ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು? – Kannada News | Film Chamber new president Jayamala talks about her plans

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (Karnataka film chamber of commerce) ಅಧ್ಯಕ್ಷ ಸೇರಿದಂತೆ ಇನ್ನೂ ಕೆಲವು ಸ್ಥಾನಗಳಿಗೆ ನಿನ್ನೆ (ಜನವರಿ 31) ಮತದಾನ ನಡೆದಿದ್ದು, ಹಿರಿಯ ನಟಿ ಜಯಮಾಲ ಅವರು ನೂತನ ಅಧ್ಯಕ್ಷೆಯಾಗಿ ಆಯ್ಕೆ ಆಗಿದ್ದಾರೆ. ಜಯಮಾಲ ಅವರು ಫಿಲಂ ಚೇಂಬರ್​​ನ ಮೊದಲ ಮಹಿಳಾ ಅಧ್ಯಕ್ಷೆ ಆಗಿದ್ದು, ಎರಡನೇ ಬಾರಿ ಅವರು ಫಿಲಂ ಚೇಂಬರ್​​ನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಿದ್ದಾರೆ. ಇಂದು ಪದಗ್ರಹಣ ಮಾಡಿದ ಜಯಮಾಲ ಅವರು ಟಿವಿ9 ಜೊತೆಗೆ ಮಾತನಾಡಿದ್ದು, ತಮ್ಮ ಮುಂದಿನ ಯೋಜನೆಗಳು, ತರಲಿರುವ ಬದಲಾವಣೆ ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ತಾರಕಕ್ಕೇರಿದ ಯಶ್ ತಾಯಿ ಸೈಟ್ ವಿವಾದ: ಕೈಕೈ ಮಿಲಾಯಿಸುವ ಹಂತಕ್ಕೆ, ಏನಿದು ತಗಾದೆ? – Kannada News | Yash’s Mother Property Dispute Escalates in Hassan: Pushpa, Devaraj Clash Over Land

ಹಾಸನ, ಫೆಬ್ರವರಿ 01: ನಟ ಯಶ್ ತಾಯಿ ಪುಷ್ಪಾ (Pushpa) ಹಾಗೂ ದೇವರಾಜ್ (Devaraj) ಎಂಬುವವರ ನಡುವೆ ನಡೆಯುತ್ತಿರುವ ಸೈಟ್ ಸಂಘರ್ಷ ಇಂದು ವಿಕೋಪಕ್ಕೆ ತಿರುಗಿತ್ತು. ತಮ್ಮ ನಿವೇಶನದಲ್ಲಿ ಹಾಕಿದ್ದ ಕಾಂಪೌಂಡ್ ತೆರವು ಮಾಡಲಾಗಿದೆ ಎಂದು ಕಾಂಪೌಂಡ್ ಮರು ನಿರ್ಮಾಣ ಮಾಡಲು ಮುಂದಾಗಿದ್ದ ಯಶ್ ತಾಯಿ ಜೊತೆಗೆ ದೇವರಾಜ್ ಜಟಾಪಟಿಗಿಳಿದಿದ್ದು, ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದು, ಸೈಟ್ ಫೈಟ್ ಮತ್ತೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಆರು ವರ್ಷಗಳ ಹಿಂದೆ ನಾನು ಖರೀದಿಸಿದ ಜಾಗ ಎಂದು ಪುಷ್ಪ ಹೇಳುತ್ತಿದ್ದರೆ 1965ರಿಂದ ಸ್ವಾಧೀನದಲ್ಲಿರುವ ಜಾಗ ನಮ್ಮದು ಎನ್ನುತ್ತಿದ್ದಾರೆ ದೇವರಾಜ್. ನಿವೇಶನ ಮಾಲೀಕತ್ವದ ವಿಚಾರ ಮತ್ತೆ ಬೀದಿ ರಂಪಕ್ಕೆ ಕಾರಣವಾಗಿದ್ದು, ಮೂಲ ಮಾಲೀಕರು ಯಾರು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

ಸೈಟ್​​ ಸಂಘರ್ಷ

ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಹಾಗೂ ನಿವೇಶನದ ಜಿಪಿಎ ಹೋಲ್ಡರ್ ಎಂದು ಹೇಳಿಕೊಂಡಿರುವ ದೇವರಾಜ್ ನಡುವಿನ ಸಂಘರ್ಷ ಇಂದು ಬೇರೆಯದೇ ಹಂತಕ್ಕೆ ಹೋಗಿತ್ತು. ನನ್ನ ಅನುಮತಿ ಇಲ್ಲದೆ ನನಗೆ ನೊಟೀಸ್ ನೀಡದೆ ನಮ್ಮ ನಿವೇಶನದ ಕಾಂಪೌಂಡ್ ಕೆಡವಲಾಗಿದೆ ಎಂದು ಆರೋಪಿಸುತ್ತಿರುವ ಯಶ್ ತಾಯಿ ಪುಷ್ಪಾ, ಇಂದು ಕಾರ್ಮಿಕರ ನೆರವಿನಿಂದ ಮತ್ತೆ ಕಾಂಪೌಂಡ್ ನಿರ್ಮಾಣಕ್ಕೆ ಮುಂದಾಗಿದ್ದರು.

ಇದನ್ನೂ ಓದಿ: ಭೂ ಒತ್ತುವರಿ ಆರೋಪ: ಯಶ್ ತಾಯಿ ಪುಷ್ಪಾ ಮನೆ ಕಾಂಪೌಂಡ್ ಧ್ವಂಸ

ಈ ವಿಚಾರ ತಿಳಿದು ಸ್ಥಳಕ್ಕೆ ಓಡೋಡಿ ಬಂದ ದೇವರಾಜ್ ಹಾಗೂ ಅವರ ಕಡೆಯವರು ಕೆಲಸಕ್ಕೆ ಅಡ್ಡಿ ಪಡಿಸಿದರು. ಈ ವೇಳೆ ಅಕ್ಷರಶಃ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪರಸ್ಪರ ಏಕ ವಚನದಲ್ಲೇ ಪುಷ್ಪಾ ಹಾಗೂ ದೇವರಾಜ್ ನಡುವೆ ಮಾತಿನ ಚಕಮಕಿ ನಡೆಯಿತು. ಸೈಟ್ ಮಾಲಿಕ ನಾನು ಯಾವುದೇ ಕಾರಣಕ್ಕೆ ಕಾಂಪೌಂಡ್ ನಿರ್ಮಾಣ ಮಾಡಕೂಡದು ಎಂದು ದೇವರಾಜ್ ಅಡ್ಡಿ ಪಡಿಸಿದರು. ನನ್ನ ಸೈಟ್​ನಲ್ಲಿ ಕೆಲಸ ಮಾಡುವುದನ್ನು ತಡೆಯುವುದಕ್ಕೆ ನೀನ್ಯಾರು ಎಂದು ತಮ್ಮದೇ ಸ್ಟೈಲ್​​ನಲ್ಲಿ ಅವಾಜ್​​​ ಹಾಕಿದ ಪುಷ್ಪಾ, ಇದು ತಮ್ಮ ಸೈಟ್ ಎಂದು ವಾದಿಸಿದರು. ಆದರೆ ಪರಿಸ್ತಿತಿ ಕೈ ಮೀರುವ ಮೊದಲೇ ಸ್ಥಳಕ್ಕೆ ಆಗಮಿಸಿದ ಬಡಾವಣೆ ಠಾಣೆ ಪೊಲೀಸರು ಎರಡು ಕಡೆಯವರಿಗೆ ವಾರ್ನ್ ಮಾಡಿ ಠಾಣೆಗೆ ಬರುವಂತೆ ಸೂಚನೆ ಬೆನ್ನಲ್ಲೇ ಇದೀಗ ಪರಿಸ್ಥಿತಿ ತಿಳಿಯಾಗಿದೆ.

ಕಾನೂನು ಬದ್ಧವಾಗಿ ನಾವೇ ಮಾಲೀಕರು: ದೇವರಾಜ್

ಈ ನಿವೇಶನ 1965ರಿಂದ ಕೂಡ ಲಕ್ಷಮ್ಮ ಅವರಿಗೆ ಸೇರಿದ್ದು, ಅವರು ತನಗೆ ಜಿಪಿಎ ಮಾಡಿಕೊಟ್ಟಿದ್ದ ಕಾರಣ ತಾವು ಕೇಸ್ ಹಾಕಿ ಈ ಪ್ರಕರಣದಲ್ಲಿ ಕೇಸ್ ತಮ್ಮಂತೆ ಆಗಿದೆ, ಹಾಗಾಗಿ ಇದು ತಮ್ಮದೇ ನಿವೇಶನ. ಯಶ್ ತಾಯಿ ವಿನಾಕಾರಣ ವಾದ ಮಾಡುತ್ತಿದ್ದಾರೆ ಎಂದು ಕಿಡಿಕಾರಿರುವ ದೇವರಾಜ್, ಯಾವುದೇ ಕಾರಣಕ್ಕೂ ಅಲ್ಲಿ ಮತ್ತೆ ಕಾಂಪೌಂಡ್ ಹಾಕಲು ನಾನು ಬಿಡುವುದಿಲ್ಲ. ನಮ್ಮನ್ನ ರೌಡಿಗಳು ಅಂತಾರೆ, ಅವರೇ ಬೇಕಾಬಿಟ್ಟು ವರ್ತನೆ ಮಾಡ್ತಾರೆ ಎಂದು ಕಿಡಿಕಾರಿರುವ ದೇವರಾಜ್, ಕಾನೂನು ಬದ್ಧವಾಗಿ ನಾವೇ ಮಾಲೀಕರು ಎಂದು ನಾವು ಸಾಬೀತು ಮಾಡಿದ್ದೇವೆ. ಅವರ ಬಳಿ ದಾಖಲೆ ಇದ್ದರೆ ಸಾಬೀತು ಮಾಡಲಿ ಎಂದಿದ್ದಾರೆ.

1965ರಲ್ಲಿ ಲಕ್ಷಮ್ಮ ಅವರು ಕರೀಗೌಡ ಎಂಬುವವರಿಂದ ಖರೀದಿ ಮಾಡಿದ ನಿವೇಶನವನ್ನು 2010ರಲ್ಲಿ ಒಮ್ಮೆ ಅಂಗವಿಕಲ ಸಂಸ್ಥೆಗೆ ದಾನ ಪತ್ರ ಬರೆದುಕೊಟ್ಟು ಅವರು ಬಳಕೆ ಮಾಡಿಕೊಳ್ಳದ ಕಾರಣ ಮತ್ತೆ ದಾನಪತ್ರ ರದ್ದು ಮಾಡಿಕೊಂಡು 2015ರಲ್ಲಿ ದಾನ ಪತ್ರ ರದ್ದು ಮಾಡಲಾಗಿದ್ದು, 2020ರಲ್ಲಿ ಲಕ್ಷ್ಮಮ್ಮ ಅವರು ದೇವರಾಜ್ ಅವರಿಗೆ ಜಿಪಿಎ ಮಾಡಿಕೊಟ್ಟಿರುವುದಾಗಿ ದೇವರಾಜ್ ಹೇಳುತ್ತಿದ್ದಾರೆ. ಈ ನಡುವೆ 2020ರ ಜನವರಿ 29ರಂದು ಪುಷ್ಪಾ ಅವರು ವೀಣಾ ಕೋಂ ಗಿರೀಶ್ ಎಂಬುವವರಿಂದ ತಮ್ಮ ಮನೆ ಸಮೀಪದ ಈ ನಿವೇಶನವನ್ನು ಖರೀದಿ ಮಾಡಿ ಆಗಲೇ ಕಾಂಪೌಂಡ್ ನಿರ್ಮಾಣ ಮಾಡಿದ್ದಾರೆ, ಆದರೆ ನಂತರ ಹಾಸನದ 4ನೇ ಜೆಎಂಎಫ್​ಸಿ ಕೋರ್ಟ್​ಗೆ ಕೇಸ್ ದಾಖಲು ಮಾಡಿದ್ದ ದೇವರಾಜ್, ಪುಷ್ಪ ಅವರನ್ನ ಪಾರ್ಟಿ ಮಾಡಿ ಕೇಸ್ ದಾಖಲು ಮಾಡಿದ್ದಾರೆ. ಆದರೆ ಪುಷ್ಪಾ ಅವರು ಕೋರ್ಟ್​ಗೆ ಹಾಜರಾಗಿಲ್ಲ ಎನ್ನುವ ಆಧಾರದ ಮೇಲೆ ಕೋರ್ಟ್​ನಲ್ಲಿ ಏಕಪಕ್ಷೀಯ ಡಿಕ್ರಿ ಆಗಿ ದೇವರಾಜ್​ ಮನವಿ ಮಾಡಿಕೊಂಡಂತೆ ಅವರು ದಾಖಲು ಮಾಡಿದ್ದ ಸ್ವತ್ತು ಅವರ ಮೂಲ ಮಾಲೀಕರಿಗೆ ಸೇರಿದ್ದೆಂದು ತೀರ್ಪುನೀಡಲಾಗಿದೆ.

ದೂರು ದಾಖಲಾದರೂ ಏಕೆ ಬಂಧಿಸಿಲ್ಲ ಎಂದ ಪುಷ್ಪಾ 

ಇಲ್ಲಿ ದೇವರಾಜ್ ಹೇಳುತ್ತಿರುವ ನಿವೇಶನಕ್ಕೂ ತಮ್ಮ ನಿವೇಶನಕ್ಕೂ ಸಂಬಂಧವೇ ಇಲ್ಲ ಎನ್ನುವುದು ಪುಷ್ಪಾ ಅವರ ವಾದ. ಅವರಿಗೆ ಐದು ಗುಂಟೆ ಜಮೀನು ಇರಬಹುದು, ಆದರೆ ನಮ್ಮದು 40X60 ಅಳತೆಯ ನಿವೇಶನ. ಇಲ್ಲಿ ಐದು ಗುಂಟೆ ಜಾಗ ಎಲ್ಲಿದೆ. ಪಕ್ಕದಲ್ಲಿ ಮತ್ತೊಂದು ಸೈಟ್ ಇದೆ. ಇನ್ನೊಂದು ಭಾಗದಲ್ಲಿ ನಮ್ಮ ಮನೆ ಇದೆ. ಇವರ ವಾದವೇ ತಪ್ಪಾಗಿದೆ ಎನ್ನುತ್ತಾರೆ.

ತಮ್ಮ ಜಾಗಕ್ಕೆ ಅತಿಕ್ರಮವಾಗಿ ಪ್ರವೇಶ ಮಾಡಿ ಕಾಂಪೌಂಡ್ ಕೆಡವಲಾಗಿದೆ. ಮನೆ ಬಳಿ ಬಂದು ಗಲಾಟೆ ಮಾಡಿದ ಬಗ್ಗೆ ದೂರು ದಾಖಲಾಗಿ ಕೇಸ್ ಆಗಿದೆ, ಆದರೂ ಏಕೆ ಯಾವ ಆರೋಪಿಗಳನ್ನು ಬಂಧಿಸಿಲ್ಲ. ಏಕೆ ಕಾಂಪೌಂಡ್​ ಕೆಡವಿದ ಜೆಸಿಬಿ ವಶಕ್ಕೆ ಪಡೆದಿಲ್ಲ ಎಂದು ಇಂದು ಕೂಡ ಪೊಲೀಸರನ್ನ ಪ್ರಶ್ನೆ ಮಾಡುತ್ತಿದ್ದಾರೆ. ಪುಷ್ಪಾ ಅವರು ಪೊಲೀಸರು ಠಾಣೆಗೆ ಕರೆದಿದ್ದರಿಂದ ಮಧ್ಯಾಹ್ನ 1-30ಕ್ಕೆ ಠಾಣೆಗೆ ದಾಖಲೆಗಳ ಸಮೇಪ ಬಂದು ಸುಮಾರು ಮೂರು ಗಂಟೆ ಕಾದು ಕುಳಿತಿದ್ದರೂ ಎದುರುದಾರರು ಹಾಜರಾಗಿಲ್ಲ. ಕ್ರಯ ಪತ್ರ, ಇ-ಸ್ವತ್ತು, ನಗರಸಭೆಯ ಖಾತೆ ಪತ್ರ, ಕಂದಾಯ ರಶೀದಿಗಳ ಜೊತೆಗೆ ಠಾಣೆಗೆ ಹಾಜರಾಗಿರುವ ಪುಷ್ಪಾ ಅವರು ತಮ್ಮ ಹಕ್ಕು ಸಾಬೀತು ಮಾಡಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಪುಷ್ಪಾ-ದೇವರಾಜ್ ಮಧ್ಯೆ ವಾಗ್ವಾದ

ಒಟ್ಟಿನಲ್ಲಿ ಇರುವ ಒಂದೇ ನಿವೇಶನಕ್ಕೆ ಇಬ್ಬಿಬ್ಬರು ತಾವು ಮಾಲೀಕರು ಎಂದು ಹಕ್ಕು ಪ್ರತಿಪಾದನೆಗೆ ಮುಂದಾಗಿರುವುದು ಪೊಲೀಸರಿಗೂ ಪ್ರಕರಣ ಕಗ್ಗಂಟಾಗಿದೆ. ಸೈಟ್ ಇವರದ್ದಾದರೆ ನಾವು ಖರೀದಿ ಮಾಡಿ ಆರು ವರ್ಷ ಆಗಿದೆ. ಆಗ ಎಲ್ಲಿಗೆ ಹೋಗಿದ್ದರು ಎನ್ನುವುದು ಪುಷ್ಪಾ ಅವರ ವಾದವಾದರೆ, ನಮ್ಮ ಸೈಟ್ ಅತಿಕ್ರಮಣ ಮಾಡಲಾಗಿದೆ ಹಾಗಾಗಿಯೇ ನಾವು ಕೋರ್ಟ್ ಮೂಲಕ ವಾಪಸ್ ಪಡೆದುಕೊಂಡಿದ್ದೇವೆ ಎನ್ನೋದು ದೇವರಾಜ್ ವಾದ. ನಾನಾ- ನೀನಾ ಎನ್ನುವ ಈ ಮಾಲೀಕತ್ವ ಜಟಾಪಟಿ ಇದೀಗ ಮತ್ತೆ ಠಾಣೆ ಮೆಟ್ಟಿಲೇರಿದ್ದು ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಜೊಕೊವಿಕ್ ಮಣಿಸಿ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಗೆದ್ದ ಕಾರ್ಲೋಸ್ ಅಲ್ಕರಾಝ್ – Kannada News | Carlos Alcaraz Wins Australian Open, Defeats Djokovic for First Title

ಆಸ್ಟ್ರೇಲಿಯನ್ ಓಪನ್ ಪುರುಷರ ಸಿಂಗಲ್ಸ್ ಕಿರೀಟ ಸ್ಪ್ಯಾನಿಷ್ ಟೆನಿಸ್ ಆಟಗಾರ ಕಾರ್ಲೋಸ್ ಅಲ್ಕರಾಝ್ ಮುಡಿಗೇರಿದೆ. ಇಂದು ನಡೆದ ಫೈನಲ್‌ನಲ್ಲಿ ಟೆನಿಸ್ ದಿಗ್ಗಜ ನೊವಾಕ್ ಜೊಕೊವಿಕ್ ಅವರನ್ನು ಎದುರಿಸಿದ್ದ ಅಲ್ಕರಾಝ್ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಗೆದ್ದ ಸಾಧನೆ ಮಾಡಿದ್ದಾರೆ. ಇತ್ತ 25 ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆಲ್ಲುವ ಇರಾದೆಯೊಂದಿಗೆ ಫೈನಲ್​ಗೆ ಲಗ್ಗೆ ಇಟ್ಟಿದ್ದ ನೊವಾಕ್ ಜೊಕೊವಿಕ್ ಸೋಲಿನ ನಿರಾಶೆ ಎದುರಿಸಬೇಕಾಯಿತು. ಇತ್ತ ಅಲ್ಕರಾಝ್ ಮೊದಲ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯಾಗಿದ್ದರೂ, ಈ ಹಿಂದೆ ಆರು ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಫೈನಲ್‌ನಲ್ಲಿ ಸೆರ್ಬಿಯಾದ ನೊವಾಕ್ ಜೊಕೊವಿಕ್ ಅವರನ್ನು 2-6, 6-2, 6-3, 6-4 ಅಂತರದಲ್ಲಿ ಸೋಲಿಸಿದ ಅಲ್ಕರಾಝ್ ತಮ್ಮ ಏಳನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆಲ್ಲುವ ಮೂಲಕ 22 ವರ್ಷ ಮತ್ತು 272 ದಿನಗಳಲ್ಲಿ ವೃತ್ತಿಜೀವನದ ಗ್ರ್ಯಾಂಡ್ ಸ್ಲ್ಯಾಮ್ ಪೂರ್ಣಗೊಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಇತಿಹಾಸ ಸೃಷ್ಟಿಸಿದರು. ಅಲ್ಕರಾಝ್ ಈ ಹಿಂದೆ ವಿಂಬಲ್ಡನ್ (2023, 2024), ಫ್ರೆಂಚ್ ಓಪನ್ (2024, 2025), ಯುಎಸ್ ಓಪನ್ (2022), ಗೆದ್ದಿದ್ದರು. ಈಗ ಆಸ್ಟ್ರೇಲಿಯನ್ ಓಪನ್ (2026) ತನ್ನದಾಗಿಸಿಕೊಂಡಿದ್ದಾರೆ.

ಮೊದಲ ಸೆಟ್‌ನಲ್ಲಿ ತಮ್ಮ ಅನುಭವ ಧಾರೆ ಎರೆದ ಜೊಕೊವಿಕ್ ಸೆಟ್ ಅನ್ನು 6-2 ರಿಂದ ಗೆದ್ದರು. ಆದಾಗ್ಯೂ, ಎರಡನೇ ಸೆಟ್‌ನಲ್ಲಿ ಅದ್ಭುತ ಪುನರಾಗಮನ ಮಾಡಿದ ಅಲ್ಕರಾಝ್ ಸೆಟ್ ಅನ್ನು 6-2 ರಿಂದ ಗೆಲ್ಲುವಲ್ಲಿ ಯಶಸ್ವಿಯಾದರು. ಮೂರನೇ ಸೆಟ್‌ನಲ್ಲೂ ಅದ್ಭುತವಾಗಿ ಆಡಿದ ಅಲ್ಕರಾಝ್ ಸೆಟ್ ಅನ್ನು 6-3 ರಿಂದ ಗೆದ್ದುಕೊಂಡರು. ಹೀಗಾಗಿ ಜೊಕೊವಿಕ್‌ಗೆ ನಾಲ್ಕನೇ ಸೆಟ್ ನಿರ್ಣಾಯಕವಾಗಿತ್ತು. ಅದರಂತೆ ಇಬ್ಬರೂ ಆಟಗಾರರು ನಾಲ್ಕನೇ ಸೆಟ್‌ನಲ್ಲಿ ನಿಕಟ ಪೈಪೋಟಿ ನೀಡಿ ಒಂದು ಹಂತದಲ್ಲಿ 4-4 ರಲ್ಲಿ ಸಮಬಲ ಸಾಧಿಸಿದರು. ಇದರ ನಂತರ ಕಾರ್ಲೋಸ್ ಸತತ 2 ಪಾಯಿಂಟ್ ಕಲೆಹಾಕಿ ಸೆಟ್ ಅನ್ನು 7-5 ರಲ್ಲಿ ಗೆದ್ದು, ಪಂದ್ಯವನ್ನು ಗೆದ್ದುಕೊಂಡರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜನವರಿಯಲ್ಲಿ 1.93 ಲಕ್ಷ ಕೋಟಿ ರೂ ಜಿಎಸ್​ಟಿ ಸಂಗ್ರಹ; ಈ ವರ್ಷ 18 ಲಕ್ಷ ಕೋಟಿ ರೂ ಟ್ಯಾಕ್ಸ್ ಕಲೆಕ್ಷನ್ – Kannada News | GST collections rises by 6.2pc to Rs 1,93,384 in 2026 January

ನವದೆಹಲಿ, ಫೆಬ್ರುವರಿ 1: ಭಾರತದ ಸರಕು ಮತ್ತು ಸೇವಾ ತೆರಿಗೆ ಸಂಗ್ರಹ (GST collections) ಜನವರಿಯಲ್ಲಿ 1,93,384 ಕೋಟಿ ರೂ ಆಗಿದೆ. ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಜಿಎಸ್​ಟಿ ಸಂಗ್ರಹದಲ್ಲಿ ಶೇ. 6.2ರಷ್ಟು ಹೆಚ್ಚಿದೆ. 2025ರ ಜನವರಿಯಲ್ಲಿ ಜಿಎಸ್​ಟಿ ಸಂಗ್ರಹ 1,82,094 ಕೋಟಿ ರೂ ಇತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ, ಅಂದರೆ 2025ರ ಏಪ್ರಿಲ್​ನಿಂದ 2026ರ ಜನವರಿವರೆಗೆ 10 ತಿಂಗಳಲ್ಲಿ ಸಂಗ್ರಹವಾದ ಒಟ್ಟು ಜಿಎಸ್​ಟಿ 18,43,423 ಕೋಟಿ ರೂ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 8.3ರಷ್ಟು ಸಂಗ್ರಹ ಹೆಚ್ಚಳ ಆಗಿದೆ.

2026ರ ಜನವರಿಯಲ್ಲಿ ಒಟ್ಟು ಸಂಗ್ರಹ 1,93,384 ಕೋಟಿ ರೂ ಇದ್ದರೆ, ನಿವ್ವಳ ಜಿಎಸ್​ಟಿ ಆದಾಯ 1,70,719 ಕೋಟಿ ರೂ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ನಿವ್ವಳ ಜಿಎಸ್​ಟಿ ಸಂಗ್ರಹದಲ್ಲಿ ಶೇ. 7.6ರಷ್ಟು ಹೆಚ್ಚಾಗಿದೆ. ಈ ಹಣಕಾಸು ವರ್ಷದ 10 ತಿಂಗಳಲ್ಲಿ ನಿವ್ವಳ ಜಿಎಸ್​ಟಿ 15,95,752 ಕೋಟಿ ರೂ ಸಂಗ್ರಹ ಆಗಿದೆ.

ಇದನ್ನೂ ಓದಿ: Union Budget 2026-27: ಯಾವ ಇಲಾಖೆಗೆ ಎಷ್ಟು ಅನುದಾನ? ಇಲ್ಲಿದೆ ಡಿಟೇಲ್ಸ್​​

ಜಿಎಸ್​ಟಿ ರೀಫಂಡ್​ಗಳಲ್ಲಿ ಶೇ 3.1ರಷ್ಟು ಇಳಿಕೆ ಆಗಿದೆ. ಜನವರಿಯಲ್ಲಿ 22,665 ಕೋಟಿ ರೂ ಮೊತ್ತದಷ್ಟು ರೀಫಂಡ್​ಗಳಾಗಿವೆ. ದೇಶೀಯ ರೀಫಂಡ್​ಗಳು 13,119 ಕೋಟಿ ರೂ ಇದ್ದು, ಶೇ. 7.1ರಷ್ಟು ಇಳಿಕೆಯಾಗಿದೆ. ರಫ್ತು ರೀಫಂಡ್​ಗಳು 9,546 ಕೋಟಿ ರೂನಷ್ಟು ಇದ್ದು, ಇದರಲ್ಲಿ ಶೇ. 2.9ರಷ್ಟು ಏರಿಕೆ ಆಗಿದೆ.

ದೇಶೀಯ ಜಿಎಸ್​ಟಿ ಸಂಗ್ರಹ 1,41,132 ಕೋಟಿ ರೂ ಇದೆ. ಆಮದು ಜಿಎಸ್​ಟಿ ಸಂಗ್ರಹ ಶೇ. 10.1ರಷ್ಟು ಹೆಚ್ಚಳ ಆಗಿ 52,253 ಕೋಟಿ ರೂ ಇದೆ.

ಇದನ್ನೂ ಓದಿ: ಬಜೆಟ್ 2026 ಪ್ರಕಟಣೆ; ಬಾಂಗ್ಲಾದೇಶದಿಂದ ಹಿಡಿದು ಮಾರಿಷಸ್​ವರೆಗೆ ವಿವಿಧ ದೇಶಗಳಿಗೆ ಭಾರತ ಮಾಡುವ ಧನಸಹಾಯವೆಷ್ಟು?

ಹರ್ಯಾಣ, ಮಹಾರಾಷ್ಟ್ರ, ಗುಜರಾತ್, ಹಿಮಾಚಲಪ್ರದೇಶ ಮತ್ತು ಪಂಜಾಬ್ ರಾಜ್ಯಗಳು ಶೇ 10ಕ್ಕಿಂತ ಹೆಚ್ಚು ಸೆಟಲ್ಮೆಂಟ್ ನಂತರದ ಜಿಎಸ್​ಟಿ ಆದಾಯ ಗಳಿಸಿವೆ. ಕರ್ನಾಟಕ, ತಮಿಳುನಾಡು ರಾಜ್ಯಗಳೂ ಕೂಡ ಉತ್ತಮ ಆದಾಯ ಏರಿಕೆ ಕಂಡಿವೆ. ಮಧ್ಯಪ್ರದೇಶ, ಜಾರ್ಖಂಡ್, ಒಡಿಶಾ, ಛತ್ತೀಸ್​ಗಡ್, ಲಡಾಖ್, ಲಕ್ಷದ್ವೀಪ್ ರಾಜ್ಯಗಳಲ್ಲಿ ಜಿಎಸ್​ಟಿ ಆದಾಯದಲ್ಲಿ ಇಳಿಕೆ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ತುಮಕೂರು ವಾಹನ ಸವಾರರಿಗೆ ಸಿಹಿಸುದ್ದಿ: ನೆನೆಗುದಿಗೆ ಬಿದ್ದಿದ್ದ ಚತುಷ್ಪಥ ಕಾಮಗಾರಿ ಆರಂಭ – Kannada News | Tumakuru NH 206 Widening Begins: Batavadi Mallasandra 4 Lane Road for Smoother Traffic

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಗೆ ಚಾಲನೆImage Credit source: tv9 kannada

ತುಮಕೂರು, ಫೆಬ್ರವರಿ 01: ನಗರದ ವಾಹನ ಸವಾರರಿಗೆ ಕೊನೆಗೂ ಸಿಹಿ ಸುದ್ದಿ ದೊರೆತಂತಾಗಿದೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಆ ಮೂಲಕ ಕಾಮಗಾರಿ ಆರಂಭದ ತಯಾರಿ ನಡೆದಿದೆ. ತುಮಕೂರು ನಗರದ ಒಳಗೆ ಹಾದುಹೋಗುವ ಬಟವಾಡಿ- ಮಲ್ಲಸಂದ್ರದ (Batavadi-Mallasandra) ನಡುವಿನ 12 ಕಿ.ಮಿ ರಸ್ತೆ ದ್ವಿಪಥವನ್ನು ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿ ಪಡಿಸಲು ಅಧಿಕೃತವಾಗಿ ಚಾಲನೆ ದೊರೆತಿದೆ.

ರಸ್ತೆ ಇಕ್ಕಟ್ಟಿನಿಂದ ವಾಹನ ಸವಾರರಿಗೆ ಕಿರಿಕಿರಿ

ತುಮಕೂರು ನಗರದಿಂದ ಭೀಮಸಂದ್ರವರೆಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 206ರ ರಸ್ತೆ ಸವಾರರಿಗೆ ಕೊಂಚ ಕಿರಿಕಿರಿಯಾಗಿತ್ತು. ಈ ಮಾರ್ಗ ರಾಷ್ಟ್ರೀಯ ಹೆದ್ದಾರಿಯಾದರೂ ಸಹ ಅಗಲೀಕರಣವಾಗದೇ ಹಾಗೆ ಉಳಿದಿತ್ತು. ಕಳೆದ ಹತ್ತು ವರ್ಷಗಳಿಂದ ಅಗಲೀಕರಣದ ನಿರೀಕ್ಷೆಯಲ್ಲೇ ಉಳಿದಿತ್ತು. ರಸ್ತೆ ಇಕ್ಕಟ್ಟಿನಿಂದ ದಿನ ನಿತ್ಯ ವಾಹನ ಸವಾರರು ತೀವ್ರ ಕಿರಿಕಿರಿ ಅನುಭವಿಸುತ್ತಿದ್ದರು. ಆದರೆ ಇದೀಗ ಆ ಕಿರಿಕಿರಿಗೆ ಅಂತ್ಯ ಹಾಡುವ ಸೂಚನೆ ಸಿಕ್ಕಿದೆ.

ಇದನ್ನೂ ಓದಿ: ಏರ್​ಪೋರ್ಟ್ ರಸ್ತೆಯಲ್ಲಿ ಅಪಘಾತ ಹೆಚ್ಚಳ: 1 ವರ್ಷದಲ್ಲಿ 50ಕ್ಕೂ ಅಧಿಕ ಜನ ಸಾವು, ಜಾಗೃತಿ ಮೂಡಿಸಲು ಬಂದ ಯಮ

ಇತ್ತೀಚೆಗೆ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಹೆದ್ದಾರಿ ಅಗಲೀಕರಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಮೂಲಕ ಹಲವು ವರ್ಷಗಳ ಕನಸು ನನಸಾಗಿದೆ. ಸುಮಾರು 13 ಕಿ.ಮೀ ದೂರದವರೆಗೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ನಡೆಯಲಿದ್ದು, ಈ ಯೋಜನೆಗೆ ಒಟ್ಟು 86 ಕೋಟಿ ರೂ ವೆಚ್ಚ ಅಂದಾಜಿಸಲಾಗಿದೆ. ನಾಲ್ಕು ಲೇನ್ ರಸ್ತೆ ನಿರ್ಮಾಣದಿಂದ ಸಂಚಾರ ಮತ್ತಷ್ಟು ಸುಗಮವಾಗಲಿದೆ.

ಇನ್ನು ಈ ಹೆದ್ದಾರಿ ಅಗಲೀಕರಣದಿಂದ ತುಮಕೂರು ನಗರದ ಅಭಿವೃದ್ಧಿಗೆ ಹೊಸ ವೇಗ ಸಿಗಲಿದೆ. ವಾಣಿಜ್ಯ, ಸಾರಿಗೆ ಹಾಗೂ ಸಾರ್ವಜನಿಕ ಸಂಚಾರಕ್ಕೆ ಅನುಕೂಲವಾಗಲಿದ್ದು, ವಾಹನ ಸವಾರರು ಹಾಗೂ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ತಿಂಗಳಲ್ಲಿ 15 ಮಂದಿ ಸಾವು: ಮೃತ್ಯುಕೂಪವಾಯ್ತಾ ತುಮಕೂರು ರಾಷ್ಟ್ರೀಯ ಹೆದ್ದಾರಿ?

ಒಟ್ಟಿನಲ್ಲಿ ಹಲವು ವರ್ಷಗಳ ಕಾಯುವಿಕೆಗೆ ತೆರೆ ಎಳೆದಿರುವ ರಾಷ್ಟ್ರೀಯ ಹೆದ್ದಾರಿ, ಕೊನೆಗೂ ಅಗಲೀಕರಣ ಕಾಮಗಾರಿ ಆರಂಭಿಸಿದೆ. ಈ ಮೂಲಕ ತುಮಕೂರು ನಗರದ ಸಂಚಾರ ವ್ಯವಸ್ಥೆಗೆ ಹೊಸ ಆಯಾಮ ನೀಡಲಿದೆ ಅನ್ನೊದು ಎಲ್ಲರ ಮಾತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮತ್ತೊಂದು ಮೆಟ್ಟಿಲೇರಿದ ಶ್ರೀಲೀಲಾ, ಮತ್ತೊಬ್ಬ ಸ್ಟಾರ್ ನಟನಿಗೆ ನಾಯಕಿ – Kannada News | Sreeleela acting with Dhanush in his next movie

ಶ್ರೀಲೀಲಾ (Sreeleela) ಕನ್ನಡದ ನಟಿ ಆದರೆ ಇದೀಗ ಪರ ಭಾಷೆಯಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ. ಕನ್ನಡದ ಬಳಿಕ ತೆಲುಗು ಚಿತ್ರರಂಗಕ್ಕೆ ಹೆಜ್ಜೆ ಇಟ್ಟ ಶ್ರೀಲೀಲಾ ಅಲ್ಲಿ ಬಹು ಕಡಿಮೆ ಅವಧಿಯಲ್ಲೇ ಸ್ಟಾರ್ ನಟಿಯಾಗಿ ಗುರುತಿಸಿಕೊಂಡರು. ಬಳಿಕ ಬಾಲಿವುಡ್​​ಗೆ ಪದಾರ್ಪಣೆ ಮಾಡಿದ ಶ್ರೀಲೀಲಾಗೆ ಅಲ್ಲಿ ಅವರ ಮೊದಲ ಸಿನಿಮಾ ಬಿಡುಗಡೆ ಆಗುವ ಮುಂಚೆಯೇ ಬಹಳ ಡಿಮ್ಯಾಂಡ್ ಏರ್ಪಟ್ಟಿದೆ. ಈಗಾಗಲೇ ಶ್ರೀಲೀಲಾ ಕೈಯಲ್ಲಿ ಮೂರು ಹಿಂದಿ ಸಿನಿಮಾಗಳಿವೆಯಂತೆ. ಇದೀಗ ತಮಿಳಿನಲ್ಲೂ ಸ್ಟಾರ್ ನಟಿ ಆಗುವತ್ತ ಹೆಜ್ಜೆ ಹಾಕಿದ್ದಾರೆ ಶ್ರೀಲೀಲಾ. ಇತ್ತೀಚೆಗಷ್ಟೆ ಶ್ರೀಲೀಲಾ ನಟನೆಯ ಮೊದಲ ತಮಿಳು ಸಿನಿಮಾ ಬಿಡುಗಡೆ ಆಗಿತ್ತು. ಇದೀಗ ಶ್ರೀಲೀಲಾಗೆ ತಮಿಳಿನ ಜನಪ್ರಿಯ ನಾಯಕನೊಟ್ಟಿಗೆ ನಾಯಕಿಯಾಗಿ ನಟಿಸುವ ಅವಕಾಶ ಲಭಿಸಿದೆ.

ಶ್ರೀಲೀಲಾ, ‘ಪರಾಶಕ್ತಿ’ ಹೆಸರಿನ ತಮಿಳು ಸಿನಿಮಾನಲ್ಲಿ ನಟಿಸಿದ್ದರು. ಅದು ಅವರ ಮೊದಲ ತಮಿಳು ಸಿನಿಮಾ ಆಗಿತ್ತು. ಸಿನಿಮಾ ಬಿಡುಗಡೆ ಆಗಿ ಕೆಲವೇ ದಿನಗಳಲ್ಲಿ ಶ್ರೀಲೀಲಾಗೆ ಮತ್ತೊಂದು ತಮಿಳು ಸಿನಿಮಾನಲ್ಲಿ ನಟಿಸುವ ಅವಕಾಶ ಲಭಿಸಿದೆ. ಅದೂ ತಮಿಳು ಮಾತ್ರವಲ್ಲದೆ ಬಾಲಿವುಡ್​​ನಲ್ಲೂ ಸಖತ್ ಹೆಸರು ಮಾಡಿರುವ ಸ್ಟಾರ್ ನಟನ ಎದುರು ನಾಯಕಿಯಾಗಿ ನಟಿಸುವ ಅವಕಾಶ ದೊರೆತಿದೆ.

ತಮಿಳಿನ ಸ್ಟಾರ್ ನಟರುಗಳಲ್ಲಿ ಒಬ್ಬರಾಗಿರುವ ಧನುಶ್ ಅವರ ಹೊಸ ಸಿನಿಮಾನಲ್ಲಿ ಶ್ರೀಲೀಲಾ ನಾಯಕಿ. ಇದು ಧನುಶ್ ಅವರ 55ನೇ ಸಿನಿಮಾ ಆಗಿದ್ದು, ಇತ್ತೀಚೆಗಷ್ಟೆ ಸಿನಿಮಾದ ಘೋಷಣೆ ಆಗಿತ್ತು. ಸಿನಿಮಾ ಘೋಷಣೆಯಾದಾಗ ಧನುಶ್ ಎದುರು ಸಾಯಿ ಪಲ್ಲವಿ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಶ್ರೀಲೀಲಾ, ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

ಇದನ್ನೂ ಓದಿ:ಮೂರು ಮಕ್ಕಳ ದತ್ತು ಪಡೆದಿದ್ದು ಏಕೆ? ಭಾವುಕ ವಿಷಯ ಹಂಚಿಕೊಂಡ ಶ್ರೀಲೀಲಾ

ಧನುಶ್ ಹಾಗೂ ಶ್ರೀಲೀಲಾ ನಟಿಸಲಿರುವ ಸಿನಿಮಾವನ್ನು ನಿರ್ದೇಶಕ ರಾಜ್​​ಕುಮಾರ್ ಪೆರಿಯಸ್ವಾಮಿ ನಿರ್ದೇಶನ ಮಾಡಲಿದ್ದಾರೆ. 2024ರಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆದ ‘ಅಮರನ್’ ಸಿನಿಮಾವನ್ನು ನಿರ್ದೇಶಿಸಿದ್ದು ಇವರೇ. ಇದೀಗ ಧನುಶ್ ಅವರಿಗಾಗಿ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

ಇನ್ನು ಶ್ರೀಲೀಲಾ ಪ್ರಸ್ತುತ ಹಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಗಬ್ಬರ್ ಸಿಂಗ್’ ರವಿತೇಜ ನಟಿಸಲಿರುವ ಹೊಸ ಸಿನಿಮಾ, ಹಿಂದಿಯಲ್ಲಿ ‘ಆಶಿಖಿ 3’, ಸೈಫ್ ಅಲಿ ಖಾನ್ ಪುತ್ರನ ಜೊತೆಗೊಂದು ಸಿನಿಮಾ. ರಣ್ವೀರ್ ಸಿಂಗ್ ನಟಿಸಲಿರುವ ಹೊಸ ಸಿನಿಮಾಗಳಲ್ಲಿಯೂ ಶ್ರೀಲೀಲಾ ನಟಿಸುತ್ತಿದ್ದಾರೆ. ಇದೀಗ ಧನುಶ್ ಸಿನಿಮಾ ಅವಕಾಶವೂ ಅವರಿಗೆ ಲಭಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Ranji Trophy 2026: ಪಂಜಾಬ್ ವಿರುದ್ಧ ಗೆದ್ದು ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ – Kannada News | Ranji Trophy 2026 Karnataka Dominates Punjab: Padikkal’s Heroic 120* Secures Quarter Final Berth

ರಣರೋಚಕ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಮಣಿಸಿದ ಕರ್ನಾಟಕ ತಂಡ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್​ ಸುತ್ತಿಗೆ ಲಗ್ಗೆ ಇಟ್ಟಿದೆ. ಮೊಹಾಲಿಯ ಬಿಂದ್ರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಕೊನೆಯ ದಿನದಂದು ಗೆಲುವಿಗೆ 250 ರನ್​ಗಳ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ನಾಯಕ ದೇವದತ್ ಪಡಿಕ್ಕಲ್ ಅವರ ಅಜೇಯ ಶತಕ ಹಾಗೂ ಮಯಾಂಕ್ ಅಗರ್ವಾಲ್ ಅವರ ಅರ್ಧಶತಕದ ನೆರವಿನಿಂದ 5 ವಿಕೆಟ್​ಗಳನ್ನು ಕಳೆದುಕೊಂಡು ಇನ್ನು 25 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಮುಟ್ಟಿತು. ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ ಪಡಿಕ್ಕಲ್ ತಮ್ಮ ಚೊಚ್ಚಲ ನಾಯಕತ್ವದಲ್ಲೇ ತಂಡವನ್ನು ಗೆಲುವಿನತ್ತ ಮುನ್ನಡೆಸಿದಲ್ಲದೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.

ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಮೊದಲು ಬ್ಯಾಟಿಂಗ್‌ ಮಾಡಿ ಮೊದಲ ಇನ್ನಿಂಗ್ಸ್​ನಲ್ಲಿ 309 ರನ್ ಕಲೆಹಾಕಿತು. ಿಇತ್ತ ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡ ಆರಂಭಿಕ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಗೋಪಾಲ್ ಅವರ ಅರ್ಧಶತಕದ ನೆರವಿನಿಂದ 316 ರನ್ ಕಲೆಹಾಕಿ ಮೊದಲ ಇನ್ನಿಂಗ್ಸ್​ನಲ್ಲಿ 7 ರನ್​ಗಳ ಮುನ್ನಡೆ ಸಾಧಿಸಿತು.

ಎರಡನೇ ಇನ್ನಿಂಗ್ಸ್ ಆರಂಭಿಸಿದ ಪಂಜಾಬ್ ತಂಡ 256 ರನ್​ಗಳಿಗೆ ಆಲೌಟ್ ಆಗುವ ಮೂಲಕ ಕರ್ನಾಟಕ ತಂಡಕ್ಕೆ 250 ರನ್​ಗಳ ಗೆಲುವಿನ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಕರ್ನಾಟಕ ಪರ ನಾಯಕ ದೇವದತ್ ಪಡಿಕ್ಕಲ್ ಅಬ್ಬರದ ಇನ್ನಿಂಗ್ಸ್ ಆಡಿದರು. ಮಯಾಂಕ್ ಜೊತೆ ಶತಕದ ಜೊತೆಯಾಟ ನಡೆಸಿದ ದೇವದತ್ ಪಡಿಕ್ಕಲ್ ತಮ್ಮ ಶತಕವನ್ನು ಪೂರೈಸಿದರು. ಇತ್ತ ಮಯಾಂಕ್ ಅರ್ಧಶತಕ ಬಾರಿಸಿ ಔಟಾದರೆ, ಕೊನೆಯವರೆಗೂ ಅಜೇಯರಾಗಿ ಉಳಿದ ಪಡಿಕ್ಕಲ್ 85 ಎಸೆತಗಳಲ್ಲಿ 6 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 120 ರನ್ ಬಾರಿಸಿದರು. ಕೊನೆಯಲ್ಲಿ ಶ್ರೇಯಸ್ ಗೋಪಾಲ್ ಕೂಡ 33 ರನ್​ಗಳ ಸ್ಮರಣೀಯ ಇನ್ನಿಂಗ್ಸ್ ಆಡಿದರು.

Source link

ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ, ಸಿಡಿದೆದ್ದ ಮೃತ ಸಂಬಂಧಿ – Kannada News | A Woman Commits Suicide In Hassan for alleged Dowry harassment

ಹಾಸನ, ಫೆಬ್ರವರಿ 01): ಪತಿಯ ಅತಿಯಾದ ಅನುಮಾನ ಮತ್ತು ವರದಕ್ಷಿಣೆ ಕಿರುಕುಳಕ್ಕೆ (Dowry harassment) ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯೋರ್ವರು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಹಾಸನದ (Hassan) ಹೆಚ್. ಮೈಲಳ್ಳಿ ಗ್ರಾಮದಲ್ಲಿ ನಡೆದಿದೆ. ಎಚ್. ಎಲ್. ಇಂದ್ರ (24) ಮೃತ ಮಹಿಳೆ. ಮದುವೆಯಾಗಿ ನಾಲ್ಕು ವರ್ಷಗಳಾಗಿದ್ದು, ಪತಿ ವರದಕ್ಷಿಣೆ ಹಾಗೂ ಹಣಕ್ಕಾಗಿ ಪೀಡಿಸುತ್ತಿದ್ದನೆನ್ನಲಾಗಿದೆ. ಈ ಸಂಬಂಧ ಪತಿ, ಅತ್ತೆ ಮತ್ತು ಅತ್ತಿಗೆ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ. ಇನ್ನು ಈ ಘಟನೆ ಬಗ್ಗೆ ಮೃತ ಇಂದ್ರ ಸಂಬಂಧಿಯೊಬ್ಬರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಐದು ವರ್ಷವಾದರೂ ಅವನಿಗೆ ಮಕ್ಕಳು ಮಾಡಿಕೊಳ್ಳಲು ಆಗಿಲ್ಲ. ಈಗ ಆ ಹುಡುಗಿನ ಅನ್ಯಾಯವಾಗಿ ಕೊಂದಿದ್ದಾರೆ. ಪೊಲೀಸರೇ ಇದಕ್ಕೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದರು.

Source link

ಇಂದು ಬಜೆಟ್ ಮಂಡನೆಗೆ ಸಚಿವೆ ನಿರ್ಮಲಾ ಸೀತಾರಾಮನ್ ಕಾಂಜೀವರಂ ಸೀರೆಯನ್ನೇ ಉಟ್ಟಿದ್ದೇಕೆ? – Kannada News | Why Finance Minister Nirmala Sitharaman wore Kanjeevaram Saree for Budget 2026 presentation

ನವದೆಹಲಿ, ಫೆಬ್ರವರಿ 1: ಕಳೆದ 8 ಬಾರಿ ಬಜೆಟ್ ಮಂಡನೆ ಮಾಡಿದಾಗಲೂ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರ ಸೀರೆಯ ಬಗ್ಗೆ ಬಹಳ ಚರ್ಚೆಗಳಾಗಿತ್ತು. ಅವರು ಉಡುವ ಸೀರೆಯ ಬಣ್ಣ, ವಿನ್ಯಾಸಕ್ಕೆ ಒಂದೊಂದು ಅರ್ಥವಿರುತ್ತಿತ್ತು. ಈ ಬಾರಿಯೂ ಅವರು ಯಾವ ಬಣ್ಣದ ಸೀರೆ ಉಡುತ್ತಾರೆ ಎಂಬುದರ ಬಗ್ಗೆ ಭಾರೀ ಕುತೂಹಲವಿತ್ತು. ಪ್ರತಿ ಬಾರಿಯೂ ಕೈಮಗ್ಗದ ಸೀರೆಗೆ ಆದ್ಯತೆ ನೀಡುವ ನಿರ್ಮಲಾ ಸೀತಾರಾಮನ್ ಇಂದು ಕೈಮಗ್ಗದ ಕಾಂಜೀವರಂ ರೇಷ್ಮೆ ಸೀರೆಯನ್ನು ಉಟ್ಟಿದ್ದರು. ನೇರಳೆ ಬಣ್ಣದ ಈ ಸೀರೆ ರಾಜಕೀಯವಾಗಿಯೂ ಬಹಳ ಪ್ರಾಮುಖ್ಯತೆ ಪಡೆದಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಬಜೆಟ್ ದಿನದಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉಡುವ ಸೀರೆ ಕೇವಲ ಫ್ಯಾಷನ್‌ ದೃಷ್ಟಿಯಿಂದ ಮಾತ್ರವಲ್ಲ ನಮ್ಮ ದೇಶದ ಸಂಸ್ಕೃತಿಯ ದೃಷ್ಟಿಯಿಂದಲೂ ಬಹಳ ಮುಖ್ಯವಾಗಿರುತ್ತದೆ. ಇಂದು ಅವರು ಉಟ್ಟಿದ್ದ ಕಾಂಜೀವರಂ ಸೀರೆಯು ಹಲವು ಶತಮಾನಗಳ ಭಾರತೀಯ ನೇಯ್ಗೆಯನ್ನು ಪ್ರತಿನಿಧಿಸುತ್ತದೆ. ಇದರ ಜೊತೆಗೆ ನಿರ್ಮಲಾ ಸೀತಾರಾಮನ್ ಉಡುವ ಸೀರೆಯ ಆಯ್ಕೆಗೆ ರಾಜಕೀಯದ ಮುಖವೂ ಇದೆ ಎಂಬುದು ನಿಮಗೆ ಗೊತ್ತಾ? ಅವರು ಪ್ರತಿ ಬಾರಿ ಬಜೆಟ್ ವೇಳೆ ಸೀರೆಯನ್ನು ಆಯ್ಕೆ ಮಾಡುವಾಗ ಯಾವ ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದೆಯೋ ಅದೇ ರಾಜ್ಯದ ಕೈಮಗ್ಗದ ಅಥವಾ ಸಾಂಪ್ರದಾಯಿಕ ಸೀರೆಯನ್ನು ಉಡುವ ಪದ್ಧತಿಯನ್ನು ರೂಢಿಸಿಕೊಂಡು ಬಂದಿದ್ದಾರೆ.

ತಮಿಳುನಾಡು ಅವರ ತವರು ರಾಜ್ಯವಾಗಿರುವುದರಿಂದ ಮತ್ತು ಈ ವರ್ಷದ ಕೊನೆಯಲ್ಲಿ ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವುದರಿಂದ ನಿರ್ಮಲಾ ಸೀತಾರಾಮನ್ ಈ ಬಾರಿ ತಮಿಳುನಾಡಿನ ಕಾಂಜೀವರಂ ಸೀರೆಯನ್ನು ಬಜೆಟ್ ಮಂಡನೆಗೆ ಆಯ್ಕೆ ಮಾಡಿಕೊಂಡಿದ್ದಾರೆ. ಮಂಗಳಗಿರಿ ಕಾಟನ್ ಸೀರೆಯಿಂದ ಕಾಂಜೀವರಂ ರೇಷ್ಮೆ ಸೀರೆಯವರೆಗೆ ಅವರು ಬಜೆಟ್ ಮಂಡನೆಗೆ ಉಟ್ಟಿರುವ ಪ್ರತಿ ಸೀರೆಯು ಕರಕುಶಲತೆ, ಸಂಸ್ಕೃತಿ ಮತ್ತು ರಾಜಕೀಯದ ಕಥೆಯನ್ನು ಹೇಳುತ್ತದೆ.

ಇದನ್ನೂ ಓದಿ: ಕೇಂದ್ರ ಬಜೆಟ್ 2026: ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ

ನೀವು ಗಮನಿಸುವುದಾದರೆ, 2026ರ ಕೊನೆಯಲ್ಲಿ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ, ನಿರ್ಮಲಾ ಸೀತಾರಾಮನ್ ಕಾಂಜೀವರಂ ರೇಷ್ಮೆ ಸೀರೆ ಉಟ್ಟಿದ್ದಾರೆ.

2025ರಲ್ಲಿ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತು. ಆ ವರ್ಷ ನಿರ್ಮಲಾ ಬಿಹಾರದ ಮಧುಬನಿ ಕಲಾಕೃತಿಯಿಂದ ಅಲಂಕರಿಸಲ್ಪಟ್ಟ ಕೈಮಗ್ಗದ ರೇಷ್ಮೆ ಸೀರೆ ಉಟ್ಟಿದ್ದರು.

2024ರ ಮಧ್ಯಂತರ ಬಜೆಟ್ ಮಂಡನೆಗೆ ನಿರ್ಮಲಾ ಸೀತಾರಾಮನ್ ಪಶ್ಚಿಮ ಬಂಗಾಳದ ಕಾಂತ ಕಸೂತಿಯಿದ್ದ ನೀಲಿ ಟಸ್ಸರ್ ರೇಷ್ಮೆ ಸೀರೆ ಉಟ್ಟಿದ್ದರು. ಆ ವರ್ಷ ಲೋಕಸಭಾ ಚುನಾವಣೆ ನಡೆದಿತ್ತು.

2024ರ ಪೂರ್ಣ ಬಜೆಟ್ ಮಂಡನೆಗೆ ಆಂಧ್ರ ಪ್ರದೇಶದ ಬಿಳಿಯ ಬಣ್ಣದ ಕೈಮಗ್ಗದ ಮಂಗಳಗಿರಿ ಕಾಟನ್ ಸೀರೆಯನ್ನು ಉಟ್ಟಿದ್ದರು. ಆ ವರ್ಷ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆ ನಡೆದಿತ್ತು.

2023ರಲ್ಲಿ ಕರ್ನಾಟಕದ ಸಾಂಪ್ರದಾಯಿಕ ಕಸೂತಿ ಇರುವ ರೇಷ್ಮೆ ಸೀರೆಯನ್ನು ಉಟ್ಟಿದ್ದರು. ಆ ವರ್ಷ ಕರ್ನಾಟಕ ವಿಧಾನಸಭಾ ಚುನಾವಣೆ ನಡೆದಿತ್ತು.

ಇದನ್ನೂ ಓದಿ: Union Budget 2026: 9 ಬಜೆಟ್​ 9 ಬಣ್ಣದ ಸೀರೆಗಳು; ನಿರ್ಮಲಾ ಸೀತಾರಾಮನ್ ‘ಬಜೆಟ್‌ ಸೀರೆ’ಯ ವೈಶಿಷ್ಟ್ಯ ಇಲ್ಲಿದೆ

2022ರಲ್ಲಿ ಒಡಿಶಾದ ಬೊಮ್ಕೈ ಸೀರೆ ಹಾಗೂ 2021ರಲ್ಲಿ ತೆಲಂಗಾಣದ ಪೋಚಂಪಲ್ಲಿ ಇಕಾಟ್ ಸೀರೆಯನ್ನು ಉಟ್ಟಿದ್ದರು. 2020ರಲ್ಲಿ ಗೋಲ್ಡನ್ ಕಲರ್ ರೇಷ್ಮೆ ಸೀರೆ ಉಟ್ಟಿದ್ದರು. ಆದರೆ, ಆ 3 ವರ್ಷಗಳು ಮಾತ್ರ ಯಾವುದೇ ಚುನಾವಣೆ ನಡೆದಿರಲಿಲ್ಲ.

2019ರಲ್ಲಿ ಆಂಧ್ರದ ಮಂಗಳಗಿರಿ ಕಾಟನ್ ಸೀರೆ ಉಟ್ಟಿದ್ದರು. ಆ ವರ್ಷ ಆಂಧ್ರ ಪ್ರದೇಶದ ವಿಧಾನಸಭಾ ಚುನಾವಣೆ ನಡೆದಿತ್ತು.

ಹೀಗಾಗಿ, ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ದಿನದ ಸೀರೆಗಳು ಕೇವಲ ಒಂದು ಉಡುಗೆ ಮಾತ್ರವಲ್ಲ. ಅದಕ್ಕಿಂತಲೂ ಹೆಚ್ಚಿನದಾಗಿ ರಾಜಕೀಯವಾಗಿಯೂ ಅವು ಮಹತ್ವ ಪಡೆದಿರುತ್ತದೆ. ಹಾಗೆಂದು ನಿರ್ಮಲಾ ಸೀತಾರಾಮನ್ ತಮ್ಮ ರಾಜ್ಯದ ಸೀರೆಯನ್ನು ಉಟ್ಟು ಬಜೆಟ್ ಮಂಡಿಸಿದ್ದಾರೆ ಎಂಬ ಕಾರಣಕ್ಕೆ ಜನ ಬಿಜೆಪಿಗೆ ಮತ ಹಾಕುವುದಿಲ್ಲ. ಬಜೆಟ್ ಮಂಡನೆ ವೇಳೆ ಹೇಗೆ ಚುನಾವಣಾ ರಾಜ್ಯಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆಯೋ ಹಾಗೆಯೇ ನಿರ್ಮಲಾ ಸೀತಾರಾಮನ್ ಕೂಡ ತಮ್ಮ ಸೀರೆಯ ಆಯ್ಕೆಯ ವಿಷಯದಲ್ಲಿ ಆ ರಾಜ್ಯಕ್ಕೆ ಮಹತ್ವ ನೀಡುತ್ತಾರೆ. ಇದು ಮತಗಳ ಮೇಲೆ ಪರಿಣಾಮ ಬೀರಲಿ ಅಥವಾ ಬೀರದೆ ಇರಲಿ; ತಮ್ಮ ರಾಜ್ಯಕ್ಕೆ ಆದ್ಯತೆ ನೀಡಿದ್ದಾರೆ ಎಂಬುದಂತೂ ಅವರ ಮನಸಲ್ಲಿ ದಾಖಲಾಗುತ್ತದೆ ಎಂಬ ಉದ್ದೇಶ ಸಚಿವರದ್ದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Hassan: ಪತಿ ಟಾರ್ಚರ್​​ ತಾಳಲಾರದೆ ವಿಷ ಕುಡಿದ ಪತ್ನಿ ಚಿಕಿತ್ಸೆ ಫಲಿಸದೆ ಸಾವು – Kannada News | Hassan: Woman Dies by Suicide After Alleged Harassment by Husband

ಹಾಸನ, ಫೆಬ್ರವರಿ 01: ಪತಿಯ ಅತಿಯಾದ ಅನುಮಾನ ಮತ್ತು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯೋರ್ವಳು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಹಾಸನದಲ್ಲಿ ನಡೆದಿದೆ. ಎಚ್. ಎಲ್. ಇಂದ್ರ (24) ಮೃತರಾಗಿದ್ದು, ಹೆಚ್. ಮೈಲಳ್ಳಿ ಗ್ರಾಮದಲ್ಲಿನ ಪತಿ ಮನೆಯಲ್ಲಿ ಇವರು ಆತ್ಮಹತ್ಯೆಗೆ ಯತ್ನಿಸಿದ್ದರು. ಚಿಕಿತ್ಸೆಗಾಗಿ ಹಾಸನದ ಹಿಮ್ಸ್​​ಗೆ ದಾಖಲಿಸಲಾಗಿತ್ತಾದರೂ ದೇಹ ಸ್ಪಂದಿಸದ ಕಾರಣ ಅಂತಿಮವಾಗಿ ಯುವತಿ ಕೊನೆಯುಸಿರೆಳೆದಿದ್ದಾರೆ.

ಕಳೆದ ನಾಲ್ಕು ವರ್ಷಗಳ ಹಿಂದೆ ಹೆಚ್. ಮೈಲಳ್ಳಿ ಗ್ರಾಮದ ಎಂ.ಎಚ್. ಸ್ವಾಮಿ ಜೊತೆ ಇಂದ್ರ ಅವರ ವಿವಾಹವಾಗಿತ್ತು. ಮದುವೆ ಸಮಯದಲ್ಲಿ ಪತ್ನಿ ಮನೆಯವರು ಹಣ, ಒಡವೆ ನೀಡಿದ್ದರೂ ಸ್ವಾಮಿ ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ. ತಾನು ನಡೆಸುತ್ತಿದ್ದ ಬೇಕರಿ ವ್ಯವಹಾದಲ್ಲಿಯೂ ನಷ್ಟ ಉಂಟಾದ ಬಳಿಕ ಪತಿ ಕಿರುಕುಳ ಹೆಚ್ಚಾಗಿದೆ. ಇದೇ ವಿಚಾರವಾಗಿ ಒಂದೆರಡು ಬಾರಿ ರಾಜಿ ಪಂಚಾಯ್ತಿ ಕೂಡ ನಡೆದಿತ್ತು. ಆದರೂ ಬದಲಾಗದ ಸ್ವಾಮಿ, ಕಿರುಕುಳ ಮುಂದುವರಿಸಿದ್ದ ಎಂದು ದೂರಲಾಗಿದೆ. ಘಟನೆ ಬೆನ್ನಲ್ಲೇ ಮೃತ ಇಂದ್ರ ಪತಿ ಸ್ವಾಮಿ, ಅತ್ತೆ ಶಂಕ್ರಮ್ಮ, ಅತ್ತಿಗೆ ಪುಟ್ಟಿ ವಿರುದ್ದ ಪೊಲೀಸ್​​ ದೂರು ದಾಖಲಾಗಿದೆ.

ಇದನ್ನೂ ಓದಿ: ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ಆರೋಪಿ

ಮೃತ ಯುವತಿ ಪೋಷಕರು ಹೇಳಿದ್ದೇನು?

ಇನ್ನು ಪತಿ ಸ್ವಾಮಿ ವರದಕ್ಷಿಣೆ ರೂಪದಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟ ಹಿನ್ನೆಲೆ 1.3 ಲಕ್ಷ ಹಣವನ್ನು ಮಗಳು ತನ್ನ ತಾಯಿಯಿಂದ ಪಡೆದು ಪತಿಗೆ ನೀಡಿದ್ದಳು. ಬಡ್ಡಿ ಸಾಲ ಮಾಡಿ ಆ ಹಣವನ್ನು ಇಂದ್ರ ತಾಯಿ ಗೌರಮ್ಮ ನೀಡಿದ್ದರು. ಆತ್ಮಹತ್ಯೆ ಯತ್ನಕ್ಕೂ ಮುನ್ನ ತಾಯಿಗೆ ಕರೆ ಮಾಡಿದ್ದ ಇಂದ್ರ, ಕಿರುಕುಳ ಸಹಿಸಲು ಸಾಧ್ಯವಾಗುತ್ತಿಲ್ಲ. ತನ್ನನ್ನು ಬಂದು ಕರೆದುಕೊಂಡು ಹೋಗುವಂತೆ ಬೇಡಿಕೊಂಡಿದ್ದಳು.  ರಾತ್ರಿ ಸಮಯವಾಗಿದ್ದರಿಂದ ತಕ್ಷಣ ತೆರಳಲು ಗೌರಮ್ಮಗೆ ಸಾಧ್ಯವಾಗಿರಲಿಲ್ಲ. ಆದ್ರೆ ಬೆಳಿಗ್ಗೆ ವೇಳೆಗೆ ಮಗಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರೋದು ಪೋಷಕರಿಗೆ ಗೊತ್ತಾಗಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version