ಬ್ರ್ಯಾಂಡ್ ಕರ್ನಾಟಕವೋ ಅಥವಾ ಬ್ರೇಕ್‌ಡೌನ್ ಕರ್ನಾಟಕವೋ?: ಕೆಎಸ್‌ಆರ್‌ಟಿಸಿ ಬಸ್‌ಗಳ ಭೀಕರ ದುಸ್ಥಿತಿ ಬಿಚ್ಚಿಟ್ಟ ಸವಾರರು!

ಬ್ರ್ಯಾಂಡ್ ಕರ್ನಾಟಕವೋ ಅಥವಾ ಬ್ರೇಕ್‌ಡೌನ್ ಕರ್ನಾಟಕವೋ?: ಕೆಎಸ್‌ಆರ್‌ಟಿಸಿ ಬಸ್‌ಗಳ ಭೀಕರ ದುಸ್ಥಿತಿ ಬಿಚ್ಚಿಟ್ಟ ಸವಾರರು!

ಬೆಂಗಳೂರು, ಏ.7: ಕಳೆದ ಮೂರು ವರ್ಷದಿಂದ ಬ್ರ್ಯಾಂಡ್ ಕರ್ನಾಟಕ… ಬ್ರ್ಯಾಂಡ್ ಕರ್ನಾಟಕ ಎನ್ನುವ ಕಾಂಗ್ರೆಸ್​​ ಸರ್ಕಾರಕ್ಕೆ ಈ ಬಸ್ಸುಗಳನ್ನು ಬ್ರ್ಯಾಂಡ್ ಮಾಡುವ ಯೋಚನೆಯೇ ಮಾಡಿಲ್ಲ ಎಂದು ಅನ್ನಿಸುತ್ತದೆ. ಕಳೆದ ಹಲವು ದಿನಗಳಿಂದ ಸರ್ಕಾರಿ ಬಸ್ಸುಗಳ ಬಗ್ಗೆ ಒಂದಲ್ಲ ಒಂದು ದೂರುಗಳು ಬರುತ್ತಲೇ ಇದೆ. ಇದೀಗ @KarnatakaPortfolio ಹಂಚಿಕೊಂಡಿರುವ ವಿಡಿಯೋ ನೋಡಿದ್ರೆ ಕೆಎಸ್​​ಆರ್​​ಟಿಸಿ ಬಸ್ಸುಗಳು ಎಷ್ಟು ಅಪಾಯಕಾರಿಯಾಗಿದೆ ಎಂಬುದನ್ನು ನೋಡಬಹುದು. ಇದೀಗ ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ಭಾರೀ ವೈರಲ್​​ ಆಗುತ್ತಿದೆ. ಇದೀಗ ಈ ತಾಂತ್ರಿಕ ದೋಷ ಜನರ ಜೀವನಕ್ಕೆ ಎಷ್ಟೊಂದು ಅಪಾಯಕಾರಿಯಾಗಿದೆ ಎಂಬುದನ್ನು ಹಾಗೂ ಸಂಸ್ಥೆಯ ನಿರ್ವಹಣಾ ಲೋಪವನ್ನು ಬೆತ್ತಲೆ ಮಾಡಿವೆ.

ಬಸ್ಸಿನ ವೇಗವನ್ನು ನಿಯಂತ್ರಿಸುವ ಆಕ್ಸಿಲರೇಟರ್ ಕಿತ್ತು ಬಂದಿದ್ದು, ಅದನ್ನು ಲೋಹದ ಬದಲು ಒಂದು ಸಾಧಾರಣ ಬಟ್ಟೆಯ ಪಟ್ಟಿಯಿಂದ ಕಟ್ಟಿ ನಿಲ್ಲಿಸಲಾಗಿದೆ. ಒಂದು ವೇಳೆ ಈ ಬಟ್ಟೆ ತುಂಡಾದರೆ ಅಪಘಾತ ಖಂಡಿತ. ಇಂತಹ ಬೇಜಾವ್ದಾರಿತನದಿಂದ ಜನರ ಪ್ರಾಣಕ್ಕೆ ಅಪಾಯ ತರುವುದು ಎಷ್ಟು ಸರಿ ಎಂದು ಜನ ಪ್ರಶ್ನೆ ಮಾಡಿದ್ದಾರೆ. ದಿನವಿಡೀ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದೊಯ್ಯಬೇಕಾದ ಚಾಲಕನ ಸೀಟನ್ನು ಸರಿಯಾಗಿ ರಿಪೇರಿ ಮಾಡುವ ಬದಲು, ಕಬ್ಬಿಣದ ತಂತಿಗಳಿಂದ ಕಟ್ಟಲಾಗಿದೆ. ಪಾಪ ಅವರಿಗೂ ಕೂಡ ಸರಿಯಾದ ವ್ಯವಸ್ಥೆಯನ್ನು ಕೂಡ ಮಾಡಲು ನಮ್ಮ ಸರ್ಕಾರದ ಬಳಿ ಹಣವಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ಇನ್ನು ಟೈರ್ ಬಳಿ ಆಯಿಲ್ ಸೋರಿಕೆಯಾಗಿರುವುದು ಕೂಡ ಈ ಬಸ್ಸಿನಲ್ಲಿ ಕಂಡು ಬಂದಿದೆ. ಇದರಿಂದ ಇದು ಬ್ರೇಕ್ ಫೇಲ್ಯೂರ್ ಅಥವಾ ಗೇರ್ ಬಾಕ್ಸ್ ಸಮಸ್ಯೆಯಾಗುವ ಸಾಧ್ಯತೆ ಕೂಡ ಇದೆ. ಪ್ರತಿದಿನ ಲಕ್ಷಾಂತರ ಶಾಲಾ ಮಕ್ಕಳು, ಕಾರ್ಮಿಕರು ಮತ್ತು ಸಾಮಾನ್ಯ ಜನರು ಈ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಬಸ್‌ಗಳ ಈ ದುಸ್ಥಿತಿಗೆ ಒತ್ತಡದಲ್ಲಿ ಕೆಲಸ ಮಾಡುವ ಚಾಲಕರನ್ನು ಹೊಣೆ ಮಾಡುವಂತಿಲ್ಲ. ಇದು ಸಂಪೂರ್ಣವಾಗಿ ಸಾರಿಗೆ ಇಲಾಖೆ ಮತ್ತು ಸರ್ಕಾರದ ನಿರ್ಲಕ್ಷ್ಯವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಯಾವುದಾದರೂ ದೊಡ್ಡ ದುರಂತ ಸಂಭವಿಸಿದ ಮೇಲೆ ಇಲಾಖೆ ಎಚ್ಚೆತ್ತುಕೊಳ್ಳುತ್ತದೆಯೇ?” ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ: ಮಹಿಳೆ ಬಟ್ಟೆ ವಾಷ್​ಗೆ ಹಾಕಲು ಬಂದಾಗ ವಾಷಿಂಗ್ ಮಷಿನ್ ಒಳಗೆ ಬೆಚ್ಚಗೆ ಮಲಗಿತ್ತು ಹಾವು! ಆಮೇಲೇನಾಯ್ತು ನೋಡಿ

ಸಾರ್ವಜನಿಕ ಸಾರಿಗೆಯು ನಂಬಿಕಾರ್ಹ ಮತ್ತು ಸುರಕ್ಷಿತವಾಗಿರಬೇಕು. ಆದರೆ ಈಗಿನ ಪರಿಸ್ಥಿತಿ ನೋಡಿದರೆ ಪ್ರಯಾಣಿಕರು ಪ್ರತಿ ಕ್ಷಣವೂ ಪ್ರಾಣಭಯದಲ್ಲೇ ಸಂಚರಿಸುವಂತಾಗಿದೆ. ಕೂಡಲೇ ಎಲ್ಲಾ ಬಸ್‌ಗಳ ತಾಂತ್ರಿಕ ತಪಾಸಣೆ ನಡೆಸಿ, ಅನರ್ಹ ವಾಹನಗಳನ್ನು ರಸ್ತೆಯಿಂದ ಹಿಂಪಡೆಯಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಹಿಳೆ ಬಟ್ಟೆ ವಾಷ್​ಗೆ ಹಾಕಲು ಬಂದಾಗ ವಾಷಿಂಗ್ ಮಷಿನ್ ಒಳಗೆ ಬೆಚ್ಚಗೆ ಮಲಗಿತ್ತು ಹಾವು! ಆಮೇಲೇನಾಯ್ತು ನೋಡಿ

ಚಾಮರಾಜನಗರ, ಏಪ್ರಿಲ್ 7: ಚಾಮರಾಜನಗರ ಜಿಲ್ಲೆಯ ಬೂದಿತಿಟ್ಟು ಗ್ರಾಮದ ಬಿಳಿಗಿರಿ ಎಂಬುವವರ ಮನೆಯಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಮನೆಯ ಹೊರಾಂಗಣದಲ್ಲಿದ್ದ ವಾಷಿಂಗ್ ಮಿಷನ್‌ನಲ್ಲಿ ಬಟ್ಟೆ ಒಗೆಯ ಹಾಕಲು ಹೋದ ಮಹಿಳೆಗೆ ಮಿಷನ್ ಒಳಗಿದ್ದ ಹಾವನ್ನು ನೋಡಿ ಶಾಕ್ ಆಗಿದೆ. ಬಿಸಿಲಿನ ಬೇಗೆಯಿಂದ ತಂಪಾದ ಜಾಗ ಅರಸಿ ಬಂದಿದ್ದ ನೀರುಹಾವು ಇದಾಗಿದ್ದು, ಉರಗ ತಜ್ಞ ಸ್ನೇಕ್ ಚಾಂಪು ಅವರು ಅದನ್ನು ರಕ್ಷಿಸಿದ್ದಾರೆ. ಬೇಸಿಗೆಯಲ್ಲಿ ಹಾವುಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಅವರು ಮನವಿ ಮಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯದಲ್ಲಿ ಬ್ಯಾನ್​​ ಆಗುತ್ತಾ ಸೋಲೋ ಟ್ರೆಕ್ಕಿಂಗ್?: ಅನುಭವ ಇದ್ದರೂ ಅಪಾಯ ಫಿಕ್ಸ್​​, ಯಾಕೆ ಗೊತ್ತಾ?

ಕೊಡಗು, ಏಪ್ರಿಲ್​​ 07: ಮಡಿಕೇರಿ ತಾಲೂಕಿನ ತಡಿಯಂಡಮೋಳ ಬೆಟ್ಟಕ್ಕೆ ಚಾರಣಕ್ಕೆಂದು ತೆರಳಿ ನಾಪತ್ತೆಯಾಗಿದ್ದ ಕೇರಳ ಮೂಲದ ಐಟಿ ಉದ್ಯೋಗಿ ಶರಣ್ಯಾ ಬರೋಬ್ಬರಿ 4 ದಿನಗಳ ಬಳಿಕ ಸುರಕ್ಷಿತವಾಗಿ ಪತ್ತೆಯಾಗಿದ್ದರು. ಆ ಬೆನ್ನಲ್ಲೇ ಅರಣ್ಯ ಇಲಾಖೆ ಕೊಡಗಿನ ತಡಿಯಂಡಮೋಳ ಟ್ರೆಕ್ಕಿಂಗ್ ಮಾರ್ಗವನ್ನು ಏಪ್ರಿಲ್ 11ರವರೆಗೆ ತಾತ್ಕಾಲಿಕವಾಗಿ ಮುಚ್ಚಿದೆ. ಈ ಮಾರ್ಗದಲ್ಲಿ ಕೆಲವು ಸುರಕ್ಷತಾ ಕ್ರಮಗಳನ್ನು ಬಲಪಡಿಸುವ ಯೋಜನೆ ಕೈಗೊಂಡಿರುವ ಹಿನ್ನೆಲೆ ಈ ನಿರ್ದಾರ ಕೈಗೊಂಡಿರೋದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಂದೆಡೆ ಸೋಲೋ ಟ್ರೆಕ್ಕಿಂಗ್​​ ಸಾಕಷ್ಟು ಅಪಾಯಕ್ಕೆ ಕಾರಣವಾಗಿರುವ ಕಾರಣ ಒಬ್ಬಂಟಿಯಾಗಿ ಚಾರಣಕ್ಕೆ ಹೋಗುವುದನ್ನು ನಿಷೇಧಿಸಬೇಕೆಂಬ ಆಗ್ರಹವೂ ವ್ಯಕ್ತವಾಗಿದೆ.

ಟ್ರೆಕ್ಕಿಂಗ್​​ಗೆಂದು ತೆರಳಿ ತಡಿಯಂಡಮೋಳ ಬೆಟ್ಟದಲ್ಲಿ ನಾಪತ್ತೆಯಾಗಿದ್ದ ಶರಣ್ಯಾಗೆ ಚಾರಣ ಹೊಸದೇನೂ ಆಗಿರಲಿಲ್ಲ. ಆ ಬಗ್ಗೆ ಸಾಕಷ್ಟು ಅನುಭವ ಅವರಿಗಿತ್ತು. ಹೀಗಾಗಿ ಟ್ರೆಕ್ಕರ್‌ಗಳು ಎಷ್ಟೇ ಅನುಭವ ಹೊಂದಿದ್ದರೂ ಪರಿಚಯವಿಲ್ಲದ ಮಾರ್ಗದಲ್ಲಿ ಒಬ್ಬರೇ ಟ್ರೆಕ್‌ಗೆ ಹೋಗುವುದು ಸೂಕ್ತವಲ್ಲ. ತಾವು ತೆರಳಲು ಉದ್ದೇಶಿಸಿದ ಮಾರ್ಗಗಳ ಕುರಿತು ಟ್ರೆಕ್ಕರ್‌ಗಳು ಮುಂಚಿತವಾಗಿ ಸಂಪೂರ್ಣ ಮಾಹಿತಿ ಸಂಗ್ರಹಿಸಿಕೊಳ್ಳಬೇಕು . ಒಬ್ಬರೇ ತೆರಳುವವರು ತಮ್ಮ ಹಾದಿಯನ್ನು ಜಾಗರೂಕತೆಯಿಂದ ಗುರುತಿಸಿಕೊಂಡು ಸಾಗಬೇಕು. ಹಲವು ಬಗೆಯ ನ್ಯಾವಿಗೇಶನ್ ಆಪ್‌ಗಳು ಲಭ್ಯವಿದ್ದು ಅವುಗಳನ್ನು ಬಳಸುವುದು ಒಳಿತು.  ಏಕೆಂದರೆ ಇವುಗಳಲ್ಲಿ ಪೂರ್ವನಕ್ಷಿತ ಮಾರ್ಗಗಳು ಲಭ್ಯವಿರುತ್ತವೆ ಎಂಬ ಅಭಿಪ್ರಾಯಗಳು ಕೂಡ ವ್ಯಕ್ತವಾಗಿವೆ. ಇನ್ನು ಟ್ರೆಕ್ಕರ್​​ಗಳು ಅಗತ್ಯ ಸಾಧನಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು. ಟಾರ್ಚ್‌ಲೈಟ್, ನೀರು ಮತ್ತು ಆಹಾರ, ಸೀಟಿ (whistle), ಪೋರ್ಟ್‌ಬಲ್ ಚಾರ್ಜರ್ ಮತ್ತು ಫಸ್ಟ್‌ಏಯ್ಡ್ ಕಿಟ್ ಈ ಪೈಕಿ ಇರಲೇ ಬೇಕಾದಂತವು ಎಂಬ ಸೂಚನೆಯನ್ನು ತಜ್ಞರು ನೀಡಿದ್ದಾರೆ.

ಇದನ್ನೂ ಓದಿ: ಕೊಡಗಿನಲ್ಲಿ ಟ್ರೆಕ್ಕಿಂಗ್​ಗೆ ತೆರಳಿ ನಿಗೂಢವಾಗಿ ನಾಪತ್ತೆಯಾಗಿದ್ದ ಯುವತಿ 4 ದಿನದ ಬಳಿಕ ಪತ್ತೆ

ಇನ್ನು ಕೊಡಗು ಜಿಲ್ಲೆಯ ಇತರೆ ಪ್ರಮುಖ ಟ್ರೆಕ್ಕಿಂಗ್ ಮಾರ್ಗಗಳಾದ ಸೋಮವಾರಪೇಟೆಯ ಬೀಡಹಳ್ಳಿಯಿಂದ ಆರಂಭವಾಗುವ ಕುಮಾರ ಪರ್ವತ ಟ್ರೆಕ್‌ಗೂ ಸ್ಪಷ್ಟ ಮಾರ್ಗಗಳಿದ್ದರೂ, ಅವು ಅರಣ್ಯ ಪ್ರದೇಶಗಳ ಮೂಲಕವೇ ಹೆಚ್ಚಾಗಿ ಸಾಗುವುದರಿಂದ ಇನ್ನಷ್ಟು ಸುರಕ್ಷತಾ ವ್ಯವಸ್ಥೆಗಳ ಅಗತ್ಯವಿದೆ. ಜೊತೆಗೆ ಈ ಮಾರ್ಗಗಳಲ್ಲಿ ಎಚ್ಚರಿಕೆ ಮತ್ತು ಸೂಚನಾ ಫಲಕಗಳ ಸ್ಥಾಪನೆ, ಸಂವಹನ ಕೇಂದ್ರಗಳ ನಿರ್ಮಾಣ, ವಿಶ್ರಾಂತಿ ಶೆಲ್ಟರ್‌ಗಳ ವ್ಯವಸ್ಥೆ, ಬ್ಯಾಕಪ್ ರೆಸ್ಕ್ಯೂ ತಂಡಗಳ ನಿಯೋಜನೆ ಮತ್ತು ಬೇಸ್ ಕ್ಯಾಂಪ್‌ಗಳಲ್ಲಿ ಆರೋಗ್ಯ ಸೇವೆಗಳ ಲಭ್ಯತೆ ಒದಗಿಸಬೇಕೇಂಬ ಬಗ್ಗೆಯೂ ಆಗ್ರಹ ಕೇಳಿಬಂದಿವೆ.

ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ತೆರಳುವವರಿಂದ ಅರಣ್ಯ ಇಲಾಖೆ ತಲಾ‌ 250 ರೂ. ಶುಲ್ಕ ವಸೂಲಿ ಮಾಡುತ್ಯದೆ.‌ ಆದರೆ ಚಾರಣ ತೆರಳುವವರ ಜೊತೆ ಯಾವುದೇ ಸಿಬ್ಬಂದಿಯನ್ನು ಕಳುಹಿಸುವುದಿಲ್ಲ. ಶರಣ್ಯಾ ಪ್ರಕರಣದಿಂದಾದರೂ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಚಾರಣ ಬರುವವರ ಜೊತೆ ಕನಿಷ್ಠ ಒಬ್ಬ ಸಿಬ್ಬಂದಿಯನ್ನು ಖಡ್ಡಾಯವಾಗಿ ಕಳುಹಿಸುವಂತಾಗಬೇಕು. ಇದರಿಂದ ಚಾರಣಿಗರು ಸುರಕ್ಷಿತವಾಗಿ ಹಿಂದಿರುಗಲು ಅನುಕೂಲವಾಗುತ್ತದೆ ಎಂದು ವಕೀಲ ಅಚ್ಚಾಂಡಿರ ಪವನ್ ಪೆಮ್ಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಬೀದಿ ಬದಿ ಕಸ ಹಾಕುವವರಿಗೆ ವಿಶಿಷ್ಟ ಬ್ಯಾನರ್ ಹಾಕಿ ವಾರ್ನಿಂಗ್ ಕೊಟ್ಟ ವ್ಯಕ್ತಿ

ಭಾರತದಲ್ಲಿ ಕಸದ ಸಮಸ್ಯೆಗಳು (garbage problem) ಹೆಚ್ಚಾಗುತ್ತಿದ್ದು, ಇದು ಮುಗಿಯದ ಗೋಳು ಎಂದರೂ ತಪ್ಪಿಲ್ಲ. ಹೌದು, ಪ್ರವಾಸಿ ತಾಣ, ಮನೆ, ಬೀದಿ ಬದಿ, ಸೇರಿದಂತೆ ಹೀಗೆ ಎಲ್ಲೆಂದರಲ್ಲಿ ಕಸ ಹಾಕುವುದು ಮಾತ್ರ ನಿಲ್ಲುತ್ತಿಲ್ಲ. ಈ ಸಮಸ್ಯೆಗಳನ್ನು ವಿದೇಶಿಗರು ತೋರಿಸುವ ಮಟ್ಟಿಗೆ ನಾವು ಬಂದು ತಲುಪಿದೆ. ಇದೀಗ ಬೀದಿ ಬದಿಯಲ್ಲಿ ಕಸ ಎಸೆದು ಹೋಗುವವರನ್ನೇ ಗುರಿಯಾಗಿಸಿಕೊಂಡು ಬ್ಯಾನರ್ ಹಾಕಿದ್ದು, ನಿನ್ನ ಹೆಣ ಸುಡಲು ಇನ್ನು ಕಸಬೇಕು ಹಾಗಾಗಿ ಕಸತಂದು ಹಾಕು. ಕಸದೊಂದಿಗೆ ನಿನ್ನ ಪಿಂಡಪ್ರದಾನ ಇಲ್ಲೇ ಮಾಡುವ ಎಂದು ಬರೆಯಲಾಗಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಈ ವೈರಲ್ ವಿಡಿಯೋವನ್ನು ನಿಲಿಶಾ ಡಿಸೋಜ (Nilisha Dsouza) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯಬಾರದೆಂದು ಬೀದಿ ಬದಿಯಲ್ಲಿ ಒಂದು ಬ್ಯಾನರ್ ಹಾಕಿದ್ದಾರೆ. ನಿನ್ನ ಹೆಣ ಸುಡಲು ಇನ್ನು ಕಸಬೇಕು ಹಾಗಾಗಿ ಕಸತಂದು ಹಾಕು. ಕಸದೊಂದಿಗೆ ನಿನ್ನ ಪಿಂಡಪ್ರದಾನ ಇಲ್ಲೇ ಮಾಡುವ. ಭಾವಪೂರ್ಣ ಶ್ರದ್ದಾಂಜಲಿ. ಇಲ್ಲಿ ಕಸ ಹಾಕುವ ಆತ್ಮಗಳಿಗೆ ಅರ್ಪಣೆ. ಪ್ರಕಟಣೆ : ನಾನು ಎಂದು ಬರೆದಿರುವುದನ್ನು ಕಾಣಬಹುದು.

ವೈರಲ್‌ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ನಿರ್ಮಾಣದ ಹೆಸರಿನಲ್ಲಿ ಹದಗೆಟ್ಟ ಬೆಂಗಳೂರು; ವರ್ಷಗಳ ಬಳಿಕ ನಗರಕ್ಕೆ ಮರಳಿದ ವ್ಯಕ್ತಿ ಹೀಗೆಂದಿದ್ದೇಕೆ?

ಈ ವಿಡಿಯೋ ಮೂವತ್ತೂ ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಅಣ್ಣ ಅವರಿಗೆ ಕನ್ನಡ ಓದೋಕೆ ಬರ್ಲಿಲ್ಲ ಅಂದ್ರೆ ಹೇಗೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಒಳ್ಳೆ ಕೆಲಸ ಮಾಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಕಸದ ವಿಷಯದಲ್ಲಿ ಇವನ ಮನ ಎಷ್ಟು ನೊಂದಿರಬೇಡ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಸಿಎಂ ಕುರ್ಚಿ ವಿವಾದ: ಸಚಿವ ಜಮೀರ್​​ ಹೇಳಿಕೆಗೆ ಡಿಸಿಎಂ ಡಿ.ಕೆ. ಶಿವಕುಮಾರ್​​ ಕೌಂಟರ್​​

ಹುಬ್ಬಳ್ಳಿ, ಏಪ್ರಿಲ್​​ 07: ಉಪಚುನಾವಣೆ ನಂತರ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವಿಷಯದಲ್ಲಿ ಯಾವುದೇ ಸಮಸ್ಯೆ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2028ರವರೆಗೂ ಸಿಎಂ ಆಗಿ ಮುಂದುವರೆಯುತ್ತಾರೆ ಎಂಬ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆಯ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು,ನಾನು ಬೇರೆಯವರ ಪ್ರಶ್ನೆಗೆ ಉತ್ತರ ಕೊಡಲು ಸಿದ್ಧನಿಲ್ಲ. ಪಕ್ಷದ ಅಧ್ಯಕ್ಷ ಅಥವಾ ಮುಖ್ಯಮಂತ್ರಿ ಉತ್ತರ ನೀಡಬೇಕು. ನಮ್ಮಿಬ್ಬರ ಮಾತು ಬಿಟ್ಟರೆ ಬೇರೆಯವರ ಮಾತು ಗೌಣ. ನನ್ನ ತಾಳ್ಮೆಗೆ ಕಾಲವೇ ಉತ್ತರ ಹೇಳಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

ನನಗೆ ಉದ್ಯಮಿ ಜೊತೆ ಮದುವೆ, ಮಕ್ಕಳು ಆಗಿದೆ: ಗರಂ ಆಗಿ ಹೇಳಿದ ನಟಿ ತ್ರಿಶಾ ಕೃಷ್ಣನ್

ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್ (Trisha Krishnan) ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ತಮಿಳು ನಟ ಹಾಗೂ ತಮಿಳಗ ವೆಟ್ರಿ ಕಳಗಂ ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ (Thalapathy Vijay) ಜೊತೆಗಿನ ರಿಲೇಷನ್​ಶಿಪ್ ಕಾರಣದಿಂದ ಅವರು ಚರ್ಚೆಗೆ ಆಹಾರ ಆಗಿದ್ದಾರೆ. ಈ ನಡುವೆ ಚಿತ್ರರಂಗದಿಂದ ಅವರು ಹೊರಬರುತ್ತಾರೆ ಎನ್ನುವ ವದಂತಿಗಳು ಕಾಲಿವುಡ್ ಅಂಗಳದಲ್ಲಿ ಜೋರಾಗಿ ಕೇಳಿಬರುತ್ತಿವೆ. ಇದೀಗ ಈ ಎಲ್ಲಾ ಗಾಸಿಪ್​ಗಳಿಗೆ ತ್ರಿಶಾ ಅವರು ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ.

ಖ್ಯಾತ ಪತ್ರಕರ್ತ ಮತ್ತು ನಟ ಚಿತ್ರಾ ಲಕ್ಷ್ಮಣನ್ ಅವರು ತಮ್ಮ ‘ಟೂರಿಂಗ್ ಟಾಕೀಸ್’ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುತ್ತಾ, ‘ತ್ರಿಶಾ ಅವರು ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸದಿರಲು ತೀರ್ಮಾನಿಸಿದ್ದಾರೆ ಎಂದು ಹಲವು ನಿರ್ಮಾಪಕರು ಹೇಳುತ್ತಿದ್ದಾರೆ’ ಎಂದು ತಿಳಿಸಿದ್ದರು. ತ್ರಿಶಾ ಇತ್ತೀಚೆಗೆ ಯಾವುದೇ ಹೊಸ ಸಿನಿಮಾಗಳಿಗೆ ಸಹಿ ಮಾಡದಿರುವುದು ಈ ಅನುಮಾನಕ್ಕೆ ತುಪ್ಪ ಸುರಿದಂತಾಗಿತ್ತು.

ತಮ್ಮ ನಿವೃತ್ತಿ ಹಾಗೂ ಮದುವೆಯ ಬಗ್ಗೆ ಹಬ್ಬಿರುವ ಸುದ್ದಿಯನ್ನು ಕಂಡು ಕೆಂಡಾಮಂಡಲವಾದ ತ್ರಿಶಾ, ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ‘ನಾನು ಸಿನಿಮಾಗಳನ್ನು ಬಿಟ್ಟಿದ್ದೇನಂತೆ. ಒಬ್ಬ ಶ್ರೀಮಂತ ಉದ್ಯಮಿಯನ್ನು ಮದುವೆಯಾಗಿದ್ದೇನಂತೆ. ಅಷ್ಟೇ ಅಲ್ಲದೇ, ನನಗೆ ನಾಲ್ಕು ಜನ ಮಕ್ಕಳಿದ್ದು ಅವರಿಗೆ ನಿನ್ನೆ ಎರಡನೇ ವರ್ಷದ ಹುಟ್ಟುಹಬ್ಬವೂ ಮುಗಿದಿದೆಯಂತೆ. ಇಂದಿನ ಕಲ್ಪಿತ ಕಥೆಯ ಕೋಟಾ ಮುಗಿಯಿತೇ ಅಥವಾ ನಾನು ಇನ್ನೂ ಏನಾದರೂ ಸೇರಿಸಬೇಕೇ’ ಎಂದು ಬರೆದುಕೊಳ್ಳುವ ಮೂಲಕ ವದಂತಿಗಳನ್ನು ತಳ್ಳಿಹಾಕಿದ್ದಾರೆ.

Trisha Krishnan Instagram Story

ಕಳೆದ ಅಕ್ಟೋಬರ್‌ನಲ್ಲಿ ತ್ರಿಶಾ ಅವರು ಚಂಡೀಗಢ ಮೂಲದ ಉದ್ಯಮಿಯೊಬ್ಬರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ‘ಪ್ರೀತಿ ಇಲ್ಲದೆ ಎಲ್ಲವೂ ಅರ್ಥಹೀನ’ ಎಂಬ ಅರ್ಥದ ಪೋಸ್ಟ್ ಹಂಚಿಕೊಂಡಿದ್ದು ಕೂಡ ಚರ್ಚೆಗೆ ಕಾರಣವಾಗಿತ್ತು. ಇನ್ನು, ನಟ ವಿಜಯ್ ಅವರ ಪತ್ನಿ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ, ವಿಜಯ್ ಮತ್ತು ತ್ರಿಶಾ ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಮದುವೆಯೊಂದಕ್ಕೆ ಒಂದೇ ರೀತಿಯ ಉಡುಪು ಧರಿಸಿ ಬಂದಿದ್ದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು.

ಇದನ್ನೂ ಓದಿ: ವಿಜಯ್ ಜೊತೆಗಿನ ಅಫೇರ್ ಬಗ್ಗೆ ನೇರ ಪ್ರಶ್ನೆ: ತ್ರಿಶಾ ಪ್ರತಿಕ್ರಿಯೆ ಹೇಗಿತ್ತು ನೋಡಿ

ತ್ರಿಶಾ ಚಿತ್ರರಂಗ ಬಿಡುತ್ತಾರೆ ಎಂಬುದು ಕೇವಲ ವದಂತಿ ಎಂಬುದು ಅವರ ಮುಂಬರುವ ಚಿತ್ರಗಳ ಪಟ್ಟಿಯನ್ನು ನೋಡಿದರೆ ತಿಳಿಯುತ್ತದೆ. 2025ರಲ್ಲಿ ‘ವಿದಾಮುಯರ್ಚಿ’, ‘ಗುಡ್ ಬ್ಯಾಡ್ ಅಗ್ಲಿ’, ‘ಥಗ್ ಲೈಫ್’ ಚಿತ್ರಗಳಲ್ಲಿ ತ್ರಿಶಾ ಅವರು ಕಾಣಿಸಿಕೊಂಡಿದ್ದರು. ‘ಕರುಪ್ಪು’, ‘ವಿಶ್ವಂಭರ’ ಮುಂತಾದ ಸಿನಿಮಾಗಳು ಈಗ ಅವರ ಕೈಯಲ್ಲಿವೆ. ಆ ಸಿನಿಮಾಗಳ ಬಿಡುಗಡೆಗೆ ಫ್ಯಾನ್ಸ್ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

16 ವರ್ಷಗಳಿಂದ ಭಾರತದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಪಾಕಿಸ್ತಾನದ ಎಲ್​ಇಟಿ ಉಗ್ರ ಸೆರೆ

ಶ್ರೀನಗರ, ಏಪ್ರಿಲ್ 7: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪೊಲೀಸರು ಇಂದು ಅಂತರರಾಜ್ಯ ಲಷ್ಕರ್-ಎ-ತೈಬಾ ಭಯೋತ್ಪಾದಕ ಘಟಕವನ್ನು ಭೇದಿಸಿದ್ದಾರೆ. ಅಬ್ದುಲ್ಲಾ ಅಲಿಯಾಸ್ ಅಬು ಹುರೇರಾ ಸೇರಿದಂತೆ 5 ಜನರನ್ನು ಬಂಧಿಸಿದ್ದಾರೆ. ಈತ 16 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಕೇಂದ್ರಾಡಳಿತ ಪ್ರದೇಶದ ಹೊರಗೆ ನೆಲೆಗಳನ್ನು ಸ್ಥಾಪಿಸಲು ಕಾರಣನಾಗಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ವ್ಯಕ್ತಿಗಳಲ್ಲಿ ಕಳೆದ 16 ವರ್ಷಗಳಿಂದ ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದ ಎಲ್‌ಇಟಿಯ ಪ್ರಮುಖ ಭಯೋತ್ಪಾದಕ ಅಬ್ದುಲ್ಲಾ ಅಲಿಯಾಸ್ ಅಬು ಹುರೇರಾ ಕೂಡ ಸೇರಿದ್ದಾರೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈತ ಭಯೋತ್ಪಾದಕ ಅಡಗುತಾಣಗಳು ಮತ್ತು ಹಣಕಾಸು ಮಾರ್ಗಗಳ ಜಾಲದ ಹಿಂದಿನ ಮಾಸ್ಟರ್ ಮೈಂಡ್ ಎಂದು ಹೇಳಲಾಗಿದೆ.

ಅಬ್ದುಲ್ಲಾ ಜೊತೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪೊಲೀಸರು ಮತ್ತು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಒಳಗೊಂಡ ಪ್ರಮುಖ ಕಾರ್ಯಾಚರಣೆಯಲ್ಲಿ ಮತ್ತೊಬ್ಬ ಪಾಕಿಸ್ತಾನಿ ಭಯೋತ್ಪಾದಕ ಉಸ್ಮಾನ್ ಅಲಿಯಾಸ್ ಖುಬೈಬ್ ಎಂಬಾತನನ್ನು ಸಹ ಬಂಧಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ, ಹರಿಯಾಣ ಸೇರಿದಂತೆ 19 ಸ್ಥಳಗಳಲ್ಲಿ ಶೋಧ ನಡೆಸಿದ್ದ ಪೊಲೀಸರು ಭಯೋತ್ಪಾದಕರಿಗೆ ಲಾಜಿಸ್ಟಿಕ್ಸ್ ಮತ್ತು ಆರ್ಥಿಕ ಬೆಂಬಲವನ್ನು ಒದಗಿಸುವಲ್ಲಿ ಭಾಗಿಯಾಗಿರುವ ಎಲ್‌ಇಟಿ ಜಾಲವನ್ನು ಪತ್ತೆಹಚ್ಚಿದ್ದರು.

ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ 17 ಬಾರಿ ತಪ್ಪಿಸಿಕೊಂಡಿದ್ದ ಉಗ್ರ ಸೇರಿ 7 ಭಯೋತ್ಪಾದಕರ ಎನ್​ಕೌಂಟರ್

ಪೊಲೀಸರ ಕೈಗೆ ಸಿಕ್ಕಿಬಿದ್ದ ಐವರಲ್ಲಿ ಮೂವರು ಶ್ರೀನಗರ ನಿವಾಸಿಗಳು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಯೋತ್ಪಾದಕರಿಗೆ ಆಶ್ರಯ ಮತ್ತು ಆಹಾರ ಸೇರಿದಂತೆ ಹಲವು ರೀತಿಯ ಬೆಂಬಲವನ್ನು ಒದಗಿಸಿದ ಆರೋಪದ ಮೇಲೆ ಮೊಹಮ್ಮದ್ ನಕೀಬ್ ಭಟ್, ಆದಿಲ್ ರಶೀದ್ ಭಟ್ ಮತ್ತು ಗುಲಾಮ್ ಮೊಹಮ್ಮದ್ ಮಿರ್ ಅಲಿಯಾಸ್ ಮಾಮಾ ಅವರನ್ನು ಬಂಧಿಸಲಾಗಿದೆ ಎಂದಿದ್ದಾರೆ.

ಲಷ್ಕರ್-ಎ-ತೈಬಾ ಜಾಲದ ಸಹಾಯದಿಂದ ಇತರ ರಾಜ್ಯಗಳಲ್ಲಿ ನಕಲಿ ದಾಖಲೆಗಳು ಮತ್ತು ಗುರುತಿನ ಆಧಾರದ ಮೇಲೆ ವಿದೇಶಿ ಭಯೋತ್ಪಾದಕನೊಬ್ಬ ದೇಶದ ಹೊರಗೆ ಪ್ರಯಾಣಿಸುವಲ್ಲಿ ಯಶಸ್ವಿಯಾಗಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಭಯೋತ್ಪಾದಕರು ಸುಮಾರು 16 ವರ್ಷಗಳ ಹಿಂದೆ ಭಾರತಕ್ಕೆ ನುಸುಳಿದ್ದರು. ಅವರು ಕಾಶ್ಮೀರ ಕಣಿವೆಯ ವಿವಿಧ ಜಿಲ್ಲೆಗಳಲ್ಲಿ ಸಕ್ರಿಯರಾಗಿದ್ದರು. ಇಲ್ಲಿಯವರೆಗೂ ಅವರು ಸುಮಾರು 40 ವಿದೇಶಿ ಭಯೋತ್ಪಾದಕರಿಗೆ ಸಹಾಯ ಮಾಡಿದ್ದರು. ಅವರಲ್ಲಿ ಹೆಚ್ಚಿನವರನ್ನು ಭಾರತೀಯ ಭದ್ರತಾ ಪಡೆಗಳು ಕೊಂದಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ರಜನೀಕಾಂತ್​​ಗೆ ಕೈಕೊಟ್ಟ ಶಾರುಖ್ ಖಾನ್, ‘ಜೈಲರ್ 2’ಗೆ ನೋ?

ರಜನೀಕಾಂತ್ (Rajinikanth) ನಟನೆಯ ‘ಜೈಲರ್ 2’ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿಯುವ ಹಂತದಲ್ಲಿದೆ. ಸಿನಿಮಾನಲ್ಲಿ ರಜನೀಕಾಂತ್ ಜೊತೆಗೆ ಇನ್ನೂ ಕೆಲವು ಸ್ಟಾರ್ ನಟರುಗಳು ನಟಿಸಲಿದ್ದಾರೆ. ‘ಜೈಲರ್’ ಸಿನಿಮಾನಲ್ಲಿ ತಮ್ಮ ಅತಿಥಿ ಪಾತ್ರದಿಂದ ಮ್ಯಾಜಿಕ್ ಮಾಡಿದ್ದ ಶಿವಣ್ಣ ಸೇರಿದಂತೆ ಮೋಹನ್​​ಲಾಲ್, ಜಾಕಿ ಶ್ರಾಫ್ ಇನ್ನೂ ಕೆಲವರಿದ್ದಾರೆ. ಈ ಸಿನಿಮಾನಲ್ಲಿ ಬಾಲಿವುಡ್​​ನ ಸೂಪರ್ ಸ್ಟಾರ್ ನಟ ಶಾರುಖ್ ಖಾನ್ ಸಹ ನಟಿಸಲಿದ್ದಾರೆ ಎಂಬ ಸುದ್ದಿ ಗಟ್ಟಿಯಾಗಿ ಕೇಳಿ ಬಂದಿತ್ತು. ಆದರೆ ಅದು ಸುಳ್ಳು ಎನ್ನಲಾಗುತ್ತಿದೆ.

ರಜನಿಕಾಂತ್ ಅವರ ‘ಜೈಲರ್ 2’ ಸಿನಿಮಾನಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ‘ಜೈಲರ್ 2’ ನಲ್ಲಿ ಶಿವಣ್ಣ, ಮೋಹನ್​​ಲಾಲ್ ಜೊತೆಗೆ ಶಾರುಖ್ ಖಾನ್ ಸಹ ಇರಲಿದ್ದಾರೆ ಎನ್ನಲಾಗಿತ್ತು. ಮೋಹನ್ ಲಾಲ್ ಅವರ ಕಾರ್ ಡ್ರೈವರ್ ಹಂಚಿಕೊಂಡಿದ್ದ ಒಂದು ಎಐ ಚಿತ್ರ, ಈ ಸುದ್ದಿಗೆ ಬಹಳಷ್ಟು ಪುಷ್ಠಿ ನೀಡಿತ್ತು. ಆದರೆ ಈಗ ಬಂದಿರುವ ಸುದ್ದಿಯ ಪ್ರಕಾರ, ‘ಜೈಲರ್ 2’ನ ಅತಿಥಿ ಪಾತ್ರವನ್ನು ಶಾರುಖ್ ಖಾನ್ ನಿರಾಕರಿಸಿದ್ದಾರಂತೆ. ಅವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ‘ಕಿಂಗ್’ ಸಿನಿಮಾದ ಮೇಲೆ ಹೆಚ್ಚು ಗಮನ ಹರಿಸಬೇಕಾಗಿರುವ ಕಾರಣದಿಂದಾಗಿ ಅವರು ‘ಜೈಲರ್ 2’ ಸಿನಿಮಾದ ಅತಿಥಿ ಪಾತ್ರವನ್ನು ನಿರಾಕರಿಸಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ರಜನೀಕಾಂತ್ ಋಣ ತೀರಿಸಿದ ಶಾರುಖ್ ಖಾನ್, ಎಸ್​​ಆರ್​​ಕೆ ಜೊತೆ ಎಸ್​​ಆರ್​​ಕೆ

“ಜೈಲರ್ 2 ಚಿತ್ರತಂಡವು ಶಾರುಖ್ ಖಾನ್ ಅವರಿಂದ 5 ದಿನಗಳ ಶೂಟಿಂಗ್ ಬಯಸಿತ್ತು. ಶಾರುಖ್ ಕೂಡ ಈ ವಿಚಾರಕ್ಕೆ ಸಕಾರಾತ್ಮಕವಾಗಿಯೇ ಪ್ರತಿಕ್ರಿಯಿಸಿದ್ದರು. ಆದರೆ ‘ಕಿಂಗ್’ ಸಿನಿಮಾಕ್ಕಾಗಿ ಶಾರುಖ್ ಖಾನ್ ಅವರು ತಮ್ಮ ಲುಕ್ ಬದಲಿಸಿದ್ದು, ಈಗ ‘ಜೈಲರ್’ಗಾಗಿ ತಮ್ಮ ಲುಕ್ ಬದಲಾಯಿಸುವ, ಅಥವಾ ಅದೇ ಲುಕ್​​ನಲ್ಲಿ ‘ಜೈಲರ್ 2’ ನಲ್ಲಿ ನಟಿಸುವುದು ಬೇಡ ಎಂದುಕೊಂಡಿದ್ದಾರಂತೆ. ‘ಕಿಂಗ್’ ಸಿನಿಮಾ ಬಿಡುಗಡೆಯಾಗುವ ಮೊದಲು ಬೇರೆ ಯಾವುದೇ ಚಿತ್ರಗಳಲ್ಲಿ ಅತಿಥಿ ನಟನಾಗಿ ಕಾಣಿಸಿಕೊಳ್ಳಬಾರದು ಎಂಬುದು ಶಾರುಖ್ ಖಾನ್ ಅವರ ಉದ್ದೇಶವಾಗಿದ್ದು, ಇದೇ ಕಾರಣಕ್ಕೆ ಅವರು ‘ಜೈಲರ್ 2’ ಸಿನಿಮಾನಲ್ಲಿ ನಟಿಸುತ್ತಿಲ್ಲ ಎನ್ನಲಾಗುತ್ತಿದೆ.

ಈ ಹಿಂದೆ ಶಾರುಖ್ ಖಾನ್ ನಟಿಸಿ, ನಿರ್ಮಾಣ ಮಾಡಿದ್ದ ‘ರಾ 1’ ಸಿನಿಮಾನಲ್ಲಿ ರಜನೀಕಾಂತ್ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಆ ಪಾತ್ರ ದೊಡ್ಡ ಹಿಟ್ ಆಗಿತ್ತು. ಇದೀಗ ‘ಜೈಲರ್ 2’ ಸಿನಿಮಾನಲ್ಲಿ ಅತಿಥಿ ಪಾತ್ರದಲ್ಲಿ ನಟಿಸುವ ಮೂಲಕ ಆ ಋಣವನ್ನು ಶಾರುಖ್ ಖಾನ್ ತೀರಿಸುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಶಾರುಖ್ ಖಾನ್ ಅವರು ‘ಜೈಲರ್ 2’ ಆಫರ್ ತಿರಸ್ಕರಿಸಿದ್ದಾರೆ. ಇದು ಸಹಜವಾಗಿಯೇ ರಜನೀಕಾಂತ್ ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಲಿದೆ.

‘ಜೈಲರ್ 2’ ಸಿನಿಮಾದ ಚಿತ್ರೀಕರಣ ಬಹುತೇಕ ಅಂತ್ಯವಾಗಿದ್ದು, ಸಿನಿಮಾ ಜೂನ್ ತಿಂಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಇನ್ನು ಶಾರುಖ್ ಖಾನ್ ನಟನೆಯ ‘ಕಿಂಗ್’ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಸಿನಿಮಾನಲ್ಲಿ ದೀಪಿಕಾ ಪಡುಕೋಣೆ ನಾಯಕಿ. ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಸಹ ಸಿನಿಮಾನಲ್ಲಿದ್ದಾರೆ. ‘ಕಿಂಗ್’ ಸಿನಿಮಾ ಇದೇ ವರ್ಷ ಡಿಸೆಂಬರ್​​ನಲ್ಲಿ ಬಿಡುಗಡೆ ಆಗಲಿದೆ. ‘ಕಿಂಗ್’ ಸಿನಿಮಾದ ಬಳಿಕ ಶಾರುಖ್ ಖಾನ್, ‘ಬ್ರಹ್ಮಾಸ್ತ್ರ’ ಸಿನಿಮಾದ ಪ್ರೀಕ್ವೆಲ್​​ನಲ್ಲಿ ನಟಿಸಲಿದ್ದಾರಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸೈಕಲ್ ಓಡಿಸುತ್ತಿದ್ದ ಬಾಲಕನಿಗೆ ಸಾಕು ನಾಯಿ ಕಡಿತ; ನಾಯಿ ಮಾಲೀಕರ ಮೇಲೆ ಎಫ್ಐಆರ್!

ಬೆಂಗಳೂರು, ಏಪ್ರಿಲ್ 07: ನಗರದಲ್ಲಿ ನಾಯಿಗಳ ಹಾವಳಿ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಬೀದಿ ನಾಯಿಗಳ (Stray Dogs) ಜೊತೆಗೆ ಸಾಕು ನಾಯಿಗಳ ದಾಳಿಯೂ ಹೆಚ್ಚಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ರಾಜಾಜಿನಗರದ 1ನೇ ಬ್ಲಾಕ್‌ನಲ್ಲಿ 11 ವರ್ಷದ ಬಾಲಕನ ಮೇಲೆ ಸಾಕು ನಾಯಿ ದಾಳಿ ನಡೆಸಿದ್ದು, ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ಬಾಲಕ ಒದ್ದಾಡುತ್ತಿದ್ದರೂ ಕ್ಯಾರೇ ಎನ್ನದ ಮಾಲೀಕರು

ಮಾರ್ಚ್ 21ರಂದು ಬೆಳಗ್ಗೆ ಬ್ರೆಡ್ ತರಲು ಸೈಕಲ್‌ನಲ್ಲಿ ತೆರಳುತ್ತಿದ್ದ ಬಾಲಕನ ಮೇಲೆ ವಾಕ್‌ಗೆ ಕರೆತಂದ ನಾಯಿಯು ಏಕಾಏಕಿ ದಾಳಿ ಮಾಡಿ ತೊಡೆಗೆ ಕಚ್ಚಿ ಗಾಯಗೊಳಿಸಿದೆ. ಘಟನೆಯಿಂದ ಬೆಚ್ಚಿಬಿದ್ದ ಬಾಲಕ ನೋವಿನಿಂದ ಬಳಲುತ್ತಿದ್ದರೂ, ನಾಯಿ ಮಾಲೀಕರು ಯಾವುದೇ ರೀತಿಯ ಸಹಾಯ ಮಾಡದೇ ಉದಾಸೀನತೆ ತೋರಿದ್ದಾರೆ ಎಂದು ಆರೋಪಿಸಲಾಗಿದೆ. ಚಿಕಿತ್ಸೆ ವೆಚ್ಚವನ್ನು ಕುಟುಂಬಸ್ಥರೇ ಭರಿಸಿದ್ದು, ಇದರಿಂದ ಆಕ್ರೋಶಗೊಂಡ ಪೋಷಕರು ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.

ನಾಯಿ ಮಾಲೀಕನಿಗೆ ನೋಟಿಸ್

ಘಟನೆಯಾಗಿ 15 ದಿನಗಳು ಕಳೆದರೂ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಪೊಲೀಸರು ಇದೀಗ ನಾಯಿ ಮಾಲೀಕನಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲು ಮುಂದಾಗಿದ್ದಾರೆ. ಬಾಲಕನ ತಾತ ವೇಣು ಮಾಧವ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ನಗರದಲ್ಲಿ ಹೆಚ್ಚುತ್ತಿರುವ ಇಂತಹ ಘಟನೆಗಳು ಜನರಲ್ಲಿ ಭೀತಿ ಹುಟ್ಟಿಸುತ್ತಿವೆ. ಸಾಕು ಪ್ರಾಣಿಗಳನ್ನು ಹೊರಗೆ ಕರೆದುಕೊಂಡು ಹೋಗುವಾಗ ಮಾಲೀಕರು ಕಡ್ಡಾಯವಾಗಿ ಮುನ್ನೆಚ್ಚರಿಕೆ ವಹಿಸಬೇಕು, ಇಲ್ಲವಾದರೆ ಇಂತಹ ಅಪಾಯಗಳು ಮರುಕಳಿಸುವ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bank Job 2026: ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್​​ನಲ್ಲಿ ನೇಮಕಾತಿ; 82 ಹುದ್ದೆಗೆ ಅರ್ಜಿ ಆಹ್ವಾನ

ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಹೊಸಪೇಟೆ ಖಾಲಿ ಇರುವ ವಿವಿಧ 82 ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿ ಜೀವನ ಆರಂಭಿಸಲು ಬಯಸುವ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಈ ನೇಮಕಾತಿಯು ಕರ್ನಾಟಕ ಸರ್ಕಾರದ ಸಹಕಾರ ಇಲಾಖೆಯ ನಿಯಮಾವಳಿಗಳ ಅನ್ವಯ ನಡೆಯಲಿದೆ.

ಈ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು ನಾಲ್ಕು ವರ್ಗದ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ವ್ಯವಸ್ಥಾಪಕರು ಅಥವಾ ಪ್ರಥಮ ದರ್ಜೆ ಸಹಾಯಕರ 22 ಹುದ್ದೆಗಳಿಗೆ 44,425 ರಿಂದ 83,700 ರೂ. ರವರೆಗೆ ವೇತನ ನಿಗದಿಯಾಗಿದೆ. ದ್ವಿತೀಯ ದರ್ಜೆ ಸಹಾಯಕರ 28 ಹುದ್ದೆಗಳಿಗೆ 34,100 ರಿಂದ 67,400 ರೂ. ವೇತನ ಶ್ರೇಣಿ ಇದ್ದರೆ, ಒಬ್ಬ ವಾಹನ ಚಾಲಕನ ಹುದ್ದೆಗೆ ರೂ. 31,775 ರಿಂದ 61,300 ಹಾಗೂ 31 ಕಿರಿಯ ಸೇವಕ ಹುದ್ದೆಗಳಿಗೆ ರೂ. 29,600 ರಿಂದ 52,800 ರವರೆಗೆ ಮಾಸಿಕ ವೇತನ ಲಭ್ಯವಿರುತ್ತದೆ.

ಅಭ್ಯರ್ಥಿಗಳು ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಅರ್ಜಿಗಳನ್ನು ಕೇವಲ ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶವಿದೆ. ಅಂಚೆ ಅಥವಾ ಕೊರಿಯರ್ ಮೂಲಕ ಕಳುಹಿಸುವ ಯಾವುದೇ ಭೌತಿಕ ಅರ್ಜಿಗಳನ್ನು ಬ್ಯಾಂಕ್ ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆಸಕ್ತರು ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ಆದ www.bellarydcc.bank.in ಗೆ ಭೇಟಿ ನೀಡಿ ನಿಗದಿತ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ.

ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಉದ್ಯೋಗ ಪಡೆಯುವುದು ಹೇಗೆ? ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ

ಅರ್ಜಿ ಸಲ್ಲಿಸಲು ಏಪ್ರಿಲ್ 6, 2026 ರಿಂದ ಚಾಲನೆ ನೀಡಲಾಗಿದ್ದು, ಮೇ 6 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ವಯೋಮಿತಿ, ಕನಿಷ್ಠ ವಿದ್ಯಾರ್ಹತೆ, ಮೀಸಲಾತಿ ವರ್ಗೀಕರಣ, ಅರ್ಜಿ ಶುಲ್ಕ ಮತ್ತು ಲಿಖಿತ ಪರೀಕ್ಷೆಯ ವಿವರಗಳನ್ನು ತಿಳಿದುಕೊಳ್ಳಲು ಅಭ್ಯರ್ಥಿಗಳು ಬ್ಯಾಂಕಿನ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಸವಿಸ್ತಾರವಾದ ಅಧಿಸೂಚನೆಯನ್ನು ಪರಿಶೀಲಿಸಲು ಸೂಚಿಸಲಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version