ಬೆಂಗಳೂರು, ಏ. 6: ಸಿಲಿಕಾನ್ ಸಿಟಿಯ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತ್ಯಂತ ಭೀಕರ ಘಟನೆಯೊಂದು ನಡೆದಿದೆ. ಮನೆಯಲ್ಲಿ ಯುವಕನ ಜೊತೆಗಿದ್ದಾಳೆ ಎಂಬ ಕಾರಣಕ್ಕೆ ಪಶ್ಚಿಮ ಬಂಗಾಳ ಮೂಲದ ಮಹಿಳೆಯೊಬ್ಬರನ್ನು ಮನೆಯಿಂದ ಹೊರಗೆ ಎಳೆದು ತಂದು ಅಮಾನವೀಯವಾಗಿ ಹಲ್ಲೆ ನಡೆಸಲಾಗಿದೆ. ಏಪ್ರಿಲ್ 4ರಂದು ಶನಿವಾರ ರಾತ್ರಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪಶ್ಚಿಮ ಬಂಗಾಳ ಮೂಲದ ಮಹಿಳೆಯು ವರ್ತೂರು ವ್ಯಾಪ್ತಿಯಲ್ಲಿ ವಾಸವಿದ್ದರು. ಏಪ್ರಿಲ್ 4ರಂದು ಆಕೆ ತನ್ನ ಮನೆಯಲ್ಲಿ ಯುವಕನೋರ್ವನ ಜೊತೆ ಇದ್ದಾಗ, ಕೆಲವು ವ್ಯಕ್ತಿಗಳು “ನಮ್ಮ ಊರಿಗೆ ಬಂದು ವೇಶ್ಯಾವಾಟಿಕೆ ನಡೆಸುತ್ತೀರಾ?” ಎಂದು ಕಿರುಚುತ್ತಾ ದಾಳಿ ಮಾಡಿದ್ದಾರೆ. ಯುವತಿಯನ್ನು ಮನೆಯಿಂದ ಹೊರಕ್ಕೆ ಎಳೆದು ತಂದು ಮನಬಂದಂತೆ ಥಳಿಸಿದ್ದಾರೆ. ಗಲಾಟೆ ಆರಂಭವಾಗುತ್ತಿದ್ದಂತೆಯೇ ಆಕೆಯ ಜೊತೆಗಿದ್ದ ಯುವಕ ಸ್ಥಳದಿಂದ ಓಡಿ ಹೋಗಿದ್ದಾನೆ.
ಹಲ್ಲೆಗೊಳಗಾದ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ವರ್ತೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಈಗಾಗಲೇ ಓರ್ವ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಹಿಳೆಯ ಖಾಸಗಿತನಕ್ಕೆ ಧಕ್ಕೆ ತಂದಿರುವ ಮತ್ತು ಹಲ್ಲೆ ನಡೆಸಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬೆಣಗಳೂರು (ಏ. 06): ನಿಮಗೆ ತಿಳಿದಿರುವ ಯಾರಾದರೂ ನಿಮ್ಮನ್ನು ವಾಟ್ಸ್ಆ್ಯಪ್ನಲ್ಲಿ (WhatsApp) ಬ್ಲಾಕ್ ಮಾಡಿದ್ದಾರಾ ಮತ್ತು ನಿಮಗೆ ಅದನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲವೇ?. ವಾಟ್ಸ್ಆ್ಯಪ್ನಲ್ಲಿ ನಿರ್ಬಂಧಿಸಿದ ನಂತರ, ಅವರು ತಮ್ಮ ಮೆಸೇಜ್ ಪಕ್ಕದಲ್ಲಿ ಒಂದೇ ಒಂದು ಟಿಕ್ ಅನ್ನು ಮಾತ್ರ ನೋಡುತ್ತಾರೆ. ನೀವು ಸಂದೇಶವನ್ನು ಕಳುಹಿಸಿದ ವ್ಯಕ್ತಿಗೆ ಇಂಟರ್ನೆಟ್ ಸಂಪರ್ಕವಿಲ್ಲದಿದ್ದಾಗ ಅಥವಾ ಡೌನ್ ಆಗಿರುವಾಗಲೂ ಇದೇ ರೀತಿ ಸಂಭವಿಸುತ್ತದೆ. ನೀವು ಸಂದೇಶವನ್ನು ಕಳುಹಿಸಿದಾಗ ಒಂದೇ ಒಂದು ಟಿಕ್ ಅನ್ನು ನೋಡಿದರೆ, ಸ್ವೀಕರಿಸುವವರು ನಿಮ್ಮನ್ನು ಬ್ಲಾಕ್ ಮಾಡಿದ್ದಾರಾ ಅಥವಾ ಅವರ ಇಂಟರ್ನೆಟ್ ಸಂಪರ್ಕ ಕಡಿತಗೊಂಡಿದೆಯೇ ಎಂಬ ಬಗ್ಗೆ ಗೊಂದಲಕ್ಕೊಳಗಾಗಬಹುದು. ಆದ್ದರಿಂದ, ಆ ವ್ಯಕ್ತಿಯು ನಿಮ್ಮನ್ನು ಬ್ಲಾಕ್ ಮಾಡಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಲು ಹೊಸದಾದ ಸುಲಭ ವಿಧಾನ ನಾವು ಹೇಳುತ್ತೇವೆ.
ಯಾರಾದರೂ ನಿಮ್ಮನ್ನು ವಾಟ್ಸ್ಆ್ಯಪ್ನಲ್ಲಿ ನಿರ್ಬಂಧಿಸಿದ್ದರೆ, ನೀವು ಮಾಡಬೇಕಾಗಿರುವುದು ಅವರ ಚಾಟ್ ಬಾಕ್ಸ್ಗೆ ಹೋಗಿ, Meta AI ಅನ್ನು ಟ್ಯಾಗ್ ಮಾಡಿ ಮತ್ತು “Hi” ಸಂದೇಶವನ್ನು ಕಳುಹಿಸಿ. ಇದನ್ನು ಮಾಡಲು, ಸ್ವೀಕರಿಸುವವರ ಚಾಟ್ ಬಾಕ್ಸ್ ಅನ್ನು ತೆರೆಯಿರಿ, @Meta AI ಎಂದು ಟೈಪ್ ಮಾಡಿ ಮತ್ತು Meta ಅನ್ನು ಟ್ಯಾಗ್ ಮಾಡಿ, ನಂತರ “Hi” ಎಂಬ ಸಂದೇಶವನ್ನು ಕಳುಹಿಸಿ.
ಆ ವ್ಯಕ್ತಿಯು ನಿಮ್ಮನ್ನು ಬ್ಲಾಕ್ ಮಾಡಿದ್ದರೆ, ಸಂದೇಶದಲ್ಲಿ ಟ್ಯಾಗ್ ಮಾಡಲಾದ ಯಾವುದೇ ಪ್ರತ್ಯುತ್ತರ ಸಂದೇಶಗಳನ್ನು ನಿಮ್ಮ ಮೆಟಾ AI ಸ್ವೀಕರಿಸುವುದಿಲ್ಲ. ಈ ಸಂದರ್ಭದಲ್ಲಿ, ಸ್ವೀಕರಿಸುವವರು ನಿಮ್ಮನ್ನು ಬ್ಲಾಕ್ ಮಾಡಿದ್ದಾರೆ ಎಂದು ನೀವು ಅರ್ಥಮಾಡಿಕೊಳ್ಳಬೇಕು.
ನಿಮ್ಮನ್ನು ಬ್ಲಾಕ್ ಮಾಡಿಲ್ಲದಿದ್ದರೆ ಏನು?
ಸಂದೇಶ ಸ್ವೀಕರಿಸುವವರು ನಿಮ್ಮನ್ನು ನಿರ್ಬಂಧಿಸದಿದ್ದರೆ, ನಿಮ್ಮ ಸಂದೇಶಕ್ಕೆ ಮೆಟಾ AI ನಿಂದ ನೀವು ಪ್ರತ್ಯುತ್ತರವನ್ನು ಸ್ವೀಕರಿಸುತ್ತೀರಿ. ಮತ್ತೊಂದು ವಿಚಾರ ಎಂದರೆ, ಆ ವ್ಯಕ್ತಿಯು ಇಂಟರ್ನೆಟ್ ಅನ್ನು ಆಫ್ ಮಾಡಿದ್ದರೂ ಸಹ ಈ ಸಂದೇಶ ಅಥವಾ ಪ್ರತ್ಯುತ್ತರವು ಬರುತ್ತದೆ. ಮೆಟಾ AI ಗೆ ನಿಮ್ಮ ಸಂದೇಶಕ್ಕೆ ಪ್ರತಿಕ್ರಿಯೆಯಾಗಿ ನೀವು ಸಂದೇಶವನ್ನು ಸ್ವೀಕರಿಸಿದರೆ, ನಿಮ್ಮನ್ನು ನಿರ್ಬಂಧಿಸಲಾಗಿಲ್ಲ ಎಂದರ್ಥ.
ಕೆಲವೊಮ್ಮೆ, ಆ ವ್ಯಕ್ತಿಯ ವಾಟ್ಸ್ಆ್ಯಪ್ DP ಸಹ ಹೊಂದಿರುವುದಿಲ್ಲ, ಆದ್ದರಿಂದ ಕಳುಹಿಸುವವರಿಗೆ ಅವರನ್ನು ನಿರ್ಬಂಧಿಸಲಾಗಿದೆ ಅಥವಾ ಅವರ ಇಂಟರ್ನೆಟ್ ಸಂಪರ್ಕವು ಕಡಿತಗೊಂಡಿದೆ ಎಂದು ತಿಳಿದಿರುವುದಿಲ್ಲ. ಅಂತಹ ಸಂದರ್ಭಗಳಲ್ಲಿಯೂ ಸಹ, ಈ ಮೆಟಾ AI ವೈಶಿಷ್ಟ್ಯವು ಅತ್ಯಂತ ಉಪಯುಕ್ತವಾಗಿದೆ, ಕಳುಹಿಸುವವರಿಗೆ ಅವರನ್ನು ನಿರ್ಬಂಧಿಸಲಾಗಿದೆಯೇ ಎಂದು ನಿರ್ಧರಿಸಲು ಸಹಾಯ ಮಾಡಿಕೊಡುತ್ತದೆ.
ಬೆಂಗಳೂರು (ಏ. 06): ನೀವು ಸ್ಮಾರ್ಟ್ಫೋನ್ (Smartphone) ಬಳಸುತ್ತಿದ್ದರೆ, ನಿಮ್ಮ ಫೋನ್ನ ಬ್ಲೂಟೂತ್ ಮತ್ತು ವೈ-ಫೈ ಅನ್ನು ಆಫ್ ಮಾಡಬೇಕು ಎಂದು ನೀವು ಬಹುಶಃ ಕೇಳಿರಬಹುದು. ಇದರ ಹಿಂದಿನ ತಾರ್ಕಿಕತೆಯೆಂದರೆ ಇದು ನಿಮ್ಮ ಫೋನ್ನ ಬ್ಯಾಟರಿಯನ್ನು ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡುತ್ತದೆ ಮತ್ತು ಆಗಾಗ್ಗೆ ಚಾರ್ಜ್ ಮಾಡುವ ಅಗತ್ಯ ಇರುವುದಿಲ್ಲ. ಆದಾಗ್ಯೂ, ಇದು ಕಾಲಾನಂತರದಲ್ಲಿ ಬದಲಾಗಿದೆ. ಈಗ ತಂತ್ರಜ್ಞಾನದಲ್ಲಿನ ಪ್ರಗತಿಯಿಂದ, ಇವು ಆಧುನಿಕ ಸ್ಮಾರ್ಟ್ಫೋನ್ಗಳಲ್ಲಿನ ಬ್ಯಾಟರಿಯ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದು ನಿಮಗೆ ತಿಳಿದಿದೆಯೇ?.
ಇಂದು ಬ್ಲೂಟೂತ್ ಕಡಿಮೆ ಬ್ಯಾಟರಿಯನ್ನು ಬಳಸುತ್ತದೆ
ಬ್ಲೂಟೂತ್ ಮತ್ತು ವೈಫೈ ಅನ್ನು ಆಫ್ ಮಾಡಿಡಬೇಕು ಇಲ್ಲದಿದ್ದರೆ ಚಾರ್ಜ್ ಖಾಲಿ ಆಗುತ್ತದೆ ಎಂಬ ಹಳೆಯ ಕಾರಣಗಳು ಈಗಿಲ್ಲ. ಇಂದಿನ ಸ್ಮಾರ್ಟ್ಫೋನ್ಗಳು ಬ್ಲೂಟೂತ್ ಕಡಿಮೆ ಶಕ್ತಿಯ ವ್ಯವಸ್ಥೆಗಳನ್ನು ಹೊಂದಿದ್ದು, ಅವು ಸಕ್ರಿಯವಾಗಿದ್ದರೂ ಸಹ ಬ್ಯಾಟರಿಯನ್ನು ಬಳಸುವುದಿಲ್ಲ. ಇಂದಿನ ಬ್ಲೂಟೂತ್ ಕೇವಲ 2.5 ಮೆಗಾವ್ಯಾಟ್ ಶಕ್ತಿಯನ್ನು ಮಾತ್ರ ಬಳಸುತ್ತದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು, ಆದ್ದರಿಂದ ನೀವು ಎಲ್ಲಾ ಸಮಯದಲ್ಲೂ ಬ್ಲೂಟೂತ್ ಅನ್ನು ಆನ್ ಮಾಡಿದ್ದರೂ ಸಹ, ಬ್ಲೂಟೂತ್ನಿಂದಾಗಿ ಬ್ಯಾಟರಿ ಡಿಸ್ಚಾರ್ಜ್ ಆಗಲು ಸುಮಾರು 3 ತಿಂಗಳುಗಳು ತೆಗೆದುಕೊಳ್ಳಬಹುದು.
ಬ್ಲೂಟೂತ್ ಕೆಲವು ಮೀಟರ್ಗಳವರೆಗೆ ಮಾತ್ರ ಸಂಕೇತಗಳನ್ನು ಕಳುಹಿಸಬೇಕಾಗುತ್ತದೆ (ಉದಾ: ನಿಮ್ಮ ಫೋನ್ನಿಂದ ನಿಮ್ಮ ಹೆಡ್ಫೋನ್ಗಳಿಗೆ ಈರೀತಿ), ಆದ್ದರಿಂದ ಇದಕ್ಕೆ ಕಡಿಮೆ ಶಕ್ತಿಯ ಅಗತ್ಯವಿರುತ್ತದೆ.
ಆಧುನಿಕ ಸ್ಮಾರ್ಟ್ಫೋನ್ಗಳು ಬ್ಲೂಟೂತ್ ಲೋ ಎನರ್ಜಿ (BLE) ತಂತ್ರಜ್ಞಾನವನ್ನು ಬಳಸುತ್ತವೆ. ನೀವು ಡೇಟಾವನ್ನು ಸಕ್ರಿಯವಾಗಿ ವರ್ಗಾಯಿಸದಿದ್ದಾಗ (ಉದಾಹರಣೆಗೆ ನಿಮ್ಮ ಸ್ಮಾರ್ಟ್ವಾಚ್ ಸಂಪರ್ಕಗೊಂಡಿದ್ದರೂ ಯಾವುದೇ ಅಧಿಸೂಚನೆಗಳನ್ನು ಸ್ವೀಕರಿಸದಿದ್ದಾಗ), ಅದು ಸ್ಲೀಪ್ ಮೋಡ್ಗೆ ಹೋಗುತ್ತದೆ ಮತ್ತು ಬ್ಯಾಟರಿಯನ್ನು ಕಡಿಮೆ ಅಥವಾ ಸಂಪೂರ್ಣವಾಗಿ ಬಳಸುವುದಿಲ್ಲ.
ಮೊಬೈಲ್ ಸಂಪರ್ಕಕ್ಕಿಂತ ವೈಫೈ ಕಡಿಮೆ ಬ್ಯಾಟರಿಯನ್ನು ಬಳಸುತ್ತದೆ
ನಿಮ್ಮ ಮೊಬೈಲ್ ಸಂಪರ್ಕಕ್ಕಿಂತ ವೈಫೈ ಕಡಿಮೆ ಬ್ಯಾಟರಿ ಶಕ್ತಿಯನ್ನು ಬಳಸುತ್ತದೆ. ನೀವು ವೈಫೈ ಮತ್ತು ಮೊಬೈಲ್ ನೆಟ್ವರ್ಕ್ ಎರಡನ್ನೂ ಹೊಂದಿದ್ದರೆ ಮತ್ತು ನೀವು ವೈಫೈ ಬಳಸುತ್ತಿದ್ದರೆ, ನಿಮ್ಮ ಫೋನ್ನ ಬ್ಯಾಟರಿ ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಆದ್ದರಿಂದ, ಲಭ್ಯವಿದ್ದರೆ ವೈಫೈ ಬಳಸಲು ಶಿಫಾರಸು ಮಾಡಲಾಗಿದೆ.
ವೈ-ಫೈ ಆನ್ ಆಗಿರುವಾಗ ಬ್ಯಾಟರಿ ಬಳಕೆ ಎರಡು ಅಂಶಗಳನ್ನು ಅವಲಂಬಿಸಿರುತ್ತದೆ:
ಫೋನ್ ಕನೆಕ್ಟ್ ಆದಾಗ
ನಿಮ್ಮ ಫೋನ್ ಮನೆ ಅಥವಾ ಕಚೇರಿಯ ವೈ-ಫೈಗೆ ಸಂಪರ್ಕಗೊಂಡಿದ್ದರೆ ಮತ್ತು ನೀವು ಅದನ್ನು ಬಳಸುತ್ತಿಲ್ಲದಿದ್ದರೆ, ಬ್ಯಾಟರಿ ಬಳಕೆ ಅತ್ಯಲ್ಪವಾಗಿರುತ್ತದೆ.
ಫೋನ್ ಸಂಪರ್ಕಗೊಂಡಿಲ್ಲದಿದ್ದಾಗ
ಉದಾಹರಣೆಗೆ, ನೀವು ಪ್ರಯಾಣಿಸುತ್ತಿದ್ದರೆ ಮತ್ತು ವೈ-ಫೈ ಆನ್ ಆಗಿದ್ದರೆ, ನಿಮ್ಮ ಫೋನ್ ನಿರಂತರವಾಗಿ ಹೊಸ ನೆಟ್ವರ್ಕ್ಗಳಿಗಾಗಿ ಹುಡುಕುತ್ತಿರುತ್ತದೆ. ಈ ಪ್ರಕ್ರಿಯೆಯು ಸ್ವಲ್ಪ ಬ್ಯಾಟರಿಯನ್ನು ಬಳಸುತ್ತದೆ, ಆದರೆ ಇದು ತುಂಬಾ ಕಡಿಮೆಯಾಗಿದ್ದು, ಒಂದು ದಿನದ ಅವಧಿಯಲ್ಲಿ ನೀವು ಬಹುಶಃ ಶೇಕಡಾ 1-2 ರಷ್ಟು ವ್ಯತ್ಯಾಸವನ್ನು ಮಾತ್ರ ಗಮನಿಸಬಹುದು.
ಪ್ರಭುದೇವ ಅವರು ನೂರಾರು ಕೋಟಿ ಒಡೆಯರು. ಅವರು ಕೊರಿಯೋಗ್ರಾಫರ್, ನಟ, ನಿರ್ಮಾಪಕ, ನಿರ್ದೇಶಕ ಹೀಗೆ ಹಲವು ಜವಾಬ್ದಾರಿಗಳನ್ನು ಅವರು ನಿರ್ವಹಿಸಿದ್ದಾರೆ. ಇಷ್ಟೆಲ್ಲ ಶ್ರೀಮಂತಿಕೆ ಇದ್ದರೂ ಅವರಿಗೆ ಬರಿ ನೆಲದ ಮೇಲೆ ಮಲಗೋದು ಹೆಚ್ಚು ಖುಷಿ ಕೊಟ್ಟಿದೆ. ಈ ಸಂದರ್ಭದ ವಿಡಿಯೋನ ಅವರು ಹಂಚಿಕೊಂಡಿದ್ದಾರೆ. ತೋಟ ಒಂದರಲ್ಲಿ ಎಳನೀರು ಕುಡಿದು ಅಲ್ಲಿಯೇ ನೆಲದ ಮೇಲೆ ಮಲಗಿದ್ದಾರೆ. ಪ್ರಭುದೇವ ಅವರ ವಿಡಿಯೋಗೆ ಫ್ಯಾನ್ಸ್ ಪ್ರತಿಕ್ರಿಯಿಸಿದ್ದು, ಸರಳತೆ ಹೊಗಳಿದ್ದಾರೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ ಹೈ-ವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಟಿಮ್ ಡೇವಿಡ್ (Tim David) ಮತ್ತೊಮ್ಮೆ ಅಬ್ಬರಿಸಿದ್ದಾರೆ. ಈ ಅಬ್ಬರದೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್ಸಿಬಿ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿದ್ದಾರೆ. ಈ ಪಂದ್ಯದ ಬಳಿಕ ‘ಪ್ಲೇಯರ್ ಆಫ್ ದಿ ಮ್ಯಾಚ್’ ಗೌರವಕ್ಕೆ ಪಾತ್ರರಾದ ಅವರು, ತಮ್ಮ ಯಶಸ್ಸಿನ ಹಿಂದಿನ ಗುಟ್ಟು ಮತ್ತು ಮೈದಾನದ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ರಜತ್ ನೀಡಿದ ಭದ್ರ ಬುನಾದಿ:
ತಮ್ಮ ಸ್ಪೋಟಕ ಇನ್ನಿಂಗ್ಸ್ ಬಗ್ಗೆ ಮಾತನಾಡಿದ ಟಿಮ್ ಡೇವಿಡ್, “ನನ್ನ ಪ್ರದರ್ಶನದ ಬಗ್ಗೆ ತುಂಬಾ ಸಂತೋಷವಾಗಿದೆ. ಆರಂಭದಲ್ಲಿ ನಾಯಕ ರಜತ್ ಪಾಟಿದಾರ್ ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಅವರು ಚೆಂಡನ್ನು ಮೈದಾನದ ಮೂಲೆ ಮೂಲೆಗೆ ಅಟ್ಟುತ್ತಿದ್ದರೆ, ನಾನು ಅವರಿಗೆ ಸಾಥ್ ನೀಡುತ್ತಿದ್ದೆ. ಅವರ ಅಬ್ಬರದಿಂದಾಗಿ ತಂಡಕ್ಕೆ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಯಿತು, ಇದು ಎದುರಾಳಿ ತಂಡದ ಮೇಲೆ ಒತ್ತಡ ಹೇರಲು ನಮಗೆ ನೆರವಾಯಿತು,” ಎಂದಿದ್ದಾರೆ.
106 ಮೀಟರ್ಗಳ ದೈತ್ಯ ಸಿಕ್ಸರ್!
ಈ ಪಂದ್ಯದ ಪ್ರಮುಖ ಆಕರ್ಷಣೆಯೆಂದರೆ ಟಿಮ್ ಡೇವಿಡ್ ಸಿಡಿಸಿದ 106 ಮೀಟರ್ ಉದ್ದದ ಸಿಕ್ಸರ್. ಈ ಬಗ್ಗೆ ತಮಾಷೆಯಾಗಿ ಪ್ರತಿಕ್ರಿಯಿಸಿದ ಅವರು, “ತರಬೇತಿ ಅವಧಿಯಲ್ಲಿ ನಾವು ಚೆಂಡನ್ನು ಸ್ಟೇಡಿಯಂನ ಛಾವಣಿಯ ಮೇಲೆ ಹೊಡೆಯುವ ಸ್ಪರ್ಧೆ ಏರ್ಪಡಿಸುತ್ತೇವೆ. ಅದಕ್ಕಾಗಿ ಕೋಚ್ಗಳ ಬಳಿ ಬೈಸಿಕೊಳ್ಳುವುದೂ ಉಂಟು! ಆದರೆ ಪಂದ್ಯದ ವೇಳೆ ವೇಗದ ಬೌಲಿಂಗ್ನಲ್ಲಿ ಅಂತಹದ್ದೇ ಒಂದು ಸಿಕ್ಸರ್ ಸಿಡಿಸಿದ್ದು ತುಂಬಾ ತೃಪ್ತಿ ನೀಡಿದೆ,” ಎಂದರು.
ಡಿಕೆ ಎಂಬ ಮಾರ್ಗದರ್ಶಕ:
ಇದೇ ವೇಳೆ ತನ್ನ ಬ್ಯಾಟಿಂಗ್ ಸುಧಾರಣೆಗೆ ಹಿರಿಯ ಆಟಗಾರ ದಿನೇಶ್ ಕಾರ್ತಿಕ್ (DK) ಅವರ ಮಾರ್ಗದರ್ಶನ ಕಾರಣ ಎಂದು ಟಿಮ್ ಡೇವಿಡ್ ತಿಳಿಸಿದ್ದಾರೆ. “ಡಿ.ಕೆ ಅವರಂತಹ ಅನುಭವ ಇರುವ ಬ್ಯಾಟಿಂಗ್ ಕೋಚ್ ಜೊತೆಗಿರುವುದು ನನ್ನ ಅದೃಷ್ಟ. ಇಲ್ಲಿನ ಪರಿಸ್ಥಿತಿಗಳಿಗೆ ತಕ್ಕಂತೆ ಹೇಗೆ ಆಡಬೇಕು ಎಂದು ಅವರು ಕಲಿಸಿಕೊಟ್ಟಿದ್ದಾರೆ. ಮೂಲಭೂತ ತಂತ್ರಗಳನ್ನು ಮರೆಯದೆ, ಶಕ್ತಿಯುತವಾಗಿ ಹೇಗೆ ಆಡಬೇಕೆಂದು ನಾವು ಚರ್ಚಿಸುತ್ತೇವೆ,” ಎಂದು ಅವರು ಹೇಳಿದರು.
ತಂಡದ ಬೆಂಬಲ ಮತ್ತು ಆಕ್ರಮಣಕಾರಿ ಆಟ:
“ನನ್ನ ಹಿಂದೆ ಜಿತೇಶ್ ಮತ್ತು ಶೆಪ್ಪಿ (ರೊಮಾರಿಯೋ ಶೆಫರ್ಡ್) ಅವರಂತಹ ಹಿಟ್ಟರ್ಸ್ ಇದ್ದಾರೆ ಎಂಬ ಧೈರ್ಯ ನನಗಿದೆ. ಇದು ನಾನು ಯಾವುದೇ ಒತ್ತಡವಿಲ್ಲದೆ ಆಕ್ರಮಣಕಾರಿ ಕ್ರಿಕೆಟ್ ಆಡಲು ಸಹಾಯ ಮಾಡುತ್ತದೆ. ಐಪಿಎಲ್ನಲ್ಲಿ ಕಳೆದ ಕೆಲವು ವರ್ಷಗಳಿಂದ ಆಡುತ್ತಿರುವುದರಿಂದ ಈಗ ನನ್ನ ಮೇಲೆ ನಾನು ಹೆಚ್ಚು ಒತ್ತಡ ಹೇರಿಕೊಳ್ಳುವುದಿಲ್ಲ. ಒಳ್ಳೆಯ ದಿನಗಳನ್ನು ಆನಂದಿಸುತ್ತೇನೆ ಮತ್ತು ಕೆಟ್ಟ ದಿನಗಳಿಂದ ಕಲಿಯುತ್ತೇನೆ,” ಎಂದು ಡೇವಿಡ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಒಟ್ಟಾರೆಯಾಗಿ, ಟಿಮ್ ಡೇವಿಡ್ ಅವರ ಈ ಆಟ ಮತ್ತು ತಂಡದ ಸಂಘಟಿತ ಪ್ರದರ್ಶನವು ಅಭಿಮಾನಿಗಳಿಗೆ ರಸದೌತಣ ನೀಡಿದ್ದಂತೂ ಸುಳ್ಳಲ್ಲ. ಈ ರಸದೌತಣದೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬದ್ಧ ವೈರಿ ಸಿಎಸ್ಕೆ ತಂಡವನ್ನು ಮಕಾಡೆ ಮಲಗಿಸಿರುವುದು ವಿಶೇಷ.
ಕೊಡಗು, ಏಪ್ರಿಲ್ 06: ಕೊಡಗು ಜಿಲ್ಲೆಯ ಕಾಡಿನಲ್ಲಿ ನಾಲ್ಕು ದಿನಗಳ ಕಾಲ ನಾಪತ್ತೆಯಾಗಿದ್ದ ಕೇರಳದ ಯುವತಿ ಶರಣ್ಯ ಕೊನೆಗೂ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಕೇರಳದ ಕೊಯಿಕೋಡ್ನ ನಿವಾಸಿ ಶರಣ್ಯ ಏಪ್ರಿಲ್ 2ರಂದು ಮಡಿಕೇರಿ ತಾಲೂಕಿನ ಗಡಿಯಂಬಡಮೋಳ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದರು. ಹತ್ತು ಜನರ ತಂಡದಲ್ಲಿದ್ದ ಶರಣ್ಯ ದಾರಿ ತಪ್ಪಿ ದಟ್ಟ ಕಾಡಿನಲ್ಲಿ ಕಣ್ಮರೆಯಾಗಿದ್ದರು.
ಕಳೆದ ನಾಲ್ಕು ದಿನಗಳಿಂದ ಅರಣ್ಯ ಇಲಾಖೆ, ಸ್ಥಳೀಯರು, ಪೊಲೀಸರು ಮತ್ತು ಶ್ವಾನದಳದೊಂದಿಗೆ ತೀವ್ರ ಕಾರ್ಯಾಚರಣೆ ನಡೆಸಿದ್ದರು. ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಶರಣ್ಯ ಕೊಲ್ಲಿಯೊಂದರ ಬಳಿ ನಿತ್ರಾಣಗೊಂಡ ಸ್ಥಿತಿಯಲ್ಲಿ ಸ್ಥಳೀಯರಿಗೆ ಕಂಡುಬಂದರು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ತಂಡ ಆಕೆಯನ್ನು ಸುರಕ್ಷಿತವಾಗಿ ಕರೆತಂದಿದೆ.
ಶರಣ್ಯ ತಾನು ಪಾಳುಬಿದ್ದ ಬಂಗಲೆಯಲ್ಲಿ ನಾಲ್ಕು ದಿನಗಳನ್ನು ಕಳೆದಿದ್ದು, ತನ್ನ ಬಳಿ ಇದ್ದ ಬಿಸ್ಕೆಟ್ ಮತ್ತು ನೀರು ಕುಡಿದು ಜೀವ ಉಳಿಸಿಕೊಂಡಿದ್ದಾಗಿ ತಿಳಿಸಿದ್ದಾರೆ. ನಿತ್ರಾಣಗೊಂಡಿದ್ದ ಶರಣ್ಯ ಅವರಿಗೆ ವಿರಾಜಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ನಂತರ ಅವರನ್ನು ಸ್ವಗ್ರಾಮ ಕೊಯಿಕೋಡಿಗೆ ಕಳುಹಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರ ಪೊಣ್ಣಣ್ಣ ಅವರು ಶರಣ್ಯ ಅವರನ್ನು ಭೇಟಿಯಾಗಿ ರಕ್ಷಣಾ ತಂಡಗಳ ಶ್ರಮವನ್ನು ಶ್ಲಾಘಿಸಿದ್ದಾರೆ.
‘ಲಕ್ಷ್ಮೀ ನಿವಾಸ’ ಧಾರಾವಾಹಿಯು ಅತ್ಯುತ್ತಮ ರೀತಿಯಲ್ಲಿ ಮೂಡಿ ಬರುತ್ತಿದೆ. ಈ ಧಾರಾವಾಹಿ ಒಂದು ಕುಟುಂಬದ ಕಥೆ ಹೇಳಲಾಗುತ್ತಾ ಇದೆ. ಅದರಲ್ಲಿ ಜಯಂತ್ ಹಾಗೂ ಜಾಹ್ನವಿ ಕಥೆ ಕೂಡ ಒಂದು. ದೂರ ಆಗಿದ್ದ ಇಬ್ಬರೂ ಪರಸ್ಪರ ಮತ್ತೆ ಒಂದಾಗಿದ್ದಾರೆ. ಇನ್ಮೇಲೆ ಜಯಂತ್ಗೆ ನರಕ ತೋರಿಸಲು ಜಾಹ್ನವಿ ರೆಡಿ ಆದಂತೆ ಇದೆ. ಈ ಸಂದರ್ಭದ ಪ್ರೋಮೋ ಜೀ ಕನ್ನಡ ಹಂಚಿಕೊಂಡಿದೆ.
ಜಾಹ್ನವಿಯನ್ನು ಪ್ರೀತಿಸಿ ಮದುವೆ ಆದನು ಜಯಂತ್. ಈ ಮದುವೆ ನಡೆಯುವುದಕ್ಕೂ ಮೊದಲು ಜಯಂತ್ ಒಳ್ಳೆಯವನು ಎಂದು ಜಾಹ್ನವಿ ಅಂದುಕೊಂಡಿದ್ದಳು ಎಂದೇ ಹೇಳಬಹುದು. ಆದರೆ, ಮದುವೆ ಆದ ಬಳಿಕ ಆತನ ನಿಜವಾದ ಬಣ್ಣ ಗೊತ್ತಾಯಿತು. ಸದಾ ಜಾಹ್ನವಿಯನ್ನು ಚಿನ್ನುಮರಿ ಎಂದೇ ಕರೆಯುತ್ತಿದ್ದ ಜಯಂತ್, ಆಕೆಗೆ ಪ್ರೀತಿ ಹೆಸರಲ್ಲಿ ಟಾರ್ಚರ್ ಕೊಡಲು ಆರಂಭಿಸಿದನು.
ಈ ಟಾರ್ಚರ್ ತಡೆಯಲು ಆಕಯಿಂದ ಸಾಧ್ಯವಾಗಲೇ ಇಲ್ಲ. ಒಂದು ದಿನ ಹೊರಗೆ ಹೋಗುವ ನೆಪದಲ್ಲಿ ನೀರಿಗೆ ಹಾರಿದಳು ಜಾಹ್ನವಿ. ಈ ಮೂಲಕ ಪತಿಯಿಂದ ತಪ್ಪಿಸಿಕೊಂಡಳು. ಇಷ್ಟು ದಿನಗಳ ಕಾಲ ಜಾಹ್ನವಿ ತಲೆಮರಿಸಿಕೊಂಡೇ ಓಡಾಡುತ್ತಿದ್ದಳು. ಆದರೆ, ಈಗ ಕೊನೆಗೂ ಆಕೆ ಸಿಕ್ಕಿದ್ದಾಳೆ.
ಇಷ್ಟು ದಿನ ಜಾಹ್ನವಿಗೆ ಜಯಂತ್ ಕಾಟ ಕೊಡುತ್ತಿದ್ದನು. ಈಗ ಜಾಹ್ನವಿಯೇ ಕಾಟ ಕೊಡಲು ನಿರ್ಧರಿಸಿದ್ದಾಳೆ. ಯಾವ ಟೆಕ್ನಿಕ್ ಉಪಯೋಗಿಸಿ ಪತಿ ಟಾರ್ಚರ್ ಕೊಡುತ್ತಿದ್ದನೋ ಅದೇ ಮಾರ್ಗದಲ್ಲಿ ಜಾಹ್ನವಿ ಟಾರ್ಚರ್ ನೀಡಲು ಆರಂಭಿಸಿದ್ದಾಳೆ. ಇದು ಧಾರಾವಾಹಿ ದಿಕ್ಕನ್ನೇ ಬದಲಿಸಿದೆ. ಮುಂದೇನಾಗುತ್ತದೆ ಎನ್ನುವ ಕುತೂಹಲ ಮೂಡಿದೆ.
‘ಲಕ್ಷ್ಮೀ ನಿವಾಸ’ ಧಾರಾವಾಹಿ ಒಳ್ಳೆಯ ಟಿಆರ್ಪಿ ಪಡೆದುಕೊಂಡು ಸಾಗಿದೆ. ಈಗ ಧಾರಾವಾಹಿ ಹೊಸ ರೀತಿಯಲ್ಲಿ ಸಾಗುತ್ತಿರುವುದರಿಂದ ಧಾರಾವಾಹಿ ಮತ್ತಷ್ಟು ಟಿಆರ್ಪಿ ಪಡೆದುಕೊಳ್ಳುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಾ ಇದೆ. ಜಾಹ್ನವಿಯ ಹೊಸ ಅವತಾರವನ್ನು ಅನೇಕರು ಹೊಗಳಿದ್ದಾರೆ. ‘ಕೇವಲ ಚಿನ್ನು ಮರಿ ಅಲ್ಲ ಈಗ ಅವರು ಬೆಂಕಿಮರಿ’ ಎಂದೆಲ್ಲ ಹೊಗಳಲಾಗುತ್ತಾ ಇದೆ.
ಎಲೆಕ್ಟ್ರಿಕ್ ರೈಲಾಗಿರಬಹುದು ಅಥವಾ ಸಾಮಾನ್ಯ ರೈಲಾಗಿರಬಹುದು ರೈಲು ಬರುವ ಮುನ್ನ ಹಳಿಯಿಂದ ಅಂತರ ಕಾಯ್ದುಕೊಳ್ಳಲಾಗುತ್ತದೆ. ರೈಲಿಗಾಗಿ ಕಾಯುತ್ತಿದ್ದ ಪ್ರಯಾಣಿಕನನ್ನು ರೈಲು ಬಂದಾಕ್ಷಣ ಅಪರಿಚಿತ ವ್ಯಕ್ತಿಯೊಬ್ಬ ತಳ್ಳಿರುವ ವಿಡಿಯೋ ವೈರಲ್ ಆಗಿದೆ.ಅಮೆರಿಕದ ಸಿಯಾಟಲ್ನಲ್ಲಿರುವ ನಾರ್ತ್ಗೇಟ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಈ ಘಟನೆ ಮಾರ್ಚ್ 19 ರಂದು ನಡೆದಿರುವುದಾಗಿ ವರದಿಯಾಗಿದೆ. ಆರೋಪಿ ಅಲ್ಲಿಂದ ಓಡುವ ಮೊದಲು ಎರಡು ಬಾರಿ ಪ್ರಯಾಣಿಕನನ್ನು ತಳ್ಳಲು ಯತ್ನಿಸಿದ್ದಾನೆ. ಅದೃಷ್ಟವಶಾತ್ ಪ್ರಯಾಣಿಕ ತಪ್ಪಿಸಿಕೊಂಡಿದ್ದಾರೆ. ಪೊಲೀಸರು ಅಂತಿಮವಾಗಿ ಆರೋಪಿ 26 ವರ್ಷದ ಎಲಿಸಿಯೊ ಮೆಲೆಂಡೆಜ್ನನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ದಾವಣಗೆರೆ, ಏಪ್ರಿಲ್ 06: ಕರ್ನಾಟಕದಲ್ಲಿ ಏಪ್ರಿಲ್ 1ರಂದು ಮತದಾನ ನಡೆಯಲಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ದಾವಣಗೆರೆ ದಕ್ಷಿಣವು ಹೈ ವೋಲ್ಟೇಜ್ ಕದನಕ್ಷೇತ್ರವಾಗಿ ಮಾರ್ಪಟ್ಟಿದೆ. ಇಂದು ಜಿಲ್ಲೆಗೆ ಆಗಮಿಸಲಿರುವ ಸಿಎಂ, ಕಾಂಗ್ರೆಸ್ ಅಭ್ಯರ್ಥಿ ಪರ ಬಿರುಸಿನ ಪ್ರಚಾರ ನಡೆಸಿ ಸಭೆ ಹಾಗೂ ರೋಡ್ ಶೋ ನಡೆಸಲಿದ್ದಾರೆ.
ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡದ ಕಾರಣಕ್ಕೆ ಸಚಿವ ಜಮೀರ್ ಅಹಮದ್ ಖಾನ್ ಪ್ರಚಾರದಿಂದ ದೂರ ಉಳಿದಿದ್ದಾರೆ ಎನ್ನಲಾಗಿತ್ತು. ಆದರೆ, ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ದಾವಣಗೆರೆಗೆ ಆಗಮಿಸಿದ ಜಮೀರ್, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನಿವಾಸಕ್ಕೆ ಭೇಟಿ ನೀಡಿದರು. ಜಂಟಿ ಸುದ್ದಿಗೋಷ್ಠಿ ನಡೆಸಿ, ತಮ್ಮಿಬ್ಬರ ನಡುವೆ ಯಾವುದೇ ಮುನಿಸು ಇಲ್ಲ ಎಂದು ಸ್ಪಷ್ಟಪಡಿಸಿದರು. 2028ರಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುವ ಭರವಸೆ ನೀಡಲಾಗಿದೆ ಎಂದು ಜಮೀರ್ ತಿಳಿಸಿದರು. ಆದಾಗ್ಯೂ, ಅವರು ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಪ್ರಚಾರ ಮಾಡದೆ ವಾಪಸಾಗಿದ್ದು ಹಲವು ಚರ್ಚೆಗಳಿಗೆ ಕಾರಣವಾಗಿದೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ ಬದ್ಧ ವೈರಿಗಳ ಕದನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಭರ್ಜರಿ ಜಯ ಸಾಧಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡವು 20 ಓವರ್ಗಳಲ್ಲಿ 250 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸಿಎಸ್ಕೆ 207 ರನ್ಗಳಿಸಿ 43 ರನ್ಗಳಿಂದ ಸೋಲೊಪ್ಪಿಕೊಂಡಿತು. ಈ ಸೋಲು-ಗೆಲುವುಗಳ ನಡುವೆ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದ್ದು ವಿರಾಟ್ ಕೊಹ್ಲಿ ಅವರ ಕ್ರೀಡಾ ಸ್ಫೂರ್ತಿ!
ಆರ್ಸಿಬಿ ನೀಡಿದ್ದ 251 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಸಿಎಸ್ಕೆ ತಂಡದ ಪರ ಸರ್ಫರಾಝ್ ಖಾನ್ ಏಕಾಂಗಿ ಹೋರಾಟ ನಡೆಸಿದ್ದರು. ಕೇವಲ 24 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಆರ್ಸಿಬಿ ಬೌಲರ್ಗಳಿಗೆ ನಡುಕ ಹುಟ್ಟಿಸಿದ್ದ ಸರ್ಫರಾಝ್ ಕೃನಾಲ್ ಪಾಂಡ್ಯ ಮುನ್ನುಗ್ಗಿ ಬಂದು ಹೊಡೆಯುವ ಯತ್ನದಲ್ಲಿ ಸ್ಟಂಪ್ ಔಟ್ ಆದರು.
ಹೀಗೆ ಔಟಾಗಿ ನಿರಾಸೆಯಿಂದ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕುತ್ತಿದ್ದ ಸರ್ಫರಾಝ್ ಖಾನ್ ಅವರನ್ನು ವಿರಾಟ್ ಕೊಹ್ಲಿ ಕೂಗಿ ಕರೆದಿದ್ದಾರೆ. ಸರ್ಫರಾಝ್ ತಿರುಗಿ ನೋಡಿದಾಗ, ಕೊಹ್ಲಿ ಚಪ್ಪಾಳೆ ತಟ್ಟುತ್ತಾ ‘ಥಮ್ಸ್ ಅಪ್’ (Thumbs-up) ತೋರಿಸಿ ಅವರ ಅಮೋಘ ಬ್ಯಾಟಿಂಗ್ ಅನ್ನು ಶ್ಲಾಘಿಸಿದ್ದಾರೆ.
ಎದುರಾಳಿ ತಂಡದ ಆಟಗಾರನಾಗಿದ್ದರೂ, ಒಬ್ಬ ಯುವ ಪ್ರತಿಭೆಯ ಹೋರಾಟವನ್ನು ವಿರಾಟ್ ಕೊಹ್ಲಿ ಗೌರವಿಸಿದ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕೊಹ್ಲಿಯ ನಡೆಗೆ ಅಭಿಮಾನಿಗಳು ಬಹುಪರಾಕ್ ಅನ್ನುತ್ತಿದ್ದಾರೆ.