ವಾಷಿಂಗ್ಟನ್, ಏಪ್ರಿಲ್ 06: ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿರುವ ಶ್ವೇತಭವನ(White House)ದ ಬಳಿ ಗುಂಡಿನ ಚಕಮಕಿ ನಡೆದಿದೆ. ಆ ಸಮಯದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದೊಳಗೆ ಇದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಘಟನೆಯ ಬಳಿಕ ಭದ್ರತಾ ಸಂಸ್ಥೆಗಳನ್ನು ಹೆಚ್ಚಿನ ಎಚ್ಚರಿಕೆ ನೀಡಲಾಗಿದೆ. ಭಾನುವಾರ ಮುಂಜಾನೆ ಶ್ವೇತಭವನದ ಎದುರಿನ ಲಫಯೆಟ್ಟೆ ಪಾರ್ಕ್ ಬಳಿ ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಬಂದೂಕುಧಾರಿ ತಲೆಮರೆಸಿಕೊಂಡಿದ್ದಾನೆ ಮತ್ತು ಪ್ರಸ್ತುತ ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಶ್ವೇತಭವನದಲ್ಲಿ ಕಾರ್ಯಾಚರಣೆಗಳು ಎಂದಿನಂತೆ ಮುಂದುವರಿದಿದ್ದರೂ, ಭದ್ರತಾ ಕ್ರಮಗಳನ್ನು ಗಮನಾರ್ಹವಾಗಿ ಬಿಗಿಗೊಳಿಸಲಾಗಿದೆ.
ಮೆಟ್ರೋಪಾಲಿಟನ್ ಪೊಲೀಸ್ ಇಲಾಖೆ ಮತ್ತು ಯುಎಸ್ ಪಾರ್ಕ್ ಪೊಲೀಸರೊಂದಿಗೆ ಕೆಲಸ ಮಾಡುತ್ತಿರುವ ತನ್ನ ತಂಡವು ಶಂಕಿತ ವ್ಯಕ್ತಿ ಮತ್ತು ವಾಹನಕ್ಕಾಗಿ ಹುಡುಕಾಟ ನಡೆಸುತ್ತಿದೆ ಎಂದು ಸೀಕ್ರೆಟ್ ಸರ್ವಿಸ್ ವರದಿ ಮಾಡಿದೆ.
ಗುಂಡಿನ ದಾಳಿಯ ಹಿಂದಿನ ಉದ್ದೇಶವೂ ಸ್ಪಷ್ಟವಾಗಿಲ್ಲ. ಕಳೆದ ಕೆಲವು ವಾರಗಳಿಂದ ನವೀಕರಣಕ್ಕಾಗಿ ಲಫಯೆಟ್ಟೆ ಪಾರ್ಕ್ ಮುಚ್ಚಲ್ಪಟ್ಟಿದೆ ಮತ್ತು ಪ್ರಸ್ತುತ ಬ್ಯಾರಿಕೇಡ್ಗಳಿಂದ ಆವೃತವಾಗಿದೆ. ಇನ್ನೊಂದೆಡೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸಾಮಾಜಿಕ ಮಾಧ್ಯಮದಲ್ಲಿ ಹರಡುತ್ತಿರುವ ಊಹಾಪೋಹಗಳನ್ನು ಶ್ವೇತಭವನ ತಳ್ಳಿಹಾಕಿದೆ.
ಕೆಲವು ಎಕ್ಸ್ ಪೋಸ್ಟ್ಗಳಲ್ಲಿ ಟ್ರಂಪ್ ಅವರನ್ನು ವಾಲ್ಟರ್ ರೀಡ್ ರಾಷ್ಟ್ರೀಯ ಮಿಲಿಟರಿ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ ಎಂದು ಹೇಳಿಕೊಂಡಿದ್ದವು. ಈ ವೀಡಿಯೊ 2024 ರಲ್ಲಿ ಟ್ರಂಪ್ ಗುಂಡಿನ ದಾಳಿಯಲ್ಲಿ ಗಾಯಗೊಂಡ ನಂತರ ಪೆನ್ಸಿಲ್ವೇನಿಯಾದ ಬಟ್ಲರ್ನಲ್ಲಿರುವ ಆಸ್ಪತ್ರೆಯಿಂದ ಬಿಡುಗಡೆಯಾದಾಗ ತೆಗೆದ ವಿಡಿಯೋ ಎಂದು ಹೇಳಲಾಗುತ್ತಿದೆ.
ಶ್ವೇತಭವನವು ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ, ಆದರೆ ಪೊಲೀಸರು ಭದ್ರತೆಯನ್ನು ಬಿಗಿಗೊಳಿಸಿದ್ದಾರೆ. ಜುಲೈ 13, 2024 ರಂದು, ಒಂದು ರ್ಯಾಲಿಯಲ್ಲಿ ಗುಂಡು ಅವರ ಹತ್ತಿರ ಹಾದುಹೋಗಿತ್ತು ಕಿವಿ ಭಾಗಕ್ಕೆ ಪೆಟ್ಟಾಗಿತ್ತು. ರಯಾನ್ ರೋತ್ ಎಂಬ ವ್ಯಕ್ತಿಯನ್ನು ಅವರ ಗಾಲ್ಫ್ ಕ್ಲಬ್ ಬಳಿ ದಾಳಿ ನಡೆಸಲು ಯೋಜಿಸಿದ್ದಕ್ಕಾಗಿ ಬಂಧಿಸಲಾಗಿತ್ತು.
ಕಳೆದ ಎರಡು ತಿಂಗಳುಗಳಿಂದ ಇಸ್ರೇಲ್-ಅಮೆರಿಕ ಸೇರಿ ಇರಾನ್ ಮೇಲೆ ದಾಳಿ ನಡೆಸುತ್ತಿದೆ, ಇರಾನ್ ಕೂಡ ಪ್ರತೀಕಾರ ತೀರಿಸಿಕೊಳ್ಳಲು ಸರಿಯಾದ ಸಮಯಕ್ಕಾಗಿ ಕಾಯುತ್ತಿದೆ. ಈ ಸಂದರ್ಭದಲ್ಲಿ ಶ್ವೇತಭವನದ ಬಳಿ ನಡೆದ ದಾಳಿಯು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಬೆಂಗಳೂರು (ಏ. 06): ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಭಾನುವಾರದ ಪಂದ್ಯ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದು, ಇದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 43 ರನ್ಗಳಿಂದ ಸೋಲಿಸಿತು. ಈ ಮೂಲಕ ಆರ್ಸಿಬಿ ಟೂರ್ನಿಯಲ್ಲಿ ಸತತ ಎರಡನೇ ಜಯ ಕಂಡು ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನಕ್ಕೇರಿದೆ. ಅತ್ತ ಸಿಎಸ್ಕೆ ಈ ಋತುವಿನಲ್ಲಿ ಸತತ ಮೂರನೇ ಸೋಲನ್ನು ಅನುಭವಿಸಿತು. 251 ರನ್ಗಳ ಗುರಿಯನ್ನು ಬೆನ್ನಟ್ಟಿದ ಚೆನ್ನೈ 19.4 ಓವರ್ಗಳಲ್ಲಿ 207 ರನ್ಗಳಿಗೆ ಆಲೌಟ್ ಆಯಿತು. ಚೆನ್ನೈ ನಾಯಕ ರುತುರಾಜ್ ಗಾಯಕ್ವಾಡ್ ಸೋಲಿನ ನಂತರ ನಿರಾಶೆಗೊಂಡರು.
ಆರ್ಸಿಬಿ ವಿರುದ್ಧದ ಸೋಲಿನ ಬಳಿಕ ರುತುರಾಜ್ ಗಾಯಕ್ವಾಡ್ ಹೇಳಿದ್ದೇನು?
ತಮ್ಮ ಬ್ಯಾಟಿಂಗ್ ಮತ್ತು ತಂಡದ ಹೋರಾಟದ ಬಗ್ಗೆ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ರುತುರಾಜ್, “ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನನಗೂ ಆಶ್ಚರ್ಯವಾಯಿತು. ಸರ್ಫರಾಜ್ ಖಾನ್, ಪ್ರಶಾಂತ್ ವೀರ್, ಜೇಮಿ ಓವರ್ಟನ್ ಮತ್ತು ಸ್ವಲ್ಪ ಮಟ್ಟಿಗೆ ಶಿವಂ ದುಬೆ ಉತ್ತಮ ಹೋರಾಟ ತೋರಿಸಿದರು ಮತ್ತು ಕೊನೆಯವರೆಗೂ ಪ್ರಯತ್ನಪಟ್ಟರು. ನಾನು ಮೇಲಿನ ಕ್ರಮಾಂಕದಲ್ಲಿ ಸ್ವಲ್ಪ ಉತ್ತಮ ಕೊಡುಗೆ ನೀಡಿದ್ದರೆ, ಯಾರಿಗೆ ಗೊತ್ತು, ಬಹುಶಃ ನಾವು ಈ ಗುರಿಯನ್ನು ಸಾಧಿಸಬಹುದಿತ್ತು. ಆದ್ದರಿಂದ, ಇಂದಿನ ಸೋಲಿನ ಜವಾಬ್ದಾರಿ ಖಂಡಿತವಾಗಿಯೂ ನನ್ನ ಮೇಲಿದೆ.” ಎಂದು ಹೇಳಿದ್ದಾರೆ.
ಪಂದ್ಯದ ತಿರುವು ಆರ್ಸಿಬಿ ಬ್ಯಾಟ್ಸ್ಮನ್ ಟಿಮ್ ಡೇವಿಡ್ ಅವರ ಪ್ರದರ್ಶನ ಎಂದು ರುತುರಾಜ್ ಹೇಳಿದರು. “ಅನ್ಶುಲ್ ಕಾಂಬೋಜ್ ತಮ್ಮ (ಡೇವಿಡ್) ವಿಕೆಟ್ ಅನ್ನು ಬಹುತೇಕ ತೆಗೆದುಕೊಂಡರು. ಅದು ನೋ-ಬಾಲ್ ಆಗಿ ಬದಲಾಯಿತು ಎಂಬುದು ದುರದೃಷ್ಟಕರ. ಆದರೆ ಆ ಜೀವದಾನದ ನಂತರ, ಅವರು ಮೈದಾನದ ಪ್ರತಿಯೊಂದು ಮೂಲೆಗೂ ಹೊಡೆತಗಳನ್ನು ಹೊಡೆದರು. ಅವರು ಬ್ಯಾಟಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು.”
ಫೀಲ್ಡಿಂಗ್ ದೋಷಗಳು ಮತ್ತು ವಿರಾಟ್ ಕೊಹ್ಲಿಗೆ ನೀಡಿದ ಜೀವದಾನ ಸೋಲಿಗೆ ಪ್ರಮುಖ ಕಾರಣ ಎಂದು ರುತುರಾಜ್ ಉಲ್ಲೇಖಿಸಿದರು. “ನಾವು ವಿರಾಟ್ ಕೊಹ್ಲಿಯನ್ನು ಇನ್ನಿಂಗ್ಸ್ನ ಆರಂಭದಲ್ಲಿಯೇ ಕ್ಯಾಚ್ ಹಿಡಿದಿದ್ದರೆ, ನಮಗೆ ಆವೇಗ ಸಿಗುತ್ತಿತ್ತು. ಇದರ ಹೊರತಾಗಿಯೂ, 13-14ನೇ ಓವರ್ವರೆಗೆ ಪಂದ್ಯ ನಮ್ಮ ಕೈಯಲ್ಲಿತ್ತು ಎಂದು ನಾನು ಭಾವಿಸುತ್ತೇನೆ, ಆದರೆ ಅಲ್ಲಿಂದ ಆವೇಗ ಸಂಪೂರ್ಣವಾಗಿ ಆರ್ಸಿಬಿ ಪರವಾಗಿ ಬದಲಾಯಿತು, ನಾವು ಹಿಂದೆ ಬಿದ್ದೆವು” ಎಂದು ಅವರು ಹೇಳಿದರು.
ಆರ್ಸಿಬಿ ನೀಡಿದ್ದ 251 ರನ್ಗಳ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ನಾಯಕ ರುತುರಾಜ್ ಗಾಯಕ್ವಾಡ್ ಕೇವಲ 7 ರನ್ಗಳಿಗೆ ಔಟಾದರು. ಮತ್ತೊಂದೆಡೆ, ಸಂಜು ಸ್ಯಾಮ್ಸನ್ 5 ಎಸೆತಗಳಲ್ಲಿ 9 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ಆಯುಷ್ ಮ್ಹಾತ್ರೆ ಕೂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಕಾರ್ತಿಕ್ ಶರ್ಮಾ ಸತತ ಮೂರನೇ ಪಂದ್ಯದಲ್ಲೂ ನಿರಾಸೆ ಮೂಡಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
IPL 2026: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ದಾಂಡಿಗರು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೊಸ ಇತಿಹಾಸ ಬರೆದಿದೆ. ಅದು ಕೂಡ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ವಿರುದ್ಧ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 11ನೇ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್ಕೆ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು.
ಈ ಸಿಡಿಲಬ್ಬರದ ಬ್ಯಾಟಿಂಗ್ನೊಂದಿಗೆ ಆರ್ಸಿಬಿ ದಾಂಡಿಗರು 20 ಓವರ್ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 250 ರನ್ಗಳು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 250 ರನ್ಗಳಿಸಿದ ಮೊದಲ ತಂಡವೆಂಬ ಹೆಗ್ಗಳಿಕೆ ಆರ್ಸಿಬಿ ಪಾಲಾಯಿತು.
ಕಳೆದ 18 ವರ್ಷಗಳಲ್ಲಿ ಸಿಎಸ್ಕೆ ವಿರುದ್ಧ ಯಾವುದೇ ತಂಡ 235 ಕ್ಕಿಂತ ಹೆಚ್ಚಿನ ಸ್ಕೋರ್ಗಳಿಸಲು ಸಾಧ್ಯವಾಗಿರಲಿಲ್ಲ. 2014 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ 2024 ರಲ್ಲಿ ಗುಜರಾತ್ ಟೈಟಾನ್ಸ್ ತಂಡವು 231 ರನ್ಗಳಿಸಿದ್ದು ಈವರೆಗಿನ ಶ್ರೇಷ್ಠ ಸಾಧನೆಯಾಗಿತ್ತು.
ಆದರೆ ಈ ಬಾರಿ ಆರ್ಸಿಬಿ ದಾಂಡಿಗರು ಸಿಎಸ್ಕೆ ತಂಡದ ಎಲ್ಲಾ ಲೆಕ್ಕಾಚಾರಗಳನ್ನು ತಲೆ ಕೆಳಗಾಗಿಸಿದ್ದಾರೆ. 20 ಓವರ್ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲರ್ಗಳನ್ನು ಚೆಂಡಾಡುವ ಮೂಲಕ ಬರೋಬ್ಬರಿ 250 ರನ್ ಚಚ್ಚಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ 5 ಬಾರಿಯ ಚಾಂಪಿಯನ್ ಸಿಎಸ್ಕೆ ವಿರುದ್ಧ 250 ರನ್ ಕಲೆಹಾಕಿದ ಮೊದಲ ತಂಡವೆಂಬ ಹೆಗ್ಗಳಿಕೆಯನ್ನು ಆರ್ಸಿಬಿ ತಂಡ ತನ್ನದಾಗಿಸಿಕೊಂಡಿದೆ.
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಏಪ್ರಿಲ್ 6, ಸೋಮವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷ, ಚೌತಿ ತಿಥಿಯಾಗಿದೆ. ಇಂದು ಡಾ. ಬಸವರಾಜ ಗುರೂಜಿಯವರು ಪ್ರತಿ ರಾಶಿಯವರಿಗೂ ಆರೋಗ್ಯ, ಆರ್ಥಿಕ ಸ್ಥಿತಿ, ಉದ್ಯೋಗ, ವ್ಯಾಪಾರ, ಕುಟುಂಬ ಮತ್ತು ವೈಯಕ್ತಿಕ ಸಂಬಂಧಗಳ ಕುರಿತು ವಿವರವಾದ ಸಲಹೆಗಳನ್ನು ನೀಡಿದ್ದಾರೆ.
ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಯಾವ ಹುತ್ತಕ್ಕೆ ಹಾಲೆರೆಯಬೇಕು, ಯಾವ ಹುತ್ತಕ್ಕೆ ಪೂಜೆ ಮಾಡಬೇಕು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ.ಹುತ್ತಕ್ಕೆ ಹಾಲೆರೆಯುವುದು, ನೈವೇದ್ಯ ಅರ್ಪಿಸುವುದು ಸಾಮಾನ್ಯ ಆಚರಣೆಗಳು. ಹುತ್ತಗಳಲ್ಲಿ ಎರಡು ಮುಖ್ಯ ವಿಧಗಳಿವೆ: ದೊಡ್ಡ ಕಿಂಡಿಗಳನ್ನು ಹೊಂದಿರುವ ಹುತ್ತಗಳನ್ನು ಹೆಣ್ಣು ಹುತ್ತ ಎಂದೂ, ಗೋಪುರದ ಆಕಾರದಲ್ಲಿ ಬೆಳೆಯುವ ಹುತ್ತಗಳನ್ನು ಗಂಡು ಹುತ್ತ ಎಂದೂ ಪರಿಗಣಿಸಲಾಗುತ್ತದೆ. ವಾಲ್ಮೀಕಿ ಮಹರ್ಷಿಗಳು ಹುತ್ತದಲ್ಲಿ ತಪಸ್ಸು ಮಾಡಿದ ಕಾರಣ ಅವರಿಗೆ ವಾಲ್ಮೀಕಿ ಎಂಬ ಹೆಸರು ಬಂತು ಎಂಬ ನಂಬಿಕೆಯಿದೆ.
ನಾಗದೋಷ ನಿವಾರಣೆ, ಸಂತಾನ ಪ್ರಾಪ್ತಿ, ಚರ್ಮ ಮತ್ತು ಕಣ್ಣಿನ ತೊಂದರೆಗಳು, ಕುಜದೋಷ ನಿವಾರಣೆ ಹಾಗೂ ಸುಖ ಶಾಂತಿ ನೆಮ್ಮದಿಗಾಗಿ ಹುತ್ತ ಪೂಜೆ ಮಾಡಲಾಗುತ್ತದೆ. ಪೂರ್ವಜರು ಹುತ್ತಗಳನ್ನು ಶಕ್ತಿ ಕೇಂದ್ರಗಳೆಂದು ಕರೆದಿದ್ದಾರೆ. ಇವುಗಳಲ್ಲಿ ತ್ರಿಶಕ್ತಿಗಳ ಸಂಗಮವಿರುತ್ತದೆ ಎಂದು ನಂಬಲಾಗಿದೆ. ಅರಳಿ ಮರದ ಬಳಿ, ದೇವಾಲಯದ ಸನಿಹ, ನವಗ್ರಹಗಳ ಪಕ್ಕ, ಮತ್ತು ನಾಗರ ಕಲ್ಲುಗಳ ಹತ್ತಿರ ಇರುವ ಹುತ್ತಗಳು ಅತ್ಯಂತ ಪವಿತ್ರ ಮತ್ತು ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ. ಈ ಜಾಗಗಳಲ್ಲಿ ಸುಬ್ರಹ್ಮಣ್ಯ ಮತ್ತು ಆದಿಶಕ್ತಿಯ ಆವಾಸ ಇರುತ್ತದೆ ಎಂಬ ನಂಬಿಕೆಯಿದೆ. ಮಂಗಳವಾರ, ಶುಕ್ರವಾರ, ನಾಗರ ಪಂಚಮಿ, ಷಷ್ಠಿ, ಸುಬ್ರಹ್ಮಣ್ಯ ಷಷ್ಠಿ, ಸಂಕಷ್ಟಹರ ಚತುರ್ಥಿ ದಿನಗಳಂದು ಹುತ್ತ ಪೂಜೆ ಮಾಡಲಾಗುತ್ತದೆ. ಎಂದು ಗುರೂಜಿ ಹೇಳಿದ್ದಾರೆ.
ಬೆಂಗಳೂರು, ಏ.6: ದೇಶದಲ್ಲಿ ಗ್ಯಾಸ್ ಕೊರತೆಗಳು ಹೆಚ್ಚಾಗಿದೆ. ಇರಾನ್, ಇಸ್ರೇಲ್, ಅಮೆರಿಕ ಯುದ್ದದಿಂದ ಜಗತ್ತು ಸಂಕಷ್ಟಕ್ಕೆ ಸಿಲುಕಿದೆ. ಇದರ ಪರಿಣಾಮ ಭಾರತದಲ್ಲೂ ಕಂಡು ಬಂದಿದೆ. ಇನ್ನು ಬೆಂಗಳೂರಿನಲ್ಲಿ ಈ ಸಮಸ್ಯೆಯ ಬಗ್ಗೆ ಕೇಳುವುದೇ ಬೇಡ. ಅದರಲ್ಲೂ ಆಟೋ ಚಾಲಕರು ಇದರಿಂದ ಭಾರೀ ಸಂಕಷ್ಟಕ್ಕೆ ಒಳಗಾಗಿದ್ದಾರೆ. ದಿನ ಪೂರ್ತಿ, ಆಟೋಗೆ ಗ್ಯಾಸ್ ಹಾಕಲು ಕ್ಯೂ ನಿಲ್ಲಬೇಕು. ಅದು ಕೂಡ ಸಿಗುತ್ತದೆ ಎಂಬ ಗ್ಯಾರಂಟಿ ಇಲ್ಲ. ಬೆಂಗಳೂರಿನ ಜೀವನನಾಡಿ ಎನಿಸಿರುವ ಆಟೋ ರಿಕ್ಷಾ ಚಾಲಕರು ಇದೀಗ ಭೀಕರ ಎಲ್ಪಿಜಿ ಅಭಾವದಿಂದ ಕಂಗಾಲಾಗಿದ್ದಾರೆ. ಇಂಧನ ಕೇಂದ್ರಗಳಲ್ಲಿ ಕಿಲೋಮೀಟರ್ಗಟ್ಟಲೆ ಉದ್ದದ ಸಾಲು ಮತ್ತು ಅನಿಶ್ಚಿತ ಪೂರೈಕೆಯಿಂದಾಗಿ ದೈನಂದಿನ ಜೀವನ ನಡೆಸುವುದು ಕಷ್ಟವಾಗಿದೆ.
ಈ ಬಿಕ್ಕಟ್ಟು ಈಗ ಅನೇಕ ಚಾಲಕರು ಎಲೆಕ್ಟ್ರಿಕ್ ಆಟೋಗಳ ಬಗ್ಗೆ ಗಂಭೀರವಾಗಿ ಆಲೋಚಿಸುವಂತೆ ಮಾಡಿದೆ. ಬನಶಂಕರಿಯ ಇಕ್ಬಾಲ್ ಸಾಬ್ ಎಂಬ ಎಲೆಕ್ಟ್ರಿಕ್ ಆಟೋ ಚಾಲಕನ ಪ್ರಕಾರ, ಪ್ರತಿದಿನ ಅನೇಕ ಎಲ್ಪಿಜಿ ಆಟೋ ಚಾಲಕರು ಬಂದು ಇವಿ ಆಟೋದ ಬೆಲೆ, ಚಾರ್ಜಿಂಗ್ ಸಮಯ ಮತ್ತು ಮೈಲೇಜ್ ಬಗ್ಗೆ ವಿಚಾರಿಸುತ್ತಿದ್ದಾರೆ. ಒಮ್ಮೆ ಚಾರ್ಜ್ ಮಾಡಿದರೆ 5 ಗಂಟೆಗಳಿಗೂ ಹೆಚ್ಚು ಕಾಲ ಓಡಿಸಬಹುದು ಮತ್ತು ಕಿಲೋಮೀಟರ್ಗೆ ಕೇವಲ 50 ಪೈಸೆ ಖರ್ಚಾಗುತ್ತದೆ ಎಂದು ಅವರಿಗೆ ಮಾಹಿತಿ ನೀಡಿದ್ದಾರೆ.
ಇನ್ನು ಈ ಎಲೆಕ್ಟ್ರಿಕ್ ಆಟೋಗಳು ತಿಂಗಳಿಗೆ ಕೇವಲ 500 ರೂಪಾಯಿಗಿಂತ ಕಡಿಮೆ ಮೇಂಟೆನೆನ್ಸ್ ಖರ್ಚು. ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ ಏರುತ್ತಿರುವ ಇಂಧನ ಬೆಲೆಗಳಿಂದ ಇದು ಮುಕ್ತಿ ನೀಡುತ್ತದೆ ಎಂಬುದು ಅನೇಕರ ಯೋಚನೆ ಆಗಿದೆ. ಶಬ್ದರಹಿತ, ಹೆಚ್ಚು ಸ್ಥಳಾವಕಾಶ ಮತ್ತು ಉತ್ತಮ ಸಸ್ಪೆನ್ಷನ್ ಇರುವುದರಿಂದ ಪ್ರಯಾಣಿಕರಿಗೂ ಇದು ಇಷ್ಟವಾಗುತ್ತಿದೆ. ಎಲೆಕ್ಟ್ರಿಕ್ ಆಟೋಗಳ ಬಗ್ಗೆ ಆಸಕ್ತಿ ಹೆಚ್ಚಿದ್ದರೂ, ಅದರ ಬೆಲೆ ದೊಡ್ಡ ಹೊರೆಯಾಗಿದೆ.
ಎಲೆಕ್ಟ್ರಿಕ್ ಆಟೋ ಬೆಲೆಯೂ 3.33 ಲಕ್ಷ ರೂ.ಯಿಂದ 3.47 ಲಕ್ಷ ರೂ ವರೆಗೆ ಇದೆ. ಎಲ್ಪಿಜಿ ಆಟೋ ಬೆಲೆ 2.22 ಲಕ್ಷದಿಂದ, 2.53 ಲಕ್ಷ ರೂ. ವರೆಗೆ ಇದೆ. ಸುಮಾರು 80 ಸಾವಿರದಿಂದ 1.25 ಲಕ್ಷ ರೂಪಾಯಿಗಳ ವ್ಯತ್ಯಾಸವು ಸಾಮಾನ್ಯ ಚಾಲಕರಿಗೆ ಭರಿಸಲಾಗದ ಮೊತ್ತವಾಗಿದೆ. ಹಳೆಯ ಆಟೋಗಳನ್ನು ಮಾರಿ ಹೊಸದನ್ನು ಕೊಳ್ಳುವುದು ಸದ್ಯದ ಪರಿಸ್ಥಿತಿಯಲ್ಲಿ ಸವಾಲಾಗಿದೆ. ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಕೆಲವು ಟೀಕೆಗಳೂ ಇವೆ. ಚಾರ್ಜಿಂಗ್ ಸ್ಟೇಷನ್ಗಳ ಕೊರತೆ, ಬ್ಯಾಟರಿ ಬಾಳಿಕೆ ಮತ್ತು ಮೆಕಾನಿಕ್ಗಳ ಅಲಭ್ಯತೆ ಚಾಲಕರನ್ನು ಕಾಡುತ್ತಿದೆ. ಅಲ್ಲದೆ, ಭಾರತದಲ್ಲಿ ಹೆಚ್ಚಿನ ವಿದ್ಯುತ್ ಕಲ್ಲಿದ್ದಲಿನಿಂದ ತಯಾರಾಗುವುದರಿಂದ ಪರಿಸರಕ್ಕೆ ಆಗುವ ಲಾಭ ತೀರಾ ಕಡಿಮೆ ಎಂಬ ವಾದವೂ ಇದೆ.
ಹುಬ್ಬಳ್ಳಿ, ಏ.6: ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣಕ್ಕೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸಮೀರ್ ಲೀಲೆಗಳು ಒಂದೊಂದಾಗಿ ಬಯಲು ಆಗುತ್ತಿದೆ. ಜಿಮ್ ಟ್ರೈನರ್ ಮಾಡಿದ ಒಂದೊಂದು ಕಹಾನಿಯ ಬಗ್ಗೆ ದಿನಕ್ಕೊಂದು ಹುಡುಗಿಯರು ಬಂದು ದೂರು ನೀಡುತ್ತಿದ್ದಾರೆ. ಇದೀಗ ಮತ್ತೊಂದು ಹುಡುಗಿ ಬಂದು ದೂರು ನೀಡಿದ್ದಾರೆ. ಈ ಬಗ್ಗೆ ಸಂಪೂರ್ಣ ವರದಿ ಇಲ್ಲಿದೆ ನೋಡಿ. ಇದರ ಜತೆಗೆ ಈಗಾಗಲೇ ದೂರು ನೀಡಿರುವ ಸಂತ್ರಸ್ತ ಯುವತಿಯನ್ನು ತನ್ನ ಐಷಾರಾಮಿ ಜೀವನಕ್ಕಾಗಿ ‘ಎಟಿಎಂ’ ತರಹ ಬಳಸಿಕೊಂಡಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಆರೋಪಿ ಸಮೀರ್ ಮುಲ್ಲಾ ಸಂತ್ರಸ್ತ ಯುವತಿಯಿಂದ ಕಳೆದ ಎರಡು ವರ್ಷಗಳಲ್ಲಿ ಸಾವಿರಾರು ರೂಪಾಯಿಗಳನ್ನು ಹಣ ಪಡೆದಿದ್ದಾನೆ. 30 ರೂಪಾಯಿಯಿಂದ ಹಿಡಿದು 25 ಸಾವಿರ ರೂಪಾಯಿವರೆಗೆ ಫೋನ್ ಪೇ (PhonePe) ಮೂಲಕ ಹಣ ಹಾಕಿಸಿಕೊಂಡಿರುವ ಸ್ಕ್ರೀನ್ಶಾಟ್ಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. “ನಿನ್ನ ವಿಡಿಯೋಗಳನ್ನು ವೈರಲ್ ಮಾಡುತ್ತೇನೆ” ಎಂದು ಬೆದರಿಸಿ ಯುವತಿಯಿಂದ ಹಣ ಕೀಳುತ್ತಿದ್ದ ಎನ್ನಲಾಗಿದೆ. ಬ್ರ್ಯಾಂಡೆಡ್ ಬಟ್ಟೆಗಳನ್ನು ಧರಿಸಲು ಮತ್ತು ಹೈಫೈ ಜೀವನ ನಡೆಸಲು ಯುವತಿಯ ಹಣವನ್ನೇ ಈತ ಬಳಸುತ್ತಿದ್ದನು.
ಕೇವಲ ಈ ಸಂತ್ರಸ್ತ ಯುವತಿ ಮಾತ್ರವಲ್ಲದೆ, ಜಿಮ್ಗೆ ಬರುತ್ತಿದ್ದ ಇನ್ನೋರ್ವ ಹಿಂದೂ ಧರ್ಮದ ಯುವತಿಯೊಂದಿಗೂ ಸಮೀರ್ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಆಕೆಯ ಮೇಲೆಯೂ ಲೈಂಗಿಕ ದೌರ್ಜನ್ಯ ಎಸಗಿ ವಿಡಿಯೋ ಮಾಡಿಟ್ಟುಕೊಂಡಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಶ್ರೀರಾಮಸೇನೆ ಸಂಘಟನೆ ದೌರ್ಜನ್ಯಕ್ಕೊಳಗಾದ ಇನ್ನೊಬ್ಬ ಯುವತಿಯನ್ನು ಭೇಟಿಯಾಗಲು ಸಂಘಟನೆಯ ಕಾರ್ಯಕರ್ತರು ಯತ್ನಿಸುತ್ತಿದ್ದಾರೆ. “ಧೈರ್ಯವಾಗಿ ಮುಂದೆ ಬಂದು ದೂರು ನೀಡಿ, ನಾವು ನಿಮ್ಮ ಜೊತೆಗಿದ್ದೇವೆ” ಎಂದು ಸಂಘಟನೆಯ ಮುಖಂಡರು ಯುವತಿಯ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ.
ರೋಮ್, ಏ.6: ಭವಿಷ್ಯದ ಕನಸು ಹೊತ್ತು ಸಮುದ್ರ ಮಾರ್ಗದ ಮೂಲಕ ಯುರೋಪ್ ತಲುಪಲು ಯತ್ನಿಸುತ್ತಿದ್ದ ವಲಸಿಗರಿಗೆ ಮಹಾಮೃತ್ಯು ಎದುರಾಗಿದೆ. ಇಟಲಿ ಕರಾವಳಿಯಲ್ಲಿ ಸಂಭವಿಸಿದ ಭೀಕರ ಬೋಟ್ ದುರಂತದಲ್ಲಿ 71 ವಲಸಿಗರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುವ ಆತಂಕ ಎದುರಾಗಿದೆ.
ಲಿಬಿಯಾದಿಂದ ಯುರೋಪ್ಗೆ ಹೊರಟಿದ್ದ ಈ ಬೋಟ್ನಲ್ಲಿ ಒಟ್ಟು 105 ಜನರಿದ್ದರು ಎಂದು ಬದುಕುಳಿದವರು ತಿಳಿಸಿದ್ದಾರೆ. ಈಸ್ಟರ್ ರಜಾದಿನಗಳ ಸಂದರ್ಭದಲ್ಲಿ ಈ ಪ್ರಯಾಣವನ್ನು ಮಾಡಲಾತ್ತು. ಸಂತೋಷದಿಂದ ರಜೆ ದಿನವನ್ನು ಕಳೆಯುವ ಎಂದವರಿಗೆ ದೊಡ್ಡ ಅಘಾತವೇ ಕಾಯುತ್ತಿತ್ತು.ಆದರೆ, ಮೆಡಿಟರೇನಿಯನ್ ಸಮುದ್ರದ ಭೀಕರ ಅಲೆಗಳು ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಬೋಟ್ ಭಾಗಶಃ ಮುಳುಗಿದೆ ಎಂದು ಹೇಳಲಾಗಿದೆ
ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸಿ 32 ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿವೆ. ದುರದೃಷ್ಟವಶಾತ್ ಇಬ್ಬರ ಶವಗಳು ಪತ್ತೆಯಾಗಿದ್ದು, ಇನ್ನುಳಿದ 71 ಜನರ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರುವುದರಿಂದ ಕಾರ್ಯಾಚರಣೆಗೆ ಅಡ್ಡಿಯುಂಟಾಗುತ್ತಿದೆ ಎಂದು ಇಟಲಿ ಅಧಿಕಾರಿಗಳು ತಿಳಿಸಿದ್ದಾರೆ.
ಮೆಡಿಟರೇನಿಯನ್ ಸಮುದ್ರವು ವಿಶ್ವದ ಅತ್ಯಂತ ಅಪಾಯಕಾರಿ ಪ್ರದೇಶವಾಗಿ ಮಾರ್ಪಟ್ಟಿದೆ. ಹಳೆಯ ಮತ್ತು ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ತುಂಬಿದ ಬೋಟ್ಗಳ ಮೂಲಕ ನಡೆಯುವ ಇಂತಹ ಪ್ರಯಾಣಗಳು ಪದೇ ಪದೇ ಇಂತಹ ದುರಂತಗಳಿಗೆ ಕಾರಣವಾಗುತ್ತಿವೆ. ಅಕ್ರಮ ವಲಸೆಯನ್ನು ತಡೆಗಟ್ಟಲು ಮತ್ತು ಸುರಕ್ಷಿತ ಮಾರ್ಗಗಳನ್ನು ಕಲ್ಪಿಸಲು ಅಂತರಾಷ್ಟ್ರೀಯ ಸಮುದಾಯವು ತಕ್ಷಣ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ.
ಕೆಲಸದಲ್ಲಿರುವ ಅಧಿಕಾರಿಗಳಿಗೆ ನಿಮ್ಮ ಸಲಹೆಯನ್ನು ಕೊಡಲು ಹೋಗಬೇಡಿ. ನೀವು ಸುಲಭವಾಗಿ ಜನರ ವಿಶ್ವಾಸವನ್ನು ಗಳಿಸುವಿರಿ. ನಿಮ್ಮ ಪ್ರಗತಿಗೆ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ನೀವು ವಹಿಸಿಕೊಂಡ ಕಾಮಗಾರಿಯ ವೇಗ ಹೆಚ್ಚಳ. ಆದರೆ ಅದರ ಬಗ್ಗೆ ಸಾಕಷ್ಟು ಯೋಚಿಸಿ ಮುಂದುವರಿಯಿರಿ. ಸ್ವಭಾವವು ಬಹಳ ತೀವ್ರವಾಗಿ ಇರಲಿದೆ. ಯಾರ ಮಾತನ್ನೂ ಕೇಳವ ಸಹನೆ ಇರದು. ಪ್ರತಿಸ್ಪರ್ಧಿಗಳಿಗೆ ಸರಿಯಾದ ಸ್ಪರ್ಧೆಯನ್ನು ಕೊಡುವಿರಿ. ನಿಮ್ಮ ನಿರ್ಧಾರಗಳೇ ಅಂತಿಮವಾಗಬೇಕು ಎನ್ನುವ ಮನಃಸ್ಥಿತಿ ಇರುವುದು.
ವೃಷಭ ರಾಶಿ:
ಕಛೇರಿಯಲ್ಲಿ ನಿಮ್ಮ ಕೆಲಸಗಳನ್ನು ಕಂಡು ನಿಮ್ಮನ್ನು ಪ್ರಶಂಸಿಸುವರು. ಹೊಸ ಕೆಲಸವನ್ನು ಆರಂಭಿಸುವ ಹುನ್ನಾರ ನಡೆಸುವಿರಿ. ನಿಮ್ಮ ಒತ್ತಡವನ್ನು ಅನ್ಯರ ಮೇಲೆ ಹಾಕುವಿರಿ. ನಿಮ್ಮನ್ನು ಇಷ್ಟಪಟ್ಟವರೊಡನೆ ಸಮಯವನ್ನು ಕಳೆಯಿರಿ. ನಿಮ್ಮ ಕೆಲಸದ ಮೇಲೆ ನೀವು ಸಂಪೂರ್ಣ ಗಮನವಿಲ್ಲದೇ ಯಾವುದೋ ಯೋಚನೆಯಲ್ಲಿ ಎಡವಟ್ಟು ಮಾಡಿಕೊಳ್ಳುವಿರಿ. ನಿಮ್ಮ ಪ್ರತಿಭೆಗೆ ಯೋಗ್ಯವಾದ ಕಾರ್ಯವು ಸಿಗುವುದು. ಭೂಮಿಯ ವ್ಯವಹಾರವನ್ನು ಒಂಟಿಯಾಗಿ ನಿರ್ವಹಿಸುವಿರಿ.
ಮಿಥುನ ರಾಶಿ:
ಒಂದಿಲ್ಲೊಂದು ವಿಷಯಗಳಿಂದ ಸುಖವನ್ನು ಪಡೆಯುವ ನಿಮಗೆ ಮುಂಬರುವ ವಿಷಯಗಳನ್ನು ಹೇಗೆ ನಿಭಾಯಿಸಬೇಕು ಎನ್ನುವ ಸ್ಪಷ್ಟತೆಯನ್ನು ಇಟ್ಟುಕೊಂಡಿರುತ್ತೀರಿ. ಶತ್ರುಗಳಿಂದ ಎಚ್ಚರವಾಗಿರಿ. ಇಂದು ನಿಮ್ಮ ಪ್ರಮುಖ ಕೆಲಸಗಳು ವೇಗದಿಂದ ಸಾಗುವುದು. ನಿಮಗೆ ಅಯಾಚಿತವಾಗಿ ಬರುವ ಶುಭಸಂದರ್ಭವನ್ನು ಸಂತೋಷಿಸುವಿರಿ. ಹಳೆಯ ಯೋಜನೆಗಳಿಗೆ ಪುನಶ್ಚೇತನವನ್ನು ನೀಡುವಿರಿ. ಪ್ರಭಾವೀ ಶತ್ರುಗಳನ್ನು ನೀವು ಸೋಲಿಸುವಿರಿ.
ಕರ್ಕಾಟಕ ರಾಶಿ:
ಉದ್ಯಮಿಗಳಿಗೆ ವ್ಯಾಪಾರಕ್ಕೆ ಸಂಬಂಧಿಸಿದ ಅನಿರೀಕ್ಷಿತ ಪ್ರಯಾಣವು ಬರಲಿದೆ. ಯಾರಿಗಾದರೂ ಕಾದು ಸಮಯವು ಹಾಳಾಗುವುದು. ನಿಮಗೆ ಸಂಬಂಧಗಳಲ್ಲಿ ಗೌರವವನ್ನು ಕಾಪಾಡಿಕೊಳ್ಳುವುದು ಕಷ್ಟವಾದೀತು. ನ್ಯಾಯಾಂಗದ ವಿಷಯಗಳಲ್ಲಿ ನೀವು ತಾಳ್ಮೆಯನ್ನು ಕಾಪಾಡಿಕೊಳ್ಳಬೇಕು. ಜಾಣ್ಮೆಯಿಂದ ನಿಮ್ಮ ಕೆಲಸವನ್ನು ಬೇಗ ಪೂರ್ಣಮಾಡುವಿರಿ. ಉದ್ಯೋಗದಲ್ಲಿ ಹೊಸ ವಿಚಾರಗಳನ್ನು ನೀವು ಕಲಿಯಬೇಕಾಗುವುದು. ಕಳೆದುಕೊಂಡಷ್ಟು ವೇಗವಾಗಿ ಉಳಿಸಿಕೊಳ್ಳುವುದು ಕಷ್ಟವೆನಿಸುವುದು.
ಸಿಂಹ ರಾಶಿ:
ಮದದಲ್ಲಿ ಬುದ್ಧಿಯನ್ನೂ ಸ್ಥಳವನ್ನೂ ಸಂದರ್ಭವನ್ನೂ ವ್ಯಕ್ತಿಯನ್ನೂ ನಗಣ್ಯಗೊಳಿಸಬೇಡಿ. ನಿಮ್ಮ ನೇರ ಮಾತಿನಿಂದ ತೊಂದರೆ ಆಗಬಹುದು. ಪ್ರೇಮದಲ್ಲಿ ಯಾರನ್ನಾದರೂ ನಿಮ್ಮವರನ್ನಾಗಿ ಮಾಡಿಕೊಳ್ಳುವ ಕಲೆ ನಿಮಗೆ ತಿಳಿದುಬರುವುದು. ನಿಮ್ಮ ಕುಟುಂಬದ ಬಗ್ಗೆ ಹೆಮ್ಮೆಯ ಭಾವ ಮೂಡುತ್ತದೆ. ಮನೆಯಲ್ಲಿಯೇ ವಾಸಿಸುವವರು ಸಣ್ಣ ಆದಾಯದ ಬಗ್ಗೆ ಆಲೋಚಿಸುವಿರಿ. ಯಾರಾದರೂ ಮುಖಸ್ತುತಿಯನ್ನು ಮಾಡಬಹುದು. ಮುಜುಗರವೂ ನಿಮಗೆ ಆದೀತು. ಅತಿಯಾದ ನಂಬಿಕೆಯು ನಿಮ್ಮ ಮೌಲ್ಯಯುತ ವಸ್ತುಗಳನ್ನು ಕಳೆದುಕೊಳ್ಳುವಂತೆ ಮಾಡುವುದು.
ಕನ್ಯಾ ರಾಶಿ:
ಮಾನಸಿಕ ಸ್ಥಿತಿ ಬಲಾಢ್ಯವಾಗಿರಲಿ. ಅಲ್ಲಿಯ ತನಕ ತಾಳ್ಮೆಯಿಂದ ಇರಬೇಕಾದ ಕರ್ತವ್ಯವಿದೆ. ಒಳ್ಳೆಯವರ ಸಂಗ ಸಿಗಬಹುದು. ಸಿಗದಿದ್ದರೆ ನೀವೇ ಹೋಗಿ. ಒಳ್ಳೆಯ ಪುಸ್ತಕವನ್ನು ತಂದು ಓದಿ. ಸ್ನೇಹಿತನ ಕೆಲಸವನ್ನು ಅದು ಮಾಡುವುದು. ಇಂದು ನಿಮ್ಮ ಭಾವನೆಗಳನ್ನು ನಿಯಂತ್ರಿಸಲಾಗದೇ ಎಲ್ಲವನ್ನೂ ಹೊರಹಾಕುವಿರಿ. ನೀವು ಮನೆಯ ಸೌಂದರ್ಯದ ಬಗ್ಗೆ ಹೆಚ್ಚು ಗಮನ ಇರಲಿದೆ. ಉದ್ಯೋಗದ ಕಾರಣ ದೂರ ಪ್ರಯಾಣ ಮಾಡಲು ಇಷ್ಟವಾಗದು. ರಾಜಕೀಯವಾಗಿ ಹಿನ್ನಡೆಯಾಗಬಹುದು. ನಿಮ್ಮದಾದ ದ್ವೀಪವನ್ನು ಮಾಡಿಕೊಂಡು ನೀವಿರುವಿರಿ.
ತುಲಾ ರಾಶಿ:
ಇಷ್ಟಮಿತ್ರರ ಭೇಟಿಯಿಂದ ಖುಷಿಯು ಹೆಚ್ಚಾಗುವುದು. ವಿಶ್ವಾಸಘಾತಕ ಕಾರ್ಯಗಳಿಗೆ ಮುನ್ನುಗ್ಗಲು ಯಾರಿಂದಲಾದರೂ ಪ್ರೇರಣೆ ಸಿಕ್ಕೀತು. ಪೆಟ್ಟು ತಿಂದರೆ ಮತ್ತೇಳುವುದು ಕಷ್ಟ. ಯಾವುದೇ ಕಾರಣಕ್ಕೂ ಬಿಟ್ಟುಕೊಡಲು ಇಷ್ಟಪಡಲಾರಿರಿ. ಎಲ್ಲರ ಜೊತೆ ಬೆರೆಯುವುದು ನಿಮಗೆ ಖುಷಿಯ ವಿಚಾರವಾಗಲಿದೆ. ಪ್ರಯಾಣದಲ್ಲಿ ಯಾವುದೇ ತೊಂದರೆಗಳು ಬಾರದು. ಕೆಲವು ಜನರ ಭೇಟಿಯು ನಿಮಗೆ ಖುಷಿ ಕೊಡುವುದು. ಹೂಡಿಕೆಯ ವಿಚಾರದಲ್ಲಿ ಸಮಸ್ಯೆಯಾಗಬಹುದು.
ವೃಶ್ಚಿಕ ರಾಶಿ:
ಸದ್ದಿಲ್ಲದೇ ಮಾಡುವ ಸಾಮಾಜಿಕ ಕಾರ್ಯಕ್ಕೆ ಪ್ರಶಂಸೆ. ಕಲಾವಿದರಿಗೆ ವಿಶೇಷ ಗೌರವ. ಸಿಟ್ಟಿನ ಮೂಟೆಯನ್ನು ಕೆಳಗಿಳಿಸಿ. ಆಗ ಸಿಗುವ ಆನಂದಕ್ಕೆ ಬೆಲೆಯೆಷ್ಟು? ನಿಮ್ಮ ಆಲೋಚನೆಗಳನ್ನು ಇತರ ಜೊತೆ ಹಂಚಿಕೊಂಡರೆ ನಿಮ್ಮ ಸ್ಥಾನಕ್ಕೆ ಚ್ಯುತಿ ಬಂದೀತು. ನಿಮ್ಮ ಕಾರ್ಯಗಳಿಂದ ಪ್ರೀತಿಪಾತ್ರರ ಹೃದಯವನ್ನು ಗೆಲ್ಲಲು ಸಫಲರಾಗುವಿರಿ. ಬಹಳ ದಿನಗಳ ಅನಂತರ ನಿಮ್ಮ ಸಂಗಾತಿಯ ಜೊತೆ ಸ್ವಲ್ಪ ಸಮಯ ಕುಳಿತು ಆಪ್ತವಾಗಿ ಮಾತನಾಡುವಿರಿ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಿ ಹಣವನ್ನು ವ್ಯಯ ಮಾಡುವಿರಿ. ನಿಮಗೆ ಆಗಬೇಕಾದ ಕೆಲಸವನ್ನು ವಿವಾದ ಇಲ್ಲದೇ ಮಾಡಿಕೊಳ್ಳಿ.
ಧನು ರಾಶಿ:
ಬಹಳ ಉತ್ಸಾಹದಿಂದ ಉತ್ಸವಗಳಲ್ಲಿ ಭಾಗವಹಿಸುವಿರಿ. ದಿನಚರಿಯ ವ್ಯತ್ಯಾಸದಿಂದ ಆರೋಗ್ಯ ಕೆಡಬಹುದು. ಅನಿರೀಕ್ಷಿತ ಸಂಪತ್ತು ಸಿಗುವ ಸಾಧ್ಯತೆ ಇದೆ. ಮೇಲಧಿಕಾರಿಗಳಿಂದ ಪ್ರಗತಿ ಪರಿಶೀಲನೆ. ಬದಲಾವಣೆಗೆ ಸಲಹೆ. ಇಂದು ಬಂದ ಅತಿಥಿಯ ಜೊತೆ ಹರಟೆಯನ್ನು ಹೊಡೆಯುತ್ತೀರಿ. ಅವಿವಾಹಿತರ ಜೀವನದಲ್ಲಿ ಹೊಸ ಅತಿಥಿಯ ಆಗಮನದ ನಿರೀಕ್ಷೆಯು ಇರುವುದು. ವಾಹನ ಚಾಲನೆಯಲ್ಲಿ ಜಾಗರೂಕತೆ ಬೇಕು. ಆಧ್ಯಾತ್ಮದಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ.
ಮಕರ ರಾಶಿ:
ನ್ಯಾಯಾಲಯದಲ್ಲಿ ಇರುವ ಪ್ರಕರಣವು ನಿಮಗೆ ಸಮಾಧಾನ ನೀಡುವುದು. ಹಣದ ತೊಂದರೆಗೆ ಮನೆಯಿಂದ ಸಹಾಯ ದೊರೆಯಬಹುದು. ನಿಮಗೆ ಕಲಿಸಿದವರ ಒಡನಾಟವು ಬೆಳೆಯುವುದು. ಸಂಬಂಧಿಕರ ಜೊತೆ ವ್ಯವಹಾರವನ್ನು ಮಾಡಬೇಡಿ. ನಿಮ್ಮ ಆದಾಯ ಮತ್ತು ಖರ್ಚುಗಳನ್ನು ನೀವು ಸಮವಲ್ಲದಿದ್ದರೂ ತೊಂದರೆಯಾಗದಂತೆ ನಿಭಾಯಿಸುವಿರಿ. ಸಹೋದ್ಯೋಗಿಗಳ ಕಿರಿಕಿರಿಯಿಂದ ಉದ್ಯೋಗವನ್ನು ಬದಲಿಸುವಿರಿ. ಇಂದು ಸ್ತ್ರೀಯರಿಗೆ ಅನಿರೀಕ್ಷಿತ ತೊಂದರೆಗಳು ಇರಲಿದೆ.
ಕುಂಭ ರಾಶಿ:
ಇಂದು ಕುಟುಂಬದ ಅಪರೂಪದ ವ್ಯಕ್ತಿಗಳನ್ನು ಭೇಟಿಯಾಗುವ ಸಂದರ್ಭ ಬರಬಹುದು. ಆಪ್ತರನ್ನು ಕಳೆದುಕೊಳ್ಳುವ ಭೀತಿ. ಎಷ್ಟೋ ದಿನದ ಸಾಲ ಇಂದು ಮುಕ್ತಾಯಗೊಳ್ಳುವುದು. ಕಛೇರಿಯಲ್ಲಿ ಅನಿರೀಕ್ಷಿತ ಒತ್ತಡಗಳು ಕಾಣಿಸಿಕೊಳ್ಳುವುದು. ನೀವು ಯಾವುದೇ ಅವಲಂಬನೆ ಇಲ್ಲದೆ ಕೆಲಸ ಮಾಡಲು ಬಯಸುವುದಿಲ್ಲ. ವ್ಯಾಪಾರ ಮಾಡುವ ಜನರ ಜೊತೆ ಸೇರಿ ಕೆಲವು ಕೆಲಸಗಳನ್ನು ಮಾಡಲು ಅವಕಾಶವಿದೆ. ನೀವು ಎಣಿಸಿದ್ದನ್ನು ಬಂಧುಗಳು ಮಾಡಿಕೊಡುವರು.
ಮೀನ ರಾಶಿ:
ಬಹು ದಿನದಿಂದ ಸಿಗಬೇಕಿದ್ದ ಆಸ್ತಿ ಕೈ ತಪ್ಪಬಹುದು. ಹಿರಿಯ ಹಾಗೂ ಪ್ರಮುಖವ್ಯಕ್ತಿಗಳನ್ನು ಇಂದು ಭೇಟಿಯಾಗುತ್ತೀರಿ. ನೀವು ಮಾಡುವ ಕಾರ್ಯಕ್ಕೆ ಇತರರ ಸಹಾಯವೂ ಲಭ್ಯವಾಗಲಿದೆ. ನೀವು ಕ್ರಿಯಾ ಯೋಜನೆಯನ್ನು ತಯಾರಿಸಿದರೆ ಯಶಸ್ಸಿಗೆ ಸಮೀಪವಾಗುವಿರಿ. ಬಂಧುಗಳು ಮನೆಗೆ ಬಂದ ಕಾರಣ ಖರ್ಚು ಹೆಚ್ಚಾದೀತು. ನಿಮ್ಮ ಸಣ್ಣ ಮನಸ್ಸನ್ನು ಅವರಿಗೆ ತೋರಿಸಬೇಡಿ. ಉನ್ನತ ಅಧ್ಯಯನವನ್ನು ಬಯಸಿ ಬೇರೆ ಕಡೆಗೆ ತೆರಳುವಿರಿ.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ಉತ್ತರಾಭಾದ್ರ, ವಾರ : ಸೋಮ, ಪಕ್ಷ : ಕೃಷ್ಣ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಅನುರಾಧಾ, ಯೋಗ : ವಜ್ರ, ಕರಣ : ಗರಜ, ಸೂರ್ಯೋದಯ – 06 – 18 am, ಸೂರ್ಯಾಸ್ತ – 06 – 35 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:50 – 09:22, ಯಮಗಂಡ ಕಾಲ 10:55 – 12:27, ಗುಳಿಕ ಕಾಲ 13:59 – 15:31