್ಲ.

ಪಿಎಫ್ ಅಕೌಂಟ್​ಗಳನ್ನು ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ರವಾನೆ ಮಾಡಲು ಕಂಪನಿಯ ವೆರಿಫಿಕೇಶನ್ ಬೇಕಿತ್ತು. ಆದರೆ, ಹೊಸ ಸಿಸ್ಟಂನಲ್ಲಿ ಅದು ಆಟೊಮ್ಯಾಟಿಕ್ ಆಗಿ ಆಗುತ್ತದೆ.

ಇದನ್ನೂ ಓದಿ: ಅಮೆರಿಕ, ಜಪಾನ್, ಜರ್ಮನಿಗೂ ಸಾಧ್ಯವಾಗದ ಅಡ್ವಾನ್ಸ್ಡ್ ರಿಯಾಕ್ಟರ್ ಸಾಧಿಸಿದ ಭಾರತ; ದೇಶದ ಇಂಧನ ಭವಿಷ್ಯ ಸುರಕ್ಷಿತ?

ಯುಪಿಐ ಮೂಲಕ ಹಣ ವಿತ್​ಡ್ರಾ ಮಾಡಬಹುದು

ಇಪಿಎಫ್​ಒ 3.0ನಲ್ಲಿ ಎಲ್ಲರೂ ಎದುರು ನೋಡುತ್ತಿರುವ ಹೊಸ ಫೀಚರ್ ಎಂದರೆ ಅದು ಯುಪಿಐ ವಿತ್​ಡ್ರಾಯಲ್. ಇಪಿಎಫ್ ಖಾತೆದಾರರು ತಮ್ಮ ಪಿಎಫ್ ಅಕೌಂಟ್​ನಲ್ಲಿರುವ ನಿರ್ದಿಷ್ಟ ಹಣವನ್ನು ಯುಪಿಐ ಮೂಲಕ ವಿತ್​ಡ್ರಾ ಮಾಡುವ ಅವಕಾಶ ಸಿಗುತ್ತದೆ. ಇಪಿಎಫ್ ಅಕೌಂಟ್​ನಲ್ಲಿರುವ ಹಣವನ್ನು ಸದಸ್ಯರು ತಮ್ಮ ಬ್ಯಾಂಕ್ ಅಕೌಂಟ್​ಗೆ ಟ್ರಾನ್ಸ್​ಫರ್ ಮಾಡಬಹುದು. ಈ ಫೀಚರ್ ಅನ್ನು ಸದ್ಯ ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ವರ್ಷದಲ್ಲೇ ಅದು ಜಾರಿಯಾಗುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದಲ್ಲೊಂದು ಅಪರೂಪದ ಘಟನೆ: ಸಿಬ್ಬಂದಿಗೆ ಬಂದೂಕು ಹೊತ್ತು ರಣಬಿಸಿಲಲ್ಲಿ ನಿಲ್ಲುವ ಶಿಕ್ಷೆ

Source link

ಉದ್ಯೋಗಾಕಾಕ್ಷಿಗಳಿಂದ ಮತ್ತೊಂದು ಸುತ್ತಿನ ಹೋರಾಟಕ್ಕೆ ಕರೆ: ಧಾರವಾಡದಲ್ಲಿ ನಾಳೆ ನಡೆಯಲಿದ್ಯಾ ಹೈಡ್ರಾಮಾ?

ಧಾರವಾಡ, ಏಪ್ರಿಲ್​​ 07: ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಿದ ಘಟನೆ ಮಾಸುವ ಮುನ್ನವೇ ವಿದ್ಯಾಕಾಶಿ ಮತ್ತೊಂದು ಸುತ್ತಿನ ಹೋರಾಟಕ್ಕೆ ಸಜ್ಜಾಗಿದೆ. ಮತ್ತೆ ಬೀದಿಗೆ ಇಳಿಯಲು ಉದ್ಯೋಗಾಕಾಂಕ್ಷಿಗಳು ನಿರ್ಧರಿಸಿದ್ದು, ಆ ಮೂಲಕ ಸರ್ಕಾರಗಳ ವಿರುದ್ಧ ತಮ್ಮ ಆಕ್ರೋಶ ಹೊರಹಾಕಲು ರೆಡಿ ಆಗಿದ್ದಾರೆ. ನಾಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಹೋರಾಟ ನಡೆಸಲು ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘದಿಂದ ಪ್ರತಿಭಟನೆಗೆ ಸಿದ್ಧತೆ ನಡೆದಿದೆ. ನಾಳೆಯಿಂದ ಅನಿರ್ದಿಷ್ಟಾವಧಿ ಹೋರಾಟಕ್ಕೆ ಸಂಘಟನೆ ತಯಾರಿ ನಡೆಸಿದೆ.

ಆದರೆ ವಿದ್ಯಾರ್ಥಿಗಳ ಸಂಘದಿಂದ ಕರೆ ನೀಡಲಾಗಿರುವ ಈ ಅನಿರ್ದಿಷ್ಟಾವಧಿ ಹೋರಾಟಕ್ಕೆ ಧಾರವಾಡ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಹೋರಾಟ ಸಂಬಂಧ ಉಪನಗರ ಠಾಣೆ ಪೊಲೀಸರು ಒಟ್ಟು 19 ಪ್ರಶ್ನೆಗಳನ್ನು ಕೇಳಿದ್ದು, ಇವುಗಳಿಗೆ ಸಂಘಟನೆ ಲಿಖಿತ ರೂಪದಲ್ಲಿ ಉತ್ತರ ನೀಡಿದೆ. ಆದರೆ ಉತ್ತರಗಳಲ್ಲಿ ಸ್ಪಷ್ಟತೆ ಇಲ್ಲ ಅನ್ನೋ ಕಾರಣ ನೀಡಿ ಪೊಲೀಸರು ಅನುಮತಿ ನಿರಾಕರಣೆ ಮಾಡಿದ್ದಾರೆ. ಹೋರಾಟದ ವೇಳೆ ಈ ಹಿಂದೆ ಕೆಲ ಅಹಿತಕರ ಘಟನೆಗಳು ನಡೆದಿರುವ ಕಾರಣ ಪ್ರತಿಭಟನೆಗೆ ಅವಕಾಶ ನೀಡಲು ಪೊಲೀಸರು ಒಪ್ಪಿಲ್ಲ. ಹೀಗಾಗಿ ಪೊಲೀಸರ ನಿರ್ಧಾರ ಪ್ರಶ್ನಿಸಿ ಧಾರವಾಡ ಹೈಕೋರ್ಟ್ ‌ಮೊರೆ ಹೋಗಲು ಸಂಘಟನೆ ನಿರ್ಧರಿಸಿದ್ದು, ಕರ್ನಾಟಕ ವಿದ್ಯಾರ್ಥಿಗಳ ಸಂಘ ನಾಳೆ ಈ ಬಗ್ಗೆ ಅರ್ಜಿ ಸಲ್ಲಿಸಲಿದೆ ಎನ್ನಲಾಗಿದೆ.

ಇದನ್ನೂ ಓದಿ: ಭಾರತೀಯ ನೌಕಾಪಡೆಯ ಸಬ್‌ಮರೀನ್ ವಿಭಾಗ ಸೇರುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

‘ಅನುಮತಿ ಇಲ್ಲದೆ ಹೋರಾಟ ಮಾಡಿದರೆ ಕಾನೂನು ಕ್ರಮ’

ಇನ್ನು ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಪೊಲೀಸರ ಅನುಮತಿ ನಿರಾಕರಣೆ ವಿಚಾರ ಸಂಬಂಧ ಧಾರವಾಡದಲ್ಲಿ ಕಮಿಷನರ್​ ಎನ್.ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. AKSSA ಸಂಘಟನೆಯ ಅನಿರ್ದಿಷ್ಟಾವಧಿ ಧರಣಿಗೆ ಉಪನಗರ ಠಾಣೆ ಪೊಲೀಸರು ಒಪ್ಪಿಗೆ ನೀಡಿಲ್ಲ. ಹೀಗಾಗಿ ಅನುಮತಿ ಇಲ್ಲದೆ ಹೋರಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಹೋರಾಟದಲ್ಲಿ ಭಾಗಿಯಾಗದಂತೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ. ಹೋರಾಟಕ್ಕೆ ಕರೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಡಿಸಿ ಕಚೇರಿ ಎದುರು ಭದ್ರತೆ ಹೆಚ್ಚಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಆಸ್ಪತ್ರೆಯಲ್ಲಿ ತ್ರಿಕೋನ ಪ್ರೇಮಕ್ಕೆ ನರ್ಸ್ ಬಲಿ: ಹೈಕೋರ್ಟ್ ತೀರ್ಪಿನಿಂದ ಅನಸ್ತೇಶಿಯಾ ವೈದ್ಯೆಗೆ ಬಿಗ್ ರಿಲೀಫ್!

ಬೆಂಗಳೂರು, ಏ.7: ಖಾಸಗಿ ಆಸ್ಪತ್ರೆಯೊಂದರ ನರ್ಸ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಅದೇ ಆಸ್ಪತ್ರೆಯ ಅನಸ್ತೇಶಿಯಾಲಜಿಸ್ಟ್ (Anesthesiologist) ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ಆದರೆ, ಮುಖ್ಯ ಆರೋಪಿಯಾಗಿರುವ ವೈದ್ಯನ ವಿರುದ್ಧದ ವಿಚಾರಣೆಯನ್ನು ಮುಂದುವರಿಸಲು ನ್ಯಾಯಾಲಯ ಸೂಚಿಸಿದೆ.

ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸರಿತಾ ಎಂಬ ನರ್ಸ್, ಆಸ್ಪತ್ರೆಯ ವೈದ್ಯ ಪೃಥ್ವಿ ಮತ್ತು ಅನಸ್ತೇಶಿಯಾಲಜಿಸ್ಟ್ ವೈದ್ಯೆಯ ಹೆಸರನ್ನು ಡೆತ್ ನೋಟ್‌ನಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆಯ ನಂತರ ಸರಿತಾ ಅವರ ತಾಯಿ ನೀಡಿದ ದೂರಿನ ಮೇರೆಗೆ ಇಬ್ಬರೂ ವೈದ್ಯರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿತ್ತು.

ಮೂಲಗಳ ಪ್ರಕಾರ, ವೈದ್ಯ ಪೃಥ್ವಿ ಮತ್ತು ನರ್ಸ್ ಸರಿತಾ ನಡುವೆ ಪ್ರೇಮ ಸಂಬಂಧವಿತ್ತು. ಅದೇ ಸಮಯದಲ್ಲಿ ವೈದ್ಯ ಪೃಥ್ವಿ ಅವರಿಗೆ ಅನಸ್ತೇಶಿಯಾಲಜಿಸ್ಟ್ ವೈದ್ಯೆಯ ಜೊತೆಯೂ ಅಫೇರ್ ಇತ್ತು ಎನ್ನಲಾಗಿದೆ. ಈ ತ್ರಿಕೋನ ಪ್ರೇಮ ಕಥೆಯಿಂದ ಬೇಸತ್ತ ಸರಿತಾ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿದ್ದರು ಎಂದು ಆರೋಪಿಸಲಾಗಿತ್ತು.

ಇದನ್ನೂ ಓದಿ: ಸ್ನ್ಯಾಪ್ ಚಾಟ್‌ನಲ್ಲಿ ಯುವತಿಗೆ ಗಾಳ: ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್​​ ಮೇಲ್​; ಪೀಕಿದ್ದು 40 ಲಕ್ಷ ಹಣ, 2 ಕೆಜಿ ಚಿನ್ನ!

ಹಾಸ್ಟೆಲ್‌ನ 9ನೇ ಮಹಡಿಯಿಂದ ಜಿಗಿದು ಪಿಯು ವಿದ್ಯಾರ್ಥಿ ಆತ್ಮಹತ್ಯೆ!

ಸಿಲಿಕಾನ್ ಸಿಟಿ ಬೆಂಗಳೂರಿನ ಯಲಹಂಕ ನ್ಯೂ ಟೌನ್‌ನಲ್ಲಿ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಗಿನ ಜಾವ ನಡೆದಿದೆ. ಮೃತನನ್ನು 21 ವರ್ಷದ ಲಕ್ಷ್ಮ ಮಿಶ್ರಾ ಎಂದು ಗುರುತಿಸಲಾಗಿದೆ. ಮೂಲತಃ ಜಾರ್ಖಂಡ್‌ನ ರಾಂಚಿ ನಿವಾಸಿಯಾಗಿದ್ದ ಲಕ್ಷ್ಮ ಮಿಶ್ರಾ, ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಯಲಹಂಕದ ಖಾಸಗಿ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ (2nd PUC) ಓದುತ್ತಿದ್ದ ಇವರು, ಕಾಲೇಜಿನ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದರು. ಇಂದು ನಸುಕಿನ ಜಾವ ಸುಮಾರು 3 ಗಂಟೆಯ ವೇಳೆಗೆ ಹಾಸ್ಟೆಲ್ ಕಟ್ಟಡದ 9ನೇ ಮಹಡಿಯಿಂದ ಕೆಳಕ್ಕೆ ಜಿಗಿದು ಪ್ರಾಣ ಬಿಟ್ಟಿದ್ದಾರೆ.

ಘಟನೆ ನಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಯಲಹಂಕ ನ್ಯೂ ಟೌನ್ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ವಿದ್ಯಾರ್ಥಿಯ ಈ ಕಠಿಣ ನಿರ್ಧಾರಕ್ಕೆ ನಿಖರ ಕಾರಣವೇನು ಎಂಬುದು ಇನ್ನು ತಿಳಿದುಬಂದಿಲ್ಲ. ಪರೀಕ್ಷಾ ಒತ್ತಡವೇ ಅಥವಾ ವೈಯಕ್ತಿಕ ಕಾರಣಗಳೇ ಎಂಬ ಬಗ್ಗೆ ಪೊಲೀಸರು ಸಹಪಾಠಿಗಳು ಮತ್ತು ಪೋಷಕರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ರಾಂಚಿಯಲ್ಲಿರುವ ಮೃತನ ಪೋಷಕರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಲಾಗಿದ್ದು, ಅವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಸದ್ಯಕ್ಕೆ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಡೀ ದೇಶದ ಜನರು ಇಂದು ರಾತ್ರಿ ಸಾಯುತ್ತಾರೆ; ಗಡುವು ಸಮೀಪಿಸುತ್ತಿದ್ದಂತೆ ಇರಾನ್​ಗೆ ಟ್ರಂಪ್ ಬೆದರಿಕೆ

ವಾಷಿಂಗ್ಟನ್, ಏಪ್ರಿಲ್ 7: ಇಸ್ರೇಲ್ ಜೊತೆ ಸೇರಿ ಫೆಬ್ರವರಿ 28ರಂದು ಅಮೆರಿಕ ಇರಾನ್ (Iran War) ಮೇಲೆ ದಾಳಿ ಆರಂಭಿಸಿತ್ತು. ಇರಾನ್​ನ ಸುಪ್ರೀಂ ನಾಯಕನನ್ನು ಕೊಂದು, ಇರಾನ್ ಮೇಲೆ ಡ್ರೋನ್ ದಾಳಿ ನಡೆಸಿದರೆ ಈ ಯುದ್ಧ ಒಂದೆರಡು ದಿನಗಳಲ್ಲೇ ಮುಗಿದು ಹೋಗುತ್ತದೆ ಎಂಬ ಲೆಕ್ಕಾಚಾರ ಟ್ರಂಪ್​ದಾಗಿತ್ತು. ಆದರೆ, ಸುಪ್ರೀಂ ನಾಯಕ ಸೇರಿದಂತೆ ಮಿಲಿಟರಿಯ ಮುಖ್ಯಸ್ಥರನ್ನೆಲ್ಲ ಕಳೆದುಕೊಂಡರೂ ಇರಾನ್ ಕಂಗೆಡದೆ ಅಮೆರಿಕ ಮತ್ತು ಇಸ್ರೇಲ್​ನ ವಾಯುನೆಲೆಗಳನ್ನೆಲ್ಲ ಉಡೀಸ್ ಮಾಡಿತ್ತು. ನಾವು ಸಂಪೂರ್ಣ ನಾಶವಾದರೂ ಪರವಾಗಿಲ್ಲ, ನಮ್ಮ ಶತ್ರುಗಳು ನಮ್ಮ ಅರ್ಧದಷ್ಟಾದರೂ ನಾಶವಾಗಬೇಕೆಂಬ ಹಠ ತೊಟ್ಟ ಇರಾನ್ ಯಾವೆಲ್ಲ ರೀತಿಯಲ್ಲಿ ಸಾಧ್ಯವೋ ಆ ರೀತಿಯಲ್ಲೆಲ್ಲ ವಿಶ್ವದ ದೊಡ್ಡಣ್ಣ ಡೊನಾಲ್ಡ್​ ಟ್ರಂಪ್​ (Donald Trump) ನಿದ್ರೆಗೆಡಿಸಿತ್ತು.

ಈ ಯುದ್ಧ ಶುರುವಾಗಿ ತಿಂಗಳೇ ಕಳೆದರೂ ಮೂರೂ ದೇಶಗಳು ಸುಮ್ಮನಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಇದರ ನಡುವೆ ಕೊನೆಯ ಅವಕಾಶವಾಗಿ ಕದನವಿರಾಮದ ಒಪ್ಪಂದಕ್ಕೆ ಒಪ್ಪಿಗೆ ನೀಡಲು ಅಮೆರಿಕ ಇರಾನ್​ಗೆ ನೀಡಿದ್ದ ಗಡುವು ಅಮೆರಿಕದ ಕಾಲಮಾನದ ಪ್ರಕಾರ ಇಂದು ರಾತ್ರಿ ಹಾಗೂ ಭಾರತೀಯ ಕಾಲಮಾನದ ಪ್ರಕಾರ ನಾಳೆ ಬೆಳಗ್ಗೆ 5.30ಕ್ಕೆ ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಕೊನೆಯ ಎಚ್ಚರಿಕೆ ನೀಡಿರುವ ಟ್ರಂಪ್ ಇಂದು ರಾತ್ರಿ ಇರಾನ್​ನ ನಾಗರಿಕರೆಲ್ಲ ಸಾಯಲಿದ್ದಾರೆ. ಇರಾನ್ ಮತ್ತೆ ಎದ್ದುಬರಲು ಸಾಧ್ಯವೇ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಒಪ್ಪಂದ, ಶರಣಾಗತಿ ಅಥವಾ ಅತ್ಯಂತ ಮಾರಕ ದಾಳಿ? ಇರಾನ್​ಗೆ ಟ್ರಂಪ್ ಗಡುವು, ವಿನಾಶಕ್ಕೆ ಕ್ಷಣಗಣನೆ

ಇರಾನ್ ವಿರುದ್ಧ ಇದುವರೆಗೆ ಟ್ರಂಪ್ ನೀಡಿದ ಪ್ರಬಲ ಬೆದರಿಕೆಗಳಲ್ಲಿ ಇದು ಒಂದಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್​ ಕದನವಿರಾಮಕ್ಕೆ ಒಪ್ಪದಿದ್ದರೆ ಆಗುವ ವಿನಾಶಕಾರಿ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಇಂದು ರಾತ್ರಿ ಇರಾನ್‌ನ ನಾಗರಿಕತೆಯು ಸಂಪೂರ್ಣ ನಾಶವಾಗಬಹುದು ಎಂದು ಬೆದರಿಕೆ ಹಾಕಿದ್ದಾರೆ.

ಟ್ರೂತ್ ಸೋಶಿಯಲ್ ಬಗ್ಗೆ ಟ್ರಂಪ್ ಈ ಬಗ್ಗೆ ಬರೆದಿದ್ದಾರೆ. “ಇಡೀ ನಾಗರಿಕತೆಯು ಇಂದು ರಾತ್ರಿ ಸಾಯುತ್ತದೆ, ಮತ್ತೆಂದೂ ಇರಾನ್​ನ ಜನರು ಹಿಂತಿರುಗುವುದಿಲ್ಲ. ಆ ರೀತಿ ಆಗಬೇಕೆಂದು ನಾನು ಬಯಸುವುದಿಲ್ಲ. ಆದರೆ ಆ ರೀತಿ ಆಗುವ ಸಾಧ್ಯತೆಯೂ ಇಲ್ಲದಿಲ್ಲ” ಎಂದು ಟ್ರಂಪ್ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಇರಾನ್ ಮುಗಿಸಲು ಒಂದೇ ಒಂದು ರಾತ್ರಿ ಸಾಕು, ಗಡುವು ಮುಗಿಯುವ ಮುನ್ನವೇ ಇರಾನ್​ಗೆ ಟ್ರಂಪ್ ಬೆದರಿಕೆ

“ಇಂದು ರಾತ್ರಿ ಏನಾಗಲಿದೆ ಎಂಬುದು ಯಾರಿಗೂ ತಿಳಿದಿಲ್ಲ. ಈ ರಾತ್ರಿ ಪ್ರಪಂಚದ ದೀರ್ಘ ಮತ್ತು ಸಂಕೀರ್ಣ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಕ್ಷಣಗಳಲ್ಲಿ ಒಂದಾಗಲಿದೆ. 47 ವರ್ಷಗಳ ಸುಲಿಗೆ, ಭ್ರಷ್ಟಾಚಾರ ಮತ್ತು ಸಾವು ಅಂತಿಮವಾಗಿ ಕೊನೆಗೊಳ್ಳುತ್ತದೆ. ಇರಾನ್‌ನ ಜನರನ್ನು ದೇವರು ಆಶೀರ್ವದಿಸಲಿ!” ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

‘ಪಲ್ಲಿಚಟ್ಟಂಬಿ’ ಸಿನಿಮಾ: ‘ಮುಗಿಲ್ ಪೇಟೆ’ ಚೆಲುವೆಯ ಮುದ್ದಾದ ಮಾತು

ಟೊವಿನೋ ಥಾಮಸ್ (Tovino Thomas) ಹಾಗೂ ಖಯಾದು ಲೋಹರ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಮಲಯಾಳಂ ಪ್ಯಾನ್ ಇಂಡಿಯಾ ಸಿನಿಮಾ ‘ಪಲ್ಲಿಚಟ್ಟಂಬಿ’ ಇದೇ ವಾರ ಬಿಡುಗಡೆ ಆಗಲಿದ್ದು, ಚಿತ್ರತಂಡವು ದೇಶದ ಪ್ರಮುಖ ರಾಜ್ಯಗಳಿಗೆ ತೆರಳಿ ಪ್ರಚಾರ ಮಾಡುತ್ತಿದೆ. ‘ಪಲ್ಲಿಚಟ್ಟಂಬಿ’ ಸಿನಿಮಾವನ್ನು ಕರ್ನಾಟಕದಲ್ಲಿ ಹೊಂಬಾಳೆ ಫಿಲಮ್ಸ್ ವಿತರಣೆ ಮಾಡುತ್ತಿದ್ದು, ಇಂದು (ಏಪ್ರಿಲ್ 07) ರಾಜ್ಯದಲ್ಲಿ ಸಿನಿಮಾದ ಪ್ರಚಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕನ್ನಡದ ‘ಮುಗಿಲ್ ಪೇಟೆ’ ಸಿನಿಮಾನಲ್ಲಿ ನಟಿಸಿರುವ ಖಯಾದು ಲೋಹರ್ ಅವರು ತಮ್ಮ ಹೊಸ ಸಿನಿಮಾ ಬಗ್ಗೆ ಪ್ರೀತಿಯಿಂದ ಮಾತನಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪಶ್ಚಿಮ ಏಷ್ಯಾ ಬಿಕ್ಕಟ್ಟಿಗೆ ಸಿಲುಕಿರುವ ಸಣ್ಣ ಉದ್ದಿಮೆಗಳಿಗೆ ಸರ್ಕಾರದಿಂದ 2.5 ಲಕ್ಷ ಕೋಟಿ ರೂ ಸಾಲ ಖಾತ್ರಿ ಯೋಜನೆ ನೆರವು

ನವದೆಹಲಿ, ಏಪ್ರಿಲ್ 7: ಪಶ್ಚಿಮ ಏಷ್ಯನ್ ಬಿಕ್ಕಟ್ಟಿನಿಂದ ಭಾರತದ ಹಲವು ಕ್ಷೇತ್ರಗಳು ಬಾಧಿತವಾಗಿವೆ. ಈ ಸಂಕಷ್ಟದ ಸಂದರ್ಭದಲ್ಲಿ ಬಾಧಿಕ ಕ್ಷೇತ್ರಗಳೆಲ್ಲವಕ್ಕೂ ನೆರವು ನೀಡಲು ಕೇಂದ್ರ ಸರ್ಕಾರ ಸಾಲ ಖಾತ್ರಿ ಯೋಜನೆ ಆರಂಭಿಸಲು ಯೋಜಿಸಿದೆ. ಕೋವಿಡ್ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಪ್ಯಾಕೇಜ್ ಮಾದರಿಯಲ್ಲಿ ಇರುವ ಈ ಕ್ರೆಡಿಟ್ ಗ್ಯಾರಂಟಿ ಸ್ಕೀಮ್​ನ (Credit Guarantee scheme) ಒಟ್ಟು ಮೊತ್ತ 2.5 ಲಕ್ಷ ಕೋಟಿ ರೂ ಇರುವ ಅಂದಾಜು ಇದೆ ಎಂದು ಮನಿಕಂಟ್ರೋಲ್​ನಲ್ಲಿ ವರದಿ ಮಾಡಲಾಗಿದೆ. ಇಬ್ಬರು ಅಧಿಕಾರಿಗಳ ಮೂಲಗಳಿಂದ ಈ ಮಾಹಿತಿ ಸಿಕ್ಕಿದೆ.

2020ರಲ್ಲಿ ಕೋವಿಡ್ ಬಂದಾಗ ಲಾಕ್​ಡೌನ್ ಕಾರಣದಿಂದ ಆರ್ಥಿಕತೆ ಸ್ಥಗಿತಗೊಂಡಿತ್ತು. ಬಹುತೇಕ ಎಲ್ಲಾ ಉದ್ಯಮಗಳು ನಲುಗಿದ್ದವು. ಅದರಲ್ಲೂ ಎಂಎಸ್​ಎಂಇಗಳು ವಿಪರೀತ ಹೊಡೆತ ತಿಂದಿದ್ದವು. ಅವುಗಳಿಗೆ ಚೇತರಿಕೆ ನೀಡುವ ಸಲುವಾಗಿ ಸರ್ಕಾರವು ಇಸಿಜಿಎಲ್​ಎಸ್ ಅಥವಾ ತುರ್ತು ಸಾಲ ಖಾತ್ರಿ ಯೋಜನೆ ಹಾಕಿತ್ತು. ಈಗ ಸರ್ಕಾರ ಯೋಜಿಸಿರುವುದು ಆ ಯೋಜನೆಯ ವಿಸ್ತೃತ ರೂಪವಾಗಿದೆ.

ಇದನ್ನೂ ಓದಿ: ಅಮೆರಿಕ, ಜಪಾನ್, ಜರ್ಮನಿಗೂ ಸಾಧ್ಯವಾಗದ ಅಡ್ವಾನ್ಸ್ಡ್ ರಿಯಾಕ್ಟರ್ ಸಾಧಿಸಿದ ಭಾರತ; ದೇಶದ ಇಂಧನ ಭವಿಷ್ಯ ಸುರಕ್ಷಿತ?

ಉದ್ದಿಮೆಗಳಿಗೆ ಸರ್ಕಾರದಿಂದ ಸಾಲ ಖಾತ್ರಿ

ವಿವಿಧ ಉದ್ದಿಮೆಗಳು ಸಾಲ ಪಡೆಯಲು ಸಾಧ್ಯವಾಗುವಂತೆ ನ್ಯಾಷನಲ್ ಕ್ರೆಡಿಟ್ ಕ್ಯಾರಂಟಿ ಟ್ರಸ್ಟೀ ಕಂಪನಿಯಿಂದ ಶೇ. 90ರಷ್ಟು ಕ್ರೆಡಿಟ್ ಗ್ಯಾರಂಟಿ ಒದಗಿಸುವ ಉದ್ದೇಶ ಈ ಸ್ಕೀಮ್​ನದ್ದಾಗಿದೆ. ಒಂದು ವೇಳೆ, ಸಾಲ ತೆಗೆದುಕೊಂಡವರು ತೀರಿಸಲು ವಿಫಲರಾದಲ್ಲಿ ಸರ್ಕಾರವು ಆ ಸಾಲವನ್ನು ಭರಿಸುತ್ತದೆ.

ಕೋವಿಡ್ ಸಂದರ್ಭದಲ್ಲಿ ಜಾರಿಗೊಳಿಸಲಾದ ಸಾಲ ಖಾತ್ರಿ ಸ್ಕೀಮ್​ನಲ್ಲಿ ಬಡ್ಡಿದರ ಹೆಚ್ಚಾಗದಂತೆ ಮಿತಿ ಹಾಕಲಾಗಿತ್ತು. ಬ್ಯಾಂಕುಗಳು ಈ ಸ್ಕೀಮ್​ನಲ್ಲಿ ನೀಡುವ ಸಾಲಗಳಿಗೆ ವಿಧಿಸುವ ಬಡ್ಡಿ ದರ ಶೇ. 9.25 ಮೀರಬಾರದು, ಮತ್ತು ಎನ್​ಬಿಎಫ್​ಸಿಗಳು ಶೇ. 14ಕ್ಕಿಂತ ಹೆಚ್ಚು ಬಡ್ಡಿ ವಿಧಿಸಬಾರದು ಎಂದು ಸರ್ಕಾರ ಒಂದು ಮಿತಿ ಹಾಕಿತ್ತು. ಹಾಗೆಯೇ, ಒಂದು ವರ್ಷ ಅಸಲು ಹಣ ಪಾವತಿಸುವ ಅವಶ್ಯಕತೆ ಇಲ್ಲದೆ, ಕೇವಲ ಬಡ್ಡಿ ಮಾತ್ರ ಕಟ್ಟಿಕೊಂಡು ಹೋಗುವ ಅವಕಾಶ ನೀಡಲಾಗಿತ್ತು.

ಇದನ್ನೂ ಓದಿ: ಐದು ಕಿಲೋ ಎಲ್​ಪಿಜಿ ಸಿಲಿಂಡರ್ ಹಂಚಿಕೆ ಎರಡು ಪಟ್ಟು ಹೆಚ್ಚಳ; ವಲಸೆ ಕಾರ್ಮಿಕರಿಗೆ ನಿರಾಳ

ಈ ಸ್ಕೀಮ್ ಅಡಿಯಲ್ಲಿ ಒಟ್ಟು ನೀಡಿದ ಕ್ರೆಡಿಟ್ ಗ್ಯಾರಂಟಿಗಳ ಸಂಖ್ಯೆ 1.19 ಕೋಟಿ. ಈ ಪೈಕಿ ಎಂಎಸ್​ಎಂಇಗಳಿಗೆ ನೀಡಿದ್ದು 1.13 ಕೋಟಿ ಗ್ಯಾರಂಟಿಗಳು. ಆ ಸಂದರ್ಭದಲ್ಲಿ ಬಾಧಿತ ಉದ್ದಿಮೆಗಳಿಗೆ ಈ ಸಾಲ ಬಹಳ ಉಪಯೋಗಕ್ಕೆ ಬಂದಿದ್ದು ಗಮನಾರ್ಹ. ಹೀಗಾಗಿ, ಅದೇ ಮಾದರಿಯಲ್ಲಿ ಇನ್ನೂ ವಿಸ್ತೃತವಾದ ಸ್ಕೀಮ್ ಅನ್ನು ಈಗ ರೂಪಿಸಲು ಸರ್ಕಾರ ಮುಂದಾಗಿದೆ ಎಂದು ಮನಿಕಂಟ್ರೋಲ್ ವರದಿಯಲ್ಲಿ ಹೇಳಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅರ್ಜುನ್ ತೆಂಡೂಲ್ಕರ್ ಯಾರ್ಕರ್​ಗೆ LSG ಬ್ಯಾಟರ್​ಗಳು ತಬ್ಬಿಬ್ಬು..!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 15ನೇ ಪಂದ್ಯಕ್ಕಾಗಿ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡವು ಭರ್ಜರಿ ಸಿದ್ಧತೆಯಲ್ಲಿದೆ. ಈ ಸಿದ್ಧತೆಗಳ ನಡುವೆ ಎಲ್ಲರ ಗಮನ ಸೆಳೆದಿರುವುದು ಯುವ ವೇಗಿ ಅರ್ಜುನ್ ತೆಂಡೂಲ್ಕರ್. ಲಕ್ನೋ ಸೂಪರ್ ಜೈಂಟ್ಸ್ ತಂಡದ ಭಾಗವಾಗಿರುವ ಅರ್ಜುನ್ ತೆಂಡೂಲ್ಕರ್ ನೆಟ್ಸ್​ನಲ್ಲಿ, ತಮ್ಮ ನಿಖರವಾದ ಯಾರ್ಕರ್ ದಾಳಿಯ ಮೂಲಕ ತಂಡದ ಪ್ರಮುಖ ಬ್ಯಾಟರ್‌ಗಳನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ಲಕ್ನೋ ತಂಡದ ನಾಯಕ ರಿಷಬ್ ಪಂತ್ ಅವರಿಗೆ ಅರ್ಜುನ್ ತೆಂಡೂಲ್ಕರ್ ಸತತವಾಗಿ ಯಾರ್ಕರ್‌ಗಳನ್ನು ಎಸೆಯುವ ಮೂಲಕ ಬೆವರಿಳಿಸಿದರು. ಪಂತ್ ಅವರ ಬ್ಯಾಟಿಂಗ್ ಲಯವನ್ನು ಪರೀಕ್ಷಿಸಲು ಅರ್ಜುನ್ ಈ ತಂತ್ರವನ್ನು ಬಳಸಿಕೊಂಡರು.

ಇದಾದ ಬಳಿಕ ಸ್ಫೋಟಕ ಬ್ಯಾಟರ್ ಅಬ್ದುಲ್ ಸಮದ್ ಕೂಡ ಅರ್ಜುನ್ ಅವರ ವೇಗದ ಮತ್ತು ನಿಖರ ಎಸೆತಗಳನ್ನು ಎದುರಿಸಲು ಪರದಾಡಿದರು. ಡೆತ್ ಓವರ್‌ಗಳಲ್ಲಿ ಬೌಲಿಂಗ್ ಮಾಡುವ ಅರ್ಜುನ್ ಅವರ ಸಾಮರ್ಥ್ಯ ಈ ಅಭ್ಯಾಸದ ವೇಳೆ ಎದ್ದು ಕಾಣುತ್ತಿತ್ತು.

ಕಳೆದ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಅರ್ಜುನ್ ತೆಂಡೂಲ್ಕರ್ ಅವರನ್ನು ಈ ಬಾರಿಯ ಹರಾಜಿಗೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ತಂಡ ಟ್ರೇಡ್ ಮಾಡಿಕೊಂಡಿದೆ. ಈ ಟ್ರೇಡ್ ಹೊರತಾಗಿಯೂ ಎಲ್​ಎಸ್​ಜಿ ಪರ ಕಣಕ್ಕಿಳಿಯಲು ಅರ್ಜುನ್ ತೆಂಡೂಲ್ಕರ್​ಗೆ ಅವಕಾಶ ಸಿಕ್ಕಿಲ್ಲ.

ಇದೀಗ ನಿಖರ ಯಾರ್ಕರ್​ಗಳ ಮೂಲಕ ಗಮನ ಸೆಳೆದಿರುವ ಅರ್ಜುನ್ ತೆಂಡೂಲ್ಕರ್ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ಪರ ಪಾದಾರ್ಪಣೆ ಮಾಡಲಿದ್ದಾರಾ ಕಾದು ನೋಡಬೇಕಿದೆ.

 

Source link

ಅಪೋಲೋ, ಡಾ.ಅಗರ್ವಾಲ್- ಯ್ಯೂನಿಕ್ ಲ್ಯಾಬ್ಸ್ ವತಿಯಿಂದ ಟಿವಿ9 ಸಿಬ್ಬಂದಿಗೆ ಉಚಿತ ಆರೋಗ್ಯ ತಪಾಸಣೆ

ಬೆಂಗಳೂರು, (ಏಪ್ರಿಲ್ 07): ವಿಶ್ವ ಆರೋಗ್ಯ ದಿನವನ್ನು (World Health Day) ಪ್ರತಿ ವರ್ಷ ಏಪ್ರಿಲ್ 7 ರಂದು ಆಚರಿಸಲಾಗುತ್ತದೆ. ಪ್ರತಿ ವರ್ಷದಂತೆ ವಿಶ್ವ ಆರೋಗ್ಯ ದಿನಾಚರಣೆ ಹಿನ್ನೆಲೆಯಲ್ಲಿ  ಇಂದು (ಮಂಗಳವಾರ) ಅಪೋಲೋ ಮತ್ತು ಡಾ.ಅಗರ್ವಾಲ್ ಕಣ್ಣಿನ ಆಸ್ಪತ್ರೆಯ ಹಾಗೂ ಯ್ಯೂನಿಕ್ ಲ್ಯಾಬ್ಸ್ ವತಿಯಿಂದ ಬೆಂಗಳೂರಿನ ಟಿವಿ9 ಕಚೇರಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ (free health checkup) ಆಯೋಜಿಸಲಾಗಿದ್ದು, ಎಲ್ಲಾ ಸಿಬ್ಬಂದಿಗೆ ಬಿಪಿ, ,ಶುಗರ್, ಥೈರಾಡ್, ಸ್ಕಿನ್‌ಕೇರ್, ಇಸಿಜಿ, ಡೆಂಟಲ್‌ ಹಾಗೂ ನೇತ್ರಾ ತಪಾಸಣೆ ಮಾಡಲಾಯ್ತು. ಅಪೋಲೋ ಆಸ್ಪತ್ರೆ ಸಿಇಓಓ ಡಾ.ಯತೀಶ್ ಗೋವಿಂದಯ್ಯ, ಮಾರ್ಕೆಟಿಂಗ್ ಮ್ಯಾನೇಜರ್ ಕೃಷ್ಣ ರೆಡ್ಡಿ ನೇತೃತ್ವದಲ್ಲಿ ಉಚಿತ ತಪಾಸಣೆ ಆಯೋಜನೆ ಮಾಡಿದ್ದು, ಪ್ರತಿದಿನ ನ್ಯೂಸ್‌ನಲ್ಲಿ ಬ್ಯುಸಿಯಾಗಿದ್ದ ಸಿಬ್ಬಂದಿ ಉತ್ಸುಕರಾಗಿ ತಮ್ಮ ಹೆಲ್ತ್​ ಚೆಕ್‌ ಮಾಡಿಸಿಕೊಂಡು ತಜ್ಞ ವೈದ್ಯರಿಂದ ಕೆಲ ಸಲಹೆ ಪಡೆದುಕೊಂಡರು.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ನ್ಯಾಪ್ ಚಾಟ್‌ನಲ್ಲಿ ಯುವತಿಗೆ ಗಾಳ: ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್​​ ಮೇಲ್​; ಪೀಕಿದ್ದು 40 ಲಕ್ಷ ಹಣ, 2 ಕೆಜಿ ಚಿನ್ನ!

ಬೆಂಗಳೂರು, ಏಪ್ರಿಲ್​​ 07: ಸಾಮಾಜಿಕ ಜಾಲತಾಣದಲ್ಲಿ ಮಹಿಳೆಗೆ ಪರಿಚಯವಾಗಿದ್ದ ವ್ಯಕ್ತಿ ಸೇರಿ ಇಬ್ಬರು ಮಹಿಳೆಯ ಖಾಸಗಿ ಫೋಟೋಗಳನ್ನು ವೈರಲ್​​ ಮಾಡೋದಾಗಿ ಬೆದರಿಸಿ ಆಕೆಯಿಂದ 2 ಕೆಜಿ ಚಿನ್ನ ಹಾಗೂ 40 ಲಕ್ಷ ಹಣ ಪೀಕಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಈ ಬಗ್ಗೆ ಸಂತ್ರಸ್ತ ಮಹಿಳೆ ನೀಡಿದ್ದ ದೂರಿನ ಅನ್ವಯ ಆಂಧ್ರ ಮೂಲದ ಚೆನ್ನೂರು ಮಹೇಶ್​ ಮತ್ತು ವನ್ನೂರು ಸ್ವಾಮಿ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 571 ಗ್ರಾಂ ಚಿನ್ನಾಭರಣ, 25 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ.

ಒಂದೂವರೆ ವರ್ಷದ ಹಿಂದೆ ಸ್ನ್ಯಾಪ್ ಚಾಟ್‌ನಲ್ಲಿ ಮಹಿಳೆಯೊಬ್ಬರಿಗೆ ಪರಿಚಯವಾಗಿದ್ದ ಆರೋಪಿಗಳು, ಮೆಲ್ಲಗೆ ಆಕೆಯ ನಂಬರ್ ಎಕ್ಸ್ಚೇಂಜ್ ಮಾಡಿಕೊಂಡಿದ್ದರು. ನಂತರ ವಾಟ್ಸ್ ಆ್ಯಪ್ ವಿಡಿಯೋ ಕಾಲ್ ಮಾಡುವಾಗ ಮಹಿಳೆಗೆ ತಿಳಿಯದಂತೆ ಸ್ಕ್ರೀನ್ ಶಾಟ್ ಮತ್ತು ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡಿದ್ದರು. ಇದನ್ನೇ ಅಸ್ತ್ರವಾಗಿಸಿಕೊಂಡು ಅಸಲಿ ಆಟ ಶುರು ಮಾಡಿದ್ದರು. ನಿನ್ನ ಖಾಸಗಿ ಫೋಟೋಗಳನ್ನು ಗಂಡನಿಗೆ ಕಳಿಸುತ್ತೇವೆ. ಸೋಷಿಯಲ್ ಮೀಡಿಯಾದಲ್ಲಿ ಹಾಕ್ತೇವೆ ಎಂದು ಬೆದರಿಸಿದ್ದ ಕಿರಾತಕರು, ಹಂತಹಂತವಾಗಿ ಮಹಿಳೆಯಿಂದ 40 ಲಕ್ಷ ಹಣ ಮತ್ತು 2 ಕೆಜಿ ಚಿನ್ನಾಭರಣವನ್ನು ಪೀಕಿದ್ದರು. ಆರೋಪಿಗಳ ಕಾಟ ತಾಳಲಾರದೆ ಮಹಿಳೆ ಕೊನೆಗೆ ತನ್ನ ಪತಿಗೆ ಈ ಬಗ್ಗೆ ವಿಷಯ ತಿಳಿಸಿದ್ದು, ಘಟನೆ ಸಂಬಂಧ ಕೆ.ಆರ್. ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

ಇದನ್ನೂ ಓದಿ: ‘ಬೆತ್ತಲೆ ವೀಡಿಯೋ ಕಾಲ್ ಮಾಡು ಎಂದು ಪೀಡಿಸುತ್ತಾರೆ’: ಬಸವಜಯ ಮೃತ್ಯುಂಜಯ ಸ್ವಾಮೀಜಿ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ!

ಇನ್ನು ಆರೋಪಿ ವನ್ನೂರು ಸ್ವಾಮಿಗೆ ಚೆನ್ನೂರು ಮಹೇಶ್​ ಮೂಲಕ ಮಹಿಳೆಯ ಪರಿಚಯವಾಗಿತ್ತು. ಯಾವಾಗ ಮಹೇಶನ ಬಳಿ ಆಕೆಯ ಫೋಟೋ, ವಿಡಿಯೋಗಳು ಇರುವ ಬಗ್ಗೆ ಗೊತ್ತಾಯ್ತೋ ಈತನೂ ಮಹೇಶನ ಜೊತೆ ಸೇರಿಕೊಂಡು ಮಹಿಳೆಗೆ ಬೆದರಿಸಿ ಹಣ, ಚಿನ್ನಾಭರಣ ಪೀಕಿದ್ದ. ಮಹಿಳೆಯಿಂದ ಪಡೆದಿದ್ದ ಹಣದಲ್ಲಿ ಬೆಟ್ಟಿಂಗ್ ಆಡ್ತಿದ್ದ ಆರೋಪಿಗಳು ಸಾಕಷ್ಟು ಹಣ ಕಳೆದುಕೊಂಡಿರುವುದು ತನಿಖೆ ವೇಳೆ ಗೊತ್ತಾಗಿದೆ. ಮತ್ತೊಂದು ಕಡೆ ಇಬ್ಬರ ಮೊಬೈಲ್ ಪರಿಶೀಲಿಸಿದ ಪೊಲೀಸರೇ ಶಾಕ್ ಆಗಿದ್ದಾರೆ. ಯಾಕಂದ್ರೆ ಕೇವಲ ಈ ಮಹಿಳೆ ಮಾತ್ರವಲ್ಲ, ಇನ್ನು ಅನೇಕ ಯುವತಿಯರ ಮತ್ತು ಮಹಿಳೆಯರ ಖಾಸಗಿ ಫೋಟೋಗಳು ಫೋನ್‌ನಲ್ಲಿ ಪತ್ತೆಯಾಗಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version