Tirumala Laddus: ದಾಖಲೆ ಬರೆದ ಶ್ರೀವಾರಿ ಪ್ರಸಾದ; ಮೇ ತಿಂಗಳಲ್ಲಿ 1.21 ಕೋಟಿಗೂ ಅಧಿಕ ತಿರುಪತಿ ಲಡ್ಡು ಮಾರಾಟ! – Kannada News

ದಾಖಲೆ ಬರೆದ ಶ್ರೀವಾರಿ ಪ್ರಸಾದImage Credit source: Pinterest

ತಿರುಮಲ: ಕಲಿಯುಗದ ಪ್ರತ್ಯಕ್ಷ ದೈವ, ವೆಂಕಟೇಶ್ವರ ಸ್ವಾಮಿಯ ಪರಮ ಪವಿತ್ರ ಪ್ರಸಾದವಾದ ‘ತಿರುಮಲ ತಿರುಪತಿ ಲಡ್ಡು’ ಇದೀಗ ಹೊಸ ಇತಿಹಾಸ ಸೃಷ್ಟಿಸಿದೆ. ಪ್ರಪಂಚದಾದ್ಯಂತದ ಕೋಟ್ಯಂತರ ಭಕ್ತರ ಪಾಲಿಗೆ ಕೇವಲ ಪ್ರಸಾದವಾಗಿರದೆ, ಮಹಾ ದೈವಿಕ ಶಕ್ತಿಯ ಸಂಕೇತವಾಗಿರುವ ಶ್ರೀವಾರಿ ಲಡ್ಡು ಮಾರಾಟವು ಈ ವರ್ಷದ (2026) ಮೇ ತಿಂಗಳಲ್ಲಿ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ (TTD) ಅಧಿಕೃತವಾಗಿ ಘೋಷಿಸಿದೆ.

ದಾಖಲೆ ಬರೆದ ಮೇ ತಿಂಗಳ ಮಾರಾಟ:

ತಿರುಮಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಹೆಚ್ಚುತ್ತಿದ್ದು, ಅದಕ್ಕೆ ಪೂರಕವಾಗಿ ಲಡ್ಡು ಪ್ರಸಾದದ ಬೇಡಿಕೆಯೂ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಟಿಟಿಡಿ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, 2024 ರ ಮೇ ತಿಂಗಳಲ್ಲಿ 1.01 ಕೋಟಿ ಮತ್ತು 2025 ರ ಮೇ ತಿಂಗಳಲ್ಲಿ 1.10 ಕೋಟಿ ಲಡ್ಡುಗಳು ಮಾರಾಟವಾಗಿದ್ದವು. ಆದರೆ ಈ ವರ್ಷದ ಮೇ ತಿಂಗಳೊಂದರಲ್ಲೇ ಬರೋಬ್ಬರಿ 1,21,35,528 (1.21 ಕೋಟಿಗೂ ಹೆಚ್ಚು) ಲಡ್ಡುಗಳು ಮಾರಾಟವಾಗುವ ಮೂಲಕ ಹಳೆಯ ಎಲ್ಲಾ ದಾಖಲೆಗಳನ್ನು ಹಿಂದಿಕ್ಕಿದೆ.

ಬೇಸಿಗೆಯ ರಜಾದಿನಗಳಲ್ಲಿ ಭಕ್ತಸಾಗರ:

ಬೇಸಿಗೆಯ ರಜಾದಿನಗಳಲ್ಲಿ ತಿರುಮಲಕ್ಕೆ ಹರಿದುಬರುತ್ತಿರುವ ಭಕ್ತರ ಮಹಾಪೂರವನ್ನು ಸರಿದೂಗಿಸಲು ಟಿಟಿಡಿ ಪ್ರಸ್ತುತ ದಿನಕ್ಕೆ 4 ಲಕ್ಷಕ್ಕೂ ಹೆಚ್ಚು ಲಡ್ಡುಗಳನ್ನು ಸಿದ್ಧಪಡಿಸುತ್ತಿದೆ. ಕೇವಲ ಪ್ರಮಾಣ ಮಾತ್ರವಲ್ಲದೆ ಗುಣಮಟ್ಟ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಲಡ್ಡು ತಯಾರಿಕೆಯ ಕಚ್ಚಾ ವಸ್ತುಗಳಲ್ಲಿನ ಕಲ್ಮಶಗಳನ್ನು ಗುರುತಿಸಿ, ಸಂಪೂರ್ಣವಾಗಿ ತೆಗೆದುಹಾಕಲು ‘ಶ್ರೀವಾರಿ ಪೋಟು’ (ಮುಖ್ಯ ಅಡುಗೆಮನೆ) ನಲ್ಲಿ ಎರಡು ಕೃತಕ ಬುದ್ಧಿಮತ್ತೆ (AI) ಆಧಾರಿತ ‘ಬಣ್ಣ-ವಿಂಗಡಣೆ ಯಂತ್ರ’ಗಳನ್ನು (Color-Sorter Machines) ಸ್ಥಾಪಿಸಲಾಗಿದೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಕೌಂಟರ್‌ಗಳ ಹೆಚ್ಚಳ ಮತ್ತು ಡಿಜಿಟಲ್ ಸೌಲಭ್ಯ:

ಲಡ್ಡು ಖರೀದಿಗಾಗಿ ಭಕ್ತರು ಗಂಟೆಗಟ್ಟಲೆ ಕಾಯುವುದನ್ನು ತಪ್ಪಿಸಲು ಟಿಟಿಡಿ ಆಡಳಿತ ಮಂಡಳಿ ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಭಕ್ತರಿಗೆ ಲಡ್ಡುಗಳ ವಿತರಣೆಯನ್ನು ವೇಗಗೊಳಿಸಲು ಪ್ರಸ್ತುತ 56 ಕೌಂಟರ್‌ಗಳನ್ನು ಸಜ್ಜುಗೊಳಿಸಲಾಗಿದೆ. ಇದರೊಂದಿಗೆ, ಹೆಚ್ಚುವರಿ ಲಡ್ಡುಗಳನ್ನು ಸುಲಭವಾಗಿ ಖರೀದಿಸಲು ಡಿಜಿಟಲ್ ಪಾವತಿ ಸೌಲಭ್ಯವಿರುವ ಆಧುನಿಕ ‘ಸ್ವಯಂಚಾಲಿತ ಕಿಯೋಸ್ಕ್‌ಗಳನ್ನು’ ಸಹ ಅಳವಡಿಸಲಾಗಿದೆ. ಇನ್ನು ಬೇಸಿಗೆ ರಜೆ ಮತ್ತು ಬ್ರಹ್ಮೋತ್ಸವಗಳಂತಹ ಅತಿಯಾದ ಜನದಟ್ಟಣೆಯ ದಿನಗಳಲ್ಲಿ ಲಡ್ಡುಗಳ ಕೊರತೆಯಾಗದಂತೆ, ಟಿಟಿಡಿ ಯಾವಾಗಲೂ 8 ರಿಂದ 10 ಲಕ್ಷ ಲಡ್ಡುಗಳ ಬಫರ್ ಸ್ಟಾಕ್ ಸದಾ ಸಿದ್ಧವಾಗಿಟ್ಟಿರುತ್ತದೆ. ಕೋಟ್ಯಂತರ ಭಕ್ತರ ದೈವಿಕ ನಂಬಿಕೆಯ ಸಮ್ಮಿಲನವಾಗಿರುವ ‘ಶ್ರೀವಾರಿ ಲಡ್ಡು’, ಮಾರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುವ ಮೂಲಕ ತನ್ನ ಹಿರಿಮೆಯನ್ನು ಜಗತ್ತಿಗೆ ಮತ್ತೊಮ್ಮೆ ಸಾರಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:05 pm, Thu, 4 June 26

Source link

ತಂತ್ರಜ್ಞಾನದ ಸವಾಲಿಗೆ ಕಾರ್ಮಿಕನ ‘ವಿಗ್’ ಎಂಬ ಜಾಣ್ಮೆಯ ಉತ್ತರ: ಸಾಫ್ಟ್‌ವೇರ್ ಅಪ್‌ಡೇಟ್‌ಗೆ ದಾರೀದೀಪವಾದ ಘಟನೆ – Kannada News

ತೆಲಂಗಾಣ, ಜೂನ್ 04: ಗ್ರಾಮೀಣ ಭಾಗದ ಆರ್ಥಿಕತೆಗೆ ಬೆನ್ನೆಲುಬಾಗಿರುವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಪಾರದರ್ಶಕತೆ ತರಲು ಜಾರಿಗೆಗೊಳಿಸಲಾದ ಮುಖ ಗುರುತಿಸುವಿಕೆ (Face Recognition) ತಂತ್ರಜ್ಞಾನವು, ಇತ್ತೀಚೆಗೆ ಕಾರ್ಮಿಕರೊಬ್ಬರ ಅದ್ಭುತ ಸಮಯಪ್ರಜ್ಞೆ ಮತ್ತು ಜಾಣ್ಮೆಗೆ ಸಾಕ್ಷಿಯಾಗಿದೆ. ತಾಂತ್ರಿಕ ಸವಾಲೊಂದನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಯಶಸ್ವಿಯಾಗಿ ಎದುರಿಸಿದ ಕಾರ್ಮಿಕರ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಕಾರಾತ್ಮಕ ಚರ್ಚೆ ಮತ್ತು ಮೆಚ್ಚುಗೆಗೆ ಪಾತ್ರವಾಗಿದೆ.

ಭಕ್ತಿ ಮತ್ತು ತಂತ್ರಜ್ಞಾನದ ಜುಗಲ್ಬಂದಿ
ವೀರ್ಣಪಲ್ಲಿ ಮಂಡಲದ ಎರ್ರಗದ್ದತಂಡದ ನಾಲ್ವರು ಉದ್ಯೋಗ ಖಾತರಿ ಕಾರ್ಮಿಕರು ಇತ್ತೀಚೆಗೆ ತಮ್ಮ ಇಷ್ಟದೈವವಾದ ವೇಮುಲವಾಡ ರಾಜಣ್ಣ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ಹರಕೆಯ ರೂಪದಲ್ಲಿ ತಲೆಕೂದಲನ್ನು ಮುಂಡನ (ಬೋಳಿಸಿಕೊಂಡು) ಮಾಡಿಸಿಕೊಂಡಿದ್ದರು. ಮರುದಿನ ಎಂದಿನಂತೆ ಶಿಸ್ತಿನಿಂದ ಕೆಲಸಕ್ಕೆ ಹಾಜರಾದಾಗ, ಹಾಜರಾತಿ ದಾಖಲಿಸುವ NMMS ಮೊಬೈಲ್ ಆ್ಯಪ್ ಅವರ ಹೊಸ ರೂಪವನ್ನು ಗುರುತಿಸಲು ಆರಂಭದಲ್ಲಿ ವಿಫಲವಾಯಿತು.

ಹಾಜರಾತಿ ದಾಖಲಾಗದಿದ್ದರೆ ದಿನದ ಕೂಲಿ ನಷ್ಟವಾಗುವ ಸಾಧ್ಯತೆಯಿತ್ತು. ಆದರೆ ಗಾಬರಿಯಾಗದ ಕಾರ್ಮಿಕರು ಅತ್ಯಂತ ಚಾಣಾಕ್ಷ ಉಪಾಯವೊಂದನ್ನು ಹೂಡಿದರು. ತಮ್ಮ ಹಳೆಯ ಫೋಟೋದಲ್ಲಿರುವಂತೆ ಕಾಣಲು ತಲೆಯ ಮೇಲೆ ತಾತ್ಕಾಲಿಕವಾಗಿ ‘ವಿಗ್’ ಧರಿಸಿ ಆ್ಯಪ್ ಮುಂದೆ ನಿಂತರು. ತಂತ್ರಜ್ಞಾನವು ತಕ್ಷಣವೇ ಅವರ ಮುಖವನ್ನು ಗುರುತಿಸಿತ್ತು.

ವ್ಯವಸ್ಥೆಯ ಸುಧಾರಣೆಗೆ ಸಿಕ್ಕ ಉತ್ತಮ ಅವಕಾಶ
ಈ ಸ್ವಾರಸ್ಯಕರ ಘಟನೆಯು ಕೇವಲ ಸ್ಥಳೀಯರನ್ನು ರಂಜಿಸಿಲ್ಲ, ಬದಲಿಗೆ ತಂತ್ರಜ್ಞಾನವನ್ನು ಮತ್ತಷ್ಟು ಜನಸ್ನೇಹಿಯಾಗಿ ರೂಪಿಸಲು ಹಿರಿಯ ಅಧಿಕಾರಿಗಳಿಗೆ ಮತ್ತು ಸಾಫ್ಟ್‌ವೇರ್ ಅಭಿವೃದ್ಧಿಪಡಿಸುವ ತಂಡಗಳಿಗೆ ಒಂದು ಉತ್ತಮ ಪ್ರಾಯೋಗಿಕ ಉದಾಹರಣೆಯನ್ನು ಒದಗಿಸಿದೆ.

ಕೂದಲು ಬೋಳಿಸಿಕೊಂಡಾಗ, ಗಡ್ಡ ಬಿಟ್ಟಾಗ ಅಥವಾ ಸಣ್ಣಪುಟ್ಟ ಕೇಶವಿನ್ಯಾಸ ಬದಲಾದಾಗಲೂ ಗ್ರಾಮೀಣ ಕಾರ್ಮಿಕರಿಗೆ ಯಾವುದೇ ತೊಂದರೆಯಾಗದಂತೆ ಆ್ಯಪ್ ಅನ್ನು ಮತ್ತಷ್ಟು ಆಧುನಿಕವಾಗಿ ನವೀಕರಿಸಲು (Software Upgrade) ಇದು ದಾರೀದೀಪವಾಗಿದೆ. ಯಾವುದೇ ತಾಂತ್ರಿಕ ಅಡಚಣೆಯೂ ಭಾರತೀಯ ಗ್ರಾಮೀಣ ಜನರ ನೈಸರ್ಗಿಕ ಬುದ್ಧಿವಂತಿಕೆ ಮತ್ತು ಹಾಸ್ಯಪ್ರಜ್ಞೆಯ ಮುಂದೆ ದೊಡ್ಡದಲ್ಲ ಎಂಬುದನ್ನು ಈ ಘಟನೆ ಜಗತ್ತಿಗೆ ಸಾರಿದೆ.

ಡಿಜಿಟಲ್ ಇಂಡಿಯಾ ಅಭಿಯಾನದ ಭಾಗವಾಗಿ ತಂತ್ರಜ್ಞಾನವನ್ನು ಬಳಸುತ್ತಿರುವುದು ಶ್ಲಾಘನೀಯವಾಗಿದ್ದು, ಕಾರ್ಮಿಕರ ಈ ಯಶಸ್ವಿ ‘ವಿಗ್ ಪ್ರಯೋಗ’ವು ಮುಂದಿನ ದಿನಗಳಲ್ಲಿ ತಂತ್ರಜ್ಞಾನವನ್ನು ಮತ್ತಷ್ಟು ದೋಷಮುಕ್ತ ಹಾಗೂ ಜನಸಾಮಾನ್ಯರಿಗೆ ಹತ್ತಿರವಾಗಿಸಲು ನೆರವಾಗಲಿದೆ ಎಂದು ಹವಾಮಾನ ಮತ್ತು ಗ್ರಾಮೀಣಾಭಿವೃದ್ಧಿ ತಜ್ಞರು ಆಶಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ಅರ್ಜಿ ಸಲ್ಲಿಕೆ ಹೇಗೆ? ಏನೇನು ದಾಖಲೆಗಳು ಬೇಕು? ಇಲ್ಲಿದೆ ವಿವರ – Kannada News

ಬಿಎಂಟಿಸಿ ಬಸ್ (ಸಾಂದರ್ಭಿಕ ಚಿತ್ರ)Image Credit source: tv9

ಬೆಂಗಳೂರು, ಜೂನ್ 4: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಿಕೆ ಶಿವಕುಮಾರ್ (DK Shivakumar) ವಿದ್ಯಾರ್ಥಿ ಸಮೂಹಕ್ಕೆ ಭರ್ಜರಿ ಕೊಡುಗೆ ನೀಡಿದ್ದಾರೆ. ರಾಜ್ಯದ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ‘ಉಚಿತ ಬಸ್ ಪಾಸ್’ ನೀಡುವುದಾಗಿ ಮುಖ್ಯಮಂತ್ರಿಗಳು ಮಹತ್ತರ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ವ್ಯಾಪ್ತಿಯಲ್ಲಿ ಸದ್ಯ ಪಾಸ್ ಪಡೆಯಲು ಇರುವ ನಿಯಮಗಳು, ಪ್ರಸ್ತುತ ಇರುವ ದರ ಪಟ್ಟಿ ಹಾಗೂ ಇನ್ನು ಮುಂದೆ ಉಚಿತ ಪಾಸ್ ಪ್ರಕ್ರಿಯೆ ಹೇಗೆ ನಡೆಯಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿದ್ಯಾರ್ಥಿಗಳು ಬಸ್ ಪಾಸ್ ಪಡೆಯುವ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈಗಿರುವ ನಿಯಮಗಳ ಪ್ರಕಾರವೇ ಅರ್ಜಿ ಸಲ್ಲಿಸಬೇಕು. ಆದರೆ, ಮುಖ್ಯ ಬದಲಾವಣೆ ಎಂದರೆ ವಿದ್ಯಾರ್ಥಿಗಳು ಇನ್ನು ಮುಂದೆ ಪಾಸ್‌ಗಾಗಿ ಯಾವುದೇ ಹಣವನ್ನು ಪಾವತಿ ಮಾಡಬೇಕಿರುವುದಿಲ್ಲ.

ವಿದ್ಯಾರ್ಥಿಗಳ ಉಚಿತ ಬಸ್ ಪಾಸ್​ಗೆ ಅರ್ಜಿ ಸಲ್ಲಿಕೆ ಹೇಗೆ?

ವಿದ್ಯಾರ್ಥಿಗಳು ಯಾವುದೇ ಸೈಬರ್ ಸೆಂಟರ್, ಬೆಂಗಳೂರು ಒನ್ ಕೇಂದ್ರಗಳು ಅಥವಾ ತಮ್ಮ ಮೊಬೈಲ್ ಮೂಲಕ ‘ಸೇವಾಸಿಂಧು’ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಸೈಬರ್ ಸೆಂಟರ್‌ಗಳಲ್ಲಿ ಅರ್ಜಿ ಸಲ್ಲಿಸಲು ಫಾರ್ಮ್‌ಗೆ 10 ರೂ. ಹಾಗೂ ಆನ್‌ಲೈನ್ ಸಲ್ಲಿಕೆಗಾಗಿ 100 ರೂ. ಸೇವಾ ಶುಲ್ಕ ಇರಲಿದೆ.

ಉಚಿತ ಬಸ್ ಪಾಸ್​ಗೆ ಅಗತ್ಯ ದಾಖಲೆಗಳು

ವಿದ್ಯಾರ್ಥಿಯ ಆಧಾರ್ ಕಾರ್ಡ್, ಪ್ರಸ್ತುತ ಸಾಲಿನ ಕಾಲೇಜು ಪ್ರವೇಶಾತಿ ರಶೀದಿ (Admission Receipt) ಹಾಗೂ ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು ಇರಬೇಕು.

ಸಹ-ಸೀಲು ಕಡ್ಡಾಯ

ಆನ್‌ಲೈನ್ ಅಪ್ಲಿಕೇಶನ್ ಹಾಕಿದ ನಂತರ, ವಿದ್ಯಾರ್ಥಿಯು ತಾನು ಓದುತ್ತಿರುವ ವಿದ್ಯಾಸಂಸ್ಥೆಯ ಮುಖ್ಯಸ್ಥರಿಂದ (ಪ್ರಾಂಶುಪಾಲರು/ಮುಖ್ಯೋಪಾಧ್ಯಾಯರು) ಸಹಿ ಮತ್ತು ಸೀಲು ಹಾಕಿಸಿಕೊಳ್ಳಬೇಕು.

ಅಪ್ರೂವಲ್ ಮತ್ತು ಮೆಸೇಜ್

ಈ ಅರ್ಜಿಯನ್ನು ಬಿಎಂಟಿಸಿ ಪಾಸ್ ವಿಭಾಗದವರು ಪರಿಶೀಲಿಸಿ ಅನುಮೋದನೆ ನೀಡುತ್ತಾರೆ. ಅಪ್ರೂವಲ್ ಆದ ತಕ್ಷಣ ವಿದ್ಯಾರ್ಥಿಯ ಮೊಬೈಲ್‌ಗೆ ಸಂದೇಶ (SMS) ಬರುತ್ತದೆ.

ಉಚಿತ ಬಸ್ ಪಾಸ್ ಎಲ್ಲಿ ಸಿಗುತ್ತೆ?

ಮೊಬೈಲ್‌ಗೆ ಮೆಸೇಜ್ ಬಂದ ನಂತರ ಮೆಜೆಸ್ಟಿಕ್, ಕೆಂಗೇರಿ, ಶಾಂತಿನಗರ, ಎಲೆಕ್ಟ್ರಾನಿಕ್ ಸಿಟಿ, ಹೊಸಕೋಟೆ ಹಾಗೂ ಆನೇಕಲ್ ಬಸ್ ನಿಲ್ದಾಣಗಳಲ್ಲಿ (TTMC) ಪಾಸ್ ಪಡೆದುಕೊಳ್ಳಬಹುದು. ಆದರೆ, ಇಲ್ಲಿ ಈ ಹಿಂದೆ ನಿಗದಿಪಡಿಸಿದ್ದ ಪಾಸಿನ ಮೊತ್ತವನ್ನು ಪಾವತಿಸುವ ಅಗತ್ಯವಿರುವುದಿಲ್ಲ, ಉಚಿತವಾಗಿ ಪಾಸ್ ನೀಡಲಾಗುತ್ತದೆ.

ಹೆಣ್ಣುಮಕ್ಕಳಿಗೆ ಮೊದಲೇ ಉಚಿತ!

ಶಕ್ತಿ ಯೋಜನೆ ಅಡಿಯಲ್ಲಿ ಈಗಾಗಲೇ ರಾಜ್ಯದ ಎಲ್ಲಾ ಮಹಿಳಾ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಇರುವುದರಿಂದ ಅವರು ಪ್ರತ್ಯೇಕವಾಗಿ ಪಾಸ್ ಪಡೆಯುವ ಅಗತ್ಯವಿಲ್ಲ. ಕೇವಲ ವಿದ್ಯಾರ್ಥಿಗಳು (ಗಂಡು ಮಕ್ಕಳು) ಮಾತ್ರ ಮುಖ್ಯಮಂತ್ರಿಗಳು ಘೋಷಿಸಿರುವ ಈ ಉಚಿತ ಬಸ್ ಪಾಸಿಗೆ ಅರ್ಜಿ ಸಲ್ಲಿಸಬೇಕಾಗಿದೆ.

ಪ್ರಸ್ತುತ ಜಾರಿಯಲ್ಲಿರುವ ಬಸ್ ಪಾಸ್ ದರ ವಿವರ

ಮುಖ್ಯಮಂತ್ರಿಗಳ ಉಚಿತ ಪಾಸ್ ಆದೇಶ ಸಂಪೂರ್ಣ ಜಾರಿಗೆ ಬರುವ ಮುನ್ನ ಬಿಎಂಟಿಸಿಯಲ್ಲಿ ಚಾಲ್ತಿಯಲ್ಲಿದ್ದ ದರ ಪಟ್ಟಿ ಹೀಗಿದೆ (ಇನ್ನು ಮುಂದೆ ಈ ಪಾಸಿನ ದರಗಳು ವಿದ್ಯಾರ್ಥಿಗಳಿಗೆ ಸಂಪೂರ್ಣ ಮನ್ನಾ ಆಗಲಿವೆ):

ತರಗತಿ / ಕೋರ್ಸ್ ವಿವರ – ಹಳೆಯ ಪಾಸಿನ ದರ – ಸೇವಾ ಶುಲ್ಕ – ಒಟ್ಟು ಮೊತ್ತ (ಈಗ ಮನ್ನಾ)

  • 1 ರಿಂದ 7ನೇ ತರಗತಿ – ಉಚಿತ – ₹150 – ₹150
  • 8 ರಿಂದ 10ನೇ ತರಗತಿ (ಬಾಲಕರಿಗೆ) – ₹600 – ₹150 – ₹750
  • 11 ಮತ್ತು 12ನೇ ತರಗತಿ (ಪಿಯುಸಿ) – ₹900 – ₹150 – ₹1,050
  • ಪದವಿ ಮತ್ತು ಸ್ನಾತಕೋತ್ತರ – ₹1,150 – ₹150 – ₹1,300
  • ತಾಂತ್ರಿಕ ಮತ್ತು ವೈದ್ಯಕೀಯ – ₹1,680 – ₹150 ₹1,830

ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ವಿದ್ಯಾರ್ಥಿಗಳಿಗೆ ಈ ಹಿಂದೆಯೂ ಸಹ ಪಾಸಿನ ದರ ಉಚಿತವಾಗಿದ್ದು, ಕೇವಲ 150 ರೂ. ಸೇವಾ ಶುಲ್ಕ ಮಾತ್ರ ಇತ್ತು.

ಇದನ್ನೂ ಓದಿ: ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: ಸಿಎಂ ಘೋಷಿಸಿದ 6 ಕೊಡುಗೆಗಳಾವುವು?

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಈ ಐತಿಹಾಸಿಕ ‘ಉಚಿತ ಬಸ್ ಪಾಸ್‘ ಘೋಷಣೆಯಿಂದಾಗಿ ಇನ್ನು ಮುಂದೆ ವಿದ್ಯಾರ್ಥಿಗಳು ಮೇಲ್ಕಂಡ ಯಾವುದೇ ಶುಲ್ಕವನ್ನು ಭರಿಸಬೇಕಾಗಿಲ್ಲ. ಕೇವಲ ಆನ್‌ಲೈನ್‌ನಲ್ಲಿ ನಿಯಮಾನುಸಾರ ಅರ್ಜಿ ಸಲ್ಲಿಸಿ ಉಚಿತವಾಗಿ ಪಾಸ್ ಪಡೆದು ಪ್ರಯಾಣಿಸಬಹುದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಮೆರಿಕನ್ನರ ಮನಗೆದ್ದ ನಮ್ಮ ಹೆಮ್ಮೆಯ ಬೆಂಗಳೂರು!: ಊರಿಗೆ ಹೋಗಲ್ಲ ಎಂದು ಹಠ ಹಿಡಿದ ವಿದೇಶಿ ಮಕ್ಕಳು – Kannada News

ಬೆಂಗಳೂರು, ಜೂ.4: ಟ್ರಾಫಿಕ್, ಕಸದ ಸಮಸ್ಯೆ ಎಂದು ಬೆಂಗಳೂರನ್ನು ಸದಾ ಟೀಕಿಸುವವರ ನಡುವೆ, ಅಮೆರಿಕದ ಪ್ರವಾಸಿಯೊಬ್ಬರು ನಮ್ಮ ಸಿಲಿಕಾನ್ ಸಿಟಿಯ ಜನತೆ, ಸಂಸ್ಕೃತಿ ಮತ್ತು ಆತಿಥ್ಯವನ್ನು ಕೊಂಡಾಡಿ ಬರೆದಿರುವ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರ ಹೃದಯ ಗೆದ್ದಿದೆ. 5 ತಿಂಗಳ ಕಾಲ ಬೆಂಗಳೂರಿನಲ್ಲಿ ವಾಸವಿದ್ದ ಅಮೆರಿಕದ ಕುಟುಂಬವೊಂದು, “ನಮ್ಮ ಮಕ್ಕಳಿಗೆ ಇಲ್ಲಿಂದ ವಾಪಸ್ ಸ್ವದೇಶಕ್ಕೆ ಹೋಗಲು ಮನಸ್ಸಿಲ್ಲ, ಬೆಂಗಳೂರಿಗೆ ನಮ್ಮ ಕಡೆಯಿಂದ 5 ಸ್ಟಾರ್ ರೇಟಿಂಗ್!” ಎಂದು ಹೆಮ್ಮೆಯಿಂದ ಹೇಳಿಕೊಂಡಿದೆ.

ರೆಡ್ಡಿಟ್​​ನಲ್ಲಿ ‘ಥ್ಯಾಂಕ್ಸ್ ಬೆಂಗಳೂರು’ (Thanks Bangalore) ಎಂಬ ಶೀರ್ಷಿಕೆಯಡಿ ಪೋಸ್ಟ್ ಮಾಡಿರುವ ವಿದೇಶಿ ಪ್ರಜೆ, “ನಾವು ಭಾರತದೊಂದಿಗೆ ಯಾವುದೇ ಪೂರ್ವ ಸಂಪರ್ಕವಿಲ್ಲದ ಅಮೆರಿಕನ್ನರು. ಕೆಲಸದ ನಿಮಿತ್ತ 5 ತಿಂಗಳ ಪ್ರವಾಸಕ್ಕಾಗಿ ಇಲ್ಲಿಗೆ ಬಂದಿದ್ದೆವು. ಬರುವ ಮುನ್ನ ಸೋಶಿಯಲ್​ ಮೀಡಿಯಾದಲ್ಲಿ ಬೆಂಗಳೂರಿನ ಕಸ, ಟ್ರಾಫಿಕ್ ಮತ್ತು ಗಾಳಿಯ ಗುಣಮಟ್ಟದ ಕೊರತೆಯ ಬಗ್ಗೆ ನೆಗೆಟಿವ್ ಕಮೆಂಟ್‌ಗಳನ್ನು ಓದಿ ಆತಂಕಗೊಂಡಿದ್ದೆವು. ಆದರೆ ಆ ಎಲ್ಲಾ ನೆಗೆಟಿವ್ ಮಾತುಗಳ ನಡುವೆಯೂ ನಿಮ್ಮದು ನಿಜಕ್ಕೂ ಒಂದು ಅದ್ಭುತವಾದ ನಗರ!” ಎಂದು ಬರೆದುಕೊಂಡಿದ್ದಾರೆ.

ಇಲ್ಲಿದೆ ನೋಡಿ ವೈರಲ್​​ ಪೋಸ್ಟ್​:

Thanks Bangalore
by
u/No-Day-2709 in
bangalore

ಇನ್ನು ಕನ್ನಡಿಗರ ಸೌಮ್ಯ ಸ್ವಭಾವ ಮತ್ತು ಸಹಾಯ ಹಸ್ತವನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಅವರು, “ಇಲ್ಲಿನ ಪ್ರತಿಯೊಬ್ಬರೂ ತುಂಬಾ ದಯಾಳುಗಳು. ನಾವು ಎಲ್ಲೇ ಹೋದರೂ ಸ್ನೇಹಪರ ಜನ ಸಿಗುತ್ತಿದ್ದರು. ಅದರಲ್ಲೂ ವಿಶೇಷವಾಗಿ ನಾವು ಬೆಂಗಳೂರಿನ ಬಸ್‌ಗಳಲ್ಲಿ ದಾರಿ ಹುಡುಕಲಾಗದೆ ಪರದಾಡಿದಾಗಲೆಲ್ಲಾ, ಸ್ಥಳೀಯರೇ ಮುಂದೆ ಬಂದು ನಮಗೆ ದಾರಿ ತೋರಿಸಿ ಸಹಾಯ ಮಾಡಿದರು. ನಮ್ಮ 5 ತಿಂಗಳ ವಾಸ್ತವ್ಯದಲ್ಲಿ ಯಾರೂ ನಮಗೆ ವಂಚಿಸಲು ಪ್ರಯತ್ನಿಸಲಿಲ್ಲ, ಯಾವುದೇ ಅಪಾಯ ಎದುರಾಗಲಿಲ್ಲ (ರಸ್ತೆಗಳ ಟ್ರಾಫಿಕ್ ಹೊರತುಪಡಿಸಿ). ಕೊನೆಯದಾಗಿ ಹೇಳಬೇಕೆಂದರೆ, ನಮಗೆ ಆತಿಥ್ಯ ನೀಡಿದ್ದಕ್ಕೆ ಧನ್ಯವಾದಗಳು, ನಾವು ಖಂಡಿತಾ ಮತ್ತೆ ಬೆಂಗಳೂರಿಗೆ ಬರುತ್ತೇವೆ” ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ರಸ್ತೆಯೋ ಅಥವಾ ಸಾವಿನ ರನ್-ವೇಯೋ?: ಬೆಂಗಳೂರಿಗರ ಜೀವ ಹಿಂಡುತ್ತಿರುವ ಗುಂಡಿಗಳು; GBA ನಿದ್ರೆಗೆ ಜಾರಿದೆಯೇ?

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬೆಂಗಳೂರಿನ ನೆಟ್ಟಿಗರು ಭಾವುಕರಾಗಿದ್ದಾರೆ. ಒಬ್ಬ ಬಳಕೆದಾರರು, “ನಮ್ಮ ನಗರದ ಆತಿಥ್ಯ, ಆಹಾರ ಮತ್ತು ಜನರ ಪ್ರೀತಿ ನಿಮಗೆ ಇಷ್ಟವಾಗಿದ್ದಕ್ಕೆ ಸಂತೋಷ, ಮತ್ತೆ ಬನ್ನಿ” ಎಂದು ಬರೆದಿದ್ದಾರೆ. ಮತ್ತೊಬ್ಬರು, “ಕೆಲವು ನಾಗರಿಕ ಪ್ರಜ್ಞೆಯ ಕೊರತೆ ಮತ್ತು ಮೂಲಸೌಕರ್ಯದ ಸಮಸ್ಯೆಗಳಿದ್ದರೂ, ಮುಕ್ತ ಮನಸ್ಸಿನಿಂದ ಬರುವ ವಿದೇಶಿಗರಿಗೆ ಬೆಂಗಳೂರು ಅತ್ಯಂತ ಸುರಕ್ಷಿತ ಮತ್ತು ಸುಂದರ ನಗರ” ಎಂದು ಕಮೆಂಟ್ ಮಾಡಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಬೆಳಗ್ಗೆಯಿಂದ ರಾತ್ರಿ ತನಕ ಬ್ಯುಸಿ, ಆದ್ರೂ ಲೈಫ್‌ನಲ್ಲಿ ಫುಲ್‌ ಹ್ಯಾಪಿ; ಈ ಯುವಕನ ಬ್ಯುಸಿ ಶೆಡ್ಯೂಲ್ ಹೇಗಿದೆ ನೋಡಿ – Kannada News

ನಮ್ಮಲ್ಲಿ ಯಾರನ್ನಾದ್ರೂ ಕೇಳಿದ್ರೆ ಕೆಲಸಕ್ಕೆ (Office) ಹೋಗಿ ಬಂದು ಸುಸ್ತು ಆಗುತ್ತದೆ. ಆಫೀಸ್‌ಗೆ ಹೋಗಿ ಬರುವಷ್ಟರಲ್ಲಿ ಟೈಮ್ ಆಗಿ ಬಿಡುತ್ತದೆ. ಮನೆಗೆ ಬಂದು ಮಲಗಿದ್ರೆ ಸಾಕು ಎಂದು ಹೇಳುವವರೇ ಹೆಚ್ಚು. ಇದೆಲ್ಲದರ ನಡುವೆ ಈ ಯುವಕನ ಬಿಡುವಿಲ್ಲದ ಕೆಲಸ ನೋಡಿದ್ರೆ ನೀವು ಶಾಕ್ ಆಗ್ತೀರಾ. ಈ ಎನರ್ಜಿಟಿಕ್ ಯುವಕನ ಹೆಸರು ದೀಪಕ್ ಪಾಂಡೆ (Deepak Pandey). ಬೆಳಗ್ಗೆ 9 ರಿಂದ 5 ಗಂಟೆ ತನಕ ಆಫೀಸ್ ಕೆಲಸ. ಸಂಜೆ ಆಫೀಸ್‌ ಮುಗಿಸಿ ಬಂದು ರಾತ್ರಿ 11 ಗಂಟೆವರೆಗೆ ಬೈಕ್ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡ್ತಾನೆ. ಅದರ ಪಿಹೆಚ್‌ಡಿ ಓದು ಹಾಗೂ ವಿಡಿಯೋ ಎಡಿಟಿಂಗ್ ಹೀಗೆ ಎಲ್ಲಾ ಕೆಲಸವನ್ನು ಯಾವುದೇ ಒತ್ತಡವಿಲ್ಲದೇ ನಿಭಾಯಿಸಿಕೊಂಡು ಹೋಗುವುದನ್ನು ಕಂಡು ಎಲ್ಲರೂ ಅಚ್ಚರಿ ಪಟ್ಟುಕೊಂಡಿದ್ದಾರೆ. ಸದಾ ಆಕ್ಟಿವ್ ಆಗಿರುವ ಈ ಯುವಕನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ದೀಪಕ್ ಪಾಂಡೆ ಎಂಬ ಯುವಕ ತನ್ನ ಇನ್‌ಸ್ಟಾಗ್ರಾಮ್‌ ವಿಡಿಯೋ ಹಂಚಿಕೊಂಡಿದ್ದಾನೆ. ಈ ಕ್ಲಿಪಿಂಗ್‌ನಲ್ಲಿ ನಾನೀಗ ಮೊದಲಿಗಿಂತಲೂ ಖುಷಿಯಾಗಿದ್ದೇನೆ. ನಾನು ಯಾಕೆ ಖುಷಿಯಾಗಿದ್ದೇನೆ ಗೊತ್ತಾ? ನನ್ನ ಜೀವನದಲ್ಲಿ ಮೊದಲ ಬಾರಿಗೆ, ನನ್ನಲ್ಲಿ ಎಷ್ಟೊಂದು ಸಾಮರ್ಥ್ಯವಿದೆ ಎಂಬುದು ನನಗೆ ತಿಳಿಯಿತು. ನಾಲ್ಕು ಜನ ಏನು ಅಂತಾರೋ ನನ್ನಿಂದ ಈ ಕೆಲಸ ಸಾಧ್ಯವಿಲ್ಲ ಅಥವಾ ಹೊಸದಾಗಿ ಏನಾದರೂ ಮಾಡಬೇಕೆಂದರೆ ನಾನು ಈಗ ಮಾಡುವ ಕೆಲಸ ಬಿಡಬೇಕು ಎಂಬ ಭಯವಿತ್ತು. ಈ ಭಯದಿಂದಲೇ ನನಗೆ ನನ್ನ ಸಾಮರ್ಥ್ಯದ ಅರಿವಿರಲಿಲ್ಲ. ನಾನು ನಿಧಾನವಾಗಿ ನನನ್ನು ಬದಲಾಯಿಸಿಕೊಂಡೆ ಎಂದು ಹೇಳಿದ್ದಾನೆ.

ವೈರಲ್ ವಿಡಿಯೋ ಇಲ್ಲಿದೆ

ಮೊದಲಿಗೆ ಪಿಎಚ್‌ಡಿಗೆ ಸೇರಿಕೊಂಡೆ, ಆ ಬಳಿಕ ಬೈಕ್ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡಲು ಮುಂದಾದೆ. ತದನಂತರದಲ್ಲಿ ಕಂಟೆಂಟ್ ಕ್ರಿಯೇಷನ್‌ ನತ್ತ ಹೆಜ್ಜೆ ಹಾಕಿದೆ.. ಇಂದು ನಾನು ಎಲ್ಲವನ್ನೂ ಸುಲಭವಾಗಿ ನಿಭಾಯಿಸಬಲ್ಲೆ ಎಂಬ ಧೈರ್ಯ ಹಾಗೂ ಆತ್ಮವಿಶ್ವಾಸವಿದೆ ಎಂದಿದ್ದಾನೆ.

ಇದೆಲ್ಲವನ್ನು ಓದಿದ ಮೇಲೆ ನಿಮಗೂ ಇದೆಲ್ಲವೂ ನನಗೇಕೆ ಸಾಧ್ಯವಿಲ್ಲ, ನಾನೇಕೆ ಮಾಡಬಾರದು ಎಂದು ಅನಿಸಬಹುದು. ನಿಮ್ಮಲ್ಲಿ ಸಾಮರ್ಥ್ಯವಿದೆ, ನಿಮಗೆ ಏನಾದ್ರೂ ಮಾಡಬೇಕು ಎಂದುಕೊಂಡಿದ್ದರೆ ಅದಕ್ಕಾಗಿ ಕೆಲಸ ಮಾಡಿ. ನೀವು ಅಂದುಕೊಂಡದ್ದನ್ನು ಮಾಡಲು ಓದು ನಿಲ್ಲಿಸಬೇಡಿ, ಕೆಲಸ ಬಿಡಬೇಡಿ. ಒಮ್ಮಿಂದ ಒಮ್ಮೆ ಕಷ್ಟಗಳು ಬರುತ್ತದೆ. ಆದರೆ ಯಶಸ್ಸು ಸಿಕ್ಕಾಗ, ನಿಮ್ಮ ಸಾಮರ್ಥ್ಯದ ಅರಿವಾದಾಗ ನಿಮಗೆ ನಿಜಕ್ಕೂ ಖುಷಿ ಸಿಗುತ್ತದೆ ಎಂದು ಹೇಳಿರುವುದನ್ನು ಕಾಣಬಹುದು.

ಇದನ್ನೂ ಓದಿ: ನಿವೃತ್ತಿಯಾಗುವ ವಯಸ್ಸಲ್ಲಿ ಸಿಕ್ತು ಸರ್ಕಾರಿ ಕೆಲಸ; ಪರೀಕ್ಷೆ ಬರೆದ 20 ವರ್ಷಗಳ ನಂತರ ಬಂದ ನೇಮಕಾತಿ ಪತ್ರ!

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಒಬ್ಬ ಬಳಕೆದಾರ, ಆಲ್ ದಿ ಬೆಸ್ಟ್, ನಿಮಗೆ ಒಳ್ಳೆದಾಗಲಿ ಎಂದಿದ್ದಾರೆ. ಇನ್ನೊಬ್ಬರು, ನಿಜಕ್ಕೂ ಈ ಯುವಕ ಸ್ಫೂರ್ತಿ ಎಂದರೆ, ಮತ್ತೊಬ್ಬರು, ನೀವು ನಿಜಕ್ಕೂ ಗ್ರೇಟ್ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:17 pm, Thu, 4 June 26

Source link

ಜಮೀರ್ ಅಹ್ಮದ್​ಗೆ ಡಿಕೆ ಶಿವಕುಮಾರ್ ಸಂಪುಟದಲ್ಲಿ ಮುಂದೆಯೂ ಸ್ಥಾನ ಸಿಗೋದು ಅನುಮಾನ! – Kannada News

ಬೆಂಗಳೂರು, ಜೂನ್ 4: ಸಿದ್ದರಾಮಯ್ಯ ಸರ್ಕಾರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ಮುಖವಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಖಾನ್​ಗೆ (Zameer Ahmed Khan) ಡಿಕೆ ಶಿವಕುಮಾರ್ (DK Shivakumar) ನೂತನ ಸಂಪುಟದಲ್ಲಿ ಮೊದಲ ಅವಕಾಶ ಕೈತಪ್ಪಿದೆ. ಸಚಿವ ಸಂಪುಟ ವಿಸ್ತರಣೆ ವೇಳೆಯೂ ಸ್ಥಾನ ತಪ್ಪುವ ಸಾಧ್ಯತೆ ದಟ್ಟವಾಗಿದೆ. ಮುಂದಿನ ದಿನಗಳಲ್ಲೂ ಕಾಂಗ್ರೆಸ್ 2.0 ಸರ್ಕಾರದಲ್ಲಿ ಜಮೀರ್​​ಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳು ಕ್ಷೀಣಿಸಿವೆ ಎಂದು ಉನ್ನತ ಮೂಲಗಳು ತಿಳಿಸಿವೆ. ದಾವಣಗೆರೆ ದಕ್ಷಿಣ ಉಪಚುನಾವಣೆಯ ವೇಳೆ ಉಂಟಾದ ಆಂತರಿಕ ಭಿನ್ನಮತ ಹಾಗೂ ಬಂಡಾಯವೇ ಜಮೀರ್‌ಗೆ ಹಿನ್ನಡೆಯಾಗಲು ಪ್ರಮುಖ ಕಾರಣ ಎನ್ನಲಾಗಿದೆ.

ದಾವಣಗೆರೆ ಉಪಚುನಾವಣೆ ಬಂಡಾಯ ಹಾಗೂ ಹೈಕಮಾಂಡ್ ಅಸಮಾಧಾನ

ಏಪ್ರಿಲ್ 9 ರಂದು ನಡೆದಿದ್ದ ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಅಲ್ಪಸಂಖ್ಯಾತ ಮತಬ್ಯಾಂಕ್ ಭಾರಿ ಪ್ರಮಾಣದಲ್ಲಿ ಒಡೆದುಹೋಗಿತ್ತು. ಸುಮಾರು 20 ಕ್ಕೂ ಹೆಚ್ಚು ಮುಸ್ಲಿಂ ಪಕ್ಷೇತರ ಅಭ್ಯರ್ಥಿಗಳು ಕಣಕ್ಕಿಳಿದು ಅಲ್ಪಸಂಖ್ಯಾತರ ಮತಗಳನ್ನು ಹಂಚಿಕೊಂಡಿದ್ದರು. ಇದರೊಂದಿಗೆ ಎಸ್‌ಡಿಪಿಐ (SDPI) ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಅವರು ಬರೋಬ್ಬರಿ 19,000 ಮತಗಳನ್ನು ಪಡೆದು ತೃತೀಯ ಸ್ಥಾನ ಗಳಿಸಿದ್ದು ಕಾಂಗ್ರೆಸ್‌ಗೆ ದೊಡ್ಡ ಹಿನ್ನಡೆ ತಂದಿತ್ತು. ಈ ಇಡೀ ಅಸಮಾಧಾನ ಮತ್ತು ಬಂಡಾಯದ ಹಿಂದೆ ಜಮೀರ್ ಅಹ್ಮದ್ ಖಾನ್ ಅವರ ಕೈವಾಡವಿದೆ ಎಂದು ಹೈಕಮಾಂಡ್‌ಗೆ ದೂರು ಸಲ್ಲಿಕೆಯಾಗಿತ್ತು. ವಿಡಿಯೋ ಹಾಗೂ ಆಡಿಯೋವೊಂದು ವೈರಲ್ ಆಗಿದ್ದು, ಅದು ಎಐ (AI) ಸೃಷ್ಟಿತ ಎಂದು ಜಮೀರ್ ಸಮರ್ಥಿಸಿಕೊಂಡಿದ್ದರೂ ವರಿಷ್ಠರು ಅದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಗಾಗಿ ಜಬ್ಬಾರ್ ಮತ್ತು ನಸೀರ್ ಅಹ್ಮದ್ ಅವರನ್ನು ಕೈಬಿಡಲಾಗಿದ್ದು, ಈಗ ಜಮೀರ್ ಅವರ ಹೆಸರನ್ನು ಮೊದಲ ಪಟ್ಟಿಯಿಂದ ದೂರ ಇಡಲಾಗಿದೆ.

ಪ್ರಮಾಣವಚನ ಕಾರ್ಯಕ್ರಮದ ನಡುವೆಯೇ ಎದ್ದುಹೋಗಿದ್ದ ಜಮೀರ್

ಬುಧವಾರ (ಜೂನ್ 3) ಲೋಕಭವನದಲ್ಲಿ ಡಿಕೆ ಶಿವಕುಮಾರ್ ಹಾಗೂ ಸಂಪುಟ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭದ ವೇಳೆ ಜಮೀರ್ ಅಹ್ಮದ್ ಖಾನ್ ಅರ್ಧದಲ್ಲೇ ಎದ್ದುಹೋಗಿರುವ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ‘ವಂದೇ ಮಾತರಂ’ ಪ್ರಸಾರವಾಗುತ್ತಿದ್ದ ವೇಳೆಯೇ ಜಮೀರ್ ಎದ್ದುಹೋಗಿರುವ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದೂ ಸಹ ಮುಂದಿನ ದಿನಗಳಲ್ಲಿ ಜಮೀರ್​ಗೆ ಹಿನ್ನಡೆಯಾಗುವ ಸಾಧ್ಯತೆ ಇದೆ.

ಜಮೀರ್ ಪರ ಸಚಿವ ಸತೀಶ್ ಜಾರಕಿಹೊಳಿ ಬ್ಯಾಟಿಂಗ್

ಜಮೀರ್ ಅಹ್ಮದ್ ಖಾನ್​ಗೆ ಸಚಿವ ಸ್ಥಾನ ಕೈತಪ್ಪಿರುವ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಸಚಿವ ಸತೀಶ್ ಜಾರಕಿಹೊಳಿ, ಮಾಜಿ ಸಚಿವರ ಪರವಾಗಿ ಧ್ವನಿ ಎತ್ತಿದ್ದಾರೆ. ಶಾಸಕ ಜಮೀರ್ ಅಹ್ಮದ್ ಖಾನ್ ಸೇವೆ ಮತ್ತು ಶಕ್ತಿ ನಮ್ಮ ಪಕ್ಷಕ್ಕೆ ತೀರಾ ಅಗತ್ಯವಿದೆ. ಜಮೀರ್ ಅವರಿಗೆ ಸಚಿವ ಸ್ಥಾನ ತಪ್ಪಿಸಲೆಂದೇ ಕೊನೆ ಹಂತದಲ್ಲಿ ವ್ಯವಸ್ಥಿತ ರಾಜಕಾರಣ ಮಾಡಲಾಗಿದ್ದು, ಉದ್ದೇಶಪೂರ್ವಕವಾಗಿ ಆಡಿಯೋವನ್ನು ಹರಿಬಿಡಲಾಗಿದೆ. ಒಂದು ಆಡಿಯೋ ಬಿಟ್ಟರೇನು, ಎರಡು ಆಡಿಯೋ ಬಿಟ್ಟರೇನು? ಒಟ್ಟಿನಲ್ಲಿ ಅವರ ಸಚಿವ ಸ್ಥಾನ ತಪ್ಪಿಸಬೇಕೆಂಬ ವಿರೋಧಿಗಳ ಉದ್ದೇಶ ಸಫಲವಾಯಿತು ಎಂದು ಜಾರಕಿಹೊಳಿ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ತೀವ್ರ ಸ್ವರೂಪ ಪಡೆದ ಜಮೀರ್ ಅಹ್ಮದ್‌ ಆಡಿಯೋ ಕೇಸ್: ಹೈಕಮಾಂಡ್​​​​ಗೆ ದೂರು

ಅಲ್ಲದೆ, ಇದಕ್ಕೂ ಹಳೆಯ ಸಿಡಿ ಫ್ಯಾಕ್ಟರಿ ಆರೋಪಗಳಿಗೂ ಯಾವುದೇ ಸಂಬಂಧವಿಲ್ಲ ಎಂದಿರುವ ಅವರು, ಜಮೀರ್ ಶಕ್ತಿಯನ್ನು ಪಕ್ಷ ಕಳೆದುಕೊಳ್ಳಬಾರದು ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:17 pm, Thu, 4 June 26

Source link

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ – Kannada News

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಂಸ್ಥಾಪಕ ಮತ್ತು ಮೊದಲ ಅಧ್ಯಕ್ಷ ಲಲಿತ್ ಮೋದಿ ಅವರು 2010ರ ಕೊಚ್ಚಿ ಟಸ್ಕರ್ಸ್ ಕೇರಳ ಫ್ರಾಂಚೈಸಿ ವಿವಾದಕ್ಕೆ ಸಂಬಂಧಿಸಿದಂತೆ ದಶಕದ ಬಳಿಕ ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ. ಅಂದಿನ ಯುಪಿಎ ಸರ್ಕಾರದ ಪ್ರಮುಖ ನಾಯಕರು ಮತ್ತು ಬಿಸಿಸಿಐ ಉನ್ನತ ಅಧಿಕಾರಿಗಳು ತಮ್ಮ ಮೇಲೆ ಒತ್ತಡ ಹೇರಿದ್ದರು ಎಂದು ಲಲಿತ್ ಮೋದಿ ಬಹಿರಂಗಪಡಿಸಿದ್ದಾರೆ.

ಸೋನಿಯಾ ಗಾಂಧಿ ಬೆಂಬಲ, ನಾಯಕರಿಂದ ಕರೆಗಳು

ಸಂದರ್ಶನವೊಂದರಲ್ಲಿ ಅಂದಿನ ಘಟನಾವಳಿಗಳನ್ನು ನೆನಪಿಸಿಕೊಂಡಿರುವ ಲಲಿತ್ ಮೋದಿ, ‘ಅಂದು ಶಶಿ ತರೂರ್ ಅವರಿಗೆ ಸೋನಿಯಾ ಗಾಂಧಿ ಅವರ ಸಂಪೂರ್ಣ ಬೆಂಬಲವಿತ್ತು. ಆ ದಿನಗಳಲ್ಲಿ ನನಗೆ ಅಹ್ಮದ್ ಪಟೇಲ್ ಮತ್ತು ಪ್ರಣಬ್ ಮುಖರ್ಜಿ ಅವರಿಂದ ಕರೆಗಳು ಬಂದಿದ್ದವು. ಅಹ್ಮದ್ ಪಟೇಲ್ ಬರುತ್ತಿದ್ದಾರೆ ಎಂದು ರಾಜೀವ್ ಶುಕ್ಲಾ ನನ್ನ ಬಳಿ ಬಂದು ಹೇಳುತ್ತಿದ್ದರು’ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಷೇರು ಹಂಚಿಕೆ ಬಗ್ಗೆ ಅನುಮಾನ

ಕೊಚ್ಚಿ ಫ್ರಾಂಚೈಸಿಯ ಆರ್ಥಿಕ ಒಪ್ಪಂದದ ಬಗ್ಗೆ ಪ್ರಶ್ನೆ ಎತ್ತಿರುವ ಅವರು, ‘ಕೊಚ್ಚಿ ಕನ್ಸೋರ್ಟಿಯಂ ತಂಡಕ್ಕಾಗಿ 350 ಮಿಲಿಯನ್ ಡಾಲರ್ ನೀಡಲು ಷೇರುದಾರರು ಮುಂದಾಗಿದ್ದರು. ಅದು ಕೊಚ್ಚಿಯಂತಹ ತಂಡಕ್ಕೆ ಇಷ್ಟು ಹಣ ಕೊಡಲು ಯಾರಿಂದಾದರೂ ಸಾಧ್ಯವೇ? ತಂಡಕ್ಕೆ ಬರುವ ಒಟ್ಟು ಆದಾಯದ ಪ್ರತಿ ಡಾಲರ್‌ನಲ್ಲಿ ಶೇ. 15ರಷ್ಟು ಹಣ ಸುನಂದಾ ಪುಷ್ಕರ್ ಅವರಿಗೆ ಹೋಗುತ್ತಿತ್ತು. ಈ ಒಪ್ಪಂದ ಮುಂದೆ ಒಂದು ದಿನ ಕುಸಿಯುತ್ತದೆ ಎಂಬುದು ನನಗೆ ಮೊದಲೇ ಗೊತ್ತಿತ್ತು, ಎರಡು ವರ್ಷಗಳ ನಂತರ ಅದೇ ಆಯಿತು’ ಎಂದಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಕನ್ಸೋರ್ಟಿಯಂ ಸದಸ್ಯರ ಸಭೆಯ ವಿವರ ಹಂಚಿಕೊಂಡ ಲಲಿತ್ ಮೋದಿ, ‘ನಾನು ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಪ್ರತಿಯೊಬ್ಬ ಸದಸ್ಯರನ್ನು ಭೇಟಿಯಾಗಲು ಬಯಸಿದ್ದೆ. ಬೆಂಗಳೂರಿನಲ್ಲಿ ಸಭೆ ನಡೆದಾಗ ಸುನಂದಾ ಪುಷ್ಕರ್ ಅವರನ್ನು ಹೊರತುಪಡಿಸಿ ಉಳಿದೆಲ್ಲಾ ಷೇರುದಾರರು ಉಪಸ್ಥಿತರಿದ್ದರು. ಸುನಂದಾ ಪುಷ್ಕರ್ ಅವರಿಗೆ ಶೇ. 25ರಷ್ಟು ಉಚಿತ ಷೇರುಗಳನ್ನು ನೀಡಲಾಗುತ್ತಿತ್ತು. ಅಂದರೆ ಇಲ್ಲಿ ಶೇ. 75ರಷ್ಟು ಶೇರುದಾರರು ಶೇ. 100ರಷ್ಟು ವೆಚ್ಚವನ್ನು ಭರಿಸುತ್ತಿದ್ದರು. ಸುನಂದಾ ಯಾರೆಂದು ನಾನು ಪ್ರಶ್ನಿಸಿದೆ ಮತ್ತು ಯಾರೆಂದು ತಿಳಿಯುವವರೆಗೂ ಸಹಿ ಮಾಡುವುದಿಲ್ಲ ಎಂದೆ. ತಕ್ಷಣವೇ ನನಗೆ ಅಂದಿನ ವಿದೇಶಾಂಗ ಖಾತೆಯ ಸಹಾಯಕ ಸಚಿವ ಶಶಿ ತರೂರ್ ಅವರಿಂದ ಕರೆ ಬಂತು’ ಎಂದು ಹೇಳಿದ್ದಾರೆ.

‘ಲಲಿತ್, ಸುನಂದಾ ಪುಷ್ಕರ್ ಬಗ್ಗೆ ಪ್ರಶ್ನಿಸಬೇಡ. ಹಾಗೆ ಮಾಡಿದರೆ ನಾಳೆ ಬೆಳಗ್ಗೆ ನಿನ್ನ ಮೇಲೆ ಐಟಿ ದಾಳಿ ಮಾಡಿಸುತ್ತೇನೆ ಎಂದು ಶಶಿ ತರೂರ್ ಬೆದರಿಕೆ ಹಾಕಿದರು. ನೀನು ದೇಶದ ವಿದೇಶಾಂಗ ಸಚಿವನಾಗಿರಬಹುದು, ಆದರೆ ನನಗೆ ಹೀಗೆ ಹೇಳುವ ಧೈರ್ಯ ಮಾಡಬೇಡ ಎಂದು ಹೇಳಿ ನಾನು ಫೋನ್ ಕಟ್ ಮಾಡಿದೆ’ ಎಂದು ಲಲಿತ್ ಮೋದಿ ಅಂದಿನ ಸಂಭಾಷಣೆಯನ್ನು ಬಿಚ್ಚಿಟ್ಟಿದ್ದಾರೆ.

ಬಿಸಿಸಿಐ ಅಧ್ಯಕ್ಷರಿಂದ ಒತ್ತಡ

ಮಧ್ಯರಾತ್ರಿ ನಡೆದ ಹೈಡ್ರಾಮಾ ಬಗ್ಗೆ ಮಾತನಾಡುತ್ತಾ, ‘ಅದು ಮಧ್ಯರಾತ್ರಿ 2 ಗಂಟೆಯ ಸಮಯ. ಸಾಮಾನ್ಯವಾಗಿ ಯಾವುದೇ ವಿಷಯದಲ್ಲೂ ತಲೆಹಾಕದ ಅಂದಿನ ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಅವರಿಂದ ನನಗೆ ಕರೆ ಬಂತು. ಲಲಿತ್, ನೀನು ಇಂದೇ ಈ ಒಪ್ಪಂದಕ್ಕೆ ಸಹಿ ಹಾಕಬೇಕು ಎಂದು ಅವರು ಹೇಳಿದರು. ನಾನು ಸದಾ ಅಧಿಕಾರದಲ್ಲಿದ್ದವರ ಮಾತಿಗೆ ಗೌರವ ನೀಡುತ್ತಿದ್ದೆ. ಹೀಗಾಗಿ, ನಾನು ಒತ್ತಡದ ಮಣಿದು ಈ ಒಪ್ಪಂದಕ್ಕೆ ಸಹಿ ಹಾಕುತ್ತಿದ್ದೇನೆ ಮತ್ತು ಅಧ್ಯಕ್ಷರೇ ನನ್ನ ಮೇಲೆ ಒತ್ತಡ ಹೇರಿದ್ದಾರೆ ಎಂಬುದನ್ನು ಉಲ್ಲೇಖಿಸಿಯೇ ಸಹಿ ಮಾಡುವುದಾಗಿ ಅವರಿಗೆ ತಿಳಿಸಿದೆ’ ಎಂದಿದ್ದಾರೆ.

ಇದನ್ನೂ ಓದಿ: ಆರ್‌ಸಿಬಿಗೆ ಬರ್ತಾರೆ ಪಾಂಡ್ಯ? ದಿನೇಶ್ ಕಾರ್ತಿಕ್ ಜೊತೆಗಿನ ಫೋಟೋದ ಅಸಲಿ ಕಥೆಯೇ ಬೇರೆ

‘ಮರುದಿನ ಬೆಳಗ್ಗೆ ಎದ್ದು ಪತ್ರಿಕೆಗಳನ್ನು ನೋಡಿದಾಗ, ಮುಖಪುಟದಲ್ಲಿ ‘ಸುನಂದಾ ಪುಷ್ಕರ್ ಮತ್ತು ಶಶಿ ತರೂರ್ ವಿವಾಹವಾಗಲಿದ್ದಾರೆ’ ಎಂಬ ಸುದ್ದಿ ಇತ್ತು. ನಾನು ಅಂದು ರಾತ್ರಿ ಯಾಕೆ ಸಹಿ ಹಾಕಬೇಕಾಗಿ ಬಂತು ಎಂಬುದು ನನಗೆ ಆಗ ಅರ್ಥವಾಯಿತು’ ಎಂದು ಲಲಿತ್ ಮೋದಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಕ್ರೀಡಾ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದ ವಾಯುಸೇನಾ ಬಲದ ಕೊರತೆ ನೀಗಿಸಲಿರುವ 114 ರಫೇಲ್ ಯುದ್ಧವಿಮಾನಗಳು – Kannada News

ನವದೆಹಲಿ, ಜೂನ್ 4: ಭಾರತವು ಫ್ರಾನ್ಸ್‌ನಿಂದ ಸುಮಾರು ₹3.25 ಲಕ್ಷ ಕೋಟಿ ಮೌಲ್ಯದ ಒಪ್ಪಂದದಲ್ಲಿ 114 ದಸ್ಸಾಲ್ಟ್ ರಫೇಲ್ (Dassault Rafale) ಯುದ್ಧವಿಮಾನಗಳನ್ನು ಖರೀದಿಸುವ ವಿನಂತಿಯನ್ನು ಅಂತಿಮಗೊಳಿಸಿದೆ. ಈ ಕುರಿತ ಅಧಿಕೃತ ವಿನಂತಿ ಪತ್ರವನ್ನು (Letter of Request – LoR) ಶೀಘ್ರದಲ್ಲೇ ಕಳುಹಿಸಲಾಗುವುದು. ಇದು ಉಭಯ ದೇಶಗಳ ನಡುವೆ ಅಧಿಕೃತ ಮಾತುಕತೆಗೆ ನಾಂದಿ ಹಾಡಲಿದೆ. ಇದು ಭಾರತದ ಇತಿಹಾಸದಲ್ಲೇ ಅತಿ ದೊಡ್ಡ ಯುದ್ಧವಿಮಾನ ಖರೀದಿ ಒಪ್ಪಂದವಾಗುವ ಸಾಧ್ಯತೆಯಿದೆ. ಭಾರತೀಯ ವಾಯುಸೇನೆಯ ಮುಖ್ಯಸ್ಥರಾದ (Air Chief Marshal) ಅಮರ್ ಪ್ರೀತ್ ಸಿಂಗ್ ಅವರು 3 ದಿನಗಳ ಫ್ರಾನ್ಸ್ ಪ್ರವಾಸದಲ್ಲಿರುವಾಗಲೇ ಈ ಮಹತ್ವದ ಬೆಳವಣಿಗೆ ನಡೆದಿದೆ.

ಕಳೆದ 60 ವರ್ಷಗಳಲ್ಲೇ ಭಾರತೀಯ ವಾಯುಸೇನೆ (IAF) ತನ್ನ ಅತ್ಯಂತ ಕನಿಷ್ಠ ಯುದ್ಧವಿಮಾನಗಳ ಸ್ಕ್ವಾಡ್ರನ್ ಬಲವನ್ನು ಎದುರಿಸುತ್ತಿರುವ ನಿರ್ಣಾಯಕ ಸಮಯದಲ್ಲಿ ಈ ನಿರ್ಧಾರ ಹೊರಬಿದ್ದಿದೆ.

ವಾಯುಸೇನೆಯಲ್ಲಿರುವ ಕೊರತೆ ನೀಗಿಸುವ ಯತ್ನ

1962 ರ ಚೀನಾ ಯುದ್ಧದ ನಂತರ, ಜೆ.ಆರ್.ಡಿ. ಟಾಟಾ (J.R.D. Tata) ನೇತೃತ್ವದ ಸಮಿತಿಯು ದೇಶದ ವಾಯು ರಕ್ಷಣೆಯನ್ನು ಬಲಪಡಿಸಲು ಭಾರತೀಯ ವಾಯುಸೇನೆಯು ಕನಿಷ್ಠ 50 ಯುದ್ಧವಿಮಾನ ಸ್ಕ್ವಾಡ್ರನ್‌ಗಳನ್ನು ಹೊಂದಿರಬೇಕು ಎಂದು ಶಿಫಾರಸು ಮಾಡಿತ್ತು. ಆದರೆ ಬಜೆಟ್ ಮಿತಿಗಳಿಂದಾಗಿ, ಸರ್ಕಾರವು ಇದಕ್ಕಿಂತ ಕಡಿಮೆ ಬಲಕ್ಕೆ ಅನುಮೋದನೆ ನೀಡಿತು. ಕಾಲಕ್ರಮೇಣ, ಈ ಗುರಿಯನ್ನು 42.5 ಸ್ಕ್ವಾಡ್ರನ್‌ಗಳಿಗೆ ನಿಗದಿಪಡಿಸಲಾಯಿತು. ಈಗ ಚೀನಾ ಮತ್ತು ಪಾಕಿಸ್ತಾನದಿಂದ ದ್ವಿಮುಖ ಅಪಾಯ (Two-front challenge) ಎದುರಿಸುವ ಸನ್ನಿವೇಶದಲ್ಲಿ ಭಾರತ ಇದೆ. ಈ ಪರಿಸ್ಥಿತಿಯಲ್ಲಿ ಭಾರತೀಯ ವಾಯುಸೇನೆ ಗರಿಷ್ಠ 42 ಸ್ಕ್ವಾಡ್ರನ್​ಗಳನ್ನು ಹೊಂದಬಹುದು (ಒಂದು ಸ್ಕ್ವಾಡ್ರನ್ ಎಂದರೆ ಸುಮಾರು 18 ಯುದ್ಧವಿಮಾನಗಳು).

ಆದರೆ, ಭಾರತ ಈ ಗುರಿಯನ್ನು ಕೂಡ ಎಂದಿಗೂ ತಲುಪಿಲ್ಲ. ಪ್ರಸ್ತುತ ಭಾರತೀಯ ವಾಯುಸೇನೆಯಲ್ಲಿ ಇರುವುದು ಕೇವಲ 29 ಕಾರ್ಯನಿರತ ಸ್ಕ್ವಾಡ್ರನ್‌ಗಳು ಮಾತ್ರ — ಅಂದರೆ ಇನ್ನೂ 13 ಸ್ಕ್ವಾಡ್ರನ್‌ಗಳ ಭಾರಿ ಕೊರತೆಯಿದೆ. ಇದು ಕಳೆದ 60 ವರ್ಷಗಳಲ್ಲೇ ಅತ್ಯಂತ ಕನಿಷ್ಠ ಸಂಖ್ಯೆಯಾಗಿದೆ.

1990 ರಲ್ಲಿ ವಾಯುಸೇನೆಯು ತನ್ನ ಇತಿಹಾಸದಲ್ಲೇ ಗರಿಷ್ಠ ಅಂದರೆ 39.5 ಸ್ಕ್ವಾಡ್ರನ್‌ಗಳನ್ನು ಹೊಂದಿತ್ತು. 2018 ರಲ್ಲಿ ಈ ಸಂಖ್ಯೆ 33 ಕ್ಕೆ ಇಳಿಯಿತು. 2025 ರ ವೇಳೆಗೆ ಎಲ್ಲಾ ಮಿಗ್-21 (MiG-21) ಸ್ಕ್ವಾಡ್ರನ್‌ಗಳ ನಿವೃತ್ತಿಯ ನಂತರ, ಈ ಸಂಖ್ಯೆ ಸುಮಾರು 29 ಕ್ಕೆ ಕುಸಿಯಿತು. ಮುಂದಿನ ದಶಕದಲ್ಲಿ ಹಳೆಯದಾಗುತ್ತಿರುವ ಜಾಗ್ವಾರ್ (Jaguar), ಮಿಗ್-29 (MiG-29) ಮತ್ತು ಮಿರಾಜ್-2000 (Mirage-2000) ವಿಮಾನಗಳು ನಿವೃತ್ತಿಯಾಗಲಿದ್ದು, ಈ ಸವಾಲು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಜೊಹೊ ಮುಖ್ಯ ವಿಜ್ಞಾನಿ ಶ್ರೀಧರ್ ವೆಂಬು ಅವರ ಕರುವಿಯಿಂದ ಚೀನೀ ಪವರ್ ಟೂಲ್ಸ್​ಗೆ ಪೈಪೋಟಿ

ಚೀನಾ ಮತ್ತು ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತದ ಸ್ಥಿತಿ ಹೇಗಿದೆ?

ಜಾಗ್ವಾರ್ ಯುದ್ಧವಿಮಾನವು 1979 ರಲ್ಲಿ ಭಾರತೀಯ ವಾಯುಸೇನೆಯನ್ನು ಸೇರಿತು. ಪ್ರಸ್ತುತ 6 ಸ್ಕ್ವಾಡ್ರನ್‌ಗಳಲ್ಲಿ ಅದರ ಸೇವೆ ಇನ್ನೂ ಇದೆ. ಪ್ರಸ್ತುತ ಭಾರತೀಯ ವಾಯುಸೇನೆಯು 6 ಜಾಗ್ವಾರ್ ಸ್ಕ್ವಾಡ್ರನ್‌ಗಳು, 3 ಮಿಗ್-29 ಸ್ಕ್ವಾಡ್ರನ್‌ಗಳು, 13 ಸುಖೋಯ್ (Su-30MKI) ಸ್ಕ್ವಾಡ್ರನ್‌ಗಳು, 2 ತೇಜಸ್ ಮಾರ್ಕ್-1 (Tejas Mk-1) ಸ್ಕ್ವಾಡ್ರನ್‌ಗಳು ಮತ್ತು 2 ರಫೇಲ್ ಸ್ಕ್ವಾಡ್ರನ್‌ಗಳನ್ನು ನಿರ್ವಹಿಸುತ್ತಿದೆ.

ಪಾಕಿಸ್ತಾನದೊಂದಿಗೆ ಹೋಲಿಕೆ: 1990 ರಲ್ಲಿ ಭಾರತದ ಬಳಿ ಸುಮಾರು 39 ಸ್ಕ್ವಾಡ್ರನ್‌ಗಳಿದ್ದರೆ, ಪಾಕಿಸ್ತಾನದ ಬಳಿ ಕೇವಲ 18 ಇದ್ದವು. ಆದರೆ ಇಂದು ಭಾರತದ ಬಳಿ 29 ಸ್ಕ್ವಾಡ್ರನ್‌ಗಳಿದ್ದರೆ, ಪಾಕಿಸ್ತಾನವು F-16, J-10 ಮತ್ತು JF-17 ವಿಮಾನಗಳನ್ನೊಳಗೊಂಡ ಸುಮಾರು 25 ಸ್ಕ್ವಾಡ್ರನ್‌ಗಳನ್ನು ಹೊಂದಿದೆ. ಅಂದರೆ ಉಭಯ ದೇಶಗಳ ನಡುವಿನ ವ್ಯತ್ಯಾಸ ತುಂಬಾ ಕಡಿಮೆಯಾಗಿದೆ.

ಚೀನಾದೊಂದಿಗೆ ಹೋಲಿಕೆ: ಚೀನಾ ನಮಗಿಂತ ಬಹುದೂರ ಮುಂದಿದೆ. ಅದು ಸುಮಾರು 66 ಯುದ್ಧವಿಮಾನ ಸ್ಕ್ವಾಡ್ರನ್‌ಗಳನ್ನು ಹೊಂದಿದೆ. ಅಷ್ಟೇ ಅಲ್ಲದೆ, ಚೀನಾ ವಾಯುಸೇನೆಯು J-20 ಮತ್ತು J-35 ನಂತಹ ಅತ್ಯಾಧುನಿಕ 5ನೇ ತಲೆಮಾರಿನ (5th Generation) ಯುದ್ಧವಿಮಾನಗಳನ್ನು ಸಹ ಬಳಸುತ್ತಿದೆ.

ಭಾರತೀಯ ವಾಯುಸೇನೆಯಲ್ಲಿ ಯುದ್ಧವಿಮಾನಗಳ ಕೊರತೆಗೆ ಕಾರಣಗಳೇನು?

ಮಿಗ್-21 ನಿವೃತ್ತಿ: ಈ ರಷ್ಯನ್ ಯುದ್ಧವಿಮಾನವು ಭಾರತೀಯ ವಾಯುಪಡೆಯನ್ನು ಸೇರಿದ್ದು 1963 ರಲ್ಲಿ. ಅಲ್ಲಿಂದ ಅದು ವಾಯುಪಡೆಯ ಬೆನ್ನೆಲುಬಾಗಿತ್ತು. ಒಂದು ಹಂತದಲ್ಲಿ ಸೇನೆಯ ಶೇ. 60ರಷ್ಟು ಯುದ್ಧವಿಮಾನಗಳು ಮಿಗ್-21 ಆಗಿದ್ದವು. ಈ ವಿಮಾನಗಳ ಅವಧಿ ಮುಗಿದು, ನಿವೃತ್ತಿಯಾದಾಗ, ಬದಲೀ ವಿಆನಗಳನ್ನು ಕ್ಷಿಪ್ರವಾಗಿ ಭರ್ತಿ ಮಾಡಿಕೊಳ್ಳಲಾಗಲಿಲ್ಲ. ಇದರಿಂದಾಗಿ ದೊಡ್ಡ ಕೊರತೆ ಉಂಟಾಯಿತು.

ತೇಜಸ್ ವಿಳಂಬ: ಭಾರತದಲ್ಲೇ ತಯಾರಾದ ಸ್ವದೇಶಿ ‘ತೇಜಸ್’ ಯುದ್ಧವಿಮಾನಗಳು ಹಳೆಯ ವಿಮಾನಗಳ ಜಾಗವನ್ನು ತುಂಬಬೇಕಿತ್ತು. ಆದರೆ ಭಾರಿ ವಿಳಂಬದ ನಂತರ ಇದಕ್ಕೆ 2011 ರಲ್ಲಿ ಕಾರ್ಯಚರಣೆಯ ಅನುಮತಿ ಸಿಕ್ಕಿತು. ಪ್ರಸ್ತುತ ಎಂಜಿನ್ ಪೂರೈಕೆಯಲ್ಲಿನ ವಿಳಂಬದಿಂದಾಗಿ ‘ತೇಜಸ್ Mk-1A’ ಉತ್ಪಾದನೆ ನಿಧಾನವಾಗಿದ್ದು, ವಿತರಣೆಯ ಸಮಯದ ಮೇಲೆ ಪರಿಣಾಮ ಬೀರಿದೆ.

ರದ್ದಾದ ಮತ್ತು ಕಡಿತಗೊಂಡ ರಫೇಲ್ ಆರ್ಡರ್: 2015 ರಲ್ಲಿ 126 ಯುದ್ಧವಿಮಾನಗಳ (MMRCA) ರಫೇಲ್ ಒಪ್ಪಂದವನ್ನು ವೆಚ್ಚ ಮತ್ತು ಇತರ ಕಾರಣಗಳಿಂದಾಗಿ ರದ್ದುಗೊಳಿಸಲಾಯಿತು. ನಂತರ 2016 ರಲ್ಲಿ ಇದನ್ನು ಕೇವಲ 36 ವಿಮಾನಗಳಿಗೆ ಸೀಮಿತಗೊಳಿಸಲಾಯಿತು. ಹೊಸ ವಿಮಾನಗಳ ಸೇರ್ಪಡೆಗಿಂತ ಹಳೆಯ ವಿಮಾನಗಳ ನಿವೃತ್ತಿ ವೇಗವಾಗಿ ನಡೆಯುತ್ತಿರುವುದರಿಂದ ಸ್ಕ್ವಾಡ್ರನ್ ಬಲ ಕುಸಿಯುತ್ತಾ ಬಂದಿದೆ.

ಇದನ್ನೂ ಓದಿ: ಚೀನಾ ಔಟ್, ಭಾರತ ಇನ್: ಜಾಗತಿಕ ಮಾರುಕಟ್ಟೆಯಲ್ಲಿ ಜಪಾನ್ ಹೂಡಿಕೆದಾರರ ಭರ್ಜರಿ ದಿಕ್ಕು ಬದಲಾವಣೆ

ರಫೇಲ್ ಒಪ್ಪಂದ ಏಕೆ ಮುಖ್ಯ?

ಚೀನಾ ತನ್ನ ಅತ್ಯಾಧುನಿಕ ಯುದ್ಧವಿಮಾನಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದೆ. ಪಾಕಿಸ್ತಾನ ತನ್ನ ವಾಯು ಸಾಮರ್ಥ್ಯವನ್ನು ನವೀಕರಿಸುತ್ತಿದೆ. ಇಂಥ ಉದ್ವಿಗ್ನ ಭೂ-ರಾಜಕೀಯ ಪರಿಸ್ಥಿತಿಯಲ್ಲಿ, ರಫೇಲ್ ಒಪ್ಪಂದವು ಭಾರತೀಯ ವಾಯುಸೇನೆಯನ್ನು ಬಲಪಡಿಸುವ ಪ್ರಮುಖ ಹೆಜ್ಜೆಯಾಗಿದೆ. ನಿಖರವಾದ ದಾಳಿ ಮತ್ತು ಕಣ್ಗಾವಲು ನಡೆಸಲು ವಾಯು ಶಕ್ತಿಯೇ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಇತ್ತೀಚಿನ ಯುದ್ಧಗಳು ಸಾಬೀತುಪಡಿಸಿವೆ. 114 ರಫೇಲ್ ವಿಮಾನಗಳ ಖರೀದಿ ವಾಯುಸೇನೆಯಲ್ಲಿರುವ ಸ್ಕ್ವಾಡ್ರನ್‌ಗಳ ಕೊರತೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.

114 ರಫೇಲ್ ವಿಮಾನಗಳಿಂದಾಗುವ ಬದಲಾವಣೆಗಳೇನು?

ಒಪ್ಪಂದವಾಗಿರುವ ಈ 114 ರಫೇಲ್ ವಿಮಾನಗಳ ಪೈಕಿ 88 ಸಿಂಗಲ್-ಸೀಟ್ (ಏಕ ಆಸನ) ಯುದ್ಧವಿಮಾನಗಳು ಮತ್ತು 26 ಟ್ವಿನ್-ಸೀಟ್ (ಅವಳಿ ಆಸನ) ತರಬೇತಿ ವಿಮಾನಗಳನ್ನು ಒಳಗೊಂಡಿದೆ. ಇದರೊಂದಿಗೆ ಅತ್ಯಾಧುನಿಕ ಆಯುಧಗಳು, ಸಿಮ್ಯುಲೇಟರ್‌ಗಳು, ಬಿಡಿಭಾಗಗಳು, ತರಬೇತಿ ಮತ್ತು ದೀರ್ಘಕಾಲೀನ ನಿರ್ವಹಣಾ ಬೆಂಬಲವೂ ಸಿಗಲಿದೆ. ಇವುಗಳು ಸಂಪೂರ್ಣವಾಗಿ ಪೂರೈಕೆಯಾದಾಗ ಭಾರತದ ರಫೇಲ್ ವಿಮಾನಗಳ ಒಟ್ಟು ಸಂಖ್ಯೆ ಸುಮಾರು 150 ಕ್ಕೆ ಏರಲಿದ್ದು, ದೇಶದ ಯುದ್ಧ ಸಾಮರ್ಥ್ಯಕ್ಕೆ ಭಾರಿ ಬಲ ಬರಲಿದೆ.

ಹಂತಹಂತವಾದ ವಿತರಣಾ ಯೋಜನೆ

ಭಾರತದ ತಕ್ಷಣದ ಅಗತ್ಯತೆಗಳನ್ನು ಪೂರೈಸಲು ಮತ್ತು ದೀರ್ಘಾವಧಿಯಲ್ಲಿ ಸ್ಥಳೀಯ ಉತ್ಪಾದನೆಯನ್ನು ಬೆಂಬಲಿಸಲು ಹಂತಹಂತವಾದ ವಿತರಣಾ ಯೋಜನೆಯನ್ನು ರೂಪಿಸಲಾಗಿದೆ. ಮೊದಲ 18 ರಫೇಲ್ ವಿಮಾನಗಳು ನೇರವಾಗಿ ಫ್ರಾನ್ಸ್‌ನಿಂದ ಸಂಪೂರ್ಣ ಸಿದ್ಧ ಸ್ಥಿತಿಯಲ್ಲಿ (Ready-to-fly) ಬರಲಿವೆ. ಇವುಗಳನ್ನು ಭಾರತೀಯ ವಾಯುಸೇನೆ ತಕ್ಷಣವೇ ಬಳಸಬಹುದು.

ಉಳಿದ 96 ವಿಮಾನಗಳು ಲೈಸೆನ್ಸ್ ಅಡಿಯಲ್ಲಿ ಭಾರತದಲ್ಲೇ ತಯಾರಾಗಲಿವೆ. ನಾಗ್ಪುರದಲ್ಲಿರುವ ದಸ್ಸಾಲ್ಟ್ ರಿಲಯನ್ಸ್ ಏರೋಸ್ಪೇಸ್ ಲಿಮಿಟೆಡ್ (DRAL) ಘಟಕದಲ್ಲಿ ಅಂತಿಮ ಜೋಡಣೆ (Final Assembly Line) ಪ್ರಕ್ರಿಯೆ ನಡೆದು ವಿತರಣೆಯಾಗಲಿದೆ.

ರಫೇಲ್‌ನ ಸ್ವದೇಶೀಕರಣ ಹಾದಿ (Indigenisation)

ಸ್ವದೇಶೀಕರಣ ಪ್ರಕ್ರಿಯೆಯು ಹಂತ ಹಂತವಾಗಿ ನಡೆಯಲಿದೆ. ಆರಂಭದಲ್ಲಿ ಶೇ. 30 ರಷ್ಟು ಭಾಗಗಳನ್ನು ಭಾರತದಲ್ಲೇ ತಯಾರಿಸಲಾಗುತ್ತದೆ. ಕಾಲಾನಂತರದಲ್ಲಿ ಇದನ್ನು ಶೇ. 50 ಕ್ಕಿಂತ ಹೆಚ್ಚು ಹೆಚ್ಚಿಸುವ ಗುರಿ ಹೊಂದಲಾಗಿದೆ.

(ಮಾಹಿತಿ ಕೃಪೆ: Nivriti Mohan, ನ್ಯೂಸ್9)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅಬುಧಾಬಿಯ ಬಿಎಪಿಎಸ್ ಹಿಂದೂ ಮಂದಿರಕ್ಕೆ ಪ್ರತಿಷ್ಠಿತ ‘ಟಾಲರೆನ್ಸ್​ ಪ್ರಶಸ್ತಿ’ಯ ಗರಿ – Kannada News

ಅಬುಧಾಬಿ, ಜೂನ್ 04: ಯುಎಇ (UAE) ರಾಜಧಾನಿ ಅಬುಧಾಬಿಯಲ್ಲಿರುವ ಪ್ರಸಿದ್ಧ ಬಿಎಪಿಎಸ್ (BAPS) ಹಿಂದೂ ಮಂದಿರಕ್ಕೆ ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ “ ಟಾಲರೆನ್ಸ್​ ಪ್ರಶಸ್ತಿ 2026” (Tolerance Award 2026) ಒಲಿದು ಬಂದಿದೆ. ಜಾಗತಿಕವಾಗಿ ಸೌಹಾರ್ದತೆ, ಪರಸ್ಪರ ಗೌರವ ಮತ್ತು ಶಾಂತಿಯುತ ಸಹಬಾಳ್ವೆಯನ್ನು ಉತ್ತೇಜಿಸುವಲ್ಲಿ ಮಂದಿರ ನೀಡುತ್ತಿರುವ ಮಹತ್ತರ ಕೊಡುಗೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.

ಇತ್ತೀಚೆಗೆ ನಡೆದ ‘ಥರ್ಡ್​ ಇಂಟರ್​ನ್ಯಾಷನಲ್ ಡೈಲಾಗ್ ಆಫ್ ಸಿಲಿಲೈಸೇಷನ್ ಆ್ಯಂಡ್ ಟಾಲರೆನ್ಸ್​ ಕಾನ್ಫರೆನ್ಸ್​(IDCT 2026)ನಲ್ಲಿ ಈ ಪ್ರಶಸ್ತಿಯನ್ನು ಅಧಿಕೃತವಾಗಿ ಪ್ರಕಟಿಸಲಾಯಿತು. ಅಬುಧಾಬಿಯ ಈ ಹಿಂದೂ ಮಂದಿರವು ಕೇವಲ ಒಂದು ಪ್ರಾರ್ಥನಾ ಮಂದಿರವಾಗಿ ಉಳಿಯದೆ, ಗಲ್ಫ್ ರಾಷ್ಟ್ರಗಳಲ್ಲಿ ಜಾಗತಿಕ ಏಕತೆಯ ಸಂಕೇತವಾಗಿ ಹೊರಹೊಮ್ಮಿದೆ.

ಮಂದಿರವು ಆಯೋಜಿಸುವ ‘ಫೆಸ್ಟಿವಲ್ ಆಫ್ ಹಾರ್ಮೋನಿ’, ‘ಓಮ್ಸಿಯಾತ್’ ನಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ವಿವಿಧ ಧರ್ಮ ಮತ್ತು ಸಂಸ್ಕೃತಿಯ ಜನರನ್ನು ಒಟ್ಟಿಗೆ ತರುತ್ತಿವೆ. ಸಂಕಷ್ಟದ ಸಮಯದಲ್ಲಿ ಮತ್ತು ಜಾಗತಿಕ ಬಿಕ್ಕಟ್ಟುಗಳ ಸಂದರ್ಭದಲ್ಲಿ ಮಂದಿರವು ಹಮ್ಮಿಕೊಳ್ಳುವ ಜನಪದ ಕಾರುಣ್ಯದ ಸೇವೆಗಳು ಜಾಗತಿಕ ಮಟ್ಟದಲ್ಲಿ ಶ್ಲಾಘನೆಗೆ ಪಾತ್ರವಾಗಿವೆ.

ಮತ್ತಷ್ಟು ಓದಿ: Somnath Temple: ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ

ಮಂದಿರದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಬ್ರಹ್ಮವಿಹಾರಿ ಸ್ವಾಮೀಜಿ ಅವರು ಭವಿಷ್ಯದ ಕುಟುಂಬ, ಧರ್ಮ ಮತ್ತು ತಂತ್ರಜ್ಞಾನದ ಕುರಿತು ಅತ್ಯಂತ ಪ್ರಬುದ್ಧವಾದ ಸಂದೇಶ ನೀಡಿದರು.

ಕೃತಕ ಬುದ್ಧಿಮತ್ತೆ ವೇಗವಾಗಿ ಬೆಳೆಯುತ್ತಿರುವ ಇಂದಿನ ದಿನಗಳಲ್ಲಿ, ಮನುಷ್ಯ ತನ್ನ ನೈತಿಕ ಮೌಲ್ಯಗಳು ಮತ್ತು ಕೌಟುಂಬಿಕ ಬಾಂಧವ್ಯಗಳನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಬೇಕು. ಪ್ರತಿ ಕುಟುಂಬವೂ ದಿನದ ಕೆಲವು ಸಮಯವನ್ನು ಮೊಬೈಲ್, ಇಂಟರ್ನೆಟ್‌ನಂತಹ ಡಿಜಿಟಲ್ ಆಕರ್ಷಣೆಗಳಿಂದ ದೂರವಿಟ್ಟು, ಒಟ್ಟಿಗೆ ಕುಳಿತು ಪ್ರಾರ್ಥನೆ ಮತ್ತು ಪರಸ್ಪರ ಪ್ರೀತಿಯ ಸಂಭಾಷಣೆಯಲ್ಲಿ ಕಳೆಯಬೇಕು (ಘರ್ ಸಭಾ). ನಮಗೆ ಕೇವಲ ತಂತ್ರಜ್ಞಾನ ತುಂಬಿದ ಕುಟುಂಬಗಳಿಗಿಂತ, ಸಂಸ್ಕಾರ ಮತ್ತು ಮೌಲ್ಯಗಳು ತುಂಬಿದ ಕುಟುಂಬಗಳ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.

ಮಹಂತ್ ಸ್ವಾಮಿ ಮಹಾರಾಜ್ ಅವರ ದಿವ್ಯ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಬಿಎಪಿಎಸ್ ಮಂದಿರಕ್ಕೆ ಸಿಕ್ಕಿರುವ ಈ ಗೌರವವು, ವಿಶ್ವ ಶಾಂತಿ, ಕರುಣೆ ಮತ್ತು ಮಾನವೀಯ ಸಹೋದರತ್ವವನ್ನು ಜಗತ್ತಿನಾದ್ಯಂತ ಪಸರಿಸುವಲ್ಲಿ ಭಾರತೀಯ ಸಂಸ್ಕೃತಿಗೆ ಸಿಕ್ಕ ಮತ್ತೊಂದು ಜಯವಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕೆಪಿಸಿಸಿ ಅಧ್ಯಕ್ಷ ಸ್ಥಾನ ಸತೀಶ್​​ ಕೈತಪ್ಪಿದ್ಯಾಕೆ? ಜಾರಕಿಹೊಳಿ ಲೆಕ್ಕಾಚಾರ ತಪ್ಪಿದ್ದೇಗೆ?: ಇಲ್ಲಿದೆ ಮಾಹಿತಿ – Kannada News

ಕೆಪಿಸಿಸಿ ಅಧ್ಯಕ್ಷ ಸ್ಥಾನ ಸತೀಶ್​​ ಕೈತಪ್ಪಿದ್ಯಾಕೆ?Image Credit source: Tv9 Kannada

ಬೆಂಗಳೂರು, ಜೂನ್​​ 04: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್ (DK Shivakumar)​​ ರಾಜೀನಾಮೆ ಬೆನ್ನಲ್ಲೇ ಪಕ್ಷದ ನೂತನ ಸಾರಥಿಯಾಗಿ ಪರಿಷತ್​​ ಸದಸ್ಯ ಬಿ.ಕೆ. ಹರಿಪ್ರಸಾದ್​ ಅವರನ್ನು ಎಐಸಿಸಿ ಘೋಷಣೆ ಮಾಡಿದೆ. ಅಷ್ಟಕ್ಕೂ ಹರಿಪ್ರಸಾದ್​​ ಹೆಸರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್​​ಗೆ ಆದ ಸರ್ಪ್ರೈಸ್​​ ಎಂಟ್ರಿಯಾಗಿತ್ತು. ಅಲ್ಲಿಯವರೆಗೂ ಸತೀಶ್​​ ಜಾರಕಿಹೊಳಿ ಹೆಸರೇ ಮುಂಚೂಣಿಯಲ್ಲಿತ್ತು, ಅವರಿಗೇ ಪಟ್ಟ ಎಂಬದೂ ಬಹುತೇಕ ಫೈನಲ್​​ ಆಗಿತ್ತು. ಆದರೆ ಕೊನೇ ಕ್ಷಣದಲ್ಲಿ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗಿದ್ದು ಒಬಿಸಿಯ ನಾಯಕನಿಗೆ ಮಹತ್ವದ ಹುದ್ದೆ ಲಭಿಸಿದೆ.

ಸತೀಶ್​​ ಲೆಕ್ಕಾಚಾರ ತಪ್ಪಿದ್ದೇಗೆ?

  • ಕೆಪಿಸಿಸಿ ಹಾಗೂ ಮಿನಿಸ್ಟರ್ ಎರಡೂ ಹುದ್ದೆ ನೀಡಲು ಹೈಕಮಾಂಡ್ ನಿರಾಕರಣೆ
  • ಸಿಎಂ ಸ್ಥಾನಕ್ಕೆ ಯಾವುದೇ ಸಂದರ್ಭದಲ್ಲಿ ಸತೀಶ್ ಕಾಂಪಿಟೇಟರ್​ ಎಂಬ ಆತಂಕ
  • ಡಿಕೆ ಶಿವಕುಮಾರ್​​ಗೆ ಸಮನಾಗಿ ಪವರ್ ಸೆಂಟರ್ ಆಗುತ್ತಾರೆ ಎಂಬ ಭೀತಿ
  • ಶಾಸಕರ ಬೆಂಬಲ ಸತೀಶ್​​ಗೆ ಇದೆ ಎಂಬುದು ದೊಡ್ಡ ಥ್ರೆಟ್
  • ಸಿದ್ದರಾಮಯ್ಯರಿಂದಲೂ ಸತೀಶ್​​ಗೆ ಕೆಪಿಸಿಸಿ ಹೊಣೆ ನೀಡಲು ವಿರೋಧ
  • ತಮ್ಮ ಬೆನ್ನಿಗೆ ನಿಂತಿಲ್ಲ ಎಂಬಂತೆ ಭಾವಿಸಿರುವ ಸಿದ್ದರಾಮಯ್ಯ
  • ಸತೀಶ್ ಅಹಿಂದ ಉತ್ತರಾಧಿಕಾರಿಯಾದರೆ ತಮ್ಮ ಅಸ್ತಿತ್ವ ಅಲುಗಾಡುತ್ತದೆ ಎಂದು ಯೋಚಿಸಿದ ಹಲವರು
  • ಸಂಘಟನೆಯಲ್ಲಿ ಸತೀಶ್ ಕೆಪ್ಯಾಸಿಟಿಯೇ ದೌರ್ಬಲ್ಯವಾಗಿದ್ದು
  • 2028ಕ್ಕೆ ಸತೀಶ್ ಸಿಎಂ ಸ್ಥಾನ ಕ್ಲೇಮ್ ಮಾಡ್ತಾರೆ ಎಂಬ ಭಯ
  • ಶಾಸಕರ ಬೆಂಬಲದ ವಿಚಾರ ಬಂದರೆ ಮತ್ತೆ ಸತೀಶ್ vs ಡಿಕೆಶಿ ಫೈಟ್ ನಡೆಯಬಹುದು
  • ಶಾಸಕರನ್ನು ಸತೀಶ್ ತಮ್ಮ ವೈಯಕ್ತಿಕ ಹಿಡಿತಕ್ಕೆ ತೆಗೆದುಕೊಳ್ಳುತ್ತಾರೆ ಎಂಬ ಆತಂಕ
  • ಜನರನ್ನು ಹಿಡಿದು ಕೂರಿಸಬಲ್ಲ ಪ್ರಭಾವಿ ಮಾತುಗಾರ ಅಲ್ಲ ಎಂಬ ಅಂಶ
  • ಇದೆಲ್ಲಕ್ಕೂ ಪುಷ್ಟಿ ನೀಡುವಂತೆ ಒಬ್ಬನಿಗೆ ಒಂದೇ ಹುದ್ದೆ ಎಂಬ ಹೈಕಮಾಂಡ್ ನಿರ್ಧಾರ

ಇದನ್ನೂ ಓದಿ: ಕೆಪಿಸಿಸಿಗೆ ಹೊಸ ಅಧ್ಯಕ್ಷರ ನೇಮಕ; ಬಿಕೆ ಹರಿಪ್ರಾಸದ್​​​ ಒಂದೇ ದಿನ ಡಬಲ್ ಧಮಾಕ

ಸಚಿವ ಸ್ಥಾನವನ್ನೇ ಸತೀಶ್​​ ಆಯ್ದುಕೊಂಡಿದ್ದೇಕೆ?

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಿಂತ ಸಚಿವ ಸ್ಥಾನವೇ ಬೆಸ್ಟ್ ಎಂಬ ನಿರ್ಧಾರಕ್ಕೆ ಸತೀಶ್​​ ಜಾರಕಿಹೊಳಿ ಕೂಡ ಬಂದಿದ್ದರು ಎನ್ನಲಾಗಿದೆ. ಸಚಿವ ಸ್ಥಾನ ಇಲ್ಲದಿದ್ದರೆ ಸರ್ಕಾರದ ಮೇಲೆ ಹಿಡಿತ ಕೈತಪ್ಪುವ ಆತಂಕದ ಜೊತೆಗೆ ಬೆಳಗಾವಿ ರಾಜಕಾರಣದ ಮೇಲೆ ಹಿಡಿತ ಕೈತಪ್ಪುವ ಭೀತಿಯೂ ಅವರಿಗಿತ್ತು. ಕೆಪಿಸಿಸಿ ಮಾತ್ರ ಸಿಕ್ಕಿದರೆ ಸಂಘಟನೆಗೆ ಮಾತ್ರ ಸೀಮಿತವಾಗಬೇಕಾಗುತ್ತದೆ. ಅಲ್ಲದೆ ಸಚಿವಗಿರಿ ಇಲ್ಲದಿದ್ದರೆ ಸಂಘಟನೆಗೆ ಧನ ಬೆಂಬಲ ಸಿಗುವ ಅವಕಾಶವೂ ಕಡಿಮೆ. ಈ ಕಾರಣಕ್ಕೆ ಸಚಿವ ಸ್ಥಾನವೆ ಒಳಿತೆಂದು ಸತೀಶ್​​ ಕೂಡ ಸುಮ್ಮನಾಗಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version