ದಾವಣಗೆರೆ, (ಏಪ್ರಿಲ್ 03): ಶಾಮನೂರು ಶಿವಶಂಕರಪ್ಪನವರು ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ (Davanagere South By Election )ಎದುರಾಗಿದ್ದು, ಕಾಂಗ್ರೆಸ್ (Congress) ಹಾಗೂ ಬಿಜೆಪಿ ನಾಯಕರು ಬಿರುಸಿನ ಪ್ರಚಾರ ನಡೆಸಿದ್ದಾರೆ. ಅದರಲ್ಲೂ ಈ ಬೈಎಲೆಕ್ಷನ್ ನಲ್ಲಿ ಗೆಲ್ಲಲ್ಲೇಬೇಕೆಂದು ಕಾಂಗ್ರೆಸ್ ಪಣತೊಟ್ಟಿದ್ದು, ಸಿಎಂ ಸಿದ್ದರಾಂಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಆದಿಯಾಗಿ ಸಚಿವ, ಶಾಸಕರು, ವಿಧಾನಪರಿಷತ್ ಸದಸ್ಯರು ಮತಬೇಟೆಗಿಳಿದಿದ್ದಾರೆ. ಇನ್ನೊಂದೆಡೆ ವಿಪಕ್ಷ ಬಿಜೆಪಿ, ಆಡಳಿರೂಢ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರ ಅವರನ್ನ ಸೋಲಿಸಲು ಇನ್ನಿಲ್ಲದ ಕಸರತ್ತು ನಡೆಸಿದೆ. ಈ ನಡುವೆ ಬಿಜೆಪಿ ಶಾಸಕ ಶ್ರೀರಾಮುಲು ಅವರು ಇಂದು (ಏಪ್ರಿಲ್ 03) ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಸಮರ್ಥನನ್ನು ಸೋಲಿಸಲು ಕಾಂಗ್ರೆಸ್ನಲ್ಲೇ ಷಡ್ಯಂತ್ರ ನಡೆದಿದೆ ಎಂದು ಸ್ಫೋಟಕ ಆರೋಪ ಮಾಡಿದ್ದಾರೆ.
ವರ್ಷಗಳ ಕಾಲ ಐಪಿಎಲ್ನಲ್ಲಿ ಅಬ್ಬರಿಸಿದ್ದ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಇದೀಗ ಐಪಿಎಲ್ನಲ್ಲಿ ಆಡುತ್ತಿಲ್ಲ. ಇದಕ್ಕೆ ಕಾರಣ ಹರಾಜಿನಲ್ಲಿ ಯಾರು ಅವರನ್ನು ಖರೀದಿಸಿಲ್ಲ. ಹೀಗಾಗಿ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಆಡುತ್ತಿರುವ ವಾರ್ನರ್, ಕರಾಚಿ ಕಿಂಗ್ಸ್ ತಂಡದ ಪರ ಆಡುತ್ತಿದ್ದಾರೆ. ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಇದುವರೆಗೆ ಹತ್ತು ಪಂದ್ಯಗಳು ನಡೆದಿದ್ದು, ಕರಾಚಿ ಕಿಂಗ್ಸ್ ತಂಡವು ಟೂರ್ನಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ಮಧ್ಯೆ, ಕರಾಚಿ ಕಿಂಗ್ಸ್ ನಾಯಕ ಡೇವಿಡ್ ವಾರ್ನರ್, ಲೀಗ್ ತೊರೆದು ತವರಿಗೆ ಮರಳಿದ್ದಾರೆ ಎಂದು ಪಾಕಿಸ್ತಾನಿ ಮಾಧ್ಯಮ ವರದಿ ಮಾಡಿವೆ.
ಆಸ್ಟ್ರೇಲಿಯಾಕ್ಕೆ ಹಾರಿದ ಡೇವಿಡ್ ವಾರ್ನರ್
ವಾಸ್ತವವಾಗಿ ಡೇವಿಡ್ ವಾರ್ನರ್ ತಮ್ಮ ತಂಡದ ಸಹ ಆಟಗಾರರೊಂದಿಗೆ ಜಗಳ ಮಾಡಿಕೊಂಡಿದ್ದಾರೆ ಎಂದು ಬಿಂಬಿಸುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಇದೆಲ್ಲದರ ನಡುವೆ ವಾರ್ನರ್ ಆಸ್ಟ್ರೇಲಿಯಾಕ್ಕೆ ಮರಳಿದ್ದಾರೆ ಎಂಬ ಸುದ್ದಿ ಬಂದಿದೆ. ಆದಾಗ್ಯೂ ವಾರ್ನರ್ ಮನೆಗೆ ಮರಳಿರುವುದಕ್ಕೂ, ವೈರಲ್ ವಿಡಿಯೋಕ್ಕೂ ಯಾವುದೇ ಸಂಬಂಧವಿಲ್ಲ. ಏಕೆಂದರೆ ಕರಾಚಿ ಕಿಂಗ್ಸ್ ತಂಡದ ಮುಂದಿನ ಪಂದ್ಯ ಏಪ್ರಿಲ್ 9 ರಂದು ಕರಾಚಿ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪೇಶಾವರ್ ಝಲ್ಮಿ ವಿರುದ್ಧ ನಡೆಯಲಿದೆ.
ಹೀಗಾಗಿ ಡೇವಿಡ್ ವಾರ್ನರ್ ಸಣ್ಣ ವಿರಾಮ ತೆಗೆದುಕೊಂಡು ಆಸ್ಟ್ರೇಲಿಯಾಕ್ಕೆ ಮರಳಿದ್ದಾರೆ. ತಂಡದ ಮುಂದಿನ ಪಂದ್ಯಕ್ಕೆ ಇನ್ನು 6 ದಿನಗಳು ಬಾಕಿ ಇರುವುದರಿಂದ ವಾರ್ನರ್, ಈ ವಿರಾಮದ ಲಾಭವನ್ನು ಪಡೆದುಕೊಂಡು ಮನೆಗೆ ಮರಳಲು ನಿರ್ಧರಿಸಿದ್ದಾರೆ. ಇದರರ್ಥ ಅವರು ಕರಾಚಿ ಕಿಂಗ್ಸ್ ತಂಡದ ಮುಂದಿನ ಪಂದ್ಯಕ್ಕೂ ಮೊದಲು ಪಾಕಿಸ್ತಾನಕ್ಕೆ ಮರಳಲಿದ್ದು ತಂಡವನ್ನು ಕೂಡಿಕೊಳ್ಳಲಿದ್ದಾರೆ.
ಡೇವಿಡ್ ವಾರ್ನರ್ ನಾಯಕತ್ವದಲ್ಲಿ, ಕರಾಚಿ ಕಿಂಗ್ಸ್ ಇಲ್ಲಿಯವರೆಗೆ ಉತ್ತಮ ಪ್ರದರ್ಶನ ನೀಡಿದೆ. ಬ್ಯಾಟ್ಸ್ಮನ್ ಆಗಿಯೂ ಉತ್ತಮ ಪ್ರದರ್ಶನ ನೀಡಿರುವ ವಾರ್ನರ್ ಆಡಿರುವ ಮೂರು ಪಂದ್ಯಗಳಲ್ಲಿ 31.00 ಸರಾಸರಿಯಲ್ಲಿ 93 ರನ್ ಗಳಿಸಿದ್ದಾರೆ, ಇದರಲ್ಲಿ ಒಂದು ಅರ್ಧಶತಕವೂ ಸೇರಿದೆ.
VIRAL CLIP: Moeen Ali vs David Warner
What looked like a “big fight” was actually a heated on-field argument during a PSL match in Karachi. Another Global Humiliation For Pakistan
ಮೇಲೆ ಹೇಳಿದಂತೆ ಪಾಕಿಸ್ತಾನ ಸೂಪರ್ ಲೀಗ್ ಸಮಯದಲ್ಲಿ ಡೇವಿಡ್ ವಾರ್ನರ್ ಅವರ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರಲ್ಲಿ, ಅವರು ಮೊಯಿನ್ ಅಲಿ ಅವರೊಂದಿಗೆ ಮಾತನಾಡುತ್ತಿರುವುದನ್ನು ಕಾಣಬಹುದು. ಇತ್ತ ಕರಾಚಿ ಕಿಂಗ್ಸ್ ತಂಡದ ನಿರ್ದೇಶಕ ಹೈದರ್ ಅಜರ್ ಕೂಡ ವಾರ್ನರ್ ಅವರನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿರುವುದು ಕಾಣಬಹುದಾಗಿದೆ. ಹೀಗಾಗಿ ಇಬ್ಬರೂ ಜಗಳವಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ. ಆದಾಗ್ಯೂ, ಡೇವಿಡ್ ವಾರ್ನರ್ ಈ ವದಂತಿಯನ್ನು ನಿರಾಕರಿಸಿದ್ದು, ಕರಾಚಿ ತಂಡದೊಳಗೆ ಯಾವುದೇ ಸಮಸ್ಯೆ ಇಲ್ಲ ಮತ್ತು ವಾದವು ತಮಾಷೆಯಾಗಿತ್ತು ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಏಪ್ರಿಲ್ 03: ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತಿದ್ದ ನಗರದ ಹೆಬ್ಬಾಳದಲ್ಲಿ ಎರಡು ಲೂಪ್ಗಳನ್ನ ಅಳವಡಿಸಿರುವ ಕಾರಣಕ್ಕೆ ಇತ್ತೀಚೆಗೆ ಟ್ರಾಫಿಕ್ ಕೊಂಚ ಸುಧಾರಿಸಿದೆ. ಆದರೆ ಅಲ್ಲಿನ ಟ್ರಾಫಿಕ್ ಈಗ ಮೇಖ್ರಿ ಸರ್ಕಲ್ಗೆ ಶಿಫ್ಟ್ ಆಗಿದ್ದು, ವಾಹನ ಸವಾರರಿಗೆ ಕಿರಿಕಿರಿ ಹೆಚ್ಚಾಗಿದೆ. ಹೀಗಾಗಿ ಬಳ್ಳಾರಿ ರಸ್ತೆಯ ವೆಟರ್ನರಿ ಕಾಲೇಜು ಬಳಿಯಿಂದ ಮೇಖ್ರಿ ಸರ್ಕಲ್ವರೆಗೆ ಹೊಸ ಫ್ಲೈಓವರ್ ನಿರ್ಮಾಣಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಧರಿಸಿದ್ದು, ಇದಕ್ಕಾಗಿ ಟೆಂಡರ್ ಕೂಡ ಆಹ್ವಾನಿಸಿದೆ.
ಬರೋಬ್ಬರಿ 420 ಕೋಟಿ ರೂಪಾಯಿ ವೆಚ್ಚದಲ್ಲಿ 4 ಪಥದ ರೋಟರಿ ಎಲಿವೇಟೆಡ್ ಕಾರಿಡಾರ್ ನಿಮಾರ್ಣಕ್ಕೆ ಟೆಂಡರ್ ಆಹ್ವಾನಿಸಲಾಗಿದ್ದು, ಈ ಫ್ಲೈಓವರ್ ಸಂಚಾರ ದಟ್ಟಣೆ ವಿಚಾರದಲ್ಲಿ ಗಮನಾರ್ಹ ಸುಧಾರಣೆ ತರುವ ವಿಶ್ವಾಸವನ್ನು ಜಿಬಿಎ ಹೊಂದಿದೆ. ಈ ಸರ್ಕಲ್ನಲ್ಲಿ ರೋಟರಿ ರೀತಿಯ ವಿನ್ಯಾಸವಿರಲಿದ್ದು, ಜಯಮಹಲ್ ರಸ್ತೆ ಹಾಗೂ ಯಶವಂತಪುರ ಕಡೆಗೆ ಲೂಪ್ ಮಾಡಲಾಗುತ್ತದೆ. ಸುಮಾರು 1.6 ಕಿಲೋ ಮೀಟರ್ ಉದ್ದದ ಎಲಿವೇಟೆಡ್ ಕಾರಿಡಾರ್ ಇದಾಗಿರಲಿದೆ. ಇನ್ನು ಯೋಜನೆಯನ್ನು ತ್ವರಿತವಾಗಿ ಆರಂಭಿಸಲು ಬಿಡಿಎ ಮಾರ್ಚ್ 26ರಂದು ಹೊಸ ಟೆಂಡರ್ ಆಹ್ವಾನಿಸಿದೆ. ಕಳೆದ ನಾಲ್ಕು ತಿಂಗಳಲ್ಲಿ ಇದು ಎರಡನೇ ಬಾರಿಕರೆದ ಟೆಂಡರ್ ಆಗಿದ್ದು, 2025ರ ಡಿಸೆಂಬರ್ನಲ್ಲಿ ಫ್ಲೈಓವರ್ ಮತ್ತು ಶಾರ್ಟ್ ಟನಲ್ ಯೋಜನೆಗೆ ಸಂಯುಕ್ತ ಪ್ರಸ್ತಾವನೆ ನೀಡಲಾಗಿತ್ತು.
ಫ್ಲೈಓವರ್ನಲ್ಲಿ ಎರಡು ಪ್ರಮುಖ ಡೌನ್ರ್ಯಾಂಪ್ಗಳು ಇರಲಿದ್ದು, ಬಿಡಿಎ ಅಧಿಕಾರಿಗಳ ಪ್ರಕಾರ ಈ ಫ್ಲೈಓವರ್ ವಿನ್ಯಾಸ ಭವಿಷ್ಯದ ಈಸ್ಟ್-ವೆಸ್ಟ್ ಎಲಿವೇಟೆಡ್ ಕಾರಿಡಾರ್ಗೆ ಹೊಂದಿಕೆಯಾಗುವಂತೆ ರೂಪಿಸಲಾಗುತ್ತದೆ. ಇದರಿಂದ ನಗರದ ದೀರ್ಘಕಾಲಿಕ ಸಾರಿಗೆ ಯೋಜನೆಗೆ ಅನುಗುಣವಾಗಿ ಅಭಿವೃದ್ಧಿ ಸಾಧ್ಯವಾಗಲಿದೆ. ಅಲ್ಲದೆ 18 ತಿಂಗಳಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದ್ದು, ಈ ಯೋಜನೆಯ ವಿಶೇಷವೆಂದರೆ ಖಾಸಗಿ ಭೂಸ್ವಾಧೀನದ ಅಗತ್ಯವಿಲ್ಲ. ಆದರೆ ಏರ್ ಫೋರ್ಸ್ ಟ್ರೈನಿಂಗ್ ಕಮಾಂಡ್ ಹಾಗೂ ಪ್ಯಾರಾಚೂಟ್ ರೆಜಿಮೆಂಟ್ ಸೇರಿದಂತೆ ಪ್ರಮುಖ ರಕ್ಷಣಾ ಸಂಸ್ಥೆಗಳಿಂದ ಅನುಮತಿ ಅಗತ್ಯವಿದ್ದು, ಅದನ್ನು ಈಗಾಗಲೇ ಪಡೆಯಲಾಗಿದೆ.
ಟೆಹ್ರಾನ್, ಏಪ್ರಿಲ್ 3: ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಅಮೆರಿಕದ ಎಫ್ -35 ಮತ್ತು ಎಫ್ -15ಇ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದು, ಇರಾನ್ನಲ್ಲಿ (Iran War) ಅಮೆರಿಕದ ಪೈಲಟ್ನನ್ನು ಸೆರೆಹಿಡಿಯಲಾಗಿದೆ ಎಂದು ಇರಾನ್ ಮಾಧ್ಯಮ ಇಂದು ವರದಿ ಮಾಡಿದೆ. ಆದರೆ, ಈ ಸುದ್ದಿ ನಿಜವೇ ಎಂಬುದಕ್ಕೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಐಆರ್ಜಿಸಿ ಏರೋಸ್ಪೇಸ್ ಫೋರ್ಸ್ ಡಿಕ್ಕಿ ಹೊಡೆದ ಎಫ್ -35 ಯುದ್ಧ ವಿಮಾನದಿಂದ ಅಮೆರಿಕದ ಪೈಲಟ್ ನೈಋತ್ಯ ಇರಾನ್ ಕಡೆಗೆ ಜಿಗಿದಿದ್ದಾರೆ ಎಂದು ತಸ್ನಿಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಮೆರಿಕದ ವಿಮಾನದ ವಿನ್ಯಾಸಕ್ಕೆ ಅವಶೇಷಗಳು ಹೊಂದಿಕೆಯಾಗುತ್ತವೆ ಎಂಬ ತಜ್ಞರ ಅಭಿಪ್ರಾಯವನ್ನು ಉಲ್ಲೇಖಿಸಿ ಎಫ್ -15ಇ ಅನ್ನು ಕೂಡ ಹೊಡೆದುರುಳಿಸಲಾಗಿದೆ ಎಂದು ಇರಾನ್ ಇಂಟರ್ನ್ಯಾಷನಲ್ ವರದಿ ಮಾಡಿದೆ. ಅಮೆರಿಕನ್ ಪೈಲಟ್ ಅನ್ನು ಸೆರೆಹಿಡಿಯಲಾಗಿದೆ ಎಂದು ಇರಾನ್ ಸರ್ಕಾರಕ್ಕೆ ಸಂಬಂಧಿಸಿದ ಮೂಲಗಳು ತಿಳಿಸಿವೆ. ಆದರೆ, ಯುಎಸ್ ಸೆಂಟ್ರಲ್ ಕಮಾಂಡ್, ಪೆಂಟಗನ್ ಮತ್ತು ಶ್ವೇತಭವನವು ತಮ್ಮ ಜೆಟ್ಗಳನ್ನು ಇರಾನ್ ಹೊಡೆದುರುಳಿಸಲಾಗಿದೆ ಎಂಬ ವರದಿಗಳಿಗೆ ಇನ್ನೂ ಪ್ರತಿಕ್ರಿಯಿಸಿಲ್ಲ.
ಕೊಹ್ಗಿಲುಯೆ ಮತ್ತು ಬೋಯರ್-ಅಹ್ಮದ್ನಲ್ಲಿರುವ ಬುಡಕಟ್ಟು ಜನರು ಮತ್ತು ಗ್ರಾಮಸ್ಥರು ಸಹ ಪರ್ವತಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಗಸ್ತು ತಿರುಗುತ್ತಾ ಯುಎಸ್ ಪಡೆಗಳನ್ನು ಹುಡುಕುತ್ತಿದ್ದರು. ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಇರಾನಿನ ಭೂಪ್ರದೇಶದಲ್ಲಿ ಅಮೇರಿಕನ್ ಹೆಲಿಕಾಪ್ಟರ್ ಮತ್ತು ಸಿ -130 ಹರ್ಕ್ಯುಲಸ್ ಕೆಳಕ್ಕೆ ಹಾರುತ್ತಿರುವುದನ್ನು ತೋರಿಸುವ ವೀಡಿಯೊಗಳನ್ನು ಐಆರ್ಜಿಸಿಗೆ ಸಂಬಂಧಿಸಿದ ಪೇಜ್ಗಳು ಎಕ್ಸ್ನಲ್ಲಿ ಪೋಸ್ಟ್ ಮಾಡಿವೆ.
ಇರಾನ್ ಅಮೆರಿಕದ ಅತ್ಯಂತ ಅಮೂಲ್ಯವಾದ ವಿಮಾನಗಳಲ್ಲಿ ಒಂದಾದ ಮತ್ತು ಅಮೆರಿಕದ ಐದನೇ ತಲೆಮಾರಿನ ಯುದ್ಧ ಹೋರಾಟದ ಸಾಮರ್ಥ್ಯದ ಬೆನ್ನೆಲುಬಾದ US F-35 ಲೈಟ್ನಿಂಗ್ 2 ಅನ್ನು ಹೊಡೆದುರುಳಿಸಿದೆ ಎಂದು ಹೇಳಿಕೊಂಡ ಸುಮಾರು 2 ವಾರಗಳ ನಂತರ ಈ ದಾಳಿ ಸಂಭವಿಸಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಏಪ್ರಿಲ್ 3: ಗಲ್ಫ್ ರಾಷ್ಟ್ರಗಳಿಂದ ತೈಲ ಪೂರೈಕೆಯ ಸಮುದ್ರ ಮಾರ್ಗದಲ್ಲಿರುವ ಹಾರ್ಮುಜ್ ಜಲಸಂಧಿಗೆ (Hormuz Strait) ಇರಾನ್ನಿಂದ ತಡೆ ಬಿದ್ದಿದೆ. ಯುಎಇ, ಸೌದಿ, ಬಹರೇನ್ ಸೇರಿದಂತೆ ಹೆಚ್ಚಿನ ಕೊಲ್ಲಿ ದೇಶಗಳು ಅಮೆರಿಕದ ಪರ ಇರುವುದರಿಂದ ಇರಾನ್ ಬಹುತೇಕ ಏಕಾಂಗಿಯಾಗಿ ಹೋರಾಡುತ್ತಿದೆ. ಹಾರ್ಮುಜ್ ಜಲಸಂಧಿಯ ನಿಯಂತ್ರಣ ಹೊಂದಿರುವ ಇರಾನ್, ಅದನ್ನೇ ತನ್ನ ಆಯುಧ ಮತ್ತು ಆದಾಯ ಮೂಲವಾಗಿ ಮಾಡಿಕೊಳ್ಳಲು ಹೊರಟಿದೆ. ಈ ಹಿಂದೆ ಬಂದ ವರದಿಯಲ್ಲಿ ತಿಳಿಸಲಾಗಿದ್ದಂತೆ ಹಾರ್ಮುಜ್ ಜಲಸಂಧಿ ಮೂಲಕ ಹಾದು ಹೋಗುವ ಹಡಗುಗಳಿಂದ ಟೋಲ್ ಸಂಗ್ರಹಿಸುವ ವ್ಯವಸ್ಥೆಯನ್ನು ಇರಾನ್ ಮಾಡುತ್ತಿದೆ. ಇರಾನ್ನ ಸಂಸದರು ಈ ಸಂಬಂಧ ಒಂದು ಮಸೂದೆಗೆ ಅಂಗೀಕಾರ ನೀಡಿದ್ದು, ಅದು ಜಾರಿ ಕೂಡ ಆಗಿದೆ ಎನ್ನಲಾಗುತ್ತಿದೆ.
ಸೀಕ್ರೆಟ್ ಕೋಡ್ ಮತ್ತು ಚೀನೀ ಕರೆನ್ಸಿಯಲ್ಲಿ ಪಾವತಿ
ಇರಾನ್ನ ಇಸ್ಲಾಮಿಕ್ ರೆವಲ್ಯೂಶನರಿ ಮಿಲಿಟರಿಗೆ ಸೇರಿದ ಕಂಪನಿಯೊಂದು ಈ ಟೋಲ್ ಅನ್ನು ನಿರ್ವಹಿಸುತ್ತದೆ. ಹಾರ್ಮುಜ್ ಜಲಸಂಧಿ ಮೂಲಕ ಹಾದು ಹೋಗಬೇಕಾದ ಹಡಗುಗಳಿಗೆ ಪೂರ್ವಾನುಮತಿ ಪಡೆಯಬೇಕಾಗುತ್ತದೆ. ಅಮೆರಿಕ ಮತ್ತು ಇಸ್ರೇಲ್ಗೆ ಸಂಬಂಧಪಡದ ಹಡಗುಗಳಿಗೆ ಮಾತ್ರ ಅನುಮತಿ ಸಿಗುತ್ತದೆ.
ಹಡಗಿನ ಡಾಕ್ಯುಮೆಂಟೇಶನ್ ವಿವರ ಪೂರ್ಣವಾಗಿ ನೀಡಬೇಕು. ಹಡಗಿನ ಮಾಲಿಕತ್ವ, ಯಾವ ದೇಶದ ದ್ವಜ, ಎಲ್ಲಿ ಹೋಗುವುದು, ಸಿಬ್ಬಂದಿ ಯಾರು, ಆಟೊಮೇಟೆಡ್ ಐಡೆಂಟಿಫಿಕೇಶನ್ ಸಿಸ್ಟಂನ (ಎಐಎಸ್) ದತ್ತಾಂಶ ಇತ್ಯಾದಿ ಮಾಹಿತಿಯನ್ನು ಮೊದಲೇ ಸಲ್ಲಿಸಬೇಕು. ಇದನ್ನು ಪರಿಶೀಲಿಸಿ, ಶತ್ರು ದೇಶಗಳಿಗೆ ಸಂಬಂಧಪಡದ ಹಡಗು ಎಂಬುದು ಖಾತ್ರಿಯಾದ ಬಳಿಕವಷ್ಟೇ ಜಲಸಂಧಿಯತ್ತ ಬರಲು ಅನುಮತಿಸಲಾಗುತ್ತದೆ.
ಎಷ್ಟು ಟೋಲ್ ಕಟ್ಟಬೇಕು?
ಹಾರ್ಮುಜ್ ಜಲಸಂಧಿ ದಾಟಿ ಹೋಗಲು ನಿರ್ದಿಷ್ಟ ಹಣವನ್ನು ಶಿಪ್ಪಿಂಗ್ ಕಂಪನಿಗಳು ಇರಾನ್ಗೆ ಪಾವತಿಸಬೇಕಾಗುತ್ತದೆ. ಒಂದು ಬ್ಯಾರಲ್ ಕಚ್ಛಾ ತೈಲಕ್ಕೆ 1 ಡಾಲರ್ನಂತೆ ಈ ಟೋಲ್ ಕಟ್ಟಬೇಕು. 500 ಬ್ಯಾರಲ್ ಹೊತ್ತ ಹಡಗು ಇದ್ದರೆ 500 ಡಾಲರ್ ಮೌಲ್ಯದಷ್ಟು ಹಣವನ್ನು ಕಟ್ಟಬೇಕು. ಆದರೆ ಹಣ ಪಾವತಿ ಡಾಲರ್ನಲ್ಲಿ ಇರಕೂಡದು. ಚೀನಾದ ಯುಆನ್ ಕರೆನ್ಸಿಯಲ್ಲಿ ಪಾವತಿಸಬೇಕು, ಅಥವಾ ಕ್ರಿಪ್ಟೋಕರೆನ್ಸಿಗಳಲ್ಲಾದರೂ ಪಾವತಿಸಬೇಕು ಎಂದು ಇರಾನ್ ತಿಳಿಸಿದೆ. ಹಣ ಪಾವತಿಸಿದ ಬಳಿಕ ಆ ಹಡಗಿಗೆ ರಹಸ್ಯ ಐಡಿ ಕೋಡ್ ನೀಡಲಾಗುತ್ತದೆ. ಅದು ಸಿಕ್ಕಾಗ ಹಡಗಿನಿಂದ ಹೈಫ್ರೀಕ್ವೆನ್ಸಿ ಸಿಗ್ನಲ್ ಹೊರಹೊಮ್ಮುತ್ತದೆ. ಇರಾನ್ನ ನೌಕಾಪಡೆಯು ಈ ಸಿಗ್ನಲ್ ಹೊಂದಿರುವ ಹಡಗಿನ ಬಳಿ ಹೋಗಿ ಸುರಕ್ಷಿತವಾಗಿ ಹಾರ್ಮುಜ್ ಜಲಸಂಧಿ ದಾಟುವವರೆಗೂ ರಕ್ಷಣೆ ಒದಗಿಸುತ್ತದೆ.
ಇರಾನ್ನ ಈ ಟೋಲ್ ಬೂತ್ ಯೋಜನೆ ಯಶಸ್ವಿಯಾದರೆ ಅಮೆರಿಕಕ್ಕೆ ಇರಿಸುಮುರುಸಾಗಬಹುದು. ತೈಲ ಮಾರಾಟ ಹಾಗು ಇತರ ಅಂತಾರಾಷ್ಟ್ರೀಯ ವಹಿವಾಟುಗಳು ಡಾಲರ್ನಲ್ಲೇ ನಡೆಯುವುದರಿಂದ ಅಮೆರಿಕಕ್ಕೆ ಸಿಕ್ಕಾಪಟ್ಟೆ ಅನುಕೂಲ ಸ್ಥಿತಿ ಇದೆ. ಆದರೆ, ಈಗ ಗಲ್ಫ್ನಿಂದ ತೈಲ ಪಡೆಯುವ ದೇಶಗಳು ಇರಾನ್ಗೆ ಟೋಲ್ ಕಟ್ಟಲು ಚೀನೀ ಕರೆನ್ಸಿ ಬಳಸಬೇಕಾಗುತ್ತದೆ. ಇದರಿಂದ ಯುಆನ್ ಕರೆನ್ಸಿಯು ಡಾಲರ್ಗೆ ಪರ್ಯಾಯವಾಗಿ ಬೆಳೆಯಲಿದೆ.
ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ಎನಿಸಿಕೊಂಡಿರುವ ‘ರಾಮಾಯಣ’ (Ramayana) ಈಗ ವ್ಯವಹಾರದ ವಿಚಾರದಲ್ಲಿ ಹೊಸ ಸಂಚಲನ ಮೂಡಿಸಿದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ, ರಾಕಿಂಗ್ ಸ್ಟಾರ್ ಯಶ್ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಈ ಬಿಗ್ ಬಜೆಟ್ ಚಿತ್ರದ ಡಿಜಿಟಲ್ ಹಕ್ಕುಗಳಿಗಾಗಿ (OTT Rights) ನಿರ್ಮಾಪಕರು ಭಾರಿ ಮೊತ್ತದ ಬೇಡಿಕೆಯಿಟ್ಟಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ನೂರಲ್ಲ, ಇನ್ನೂರಲ್ಲ.. ಬರೋಬ್ಬರಿ ಸಾವಿರ ಕೋಟಿ ರೂಪಾಯಿ ನಿರೀಕ್ಷಿಸುತ್ತಿದ್ದಾರೆ ಎನ್ನಲಾಗಿದೆ.
ವರದಿಗಳ ಪ್ರಕಾರ, ಹೆಸರಾಂತ ಒಟಿಟಿ ಸಂಸ್ಥೆಯೊಂದು ‘ರಾಮಾಯಣ’ ಸಿನಿಮಾದ ಎರಡು ಭಾಗಗಳ ಡಿಜಿಟಲ್ ಹಕ್ಕುಗಳಿಗಾಗಿ ಬರೋಬ್ಬರಿ 700 ಕೋಟಿ ರೂಪಾಯಿಗಳ ಆಫರ್ ನೀಡಿತ್ತು. ಆದರೆ, ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಈ ಆಫರ್ ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಈ ಬೃಹತ್ ಬಜೆಟ್ನ ದೃಶ್ಯಕಾವ್ಯಕ್ಕೆ ಕನಿಷ್ಠ 1000 ಕೋಟಿ ರೂಪಾಯಿಗಳ ಡೀಲ್ ಕುದುರಿಸುವುದು ಅವರ ಗುರಿಯಾಗಿದೆ.
ಈ ಚಿತ್ರವು ಸುಮಾರು 4000 ಕೋಟಿ ರೂಪಾಯಿ ಬೃಹತ್ ಬಜೆಟ್ನಲ್ಲಿ ತಯಾರಾಗುತ್ತಿದೆ ಎಂಬ ಮಾಹಿತಿ. ಹೂಡಿಕೆಯನ್ನು ಹಿಂಪಡೆಯಲು ಚಿತ್ರತಂಡಕ್ಕೆ ಥಿಯೇಟರ್ ಮತ್ತು ಡಿಜಿಟಲ್ ಮೂಲಗಳಿಂದ ದೊಡ್ಡ ಮಟ್ಟದ ಆದಾಯದ ಅಗತ್ಯವಿದೆ. ಆ ಕಾರಣದಿಂದಲೇ ದೊಡ್ಡ ಮೊತ್ತದ ಒಟಿಟಿ ಡೀಲ್ ಸಲುವಾಗಿ ಚಿತ್ರತಂಡ ಕಾಯುತ್ತಿದೆ ಎನ್ನಲಾಗಿದೆ.
ರಾಮಾಯಣ ಸಿನಿಮಾದ ಟೀಸರ್:
ಎಸ್ಎಸ್ ರಾಜಮೌಳಿ ನಿರ್ದೇಶನದ, ಮಹೇಶ್ ಬಾಬು ನಟನೆಯ ‘ವಾರಾಣಸಿ’ ಚಿತ್ರಕ್ಕೂ ಇದೇ ರೀತಿಯ ದೊಡ್ಡ ಮೊತ್ತದ ಒಟಿಟಿ ಆಫರ್ ಬಂದಿತ್ತು ಎಂಬ ಸುದ್ದಿಯಿದೆ. ನೆಟ್ಫ್ಲಿಕ್ಸ್ ಸಂಸ್ಥೆಯು ಈ ಚಿತ್ರಕ್ಕೆ ಭಾರಿ ಮೊತ್ತದ ಆಫರ್ ನೀಡಿತ್ತು ಎನ್ನಲಾಗಿದ್ದರೂ, ಇನ್ನೂ ಅಧಿಕೃತವಾಗಿ ಯಾವುದೇ ಒಪ್ಪಂದ ನಡೆದಿಲ್ಲ. ‘ವಾರಣಸಿ’ ಚಿತ್ರಕ್ಕಿಂತಲೂ ದೊಡ್ಡ ಮೊತ್ತಕ್ಕೆ ತಮ್ಮ ಸಿನಿಮಾದ ಒಟಿಟಿ ಡೀಲ್ ಕುದುರಬೇಕು ಎಂಬ ಹಠ ‘ರಾಮಾಯಣ’ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರಿಗೆ ಇರಬಹುದು.
‘ರಾಮಾಯಣ’ ಸಿನಿಮಾದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆ ಆಗಿದೆ. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ವಿಶೇಷವಾಗಿ ವಿಎಫ್ಎಕ್ಸ್ ವಿಚಾರದಲ್ಲಿ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದು, ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದೆಡೆ, ರಾಜಮೌಳಿ ಅವರ ‘ವಾರಾಣಸಿ’ ಮೊದಲ ಗ್ಲಿಂಪ್ಸ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಐಪಿಎಲ್ 2026 (IPL 2026) ರ ಏಳನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್ (CSK vs PBKS) ತಂಡವನ್ನು MA ಚಿದಂಬರಂ ಕ್ರೀಡಾಂಗಣದಲ್ಲಿ ಎದುರಿಸಿದೆ. ಕಳೆದ ಸೀಸನ್ನಲ್ಲಿ ಕೊನೆಯ ಸ್ಥಾನ ಪಡೆದಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ ಆವೃತ್ತಿಯ ಆರಂಭವನ್ನು ಕಳಪೆಯಾಗಿ ಮಾಡಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಹೀನಾಯ ಸೋಲನ್ನು ಎದುರಿಸಿರುವ ಸಿಎಸ್ಕೆ, ಬಲಿಷ್ಠ ಪಂಜಾಬ್ ವಿರುದ್ಧ ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ. ಇತ್ತ ಪಂಜಾಬ್ ಕಿಂಗ್ಸ್ ತನ್ನ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಗೆಲುವು ಸಾಧಿಸಿದ್ದು, ತನ್ನ ಅಜೇಯ ಓಟವನ್ನು ಮುಂದುವರೆಸುವ ಇರಾದೆಯಲ್ಲಿದೆ.
ಟಾಸ್ ಗೆದ್ದ ಪಂಜಾಬ್
ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಸಿಎಸ್ಕೆ ಮೊದಲು ಬ್ಯಾಟಿಂಗ್ ಮಾಡಲಿದೆ. ಇದರೊಂದಿಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಖಚಿತವಾಗಿದೆ. ಅದರಂತೆ ಗೆಲುವಿನ ಲಯದಲ್ಲಿರುವ ಪಂಜಾಬ್ ಕಿಂಗ್ ತನ್ನ ಪ್ಲೇಯಿಂಗ್ 11ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಇತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಪ್ರಶಾಂತ್ ವೀರ್ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆದಿದ್ದಾರೆ.
ಹೆಡ್ ಟು ಹೆಡ್ ರೆಕಾರ್ಡ್
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ಎರಡೂ ತಂಡಗಳು ಸ್ಪರ್ಧೆಯ ಮೊದಲ ಸೀಸನ್ನಿಂದ ಆಡುತ್ತಿವೆ. ಇಲ್ಲಿಯವರೆಗೆ, ಎರಡೂ ತಂಡಗಳು 32 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 16 ಪಂದ್ಯಗಳನ್ನು ಗೆದ್ದಿದ್ದರೆ, ಪಂಜಾಬ್ ಕಿಂಗ್ಸ್ 16 ಪಂದ್ಯಗಳನ್ನು ಗೆದ್ದಿದೆ. ಆದ್ದರಿಂದ ಈ ಪಂದ್ಯವನ್ನು ಯಾರು ಗೆಲ್ಲುತ್ತಾರೆ ಎಂಬ ಕುತೂಹಲವಿದೆ. ಐಪಿಎಲ್ ಇತಿಹಾಸದಲ್ಲಿ, ಎರಡೂ ತಂಡಗಳು ಮೊದಲ ಬಾರಿಗೆ ಏಪ್ರಿಲ್ 19, 2008 ರಂದು ಪರಸ್ಪರ ಮುಖಾಮುಖಿಯಾಗಿದ್ದವು, ಆ ಪಂದ್ಯದಲ್ಲಿ ಚೆನ್ನೈ ಗೆದ್ದಿತ್ತು. ಇನ್ನು ಕೊನೆಯ ಮುಖಾಮುಖಿಯಲ್ಲಿ ಪಂಜಾಬ್ ಗೆಲುವು ಸಾಧಿಸಿದೆ.
ಇತ್ತೀಚಿನ ದಿನಗಳಲ್ಲಿ ಬೊಜ್ಜು (Obesity) ಒಂದು ಪ್ರಮುಖ ಜಾಗತಿಕ ಆರೋಗ್ಯ ಸವಾಲಾಗುತ್ತಿದ್ದು ಅದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಹರಸಾಹಸ ಪಡುವಂತಾಗಿದೆ. ಇನ್ನು, ಬೊಜ್ಜು ಕಡಿಮೆ ಮಾಡಲು ಕೆಲವರು ಸಾಮಾನ್ಯವಾಗಿ ಸೇವಿಸುವ ಕೆಲವು ಔಷಧಿಗಳು ಅಡ್ಡಪರಿಣಾಮಗಳನ್ನು ಉಂಟುಮಾಡುತ್ತಿವೆ. ಅದರಲ್ಲಿ GLP-1 ರಿಸೆಪ್ಟರ್ ಅಗೋನಿಸ್ಟ್ಗಳು ಎಂಬ ಔಷಧಿ ಕೂಡ ಒಂದು. ಈ ಔಷಧಿಯನ್ನು ಬಳಸುವವರಿಗೆ ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ (WHO) ಜಾಗತಿಕ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿತ್ತು. ಇದೀಗ ಭಾರತ ಸರ್ಕಾರವು ಇತ್ತೀಚೆಗೆ GLP-1 (Glucagon-Like Peptide-1 agonist) ಔಷಧಿಗಳ ಬಳಕೆ, ಅದರ ಅಪಾಯಗಳು ಹಾಗೂ ನಿಯಂತ್ರಣ ಕುರಿತು ಮಹತ್ವದ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಈ ಔಷಧಿಗಳು ಮುಖ್ಯವಾಗಿ ಟೈಪ್-2 ಮಧುಮೇಹ ಮತ್ತು ಅತಿದಪ್ಪತನ ಅಂದರೆ ಒಬೆಸಿಟಿ ಚಿಕಿತ್ಸೆ ನೀಡಲು ಬಳಸಲಾಗುತ್ತವೆ. ಹಾಗಾದರೆ GLP-1 ಔಷಧಿ ಎಂದರೇನು, ಇದನ್ನು ಹೇಗೆ ಬಳಕೆ ಮಾಡಬೇಕು ಎಂಬುದರ ಕುರಿತ ಮಾಹಿತಿ ಸ್ಟೋರಿಯಲ್ಲಿದೆ.
GLP-1 ಔಷಧಿಗಳು ಎಂದರೇನು?
ಸಾಮಾನ್ಯವಾಗಿ ಈ GLP-1 ಔಷಧಿಗಳು ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಜೊತೆಗೆ ತೂಕ ಇಳಿಕೆಸಿಕೊಳ್ಳುವವರಿಗೂ ಸಹ ಇದು ಸಹಕಾರಿಯಾಗಿದೆ.
ತಜ್ಞರ ಪ್ರಕಾರ, ಈ ಔಷಧಿಗಳನ್ನು ವೈದ್ಯರ ಸಲಹೆಯಿಲ್ಲದೆ ಬಳಸುವುದು ಅಪಾಯಕಾರಿಯಾಗಿದೆ. ಇವುಗಳಿಂದ ಕೆಲವು ಗಂಭೀರ ಪಾರ್ಶ್ವ ಪರಿಣಾಮಗಳು ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ, ಈ ಔಷಧಿಗಳನ್ನು ಕಡ್ಡಾಯವಾಗಿ ಅರ್ಹ ವೈದ್ಯರ ಮೇಲ್ವಿಚಾರಣೆಯಲ್ಲೇ ತೆಗೆದುಕೊಳ್ಳಬೇಕು. ಅದರಲ್ಲಿಯೂ ಭಾರತದಲ್ಲಿ GLP-1 ಔಷಧಿಗಳನ್ನು ಯಾವುದೇ ಮೆಡಿಕಲ್ ಅಂಗಡಿಗಳಲ್ಲಿ ಸ್ವತಃ ಖರೀದಿಸಲು ಅವಕಾಶ ಇಲ್ಲ. ಇವುಗಳನ್ನು ಎಂಡೋಕ್ರಿನಾಲಜಿಸ್ಟ್ಗಳು, ಇಂಟರ್ನಲ್ ಮೆಡಿಸಿನ್ ತಜ್ಞರು, ಕಾರ್ಡಿಯಾಲಜಿಸ್ಟ್ಗಳು ಮಾತ್ರ ನೀಡಬಹುದಾಗಿದೆ. ರೋಗಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೈಗೊಂಡ ಕ್ರಮವಾಗಿದ್ದು, ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ರಾಜ್ಯ ಔಷಧ ನಿಯಂತ್ರಕರ ಜೊತೆಗೂಡಿ ಈ ಔಷಧಿಗಳ ಮೇಲಿನ ನಿಯಂತ್ರಣವನ್ನು ಇನ್ನಷ್ಟು ಬಲಪಡಿಸಿದೆ. ವಿವಿಧ ಸ್ಥಳಗಳಲ್ಲಿ ಪರಿಶೀಲನೆಗಳನ್ನು ನಡೆಸಲಾಗುತ್ತಿದ್ದು, ನಿಯಮ ಉಲ್ಲಂಘನೆ ಮಾಡಿದರೆ, ಲೈಸೆನ್ಸ್ ರದ್ದುಪಡಿಸುವುದು, ದಂಡ ವಿಧಿಸುವುದು, ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ.
ಹಾಗಾಗಿ, GLP-1 ಔಷಧಿಗಳು ಪರಿಣಾಮಕಾರಿ ಆಗಿದ್ದರೂ, ಅವುಗಳನ್ನು ಸ್ವಯಂಪ್ರೇರಿತವಾಗಿ ಬಳಸಬಾರದು. ಯಾವುದೇ ಚಿಕಿತ್ಸೆ ಆರಂಭಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಅತ್ಯಂತ ಮುಖ್ಯ. ಒಟ್ಟಿನಲ್ಲಿ, ಈ ಔಷಧಿಗಳ ಸರಿಯಾದ ಬಳಕೆ ಆರೋಗ್ಯಕ್ಕೆ ಸಹಾಯಕವಾಗಬಹುದು, ಆದರೆ ಗೊತ್ತಿಲ್ಲದೆಯೇ, ನೀವಾಗಿಯೇ ಬಳಸಿದರೆ ಗಂಭೀರ ಸಮಸ್ಯೆಗಳಿಗೂ ಕಾರಣವಾಗಬಹುದು. ಆದ್ದರಿಂದ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವುದು ಅಗತ್ಯ.
ಕೊಡಗು, ಏಪ್ರಿಲ್ 03: ಚಾರಣಕ್ಕೆ ತೆರಳಿದ್ದ ಯುವತಿ ಶರಣ್ಯ (35) ನಾಪತ್ತೆ ಪ್ರಕರಣಕ್ಕೆ(Missing Case) ಸಂಬಂಧಿಸಿದಂತೆ 24 ಗಂಟೆ ಕಳೆದರು ಇನ್ನೂ ಪತ್ತೆಯಾಗಿಲ್ಲ. ಪೊಲೀಸ್ ಶ್ವಾನಕ್ಕೂ ಯಾವುದೇ ಸುಳಿವು ಸಿಕ್ಕಿಲ್ಲ. ಅರಣ್ಯ ಇಲಾಖೆಯ 60ಕ್ಕೂ ಅಧಿಕ ಸಿಬ್ಬಂದಿ ಸೇರಿದಂತೆ ಪೊಲೀಸರು ತಡಿಯಂಡ ಬೆಟ್ಟ ಪ್ರದೇಶದಲ್ಲಿ ವ್ಯಾಪಕ ಶೋಧ ನಡೆಸಿದ್ದಾರೆ. ದಾರಿ ತಪ್ಪುವಂತಹ ಮಾರ್ಗವಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಸದ್ಯ ಪ್ರಕರಣ ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ತಲೆನೋವಾಗಿದೆ.
ಕೇರಳದ ಕೋಯಿಕ್ಕೋಡ್ ನಿವಾಸಿ ಶರಣ್ಯ ನಿನ್ನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಕ್ಕಬ್ಬೆ ಗ್ರಾಮದಲ್ಲಿ ಟ್ರೆಕ್ಕಿಂಗ್ಗೆ ತೆರಳಿದ್ದರು. ಮನೆಯಲ್ಲಿ ಹೇಳದೆಯೇ ಟ್ರೆಕ್ಕಿಂಗ್ ಬಂದಿದ್ದರು. 9 ಜನರ ಜೊತೆಗೆ ಚಾರಣ ತೆರಳುದ್ದರು. ಆದರೆ ನಾಯಿಗಳ ಜೊತೆ ಆಟವಾಡುತ್ತಾ ಹಿಂದೆ ಉಳಿದಿದ್ದಾರೆ.
ನಿನ್ನೆ ಸಂಜೆ ದಾರಿ ತಪ್ಪಿರುವುದಾಗಿ ತಾನು ತಂಗಿದ್ದ ಹೋಂ ಸ್ಟೇ ಮಾಲೀಕರಿಗೆ ಕರೆ ಮಾಡಿ ಮಾಹಿತಿ ನಿಡಿದ್ದಾರೆ. ಅದಾದ ಬಳಿಕ ಶರಣ್ಯ ಮೊಬೈಲ್ ನಾಟ್ ರೀಚೇಬಲ್ ಆಗಿದೆ. ಟ್ರೆಕ್ಕಿಂಗ್ಗೆ ತೆರಳಿರುವ ಪ್ರದೇಶದಲ್ಲಿ ವಿಪರೀತ ಕಾಡಾನೆ ಕಾಟ ಇದೆ ಎನ್ನಲಾಗುತ್ತಿದೆ. ಕಳೆದ ರಾತ್ರಿ 3 ಗಂಟೆಯವರೆಗೂ ಶೋಧ ಮಾಡಲಾಗಿದ್ದು, ಇದುವರೆಗೂ ಯುವತಿಯ ಬಗ್ಗೆ ಯಾವುದೇ ಸುಳಿವಿಲ್ಲ.
ದೇವರಿಗೆ ಹರಿಕೆ ಹೊತ್ತ ಕುಡಿಯ ಜನಾಂಗ
ಸದ್ಯ ಶರಣ್ಯಳ ಪತ್ತೆಗೆ ಅರಣ್ಯ ಮತ್ತು ಪೊಲೀಸ್ ಇಲಾಖೆಯ ನಾಲ್ಕು ತಂಡದಿಂದ ಶೋಧ ಮುಂದುವರೆದಿದೆ. ಆದರೆ ಯಾವುದೇ ಸುಳಿವು ಸಿಗದೆ ನಿರಾಶೆ ಮೂಡಿದೆ. ಹೀಗಿರುವಾಗ ಟ್ರೆಕ್ಕಿಂಗ್ಗೆ ತೆರಳಿರುವ ಶರಣ್ಯ ಸುರಕ್ಷಿತವಾಗಿ ಮರಳಿ ಬರಲೆಂದು ಬೆಟ್ಟ ಪ್ರದೇಶದಲ್ಲಿ ವಾಸಿಸುವ ಕುಡಿಯ ಜನಾಂಗ ಮಲೆ ತಮ್ಮಚ್ಚ ದೇವರಿಗೆ ಹರಕೆ ಹೊತ್ತಿದ್ದಾರೆ. ಇನ್ನು ತಡಿಯಂಡಮೋಳ್ ಬೆಟ್ಟದಲ್ಲಿ ದಟ್ಟ ಮಳೆ ಮೋಡ ಕವಿದಿದ್ದು, ಆತಂಕ ಮನೆಮಾಡಿದೆ.
ಸ್ಥಳೀಯರು ಹೇಳುವುದೇನು?
ಶರಣ್ಯ ನಾಪತ್ತೆ ಪ್ರಕರಣದ ಬಗ್ಗೆ ಸ್ಥಳೀಯರು ಮಾತನಾಡಿದ್ದು, ದಾರಿ ತಪ್ಪುವುದಕ್ಕೆ ಸಾಧ್ಯವೇ ಇಲ್ಲ. ಏಕೆಂದರೆ ದಾರಿ ತಪ್ಪುವಂತಹ ದುರ್ಗಮ ಹಾದಿ ಏನು ಅಲ್ಲ ಎಂದು ಹೇಳುತ್ತಿದ್ದಾರೆ. ಸದ್ಯ ಶೋಧ ಕಾರ್ಯಕ್ಕೆ ಯವಕಪಾಡಿ ಗ್ರಾಮಸ್ಥರು ಸಾಥ್ ನೀಡಿದ್ದಾರೆ.
ನವದೆಹಲಿ, ಏಪ್ರಿಲ್ 3: ಭಾರತಕ್ಕೆ ಇರಾನಿನ ಕಚ್ಚಾ ತೈಲವನ್ನು ಸಾಗಿಸಬೇಕಾಗಿದ್ದ ತೈಲ ಟ್ಯಾಂಕರ್ (Oil Tanker) ಸಮುದ್ರದ ಮಧ್ಯೆ ಮಾರ್ಗವನ್ನು ಬದಲಾಯಿಸಿ ಚೀನಾದ ಕಡೆಗೆ ಸಾಗುತ್ತಿದೆ. ಮಧ್ಯ ಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನತೆಯ ನಡುವೆ ಭಾರತ ಇರಾನ್ನಿಂದ ಕಚ್ಚಾ ತೈಲವನ್ನು ಖರೀದಿಸಲು ಮುಂದಾಗಿತ್ತು. ಆದರೆ, ಆ ಟ್ಯಾಂಕರ್ ಗುಜರಾತ್ ಬಂದರಿಗೆ ಆಗಮಿಸುವ ಬದಲು ಚೀನಾದ ಕಡೆ ತೆರಳುತ್ತಿದೆ. ಕಳೆದ 3 ದಿನಗಳಿಂದ ಗುಜರಾತ್ನ ವಡಿನಾರ್ಗೆ ತೆರಳುತ್ತಿದ್ದ ಇರಾನಿನ ಕಚ್ಚಾ ತೈಲದ ಹಡಗು ಪಿಂಗ್ ಶುನ್ ಭಾರತದ ಬದಲಾಗಿ ಚೀನಾಕ್ಕೆ ಸಿಗ್ನಲ್ ನೀಡುತ್ತಿದೆ ಎಂದು ಮೂಲಗಳು ತಿಳಿಸಿವೆ.
2002ರಲ್ಲಿ ನಿರ್ಮಿಸಲಾದ ಅಫ್ರಾಮ್ಯಾಕ್ಸ್ ಟ್ಯಾಂಕರ್ ಪಿಂಗ್ ಶುನ್ ಭಾರತಕ್ಕೆ ಆಗಮಿಸಬೇಕಿತ್ತು. ಆದರೆ ಈಗ ಗುಜರಾತ್ ಬದಲಾಗಿ ಚೀನಾದ ಡಾಂಗ್ಯಿಂಗ್ನತ್ತ ಸಾಗುತ್ತಿದೆ ಎಂದು ಹಡಗು ಟ್ರ್ಯಾಕಿಂಗ್ ಸಂಸ್ಥೆ ಕೆಪ್ಲರ್ ತಿಳಿಸಿದೆ. ಈ ವಾರದ ಆರಂಭದಲ್ಲಿ ಈ ಹಡಗು ಭಾರತದ ಪಶ್ಚಿಮ ಕರಾವಳಿಯ ವಾಡಿನಾರ್ಗೆ ಆಗಮನವನ್ನು ಸೂಚಿಸಿತ್ತು. ಆದರೆ ಅದು ಚೀನಾದ ದಿಕ್ಕಿಗೆ ತಿರುಗಿದೆ. ಬ್ಲೂಮ್ಬರ್ಗ್ ವರದಿಯ ಪ್ರಕಾರ ಈ ಹಡಗಿನ ಗಮ್ಯಸ್ಥಾನ ಇನ್ನೂ ಬದಲಾಗುವ ಸಾಧ್ಯತೆಯೂ ಇದೆ.
ಈಸ್ವತಿನಿ ಧ್ವಜ ಹೊತ್ತ ಪಿಂಗ್ ಶುನ್ ಹಡಗು ತನ್ನ ಟ್ರಾನ್ಸ್ಪಾಂಡರ್ಗಳು ಮತ್ತು AIS (ಸ್ವಯಂಚಾಲಿತ ಗುರುತಿನ ವ್ಯವಸ್ಥೆ) ಮೂಲಕ ಏಪ್ರಿಲ್ 4ರಂದು ಗುಜರಾತ್ನ ಟರ್ಮಿನಲ್ಗೆ ಹೋಗುವ ಮಾರ್ಗದಲ್ಲಿದೆ ಎಂದು ಸೂಚಿಸಿತ್ತು. ಆದರೆ, ಅದು ಈಗ ಚೀನಾಗೆ ತೆರಳುತ್ತಿದೆ. ಬೆಲೆ, ವಿಮೆ, ಕಾರ್ಯಾಚರಣಾ ಸಿಬ್ಬಂದಿ ಅಥವಾ ದಾಖಲಾತಿಯಲ್ಲಿನ ಸಮಸ್ಯೆಗಳು ಸೇರಿದಂತೆ ಹಲವು ಅಂಶಗಳು ಈ ರೀತಿಯ ಹಡಗಿನ ಮಾರ್ಗದಲ್ಲಿನ ಬದಲಾವಣೆಗೆ ಕಾರಣವಾಗಿರಬಹುದು ಎನ್ನಲಾಗಿದೆ. ಆದರೆ ಹಡಗು ತನ್ನ ಗಮ್ಯಸ್ಥಾನವನ್ನು ಬದಲಾಯಿಸಿದ ನಿಖರವಾದ ಕಾರಣ ಖಚಿತವಾಗಿಲ್ಲ. ಈ ಬಗ್ಗೆ ಯಾವುದೇ ಸ್ಪಷ್ಟನೆಯೂ ಬಂದಿಲ್ಲ.
ಇದಕ್ಕೂ ಮೊದಲು, ಮಾರ್ಚ್ 21ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಗನಕ್ಕೇರುತ್ತಿರುವ ಕಚ್ಚಾ ತೈಲದ ಬೆಲೆಗಳನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಟ್ಯಾಂಕರ್ಗಳಿಗೆ ಈಗಾಗಲೇ ಲೋಡ್ ಮಾಡಲಾದ ಇರಾನಿನ ತೈಲವನ್ನು ಮಾರಾಟ ಮಾಡಲು ಅನುಮತಿ ನೀಡಿದ್ದರು. ಇರಾನ್ನಿಂದ ಹೊರಟಿದ್ದ ಈ ಹಡಗನ್ನು ಚೀನಾದ ಕಂಪನಿಯಾದ ನೈಸಿಟಿ ಶಿಪ್ಮ್ಯಾನೇಜ್ಮೆಂಟ್ ಕಂ. ಲಿಮಿಟೆಡ್ ನಿರ್ವಹಿಸುತ್ತದೆ. ಇದು ಇರಾನ್ನ ಖಾರ್ಗ್ ದ್ವೀಪದಿಂದ ಕಚ್ಚಾ ತೈಲವನ್ನು ಲೋಡ್ ಮಾಡಿತ್ತು.
ಭಾರತವು ತನ್ನ ಇಂಧನ ಅಗತ್ಯಗಳಿಗಾಗಿ ಆಮದುಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇದು ತನ್ನ ಕಚ್ಚಾ ತೈಲದ ಸುಮಾರು ಶೇ. 90ರಷ್ಟು ದ್ರವೀಕೃತ ನೈಸರ್ಗಿಕ ಅನಿಲದ (LNG) ಅರ್ಧದಷ್ಟು ಮತ್ತು LPGಯ ಸರಿಸುಮಾರು ಮೂರನೇ ಎರಡರಷ್ಟು ಭಾಗವನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತದೆ. ಈ ಸರಬರಾಜುಗಳಲ್ಲಿ ಹೆಚ್ಚಿನವು ಹಾರ್ಮುಜ್ ಜಲಸಂಧಿಯ ಮೂಲಕ ಹಾದು ಹೋಗುತ್ತವೆ. ಭಾರತದ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯನ್ನು ದಾಟಲು ಅನುಮತಿ ನೀಡಿದ್ದರೂ ಬಿಕ್ಕಟ್ಟು ಇನ್ನೂ ಪೂರ್ತಿಯಾಗಿ ಬಗೆಹರಿದಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ