ದೆಹಲಿ: ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ

ನವದೆಹಲಿ, ಜೂನ್ 01: ದೆಹಲಿಯ ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಇಂದು ಅಗ್ನಿ ಅವಘಡ ಸಂಭವಿಸಿದೆ. ವಿಕಾಸ್ ಮಾರ್ಗದಲ್ಲಿರುವ ಸಚಿವಾಲಯದ ಕಟ್ಟಡದ ಎರಡನೇ ಮಹಡಿಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಕನಿಷ್ಠ ಎಂಟು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ಬೆಂಕಿಯನ್ನು ನಿಯಂತ್ರಣಕ್ಕೆ ತರುವ ಪ್ರಯತ್ನಗಳು ನಡೆಯುತ್ತಿದ್ದು, ಬೆಂಕಿಯ ಕಾರಣ ಮತ್ತು ಯಾವುದೇ ಸಂಭಾವ್ಯ ಹಾನಿಯ ಕುರಿತು ಹೆಚ್ಚಿನ ವಿವರಗಳನ್ನು ಇನ್ನೂ ನಿರೀಕ್ಷಿಸಲಾಗಿದೆ. ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಸಿಎಂ ಪತ್ನಿಯಂತೆ ತ್ರಿಷಾಗೆ ರಾಜ ಮರ್ಯಾದೆ; ಶುವಾಯ್ತು ಚರ್ಚೆ

ತಮಿಳುನಾಡಿನ ರಾಜಕೀಯಕ್ಕೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟು, ಮುಖ್ಯಮಂತ್ರಿಯಾಗಿರುವ ದಳಪತಿ ವಿಜಯ್ ಅವರ ಕೆಲವು ವೈಯಕ್ತಿಕ ನಡೆಗಳು ಈಗ ಭಾರಿ ಚರ್ಚೆಗೆ ಕಾರಣವಾಗಿವೆ. ಆರಂಭದಲ್ಲಿ ಅವರು ತಮ್ಮ ಜ್ಯೋತಿಷಿಯನ್ನು ಸಲಹೆಗಾರರನ್ನಾಗಿ ನೇಮಿಸಿ ಟೀಕೆಗೆ ಒಳಗಾಗಿದ್ದರು. ಆದರೆ ಆ ತಪ್ಪು ತಿದ್ದಿಕೊಂಡು ಆದೇಶ ಹಿಂಪಡೆದಿದ್ದರು. ಮತ್ತೊಮ್ಮೆ ವಿಜಯ್ (Vijay) ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಇತ್ತೀಚೆಗಷ್ಟೇ ತಮಿಳು ಚಿತ್ರರಂಗದ ಖ್ಯಾತ ನಟ ಅಜಿತ್ ಕುಮಾರ್ ಅವರ ತಾಯಿ ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಅಜಿತ್ ಅವರಿಗೆ ಸಾಂತ್ವನ ಹೇಳಲು ವಿಜಯ್ ಅವರು ಅಜಿತ್ ನಿವಾಸಕ್ಕೆ ಭೇಟಿ ನೀಡಿದ್ದರು. ಆದರೆ ಈ ವೇಳೆ ವಿಜಯ್ ಒಬ್ಬರೇ ಹೋಗದೆ, ಅವರ ಜೊತೆ ನಟಿ ತ್ರಿಷಾ ಕೃಷ್ಣನ್ ಕೂಡ ಕಾಣಿಸಿಕೊಂಡಿರುವುದು ಈಗ ಚರ್ಚೆ ಹುಟ್ಟುಹಾಕಿದೆ.

ಅಜಿತ್ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನಟಿ ತ್ರಿಷಾ ಅವರಿಗೆ ಸಿಕ್ಕ ಗೌರವ ಮತ್ತು ಸವಲತ್ತುಗಳು ಚರ್ಚೆ ಹುಟ್ಟಲು ಪ್ರಮುಖ ಕಾರಣ. ಒಬ್ಬ ಮುಖ್ಯಮಂತ್ರಿಯ ಪತ್ನಿಗೆ ಸಿಗುವಂತಹ ಭದ್ರತೆ, ಪ್ರೋಟೋಕಾಲ್ ಹಾಗೂ ಸರ್ಕಾರಿ ವಾಹನಗಳ ಬೆಂಗಾವಲು ವ್ಯವಸ್ಥೆಯನ್ನು ತ್ರಿಷಾಗೆ ಕಲ್ಪಿಸಲಾಗಿತ್ತು. ಇದು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ ಎಂದು ಜನರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಅವರ ವೈವಾಹಿಕ ಜೀವನ ಸದ್ಯ ಬಿಕ್ಕಟ್ಟಿನಲ್ಲಿದೆ. ಇವರಿಬ್ಬರ ವಿಚ್ಛೇದನ ಪ್ರಕರಣವು ಪ್ರಸ್ತುತ ನ್ಯಾಯಾಲಯದಲ್ಲಿದೆ. ವಿಚ್ಛೇದನ ಪ್ರಕ್ರಿಯೆ ಮುಗಿದು ಒಂದು ತಾರ್ಕಿಕ ಅಂತ್ಯ ಕಾಣುವವರೆಗೆ ಅಥವಾ ಅಧಿಕೃತವಾಗಿ ಮದುವೆಯಾಗುವವರೆಗೆ ವಿಜಯ್ ಅವರು ತ್ರಿಷಾ ಅವರನ್ನು ತಮ್ಮ ವೈಯಕ್ತಿಕ ವಿಷಯಗಳಿಂದ ದೂರ ಇಡುವುದು ಸೂಕ್ತ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ಪಾತ್ರ ಕೊಟ್ಟಿಲ್ಲವೆಂದು ನಿರ್ಮಾಪಕರ ಮೇಲೆ ಮುನಿಸಿಕೊಂಡಿದ್ದ ತ್ರಿಷಾ

ಇವರಿಬ್ಬರು ಹೊರಗೆ ಹೋದಾಗಲೆಲ್ಲಾ ಮಾಧ್ಯಮಗಳು ಇವರ ಮೇಲೆ ಅತಿಯಾದ ಗಮನ ಹರಿಸುವುದರಿಂದ, ಅದು ವಿಜಯ್ ಅವರ ಮಕ್ಕಳ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಒಬ್ಬ ಜವಾಬ್ದಾರಿಯುತ ತಂದೆಯಾಗಿ, ಈ ಕಠಿಣ ಸಮಯದಲ್ಲಿ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕಾದ ಕರ್ತವ್ಯ ವಿಜಯ್ ಮೇಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Global day of parents 2026: ಪೋಷಕರೇ ಮಕ್ಕಳ ಪಾಲಿನ ನಿಜವಾದ ಸೂಪರ್‌ ಹೀರೋ

ಪೋಷಕಾರಗುವುದು (Parents) ಅಷ್ಟು ಸುಲಭದ ಮಾತಲ್ಲ, ಮಕ್ಕಳನ್ನು ಸಂಸ್ಕಾರಯುತರನ್ನಾಗಿ, ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ, ಉತ್ತಮ ಪ್ರಜೆಯಾಗಿ ರೂಪಿಸುವುದು ಸವಾಲಿನ ಕೆಲಸವೇ ಸರಿ. ಮನೆಯೇ ಮೊದಲ ಪಾಠ ಶಾಲೆ ಎನ್ನುವಂತೆ ಪ್ರತಿಯೊಬ್ಬ ಪೋಷಕರು ಮಕ್ಕಳನ್ನು ಬೆಳೆಸುವಲ್ಲಿ ತಮ್ಮ ಕೈ ಮೀರಿದ ಪ್ರಯತ್ನಗಳನ್ನು ಮಾಡುತ್ತಾರೆ, ಮಕ್ಕಳ ಲಾಲನೆ ಪಾಲನೆಗಾಗಿ ಎಂತಹ ತ್ಯಾಗಕ್ಕೂ ಸಿದ್ಧರಿರುತ್ತಾರೆ. ಹೀಗೆ ಪ್ರತಿ ಮಕ್ಕಳ ಜೀವನವನ್ನೂ ಉತ್ತಮವಾಗಿ ರೂಪಿಸುವಲ್ಲಿ ಪೋಷಕರು ಬಹುಮುಖ್ಯ ಪಾತ್ರವನ್ನು ವಹಿಸುತ್ತಾರೆ. ಒಂದು ಲೆಕ್ಕದಲ್ಲಿ ಪೋಷಕರು ಮಕ್ಕಳ ಪಾಲಿನ ನಿಜವಾದ ದೇವರು ಎಂದರೆ ತಪ್ಪಾಗಲಾರದು.  ಮಕ್ಕಳ ಬದುಕನ್ನು ಸುಂದರವಾಗಿ ನಿರ್ಮಿಸಲು ಎಂತಹ ತ್ಯಾಗಕ್ಕೂ ಸಿದ್ಧರಿರುವವರ ತಂದೆ ತಾಯಂದಿರ ಪ್ರೀತಿ, ತ್ಯಾಗ ಮತ್ತು ಸಮರ್ಪಣೆಯನ್ನು ನೆನೆಸಿಕೊಳ್ಳಲು, ಅವರಿಗೆ ಗೌರವ ಸಲ್ಲಿಸಲು ಪ್ರತಿವರ್ಷ ಜೂನ್‌ 1 ರಂದು ಜಾಗತಿಕ ಪೋಷಕರ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯಿರಿ.

ಜಾಗತಿಕ ಪೋಷಕರ ದಿನದ ಇತಿಹಾಸವೇನು?

ಜಾಗತಿಕ ಪೋಷಕರ ದಿನದ ಇತಿಹಾಸವನ್ನು ನೋಡುವುದಾದರೆ, ಅದು 1994 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪೋಷಕರನ್ನು ಗೌರವಿಸುವ ಸಲುವಾಗಿ ಪೋಷಕರ ದಿನವನ್ನು ಆಚರಿಸುವ ಕಲ್ಪನೆ ಮೂಡಿತು. ನಂತರ 2012 ರಲ್ಲಿ , ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಜೂನ್ 1 ಅನ್ನು ‘ ಪೋಷಕರ ಜಾಗತಿಕ ದಿನ’ ಎಂದು ಗುರುತಿಸಿತು. ಜಾಗತಿಕ ಮಟ್ಟದಲ್ಲಿ ಪ್ರಪಂಚದಾದ್ಯಂತದ ಪೋಷಕರ ಕೊಡುಗೆಯನ್ನು ಶ್ಲಾಘಿಸುವುದು ಈ ದಿನದ ಉದ್ದೇಶವಾಗಿತ್ತು. ಇದು ಕೇವಲ ಒಂದು ದಿನವಲ್ಲ, ಬದಲಾಗಿ ನಮ್ಮ ಹೆತ್ತವರ ಪ್ರೀತಿ, ತ್ಯಾಗ ಮತ್ತು ತಾಳ್ಮೆ ಯಾವುದೇ ಪ್ರಶಸ್ತಿಗಿಂತ ಹೆಚ್ಚು ಮೌಲ್ಯಯುತವಾಗಿದೆ ಎಂದು ನೆನಪಿಸುವ ದಿನವಾಗಿದೆ.

ಇದನ್ನೂ ಓದಿ: ವಿಶ್ವ ಹಾಲು ದಿನವನ್ನು ಯಾವ ಉದ್ದೇಶಕ್ಕಾಗಿ ಆಚರಿಸಲಾಗುತ್ತದೆ?

ಜಾಗತಿಕ ಪೋಷಕರ ದಿನದ ಮಹತ್ವವೇನು?

  • ಪೋಷಕರ ತ್ಯಾಗ ಮತ್ತು ಸಮರ್ಪಣೆಯನ್ನು ಗೌರವಿಸಲು ಸಲುವಾಗಿ ಪ್ರತಿ ವರ್ಷ ಜೂನ್ 1 ರಂದು ಜಾಗತಿಕ ಪೋಷಕರ ದಿನವನ್ನು ಆಚರಿಸಲಾಗುತ್ತದೆ.
  • ಈ ದಿನವು ಪೋಷಕರು ಜನ್ಮ ನೀಡುವವರು ಮಾತ್ರವಲ್ಲದೆ ಜೀವನದ ಶ್ರೇಷ್ಠ ಶಿಕ್ಷಕರು ಮತ್ತು ರಕ್ಷಕರು ಎಂಬುದನ್ನು ನೆನಪಿಸಿಕೊಳ್ಳಲು ಒಂದು ಅವಕಾಶವನ್ನು ನೀಡುತ್ತದೆ.
  • ಜಾಗತಿಕ ಪೋಷಕರ ದಿನವು ನಮ್ಮ ಹೆತ್ತವರ ಬಗ್ಗೆ ನಮ್ಮ ಪ್ರೀತಿ, ಗೌರವ ಮತ್ತು ಕೃತಜ್ಞತೆಯನ್ನು ಮುಕ್ತ ಹೃದಯದಿಂದ ವ್ಯಕ್ತಪಡಿಸುವ ಒಂದು ಅವಕಾಶವಾಗಿದೆ.
  • ಈ ವಿಶೇಷ ದಿನದಂದು ಭಾಷಣಗಳು, ಸಾಂಸ್ಕೃತಿಕ ಕಾರ್ಯಕ್ರಮ, ಪ್ರದರ್ಶನಗಳು ಸೇರಿದಂತೆ ಪ್ರಪಂಚದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಮೆರಿಕ: ಮದುವೆಯಾಗಿ ಕೆಲವೇ ಗಂಟೆಗಳಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಭಾರತ ಮೂಲದ ಪೈಲಟ್ ಸಾವು, ವಧು ಅಪಾಯದಿಂದ ಪಾರು

ಅಟ್ಲಾಂಟಾ, ಜೂನ್ 01: ಆಗಷ್ಟೇ ಇಬ್ಬರೂ ಸಪ್ತಪದಿ ತುಳಿದಿದ್ದರು, ಇನ್ನುಮುಂದೆ ಜೀವನದಲ್ಲಿ ಕಷ್ಟ, ಸುಖ ಏನೇ ಇರಲಿ ಇಬ್ಬರು ಒಟ್ಟಿಗೆ ಸಾಗೋಣ ಎನ್ನವು ಪ್ರಮಾಣ ಮಾಡಿದ್ದರು. ಸಾವಿರಾರು ಕನಸುಗಳನ್ನು ಹೊತ್ತಿದ್ದರು. ಆದರೆ ವಿಧಿಯ ಆಟವೇ ಬೇರೆ ಇತ್ತು. ಮದುವೆಯಾಗಿ ಕೆಲವೇ ಗಂಟೆಗಳಲ್ಲಿ ವರ ಹೆಲಿಕಾಪ್ಟರ್ ಅಪಘಾತ(Accident)ದಲ್ಲಿ ಪ್ರಾಣ ಕಳೆದುಕೊಂಡಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

ಅಮೆರಿಕದ ಜಾರ್ಜಿಯಾದಲ್ಲಿ ನಡೆದ ಭೀಕರ ಹೆಲಿಕಾಪ್ಟರ್ ಅಪಘಾತವೊಂದರಲ್ಲಿ ತೀವ್ರ ಗಾಯಗಳ ನಡುವೆಯೂ ಭಾರತ ಮೂಲದ ನವವಧು ಜೆಸ್ನಿ ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ದುರಂತವೆಂದರೆ ಮದುವೆಯಾದ ಕೆಲವೇ ಗಂಟೆಗಳಲ್ಲಿ ನಡೆದ ಈ ಘಟನೆಯಲ್ಲಿ ಆಕೆಯ ಪತಿ, ಡೆಲ್ಟಾ ಏರ್‌ಲೈನ್ಸ್‌ನ ಪೈಲಟ್ ಆಗಿದ್ದ ಭಾರತೀಯ ಮೂಲದ ಡೇವ್ ಫಿಜಿ (25) ಮತ್ತು ಹೆಲಿಕಾಪ್ಟರ್‌ನ ಪೈಲಟ್ ಸಾವನ್ನಪ್ಪಿದ್ದಾರೆ.

ಕೇರಳ ಮೂಲದ ಈ ದಂಪತಿ ವಿವಾಹವು ಶುಕ್ರವಾರ ಡಾಸನ್‌ವಿಲ್ಲೆಯ ‘ದಿ ರೆವೆರೆ’ ಕಲ್ಯಾಣ ಮಂಟಪದಲ್ಲಿ ನೂರಾರು ಅತಿಥಿಗಳ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ ನೆರವೇರಿತ್ತು. ವಿವಾಹದ ಬಳಿಕ ದಂಪತಿ ಹೋಟೆಲ್‌ಗೆ ತೆರಳಲು ಹೆಲಿಕಾಪ್ಟರ್ ಏರಿದ್ದರು. ಆದರೆ, ಮಳೆ ಮತ್ತು ದಟ್ಟವಾದ ಮಂಜಿನ ಕಾರಣದಿಂದಾಗಿ ಗೋಚರತೆ ಕಡಿಮೆಯಾಗಿ, ಹೆಲಿಕಾಪ್ಟರ್ ಡಾಸನ್‌ವಿಲ್ಲೆಯ ದಟ್ಟ ಅರಣ್ಯ ಹಾಗೂ ಪರ್ವತ ಪ್ರದೇಶದಲ್ಲಿ ಪತನಗೊಂಡಿದೆ.

ಮತ್ತಷ್ಟು ಓದಿ: ಹಸೆಮಣೆ ಏರಬೇಕಿದ್ದ ವಧುವಿನ ದಾರುಣ ಅಂತ್ಯ, ಮದುವೆ ದಿನ ಬ್ಯೂಟಿ ಪಾರ್ಲರ್‌ಗೆ ಹೋಗುತ್ತಿದ್ದಾಗ ಅಪಘಾತ, ಯುವತಿ ಸಾವು

ರಕ್ಷಣಾ ಪಡೆಯ ಸಾಹಸ ಮತ್ತು ಜೆಸ್ನಿ ಚೇತರಿಕೆ
ಅಪಘಾತದ ತೀವ್ರತೆಗೆ ಹೆಲಿಕಾಪ್ಟರ್ ಸಂಪೂರ್ಣ ಜಖಂಗೊಂಡಿದ್ದು, ದಟ್ಟವಾದ ಕಾಡಿನ ಕಾರಣದಿಂದಾಗಿ ರಕ್ಷಣಾ ಕಾರ್ಯಾಚರಣೆ ಅತ್ಯಂತ ಸವಾಲಾಗಿತ್ತು. ಸುಮಾರು ಐದು ಗಂಟೆಗಳ ಕಾಲ ಅವಶೇಷಗಳು ಮತ್ತು ಬಿದ್ದ ಮರಗಳ ಅಡಿಯಲ್ಲಿ ಸಿಲುಕಿಕೊಂಡಿದ್ದ ನವವಧು ಜೆಸ್ನಿಯನ್ನು ರಕ್ಷಣಾ ಸಿಬ್ಬಂದಿ ಆಫ್-ರೋಡ್ ವಾಹನಗಳ ಸಹಾಯದಿಂದ ಅತ್ಯಂತ ಶ್ರಮಪಟ್ಟು ಹೊರತೆಗೆದಿದ್ದಾರೆ.

ವೃತ್ತಿಯಲ್ಲಿ ನರ್ಸ್ ಆಗಿರುವ ಜೆಸ್ನಿಗೆ ದೇಹದಾದ್ಯಂತ ತೀವ್ರ ಗಾಯಗಳಾಗಿದ್ದರೂ, ಯಾವುದೇ ಮೂಳೆ ಮುರಿತ ಸಂಭವಿಸದೆ ಬದುಕುಳಿದಿರುವುದು ವೈದ್ಯಕೀಯ ಪವಾಡವೇ ಸರಿ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತನಿಖೆ ಆರಂಭ
ನಾಲ್ಕು ದಶಕಗಳಿಂದ ಅತ್ಯುತ್ತಮ ಸುರಕ್ಷತಾ ದಾಖಲೆ ಹೊಂದಿದ್ದ ‘ಪ್ರೆಸ್ಟೀಜ್ ಹೆಲಿಕಾಪ್ಟರ್ಸ್’ ಸಂಸ್ಥೆಗೆ ಸೇರಿದ ರಾಬಿನ್ಸನ್ R66 ಹೆಲಿಕಾಪ್ಟರ್ ಇದಾಗಿದ್ದು, ಅಪಘಾತಕ್ಕೆ ನಿಖರ ಕಾರಣ ತಿಳಿಯಲು ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯು (NTSB) ತನಿಖೆ ಆರಂಭಿಸಿದೆ. ಇನ್ನು 30 ದಿನಗಳಲ್ಲಿ ಇದರ ಪ್ರಾಥಮಿಕ ವರದಿ ಹೊರಬರಲಿದೆ. ಭೀಕರ ದುರಂತದಲ್ಲೂ ಮಗಳು ಬದುಕುಳಿದಿರುವುದಕ್ಕೆ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕೊಹ್ಲಿಯನ್ನು ಕೆಣಕಿ ಸಿಕ್ಕಿಹಾಕಿಕೊಂಡ ಸಾಯಿ!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಅಂತಿಮ ಪಂದ್ಯವು ಆಟಗಾರರ ವಾಕ್ಸಮರಕ್ಕೆ ಸಾಕ್ಷಿಯಾಗಿತ್ತು. ಮೊದಲಿಗೆ ಮೊಹಮ್ಮದ್ ಸಿರಾಜ್ ಹಾಗೂ ವೆಂಕಟೇಶ್ ಅಯ್ಯರ್ ನಡುವೆ ಮಾತಿನ ಚಕಮಕಿ ನಡೆದರೆ, ಆ ಬಳಿಕ ವಿರಾಟ್ ಕೊಹ್ಲಿಯನ್ನು ಕೆಣಕುವ ಪ್ರಯತ್ನಕ್ಕೆ ಸಾಯಿ ಸುದರ್ಶನ್ ಕೈ ಹಾಕಿದರು.

ಆರ್​ಸಿಬಿ ಬ್ಯಾಟಿಂಗ್ ವೇಳೆ ಫ್ರಂಟ್ ಫೀಲ್ಡಿಂಗ್​ನಲ್ಲಿದ್ದ ಸಾಯಿ ಸುದರ್ಶನ್ ಭರ್ಜರಿಯಾಗಿ ಬ್ಯಾಟ್ ಮಾಡುತ್ತಿದ್ದ ವಿರಾಟ್ ಕೊಹ್ಲಿಯನ್ನು ಗುರಿಯಾಗಿಸಿ ಏನನ್ನೋ ಹೇಳಿದ್ದಾರೆ. ಈ ವೇಳೆ ಕೊಹ್ಲಿ ಕೂಡ ತಿರುಗೇಟು ನೀಡಿದ್ದಾರೆ. ಇದೇ ವೇಳೆ ಕೊಹ್ಲಿಯ ಬಳಿ ತೆರಳಿದ ಸಾಯಿ ಸುದರ್ಶನ್ ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದ್ದಾರೆ.

ಇದಾಗ್ಯೂ ಸಮಾಧಾನಗೊಳ್ಳದ ವಿರಾಟ್ ಕೊಹ್ಲಿ ಮತ್ತೆ ಬಂದು ಸಾಯಿ ಸುದರ್ಶನ್​ಗೆ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದ್ದಾರೆ. ಇತ್ತ ಸುಖಾ ಸುಮ್ಮನೆ ಕೊಹ್ಲಿಯನ್ನು ಕೆಣಕಿ ಪೇಚಿಗೆ ಸಿಲುಕಿದ ಸಾಯಿ ಸುದರ್ಶನ್ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರೂ ಅಷ್ಟರಲ್ಲಾಗಲೇ ಸಿಗಬೇಕಿರುವುದೆಲ್ಲವೂ ಸಿಕ್ಕಾಗಿತ್ತು.

ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಗುಜರಾತ್ ಟೈಟಾನ್ಸ್ ಆಟಗಾರ ಆರ್​ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್​ಗಳಲ್ಲಿ 155 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18 ಓವರ್​ಗಳಲ್ಲಿ 161 ರನ್​ ಬಾರಿಸಿ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಆರ್​ಸಿಬಿ ತಂಡ 2ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

 

Source link

ಇರಾನ್ ಮೇಲೆ ಮತ್ತೆ ಅಮೆರಿಕದ ‘ಆತ್ಮರಕ್ಷಣಾ ದಾಳಿ’: ಸೈನಿಕರು ಸುರಕ್ಷಿತ

ಅಮೆರಿಕ ದಾಳಿ-ಸಾಂದರ್ಭಿಕ ಚಿತ್ರ Image Credit source: Aljazeera

ವಾಷಿಂಗ್ಟನ್, ಜೂನ್ 1: ಅಮೆರಿಕದ ‘MQ-1’ ಡ್ರೋನ್ ಅನ್ನು ಇರಾನ್ ಹೊಡೆದುರುಳಿಸಿದ ಬೆನ್ನಲ್ಲೇ, ಅಮೆರಿಕ(America)ಸೇನೆಯು ಇರಾನ್‌ನ ರಾಡಾರ್ ಮತ್ತು ಡ್ರೋನ್ ತಾಣಗಳ ಮೇಲೆ ಶಕ್ತಿಶಾಲಿ ‘ಆತ್ಮರಕ್ಷಣಾ ದಾಳಿ’ ನಡೆಸಿದೆ. ಈ ಕಾರ್ಯಾಚರಣೆಯು ಅತ್ಯಂತ ಯೋಜಿತ ಹಾಗೂ ನಿಖರವಾಗಿದ್ದು, ಯಾವುದೇ ಅಮೇರಿಕದ ಮಿಲಿಟರಿ ಸಿಬ್ಬಂದಿಗೆ ಹಾನಿಯಾಗಿಲ್ಲ ಎಂದು ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ಪ್ರಕಟಿಸಿದೆ.

ನಿಖರ ಕಾರ್ಯಾಚರಣೆ ಮತ್ತು ಭದ್ರತೆ
ಇರಾನ್‌ನ ಗೋರುಕ್ ಮತ್ತು ಕೆಶ್ಮ್ ದ್ವೀಪಗಳಲ್ಲಿನ ರಾಡಾರ್ ವ್ಯವಸ್ಥೆಗಳು ಹಾಗೂ ಡ್ರೋನ್ ಕಮಾಂಡ್-ಅಂಡ್-ಕಂಟ್ರೋಲ್ ಸೈಟ್‌ಗಳನ್ನು ಗುರಿಯಾಗಿಸಿಕೊಂಡು ಅಮೆರಿಕದ ಯುದ್ಧ ವಿಮಾನಗಳು ದಾಳಿ ನಡೆಸಿವೆ. ವಾಣಿಜ್ಯ ಮತ್ತು ಮಿಲಿಟರಿ ಹಡಗುಗಳಿಗೆ ನೇರ ಬೆದರಿಕೆಯೊಡ್ಡಿದ್ದ ಇರಾನಿನ ವಾಯು ರಕ್ಷಣಾ ವ್ಯವಸ್ಥೆಗಳು, ಒಂದು ನೆಲದ ನಿಯಂತ್ರಣ ಕೇಂದ್ರ ಮತ್ತು ಎರಡು ಏಕಮುಖ ದಾಳಿ ಡ್ರೋನ್‌ಗಳನ್ನು ಅಮೆರಿಕ ಪಡೆಗಳು ಯಶಸ್ವಿಯಾಗಿ ನಾಶಪಡಿಸಿವೆ. ಪ್ರಾದೇಶಿಕ ನೀರಿನಲ್ಲಿ ಶಾಂತಿ ಕಾಪಾಡಲು ಮತ್ತು ತನ್ನ ಹಿತಾಸಕ್ತಿಗಳನ್ನು ರಕ್ಷಿಸಲು ಅಮೆರಿಕ ಬದ್ಧವಾಗಿದೆ ಎಂದು CENTCOM ಪುನರುಚ್ಚರಿಸಿದೆ.

ಜಾಗತಿಕ ಮಾರುಕಟ್ಟೆ ಮತ್ತು ರಾಜತಾಂತ್ರಿಕತೆ
ಈ ಪ್ರಾದೇಶಿಕ ಉದ್ವಿಗ್ನತೆಯ ನಡುವೆಯೂ, ಒಳಬರುವ ಡ್ರೋನ್ ಮತ್ತು ಕ್ಷಿಪಣಿಗಳನ್ನು ಎದುರಿಸಲು ಕುವೈತ್ ತನ್ನ ವಾಯು ರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸುವ ಮೂಲಕ ಗಡಿ ಭದ್ರತೆಯನ್ನು ಬಲಪಡಿಸಿದೆ.

ಮತ್ತಷ್ಟು ಓದಿ: ಭಾರತ-ಅಮೆರಿಕ ವ್ಯಾಪಾರ ಒಪ್ಪಂದ: ಜೂನ್ 1-4ಕ್ಕೆ ಭಾರತದಲ್ಲಿರಲಿದ್ದಾರೆ ಟ್ರಂಪ್ ಆಪ್ತ ಸಲಹೆಗಾರರು

ಮತ್ತೊಂದೆಡೆ, ಇರಾನ್ ಜೊತೆಗಿನ ಕದನ ವಿರಾಮ ಒಪ್ಪಂದವನ್ನು ವಿಸ್ತರಿಸುವ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆಗೆದುಕೊಳ್ಳಲಿರುವ ಅಂತಿಮ ನಿರ್ಧಾರದ ಕಡೆಗೆ ಜಾಗತಿಕ ಹೂಡಿಕೆದಾರರು ಕುತೂಹಲದಿಂದ ಎದುರುನೋಡುತ್ತಿದ್ದಾರೆ. ಈ ರಾಜತಾಂತ್ರಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಜಾಗತಿಕ ಮಾರುಕಟ್ಟೆಯಲ್ಲಿ ಬಲವಾದ ಡಾಲರ್ ಮತ್ತು ಏರುತ್ತಿರುವ ತೈಲ ಬೆಲೆಗಳ ಒತ್ತಡದಿಂದಾಗಿ ಸೋಮವಾರ ಚಿನ್ನದ ಬೆಲೆಯಲ್ಲಿ ಸಲ್ಪ ಕುಸಿತ ಕಂಡುಬಂದಿದೆ. ಪ್ರಾದೇಶಿಕ ಬಿಕ್ಕಟ್ಟನ್ನು ಶಮನಗೊಳಿಸಲು ಜರ್ಮನಿ, ಕತಾರ್ ಸೇರಿದಂತೆ ಅಂತರರಾಷ್ಟ್ರೀಯ ಸಮುದಾಯಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 9:57 am, Mon, 1 June 26

Source link

ಪ್ರಾಣಿ ಬಲಿ ಮಹಾ ಪಾಪ, ಬಕ್ರೀದ್ ದಿನ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ವ್ಯಕ್ತಿ

ಹಿಂದೂ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿImage Credit source: India Today

ಖಾಂಡ್ವಾ, ಜೂನ್ 1: ಪ್ರಾಣಿಗಳ ಮೇಲಿನ ಅತಿಯಾದ ಕರುಣೆ ಮತ್ತು ಸನಾತನ ಧರ್ಮದ ತತ್ವಗಳಿಗೆ ಆಕರ್ಷಿತನಾದ ಬಿಲಾಲ್ ಎಂಬ ಯುವಕ ಇಸ್ಲಾಂ ಧರ್ಮ ತೊರೆದು ಹಿಂದೂ(Hindu) ಧರ್ಮವನ್ನು ಸ್ವೀಕರಿಸಿದ್ದಾನೆ. ಮತಾಂತರದ ನಂತರ ಆತ ತನ್ನ ಹೆಸರನ್ನು ‘ವಿಶಾಲ್’ ಎಂದು ಬದಲಾಯಿಸಿಕೊಂಡಿದ್ದಾನೆ.

ಚಿಕ್ಕ ವಯಸ್ಸಿನಿಂದಲೂ ರಾಜೇಶ್ ಸಾರಂಗ್ ಎಂಬುವವರ ಬಳಿ ಕೆಲಸ ಮಾಡುತ್ತಿದ್ದ ಬಿಲಾಲ್‌ನನ್ನು ಅವರ ಕುಟುಂಬದ ಸದಸ್ಯನಂತೆಯೇ ನೋಡಿಕೊಳ್ಳಲಾಗಿತ್ತು. ಈ ವಾತಾವರಣವು ಆತನ ಮೇಲೆ ಭಾರಿ ಪ್ರಭಾವ ಬೀರಿತ್ತು. ಇತ್ತೀಚೆಗೆ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ನಡೆದ ಪ್ರಾಣಿ ಬಲಿಯನ್ನು ಕಂಡು ನೊಂದ ಬಿಲಾಲ್, ಎಲ್ಲಾ ಜೀವಿಗಳ ಮೇಲಿನ ದಯೆಯನ್ನು ಸಾರುವ ಸರ್ವೇ ಭವಂತು ಸುಖಿನಃ ಎಂಬ ಹಿಂದೂ ಧರ್ಮದ ತತ್ವಕ್ಕೆ ಮಾರುಹೋಗಿ ಧರ್ಮ ಬದಲಿಸುವ ನಿರ್ಧಾರ ಕೈಗೊಂಡಿದ್ದಾನೆ.

ಖಾಂಡ್ವಾದ ಪ್ರಸಿದ್ಧ ದೇವಸ್ಥಾನದಲ್ಲಿ ನಡೆದ ಸಾಂಪ್ರದಾಯಿಕ ‘ಘರ್ ವಾಪಸಿ’ ಆಚರಣೆಯ ಭಾಗವಾಗಿ ಆತನಿಗೆ ಪಂಚಗವ್ಯ, ಗಂಗಾಜಲ ಮತ್ತು ಪವಿತ್ರ ದ್ರವ್ಯಗಳಿಂದ ಹತ್ತು ವಿಧದ ಸ್ನಾನ ಮಾಡಿಸಲಾಯಿತು. ಬಳಿಕ ಆತ ತಲೆ ಬೋಳಿಸಿಕೊಂಡು ಯಜ್ಞ ಮತ್ತು ಶಿವಪೂಜೆಯಲ್ಲಿ ಪಾಲ್ಗೊಂಡಿದ್ದಾನೆ. ಸನಾತನ ಧರ್ಮದ ನಿಯಮಗಳನ್ನು ಪಾಲಿಸುವುದಾಗಿ ಪ್ರಮಾಣ ಮಾಡಿದ ವಿಶಾಲ್, ಅತ್ಯಂತ ಭಕ್ತಿಯಿಂದ ರಾಮಚರಿತಮಾನಸ ಗ್ರಂಥವನ್ನು ತನ್ನ ಹಣೆಯ ಮೇಲಿಟ್ಟುಕೊಂಡು ಇನ್ಮುಂದೆ ದಿನವೂ ಅದನ್ನು ಪಠಿಸುವುದಾಗಿ ಪ್ರತಿಜ್ಞೆ ಮಾಡಿದ್ದಾನೆ.

ಮತ್ತಷ್ಟು ಓದಿ: ಸಾವಿನ ಕೊನೆ ಗಳಿಗೆಯಲ್ಲಿ ಬಾಯಿಗೆ ಗಂಗಾಜಲ ಯಾಕೆ ಬಿಡ್ತಾರೆ ಗೊತ್ತಾ?

ನನಗೆ ಸನಾತನ ಧರ್ಮ ತುಂಬಾ ಇಷ್ಟ, ನಾನು ಅದಕ್ಕೆ ಸೇರಲೇಬೇಕಿತ್ತು, ನಾನು ಮೊದಲಿನಿಂದಲೂ ಅದರ ಆಚರಣೆಗಳನ್ನು ಅನುಸರಿಸುತ್ತಿದ್ದೇನೆ. ಬಕ್ರೀದ್ ದಿನದಂದು, ಮುಗ್ಧ ಪ್ರಾಣಿಗಳಿಗೆ ಪರಿಸ್ಥಿತಿಯನ್ನು ನನ್ನಿಂದ ನೋಡಲಾಗಲಿಲ್ಲ ಎಂದು ಅವರು ಹೇಳಿದರು. ಬಾಲ್ಯದಿಂದಲೂ ಹಿಂದೂ ಧರ್ಮದ ಬಗ್ಗೆ ಆಸಕ್ತಿ ಇತ್ತು ಎಂದು ವಿಶಾಲ್ ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

World Milk Day 2026: ವಿಶ್ವ ಹಾಲು ದಿನವನ್ನು ಯಾವ ಉದ್ದೇಶಕ್ಕಾಗಿ ಆಚರಿಸಲಾಗುತ್ತದೆ?

ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ, ಸತು, ವಿಟಮಿನ್ ಬಿ 12, ವಿಟಮಿನ್ ಡಿ ಮತ್ತು ಹೇರಳವಾದ ಪ್ರೋಟೀನ್‌ಗಳಂತಹ ಖನಿಜಗಳಿಂದ ತುಂಬಿದ ಹಾಲು (Milk) ಒಂದು ಸಂಪೂರ್ಣ ಆಹಾರವಾಗಿದೆ. ಪ್ರತಿದಿನ ಒಂದು ಲೋಟ ಹಾಲು ಕುಡಿಯುವುದರಿಂದ ನಮ್ಮ ದೇಹಕ್ಕೆ ಪ್ರಯೋಜನಕಾರಿಯಾದ ಅನೇಕ ಪೋಷಕಾಂಶಗಳನ್ನು ದೊರೆಯುತ್ತದೆ. ಹೀಗೆ ಹಾಲಿನ ಆರೋಗ್ಯ ಪ್ರಯೋಜನಗಳು,  ಹೈನುಗಾರಿಕೆ ಉದ್ಯಮಕ್ಕೆ ಸಂಬಂಧಿಸಿದ ಚಟುವಟಿಕೆಗಳ ಅರಿವು ಮೂಡಿಸಲು ಮತ್ತು ಬೆಂಬಲವನ್ನು ಉತ್ತೇಜಿಸಲು ಪ್ರತಿವರ್ಷ ಜೂನ್‌ 1 ರಂದು ವಿಶ್ವ ಹಾಲು ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿದುಕೊಳ್ಳಿ.

ವಿಶ್ವ ಹಾಲು ದಿನದ ಇತಿಹಾಸವೇನು?

ಡೈರಿ ಉದ್ಯಮವನ್ನು ಗುರುತಿಸಲು ಮತ್ತು ಹಾಲಿನ ಪ್ರಯೋಜನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಜೂನ್ 1 ರಂದು ವಿಶ್ವ ಹಾಲು ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆಯು 2001 ರಲ್ಲಿ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು ಪ್ರಾರಂಭಿಸಿತು. ಅಂದಿನಿಂದ ಪ್ರತಿವರ್ಷ ವಿಶ್ವ ಹಾಲು ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ವಿಶ್ವ ಹಾಲು ದಿನದ ಮಹತ್ವವೇನು?

  • ಹಾಲು ದಿನವನ್ನು ಆಚರಿಸುವ ಉದ್ದೇಶವು ಜನರಿಗೆ ಅದರ ಪ್ರಯೋಜನಗಳು ಮತ್ತು ಮಹತ್ವವನ್ನು ಅರ್ಥಮಾಡಿಸುವುದು ಹಾಗೂ ಹಾಲು ಸ್ಥಳೀಯ ಆರ್ಥಿಕತೆ ಮತ್ತು ಸಮುದಾಯಗಳಿಗೆ ಹೇಗೆ ಪ್ರಯೋಜನವನ್ನು ನೀಡುತ್ತದೆ ಎಂಬುದನ್ನು ಜನರಿಗೆ ತಿಳಿಸುವುದಾಗಿದೆ.
  • ಹಾಗಾಗಿ ಜಗತ್ತಿನಲ್ಲಿ ಡೈರಿ ಉತ್ಪನ್ನಗಳನ್ನು ಉತ್ತೇಜಿಸಲು ಮತ್ತು ಅವುಗಳಿಗೆ ಸಂಬಂಧಿಸಿದ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಒದಗಿಸುಲು ಪ್ರತಿ ವರ್ಷ ಜೂನ್ 1 ರಂದು ವಿಶ್ವ ಹಾಲು ದಿನವನ್ನು ಆಚರಿಸಲಾಗುತ್ತದೆ.
  • ಹಾಲಿನ ಪೌಷ್ಟಿಕಾಂಶದ ಮೌಲ್ಯ, ಡೈರಿ ಉದ್ಯಮದ ಸಾಮಾಜಿಕ-ಆರ್ಥಿಕ ಪ್ರಾಮುಖ್ಯತೆ ಮತ್ತು ಆಹಾರ ಭದ್ರತೆಯಲ್ಲಿ ಅದರ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ.

ಇದನ್ನೂ ಓದಿ: ಆಲೂಗಡ್ಡೆ ತಿನ್ನುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳೇನು?

ಪ್ರತಿದಿನ ಒಂದು ಲೋಟ ಹಾಲು ಕುಡಿಯುವುದರಿಂದ ಲಭಿಸುವ ಪ್ರಯೋಜನಗಳೇನು?

  • ಪ್ರತಿದಿನ ಒಂದು ಲೋಟ ಬೆಚ್ಚಗಿನ ಹಾಲು ಕುಡಿಯುವುದರಿಂದ ನಿಮಗೆ ಹೆಚ್ಚು ಸಮಯ ಹೊಟ್ಟೆ ತುಂಬಿದ ಅನುಭವವಾಗುತ್ತದೆ, ಇದು ಆಗಾಗ್ಗೆ ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ.
  • ರಾತ್ರಿ ಒಂದು ಲೋಟ ಬೆಚ್ಚಗಿನ ಹಾಲು ಕುಡಿಯುವುದು ಅತ್ಯಗತ್ಯ. ಇದು ದೇಹ ಮತ್ತು ಮನಸ್ಸನ್ನು ಶಮನಗೊಳಿಸುತ್ತದೆ. ಇದು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ
  • ಹಾಲಿನಲ್ಲಿ ಟ್ರಿಪ್ಟೊಫಾನ್ ಎಂಬ ಅಮೈನೋ ಆಮ್ಲವಿದೆ, ಇದು ಉತ್ತಮ ನಿದ್ರೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ನೀವು ರಾತ್ರಿಯಲ್ಲಿ ಬೇಗನೆ ನಿದ್ರಿಸಲು ಕಷ್ಟಪಡುತ್ತಿದ್ದರೆ, ಒಂದು ಗ್ಲಾಸ್‌ ಬೆಚ್ಚಗಿನ ಹಾಲು ಕುಡಿಯಿರಿ.
  • ಹಾಲಿನಲ್ಲಿರುವ ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸುತ್ತದೆ. ಬೆಚ್ಚಗಿನ ಹಾಲು ಕುಡಿಯುವುದರಿಂದ ಮೂಳೆಗಳ ಸಾಂದ್ರತೆ ಹೆಚ್ಚಾಗುತ್ತದೆ ಮತ್ತು ನಿಮ್ಮ ದೇಹವು ಮೊದಲಿಗಿಂತ ಬಲಶಾಲಿಯಾಗುತ್ತದೆ.
  • ಮಲಗುವ ಮುನ್ನ ಪ್ರತಿದಿನ ರಾತ್ರಿ ಬೆಚ್ಚಗಿನ ಹಾಲು ಕುಡಿಯುವುದರಿಂದ ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
  • ಹಾಲಿನಲ್ಲಿ ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುವ ಸಂಯುಕ್ತಗಳಿವೆ. ರಾತ್ರಿಯಲ್ಲಿ ಹಾಲು ಕುಡಿಯುವುದರಿಂದ ನಿಮ್ಮ ನರಮಂಡಲಕ್ಕೆ ವಿಶ್ರಾಂತಿ ಸಿಗುತ್ತದೆ. ಇದು ಆಯಾಸವನ್ನು ಕಡಿಮೆ ಮಾಡುತ್ತದೆ ಮತ್ತು ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ, ಬೆಳಿಗ್ಗೆ ನಿಮ್ಮನ್ನು ಉಲ್ಲಾಸ ಮತ್ತು ಒತ್ತಡರಹಿತವಾಗಿ ಅನುಭವಿಸುವಂತೆ ಮಾಡುತ್ತದೆ.
  • ರಾತ್ರಿ ಹಾಲು ಕುಡಿಯುವುದರಿಂದ ಬೆಳಿಗ್ಗೆ ಒತ್ತಡ ಮುಕ್ತವಾಗಿರಲು ಸಹಾಯ ಮಾಡುತ್ತದೆ. ಹಾಲಿನಲ್ಲಿರುವ ಅಮೈನೋ ಆಮ್ಲಗಳು ಕಾರ್ಟಿಸೋಲ್ ಹಾರ್ಮೋನ್ ಮಟ್ಟವನ್ನು ಕಡಿಮೆ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿದ್ದರಾಮಯ್ಯ ಪತ್ನಿಗೆ ರಾಜ್ಯಸಭಾ ಆಫರ್ ನೀಡಿದ್ದ ರಾಹುಲ್ ಗಾಂಧಿ: ಬೇಡವೆಂದಿದ್ದ ಮಾಜಿ ಸಿಎಂ ಇಟ್ಟಿದ್ದು ಬೇರೆಯೇ ಬೇಡಿಕೆ!

ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯImage Credit source: tv9

ಬೆಂಗಳೂರು, ಜೂನ್ 1: ರಾಜ್ಯದಲ್ಲಿ ಸಿಎಂ ಹುದ್ದೆ ಬದಲಾವಣೆಯ ಜತೆಗೆ ಸಂಪುಟ ರಚನೆಯ ಕಸರತ್ತು ಅಂತಿಮ ಘಟ್ಟ ತಲುಪಿದೆ. ಸಚಿವ ಸಂಪುಟದಲ್ಲಿ ಯಾರೆಲ್ಲ ಇರಬೇಕು ಎಂಬುದು ಮತ್ತು ಇತರ ಪ್ರಮುಖ ರಾಜಕೀಯ ನಿರ್ಧಾರಗಳ ಕುರಿತು ಚರ್ಚಿಸಲು ನಿರ್ಗಮಿತ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ನಿಯೋಜಿತ ಸಿಎಂ ಡಿಕೆ ಶಿವಕುಮಾರ್ (DK Shivakumar) ಇಂದು (ಜೂನ್ 1) ದೆಹಲಿಗೆ ತೆರಳುತ್ತಿದ್ದಾರೆ. ಸಂಭಾವ್ಯ ಸಚಿವರ ಪಟ್ಟಿ ಅಂತಿಮಗೊಳಿಸಲು ಹೈಕಮಾಂಡ್ ನಾಯಕರೊಂದಿಗೆ ಈ ಭೇಟಿ ನಿಗದಿಯಾಗಿದೆ. ಇದೇ ವೇಳೆ, ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣ ಪ್ರವೇಶಿಸಲು ನಿರಾಕರಿಸಿದ ನಂತರ ಅವರ ಪತ್ನಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜ್ಯಸಭಾ ಸ್ಥಾನದ ಆಫರ್ ನೀಡಿದ್ದರು ಎಂಬ ಅಚ್ಚರಿಯ ವಿಚಾರ ಈಗ ತಿಳಿದುಬಂದಿದೆ.

ಮುಖ್ಯಾಂಶಗಳು

  • ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ ರಾಜ್ಯಸಭಾ ಸ್ಥಾನದ ಆಫರ್ ನೀಡಿದ್ದ ರಾಹುಲ್ ಗಾಂಧಿ.
  • ಪತ್ನಿಗೆ ರಾಜ್ಯಸಭಾ ಆಫರ್ ಅನ್ನು ಗೌರವಯುತವಾಗಿ ತಿರಸ್ಕರಿಸಿದ ಸಿದ್ದರಾಮಯ್ಯ.
  • ಜಾತಿ ಸಮೀಕರಣದ ಆಧಾರದ ಮೇಲೆ ಕನಿಷ್ಠ 3 ಡಿಸಿಎಂ ಹುದ್ದೆ ನೀಡುವಂತೆ ಹೈಕಮಾಂಡ್ ಮೇಲೆ ಒತ್ತಡ.

ರಾಹುಲ್ ಗಾಂಧಿ ಆಫರ್ ತಿರಸ್ಕರಿಸಿದ ಸಿದ್ದರಾಮಯ್ಯ

ರಾಷ್ಟ್ರ ರಾಜಕಾರಣಕ್ಕೆ ಆಗಮಿಸುವಂತೆ ಸಿದ್ದರಾಮಯ್ಯ ಮೇಲೆ ರಾಹುಲ್ ಗಾಂಧಿ ತೀವ್ರ ಒತ್ತಡ ಹೇರಿದ್ದರು. ಒಂದು ವೇಳೆ ಸಿದ್ದರಾಮಯ್ಯಗೆ ದೆಹಲಿ ರಾಜಕಾರಣಕ್ಕೆ ಬರಲು ಸಾಧ್ಯವಾಗದಿದ್ದರೆ, ಅವರ ಪತ್ನಿಯನ್ನು ರಾಜ್ಯಸಭೆಗೆ ಕಳುಹಿಸಿಕೊಡುವಂತೆ ಗೌರವಯುತ ಆಫರ್ ನೀಡಿದ್ದರು. ಆದರೆ, ಇದನ್ನು ನಯವಾಗಿಯೇ ನಿರಾಕರಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ‘ನಾನು ರಾಜ್ಯ ರಾಜಕಾರಣದಲ್ಲೇ ಮುಂದುವರಿಯುತ್ತೇನೆ. ನನ್ನ ಪತ್ನಿ ಎಂದಿಗೂ ರಾಜಕೀಯದಲ್ಲಿ ಇಲ್ಲ, ಆಕೆ ಹೊರಜಗತ್ತಿಗೂ ಬಂದಿಲ್ಲ. ಹೀಗಾಗಿ ಆಕೆ ರಾಜ್ಯಸಭೆ ಪ್ರವೇಶಿಸುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ತಮಗೆ ನೀಡಿದ್ದ ಆ ಸ್ಥಾನವನ್ನು ಹಿಂದುಳಿದ ಸಮುದಾಯದ ಯೋಗ್ಯ ನಾಯಕರಿಗೆ ನೀಡುವಂತೆ ರಾಹುಲ್ ಗಾಂಧಿ ಬಳಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಜೊತೆಗೆ ಪುತ್ರ ಯತೀಂದ್ರಗೆ ಡಿಸಿಎಂ ಪಟ್ಟವನ್ನು ಸಿದ್ದರಾಮಯ್ಯ ನಿರಾಕರಿಸಿದ್ದಾರೆ.

ಮೂವರಿಗೆ ಡಿಸಿಎಂ ಪಟ್ಟ ನೀಡಲು ಸಿದ್ದು ಬಣದ ಬ್ಯಾಟಿಂಗ್

ಇನ್ನೊಂದೆಡೆ, ರಾಜ್ಯದಲ್ಲಿ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿಗೆ ಸಿದ್ದರಾಮಯ್ಯ ತೀವ್ರ ಒತ್ತಡ ಹೇರುವ ಸಾಧ್ಯತೆ ದಟ್ಟವಾಗಿದೆ. ಸಿದ್ದರಾಮಯ್ಯ ನಿವಾಸದಲ್ಲಿ ನಡೆದ ಸಭೆಯ ತೀರ್ಮಾನದಂತೆ, ಜಾತಿ ಸಮೀಕರಣವನ್ನು ಸರಿದೂಗಿಸಲು ಕನಿಷ್ಠ ಮೂವರಿಗೆ ಡಿಸಿಎಂ ಸ್ಥಾನ ನೀಡಬೇಕು ಎಂಬುದು ಅವರ ವಾದವಾಗಿದೆ. ಪ್ರಮುಖವಾಗಿ 8 ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಹಾಗೂ ಮುಖ್ಯಮಂತ್ರಿ ರೇಸ್‌ನಲ್ಲಿದ್ದ ಹಿರಿಯ ನಾಯಕ ಡಾ. ಜಿ. ಪರಮೇಶ್ವರ್, ಲಿಂಗಾಯತ ಸಮುದಾಯದ ಪ್ರಮುಖ ನಾಯಕ ಎಂ.ಬಿ. ಪಾಟೀಲ್ ಹಾಗೂ ಅಲ್ಪಸಂಖ್ಯಾತ ಸಮುದಾಯದ ಜಮೀರ್ ಅಹಮದ್ ಖಾನ್ ಅವರಿಗೆ ಡಿಸಿಎಂ ಪಟ್ಟ ನೀಡಲು ಸಿದ್ದರಾಮಯ್ಯ ಹೈಕಮಾಂಡ್ ಮಟ್ಟದಲ್ಲಿ ಬ್ಯಾಟಿಂಗ್ ನಡೆಸಲಿದ್ದಾರೆ.

ದೆಹಲಿಯಲ್ಲಿ ಹೈಕಮಾಂಡ್ ಫಿಲ್ಟರ್: ಸಚಿವಾಕಾಂಕ್ಷಿಗಳಲ್ಲಿ ನಡುಕ

ಸಂಪುಟ ರಚನೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಈಗಾಗಲೇ ತಮ್ಮ ಬಣದ ಸಚಿವಾಕಾಂಕ್ಷಿಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದು, ಅದನ್ನು ಹೈಕಮಾಂಡ್ ನಾಯಕರಿಗೆ ಹಸ್ತಾಂತರಿಸಲಿದ್ದಾರೆ. ಸಿದ್ದರಾಮಯ್ಯ ಬಣದಿಂದ ಎ.ಎಸ್. ಪೊನ್ನಣ್ಣ, ಶಿವರಾಜ್ ತಂಗಡಗಿ, ಪುಟ್ಟರಂಗಶೆಟ್ಟಿ, ಕೆ. ವೆಂಕಟೇಶ್, ಬಸವರಾಜ್ ರಾಯರೆಡ್ಡಿ, ಬಿ.ಕೆ. ಹರಿಪ್ರಸಾದ್, ಸಂತೋಷ್ ಲಾಡ್, ಎಚ್.ಸಿ. ಮಹದೇವಪ್ಪ ಹಾಗೂ ಜಮೀರ್ ಅಹಮದ್ ಖಾನ್ ಪ್ರಮುಖ ಸಚಿವಾಕಾಂಕ್ಷಿಗಳಾಗಿದ್ದಾರೆ. ಈಗಾಗಲೇ ಹತ್ತಾರು ಆಕಾಂಕ್ಷಿಗಳು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಹೈಕಮಾಂಡ್ ಜಿಲ್ಲಾವಾರು ಮತ್ತು ಸಮುದಾಯವಾರು ಪ್ರಾತಿನಿಧ್ಯವನ್ನು ಗಮನದಲ್ಲಿಟ್ಟುಕೊಂಡು ಲಿಸ್ಟ್ ಫಿಲ್ಟರ್ ಮಾಡಲಿದೆ.

ಹೈಕಮಾಂಡ್ ಅಂಗಳದಲ್ಲಿ ಚರ್ಚೆಯಾಗಲಿರುವ ಪ್ರಮುಖ 8 ವಿಷಯಗಳು

  1. ಮೊದಲ ಪಟ್ಟಿಯ ಸಚಿವರ ಆಯ್ಕೆ ಮತ್ತು ಪ್ರಮಾಣ ವಚನದ ಬಗ್ಗೆ.
  2. ಹಳೆಯ ಸಚಿವರಲ್ಲಿ ಯಾರನ್ನು ಮುಂದುವರಿಸಬೇಕು? ಯಾರನ್ನು ಕೈಬಿಡಬೇಕು?
  3. ಹಾಲಿ ಸಚಿವ ಸಂಪುಟದ ನಡುವೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ವಿಚಾರ.
  4. ರಾಜ್ಯಕ್ಕೆ ಹೆಚ್ಚುವರಿ ಡಿಸಿಎಂ ಹುದ್ದೆಗಳು ಬೇಕಾ ಅಥವಾ ಬೇಡವಾ?
  5. ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಯಾದರೆ ಯಾವ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಬೇಕು?
  6. ಸರ್ಕಾರದ ಸುಗಮ ನಡಿಗೆಗೆ ಸಮನ್ವಯ ಸಮಿತಿ ಅಥವಾ ಕೋರ್ ಕಮಿಟಿ ಮಾದರಿ ರಚನೆ.
  7. ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರ ರಾಜಕೀಯ ಸ್ಥಾನಮಾನದ ನಿರ್ಧಾರ.
  8. ಮುಂಬರುವ ರಾಜ್ಯಸಭಾ ಚುನಾವಣೆ ಪ್ರಕ್ರಿಯೆ ಮತ್ತು ಸಂಭಾವ್ಯ ಅಭ್ಯರ್ಥಿಗಳ ಆಯ್ಕೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಜನೆಯಲ್ಲ, ತಾಯಿ ಶ್ರಾದ್ಧದ ದಿನ ರಾತ್ರಿ ಇಡೀ ನಡೆದಿದ್ದು ಇದೆಂಥಾ ನೃತ್ಯ

ಬೇಗುಸರಾಯ್, ಜೂನ್ 01: ಯಾರಾದರೂ ಮನೆಯಲ್ಲಿ ಸತ್ತಿದ್ದಾರೆಂದರೆ ಎಲ್ಲರ ಕಣ್ಣಂಚಲ್ಲೂ ನೀರು, ಊಟವೂ ಬೇಡ ಏನೂ ಬೇಡವೆಂಬ ಭಾವನೆ. ಸಂಜೆ ಹೊತ್ತು ದೇವರ ಮುಂದೆ ಒಂದಿಷ್ಟು ಭಜನೆ ವಾತಾವರಣ ಹೀಗಿರುವುದು ಸಾಮಾನ್ಯ. ಆದರೆ ಇಲ್ಲೊಂದು ಮನೆಯಲ್ಲಿ ಮಹಿಳೆ ಮೃತಪಟ್ಟಿದ್ದಾರೆ, ಅವರ ಶ್ರಾದ್ಧ(Shraddha) ಕಾರ್ಯದ ದಿನ ಆ ಮಹಿಳೆಯ ಮಗ ಭಜನೆ ಬದಲು ಲಾಂಡ್ ನೃತ್ಯ ಮಾಡಿಸಿರುವ ಘಟನೆ ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಶಿವನಗರ ಗ್ರಾಮದಲ್ಲಿ ನಡೆದ ಶ್ರಾದ್ಧ ಕಾರ್ಯಕ್ರಮವೊಂದು ಸಾಂಪ್ರದಾಯಿಕ ಪದ್ಧತಿಗಿಂತ ಸಂಪೂರ್ಣ ಭಿನ್ನವಾಗಿ ನಡೆದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇಲ್ಲಿನ ನಿವಾಸಿ ಮೈನಾ ದೇವಿ ಎಂಬುವವರು ಮೇ 19 ರಂದು ನಿಧನರಾಗಿದ್ದರು. ಮೇ 30 ರಂದು ಅವರ 12ನೇ ದಿನದ ಪುಣ್ಯತಿಥಿ (ಶ್ರಾದ್ಧ) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಮಗ ಮಹಾರಾಣಾ ಪ್ರತಾಪ್ ಪಾಸ್ವಾನ್, ಸಾಂಪ್ರದಾಯಿಕ ಭಜನೆ-ಪ್ರವಚನಗಳ ಬದಲಿಗೆ ಬಿಹಾರದ ಪ್ರಸಿದ್ಧ ಜಾನಪದ ಕಲೆಯಾದ ‘ಲಾಂಡ್ ನೃತ್ಯ’ (Launda Dance) ಕಾರ್ಯಕ್ರಮವನ್ನು ಏರ್ಪಡಿಸಿದ್ದರು.

ವೇದಿಕೆಯ ಮೇಲೆ ಮೃತ ಮಹಿಳೆಯ ದೊಡ್ಡ ಫೋಟೋ ಇಟ್ಟು, ಅದರ ಮುಂದೆಯೇ ನೃತ್ಯಗಾರರು ರಾತ್ರಿಯಿಡೀ ಭೋಜ್‌ಪುರಿ ಮತ್ತು ಹಿಂದಿ ಹಾಡುಗಳಿಗೆ ಜೋರಾದ ಸಂಗೀತದೊಂದಿಗೆ ನೃತ್ಯ ಪ್ರದರ್ಶನ ನೀಡಿದ್ದಾರೆ. ಮದುವೆ ಅಥವಾ ಆರ್ಕೆಸ್ಟ್ರಾ ಕಾರ್ಯಕ್ರಮದಂತಿದ್ದ ಈ ವಿಚಿತ್ರ ಶ್ರಾದ್ಧದ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇದನ್ನು ಸಂಪ್ರದಾಯಕ್ಕೆ ಮಾಡಿದ ಅಪಚಾರ ಎಂದರೆ, ಇನ್ನು ಕೆಲವರು ಇದು ಆ ಕುಟುಂಬದ ವೈಯಕ್ತಿಕ ನಿರ್ಧಾರ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ಓದಿ:Video: ಬತ್ತದ ಜೀವನೋತ್ಸಾಹ; ಇಳಿ ವಯಸ್ಸಿನಲ್ಲೂ ದಾಂಡಿಯಾ ನೃತ್ಯ ಪ್ರದರ್ಶಿಸಿದ ವೃದ್ಧ ದಂಪತಿ

ಈ ಘಟನೆಯು ವಿಕಸನಗೊಳ್ಳುತ್ತಿರುವ ಸಾಂಸ್ಕೃತಿಕ ಪದ್ಧತಿಗಳು ಮತ್ತು ವೈಯಕ್ತಿಕ ಆಯ್ಕೆ ಮತ್ತು ದೀರ್ಘಕಾಲೀನ ಸಾಮಾಜಿಕ ಪದ್ಧತಿಗಳ ನಡುವಿನ ಸಮತೋಲನದ ಕುರಿತು ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ.
ಸ್ಥಳೀಯರು ಹೇಳುವ ಪ್ರಕಾರ, ಈ ಕಾರ್ಯಕ್ರಮವು ಸಾಂಪ್ರದಾಯಿಕ ಸಂತಾಪ ಸೂಚಕ ಸಭೆಯಾಗಿ ಪ್ರಾರಂಭವಾಯಿತು, ಆದರೆ ಕ್ರಮೇಣ ವಿವಾಹ ಆಚರಣೆ ಅಥವಾ ಆರ್ಕೆಸ್ಟ್ರಾ ಪ್ರದರ್ಶನವನ್ನು ಹೋಲುವ ಕಾರ್ಯಕ್ರಮವಾಗಿ ರೂಪಾಂತರಗೊಂಡಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version