ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಿಸಿ ಕ್ರಿಕೆಟ್ ಲೋಕದ ಚಿತ್ರಣವನ್ನೇ ಬದಲಿಸಿದ ಲಲಿತ್ ಮೋದಿ (Lalit Modi) ಅವರ ಜೀವನ ಚರಿತ್ರೆ ಈಗ ಬೆಳ್ಳಿಪರದೆಗೆ ಬರಲು ಸಿದ್ಧವಾಗುತ್ತಿದೆ. ತಮ್ಮ ಜೀವನ ಆಧಾರಿತ ಬಯೋಪಿಕ್ (Lalit Modi Biopic) ಕೆಲಸಗಳು ಈಗ ಸ್ಕ್ರಿಪ್ಟಿಂಗ್ ಹಂತದಲ್ಲಿವೆ ಎಂದು ಲಲಿತ್ ಮೋದಿ ಅವರೇ ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಈ ಚಿತ್ರದಲ್ಲಿ ತಮ್ಮ ಪಾತ್ರವನ್ನು ಮಾಡಲು ಬಾಲಿವುಡ್‌ನ ಸ್ಟಾರ್ ನಟ ರಣವೀರ್ ಸಿಂಗ್ (Ranveer Singh) ತೀವ್ರ ಆಸಕ್ತಿ ತೋರಿಸಿದ್ದರು ಎಂಬ ಆಸಕ್ತಿದಾಯಕ ವಿಷಯವನ್ನು ಅವರು ಹಂಚಿಕೊಂಡಿದ್ದಾರೆ.

ಸುದ್ದಿಸಂಸ್ಥೆ ‘ಎಎನ್‌ಐ’ ಜೊತೆ ಮಾತನಾಡಿದ ಲಲಿತ್ ಮೋದಿ, ‘ನನ್ನ ಬಯೋಪಿಕ್ ಕೆಲಸಗಳು ನಡೆಯುತ್ತಿರುವುದು ನಿಜ. ಸದ್ಯ ಅದಕ್ಕೆ ಕಥೆ ಮತ್ತು ಚಿತ್ರಕಥೆ ಸಿದ್ಧಪಡಿಸಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ನೂರಾರು ಸಂದರ್ಶನಗಳನ್ನು ಮಾಡಲಾಗಿದೆ. ಸೋನಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದ ಸ್ನೇಹಾ ರಜನಿ ಅವರ ನೇತೃತ್ವದ ಇಡೀ ತಂಡ ಈ ಸ್ಕ್ರಿಪ್ಟಿಂಗ್ ಜವಾಬ್ದಾರಿಯನ್ನು ಹೊತ್ತುಕೊಂಡಿದೆ’ ಎಂದು ತಿಳಿಸಿದ್ದಾರೆ.

ಬಯೋಪಿಕ್‌ನಲ್ಲಿ ನಿಮ್ಮ ಪಾತ್ರವನ್ನು ಯಾರು ನಿರ್ವಹಿಸಬೇಕೆಂದು ಬಯಸುತ್ತೀರಿ ಎಂದು ಕೇಳಿದಾಗ, ಲಲಿತ್ ಮೋದಿ ಅವರು ರಣವೀರ್ ಸಿಂಗ್ ಅವರೊಂದಿಗಿನ ಭೇಟಿಯನ್ನು ನೆನಪಿಸಿಕೊಂಡರು. ‘ರಣವೀರ್ ಸಿಂಗ್ ನನ್ನ ಪಾತ್ರವನ್ನು ಮಾಡಲು ಬಯಸಿದ್ದಾರೆ. ಎರಡು ವರ್ಷಗಳ ಹಿಂದೆ ಅವರೇ ಸ್ವತಃ ನನಗೆ ಕರೆ ಮಾಡಿ, ನನ್ನನ್ನು ಭೇಟಿಯಾಗಲು ಲಂಡನ್‌ಗೆ ಬಂದಿದ್ದರು. ಅದಕ್ಕೂ ಮುನ್ನ ನನಗೆ ರಣವೀರ್ ಪರಿಚಯ ಇರಲಿಲ್ಲ, ಆದರೆ ದೀಪಿಕಾ ಪಡುಕೋಣೆ ಚೆನ್ನಾಗಿ ಗೊತ್ತಿದ್ದರು. ರಣವೀರ್ ನನ್ನನ್ನು ಭೇಟಿಯಾದ ಆ ದಿನ ನನಗೆ ಇಂದಿಗೂ ನೆನಪಿದೆ’ ಎಂದಿದ್ದಾರೆ.

ಲಲಿತ್ ಮೋದಿ ಅವರ ಪ್ರಕಾರ, ರಣವೀರ್ ಸಿಂಗ್ ಅವರ ಸಿನಿ ಜರ್ನಿಯನ್ನು ಅರ್ಥಮಾಡಿಕೊಳ್ಳಲು ತುಂಬಾ ಆಸಕ್ತಿ ತೋರಿಸಿದ್ದರಂತೆ. ‘ತಮ್ಮ ಸಿನಿಮೀಯ ಜೀವನದಲ್ಲಿ ಯಾವುದಾದರೂ ಒಂದು ಐತಿಹಾಸಿಕ ಪಾತ್ರವನ್ನು ಮಾಡಬೇಕು ಎಂದರೆ, ಅದು ಐಪಿಎಲ್ ಕಮಿಷನರ್ ಆಗಿದ್ದ ಲಲಿತ್ ಮೋದಿ ಅವರ ಪಾತ್ರ ಮಾತ್ರ ಎಂದು ರಣವೀರ್ ನನ್ನ ಬಳಿ ಹೇಳಿದ್ದರು. ನಾನಾಗಿಯೇ ಅವರಿಗೆ ಈ ಆಫರ್ ಕೊಟ್ಟಿರಲಿಲ್ಲ, ಅವರೇ ಆಸಕ್ತಿ ವಹಿಸಿದ್ದರು. ರಣವೀರ್ ಒಬ್ಬ ಅದ್ಭುತ ನಟ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ’ ಎಂದು ಮೋದಿ ಹೊಗಳಿದ್ದಾರೆ.

ಇದನ್ನೂ ಓದಿ: ರಣವೀರ್ ಸಿಂಗ್ ಬ್ಯಾನ್ ಮಾಡಿದ್ದಕ್ಕೆ ಗರಂ ಆದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ

ಆದರೆ, ರಣವೀರ್ ಸಿಂಗ್ ಈಗ ತುಂಬಾ ಬಿಜಿಯಾಗಿದ್ದು, ಅವರ ಸಿನಿಮಾ ಗ್ರಾಫ್ ಮತ್ತಷ್ಟು ಎತ್ತರಕ್ಕೆ ಬೆಳೆದಿದೆ. ಹೀಗಾಗಿ ಅವರು ಇಂದಿಗೂ ಈ ಪ್ರಾಜೆಕ್ಟ್‌ನಲ್ಲಿ ನಟಿಸಲು ಆಸಕ್ತಿ ಹೊಂದಿದ್ದಾರಾ ಅಥವಾ ಇಲ್ಲವೇ ಎಂಬುದು ಸದ್ಯಕ್ಕೆ ತಮಗೂ ತಿಳಿದಿಲ್ಲ ಎಂದು ಲಲಿತ್ ಮೋದಿ ಸ್ಪಷ್ಟಪಡಿಸಿದ್ದಾರೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಹಬ್ಬವಾದ ಐಪಿಎಲ್ ಅನ್ನು ಕಟ್ಟಿಬೆಳೆಸಿದ ಲಲಿತ್ ಮೋದಿ ಅವರ ಬಯೋಪಿಕ್ ಅನ್ನು ಯಾರು ನಿರ್ದೇಶನ ಮಾಡಲಿದ್ದಾರೆ ಮತ್ತು ಯಾರೆಲ್ಲಾ ನಟಿಸಲಿದ್ದಾರೆ ಎಂಬ ಅಧಿಕೃತ ಪ್ರಕಟಣೆಗಾಗಿ ಸದ್ಯ ಸಿನಿಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸರ್ಕಾರಿ ಶಾಲೆಗಳ ವಿಲೀನಕ್ಕೆ ಜನಾಕ್ರೋಶ: ರಾಯಚೂರಿನಲ್ಲಿ ಕೆಪಿಎಸ್ ಮ್ಯಾಗ್ನೆಟ್ ಯೋಜನೆಗೆ ತೀವ್ರ ವಿರೋಧ! – Kannada News

ರಾಯಚೂರು, ಜೂನ್​ 04: ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳನ್ನ ವಿಲೀನಗೊಳಿಸಿ, ಕೆಪಿಎಸ್ ಮ್ಯಾಗ್ನೆಟ್ ಶಾಲಾ ಯೋಜನೆಗೆ (KPS School Mergers) ಮುಂದಾಗಿದೆ. ಆದರೆ ಈ ಯೋಜನೆಗೆ ಭಾರೀ ವಿರೋಧದ ಜೊತೆ ಸರ್ಕಾರಿ ಶಾಲೆಗಳ ವಿಲೀನಕ್ಕೆ ಜನಾಕ್ರೋಶ ವ್ಯಕ್ತವಾಗಿದೆ. ಗಡಿ ಜಿಲ್ಲೆ ರಾಯಚೂರಿನಲ್ಲಿ (raichur) ಶೇಕಡ 50% ಖಾಯಂ ಶಿಕ್ಷಕರೇ ಇಲ್ಲಾ, ನೇಮಕ ಮಾಡುವುದನ್ನು ಬಿಟ್ಟು ಸರ್ಕಾರಿ ಶಾಲೆ ಮುಚ್ಚುವ ಹುನ್ನಾರ ನಡೆಯುತ್ತಿದೆ ಎಂದು ವಿವಿಧ ಸಂಘಟನೆಗಳು ಬೃಹತ್ ಪ್ರತಿಭಟನೆ ಮಾಡಿವೆ.

ಮುಖ್ಯಾಂಶಗಳು

  • ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯ KPS ಮ್ಯಾಗ್ನೆಟ್ ಯೋಜನೆಗೆ ವಿರೋಧ
  • ರಾಯಚೂರಿನಲ್ಲಿ ವಿವಿಧ ಸಂಘಟನೆಗಳು ಬೃಹತ್ ಪ್ರತಿಭಟನೆ
  • ಉಗ್ರ ಹೋರಾಟದ ಎಚ್ಚರಿಕೆ

ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆ, ರಾಜ್ಯದಲ್ಲಿ ಶೈಕ್ಷಣಿಕ ವಿಚಾರವಾಗಿ ಮಹತ್ವದ ಯೋಜನೆಗೆ ಮುಂದಾಗಿದೆ. ಆಯ್ದ ಸರ್ಕಾರಿ ಶಾಲೆಗಳನ್ನ ವಿಲೀನಗೊಳಿಸುವ ಮೂಲಕ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನ ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಆಯ್ದ ಸರ್ಕಾರಿ ಶಾಲೆಗಳನ್ನ ಗುರುತಿಸಿ ಅವುಗಳನ್ನ ವಿಲೀನ ಮಾಡಿ ಆಯಾ ವ್ಯಾಪ್ತಿಯಲ್ಲಿ ಕೆಪಿಎಸ್ ಶಾಲೆ ಶುರು ಮಾಡುವ ಯೋಜನೆ ಇದಾಗಿದೆ.

ಇದನ್ನೂ ಓದಿ: ಕೆಪಿಎಸ್ ಶಾಲೆಯಿಂದ ಸರ್ಕಾರಿ ಶಾಲೆಗಳು ಕ್ಲೋಸ್ ಆಗುತ್ತಿವೆಯಾ? ಕಳವಳ ವ್ಯಕ್ತಪಡಿಸಿದ ಹೊರಟ್ಟಿ

ಇತ್ತ ರಾಯಚೂರು ಜಿಲ್ಲೆಯಲ್ಲಿ ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಯೋಜನೆಯಡಿ ಸರ್ಕಾರಿ ಶಾಲೆಗಳ ವಿಲೀನ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದ್ದು, ಇದರಿಂದ ಜಿಲ್ಲೆಯ 100ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಮುಚ್ಚುವ ಭೀತಿ ಎದುರಾಗಿದೆ ಎಂದು ವಿವಿಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಈ ಬಗ್ಗೆ ಇಂದು ಎಐಡಿಎಸ್ಒ ಹಾಗೂ ಸಾರ್ವಜನಿಕ ಶಾಲೆ ಉಳಿಸಿ ಸಮಿತಿಯ ನೇತೃತ್ವದಲ್ಲಿ ರಾಯಚೂರು ನಗರದ ಹೊಸ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಮಾಡಲಾಗಿದೆ. ಪ್ರತಿಭಟನಾಕಾರರು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರುದ್ಧ ಪೋಸ್ಟ್‌ಕಾರ್ಡ್‌ಗಳನ್ನು ಪ್ರದರ್ಶಿಸಿ, ಶಾಲೆಗಳ ವಿಲೀನ ಪ್ರಕ್ರಿಯೆಯನ್ನು ತಕ್ಷಣ ಕೈಬಿಡುವಂತೆ ಹೋರಾಟಗಾರರು ಒತ್ತಾಯಿಸಿದರು.

266 ಶಾಲೆಗಳಲ್ಲಿ ತಲಾ ಒಬ್ಬರೇ ಶಿಕ್ಷಕರು

ಜಿಲ್ಲೆಯಲ್ಲಿ 50 ಕ್ಕೂ ಹೆಚ್ಚು ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಆರಂಭಕ್ಕೆ ಸಿದ್ಧತೆ ನಡೆಯುತ್ತಿದ್ದು, ಇದರ ಪರಿಣಾಮವಾಗಿ 100ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ವಿಲೀನಗೊಳ್ಳುವ ಸಾಧ್ಯತೆ ಇದೆ. ಗ್ರಾಮೀಣ ಹಾಗೂ ನಗರ ಭಾಗದ ಬಡ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಇದರಿಂದ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದು ಹೋರಾಟಗಾರರು ಆಕ್ರೋಶ ಹೊರಹಾಕಿದ್ದಾರೆ. ಗ್ರಾಮಗಳಲ್ಲಿರುವ ಶಾಲೆಗಳು ಮುಚ್ಚಿದರೆ ವಿದ್ಯಾರ್ಥಿಗಳು ನಾಲ್ಕೈದು ಕಿ.ಮೀ ದೂರದ ಕೆಪಿಎಸ್ ಶಾಲೆಗಳಿಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದರಿಂದ ಬಡ ಕುಟುಂಬಗಳ ಮಕ್ಕಳಲ್ಲಿ ಶಾಲೆಯಿಂದ ದೂರ ಉಳಿಯುವವರ ಸಂಖ್ಯೆ ಹೆಚ್ಚುವ ಆತಂಕವಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ.

ಇದೇ ವೇಳೆ ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ, ಮೂಲಭೂತ ಸೌಕರ್ಯಗಳ ಅಭಾವ ಸೇರಿದಂತೆ ಹಲವು ಸಮಸ್ಯೆಗಳು ತೀವ್ರವಾಗಿವೆ. ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ 5,624 ಶಿಕ್ಷಕರ ಹುದ್ದೆಗಳು ಮಂಜೂರಾಗಿದ್ದರೂ,  ಶೇಕಡ 50ರಷ್ಟು ಹುದ್ದೆಗಳು ಖಾಲಿ ಇವೆ ಎನ್ನಲಾಗಿದೆ. 266 ಏಕೋಪಾಧ್ಯಾಯ ಶಾಲೆಗಳು ಕೇವಲ ಒಬ್ಬ ಶಿಕ್ಷಕರಿಂದಲೇ ನಿರ್ವಹಣೆಯಾಗುತ್ತಿದ್ದು, ಅನೇಕ ಶಾಲೆಗಳಲ್ಲಿ ಖಾಯಂ ಶಿಕ್ಷಕರೇ ಇಲ್ಲ. ಹೀಗಾಗಿ ಅತಿಥಿ ಶಿಕ್ಷಕರ ನೇಮಕ ಮಾಡಲಾಗಿದೆ.

ಇದನ್ನೂ ಓದಿ: ಶಿಕ್ಷಕರ ಕೊರತೆ: ಸರ್ಕಾರಿ ಶಾಲೆಗಳ ವಿಲೀನಕ್ಕೆ ಶಿಕ್ಷಣ ಇಲಾಖೆ ಚಿಂತನೆ

ಇದಷ್ಟೇ ಅಲ್ಲ ಜಿಲ್ಲೆಯ 874 ಶಾಲೆಗಳಲ್ಲಿ ಶೌಚಾಲಯ ಸಮಸ್ಯೆಯೂ ಗಂಭೀರವಾಗಿದೆ. ಇಂತಹ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬದಲು ಸರ್ಕಾರ ಶಾಲೆಗಳ ವಿಲೀನಕ್ಕೆ ಮುಂದಾಗಿರುವುದು ಸರಿಯಲ್ಲ. ಮೂಲಭೂತ ಸೌಕರ್ಯ ಒದಗಿಸಿ, ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಸರ್ಕಾರಿ ಶಾಲೆಗಳನ್ನು ಬಲಪಡಿಸಬೇಕು. ಇಲ್ಲದಿದರೆ ಉಗ್ರ ಹೋರಾಟ ಮಾಡುವುದಾಗಿದೆ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

PAK vs AUS: ಪಾಕ್ ವಿರುದ್ಧ 38 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡ ಆಸ್ಟ್ರೇಲಿಯಾ – Kannada News

ಪ್ರಸ್ತುತ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ (Pakistan vs Australia) ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯುತ್ತಿದೆ. ಈಗಾಗಲೇ ನಡೆದಿರುವ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದಿವೆ. ಹೀಗಾಗಿ ಕೊನೆಯ ಪಂದ್ಯವನ್ನು ಗೆದ್ದ ತಂಡಕ್ಕೆ ಸರಣಿ ಸಿಗಲಿದೆ. ಹೀಗಾಗಿ ಇಂದು ನಡೆದ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ತಂಡ, ಪಾಕಿಸ್ತಾನಿ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿ ಹೋಗಿದೆ. ಇದರ ಪರಿಣಾಮವಾಗಿ ಇಡೀ ಆಸ್ಟ್ರೇಲಿಯಾ ತಂಡವು 42 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 157 ರನ್‌ಗಳಿಗೆ ಆಲೌಟ್ ಆಗಿದೆ.

ಆಸೀಸ್​ಗೆ ಆರಂಭದಲ್ಲೇ ಆಘಾತ

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ತನ್ನ ಕೊನೆಯ ಏಳು ವಿಕೆಟ್‌ಗಳನ್ನು ಕೇವಲ 38 ರನ್‌ಗಳಿಗೆ ಕಳೆದುಕೊಂಡಿತು. ಇತ್ತ ತಂಡಕ್ಕೆ ಉತ್ತಮ ಆರಂಭವೂ ಸಿಗಲಿಲ್ಲ. ಶೂನ್ಯಕ್ಕೆ ಮೊದಲ ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾ, 42 ರನ್​ಗಳಿಗೆ ತನ್ನ ಎರಡನೇ ವಿಕೆಟ್ ಕಳೆದುಕೊಂಡಿತು. 100 ರನ್​ಗಳ ಒಳಗೆ ಮೂರನೇ ವಿಕೆಟ್ ಕೂಡ ಪತನವಾಯಿತು. ಆದಾಗ್ಯೂ ನಾಯಕ ಜೋಶ್ ಇಂಗ್ಲಿಸ್ ಒಂದು ತುದಿಯನ್ನು ದೃಢವಾಗಿ ನಿಂತು 65 ರನ್​ಗಳ ಇನ್ನಿಂಗ್ಸ್ ಆಡಿದರು. ಇಂಗ್ಲಿಸ್ ಕ್ರೀಸ್‌ನಲ್ಲಿದ್ದ ತನಕ, ಆಸ್ಟ್ರೇಲಿಯಾ ದೊಡ್ಡ ಸ್ಕೋರ್‌ ದಾಖಲಿಸುವಂತೆ ತೋರುತ್ತಿತ್ತು. ಆದರೆ ಶಾಹೀನ್ ಶಾ ಅಫ್ರಿದಿ ಇಂಗ್ಲಿಸ್ ಅವರನ್ನು ಔಟ್ ಮಾಡಿದ ತಕ್ಷಣ, ಇಡೀ ಆಸ್ಟ್ರೇಲಿಯನ್ ಇನ್ನಿಂಗ್ಸ್ ತರಗೆಲೆಗಳಂತೆ ಉದುರಿತು.

157 ರನ್​ಗಳಿಗೆ ಆಲೌಟ್

ಒಂದು ಹಂತದಲ್ಲಿ ಆಸ್ಟ್ರೇಲಿಯಾ 26 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 119 ರನ್ ಗಳಿಸಿತ್ತು. ಆದರೆ ಜೋಶ್ ಇಂಗ್ಲಿಸ್ ಔಟಾದ ಬಳಿಕ ಆಸ್ಟ್ರೇಲಿಯಾದ ಯಾವುದೇ ಬ್ಯಾಟ್ಸ್‌ಮನ್​ಗೆ ಕ್ರೀಸ್‌ನಲ್ಲಿ ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ. ತಂಡವು 157 ರನ್ ತಲುಪುವ ಹೊತ್ತಿಗೆ, ಉಳಿದ 6 ವಿಕೆಟ್‌ಗಳನ್ನು ಕಳೆದುಕೊಂಡಿತು. ಜೋಶ್ ಇಂಗ್ಲಿಸ್ ಹೊರತುಪಡಿಸಿ, ಬೇರೆ ಯಾವುದೇ ಬ್ಯಾಟ್ಸ್‌ಮನ್​ಗೂ 20 ರನ್ ಗಳಿಸಲು ಸಾಧ್ಯವಾಗಲಿಲ್ಲ. ಮಾರ್ನಸ್ ಲಬುಶೇನ್ ಮತ್ತು ಅಲೆಕ್ಸ್ ಕ್ಯಾರಿ ತಲಾ 19 ರನ್ ಗಳಿಸಿದರೆ, ಕೊನೆಯಲ್ಲಿ ಆಡಮ್ ಜಂಪಾ 10 ರನ್ ಗಳಿಸಿದರು. ಬೇರೆ ಯಾವುದೇ ಆಟಗಾರನಿಗೆ ಎರಡಂಕಿ ತಲುಪಲು ಸಾಧ್ಯವಾಗಲಿಲ್ಲ.

ಗಾಯಗೊಂಡ ವಿರಾಟ್ ಕೊಹ್ಲಿ; ಅಫ್ಘಾನಿಸ್ತಾನದ ವಿರುದ್ಧದ ಏಕದಿನ ಸರಣಿಯಿಂದ ಔಟ್

ಶಾಹೀನ್ ಶಾ ಅಫ್ರಿದಿ ಮಾರಕ ದಾಳಿ

ಪಾಕಿಸ್ತಾನ ಪರ ಶಾಹೀನ್ ಶಾ ಅಫ್ರಿದಿ ಅದ್ಭುತ ಬೌಲಿಂಗ್ ಪ್ರದರ್ಶಿಸಿ ಎಂಟು ಓವರ್‌ಗಳಲ್ಲಿ 30 ರನ್‌ಗಳಿಗೆ ಮೂರು ವಿಕೆಟ್ ಪಡೆದರು. ಅಬ್ರಾರ್ ಅಹ್ಮದ್ ಮತ್ತು ಶಾದಾಬ್ ಖಾನ್ ತಲಾ ಎರಡು ವಿಕೆಟ್ ಪಡೆದರು. ಹ್ಯಾರಿಸ್ ರೌಫ್ ಕೂಡ ಒಂದು ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೂತನ ಸಚಿವರಿಗೆ ಖಾತೆ ಹಂಚಿಕೆ:ಪ್ರಿಯಾಂಕ್​​ ಖರ್ಗೆಗೆ ಗೃಹ, ಇನ್ನುಳಿದ ಯಾರಿಗೆ ಯಾವ ಖಾತೆ? – Kannada News

ಬೆಂಗಳೂರು, (ಜೂನ್ 04): ಡಿಕೆ ಶಿವಕುಮಾರ್ (DK Shivakuamr) ಸಂಪುಟ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಡಿಕೆ ಶಿವಕುಮಾರ್ ಜೊತೆ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣವ ವಚನ ಸ್ವೀಕರಿಸಿದ್ದ  13 ನೂತನ ಸಚಿವರಿಗೆ ಇಲಾಖೆಗಳ (Portfolios) ಜವಾಬ್ದಾರಿ ನೀಡಲಾಗಿದೆ. ಈ ಪೈಕಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹಣಕಾಸು ಇಲಾಖೆ, DPAR ಸೇರಿದಂತೆ ಇತರೆ ಕೆಲ ಖಾತೆಗಳನ್ನು ತಮ್ಮ ಬಳಿ ಉಳಿಸಿಕೊಂಡಿದ್ದು, ಇನ್ನುಳಿದ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಇದರೊಂದಿಗೆ ಆಯಕಟ್ಟಿನ ಹಣಕಾಸು, ಜಲಸಂಪನ್ಮೂಲ, ಗೃಹ, ಲೋಕೋಪಯೋಗಿ, ಬೆಂಗಳೂರು ಅಭಿವೃದ್ದಿ ಮುಂತಾದ ಖಾತೆಗಳು ಯಾರಿಗೆ ಹಂಚಿಕೆಯಾಗಲಿದೆ ಎನ್ನುವ ಗೊಂದಲಗಳಿಗೆ ತೆರೆ ಬಿದ್ದಿದೆ.

ಕೆಲವರಿಗೆ ಈ ಹಿಂದೆ ಸಿದ್ದರಾಮಯ್ಯನವರ ಸರ್ಕಾರದಲ್ಲಿ ನಿಭಾಯಿಸಿದ್ದ ಇಲಾಖೆಗಳ ಜವಾಬ್ದಾರಿಯನ್ನೇ ನೀಡಲಾಗಿದೆ. ಸಚಿವ ಕೃಷ್ಣ ಭೈರೇಗೌಡ ಅವರಿಗೆ ಬೆಂಗಳೂರು ನಗರಾಭಿವೃದ್ಧಿ (ಜಿಬಿಎ) ನೀಡಲಾಗಿದೆ. ಇನ್ನು ಬೆಂಗಳೂರು ನಗರಭಿವೃದ್ಧಿ ಮೇಲೆ ಕಣ್ಣಿಟ್ಟಿದ್ದ ರಾಮಲಿಂಗಾರೆಡ್ಡಿ ಅವರಿಗೆ ಜಲಸಂಪನ್ಮೂಲ ಇಲಾಖೆ ಜವಾಬ್ದಾರಿ ನೀಡಲಾಗಿದೆ.

ಯಾರಿಗೆ ಯಾವ ಖಾತೆ?

ಡಿಕೆ ಶಿವಕುಮಾರ್ (ಮುಖ್ಯಮಂತ್ರಿ):- ಹಣಕಾಸು ಇಲಾಖೆ, DPAR  ಮತ್ತು ಇತರೆ ಎಲ್ಲಾ ಖಾತೆಗಳು.

ಡಾ.ಜಿ.ಪರಮೇಶ್ವರ್​ (ಉಪಮುಖ್ಯಮಂತ್ರಿ) :ಕಂದಾಯ  ಹಾಗೂ ಕ್ರೀಡಾ ಹಾಗೂ ಯುವಜನ ಸಬಲೀಕರಣ.

ಪ್ರಿಯಾಂಕ್ ಖರ್ಗೆ- ಗೃಹ ಹಾಗೂ ಐಟಿ-ಬಿಟಿ ಇಲಾಖೆ

ಕೆ.ಜೆ.ಜಾರ್ಜ್- ಇಂಧನ ಮತ್ತು ಪ್ರವಾಸೋದ್ಯಮ ಇಲಾಖೆ

ಎಂ.ಬಿ.ಪಾಟೀಲ್- ಬೃಹತ್ & ಮಧ್ಯಮ ಕೈಗಾರಿಕೆ ಇಲಾಖೆ

ಸತೀಶ್ ಜಾರಕಿಹೊಳಿ– ಲೋಕೋಪಯೋಗಿ ಇಲಾಖೆ

ಕೃಷ್ಣ ಭೈರೇಗೌಡ– ಬೆಂಗಳೂರು ನಗರಾಭಿವೃದ್ಧಿ(ಜಿಬಿಎ)

ರಾಮಲಿಂಗಾರೆಡ್ಡಿ– ಜಲಸಂಪನ್ಮೂಲ ಇಲಾಖೆ

ಕೆ.ಹೆಚ್.ಮುನಿಯಪ್ಪ– ಆಹಾರ & ನಾಗರಿಕ ಸರಬರಾಜು ಇಲಾಖೆ

ಭೈರತಿ ಸುರೇಶ್– ಸಾರಿಗೆ ಇಲಾಖೆ

ಯು.ಟಿ.ಖಾದರ್– ಆರೋಗ್ಯ ಇಲಾಖೆ

ಡಾ.ಯತೀಂದ್ರ ಸಿದ್ದರಾಮಯ್ಯ– ನಗರಾಭಿವೃದ್ಧಿ ಇಲಾಖೆ

ಶರಣಪ್ರಕಾಶ್ ಪಾಟೀಲ್– ವೈದ್ಯಕೀಯ ಶಿಕ್ಷಣ ಇಲಾಖೆ

ಈಶ್ವರ್ ಖಂಡ್ರೆ- ಗ್ರಾಮೀಣಾಭಿವೃದ್ಧಿ ಇಲಾಖೆ

Source link

ಬಿಜೆಪಿ ತೊರೆದು ಹೊಸ ಪಕ್ಷ ಘೋಷಣೆ? ನಾಳೆ ಅಣ್ಣಾಮಲೈ ಮುಂದಿನ ಹೆಜ್ಜೆ ಪ್ರಕಟ – Kannada News

ಚೆನ್ನೈ, ಜೂನ್ 4: ತಮಿಳುನಾಡು ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸುವಂತಹ ಮಹತ್ವದ ಬೆಳವಣಿಗೆಯೊಂದರಲ್ಲಿ ತಮಿಳುನಾಡು ರಾಜ್ಯ ಬಿಜೆಪಿ (BJP) ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ (K Annamalai) ಅವರು ಪಕ್ಷವನ್ನು ತೊರೆಯುವುದು ಬಹುತೇಕ ಖಚಿತವಾಗಿದೆ. ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿದ್ದ ವದಂತಿಗಳಿಗೆ ಈಗ ಅಧಿಕೃತ ಮುದ್ರೆ ಬಿದ್ದಿದ್ದು, ನಾಳೆ (ಶುಕ್ರವಾರ) ಅವರು ತಮ್ಮ ಮುಂದಿನ ರಾಜಕೀಯ ಆಥವಾ ವೈಯಕ್ತಿಕ ಹೆಜ್ಜೆಯ ಕುರಿತು ಮಹತ್ವದ ಪ್ರಕಟಣೆ ಹೊರಡಿಸಲಿದ್ದಾರೆ.

ತಮಿಳುನಾಡು ವಿಧಾನಸಭಾ ಚುನಾವಣೆಯ ನಂತರ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮರುಸಂಘಟನೆ ನಡೆದಿದೆ. ನಟ ವಿಜಯ್ ನೇತೃತ್ವದ ಟಿವಿಕೆ (TVK) ಪಕ್ಷದೊಂದಿಗೆ ಕಾಂಗ್ರೆಸ್ ಕೈಜೋಡಿಸಿ ಸರ್ಕಾರ ರಚಿಸಲು ಮುಂದಾದ ಬೆನ್ನಲ್ಲೇ, ತಮಿಳುನಾಡಿನಲ್ಲಿ ಬಿಜೆಪಿಯ ಭವಿಷ್ಯ ಮತ್ತು ಕಾರ್ಯತಂತ್ರದ ಕುರಿತು ಭಿನ್ನಾಭಿಪ್ರಾಯಗಳು ತಲೆದೋರಿದ್ದವು ಎನ್ನಲಾಗಿದೆ. ತಮಿಳುನಾಡಿನಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಅಣ್ಣಾಮಲೈ ತೋರಿದ ಆಕ್ರಮಣಕಾರಿ ಶೈಲಿಗೆ ಸ್ಥಳೀಯವಾಗಿ ಮತ್ತು ಕೇಂದ್ರದ ಕೆಲವು ನಾಯಕರಿಂದ ನಿರೀಕ್ಷಿತ ಬೆಂಬಲ ಸಿಗಲಿಲ್ಲ ಎಂಬ ಅಸಮಾಧಾನವೂ ಈ ನಿರ್ಧಾರದ ಹಿಂದೆ ಇದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ಇದನ್ನೂ ಓದಿ: ಅಮಿತ್ ಶಾ ಜೊತೆ ಅಣ್ಣಾಮಲೈ ಮಾತುಕತೆ; ಮನವೊಲಿಕೆಗೆ ಬಿಜೆಪಿ ಹೈಕಮಾಂಡ್ ಕಸರತ್ತು

ಅಣ್ಣಾಮಲೈ ಅವರು ಬಿಜೆಪಿ ತೊರೆಯುವುದು ಖಚಿತವಾದ ಬೆನ್ನಲ್ಲೇ, ಅವರ ಮುಂದಿನ ನಡೆ ಏನು ಎಂಬ ಬಗ್ಗೆ ತೀವ್ರ ಕುತೂಹಲ ಮೂಡಿದೆ. ನಾಳೆ ಮಧ್ಯಾಹ್ನ 12 ಗಂಟೆಗೆ ಅವರು ಈ ಬಗ್ಗೆ ಘೋಷಿಸುವ ನಿರೀಕ್ಷೆಯಿದೆ. ತಮಿಳುನಾಡಿನ ಯುವಜನತೆ ಮತ್ತು ಮತದಾರರಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ಅಣ್ಣಾಮಲೈ, ಸ್ವಂತ ರಾಜಕೀಯ ಪಕ್ಷವನ್ನು ಘೋಷಿಸುವ ಸಾಧ್ಯತೆ ಇದೆ. ಅಥವಾ ರಾಜ್ಯದ ಪ್ರಸ್ತುತ ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಬೇರೆ ಯಾವುದಾದರೂ ಪ್ರಮುಖ ಪಕ್ಷದೊಂದಿಗೆ ಕೈಜೋಡಿಸುವ ನಿರ್ಧಾರವನ್ನೂ ಪ್ರಕಟಿಸಬಹುದು.

ಇಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅಣ್ಣಾಮಲೈ, “ನಾಳೆ (ಶುಕ್ರವಾರ) ಮಧ್ಯಾಹ್ನ 12 ಗಂಟೆಗೆ, ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮೆಲ್ಲರೊಂದಿಗೆ ಸಂವಹನ ನಡೆಸಲು, ನನ್ನ ಆಲೋಚನೆಗಳನ್ನು ಹಂಚಿಕೊಳ್ಳಲು ಮತ್ತು ಪ್ರಾಮಾಣಿಕವಾಗಿ, ಹೃದಯದಿಂದ ಸಂಭಾಷಣೆ ನಡೆಸಲು ನಾನು ಕಾಯುತ್ತಿದ್ದೇನೆ” ಎಂದು ಬರೆದಿದ್ದಾರೆ.

ಇದನ್ನೂ ಓದಿ: ತಮಿಳುನಾಡು ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ; ಬಿಜೆಪಿಗೆ ಕೆ. ಅಣ್ಣಾಮಲೈ ದಿಢೀರ್ ರಾಜೀನಾಮೆ

ಮಾಜಿ ಐಪಿಎಸ್ ಅಧಿಕಾರಿಯಾಗಿದ್ದ ಕೆ. ಅಣ್ಣಾಮಲೈ ಅವರು ತಮಿಳುನಾಡು ಬಿಜೆಪಿ ಅಧ್ಯಕ್ಷರಾದ ನಂತರ ರಾಜ್ಯದಲ್ಲಿ ಪಕ್ಷಕ್ಕೆ ಹೊಸ ಕಳೆ ಬಂದಿತ್ತು. ದ್ರಾವಿಡ ರಾಜಕಾರಣದ ಭದ್ರಕೋಟೆಯಲ್ಲಿ ಬಿಜೆಪಿಯನ್ನು ಪ್ರಮುಖ ಪರ್ಯಾಯ ಶಕ್ತಿಯಾಗಿ ಬೆಳೆಸಲು ಅವರು ತೀವ್ರ ಶ್ರಮವಹಿಸಿದ್ದರು. ಬಳಿಕ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ಈಗ ಅವರೇ ಪಕ್ಷದಿಂದ ಹೊರನಡೆಯುತ್ತಿರುವುದು ತಮಿಳುನಾಡಿನಲ್ಲಿ ನೆಲೆ ಕಂಡುಕೊಳ್ಳಲು ಹೋರಾಡುತ್ತಿರುವ ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಆ ಒಂದು ಪಂದ್ಯಕ್ಕೆ ಏಕೆ ಅಷ್ಟೊಂದು ಮನ್ನಣೆ’?; ವಿಶ್ವಕಪ್​ಗೂ ಮುನ್ನ ಸ್ಮೃತಿ ಮನವಿ – Kannada News

2026 ರ ಮಹಿಳಾ ಟಿ20 ವಿಶ್ವಕಪ್ (2026 Women’s T20 World Cup) ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಈ ಚುಟುಕು ಸಮರ ಜೂನ್ 12 ರಿಂದ ಜುಲೈ 5 ರವರೆಗೆ ನಡೆಯಲಿದೆ. ಭಾರತ ವನಿತಾ ಪಡೆ ಜೂನ್ 14 ರಂದು ನಡೆಯಲಿರುವ ಪಾಕಿಸ್ತಾನ ವಿರುದ್ಧದ ( India vs Pakistan) ಪಂದ್ಯದೊಂದಿಗೆ ತನ್ನ ಅಭಿಯಾನವನ್ನು ಆರಂಭಿಸಲಿದೆ. ಈ ಪಂದ್ಯಕ್ಕಾಗಿ ಇಡೀ ವಿಶ್ವ ಕ್ರಿಕೆಟ್ ಕಾದು ಕುಳಿತಿದೆ. ಏಕೆಂದರೆ ಉಭಯ ದೇಶಗಳ ತಂಡಗಳ ನಡುವಿನ ಕ್ರಿಕೆಟ್ ಪಂದ್ಯಕ್ಕೆ ವಿಶೇಷ ಅಭಿಮಾನಿಗಳ ಬಳಗವೇ ಇದೆ. ಅದು ಪುರುಷರ ಕ್ರಿಕೆಟ್ ಆಗಿರಲಿ ಅಥವಾ ಮಹಿಳಾ ಕ್ರಿಕೆಟ್ ಆಗಿರಲಿ, ಪಂದ್ಯ ನಡೆದಾಗಲೆಲ್ಲ ಮೈದಾನಗಳು ತುಂಬಿ ತುಳುಕುತ್ತವೆ. ಆದರೆ ಈ ಪಂದ್ಯ ನಡೆಯುವುದಕ್ಕೂ ಮುನ್ನವೇ ಭಾರತ ಮಹಿಳಾ ತಂಡದ ಉಪನಾಯಕಿ ಮತ್ತು ಸ್ಟಾರ್ ಓಪನರ್ ಸ್ಮೃತಿ ಮಂಧಾನ (Smriti Mandhana) ಮಾಧ್ಯಮ ಮತ್ತು ಅಭಿಮಾನಿಗಳ ಬಳಿ ವಿಶೇಷ ಮನವಿ ಮಾಡಿದ್ದಾರೆ.

ಹೈಪ್ ಸೃಷ್ಟಿಸುವ ಅಗತ್ಯವಿಲ್ಲ

ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಸ್ಮೃತಿ ಮಂಧಾನ ಮಾತನಾಡಿ, ‘ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ 2022 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ, ಭಾರತ-ಪಾಕಿಸ್ತಾನ ಪಂದ್ಯದ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿದ್ದವು. ಇದನ್ನು ಉಲ್ಲೇಖಿಸಿರುವ ಮಂಧಾನ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಮಾತ್ರವಲ್ಲ.. ಇತರ ಪಂದ್ಯಗಳಿಗೂ ಅದೇ ಮಟ್ಟದ ಕ್ರೇಜ್ ಇರಬೇಕೆಂದು ನಾನು ಬಯಸುತ್ತೇನೆ. ಈ ಒಂದು ಪಂದ್ಯಕ್ಕೆ ವಿಶೇಷ ಹೈಪ್ ಸೃಷ್ಟಿಸುವ ಅಗತ್ಯವಿಲ್ಲ, ಏಕೆಂದರೆ ಈಗಾಗಲೇ ಅದರ ಬಗ್ಗೆ ಸಾಕಷ್ಟು ಕ್ರೇಜ್ ಇದೆ. ಟೂರ್ನಿಯಾದ್ಯಂತ ಎಲ್ಲಾ ಅಭಿಮಾನಿಗಳು ನಮ್ಮನ್ನು ಬೆಂಬಲಿಸುತ್ತಾರೆ ಎಂದು ನಾನು ಭಾವಿಸುತ್ತೇನೆ.

ಮಹಿಳಾ ಕ್ರಿಕೆಟ್ ಪ್ರಸ್ತುತ ಪ್ರಪಂಚದಾದ್ಯಂತ ಅಪಾರ ಜನಪ್ರಿಯತೆಯನ್ನು ಗಳಿಸುತ್ತಿದೆ ಮತ್ತು ಪ್ರತಿಯೊಂದು ತಂಡದಲ್ಲೂ ಸಾಕಷ್ಟು ಪ್ರತಿಭಾನ್ವಿತ ಆಟಗಾರ್ತಿಯರು ಇದ್ದಾರೆ. ಹೀಗಾಗಿ ಅಭಿಮಾನಿಗಳು, ಕ್ರೀಡಾ ವಿಶ್ಲೇಷಕರು ಮತ್ತು ಮಾಧ್ಯಮಗಳು ಭಾರತ-ಪಾಕ್ ಪಂದ್ಯಕ್ಕೆ ಮಾತ್ರವಲ್ಲದೆ ಪಂದ್ಯಾವಳಿಯ ಇತರ ಎಲ್ಲಾ ಪಂದ್ಯಗಳಿಗೂ ಸಮಾನ ಗಮನ ನೀಡಬೇಕು, ಆಗ ಮಾತ್ರ ಮಹಿಳಾ ಕ್ರಿಕೆಟ್‌ಗೆ ನಿಜವಾದ ಮನ್ನಣೆ ಸಿಗುತ್ತದೆ ಎಂದಿದ್ದಾರೆ.

ಲೀಗ್ ಹಂತದಲ್ಲಿ ಭಾರತದ ವೇಳಾಪಟ್ಟಿ

ಈ ವಿಶ್ವಕಪ್‌ನಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಮಾತ್ರವಲ್ಲದೆ ಇತರ ಕೆಲವು ಬಲಿಷ್ಠ ತಂಡಗಳನ್ನೂ ಎದುರಿಸಬೇಕಾಗಿದೆ. ಜೂನ್ 14 ರಂದು ಪಾಕಿಸ್ತಾನ ವಿರುದ್ಧ ಭಾರತ ಗುಂಪು ಹಂತದಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಅದರ ನಂತರ, ನೆದರ್ಲ್ಯಾಂಡ್ಸ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಲೀಗ್ ಪಂದ್ಯಗಳನ್ನು ಆಡಲಿದೆ. ಆದ್ದರಿಂದ, ಪಂದ್ಯಾವಳಿಯಲ್ಲಿ ಮುಂದುವರಿಯಲು ಪ್ರತಿಯೊಂದು ಪಂದ್ಯವು ಬಹಳ ಮುಖ್ಯ ಎಂಬುದು ಸ್ಮೃತಿ ಮಂಧಾನ ಅವರ ಅಭಿಪ್ರಾಯವಾಗಿದೆ.

Womens T20 World Cup 2026: ಮಹಿಳಾ ಟಿ20 ವಿಶ್ವಕಪ್​ಗೆ ಟೀಂ ಇಂಡಿಯಾ ಪ್ರಕಟ

ಭಾರತ- ಪಾಕ್ ಮುಖಾಮುಖಿ ದಾಖಲೆ

ಮಹಿಳಾ ಟಿ20 ಕ್ರಿಕೆಟ್ ಇತಿಹಾಸವನ್ನು ನೋಡಿದರೆ, ಭಾರತ ತಂಡವು ಪಾಕಿಸ್ತಾನದ ವಿರುದ್ಧ ಅಜೇಯ ದಾಖಲೆಯನ್ನು ಹೊಂದಿದೆ. ಇಲ್ಲಿಯವರೆಗೆ, ಎರಡೂ ತಂಡಗಳು 16 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಟೀಂ ಇಂಡಿಯಾ 13 ಬಾರಿ ಗೆದ್ದಿದ್ದರೆ, ಪಾಕಿಸ್ತಾನ ಕೇವಲ 3 ಪಂದ್ಯಗಳನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಎರಡು ವರ್ಷಗಳ ಹಿಂದೆ 2024 ರ ಟಿ20 ವಿಶ್ವಕಪ್‌ನಲ್ಲಿ ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದಾಗ ಭಾರತ ತಂಡ, ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಸುಲಭವಾಗಿ ಸೋಲಿಸಿತು. ಹೀಗಾಗಿ ಈ ಬಾರಿಯೂ ಟೀಂ ಇಂಡಿಯಾವೇ ಗೆಲ್ಲುತ್ತದೆ ಎಂಬುದು ಅಭಿಮಾನಿಗಳ ಆಶಯವಾಗಿದೆ.

Published On – 9:13 pm, Thu, 4 June 26

Source link

15 ಲಕ್ಷ ಕೋಟಿ ರೂ ವಂಚನೆ: ಷೇರು ಮಾರ್ಕೆಟ್​ನಿಂದ ರಾಜೇಶ್ ಎಕ್ಸ್‌ಪೋರ್ಟ್ಸ್‌ ಲಿಮಿಟೆಡ್ ನಿಷೇಧ – Kannada News

ರಾಜೇಶ್ ಎಕ್ಸ್‌ಪೋರ್ಟ್ಸ್‌ ಲಿಮಿಟೆಡ್ Image Credit source: wikipedia

ಬೆಂಗಳೂರು, ಜೂನ್​ 04: ಬೆಂಗಳೂರು (bangaluru) ಮೂಲದ ಚಿನ್ನ ಸಂಸ್ಕರಣೆ ಮತ್ತು ಆಭರಣ ರಫ್ತು ಕಂಪನಿಯಾದ ರಾಜೇಶ್ ಎಕ್ಸ್‌ಪೋರ್ಟ್ಸ್‌ ಲಿಮಿಟೆಡ್ ವಿರುದ್ಧ ಬಂಡವಾಳ ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಬಿ (SEBI) ಭಾರಿ ಶಿಸ್ತುಕ್ರಮ ಜರುಗಿಸಿದೆ. ಕಂಪನಿಯು ಆರ್ಥಿಕ ಅಕ್ರಮ ಎಸಗಿರುವ ಗಂಭೀರ ಆರೋಪ ಹಿನ್ನೆಲೆ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಮೆಹ್ತಾಗೆ ಷೇರು ಮಾರುಕಟ್ಟೆಯಲ್ಲಿ ವಹಿವಾಟು ನಡೆಸದಂತೆ ತಾತ್ಕಾಲಿಕ ನಿಷೇಧ ಹೇರಿ ಮಧ್ಯಂತರ ಆದೇಶ ಹೊರಡಿಸಿದೆ.

ಮುಖ್ಯಾಂಶಗಳು

  • ಷೇರು ಮಾರ್ಕೆಟ್​ನಿಂದ ರಾಜೇಶ್ ಎಕ್ಸ್‌ಪೋರ್ಟ್ಸ್‌ ಲಿಮಿಟೆಡ್ ನಿಷೇಧ
  • ನಕಲಿ ಆದಾಯ ಆರೋಪ ಮತ್ತು ಹೂಡಿಕೆದಾರರಿಗೆ ವಂಚನೆ
  • ಬೆಂಗಳೂರಿನಲ್ಲಿರುವ 1989ರಲ್ಲಿ ಸ್ಥಾಪನೆಯಾಗಿದ್ದ REL ಕಂಪನಿ

ನಕಲಿ‌ ಆದಾಯ ತೋರಿಸಿ ಹೂಡಿಕೆದಾರರಿಗೆ ವಂಚನೆ

1989ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾಗಿದ್ದ ಈ ಕಂಪನಿಯು, ಈ ಹಿಂದೆ ಜಾಗತಿಕ ಮಟ್ಟದಲ್ಲಿ ದೊಡ್ಡ ಪ್ರಮಾಣದ ಚಿನ್ನದ ರಫ್ತುದಾರ ಎಂದು ಗುರುತಿಸಿಕೊಂಡಿತ್ತು. ಈ ಕಂಪನಿಯು 2021 ರಿಂದ 2025ರ ನಡುವಿನ ಅವಧಿಯಲ್ಲಿ ತನ್ನ ವಾರ್ಷಿಕ ಆದಾಯವನ್ನು ಬರೋಬ್ಬರಿ 15.15 ಲಕ್ಷ ಕೋಟಿ ರೂಪಾಯಿಗಳಷ್ಟು ಅತಿಯಾಗಿ ತೋರಿಸುವ ಮೂಲಕ ಹೂಡಿಕೆದಾರರಿಗೆ ವಂಚಿಸಿದೆ ಎಂಬ ದೂರು ಕೇಳಿಬಂದಿದೆ. ಕಂಪನಿಯ ಒಟ್ಟು ವರಮಾನದ ಸುಮಾರು ಭಾಗ ನಕಲಿ ಎಂಬ ಆಘಾತಕಾರಿ ಅಂಶ ಸೆಬಿಯ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಬೆಂಗಳೂರು: ಎಸ್​​ಬಿಐ ಬ್ಯಾಂಕ್ ಒಕ್ಕೂಟಕ್ಕೆ ಕೋಟ್ಯಂತರ ರೂ ವಂಚನೆ; ದೀಪಕ್ ಕೇಬಲ್ಸ್ ಲಿಮಿಟೆಡ್ ನಿರ್ದೇಶಕ ಅರೆಸ್ಟ್

ಇನ್ನು ಈ ಪ್ರಕರಣ ಬೆಳಕಿಗೆ ಬಂದಿದ್ದು 2024ರ ಮಾರ್ಚ್ 11ರಂದು ಸಾಮಾನ್ಯ ಹೂಡಿಕೆದಾರನೊಬ್ಬ ಸೆಬಿ ಮೆಟ್ಟಿಲೇರಿದಾಗ. ರಾಜೇಶ್ ಎಕ್ಸ್‌ಪೋರ್ಟ್ಸ್ ಕಂಪನಿಯು ತನ್ನ ಲೆಕ್ಕಪತ್ರಗಳಲ್ಲಿ ತೋರಿಸಿದ್ದ ಕೋಟ್ಯಂತರ ರೂ ವ್ಯಾಪಾರ ಬಾಕಿ ಮೊತ್ತ ಕಳೆದ ಎರಡು ವರ್ಷಗಳಿಂದಲೂ ವಸೂಲಾಗದೆ ಹಾಗೇ ಉಳಿದಿದ್ದನ್ನು ಆ ದೂರುದಾರ ಪ್ರಶ್ನಿಸಿದ್ದ. ಸಾಮಾನ್ಯವಾಗಿ ಇಷ್ಟು ಸುದೀರ್ಘ ಕಾಲ ಬೃಹತ್ ಮೊತ್ತದ ಹಣ ಬಾಕಿ ಉಳಿದಿರುವುದು ಕಂಪನಿಯ ದಿವಾಳಿತನ ಅಥವಾ ವ್ಯವಸ್ಥಿತ ಲೆಕ್ಕಪತ್ರ ವಂಚನೆ ಎನ್ನಲಾಗಿದೆ. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಸೆಬಿ, 2024ರ ಅಕ್ಟೋಬರ್‌ನಲ್ಲಿ ವಿಶೇಷ ತನಿಖಾ ಅಧಿಕಾರಿಯನ್ನು ನೇಮಿಸಿತ್ತು.

ಆರೋಪ ತಳ್ಳಿಹಾಕಿದ ರಾಜೇಶ್ ಎಕ್ಸ್‌ಪೋರ್ಟ್ಸ್ ಲಿಮಿಟೆಡ್ ಕಂಪನಿ

ಇನ್ನು ತನ್ನ ಮೇಲೆ ಬಂದಿರುವ ಅಕ್ರಮ ಆರೋಪಗಳನ್ನು ತಳ್ಳಿಹಾಕಿರುವ ರಾಜೇಶ್ ಎಕ್ಸ್‌ಪೋರ್ಟ್ಸ್ ಲಿಮಿಟೆಡ್ ಕಂಪನಿಯು, ‘ತಾನು ಘೋಷಿಸಿರುವ ವಾರ್ಷಿಕ ಆದಾಯದ ವಿವರಗಳು ಸಂಪೂರ್ಣವಾಗಿ ನಿಖರ ಹಾಗೂ ಸರಿಯಾಗಿವೆ ಎಂದು ಸ್ಪಷ್ಟನೆ ನೀಡಿದೆ. ಸೆಬಿ ಮತ್ತು ತನ್ನ ಕಂಪನಿ ನಡುವೆ ಮಾಹಿತಿ ವಿನಿಮಯದ ಕೊರತೆ ಹಾಗೂ ಗೊಂದಲ ಉಂಟಾಗಿರುವ ಸಾಧ್ಯತೆಯಿದೆ’ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಶಿವಾಜಿ ಚಿತ್ರವಿರುವ ಟಿ-ಶರ್ಟ್ ಧರಿಸಿ ರಿತೇಶ್ ದೇಶ್‌ಮುಖ್ ಪಾರ್ಟಿ; ಕ್ಷಮೆ ಕೇಳಿದ ನಟ – Kannada News

ಬಾಲಿವುಡ್ ಹಾಗೂ ಮರಾಠಿ ಚಿತ್ರರಂಗದ ಖ್ಯಾತ ನಟ-ನಿರ್ದೇಶಕ ರಿತೇಶ್ ದೇಶ್‌ಮುಖ್ (Riteish Deshmukh) ಅವರು ತಮ್ಮ ಇತ್ತೀಚಿನ ಸೂಪರ್ ಹಿಟ್ ಮರಾಠಿ ಸಿನಿಮಾ ‘ರಾಜಾ ಶಿವಾಜಿ’ (Raja Shivaji) ಚಿತ್ರದ ಸಕ್ಸಸ್ ಪಾರ್ಟಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿರುವ ವಿವಾದಕ್ಕೆ ಅಧಿಕೃತ ಸ್ಪಷ್ಟನೆ ನೀಡಿದ್ದಾರೆ. ಪಾರ್ಟಿಯ ವಿಡಿಯೋವೊಂದು ವೈರಲ್ ಆದ ಬೆನ್ನಲ್ಲೇ ಅವರ ಉಡುಪು ಮತ್ತು ನಡತೆಯ ಬಗ್ಗೆ ಕೇಳಿಬಂದಿದ್ದ ಗಂಭೀರ ಆರೋಪಗಳನ್ನು ಖಡಕ್ ಆಗಿ ನಿರಾಕರಿಸಿದ್ದಾರೆ.

‘ರಾಜಾ ಶಿವಾಜಿ’ ಚಿತ್ರಕ್ಕೆ ಪ್ರೇಕ್ಷಕರಿಂದ ಸಿಕ್ಕ ಅಭೂತಪೂರ್ವ ಯಶಸ್ಸಿನ ಬಳಿಕ ಚಿತ್ರತಂಡಕ್ಕೆ ಧನ್ಯವಾದ ತಿಳಿಸಲು ಈ ಖಾಸಗಿ ಪಾರ್ಟಿಯನ್ನು ಆಯೋಜಿಸಲಾಗಿತ್ತು ಎಂದು ರಿತೇಶ್ ತಿಳಿಸಿದ್ದಾರೆ. ತಾವು ಛತ್ರಪತಿ ಶಿವಾಜಿ ಮಹಾರಾಜರ ಪರಮ ಭಕ್ತರಾಗಿದ್ದು, ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸುವುದು ತಮ್ಮ ಕರ್ತವ್ಯ ಎಂದು ಭಾವಿಸಿ ಅವರು ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ.

ಪಾರ್ಟಿಯ ವೇಳೆ ರಿತೇಶ್ ಅವರು ಛತ್ರಪತಿ ಶಿವಾಜಿ ಮಹಾರಾಜರ ಚಿತ್ರವಿರುವ ಟಿ-ಶರ್ಟ್ ಧರಿಸಿ ಸಂಭ್ರಮಿಸುತ್ತಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಇದಕ್ಕೆ ವಿನಮ್ರವಾಗಿ ಉತ್ತರಿಸಿರುವ ರಿತೇಶ್, ‘ಶಿವಾಜಿ ಮಹಾರಾಜರ ಚಿತ್ರವಿರುವ ಟಿ-ಶರ್ಟ್ ಧರಿಸಿ ಪಾರ್ಟಿ ಮಾಡುವ ಮೂಲಕ ಅವರಿಗೆ ಅಪಮಾನ ಮಾಡುವ ಯಾವುದೇ ಉದ್ದೇಶ ನನಗಿರಲಿಲ್ಲ. ಸಿನಿಮಾದ ಪ್ರಚಾರದ ವೇಳೆ ನಾನು ಅದೇ ಟಿ-ಶರ್ಟ್ ಧರಿಸಿದ್ದೆ. ಅಂದು ಪ್ರಚಾರದ ಕೆಲಸ ಮುಗಿಸಿ ನೇರವಾಗಿ ಪಾರ್ಟಿಗೆ ಬರಬೇಕಾದ್ದರಿಂದ, ಉಡುಪು ಬದಲಾಯಿಸಲು ಸಾಧ್ಯವಾಗಲಿಲ್ಲ. ಇದು ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ’ ಎಂದು ಕ್ಷಮೆಯಾಚಿಸಿದ್ದಾರೆ.

ರಿತೇಶ್ ದೇಶ್‌ಮುಖ್ ವೈರಲ್ ವಿಡಿಯೋ:

ಇದೇ ಪಾರ್ಟಿಯಲ್ಲಿ ರಿತೇಶ್ ದೇಶ್‌ಮುಖ್ ಮದ್ಯ ಸೇವಿಸುತ್ತಿದ್ದರು ಎಂಬ ಆರೋಪಗಳೂ ಕೇಳಿಬಂದಿದ್ದವು. ಇದನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಅವರು, ‘ನಾನು ನನ್ನ ಜೀವನದಲ್ಲಿ ಇದುವರೆಗೂ ಎಂದೂ ಮದ್ಯ ಸೇವಿಸಿಲ್ಲ, ಮುಂದಿನ ದಿನಗಳಲ್ಲೂ ಅದನ್ನು ಮುಟ್ಟುವುದಿಲ್ಲ. ಆದ್ದರಿಂದ ಇಂತಹ ಆರೋಪಗಳು ಸತ್ಯಕ್ಕೆ ತೀರಾ ದೂರವಾಗಿವೆ. ಈ ವಿಡಿಯೋ ಚಿತ್ರೀಕರಿಸಿದ ವ್ಯಕ್ತಿಗೆ ನಮ್ಮ ಪಾರ್ಟಿಗೆ ಆಹ್ವಾನವೇ ಇರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಆದಾಗ್ಯೂ, ನನ್ನ ಈ ಕ್ರಿಯೆಯಿಂದ ಯಾರದೇ ಭಾವನೆಗಳಿಗೆ ಧಕ್ಕೆಯಾಗಿದ್ದರೆ, ಶಿವಾಜಿ ಮಹಾರಾಜರ ಒಬ್ಬ ಅನುಯಾಯಿ ಆಗಿ ನಾನು ಮನಸಾರೆ ವಿಷಾದ ವ್ಯಕ್ತಪಡಿಸುತ್ತೇನೆ’ ಎಂದು ರಿತೇಶ್ ಹೇಳಿದ್ದಾರೆ. ಈ ಮೂಲಕ ಅವರು ಎಲ್ಲ ವಿವಾದಗಳಿಗೆ ಫುಲ್ ಸ್ಟಾರ್ ಇಟ್ಟಿದ್ದಾರೆ. ಶಿವಾಜಿ ಮಹಾರಾಜರ ಬಗ್ಗೆ ತಮಗೆ ಅಪಾರ ಗೌರವ ಇದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ರಾಜ ಶಿವಾಜಿ’ ಚಿತ್ರದಿಂದ ರಿತೇಶ್​​ಗೆ ದೊಡ್ಡ ಗೆಲುವು; ಸಿನಿಮಾ ಕಂಡ ಲಾಭ ಎಷ್ಟು?

‘ಛತ್ರಪತಿ ಶಿವಾಜಿ ಮಹಾರಾಜರು ನಮ್ಮೆಲ್ಲರ ನಂಬಿಕೆ, ಸ್ಫೂರ್ತಿ ಮತ್ತು ಸ್ವಾಭಿಮಾನದ ಸಂಕೇತ. ಅವರ ಮೇಲೆ ನನ್ನ ಹೃದಯದಲ್ಲಿ ಅಪಾರ ಗೌರವ, ಪ್ರೀತಿ ಮತ್ತು ನಿಷ್ಠೆ ಇದೆ. ಈ ಭಾವನೆ ಇಂದಿಗೂ ಮತ್ತು ಎಂದೆಂದಿಗೂ ಹೀಗೆಯೇ ಇರುತ್ತದೆ. ಜೈ ಶಿವರಾಯ್’ ಎಂದು ಬರೆಯುವ ಮೂಲಕ ರಿತೇಶ್ ದೇಶ್‌ಮುಖ್ ಅವರು ವಿವಾದವನ್ನು ಅಂತ್ಯಗೊಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಿಜೆಪಿಯ ರಾಜ್ಯಸಭಾ ಅಭ್ಯರ್ಥಿಗಳ ಪಟ್ಟಿ ಪ್ರಕಟ; 11 ನಾಯಕರಿಗೆ ಟಿಕೆಟ್ – Kannada News

ದೆಹಲಿ, ಜೂನ್ 4: ಮುಂಬರುವ ರಾಜ್ಯಸಭೆಯ ಉಪಚುನಾವಣೆ (Rajya Sabha Elections) ಹಾಗೂ ಖಾಲಿ ಇರುವ ಸ್ಥಾನಗಳಿಗಾಗಿ ಬಿಜೆಪಿ ತನ್ನ 11 ಅಧಿಕೃತ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಪಕ್ಷದ ಹಿರಿಯ ನಾಯಕರು ಮತ್ತು ವಿವಿಧ ರಾಜ್ಯಗಳ ಪ್ರಮುಖ ಮುಖಂಡರಿಗೆ ಈ ಪಟ್ಟಿಯಲ್ಲಿ ಸ್ಥಾನ ಕಲ್ಪಿಸಲಾಗಿದ್ದು, ರಾಜಸ್ಥಾನದಿಂದ ಸತೀಶ್ ಪೂನಿಯಾ ಮತ್ತು ಮಧ್ಯಪ್ರದೇಶದಿಂದ ತರುಣ್ ಚುಗ್ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಬಿಜೆಪಿಯಿಂದ ರಾಜಸ್ಥಾನದಿಂದ ಸತೀಶ್ ಪೂನಿಯಾ ಮತ್ತು ಮಧ್ಯಪ್ರದೇಶದಿಂದ ತರುಣ್ ಚುಗ್ ಅವರನ್ನು ಕಣಕ್ಕಿಳಿಸಲಾಗಿದೆ. ಅರುಣಾಚಲ ಪ್ರದೇಶದಿಂದ ತಾಯಿ ತಾಗಕ್ ಸ್ಪರ್ಧಿಸಲಿದ್ದರೆ, ಗುಜರಾತ್‌ನಿಂದ ರಾಜುಭಾಯ್ ಶುಕ್ಲಾ, ಮುಖೇಶ್‌ಭಾಯ್ ರಾಥ್ವಾ, ಮಾನಸಿಂಗ್ ಪರ್ಮಾರ್ ಮತ್ತು ಜಿತೇಂದ್ರ ಮೇಘ್ ಜಿಭಾಯ್ ಕಂಜಾರಿಯಾ ಸ್ಪರ್ಧಿಸಲಿದ್ದಾರೆ. ಮಧ್ಯಪ್ರದೇಶದಿಂದ ತರುಣ್ ಚುಗ್ ಮತ್ತು ರಜನೀಶ್ ಅಗರ್ವಾಲ್ ಹಾಗೂ ಮಣಿಪುರದಿಂದ ಎ. ಶಾರದಾ ದೇವಿ ಅವರಿಗೆ ಟಿಕೆಟ್ ನೀಡಲಾಗಿದೆ.

ರಾಜಸ್ಥಾನ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷರಾದ ಸತೀಶ್ ಪೂನಿಯಾ ಅವರಿಗೆ ರಾಜಸ್ಥಾನದಿಂದ ರಾಜ್ಯಸಭಾ ಸ್ಥಾನಕ್ಕೆ ಟಿಕೆಟ್ ನೀಡಲಾಗಿದೆ. ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗಿದ್ದ ಅವರಿಗೆ ಈಗ ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಜವಾಬ್ದಾರಿ ನೀಡಲಾಗುತ್ತಿದೆ. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ತರುಣ್ ಚುಗ್ ಅವರನ್ನು ಮಧ್ಯಪ್ರದೇಶದಿಂದ ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ.

ಇದನ್ನೂ ಓದಿ: ರಾಜ್ಯಸಭಾ ಚುನಾವಣೆಗೆ ‘ಕೈ’ನಲ್ಲಿ ಭಾರಿ ಪೈಪೋಟಿ: ಮುಂಚೂಣಿಯಲ್ಲಿವೆ ಕೆಲ ನಾಯಕರ ಹೆಸರು

ಇವರೊಂದಿಗೆ ವಿವಿಧ ರಾಜ್ಯಗಳ ಒಟ್ಟು 11 ಜನ ನಾಯಕರನ್ನು ರಾಜ್ಯಸಭೆಗೆ ಕಳುಹಿಸಲು ಬಿಜೆಪಿ ಹೈಕಮಾಂಡ್ ಹಸಿರು ನಿಶಾನೆ ತೋರಿದೆ. ರಾಜ್ಯವಾರು ಸಮೀಕರಣ ಮತ್ತು ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಆಯ್ಕೆ ಮಾಡಲಾಗಿದೆ. ವಿವಿಧ ರಾಜ್ಯಗಳಲ್ಲಿ ಶಾಸಕರ ಸಂಖ್ಯಾಬಲದ ಆಧಾರದ ಮೇಲೆ ಈ ಬಿಜೆಪಿ ಅಭ್ಯರ್ಥಿಗಳ ಗೆಲುವು ಬಹುತೇಕ ಖಚಿತವಾಗಿದೆ. ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯಲ್ಲಿ ತನ್ನ ಬಲವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಮತ್ತು ಪ್ರಮುಖ ಮಸೂದೆಗಳ ಅಂಗೀಕಾರಕ್ಕೆ ಅನುಕೂಲ ಮಾಡಿಕೊಳ್ಳಲು ಬಿಜೆಪಿ ಈ ತಂತ್ರ ರೂಪಿಸಿದೆ. ಪ್ರಾದೇಶಿಕ ನಾಯಕರಿಗೆ ರಾಷ್ಟ್ರ ಮಟ್ಟದಲ್ಲಿ ಪ್ರಾತಿನಿಧ್ಯ ನೀಡುವ ಮೂಲಕ ಪಕ್ಷದ ಸಂಘಟನೆಯನ್ನು ಬಲಪಡಿಸುವುದು ಇದರ ಹಿಂದಿನ ಉದ್ದೇಶವಾಗಿದೆ.

ಕಳೆದ ತಿಂಗಳು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ದಿಗ್ವಿಜಯ್ ಸಿಂಗ್ ಸೇರಿದಂತೆ ಹಾಲಿ ಸದಸ್ಯರ ನಿವೃತ್ತಿಯಿಂದಾಗಿ ಖಾಲಿ ಇರುವ 24 ರಾಜ್ಯಸಭಾ ಸ್ಥಾನಗಳಿಗೆ ಜೂನ್ 18ರಂದು ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಪ್ರಕಟಿಸಿತ್ತು. ಜೂನ್ 21ರಿಂದ ಜುಲೈ 19ರ ನಡುವೆ ವಿವಿಧ ದಿನಾಂಕಗಳಲ್ಲಿ ಸದಸ್ಯರು ನಿವೃತ್ತರಾಗುತ್ತಿರುವ 10 ರಾಜ್ಯಗಳಲ್ಲಿ ಈ ಚುನಾವಣೆ ನಡೆಯಲಿದೆ ಎಂದು ಆಯೋಗ ತಿಳಿಸಿದೆ.

ಇದನ್ನೂ ಓದಿ: ತಮಿಳುನಾಡು ಉಪಚುನಾವಣೆ; ಕಾಂಗ್ರೆಸ್‌ಗೆ ರಾಜ್ಯಸಭಾ ಸ್ಥಾನ ಬಿಟ್ಟುಕೊಟ್ಟ ವಿಜಯ್ ನೇತೃತ್ವದ ಟಿವಿಕೆ

ರಾಜ್ಯಸಭಾ ಚುನಾವಣೆಯು ಆಂಧ್ರಪ್ರದೇಶ, ಗುಜರಾತ್ ಮತ್ತು ಕರ್ನಾಟಕದಲ್ಲಿ ತಲಾ 4 ಸ್ಥಾನಗಳಿಗೆ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ 3 ಸ್ಥಾನಗಳಿಗೆ, ಜಾರ್ಖಂಡ್‌ನಲ್ಲಿ 2 ಸ್ಥಾನಗಳಿಗೆ ಹಾಗೂ ಮಣಿಪುರ, ಮೇಘಾಲಯ, ಅರುಣಾಚಲ ಪ್ರದೇಶ ಮತ್ತು ಮಿಜೋರಾಂನಲ್ಲಿ ತಲಾ ಒಂದು ಸ್ಥಾನಕ್ಕೆ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಜೂನ್ 8 ಕೊನೆಯ ದಿನವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿದ್ರೆಗೆ ಭಂಗ ಉಂಟಾಗಲು ನಿಮ್ಮ ಈ ಅಭ್ಯಾಸಗಳೇ ಕಾರಣ – Kannada News

ಆಹಾರ, ನೀರಿನಂತೆ ಮನುಷ್ಯನಿಗೆ ನಿದ್ರೆಯೂ (sleep) ತುಂಬಾ ಮುಖ್ಯ. 8 ರಿಂದ 9 ಗಂಟೆಗಳ ಕಾಲ ಉತ್ತಮ ನಿದ್ರೆ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡೂ ಉತ್ತಮವಾಗಿರುತ್ತದೆ. ಆದರೆ ಇಂದು ಹೆಚ್ಚಿನವರು ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೌದು ಅನೇಕರಿಗೆ ಎಷ್ಟೇ ಪ್ರಯತ್ನಪಟ್ಟರೂ ರಾತ್ರಿ ನಿದ್ರೆ ಮಾಡಲು ಸಖತ್‌ ಕಷ್ಟಕರವಾಗುತ್ತದೆ. ನಿದ್ರಾಹೀನತೆಗೆ ಈ ಕೆಲವೊಂದು ಅಭ್ಯಾಸಗಳೇ ಕಾರಣವಂತೆ. ಈ ಅಭ್ಯಾಸಗಳನ್ನು ತ್ಯಜಿಸಿದರೆ ನೀವು ಸಹ ರಾತ್ರಿಯಲ್ಲಿ ಉತ್ತಮವಾಗಿ ನಿದ್ರೆ ಮಾಡಬಹುದು. ನಿದ್ರೆಗೆ ಭಂಗ ತರುವಂತಹ ಆ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ನಿದ್ರಾಹೀನತೆಗೆ ಈ ಅಭ್ಯಾಸಗಳೇ ಮುಖ್ಯ ಕಾರಣ:

ಫೋನ್‌ ನೋಡುವುದು: ಮಲಗುವ ಮುನ್ನ ಅತಿಯಾಗಿ ಫೋನ್‌ ಬಳಸುವ ಅಭ್ಯಾಸ ನಿಮ್ಮ ನಿದ್ರೆಯ ಗುಣಮಟ್ಟದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಹೌದು ಫೋನ್‌ನಿಂದ ಹೊರಸೂಸುವ ನೀಲಿ ಬೆಳಕು  ಸಿರ್ಕಾಡಿಯನ್ ಲಯವನ್ನು ಅಡ್ಡಿಪಡಿಸುತ್ತದೆ ಮತ್ತು ಇದು ನಿದ್ರೆಗೆ ಅಡ್ಡಿಪಡಿಸುತ್ತದೆ. ಈ ನೀಲಿ ಬೆಳಕು  ನಿದ್ರೆ-ಎಚ್ಚರ ಚಕ್ರವನ್ನು ನಿಯಂತ್ರಿಸುವ ಹಾರ್ಮೋನ್ ಮೆಲಟೋನಿನ್ ಉತ್ಪಾದನೆಯನ್ನು ನಿಗ್ರಹಿಸಬಹುದು. ಮೆಲಟೋನಿನ್ ಕೊರತೆಯು ನಿದ್ರಾಹೀನತೆ, ಕಿರಿಕಿರಿ ಮತ್ತು ಹಗಲಿನ ನಿದ್ರೆಗೆ ಕಾರಣವಾಗಬಹುದು.

ಕಾಫಿ, ಮದ್ಯಪಾನ  ಸೇವನೆ: ಕಾಫಿ ಮತ್ತು ಆಲ್ಕೋಹಾಲ್ ನಲ್ಲಿರುವ ಕೆಫೀನ್ ನಿಮ್ಮ ನಿದ್ರೆಯ ಮಾದರಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮಲಗುವ ನಾಲ್ಕು ಗಂಟೆಗಳ ಮುನ್ನ ಕಾಫಿ ಅಥವಾ ಟೀ ಕುಡಿಯುವುದರಿಂದ ನಿದ್ರೆ ಮಾಡಲು ಕಷ್ಟಸಾಧ್ಯವಾಗುತ್ತದೆ. ಆದ್ದರಿಂದ ರಾತ್ರಿ ಹೊತ್ತು ಮಧ್ಯಪಾನ, ಕೆಫೀನ್‌ ಸೇವನೆಯನ್ನು  ತಪ್ಪಿಸಿ.

ಭಾರವಾದ ಆಹಾರ ಸೇವನೆ: ಮಲಗುವ ಸ್ವಲ್ಪ ಅಥವಾ ಒಂದು ಗಂಟೆ ಮೊದಲು ಭಾರವಾದ ಊಟ ಮಾಡುವ ಅಣ್ಯಾಸವು ನಿದ್ರೆಗೆ ಅಡ್ಡಿಯುಂಟುಮಾಡುತ್ತದೆ. ಭಾರವಾದ ಆಹಾರ ಸೇವಿಸಿದರೆ ಅದು ನೀವು ಹಾಸಿಗೆಯಲ್ಲಿ ಮಲಗಿದ ನಂತರವೂ ನಿಮ್ಮ ದೇಹವು ಆಹಾರವನ್ನು ಜೀರ್ಣಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ನಿದ್ರೆ ಅಡ್ಡಿಯುಂಟಾಗುತ್ತದೆ.

ಹಗಲಿನಲ್ಲಿ ಮಲಗುವ ಅಭ್ಯಾಸ: ಕೆಲವು ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಈ ಅಭ್ಯಾಸ  ರಾತ್ರಿಯಲ್ಲಿ ನಿಮ್ಮ ನಿದ್ರೆಯ ಗುಣಮಟ್ಟವನ್ನು ಸ್ಪಷ್ಟವಾಗಿ ಹಾಳುಮಾಡುತ್ತದೆ.

ಇದನ್ನೂ ಓದಿ: ನಿಮ್ಮ ಹಾಸಿಗೆ ಮೇಲೊಂದು ಟೈಮ್ ಬಾಂಬ್; ಮೊಬೈಲ್ ಪಕ್ಕದಲ್ಲಿಟ್ಟುಕೊಂಡು ನಿದ್ರೆ ಮಾಡುತ್ತೀರಾ?

ಸಿಗರೇಟ್‌ ಸೇವನೆ: ಮಲಗುವ ಮುನ್ನ ಸಿಗರೇಟ್‌ ಸೇದುವುದರಿಂದ ನಿದ್ರೆಗೆ ಭಂಗ ಬರಬಹುದು. ತಂಬಾಕಿನಲ್ಲಿರುವ ನಿಕೋಟಿನ್‌ ಅಂಶ ಮೆದುಳನ್ನು ಉತ್ತೇಜಿಸುತ್ತದೆ. ಇದು ನಿದ್ರೆಗೆ ಭಂಗ ಉಂಟುಮಾಡುತ್ತದೆ.

ಅತಿಯಾದ ಯೋಚನೆ: ಹೆಚ್ಚು ಯೋಚಿಸುವ ಅಭ್ಯಾಸ ನಿದ್ರೆಯ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತದೆ. ಅತಿಯಾದ ಯೋಚನೆ ಮತ್ತು ಒತ್ತಡವು ನಿದ್ರಾಹೀನತೆಗೆ ಕಾರಣವಾಗಬಹುದು.

ಒತ್ತಡ: ಹೆಚ್ಚಿನ ಮಟ್ಟದ ಒತ್ತಡವು ನಿದ್ರೆಗೆ ಭಂಗ ತರುತ್ತದೆ. ನಿದ್ರೆಯ ಕೊರತೆಯು ನಮ್ಮ ದೇಹದ ಒತ್ತಡ ಪ್ರತಿಕ್ರಿಯೆ ವ್ಯವಸ್ಥೆಯನ್ನು ಪ್ರಚೋದಿಸುತ್ತದೆ, ಇದು ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಹೆಚ್ಚಳಕ್ಕೆ ಕಾರಣವಾಗುತ್ತದೆ, ಇದು ನಿದ್ರೆಯನ್ನು ಮತ್ತಷ್ಟು ಅಡ್ಡಿಪಡಿಸುತ್ತದೆ. ಇದಲ್ಲದೆ, ಜಡ ಜೀವನಶೈಲಿಯು ನಿದ್ರಾಹೀನತೆಗೆ ಪ್ರಮುಖ ಕಾರಣವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version