ವಂದೇ ಭಾರತ್ ಸ್ಲೀಪರ್ ರೈಲಿಗೆ ಭಾರೀ ಡಿಮ್ಯಾಂಡ್; ರೈಲ್ವೆ ಇಲಾಖೆಯಿಂದ ಮಹತ್ವದ ನಿರ್ಧಾರ – Kannada News | Vande Bharat sleeper train to get total 24 coaches passenger capacity to cross 1200

ನವದೆಹಲಿ, ಜನವರಿ 29: ಭಾರತ ದೇಶದ ಮೊದಲ ಸೆಮಿ ಹೈ ಸ್ಪೀಡ್ ಸ್ಲೀಪರ್ ರೈಲಾದ ವಂದೇ ಭಾರತ್ ಸ್ಲೀಪರ್ (Vande Bharat Sleeper Train) ಗುವಾಹಟಿ ಮತ್ತು ಹೌರಾ ನಡುವೆ ಈಗಾಗಲೇ ಸಂಚರಿಸುತ್ತಿದೆ. ಪ್ರಯಾಣಿಕರು ಇದನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಇದರ ಜನಪ್ರಿಯತೆ ಹೆಚ್ಚುತ್ತಿರುವ ಕಾರಣದಿಂದಾಗಿ ಭಾರತೀಯ ರೈಲ್ವೆ ಈ ರೈಲಿನಲ್ಲಿ ಹೊಸ ಪ್ರಯೋಗಗಳನ್ನು ನಡೆಸಲು ಮುಂದಾಗಿದೆ. ಹೆಚ್ಚಿನ ಜನರಿಗೆ ಈ ಸ್ಲೀಪರ್ ರೈಲಿನಲ್ಲಿ ಸಂಚರಿಸಲು ಸಹಾಯವಾಗಲಿ ಎಂಬ ಉದ್ದೇಶದಿಂದ ಈ ರೈಲಿನಲ್ಲಿ ಕೋಚ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಿದೆ.

ಸದ್ಯಕ್ಕೆ ವಂದೇ ಭಾರತ್ ಸ್ಲೀಪರ್ ರೈಲುಗಳು 16 ಬೋಗಿಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಇದು 823 ಬರ್ತ್‌ಗಳನ್ನು ಹೊಂದಿವೆ. ಆದರೆ, ಮುಂದಿನ ದಿನಗಳಲ್ಲಿ ಇನ್ನೂ 8 ಬೋಗಿಗಳನ್ನು ಸೇರಿಸಲಾಗುತ್ತದೆ. ಒಟ್ಟು 24 ಬೋಗಿಗಳ ಸಾಮರ್ಥ್ಯವನ್ನು ಹೊಂದಿರುವ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಸಿದ್ಧಪಡಿಸಲಾಗುತ್ತಿದೆ. ಇದರಲ್ಲಿ 1,224 ಬರ್ತ್‌ಗಳಿರಲಿದೆ.

ಇದನ್ನೂ ಓದಿ: Vande Bharat Sleeper: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿನ ವಿಶೇಷತೆ, ಟಿಕೆಟ್ ದರ ಏನು?

ವಂದೇ ಭಾರತ್ ಸ್ಲೀಪರ್ ಅನ್ನು ಪ್ರಾರಂಭಿಸಿದ 10 ದಿನಗಳಲ್ಲಿ ಹೆಚ್ಚಿನ ಪ್ರಯಾಣಿಕರು ಆರಾಮದಾಯಕ ಪ್ರಯಾಣವನ್ನು ಆನಂದಿಸಲು ಅನುವು ಮಾಡಿಕೊಡಲು ರೈಲ್ವೆ ತನ್ನ ಸಾಮರ್ಥ್ಯವನ್ನು ಹೆಚ್ಚಿಸಲು ನಿರ್ಧರಿಸಿದೆ. ವಂದೇ ಭಾರತ್ ಸ್ಲೀಪರ್ ರೈಲುಗಳಲ್ಲಿ ಕೋಚ್‌ಗಳ ಸಂಖ್ಯೆಯನ್ನು ರೈಲ್ವೆ ಇಲಾಖೆ ವಿಸ್ತರಿಸುತ್ತಿದೆ. ಮೊದಲ ಬಾರಿಗೆ, ವಂದೇ ಭಾರತ್ ರೈಲುಗಳಿಗೆ 24 ಕೋಚ್‌ಗಳನ್ನು ಸೇರಿಸಲು ನಿರ್ಧರಿಸಲಾಗಿದೆ.

ಪ್ರಸ್ತುತ 16 ಬೋಗಿಗಳ ವಂದೇ ಭಾರತ್ ರೈಲಿನಲ್ಲಿ ಎಲ್ಲಾ ತರಗತಿಗಳಲ್ಲಿ 823 ಬರ್ತ್‌ಗಳಿವೆ. ಆದರೆ, 24 ಬೋಗಿಗಳ ವಂದೇ ಭಾರತ್ ರೈಲಿನಲ್ಲಿ 1,224 ಬರ್ತ್‌ಗಳಿರಲಿವೆ. ಇದು ಬರ್ತ್‌ಗಳ ಸಂಖ್ಯೆಯನ್ನು ಮೂರನೇ ಒಂದು ಭಾಗದಷ್ಟು ಹೆಚ್ಚಿಸುತ್ತದೆ. ರೈಲ್ವೆ ಇಲಾಖೆಯ ಪ್ರಕಾರ, 24 ಬೋಗಿಗಳ ರೈಲನ್ನು ಮೇಕ್ ಇನ್ ಇಂಡಿಯಾ ಉಪಕ್ರಮದಡಿಯಲ್ಲಿ ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್)ಯಲ್ಲಿ ತಯಾರಿಸಲಾಗುವುದು.

ಇದನ್ನೂ ಓದಿ: ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ವಿದ್ಯಾರ್ಥಿಗಳು, ಲೋಕೋ ಪೈಲಟ್ ಜೊತೆ ಮೋದಿ ಸಂವಾದ

ಭಾರತೀಯ ರೈಲ್ವೆ ವಿನ್ಯಾಸಗೊಳಿಸುತ್ತಿರುವ 24 ಬೋಗಿಗಳ ಮೊದಲ ರೈಲು 2026ರ ಅಂತ್ಯದ ವೇಳೆಗೆ ಸಿದ್ಧವಾಗುವ ನಿರೀಕ್ಷೆಯಿದೆ. ಈ ರೈಲು 17 ಎಸಿ 3-ಬೋಗಿಗಳು, 5 ಎಸಿ 2-ಬೋಗಿಗಳು, 1 ಎಸಿ ಪ್ರಥಮ ದರ್ಜೆ ಕೋಚ್ ಮತ್ತು 1 ಎಸಿ ಪ್ಯಾಂಟ್ರಿ ಕಾರ್ ಅನ್ನು ಒಳಗೊಂಡಿರುತ್ತದೆ. 24 ಬೋಗಿಗಳ ವಂದೇ ಭಾರತ್ ಆರಾಮದಾಯಕ ಬರ್ತ್‌ಗಳು ರೀಡಿಂಗ್ ಲ್ಯಾಂಪ್, ಮೊಬೈಲ್-ಲ್ಯಾಪ್‌ಟಾಪ್ ಚಾರ್ಜಿಂಗ್ ಪಾಯಿಂಟ್‌ಗಳು, ವೈ-ಫೈ ಮಾಹಿತಿ ಮತ್ತು ಮನರಂಜನಾ ವ್ಯವಸ್ಥೆ, ನಿರ್ವಾತ ಶೌಚಾಲಯಗಳು, ಹೆಚ್ಚಿನ ಲಗೇಜ್ ಸ್ಥಳ, ಆಧುನಿಕ ಒಳಾಂಗಣಗಳು, ಅಂಗವಿಕಲ ಪ್ರಯಾಣಿಕರಿಗಾಗಿ ವಿಶೇಷ ಶೌಚಾಲಯಗಳು ಮತ್ತು ರ‍್ಯಾಂಪ್‌ಗಳನ್ನು ಹೊಂದಿರುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 3:24 pm, Thu, 29 January 26

Source link

ಗುರುತು ಸಿಗದಂತೆ ಬದಲಾದ ಜಾನ್ ಅಬ್ರಾಹಂ; ಆರೋಗ್ಯದ ಬಗ್ಗೆ ಮೂಡಿದೆ ಅನುಮಾನ – Kannada News | John Abraham new photos go viral Fans worried about his health

ಬಾಲಿವುಡ್ ನಟ ಜಾನ್ ಅಬ್ರಾಹಂ (John Abraham) ಅವರು ಸುರ ಸುಂದರಾಂಗ. ಕಟ್ಟುಮಸ್ತಾದ ದೇಹದ ಮೂಲಕ ಅವರು ಎಲ್ಲರ ಗಮನ ಸೆಳೆಯುತ್ತಾರೆ. ‘ಧೂಮ್’ ರೀತಿಯ ಸಿನಿಮಾಗಳಿಂದ ಅವರು ಪಡೆದ ಜನಪ್ರಿಯತೆ ಅಪಾರ. ಜಾನ್ ಅಬ್ರಾಹಂ ರೀತಿ ಬಾಡಿ ಬಿಲ್ಡ್ ಮಾಡಬೇಕು ಎಂಬುದು ಎಷ್ಟೋ ಜನರ ಕನಸು. ಆದರೆ ಈಗ ಒಂದು ಶಾಕಿಂಗ್ ವಿಷಯ ಗೊತ್ತಾಗಿದೆ. ಜಾನ್ ಅಬ್ರಹಾಂ ಅವರು ಮೊದಲಿನ ರೀತಿ ಇಲ್ಲ. ಅವರು ಸಿಕ್ಕಾಪಟ್ಟೆ ಬದಲಾಗಿದ್ದಾರೆ. ಹೆಚ್ಚು ಕಡಿಮೆ ಗುರುತೇ ಸಿಗದ ರೀತಿಯಲ್ಲಿ ಅವರು ಬದಲಾಗಿದ್ದಾರೆ. ಅವರ ಹೊಸ ಫೋಟೋ (John Abraham New Photo) ವೈರಲ್ ಆಗಿದ್ದು, ಅಭಿಮಾನಿಗಳಿಗೆ ಶಾಕ್ ಆಗಿದೆ.

ಜಾನ್ ಅಬ್ರಾಹಂ ಅವರು ಇತ್ತೀಚೆಗೆ ತಮ್ಮ ತಂಡದ ಸದಸ್ಯರ ಜೊತೆ ತೆಗೆದುಕೊಂಡ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಮೊದಲು ಕಟ್ಟುಮಸ್ತಾಗಿದ್ದ ಅವರು ಈಗ ಸಿಕ್ಕಾಪಟ್ಟೆ ಸ್ಲಿಮ್ ಆಗಿದ್ದಾರೆ. ಕ್ಲೀನ್ ಶೇವ್ ಲುಕ್​​ನಲ್ಲಿ ಕಾಣಿಸಿಕೊಂಡಿದ್ದು, ಮುಖ ಸಂಪೂರ್ಣ ಬಾಡಿಹೋದಂತೆ ಕಾಣಿಸಿದೆ. ಇದರಿಂದ ಅಭಿಮಾನಿಗಳಿಗೆ ಚಿಂತೆ ಆಗಿದೆ.

ಅನಾರೋಗ್ಯದ ಕಾರಣದಿಂದ ಜಾನ್ ಅಬ್ರಾಹಂ ಅವರಿಗೆ ಈ ರೀತಿ ಆಗಿರಬಹುದಾ ಎಂದು ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ. ವೈರಲ್ ಆಗಿರುವ ಫೋಟೋಗೆ ಹಲವರು ಕಮೆಂಟ್ ಮಾಡಿದ್ದು, ‘ಅಯ್ಯೋ.. ಜಾನ್ ಅಬ್ರಾಹಂ ಅವರಿಗೆ ಏನಾಗಿದೆ? ಯಾಕೆ ಈ ರೀತಿ ಕಾಣುತ್ತಿದ್ದಾರೆ. ಗುರುತೇ ಸಿಗುತಿಲ್ಲ. ಇದು ಜಾನ್ ಅಬ್ರಾಹಂ ಅಂತ ನಂಬೋಕೆ ಆಗುತ್ತಿಲ್ಲ’ ಎಂದು ಅಭಿಪ್ರಾಯ ತಿಳಿಸಿದ್ದಾರೆ.

ಕೆಲವರು ಜಾನ್ ಅಬ್ರಾಹಂ ಪರವಾಗಿ ಕಮೆಂಟ್ ಮಾಡಿದ್ದಾರೆ. ‘ಅವರಿಗೆ ಈಗ 53 ವರ್ಷ ವಯಸ್ಸು. ಈ ವಯಸ್ಸಿನಲ್ಲಿ ಹೀಗೆ ಕಾಣಿಸುವುದು ಸಹಜ. ವಯಸ್ಸಿಗೆ ತಕ್ಕಂತೆ ಅವರ ಮುಖದಲ್ಲಿ ಸುಕ್ಕು ಕಾಣಿಸಿದೆ. ಅವರನ್ನು ಜಡ್ಜ್ ಮಾಡಬೇಡಿ. ಲವ್ ಯೂ ಜಾನ್’ ಎಂಬಿತ್ಯಾದಿ ಕಮೆಂಟ್​​ಗಳು ಬಂದಿವೆ. ಇದು ರಿಯಲ್ ಫೋಟೋ ಹೌದೋ ಅಲ್ಲವೋ ಎಂಬ ಅನುಮಾನ ಕೂಡ ಕೆಲವರಿಗೆ ಮೂಡಿದೆ.

ಇದನ್ನೂ ಓದಿ: ‘ನನ್ನ ಕೆಣಕಲು ಪತ್ರಕರ್ತರನ್ನು ಕಳಿಸಲಾಗಿತ್ತು’: ಶಾಕಿಂಗ್​ ವಿಚಾರ ತಿಳಿಸಿದ ಜಾನ್​ ಅಬ್ರಾಹಂ

53ನೇ ವಯಸ್ಸಿನಲ್ಲಿ ಅನೇಕ ಹೀರೋಗಳು ತುಂಬಾ ಫಿಟ್ ಆಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಜಾನ್ ಅಬ್ರಾಹಂ ಅವರು ಈ ರೀತಿ ಬದಲಾಗಿರುವುದು ಯಾಕೆ ಎಂಬ ಪ್ರಶ್ನೆ ಅಭಿಮಾನಿಗಳ ತಲೆಯಲ್ಲಿ ಕೊರೆಯುತ್ತಿದೆ. ಸಿನಿಮಾದ ಸಲುವಾಗಿ ಅವರು ಈ ರೀತಿ ಟ್ರಾನ್ಸ್​ಫರ್ಮೇಷನ್ ಮಾಡಿಕೊಂಡಿರಬಹುದು ಎಂದು ಕೂಡ ಕೆಲವರು ಊಹಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕ್ರಿಕೆಟ್​ ಗ್ರೌಂಡ್​​ನಲ್ಲಿ ಅವಾಚ್ಯ ಶಬ್ದ ಬಳಕೆ ಮಾಡಿದ್ದಕ್ಕೆ ಸ್ಪಷ್ಟನೆ ಕೊಟ್ಟ ಕಿಚ್ಚ ಸುದೀಪ್ – Kannada News | Kiccha Sudeep’s CCL Controversy: Jogi Prem Blamed for Bad Words Usage Clarification

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ನಿರೂಪಣೆಯನ್ನು ಸುದೀಪ್ (Sudeep) ಅವರು ಇತ್ತೀಚೆಗೆ ಪೂರ್ಣಗೊಳಿಸಿದ್ದಾರೆ. ಈಗ ಅವರ ಸಂಪೂರ್ಣ ಗಮನ ಕ್ರಿಕೆಟ್ ಮೇಲಿದೆ. ಸಿಸಿಎಲ್​​ನಲ್ಲಿ ಅವರು ಕರ್ನಾಟಕ ಬುಲ್ಡೋಜರ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇತ್ತೀಚೆಗೆ ಪಂದ್ಯ ಆಡುವಾಗ ಅವರು ಅವಾಚ್ಯ ಶಬ್ದ ಬಳಕೆ ಮಾಡಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ಇದಕ್ಕೆ ಸುದೀಪ್ ಸ್ಪಷ್ಟನೆ ಕೊಟ್ಟಿದ್ದಾರೆ. ಈ ಪದ ಬಳಕೆಗೆ ಜೋಗಿ ಪ್ರೇಮ್ ಕಾರಣ ಎಂದಿದ್ದಾರೆ.

ರಾಜ್ ಬಿ ಶೆಟ್ಟಿ ನಟನೆಯ ‘ರಕ್ಕಸಪೂರದೊಳ್’ ಸಿನಿಮಾ ಟ್ರೈಲರ್ ಲಾಂಚ್ ಈವೆಂಟ್ ನಡೆದಿದೆ. ಕಿಚ್ಚ ಸುದೀಪ್, ನಿರ್ದೇಶಕ ಪ್ರೇಮ್ ಹಾಗೂ ರಕ್ಷಿತಾ ಅತಿಥಿಯಾಗಿದ್ದರು.ಈ ಈವೆಂಟ್​​ನಲ್ಲಿ ಜೋಗಿ ಪ್ರೇಮ್ ಅವರು ಮೊದಲು ಈ ವಿಷಯ ತೆಗೆದರು. ಸುದೀಪ್ ಮಾತಿನ ಮಲ್ಲ. ಹೀಗಾಗಿ, ಅವರು ಕೌಂಟರ್ ಕೊಟ್ಟರು.

ಈ ಮೊದಲು ಜೋಗಿ ಪ್ರೇಮ್ ಅವರು ಏನಾದರೂ ಮಾತನಾಡುವಾಗ ಕೆಟ್ಟ ಪದ ಬಳಕೆ ಮಾಡಿದರೆ ಸುದೀಪ್ ಅದನ್ನು ಪ್ರಶ್ನೆ ಮಾಡುತ್ತಿದ್ದರಂತೆ. ಹಾಗೆಲ್ಲ ಏಕೆ ಮಾತನಾಡಿದೆ ಎಂದು ಕೇಳುತ್ತಿದ್ದರಂತೆ. ಈಗ ಸುದೀಪ್ ಕೂಡ ಬಳಕೆಗೆ ಅರ್ಹವಲ್ಲದ ಶಬ್ದ ಹೇಳಿದ್ದನ್ನು ಕೇಳಿ ಪ್ರೇಮ್​​ಗೆ ಖುಷಿ ಆಗಿದೆ.

‘ನಾನು ಬರುವಾಗ ಒಂದು ವಿಡಿಯೋ ನೋಡಿದೆ. ಇಡೀ ಕರ್ನಾಟಕ ವಿಡಿಯೋ ನೋಡಿದೆ. ಆಗ ಸುದೀಪ್ ಕೆಟ್ಟ ಪದ ಬಳಕೆ ಮಾಡಿದ್ರೆ ಬೈತಿದ್ರು. ಸುದೀಪ್ ಕೂಡ ನಮ್ಮ ರೂಟ್​​​​ಗೆ ಬಂದ್ರಲ್ಲ ಎಂಬುದೇ ಖುಷಿ. ಅವರು ಅದನ್ನು ಹೇಳಿದ ಸ್ಟೈಲ್ ಚೆನ್ನಾಗಿತ್ತು’ ಎಂದಿದ್ದಾರೆ ಪ್ರೇಮ್. ‘ಮೊನ್ನೆ ಏನು ವೈರಲ್ ಆಯ್ತಲ್ಲ ರೀಲ್​ ಅದಕ್ಕೆ ಕಾರಣ ಗುರುಗಳು ಪ್ರೇಮ್. ಸೆಮಿ ಫೈನಲ್ ಅಲ್ಲಿ ಏನಾದರೂ ಬಂದರೆ ಅದಕ್ಕೆ ಕಾರಣನೂ ಪ್ರೇಮ್ ಅವರೇ’ ಎಂದಿದ್ದಾರೆ ಸುದೀಪ್.

ಇದನ್ನೂ ಓದಿ: ಸುದೀಪ್ ವ್ಯಂಗ್ಯವಾಗಿ ಹೇಳಿದ್ದನ್ನೇ ಇಟ್ಟುಕೊಂಡು ಬಡಾಯಿಕೊಚ್ಚಿಕೊಂಡ ಸತೀಶ್

ಸುದೀಪ್ ಅವರು ಅವಾಚ್ಯ ಶಬ್ದ ಬಳಕೆ ಮಾಡಿದ್ದನ್ನು ಅನೇಕರು ಪ್ರಶ್ನೆ ಮಾಡಿದ್ದರು. ಬಿಗ್ ಬಾಸ್​​​ನಲ್ಲಿ ಸುದೀಪ್ ಕೆಟ್ಟ ಪದ ಬಳಕೆ ಮಾಡಿದ್ದಕ್ಕೆ ಪಾಠ ಹೇಳುತ್ತಾರೆ, ನಂತರ ಅವರೇ ಆ ರೀತಿಯ ಪದ ಬಳಕೆ ಮಾಡುತ್ತಾರೆ ಎಂದು ಹೇಳಿದ್ದರು. ಒಂದು ಫ್ಯಾಮಿಲಿ ಶೋನಲ್ಲಿ ಕೆಟ್ಟ ಪದ ಬಳಸುವುದಕ್ಕೂ, ಗೆಳೆಯರ ಜೊತೆ ಕ್ರಿಕೆಟ್ ಆಡುವಾಗ ಮಾಡುವ ಪದ ಬಳಕೆಗೂ ಸಾಕಷ್ಟು ವ್ಯತ್ಯಾಸ ಇದೆ. ಇದು ಅನೇಕರಿಗೆ ಅರ್ಥವಾಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕುಮಟಾ ಬಳಿ ಕೆಎಸ್​​ಆರ್​​​ಟಿಸಿ ಬಸ್, ಬೊಲೆರೋ ಮುಖಾಮುಖಿ ಡಿಕ್ಕಿ: 8 ಮಂದಿಗೆ ಗಾಯ – Kannada News | KSRTC Bus and Bolero Collision on NH 66 Near Kumta, Several Injured

ಕಾರವಾರ, ಜನವರಿ 29: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ–66ರ ಮಾನೀರು ದೇವಸ್ಥಾನದ ಬಳಿ ಕೆಎಸ್​​ಆರ್​​​ಟಿಸಿ ಬಸ್ ಹಾಗೂ ಬೊಲೆರೋ ವಾಹನ ಮುಖಾಮುಖಿ ಡಿಕ್ಕಿಯಾಗಿ ಬೊಲೆರೋ ವಾಹನ ಚಾಲಕ ಹಾಗೂ ಬಸ್‌ನಲ್ಲಿದ್ದ ಏಳು ಜನ ಗಾಯಗೊಂಡಿದ್ದಾರೆ. ಬೊಲೆರೋ ವಾಹನ ಚಾಲಕ ಕಾರವಾರದ ಡೇವಿಡ್ ಪಾಸ್ಕಲ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಗಾಯಾಳುಗಳನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾರವಾರದಿಂದ ಕುಮಟಾಗೆ ಮೀನು ತುಂಬಿಕೊಂಡು ತೆರಳಿದ್ದ ಬೊಲೆರೋ ವಾಹನ, ಕುಮಟಾದಿಂದ ಕಾರವಾರದ ಕಡೆಗೆ ಮರಳುತ್ತಿದ್ದಾಗ ಗೋಕರ್ಣದ ಕಡೆಗೆ ತೆರಳುತ್ತಿದ್ದ ಕೆಎಸ್​​ಆರ್​​​ಟಿಸಿ ಬಸ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಘಟನೆಯ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾಸ್ಕರ ಪರ್ವ: ಮಾಧ್ಯಮ ಲೋಕದ ಧೀಮಂತ ಗುರು ಡಾ. ಭಾಸ್ಕರ ಹೆಗಡೆಗೆ ವಿಶಿಷ್ಟ ಬೀಳ್ಕೊಡುಗೆ, ಸನ್ಮಾನ – Kannada News | Bhaskara Parva: SDM Ujire to Honor Journalism Legend Dr. Bhaskara Hegde on Jan 31

ಡಾ. ಭಾಸ್ಕರ ಹೆಗಡೆ

ಮಂಗಳೂರು, ಜನವರಿ 29: ಶಿಕ್ಷಣ ಮತ್ತು ಪತ್ರಿಕೋದ್ಯಮ (Journalism) ಕ್ಷೇತ್ರದಲ್ಲಿ ಕಳೆದ ಮೂರೂವರೆ ದಶಕಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿರುವ ಉಜಿರೆ ಎಸ್‌ಡಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ (Dr. Bhaskara Hegde) ಅವರು ಜನವರಿ 31ರಂದು ವೃತ್ತಿ ಬದುಕಿನಿಂದ ನಿವೃತ್ತರಾಗುತ್ತಿದ್ದಾರೆ. ಈ ಐತಿಹಾಸಿಕ ಕ್ಷಣವನ್ನು ಸ್ಮರಣೀಯವಾಗಿಸಲು ಹಿರಿಯ-ಕಿರಿಯ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವೃಂದದ ವತಿಯಿಂದ ‘ಭಾಸ್ಕರ ಪರ್ವ – ಮಾಧ್ಯಮ ಗುರುವಿಗೆ ಅಭಿನಂದನೆ’ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಜನವರಿ 31 ರಂದು ಶನಿವಾರ ಬೆಳಿಗ್ಗೆ 10 ಗಂಟೆಗೆ ಉಜಿರೆ ಎಸ್​ಡಿಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.

‘ಭಾಸ್ಕರ ಪರ್ವ’ ಕಾರ್ಯಕ್ರಮದಲ್ಲಿ ಏನೇನು?

  • ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ ಚಂದ್ರ ಎಸ್. ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಡಾ. ಭಾಸ್ಕರ ಹೆಗಡೆ ಕುರಿತಾದ ಅಭಿನಂದನಾ ಗ್ರಂಥವನ್ನು ಲೋಕಾರ್ಪಣೆ ಮಾಡಲಿದ್ದಾರೆ.
  • ಸಾಕ್ಷ್ಯಚಿತ್ರ ಪ್ರದರ್ಶನ: ಡಾ. ಭಾಸ್ಕರ ಹೆಗಡೆ ವೃತ್ತಿ ಜೀವನದ ಸಾಧನೆಗಳನ್ನು ಬಿಂಬಿಸುವ ವಿಶೇಷ ಸಾಕ್ಷ್ಯಚಿತ್ರವನ್ನು ಬೆಂಗಳೂರಿನ ‘ಕ್ಷೇಮವನ’ದ ಕಾರ್ಯನಿರ್ವಹಕ ನಿರ್ದೇಶಕಿ ಶ್ರೀಮತಿ ಶ್ರದ್ಧಾ ಅಮಿತ್ ಅವರು ಬಿಡುಗಡೆಗೊಳಿಸಲಿದ್ದಾರೆ.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ ಪಿ.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭಕ್ಕೆ ಪತ್ರಿಕೋದ್ಯಮ ಆಸಕ್ತರು, ಹಿತೈಷಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಆಯೋಜಕರು ವಿನಂತಿಸಿದ್ದಾರೆ.

33 ವರ್ಷಗಳ ಸಾರ್ಥಕ ಪಯಣ

ಡಾ. ಭಾಸ್ಕರ ಹೆಗಡೆ ಪ್ರಾಧ್ಯಾಪಕರಾಗಿ ಮಾತ್ರವಲ್ಲದೆ, ನೂರಾರು ಜನ ಪತ್ರಕರ್ತರನ್ನು ರೂಪಿಸಿದ ಶಿಲ್ಪಿ ಎಂದೇ ಪ್ರಸಿದ್ಧರು. ಅವರ 33 ವರ್ಷಗಳ ಸುದೀರ್ಘ ಸೇವೆಯ ಗೌರವಾರ್ಥವಾಗಿ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ಅನೇಕ ಗಣ್ಯರು ಸಾಕ್ಷಿಯಾಗಲಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇನ್ಷೂರೆನ್ಸ್ ಹೆಚ್ಚು ಜನರನ್ನು ಯಾಕೆ ತಲುಪುತ್ತಿಲ್ಲ? ಪ್ರಶ್ನೆ ಮಾಡುತ್ತಿರುವ ಆರ್ಥಿಕ ಸಮೀಕ್ಷೆ – Kannada News | Economic Survey 2026 points out reasons for low insurance penetration rate

ನವದೆಹಲಿ, ಜನವರಿ 29: ವಿಮಾ ಕ್ಷೇತ್ರದಲ್ಲಿ ಕಂಪನಿಗಳಿಗೆ ಆದಾಯ ಹೆಚ್ಚುತ್ತಿದೆ. ಆದರೆ, ಹೆಚ್ಚು ಜನರನ್ನು ಇದು ತಲುಪುತ್ತಿಲ್ಲ. ಇಂಥದ್ದೊಂದು ಪರಿಸ್ಥಿತಿಯನ್ನು ಆರ್ಥಿಕ ಸಮೀಕ್ಷೆಯಲ್ಲಿ (Economic Survey) ಎತ್ತಿ ತೋರಿಸಲಾಗಿದೆ. ಹಾಗೆಯೇ ಅದಕ್ಕೆ ಕಾರಣವೇನಿರಬಹುದು ಎಂದೂ ಅಂದಾಜಿಸಿದೆ. ಸಮೀಕ್ಷೆ ವರದಿ ಪ್ರಕಾರ ಭಾರತದಲ್ಲಿ ಇನ್ಷೂರೆನ್ಸ್ ಡಿಸ್ಟ್ರಿಬ್ಯೂಶನ್ ವೆಚ್ಚ ಬಹಳ ಅಧಿಕ ಇದೆ. ಇದರಿಂದಾಗಿ ಈ ಕ್ಷೇತ್ರದ ಬೆಳವಣಿಗೆ ತಡೆ ಎದುರಿಸುತ್ತಿದೆ.

ಭಾರತದಲ್ಲಿ ಇನ್ಷೂರೆನ್ಸ್ ಉದ್ಯಮ ಬೆಳೆಯುತ್ತಿದೆ. ಆದಾಯವೂ ಹೆಚ್ಚುತ್ತಿದೆ. ಆದರೆ, ಈಗಿರುವ ಗ್ರಾಹಕರಿಂದಲೇ ಹೆಚ್ಚಾಗಿ ಆದಾಯ ಬರುತ್ತಿರುವುದು. 2024-25ರಲ್ಲಿ ಇನ್ಷೂರೆನ್ಸ್ ದಟ್ಟಣೆ (ಪ್ರೀಮಿಯಮ್ ಸಂಗ್ರಹ) 97 ಡಾಲರ್​ಗೆ ಏರಿದೆ. ಅದರೆ, ಇನ್ಷೂರೆನ್ಸ್ ವ್ಯಾಪ್ತಿ (ಹೊಸ ಗ್ರಾಹಕರು) ಶೇ. 3.7ಕ್ಕೆ ಇಳಿಕೆಯಾಗಿದೆ. ಅಂದರೆ, ಹಾಲಿ ಗ್ರಾಹಕರಿಗೆ ಕವರೇಜ್ ಹೆಚ್ಚುತ್ತಿರುವುದು ಹಾಗೂ ಹೊಸ ಗ್ರಾಹಕರಿಗೆ ವಿಸ್ತರಣೆಯಾಗುತ್ತಿರುವುದು, ಈ ಎರಡರ ಮಧ್ಯೆ ಅಂತರ ಹೆಚ್ಚುತ್ತಿದೆ ಎಂದು ಸಮೀಕ್ಷೆಯು ಗಮನಿಸಿದೆ.

ಇದನ್ನೂ ಓದಿ: Economic Survey 2026: ಆರ್ಥಿಕ ಸಮೀಕ್ಷೆ ವರದಿ ಮಂಡನೆ; ಜಿಡಿಪಿ ಶೇ. 6.8-7.2 ಬೆಳೆಯುವ ನಿರೀಕ್ಷೆ

ಲೈಫ್ ಇನ್ಷೂರೆನ್ಸ್ ಮತ್ತು ನಾನ್-ಲೈಫ್ ಇನ್ಷೂರೆನ್ಸ್ ಸೆಗ್ಮೆಂಟ್ ಎರಡರಲ್ಲೂ ಈ ಸಮಸ್ಯೆ ಇದೆ. ಡಿಸ್ಟ್ರಿಬ್ಯೂಶನ್ ಅಥವಾ ಅಡ್ಮಿನಿಸ್ಟ್ರೇಟಿವ್ ವೆಚ್ಚ ಬಹಳ ಅಧಿಕ ಇರುವುದರಿಂದ ಕಂಪನಿಗಳ ಆಪರೇಟಿಂಗ್ ವೆಚ್ಚ ಹೆಚ್ಚಾಗಿದೆ ಎಂದು 2025-26ರ ಆರ್ಥಿಕ ಸಮೀಕ್ಷೆಯಲ್ಲಿ ಅಭಿಪ್ರಾಯಪಡಲಾಗಿದೆ.

ಡಿಜಿಟಲ್ ಪ್ಲಾಟ್​ಫಾರ್ಮ್​ಗಳಲ್ಲಿ ಇನ್ಷೂರೆನ್ಸ್ ಲಭ್ಯ ಇದೆಯಾದರೂ ಈಗಲೂ ಕೂಡ ಮಧ್ಯವರ್ತಿಗಳು ಭಾಗಿಯಾಗಿರುವ ಡಿಸ್ಟ್ರಿಬ್ಯೂಶನ್ ನೆಟ್ವರ್ಕ್​ಗಳ ಮೂಲಕವೇ ಹೆಚ್ಚಿನ ಬ್ಯುಸಿನೆಸ್ ನಡೆಯುತ್ತಿದೆ. ಈ ಡಿಸ್ಟ್ರಿಬ್ಯೂಶನ್ ವೆಚ್ಚವು ಪ್ರೀಮಿಯಮ್ ಮೌಲ್ಯ ಹೆಚ್ಚಲು ಕಾರಣವಾಗುತ್ತದೆ. ಹೀಗಾಗಿ, ಜಿಡಿಪಿ ಬೆಳವಣಿಗೆಯ ವೇಗಕ್ಕೆ ಇನ್ಷೂರೆನ್ಸ್ ಬೆಳವಣಿಗೆ ತಾಳೆಯಾಗುತ್ತಿಲ್ಲ ಎಂಬುದನ್ನು ಆರ್ಥಿಕ ಸಮೀಕ್ಷಾ ವರದಿಯಲ್ಲಿ ಗುರುತಿಸಲಾಗಿದೆ.

ಇದನ್ನೂ ಓದಿ: ಸರ್ಕಾರಕ್ಕೆ ಉದ್ಯೋಗ ಸೃಷ್ಟಿ ಗುರಿ; ಬಜೆಟ್​ನಲ್ಲಿ ಈ ಉದ್ದಿಮೆಗಳಿಗೆ ಸಿಗಲಿದೆ ಪುಷ್ಟಿ

ಭಾರತದ ಇನ್ಷೂರೆನ್ಸ್ ಸೆಕ್ಟರ್​ನಲ್ಲಿ 83 ಲಕ್ಷ ಇಂಟರ್ಮೀಡಿಯರಿಗಳಿದ್ದಾರೆ (ಏಜೆಂಟ್ಸ್ ಇತ್ಯಾದಿ ಮಧ್ಯವರ್ತಿ). ಇದು ಈ ಸೆಕ್ಟರ್​ನ ಬಲ ಮತ್ತು ದೌರ್ಬಲ್ಯ. ಇನ್ಷೂರೆನ್ಸ್ ಡಿಸ್ಟ್ರಿಬ್ಯೂಶನ್ ಅನ್ನು ಇನ್ನಷ್ಟು ಡಿಜಿಟಲೀಕರಣಗೊಳಿಸಿದರೆ ಹೊಸ ಗ್ರಾಹಕರನ್ನು ಸೆಳೆಯಲು ಮತ್ತು ಉತ್ತಮ ಇನ್ಷೂರೆನ್ಸ್ ಉತ್ಪನ್ನಗಳನ್ನು ಕೊಡಲು ಸಾಧ್ಯವಾಗಬಹುದು ಎನ್ನುವ ಸಲಹೆಯನ್ನೂ ಸಮೀಕ್ಷೆಯಲ್ಲಿ ನೀಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ಏನ್ ನಡೀತಿದೆ ಅಲ್ಲಿ? ನಾಯಿಗೂ ಜನರ ಜಗಳ ನೋಡುವ ಕುತೂಹಲ – Kannada News | Dogs Silent Stare at Street Argument Amuses the Internet

ಸಾಮಾನ್ಯವಾಗಿ ಒಂದಿಷ್ಟು ಜನ ಒಟ್ಟಿಗೆ ವಾಸಿಸುತ್ತಿದ್ದಾರೆಂದರೆ ಜಗಳಗಳು ಸಾಮಾನ್ಯ. ಒಬ್ಬರಿಗೆ ಒಂದು ಸರಿ ಎನಿಸಿದರೆ ಮತ್ತೊಬ್ಬರಿಗೆ ಅದು ತಪ್ಪೆನಿಸುವುದು. ಬೀದಿಯಲ್ಲಿ ಜಗಳ ನಡೆಯುತ್ತಿರುವಾಗ ಜನರು ನಿಂತು ನೋಡುವುದು ಕಾಮನ್ ಆದರೆ ನಾಯಿಗೂ ಇದೇನಿದು ಕುತೂಹಲ. ತಾರಸಿಯಲ್ಲಿ ನಿಂತು ಕೆಳಗೆ ನಡೆಯುತ್ತಿರುವ ಜಗಳವನ್ನು ನಾಯಿಯೊಂದು ಗಂಭೀರವಾಗಿ ನಿಂತು ಕೇಳುತ್ತಿರುವ ವಿಡಿಯೋ ವೈರಲ್ ಆಗಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮೈಸೂರು ಸಂಚಾರ ಪೊಲೀಸರಿಂದ ವಿದ್ಯಾರ್ಥಿನಿಯರಿಗೆ ಉಚಿತ ಹೆಲ್ಮೆಟ್ ವಿತರಣೆ – Kannada News | Free Helmets for Students: Mysuru Police Intensify Road Safety Awareness Campaign

ಹೆಲ್ಮೆಟ್ ವಿತರಣೆ, ರಸ್ತೆ ಸುರಕ್ಷತೆImage Credit source: Tv9 kannada

ಮೈಸೂರು, ಜ.29: ಮೈಸೂರು ಸಂಚಾರ ಪೊಲೀಸರು (Mysuru Traffic Police) ರಸ್ತೆ ಅಪಘಾತಗಳನ್ನು ತಡೆಗಟ್ಟುವ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ವಿನೂತನ ಜಾಗೃತಿ ಅಭಿಯಾನವನ್ನು ನಡೆಸಿದ್ದಾರೆ. ಈ ಕಾರ್ಯಕ್ರಮದ ಭಾಗವಾಗಿ, ಮೈಸೂರಿನ ಎಸ್.ಡಿ.ಎಂ. ಕಾಲೇಜಿನ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಹೆಲ್ಮೆಟ್‌ಗಳನ್ನು ವಿತರಿಸಲಾಯಿತು. ಜೆಎಲ್‌ಬಿ ರಸ್ತೆಯಲ್ಲಿರುವ ಕಾಲೇಜಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಡಿಸಿಪಿ ಸುಂದರ್ ರಾಜ್ ಅವರು 250 ಪೂರ್ಣ ಮುಖ ಐಎಸ್‌ಐ ಗುರುತಿನ ಹೆಲ್ಮೆಟ್‌ಗಳನ್ನು ವಿತರಿಸಿದರು. ಈ ಮೂಲಕ ವಿದ್ಯಾರ್ಥಿನಿಯರು ಸಂಚಾರ ನಿಯಮಗಳನ್ನು ಪಾಲಿಸಬೇಕು ಮತ್ತು ಹೆಲ್ಮೆಟ್ ಧರಿಸುವ ಮಹತ್ವವನ್ನು ಅರಿಯಬೇಕು ಎಂದು ತಿಳಿಸಿದರು.

ಕಳೆದ ಒಂದು ತಿಂಗಳಿಂದ ರಸ್ತೆ ಸಂಚಾರ ಸುರಕ್ಷತಾ ಸಪ್ತಾಹವನ್ನು ಆಚರಿಸುತ್ತಿರುವ ಮೈಸೂರು ಪೊಲೀಸರು, ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದನ್ನು ಮುಖ್ಯ ಆದ್ಯತೆಯಾಗಿ ಪರಿಗಣಿಸಿದ್ದಾರೆ. ಕೆ.ಆರ್. ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಎಸ್.ಡಿ.ಎಂ. ಕಾಲೇಜನ್ನು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಸುಗುಣ ಎಂಬ ಸಂಸ್ಥೆಯು ಈ ಉಚಿತ ಹೆಲ್ಮೆಟ್ ವಿತರಣಾ ಕಾರ್ಯಕ್ರಮಕ್ಕೆ ಕೈಜೋಡಿಸಿತ್ತು. ಹೆಲ್ಮೆಟ್ ಧರಿಸುವುದಕ್ಕೆ ಯಾಕೆ ಆದ್ಯತೆ ನೀಡಬೇಕು ಎಂಬುದನ್ನು ವಿವರಿಸಿದ ಡಿಸಿಪಿ ಸುಂದರ್ ರಾಜ್, ಸಂಭವಿಸುವ 100 ಅಪಘಾತಗಳಲ್ಲಿ ಶೇಕಡ 75ರಷ್ಟು ದ್ವಿಚಕ್ರ ವಾಹನಗಳ ಸವಾರರೇ ಪ್ರಾಣ ಕಳೆದುಕೊಳ್ಳುತ್ತಾರೆ ಎಂದು ಅಂಕಿಅಂಶಗಳ ಮೂಲಕ ತಿಳಿಸಿದರು. ಮಾರಣಾಂತಿಕ ಪ್ರಕರಣಗಳು ವರದಿಯಾಗುವುದರಿಂದ ಇಡೀ ಕುಟುಂಬವೇ ದುಃಖಕ್ಕೆ ಈಡಾಗುತ್ತದೆ ಎಂದು ಅವರು ವಿವರಿಸಿದರು. ಸುಮಾರು ಒಂದು ಗಂಟೆಗಳ ಕಾಲ ವಿದ್ಯಾರ್ಥಿಗಳಿಗೆ ಅಪಘಾತಗಳಿಂದಾಗುವ ದುಷ್ಪರಿಣಾಮಗಳು ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಲಾಯಿತು.

ಇಲ್ಲಿದೆ ನೋಡಿ ವಿಡಿಯೋ;

ಈ ರಸ್ತೆ ಸುರಕ್ಷತಾ ಸಪ್ತಾಹದ ಘೋಷವಾಕ್ಯ “ರೋಡ್, ಸಡಕ್, ಜೀವನ್ ರಕ್ಷಕ್” (ರಸ್ತೆ ಸುರಕ್ಷತೆ, ಜೀವನ ರಕ್ಷಕ) ಎಂಬುದಾಗಿದೆ. ಸೇಫ್ ಸವಾರಿ, ಸುರಕ್ಷಿತ ಸವಾರಿ ಎಂಬ ಧ್ಯೇಯದೊಂದಿಗೆ ಮೈಸೂರು ಸಂಚಾರ ಪೊಲೀಸರು ಈ ಅಭಿಯಾನವನ್ನು ನಡೆಸುತ್ತಿದ್ದಾರೆ. ಯುವಕರು ವೇಗವಾಗಿ ವಾಹನ ಚಲಾಯಿಸುವ ಪ್ರವೃತ್ತಿ ಹೊಂದಿರುವುದರಿಂದ, ಅವರಿಗೆ ಅರಿವು ಮೂಡಿಸಿ ಅವರ ಸುರಕ್ಷತೆಗೆ ಆದ್ಯತೆ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: ಮೈಸೂರು ಪ್ರವಾಸಿಗರಿಗೆ ದುಃಖದ ಸುದ್ದಿ: ಇನ್ಮುಂದೆ ಸಿಗಲ್ಲ ಜಿರಾಫೆ ‘ಯುವರಾಜ’

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಸ್.ಡಿ.ಎಂ. ಕಾಲೇಜಿನ ಪ್ರತಿನಿಧಿಗಳು, ತಮ್ಮ ಕಾಲೇಜಿನಲ್ಲಿ ಯೂತ್ ರೆಡ್ ಕ್ರಾಸ್, ಎನ್‌ಎಸ್‌ಎಸ್ ಮತ್ತು ವೈಆರ್‌ಸಿ ಕಾರ್ಯಕ್ರಮಗಳ ಮೂಲಕ ಸಂಚಾರ ಪೊಲೀಸರೊಂದಿಗೆ ಸೇರಿ ಜಾಥಾ ಕಾರ್ಯಕ್ರಮಗಳನ್ನು ನಡೆಸಿ, ಮಕ್ಕಳಿಗೆ ರಸ್ತೆ ಸುರಕ್ಷತೆಯ ಬಗ್ಗೆ ಮಾಹಿತಿ ನೀಡುತ್ತಾರೆ ಎಂದು ತಿಳಿಸಿದರು. ವಿದ್ಯಾರ್ಥಿನಿಯರಾದವರು ಈ ಹಿಂದೆ ಕೂಡ ಹೆಲ್ಮೆಟ್ ಧರಿಸುತ್ತಿದ್ದರು ಎಂದು ದೃಢಪಡಿಸಿದರು. ಈ ಕಾರ್ಯಕ್ರಮದಿಂದ ದೊರೆತ ಮಾಹಿತಿಯು ಹೆಲ್ಮೆಟ್ ಧರಿಸುವಿಕೆಯ ಪರಿಣಾಮಕಾರಿತ್ವವನ್ನು ಇನ್ನಷ್ಟು ಮನವರಿಕೆ ಮಾಡಿಕೊಟ್ಟಿದೆ ಎಂದು ತಿಳಿಸಿದರು. ಭವಿಷ್ಯದಲ್ಲಿ ತಾವು ಮತ್ತು ತಮ್ಮ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರೂ ಹೆಲ್ಮೆಟ್ ಧರಿಸುವಂತೆ ಉತ್ತೇಜಿಸುವುದಾಗಿ ವಿದ್ಯಾರ್ಥಿನಿಯರು ಪ್ರತಿಜ್ಞೆ ಮಾಡಿದರು. ಹೆಲ್ಮೆಟ್ ಧರಿಸುವುದು ಪೊಲೀಸರಿಂದ ದಂಡ ತಪ್ಪಿಸಿಕೊಳ್ಳುವುದಕ್ಕಾಗಿ ಅಲ್ಲ, ಬದಲಾಗಿ ನಮ್ಮ ಪ್ರಾಣವನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಎಂಬುದನ್ನು ಅವರು ಒತ್ತಿ ಹೇಳಿದರು. ಇದು ನಮ್ಮ ಜೀವನವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಾವೇ ತೆಗೆದುಕೊಳ್ಳಬೇಕೆಂಬ ಸಂದೇಶವನ್ನು ಸಾರಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಹಾವಿನ ಜತೆಗೆ ಯುವತಿಯ ಚೆಲ್ಲಾಟ, ಮುಂದೇನಾಯ್ತು ನೋಡಿ – Kannada News | A young woman tried to hold a snake in her hand without any fear

ಹಾವು (Snakes) ಕಂಡ್ರೆ ಯಾರಿಗೆ ತಾನೇ ಭಯವಿಲ್ಲ ಹೇಳಿ. ಬಹುತೇಕ ಜನರು ಈ ಹಾವುಗಳ ಹೆಸರನ್ನು ಕೇಳಿಯೇ ಬೆಚ್ಚಿ ಬೀಳುತ್ತಾರೆ. ಇನ್ನು ಹಾವುಗಳು ಮನೆಯೊಳಗೆ ಎಂಟ್ರಿ ಕೊಟ್ಟರೆ ಸಾಕು, ಅಲ್ಲಿ ನಿಲ್ಲುವ ಧೈರ್ಯವಂತೂ ಮಾಡಲ್ಲ. ಆದರೆ ಇನ್ನು ಕೆಲವರು ಭಂಡ ಧೈರ್ಯದಲ್ಲಿ ಯಾವುದೇ ಸಾಧನಗಳಿಲ್ಲದೇ ಬರಿಗೈಯಲ್ಲಿ ಹಾವನ್ನು ಹಿಡಿಯುವ ಪ್ರಯತ್ನ ಮಾಡ್ತಾರೆ. ಇದೀಗ ಯುವತಿಯೊಬ್ಬಳು (young woman) ಹಾವಿನೊಂದಿಗೆ ಚೆಲ್ಲಾಟವಾಡಿದ್ದಾಳೆ. ಕೋಪಗೊಂಡ ಹಾವು ಈ ಯುವತಿಯ ಮೇಲೆ ಪ್ರತಿ ದಾಳಿ ನಡೆಸಿದೆ. ಈ ಭಯಾನಕ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಯುವತಿಯ ವಿರುದ್ಧ ಗರಂ ಆಗಿದ್ದಾರೆ.

ಶ್ವೇತಾ ಸುತರ್ (shweta_wildliferescuer) ಎಂಬ ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿ ಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಯುವತಿಯು ಹಾವಿನೊಂದಿಗೆ ಚೆಲ್ಲಾಟ ಆಡುತ್ತಿರುವುದನ್ನು ಕಾಣಬಹುದು. ಯುವತಿಯು ಹಾವಿನ ಬಾಲವನ್ನು ಹಿಡಿಯಲು ಪ್ರಯತ್ನಿಸಿದ್ದು, ಅದು ಆಕೆಯ ಮೇಲೆ ಪ್ರತಿದಾಳಿ ನಡೆಸುತ್ತಿರುವುದನ್ನು ನೋಡಬಹುದು. ಈ ಹಾವನ್ನು ಹಿಡಿಯಲು ಪ್ರಯತ್ನಿಸುವ ಯುವತಿಯ ಕೈಯಲ್ಲಿ ಯಾವುದೇ ಸಾಧನಗಳಿಲ್ಲದಿರುವುದನ್ನು ಗಮನಿಸಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಯಮನನ್ನೇ ಕೈಯಲ್ಲಿ ಹಿಡಿದುಕೊಂಡ ವ್ಯಕ್ತಿ, ನೀವು ತುಂಬಾ ಲಕ್ಕಿ ಎಂದ ನೆಟ್ಟಿಗರು

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರರು, ಇದನ್ನೇ ಸಾವಿನೊಂದಿಗೆ ಆಟವಾಡುವುದು ಎನ್ನುವುದು ಎಂದಿದ್ದಾರೆ. ಮತ್ತೊಬ್ಬರು, ತುಂಬಾ ಅಪಾಯಕಾರಿ ದೃಶ್ಯ ಎಂದು ಹೇಳಿದರೆ, ಇನ್ನೊಬ್ಬರು ದಯವಿಟ್ಟು ಈ ರೀತಿ ಪ್ರಾಣದ ಜತೆಗೆ ಚೆಲ್ಲಾಟ ಆಡಬೇಡಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟಿ20 ವಿಶ್ವಕಪ್​ಗೂ ಮುನ್ನ ಪ್ರಮುಖ ಆಟಗಾರ ಅಮಾನತು..! – Kannada News | USA cricketer Aaron Jones suspended From Cricket

ಅಮೆರಿಕ ತಂಡದ ಸ್ಟಾರ್ ಬ್ಯಾಟರ್ ಆರೋನ್ ಜೋನ್ಸ್ (Aaron Jones)​ ಅವರನ್ನು ಎಲ್ಲಾ ಮಾದರಿಯ ಕ್ರಿಕೆಟ್​ನಿಂದ ಅಮಾನತುಗೊಳಿಸಲಾಗಿದೆ. ಭ್ರಷ್ಟಾಚಾರ ವಿರೋಧಿ ಸಂಹಿತೆಗಳ ಉಲ್ಲಂಘನೆಗಳ ಅಡಿಯಲ್ಲಿ ಜೋನ್ಸ್ ಅವರನ್ನು ತಾತ್ಕಾಲಿಕವಾಗಿ ಸಸ್ಪೆಂಡ್ ಮಾಡಲಾಗಿದೆ ಎಂದು ಐಸಿಸಿ ತಿಳಿಸಿದೆ.

2023-24 ರಲ್ಲಿ ಬಾರ್ಬಡೋಸ್‌ನಲ್ಲಿ ನಡೆದ ಬಿಮ್10 ಟೂರ್ನಮೆಂಟ್‌ನಲ್ಲಿ ಆರೋನ್ ಜೋನ್ಸ್ ಐಸಿಸಿಯ ಭ್ರಷ್ಟಾಚಾರ ವಿರೋಧಿ ಸಂಹಿತೆಗಳನ್ನು ಉಲ್ಲಂಘಿಸಿರುವ ಆರೋಪ ಕೇಳಿ ಬಂದಿವೆ. ಒಟ್ಟು ಐದು ಆರೋಪಗಳಲ್ಲಿ ಎರಡು ಅಂತರರಾಷ್ಟ್ರೀಯ ಪಂದ್ಯಗಳಿಗೆ ಸಂಬಂಧಿಸಿವೆ ಎಂದು ಐಸಿಸಿ ತಿಳಿಸಿದೆ. 

ಜೋನ್ಸ್ ಬಿಮ್​10 ಟೂರ್ನಮೆಂಟ್‌ನಲ್ಲಿ ಪಂದ್ಯಗಳಲ್ಲಿನ ಫಿಕ್ಸಿಂಗ್​ನಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಆರೋಪವಿದೆ. ಇದಲ್ಲದೆ ಭ್ರಷ್ಟಚಾರದಲ್ಲಿ ತೊಡಗಿಸಿಕೊಳ್ಳುವ ವಿಧಾನಗಳನ್ನು ಬಹಿರಂಗಪಡಿಸದಿರುವುದು ಮತ್ತು ಗೊತ್ತುಪಡಿಸಿದ ಭ್ರಷ್ಟಾಚಾರ-ವಿರೋಧಿ ಅಧಿಕಾರಿಯಿಂದ ಸಮಂಜಸವಾದ ತನಿಖೆಗೆ ಸಹಕರಿಸದಿರುವ ಆರೋಪ ಹೊರಿಸಲಾಗಿದೆ.

ಈ ಆರೋಪಗಳು ವ್ಯಾಪಕ ತನಿಖೆಯ ಭಾಗವಾಗಿದ್ದು, ಹೀಗಾಗಿ ಜೋನ್ಸ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಆರೋಪಗಳಿಗೆ ಪ್ರತಿಕ್ರಿಯಿಸಲು ಅವರಿಗೆ ಜನವರಿ 28, 2026 ರಿಂದ 14 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಐಸಿಸಿ ತಿಳಿಸಿದೆ.

ಆರೋನ್ ಜೋನ್ಸ್ 2024 ರಲ್ಲಿ ನಡೆದ ಟಿ20 ವಿಶ್ವಕಪ್​ನಲ್ಲಿ ಯುಎಸ್​ಎ (ಅಮೆರಿಕ) ತಂಡದ ಪರ ಕಣಕ್ಕಿಳಿದಿದ್ದರು. ಅಲ್ಲದೆ ಮುಂಬರುವ ಟಿ20 ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ ಇದೀಗ ಫಿಕ್ಸಿಂಗ್ ಆರೋಪಕ್ಕೆ ಗುರಿಯಾಗಿ ಎಲ್ಲಾ ರೀತಿಯ ಕ್ರಿಕೆಟ್​ನಿಂದ ಅಮಾನತುಗೊಂಡಿದ್ದಾರೆ. ಹೀಗಾಗಿ ಅವರು ಭಾರತ-ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ಖಚಿತ.

31 ವರ್ಷದ ಆರೋನ್ ಜೋನ್ಸ್ ಯುಎಸ್ಎ ಪರ 100 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 52 ಏಕದಿನ ಪಂದ್ಯಗಳಿಂದ 1664 ರನ್ ಕಲೆಹಾಕಿದ್ದಾರೆ. ಹಾಗೆಯೇ 48 ಟಿ20 ಪಂದ್ಯಗಳಿಂದ 770 ರನ್ ಕಲೆಹಾಕಿದ್ದಾರೆ. ಹಾಗೆಯೇ ಯುಎಸ್ಎ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಸಿಯಾಟಲ್ ಓರ್ಕಾಸ್ ಪರ ಮತ್ತು ಸಿಪಿಎಲ್‌ನಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ಪರ ಕಣಕ್ಕಿಳಿದಿದ್ದಾರೆ. ಇದೀಗ ಅಮಾನತುಗೊಂಡಿದ್ದರಿಂದ ಅವರು ಇನ್ಮುಂದೆ ಯಾವುದೇ ರೀತಿಯ ಕ್ರಿಕೆಟ್ ಆಡುವಂತಿಲ್ಲ.

Published On – 2:09 pm, Thu, 29 January 26

Source link

Exit mobile version