ಮೈಸೂರು, ಏ.6: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಏರುತ್ತಿದ್ದು, ಕೇವಲ ಮನುಷ್ಯರಿಗಷ್ಟೇ ಅಲ್ಲದೆ ಪ್ರಾಣಿಗಳಿಗೂ ಬಿಸಿಲ ಬೇಗೆ ತಟ್ಟಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲ್ಲೂಕಿನ ಪ್ರಸಿದ್ಧ ಕಬಿನಿ ಹಿನ್ನೀರಿನಲ್ಲಿ ಯಂಗ್ ಟೈಗರ್ (Young Tiger) ಒಂದು ನೀರಿನಲ್ಲಿ ಮುಳುಗಿ ವಿಶ್ರಮಿಸುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಕಬಿನಿ ಹಿನ್ನೀರಿನಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಈ ಅದ್ಭುತ ದೃಶ್ಯ ಕಂಡುಬಂದಿದೆ. ಕೆಂಡದಂತಹ ಬಿಸಿಲಿನಿಂದ ಪಾರಾಗಲು ಈ ಯುವ ಹುಲಿಯು ನೀರಿನೊಳಗೆ ಮುಳುಗಿ ಅತ್ಯಂತ ತಂಪಾಗಿ ವಿಶ್ರಮಿಸುತ್ತಿತ್ತು. ಪ್ರವಾಸಿಗರು ಈ ದೃಶ್ಯವನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದು, ಪ್ರಕೃತಿ ಪ್ರೇಮಿಗಳ ಮನ ಗೆದ್ದಿದೆ. ಸಾಮಾನ್ಯವಾಗಿ ಹುಲಿಗಳು ನೀರಿನಲ್ಲಿ ಈಜುವುದು ಅಥವಾ ನೀರು ಕುಡಿಯುವುದು ಸಹಜ. ಆದರೆ, ಬಿಸಿಲಿನ ತಾಪಕ್ಕೆ ಈ ರೀತಿ ಆರಾಮವಾಗಿ ನೀರಿನಲ್ಲಿ ಕುಳಿತು ವಿಶ್ರಮಿಸುತ್ತಿರುವ ದೃಶ್ಯ ಅಪರೂಪದ್ದಾಗಿದೆ. ಕಬಿನಿಯ ನೈಸರ್ಗಿಕ ಸೌಂದರ್ಯದ ನಡುವೆ ಹುಲಿಯ ಈ ‘ಕೂಲ್’ ಅವತಾರ ಈಗ ಸೋಷಿಯಲ್ ಮೀಡಿಯಾದಲ್ಲಿ ಎಲ್ಲೆಡೆ ಹರಿದಾಡುತ್ತಿದೆ.
ಮೀರತ್, ಏಪ್ರಿಲ್ 06: ಮಗಳನ್ನು ಖುಷಿಯಾಗಿಡುವುದಕ್ಕಿಂತ ದೊಡ್ಡ ಕರ್ತವ್ಯ ಮತ್ತೊಂದಿಲ್ಲ ಎಂದು ಹೇಳುತ್ತಾ ವಿಚ್ಛೇದನ ಪಡೆದು ಮನೆಗೆ ಬಂದ ಮಗಳನ್ನು ನಿವೃತ್ತ ನ್ಯಾಯಾಧೀಶರೊಬ್ಬರು ವಾದ್ಯಗಳೊಂದಿಗೆ ಸ್ವಾಗತಿಸಿರುವ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ. ತಂದೆ ಮಗಳು ಮನೆಗೆ ಬಂದಿದ್ದನ್ನು ಕಳಂಕ ಎಂದು ಪರಿಗಣಿಸಿಲ್ಲ. ಬದಲಾಗಿ ಆಕೆಯ ನಿರ್ಧಾರಕ್ಕೆ ಬೆಂಬಲ ನೀಡಿದ್ದಾರೆ.
ಮೀರತ್ ಕೌಟುಂಬಿಕ ನ್ಯಾಯಾಲಯದ ಹೊರಗೆ, ಸಂಬಂಧಿಕರು ನೃತ್ಯ ಮಾಡಿ ಸಿಹಿತಿಂಡಿಗಳನ್ನು ವಿತರಿಸಿ ಡೋಲು ಬಾರಿಸುತ್ತಾ ಮನೆಗೆ ಕರೆದೊಯ್ಯಲಾಯಿತು.ಐ ಲವ್ ಮೈ ಡಾಟರ್ ಎನ್ನುವ ಚಿತ್ರವನ್ನು ಕಪ್ಪು ಟಿ ಶರ್ಟ್ನಲ್ಲಿ ಮುದ್ರಿಸಲಾಗಿತ್ತು. ಏಪ್ರಿಲ್ 4 ರಂದು ನ್ಯಾಯಾಲಯವು ಅಧಿಕೃತವಾಗಿ ವಿಚ್ಛೇದನವನ್ನು ನೀಡಿದ ನಂತರ ಅವರು ಮನೆಗೆ ಹಿಂದಿರುಗಿದಾಗ ಅವರ ತಂದೆ ಆಕೆಯನ್ನು ಸಂತಸದಿಂದ ಬರಮಾಡಿಕೊಂಡರು.
ಪ್ರಣೀತಾ ಡಿಸೆಂಬರ್ 2018 ರಲ್ಲಿ ಸೇನಾ ಮೇಜರ್ ಗೌರವ್ ಅಗ್ನಿಹೋತ್ರಿ ಅವರನ್ನು ವಿವಾಹವಾಗಿದ್ದರು. ಮಾನಸಿಕ, ಭಾವನಾತ್ಮಕ ಮತ್ತು ದೈಹಿಕ ಕಿರುಕುಳವನ್ನು ಎದುರಿಸುತ್ತಿದ್ದರು ಎನ್ನಲಾಗಿದೆ. ಮಗ ಹುಟ್ಟಿದ ಮೇಲೂ ಪರಿಸ್ಥಿತಿ ಸುಧಾರಿಸಿರಲಿಲ್ಲ. ಅಂತಿಮವಾಗಿ ಗಂಡನನ್ನು ಬಿಡುವ ನಿರ್ಧಾರ ಮಾಡಿದ್ದರು. ಅದಕ್ಕೆ ತವರು ಮನೆಯಿಂದ ಬೆಂಬಲವೂ ಸಿಕ್ಕಿತ್ತು.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 11 ಪಂದ್ಯಗಳು ಮುಗಿದಿವೆ. ಈ ಹನ್ನೊಂದು ಪಂದ್ಯಗಳಲ್ಲಿ ಎಲ್ಲಾ ತಂಡಗಳು 2 ಮ್ಯಾಚ್ಗಳನ್ನು ಆಡಿದೆ. ಈ ಪಂದ್ಯಗಳ ಬಳಿಕ ಐಪಿಎಲ್ ಪಾಯಿಂಟ್ಸ್ ಟೇಬಲ್ನಲ್ಲೂ ಮಹತ್ವದ ಬದಲಾವಣೆಯಾಗಿದ್ದು, ನೂತನ ಅಂಕ ಪಟ್ಟಿ ಈ ಕೆಳಗಿನಂತಿದೆ…
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 202 ರನ್ಗಳ ಗುರಿಯನ್ನು 15.4 ಓವರ್ಗಳಲ್ಲಿ ಚೇಸ್ ಮಾಡಿ 6 ವಿಕೆಟ್ಗಳ ಜಯ ಸಾಧಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಇದೀಗ ಸಿಎಸ್ಕೆ ವಿರುದ್ಧ 43 ರನ್ಗಳ ಗೆಲುವು ದಾಖಲಿಸಿದೆ. ಈ ಗೆಲುವುಗಳೊಂದಿಗೆ +2.501 ನೆಟ್ ರನ್ ರೇಟ್ ಪಡೆದಿರುವ ಆರ್ಸಿಬಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.
ರಾಜಸ್ಥಾನ್ ರಾಯಲ್ಸ್: ಪ್ರಸ್ತುತ ಅಂಕ ಪಟ್ಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ದ್ವಿತೀಯ ಸ್ಥಾನದಲ್ಲಿದೆ. ಸಿಎಸ್ಕೆ ವಿರುದ್ಧ 8 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿದ್ದ ರಾಜಸ್ಥಾನ್ ಪಡೆ ಗುಜರಾತ್ ಟೈಟಾನ್ಸ್ ವಿರುದ್ಧ 6 ರನ್ಗಳ ರೋಚಕ ಜಯ ಸಾಧಿಸಿತ್ತು. ಈ ಗೆಲುವುಗಳ ಮೂಲಕ ಒಟ್ಟು +2.233 ನೆಟ್ ರನ್ ರೇಟ್ ಪಡೆದುಕೊಂಡಿದೆ.
ಡೆಲ್ಲಿ ಕ್ಯಾಪಿಟಲ್ಸ್: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು ಆರು ವಿಕೆಟ್ಗಳಿಂದ ಮಣಿಸಿದೆ. ಈ ಮೂಲಕ +1.170 ನೆಟ್ ರೇಟ್ ಪಡೆದಿರುವ ಡೆಲ್ಲಿ ಕ್ಯಾಪಿಟಲ್ಸ್ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.
ಪಂಜಾಬ್ ಕಿಂಗ್ಸ್: ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ 3 ವಿಕೆಟ್ಗಳ ರೋಚಕ ಜಯ ಸಾಧಿಸಿದ ಪಂಜಾಬ್ ಕಿಂಗ್ಸ್ ಆ ಬಳಿಕ ಸಿಎಸ್ಕೆ ತಂಡಕ್ಕೆ ಸೋಲುಣಿಸಿದೆ. ಇದೀಗ +0.637 ನೆಟ್ ರನ್ ರೇಟ್ ಹೊಂದಿರುವ ಪಂಜಾಬ್ ಪಡೆ ಅಂಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.
ಸನ್ರೈಸರ್ಸ್ ಹೈದರಾಬಾದ್: ಆರ್ಸಿಬಿ ಮತ್ತು ಎಲ್ಎಸ್ಜಿ ವಿರುದ್ಧ ಸೋತಿರುವ ಸನ್ರೈಸರ್ಸ್ ಹೈದರಾಬಾದ್ ತಂಡವು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 65 ರನ್ಗಳ ಗೆಲುವು ದಾಖಲಿಸಿತ್ತು. ಈ ಮೂಲಕ +0.275 ನೆಟ್ ರೇಟ್ ಹೊಂದಿರುವ ಎಸ್ಆರ್ಹೆಚ್ ಅಂಕ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.
ಇನ್ನುಳಿದಂತೆ ಮುಂಬೈ ಇಂಡಿಯನ್ಸ್ 6ನೇ ಸ್ಥಾನದಲ್ಲಿದ್ದರೆ, ಲಕ್ನೋ ಸೂಪರ್ ಜೈಂಟ್ಸ್ ತಂಡ 7ನೇ ಸ್ಥಾನದಲ್ಲಿದೆ. ಹಾಗೆಯೇ ಗುಜರಾತ್ ಟೈಟಾನ್ಸ್ 8ನೇ, ಕೊಲ್ಕತ್ತಾ ನೈಟ್ ರೈಡರ್ಸ್ 9ನೇ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡ 10ನೇ ಸ್ಥಾನದಲ್ಲಿದೆ.
ಕನ್ನಡ ಚಿತ್ರರಂಗದಲ್ಲಿ ಈಗತಾನೇ ಗುರುತಿಸಿಕೊಳ್ಳುತ್ತಿರುವ ನಟ ನಿರಂಜನ್ ಮೇಲೆ ಅಪರಿಚಿತ ವ್ಯಕ್ತಿಗಳು ಹಲ್ಲೆ ಮಾಡಿದ್ದಾರೆ. ಬೆಂಗಳೂರಿನ ಬಾರ್ ಒಂದರಲ್ಲಿ ನಡೆದ ಕಿರಿಕ್ ಮಿತಿ ಮೀರಿದ್ದು, ಬಿಯರ್ ಬಾಟಲಿಯಿಂದ ನಟನ ಮೇಲೆ ಹಲ್ಲೆ ಮಾಡಲಾಗಿದೆ. ಘಟನೆ ಸಂಬಂಧ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮಾರ್ಚ್ 28ರಂದು ನಡೆದಿರುವ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ದರ್ಶನ್ ಅಭಿನಯದ ‘ಒಡೆಯ’ (2019) ಸಿನಿಮಾದಲ್ಲಿ ನಿರಂಜನ್ ನಟಿಸಿದ್ದರು. ಈ ಸಿನಿಮಾದಲ್ಲಿ ದರ್ಶನ್ ಸಹೋದರನ ಪಾತ್ರದಲ್ಲಿ ಅವರು ಕಾಣಿಸಿಕೊಂಡರು. ಈ ಪಾತ್ರ ಅವರ ವೃತ್ತಿ ಜೀವನಕ್ಕೆ ಸಾಕಷ್ಟು ಮೈಲೇಜ್ ನೀಡಿತು. ಈಗ ಅವರು ವಿವಾದದ ಮೂಲಕ ಸುದ್ದಿ ಆಗಿದ್ದಾರೆ.
ಕೆಲಸದ ನಿಮಿತ್ತ ನಟ ಯಶಸ್ ಸೂರ್ಯ ನಿವಾಸಕ್ಕೆ ನಿರಂಜನ್ ತೆರಳಿದ್ದರು. ಭೇಟಿ ಬಳಿಕ ಮಂತ್ರಿ ಅಲೈಯನ್ಸ್ ಬಳಿಯ ಬಾರ್ಗೆ ನಿರಂಜನ್ ಬಂದಿದ್ದರು. ನೀರು ಕುಡಿಯಲೆಂದು ಬಾರ್ಗೆ ಬಂದಿದ್ದಾಗಿ ನಿರಂಜನ್ ಹೇಳಿಕೊಂಡಿದ್ದಾರೆ. ಈ ವೇಳೆ ಬಾರ್ ಅಲ್ಲಿ ಇದ್ದ ವ್ಯಕ್ತಿಯೋರ್ವ ನಿರಂಜನ್ ತಳ್ಳಿದ್ದಕ್ಕೆ ಗಲಾಟೆ ಶುರುವಾಗಿದೆ.
ಈ ವೇಳೆ ನಿರಂಜನ್ ನಟ ಎಂಬ ವಿಷಯ ಅಪರಿಚಿತ ವ್ಯಕ್ತಿಗೆ ಗೊತ್ತಾಗಿದೆ. ‘ನೀನು ನಟನಾದರೆ ನನಗೇನು’ ಎಂದು ಅಪರಿಚಿತ ವ್ಯಕ್ತಿ ಬೈದಿದ್ದ. ಈ ವಿಷಯದ ಬಗ್ಗೆ ಬಾರ್ ಮಾಲೀಕರ ಜೊತೆ ಮಾತನಾಡುವಾಗ ಬಂದ ನಾಲ್ವರು ನಿರಂಜನ್ ಜೊತೆ ಮತ್ತೆ ಕಿರಿಕ್ ಮಾಡಿಕೊಂಡಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಬಿಯರ್ ಬಾಟಲಿಯಿಂದ ನಟನ ತಲೆಗೆ ಹೊಡೆದು ಹಲ್ಲೆ ಮಾಡಿದ್ದಾರೆ. ಘಟನೆ ಸಂಬಂಧ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
2017ರ ‘ಜಲ್ಸಾ’ (2017) ಚಿತ್ರದ ಮೂಲಕ ನಿರಂಜನ್ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ಕೆಲ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ‘ಒಡೆಯ’ ಚಿತ್ರದ ಪಾತ್ರಕ್ಕೆ ಮೆಚ್ಚುಗೆ ಸಿಕ್ಕಿದೆ.
ಬೆಂಗಳೂರು, ಏಪ್ರಿಲ್ 06: ನಗರದಲ್ಲಿ ಎಲ್ಪಿಜಿ ಗ್ಯಾಸ್ ಸಮಸ್ಯೆ (LPG gas crisis)ಹೋಟೆಲ್ ಉದ್ಯಮಕ್ಕಷ್ಟೆ ಅಲ್ಲದೆ ಇದೀಗ ಆಟೋ ಚಾಲಕರ ದುಡಿಮೆ ಮೇಲೂ ಹೊಡೆತ ಕೊಟ್ಟಿದೆ. ಗಂಟೆಗಟ್ಟಲೆ ಆಟೋಗೆ ಗ್ಯಾಸ್ ತುಂಬಿಸಲು ಕಾದು ಕಾದು ಸುಸ್ತಾಗಿರುವ ಚಾಲಕರು ಇಂದು ಆಹಾರ ಸಚಿವ ಕೆ. ಹೆಚ್ ಮುನಿಯಪ್ಪ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಗ್ಯಾಸ್ ಕೊಡಿಸಲೇಬೇಕು ಎಂದ ಚಾಲಕರು
ಹೆಬ್ಬಾಳದ ಸಂಜಯನಗರದಲ್ಲಿರುವ ಸಚಿವರ ಮನೆ ಎದುರು ಜಮಾಯಿಸಿದ ಆಟೋ ಚಾಲಕರು ಗ್ಯಾಸ್ ಕೊಡಬೇಕು ಎಂದು ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಹಲವೆಡೆ ಆಟೋಗಳಿಗೆ ಅಗತ್ಯವಾದ LPG ಗ್ಯಾಸ್ ಲಭ್ಯವಾಗದೇ ಇರುವುದರಿಂದ ಜೀವನೋಪಾಯಕ್ಕೆ ತೊಂದರೆ ಉಂಟಾಗಿದೆ ಎಂದು ಚಾಲಕರು ಅಳಲು ತೋಡಿಕೊಂಡಿದ್ದಾರೆ.
ಗ್ಯಾಸ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಎಂದ ಸಚಿವ
ಪ್ರತಿಭಟನಾಕಾರರ ಜೊತೆ ಮಾತನಾಡಿದ ಸಚಿವ ಮುನಿಯಪ್ಪ, ಕೇಂದ್ರ ಸರ್ಕಾರದಿಂದ ಪ್ರತಿದಿನ ಸುಮಾರು 3 ಸಾವಿರ ಸಿಲಿಂಡರ್ಗಳನ್ನು ಒದಗಿಸಲಾಗುತ್ತಿದ್ದು, ಪೂರೈಕೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಖಾಸಗಿ ಗ್ಯಾಸ್ ಬಂಕ್ಗಳಲ್ಲಿ ಹೆಚ್ಚುವರಿ ದರ ವಸೂಲಿ ನಡೆಯುತ್ತಿರುವ ಬಗ್ಗೆ ಮಾಹಿತಿ ದೊರೆತಿದ್ದು, ಸಂಬಂಧಪಟ್ಟ ಬಂಕ್ ಮಾಲೀಕರನ್ನು ಕರೆದು ಚರ್ಚೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.
ಆಟೋ ಚಾಲಕರಿಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ ಸಚಿವರು, ಏಪ್ರಿಲ್ 10ರಂದು ಅಧಿಕಾರಿಗಳು ಮತ್ತು ಪೊಲೀಸರ ಜೊತೆ ಸಭೆ ನಡೆಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿದರು. ಇದೇ ವೇಳೆ, ಇಂದು ಮಧ್ಯಾಹ್ನದ ನಂತರವೂ ಅಧಿಕಾರಿಗಳ ಜೊತೆ ಚರ್ಚೆ ನಡೆಸುವುದಾಗಿ ಅವರು ತಿಳಿಸಿದರು. ಪ್ರತಿಭಟನೆ ವೇಳೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟಿದ್ದಾರೆ. ವಿವಿಧ ಆಟೋ ಚಾಲಕರ ಸಂಘಟನೆಗಳು ಈ ಸಮಸ್ಯೆ ಪರಿಹಾರವಾಗದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆ ನೀಡಿವೆ.
ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪೀಸ್ ಆಟೋ ಸಂಘಟನೆಯ ಅಧ್ಯಕ್ಷ ರಘು, ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಸಚಿವರು ತೆರಳುವ ಎಲ್ಲೆಡೆ ಕಪ್ಪು ಬಾವುಟ ಪ್ರದರ್ಶನ ಮಾಡುವುದಾಗಿ ಹಾಗೂ ತೇಜಸ್ವಿ ಸೂರ್ಯ ಸೇರಿದಂತೆ ಸಂಸದರ ಮನೆಗಳಿಗೂ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ್ದಾರೆ.
ಚಿಕ್ಕಮಗಳೂರು, ಏ.6: ಜಿಲ್ಲೆಯ ನರಸಿಂಹರಾಜಪುರ (ಎನ್.ಆರ್.ಪುರ) ತಾಲ್ಲೂಕಿನ ಬನ್ನೂರು ಗ್ರಾಮದ ಬಳಿ ಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಐಟಿ ಉದ್ಯೋಗಿಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಯುವಕನನ್ನು ಗದಗ ಮೂಲದ, ಬೆಂಗಳೂರಿನ ಖಾಸಗಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್ (27) ಎಂದು ಗುರುತಿಸಲಾಗಿದೆ.
ಅಭಿಷೇಕ್ ಅವರು ತಮ್ಮ ಸ್ನೇಹಿತನ ಮದುವೆಯಲ್ಲಿ ಪಾಲ್ಗೊಳ್ಳಲು ಸ್ನೇಹಿತರ ಜತೆ ಸೇರಿ ಬಾಳೆಹೊನ್ನೂರು ಸಮೀಪದ ಬನ್ನೂರು ಗ್ರಾಮಕ್ಕೆ ಬಂದಿದ್ದರು. ಸ್ನೇಹಿತರೊಂದಿಗೆ ಸ್ಥಳೀಯ ಹೋಂ ಸ್ಟೇನಲ್ಲಿ ವಾಸ್ತವ್ಯ ಹೂಡಿದ್ದ ಇವರು, ಇಂದು ಬೆಳಿಗ್ಗೆ ಭದ್ರಾ ನದಿಗೆ ಈಜಲು ತೆರಳಿದ್ದರು. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಅಭಿಷೇಕ್ ನಾಪತ್ತೆಯಾಗಿದ್ದರು.
ಯುವಕ ನಾಪತ್ತೆಯಾದ ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯರು ಹುಡುಕಾಟ ನಡೆಸಿದ್ದರು. ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆಯ ನಂತರ, ಬನ್ನೂರು ಗ್ರಾಮದ ಸಮೀಪದ ನದಿಯಲ್ಲೇ ಅಭಿಷೇಕ್ ಅವರ ಮೃತದೇಹ ಪತ್ತೆಯಾಗಿದೆ. ಮದುವೆ ಸಂಭ್ರಮದಲ್ಲಿದ್ದ ಸ್ನೇಹಿತರು ಮತ್ತು ಕುಟುಂಬದವರಲ್ಲಿ ಈ ಘಟನೆ ತೀವ್ರ ಶೋಕವನ್ನುಂಟು ಮಾಡಿದೆ. ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 11ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಭರ್ಜರಿ ಜಯ ಸಾಧಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 250 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸಿಎಸ್ಕೆ 19.4 ಓವರ್ಗಳಲ್ಲಿ 207 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಆರ್ಸಿಬಿ ತಂಡವು 43 ರನ್ಗಳ ಜಯ ಸಾಧಿಸಿತು.
ಈ ಗೆಲುವಿನ ಬಳಿಕ ಮಾತನಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್, ತಂಡ ಸಾಂಘಿಕ ಪ್ರದರ್ಶನದ ಬಗ್ಗೆ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.
“ಆರಂಭದಲ್ಲಿ ಪಿಚ್ ಸ್ವಲ್ಪ ನಿಧಾನಗತಿಯಲ್ಲಿತ್ತು. ಆದರೆ ವಿರಾಟ್ ಭಾಯ್ ಮತ್ತು ಫಿಲ್ ಸಾಲ್ಟ್ ಉತ್ತಮ ಆರಂಭ ನೀಡಿದರು. ಅವರ ಬ್ಯಾಟಿಂಗ್ ಅದ್ಭುತವಾಗಿತ್ತು,” ಎಂದು ರಜತ್ ಶ್ಲಾಘಿಸಿದರು.
ಇನ್ನು 13ನೇ ಓವರ್ ನಂತರ ಪಂದ್ಯದ ವೇಗವನ್ನು ಹೆಚ್ಚಿಸಿದ ಬಗ್ಗೆ ಕೇಳಿದಾಗ, ಬೌಲರ್ಗಳ ಮೇಲೆ ಒತ್ತಡ ಹೇರುವುದು ತಮ್ಮ ಗುರಿಯಾಗಿತ್ತು. ಅದರಂತೆ ನಾನು ಹಾಗೂ ಟಿಮ್ ಡೇವಿಡ್ ಬಿರುಸಿನ ಬ್ಯಾಟಿಂಗ್ ಮಾಡಿದೆವು ಎಂದರು.
ವಿಶೇಷವಾಗಿ ಟಿಮ್ ಡೇವಿಡ್ ಅವರ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪಾಟಿದಾರ್, “ಟಿಮ್ ಡೇವಿಡ್ ವಿಶ್ವದ ಅತ್ಯುತ್ತಮ ಫಿನಿಶರ್ಗಳಲ್ಲಿ ಒಬ್ಬರು. ಅವರು ಹೊಡೆದ 106 ಮೀಟರ್ಗಳ ಬೃಹತ್ ಸಿಕ್ಸರ್ ಅನ್ನು ನಾನು ನಾನ್-ಸ್ಟ್ರೈಕರ್ ತುದಿಯಿಂದ ಎಂಜಾಯ್ ಮಾಡಿದೆ. ಅವರು ಕಳೆದ ವರ್ಷವೂ ಉತ್ತಮವಾಗಿ ಆಡಿದ್ದರು, ಅವರ ಸ್ಥಿರತೆ ತಂಡಕ್ಕೆ ದೊಡ್ಡ ಬಲ,” ಎಂದರು.
ಬೌಲರ್ಗಳ ಶಿಸ್ತುಬದ್ಧ ಪ್ರದರ್ಶನ:
ತಂಡದ ಬೌಲಿಂಗ್ ವಿಭಾಗದ ಬಗ್ಗೆ ಮಾತನಾಡುತ್ತಾ, ಜೇಕಬ್ ಡಫಿ ಅವರ ಔಟ್ಸ್ವಿಂಗರ್ಗಳು ಮತ್ತು ಅವರು ಪಡೆದ 3 ವಿಕೆಟ್ಗಳು ತಂಡವನ್ನು ಗೆಲುವಿನ ಹತ್ತಿರ ತಂದವು.
ಡೆತ್ ಓವರ್ಗಳಲ್ಲಿ ಭುವಿ (ಭುವನೇಶ್ವರ್ ಕುಮಾರ್) ಮತ್ತು ಅಭಿನಂದನ್ ಎಸೆದ ಯಾರ್ಕರ್ಸ್ಗಳು ನೋಡಲು ಅದ್ಭುತವಾಗಿದ್ದವು.
ಅದರಲ್ಲೂ ನಾನು ಒತ್ತಡಕ್ಕೆ ಒಳಗಾದರೆ ಯಾವಾಗಲೂ ಕೃನಾಲ್ ಪಾಂಡ್ಯರತ್ತ ನೋಡುತ್ತೇನೆ. ತಂಡಕ್ಕೆ ವಿಕೆಟ್ ಅಗತ್ಯವಿದ್ದಾಗ ಯಾವಾಗಲೂ ನಾನು ಕೆ.ಪಿ (ಕೃನಾಲ್ ಪಾಂಡ್ಯ) ಕಡೆ ಮುಖ ಮಾಡುತ್ತೇನೆ. ಏಕೆಂದರೆ ಅವರ ಮೇಲೆ ನನಗೆ ಅತೀವ ನಂಬಿಕೆಯಿದೆ ಎಂದು ರಜತ್ ಪಾಟೀದಾರ್ ತಿಳಿಸಿದರು.
ಇನ್ನು ಸುಯಶ್ ಶರ್ಮಾ ಅವರ ನಾಲ್ಕು ಓವರ್ಗಳ ಶಿಸ್ತುಬದ್ಧ ಬೌಲಿಂಗ್ ಮತ್ತು ರೊಮಾರಿಯೋ ಶೆಫರ್ಡ್ ಅವರ ಒಂದು ಓವರ್ನ ಸಾಂಘಿಕ ಪ್ರಯತ್ನ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು ಎಂದು ಇದೇ ವೇಳೆ ರಜತ್ ಪಾಟಿದಾರ್ ಸ್ಮರಿಸಿದರು.
ಮುಂದಿನ ಪಂದ್ಯಗಳತ್ತ ಚಿತ್ತ:
ಬ್ಯಾಕ್ ಟು ಬ್ಯಾಕ್ ಗೆಲುವುಗಳೊಂದಿಗೆ ಆರ್ಸಿಬಿ ತಂಡದ ಎಲ್ಲಾ ಆಟಗಾರರು ಈಗ ಉತ್ತಮ ಮಾನಸಿಕ ಸ್ಥಿತಿಯಲ್ಲಿದ್ದಾರೆ ಮತ್ತು ಫಾರ್ಮ್ನಲ್ಲಿದ್ದಾರೆ. ಮುಂದಿನ ಪಂದ್ಯಗಳಲ್ಲೂ ಇದೇ ಉತ್ಸಾಹದೊಂದಿಗೆ ಕಣಕ್ಕಿಳಿಯಲಿದ್ದೇವೆ ಎಂದು ನಾಯಕ ರಜತ್ ಪಾಟಿದಾರ್ ಇದೇ ವೇಳೆ ತಿಳಿಸಿದ್ದಾರೆ.
ಅಂದಹಾಗೆ ಆರ್ಸಿಬಿ ತಂಡವು ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 10 ರಂದು ಆಡಲಿದೆ. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎದುರಾಳಿ ರಾಜಸ್ಥಾನ್ ರಾಯಲ್ಸ್. ಈ ಪಂದ್ಯದಲ್ಲೂ ಗೆಲ್ಲುವ ಮೂಲಕ ಆರ್ಸಿಬಿ ಹ್ಯಾಟ್ರಿಕ್ ಗೆಲುವು ತನ್ನದಾಗಿಸಿಕೊಳ್ಳಲಿದೆಯಾ ಕಾದು ನೋಡಬೇಕಿದೆ.
ಬೆಳಗಾವಿ, ಏ.6: ಬಡತನ ಎಂಬುದನ್ನು ಸಾಧನೆಗೆ ತೊಂದರೆಯನ್ನು ಉಂಟು ಮಾಡುವುದಿಲ್ಲ. ಇದೀಗ ಇಲ್ಲೊಂದು ಶಿಕ್ಷಕರ ಸಾಧನೆಗೆ ದೊಡ್ಡ ಮಟ್ಟದ ಪ್ರಶಸ್ತಿ ಲಭಿಸಿದೆ. ಅವರ ಸಾಧನೆ ಇದೀಗ ಬೆಳಗಾವಿಯ ಯುವಕರಲ್ಲಿ ಒಳ್ಳೆಯ ಕನಸುಗಳನ್ನು ಮೂಡಿಸಿದೆ. ಶಿಕ್ಷಕ ಯಾವಾಗಲೂ ವಿದ್ಯಾರ್ಥಿಯಾಗಿಯೇ ಇರಬೇಕು ಎಂಬ ಸರಳ ಮಂತ್ರವನ್ನು ನಂಬಿರುವ ರಾಜಶೇಖರ್ ರಗಟಿ (43) ಅವರು ಇಂದು ಕರ್ನಾಟಕದ ಮನೆಮಾತಾಗಿದ್ದಾರೆ. 2025-26ನೇ ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸ್ವೀಕರಿಸಿರುವ ಇವರ ಯಶೋಗಾಥೆಯ ಹಿಂದೆ ಹಸಿವು, ಕಷ್ಟ ಮತ್ತು ಬದ್ಧತೆಯ ದೊಡ್ಡ ಕಥೆಯನ್ನೇ ಜೋಡಿಸಿದ್ದಾರೆ.
1981ರಲ್ಲಿ ವಿಜಯಪುರ ಜಿಲ್ಲೆಯ ಹಲಸಂಗಿ ಗ್ರಾಮದಲ್ಲಿ ಜನಿಸಿದ ರಾಜಶೇಖರ್ ಅವರ ಆರಂಭಿಕ ಜೀವನ ಸುಲಭವಾಗಿರಲಿಲ್ಲ. ವಿಜ್ಞಾನ ಕಾಲೇಜು ಬಿಟ್ಟ ನಂತರ ಸುಮಾರು ಮೂರು ವರ್ಷಗಳ ಕಾಲ ಅವರು ಬದುಕಿಗಾಗಿ ಹರಸಾಹಸ ಪಟ್ಟಿದ್ದರು. ಹೋಟೆಲ್ ಕಾರ್ಮಿಕನಾಗಿ, ಮೆಡಿಕಲ್ ಶಾಪ್ ಸಹಾಯಕನಾಗಿ ಕೆಲಸ ಮಾಡಿದ್ದರು. ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದ ಪ್ಲಾಟ್ಫಾರ್ಮ್ಗಳ ಮೇಲೆ ಪತ್ರಿಕೆಗಳನ್ನು ಹೊದ್ದುಕೊಂಡು ಚಳಿಯಲ್ಲಿ ಮಲಗಿದ ದಿನಗಳನ್ನೂ ಅವರು ನೆನಪಿಸಿಕೊಂಡಿದ್ದಾರೆ.
ತಂದೆಯ ಪ್ರೇರಣೆಯಿಂದ ಮತ್ತೆ ಶಿಕ್ಷಣ ಆರಂಭಿಸಿದ ಅವರು, ಪಿಯುಸಿಯಲ್ಲಿ ಶೇ. 56 ಹಾಗೂ ಬಿಎ ಪದವಿಯಲ್ಲಿ ಶೇ. 70 ಅಂಕ ಗಳಿಸಿ ಸಾಧನೆಯ ಹಾದಿ ಹಿಡಿದರು. ಕೆಎಎಸ್ (KAS), ಪಿಎಸ್ಐ (PSI), ಎಫ್ಡಿಎ (FDA) ಪರೀಕ್ಷೆಗಳಲ್ಲಿ ಅಲ್ಪ ಅಂಕಗಳ ಅಂತರದಿಂದ ಸೋತರೂ ಧೃತಿಗೆಡದ ಅವರು, ಆ ಸೋಲನ್ನೇ ಪಾಠವಾಗಿ ಬಳಸಿಕೊಂಡರು. “ನಾನು ಅನೇಕ ಬಾರಿ ಸೋತಿದ್ದೇನೆ, ಅದಕ್ಕೇ ನನ್ನ ವಿದ್ಯಾರ್ಥಿಗಳಿಗೆ ಗುರಿ ತಲುಪುವುದು ಹೇಗೆ ಎಂದು ಕಲಿಸುತ್ತೇನೆ” ಎಂದು ಹೇಳಿದ್ದಾರೆ.
2010ರಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ ರಾಜಶೇಖರ್, ಬೆಳಗಾವಿ ಜಿಲ್ಲೆಯಲ್ಲೇ ಮೊದಲ ಬಾರಿಗೆ ‘ಸಮಾಜ ವಿಜ್ಞಾನ ಪ್ರಯೋಗಾಲಯ’ ಸ್ಥಾಪಿಸಿದ ಕೀರ್ತಿ ಹೊಂದಿದ್ದಾರೆ. ಹಳೆಯ ವಿದ್ಯಾರ್ಥಿಗಳ ನೆರವಿನಿಂದ ಡಿಜಿಟಲ್ ಉಪಕರಣಗಳು, ನಕ್ಷೆಗಳು ಮತ್ತು ಮಾದರಿಗಳನ್ನು ಒಳಗೊಂಡ ಈ ಲ್ಯಾಬ್ ಗ್ರಾಮೀಣ ಮಕ್ಕಳಿಗೆ ವರದಾನವಾಗಿದೆ. ಅವರ ಶಾಲೆಯ ಸಮಾಜ ವಿಜ್ಞಾನ ಫಲಿತಾಂಶ ಸತತವಾಗಿ ಶೇ. 100 ರಷ್ಟಿದೆ.
ಇಟಾವಾ, ಏಪ್ರಿಲ್ 06: ತಾಂತ್ರಿಕ ದೋಷದಿಂದಾಗಿ ನಿಂತಿದ್ದ ರೈಲಿನಿಂದ ಇಳಿದ ಯುವಕನೊಬ್ಬನಿಗೆ ಮತ್ತೊಂದು ರೈಲು ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಇಟಾವಾದಲ್ಲಿ ನಡೆದಿದೆ. ಅಪಘಾತದ ಬಗ್ಗೆ ರೈಲ್ವೆ ಪೊಲೀಸರು ಯುವಕನ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.ಓಖಾ-ಗುವಾಹಟಿ ಎಕ್ಸ್ಪ್ರೆಸ್ ಇಟಾವಾದಿಂದ ಕಾನ್ಪುರಕ್ಕೆ ಡೌನ್ ಲೈನ್ನಲ್ಲಿ ಪ್ರಯಾಣಿಸುತ್ತಿತ್ತು. ಪ್ರಯಾಣದ ಸಮಯದಲ್ಲಿ, 13 ನೇ ಕೋಚ್ನ ಚಕ್ರಗಳಿಂದ ಇದ್ದಕ್ಕಿದ್ದಂತೆ ಹೊಗೆ ಬರಲು ಪ್ರಾರಂಭಿಸಿತ್ತು.
ಪ್ರಯಾಣಿಕರು ಹೊಗೆಯಿಂದ ಗಾಬರಿಗೊಂಡರು, ಮತ್ತು ಅನೇಕರು ಭಯದಿಂದ ತಮ್ಮ ಆಸನಗಳಿಂದ ಎದ್ದರು. ತಾಂತ್ರಿಕ ತಂಡವನ್ನು ಸ್ಥಳಕ್ಕೆ ಕರೆಸಿ ಹೊಗೆಯನ್ನು ನಂದಿಸಲಾಯಿತು. ಈ ಸಮಯದಲ್ಲಿ ರೈಲು 10 ನಿಮಿಷಗಳ ಕಾಲ ನಿಂತಿತು. ರೈಲು ನಿಂತಾಗ, ಅನೇಕ ಪ್ರಯಾಣಿಕರು ಇಳಿದರು.
ತಾಂತ್ರಿಕ ದೋಷವನ್ನು ಸರಿಪಡಿಸಿದ ನಂತರ ರೈಲು ಮುಂದೆ ಚಲಿಸಿದ ತಕ್ಷಣ, ಪ್ರಯಾಣಿಕರಲ್ಲಿ ರೈಲು ಹತ್ತಲು ನೂಕುನುಗ್ಗಲು ಉಂಟಾಯಿತು. ಈ ಮಧ್ಯೆ, ಇನ್ನೊಂದು ಮಾರ್ಗವನ್ನು ದಾಟಿ ರೈಲು ಹತ್ತಲು ಓಡುತ್ತಿದ್ದ ಪ್ರಯಾಣಿಕನೊಬ್ಬನಿಗೆ ಕಾನ್ಪುರದಿಂದ ಇಟಾವಾ ಕಡೆಗೆ ಬರುತ್ತಿದ್ದ ಸೀಲ್ಡಾ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. ಮೃತರನ್ನು ದಿಲಾವರ್ ಹುಸೇನ್ ಎಂದು ಗುರುತಿಸಲಾಗಿದೆ.
ಮಂಡ್ಯ , ಏಪ್ರಿಲ್ 06: ಕ್ಷುಲ್ಲಕ ಕಾರಣಗಳು ಹಾಗೂ ಆಸ್ತಿ ವಿವಾದಗಳಿಂದ ಮಂಡ್ಯದಲ್ಲಿ (Mandya)ಎರಡು ಪ್ರತ್ಯೇಕ ಹಿಂಸಾತ್ಮಕ ಘಟನೆಗಳು ನಡೆದಿದ್ದು, ಒಬ್ಬ ಯುವಕ ಸಾವನ್ನಪ್ಪಿದ್ದಾನೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮದ್ದೂರು ಮತ್ತು ಕೆ.ಆರ್.ಪೇಟೆಯಲ್ಲಿ ಮಾರಾಮಾರಿ ನಡೆದಿದ್ದು, ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಎರಡೂ ಘಟನೆಗಳಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಜಿ ಸಂಧಾನ ನಡೆಯುತ್ತಿರುವಾಗಲೇ ಮತ್ತೆ ಗಲಾಟೆ
ಮದ್ದೂರು ಪಟ್ಟಣದ ಪಟೇಲ್ ಸಾಮಿಲ್ ಸಮೀಪ ಎರಡು ಯುವಕರ ಗುಂಪುಗಳ ನಡುವೆ ಗಲಾಟೆ ನಡೆದಿದೆ. ಪರಿಣಾಮವಾಗಿ ಮರಳಿಗ ಗ್ರಾಮದ ಯಶವಂತ್ ಎಂಬ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಗೊರವನಹಳ್ಳಿ ಗ್ರಾಮದ ದರ್ಶನ್ ಮತ್ತು ಸಚಿನ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೆಲ ದಿನಗಳ ಹಿಂದೆ ಬಾರ್ನಲ್ಲಿ ಸಿಗರೇಟ್ ವಿಚಾರವಾಗಿ ಎರಡು ಗುಂಪಿನ ಯುವಕರ ನಡುವೆ ಗಲಾಟೆ ನಡೆದಿತ್ತು. ಇದೇ ವಿಷಯಕ್ಕೆ ಕಳೆದ ರಾತ್ರಿ ರಾಜಿ ಮಾತುಕತೆ ನಡೆಯುವ ವೇಳೆ ಮತ್ತೆ ಜಗಳವಾಗಿದೆ. ಈ ಸಂದರ್ಭದಲ್ಲಿ ಯುವಕರು ದೊಣ್ಣೆಗಳಿಂದ ಪರಸ್ಪರ ದಾಳಿ ನಡೆಸಿಕೊಂಡಿದ್ದು, ಪರಿಣಾಮವಾಗಿ ಯಶವಂತ್ ಮೃತಪಟ್ಟಿದ್ದಾನೆ. ಮದ್ದೂರು ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಜೆ ಶೋಭಾರಾಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನೊಂದು ಘಟನೆ ಕೆ.ಆರ್.ಪೇಟೆ ತಾಲೂಕಿನ ನಾಟನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪಿತ್ರಾರ್ಜಿತ ಆಸ್ತಿ ಸಂಬಂಧ ರಸ್ತೆ ಬಿಡುವ ವಿಚಾರವಾಗಿ ದಾಯಾದಿಗಳ ನಡುವೆ ಉಂಟಾದ ಜಗಳ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದೆ. ಈ ವೇಳೆ ಸಂಬಂಧಿಕರು ಮಾರಕಾಸ್ತ್ರಗಳಿಂದ ಪರಸ್ಪರ ದಾಳಿ ನಡೆಸಿಕೊಂಡಿದ್ದಾರೆ. ಪರಿಣಾಮವಾಗಿ ಸೋಮೇಗೌಡ, ವಸಂತ್ ಮತ್ತು ನಿಶಾಂತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರು ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಪ್ರಕರಣದಲ್ಲಿ ಉಗ್ರೇಗೌಡ, ವೇಣು, ನೂತನ್, ಪ್ರಕಾಶ್ ಮತ್ತು ಸೋಮೇಶ್ ಎಂಬವರ ವಿರುದ್ಧ ದೂರು ದಾಖಲಾಗಿದ್ದು, ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.