ತುಮಕೂರು: ವಿದೇಶಿ ಉಗ್ರನ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಯುವಕನ ಬಂಧನ – Kannada News

ತುಮಕೂರು, ಜೂನ್ 5: ವಿದೇಶಿ ಭಯೋತ್ಪಾದಕ ಸಂಘಟನೆ, ಭಯೋತ್ಪಾದಕನ ಜೊತೆ ನಿರಂತರ ಸಂಪರ್ಕದಲ್ಲಿದ್ದ ಹಾಗೂ ದೇಶದ ಭದ್ರತೆಗೆ ಧಕ್ಕೆ ತರುವಂಥ ಚಟುವಟಿಕೆಗಳನ್ನು ನಡೆಸುತ್ತಿದ್ದ ಆರೋಪದ ಮೇಲೆ ತುಮಕೂರಿನಲ್ಲಿ (Tumakur) ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕೇಂದ್ರ ತನಿಖಾ ಸಂಸ್ಥೆಗಳು ನೀಡಿದ ರಹಸ್ಯ ಹಾಗೂ ನಿಖರ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ತುಮಕೂರು ನಗರ ಪೊಲೀಸರು ಶಂಕಿತ ಉಗ್ರನನ್ನು ಬಂಧಿಸಿದ್ದಾರೆ. ಬಂಧಿತ ಯುವಕ ದೇಶದ ಆಂತರಿಕ ಬೆಳವಣಿಗೆಗಳ ಕುರಿತು ಪ್ರಚೋದನಾತ್ಮಕ ಸಂದೇಶಗಳನ್ನು ರವಾನಿಸುತ್ತಿದ್ದ ಎನ್ನಲಾಗಿದೆ.

ಮುಖ್ಯಾಂಶಗಳು

  • ಕೇಂದ್ರ ತನಿಖಾ ಸಂಸ್ಥೆಗಳ ರಹಸ್ಯ ಮಾಹಿತಿಯ ಮೇರೆಗೆ ತುಮಕೂರಿನ ಕ್ಯಾತಸಂದ್ರದಲ್ಲಿ ಶಂಕಿತ ಯುವಕನ ಬಂಧನ.
  • ಸಾಮಾಜಿಕ ಜಾಲತಾಣದ ಖಾತೆ ಮೂಲಕ ವಿದೇಶಿ ಉಗ್ರನ ಜೊತೆ ನಿರಂತರ ಸಂಪರ್ಕದಲ್ಲಿದ್ದ ಅಲ್ಲಾಬಕ್ಷು.
  • ದೇಶದ ಭದ್ರತೆಗೆ ಧಕ್ಕೆ ತರುವ ನಿಟ್ಟಿನಲ್ಲಿ ಪ್ರಚೋದನಾತ್ಮಕ ಚಾಟಿಂಗ್; ನೆರವು ನೀಡಿದ ಮತ್ತೋರ್ವನಿಗಾಗಿ ಪೊಲೀಸರಿಂದ ತೀವ್ರ ಶೋಧ.

ಎಕ್ಸ್ ಖಾತೆ ಮೂಲಕ ಉಗ್ರರ ಜೊತೆ ಲಿಂಕ್

ಬಂಧಿತ ಆರೋಪಿಯನ್ನು ತುಮಕೂರಿನ ಶ್ರೀರಾಮನಗರ ನಿವಾಸಿ ಅಲ್ಲಾಬಕ್ಷು (24) ಎಂದು ಗುರುತಿಸಲಾಗಿದೆ. ಈತ ಕಳೆದ ಕೆಲವು ಸಮಯದಿಂದ ಸಾಮಾಜಿಕ ಜಾಲತಾಣವಾದ ಎಕ್ಸ್ (X) ಖಾತೆಯ ಮೂಲಕ ವಿದೇಶಿ ಮೂಲದ ಶಂಕಿತ ಉಗ್ರ ಸಂಘಟನೆಯ ವ್ಯಕ್ತಿಯೊಬ್ಬನ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದ ಎಂಬ ಆಘಾತಕಾರಿ ಮಾಹಿತಿ ತಿಳಿದುಬಂದಿದೆ. ದೇಶದ ಆಂತರಿಕ ಭದ್ರತೆ ಮತ್ತು ಶಾಂತಿ ಕದಡುವ ನಿಟ್ಟಿನಲ್ಲಿ ಈತ ಸರಣಿ ಪ್ರಚೋದನಾತ್ಮಕ ಸಂದೇಶಗಳನ್ನು ರವಾನಿಸುತ್ತಿದ್ದ ಹಾಗೂ ದೇಶ ವಿರೋಧಿ ಚಟುವಟಿಕೆಗಳ ಕುರಿತು ಚಾಟ್ ನಡೆಸುತ್ತಿದ್ದ ಎಂಬ ಆರೋಪವಿದೆ.

ಕೇಂದ್ರ ತನಿಖಾ ಸಂಸ್ಥೆಗಳ ನಿಗಾ: ಮತ್ತೊಬ್ಬನಿಗಾಗಿ ಬಲೆ

ಅಲ್ಲಾಬಕ್ಷು ಸಾಮಾಜಿಕ ಜಾಲತಾಣಗಳಲ್ಲಿ ನಡೆಸುತ್ತಿದ್ದ ಅನುಮಾನಾಸ್ಪದ ಚಟುವಟಿಕೆಗಳು ಹಾಗೂ ದೇಶ ವಿರೋಧಿ ಚಾಟಿಂಗ್‌ಗಳ ಬಗ್ಗೆ ಕೇಂದ್ರ ತನಿಖಾ ಸಂಸ್ಥೆಗಳು ತೀವ್ರ ನಿಗಾವಹಿಸಿದ್ದವು. ಆತನ ಲಿಂಕ್‌ಗಳನ್ನು ಪತ್ತೆಹಚ್ಚಿದ ಬಳಿಕ, ತನಿಖಾ ಸಂಸ್ಥೆಗಳು ರಾಜ್ಯ ಪೊಲೀಸರಿಗೆ ಮಾಹಿತಿ ರವಾನಿಸಿದ್ದವು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ತುಮಕೂರು ನಗರ ಪೊಲೀಸರು ಗುರುವಾರ ರಾತ್ರಿ ಕ್ಯಾತಸಂದ್ರದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ವಿದಾನಸೌಧ ಮೇಲೆ ಹಾರಾಡಿದ ಹೆಲಿಕಾಪ್ಟರ್‌, ಭಯೋತ್ಪಾದಕರ ವಿರುದ್ಧ ಮಾಕ್‌ ಡ್ರಿಲ್‌ ಹೇಗಿತ್ತು ನೋಡಿ

ಪ್ರಸ್ತುತ ಈ ಬಂಧಿತ ಯುವಕನಿಗೆ ಕೃತ್ಯದಲ್ಲಿ ಸಾಥ್ ನೀಡಿದ ಹಾಗೂ ಆತನ ಜೊತೆ ನಿಕಟ ಸಂಪರ್ಕದಲ್ಲಿದ್ದ ಮತ್ತೊಬ್ಬ ವ್ಯಕ್ತಿಯ ಬಗ್ಗೆಯೂ ಮಾಹಿತಿ ಲಭ್ಯವಾಗಿದ್ದು, ಆತನಿಗಾಗಿ ತುಮಕೂರು ನಗರ ಪೊಲೀಸರು ಬಲೆ ಬೀಸಿದ್ದಾರೆ. ಈ ಕುರಿತು ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

International Tolerance Award 2026: ಅಬುಧಾಬಿಯಲ್ಲಿರುವ ಹಿಂದೂ ದೇವಾಲಯಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವ – Kannada News

ಅಬುಧಾಬಿಯಲ್ಲಿರುವ ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ (BAPS) ಹಿಂದೂ ಮಂದಿರವು ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದು, ಪ್ರತಿಷ್ಠಿತ ‘2026 ಅಂತರರಾಷ್ಟ್ರೀಯ ಸಹಿಷ್ಣುತೆ ಪ್ರಶಸ್ತಿ’ (Tolerance Award)ಗೆ ಭಾಜನವಾಗಿದೆ. ಜಾಗತಿಕ ಮಟ್ಟದಲ್ಲಿ ಶಾಂತಿ, ಸಹಿಷ್ಣುತೆ, ಪರಸ್ಪರ ಗೌರವ ಮತ್ತು ಮಾನವ ಏಕತೆಯನ್ನು ಉತ್ತೇಜಿಸುವಲ್ಲಿ ನೀಡಿದ ಮಹತ್ವದ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಈ ಗೌರವವನ್ನು ಅಂತರರಾಷ್ಟ್ರೀಯ ನಾಗರಿಕತೆಗಳು ಮತ್ತು ಸಹಿಷ್ಣುತೆ ಸಮ್ಮೇಳನ (IDCT 2026) ಸಂದರ್ಭದಲ್ಲಿ ಘೋಷಿಸಲಾಯಿತು. ವಿವಿಧ ಧರ್ಮಗಳು, ಸಂಸ್ಕೃತಿಗಳು ಮತ್ತು ಸಮುದಾಯಗಳ ನಡುವೆ ಸಾಮರಸ್ಯದ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿರುವ BAPS ಮಂದಿರದ ಸೇವಾ ಚಟುವಟಿಕೆಗಳು ವಿಶ್ವದ ಗಮನ ಸೆಳೆದಿವೆ.

ಸಾಮರಸ್ಯದ ಪ್ರತೀಕವಾಗಿ ಗುರುತಿಸಿಕೊಂಡ ದೇವಾಲಯ:

ಅಬುಧಾಬಿ ಹಿಂದೂ ದೇವಾಲಯವು ಧಾರ್ಮಿಕ, ಭಾಷಾ ಮತ್ತು ಸಾಂಸ್ಕೃತಿಕ ಭಿನ್ನತೆಗಳನ್ನು ಮೀರಿ ಜನರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮೂಲಕ ಜಾಗತಿಕ ಸಹಬಾಳ್ವೆಯ ಸಂದೇಶವನ್ನು ಸಾರುತ್ತಿದೆ. ಸಮಾಜದಲ್ಲಿ ಏಕತೆ ಬೆಳೆಸುವ ಕಾರ್ಯಕ್ರಮಗಳು, ಮಾನವೀಯ ಸೇವೆಗಳು ಹಾಗೂ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಕೈಗೊಂಡ ಸೇವಾ ಕಾರ್ಯಗಳನ್ನು ಪರಿಗಣಿಸಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗಿದೆ.

ಕುಟುಂಬ ಮೌಲ್ಯಗಳ ಮಹತ್ವ ಒತ್ತಿ ಹೇಳಿದ ಆಧ್ಯಾತ್ಮಿಕ ನಾಯಕರು:

ಪ್ರಶಸ್ತಿ ಸ್ವೀಕರಿಸಿದ ಸಂದರ್ಭದಲ್ಲಿ BAPS ಸಂಸ್ಥೆಯ ಆಧ್ಯಾತ್ಮಿಕ ನಾಯಕರು, ತಂತ್ರಜ್ಞಾನ ಮತ್ತು ಆಧ್ಯಾತ್ಮಿಕತೆಯ ನಡುವಿನ ಸಮತೋಲನದ ಅಗತ್ಯವನ್ನು ವಿವರಿಸಿದ್ದಾರೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಮಾನವೀಯ ಮೌಲ್ಯಗಳು, ಕುಟುಂಬ ಬಾಂಧವ್ಯಗಳು ಮತ್ತು ಪರಸ್ಪರ ಸಂಬಂಧಗಳ ಮಹತ್ವ ಕಡಿಮೆಯಾಗಬಾರದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬೃಂದಾವನದಲ್ಲಿ ವಿರಾಟ್-ಅನುಷ್ಕಾ; ಪ್ರೇಮಾನಂದ್ ಗುರೂಜಿ ಬಳಿ ಈ ಜೋಡಿ ಪದೇ ಪದೇ ಹೋಗುವುದೇಕೆ ಗೊತ್ತಾ?

ಕುಟುಂಬದ ಸದಸ್ಯರು ಪ್ರತಿದಿನ ಸ್ವಲ್ಪ ಸಮಯವನ್ನು ಪ್ರಾರ್ಥನೆ, ಆತ್ಮಾವಲೋಕನ ಹಾಗೂ ಪರಸ್ಪರ ಸಂಭಾಷಣೆಗೆ ಮೀಸಲಿಡಬೇಕು. ಮೊಬೈಲ್ ಫೋನ್ ಹಾಗೂ ಡಿಜಿಟಲ್ ಸಾಧನಗಳ ಬಳಕೆಯನ್ನು ಮಿತಿಗೊಳಿಸಿ ಕುಟುಂಬದೊಂದಿಗೆ ಗುಣಮಟ್ಟದ ಸಮಯ ಕಳೆಯುವುದು ಸಮಾಜದ ಸೌಹಾರ್ದತೆಗೆ ಅತ್ಯಗತ್ಯ ಎಂದು ಸಲಹೆ ನೀಡಿದ್ದಾರೆ. .

ಶಾಂತಿ ಮತ್ತು ಮಾನವೀಯತೆಯ ಸಂದೇಶಕ್ಕೆ ಜಾಗತಿಕ ಮನ್ನಣೆ:

ಶಾಂತಿ, ಕರುಣೆ, ಸಹೋದರತ್ವ ಮತ್ತು ಮಾನವೀಯ ಮೌಲ್ಯಗಳನ್ನು ವಿಶ್ವದಾದ್ಯಂತ ಹರಡುವ ಉದ್ದೇಶದಿಂದ BAPS ಹಿಂದೂ ಮಂದಿರ ಕೈಗೊಂಡಿರುವ ವಿವಿಧ ಚಟುವಟಿಕೆಗಳಿಗೆ ಈ ಪ್ರಶಸ್ತಿ ಮತ್ತೊಂದು ದೊಡ್ಡ ಮಾನ್ಯತೆಯಾಗಿದೆ. ಇಂದು ಈ ದೇವಾಲಯವು ಕೇವಲ ಪೂಜಾ ಕೇಂದ್ರವಾಗಿಯೇ ಅಲ್ಲದೆ, ವಿಭಿನ್ನ ಧರ್ಮಗಳು ಮತ್ತು ಸಂಸ್ಕೃತಿಗಳನ್ನು ಸಂಪರ್ಕಿಸುವ ಸಾಮರಸ್ಯದ ಸಂಕೇತವಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರದ ಬಜೆಟ್ ಮತ್ತು ತಾರಾಗಣದ ಸಂಭಾವನೆ ವಿವರ ಇಲ್ಲಿದೆ – Kannada News

ಜೂನ್ 4ರಂದು ಭಾರಿ ನಿರೀಕ್ಷೆಗಳ ನಡುವೆ ‘ಪೆದ್ದಿ’ ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗಿದೆ. ನಿರ್ದೇಶಕ ಬುಚಿ ಬಾಬು ಸನಾ ನಿರ್ದೇಶನದ ಈ ಕ್ರೀಡಾ ಸಾಹಸ ಪ್ರಧಾನ ಸಿನಿಮಾದಲ್ಲಿ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಾಯಕನಾಗಿ ನಟಿಸಿದ್ದು, ಚಿತ್ರಕ್ಕೆ ಮೊದಲ ದಿನದ ಬೆಳಗಿನ ಪ್ರದರ್ಶನದಿಂದಲೇ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈ ಅದ್ಭುತ ಯಶಸ್ಸಿನ ಸಂದರ್ಭದಲ್ಲಿ, ಚಿತ್ರದ ಒಟ್ಟು ಬಜೆಟ್ ಮತ್ತು ಕಲಾವಿದರ ಸಂಭಾವನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ.

ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ನಿರ್ಮಿಸಿರುವ ಈ ಚಿತ್ರದಲ್ಲಿ ಜಾನ್ವಿ ಕಪೂರ್, ಕರುನಾಡ ಚಕ್ರವರ್ತಿ ಶಿವ ರಾಜ್‌ಕುಮಾರ್, ಜಗಪತಿ ಬಾಬು, ದಿವ್ಯೇಂದು ಶರ್ಮಾ ಮತ್ತು ಬೋಮನ್ ಇರಾನಿ ಸೇರಿದಂತೆ ದೊಡ್ಡ ತಾರಾಗಣವೇ ನಟಿಸಿದೆ. ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ರತ್ನವೇಲು ಛಾಯಾಗ್ರಹಣ ಹಾಗೂ ನವೀನ್ ನೂಲಿ ಸಂಕಲನದ ಜವಾಬ್ದಾರಿ ನಿರ್ವಹಿಸಿದ್ದಾರೆ.

ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಈ ಚಿತ್ರದ ಬಜೆಟ್‌ನ ಬಹುಪಾಲು ಭಾಗವನ್ನು ನಟರು ಮತ್ತು ತಂತ್ರಜ್ಞರ ಸಂಭಾವನೆಗಾಗಿಯೇ ಖರ್ಚು ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಬಿಗ್ ಬಜೆಟ್ ಚಿತ್ರಕ್ಕಾಗಿ ನಾಯಕ ರಾಮ್ ಚರಣ್ ಬರೋಬ್ಬರಿ 100 ಕೋಟಿ ರೂಪಾಯಿಗಳ ಸಂಭಾವನೆ ಪಡೆದಿದ್ದಾರೆ ಎಂಬ ವದಂತಿ ಇದೆ.

ಇನ್ನು ‘ಉಪ್ಪೇನ’ ಚಿತ್ರದ ಸೂಪರ್ ಹಿಟ್ ನಂತರ ನಿರ್ದೇಶಕ ಬುಚ್ಚಿ ಬಾಬು ಸನಾ ಅವರಿಗೆ ಇದು ಎರಡನೇ ಸಿನಿಮಾವಾಗಿದ್ದು, ಅವರು ಈ ಚಿತ್ರಕ್ಕಾಗಿ ಸುಮಾರು 30 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ನಾಯಕಿ ಜಾನ್ವಿ ಕಪೂರ್, ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್, ಛಾಯಾಗ್ರಾಹಕ ರತ್ನವೇಲು ಮತ್ತು ಇತರ ಪ್ರಮುಖ ನಟರ ಸಂಭಾವನೆಗಾಗಿಯೇ ಸುಮಾರು 35 ರಿಂದ 40 ಕೋಟಿ ರೂಪಾಯಿಗಳವರೆಗೆ ವೆಚ್ಚ ಮಾಡಲಾಗಿದೆ ಎಂದು ವರದಿಯಾಗಿದೆ. ಆದಾಗ್ಯೂ, ಈ ಸಂಭಾವನೆಯ ವಿವರಗಳ ಬಗ್ಗೆ ಚಿತ್ರತಂಡ ಅಥವಾ ನಿರ್ಮಾಪಕರು ಯಾವುದೇ ಅಧಿಕೃತ ಪ್ರಕಟಣೆ ಮಾಡಿಲ್ಲ. ಈ ಚಿತ್ರದ ಒಟ್ಟು ಬಜೆಟ್ ಸುಮಾರು 250 ಕೋಟಿ ಇಂದ 300 ಕೋಟಿ ರೂಪಾಯಿಗಳವರೆಗೆ ಇರಬಹುದೆಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ‘ಪೆದ್ದಿ’; ಒಂದೇ ದಿನಕ್ಕೆ 100 ಕೋಟಿ ರೂ. ಕಲೆಕ್ಷನ್

ಬಾಲಿವುಡ್ ಸುಂದರಿ ಜಾನ್ವಿ ಕಪೂರ್ ಈ ಚಿತ್ರದಲ್ಲಿ ರಾಮ್ ಚರಣ್ ಅವರ ಜೋಡಿಯಾಗಿ ನಟಿಸಿದ್ದು, ತೆರೆಯ ಮೇಲಿನ ಇವರ ಕೆಮಿಸ್ಟ್ರಿ ಮತ್ತು ಅದ್ಭುತ ನಟನೆ ಚಿತ್ರಕ್ಕೆ ಹೊಸ ಮೆರುಗನ್ನು ತಂದಿದೆ. ಇವರ ಜೊತೆಗೆ ಕನ್ನಡದ ಸೂಪರ್‌ಸ್ಟಾರ್ ಶಿವರಾಜ್ ಕುಮಾರ್, ದಕ್ಷಿಣ ಭಾರತದ ಖ್ಯಾತ ನಟ ಜಗಪತಿ ಬಾಬು, ಬಾಲಿವುಡ್‌ನ ಪ್ರತಿಭಾವಂತ ನಟರಾದ ಬೋಮನ್ ಇರಾನಿ ಮತ್ತು ದಿವ್ಯೇಂದು ಶರ್ಮಾ ಅವರಂತಹ ದಿಗ್ಗಜ ಕಲಾವಿಧರ ದಂಡೇ ಇರುವುದರಿಂದ, ಚಿತ್ರದ ಪ್ರತಿಯೊಂದು ಪಾತ್ರವೂ ಪರದೆಯ ಮೇಲೆ ತುಂಬಾ ಶಕ್ತಿಶಾಲಿಯಾಗಿ ಮೂಡಿಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಿರ್ಮಾಣ ಹಂತದ ಫ್ಲೈಓವರ್ ಬಳಿ ಕಾರ್ಮಿಕರ ಮೇಲೆ ಕುಸಿದ ಕ್ರೇನ್, ಮೂವರು ಸಾವು – Kannada News

ಫರೀದಾಬಾದ್, ಜೂನ್ 05: ಹರಿಯಾಣದ ಫರೀದಾಬಾದ್​ನ ಜೆವರ್ ಎಕ್ಸ್​​ಪ್ರೆಸ್​ವೇನಲ್ಲಿ ನಿರ್ಮಾಣ ಹಂತದ ಫ್ಲೈಓವರ್ ಬಳಿ ಕ್ರೇನ್(Crane) ಕುಸಿದ ಪರಿಣಾಮ ಮೂವರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಮತ್ತು ಸ್ಥಳೀಯ ಪೊಲೀಸರು ಅತ್ಯಂತ ಕ್ಷಿಪ್ರವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಭಾರಿ ಮಳೆಯಿಂದಾಗಿ ಉಂಟಾಗಿದ್ದ ಕೆಸರಿನ ಸವಾಲಿನ ನಡುವೆಯೂ ರಕ್ಷಣಾ ತಂಡಗಳು ಸ್ಥಳೀಯ ನಿವಾಸಿಗಳ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ, ಕ್ರೇನ್ ಅಡಿಯಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಯಶಸ್ವಿಯಾಗಿ ಹೊರತೆಗೆದಿವೆ.

ಗುರುವಾರ ಸಂಜೆ ಫ್ಲೈಓವರ್ ನಿರ್ಮಾಣದ ವೇಳೆ ಭಾರಿ ಗಾತ್ರದ ಗಿರ್ಡರ್ ಅನ್ನು ಎತ್ತುವಾಗ, ಕೆಸರಿನ ಕಾರಣದಿಂದಾಗಿ ಕ್ರೇನ್ ತನ್ನ ಸಮತೋಲನವನ್ನು ಕಳೆದುಕೊಂಡು ವಾಲಿತ್ತು. ಘಟನಾ ಸ್ಥಳದಲ್ಲಿ ಏಳು ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಅವರಲ್ಲಿ ನಾಲ್ವರು ಕ್ರೇನ್ ಅಡಿಯಲ್ಲಿ ಸಿಲುಕಿಕೊಂಡಿದ್ದರು.

ಅಪಘಾತದ ಮಾಹಿತಿ ಲಭಿಸಿದ ತಕ್ಷಣವೇ ಎಸ್‌ಡಿಆರ್‌ಎಫ್ ಮತ್ತು ಪೊಲೀಸ್ ಪಡೆಗಳು ಜಂಟಿಯಾಗಿ ಅತ್ಯಾಧುನಿಕ ಉಪಕರಣಗಳೊಂದಿಗೆ ಸ್ಥಳಕ್ಕೆ ಧಾವಿಸಿದವು. ತಕ್ಷಣದ ವೈದ್ಯಕೀಯ ನೆರವು: ಕ್ರೇನ್ ಅಡಿಯಲ್ಲಿದ್ದ ಇಬ್ಬರು ಕಾರ್ಮಿಕರನ್ನು ಅತ್ಯಂತ ಸುರಕ್ಷಿತವಾಗಿ ಹೊರತೆಗೆದು, ಗಾಯಗೊಂಡಿದ್ದ ಕಾರ್ಮಿಕನನ್ನು ತಕ್ಷಣವೇ ಹತ್ತಿರದ ಸುಸಜ್ಜಿತ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆತನಿಗೆ ತಜ್ಞ ವೈದ್ಯರಿಂದ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

ಮತ್ತಷ್ಟು ಓದಿ: ನಮ್ಮ ಮೆಟ್ರೋ ನೀಲಿ ಮಾರ್ಗದ ಕಾಮಗಾರಿ ವೇಳೆ ಕ್ರೇನ್​​ ಪಲ್ಟಿ: ತಪ್ಪಿದ ಭಾರೀ ದುರಂತ

ಸುರಕ್ಷತಾ ಪರಿಶೀಲನೆ ಮತ್ತು ಮುಂದಿನ ಕ್ರಮ
ಘಟನೆಯಲ್ಲಿ ಮೂವರು ಕಾರ್ಮಿಕರು ದುರಂತವಾಗಿ ಪ್ರಾಣ ಕಳೆದುಕೊಂಡಿರುವುದು ತೀವ್ರ ಬೇಸರದ ಸಂಗತಿಯಾಗಿದ್ದರೂ, ರಕ್ಷಣಾ ತಂಡಗಳ ತಕ್ಷಣದ ಹಸ್ತಕ್ಷೇಪದಿಂದಾಗಿ ಅಲ್ಲಿ ಇನ್ನುಳಿದ ಯಾವುದೇ ಕಾರ್ಮಿಕರು ಸಿಲುಕದಂತೆ ಇಡೀ ಪ್ರದೇಶವನ್ನು ಕೇವಲ ಕೆಲವೇ ಗಂಟೆಗಳಲ್ಲಿ ಸುರಕ್ಷಿತಗೊಳಿಸಲಾಗಿದೆ.

ಎಸ್‌ಡಿಆರ್‌ಎಫ್ ತಂಡದ ಎಎಸ್‌ಐ ಅಮರ್‌ಜೀತ್ ಸಿಂಗ್ ಅವರು ಮಾತನಾಡಿ, ಘಟನೆಯ ವರದಿ ಬಂದ ಕೂಡಲೇ ನಮ್ಮ ತಂಡ ಸ್ಥಳಕ್ಕೆ ತಲುಪಿತು. ಕ್ರೇನ್ ಅಡಿಯಲ್ಲಿದ್ದ ಎಲ್ಲರನ್ನೂ ಯಶಸ್ವಿಯಾಗಿ ಹೊರತೆಗೆಯಲಾಗಿದ್ದು, ಸದ್ಯ ಸ್ಥಳದಲ್ಲಿ ಯಾವುದೇ ಅಪಾಯವಿಲ್ಲ ಮತ್ತು ಪರಿಸ್ಥಿತಿ ಸಂಪೂರ್ಣ ಹತೋಟಿಯಲ್ಲಿದೆ ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Bengaluru Air Quality: ಮುಂಗಾರು ಮಳೆಗೆ ತಂಪಾದ ಬೆಂಗಳೂರು, ಎಲ್ಲೆಡೆ ವಾಯು ಗುಣಮಟ್ಟ ಉತ್ತಮ – Kannada News

ಬೆಂಗಳೂರು, ಜೂನ್ 05: ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಬಹುತೇಕ ಉತ್ತಮ ಹಾಗೂ ಸಾಧಾರಣ ಮಟ್ಟದಲ್ಲಿದೆ. ಇತ್ತೀಚಿನ ಮಳೆಯ ಪ್ರಭಾವದಿಂದಾಗಿ ರಾಜ್ಯದ ಬಹುತೇಕ ಭಾಗಗಳಲ್ಲಿ ವಾಯು ಮಾಲಿನ್ಯದ ಮಟ್ಟ ನಿಯಂತ್ರಣದಲ್ಲಿದೆ.

ಮುಖ್ಯಾಂಶಗಳು

  • ಮಳೆಯ ಕಾರಣದಿಂದ ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಉತ್ತಮ ಮಟ್ಟದಲ್ಲಿದೆ.
  • ಧಾರವಾಡ ನಗರದಲ್ಲಿ ಧೂಳಿನ ಕಣಗಳ ಹೆಚ್ಚಳದಿಂದ ವಾಯು ಗುಣಮಟ್ಟ ಕಳಪೆಯಾಗಿದೆ.
  • ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ ದಾಖಲಾಗಿದೆ.

ಬೆಂಗಳೂರಿನ ಇಂದಿನ ವಾಯು ಗುಣಮಟ್ಟ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಜೂನ್ 05 ರಂದು ಗಾಳಿಯ ಗುಣಮಟ್ಟವು ಉತ್ತಮದಿಂದ ಸಾಧಾರಣ (Good to Moderate) ಮಟ್ಟದಲ್ಲಿದೆ. ಬೆಂಗಳೂರಿನ ಒಟ್ಟಾರೆ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು (AQI) 60ರಷ್ಟಿದೆ. ಕಳೆದ ಕೆಲವು ದಿನಗಳಿಂದ ನಗರದಾದ್ಯಂತ ಬೀಸುತ್ತಿರುವ ಬಿರುಗಾಳಿ ಮತ್ತು ಮುಂಗಾರು ಮಳೆಯ ಸಿಂಚನದಿಂದಾಗಿ ವಾತಾವರಣದಲ್ಲಿದ್ದ ಧೂಳಿನ ಕಣಗಳು (PM2.5 ಮತ್ತು PM10) ಗಣನೀಯವಾಗಿ ಕಡಿಮೆಯಾಗಿವೆ.

ನಗರದ ವಿವಿಧ ಪ್ರಮುಖ ವಲಯಗಳ AQI ವಿವರ

  • ಮೆಜೆಸ್ಟಿಕ್ ಮತ್ತು ಸಿಟಿ ರೈಲ್ವೆ ಸ್ಟೇಷನ್: 61 (ಸಾಧಾರಣ)
  • ಪೀಣ್ಯ ಕೈಗಾರಿಕಾ ಪ್ರದೇಶ: 66 (ಸಾಧಾರಣ)
  • ಜಯನಗರ ಮತ್ತು ಬಿಟಿಎಂ ಲೇಔಟ್: 54 ರಿಂದ 58 (ಉತ್ತಮ/ಸಾಧಾರಣ)
  • ಬಾಪುಜಿನಗರ: 74 (ಸಾಧಾರಣ)

ಇತರೆ ಪ್ರಮುಖ ನಗರಗಳ ವಾಯು ಗುಣಮಟ್ಟದ ವಿವರ

ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರೆ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲೂ ಹವಾಮಾನ ವೈಪರೀತ್ಯ ಹಾಗೂ ಮಳೆಯ ಕಾರಣದಿಂದ ಗಾಳಿಯ ಗುಣಮಟ್ಟದಲ್ಲಿ ಏರುಪೇರಾಗಿದೆ. ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಬಿರುಗಾಳಿಯ ತೀವ್ರತೆಯಿಂದಾಗಿ ಧೂಳಿನ ಪ್ರಮಾಣ ಹೆಚ್ಚಾಗಿದ್ದು, ವಾಯು ಗುಣಮಟ್ಟ ತುಸು ಕುಸಿದಿದೆ.

  • ಧಾರವಾಡ: 114 (ಕಳಪೆ – Poor): ಇಲ್ಲಿ ಧೂಳಿನ ಕಣಗಳ ಪ್ರಮಾಣ ಹೆಚ್ಚಾಗಿದ್ದು, ಉಸಿರಾಟದ ತೊಂದರೆ ಇರುವವರು ಎಚ್ಚರ ವಹಿಸಬೇಕು.
  • ಮಡಿಕೇರಿ: 79 (ಸಾಧಾರಣ)
  • ಹುಬ್ಬಳ್ಳಿ: 77 (ಸಾಧಾರಣ)
  • ಶಿವಮೊಗ್ಗ: 75 (ಸಾಧಾರಣ)
  • ಮೈಸೂರು: 66 (ಸಾಧಾರಣ)
  • ಬೆಳಗಾವಿ: 59 (ಸಾಧಾರಣ)
  • ಚಿಕ್ಕಬಳ್ಳಾಪುರ ಮತ್ತು ರಾಮನಗರ: 39 (ಅತ್ಯಂತ ಉತ್ತಮ)

ಒಟ್ಟಾರೆಯಾಗಿ ಹೇಳುವುದಾದರೆ, ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ವಾಯು ಗುಣಮಟ್ಟ ಅತ್ಯುತ್ತಮವಾಗಿದ್ದು, ಬಯಲುಸೀಮೆ ಹಾಗೂ ಒಳನಾಡಿನ ನಗರಗಳಲ್ಲಿ ಸಾಧಾರಣ ಮಟ್ಟದ ವಾತಾವರಣವಿದೆ. ಧೂಳಿನ ಅಲರ್ಜಿ ಇರುವವರು ಧಾರವಾಡ ಮತ್ತು ಹುಬ್ಬಳ್ಳಿ ಭಾಗಗಳಲ್ಲಿ ಸಂಚರಿಸುವಾಗ ಮಾಸ್ಕ್ ಧರಿಸುವುದು ಸೂಕ್ತ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

300 ಕೋಟಿ ಗಳಿಸಿದ ಮೇಲೆ ‘ಕರುಪ್ಪು’ ವಿವಾದ; ಸೂರ್ಯಗೆ ಅವಮಾನ

ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಕಾಲಿವುಡ್ ಸ್ಟಾರ್ ನಟ ಸೂರ್ಯ ಅಭಿನಯದ ‘ಕರುಪ್ಪು’ ಸಿನಿಮಾ (Karuppu Movie) ಈಗ ಹೊಸದೊಂದು ವಿವಾದಕ್ಕೆ ಸಿಲುಕಿದೆ. ಚಿತ್ರದ ನಿರ್ದೇಶಕ ಹಾಗೂ ಎಡಿಟರ್ ನೀಡಿದ ಕೆಲವು ಹೇಳಿಕೆಗಳು ಸೂರ್ಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ಶುರುವಾಗಿದೆ. ಈ ಬೆನ್ನಲ್ಲೇ ನಟ ಸೂರ್ಯ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ನಿಗೂಢ ಪೋಸ್ಟ್ ಒಂದು ಎಲ್ಲರ ಗಮನ ಸೆಳೆದಿದೆ.

ಏನಿದು ವಿವಾದ?:

‘ಕರುಪ್ಪು’ ಚಿತ್ರದ ಪ್ರಚಾರದ ವೇಳೆ ನಿರ್ದೇಶಕ ಆರ್‌ಜೆ ಬಾಲಾಜಿ ಮತ್ತು ಎಡಿಟರ್ ಆರ್. ಕಲೈವಾಣನ್ ಅವರು ನಟ ದಳಪತಿ ವಿಜಯ್ ಕುರಿತು ಆಡಿದ ಮಾತುಗಳೇ ಈ ವಿವಾದಕ್ಕೆ ಕಾರಣ. ‘ಈ ಚಿತ್ರದ ಕಥೆಯನ್ನು ಮೊದಲು ವಿಜಯ್ ಅವರಿಗೆ ಹೇಳಲಾಗಿತ್ತು. ಆದರೆ ಕೆಲವು ಕಾರಣಗಳಿಂದ ಅವರು ನಟಿಸಲು ಸಾಧ್ಯವಾಗಲಿಲ್ಲ’ ಎಂದು ಬಾಲಾಜಿ ಹೇಳಿದ್ದರು.

ಅಷ್ಟೇ ಅಲ್ಲದೆ, ಇತ್ತೀಚೆಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ವಿಜಯ್ ಅವರನ್ನು ಭೇಟಿಯಾದ ಫೋಟೋ ಹಂಚಿಕೊಂಡ ಬಾಲಾಜಿ, “ಕರಪ್ಪು ಚಿತ್ರವನ್ನು ಮೊದಲಿಗೆ ಶುರು ಮಾಡಿದ ವ್ಯಕ್ತಿ’ ಎಂದು ಬರೆದುಕೊಂಡಿದ್ದರು. ಇದು ಸೂರ್ಯ ಅಭಿಮಾನಿಗಳನ್ನು ಕೆರಳಿಸಿತು. ಸಿನಿಮಾ ಗೆದ್ದ ಮೇಲೆ ಸೂರ್ಯ ಅವರ ಶ್ರಮವನ್ನು ನಿರ್ಲಕ್ಷಿಸಿ, ವಿಜಯ್ ಅವರಿಗೆ ಕ್ರೆಡಿಟ್ ಕೊಡಲಾಗುತ್ತಿದೆ ಎಂದು ಫ್ಯಾನ್ಸ್ ಆಕ್ರೋಶ ಹೊರಹಾಕಿದರು.

ಇದರ ಬೆನ್ನಲ್ಲೇ ಚಿತ್ರದ ಎಡಿಟರ್ ಕಲೈವಾಣನ್, ‘ಒಂದು ವೇಳೆ ಈ ಸಿನಿಮಾದಲ್ಲಿ ವಿಜಯ್ ನಟಿಸಿದ್ದರೆ, ಅವರ ಸ್ಟಾರ್‌ಡಮ್‌ಗೆ ತಕ್ಕಂತೆ ದೃಶ್ಯಗಳು ಮತ್ತಷ್ಟು ಬ್ಲಾಸ್ಟಿಂಗ್ ಆಗಿರುತ್ತಿದ್ದವು’ ಎಂದು ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದರು. ಸೂರ್ಯ ನಟಿಸಿ ಸಿನಿಮಾ ಸೂಪರ್ ಹಿಟ್ ಆಗಿರುವಾಗ ಈ ರೀತಿಯ ಹೋಲಿಕೆ ಮಾಡಿದ್ದು ಅಭಿಮಾನಿಗಳ ಕೋಪವನ್ನು ಮತ್ತಷ್ಟು ಹೆಚ್ಚಿಸಿತು.

ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಎಡಿಟರ್ ಕಲೈವಾಣನ್ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗ ಕ್ಷಮೆ ಯಾಚಿಸಿದ್ದಾರೆ. ‘ಸೂರ್ಯ ಅಣ್ಣನ ಅಭಿಮಾನಿಗಳಿಗೆ ನಿಜಕ್ಕೂ ಕ್ಷಮೆ ಕೇಳುತ್ತೇನೆ. ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಬಳಸಿದ ಪದಗಳು ನನ್ನದೇ ತಪ್ಪು. ಸೂರ್ಯ ಅಣ್ಣನಿಗೆ ನಾನು ಯಾವಾಗಲೂ ಕೃತಜ್ಞನಾಗಿರುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಸೂರ್ಯ ಪೋಸ್ಟ್‌ನಲ್ಲಿ ಏನಿದೆ?

ಈ ಎಲ್ಲ ಬೆಳವಣಿಗೆಗಳ ನಡುವೆ ನಟ ಸೂರ್ಯ ಯಾರ ಹೆಸರನ್ನೂ ಉಲ್ಲೇಖಿಸದೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಒಂದು ಸಣ್ಣ ಸಂದೇಶ ಹಂಚಿಕೊಂಡಿದ್ದಾರೆ. ‘ಪ್ರೀತಿಯಿಂದ ಮುನ್ನಡೆಯಿರಿ. ದಯೆ ಇರಲಿ. ಉದಾರವಾಗಿರಿ’ ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳಿಗೆ ಶಾಂತವಾಗಿರುವಂತೆ ಸೂಚಿಸಲು ಸೂರ್ಯ ಈ ಪೋಸ್ಟ್ ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: ‘ಕರುಪ್ಪು’ ಸಿನಿಮಾ ಗೆದ್ದ ಖುಷಿಯಲ್ಲಿ ತಂಡದವರಿಗೆ ಕಾರು ಗಿಫ್ಟ್ ಕೊಟ್ಟ ನಟ ಸೂರ್ಯ

₹300 ಕೋಟಿ ಕ್ಲಬ್ ಸೇರಿದ ‘ಕರುಪ್ಪು’

ವಿವಾದಗಳು ಏನೇ ಇದ್ದರೂ ‘ಕರುಪ್ಪು’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಚಿತ್ರತಂಡದ ಅಧಿಕೃತ ಮಾಹಿತಿ ಪ್ರಕಾರ, ಸಿನಿಮಾ ಈಗಾಗಲೇ ವಿಶ್ವಾದ್ಯಂತ ಬರೋಬ್ಬರಿ ₹300 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಮೂಲಕ ಸೂರ್ಯ ಅವರ ಕೆರಿಯರ್‌ನಲ್ಲೇ ಅತಿ ದೊಡ್ಡ ಹಿಟ್ ಚಿತ್ರಗಳ ಸಾಲಿಗೆ ‘ಕರುಪ್ಪು’ ಸೇರ್ಪಡೆಯಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Daily Devotional: ಮನೆ ಗೋಡೆಗಳಲ್ಲಿ ಈ ಗಿಡ ಚಿಗುರಿದರೆ ತಕ್ಷಣ ಕಿತ್ತು ಹಾಕಿ; ಇಲ್ಲದಿದ್ದರೆ ಸಂಕಷ್ಟ ತಪ್ಪಿದ್ದಲ್ಲ! – Kannada News

ಕಾಂಪೌಂಡ್ ಒಳಗೆ ಅಥವಾ ಚಾವಣಿ ಮೇಲೆ ಗಿಡImage Credit source: Pinterest

ಮನೆಯ ಗೋಡೆಗಳ ಮೇಲೆ, ಕಾಂಪೌಂಡ್ ಒಳಗೆ ಅಥವಾ ಚಾವಣಿಯ ಮೇಲೆ ತಾನಾಗಿಯೇ ಬೆಳೆಯುವ ಕೆಲವು ವೃಕ್ಷಗಳ ಬಗ್ಗೆ ಧರ್ಮಶಾಸ್ತ್ರ ಮತ್ತು ವಾಸ್ತುಶಾಸ್ತ್ರದಲ್ಲಿ ಉಲ್ಲೇಖವಿದೆ. ಎಲ್ಲ ಮರಗಳಲ್ಲ, ಆದರೆ ಅಶ್ವತ್ಥ (ಅರಳಿ), ಬೇವಿನ ಮತ್ತು ನಿಂಬೆ ಮರಗಳು ಇಂತಹ ಸ್ಥಳಗಳಲ್ಲಿ ಬೆಳೆದರೆ ಅವುಗಳ ಫಲ ಮತ್ತು ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಈ ವೃಕ್ಷಗಳು ಇಂತಹ ಅನಿರೀಕ್ಷಿತ ಸ್ಥಳಗಳಲ್ಲಿ ಬೆಳೆದಾಗ ಅದು ಶುಭವೋ ಅಶುಭವೋ ಎಂಬುದನ್ನು ಅರಿಯಬೇಕು. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಅಶ್ವತ್ಥ ವೃಕ್ಷವು ಬಹಳ ಪವಿತ್ರವೆಂದು ಪೂಜಿಸಲ್ಪಡುತ್ತದೆ. ಆದರೆ, ಇದೇ ಅಶ್ವತ್ಥ ವೃಕ್ಷ ವಾಸ್ತು ಪ್ರಕಾರ ಮನೆಯ ಗೋಡೆ, ಚಾವಣಿ ಅಥವಾ ಕಾಂಪೌಂಡ್ ಮೇಲೆ ತಾನಾಗಿಯೇ ಬೆಳೆದರೆ, ಅದನ್ನು ಶುಭಸೂಚಕವೆಂದು ಪರಿಗಣಿಸಲಾಗುವುದಿಲ್ಲ. ನಾವು ಹಳೆಯ ಮನೆಗಳ ಬಳಿ, ಬಿದ್ದುಹೋದ ಮನೆಗಳ ಗೋಡೆಗಳಲ್ಲಿ, ಅಥವಾ ಕಾಂಪೌಂಡ್ ಒಳಗೆ ಅರಳಿಗಿಡ ಬೆಳೆದಿರುವುದನ್ನು ಅನೇಕ ಬಾರಿ ಗಮನಿಸಿರುತ್ತೇವೆ. ನಮ್ಮ ನಂಬಿಕೆಗಳ ಪ್ರಕಾರ, ಇಂತಹ ಸ್ಥಳಗಳಲ್ಲಿ ಅರಳಿಗಿಡ ಬೆಳೆದರೆ, ಆ ವೃಕ್ಷಕ್ಕೆ ಯಾವುದೋ ಒಂದು ಸಮಯದಲ್ಲಿ ದೇವರ ಲಹರಿಗಳು ಅಥವಾ ಅಂಶಗಳು ಆವಾಹನೆ ಆಗುತ್ತವೆ. ಸಂಸಾರಿಗಳಾದ ನಾವು, ಅಂತಹ ಪ್ರಬಲ ಶಕ್ತಿಯನ್ನು ಸದಾ ಪೂಜೆ, ಶುದ್ಧತೆ ಮತ್ತು ಆಚರಣೆಗಳ ಮೂಲಕ ತಡೆದುಕೊಳ್ಳುವುದು ಸಾಮಾನ್ಯ ಜೀವನದಲ್ಲಿ ಕಷ್ಟವಾಗುತ್ತದೆ.

ಇಂತಹ ಪರಿಸ್ಥಿತಿಯಲ್ಲಿ ಏನಾಗಬಹುದು?

ಮನೆಯಲ್ಲಿ ಹಣದ ಹರಿವಿಗೆ ಅಡ್ಡಿಯಾಗಬಹುದು, ಕೆಲಸಕಾರ್ಯಗಳು ಸ್ಥಗಿತಗೊಳ್ಳಬಹುದು, ಕುಟುಂಬದಲ್ಲಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು, ಭಿನ್ನಾಭಿಪ್ರಾಯಗಳು ಮತ್ತು ಕೋಪತಾಪಗಳು ಹೆಚ್ಚಾಗಬಹುದು. ಮನೆ ಬಾಡಿಗೆಗೆ ನೀಡಲು ಅಥವಾ ಮಾರಾಟ ಮಾಡಲು ಕಷ್ಟವಾಗಬಹುದು, ಯಾಕೆಂದರೆ ಅನೇಕರಿಗೆ ಈ ನಂಬಿಕೆಗಳ ಬಗ್ಗೆ ಅರಿವಿರುತ್ತದೆ. ನಾವು ಎಷ್ಟೋ ಬಾರಿ ಈ ಮನೆ ತುಂಬಾ ಚೆನ್ನಾಗಿದೆ, ಆದರೆ ಯಾಕೋ ತಗೊಳೋಕೆ ಆಗ್ತಾ ಇಲ್ಲ ಎಂಬ ಮಾತುಗಳನ್ನು ಕೇಳಿರುತ್ತೇವೆ. ಇದೇ ರೀತಿ ಬೇವಿನ ಮರ ಅಥವಾ ನಿಂಬೆ ಮರ ಕೂಡ ಮನೆಯ ಗೋಡೆ, ಚಾವಣಿ ಅಥವಾ ಕಾಂಪೌಂಡ್ ಮೇಲೆ ಬೆಳೆದರೆ ಅವು ಕೂಡ ಅಷ್ಟೇ ಶುಭ ಫಲಗಳನ್ನು ನೀಡುವುದಿಲ್ಲ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಇದಕ್ಕೆ ಪರಿಹಾರವೇನು?

ಈ ರೀತಿ ಮರಗಳು ಮನೆಯ ರಚನೆಗಳಿಗೆ ಅಂಟಿಕೊಂಡು ಬೆಳೆದಾಗ, ಅವುಗಳಿಗೆ ಯೋಗ್ಯವಾದ ಪೂಜೆಗಳನ್ನು ಮಾಡಿಸಿ, ನಂತರ ಯಾರ ಕೈಯಲ್ಲಾದರೂ ಅವುಗಳನ್ನು ಎಚ್ಚರಿಕೆಯಿಂದ ತೆಗೆಸಿ, ಬೇರೆ ದೇವಸ್ಥಾನಗಳ ಆವರಣದಲ್ಲಿ ಅಥವಾ ಸೂಕ್ತವಾದ ಪವಿತ್ರ ಸ್ಥಳಗಳಲ್ಲಿ ನೆಡಿಸಬೇಕು. ಹೀಗೆ ಮಾಡಿದರೆ ಅವುಗಳು ಶುಭ ಫಲಗಳನ್ನು ನೀಡುತ್ತವೆ. ಒಂದು ವೇಳೆ ಅವುಗಳನ್ನು ಹಾಗೆಯೇ ನಿರ್ಲಕ್ಷಿಸಿದರೆ, ಆ ಕುಟುಂಬದಲ್ಲಿ ಕಷ್ಟದ ಪರಿಸ್ಥಿತಿಗಳು ಎದುರಾಗಬಹುದು. ಅಚಾನಕ್ ಆಗಿ ಆ ಮರವು ಮುರಿದುಬಿದ್ದರೆ, ಅದನ್ನು ಬೇರೆ ಕಡೆ ನೆಡಲು ಸಾಧ್ಯವಾಗುವುದಿಲ್ಲ. ಅಂತಹ ಸಮಯದಲ್ಲಿ ಅದನ್ನು ನೀರಿಗೆ ಅರ್ಪಿಸುವುದು ಅತ್ಯುತ್ತಮ ಪರಿಹಾರ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಲುಫ್ಥಾನ್ಸಾ ಬೋಯಿಂಗ್ ವಿಮಾನದ ಲ್ಯಾಂಡಿಂಗ್ ಗೇರ್ ಕುಸಿತ, ಹಲವರಿಗೆ ಗಾಯ – Kannada News

ಬರ್ಲಿನ್, ಜೂನ್ 05: ಲುಫ್ಥಾನ್ಸಾ ಬೋಯಿಂಗ್ ವಿಮಾನ(Flight)ದ  ಲ್ಯಾಂಡಿಂಗ್ ಗೇರ್ ಕುಸಿದುಬಿದ್ದ ಪರಿಣಾಮ ಹಲವರು ಗಾಯಗೊಂಡಿರುವ ಘಟನೆ ಜರ್ಮನಿಯ ಫ್ರಾಂಕ್​ಫರ್ಟ್​ ವಿಮಾನ ನಿಲ್ದಾಣದಲ್ಲಿ ನಡೆದಿದೆ. ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಏರ್‌ಲೈನ್ಸ್ ಸಿಬ್ಬಂದಿ ತೋರಿದ ಮುನ್ನೆಚ್ಚರಿಕೆ ಕ್ರಮಗಳಿಂದಾಗಿ ಯಾವುದೇ ಪ್ರಯಾಣಿಕರಿಗೆ ತೊಂದರೆಯಾಗದಂತೆ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಲಾಗಿದೆ. ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದ ನಿರ್ಗಮನ ದ್ವಾರದಲ್ಲಿ ಲಾಸ್ ಏಂಜಲೀಸ್‌ಗೆ ಹಾರಲು ಸಜ್ಜಾಗಿ ನಿಂತಿದ್ದ ಬೋಯಿಂಗ್ 787-9 ಡ್ರೀಮ್‌ಲೈನರ್ ವಿಮಾನವು ಪಾರ್ಕಿಂಗ್ ಮೋಡ್‌ನಲ್ಲಿದ್ದಾಗ ಈ ಘಟನೆ ನಡೆದಿದೆ.

ವಿಮಾನಕ್ಕೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಏಣಿಗಳನ್ನು ಜೋಡಿಸಲಾಗಿತ್ತಾದರೂ, ಅದೃಷ್ಟವಶಾತ್ ಬೋರ್ಡಿಂಗ್ ಇನ್ನೂ ಆರಂಭವಾಗಿರಲಿಲ್ಲ. ಇದರಿಂದಾಗಿ ವಿಮಾನದೊಳಗೆ ಯಾವುದೇ ಪ್ರಯಾಣಿಕರು ಇರಲಿಲ್ಲ ಮತ್ತು ಎಲ್ಲರೂ ಸಂಪೂರ್ಣ ಸುರಕ್ಷಿತವಾಗಿದ್ದಾರೆ.

ವಿಮಾನದ ಮುಂಭಾಗದ ಚಕ್ರ (Nose landing gear) ತಾಂತ್ರಿಕ ಕಾರಣದಿಂದ ಒಳಮುಖವಾಗಿ ಸರಿದಿದ್ದರಿಂದ ವಿಮಾನದ ಮುಂಭಾಗ ನೆಲಕ್ಕೆ ವಾಲಿತ್ತು. ಈ ಹಠಾತ್ ಕಂಪನದಿಂದಾಗಿ ವಿಮಾನದ ಒಳಗೆ ಹಾಗೂ ಹೊರಗೆ ಕರ್ತವ್ಯದಲ್ಲಿದ್ದ ಲುಫ್ಥಾನ್ಸ ಸಂಸ್ಥೆಯ ಕೆಲವು ನೆಲದ ಸಿಬ್ಬಂದಿಗೆ(Ground staff) ಸಣ್ಣಪುಟ್ಟ ಗಾಯಗಳಾಗಿವೆ. ಏರ್‌ಲೈನ್ಸ್ ಮಂಡಳಿಯು ವಿಳಂಬ ಮಾಡದೆ ಗಾಯಗೊಂಡ ಉದ್ಯೋಗಿಗಳನ್ನು ತಕ್ಷಣವೇ ಸುಸಜ್ಜಿತ ಆಸ್ಪತ್ರೆಗೆ ದಾಖಲಿಸಿದ್ದು, ಅವರಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ.

ವಿಡಿಯೋ

ಘಟನೆ ಸಂಭವಿಸಿದ ತಕ್ಷಣವೇ ವಾಯುಯಾನ ಸುರಕ್ಷತಾ ಅಧಿಕಾರಿಗಳು ಹಾಗೂ ಲುಫ್ಥಾನ್ಸ ಏರ್‌ಲೈನ್ಸ್ ಜಂಟಿಯಾಗಿ ಉನ್ನತ ಮಟ್ಟದ ಪರಿಶೀಲನೆಯನ್ನು ಕೈಗೆತ್ತಿಕೊಂಡಿವೆ. ಭವಿಷ್ಯದಲ್ಲಿ ಇಂತಹ ತಾಂತ್ರಿಕ ದೋಷಗಳು ಮರುಕಳಿಸದಂತೆ ತಡೆಯಲು ಈ ನಿರ್ದಿಷ್ಟ ಬೋಯಿಂಗ್ 787-9 ಡ್ರೀಮ್‌ಲೈನರ್ ವಿಮಾನದ ಹಾರಾಟವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 7:42 am, Fri, 5 June 26

Source link

ಹೊಸ ಕಾರು ಖರೀದಿ ಮಾಡಿದ ಮಲ್ಲಮ್ಮ; ಅನೇಕರಿಗೆ ಮಾದರಿಯಾದ ಬಿಬ್ ಬಾಸ್ ಸ್ಪರ್ಧಿ – Kannada News

ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಹಾಗೂ ಬಿಗ್ ಬಾಸ್ ಖ್ಯಾತಿಯ ಮಲ್ಲಮ್ಮ ಅವರು (Mallama) ತಮ್ಮ ಸಾಧನೆಯ ಮುಕುಟಕ್ಕೆ ಮತ್ತೊಂದು ಹೊಸ ಗರಿ ಸೇರಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಅಪಾರ ಜನಪ್ರಿಯತೆ ಗಳಿಸಿ, ನಂತರ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಅವಕಾಶ ಪಡೆದರು. ಇದರ ಮೂಲಕ ಮನೆಮಾತಾಗಿರೋ ಮಲ್ಲಮ್ಮ ಈಗ ಹೊಸ ಕಾರೊಂದನ್ನು ಖರೀದಿಸುವ ಮೂಲಕ ತಮ್ಮ ಹೊಸ ಯಶಸ್ಸನ್ನು ಸಂಭ್ರಮಿಸಿದ್ದಾರೆ.

ಈ ಸಂತಸದ ಕ್ಷಣವನ್ನು ಮಲ್ಲಮ್ಮ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರು ಖರೀದಿ ಮಾಡಿದ್ದು ಮಾರುತಿ ಸುಜುಕಿ ಡಿಸೈರ್ ಟೂರ್ ಕಾರು. ಹೊಸ ಕಾರಿನ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಮಲ್ಲಮ್ಮ ಅವರು ತಮ್ಮ ಕುಟುಂಬಸ್ಥರು ಹಾಗೂ ಆಪ್ತರೊಂದಿಗೆ ಸೇರಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಕೇಕ್ ಕತ್ತರಿಸುವ ಮೂಲಕ ಕಾರನ್ನು ಖರೀದಿ ಮಾಡಿದ್ದಾರೆ.
ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದು, ಇಂದು ಸ್ವಂತ ಪರಿಶ್ರಮದಿಂದ ಹೊಸ ಕಾರು ಖರೀದಿಸಿರುವ ಅವರ ಈ ಸಾಧನೆಗೆ ಅಭಿಮಾನಿಗಳಿಂದ ಹಾಗೂ ಸೋಶಿಯಲ್ ಮೀಡಿಯಾ ಬಳಕೆದಾರರಿಂದ ವ್ಯಾಪಕ ಪ್ರಶಂಸೆ ಮತ್ತು ಹಾರೈಕೆಗಳು ಹರಿದುಬರುತ್ತಿವೆ.

ಮಲ್ಲಮ್ಮ ಅವರ ಲೈಫ್ ಜರ್ನಿ ನಿಜಕ್ಕೂ ಅನೇಕರಿಗೆ ಪ್ರೇರಣೆಯಾಗಿದೆ. ಆರಂಭದಲ್ಲಿ ಇನ್‌ಸ್ಟಾಗ್ರಾಮ್, ಯೂಟ್ಯೂಬ್‌ನಂತಹ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ತಮ್ಮ ವಿಶಿಷ್ಟ ಕಂಟೆಂಟ್, ಹಳ್ಳಿ ಸೊಗಡಿನ ಮಾತುಗಳು ಹಾಗೂ ರೀಲ್ಸ್‌ಗಳ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದರು. ಇವರ ಜನಪ್ರಿಯತೆಯನ್ನು ಗುರುತಿಸಿ ಬಿಗ್ ಬಾಸ್ ಶೋಗೆ ಸ್ಪರ್ಧಿಯಾಗಿ ಬರುವ ದೊಡ್ಡ ಅವಕಾಶ ಸಿಕ್ಕಿತು. ಬಿಗ್ ಬಾಸ್ ಮನೆಯಲ್ಲಿ ತಮ್ಮ ನೈಜ ವ್ಯಕ್ತಿತ್ವ, ಮುಗ್ಧತೆ ಹಾಗೂ ಚುರುಕಾದ ಆಟದ ಮೂಲಕ ಕನ್ನಡಿಗರ ಮನ ಗೆದ್ದು ದೊಡ್ಡ ಮಟ್ಟದ ಹೆಸರು ಮಾಡಿದರು.

ಇದನ್ನೂ ಓದಿ: ‘ವಿನಾಶ ಕಾಲೆ’ ಸಿನಿಮಾಗೆ ಸಾಥ್ ನೀಡಿದ ಮಲ್ಲಮ್ಮ, ಡಾಗ್ ಸತೀಶ್, ಕರಿಬಸಪ್ಪ

ಬಿಗ್ ಬಾಸ್‌ನಿಂದ ಹೊರಬಂದ ನಂತರವೂ ತಮ್ಮ ಕ್ರಿಯೇಟಿವಿಟಿಯನ್ನು ಮುಂದುವರಿಸಿರುವ ಮಲ್ಲಮ್ಮ, ಇಂದು ಆರ್ಥಿಕವಾಗಿ ಸ್ವಾವಲಂಬಿಯಾಗಿ ಈ ಮಟ್ಟಕ್ಕೆ ಬೆಳೆದು ನಿಂತಿರುವುದು ಅವರ ಕಠಿಣ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿದೆ. ‘ಕನಸುಗಳನ್ನು ಬೆನ್ನಟ್ಟಿದರೆ ಯಶಸ್ಸು ಖಂಡಿತ ಸಿಗುತ್ತದೆ’ ಎಂಬುದಕ್ಕೆ ಮಲ್ಲಮ್ಮ ಅವರ ಈ ಹೊಸ ಕಾರು ಖರೀದಿಯ ಕ್ಷಣವೇ ಸಾಕ್ಷಿಯಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Karnataka Weather Forecast: ರಾಜ್ಯದ ಹಲವೆಡೆ ವರುಣನ ಅಬ್ಬರ, ವಿವಿಧ ಜಿಲ್ಲೆಗಳಿಗೆ ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಣೆ! – Kannada News

ರಾಜ್ಯದ ಹಲವೆಡೆ ವರುಣನ ಅಬ್ಬರImage Credit source: telugu.hindustantimes.com

ಬೆಂಗಳೂರು, ಜೂನ್ 05: ರಾಜ್ಯದಲ್ಲಿ ಮುಂಗಾರು (Weather)ಮಳೆ ಚುರುಕುಗೊಂಡಿದ್ದು, ಮುಂದಿನ ಕೆಲವು ದಿನಗಳ ಕಾಲ ಕರ್ನಾಟಕದಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಪ್ರಬಲ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಹವಾಮಾನ ಇಲಾಖೆಯು 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಜಾರಿಗೊಳಿಸಿದೆ.

ಮುಖ್ಯಾಂಶಗಳು

  • ಕರ್ನಾಟಕದ ಏಳು ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ ಆರೆಂಜ್ ಅಲರ್ಟ್ ಘೋಷಣೆ.
  • ಕರಾವಳಿ ಜಿಲ್ಲೆಗಳಲ್ಲಿ ಅತ್ಯಂತ ಭಾರೀ ಮಳೆ ಮುನ್ಸೂಚನೆ; ಮೀನುಗಾರರಿಗೆ ಎಚ್ಚರಿಕೆ.
  • ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಬಿರುಗಾಳಿ ಸಹಿತ ಸಾಧಾರಣ ಮಳೆ.

ಕರಾವಳಿಯಲ್ಲಿ ವರುಣನ ಅಬ್ಬರ!

ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅತ್ಯಂತ ಭಾರೀ ಮಳೆಯಾಗುವ (115.6mm ನಿಂದ 204.4mm ವರೆಗೆ) ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಈ ಮೂರೂ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಸಮುದ್ರ ತೀರದಲ್ಲಿ ಗಾಳಿಯ ವೇಗ ಹೆಚ್ಚಿರುವುದರಿಂದ ಮೀನುಗಾರರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.

ಬಿರುಗಾಳಿ ಸಹಿತ ಮಳೆ

ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಕಲಬುರಗಿ ಮತ್ತು ವಿಜಯಾಪುರ ಜಿಲ್ಲೆಗಳಿಗೂ ಆರೆಂಜ್ ಅಲರ್ಟ್ ನೀಡಲಾಗಿದ್ದು, ಇಲ್ಲಿ ಗಂಟೆಗೆ 40-50 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ. ಇದರೊಂದಿಗೆ ಧಾರವಾಡ, ಗದಗ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು, ಯೆಲ್ಲೋ ಅಲರ್ಟ್ ಪ್ರಕಟಿಸಲಾಗಿದೆ. ಇನ್ನುಳಿದಂತೆ ಬಿದರ್, ಹಾವೇರಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಬೆಂಗಳೂರಿಗೂ ಮಳೆ ಮುನ್ಸೂಚನೆ

ದಕ್ಷಿಣ ಒಳನಾಡಿನ ಬಳ್ಳಾರಿ, ವಿಜಯನಗರ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಭಾರೀ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದ್ದು, ಯೆಲ್ಲೋ ಅಲರ್ಟ್ ಜಾರಿಯಲ್ಲಿದೆ. ಇನ್ನುಳಿದಂತೆ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಮತ್ತು ತುಮಕೂರು ಜಿಲ್ಲೆಗಳ ಹಲವೆಡೆ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version