ಅಣ್ಣನ ಜೊತೆ ಮದುವೆ ನಿರಾಕರಿಸಿದ್ದಕ್ಕೆ ತಮ್ಮನಿಂದ ಯುವತಿ ಕೊಲೆ ಕೇಸ್​​ಗೆ ಬಿಗ್​​ ಟ್ವಿಸ್ಟ್​​: ಯುವತಿ ಪಾಲಿಗೆ ಮುಳುವಾದ ತಾಯಿಯ ಚೀಟಿ ವ್ಯವಹಾರ! – Kannada News | Bengaluru: 5 Lakh Rupees Chit Fund Dispute Linked to Amrutha’s Death

ಅಣ್ಣನ ಜೊತೆ ಮದುವೆ ನಿರಾಕರಿಸಿದ್ದಕ್ಕೆ ತಮ್ಮನಿಂದ ಯುವತಿ ಕೊಲೆ ಕೇಸ್​​ಗೆ ಬಿಗ್​​ ಟ್ವಿಸ್ಟ್Image Credit source: Tv9 Kannada

ಬೆಂಗಳೂರು, ಜುಲೈ 19: ಅಣ್ಣ ಧನುಷ್​​ ಜೊತೆ ಮದುವೆಗೆ ನಿರಾಕರಿಸಿದ ಕಾರಣಕ್ಕೆ ತಮ್ಮ ಸೂರ್ಯನಿಂದ ಚಾಕು ಇರಿತಕ್ಕೆ ಒಳಗಾಗಿ ಬೆಂಗಳೂರಿನ (Bengaluru) ಯುವತಿ ಅಮೃತಾ ಮೃತಪಟ್ಟಿದ್ದ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್​​ ಸಿಕ್ಕಿದೆ. ಮದುವೆ ಮಾತ್ರವಲ್ಲದೆ ಹಣಕಾಸಿನ ವಿಚಾರ ಕೂಡ ಕೊಲೆಗೆ ಪ್ರಮುಖ ಕಾರಣ ಎಂಬುದು ತನಿಖೆ ವೇಳೆ ಬಯಲಾಗಿದೆ. ಮೃತ ಯುವತಿಯ ತಾಯಿ ಚೀಟಿ ವ್ಯವಹಾರ ನಡೆಸುತ್ತಿದ್ದರು. ಈ ಬಗ್ಗೆ ಅಮೃತಾ ಹೇಳಿದ್ದಕ್ಕೆ ಧನುಷ್​​ ಸಹೋದರರು ಅವರ ತಾಯಿಯ ಬಳಿ ಚೀಟಿ ಹಾಕಿದ್ದರು. ಅದರಲ್ಲಿ ಧನುಷ್​​ ಸಹೋದರ ಸೂರ್ಯನೇ ಹೆಚ್ಚಿನ ಕಂತು ಕಟ್ಟಿದ್ದ. ಚೀಟಿ ಮುಗಿದಿದ್ದರೂ ಹಣವನ್ನು ಅಮೃತಾ ತಾಯಿ ಹಿಂದಿರುಗಿಸಿರಲಿಲ್ಲ ಎಂಬ ವಿಚಾರವೀಗ ಬಹಿರಂಗಗೊಂಡಿದೆ.

ದುಡ್ಡು ನೀಡಲ್ಲ ಎಂದಿದ್ದಳಂತೆ ಅಮೃತಾ!

ಚೀಟಿ ಅವಧಿ ಮುಗಿದಿದ್ದರೂ ತಮ್ಮ 5 ಲಕ್ಷ ರೂಪಾಯಿ ಹಣವನ್ನು ಅಮೃತಾ ಮತ್ತು ಆಕೆಯ ತಾಯಿ ನೀಡದಿರುವ ಬಗ್ಗೆ ಆರೋಪಿ ಸೂರ್ಯನಿಗೆ ಸಿಟ್ಟಿತ್ತು. ಹಣ ಕೊಡುವಂತೆ ಪದೇ ಪದೆ ಕೇಳಿದರೂ ನೀಡದಿರುವ ನಡುವೆ ಅಣ್ಣನ ಮದುವೆಯಾಗಲೂ ಆಕೆ ನಿರಾಕರಿಸಿದ್ದರಿಂದ ಪಿತ್ತ ಮತ್ತಷ್ಟು ನೆತ್ತಿಗೇರಿತ್ತು. ಹೀಗಾಗಿ ಅಮೃತಾ ಕೊಲೆಗೆ ಸೂರ್ಯ ನಿರ್ಧರಿಸಿದ್ದ. ಆಕೆಯ ಮೇಲೆ ದಾಳಿ ನಡೆಸಿರುವ ದಿನ ಕೂಡ ಹಣವನ್ನು ಹಿಂದಿರುಗಿಸುವಂತೆ ಕೇಳಿದ್ದ. ಆದರೆ ದುಡ್ಡು ನೀಡಲ್ಲ ಎಂದು ಅಮೃತಾ ಹೇಳಿದ್ದೇ ಆಕೆಯ ಪ್ರಾಣಕ್ಕೆ ಕಂಟಕವಾಯಿತು ಎನ್ನಲಾಗಿದೆ.

ಇದನ್ನೂ ಓದಿ: ಅಣ್ಣನ ಮದುವೆಯಾಗಲು ನಿರಾಕರಿಸಿದ್ದಕ್ಕೆ ತಮ್ಮನಿಂದ ಚಾಕು ಇರಿತ; ದುರಂತ ಅಂತ್ಯ ಕಂಡ LLB ವಿದ್ಯಾರ್ಥಿನಿ

ಜು.13ರಂದು ಬೆಂಗಳೂರಿನ HAL ರಸ್ತೆಯ ಕೋಡಿಹಳ್ಳಿಯಲ್ಲಿ ಅಮೃತಾಗೆ ಸೂರ್ಯ ಚಾಕು ಇರಿದಿದ್ದ. ಈ ವೇಳೆ ಗಂಭೀರ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅಮೃತಾ ಜುಲೈ 15ರಂದು ಪ್ರಾಣಬಿಟ್ಟಿದ್ದಳು. ಅಮೃತಾ ಮತ್ತು ಆರೋಪಿ ಸೂರ್ಯ ಸಹೋದರ ಧನುಷ್​ ಪರಸ್ಪರ ಪ್ರೀತಿಸುತ್ತಿದ್ದರು. ಇವರೆಲ್ಲ ಒಂದೇ ಏರಿಯಾದವರಾಗಿದ್ದು, ಓಂ ಶಕ್ತಿ ಮಾಲೆ ಹಾಕುವ ವೇಳೆ ಎರಡು ಕುಟುಂಬಗಳ ನಡುವೆ ಪರಿಚಯವಾಗಿತ್ತು. ಅದೇ ಪರಿಚಯದಿಂದ ಧನುಷ್ ಮತ್ತು ಅಮೃತಾ ಆತ್ಮೀಯರಾಗಿದ್ರು. ಬಳಿಕ ಪರಸ್ಪರ ಪ್ರೀತಿಸಲು ಆರಂಭಿಸಿದ್ದರು. ಧನುಷ್​​ಗೆ ಅದಾಗಲೇ​ ಮದುವೆಯಾಗಿ 1 ಮಗುವಿದ್ದು, ಪತ್ನಿಯಿಂದ ಆತ ವಿಚ್ಚೇದನ ಪಡೆದಿದ್ದ. ಆದರೆ ಈ ವಿಚಾರವನ್ನು ಅಮೃತಾಳಿಂದ ಮುಚ್ಚಿಟ್ಟಿದ್ದ ಎನ್ನಲಾಗಿದೆ. ಈ ವಿಷಯ ಗೊತ್ತಾದ ಬಳಿಕ ಧನುಷ್​​ನಿಂದ ಅಮೃತಾ ದೂರವಾಗಿದ್ದಳು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 9:58 am, Sun, 19 July 26

Source link

ವಿಶ್ವಕಪ್ ಗೆದ್ದರೆ ನಿವೃತ್ತಿ: ಯುವ ಆಟಗಾರನ ಘೋಷಣೆ! – Kannada News | Marc Cucurella’s World Cup Vow: Win and Retire

FIFA World Cup 2026: ಸ್ಪೇನ್ ತಂಡವು 2026ರ ಫಿಫಾ ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರೆ, ತಾನು ಅಂತಾರಾಷ್ಟ್ರೀಯ ಫುಟ್‌ಬಾಲ್‌ನಿಂದ ನಿವೃತ್ತಿ ಹೊಂದುವುದಾಗಿ ರಕ್ಷಣಾ ಆಟಗಾರ ಮಾರ್ಕ್ ಕುಕುರೆಲ್ಲಾ ಅತ್ಯಂತ ಅಚ್ಚರಿಯ ಘೋಷಣೆ ಮಾಡಿದ್ದಾರೆ. ಫ್ರಾನ್ಸ್‌ನ ಪ್ರಮುಖ ಪತ್ರಿಕೆ ಎಲ್ ಎಕ್ವಿಪ್ ಮತ್ತು ಮೂವಿಸ್ಟಾರ್ ಪ್ಲಸ್  ವಾಹಿನಿಗಳಿಗೆ ನೀಡಿರುವ ಜಂಟಿ ಸಂದರ್ಶನದಲ್ಲಿ ಮಾತನಾಡಿದ 27 ವರ್ಷದ ಕುಕುರೆಲ್ಲಾ, ನನ್ನ ಗುರಿ ವಿಶ್ವಕಪ್​. ಈ ವರ್ಲ್ಡ್​ಕಪ್ ಸಿಕ್ಕರೆ, ನಾನು ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ವಿದಾಯ ಹೇಳುವುದಾಗಿ ತಿಳಿಸಿದ್ದಾರೆ.

ಅರ್ಜೆಂಟೀನಾ ವಿರುದ್ಧದ ಮೆಟ್‌ಲೈಫ್ ಸ್ಟೇಡಿಯಂನ ಮಹಾ ಫೈನಲ್ ಪಂದ್ಯಕ್ಕೂ ಮುನ್ನ ಮಾರ್ಕ್ ಕುಕುರೆಲ್ಲಾ ನೀಡಿರುವ ಈ ಹೇಳಿಕೆ ಈಗ ಜಾಗತಿಕ ಫುಟ್‌ಬಾಲ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

 ಸಾಧಿಸಲು ಇನ್ನೇನಿದೆ?

ತಮ್ಮ ಈ ಅನಿರೀಕ್ಷಿತ ನಿರ್ಧಾರದ ಬಗ್ಗೆ ಮಾತನಾಡಿದ ಮಾರ್ಕ್ ಕುಕುರೆಲ್ಲಾ, “ನಾವು ವಿಶ್ವಕಪ್ ಗೆದ್ದರೆ, ಮರುದಿನವೇ ನಾನು ಕೋಚ್ ಲೂಯಿಸ್ ಡಿ ಲಾ ಫ್ಯುಯೆಂಟೆ ಅವರಿಗೆ ಕರೆ ಮಾಡಿ, ಇನ್ಮುಂದೆ ನನ್ನನ್ನು ತಂಡಕ್ಕೆ ಪರಿಗಣಿಸಬೇಡಿ ಎಂದು ಹೇಳಿ ನಿವೃತ್ತಿ ಘೋಷಿಸುತ್ತೇನೆ.

ಒಂದು ಯುರೋ ಕಪ್ (Euro 2024) ಮತ್ತು ಒಂದು ವಿಶ್ವಕಪ್ ಗೆದ್ದ ಮೇಲೆ, ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಇದಕ್ಕಿಂತ ಹೆಚ್ಚಿನದನ್ನು ಸಾಧಿಸಲು ಸಾಧ್ಯವಿಲ್ಲ. ಈಗಾಗಲೇ ನಾನು ಯುರೋ ಕಪ್ ಗೆದ್ದಿದ್ದೇನೆ. ಇದೀಗ ಸ್ಪೇನ್ ವಿಶ್ವಕಪ್ ಗೆದ್ದರೆ ನಿವೃತ್ತಿ ಘೋಷಿಸುವುದಾಗಿ ತಿಳಿಸಿದ್ದಾರೆ.

ಕೇವಲ 27 ವರ್ಷ ವಯಸ್ಸಿನ, ತಮ್ಮ ವೃತ್ತಿಜೀವನದ ಅತ್ಯುತ್ತಮ ಫಾರ್ಮ್‌ನಲ್ಲಿರುವ ಆಟಗಾರನೊಬ್ಬ ಇಷ್ಟು ಬೇಗ ನಿವೃತ್ತಿಯ ಸುಳಿವು ನೀಡಿರುವುದು ಕ್ರೀಡಾಭಿಮಾನಿಗಳಿಗೆ ಆಘಾತ ತಂದಿದೆ.

ಮಾರ್ಕ್ ಕುಕುರೆಲ್ಲಾ (PC: Getty Images)

ವಿಚಿತ್ರ ಶಪಥ:

ಕುಕುರೆಲ್ಲಾ ಕೇವಲ ನಿವೃತ್ತಿಯ ಶಪಥ ಮಾಡಿಲ್ಲ. ಇದರ ಜೊತೆಗೆ ಸ್ಪೇನ್ ತಂಡದ ಕೋಚ್ ಲೂಯಿಸ್ ಡಿ ಲಾ ಫ್ಯುಯೆಂಟೆ ಅವರಿಗೆ ವಿಶಿಷ್ಟ ಗೌರವ ಸಲ್ಲಿಸುವುದಾಗಿಯೂ ಪ್ರಕಟಿಸಿದ್ದಾರೆ.

ಸ್ಪೇನ್ ತಂಡ ಚಾಂಪಿಯನ್ ಆದರೆ, ತಮ್ಮ ಬೈಸೆಪ್ (ತೋಳಿನ) ಮೇಲೆ ಕೋಚ್ ಲೂಯಿಸ್ ಅವರ ಮುಖದ ಟ್ಯಾಟೂ ಹಾಕಿಸಿಕೊಳ್ಳುವುದಾಗಿ ಮಾರ್ಕ್ ಕುಕುರೆಲ್ಲಾ ಶಪಥ ಮಾಡಿದ್ದಾರೆ.

ಈ ಹಿಂದೆ ಯುರೋ 2024 ಗೆದ್ದರೆ ತಮ್ಮ ಪ್ರಸಿದ್ಧವಾದ ಉದ್ದನೆಯ ಕೂದಲಿಗೆ ಕೆಂಪು ಬಣ್ಣ ಬಳಿಯುವುದಾಗಿ ಕುಕುರೆಲ್ಲಾ ಹೇಳಿದ್ದರು ಮತ್ತು ಗೆದ್ದ ನಂತರ ಅದನ್ನು ಮಾಡಿ ತೋರಿಸಿದ್ದರು. ಇದೀಗ ಫೈನಲ್​ಗೂ ಮುನ್ನ ಮಾರ್ಕ್ ಕುಕುರೆಲ್ಲಾ ಹೊಸ ಶಪಥಗಳೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ವಿಶ್ವಕಪ್‌ನಲ್ಲಿ ಕುಕುರೆಲ್ಲಾ ಸಾಧನೆ:

ಈ ಬಾರಿಯ ವಿಶ್ವಕಪ್‌ನಲ್ಲಿ ಸ್ಪೇನ್ ತಂಡವು ಫೈನಲ್ ತಲುಪಲು ಕುಕುರೆಲ್ಲಾ ಅವರ ರಕ್ಷಣಾತ್ಮಕ ಆಟವೇ ಪ್ರಮುಖ ಕಾರಣವಾಗಿದೆ. ಸ್ಪೇನ್ ಆಡಿದ ಎಲ್ಲಾ 7 ಪಂದ್ಯಗಳಲ್ಲೂ ಅವರು ಆರಂಭಿಕ ಆಟಗಾರನಾಗಿ ಕಣಕ್ಕಿಳಿದು ಪ್ರತಿ ನಿಮಿಷವೂ ಮೈದಾನದಲ್ಲಿ ಶ್ರಮಿಸಿದ್ದಾರೆ.

ಮಾರ್ಕ್ ಕುಕುರೆಲ್ಲಾ ಅದ್ಭುತ ಡಿಫೆನ್ಸ್‌ನಿಂದಾಗಿ ಸ್ಪೇನ್ ತಂಡವು ಇಡೀ ಟೂರ್ನಿಯಲ್ಲಿ ಎದುರಾಳಿಗಳಿಗೆ ಕೇವಲ 1 ಗೋಲು ಬಿಟ್ಟುಕೊಟ್ಟು, 6 ಪಂದ್ಯಗಳಲ್ಲಿ ಕ್ಲೀನ್ ಶೀಟ್ ಸಾಧಿಸಿದೆ. ಇನ್ನು 2 ಪ್ರಮುಖ ಗೋಲುಗಳಿಗೆ ಅಸಿಸ್ಟ್  ಮಾಡುವ ಮೂಲಕ ಆಕ್ರಮಣಕಾರಿ ಆಟಕ್ಕೂ ಸಾಥ್ ನೀಡಿದ್ದಾರೆ.

ಹೀಗೆ ಸ್ಪೇನ್ ತಂಡವು ಫೈನಲ್​ಗೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕುಕುರೆಲ್ಲಾ ಇದೀಗ ಅಂತಿಮ ಪಂದ್ಯಕ್ಕೂ ಮುನ್ನ ಶಪಥ ಹಾಗೂ ನಿವೃತ್ತಿಯ ನಿರ್ಧಾರವನ್ನು ಪ್ರಕಟಿಸಿ ಅಚ್ಚರಿ ಮೂಡಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಮಾರ್ಕ್ ಕುಕುರೆಲ್ಲಾ ಅವರ ಈ ಅಚ್ಚರಿಯ ಶಪಥವು ಕೇವಲ ಒಂದು ಹೇಳಿಕೆಯಲ್ಲ. ಅದು ದೇಶಕ್ಕಾಗಿ ವಿಶ್ವಕಪ್ ಗೆಲ್ಲಲೇಬೇಕೆಂಬ ಅವರ ಅದಮ್ಯ ಹಂಬಲದ ಸಂಕೇತವಾಗಿದೆ. ಕೇವಲ 27ರ ಹರೆಯದಲ್ಲೇ, ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ವಿದಾಯ ಹೇಳಲು ಸಿದ್ಧರಾಗಿರುವುದು ಅವರ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ತೋರಿಸುತ್ತದೆ.

ಇದನ್ನೂ ಓದಿ: ಮೆಸ್ಸಿಯ ಸಾರ್ವಕಾಲಿಕ ವಿಶ್ವ ದಾಖಲೆ ಮುರಿದ ಎಂಬಾಪೆ!

ಒಂದು ವೇಳೆ ಸ್ಪೇನ್ ಈ ವಿಶ್ವಕಪ್ ಮುಡಿಗೇರಿಸಿಕೊಂಡರೆ, ಕುಕುರೆಲ್ಲಾ ತಮ್ಮ ತೋಳಿನ ಮೇಲೆ ಕೋಚ್ ಮುಖದ ಹಚ್ಚೆಯೊಂದಿಗೆ, ಅತ್ಯಂತ ಅಪರೂಪದ ಹಾಗೂ ಯಶಸ್ವಿ ಆಟಗಾರನಾಗಿ ಅಂತರರಾಷ್ಟ್ರೀಯ ಫುಟ್‌ಬಾಲ್ ಇತಿಹಾಸದ ಪುಟಗಳನ್ನು ಸೇರಲಿದ್ದಾರೆ. ಕುಕುರೆಲ್ಲಾ ಅವರ ಈ ಮಹತ್ವಾಕಾಂಕ್ಷೆಯ ಕನಸು ನನಸಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

Source link

‘ರಾಮಾಯಣ ಚಿತ್ರದಲ್ಲಿ ಸೀತೆ ಪಾತ್ರ ಮಾಡಲು ನಾನು ಶುದ್ಧವಾಗಿದ್ದೆ’: ಸಾಯಿ ಪಲ್ಲವಿ – Kannada News | Ramayana Movie Pratham Sankalp Event Delhi Sai Pallavi Ranbir Kapoor Nitesh Tiwari speech

ದೇಶಾದ್ಯಂತ ಭಾರಿ ಕುತೂಹಲ ಮೂಡಿಸಿರುವ ನಿತೇಶ್ ತಿವಾರಿ ನಿರ್ದೇಶನದ ಬಹುಕೋಟಿ ವೆಚ್ಚದ ‘ರಾಮಾಯಣ’ (Ramayana: Part 1) ಚಿತ್ರದ ಪ್ರಚಾರ ಕಾರ್ಯಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ಶನಿವಾರ (ಜುಲೈ 18) ದೆಹಲಿಯಲ್ಲಿ ನಡೆದ ‘ಪ್ರಥಮ ಸಂಕಲ್ಪ’ (Pratham Sankalp) ಕಾರ್ಯಕ್ರಮದಲ್ಲಿ ಚಿತ್ರದ ತಾರಾಗಣ ಹಾಗೂ ತಾಂತ್ರಿಕ ತಂಡದೊಂದಿಗೆ ಸಿನಿಮಾ ಮತ್ತು ಆಧ್ಯಾತ್ಮಿಕ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು. ಈ ವೇಳೆ ನಟಿ ಸಾಯಿ ಪಲ್ಲವಿ (Sai Pallavi) ಅವರು ತಾವು ಮಾಡಿರುವ ಸೀತಾ ಮಾತೆಯ ಪಾತ್ರದ ಬಗ್ಗೆ ಮಾತನಾಡಿದರು.

ಚಿತ್ರದಲ್ಲಿ ಸೀತೆಯ ಪಾತ್ರ ನಿರ್ವಹಿಸಿದ ಅನುಭವದ ಬಗ್ಗೆ ಮಾತನಾಡಿದ ಸಾಯಿ ಪಲ್ಲವಿ, ‘ನಟರಿಗೆ ಇಂತಹ ಪಾತ್ರಗಳು ಸಿಗುವುದು ಸುಲಭವಲ್ಲ. ಯಾಕೆಂದರೆ ದೇವತೆಯ ಪಾತ್ರವನ್ನು ಮಾಡುವುದು ಅಷ್ಟು ಸುಲಭದ ಮಾತಲ್ಲ. ಇದರ ಹಿಂದೆ ಇಡೀ ತಂಡದ ಶ್ರಮ ಮತ್ತು ಆತ್ಮ ಅಡಗಿರುತ್ತದೆ. ನಾನು ಸೀತಾ ಮಾತೆಯ ಪಾತ್ರವನ್ನು ನಾನಾಗಿಯೇ ಆರಿಸಿಕೊಂಡೆ ಎಂದು ನಾನು ಭಾವಿಸುವುದಿಲ್ಲ. ಈ ಪಾತ್ರವನ್ನು ಮಾಡಲು ನನಗೆ ಆಶೀರ್ವಾದ ಸಿಕ್ಕಿದೆ ಅಷ್ಟೇ. ಇದು ನಾವು ಹುಡುಕಿಕೊಂಡು ಹೋಗುವ ಅಥವಾ ಹೀಗೆಯೇ ನಟಿಸಬೇಕು ಎಂದು ಮೊದಲೇ ಬರೆದಿಡುವ ಪಾತ್ರವಲ್ಲ’ ಎಂದಿದ್ದಾರೆ.

‘ಆಲೋಚನೆಗಳಲ್ಲಿ ಅತ್ಯಂತ ಶುದ್ಧ’

‘ನಾನು ಶೂಟಿಂಗ್ ಸಮಯದಲ್ಲಿ ಧ್ಯಾನದಲ್ಲಿ ಕುಳಿತು, ‘ಸೀತಾ ಮಾತೆ, ನೀನೇ ನನ್ನ ಮೂಲಕ ನಟಿಸು. ನನ್ನಿಂದ ಏನನ್ನು ನಿರೀಕ್ಷಿಸುತ್ತೀಯೋ ಅದು ಈ ಚಿತ್ರಕ್ಕೆ ಸಿಗಲಿ’ ಎಂದು ಪ್ರಾರ್ಥಿಸುತ್ತಿದ್ದೆ. ಈ ಪಾತ್ರಕ್ಕಾಗಿ ನನ್ನ ಆಲೋಚನೆಗಳಲ್ಲಿ, ನನ್ನನ್ನು ನಾನು ಅತ್ಯಂತ ಶುದ್ಧವಾಗಿಟ್ಟುಕೊಳ್ಳಲು ಪ್ರಯತ್ನಿಸಿದ್ದೇನೆ. ನನ್ನ ಅತ್ಯುತ್ತಮ ಆವೃತ್ತಿಯನ್ನು ಸೀತೆಯಾಗಿ ಪರದೆಯ ಮೇಲೆ ತರಲು ಶ್ರಮಿಸಿದ್ದೇನೆ’ ಎಂದು ಭಾವುಕರಾಗಿ ನುಡಿದರು.

‘ರಣಬೀರ್ ಕಣ್ಣಲ್ಲಿ ರಾಮ, ಸಾಯಿ ಕಣ್ಣಲ್ಲಿ ಸೀತೆ ಕಂಡೆ’

ನಿರ್ದೇಶಕ ನಿತೇಶ್ ತಿವಾರಿ ಅವರು ಮುಖ್ಯ ಭೂಮಿಕೆಯ ನಟರನ್ನು ಶ್ಲಾಘಿಸುತ್ತಾ, ‘ನಟರ ಕಣ್ಣುಗಳು ಯಾವಾಗಲೂ ಸತ್ಯವನ್ನು ಹೇಳುತ್ತವೆ. ನಾನು ರಣಬೀರ್ ಕಪೂರ್ ಕಣ್ಣುಗಳಲ್ಲಿ ಶ್ರೀರಾಮನನ್ನು ಮತ್ತು ಸಾಯಿ ಪಲ್ಲವಿ ಕಣ್ಣುಗಳಲ್ಲಿ ಸೀತಾ ಮಾತೆಯನ್ನು ಕಂಡೆ. ನಾನು ಪಾತ್ರಕ್ಕಾಗಿ ಹುಡುಕುತ್ತಿದ್ದ ಪ್ರಾಮಾಣಿಕತೆ ಈ ಇಬ್ಬರಲ್ಲಿ ನನಗೆ ಸಿಕ್ಕಿತು. ಸಿನಿಮಾದಲ್ಲಿ ನನಗೆ ರಣಬೀರ್ ಮತ್ತು ಸಾಯಿ ಪಲ್ಲವಿ ಕಾಣಿಸುವುದಿಲ್ಲ, ಕೇವಲ ರಾಮ ಮತ್ತು ಸೀತೆ ಮಾತ್ರ ಕಾಣಿಸುತ್ತಾರೆ’ ಎಂದು ಪ್ರಶಂಸಿಸಿದರು.

ಇದನ್ನೂ ಓದಿ: ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಧ್ವನಿ ಇಲ್ಲ? ‘ಏಕ್ ದಿನ್’ ಸೋಲಿನ ಬಳಿಕ ನಟಿಗೆ ಮತ್ತೊಂದು ಹಿನ್ನಡೆ

ದೀಪಾವಳಿಗೆ ‘ರಾಮಾಯಣ’ ದರ್ಶನ:

ನಮಿತ್ ಮಲ್ಹೋತ್ರಾ ನಿರ್ಮಾಣ ಮಾಡುತ್ತಿರುವ ‘ರಾಮಾಯಣ’ ಚಿತ್ರವು ಎರಡು ಭಾಗಗಳಲ್ಲಿ ಮೂಡಿಬರಲಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿದ್ದರೆ, ರಾಕಿಂಗ್ ಸ್ಟಾರ್ ಯಶ್ ಅವರು ರಾವಣನ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಇವರೊಂದಿಗೆ ಲಕ್ಷ್ಮಣನಾಗಿ ರವಿ ದುಬೆ, ಹನುಮಂತನಾಗಿ ಸನ್ನಿ ಡಿಯೋಲ್ ಅಭಿನಯಿಸಿದ್ದಾರೆ. ಕಾಜಲ್ ಅಗರ್ವಾಲ್, ವಿವೇಕ್ ಒಬೆರಾಯ್ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರದ ಮೊದಲ ಭಾಗವು 2026ರ ದೀಪಾವಳಿ ಹಬ್ಬಕ್ಕೆ ತೆರೆಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Sunday Worship: ಭಾನುವಾರ ಸೂರ್ಯ ದೇವರಿಗೆ ಅರ್ಘ್ಯ ಅರ್ಪಿಸುವಾಗ ಈ ತಪ್ಪು ಮಾಡಲೇಬೇಡಿ; ಇಲ್ಲಿದೆ ಸರಿಯಾದ ನಿಯಮ! – Kannada News | How to Offer Water to Surya Dev on Sunday: Correct Arghya Ritual for Blessings

ಸನಾತನ ಧರ್ಮದಲ್ಲಿ ಭಾನುವಾರವನ್ನು ಭಗವಾನ್ ಸೂರ್ಯನಿಗೆ ಮೀಸಲಾಗಿರುವ ಅತ್ಯಂತ ಪವಿತ್ರವಾದ ದಿನವೆಂದು ಪರಿಗಣಿಸಲಾಗುತ್ತದೆ. ಜಗತ್ತಿಗೆ ಬೆಳಕು ನೀಡುವ ಸೂರ್ಯನನ್ನು ಆರೋಗ್ಯ, ಶಕ್ತಿ, ಕೀರ್ತಿ ಮತ್ತು ಸಂಪತ್ತಿನ ಅಧಿಪತಿ ಎಂದು ಶಾಸ್ತ್ರಗಳು ವಿವರಿಸುತ್ತವೆ. ಅದಕ್ಕಾಗಿಯೇ ಭಾನುವಾರದಂದು ಸೂರ್ಯ ದೇವನನ್ನು ವಿಶೇಷವಾಗಿ ಆರಾಧಿಸುವುದು, ಉಪವಾಸ ವ್ರತ ಮಾಡುವುದು ಮತ್ತು ಸೂರ್ಯ ಮಂತ್ರಗಳನ್ನು ಪಠಿಸುವುದರಿಂದ ಅಪಾರ ಫಲಿತಾಂಶಗಳು ಸಿಗುತ್ತವೆ ಎಂಬ ನಂಬಿಕೆಯಿದೆ.

ವಿಶೇಷವಾಗಿ ಈ ದಿನ ‘ಆದಿತ್ಯ ಹೃದಯ ಸ್ತೋತ್ರ’ ಪಠಿಸುವುದರಿಂದ ಧೈರ್ಯ, ಆತ್ಮವಿಶ್ವಾಸ ಮತ್ತು ಮಾಡುವ ಕೆಲಸಗಳಲ್ಲಿ ಅಭೂತಪೂರ್ವ ಯಶಸ್ಸು ಸಿಗುತ್ತದೆ ಎಂದು ಪುರಾಣಗಳು ಹೇಳುತ್ತವೆ. ಶಾಸ್ತ್ರಗಳ ಪ್ರಕಾರ, ಸೂರ್ಯ ದೇವರಿಗೆ ನೀರನ್ನು (ಅರ್ಘ್ಯ) ಅರ್ಪಿಸಲು ಕೆಲವು ವಿಶೇಷ ವಿಧಿವಿಧಾನಗಳಿವೆ. ಈ ಪೂಜೆಯನ್ನು ಸರಿಯಾದ ನಿಯಮಗಳೊಂದಿಗೆ ಮಾಡಿದರೆ ಧನಾತ್ಮಕ ಫಲಿತಾಂಶಗಳು ಸಿಗುತ್ತವೆ. ಆದರೆ ಗೊತ್ತಿಲ್ಲದೆ ಮಾಡುವ ಸಣ್ಣ ತಪ್ಪುಗಳು ಪೂಜೆಯ ಫಲವನ್ನು ಕಡಿಮೆ ಮಾಡಬಹುದು. ಹಾಗಾದರೆ ಸೂರ್ಯ ದೇವರಿಗೆ ನೀರನ್ನು ಅರ್ಪಿಸುವ ಸರಿಯಾದ ಮಾರ್ಗ ಯಾವುದು? ಯಾವ ತಪ್ಪುಗಳನ್ನು ಮಾಡಬಾರದು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಸೂರ್ಯ ದೇವರಿಗೆ ಅರ್ಘ್ಯ ಅರ್ಪಿಸುವ ಸರಿಯಾದ ವಿಧಾನ:

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯ ದೇವರಿಗೆ ನೀರನ್ನು ಅರ್ಪಿಸಲು ತಾಮ್ರದ ಪಾತ್ರೆಯನ್ನು ಬಳಸುವುದು ಅತ್ಯಂತ ಶುಭ ಮತ್ತು ಶ್ರೇಷ್ಠ. ತಾಮ್ರದ ಪಾತ್ರೆಯಲ್ಲಿ ಶುದ್ಧ ನೀರನ್ನು ತೆಗೆದುಕೊಂಡು, ಅದಕ್ಕೆ ಕೆಂಪು ಚಂದನ, ಕೆಂಪು ಹೂವು, ಸ್ವಲ್ಪ ಕುಂಕುಮ ಮತ್ತು ಅಕ್ಕಿ (ಅಕ್ಷತೆ) ಯನ್ನು ಸೇರಿಸಬೇಕು. ಪೂಜೆ ಮಾಡುವಾಗ ಸೂರ್ಯ ಉದಯಿಸುವ ಪೂರ್ವ ದಿಕ್ಕಿಗೆ ಮುಖ ಮಾಡಿ ನಿಲ್ಲಬೇಕು. ನಂತರ ಪಾತ್ರೆಯನ್ನು ಎರಡೂ ಕೈಗಳಿಂದ ಹಿಡಿದು, ನಿಮ್ಮ ಹಣೆಯ ಎತ್ತರಕ್ಕೆ ತಂದು ನಿಧಾನವಾಗಿ ನೀರನ್ನು ಕೆಳಗೆ ಬಿಡಬೇಕು.

ಇದನ್ನೂ ಓದಿ: ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಹಳದಿ ಮತ್ತು ಕೆಂಪು ಬಣ್ಣದ ಉಡುಪುಗಳನ್ನೇ ಆಯ್ಕೆ ಮಾಡುವುದೇಕೆ ಗೊತ್ತಾ? ಇಲ್ಲಿದೆ ಆಧ್ಯಾತ್ಮಿಕ ಮಹತ್ವ!

ಮಂತ್ರ ಪಠಣೆ:

ಪಾತ್ರೆಯಿಂದ ಬೀಳುವ ನೀರಿನ ಧಾರೆಗಳ ಮೂಲಕ ಸೂರ್ಯ ದೇವನನ್ನು ನೋಡುತ್ತಾ ಭಕ್ತಿಯಿಂದ “ಓಂ ಘೃಣಿ ಸೂರ್ಯಾಯ ನಮಃ” ಅಥವಾ “ಓಂ ಸೂರ್ಯಾಯ ನಮಃ” ಎಂಬ ಮಂತ್ರವನ್ನು ಜಪಿಸಬೇಕು. ಅರ್ಘ್ಯ ನೀಡಿದ ನಂತರ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿದರೆ ಹೆಚ್ಚಿನ ಪುಣ್ಯ ಲಭಿಸುತ್ತದೆ.

ಸೂರ್ಯ ಪೂಜೆಯಲ್ಲಿ ಈ ತಪ್ಪುಗಳನ್ನು ಮರೆತೂ ಮಾಡಬೇಡಿ:

ಶಾಸ್ತ್ರಗಳ ಪ್ರಕಾರ ಸೂರ್ಯ ದೇವರಿಗೆ ಅರ್ಘ್ಯ ನೀಡುವಾಗ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

  • ಸೂರ್ಯ ದೇವರಿಗೆ ಅರ್ಪಿಸುವ ಪವಿತ್ರ ನೀರು ಯಾವುದೇ ಕಾರಣಕ್ಕೂ ನಿಮ್ಮ ಪಾದಗಳ ಮೇಲೆ ಅಥವಾ ನೆಲದ ಮೇಲೆ ಎಲ್ಲೆಂದರಲ್ಲಿ ಬೀಳದಂತೆ ಎಚ್ಚರ ವಹಿಸಬೇಕು. (ಇದಕ್ಕಾಗಿ ಕೆಳಗೆ ಒಂದು ಕುಂಡ ಅಥವಾ ಪ್ರತ್ಯೇಕ ಪಾತ್ರೆಯನ್ನು ಇಟ್ಟುಕೊಳ್ಳಬಹುದು).
  • ಪೂಜೆಗೆ ಉಕ್ಕು (ಸ್ಟೀಲ್), ಪ್ಲಾಸ್ಟಿಕ್ ಅಥವಾ ಗಾಜಿನ ಪಾತ್ರೆಗಳನ್ನು ಮರೆತೂ ಬಳಸಬಾರದು. ಕೇವಲ ತಾಮ್ರದ ಪಾತ್ರೆಯನ್ನು ಮಾತ್ರ ಬಳಸುವುದು ಶಾಸ್ತ್ರಸಮ್ಮತ.
  • ಮಧ್ಯಾಹ್ನ ಅಥವಾ ಸಂಜೆಯ ಸಮಯದಲ್ಲಿ ಸೂರ್ಯನಿಗೆ ನೀರನ್ನು ಅರ್ಪಿಸಬಾರದು. ಸೂರ್ಯೋದಯದ ತಕ್ಷಣ, ಅಂದರೆ ಮುಂಜಾನೆಯ ಅವಧಿಯಲ್ಲಿ ಅರ್ಘ್ಯ ನೀಡುವುದು ಅತ್ಯಂತ ಸೂಕ್ತ.
  • ಸ್ನಾನ ಮಾಡದೆ ಅಥವಾ ಕೊಳಕು ಬಟ್ಟೆಗಳನ್ನು ಧರಿಸಿ ಸೂರ್ಯನನ್ನು ಪೂಜಿಸಬಾರದು. ಮೊದಲು ಸ್ನಾನ ಮಾಡಿ, ಶುದ್ಧವಾದ ಉಡುಪನ್ನು ಧರಿಸಿ ಪೂಜೆಗೆ ಸಿದ್ಧರಾಗಬೇಕು.
  • ನೀರನ್ನು ಅರ್ಪಿಸುವಾಗ ಕಡ್ಡಾಯವಾಗಿ ಪೂರ್ವ ದಿಕ್ಕಿಗೇ ಮುಖ ಮಾಡಿರಬೇಕು.
  • ಯಾವುದೇ ಪೂಜೆಯನ್ನಾಗಲಿ ಆತುರದಿಂದ ಮಾಡದೆ, ಶಾಂತ ಮನಸ್ಸು, ಪರಿಶುದ್ಧ ಭಕ್ತಿ ಮತ್ತು ಏಕಾಗ್ರತೆಯಿಂದ ಮಾಡುವುದರಿಂದ ಸೂರ್ಯ ನಾರಾಯಣನ ಕೃಪೆ ಸದಾ ನಿಮ್ಮ ಮೇಲಿರುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಾಯಿ ಹೇಳಿಕೊಟ್ಟ ಬದುಕಿನ ಪಾಠ ಮರೆಯಲಾಗಲ್ಲ: ಅಮ್ಮನ ಅಗಲುವಿಕೆ ನೆನೆದು ಹೆಚ್​.ಡಿ. ಕುಮಾರಸ್ವಾಮಿ ಭಾವುಕ – Kannada News | Union Minister HD Kumaraswamy Emotional Over Mother Chennamma’s Demise, Recalls Her Life Lessons

ಬೆಂಗಳೂರು, ಜುಲೈ 19: ತಾಯಿ ಚೆನ್ನಮ್ಮ ಎಲ್ಲ ಮಕ್ಕಳನ್ನು ಸಮಾನವಾಗಿ ಬೆಳೆಸಿದ್ದಾರೆಯಾದರೂ ನಾನೆಂದರೆ ಅವರಿಗೆ ತುಸು ಜಾಸ್ತಿ ಪ್ರೀತಿ ಇತ್ತು. ಅದೆಷ್ಟೋ ಬಾರಿ ಹೇಗೆ ಬದುಕಬೇಕೆಂದು ಅವರು ನನಗೆ ಹಿತವಚನ ನೀಡಿದ್ದ ದಿನಗಳನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳುತ್ತಲೇ ಕೇಂದ್ರ ಸಚಿವ ಹೆಚ್​.ಡಿ. ಕುಮಾರಸ್ವಾಮಿ ಭಾವುಕರಾದ ಪ್ರಸಂಗ ನಡೆದಿದೆ. ಹಲವು ಪಕ್ಷಗಳಲ್ಲಿ ಇರುವ ನಾಯಕರೆಲ್ಲ ನಮ್ಮಮನ ಹಾರೈಕೆಯಲ್ಲಿ ಬೆಳೆದವರೆ. ಹೀಗಾಗಿ ಅವರ ಬಗ್ಗೆ ಗೌರವ ಇಟ್ಟುಕೊಂಡು ಎಲ್ಲರೀ ಬಂದು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಇವತ್ತಿನ ಸಮಾಜಕ್ಕೆ ನಮ್ಮ ತಂದೆ ತಾಯಿಯ ದಾಂಪತ್ಯ ಮಾದರಿಯಾಗಿದೆ. ಗಂಡ ಪ್ರಧಾನಿ, ಮುಖ್ಯಮಂತ್ರಿಯಾದಗಲೂ ಅವರು ಮನೆಯಿಂದ ಹೊರ ಬಂದವರಲ್ಲ. ಅವರಾಯಿತು ಅವರ ದೇವರ ಮನೆಯಾಯಿತು ಎಂದು ಇದ್ದಂತವರು ಎಂದು ಕುಮಾರಸ್ವಾಮಿ ಈ ವೇಳೆ ನೆನಪಿಸಿಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಎಲ್ಲಾ ವದಂತಿಗಳಿಗೆ ಬ್ರೇಕ್: ಲಾರ್ಡ್ಸ್​ನಲ್ಲಿ ರೋಹಿತ್-ಗಂಭೀರ್ ನಗುವೋ ನಗು! – Kannada News | Rohit Sharma Gautam Gambhir Lord’s Video Ends Rift Rumours

ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್‌ನಲ್ಲಿ ಎಲ್ಲವೂ ಸರಿಯಿಲ್ಲ, ಹಿರಿಯ ಆಟಗಾರರು ಮತ್ತು ಕೋಚ್ ನಡುವೆ ಕೋಲ್ಡ್ ವಾರ್ ನಡೀತಿದೆ ಎನ್ನುತ್ತಿದ್ದ ವದಂತಿಗಳಿಗೆ ಲಾರ್ಡ್ಸ್ ಮೈದಾನದ ಬಾಲ್ಕನಿಯಿಂದ ಬ್ರೇಕ್ ಬಿದ್ದಿದೆ. ಅನುಭವಿ ದಾಂಡಿಗ ರೋಹಿತ್ ಶರ್ಮಾ ಹಾಗೂ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಮುಕ್ತವಾಗಿ ನಗುತ್ತಾ, ಹರಟೆ ಹೊಡೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಇದು ಇಬ್ಬರ ನಡುವಿನ ಭಿನ್ನಾಭಿಪ್ರಾಯದ ಸುದ್ದಿಗೆ ಸಂಪೂರ್ಣ ತೆರೆ ಎಳೆದಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರನೇ ಏಕದಿನ ಪಂದ್ಯದಕ್ಕೂ ಮುನ್ನ ರೋಹಿತ್ ಶರ್ಮಾ, ಗೌತಮ್ ಗಂಭೀರ್ ಮತ್ತು ಬ್ಯಾಟಿಂಗ್ ತರಬೇತುದಾರ ಸಿತಾಂಶು ಕೋಟಕ್ ಲಾರ್ಡ್ಸ್ ಮೈದಾನದ ಬಾಲ್ಕನಿಯಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ನಗುತ್ತಾ ಹರಟೆ ಹೊಡೆಯುತ್ತಿರುವ ದೃಶ್ಯವನ್ನು ಸ್ಟಾರ್ ಸ್ಪೋರ್ಟ್ಸ್ ಸೆರೆ ಹಿಡಿದಿದೆ. ಇದರೊಂದಿಗೆ ಗೌತಮ್ ಗಂಭೀರ್ ಹಾಗೂ ರೋಹಿತ್ ಶರ್ಮಾ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿಗಳಿಗೆ ಬ್ರೇಕ್ ಬಿದ್ದಂತಾಗಿದೆ.

ಗಂಭೀರ್ ಬೆಂಬಲ:

ರೋಹಿತ್ ಶರ್ಮಾ ಇತ್ತೀಚಿನ ಪಂದ್ಯಗಳಲ್ಲಿ ದೊಡ್ಡ ಸ್ಕೋರ್ ಗಳಿಸಲು ಪರದಾಡುತ್ತಿದ್ದರೂ, ಗೌತಮ್ ಗಂಭೀರ್ ಅವರು ಯಾವುದೇ ಒತ್ತಡವಿಲ್ಲದೆ ಮುಕ್ತವಾಗಿ ಆಡುವಂತೆ ನಾಯಕನಿಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇನ್ನು ಇಬ್ಬರ ನಡುವಿನ ಸಂಬಂಧ ಹಳಸಿದೆ ಎಂಬ ಮಾಧ್ಯಮಗಳ ಊಹಾಪೋಹಗಳು ಕೇವಲ ವದಂತಿ ಎಂಬುದನ್ನು ಈ ದೃಶ್ಯ ಸಾಬೀತುಪಡಿಸಿದೆ.

ನಿವೃತ್ತಿ ಸುದ್ದಿಗೆ ಬಿಸಿಸಿಐ ಸ್ಪಷ್ಟನೆ:

ಲಾರ್ಡ್ಸ್​ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಪಂದ್ಯವೇ 39 ವರ್ಷದ ರೋಹಿತ್ ಶರ್ಮಾ ಅವರ ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಗಲಿದೆ ಮತ್ತು 2027ರ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಯುವ ಆಟಗಾರರಿಗೆ ಮಣೆ ಹಾಕಲು ಆಯ್ಕೆಗಾರರು ನಿರ್ಧರಿಸಿದ್ದಾರೆ ಎಂಬ ಸುದ್ದಿ ಹರಡಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ರೋಹಿತ್ ಶರ್ಮಾ ನಿವೃತ್ತಿ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಅವರು ತಂಡದ ಅವಿಭಾಜ್ಯ ಅಂಗವಾಗಿದ್ದು, ಏಕದಿನ ಮಾದರಿಯಲ್ಲಿ ಮುಂದುವರಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಮೆಸ್ಸಿಯ ಸಾರ್ವಕಾಲಿಕ ವಿಶ್ವ ದಾಖಲೆ ಮುರಿದ ಎಂಬಾಪೆ!

ಒಟ್ಟಾರೆ, ಲಾರ್ಡ್ಸ್ ಬಾಲ್ಕನಿಯ ಈ ಒಂದೇ ಒಂದು ದೃಶ್ಯ ಟೀಮ್ ಇಂಡಿಯಾ ಅಭಿಮಾನಿಗಳಲ್ಲಿ ನೆಮ್ಮದಿ ತಂದಿದೆ. ನಾಯಕ ಮತ್ತು ಕೋಚ್ ನಡುವಿನ ಬಾಂಧವ್ಯ ಗಟ್ಟಿಯಾಗಿದೆ ಎಂಬುದು ಸಾಬೀತಾಗಿದ್ದು, ಇವರಿಬ್ಬರ ಜುಗಲ್‌ಬಂದಿಯಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧದ ನಿರ್ಣಾಯಕ ಪಂದ್ಯವನ್ನು ಗೆದ್ದು ಸರಣಿ ಕೈವಶ ಮಾಡಿಕೊಳ್ಳಲಿ ಎಂಬುದೇ ಸದ್ಯದ ನಿರೀಕ್ಷೆ.

Source link

ಲೀಕ್ ಬಳಿಕ ‘ಜನ ನಾಯಗನ್’ ಚಿತ್ರದಲ್ಲಿ ಭಾರಿ ಬದಲಾವಣೆ: ಪ್ರೇಕ್ಷಕರಿಗೆ ಸಿಗಲಿದೆ ಹೊಸ ಅನುಭವ – Kannada News | Vijay Jana Nayagan movie changes after leak producer KVN Productions reaction

ಕಾಲಿವುಡ್ ಸ್ಟಾರ್ ನಟ ದಳಪತಿ ವಿಜಯ್ (CM Vijay) ನಟನೆಯ ಕೊನೆಯ ಹಾಗೂ ಬಹುನಿರೀಕ್ಷಿತ ಚಿತ್ರ ‘ಜನ ನಾಯಗನ್’ (Jana Nayagan) ಜುಲೈ 23ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಆದರೆ, ಸೆನ್ಸಾರ್ ಮಂಡಳಿ (CBFC) ಜೊತೆಗಿನ ಸುದೀರ್ಘ ಹೋರಾಟ ಮತ್ತು ಕಳೆದ ಏಪ್ರಿಲ್‌ನಲ್ಲಿ ಎಚ್‌ಡಿ ಪ್ರಿಂಟ್ ಆನ್‌ಲೈನ್‌ನಲ್ಲಿ ಲೀಕ್ ಆದ ಬೆನ್ನಲ್ಲೇ ಚಿತ್ರದಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಚಿತ್ರದ ನಿರ್ಮಾಪಕರು ಬಹಿರಂಗಪಡಿಸಿದ್ದಾರೆ.

ಕನ್ನಡಿಗ ಕೆ. ವೆಂಕಟ್ ನಾರಾಯಣ್ ಅವರು ‘ಕೆವಿಎನ್ ಪ್ರೊಡಕ್ಷನ್ಸ್’ ಬ್ಯಾನರ್ ಮೂಲಕ ‘ಜನ ನಾಯಗನ್’ ಚಿತ್ರವನ್ನು ನಿರ್ಮಿಸಿದ್ದು, ಎಚ್. ವಿನೋದ್ ನಿರ್ದೇಶಿಸಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಿರ್ಮಾಪಕರು ಚಿತ್ರದ ಸೆನ್ಸಾರ್ ವಿವಾದ ಮತ್ತು ಲೀಕ್ ಆದ ಬಳಿಕ ಆಗಿರುವ ಬದಲಾವಣೆಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

ಥಿಯೇಟರ್‌ನಲ್ಲಿ ಪ್ರೇಕ್ಷಕರಿಗೆ ಸಿಗಲಿದೆ ಹೊಸ ಸಿನಿಮಾ:

ಚಿತ್ರದ ಲೀಕ್ ಮತ್ತು ಸೆನ್ಸಾರ್ ಕಟ್‌ಗಳ ಬಗ್ಗೆ ಮಾತನಾಡಿದ ನಿರ್ಮಾಪಕ ವೆಂಕಟ್ ನಾರಾಯಣ್, ‘ಈಗ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರು ಸಂಪೂರ್ಣವಾಗಿ ಒಂದು ಹೊಸ ಸಿನಿಮಾವನ್ನು ನೋಡಲಿದ್ದಾರೆ. ಚಿತ್ರದಲ್ಲಿ ಸಾಕಷ್ಟು ಬದಲಾವಣೆಗಳು ಮತ್ತು ಹೊಸ ಸೇರ್ಪಡೆಗಳನ್ನು ಮಾಡಲಾಗಿದೆ. ಕೆಲವು ಹೊಸ ಹಾಡುಗಳು ಮತ್ತು ಹೊಸ ದೃಶ್ಯಗಳನ್ನು ಜೋಡಿಸಲಾಗಿದೆ. ಹಾಗಾಗಿ ಪ್ರೇಕ್ಷಕರಿಗೆ ಇದು ವಿಭಿನ್ನ ಅನುಭವ ನೀಡಲಿದೆ. ಈ ವರ್ಷದ ಆರಂಭದಿಂದಲೇ ಸಿನಿಮಾ ಬಿಡುಗಡೆಗೆ ಹಲವು ಸವಾಲುಗಳನ್ನು ಎದುರಿಸಿದ್ದೇವೆ. ಆದರೆ ಚಿತ್ರದ ಯಾವುದೇ ಸಸ್ಪೆನ್ಸ್ ಅನ್ನು ನಾನಿಲ್ಲಿ ಬಿಟ್ಟುಕೊಡುವುದಿಲ್ಲ’ ಎಂದಿದ್ದಾರೆ.

ಸೆನ್ಸಾರ್ ಮಂಡಳಿಯಿಂದ ‘ಎ’ ಪ್ರಮಾಣಪತ್ರ:

ಚಿತ್ರದಲ್ಲಿ ವಿಜಯ್ ಅವರ ರಾಜಕೀಯ ಪಕ್ಷವಾದ ಟಿವಿಕೆ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಉಲ್ಲೇಖವಿರುವ ಸಂಭಾಷಣೆಗಳಿಗೆ ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ದೇಶದ ಕಾನೂನು ಮತ್ತು ಸೆನ್ಸಾರ್ ಮಂಡಳಿಯ ನಿಯಮಗಳಿಗೆ ನಾವು ಗೌರವ ನೀಡುತ್ತೇವೆ. ಅವರು ಸೂಚಿಸಿದ ಜಾಗದಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿದ್ದೇವೆ’ ಎಂದು ಸ್ಪಷ್ಟಪಡಿಸಿದ್ದಾರೆ. ಸುಮಾರು 7 ತಿಂಗಳ ಸುದೀರ್ಘ ವಿಳಂಬದ ನಂತರ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಹಲವು ಕಟ್‌ಗಳೊಂದಿಗೆ ‘ಎ’ (Adults Only) ಪ್ರಮಾಣಪತ್ರ ನೀಡಿದೆ.

ಸಾಮಾಜಿಕ ಕಳಕಳಿಯ ಕಥಾಹಂದರ:

ವಿಜಯ್ ಅವರ ಹಿಂದಿನ ಚಿತ್ರಗಳಂತೆಯೇ ‘ಜನ ನಾಯಗನ್’ ಕೂಡ ಒಂದು ಬಲವಾದ ಸಾಮಾಜಿಕ ಸಮಸ್ಯೆಯ ಸುತ್ತ ಸಾಗುತ್ತದೆ. ಇದು ಎಲ್ಲಾ ವಯೋಮಾನದ ಪ್ರೇಕ್ಷಕರನ್ನು ಸೆಳೆಯುವಂತಹ ಶಕ್ತಿಯುತ ಮತ್ತು ರೋಮಾಂಚಕಾರಿ ಕಥೆಯನ್ನು ಹೊಂದಿದೆ ಎಂದು ನಿರ್ಮಾಪಕರು ಭರವಸೆ ನೀಡಿದ್ದಾರೆ. ಈ ಸಿನಿಮಾ ಜನವರಿಯಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ ಸೆನ್ಸಾರ್ ವಿವಾದದಿಂದಾಗಿ ಮುಂದೂಡಲ್ಪಟ್ಟಿತ್ತು. ವಿಜಯ್ ರಾಜಕೀಯ ಜೀವನ ಆರಂಭಿಸಿದ್ದು, ಇದು ಅವರ ಕೊನೆಯ ಸಿನಿಮಾ ಆಗಿರುವುದರಿಂದ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಸೆನ್ಸಾರ್ ಕಟ್ ಇಲ್ಲದೆ ಜನ ನಾಯಗನ್ ಸಿನಿಮಾ ನೋಡಲು ವಿಜಯ್ ಅಭಿಮಾನಿಗಳಿಗೆ ಸುವರ್ಣಾವಕಾಶ

ತೆಲುಗಿನಲ್ಲಿ ನಂದಮೂರಿ ಬಾಲಕೃಷ್ಣ ನಟನೆಯ ಸೂಪರ್ ಹಿಟ್ ಸಿನಿಮಾ ‘ಭಗವಂತ್ ಕೇಸರಿ’ ಚಿತ್ರದ ಅಧಿಕೃತ ರಿಮೇಕ್ ಇದಾಗಿದೆ. ಚಿತ್ರದಲ್ಲಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜೊತೆಗೆ ಮಮಿತಾ ಬೈಜು, ಬಾಬಿ ಡಿಯೋಲ್, ಪೂಜಾ ಹೆಗ್ಡೆ, ಪ್ರಕಾಶ್ ರಾಜ್ ಮತ್ತು ಪ್ರಿಯಾಮಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಅವರ ಸಂಗೀತ ಚಿತ್ರಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೆಸ್ಸಿಯ ಸಾರ್ವಕಾಲಿಕ ವಿಶ್ವ ದಾಖಲೆ ಮುರಿದ ಎಂಬಾಪೆ! – Kannada News | Kylian mbappe breaks lionel messi’s World record

ಫ್ರಾನ್ಸ್‌ನ ಯುವ ತಾರೆ ಕಿಲಿಯನ್ ಎಂಬಾಪೆ (Kylian Mbappé) ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಗೋಲು ಗಳಿಸಿದ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಸಹ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಲಿಯೋನೆಲ್ ಮೆಸ್ಸಿ ಐತಿಹಾಸಿಕ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ. (PC: Getty Images)

ಜುಲೈ 18ರ ಶನಿವಾರದಂದು ಮಿಯಾಮಿಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಸ್ಥಾನದ ಪ್ಲೇ-ಆಫ್ ಪಂದ್ಯದಲ್ಲಿ ಕಿಲಿಯನ್ ಎಂಬಾಪೆ ಫ್ರಾನ್ಸ್ ಪರ ಎರಡು ಅದ್ಭುತ ಗೋಲುಗಳನ್ನು ಬಾರಿಸಿದ್ದರು. ಈ ಗೋಲುಗಳ ಮೂಲಕ ಎಂಬಾಪೆ  ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಅವರ ದಾಖಲೆಯನ್ನು ಎಂಬಾಪೆ ಮುರಿದರು. (PC: Getty Images)

ಇದಕ್ಕೂ ಮುನ್ನ ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಗೋಲು ಗಳಿಸಿದ ವಿಶ್ವ ದಾಖಲೆ ಲಿಯೋನೆಲ್ ಮೆಸ್ಸಿ ಹೆಸರಿನಲ್ಲಿತ್ತು. ಮೆಸ್ಸಿ 33 ಪಂದ್ಯಗಳ ಮೂಲಕ ಒಟ್ಟು 21 ಗೋಲು ಬಾರಿಸಿ ಈ ವರ್ಲ್ಡ್​ ರೆಕಾರ್ಡ್​ ನಿರ್ಮಿಸಿದ್ದರು. ಮೆಸ್ಸಿಗೂ ಮುನ್ನ ಈ ದಾಖಲೆ ಜರ್ಮನಿಯ ಮಿರೋಸ್ಲಾವ್ ಕ್ಲೋಸ್ (16 ಗೋಲು) ಹೆಸರಿನಲ್ಲಿತ್ತು. (PC: Getty Images)

ಇದೀಗ 22 ಪಂದ್ಯಗಳ ಮೂಲಕ ಕಿಲಿಯನ್ ಎಂಬಾಪೆ, ಮೆಸ್ಸಿಯ ವಿಶ್ವ ದಾಖಲೆ ಮುರಿದಿದ್ದಾರೆ. ಅದು ಸಹ ಕೊನೆಯ ಪಂದ್ಯದಲ್ಲಿ 2 ಗೋಲು ಬಾರಿಸಿ ಎಂಬುದು ವಿಶೇಷ. ಈ ಗೋಲುಗಳೊಂದಿಗೆ ವಿಶ್ವಕಪ್​ ಅಂಗಳದಲ್ಲಿ ಕಿಲಿಯನ್ ಎಂಬಾಪೆ ಅವರ ಒಟ್ಟಾರೆ ಗೋಲುಗಳ ಸಂಖ್ಯೆ 22 ಕ್ಕೇರಿದೆ. ಈ ಮೂಲಕ ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. (PC: Getty Images)

ಇದಾಗ್ಯೂ ಈ ವಿಶ್ವ ದಾಖಲೆ ಮುರಿಯಲು ಲಿಯೋನೆಲ್ ಮೆಸ್ಸಿಗೆ ಉತ್ತಮ ಅವಕಾಶವಿದೆ. ಭಾನುವಾರ ಸ್ಪೇನ್ ವಿರುದ್ಧ ನಡೆಯುವ ಫೈನಲ್ ಪಂದ್ಯದಲ್ಲಿ ಮೆಸ್ಸಿ 2 ಗೋಲು ದಾಖಲಿಸಿದರೆ ಮತ್ತೆ ವಿಶ್ವಕಪ್​ ಇತಿಹಾಸದಲ್ಲಿ ಅತ್ಯಧಿಕ ಗೋಲು ಬಾರಿಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ. ಹೀಗಾಗಿ ಎಲ್ಲರ ಕಣ್ಣು ಅಂತಿಮ ಪಂದ್ಯದತ್ತ ನೆಟ್ಟಿದೆ. (PC: Getty Images)

Published On – 8:47 am, Sun, 19 July 26

Source link

Unique Frog Temple: ಭಾರತದ ಏಕೈಕ ‘ಕಪ್ಪೆ ದೇವಾಲಯ’; ಇಲ್ಲಿದೆ ಬಣ್ಣ ಬದಲಾಯಿಸುವ ಶಿವಲಿಂಗ! – Kannada News | Manduk Mandir Oel: India’s Unique Frog Temple and Color Changing Shiva Lingam

ಭಾರತದ ಏಕೈಕ ‘ಕಪ್ಪೆ ದೇವಾಲಯImage Credit source: bhartiyadharohar.com

ಹಿಂದೂ ಧರ್ಮ ಮತ್ತು ಪುರಾಣಗಳಲ್ಲಿ ಪ್ರಾಣಿ-ಪಕ್ಷಿಗಳಿಗೆ ಅತ್ಯಂತ ಪವಿತ್ರವಾದ ಸ್ಥಾನವನ್ನು ನೀಡಲಾಗಿದೆ. ಗೋವು, ನಾಗರಹಾವು, ಆನೆ ಅಥವಾ ಸಿಂಹಗಳನ್ನು ದೈವಿಕ ರೂಪದಲ್ಲಿ ಪೂಜಿಸುವುದನ್ನು ನಾವು ಭಾರತದಾದ್ಯಂತ ಕಾಣಬಹುದು. ಆದರೆ, ಮಳೆ ಮತ್ತು ಸಮೃದ್ಧಿಯ ಸಂಕೇತವಾಗಿರುವ ಕಪ್ಪೆಯನ್ನೇ ಪ್ರಧಾನವಾಗಿಟ್ಟುಕೊಂಡು ನಿರ್ಮಿಸಲಾದ ದೇವಾಲಯದ ಬಗ್ಗೆ ನೀವು ಕೇಳಿದ್ದೀರಾ? ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯ ‘ಓಯೆಲ್’ (Oel Town) ಎಂಬ ಸಣ್ಣ ಪಟ್ಟಣದಲ್ಲಿ ಇಂತಹದ್ದೊಂದು ಅಪರೂಪದ ಶಿವ ದೇವಾಲಯವಿದೆ. ಇಡೀ ದೇಶದಲ್ಲೇ ಇರುವ ಏಕೈಕ ಕಪ್ಪೆ ದೇವಾಲಯ (Manduk Mandir) ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

ಮಂಡೂಕ ತಂತ್ರಾಧಾರಿತ ಅದ್ಭುತ ವಾಸ್ತುಶಿಲ್ಪ:

ಈ ದೇವಾಲಯದ ಪ್ರಮುಖ ಆಕರ್ಷಣೆಯೇ ಇದರ ವಿಶಿಷ್ಟ ರಚನೆ. ಮೇಲ್ನೋಟಕ್ಕೆ ಈ ಇಡೀ ಮಂದಿರವು ಒಂದು ಬೃಹತ್ ಕಪ್ಪೆಯ ಆಕಾರದಲ್ಲಿ ಕಂಗೊಳಿಸುತ್ತದೆ. ವಾಸ್ತುಶಿಲ್ಪದ ಪ್ರಕಾರ, ಈ ದೇವಾಲಯವನ್ನು ಒಂದು ದೊಡ್ಡ ಕಪ್ಪೆಯ ಬೆನ್ನಿನ ಮೇಲೆ ನಿರ್ಮಿಸಲಾಗಿದ್ದು, ಆ ಕಪ್ಪೆಯು ಒಂದು ಬೃಹತ್ ಮೊಸಳೆಯ ಬೆನ್ನಿನ ಮೇಲೆ ಕುಳಿತಿರುವಂತೆ ವಿನ್ಯಾಸಗೊಳಿಸಲಾಗಿದೆ. ಮೇಘಾಲಯದ ಪ್ರಸಿದ್ಧ ತಾಂತ್ರಿಕ ಕಪಿಲ್ ಎಂಬುವವರ ಮಾರ್ಗದರ್ಶನದಲ್ಲಿ, ತಾಂತ್ರಿಕ ‘ಮಂಡೂಕ ಯಂತ್ರ’ವನ್ನು ಆಧರಿಸಿ ಇದನ್ನು ರಾಜಸ್ಥಾನಿ ಶೈಲಿಯಲ್ಲಿ ಕಟ್ಟಲಾಗಿದೆ. ಭಕ್ತರು ಪೂರ್ವದ್ವಾರದ ಮೂಲಕ ಪ್ರವೇಶಿಸಿದರೆ, ಕಪ್ಪೆಯ ಮುಖದ ಭಾಗದಿಂದ ನೇರವಾಗಿ ಗರ್ಭಗುಡಿಯನ್ನು ತಲುಪಬಹುದು. ದೇವಾಲಯದ ಹೊರಗೋಡೆಗಳ ಮೇಲಿರುವ ತಾಂತ್ರಿಕ ಶೈಲಿಯ ಕೆತ್ತನೆಗಳು ಇದರ ಐತಿಹಾಸಿಕ ರಹಸ್ಯವನ್ನು ಸಾರುತ್ತವೆ.

ಕಾಲಕ್ಕೆ ತಕ್ಕಂತೆ ಬಣ್ಣ ಬದಲಿಸುವ ಶಿವಲಿಂಗ ಮತ್ತು ನಿಂತಿರುವ ನಂದಿ!

ಈ ಮಂದಿರದಲ್ಲಿರುವ ನರ್ಮದೇಶ್ವರ ಮಹಾದೇವನ ಶಿವಲಿಂಗವು ಅತ್ಯಂತ ಸುಂದರವಾದ ಅಮೃತಶಿಲೆಯ ಎತ್ತರದ ಬಂಡೆಯ ಮೇಲಿದೆ. ನರ್ಮದಾ ನದಿಯಿಂದ ತರಲಾದ ಈ ಅಪರೂಪದ ಶಿವಲಿಂಗವು ಹಗಲಿನ ಬೇರೆ ಬೇರೆ ಅವಧಿಗಳಲ್ಲಿ ತನ್ನ ಬಣ್ಣವನ್ನು ಬದಲಾಯಿಸುತ್ತದೆ ಎಂಬುದು ಇಲ್ಲಿನ ದೊಡ್ಡ ಪವಾಡ! ಅಷ್ಟೇ ಅಲ್ಲ, ಸಾಮಾನ್ಯವಾಗಿ ಜಗತ್ತಿನ ಎಲ್ಲಾ ಶಿವ ದೇವಾಲಯಗಳಲ್ಲೂ ನಂದಿ ಕುಳಿತಿರುವ ಭಂಗಿಯಲ್ಲಿರುತ್ತಾನೆ. ಆದರೆ, ಇಲ್ಲಿ ಮಾತ್ರ ನಂದಿಯ ವಿಗ್ರಹವು ನಿಂತಿರುವ ಭಂಗಿಯಲ್ಲಿದೆ. ಇಂತಹ ಅಪರೂಪದ ದೃಶ್ಯ ಭಾರತದಲ್ಲಿ ಬೇರೆಲ್ಲೂ ನೋಡಲು ಸಿಗುವುದಿಲ್ಲ. ಹಿಂದೆ ಸೂರ್ಯನ ಬೆಳಕಿಗೆ ತಕ್ಕಂತೆ ಸ್ವಯಂಚಾಲಿತವಾಗಿ ತಿರುಗುತ್ತಿದ್ದ ದೇವಾಲಯದ ಮೇಲಿನ ಛತ್ರಿ ಈಗ ಕಾಲಗರ್ಭದಲ್ಲಿ ಹಾಳಾಗಿದೆ.

ಇದನ್ನೂ ಓದಿ: ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಹಳದಿ ಮತ್ತು ಕೆಂಪು ಬಣ್ಣದ ಉಡುಪುಗಳನ್ನೇ ಆಯ್ಕೆ ಮಾಡುವುದೇಕೆ ಗೊತ್ತಾ? ಇಲ್ಲಿದೆ ಆಧ್ಯಾತ್ಮಿಕ ಮಹತ್ವ!

ರಾಜನ ಭವಿಷ್ಯ ಬದಲಿಸಿದ ಕಪ್ಪೆ:

200 ವರ್ಷಗಳ ಇತಿಹಾಸಈ ವಿಶಿಷ್ಟ ತಾಂತ್ರಿಕ ದೇವಾಲಯಕ್ಕೆ ಸುಮಾರು 200 ವರ್ಷಗಳ ಸುದೀರ್ಘ ಇತಿಹಾಸವಿದೆ. 11 ನೇ ಶತಮಾನದಿಂದ 19 ನೇ ಶತಮಾನದವರೆಗೆ ಈ ಪ್ರದೇಶವನ್ನು ಚೌಹಾಣ್ ವಂಶದ ರಾಜರು ಆಳುತ್ತಿದ್ದರು. ಸ್ಥಳೀಯ ನಂಬಿಕೆಗಳ ಪ್ರಕಾರ, ಒಮ್ಮೆ ಈ ಭಾಗದಲ್ಲಿ ಭೀಕರ ಬರಗಾಲ ಉಂಟಾದಾಗ  ಸಂಸ್ಥಾನದ ರಾಜ ಬಖತ್ ಸಿಂಗ್ ಅವರಿಗೆ ದೈವಿಕ ಕಪ್ಪೆಯೊಂದು ಆಶೀರ್ವಾದ ನೀಡಿತು. ಅದಾದ ಬಳಿಕ ರಾಜನ ಭವಿಷ್ಯವೇ ಬದಲಾಗಿ, ಇಡೀ ರಾಜ್ಯದಲ್ಲಿ ಸಮೃದ್ಧಿ ನೆಲೆಸಿತು. ತಂತ್ರ ಶಾಸ್ತ್ರದಲ್ಲಿ ಕಪ್ಪೆಯನ್ನು ಅದೃಷ್ಟ, ಸಂತಾನೋತ್ಪತ್ತಿ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸುವುದರಿಂದ, ಆ ದೈವಿಕ ಕಪ್ಪೆಯ ಗೌರವಾರ್ಥವಾಗಿ ರಾಜನು ಈ ಮಂದಿರವನ್ನು ನಿರ್ಮಿಸಿದನು.

ಶಿವರಾತ್ರಿ ಮತ್ತು ದೀಪಾವಳಿಯಂದು ವಿಶೇಷ ಪೂಜೆ:

ಉತ್ತರ ಪ್ರದೇಶದ ಪ್ರವಾಸೋದ್ಯಮ ಇಲಾಖೆಯಿಂದ ಅಧಿಕೃತ ಮಾನ್ಯತೆ ಪಡೆದಿರುವ ಈ ದೇವಾಲಯದಲ್ಲಿ ಮಹಾ ಶಿವರಾತ್ರಿಯಂದು ಭಾರಿ ಉತ್ಸವ ನಡೆಯುತ್ತದೆ. ಇದರೊಂದಿಗೆ, ದೀಪಾವಳಿಯ ಹಬ್ಬದ ದಿನದಂದು ಇಲ್ಲಿ ವಿಶೇಷ ತಾಂತ್ರಿಕ ಪೂಜೆಗಳನ್ನು ಸಲ್ಲಿಸಲಾಗುತ್ತದೆ. ಈ ಸಂದರ್ಭಗಳಲ್ಲಿ ಕಪ್ಪೆಯ ಬೆನ್ನಿನ ಮೇಲಿರುವ ಶಿವನ ದರ್ಶನ ಪಡೆದರೆ ಜೀವನದ ಎಲ್ಲಾ ಕಷ್ಟಗಳು ದೂರವಾಗಿ, ಸಂಪತ್ತು ಮತ್ತು ಸಂತಾನ ಭಾಗ್ಯ ಸಿದ್ಧಿಸುತ್ತದೆ ಎಂಬುದು ಭಕ್ತರ ದೃಢವಾದ ನಂಬಿಕೆಯಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ಕಾಫಿ ಪ್ರಿಯರೇ ಎಚ್ಚರ! ಅತಿಯಾದ ಕೆಫಿನ್ ತರುತ್ತಿದೆ ನಿಮ್ಮ ಆರೋಗ್ಯಕ್ಕೆ ಕಂಟಕ – Kannada News | Bengaluru Coffee Lovers: Hidden Health Risks and Safe Caffeine Consumption Limits

ಬೆಂಗಳೂರು, ಜುಲೈ 19: ನಗರದಲ್ಲಿ ಕಾಫಿ ಪ್ರಿಯರಿಗೇನು (Coffee Lovers) ಕಡಿಮೆಯಿಲ್ಲ. ಪ್ರತಿ ಗಲ್ಲಿ-ಗಲ್ಲಿಯಲ್ಲಿಯೂ ತರಹೇವಾರಿ ಕಾಫಿ ಶಾಪ್‌ಗಳು ತಲೆ ಎತ್ತುತ್ತಿದ್ದು, ಯುವ ಪೀಳಿಗೆ ಹಾಗೂ ಐಟಿ ಉದ್ಯೋಗಿಗಳಿಗೆ ಇದು ನೆಚ್ಚಿನ ತಾಣವಾಗಿದೆ. ಆದರೆ ಇದೇ ಕಾಫಿ ಜನರ ಆರೋಗ್ಯಕ್ಕೆ ಕುತ್ತು ತರುತ್ತಿದೆ ಎಂಬ ಕಹಿ ಸತ್ಯ ಬಯಲಾಗಿದ್ದು, ಕಾಫಿ ಪ್ರಿಯರಲ್ಲಿ ಭಾರೀ ಆತಂಕ ಮೂಡಿಸಿದೆ. ನಗರದ ಆಸ್ಪತ್ರೆಗಳಲ್ಲಿ ಓಪಿಡಿಗೆ ಬರುವ 15-20 ರೋಗಿಗಳು ಅತಿಯಾದ ಕಾಫಿ ಸೇವನೆಯಿಂದ ಆರೋಗ್ಯ ಸಮಸ್ಯೆಯಿಂದ ಬಳಲುವವರೇ ಆಗಿದ್ದಾರೆ ಎಂದು ವರದಿ ತಿಳಿಸಿದೆ.

ಬಣ್ಣ ಬಣ್ಣದ ಕಾಫಿ ಕಪ್‌ಗಳ ಹಿಂದೆ ಅಡಗಿದೆ ‘ಸಕ್ಕರೆ’ ಮತ್ತು ‘ಕ್ಯಾಲೋರಿ’!

ನಾವೆಲ್ಲರೂ ಸಾಂಪ್ರದಾಯಿಕ ಫಿಲ್ಟರ್ ಕಾಫಿಗೆ ಒಗ್ಗಿಕೊಂಡವರು. ಆದರೆ ಇಂದಿನ ಮಾಡರ್ನ್ ಕೆಫೆಗಳಲ್ಲಿ ಸಿಗುವ ಲ್ಯಾಟೆ (Latte), ಕ್ಯುಪುಚಿನೋ (Cappuccino) ಅಥವಾ ಕೋಲ್ಡ್ ಕಾಫಿಗಳಲ್ಲಿ ಬಳಸುವ ಪದಾರ್ಥಗಳು ದೇಹಕ್ಕೆ ಅತ್ಯಂತ ಹಾನಿಕಾರಕವಾಗಿವೆ. ಕಾಫಿಯ ರುಚಿ ಹೆಚ್ಚಿಸಲು ಬಳಸುವ ಕ್ಯಾರಮೆಲ್, ವೆನಿಲ್ಲಾ ಹಾಗೂ ಚಾಕೊಲೇಟ್ ಸಿರಪ್‌ಗಳಲ್ಲಿ ಕೃತಕ ಸಕ್ಕರೆಯ ಪ್ರಮಾಣ ಅತಿಯಾಗಿರುತ್ತದೆ. ಹೀಗಾಗಿ ಒಂದು ಕಪ್ ಕಾಫಿ ಕುಡಿದರೆ, ಅದು ಒಂದು ಹೊತ್ತಿನ ಊಟಕ್ಕೆ ಸಮನಾದ ಕ್ಯಾಲೋರಿಗಳನ್ನು ದೇಹಕ್ಕೆ ಸೇರಿಸುತ್ತದೆ. ನಿರಂತರವಾಗಿ ಇಂತಹ ಕಾಫಿ ಸೇವನೆಯಿಂದಾಗಿ ಯುವಕರಲ್ಲಿ ತೂಕ ಹೆಚ್ಚಳ (Obesity) ಮತ್ತು ಅತಿ ಸಣ್ಣ ವಯಸ್ಸಿನಲ್ಲೇ ಟೈಪ್-2 ಮಧುಮೇಹ (Diabetes) ಕಾಣಿಸಿಕೊಳ್ಳುತ್ತಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಕೆಫಿನ್ ಹೇಗೆ ಕೆಲಸ ಮಾಡುತ್ತದೆ?

ನಮ್ಮ ಮೆದುಳಿನಲ್ಲಿ ಆಯಾಸ ಮತ್ತು ಸುಸ್ತನ್ನು ಉಂಟುಮಾಡುವ ‘ಅಡೆನೊಸಿನ್’ (Adenosine) ಎಂಬ ರಾಸಾಯನಿಕ ರಿಸೆಪ್ಟರ್‌ಗಳನ್ನು ಬ್ಲಾಕ್ ಮಾಡುವ ಮೂಲಕ ಕೆಫಿನ್ ಕೆಲಸ ಮಾಡುತ್ತದೆ. ಇದು ನಮಗೆ ಚುರುಕುತನ ನೀಡುವುದರ ಜೊತೆಗೆ ‘ಅಡ್ರಿನಾಲಿನ್’ ನಂತಹ ಒತ್ತಡದ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಇದು ಕೆಲವರನ್ನು ಜಾಗರೂಕರಾಗಿಟ್ಟರೆ, ಇನ್ನು ಕೆಲವರಲ್ಲಿ ಅತಿಯಾದ ಆತಂಕ ಮತ್ತು ಅತಿ-ಉತ್ತೇಜನಕ್ಕೆ ಕಾರಣವಾಗುತ್ತದೆ.

ಫಿಲ್ಟರ್ ಕಾಫಿ vs ಎಸ್ಪ್ರೆಸೊ: ಯಾವುದು ಹೆಚ್ಚು ಹಾನಿಕರ?

ನಮ್ಮಲ್ಲಿ ಬಹುತೇಕರು ಕುಡಿಯುವ ದಕ್ಷಿಣ ಭಾರತದ ಸಾಂಪ್ರದಾಯಿಕ ಫಿಲ್ಟರ್ ಕಾಫಿಯು, ಎಸ್ಪ್ರೆಸೊ ಆಧಾರಿತ ಅಮೆರಿಕಾನೊಗಿಂತ ಹೆಚ್ಚು ಕೆಫಿನ್ ಹೊಂದಿರುತ್ತದೆ. ಇದಕ್ಕೆ ಬಳಸುವ ಚಿಕೋರಿ ಪುಡಿಯು ತೀವ್ರತೆಯನ್ನು ಸ್ವಲ್ಪ ಕಡಿಮೆ ಮಾಡಿದರೂ, ದೀರ್ಘಕಾಲದ ಬ್ರೂಯಿಂಗ್ ಪ್ರಕ್ರಿಯೆಯಿಂದಾಗಿ ಇದು ಪ್ರಬಲವಾದ ಕೆಫಿನ್ ಸಾಂದ್ರತೆಯನ್ನು ಹೊಂದಿರುತ್ತದೆ. ತಜ್ಞರ ಪ್ರಕಾರ, ಒಬ್ಬ ವ್ಯಕ್ತಿಯು ದಿನಕ್ಕೆ ಗರಿಷ್ಠ 400mg ಗಿಂತ ಕಡಿಮೆ ಕೆಫಿನ್ ಸೇವಿಸಬೇಕು.

ಅಲ್ಲದೆ ಫಿಲ್ಟರ್ ಕಾಫಿಯು ಹಾಲಿನ ಅಂಶದಿಂದಾಗಿ ದೀರ್ಘಕಾಲದ ಆಸಿಡ್ ರಿಫ್ಲಕ್ಸ್ (ಆಮ್ಲೀಯತೆ) ಉಂಟುಮಾಡಬಹುದು. ಆದರೆ ತೀವ್ರವಾದ ಎಸ್ಪ್ರೆಸೊ ಶಾಟ್‌ಗಳು ನಮ್ಮ ನರಮಂಡಲ ಮತ್ತು ರಕ್ತಪರಿಚಲನಾ ವ್ಯವಸ್ಥೆಯಲ್ಲಿ ತಕ್ಷಣದ ತಲ್ಲಣವನ್ನು ಸೃಷ್ಟಿಸುತ್ತವೆ ಎಂದು ಡಾ. ರಾವ್ ತಿಳಿಸಿದ್ದಾರೆ.

ಆರೋಗ್ಯ ಹದಗೆಡದಂತೆ ಕಾಫಿ ಆನಂದಿಸುವುದು ಹೇಗೆ?

ಮಧ್ಯಾಹ್ನ 2 ಗಂಟೆಯ ನಂತರ ಕಾಫಿ ಕುಡಿಯದಿರುವುದು
ದಿನದ ಒಟ್ಟು ಕೆಫಿನ್ ಸೇವನೆ 400mg ಗಿಂತ ಕಡಿಮೆ ಇರಲಿ
ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯಬೇಡಿ
ಹೆಚ್ಚು ನೀರು ಕುಡಿಯಿರಿ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version