ಬಾಗಲಕೋಟೆ, ಏ.6: ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಭರ್ಜರಿ ಪ್ರಚಾರ ನಡೆಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸರ್ಕಾರದ ಗ್ಯಾರಂಟಿ ಯೋಜನೆಗಳು ಭವಿಷ್ಯದ ಪೀಳಿಗೆಗೆ ಸಾಲದ ಹೊರೆ ಹೆಚ್ಚಿಸುತ್ತವೆ ಎಂದು ಅವರು ಎಚ್ಚರಿಸಿದರು. ಪ್ರಸ್ತುತ ಸರ್ಕಾರವು 8.17 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು. ಕುಟುಂಬ ರಾಜಕಾರಣದ ಬಗ್ಗೆ ಸಿದ್ದರಾಮಯ್ಯನವರನ್ನು ಟೀಕಿಸಿದ ಕುಮಾರಸ್ವಾಮಿ, ಅವರ ಪುತ್ರನನ್ನು ರಾಜಕೀಯಕ್ಕೆ ತಂದಿರುವುದನ್ನು ಪ್ರಶ್ನಿಸಿದರು. ಅಹಿಂದ ಸಮುದಾಯದ ಹೆಸರನ್ನು ಅಧಿಕಾರಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ಬೆಳಕಿಗೆ ಬಂದ ವಾಲ್ಮೀಕಿ ಅಭಿವೃದ್ಧಿ ನಿಗಮದ 87 ಕೋಟಿ ರೂಪಾಯಿ ಹಗರಣ ಮಾಡಿದ್ದಾರೆ ಎಂದು ಹೇಳಿದರು. ವೀರಣ್ಣ ಚರಂತಿಮಠ ಅವರನ್ನು ಶಿಕ್ಷಣ ತಜ್ಞ ಎಂದು ಶ್ಲಾಘಿಸಿದ ಕುಮಾರಸ್ವಾಮಿ, ಅವರು ಈ ಭಾಗದ ಅನೇಕ ಕುಟುಂಬಗಳ ಮಕ್ಕಳಿಗೆ ವಿದ್ಯೆ ನೀಡಿ ಬದುಕಿಗೆ ದಾರಿ ತೋರಿದ್ದಾರೆ ಎಂದರು. ರಾಜ್ಯದ ಗೌರವವನ್ನು ಉಳಿಸಲು ಮತ್ತು ಉತ್ತಮ ಆಡಳಿತಕ್ಕಾಗಿ ಚರಂತಿಮಠ ಅವರನ್ನು ಆಯ್ಕೆ ಮಾಡುವಂತೆ ಬಾಗಲಕೋಟೆ ಮತದಾರರಲ್ಲಿ ಕುಮಾರಸ್ವಾಮಿ ಮನವಿ ಮಾಡಿದರು.
ಟೆಹ್ರಾನ್, ಏಪ್ರಿಲ್ 06: ಅಮೆರಿಕ ಮತ್ತು ಇಸ್ರೇಲ್ ಮತ್ತು ಇರಾನ್(Iran) ನಡುವೆ ನಡೆಯುತ್ತಿರುವ ಸಂಘರ್ಷ ಈಗ 37 ನೇ ದಿನವನ್ನು ತಲುಪಿದೆ ಮತ್ತು ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಹದಗೆಡುತ್ತಲೇ ಇದೆ. ಏತನ್ಮಧ್ಯೆ, ರಾಜತಾಂತ್ರಿಕ ಪರಿಹಾರದ ಭರವಸೆ ಇದೆ ಎಂದು ತೋರುತ್ತದೆ. ವರದಿಗಳ ಪ್ರಕಾರ, 45 ದಿನಗಳ ಕದನ ವಿರಾಮದ ಕುರಿತು ಮೂರು ಕಡೆಯ ನಡುವೆ ಮಾತುಕತೆ ತೀವ್ರಗೊಂಡಿದೆ. ಆಕ್ಸಿಯಾಸ್ ವರದಿಯ ಪ್ರಕಾರ, ಈ ಪ್ರಸ್ತಾಪದ ಕುರಿತು ಅಮೆರಿಕ, ಇರಾನ್ ಮತ್ತು ಪ್ರಾದೇಶಿಕ ಮಧ್ಯಸ್ಥಿಕೆ ವಹಿಸುವ ದೇಶಗಳ ನಡುವೆ ಗಂಭೀರ ಚರ್ಚೆಗಳು ನಡೆಯುತ್ತಿವೆ.
ಇದು ಸಂಘರ್ಷವನ್ನು ಕೊನೆಗೊಳಿಸುವ ಪ್ರಮುಖ ಉಪಕ್ರಮವೆಂದು ಪರಿಗಣಿಸಲಾಗಿದೆ. ಪಾಕಿಸ್ತಾನ, ಈಜಿಪ್ಟ್ ಮತ್ತು ಟರ್ಕಿ ಈ ಮಾತುಕತೆಗಳಲ್ಲಿ ಮಧ್ಯವರ್ತಿಗಳ ಪಾತ್ರವನ್ನು ವಹಿಸುತ್ತಿವೆ ಎಂದು ವರದಿಯಾಗಿದೆ. ಮಧ್ಯವರ್ತಿಗಳು 45 ದಿನಗಳ ಕದನ ವಿರಾಮದ ನಿಯಮಗಳನ್ನು ಅಂತಿಮಗೊಳಿಸಲು ತೀವ್ರವಾಗಿ ಪ್ರಯತ್ನಿಸುತ್ತಿದ್ದಾರೆ ಮತ್ತು ಎರಡೂ ಕಡೆಯವರು ಅದಕ್ಕೆ ಒಪ್ಪಿಕೊಳ್ಳುವಂತೆ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ.
ಆದಾಗ್ಯೂ, ಅಮೆರಿಕ, ಇಸ್ರೇಲ್ ಮತ್ತು ಇರಾನ್ನ ನಿಲುವುಗಳನ್ನು ಗಮನಿಸಿದರೆ ಶಾಂತಿ ನೆಲೆಸುವುದು ಅಸಾಧ್ಯವೆಂಬಂತೆ ತೋರುತ್ತಿದೆ. ಕನಿಷ್ಠ 45 ದಿನಗಳವರೆಗೆ ಹೋರಾಟವನ್ನು ನಿಲ್ಲಿಸಿ ನಂತರ ಮಾತುಕತೆಗಳನ್ನು ಪುನರಾರಂಭಿಸುವುದು ಯೋಜನೆಯಾಗಿದೆ.
ಚರ್ಚೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಮುಂದಿನ ಎರಡು ದಿನಗಳಲ್ಲಿ ಸೀಮಿತ ಒಪ್ಪಂದವು ಅಸಂಭವವೆಂದು ಸೂಚಿಸಿದ್ದಾರೆ. ಅದೇನೇ ಇದ್ದರೂ, ರಾಜತಾಂತ್ರಿಕರು ಇದನ್ನು ಪ್ರಮುಖ ಮುಖಾಮುಖಿಯನ್ನು ತಪ್ಪಿಸಲು ಕೊನೆಯ ಅವಕಾಶವೆಂದು ಪರಿಗಣಿಸಿದ್ದಾರೆ.
ಇರಾನ್ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕುತ್ತಾ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಎಚ್ಚರಿಕೆ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ಮಾತುಕತೆ ವಿಫಲವಾದರೆ, ಇರಾನ್ನಲ್ಲಿ ನಾಗರಿಕ ಮೂಲಸೌಕರ್ಯದ ಮೇಲೆ ದೊಡ್ಡ ಪ್ರಮಾಣದ ಮಿಲಿಟರಿ ದಾಳಿ ನಡೆಸುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡಿದವು.
ಅಂದಿನಿಂದ ಹೋರಾಟ ಮುಂದುವರೆದಿದೆ. ಇರಾನ್ ಇಸ್ರೇಲ್ ಮತ್ತು ಗಲ್ಫ್ ದೇಶಗಳಲ್ಲಿನ ಅಮೆರಿಕದ ನೆಲೆಗಳು ಮತ್ತು ಕಂಪನಿಗಳನ್ನು ಗುರಿಯಾಗಿಸಿಕೊಂಡಿದೆ.ಈ ಸಂಘರ್ಷವು 10 ಕ್ಕೂ ಹೆಚ್ಚು ದೇಶಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ. ಹಾರ್ಮುಜ್ ಜಲಸಂಧಿಯ ಮುಚ್ಚುವಿಕೆಯು ಜಾಗತಿಕ ಇಂಧನ ಬಿಕ್ಕಟ್ಟನ್ನು ಉಲ್ಬಣಗೊಳಿಸುತ್ತಿದೆ.ಇರಾನ್ ಹಾರ್ಮುಜ್ ಜಲಸಂಧಿಯನ್ನು ತೆರೆಯಬೇಕು ಮತ್ತು ಅಮೆರಿಕದ ಪ್ರಸ್ತಾಪವನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದಾರೆ.
ಟೆಹ್ರಾನ್, ಏಪ್ರಿಲ್ 06: ಇರಾನ್(Iran)ಗೆ ಮತ್ತೊಂದು ದೊಡ್ಡ ಹೊಡೆತ ಬಿದ್ದಿದೆ. ದೇಶದ ಪ್ರಬಲ ಮಿಲಿಟರಿ ಸಂಘಟನೆಯಾದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ಗುಪ್ತಚರ ಮುಖ್ಯಸ್ಥ ಮಜೀದ್ ಖಾದೇಮಿ ಸೋಮವಾರ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆರಂಭದಲ್ಲಿ, ಅವರ ಸಾವಿಗೆ ಕಾರಣದ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಯನ್ನು ನೀಡಲಾಗಿಲ್ಲ. ಆದರೆ ನಂತರ, IRGC ಅವರು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡಿದೆ.
ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಈ ದಾಳಿಗೆ ಅಮೆರಿಕ ಮತ್ತು ಇಸ್ರೇಲ್ ಕಾರಣ ಎಂದು ಆರೋಪಿಸಿದೆ. ಮೇಜರ್ ಜನರಲ್ ಮಜೀದ್ ಖಾದೇಮಿ ಎಲ್ಲಿ ಕೊಲ್ಲಲ್ಪಟ್ಟರು ಎಂಬುದರ ಕುರಿತು IRGC ತಕ್ಷಣದ ವಿವರಗಳನ್ನು ನೀಡಿಲ್ಲ.
ಇರಾನ್ ರಾಜಧಾನಿ ಟೆಹ್ರಾನ್ ಸುತ್ತಮುತ್ತಲಿನ ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಸೋಮವಾರ ಮುಂಜಾನೆ ಹಲವಾರು ವೈಮಾನಿಕ ದಾಳಿಗಳನ್ನು ನಡೆಸಲಾಯಿತು.
ಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ನ ಗುಪ್ತಚರ ಸಂಸ್ಥೆಯ ಮುಖ್ಯಸ್ಥ ಮೇಜರ್ ಜನರಲ್ ಮಜೀದ್ ಖಾದೇಮಿ ಅವರು ಅಮೆರಿಕ-ಇಸ್ರೇಲಿ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಮಜೀದ್ ಸುಮಾರು ಐದು ದಶಕಗಳ ಕಾಲ ಇರಾನ್ನ ಗುಪ್ತಚರ ಮತ್ತು ಭದ್ರತಾ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸೋಮವಾರ ಇಸ್ರೇಲ್ ಮತ್ತು ಅಮೆರಿಕ ನಡೆಸಿದ ಸರಣಿ ದಾಳಿಯಲ್ಲಿ 25 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇರಾನ್ ಇಸ್ರೇಲ್ ಮತ್ತು ಅದರ ನೆರೆಯ ರಾಷ್ಟ್ರಗಳ ಮೇಲೂ ದಾಳಿ ಮಾಡಿದೆ.
ಭಾನುವಾರ, ಹೈಫಾ ನಗರದಲ್ಲಿ ಇರಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.ಫೆಬ್ರವರಿ 28, 2026 ರಂದು, ಅಮೆರಿಕ ಮತ್ತು ಇಸ್ರೇಲ್ ಆಪರೇಷನ್ ಎಪಿಕ್ ಫ್ಯೂರಿಯನ್ನು ಪ್ರಾರಂಭಿಸಿದವು. ಸುಪ್ರೀಂ ನಾಯಕ ಅಲಿ ಖಮೇನಿ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದರು. ಖಮೇನಿಯ ಆಪ್ತ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಲಿ ಶಮ್ಖಾನಿ ಕೆಲವೇ ಗಂಟೆಗಳಲ್ಲಿ ಕೊಲ್ಲಲ್ಪಟ್ಟರು. ಐಆರ್ಜಿಸಿ ಕಮಾಂಡರ್, ಜನರಲ್ ಸ್ಟಾಫ್ ಮುಖ್ಯಸ್ಥ, ಬಸಿಜ್ ಪಡೆಗಳ ಮುಖ್ಯಸ್ಥ, ಐಆರ್ಜಿಸಿ ನೌಕಾ ಕಮಾಂಡರ್, ಗುಪ್ತಚರ ಸಚಿವರು ಮತ್ತು ಹಲವಾರು ಹಿರಿಯ ಮಿಲಿಟರಿ ಯೋಜನಾ ಅಧಿಕಾರಿಗಳು ದಾಳಿಯ ಆರಂಭದಲ್ಲೇ ಸಾವನ್ನಪ್ಪಿದ್ದರು.
ಸೋಮವಾರ ಬೆಳಗ್ಗೆ ಇರಾನ್ ರಾಜಧಾನಿ ಟೆಹ್ರಾನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವಾರು ವಾಯುದಾಳಿಗಳನ್ನು ನಡೆಸಲಾಗಿದೆ. ಈ ದಾಳಿಗಳಲ್ಲಿ ವಸತಿ ಪ್ರದೇಶಗಳು ಸಹ ಹಾನಿಗೊಳಗಾಗಿದ್ದು, ಹಲವಾರು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಆದಾಗ್ಯೂ, ಈ ದಾಳಿಯ ಬಗ್ಗೆ ಅಮೆರಿಕ ಮತ್ತು ಇಸ್ರೇಲ್ನಿಂದ ಯಾವುದೇ ಸ್ಪಷ್ಟ ಅಧಿಕೃತ ದೃಢೀಕರಣ ಬಂದಿಲ್ಲ. ಹೀಗಾಗಿ, ಘಟನೆಯ ಬಗ್ಗೆ ವಿಭಿನ್ನ ಹೇಳಿಕೆಗಳನ್ನು ನೀಡಲಾಗುತ್ತಿದೆ ಮತ್ತು ಪೂರ್ಣ ಸತ್ಯ ಇನ್ನೂ ಸ್ಪಷ್ಟವಾಗಿಲ್ಲ. ದೇಶದ ಭದ್ರತೆ ಮತ್ತು ಗುಪ್ತಚರ ಕಾರ್ಯತಂತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಜೀದ್ ಖಾದೇಮಿ ಅವರ ಸಾವು ಇರಾನ್ಗೆ ದೊಡ್ಡ ಹೊಡೆತ ಎಂದು ತಜ್ಞರು ಹೇಳುತ್ತಾರೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಡೆತ್ ಓವರ್ಗಳಲ್ಲಿ ಅತ್ಯಧಿಕ ರನ್ ಚಚ್ಚಿದ ಭರ್ಜರಿ ದಾಖಲೆ ಟಿಮ್ ಡೇವಿಡ್ (Tim David) ಹೆಸರಿಗೆ ಸೇರ್ಪಡೆಯಾಗಿದೆ. ಐದು ವರ್ಷಗಳ ಹಿಂದೆ ಕನ್ನಡಿಗ ಕೆಎಲ್ ರಾಹುಲ್ ಬರೆದಿಟ್ಟಿದ್ದ ದಾಖಲೆಯನ್ನು ಅಳಿಸಿ ಹಾಕುವ ಮೂಲಕ ಟಿಮ್ ಡೇವಿಡ್ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 11ನೇ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಟಿಮ್ ಡೇವಿಡ್ ತೂಫಾನ್ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಕೇವಲ 25 ಎಸೆತಗಳನ್ನು ಎದುರಿಸಿದ 3 ಫೋರ್ ಹಾಗೂ 8 ಭರ್ಜರಿ ಸಿಕ್ಸರ್ಗಳೊಂದಿಗೆ ಅಜೇಯ 70 ರನ್ ಬಾರಿಸಿದ್ದರು.
ಈ 70 ರನ್ಗಳಲ್ಲಿ ಡೆತ್ ಓವರ್ಗಳಲ್ಲಿ (17 ರಿಂದ 20) ಟಿಮ್ ಡೇವಿಡ್ ಚಚ್ಚಿದ್ದು ಬರೋಬ್ಬರಿ 68 ರನ್ಗಳು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಡೆತ್ ಓವರ್ಗಳಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಭರ್ಜರಿ ದಾಖಲೆ ಟಿಮ್ ಡೇವಿಡ್ ಹೆಸರಿಗೆ ಸೇರ್ಪಡೆಯಾಯಿತು.
ಇದಕ್ಕೂ ಮುನ್ನ ಈ ದಾಖಲೆ ಕೆಎಲ್ ರಾಹುಲ್ ಹೆಸರಿನಲ್ಲಿತ್ತು. 2020 ರಲ್ಲಿ ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿದಿದ್ದ ಕೆಎಲ್ ರಾಹುಲ್ ಆರ್ಸಿಬಿ ವಿರುದ್ಧ ಡೆತ್ ಓವರ್ಗಳಲ್ಲಿ (17 ರಿಂದ 20) ಬರೋಬ್ಬರಿ 60 ರನ್ ಚಚ್ಚಿ ದಾಖಲೆ ನಿರ್ಮಿಸಿದ್ದರು.
ಇದೀಗ ಕೊನೆಯ 4 ಓವರ್ಗಳಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಟಿಮ್ ಡೇವಿಡ್ ಬರೋಬ್ಬರಿ 68 ರನ್ ಚಚ್ಚಿದ್ದಾರೆ. ಈ ಮೂಲಕ ಐಪಿಎಲ್ ಹಿಸ್ಟರಿಯಲ್ಲೇ ಡೆತ್ ಓವರ್ಗಳಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ದಾಖಲೆಯನ್ನು ಟಿಮ್ ಡೇವಿಡ್ ತಮ್ಮದಾಗಿಸಿಕೊಂಡಿದ್ದಾರೆ.
ಮಾರ್ಚ್ 25ರಿಂದ ಏಪ್ರಿಲ್ 22 ರ ವರೆಗೆ ಶುಕ್ರನು ಮೇಷ ರಾಶಿಯಲ್ಲಿ ಸಂಚರಿಸುವನು. ಈ ಸಮಯದಲ್ಲಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳು ತಾವು ನಿಂತಿರುವ ರಾಶಿ, ತಮ್ಮ ಸ್ವಕ್ಷೇತ್ರಗಳು ಮತ್ತು ತಮ್ಮ ದೃಷ್ಟಿ ಬೀರುವ ರಾಶಿಗಳ ಮೇಲೆ ವಿಶಿಷ್ಟ ಪ್ರಭಾವ ಬೀರುತ್ತವೆ. ಮೇಷ ರಾಶಿಯ ರವಿ ದ್ರೇಕ್ಕಾಣದಲ್ಲಿ ಶುಕ್ರನು ಸ್ಥಿತನಾಗಿದ್ದರೆ, ಆತ ದೃಢತೆ ಮತ್ತು ಕ್ರಿಯಾಶೀಲತೆಯನ್ನು ಹೊಂದಿರುತ್ತಾನೆ.
ಈ ಸ್ಥಿತಿಯಲ್ಲಿ ಶುಕ್ರನು ನೀಡುವ ವಿಶೇಷವಾದುದು.
ಮೇಷದಲ್ಲಿರುವ ಶುಕ್ರ:
ಈ ರಾಶಿ ಮಂಗಳನ ಮನೆ. ಇಲ್ಲಿ ಶುಕ್ರನು ರವಿ ದ್ರೇಕ್ಕಾಣದಲ್ಲಿದ್ದಾಗ ವ್ಯಕ್ತಿಯಲ್ಲಿ ಅದ್ಭುತವಾದ ಆಕರ್ಷಣೆ ಮತ್ತು ತೇಜಸ್ಸು ಇರುತ್ತದೆ. ಆತುರದ ನಿರ್ಧಾರಗಳು ಮತ್ತು ಪ್ರೇಮ ವಿಚಾರದಲ್ಲಿ ಅತಿಯಾದ ಉತ್ಸಾಹವಿರುತ್ತದೆ. ಸಾಹಸ ಪ್ರವೃತ್ತಿ ಹೆಚ್ಚಾಗುತ್ತದೆ. ಕಲೆ ಮತ್ತು ಸೌಂದರ್ಯದ ಕಡೆಗೆ ಒಲವು ಇದ್ದರೂ, ಸ್ವಾಭಿಮಾನ ಅಥವಾ ಅಹಂಕಾರದ ಪ್ರಭಾವ ಸಂಬಂಧಗಳ ಮೇಲೆ ಬೀಳಬಹುದು.
ವೃಷಭ ರಾಶಿಯ ಫಲ
ವೃಷಭ ರಾಶಿಯು ಶುಕ್ರನ ಸ್ವಂತ ಮನೆಯಾಗಿದ್ದು, ದ್ವಿತೀಯ ಭಾವವನ್ನು ಪ್ರತಿನಿಧಿಸುತ್ತದೆ.
ಧನ ಮತ್ತು ಸಂಪತ್ತು: ಶುಕ್ರನು ಬಲಿಷ್ಠನಾಗಿದ್ದರೆ ಆರ್ಥಿಕ ಸ್ಥಿತಿ ಸ್ಥಿರವಾಗಿರುತ್ತದೆ. ಐಷಾರಾಮಿ ವಸ್ತುಗಳ ಸಂಗ್ರಹ ಮತ್ತು ಕೌಟುಂಬಿಕ ಸುಖ ಲಭಿಸುತ್ತದೆ. ಸ್ಥಿರ ಆಸ್ತಿಗಳ ಮೇಲೆ ಹೂಡಿಕೆ ಮಾಡಲು ಇದು ಪ್ರೇರಣೆ ನೀಡುತ್ತದೆ. ಮಾತು ಮಧುರವಾಗಿರುತ್ತದೆ ಮತ್ತು ಸುಖ ಭೋಜನದ ಯೋಗವಿರುತ್ತದೆ.
ಶುಕ್ರನ ಸ್ವಕ್ಷೇತ್ರದಲ್ಲಿ
ತುಲಾ ರಾಶಿಯು ಶುಕ್ರನ ಮೂಲತ್ರಿಕೋಣ ಸ್ಥಾನವಾಗಿದ್ದು, ಸಪ್ತಮ ಭಾವವನ್ನು ಸೂಚಿಸುತ್ತದೆ. ಸಾರ್ವಜನಿಕ ಜೀವನದಲ್ಲಿ ಗೌರವ ತಂದುಕೊಡುತ್ತಾನೆ. ವ್ಯಾಪಾರ ಪಾಲುದಾರಿಕೆಯಲ್ಲಿ ಲಾಭವಾಗುತ್ತದೆ. ವಿವಾಹಾದಿ ಶುಭ ಕಾರ್ಯಗಳಿಗೆ ಮತ್ತು ಸಾಮಾಜಿಕ ಸಂಬಂಧಗಳನ್ನು ವೃದ್ಧಿಸಿಕೊಳ್ಳಲು ಇದು ಪೂರಕವಾಗಿದೆ. ನ್ಯಾಯಯುತವಾಗಿ ನಡೆದುಕೊಳ್ಳುವ ಗುಣವನ್ನು ಇದು ವೃದ್ಧಿಸುತ್ತದೆ.
ತುಲಾ ರಾಶಿಗೆ ದೃಷ್ಟಿ ಫಲ
ಶುಕ್ರನು ಮೇಷ ರಾಶಿಯಲ್ಲಿದ್ದಾಗ, ತನ್ನ ಪೂರ್ಣ ಸಪ್ತಮ ದೃಷ್ಟಿಯನ್ನು ತುಲಾ ರಾಶಿಯ ಮೇಲೆ ಬೀರುತ್ತಾನೆ.
ಶುಕ್ರನು ತನ್ನ ಸ್ವಂತ ಮನೆಯಾದ ತುಲಾ ರಾಶಿಯನ್ನೇ ನೋಡುವುದರಿಂದ, ಆ ರಾಶಿಯ ಶುಭ ಫಲಗಳು ದುಪ್ಪಟ್ಟಾಗುತ್ತವೆ. ದಾಂಪತ್ಯ ಜೀವನದಲ್ಲಿ ಸಾಮರಸ್ಯ ಮತ್ತು ಪ್ರೀತಿ ಹೆಚ್ಚಾಗುತ್ತದೆ. ವ್ಯವಹಾರದಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗುತ್ತವೆ. ಸೌಂದರ್ಯವರ್ಧಕ, ಕಲೆ, ಅಥವಾ ಫ್ಯಾಷನ್ ರಂಗದಲ್ಲಿ ಇರುವವರಿಗೆ ಹೆಚ್ಚಿನ ಯಶಸ್ಸು ಸಿಗುತ್ತದೆ. ಸಮಾಜದಲ್ಲಿ ನಿಮ್ಮ ವ್ಯಕ್ತಿತ್ವಕ್ಕೆ ಹೆಚ್ಚಿನ ಮಾನ್ಯತೆ ದೊರೆಯುತ್ತದೆ.
ರವಿ ದ್ರೇಕ್ಕಾಣದ ಈ ಶುಕ್ರನು ವ್ಯಕ್ತಿಗೆ ರಾಜಕೀಯ ಅಥವಾ ಉನ್ನತ ಮಟ್ಟದ ವ್ಯಕ್ತಿಗಳ ಸಂಪರ್ಕದಿಂದ ಲಾಭ ತಂದುಕೊಡುತ್ತಾನೆ. ತುಲಾ ರಾಶಿಯ ಮೇಲೆ ಶುಕ್ರನ ದೃಷ್ಟಿ ಬೀಳುವುದರಿಂದ, ಆತ ಎಷ್ಟೇ ಕಷ್ಟದಲ್ಲಿದ್ದರೂ ಅಂತಿಮವಾಗಿ ಸಾಮಾಜಿಕ ಪ್ರತಿಷ್ಠೆ ಮತ್ತು ಆರ್ಥಿಕ ಭದ್ರತೆಯನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತಾನೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 11ನೇ ಪಂದ್ಯದಲ್ಲಿ ಬರೋಬ್ಬರಿ 30 ಸಿಕ್ಸರ್ಗಳು ಮೂಡಿಬಂದಿವೆ. ಈ ಮೂವತ್ತು ಸಿಕ್ಸರ್ಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 19 ಸಿಕ್ಸ್ ಬಾರಿಸಿದರೆ, ಚೆನ್ನೈ ಸೂಪರ್ ಕಿಂಗ್ಸ್ (CSK) ಕೇವಲ 11 ಸಿಕ್ಸ್ ಸಿಡಿಸಿದ್ದರು. ಇದಾಗ್ಯೂ ಸಿಎಸ್ಕೆ ತಂಡದ ಹೆಸರಿಗೆ ವಿಶೇಷ ವಿಶ್ವ ದಾಖಲೆ ಸೇರ್ಪಡೆಯಾಗಿದೆ.
ಹೌದು, ಟಿ20 ಕ್ರಿಕೆಟ್ ಇತಿಹಾಸದಲ್ಲೇ ಇನಿಂಗ್ಸ್ವೊಂದರಲ್ಲಿ 9 ಬ್ಯಾಟರ್ಗಳು ಸಿಕ್ಸ್ ಸಿಡಿಸಿದ ವಿಶ್ವ ದಾಖಲೆಯೊಂದನ್ನು ಚೆನ್ನೈ ಸೂಪರ್ ಕಿಂಗ್ಸ್ ತನ್ನದಾಗಿಸಿಕೊಂಡಿದೆ. ಅಂದರೆ ಆರ್ಸಿಬಿ ವಿರುದ್ಧ ಸಿಎಸ್ಕೆ ತಂಡದ 9 ಬ್ಯಾಟರ್ಗಳು ಸಿಕ್ಸ್ ಬಾರಿಸಿದ್ದರು. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಯಾವುದೇ ತಂಡಕ್ಕೂ ಸಾಧ್ಯವಾಗದ ಅಪರೂಪದ ದಾಖಲೆಯೊಂದನ್ನು ಚೆನ್ನೈ ಸೂಪರ್ ಕಿಂಗ್ಸ್ ನಿರ್ಮಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ ಪರ ಸಿಕ್ಸರ್ ಬಾರಿಸಿದವರು: ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸರ್ಫರಾಝ್ ಖಾನ್, ಕಾರ್ತಿಕ್ ಶರ್ಮಾ, ಶಿವಂ ದುಬೆ, ಜೇಮೀ ಓವರ್ಟನ್, ಪ್ರಶಾಂತ್ ವೀರ್, ನೂರ್ ಅಹ್ಮದ್ ಮತ್ತು ಅಂಶುಲ್ ಕಾಂಬೋಜ್. ಇನ್ನು ಸಿಕ್ಸ್ ಬಾರಿಸದೇ ಇದ್ದ ಇಬ್ಬರೆಂದರೆ ಆಯುಷ್ ಮ್ಹಾತ್ರೆ ಹಾಗೂ ಮ್ಯಾಟ್ ಹೆನ್ರಿ.
ಇತ್ತ ಟಿ20 ಕ್ರಿಕೆಟ್ನಲ್ಲಿ ಪಂದ್ಯವೊಂದರಲ್ಲಿ 9 ಬ್ಯಾಟರ್ಗಳಿಂದ ಸಿಕ್ಸ್ ಹೊಡೆಸಿಕೊಂಡ ಮೊದಲ ತಂಡವೆಂಬ ಹೀನಾಯ ದಾಖಲೆಯೊಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದೆ. ಅಂದರೆ ಆರ್ಸಿಬಿಯನ್ನು ಹೊರತುಪಡಿಸಿ ಯಾವುದೇ ತಂಡವು ಇನಿಂಗ್ಸ್ವೊಂದರಲ್ಲಿ 9 ಬ್ಯಾಟರ್ಗಳಿಂದ ಸಿಕ್ಸ್ ಹೊಡೆಸಿಕೊಂಡಿರಲಿಲ್ಲ.
ಈ ಸಿಕ್ಸರ್ಗಳ ದಾಖಲೆಯ ಹೊರತಾಗಿಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ಪಂದ್ಯದಲ್ಲಿ ಸೋಲನುಭವಿಸಿದೆ. ಈ ಮ್ಯಾಚ್ನಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ಓವರ್ಗಳಲ್ಲಿ 250 ರನ್ ಕಲೆಹಾಕಿದರೆ, ಸಿಎಸ್ಕೆ ತಂಡವು 19.4 ಓವರ್ಗಳಲ್ಲಿ 207 ರನ್ಗಳಿ ಆಲೌಟ್ ಆಯಿತು. ಈ ಮೂಲಕ ಆರ್ಸಿಬಿ ತಂಡವು 43 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಬೆಳಗಾವಿ, ಏಪ್ರಿಲ್ 06: ಜಿಲ್ಲೆಯಲ್ಲಿ ಒಂದೇ ದಿನ ಪತಿ-ಪತ್ನಿ (Husband and wife death) ಸಾವನ್ನಪ್ಪಿರುವ ಘಟನೆ ನಡೆದಿದ್ದು, ದಂಪತಿಯ ಮೂವರು ಮಕ್ಕಳು ಅನಾಥರಾಗಿದ್ದಾರೆ. ಪತ್ನಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದ ಪತಿ, ಬೈಕ್ನಲ್ಲಿ ಬರುವಾಗ ಅಪಘಾತಕ್ಕೀಡಾಗಿದ್ದು, ದಾರುಣವಾಗಿ ಸಾವನ್ನಪ್ಪಿದ್ದಾನೆ.
ಹೊಟ್ಟೆನೋವಿನಿಂದ ಬಳಲುತ್ತಿದ್ದ ಪತ್ನಿ
ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದ ಕರೆಪ್ಪ (36) ಹಾಗೂ ಅವರ ಪತ್ನಿ ಮಧುರಾ (30) ಮೃತ ದಂಪತಿ. ಹಲವು ವರ್ಷಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಧುರಾ, ನೋವು ತಾಳಲಾರದೆ ಕ್ರಿಮಿನಾಶಕ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣವೇ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಸಾಗಿಸಲು ಮುಂದಾದರೂ, ಮಾರ್ಗ ಮಧ್ಯೆಯೇ ಅವರು ಮೃತಪಟ್ಟಿದ್ದಾರೆ.
ಪತ್ನಿಯ ಸಾವಿನ ಸುದ್ದಿ ತಿಳಿದು ಆಘಾತಗೊಂಡ ಕರೆಪ್ಪ, ಬೈಕ್ನಲ್ಲಿ ಆಸ್ಪತ್ರೆಗೆ ಧಾವಿಸುತ್ತಿದ್ದ ವೇಳೆ ಅಪಘಾತಕ್ಕೀಡಾಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಅವಸರದಲ್ಲಿ ಬರುತ್ತಿದ್ದ ವೇಳೆ ಬಸ್ ಚಕ್ರಕ್ಕೆ ಸಿಲುಕಿದ ಪರಿಣಾಮ ಸ್ಥಳದಲ್ಲೇ ಅವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮೂವರು ಮಕ್ಕಳು ಅನಾಥ!
ಒಂದೇ ದಿನ ದಂಪತಿಗಳಿಬ್ಬರ ಸಾವಿನಿಂದ ಕುಟುಂಬದಲ್ಲಿ ಶೋಕದ ವಾತಾವರಣ ಆವರಿಸಿದ್ದು, ಗ್ರಾಮದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ದಂಪತಿಗೆ ಒಂದು ಹೆಣ್ಣು ಮಗು ಹಾಗೂ ಇಬ್ಬರು ಗಂಡು ಮಕ್ಕಳಿದ್ದು, ಇದೀಗ ಅವರು ಅನಾಥರಾಗಿದ್ದಾರೆ.
ಕರೆಪ್ಪ ಮತ್ತು ಮಧುರಾ ದಂಪತಿ ಸುಮಾರು ಒಂಬತ್ತು ವರ್ಷಗಳ ಹಿಂದೆ ವಿವಾಹವಾಗಿದ್ದರು. ನಿನ್ನೆಯಷ್ಟೇ ತಮ್ಮ ಮಕ್ಕಳಿಗೆ ಹೊಸ ಬಟ್ಟೆಗಳನ್ನು ಖರೀದಿಸಿ, ಮನೆಗೆ ಬೇಕಾದ ಸಾಮಗ್ರಿಗಳನ್ನು ಕೂಡ ತಂದಿದ್ದರು. ಮಧುರಾ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೂ, ತೀವ್ರ ನೋವಿನ ಹಿನ್ನೆಲೆ ಈ ರೀತಿಯ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಘಟನೆ ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಬೆಳಗಾವಿ, ಏ.6 : ಬೆಳಗಾವಿಯ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತ್ಯಂತ ಅಮಾನವೀಯ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪ್ರೀತಿ ಹಾಗೂ ಮದುವೆಯ ಹೆಸರಿನಲ್ಲಿ ಯುವತಿಯನ್ನು ನಂಬಿಸಿ, ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಲಕ್ಷಾಂತರ ರೂಪಾಯಿ ಹಣ ಹಾಗೂ ಚಿನ್ನಾಭರಣ ಲೂಟಿ ಮಾಡಿದ ಆರೋಪ ಕೇಳಿಬಂದಿದೆ.
ಬೆಳಗಾವಿಯ ಮಾಧವಾ ಕಾಲೋನಿ ನಿವಾಸಿ ಈಶ್ವರಸಿಂಗ್ ಪ್ರೇಮಸಿಂಗ್ ಬಡಗೂಜರ್ ಎಂಬಾತನೇ ಈ ವಂಚನೆಯ ಸೂತ್ರಧಾರ ಎನ್ನಲಾಗಿದೆ. ಫೇಸ್ಬುಕ್ ಮೂಲಕ ಯುವತಿಯ ಪರಿಚಯ ಮಾಡಿಕೊಂಡಿದ್ದ ಈತ, ಬಳಿಕ ಅದನ್ನು ಪ್ರೀತಿಗೆ ತಿರುಗಿಸಿದ್ದಾನೆ. ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ, ಯುವತಿಗೆ ತಿಳಿಯದಂತೆ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ ಯುವತಿಯಿಂದ ಭಾರಿ ಪ್ರಮಾಣದ ಹಣ ವಸೂಲಿ ಮಾಡಿದ್ದಾನೆ. ಸಂತ್ರಸ್ತೆಯ ತಾಯಿಯ ಚಿನ್ನ ಹಾಗೂ ತಂದೆಯ ಎಫ್ಡಿ (FD) ಹಣವನ್ನೂ ಈತ ಲೂಟಿ ಮಾಡಿದ್ದಾನೆ. ಸುಮಾರು 150 ಗ್ರಾಂ ಚಿನ್ನಾಭರಣ ಹಾಗೂ 19 ಲಕ್ಷ ರೂಪಾಯಿಗಳನ್ನು ಗೂಗಲ್ ಪೇ ಮೂಲಕ ವರ್ಗಾಯಿಸಿಕೊಂಡಿದ್ದಾನೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಆರೋಪಿ ಯುವಕನ ತಾಯಿ “3 ಕೋಟಿ ರೂಪಾಯಿ ಕೊಟ್ಟರೆ ಮಾತ್ರ ಮದುವೆ ಮಾಡಿಕೊಳ್ಳುತ್ತೇವೆ” ಎಂದು ಡಿಮ್ಯಾಂಡ್ ಇಟ್ಟಿರುವುದು ಯುವತಿಯನ್ನು ಕಂಗಾಲಾಗುವಂತೆ ಮಾಡಿದೆ.
ಈ ಪ್ರಕರಣದಲ್ಲಿ ಶಹಾಪುರ ಪೊಲೀಸರ ನಡೆ ಸಂಶಯಾಸ್ಪದವಾಗಿದೆ ಎಂದು ಯುವತಿ ಆರೋಪಿಸಿದ್ದಾರೆ. ಬ್ಯಾಂಕ್ನಿಂದ ರಿಕವರಿ ಮಾಡಿದ್ದ ಚಿನ್ನವನ್ನು ಮರಳಿ ಯುವಕನಿಗೇ ಕೊಟ್ಟು ಕಳುಹಿಸಿದ್ದಾರೆ ಹಾಗೂ ಆರೋಪಿಗಳ ಜೊತೆ ಪೊಲೀಸರು ಶಾಮೀಲಾಗಿದ್ದಾರೆ ಎಂದು ಸಂತ್ರಸ್ತೆ ದೂರಿದ್ದಾರೆ. ನ್ಯಾಯಕ್ಕಾಗಿ ಇಂದು ಕಮಿಷನರ್ ಕಚೇರಿಗೆ ಆಗಮಿಸಿದ ಯುವತಿ, ಕಣ್ಣೀರು ಹಾಕುತ್ತಾ ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನ 10ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ವೇಗಿ ಮೊಹಮ್ಮದ್ ಶಮಿ ಮಾರಕ ದಾಳಿ ಸಂಘಟಿಸಿದ್ದಾರೆ. ಬಲಿಷ್ಠ ಬ್ಯಾಟಿಂಗ್ ಲೈನಲ್ ಹೊಂದಿರುವ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 4 ಓವರ್ ಎಸೆದ ಶಮಿ ನೀಡಿದ್ದು ಕೇವಲ 9 ರನ್ಗಳು ಮಾತ್ರ. ಇದರ ನಡುವೆ 2 ವಿಕೆಟ್ಗಳನ್ನು ಸಹ ಕಬಳಿಸಿದ್ದಾರೆ.
ವಿಶೇಷ ಎಂದರೆ ಮೊಹಮ್ಮದ್ ಶಮಿ ತಮ್ಮ 24 ಎಸೆತಗಳಲ್ಲಿ ಒಂದೇ ಒಂದು ಬೌಂಡರಿ ಹೊಡೆಸಿಕೊಂಡಿಲ್ಲ. ಅಂದರೆ ಶಮಿ ಓವರ್ನಲ್ಲಿ ಫೋರ್ ಅಥವಾ ಸಿಕ್ಸ್ ಬಾರಿಸಲು ಎಸ್ಆರ್ಹೆಚ್ ತಂಡದ ಯಾವುದೇ ಬ್ಯಾಟರ್ಗೆ ಸಾಧ್ಯವಾಗಿಲ್ಲ.
ಇನ್ನು ಇಪ್ಪತ್ತನಾಲ್ಕು ಎಸೆತಗಳಲ್ಲಿ ಶಮಿ ಬರೋಬ್ಬರಿ 18 ಎಸೆತಗಳನ್ನು ಡಾಟ್ ಮಾಡಿದ್ದರು ಎಂಬುದು ಮತ್ತೊಂದು ವಿಶೇಷ. ಈ ಮೂಲಕ ಕರಾರುವಾಕ್ ದಾಳಿ ಸಂಘಟಿಸುವ ಮೂಲಕ ಮೊಹಮ್ಮದ್ ಶಮಿ ಎಲ್ಲರನ್ನು ಚಕಿತಗೊಳಿಸಿದ್ದಾರೆ.
ಮೊಹಮ್ಮದ್ ಶಮಿಯ ಈ ಮಾರಕ ದಾಳಿಗೆ ಕಂಗೆಟ್ಟ ಸನ್ರೈಸರ್ಸ್ ಹೈದರಾಬಾದ್ ತಂಡವು ಈ ಪಂದ್ಯದಲ್ಲಿ 20 ಓವರ್ಗಳಲ್ಲಿ ಕಲೆಹಾಕಿದ್ದು ಕೇವಲ 156 ರನ್ಗಳು ಮಾತ್ರ. ಈ ಗುರಿಯನ್ನು 19.5 ಓವರ್ಗಳಲ್ಲಿ ಚೇಸ್ ಮಾಡುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡ 5 ವಿಕೆಟ್ಗಳ ಜಯ ಸಾಧಿಸಿದೆ.
ರಿಷಬ್ ಶೆಟ್ಟಿ ಅವರು ‘ಕಾಂತಾರ’ ಸಿನಿಮಾ ಬಳಿಕ, ‘ಕಾಂತಾರ: ಚಾಪ್ಟರ್ 1’ ಮಾಡಿದರು. ಈ ಎರಡೂ ಸಿನಿಮಾಗಳು ಅವರನ್ನು ಪ್ಯಾನ್ ಇಂಡಿಯಾ ಮಟ್ಟಕ್ಕೆ ಕರೆದುಕೊಂಡು ಹೋಗಿದೆ. ಈ ಸಿನಿಮಾಗಳಲ್ಲಿ ನಟಿಸೋದು ಮಾತ್ರವಲ್ಲ, ನಿರ್ದೇಶನ ಕೂಡ ಅವರದ್ದೇ. ಸದ್ಯ ರಿಷಬ್ ಅವರು ನಿರ್ದೇಶನದಿಂದ ಬ್ರೇಕ್ ಪಡೆದಿದ್ದು, ‘ಜೈ ಹನುಮಾನ್’ (Jai Hanuman) ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರ ಸೆಟ್ಟೇರಿ ಹಲವು ದಿನ ಕಳೆದ ಬಳಿಕ ಸಿನಿಮಾದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.
‘ಜೈ ಹನುಮಾನ್’ ಚಿತ್ರಕ್ಕೆ ಫೆಬ್ರವರಿಯಲ್ಲಿ ಮುಹೂರ್ತ ನೆರವೇರಿದೆ. ಈ ಚಿತ್ರದಲ್ಲಿ ರಿಷಬ್ ಹನುಮಾನ್ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ನಿಮಿಷ್ ರವಿ ಛಾಯಾಗ್ರಾಹಣ ಮಾಡಬೇಕಿತ್ತು. ಅವರು ‘ಲಕ್ಕಿ ಭಾಸ್ಕರ್’ ರೀತಿಯ ಸಿನಿಮಾಗಳಿಗೆ ಛಾಯಾಗ್ರಹಣ ಮಾಡಿದ್ದರು. ಈಗ ಇವರನ್ನು ‘ಜೈ ಹನುಮಾನ್’ ಸಿನಿಮಾದಿಂದ ಹೊರಗಿಡಲಾಗಿದ್ದು, ಎಸ್ ತಿರುನವುಕ್ಕರಸು ಅವರ ಎಂಟ್ರಿ ಆಗಿದೆ.
‘ಜೈ ಹನುಮಾನ್’ ಸಿನಿಮಾದಲ್ಲಿ ಪಾತ್ರವರ್ಗದ ಜೊತೆಗೆ ತಾಂತ್ರಿಕ ವರ್ಗಕ್ಕೂ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ಆಸ್ಕರ್ ವಿಜೇತ ಎಂಎಂ ಕೀರವಾಣಿ ಅವರು ಸಿನಿಮಾಗೆ ಸಂಗೀತ ಮಾಡುತ್ತಿದ್ದಾರೆ. ನಿಮಿಷ್ ಅವರನ್ನು ಹೊರಕ್ಕೆ ಇಡಲು ಕಾರಣ ಏನು ಎಂಬ ವಿಷಯ ಇನ್ನೂ ಬಹಿರಂಗವಾಗಿಲ್ಲ. ಮೈತ್ರಿ ಮೂವೀ ಮೇಕರ್ಸ್ ‘ಜೈ ಹನುಮಾನ್’ ಸಿನಿಮಾನ ನಿರ್ಮಾಣ ಮಾಡುತ್ತಿದೆ. ‘ಹನುಮಾನ್’ ಸಿನಿಮಾ ದೊಡ್ಡ ಯಶಸ್ಸು ಕಂಡ ಬಳಿಕ, ಮೈತ್ರಿ ಈ ಚಿತ್ರಕ್ಕೆ ಕೈ ಹಾಕಿದೆ.
‘ಹನುಮಾನ್’ ಚಿತ್ರದಲ್ಲಿ ಮಾಡರ್ನ್ ಕಥೆ ಹಾಗೂ ದೈವಿಕ ಶಕ್ತಿ ವಿಷಯವನ್ನು ಒಂದುಗೂಡಿಸಲಾಗಿತ್ತು. ಈಗ ‘ಜೈ ಹನುಮಾನ್’ ಚಿತ್ರವನ್ನು ಯಾವ ರೀತಿಯಲ್ಲಿ ಮಾಡುತ್ತಾರೆ ಎಂಬ ಕುತೂಹಲ ಮೂಡಿದೆ. ರಿಷಬ್ ಶೆಟ್ಟಿ ಅವರು ಭಕ್ತಿ ಪ್ರಧಾನ ಸಿನಿಮಾಗಳನ್ನು ಮಾಡುವ ಮೂಲಕ ಭೇಷ್ ಎನಿಸಿಕೊಳ್ಳುತ್ತಿದ್ದಾರೆ. ಅವರ ಬತ್ತಳಿಕೆಗೆ ಹೊಸ ಸಿನಿಮಾ ಸೇರ್ಪಡೆ ಆಗುತ್ತಿದೆ.