ಬ್ಯಾಂಕ್ ಓವರ್ಡ್ರಾಫ್ಟ್ ಅಥವಾ ಓ.ಡಿ. ಫೆಸಿಲಿಟಿ (Overdraft facility) ಬಗ್ಗೆ ಗೊತ್ತಿರಬಹುದು. ಅಂಥದ್ದೇ ರೀತಿ ಗೋಲ್ಡ್ ಓವರ್ಡ್ರಾಫ್ಟ್ (Gold OD) ಸಾಲದ ಸೌಲಭ್ಯ ಇದೆ. ಬಹುತೇಕ ಎಲ್ಲಾ ಬ್ಯಾಂಕುಗಳು ಮತ್ತು ಎನ್ಬಿಎಫ್ಸಿಗಳು ಈ ಗೋಲ್ಡ್ ಒ.ಡಿ. ಸೌಲಭ್ಯದ ಆಯ್ಕೆಯನ್ನು ಗ್ರಾಹಕರಿಗೆ ನೀಡುತ್ತವೆ. ಚಿನ್ನ ಅಥವಾ ಒಡವೆ ಮೇಲೆ ಸಾಲ ಬಹಳ ಸುಲಭವಾಗಿ ಸಿಗುತ್ತದೆ. ಇದು ಬಹಳ ಜನಪ್ರಿಯವೂ ಹೌದು. ಆದರೆ, ಗೋಲ್ಡ್ ಓವರ್ಡ್ರಾಫ್ಟ್ ಲೋನ್ ಇದಕ್ಕಿಂತಲೂ ಹೆಚ್ಚಿನ ಉಪಯುಕ್ತತೆ ಹೊಂದಿದೆ.
ಏನಿದು ಗೋಲ್ಡ್ ಓವರ್ಡ್ರಾಫ್ಟ್ ಫೆಸಿಲಿಟಿ?
ಬ್ಯಾಂಕ್ನಲ್ಲಿ ಕೆಲ ಸಾಲಗಳಿಗೆ ಓವರ್ಡ್ರಾಫ್ಟ್ ಫೆಸಿಲಿಟಿ ಕೊಡಲಾಗುತ್ತದೆ. ಅನೇಕ ಹೋಮ್ಲೋನ್ಗಳಿಗೆ ಈ ಆಯ್ಕೆ ಇರುತ್ತದೆ. ಅಂದರೆ, ಗ್ರಾಹಕರಿಗೆ ನಿರ್ದಿಷ್ಟ ಮೊತ್ತದಷ್ಟು ಸಾಲವನ್ನು ಮಂಜೂರು ಮಾಡಲಾಗುತ್ತದೆ. ಇದರಲ್ಲಿ ಎಷ್ಟೆಷ್ಟು ಬೇಕೋ ಅಷ್ಟಷ್ಟು ಹಣವನ್ನು ವಿವಿಧ ಸಂದರ್ಭಗಳಲ್ಲಿ ಬಳಸಬಹುದು. ಎಷ್ಟು ಬಳಸುತ್ತೀರೋ ಅಷ್ಟಕ್ಕೆ ಮಾತ್ರ ಬಡ್ಡಿ ಕಟ್ಟುತ್ತೀರಿ.
ಗೋಲ್ಡ್ ಓವರ್ಡ್ರಾಫ್ಟ್ ಲೋನ್ ಕೂಡ ಹೀಗೆಯೇ. ನಿಮಗೆ 10 ಲಕ್ಷ ರೂ ಸಾಲ ಮಂಜೂರು ಮಾಡಿದರೆ, ಅದರಲ್ಲಿ ನಿಮಗೆ ಬೇಕಾದಷ್ಟನ್ನು ಮಾತ್ರ ಬಳಸಬಹುದು. ಅಷ್ಟಕ್ಕೆ ಮಾತ್ರ ಬಡ್ಡಿ ಅನ್ವಯ ಆಗುತ್ತದೆ. ಈ ತಿಂಗಳು 2 ಲಕ್ಷ ಉಪಯೋಗಿಸುತ್ತೀರಿ. ಇನ್ನೆರಡು ತಿಂಗಳು ಬಿಟ್ಟು 1 ಲಕ್ಷ ಉಪಯೋಗಿಸುತ್ತೀರಿ. ನೀವು ಈ 3 ಲಕ್ಷ ರೂಗೆ ಮಾತ್ರ ಬಡ್ಡಿ ಕಟ್ಟುತ್ತೀರಿ. ಆದರೆ, ಇನ್ನೂ 7 ಲಕ್ಷ ನಿಮ್ಮ ಲೋನ್ ಅಕೌಂಟ್ನಲ್ಲಿ ಉಳಿದಿರುತ್ತದೆ. ಅದಕ್ಕೆ ಬಡ್ಡಿ ಕಟ್ಟುವ ಅವಶ್ಯಕತೆ ಇರುವುದಿಲ್ಲ.
ಮನೆ ಕಟ್ಟಿಸುತ್ತಿರುವವರಿಗೆ ಅಥವಾ ಅನಿಶ್ಚಿತ ಖರ್ಚು ವೆಚ್ಚಗಳ ಸಂದರ್ಭದಲ್ಲಿ ಇರುವವರಿಗೆ ಈ ಓವರ್ಡ್ರಾಫ್ಟ್ ಫೆಸಿಲಿಟಿ ಬಹಳ ಉಪಯೋಗ ಆಗುತ್ತದೆ.
ಇದಕ್ಕೆ ಪ್ರತಿಯಾಗಿ ಗೋಲ್ಡ್ ಲೋನ್ನಲ್ಲಿ ನಿಮಗೆ ಒಮ್ಮೆಗೇ ಎಲ್ಲಾ ಲೋನ್ ಮೊತ್ತವನ್ನು ರಿಲೀಸ್ ಮಾಡಲಾಗುತ್ತದೆ. ಅಷ್ಟಕ್ಕೂ ತತ್ಕ್ಷಣದಿಂದಲೇ ಬಡ್ಡಿ ಅನ್ವಯ ಆಗತೊಡಗುತ್ತದೆ. ಒಮ್ಮೆಗೇ ಎಲ್ಲಾ ಹಣ ವ್ಯಯಿಸಬೇಕಿದ್ದಲ್ಲಿ ಈ ಸಾಲ ಸರಿ. ವಿವಿಧ ಕಾಲದವರೆಗೆ ವೆಚ್ಚಗಳು ಇರುತ್ತವೆ ಎಂದಾದಲ್ಲಿ ಓವರ್ಡ್ರಾಫ್ಟ್ ಫೆಸಿಲಿಟಿ ಉಪಯುಕ್ತ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಸಾಮಾನ್ಯವಾಗಿ ಹೆಚ್ಚು ಸಿಹಿ ತಿನ್ನುವುದರಿಂದ ಮಾತ್ರ ಡಯಾಬಿಟಿಸ್ ಸಮಸ್ಯೆ ಉಂಟಾಗುತ್ತದೆ ಎಂಬುದು ಹಲವರ ನಂಬಿಕೆ. ಅದರಿಂದಲೇ ಡಯಾಬಿಟಿಸ್ (Diabetics) ಇರುವವರಿಗೆ ಸಿಹಿ ಆಹಾರಗಳಿಂದ ದೂರವಿರಲು ಸಲಹೆ ನೀಡಲಾಗುತ್ತದೆ. ಆದರೆ, ಕೆಲವು ಉಪ್ಪಿನ ಅಂಶವಿರುವ ಆಹಾರಗಳ ಸೇವನೆಯಿಂದಲೂ ಈ ರೀತಿ ಸಮಸ್ಯೆಯಾಗಬಹುದು ಎಂಬುದು ತಿಳಿದಿದೆಯೇ… ಹೌದು, ಉಪ್ಪಿನ ಅಂಶವಿರುವ ಆಹಾರ ರಕ್ತದಲ್ಲಿನ ಶುಗರ್ ಮಟ್ಟವನ್ನು ಹೆಚ್ಚಿಸಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ಹಾಗಾದರೆ ಉಪ್ಪಿರುವ ಆಹಾರ ಹೇಗೆ ಶುಗರ್ ಲೆವೆಲ್ ಹೆಚ್ಚಳಕ್ಕೆ ಕಾರಣವಾಗುತ್ತದೆ, ಯಾವ ಆಹಾರಗಳು ಆರೋಗ್ಯಕ್ಕೆ ಅಪಾಯಕಾರಿ, ಡಯಾಬಿಟಿಸ್ ರೋಗಿಗಳು ಆರೋಗ್ಯ ಕಾಪಾಡಿಕೊಳ್ಳಲು ಯಾವ ರೀತಿಯ ಸಲಹೆಗಳನ್ನು ಅನುಸರಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಉಪ್ಪಿರುವ ಆಹಾರಗಳು ಶುಗರ್ ಲೆವೆಲ್ ಹೆಚ್ಚಿಸುತ್ತವೆಯೇ?
ತಜ್ಞರ ಪ್ರಕಾರ, ಬಹಳಷ್ಟು ಜನರಿಗೆ ಉಪ್ಪಿನಾಂಶವಿರುವ ಆಹಾರ ಸೇವನೆ ಮಾಡುವುದರಿಂದ ಶುಗರ್ ಹೆಚ್ಚಾಗುವುದಿಲ್ಲ ಎಂಬ ಭಾವನೆ ಇದೆ. ಆದರೆ ಇದರಲ್ಲಿ ಪೂರ್ಣ ಸತ್ಯವಿಲ್ಲ. ಕೆಲವು ಪ್ಯಾಕೆಟ್ ಹಾಗೂ ಪ್ರೊಸೆಸ್ಡ್ ಆಹಾರಗಳಲ್ಲಿ ನಮಗೆ ತಿಳಿಯದಂತೆ ಸಕ್ಕರೆಯನ್ನು (Hidden Sugar) ಹಾಕಿರುತ್ತಾರೆ, ಇದು ದೇಹದಲ್ಲಿ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸಬಹುದು.
ಯಾವ ಆಹಾರಗಳು ಅಪಾಯಕಾರಿ?
ಪ್ಯಾಕೆಟ್ ಸ್ನ್ಯಾಕ್ಸ್
ಚಿಪ್ಸ್
ಉಪ್ಪಿನ ಬಿಸ್ಕತ್ಗಳು
ಪ್ರೊಸೆಸ್ಡ್ ಫುಡ್ಗಳು
ಈ ಆಹಾರಗಳನ್ನು ಹೆಚ್ಚು ಕಾಲ ಸಂರಕ್ಷಿಸಲು ಸಕ್ಕರೆ, ಕಾರ್ನ್ ಸಿರಪ್ ಮತ್ತು ಪ್ರಿಸರ್ವೇಟಿವ್ಗಳನ್ನು ಬಳಸಲಾಗುತ್ತದೆ. ಇವು ಉಪ್ಪಿನ ರುಚಿ ನೀಡಿದರೂ, ದೇಹದಲ್ಲಿ ಶುಗರ್ ಮಟ್ಟವನ್ನು ವೇಗವಾಗಿ ಹೆಚ್ಚಿಸಬಹುದು.
ಶುಗರ್ ಇದ್ದ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿ ಅಥವಾ ತಿನ್ನುವುದನ್ನೇ ತಪ್ಪಿಸಿ
ಹೈ ಬ್ಲಡ್ ಪ್ರೆಶರ್ ಇದ್ದರೆ ಉಪ್ಪಿನ ಅಂಶವಿರುವ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಡಿ
ಆರೋಗ್ಯಕರ ಪರ್ಯಾಯಗಳು:
ನಿಂಬೆ ಹಣ್ಣಿನ ಜ್ಯೂಸ್
ಕಿತ್ತಳೆ ಹಣ್ಣು
ತಾಜಾ ಹಣ್ಣುಗಳು
ಇವು ದೇಹಕ್ಕೆ ಪೋಷಕಾಂಶ ನೀಡುತ್ತವೆ ಮತ್ತು ಶುಗರ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತವೆ. ಒಟ್ಟಿನಲ್ಲಿ, ಸಿಹಿ ಮಾತ್ರವಲ್ಲ, ಕೆಲವು ಉಪ್ಪಿನ ಆಹಾರಗಳೂ ಕೂಡ ಶುಗರ್ ಲೆವೆಲ್ ಹೆಚ್ಚಿಸಬಹುದು. ಆದ್ದರಿಂದ ಡಯಾಬಿಟಿಸ್ ರೋಗಿಗಳು ತಮ್ಮ ಆಹಾರ ಪದ್ಧತಿಯಲ್ಲಿ ಜಾಗ್ರತೆ ವಹಿಸುವುದು ಅತ್ಯಂತ ಮುಖ್ಯ.
ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಇರುವಷ್ಟೇ ಮಹತ್ವ ಐಪಿಎಲ್ನಲ್ಲಿ (IPL) ಆರ್ಸಿಬಿ ಹಾಗೂ ಸಿಎಸ್ಕೆ (RCB vs CSK) ನಡುವಿನ ಪಂದ್ಯಕ್ಕೆ ಇರುತ್ತದೆ. ಈ ಉಭಯ ತಂಡಗಳ ಮುಖಾಮುಖಿಯನ್ನು ನೋಡಲು ಅಭಿಮಾನಿಗಳು ವರ್ಷಗಳಿಂದ ಕಾದು ಕುಳಿತಿರುತ್ತಾರೆ. ಹಾಗೆಯೇ ಪಂದ್ಯಗಳು ನಡೆದಾಗ ಕ್ರೀಡಾಂಗಣಗಳು ತುಂಬಿ ತುಳುಕುತ್ತಿರುತ್ತವೆ. ಇದನ್ನು ಗಮನಿಸಿಯೇ ಬಿಸಿಸಿಐ, ಲೀಗ್ ಹಂತದಲ್ಲಿ ಆರ್ಸಿಬಿ ಹಾಗೂ ಸಿಎಸ್ಕೆ ನಡುವೆ ಎರಡು ಪಂದ್ಯಗಳನ್ನು ಆಯೋಜನೆ ಮಾಡುತ್ತದೆ. ಇದರಿಂದ ಅಭಿಮಾನಿಗಳು ಎರಡು ಬಾರಿ ಈ ತಂಡಗಳ ನಡುವಿನ ಮುಖಾಮುಖಿ ನೋಡಲು ಸಾಧ್ಯವಾಗುತ್ತದೆ. ಆದರೆ ಈ ಬಾರಿ ಅದು ಸಾಧ್ಯವಾಗುವುದಿಲ್ಲ. ಹಾಗಿದ್ದರೆ, ಈ ಬಾರಿ ಆರ್ಸಿಬಿ ಮತ್ತು ಸಿಎಸ್ಕೆ ನಡುವೆ ಲೀಗ್ ಹಂತದಲ್ಲಿ ಕೇವಲ ಒಂದು ಪಂದ್ಯ ನಡೆಯಲು ಕಾರಣವೇನು ಎಂಬುದನ್ನು ನೋಡುವುದಾದರೆ..
ಮೇಲೆ ಹೇಳಿದಂತೆ 2026 ರ ಐಪಿಎಲ್ನ ಲೀಗ್ ಹಂತದಲ್ಲಿ ಆರ್ಸಿಬಿ ಮತ್ತು ಸಿಎಸ್ಕೆ ಒಮ್ಮೆ ಮಾತ್ರ ಮುಖಾಮುಖಿಗಲಿವೆ. ಅದರಂತೆ ನಡೆದ ಪಂದ್ಯದಲ್ಲಿ ಆರ್ಸಿಬಿ, ಸಿಎಸ್ಕೆ ತಂಡವನ್ನು ಹೀನಾಯವಾಗಿ ಮಣಿಸಿದೆ. ಸಿಎಸ್ಕೆ ತಂಡದ ಪ್ರದರ್ಶನವನ್ನು ನೋಡಿದರೆ, ಈ ಸೀಸನ್ನಲ್ಲಿ ಉಭಯ ತಂಡಗಳು ಮತ್ತೆ ಮುಖಾಮುಖಿಯಾಗುವ ಸಾಧ್ಯತೆಗಳಿಲ್ಲ. ಒಂದು ವೇಳೆ ಸಿಎಸ್ಕೆ ಉಳಿದ ಎಲ್ಲಾ ಪಂದ್ಯಗಳನ್ನು ಗೆದ್ದು ನಾಕೌಟ್ ಸುತ್ತಿಗೆ ಅರ್ಹತೆ ಪಡೆದರೆ, ಆಗ ಉಭಯ ತಂಡಗಳ ನಡುವೆ ಪಂದ್ಯ ನಡೆಯಬಹುದು. ಆದರೆ ಸಿಎಸ್ಕೆ ಆ ಹಂತಕ್ಕೆ ಹೋಗುವ ಸಾಧ್ಯತೆಗಳು ಗೋಚರಿಸುತ್ತಿಲ್ಲ.
ಪ್ಲೇ ಆಫ್ ಸುತ್ತಿನಲ್ಲಿ ಮುಖಾಮುಖಿ ಹೇಗೆ ಸಾಧ್ಯ?
ಆದಾಗ್ಯೂ ಎಲ್ಲಾ ಆಡೆತಡೆಗಳನ್ನು ನಿವಾರಿಸಿ ಸಿಎಸ್ಕೆ ಪ್ಲೇ ಆಫ್ ಸುತ್ತಿಗೆ ಅರ್ಹತೆ ಪಡೆದರೆ, ಆಗ ಆರ್ಸಿಬಿ ವಿರುದ್ಧ ಪಂದ್ಯವನ್ನಾಡಬಹುದಾಗಿದೆ. ಅದು ಹೇಗೆ ಎಂದರೆ, ಲೀಗ್ ಹಂತ ಮುಗಿದ ಬಳಿಕ ಅಂಕಪಟ್ಟಿಯಲ್ಲಿ ಆರ್ಸಿಬಿ ಹಾಗೂ ಸಿಎಸ್ಕೆ ಮೊದಲ ಎರಡು ಸ್ಥಾನಗಳಲ್ಲಿದ್ದರೆ, ಆಗ ಎರಡು ತಂಡಗಳು ಕ್ವಾಲಿಫೈಯರ್ 1 ಆಡಲಿವೆ. ಹಾಗೆಯೇ ಆರ್ಸಿಬಿ ಹಾಗೂ ಸಿಎಸ್ಕೆ ಪಾಯಿಂಟ್ ಪಟ್ಟಿಯಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದರೆ ಆಗ ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಗಲಿವೆ.
ಇದರ ಹೊರತಾಗಿ ಆರ್ಸಿಬಿ ಅಂಕಪಟ್ಟಿಯಲ್ಲಿ ಅಗ್ರ ಎರಡಲ್ಲಿ ಸ್ಥಾನ ಪಡೆದು, ಕ್ವಾಲಿಫೈಯರ್ 1 ರಲ್ಲಿ ಗೆದ್ದು ಫೈನಲ್ ಪ್ರವೇಶಿಸಿದರೆ, ಇತ್ತ ಸಿಎಸ್ಕೆ ಅಂಕಪಟ್ಟಿಯಲ್ಲಿ ಮೂರು ಅಥವಾ ನಾಲ್ಕನೇ ಸ್ಥಾನ ಪಡೆದು, ಎಲಿಮಿನೇಟರ್ ಗೆದ್ದು, ಕ್ವಾಲಿಫೈಯರ್ 2 ರಲ್ಲೂ ಗೆದ್ದರೆ ಆಗ ಆರ್ಸಿಬಿ ಹಾಗೂ ಸಿಎಸ್ಕೆ ನಡುವೆ ಫೈನಲ್ ಪಂದ್ಯ ನಡೆಯಲಿದೆ. ಒಂದು ವೇಳೆ ಆರ್ಸಿಬಿ ಅಂಕಪಟ್ಟಿಯಲ್ಲಿ ಅಗ್ರ 2 ರಲ್ಲಿ ಸ್ಥಾನ ಪಡೆದು ಕ್ವಾಲಿಫೈಯರ್ 1 ರಲ್ಲಿ ಸೋತರೆ, ಇತ್ತ ಸಿಎಸ್ಕೆ ಅಂಕಪಟ್ಟಿಯಲ್ಲಿ ಅಗ್ರ ಮೂರು ಅಥವಾ ನಾಲ್ಕರಲ್ಲಿ ಸ್ಥಾನ ಪಡೆದು ಎಲಿಮಿನೇಟರ್ನಲ್ಲಿ ಗೆದ್ದರೆ, ಆಗ ಉಭಯ ತಂಡಗಳು ಕ್ವಾಲಿಫೈಯರ್ 2 ರಲ್ಲಿ ಮುಖಾಮುಖಿಗಲಿವೆ.
ಲೀಗ್ ಹಂತದಲ್ಲಿ ಒಂದು ಪಂದ್ಯ ಏಕೆ?
ಇನ್ನು ಈ ಸೀಸನ್ನಲ್ಲಿ ಆರ್ಸಿಬಿ ಹಾಗೂ ಸಿಎಸ್ಕೆ ನಡುವೆ ಕೇವಲ ಒಂದು ಪಂದ್ಯ ನಡೆದಿದ್ದು ಏಕೆ ಎಂಬುದನ್ನು ನೋಡುವುದಾದರೆ.. ಪ್ರತಿ ಬಾರಿಯಂತೆ ಈ ಬಾರಿಯೂ ಬಿಸಿಸಿಐ, 10 ತಂಡಗಳನ್ನು ತಲಾ 5 ತಂಡಗಳ ಎರಡು ವರ್ಚುವಲ್ ಗುಂಪುಗಳಾಗಿ ವಿಂಗಡಿಸಿದೆ. ಅದರಂತೆ ಲೀಗ್ ಹಂತದಲ್ಲಿ ನಡೆಯುವ 70 ಪಂದ್ಯಗಳಲ್ಲಿ ಪ್ರತಿಯೊಂದು ತಂಡವು ತಲಾ 14 ಪಂದ್ಯಗಳನ್ನು ಆಡುತ್ತದೆ. ಅದರಲ್ಲಿ ತಲಾ ಒಂದು ಪಂದ್ಯವನ್ನು ತನ್ನ ಗುಂಪಿನಲ್ಲಿರುವ ಇತರ 4 ತಂಡಗಳ ವಿರುದ್ಧ ಆಡಿದರೆ, ತಲಾ 2 ಪಂದ್ಯಗಳನ್ನು ಇನ್ನೊಂದು ಗುಂಪಿನಲ್ಲಿರುವ 5 ತಂಡಗಳ ವಿರುದ್ಧ ಆಡಲಿದೆ.
ಇಲ್ಲಿ ಬಿಸಿಸಿಐ, ಎಲ್ಲಾ 10 ತಂಡಗಳನ್ನು ತಲಾ ಐದು ಗುಂಪುಗಳಾಗಿ ವಿಂಗಡಿಸಿದೆ. ಅದರಂತೆ ಗುಂಪು 1 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (5), ಕೋಲ್ಕತ್ತಾ ನೈಟ್ ರೈಡರ್ಸ್ (3), ರಾಜಸ್ಥಾನ್ ರಾಯಲ್ಸ್ (1), ರಾಯಲ್ ಚಾಲೆಂಜರ್ಸ್ ಬೆಂಗಳೂರು (1) ಮತ್ತು ಪಂಜಾಬ್ ಕಿಂಗ್ಸ್ ಗುಂಪು ಎ ನಲ್ಲಿ ಸ್ಥಾನ ಪಡೆದರೆ, ಗುಂಪು ಬಿಯಲ್ಲಿ ಮುಂಬೈ ಇಂಡಿಯನ್ಸ್ (5), ಸನ್ರೈಸರ್ಸ್ ಹೈದರಾಬಾದ್ (1), ಗುಜರಾತ್ ಟೈಟಾನ್ಸ್ (1), ದೆಹಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳಿವೆ.
ಮೇಲೆ ಹೇಳಿದಂತೆ ಆರ್ಸಿಬಿ ತನ್ನ ಗುಂಪಿನಲ್ಲಿರುವ ಇತರ ತಂಡಗಳ ವಿರುದ್ಧ ಅಂದರೆ, ಸಿಎಸ್ಕೆ,ಕೆಕೆಆರ್, ರಾಜಸ್ಥಾನ್ ಹಾಗೂ ಪಂಜಾಬ್ ವಿರುದ್ಧ ತಲಾ ಒಂದೊಂದು ಪಂದ್ಯವನ್ನು ಲೀಗ್ ಹಂತದಲ್ಲಿ ಆಡಲಿದೆ. ಇನ್ನು ಬಿ ಗುಂಪಿನಲ್ಲಿರುವ ಮುಂಬೈ, ಸನ್ರೈಸರ್ಸ್, ಗುಜರಾತ್, ಡೆಲ್ಲಿ ಹಾಗೂ ಲಕ್ನೋ ವಿರುದ್ಧ ತಲಾ 2 ಪಂದ್ಯಗಳನ್ನು ಆಡಲಿದೆ. ಹೀಗಾಗಿ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿರುವ ಸಿಎಸ್ಕೆ ಹಾಗೂ ಆರ್ಸಿಬಿ ಈ ಬಾರಿ ಲೀಗ್ ಹಂತದಲ್ಲಿ ಒಮ್ಮೆ ಮಾತ್ರ ಮುಖಾಮುಖಿಯಾಗಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಏಪ್ರಿಲ್ 6: ವಿಕ್ಸ್ ಚಾಕೋಲೇಟ್ ಖರೀದಿ ಮಾಡಲು ಅಂಗಡಿಗೆ ಬಂದ ಕಳ್ಳನೊಬ್ಬ ಅಂಗಡಿಯ ಮಾಲೀಕಳ ಕುತ್ತಿಗೆಯಿಂದ ಚಿನ್ನದ ಸರವನ್ನು ಎಳೆದುಕೊಂಡಿದ್ದಾನೆ. ದಿನಸಿ ಅಂಗಡಿಯಲ್ಲಿ ನಡೆದ ಈ ಚಿನ್ನದ ಸರ ಕಿತ್ತುಕೊಂಡ ಘಟನೆ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದರಲ್ಲಿ ಕಳ್ಳನ ಮುಖವೂ ಸ್ಪಷ್ಟವಾಗಿ ದಾಖಲಾಗಿದೆ. ಸಂಜೆ ದಿನಸಿ ಅಂಗಡಿಗೆ ಬಂದ ಅಪರಿಚಿತನೊಬ್ಬ ವಿಕ್ಸ್ ಚಾಕೋಲೇಟ್ಗಳನ್ನು ಕೇಳಿದ. ಇದಕ್ಕೆ ಅಂಗಡಿಯಲ್ಲಿದ್ದ ಮಹಿಳೆ ಅವನಿಗೆ ವಿಕ್ಸ್ ಕೊಟ್ಟಳು. ಆಗ ಚಿಲ್ಲರೆ ಹಣ ನೀಡಲು ಹತ್ತಿರ ಬಂದ ಆ ಕಳ್ಳ ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಟ್ ಮಾಡಿಕೊಂಡು ಓಡಿದ್ದಾನೆ. ಆತ ದಿಢೀರೆಂದು ಈ ರೀತಿ ಮಾಡಿದ್ದರಿಂದ ಆಘಾತಕ್ಕೊಳಗಾದ ಮಹಿಳೆ ಗಂಡನನ್ನು ಕರೆದಿದ್ದಾಳೆ. ನಂತರ ಕುಟುಂಬ ಸದಸ್ಯರು ಹೊರಬಂದು ಕಳ್ಳನನ್ನು ಹಿಡಿಯಲು ಓಡಿಹೋಗಿದ್ದಾರೆ. ಆದರೆ, ಕಳ್ಳ ತಪ್ಪಿಸಿಕೊಂಡಿದ್ದಾನೆ. ಇದು ಎಲ್ಲಿ ನಡೆದಿದೆ ಎಂಬುದು ಸ್ಪಷ್ಟವಾಗಿಲ್ಲ. ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಏಪ್ರಿಲ್ 06: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಇದೇ ಕೇಸ್ನಲ್ಲಿ ಬಂಧನಕ್ಕೊಳಗಾಗಿದ್ದ ಕೆ.ಆರ್ ಪುರಂ ಶಾಸಕ ಭೈರತಿ ಬಸವರಾಜ್ (Byrathi Basavaraj)ಇತ್ತೀಚೆಗೆ ಜಾಮೀನು ಮೇಲೆ ಬಿಡುಗಡೆಯಾಗಿದ್ದರು. ಇದೀಗ ಜಾಮೀನು ರದ್ದುಪಡಿಸುವಂತೆ ಕೋರಿ ಸಿಐಡಿ ಪೊಲೀಸರಿಂದ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ. ಆ ಮೂಲಕ ಭೈರತಿ ಬಸವರಾಜ್ಗೆ ಮತ್ತೆ ಸಂಕಷ್ಟ ಶುರುವಾಗಿದೆ.
ರೌಡಿಶೀಟರ್ ಬಿಕ್ಲು ಶಿವ ಅಲಿಯಾಸ್ ಶಿವಕುಮಾರ್ ಕೊಲೆ ಪ್ರಕರಣದಲ್ಲಿ 5ನೇ ಆರೋಪಿಯಾಗಿರುವ ಕೆ.ಆರ್.ಪುರಂ ಬಿಜೆಪಿ ಶಾಸಕ ಭೈರತಿ ಬಸವರಾಜ್ 6 ತಿಂಗಳ ಬಳಿಕ ಬಲೆಗೆ ಬಿದ್ದಿದ್ದರು. ಕೆಂಪೇಗೌಡ ಏರ್ಪೋರ್ಟ್ನಲ್ಲಿ ರಾತ್ರಿ ಪೊಲೀಸರು ಭೈರತಿಯನ್ನು ಬಂಧಿಸಿದ್ದರು. ನಂತರ ಸಿಐಡಿಗೆ ಹಸ್ತಾಂತರಿಸಲಾಗಿತ್ತು.
7 ದಿನ ಸಿಐಡಿ ಕಸ್ಟಡಿಗೆ ನೀಡಿ 42ನೇ ACJM ಕೋರ್ಟ್ ಜಡ್ಜ್ ಆದೇಶ ಹೊರಡಿಸಿತ್ತು. 7 ದಿನಗಳ ಕಾಲ ಸಿಐಡಿ ಅಧಿಕಾರಿಗಳು 258 ಪ್ರಶ್ನೆಗಳನ್ನು ಮಾಡಿದ್ದರು. ಈ ವೇಳೆ ಬಹುತೇಕ ಪ್ರಶ್ನೆಗಳಿಗೆ ಶಾಸಕರು ಗೊತ್ತಿಲ್ಲ ಎಂದು ಉತ್ತರವನ್ನೇ ನೀಡಿದ್ದರು. ಇದರ ಜೊತೆಗೆ ಶಾಸಕರ ಎರಡು ಮೊಬೈಲ್ಗಳು ಕೂಡ ಸಿಐಡಿ ಜಪ್ತಿ ಮಾಡಿತ್ತು. ಮಾರ್ಚ್ 13ರಂದು ಷರತ್ತುಬದ್ಧ ಜಾಮೀನು ಮಂಜೂರು ಬೆನ್ನಲ್ಲೇ ಸೆಂಟ್ರಲ್ ಜೈಲಿನಿಂದ ಶಾಸಕ ಭೈರತಿ ಬಸವರಾಜ್ ಬಿಡುಗಡೆ ಆಗಿದ್ದರು.
ಪ್ರಕರಣದ ಹಿನ್ನೆಲೆ
ಕಿತ್ತಗನೂರಿನ ಜಮೀನು ವಿವಾದದ ಹಿನ್ನೆಲೆ ಕಳೆದ ವರ್ಷ ಜುಲೈ 15ರಂದು ದುಷ್ಕರ್ಮಿಗಳ ಗುಂಪೊಂದು ಮಾಜಿ ರೌಡಿ ಶೀಟರ್ ಬಿಕ್ಲು ಶಿವನನ್ನು ಮಚ್ಚು, ಲಾಂಗ್ಗಳಿಂದ ಅಟ್ಯಾಕ್ ಮಾಡಿ ಕೊಲೆ ಮಾಡಿತ್ತು. ಮೃತನ ತಾಯಿ ಭೈರತಿ ಬಸವರಾಜ್ ಸೇರಿದಂತೆ ಹಲವರ ಮೇಲೆ ದೂರು ನೀಡಿದ್ದರು. ಎಫ್ಐಆರ್ ದಾಖಲಾಗುತ್ತಿದ್ದಂತೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ ಬಂಧನದಿಂದ ಮಧ್ಯಂತರ ರಕ್ಷಣೆ ಪಡೆದ ಭೈರತಿ ಬಸವರಾಜ್ ಪೊಲೀಸರ ಮುಂದೆ ತನಿಖೆಗೆ ಹಾಜರಾಗಿದ್ದರು. ಆದರೆ ಪ್ರಯಾಗ್ ರಾಜ್ಗೆ ತನ್ನ ಜೊತೆಯಲ್ಲೇ ಪ್ರಯಾಣಿಸಿದ ಎ1 ಆರೋಪಿ ಜಗ್ಗ ಅಲಿಯಾಸ್ ಜಗದೀಶ್ ಯಾರೆಂಬುದೇ ಗೊತ್ತಿಲ್ಲವೆಂದು ಹೇಳಿಕೆ ನೀಡಿದ್ದರು. ಈ ವೇಳೆ ಭೈರತಿ ಬಸವರಾಜ್ ತಗ್ಲಾಕಿಕೊಂಡಿದ್ದರು.
ನಟಿ ಶ್ರುತಿ ಹರಿಹರನ್ (Sruthi Hariharan) ಅವರು ಸಿನಿಮಾಗಳ ಆಯ್ಕೆಯಲ್ಲಿ ಬಹಳ ಚ್ಯೂಸಿ. ವಯಸ್ಸು ಆಗುತ್ತಿದ್ದಂತೆಯೇ ಇನ್ನೂ ಉತ್ತಮವಾದ ಪಾತ್ರಗಳು ಸಿಗುತ್ತಿವೆ ಎಂಬ ಖುಷಿ ಅವರಿಗೆ ಇದೆ. ‘ಲೈಫ್ ಚೆನ್ನಾಗಿ ನಡೆಯುತ್ತಿದೆ. ಇನ್ನೊಂದು ಬಿಸ್ನೆಸ್ ಕೂಡ ಶುರು ಮಾಡಿದ್ದೇನೆ. ಮನೆ, ಮಗು, ಸಿನಿಮಾ ಜೊತೆ ಬ್ಯುಸಿ ಆಗಿದ್ದೇನೆ. ಎನ್ಹೆಚ್ 66 ಸಿನಿಮಾ ಕೂಡ ನನಗೆ ಚಾಲೆಂಜಿಂಗ್ ಆಗಿದೆ. 15 ವರ್ಷಗಳಲ್ಲಿ ಅಂದಾಜು 40 ಪಾತ್ರ ಮಾಡಿರುತ್ತೇನೆ. ಆದರೆ ಅವುಗಳಿಗಿಂತ ಡಿಫರೆಂಟ್ ಆಗಿರುವ ಪಾತ್ರ ಈ ಸಿನಿಮಾದಲ್ಲಿ ನನಗೆ ಸಿಕ್ಕಿದೆ. ಪ್ರತಿ ಬಾರಿ ಈ ರೀತಿಯ ಚಾಲೆಂಜಿಂಗ್ ಪಾತ್ರ ಸಿಕ್ಕಾಗ ನಮ್ಮ ಕೆಲಸವನ್ನು ನಾವು ಸರಿಯಾಗಿ ಮಾಡಬೇಕು ಎಂಬ ಪ್ಯಾಷನ್ನೊಂದಿಗೆ ನಾನು ಕೆಲಸ ಶುರು ಮಾಡುತ್ತೇನೆ. ನಾನು ಕಲಾವಿದೆ. ಸ್ಟಾರ್ ಅಲ್ಲ. ಕಲಾವಿದರಿಗೆ ಸಾವಿಲ್ಲ. ಪಾತ್ರಗಳು ಬರುತ್ತಾ ಇರುತ್ತವೆ’ ಎಂದು ಶ್ರುತಿ ಹರಿಹರನ್ ಅವರು ಹೇಳಿದ್ದಾರೆ.
ಸ್ಯಾಂಡಲ್ವುಡ್ನಿಂದ ಬಣ್ಣದ ಬದುಕು ಆರಂಭಿಸಿ ಬಳಿಕ ನ್ಯಾಷನಲ್ ಕ್ರಶ್ ಆಗಿ ಮಿಂಚಿದ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ವಿಜಯ್ ದೇವರಕೊಂಡ (Vijay Deverakonda) ಜೊತೆ ಮದುವೆ ಮಾಡಿಕೊಂಡಿದ್ದರು. ಈಗ ಪತಿಯ ಜೊತೆ ಅವರು ಮೊದಲ ಬಾರಿಗೆ ತವರಿಗೆ ಆಗಮಿಸಿದ್ದಾರೆ. ಮದುವೆಯಾದ ನಂತರ ಇದೇ ಮೊದಲ ಬಾರಿಗೆ ರಶ್ಮಿಕಾ (Rashmika Mandanna) ಅವರು ಕೊಡಗಿನ (Kodagu) ವಿರಾಜಪೇಟೆಗೆ ಭೇಟಿ ನೀಡಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಅವರು ತವರಿಗೆ ಬಂದಿದ್ದಾರೆ. ಅವರಿಗೆ ತಂದೆಯಿಂದ ಭರ್ಜರಿ ಉಡುಗೊರೆ ಸಿಕ್ಕಿದೆ.
ಭಾನುವಾರ (ಏಪ್ರಿಲ್ 5) ರಶ್ಮಿಕಾ ಮಂದಣ್ಣ ಅವರ ಹುಟ್ಟುಹಬ್ಬವಿತ್ತು. ಈ ವಿಶೇಷ ದಿನವನ್ನು ಆಚರಿಸಲು ರಶ್ಮಿಕಾ ಮತ್ತು ವಿಜಯ್ ಅವರು ಕೊಡಗು ಜಿಲ್ಲೆಯ ವಿರಾಜಪೇಟೆ ಹೊರವಲಯದಲ್ಲಿರುವ ಕದನೂರಿನ ತಮ್ಮ ನಿವಾಸಕ್ಕೆ ಆಗಮಿಸಿದ್ದಾರೆ. ಮದುವೆಯ ನಂತರ ಮೊದಲ ಬಾರಿಗೆ ಮಗಳು ಮತ್ತು ಅಳಿಯ ಮನೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ರಶ್ಮಿಕಾ ತಂದೆ ಮದನ್ ಮಂದಣ್ಣ ಅವರು ಮನೆಯನ್ನು ವಿಶೇಷವಾಗಿ ನವೀಕರಣಗೊಳಿಸಿದ್ದರು.
ಹುಟ್ಟುಹಬ್ಬದ ಅಂಗವಾಗಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ದಂಪತಿ ಕೊಡಗಿನ ಆರಾಧ್ಯ ದೈವ, ಮಡಿಕೇರಿ ತಾಲೂಕಿನ ಕಕ್ಕಬ್ಬೆ ಗ್ರಾಮದಲ್ಲಿರುವ ಪಾಡಿ ಇಗ್ಗುತ್ತಪ್ಪ ದೇವಸ್ಥಾನಕ್ಕೆ ಭೇಟಿ ನೀಡಿದರು. ಯಾವುದೇ ಸೆಲೆಬ್ರಿಟಿ ಹಮ್ಮಿಲ್ಲದೆ ಸಾಮಾನ್ಯರಂತೆ ದೇವಸ್ಥಾನಕ್ಕೆ ಆಗಮಿಸಿದ ಈ ಜೋಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದಲ್ಲಿದ್ದ ಭಕ್ತರು ನೆಚ್ಚಿನ ನಟ-ನಟಿಯನ್ನು ಒಟ್ಟಾಗಿ ಕಂಡು ಅಚ್ಚರಿ ವ್ಯಕ್ತಪಡಿಸಿದರು.
ರಶ್ಮಿಕಾ ಅವರ ಈ ಬಾರಿಯ ಹುಟ್ಟುಹಬ್ಬಕ್ಕೆ ತಂದೆ ಮದನ್ ಮಂದಣ್ಣ ಕಡೆಯಿಂದ ಅತ್ಯಮೂಲ್ಯ ಉಡುಗೊರೆ ಸಿಕ್ಕಿದೆ. ಕದನೂರು ಬಳಿಯಿರುವ ಸುಸಜ್ಜಿತ ‘ಸೆರೆನಿಟಿ’ ಬಂಗಲೆಯನ್ನು ಮದನ್ ಮಂದಣ್ಣ ಅವರು ಮಗಳು ರಶ್ಮಿಕಾಗೆ ಗಿಫ್ಟ್ ನೀಡಿದ್ದಾರೆ. ಈಗಾಗಲೇ ವಿರಾಜಪೇಟೆ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಬಂಗಲೆಯ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಧಿಕೃತವಾಗಿ ರಶ್ಮಿಕಾ ಅವರ ಹೆಸರಿಗೆ ಆಸ್ತಿ ವರ್ಗಾವಣೆಯಾಗಿದೆ.
ಮದುವೆಗೂ ಮುಂಚೆಯೇ ರಶ್ಮಿಕಾ ಮಂದಣ್ಣ ಅವರು ಹೈದರಾಬಾದ್ನಲ್ಲಿ ಸೆಟ್ಲ್ ಆಗಿದ್ದರು. ತೆಲುಗು ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಅವರು ಹೆಚ್ಚು ಬ್ಯುಸಿ ಆಗಿದ್ದಾರೆ. ವಿಜಯ್ ದೇವರಕೊಂಡ ಜೊತೆ ಅವರು ‘ರಣಬಾಲಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರ ಹುಟ್ಟುಹಬ್ಬದ ಪ್ರಯುಕ್ತ ವಿಜಯ್ ದೇವರಕೊಂಡ ಮೇಕಿಂಗ್ ವಿಡಿಯೋ ಹಂಚಿಕೊಂಡಿದ್ದಾರೆ.
ನವದೆಹಲಿ, ಏಪ್ರಿಲ್ 6: ಭಾರತೀಯ ರಿಸರ್ವ್ ಬ್ಯಾಂಕ್ನ ಮಾನಿಟರಿ ಪಾಲಿಸಿ ಕಮಿಟಿಯ ದ್ವೈಮಾಸಿಕ ಸಭೆ ಇವತ್ತು ಆರಂಭವಾಗಿದೆ. ಜಾಗತಿಕ ಪರಿಸ್ಥಿತಿ ಬಹಳ ಬಿಗಡಾಯಿಸಿದ ಕ್ಲಿಷ್ಟಕರ ಸಂದರ್ಭದಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ ತೆಗೆದುಕೊಳ್ಳಲಾಗುವ ನಿರ್ಧಾರಗಳ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಮೂರು ದಿನಗಳ ಕಾಲ ನಡೆಯುವ ಈ ಸಭೆಯ ನಿರ್ಧಾರಗಳನ್ನು ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಏಪ್ರಿಲ್ 8ರಂದು ಬೆಳಗ್ಗೆ 10 ಗಂಟೆಗೆ ಪ್ರಕಟಿಸಲಿದ್ದಾರೆ.
ಜಾಗತಿಕ ಕಚ್ಛಾ ತೈಲ ಬೆಲೆ ಬಹಳ ಎತ್ತರಕ್ಕೆ ಹೋಗಿದೆ. ಪಶ್ಚಿಮ ಏಷ್ಯಾ ಪ್ರದೇಶ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಜಗತ್ತಿನ ಹೆಚ್ಚಿನ ದೇಶಗಳು ಇದರ ಪರಿಣಾಮ ಎದುರಿಸುತ್ತಿವೆ. ಭಾರತಕ್ಕೂ ಬಹಳ ಬಾಧೆಯಾಗಿದೆ. ಜನಸಾಮಾನ್ಯರಿಗೆ ಹೊರೆಯಾಗಬಾರದೆಂದು ಸರ್ಕಾರ ಪೆಟ್ರೋಲ್, ಡೀಸಲ್ ಬೆಲೆ ಏರಿಕೆಯನ್ನು ತಡೆ ಹಿಡಿದಿದೆ. ಇಂಥ ಪರಿಸ್ಥಿತಿಯಲ್ಲಿ ಆರ್ಬಿಐ ಮುಂದೆ ಬಹಳ ದೊಡ್ಡ ಸವಾಲುಗಳು ಇವೆ ಎನ್ನುವುದು ನಿಜ. ಎಂಪಿಸಿ ಸಭೆಯಲ್ಲಿ ತೆಗೆದುಕೊಳ್ಳುವ ಒಂದೊಂದು ನಿರ್ಧಾರದ ಹಿಂದೆಯೂ ಸಾಕಷ್ಟು ಪರಾಮರ್ಶೆಗಳು ನಡೆಯುತ್ತವೆ ಎನ್ನುವ ಆಶಯ ಇದೆ.
ಎಸ್ಬಿಐ ರಿಸರ್ಚ್ ಸಂಸ್ಥೆ ಪ್ರಕಾರ ಆರ್ಬಿಐ ಈ ಬಾರಿಯೂ ರಿಪೋ ದರದಲ್ಲಿ ಬದಲಾವಣೆ ಮಾಡದಿರುವ ಸಾಧ್ಯತೆ ಇದೆ. ಹಣದುಬ್ಬರ ಏರುಗತಿಯಲ್ಲಿರುವುದರಿಂದ ಬಡ್ಡಿ ದರ ಇಳಿಸುವುದು ಮತ್ತಷ್ಟು ಅಪಾಯ ತಂದುಕೊಂಡಂತಾಗಬಹುದು. ಈ ಕಾರಣಕ್ಕೆ ರಿಪೋ ದರವನ್ನು ಶೇ. 5.25ರಲ್ಲೇ ಮುಂದುವರಿಸಬಹುದು ಎನ್ನುವ ಅಭಿಪ್ರಾಯಗಳಿವೆ.
ಕಳೆದ ಮೂರು ವರ್ಷದಲ್ಲಿ ಆರ್ಬಿಐ ತನ್ನ ರಿಪೋ ದರವನ್ನು 125 ಮೂಲಾಂಕಗಳಷ್ಟು ಇಳಿಸಿದೆ. 2023ರ ಫೆಬ್ರುವರಿಯಲ್ಲಿ ಶೇ. 6.50ರಷ್ಟು ರಿಪೋ ದರ ಇತ್ತು. 2025ರ ಡಿಸೆಂಬರ್ ವೇಳೆಗೆ ನಾಲ್ಕೈದು ಬಾರಿ ರಿಪೋ ದರ ಇಳಿಕೆಯಾಗಿ ಶೇ. 5.25ಕ್ಕೆ ಬಂದು ನಿಂತಿದೆ. 2026ರ ಫೆಬ್ರುವರಿಯಲ್ಲಿ ನಡೆದ ಎಂಪಿಸಿ ಸಭೆಯಲ್ಲಿ ಬಡ್ಡಿದರದ ಯಥಾಸ್ಥಿತಿ ಉಳಿಸಲಾಯಿತು. ಈ ಬಾರಿಯೂ ಅದೇ ಮುಂದುವರಿಯಬಹುದು.
ಬಡ್ಡಿದರ ಯಥಾಸ್ಥಿತಿಯಲ್ಲಿ ಇರುವ ನಿರೀಕ್ಷೆಯಲ್ಲಿ ಬ್ಯಾಂಕುಗಳ ಬಡ್ಡಿದರದಲ್ಲಿ ಸ್ಥಿರತೆ ಸಿಕ್ಕಿದೆ. ಗೃಹ ಸಾಲ ಪಡೆಯುವ ಗ್ರಾಹಕರಿಗೂ ನಿರ್ದಿಷ್ಟತೆ ಸಿಕ್ಕಂತಾಗಿದೆ. ಈ ಹಂತದಲ್ಲಿ ಆರ್ಬಿಐನಿಂದ ರಿಪೋ ದರದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ.
2024 ರ ಐಪಿಎಲ್ನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಸಂಚಲನ ಮೂಡಿಸಿದ ಅಭಿಷೇಕ್ ಶರ್ಮಾ, ಸುಮಾರು ಒಂದೂವರೆ ವರ್ಷಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಇದೇ ರೀತಿಯ ಸಂಚಲನ ಸೃಷ್ಟಿಸುವುದನ್ನು ಮುಂದುವರೆಸಿದ್ದರು. ಆದಾಗ್ಯೂ, 2026 ರ ವರ್ಷ ಅವರಿಗೆ ಇದುವರೆಗೆ ಉತ್ತಮವಾಗಿಲ್ಲ. ಒಂದೆಡೆ ರನ್ ಬರ ಎದುರಿಸುತ್ತಿರುವ ಅಭಿಷೇಕ್ಗೆ ಖಾತೆ ತೆರೆಯುತ್ತಿರುವುದು ಕೂಡ ಕಷ್ಟವಾಗಿದೆ.
2026 ರ ಟಿ20 ವಿಶ್ವಕಪ್ನಲ್ಲಿ ಸತತ ಮೂರು ಬಾರಿ ಶೂನ್ಯಕ್ಕೆ ಔಟಾಗಿ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸುವ ಕೆಲಸ ಮಾಡಿದ್ದ ಅಭಿಷೇಕ್ ಶರ್ಮಾ ಇದೀಗ ಐಪಿಎಲ್ನಲ್ಲಿಯೂ ಸಹ ಸೊನ್ನೆ ಸುತ್ತುವ ಕೆಲಸವನ್ನು ಮುಂದುವರೆಸಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲ ಓವರ್ನಲ್ಲಿಯೇ ಅವರು ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು.
2026 ರಲ್ಲಿ ಅಭಿಷೇಕ್ ಶರ್ಮಾ ಖಾತೆ ತೆರೆಯಲು ವಿಫಲರಾಗಿರುವುದು ಇದು ಆರನೇ ಬಾರಿ. ಜನವರಿ 21 ರಿಂದ ಏಪ್ರಿಲ್ 5 ರವರೆಗೆ ನಡೆದ ಟಿ20 ಸರಣಿಯಲ್ಲಿ ಅಭಿಷೇಕ್ ಒಟ್ಟು 75 ದಿನಗಳಲ್ಲಿ 14 ಟಿ 20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು ಆರು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲೂ ಅಭಿಷೇಕ್ ಎರಡು ಬಾರಿ ಖಾತೆ ತೆರೆಯಲು ವಿಫಲರಾಗಿದ್ದರು.
ಅಭಿಷೇಕ್ ಐಪಿಎಲ್ 2026 ರಲ್ಲಿ ಇದುವರೆಗೆ ಕೇವಲ ಮೂರು ಪಂದ್ಯಗಳನ್ನು ಆಡಿದ್ದಾರೆ. ಆದರೆ ಆ ಮೂರು ಇನ್ನಿಂಗ್ಸ್ಗಳಲ್ಲಿ ಅವರು 18 ರ ಸರಾಸರಿಯಲ್ಲಿ ಕೇವಲ 55 ರನ್ ಗಳಿಸಿದ್ದಾರೆ. ಇದಕ್ಕೂ ಮೊದಲು ಅವರು ಕೆಕೆಆರ್ ವಿರುದ್ಧ 48 ಮತ್ತು ಆರ್ಸಿಬಿ ವಿರುದ್ಧ ಕೇವಲ 7 ರನ್ ಗಳಿಸಿದ್ದರು.
ಇದೀಗ ಏಪ್ರಿಲ್ 11 ರ ಶನಿವಾರದಂದು ಸನ್ರೈಸರ್ಸ್ ಹೈದರಾಬಾದ್ ತಂಡ ತನ್ನ ನಾಲ್ಕನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸುತ್ತಿದೆ. ಲೀಗ್ನಲ್ಲಿ ಮೂರು ಪಂದ್ಯಗಳನ್ನಾಡಿರುವ ಸನ್ರೈಸರ್ಸ್ ಒಂದು ಪಂದ್ಯವನ್ನು ಗೆದ್ದು ಎರಡು ಪಂದ್ಯಗಳಲ್ಲಿ ಸೋತಿದೆ. ಹೀಗಾಗಿ ಮುಂದಿನ ಸುತ್ತಿಗೆ ಅರ್ಹತೆ ಪಡೆಯುವ ದೃಷ್ಟಿಯಿಂದ ಸನ್ರೈಸರ್ಸ್ ತಂಡ ಉಳಿದ ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಹಾಗಾಗಬೇಕಿದ್ದರೆ, ಅಭಿಷೇಕ್ ತಂಡದ ಪರ ಅಬ್ಬರಿಸಬೇಕಿದೆ.
ಬೆಂಗಳೂರು, (ಏಪ್ರಿಲ್ 06): ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಕುತೂಹಲದಿಂದ ಕಾಯುತ್ತಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ (Puc Exam Result) ನಾಳೆ(ಏ.7) ಪ್ರಕಟವಾಗುವುದಿಲ್ಲ. ಶಿಕ್ಷಣ ಸಚಿವ ಮಧುಬಂಗಾರಪ್ಪ (Madhu Bangarappa) ಅವರೇ ಸುದ್ದಿಗೋಷ್ಠಿಯಲ್ಲಿ ಏಪ್ರಿಲ್ ಮೊದಲ ವಾರದಲ್ಲೇ ಫಲಿತಾಂಶ ನೀಡುವುದಾಗಿ ಘೋಷಿಸಿದ್ದರು. ಆದ್ರೆ, ನಾಳೆ(ಏಪ್ರಿಲ್ 7) ದ್ವಿತೀಯ ಪಿಯುಸಿ ರಿಸಲ್ಟ್ ಅನೌನ್ಸ್ ಆಗುವುದಿಲ್ಲ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (ಕೆಎಸ್ಇಎಬಿ) ಅಧ್ಯಕ್ಷ ಪ್ರಕಾಶ್ ನಿಟ್ಟಾಲಿ ಅವರು ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಬಹಳ ಕಾತರದಿಂದ ಕಾಯುತ್ತಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ನಿರಾಸೆಯಾಗಿದೆ.
ಈ ಮೊದಲು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಏಪ್ರಿಲ್ ಮೊದಲ ವಾರದಲ್ಲೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸುವುದಾಗಿ ಘೋಷಿಸಿದ್ದರು. ಹೀಗಾಗಿ ಪ್ರತಿವರ್ಷಕ್ಕಿಂತ ಈ ಬಾರಿ ಬೇಗ ರಿಸಲ್ಟ್ ಕೊಡುತ್ತಾರೆಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಸಂತಸ ವ್ಯಕ್ತಪಡಿಸಿದ್ದರು. ಆದರೆ ಇದೀಗ ಎಕ್ಸಾಂ ಬೋರ್ಡ್ ಅಧಿಕಾರಿಗಳು ನಾಳೆ ಫಲಿತಾಂಶ ಪ್ರಕಟವಾಗುವುದಿಲ್ಲ. ಇನ್ನೂ ಯಾವಾಗ ಫಲಿತಾಂಶ ಪ್ರಕಟಿಸಬೇಕು ಎನ್ನುವ ಕುರಿತು ದಿನಾಂಕ ನಿಗದಿಪಡಿಸಿಲ್ಲ ಎಂದು ತಿಳಿಸಿದ್ದಾರೆ.
ಮಾರ್ಚ್ನಲ್ಲಿ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗೆ ರಾಜ್ಯಾದ್ಯಂತ ಸುಮಾರು 7 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಾಗಿದ್ದರು. ಪರೀಕ್ಷೆ ಮುಗಿದ ಬೆನ್ನಲ್ಲೇ ಮೌಲ್ಯಮಾಪನ ಕಾರ್ಯ ಚುರುಕಿನಿಂದ ಸಾಗಿತ್ತು. ಆದರೆ, ಈಗ ಕೊನೆಯ ಕ್ಷಣದಲ್ಲಿ ಮೌಲ್ಯಮಾಪನ ಪ್ರಕ್ರಿಯೆಯ ಸಣ್ಣ ಪುಟ್ಟ ಕೆಲಸಗಳು ಬಾಕಿ ಇರುವುದರಿಂದ ಫಲಿತಾಂಶದ ದಿನಾಂಕ ಮುಂದೂಡಲ್ಪಟ್ಟಿದ್ದು, ಇನ್ನೆರಡು ದಿನ ವಿಳಂಬವಾಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ಇನ್ನು ಫಲಿತಾಂಶ ಯಾವಾಗ? ಏನು ಅಂತ ಶಿಕ್ಷಣ ಇಲಾಖೆ ಯಾವುದೇ ಮಾಹಿತಿ ನೀಡಿಲ್ಲ. ಇದರಿಂದ ಗೊಂದಲ ಸೃಷ್ಟಿಯಾಗಿದೆ.