ತುಮಕೂರು: ಸಾರ್ವಜನಿಕರಿಗೆ ಬಿತ್ತು ತೆರಿಗೆ ಬರೆ; ಪಾಲಿಕೆಯ ಹೊಸ ನೀತಿಗೆ ಜನ ಕಂಗಾಲು

ತುಮಕೂರು: ಸಾರ್ವಜನಿಕರಿಗೆ ಬಿತ್ತು ತೆರಿಗೆ ಬರೆ; ಪಾಲಿಕೆಯ ಹೊಸ ನೀತಿಗೆ ಜನ ಕಂಗಾಲು

ತುಮಕೂರು, ಏಪ್ರಿಲ್​ 06: ಸದ್ಯ ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ಹೊಡೆತ ಎಲ್ಲೆಡೆ ತಟ್ಟಿದೆ. ಅನಿಲ ಅಭಾವದಿಂದ ಜನ ತತ್ತರಿಸಿದ್ದಾರೆ. ಅತ್ತ ಅಡುಗೆ ಅನಿಲ ಕೊರತೆ ಉಂಟಾದರೆ, ಇತ್ತ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ. ಇದರ ಮಧ್ಯೆ ಮುಂದೇನಾಗುತ್ತೋ ಎಂಬ ಆತಂಕದಲ್ಲಿರುವ ತುಮಕೂರು (tumakuru) ನಗರದ ಜನರಿಗೆ ಪಾಲಿಕೆ ಈಗ ಶಾಕ್ ಕೊಟ್ಟಿದೆ. ತುಮಕೂರು ಮಹಾನಗರ ಪಾಲಿಕೆ ತೆರಿಗೆ ದರವನ್ನು (tax hike) ದಿಢೀರ್ ಏರಿಕೆ ಮಾಡಿದೆ. ಯುಜಿಡಿ, ನೀರಿನ ತೆರಿಗೆ ಸೇರಿದಂತೆ ಹಲವು ಶುಲ್ಕಗಳಲ್ಲಿ ಭಾರೀ ಏರಿಕೆಯಾಗಿದ್ದು, ಜನ ಕಂಗಾಲಾಗಿದ್ದಾರೆ.

ಮಹಾನಗರ ಪಾಲಿಕೆಯಿಂದ ದಿಢೀರ್ ತೆರಿಗೆ ದರ ಹೆಚ್ಚಳ

ತುಮಕೂರು ನಗರದ ಜನರಿಗೆ ಪಾಲಿಕೆಯಿಂದ ತೆರಿಗೆ ಶಾಕ್ ಎದುರಾಗಿದೆ. ಕಳೆದ 10 ವರ್ಷಗಳಿಂದ ಏರಿಕೆಯಾಗದ ಯುಜಿಡಿ ಮತ್ತು ನೀರಿನ ತೆರಿಗೆ ದರವನ್ನು ಮಹಾನಗರ ಪಾಲಿಕೆ ಈ ವರ್ಷ ದಿಢೀರ್ ಹೆಚ್ಚಳ ಮಾಡಿದೆ. ಈ ಮೂಲಕ 2026-27ನೇ ಸಾಲಿನ ಆಸ್ತಿ ತೆರಿಗೆಯ ಮೇಲೂ ಶೇಕಡ 5ರಷ್ಟು ಹೆಚ್ಚಳ ಮಾಡಲಾಗಿದ್ದು, ಏಪ್ರಿಲ್ 1ರಿಂದಲೇ ಹೊಸ ದರ ಜಾರಿಯಾಗಿದೆ. ಆದರೆ ಜನರಿಗೆ ತುಮಕೂರು ಮಹಾನಗರ ಪಾಲಿಕೆಯ ಈ ಲೆಕ್ಕಾಚಾರವೇ ಕಂಗಾಲಾಗಿಸಿದೆ.

ಇದನ್ನೂ ಓದಿ: ಹೊಸ ಚರ್ಚೆ ಹುಟ್ಟುಹಾಕಿದ KPS ಮ್ಯಾಗ್ನೆಟ್ ಶಾಲೆ ಯೋಜನೆ: ಆರಂಭಕ್ಕೂ ಮುನ್ನವೇ ಅಪಸ್ವರ ಏಕೆ?

ಯುಜಿಡಿ ತೆರಿಗೆ 480 ರೂ ಇಂದ ನೇರವಾಗಿ 1,440 ರೂ.ಗೆ ಏರಿಕೆಯಾಗಿದೆ. ಇದೇ ರೀತಿ ನೀರಿನ ತೆರಿಗೆ 2,400 ರೂ, ಇಂದ 3,600 ರೂ. ಗೆ ಹೆಚ್ಚಳ ಕಂಡಿದೆ. ಖಾತಾ ವರ್ಗಾವಣೆ ಶುಲ್ಕವೂ 100 ರೂಪಾಯಿಯಿಂದ 200 ರೂಪಾಯಿಗೆ ಡಬಲ್ ಆಗಿದೆ. ದಿಢೀರ್ ಏರಿಕೆಯ ಈ ನಿರ್ಧಾರಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಒಂದು ಕಡೆ ಹಣ ಕೊಡುತ್ತೇವೆ ಅಂತ ಹೇಳಿ ಗ್ಯಾರಂಟಿ ಯೋಜನೆ ಅಂತ ಎರಡು ಸಾವಿರ ರೂ ಕೊಟ್ಟು, ಇನ್ನೊಂದು ಕಡೆ ತೆರಿಗೆ ರೂಪದಲ್ಲಿ ನಮ್ಮಿಂದಲೇ ಹಣ ವಾಪಸ್ ಪಡೆಯುತ್ತಿದ್ದಾರೆ. ಪಾಶ್ಚಿಮಾತ್ಯದ ಯುದ್ಧ ಪರಿಸ್ಥಿತಿ, ಬೆಲೆ ಏರಿಕೆ ಸಮಸ್ಯೆಗಳ ನಡುವೆ ಈ ತೆರಿಗೆ ಹೆಚ್ಚಳ ಸರಿಯಲ್ಲ ಎಂದು ಚಾಂದ್ ಪಾಷ ಎನ್ನುವವರು  ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಾಲಿಕೆ ಆಯುಕರು ಹೇಳುವುದೇನು?

ಮಹಾನಗರ ಪಾಲಿಕೆ ಆಯುಕ್ತೆ ಶುಭ ಅವರು ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. 10 ವರ್ಷಗಳಿಂದ ಏರಿಕೆಯಾಗದ ಯುಜಿಡಿ ಮತ್ತು ನೀರಿನ ತೆರಿಗೆ ದರವನ್ನು ಸರ್ಕಾರದ ನಿಯಮದಂತೆ ಈ ವರ್ಷ ಹೆಚ್ಚಿಸಲಾಗಿದೆ ಎಂದಿದ್ದಾರೆ. ಜೊತೆಗೆ, ಪ್ರತಿ ವರ್ಷದಂತೆ ಶೇಕಡ 5ರಷ್ಟು ಆಸ್ತಿ ತೆರಿಗೆ ಏರಿಕೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಏಪ್ರಿಲ್ ತಿಂಗಳಲ್ಲೇ ತೆರಿಗೆ ಪಾವತಿಸಿದರೆ ಶೇಕಡ 5ರಷ್ಟು ರಿಯಾಯಿತಿ ನೀಡಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಅರಣ್ಯ ಇಲಾಖೆ ಹೆಸರಲ್ಲಿ ನಕಲಿ ತರಬೇತಿ ಕೇಂದ್ರ: ಖದೀಮರ ಸೆಟ್​​ ಅಪ್​​ ಕಂಡು ಅಧಿಕಾರಿಗಳೇ ಕಂಗಾಲು

ಒಟ್ಟಾರೆ, ತೆರಿಗೆ ಏರಿಕೆಗೆ ಕಾರಣ ಕೊಟ್ಟ ಪಾಲಿಕೆ ಕಡ್ಡಾಯ ಪಾವತಿಗೆ ಸೂಚಿಸಿದ್ದು, ಏಪ್ರಿಲ್​ ವಿನಾಯಿತಿಯ ಲೆಕ್ಕಾಚಾರ ನೀಡಿದೆ. ಆದರೆ ತೆರಿಗೆ ಹೆಚ್ಚಳದ ಬಳಿಕ ಕೊಟ್ಟ ಈ ಆಫರ್ ಜನರಿಗೆ ನುಂಗಲಾರದ ತುತ್ತಾಗಿದ್ದು, ಪಾಲಿಕೆಯ ಚಿಂತನೆಗೆ ಜನ, ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಈ ದೇವಸ್ಥಾನದಲ್ಲಿ ಪ್ರಸಾದವಾಗಿ ನೂಡಲ್ಸ್, ಪಿಜ್ಜಾ ಕೊಡ್ತಾರೆ!

ಕೊಲ್ಕತ್ತಾ, ಏಪ್ರಿಲ್ 6: ಭಾರತೀಯ ಭಕ್ತಿ, ಚೀನಾದ ಸಂಪ್ರದಾಯದ ಸಂಗಮವಾಗಿರುವ ಕೊಲ್ಕತ್ತಾದ ‘ಚೀನಾ ಕಾಳಿ ದೇವಸ್ಥಾನ’ದಲ್ಲಿ ಪಿಜ್ಜಾ ಮತ್ತು ನೂಡಲ್ಸ್​ ಅನ್ನೇ ಪ್ರಸಾದವಾಗಿ ನೀಡಲಾಗುತ್ತದೆ. ಹಲವು ದಶಕಗಳ ಹಿಂದೆ ಚೀನಾದಿಂದ ಇಲ್ಲಿ ನೆಲೆಸಿ ಬಂಗಾಳಿ ಸಂಸ್ಕೃತಿಯನ್ನು ಸ್ವೀಕರಿಸಿದವರು ಈ ದೇವಾಲಯವನ್ನು (Kali Temple) ನಿರ್ಮಿಸಿದರು. ಈ ಮಂದಿರ ವೈವಿಧ್ಯತೆಯಲ್ಲಿ ಏಕತೆಗೆ ಸಾಕ್ಷಿಯಾಗಿದೆ. ನೂಡಲ್ಸ್ ಮತ್ತು ಸೂಪ್ ಅನ್ನು ನೈವೇದ್ಯವಾಗಿ ನೀಡುವ ಈ ವಿಚಿತ್ರ ಪದ್ಧತಿಯ ಹಿಂದಿನ ವಿಷಯಗಳ ಕುರಿತಾದ ಮಾಹಿತಿ ಇಲ್ಲಿದೆ.

ಸಾಮಾನ್ಯವಾಗಿ ನಾವು ದೇವಸ್ಥಾನಗಳಿಗೆ ಹೋದಾಗ ನಮಗೆ ಲಡ್ಡು, ಪುಳಿಯೋಗರೆ, ಪೋಹಾ ಅಥವಾ ಹಣ್ಣುಗಳನ್ನು ಪ್ರಸಾದವಾಗಿ ನೀಡಲಾಗುತ್ತದೆ. ಆದರೆ ಈ ಒಂದು ದೇವಸ್ಥಾನದಲ್ಲಿ, ನೂಡಲ್ಸ್, ಮೊಮೊಸ್, ಪಾಸ್ತಾ ಮತ್ತು ಪಿಜ್ಜಾವನ್ನು ದೇವಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಇದು ವಿಚಿತ್ರವೆನಿಸಬಹುದು ಆದರೆ ಇದು ಅಕ್ಷರಶಃ ನಿಜ. ಕೊಲ್ಕತ್ತಾದ ಚೈನಾಟೌನ್ ಎಂದು ಕರೆಯಲ್ಪಡುವ ಟ್ಯಾಂಗ್ರಾ ಪ್ರದೇಶದಲ್ಲಿ ನೆಲೆಗೊಂಡಿರುವ ಚೈನಾ ಕಾಳಿ ದೇವಸ್ಥಾನದ ವಿಶೇಷತೆಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.

ಇದನ್ನೂ ಓದಿ: Global Shiva Temples: ಭಾರತದ ಹೊರಗೂ ಮೊಳಗುತ್ತಿದೆ ಹರಹರ ಮಹಾದೇವ ಘೋಷ; ಇವು ಜಗತ್ತಿನ ಪ್ರಸಿದ್ಧ 5 ಶಿವ ದೇವಾಲಯಗಳು

ಈ ದೇವಾಲಯವು ಕೆಲವು ದಶಕಗಳ ಇತಿಹಾಸವನ್ನು ಹೊಂದಿದೆ. ಈ ದೇವಾಲಯವನ್ನು ಕೋಲ್ಕತ್ತಾದ ಟ್ಯಾಂಗ್ರಾ ಪ್ರದೇಶದಲ್ಲಿ ನೆಲೆಸಿದ ಚೀನೀ ಸಮುದಾಯದ ಸದಸ್ಯರು ನಿರ್ಮಿಸಿದ್ದಾರೆ. ಅವರು ಚರ್ಮದ ಉದ್ಯಮದಲ್ಲಿ ಕೆಲಸ ಮಾಡುತ್ತಾ ಇಲ್ಲಿ ನೆಲೆಸಿದರು. ಬಳಿಕ ಸ್ಥಳೀಯ ಬಂಗಾಳಿ ಸಂಸ್ಕೃತಿಯನ್ನು ಅಳವಡಿಸಿಕೊಂಡರು. ಕಾಳಿ ದೇವಿಯ ಬಗ್ಗೆ ಅಪಾರ ಭಕ್ತಿಯನ್ನು ಬೆಳೆಸಿಕೊಂಡರು. ಅವರು ತಮ್ಮ ಸಂಪ್ರದಾಯಗಳು ಮತ್ತು ಸ್ಥಳೀಯ ಭಕ್ತಿಯನ್ನು ಸೇರಿಸುವ ಮೂಲಕ ಈ ವಿಶಿಷ್ಟ ದೇವಾಲಯವನ್ನು ವಿನ್ಯಾಸಗೊಳಿಸಿದರು. ಹೀಗಾಗಿಯೇ ಈ ಮಂದಿರದಲ್ಲಿ ಭಕ್ತರು ತಮ್ಮ ನೆಚ್ಚಿನ ಚೌಮೀನ್, ಮೊಮೊಸ್, ನೂಡಲ್ಸ್, ಸೂಪ್ ಮತ್ತು ಪಿಜ್ಜಾಗಳನ್ನು ದೇವಿಗೆ ನೈವೇದ್ಯವಾಗಿ ಅರ್ಪಿಸುತ್ತಾರೆ. ಪೂಜೆಯ ನಂತರ ಅದೇ ಪದಾರ್ಥಗಳನ್ನು ಪ್ರಸಾದವಾಗಿ ಭಕ್ತರಿಗೆ ವಿತರಿಸಲಾಗುತ್ತದೆ.

ಇದನ್ನೂ ಓದಿ: ವಿಶ್ವದ ಏಕೈಕ ಸ್ತ್ರೀ ರೂಪದ ಹನುಮಂತನ ದೇವಾಲಯ; ಇಲ್ಲಿನ ವಿಗ್ರಹದ ರಹಸ್ಯವೇನು ಗೊತ್ತೇ?

ಈ ದೇವಾಲಯವು ಕಾಳಿ ಮತ್ತು ಶಿವನ ವಿಗ್ರಹಗಳನ್ನು ಹೊಂದಿದೆ. ಪುರೋಹಿತರು ಮಂತ್ರಗಳನ್ನು ಪಠಿಸಿ, ಆರತಿಗಳನ್ನು ಮಾಡುವ ಮೂಲಕ ಧೂಪ ಮತ್ತು ದೀಪಗಳನ್ನು ಅರ್ಪಿಸುತ್ತಾರೆ. ಭಕ್ತಿಯು ಧಾರ್ಮಿಕ ಮತ್ತು ರಾಷ್ಟ್ರೀಯ ಗಡಿಗಳನ್ನು ಹೇಗೆ ಮೀರುತ್ತದೆ ಎಂಬುದಕ್ಕೆ ಈ ದೇವಾಲಯವು ಜೀವಂತ ಸಾಕ್ಷಿಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಭೂತ್ ಬಂಗ್ಲ’ ಟ್ರೇಲರ್: ಮತ್ತದೇ ಹಳೇ ಕಥೆ ಹೇಳುತ್ತಾರಾ ಅಕ್ಷಯ್ ಕುಮಾರ್?

ಬಾಲಿವುಡ್‌ನ ಯಶಸ್ವಿ ಜೋಡಿಗಳಲ್ಲೊಂದಾದ ನಟ ಅಕ್ಷಯ್ ಕುಮಾರ್ (Akshay Kumar) ಮತ್ತು ನಿರ್ದೇಶಕ ಪ್ರಿಯದರ್ಶನ್ ಅವರು ದೀರ್ಘಕಾಲದ ನಂತರ ಮತ್ತೆ ಒಂದಾಗಿದ್ದಾರೆ. ಅವರಿಬ್ಬರ ಕಾಂಬಿನೇಷನ್​ನಲ್ಲಿ ಬಹುನಿರೀಕ್ಷಿತ ಹಾರರ್ ಕಾಮಿಡಿ ಸಿನಿಮಾ ‘ಭೂತ್ ಬಂಗ್ಲ’ (Bhooth Bangla) ಸಿದ್ಧವಾಗಿದೆ. ಈಗ ಈ ಚಿತ್ರದ ಟ್ರೇಲರ್ (Bhooth Bangla Trailer) ಬಿಡುಗಡೆ ಆಗಿದ್ದು, ಸಿನಿರಸಿಕರಲ್ಲಿ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ. ಏಪ್ರಿಲ್ 16ರಂದು ಈ ಚಿತ್ರ ವಿಶ್ವಾದ್ಯಂತ ತೆರೆಕಾಣಲಿದೆ. ಹಾರರ್ ಕಾಮಿಡಿ ಕಥಾಹಂದರ ಇರುವ ಈ ಸಿನಿಮಾ ಹೇಗಿದೆ ಎಂಬುದರ ಝಲಕ್ ಈ ಟ್ರೇಲರ್​ನಲ್ಲಿ ಕಾಣಿಸಿದೆ.

ಪ್ರಿಯದರ್ಶನ್ ಅವರ ವಿಶಿಷ್ಟ ಶೈಲಿಯ ಹಾಸ್ಯವು ‘ಭೂತ್ ಬಂಗ್ಲ’ ಟ್ರೇಲರ್​ನಲ್ಲಿದೆ. ಹೀರೋಗೆ ಪಿತ್ರಾರ್ಜಿತವಾಗಿ ಒಂದು ಹಳೆಯ ಬಂಗಲೆ ಆಸ್ತಿಯಾಗಿ ಬರುತ್ತದೆ. ಆದರೆ, ಆ ಬಂಗಲೆಯ ಹಿಂದೆ ಒಂದು ಭಯಾನಕ ಅರಣ್ಯವಿರುತ್ತದೆ. ಕಥೆಯ ಮತ್ತೊಂದು ಆಸಕ್ತಿದಾಯಕ ತಿರುವೆಂದರೆ, ಮದುವೆಗಳೇ ನಡೆಯದ ಮಂಗಳಪುರ ಎಂಬ ಗ್ರಾಮದಲ್ಲಿ ಹೀರೋ ಮದುವೆ ನಿಶ್ಚಯವಾಗುತ್ತದೆ. ಅಲ್ಲಿಂದ ಆರಂಭವಾಗುವ ಗೊಂದಲ ಮತ್ತು ಹಾಸ್ಯದ ಸನ್ನಿವೇಶಗಳೇ ಈ ಚಿತ್ರದ ಜೀವಾಳ.

ಈ ಚಿತ್ರದ ದೊಡ್ಡ ಆಕರ್ಷಣೆ ಎಂದರೆ ಅದು ನಟಿ ಟಬು. ಟ್ರೇಲರ್‌ನಲ್ಲಿ ಅವರ ಎಂಟ್ರಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಚಿತ್ರದ ಗಂಭೀರತೆ ಮತ್ತು ನಿಗೂಢತೆಯನ್ನು ಹೆಚ್ಚಿಸುವಲ್ಲಿ ಅವರ ಪಾತ್ರ ಪ್ರಮುಖವಾಗಿರುವಂತೆ ಕಾಣುತ್ತಿದೆ. ಟ್ರೇಲರ್​ನಲ್ಲಿ ಅದ್ದೂರಿ ದೃಶ್ಯಗಳು ಮತ್ತು ಹಾಸ್ಯದ ಸಂಭಾಷಣೆಗಳು ಇದ್ದರೂ ಕೂಡ ಚಿತ್ರದ ಮೂಲ ಕಥೆ ಸ್ವಲ್ಪ ಹಳೆಯ ಶೈಲಿಯದ್ದೇ ಇರಬಹುದು ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿವೆ.

ಭೂತ್ ಬಂಗ್ಲ ಟ್ರೇಲರ್:

ಸದ್ಯ ಬಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ರಣವೀರ್ ಸಿಂಗ್ ಅವರ ‘ಧುರಂಧರ್ 2’ ಸಿನಿಮಾ ಸುನಾಮಿ ಎಬ್ಬಿಸಿದೆ. 1000 ಕೋಟಿಗೂ ರೂಪಾಯಿಗೂ ಅಧಿಕ ಗಳಿಕೆ ಮಾಡಿರುವ ಆ ಚಿತ್ರದ ಪ್ರಭಾವ ಇನ್ನೂ ಕಡಿಮೆಯಾಗಿಲ್ಲ. ಇಂತಹ ಸಂದರ್ಭದಲ್ಲಿ, ಪ್ರೇಕ್ಷಕರು ಹಾರರ್ ಕಾಮಿಡಿ ಶೈಲಿಯ ‘ಭೂತ್ ಬಂಗ್ಲ’ ಚಿತ್ರಕ್ಕೆ ಎಷ್ಟರ ಮಟ್ಟಿಗೆ ಸ್ಪಂದಿಸುತ್ತಾರೆ ಎಂಬುದು ಈಗಿರುವ ದೊಡ್ಡ ಪ್ರಶ್ನೆ.

ಇದನ್ನೂ ಓದಿ: ಸಿನಿಮಾ ಬಿಡುಗಡೆಗೂ ಮುನ್ನ ದೇವರ ಮೊರೆಹೋಗಿ, ‘ಇಡೀ ದೇಶಕ್ಕಾಗಿ ಪ್ರಾರ್ಥಿಸಿದೆ’ ಎಂದ ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್ ಮತ್ತು ಪ್ರಿಯದರ್ಶನ್ ಅವರ ಕಾಂಬಿನೇಷನ್ ಮೇಲೆ ಪ್ರೇಕ್ಷಕರಿಗೆ ನಂಬಿಕೆ ಇದೆ. ಆದರೆ ಬದಲಾದ ಈ ಕಾಲಘಟ್ಟದಲ್ಲಿ ಅವರಿಬ್ಬರು ಮ್ಯಾಜಿಕ್ ಮಾಡುತ್ತಾರಾ ಇಲ್ಲವಾ ಎಂಬ ಅನುಮಾನ ಮೂಡಿದೆ. ನೆಟ್ಟಿಗರ ವಲಯದಲ್ಲಿ ಈ ಟ್ರೇಲರ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಏಪ್ರಿಲ್ 16ರಂದು ಸಿನಿಮಾದ ಅಸಲಿ ಕಹಾನಿ ಏನು ಎಂಬುದು ತಿಳಿಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ತಂದೆ-ಮಗನ ಲಾಕಪ್ ಡೆತ್ ಪ್ರಕರಣ; ತಮಿಳುನಾಡಿನ 9 ಪೊಲೀಸರಿಗೆ ಮರಣದಂಡನೆ

ಚೆನ್ನೈ, ಏಪ್ರಿಲ್ 6: 2020ರಲ್ಲಿ ಕೊರೊನಾ (Covid-19) ಅವಧಿಯಲ್ಲಿ ರಾತ್ರಿಯಿಡೀ ಅಂಗಡಿ ತೆರೆದಿದ್ದರು ಎಂಬ ಕಾರಣಕ್ಕೆ ತಮಿಳುನಾಡಿನ (Tamil Nadu) ತೂತುಕುಡಿ ಜಿಲ್ಲೆಯ ಸಾಥನ್‌ಕುಲಂನಲ್ಲಿ ಅಂಗಡಿ ಮಾಲೀಕ ಜಯರಾಜ್ ಮತ್ತು ಅವರ ಮಗ ಬೆನ್ನಿಕ್ಸ್ ಅವರನ್ನು ಸಾಥನ್‌ಕುಲಂ ಪೊಲೀಸರು ಕ್ರೂರವಾಗಿ ಥಳಿಸಿದ್ದರು. ಕಸ್ಟಡಿಯಲ್ಲಿದ್ದಾಗ ಅವರಿಗೆ ಚಿತ್ರಹಿಂಸೆ ನೀಡಿದ್ದರಿಂದ ಅವರಿಬ್ಬರೂ ಪೊಲೀಸ್ ಠಾಣೆಯಲ್ಲೇ ಮೃತಪಟ್ಟಿದ್ದರು. ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಈ ಪ್ರಕರಣದ ತನಿಖೆಯನ್ನು ಸರ್ಕಾರ ಸಿಬಿಐಗೆ ವಹಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಮಗ್ರ ತನಿಖೆ ನಡೆಸಿ 2,427 ಪುಟಗಳ ಚಾರ್ಜ್‌ಶೀಟ್ ಅನ್ನು ಮಧುರೈ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಅದರ ಆಧಾರದ ಮೇಲೆ ತಂದೆ-ಮಗನ ಲಾಕಪ್ ಡೆತ್ ಪ್ರಕರಣದಲ್ಲಿ ಬಂಧಿತರಾದ ಎಲ್ಲಾ 9 ಪೊಲೀಸರು ತಪ್ಪಿತಸ್ಥರೆಂದು ಕೋರ್ಟ್ ಘೋಷಿಸಿತ್ತು. ಇಂದು ಅವರ ಶಿಕ್ಷೆಯ ಪ್ರಮಾಣ ಪ್ರಕಟವಾಗಿದ್ದು, ಎಲ್ಲ ಆರೋಪಿಗಳಿಗೂ ಗಲ್ಲು ಶಿಕ್ಷೆ ವಿಧಿಸಲಾಗಿದೆ.

ಈ ಘಟನೆ ನಡೆದು 6 ವರ್ಷಗಳ ವಿಚಾರಣೆಯ ನಂತರ ಇಂದು ತೀರ್ಪು ಹೊರಬಿದ್ದಿದೆ. ವ್ಯಾಪಾರಿ ಪಿ. ಜಯರಾಜ್ (59) ಮತ್ತು ಅವರ ಮಗ ಜೆ. ಬೆನ್ನಿಕ್ಸ್ (31) ಅವರ ಸಾವಿನ ಪ್ರಕರಣದಲ್ಲಿ ಕೊಲೆ ಮತ್ತು ಸಂಬಂಧಿತ ಅಪರಾಧಗಳಲ್ಲಿ 9 ಆರೋಪಿಗಳನ್ನು ತಪ್ಪಿತಸ್ಥರೆಂದು ನ್ಯಾಯಾಧೀಶ ಜಿ ಮುತ್ತುಕುಮಾರನ್ ತೀರ್ಪು ನೀಡಿದ್ದಾರೆ. ಕಸ್ಟಡಿಯಲ್ಲಿದ್ದಾಗ ಪೂರ್ವನಿಯೋಜಿತವಾಗಿ ಪ್ಲಾನ್ ಮಾಡಿ ರಾತ್ರಿಯಿಡೀ ಚಿತ್ರಹಿಂಸೆಯನ್ನು ನೀಡಲಾಗಿದೆ ಎಂಬ ಕೇಂದ್ರ ತನಿಖಾ ದಳದ (ಸಿಬಿಐ) ವಾದವನ್ನು ನ್ಯಾಯಾಲಯ ಸ್ವೀಕರಿಸಿದೆ. ಹೀಗಾಗಿ, ಗರಿಷ್ಠ ಶಿಕ್ಷೆಯನ್ನು ವಿಧಿಸಲಾಗಿದೆ.

ಇದನ್ನೂ ಓದಿ: ವಿಜಯ್ ಹಾಡಿಗೆ ಡ್ಯಾನ್ಸ್ ಮಾಡಿದ ತಮಿಳುನಾಡಿನ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕಿ ಅಮಾನತು

ಗಲ್ಲು ಶಿಕ್ಷೆಗೊಳಗಾದವರಲ್ಲಿ ಇನ್ಸ್‌ಪೆಕ್ಟರ್ ಎಸ್. ಶ್ರೀಧರ್, ಸಬ್ ಇನ್ಸ್‌ಪೆಕ್ಟರ್‌ಗಳಾದ ಪಿ. ರಘು ಗಣೇಶ್ ಮತ್ತು ಕೆ. ಬಾಲಕೃಷ್ಣನ್, ಹೆಡ್ ಕಾನ್‌ಸ್ಟೆಬಲ್‌ಗಳಾದ ಎಸ್. ಮುರುಗನ್ ಮತ್ತು ಎ. ಸಮದುರೈ, ಕಾನ್‌ಸ್ಟೆಬಲ್‌ಗಳಾದ ಎಂ. ಮುತ್ತುರಾಜ್, ಎಸ್. ಚೆಲ್ಲಾದುರೈ, ಎಕ್ಸ್. ಥಾಮಸ್ ಫ್ರಾನ್ಸಿಸ್ ಮತ್ತು ಎಸ್. ವೇಲುಮುತ್ತು ಸೇರಿದ್ದಾರೆ. ಹತ್ತನೇ ಆರೋಪಿಯಾದ ವಿಶೇಷ ಸಬ್ ಇನ್ಸ್‌ಪೆಕ್ಟರ್ ಪೌಲ್ದುರೈ, ವಿಚಾರಣೆಯ ಸಮಯದಲ್ಲಿ ಕೊವಿಡ್​​-19ನಿಂದ ನಿಧನರಾಗಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಂಡೀಪುರ ಸಫಾರಿ ವಿರುದ್ಧ ಮತ್ತೆ ಸಿಡಿದೆದ್ದ ರೈತರು: ನಾಳೆಯಿಂದ ಆಮರಣಾಂತ ಧರಣಿ, ಕಾರಣವೇನು?

ಚಾಮರಾಜನಗರ, ಏಪ್ರಿಲ್ 06: ಭಾರಿ ವಿರೋಧದ ನಡುವೆಯೂ ಬಂಡೀಪುರ ಸಫಾರಿಯನ್ನ (Bandipur Safari) ಸರ್ಕಾರ ರೀ ಓಪನ್ ಮಾಡಿತ್ತು. ಇದೀಗ ಸಫಾರಿ ಆರಂಭವಾದ ಬೆನ್ನಲ್ಲೇ ಮತ್ತೆ ಮಾನವ ಮತ್ತು ಕಾಡು ಪ್ರಾಣಿ ಸಂಘರ್ಷ ಹೆಚ್ಚಾಗಿದೆ. ಹೀಗಾಗಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ವಿರುದ್ಧ ಸಿಡಿದೆದ್ದಿರುವ ರೈತರು ಸಫಾರಿ ಬಂದ್​​ಗೆ ಆಗ್ರಹಿಸಿ ನಾಳೆಯಿಂದ ಅಂದರೆ ಏಪ್ರಿಲ್​ 07ರಿಂದ ಆಮರಣಾಂತ ಧರಣಿಗೆ ಸಜ್ಜಾಗಿದ್ದಾರೆ.

ಪ್ರತಿ ತಾಲೂಕಿನಲ್ಲಿ ಧರಣಿ

ಕಳೆದೊಂದು ವರ್ಷದಿಂದ ಮಾನವ ಮತ್ತು ಕಾಡು ಪ್ರಾಣಿ ಸಂಘರ್ಷಕ್ಕೆ ಸುದ್ದಿ ಆಗುತ್ತಿರುವ ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿಂದ ಮತ್ತೆ ಹುಲಿ, ಚಿರತೆ ಹಾಗೂ ಕಾಡಾನೆ ದಾಳಿ ಹೆಚ್ಚಾಗಿದೆ. ಗುಂಡ್ಲುಪೇಟೆ ಭಾಗದಲ್ಲೇ ಅತಿ ಹೆಚ್ಚು ಮಾನವ ಹಾಗೂ ಕಾಡು ಪ್ರಾಣಿ ಸಂಘರ್ಷಕ್ಕೆ ಬಂಡೀಪುರ ಸಫಾರಿ ರೀ ಓಪನ್ ಆಗಿರುವುದೇ ಕಾರಣ ಎಂಬ ಕೂಗು ಇದೀಗ ಹೆಚ್ಚಾಗಿದೆ. ಏಪ್ರಿಲ್​ 07ರಿಂದ ರಾಜ್ಯ ರೈತ ಸಂಘದ ಹೊನ್ನೂರು ಪ್ರಕಾಶ್ ಬಣದಿಂದ ಜಿಲ್ಲಾದ್ಯಂತ ಪ್ರತಿ ತಾಲೂಕಿನಲ್ಲಿ ಆಮರಣಾಂತ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ.

ಇದನ್ನೂ ಓದಿ: ಗಡಿ ಜಿಲ್ಲೆ ಚಾಮರಾಜನಗರದ ರೈತರಿಗೆ ಕಾಡಾನೆ ಕಾಟ: ಬೆಳೆದ ಬೆಳೆ ಕೈಸೇರುವ ಮುನ್ನವೇ ಸರ್ವನಾಶ!

ಭೀಮನ ಬೀಡು ಬರ್ಗಿ ಪಡಗೂರಿನಲ್ಲಿ ಹುಲಿ ಉಪಟಳ ಮಿತಿಮೀರಿದೆ. ಗ್ರಾಮದ ಬಳಿಯ ಜಮೀನುಗಳಲ್ಲಿ ಹುಲಿಗಳು ಆಶ್ರಯ ಪಡೆದುಕೊಳ್ಳುತ್ತಿವೆ. ಹಸು, ಕುರಿ, ಮೇಕೆ ಸೇರಿದಂತೆ ಜಾನುವಾರುಗಳ ಮೇಲೆ ದಾಳಿ ಹೆಚ್ಚುತ್ತಿವೆ. ಮಂಚಹಳ್ಳಿ ಗ್ರಾಮದ ಜಮೀನುಗಳಿಗೆ ಕಾಡಾನೆಗಳು ಲಗ್ಗೆ ಇಡುತ್ತಿವೆ. ಬೆಳೆಗಳನ್ನ ತಿಂದು ತೇಗಿದ್ದು, ಅಲ್ಲದೆ ಶೆಡ್ ಹಾಗೂ ಮೋಟಾರು ಪೈಪ್​ಗಳನ್ನ ತುಳಿದು ನಾಶಪಡಿಸುತ್ತಿವೆ.’

ಸಫಾರಿ ಬಂದ್ ಒಂದೇ ಪರಿಹಾರ

ಈ ಎಲ್ಲಾ ಕಾರಣಗಳಿಗೆ ಶಾಶ್ವತ ಪರಿಹಾರ ಅಂತ ಹೇಳಿದರೆ ಆರಂಭವಾಗಿರುವ ಸಫಾರಿಯನ್ನ ಬಂದ್ ಮಾಡುವುದು. ಜೊತೆಗೆ ಕೇರಳಕ್ಕೆ ಅಕ್ರಮವಾಗಿ ಸಾಗಾಟ ಆಗುತ್ತಿರುವ ಮರಳು ಮತ್ತು ಖನಿಜ ಸಂಪನ್ಮೂಲಗಳನ್ನ ತಡೆ ಹಿಡಿಯಬೇಕೆಂಬ ಆಶಯಗಳೊಂದಿಗೆ ನಾಳೆಯಿಂದ ಹೊನ್ನೂರು ಪ್ರಕಾಶ್ ಬಣ ಪ್ರತಿ ತಾಲೂಕಿನಲ್ಲಿ ಒಂದೊಂದು ದಿನ ಪ್ರತಿಭಟನೆ ನಡೆಸುವುದಕ್ಕೆ ಮುಂದಾಗಿದೆ.

ಇದನ್ನೂ ಓದಿ: ರೆಸಾರ್ಟ್ ಮಾಲೀಕರ ಲಾಬಿಗೆ ಒಳಗಾದ್ರಾ ಬಂಡೀಪುರ ಅರಣ್ಯ ಸಿಬ್ಬಂದಿ? ರೈತರ ವಿರುದ್ದವೇ ದಬ್ಬಾಳಿಕೆ

ಒಟ್ಟಿನಲ್ಲಿ ರೆಸಾರ್ಟ್ ಮಾಲೀಕರು ಕೆಲ ಹಾಲಿ, ಮಾಜಿ ಶಾಸಕರ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ಸಫಾರಿ ಮತ್ತೆ ಪುನರಾರಂಭ ಮಾಡಿದ್ದು, ಇದೀಗ ಮತ್ತೆ ಸರ್ಕಾರ ಸಫಾರಿ ಬಂದ್ ಮಾಡಿ ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತಾ, ಇಲ್ಲವಾ ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಇರಾನ್‌ನಿಂದ ಬಂದಿದ್ದ ದಂಪತಿ ಕೊಡಗಿನಲ್ಲೇ ಲಾಕ್‌: ಅಲ್ಲಿ ಮಕ್ಕಳು, ಇಲ್ಲಿ ಪೋಷಕರು!

ಮಡಿಕೇರಿ, (ಏಪ್ರಿಲ್ 06):  ಯುದ್ಧ ಪರಿಸ್ಥಿತಿಯಿಂದಾಗಿ ದಂಪತಿ ಇರಾನ್‌ಗೆ (Iran) ಮರಳಲಾಗದೆ ಕೊಡಗು (Kodagu) ಜಿಲ್ಲೆಯ ಮೂರ್ನಾಡು ಸಮೀಪದ ಕಾಂತೂರಿನಲ್ಲಿ ಪರಿತಪಿಸುವಂತಾಗಿದೆ. ಕಾಂತೂರು ನಿವಾಸಿ ಪತ್ನಿ ನವೀನಾ ಹಾಗೂ ಇರಾನ್ ಮೂಲದ ಪತಿ ನಾದರ್ ಕೊಡಗಿನಲ್ಲಿಯೇ ಸಿಲುಕಿರುವ ದಂಪತಿ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಹಲವು ದೇಶಗಳ ವಾಯು ಪ್ರದೇಶ ಬಂದ್ ಆಗಿದ್ದು, ವಿಮಾನ ಸಂಚಾರವೂ ಅಸ್ತವ್ಯಸ್ತಗೊಂಡಿದೆ. ಹೀಗಾಗಿ ದಂಪತಿ ಕೊಡಗಿನಲ್ಲಿಯೇ ಉಳಿಯುವಂತಾಗಿದೆ.

ಕೊಡಗು ಮೂಲದ ನವೀನಾ, 30 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಆ ವೇಳೆ ಇರಾನ್‌ನ ನಾದರ್‌ ಅವರೊಂದಿಗೆ ಪರಿಚಯವಾಗಿದ್ದು, ಬಳಿಕ ಪ್ರೀತಿಸಿ ವಿವಾಹವಾದ್ದರು. ನಂತರ ದಂಪತಿ ಇರಾನ್‌ನ ಬೋಜ್‌ನೂರ್‌ ಪ್ರದೇಶದಲ್ಲಿ ನೆಲೆಸಿತ್ತು. ಆದ್ರೆ, ಇದೀಗ ದೀರ್ಘ ರಜೆಗೆಂದು ಇರಾನ್​ ನಿಂದ ತವರುಮನೆ ಕೊಡಗಿಗೆ ಆಗಮಿಸಿದ್ದು, ಇಲ್ಲೇ ಸಿಲುಕಿ ಪರದಾಡುವಂತಾಗಿದೆ.

ಇದನ್ನೂ ನೋಡಿ: ಬಾವಿಗೆ ಬಿದ್ದು 3 ದಿನ ಬಳಿಕ ಬದುಕಿ ಬಂದ ವೃದ್ಧ: ಗ್ಯಾಸ್ ಸಿಲಿಂಡರ್ OTP ವ್ಯಕ್ತಿಯ ಜೀವ ಉಳಿಸಿದ್ಹೇಗೆ ಗೊತ್ತಾ?

ದಂಪತಿಗೆ ಇಬ್ಬರು ಮಕ್ಕಳಿದ್ದು, ಒಬ್ಬರು ಸಿವಿಲ್ ಇಂಜಿನಿಯರ್ ಆಗಿದ್ದು, ಮತ್ತೊಬ್ಬರು ಆರ್ಕಿಟೆಕ್ಟ್ (ವಾಸ್ತುಶಿಲ್ಪಿ) ಆಗಿದ್ದಾರೆ. ಈ ಕುಟುಂಬವು ಇರಾನಿನಲ್ಲಿ ದಾಳಿಂಬೆ, ಗ್ರೇಪ್, ಆಪಲ್, ಬ್ಲೂಬೆರಿ, ಬಾದಾಮಿ, ಏಪ್ರಿಕೋಟ್, ಖರ್ಜೂರ, ಪಿಸ್ತಾ ಸೇರಿದಂತೆ ಹಲವು ವಿದೇಶಿ ಹಣ್ಣುಗಳ ಫಾರ್ಮ್‌ಗಳನ್ನ ಹೊಂದಿದ್ದು, ಜೊತೆಗೆ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದಾರೆ.

ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಕೊಡಗಿಗೆ ಬರುತ್ತಿದ್ದ ದಂಪತಿ, ಮಾರ್ಚ್‌ನಲ್ಲಿ ಮರಳಿ ಇರಾನ್‌ಗೆ ತೆರಳುತ್ತಿದ್ದರು. ಈ ಬಾರಿಯೂ ಡಿಸೆಂಬರ್‌ನಲ್ಲಿ ಕೊಡಗಿಗೆ ಬಂದಿದ್ದು, ಮಾರ್ಚ್ 16 ರಂದು ಬೆಂಗಳೂರಿನಿಂದ ಶಾರ್ಜಾ ಮೂಲಕ ಇರಾನ್‌ನ ಬೋಜ್‌ನೂರ್‌ಗೆ ತೆರಳಲು ವಿಮಾನ ಟಿಕೆಟ್ ಬುಕ್ ಮಾಡಿದ್ದರು. ಆದರೆ ಅಮೆರಿಕ–ಇರಾನ್ ಯುದ್ಧದ ಪರಿಣಾಮವಾಗಿ ವಿಮಾನ ರದ್ದಾಯಿತು. ನಂತರ ಏಪ್ರಿಲ್ 15 ರಂದು ಮತ್ತೊಮ್ಮೆ ಪ್ರಯಾಣ ಬುಕ್ ಮಾಡಿದ್ದರು, ಆ ವಿಮಾನವೂ ರದ್ದಾಗಿದೆ. ಇದರಿಂದ ದಂಪತಿ ಇದೀಗ ಕೊಡಗಿನಲೇ ಉಳಿಯುವಂತಾಗಿದೆ.

ಇನ್ನೂ ನವೀನಾ ಪತಿ ನಾದೀರ್ ಪಾಸ್‌ಪೋರ್ಟ್‌ ಅವಧಿ ಮುಕ್ತಾಯಗೊಳ್ಳುತ್ತದೆ. ಹೀಗಾಗಿ ಅದರೊಳಗೆ ಇವರು ಇರಾನ್ ತೆರಳಬೇಕಿದೆ. ಇವರಿಬ್ಬರ ಇಬ್ಬರು ಮಕ್ಕಳು ಇರಾನ್ ನಲ್ಲೇ ಉಳಿದುಕೊಂಡಿದ್ದು, ಸಂಪರ್ಕ ಸಾಧ್ಯವಾಗುತ್ತಿಲ್ಲ. ಇಂಟರ್ನೆಟ್ ಸ್ಥಗಿತವಾಗಿರುವುದಿರಂದ ಅವರಾಗಿಯೇ ಇವರಿಗೆ ಮೆಸೇಜ್ ಮಾಡುವವರೆಗೂ ಸಂಪರ್ಕ ಸಾಧ್ಯವಾಗುವುದಿಲ್ಲ. ಇನ್ನು ಯುದ್ಧದ ಬಗ್ಗೆ ಪ್ರತಿಕ್ರಿಯೆ ನೀಡಿದ ನಾದೀರ್ ಅಜೀಜಿ, ನನ್ನ ಪ್ರೀತಿಯ ದೇಶ ಮತ್ತು ಜನರ ಬಗ್ಗೆ ಬಹಳ ಚಿಂತೆಯಾಗಿದೆ. ಇಂತಹ ಸಂದರ್ಭದಲ್ಲಿ ನಾವು ಅಲ್ಲಿರಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

Source link

KKR vs PBKS IPL 2026 Live Score: ಟಾಸ್ ಗೆದ್ದ ಕೆಕೆಆರ್ ಬ್ಯಾಟಿಂಗ್ ಆಯ್ಕೆ – Kannada News | Kolkata Knight Riders vs Punjab Kings IPL 2026 Live Cricket Score KKR vs PBKS Match on 6th April latest news in Kannada

ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಐಪಿಎಲ್ 19 ನೇ ಸೀಸನ್​ನ ತನ್ನ ಮೂರನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಿದೆ. ಈ ಎರಡೂ ತಂಡಗಳ ನಡುವಿನ ಈ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯುತ್ತಿದೆ. ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಕೆಕೆಆರ್ ಮೊದಲ ಎರಡು ಪಂದ್ಯಗಳಲ್ಲಿ ಸೋತಿದ್ದರೆ, ಶ್ರೇಯಸ್ ಅಯ್ಯರ್ ಮೊದಲ ಎರಡು ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ಆದ್ದರಿಂದ, ಪಂಜಾಬ್ ಸೋಮವಾರ ಮೈದಾನಕ್ಕಿಳಿದು ಸತತ ಮೂರನೇ ಪಂದ್ಯವನ್ನು ಗೆದ್ದು ಹ್ಯಾಟ್ರಿಕ್ ಗೆಲುವಿನ ಇರಾದೆಯಲ್ಲಿದ್ದರೆ, ಮತ್ತೊಂದೆಡೆ, ಕೆಕೆಆರ್ ಸೋಲಿನ ಹ್ಯಾಟ್ರಿಕ್ ತಪ್ಪಿಸುವ ಸವಾಲನ್ನು ಎದುರಿಸಲಿದೆ.

Source link

ಕೊಲನ್‌ ಕ್ಯಾನ್ಸರ್ ಎಷ್ಟು ಅಪಾಯಕಾರಿ ಗೊತ್ತಾ? ಹೇಗಿರುತ್ತೆ ಇದರ ಲಕ್ಷಣಗಳು? ಡಾ ಅನುರಾಗ್‌ ಶೆಟ್ಟಿ ನೀಡಿರುವ ಮಾಹಿತಿ ಇಲ್ಲಿದೆ

ಕೊಲನ್‌ ಕ್ಯಾನ್ಸರ್ (Colon Cancer) ಅಥವಾ ದೊಡ್ಡ ಕರುಳಿನ ಕ್ಯಾನ್ಸರ್ ಬಗ್ಗೆ ನೀವು ಕೇಳಿರಬಹುದು. ಅತಿ ಹೆಚ್ಚು ಕಾಣಿಸಿಕೊಳ್ಳುವ ಕ್ಯಾನ್ಸರ್ ಗಳಲ್ಲಿ ಇದು ಒಂದಾಗಿದೆ. ಜಾಗತಿಕವಾಗಿ ಕ್ಯಾನ್ಸರ್ (Cancer) ನಿಂದ ಸಂಭವಿಸುವ ಸಾವುಗಳಿಗೆ ಎರಡನೇ ಪ್ರಮುಖ ಕಾರಣವಾಗಿದೆ. ಇದನ್ನು “ಸೈಲೆಂಟ್‌” ಕ್ಯಾನ್ಸರ್ ಎಂದು ಕೂಡ ಕರೆಯಲಾಗುತ್ತದೆ, ಏಕೆಂದರೆ ಇದರ ಆರಂಭಿಕ ಹಂತಗಳಲ್ಲಿ ಯಾವುದೇ ರೀತಿಯ ಲಕ್ಷಣಗಳು ಕೂಡ ಕಂಡುಬರುವುದಿಲ್ಲ. ಆದರೆ ಈ ರೀತಿ ಕಂಡು ಬರುವ ಕ್ಯಾನ್ಸರ್ ಗೆ ಕಾರಣವೇನು, ಲಕ್ಷಣಗಳನ್ನು ಗುರುತಿಸುವುದು ಹೇಗೆ, ಕೊಲನ್‌ ಕ್ಯಾನ್ಸರ್ ಗುಣಪಡಿಸಬಹುದೇ ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಏಕೆಂದರೆ ಈ ಬಗ್ಗೆ ತಿಳಿದಿದ್ದಾಗ ಸಮಸ್ಯೆಗಳನ್ನು ಮುಂಚಿತವಾಗಿಯೇ ಗುರುತಿಸಿ ಅದನ್ನು ತಡೆಯಬಹುದು. ಮಂಗಳೂರು ಕೆಎಂಸಿ ಆಸ್ಪತ್ರೆಯ ಮೆಡಿಕಲ್ ಗ್ಯಾಸ್ಟ್ರೊಎಂಟರಾಲಾಜಿಸ್ಟ್, ಡಾ ಅನುರಾಗ್ ಶೆಟ್ಟಿ ಅವರು ಈ ಕುರಿತು ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಕೊಲನ್‌ ಕ್ಯಾನ್ಸರ್ ಲಕ್ಷಣಗಳು:

ಕರುಳಿನ ಕಾರ್ಯದಲ್ಲಿ ಬದಲಾವಣೆಗಳು (ಮಲಬದ್ಧತೆ ಅಥವಾ ಅತಿಸಾರ), ಮಲದ ಗಾತ್ರದಲ್ಲಿ ಬದಲಾವಣೆ, ಮಲದಲ್ಲಿ ರಕ್ತ ಬರುವುದು, ಕಾರಣವಿಲ್ಲದೆ ತೂಕ ಕಡಿಮೆಯಾಗುವುದು, ಹೊಟ್ಟೆ ನೋವು, ದೌರ್ಬಲ್ಯ, ಕಡಿಮೆ ಹಿಮೋಗ್ಲೋಬಿನ್ (ರಕ್ತಹೀನತೆ), ಕರುಳಿನ ಅಡಚಣೆಯಿಂದ ಉಂಟಾಗುವ ನಿರಂತರ ವಾಂತಿ ಅಥವಾ ಮಲ ವಿಸರ್ಜನೆ ಇವು ಕೊಲನ್ ಕ್ಯಾನ್ಸರ್‌ನ ಆರಂಭಿಕ ಹಂತಗಳಲ್ಲಿ ಕಾಣಿಸಬಹುದಾದ ಲಕ್ಷಣಗಳಾಗಿವೆ.

ಜೀವನಶೈಲಿಯೂ ಕಾರಣವಾಗಬಹುದೇ?

ದೊಡ್ಡ ಕರುಳಿನ ಕ್ಯಾನ್ಸರ್ ವಿಷಯದಲ್ಲಿ ಜೀವನಶೈಲಿ ಅಂಶಗಳು ಸಹ ಮಹತ್ವದ ಪಾತ್ರ ವಹಿಸುತ್ತವೆ. ಬೊಜ್ಜು ಮತ್ತು ಜಡ ಜೀವನಶೈಲಿ ಅಪಾಯಕಾರಕ ಅಂಶಗಳಾಗಿವೆ, ಆದರೆ ದೈಹಿಕ ಚಟುವಟಿಕೆ ಕೊಲನ್‌ ಕ್ಯಾನ್ಸರ್ ಅಪಾಯವನ್ನು 19–24% ರಷ್ಟು ಕಡಿಮೆ ಮಾಡಬಹುದು. ರೋಗ ತಡೆಗಟ್ಟುವ ಕ್ರಮಗಳಲ್ಲಿ ಸಮರ್ಪಕ ಫೈಬರ್ ಮತ್ತು ದ್ರವ ಸೇವನೆ, ಮುಖ್ಯವಾಗಿವೆ ಹಾಗೇ ಸಂಸ್ಕರಿಸಿದ ಆಹಾರಗಳು ಮತ್ತು ಕೆಂಪು ಮಾಂಸದ ಸೇವನೆಯನ್ನು ಕಡಿಮೆ ಮಾಡುವುದು, ಧೂಮಪಾನ ಮತ್ತು ಮದ್ಯಪಾನ ನಿಲ್ಲಿಸುವುದು ಕೂಡ ಒಳಗೊಂಡಿದೆ.

ಇದನ್ನೂ ಓದಿ: ಮೌತ್ ಕಾಂಡೋಮ್‌ ಎಂದರೇನು? ಇದು ಓರಲ್ ಕ್ಯಾನ್ಸರ್‌ನಿಂದ ರಕ್ಷಣೆ ನೀಡುತ್ತದೆಯೇ?

ರೋಗ ಪತ್ತೆ ಹೇಗೆ?

ಮಲ ಪರೀಕ್ಷೆ, ಕೊಲೊನೋಸ್ಕೊಪಿ ಮೂಲಕ ಆರಂಭಿಕ ಹಂತದಲ್ಲಿ ಪಾಲಿಪ್ಸ್‌ನಂತಹ ಕ್ಯಾನ್ಸರ್ ಪೂರ್ವ ಲಕ್ಷಣಗಳನ್ನು ಪತ್ತೆಹಚ್ಚಬಹುದಾಗಿದೆ. ಪಾಲಿಪ್ಸ್‌ಗಳು ಪತ್ತೆಯಾದಲ್ಲಿ ಎಂಡೊಸ್ಕೊಪಿ ಮೂಲಕ ತೆಗೆದುಹಾಕಬಹುದು ಇದರಿಂದ ಕ್ಯಾನ್ಸರ್ ಗೆ ಕಾರಣವಾಗುವುದನ್ನು ತಡೆಯಬಹುದು. ಪಾಶ್ಚಾತ್ಯ ಮಾರ್ಗಸೂಚಿಗಳ ಪ್ರಕಾರ 45 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು ಅಥವಾ ಹೆಚ್ಚಿನ ಅಪಾಯದಲ್ಲಿರುವವರು ಇನ್ನಷ್ಟು ಮುಂಚೆಯೇ ನಿಯಮಿತ ಸ್ಕ್ರೀನಿಂಗ್ ಮಾಡಿಸಿಕೊಳ್ಳುವುದು ಒಳ್ಳೆಯದು. ಕುಟುಂಬದಲ್ಲಿ ಕೊಲನ್ ಕ್ಯಾನ್ಸರ್ ಇತಿಹಾಸ ಇರುವವರು, ಕರುಳಿನ ಉರಿಯೂತದ ಕಾಯಿಲೆ ಹೊಂದಿರುವವರು ಅಥವಾ ಕೆಲವು ಆನುವಂಶಿಕ ಸಿಂಡ್ರೋಮ್‌ಗಳನ್ನು ಹೊಂದಿರುವವರಲ್ಲಿ ಕೊಲನ್‌ ಕ್ಯಾನ್ಸರ್ ಕಂಡುಬರುವ ಸಾಧ್ಯತೆ ಅಧಿಕವಾಗಿರುತ್ತದೆ.

ಕೊಲನ್‌ ಕ್ಯಾನ್ಸರ್ ಗುಣಪಡಿಸಬಹುದೇ?

ಆರಂಭಿಕ ಹಂತದಲ್ಲೇ ಪತ್ತೆಯಾದಲ್ಲಿ ಕೊಲನ್‌ ಕ್ಯಾನ್ಸರ್ ಗುಣಪಡಿಸಬಹುದಾಗಿದೆ. ರೋಗ ಬೇಗ ಪತ್ತೆಯಾದಲ್ಲಿ ರೋಗಿ ಬದುಕುಳಿಯುವ ಸಾಧ್ಯತೆ ಶೇ. 92ರಷ್ಟಿದ್ದು, ರೋಗ ಮುಂದುವರೆದಲ್ಲಿ ಬದುಕುಳಿಯುವ ಸಾಧ್ಯತೆ ಶೇ. 16ಕ್ಕೆ ಕುಸಿಯುತ್ತದೆ. ಸಕಾಲಿಕ ತಪಾಸಣೆ, ಆರೋಗ್ಯಕರ ಜೀವನಶೈಲಿ ರೋಗ ಗುಣಪಡಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಂಡನನ್ನು ಬಿಟ್ಟು ಪ್ರಿಯಕರನ ಜೊತೆ ಬದುಕಲು 19 ವರ್ಷದ ಯುವತಿಗೆ ಕೋರ್ಟ್ ಒಪ್ಪಿಗೆ

ನವದೆಹಲಿ, ಏಪ್ರಿಲ್ 6: 19 ವರ್ಷದ ಯುವತಿಗೆ ತನ್ನ ಗಂಡನ ಜೊತೆ ಬದುಕುವುದು ಇಷ್ಟವಿರಲಿಲ್ಲ. ಮನೆಯಿಂದ ಬರುವಾಗ ಆಕೆಯ ಗಂಡ ಆಕೆಯ ಮನವೊಲಿಸಿ ತನ್ನ ಜೊತೆಗೆ ಇರಲು ಒಪ್ಪಿಸಿ ಕರೆತಂದಿದ್ದ. ಆದರೆ, ಆಕೆಯ ಪತಿ, ಪೋಷಕರು ಮತ್ತು ಆಕೆಯ ಪ್ರೇಮಿ ನ್ಯಾಯಾಲಯದ ಹೊರಗೆ ಕಾಯುತ್ತಿದ್ದಾಗ ಆಕೆ ಕೋರ್ಟ್​ನೊಳಗೆ ನ್ಯಾಯಾಧೀಶರ ಮುಂದೆ ತಾನು ಪ್ರಿಯಕರನ ಜೊತೆಯೇ ಹೋಗುತ್ತೇನೆ ಎಂದು ನಿರ್ಧಾರ ತಿಳಿಸಿದಳು. “ನಾನು ವಯಸ್ಕಳು. ನಾನು ನನ್ನ ಸ್ವಂತ ಇಚ್ಛೆಯ ಮೇಲೆ ಬದುಕುತ್ತಿದ್ದೇನೆ. ನನ್ನ ಪತಿ ಅಥವಾ ನನ್ನ ಪೋಷಕರೊಂದಿಗೆ ಇರಲು ನಾನು ಬಯಸುವುದಿಲ್ಲ” ಎಂದು ಆಕೆ ನ್ಯಾಯಾಲಯಕ್ಕೆ (Court) ತಿಳಿಸಿದ್ದಾಳೆ. ಆಕೆಯ ನಿರ್ಧಾರವನ್ನು ಮಧ್ಯಪ್ರದೇಶದ ಹೈಕೋರ್ಟ್‌ನ ಗ್ವಾಲಿಯರ್ ಪೀಠವು ಒಪ್ಪಿಕೊಂಡಿತು.

ತನಗಿಂತ 2 ಪಟ್ಟು ಹೆಚ್ಚು ವಯಸ್ಸಿನವನ ಜೊತೆ ಮನೆಯವರು ಮದುವೆ ಮಾಡಿಕೊಟ್ಟಿದ್ದರಿಂದ 19 ವರ್ಷದ ಯುವತಿ ಆ ಮದುವೆಯಲ್ಲಿ ಸಂತೋಷವಾಗಿರಲಿಲ್ಲ. ಆಕೆಗೆ ಇನ್ನೋರ್ವ ಯುವಕನ ಮೇಲೆ ಮನಸಾಗಿತ್ತು. ಈ ಕುರಿತು ನ್ಯಾಯಾಲಯದ ಮೊರೆ ಹೋಗಿದ್ದ ಆಕೆ ತಾನು ತನ್ನ ಮನೆಯಲ್ಲಿ ವಯಸ್ಸಾದ ಗಂಡನಿಂದ ಯಾವ ರೀತಿ ದೌರ್ಜನ್ಯವನ್ನು ಸಹಿಸಿಕೊಂಡಿದ್ದೇನೆ, ತನ್ನ ತವರು ಮನೆಯವರು ಯಾವ ರೀತಿ ತನ್ನನ್ನು ದೂರ ಇಟ್ಟಿದ್ದಾರೆ, ಎರಡೂ ಕಡೆ ಆಶ್ರಯ ಸಿಗದೆ ತಾನು ಹೇಗೆ ಕಷ್ಟ ಅನುಭವಿಸುತ್ತಿದ್ದೇನೆ ಎಂಬುದರ ಬಗ್ಗೆ ಹೇಳಿಕೊಂಡಿದ್ದಳು.

ಇದನ್ನೂ ಓದಿ: ಮದುವೆ ಮುಗಿದ ಮೇಲೆ ಮಗಳನ್ನು ಗಂಡನ ಮನೆಗೆ ಕಳಿಸಲ್ಲ ಎಂದು ಮದುವೆ ಮುರಿದ ತಂದೆ, ಅಂಥದ್ದೇನಾಯ್ತು?

ನ್ಯಾಯಮೂರ್ತಿಗಳಾದ ಆನಂದ್ ಪಾಠಕ್ ಮತ್ತು ಪುಷ್ಪೇಂದ್ರ ಯಾದವ್ ಅವರ ವಿಭಾಗೀಯ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು. ಏಪ್ರಿಲ್ 2ರಂದು ಆಕೆಯ ಪತಿ ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯಲ್ಲಿ ಆಕೆಯನ್ನು ಇನ್ನೊಬ್ಬ ಪುರುಷ ಕಾನೂನುಬಾಹಿರವಾಗಿ ವಶದಲ್ಲಿಟ್ಟುಕೊಂಡಿದ್ದಾನೆ ಎಂದು ಆರೋಪಿಸಲಾಗಿತ್ತು. ಆದರೆ, ತನ್ನ ಪತಿ, ಪೋಷಕರು ಮತ್ತು ಪ್ರಿಯಕರನ ಜೊತೆ ನ್ಯಾಯಾಲಯಕ್ಕೆ ಹಾಜರಾದ ಆ ಯುವತಿ ತನ್ನ ಗಂಡ ಮಾಡಿದ ಆರೋಪಗಳನ್ನು ದೃಢವಾಗಿ ತಳ್ಳಿಹಾಕಿದ ನಂತರ ಈ ಪ್ರಕರಣವು ನಾಟಕೀಯ ತಿರುವು ಪಡೆದುಕೊಂಡಿತು.

ನನ್ನನ್ನು ಯಾರೂ ಬಲವಂತವಾಗಿ ಕರೆದುಕೊಂಡು ಹೋಗಿಲ್ಲ. ನನ್ನ ಗಂಡನ ಕಿರುಕುಳ ತಾಳಲಾರದೆ ಅಪ್ಪನ ಮನೆಗೆ ಹೋದಾಗ ಅಲ್ಲಿ ಕೂಡ ನನಗೆ ಆಶ್ರಯ ಸಿಗಲಿಲ್ಲ. ನಾನು ಪ್ರೀತಿಸುತ್ತಿರುವ ಯುವಕನ ಜೊತೆ ಹೋದ ನಂತರವೇ ನನಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು. ನನ್ನ ಸಂತೋಷ ಬಯಸದ, ನನ್ನ ಹಿತೈಷಿಗಳಲ್ಲದವರ ಜೊತೆ ವಾಪಾಸ್ ಹೋಗುವ ಪ್ರಶ್ನೆಯೇ ಇಲ್ಲ ಎಂದು ಆಕೆಯ ನ್ಯಾಯಾಧೀಶರ ಮುಂದೆ ಹೇಳಿದ್ದಾಳೆ. ಅಲ್ಲದೆ, ಆಕೆಯನ್ನು ಸೆರೆಯಲ್ಲಿಟ್ಟಿದ್ದ ಆರೋಪ ಹೊತ್ತಿರುವ ಆಕೆಯ ಪ್ರೇಮಿಯ ಜೊತೆಯೇ ಇರಲು ಬಯಸುವುದಾಗಿ ಆಕೆ ಹೇಳಿದ್ದಾಳೆ.

ಇದನ್ನೂ ಓದಿ: ಇನ್ನೋರ್ವ ಜಡ್ಜ್ ಮನೆಯಿಂದ ಆಭರಣ ಕದ್ದ ನ್ಯಾಯಾಧೀಶರಿಗೆ ಜಾಮೀನು ನಿರಾಕರಿಸಿದ ಕೋರ್ಟ್

ಆಕೆಯ ಪ್ರಿಯಕರನನ್ನು ಕೂಡ ಈ ಬಗ್ಗೆ ವಿಚಾರಿಸಲಾಯಿತು. ಆತನೂ ಆ ಯುವತಿಯನ್ನು ಪ್ರೀತಿ ಮಾಡುತ್ತಿರುವುದಾಗಿ ಹೇಳಿಕೆ ನೀಡಿದನು. ಅವಳ ವಿಚ್ಛೇದನದ ನಂತರ ಅವಳನ್ನು ಮದುವೆಯಾಗುವ ಉದ್ದೇಶವಿದೆ ಎಂದು ಕೂಡ ಹೇಳಿದನು. ಯಾವುದೇ ರೀತಿಯಲ್ಲಿ ಅವಳಿಗೆ ಕಿರುಕುಳ ನೀಡುವುದಿಲ್ಲ ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದನು.

ಆಕೆಯ ಗಂಡನ ವಯಸ್ಸು, ಆಕೆಯ ವಯಸ್ಸು ಗಮನಿಸಿದ ನ್ಯಾಯಾಲಯವು ಆಕೆ ತನ್ನ ಸ್ವಂತ ಇಚ್ಛೆಯಂತೆ ನಿರ್ಧಾರ ತೆಗೆದುಕೊಳ್ಳುವ ಪ್ರೌಢಿಮೆ ಹೊಂದಿದ್ದಾಳೆ ಎಂದು ದೃಢಪಡಿಸಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಲಿತ ಎನ್ನೋ ಕಾರಣಕ್ಕೆ ಎಳೆದಾಡಿ ಸ್ವಾಮೀಜಿ ಮೇಲೆ ಹಲ್ಲೆ: ದೇವಸ್ಥಾನದಿಂದ ಎತ್ತಿ ಹೊರಹಾಕಿದ ಟ್ರಸ್ಟಿಗಳು

ಕಲಬುರಗಿ, ಏಪ್ರಿಲ್​ 06: ದಲಿತ ಎಂಬ ಕಾರಣಕ್ಕೆ ಸ್ವಾಮೀಜಿ ಮೇಲೆ ಹಲ್ಲೆ ಮಾಡಿ, ದೇಗುಲದಿಂದ ಹೊರಗೆ ಹಾಕಿರುವಂತಹ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಯಾನಾಗುಂದಿಯಲ್ಲಿ ನಡೆದಿದೆ. ಮಾತಾ ಮಾಣಿಕೇಶ್ವರಿ ದೇವಸ್ಥಾನದಲ್ಲಿ ಟ್ರಸ್ಟಿಗಳಿಂದ ತೆಲಂಗಾಣ ಮೂಲದ ಬಂಡಿ ಬಾಲಕೃಷ್ಣ ಎಂಬುವರನ್ನು ಎಳೆದಾಡಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಸ್ವಾಮೀಜಿ ಕಳೆದ 7-8 ವರ್ಷಗಳಿಂದ ದೇವಸ್ಥಾನದಲ್ಲಿ ನೆಲೆಸಿ ಸೇವೆ ಸಲ್ಲಿಸುತ್ತಿದ್ದರು. ಕೆಳಜಾತಿಯವರು ದೇವಸ್ಥಾನ ಪ್ರವೇಶಿಸಬಾರದು ಎಂದು ನಿಂದಿಸಿ ಹಲವು ಬಾರಿ ಹಲ್ಲೆ ಮಾಡಿದ್ದಾರೆ. ಟ್ರಸ್ಟ್​ನ ಕಾರ್ಯದರ್ಶಿ ಶಿವಯ್ಯ ಮತ್ತು ಪುತ್ರ ಸುಮನ್ ವಿರುದ್ಧ ಹಲ್ಲೆ ಆರೋಪ ಮಾಡಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version