ಭಾರತದ ಸೇವಾ ಕ್ಷೇತ್ರದಲ್ಲಿ ಹೊಸ ಹುರುಪು; ಮೇ ತಿಂಗಳ ಸರ್ವಿಸ್ ಸೆಕ್ಟರ್ ಪಿಎಂಐ 6 ತಿಂಗಳ ಗರಿಷ್ಠ ಮಟ್ಟಕ್ಕೆ – Kannada News

ನವದೆಹಲಿ, ಜೂನ್ 3: ಭಾರತದ ಆರ್ಥಿಕತೆಗೆ ಸೇವಾ ವಲಯದಿಂದ (Services Sector) ಮತ್ತೊಂದು ಅತ್ಯಂತ ಆಶಾದಾಯಕ ಸುದ್ದಿ ಹೊರಬಿದ್ದಿದೆ. ಬಲವಾದ ದೇಶೀಯ ಬೇಡಿಕೆ ಮತ್ತು ಹೊಸ ಉದ್ಯೋಗಾವಕಾಶಗಳ ಸೃಷ್ಟಿಯಿಂದಾಗಿ ಭಾರತದ ಸೇವಾ ವಲಯದ ಬೆಳವಣಿಗೆಯು ಮೇ ತಿಂಗಳಲ್ಲಿ ಕಳೆದ 6 ತಿಂಗಳಲ್ಲೇ ಅತ್ಯಂತ ಗರಿಷ್ಠ ಮಟ್ಟವನ್ನು ತಲುಪಿದೆ. ಎಚ್‌ಎಸ್‌ಬಿಸಿ (HSBC) ಸಂಸ್ಥೆಯು ಬಿಡುಗಡೆ ಮಾಡಿರುವ ಇತ್ತೀಚಿನ ದತ್ತಾಂಶಗಳ ಪ್ರಕಾರ, ಭಾರತದ ಸೇವಾ ವಲಯದ ‘ಖರೀದಿ ವ್ಯವಸ್ಥಾಪಕರ ಸೂಚ್ಯಂಕ’ (Purchasing Managers’ Index – PMI) ಏಪ್ರಿಲ್ ತಿಂಗಳಲ್ಲಿದ್ದ 60.8 ಅಂಕಗಳಿಂದ ಮೇ ತಿಂಗಳಲ್ಲಿ ಗರಿಷ್ಠ ಮಟ್ಟಕ್ಕೆ ಜಿಗಿದಿದೆ.

ಏನಿದು ಪಿಎಂಐ (PMI) ಸೂಚ್ಯಂಕ?

ಪಿಎಂಐ (PMI) ಎಂಬುದು ಆರ್ಥಿಕತೆಯ ಆರೋಗ್ಯವನ್ನು ಅಳೆಯುವ ಒಂದು ಪ್ರಮುಖ ಸೂಚ್ಯಂಕವಾಗಿದೆ. ಸರಕುಗಳ ಓಡಾಟವಾಗುವ ಸಪ್ಲೈ ಚೈನ್​ನ ಮ್ಯಾನೇಜರ್​ಗಳ ಮಾಸಿಕ ಸಮೀಕ್ಷೆ ನಡೆಸಿ ಈ ಇಂಡೆಕ್ಸ್ ಅಪ್​ಡೇಟ್ ಮಾಡಲಾಗುತ್ತದೆ. ಹೊಸ ವರ್ಕ್ ಆರ್ಡರ್​ಗಳು, ಉತ್ಪಾದನೆ, ಉದ್ಯೋಗ, ಸರಬರಾಜು ಅವಧಿ ಮತ್ತು ಸರಕುಗಳ ಸಂಗ್ರಹ, ಈ ಅಂಶಗಳನ್ನು ಪರಿಗಣಿಸಲಾಗುತ್ತದೆ.

ಆರ್ಥಿಕ ತಜ್ಞರ ಪ್ರಕಾರ, ಪಿಎಂಐ ಸೂಚ್ಯಂಕವು 50 ಕ್ಕಿಂತ ಹೆಚ್ಚಿದ್ದರೆ ಅದು ಆ ವಲಯದ ಬೆಳವಣಿಗೆ ಅಥವಾ ವಿಸ್ತರಣೆಯನ್ನು (Expansion) ತೋರಿಸುತ್ತದೆ. ಪಿಎಂಐ ಇಂಡೆಕ್ಸ್ 50 ಕ್ಕಿಂತ ಕಡಿಮೆ ಇದ್ದರೆ ಅದು ಆರ್ಥಿಕ ಕುಸಿತವನ್ನು (Contraction) ಸೂಚಿಸುತ್ತದೆ.

ಭಾರತದ ಸರ್ವಿಸ್ ಸೆಕ್ಟರ್ ಪಿಎಂಐ ಸತತವಾಗಿ 50 ರ ಮಟ್ಟಕ್ಕಿಂತ ಮೇಲೆಯೇ ಉಳಿದುಕೊಂಡು ಬಂದಿದ್ದು, ದೇಶದ ಸೇವಾ ವಲಯವು ಬಲಿಷ್ಠವಾದ ಹಾದಿಯಲ್ಲಿ ಸಾಗುತ್ತಿರುವುದನ್ನು ಇದು ಸಾಬೀತುಪಡಿಸಿದೆ.

ಇದನ್ನೂ ಓದಿ: ಫಾರೆಕ್ಸ್​ನ ಚಿನ್ನ ಮಾರಿರುವ ಸುದ್ದಿ ಸುಳ್ಳು ಎಂದ ಸರ್ಕಾರ; ದೇಶದ ಬಂಗಾರದ ದಾಸ್ತಾನು 880.52 ಟನ್‌ಗಳಷ್ಟು ಸುರಕ್ಷಿತವಂತೆ

ಬೆಳವಣಿಗೆಗೆ ಪ್ರಮುಖ ಕಾರಣಗಳೇನು?

  • ಬಲವಾದ ದೇಶೀಯ ಬೇಡಿಕೆ: ದೇಶದ ಒಳಗಡೆ ಹಣಕಾಸು, ವಿಮೆ, ರಿಯಲ್ ಎಸ್ಟೇಟ್, ಮಾಹಿತಿ ತಂತ್ರಜ್ಞಾನ (IT) ಮತ್ತು ಪ್ರವಾಸೋದ್ಯಮದಂತಹ ಪ್ರಮುಖ ಸೇವೆಗಳಿಗೆ ಗ್ರಾಹಕರಿಂದ ಭಾರಿ ಬೇಡಿಕೆ ವ್ಯಕ್ತವಾಗಿದೆ.
  • ಹೊಸ ಉದ್ಯಮಗಳ ಸೃಷ್ಟಿ: ಮೇ ತಿಂಗಳಲ್ಲಿ ಹೊಸ ಆರ್ಡರ್‌ಗಳ ಪ್ರಮಾಣವು ತೀವ್ರ ಗತಿಯಲ್ಲಿ ಹೆಚ್ಚಾಗಿದ್ದು, ಕಂಪನಿಗಳು ತಮ್ಮ ಉದ್ಯಮ ವ್ಯಾಪ್ತಿಯನ್ನು ವಿಸ್ತರಿಸಲು ಮುಂದಾಗಿವೆ.
  • ಉದ್ಯೋಗಾವಕಾಶಗಳ ಹೆಚ್ಚಳ: ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಮತ್ತು ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಸೇವಾ ವಲಯದ ಕಂಪನಿಗಳು ಹೊಸ ಸಿಬ್ಬಂದಿಗಳನ್ನು ದೊಡ್ಡ ಪ್ರಮಾಣದಲ್ಲಿ ನೇಮಕ ಮಾಡಿಕೊಂಡಿವೆ. ಇದು ಉದ್ಯೋಗ ಮಾರುಕಟ್ಟೆಗೆ ಸಕಾರಾತ್ಮಕ ಶಕ್ತಿ ನೀಡಿದೆ.
  • ವಿದೇಶಿ ಬೇಡಿಕೆಯೂ ಉತ್ತಮ: ದೇಶೀಯ ಮಾರುಕಟ್ಟೆಯ ಜೊತೆಗೆ, ಏಷ್ಯಾ, ಯುರೋಪ್ ಮತ್ತು ಅಮೆರಿಕದ ಮಾರುಕಟ್ಟೆಗಳಿಂದಲೂ ಭಾರತೀಯ ಸೇವೆಗಳಿಗೆ ಉತ್ತಮ ಜಾಗತಿಕ ಬೇಡಿಕೆ (International Demand) ಮುಂದುವರಿದಿದೆ.

ಇದನ್ನೂ ಓದಿ: ಅಮೆರಿಕ ಹೊಸ ‘ವರಸೆ’; ಫೋರ್ಸ್ಡ್ ಲೇಬರ್ ಹೆಸರಲ್ಲಿ ಭಾರತ ಸೇರಿ 60 ದೇಶಗಳ ಮೇಲೆ ಶೇ. 12.5 ಹೆಚ್ಚುವರಿ ಸುಂಕಕ್ಕೆ ಯೋಜನೆ

ಉದ್ಯಮ ವಲಯದ ವಿಶ್ವಾಸ ಮತ್ತು ಭವಿಷ್ಯ

ಬೆಲೆ ಏರಿಕೆಯ (ಹಣದುಬ್ಬರ) ಒತ್ತಡಗಳ ನಡುವೆಯೂ ಕಂಪನಿಗಳ ವೆಚ್ಚ ನಿರ್ವಹಣೆ ಉತ್ತಮವಾಗಿದೆ ಎಂದು ವರದಿ ಹೇಳಿದೆ. ಮುಂಬರುವ ದಿನಗಳಲ್ಲಿ ಉದ್ಯಮದ ಸ್ಥಿತಿಗತಿಗಳು ಇನ್ನಷ್ಟು ಉತ್ತಮಗೊಳ್ಳಲಿವೆ ಎಂಬ ದೃಢವಾದ ವಿಶ್ವಾಸವನ್ನು ಸೇವಾ ವಲಯದ ಉದ್ಯಮಿಗಳು ವ್ಯಕ್ತಪಡಿಸಿದ್ದಾರೆ.

ಭಾರತದ ಒಟ್ಟು ದೇಶೀಯ ಉತ್ಪನ್ನಕ್ಕೆ (GDP) ಶೇಕಡಾ 50 ಕ್ಕಿಂತ ಹೆಚ್ಚು ಕೊಡುಗೆ ನೀಡುವ ಸೇವಾ ವಲಯದ ಈ ಭರ್ಜರಿ ಪ್ರಗತಿಯು, ಇಡೀ ದೇಶದ ಆರ್ಥಿಕತೆಯು ಮುಂಬರುವ ತ್ರೈಮಾಸಿಕಗಳಲ್ಲಿ ವೇಗವಾಗಿ ಮುನ್ನಡೆಯಲು ಬಲವಾದ ಅಡಿಪಾಯ ಹಾಕಿಕೊಟ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅಹಮದಾಬಾದ್‌ನಲ್ಲಿ ಅಕ್ರಮವಾಗಿ ನೆಲೆಸಿದ್ದ 166 ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧನ – Kannada News

ಅಹಮದಾಬಾದ್, ಜೂನ್ 3: ಗುಜರಾತ್‌ನ ಅಹಮದಾಬಾದ್‌ನಲ್ಲಿ ಭದ್ರತಾ ಸಂಸ್ಥೆಗಳು ಮತ್ತು ಸ್ಥಳೀಯ ಪೊಲೀಸರು ಜಂಟಿಯಾಗಿ ನಡೆಸಿದ ಬೃಹತ್ ಕಾರ್ಯಾಚರಣೆಯಲ್ಲಿ ಭಾರತದಲ್ಲಿ ಯಾವುದೇ ದಾಖಲೆಗಳಿಲ್ಲದೆ ಅಕ್ರಮವಾಗಿ ವಾಸಿಸುತ್ತಿದ್ದ ಬರೋಬ್ಬರಿ 166 ಬಾಂಗ್ಲಾದೇಶಿ (Bangladesh) ಪ್ರಜೆಗಳನ್ನು ಬಂಧಿಸಲಾಗಿದೆ. ಅಹಮದಾಬಾದ್​​ನ ವಿವಿಧ ಭಾಗಗಳಲ್ಲಿ ಇವರು ಅಕ್ರಮವಾಗಿ ನೆಲೆಸಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿ ಈ ಜಾಲವನ್ನು ಪತ್ತೆಹಚ್ಚಿದ್ದಾರೆ.

ಅಹಮದಾಬಾದ್ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ವಿದೇಶಿ ಪ್ರಜೆಗಳ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇಡಲಾಗಿತ್ತು. ನಗರದ ನಿರ್ಮಾಣ ಪ್ರದೇಶಗಳು, ಕೈಗಾರಿಕಾ ವಲಯಗಳು ಮತ್ತು ಬಾಡಿಗೆ ಮನೆಗಳಲ್ಲಿ ಹಲವು ಬಾಂಗ್ಲಾದೇಶಿ ಪ್ರಜೆಗಳು ನಕಲಿ ಗುರುತಿನ ಚೀಟಿಗಳನ್ನು ಬಳಸಿಕೊಂಡು ವಾಸಿಸುತ್ತಿದ್ದಾರೆ ಎಂಬ ರಹಸ್ಯ ಮಾಹಿತಿ ಪೊಲೀಸರಿಗೆ ಲಭಿಸಿತ್ತು.

ಇದನ್ನೂ ಓದಿ: Kerala: ನಿವೃತ್ತಿಯಾಗುವ ವಯಸ್ಸಲ್ಲಿ ಸಿಕ್ತು ಸರ್ಕಾರಿ ಕೆಲಸ; ಪರೀಕ್ಷೆ ಬರೆದ 20 ವರ್ಷಗಳ ನಂತರ ಬಂದ ನೇಮಕಾತಿ ಪತ್ರ!

ಈ ಮಾಹಿತಿಯ ಆಧಾರದ ಮೇಲೆ ವಿಶೇಷ ಪೊಲೀಸ್ ತಂಡಗಳು ಹಾಗೂ ಅಪರಾಧ ವಿಭಾಗದ ಅಧಿಕಾರಿಗಳು ನಗರದ ಪ್ರಮುಖ ಪ್ರದೇಶಗಳಲ್ಲಿ ಹಠಾತ್ ಜಂಟಿ ತಪಾಸಣೆ ನಡೆಸಿದರು. ಈ ವೇಳೆ ಸಿಕ್ಕಿಬಿದ್ದವರ ಪಾಸ್‌ಪೋರ್ಟ್ ಹಾಗೂ ವೀಸಾ ದಾಖಲೆಗಳನ್ನು ಪರಿಶೀಲಿಸಿದಾಗ, ಅವೆಲ್ಲವೂ ನಕಲಿ ಅಥವಾ ಯಾವುದೇ ದಾಖಲೆಗಳೇ ಇಲ್ಲದಿರುವುದು ಬೆಳಕಿಗೆ ಬಂದಿದೆ.

ನಕಲಿ ದಾಖಲೆಗಳ ಸೃಷ್ಟಿ:

ಪ್ರಾಥಮಿಕ ತನಿಖೆಯ ಪ್ರಕಾರ, ಬಂಧಿತ ಬಾಂಗ್ಲಾದೇಶಿ ಪ್ರಜೆಗಳು ಗಡಿ ದಾಟಿ ಭಾರತದೊಳಗೆ ನುಸುಳಲು ಮತ್ತು ಇಲ್ಲಿ ನೆಲೆಸಲು ದಲ್ಲಾಳಿಗಳ ಸಹಾಯ ಪಡೆದಿದ್ದರು ಎನ್ನಲಾಗಿದೆ. ಭಾರತದಲ್ಲಿ ಸಣ್ಣಪುಟ್ಟ ಕೆಲಸ ಗಿಟ್ಟಿಸಿಕೊಳ್ಳಲು ಇವರು ನಕಲಿ ಆಧಾರ್ ಕಾರ್ಡ್, ವೋಟರ್ ಐಡಿ ಹಾಗೂ ಪ್ಯಾನ್ ಕಾರ್ಡ್‌ಗಳನ್ನು ಸೃಷ್ಟಿಸಿಕೊಂಡಿದ್ದರು. ಈ ನಕಲಿ ದಾಖಲೆಗಳನ್ನು ಒದಗಿಸಿ ಇವರು ಸ್ಥಳೀಯವಾಗಿ ಮನೆಗಳನ್ನು ಬಾಡಿಗೆಗೆ ಪಡೆದುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ 166 ವಿದೇಶಿ ಪ್ರಜೆಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಇವರಿಗೆ ಭಾರತದ ಗಡಿ ದಾಟಲು ನೆರವು ನೀಡಿದ ಅಂತಾರಾಷ್ಟ್ರೀಯ ದಲ್ಲಾಳಿಗಳು ಮತ್ತು ಸ್ಥಳೀಯವಾಗಿ ನಕಲಿ ದಾಖಲೆಗಳ ವ್ಯವಸ್ಥೆ ಮಾಡಿಕೊಟ್ಟ ಜಾಲದ ಪತ್ತೆಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಇದನ್ನೂ ಓದಿ: ಸಿಬಿಎಸ್‌ಇ ನೂತನ ಅಧ್ಯಕ್ಷರಾಗಿ ಐಎಎಸ್​ ಅಧಿಕಾರಿ ಲೋಖಂಡೆ ಸೀತಾರಾಮ್ ನೇಮಕ

ಕಾನೂನು ಪ್ರಕ್ರಿಯೆಗಳು ಮುಗಿದ ನಂತರ, ವಿದೇಶಾಂಗ ಸಚಿವಾಲಯದ ನಿಯಮಾವಳಿಗಳ ಪ್ರಕಾರ ಇವರನ್ನು ಮರಳಿ ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಅಹಮದಾಬಾದ್ ಪೊಲೀಸರು ನಡೆಸಿರುವ ಈ ಕಾರ್ಯಾಚರಣೆ ಅತ್ಯಂತ ಮಹತ್ವದ್ದಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಒಂದೇ ನೋಟೀಸ್​​ಗೆ ರಣ್ವೀರ್ ಮೇಲಿನ ನಿಷೇಧ ಹಿಂಪಡೆದ ಒಕ್ಕೂಟ: ಹೇಳಿದ್ದೇನು? – Kannada News

ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ (FWICE), ನಟ ರಣವೀರ್ ಸಿಂಗ್ (Ranveer Singh) ನಿಷೇಧ ಹೇರಿತ್ತು. ಆದರೆ ಇಂದು (ಜೂನ್ 03) ಆ ನಿಷೇಧವನ್ನು ಹಿಂಪಡೆದಿದೆ. ಫರ್ಹಾನ್ ಅಖ್ತರ್ ನಿರ್ಮಾಣದ ‘ಡಾನ್ 3’ ಚಿತ್ರದಿಂದ ಹೊರನಡೆದು ಒಪ್ಪಂದ ಮುರಿದ ರಣ್ವೀರ್ ವಿರುದ್ಧ ‘ಅಸಹಕಾರ’ವನ್ನು ಸಿನಿ ನೌಕರರ ಒಕ್ಕೂಟ ಘೋಷಿಸಿತ್ತು. ಈ ಬಗ್ಗೆ ಸಾಕಷ್ಟು ಚರ್ಚೆಗಳು ಚಿತ್ರರಂಗದಲ್ಲಿ ಉಂಟಾಗಿದ್ದು, ಕೆಲವರು ರಣ್ವೀರ್ ಸಿಂಗ್ ಅವರಿಗೆ ಬೆಂಬಲ ಸೂಚಿಸಿದ್ದರು. ನಿನ್ನೆಯಷ್ಟೆ ನಟ ರಣ್ವೀರ್ ಸಿಂಗ್ ಅವರು ತಮ್ಮ ವಿರುದ್ಧ ನಿಷೇಧ ಹೇರಿದ್ದ ಒಕ್ಕೂಟಕ್ಕೆ ಕಾನೂನಾತ್ಮಕವಾಗಿ ನೊಟೀಸ್ ಸಹ ನೀಡಿದ್ದರು. ಅದರ ಬೆನ್ನಲ್ಲೇ ಇದೀಗ ಒಕ್ಕೂಟವು ನಿಷೇಧವನ್ನು ಹಿಂಪಡೆದಿದೆ.

ಹಠಾತ್ತನೆ ನಿಷೇಧ ಹಿಂಪಡೆದ ಬಳಿಕ ಈ ಬಗ್ಗೆ ಮಾಹಿತಿ ನೀಡಿರುವ ಒಕ್ಕೂಟವು, ತಾವು ರಣ್ವೀರ್ ಅವರು ನೀಡಿರುವ ನೊಟೀಸ್​​ನ ಕಾರಣಕ್ಕ ನಿಷೇಧ ಹಿಂಪಡೆದಿಲ್ಲ ಬದಲಿಗೆ ಸಹವರ್ತಿ ಚಲನಚಿತ್ರ ಮಂಡಳಿಗಳಾದ ಇಂಡಿಯನ್ ಮೋಷನ್ ಪಿಕ್ಚರ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ (IMPPA) ಮತ್ತು ಸಿನಿ ಅಂಡ್ ಟಿವಿ ಆರ್ಟಿಸ್ಟ್ಸ್ ಅಸೋಸಿಯೇಷನ್ (CINTAA) ಮನವಿಯ ಮೇರೆಗೆ ಈ ನಿರ್ಧಾರವನ್ನು ತೆಗೆದುಕೊಳ್ಳುತ್ತಿರುವುದಾಗಿ ಅದು ಹೇಳಿದೆ. ರಣ್ವೀರ್ ಸಿಂಗ್ ನೀಡಿರುವ ಕಾನೂನು ನೋಟಿಸ್‌ಗೆ ತಮ್ಮ ಕಾನೂನು ತಂಡವು ಉತ್ತರಿಸಲಿದೆ ಎಂದು ಒಕ್ಕೂಟ ಹೇಳಿದೆ.

ರಣ್ವೀರ್ ಸಿಂಗ್ ವಿರುದ್ಧ ನಾವು ಅಸಹಕಾರ (ಅನಧಿಕೃತ ನಿಷೇಧ) ಘೋಷಿಸಿದ ಬಳಿಕ ನಾವು ಇತರ ಚಲನಚಿತ್ರ ಮಂಡಳಿಗಳನ್ನು ಸಂಪರ್ಕಿಸಿ ಅವರ ಬೆಂಬಲವನ್ನು ಕೋರಿದ್ದೆವು. ನಮಗೆ ಇಂಡಿಯನ್ ಮೋಷನ್ ಪಿಕ್ಚರ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ ಮತ್ತು ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಇಂಡಿಯಾದಿಂದ ಪ್ರತಿಕ್ರಿಯೆಗಳು ಬಂದಿವೆ. ಕೊನೆಯ ಕ್ಷಣದಲ್ಲಿ ರಣವೀರ್, ‘ಡಾನ್ 3’ ಚಿತ್ರದಿಂದ ಹಿಂದೆ ಸರಿದಿರುವುದು ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ನಿರ್ಮಾಣ ಸಂಸ್ಥೆಗೆ ನಷ್ಟ ಉಂಟುಮಾಡಿರುವುದನ್ನು ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಇಂಡಿಯಾ ಖಂಡಿಸಿದ್ದರೆ, ಚಲನಚಿತ್ರೋದ್ಯಮದ ಹಿತದೃಷ್ಟಿಯಿಂದ ಅಸಹಕಾರ ನಿರ್ದೇಶನವನ್ನು ಹಿಂಪಡೆಯುವಂತೆ ಇಂಪಾ (IMPPA) ವಿನಂತಿಸಿದೆ ಎಂದು ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್​​ನ ಪಂಡಿತ್ ಹೇಳಿದ್ದಾರೆ.

ಇದನ್ನೂ ಓದಿ:ರಣವೀರ್ ಸಿಂಗ್ ಪರ ಬ್ಯಾಟ್ ಬೀಸಿದ ಕಂಗನಾ ರಣಾವತ್; ‘ನನಗೂ ಹೀಗೇ ಆಗಿತ್ತು’ ಎಂದ ನಟಿ

‘ನಾವು ಯಾವುದೇ ಒತ್ತಡಕ್ಕೆ ಮಣಿದಿಲ್ಲ. ನಾವು 70 ವರ್ಷ ಹಳೆಯ ಸಂಸ್ಥೆಯಾಗಿದ್ದು, ಇಂತಹ ಅಸಂಖ್ಯಾತ ಕಾನೂನು ನೋಟಿಸ್‌ಗಳನ್ನು ಸ್ವೀಕರಿಸಿದ್ದೇವೆ. ಎಲ್ಲಾ ಸೌಹಾರ್ದಯುತವಾಗಿ ಮತ್ತು ಶೀಘ್ರವಾಗಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ’ ಎಂದು FWICE ಅಧ್ಯಕ್ಷ ಬಿ.ಎನ್. ತಿವಾರಿ ತಿಳಿಸಿದ್ದಾರೆ. ‘ನಾವು ನಿರ್ದೇಶನವನ್ನು ಹೊರಡಿಸಿದ ನಂತರ ರಣವೀರ್ ಬರುತ್ತಾರೆ ಎಂದು ನಿರೀಕ್ಷಿಸಿದ್ದೆವು. ಆದರೆ ಅವರ ತಂಡ ಅವರಿಗೆ ತಪ್ಪು ದಾರಿ ತೋರಿಸಿದೆ’ ಎಂದು ಅವರು ಹೇಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

DK Shivakumar Oath Taking Ceremony Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ

ಬೆಂಗಳೂರು, ಜೂನ್​ 03: ರಾಜ್ಯದ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್​​ ಪಟ್ಟಾಭಿಷೇಕ ನಡೆಯುತ್ತಿದೆ. ಇದಕ್ಕಾಗಿ ಲೋಕಭವನದ ಗಾಜಿನ ಮನೆ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಬೆಂಗಳೂರಿನಾದ್ಯಂತ ಡಿಕೆ ಶಿವಕುಮಾರ್​ ಕಟೌಟ್​​, ಬ್ಯಾನರ್​ಗಳು ರಾರಾಜಿಸುತ್ತಿವೆ. ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಕೂಡ ಆಗಮಿಸಿದ್ದಾರೆ. ವಿಶೇಷ ಅಂದರೆ ಬಂಡೆ ಪ್ರಮಾಣ ವಚನಕ್ಕೆ ವಾಸ್ತು ಟಚ್​ ಕೊಡಲಾಗಿದ್ದು, ಸರ್ವಧರ್ಮದ ಗುರುಗಳಿಗೂ ಭಾಗಿಯಾಗಿದ್ದಾರೆ. ಸಂಜೆ 4 ಗಂಟೆ 5 ನಿಮಿಷದ ಶುಭ ಮುಹೂರ್ತದಲ್ಲಿ ಡಿಕೆ ಶಿವಕುಮಾರ್​ ಪಟ್ಟಾಭಿಷೇಕ ನಡೆಯುತ್ತಿದೆ. ಈ ಹಿಂದೆ ಲೋಕಭವನದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳ ವೇದಿಕೆ ಪಶ್ಚಿಮಾಭಿಮುಖವಾಗಿ ಇರುತ್ತಿತ್ತು. ಆದರೆ ಈ ಬಾರಿ ಜ್ಯೋತಿಷಿ ಆರಾಧ್ಯ ಸಲಹೆಯಂತೆ, ವೇದಿಕೆಯನ್ನ ಪೂರ್ವಾಭಿಮುಖವಾಗಿ ಸಿದ್ಧಪಡಿಸಲಾಗಿದೆ. ಡಿಕೆ ಶಿವಕುಮಾರ್​ ಸಹೋದರ ಡಿಕೆ ಸುರೇಶ್, ಇಡೀ ಕಾರ್ಯಕ್ರಮದ ಸಂಪೂರ್ಣ ಹೊಣೆ ಹೊತ್ತುಕೊಂಡಿದ್ದಾರೆ. ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣದ ನೇರಪ್ರಸಾರ ಲೈವ್​ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಸಿಎಂ ಆಗುವ ಮುನ್ನವೇ ಡಿಕೆಶಿ ತಂತ್ರಗಾರಿಕೆ: ರಾಜಕೀಯ ಬದ್ಧವೈರಿಗಳ ಭೇಟಿ ಹಿಂದಿನ ಲೆಕ್ಕಾಚಾರವೇನು? – Kannada News

ಬೆಂಗಳೂರು, (ಜೂನ್ 03): ಡಿಕೆ ಶಿವಕುಮಾರ್ (DK Shivakumar) ಅವರು ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದ್ರೆ, ಅಧಿಕಾರ ಸ್ವೀಕಾರ ಮುನ್ನ ಡಿಕೆ ಶಿವಕುಮಾರ್ ಅವರು ರಾಜ್ಯದ ಇಬ್ಬರು ಪ್ರಭಾವಿ ಜಾತಿ ಸಮುದಾಯಗಳ ಪ್ರಶ್ನಾತೀತ ನಾಯಕರನ್ನು ಭೇಟಿ ಮಾಡಿದ್ದಾರೆ. ಹೌದು.. ರಾಜ್ಯದ ಇಬ್ಬರು ಧೀಮಂತ ಮುತ್ಸದ್ದಿ ನಾಯಕರಾದ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಮನೆಗೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಇದರೊಂದಿಗೆ ಡಿಕೆ ಶಿವಕುಮಾರ್ ಎಚ್ಚರಿಕೆ ಹೆಜ್ಜೆ ಇಟ್ಟಿದ್ದಾರೆ.  ರಾಜಕೀಯ ಬದ್ಧವೈರಿಗಳ ಭೇಟಿಯ ಹಿಂದೆ ಕೇವಲ ಸೌಜನ್ಯ ಮಾತ್ರವಲ್ಲ ಬದಲಿಗೆ ಅತ್ಯಂತ ವ್ಯವಸ್ಥಿತವಾದ ದೂರದೃಷ್ಠಿಯ ರಾಜಕೀಯ ಲೆಕ್ಕಾಚಾರವೂ ಸಹ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜೂನ್​ನಲ್ಲಿ ಬುಧ ಸಂಚಾರದಿಂದ ಅಪರೂಪದ ಸಂಯೋಜನೆ; 12 ರಾಶಿಗಳ ಮೇಲೆ ಪ್ರಭಾವ ಹೇಗಿರಲಿದೆ? – Kannada News

ಬುಧ ಸಂಚಾರದಿಂದ ಅಪರೂಪದ ಸಂಯೋಜನೆImage Credit source: Pinterest

ಜೂನ್ ತಿಂಗಳಿನಲ್ಲಿ ಬುಧನು ಚಂದ್ರ ಮತ್ತು ಶುಕ್ರನ ತ್ರಿಂಶಾಂಶದಲ್ಲಿ ಇರುವುದರಿಂದ, ಈ ತಿಂಗಳು ತಾರ್ಕಿಕ ಆಲೋಚನೆಗಿಂತ ಭಾವನಾತ್ಮಕ ಬುದ್ಧಿವಂತಿಕೆ ಕಲ್ಪನಾ ಶಕ್ತಿ, ಮತ್ತು ಭೌತಿಕ ಸುಖ-ವಿಲಾಸಗಳ ಕಡೆಗೆ ಮನಸ್ಸು ಹೆಚ್ಚು ಹರಿಯುವುದು. ಅದರಲ್ಲಿಯೂ ಚಂದ್ರನ ಅಂಶದಲ್ಲಿಯೇ ಹೆಚ್ಚಿ ಸಮಯವಿರುವ ಕಾರಣ ಅನೇಕ ವೈಪರೀತ್ಯಗಳು ಆಗಲಿವೆ. ಅಪರೂಪದ ಸಂಯೋಜನೆ ಇದಾಗಿರಲಿದೆ.

​ಮೇಷ ರಾಶಿ:

​ಬುಧನ ಈ ಸ್ಥಿತಿಯು ನಿಮಗೆ ಮಿಶ್ರಫಲ ನೀಡಲಿದೆ. ಚಂದ್ರನ ವರ್ಗದ ಪ್ರಭಾವದಿಂದ ಮನಸ್ಸಿನಲ್ಲಿ ಅಸ್ಥಿರತೆ ಇರಬಹುದು. ಕೌಟುಂಬಿಕ ಸುಖ ವೃದ್ಧಿಯಾಗಲಿದೆ. ಆದರೆ ತಾಯಿಯ ಆರೋಗ್ಯದ ಕಡೆ ಗಮನವಿರಲಿ. ಶುಕ್ರನ ತ್ರಿಂಶಾಂಶದ ಪ್ರಭಾವದಿಂದ ಮನೆಗೆ ಹೊಸ ಅಲಂಕಾರಿಕ ವಸ್ತುಗಳ ಖರೀದಿಯಾಗಬಹುದು. ಪ್ರಯಾಣದಿಂದ ಲಾಭವಿದೆ.

​ವೃಷಭ ರಾಶಿ:

ನಿಮ್ಮ ರಾಶ್ಯಾಧಿಪತಿ ಶುಕ್ರನ ತ್ರಿಂಶಾಂಶದಲ್ಲಿ ಬುಧನಿರುವುದು ನಿಮಗೆ ಅನುಕೂಲಕರವಾಗಿದೆ. ಕಲೆ, ಸಾಹಿತ್ಯ ಮತ್ತು ಸಂವಹನ ರಂಗದಲ್ಲಿ ಇರುವವರಿಗೆ ಅತ್ಯುತ್ತಮ ಯಶಸ್ಸು ಸಿಗಲಿದೆ. ಆರ್ಥಿಕವಾಗಿ ಧನಲಾಭದ ಯೋಗವಿದೆ. ಸಹೋದರ ಮತ್ತು ಸಹೋದರಿಯರೊಂದಿಗೆ ಸೌಹಾರ್ದತೆ ಹೆಚ್ಚಲಿದ್ದು, ಹಳೆಯ ಹೂಡಿಕೆಗಳಿಂದ ಲಾಭ ಸಿಗಲಿದೆ.

ಮಿಥುನ ರಾಶಿ:

ನಿಮ್ಮ ರಾಶ್ಯಾಧಿಪತಿಯಾದ ಬುಧನು ಚಂದ್ರನ ವರ್ಗಗಳಲ್ಲ ಪ್ರಭಾವಿತನಾಗಿರುವುದರಿಂದ ಮಾನಸಿಕವಾಗಿ ಸ್ವಲ್ಪ ಸೂಕ್ಷ್ಮತೆ ಹೆಚ್ಚಿರುತ್ತದೆ. ಮಾತಿನಲ್ಲಿ ಮೃದುತ್ವ ಮತ್ತು ಆಕರ್ಷಣೆ ಇರಲಿದೆ. ಆರ್ಥಿಕವಾಗಿ ಇದು ಉತ್ತಮ ಸಮಯವಾಗಿದ್ದರೂ, ಅನಗತ್ಯ ಖರ್ಚುಗಳಿಗೆ ಆಸ್ಪದ ನೀಡಬೇಡಿ. ಕುಟುಂಬದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬಂದು ಹೋಗಬಹುದು, ತಾಳ್ಮೆಯಿರಲಿ.

ಕರ್ಕಾಟಕ ರಾಶಿ :

ಬುಧನು ನಿಮ್ಮದೇ ರಾಶಿಯ ಬಹುತೇಕ ವರ್ಗಗಳಲ್ಲಿ ಇರುವುದರಿಂದ ನಿಮ್ಮ ಮೇಲೆ ಇದರ ಪ್ರಭಾವ ಅತ್ಯಂತ ಗಾಢವಾಗಿರುತ್ತದೆ. ಬುದ್ಧಿಶಕ್ತಿ ತೀಕ್ಷ್ಣವಾಗಲಿದ್ದರೂ, ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಗೊಂದಲ ಉಂಟಾಗಬಹುದು. ಸೌಂದರ್ಯ ಮತ್ತು ಐಷಾರಾಮಿ ಜೀವನದ ಕಡೆಗೆ ಒಲವು ಹೆಚ್ಚುತ್ತದೆ. ವ್ಯಾಪಾರದಲ್ಲಿ ಹೊಸ ಯೋಜನೆಗಳನ್ನು ರೂಪಿಸಲು ಇದು ಸಕಾಲ.

ಸಿಂಹ ರಾಶಿ :

​ಬುಧನ ಈ ಸ್ಥಿತಿಯು ನಿಮಗೆ ಹ‌ನ್ನೆರಡನೇ ಮನೆಯ ಪ್ರಭಾವವನ್ನು ಹೆಚ್ಚಿಸಬಹುದು. ಶುಭ ಕಾರ್ಯಗಳಿಗಾಗಿ ಮತ್ತು ಪ್ರಯಾಣಕ್ಕಾಗಿ ವೆಚ್ಚಗಳು ಹೆಚ್ಚಾಗಲಿವೆ. ವಿದೇಶಿ ಸಂಪರ್ಕಗಳಿಂದ ಲಾಭವಾಗುವ ಸಾಧ್ಯತೆ ಇದೆ. ಚಂದ್ರನ ಹೋರೆ ಮತ್ತು ನವಾಂಶದ ಪ್ರಭಾವದಿಂದಾಗಿ ನಿದ್ರಾಹೀನತೆ ಅಥವಾ ಅತಿಯಾದ ಆಲೋಚನೆಗಳು ನಿಮ್ಮನ್ನು ಕಾಡಬಹುದು.

ಕನ್ಯಾ ರಾಶಿ:

ನಿಮ್ಮ ರಾಶ್ಯಾಧಿಪತಿ ಬುಧನಿಗೆ ಚಂದ್ರ ಮತ್ತು ಶುಕ್ರನ ವರ್ಗಗಳ ಸಂಬಂಧ ದೊರೆತಿರುವುದರಿಂದ ಲಾಭ ಸ್ಥಾನ ಬಲಗೊಳ್ಳುತ್ತದೆ. ಆರ್ಥಿಕ ಪ್ರಗತಿ ಉತ್ತಮವಾಗಿರುತ್ತದೆ. ಹಳೆಯ ಸ್ನೇಹಿತರ ಭೇಟಿಯಿಂದ ಮನಸ್ಸಿಗೆ ಸಂತೋಷವಾಗಲಿದೆ. ಸಮಾಜದಲ್ಲಿ ಗೌರವ ಪ್ರತಿಷ್ಠೆಗಳು ಹೆಚ್ಚಾಗಲಿವೆ. ಪ್ರೇಮ ಜೀವನದಲ್ಲಿ ಮಧುರತೆ ಇರಲಿದ್ದು, ಮನೋಕಾಮನೆಗಳು ಈಡೇರಲಿವೆ.

ತುಲಾ ರಾಶಿ:

​ಶುಕ್ರನ ತ್ರಿಂಶಾಂಶ ಮತ್ತು ಚಂದ್ರನ ವರ್ಗಗಳು ನಿಮ್ಮ ವೃತ್ತಿ ಜೀವನದ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತವೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ಸೃಜನಶೀಲ ಕೆಲಸಗಳಲ್ಲಿ ತೊಡಗಿರುವವರಿಗೆ ಉತ್ತಮ ಪ್ರಗತಿ ಇದೆ. ಉನ್ನತ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಏರ್ಪಡಲಿದ್ದು, ಹೊಸ ಜವಾಬ್ದಾರಿಗಳು ಸಿಗಬಹುದು.

ವೃಶ್ಚಿಕ ರಾಶಿ :

ಬುಧನ ಈ ಸ್ಥಿತಿಯು ನಿಮ್ಮ ಭಾಗ್ಯೋದಯಕ್ಕೆ ಕಾರಣವಾಗಬಹುದು. ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ದೂರದ ಪ್ರಯಾಣ ಅಥವಾ ಪುಣ್ಯಕ್ಷೇತ್ರ ದರ್ಶನದ ಯೋಗವಿದೆ. ತಂದೆಯವರೊಂದಿಗೆ ಭಿನ್ನಾಭಿಪ್ರಾಯ ಬರದಂತೆ ನೋಡಿಕೊಳ್ಳಿ. ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ಸಿಗಲಿದೆ.

ಧನು ರಾಶಿ :

​ಬುಧನು ಚಂದ್ರನ ವರ್ಗಗಳಲ್ಲಟ್ಟಿರುವುದು ನಿಮಗೆ ಸ್ವಲ್ಪ ಜಾಗರೂಕತೆಯ ಸಂದೇಶವನ್ನು ನೀಡುತ್ತದೆ. ಹಠಾತ್ ಧನಲಾಭದ ಯೋಗವಿದ್ದರೂ ಆರೋಗ್ಯದ ಕಡೆಗೆ ವಿಶೇಷ ಗಮನ ಹರಿಸಬೇಕು. ಚರ್ಮ ಅಥವಾ ಉದರ ಸಂಬಂಧಿ ಸಣ್ಣಪುಟ್ಟ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಸಾಲ ನೀಡುವಾಗ ಅಥವಾ ತೆಗೆದುಕೊಳ್ಳುವಾಗ ಎಚ್ಚರಿಕೆ ಅಗತ್ಯ. ಮಾತು ನಿಯಂತ್ರಣದಲ್ಲಿರಲಿ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಮಕರ ರಾಶಿ:

​ನಿಮ್ಮ ಸಪ್ತಮ ಭಾವದಲ್ಲಿ ಬುಧನ ಈ ವರ್ಗಗಳ ಪ್ರಭಾವ ಹೆಚ್ಚಿರುತ್ತದೆ. ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಸಾಮರಸ್ಯ ಹೆಚ್ಚಾಗಲಿದೆ. ಸಂಗಾತಿಯ ಹೆಸರಿನಲ್ಲಿ ಮಾಡುವ ವ್ಯವಹಾರಗಳು ಲಾಭ ತರಲಿವೆ. ಹೊಸ ಪಾಲುದಾರಿಕೆ ವ್ಯವಹಾರಕ್ಕೆ ಇದು ಸೂಕ್ತ ಸಮಯ. ಸಮಾಜದಲ್ಲಿ ನಿಮ್ಮ ಜನಪ್ರಿಯತೆ ಹೆಚ್ಚುತ್ತದೆ.

ಕುಂಭ ರಾಶಿ :

ಬುಧನ ಈ ಸ್ಥಿತಿಯು ನಿಮಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜಯವನ್ನು ತಂದುಕೊಡಲಿದೆ. ಶತ್ರುಗಳ ಮೇಲೆ ಜಯ ಸಿಗಲಿದೆ. ಕೋರ್ಟ್ ಕಚೇರಿ ಕೆಲಸಗಳಲ್ಲಿ ಪ್ರಗತಿ ಕಂಡುಬರಲಿದೆ. ಆದರೆ ಚಂದ್ರನ ವರ್ಗಗಳ ಪ್ರಭಾವದಿಂದಾಗಿ ಸಣ್ಣಪುಟ್ಟ ವಿಷಯಗಳಿಗೂ ಆತಂಕ ಪಡುವ ಸ್ವಭಾವ ಹೆಚ್ಚಾಗಬಹುದು. ನೌಕರಿಯಲ್ಲಿರುವವರಿಗೆ ಸಹೋದ್ಯೋಗಿಗಳಿಂದ ಸಹಕಾರ ಸಿಗಲಿದೆ.

ಮೀನ ರಾಶಿ :

ಬುಧನು ಪಂಚಮ ಸ್ಥಾನದ ಪ್ರಭಾವದಲ್ಲಿರುವುದರಿಂದ ಅತ್ಯಂತ ಶುಭ ಫಲಗಳನ್ನು ನಿರೀಕ್ಷಿಸಬಹುದು. ಕಲ್ಪನಾಶಕ್ತಿ ಮತ್ತು ಸೃಜನಶೀಲತೆ ಅದ್ಭುತವಾಗಿರುತ್ತದೆ. ಲೇಖಕರು, ಶಿಕ್ಷಕರು ಮತ್ತು ಸಲಹೆಗಾರರಿಗೆ ಅತ್ಯಂತ ಲಾಭದಾಯಕ ಸಮಯ. ಮಕ್ಕಳಿಂದ ಶುಭ ವಾರ್ತೆ ಕೇಳುವಿರಿ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಯೋಚಿಸಿ ಮುನ್ನಡೆಯಿರಿ.

​- ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​: ಯಾರಿಗೆಲ್ಲ ಧನ್ಯವಾದ ಹೇಳಿದ್ರು ನೋಡಿ – Kannada News

ಬೆಂಗಳೂರು, ಜೂನ್​​ 03: ಕರ್ನಾಟಕದ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾದ ಡಾ. ಜಿ. ಪರಮೇಶ್ವರ್ ಅವರು, ತಮ್ಮನ್ನು ಈ ಮಹತ್ವದ ಹುದ್ದೆಗೆ ಆಯ್ಕೆ ಮಾಡಿದ ಪಕ್ಷದ ಹೈಕಮಾಂಡ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ಕೆ.ಸಿ. ವೇಣುಗೋಪಾಲ್ ಅವರಿಗೆ ವಿಶೇಷ ಧನ್ಯವಾದಗಳನ್ನು ಹೇಳಿದ್ದಾರೆ. ತನ್ನ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ನಂಬಿಕೆಗೆ ತಾನು ಆಭಾರಿಯಾಗಿರುವುದಾಗಿ ಡಾ. ಪರಮೇಶ್ವರ್ ತಿಳಿಸಿದ್ದು, ಇದೊಂದು ಸುವರ್ಣಾವಕಾಶ ಎಂದು ಬಣ್ಣಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸೌರವ್ ಗಂಗೂಲಿಗೆ ಬಿಗ್ ಶಾಕ್ ನೀಡಿದ ಪಶ್ಚಿಮ ಬಂಗಾಳ ಸರ್ಕಾರ – Kannada News

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರವನ್ನು ಹೀನಾಯವಾಗಿ ಸೋಲಿಸಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಸುವೆಂದು ಅಧಿಕಾರಿ ನೇತೃತ್ವದ ಬಿಜೆಪಿ (BJP) ಸರ್ಕಾರ ತನ್ನ ಕ್ರಾಂತಿ ಕಾರಿ ನಿರ್ಧಾರಗಳ ಮೂಲಕ ಪಶ್ಚಿಮ ಬಂಗಾಳದಲ್ಲಿ ಬದಲಾವಣೆಗಳನ್ನು ತರಲಾರಂಭಿಸಿದೆ. ಈಗಾಗಲೇ ಆ ರೀತಿಯ ಕಾರ್ಯಗಳು ಶುರುವಾಗಿವೆ. ಇದೀಗ ಮತ್ತೊಂದು ಕೆಲಸಕ್ಕೆ ಕೈಹಾಕಿರುವ ಸರ್ಕಾರ, ವಿಐಪಿಗಳಿಗೆ (VIP) ನೀಡುತ್ತಿದ್ದ ಭದ್ರತೆಗಳಲ್ಲೂ ಬದಲಾವಣೆಗಳನ್ನು ತಂದಿದೆ. ಆ ಪ್ರಕಾರ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಅವರಿಗೆ ಇಷ್ಟು ದಿನ ನೀಡುತ್ತಿದ್ದ ‘Z’ ಕ್ಯಾಟಗರಿ ಭದ್ರತೆಯನ್ನು ‘Y’ ಕ್ಯಾಟಗರಿಗೆ ಇಳಿಸಲಾಗಿದೆ.

ಗಂಗೂಲಿಗೆ ಬಿಗ್ ಶಾಕ್

ಸೌರವ್ ಗಂಗೂಲಿಗೆ ದೇಶದಲ್ಲಿ ಮಾತ್ರವಲ್ಲದೆ ಪಶ್ಚಿಮ ಬಂಗಾಳದಲ್ಲೂ ಅಪಾರ ಕ್ರೇಜ್ ಇದೆ. ಅವರ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು, ಬಂಗಾಳ ಸರ್ಕಾರವು 2023 ರಲ್ಲಿ ಗಂಗೂಲಿಗೆ ನೀಡುತ್ತಿದ್ದ ಭದ್ರತೆಯನ್ನು ‘Y’ ಕ್ಯಾಟಗರಿಯಿಂದ ‘Z’ ಕ್ಯಾಟಗರಿಗೆ ಏರಿಸಿತ್ತು. ಇದೀಗ ಬಂಗಾಳದಲ್ಲಿ ನೂತನ ಸರ್ಕಾರ ಬಂದ ಬಳಿಕ ರಾಜ್ಯದ ರಕ್ಷಣಾ ಇಲಾಖೆಯ ಉನ್ನತ ಅಧಿಕಾರಿಗಳು ನಡೆಸಿದ ವಿಐಪಿ ಭದ್ರತೆ ಪರಿಶೀಲನೆಯಲ್ಲಿ ಗಂಗೂಲಿಗೆ ‘Z’ ಕ್ಯಾಟಗರಿಯ ಭದ್ರತೆ ಅಗತ್ಯವಿಲ್ಲ ಎಂಬುದು ತಿಳಿದು ಬಂದಿದೆ. ಗಂಗೂಲಿಗೆ ಯಾವುದೇ ನೇರ ಬೆದರಿಕೆ ಇಲ್ಲದ ಕಾರಣ ಭದ್ರತೆಯನ್ನು ಕಡಿಮೆ ಮಾಡಲಾಗಿದೆ ಎಂದು ವರದಿಯಾಗಿದೆ.

‘Y’ ಕ್ಯಾಟಗರಿ ಭದ್ರತೆ ಹೇಗಿರಲಿದೆ?

ಇಲ್ಲಿಯವರೆಗೆ ‘Z’ ಕ್ಯಾಟಗರಿಯ ಭದ್ರತೆಯಲ್ಲಿದ್ದ ಗಂಗೂಲಿ ಅವರನ್ನು ಸುಮಾರು 8 ರಿಂದ 10 ವಿಶೇಷ ಸಶಸ್ತ್ರ ಪೊಲೀಸರು ನಿರಂತರವಾಗಿ ಕಾವಲು ಕಾಯುತ್ತಿದ್ದರು. ಕೋಲ್ಕತ್ತಾದ ಬಹಾಲಾದಲ್ಲಿರುವ ಅವರ ನಿವಾಸದಲ್ಲಿದ್ದಾಗಲೆಲ್ಲಾ ಅವರನ್ನು ಸಶಸ್ತ್ರ ಪಡೆಗಳು ಗಸ್ತು ತಿರುಗುತ್ತಿದ್ದವು. ಇದಲ್ಲದೆ, ಅವರು ರಾಜ್ಯದಲ್ಲಿ ಎಲ್ಲಿಗೆ ಪ್ರಯಾಣಿಸಿದರೂ ವಿಶೇಷ ಬೆಂಗಾವಲು ವಾಹನಗಳು ಅವರೊಂದಿಗೆ ಇರುತ್ತಿದ್ದವು. ಇದೀಗ ‘Y’ ಕ್ಯಾಟಗರಿ ಭದ್ರತೆ ಅಡಿಯಲ್ಲಿ, ವಿಶೇಷ ಶಾಖೆಯ ಮೂವರು ಪೊಲೀಸರು ಗಂಗೂಲಿ ಅವರ ಭದ್ರತೆಯನ್ನು ನೋಡಿಕೊಳ್ಳಲಿದ್ದಾರೆ. ಅಲ್ಲದೆ, ಅವರ ನಿವಾಸದಲ್ಲಿ ಇನ್ನೂ ಮೂವರು ಸಿಬ್ಬಂದಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಕ್ರಿಕೆಟ್ ಜೊತೆಗೆ ಪಾಕಿಸ್ತಾನದೊಂದಿಗಿನ ಎಲ್ಲಾ ಸಂಬಂಧಕ್ಕೂ ಅಂತ್ಯ ಹಾಡಬೇಕು; ಸೌರವ್ ಗಂಗೂಲಿ

ಬಂಗಾಳ ಸರ್ಕಾರ ನೀಡಿದ ಸ್ಪಷ್ಟನೆ ಏನು?

ಈ ಭದ್ರತಾ ಕಡಿತವು ಸೌರವ್ ಗಂಗೂಲಿಗೆ ಮಾತ್ರವಲ್ಲ, ರಾಜ್ಯಾದ ಹಲವು ವಿಐಪಿಗಳಿಗೆ ನೀಡುತ್ತಿದ್ದ ಭದ್ರತೆಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಬಂಗಾಳ ಸರ್ಕಾರದ ಉನ್ನತ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಹೊಸ ಸರ್ಕಾರವು ವ್ಯಕ್ತಿಯ ಅಧಿಕೃತ ಸ್ಥಾನಮಾನ, ಪ್ರಸ್ತುತ ಸಾಂವಿಧಾನಿಕ ಸ್ಥಾನಮಾನ ಮತ್ತು ಅವರು ಎದುರಿಸುತ್ತಿರುವ ಬೆದರಿಕೆಯ ಮಟ್ಟವನ್ನು ಆಧರಿಸಿ ಭದ್ರತಾ ವ್ಯಾಪ್ತಿಯನ್ನು ಹಂಚಿಕೆ ಮಾಡಲು ನಿರ್ಧರಿಸಿದೆ. ಗಂಗೂಲಿ ಪ್ರಸ್ತುತ ಯಾವುದೇ ಸಕ್ರಿಯ ಅಧಿಕೃತ ಹುದ್ದೆಗಳನ್ನು ಹೊಂದಿಲ್ಲದ ಕಾರಣ ಭದ್ರತಾ ವ್ಯವಸ್ಥೆಗಳನ್ನು ಕಡಿಮೆ ಮಾಡಲಾಗಿದೆ ಎಂದು ವರದಿಯಾಗಿದೆ.

Source link

ಆನ್‌ಲೈನ್ ಜೂಜಿಗೆ ಬಿತ್ತು ಬ್ರೇಕ್: 127 ಹೋಸ್ಟಿಂಗ್ ಏಜೆನ್ಸಿಗಳ ಸಹಾಯ ಕೋರಿದ ಕರ್ನಾಟಕ ಸೈಬರ್ ಪೊಲೀಸರು! – Kannada News

ಬೆಂಗಳೂರು, ಜೂನ್ 03: ರಾಜ್ಯದಲ್ಲಿ ದಿನೇ ದಿನೇ ಯುವ ಪೀಳಿಗೆಯನ್ನು ದಾರಿ ತಪ್ಪಿಸುತ್ತಿರುವ ಅಕ್ರಮ ಆನ್‌ಲೈನ್ ಜೂಜು (Online Gambling) ಮತ್ತು ಬೆಟ್ಟಿಂಗ್ ದಂಧೆಯನ್ನು ಬೇರು ಸಮೇತ ಕಿತ್ತೆಸೆಯಲು ಕರ್ನಾಟಕ ಸೈಬರ್ ಕಮಾಂಡ್ ಭರ್ಜರಿ ಕಾರ್ಯಾಚರಣೆ ಆರಂಭಿಸಿದೆ. ಇಂಟರ್ನೆಟ್‌ನಲ್ಲಿ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ನೂರಾರು ಜೂಜಿನ ವೆಬ್‌ಸೈಟ್‌ಗಳು ಹಾಗೂ ಆ್ಯಪ್‌ಗಳನ್ನು ಶಾಶ್ವತವಾಗಿ ನಿರ್ಬಂಧಿಸಲು (Block) ಮತ್ತು ಅವುಗಳ ಡಿಜಿಟಲ್ ಹೆಜ್ಜೆಗುರುತುಗಳನ್ನು ಅಳಿಸಿಹಾಕಲು ದೇಶ ಹಾಗೂ ವಿದೇಶಗಳ ಒಟ್ಟು 127 ಪ್ರಮುಖ ವೆಬ್ ಹೋಸ್ಟಿಂಗ್ ಏಜೆನ್ಸಿಗಳ ಅಧಿಕೃತ ನೆರವನ್ನು ಕರ್ನಾಟಕ ಸೈಬರ್ ಕಮಾಂಡ್ ಮತ್ತು ಇನ್ಫಾರ್ಮೇಶನ್ ಸೆಕ್ಯುರಿಟಿ ಡಿವಿಷನ್ (CCISD) ಕೋರಿದೆ.

ಮುಖ್ಯಾಂಶಗಳು

  • ಅಕ್ರಮ ಆನ್‌ಲೈನ್ ಜೂಜು ತಡೆಯಲು ಕರ್ನಾಟಕ ಸೈಬರ್ ಕಮಾಂಡ್ ಭರ್ಜರಿ ಕಾರ್ಯಾಚರಣೆ.
  • ಕಾನೂನುಬಾಹಿರ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲು 127 ಹೋಸ್ಟಿಂಗ್ ಏಜೆನ್ಸಿಗಳ ಸಹಾಯಕ್ಕೆ ಕೋರಿಕೆ.
  • ಸಾರ್ವಜನಿಕರ ಹಣ ವಂಚಿಸುವ ಬೆಟ್ಟಿಂಗ್ ಆ್ಯಪ್‌ಗಳ ಸರ್ವರ್‌ಗಳನ್ನೇ ಸಂಪೂರ್ಣ ಮುಚ್ಚಿಸಲು ಕ್ರಮ.

ಹೋಸ್ಟಿಂಗ್ ಏಜೆನ್ಸಿಗಳಿಗೆ ಪತ್ರ

ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರ ಹಣವನ್ನು ದೋಚುತ್ತಿರುವ ಇಂತಹ ವಂಚಕ ಜೂಜಿನ ಅಪ್ಲಿಕೇಶನ್‌ಗಳ ಸರ್ವರ್‌ಗಳು ಹೆಚ್ಚಾಗಿ ವಿದೇಶಿ ಅಥವಾ ಖಾಸಗಿ ಹೋಸ್ಟಿಂಗ್ ಸಂಸ್ಥೆಗಳ ಸರ್ವರ್‌ಗಳಲ್ಲಿ ಇಂಟರ್ನೆಟ್ ಜಾಗವನ್ನು ಪಡೆದುಕೊಂಡಿರುತ್ತವೆ. ಇದರಿಂದಾಗಿ ಕೇವಲ ಲಿಂಕ್‌ಗಳನ್ನು ಬ್ಲಾಕ್ ಮಾಡಿದರೆ ಸಾಲದು, ಅವುಗಳ ಮೂಲ ಬೇರನ್ನೇ ಕತ್ತರಿಸಬೇಕಾದ ಅಗತ್ಯವಿದೆ. ಇದನ್ನರಿತ ಸೈಬರ್ ಪೊಲೀಸರು, ತಕ್ಷಣವೇ ಕಾರ್ಯಪ್ರವೃತ್ತರಾಗಿ ಆಯಾ ವೆಬ್‌ಸೈಟ್‌ಗಳಿಗೆ ಸರ್ವರ್ ಬ್ಯಾಕಪ್ ನೀಡುತ್ತಿರುವ 127 ಹೋಸ್ಟಿಂಗ್ ಏಜೆನ್ಸಿಗಳನ್ನು ಗುರುತಿಸಿ, ಅವುಗಳಿಗೆ ನೋಟಿಸ್ ಮಾದರಿಯ ಅಧಿಕೃತ ಪತ್ರಗಳನ್ನು ಬರೆದಿದ್ದಾರೆ. ಈ ಸಂಸ್ಥೆಗಳ ಸಹಯೋಗದೊಂದಿಗೆ ಅಕ್ರಮ ಸೈಟ್‌ಗಳನ್ನು ಸರ್ವರ್ ಮಟ್ಟದಲ್ಲೇ ಡಿಲೀಟ್ ಮಾಡಿಸುವುದು ಸೈಬರ್ ಕಮಾಂಡ್‌ನ ಪ್ರಮುಖ ಉದ್ದೇಶವಾಗಿದೆ.

ಇದನ್ನೂ ಓದಿ ಆನ್‌ಲೈನ್ ಬೆಟ್ಟಿಂಗ್ ವಿರುದ್ಧ ಪೊಲೀಸರ ಕಾರ್ಯಾಚರಣೆ: 8,750 ಕ್ಕೂ ಹೆಚ್ಚು ವೆಬ್‌ಸೈಟ್‌ಗಳು ಬ್ಲಾಕ್!

ಹಿರಿಯ ಪೊಲೀಸ್ ಅಧಿಕಾರಿಗಳ ವಿನಂತಿ

ಇಂಟರ್ನೆಟ್ ಸೇವಾ ಪೂರೈಕೆದಾರರು (ISPs) ಹಾಗೂ ಈ ಗ್ಲೋಬಲ್ ಹೋಸ್ಟಿಂಗ್ ಸಂಸ್ಥೆಗಳು ಒಟ್ಟಾಗಿ ಕೈಜೋಡಿಸಿದರೆ, ರಾಜ್ಯದ ಸಾರ್ವಜನಿಕರಿಗೆ ಇಂತಹ ಯಾವುದೇ ಬೆಟ್ಟಿಂಗ್ ಸೈಟ್‌ಗಳು ಸಿಗದಂತೆ ಸಂಪೂರ್ಣವಾಗಿ ನಿಯಂತ್ರಿಸಬಹುದು. ಹಣದ ಆಸೆಗೆ ಬಿದ್ದು ಇಂತಹ ಅನಧಿಕೃತ ಹಾಗೂ ನಕಲಿ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹೂಡಿಕೆ ಮಾಡಿ ಮೋಸ ಹೋಗದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಜನರಲ್ಲಿ ವಿನಂತಿಸಿದ್ದಾರೆ. ಅಲ್ಲದೆ, ಇಂಟರ್ನೆಟ್‌ನಲ್ಲಿ ಯಾವುದೇ ಸಂಶಯಾಸ್ಪದ ಬೆಟ್ಟಿಂಗ್ ಅಥವಾ ಜೂಜಿನ ಜಾಹೀರಾತುಗಳು, ಲಿಂಕ್‌ಗಳು ಕಂಡುಬಂದಲ್ಲಿ ತಕ್ಷಣವೇ ಸೈಬರ್ ಕ್ರೈಮ್ ವಿಭಾಗಕ್ಕೆ ಮಾಹಿತಿ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಡಿಜಿಟಲ್ ಸುರಕ್ಷತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ಪೊಲೀಸರು ಇಟ್ಟಿರುವ ಈ ಮಹತ್ವದ ಹೆಜ್ಜೆ ಸದ್ಯ ಸೈಬರ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Shiva Puja: ಶಿವಪೂಜೆಯಲ್ಲಿ ಶಂಖ ಏಕೆ ಬಳಸಬಾರದು? ಇದರ ಹಿಂದಿನ ಪೌರಾಣಿಕ ಮತ್ತು ಆಧ್ಯಾತ್ಮಿಕ ರಹಸ್ಯ ಇಲ್ಲಿ ತಿಳಿಯಿರಿ – Kannada News

ಹಿಂದೂ ಧರ್ಮದಲ್ಲಿ ಶಂಖದ ಧ್ವನಿಯನ್ನು ಅತ್ಯಂತ ಮಂಗಳಕರ ಮತ್ತು ಧನಾತ್ಮಕ ಶಕ್ತಿಯ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಆದರೆ, ಶ್ರಾವಣ ಮಾಸವಿರಲಿ ಅಥವಾ ಮಹಾಶಿವರಾತ್ರಿಯಿರಲಿ, ಶಿವನಿಗೆ ಜಲಾಭಿಷೇಕ ಮಾಡುವಾಗ ಅಥವಾ ಪೂಜಿಸುವಾಗ ಶಂಖವನ್ನು ಬಳಸಬಾರದು ಎಂದು ಶಾಸ್ತ್ರಗಳು ಹೇಳುತ್ತವೆ.

ಪೌರಾಣಿಕ ಕಾರಣ:

ಶಿವಪುರಾಣದಲ್ಲಿ ಉಲ್ಲೇಖವಾಗಿರುವಂತೆ, ಹಿಂದೆ ‘ಶಂಖಚೂಡ’ ಎಂಬ ಪ್ರಬಲ ರಾಕ್ಷಸನಿದ್ದನು. ಆತನ ಕಾಟದಿಂದ ದೇವತೆಗಳೆಲ್ಲರೂ ತತ್ತರಿಸಿದಾಗ, ಭಗವಾನ್ ಶಿವನು ತನ್ನ ತ್ರಿಶೂಲದಿಂದ ಆತನನ್ನು ಸಂಹರಿಸುತ್ತಾನೆ. ಶಂಖಚೂಡನ ದೇಹವು ಭಸ್ಮವಾಗಿ ಸಮುದ್ರದಲ್ಲಿ ಬಿದ್ದಾಗ, ಅದರಿಂದ ‘ಶಂಖ’ ಉದ್ಭವವಾಯಿತು ಎಂದು ಹೇಳಲಾಗುತ್ತದೆ.

ಕೆಲವು ಧರ್ಮಗ್ರಂಥಗಳಲ್ಲಿ ಶಂಖವನ್ನು “ಮೃತಜ” (ಮೃತದೇಹದಿಂದ ಹುಟ್ಟಿದ್ದು) ಎಂದು ಕರೆಯಲಾಗಿದೆ. ಶಿವನು ತಾನು ವಧಿಸಿದ ರಾಕ್ಷಸನ ಭಾಗದಿಂದ ಉತ್ಪನ್ನವಾದ ವಸ್ತುವನ್ನು ಪೂಜೆಯಲ್ಲಿ ಸ್ವೀಕರಿಸುವುದಿಲ್ಲ. ಆದ್ದರಿಂದಲೇ, ಶಿವಲಿಂಗಕ್ಕೆ ಶಂಖದಿಂದ ನೀರು ಅಥವಾ ಹಾಲನ್ನು ಅರ್ಪಿಸುವುದು ನಿಷಿದ್ಧವಾಗಿದೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಶಂಖವು ಶ್ರೀಹರಿಯ ಆಯುಧ ಮತ್ತು ವೈಷ್ಣವ ಸಂಕೇತ:

ಶಂಖವು ಲಕ್ಷ್ಮಿ ದೇವಿಯ ಸೋದರ (ಸಮುದ್ರ ಮಂಥನದಿಂದ ಜನಿಸಿದ್ದು) ಹಾಗೂ ಭಗವಾನ್ ವಿಷ್ಣುವಿನ ಪರಮ ಪ್ರಿಯವಾದ ಆಯುಧವಾಗಿದೆ. ಇದು ಮುಖ್ಯವಾಗಿ ವೈಷ್ಣವ ಸಂಪ್ರದಾಯ ಮತ್ತು ಲೌಕಿಕ ಸಮೃದ್ಧಿಗೆ ಸಂಬಂಧಿಸಿದ್ದಾಗಿದೆ. ಶಂಖದ ಧ್ವನಿಯು ವಿಜಯ, ವೈಭವ ಮತ್ತು ಐಶ್ವರ್ಯವನ್ನು ಪ್ರತಿನಿಧಿಸುತ್ತದೆ. ಆದರೆ, ಶಿವನು ಎಲ್ಲವನ್ನೂ ತ್ಯಜಿಸಿದ ವೈರಾಗ್ಯ ಮೂರ್ತಿ.

ಶಿವನು ನಿರ್ಲಿಪ್ತತೆಯ ಹಾಗೂ ಮೌನದ ದೇವರು:

ಶ್ರೀಹರಿ ವಿಷ್ಣುವು ಜಗತ್ತಿನ ಪಾಲಕನಾಗಿದ್ದು, ಆತನ ಆರಾಧನೆಯು ವೈಭವದಿಂದ ಕೂಡಿರುತ್ತದೆ. ಅದಕ್ಕೆ ವ್ಯತಿರಿಕ್ತವಾಗಿ, ಶಿವನು ಕೈಲಾಸದಲ್ಲಿ ಅಥವಾ ಶ್ಮಶಾನದಲ್ಲಿ ವಾಸಿಸುವ ತಪಸ್ವಿ. ಶಿವನನ್ನು ಯೋಗ, ಧ್ಯಾನ, ಮೌನ ಮತ್ತು ಏಕಾಗ್ರತೆಯ ಮೂಲಕ ಪೂಜಿಸಲಾಗುತ್ತದೆ. ಶಂಖದ ತೀವ್ರವಾದ ಧ್ವನಿಯು ಧ್ಯಾನಸ್ಥನಾಗಿರುವ ಶಿವನ ಮೌನಕ್ಕೆ ಭಂಗ ತರುತ್ತದೆ ಎಂಬ ನಂಬಿಕೆಯಿದೆ.

ಶಿವನ ಆರಾಧನೆಯಲ್ಲಿ ಬಾಹ್ಯ ಅಬ್ಬರಕ್ಕಿಂತ ಆಂತರಿಕ ಶಾಂತಿ ಮತ್ತು ಮೌನ ಧ್ಯಾನಕ್ಕೆ ಅತಿ ಹೆಚ್ಚಿನ ಪ್ರಾಮುಖ್ಯತೆ ಇದೆ. ಮೌನವಾಗಿ ಮಾಡುವ ಶಿವಸ್ಮರಣೆಯು ಕೋಟಿ ಪಟ್ಟು ಹೆಚ್ಚು ಫಲಪ್ರದ ನೀಡುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version