ಊಟ ಮಾಡಿದ ತಕ್ಷಣ ಟೀ ಕುಡಿದ್ರೆ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತೆ ಗೊತ್ತಾ? – Kannada News | ಊಟ ಮಾಡಿದ ತಕ್ಷಣ ಟೀ ಕುಡಿಯುವ ಅಭ್ಯಾಸದಿಂದ ಆಗುವ ತೊಂದರೆಗಳು ಅಷ್ಟಿಷ್ಟಲ್ಲ

ನಮ್ಮಲ್ಲಿ ಬಹುತೇಕ ಹೆಚ್ಚಿನವರಿಗೆ ಚಹಾ (tea) ಅಂದ್ರೆ ಪಂಚಪ್ರಾಣ. ಅವರ ದಿನ ಆರಂಭವಾಗುವುದೇ ಒಂದು ಕಪ್‌ ಚಹಾದೊಂದಿಗೆ. ಅದರಲ್ಲೂ ಕೆಲವರಂತೂ ಊಟ ಮಾಡಿದ ತಕ್ಷಣವೇ ಟೀ ಕುಡಿದು ಬಿಡುತ್ತಾರೆ. ಹೌದು ವಿಶೇಷವಾಗಿ ಮಧ್ಯಾಹ್ನ ಊಟ ಮಾಡಿದ ನಂತರ ಬರುವ ನಿದ್ರೆ, ಆಲಸ್ಯವನ್ನು ಹೋಗಲಾಡಿಸಲು ಚಹಾ ಕುಡಿಯುತ್ತಾರೆ. ಹೀಗೆ ಊಟ ಮಾಡಿದ ತಕ್ಷಣವೇ ಟೀ ಕುಡಿಯುವುದರಿಂದ ಚಹಾದಲ್ಲಿರುವ ಅಂಶಗಳು ದೇಹವು ಆಹಾರದ ಪೋಷಕಾಂಶಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ನೀವು ಎಷ್ಟೇ ಆರೋಗ್ಯಕರ ಅಥವಾ ವಿಟಮಿನ್ ಭರಿತ ಆಹಾರವನ್ನು ಸೇವಿಸಿದ್ದರೂ, ನೀವು ತಕ್ಷಣ ಚಹಾ ಕುಡಿದರೆ, ಅದು ದೇಹದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಹಾಗಿದ್ರೆ ಊಟ ಮಾಡಿದ ತಕ್ಷಣ ಟೀ ಕುಡಿಯೋದರಿಂದ ಆಗುವ ತೊಂದರೆಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಊಟ ಮಾಡಿದ ತಕ್ಷಣ ಚಹಾ ಸೇವಿಸಿದರೆ ಏನಾಗುತ್ತದೆ?

ಕಬ್ಬಿಣದ ಕೊರತೆ ಮತ್ತು ರಕ್ತಹೀನತೆಯ ಅಪಾಯ: ಚಹಾವು ‘ಟ್ಯಾನಿನ್’ ಮತ್ತು ‘ಪಾಲಿಫಿನಾಲ್‌ಗಳು’ ಎಂಬ ಸಂಯುಕ್ತಗಳನ್ನು ಹೊಂದಿರುತ್ತದೆ. ಈ ಸಂಯುಕ್ತಗಳು ಆಹಾರದಲ್ಲಿರುವ ಕಬ್ಬಿಣಾಂಶದೊಂದಿಗೆ ವಿಶೇಷವಾಗಿ ತರಕಾರಿಗಳು ಮತ್ತು ದ್ವಿದಳ ಧಾನ್ಯಗಳಲ್ಲಿ ಕಂಡುಬರುವ ನಾನ್-ಹೀಮ್ ಕಬ್ಬಿಣದೊಂದಿಗೆ ಬಂಧಿಸುತ್ತವೆ. ಈ ಬಂಧದಿಂದಾಗಿ, ದೇಹವು ಕಬ್ಬಿಣವನ್ನು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಅಭ್ಯಾಸವು ದೀರ್ಘಕಾಲದವರೆಗೆ ಮುಂದುವರಿದರೆ, ದೇಹದಲ್ಲಿ ಕಬ್ಬಿಣದ ಕೊರತೆ ಉಂಟಾಗುತ್ತದೆ, ಇದು ನಂತರ ರಕ್ತಹೀನತೆಯಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು.

ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ: ಚಹಾದಲ್ಲಿರುವ ಕೆಫೀನ್ ಮತ್ತು ಟ್ಯಾನಿನ್‌ಗಳು ಜೀರ್ಣಕಾರಿ ಕಿಣ್ವಗಳನ್ನು ಪ್ರತಿಬಂಧಿಸುತ್ತವೆ. ಊಟ ಮಾಡಿದ  ತಕ್ಷಣ ಚಹಾ ಕುಡಿಯುವುದರಿಂದ ಜೀರ್ಣಕ್ರಿಯೆಯ ಪ್ರಕ್ರಿಯೆಯು ನಿಧಾನಗೊಳ್ಳುತ್ತದೆ, ಇದು ಹೊಟ್ಟೆ ಉಬ್ಬರ, ಗ್ಯಾಸ್, ಆಮ್ಲೀಯತೆ ಮತ್ತು ಹೊಟ್ಟೆ ಭಾರದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.

ರೋಗನಿರೋಧಕ ಶಕ್ತಿ ಮತ್ತು ಮೂಳೆಗಳು ದುರ್ಬಲಗೊಳ್ಳುವ ಸಾಧ್ಯತೆ ಇದೆ: ನಿಯಮಿತವಾಗಿ ಊಟ ಮಾಡಿದ ತಕ್ಷಣ ಟೀ ಕುಡಿಯುವ ಅಭ್ಯಾಸವನ್ನು ಪಾಲಿಸುತ್ತಾ ಬಂದರೆ ದೇಹದಲ್ಲಿ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಪರಿಣಾಮವಾಗಿ, ರೋಗನಿರೋಧಕ ವ್ಯವಸ್ಥೆಯು ದುರ್ಬಲಗೊಳ್ಳುತ್ತದೆ ಮತ್ತು ಇದು  ಮೂಳೆಗಳ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಇದರ ಹೊರತಾಗಿ, ಕೆಫೀನ್ ‘ಮೂತ್ರವರ್ಧಕ’ ಆಗಿರುವುದರಿಂದ ದೇಹದಲ್ಲಿ ನೀರಿನ ಕೊರತೆಯನ್ನು ಉಂಟುಮಾಡಬಹುದು.

ಇದನ್ನೂ ಓದಿ: ಒತ್ತಡ, ಆಯಾಸವಿಲ್ಲದೆ ನೆಮ್ಮದಿಯಿಂದ ನಿದ್ರೆ ಮಾಡಲು ರಾತ್ರಿ ವೇಳೆ ಅಭ್ಯಾಸಗಳನ್ನು ಪಾಲಿಸಿ

ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ: ಊಟವಾದ ತಕ್ಷಣ ಚಹಾ ಕುಡಿಯುವುದರಿಂದ ದೇಹದ ನೈಸರ್ಗಿಕ ಜೀರ್ಣಕ್ರಿಯೆ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ, ಇದು ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ತೂಕ ಹೆಚ್ಚಾಗಲು ಕಾರಣವಾಗಬಹುದು. ಆದ್ದರಿಂದ, ಊಟವಾದ ತಕ್ಷಣ ಚಹಾ ಕುಡಿಯುವುದನ್ನು ತಪ್ಪಿಸಿ.

ಊಟದ ಮಾಡಿದ ಎಷ್ಟು ಸಮಯದ ನಂತರ ಚಹಾ ಕುಡಿಯಬೇಕು?

ಊಟವಾದ ತಕ್ಷಣ ಚಹಾ ಕುಡಿಯುವುದನ್ನು ತಪ್ಪಿಸಲು ತಜ್ಞರು ಸೂಚಿಸುತ್ತಾರೆ. ನೀವು ಚಹಾ ಕುಡಿಯುವವರಾಗಿದ್ದರೆ, ಊಟವಾದ ಕನಿಷ್ಠ 45 ನಿಮಿಷದಿಂದ 1 ಗಂಟೆಯ ನಂತರ ಕುಡಿಯಬೇಕು. ಏಕೆಂದರೆ ಈ ಅವಧಿಯು ದೇಹವು ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಮತ್ತು ಪೋಷಕಾಂಶಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಹೀರಿಕೊಳ್ಳಲು ಸಮಯವನ್ನು ನೀಡುತ್ತದೆ. ಹಾಗಾಗಿ ಈ ಸಂದರ್ಭದಲ್ಲಿ ಟೀ ಕಾಫಿ ಬದಲಿಗೆ ಉಗುರು ಬೆಚ್ಚಗಿನ ನೀರು ಅಥವಾ ಸೋಂಪು ನೀರು ಕುಡಿಯಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:29 pm, Sun, 1 February 26

Source link

ಮೂವರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆಗೆ ಯತ್ನ, ದುಡುಕಿನ‌ ನಿರ್ಧಾರಕ್ಕೆ 3 ಜೀವಗಳು ಬಲಿ – Kannada News | Mother kills three children in Bagalkot, then attempts suicide for Family Dispute

ಪರಿಶೀಲನೆ ಮಾಡುತ್ತಿರುವ ಪೊಲೀಸ್ರು

ಬಾಗಲಕೋಟೆ, (ಫೆಬ್ರವರಿ 01): ಮಹಿಳೆಯೊಬ್ಬರು (Woman) ತನ್ನ ಮೂವರು ಮಕ್ಕಳನ್ನು ಕೊಂದು ತಾನೂ ಸಹ ಆತ್ಮಹತ್ಯೆಗೆ ಯತ್ನಿಸಿರುವ ದಾರುಣ ಘಟನೆ ಬಾಗಲಕೋಟೆ (Bagalkot) ಜಿಲ್ಲೆ ಬಾದಾಮಿ ತಾಲೂಕಿನ ಹಿರೇಮುಚ್ಚಳಗುಡ್ಡ ಗ್ರಾಮದಲ್ಲಿ ನಡೆದಿದೆ. ಕೌಟುಂಬಿಕ ಕಲಹದಿಂದ ಬೇಸತ್ತು ರೂಪಾ ಎನ್ನುವ ಮಹಿಳೆ ತನ್ನ ಮೂರು ಮಕ್ಕಳನ್ನು ನೇಣಿಗೆ ಹಾಕಿ ಕೊಂದು ಬಳಿಕ ತಾನೂ ಡೀಸೆಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸಮೃದ್ಧಿ(5), ಪ್ರೀತಮ್(4), ಸುಕ್ಷಿತ್(2) ಮೃತ ಮಕ್ಕಳು. ಇನ್ನು ಡೀಸೆಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ರೂಪಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರೂಪಾ 2018ರಲ್ಲಿ ಹನಮಂತ ಬಾದಾಮಿ ಎನ್ನುವಾತನೊಂದಿಗೆ ಮದುವೆ ಮಾಡಿಕೊಂಡಿದ್ದು, ದಂಪತಿಗೆ ಮೂರು ಮಕ್ಕಳು ಸಹ ಇದ್ದವು. ಆದ್ರೆ, ಅತ್ತೆ ರೇಣವ್ವ ಕಿರುಕುಳ ಹೆಚ್ಚಾಗಿತ್ತು. ಇದರಿಂದ ಬೇಸತ್ತು ರೂಪಾ ಮೊದಲು ತನ್ನ ಮೂವರು ಮಕ್ಕಳಿಗೆ ಹಗ್ಗದಿಂದ ಮನೆಯ ಜಂತಿಗೆ ನೇಣು ಹಾಕಿ ಕೊಂದಿದ್ದಾಳೆ. ಬಳಿಕ ತಾನೂ ಡೀಸೆಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಅದೃಷ್ಟವಶಾತ್ ಬದುಕುಳಿದಿದ್ದು ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಇದನ್ನೂ ಓದಿ: ಕೊಳಚೆ ನೀರಲ್ಲಿ ಶಾಲಾ ವಿದ್ಯಾರ್ಥಿಗಳು ಪ್ಲೇಟ್ ತೊಳೆದ ವೈರಲ್ ಫೋಟೋ ಅಸಲಿಯತ್ತು ಬಿಚ್ಚಿಟ್ಟ ಬಿಇಓ

ಇನ್ನು ಘಟನಾ ಸ್ಥಳಕ್ಕೆ ಬಾದಾಮಿ ಠಾಣೆ ಪೊಲೀಸರ ಹಾಗೂ ಬಾಗಲಕೋಟೆ ಎಸ್ ಪಿ ಸಿದ್ದಾರ್ಥ ಗೋಯೆಲ್ ಭೇಟಿ ಪರಿಶೀಲನೆ ನಡೆಸಿದ್ದಾರೆ.  ಕೌಟುಂಬಿಕ ಕಲಹಕ್ಕೆ ರೂಪಾಳ ದುಡುಕಿನ‌ ನಿರ್ಧಾರಕ್ಕೆ ಅನಾಯಸವಾಗಿ ಮೂವರು ಮಕ್ಕಳ ಜೀವ ಹೋಗಿದ್ದು ದುರಂತವೇ ಸರಿ.

ಘಟನೆಗೆ ಬಗ್ಗೆ ಪ್ರಾಥಮಿಕ ಮಾಹಿತಿ ಬಿಚ್ಚಿಟ್ಟ ಎಸ್ಪಿ

ಹಿರೇಮಚ್ಚಳಗುಡ್ಡದಲ್ಲಿ ತಾಯಿ ಮೂರು ಮಕ್ಕಳ ಕೊಂದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಮಕ್ಕಳು ಮೃತಪಟ್ಟಿವೆ. ತಾಯಿಗೆ ಸೀರಿಯಸ್ ಆಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಗೆ ಕಾರಣ ಗಂಡ ಹೆಂಡತಿ ಜಗಳ , ಅತ್ತೆ ಮಾವ ಕಿರುಕಳ ಬಗ್ಗೆ ಪ್ರಾಥಮಿಕ ಮಾಹಿತಿ ಇದೆ. ಈ ಬಗ್ಗೆ ಪೂರ್ಣ ತನಿಖೆ ನಡೆಸಲಾಗುತ್ತಿದೆ. ಈಗಾಗಲೇ ಸ್ಥಳದಲ್ಲೇ ಸಿಪಿಐ ಮತ್ತು ಪಿಎಸ್ಐ ಇದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಅತ್ತೆ ಮಾವನ ಕಿರುಕಳ ಬಗ್ಗೆ ಹೆಚ್ಚು ಆರೋಪ ಇದೆ. ಆದ್ರೆ ತಾಯಿ ಕಂಡಿಷನ್ ನೋಡಿಕೊಂಡು, ವೈದ್ಯರ ಸಲಹೆ ಮೇರೆಗೆ ತಾಯಿ ಹೇಳಿಕೆ ಪಡೆಯುತ್ತೇವೆ ಎಂದು ಮಾಹಿತಿ ನೀಡಿದರು.

ನಾವು ಮತ್ತು ಎಕ್ಸಿಕ್ಯುಟಿವ್ ಮೆಜಿಸ್ಟ್ರೇಟ್ ಕಡೆಯಿಂದ ರೆಕಾರ್ಡ್ ಮಾಡಿ ಮಾಹಿತಿ ಪಡೆಯುತ್ತೇವೆ‌. ಇಂದು ಮಧ್ಯಾಹ್ನ 1.30 ಗಂಟೆಯೊಳಗೆ ಈ ಘಟನೆ ‌ನಡೆದಿದೆ‌. ಗಂಡ ಮನೆಗೆ ಬಂದು ನೋಡಿದಾಗ ಘಟನೆ ಗೊತ್ತಾಗಿದೆ ಅಂತಿದ್ದಾರೆ. ಒಟ್ಟಾರೆ ಸಂಪೂರ್ಣ ತನಿಖೆ ನಂತರವೇ ಘಟನೆಗೆ ನಿಖರ ಕಾರಣ ತಿಳಿಯಲಿದೆ ಎಂದರು.

ಕರ್ನಾಟದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 5:36 pm, Sun, 1 February 26

Source link

ಆ ನಟನಿಗಿಂತ ನಾನು ದೊಡ್ಡ ಸ್ಟಾರ್: ರಜನೀಕಾಂತ್ ಹೇಳಿದ್ದು ಯಾರ ಬಗ್ಗೆ? – Kannada News | Rajinikanth talks about Mohan Babu in his 50 year function

ರಜನೀಕಾಂತ್ (Rajinikanth) ಭಾರತದ ನಂಬರ್ 1 ಸ್ಟಾರ್. ಅವರಿಗೆ ಇರುವಷ್ಟು ಅಭಿಮಾನಿಗಳು ಬಹುಷಃ ಇನ್ಯಾವ ನಟರಿಗೂ ಇದ್ದಂತಿಲ್ಲ. ಭಾರತ ಮಾತ್ರವಲ್ಲ, ಅಮೆರಿಕ, ಸಿಂಗಪುರ, ಮಲೇಷ್ಯಾ, ಜಪಾನ್ ಇನ್ನೂ ಹಲವು ದೇಶಗಳಲ್ಲಿ ಈಗಲ್ಲ, ದಶಕಗಳ ಹಿಂದೆಯೇ ಸ್ಟಾರ್ ನಟ ಅವರು. ಎಷ್ಟೇ ದೊಡ್ಡ ಸ್ಟಾರ್ ನಟ ಆಗಿದ್ದರೂ ಸಹ ಬಹಳ ವಿನಯಂತ, ಸಜ್ಜನ ರಜನೀಕಾಂತ್. ಅಧ್ಯಾತ್ಮದಲ್ಲಿ ಆಸಕ್ತಿ ಉಳ್ಳ ರಜನೀಕಾಂತ್ ತಮ್ಮನ್ನು ತಾವು ಹೊಗಳಿಕೊಂಡಿದ್ದು, ಅಹಂ ಭಾವ ಪ್ರದರ್ಶಿಸಿದ್ದೆಲ್ಲ ಇಲ್ಲ. ಆದರೆ ಇತ್ತೀಚೆಗಿನ ಕಾರ್ಯಕ್ರಮ ಒಂದರಲ್ಲಿ ಮತ್ತೊಬ್ಬ ಸ್ಟಾರ್ ನಟನ ಹೆಸರು ಹೇಳಿ, ಅವನಿಗಿಂತಲೂ ನಾನು ದೊಡ್ಡ ಸ್ಟಾರ್ ಎಂದಿದ್ದಾರೆ ರಜನೀಕಾಂತ್. ಅದೇಕೆ? ವಿವರ ಇಲ್ಲಿದೆ.

ರಜನೀಕಾಂತ್ ಸ್ಟಾರ್ ನಟ ಆಗಿರುವ ಜೊತೆಗೆ ಅದ್ಭುತ ವ್ಯಕ್ತಿ. ಅದರಲ್ಲೂ ಗೆಳೆತನಕ್ಕೆ ಅವರು ವಿಶೇಷ ಮನ್ನಣೆ ನೀಡುತ್ತಾರೆ. ಇದಕ್ಕೆ ಉದಾಹರಣೆ ಬೆಂಗಳೂರಿನ ಅವರ ಡ್ರೈವರ್ ಫ್ರೆಂಡ್ ರಾಜ್ ಬಹದ್ಧೂರ್. ತಮ್ಮ ಹಳೆಯ ಗೆಳೆಯರೊಟ್ಟಿಗೆ ಈಗಲೂ ಬಾಂಧವ್ಯ ಇರಿಸಿಕೊಂಡಿರುವ ಜೊತೆಗೆ ಅವರೊಟ್ಟಿಗೆ ಅದೇ ತುಂಟತನ, ಸಲುಗೆಯನ್ನು ಇರಿಸಿಕೊಂಡಿದ್ದಾರೆ. ಹಾಗೆಯೇ ಚಿತ್ರರಂಗದಲ್ಲಿಯೂ ರಜನೀಕಾಂತ್ ಅವರಿಗೆ ಹಲವು ಸಲುಗೆಯ ಗೆಳೆಯರಿದ್ದಾರೆ ಅವರಲ್ಲಿ ತೆಲುಗಿನ ಹಿರಿಯ ನಟ ಮೋಹನ್​​ಬಾಬು ಸಹ ಒಬ್ಬರು.

ಇದನ್ನೂ ಓದಿ:ಪೆನ್ನು ಹಿಡಿದ ಸ್ಟೈಲ್ ಕಿಂಗ್ ರಜನೀಕಾಂತ್: ಬರೆಯುತ್ತಿರುವುದು ಯಾವ ಪುಸ್ತಕ?

ಮೋಹನ್ ಬಾಬು ಅವರು ಚಿತ್ರರಂಗಕ್ಕೆ ಕಾಲಿರಿಸಿ 50 ವರ್ಷಗಳಾದ ಸಂಭ್ರಮಾಚರಣೆ ಇತ್ತೀಚೆಗಷ್ಟೆ ನಡೆದಿತ್ತು. ಕಾರ್ಯಕ್ರಮದಲ್ಲಿ ರಜನೀಕಾಂತ್ ಅತಿಥಿಯಾಗಿ ಭಾಗವಹಿಸಿದ್ದರು. ಮೋಹನ್​ ಬಾಬು ಅವರು ಸ್ವಭಾವತಃ ತುಸು ಭಿನ್ನ ವ್ಯಕ್ತಿ. ತಮ್ಮ ಹಿರಿಮೆ-ಗರಿಮೆಯನ್ನು ಹೇಳಿ-ಹೇಳಿ ಪ್ರಚಾರ ಪಡೆಯುವ ವ್ಯಕ್ತಿ. ಆದರೆ ಅದೇ ಸಭೆಯಲ್ಲಿ ಮಾತನಾಡಿದ ರಜನೀಕಾಂತ್, ಮೋಹನ್ ಬಾಬು ಅವರಿಗೆ ತಮಾಷೆಯಾಗಿ ಕಾಲೆಳೆಯುತ್ತಾ, ಅವರಿಗೆ ಉರಿಸಲೆಂದೇ ತಮ್ಮ ಅಭಿಮಾನಿಗಳ ಬಗ್ಗೆ, ಸ್ಟಾರ್ ಗಿರಿಯ ಬಗ್ಗೆ ಮಾತನಾಡಿದ್ದಾರೆ.

ರಜನೀಕಾಂತ್ ಅವರ ಭಾಷಣದ ತುಣುಕು ಇದೀಗ ವೈರಲ್ ಆಗಿದ್ದು, ‘ನಾನು ಮೋಹನ್​​ಬಾಬು ಒಟ್ಟಿಗೆ ಚಿತ್ರರಂಗಕ್ಕೆ ಬಂದವರು. ಖಂಡಿತವಾಗಿ ನಾನು, ಅವರಿಗಿಂತ (ಮೋಹನ್ ಬಾಬು) ದೊಡ್ಡ ಕಲಾವಿದ. ಅವರಿಗಿಂತಲೂ ದೊಡ್ಡ ಸ್ಟಾರ್. ಅವರಿಗೆ ಕೇವಲ ಆಂಧ್ರ, ತೆಲಂಗಾಣದಲ್ಲಿ ಅಭಿಮಾನಿಗಳು ಇದ್ದಾರೆ. ಆದರೆ ನನಗೆ ಆಂಧ್ರ, ತೆಲಂಗಾಣ, ಕರ್ನಾಟಕ, ಮಹಾರಾಷ್ಟ್ರ, ಕೇರಳ, ಅಮೆರಿಕ, ಜಪಾನ್ ಇನ್ನೂ ಎಲ್ಲೆಲ್ಲೋ ಇದ್ದಾರೆ’ ಎಂದಿದ್ದಾರೆ ರಜನೀಕಾಂತ್.

‘ಆದರೆ ಇವರಂಥ (ಮೋಹನ್​​ಬಾಬು) ಗೆಳೆಯ ಇಲ್ಲ. ಈಗ ಮೋಹನ್​​ಬಾಬುಗೆ ಎಲ್ಲವೂ ಸಿಕ್ಕಿದೆ. ಇನ್ನು ಸಿಕ್ಕಬೇಕಿರುವುದು ನೆಮ್ಮದಿ ಮತ್ತು ಆರೋಗ್ಯ. ಮೋಹನ್​​ಬಾಬು ಅವರಿಗೆ ಒಳ್ಳೆಯ ಆರೋಗ್ಯ ಸಿಗಲಿ, ಮುಂದಿನ ಜೀವನವನ್ನು ಅವರು ನೆಮ್ಮದಿಯಿಂದ ಕಳೆಯಲಿ’ ಎಂದು ರಜನೀಕಾಂತ್ ಹಾರೈಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 6:14 pm, Sun, 1 February 26

Source link

ಚಿಮುಲ್ ಚುನಾವಣೆಯಲ್ಲಿ ಹರಿದ ಹಣದ ಹೊಳೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ! – Kannada News | Chikkaballapur Chimul Election: Cash and Silver Plates Offered for Votes

ಚಿಕ್ಕಬಳ್ಳಾಪುರ, ಫೆ. 01: ಚಿಮುಲ್ ಚುನಾವಣೆಯಲ್ಲಿ ಮತದಾರರಿಗೆ ಹಣ ಮತ್ತು ಬೆಳ್ಳಿ ತಟ್ಟೆಗಳ ಮೂಲಕ ಭಾರಿ ಆಮಿಷ ಒಡ್ಡಲಾಗಿರು ದೃಶ್ಯಗಳು ಟಿವಿ9 ಕ್ಯಾಮರಾದಲ್ಲಿ ಸೆರೆಯಾಗಿವೆ. ಮತಗಟ್ಟೆಗಳ ಬಳಿಯೇ ಮತದಾರರಿಗೆ ಆಮಿಷ ಒಡ್ಡಲಾಗಿದ್ದು, ಕೈವಾರ ಕ್ಷೇತ್ರದಲ್ಲಿ ಮತದಾರರಿಗೆ ತಲಾ 2 ಲಕ್ಷ ರೂಪಾಯಿ ಹಂಚಿಕೆ ಮಾಡಲಾಗಿದೆ. ಇತ್ತ ನಂದಿ ಕ್ಷೇತ್ರದಲ್ಲಿ ತಲಾ 8 ಲಕ್ಷ ರೂಪಾಯಿಯವರೆಗೂ ಆಮಿಷ ಒಡ್ಡಲಾಗಿದ್ದರೆ, ಒಬ್ಬ ಅಭ್ಯರ್ಥಿ ಮುಕ್ಕಾಲು ಕೆ.ಜಿ. ತೂಕದ ಬೆಳ್ಳಿ ತಟ್ಟೆ ಹಾಗೂ 2 ಲಕ್ಷ ರೂಪಾಯಿ ನಗದು ನೀಡಿದ್ದಾರೆ. ಮತ್ತೊಬ್ಬ ಅಭ್ಯರ್ಥಿ 8 ಲಕ್ಷ ರೂಪಾಯಿ ನಗದು ಮತ್ತು ಬೆಳ್ಳಿ ತಟ್ಟೆ ವಿತರಿಸಿದ್ದಾರೆ. ಕೋಲಾರದಿಂದ ವಿಭಜನೆಯಾದ ನಂತರ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟ ಸಹಕಾರ ಸಂಘಕ್ಕೆ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಒಟ್ಟು 952 ಮತದಾರರು ಇದ್ದು, ಪ್ರತಿಯೊಂದು ಕ್ಷೇತ್ರದಲ್ಲೂ ಲಕ್ಷಗಟ್ಟಲೆ ಹಣದ ಹಂಚಿಕೆ ಆರೋಪ ಕೇಳಿಬಂದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

ಏರ್​ಪೋರ್ಟ್ ರಸ್ತೆಯಲ್ಲಿ ಅಪಘಾತ ಹೆಚ್ಚಳ: 1 ವರ್ಷದಲ್ಲಿ 50ಕ್ಕೂ ಅಧಿಕ ಜನ ಸಾವು, ಜಾಗೃತಿ ಮೂಡಿಸಲು ಬಂದ ಯಮ – Kannada News | Devanahalli Airport Road Safety: Yamaraja Campaign Tackles Accidents and Helmet Use

ರಸ್ತೆ ಸಂಚಾರದ ಬಗ್ಗೆ ಯಮರಾಜನಿಂದ ಜಾಗೃತಿImage Credit source: tv9 kannada

ದೇವನಹಳ್ಳಿ, ಫೆಬ್ರವರಿ 01: ಏರ್​ಪೋರ್ಟ್​​ ರಸ್ತೆ (Airport Road) ನಿತ್ಯ ಸಾವಿರಾರು ವಾಹನಗಳ ಸಂಚಾರದಿಂದ 24 ಗಂಟೆಯೂ ಫುಲ್ ಬ್ಯುಸಿಯಾಗಿರುವ ನಗರದ ಪ್ರಮುಖ ರಸ್ತೆ. ಹೀಗಾಗಿ ಈ ರಸ್ತೆಯಲ್ಲಿ ನೂರಾರು ಅಪಘಾತಗಳು, ಹತ್ತಾರು ಜನರ ಸಾವುಗಳು (deacth) ಸಂಭವಿಸುತ್ತಿದ್ದರು ವಾಹನ ಸವಾರರು ಮಾತ್ರ ಎಚ್ಚೆತ್ತುಕೊಂಡಿರಲಿಲ್ಲ. ಹಾಗಾಗಿ ಸಂಚಾರ ನಿಯಮ ತಿಳಿಸುವುದಕ್ಕೆ ಅಂತ ಸ್ವತಃ ಯಮರಾಜನೇ ರಸ್ತೆಗಿಳಿದಿದ್ದು, ಸವಾರರಿಗೆ ಎಚ್ಚರಿಕೆ ನೀಡಿದ್ದಾನೆ.

ಚಿತ್ರಗುಪ್ತ ಮತ್ತು ಯಮರಾಜರಿಂದ ಸಂಚಾರ ಜಾಗೃತಿ

ವೀಕೆಂಡ್ ಮೂಡ್​ನಲ್ಲಿ ಜಾಲಿ ರೈಡ್​​ಗೆ ಅಂತ ರಸ್ತೆಗಿಳಿಯುತ್ತಿದ್ದವರಿಗೆ ಯಾವಾಗಲೂ ಸಂಚಾರಿ ಪೊಲೀಸರು ಎದುರಾಗ್ತಿದ್ದರು. ಆದರೆ ಇಂದು ಮಾತ್ರ ಸಂಚಾರಿ ಪೊಲೀಸರ ಬದಲಿಗೆ ಸ್ವತಃ ಚಿತ್ರಗುಪ್ತ ಮತ್ತು ಯಮರಾಜ ಪ್ರತ್ಯಕ್ಷವಾಗಿ ಸಂಚಾರ ಜಾಗೃತಿ ಮೂಡಿಸಿದರು.

ಇದನ್ನೂ ಓದಿ: ತಪಾಸಣೆ ನೆಪದಲ್ಲಿ ವಿದೇಶಿ ಮಹಿಳೆಯ ಖಾಸಗಿ ಅಂಗ ಸ್ಪರ್ಶಿಸಿ ತಬ್ಬಿಕೊಂಡ ಏರ್​ಲೈನ್ಸ್ ಸಿಬ್ಬಂದಿಯ ಬಂಧನ

ಅಂದಹಾಗೆ ದೇವನಹಳ್ಳಿ ಬಳಿ ಕೆಂಪೇಗೌಡ ಅಂತಾರಾಷ್ಟ್ರಿಯ ವಿಮಾನ ನಿಲ್ಥಾಣವಾದ ನಂತರ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಲೆ ಬರ್ತಿದ್ದು, ನಿತ್ಯ ನಡೆಯುವ ಅಪಘಾತಗಳಿಂದ ಜನರು ಕೈ-ಕಾಲು ಮುರಿದುಕೊಳ್ಳುವುದರ ಜೊತೆಗೆ ಜೀವ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಜನರಲ್ಲಿ ಜಾಗೃತಿ ಮೂಡಿಸುವುದಕ್ಕೆ ಇಂದು ಸ್ವತಃ ಯಮ ವೇಷಧಾರಿ ಹಾಗೂ ಚಿತ್ರಗುಪ್ತರು ರಸ್ತೆಗಿಳಿದಿದ್ದು, ಟೋಲ್ ಬಳಿ ಬಂದ ವಾಹನ ಸವಾರರಿಗೆ ಬುದ್ಧಿವಾದ ಹೇಳಿದರು.

ದೇವನಹಳ್ಳಿಯ ಏರ್​ಪೋರ್ಟ್ ಟೋಲ್ ಪ್ಲಾಜಾ ಬಳಿ ವಾಹನ ಸವಾರರನ್ನ ಅಡ್ಡಗಟ್ಟಿದ ಯಮ ಹಾಗೂ ಚಿತ್ರಗುಪ್ತ ವಾಹನ ಸವಾರರು ಪೊಲೀಸರಿಂದ ತಪ್ಪಿಸಿಕೊಳ್ಳಲು ಯಾವುದೇ ರಕ್ಷಣೆ ಇಲ್ಲದೆ ಕಳಪೆ ಹಾಫ್​ ಹೆಲ್ಮೆಟ್ ಹಾಕಿ ಸಂಚಾರ ಮಾಡುತ್ತಿದ್ದ ಜನರಿಗೆ ಬುದ್ದಿವಾದ ಹೇಳಿದರು. ಪೊಲೀಸರು ಕೇವಲ ದಂಡ ವಿಧಿಸುತ್ತಾರೆ, ನಾನು ನೇರವಾಗಿ ಅಲ್ಲಿಗೆ ಕರೆದುಕೊಂಡು ಹೋಗುತ್ತೇನೆ. ಜೀವ ಮುಖ್ಯ ಸುರಕ್ಷಿತ ಹೆಲ್ಮೆಟ್ ಧರಿಸಿ ಅಂತ ವಾಹನ ಸವಾರರಿಗೆ ಸಂಚಾರಿ ನಿಯಮಗಳ ಬಗ್ಗೆ ಬಿತ್ತಿ ಪತ್ರಗಳನ್ನ ನೀಡಿ ಅರಿವು ಮೂಡಿಸಿದರು.

50ಕ್ಕೂ ಅಧಿಕ ಜನರು ಸಾವು

ಕೆಂಪೇಗೌಡ ಏರ್​ಪೋರ್ಟ್ ರಸ್ತೆಯಲ್ಲಿ ನಿತ್ಯ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಅಪಘಾತಗಳಿಂದ ಸಾಯುವವರ ಸಂಖ್ಯೆಯು ಹೆಚ್ಚುತ್ತಲೇ ಇದೆ. ಕಳೆದ 2025ರಲ್ಲಿ ಯಲಹಂಕದಿಂದ ದೇವನಹಳ್ಳಿವರೆಗೆ 25 ಕಿ.ಮೀ ದೂರದಲ್ಲಿ ನೂರಕ್ಕೂ ಅಧಿಕ ಗಂಭೀರ ಅಪಘಾತಗಳಾಗಿದ್ದು, 50ಕ್ಕೂ ಅಧಿಕ ಜನರು ಸಾವನ್ನಪಿದ್ದರೆ, ನೂರಾರು ಜನ ಕೈ-ಕಾಲು ಮುರಿದುಕೊಂಡಿದ್ದಾರೆ. ಹೀಗಾಗಿ ಜನರಲ್ಲಿ ಸಂಚಾರ ನಿಯಮದ ಬಗ್ಗೆ ಜಾಗೃತಿ ಮೂಡಿಸಿದ್ದು, ಕಾರು ಚಾಲಕರು ಸೀಟ್ ಬೆಲ್ಟ್ ಮತ್ತು ಬೈಕ್ ಸವಾರರು ಮುಂಭಾಗ ಹಾಗೂ ಹಿಂಭಾಗ ಪ್ರಯಾಣಿಕರು ಐಎಸ್ಐ ಗುಣಮಟ್ಟದ ಹೆಲ್ಮೆಟ್ ಧರಿಸಿ ಸಂಚಾರ ಮಾಡುವಂತೆ ತಿಳಿಸಿದರು.

ಇದನ್ನೂ ಓದಿ: ದೇವನಹಳ್ಳಿ ಸುತ್ತಮುತ್ತ ದಟ್ಟ ಮಂಜು: ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕೆಲ‌ಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ

ಒಟ್ಟಾರೆ ಏರ್​ಪೋರ್ಟ್ ರಸ್ತೆಯಲ್ಲಿ ನಿತ್ಯ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದಂತೆ ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಸಾವು-ನೋವುಗಳ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ. ಇನ್ನೂ ಅತೀ ವೇಗ ಹಾಗೂ ಅಪಘಾತಗಳನ್ನ ತಡೆಗಟ್ಟಲು ಎಐ ಕ್ಯಾಮರಾ ಸೇರಿದಂತೆ ಕಟ್ಟುನಿಟ್ಟಿನ ಸಂಚಾರಿ ನಿಯಮಗಳನ್ನ ಜಾರಿಗೆ ತಂದಿದ್ದು ಇನ್ನಾದರೂ ಸವಾರರು ಎಚ್ಚೆತ್ತುಕೊಳ್ಳುತ್ತಾರಾ ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Goddess saraswati: ಸರಸ್ವತಿ ದೇವಿಯನ್ನು ಜ್ಞಾನದ ದೇವತೆ ಎಂದು ಏಕೆ ಕರೆಯಲಾಗುತ್ತದೆ? – Kannada News | Saraswati: Unveiling True Knowledge and Wisdom in Indian Culture’s Ancient Philosophy

ಭಾರತೀಯ ಸಂಸ್ಕೃತಿಯಲ್ಲಿ ಜ್ಞಾನ ಎಂದರೆ ಕೇವಲ ಪುಸ್ತಕದ ಮಾಹಿತಿ ಅಥವಾ ಪರೀಕ್ಷಾ ಅಂಕಗಳು ಅಲ್ಲ. ಅದು ತಿಳುವಳಿಕೆ, ಆತ್ಮಪರಿಶೀಲನೆ ಮತ್ತು ಜೀವನದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಬುದ್ಧಿವಂತಿಕೆ. ಈ ಆಳವಾದ ಅರ್ಥವನ್ನೇ ಪ್ರತಿನಿಧಿಸುವ ದೇವತೆಯಾಗಿ ಸರಸ್ವತಿಯನ್ನು ಪೂಜಿಸಲಾಗುತ್ತದೆ. ಲಕ್ಷ್ಮಿ ಸಮೃದ್ಧಿಯ ಸಂಕೇತ, ದುರ್ಗಾ ಶಕ್ತಿಯ ರೂಪವಾಗಿದ್ದರೆ, ಸರಸ್ವತಿಯನ್ನು ಮಾತ್ರ ಜ್ಞಾನದ ದೇವತೆಯೆಂದು ಏಕೆ ಕರೆಯಲಾಗುತ್ತದೆ ಎಂಬ ಪ್ರಶ್ನೆ ಅನೇಕರಿಗೆ ಮೂಡುತ್ತದೆ. ಇದರ ಉತ್ತರ ಪ್ರಾಚೀನ ವೇದಗಳು, ಭಾಷಾಶಾಸ್ತ್ರ ಮತ್ತು ಆಧುನಿಕ ಮನೋವಿಜ್ಞಾನದಲ್ಲಿದೆ.

‘ಸರಸ್ವತಿ’ ಎಂಬ ಹೆಸರಿನ ಅರ್ಥವೇನು?

‘ಸರಸ್ವತಿ’ ಎಂಬ ಪದವು ಸಂಸ್ಕೃತದ ‘ಸರಸ್’ (Saras) ಎಂಬ ಸಂಸ್ಕೃತ ಪದದಿಂದ ಬಂದಿದೆ, ಇದು ನಿರಂತರ ಹರಿವು ಅಥವಾ ಶುದ್ಧ ನೀರನ್ನು ಸೂಚಿಸುತ್ತದೆ. ಜ್ಞಾನವು ನದಿಯಂತೆ ನಿರಂತರವಾಗಿ ಹರಿಯುತ್ತದೆ ಮತ್ತು ಬುದ್ಧಿವಂತಿಕೆಯನ್ನು ಸಂಕೇತಿಸುತ್ತದೆ. ಭಾರತೀಯ ತತ್ವಶಾಸ್ತ್ರದಲ್ಲಿ ಜ್ಞಾನವನ್ನು ಎಂದಿಗೂ ಸ್ಥಿರವೆಂದು ಪರಿಗಣಿಸುವುದಿಲ್ಲ. ಅದು ನದಿಯಂತೆ ನಿರಂತರವಾಗಿ ಹರಿದು, ವಿಸ್ತಾರಗೊಳ್ಳುತ್ತಾ ಬೆಳೆಯುತ್ತದೆ. ಈ ಕಾರಣಕ್ಕೇ ಸರಸ್ವತಿಯನ್ನು ಮೊದಲಿಗೆ ಋಗ್ವೇದದಲ್ಲಿ ನದಿಯಾಗಿ ವರ್ಣಿಸಲಾಗಿದೆ. ನಂತರದ ವೈದಿಕ ಸಾಹಿತ್ಯದಲ್ಲಿ ಅವಳು ಜ್ಞಾನ, ವಾಣಿ ಮತ್ತು ಬುದ್ಧಿಯ ಸಂಕೇತವಾಗಿ ರೂಪಾಂತರಗೊಂಡಿದ್ದಾಳೆ. ಋಗ್ವೇದದ ಹಲವು ಸೂಕ್ತಗಳಲ್ಲಿ ಸರಸ್ವತಿಯನ್ನು ಮಾನವನ ಬುದ್ಧಿಯನ್ನು ಶುದ್ಧೀಕರಿಸುವ ಶಕ್ತಿಯೆಂದು ಬಣ್ಣಿಸಲಾಗಿದೆ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ಜೋಡಿ ಒಂಟೆಯ ಪ್ರತಿಮೆ ಇರಿಸಿ; ಹಣಕ್ಕೆಂದೂ ಕೊರತೆಯಾಗದು!

ಸರಸ್ವತಿಯ ರೂಪದಲ್ಲಿರುವ ಜ್ಞಾನದ ಸಂಕೇತಗಳು:

ಸರಸ್ವತಿಯ ಪ್ರತಿಯೊಂದು ಅಂಶವೂ ಜ್ಞಾನದ ವಿಭಿನ್ನ ಮುಖವನ್ನು ಸೂಚಿಸುತ್ತದೆ. ಅವಳ ಕೈಯಲ್ಲಿರುವ ವೀಣೆ ಸೃಜನಶೀಲತೆ ಮತ್ತು ಶಿಸ್ತಿನ ಸಂಯೋಜನೆಯ ಸಂಕೇತ. ಸಂಗೀತವು ನಿಯಮಗಳ ಒಳಗೆ ಸ್ವಾತಂತ್ರ್ಯ ಕಲಿಸುವಂತೆ, ನಿಜವಾದ ಜ್ಞಾನವೂ ನಿಯಂತ್ರಿತ ಚಿಂತನೆಯ ಮೂಲಕವೇ ಬೆಳೆಯುತ್ತದೆ. ದೇವಿಯ ವಾಹನವಾದ ಹಂಸವು ಅತ್ಯಂತ ಮಹತ್ವದ್ದಾಗಿದೆ. ಪೌರಾಣಿಕ ನಂಬಿಕೆಯಂತೆ, ಹಂಸವು ಹಾಲು ಮತ್ತು ನೀರಿನ ನಡುವಿನ ವ್ಯತ್ಯಾಸವನ್ನು ಗುರುತಿಸಬಲ್ಲದು. ಇದು ಸತ್ಯ–ಸುಳ್ಳು, ಸರಿಯಾದದು–ತಪ್ಪಾದದ್ದು ಎಂಬ ಭೇದವನ್ನು ಅರಿಯುವ ವಿವೇಕದ ಸಂಕೇತವಾಗಿದೆ.

ಪ್ರಾಚೀನ ಧರ್ಮಗ್ರಂಥಗಳು ಮತ್ತು ಆಧುನಿಕ ವಿಜ್ಞಾನ:

ಆಧುನಿಕ ಶೈಕ್ಷಣಿಕ ಮನೋವಿಜ್ಞಾನ ಮತ್ತು ಅರಿವಿನ ವಿಜ್ಞಾನವೂ ಜ್ಞಾನ ಸಂಪಾದನೆಗೆ ಏಕಾಗ್ರತೆ, ಸೃಜನಶೀಲತೆ ಮತ್ತು ಗಮನ ಮುಖ್ಯವೆಂದು ಹೇಳುತ್ತದೆ. ಅಮೇರಿಕನ್ ಸೈಕಲಾಜಿಕಲ್ ಅಸೋಸಿಯೇಷನ್ ಪ್ರಕಟಿಸಿದ ಅಧ್ಯಯನಗಳ ಪ್ರಕಾರ, ಸಂಗೀತಾಭ್ಯಾಸ ಮತ್ತು ಅಧ್ಯಯನವು ಮೆದುಳಿನ ನರ ಸಂಪರ್ಕಗಳನ್ನು ಬಲಪಡಿಸುತ್ತದೆ. ಈ ಅಂಶಗಳು ಸರಸ್ವತಿಯ ವೀಣೆ ಮತ್ತು ವಾಣಿಯ ಸಂಕೇತಗಳೊಂದಿಗೆ ನೇರವಾಗಿ ಹೊಂದಿಕೆಯಾಗುತ್ತವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊಟ್ಟೂರು ತ್ರಿಬಲ್​​ ಮರ್ಡರ್​​ಗೆ ಹೊಸ ಟ್ವಿಸ್ಟ್​​​​​: ಮರ್ಯಾದಾ ಹತ್ಯೆಯೋ? ಹಣಕ್ಕಾಗಿ ಕೊಲೆಯೋ? – Kannada News | Vijaynagara Triple Murder: Honour Killing or Money Motive? Police Probe Continues

ಆರೋಪಿ ಅಕ್ಷಯ್​ ಮತ್ತು ಮೃತ ಮೂವರುImage Credit source: Tv9 Kannada

ಬೆಂಗಳೂರು, ಫೆ. 01: ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ ತ್ರಿವಳಿ ಕೊಲೆ ಪ್ರಕರಣ ದಿನಕ್ಕೊಂದು ಟ್ವಿಸ್ಟ್​​ ಪಡೆಯುತ್ತಿದೆ. ಆರೋಪಿ ಅಕ್ಷಯ್, ತಂಗಿಯ ಪ್ರೇಮ ಪ್ರಕರಣ ಮತ್ತು ಆಕೆ ಗರ್ಭಿಣಿಯಾಗಿರುವುದು ತಿಳಿದು ಮರ್ಯಾದಾ ಹತ್ಯೆ ಮಾಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದ. ಆದ್ರೆ ತನಿಖೆ ವೇಳೆ ತಂಗಿ ಗರ್ಭಿಣಿ ಎಂದು ಈತ ಕತೆ ಕಟ್ಟಿದ್ದಾನಾ ಎನ್ನುವ ಶಂಕೆಯೀಗ ಪೊಲೀಸರನ್ನು ಕಾಡ್ತಿದೆ. ಬೆಟ್ಟಿಂಗ್, ಗ್ಯಾಂಬ್ಲಿಂಗ್ ಚಟಕ್ಕೆ ಬಿದ್ದಿದ್ದ ಆರೋಪಿ ಅಕ್ಷಯ್,  ಹಣದ ವಿಚಾರಕ್ಕೆ ಮನೆಯವರನ್ನು ಕೊಲೆಗೈದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ವಿಚಾರಣೆ ವೇಳೆ ಮತ್ತಷ್ಟು ಸ್ಫೋಟಕ ವಿಚಾರಗಳು ಬಯಲಿಗೆ ಬಂದಿವೆ.

ಮನೆ ಮಾರಿದ್ದ ಹಣದ ಮೇಲೆ ಅಕ್ಷಯ್​​ಗೆ​​ ಕಣ್ಣು?

ದಾವಣಗೆರೆ ಜಿಲ್ಲೆ ಜಗಳೂರಿನಲ್ಲದ್ದ ಮನೆ ಮಾರಾಟದಿಂದ ಅಕ್ಷಯ್ ಕುಟುಂಬಕ್ಕೆ 1.5 ಕೋಟಿ ರುಪಾಯಿ ಹಣ ಬಂದಿತ್ತು. ಈ ದುಡ್ಡನ್ನು ಮಗಳ ಮದುವೆಗೆ ಎಂದು ತಂದೆ ಭೀಮರಾಜ್ ಹಾಗೇಯೇ ಇರಿಸಿದ್ದರು. ಆದರೆ ಬೆಟ್ಟಿಂಗ್​ನಿಂದ ಸಾಲ ಮಾಡಿಕೊಂಡಿದ್ದ ಮಗ ಅಕ್ಷಯ್, ಮನೆ ಮಾರಾಟದ ಹಣ ಕೊಡುವಂತೆ ತಂದೆಯನ್ನು ಪೀಡಿಸುತ್ತಿದ್ದನಂತೆ. ಆದರೆ ಮನೆಯವರು ಅಕ್ಷಯ್​ಗೆ ಹಣ ನೀಡಲು ನಿರಾಕರಿಸಿದ್ದರು. ಇದೇ ಕಾರಣಕ್ಕೆ ತಂದೆ, ತಾಯಿ ಹಾಗೂ ತಂಗಿಯನ್ನ ಈತ ಕೊಂದಿರುವ ಶಂಕೆ ತನಿಖೆ ವೇಳೆ ಪೊಲೀಸರಿಗೆ ಬಂದಿದೆ. ಪ್ರಕರಣ ಆರಂಭದಿಂದಲೂ ಆರೋಪಿ ಅಕ್ಷಯ್​​ ಒಂದೊಂದು ಕತೆ ಹೇಳಿಕೊಂಡು ಬಂದಿದ್ದಾನೆ. ಆರಂಭದಲ್ಲಿ ಬೆಂಗಳೂರಿಗೆ ಬಂದಿದ್ದ ಕುಟುಂಬ ನಾಪತ್ತೆಯಾಗಿದೆ ಎಂದು ಪೊಲೀಸರಿಗೆ ಹೇಳಿ ಈತ ಯಾಮಾರಿಸಿದ್ದ. ಈಗ ಮದುವೆಗೆ ಮೊದಲೇ ತಂಗಿ ಗರ್ಭಿಣಿ ಆದ ಕಾರಣ ಕುಟುಂಬವನ್ನು ಹತ್ಯೆ ಮಾಡಿರೋದಾಗಿ ಈತ ಹೇಳಿರೋದು ಪೊಲೀಸರಲ್ಲಿ ಸಾಕಷ್ಟು ಪ್ರಶ್ನೆ ಹುಟ್ಟು ಹಾಕಿದೆ.

ಇದನ್ನೂ ಓದಿ: ತ್ರಿವಳಿ ಕೊಲೆಯ ಕಾರಣ ಬಯಲು, ಲವ್ವಿಡವ್ವಿಯಿಂದ ತಂಗಿ ಗರ್ಭಿಣಿಯಾದ್ದು ತಿಳಿದು ಕುಟುಂಬವನ್ನೇ ಮುಗಿಸಿದ ಅಣ್ಣ!

ಆರೋಪಿ ಅಕ್ಷಯ್​​, ಮೂವರನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿ ಕೊಲೆಗೈದಿದ್ದ. ಮೊದಲು ಚಾಕುವಿನಿಂದ ಇರಿದು ತಾಯಿಯನ್ನು ಕೊಲೆ ಮಾಡಿರುವ ಪಾಪಿ ಪುತ್ರ, ಬಳಿಕ ತಂಗಿಗೆ ಕರೆ ಮಾಡಿ ನಿನಗೆ ಗಿಫ್ಟ್ ತಂದಿರುವೆ ಅಂತಾ ಮನೆಗೆ ಕರೆದು ಆಕೆಯನ್ನೂ ಸಾಯಿಸಿದ್ದ. ಇಬ್ಬರ ಮೃತದೇಹಗಳನ್ನು ಕೊಠಡಿಯಲ್ಲಿ ಇಟ್ಟಿದ್ದ. ಮನೆಗೆ ಬಂದ ತಂದೆ ಟಿವಿ ನೋಡುತ್ತಾ ಕುಳಿತಿದ್ದಾಗ ಅವರ ಕತೆಯನ್ನೂ ಮುಗಿಸಿ, ಮನೆಯ ಹಾಲ್​ನಲ್ಲೇ ಮೂರು ಮೃತದೇಹಗಳನ್ನು ಹೂತಿದ್ದ ಎಂಬ ವಿಷಯ ತನಿಖೆ ವೇಳೆ ಬಯಲಾಗಿತ್ತು.

ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

T20 World Cup: ಭಾರತಕ್ಕೆ ಬಂದ ಪಾಕ್ ಮೂಲದ ಆಟಗಾರರಿಗೆ ತಿಲಕವಿಟ್ಟು ಸ್ವಾಗತ – Kannada News | 2026 T20 World Cup: USA Cricket Team Receives Traditional Indian Welcome, Gears Up for Group A

2026 ರ ಟಿ20 ವಿಶ್ವಕಪ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಫೆಬ್ರವರಿ 7, 2026 ರಂದು ಪ್ರಾರಂಭವಾಗಿ ಮಾರ್ಚ್ 8 ರವರೆಗೆ ನಡೆಯಲಿರುವ ಈ ಪಂದ್ಯಾವಳಿಯಲ್ಲಿ 20 ತಂಡಗಳು ಭಾಗವಹಿಸಲಿವೆ. ಈ ಟೂರ್ನಿಗೆ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆತಿಥ್ಯವಹಿಸುತ್ತಿವೆ. ಹೀಗಾಗಿ ಭಾರತ ಮತ್ತು ಶ್ರೀಲಂಕಾಕ್ಕೆ ಟೂರ್ನಿಯಲ್ಲಿ ಭಾಗವಹಿಸುವ ತಂಡಗಳು ಆಗಮಿಸಲು ಪ್ರಾರಂಭಿಸಿವೆ. ಅದರಂತೆ ಭಾರತಕ್ಕೆ ಆಗಮಿಸಿದ ಯುಎಸ್ಎ ಕ್ರಿಕೆಟ್ ತಂಡವನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು. ಭಾರತೀಯ ಸಂಪ್ರದಾಯಕ್ಕೆ ಅನುಗುಣವಾಗಿ ಆಟಗಾರರನ್ನು ಸ್ವಾಗತಿಸಲಾಗುತ್ತಿರುವ ವೀಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ತಿಲಕವಿಟ್ಟು ಆಟಗಾರರಿಗೆ ಸ್ವಾಗತ

ವೈರಲ್ ಆಗುತ್ತಿರುವ ವೀಡಿಯೊವೊಂದರಲ್ಲಿ, ಭಾರತೀಯ ಸಂಪ್ರದಾಯದ ಪ್ರಕಾರ ಯುಎಸ್ ಕ್ರಿಕೆಟ್ ತಂಡದ ಆಟಗಾರರ ಹಣೆಗೆ ತಿಲಕವಿಡುವ ಮೂಲಕ ಸ್ವಾಗತಿಸಲಾಯಿತು. ಗಮನಾರ್ಹವಾಗಿ, ಯುಎಸ್ಎ ತಂಡದಲ್ಲಿ ಮೂವರು ಪಾಕಿಸ್ತಾನಿ ಮೂಲದ ಆಟಗಾರರಿದ್ದಾರೆ. ಶಯಾನ್ ಜಹಾಂಗೀರ್, ಅಲಿ ಖಾನ್ ಮತ್ತು ಮೊಹಮ್ಮದ್ ಮೊಹ್ಸಿನ್ ಅವರಿಗೂ ತಿಲಕ ಇಟ್ಟು ಸ್ವಾಗತಿಸಲಾಯಿತು, ಇದು ಎಲ್ಲರ ಗಮನ ಸೆಳೆಯಿತು.

ಗಮನಿಸಬೇಕಾದ ಅಂಶವೆಂದರೆ, ಯುಎಸ್ಎ ತಂಡವು ಈ ಪಂದ್ಯಾವಳಿಯಲ್ಲಿ ಎರಡನೇ ಬಾರಿಗೆ ಭಾಗವಹಿಸುತ್ತಿದೆ. ಕಳೆದ ವರ್ಷ ತಮ್ಮ ಚೊಚ್ಚಲ ಟಿ20 ವಿಶ್ವಕಪ್ ಆಡಿದ್ದ ಅಮೆರಿಕ ಮೊದಲ ಆವೃತ್ತಿಯಲ್ಲೇ ಸೂಪರ್ 8 ಹಂತ ತಲುಪುವ ಮೂಲಕ ಇತಿಹಾಸ ನಿರ್ಮಿಸಿತ್ತು. ಈ ಬಾರಿಯೂ ಅದೇ ಪ್ರದರ್ಶನವನ್ನು ಪುನಾರವರ್ತಿಸಲು ತಂಡವು ಪ್ರಯತ್ನಿಸಲಿದೆ. ಈ ಆವೃತ್ತಿಯಲ್ಲೂ ಮೋನಾಂಕ್ ಪಟೇಲ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ಬಾರಿ, ಯುಎಸ್ಎ ಭಾರತ, ಪಾಕಿಸ್ತಾನ, ನೆದರ್ಲ್ಯಾಂಡ್ಸ್ ಮತ್ತು ನಮೀಬಿಯಾ ವಿರುದ್ಧ ಗ್ರೂಪ್ ಎ ನಲ್ಲಿ ಸ್ಪರ್ಧಿಸಲಿದೆ.

ಯುಎಸ್ಎ ವೇಳಾಪಟ್ಟಿ

ಫೆಬ್ರವರಿ 7: ಅಮೆರಿಕ vs ಭಾರತ, ಮುಂಬೈ

ಫೆಬ್ರವರಿ 10: ಅಮೆರಿಕ vs ಪಾಕಿಸ್ತಾನ, ಕೊಲಂಬೊ

ಫೆಬ್ರವರಿ 13: ಅಮೆರಿಕ vs ನೆದರ್ಲ್ಯಾಂಡ್ಸ್, ಚೆನ್ನೈ

ಫೆಬ್ರವರಿ 15: ಅಮೆರಿಕ vs ನಮೀಬಿಯಾ, ಚೆನ್ನೈ

2026 ರ ಟಿ20 ವಿಶ್ವಕಪ್‌ಗಾಗಿ ಯುಎಸ್‌ಎ ತಂಡ: ಮೊನಾಂಕ್ ಪಟೇಲ್ (ನಾಯಕ), ಜೆಸಿ ಸಿಂಗ್, ಆಂಡ್ರೀಸ್ ಗೌಸ್, ಶೆಹನ್ ಜಯಸೂರ್ಯ, ಮಿಲಿಂದ್ ಕುಮಾರ್, ಶಯಾನ್ ಜಹಾಂಗೀರ್, ಸೈತೀಜ ಮುಕ್ಕಮಲ, ಸಂಜಯ್ ಕೃಷ್ಣಮೂರ್ತಿ, ಹರ್ಮೀತ್ ಸಿಂಗ್, ನೋಸ್ತೂಶ್ ಕೆಂಜಿಗೆ, ಶಾಡ್ಲಿ ವ್ಯಾನ್ ಶಾಲ್ಕ್‌ವಿಕ್, ಸೌರಭ್ ನೇತ್ರವಾಲ್ಕರ್, ಅಲಿ ಖಾನ್, ಮೊಹಮ್ಮದ್ ಮೊಹ್ಸಿನ್, ಶುಭಂ ರಂಜನೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

February Weekly Horoscope 2026: ನಿಮ್ಮ ರಾಶಿಗನುಗುಣವಾಗಿ ಫೆಬ್ರವರಿ ಮೊದಲ ವಾರದ ಭವಿಷ್ಯ ತಿಳಿಯಿರಿ – Kannada News | February Weekly Horoscope 2026: Zodiac Predictions and Planetary Effects for Your Rashi

2026ರ ಫೆಬ್ರವರಿಯ ಮೊದಲ ವಾರ ಇದಾಗಿದ್ದು ಗ್ರಹಗತಿಗಳ ನಿಖರ ಸ್ಥಾನವನ್ನು ಆಧರಿಸಿ, ಶುಭಾಶುಭಗಳು ನಿರ್ಣಯವಾಗುವುದು. ​ಮುಖ್ಯವಾಗಿ ಈ ಸಮಯದಲ್ಲಿ ಶನಿ ಮೀನ ರಾಶಿಯಲ್ಲಿ, ಗುರು ಮಿಥುನ ರಾಶಿಯಲ್ಲಿ ಮತ್ತು ರಾಹು ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾರೆ. ಇವರ ಆಧಾರದ ಮೇಲೆ ಈ ವಾರ ಫಲಗಳು ಹೇಗಿರಲಿವೆ?

ಮೇಷ ರಾಶಿ:

ನಿಮ್ಮ ರಾಶ್ಯಾಧಿಪತಿ ಮಂಗಳನ ಶುಭ ದೃಷ್ಟಿಯಿಂದ ವೃತ್ತಿಯಲ್ಲಿ ಉತ್ಸಾಹ ಇರಲಿದೆ. ತೃತೀಯ ಗುರುವು ಧೈರ್ಯ ನೀಡಲಿದ್ದು, ಸಹೋದರರಿಂದ ಸಹಕಾರ ಸಿಗಲಿದೆ. ಆರ್ಥಿಕವಾಗಿ ಹೂಡಿಕೆಗೆ ಲಾಭದಾಯಕ ಸಮಯ. ಆದರೆ ಶನಿಯ 12ನೇ ಮನೆಯ ಸಂಚಾರದಿಂದ ಅನಗತ್ಯ ಖರ್ಚುಗಳು ಬರಬಹುದು, ಜಾಗರೂಕರಾಗಿರಿ.

​ವೃಷಭ ರಾಶಿ:

ದ್ವಿತೀಯದಲ್ಲಿ ಗುರುವಿನ ಸ್ಥಿತಿಯಿಂದ ಹಣಕಾಸಿನ ಹರಿವು ಚೆನ್ನಾಗಿರಲಿದೆ. ಮಾತಿನಿಂದ ಕೆಲಸಗಳನ್ನು ಸಾಧಿಸಿಕೊಳ್ಳುವಿರಿ. ಲಾಭ ಸ್ಥಾನದ ಶನಿಯು ಸ್ಥಿರ ಆದಾಯಕ್ಕೆ ದಾರಿ ಮಾಡಿಕೊಡಲಿದ್ದಾನೆ. ಕೆಲಸದ ಸ್ಥಳದಲ್ಲಿ ಗೌರವ ಹೆಚ್ಚಲಿದೆ. ಆದರೆ ರಾಹುವಿನ ಪ್ರಭಾವದಿಂದ ಆರೋಗ್ಯದ ಬಗ್ಗೆ ಕಿರಿಕಿರಿ ಉಂಟಾಗಬಹುದು, ಆಹಾರ ಕ್ರಮದ ಕಡೆ ಗಮನವಿರಲಿ.

​ಮಿಥುನ ರಾಶಿ:

ನಿಮ್ಮ ರಾಶಿಯಲ್ಲಿಯೇ ಗುರು ಇರುವುದರಿಂದ ಆತ್ಮವಿಶ್ವಾಸ ಹೆಚ್ಚಲಿದೆ. ಹೊಸ ಯೋಜನೆಗಳಿಗೆ ಚಾಲನೆ ನೀಡಲು ಸಕಾಲ. ದಶಮದಲ್ಲಿ ಶನಿ ಇರುವುದರಿಂದ ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿಗಳು ಹೆಗಲಿಗೆ ಬೀಳಲಿವೆ. ವ್ಯಾಪಾರದಲ್ಲಿ ಲಾಭ ಸಾಧಾರಣವಾಗಿರುತ್ತದೆ. ಸಂಗಾತಿಯೊಂದಿಗೆ ಸಣ್ಣ ಭಿನ್ನಾಭಿಪ್ರಾಯ ಮೂಡಬಹುದು, ತಾಳ್ಮೆಯಿಂದ ವರ್ತಿಸಿ.

​ಕರ್ಕಾಟಕ ರಾಶಿ:

ದ್ವಾದಶ ಭಾವದ ಗುರುವಿನಿಂದಾಗಿ ಶುಭ ಕಾರ್ಯಗಳಿಗಾಗಿ ಹಣ ಖರ್ಚಾಗಲಿದೆ. ದೂರದ ಪ್ರಯಾಣದ ಯೋಗವಿದೆ. ಭಾಗ್ಯ ಸ್ಥಾನದ ಶನಿಯು ಪಿತ್ರಾರ್ಜಿತ ಆಸ್ತಿಯಲ್ಲಿ ಲಾಭ ನೀಡಲಿದ್ದಾನೆ. ಕುಟುಂಬದಲ್ಲಿ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಕಚೇರಿಯಲ್ಲಿ ಗುಪ್ತ ಶತ್ರುಗಳ ಬಗ್ಗೆ ಎಚ್ಚರವಿರಲಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ.

​ಸಿಂಹ ರಾಶಿ:

ಲಾಭ ಸ್ಥಾನದ ಗುರುವಿನಿಂದ ಆರ್ಥಿಕ ಪ್ರಗತಿ ಅದ್ಭುತವಾಗಿರಲಿದೆ. ಹಳೆಯ ಸಾಲಗಳು ತೀರುವ ಸಾಧ್ಯತೆ ಇದೆ. ಅಷ್ಟಮ ಶನಿಯ ಪ್ರಭಾವವಿರುವುದರಿಂದ ವಾಹನ ಚಾಲನೆಯಲ್ಲಿ ಅತೀವ ಎಚ್ಚರಿಕೆ ಅಗತ್ಯ. ಅನಗತ್ಯ ವಾದ ವಿವಾದಗಳಿಂದ ದೂರವಿರಿ. ಕೆಲಸದ ಸ್ಥಳದಲ್ಲಿ ಬದಲಾವಣೆ ಕಂಡುಬರಲಿದೆ. ಸಂಗಾತಿಯಿಂದ ಬೆಂಬಲ ಸಿಗಲಿದೆ.

​ಕನ್ಯಾ ರಾಶಿ:

ದಶಮದ ಗುರುವಿನ ಪ್ರಭಾವದಿಂದ ವೃತ್ತಿ ಕ್ಷೇತ್ರದಲ್ಲಿ ಪ್ರಗತಿ ಮತ್ತು ಬಡ್ತಿಯ ಸಾಧ್ಯತೆ ಇದೆ. ಸಪ್ತಮದಲ್ಲಿ ಶನಿ ಇರುವುದರಿಂದ ಪಾಲುದಾರಿಕೆ ವ್ಯವಹಾರದಲ್ಲಿ ಎಚ್ಚರವಿರಲಿ. ಆರ್ಥಿಕವಾಗಿ ಈ ವಾರ ಸಮಾಧಾನಕರವಾಗಿರಲಿದೆ. ಮಕ್ಕಳ ಶಿಕ್ಷಣಕ್ಕಾಗಿ ಓಡಾಟ ನಡೆಸಬೇಕಾಗಬಹುದು. ಸ್ನಾಯು ಸೆಳೆತದಂತಹ ಸಣ್ಣ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

​ತುಲಾ ರಾಶಿ:

ಭಾಗ್ಯಸ್ಥಾನದ ಗುರುವಿನಿಂದ ಅದೃಷ್ಟ ನಿಮ್ಮ ಕಡೆ ಇರಲಿದೆ. ತಂದೆಯಿಂದ ಅಥವಾ ಹಿರಿಯರಿಂದ ಆರ್ಥಿಕ ಸಹಾಯ ದೊರೆಯಲಿದೆ. ಆರನೇ ಮನೆಯ ಶನಿಯು ನಿಮ್ಮ ಶತ್ರುಗಳ ಮೇಲೆ ಜಯ ತಂದುಕೊಡಲಿದ್ದಾನೆ. ಕೋರ್ಟ್ ವ್ಯವಹಾರಗಳಲ್ಲಿ ಪ್ರಗತಿ ಇರಲಿದೆ. ವಿದೇಶ ಪ್ರಯಾಣದ ಕನಸು ನನಸಾಗಬಹುದು. ದೈಹಿಕ ವ್ಯಾಯಾಮಕ್ಕೆ ಆದ್ಯತೆ ನೀಡಿ.

ವೃಶ್ಚಿಕ ರಾಶಿ:

ಅಷ್ಟಮದ ಗುರುವಿನಿಂದ ಹಣಕಾಸಿನ ಹರಿವಿನಲ್ಲಿ ಏರಿಳಿತವಿರಲಿದೆ. ಐದನೇ ಮನೆಯಲ್ಲಿ ಶನಿ ಇರುವುದರಿಂದ ಸಂತಾನ ಅಥವಾ ಶಿಕ್ಷಣದ ವಿಷಯದಲ್ಲಿ ಸ್ವಲ್ಪ ಕಾಳಜಿ ವಹಿಸಬೇಕು. ಆತುರದ ನಿರ್ಧಾರಗಳು ನಷ್ಟ ತರಬಹುದು. ಉದ್ಯೋಗದಲ್ಲಿ ಸಹೋದ್ಯೋಗಿಗಳ ಕಿರಿಕಿರಿ ಇರಬಹುದು. ವಾರದ ಕೊನೆಯಲ್ಲಿ ಅನಿರೀಕ್ಷಿತ ಧನಲಾಭ ಅಥವಾ ಗೆಳೆಯರ ಭೇಟಿಯ ಸಾಧ್ಯತೆ ಇದೆ.

​ಧನಸ್ಸು ರಾಶಿ:

ಸಪ್ತಮ ಗುರುವಿನ ಪ್ರಭಾವದಿಂದ ವಿವಾಹ ಪ್ರಯತ್ನಗಳು ಸಫಲವಾಗಲಿವೆ. ವೈವಾಹಿಕ ಜೀವನ ಸುಖಮಯವಾಗಿರಲಿದೆ. ನಾಲ್ಕನೇ ಮನೆಯ ಶನಿಯಿಂದ ಮನೆ ಅಥವಾ ವಾಹನದ ರಿಪೇರಿಗಾಗಿ ಖರ್ಚು ಬರಬಹುದು. ವೃತ್ತಿ ಜೀವನದಲ್ಲಿ ಸ್ಥಿರತೆ ಇರಲಿದೆ. ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಶೈಕ್ಷಣಿಕ ಕ್ಷೇತ್ರದಲ್ಲಿರುವವರಿಗೆ ಉತ್ತಮ ಫಲಿತಾಂಶ ಸಿಗಲಿದೆ.

​ಮಕರ ರಾಶಿ:

ಆರನೇ ರಾಶಿಯ ಗುರುವಿನಿಂದಾಗಿ ಸಾಲದ ಹೊರೆ ಕಡಿಮೆಯಾಗಲಿದೆ. ತೃತೀಯದಲ್ಲಿ ಶನಿ ಇರುವುದರಿಂದ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಸಹೋದರರೊಂದಿಗೆ ಸಂಬಂಧ ಸುಧಾರಿಸಲಿದೆ. ವ್ಯಾಪಾರದಲ್ಲಿ ಹೊಸ ಗ್ರಾಹಕರು ಸಿಗಲಿದ್ದಾರೆ. ಶೀತ ಅಥವಾ ಅಲರ್ಜಿಯಂತಹ ಸಮಸ್ಯೆಗಳು ಕಾಡಬಹುದು. ಮಾನಸಿಕವಾಗಿ ಸ್ವಲ್ಪ ದಣಿವು ಅನುಭವಿಸುವಿರಿ.

​ಕುಂಭ ರಾಶಿ:

ಪಂಚಮ ಗುರುವಿನ ಅನುಗ್ರಹದಿಂದ ಸೃಜನಶೀಲ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಎರಡನೇ ಮನೆಯಲ್ಲಿ ಶನಿ ಇರುವುದರಿಂದ ಮಾತಿನ ಮೇಲೆ ಹಿಡಿತವಿರಲಿ, ಇಲ್ಲದಿದ್ದರೆ ಸಂಬಂಧಗಳು ಹಾಳಾಗಬಹುದು. ಆರ್ಥಿಕವಾಗಿ ಲಾಭದಾಯಕ ವಾರ. ಮಕ್ಕಳ ಕಡೆಯಿಂದ ಶುಭ ಸುದ್ದಿ ಕೇಳುವಿರಿ. ರಾಹುವಿನಿಂದಾಗಿ ಮನಸ್ಸಿನಲ್ಲಿ ಸಣ್ಣ ಆತಂಕ ಇರಬಹುದು, ಧ್ಯಾನ ಮಾಡಿ.

​ಮೀನ ರಾಶಿ:

ನಿಮ್ಮ ರಾಶಿಯಲ್ಲಿಯೇ ಶನಿ ಸಂಚರಿಸುತ್ತಿರುವುದರಿಂದ ಕೆಲಸದಲ್ಲಿ ವಿಳಂಬ ಮತ್ತು ಮಾನಸಿಕ ಒತ್ತಡ ಇರಬಹುದು. ಆದರೆ ನಾಲ್ಕನೇ ಮನೆಯ ಗುರುವು ಸುಖ ಭೋಗಗಳನ್ನು ನೀಡಲಿದ್ದಾನೆ. ಮನೆಯಲ್ಲಿ ಶಾಂತಿ ನೆಲೆಸಲಿದೆ. ಆಸ್ತಿ ಖರೀದಿ ಪ್ರಯತ್ನಗಳು ಯಶಸ್ವಿಯಾಗಲಿವೆ. ಆರೋಗ್ಯದ ಕಡೆ ನಿರ್ಲಕ್ಷ್ಯ ಬೇಡ. ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಿರಿ.

-ಲೋಹಿತ ಹೆಬ್ಬಾರ್ – 8762924271 (what’s app only)

Published On – 5:30 pm, Sun, 1 February 26

Source link

ಭಾರತದ ಉಜ್ವಲ ಭವಿಷ್ಯಕ್ಕೆ ಅಡಿಪಾಯ ಬಲಪಡಿಸುವ ಬಜೆಟ್; ಪ್ರಧಾನಿ ಮೋದಿ ಬಣ್ಣನೆ – Kannada News | Budget 2026 strengthens foundation for Indias bright future says PM Narendra Modi

ನವದೆಹಲಿ, ಫೆಬ್ರವರಿ 1: ಈ ಬಾರಿಯ ಕೇಂದ್ರ ಬಜೆಟ್ (Budget 2026) ಐತಿಹಾಸಿಕ ಬಜೆಟ್ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Modi) ಬಣ್ಣಿಸಿದ್ದಾರೆ. ಇದು ಮಹಿಳೆಯರ ಸಬಲೀಕರಣವನ್ನು ಪ್ರತಿಬಿಂಬಿಸುತ್ತದೆ, ಭಾರತದ ಸುಧಾರಣಾ ಪ್ರಯಾಣವನ್ನು ವೇಗಗೊಳಿಸುತ್ತದೆ ಮತ್ತು ದೇಶದ ಭವಿಷ್ಯದ ಬೆಳವಣಿಗೆಗೆ ಬಲವಾದ ಅಡಿಪಾಯವನ್ನು ಹಾಕುತ್ತದೆ ಎಂದು ಹೇಳಿದ್ದಾರೆ. ಹಾಗೇ, ಸತತ 9ನೇ ಬಾರಿ ಕೇಂದ್ರ ಬಜೆಟ್ ಮಂಡಿಸಿದ್ದಕ್ಕಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ನಿರ್ಮಲಾ ಸೀತಾರಾಮನ್ ಸತತ ಒಂಬತ್ತನೇ ಬಾರಿಗೆ ಬಜೆಟ್ ಮಂಡಿಸಿದ ಮೂಲಕ ಮಹಿಳಾ ಹಣಕಾಸು ಸಚಿವೆಯಾಗಿ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಹೇಳಿದ್ದಾರೆ.

ಈ ಬಜೆಟ್ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ಭಾರತದ ಹಾದಿಯನ್ನು ಬಲಪಡಿಸುತ್ತದೆ. ಇಂದಿನ ಬಜೆಟ್ ಐತಿಹಾಸಿಕವಾಗಿದೆ. ಇದು ದೇಶದ ಮಹಿಳಾ ಶಕ್ತಿಯ ಬಲವಾದ ಸಬಲೀಕರಣವನ್ನು ಪ್ರತಿಬಿಂಬಿಸುತ್ತದೆ. ಈ ಬಜೆಟ್ ಅಪಾರ ಅವಕಾಶಗಳ ಹೆದ್ದಾರಿಯಂತೆ ಕಾರ್ಯನಿರ್ವಹಿಸುತ್ತದೆ. ಭಾರತದ 140 ಕೋಟಿ ನಾಗರಿಕರು ದೇಶವು ಸಾಧ್ಯವಾದಷ್ಟು ಬೇಗ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಬೇಕೆಂದು ಬಯಸುತ್ತಾರೆ. ಈ ಬಜೆಟ್ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಭಾರತದ ಪ್ರಯತ್ನಕ್ಕೆ ಬಲವಾದ ಅಡಿಪಾಯವನ್ನು ಒದಗಿಸುತ್ತದೆ ಎಂದಿದ್ದಾರೆ.
ಈ ಬಜೆಟ್ “ಅಪಾರ ಅವಕಾಶಗಳ ಹೆದ್ದಾರಿ”ಯಾಗಿದ್ದು, ಇದು “ವರ್ತಮಾನದ ಕನಸುಗಳನ್ನು ವಾಸ್ತವಕ್ಕೆ ತಿರುಗಿಸುತ್ತದೆ” ಮತ್ತು “ಭಾರತದ ಉಜ್ವಲ ಭವಿಷ್ಯಕ್ಕೆ ಬಲವಾದ ಅಡಿಪಾಯ” ಹಾಕುತ್ತದೆ. 2047ರ ವೇಳೆಗೆ ವಿಕಸಿತ ಭಾರತವನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Budget 2026: ಸೆಮಿಕಂಡಕ್ಟರ್ ಮಿಷನ್‌ಗೆ 40,000 ಕೋಟಿ ರೂ.; ಬಜೆಟ್ ಮಂಡನೆ ಬಳಿಕ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ

ಈ ಬಜೆಟ್ ಅನ್ನು ವಿಶಿಷ್ಟ ಎಂದು ಕರೆದ ಪ್ರಧಾನಿ ಮೋದಿ, “ಇದು ಹಣಕಾಸಿನ ಕೊರತೆಯನ್ನು ಕಡಿಮೆ ಮಾಡುವುದು ಮತ್ತು ಹಣದುಬ್ಬರವನ್ನು ನಿಯಂತ್ರಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಜೊತೆಗೆ ಹೆಚ್ಚಿನ ಕ್ಯಾಪೆಕ್ಸ್ ಮತ್ತು ಹೆಚ್ಚಿನ ಬೆಳವಣಿಗೆಗೆ ಒತ್ತು ನೀಡುತ್ತದೆ. ಈ ಬಜೆಟ್ ಭಾರತದ ಜಾಗತಿಕ ಪಾತ್ರವನ್ನು ಬಲಪಡಿಸುತ್ತದೆ” ಎಂದಿದ್ದಾರೆ.

“ಮಹಿಳಾ ನೇತೃತ್ವದ ಸ್ವ-ಸಹಾಯ ಗುಂಪುಗಳಿಗೆ ಆಧುನಿಕ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಈ ಬಜೆಟ್ ಆದ್ಯತೆ ನೀಡುತ್ತದೆ. ಪ್ರತಿ ಜಿಲ್ಲೆಯಲ್ಲೂ ಹುಡುಗಿಯರಿಗೆ ಹೊಸ ಹಾಸ್ಟೆಲ್‌ಗಳನ್ನು ನಿರ್ಮಿಸಲು ಪ್ರಯತ್ನಗಳು ನಡೆಯುತ್ತಿವೆ. ಇದು ಹೆಚ್ಚು ಜನರು ಶಿಕ್ಷಣವನ್ನು ಪಡೆಯಲು ಸಹಾಯ ಮಾಡುತ್ತದೆ. ಸರ್ಕಾರ ಯಾವಾಗಲೂ ಕೃಷಿ ಮತ್ತು ಮೀನುಗಾರಿಕೆಗೆ ಆದ್ಯತೆ ನೀಡಿದೆ. ಈ ಬಜೆಟ್ ತೆಂಗಿನಕಾಯಿ, ಗೋಡಂಬಿ, ಕೋಕೋ ಮತ್ತು ಶ್ರೀಗಂಧದ ಉತ್ಪಾದನೆಯಲ್ಲಿ ತೊಡಗಿರುವ ರೈತರನ್ನು ಬೆಂಬಲಿಸಲು ಪ್ರಮುಖ ಕ್ರಮಗಳನ್ನು ಪರಿಚಯಿಸುತ್ತದೆ” ಎಂದು ಅವರು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version