ಒರಾಕಲ್​ನಲ್ಲಿ ಕೆಲಸ ಕಳೆದುಕೊಳ್ಳಲಿರುವ 30,000 ಉದ್ಯೋಗಿಗಳು; ಜೂನ್ 18ರೊಳಗೆ ಲೇ ಆಫ್ ಪ್ರಕ್ರಿಯೆ ಪೂರ್ಣ – Kannada News

ವಾಷಿಂಗ್ಟನ್, ಜೂನ್ 4: ವಿಶ್ವದ ಪ್ರಮುಖ ಸಾಫ್ಟ್​ವೇರ್ ಅಪ್ಲಿಕೇಶನ್ ಕಂಪನಿಯಾದ ಒರಾಕಲ್ (Oracle) ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆಯನ್ನು ಜೂನ್ 15 ರೊಳಗೆ ಪೂರ್ಣಗೊಳಿಸಲಿದೆ. ಈ ಕಂಪನಿಯು ತನ್ನ ಜಾಗತಿಕ ಉದ್ಯೋಗಿಗಳ ಪೈಕಿ ಸುಮಾರು 18% ರಷ್ಟು ಮಂದಿಯನ್ನು ಕೆಲಸದಿಂದ ತೆಗೆದುಹಾಕುತ್ತಿದೆ. ಈ ಪ್ರಕ್ರಿಯೆಯು ಜೂನ್ 1 ರಿಂದ ನಡೆಯುತ್ತಿದ್ದು ಜೂನ್ 15ರೊಳಗೆ ಪೂರ್ಣಗೊಳ್ಳಲಿದೆ.

ಆಶ್ಚರ್ಯದ ಸಂಗತಿಯೆಂದರೆ, ಈ ದೊಡ್ಡಮಟ್ಟದ ಲೇ ಆಫ್ ನಡೆಯುತ್ತಿರುವುದು ಕಂಪನಿ ಸುಸ್ಥಿತಿಯಲ್ಲಿರುವಾಗಲೇ. ಒರಾಕಲ್ ಕಂಪನಿ ಉತ್ತಮ ಆದಾಯವನ್ನು ಗಳಿಸುತ್ತಿದೆ. ಕ್ಲೌಡ್ ಹಾಗೂ ಕೃತಕ ಬುದ್ಧಿಮತ್ತೆ (AI) ವಲಯದಲ್ಲಿ ಭಾರಿ ಬೆಳವಣಿಗೆ ಕಾಣುತ್ತಿದೆ. ಕಂಪನಿಯು ಮೂರನೇ ತ್ರೈಮಾಸಿಕದಲ್ಲಿ 22% ಆದಾಯ ಹೆಚ್ಚಳವನ್ನೂ ಕಂಡಿದೆ. ಆದರೂ ಕೂಡ ಒರಾಕಲ್ ದೊಡ್ಡ ಮಟ್ಟದ ಲೇಆಫ್​ಗೆ ಕೈಹಾಕಿದೆ.

ಇದನ್ನೂ ಓದಿ: ವಿದೇಶಿ ಬಂಡವಾಳ ಸೆಳೆಯಲು ಭರ್ಜರಿ ಪ್ಲಾನ್: ಬಾಂಡ್ ತೆರಿಗೆ ಕಡಿತ ಮತ್ತು ಹೂಡಿಕೆ ನಿಯಮಗಳ ಸಡಿಲಿಕೆಗೆ ಕೇಂದ್ರ ಸರ್ಕಾರ ಮುಂದು

ಒರಾಕಲ್​ನ ಈ ಕತ್ತರಿಗೆ ಏನು ಕಾರಣ?

ಒರಾಕಲ್ ಕಂಪನಿಯು ತನ್ನ ಸಂಪನ್ಮೂಲಗಳನ್ನು ಹೆಚ್ಚು ಬೆಳವಣಿಗೆಯಾಗುತ್ತಿರುವ AI ವ್ಯವಹಾರಗಳ ಕಡೆಗೆ ತಿರುಗಿಸಲು ಬಯಸಿದೆ. ಮುಂದಿನ ದಿನಗಳಲ್ಲಿ ಕ್ಲೌಡ್ ಇನ್‌ಫ್ರಾಸ್ಟ್ರಕ್ಚರ್ ಮತ್ತು AI ಡೇಟಾ ಸೆಂಟರ್‌ಗಳನ್ನು ವಿಸ್ತರಿಸಲು ಕಂಪನಿಯು ಸುಮಾರು 50 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಯೋಜಿಸಿದೆ.

ಲೇ ಆಫ್ ನಿರ್ಧಾರದಿಂದ ಉದ್ಯೋಗಿಗಳಿಗೆ ಆತಂಕ

ಒರಾಕಲ್​ನ ಲೇ ಆಫ್ ಕ್ರಮವು ಉದ್ಯೋಗಿಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಕಂಪನಿಯು ನೀಡುತ್ತಿರುವ ಪರಿಹಾರ ಪ್ಯಾಕೇಜ್ (Severance Package) ಅಸಮರ್ಪಕವಾಗಿದೆ ಎಂದು ಅನೇಕ ಬಾಧಿತ ಉದ್ಯೋಗಿಗಳು ಟೀಕಿಸಿದ್ದಾರೆ. ವಿಶೇಷವಾಗಿ, ಕಂಪನಿಯು ವಾಗ್ದಾನ ಮಾಡಿದ ಸ್ಟಾಕ್ ಆಯ್ಕೆಗಳನ್ನು (Unvested stock awards) ನೀಡದಿರುವುದು ವಿವಾದಕ್ಕೆ ಕಾರಣವಾಗಿದೆ. ಸಂಸ್ಥೆಯು ಕೆಲಸ ಕಳೆದುಕೊಂಡ ಉದ್ಯೋಗಿಗಳಿಗೆ 26 ವಾರಗಳವರೆಗೆ ವೇತನವನ್ನು ಪರಿಹಾರವಾಗಿ ನೀಡಿದೆ. ಅಂದರೆ, ಕಂಪನಿಯ ಹಿರಿಯರಿಗೆ 26 ವಾರದ ವೇತನ ಸಿಗುತ್ತದೆ. ಕಿರಿಯರಿಗೆ ಪ್ಯಾಕೇಜ್ ಕಡಿಮೆ ಇರುತ್ತದೆ.

ಇದನ್ನೂ ಓದಿ: ಜೊಹೊ ಮುಖ್ಯ ವಿಜ್ಞಾನಿ ಶ್ರೀಧರ್ ವೆಂಬು ಅವರ ಕರುವಿಯಿಂದ ಚೀನೀ ಪವರ್ ಟೂಲ್ಸ್​ಗೆ ಪೈಪೋಟಿ

ಒಟ್ಟಾರೆ, ಭವಿಷ್ಯದ AI ತಂತ್ರಜ್ಞಾನದ ಹೂಡಿಕೆಗೆ ಒತ್ತು ನೀಡಲು, ಪ್ರಸ್ತುತ ಇರುವ ಮಾನವ ಸಂಪನ್ಮೂಲವನ್ನು ಕಂಪನಿಯು ತೀವ್ರವಾಗಿ ಕಡಿತಗೊಳಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ: ಮಗು ಸೇರಿದಂತೆ ನಾಲ್ವರ ಸಾವು – Kannada News

ಚಿಕ್ಕಬಳ್ಳಾಪುರ ಹಾಗೂ ಚಾಮರಾಜನಗರದ ಅಪಘಾತದಲ್ಲಿ ಜಖಂಗೊಂಡಿರುವ ವಾಹನಗಳುImage Credit source: tv9

ಬೆಂಗಳೂರು, ಜೂನ್ 4: ಚಾಮರಾಜನಗರ (Chamarajanagar) ಮತ್ತು ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಗಳಲ್ಲಿ ಗುರುವಾರ ಎರಡು ಭೀಕರ ರಸ್ತೆ ಅಪಘಾತಗಳು ಸಂಭವಿಸಿದ್ದು, 7 ತಿಂಗಳ ಹಸುಗೂಸು ಹಾಗೂ ವೃದ್ಧ ದಂಪತಿ ಸೇರಿದಂತೆ ಒಟ್ಟು ನಾಲ್ವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ವೇಗದ ಚಾಲನೆ ಮತ್ತು ಚಾಲಕನ ನಿಯಂತ್ರಣ ತಪ್ಪಿದ ಕಾರಣದಿಂದಾಗಿ ಈ ಎರಡೂ ದುರಂತಗಳು ಸಂಭವಿಸಿದ್ದು, ಹಲವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಅಪಘಾತದ ತೀವ್ರತೆಗೆ ವಾಹನಗಳು ಸಂಪೂರ್ಣ ಜಖಂಗೊಂಡಿವೆ.

ಮುಖ್ಯಾಂಶಗಳು

  • ಚಾಮರಾಜನಗರದ ದೊಡ್ಡಮೂಡಹಳ್ಳಿ ಕ್ರಾಸ್ ಬಳಿ ಎರಡು ಕಾರುಗಳ ಡಿಕ್ಕಿ; ವೃದ್ಧ ಹಾಗೂ ಮಗು ಸಾವು.
  • ಚಿಕ್ಕಬಳ್ಳಾಪುರದ ಸಾದಲಿ ಕ್ರಾಸ್ ಬಳಿ ಟಿವಿಎಸ್ ಎಕ್ಸೇಲ್‌ಗೆ ಸರ್ಕಾರಿ ಬಸ್ ಡಿಕ್ಕಿ
  • ಬಸ್ ಚಕ್ರದಡಿ ಸಿಲುಕಿ ವೃದ್ಧ ದಂಪತಿ ಸ್ಥಳದಲ್ಲೇ ದುರ್ಮರಣ.

ಚಾಮರಾಜನಗರದಲ್ಲಿ ಕಾರುಗಳ ಡಿಕ್ಕಿ: ಇಬ್ಬರ ಸಾವು

ಚಾಮರಾಜನಗರ ಜಿಲ್ಲೆ ಚಾಮರಾಜನಗರ ತಾಲ್ಲೂಕಿನ ದೊಡ್ಡಮೂಡಹಳ್ಳಿ ಕ್ರಾಸ್ ಬಳಿ ಎರಡು ಕಾರುಗಳ ನಡುವೆ ಭೀಕರ ಅಪಘಾತ ನಡೆದಿದೆ. ವೇಗವಾಗಿ ಬಂದ ಸ್ವಿಫ್ಟ್ ಕಾರು ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಮತ್ತೊಂದು ಕಾರಿಗೆ ಪ್ರಬಲವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ಭೀಕರತೆಗೆ ಕಾರಿನಲ್ಲಿದ್ದ ಮುಬಾರಕ್ (70) ಹಾಗೂ ಕೇವಲ 7 ತಿಂಗಳ ಹಸುಗೂಸು ಸ್ಥಳದಲ್ಲೇ ಕೊನೆಯುಸಿರೆಳೆದಿವೆ. ಇನ್ನುಳಿದಂತೆ ಮಕ್ಕಳು ಸೇರಿದಂತೆ ಕಾರಿನಲ್ಲಿದ್ದ ಐವರಿಗೆ ತೀವ್ರ ಸ್ವರೂಪದ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಚಾಮರಾಜನಗರದ ಸಿಮ್ಸ್ (CIMS) ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಚಾಮರಾಜನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಎಪಿಎಸ್ಆರ್ಟಿಸಿ ಬಸ್ ಧಾವಂತಕ್ಕೆ ದಂಪತಿ ಬಲಿ

ಇನ್ನೊಂದೆಡೆ, ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 44ರ (NH 44) ಸಾದಲಿ ಕ್ರಾಸ್ ಬಳಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಟಿವಿಎಸ್ ಎಕ್ಸೇಲ್ (TVS XL) ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೃದ್ಧ ದಂಪತಿಗೆ ಆಂಧ್ರಪ್ರದೇಶ ಸಾರಿಗೆ ಸಂಸ್ಥೆಯ (APSRTC) ಬಸ್ ಡಿಕ್ಕಿ ಹೊಡೆದಿದೆ. ಕದರಿಯಿಂದ ಬೆಂಗಳೂರಿನ ಕಡೆಗೆ ಸಂಚರಿಸುತ್ತಿದ್ದ ಈ ಬಸ್ ಬರುವುದನ್ನು ಗಮನಿಸದೇ ದ್ವಿಚಕ್ರ ವಾಹನ ಸವಾರರು ದಿಢೀರ್ ರಸ್ತೆ ತಿರುವು (ಟರ್ನ್) ಪಡೆದಿದ್ದೇ ಈ ಅಪಘಾತಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನದಲ್ಲಿದ್ದ ಲಕ್ಷ್ಮಣ (75) ಹಾಗೂ ಅವರ ಪತ್ನಿ ರತ್ನಮ್ಮ (70) ಬಸ್ಸಿನ ಚಕ್ರದ ಕೆಳಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಬೈಕ್​ ಡಿಕ್ಕಿ ತಪ್ಪಿಸಲು ಹೋಗಿ 4 ಕಾರುಗಳ ನಡುವೆ ಸರಣಿ ಅಪಘಾತ

ಮೃತರು ಶಿಡ್ಲಘಟ್ಟ ತಾಲ್ಲೂಕಿನ ತಿರುಕಾಚೇನಹಳ್ಳಿ ನಿವಾಸಿಗಳು ಎಂದು ಗುರುತಿಸಲಾಗಿದೆ. ಈ ಘಟನೆ ಕುರಿತು ಪೆರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವರದಿ: ಸೂರಜ್ ಪ್ರಸಾದ್ ಎಸ್​ಎನ್ ಮತ್ತು ಭೀಮಪ್ಪ ಪಾಟೀಲ್

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

“ಅಧಿಕಾರ ಬೇಕಾದವರು ಡಿಕೆಶಿ ಜತೆ ಹೋಗಿ, ಪಕ್ಷ ಕಟ್ಟುವವರು ನನ್ನೊಂದಿಗೆ ಬನ್ನಿ”: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಖಡಕ್ ಮಾತು – Kannada News

ಬಿ.ಕೆ. ಹರಿಪ್ರಸಾದ್

ಬೆಂಗಳೂರು, ಜೂ.4: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಪಕ್ಷದ ಸಚಿವ ಸ್ಥಾನ ವಂಚಿತರಿಗೆ ಹಾಗೂ ಅಧಿಕಾರ ಆಸೆ ಉಳ್ಳವರಿಗೆ ಅತ್ಯಂತ ಖಡಕ್ ಸಂದೇಶ ರವಾನಿಸಿದ್ದಾರೆ. “ಯಾರಿಗೆ ಅಧಿಕಾರ ಮತ್ತು ಸ್ಥಾನಮಾನ ಬೇಕೋ ಅವರು ಡಿ.ಕೆ. ಶಿವಕುಮಾರ್ ಜೊತೆಗೆ ಹೋಗಿ, ಪಕ್ಷವನ್ನು ಸದೃಢವಾಗಿ ಬೆಳೆಸಬೇಕು ಅನ್ನೋರು ನಮ್ಮ ಜೊತೆಗೆ ಬನ್ನಿ” ಎಂದು ಹೇಳುವ ಮೂಲಕ ಕಾಂಗ್ರೆಸ್​​​​ ನಾಯಕರಿಗೆ ಹಾಗೂ ಸಚಿವ ಆಕ್ಷಾಂಕಿಗಳಿಗೆ ಖಡಕ್​​​​​​ ಮಾತುಗಳನ್ನು ಹೇಳಿದ್ದಾರೆ. ಈ ಎಕ್ಸ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಬಿ.ಕೆ. ಹರಿಪ್ರಸಾದ್, ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ನಾಯಕರಿಗೆ ಕಳಕಳಿಯ ವಿನಂತಿ ಮಾಡಿದರು. “ಸರ್ಕಾರದಲ್ಲಿ ಈಗಾಗಲೇ ಬೇರೆ ಬೇರೆ ಕೆಲಸ ಮಾಡಿದವರು ಈಗ ಪಕ್ಷದ ಸಂಘಟನೆಗೆ ಒತ್ತು ನೀಡಬೇಕು. ನಾವೆಲ್ಲರೂ ಸೇರಿ ರಾಹುಲ್ ಗಾಂಧಿ ಅವರ ಹೋರಾಟಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ. ಸಂಘಟನೆ ಮತ್ತು ಸರ್ಕಾರ ಎರಡನ್ನೂ ಸಮತೋಲನವಾಗಿ ಹಂಚಿಕೊಂಡು ಮುಂದೆ ಹೋಗೋಣ. ನನ್ನ ಪೂರ್ವಜರು ಮಾಡಿದ ಪುಣ್ಯದಿಂದಾಗಿ ಈ ಪವಿತ್ರ ಪಕ್ಷದ ಅಧ್ಯಕ್ಷ ಹುದ್ದೆ ನನಗೆ ಸಿಕ್ಕಿದೆ. ಸಾಮಾನ್ಯ ಕಾರ್ಯಕರ್ತರಿಗೆ ಏನೇ ತೊಂದರೆಯಾದರೂ ನಾನು ಸದಾ ಅವರ ಜೊತೆ ಇರುತ್ತೇನೆ” ಎಂದು ಭರವಸೆ ನೀಡಿದರು.

ಇಲ್ಲಿದೆ ನೋಡಿ ಎಕ್ಸ್​​​​​ ಪೋಸ್ಟ್​​:

ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಎಐಸಿಸಿ (AICC) ಹೈಕಮಾಂಡ್ ನಾಯಕರಿಗೆ ಧನ್ಯವಾದ ತಿಳಿಸಿ ಬಿ.ಕೆ. ಹರಿಪ್ರಸಾದ್ ಅವರು ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. “ಹೈಕಮಾಂಡ್‌ನ ಈ ನಿರ್ಧಾರ ಕೇವಲ ಒಬ್ಬ ವ್ಯಕ್ತಿಗೆ ನೀಡಿರುವ ಹುದ್ದೆಯಲ್ಲ. ಇದು ಕಾಂಗ್ರೆಸ್ ಪಕ್ಷದ ಮೂಲ ಸಿದ್ಧಾಂತಗಳಾದ ಸಾಮಾಜಿಕ ನ್ಯಾಯ, ಜಾತ್ಯತೀತತೆ, ಪ್ರಜಾಪ್ರಭುತ್ವ ಮತ್ತು ದುರ್ಬಲ ವರ್ಗಗಳ ಸಬಲೀಕರಣಕ್ಕೆ ಸಂದ ಜಯ. ನನ್ನ ಜೀವನ ಪೂರ್ತಿ ಕಾಂಗ್ರೆಸ್ ತತ್ವಗಳಿಗಾಗಿ ಮೀಸಲಿಟ್ಟಿದ್ದೇನೆ. ನನಗೆ ಅಧಿಕಾರಕ್ಕಿಂತ ಸಿದ್ಧಾಂತ ದೊಡ್ಡದು, ಹುದ್ದೆಗಿಂತ ಜನರ ಹಿತ ಮುಖ್ಯ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಹೈಕಮಾಂಡ್‌ಗೆ ಮುಸ್ಲಿಂ ಸಮುದಾಯದ ಖಡಕ್ ಎಚ್ಚರಿಕೆ: 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿ ಏನೂ ಎಂಬುದನ್ನ ತೋರಿಸುತ್ತೇವೆ

ಪ್ರಸ್ತುತ ದೇಶದಲ್ಲಿ ದ್ವೇಷದ ರಾಜಕಾರಣ ಮತ್ತು ಧರ್ಮದ ಹೆಸರಿನಲ್ಲಿ ಧ್ರುವೀಕರಣ ನಡೆಯುತ್ತಿದೆ. ಸಂವಿಧಾನ ವಿರೋಧಿ ಪ್ರವೃತ್ತಿಗಳು ಹೆಚ್ಚಾಗುತ್ತಿರುವ ಇಂತಹ ಕಾಲದಲ್ಲಿ ನನಗೆ ರಾಜ್ಯ ಕಾಂಗ್ರೆಸ್‌ನ ನೇತೃತ್ವ ಸಿಕ್ಕಿರುವುದು ದೊಡ್ಡ ಸವಾಲಾಗಿದೆ. ಹಿಂದುಳಿದ ವರ್ಗಗಳು, ದಲಿತರು, ಅಲ್ಪಸಂಖ್ಯಾತರು, ರೈತರು ಮತ್ತು ಯುವಜನರ ಆಶೋತ್ತರಗಳನ್ನು ನಾನು ಬಲ್ಲೆ. ಸಂವಿಧಾನವೇ ನಮ್ಮ ದಾರಿ, ಸಾಮಾಜಿಕ ನ್ಯಾಯವೇ ನಮ್ಮ ಗುರಿ. ಈ ಸವಾಲನ್ನು ಕಾರ್ಯಕರ್ತರ ಬಲದಿಂದ ಯಶಸ್ವಿಯಾಗಿ ಎದುರಿಸುತ್ತೇನೆ. ಎಲ್ಲಾ ನಾಯಕರು ಹಾಗೂ ಪ್ರಜಾಪ್ರಭುತ್ವವಾದಿಗಳು ನನ್ನೊಂದಿಗೆ ಕೈಜೋಡಿಸಲಿದ್ದಾರೆ ಎಂಬ ನಂಬಿಕೆ ನನಗಿದೆ” ಎಂದು ಹರಿಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಮಿರ್ ಖಾನ್​ಗೆ ಮೂರನೇ ವಿವಾಹ; ಮೊದಲ ಎರಡು ವೈವಾಹಿಕ ಬದುಕು ಮುರಿದುಬಿದ್ದಿದ್ದು ಏಕೆ? – Kannada News

ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ನಟ ಆಮಿರ್ ಖಾನ್ ಪ್ರಸ್ತುತ ತಮ್ಮ ವೃತ್ತಿಪರ ಜೀವನಕ್ಕಿಂತ ಹೆಚ್ಚಾಗಿ ವೈಯಕ್ತಿಕ ಜೀವನದ ಕಾರಣಕ್ಕಾಗಿಯೇ ಭಾರಿ ಸುದ್ದಿಯಲ್ಲಿದ್ದಾರೆ. ಅವರ ಖಾಸಗಿ ಬದುಕಿನಲ್ಲಿ ನಡೆಯುತ್ತಿರುವ ಸರಣಿ ಘಟನೆಗಳು ಸದ್ಯ ವರದಿಯಾಗುತ್ತಿವೆ. ಆಮಿರ್ ಖಾನ್ ತಮ್ಮ 61ನೇ ವಯಸ್ಸಿನಲ್ಲಿ ಮೂರನೇ ಬಾರಿಗೆ ವಿವಾಹವಾಗಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಜುಲೈ 5 ರಂದು ಅವರು ತಮ್ಮ ಗೆಳತಿ ಗೌರಿ ಸ್ಪ್ರಾಟ್ ಅವರೊಂದಿಗೆ ಖಾಸಗಿ ಸಮಾರಂಭವೊಂದರಲ್ಲಿ ವಿವಾಹವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಆಮಿರ್ ಖಾನ್ ಅವರು ತಮ್ಮ 60ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಗೌರಿ ಸ್ಪ್ರಾಟ್ ಅವರೊಂದಿಗಿನ ಸಂಬಂಧವನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದರು. ಅಲ್ಲದೆ ಇಡೀ ಜಗತ್ತಿಗೆ ತಮ್ಮ ಗೆಳತಿ ಎಂದು ಪರಿಚಯಿಸಿದ್ದರು. ಈಗ ಈ ಜೋಡಿ ಶೀಘ್ರದಲ್ಲೇ ಮದುವೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಗೌರಿ ಅವರ ಕೈಹಿಡಿಯುವ ಮುನ್ನ ಆಮಿರ್ ಖಾನ್ ಎರಡು ಬಾರಿ ವಿವಾಹವಾಗಿದ್ದರು. ಅವರು ತಮ್ಮ ಮೊದಲ ಪತ್ನಿ ರೀನಾ ದತ್ತಾ ಮತ್ತು ಎರಡನೇ ಪತ್ನಿ ಕಿರಣ್ ರಾವ್ ಇಬ್ಬರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರಾದರೂ, ಅಂತಿಮವಾಗಿ ಅವರಿಂದ ಬೇರ್ಪಟ್ಟರು. ಆಮಿರ್ ಖಾನ್ ಅವರ ಮೊದಲ ಮತ್ತು ಎರಡನೇ ವಿವಾಹಗಳು ಮುರಿದುಬಿದ್ದಿದ್ದು ಏಕೆ ಮತ್ತು ಅವರ ಮಾಜಿ ಪತ್ನಿಯರು ಈಗ ಪ್ರಸ್ತುತ ಏನು ಮಾಡುತ್ತಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

ಆಮಿರ್ ಖಾನ್ ಅವರ ಪ್ರೇಮ ಜೀವನವು ಯಾವುದೇ ಸಿನಿಮಾದ ಕಥಾಹಂದರಕ್ಕಿಂತ ಕಮ್ಮಿಯಿಲ್ಲ. ಅವರು ಕೇವಲ 21ನೇ ವಯಸ್ಸಿನಲ್ಲಿ ರೀನಾ ದತ್ತಾ ಅವರನ್ನು ಮೊದಲ ಬಾರಿಗೆ ವಿವಾಹವಾದರು, ಆದರೆ ನಂತರದ ದಿನಗಳಲ್ಲಿ ವಿಚ್ಛೇದನ ಪಡೆದರು. ಅದಾದ ಬಳಿಕ, ತಮ್ಮ 40ನೇ ವಯಸ್ಸಿನಲ್ಲಿ ಕಿರಣ್ ರಾವ್ ಅವರನ್ನು ಕೈಹಿಡಿದರು. ವಿಚ್ಛೇದನದ ನಂತರವೂ ಆಮಿರ್ ಖಾನ್ ತಮ್ಮ ಇಬ್ಬರೂ ಮಾಜಿ ಪತ್ನಿಯರೊಂದಿಗೆ ಉತ್ತಮ ಸ್ನೇಹ ಸಂಬಂಧವನ್ನು ಕಾಯ್ದುಕೊಂಡಿದ್ದಾರೆ. ಆದರೆ, ಇವರ ಮೊದಲ ಮತ್ತು ಎರಡನೇ ವಿವಾಹ ಜೀವನಗಳು ಮುರಿದು ಬೀಳಲು ಅಸಲಿ ಕಾರಣವೇನೆಂದು ಕೆಲವೇ ಜನರಿಗೆ ತಿಳಿದಿದೆ.

ಇದನ್ನೂ ಓದಿ: ಆಮಿರ್ ಖಾನ್ 3ನೇ ಮದುವೆಗೆ ದಿನಾಂಕ ನಿಗದಿ; ಜುಲೈ 5ರಂದು ಗೌರಿ ಜೊತೆ ವಿವಾಹ?

ಆಮಿರ್ ಖಾನ್ ಅವರ ಮೊದಲ ಮದುವೆ:

ನಟ ಆಮಿರ್ ಖಾನ್ ಮೊದಲು ರೀನಾ ದತ್ತಾ ಅವರನ್ನು 1986 ರಲ್ಲಿ ವಿವಾಹವಾದರು. ಆ ಸಮಯದಲ್ಲಿ ಇವರಿಬ್ಬರೂ ನೆರೆಹೊರೆಯವರಾಗಿದ್ದು, ಕ್ರಮೇಣ ಪ್ರೀತಿಯಲ್ಲಿ ಬಿದ್ದಿದ್ದರು. ಆಮಿರ್ ಮತ್ತು ರೀನಾ ತಮ್ಮ ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ಬಹಳ ಚಿಕ್ಕ ವಯಸ್ಸಿನಲ್ಲಿಯೇ (ಆಮಿರ್ 21 ವರ್ಷ ಮತ್ತು ರೀನಾ 19 ವರ್ಷ) ಮದುವೆಯಾಗಿದ್ದರು. ರೀನಾ ಮತ್ತು ಆಮಿರ್ ದಂಪತಿಗೆ ಜುನೈದ್ ಮತ್ತು ಐರಾ ಎಂಬ ಇಬ್ಬರು ಮಕ್ಕಳಿದ್ದಾರೆ. ಇವರ ವೈವಾಹಿಕ ಜೀವನವು ಹೆಚ್ಚು ಕಾಲ ಉಳಿಯಲಿಲ್ಲ. ಮದುವೆಯಾದ 16 ವರ್ಷಗಳ ನಂತರ, ಅಂದರೆ 2002 ರಲ್ಲಿ ಇಬ್ಬರೂ ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನ ಪಡೆದರು. ಆ ಸಮಯದಲ್ಲಿ ತಾವು ಸಂಪೂರ್ಣವಾಗಿ ಚಲನಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಕುಟುಂಬಕ್ಕೆ ಸರಿಯಾಗಿ ಸಮಯ ನೀಡಲು ಸಾಧ್ಯವಾಗಲಿಲ್ಲ ಎಂದು ಆಮಿರ್ ಖಾನ್ ಅವರೇ ಸ್ವತಃ ಒಪ್ಪಿಕೊಂಡಿದ್ದರು. ಇದೇ ಕಾರಣಕ್ಕಾಗಿ, 16 ವರ್ಷಗಳ ದಾಂಪತ್ಯದ ನಂತರ ಆಮಿರ್ ಮತ್ತು ರೀನಾ ಪರಸ್ಪರ ಒಪ್ಪಿಗೆಯೊಂದಿಗೆ ಬೇರೆಯಾಗಲು ನಿರ್ಧರಿಸಿದರು.

ರೀನಾ ದತ್ತಾ ಈಗ ಏನು ಮಾಡುತ್ತಿದ್ದಾರೆ?

ರೀನಾ ದತ್ತಾ ಅವರು ಸದ್ಯ ಚಿತ್ರರಂಗದ ಜನಮನ ಹಾಗೂ ಗ್ಲಾಮರ್ ಪ್ರಪಂಚದಿಂದ ದೂರವಿದ್ದಾರೆ. ಆದಾಗ್ಯೂ, ಅವರು ಸಾಮಾಜಿಕ ಕೆಲಸಗಳಲ್ಲಿ ಸಕ್ರಿಯರಾಗಿದ್ದಾರೆ. ಇದರೊಂದಿಗೆ ಅವರು ತಮ್ಮ ಕುಟುಂಬದವರ ಜೊತೆ ಸಮಯ ಕಳೆಯುವುದನ್ನು ಹೆಚ್ಚು ಇಷ್ಟಪಡುತ್ತಾರೆ. ಪ್ರಸ್ತುತ ಮುಂಬೈನಲ್ಲಿರುವ ತಮ್ಮ ಮನೆಯಲ್ಲಿ ವಾಸಿಸುತ್ತಿರುವ ರೀನಾ, ಮಗಳು ಐರಾ ಖಾನ್ ಅವರ ಕುಟುಂಬದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ.

ಆಮಿರ್ ಖಾನ್ ಎರಡನೇ ಮದುವೆ

ರೀನಾ ಅವರಿಂದ ವಿಚ್ಛೇದನ ಪಡೆದ ಮೂರು ವರ್ಷಗಳ ನಂತರ, ಅಂದರೆ 2005 ರಲ್ಲಿ ಆಮಿರ್ ಖಾನ್ ಕಿರಣ್ ರಾವ್ ಅವರನ್ನು ಎರಡನೇ ಬಾರಿಗೆ ವಿವಾಹವಾದರು. ಕಿರಣ್ ಅವರು ಆಮಿರ್ ಖಾನ್ ಅವರಿಗಿಂತ 10 ವರ್ಷ ಚಿಕ್ಕವರಾಗಿದ್ದಾರೆ. ಇವರಿಬ್ಬರ ಪ್ರೇಮಕಥೆ ‘ಲಗಾನ್’ ಸಿನಿಮಾದ ಚಿತ್ರೀಕರಣದ ನಂತರ ಪ್ರಾರಂಭವಾಗಿತ್ತು. ಅವರ ಸ್ನೇಹ ಕ್ರಮೇಣ ಪ್ರೀತಿಗೆ ತಿರುಗಿ, ಮದುವೆಗೆ ಮುಂಚೆಯೇ ಇಬ್ಬರೂ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದರು. ಅದಾದ ನಂತರ, 2011 ರಲ್ಲಿ ಇವರಿಗೆ ಆಜಾದ್ ಎಂಬ ಮಗ ಜನಿಸಿದನು. ಆದಾಗ್ಯೂ, ಈ ಸಂಬಂಧವೂ ಹೆಚ್ಚು ಕಾಲ ಉಳಿಯಲಿಲ್ಲ. ಆಮಿರ್ ಮತ್ತು ಕಿರಣ್ ರಾವ್ 2021 ರಲ್ಲಿ ಪರಸ್ಪರ ಒಪ್ಪಿಗೆಯ ಮೇರೆಗೆ ಬೇರ್ಪಟ್ಟರು.

ಕಿರಣ್ ರಾವ್ ಈಗ ಏನು ಮಾಡುತ್ತಿದ್ದಾರೆ?

ಕಿರಣ್ ರಾವ್ ಅವರು ಚಿತ್ರರಂಗದ ಪ್ರಸಿದ್ಧ ಚಲನಚಿತ್ರ ನಿರ್ಮಾಪಕಿ ಮತ್ತು ನಿರ್ದೇಶಕಿಯಾಗಿದ್ದಾರೆ. ಅವರು ಪ್ರಸ್ತುತ ಮುಂಬೈನಲ್ಲಿ ವಾಸಿಸುತ್ತಿದ್ದು, ಆಮಿರ್ ಖಾನ್ ಅವರ ಸಿನಿಮಾ ನಿರ್ಮಾಣ ಸಂಸ್ಥೆಯ ವಿವಿಧ ಸಿನಿಮಾಗಳಿಗೆ ಸಹಾಯ ಮಾಡುತ್ತಾರೆ. ವಿಚ್ಛೇದನದ ಬಳಿಕವೂ ಇಬ್ಬರೂ ಒಟ್ಟಾಗಿ ತಮ್ಮ ಮಗ ಆಜಾದ್‌ನ ಜವಾಬ್ದಾರಿಯನ್ನು ಸಹ-ಪೋಷಕರಾಗಿನಿಭಾಯಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Indian Breakfast in Tokyo: ಭಾರತಕ್ಕೆ ಬಂದು ದೋಸೆ ರುಚಿಗೆ ಫಿದಾ; ಟೋಕಿಯೊದಲ್ಲಿ ಇಡ್ಲಿ-ದೋಸೆ ಹೋಟೆಲ್ ಆರಂಭಿಸಿದ ಜಪಾನಿ ದಂಪತಿ – Kannada News

ಇಡ್ಲಿ-ದೋಸೆ ಹೋಟೆಲ್ ಆರಂಭಿಸಿದ ಜಪಾನಿ ದಂಪತಿImage Credit source: instagram/sonammidhax

ಭಾರತೀಯ ಆಹಾರದ ಖ್ಯಾತಿ ವಿಶ್ವದಾದ್ಯಂತ ಹರಡುತ್ತಿದೆ. ಅದರಲ್ಲೂ ದಕ್ಷಿಣ ಭಾರತದ ತಿಂಡಿಗಳಿಗೆ ವಿದೇಶಗಳಲ್ಲಿ ವಿಶೇಷ ಬೇಡಿಕೆ ಹೆಚ್ಚುತ್ತಿದೆ. ಇದೀಗ ಜಪಾನ್‌ನ ಟೋಕಿಯೊ ನಗರದಲ್ಲಿರುವ ಒಂದು ವಿಶಿಷ್ಟ ಉಪಹಾರ ಮಂದಿರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಪ್ರವಾಸಿ ವ್ಲಾಗರ್ ಸೋನಂ ಮಿಧಾ ಅವರು ಟೋಕಿಯೊದಲ್ಲಿರುವ “Kerala no Kaze no Morning” ಎಂಬ ಕೇರಳ ಶೈಲಿಯ ಉಪಹಾರ ಮಂದಿರಕ್ಕೆ ಭೇಟಿ ನೀಡಿದ್ದರು. ಅಲ್ಲಿ ಕಂಡ ಕಥೆ ಅನೇಕರ ಮನ ಗೆದ್ದಿದೆ.

40 ವರ್ಷಗಳ ಹಿಂದಿನ ಭಾರತದ ನೆನಪು:

ಈ ರೆಸ್ಟೋರೆಂಟ್‌ನ್ನು ನಡೆಸುತ್ತಿರುವುದು ನಿವೃತ್ತ ಜಪಾನಿ ದಂಪತಿ. ವಿಶೇಷವೆಂದರೆ, ಸುಮಾರು ನಾಲ್ಕು ದಶಕಗಳ ಹಿಂದೆ ಈ ದಂಪತಿ ಕೇರಳದಲ್ಲಿ ಎರಡು ವರ್ಷಗಳ ಕಾಲ ವಾಸಿಸಿದ್ದರು. ಆ ಅವಧಿಯಲ್ಲಿ ಭಾರತೀಯ, ವಿಶೇಷವಾಗಿ ಕೇರಳದ ಆಹಾರದ ರುಚಿಗೆ ಅವರು ಮನಸೋತಿದ್ದರು. ನಿವೃತ್ತಿಯ ನಂತರ ತಮ್ಮ ಆ ಪ್ರೀತಿಯನ್ನು ಜಪಾನ್‌ನ ಜನರೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ಈ ಉಪಹಾರ ಮಂದಿರವನ್ನು ಆರಂಭಿಸಿದ್ದಾರೆ.

ದೋಸೆ, ಇಡ್ಲಿ, ವಡೆ ಸೇರಿದಂತೆ ಹಲವು ಖಾದ್ಯಗಳು:

ಈ ರೆಸ್ಟೋರೆಂಟ್‌ನಲ್ಲಿ ದೋಸೆ, ಇಡ್ಲಿ, ವಡೆ, ಉತ್ತಪ್ಪ, ಉಪ್ಪಿಟ್ಟು ಹಾಗೂ ಚಹಾ ಸೇರಿದಂತೆ ದಕ್ಷಿಣ ಭಾರತದ ಜನಪ್ರಿಯ ಉಪಹಾರಗಳನ್ನು ತಯಾರಿಸಿ ಗ್ರಾಹಕರಿಗೆ ನೀಡಲಾಗುತ್ತಿದೆ. ಕೇರಳದ ಸಾಂಪ್ರದಾಯಿಕ ರುಚಿಯನ್ನು ಸಾಧ್ಯವಾದಷ್ಟು ಉಳಿಸಿಕೊಳ್ಳಲು ದಂಪತಿ ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: ಕಾರ್ಪೊರೇಟ್ ಕೆಲಸಕ್ಕೆ ಬೇಸತ್ತು ಕುರಿ ಕಾಯುವ ಕೆಲಸಕ್ಕೆ ಮುಗಿಬಿದ್ದ ಯುವಕರು! ಒಂದು ಜಾಹೀರಾತು, 700ಕ್ಕೂ ಹೆಚ್ಚು ಅರ್ಜಿ!

“ನಾನು ಪ್ರತಿದಿನ ಈ ಆಹಾರ ತಿನ್ನಲು ರೆಸ್ಟೋರೆಂಟ್ ತೆರೆದಿದ್ದೇನೆ”

ರೆಸ್ಟೋರೆಂಟ್ ಆರಂಭಿಸಿದ ಕಾರಣವನ್ನು ವಿವರಿಸಿದ ಮಾಲೀಕರು, “ನಾನು ಪ್ರತಿದಿನ ಈ ಆಹಾರವನ್ನು ಸವಿಯಲು ಸಾಧ್ಯವಾಗಲಿ ಎಂಬ ಕಾರಣಕ್ಕೆ ಈ ರೆಸ್ಟೋರೆಂಟ್ ಆರಂಭಿಸಿದೆ. ಜೊತೆಗೆ ಜಪಾನ್‌ನ ಜನರಿಗೆ ಈ ವಿಶೇಷ ಆಹಾರ ಸಂಸ್ಕೃತಿಯನ್ನು ಪರಿಚಯಿಸಬೇಕೆಂದು ಬಯಸಿದೆ” ಎಂದು ಹೇಳಿದ್ದಾರೆ. ಅವರು ಹಿಂದೆ ಮದ್ಯಾಹ್ನ, ರಾತ್ರಿ ಊಟವನ್ನೂ ನೀಡುತ್ತಿದ್ದರು. ಆದರೆ ವಯಸ್ಸಾದ ಕಾರಣ ಈಗ ಉಪಹಾರಗಳ ಸೇವೆಗೆ ಮಾತ್ರ ಸೀಮಿತವಾಗಿದ್ದಾರೆ ಎಂದು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ:

ವ್ಲಾಗರ್ ಹಂಚಿಕೊಂಡ ವಿಡಿಯೋ ವೈರಲ್ ಆದ ಬಳಿಕ ನೆಟ್ಟಿಗರು ದಂಪತಿಯ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಕೆಲವರು ಈ ರೆಸ್ಟೋರೆಂಟ್‌ಗೆ ಭೇಟಿ ನೀಡಿದ ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಅಲ್ಲಿನ ಆಹಾರದ ರುಚಿ ಹಾಗೂ ದಂಪತಿಯ ಆತಿಥ್ಯವನ್ನು ಮೆಚ್ಚಿಕೊಂಡಿದ್ದಾರೆ. ಈ ಕಥೆ ಮತ್ತೊಮ್ಮೆ ಆಹಾರಕ್ಕೆ ಗಡಿ ಇಲ್ಲ ಎಂಬುದನ್ನು ಸಾಬೀತುಪಡಿಸಿದೆ. ನಾಲ್ಕು ದಶಕಗಳ ಹಿಂದೆ ಭಾರತದಲ್ಲಿ ಬೆಳೆದ ಒಂದು ಪ್ರೀತಿ ಇಂದು ಜಪಾನ್‌ನಲ್ಲಿ ಸಾವಿರಾರು ಮಂದಿಗೆ ಭಾರತೀಯ ಆಹಾರದ ಸುವಾಸನೆಯನ್ನು ಪರಿಚಯಿಸುತ್ತಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಾಸ್ಟೆಲ್‌ನಲ್ಲಿ ಕಳಪೆ ಗುಣಮಟ್ಟದ ಆಹಾರ ವಿತರಣೆ: ಕೊಳೆತ ತರಕಾರಿ ಸಮೇತ ಶಾಸಕರ ಮನೆಗೆ ಬಂದು ವಿದ್ಯಾರ್ಥಿಗಳಿಂದ ದೂರು – Kannada News

ಶಾಸಕರ ಮನೆಗೆ ಕೊಳೆತ ತರಕಾರಿ ಹಿಡಿದುಬಂದ ವಿದ್ಯಾರ್ಥಿಗಳುImage Credit source: Tv9 Kannada

ಬೀದರ್​​, ಜೂನ್​ 04: ಶಿಕ್ಷಣಕ್ಕಾಗಿ ಪ್ರತಿ ವರ್ಷ ಕೋಟ್ಯಾಂತರ ಹಣವನ್ನು ಸರ್ಕಾರ ವೆಚ್ಚ ಮಾಡುತ್ತೆ. ಹೀಗಿದ್ದರೂ ಅವುಗಳು ಮಾತ್ರ ಎಷ್ಟರ ಮಟ್ಟಿಗೆ ವಿದ್ಯಾರ್ಥಿಗಳನ್ನು ತಲುಪುತ್ತೆ ಎಂಬುದನ್ನು ಮಾತ್ರ ಆ ಭಗವಂತನೇ ಬಲ್ಲ. ಮಳೆ ಬಂದರೆ ಸೋರುವ ಶಾಲಾ ಕಟ್ಟಡಗಳು, ಸುಣ್ಣ-ಬಣ್ಣವಿಲ್ಲದ ಗೋಡೆಗಳು ಹೀಗೆ ಕೆಲ ಶಾಲೆ-ಕಾಲೇಜುಗಳ ದುಃಸ್ಥಿತಿ ಹೇಳತೀರದು. ಹಾಸ್ಟೆಲ್​​ಗಳ ಅವ್ಯವಸ್ಥೆಯೂ ಇದಕ್ಕೆ ಹೊರತಾಗಿಲ್ಲ. ಈ ನಡುವೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಹಾಸ್ಟೆಲ್​​ನಲ್ಲಿ ವಿದ್ಯಾರ್ಥಿಗಳಿಗೆ ತೀರಾ ಕಳಪೆ ಮಟ್ಟದ ಆಹಾರ ಒದಗಿಸುತ್ತಿರುವ ಘಟನೆ ಬೀದರ್​​ನಲ್ಲಿ ನಡೆದಿದೆ. ಅಷ್ಟಕ್ಕೂ ಯಾವುದೋ ಅಧಿಕಾರಿಗಳು ಪರಿಶೀಲನೆಗೆ ಬಂದಾಗ ಈ ವಿಚಾರ ಬಯಲಾಗಿದ್ದಲ್ಲ. ಬದಲಾಗಿ ಆಹಾರ, ಕೊಳೆತ ತರಕಾರಿಗಳನ್ನು ಹಿಡಿದು ವಿದ್ಯಾರ್ಥಿಗಳೇ ಶಾಸಕರ ಮನೆ ಬಾಗಿಲು ತಟ್ಟಿದ್ದಾರೆ.

ವಾರ್ಡನ್​​ ಮತ್ತು ಅಧಿಕಾರಿಗಳ ಮೇಲೆ ಶಾಸಕರು ಗರಂ

ವಿದ್ಯಾರ್ಥಿಗಳು ತಂದಿದ್ದ ಕಳಪೆ ಗುಣಮಟ್ಟದ ಆಹಾರ ಮತ್ತು ತರಕಾರಿಗಳನ್ನು ಕಂಡು ಗರಂ ಆದ ಬಸವಕಲ್ಯಾಣ ಶಾಸಕ ಶಾಸಕ ಶರಣು ಸಲಗರ್, ದೂರವಾಣಿ ಕರೆ ಮಾಡಿ ವಾರ್ಡನ್​​ ಮತ್ತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ‌ ಮಕ್ಕಳಿಗೂ ಇದೇ ರೀತಿ ಊಟ ಕೋಡ್ತಿರಾ ಎಂದು ವಾರ್ಡ‌ನ್​​ರನ್ನು ಪ್ರಶ್ನಿಸಿರುವ ಶಾಸಕರು, ಮಕ್ಕಳಿಗೆ ಚೆನ್ನಾಗಿರುವ ಊಟ ಕೊಡಿ ಅಂತಾ ಸರ್ಕಾರ ಹಣ ಕೊಡುತ್ತೆ, ಆದರೆ ನೀವೇನು ಮಾಡುತ್ತಿದ್ದೀರಾ ಎಂದು ತರಾಟೆಗೆ ಪಡೆದಿದ್ದಾರೆ.

ಇದನ್ನೂ ಓದಿ: ಹರಿದ ಬಟ್ಟೆಯ ಗುಡಿಸಲೇ ಇವರ ಅರಮನೆ; ಕತ್ತಲ ಕೂಪದಲ್ಲಿ ಹಕ್ಕಿಪಿಕ್ಕಿ ಸಮುದಾಯ

ಶಾಸಕರ ಮನೆಯಲ್ಲಿಯೇ ಊಟ ಸವಿದ ವಿದ್ಯಾರ್ಥಿಗಳು

ಅಧಿಕಾರಿಗಳಿಗೆ ಖಡಕ್​​ ಎಚ್ಚರಿಕೆ ಬಳಿಕ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ತಮ್ಮ ಮನೆಯಲ್ಲಿಯೇ ಊಟ ನೀಡುವ ಮೂಲಕ ಶಾಸಕರು ಗಮನ ಸೆಳೆದಿದ್ದಾರೆ. ವಿದ್ಯಾರ್ಥಿಗಳೂ ಸಾಲಾಗಿ ಕೂತು ಭೋಜನ ಸವಿದಿದ್ದಾರೆ. ಇನ್ನುಮುಂದೆ ಈ ರೀತಿ ಸಮಸ್ಯೆ ಆಗದಂತೆ ಕ್ರಮ ಕ್ರಮ ಕೈಗೊಳ್ಳುವುದಾಗಿ ಇದೇ ವೇಳೆ ವಿದ್ಯಾರ್ಥಿಗಳಿಗೆ ಶಾಸಕ ಶರಣು ಸಲಗರ್​ ಭರವಸೆ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:15 am, Thu, 4 June 26

Source link

ಆರ್‌ಸಿಬಿಗೆ ಬರ್ತಾರೆ ಪಾಂಡ್ಯ? ದಿನೇಶ್ ಕಾರ್ತಿಕ್ ಜೊತೆಗಿನ ಫೋಟೋದ ಅಸಲಿ ಕಥೆಯೇ ಬೇರೆ – Kannada News

ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ  ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಹಾಗೂ ಬ್ಯಾಟಿಂಗ್ ಕೋಚ್, ಮೆಂಟರ್ ದಿನೇಶ್ ಕಾರ್ತಿಕ್ ಅವರೊಂದಿಗೆ ಮಾತನಾಡುತ್ತಿರುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಆರ್‌ಸಿಬಿ ತಂಡ ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದ ಕೆಲವೇ ದಿನಗಳಲ್ಲಿ ಈ ಫೋಟೋ ಹೊರಬಂದಿರುವುದರಿಂದ, ಹಾರ್ದಿಕ್ ಪಾಂಡ್ಯ ಮುಂದಿನ ಸೀಸನ್‌ಗೆ ಬೆಂಗಳೂರು ತಂಡ ಸೇರಲಿದ್ದಾರಾ ಎಂಬ ದೊಡ್ಡ ಮಟ್ಟದ ಚರ್ಚೆ ಮತ್ತು ವದಂತಿಗಳು ಕ್ರಿಕೆಟ್ ವಲಯದಲ್ಲಿ ಶುರುವಾಗಿವೆ.

ಹಾರ್ದಿಕ್ ಪಾಂಡ್ಯ ಮುಂಬೈನಲ್ಲಿ ಕಳಪೆ ಪ್ರದರ್ಶನ ನೀಡಿದ್ದು, ಕ್ಯಾಪ್ಟನ್ ಆಗಿಯೂ ವಿಫಲರಾಗಿದ್ದಾರೆ. ಅವರು ಮುಂಬೈ ತಂಡ ತೊರೆಯುತ್ತಾರೆ ಎನ್ನಲಾಗಿದೆ. ಹೀಗಿರುವಾಗಲೇ ಈ ಫೋಟೋ ವೈರಲ್ ಆಗಿದೆ. ಆದರೆ, ಈ ಭೇಟಿಗೂ, ಐಪಿಎಲ್ ಟ್ರೇಡಿಂಗ್​ಗೆ ಯಾವುದೇ ಸಂಬಂಧವಿಲ್ಲ ಎನ್ನಲಾಗಿದೆ. ಈ ಫೋಟೋದ ಬಗ್ಗೆ ಎರಡು ಪ್ರಮುಖ ಅನುಮಾನಗಳು ವ್ಯಕ್ತವಾಗಿವೆ.

ಇದು AI ಫೋಟೋ?

ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಳಕೆದಾರರು ಈ ಫೋಟೋದಲ್ಲಿರುವ ಹಲವಾರು ತಪ್ಪುಗಳನ್ನು ಎತ್ತಿ ತೋರಿಸಿದ್ದಾರೆ. ಇದು ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಲಾದ ನಕಲಿ ಫೋಟೋ ಇರಬಹುದು ಎಂದು ಶಂಕಿಸಲಾಗಿದೆ. ಫೋಟೋದಲ್ಲಿ ಹಾರ್ದಿಕ್ ಪಾಂಡ್ಯ ಅವರ ಹೇರ್‌ಸ್ಟೈಲ್ ಇತ್ತೀಚಿನ ಐಪಿಎಲ್ ಪಂದ್ಯಗಳಲ್ಲಿದ್ದ ಶೈಲಿಗಿಂತ ಸಂಪೂರ್ಣ ಭಿನ್ನವಾಗಿದೆ. ಇದರ ಜೊತೆಗೆ, ಈ ಫೋಟೋ ವೈರಲ್ ಆದ ದಿನವೇ ಹಾರ್ದಿಕ್ ಪಾಂಡ್ಯ ಅವರ ಗರ್ಲ್‌ಫ್ರೆಂಡ್ ಮಹಿಹಿಕಾ ಶರ್ಮಾ ಅವರು ಫ್ರಾನ್ಸ್ ಪ್ರವಾಸದ ಫೋಟೋಗಳನ್ನು ಹಂಚಿಕೊಂಡಿದ್ದರು. ಮೇ 24 ರಂದೇ ಹಾರ್ದಿಕ್ ಮುಂಬೈ ಬಿಟ್ಟು ಹೊರಟಿದ್ದರಿಂದ, ಅವರು ಆರ್‌ಸಿಬಿ ಕೋಚ್‌ಗಳನ್ನು ಭೇಟಿಯಾಗಿರುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ.

ಇದು ಹಳೆಯ ಫೋಟೋ ಇರಬಹುದು!

ಈ ವೈರಲ್ ಫೋಟೋ ಕುರಿತು ಮತ್ತೊಂದು ಆಸಕ್ತಿದಾಯಕ ಆ್ಯಂಗಲ್ ಕೂಡ ಕೇಳಿಬರುತ್ತಿದೆ. ಫೋಟೋದಲ್ಲಿ ಆರ್‌ಸಿಬಿ ಹೆಡ್ ಕೋಚ್ ಆ್ಯಂಡಿ ಫ್ಲವರ್ ಅವರ ತಲೆಯಲ್ಲಿ ದಟ್ಟವಾದ ಕೂದಲು ಕಾಣಿಸುತ್ತಿದೆ. ಆದರೆ, ಪ್ರಸ್ತುತ ಆ್ಯಂಡಿ ಫ್ಲವರ್ ಅವರ ತಲೆಯಲ್ಲಿ ಕೂದಲು ತೀರಾ ಕಡಿಮೆ ಇದೆ. ಈ ಪ್ರಮುಖ ವ್ಯತ್ಯಾಸವನ್ನು ಗಮನಿಸಿರುವ ಕ್ರಿಕೆಟ್ ಪ್ರೇಮಿಗಳು, ಇದು ಈಗಿನ ಫೋಟೋ ಅಲ್ಲವೇ ಅಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಕಪ್ ಗೆದ್ದ ಖುಷಿಯಲ್ಲಿದ್ದ ರಜತ್​​ಗೆ ಹೊಸ ಲೀಗ್​​ನ ಮೊದಲ ಪಂದ್ಯದಲ್ಲೇ ಹೀನಾಯ ಸೋಲಿನಾಘಾತ

ಮುಂಬೈ ಇಂಡಿಯನ್ಸ್‌ನಿಂದ ಹೊರನಡೆಯಲಿರುವ ಹಾರ್ದಿಕ್?

ಫೋಟೋ ವದಂತಿ ಏನೇ ಇರಲಿ, ಮುಂಬೈ ಇಂಡಿಯನ್ಸ್ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದ ದಿನಗಳು ಮುಗಿಯುತ್ತಾ ಬಂದಿರುವುದು ಮಾತ್ರ ನಿಜ ಎನ್ನಲಾಗುತ್ತಿದೆ. ಈ ಸೀಸನ್‌ನಲ್ಲಿ ಮುಂಬೈ ಪ್ಲೇಆಫ್ ತಲುಪಲು ವಿಫಲವಾಗಿತ್ತು. ಡ್ರೆಸ್ಸಿಂಗ್ ರೂಮ್‌ನಲ್ಲಿ ಹಿರಿಯ ಆಟಗಾರರ ಬೆಂಬಲ ಸಿಗದ ಕಾರಣ, ಸೀಸನ್‌ನ ಮಧ್ಯದಲ್ಲೇ ಹಾರ್ದಿಕ್ ತಾವು ಮುಂಬೈ ಫ್ರಾಂಚೈಸಿಯಿಂದ ಹೊರನಡೆಯುವ ನಿರ್ಧಾರವನ್ನು ಮ್ಯಾನೇಜ್‌ಮೆಂಟ್‌ಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಹೆಚ್ಚಿನ ಕ್ರೀಡಾ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೂನ್ 10 ಕ್ಕೆ ಪ್ರಧಾನಿ ಮೋದಿ ಹೆಸರಿಗೆ ಹೊಸ ದಾಖಲೆ, ನೆಹರು ಅಧಿಕಾರಾವಧಿ ಹಿಂದಿಕ್ಕಲಿರುವ ನವ ಭಾರತದ ಸಾರಥಿ – Kannada News

ನವದೆಹಲಿ, ಜೂನ್ 04: ಭಾರತದ ರಾಜಕೀಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಮಹತ್ತರ ಮೈಲಿಗಲ್ಲೊಂದು ಜೂನ್ 10ರಂದು ನಿರ್ಮಾಣವಾಗಲಿದೆ. ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಭಾರತದಲ್ಲಿ ಅತ್ಯಂತ ದೀರ್ಘಾವಧಿ ಅಧಿಕಾರ ನಡೆಸಿದ ಪ್ರಧಾನಿ ಎಂಬ ಅಭೂತಪೂರ್ವ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. 1951-52 ರ ದೇಶದ ಮೊದಲ ಸಾರ್ವತ್ರಿಕ ಚುನಾವಣೆಗೂ ಮುನ್ನ ಇದ್ದ ಮಧ್ಯಂತರ ಅವಧಿಯನ್ನು ಹೊರತುಪಡಿಸಿ, ಕೇವಲ ಚುನಾಯಿತ ಸರ್ಕಾರದ ದಿನಗಳನ್ನು ಲೆಕ್ಕ ಹಾಕಿದಾಗ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ದಿಗಜ, ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಸುದೀರ್ಘ ದಾಖಲೆಯನ್ನು ಮುರಿಯಲಿದ್ದಾರೆ.

ದಾಖಲೆಯ ದಿನಗಳ ಲೆಕ್ಕಾಚಾರ ಹೀಗಿದೆ
2014 ರ ಮೇ 26 ರಂದು ದೇಶದ ಪ್ರಧಾನಿಯಾಗಿ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರು, 2026 ರ ಜೂನ್ 10ರ ವೇಳೆಗೆ ಸತತವಾಗಿ 4,399 ದಿನಗಳ ಕಾಲ ಅಧಿಕಾರ ಪೂರೈಸಿದಂತಾಗುತ್ತದೆ.

ಜವಾಹರಲಾಲ್ ನೆಹರು ಅವರು ದೇಶದ ಮೊದಲ ಸಾರ್ವತ್ರಿಕ ಚುನಾವಣೆಯ ನಂತರ ಅಂದರೆ, 1952 ರ ಮೇ 13 ರಿಂದ 1964 ರ ಮೇ 27ರಂದು ನಿಧನರಾಗುವವರೆಗೂ ಚುನಾಯಿತ ಪ್ರಧಾನಿಯಾಗಿ ಒಟ್ಟು 4,398ದಿನಗಳ ಕಾಲ ಸೇವೆ ಸಲ್ಲಿಸಿದ್ದರು.

ಇಂದಿರಾ ಗಾಂಧಿ ಅವರ ಅವಧಿ: ಇದೇ ಪಟ್ಟಿಯಲ್ಲಿ ನೆಹರೂ ಅವರ ಪುತ್ರಿ ಇಂದಿರಾ ಗಾಂಧಿ ಅವರು4077 ದಿನಗಳ ಕಾಲ (1966 ರಿಂದ 1977ರವರೆಗೆ) ಸತತ ಅಧಿಕಾರ ನಡೆಸಿ ಮೂರನೇ ಸ್ಥಾನದಲ್ಲಿದ್ದಾರೆ.

ಜವಾಹರಲಾಲ್ ನೆಹರು ಮತ್ತು ನರೇಂದ್ರ ಮೋದಿ ಇಬ್ಬರೂ ತಮ್ಮದೇ ಆದ ಶೈಲಿಯಲ್ಲಿ ಭಾರತೀಯ ರಾಜಕಾರಣದ ದಿಕ್ಕನ್ನು ಬದಲಿಸಿದ ಧೀಮಂತ ನಾಯಕರಾಗಿದ್ದಾರೆ. ನೆಹರೂ ಅವರು ಸ್ವಾತಂತ್ರ್ಯೋತ್ತರ ಭಾರತದಲ್ಲಿ ‘ಜಾತ್ಯತೀತ ಒಮ್ಮತ’ದ ಆಧಾರದ ಮೇಲೆ ದಶಕಗಳ ಕಾಲ ದೇಶವನ್ನು ಮುನ್ನಡೆಸಿದರೆ, ಪ್ರಧಾನಿ ಮೋದಿ ಅವರು ಸಾಂಸ್ಕೃತಿಕ ರಾಷ್ಟ್ರೀಯತೆ ಮತ್ತು ತೇಜಸ್ವಿ ಅಭಿವೃದ್ಧಿಯ ಹೊಸ ಮಿಶ್ರಣದ ಮೂಲಕ ಭಾರತದ ರಾಜಕೀಯ ವ್ಯಾಕರಣವನ್ನೇ ಪುನಃ ಬರೆದಿದ್ದಾರೆ.

ಮತ್ತಷ್ಟು ಓದಿ: ಪ್ರಧಾನಿ ನರೇಂದ್ರ ಮೋದಿ ನೆದರ್‌ಲ್ಯಾಂಡ್ಸ್ ಭೇಟಿಯಿಂದ ಭಾರತಕ್ಕೆ ಏನೆಲ್ಲ ಲಾಭ? ಇಲ್ಲಿದೆ ಮಾಹಿತಿ

ತೀವ್ರ ಪೈಪೋಟಿಯ ಇಂದಿನ ರಾಜಕೀಯ ವಾತಾವರಣದಲ್ಲೂ ಸತತ ಮೂರು ಬಾರಿ ಭಾರಿ ಜನಾದೇಶದೊಂದಿಗೆ ಗೆದ್ದು ಬಂದಿರುವುದು ಮೋದಿ ಅವರ ನಾಯಕತ್ವದ ಶಕ್ತಿಯನ್ನು ತೋರಿಸುತ್ತದೆ.

ಐತಿಹಾಸಿಕ ಸುಧಾರಣೆಗಳು ಮತ್ತು ದೃಢ ನಿರ್ಧಾರಗಳ ಕಾಲ
ಪ್ರಧಾನಿ ನರೇಂದ್ರ ಮೋದಿ ಅವರ ಈ ಸುದೀರ್ಘ ಅಧಿಕಾರಾವಧಿಯು ಭಾರತದ ಸಾರ್ವಭೌಮತೆ ಮತ್ತು ಆಡಳಿತಾತ್ಮಕ ಸುಧಾರಣೆಗಳಿಗೆ ಹೊಸ ಭಾಷ್ಯ ಬರೆದಿದೆ. ಸ್ವಾತಂತ್ರ್ಯದ ನಂತರ ದಶಕಗಳ ಕಾಲ ನೆನೆಗುದಿಗೆ ಬಿದ್ದಿದ್ದ ಅನೇಕ ಐತಿಹಾಸಿಕ ನಿರ್ಧಾರಗಳು ಇವರ ಅವಧಿಯಲ್ಲಿ ಯಶಸ್ವಿಯಾಗಿ ಕಾರ್ಯರೂಪಕ್ಕೆ ಬಂದಿವೆ.

370 ನೇ ವಿಧಿ ರದ್ದು: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ, ಅದನ್ನು ಭಾರತದ ಮುಖ್ಯವಾಹಿನಿಯೊಂದಿಗೆ ಸಂಪೂರ್ಣವಾಗಿ ಬೆಸೆದಿರುವುದು ತಂತ್ರಜ್ಞಾನ ಮತ್ತು ಭದ್ರತೆಯ ದೃಷ್ಟಿಯಿಂದ ದೇಶಕ್ಕೆ ಸಿಕ್ಕ ಬಹುದೊಡ್ಡ ಯಶಸ್ಸಾಗಿದೆ.

ಸಾಮಾಜಿಕ ಸುಧಾರಣೆ (ತ್ರಿವಳಿ ತಲಾಖ್ ರದ್ದು): ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ‘ತ್ರಿವಳಿ ತಲಾಖ್’ ಪದ್ಧತಿಯನ್ನು ರದ್ದುಗೊಳಿಸಿ ಸಾಮಾಜಿಕ ನ್ಯಾಯ ಎತ್ತಿಹಿಡಿಯಲಾಗಿದೆ.

ಭವ್ಯ ರಾಮ ಮಂದಿರ ನಿರ್ಮಾಣ: ಶತಮಾನಗಳ ಕಾಲದ ವಿವಾದಕ್ಕೆ ಸುಪ್ರೀಂ ಕೋರ್ಟ್ ಮೂಲಕ ಸೌಹಾರ್ದಯುತ ತೆರೆ ಎಳೆದು, ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರವನ್ನು ನಿರ್ಮಿಸಿರುವುದು ನವ ಭಾರತದ ಸಾಂಸ್ಕೃತಿಕ ಹೆಮ್ಮೆಯ ಸಂಕೇತವಾಗಿದೆ.

ಕಾಂಗ್ರೆಸ್ ಯುಗದ ನೈಸರ್ಗಿಕ ಆಡಳಿತ ಚೌಕಟ್ಟಿನಿಂದ ಹೊರಬಂದು, ಪ್ರಾದೇಶಿಕ ಮುಖ್ಯಮಂತ್ರಿಯಾಗಿ (ಗುಜರಾತ್) ಮೂರು ಬಾರಿ ಗೆದ್ದು, ನಂತರ ರಾಷ್ಟ್ರ ರಾಜಕಾರಣದಲ್ಲೂ ಸತತ ಮೂರನೇ ಬಾರಿಗೆ ಎನ್‌ಡಿಎ (NDA) ಸರ್ಕಾರವನ್ನು ಮುನ್ನಡೆಸುತ್ತಿರುವ ಪ್ರಧಾನಿ ಮೋದಿ ಅವರ ಈ ಸಾಧನೆ ಇಡೀ ವಿಶ್ವವೇ ಭಾರತದ ಪ್ರಜಾಪ್ರಭುತ್ವದ ಸ್ಥಿರತೆಯನ್ನು ಹೆಮ್ಮೆಯಿಂದ ನೋಡುವಂತೆ ಮಾಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 11:01 am, Thu, 4 June 26

Source link

Wind Chimes Vastu: ಮನೆಯಲ್ಲಿ ಈ ವಸ್ತು ನೇತುಹಾಕುವ ಮುನ್ನ ವಾಸ್ತು ನಿಯಮ ತಿಳಿದಿರಲಿ; ಇಲ್ಲದಿದ್ದರೆ ಕಷ್ಟ ತಪ್ಪಿದ್ದಲ್ಲ – Kannada News

ವಿಂಡ್ ಚೈಮ್‌ ವಾಸ್ತು
Image Credit source: Pinterest

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಮ್ಮ ಮನೆ ಸುಂದರಗೊಳಿಸಲು ಮತ್ತು ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಲು ವಿಂಡ್ ಚೈಮ್‌ ಖರೀದಿಸಿ ತರುತ್ತಾರೆ. ಗಾಳಿಯಲ್ಲಿ ತೂಗಾಡುವ ವಿಂಡ್ ಚೈಮ್‌ಗಳಿಂದ ಮೂಡುವ ಮಧುರ ನಾದವು ಮನಸ್ಸಿಗೆ ನೆಮ್ಮದಿ ನೀಡುವುದರ ಜೊತೆಗೆ, ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆ ಇದೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಕೇವಲ ವಿಂಡ್ ಚೈಮ್ ಹಾಕಿದರೆ ಸಾಕಾಗುವುದಿಲ್ಲ. ಅದರ ವಿಧ, ರಾಡ್‌ಗಳ ಸಂಖ್ಯೆ ಹಾಗೂ ಅದನ್ನು ಇಡುವ ದಿಕ್ಕು ಕೂಡ ಬಹಳ ಮುಖ್ಯವಾಗಿರುತ್ತದೆ.

ವಿಂಡ್ ಚೈಮ್‌ನಲ್ಲಿ ಎಷ್ಟು ರಾಡ್‌ಗಳಿರಬೇಕು?

ವಿಂಡ್ ಚೈಮ್ ಖರೀದಿಸುವಾಗ ಅದರಲ್ಲಿರುವ ರಾಡ್‌ಗಳ ಸಂಖ್ಯೆಗೆ ಗಮನ ನೀಡಬೇಕು. ವಾಸ್ತು ಪ್ರಕಾರ, ಪ್ರತಿಯೊಂದು ಸಂಖ್ಯೆಯೂ ತನ್ನದೇ ಆದ ಮಹತ್ವವನ್ನು ಹೊಂದಿದೆ. ಐದು ರಾಡ್‌ಗಳನ್ನು ಹೊಂದಿರುವ ವಿಂಡ್ ಚೈಮ್‌ಗಳು ವಿಶೇಷವಾಗಿ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇವು ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಿ, ಸಕಾರಾತ್ಮಕತೆ ಮತ್ತು ಶಾಂತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ ಎಂಬ ನಂಬಿಕೆ ಇದೆ.

ಯಾವ ದಿಕ್ಕಿನಲ್ಲಿ ವಿಂಡ್ ಚೈಮ್ ಇಡಬೇಕು?

ವಾಸ್ತು ಶಾಸ್ತ್ರದ ಪ್ರಕಾರ, ಬಿದಿರು ಅಥವಾ ಮರದಿಂದ ತಯಾರಿಸಿದ ವಿಂಡ್ ಚೈಮ್‌ಗಳನ್ನು ಮನೆಯ ಪೂರ್ವ, ಆಗ್ನೇಯ ಅಥವಾ ದಕ್ಷಿಣ ದಿಕ್ಕಿನಲ್ಲಿ ಅಳವಡಿಸುವುದು ಶುಭಕರವೆಂದು ಹೇಳಲಾಗುತ್ತದೆ. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚುವುದರ ಜೊತೆಗೆ, ಕುಟುಂಬ ಸದಸ್ಯರ ನಡುವೆ ಪ್ರೀತಿ, ಸಾಮರಸ್ಯ ಮತ್ತು ಉತ್ತಮ ಬಾಂಧವ್ಯ ವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ. ಜೊತೆಗೆ, ಕುಟುಂಬದ ಸದಸ್ಯರು ತಮ್ಮ ಕೆಲಸಗಳಲ್ಲಿ ಯಶಸ್ಸು ಸಾಧಿಸಲು ಸಹ ಇದು ಸಹಕಾರಿಯಾಗುತ್ತದೆ ಎಂದು ಹೇಳಲಾಗುತ್ತದೆ.

ಈ ಸ್ಥಳಗಳಲ್ಲಿ ವಿಂಡ್ ಚೈಮ್ ಇಡಬೇಡಿ:

ವಾಸ್ತು ಪ್ರಕಾರ, ಜನರು ನೇರವಾಗಿ ಕುಳಿತುಕೊಳ್ಳುವ ಅಥವಾ ಮಲಗುವ ಸ್ಥಳದ ಮೇಲ್ಭಾಗದಲ್ಲಿ ವಿಂಡ್ ಚೈಮ್‌ಗಳನ್ನು ಅಳವಡಿಸುವುದನ್ನು ತಪ್ಪಿಸಬೇಕು. ಹಾಸಿಗೆ ಅಥವಾ ಸೋಫಾದ ಮೇಲ್ಭಾಗದಲ್ಲಿ ಇಡುವುದು ಸೂಕ್ತವಲ್ಲ ಎಂದು ಪರಿಗಣಿಸಲಾಗುತ್ತದೆ. ಬದಲಾಗಿ, ಉತ್ತಮ ಗಾಳಿಯ ಹರಿವು ಇರುವ ಮುಖ್ಯ ಬಾಗಿಲು ಅಥವಾ ಕಿಟಕಿಯ ಬಳಿ ವಿಂಡ್ ಚೈಮ್‌ಗಳನ್ನು ಇಡುವುದು ಹೆಚ್ಚು ಮಂಗಳಕರವೆಂದು ಹೇಳಲಾಗುತ್ತದೆ. ಇದರಿಂದ ಅದರ ಮಧುರ ನಾದವು ಮನೆಯಾದ್ಯಂತ ಹರಡಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಅಡುಗೆಮನೆ ಮತ್ತು ಶೌಚಾಲಯದ ಬಳಿ ಯಾಕೆ ಇಡಬಾರದು?

ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆ ಅಥವಾ ಶೌಚಾಲಯದ ಸಮೀಪ ವಿಂಡ್ ಚೈಮ್‌ಗಳನ್ನು ಅಳವಡಿಸುವುದು ಸೂಕ್ತವಲ್ಲ. ಇಂತಹ ಸ್ಥಳಗಳಲ್ಲಿ ವಿಂಡ್ ಚೈಮ್‌ಗಳನ್ನು ಇಡುವುದರಿಂದ ಅದರ ಶುಭ ಪರಿಣಾಮಗಳು ಕಡಿಮೆಯಾಗಬಹುದು ಎಂದು ಹೇಳಲಾಗುತ್ತದೆ.

ಹೊಸ ವಿಂಡ್ ಚೈಮ್ ಮನೆಗೆ ತಂದಾಗ ಏನು ಮಾಡಬೇಕು?

ಸಾಂಪ್ರದಾಯಿಕ ನಂಬಿಕೆಯ ಪ್ರಕಾರ, ಹೊಸ ವಿಂಡ್ ಚೈಮ್‌ನ್ನು ಮನೆಗೆ ತಂದ ಬಳಿಕ ಗಂಗಾಜಲ ಅಥವಾ ಶುದ್ಧ ನೀರಿನಿಂದ ಸ್ವಚ್ಛಗೊಳಿಸಿ, ಮನೆಯ ಶುಭ ಮೂಲೆಯಲ್ಲಿ ಅಳವಡಿಸುವುದು ಉತ್ತಮ ಎಂದು ಪರಿಗಣಿಸಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಸ್ತೆಯೋ ಅಥವಾ ಸಾವಿನ ರನ್-ವೇಯೋ?: ಬೆಂಗಳೂರಿಗರ ಜೀವ ಹಿಂಡುತ್ತಿರುವ ಗುಂಡಿಗಳು; GBA ನಿದ್ರೆಗೆ ಜಾರಿದೆಯೇ?

ಬೆಂಗಳೂರು, ಜೂ.4: “ರಾಜ್ಯದಲ್ಲಿ ಮುಖ್ಯಮಂತ್ರಿಗಳು ಬದಲಾಗಬಹುದು, ಸರ್ಕಾರಗಳು ಬದಲಾಗಬಹುದು. ಆದರೆ ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗಳ ಹಣೆಬರಹ ಮಾತ್ರ ಎಂದಿಗೂ ಬದಲಾಗುವುದಿಲ್ಲ. ಇದು ಪ್ರಸ್ತುತ ಬೆಂಗಳೂರಿನ ರಸ್ತೆಗಳಲ್ಲಿ ನಿತ್ಯ ನರಕಯಾತನೆ ಅನುಭವಿಸುತ್ತಿರುವ ಸಾರ್ವಜನಿಕರ ತೀವ್ರ ಆಕ್ರೋಶದ ನುಡಿಗಳು. ನಿತ್ಯ ಸಾವಿರಾರು ವಾಹನ ಸವಾರರು, ಉದ್ಯೋಗಿಗಳು ಮತ್ತು ನಾಗರಿಕರು ಸಂಚರಿಸುವ ಪ್ರಮುಖ ರಸ್ತೆಗಳ ಪರಿಸ್ಥಿತಿ ಇಂದು ನಗರದ ರಸ್ತೆಯಂತೆ ಕಾಣುತ್ತಿಲ್ಲ, ಬದಲಿಗೆ ಅದೊಂದು ಸಾಹಸಮಯ ‘ಆಫ್-ರೋಡ್ ಟ್ರ್ಯಾಕ್’ (Off-road track) ನಂತೆ ಮಾರ್ಪಟ್ಟಿದೆ. ಈ ಬಗ್ಗೆ ವಿಡಿಯೋವೊಂದನ್ನು ಕರ್ನಾಟಕ ಪೋರ್ಟ್ಫೋಲಿಯೋ (Karnataka Portfolio) ಎಂಬ ಎಕ್ಸ್​​​​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ನಗರದ ಪ್ರಮುಖ ರಸ್ತೆಗಳ ಸಂಪೂರ್ಣ ಭಾಗವು ದೈತ್ಯ ಹೊಂಡಗಳು (Craters), ಕಿತ್ತುಹೋದ ಡಾಂಬರು ಮತ್ತು ಜಲ್ಲಿಕಲ್ಲುಗಳಿಂದ ತುಂಬಿಹೋಗಿದೆ. ಇಲ್ಲಿ ವಾಹನ ಚಾಲನೆ ಮಾಡುವುದು ಕೇವಲ ಅಸಮಾಧಾನ ತರುವುದಲ್ಲ, ಬದಲಿಗೆ ದ್ವಿಚಕ್ರ ವಾಹನ ಸವಾರರು, ಸೈಕಲ್ ಸವಾರರು ಹಾಗೂ ಪಾದಚಾರಿಗಳ ಜೀವಕ್ಕೆ ನೇರ ಕುತ್ತು ತರುತ್ತಿದೆ. ಅದರಲ್ಲೂ ವಿಶೇಷವಾಗಿ ಮಳೆ ಬಂದಾಗ ಈ ರಸ್ತೆ ಗುಂಡಿಗಳು ನೀರಿನಿಂದ ಆವೃತವಾಗಿ ಮಾರಣಾಂತಿಕ ಕಂದಕಗಳಾಗಿ ಬದಲಾಗುತ್ತಿವೆ. ಇದರಿಂದಾಗಿ ನಿತ್ಯ ಅಪಘಾತಗಳು ಸಂಭವಿಸುತ್ತಿದ್ದು, ವಾಹನಗಳು ಜಖಂಗೊಳ್ಳುತ್ತಿವೆ.

ಇಲ್ಲಿದೆ ನೋಡಿ ವಿಡಿಯೋ:

ನಾವು ಪ್ರಾಮಾಣಿಕವಾಗಿ ಆದಾಯ ತೆರಿಗೆ, ರಸ್ತೆ ತೆರಿಗೆ , ಇಂಧನ ತೆರಿಗೆ ಸೇರಿದಂತೆ ಹತ್ತಾರು ರೀತಿಯ ಸೆಸ್‌ಗಳನ್ನು ಸರ್ಕಾರಕ್ಕೆ ಪಾವತಿಸುತ್ತಿದ್ದಾರೆ. ಕನಿಷ್ಠ ಪಕ್ಷ ಸುರಕ್ಷಿತವಾದ ಮೂಲಸೌಕರ್ಯ ಮತ್ತು ರಸ್ತೆಗಳನ್ನು ಪಡೆಯುವ ನಿರೀಕ್ಷೆಯಿಂದ ಜನ ತೆರಿಗೆ ಕಟ್ಟುತ್ತಾರೆ. ಆದರೆ, ರಸ್ತೆಗಳ ಈ ನರಕಸದೃಶ ಸ್ಥಿತಿಯನ್ನು ನೋಡಿದರೆ, “ನಾವು ಕಟ್ಟುವ ತೆರಿಗೆ ಹಣವೆಲ್ಲಾ ಎಲ್ಲಿಗೆ ಹೋಗುತ್ತಿದೆ?” ಎಂಬ ಯಕ್ಷಪ್ರಶ್ನೆ ಪ್ರತಿಯೊಬ್ಬ ನಾಗರಿಕನಲ್ಲೂ ಮೂಡುತ್ತಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

ಇದನ್ನೂ ಓದಿ: ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್​​ಗೆ ಡಿಕ್ಕಿ: ತಪ್ಪಿದ ಭಾರಿ ಅನಾಹುತ

ಬೆಂಗಳೂರಿನಂತಹ ಅಂತರರಾಷ್ಟ್ರೀಯ ಮಟ್ಟದ ನಗರಕ್ಕೆ ಇಂತಹ ದುಃಸ್ಥಿತಿ ಖಂಡಿತಾ ಶೋಭಿಸುವುದಿಲ್ಲ. ಸುರಕ್ಷಿತ ಹಾಗೂ ಸುಸಜ್ಜಿತ ರಸ್ತೆಗಳು ನಾಗರಿಕರಿಗೆ ನೀಡುವ ಐಷಾರಾಮಿ ಸೌಲಭ್ಯವಲ್ಲ, ಅದು ಪ್ರತಿಯೊಬ್ಬ ತೆರಿಗೆದಾರನ ಕನಿಷ್ಠ ಮೂಲಭೂತ ಹಕ್ಕು ಎಂಬುದನ್ನು ಬಿಬಿಎಂಪಿ (BBMP) ಮತ್ತು ಸರ್ಕಾರ ಅರಿತುಕೊಳ್ಳಬೇಕಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version