ಲಾಹೋರ್ನ ಗದ್ದಾಫಿ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ್ ಸೂಪರ್ ಲೀಗ್ನ 11ನೇ ಪಂದ್ಯದಲ್ಲಿ ಲಾಹೋರ್ ಖಲಂದರ್ಸ್ ತಂಡ ಮುಲ್ತಾನ್ ಸುಲ್ತಾನ್ಸ್ ವಿರುದ್ಧ 20 ರನ್ಗಳ ಭರ್ಜರಿ ಜಯ ದಾಖಲಿಸಿದೆ. ಮಳೆಯಿಂದಾಗಿ 13 ಓವರ್ಗಳಿಗೆ ಸೀಮಿತಗೊಂಡಿದ್ದ ಈ ಪಂದ್ಯದಲ್ಲಿ ಲಾಹೋರ್ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿತು.
ಮೊದಲು ಬ್ಯಾಟಿಂಗ್ ಮಾಡಿದ ಲಾಹೋರ್ ಖಲಂದರ್ಸ್ ಕೇವಲ 13 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 185 ರನ್ ಪೇರಿಸಿತು. ಇದು ಪಿಎಸ್ಎಲ್ ಇತಿಹಾಸದಲ್ಲೇ ಅತ್ಯಧಿಕ ರನ್ ರೇಟ್ (14.23) ಹೊಂದಿದ ಇನ್ನಿಂಗ್ಸ್ ಎಂಬ ದಾಖಲೆಗೆ ಪಾತ್ರವಾಯಿತು.
ಲಾಹೋರ್ ಖಲಂದರ್ಸ್ ಪರ 28 ಎಸೆತಗಳನ್ನು ಎದುರಿಸಿದ ಮೊಹಮ್ಮದ್ ನಯೀಮ್ 4 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 60 ರನ್ ಚಚ್ಚಿದರು. ಇನ್ನು ಪರ್ವೇಜ್ ಹೊಸೈನ್ ಎಮನ: ಕೇವಲ 19 ಎಸೆತಗಳಲ್ಲಿ 5 ಸಿಕ್ಸರ್ಗಳ ನೆರವಿನಿಂದ 45 ರನ್ ಬಾರಿಸಿದರು. ಹಾಗೆಯೇ ಅಬ್ದುಲ್ಲಾ ಶಫೀಕ್ 14 ಎಸೆತಗಳಲ್ಲಿ 33 ರನ್ ಕೊಡುಗೆ ನೀಡುವ ಮೂಲಕ ಲಾಹೋರ್ ಖಲಂದರ್ಸ್ ತಂಡದ ಸ್ಕೋರ್ ಅನ್ನು 13 ಓವರ್ಗಳಲ್ಲಿ 185 ಕ್ಕೆ ತಂದು ನಿಲ್ಲಿಸಿದ್ದರು.
ಈ 186 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಮುಲ್ತಾನ್ ಸುಲ್ತಾನ್ಸ್ 13 ಓವರ್ಗಳಲ್ಲಿ 165 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು. ತಂಡದ ಪರ ನಾಯಕ ಆಷ್ಟನ್ ಟರ್ನರ್ ಕೇವಲ 22 ಎಸೆತಗಳಲ್ಲಿ ಅಜೇಯ 52 ರನ್ ಬಾರಿಸಿದರೂ ಜಯ ತಂದುಕೊಡಲು ಸಾಧ್ಯವಾಗಲಿಲ್ಲ.
ರಾಷ್ಟ್ರೀಯ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಅಪಾರ ಜನಪ್ರಿಯತೆ ಪಡೆದಿದ್ದಾರೆ. ಯಾವುದೇ ಹಿನ್ನೆಲೆ ಇಲ್ಲದೆ ಬಂದು ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಅವರು ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಸರಣಿ ಚಿತ್ರಗಳ ಮೂಲಕ ಮನರಂಜನೆ ನೀಡುತ್ತಾರೆ. ಈಗ, ಈ ನಟಿಯ ಖಾತೆಗೆ ಅಪರೂಪದ ಸಾಧನೆ ಸೇರ್ಪಡೆಯಾಗಿದೆ.
ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾದಲ್ಲಿ ಪ್ರಮುಖ ನಾಯಕಿಯಾಗಿ ತಮಗಾಗಿ ವಿಶೇಷ ಇಮೇಜ್ ಸೃಷ್ಟಿಸಿಕೊಂಡಿದ್ದಾರೆ. ಅಭಿಮಾನಿಗಳಿಂದ ಪ್ರೀತಿಯಿಂದ ನ್ಯಾಷನಲ್ ಕ್ರಶ್ ಎಂದು ಕರೆಯಲ್ಪಡುವ ಈ ನಟಿ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಹಳ ದಿನಗಳಿಂದ ವಿಜಯ್ ದೇವರಕೊಂಡ ಅವರನ್ನು ಪ್ರೀತಿಸುತ್ತಿದ್ದ ರಶ್ಮಿಕಾ, ಈ ವರ್ಷ ಎರಡೂ ಕುಟುಂಬಗಳ ಸಮ್ಮುಖದಲ್ಲಿ ವಿವಾಹವಾದರು. ಈಗ ರಶ್ಮಿಕಾ ತೆಲುಗು ಸೊಸೆ.
ಮತ್ತೊಂದೆಡೆ, ರಶ್ಮಿಕಾ ಇತ್ತೀಚೆಗೆ ಅತ್ಯುತ್ತಮ ನಟಿಗಾಗಿ ಗದ್ದರ್ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು. ಅವರು ಇತ್ತೀಚೆಗೆ ಮತ್ತೊಂದು ಅಂತರರಾಷ್ಟ್ರೀಯ ಸಾಧನೆ ಮಾಡಿದ್ದಾರೆ. ಜಪಾನ್ನಲ್ಲಿ ನಡೆಯಲಿರುವ ಅತ್ಯಂತ ಪ್ರತಿಷ್ಠಿತ ಕ್ರಂಚೈರೋಲ್ ಅನಿಮೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎರಡನೇ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ. ರಶ್ಮಿಕಾ ಈ ಹಿಂದೆ 2024 ರಲ್ಲಿ ಈ ವೇದಿಕೆಯಲ್ಲಿ ಮಿಂಚಿದ್ದರು. ಈಗ ಅವರು ಮತ್ತೊಮ್ಮೆ ಸದ್ದು ಮಾಡಲಿದ್ದಾರೆ.
ರಶ್ಮಿಕಾ ಎರಡು ಬಾರಿ ಈ ಗೌರವವನ್ನು ಪಡೆದ ಮೊದಲ ಭಾರತೀಯ ಚಲನಚಿತ್ರ ಸೆಲೆಬ್ರಿಟಿ ಎಂಬ ದಾಖಲೆಯನ್ನು ಸೃಷ್ಟಿಸಿದ್ದಾರೆ. ಅನಿಮೇಟೆಡ್ ಚಲನಚಿತ್ರಗಳು ಮತ್ತು ವೆಬ್ ಸರಣಿಗಳಲ್ಲಿ ಪ್ರತಿಭೆಯನ್ನು ತೋರಿಸಿದವರಿಗೆ ನೀಡಲಾಗುವ ಈ ಪ್ರಶಸ್ತಿಗಳ 10 ನೇ ಆವೃತ್ತಿಯು ಮೇ 23 ರಂದು ಟೋಕಿಯೊದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ, ಅವರು ಹಾಲಿವುಡ್ ಸೆಲೆಬ್ರಿಟಿಗಳೊಂದಿಗೆ ವಿಜೇತರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.
ಪುಷ್ಪ ಚಿತ್ರದಲ್ಲಿ ಶ್ರೀವಲ್ಲಿ ಪಾತ್ರದ ಮೂಲಕ ರಶ್ಮಿಕಾ ಜಪಾನ್ನಲ್ಲಿ ಭಾರಿ ಕ್ರೇಜ್ ಸೃಷ್ಟಿಸಿದರು. ರಶ್ಮಿಕಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.ಎಲ್ಲಕಿಂತ ಮುಖ್ಯವಾಗಿ ಅನಿಮೇ ಸಿನಿಮಾಗಳ ಬಗ್ಗೆ ಅವರಿಗೆ ಅಪಾರ ಆಸಕ್ತಿ ಇದೆ. ಅನಿಮಲ್, ಪುಷ್ಪ 2, ಕುಬೇರ, ಗರ್ಲ್ಫ್ರೆಂಡ್ ಮತ್ತು ತಮ್ಮಾ ಮುಂತಾದ ಚಿತ್ರಗಳೊಂದಿಗೆ ಸತತ ಹಿಟ್ಗಳನ್ನು ನೀಡಿದರು. ಅವರು ಪ್ರಸ್ತುತ ಮೈಸಾ ಮತ್ತು ರಣಬಲಿ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
ಬೆಂಗಳೂರು, ಏಪ್ರಿಲ್ 4: ಐಪಿಎಲ್ (IPL) ಪಂದ್ಯದ ವೇಳೆ ಕ್ರಿಕೆಟ್ ಪ್ರೇಮಿಗಳ ಸಂಭ್ರಮವನ್ನೇ ಬಂಡವಾಳ ಮಾಡಿಕೊಂಡಿದ್ದ ಅಂತರರಾಜ್ಯ ಕಳ್ಳರ ಜಾಲವನ್ನು ಕಬ್ಬನ್ ಪಾರ್ಕ್ ಪೊಲೀಸರು ಕೊನೆಗೂ ಪತ್ತೆಹಚ್ಚಿದ್ದಾರೆ. ಇದರೊಂದಿಗೆ, ಆರ್ಸಿಬಿ ಹಾಗೂ ಎಸ್ಆರ್ಎಚ್ (RCB vs SRH) ಪಂದ್ಯದ ವೇಳೆ ನಡೆದಿದ್ದ ಮೊಬೈಲ್ ಕಳ್ಳತನ ಪ್ರಕರಣದಲ್ಲಿ ಪೊಲೀಸರಿಗೆ ಮಹತ್ವದ ಯಶಸ್ಸು ದೊರೆತಂತಾಗಿದೆ. ಸದ್ಯ ಪೊಲೀಸರು 51 ಮೊಬೈಲ್ ಫೋನ್ಗಳನ್ನು ಜಪ್ತಿ ಮಾಡಿದ್ದಾರೆ.
ಆರ್ಸಿಬಿ ಟೀ ಶರ್ಟ್ ಧರಿಸಿ ಎಂಟ್ರಿ!
ಈ ಕಳ್ಳತನ ಜಾಲದಲ್ಲಿ ಭಾಗಿಯಾಗಿದ್ದ 18 ಅಪ್ರಾಪ್ತರು ಸೇರಿದಂತೆ ಒಟ್ಟು 19 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಪೈಕಿ ಒಬ್ಬನನ್ನು ಬಂಧಿಸಲಾಗಿದೆ. ವಿಶೇಷವೆಂದರೆ, ಈ ಕಳ್ಳರೆಲ್ಲರೂ ಜಾರ್ಖಂಡ್ ಮೂಲದವರಾಗಿದ್ದು, ಪಂದ್ಯದ ವೇಳೆ ಅಭಿಮಾನಿಗಳಂತೆ ಕಾಣಲು ಆರ್ಸಿಬಿ ತಂಡದ ಜೆರ್ಸಿ (T-shirt) ಧರಿಸುತ್ತಿದ್ದರು. ಅಭಿಮಾನಿಗಳಿಂದ ಟಿಕೆಟ್ಗಳನ್ನು ಕಸಿದುಕೊಂಡು ಅಥವಾ ಕಳ್ಳತನ ಮಾಡಿ ಕ್ರೀಡಾಂಗಣದ ಒಳಗೆ ಪ್ರವೇಶಿಸುತ್ತಿದ್ದ ಈ ಗ್ಯಾಂಗ್, ಜನಜಂಗುಳಿಯ ನಡುವೆ ಮೊಬೈಲ್ಗಳನ್ನು ಲಪಟಾಯಿಸುತ್ತಿತ್ತು.
ಮಾಸ್ಟರ್ ಮೈಂಡ್ ಬಂಧನ
ಈ ಬೃಹತ್ ಜಾಲದ ಹಿಂದೆ ಇದ್ದ ಮಾಸ್ಟರ್ ಮೈಂಡ್ ಶುಭಮ್ ಎಂಬಾತನನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಶುಭಮ್ ಮಾತ್ರ ವಯಸ್ಕನಾಗಿದ್ದು, ಉಳಿದ 18 ಮಂದಿ ಅಪ್ರಾಪ್ತ ಬಾಲಕರು. ಈ ಬಾಲಕರನ್ನು ಬಳಸಿಕೊಂಡು ಶುಭಮ್ ನಗರದ ವಿವಿಧೆಡೆ ಕಳ್ಳತನ ಮಾಡಿಸುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ.
ಕಳೆದ RCB vs SRH ಪಂದ್ಯದ ವೇಳೆ ಸ್ಟೇಡಿಯಂ ಒಳಗಡೆ ಹೋಗುವ ಗೇಟ್ಗಳ ಬಳಿ ಹಾಗೂ ಗ್ಯಾಲರಿಗಳಲ್ಲಿ ಅತಿ ಹೆಚ್ಚು ಮೊಬೈಲ್ ಕಳ್ಳತನವಾಗಿರುವ ಬಗ್ಗೆ ದೂರುಗಳು ದಾಖಲಾಗಿದ್ದವು. ಸದ್ಯ ಪೊಲೀಸರು ಕಳ್ಳತನವಾಗಿದ್ದ 51 ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಚಾಮರಾಜನಗರ, ಏಪ್ರಿಲ್ 04: ಜಿಲ್ಲೆಯ ಕೊಳ್ಳೇಗಾಲ ಹೊರವಲಯದಲ್ಲಿ ನಡೆದ ಡ್ರಗ್ಸ್ ಪಾರ್ಟಿ (Drugs Party)ಪ್ರಕರಣ ಸಂಚಲನ ಮೂಡಿಸಿದೆ. ಬೆಂಗಳೂರು ಮೂಲದ ರೌಡಿಶೀಟರ್ ಜಹೀರ್ ನೇತೃತ್ವದಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ಪಾರ್ಟಿ ಪೊಲೀಸರ ದಾಳಿ ವೇಳೆ ಬಯಲಾಗಿದೆ. ಜಹೀರ್ ಜನ್ಮದಿನದ ಅಂಗವಾಗಿ ವಿಶೇಷವಾಗಿ ಈ ಪಾರ್ಟಿ ಆಯೋಜಿಸಲಾಗಿತ್ತು ಎಂದು ತಿಳಿದುಬಂದಿದೆ.
15 ಮಂದಿ ಡ್ರಗ್ಸ್ ಸೇವಿಸಿರುವುದು ದೃಢ
ಪಾರ್ಟಿಯಲ್ಲಿ ಭಾಗಿಯಾದವರು ಗಾಂಜಾ ಹಾಗೂ ಚರಸ್ ಸೇವಿಸಿ ಮೋಜುಮಸ್ತಿಯಲ್ಲಿ ತೊಡಗಿದ್ದರು. ಬಳಿಕ ಪೊಲೀಸರು ನಡೆಸಿದ ವೈದ್ಯಕೀಯ ತಪಾಸಣೆಯಲ್ಲಿ 15 ಮಂದಿ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ. ಈ ಪಾರ್ಟಿ ಕೊಳ್ಳೇಗಾಲದ ಎ1 ಕಾಂಟ್ರಾಕ್ಟರ್ ಫಯಾಜ್ ಖಾನ್ ಅವರ ರೆಸಾರ್ಟ್ನಲ್ಲಿ ನಡೆದಿದ್ದು, ಈ ವಿಚಾರ ಇನ್ನಷ್ಟು ಚರ್ಚೆಗೆ ಗ್ರಾಸವಾಗಿದೆ. ಫಯಾಜ್ ಖಾನ್ ಪ್ರಭಾವಿ ರಾಜಕೀಯ ಸಂಪರ್ಕ ಹೊಂದಿರುವ ವ್ಯಕ್ತಿಯಾಗಿದ್ದು, ಕಾಂಗ್ರೆಸ್ ನಾಯಕರ ಆಪ್ತನೆಂದು ಹೇಳಲಾಗುತ್ತಿದೆ.
ಪಾರ್ಟಿಯಲ್ಲಿ ಜಹೀರ್ ಕುಟುಂಬ ಸದಸ್ಯರೂ ಭಾಗಿಯಾಗಿದ್ದರೆಂದು ಮೂಲಗಳು ತಿಳಿಸಿವೆ. ಮಹಿಳೆಯರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುತ್ತಿದ್ದು, ಲೇಡಿ ಕಾನ್ಸ್ಟೇಬಲ್ಗಳು ವಿಚಾರಣೆ ಮುಂದುವರಿಸಿದ್ದಾರೆ. ಸದ್ಯ ಎಲ್ಲಾ ಆರೋಪಿಗಳನ್ನು ಕೊಳ್ಳೇಗಾಲ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣ ಸಂಬಂಧ ಇನ್ನಷ್ಟು ಮಾಹಿತಿಗಾಗಿ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
ಬೆಂಗಳೂರು (ಏ. 04): ಇತ್ತೀಚಿನ ದಿನಗಳಲ್ಲಿ ವೇಗದ ಇಂಟರ್ನೆಟ್ (Internet) ಎಲ್ಲರಿಗೂ ಅನಿವಾರ್ಯ. ಆನ್ಲೈನ್ ಕ್ಲಾಸ್, ಮನೆಯಿಂದ ಕೆಲಸ ಮಾಡುವುದಾಗಲಿ ಅಥವಾ ಮನರಂಜನೆಯಾಗಲಿ, ಎಲ್ಲದಕ್ಕೂ ಹೈ-ಸ್ಪೀಡ್ ಇಂಟರ್ನೆಟ್ ಅತ್ಯಗತ್ಯ. ಭಾರತದಲ್ಲಿ, ವಿಶೇಷವಾಗಿ ಪ್ರಮುಖ ನಗರಗಳಲ್ಲಿ ಇಂಟರ್ನೆಟ್ ವೇಗವು ಸುಧಾರಿಸುತ್ತಿದೆ. ಇತ್ತೀಚಿನ ವರದಿಯ ಪ್ರಕಾರ, ದೇಶದ ಕೆಲವು ನಗರಗಳು ಇಂಟರ್ನೆಟ್ ವೇಗದ ವಿಷಯದಲ್ಲಿ ಇತರರಿಗಿಂತ ಬಹಳ ಮುಂದಿವೆ.
ಓಕ್ಲಾ ವರದಿಯ ಪ್ರಕಾರ, ಚೆನ್ನೈ ಭಾರತದಲ್ಲಿ ಅತಿ ಹೆಚ್ಚು ಇಂಟರ್ನೆಟ್ ವೇಗವನ್ನು ಹೊಂದಿರುವ ನಗರವಾಗಿದೆ. ಇಲ್ಲಿನ ಸರಾಸರಿ ಮೊಬೈಲ್ ಇಂಟರ್ನೆಟ್ ವೇಗ ಸುಮಾರು 51 Mbps ಆಗಿದ್ದು, ಇದು ದೇಶದಲ್ಲೇ ಅತಿ ಹೆಚ್ಚು ಎಂದು ವರದಿ ಹೇಳುತ್ತದೆ. ಚೆನ್ನೈನ ಬಲಿಷ್ಠ ನೆಟ್ವರ್ಕ್ ಮೂಲಸೌಕರ್ಯ ಮತ್ತು ವೇಗವಾಗಿ ವಿಸ್ತರಿಸುತ್ತಿರುವ 5G ಸೇವೆಗಳು ಅದನ್ನು ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಕೊಂಡೊಯ್ದಿವೆ.
ಸಿಲಿಕಾನ್ ಸಿಟಿ ಬೆಂಗಳೂರು ಇಂಟರ್ನೆಟ್ ವೇಗದಲ್ಲಿ ಎರಡನೇ ಸ್ಥಾನದಲ್ಲಿದೆ, ಸರಾಸರಿ ವೇಗ ಸುಮಾರು 42.50 Mbps. ಐಟಿ ಕೇಂದ್ರವಾಗಿರುವುದರಿಂದ, ನಗರವು ಬಲವಾದ ಡಿಜಿಟಲ್ ಮೂಲಸೌಕರ್ಯವನ್ನು ಹೊಂದಿದ್ದು, ಬಳಕೆದಾರರಿಗೆ ವೇಗದ ಮತ್ತು ಸ್ಥಿರವಾದ ಇಂಟರ್ನೆಟ್ ಸಂಪರ್ಕಗಳನ್ನು ಒದಗಿಸುತ್ತದೆ.
ಈ ಪಟ್ಟಿಯಲ್ಲಿ ಹೈದರಾಬಾದ್ ಮೂರನೇ ಸ್ಥಾನದಲ್ಲಿದ್ದು, ಸರಿಸುಮಾರು 41.68 Mbps ಇಂಟರ್ನೆಟ್ ವೇಗವನ್ನು ಹೊಂದಿದೆ. ಹೈದರಾಬಾದ್ನಲ್ಲಿ ಹೆಚ್ಚುತ್ತಿರುವ ಟೆಕ್ ಕಂಪನಿಗಳ ಉಪಸ್ಥಿತಿ ಮತ್ತು ಸುಧಾರಿತ ನೆಟ್ವರ್ಕ್ ಕವರೇಜ್ ಈ ವೇಗ ಹೆಚ್ಚಳಕ್ಕೆ ಕಾರಣವಾಗಿವೆ.
ಈ ನಗರಗಳು ಮೊದಲ ಮೂರು ಸ್ಥಾನಗಳಲ್ಲಿ ಸ್ಥಾನ ಪಡೆದಿದ್ದರೂ, ನವದೆಹಲಿ ಮತ್ತು ಮುಂಬೈನಂತಹ ನಗರಗಳು ಸಹ ತಮ್ಮ ಇಂಟರ್ನೆಟ್ ವೇಗವನ್ನು ವೇಗವಾಗಿ ಸುಧಾರಿಸುತ್ತಿವೆ. ದೆಹಲಿಯು ಸರಾಸರಿ 32 Mbps ವೇಗವನ್ನು ಹೊಂದಿದೆ ಮತ್ತು 5G ಬಿಡುಗಡೆಯಾದ ನಂತರ ಇದು ಸ್ಥಿರವಾಗಿ ಸುಧಾರಿಸುತ್ತಿದೆ.
ಭಾರತದಲ್ಲಿ ಇಂಟರ್ನೆಟ್ ವೇಗ ಹೆಚ್ಚಳಕ್ಕೆ ಹಲವಾರು ಕಾರಣಗಳಿವೆ. ಅತ್ಯಂತ ಮಹತ್ವದ ಕಾರಣವೆಂದರೆ 5G ತಂತ್ರಜ್ಞಾನದ ತ್ವರಿತ ವಿಸ್ತರಣೆ, ಇದು ಮೊಬೈಲ್ ಇಂಟರ್ನೆಟ್ ಅನ್ನು ಹಿಂದೆಂದಿಗಿಂತಲೂ ವೇಗಗೊಳಿಸಿದೆ. ಇದಲ್ಲದೆ, ಫೈಬರ್ ನೆಟ್ವರ್ಕ್ಗಳ ವಿಸ್ತರಣೆ, ಹೆಚ್ಚಿದ ಸ್ಪರ್ಧೆ ಮತ್ತು ಡಿಜಿಟಲ್ ಸೇವೆಗಳಿಗೆ ಹೆಚ್ಚುತ್ತಿರುವ ಬೇಡಿಕೆಯೂ ಈ ಬದಲಾವಣೆಗೆ ಕಾರಣವಾಗಿವೆ.
ಬೆಂಗಳೂರು, ಏಪ್ರಿಲ್ 4: ಬೆಂಗಳೂರಿನ (Bangalore) ಆವಲಹಳ್ಳಿಯ ಸ್ಕಿನ್ ಶೈನ್ ಫ್ಯಾಮಿಲಿ ಸಲೂನ್ನಲ್ಲಿ ಶುರುವಾದ ಸಣ್ಣ ವಿವಾದವೊಂದು ಇದೀಗ ಭೀಕರ ಮಾರಾಮಾರಿಯಲ್ಲಿ ಅಂತ್ಯವಾಗಿದೆ. ಸಲೂನ್ನಲ್ಲಿ ಕೆಲಸ ಮಾಡುತ್ತಿದ್ದ ಬ್ಯೂಟಿಷಿಯನ್ಗೆ ಮಾಲೀಕ ಪ್ರಪೋಸ್ ಮಾಡಿದ್ದಾನೆ ಎಂಬ ಆರೋಪ ಹಾಗೂ ಅದನ್ನು ವಿರೋಧಿಸಿದ್ದಕ್ಕೆ ಕೆಲಸದಿಂದ ತೆಗೆದಿದ್ದೇ ಈ ಗಲಾಟೆಗೆ ಮೂಲ ಕಾರಣ ಎನ್ನಲಾಗಿದೆ.
ಆಲವಹಳ್ಳಿಯ ಸಲೂನ್ ಮಾಲೀಕ ಮೋಹನ್ ಕುಮಾರ್, ತನ್ನಲ್ಲಿ ಕೆಲಸ ಮಾಡುತ್ತಿದ್ದ ಬ್ಯೂಟಿಷಿಯನ್ ಒಬ್ಬರಿಗೆ ಬಿಸ್ಕೆಟ್ ನೀಡಿ ಪ್ರಪೋಸ್ ಮಾಡಿದ್ದ ಎನ್ನಲಾಗಿದೆ. ಆದರೆ ಇದನ್ನು ಆಕೆ ನಿರಾಕರಿಸಿದ್ದರು. ಈ ವಿಚಾರವಾಗಿ ಮನಸ್ತಾಪ ಉಂಟಾಗಿ ಮೋಹನ್ ಕುಮಾರ್ ಆಕೆಯನ್ನು ಕೆಲಸದಿಂದ ತೆಗೆದುಹಾಕಿದ್ದರು. ಇದರಿಂದ ಬ್ಯೂಟಿಷಿಯನ್ನ ಪತಿ ಆಕ್ರೋಶಗೊಂಡಿದ್ದರು. ಪತ್ನಿಯನ್ನು ಕೆಲಸದಿಂದ ತೆಗೆದಿದ್ದಕ್ಕೆ ಆಕ್ರೋಶಗೊಂಡ ಆತ, ನಾಲ್ಕೈದು ಜನರ ಗುಂಪು ಕಟ್ಟಿಕೊಂಡು ಸಲೂನ್ಗೆ ನುಗ್ಗಿದ್ದಾರೆ.
ಸಿಸಿಟಿವಿಯಲ್ಲಿ ಸೆರೆಯಾದ ಹಲ್ಲೆ ದೃಶ್ಯ
ಬ್ಯೂಟಿಷಿಯನ್ ಪತಿ ಮತ್ತು ಆತನ ಬೆಂಬಲಿಗರು ಸಲೂನ್ ಮಾಲೀಕ ಮೋಹನ್ ಕುಮಾರ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಗಲಾಟೆ ತಡೆಯಲು ಬಂದ ಮೋಹನ್ ಪತ್ನಿ ಶ್ರೀಜಾ ಅವರ ಕುತ್ತಿಗೆಗೆ ಕೈ ಹಾಕಿ ಹಲ್ಲೆ ನಡೆಸಲಾಗಿದ್ದು, ಬಂದವರೆಲ್ಲರೂ ಸೇರಿ ಸಲೂನ್ನಲ್ಲಿ ದಾಂಧಲೆ ನಡೆಸಿದ್ದಾರೆ. ಈ ಇಡೀ ದಾಳಿಯ ದೃಶ್ಯಗಳು ಸಲೂನ್ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಸದ್ಯ ಹಲ್ಲೆಗೊಳಗಾದ ಮೋಹನ್ ಕುಮಾರ್ ಅವರು ಬ್ಯೂಟಿಷಿಯನ್, ಆಕೆಯ ಪತಿ ಹಾಗೂ ಬೆಂಬಲಿಗರ ವಿರುದ್ಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಆ್ಯಂಕರ್ ಅನುಶ್ರೀ (Anushree) ಅವರು ಹಲವು ವಿಷಯಗಳ ಬಗ್ಗೆ ಓಪನ್ ಆಗಿ ಮಾತನಾಡುತ್ತಾರೆ. ತಮ್ಮ ಬಗ್ಗೆ, ತಾವು ನಡೆಸಿಕೊಡೋ ಶೋ ಬಗ್ಗೆ ಏನಾದರೂ ಆರೋಪ ಕೇಳಿ ಬಂದರೆ ನೇರವಾಗಿ ಉತ್ತರಿಸುತ್ತಾರೆ. ಈ ಬಗ್ಗೆ ಅವರು ಹಿಂದೂ ಮುಂದೂ ಯೋಚಿಸೋದಿಲ್ಲ. ಈಗ ಸಂದರ್ಶನ ಒಂದರಲ್ಲಿ ಅವರು ನೇರ ಮಾತುಗಳಲ್ಲಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.ಇದರಲ್ಲಿ ಅವರು ಹೆಣ್ಣು ಮಕ್ಕಳಿಗೆ ಸೈಲೆಂಟ್ ಆಗಿ ನಡೆಯುವ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ.
ಅನುಶ್ರೀ ಅವರು ಸಂದರ್ಶನ ನೀಡಿದ್ದಕ್ಕಿಂತ, ಸಂದರ್ಶನ ಮಾಡಿದ್ದೇ ಹೆಚ್ಚು. ಅವರು ಅನೇಕ ಸೆಲೆಬ್ರಿಟಿಗಳನ್ನು ಇಂಟರ್ವ್ಯೂ ಮಾಡಿದ್ದಾರೆ. ಈಗ ಅವರನ್ನೇ ಸಂದರ್ಶನ ಮಾಡಲಾಗಿದೆ. ಆರ್ಜೆ ಮಯೂರ್ ಅವರು ತಮ್ಮ ‘ಗೋಲ್ಡನ್ ಕ್ಲಾಸ್ ವಿತ್ ಮಯೂರ’ ಯೂಟ್ಯೂಬ್ ಚಾನೆಲ್ ಅಲ್ಲಿ ಅನುಶ್ರೀ ಇಂಟರ್ವ್ಯೂ ಮಾಡಿದ್ದಾರೆ. ಈ ವಿಡಿಯೋ ಗಮನ ಸೆಳೆದಿದೆ.
ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರ ಖಾತೆಗೂ ಅಶ್ಲೀಲ ಕಮೆಂಟ್ ಬಂದೇ ಬರುತ್ತವೆ. ಆದರೆ, ಸೆಲೆಬ್ರಿಟಿಗಳು ಇದಕ್ಕೆ ಸಂತ್ರಸ್ತರಾಗುವ ಸಾಧ್ಯತೆ ಹೆಚ್ಚು. ಜನಸಾಮಾನ್ಯರಾದರೆ ಖಾತೆಯನ್ನು ಖಾಸಗಿಯಾಗಿ ಇಟ್ಟುಕೊಂಡು, ಪರಿಚಯ ಇರುವವರನ್ನು ಮಾತ್ರ ಫಾಲೋ ಮಾಡಲು ಅವಕಾಶ ನೀಡಬಹುದು. ಆದರೆ, ಸೆಲೆಬ್ರಿಟಿಗಳು ತಮ್ಮ ಖಾತೆಯನ್ನು ಓಪನ್ ಆಗಿ ಇಡುತ್ತಾರೆ. ಈ ಕಾರಣಕ್ಕೆ ಗೊತ್ತು ಪರಿಚಯ ಇಲ್ಲದವರು ಬಂದು ಅವರ ಖಾತೆಗೆ ಕಮೆಂಟ್ ಹಾಕುತ್ತಾರೆ. ಈ ಬಗ್ಗೆ ಅನುಶ್ರೀ ಅವರು ಮಾತನಾಡಿದ್ದಾರೆ.
ಸಂದರ್ಶನದಲ್ಲಿ ಡಗಾರ್ ಎಂಬ ಪದ ಚರ್ಚೆಗೆ ಬಂದಿದೆ. ಡಗಾರ್ ಅಂದರೆ ನಡತೆಗೆಟ್ಟವಳು ಎಂಬ ಅರ್ಥ ನೀಡುತ್ತದೆ. ಈ ಪದ ಹೇಳಲು ಮಯೂರ್ ಅವರು ಮುಜುಗರ ಮಾಡಿಕೊಂಡಿದರು. ಆಗ ಮಾತನಾಡಿದ ಅನುಶ್ರೀ, ‘ನೋಡಿ ನಿಮಗೆ ಅದನ್ನು ಹೇಳಲೇ ಅಷ್ಟು ಮುಜುಗರ ಆಗುತ್ತಿದೆ ಎಂದರೆ ನಮಗೆ ಹಾಗೆ ಕರೆದಾಗ ಹೇಗನಿಸಬೇಡಿ’ ಎಂದು ಅನುಶ್ರೀ ಕೇಳಿದರು. ಅದನ್ನು ಹೇಳುವಾಗ ಅವರ ಮುಖದಲ್ಲಿ ಬೇಸರ ಇತ್ತು.
ಮಡಿಕೇರಿ, ಏಪ್ರಿಲ್ 04: ವಿರಾಜಪೇಟೆ ತಾಲ್ಲೂಕಿನ ಚೆಂಬೆಬೆಳ್ಳೂರು ಗ್ರಾಮದಲ್ಲಿ ಕಾಫಿ ಕಳ್ಳತನದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಎಂಎಲ್ಸಿ ಸುಜಾ ಕುಶಾಲಪ್ಪ ಅವರ ಎಸ್ಟೇಟ್ನಲ್ಲಿ ನೌಕರನಾಗಿದ್ದ ಪೊನ್ನಪ್ಪ ಕಾಫಿ ಕದ್ದಿರುವುದು ಪತ್ತೆಯಾಗಿದೆ. ಶಾಸಕರ ಮನೆಯಲ್ಲೇ ನಡೆದ ಈ ಪ್ರಕರಣದಲ್ಲಿ, ಪೊನ್ನಪ್ಪನನ್ನು ಸುಜಾ ಕುಶಾಲಪ್ಪ ಅವರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಸುಮಾರು 7 ಲಕ್ಷ ರೂಪಾಯಿ ಮೌಲ್ಯದ ಕಾಫಿಯನ್ನು ಕದ್ದಿದ್ದಾಗಿ ಆರೋಪಿಸಲಾಗಿದೆ. ವಿಚಾರಣೆ ವೇಳೆ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ತಿಂಗಳ ಹಿಂದೆ ನಡೆದ ಈ ಘಟನೆ ಇದೀಗ ಬಹಿರಂಗವಾಗಿದ್ದು, ತಪ್ಪೊಪ್ಪಿಗೆ ಹಿನ್ನೆಲೆ ಸುಜಾ ಕುಶಾಲಪ್ಪ ಅವರು ಪ್ರಕರಣ ದಾಖಲಿಸದೆ ಮಾನವೀಯತೆ ದೃಷ್ಟಿಯಿಂದ ಕ್ಷಮೆ ನೀಡಿದ್ದಾರೆ.
ವಿಜಯವಾಡ, ಏ.4: ಪಲ್ನಾಡು ಜಿಲ್ಲೆಯ ಮಾಚೆರ್ಲಾ ಪಟ್ಟಣದಲ್ಲಿ ಒಂದು ಅಮಾನೀಯ ಘಟನೆಯೊಂದು ನಡೆದಿದೆ. 35 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಮಾಡಿ, ಆಕೆಯ ಖಾಸಗಿ ಭಾಗಕ್ಕೆ ಕಬ್ಬಿಣದ ರಾಡ್ ತುರುಕಿ, ಚಿತ್ರ ಹಿಂಸೆ ನೀಡಿದ್ದಾರೆ. ಗುರುವಾರ ಸಂಜೆ ಸಂತ್ರಸ್ತೆಯ ಮನೆಯಲ್ಲಿ ಈ ಘಟನೆ ನಡೆದಿದೆ. ಮಾಚೆರ್ಲಾ ಪಟ್ಟಣದಲ್ಲಿ ಸರ್ಕಾರಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ಅವರು ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಆರೋಪಿಗಳು ಬಂದು ಈ ಅಪರಾಧ ಎಸಗಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಗುರುವಾರ ಮಧ್ಯಾಹ್ನ 3:30 ರಿಂದ 4 ಗಂಟೆಯ ನಡುವೆ ಈ ಘಟನೆ ನಡೆದಿದ್ದು, ಆರೋಪಿ ಕುಡಿಯಲು ನೀರು ಕೇಳುವ ನೆಪದಲ್ಲಿ ಸಂತ್ರಸ್ತೆಯ ಮನೆಗೆ ನುಗ್ಗಿ, ಮಹಿಳೆಯ ಮೇಲೆ ಬಲವಂತವಾಗಿ ಹಲ್ಲೆ ನಡೆಸಿದ್ದಾನೆ ಎಂದು ಮಾಚೆರ್ಲಾ ಪಟ್ಟಣದ ಸಿಐ ವೆಂಕಟ ರಮಣ ಎಂಬುವವರು ತಿಳಿಸಿದ್ದಾರೆ. ಸಂತ್ರಸ್ತೆ ಪ್ರಸ್ತುತ ನರಸರಾವ್ಪೇಟ ಏರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಮಾಹಿತಿಯ ಪ್ರಕಾರ, ಮಹಿಳೆಯ ಮನೆ ಒಳಗೆ ನುಗ್ಗಿದ ನಂತರ, ಆರೋಪಿಯು ಆಕೆಯನ್ನು ಸ್ಕಾರ್ಫ್ನಿಂದ ಕಟ್ಟಿ, ಚಾಕು ತೋರಿಸಿ ಅತ್ಯಾಚಾರ ಮಾಡಿ, ಥಳಿಸಿದ್ದಾನೆ. ಈ ವೇಳೆ ಮಹಿಳೆ ತನಗೆ ಎಚ್ಐವಿ ಸೋಂಕು ಇದೆ ಎಂದು ಹೇಳಿಕೊಂಡ, ಕೋಪದಿಂದ ಕಬ್ಬಿಣದ ರಾಡ್ ಅನ್ನು ಆಕೆಯ ಖಾಸಗಿ ಭಾಗಕ್ಕೆ ತುರುಕಿದ್ದಾನೆ. ನಂತರ ಅಲ್ಲಿಂದ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಸಂತ್ರಸ್ತೆಯ ಜೊತೆ ವಾಸವಾಗಿದ್ದ ಆಕೆಯ ಸೋದರಳಿಯ ಹತ್ತನೇ ತರಗತಿ ಪರೀಕ್ಷೆ ಮುಗಿಸಿ ತನ್ನ ಹೆತ್ತವರ ಮನೆಗೆ ತೆರಳಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಬಾಲಕ ಸಂತ್ರಸ್ತೆಯ ಮೊಬೈಲ್ ಫೋನ್ಗೆ ಹಲವು ಬಾರಿ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಏನೋ ಸಮಸ್ಯೆಯಾಗಿದೆ ಎಂದು ತಿಳಿದು ಅವನು ತನ್ನ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ಆಕೆಯ ಮನೆಗೆ ಭೇಟಿ ನೀಡಿ ವಿಚಾರಿಸುವಂತೆ ಹೇಳಿದ್ದಾನೆ. ಬಾಲಕ ಮಾತಿನಂತೆ ಸ್ಥಳೀಯರು ಮಹಿಳೆಯ ಮನೆಗೆ ಧಾವಿಸಿ ನೋಡಿದಾಗ ಆಕೆ ಪ್ರಜ್ಞಾಹೀನಳಾಗಿ ಬಿದ್ದಿರುವುದನ್ನು ನೋಡಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಆಕೆಯನ್ನು ಮೊದಲು ಮಾಚೆರ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡಿದ್ದಾರೆ. ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ನರಸರಾವ್ಪೇಟ ಏರಿಯಾ ಆಸ್ಪತ್ರೆಗೆ ಸ್ಥಳಾಂತರಿಸಿದರು.
ಟೀಮ್ ಇಂಡಿಯಾದ ಮಾಜಿ ಸ್ಟಾರ್ ಆಟಗಾರ, ಎರಡು ಬಾರಿ ವಿಶ್ವಕಪ್ ವಿಜೇತ ಯುವರಾಜ್ ಸಿಂಗ್ ಅವರು ಭಾರತೀಯ ಕ್ರಿಕೆಟ್ನ ದಿಗ್ಗಜ ನಾಯಕರಾದ ಎಂ.ಎಸ್. ಧೋನಿ ಮತ್ತು ಕಪಿಲ್ ದೇವ್ ಅವರಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ತಮ್ಮ ತಂದೆ ಯೋಗರಾಜ್ ಸಿಂಗ್ ಅವರು ನೀಡುತ್ತಿರುವ ಸರಣಿ ವಿವಾದಾತ್ಮಕ ಹೇಳಿಕೆಗಳಿಗಾಗಿ ಕ್ಷಮಾಪಣೆ ಕೇಳಿದ್ದಾರೆ.
ಕ್ಷಮೆಯಾಚನೆಗೆ ಕಾರಣವೇನು?
ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಅವರು ಕಳೆದ ಹಲವು ವರ್ಷಗಳಿಂದ ಎಂ.ಎಸ್. ಧೋನಿ ಮತ್ತು ಕಪಿಲ್ ದೇವ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಾ ಬಂದಿದ್ದಾರೆ.
ಧೋನಿ ವಿರುದ್ಧದ ಆರೋಪ: ಧೋನಿ ಅವರು ಬೇಕೆಂದೇ ಯುವರಾಜ್ ಸಿಂಗ್ ಅವರ ವೃತ್ತಿಜೀವನವನ್ನು ಹಾಳು ಮಾಡಿದರು ಮತ್ತು ಅವರನ್ನು ತಂಡದಿಂದ ಹೊರಹಾಕಲು ಕಾರಣರಾದರು ಎಂದು ಯೋಗರಾಜ್ ಸಿಂಗ್ ಪದೇ ಪದೇ ಹೇಳುತ್ತಿದ್ದರು.
ಕಪಿಲ್ ದೇವ್ ವಿರುದ್ಧದ ದ್ವೇಷ: 1980ರ ದಶಕದಲ್ಲಿ ತಮ್ಮನ್ನು ತಂಡದಿಂದ ಕೈಬಿಟ್ಟಿದ್ದಕ್ಕೆ ಕಪಿಲ್ ದೇವ್ ಕಾರಣ ಎಂದು ಯೋಗರಾಜ್ ಅವರು ದಶಕಗಳಿಂದ ಹಗೆತನ ಸಾಧಿಸುತ್ತಿದ್ದರು. ಇತ್ತೀಚೆಗೆ ಅವರು ಕಪಿಲ್ ದೇವ್ ಮನೆಗೆ ಪಿಸ್ತೂಲ್ ಹಿಡಿದು ಹೋಗಿದ್ದ ಘಟನೆಯನ್ನೂ ನೆನಪಿಸಿಕೊಂಡಿದ್ದರು.
ಯುವರಾಜ್ ಸಿಂಗ್ ಪ್ರತಿಕ್ರಿಯೆ:
ಸ್ಪೋರ್ಟ್ಸ್ ತಕ್ (Sports Tak) ಸಂದರ್ಶನದಲ್ಲಿ ಮಾತನಾಡಿದ ಯುವರಾಜ್ ಸಿಂಗ್ “ನಾನು ಕಪಿಲ್ ದೇವ್ ಮತ್ತು ಎಂ.ಎಸ್. ಧೋನಿ ಅವರಲ್ಲಿ ಕ್ಷಮೆಯಾಚಿಸಲು ಬಯಸುತ್ತೇನೆ. ನನ್ನ ತಂದೆ ಆಡುವ ಮಾತುಗಳು ಸರಿಯಲ್ಲ ಎಂದು ನಾನು ಅವರಿಗೆ ತಿಳಿಸಿದ್ದೇನೆ.”
ಈ ಇಬ್ಬರೂ ದಿಗ್ಗಜರು ಭಾರತೀಯ ಕ್ರಿಕೆಟ್ಗೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ತಂದೆಯ ಮಾತುಗಳು ತಮ್ಮ ವೈಯಕ್ತಿಕ ಅಭಿಪ್ರಾಯವಲ್ಲ ಮತ್ತು ತಂದೆ-ಮಗನ ನಡುವಿನ ಆಲೋಚನೆಗಳಲ್ಲಿ ವ್ಯತ್ಯಾಸವಿದೆ ಎಂದು ಯುವರಾಜ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಯೋಗರಾಜ್ ಸಿಂಗ್ ಮಾಡಿದ ಆರೋಪಗಳೇನು?
ಯುವರಾಜ್ ಸಿಂಗ್ ಫಾರ್ಮ್ನಲ್ಲಿದ್ದರೂ ಧೋನಿ ಅವರನ್ನು ತಂಡದಿಂದ ಹೊರಹಾಕಲು ಸಂಚು ರೂಪಿಸಿದರು ಮತ್ತು ಅವರ ಕ್ರಿಕೆಟ್ ಬದುಕನ್ನು ಅವಧಿಗಿಂತ ಮುನ್ನವೇ ಕೊನೆಗೊಳಿಸಿದರು ಎಂದು ಅವರ ತಂದೆ ಯೋಗರಾಜ್ ಸಿಂಗ್ ಆರೋಪಿಸಿದ್ದರು.
ಮತ್ತೊಮದು ಸಂದರ್ಶನದಲ್ಲಿ, “ಧೋನಿಗೆ ಒಂದು ದಿನ ಗತಿ ಇಲ್ಲದಂತಾಗುತ್ತದೆ, ಅವರು ಭಿಕ್ಷೆ ಬೇಡಬೇಕಾಗುತ್ತದೆ” ಎಂದು ಶಪಿಸಿದ್ದರು.
ಹಾಗೆಯೇ ಧೋನಿ ಕೇವಲ ತನ್ನ ಹೆಸರಿಗಾಗಿ ಆಡುತ್ತಾರೆ ಮತ್ತು ತಂಡದ ಇತರ ಪ್ರತಿಭಾವಂತ ಆಟಗಾರರನ್ನು ಬೆಳೆಯಲು ಬಿಡುವುದಿಲ್ಲ ಎಂದು ಯೋಗರಾಜ್ ಸಿಂಗ್ ದೂರಿದ್ದರು.
ಕಪಿಲ್ ದೇವ್ ಮತ್ತು ಯೋಗರಾಜ್ ಸಿಂಗ್ ಒಟ್ಟಿಗೆ ಕ್ರಿಕೆಟ್ ಆಡಿದವರು. ಆದರೆ ಯೋಗರಾಜ್ ಅವರ ಸಿಟ್ಟು ದಶಕಗಳಷ್ಟು ಹಳೆಯದು.
1981ರಲ್ಲಿ ಕೇವಲ ಒಂದು ಅಂತರಾಷ್ಟ್ರೀಯ ಪಂದ್ಯ ಆಡಿದ ನಂತರ ಯೋಗರಾಜ್ ಅವರನ್ನು ತಂಡದಿಂದ ಕೈಬಿಡಲಾಯಿತು. ಇದಕ್ಕೆ ಕಪಿಲ್ ದೇವ್ ಅವರೇ ಕಾರಣ ಎಂದು ಯೋಗರಾಜ್ ನಂಬಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ, ತಮಗೆ ತಂಡದಲ್ಲಿ ಅವಕಾಶ ಸಿಗದಿದ್ದಕ್ಕೆ ಸಿಟ್ಟಾಗಿ ಕಪಿಲ್ ದೇವ್ ಅವರ ಮನೆಗೆ ಪಿಸ್ತೂಲ್ ಹಿಡಿದು ಹೋಗಿದ್ದೆ ಎಂದು ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದರು. “ಕಪಿಲ್ ದೇವ್ ಅವರ ಕಾಲನ್ನು ಮುರಿದು ಮನೆಗೆ ಕಳುಹಿಸಬೇಕಿತ್ತು” ಎಂಬ ಅರ್ಥದಲ್ಲಿ ಮಾತನಾಡಿ ವಿವಾದ ಹುಟ್ಟು ಹಾಕಿದ್ದರು.