ರಾಜ್ಯಾದ್ಯಂತ ವಾಯು ಗುಣಮಟ್ಟ ಸುಧಾರಣೆ: ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ನಿರಾಳ ವಾತಾವರಣ – Kannada News

ಬೆಂಗಳೂರು, ಜೂ.4: ಇತ್ತೀಚಿನ ದಿನಗಳಲ್ಲಿ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಯಿಂದಾಗಿ ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯದ ಪ್ರಮಾಣ ಗಣನೀಯವಾಗಿ ಕುಸಿದಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟವು ‘ಉತ್ತಮ’ (Good) ಹಾಗೂ ‘ಸಾಧಾರಣ’ (Moderate) ಮಟ್ಟದಲ್ಲಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ವರದಿ ಮಾಡಿದೆ. ಸಿಲಿಕಾನ್ ಸಿಟಿಯಲ್ಲಿ ಇಂದು ಸರಾಸರಿ AQI 46 ರಿಂದ 65ರ ಆಸುಪಾಸಿನಲ್ಲಿದೆ. ಮಳೆಯ ಸಿಂಚನ ಮತ್ತು ತಂಗಾಳಿಯ ಕಾರಣದಿಂದಾಗಿ ಧೂಳಿನ ಕಣಗಳು ನೆಲಕಚ್ಚಿದ್ದು, ಸಾರ್ವಜನಿಕರು ನಿರಾಳವಾಗಿ ಉಸಿರಾಡುವಂತಾಗಿದೆ.

ಮಂಗಳೂರು, ಮಡಿಕೇರಿ ಮತ್ತು ಹಾಸನ ಜಿಲ್ಲೆಗಳಲ್ಲಿ ನಿರಂತರವಾಗಿ ಮೋಡ ಕವಿದ ವಾತಾವರಣ ಮತ್ತು ಮಳೆಯಾಗುತ್ತಿರುವುದರಿಂದ ಇಲ್ಲಿನ ಗಾಳಿ ಸಂಪೂರ್ಣವಾಗಿ ಶುದ್ಧವಾಗಿದೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಇಂದು ಸರಾಸರಿ AQI 30 ರಿಂದ 45ರ ಒಳಗಿದ್ದು, ಅತ್ಯುತ್ತಮ ಶ್ರೇಣಿಯಲ್ಲಿದೆ. ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡ, ಕಲಬುರಗಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಒಣ ಹವೆ ಮತ್ತು ಬಿಸಿಲು ಹೆಚ್ಚಾಗಿದ್ದರೂ, ವಾಯು ಮಾಲಿನ್ಯ ನಿಯಂತ್ರಣದಲ್ಲಿದೆ. ಇಲ್ಲಿನ ಇಂದಿನ ಸರಾಸರಿ AQI 55 ರಿಂದ 75ರ ಆಸುಪಾಸಿನಲ್ಲಿದ್ದು, ‘ಸಾಧಾರಣ’ಮಟ್ಟವನ್ನು ಕಾಯ್ದುಕೊಂಡಿದೆ.

ಉತ್ತರ ಕರ್ನಾಟಕದಲ್ಲಿ ವಾಯು ಗುಣಮಟ್ಟವು ನಿಯಂತ್ರಣದಲ್ಲಿದೆ (ಸಾಧಾರಣ ಮಟ್ಟ). ಹಾಗಾಗಿ ಸಾರ್ವಜನಿಕರು ಧೈರ್ಯವಾಗಿ ಹೊರಾಂಗಣ ಚಟುವಟಿಕೆಗಳನ್ನು ನಡೆಸಬಹುದು. ಆದರೆ, ಶ್ವಾಸಕೋಶದ ತೊಂದರೆ ಅಥವಾ ಅಸ್ತಮಾ ಇರುವಂತಹ ಸೂಕ್ಷ್ಮ ಆರೋಗ್ಯದ ವ್ಯಕ್ತಿಗಳು ಮಧ್ಯಾಹ್ನದ ತೀವ್ರ ಬಿಸಿಲು ಮತ್ತು ಧೂಳಿನ ಸಮಯದಲ್ಲಿ ಮುನ್ನೆಚ್ಚರಿಕೆ ವಹಿಸುವುದು ಒಳಿತು ಎಂದು ಹೇಳಲಾಗಿದೆ.

ಇದನ್ನೂ ಓದಿ: ಕರಾವಳಿ-ಮಲೆನಾಡಿಗೆ ಮಳೆ ಸಿಂಚನ, ಉತ್ತರ ಕರ್ನಾಟಕಕ್ಕೆ ಸೂರ್ಯನ ತಾಪ!

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500+

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Weather Report: ಕರಾವಳಿ-ಮಲೆನಾಡಿಗೆ ಮಳೆ ಸಿಂಚನ, ಉತ್ತರ ಕರ್ನಾಟಕಕ್ಕೆ ಸೂರ್ಯನ ತಾಪ! – Kannada News

ಬೆಂಗಳೂರು, ಜೂ.4:ಕರಾವಳಿಯಿಂದ ಬಯಲು ಸೀಮೆಯವರೆಗೆ ಕಳೆದ ಕೆಲವು ದಿನಗಳಿಂದ ಮುಂದುವರಿದಿದ್ದ ಬಿಗುವಿನ ವಾತಾವರಣಕ್ಕೆ ಬ್ರೇಕ್ ಬೀಳುವ ಸಮಯ ಬಂದಿದೆ. ರಾಜ್ಯದಲ್ಲಿ ವರುಣದೇವ ಅಬ್ಬರ ಹೆಚ್ಚಾಗಲಿದೆ. ಇಂದು ಮಧ್ಯಾಹ್ನದ ನಂತರ ಕರ್ನಾಟಕದಾದ್ಯಂತ ಬಿರುಗಾಳಿ ಸಹಿತ ಭಾರೀ ಮಳೆಯಾಗುವ (Heavy Rain Forecast) ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಒಣಗಿದ ಭೂಮಿಯನ್ನು ಮತ್ತೆ ತಂಪಾಗಿಸಲಿದೆ.

ಇಂದು ಬೆಳಗಿನ ಜಾವದಿಂದಲೇ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಶೇ. 90 ರಷ್ಟು ತೇವಾಂಶ ದಾಖಲಾಗಿದ್ದು, ವಾತಾವರಣದಲ್ಲಿ ಗರಿಷ್ಠ ತಂಪಾದ ಅನುಭವವಾಗುತ್ತಿದೆ. ನೈಋತ್ಯ ದಿಕ್ಕಿನಿಂದ ಬೀಸುತ್ತಿರುವ ತಂಗಾಳಿಯು ಮಧ್ಯಾಹ್ನದ ವೇಳೆಗೆ ತೀವ್ರಗೊಳ್ಳಲಿದ್ದು, ಪಶ್ಚಿಮ ದಿಕ್ಕಿನಿಂದ ಗಂಟೆಗೆ 14 ಮೈಲಿಗೂ ಅಧಿಕ ವೇಗದಲ್ಲಿ ಬಿರುಗಾಳಿ ಬೀಸಲಿದೆ. ಇದು ಮುಂಗಾರಿನ ದಟ್ಟ ಮೋಡಗಳು ರಾಜ್ಯದಲ್ಲಿ ಹೆಚ್ಚಿನ ಮಳೆಯ ನೀಡುವ ಸಾಧ್ಯತೆಗಳು ಇದೆ.

ಇನ್ನು ಬೆಳಿಗ್ಗೆಯಿಂದ ಸೂರ್ಯನ ಪ್ರಖರತೆ ಹೆಚ್ಚಾಗಲಿದ್ದು, ಗರಿಷ್ಠ ತಾಪಮಾನವು 31°C ಆಸುಪಾಸಿನಲ್ಲಿರಲಿದೆ. ಯುವಿ ಇಂಡೆಕ್ಸ್ 8 ರಷ್ಟಿರುವುದರಿಂದ ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಬಿಸಿಲಿನ ಬೇಗೆ ಜೋರಾಗಿರಲಿದೆ. ಆದರೆ, ಸಂಜೆಯಾಗುತ್ತಿದ್ದಂತೆ ಹವಾಮಾನದಲ್ಲಿ ಬದಲಾವಣೆ ಕಂಡುಬರಲಿದೆ. ರಾಜ್ಯದಾದ್ಯಂತ ಶೇ. 55 ರಷ್ಟು ಮಳೆಯಾಗುವ ಭಾರಿ ಸಾಧ್ಯತೆಯಿದ್ದು, ಕರಾವಳಿ ಜಿಲ್ಲೆಗಳು, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ರಾತ್ರಿಯ ವೇಳೆಗೆ ತಾಪಮಾನವು 24°C ಗೆ ಇಳಿಕೆಯಾಗಲಿದ್ದು, ಮೋಡ ಕವಿದ ತಂಪಾದ ವಾತಾವರಣ ಇರಲಿದೆ.

ಮಂಗಳೂರಿನಲ್ಲಿ ಇಂದು ತೇವಾಂಶದ ಪ್ರಮಾಣ ಶೇ. 85 ಕ್ಕೂ ಅಧಿಕ ದಾಖಲಾಗಿದೆ. ಗರಿಷ್ಠ ತಾಪಮಾನ 32°C ಇರಲಿದ್ದು, ಕರಾವಳಿ ತೀರದಲ್ಲಿ ನೈಋತ್ಯ ದಿಕ್ಕಿನಿಂದ ಬಲವಾದ ಗಾಳಿ ಬೀಸುತ್ತಿದೆ. ಮಧ್ಯಾಹ್ನದ ನಂತರ ಮತ್ತು ಸಂಜೆ ವೇಳೆಗೆ ನಗರದ ಹಲವೆಡೆ ಗುಡುಗು ಸಹಿತ ಭರ್ಜರಿ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಮಡಿಕೇರಿ ಸೇರಿದಂತೆ ಇಡೀ ಮಲೆನಾಡು ಭಾಗದಲ್ಲಿ ಇಂದು ಅತ್ಯಂತ ಆಹ್ಲಾದಕರ ಹಾಗೂ ತಂಪಾದ ವಾತಾವರಣವಿದೆ. ಇಲ್ಲಿನ ಗರಿಷ್ಠ ತಾಪಮಾನ 26°C ನಿಂದ 28°C ಆಸುಪಾಸಿನಲ್ಲಿದ್ದು, ಕನಿಷ್ಠ ತಾಪಮಾನ 19°C ಗೆ ಕುಸಿದಿದೆ. ದಟ್ಟವಾದ ಮೋಡ ಕವಿದ ವಾತಾವರಣವಿದ್ದು, ಮಲೆನಾಡಿನ ಘಟ್ಟ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.

ಇದನ್ನೂ ಓದಿ: 11 ಜಿಲ್ಲೆಗಳಲ್ಲಿ ನಾಳೆ ವರುಣಾರ್ಭಟ, ತೀವ್ರ ಗಾಳಿಯ ಎಚ್ಚರಿಕೆ

ಹಾಸನ ಜಿಲ್ಲೆಯಲ್ಲಿ ಇಂದು ಮಿಶ್ರ ಹವಾಮಾನ ಇರಲಿದೆ. ಹಗಲಿನಲ್ಲಿ ಸ್ವಲ್ಪ ಬಿಸಿಲಿನ ವಾತಾವರಣವಿದ್ದರೂ, ಸಂಜೆಯ ವೇಳೆಗೆ ಹವಾಮಾನ ತಂಪಾಗಲಿದೆ. ಗರಿಷ್ಠ ತಾಪಮಾನ 30°C ಇರಲಿದ್ದು, ಜಿಲ್ಲೆಯ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಹನಿಗಳು ಬೀಳುವ ಮೂಲಕ ಇಳೆಯನ್ನು ತಂಪಾಗಿಸಲಿವೆ. ಕರಾವಳಿ ಮತ್ತು ಮಲೆನಾಡಿಗೆ ಹೋಲಿಸಿದರೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ (ವಿಜಯಪುರ, ಕಲಬುರಗಿ, ಬಾಗಲಕೋಟೆ, ರಾಯಚೂರು) ಬಿಸಿಲಿನ ಆರ್ಭಟ ಜೋರಾಗಿದೆ. ಇಲ್ಲಿ ಗರಿಷ್ಠ ತಾಪಮಾನ 36°C ಇಂದ 38°C ವರೆಗೆ ದಾಖಲಾಗುವ ಸಾಧ್ಯತೆ ಇದ್ದು, ಯುವಿ ಇಂಡೆಕ್ಸ್ ತೀವ್ರವಾಗಿದೆ. ಆದರೆ, ರಾತ್ರಿಯ ವೇಳೆಗೆ ಒಣ ಹವೆ ಕಡಿಮೆಯಾಗಿ ತಂಗಾಳಿ ಬೀಸುವ ನಿರೀಕ್ಷೆ ಇದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ದಿನ ಭವಿಷ್ಯ: ಇಂದು ಈ ರಾಶಿಯವರ ಮನಸ್ಸಿಗೆ ಏನನ್ನು ಅರ್ಥಮಾಡಿಸುವುದೂ ಕಷ್ಟ.. – Kannada News

ಮೇಷ ರಾಶಿ:

ನಿಮ್ಮ ವೈವಾಹಿಕ ಜೀವನದಲ್ಲಿ ಯಾವುದೇ ಅಡೆತಡೆಗಳು ಕಂಡುಬಂದರೆ, ಅದು ಕೊನೆಗೊಳ್ಳುತ್ತದೆ. ಬಂದ ಕಳಂಕವನ್ನು ಯಾವುದಾರೂ ರೀತಿಯಲ್ಲಿ ತೊಳೆಯುವ ಪ್ರಯತ್ನ ಮಾಡುವಿರಿ. ಕೆಲಸದಲ್ಲಿ ಒತ್ತಡ ತಕ್ಷಣ ಉಂಟಾಗಬಹುದು ಆದರೆ ನಿರ್ವಹಿಸಬಹುದಾದ ಮಟ್ಟದಲ್ಲಿದೆ. ಹೆಚ್ಚು ನಿರುಪಯುಕ್ತ ಮಾತುಗಳು ನಿಮ್ಮಿಂದ ಬರಬಹುದು. ಅನಿರೀಕ್ಷಿತ ಅಶುಭವಾರ್ತೆಯನ್ನು ನೀವು ಕೇಳಬೇಕಾದೀತು.‌ ತನ್ನವರ ಬಗ್ಗೆ ನಂಬಿಕೆ ಇರದು. ನಂಬಿಕೆಯಲ್ಲಿ ಪಕ್ವತೆ ಇರಲಿದೆ.

ವೃಷಭ ರಾಶಿ:

ನಿಮ್ಮ ಮನಸ್ಸಿಗೆ ಅದು ಒಪ್ಪಿಗೆಯಾಗಲಿ. ಎಲ್ಲ ವಿಷಯಗಳಲ್ಲಿ ಸ್ಪಷ್ಟತೆಯೊಂದಿಗೆ ನಡೆದುಕೊಳ್ಳಿ. ಹಣಕಾಸಿನಲ್ಲಿ ಉತ್ತಮ ಸ್ಥಿತಿ ಕಾಣಬಹುದು. ಆದರೂ ಕೆಲವು ಕೆಲಸಗಳಲ್ಲಿ ವಿಳಂಬ ಸಂಭವಿಸಬಹುದು. ಉತ್ಸಾಹವಿಲ್ಲದಂತೆ ಇದ್ದರೂ ಕೆಲಸಗಳು ಒಂದರಹಿಂದೆ ಬರುತ್ತಲೇ ಇರುವುದು. ಹಿರಿಯರಿಂದ ಮಾರ್ಗದರ್ಶನ ಒಳಿತು. ಮಿತ್ರರೊಂದಿಗೆ ಮನೋರಂಜನೆಯ ಕಾಲ ಕಳೆಯಬಹುದು. ಸಣ್ಣ ವ್ಯಾಪಾರವು ಹೆಚ್ಚುವರಿಯಾಗಿ ಲಾಭವನ್ನು ಕೊಡುವುದು. ಉದ್ಯೋಗದ ಕನಸನ್ನು ಕಾಣುತ್ತಾ ಇರುವಿರಿ. ಉತ್ತಮ‌ ವಸ್ತುಗಳ ಖರೀದಿ ಮಾಡುವಿರಿ.

ಮಿಥುನ ರಾಶಿ:

ಸಾಲ ಕೊಟ್ಟವರು ಕಟುವಾಗಿ ಮಾತನಾಡಬಹುದು. ಪ್ರಾಮಾಣಿಕ ಪ್ರಯತ್ನ ಯಶಸ್ಸಿಗೆ ದಾರಿ ಮಾಡಿಕೊಡಲಿದೆ. ಲಘು ಆರೋಗ್ಯ ಸಮಸ್ಯೆ ತೊಂದರೆ ಮಾಡಬಹುದು. ಮನೆಯಲ್ಲಿನ ಜವಾಬ್ದಾರಿಗಳು ಹೆಚ್ಚಾಗಲಿವೆ. ಹಣಕಾಸಿನಲ್ಲಿ ನಿರ್ವಹಣಾ ಜಾಣ್ಮೆ ಅಗತ್ಯ. ಸಹೋದರರೊಂದಿಗೆ ಮಾತುಕತೆ ಎಚ್ಚರಿಕೆಯಿಂದ ಇರಲಿ. ರಾಜಕೀಯದಲ್ಲಿ ಕೆಲಸ ಮಾಡುವ ಸ್ಥಳೀಯರು ಎಚ್ಚರಿಕೆಯಿಂದ ಇರಬೇಕು. ಭವಿಷ್ಯದ ಬಗ್ಗೆ ನಿಮಗೆ ಏನೇನೋ ಆಲೋಚನೆಗಳನ್ನು ಇಟ್ಟುಕೊಳ್ಳುವಿರಿ.

ಕರ್ಕಾಟಕ ರಾಶಿ:

ಕರ್ಮದ ನಡುವೆ ಸಮತೋಲನ ಅಗತ್ಯ. ಕೆಲಸದಲ್ಲಿ ಹೊಸ ಅವಕಾಶಗಳು ಬರಬಹುದು. ಧೈರ್ಯದಿಂದ ಮಾತಾಡುವುದು ಉತ್ತಮ. ಸುಳ್ಳು ಸುದ್ದಿಗಳಿಗೆ ಮಾರುಹೋಗುವಿರಿ.ತ ದೂರದ ಸಂಬಂಧಿಕರಿಂದ ಒಳ್ಳೆಯ ಸುದ್ದಿ. ಹಣಕಾಸಿನಲ್ಲಿ ತಾತ್ಕಾಲಿಕ ಒತ್ತಡ. ಮಕ್ಕಳು ನಿಮ್ಮನ್ನು ಪ್ರೇರೇಪಿಸುತ್ತಾರೆ. ಎಲ್ಲರಿಂದ ಹೊಗಳಿಸಿಕೊಳ್ಳಬೇಕು ಎಂದು ಅನ್ನಿಸಬಹುದು. ವ್ಯವಸ್ಥೆಯ ಕಾರಣಕ್ಕೆ ವ್ಯಕ್ತಿಯನ್ನು ದ್ವೇಷಿಸುವಿರಿ.

ಸಿಂಹ ರಾಶಿ :

ಹಳೆಯ ಸಮಸ್ಯೆ ಮತ್ತೆ ಎದುರಾಗಬಹುದು. ಧೈರ್ಯದಿಂದ ನಿಭಾಯಿಸಿದರೆ ಪ್ರಯೋಜನ ಸ್ನೇಹಿತರ ಸಲಹೆ ಉಪಯುಕ್ತ. ಮಾತಿನ ಸೌಮ್ಯತೆಯು ನಿಮಗೆ ಗೌರವವನ್ನು ಕೊಡುವುದು. ನಿಮಗೆ ಹಿಡಿಸದ ವ್ಯವಹಾರವನ್ನು ಕಠೋರವಾಗಿ ಠೀಕಿಸುವಿರಿ. ವೈವಾಹಿಕ ಜೀವನವನ್ನು ನಡೆಸಲು ನಿಮಗೆ ಕಷ್ಟ ಎನಿಸಬಹುದು. ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿ, ಇನ್ನೊಬ್ಬರಿಗೆ ಸಹಾಯ ಮಾಡುವಿರಿ. ಯಾವುದೂ ಅಂತ್ಯವಲ್ಲ.‌

ಕನ್ಯಾ ರಾಶಿ:

ನಿಮ್ಮ ಬಾಯಿಯ ಚಪಲಕ್ಕೆ ಅಸಂಬದ್ಧವನ್ನು ಹೇಳುವಿರಿ. ಸದಾ ನಗುಮುಖದಿಂದ ಇರಿ. ಮನಸ್ತಾಪವು ಆಸ್ತಿ ವಿಭಜನೆಯವರೆಗೆ ಹೋಗಬಹುದು. ಯೋಜನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದು ಬಗೆಯನ್ನು ಚಿಂತಿಸಿ. ಸಹೋದ್ಯೋಗಿಗಳಿಂದ ಮೆಚ್ಚುಗೆ. ನಿಮ್ಮ ಅಂತಸ್ತಿನ ಬಗ್ಗೆ ನಿಮಗೆ ಬಿಮ್ಮು ಇರುವುದು. ನೀವು ಹೂಡಿಕೆ ವಿಷಯಗಳಲ್ಲಿ ಉತ್ತಮ ಆದಾಯವನ್ನು ಪಡೆಯುವ ಸಾಧ್ಯತೆಯಿದೆ. ಇಂದಿನ ದೂರಪ್ರಯಾಣವು ನಿರಾಶಾದಾಯಕವಾಗಿದ್ದು ಎಲ್ಲರನ್ನೂ ಹೀಗಳೆಯುವಿರಿ.

ತುಲಾ ರಾಶಿ:

ಊಹೆಗೂ ನಿಲುಕದ ವಿಷಯವು ನಿಮ್ಮೆದುರು ಪ್ರಸ್ತಾಪಗೊಂಡೀತು. ನಡವಳಿಕೆಯಲ್ಲಿ ಶಿಸ್ತು ಅಗತ್ಯ. ಹಣಕಾಸಿನಲ್ಲಿ ಸ್ವಲ್ಪ ಚಿಂತೆಗಳು ಎದುರಾಗಬಹುದು. ಅಜಾಗರೂಕತೆಯಿಂದ ಹಣವನ್ನು ಕಳೆದುಕೊಳ್ಳುವಿರಿ. ಧೈರ್ಯದಿಂದ ನಿರ್ಧಾರ ಕೈಗೊಳ್ಳಿ. ಕೆಲವರಿಂದ ಅನಿರೀಕ್ಷಿತ ಸಹಾಯ ದೊರೆಯುತ್ತದೆ. ಯಾವುದೇ ವಿಚಾರಕ್ಕೆ ಮಿತವಾಗಿ ಮಾತನಾಡುವುದು ಒಳಿತು. ಕೆಲವರು ನಿಮ್ಮ ಬಗ್ಗೆ ಆಡಿಕೊಳ್ಳಬಹುದು. ವಿಶ್ವಾಸಕ್ಕೆ ಯೋಗ್ಯವಾದ ಕೆಲಸವನ್ನು ಮಾಡುವಿರಿ.

ವೃಶ್ಚಿಕ ರಾಶಿ:

ನಿಮ್ಮ ಆಲಸ್ಯ ಕ್ಷಣಾರ್ಧದಲ್ಲಿ ಮಾಯವಾಗುವುದು. ಮಾಜಿ ಪ್ರೇಯಸಿ ಕಂಡಳೆಂದು ಹಿಗ್ಗುವುದು ಬೇಡ. ಕೆಲಸದಲ್ಲಿ ನಿಖರತೆ ಅಗತ್ಯ. ಇಂದಿನ ಆದಾಯವನ್ನು ಹೆಚ್ಚು ಮಾಡಿಕೊಳ್ಳಬಹುದು. ಹಣಕಾಸಿನಲ್ಲಿ ಲಘು ವ್ಯತ್ಯಾಸವು ಚಿಂತೆಗಿಳಿಸುವುದು. ಪ್ರಬಲ ವೈರಿಗಳನ್ನು ನೀವು ಮೆಟ್ಟಿನಿಲ್ಲುವ ಛಾತಿ ಇರಲಿದೆ. ಹೂಡಿಕೆಯ ಬಗ್ಗೆ ನಿಮ್ಮ ಸ್ನೇಹಿತರು ನಿಮ್ಮ ಜೊತೆ ಮಾತನಾಡಬಹುದು. ಮಕ್ಕಳಿಗೆ ಮನೆಯ ಜವಾಬ್ದಾರಿಯನ್ನು ಕೊಟ್ಟು ನಿಶ್ಚಿಂತರಾಗಲು ಇಷ್ಟಪಡುವಿರಿ.

ಧನು ರಾಶಿ:

ಸಮಯವನ್ನು ಬಳಸಿಕೊಳ್ಳುವುದನ್ನು ಕಲಿಯುವಿರಿ. ನಿಮ್ಮ ಹೆಚ್ಚಿನ ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಿಸಿ, ಏಕೆಂದರೆ ಅನಂತರ ಆರೋಗ್ಯ ಸ್ವಲ್ಪ ಹದಗೆಡಬಹುದು. ಕುಟುಂಬ ಸಂಬಂಧಿ ವಿಚಾರದಲ್ಲಿ ಕೆಲಚರ್ಚೆಗಳು ನಡೆಯಬಹುದು. ಸೌಕರ್ಯಗಳಿಗಾಗಿ ನೀವು ಸಾಕಷ್ಟು ಹಣವನ್ನು ಖರ್ಚು ಮಾಡಿಕೊಳ್ಳುವಿರಿ. ನೂತನ ವಸ್ತ್ರ, ವಸ್ತುಗಳ ಖರೀದಿಗೆ ಹೆಚ್ಚು ಸಮಯವನ್ನು ಕೊಡಬೇಕಾದೀತು. ಸಂಗಾತಿಯ ಮನೋಭಾವವನ್ನು ಅರ್ಥವಾಗುವುದು ಕಷ್ಟವಾದೀತು.

ಮಕರ ರಾಶಿ :

ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಕಾಯಬೇಡಿ. ಆತ್ಮವಿಶ್ವಾಸ ಕಾಪಾಡಿಕೊಳ್ಳಿ. ನಿಮ್ಮ ಲೆಕ್ಕಾಚಾರವನ್ನು ವ್ಯತ್ಯಾಸ ಆಗಬಹುದು. ಕುಟುಂಬದ ಸದಸ್ಯರೊಂದಿಗೆ ಸಂತೋಷಕರ ಕ್ಷಣಗಳು ಕಳೆಯಬಹುದು. ಮೇಲಧಿಕಾರಿಗಳ ಅಸಮಾಧಾನವನ್ನು ದೂರ ಮಾಡಿ. ಹಣಕಾಸು ಯೋಜನೆ ಹೊಸ ರೂಪ ಪಡೆಯಲಿದೆ. ಆರೋಗ್ಯದ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಓಡಾಟದಲ್ಲಿ ಕೆಲವು ಅಡೆತಡೆಗಳ ಬರಬಹುದು.

ಕುಂಭ ರಾಶಿ :

ಇಂದು ನಿಮ್ಮ ಸಾಮರ್ಥ್ಯವನ್ನು ತೋರಿಸುತ್ತದೆ. ಅಹಂಕಾರದಿಂದ ಬೀಗುವುದು ಬೇಡ. ಇತರರು ಅಚ್ಚರಿ ಪಡುವಂತೆ ಮಾಡುತ್ತದೆ. ನಿಮ್ಮ ಉತ್ಸಾಹ ಉಳಿದಂತೆ ನೋಡಿಕೊಳ್ಳಿ. ಯತ್ನಿಸಿದ ಕೆಲಸಗಳಲ್ಲಿ ಹೆಚ್ಚಿನ ಪ್ರಯೋಜನ ದೊರೆಯಬಹುದು. ಸ್ನೇಹಿತರಿಂದ ಸಹಾಯ ಲಭ್ಯವಿರುತ್ತದೆ. ಉದ್ಯೋಗದಲ್ಲಿ ಮೇಲಧಿಕಾರಿಗಳ ಗಮನ ಸೆಳೆಯುವಿರಿ. ವೈಯಕ್ತಿಕ ವಹಿವಾಟಿನ ವಿಷಯದಲ್ಲಿ ನಿಮಗೆ ಸ್ಪಷ್ಟತೆ ಇರಲಿ.

ಮೀನ ರಾಶಿ :

ನಿಮ್ಮ ಸಹನೆಯನ್ನೇ ಆಯುಧವಾಗಿರಿಸಿಕೊಳ್ಳಿ. ಸಮಾರಂಭಗಳಿಗೆ ತೆರಳಲಿದ್ದೀರಿ. ಸಿಟ್ಟಿನಿಂದ ಇನ್ನಷ್ಟು ಪರಿಹಾಸ್ಯಕ್ಕೆ ಒಳಗಾಗಬೇಡಿ. ಮುಂದಾಳುತ್ವ ವಹಿಸಿದರೆ, ನೀವೊಬ್ಬರೇ ಕೊನೆಗೆ ಉಳಿಯುವುದು. ತಾತ್ಕಾಲಿಕ ತೀರ್ಮಾನಗಳು ದೀರ್ಘಾವಧಿಯಲ್ಲಿ ಲಾಭಕಾರಿಯಾಗಬಹುದು. ನವೀನ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ಬೇಸರಗೊಳ್ಳದೇ ಖುಷಿಯಿಂದ ಮಾಡಿ. ನಿಮ್ಮ ಜವಾಬ್ದಾರಿಗಳನ್ನು ಸಮಯಕ್ಕೆ ಸರಿಯಾಗಿ ನಿರ್ವಹಿಸಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ರೋಹಿಣೀ, ವಾರ : ಗುರು, ಪಕ್ಷ : ಕೃಷ್ಣ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಉತ್ತರಾಷಾಢಾ, ಯೋಗ : ಶುಭ, ಕರಣ : ಬಾಲವ, ಸೂರ್ಯೋದಯ – 05 – 56 am, ಸೂರ್ಯಾಸ್ತ – 06 – 49 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:59 – 15:36, ಯಮಗಂಡ ಕಾಲ 05:56 – 07:33, ಗುಳಿಕ ಕಾಲ 09:09 – 10:46

– ಲೋಹಿತ್ ಹೆಬ್ಬಾರ್-8762924271 (what’s app only)

Source link

ದೆಹಲಿ ಬೆಂಕಿ ದುರಂತ; ಹೋಟೆಲ್ ಮಾಲೀಕ ಬಂಧನ, ನ್ಯಾಯಾಂಗ ತನಿಖೆಗೆ ಆದೇಶ – Kannada News

ನವದೆಹಲಿ, ಜೂನ್ 3: ದೆಹಲಿಯ ಮಾಳವೀಯ ನಗರದಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ (Fire Accident) 21 ಜನರು ಸಾವನ್ನಪ್ಪಿದ ನಂತರ ಲೆಫ್ಟಿನೆಂಟ್ ಗವರ್ನರ್ ಇಂದು ತುರ್ತು ಸಭೆ ಕರೆದಿದ್ದರು. ಈ ವೇಳೆ ಅವರು ದೆಹಲಿಯಲ್ಲಿ ಒಂದು ತಿಂಗಳ ವಿಶೇಷ ಅಗ್ನಿ ಸುರಕ್ಷತಾ ಅಭಿಯಾನವನ್ನು ನಡೆಸಲು ಆದೇಶಿಸಿದ್ದಾರೆ. ಇದರಲ್ಲಿ ಎಲ್ಲಾ ಹೋಟೆಲ್‌ಗಳು, ಅತಿಥಿ ಗೃಹಗಳು ಮತ್ತು ಸೂಕ್ಷ್ಮ ಕಟ್ಟಡಗಳ ತಪಾಸಣೆ ಸೇರಿದೆ. ಈ ಬೆಂಕಿ ದುರಂತದ ಬಗ್ಗೆ ನ್ಯಾಯಾಂಗ ತನಿಖೆಗೂ ಆದೇಶಿಸಲಾಗಿದೆ. ಪರಾರಿಯಾಗಿದ್ದ ಹೋಟೆಲ್ ಮಾಲೀಕರನ್ನು ಕೂಡ ಬಂಧಿಸಲಾಗಿದೆ.

ದೆಹಲಿ ಲೆಫ್ಟಿನೆಂಟ್ ಗವರ್ನರ್ ತರಂಜಿತ್ ಸಿಂಗ್ ಸಂಧು ಅವರು ದೆಹಲಿ ಸರ್ಕಾರ ಮತ್ತು ಸಂಬಂಧಿತ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಪರಿಶೀಲನಾ ಸಭೆ ನಡೆಸಿದರು. ಈ ಸಭೆಯಲ್ಲಿ, ಅಗ್ನಿಶಾಮಕ ನಿಯಮಗಳನ್ನು ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಸೀಲಿಂಗ್‌ನಂತಹ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದರು. ದೆಹಲಿಯ ಬೆಂಕಿ ದುರಂತದ ನಂತರ, ದೆಹಲಿ ಗೃಹ ಸಚಿವ ಆಶಿಶ್ ಸೂದ್ ಅವರೊಂದಿಗೆ ಲೆಫ್ಟಿನೆಂಟ್ ಗವರ್ನರ್ ತರಣ್‌ಜಿತ್ ಸಿಂಗ್ ಸಂಧು ಈ ತುರ್ತು ಪರಿಶೀಲನಾ ಸಭೆಯನ್ನು ನಡೆಸಿದರು. ಇದರಲ್ಲಿ ಅಗ್ನಿಶಾಮಕ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ.

ಇದನ್ನೂ ಓದಿ: ದೆಹಲಿಯ ಬೆಂಕಿ ದುರಂತದಲ್ಲಿ ಬಾಂಗ್ಲಾ, ಅಫ್ಘಾನ್, ಆಫ್ರಿಕಾದ ಪ್ರವಾಸಿಗರೂ ಸಾವು; ಹೋಟೆಲ್ ಮಾಲೀಕ ಪರಾರಿ

ಹೋಟೆಲ್ ಮಾಲೀಕ ಬಂಧನ:

ದುರಂತ ಸಂಭವಿಸಿ ಎಫ್‌ಐಆರ್ (FIR) ದಾಖಲಾಗುತ್ತಿದ್ದಂತೆ ಹೋಟೆಲ್ ಮಾಲೀಕ ಲವಕೇಶ್ ಬಜಾಜ್ ತಲೆಮರೆಸಿಕೊಂಡಿದ್ದರು. ಅವರು ದೇಶ ಬಿಟ್ಟು ಓಡಿಹೋಗದಂತೆ ಪೊಲೀಸರು ಲುಕೌಟ್ ನೋಟಿಸ್ ಜಾರಿ ಮಾಡಿದ್ದರು. ತೀವ್ರ ಶೋಧದ ಬಳಿಕ ಕೊನೆಗೂ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

5 ಅಂತಸ್ತಿನ ಈ ಬೆಡ್ ಆ್ಯಂಡ್ ಬ್ರೇಕ್‌ಫಾಸ್ಟ್ (B&B) ಕಟ್ಟಡದಲ್ಲಿ ಯಾವುದೇ ಅಗ್ನಿಶಾಮಕ ಮುನ್ನೆಚ್ಚರಿಕಾ ಕ್ರಮಗಳು ಅಥವಾ ಕಡ್ಡಾಯ ಸುರಕ್ಷತಾ ಪರವಾನಗಿಗಳು ಇರಲಿಲ್ಲ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿದೆ. ನಿರ್ಲಕ್ಷ್ಯದ ಮೂಲಕ ಸಾವು ಉಂಟುಮಾಡಿದ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಆತನ ವಿರುದ್ಧ ಕೇಸ್ ದಾಖಲಿಸಲಾಗಿದೆ. ಮೃತಪಟ್ಟ 21 ಜನರಲ್ಲಿ 18 ಮಂದಿ ನೈಜೀರಿಯಾ, ಮೊಜಾಂಬಿಕ್, ಬಾಂಗ್ಲಾದೇಶ, ಸೊಮಾಲಿಯಾ, ಲೈಬೀರಿಯಾ ಮತ್ತು ಅಫ್ಘಾನಿಸ್ತಾನದ ಪ್ರಜೆಗಳಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ವೇಳೆ 10 ಪೊಲೀಸ್ ಸಿಬ್ಬಂದಿಯೂ ಗಾಯಗೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆರ್​ಸಿಬಿ ಹ್ಯಾಟ್ರಿಕ್ ಕಪ್ ಗೆಲ್ಲುವುದು ಕಷ್ಟಕರ..! ಇದು ಐಪಿಎಲ್ ಇತಿಹಾಸ ನುಡಿದ ಭವಿಷ್ಯ – Kannada News

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸತತ ಎರಡನೇ ಐಪಿಎಲ್ (IPL) ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಸತತ ಎರಡು ಪ್ರಶಸ್ತಿಗಳನ್ನು ಗೆದ್ದ ಮೂರನೇ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಒಂದು ಟ್ರೋಫಿಗಾಗಿ ಬರೋಬ್ಬರಿ 17 ವರ್ಷಗಳ ಕಾಲ ಕಾದಿದ್ದ ಆರ್​ಸಿಬಿ, ಎರಡನೇ ಟ್ರೋಫಿಯನ್ನು ಕೇವಲ ಒಂದು ವರ್ಷದಲ್ಲೇ ಗೆದ್ದುಕೊಂಡಿತು. ಇದೀಗ ಆರ್​ಸಿಬಿ ಸತತ ಮೂರನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ತಂಡದ ಆಟಗಾರರು ಕೂಡ ಇದೇ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಆರ್​ಸಿಬಿ ತನ್ನ ಮೂರನೇ ಟ್ರೋಫಿಗಾಗಿ ಸಾಕಷ್ಟು ಸಮಯ ಕಾಯಬೇಕಾಗಬಹುದು ಎಂದು ಐಪಿಎಲ್ ಇತಿಹಾಸ ಭವಿಷ್ಯ ನುಡಿದಿದೆ.

ಸತತ 2 ಪ್ರಶಸ್ತಿ ಗೆದ್ದಿದ್ದ ಸಿಎಸ್​ಕೆ, ಮುಂಬೈ

ಮೇಲೆ ಹೇಳಿದಂತೆ ಆರ್‌ಸಿಬಿಗಿಂತ ಮೊದಲು, ಕೇವಲ ಎರಡು ತಂಡಗಳು ಮಾತ್ರ ಸತತ ಎರಡು ಬಾರಿ ಐಪಿಎಲ್ ಗೆದ್ದಿವೆ. ಚೆನ್ನೈ ಸೂಪರ್ ಕಿಂಗ್ಸ್ 2010 ಮತ್ತು 2011 ರಲ್ಲಿ ಈ ಸಾಧನೆ ಮಾಡಿದ್ದರೆ, ಮುಂಬೈ ಇಂಡಿಯನ್ಸ್ 2019 ಮತ್ತು 2020 ರಲ್ಲಿ ಎರಡು ಬಾರಿ ಐಪಿಎಲ್ ಗೆದ್ದಿತ್ತು. ಈ ಎರಡು ಪ್ರಶಸ್ತಿ ಗೆಲುವಿನ ನಂತರ, ಚೆನ್ನೈ ಮತ್ತು ಮುಂಬೈನ ಮುಂದಿನ ಟ್ರೋಫಿಯ ಗೆಲುವಿಗಾಗಿ ಬಹಳ ವರ್ಷ ಕಾಯಬೇಕಾಯಿತು.

ಸಿಎಸ್​ಕೆಗೆ 7 ವರ್ಷ, ಮುಂಬೈಗೆ?

2010 ಮತ್ತು 2011 ರಲ್ಲಿ ಸತತ ಎರಡು ಪ್ರಶಸ್ತಿಗಳನ್ನು ಗೆದ್ದಿದ್ದ ಸಿಎಸ್​ಕೆ ತನ್ನ ಮುಂದಿನ ಟ್ರೋಫಿಗಾಗಿ 2018 ರವರೆಗೆ ಕಾಯಬೇಕಾಯಿತು. ಅಂದರೆ ಸಿಎಸ್​ಕೆ ತನ್ನ ಮುಂದಿನ ಪ್ರಶಸ್ತಿಗಾಗಿ ಏಳು ವರ್ಷ ಕಾಯಬೇಕಾಯಿತು. ಇತ್ತ 2019 ಮತ್ತು 2020 ರಲ್ಲಿ ಎರಡು ಬಾರಿ ಐಪಿಎಲ್ ಗೆದ್ದಿದ್ದ ಮುಂಬೈ, ತನ್ನ ಮುಂದಿನ ಪ್ರಶಸ್ತಿಗಾಗಿ ಈಗಲೂ ಕಾಯುತ್ತಲೇ ಇದೆ. ಅಂದರೆ ಮುಂಬೈ ಕೂಡ ಆರು ವರ್ಷಗಳಿಂದ ಪ್ರಶಸ್ತಿಯನ್ನು ಗೆದ್ದಿಲ್ಲ.

IPL 2026: ಅತ್ಯಧಿಕ ವೀಕ್ಷಣೆ ಕಂಡ 7 ಪಂದ್ಯಗಳಲ್ಲಿ ಆರ್​ಸಿಬಿಯದ್ದೇ 6 ಪಂದ್ಯಗಳು ..!

ಹ್ಯಾಟ್ರಿಕ್ ಕಪ್ ಗೆಲ್ಲುತ್ತಾ ಆರ್​ಸಿಬಿ?

ಇವು ಕೇವಲ ಅಂಕಿಅಂಶಗಳಾಗಿದ್ದು, ಇದು ಸಂಭವಿಸುವ ಸಾಧ್ಯತೆ ಎಷ್ಟರ ಮಟ್ಟಿಗೆ ಇದೆ ಎಂದು ಹೇಳಲು ಸಾಧ್ಯವಿಲ್ಲ, ಆದರೆ ಸತತ ಎರಡು ಪ್ರಶಸ್ತಿಗಳನ್ನು ಗೆದ್ದ ನಂತರದ ಮಾದರಿಯನ್ನು ನೋಡಿದರೆ, ಆರ್‌ಸಿಬಿ ತನ್ನ ಮೂರನೇ ಪ್ರಶಸ್ತಿಗಾಗಿ ಸಾಕಷ್ಟು ಸಮಯ ಕಾಯಬೇಕಾಗಬಹುದು. ಆರ್‌ಸಿಬಿ ಈ ಹಿಂದೆ 2009, 2011 ಮತ್ತು 2016 ರಲ್ಲಿ ಐಪಿಎಲ್ ಫೈನಲ್‌ನಲ್ಲಿ ಆಡಿತ್ತು, ಆದರೆ ಆ ಎಲ್ಲಾ ಪಂದ್ಯಗಳಲ್ಲಿ ಸೋತಿತ್ತು. 2025 ರಲ್ಲಿ ನಾಲ್ಕನೇ ಬಾರಿಗೆ ಫೈನಲ್ ತಲುಪಿ ಗೆಲುವು ಸಾಧಿಸಿತ್ತು. ಇದೀಗ ಈ ಆವೃತ್ತಿಯಲ್ಲೂ ತಂಡವು ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲು ಯಶಸ್ವಿಯಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Monsoon 2026: ಕೇರಳದಿಂದಲೇ ಮಾನ್ಸೂನ್ ಭಾರತವನ್ನು ಪ್ರವೇಶಿಸುವುದೇಕೆ? – Kannada News

ನವದೆಹಲಿ, ಜೂನ್ 3: ನಾಳೆ (ಜೂನ್ 4) ಮಾನ್ಸೂನ್ (Monsoon) ಕೇರಳವನ್ನು ತಲುಪಲಿದೆ. ಇದು ಅಧಿಕೃತವಾಗಿ ಭಾರತದಲ್ಲಿ ಮಳೆಗಾಲದ ಆರಂಭವನ್ನು ಸೂಚಿಸುತ್ತದೆ. ಈಗಾಗಲೇ ದೇಶಾದ್ಯಂತ ಪೂರ್ವ ಮಾನ್ಸೂನ್ ಮಳೆ ಶುರುವಾಗಿದೆ. ಹಾಗಾದರೆ, ಮಾನ್ಸೂನ್ ಕೇರಳದಿಂದಲೇ ಭಾರತವನ್ನು ಪ್ರವೇಶಿಸಲು ಕಾರಣವೇನು? ಮಾನ್ಸೂನ್ ಮಳೆಗಾಗಿ ಒತ್ತಡವನ್ನು ಹೇಗೆ ಸೃಷ್ಟಿಸುತ್ತವೆ? ಎಂಬ ಕುರಿತು ಮಾಹಿತಿ ಇಲ್ಲಿದೆ.

ಜೂನ್ 4ರಂದು ಮಾನ್ಸೂನ್ ಕೇರಳವನ್ನು ತಲುಪಲಿದೆ. ಕೇರಳವು ಅರಬ್ಬಿ ಸಮುದ್ರದ ತೀರದಲ್ಲಿದೆ. ಅರಬ್ಬಿ ಸಮುದ್ರದ ಶಾಖೆಯು ಮೊದಲು ಭಾರತದ ಪಶ್ಚಿಮ ಕರಾವಳಿಯನ್ನು ತಲುಪುತ್ತದೆ. ಆ ಮಾರ್ಗದಲ್ಲಿ ಕೇರಳವು ಮೊದಲ ಪ್ರಮುಖ ದ್ವಾರವಾಗಿದೆ. ಹೀಗಾಗಿ, ಕೇರಳಕ್ಕೆ ಮಾನ್ಸೂನ್ ಪ್ರವೇಶಿಸಿದ ಬಳಿಕ ಉಳಿದ ರಾಜ್ಯಗಳಿಗೆ ಎಂಟ್ರಿ ನೀಡುತ್ತದೆ. ಅರಬ್ಬಿ ಸಮುದ್ರವು ತ್ವರಿತ ಮತ್ತು ಹೇರಳವಾದ ತೇವಾಂಶವನ್ನು ಒದಗಿಸುತ್ತದೆ. ಬೇಸಿಗೆಯಲ್ಲಿ, ಅರಬ್ಬಿ ಸಮುದ್ರದಿಂದ ಬೀಸುವ ಗಾಳಿಯು ಬಹಳಷ್ಟು ತೇವಾಂಶವನ್ನು ಹೊತ್ತೊಯ್ಯಬಹುದು. ಈ ಗಾಳಿ ಕೇರಳ ಕರಾವಳಿಯನ್ನು ತಲುಪಿದಾಗ, ವಾತಾವರಣವು ಬೇಗನೆ ತೇವವಾಗುತ್ತದೆ. ಇದರಿಂದಾಗಿ ಮಳೆ ಪ್ರಾರಂಭವಾಗಲು ಸುಲಭವಾಗುತ್ತದೆ.

ಇದನ್ನೂ ಓದಿ: ಕೊಡಗು ಭೀಕರ ಪ್ರವಾಹ ಸಂತ್ರಸ್ತರಿಗೆ 7 ವರ್ಷಗಳಾದರೂ ಸಿಗದ ಪುನರ್ವಸತಿ ಆಸರೆ: ಮಳೆಗಾಲದಲ್ಲಿ ಪ್ರವಾಹದ ಭೀತಿ

ಬೇಸಿಗೆಯ ಅವಧಿಯಲ್ಲಿ (ಏಪ್ರಿಲ್ ಮತ್ತು ಮೇ) ಉತ್ತರ ಹಾಗೂ ಮಧ್ಯ ಭಾರತದ ಭೂಭಾಗವು ಸೂರ್ಯನ ತೀವ್ರ ಶಾಖದಿಂದಾಗಿ ಭಾರೀ ಪ್ರಮಾಣದಲ್ಲಿ ಕಾಯುತ್ತದೆ. ಭೂಮಿ ಬಿಸಿಯಾದಾಗ ಅದರ ಮೇಲಿರುವ ಗಾಳಿಯು ಹಗುರವಾಗಿ ಮೇಲಕ್ಕೆ ಏರುತ್ತದೆ. ಇದರಿಂದಾಗಿ ಭಾರತದ ಭೂಭಾಗದ ಮೇಲೆ ದೊಡ್ಡ ಕಡಿಮೆ ಒತ್ತಡದ ವಲಯ ಸೃಷ್ಟಿಯಾಗುತ್ತದೆ. ಆದರೆ, ಹಿಂದೂ ಮಹಾಸಾಗರದ ನೀರು ಭೂಮಿಯಷ್ಟು ಬೇಗ ಕಾಯುವುದಿಲ್ಲ. ಹಾಗಾಗಿ ಅಲ್ಲಿ ಹೆಚ್ಚು ಒತ್ತಡದ ವಲಯ ಇರುತ್ತದೆ. ಗಾಳಿಯು ಯಾವಾಗಲೂ ಹೆಚ್ಚು ಒತ್ತಡದ ಪ್ರದೇಶದಿಂದ ಕಡಿಮೆ ಒತ್ತಡದ ಪ್ರದೇಶದ ಕಡೆಗೆ ಬೀಸುವುದರಿಂದ, ಸಮುದ್ರದ ಮೇಲಿನ ತೇವಾಂಶಭರಿತ ಗಾಳಿಯು ಭಾರತದ ಭೂಭಾಗದ ಕಡೆಗೆ ವೇಗವಾಗಿ ನುಗ್ಗಿ ಬರುತ್ತದೆ.

ಪಶ್ಚಿಮ ಘಟ್ಟಗಳು ಕೇರಳದಿಂದ ನೇರವಾಗಿ ಹಿಂಭಾಗದಲ್ಲಿ ಇವೆ. ಕರಾವಳಿ ಗಾಳಿಯು ಪರ್ವತಗಳಿಗೆ ಡಿಕ್ಕಿ ಹೊಡೆದು ಮೇಲೇರುತ್ತದೆ. ಅದು ಮೇಲೇರುತ್ತಿದ್ದಂತೆ ಮೋಡಗಳು ರೂಪುಗೊಳ್ಳುತ್ತವೆ ಮತ್ತು ಭೂಗೋಳದ ಮಳೆಯು ತೀವ್ರಗೊಳ್ಳುತ್ತದೆ. ಆಗ ಮಾನ್ಸೂನ್‌ನ ಮುಖ್ಯ ಹರಿವು ಮೊದಲು ದಕ್ಷಿಣ ಭಾರತದ ಮೇಲೆ ಇಳಿಯುತ್ತದೆ. ಮಾನ್ಸೂನ್ ಹರಿವು ಕ್ರಮೇಣ ಬಲಗೊಳ್ಳುತ್ತದೆ. ಆರಂಭದಲ್ಲಿ, ಇದು ಮೊದಲು ದಕ್ಷಿಣ ಭಾರತದಲ್ಲಿ ಶುರುವಾಗಿ ನಂತರ ಉತ್ತರ ಭಾರತಕ್ಕೆ ಹರಡುತ್ತದೆ.

ಇದನ್ನೂ ಓದಿ: Monsoon 2026: ಜೂನ್ 4ರಂದು ಕೇರಳಕ್ಕೆ ಮುಂಗಾರು ಪ್ರವೇಶ; ಕರ್ನಾಟಕದಲ್ಲಿ ಮಳೆಗಾಲ ಯಾವಾಗ ಶುರು?

ಭಾರತದಲ್ಲಿ ಎಷ್ಟು ರೀತಿಯ ಮಾನ್ಸೂನ್ ಮಾರುತಗಳಿವೆ?:

ನೈಋತ್ಯ ಮಾನ್ಸೂನ್: ಇದು ಜೂನ್ ಮತ್ತು ಸೆಪ್ಟೆಂಬರ್ ನಡುವೆ ಸಕ್ರಿಯವಾಗಿರುತ್ತದೆ. ಇದನ್ನು ಭಾರತದ ಪ್ರಾಥಮಿಕ ಮಳೆಗಾಲವೆಂದು ಪರಿಗಣಿಸಲಾಗುತ್ತದೆ. ಒಟ್ಟು ಮಳೆಯ ಬಹುಪಾಲು ಈ ಸಮಯದಲ್ಲಿ ಸಂಭವಿಸುತ್ತದೆ. ಇದು ಮೊದಲು ಕೇರಳ ಮತ್ತು ಕರ್ನಾಟಕದ ಕರಾವಳಿಗಳ ಕಡೆಗೆ ಸಾಗುತ್ತದೆ. ಬಳಿಕ ಈಶಾನ್ಯ ಭಾರತ ಮತ್ತು ಬಂಗಾಳ-ಒಡಿಶಾ ಕಡೆಗೆ ಚಲಿಸಿ, ನಂತರ ಬಯಲು ಪ್ರದೇಶಗಳಲ್ಲಿ ಹರಡಿ ಉತ್ತರ ಮತ್ತು ಪಶ್ಚಿಮಕ್ಕೆ ಚಲಿಸುತ್ತದೆ.

ಈಶಾನ್ಯ ಮಾನ್ಸೂನ್: ಇದು ಅಕ್ಟೋಬರ್ ಮತ್ತು ಡಿಸೆಂಬರ್ ನಡುವೆ ಸಂಭವಿಸುತ್ತದೆ. ಇದು ವಿಶೇಷವಾಗಿ ತಮಿಳುನಾಡು, ದಕ್ಷಿಣ ಆಂಧ್ರಪ್ರದೇಶ, ಪುದುಚೇರಿ ಮತ್ತು ಸುತ್ತಮುತ್ತಲಿನ ಕರಾವಳಿಗಳಿಗೆ ಉತ್ತಮ ಮಳೆಯನ್ನು ತರುತ್ತದೆ.

ಭಾರತದ ಮುಖ್ಯ ಭೂಭಾಗಕ್ಕೆ ಕೇರಳದಲ್ಲೇ ಮೊದಲು ಮುಂಗಾರು ಪ್ರವೇಶಿಸಿದರೂ, ಅದಕ್ಕಿಂತ ಮುಂಚಿತವಾಗಿ ಅಂದರೆ ಮೇ ಮಧ್ಯಭಾಗದಲ್ಲೇ ಭಾರತದ ದ್ವೀಪಗಳಾದ ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಮುಂಗಾರು ಮಳೆ ಆರಂಭವಾಗುತ್ತದೆ. ಏಕೆಂದರೆ ಇವು ಭೂಮಧ್ಯ ರೇಖೆಗೆ ಹಾಗೂ ಬಂಗಾಳ ಕೊಲ್ಲಿಗೆ ಹತ್ತಿರದಲ್ಲಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

26/11 ಮುಂಬೈ ಉಗ್ರರ ದಾಳಿ ನಡೆದಾಗ ಪಾರ್ಟಿ ಮಾಡುತ್ತಿದ್ದ ನಟಿ ಕಂಗನಾ ರಣಾವತ್ – Kannada News

ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಅವರು ‘ಭಾರತ್ ಭಾಗ್ಯ ವಿಧಾತ’ (Bharat Bhagya Vidhata) ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಈ ವಿಷಯ ಹೇಳಿದ್ದಾರೆ. ದೇಶವನ್ನೇ ನಡುಗಿಸಿದ್ದ 2008ರ 26/11 ಮುಂಬೈ ಉಗ್ರರ ದಾಳಿಯ ಕರಾಳ ರಾತ್ರಿಗೆ ಸಂಬಂಧಿಸಿದಂತೆ ತಮ್ಮ ನೆನಪೊಂದನ್ನು ಅವರು ಹಂಚಿಕೊಂಡಿದ್ದಾರೆ. ಉಗ್ರರು ಮುಂಬೈ ಮೇಲೆ ದಾಳಿ ಮಾಡಿದ ಆ ಸಮಯದಲ್ಲಿ ತಾವು ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದ ವಿಷಯವನ್ನು ಕಂಗನಾ (Kangana Ranaut) ಬಹಿರಂಗಪಡಿಸಿದ್ದಾರೆ.

ಆ ಕರಾಳ ರಾತ್ರಿಯನ್ನು ನೆನಸಿಕೊಂಡ ಕಂಗನಾ, ‘ಅಂದು ನಟಿ ಶಹಾನಾ ಗೋಸ್ವಾಮಿ ಅವರು ಯಾರಿ ರೋಡ್‌ನಲ್ಲಿ ಹೊಸ ಮನೆಗೆ ಗೃಹಪ್ರವೇಶ ಮಾಡಿದ್ದರು. ಆ ಖುಷಿಯಲ್ಲಿ ಅವರು ವಿಶೇಷ್ ಫಿಲ್ಮ್ಸ್ ಬ್ಯಾನರ್‌ನ ಆಪ್ತ ನಟ-ನಟಿಯರಿಗೆ ಹೌಸ್ ಪಾರ್ಟಿ ಆಯೋಜಿಸಿದ್ದರು. ನಾವೆಲ್ಲರೂ ಹಾಡು, ಡ್ಯಾನ್ಸ್ ಮಾಡುತ್ತಾ ಪಾರ್ಟಿ ಮೂಡ್‌ನಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದೆವು’ ಎಂದಿದ್ದಾರೆ.

‘ನಾವು ಪಾರ್ಟಿ ಮಾಡುತ್ತಿದ್ದ ಜಾಗಕ್ಕೆ ಹಿರಿಯ ನಿರ್ದೇಶಕ ಮಹೇಶ್ ಭಟ್ ಅವರು ಬಂದರು. ತಕ್ಷಣವೇ ಪಾರ್ಟಿ ನಿಲ್ಲಿಸಿ, ಟಿವಿ ಆನ್ ಮಾಡುವಂತೆ ನಮಗೆ ತಿಳಿಸಿದರು. ನಾವು ಟಿವಿ ಹಾಕಿದಾಗ ಇಡೀ ಮುಂಬೈನಲ್ಲಿ ಉಗ್ರರು ಅಟ್ಟಹಾಸ ಮೆರೆಯುತ್ತಿರುವ ಲೈವ್ ನ್ಯೂಸ್ ಬಿತ್ತರವಾಗುತ್ತಿತ್ತು. ಅದನ್ನು ನೋಡಿ ನಾವೆಲ್ಲರೂ ಒಂದು ಕ್ಷಣ ದಿಗ್ಭ್ರಮೆಗೊಂಡೆವು’ ಎಂದು ಕಂಗನಾ ಆ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.

‘ಆರಂಭದಲ್ಲಿ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂಬುದು ನಮಗೆ ಅರ್ಥವಾಗಲಿಲ್ಲ. ಪಾರ್ಟಿ ಮುಂದುವರಿಸಬೇಕೇ ಅಥವಾ ಮನೆಗೆ ಹೋಗಬೇಕೇ ಎಂದು ನಮ್ಮ ನಡುವೆ ಚರ್ಚೆ ನಡೆಯುತ್ತಿತ್ತು. ಆದರೆ ಮಹೇಶ್ ಭಟ್ ಅವರು ಪರಿಸ್ಥಿತಿಯ ಗಂಭೀರತೆಯನ್ನು ಅರಿತು, ತಕ್ಷಣವೇ ಎಲ್ಲರಿಗೂ ಪಾರ್ಟಿ ನಿಲ್ಲಿಸಿ ಮನೆಗೆ ಮರಳುವಂತೆ ಖಡಕ್ ಆಗಿ ಸೂಚಿಸಿದರು. ಅವರ ಮಾತನ್ನು ಕೇಳಿ ನಾವೆಲ್ಲರೂ ಅಲ್ಲಿಂದ ಹೊರಟೆವು. ಒಂದು ವೇಳೆ ಅಂದು ಮಹೇಶ್ ಭಟ್ ನಮಗೆ ಮಾಹಿತಿ ನೀಡದಿದ್ದರೆ, ಮುಂಬೈನಲ್ಲಿ ಅಷ್ಟು ದೊಡ್ಡ ದುರಂತ ನಡೆಯುತ್ತಿರುವುದು ನಮಗೆ ತಡವಾಗಿ ತಿಳಿಯುತ್ತಿತ್ತು’ ಎಂದು ಕಂಗನಾ ಹೇಳಿದ್ದಾರೆ.

ಇದನ್ನೂ ಓದಿ: ಮತ್ತೊಂದು ರಾಷ್ಟ್ರ ಪ್ರಶಸ್ತಿ ಗ್ಯಾರಂಟಿ; ಕಂಗನಾ ಹೊಸ ಸಿನಿಮಾ ಟ್ರೇಲರ್ ನೋಡಿ ಫ್ಯಾನ್ಸ್ ಫಿದಾ

‘ಭಾರತ್ ಭಾಗ್ಯ ವಿಧಾತ’ ಚಿತ್ರದ ಕಥೆ:
ಕಂಗನಾ ರಣಾವತ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಭಾರತ್ ಭಾಗ್ಯ ವಿಧಾತ’ ಸಿನಿಮಾವು 26/11ರ ಮುಂಬೈ ಉಗ್ರರ ದಾಳಿಯ ನೈಜ ಘಟನೆಗಳನ್ನು ಆಧರಿಸಿ ತಯಾರಾಗಿದೆ. ದಾಳಿಯ ಸಮಯದಲ್ಲಿ ಮುಂಬೈನ ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ವೈದ್ಯರು ಪ್ರಾಣದ ಹಂಗು ತೊರೆದು ನೂರಾರು ಜನರ ಜೀವ ಉಳಿಸಲು ತೋರಿದ ಅಪ್ರತಿಮ ಧೈರ್ಯ ಮತ್ತು ಹೋರಾಟದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಚಿತ್ರದಲ್ಲಿ ಕಂಗನಾ ಅವರು ನರ್ಸ್ ಪಾತ್ರವನ್ನು ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಲೈಂಗಿಕ ಕಿರುಕುಳದ ಸುಳ್ಳು ಕೇಸ್ ಹಾಕಿದ್ದನ್ನು ಒಪ್ಪಿಕೊಂಡ ಶಿಲ್ಪಾ ಶಿಂಧೆ; ನಟಿಯ ಬಂಧನಕ್ಕೆ ಒತ್ತಾಯ – Kannada News

ಕಿರುತೆರೆಯ ಜನಪ್ರಿಯ ನಟಿ ಮತ್ತು ‘ಬಿಗ್ ಬಾಸ್’ ವಿನ್ನರ್ ಶಿಲ್ಪಾ ಶಿಂಧೆ (Shilpa Shinde) ಅವರು ತಮ್ಮ ಹಳೆಯ ವಿವಾದವೊಂದರ ಕುರಿತು ನೀಡಿರುವ ಹೇಳಿಕೆ ಈಗ ಹೊಸದೊಂದು ಕಾನೂನು ಸಂಕಷ್ಟಕ್ಕೆ ಕಾರಣವಾಗಿದೆ. ಸೂಪರ್ ಹಿಟ್ ಹಿಂದಿ ಧಾರಾವಾಹಿ ‘ಭಾಬಿ ಜಿ ಘರ್ ಪರ್ ಹೈ’ (Bhabi Ji Ghar Par Hain) ನಿರ್ಮಾಪಕರ ವಿರುದ್ಧ ತಾವು ಈ ಹಿಂದೆ ಹೂಡಿದ್ದ ಲೈಂಗಿಕ ಕಿರುಕುಳದ ಕೇಸ್ (Harassment Case) ಸುಳ್ಳು ಎಂದು ಅವರು ಇತ್ತೀಚಿನ ಪಾಡ್‌ಕಾಸ್ಟ್‌ನಲ್ಲಿ ಒಪ್ಪಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಪುರುಷರ ಹಕ್ಕುಗಳ ಸಂಘಟನೆಯೊಂದು ನಟಿಯನ್ನು ಬಂಧಿಸುವಂತೆ ಮುಂಬೈ ಪೊಲೀಸರನ್ನು ಆಗ್ರಹಿಸಿದೆ.

ಭಾರ್ತಿ ಸಿಂಗ್ ಮತ್ತು ಹರ್ಷ್ ಲಿಂಬಾಚಿಯಾ ನಡೆಸಿಕೊಡುವ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದ ಶಿಲ್ಪಾ ಶಿಂಧೆ ಈ ಆಘಾತಕಾರಿ ವಿಷಯವನ್ನು ಹಂಚಿಕೊಂಡಿದ್ದಾರೆ. ಅವರ ಈ ಹೇಳಿಕೆ ಹೊರಬರುತ್ತಿದ್ದಂತೆ ದೆಹಲಿ ಮೂಲದ ಪುರುಷರ ಹಕ್ಕುಗಳ ಸಂಘಟನೆಯಾದ ‘NCMIndia Council for Men Affairs’ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಶಿಲ್ಪಾ ಶಿಂಧೆ ಅವರು ಕಾನೂನನ್ನು ದುರುಪಯೋಗಪಡಿಸಿಕೊಂಡು ನಿರ್ಮಾಪಕರ ವಿರುದ್ಧ ಸುಳ್ಳು ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದರು ಎಂಬುದು ಅವರ ಒಪ್ಪಿಗೆಯಿಂದಲೇ ಸಾಬೀತಾಗಿದೆ. ಹಾಗಾಗಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಂಘಟನೆಯು ಮುಂಬೈ ಪೊಲೀಸರನ್ನು ಒತ್ತಾಯಿಸಿದೆ.

ಪಾಡ್‌ಕಾಸ್ಟ್‌ನಲ್ಲಿ ಶಿಲ್ಪಾ ಶಿಂಧೆ ಹೇಳಿದ್ದೇನು?
ಧಾರಾವಾಹಿಯ ನಿರ್ಮಾಪಕ ಸಂಜಯ್ ಕೊಹ್ಲಿ ವಿರುದ್ಧ ವರ್ಷಗಳ ಹಿಂದೆ ದಾಖಲಿಸಿದ್ದ ಲೈಂಗಿಕ ಕಿರುಕುಳದ ದೂರು ಸಂಪೂರ್ಣವಾಗಿ ನಿಜವಾಗಿರಲಿಲ್ಲ ಎಂದು ಶಿಲ್ಪಾ ಅವರು ಪಾಡ್‌ಕಾಸ್ಟ್‌ನಲ್ಲಿ ಒಪ್ಪಿಕೊಂಡಿದ್ದಾರೆ. ಆ ಸಮಯದಲ್ಲಿ ತಮಗೆ ಬೇರೆ ಯಾವುದೇ ದಾರಿ ಕಾಣದಿದ್ದಕ್ಕೆ ಮತ್ತು ತಮ್ಮ ಬಾಕಿ ಹಣವನ್ನು ವಸೂಲಿ ಮಾಡುವ ಉದ್ದೇಶದಿಂದ ಅನಿವಾರ್ಯವಾಗಿ ಆ ರೀತಿಯ ಕೇಸ್ ದಾಖಲಿಸಬೇಕಾಯಿತು ಎಂದು ಅವರು ಹೇಳಿದ್ದಾರೆ.

‘ಬಳಿಕ ಆ ಪ್ರಕರಣವು ಇಬ್ಬರ ನಡುವಿನ ಮಾತುಕತೆಯ ಮೂಲಕ ಇತ್ಯರ್ಥವಾಯಿತು. ನನ್ನ ಬಾಕಿ ಇದ್ದ ಪೇಮೆಂಟ್ ಕೂಡ ಕ್ಲಿಯರ್ ಆಯಿತು. ಈಗ ನಿರ್ಮಾಪಕರ ಜೊತೆ ನನ್ನ ಸಂಬಂಧ ಚೆನ್ನಾಗಿದೆ ಮತ್ತು ನಮ್ಮ ನಡುವೆ ಯಾವುದೇ ದ್ವೇಷ ಇಲ್ಲ’ ಎಂದು ಶಿಲ್ಪಾ ಶಿಂಧೆ ಸಮರ್ಥಿಸಿಕೊಂಡಿದ್ದಾರೆ. ಆದರೆ, ತಾವು ನೀಡಿದ್ದ ದೂರು ಸುಳ್ಳು ಎಂದು ಈಗ ಸ್ವತಃ ಅವರೇ ಒಪ್ಪಿಕೊಂಡಿರುವುದು ಪುರುಷರ ಹಕ್ಕುಗಳ ಪರ ಹೋರಾಡುವ ಸಂಘಟನೆಗಳನ್ನು ಕೆರಳಿಸಿದೆ.

ಇದನ್ನೂ ಓದಿ: ‘ಧುರಂಧರ್’ ಚಿತ್ರತಂಡದ ಸದಸ್ಯನ ಲೈಂಗಿಕ ದೌರ್ಜನ್ಯ ಕೃತ್ಯ ಸಾಬೀತು; ಕಠಿಣ ಕ್ರಮ

ವಿವಾದದ ಹಿನ್ನೆಲೆ:
2016ರಲ್ಲಿ ‘ಭಾಬಿ ಜಿ ಘರ್ ಪರ್ ಹೈ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡುವ ಮೂಲಕ ಶಿಲ್ಪಾ ಶಿಂಧೆ ದೇಶಾದ್ಯಂತ ಮನೆಮಾತಾಗಿದ್ದರು. ಆದರೆ ಅದೇ ಸಮಯದಲ್ಲಿ ಸಂಭಾವನೆ ಮತ್ತು ಒಪ್ಪಂದದ ವಿಚಾರವಾಗಿ ನಿರ್ಮಾಪಕರೊಂದಿಗೆ ಭಿನ್ನಾಭಿಪ್ರಾಯ ಮೂಡಿ ಅವರು ದಿಢೀರ್ ಶೋನಿಂದ ಹೊರನಡೆದಿದ್ದರು. ಈ ವೇಳೆ ಇಡೀ ಟಿವಿ ಉದ್ಯಮದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಈ ವಿವಾದ, ಕೋರ್ಟ್ ಮೆಟ್ಟಿಲೇರಿ ತಿಂಗಳುಗಟ್ಟಲೆ ಸುದ್ದಿಯಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇಂಧನ ಉಳಿಸಲು ಮೋದಿ ಕರೆ; ಒಂದೇ ಕಾರಿನಲ್ಲಿ ಸಂಪುಟ ಸಭೆಗೆ ತೆರಳಿದ ಕೇಂದ್ರ ಸಚಿವರು – Kannada News

ನವದೆಹಲಿ, ಜೂನ್ 3: ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಓಗೊಟ್ಟು ಕೇಂದ್ರ ಸಚಿವರು ಪರಿಸರ ಕಾಳಜಿ ಮೆರೆದಿರುವ ಅಪರೂಪದ ವಿದ್ಯಮಾನವೊಂದು ನಡೆದಿದೆ. ಇಂಧನ ಉಳಿತಾಯಕ್ಕೆ ಪ್ರಧಾನಿ ನರೇಂದ್ರ ಮೋದಿ (PM Modi) ಕರೆ ನೀಡಿರುವ ಹಿನ್ನೆಲೆಯಲ್ಲಿ ಒಂದೇ ಕಾರಿನಲ್ಲಿ ಕ್ಯಾಬಿನೆಟ್ ಸಭೆಗೆ ತೆರಳಿ ಕೇಂದ್ರ ಸಚಿವರು ಮಾದರಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಇಂಧನ ಬಳಕೆಯನ್ನು ಕಡಿಮೆ ಮಾಡಲು ಮತ್ತು ಪರಿಸರ ಮಾಲಿನ್ಯ ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಕರೆಗೆ ಕೇಂದ್ರ ಸಚಿವರು ಅದ್ಭುತವಾಗಿ ಸ್ಪಂದಿಸಿದ್ದಾರೆ.

ಇಂದು ನಡೆದ ಮಹತ್ವದ ಕೇಂದ್ರ ಸಚಿವ ಸಂಪುಟ ಸಭೆಗೆ ಕೇಂದ್ರ ಸಚಿವರಾದ ಜಿ. ಕಿಶನ್ ರೆಡ್ಡಿ, ಶಿವರಾಜ್ ಸಿಂಗ್ ಚೌಹಾಣ್, ಪ್ರಲ್ಹಾದ್ ಜೋಶಿ ಮತ್ತಿತರ ಕೇಂದ್ರ ಸಚಿವರು ತಮ್ಮ ವೈಯಕ್ತಿಕ ಅಧಿಕೃತ ಕಾರುಗಳನ್ನು ಬಿಟ್ಟು, ಒಂದೇ ಕಾರಿನಲ್ಲಿ ‘ಕಾರ್‌ಪೂಲಿಂಗ್’ (Carpooling) ಮಾಡುವ ಮೂಲಕ ದೇಶದ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ಕಲ್ಲಿದ್ದಲು ಅನಿಲೀಕರಣ ಯೋಜನೆಗೆ ಸಂಪುಟದಿಂದ 37,500 ರೂ ಅನುಮೋದನೆ; ಏನಿದರ ಉಪಯೋಗ?

ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಹಾಗೂ ಪ್ರವಾಸೋದ್ಯಮ ಸಚಿವ ಜಿ. ಕಿಶನ್ ರೆಡ್ಡಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಫೋಟೋ ಹಾಗೂ ವಿವರಗಳನ್ನು ಹಂಚಿಕೊಂಡಿದ್ದಾರೆ. “ಪ್ರಧಾನಿ ನರೇಂದ್ರ ಮೋದಿ ಅವರ ಇಂಧನ ಸಂರಕ್ಷಣೆ ಮತ್ತು ಮಾಲಿನ್ಯ ಮುಕ್ತ ಭಾರತದ ಕರೆಯನ್ನು ಬೆಂಬಲಿಸಿ, ನಾವು ಇಂದು ಕ್ಯಾಬಿನೆಟ್ ಸಭೆಗೆ ಒಟ್ಟಿಗೆ ಕಾರ್‌ಪೂಲ್ ಮಾಡಿದ್ದೇವೆ” ಎಂದು ಕಿಶನ್ ರೆಡ್ಡಿ ತಿಳಿಸಿದ್ದಾರೆ. ಕಿಶನ್ ರೆಡ್ಡಿ, ಶಿವರಾಜ್ ಸಿಂಗ್ ಚೌಹಾಣ್, ಸಿ ಆರ್ ಪಾಟೀಲ್ ಒಂದೇ ಕಾರಿನಲ್ಲಿ ಸಂಪುಟ ಸಭೆಗೆ ತೆರಳಿದ್ದಾರೆ.

ಹಾಗೇ, ಕೇಂದ್ರ ಸಚಿವರಾದ ಕಿರಣ್ ರಿಜಿಜು, ರಾಜೀವ್ ರಂಜನ್ ಸಿಂಗ್, ಮನೋಹರ್ ಖಟ್ಟರ್ ಒಂದೇ ಕಾರಿನಲ್ಲಿ ಸಂಪುಟ ಸಭೆಗೆ ತೆರಳಿದ್ದಾರೆ.

ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಮತ್ತು ಗಜೇಂದ್ರ ಸಿಂಗ್ ಶೇಖಾವತ್ ಒಂದೇ ಕಾರಿನಲ್ಲಿ ಸಂಪುಟ ಸಭೆಗೆ ತೆರಳಿದ್ದಾರೆ.

ಇತ್ತೀಚಿನ ಜಾಗತಿಕ ಹವಾಮಾನ ಬದಲಾವಣೆ ಮತ್ತು ಇಂಧನ ದರಗಳ ಏರಿಳಿತದ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿ ಅವರು ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಸಾಧ್ಯವಾದಷ್ಟು ಇಂಧನ ಉಳಿತಾಯದ ಮಾರ್ಗಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದ್ದರು. ಸಾರ್ವಜನಿಕ ಸಾರಿಗೆ ಬಳಕೆ, ಎಲೆಕ್ಟ್ರಿಕ್ ವಾಹನಗಳ ಬಳಕೆ ಹಾಗೂ ಕಾರ್‌ಪೂಲಿಂಗ್ ಮಾಡುವುದರಿಂದ ದೇಶದ ಇಂಧನ ಆಮದು ವೆಚ್ಚ ಕಡಿಮೆಯಾಗುವುದಲ್ಲದೆ, ಮಾಲಿನ್ಯವೂ ತಗ್ಗುತ್ತದೆ ಎಂಬುದು ಸರ್ಕಾರದ ಆಶಯವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾಯಕತ್ವದ ಜೊತೆಗೆ ಟಿ20 ತಂಡದಿಂದಲೂ ಸೂರ್ಯಕುಮಾರ್​ಗೆ ಗೇಟ್​ಪಾಸ್ – Kannada News

2026 ರ ಐಪಿಎಲ್‌ನಲ್ಲಿ (IPL 2026) ಕಳಪೆ ಪ್ರದರ್ಶನದ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಪ್ರಸ್ತುತ ಮುಂಬೈ ಟಿ20 ಲೀಗ್​ನಲ್ಲಿ ಆಡುತ್ತಿದ್ದಾರೆ. ಈ ಲೀಗ್​ನಲ್ಲೂ ಸೂರ್ಯನಿಗೆ ಉತ್ತಮ ಆರಂಭ ಸಿಕ್ಕಿಲ್ಲ. ಇದೆಲ್ಲದರ ನಡುವೆ ಹೊರಬಿದ್ದಿರುವ ಮಾಹಿತಿ ಪ್ರಕಾರ, ಸೂರ್ಯಕುಮಾರ್ ಯಾದವ್ ಅವರನ್ನು ಭಾರತ ಟಿ20 ತಂಡದ ನಾಯಕತ್ವದಿಂದ ತೆಗೆದುಹಾಕಲು ನಿರ್ಧರಿಸಲಾಗಿದೆ. ಇದರ ಜೊತೆಗೆ ಅವರನ್ನು ಭಾರತ ಟಿ20 ತಂಡದಿಂದಲೂ ಕೈಬಿಡಲಾಗುತ್ತಿದೆ ಎಂದು ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ನಾಯಕತ್ವದ ಜೊತೆಗೆ ತಂಡದಿಂದಲೂ ಕೋಕ್

ಭಾರತ ಟಿ20 ತಂಡದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ, ತಂಡಕ್ಕೆ ಹೊರ ನಾಯಕನ ಹುಡುಕಾಟ ಶುರು ಮಾಡಿದೆ. ಕೋಚ್ ಗೌತಮ್ ಗಂಭೀರ್, ತಂಡದ ನಿರ್ವಹಣೆ ಮತ್ತು ಆಯ್ಕೆ ಸಮಿತಿಯೊಂದಿಗೆ ಚರ್ಚಿಸಿದ ನಂತರ ಹೊಸ ಟಿ20 ನಾಯಕನನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ವರದಿ ಮಾಡಿದೆ.

ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ‘ಸೂರ್ಯ ಅವರ ನಾಯಕತ್ವದಲ್ಲಿ ತಂಡವು ಟಿ20 ವಿಶ್ವಕಪ್ ಗೆದ್ದಿದ್ದರೂ, ಅವರ ವೈಯಕ್ತಿಕ ಫಾರ್ಮ್ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆಗಳಿಗೆ ನಿರ್ಧರಿಸಲಾಗಿದೆ. ಹೀಗಾಗಿ ಸೂರ್ಯ ಅವರನ್ನು ಟಿ20 ತಂಡದಿಂದ ಕೈಬಿಡಲಾಗುವುದು. ಶೀಘ್ರದಲ್ಲೇ ಈ ನಿರ್ಧಾರವನ್ನು ಸೂರ್ಯನಿಗೆ ತಿಳಿಸಲಾಗುವುದು ಎಂದು ಉಲ್ಲೇಖಿಸಲಾಗಿದೆ.

ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಸೂರ್ಯ

ಸೂರ್ಯಕುಮಾರ್ ಯಾದವ್ 2024 ರಿಂದ ನಾಯಕನಾಗಿ ಭಾರತವನ್ನು ಸತತ ಟಿ20 ಸರಣಿ ಗೆಲುವುಗಳಿಗೆ ಮುನ್ನಡೆಸಿದ್ದಾರೆ. ಅವರ ನಾಯಕತ್ವದಲ್ಲಿ, ಟೀಂ ಇಂಡಿಯಾ ವಿಶ್ವ ಚಾಂಪಿಯನ್ ಆಯಿತು. ಆದಾಗ್ಯೂ, ಆಟಗಾರನಾಗಿ ಸೂರ್ಯ ಅವರ ಫಾರ್ಮ್​ ಅತ್ಯಂತ ಕಳಪೆಯಾಗಿತ್ತು. 2021, 2022 ಮತ್ತು 2023 ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಸೂರ್ಯ, 2024 ಮತ್ತು 2025 ರಲ್ಲಿ, ತೀರ ಕಳಪೆ ಪ್ರದರ್ಶನ ನೀಡಿದ್ದಾರೆ. 2026 ರಲ್ಲಿ 14 ಟಿ20 ಪಂದ್ಯಗಳನ್ನಾಡಿದ್ದ ಸೂರ್ಯ, 44 ರ ಸರಾಸರಿಯಲ್ಲಿ 484 ರನ್ ಗಳಿಸಿದ್ದರು. ಹಾಗೆಯೇ ಐಪಿಎಲ್ 2026 ರಲ್ಲಿ ಅವರ ಪ್ರದರ್ಶನವು ವಿಶೇಷವಾಗಿರಲಿಲ್ಲ. ಆಡಿದ 13 ಇನ್ನಿಂಗ್ಸ್‌ಗಳಲ್ಲಿ ಕೇವಲ ಒಂದು ಅರ್ಧಶತಕದೊಂದಿಗೆ ಕೇವಲ 270 ರನ್ ಮಾತ್ರ ಕಲೆಹಾಕಿದ್ದರು.

ತಂದೆಯಾಗುವ ಸಂತಸದಲ್ಲಿ ಸೂರ್ಯಕುಮಾರ್; ಬೇಬಿ ಶವರ್ ವಿಡಿಯೋ ವೈರಲ್

ಸೂರ್ಯನ ಬದಲಿಗೆ ಯಾರಿಗೆ ನಾಯಕತ್ವ?

ಪ್ರಸ್ತುತ ಟಿ20 ತಂಡದ ನಾಯಕತ್ವಕ್ಕೆ ಶ್ರೇಯಸ್ ಅಯ್ಯರ್ ಅವರ ಹೆಸರು ಬಲವಾಗಿ ಕೇಳಿಬರುತ್ತಿದೆ. ಅಯ್ಯರ್ ಅವರ ಜೊತೆಗೆ, ಶುಭಮನ್ ಗಿಲ್, ಅಕ್ಷರ್ ಪಟೇಲ್, ಇಶಾನ್ ಕಿಶನ್ ಮತ್ತು ತಿಲಕ್ ವರ್ಮಾ ಅವರ ಹೆಸರುಗಳನ್ನು ಸಹ ಟಿ20 ತಂಡದ ನಾಯಕತ್ವಕ್ಕೆ ಚರ್ಚಿಸಲಾಗುತ್ತಿದೆ. ಇದರಲ್ಲಿ ಶ್ರೇಯಸ್ ಅಯ್ಯರ್​ಗೆ ಕೊಂಚ ಮೇಲುಗೈ ಸಾಧಿಸಿದ್ದಾರೆ. ಏಕೆಂದರೆ ನಾಯಕತ್ವದ ಅನುಭವ ಹೊಂದಿರುವ ಅಯ್ಯರ್ ತಮ್ಮ ನಾಯಕತ್ವದಲ್ಲಿ ಕೆಕೆಆರ್ ತಂಡವನ್ನು ಐಪಿಎಲ್ ಪ್ರಶಸ್ತಿಗೆ ಮುನ್ನಡೆಸಿದ್ದರು. ಹಾಗೆಯೇ ಪಂಜಾಬ್ ತಂಡವನ್ನು ಫೈನಲ್​ಗೇರಿಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version