ಬಾಕಿ ವೇತನ ಕೇಳಿದ್ದಕ್ಕೆ ‘ಸಿದ್ಧಗಂಗಾ ಟೂರ್ಸ್’ ಮಾಲೀಕರಿಂದ ಚಾಲಕನಿಗೆ ಹಲ್ಲೆ: ಪೊಲೀಸರಿಂದಲೇ ಸಾಕ್ಷ್ಯ ನಾಶದ ಪ್ರಯತ್ನ?

ಬಾಕಿ ವೇತನ ಕೇಳಿದ್ದಕ್ಕೆ ‘ಸಿದ್ಧಗಂಗಾ ಟೂರ್ಸ್’ ಮಾಲೀಕರಿಂದ ಚಾಲಕನಿಗೆ ಹಲ್ಲೆ: ಪೊಲೀಸರಿಂದಲೇ ಸಾಕ್ಷ್ಯ ನಾಶದ ಪ್ರಯತ್ನ?

ಬೆಂಗಳೂರು, ಏ.7: ನಗರದ ಖಾಸಗಿ ಬಸ್ ಸಂಸ್ಥೆಯೊಂದರಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದ ರಾಮೇಗೌಡ ಎಂಬುವವರ ಮೇಲೆ ಮಾಲೀಕರು ಮತ್ತು ಮ್ಯಾನೇಜ್‌ಮೆಂಟ್ ಸಿಬ್ಬಂದಿ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕುಟುಂಬದ ಏಕೈಕ ಆಧಾರ ಸ್ತಂಭವಾಗಿದ್ದ ಚಾಲಕನಿಗೆ ಕಳೆದ ಹಲವು ತಿಂಗಳುಗಳಿಂದ ಸಂಬಳ ನೀಡದೆ ಸತಾಯಿಸುತ್ತಿದ್ದ ಸಂಸ್ಥೆ, ಈಗ ಅವರ ಮೇಲೆ ದೈಹಿಕ ದೌರ್ಜನ್ಯ ಎಸಗಿದೆ ಎಂದು ಆರೋಪಿಸಲಾಗಿದೆ.

ರಾಮೇಗೌಡ ಅವರು ‘ಸಿದ್ಧಗಂಗಾ ಟೂರ್ಸ್ ಅಂಡ್ ಟ್ರಾವೆಲ್ಸ್’ (Siddaganga Tours and Travels) ಸಂಸ್ಥೆಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಹಲವು ತಿಂಗಳಿಂದ ಸಂಬಳ ಬಾರದ ಕಾರಣ ಸಂಸಾರ ನಡೆಸುವುದು ಕಷ್ಟವಾಗಿತ್ತು. ಮಾರ್ಚ್ 26ರ ಸಂಜೆ 6.30ರ ಸುಮಾರಿಗೆ ಅವರು ತಮ್ಮ ಬಾಕಿ ಸಂಬಳ ಕೇಳಲು ಹೋದಾಗ, ಸಂಸ್ಥೆಯ ಆಡಳಿತ ಮಂಡಳಿಯವರು ಅವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಹಲ್ಲೆಗೊಳಗಾದ ರಾಮೇಗೌಡ ಅವರು ಎರಡು ದಿನಗಳ ಕಾಲ ಮನೆಯಲ್ಲಿ ಮೌನವಾಗಿ ಮಲಗಿದ್ದರು. ಪತ್ನಿ ಜ್ಯೋತಿ ಅವರು ಅನಾರೋಗ್ಯವೆಂದು ಭಾವಿಸಿದ್ದರು. ಆದರೆ ಅವರ ಮೊಬೈಲ್ ಪರೀಕ್ಷಿಸಿದಾಗ ಹಲ್ಲೆಯ ಸತ್ಯಾಂಶ ಬಯಲಾಗಿದೆ. ತಕ್ಷಣವೇ ಅವರನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಹಲ್ಲೆ ನಡೆದ ಒಂದು ಗಂಟೆಯೊಳಗೆ (ಸಂಜೆ 7.43ಕ್ಕೆ) ಸಂಸ್ಥೆಯು ಯುಪಿಐ (UPI) ಮೂಲಕ 15,000 ರೂಪಾಯಿಗಳನ್ನು ರಾಮೇಗೌಡ ಅವರ ಖಾತೆಗೆ ವರ್ಗಾಯಿಸಿದೆ. ಈ ಮೂಲಕ ತಮ್ಮ ಕೃತ್ಯವನ್ನು ಒಪ್ಪಿಕೊಂಡಂತೆ ಆಗಿದೆ.

ಇದನ್ನೂ ಓದಿ: ಬ್ರ್ಯಾಂಡ್ ಕರ್ನಾಟಕವೋ ಅಥವಾ ಬ್ರೇಕ್‌ಡೌನ್ ಕರ್ನಾಟಕವೋ?: ಕೆಎಸ್‌ಆರ್‌ಟಿಸಿ ಬಸ್‌ಗಳ ಭೀಕರ ದುಸ್ಥಿತಿ ಬಿಚ್ಚಿಟ್ಟ ಸವಾರರು!

ಇನ್ನು ಈ ಪ್ರಕರಣದಲ್ಲಿ ಪೊಲೀಸರ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪತ್ನಿ ಜ್ಯೋತಿ ದೂರು ನೀಡಲು ಹೋದಾಗ ಬಸವೇಶ್ವರನಗರ ಪೊಲೀಸರು ಮೊದಲು ನಿರಾಕರಿಸಿದ್ದರು. ನಂತರ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಹೊಯ್ಸಳ ಪೊಲೀಸ್ ಸಿಬ್ಬಂದಿಯೇ ತನ್ನ ಪತಿಯ ರಕ್ತಸಿಕ್ತ ಅಂಗಿಯನ್ನು (ಪ್ರಮುಖ ಸಾಕ್ಷ್ಯ) ಬಲವಂತವಾಗಿ ತೆಗೆಸಿದ್ದಾರೆ ಎಂದು ಜ್ಯೋತಿ ಗಂಭೀರ ಆರೋಪ ಮಾಡಿದ್ದಾರೆ. ಬಸವೇಶ್ವರನಗರ ಇನ್ಸ್‌ಪೆಕ್ಟರ್ ಅವರು ಈ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದು, ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಆರೋಪಿಗಳಿಗೆ ಸ್ಟೇಷನ್ ಜಾಮೀನು ನೀಡಲಾಗಿದ್ದು, ತನಿಖೆ ಮುಂದುವರಿದಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಬೆಂಗಳೂರಿಗರಿಗೆ ಗುಡ್​​ ನ್ಯೂಸ್​​ ಕೊಟ್ಟ BWSSB: ಮೂರು ತಿಂಗಳ ಅವಧಿಗೆ OTS ಯೋಜನೆ ಜಾರಿಗೆ

ಬೆಂಗಳೂರು, ಏಪ್ರಿಲ್​​ 07: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ನಗರದ ನಿವಾಸಿಗಳಿಗೆ ಗುಡ್​​ ನ್ಯೂಸ್​​ ನೀಡಿದೆ. ಬಾಕಿ ಇರುವ ನೀರಿನ ಬಿಲ್‌ಗಳನ್ನು ವಸೂಲಿ ಮಾಡುವ ಉದ್ದೇಶದಿಂದ ಮೂರು ತಿಂಗಳ ಅವಧಿಗೆ ಒನ್ ಟೈಮ್ ಸೆಟಲ್‌ಮೆಂಟ್ (OTS) ಯೋಜನೆಯನ್ನು ಜಾರಿಗೆ ತಂದಿದೆ. ಈ ಬಗ್ಗೆ ಮಾಹಿತಿ ನೀಡಿರುವ ಮಂಡಳಿಯ ಅಧ್ಯಕ್ಷ ರಾಮ ಪ್ರಸಾತ್ ಮನೋಹರ್ , ಪ್ರಸ್ತುತ ನೀರಿನ ಬಿಲ್‌ಗಳ ಜೊತೆಗೆ OTS ನೋಟಿಸ್‌ಗಳನ್ನು ನೀಡಲಾಗುವುದು. BWSSB ವ್ಯಾಪ್ತಿಯ ಸುಮಾರು 11 ಲಕ್ಷ ನೀರಿನ ಸಂಪರ್ಕಗಳಲ್ಲಿ, 5.11 ಲಕ್ಷ ಗ್ರಾಹಕರಿಗೆ ಸಂಬಂಧಿಸಿ ಬಾಕಿ ಬಿಲ್‌ಗಳು ಇರುವುದಾಗಿ ಅವರು ತಿಳಿಸಿದ್ದಾರೆ.

ಏಪ್ರಿಲ್‌ನಿಂದ ಜೂನ್‌ವರೆಗೆ OTS ಯೋಜನೆ

ಅಂಕಿಅಂಶಗಳ ಪ್ರಕಾರ, ಫೆಬ್ರವರಿ ಅಂತ್ಯದ ವೇಳೆಗೆ ಬಾಕಿ ಇರುವ ನೀರಿನ ಬಿಲ್‌ಗಳ ಒಟ್ಟು ಮೊತ್ತ 851.33 ಕೋಟಿ ರೂಪಾಯಿಗಳಾಗಿದ್ದು, ಇದರಲ್ಲಿ ಮೂಲ ಮೊತ್ತ 539.43 ಕೋಟಿ ರೂಪಾಯಿ ಹಾಗೂ ಬಡ್ಡಿ 311.90 ಕೋಟಿ ರೂಪಯಿಗಳು ಸೇರಿವೆ. ಈ ಬಾಕಿ ಮೊತ್ತವನ್ನು ಸುಲಭವಾಗಿ ತೀರಿಸಲು ಏಪ್ರಿಲ್‌ನಿಂದ ಜೂನ್‌ವರೆಗೆ OTS ಯೋಜನೆಯನ್ನು ಜಾರಿಗೆ ತರಲಾಗಿದೆ. OTS ಯೋಜನೆಗೆ ಅರ್ಹರಾಗಿರುವ ಗ್ರಾಹಕರಿಗೆ ಈ ತಿಂಗಳ ನೀರಿನ ಬಿಲ್ ಜೊತೆಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗುತ್ತದೆ ಎಂದು ರಾಮ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ಇದನ್ನೂ ಓದಿ: ಹೆಲ್ಮೆಟ್ ಧರಿಸಿ ಬಂದು ಗ್ಯಾಸ್ ಸಿಲಿಂಡರ್ ಎಗರಿಸಿದ ಚಾಲಾಕಿ ಕಳ್ಳ; ಸಿಸಿಟಿವಿ ವಿಡಿಯೋ ಇಲ್ಲಿದೆ ನೋಡಿ

ಬಾಕಿ ಇರುವ ಮೂಲ ಮೊತ್ತ, ಮನ್ನಾ ಮಾಡಲಾಗುವ ಬಡ್ಡಿ ಮೊತ್ತ, ಅಂತಿಮವಾಗಿ ಪಾವತಿಸಬೇಕಾದ ಮೊತ್ತ, ಪಾವತಿ ವಿಧಾನಗಳು ಹಾಗೂ ಯೋಜನೆಯ ಅರ್ಹತಾ ಮಾನದಂಡಗಳ ವಿವರಗಳನ್ನು ಪ್ರತ್ಯೇಕ ಪತ್ರದ ಮೂಲಕ ಬಿಲ್ ಜೊತೆ ಸೇರಿಸಿ ನೀಡಲಾಗುತ್ತದೆ. ದೀರ್ಘಕಾಲದಿಂದ ಬಿಲ್​​ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಅವರು ಮನವಿ ಮಾಡಿರೋದಾಗಿ ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Ruturaj Gaikwad: ನಾನು ನಿಂತಿದ್ರೆ ಫಲಿತಾಂಶ ಬೇರೆ ಇರುತ್ತಿತ್ತು..!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್​-19 ರ ಆರಂಭದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಬ್ಯಾಕ್ ಟು ಬ್ಯಾಕ್ ಸೋಲನುಭವಿಸಿದೆ. ಅದರಲ್ಲೂ ತನ್ನ ಬದ್ಧವೈರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸಿಎಸ್​ಕೆ ಪಡೆ ಮಕಾಡೆ ಮಲಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್​ಕೆ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಬೌಲಿಂಗ್ ಆಯ್ದುಕೊಂಡಿದ್ದರು.

ಅತ್ತ ಟಾಸ್ ಗೆದ್ದಿದ್ದರಿಂದ ಸಿಎಸ್​ಕೆ ತಂಡವು ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿತ್ತು. ಆದರೆ ರಾಯಲ್ ಚಾಲೆಂಜರ್ಸ್  ಬೆಂಗಳೂರು ತಂಡದ ದಾಂಡಿಗರು ಇಡೀ ಪಂದ್ಯದ ಚಿತ್ರಣವನ್ನೇ ಬದಲಿಸಿದ್ದರು. ಅಲ್ಲದೆ  20 ಓವರ್​ಗಳಲ್ಲಿ ಬರೋಬ್ಬರಿ 250 ರನ್ ಬಾರಿಸಿ ಆರ್​ಸಿಬಿ ಹೊಸ ಇತಿಹಾಸ ನಿರ್ಮಿಸಿದ್ದರು.

ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 19.4 ಓವರ್​ಗಳಲ್ಲಿ 207 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಸಿಎಸ್​ಕೆ ತಂಡವು 43 ರನ್​ಗಳ ಅಂತರದಿಂದ ಸೋಲೊಪ್ಪಿಕೊಂಡಿತು.

ಈ ಸೋಲಿನ ಬಳಿಕ ಮಾತನಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್ವಾಡ್, “ಇಂದಿನ ಸೋಲಿಗೆ ಖಂಡಿತವಾಗಿಯೂ ನಾನೇ ಕಾರಣ. ನಾನು ಕ್ರೀಸ್‌ನಲ್ಲಿ ಹೆಚ್ಚು ಸಮಯ ನಿಂತು ತಂಡಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದರೆ ಫಲಿತಾಂಶ ಬೇರೆಯೇ ಇರುತ್ತಿತ್ತು. ಆರಂಭದಲ್ಲೇ ವಿಕೆಟ್ ಒಪ್ಪಿಸಿದ್ದು ತಂಡಕ್ಕೆ ದೊಡ್ಡ ಹಿನ್ನಡೆಯಾಯಿತು,” ಎಂದು ಒಪ್ಪಿಕೊಂಡಿದ್ದಾರೆ.

ಒಂದು ವೇಳೆ ನಾನು ಕ್ರೀಸ್​ನಲ್ಲಿ ಹೆಚ್ಚು ಸಮಯ ಆಡಿದ್ದರೆ ಪಂದ್ಯದ ಫಲಿತಾಂಶವೇ ಬೇರೆಯಾಗಿರುತ್ತಿತ್ತು. ನಾನು ಬೇಗನೆ ಔಟಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸೋಲಿಗೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದಾಗ್ಯೂ ಮುಂದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಸಿಎಸ್​ಕೆ ಗೆಲುವಿನ ಖಾತೆ ತೆರೆಯಲಿದೆ ಎಂಬ ವಿಶ್ವಾಸವಿದೆ ರುತುರಾಜ್ ಗಾಯಕ್ವಾಡ್ ತಿಳಿಸಿದ್ದಾರೆ.

RCB vs CSK ಮುಖ್ಯಾಂಶಗಳು:

  • RCB ಅಬ್ಬರ: ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ, ಟಿಮ್ ಡೇವಿಡ್ (70*) ಮತ್ತು ರಜತ್ ಪಾಟಿದಾರ್ (48*) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್​ಗಳಲ್ಲಿ  250 ರನ್‌ಗಳ ಬೃಹತ್ ಮೊತ್ತ ಪೇರಿಸಿತು.
  • CSK ವಿಫಲ: 251 ರನ್​ಗಳ ಗುರಿ ಬೆನ್ನತ್ತಿದ ಸಿಎಸ್​ಕೆ ತಂಡವು 19.4 ಓವರ್​ಗಳಲ್ಲಿ 207 ರನ್​​ಗಳಿಗೆ ಆಲೌಟ್ ಆಗಿದ್ದರು.
  • ಗಾಯಕ್ವಾಡ್ ವೈಫಲ್ಯ: 251 ರನ್‌ಗಳ ಗುರಿ ಬೆನ್ನಟ್ಟಿದ ಸಿಎಸ್‌ಕೆ ಪರ ನಾಯಕ ರುತುರಾಜ್ ಗಾಯಕ್ವಾಡ್ ಕೇವಲ 7 ರನ್ ಗಳಿಸಿ ಔಟ್ ಆಗಿದ್ದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿತು.

ಸತತ ಸೋಲು:

ಇದು 2026ರ ಸೀಸನ್‌ನಲ್ಲಿ ಸಿಎಸ್‌ಕೆ ತಂಡಕ್ಕೆ ಎದುರಾದ ಸತತ ಮೂರನೇ ಸೋಲಾಗಿದೆ. ರುತುರಾಜ್ ನಾಯಕತ್ವದಲ್ಲಿ ತಂಡವು ಕಳೆದ ಸೀಸನ್‌ನಿಂದ ಸೇರಿ ಒಟ್ಟು ಏಳು ಪಂದ್ಯಗಳಲ್ಲಿ ಸೋಲು ಕಂಡಿದೆ.

ಸೋಲಿಗೆ ಕಾರಣವಾದ ಅಂಶಗಳು:

ಸಿಎಸ್​ಕೆ ತಂಡದ ಬ್ಯಾಟಿಂಗ್ ವೈಫಲ್ಯದ ಜೊತೆಗೆ, ವಿರಾಟ್ ಕೊಹ್ಲಿ ಅವರಿಗೆ ನೀಡಿದ ಜೀವದಾನ ಮತ್ತು ನೋ-ಬಾಲ್‌ಗಳ ಮೂಲಕ ಎದುರಾಳಿ ತಂಡಕ್ಕೆ ಸಿಕ್ಕ ಅವಕಾಶಗಳು ಸೋಲಿಗೆ ಮುಖ್ಯ ಕಾರಣ ಎಂದು ರುತುರಾಜ್ ಗಾಯಕ್ವಾಡ್ ವಿಶ್ಲೇಷಿಸಿದ್ದಾರೆ.

ಇದನ್ನೂ ಓದಿ: ಕೈ ಸನ್ನೆಯೊಂದಿಗೆ ​ವಿಶ್ಲೇಷಣೆ… ಬಿದ್ದು ಬಿದ್ದು ನಕ್ಕ RCB ಆಟಗಾರರು

ಇತ್ತ ಸರ್ಫರಾಝ್ ಖಾನ್, ಪ್ರಶಾಂತ್ ವೀರ್ ಹೋರಾಟ ನಡೆಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಇದಾಗ್ಯೂ ಚೆನ್ನೈ ಸೂಪರ್ ಕಿಂಗ್ಸ್​ ತಂಡವು ಮುಂದಿನ ಪಂದ್ಯಗಳಲ್ಲಿ ಪುಟಿದೇಳಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

 

Source link

ಊಟ ಮಾಡುವಾಗ ಫೋನ್ ಬಳಸುವ ಅಭ್ಯಾಸ ನಿಮಗಿದ್ಯಾ? ಇದರಿಂದ ಕರುಳಿನ ಆರೋಗ್ಯ ಹಾಳಾಗುತ್ತೆ ಹುಷಾರ್!

ಇಂದಿನ ಕಾಲದಲ್ಲಿ ಅನಾರೋಗ್ಯಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು ಮತ್ತು ಅಸ್ಥಿರ ಜೀವನ ಶೈಲಿ. ಈಗ ಹೆಚ್ಚಿನವರು ಆನ್‌ಲೈನ್ ಮೂಲಕ ಆರ್ಡರ್ ಮಾಡಿ ತಿನ್ನುತ್ತಾರೆ. ಅಷ್ಟು ಮಾತ್ರವಲ್ಲ, ಊಟ ಮಾಡುವಾಗ ಮೊಬೈಲ್ ಬಳಸದೆಯೇ ಊಟ ಮಾಡುವುದೇ ಇಲ್ಲ. ಆದರೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಈ ಅಭ್ಯಾಸ ನಿಮ್ಮ ಆರೋಗ್ಯಕ್ಕೆ, ಅದರಲ್ಲಿಯೂ ಕರುಳಿನ ಆರೋಗ್ಯಕ್ಕೆ (Gut Health) ಹಾನಿ ಉಂಟುಮಾಡಬಹುದು. ಹಾಗಾದರೆ ಫೋನ್ ಬಳಕೆ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆಯೇ, ಆರೋಗ್ಯ ಕಾಪಾಡಿಕೊಳ್ಳಲು ಯಾವ ರೀತಿಯ ಸಲಹೆಗಳನ್ನು ಅನುಸರಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಫೋನ್ ಬಳಕೆ ಮತ್ತು ಜೀರ್ಣಕ್ರಿಯೆ ಮೇಲೆ ಪರಿಣಾಮ:

ಊಟ ಮಾಡುವಾಗ ಫೋನ್ ನೋಡುತ್ತಾ ಆಹಾರ ಸೇವನೆ ಮಾಡುವವರು ಸಾಮಾನ್ಯವಾಗಿ ಆಹಾರವನ್ನು ಸರಿಯಾಗಿ ಜಗಿದು ತಿನ್ನುವುದಿಲ್ಲ. ಇದರ ಪರಿಣಾಮವಾಗಿ ಆಹಾರ ಸರಿಯಾಗಿ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈ ಒತ್ತಡದಿಂದ ಕರುಳು ಅಥವಾ ಗಟ್ ಆರೋಗ್ಯ ಹದಗೆಡುತ್ತದೆ. ಆಗ ಮೈಕ್ರೋಬಿಯೊಮ್‌ನಲ್ಲಿ ಅಸಮತೋಲನ ಉಂಟಾಗುತ್ತದೆ. ಇದು ಇಮ್ಯುನಿಟಿ ಕಡಿಮೆಯಾಗುವುದರಿಂದ ಹಿಡಿದು ನಿದ್ರಾಹೀನತೆ ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ: ಖಾರವಾಗಿರುವ ಆಹಾರ ಸೇವನೆ ಮಾಡೋದಕ್ಕೆ ತುಂಬಾ ಇಷ್ಟಾನಾ? ಹಾಗಿದ್ರೆ ಈ ಸ್ಟೋರಿ ನಿಮಗಾಗಿ

ಕೆಟ್ಟ ಆಹಾರ ಪದ್ಧತಿಯೂ ಕಾರಣ!

ಪ್ಯಾಸಿಫಿಕ್ ವನ್‌ಹೆಲ್ತ್ ಸಂಸ್ಥೆಯ ಪ್ರಿವೆಂಟಿವ್ ವೆಲ್‌ನೆಸ್ ಮತ್ತು ಮೆಟಾಬಾಲಿಕ್ ಡಿಸೀಸ್ ವಿಭಾಗದ ಮುಖ್ಯಸ್ಥರಾದ ಡಾ. ಐಜಾಝ್ ಇಲ್ಮಿ ಅವರ ಪ್ರಕಾರ, 2025ರಲ್ಲಿ ನಡೆದ ಒಂದು ಅಧ್ಯಯನದಂತೆ ಸುಮಾರು 39% ನಗರ ಪ್ರದೇಶದ ಜನರು ಕಡಿಮೆ ಫೈಬರ್ ಇರುವ ಆಹಾರ ಸೇವಿಸುತ್ತಿದ್ದಾರೆ. ಜೊತೆಗೆ 36% ಕ್ಕಿಂತ ಹೆಚ್ಚು ಜನರು ಹೆಚ್ಚು ಸಕ್ಕರೆ ಇರುವ ಆಹಾರಗಳನ್ನು ಸೇವಿಸುತ್ತಿದ್ದಾರೆ. ಈ ರೀತಿಯ ಆಹಾರ ಪದ್ಧತಿಗಳು ಕರುಳಿನ ಆರೋಗ್ಯವನ್ನು ಹಾನಿಗೊಳಿಸುತ್ತವೆ. ದೇಹದಲ್ಲಿ ಉರಿಯೂತ (ಇನ್‌ಫ್ಲಮೇಷನ್) ಹೆಚ್ಚುವುದು, ಇಮ್ಯೂನ್ ಸಿಸ್ಟಮ್ ಮೇಲೆ ಪರಿಣಾಮ ಬೀಳುವುದು ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗುತ್ತವೆ. ಹೊಟ್ಟೆ ಉಬ್ಬರ, ಮಧ್ಯಾಹ್ನದ ವೇಳೆಯಲ್ಲಿ ದಣಿವು ಇತ್ಯಾದಿ ಲಕ್ಷಣಗಳು ಕಂಡುಬರುತ್ತದೆ ಆದರೆ ಇದನ್ನು ಸಾಮಾನ್ಯವೆಂದು ನಿರ್ಲಕ್ಷಿಸುವುದರಿಂದ ಸಮಸ್ಯೆ ಗಂಭೀರವಾಗಬಹುದು.

ಆರೋಗ್ಯ ಕಾಪಾಡಿಕೊಳ್ಳಲು ಸಲಹೆಗಳು:

  • ಊಟ ಮಾಡುವಾಗ ಫೋನ್ ಬಳಕೆ ಮಾಡಬೇಡಿ
  • ಆಹಾರದಲ್ಲಿ ದಾಲ್, ಹಣ್ಣು ಮತ್ತು ಕಾಯಿ, ಬೀಜಗಳನ್ನು ಸೇರಿಸಿಕೊಳ್ಳಿ
  • ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿ
  • ಪ್ರತಿದಿನ ವ್ಯಾಯಾಮ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಡ್ರ್ಯಾಗನ್’ ಸಿನಿಮಾ ಶೂಟಿಂಗ್ ನಿಲ್ಲಿಸಿದ ಪ್ರಶಾಂತ್ ನೀಲ್, ಜೂ. ಎನ್​ಟಿಆರ್; ಕಾರಣ ಏನು?

ನಟ ಜೂನಿಯರ್ ಎನ್‌ಟಿಆರ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಶನ್‌ನ ಬಹುನಿರೀಕ್ಷಿತ ‘ಡ್ರ್ಯಾಗನ್’ (Dragon) ಸಿನಿಮಾದ ಚಿತ್ರೀಕರಣಕ್ಕೆ ಸಣ್ಣ ಬ್ರೇಕ್ ನೀಡಲಾಗಿದೆ. ಈ ತಿಂಗಳು ನಡೆಯಬೇಕಿದ್ದ ಪ್ರಮುಖ ಹಂತದ ಚಿತ್ರೀಕರಣವನ್ನು ದಿಢೀರ್ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ. ಈ ಚಿತ್ರದಲ್ಲಿ ಎನ್‌ಟಿಆರ್ (Jr NTR) ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚಿನ ಶೆಡ್ಯೂಲ್‌ಗಾಗಿ ಎನ್‌ಟಿಆರ್ ಅವರ ಹೊಸದೊಂದು ಲುಕ್ ಫೈನಲ್ ಮಾಡಬೇಕಿತ್ತು. ಆದರೆ, ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ (Prashanth Neel) ಇಬ್ಬರೂ ಆ ಹೊಸ ಲುಕ್ ಬಗ್ಗೆ ತೃಪ್ತರಾಗಿಲ್ಲ ಎನ್ನಲಾಗಿದೆ.

ಗುಣಮಟ್ಟದ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಇಷ್ಟಪಡದ ಈ ಜೋಡಿ, ಪರ್ಫೆಕ್ಟ್ ಲುಕ್ ಸಿಗುವವರೆಗೆ ಚಿತ್ರೀಕರಣವನ್ನು ಮುಂದೂಡಲು ನಿರ್ಧರಿಸಿದ್ದಾರೆ. ಆದ್ದರಿಂದ ಈಗ ಶೂಟಿಂಗ್​ಗೆ ಬ್ರೇಕ್ ನೀಡಲಾಗಿದೆ ಎಂಬ ಮಾಹಿತಿ ಕೇಳಿಬಂದಿದೆ. ಪವರ್​ಫುಲ್ ಕಾಂಬಿನೇಷನ್ ಆದ್ದರಿಂದ ಈ ಸಿನಿಮಾ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಚಿತ್ರತಂಡ ಈಗಾಗಲೇ ಜೋರ್ಡಾನ್‌ನಲ್ಲಿ ಒಂದು ದೊಡ್ಡ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರೈಸಿದೆ. ಕಳೆದ ತಿಂಗಳು ಶಂಶಾಬಾದ್ ಸಮೀಪದ ದೇವಾಲಯವೊಂದರಲ್ಲಿ ಸುಮಾರು ಒಂದು ವಾರಗಳ ಕಾಲ ಚಿತ್ರೀಕರಣ ನಡೆಸಲಾಗಿತ್ತು. ಪ್ರಸ್ತುತ ಹೈದರಾಬಾದ್ ಹೊರವಲಯದಲ್ಲಿ ಬೃಹತ್ ಸೆಟ್ ನಿರ್ಮಾಣವಾಗುತ್ತಿದ್ದು, ಮುಂದಿನ ತಿಂಗಳಿಂದ ಅಲ್ಲಿ ಚಿತ್ರೀಕರಣ ಪುನರಾರಂಭವಾಗುವ ಸಾಧ್ಯತೆಯಿದೆ.

ಈ ಹಿಂದೆ ಚಿತ್ರವನ್ನು 2026ರ ಜೂನ್ 25ರಂದು ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿತ್ತು. ಆದರೆ ಶೂಟಿಂಗ್ ವಿಳಂಬವಾಗುತ್ತಿರುವುದರಿಂದ ಈ ದಿನಾಂಕದಂದು ಸಿನಿಮಾ ತೆರೆಗೆ ಬರುವುದು ಅನುಮಾನ ಎನ್ನಲಾಗುತ್ತಿದೆ. ಒಂದು ವೇಳೆ ಎನ್‌ಟಿಆರ್ ಸಿನಿಮಾ ಮುಂದೂಡಲ್ಪಟ್ಟರೆ, ಅದೇ ದಿನಾಂಕದಂದು ರಾಮ್ ಚರಣ್ ಅಭಿನಯದ ‘ಪೆದ್ದಿ’ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಜೂ. ಎನ್​ಟಿಆರ್ ನೋಡಲು ಮುಗಿಬಿದ್ದ ಜನ; ಪೊಲೀಸ್ ಲಾಠಿ ಚಾರ್ಜ್

‘ಮೈತ್ರಿ ಮೂವೀ ಮೇಕರ್ಸ್’ ಮತ್ತು ‘ಎನ್‌ಟಿಆರ್ ಆರ್ಟ್ಸ್’ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ. ಎನ್‌ಟಿಆರ್ ಅವರ ಬಾಲಿವುಡ್​ನ ಮೊದಲ ಸಿನಿಮಾ ‘ವಾರ್ 2’ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಹಿನ್ನೆಲೆಯಲ್ಲಿ, ಪ್ರಶಾಂತ್ ನೀಲ್ ಜೊತೆಗಿನ ಈ ಸಿನಿಮಾ ಎನ್‌ಟಿಆರ್ ವೃತ್ತಿಜೀವನಕ್ಕೆ ಅತ್ಯಂತ ನಿರ್ಣಾಯಕವಾಗಿದೆ. ಹೀಗಾಗಿ ಪ್ರಶಾಂತ್ ನೀಲ್ ಪ್ರತಿಯೊಂದು ದೃಶ್ಯವನ್ನೂ ಬಹಳ ಅಚ್ಚುಕಟ್ಟಾಗಿ ರೂಪಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದೆಹಲಿಗೆ ಬಂದ ಅಸ್ಸಾಂ ಪೊಲೀಸರು, ಹೈದರಾಬಾದ್​ಗೆ ಪರಾರಿಯಾದ ಪವನ್ ಖೇರಾ

ನವದೆಹಲಿ, ಏಪ್ರಿಲ್ 7: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಅವರು ಮಾಡಿದ್ದ ಪಾಸ್‌ಪೋರ್ಟ್ ವಂಚನೆ ಆರೋಪದ ವಿರುದ್ಧ ಕಾಂಗ್ರೆಸ್ ನಾಯಕ ಪವನ್ ಖೇರಾ (Pawan Khera) ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಅದಾದ ಒಂದು ದಿನದ ನಂತರ ಇಂದು ಅಸ್ಸಾಂ ಪೊಲೀಸರು ದೆಹಲಿಯಲ್ಲಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರ ನಿವಾಸಕ್ಕೆ ತೆರಳಿದ್ದಾರೆ.ನಿಜಾಮುದ್ದೀನ್ ಪ್ರದೇಶದ ದೆಹಲಿ ಪೊಲೀಸರು ಅಸ್ಸಾಂ ಪೊಲೀಸರ ಭೇಟಿಯ ಸಮಯದಲ್ಲಿ ಅಸ್ಸಾಂ ಪೊಲೀಸ್ ತಂಡಕ್ಕೆ ಸಹಾಯ ಮಾಡಿದರು.

ಆದರೆ, ಅಷ್ಟರಲ್ಲಾಗಲೇ ಪವನ್ ಖೇರಾ ತಮ್ಮ ಮನೆಯನ್ನು ಬಿಟ್ಟು ಹೈದರಾಬಾದ್​ಗೆ ಪರಾರಿಯಾಗಿದ್ದರು. ಪವನ್ ಖೇರಾ ದೆಹಲಿಯಲ್ಲಿಲ್ಲ ಮತ್ತು ಕಾಂಗ್ರೆಸ್ ಆಡಳಿತದ ರಾಜ್ಯವಾದ ತೆಲಂಗಾಣದಲ್ಲಿ ಇರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

 

“ನಾವು ಅವರ ಮನೆಯನ್ನು ಶೋಧಿಸಿದ್ದೇವೆ. ನಾವು ಹೆಚ್ಚಿನ ವಿವರಗಳನ್ನು ನೀಡಲು ಸಾಧ್ಯವಿಲ್ಲ” ಎಂದು ಅಸ್ಸಾಂ ಪೊಲೀಸ್ ಡಿಸಿಪಿ ಡಾ. ದೇಬಾಜಿತ್ ನಾಥ್ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರ ನಿವಾಸದಲ್ಲಿ ನಡೆಸಿದ ಶೋಧದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಸಂಸದರ ಪತ್ನಿಗೆ ಪಾಕಿಸ್ತಾನದ ನಂಟು ದೃಢ; ಅಸ್ಸಾಂ ಸಿಎಂ ಹಿಮಂತ ಶರ್ಮಾಗೆ ಎಸ್‌ಐಟಿ ವರದಿ ಸಲ್ಲಿಕೆ

“ಪವನ್ ಖೇರಾ ಹೈದರಾಬಾದ್‌ಗೆ ಓಡಿಹೋಗಿದ್ದಾರೆ” ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಲೇವಡಿ ಮಾಡಿದ್ದಾರೆ. “ಅವರು ನಿನ್ನೆ ಗುವಾಹಟಿಯಿಂದ ಓಡಿಹೋಗಿದ್ದಾರೆ. ಪೊಲೀಸರು ದೆಹಲಿಯಲ್ಲಿರುವ ಅವರ ನಿವಾಸಕ್ಕೆ ಹೋಗಿದ್ದಾರೆ ಎಂದು ಮಾಧ್ಯಮಗಳ ಮೂಲಕ ನನಗೆ ತಿಳಿದುಬಂದಿದೆ. ಆದರೆ ಅವರು ಹೈದರಾಬಾದ್‌ಗೆ ಓಡಿಹೋಗಿದ್ದಾರೆ. ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ” ಎಂದು ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.

ಏನಿದು ವಿವಾದ?:

ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರಿಗೆ ಸಂಬಂಧಿಸಿದ ಪಾಸ್‌ಪೋರ್ಟ್‌ಗಳು ಮತ್ತು ವಿದೇಶಿ ಆಸ್ತಿಗಳನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ಪವನ್ ಖೇರಾ ಪತ್ರಿಕಾಗೋಷ್ಠಿ ನಡೆಸಿದ್ದರು. ಅವರ ಹೇಳಿಕೆಗಳಿಗೆ ಸಂಬಂಧಿಸಿದಂತೆ ಅಸ್ಸಾಂ ಪೊಲೀಸರು ಪವನ್ ಖೇರಾ ಅವರನ್ನು ಪ್ರಶ್ನಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಪವನ್ ಖೇರಾ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ.

ಇದನ್ನೂ ಓದಿ: ನನ್ನ ಪತ್ನಿ ಮೇಲೆ ಸುಳ್ಳು ಆರೋಪ ಮಾಡ್ಬೇಡಿ ಎನ್ನುತ್ತಾ ಕಾಂಗ್ರೆಸ್ ಬಂಡವಾಳ ಬಿಚ್ಚಿಟ್ಟ ಅಸ್ಸಾಂ ಸಿಎಂ ಹಿಮಂತ ಶರ್ಮಾ

ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಕ್ಕೆ ಹಿಮಂತ ಬಿಸ್ವ ಶರ್ಮ ಅವರ ಪತ್ನಿ ಪೊಲೀಸ್ ದೂರು ದಾಖಲಿಸಿದ್ದಾರೆ. ಹೀಗಾಗಿ, ಪವನ್ ಖೇರಾ ವಿರುದ್ಧ ಕೇಸ್ ದಾಖಲಾಗಿದ್ದು, ಅವರನ್ನು ವಿಚಾರಣೆಗೆ ಒಳಪಡಿಸಲು ದೆಹಲಿಗೆ ಹೋದರೂ ಅಲ್ಲಿಂದಲೂ ಪವನ್ ಖೇರಾ ಹೈದರಾಬಾದ್​​ಗೆ ಓಡಿಹೋಗಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಸವಜಯಮೃತ್ಯುಂಜಯ ವಿರುದ್ಧ ಮಹಿಳೆ ಲೈಂಗಿಕ ದೌರ್ಜುನ್ಯ ಆರೋಪ:ಸ್ಫೋಟಕ ವಿಚಾರ ಬಿಚ್ಚಿಟ್ಟ ಕೈ ಶಾಸಕ

ಬಾಗಲಕೋಟೆ, (ಏಪ್ರಿಲ್ 07): ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ (Basavajaya Mrutyunjaya Swamiji )ಮೇಲೆ ಲೈಂಗಿಕ ಕಿರುಕುಳ ಆರೋಪ ದಾಖಲಾಗಿದೆ. ಸ್ವಾಮೀಜಿ ತನ್ನ ವಿಡಿಯೋ ಮಾಡಿಕೊಂಡು ಬೆದರಿಕೆ ಹಾಕುತ್ತಿದ್ದಾರೆ ಎಂದು ಬೆಂಗಳೂರು ಮೂಲದ ಮಹಿಳೆಯ ಆರೋಪ ಮಾಡಿದ್ದಾರೆ. ಈ ಕುರಿತು ರಾಜ್ಯ ಮಹಿಳಾ ಆಯೋಗಕ್ಕೆ ದೂರು ದಾಖಲು ಮಾಡಿದ್ದಾರೆ. ಇದರ ಬೆನ್ನಲ್ಲೇ ಈ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಈ ಬಗ್ಗೆ ಕಾಂಗ್ರೆಸ್ ಶಾಸಕ ಹಾಗೂ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್  (Congress MLA vijayanand kashappanavar) ಪ್ರತಿಕ್ರಿಯಿಸಿದ್ದು, ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ. ಸ್ವಾಮೀಜಿಗಳು ಚಾರಿತ್ರ್ಯವಂತರಾಗಿದ್ದರೆ. ಕೋರ್ಟ್ ನಿಂದ ಇಂಜೆಕ್ಷನ್ ಯಾಕೆ ತರುತ್ತಿದ್ದರು? ಎಂದು ಪ್ರಶ್ನಿಸಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ವಿಜಯಾನಂದ ಕಾಶಪ್ಪನವರ್. ಬಸವ ಜಯಮೃತ್ಯುಂಜಯ ಸ್ವಾಮೀಜಿಗಳು ಸ್ವಾಮೀಜಿಗಳಾಗಿ ಉಳಿದಿಲ್ಲ. ನಡೆ-ನುಡಿಯಲ್ಲಿ ಅವರು ಸ್ವಾಮೀಜಿಗಳಾಗಿಲ್ಲ. ಅದೇ ಹಿನ್ನೆಲೆಯಿಂದ ನಾವು ಅವರನ್ನು ಪೀಠದಿಂದ ಉಚ್ಚಾಟನೆ ಮಾಡಿದ್ದು. ಉಚ್ಚಾಟನೆಗೂ ಮುನ್ನ ಅವರಿಗೆ ಸುಧಾರಿಸಿಕೊಳ್ಳಿ ಎಂದು ಹೇಳಿ ನೋಟಿಸ್ ಕೂಡ ಕೊಟ್ಟಿದ್ದೆವು. ಆದರೂ ಅವರು ಬದಲಾಗಲಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ನಾವು ಉಚ್ಚಾಟನೆ ಮಾಡಿದ್ದೆವು. ಕಾಲ ಎಲ್ಲ ಉತ್ತರ ನೀಡುತ್ತಿದೆ. ಇದೀಗ ಅದೆಲ್ಲ ನಡೆಯುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ‘ಬೆತ್ತಲೆ ವೀಡಿಯೋ ಕಾಲ್ ಮಾಡು ಎಂದು ಪೀಡಿಸುತ್ತಾರೆ’: ಬಸವಜಯ ಮೃತ್ಯುಂಜಯ ಸ್ವಾಮೀಜಿ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ!

ಮಹಿಳೆ ಬ್ಲಾಕ್ ಮೇಲ್ ಮಾಡಿದಳು 3 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಳು ಎಂಬ ವಿಚಾರದ ಬಗ್ಗೆ ಮಾತನಾಡಿ,
ಮಹಿಳೆ ಹಣಕ್ಕೆ ಡಿಮ್ಯಾಂಡ್ ಮಾಡಿದಳು ಬ್ಲಾಕ್ ಮೇಲ್ ಮಾಡಿದ್ದಳು ಎನ್ನುವುದಾದರೆ, ಏನಾದರೂ ಆಗಿರಲೇಬೇಕು ಅಲ್ವಾ? ಸುಮ್ಮನೆ ಒಬ್ಬ ಮಹಿಳೆ ಯಾಕೆ ಆರೋಪ ಮಾಡುತ್ತಾರೆ. ಅಂತಹ ಕೃತ್ಯಕ್ಕೆ ಇವರು ಆಸ್ಪದ ಯಾಕೆ ನೀಡಬೇಕು. ಸಮಯ ಸಂದರ್ಭ ಬಂದಾಗ ಎಲ್ಲವೂ ಆಗಲಿದೆ. ಈಗ ಒಂದೊಂದೇ ಹೊರಗೆ ಬರುತ್ತಿದೆ. ಘಟನೆಗೆ ಸಂಬಂಧಪಟ್ಟಂತೆ ಕೋರ್ಟ್ ಇದೆ ಕಾನೂನಿದೆ. ಅದು ಅದರ ಪ್ರಕಾರ ಏನಾಗಬೇಕು ಆಗುತ್ತದೆ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಚ್ಛೇದಿತ ಮಹಿಳೆಗೂ, ಮನೆ ಕಟ್ಟಲು ಬಂದ ಗೌಂಡಿಗೂ ಲವ್​: ಆಸ್ತಿಗಾಗಿ ನಡೆದಿದ್ದು ಭೀಕರ ಕೊಲೆ!

ಬೆಳಗಾವಿ, ಏಪ್ರಿಲ್​​ 07: ವಿಚ್ಛೇದಿತ ಮಹಿಳೆಯ ನಂಬಿಕೆ ಗಳಿಸಿ ಆಕೆಯ ಜೊತೆ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದ ವ್ಯಕ್ತಿಯೋರ್ವ ಆಕೆಯ ಆಸ್ತಿ ಲಪಟಾಯಿಸುವ ಆಸೆಯಿಂದ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಕಳೆದ ಮಾರ್ಚ್ 12ರಂದು ಅಥಣಿ ಪಟ್ಟಣದ ಹೊರ ವಲಯದ ಕಬ್ಬಿನ ಗದ್ದೆಯೊಂದರಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ ಪ್ರಕರಣ ಬೆನ್ನತ್ತಿದ್ದ ಪೊಲೀಸರು ಮೃತಳನ್ನು ಅಥಣಿ ಪಟ್ಟಣದ ನಿವಾಸಿ ಸುಜಾತಾ ಪವಾರ್ (35) ಎಂದು ಗುರುತಿಸಿದ್ದು, ಈಕೆಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಆರೋಪಿ ಕುಮಾರ್ ಹವಾಲ್ದಾರ್​​ ಎಂಬಾತನನ್ನು ಬಂಧಿಸಿದ್ದಾರೆ.

ಇನ್ನು ಕೊಲೆಯಾಗಿರುವ ಈ ಸುಜಾತಳನ್ನ 16 ವರ್ಷಗಳ ಹಿಂದೆ ಹಾರೂಗೇರಿ ಯುವಕನೊಬ್ಬನ ಜೊತೆಗೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಗಂಡು ಮಗುವೂ ಇತ್ತು. ಆದರೆ ಕುಡಿದು ಬಂದು ಗಂಡ ಕಿರುಕುಳ ನೀಡುತ್ತಾನೆ ಎಂಬ ಕಾರಣಕ್ಕೆ 13 ವರ್ಷಗಳ ಬಳಿಕ ಪತಿ ತೊರೆದು ಸುಜಾತಾ  ತವರು ಸೇರಿದ್ದಳು. ಗಂಡನಿಂದ ವಿಚ್ಛೇದನ ಕೂಡ ಪಡೆದು, ಆತನ ಕಡೆಯಿಂದ ಸಿಕ್ಕಿದ್ದ ಮನೆ ಕೂಡ ಮಾರಿ ಅದರಿಂದ ಬಂದ ಹಣದಿಂದ ಅಥಣಿ ಹೊರ ವಲಯದಲ್ಲಿ ಸೈಟ್ ಕೂಡ ಖರೀದಿಸಿದ್ದಳು. ಗಂಡು ದಿಕ್ಕಿಲ್ಲದ ತವರು ಮನೆಗೆ ಆಧಾರವಾಗಿದ್ದ ಈಕೆ ತಾಯಿ ಬಾಡಿಗೆ ಮನೆಯಲ್ಲಿದ್ದ ಕಾರಣ ಸ್ವಂತದ್ದೊಂದು ಮನೆ ಬೇಕು ಎಂದು ಖರೀದಿಸಿದ್ದ ಜಾಗದಲ್ಲಿ ಹೊಸ ಮನೆ ಕಟ್ಟಲು ಮುಂದಾಗಿದ್ದಳು. ಈ ವೇಳೆ ಗೌಂಡಿ ಕುಮಾರ್ ಹವಾಲ್ದಾರನ ಪರಿಚಯ ಸುಜಾತಾಳಿಗಾಗಿತ್ತು. ಮನೆ ಕಟ್ಟಲು ಸಹಾಯ ಮಾಡವ ನೆಪದಲ್ಲಿ ಸುಜಾತಾಳ ವಿಶ್ವಾಸ ಗಳಿಸಿದ್ದ ಈತ, ನಿನ್ನ ಮದುವೆ ಆಗ್ತೀನಿ ಎಂದು ಹೇಳಿ ದೈಹಿಕ ಸಂಬಂಧ ಕೂಡ ಬೆಳೆಸಿದ್ದ. ಆದರೆ ಕಳೆದ 2 ವರ್ಷಗಳಿಂದ ಇವರ ನಡುವಿನ ಸಂಬಂಧ ಹಳಸಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಸಾವಿನಲ್ಲೂ ಒಂದಾದ ಯುವ ದಂಪತಿ! ಪತ್ನಿಯ ಸಾವಿನ ದಿನವೇ ರಸ್ತೆ ಅಪಘಾತದಲ್ಲಿ ಪ್ರಾಣಬಿಟ್ಟ ಪತಿ

ಅಲ್ಲದೆ, ಮದುವೆ ಆಗಬೇಕು ಎಂದರೆ ಕಟ್ಟಿದ ಮನೆಯನ್ನ ತನ್ನ ಹೆಸರಿಗೆ ಮಾಡಬೇಕು ಎಂದು ಕುಮಾರ್ ಸುಜಾತಾಗೆ ಒತ್ತಡ ಹಾಕಲಾರಂಭಿಸಿದ್ದ. ಆದರೆ ಮಗನಿದ್ದಾನೆ, ತಾನು ಮನೆ ಕೊಡಲ್ಲ ಎಂದು ಸುಜಾತಾ ಹೇಳಿದ್ದಳು. ಇದರಿಂದ ಪಿತ್ತ ನೆತ್ತಿಗೇರಸಿಕೊಂಡಿದ್ದ ಈತ ಮಾರ್ಚ್ 5ರಂದು ಮಧ್ಯಾಹ್ನ ಕುಡಿದು ಬಂದು ಸುಜಾತ ಜೊತೆಗೆ ಗಲಾಟೆ ನಡೆಸಿದ್ದಾನೆ. ಮಾತಾಡೋದಿದೆ ಅಂತಾ ಬೈಕ್ ಮೇಲೆ ಕರೆದುಕೊಂಡು ಹೋಗಿ ಕೊಲೆ ಮಾಡಿ ವಾಪಾಸ್ ಆಕೆಯ ಮನೆಗೆ ಬಂದು ಸಾಮಗ್ರಿಗಳ ಸಮೇತ ಹೊರ ನಡೆದಿದ್ದಾನೆ. ಈ ವೇಳೆ ಸುಜಾತಾಳ 15ವರ್ಷದ ಮಗ ಪ್ರಶ್ನೆ ಮಾಡಿದಾಗ ತನ್ನ ಜೊತೆಗೆ ಜಗಳ ಮಾಡಿ ಗೆಳತಿ ಮನೆಗೆ ನಿಮ್ಮಮ್ಮ ಹೋಗಿದ್ದಾಳೆ. ನಾನು ಬೈಯುತ್ತೇನೆಂದು ಪೋನ್ ಸ್ವಿಚ್ಛ್ ಆಫ್ ಮಾಡಿದ್ದಾಳೆ. ತಾನು ಕೂಡ ಜಾತ್ರೆ ಹೋಗುತ್ತೇನೆಂದು ಸುಳ್ಳು ಹೇಳಿ ತೆರಳಿದ್ದ. ಇತ್ತ ಸುಜಾತಾ ತಾಯಿ ಕೂಡ ಏನೋ ಬೇಜಾರಾಗಿ ಮಗಳು ಪ್ರತಿ ವರ್ಷದಂತೆ ಈ ಬಾರಿಯೂ ಗೆಳೆತಿಯರ ಜೊತೆಗೆ ಶ್ರೀಶೈಲಕ್ಕೆ ಹೋಗಿದ್ದಾಳೆ ಎಂದು ಸುಮ್ಮನಾಗಿದ್ದಳು. ಆದರೆ  ಮನೆಗೆ ಪೊಲೀಸರು ಬಂದು ಸುಜಾತಾ ಸಾವಿನ ವಿಷಯ ತಿಳಿಸುತ್ತಿದ್ದಂತೆ ಕುಮಾರನ ಕಳ್ಳಾಟ ಬಯಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Source link

PSL 2026: ಡೇವಿಡ್ ವಾರ್ನರ್​ ಬಂಧನ

ಕರಾಚಿ ಕಿಂಗ್ಸ್ ತಂಡದ ನಾಯಕ ಡೇವಿಡ್ ವಾರ್ನರ್ (David Warner) ಅವರು ಸಿಡ್ನಿಯಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಆರೋಪದ ಮೇಲೆ ಆಸ್ಟ್ರೇಲಿಯನ್ ಪೊಲೀಸರು ಬಂಧಿಸಿದ್ದಾರೆ. ಪ್ರಸ್ತುತ ಪಾಕಿಸ್ತಾನ ಸೂಪರ್ ಲೀಗ್ (PSL 2026) ನಡೆಯುತ್ತಿದ್ದು, ಅದರ ನಡುವೆಯೇ ಈ ಘಟನೆ ಸಂಭವಿಸಿದೆ.

ಪಾಕಿಸ್ತಾನ್ ಸೂಪರ್ ಲೀಗ್​ ನಡುವೆ ತವರಿಗೆ ತೆರಳಿದ್ದ ಡೇವಿಡ್ ವಾರ್ನರ್ ಏಪ್ರಿಲ್ 7, 2026 ರಂದು ಸಿಡ್ನಿಯ ಮರೂಬ್ರಾದಲ್ಲಿ ವೇಗದಲ್ಲಿ ವಾಹನ ಚಲಾಯಿಸಿದ್ದರು. ಇದನ್ನು ಗಮನಿಸಿದ ಪೋಲೀಸರು ಇವರನ್ನು ತಪಾಸಣೆಗಾಗಿ ತಡೆದಿದ್ದಾರೆ.

ಈ ವೇಳೆ ಡೇವಿಡ್ ವಾರ್ನರ್  ಕುಡಿದು ಗಾಡಿ ಓಡಿಸುತ್ತಿರುವುದು ಗೊತ್ತಾಗಿದೆ. ತಕ್ಷಣವೇ ವಾರ್ನರ್​ ಅವರನ್ನು ವಶಕ್ಕೆ ಪಡೆದ ಪೊಲೀಸರು ಅವರನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ಅವರ ರಕ್ತದಲ್ಲಿನ ಮದ್ಯದ ಪ್ರಮಾಣ 0.104 ಇರುವುದು ಕಂಡುಬಂದಿದೆ. ಇದು ಆಸ್ಟ್ರೇಲಿಯಾದ ಕಾನೂನುಬದ್ಧ ಮಿತಿಗಿಂತ (0.05) ಎರಡು ಪಟ್ಟು ಹೆಚ್ಚು.

ಇತ್ತ ಮದ್ಯಪಾನ ಮಾಡಿ ಬಂಧನಕ್ಕೆ ಒಳಗಾದ ಡೇವಿಡ್ ವಾರ್ನರ್ ಇದೀಗ ವಕೀಲರ ನೆರವಿನೊಂದಿಗೆ ಬಿಡುಗಡೆಯಾಗಿದ್ದಾರೆ. ಇದಾಗ್ಯೂ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತಿಂಗಳು ಆಸ್ಟ್ರೇಲಿಯಾದ ನ್ಯಾಯಾಲಯಕ್ಕೆ ಹಾಜರಾಗಬೇಕಿದೆ.

PSL 2026​ ಆಡ್ತಾರಾ?

ವರದಿಯ ಪ್ರಕಾರ, ಡೇವಿಡ್ ವಾರ್ನರ್ ಅವರು ಶೀಘ್ರದಲ್ಲೇ ಪಾಕಿಸ್ತಾನಕ್ಕೆ ಮರಳಲಿದ್ದಾರೆ ಮತ್ತು ಕರಾಚಿ ಕಿಂಗ್ಸ್ ತಂಡದ ಪರವಾಗಿ ಪಂದ್ಯಗಳನ್ನು ಮುಂದುವರಿಸಲಿದ್ದಾರೆ.

ಕರಾಚಿ ಕಿಂಗ್ಸ್ ತಂಡವು ಏಪ್ರಿಲ್ 9 ರಂದು ಗುರುವಾರ ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪೆಶಾವರ್ ಝಲ್ಮಿ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೆ ಅವರು ಲಭ್ಯರಿರಲಿದ್ದಾರೆ ಎಂದು ವರದಿಯಾಗಿದೆ.

ಅಂದಹಾಗೆ ಡೇವಿಡ್ ವಾರ್ನರ್, ಇತ್ತೀಚೆಗಷ್ಟೇ ತಂಡದ ಸದಸ್ಯ ಮೊಯಿನ್ ಅಲಿ ಅವರೊಂದಿಗೆ ಗಲಾಟೆ ಮಾಡಿಕೊಂಡಿದ್ದಾರೆ ಎಂಬ ವಿಡಿಯೋ ವೈರಲ್ ಆಗಿತ್ತು, ಆದರೆ ಅದು ಕೇವಲ “ತಮಾಷೆ” ಎಂದು ವಾರ್ನರ್ ಸ್ಪಷ್ಟಪಡಿಸಿದ್ದರು. ಇದೀಗ ಮದ್ಯಪಾನ ಮಾಡಿ ಗಾಡಿ ಓಡಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

 

Source link

ಬ್ರ್ಯಾಂಡ್ ಕರ್ನಾಟಕವೋ ಅಥವಾ ಬ್ರೇಕ್‌ಡೌನ್ ಕರ್ನಾಟಕವೋ?: ಕೆಎಸ್‌ಆರ್‌ಟಿಸಿ ಬಸ್‌ಗಳ ಭೀಕರ ದುಸ್ಥಿತಿ ಬಿಚ್ಚಿಟ್ಟ ಸವಾರರು!

ಬೆಂಗಳೂರು, ಏ.7: ಕಳೆದ ಮೂರು ವರ್ಷದಿಂದ ಬ್ರ್ಯಾಂಡ್ ಕರ್ನಾಟಕ… ಬ್ರ್ಯಾಂಡ್ ಕರ್ನಾಟಕ ಎನ್ನುವ ಕಾಂಗ್ರೆಸ್​​ ಸರ್ಕಾರಕ್ಕೆ ಈ ಬಸ್ಸುಗಳನ್ನು ಬ್ರ್ಯಾಂಡ್ ಮಾಡುವ ಯೋಚನೆಯೇ ಮಾಡಿಲ್ಲ ಎಂದು ಅನ್ನಿಸುತ್ತದೆ. ಕಳೆದ ಹಲವು ದಿನಗಳಿಂದ ಸರ್ಕಾರಿ ಬಸ್ಸುಗಳ ಬಗ್ಗೆ ಒಂದಲ್ಲ ಒಂದು ದೂರುಗಳು ಬರುತ್ತಲೇ ಇದೆ. ಇದೀಗ @KarnatakaPortfolio ಹಂಚಿಕೊಂಡಿರುವ ವಿಡಿಯೋ ನೋಡಿದ್ರೆ ಕೆಎಸ್​​ಆರ್​​ಟಿಸಿ ಬಸ್ಸುಗಳು ಎಷ್ಟು ಅಪಾಯಕಾರಿಯಾಗಿದೆ ಎಂಬುದನ್ನು ನೋಡಬಹುದು. ಇದೀಗ ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ಭಾರೀ ವೈರಲ್​​ ಆಗುತ್ತಿದೆ. ಇದೀಗ ಈ ತಾಂತ್ರಿಕ ದೋಷ ಜನರ ಜೀವನಕ್ಕೆ ಎಷ್ಟೊಂದು ಅಪಾಯಕಾರಿಯಾಗಿದೆ ಎಂಬುದನ್ನು ಹಾಗೂ ಸಂಸ್ಥೆಯ ನಿರ್ವಹಣಾ ಲೋಪವನ್ನು ಬೆತ್ತಲೆ ಮಾಡಿವೆ.

ಬಸ್ಸಿನ ವೇಗವನ್ನು ನಿಯಂತ್ರಿಸುವ ಆಕ್ಸಿಲರೇಟರ್ ಕಿತ್ತು ಬಂದಿದ್ದು, ಅದನ್ನು ಲೋಹದ ಬದಲು ಒಂದು ಸಾಧಾರಣ ಬಟ್ಟೆಯ ಪಟ್ಟಿಯಿಂದ ಕಟ್ಟಿ ನಿಲ್ಲಿಸಲಾಗಿದೆ. ಒಂದು ವೇಳೆ ಈ ಬಟ್ಟೆ ತುಂಡಾದರೆ ಅಪಘಾತ ಖಂಡಿತ. ಇಂತಹ ಬೇಜಾವ್ದಾರಿತನದಿಂದ ಜನರ ಪ್ರಾಣಕ್ಕೆ ಅಪಾಯ ತರುವುದು ಎಷ್ಟು ಸರಿ ಎಂದು ಜನ ಪ್ರಶ್ನೆ ಮಾಡಿದ್ದಾರೆ. ದಿನವಿಡೀ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದೊಯ್ಯಬೇಕಾದ ಚಾಲಕನ ಸೀಟನ್ನು ಸರಿಯಾಗಿ ರಿಪೇರಿ ಮಾಡುವ ಬದಲು, ಕಬ್ಬಿಣದ ತಂತಿಗಳಿಂದ ಕಟ್ಟಲಾಗಿದೆ. ಪಾಪ ಅವರಿಗೂ ಕೂಡ ಸರಿಯಾದ ವ್ಯವಸ್ಥೆಯನ್ನು ಕೂಡ ಮಾಡಲು ನಮ್ಮ ಸರ್ಕಾರದ ಬಳಿ ಹಣವಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ಇನ್ನು ಟೈರ್ ಬಳಿ ಆಯಿಲ್ ಸೋರಿಕೆಯಾಗಿರುವುದು ಕೂಡ ಈ ಬಸ್ಸಿನಲ್ಲಿ ಕಂಡು ಬಂದಿದೆ. ಇದರಿಂದ ಇದು ಬ್ರೇಕ್ ಫೇಲ್ಯೂರ್ ಅಥವಾ ಗೇರ್ ಬಾಕ್ಸ್ ಸಮಸ್ಯೆಯಾಗುವ ಸಾಧ್ಯತೆ ಕೂಡ ಇದೆ. ಪ್ರತಿದಿನ ಲಕ್ಷಾಂತರ ಶಾಲಾ ಮಕ್ಕಳು, ಕಾರ್ಮಿಕರು ಮತ್ತು ಸಾಮಾನ್ಯ ಜನರು ಈ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಬಸ್‌ಗಳ ಈ ದುಸ್ಥಿತಿಗೆ ಒತ್ತಡದಲ್ಲಿ ಕೆಲಸ ಮಾಡುವ ಚಾಲಕರನ್ನು ಹೊಣೆ ಮಾಡುವಂತಿಲ್ಲ. ಇದು ಸಂಪೂರ್ಣವಾಗಿ ಸಾರಿಗೆ ಇಲಾಖೆ ಮತ್ತು ಸರ್ಕಾರದ ನಿರ್ಲಕ್ಷ್ಯವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಯಾವುದಾದರೂ ದೊಡ್ಡ ದುರಂತ ಸಂಭವಿಸಿದ ಮೇಲೆ ಇಲಾಖೆ ಎಚ್ಚೆತ್ತುಕೊಳ್ಳುತ್ತದೆಯೇ?” ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ: ಮಹಿಳೆ ಬಟ್ಟೆ ವಾಷ್​ಗೆ ಹಾಕಲು ಬಂದಾಗ ವಾಷಿಂಗ್ ಮಷಿನ್ ಒಳಗೆ ಬೆಚ್ಚಗೆ ಮಲಗಿತ್ತು ಹಾವು! ಆಮೇಲೇನಾಯ್ತು ನೋಡಿ

ಸಾರ್ವಜನಿಕ ಸಾರಿಗೆಯು ನಂಬಿಕಾರ್ಹ ಮತ್ತು ಸುರಕ್ಷಿತವಾಗಿರಬೇಕು. ಆದರೆ ಈಗಿನ ಪರಿಸ್ಥಿತಿ ನೋಡಿದರೆ ಪ್ರಯಾಣಿಕರು ಪ್ರತಿ ಕ್ಷಣವೂ ಪ್ರಾಣಭಯದಲ್ಲೇ ಸಂಚರಿಸುವಂತಾಗಿದೆ. ಕೂಡಲೇ ಎಲ್ಲಾ ಬಸ್‌ಗಳ ತಾಂತ್ರಿಕ ತಪಾಸಣೆ ನಡೆಸಿ, ಅನರ್ಹ ವಾಹನಗಳನ್ನು ರಸ್ತೆಯಿಂದ ಹಿಂಪಡೆಯಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version