ಸೋನಮ್ ವಾಂಗ್ಚುಕ್ 3 ವಾರಗಳ ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ ಷರತ್ತು ವಿಧಿಸಿದ ಪತ್ನಿ – Kannada News | Sonam Wangchuk: Wife Sets Conditions to End 21 Day Hunger Strike and Demands NEET Scam Action

ನವದೆಹಲಿ, ಜುಲೈ 20: ದೆಹಲಿಯ ಜಂತರ್​ಮಂತರ್​ನಲ್ಲಿ ಕಳೆದ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್(Sonam Wangchuk) ಉಪವಾಸ ಕೈಬಿಡಲು ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ. ಷರತ್ತುಗಳ ಬಗ್ಗೆ ಪತ್ನಿ ಗೀತಾಂಜಲಿ ಆಂಗ್ಮೋ ಮಾತನಾಡಿದ್ದಾರೆ. ಸೋನಮ್ ವಾಂಗ್ಚುಕ್ ಅವರನ್ನು ಸರ್ಕಾರಿ ಸ್ವಾಮ್ಯದ ಸಫ್ದರ್ಜಂಗ್ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದ ಕೆಲವೇ ಗಂಟೆಗಳ ನಂತರ ಈ ಮಹತ್ವದ ನಿರ್ಧಾರ ಹೊರಬಿದ್ದಿದೆ.

ಉಪವಾಸ ಅಂತ್ಯಕ್ಕೆ ವಾಂಗ್ಚುಕ್ ಇಟ್ಟಿರುವ 2 ಷರತ್ತುಗಳು

ಇತ್ತೀಚೆಗೆ ನಡೆದ ‘ನೀಟ್’ಪರೀಕ್ಷೆ ಪೇಪರ್ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ವಾಂಗ್ಚುಕ್ ಪಟ್ಟು ಹಿಡಿದಿದ್ದಾರೆ. ಅವರು ಉಪವಾಸ ಹಿಂಪಡೆಯಲು ಇಟ್ಟಿರುವ ಷರತ್ತುಗಳು.

ರಾಜಕೀಯ ನಾಯಕರು ಸಫ್ದರ್ಜಂಗ್ ಆಸ್ಪತ್ರೆಗೆ ಆಗಮಿಸಿ ತಮ್ಮನ್ನು ಖುದ್ದಾಗಿ ಭೇಟಿಯಾಗಬೇಕು.

ಸೋಮವಾರದಿಂದ ಆರಂಭವಾಗುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಶಿಕ್ಷಣ ಕ್ಷೇತ್ರದ ಉತ್ತರದಾಯಿತ್ವ ಮತ್ತು ಪರೀಕ್ಷಾ ಅಕ್ರಮಗಳ ವಿಷಯವನ್ನು ಪ್ರಸ್ತಾಪಿಸುವುದಾಗಿ ನಾಯಕರು ಭರವಸೆ ನೀಡಬೇಕು. ಈ ಭರವಸೆಗಳು ಸಿಕ್ಕರೆ ಸೋಮವಾರವೇ ತಮ್ಮ 21 ದಿನಗಳ ದೀರ್ಘ ಉಪವಾಸವನ್ನು ಕೊನೆಗೊಳಿಸುವುದಾಗಿ ವಾಂಗ್‌ಚುಕ್ ತಿಳಿಸಿದ್ದಾರೆ.

ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಅರ್ಜಿ ವಜಾ: ದೆಹಲಿ ಹೈಕೋರ್ಟ್ ತೀರ್ಪು

ಶನಿವಾರ ಬೆಳಗ್ಗೆ ದೆಹಲಿ ಪೊಲೀಸರು ವಾಂಗ್‌ಚುಕ್ ಅವರನ್ನು ಜಂತರ್ ಮಂತರ್‌ನಿಂದ ಬಲವಂತವಾಗಿ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಗೀತಾಂಜಲಿ ಆಂಗ್ಮೋ ಅವರು ತಮ್ಮ ಪತಿಯನ್ನು ಗುರುಗ್ರಾಮದ ಮೇದಾಂತ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಬೇಕೆಂದು ಅರ್ಜಿ ಸಲ್ಲಿಸಿದ್ದರು.

ಮತ್ತಷ್ಟು ಓದಿ: 20 ದಿನಗಳ ಉಪವಾಸದ ಬಳಿಕ ಸೋನಮ್ ವಾಂಗ್ಚುಕ್ ಆಸ್ಪತ್ರೆಗೆ ದಾಖಲು

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರ ಪೀಠ, “ವಾಂಗ್ಚುಕ್ ಅವರ ಆರೋಗ್ಯ ಹದಗೆಡುತ್ತಿರುವುದರಿಂದ ಅವರನ್ನು ಆಸ್ಪತ್ರೆಗೆ ಸೇರಿಸುವ ಸಂಪೂರ್ಣ ಹಕ್ಕು ಸರ್ಕಾರಕ್ಕಿದೆ. ವೈದ್ಯರು ಅವರ ಒಪ್ಪಿಗೆಯೊಂದಿಗೆ ಔಷಧಿಗಳನ್ನು ನೀಡುತ್ತಿದ್ದು, ಅವರ ಸ್ವಾತಂತ್ರ್ಯವನ್ನು ಉಲ್ಲಂಘಿಸಲಾಗಿಲ್ಲ” ಎಂದು ಸ್ಪಷ್ಟಪಡಿಸಿ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿತು. ಹೈಕೋರ್ಟ್‌ನ ಈ ಆದೇಶವನ್ನು ಇಬ್ಬರು ನ್ಯಾಯಾಧೀಶರ ವಿಭಾಗೀಯ ಪೀಠದ ಮುಂದೆ ಸವಾಲು ಮಾಡಲಾಗುವುದು ಎಂದು ವಾಂಗ್ಚುಕ್ ಪರ ವಕೀಲರು ತಿಳಿಸಿದ್ದಾರೆ.

ಸೋನಮ್ ವಾಂಗ್ಚುಕ್ ಆರೋಗ್ಯ ಸ್ಥಿತಿ ಹೇಗಿದೆ?

ಸಫ್ದರ್ಜಂಗ್ ಆಸ್ಪತ್ರೆಯ ವೈದ್ಯಕೀಯ ವರದಿಯ ಪ್ರಕಾರ, ಸೋನಮ್ ವಾಂಗ್ಚುಕ್ ಅವರ ದೇಹದ ಪ್ರಮುಖ ಅಂಗಾಂಗಗಳ ಕಾರ್ಯನಿರ್ವಹಣೆ ಸದ್ಯಕ್ಕೆ ಸ್ಥಿರವಾಗಿದೆ. ರಕ್ತದ ಪರೀಕ್ಷಾ ವರದಿಗಳಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದೆಯಾದರೂ, 21 ದಿನಗಳ ಸುದೀರ್ಘ ಉಪವಾಸದಿಂದಾಗಿ ದೇಹದ ಮೇಲೆ ತೀವ್ರ ಒತ್ತಡ ಬಿದ್ದಿದೆ. ಹೀಗಾಗಿ ವೈದ್ಯರ ತಂಡವು 24 ಗಂಟೆಗಳ ಕಾಲ ಅವರ ಆರೋಗ್ಯದ ಮೇಲೆ ನಿರಂತರ ಕಣ್ಣಿಟ್ಟಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Chennamma Passed Away: ರೇವಣ್ಣ ಮನೆ ಬಳಿ ಮಳೆಯ ಮಧ್ಯೆಯೂ ಚೆನ್ನಮ್ಮ ಅಂತಿಮ ದರ್ಶನಕ್ಕೆ ಬಂದ ಜನ! – Kannada News | Public Pays Last Respects to Chennamma Amidst Rains in Karnataka

ಹಾಸನ, ಜುಲೈ 20: ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ಅಂತ್ಯಸಂಸ್ಕಾರ ಇಂದು ನೆರವೇರಲಿದೆ. ಈ ವೇಳೆ ಮಳೆಯ ನಡುವೆಯೂ ಸಾವಿರಾರು ಸಂಖ್ಯೆಯ ಜನರು ಜೆಡಿಎಸ್ ನಾಯಕ ಹೆಚ್.ಡಿ. ರೇವಣ್ಣ ಅವರ ನಿವಾಸದ ಬಳಿ ಆಗಮಿಸಿ ಚೆನ್ನಮ್ಮ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಅಗಲಿದ ತಾಯಿಯ ಅಂತಿಮ ದರ್ಶನಕ್ಕೆ ಸಾರ್ವಜನಿಕರು ಮತ್ತು ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದು, ಅವರ ಮೇಲಿದ್ದ ಅಪಾರ ಗೌರವವನ್ನು ಪ್ರತಿಬಿಂಬಿಸುತ್ತದೆ.

ಚೆನ್ನಮ್ಮ ಅವರ ಅಂತ್ಯಕ್ರಿಯೆಯು ಮಾವಿನಕೆರೆ ಬೆಟ್ಟದ ತಪ್ಪಲಿನಲ್ಲಿ ನಡೆಯಲಿದೆ. ಈ ಅಂತಿಮ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಅನೇಕ ಜನಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಕರ್ನಾಟಕದಾದ್ಯಂತ ರಾಜಕೀಯ ಮುಖಂಡರು ಮತ್ತು ಸಾರ್ವಜನಿಕರು ಚೆನ್ನಮ್ಮ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

TV9 Kannada News Live: ಹೆಚ್.ಡಿ ದೇವೇಗೌಡರ ಪತ್ನಿ ಚೆನ್ನಮ್ಮರ ಅಂತ್ಯಕ್ರಿಯೆ ಇಂದು: ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ – Kannada News | TV9 Kannada Live Breaking News 20 July 2026 Chennamma Funeral and Cremation, CM DK Shivakumar, Karnataka Cabinet Expansion, Weather, Rain, SIR Latest Updates in Kannada

ಹೆಚ್.ಡಿ ದೇವೇಗೌಡರ ಪತ್ನಿ ಚೆನ್ನಮ್ಮರ ಅಂತ್ಯಕ್ರಿಯೆ ಇಂದು

Breaking News Today Live Updates in Kannada: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಅಂತಿಮ ಸಂಸ್ಕಾರವು ಇಂದು ಮಧ್ಯಾಹ್ನ 3 ಗಂಟೆಗೆ ಮಾವಿನಕೆರೆ ಬೆಟ್ಟದ ತಪ್ಪಲಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದ್ದು, ಕೇಂದ್ರ ಸಚಿವರು ಸೇರಿದಂತೆ ಹಲವು ಪ್ರಮುಖ ಬಿಜೆಪಿ-ಜೆಡಿಎಸ್ ರಾಜಕೀಯ ಗಣ್ಯರು ಭಾಗಿಯಾಗಲಿದ್ದಾರೆ. ಮತ್ತೊಂದೆಡೆ, ಬೆಂಗಳೂರಿನಲ್ಲಿ ವಾಯುಮಾಲಿನ್ಯದ ಪ್ರಮಾಣ 70 AQI ದಾಟಿದ್ದು, ನಗರದ ಸುತ್ತಮುತ್ತ ಬೆಳೆಯುವ ಬದನೆ, ತೊಂಡೆಕಾಯಿ ಹಾಗೂ ಹಸಿರೆಲೆ ಸೊಪ್ಪುಗಳಲ್ಲಿ ಅಪಾಯಕಾರಿ ಸೀಸದ (Lead) ವಿಷ ಪತ್ತೆಯಾಗಿರುವುದು ಗ್ರಾಹಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಇನ್ನು, ನೀಟ್ ಹಗರಣ ಖಂಡಿಸಿ 21 ದಿನಗಳಿಂದ ಉಪವಾಸ ನಿರತರಾಗಿ ಆಸ್ಪತ್ರೆ ಸೇರಿರುವ ಸಮಾಜ ಸೇವಕ ಸೋನಮ್ ವಾಂಗ್ಚುಕ್ ಸತ್ಯಾಗ್ರಹ ಅಂತ್ಯಕ್ಕೆ ಅವರ ಪತ್ನಿ ಕಠಿಣ ಷರತ್ತುಗಳನ್ನು ವಿಧಿಸಿದ್ದು, ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಕೋರಿದ್ದ ಅವರ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

Source link

ರೋಹಿತ್ ಶರ್ಮಾ ಸೆಂಚುರಿಗೆ ಸಚಿನ್ ಸಾರ್ವಕಾಲಿಕ ದಾಖಲೆ ಉಡೀಸ್ – Kannada News | Rohit Sharma Breaks Sachin Tendulkar’s All Time Record

ಲಾರ್ಡ್ಸ್ ಮೈದಾನದಲ್ಲಿ ಹಿಟ್​​ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಸಿಡಿಸಿದ ಸೆಂಚುರಿಗೆ ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ದಾಖಲೆ ಧೂಳೀಪಟವಾಗಿದೆ. ಈ ಶತಕದೊಂದಿಗೆ ಹಿಟ್​​​ಮ್ಯಾನ್ ಟೀಮ್ ಇಂಡಿಯಾ ಪರ ಆರಂಭಿಕನಾಗಿ ಅತ್ಯಧಿಕ ಶತಕ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. (PC: BCCI)

ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ರೋಹಿತ್ ಶರ್ಮಾ 84 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಧಿಕ ಸೆಂಚುರಿ ಸಿಡಿಸಿದ ಟೀಮ್ ಇಂಡಿಯಾದ ಆರಂಭಿಕ ದಾಂಡಿಗ ಎಂಬ ಹಿರಿಮೆಯನ್ನು ತಮ್ಮದಾಗಿಸಿಕೊಂಡರು. (PC: BCCI)

ಇದಕ್ಕೂ ಮುನ್ನ ಈ ಭರ್ಜರಿ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲುತ್ತು. ಟೀಮ್ ಇಂಡಿಯಾ 356 ಪಂದ್ಯಗಳಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಸಚಿನ್ ತೆಂಡೂಲ್ಕರ್ ಒಟ್ಟು 45 ಸೆಂಚುರಿ ಸಿಡಿಸಿ ಈ ದಾಖಲೆ ನಿರ್ಮಿಸಿದ್ದರು. (PC: BCCI)

ಇದೀಗ ಈ ದಾಖಲೆಯನ್ನು ರೋಹಿತ್ ಶರ್ಮಾ ಅಳಿಸಿ ಹಾಕಿದ್ದಾರೆ. ಭಾರತದ ಪರ ಟೆಸ್ಟ್, ಏಕದಿನ ಹಾಗೂ ಟಿ20 ಕ್ರಿಕೆಟ್​​​ನಲ್ಲಿ ಆರಂಭಿಕನಾಗಿ ಬ್ಯಾಟ್ ಬೀಸಿರುವ ಹಿಟ್​ಮ್ಯಾನ್ ಈವರೆಗೆ ಒಟ್ಟು 46 ಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಪರ ಅತ್ಯಧಿಕ ಸೆಂಚುರಿ ಸಿಡಿಸಿದ ಓಪನರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. (PC: BCCI)

ಈ ದಾಖಲೆಯೊಂದಿಗೆ ರೋಹಿತ್ ಶರ್ಮಾ ಭಾರತದ ಪರ ಕ್ರಿಕೆಟ್ ಕಾಶಿ ಲಾರ್ಡ್ಸ್​ ಮೈದಾನದಲ್ಲಿ ಏಕದಿನ ಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅಂದರೆ ಈ ಮೈದಾನದಲ್ಲಿ ಭಾರತೀಯರು ಟೆಸ್ಟ್ ಸೆಂಚುರಿ ಸಿಡಿಸಿದರೂ, ಏಕದಿನ ಕ್ರಿಕೆಟ್​ನಲ್ಲಿ ಯಾವುದೇ ಬ್ಯಾಟರ್ ಮೂರಂಕಿ ಮೊತ್ತ ಗಳಿಸಿರಲಿಲ್ಲ. ಇದೀಗ ರೋಹಿತ್ ಶರ್ಮಾ ಭರ್ಜರಿ ಸೆಂಚುರಿ ಸಿಡಿಸುವ ಮೂಲಕ ಈ ಬರ ನೀಗಿಸಿದ್ದಾರೆ. (PC: BCCI)

Published On – 8:43 am, Mon, 20 July 26

Source link

ಅಶ್ಲೀಲ ಕಮೆಂಟ್; ರಮ್ಯಾ, ವಿಜಯಲಕ್ಷ್ಮೀ ಬಳಿಕ ದೂರು ದಾಖಲಿಸಿದ ಐಶ್ವರ್ಯಾ ಸಿಂಧೋಗಿ – Kannada News | Aishwarya Sindogi Battles Cyber Bullying: Actress Files FIR Over Derogatory Comments

ಸ್ಯಾಂಡಲ್‌ವುಡ್ ನಟಿಯರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸುವ ಮತ್ತು ಅವಹೇಳನಕಾರಿ ಕಮೆಂಟ್ ಮಾಡುವುದಕ್ಕೆ ಬ್ರೇಕ್ ಬಿದ್ದಿಲ್ಲ. ನಟಿ ರಮ್ಯಾ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮೀ ಈ ವಿಷಯವನ್ನು ಗಂಭೀರವಾಗಿ ಸ್ವೀಕರಿಸಿ ಕೇಸ್ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಅರೆಸ್ಟ್ ಕೂಡ ನಡೆಯಿತು. ಆದರೂ ಕೆಲವರು ಬುದ್ಧಿ ಕಲಿತಿಲ್ಲ. ಈಗ ಕನ್ನಡದ ಮತ್ತೋರ್ವ ನಟಿ ಐಶ್ವರ್ಯ ಸಿಂದೋಗಿ ಅವರು ಇಂತಹ ಕಿಡಿಗೇಡಿಗಳ ಕಾಟಕ್ಕೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ನಟಿ ಐಶ್ವರ್ಯ ಸಿಂಧೋಗಿ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಅಪ್‌ಲೋಡ್ ಮಾಡಿರುವ ಪೋಸ್ಟ್‌ಗಳಿಗೆ ಸತತವಾಗಿ ಅವಹೇಳನಕಾರಿ ಹಾಗೂ ಆಕ್ಷೇಪಾರ್ಹ ಕಮೆಂಟ್‌ಗಳನ್ನು ಮಾಡಲಾಗುತ್ತಿದೆ ಎಂದು ದೂರು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ತಮಗೆ ಪರಿಚಯವಿರುವ ವ್ಯಕ್ತಿಯೊಬ್ಬರ ಹೆಸರನ್ನು ಉಲ್ಲೇಖಿಸಿ ದೂರು ದಾಖಲಿಸಿದ್ದಾರೆ.

ಈ ಹಿಂದೆ ಕೂಡ ಇದೇ ವ್ಯಕ್ತಿ ಐಶ್ವರ್ಯಾಗೆ ಬೆದರಿಕೆ ಹಾಕಿದ್ದರು. ಆ ವೇಳೆ ಕೇಸ್ ದಾಖಲಾಗಿತ್ತು. ಈಗ ಅದೇ ವ್ಯಕ್ತಿ ನಕಲಿ ಖಾತೆಗಳನ್ನು ಸೃಷ್ಟಿಸಿ, ಅವುಗಳ ಮೂಲಕ ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ.

ತಮಗೆ ತೊಂದರೆ ನೀಡುತ್ತಿರುವ ಆ ನಕಲಿ ಖಾತೆಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಐಶ್ವರ್ಯಾ ಮನವಿ ಮಾಡಿದ್ದಾರೆ. ನಟಿಯ ದೂರಿನ ಹಿನ್ನೆಲೆಯಲ್ಲಿ ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಸದ್ಯ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಹಿಂದಿನ ಪ್ರಕರಣಗಳ ಹಿನ್ನೆಲೆ:

ಸಾಮಾಜಿಕ ಜಾಲತಾಣಗಳಲ್ಲಿ ನಟಿಯರಿಗೆ ಈ ರೀತಿಯ ಕಿರುಕುಳ ನೀಡುತ್ತಿರುವುದು ಇದೇ ಮೊದಲೇನಲ್ಲ. ಇತ್ತೀಚೆಗಷ್ಟೇ ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ರಮ್ಯಾ ಹಾಗೂ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರಿಗೂ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ ಕಮೆಂಟ್‌ಗಳ ಮೂಲಕ ನಿಂದಿಸಲಾಗಿತ್ತು.

ಇದನ್ನೂ ಓದಿ: ‘ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ’ ವಿಜಯಲಕ್ಷ್ಮಿ ದರ್ಶನ್ ಟಾಂಗ್ ಕೊಟ್ಟಿದ್ದು ಯಾರಿಗೆ?

ಆನ್‌ಲೈನ್‌ನಲ್ಲಿ ಅವಹೇಳನಕಾರಿ ಕಮೆಂಟ್‌ಗಳನ್ನು ಹಾಕಿ ಮಾನಸಿಕ ಕಿರುಕುಳ ನೀಡಿದ್ದಕ್ಕಾಗಿ ಇವರಿಬ್ಬರೂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸೈಬರ್ ಕ್ರೈಮ್ ಪೊಲೀಸರು ತನಿಖೆ ನಡೆಸಿ, ನಟಿಯರಿಗೆ ಕೆಟ್ಟ ಕಮೆಂಟ್ ಮಾಡಿದ್ದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಅರೆಸ್ಟ್ ಮಾಡಿದ್ದರು. ನಟಿಯರ ತೇಜೋವಧೆ ಮಾಡುವವರ ವಿರುದ್ಧ ಕಾನೂನು ಕಠಿಣ ಕ್ರಮ ಜರುಗಿಸುತ್ತಿದ್ದರೂ, ಕಿಡಿಗೇಡಿಗಳ ಇಂತಹ ವಿಕೃತ ನಡೆ ಮಾತ್ರ ನಿಲ್ಲುತ್ತಿಲ್ಲ ಎಂಬುದಕ್ಕೆ ಐಶ್ವರ್ಯ ಸಿಂದೋಗಿ ಅವರ ಪ್ರಕರಣವೇ ಸಾಕ್ಷಿಯಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಾಮ್ ಚರಣ್ ಎದುರು ಹೊಸ ಬೇಡಿಕೆ ಇಟ್ಟ ಅಭಿಮಾನಿಗಳು – Kannada News | Ram Charan RC17: Why Production Speed is Crucial for His Tollywood Career Growth

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರು ತಮ್ಮ ಮುಂಬರುವ ಚಿತ್ರ ‘ಆರ್‌ಸಿ 17’ ವಿಷಯದಲ್ಲಿ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದ ಸಮಯ ಬಂದಿದೆ ಎಂದು ಸಿನಿ ರಂಗದ ವ್ಯಾಪಾರ ಮೂಲಗಳು ಅಭಿಪ್ರಾಯಪಟ್ಟಿವೆ. ಈ ಜಾಗರೂಕತೆಯು ಕೇವಲ ನಟನೆ ಅಥವಾ ಚಿತ್ರಕಥೆಯ ಆಯ್ಕೆಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ, ಚಿತ್ರ ನಿರ್ಮಾಣದ ವೇಗದ ಬಗ್ಗೆಯೂ ಅವರು ವಿಶೇಷ ಗಮನ ಹರಿಸಬೇಕಾಗಿದೆ. ‘ಆರ್‌ಆರ್‌ಆರ್’ ನಂತಹ ಬ್ಲಾಕ್‌ಬಸ್ಟರ್ ಚಿತ್ರದ ನಂತರ, ಚರಣ್ ಇಲ್ಲಿಯವರೆಗೆ ಕೇವಲ ಎರಡು ಚಿತ್ರಗಳನ್ನು ಮಾತ್ರ ಒಪ್ಪಿಕೊಂಡಿದ್ದಾರೆ. ಮೂರು ವರ್ಷಗಳ ದೀರ್ಘ ಕಾಯುವಿಕೆಯ ನಂತರ ‘ಗೇಮ್ ಚೇಂಜರ್’ ಮತ್ತು ಎರಡು ವರ್ಷಗಳ ನಂತರ ‘ಪೆದ್ದಿ’ ಚಿತ್ರಗಳನ್ನು ತಮ್ಮ ಅಭಿಮಾನಿಗಳಿಗೆ ನೀಡಿದ್ದಾರೆ. ಇನ್ನು ಮುಂದೆ ಚಿತ್ರೀಕರಣದ ವೇಗವನ್ನು ಹೆಚ್ಚಿಸುವುದು ಚರಣ್ ಅವರ ವೃತ್ತಿಜೀವನಕ್ಕೆ ಮಾತ್ರವಲ್ಲದೆ ಇಡೀ ಟಾಲಿವುಡ್ ಚಿತ್ರರಂಗಕ್ಕೂ ಒಳ್ಳೆಯದು ಎಂಬ ಮಾತುಗಳು ಕೇಳಿಬರುತ್ತಿವೆ.

ರಾಮ್ ಚರಣ್ ಅವರು ತಮ್ಮ ‘ಪೆದ್ದಿ’ ಚಿತ್ರಕ್ಕಾಗಿ ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಚಿತ್ರದ ನಿರ್ದೇಶಕ ಬುಚ್ಚಿ ಬಾಬು ಅವರು ನಿರೀಕ್ಷಿಸಿದ್ದಕ್ಕಿಂತ ಇನ್ನೂರು ಪ್ರತಿಶತದಷ್ಟು ಹೆಚ್ಚಿನ ಶ್ರಮವನ್ನು ಚರಣ್ ಹಾಕಿದ್ದಾರೆ. ಅದಕ್ಕೆ ತಕ್ಕಂತೆ ಅವರಿಗೆ ಸೂಕ್ತವಾದ ಸಂಭಾವನೆಯೂ ಲಭಿಸಿದೆ ಮತ್ತು ಚಿತ್ರದಲ್ಲಿನ ಅವರ ಅಭಿನಯಕ್ಕೆ ಉತ್ತಮ ಪ್ರಶಂಸೆಗಳು ಬಂದಿವೆ. ಆದರೆ, ಈಗಿನ ಪರಿಸ್ಥಿತಿಯಲ್ಲಿ ‘ಆರ್‌ಸಿ 17’ ಚಿತ್ರದ ಚಿತ್ರೀಕರಣವನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಬಿಡುಗಡೆ ಮಾಡುವುದು ಅತ್ಯಂತ ಮುಖ್ಯವಾಗಿದೆ. ಈಗಾಗಲೇ ಚರಣ್ ಅವರು ‘ಗೇಮ್ ಚೇಂಜರ್’ ಚಿತ್ರಕ್ಕಾಗಿ ಮೂರು ವರ್ಷ ಹಾಗೂ ‘ಪೆದ್ದಿ’ ಚಿತ್ರಕ್ಕಾಗಿ ಎರಡು ವರ್ಷಗಳ ಸುದೀರ್ಘ ಸಮಯವನ್ನು ವ್ಯಯಿಸಿದ್ದಾರೆ.

ಈ ಸಿನಿಮಾಗಳ ನಿರ್ಮಾಣದಲ್ಲಿ ಆಗಿರುವ ವಿಳಂಬದಿಂದಾಗಿ, ‘ಆರ್‌ಆರ್‌ಆರ್’ ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಸಿಕ್ಕಿರುವ ಮಾರುಕಟ್ಟೆ ಇಮೇಜ್ ಎಲ್ಲೋ ಒಂದು ಕಡೆ ಅಪಾಯಕ್ಕೆ ಸಿಲುಕಬಹುದು ಎಂದು ಅಭಿಮಾನಿಗಳು ಆತಂಕಗೊಂಡಿದ್ದಾರೆ. ಈ ಹಿಂದೆ ‘ರಂಗಸ್ಥಳಂ’ನಂತಹ ಅದ್ಭುತ ಹಿಟ್ ಚಿತ್ರವನ್ನು ನೀಡಿದ ಕ್ರಿಯೇಟಿವ್ ನಿರ್ದೇಶಕ ಸುಕುಮಾರ್ ಅವರೊಂದಿಗೆ ಚರಣ್ ಮತ್ತೊಮ್ಮೆ ಕೈಜೋಡಿಸುತ್ತಿರುವುದರಿಂದ, ಸಹಜವಾಗಿಯೇ ಅಭಿಮಾನಿಗಳಲ್ಲಿ ಈ ಹೊಸ ಚಿತ್ರದ ಮೇಲಿನ ನಿರೀಕ್ಷೆಗಳು ಗಗನಕ್ಕೇರಿವೆ.

ಆದರೆ, ನಿರ್ದೇಶಕ ಸುಕುಮಾರ್ ಅವರ ಕಾರ್ಯವೈಖರಿಯ ಬಗ್ಗೆ ಉದ್ಯಮದಲ್ಲಿ ಕೆಲವು ಕಳವಳಗಳು ವ್ಯಕ್ತವಾಗುತ್ತಿವೆ. ರಾಮ್ ಚರಣ್ ಮತ್ತು ಸುಕುಮಾರ್ ಕಾಂಬಿನೇಷನ್‌ನ ‘ಆರ್‌ಸಿ 17’ ಚಿತ್ರದ ಚಿತ್ರೀಕರಣವು ನವೆಂಬರ್ ತಿಂಗಳಿನಿಂದ ಪ್ರಾರಂಭವಾಗಲಿದೆ. ಸುಕುಮಾರ್ ಅವರಿಗೆ ಸಿನಿಮಾಗಳನ್ನು ಬೇಗನೆ ಮುಗಿಸುವ ಅಭ್ಯಾಸವಿಲ್ಲ. ಉದಾಹರಣೆಗೆ, ‘ಪುಷ್ಪ 1’ ಮತ್ತು ‘ಪುಷ್ಪ 2’ ಚಿತ್ರಗಳಿಗಾಗಿ ನಟ ಅಲ್ಲು ಅರ್ಜುನ್ ಅವರು ಸುಮಾರು ಐದು ವರ್ಷಗಳ ಕಾಲ ಶ್ರಮಿಸಬೇಕಾಯಿತು. ಅಲ್ಲು ಅರ್ಜುನ್ ಅವರಿಗೆ ಬಾಕ್ಸ್ ಆಫೀಸ್‌ನಲ್ಲಿ ಅದಕ್ಕೆ ತಕ್ಕ ಭರ್ಜರಿ ಯಶಸ್ಸು ಸಿಕ್ಕಿದ್ದರಿಂದ ಆ ಸಮಯ ವ್ಯರ್ಥವಾಗಲಿಲ್ಲ. ಆದರೆ, ರಾಮ್ ಚರಣ್ ವಿಷಯದಲ್ಲೂ ಸುಕುಮಾರ್ ಇದೇ ರೀತಿ ವಿಳಂಬ ಮಾಡಿದರೆ, ಚರಣ್ ತಮ್ಮ ವೃತ್ತಿಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹಲವರು ಭಾವಿಸಿದ್ದಾರೆ. ಸರಿಯಾದ ಯೋಜನೆಯನ್ನು ರೂಪಿಸಿಕೊಂಡರೆ, ಕಡಿಮೆ ಅವಧಿಯಲ್ಲಿಯೂ ದೊಡ್ಡ ಬಜೆಟ್ ಚಿತ್ರಗಳನ್ನು ಮಾಡಬಹುದು ಎಂಬುದನ್ನು ಈಗಾಗಲೇ ಹಲವು ಸಿನಿಮಾಗಳು ನಿರೂಪಿಸಿವೆ.

ಇದನ್ನೂ ಓದಿ: ರಾಮ್ ಚರಣ್ ಕಾರಣಕ್ಕೆ ಟ್ರೋಲ್​​ಗೆ ಒಳಗಾದ ಮೆಗಾಸ್ಟಾರ್ ಚಿರಂಜೀವಿ

ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ನಿರ್ಮಿಸುತ್ತಿರುವ ‘ಆರ್‌ಸಿ 17’ ಚಿತ್ರದ ಅಂತಿಮ ಚಿತ್ರಕಥೆ ಈಗ ಸಂಪೂರ್ಣವಾಗಿ ಲಾಕ್ ಆಗಿದೆ ಎಂಬ ವರದಿಗಳಿವೆ. ಈ ಹಿಂದೆ ಈ ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ ಎಂದು ವದಂತಿಗಳು ಹಬ್ಬಿದ್ದವು. ಆದರೆ, ಈಗಿನ ಹೊಸ ಮಾಹಿತಿ ಪ್ರಕಾರ ಚಿತ್ರವನ್ನು ಒಂದೇ ಭಾಗಕ್ಕೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ. ಈ ಬಾರಿ ಸುಕುಮಾರ್ ಅವರು ತಮ್ಮ ಹಳೆಯ ಶೈಲಿಯ ಹಳ್ಳಿಯ ಹಿನ್ನೆಲೆ ಹಾಗೂ ಮಾಫಿಯಾ ಕಥಾಹಂದರವನ್ನು ಬಿಟ್ಟು, ಸಂಪೂರ್ಣ ಹೊಸ ಜಾನರ್ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಮ್ಮ ಸೋಲಿಗೆ ಇದುವೇ ಪ್ರಮುಖ ಕಾರಣ: ಶುಭ್​​ಮನ್ ಗಿಲ್ ಬೇಸರ – Kannada News | Death Over Woes Cost Us the Game: Shubman Gill

ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಮೈದಾನದಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 27 ರನ್‌ಗಳ ಸೋಲು ಅನುಭವಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು 50 ಓವರ್​​ಗಳಲ್ಲಿ 387 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 360 ರನ್​​ ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಭಾರತ ತಂಡವು 27 ರನ್​​ಗಳಿಂದ ಸೋಲೊಪ್ಪಿಕೊಂಡಿದೆ.

ಈ ಸೋಲಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ಶುಭ್​​ಮನ್ ಗಿಲ್, ಡೆತ್ ಓವರ್‌ಗಳಲ್ಲಿ ಹೆಚ್ಚು ರನ್ ಬಿಟ್ಟುಕೊಟ್ಟಿದ್ದೇ ತಂಡದ ಸೋಲಿಗೆ ಪ್ರಮುಖ ಕಾರಣ ಎಂದು ತಿಳಿಸಿದ್ದಾರೆ.

ಕೈಕೊಟ್ಟ ಡೆತ್ ಓವರ್:

ನಾವು ಬೃಹತ್ ಮೊತ್ತ ನೀಡುತ್ತೇವೆ ಎಂದು ಅಂದು ಕೊಂಡಿರಲಿಲ್ಲ. ಆದರೆ ಕೊನೆಯ ಕೆಲವು ಓವರ್‌ಗಳಲ್ಲಿ ನಾವು ಅತಿಯಾದ ರನ್‌ಗಳನ್ನು ಬಿಟ್ಟುಕೊಟ್ಟೆವು. ಅಲ್ಲಿಯೇ ಪಂದ್ಯ ನಮ್ಮ ಕೈಯಿಂದ ಸಂಪೂರ್ಣವಾಗಿ ಜಾರಿಹೋಯಿತು ಎಂದು ಪಂದ್ಯದ ಬಳಿಕ ಶುಭ್​ಮನ್ ಗಿಲ್ ಬೇಸರ ವ್ಯಕ್ತಪಡಿಸಿದ್ದಾರೆ.

ಪವರ್‌ಪ್ಲೇನಲ್ಲಿ ಹಿನ್ನಡೆ:

ಪ್ರತಿ ಪಂದ್ಯದಲ್ಲೂ ನಾವು ಶುಭಾರಂಭ ಮಾಡಬೇಕಾಗುತ್ತದೆ. ಆದರೆ ಇಂಗ್ಲೆಂಡ್ ಆರಂಭಿಕ ಆಟಗಾರರನ್ನು ಕಟ್ಟಿಹಾಕಲು ಭಾರತ ವಿಫಲವಾಯಿತು. ಎದುರಾಳಿ ತಂಡದ ಇಬ್ಬರೂ ಓಪನರ್‌ಗಳು ಇದರ ಸಂಪೂರ್ಣ ಲಾಭ ಪಡೆದರು. ಈ ಮೂಲಕ ಪವರ್​ಪ್ಲೇನಲ್ಲಿ ಬೃಹತ್ ಮೊತ್ತ ಪೇರಿಸಲು ಉತ್ತಮ ಅಡಿಪಾಯ ಹಾಕಿ ಕೊಟ್ಟರು ಎಂದು ಗಿಲ್ ತಿಳಿಸಿದ್ದಾರೆ.

ಮಧ್ಯಮ ಕ್ರಮಾಂಕದ ವೈಫಲ್ಯ:

ಬೃಹತ್ ಮೊತ್ತವನ್ನು ಚೇಸ್ ಮಾಡುವಾಗ ಕೊನೆಯವರೆಗೂ ವಿಕೆಟ್ ಬೀಳದಂತೆ ನೋಡಿಕೊಳ್ಳಬೇಕಾಗುತ್ತದೆ. ಆದರೆ ಮಧ್ಯಮ ಕ್ರಮಾಂಕದ ವಿಕೆಟ್‌ಗಳು ಬೇಗನೆ ಪತನಗೊಂಡಿದ್ದು ಟೀಮ್ ಇಂಡಿಯಾದ ಚೇಸಿಂಗ್​​ಗೆ ಹಿನ್ನಡೆಯಾಯಿತು ಎಂದು ಗಿಲ್ ಬೇಸರ ವ್ಯಕ್ತಪಡಿಸಿದ್ದಾರೆ.

ಹಿಟ್​ಮ್ಯಾನ್ ಆಟಕ್ಕೆ ಮೆಚ್ಚುಗೆ:

ಇದೇ ವೇಳೆ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಅನುಭವವನ್ನು ಗಿಲ್ ಶ್ಲಾಘಿಸಿದ್ದಾರೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಸಿಡಿಸಿದ ಭರ್ಜರಿ ಶತಕದ (138 ರನ್) ಬಗ್ಗೆ ಮಾತನಾಡಿದ ಗಿಲ್, ರೋಹಿತ್ ಭಾಯ್ ಇಂದು ಬ್ಯಾಟಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು. ಅವರ ಆಟವನ್ನು ಕಣ್ಣುಂಬಿಕೊಳ್ಳುವುದೇ ಒಂದು ಸೌಭಾಗ್ಯ ಎಂದು ಕೊಂಡಾಡಿದ್ದಾರೆ.

ಇನ್ನು ಈ ಸೋಲಿನ ಹೊರತಾಗಿಯೂ ಈ ಸರಣಿಯಲ್ಲಿ ಭಾರತದ ಬಹುತೇಕ ಎಲ್ಲಾ ಬ್ಯಾಟರ್‌ಗಳು ರನ್ ಗಳಿಸಿರುವುದು ತಂಡಕ್ಕೆ ಸಿಕ್ಕ ದೊಡ್ಡ ಪ್ಲಸ್ ಪಾಯಿಂಟ್ ಎಂದು ಗಿಲ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾ ಆಯ್ಕೆಗಾರರ ವರ್ತನೆಗೆ ಬಿಸಿಸಿಐ ತೀವ್ರ ಅಸಮಾಧಾನ!

ಒಟ್ಟಾರೆಯಾಗಿ ಹೇಳುವುದಾದರೆ, ಇಂಗ್ಲೆಂಡ್ ವಿರುದ್ಧದ ಈ ಪಂದ್ಯವು ಭಾರತ ತಂಡಕ್ಕೆ ಬೌಲಿಂಗ್ ವಿಭಾಗದ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಒಂದು ಪ್ರಮುಖ ಎಚ್ಚರಿಕೆಯ ಗಂಟೆಯಾಗಿದೆ. ಡೆತ್ ಓವರ್‌ಗಳ ಬೌಲಿಂಗ್ ವೈಫಲ್ಯ ತಂಡಕ್ಕೆ ಹಿನ್ನಡೆ ತಂದಿದ್ದರೂ, ಬ್ಯಾಟಿಂಗ್‌ನಲ್ಲಿ ಮೂಡಿಬಂದ ಒಗ್ಗಟ್ಟಿನ ಪ್ರದರ್ಶನ ಮತ್ತು ಹಿರಿಯ ಆಟಗಾರರ ಫಾರ್ಮ್ ಭವಿಷ್ಯದ ಸರಣಿಗಳಿಗೆ ಧನಾತ್ಮಕ ಭರವಸೆಯನ್ನು ಮೂಡಿಸಿದೆ. ನಾಯಕ ಶುಭಮನ್ ಗಿಲ್ ಹೇಳಿದಂತೆ, ಈ ತಪ್ಪುಗಳಿಂದ ಪಾಠ ಕಲಿತು ಮುಂದಿನ ಪಂದ್ಯಗಳಲ್ಲಿ ಭಾರತ ಬಲಿಷ್ಠವಾಗಿ ಪುನರಾಗಮನ ಮಾಡಬೇಕಿದೆ.

Source link

ಗೋಲ್ಡನ್ ಬೂಟ್ ಇಲ್ಲ, ಗೋಲ್ಡನ್ ಬಾಲ್​ ಕೂಡ ಇಲ್ಲ… ವಿಶ್ವಕಪ್ ಕೂಡ ಸಿಕ್ಕಿಲ್ಲ! – Kannada News | Lionel Messi Misses World Cup and Historic Double Gold

2026ರ ಜಾಗತಿಕ ಫುಟ್‌ಬಾಲ್ ಹಬ್ಬ ಮುಕ್ತಾಯಗೊಂಡಿದೆ. 39ನೇ ವಯಸ್ಸಿನಲ್ಲೂ ಲಿಯೋನೆಲ್ ಮೆಸ್ಸಿ ಅರ್ಜೆಂಟೀನಾ ತಂಡವನ್ನು ಮುನ್ನಡೆಸಿದ ರೀತಿ ಮತ್ತು ನೀಡಿದ ಪ್ರದರ್ಶನ ಜಗತ್ತನ್ನೇ ಬೆರಗುಗೊಳಿಸಿದೆ. ಆದರೆ ವೈಯಕ್ತಿಕ ಮಟ್ಟದಲ್ಲಿ ಮೆಸ್ಸಿಗೆ ಈ ಬಾರಿ ಅತ್ಯುನ್ನತ ಗೌರವಗಳಾದ ‘ಗೋಲ್ಡನ್ ಬೂಟ್’ ಮತ್ತು ‘ಗೋಲ್ಡನ್ ಬಾಲ್’ ದಕ್ಕಲಿಲ್ಲ. ಅದರಲ್ಲೂ ಈ ಎರಡು ಪ್ರಶಸ್ತಿಗಳನ್ನು ಒಟ್ಟಿಗೆ ಪಡೆಯುವ ಎಲ್ಲಾ ಅವಕಾಶಗಳಿದ್ದವು. ಆದರೆ ಫೈನಲ್ ಪಂದ್ಯಕ್ಕೂ ಮುನ್ನ 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಫ್ರಾನ್ಸ್​ನ ಕಿಲಿಯನ್ ಎಂಬಾಪೆ, ಮೆಸ್ಸಿಯ ಈ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದರು.

ಏನಿದು ಗೋಲ್ಡನ್ ಬೂಟ್:

ಗೋಲ್ಡನ್ ಬೂಟ್ ಎಂಬುದು ವಿಶ್ವಕಪ್​​ ಫುಟ್‌ಬಾಲ್​ನಲ್ಲಿ ಅತಿ ಹೆಚ್ಚು ಗೋಲು ಗಳಿಸುವ ಆಟಗಾರನಿಗೆ ನೀಡಲಾಗುವ ಅತ್ಯಂತ ಪ್ರತಿಷ್ಠಿತ ವೈಯಕ್ತಿಕ ಪ್ರಶಸ್ತಿಯಾಗಿದೆ. ಇತ್ತ ಫೈನಲ್ ಪಂದ್ಯದವರೆಗೆ ಅತ್ಯುತ್ತಮ ಪ್ರದರ್ಶನ ನೀಡಿದ ಮೆಸ್ಸಿಗೆ ಅಂತಿಮ ಮ್ಯಾಚ್​ನಲ್ಲಿ ಗೋಲ್ಡನ್ ಬೂಟ್ ಅವಾರ್ಡ್​ ಮಿಸ್ ಆಗಿದೆ.

  • ಎಂಬಾಪೆ ಮಿಂಚಿಂಗ್: ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಎಂಬಾಪೆ 2 ಗೋಲು ದಾಖಲಿಸಿದ್ದರು. ಈ ಮೂಲಕ ಗೋಲ್ಡನ್ ಬೂಟ್ ರೇಸ್​ನಲ್ಲಿ ಅಗ್ರಸ್ಥಾನಕ್ಕೇರಿದ್ದರು. ಇತ್ತ ಟೂರ್ನಿಯುದ್ದಕ್ಕೂ ಮೊದಲ ಸ್ಥಾನ ಅಲಂಕರಿಸಿದ್ದ ಮೆಸ್ಸಿ ಫೈನಲ್ ಮ್ಯಾಚ್​ನಲ್ಲಿ ಮ್ಯಾಜಿಕ್ ಮಾಡಲು ವಿಫಲರಾದರು.
  • ಮೆಸ್ಸಿಗೆ ಇದ್ದ ಚಾನ್ಸ್: ಸ್ಪೇನ್ ವಿರುದ್ಧದ ಫೈನಲ್ ಪಂದ್ಯಕ್ಕೂ ಮುನ್ನ ಮೆಸ್ಸಿ 8 ಗೋಲು ಮತ್ತು 4 ಅಸಿಸ್ಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದ ಮೆಸ್ಸಿಗೆ ಗೋಲ್ಡನ್ ಬೂಟ್ ಗೆಲ್ಲಲು ಫೈನಲ್‌ನಲ್ಲಿ ಕನಿಷ್ಠ 2 ಗೋಲುಗಳ ಅಗತ್ಯವಿತ್ತು. ಒಂದು ವೇಳೆ ಅವರು 2 ಗೋಲು ಗಳಿಸಿದರೆ ಎಂಬಾಪೆ ಜೊತೆ 10 ಗೋಲುಗಳ ಸಮಬಲ ಸಾಧಿಸಿ ಗೋಲ್ಡನ್ ಬೂಟ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳುತ್ತಿದ್ದರು. ಆದರೆ ಫೈನಲ್ ಮ್ಯಾಚ್​ನಲ್ಲಿ ಮೆಸ್ಸಿ ಕಡೆಯಿಂದ ಒಂದೇ ಒಂದು ಗೋಲು ದಾಖಲಾಗಿರಲಿಲ್ಲ.

ಗೋಲ್ಡನ್ ಬಾಲ್:

ಫಿಫಾ ವಿಶ್ವಕಪ್​ ಟೂರ್ನಿಯ ಅತ್ಯುತ್ತಮ ಆಟಗಾರನಿಗೆ ನೀಡಲಾಗುವ ‘ಗೋಲ್ಡನ್ ಬಾಲ್’ ಪ್ರಶಸ್ತಿಯನ್ನು ಮೆಸ್ಸಿ ಈ ಬಾರಿಯೂ ಗೆದ್ದು ಇತಿಹಾಸ ಬರೆಯಲಿದ್ದಾರೆ ಎಂದೇ ಇಡೀ ಕ್ರೀಡಾಲೋಕ ನಂಬಿತ್ತು. ಇದಕ್ಕೆ ಮುಖ್ಯ ಕಾರಣ ಈ ಬಾರಿಯ ಟೂರ್ನಿಯಲ್ಲಿ ಅರ್ಜೆಂಟೀನಾ ಆಡಿದ 7 ಪಂದ್ಯಗಳಲ್ಲಿ ಬರೋಬ್ಬರಿ 5 ಪಂದ್ಯಗಳಲ್ಲಿ ಮೆಸ್ಸಿ ‘ಮ್ಯಾನ್ ಆಫ್ ದಿ ಮ್ಯಾಚ್’ ಗೌರವ ಪಡೆದಿದ್ದರು. ಈಜಿಪ್ಟ್ ಮತ್ತು ಇಂಗ್ಲೆಂಡ್ ವಿರುದ್ಧದ ನಿರ್ಣಾಯಕ ಪಂದ್ಯಗಳಲ್ಲಿ ಮೆಸ್ಸಿಯ ನಾಯಕತ್ವ ಅಪ್ರತಿಮವಾಗಿತ್ತು.

ಟ್ವಿಸ್ಟ್ ನೀಡಿದ ಸ್ಪೇನ್ ಕ್ಯಾಪ್ಟನ್: ಫಿಫಾ ಇತಿಹಾಸದಲ್ಲಿ ಸಾಮಾನ್ಯವಾಗಿ ವಿಶ್ವಕಪ್ ಗೆಲ್ಲುವ ಚಾಂಪಿಯನ್ ತಂಡದ ಪ್ರಮುಖ ಆಟಗಾರನಿಗೆ ಗೋಲ್ಡನ್ ಬಾಲ್ ನೀಡುವ ಸಂಪ್ರದಾಯ ಇದೆ. ಸ್ಪೇನ್ ತಂಡದ ನಾಯಕ ಹಾಗೂ ಮಿಡ್‌ಫೀಲ್ಡರ್ ರೊಡ್ರಿ ಇಡೀ ಟೂರ್ನಿಯಲ್ಲಿ ಸ್ಪೇನ್ ತಂಡ ಸೋಲರಿಯದಂತೆ ಮುನ್ನಡೆಸಿದರು. ಫೈನಲ್‌ನಲ್ಲಿ ಸ್ಪೇನ್ ಚಾಂಪಿಯನ್ ಆಗುತ್ತಿದ್ದಂತೆ, ರೊಡ್ರಿಯವರ ಸ್ಥಿರ ಪ್ರದರ್ಶನವನ್ನು ಪರಿಗಣಿಸಿ ಅವರಿಗೆ ‘ಗೋಲ್ಡನ್ ಬಾಲ್’ ನೀಡಲಾಯಿತು.

ಅಂದರೆ  ಅರ್ಜೆಂಟೀನಾ ತಂಡ ಫೈನಲ್‌ನಲ್ಲಿ ಸೋತಿದ್ದರಿಂದ ಮೆಸ್ಸಿಯ ಗೋಲ್ಡನ್ ಬಾಲ್ ಕನಸು ಕೈತಪ್ಪಿತು. ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ಮೆಸ್ಸಿ ಪರವಾಗಿ ಧ್ವನಿ ಎತ್ತಿದರೂ, ಫಿಫಾ ನಿಯಮಾವಳಿಗಳ ಪ್ರಕಾರ ಮೆಸ್ಸಿಗೆ ‘ಸಿಲ್ವರ್ ಬಾಲ್’ ಪ್ರಶಸ್ತಿ ಲಭಿಸಿತು.

ಕೈ ತಪ್ಪಿದ ಸಾರ್ವಕಾಲಿಕ ದಾಖಲೆ:

ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತೀ ಹೆಚ್ಚು ಗೋಲು ದಾಖಲಿಸಿದ ವಿಶ್ವ ದಾಖಲೆ ಬರೆಯುವ ಅವಕಾಶವನ್ನು ಮೆಸ್ಸಿ ಕೈಚೆಲ್ಲಿಕೊಂಡಿದ್ದಾರೆ. ಲಿಯೋನೆಲ್ ಮೆಸ್ಸಿ ಫಿಫಾ ವಿಶ್ವಕಪ್​ನಲ್ಲಿ ಒಟ್ಟು 21 ಗೋಲು ದಾಖಲಿಸಿದ್ದಾರೆ. ಆದರೆ ಇಂಗ್ಲೆಂಡ್ ವಿರುದ್ಧದ ಮ್ಯಾಚ್​ನಲ್ಲಿ 2 ಗೋಲು ಬಾರಿಸುವ ಮೂಲಕ ಕಿಲಿಯನ್ ಎಂಬಾಪೆ 22 ಗೋಲುಗಳೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದರು.

ಹೀಗಾಗಿ ಫೈನಲ್ ಪಂದ್ಯದಲ್ಲಿ 2 ಗೋಲು ದಾಖಲಿಸಿ ಎಂಬಾಪೆ ಈ ವಿಶ್ವ ದಾಖಲೆ ಮುರಿಯುವುದು ಮೆಸ್ಸಿಗೆ ಅನಿವಾರ್ಯವಾಗಿತ್ತು. ಆದರೆ ಸ್ಪೇನ್ ತಂಡದ ರಕ್ಷಣಾ ಕೋಟೆಯನ್ನು ಭೇದಿಸಲು ವಿಫಲರಾದ ಮೆಸ್ಸಿ ಇದೀಗ 21 ಗೋಲುಗಳೊಂದಿಗೆ ವಿಶ್ವಕಪ್ ಅಭಿಯಾನವನ್ನು ಅಂತ್ಯಗೊಳಿಸಿದ್ದಾರೆ.

ಫೈನಲ್ ರೆಕಾರ್ಡ್ ಕೂಡ ಮಿಸ್​:

2022ರ ಖತಾರ್ ವಿಶ್ವಕಪ್ ಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ ಮೆಸ್ಸಿ ಗೋಲು ಹೊಡೆದಿದ್ದರು. ಒಂದು ವೇಳೆ ಈ ಬಾರಿಯೂ ಗೋಲು ಗಳಿಸಿದ್ದರೆ, ಸತತ ಎರಡು ವಿಶ್ವಕಪ್ ಫೈನಲ್‌ ಪಂದ್ಯಗಳಲ್ಲಿ ಗೋಲು ಗಳಿಸಿದ ವಿಶ್ವದ ಏಕೈಕ ಆಟಗಾರ ಎಂಬ ಕೀರ್ತಿಗೆ ಮೆಸ್ಸಿ ಪಾತ್ರರಾಗುತ್ತಿದ್ದರು.

ಇದನ್ನೂ ಓದಿ: ವಿಶ್ವ ಚಾಂಪಿಯನ್​ ಪಟ್ಟದೊಂದಿಗೆ ಹೊಸ ಇತಿಹಾಸ ಬರೆದ ಸ್ಪೇನ್

ಕೈತಪ್ಪಿದ ವಿಶ್ವಕಪ್​!

ಗೋಲ್ಡನ್ ಬೂಟ್, ಗೋಲ್ಡನ್ ಬಾಲ್ ಹಾಗೂ ವಿಶ್ವ ದಾಖಲೆಗಳೊಂದಿಗೆ ಲಿಯೋನೆಲ್ ಮೆಸ್ಸಿಗೆ 2ನೇ ವಿಶ್ವಕಪ್ ಕೂಡ ಕೈ ತಪ್ಪಿತು. ಅಂದರೆ 2026ರ ಫಿಫಾ ವಿಶ್ವಕಪ್‌ನ ಮಹಾಫೈನಲ್ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಅರ್ಜೆಂಟೀನಾ ತಂಡವು 0-1 ಗೋಲುಗಳ ಅಂತರದಿಂದ ಅನುಭವಿಸಿದ ಸೋಲು, ಕೇವಲ ಒಂದು ಟ್ರೋಫಿಯನ್ನಷ್ಟೇ ಅಲ್ಲ, ಲಿಯೋನೆಲ್ ಮೆಸ್ಸಿಯವರ ಹೆಸರಿಗೆ ಸೇರಬೇಕಿದ್ದ ಮೂರು ಐತಿಹಾಸಿಕ ವೈಯಕ್ತಿಕ ಕಿರೀಟಗಳನ್ನು ಕೊನೆಯ ಕ್ಷಣದಲ್ಲಿ ಕೈತಪ್ಪುವಂತೆ ಮಾಡಿತು.

Source link

ಬೆಂಗಳೂರಿನಲ್ಲಿವೆ ಬರೋಬ್ಬರಿ 25 ಲಕ್ಷ ಪ್ರೈವೆಟ್ ಕಾರುಗಳು! ದೆಹಲಿ, ಮುಂಬೈಗೇ ಸೆಡ್ಡು ಹೊಡೆದ ಸಿಲಿಕಾನ್ ಸಿಟಿ – Kannada News | Highest Private Cars in India: Bengaluru Surpasses Delhi with 25 Lakh Cars

ಬೆಂಗಳೂರು, ಜುಲೈ 20: ದೇಶದ ಐಟಿ ಹಬ್ ಖಾಸಗಿ ಕಾರುಗಳ ಬಳಕೆಯಲ್ಲಿ ಹೊಸ ದಾಖಲೆ ಬರೆದಿದೆ. ಬೆಂಗಳೂರು ಬರೋಬ್ಬರಿ 25 ಲಕ್ಷ ಖಾಸಗಿ ಕಾರುಗಳನ್ನು (Private Cars) ಹೊಂದುವ ಮೂಲಕ ಇಡೀ ದೇಶದಲ್ಲೇ ಅತಿ ಹೆಚ್ಚು ವೈಯಕ್ತಿಕ ಕಾರುಗಳಿರುವ ನಗರವಾಗಿ ಹೊರಹೊಮ್ಮಿದೆ. ವಾಹನ ದಟ್ಟಣೆ ಮತ್ತು ಟ್ರಾಫಿಕ್ ಕಿರಿಕಿರಿಗೆ ಈಗಾಗಲೇ ಹೆಸರಾಗಿರುವ ಬೆಂಗಳೂರಿಗೆ ಈ ಅಂಕಿ-ಅಂಶ ಮತ್ತಷ್ಟು ಆತಂಕ ತಂದಿಟ್ಟಿದೆ.

ದೆಹಲಿ, ಮುಂಬೈ ಹಿಂದಿಕ್ಕಿದ ಸಿಲಿಕಾನ್ ಸಿಟಿ

ಸಾಮಾನ್ಯವಾಗಿ ದೇಶದಲ್ಲೇ ಅತಿ ಹೆಚ್ಚು ವಾಹನಗಳಿರುವ ನಗರ ಎಂದರೆ ದೆಹಲಿ ಎಂಬ ಭಾವನೆ ಇತ್ತು. ಆದರೆ ವೈಯಕ್ತಿಕ ಅಥವಾ ಖಾಸಗಿ ಕಾರುಗಳ ಒಡೆತನದ ವಿಷಯಕ್ಕೆ ಬಂದರೆ ಬೆಂಗಳೂರು ಈಗ ದೆಹಲಿ ಮತ್ತು ಮುಂಬೈ ನಗರಗಳನ್ನೂ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ. ಸಾರ್ವಜನಿಕ ಸಾರಿಗೆಗಿಂತಲೂ ಸ್ವಂತ ಕಾರುಗಳ ಬಳಕೆಗೆ ಬೆಂಗಳೂರಿಗರು ಹೆಚ್ಚಿನ ಆದ್ಯತೆ ನೀಡುತ್ತಿರುವುದನ್ನು ಈ ವರದಿ ಸಾಬೀತುಪಡಿಸಿದೆ. ಐಟಿ ಉದ್ಯೋಗಿಗಳ ಸಂಖ್ಯೆ ಹೆಚ್ಚಿರುವುದು ಮತ್ತು ನಗರದ ಆರ್ಥಿಕ ಬೆಳವಣಿಗೆಯೂ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಟ್ರಾಫಿಕ್ ಕಿರಿಕಿರಿ ಹೆಚ್ಚು

ನಗರದಲ್ಲಿ ಕಾರುಗಳ ಸಂಖ್ಯೆ 25 ಲಕ್ಷ ತಲುಪಿರುವುದರಿಂದ ಬೆಂಗಳೂರಿನ ರಸ್ತೆಗಳ ಮೇಲಿನ ಒತ್ತಡ ಗಣನೀಯವಾಗಿ ಹೆಚ್ಚಾಗಿದೆ. ಕಿರಿದಾದ ರಸ್ತೆಗಳು ಮತ್ತು ಮೂಲಸೌಕರ್ಯಗಳ ಕೊರತೆಯ ನಡುವೆ ಇಷ್ಟೊಂದು ಬೃಹತ್ ಪ್ರಮಾಣದ ಕಾರುಗಳು ರಸ್ತೆಗಿಳಿಯುತ್ತಿರುವುದರಿಂದ ಪೀಕ್ ಅವರ್‌ಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವುದು ಸಂಚಾರ ಪೊಲೀಸರಿಗೂ ದೊಡ್ಡ ಸವಾಲಾಗಿದೆ. ಮೆಟ್ರೋ ವಿಸ್ತರಣೆ ಮತ್ತು ಬಿಎಂಟಿಸಿ ಬಸ್‌ಗಳ ಸೌಲಭ್ಯವಿದ್ದರೂ ಕಾರುಗಳ ಸಂಖ್ಯೆ ಮಾತ್ರ ವರ್ಷದಿಂದ ವರ್ಷಕ್ಕೆ ದಾಖಲೆ ಮಟ್ಟದಲ್ಲಿ ಏರುತ್ತಲೇ ಸಾಗಿದೆ.

ಇದನ್ನೂ ಓದಿ Auto Tips: ವಿವಿಧ ರೀತಿಯ ಹೈಬ್ರಿಡ್ ಕಾರುಗಳು ಯಾವುವು?, ಅವು ಹೇಗೆ ಕಾರ್ಯನಿರ್ವಹಿಸುತ್ತವೆ?

ಮಾಲಿನ್ಯ ಮತ್ತು ಪಾರ್ಕಿಂಗ್ ಸಮಸ್ಯೆ

ಖಾಸಗಿ ಕಾರುಗಳ ಈ ಅತಿಯಾದ ಸಂಖ್ಯೆಯಿಂದಾಗಿ ನಗರದಲ್ಲಿ ವಾಯುಮಾಲಿನ್ಯದ ಪ್ರಮಾಣ ಹೆಚ್ಚುತ್ತಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಈಗ ‘ಪಾರ್ಕಿಂಗ್’ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ವಸತಿ ಪ್ರದೇಶಗಳು ಹಾಗೂ ವಾಣಿಜ್ಯ ಮಾರುಕಟ್ಟೆಗಳಲ್ಲಿ ವಾಹನ ನಿಲ್ಲಿಸಲು ಜಾಗವಿಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ. ಸಾರ್ವಜನಿಕ ಸಾರಿಗೆಯನ್ನು ಬಳಸದೆ ಪ್ರತಿಯೊಬ್ಬರೂ ವೈಯಕ್ತಿಕ ಕಾರು ಅವಲಂಬನೆ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Peru Earthquake: ಪೆರುವಿನಲ್ಲಿ ಅವಳಿ ಭೂಕಂಪ: 6 ಮಂದಿ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ,ಐತಿಹಾಸಿಕ ಚರ್ಚ್ ನೆಲಸಮ – Kannada News | Peru Earthquake Kills 6: Historic Church Destroyed, Dozens Injured in Junin

ಲಿಮಾ, ಜುಲೈ 20: ದಕ್ಷಿಣ ಅಮೆರಿಕದ ಸುಂದರ ದೇಶ ಪೆರವಿನ ಮಧ್ಯ ಜುನಿನ್​ ಪರ್ವತ ಪ್ರದೇಶದಲ್ಲಿ ಅವಳಿ ಭೂಕಂಪ(Earthquake)ಗಳು ಸಂಭವಿಸಿದ್ದು, ಭಾರಿ ವಿನಾಶವನ್ನು ಸೃಷ್ಟಿಸಿವೆ. ಈ ದುರಂತದಲ್ಲಿ ಕನಿಷ್ಠ 6 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.30ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ನೂರಾರು ಮನೆಗಳು ಉರುಳಿವೆ, 200ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. 5.1 ಹಾಗೂ 3.7 ತೀವ್ರತೆಯ ಭೂಕಂಪ ಸಂಭವಿಸಿದೆ.

ರಾಜಧಾನಿ ಲಿಮಾದಿಂದ ಪೂರ್ವಕ್ಕೆ ಸುಮಾರು 300 ಕಿಲೋಮೀಟರ್ ದೂರದಲ್ಲಿರುವ ಹುವಾನ್‌ಕಾಯೊ ಪ್ರಾಂತ್ಯದ ಸಿಕಾಯಾ ನಗರದ ಬಳಿ ಈ ಕಂಪನ ಸಂಭವಿಸಿದೆ. ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (USGS) ಪ್ರಕಾರ, 5.1 ತೀವ್ರತೆಯ ಭೂಕಂಪವು ರಾತ್ರಿ 9.24 ಕ್ಕೆ ಭೂಮಿಯ 10 ಕಿಲೋಮೀಟರ್ ಆಳದಲ್ಲಿ ದಾಖಲಾಗಿದೆ.

ಮನೆಗಳು ನೆಲಸಮ: ಬೀದಿಗೆ ಬಿದ್ದ ಜನರು
ಪೆರುವಿನ ಆಂಡಿಸ್ ಪರ್ವತ ಸರಣಿಯ ಗ್ರಾಮಗಳಲ್ಲಿ ಬಹುತೇಕ ಮನೆಗಳನ್ನು ಒಣಗಿಸಿದ ಮಣ್ಣಿನ ಇಟ್ಟಿಗೆಗಳಿಂದ ನಿರ್ಮಿಸಲಾಗಿರುತ್ತದೆ. ಇವು ಪ್ರಬಲ ಭೂಕಂಪದ ಕಂಪನ ತಡೆಯಲು ಸಾಧ್ಯವಾಗದೆ ತಕ್ಷಣವೇ ಕುಸಿದು ಬಿದ್ದಿವೆ. ಪ್ರಾಥಮಿಕ ಅಂದಾಜಿನ ಪ್ರಕಾರ 48 ಕ್ಕೂ ಹೆಚ್ಚು ಮನೆಗಳು ಸಂಪೂರ್ಣವಾಗಿ ಧ್ವಂಸಗೊಂಡಿದ್ದು, 18 ಕ್ಕೂ ಹೆಚ್ಚು ಕಟ್ಟಡಗಳು ತೀವ್ರವಾಗಿ ಹಾನಿಗೊಳಗಾಗಿವೆ.

ಮತ್ತಷ್ಟು ಓದಿ: ಅಫ್ಘಾನಿಸ್ತಾನದಲ್ಲಿ ಭೂಕಂಪನ: ದೆಹಲಿ, ಜಮ್ಮು ಸೇರಿ ಇಡೀ ಉತ್ತರ ಭಾರತದಲ್ಲೂ ನಡುಗಿದ ಭೂಮಿ!

ಚೊಂಗೊಸ್ ಬಹೋ ಎಂಬ ಕೃಷಿ ಪ್ರದೇಶದ ನೂರಾರು ಜನರು ತಮ್ಮ ಮನೆಗಳನ್ನು ಕಳೆದುಕೊಂಡು, ತೀವ್ರ ಚಳಿಯಲ್ಲಿ ಕಂಬಳಿಗಳನ್ನು ಹೊದ್ದು ರಸ್ತೆ ಬದಿಗಳಲ್ಲಿ ರಾತ್ರಿ ಕಳೆದಿದ್ದಾರೆ. ಇವರ ಸಾಕಷ್ಟೂ ಜಾನುವಾರುಗಳು ಕೂಡ ಅವಶೇಷಗಳ ಅಡಿಯಲ್ಲಿ ಸಿಲುಕಿ ನರಳುತ್ತಿರುವ ದೃಶ್ಯಗಳು ಕಂಡುಬಂದಿವೆ.

16ನೇ ಶತಮಾನದ ಐತಿಹಾಸಿಕ ‘ಸ್ಯಾಂಟಿಯಾಗೊ ಡಿ ಲಿಯಾನ್’ ಚರ್ಚ್ ನೆಲಸಮ
ಈ ಭೂಕಂಪದಲ್ಲಿ ದೇಶದ ಪ್ರಸಿದ್ಧ ರಾಷ್ಟ್ರೀಯ ಪರಂಪರೆಯ ತಾಣವೂ ಹಾನಿಗೊಳಗಾಗಿದೆ. 1565 ರಲ್ಲಿ ನಿರ್ಮಿಸಲಾಗಿದ್ದ ಚೊಂಗೊಸ್ ಬಹೋ ಪ್ರದೇಶದ ಐತಿಹಾಸಿಕ ‘ಸ್ಯಾಂಟಿಯಾಗೊ ಡಿ ಲಿಯಾನ್’ ಚರ್ಚ್ ಮತ್ತು ಅದರ ಪಕ್ಕದಲ್ಲಿದ್ದ ಕಾನ್ವೆಂಟ್​ಗೆ ಭಾರಿ  ಹಾನಿಯಾಗಿದೆ.

ವಿಡಿಯೋ

ಪೆರುವಿನಲ್ಲಿ ಆಗಾಗ ಭೂಕಂಪ ಏಕೆ ಸಂಭವಿಸುತ್ತದೆ?
ಪೆರು ದೇಶವು ಜಗತ್ತಿನ ಅತ್ಯಂತ ಅಪಾಯಕಾರಿ ‘ಪೆಸಿಫಿಕ್ ರಿಂಗ್ ಆಫ್ ಫೈರ್’ ವಲಯದಲ್ಲಿದೆ. ಜಗತ್ತಿನಲ್ಲಿ ಸಂಭವಿಸುವ ಸುಮಾರು 85 ಪ್ರತಿಶತ ಭೂಕಂಪಗಳಿಗೆ ಈ ವಲಯವೇ ಕಾರಣ.

ಭೂಮಿಯ ಅಡಿಯಲ್ಲಿರುವ ‘ನಾಜ್ಕಾ’ ಟೆಕ್ಟೋನಿಕ್ ಪ್ಲೇಟ್, ‘ದಕ್ಷಿಣ ಅಮೆರಿಕನ್’ ಪ್ಲೇಟ್‌ನ ಕೆಳಗೆ ನಿಧಾನವಾಗಿ ಜಾರುವುದರಿಂದ ಭಾರಿ ಒತ್ತಡ ನಿರ್ಮಾಣವಾಗುತ್ತದೆ. ಈ ಒತ್ತಡವು ಶಕ್ತಿಯಾಗಿ ಬಿಡುಗಡೆಯಾದಾಗ ಭೂಕಂಪಗಳು ಸಂಭವಿಸುತ್ತವೆ.

ಇದಕ್ಕೂ ಮುನ್ನ, 2007 ರಲ್ಲಿ ಪಿಸ್ಕೋ ಪ್ರಾಂತ್ಯದಲ್ಲಿ 7.9 ತೀವ್ರತೆಯ ಭೀಕರ ಭೂಕಂಪ ಸಂಭವಿಸಿ ಬರೋಬ್ಬರಿ 600 ಜನರು ಪ್ರಾಣ ಕಳೆದುಕೊಂಡಿದ್ದರು. ಸದ್ಯ ಪೆರುವಿನ ರಾಷ್ಟ್ರೀಯ ನಾಗರಿಕ ರಕ್ಷಣಾ ಪಡೆಗಳು ಧ್ವಂಸಗೊಂಡ ಮನೆಗಳ ಅವಶೇಷಗಳನ್ನು ತೆರವುಗೊಳಿಸುತ್ತಿದ್ದು, ಸಂತ್ರಸ್ತರಿಗೆ ತುರ್ತು ಆಹಾರ, ಆಶ್ರಯ  ಒದಗಿಸುತ್ತಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version