ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ

ಬೆಂಗಳೂರು, ಜೂನ್ 1: ರಾಜ್ಯಪಾಲ ಥಾವರ್‌ಚಂದ್ ಗೆಹಲೋಟ್​ಗೆ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದಕ್ಕೆ ವ್ಯಕ್ತಿಯೊಬ್ಬರು ನಡು ಮಾರ್ಗದಲ್ಲಿ ಕುಳಿತು ಪ್ರತಿಭಟಿಸಿದ ಘಟನೆ ಬೆಂಗಳೂರಿನ ಹೆಚ್​ಎಎಲ್​ ಓಲ್ಡ್ ಏರ್​ಪೋರ್ಟ್ ರಸ್ತೆಯಲ್ಲಿ ನಡೆದಿದೆ. ಇದೇ ವೇಳೆ ಬಳಿ ಬಂದ ಟ್ರಾಫಿಕ್ ಪೊಲೀಸರ ಬಳಿ, ‘ನನ್ನ ಪತ್ನಿ ಗರ್ಭಿಣಿ, ಈಗ ಹೇಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರ ಸಂಚಾರಕ್ಕಾಗಿ ಸುಮಾರು 30 ನಿಮಿಷ ಪೊಲೀಸರು ಟ್ರಾಫಿಕ್​ ಬಂದ್ ಮಾಡಿದ್ದರು. ಇದರಿಂದ ವ್ಯಕ್ತಿ ಕೆರಳಿದ್ದರು. ನಂತರ ವ್ಯಕ್ತಿಯನ್ನು ಪೊಲೀಸರು ಸಮಾಧಾನಪಡಿಸಿ ಕಳುಹಿಸಿದ್ದಾರೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ಪೆಷಲ್ ಫ್ಲೈಟ್​ನಲ್ಲಿ ಒಟ್ಟಿಗೆ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!

ಬೆಂಗಳೂರು, ಜೂನ್ 01: ಕಾಂಗ್ರೆಸ್ ಹೈಕಮಾಂಡ್‌ನೊಂದಿಗೆ ಮಹತ್ವದ ಸಭೆಗಳನ್ನು ನಡೆಸಲು ಹಂಗಾಮಿ ಸಿಎಂ ಸಿದ್ದರಾಮಯ್ಯ ಮತ್ತು ನಿಯೋಜಿತ ಸಿಎಂ ಡಿಕೆ ಶಿವಕುಮಾರ್ ಇಬ್ಬರೂ ಒಟ್ಟಿಗೆ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದ್ದಾರೆ. ಅಧಿಕಾರ ಹಂಚಿಕೆ ಮತ್ತು ಸಂಪುಟ ಪುನರ್‌ರಚನೆ ಕುರಿತು ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ. ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಮತ್ತು ಹಿರಿಯ ನಾಯಕ ಹೆಚ್.ಸಿ. ಮಹದೇವಪ್ಪ ಸೇರಿದಂತೆ ಹಲವು ಮುಖಂಡರು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರೊಂದಿಗೆ ದೆಹಲಿಗೆ ಪ್ರಯಾಣಿಸಿದ್ದಾರೆ.

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಮತ್ತು ರಾಜಕೀಯ ಸ್ಥಿತ್ಯಂತರಗಳ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ರಣದೀಪ್ ಸುರ್ಜೇವಾಲಾ ಅವರೊಂದಿಗೆ ಚರ್ಚೆಗಳು ನಡೆಯಲಿವೆ ಎಂದು ಮೂಲಗಳು ತಿಳಿಸಿವೆ. ಈ ಉನ್ನತ ಮಟ್ಟದ ಭೇಟಿ ರಾಜ್ಯ ರಾಜಕೀಯದಲ್ಲಿ ಮುಂದಿನ ಬೆಳವಣಿಗೆಗಳಿಗೆ ನಿರ್ಣಾಯಕವಾಗಬಹುದು. ಈ ಭೇಟಿಯು ಕರ್ನಾಟಕದಲ್ಲಿ ಸ್ಥಿರ ಸರ್ಕಾರ ರಚನೆಗೆ ಅಡಿಪಾಯ ಹಾಕುವ ಸಾಧ್ಯತೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಬಾಲಕಿಯ ಅಪಹರಿಸಿ, ಅತ್ಯಾಚಾರ ನಡೆಸಲು ವ್ಯಕ್ತಿಯ ಯತ್ನ, ಬಾಲಕನ ಸಮಯಪ್ರಜ್ಞೆಯಿಂದ ಉಳೀತು ಆಕೆಯ ಜೀವ

ರಷ್ಯಾ, ಜೂನ್ 01: ರಷ್ಯಾದಲ್ಲಿ 44 ವರ್ಷದ ವ್ಯಕ್ತಿಯೊಬ್ಬ ಕಿರುಚುತ್ತಿದ್ದ 5 ವರ್ಷದ ಪುಟ್ಟ ಹೆಣ್ಣು ಮಗಳನ್ನು ಬಲವಂತವಾಗಿ ಎತ್ತಿಕೊಂಡು ಕಟ್ಟಡದ ಒಳಗೆ ಹೋಗಲು ಯತ್ನಿಸಿದ್ದಾನೆ. ಆದರೆ ಅಲ್ಲಿಯೇ ಇದ್ದ ಸಣ್ಣ ಬಾಲಕನೊಬ್ಬ ತಕ್ಷಣವೇ ಎಚ್ಚೆತ್ತುಕೊಂಡು, ಕಟ್ಟಡದ ಮುಖ್ಯ ಬಾಗಿಲು ಮುಚ್ಚದಂತೆ ಗಟ್ಟಿಯಾಗಿ ಹಿಡಿದುಕೊಂಡು ಜೋರಾಗಿ ಕೂಗಿ ಇತರರ ಸಹಾಯ ಬೇಡಿದ್ದಾನೆ. ಬಾಲಕನ ಈ ಸಮಯಪ್ರಜ್ಞೆ ಮತ್ತು ಧೈರ್ಯದಿಂದಾಗಿ ಅಪಹರಣಕಾರನ ಸಂಚು ವಿಫಲಗೊಂಡಿದ್ದು, ಮಗು ಸುರಕ್ಷಿತವಾಗಿ ಪಾರಾಗಿದೆ. ಸಾರ್ವಜನಿಕರ ಸಹಾಯದಿಂದ ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿಟ್ಟಿದ್ದಾರೆ. ಸಮಯಕ್ಕೆ ಸರಿಯಾಗಿ ಧೈರ್ಯ ತೋರಿದ ಆ ಪುಟ್ಟ ಬಾಲಕನ ಸಾಹಸಕ್ಕೆ ಜಗತ್ತಿನಾದ್ಯಂತ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Source link

ಬೆಂಗಳೂರು: ಗಾಂಧಿ ಬಜಾರ್ ಹೈಟೆಕ್ ಪಾರ್ಕಿಂಗ್ ಲಾಟ್‌ ಕಾರು ಶೋರೂಂಗೆ ಬಾಡಿಗೆಗೆ! ವಾಹನ ಸವಾರರ ತೀವ್ರ ಆಕ್ರೋಶ

ಗಾಂಧಿ ಬಜಾರ್ ಹೈಟೆಕ್ ಪಾರ್ಕಿಂಗ್ ಲಾಟ್‌Image Credit source: tv9

ಬೆಂಗಳೂರು, ಜೂನ್ 1: ಬೆಂಗಳೂರಿನ (Bengaluru) ಅತ್ಯಂತ ಜನನಿಬಿಡ ವಾಣಿಜ್ಯ ಪ್ರದೇಶವಾದ ಬಸವನಗುಡಿಯ ಗಾಂಧಿ ಬಜಾರ್‌ನಲ್ಲಿ ವಾಹನ ಸವಾರರ ಪಾರ್ಕಿಂಗ್ ಸಮಸ್ಯೆಗೆ ಮುಕ್ತಿ ನೀಡಲು ನಿರ್ಮಿಸಲಾಗಿದ್ದ ಹೈಟೆಕ್ ಮಲ್ಟಿಲೆವೆಲ್ ಪಾರ್ಕಿಂಗ್ ಲಾಟ್ ಈಗ ವಿವಾದದ ಕೇಂದ್ರಬಿಂದುವಾಗಿದೆ. ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ ಬರೋಬ್ಬರಿ 27 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ನಾಲ್ಕು ಅಂತಸ್ತಿನ ಈ ಬೃಹತ್ ಪಾರ್ಕಿಂಗ್ ಸಂಕೀರ್ಣವನ್ನು ಕಳೆದ ತಿಂಗಳಷ್ಟೇ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿತ್ತು. ಆದರೆ, ಇದರ ಗುತ್ತಿಗೆ ಪಡೆದಿರುವ ಮಾಲೀಕ ಸಾರ್ವಜನಿಕ ವಾಹನಗಳಿಗೆ ಜಾಗ ನೀಡುವ ಬದಲಿಗೆ ಇಡೀ ಪಾರ್ಕಿಂಗ್ ಲಾಟ್ ಅನ್ನು ಐಷಾರಾಮಿ ‘ಬೆಂಜ್ ಕಾರ್ ಶೋರೂಂ’ನ ಹೊಸ ಕಾರುಗಳ ನಿಲುಗಡೆಗೆ ಅಕ್ರಮವಾಗಿ ಬಾಡಿಗೆಗೆ ನೀಡಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ಸ್ಥಳೀಯರು ಮತ್ತು ವಾಹನ ಸವಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಾಂಶಗಳು

  • ಸಾರ್ವಜನಿಕರ ಬಳಕೆಗೆ ಮೀಸಲಾಗಿರಬೇಕಿದ್ದ ಹೈಟೆಕ್ ಪಾರ್ಕಿಂಗ್ ಲಾಟ್ ಅನ್ನು ಕಾರ್ ಶೋರೂಂಗೆ ಅಕ್ರಮವಾಗಿ ಬಾಡಿಗೆ ನೀಡಿದ ಗುತ್ತಿಗೆದಾರ.
  • ಪಾರ್ಕಿಂಗ್ ಸಂಕೀರ್ಣದಲ್ಲಿ ಜಾಗ ಸಿಗದೆ ರಸ್ತೆ, ಫುಟ್‌ಪಾತ್ ಹಾಗೂ ಸ್ಥಳೀಯರ ಮನೆಗಳ ಮುಂದೆ ವಾಹನ ನಿಲುಗಡೆ.
  • ಗಾಂಧಿ ಬಜಾರ್‌ನಲ್ಲಿ ಹೆಚ್ಚಿದ ಟ್ರಾಫಿಕ್ ಕಿರಿಕಿರಿ.

ಮನೆಗಳ ಮುಂದೆ ವಾಹನ ನಿಲುಗಡೆ, ನಿವಾಸಿಗಳಿಗೆ ತಲೆನೋವು

ಗಾಂಧಿ ಬಜಾರ್ ಮಾರುಕಟ್ಟೆಗೆ ಪ್ರತಿದಿನ ಸಾವಿರಾರು ಗ್ರಾಹಕರು ಮತ್ತು ವ್ಯಾಪಾರಿಗಳು ಆಗಮಿಸುತ್ತಾರೆ. ಇಲ್ಲಿ ದಶಕಗಳಿಂದ ಇದ್ದ ಪಾರ್ಕಿಂಗ್ ಸಮಸ್ಯೆಗೆ ಪರಿಹಾರವಾಗಿ ಈ ಬೃಹತ್ ಕಟ್ಟಡ ತಲೆಯೆತ್ತಿತ್ತು. ಆದರೆ, ಗುತ್ತಿಗೆದಾರನ ದುರಾಶೆಯಿಂದಾಗಿ ಸಾರ್ವಜನಿಕರಿಗೆ ಇಲ್ಲಿ ವಾಹನ ನಿಲ್ಲಿಸಲು ಅವಕಾಶವೇ ಸಿಗುತ್ತಿಲ್ಲ. ಇದರಿಂದ ಬೇಸತ್ತ ವಾಹನ ಸವಾರರು ಅನಿವಾರ್ಯವಾಗಿ ಗಾಂಧಿ ಬಜಾರ್ ಸುತ್ತಮುತ್ತಲಿನ ನಿವಾಸಿಗಳ ಮನೆಗಳ ಮುಂದೆ ಹಾಗೂ ಅಂಗಡಿ ಮುಂಗಟ್ಟುಗಳ ಎದುರು ತಮ್ಮ ಕಾರು, ಬೈಕ್‌ಗಳನ್ನು ನಿಲ್ಲಿಸಿ ಹೋಗುತ್ತಿದ್ದಾರೆ. ಇದು ಸ್ಥಳೀಯ ನಿವಾಸಿಗಳ ನೆಮ್ಮದಿ ಕೆಡಿಸಿದ್ದು, ನಿವಾಸಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಟ್ರಾಫಿಕ್ ಸಮಸ್ಯೆ ಮತ್ತು ಸ್ಮಾರ್ಟ್ ಸಿಟಿ ಯೋಜನೆಗೆ ಧಕ್ಕೆ

‘ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಾಣ ಮಾಡಲಾದ ಪಾರ್ಕಿಂಗ್ ಜಾಗವನ್ನು ಖಾಸಗಿ ಕಾರ್ ಶೋರೂಂನ ಗೋಡೌನ್ ತರಹ ಬಳಸಿ ಲೂಟಿ ಹೊಡೆಯಲಾಗುತ್ತಿದೆ’ ಎಂದು ಹೆರಿಟೇಜ್ ಬಸವನಗುಡಿ ಸಂಸ್ಥೆಯ ಕಾರ್ಯದರ್ಶಿ ಗುರುಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾರ್ಕಿಂಗ್ ಸಂಕೀರ್ಣದ ಒಳಗೆ ಜಾಗ ಸಿಗದ ಕಾರಣ ಸವಾರರು ರಸ್ತೆ ಮತ್ತು ಫುಟ್‌ಪಾತ್‌ಗಳ ಮೇಲೆಯೇ ವಾಹನಗಳನ್ನು ಪಾರ್ಕ್ ಮಾಡುತ್ತಿದ್ದು, ಗಾಂಧಿ ಬಜಾರ್‌ನಲ್ಲಿ ಸಂಚಾರ ದಟ್ಟಣೆ ಮತ್ತಷ್ಟು ಹದಗೆಟ್ಟಿದೆ.

ಇದನ್ನೂ ಓದಿ: 35 ಸಾವಿರ ರೂಗೆ ಬೆಂಗಳೂರಿನಲ್ಲಿ ಆರಾಮ ಜೀವನ ನಡೆಸ್ಬಹುದು; ತಿಂಗಳ ಖರ್ಚು ವೆಚ್ಚ ಬಿಚ್ಚಿಟ್ಟ ಸಾಫ್ಟ್‌ವೇರ್‌ ಇಂಜಿನಿಯರ್

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆಯ ಉದ್ದೇಶವನ್ನೇ ಗುತ್ತಿಗೆದಾರ ಗಾಳಿಗೆ ತೂರಿದ್ದು, ಬಿಬಿಎಂಪಿ ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಿ ಅಕ್ರಮ ಬಾಡಿಗೆ ದಂಧೆಯನ್ನು ನಿಲ್ಲಿಸಬೇಕು ಹಾಗೂ ಗುತ್ತಿಗೆದಾರನ ಪರವಾನಗಿಯನ್ನು ರದ್ದುಗೊಳಿಸಬೇಕು ಎಂದು ಸಾರ್ವಜನಿಕರು ಕಟ್ಟುನಿಟ್ಟಾಗಿ ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Virat Kohli: ಯುವ ಆಟಗಾರರ ಸವಾಲಿಗೆ ನಾನು ರೆಡಿ!

ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಆರ್​ಸಿಬಿ ತಂಡದ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ವಿರಾಟ್ ಕೊಹ್ಲಿ (Virat Kohli).

ಗುಜರಾತ್ ಟೈಟಾನ್ಸ್ ನೀಡಿದ 155 ರನ್​ಗಳ ಸವಾಲನ್ನು ಬೆನ್ನತ್ತಿದ ಆರ್​ಸಿಬಿ ಪರ ವಿರಾಟ್ ಕೊಹ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭಿಕನಾಗಿ ಕಣಕ್ಕಿಳಿದ ಕೊಹ್ಲಿ 42 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 9 ಫೋರ್​ಗಳೊಂದಿಗೆ ಅಜೇಯ 75 ರನ್ ಬಾರಿಸಿದರು. ಈ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಈ ಪ್ರಶಸ್ತಿ ಸ್ವೀಕರಿಸಿದ ಬಳಿಕ ನಡೆದ ಸಂದರ್ಶನದಲ್ಲಿ ವಿರಾಟ್ ಕೊಹ್ಲಿಗೆ ಬ್ಯಾಟಿಂಗ್ ಶೈಲಿಯ ಬದಲಾವಣೆ ಬಗ್ಗೆ ಪ್ರಶ್ನೆ ಮುಂದಿಡಲಾಗಿತ್ತು. ಇದಕ್ಕೆ ಉತ್ತರಿಸಿದ ಕೊಹ್ಲಿ, “ಇಂದಿನ ಕ್ರಿಕೆಟ್‌ನ ಬೇಡಿಕೆ ಎಷ್ಟಿದೆಯೆಂದರೆ, ತೀರಾ ಕಿರಿಯ ವಯಸ್ಸಿನ (ಸೂಪರ್ ಯಂಗ್) ಆಟಗಾರರು ಸಹ ನೀವು ನಿಮ್ಮ ಆಟದ ಮಟ್ಟವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದಾರೆ ಮತ್ತು ಒತ್ತಡ ಹೇರುತ್ತಿದ್ದಾರೆ. ಇದಕ್ಕಾಗಿ ನಾನು ಕೂಡ ಬದಲಾಗಿದ್ದೇನೆ” ಎಂದರು.

ಇಂತಹದೊಂದು ಪ್ರಶ್ನೆ ಮುಂದಿಡಲು ಮುಖ್ಯ ಕಾರಣ ಈ ಪಂದ್ಯದಲ್ಲಿ ಕೊಹ್ಲಿ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದು. ಅಂದರೆ ಇದೇ ಮೊದಲ ಬಾರಿಗೆ ಕಿಂಗ್ ಕೊಹ್ಲಿ 26 ಕ್ಕಿಂತ ಕಡಿಮೆ ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿದ್ದಾರೆ. ಹಾಗೆಯೇ ಈ ಬಾರಿಯ ಐಪಿಎಲ್​ನಲ್ಲಿ ಕೊಹ್ಲಿ ಬ್ಯಾಟ್ ಬೀಸಿರುವುದು 165.84 ಸ್ಟ್ರೈಕ್ ರೇಟ್​ನಲ್ಲಿ. ಇದು ಕಐಪಿಎಲ್ ಇತಿಹಾಸದಲ್ಲೇ ವಿರಾಟ್ ಕೊಹ್ಲಿ ಅವರ ಗರಿಷ್ಠ ಸ್ಟ್ರೈಕ್ ರೇಟ್​ ಎಂಬುದು ವಿಶೇಷ.

ಹೀಗೆ ಈ ಬಾರಿಯ ಐಪಿಎಲ್​ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್​ಗೆ ಒತ್ತು ನೀಡಿರುವ ಕೊಹ್ಲಿಗೆ ಇಂತಹದೊಂದು ಬದಲಾವಣೆಗೆ ಕಾರಣವೇನು ಎಂದು ಕೇಳಿದ್ದಾರೆ. ಈ ವೇಳೆ ಯುವ ದಾಂಡಿಗರ ಆರ್ಭಟದ ಮುಂದೆ ಹಾಗೂ ಅವರ ಸವಾಲನ್ನು ಸ್ವೀಕರಿಸಲು ಈ ರೀತಿಯಾಗಿ ಬದಲಾಗಿರುವುದಾಗಿ ಕಿಂಗ್ ಕೊಹ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಪ್ರತಿದಿನ ಎಷ್ಟು ಹಾಲು ಕುಡೀತಿಯಾ? ವೈಭವ್ ಸೂರ್ಯವಂಶಿ ಉತ್ತರ ಹೀಗಿತ್ತು!

ಹೀಗಾಗಿ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲೂ ವಿರಾಟ್ ಕೊಹ್ಲಿ ಕಡೆಯಿಂದ ಭರ್ಜರಿ ಬ್ಯಾಟಿಂಗ್ ನಿರೀಕ್ಷಿಸಬಹುದು. ಅದರಲ್ಲೂ ಈ ಬಾರಿ 165.84ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬಿಸಿರುವ ಕೊಹ್ಲಿ ಮುಂದಿನ ಸೀಸನ್​ನಲ್ಲಿ 170ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದರೂ ಅಚ್ಚರಿಪಡಬೇಕಿಲ್ಲ.

Source link

ಪಹಲ್ಗಾಮ್ ದಾಳಿ ತನಿಖೆಯಲ್ಲಿ ಮಹತ್ವದ ಸುಳಿವು: ಉಗ್ರರು ಬಳಸಿದ್ದ ಫೋನ್​ಗೆ ಪಾಕಿಸ್ತಾನ ಬ್ಯಾಂಕ್​ ಲಿಂಕ್

ಶ್ರೀನಗರ, ಜೂನ್ 01: ಕಳೆದ ವರ್ಷ ದಕ್ಷಿಣ ಕಾಶ್ಮೀರದ ಪಹಲ್ಗಾಮ್‌(Pahalgam)ನಲ್ಲಿ ನಡೆದ ಭಯೋತ್ಪಾದಕ ದಾಳಿಯ ತನಿಖೆಯನ್ನು ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಜಮ್ಮು-ಕಾಶ್ಮೀರ ಪೊಲೀಸರಿಗೆ ಅತ್ಯಂತ ಪ್ರಮುಖ ಸುಳಿವು ಲಭ್ಯವಾಗಿದೆ. ದಾಳಿ ನಡೆಸಿದ ಉಗ್ರರು ಬಳಸಿದ್ದ ಎರಡು ಪ್ರಮುಖ ಮೊಬೈಲ್ ಫೋನ್‌ಗಳ ಮೂಲವನ್ನು ಪತ್ತೆಹಚ್ಚಲಾಗಿದ್ದು, ಅದರಲ್ಲಿ ಒಂದು ಫೋನ್‌ಗೆ ಪಾಕಿಸ್ತಾನದ ಕರಾಚಿ ಮೂಲದ ಪ್ರಮುಖ ಬ್ಯಾಂಕ್‌ವೊಂದು ಹಣಕಾಸು ನೆರವು ನೀಡಿರುವುದು ತನಿಖೆಯಲ್ಲಿ ಬಯಲಾಗಿದೆ . ಈ ಕುರಿತು ಇಂಡಿಯನ್ ಎಕ್ಸ್​ಪ್ರೆಸ್​ ವರದಿ ಮಾಡಿದೆ. ದಾಳಿಕೋರರ ಡಿಜಿಟಲ್ ಹೆಜ್ಜೆಗುರುತುಗಳನ್ನು ಯಶಸ್ವಿಯಾಗಿ ಬೆನ್ನಟ್ಟಿರುವ ಭದ್ರತಾ ಪಡೆಗಳು, ಶತ್ರುಗಳ ಜಾಲವನ್ನು ಭೇದಿಸುವಲ್ಲಿ ದೊಡ್ಡ ಯಶಸ್ಸು ಕಂಡಿವೆ.

ಬ್ಯಾಂಕ್ ಲಿಂಕ್ ಪತ್ತೆಯಾದದ್ದು ಹೇಗೆ?
2025ರ ಜುಲೈ 28ರಂದು ಜಮ್ಮು ಮತ್ತು ಕಾಶ್ಮೀರದ ಡಚಿಗಮ್ ಅರಣ್ಯ ವ್ಯಾಪ್ತಿಯ ಮುಲ್ನಾರ್ ಮಹಾದೇವ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರಾದ ಫೈಸಲ್ ಜಟ್, ಹಬೀಬ್ ತಾಹಿರ್ ಮತ್ತು ಹಮ್ಜಾ ಅಫ್ಘಾನಿಯನ್ನು ಸೇನೆ ಹೊಡೆದುರುಳಿಸಿತ್ತು. ಇವರಿಂದ ವಶಪಡಿಸಿಕೊಳ್ಳಲಾದ ಎರಡು ಶಿಯೋಮಿ (Xiaomi) ರೆಡ್‌ಮಿ ಫೋನ್‌ಗಳ ತಪಾಸಣೆಯಿಂದ ಈ ಕೆಳಗಿನ ಸತ್ಯಗಳು ಹೊರಬಂದಿವೆ:

ಕರಾಚಿಯ ಕನೆಕ್ಷನ್: ಶಿಯೋಮಿ ಗ್ಲೋಬಲ್ ಸಂಸ್ಥೆ ನೀಡಿದ ಮಾಹಿತಿಯ ಪ್ರಕಾರ, ಉಗ್ರರ ಬಳಿಯಿದ್ದ ಒಂದು ‘ರೆಡ್‌ಮಿ 9T’ ಫೋನ್ ಅನ್ನು 2021ರ ಜನವರಿಯಲ್ಲಿ ಪಾಕಿಸ್ತಾನದ ‘ಟೆಕ್ ಸಿರಾಟ್ ಪ್ರೈವೇಟ್ ಲಿಮಿಟೆಡ್’ ಕಂಪನಿಯು ಆಮದು ಮಾಡಿಕೊಂಡಿತ್ತು. ಈ ಆಮದಿಗೆ ಕರಾಚಿಯ ಶಹ್ರಾ-ಇ-ಫೈಸಲ್‌ನಲ್ಲಿರುವ ಪ್ರಮುಖ ಇಸ್ಲಾಮಿಕ್ ಬ್ಯಾಂಕ್ ಆದ ‘ಫೈಸಲ್ ಬ್ಯಾಂಕ್ ಲಿಮಿಟೆಡ್’ ಹಣಕಾಸು ಒದಗಿಸಿತ್ತು.

ಮತ್ತಷ್ಟು ಓದಿ: ಪಾಕಿಸ್ತಾನದಲ್ಲಿ ಕುಳಿತು ಪಹಲ್ಗಾಮ್​ನಲ್ಲಿ ಲಷ್ಕರ್ ಉಗ್ರರು ಭಯೋತ್ಪಾದಕ ದಾಳಿ ನಡೆಸಿದ್ಹೇಗೆ? ಎನ್​ಐಎ ಚಾರ್ಜ್​ಶೀಟ್​​ನಲ್ಲೇನಿದೆ?

ರಹಸ್ಯ ಕಳ್ಳಸಾಗಣೆ: ಈ ಫೋನ್ ಅನ್ನು 2021 ರಲ್ಲಿ ಆಮದು ಮಾಡಿಕೊಂಡಿದ್ದರೂ, ಏಪ್ರಿಲ್ 22, 2025 ರಂದು ಪಹಲ್ಗಾಮ್ ದಾಳಿ ನಡೆಯುವವರೆಗೂ ಒಮ್ಮೆಯೂ ಸ್ವಿಚ್ ಆನ್ ಮಾಡಲಾಗಿರಲಿಲ್ಲ. ಅಂದರೆ, ಲಷ್ಕರ್-ತೊಯ್ಬಾ (LeT) ಉಗ್ರರಿಗೆ ಹಸ್ತಾಂತರಿಸುವ ಉದ್ದೇಶದಿಂದಲೇ ಇದನ್ನು ರಹಸ್ಯವಾಗಿ ಎತ್ತಿಡಲಾಗಿತ್ತು ಎಂಬುದು ಸಾಬೀತಾಗಿದೆ.

ಎರಡನೇ ಫೋನ್: ಉಗ್ರರ ಬಳಿಯಿದ್ದ ಮತ್ತೊಂದು ‘ರೆಡ್‌ಮಿ ನೋಟ್ 12’ ಫೋನ್ ಅನ್ನು ಲಾಹೋರ್‌ನ ‘ಏರ್ ಲಿಂಕ್ ಕಮ್ಯುನಿಕೇಷನ್ಸ್’ ಸಂಸ್ಥೆ ಆಮದು ಮಾಡಿಕೊಂಡಿತ್ತು. ಇದನ್ನು ಸಹ ದಾಳಿಗೆ ಮುನ್ನ ಎಂದೂ ಆನ್ ಮಾಡಿರಲಿಲ್ಲ.

ಈ ಹಿಂದೆಯೂ ಭಯೋತ್ಪಾದನಾ ತನಿಖೆಯಲ್ಲಿದ್ದ ಬ್ಯಾಂಕ್
ಪಹಲ್ಗಾಮ್ ದಾಳಿಯಲ್ಲಿ ಈ ಬ್ಯಾಂಕ್‌ನ ನೇರ ಪಾತ್ರದ ಬಗ್ಗೆ ಪುರಾವೆಗಳಿಲ್ಲದಿದ್ದರೂ, ಜಾಗತಿಕ ಭಯೋತ್ಪಾದನಾ ನಿಧಿಯ ತನಿಖೆಗಳಲ್ಲಿ ಈ ಬ್ಯಾಂಕ್ ಹೆಸರು ಈ ಹಿಂದೆಯೂ ಕೇಳಿಬಂದಿತ್ತು. 9/11 ದಾಳಿಯ ನಂತರ ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಭಾರತದ ವಿರುದ್ಧ ಹೋರಾಡುವ ಲಷ್ಕರ್-ಎ-ತೊಯ್ಬಾ(LeT) ಮತ್ತು ಅಲ್-ಖೈದಾ ಒಡನಾಟ ಹೊಂದಿರುವ ಕುವೈತ್ ಮೂಲದ ಲಜ್ನತ್ ಅಲ್-ದವಾ ಸಂಸ್ಥೆಗಳು ಇದೇ ಫೈಸಲ್ ಬ್ಯಾಂಕ್‌ನಲ್ಲಿ ಠೇವಣಿ ಖಾತೆಗಳನ್ನು ಹೊಂದಿದ್ದವು. 2002ರ ವರದಿಗಳ ಪ್ರಕಾರ ಪಾಕಿಸ್ತಾನದ ಎಫ್‌ಐಎ (FIA) ತನಿಖೆ ನಡೆಸಿದಾಗ ಜೈಶ್-ಎ-ಮೊಹಮ್ಮದ್ ಸೇರಿ ಹಲವು ನಿಷೇಧಿತ ಗುಂಪುಗಳು ಇಲ್ಲಿ ಖಾತೆ ಹೊಂದಿದ್ದು ಪತ್ತೆಯಾಗಿತ್ತು.

ರೇಡಿಯೋ ಮತ್ತು ಫೋಟೋಗಳ ಜಪ್ತಿ
ತನಿಖಾಧಿಕಾರಿಗಳ ಪ್ರಕಾರ, ಉಗ್ರರು ಸೆಲ್ಯುಲಾರ್ ನೆಟ್‌ವರ್ಕ್ ಅಥವಾ ಇಂಟರ್ನೆಟ್ ಬಳಸದೆ, ಸುರಕ್ಷಿತವಾಗಿ ಸಂವಹನ ನಡೆಸಲು ‘ಲಾಂಗ್ ರೇಂಜ್ ರೇಡಿಯೋ ಕಮ್ಯುನಿಕೇಷನ್ ತಂತ್ರಜ್ಞಾನ’ ಬಳಸುತ್ತಿದ್ದರು. ಹೀಗಾಗಿ ಫೋನ್‌ಗಳಲ್ಲಿ ಯಾವುದೇ ಕರೆ ಡೇಟಾ ಸಿಕ್ಕಿಲ್ಲ.

ಆದರೆ, ಭದ್ರತಾ ಪಡೆಗಳು ಫೋನ್‌ನಲ್ಲಿದ್ದ ಡಿಜಿಟಲ್ ದತ್ತಾಂಶಗಳನ್ನು ಯಶಸ್ವಿಯಾಗಿ ಮರುಪಡೆದಿದ್ದು (Data Recovery), ಅದರಲ್ಲಿ ಪಹಲ್ಗಾಮ್‌ನ ಬೈಸರನ್ ಕಣಿವೆಯ ನಕ್ಷೆಗಳು ಮತ್ತು ಫೋಟೋಗಳು ಲಭ್ಯವಾಗಿವೆ. ದಾಳಿಗೆ ಮುನ್ನ ಮಾರ್ಚ್ 30, 2025 ರಂದು ಉಗ್ರರು ಎತ್ತರದ ಪ್ರದೇಶದಲ್ಲಿ ಹೂಡಿದ್ದ ರಹಸ್ಯ ಟೆಂಟ್‌ನ ಫೋಟೋ ಕೂಡ ಇದರಲ್ಲಿ ಪತ್ತೆಯಾಗಿದ್ದು, ತನಿಖೆಗೆ ದೊಡ್ಡ ಶಕ್ತಿ ನೀಡಿದೆ. ಶತ್ರುಗಳ ಪ್ರತಿ ನಡೆಯನ್ನು ಭೇದಿಸುತ್ತಿರುವ ತನಿಖಾ ಸಂಸ್ಥೆಗಳ ಈ ಪ್ರಗತಿ ದೇಶದ ಸುರಕ್ಷತೆಯ ದೃಷ್ಟಿಯಿಂದ ಪ್ರಮುಖ ಹೆಜ್ಜೆಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Video: 35 ಸಾವಿರ ರೂಗೆ ಬೆಂಗಳೂರಿನಲ್ಲಿ ಆರಾಮ ಜೀವನ ನಡೆಸ್ಬಹುದು; ತಿಂಗಳ ಖರ್ಚು ವೆಚ್ಚ ಬಿಚ್ಚಿಟ್ಟ ಸಾಫ್ಟ್‌ವೇರ್‌ ಇಂಜಿನಿಯರ್

ಬೆಂಗಳೂರು, ಜೂನ್ 01: ಬೆಂಗ್ಳೂರಿನಂತಹ (Bengaluru) ದೊಡ್ಡ ದೊಡ್ಡ ನಗರಗಳಲ್ಲಿ ಜನ ಎಷ್ಟೇ ದುಡಿದ್ರೂ ಹಣ ಸಾಲ್ತಿಲ್ಲ, ದುಡಿದ ಎಲ್ಲಾ ಹಣ ಬಾಡಿಗೆ ಕಟ್ಟೋಕೆ, ತಿಂಗಳ ಖರ್ಚಿಗೆ ಸಾಕಾಗುತ್ತದೆ ಎಂದು ಗೊಣಗುವುದನ್ನು ನೋಡಿರುತ್ತೀರಿ. ಬೆಂಗಳೂರಿನಂತಹ ನಗರದಲ್ಲಿ 35,000 ನಿಂದ ಯೋಗ್ಯ ಜೀವನ ಹೇಗೆ ನಡೆಸಬಹುದೆಂದು ಬೆಂಗಳೂರಿನ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರು ತಿಳಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಕಾಮೆಂಟ್ ಮಾಡಿ ಅಭಿಪ್ರಾಯ ತಮ್ಮ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಅಮೆಜಾನ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಪ್ರೇಮ್ ರಾಜ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಬೆಂಗಳೂರಿನ ಅಮೆಜಾನ್‌ನಲ್ಲಿ 9 ರಿಂದ 5 ರವರೆಗೆ ಕೆಲಸ ಮಾಡುವ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ನಾನು ಎಷ್ಟು ಖರ್ಚು ಮಾಡುತ್ತೇನೆ ಎಂಬುದು ಇಲ್ಲಿದೆ ಎಂದು ಹೇಳಿದ್ದಾರೆ. ಮಾರತಹಳ್ಳಿಯ 2BHK ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್‌ಮೇಟ್‌ನೊಂದಿಗೆ ವಾಸಿಸುತ್ತಿದ್ದು ತಿಂಗಳ ಬಾಡಿಗೆ 30000 ರೂ ಇದ್ದರೂ, ನನಗೆ  ತಿಂಗಳಿಗೆ 15,000 ರೂ ಬರುತ್ತದೆ. 3,000 ರೂ ಸಂಬಳಕ್ಕೆ ಅಡುಗೆಯವರನ್ನು ನೇಮಿಸಿಕೊಂಡಿದ್ದೇನೆ ಎಂದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಪೆಟ್ರೋಲ್ ವೆಚ್ಚವು ತಿಂಗಳಿಗೆ 2,000 ರೂ ಆಗುತ್ತದೆ. ಫಿಟ್ ಆಗಿರಲು, ನಾನು ನಿಯಮಿತವಾಗಿ ಜಿಮ್ ಮಾಡುತ್ತೇನೆ. ಜಿಮ್ ಚಂದಾದಾರಿಕೆ ಮತ್ತು ಪ್ರೋಟೀನ್ ಪೂರಕಗಳಿಗಾಗಿ 2,000 ರೂ ಖರ್ಚು ಮಾಡುತ್ತೇನೆ. ಚಿಕನ್ ಗಾಗಿ
ತಿಂಗಳಿಗೆ 3,000 ರೂ ಎತ್ತಿಡುತ್ತೇನೆ ಎಂದು ಹೇಳಿದ್ದಾರೆ.

ದಿನಸಿ ಮತ್ತು ಗೃಹೋಪಯೋಗಿ ವಸ್ತುಗಳಿಗೆ ತಿಂಗಳಿಗೆ ಸರಿಸುಮಾರು 3,000 ರೂ ಖರ್ಚು ಮಾಡುತ್ತೇನೆ. ವಾರಾಂತ್ಯದಲ್ಲಿ ಅಡುಗೆಯವರು ಹೆಚ್ಚಾಗಿ ಲಭ್ಯವಿರುವುದಿಲ್ಲ, ಹೀಗಾಗಿ ನಾನು ಫುಡ್‌ ಆರ್ಡರ್ ಮಾಡಲು ಪ್ರತಿ ತಿಂಗಳು ಸುಮಾರು 2,000 ರೂ ವೆಚ್ಚವಾಗುತ್ತದೆ ಎಂದು ವಿವರಿಸಿದ್ದಾರೆ.

ಇಂಟರ್ನೆಟ್ ಬಿಲ್‌ಗಳು, ವಿದ್ಯುತ್ ಮತ್ತು ಚಂದಾದಾರಿಕೆ ಸೇರಿ 2,000 ರೂ ರಷ್ಟು ಕಡಿಮೆ ಖರ್ಚಾಗುತ್ತದೆ. ವಾಷಿಂಗ್ ಮೆಷಿನ್ ರೆಫ್ರಿಜರೇಟರ್‌ನಂತಹ ಉಪಕರಣಗಳಿಗೆ 1,000 ರೂ ಬಾಡಿಗೆಯನ್ನೂ ಪಾವತಿಸುತ್ತೇನೆ. ಶಾಪಿಂಗ್‌ಗಾಗಿ 2,000 ರೂ ಮೀಸಲಿಡುತ್ತೇನೆ. ಹೀಗಾಗಿ, ಮಾಸಿಕ ಖರ್ಚು 35,000 ರೂ ಆಗುತ್ತದೆ ಎಂದು ಹೇಳಿರುವುದನ್ನು ನೀವು ನೋಡಬಹುದು.

ಇದನ್ನೂ ಓದಿ: ಬೆಂಗಳೂರಿನ ಇಸ್ತ್ರಿ ದರ ಕೇಳಿ ಬೆಚ್ಚಿಬಿದ್ದ ನೋಯ್ಡಾ ನಿವಾಸಿ; ವೈರಲ್ ಆಯ್ತು ಪೋಸ್ಟ್

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಈ ಬೆಂಗಳೂರಿನಲ್ಲಿ ಲೆಕ್ಕ ಹಾಕಿ ಬದುಕುವುದು ಅನಿರ್ವಾಯ ಎಂದು ಹೇಳಿದ್ದಾರೆ. ಮತ್ತೊಬ್ಬರು, ನಾನು ನೋಡಿದ ಅತ್ಯಂತ ವಾಸ್ತವಿಕ ವೆಚ್ಚಗಳ ವೀಡಿಯೊಗಳಲ್ಲಿ ಇದು ಒಂದು ಎಂದಿದ್ದಾರೆ. ಇನ್ನೊಬ್ಬರು, ಆದಾಯ ಹೆಚ್ಚಿರಲಿ ಕಡಿಮೆಯಿರಲಿ, ಖರ್ಚು ವೆಚ್ಚಗಳು ಇತಿಮಿತಿಯಲ್ಲಿದ್ದರೆ ಉತ್ತಮ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದ ಕ್ಲೋಸಿಂಗ್ ಕಲೆಕ್ಷನ್ ಎಷ್ಟು? ಇಲ್ಲಿದೆ ವಿವರ

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದಾಗಿದ್ದ ‘ಕೆಡಿ – ದಿ ಡೆವಿಲ್’ ಚಿತ್ರದ (KD Movie) ಒಟ್ಟು ಬಾಕ್ಸ್ ಆಫೀಸ್ ಗಳಿಕೆಯ ಅಧಿಕೃತ ವಿವರಗಳು ಹೊರಬಿದ್ದಿವೆ. ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಂಡ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸಾಧಾರಣ ಗಳಿಕೆ ಮಾಡಿದೆ. ಈ ಸಿನಿಮಾ ಈಗ ಒಟಿಟಿಗೆ ಬರುತ್ತಿರುವುದರಿಂದ ಸಿನಿಮಾದ ಗಳಿಕೆ ಬಹುತೇಕ ಕೊನೆಗೊಂಡಂತೆ ಆಗಿದೆ. ಈ ಚಿತ್ರದ ಕ್ಲೋಸಿಂಗ್ ಗಳಿಕೆ ವಿವರ ಇಲ್ಲಿದೆ.

ವಿಶ್ವದಾದ್ಯಂತ ಒಟ್ಟು 13,358 ಶೋ ಪ್ರದರ್ಶನ ಕಂಡಿರುವ ಈ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ. ಆದರೆ, ಚಿತ್ರದ ಬಜೆಟ್​​ಗೆ ಹೋಲಿಸಿದರೆ ಈ ಗಳಿಕೆ ಸಣ್ಣದು ಎನ್ನಬಹುದು. ಈ ಚಿತ್ರ ವಿಶ್ವದಾದ್ಯಂತ ಚಿತ್ರವು ಒಟ್ಟು 24.35 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಚಿತ್ರದ ನೆಟ್ ಕಲೆಕ್ಷನ್ ಒಟ್ಟು 21.39 ಕೋಟಿ ಆಗಿದೆ. ಈ ಸಿನಿಮಾದ ಬಜೆಟ್ 100 ಕೋಟಿ ರೂಪಾಯಿ ದಾಟಿದೆ ಎನ್ನಲಾಗಿದೆ.

ಸಿನಿಮಾ ಈಗ ತನ್ನ ಥಿಯೇಟರ್ ರನ್ ಅನ್ನು ಬಹುತೇಕ ಮುಗಿಸುವ ಹಂತಕ್ಕೆ ಬಂದಿದೆ. ಇತ್ತೀಚೆಗೆ ಅಂದರೆ ಮೇ 31ರ ಭಾನುವಾರದಂದು ಈ ಸಿನಿಮಾ ಕೇವಲ 7 ಲಕ್ಷ ರೂಪಾಯಿ ಗಳಿಸಿದೆ. ಚಿತ್ರಮಂದಿರಗಳಲ್ಲಿ ಇದು ಸಿನಿಮಾದ ಕೊನೆಯ ದಿನಗಳ ಗಳಿಕೆಯಾಗಿದ್ದರಿಂದ, ಇದನ್ನು ಚಿತ್ರದ ಕ್ಲೋಸಿಂಗ್ ಗಳಿಕೆ ಎಂದು ಪರಿಗಣಿಸಬಹುದು. ಜೂನ್ 5ರಂದು ಈ ಚಿತ್ರವು ಅಧಿಕೃತವಾಗಿ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗುತ್ತಿದೆ.

‘ಕೆಡಿ – ದಿ ಡೆವಿಲ್’ ಚಿತ್ರವನ್ನು ಖ್ಯಾತ ನಿರ್ದೇಶಕ ಪ್ರೇಮ್ ನಿರ್ದೇಶಿಸಿದ್ದು, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಾಯಕರಾಗಿ ಅಬ್ಬರಿಸಿದ್ದಾರೆ. ಚಿತ್ರದಲ್ಲಿ ಧ್ರುವ ಸರ್ಜಾ ಅವರ ‘ಕಾಳಿ’ ಎಂಬ ಪವರ್‌ಫುಲ್ ಮಾಸ್ ಲುಕ್ ಪ್ರೇಕ್ಷಕರ ಮನ ಗೆದ್ದಿದೆ. ಇವರೊಂದಿಗೆ ಬಾಲಿವುಡ್ ಸ್ಟಾರ್ ಸಂಜಯ್ ದತ್ ಖಳನಾಯಕನಾಗಿ ನಟಿಸಿದ್ದು, ಕ್ರೇಜಿಸ್ಟಾರ್ ರವಿಚಂದ್ರನ್, ಶಿಲ್ಪಾ ಶೆಟ್ಟಿ, ರೇಷ್ಮಾ ನಾಣಯ್ಯ ಹಾಗೂ ರಮೇಶ್ ಅರವಿಂದ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಜೀ5ನಲ್ಲಿ ಪ್ರಸಾರ ಕಾಣಲಿದೆ ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾ; ಇಲ್ಲಿದೆ ಮಾಹಿತಿ

‘ಕೆಡಿ’ ಸಿನಿಮಾ ಶೀರ್ಷಿಕೆ ಪ್ರಕಟವಾದ ದಿನದಿಂದಲೇ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಲ್ಲಿತ್ತು. ಚಿತ್ರದ ‘ಸರ್ಸೆ ಸರ್ಸೆ’ ಕೆಟ್ಟ ಸಾಹಿತ್ಯದ ಕಾರಣಕ್ಕೆ ವಿವಾದ ಮಾಡಿಕೊಂಡಿತು. ಟ್ರೈಲರ್​ನಲ್ಲಿರುವ ವಿಪರೀತ ರಕ್ತಪಾತ ಹಾಗೂ ಹಿಂಸಾಚಾರದ ದೃಶ್ಯಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ನಡೆದಿದ್ದವು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಖಾಸಗಿ ಆಸ್ಪತ್ರೆಗಳ ‘ಟ್ರಾನ್ಸ್‌ಪ್ಲಾಂಟ್’ ದಂಧೆಗೆ ಬೀಳುತ್ತಾ ಬ್ರೇಕ್? ಸರ್ಕಾರಿ ಆಸ್ಪತ್ರೆಗಳಲ್ಲಿ ಕಡಿಮೆ ಖರ್ಚಿನಲ್ಲಿ ಸಿಗಲಿದೆ ಹೈಟೆಕ್ ಚಿಕಿತ್ಸೆ!

ಬೆಂಗಳೂರು, ಜೂನ್ 01: ಕೆಲ ಖಾಸಗಿ ಆಸ್ಪತ್ರೆಗಳ ಕಳ್ಳಾಟ ಹಾಗೂ ಬೇಕಾಬಿಟ್ಟಿ ಹಣ ವಸೂಲಿ ಮಾಡುವ ದಂಧೆ ಈಗಿನದಲ್ಲ. ಪ್ರತಿಯೊಂದು ಚಿಕಿತ್ಸೆಗೂ ಲಕ್ಷ ಲಕ್ಷ ಪೀಕುವ ಖಾಸಗಿ ಆಸ್ಪತ್ರೆಗಳಲ್ಲಿ, ಅದರಲ್ಲೂ ವಿಶೇಷವಾಗಿ ಅಂಗಾಂಗ ಕಸಿ (Organ Transplant) ಚಿಕಿತ್ಸೆ ಮಾಡಿಸಬೇಕೆಂದರೆ ಬಡ ಹಾಗೂ ಮಧ್ಯಮ ವರ್ಗದ ಜನರು ದುಪ್ಪಟ್ಟು ಹಣ ನೀಡಿ ಬೀದಿಗೆ ಬೀಳುವ ಪರಿಸ್ಥಿತಿ ಇದೆ. ಈ ಜಾಲಕ್ಕೆ ಕಡಿವಾಣ ಹಾಕಲು ಮತ್ತು ಜನಸಾಮಾನ್ಯರಿಗೆ ನೆರವಾಗಲು ಈಗ ಆರೋಗ್ಯ ಇಲಾಖೆ ಮಹತ್ವದ ಮಾಸ್ಟರ್ ಪ್ಲಾನ್ ಒಂದನ್ನು ಸಿದ್ಧಪಡಿಸಿದೆ.

ಮುಖ್ಯಾಂಶಗಳು

  • ಖಾಸಗಿ ಆಸ್ಪತ್ರೆಗಳ ದುಬಾರಿ ಅಂಗಾಂಗ ಕಸಿ ಚಿಕಿತ್ಸಾ ವೆಚ್ಚಕ್ಕೆ ಕ್ಯಾಪಿಂಗ್ ಜಾರಿ ಸಾಧ್ಯತೆ.
  • ಸರ್ಕಾರಿ ಆಸ್ಪತ್ರೆಗಳಲ್ಲೇ ಅತ್ಯಾಧುನಿಕ ಟ್ರಾನ್ಸ್‌ಪ್ಲಾಂಟ್ ಚಿಕಿತ್ಸೆ ಪರಿಚಯಿಸಲು ಆರೋಗ್ಯ ಇಲಾಖೆ ಮುಂದು.
  • ಖಾಸಗಿಯವರ ಸುಲಿಗೆಗೆ ಕಡಿವಾಣ ಹಾಕಲು ಸಚಿವ ದಿನೇಶ್ ಗುಂಡೂರಾವ್‌ಗೆ ಮಾಜಿ ಸಿಎಂ ಸೂಚನೆ.

ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ‘ಕ್ಯಾಪಿಂಗ್’ ಬಿಸಿ!

ಲಿವರ್, ಕಿಡ್ನಿ, ಬೋನ್ ಮ್ಯಾರೋ ಹಾಗೂ ಶ್ವಾಸಕೋಶದಂತಹ ಅತ್ಯಂತ ಜಟಿಲ ಹಾಗೂ ದುಬಾರಿ ಟ್ರಾನ್ಸ್‌ಪ್ಲಾಂಟ್‌ಗಳಿಗೆ ಖಾಸಗಿ ಆಸ್ಪತ್ರೆಗಳು 5 ಲಕ್ಷದಿಂದ ಹಿಡಿದು 20 ಹಾಗೂ 50 ಲಕ್ಷ ರೂಪಾಯಿವರೆಗೂ ಬೇಕಾಬಿಟ್ಟಿ ಚಾರ್ಜ್ ಮಾಡುತ್ತಿವೆ. ಬಡವರಿಗೆ ಸರ್ಕಾರದಿಂದ ಸಿಗುವ ಲೋನ್ ಅಥವಾ ನೆರವು ಕೇವಲ 5 ಲಕ್ಷ ರೂಪಾಯಿ ಮಾತ್ರ ಇರುವುದರಿಂದ, ಬಾಕಿ ಹಣ ಹೊಂದಿಸಲಾಗದೆ ಅದೆಷ್ಟೋ ರೋಗಿಗಳು ಕಣ್ಣೀರಿಡುತ್ತಿದ್ದಾರೆ. ಇದಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಆರೋಗ್ಯ ಇಲಾಖೆ, ಹೈಟೆಕ್ ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚಕ್ಕೆ ಗರಿಷ್ಠ ಮಿತಿ ಅಂದರೆ ‘ಕ್ಯಾಪಿಂಗ್’ (Capping) ಜಾರಿಗೊಳಿಸಲು ಚಿಂತನೆ ನಡೆಸಿದೆ.

ಸರ್ಕಾರಿ ಆಸ್ಪತ್ರೆಗಳಲ್ಲೇ ಅಂಗಾಂಗ ಕಸಿ: ಮಾಜಿ ಸಿಎಂ ಸೂಚನೆ

ಖಾಸಗಿ ಆಸ್ಪತ್ರೆಗಳ ಈ ಮನಸೋಇಚ್ಛೆ ಲೂಟಿಗೆ ಕಡಿವಾಣ ಹಾಕುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕೊನೆಯ ಆರೋಗ್ಯ ಇಲಾಖೆಯ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಕಡಕ್ ಸೂಚನೆ ನೀಡಿದ್ದರು. “ಸರ್ಕಾರಿ ಆಸ್ಪತ್ರೆಗಳ ಚಿಕಿತ್ಸಾ ವ್ಯವಸ್ಥೆ ಖಾಸಗಿಯವರಿಗಿಂತ ಕಡಿಮೆ ಇರಬಾರದು. ಆರೋಗ್ಯ ಸೇವೆಗೆ ಏನು ಬೇಕಾದರೂ ಮಾಡಲು ನಾನು ಸಿದ್ಧ” ಎಂದು ಹೇಳಿದ್ದರು. ಅವರ ಕನಸಿನಂತೆಯೇ, ಇನ್ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲೇ ಅತ್ಯಾಧುನಿಕ ಅಂಗಾಂಗ ಕಸಿ ಚಿಕಿತ್ಸೆಗಳನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಪರಿಚಯಿಸಲು ಆರೋಗ್ಯ ಇಲಾಖೆ ಸಜ್ಜಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕೊಹ್ಲಿಯನ್ನು ಕೆಣಕಿ ಸಿಕ್ಕಿಹಾಕಿಕೊಂಡ ಸಾಯಿ!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಅಂತಿಮ ಪಂದ್ಯವು ಆಟಗಾರರ ವಾಕ್ಸಮರಕ್ಕೆ ಸಾಕ್ಷಿಯಾಗಿತ್ತು. ಮೊದಲಿಗೆ ಮೊಹಮ್ಮದ್ ಸಿರಾಜ್ ಹಾಗೂ ವೆಂಕಟೇಶ್ ಅಯ್ಯರ್ ನಡುವೆ ಮಾತಿನ ಚಕಮಕಿ ನಡೆದರೆ, ಆ ಬಳಿಕ ವಿರಾಟ್ ಕೊಹ್ಲಿಯನ್ನು ಕೆಣಕುವ ಪ್ರಯತ್ನಕ್ಕೆ ಸಾಯಿ ಸುದರ್ಶನ್ ಕೈ ಹಾಕಿದರು.

ಆರ್​ಸಿಬಿ ಬ್ಯಾಟಿಂಗ್ ವೇಳೆ ಫ್ರಂಟ್ ಫೀಲ್ಡಿಂಗ್​ನಲ್ಲಿದ್ದ ಸಾಯಿ ಸುದರ್ಶನ್ ಭರ್ಜರಿಯಾಗಿ ಬ್ಯಾಟ್ ಮಾಡುತ್ತಿದ್ದ ವಿರಾಟ್ ಕೊಹ್ಲಿಯನ್ನು ಗುರಿಯಾಗಿಸಿ ಏನನ್ನೋ ಹೇಳಿದ್ದಾರೆ. ಈ ವೇಳೆ ಕೊಹ್ಲಿ ಕೂಡ ತಿರುಗೇಟು ನೀಡಿದ್ದಾರೆ. ಇದೇ ವೇಳೆ ಕೊಹ್ಲಿಯ ಬಳಿ ತೆರಳಿದ ಸಾಯಿ ಸುದರ್ಶನ್ ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದ್ದಾರೆ.

ಇದಾಗ್ಯೂ ಸಮಾಧಾನಗೊಳ್ಳದ ವಿರಾಟ್ ಕೊಹ್ಲಿ ಮತ್ತೆ ಬಂದು ಸಾಯಿ ಸುದರ್ಶನ್​ಗೆ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದ್ದಾರೆ. ಇತ್ತ ಸುಖಾ ಸುಮ್ಮನೆ ಕೊಹ್ಲಿಯನ್ನು ಕೆಣಕಿ ಪೇಚಿಗೆ ಸಿಲುಕಿದ ಸಾಯಿ ಸುದರ್ಶನ್ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರೂ ಅಷ್ಟರಲ್ಲಾಗಲೇ ಸಿಗಬೇಕಿರುವುದೆಲ್ಲವೂ ಸಿಕ್ಕಾಗಿತ್ತು.

ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಗುಜರಾತ್ ಟೈಟಾನ್ಸ್ ಆಟಗಾರ ಆರ್​ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್​ಗಳಲ್ಲಿ 155 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18 ಓವರ್​ಗಳಲ್ಲಿ 161 ರನ್​ ಬಾರಿಸಿ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಆರ್​ಸಿಬಿ ತಂಡ 2ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

 

Source link

Exit mobile version