‘ಜನ ನಾಯಗನ್’ ಚಿತ್ರಕ್ಕಾಗಿ ದೊಡ್ಡ ರಿಸ್ಕ್ ತೆಗೆದುಕೊಳ್ಳಲು ಮುಂದಾದ ಕೆವಿಎನ್? – Kannada News

ದಳಪತಿ ವಿಜಯ್ (Vijay) ನಟನೆಯ ಬಹುನಿರೀಕ್ಷಿತ ‘ಜನನಾಯಗನ್’ ಚಿತ್ರದ ಬಿಡುಗಡೆಗೆ ಎದುರಾಗಿರುವ ಅನಿಶ್ಚಿತತೆ ಮುಂದುವರಿದಿದೆ. ಸತತ ಪ್ರಯತ್ನಗಳ ಹೊರತಾಗಿಯೂ ಚಿತ್ರದ ಸೆನ್ಸಾರ್ ಪ್ರಮಾಣಪತ್ರ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ ಎನ್ನಲಾಗಿದೆ. ಈ ಅನಿರೀಕ್ಷಿತ ವಿಳಂಬವು ಚಿತ್ರದ ಮೇಲೆ ದೊಡ್ಡ ಮಟ್ಟದ ಹಣ ಹೂಡಿಕೆ ಮಾಡಿರುವ ವಿತರಕರು ಹಾಗೂ ಇತರ ಪಾಲುದಾರರಲ್ಲಿ ತೀವ್ರ ಕಳವಳವನ್ನು ಉಂಟುಮಾಡಿದೆ.

ಚಿತ್ರರಂಗದ ಮೂಲಗಳ ಪ್ರಕಾರ, ಚಿತ್ರದ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ವಿತರಕರ ಹಿತರಕ್ಷಣೆಗಾಗಿ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಳ್ಳಲು ಮುಂದಾಗಿದೆ ಎನ್ನಲಾಗಿದೆ. ಸೆನ್ಸಾರ್ ಮಂಡಳಿಯ ಸಮಸ್ಯೆಗಳು ಬಗೆಹರಿದು ಸಿನಿಮಾ ಬಿಡುಗಡೆಗೆ ಹಸಿರು ನಿಶಾನೆ ಸಿಗುವವರೆಗೆ, ವಿತರಕರಿಗೆ ಹಣವನ್ನು ಮರುಪಾವತಿ ಮಾಡಲು ನಿರ್ಮಾಪಕರು ಆಲೋಚಿಸುತ್ತಿದ್ದಾರೆ ಎಂದು ವರದಿ ಆಗಿದೆ. ನಂತರ ಚಿತ್ರ ಬಿಡುಗಡೆಯ ಸಂಪೂರ್ಣ ಜವಾಬ್ದಾರಿಯನ್ನು ತಾವೇ ಹೊರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ನಿರ್ಧಾರದಿಂದ ನಿರ್ಮಾಪಕರ ಮೇಲಿನ ಆರ್ಥಿಕ ಹೊರೆ ಹಾಗೂ ರಿಸ್ಕ್ ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆ ಇದೆ.

ನಟ ವಿಜಯ್ ಅವರ ಅಪಾರ ಜನಪ್ರಿಯತೆ ಮತ್ತು ಅವರ ರಾಜಕೀಯ ಎಂಟ್ರಿ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿರುವುದು ನಿಜವಾದರೂ, ‘ಜನನಾಯಗನ್’ ಚಿತ್ರ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಇದು ರಿಮೇಕ್ ಸಿನಿಮಾ ಎಂಬ ಚರ್ಚೆಗಳು ಈಗಾಗಲೇ ಜೋರಾಗಿದ್ದು, ಇದರ ಬೆನ್ನಲ್ಲೇ ಪೈರಸಿ ಕಾಟ ಕೂಡ ಚಿತ್ರದ ಬಿಸಿನೆಸ್‌ಗೆ ಹೊಡೆತ ನೀಡುವ ಭೀತಿ ಇದೆ. ಅಲ್ಲದೆ, ಬಿಡುಗಡೆ ತಡವಾದಷ್ಟೂ ಪ್ರೇಕ್ಷಕರಲ್ಲಿರುವ ಉತ್ಸಾಹ ಮತ್ತು ಚಿತ್ರದ ಮಾರುಕಟ್ಟೆ ಮೌಲ್ಯ ಕಡಿಮೆಯಾಗುವ ಅಪಾಯವಿರುತ್ತದೆ.

ಈ ಎಲ್ಲಾ ಆರ್ಥಿಕ ಒತ್ತಡಗಳಿಂದ ಹೊರಬರಲು ಮತ್ತು ಚಿತ್ರದ ಹವಾ ಹಾಗೇ ಉಳಿಸಿಕೊಳ್ಳಲು ಸೆನ್ಸಾರ್ ಮಂಡಳಿಯಿಂದ ಆದಷ್ಟು ಬೇಗ ಪ್ರಮಾಣಪತ್ರವನ್ನು ಪಡೆದುಕೊಳ್ಳುವುದು ಅನಿವಾರ್ಯವಾಗಿದೆ.

ಇದನ್ನೂ ಓದಿ: ವಿಜಯ್ ಕೊನೆಯ ಸಿನಿಮಾ ಆಗಬೇಕಿದ್ದಿದ್ದು ‘ಜನ ನಾಯಗನ್’ ಅಲ್ಲ, ಮತ್ಯಾವುದು?

‘ಜನ ನಾಯಗನ್’ ಚಿತ್ರವನ್ನು ಎಚ್​. ವಿನೋದ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿ. ಈ ಚಿತ್ರದಲ್ಲಿ ಮಮಿತಾ ಬೈಜು ಮುಖ್ಯ ಪಾತ್ರದಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಹಿಮಾಚಲದಲ್ಲಿ ವಿದೇಶಿ ಮಹಿಳೆಗೆ ರಸ್ತೆಯಲ್ಲಿ ವ್ಯಕ್ತಿಯಿಂದ ಕಿರುಕುಳ – Kannada News

ಶಿಮ್ಲಾ, ಜೂನ್ 05: ಪ್ರವಾಸಿಗರ ಸ್ವರ್ಗ ಎಂದೇ ಖ್ಯಾತಿಯಾಗಿರುವ ಹಿಮಾಚಲ ಪ್ರದೇಶದಲ್ಲಿ ವಿದೇಶಿ ಮಹಿಳಾ ಪ್ರವಾಸಿಯೊಬ್ಬರಿಗೆ ಸಾರ್ವಜನಿಕ ಸ್ಥಳದಲ್ಲಿ ಕಿರುಕುಳ(Harassment) ಕೊಟ್ಟಿರುವ ವಿಡಿಯೋ ವೈರಲ್ ಆಗಿದೆ. ಪ್ರವಾಸಿಗರ ಸುರಕ್ಷತೆಯ ಪರವಾಗಿ ಜನರು ಭಾರಿ ಧ್ವನಿ ಎತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ಅಥವಾ ಹೆಚ್ಚಿನ ಅಪಾಯ ಸಂಭವಿಸುವ ಮುನ್ನವೇ ಸಿಸಿಟಿವಿ ಮೂಲಕ ಕೃತ್ಯವು ಬೆಳಕಿಗೆ ಬಂದಿರುವುದು ಮತ್ತು ಸಾರ್ವಜನಿಕರು ತಕ್ಷಣವೇ ಕಾನೂನು ಸುವ್ಯವಸ್ಥೆಗೆ ಬೆಂಬಲವಾಗಿ ನಿಂತಿರುವುದು ಅತ್ಯಂತ ಆಶಾದಾಯಕ ಬೆಳವಣಿಗೆಯಾಗಿದೆ.

‘ದಿ ಮಾಡರ್ನ್ ಹಿಮಾಚಲ’ ಸಾಮಾಜಿಕ ಮಾಧ್ಯಮ ಪುಟವು ಈ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ ಪ್ರವಾಸಿಗರ ಘನತೆಯನ್ನು ಎತ್ತಿಹಿಡಿಯುವ ಜವಾಬ್ದಾರಿಯುತ ಕಾರ್ಯ ಮಾಡಿದೆ. ದೃಶ್ಯಾವಳಿಗಳಲ್ಲಿ ವಿದೇಶಿ ಮಹಿಳೆ ತನ್ನ ಸ್ನೇಹಿತನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ, ಕಟ್ಟಡದ ಹೊರಗೆ ನಿಂತಿದ್ದ ಯುವಕನೊಬ್ಬ ಅನುಚಿತವಾಗಿ ವರ್ತಿಸಿರುವುದು ದಾಖಲಾಗಿದೆ.
ಈ ಪೋಸ್ಟ್‌ನಲ್ಲಿ ಹಿಮಾಚಲ ಪ್ರದೇಶ ಪೊಲೀಸರನ್ನು ಟ್ಯಾಗ್ ಮಾಡಲಾಗಿದ್ದು, ಪ್ರವಾಸಿ ತಾಣಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಇರುವ ಕಟ್ಟುನಿಟ್ಟಿನ ನಿಯಮಗಳನ್ನು ಮತ್ತಷ್ಟು ಬಲಪಡಿಸಲು ಇದು ಅಧಿಕಾರಿಗಳಿಗೆ ನೆರವಾಗಿದೆ.

ಪ್ರವಾಸೋದ್ಯಮದ ಇಮೇಜ್ ರಕ್ಷಣೆಗೆ ಡಿಜಿಟಲ್ ಒಗ್ಗಟ್ಟು
ವೀಡಿಯೊ ವೈರಲ್ ಆಗುತ್ತಿದ್ದಂತೆ ಅಂತರ್ಜಾಲದಲ್ಲಿ ಪ್ರವಾಸಿಗರ ಸುರಕ್ಷತೆಯ ಕುರಿತು ಅತ್ಯಂತ ಸಕಾರಾತ್ಮಕ ಮತ್ತು ಗಂಭೀರ ಚರ್ಚೆಗಳು ಆರಂಭವಾಗಿವೆ. ಭಾರತವು ಅತಿಥಿ ಸತ್ಕಾರಕ್ಕೆ ಹೆಸರಾದ ದೇಶವಾಗಿದ್ದು, ಪ್ರತಿಯೊಬ್ಬ ಸಂದರ್ಶಕನಿಗೂ ಸುರಕ್ಷಿತ ವಾತಾವರಣ ಕಲ್ಪಿಸುವುದು ನಮ್ಮ ಕರ್ತವ್ಯ ಎಂದು ನೆಟ್ಟಿಗರು ಒಕ್ಕೊರಲಿನಿಂದ ಪ್ರತಿಪಾದಿಸುತ್ತಿದ್ದಾರೆ. ಭವಿಷ್ಯದಲ್ಲಿ ಇಂತಹ ಸಣ್ಣಪುಟ್ಟ ಘಟನೆಗಳೂ ಮರುಕಳಿಸದಂತೆ ತಡೆಯಲು ಆರೋಪಿಯನ್ನು ತ್ವರಿತವಾಗಿ ಗುರುತಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ವಿಡಿಯೋ

ಸುಧಾರಣೆಯ ನಿರೀಕ್ಷೆ ಮತ್ತು ಮುಂದಿನ ಹೆಜ್ಜೆ
ಈ ದೃಶ್ಯಗಳ ನಿಖರವಾದ ಸ್ಥಳದ ಸತ್ಯಾಸತ್ಯತೆಯ ಪರಿಶೀಲನೆ ನಡೆಯುತ್ತಿದ್ದರೂ, ಸಾರ್ವಜನಿಕರ ಈ ತೀವ್ರ ಜಾಗೃತಿಯು ಆಡಳಿತ ಯಂತ್ರವನ್ನು ಅಲರ್ಟ್ ಮಾಡಿದೆ. ಹಿಮಾಚಲ ಪ್ರದೇಶದ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಪೊಲೀಸ್ ಗಸ್ತು ಮತ್ತು ಸಿಸಿಟಿವಿ ಕಣ್ಗಾವಲನ್ನು ಮತ್ತಷ್ಟು ಆಧುನೀಕರಿಸಲು ಈ ಘಟನೆ ಪ್ರೇರಣೆ ನೀಡಿದೆ.

ಮತ್ತಷ್ಟು ಓದಿ: ಮದುವೆಯಾಗಿ ಆರೇ ತಿಂಗಳಿಗೆ ಮಹಿಳೆ ಸಾವು: ವರದಕ್ಷಿಣೆ ಕಿರುಕುಳ, ಕೊಲೆ ಮಾಡಿ ನೇಣು ಹಾಕಿರುವ ಆರೋಪ

ಸಾರ್ವಜನಿಕರ ಮತ್ತು ಕಾನೂನು ರಕ್ಷಕರ ಈ ಜಂಟಿ ಜಾಗೃತಿಯು ಮುಂಬರುವ ದಿನಗಳಲ್ಲಿ ದೇಶ-ವಿದೇಶಗಳ ಪ್ರವಾಸಿಗರು ಹಿಮಾಚಲದ ಶಾಂತಿ ಮತ್ತು ಸೌಂದರ್ಯವನ್ನು ಯಾವುದೇ ಆತಂಕವಿಲ್ಲದೆ ಆನಂದಿಸಲು ಮತ್ತಷ್ಟು ಭದ್ರವಾದ ರಕ್ಷಣಾ ಕವಚವನ್ನು ನಿರ್ಮಿಸಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರು ನಗರಾಭಿವೃದ್ಧಿ ಖಾತೆ ಸಿಗದಿದ್ದಕ್ಕೆ ರಾಮಲಿಂಗಾ ರೆಡ್ಡಿ ತೀವ್ರ ಅಸಮಾಧಾನ: ರಾಜೀನಾಮೆ ಸಾಧ್ಯತೆ – Kannada News

ರಾಮಲಿಂಗಾ ರೆಡ್ಡಿ ಅಸಮಾಧಾನImage Credit source: tv9

ಬೆಂಗಳೂರು, ಜೂನ್ 5: ಕರ್ನಾಟಕದ ನೂತನ ಸಿಎಂ ಡಿಕೆ ಶಿವಕುಮಾರ್ ಸಂಪುಟದ ಸಚಿವರಿಗೆ ಖಾತೆಗಳ ಹಂಚಿಕೆಯಾದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಲ್ಲಿ ಅತೃಪ್ತಿಯ ಅಲೆ ಎದ್ದಿದೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ಸಿಗದ ಕಾರಣ, ರಾಮಲಿಂಗಾ ರೆಡ್ಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದೆ. ಅವರಿಗೆ ಜಲಸಂಪನ್ಮೂಲ ಖಾತೆ ಹಂಚಿಕೆ ಮಾಡಲಾಗಿದೆ.

ರಾಮಲಿಂಗಾ ರೆಡ್ಡಿಗೆ ಮಾತು ಕೊಟ್ಟಿದ್ದ ಡಿಕೆ ಶಿವಕುಮಾರ್

ರಾಮಲಿಂಗಾ ರೆಡ್ಡಿ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡಬೇಕೆಂದು ಪಟ್ಟು ಹಿಡಿದಿದ್ದರು. 2023 ರಲ್ಲಿ ಡಿಕೆ ಶಿವಕುಮಾರ್ ಅವರು ಡಿಸಿಎಂ ಆಗಿದ್ದಾಗ, ರಾಮಲಿಂಗಾ ರೆಡ್ಡಿಗೆ ಸಾರಿಗೆ ಇಲಾಖೆ ನೀಡಿದ ಸಂದರ್ಭದಲ್ಲಿ, ‘ನಾನು ಮುಖ್ಯಮಂತ್ರಿಯಾದಾಗ ಬೆಂಗಳೂರು ನಗರಾಭಿವೃದ್ಧಿ ಖಾತೆ ನನ್ನ ಬಳಿ ಇರುತ್ತದೆ, ಅದನ್ನೇ ನಿಮಗೆ ನೀಡುತ್ತೇನೆ’ ಎಂದು ಭರವಸೆ ನೀಡಿದ್ದರು. ಈ ಭರವಸೆಯನ್ನು ಉಳಿಸಿಕೊಳ್ಳುವಂತೆ ರಾಮಲಿಂಗಾ ರೆಡ್ಡಿ ಈಗ ಡಿಕೆ ಶಿವಕುಮಾರ್ ಬೆನ್ನುಬಿದ್ದಿದ್ದಾರೆ ಎನ್ನಲಾಗಿದೆ.

ಬೆಂಗಳೂರು ನಗರಾಭಿವೃದ್ಧಿ ಖಾತೆಯು ಕೃಷ್ಣ ಬೈರೇಗೌಡರ ಪಾಲಾಗಿದೆ. ಜಲಸಂಪನ್ಮೂಲ ಖಾತೆ ರಾಮಲಿಂಗಾ ರೆಡ್ಡಿ ಅವರಿಗೆ ಲಭಿಸಿದೆ. ರಾಮಲಿಂಗಾ ರೆಡ್ಡಿ ಅವರನ್ನು ಮನವೊಲಿಸಲು ಗುರುವಾರ ಡಿಕೆ ಶಿವಕುಮಾರ್ ಪ್ರಯತ್ನಿಸಿದ್ದರು. ಆದರೆ, ಹೈಕಮಾಂಡ್ ನಾಯಕರಾದ ಸುರ್ಜೆವಾಲಾ ಮತ್ತು ಕೆಸಿ ವೇಣುಗೋಪಾಲ್ ಅವರೊಂದಿಗೆ ಚರ್ಚಿಸಿದ ನಂತರವೂ ಹೈಕಮಾಂಡ್‌ನಿಂದ ಅನುಮೋದನೆ ದೊರೆಯದ ಕಾರಣ, ಡಿಕೆ ಶಿವಕುಮಾರ್ ಪ್ರಯತ್ನ ಫಲಕಾರಿಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ರಾಮಲಿಂಗಾ ರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಾಗಿದೆ.

ಸಂಬಂಧವಿಲ್ಲದ ಖಾತೆ ಬೇಡ: ರಾಮಲಿಂಗಾ ರೆಡ್ಡಿ ಪಟ್ಟು

ಸ್ವಾಭಿಮಾನದ ಪ್ರಶ್ನೆಯನ್ನು ಎತ್ತಿರುವ ರಾಮಲಿಂಗಾ ರೆಡ್ಡಿ, ತಮಗೆ ಸಂಬಂಧವಿಲ್ಲದ ಖಾತೆ ಬೇಡ ಎಂದು ಹೇಳುತ್ತಿದ್ದಾರೆ. ಡಿಕೆ ಶಿವಕುಮಾರ್ ತಮ್ಮ ಮಾತನ್ನು ಉಳಿಸಿಕೊಳ್ಳಬೇಕಿತ್ತು ಎಂಬುದು ಅವರ ವಾದವಾಗಿದೆ. ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ನಡುವೆ ಅಸಮಾಧಾನ ಸ್ಫೋಟಗೊಂಡಿರುವುದು ಗಮನಾರ್ಹ. ಖಾತೆ ಹಂಚಿಕೆಯಲ್ಲಿ ಮುಖ್ಯಮಂತ್ರಿಗಳಿಗೆ ಪೂರ್ಣ ಅಧಿಕಾರವನ್ನು ಹೈಕಮಾಂಡ್ ನೀಡಿಲ್ಲವೇ ಎಂಬ ಪ್ರಶ್ನೆಯೂ ಈಗ ಎದುರಾಗಿದೆ. ಬೆಂಗಳೂರು ನಗರಾಭಿವೃದ್ಧಿ ಯಾರಿಗೆ ನೀಡಬೇಕು ಎಂಬುದನ್ನು ಡಿ ಕೆ ಶಿವಕುಮಾರ್ ನಿರ್ಧರಿಸಲು ಹೈಕಮಾಂಡ್ ಅವಕಾಶ ನೀಡಿಲ್ಲ ಎಂಬ ಅನುಮಾನಗಳು ಮೂಡಿವೆ.

ಮೊದಲ ಪಟ್ಟಿಯಲ್ಲಿ ಸಚಿವ ಸ್ಥಾನ ಸಿಗದ ಹಿನ್ನೆಲೆ: ಹಿರಿಯ ನಾಯಕರ ಅಸಮಾಧಾನ

ಸಂಪುಟಕ್ಕೆ ಸೇರ್ಪಡೆಯಾಗದ ಹಲವು ಹಿರಿಯ ನಾಯಕರೂ ಅಸಮಾಧಾನಗೊಂಡಿದ್ದಾರೆ. ದಿನೇಶ್ ಗುಂಡೂರಾವ್ ಅವರಂತಹ ನಾಯಕರು ಸಹ ಮೊದಲ ಪಟ್ಟಿಯಲ್ಲಿ ಸಚಿವ ಸ್ಥಾನ ಸಿಗದ ಕಾರಣ ಬೇಸರ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಕಾಂಗ್ರೆಸ್‌ನಲ್ಲಿ ಆಂತರಿಕ ಬಿಕ್ಕಟ್ಟಿಗೆ ಕಾರಣವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ನೂತನ ಸಚಿವರಿಗೆ ಖಾತೆ ಹಂಚಿಕೆ:ಪ್ರಿಯಾಂಕ್​​ ಖರ್ಗೆಗೆ ಗೃಹ, ಇನ್ನುಳಿದ ಯಾರಿಗೆ ಯಾವ ಖಾತೆ?

ಎಲ್ಲವನ್ನು ದೆಹಲಿಯಿಂದಲೇ ನಿಯಂತ್ರಿಸುವ ಹೈಕಮಾಂಡ್ ನಿರ್ಧಾರ ಇಂತಹ ಅಸಮಾಧಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಬೆಂಗಳೂರಿನ ಅಭಿವೃದ್ಧಿ ವಿಚಾರದಲ್ಲಿ ರಾಮಲಿಂಗಾ ರೆಡ್ಡಿ ಅವರ ಅನುಭವವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಅವರ ನಿರ್ಧಾರ ಕಾಂಗ್ರೆಸ್ ಪಕ್ಷಕ್ಕೆ ದುಬಾರಿಯಾಗಬಹುದು ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರೌಡಿ ಶೀಟರ್ ಎಣ್ಣೆ ಪಾರ್ಟಿ! – Kannada News

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರೌಡಿ ಶೀಟರ್ ಎಣ್ಣೆ ಪಾರ್ಟಿ!

ಚಾಮರಾಜನಗರ, ಜೂನ್ 05: ಸಾರ್ವಜನಿಕರಿಗೆ ಕಟ್ಟುನಿಟ್ಟಿನ ನಿಷೇಧವಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ (Bandipur Tiger Reserve) ದಟ್ಟ ಕಾನನದೊಳಗೆ ರೌಡಿ ಶೀಟರ್ ಒಬ್ಬ ತನ್ನ ಸಂಗಡಿಗರೊಂದಿಗೆ ರಾಜಾರೋಷವಾಗಿ ‘ಎಣ್ಣೆ ಪಾರ್ಟಿ’ ನಡೆಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಅರಣ್ಯ ಇಲಾಖೆಯ ಅತ್ಯಂತ ಸುರಕ್ಷಿತ ಮತ್ತು ನಿರ್ಬಂಧಿತ ವಲಯ ಎಂದೇ ಪರಿಗಣಿಸಲಾಗುವ ಕಳ್ಳಬೇಟೆ ತಡೆ ಶಿಬಿರದ (APC Camp) ಮುಂಭಾಗದಲ್ಲೇ ಈ ಮೋಜು-ಮಸ್ತಿ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಮುಖ್ಯಾಂಶಗಳು

  • ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗೆ ರೌಡಿ ಶೀಟರ್‌ನಿಂದ ರಾಜಾರೋಷವಾಗಿ ಎಣ್ಣೆ ಪಾರ್ಟಿ.
  • ಕಳ್ಳಬೇಟೆ ತಡೆ ಶಿಬಿರದ ಮುಂದೆಯೇ ಮೋಜು; ಅರಣ್ಯ ಇಲಾಖೆಯ ಭದ್ರತಾ ವೈಫಲ್ಯ.
  • ಬಡ ರೈತರಿಗೆ ಕೇಸ್ ಹಾಕುವ ಅಧಿಕಾರಿಗಳು ಕ್ರಿಮಿನಲ್‌ಗಳಿಗೆ ಸಾಥ್ ನೀಡಿದ್ದು ಆಕ್ರೋಶ.

ದಟ್ಟಾರಣ್ಯದಲ್ಲಿ ರೌಡಿಗಳ ದಿಲ್ದಾರ್ ಪಾರ್ಟಿ!

ಗುಂಡ್ಲುಪೇಟೆ ಪೊಲೀಸ್ ಠಾಣೆಯ ರೌಡಿ ಶೀಟರ್ ಸತೀಶ್ ಎಂಬಾತ ತನ್ನ ಸಂಗಡಿಗರಾದ ಗಂಗಾಧರ್ ಮತ್ತು ಚೇತನ್ ಎಂಬುವವರೊಂದಿಗೆ ಸೇರಿ ಬಂಡೀಪುರ ಅರಣ್ಯದ ಮದ್ದೂರು ವಲಯದ ಹುಲಿಕಟ್ಟೆ ಎಂಬಲ್ಲಿ ಈ ಜಾಲಸಾಬ್ ಪಾರ್ಟಿ ಮಾಡಿದ್ದಾನೆ. ವನ್ಯಜೀವಿಗಳ ಮುಕ್ತ ಸಂಚಾರವಿರುವ, ಸದಾ ಹದ್ದಿನ ಕಣ್ಣಿಡಬೇಕಾದ ಆಂಟಿ ಪೋಚಿಂಗ್ ಕ್ಯಾಂಪ್ ಮುಂಭಾಗದಲ್ಲೇ ಮದ್ಯದ ಬಾಟಲಿಗಳನ್ನು ಇಟ್ಟುಕೊಂಡು ಮೋಜು ಮಾಡಿದ್ದಾರೆ. ರೌಡಿ ಶೀಟರ್‌ಗಳು ಕಾಡಿನೊಳಗೆ ಮದ್ಯದ ಪಾರ್ಟಿ ಮಾಡುತ್ತಿರುವ ಎಕ್ಸ್‌ಕ್ಲೂಸಿವ್ ಫೋಟೋಗಳು ಈಗ ಲಭ್ಯವಾಗಿವೆ. ಈ ಮದ್ದೂರು ವಲಯವು ಆರ್‌ಎಫ್‌ಒ (RFO) ಪುನೀತ್ ಅವರ ಉಸ್ತುವಾರಿಯಲ್ಲಿದ್ದು, ಅರಣ್ಯ ಇಲಾಖೆಯ ಕಾರ್ಯವೈಖರಿಯನ್ನು ಪ್ರಶ್ನಿಸುವಂತೆ ಮಾಡಿವೆ.

ಅರಣ್ಯ ಇಲಾಖೆಯ ಸಂಪೂರ್ಣ ವೈಫಲ್ಯ

ಈ ಘಟನೆಯು ಬಂಡೀಪುರ ಅರಣ್ಯ ಇಲಾಖೆಯ ಸಂಪೂರ್ಣ ಭದ್ರತಾ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅತ್ಯಂತ ಸೂಕ್ಷ್ಮ ಪ್ರದೇಶಕ್ಕೆ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಮಾರಕಾಸ್ತ್ರಗಳನ್ನು ಹಿಡಿಯುವ ರೌಡಿ ಶೀಟರ್‌ಗೆ ದಟ್ಟ ಕಾನನದೊಳಗಿನ ಕಳ್ಳಬೇಟೆ ಶಿಬಿರದವರೆಗೂ ಹೋಗಲು ದಾರಿ ಮಾಡಿಕೊಟ್ಟವರು ಯಾರು? ಅರಣ್ಯ ಸಿಬ್ಬಂದಿಯ ಆಶೀರ್ವಾದ ಅಥವಾ ಸಹಕಾರವಿಲ್ಲದೆ ಇಂತಹ ಕೃತ್ಯ ನಡೆಯಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡಿದೆ.

ಕಾಡಿನಲ್ಲಿ ಒಣಗಿ ಬಿದ್ದ ಸೌದೆಯನ್ನು ತರಲು ಹೋಗುವ ಬಡ ರೈತರು ಮತ್ತು ಬುಡಕಟ್ಟು ಜನರನ್ನು ಕಂಡರೆ ಮುಲಾಜಿಲ್ಲದೆ ಕೇಸ್ ದಾಖಲಿಸುವ ಅರಣ್ಯ ಸಿಬ್ಬಂದಿ, ಇಂತಹ ಕ್ರಿಮಿನಲ್ ಹಿನ್ನೆಲೆಯುಳ್ಳವರು ಕಾಡಿನ ನಿಯಮಗಳನ್ನು ಗಾಳಿಗೆ ತೂರಿ ಗುಂಡಿನ ಪಾರ್ಟಿ ಮಾಡುತ್ತಿದ್ದರೂ ಕಣ್ಮುಚ್ಚಿ ಕುಳಿತಿರುವುದು ಏಕೆ? ಇಷ್ಟೆಲ್ಲಾ ಸಾಕ್ಷ್ಯಾಧಾರಗಳು ಸಿಕ್ಕಿದ್ದರೂ ಉನ್ನತ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಇಲಾಖೆಯೊಳಗಿನ ಶಾಮೀಲಾತಿಯನ್ನು ಶಂಕಿಸುವಂತೆ ಮಾಡಿದೆ. ಬಂಡೀಪುರದಂತಹ ಸೂಕ್ಷ್ಮ ವಲಯದ ಭದ್ರತೆಯ ಹಿತದೃಷ್ಟಿಯಿಂದ ತಕ್ಷಣವೇ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ನಂಗೆ ನೀನು ಅಂದ್ರೆ ತುಂಬಾ ಇಷ್ಟ’; ಮನದಾಳದ ಮಾತು ಹೇಳಿದ ರಕ್ಷಿತಾ ಶೆಟ್ಟಿ

ತಮ್ಮ ಭಿನ್ನ ಶೈಲಿಯ ಅಡುಗೆ ವಿಡಿಯೋ ಮೂಲಕ ಗಮನ ಸೆಳೆದವರು ರಕ್ಷಿತಾ ಶೆಟ್ಟಿ. ಅವರಿಗೆ ಬಿಗ್ ಬಾಸ್ ಆಫರ್ ಬಂತು. ಈಗ ಅವರು ‘ಕ್ವಾಟ್ಲೆ ಕಿಚನ್ ಸೀಸನ್ 2’ ಶೋಗೆ ಬಂದಿದ್ದಾರೆ. ಈ ಶೋನಲ್ಲಿ ಅವರು ಮಾತನಾಡಿದ ವಿಡಿಯೋ ಗಮನ ಸೆಳೆದಿದೆ. ವೇದಿಕೆ ಮೇಲೆ ಅವರ ಅಡುಗೆ ವಿಡಿಯೋ ಪ್ಲೇ ಮಾಡಲಾಯಿತು. ಈ ವಿಡಿಯೋದಲ್ಲಿ ಅವರು, ‘ನನಗೆ ನೀನು ಅಂದ್ರೆ ತುಂಬ ಇಷ್ಟ’ ಎಂದು ಮೀನಿಗೆ ಹೇಳಿದ ವಿಡಿಯೋ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Kedarnath Yatra: ಭಕ್ತರ ಗಮನಕ್ಕೆ; ಭಾರೀ ಮಳೆಯಿಂದ ಕೇದಾರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ! – Kannada News

ಕೇದಾರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತImage Credit source: Pinterest

ಉತ್ತರಾಖಂಡದ ಪವಿತ್ರ ಕೇದಾರನಾಥ ಧಾಮಕ್ಕೆ ತೆರಳಲು ಯೋಜನೆ ಮಾಡಿಕೊಂಡಿದ್ದ ಭಕ್ತರಿಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ರಾಜ್ಯದ ಹಲವು ಪ್ರದೇಶಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆ ಹಾಗೂ ಪ್ರತಿಕೂಲ ಹವಾಮಾನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೇದಾರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಯಾತ್ರಾ ಮಾರ್ಗಗಳಲ್ಲಿ ಭೂಕುಸಿತದ ಅಪಾಯ ಹೆಚ್ಚಾಗಿದ್ದು, ಕೆಲವೆಡೆ ರಸ್ತೆ ಸಂಪರ್ಕಕ್ಕೂ ಹಾನಿಯಾಗಿದೆ. ಭಕ್ತರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯ ಆಡಳಿತ, ವಿಪತ್ತು ನಿರ್ವಹಣಾ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಈ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.

ಯಾತ್ರಿಕರಿಗೆ ವಿಶೇಷ ಸೂಚನೆ:

ಕೇದಾರನಾಥ ಯಾತ್ರೆಗೆ ತೆರಳಲು ಸಿದ್ಧರಾಗಿರುವ ಭಕ್ತರು ಅಧಿಕೃತ ಪ್ರಕಟಣೆಗಳನ್ನು ಪರಿಶೀಲಿಸಿದ ನಂತರವೇ ಪ್ರಯಾಣ ಆರಂಭಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಈಗಾಗಲೇ ಯಾತ್ರಾ ಮಾರ್ಗದಲ್ಲಿರುವವರು ಸುರಕ್ಷಿತ ಸ್ಥಳಗಳಲ್ಲಿ ತಂಗಿ, ಆಡಳಿತದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಹವಾಮಾನ ಇಲಾಖೆ ಮುಂದಿನ ಕೆಲ ದಿನಗಳವರೆಗೆ ಭಾರೀ ಮಳೆಯ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಯಾತ್ರೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಪರಿಸ್ಥಿತಿ ಸುಧಾರಿಸಿದ ಬಳಿಕ ಯಾತ್ರೆಯನ್ನು ಪುನರಾರಂಭಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ.

ಸುರಕ್ಷತೆಗೆ ಮೊದಲ ಆದ್ಯತೆ:

ಪ್ರತಿ ವರ್ಷ ಲಕ್ಷಾಂತರ ಭಕ್ತರು ಕೇದಾರನಾಥ ಧಾಮಕ್ಕೆ ಭೇಟಿ ನೀಡುತ್ತಾರೆ. ಆದರೆ ಮಳೆಗಾಲದಲ್ಲಿ ಪರ್ವತ ಪ್ರದೇಶಗಳಲ್ಲಿ ಭೂಕುಸಿತ, ರಸ್ತೆ ಕುಸಿತ, ಪ್ರವಾಹ ಹಾಗೂ ಕಲ್ಲುಗಳು ಉರುಳುವಂತಹ ಅಪಾಯಗಳು ಹೆಚ್ಚಾಗುತ್ತವೆ. ಈ ಕಾರಣದಿಂದ ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.

ಇದನ್ನೂ ಓದಿ: ಬೃಂದಾವನದಲ್ಲಿ ವಿರಾಟ್-ಅನುಷ್ಕಾ; ಪ್ರೇಮಾನಂದ್ ಗುರೂಜಿ ಬಳಿ ಈ ಜೋಡಿ ಪದೇ ಪದೇ ಹೋಗುವುದೇಕೆ ಗೊತ್ತಾ?

ಭಕ್ತರಿಗೆ ಮನವಿ:

ಅಧಿಕಾರಿಗಳ ಸೂಚನೆಗಳನ್ನು ಪಾಲಿಸುವುದು, ಹವಾಮಾನ ಮಾಹಿತಿ ನಿರಂತರವಾಗಿ ಪರಿಶೀಲಿಸುವುದು ಹಾಗೂ ಅನಗತ್ಯವಾಗಿ ಅಪಾಯಕಾರಿ ಪ್ರದೇಶಗಳಿಗೆ ತೆರಳದಿರುವುದು ಅತ್ಯಂತ ಮುಖ್ಯವಾಗಿದೆ. ಯಾತ್ರೆ ಪುನರಾರಂಭವಾಗುವ ಕುರಿತು ಅಧಿಕೃತ ಮಾಹಿತಿ ಪ್ರಕಟವಾದ ಬಳಿಕವೇ ಮುಂದಿನ ಪ್ರಯಾಣದ ಯೋಜನೆ ರೂಪಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇದಾರನಾಥ ಧಾಮಕ್ಕೆ ಭೇಟಿ ನೀಡುವ ಭಕ್ತರ ಸುರಕ್ಷತೆಯೇ ಸರ್ಕಾರದ ಮೊದಲ ಆದ್ಯತೆಯಾಗಿದ್ದು, ಹವಾಮಾನ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ತಕ್ಷಣ ಯಾತ್ರೆಯನ್ನು ಪುನರಾರಂಭಿಸುವ ನಿರೀಕ್ಷೆಯಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮರ ಬಿದ್ದು ಸಾವು-ನೋವಿಗೆ ಬ್ರೇಕ್: ದುರ್ಬಲ ಮರಗಳ ಪತ್ತೆಗೆ ಮಾನವ ದೇಹದ ಸ್ಕ್ಯಾನಿಂಗ್ ಮಾದರಿ ತಂತ್ರಜ್ಞಾನಕ್ಕೆ ಜಿಬಿಎ ಮುಂದು! – Kannada News

ರಸ್ತೆಯಲ್ಲಿ ಮರ ಬಿದ್ದಿರುವುದು (ಸಾಂದರ್ಭಿಕ ಚಿತ್ರ)Image Credit source: tv9

ಬೆಂಗಳೂರು, ಜೂನ್ 5: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಮಳೆ ಹಾಗೂ ಬಿರುಗಾಳಿಯ ಸಂದರ್ಭದಲ್ಲಿ ರಸ್ತೆಬದಿಯ ಮರಗಳು ಮತ್ತು ರೆಂಬೆಗಳು ಹಠಾತ್ತನೆ ಉರುಳಿ ಬಿದ್ದು ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿರುವುದು ಹಾಗೂ ಆಸ್ತಿ ಪಾಸ್ತಿ ನಷ್ಟವಾಗುತ್ತಿರುವುದು ನಿರಂತರವಾಗಿ ವರದಿಯಾಗುತ್ತಿದೆ. ಈ ಗಂಭೀರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಈಗ ವಿನೂತನ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಮೊರೆ ಹೋಗಿದೆ. ನಗರದ ದುರ್ಬಲ ಹಾಗೂ ಅಪಾಯಕಾರಿ ಮರಗಳನ್ನು ವೈಜ್ಞಾನಿಕವಾಗಿ ಪತ್ತೆಹಚ್ಚಲು ‘ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ’ಯೊಂದಿಗೆ ಜಿಬಿಎ ಅರಣ್ಯ ವಿಭಾಗವು ಕೈಜೋಡಿಸಲು ಮುಂದಾಗಿದೆ.

ಮುಖ್ಯಾಂಶಗಳು

  • ಮರಗಳ ಒಳಭಾಗ ಕೊಳೆಯುತ್ತಿದೆಯೇ ಮತ್ತು ಬೇರುಗಳು ದುರ್ಬಲವಾಗಿವೆಯೇ ಎಂದು ಪತ್ತೆಹಚ್ಚಲು ಕ್ರಮ.
  • ಮಾನವ ದೇಹದ ಮಾದರಿಯಲ್ಲಿ ಸ್ಕ್ಯಾನಿಂಗ್ ತಂತ್ರಜ್ಞಾನ ಬಳಕೆ.
  • ಮರಗಳ ಸಮಗ್ರ ವೈಜ್ಞಾನಿಕ ಸರ್ವೇಗಾಗಿ ₹4 ಕೋಟಿ ವೆಚ್ಚದ ಯೋಜನೆ ಸಿದ್ಧ.

ಮರಗಳ ಆರೋಗ್ಯ ಪರೀಕ್ಷೆಗೆ ಅತ್ಯಾಧುನಿಕ ತಂತ್ರಜ್ಞಾನ

ನಗರದಲ್ಲಿರುವ ನೂರಾರು ಮರಗಳು ದಶಕಗಳಷ್ಟು ಹಳೆಯದಾಗಿದ್ದು, ಮೇಲ್ನೋಟಕ್ಕೆ ಹಸಿರಾಗಿ ಕಂಡರೂ ಒಳಭಾಗದಲ್ಲಿ ಸಂಪೂರ್ಣ ಕೊಳೆತು ಆಯುಷ್ಯ ಮುಗಿದಿರುತ್ತವೆ. ಇಂತಹ ಮರಗಳನ್ನು ಗುರುತಿಸುವುದು ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿತ್ತು. ಇದಕ್ಕೆ ಪರಿಹಾರವಾಗಿ ಮರ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಜಿಬಿಎಗೆ ವಿಶೇಷ ಪ್ರಸ್ತಾವನೆಯೊಂದನ್ನು ಸಲ್ಲಿಸಿದೆ. ಈ ಯೋಜನೆಯಡಿ ಮರಗಳಿಗೆ ಯಾವುದೇ ಹಾನಿ ಮಾಡದ ನಾನ್-ಇನ್ವೇಸಿವ್ ಡಯಾಗ್ನೋಸ್ಟಿಕ್ (Non-invasive Diagnostic) ತಂತ್ರಜ್ಞಾನ, ರೆಸಿಸ್ಟೋಗ್ರಾಫ್, ಸೋನಿಕ್ ಟೊಮೊಗ್ರಫಿ, ಎಲೆಕ್ಟ್ರಿಕಲ್ ರೆಸಿಸ್ಟೆನ್ಸ್ ಟೊಮೊಗ್ರಫಿ ಹಾಗೂ ಟ್ರೀ-ಮೋಷನ್ ವಿಶ್ಲೇಷಣೆಯಂತಹ ಸುಧಾರಿತ ಸಾಧನಗಳನ್ನು ಬಳಸಲಾಗುತ್ತದೆ. ಇವುಗಳ ಮೂಲಕ ಮರದ ಒಳರಚನೆ, ಬೇರುಗಳ ಸಾಮರ್ಥ್ಯ ಮತ್ತು ಮರ ಇನ್ನು ಎಷ್ಟು ವರ್ಷ ಸುರಕ್ಷಿತವಾಗಿ ನಿಲ್ಲಬಲ್ಲದು ಎಂಬುದನ್ನು ನಿಖರವಾಗಿ ಅಂದಾಜಿಸಬಹುದು ಎಂದು ಜಿಬಿಎ ಅರಣ್ಯ ಸಂರಕ್ಷಣಾ ಅಧಿಕಾರಿ ಸುದರ್ಶನ್ ಮಾಹಿತಿ ನೀಡಿದ್ದಾರೆ.

ವಲಯವಾರು ವೆಚ್ಚ ಹಾಗೂ ಮುನ್ನೆಚ್ಚರಿಕೆ

ಪ್ರಾಯೋಗಿಕವಾಗಿ ಹಮ್ಮಿಕೊಳ್ಳಲಾಗಿರುವ ಈ ಯೋಜನೆಯ ಒಟ್ಟು ವೆಚ್ಚ 4 ಕೋಟಿ ರೂ. ಆಗಿದ್ದು, ಬೆಂಗಳೂರಿನ ವಿವಿಧ ವಲಯಗಳ ನಗರಪಾಲಿಕೆಗಳಿಗೆ ವೆಚ್ಚವನ್ನು ಹಂಚಿಕೆ ಮಾಡಲಾಗಿದೆ.

  • ಬೆಂಗಳೂರು ಕೇಂದ್ರ ನಗರಪಾಲಿಕೆ: 69.41 ಲಕ್ಷ ರೂ.
  • ಬೆಂಗಳೂರು ಪೂರ್ವ ನಗರಪಾಲಿಕೆ: 96 ಲಕ್ಷ ರೂ.
  • ಬೆಂಗಳೂರು ಉತ್ತರ ನಗರಪಾಲಿಕೆ: 104.49 ಲಕ್ಷ ರೂ.
  • ಬೆಂಗಳೂರು ದಕ್ಷಿಣ ನಗರಪಾಲಿಕೆ: 90.65 ಲಕ್ಷ ರೂ.
  • ಬೆಂಗಳೂರು ಪಶ್ಚಿಮ ನಗರಪಾಲಿಕೆ: 79.15 ಲಕ್ಷ ರೂ.

ಈ ತಾಂತ್ರಿಕ ಸಮೀಕ್ಷೆಯು ಯಶಸ್ವಿಯಾಗಿ ಜಾರಿಯಾದರೆ, ಮಳೆಗಾಲದಲ್ಲಿ ಹಠಾತ್ತನೆ ಮರಗಳು ಉರುಳುವ ಮುನ್ನವೇ ಅವುಗಳನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ. ಈ ಮೂಲಕ ಸಾರ್ವಜನಿಕರ ಪ್ರಾಣಹಾನಿ ಮತ್ತು ವಾಹನಗಳ ಮೇಲಾಗುವ ಆಸ್ತಿ ನಷ್ಟದ ಗಂಡಾಂತರವನ್ನು ಸಂಪೂರ್ಣವಾಗಿ ತಪ್ಪಿಸಬಹುದಾಗಿದೆ.

ವರದಿ: ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತುಮಕೂರು: ವಿದೇಶಿ ಉಗ್ರನ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಯುವಕನ ಬಂಧನ – Kannada News

ತುಮಕೂರು, ಜೂನ್ 5: ವಿದೇಶಿ ಭಯೋತ್ಪಾದಕ ಸಂಘಟನೆ, ಭಯೋತ್ಪಾದಕನ ಜೊತೆ ನಿರಂತರ ಸಂಪರ್ಕದಲ್ಲಿದ್ದ ಹಾಗೂ ದೇಶದ ಭದ್ರತೆಗೆ ಧಕ್ಕೆ ತರುವಂಥ ಚಟುವಟಿಕೆಗಳನ್ನು ನಡೆಸುತ್ತಿದ್ದ ಆರೋಪದ ಮೇಲೆ ತುಮಕೂರಿನಲ್ಲಿ (Tumakur) ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕೇಂದ್ರ ತನಿಖಾ ಸಂಸ್ಥೆಗಳು ನೀಡಿದ ರಹಸ್ಯ ಹಾಗೂ ನಿಖರ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ತುಮಕೂರು ನಗರ ಪೊಲೀಸರು ಶಂಕಿತ ಉಗ್ರನನ್ನು ಬಂಧಿಸಿದ್ದಾರೆ. ಬಂಧಿತ ಯುವಕ ದೇಶದ ಆಂತರಿಕ ಬೆಳವಣಿಗೆಗಳ ಕುರಿತು ಪ್ರಚೋದನಾತ್ಮಕ ಸಂದೇಶಗಳನ್ನು ರವಾನಿಸುತ್ತಿದ್ದ ಎನ್ನಲಾಗಿದೆ.

ಮುಖ್ಯಾಂಶಗಳು

  • ಕೇಂದ್ರ ತನಿಖಾ ಸಂಸ್ಥೆಗಳ ರಹಸ್ಯ ಮಾಹಿತಿಯ ಮೇರೆಗೆ ತುಮಕೂರಿನ ಕ್ಯಾತಸಂದ್ರದಲ್ಲಿ ಶಂಕಿತ ಯುವಕನ ಬಂಧನ.
  • ಸಾಮಾಜಿಕ ಜಾಲತಾಣದ ಖಾತೆ ಮೂಲಕ ವಿದೇಶಿ ಉಗ್ರನ ಜೊತೆ ನಿರಂತರ ಸಂಪರ್ಕದಲ್ಲಿದ್ದ ಅಲ್ಲಾಬಕ್ಷು.
  • ದೇಶದ ಭದ್ರತೆಗೆ ಧಕ್ಕೆ ತರುವ ನಿಟ್ಟಿನಲ್ಲಿ ಪ್ರಚೋದನಾತ್ಮಕ ಚಾಟಿಂಗ್; ನೆರವು ನೀಡಿದ ಮತ್ತೋರ್ವನಿಗಾಗಿ ಪೊಲೀಸರಿಂದ ತೀವ್ರ ಶೋಧ.

ಎಕ್ಸ್ ಖಾತೆ ಮೂಲಕ ಉಗ್ರರ ಜೊತೆ ಲಿಂಕ್

ಬಂಧಿತ ಆರೋಪಿಯನ್ನು ತುಮಕೂರಿನ ಶ್ರೀರಾಮನಗರ ನಿವಾಸಿ ಅಲ್ಲಾಬಕ್ಷು (24) ಎಂದು ಗುರುತಿಸಲಾಗಿದೆ. ಈತ ಕಳೆದ ಕೆಲವು ಸಮಯದಿಂದ ಸಾಮಾಜಿಕ ಜಾಲತಾಣವಾದ ಎಕ್ಸ್ (X) ಖಾತೆಯ ಮೂಲಕ ವಿದೇಶಿ ಮೂಲದ ಶಂಕಿತ ಉಗ್ರ ಸಂಘಟನೆಯ ವ್ಯಕ್ತಿಯೊಬ್ಬನ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದ ಎಂಬ ಆಘಾತಕಾರಿ ಮಾಹಿತಿ ತಿಳಿದುಬಂದಿದೆ. ದೇಶದ ಆಂತರಿಕ ಭದ್ರತೆ ಮತ್ತು ಶಾಂತಿ ಕದಡುವ ನಿಟ್ಟಿನಲ್ಲಿ ಈತ ಸರಣಿ ಪ್ರಚೋದನಾತ್ಮಕ ಸಂದೇಶಗಳನ್ನು ರವಾನಿಸುತ್ತಿದ್ದ ಹಾಗೂ ದೇಶ ವಿರೋಧಿ ಚಟುವಟಿಕೆಗಳ ಕುರಿತು ಚಾಟ್ ನಡೆಸುತ್ತಿದ್ದ ಎಂಬ ಆರೋಪವಿದೆ.

ಕೇಂದ್ರ ತನಿಖಾ ಸಂಸ್ಥೆಗಳ ನಿಗಾ: ಮತ್ತೊಬ್ಬನಿಗಾಗಿ ಬಲೆ

ಅಲ್ಲಾಬಕ್ಷು ಸಾಮಾಜಿಕ ಜಾಲತಾಣಗಳಲ್ಲಿ ನಡೆಸುತ್ತಿದ್ದ ಅನುಮಾನಾಸ್ಪದ ಚಟುವಟಿಕೆಗಳು ಹಾಗೂ ದೇಶ ವಿರೋಧಿ ಚಾಟಿಂಗ್‌ಗಳ ಬಗ್ಗೆ ಕೇಂದ್ರ ತನಿಖಾ ಸಂಸ್ಥೆಗಳು ತೀವ್ರ ನಿಗಾವಹಿಸಿದ್ದವು. ಆತನ ಲಿಂಕ್‌ಗಳನ್ನು ಪತ್ತೆಹಚ್ಚಿದ ಬಳಿಕ, ತನಿಖಾ ಸಂಸ್ಥೆಗಳು ರಾಜ್ಯ ಪೊಲೀಸರಿಗೆ ಮಾಹಿತಿ ರವಾನಿಸಿದ್ದವು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ತುಮಕೂರು ನಗರ ಪೊಲೀಸರು ಗುರುವಾರ ರಾತ್ರಿ ಕ್ಯಾತಸಂದ್ರದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ವಿದಾನಸೌಧ ಮೇಲೆ ಹಾರಾಡಿದ ಹೆಲಿಕಾಪ್ಟರ್‌, ಭಯೋತ್ಪಾದಕರ ವಿರುದ್ಧ ಮಾಕ್‌ ಡ್ರಿಲ್‌ ಹೇಗಿತ್ತು ನೋಡಿ

ಪ್ರಸ್ತುತ ಈ ಬಂಧಿತ ಯುವಕನಿಗೆ ಕೃತ್ಯದಲ್ಲಿ ಸಾಥ್ ನೀಡಿದ ಹಾಗೂ ಆತನ ಜೊತೆ ನಿಕಟ ಸಂಪರ್ಕದಲ್ಲಿದ್ದ ಮತ್ತೊಬ್ಬ ವ್ಯಕ್ತಿಯ ಬಗ್ಗೆಯೂ ಮಾಹಿತಿ ಲಭ್ಯವಾಗಿದ್ದು, ಆತನಿಗಾಗಿ ತುಮಕೂರು ನಗರ ಪೊಲೀಸರು ಬಲೆ ಬೀಸಿದ್ದಾರೆ. ಈ ಕುರಿತು ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

International Tolerance Award 2026: ಅಬುಧಾಬಿಯಲ್ಲಿರುವ ಹಿಂದೂ ದೇವಾಲಯಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವ – Kannada News

ಅಬುಧಾಬಿಯಲ್ಲಿರುವ ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ (BAPS) ಹಿಂದೂ ಮಂದಿರವು ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದು, ಪ್ರತಿಷ್ಠಿತ ‘2026 ಅಂತರರಾಷ್ಟ್ರೀಯ ಸಹಿಷ್ಣುತೆ ಪ್ರಶಸ್ತಿ’ (Tolerance Award)ಗೆ ಭಾಜನವಾಗಿದೆ. ಜಾಗತಿಕ ಮಟ್ಟದಲ್ಲಿ ಶಾಂತಿ, ಸಹಿಷ್ಣುತೆ, ಪರಸ್ಪರ ಗೌರವ ಮತ್ತು ಮಾನವ ಏಕತೆಯನ್ನು ಉತ್ತೇಜಿಸುವಲ್ಲಿ ನೀಡಿದ ಮಹತ್ವದ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಈ ಗೌರವವನ್ನು ಅಂತರರಾಷ್ಟ್ರೀಯ ನಾಗರಿಕತೆಗಳು ಮತ್ತು ಸಹಿಷ್ಣುತೆ ಸಮ್ಮೇಳನ (IDCT 2026) ಸಂದರ್ಭದಲ್ಲಿ ಘೋಷಿಸಲಾಯಿತು. ವಿವಿಧ ಧರ್ಮಗಳು, ಸಂಸ್ಕೃತಿಗಳು ಮತ್ತು ಸಮುದಾಯಗಳ ನಡುವೆ ಸಾಮರಸ್ಯದ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿರುವ BAPS ಮಂದಿರದ ಸೇವಾ ಚಟುವಟಿಕೆಗಳು ವಿಶ್ವದ ಗಮನ ಸೆಳೆದಿವೆ.

ಸಾಮರಸ್ಯದ ಪ್ರತೀಕವಾಗಿ ಗುರುತಿಸಿಕೊಂಡ ದೇವಾಲಯ:

ಅಬುಧಾಬಿ ಹಿಂದೂ ದೇವಾಲಯವು ಧಾರ್ಮಿಕ, ಭಾಷಾ ಮತ್ತು ಸಾಂಸ್ಕೃತಿಕ ಭಿನ್ನತೆಗಳನ್ನು ಮೀರಿ ಜನರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮೂಲಕ ಜಾಗತಿಕ ಸಹಬಾಳ್ವೆಯ ಸಂದೇಶವನ್ನು ಸಾರುತ್ತಿದೆ. ಸಮಾಜದಲ್ಲಿ ಏಕತೆ ಬೆಳೆಸುವ ಕಾರ್ಯಕ್ರಮಗಳು, ಮಾನವೀಯ ಸೇವೆಗಳು ಹಾಗೂ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಕೈಗೊಂಡ ಸೇವಾ ಕಾರ್ಯಗಳನ್ನು ಪರಿಗಣಿಸಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗಿದೆ.

ಕುಟುಂಬ ಮೌಲ್ಯಗಳ ಮಹತ್ವ ಒತ್ತಿ ಹೇಳಿದ ಆಧ್ಯಾತ್ಮಿಕ ನಾಯಕರು:

ಪ್ರಶಸ್ತಿ ಸ್ವೀಕರಿಸಿದ ಸಂದರ್ಭದಲ್ಲಿ BAPS ಸಂಸ್ಥೆಯ ಆಧ್ಯಾತ್ಮಿಕ ನಾಯಕರು, ತಂತ್ರಜ್ಞಾನ ಮತ್ತು ಆಧ್ಯಾತ್ಮಿಕತೆಯ ನಡುವಿನ ಸಮತೋಲನದ ಅಗತ್ಯವನ್ನು ವಿವರಿಸಿದ್ದಾರೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಮಾನವೀಯ ಮೌಲ್ಯಗಳು, ಕುಟುಂಬ ಬಾಂಧವ್ಯಗಳು ಮತ್ತು ಪರಸ್ಪರ ಸಂಬಂಧಗಳ ಮಹತ್ವ ಕಡಿಮೆಯಾಗಬಾರದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬೃಂದಾವನದಲ್ಲಿ ವಿರಾಟ್-ಅನುಷ್ಕಾ; ಪ್ರೇಮಾನಂದ್ ಗುರೂಜಿ ಬಳಿ ಈ ಜೋಡಿ ಪದೇ ಪದೇ ಹೋಗುವುದೇಕೆ ಗೊತ್ತಾ?

ಕುಟುಂಬದ ಸದಸ್ಯರು ಪ್ರತಿದಿನ ಸ್ವಲ್ಪ ಸಮಯವನ್ನು ಪ್ರಾರ್ಥನೆ, ಆತ್ಮಾವಲೋಕನ ಹಾಗೂ ಪರಸ್ಪರ ಸಂಭಾಷಣೆಗೆ ಮೀಸಲಿಡಬೇಕು. ಮೊಬೈಲ್ ಫೋನ್ ಹಾಗೂ ಡಿಜಿಟಲ್ ಸಾಧನಗಳ ಬಳಕೆಯನ್ನು ಮಿತಿಗೊಳಿಸಿ ಕುಟುಂಬದೊಂದಿಗೆ ಗುಣಮಟ್ಟದ ಸಮಯ ಕಳೆಯುವುದು ಸಮಾಜದ ಸೌಹಾರ್ದತೆಗೆ ಅತ್ಯಗತ್ಯ ಎಂದು ಸಲಹೆ ನೀಡಿದ್ದಾರೆ. .

ಶಾಂತಿ ಮತ್ತು ಮಾನವೀಯತೆಯ ಸಂದೇಶಕ್ಕೆ ಜಾಗತಿಕ ಮನ್ನಣೆ:

ಶಾಂತಿ, ಕರುಣೆ, ಸಹೋದರತ್ವ ಮತ್ತು ಮಾನವೀಯ ಮೌಲ್ಯಗಳನ್ನು ವಿಶ್ವದಾದ್ಯಂತ ಹರಡುವ ಉದ್ದೇಶದಿಂದ BAPS ಹಿಂದೂ ಮಂದಿರ ಕೈಗೊಂಡಿರುವ ವಿವಿಧ ಚಟುವಟಿಕೆಗಳಿಗೆ ಈ ಪ್ರಶಸ್ತಿ ಮತ್ತೊಂದು ದೊಡ್ಡ ಮಾನ್ಯತೆಯಾಗಿದೆ. ಇಂದು ಈ ದೇವಾಲಯವು ಕೇವಲ ಪೂಜಾ ಕೇಂದ್ರವಾಗಿಯೇ ಅಲ್ಲದೆ, ವಿಭಿನ್ನ ಧರ್ಮಗಳು ಮತ್ತು ಸಂಸ್ಕೃತಿಗಳನ್ನು ಸಂಪರ್ಕಿಸುವ ಸಾಮರಸ್ಯದ ಸಂಕೇತವಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರದ ಬಜೆಟ್ ಮತ್ತು ತಾರಾಗಣದ ಸಂಭಾವನೆ ವಿವರ ಇಲ್ಲಿದೆ – Kannada News

ಜೂನ್ 4ರಂದು ಭಾರಿ ನಿರೀಕ್ಷೆಗಳ ನಡುವೆ ‘ಪೆದ್ದಿ’ ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗಿದೆ. ನಿರ್ದೇಶಕ ಬುಚಿ ಬಾಬು ಸನಾ ನಿರ್ದೇಶನದ ಈ ಕ್ರೀಡಾ ಸಾಹಸ ಪ್ರಧಾನ ಸಿನಿಮಾದಲ್ಲಿ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಾಯಕನಾಗಿ ನಟಿಸಿದ್ದು, ಚಿತ್ರಕ್ಕೆ ಮೊದಲ ದಿನದ ಬೆಳಗಿನ ಪ್ರದರ್ಶನದಿಂದಲೇ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈ ಅದ್ಭುತ ಯಶಸ್ಸಿನ ಸಂದರ್ಭದಲ್ಲಿ, ಚಿತ್ರದ ಒಟ್ಟು ಬಜೆಟ್ ಮತ್ತು ಕಲಾವಿದರ ಸಂಭಾವನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ.

ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ನಿರ್ಮಿಸಿರುವ ಈ ಚಿತ್ರದಲ್ಲಿ ಜಾನ್ವಿ ಕಪೂರ್, ಕರುನಾಡ ಚಕ್ರವರ್ತಿ ಶಿವ ರಾಜ್‌ಕುಮಾರ್, ಜಗಪತಿ ಬಾಬು, ದಿವ್ಯೇಂದು ಶರ್ಮಾ ಮತ್ತು ಬೋಮನ್ ಇರಾನಿ ಸೇರಿದಂತೆ ದೊಡ್ಡ ತಾರಾಗಣವೇ ನಟಿಸಿದೆ. ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ರತ್ನವೇಲು ಛಾಯಾಗ್ರಹಣ ಹಾಗೂ ನವೀನ್ ನೂಲಿ ಸಂಕಲನದ ಜವಾಬ್ದಾರಿ ನಿರ್ವಹಿಸಿದ್ದಾರೆ.

ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಈ ಚಿತ್ರದ ಬಜೆಟ್‌ನ ಬಹುಪಾಲು ಭಾಗವನ್ನು ನಟರು ಮತ್ತು ತಂತ್ರಜ್ಞರ ಸಂಭಾವನೆಗಾಗಿಯೇ ಖರ್ಚು ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಬಿಗ್ ಬಜೆಟ್ ಚಿತ್ರಕ್ಕಾಗಿ ನಾಯಕ ರಾಮ್ ಚರಣ್ ಬರೋಬ್ಬರಿ 100 ಕೋಟಿ ರೂಪಾಯಿಗಳ ಸಂಭಾವನೆ ಪಡೆದಿದ್ದಾರೆ ಎಂಬ ವದಂತಿ ಇದೆ.

ಇನ್ನು ‘ಉಪ್ಪೇನ’ ಚಿತ್ರದ ಸೂಪರ್ ಹಿಟ್ ನಂತರ ನಿರ್ದೇಶಕ ಬುಚ್ಚಿ ಬಾಬು ಸನಾ ಅವರಿಗೆ ಇದು ಎರಡನೇ ಸಿನಿಮಾವಾಗಿದ್ದು, ಅವರು ಈ ಚಿತ್ರಕ್ಕಾಗಿ ಸುಮಾರು 30 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ನಾಯಕಿ ಜಾನ್ವಿ ಕಪೂರ್, ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್, ಛಾಯಾಗ್ರಾಹಕ ರತ್ನವೇಲು ಮತ್ತು ಇತರ ಪ್ರಮುಖ ನಟರ ಸಂಭಾವನೆಗಾಗಿಯೇ ಸುಮಾರು 35 ರಿಂದ 40 ಕೋಟಿ ರೂಪಾಯಿಗಳವರೆಗೆ ವೆಚ್ಚ ಮಾಡಲಾಗಿದೆ ಎಂದು ವರದಿಯಾಗಿದೆ. ಆದಾಗ್ಯೂ, ಈ ಸಂಭಾವನೆಯ ವಿವರಗಳ ಬಗ್ಗೆ ಚಿತ್ರತಂಡ ಅಥವಾ ನಿರ್ಮಾಪಕರು ಯಾವುದೇ ಅಧಿಕೃತ ಪ್ರಕಟಣೆ ಮಾಡಿಲ್ಲ. ಈ ಚಿತ್ರದ ಒಟ್ಟು ಬಜೆಟ್ ಸುಮಾರು 250 ಕೋಟಿ ಇಂದ 300 ಕೋಟಿ ರೂಪಾಯಿಗಳವರೆಗೆ ಇರಬಹುದೆಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ‘ಪೆದ್ದಿ’; ಒಂದೇ ದಿನಕ್ಕೆ 100 ಕೋಟಿ ರೂ. ಕಲೆಕ್ಷನ್

ಬಾಲಿವುಡ್ ಸುಂದರಿ ಜಾನ್ವಿ ಕಪೂರ್ ಈ ಚಿತ್ರದಲ್ಲಿ ರಾಮ್ ಚರಣ್ ಅವರ ಜೋಡಿಯಾಗಿ ನಟಿಸಿದ್ದು, ತೆರೆಯ ಮೇಲಿನ ಇವರ ಕೆಮಿಸ್ಟ್ರಿ ಮತ್ತು ಅದ್ಭುತ ನಟನೆ ಚಿತ್ರಕ್ಕೆ ಹೊಸ ಮೆರುಗನ್ನು ತಂದಿದೆ. ಇವರ ಜೊತೆಗೆ ಕನ್ನಡದ ಸೂಪರ್‌ಸ್ಟಾರ್ ಶಿವರಾಜ್ ಕುಮಾರ್, ದಕ್ಷಿಣ ಭಾರತದ ಖ್ಯಾತ ನಟ ಜಗಪತಿ ಬಾಬು, ಬಾಲಿವುಡ್‌ನ ಪ್ರತಿಭಾವಂತ ನಟರಾದ ಬೋಮನ್ ಇರಾನಿ ಮತ್ತು ದಿವ್ಯೇಂದು ಶರ್ಮಾ ಅವರಂತಹ ದಿಗ್ಗಜ ಕಲಾವಿಧರ ದಂಡೇ ಇರುವುದರಿಂದ, ಚಿತ್ರದ ಪ್ರತಿಯೊಂದು ಪಾತ್ರವೂ ಪರದೆಯ ಮೇಲೆ ತುಂಬಾ ಶಕ್ತಿಶಾಲಿಯಾಗಿ ಮೂಡಿಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version