ಬಹಿರಂಗವಾಗಿ ವಿಜಯ್, ತ್ರಿಷಾ ಬಗ್ಗೆ ಹಾಸ್ಯ ಮಾಡಿದ ಮಲಯಾಳಂ ನಟ; ವಿಡಿಯೋ ವೈರಲ್ – Kannada News | Dhyan Sreenivasan jokes on CM Vijay Trisha Krishnan Navya Nair in Visitor Movie promotion

ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ (Thalapathy Vijay) ಹಾಗೂ ನಟಿ ತ್ರಿಷಾ ಕೃಷ್ಣನ್ ನಡುವಿನ ಸ್ನೇಹ ಮತ್ತು ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯೇ ನಡೆಯುತ್ತಿದೆ. ಇದೀಗ ಮಲಯಾಳಂನ ಖ್ಯಾತ ನಟ ಧ್ಯಾನ್ ಶ್ರೀನಿವಾಸನ್ (Dhyan Sreenivasan) ಅವರು ಈ ಜೋಡಿಯ ಕಾಲೆಳೆಯುವ ಮೂಲಕ ಸಖತ್ ಸುದ್ದಿಯಾಗಿದ್ದಾರೆ. ತಮ್ಮ ಮುಂಬರುವ ‘ವಿಸಿಟರ್’ (Visitor) ಸಿನಿಮಾದ ಪ್ರಚಾರದ ವೇಳೆ ಧ್ಯಾನ್ ಮಾಡಿದ ತಮಾಷೆಯಿಂದಾಗಿ ಹಲವರಿಗೆ ಅಚ್ಚರಿ ಆಗಿದೆ.

‘ನಾನು ಕೇರಳದ ಮುಖ್ಯಮಂತ್ರಿ ಆಗ್ತೀನಿ’

ಕಾರ್ಯಕ್ರಮದಲ್ಲಿ ಮಾತನಾಡಿದ ಧ್ಯಾನ್, ‘ಇತ್ತೀಚೆಗೆ ನಾನು ಸಿನಿಮಾಗಳಿಗಿಂತ ಹೆಚ್ಚಾಗಿ ಸ್ಟೇಜ್ ಶೋಗಳು ಮತ್ತು ಜಾಹೀರಾತುಗಳ ಕಡೆ ಗಮನ ಹರಿಸುತ್ತಿದ್ದೇನೆ. ನಾನು ಆಸ್ಟ್ರೇಲಿಯಾದಲ್ಲಿ ಕಾರ್ಯಕ್ರಮವೊಂದನ್ನು ಮಾಡುತ್ತಿದ್ದಾಗ, ನಟ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾದರು. ಅದನ್ನು ನೋಡಿ ನಾನು ಮುಂದಿನ 15 ವರ್ಷಗಳ ಕಾಲ ಅವರ ಹಾದಿಯನ್ನೇ ಅನುಸರಿಸಲು ನಿರ್ಧರಿಸಿದೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಮುಂದುವರಿದು ಮಾತನಾಡಿದ ಅವರು, ‘ನನ್ನ ಗೆಳೆಯ ಅಜು ವರ್ಗೀಸ್ ನನಗೆ ಮೊದಲು ಕಲಾವಿದರ ಸಂಘದ ಪ್ರೆಸಿಡೆಂಟ್ ಆಗು, ಆಮೇಲೆ ಸಮಾಜ ಸೇವೆ ಮಾಡಿ ಜನರನ್ನು ಒಲಿಸಿಕೊಂಡು ಸಿಎಂ ಆಗು ಎಂದು ಸಲಹೆ ನೀಡಿದ್ದ. ಆದರೆ ಸ್ವಲ್ಪ ಸಮಯದ ನಂತರ ಮತ್ತೆ ಫೋನ್ ಮಾಡಿ, ಕಲಾವಿದರ ಸಂಘದಲ್ಲಿ ಭಾರಿ ವಿವಾದಗಳು ನಡೆಯುತ್ತಿವೆ. ನೀನು ಸಿಎಂ ಅಥವಾ ಪ್ರೆಸಿಡೆಂಟ್ ಯಾವುದೂ ಆಗಬೇಡ. ನಿನಗೆ ಗವರ್ನರ್ ಹುದ್ದೆಯೇ ಬೆಸ್ಟ್. ಅಲ್ಲಿ ಅಷ್ಟಾಗಿ ಕೆಲಸ ಇರಲ್ಲ ಅಂತ ಕಾಲೆಳೆದಿದ್ದ’ ಎಂದಾಗ ಪ್ರೇಕ್ಷಕರು ನಗೆಗಡಲಲ್ಲಿ ಮುಳುಗಿದರು.

ನವ್ಯಾ ನಾಯರ್ ಮುಂದಿನ ಸೀಟಿನಲ್ಲಿ ಕಣ್ಣೀರು ಹಾಕ್ತಾರೆ:

ಅಷ್ಟಕ್ಕೇ ನಿಲ್ಲಿಸದ ಧ್ಯಾನ್ ಶ್ರೀನಿವಾಸನ್, ತಮ್ಮ ‘ವಿಸಿಟರ್’ ಸಿನಿಮಾದ ನಾಯಕಿ ನವ್ಯಾ ನಾಯರ್ ಅವರ ಕಾಲೆಳೆದರು. ‘ನಾವು ತುಂಬಾ ವರ್ಷಗಳ ನಂತರ ಒಟ್ಟಿಗೆ ಸಿನಿಮಾ ಮಾಡುತ್ತಿದ್ದೇವೆ. ನವ್ಯಾಗೆ ಈಗ ಮದುವೆಯಾಗಿ ಒಬ್ಬ ಮಗನಿದ್ದಾನೆ. ಆದರೂ ಪರವಾಗಿಲ್ಲ, ನಾನು ಕೇರಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ನವ್ಯಾ ನಾಯರ್ ಮುಂದಿನ ಸಾಲಿನಲ್ಲಿ ಸೀರೆ ಧರಿಸಿ, ಕಣ್ಣಲ್ಲಿ ಆನಂದ ಬಾಷ್ಪ ಸುರಿಸುತ್ತಾ ಕುಳಿತುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ’ ಎಂದರು.

ಇದಕ್ಕೆ ನವ್ಯಾ ನಾಯರ್ ಕೂಡ ಅಷ್ಟೇ ತಮಾಷೆಯಾಗಿ ಪ್ರತಿಕ್ರಿಯಿಸಿ, ‘ಚಿಂತೆ ಮಾಡಬೇಡ ಧ್ಯಾನ್, ನೀನು ಸಿಎಂ ಆದಾಗ ನಿನ್ನ ಆಸೆಯಂತೆಯೇ ನಾನು ಗ್ರೀನ್ ಬಾರ್ಡರ್ ಇರುವ ಬಿಳಿ ಸೀರೆ ಮತ್ತು ವಜ್ರದ ಹಾರ ಧರಿಸಿ ಮುಂಭಾಗದ ಸೀಟಿನಲ್ಲಿ ಕುಳಿತುಕೊಳ್ಳುತ್ತೇನೆ. ಕಣ್ಣೀರು ಹಾಕುತ್ತಾ ನಿನ್ನ ಪರವಾಗಿ ಜಯಘೋಷ ಕೂಗುತ್ತೇನೆ. ಆದರೆ ನನಗೆ ಮುಂಭಾಗದ ಸಾಲಿನಲ್ಲಿ ಸೀಟು ಬುಕ್ ಮಾಡ್ತೀಯಾ ತಾನೇ?’ ಎಂದು ಕಾಲೆಳೆದರು.

ಇದನ್ನೂ ಓದಿ: ಜುಲೈ 23ಕ್ಕೆ ಬಿಡುಗಡೆ ಆಗಲಿದೆ ದಳಪತಿ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’

ವಿಜಯ್ ಅವರಲ್ಲಿ ಕ್ಷಮೆ ಕೇಳಿದ ಗೆಳೆಯ ಅಜು:

ಧ್ಯಾನ್ ಶ್ರೀನಿವಾಸನ್ ಅವರ ಈ ಮಾತುಗಳ ನಂತರ ಸ್ಟೇಜ್‌ಗೆ ಬಂದ ಅಜು ವರ್ಗೀಸ್ ಅವರು ತಮಿಳು ನಟ ವಿಜಯ್ ಅವರಲ್ಲಿ ನೇರವಾಗಿಯೇ ಕ್ಷಮೆ ಕೇಳಿದರು. ‘ಒಂದು ವಿಷಯಂತೂ ಗ್ಯಾರಂಟಿ, ಇನ್ಮುಂದೆ ನಾನು ತಮಿಳುನಾಡಿಗೆ ಕಾಲಿಡಲು ಸಾಧ್ಯವಿಲ್ಲ. ನನ್ನ ಪ್ರೀತಿಯ ಸಿಎಂ ವಿಜಯ್ ಸರ್, ನನ್ನ ಈ ಹುಚ್ಚು ಗೆಳೆಯನನ್ನು ದಯವಿಟ್ಟು ಕ್ಷಮಿಸಿ. ಅವನಿಗೆ ತಲೆ ಕೆಟ್ಟಿದೆ, ನಾನೇನೂ ಮಾಡಲು ಸಾಧ್ಯವಿಲ್ಲ’ ಎಂದು ಮನವಿ ಮಾಡಿಕೊಂಡರು.

ಈ ರೀತಿ ತಮಾಷೆ ಮಾಡಲು ಕಾರಣ ಏನು?

ಧ್ಯಾನ್ ಶ್ರೀನಿವಾಸನ್ ಅವರ ಈ ತಮಾಷೆಗೆ ಕಾರಣ ಇದೆ. ವಿಜಯ್ ಪತ್ನಿ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ವದಂತಿಗಳ ನಡುವೆಯೇ, ತ್ರಿಷಾ ಜೊತೆಗಿನ ವಿಜಯ್ ಸ್ನೇಹ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇತ್ತೀಚೆಗೆ ವಿಜಯ್ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭದಲ್ಲಿ, ತ್ರಿಷಾ ಅವರು ವಿಜಯ್ ಅವರ ತಂದೆ-ತಾಯಿಯ ಜೊತೆ ಮುಂಭಾಗದ ಸಾಲಿನಲ್ಲಿ ಕುಳಿತುಕೊಂಡು ಭಾವುಕರಾಗಿದ್ದರು. ಇದೇ ಘಟನೆಯನ್ನು ಧ್ಯಾನ್ ಶ್ರೀನಿವಾಸನ್ ಈಗ ತಮ್ಮದೇ ಶೈಲಿಯಲ್ಲಿ ಅಣಕಿಸಿದ್ದು, ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IND vs ENG: ಹಿಟ್​ಮ್ಯಾನ್ ಅಲ್ಲ, ಟೆಸ್ಟ್ ಮ್ಯಾನ್..! ಏನಾಯ್ತು ರೋಹಿತ್ ಶರ್ಮಾ? – Kannada News | Rohit Sharma’s Struggle: Can He Secure 2027 World Cup Spot Amidst Poor Form?

2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಸಲುವಾಗಿ ಹೋರಾಟ ನಡೆಸುತ್ತಿರುವ ಟೀಂ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾಗೆ ಯಾವುದೂ ಅಂದುಕೊಂಡಂತೆ ನಡೆಯುತ್ತಿಲ್ಲ. ಅಫ್ಘಾನಿಸ್ತಾನ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ 79 ರನ್​ಗಳ ಇನ್ನಿಂಗ್ಸ್ ಆಡುವ ಮೂಲಕ ಲಯ ಕಂಡುಕೊಳ್ಳುವ ಸುಳಿವು ನೀಡಿದ್ದ ರೋಹಿತ್ ಶರ್ಮಾಗೆ ಇಂಗ್ಲೆಂಡ್‌ ಪ್ರವಾಸ ದುಃಸ್ವಪ್ನವಾಗಿ ಕಾಡುತ್ತಿದೆ. ಹೊಡಿಬಡಿ ಆಟದ ಮೂಲಕ ತಂಡಕ್ಕೆ ಸ್ಫೋಟಕ ಆರಂಭ ಒದಗಿಸಿಕೊಡುತ್ತಿದ್ದ ರೋಹಿತ್​ಗೆ ಇಂಗ್ಲೆಂಡ್‌ ನೆಲದಲ್ಲಿ ಮುಕ್ತವಾಗಿ ರನ್ ಕಲೆಹಾಕಲು ಸಾಧ್ಯವಾಗುತ್ತಿಲ್ಲ.

ಒತ್ತಡಕ್ಕೆ ಸಿಲುಕಿದ ರೋಹಿತ್

ಹೀಗಾಗಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲೂ ರೋಹಿತ್ ಶರ್ಮಾ ಕಳಪೆ ಪ್ರದರ್ಶನ ಮುಂದುವರಿಸಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ಕೇವಲ 11 ರನ್‌ಗಳಿಗೆ ಔಟಾಗಿದ್ದ ರೋಹಿತ್ ಎರಡನೇ ಪಂದ್ಯದಲ್ಲಿ ಕೇವಲ 26 ರನ್ ಗಳಿಸುವಲ್ಲಿ ಯಶಸ್ವಿಯಾದರು. ಮತ್ತೊಮ್ಮೆ ಸೆಟ್ ಆದ ನಂತರ ವಿಕೆಟ್ ಕಳೆದುಕೊಂಡಿದ್ದು ರೋಹಿತ್ ಅವರ ಕಳಪೆ ಫಾರ್ಮ್​ಗೆ ಹಿಡಿದ ಕೈಗನ್ನಡಿಯಾಗಿತ್ತು. ಅದರಲ್ಲೂ ಕಾರ್ಡಿಫ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್​ಗೆ ಸತತ 10 ಎಸೆತಗಳಿಗೆ ರನ್​ ಕಲೆಹಾಕಲು ಸಾಧ್ಯವಾಗಲಿಲ್ಲ. ಇದರಿಂದ ಒತ್ತಡಕ್ಕೆ ಸಿಲುಕಿದ ರೋಹಿತ್ ಇಲ್ಲದ ಶಾಟ್ ಆಡಲು ಯತ್ನಿಸಿ ವಿಕೆಟ್ ಕೈಚೆಲ್ಲಿದರು.

ಶೇ. 29.1 ರಷ್ಟು ಕಳಪೆ ಶಾಟ್‌

ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಆರಂಭದಿಂದಲೂ ಪ್ರತಿಯೊಂದು ರನ್​ಗೆ ಸಾಕಷ್ಟು ಹೆಣಗಾಟ ನಡೆಸಿದರು. ಹೀಗಾಗಿ ರೋಹಿತ್ ಈ ಪಂದ್ಯದಲ್ಲಿ ಬರೋಬ್ಬರಿ 47 ಎಸೆತಗಳನ್ನು ಎದುರಿಸಿ ಕೇವಲ 26 ರನ್ ಕಲೆಹಾಕಿದರು. ಈ ಹಿಂದೆ ರೋಹಿತ್ ಆಟವನ್ನು ನೋಡಿದವರಿಗೆ ಅವರ ಈ ಹೋರಾಟ ನಿಜಕ್ಕೂ ಅಚ್ಚರಿ ಮೂಡಿಸಿತು. ಕಾರ್ಡಿಫ್ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಶೇ. 29.1 ರಷ್ಟು ಕಳಪೆ ಶಾಟ್‌ ಆಡಿದರು . 2014 ರ ನಂತರ ರೋಹಿತ್ ಶರ್ಮಾ ಅವರ ಕಳಪೆ ಶಾಟ್‌ಗಳ ಶೇಕಡಾವಾರು ಇಷ್ಟೊಂದು ಹೆಚ್ಚಿರುವುದು ಇದೇ ಮೊದಲು. ರೋಹಿತ್ ಇದೇ ರೀತಿಯ ಆಟವನ್ನು ಮುಂದುವರಿಸಿದರೆ, 2027 ರ ವಿಶ್ವಕಪ್‌ವರೆಗೆ ಅವರು ತಂಡದಲ್ಲಿ ಉಳಿಯುವುದು ಕಷ್ಟಕರವಾಗಿರುತ್ತದೆ.

ರೋಹಿತ್ ಶರ್ಮಾ ಹೋರಾಟ

ಈ ವರ್ಷ ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಅವರ ಪ್ರದರ್ಶನ ತೀರ ಕಳಪೆಯಾಗಿದೆ. 2026 ರಲ್ಲಿ ರೋಹಿತ್ ಆಡಿರುವ ಎಂಟು ಇನ್ನಿಂಗ್ಸ್‌ಗಳಲ್ಲಿ ಕೇವಲ 241 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ 30.12 ಆಗಿದ್ದು ಕೇವಲ ಒಂದು ಅರ್ಧಶತಕವನ್ನು ಮಾತ್ರ ಬಾರಿಸಿದ್ದಾರೆ. ಇಂಗ್ಲೆಂಡ್ ಏಕದಿನ ಸರಣಿಯ ಸಮಯದಲ್ಲಿ, ಮುಖ್ಯ ಕೋಚ್ ಗೌತಮ್ ಗಂಭೀರ್ ರೋಹಿತ್ ಅವರನ್ನು ಮುಕ್ತವಾಗಿ ಆಡುವಂತೆ ಕೇಳಿಕೊಂಡಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಆದರೆ ಎರಡೂ ಇನ್ನಿಂಗ್ಸ್‌ಗಳಲ್ಲಿ ನಿಧಾನಗತಿಯ ಇನ್ನಿಂಗ್ಸ್‌ ಆಡುವ ಮೂಲಕ ರೋಹಿತ್ ಒತ್ತಡಕ್ಕೆ ಸಿಲುಕಿ ತಮ್ಮ ವಿಕೆಟ್ ಕೈಚೆಲ್ಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ, ಒಟ್ಟು 90ಕ್ಕೂ ಹೆಚ್ಚು ಅಧಿಕಾರಿಗಳ ವರ್ಗಾವಣೆ – Kannada News | Major surgery In health Department, Karnataka Government Transfers 40 Officers

ಬೆಂಗಳೂರು, (ಜುಲೈ 16): ರಾಜ್ಯ ಸರ್ಕಾರದ ಸಾರ್ವತ್ರಿಕ ವರ್ಗಾವಣೆ ನಡೆಯುತ್ತಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಮೇಜರ್ ಸರ್ಜರಿ ಮಾಡಲಾಗಿದೆ. 9 ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿಗಳು, ಓರ್ವ ಅಪರ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ, ಮೂವರು ಜಿಲ್ಲಾ ಸರ್ಜನ್​​, ಇಲಾಖೆಯ 8 ಉಪನಿರ್ದೇಶಕರು, 8 ಪ್ರಾಂಶುಪಾಲರು ಮತ್ತಯ 42 ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳು, 21 THOಗಳು ಸೇರಿ 90ಕ್ಕೂ ಹೆಚ್ಚು ಅಧಿಕಾರಿಗಳನ್ನ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.

40 ವಲಯ ಅರಣ್ಯಾಧಿಕಾರಿಗಳ ವರ್ಗಾವಣೆ

ಕರ್ನಾಟಕ 40 ವಲಯ ಅರಣ್ಯಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. 40 RFO ಗಳನ್ನು ಬೇರೆ ಬೇರೆ ಜಿಲ್ಲೆಗಳಿಗೆ ವರ್ಗಾವಣೆಗೊಳಿಸಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಇಂದು (ಜುಲೈ 16) ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ವಿಧಾನಸೌಧ, ಸಚಿವಾಲಯಗಳಿಗೂ ತಟ್ಟಿದ ಬರಗಾಲದ ಬಿಸಿ: ನೀರು, ವಿದ್ಯುತ್‌ ಉಳಿತಾಯಕ್ಕೆ ಕಟ್ಟುನಿಟ್ಟಿನ ಸೂಚನೆ

ವರ್ಗಾವಣೆಗೊಂಡಿದ್ದ ಇಬ್ಬರು IPS ಅಧಿಕಾರಿಗಳಿಗೆ ಸ್ಥಳ ನಿಯುಕ್ತಿ

ವರ್ಗಾವಣೆಗೊಂಡಿದ್ದ ಇಬ್ಬರು IPS ಅಧಿಕಾರಿಗಳಿಗೆ ಸ್ಥಳ ನಿಯುಕ್ತಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನಿಶಾ ಜೇಮ್ಸ್, ಮಾನೆ ಸ್ವಪ್ನಿಲ್ ತುಕಾರಾಮ್ ಅವರಿಗೆ ಸ್ಥಳ ನಿಯುಕ್ತಿಗೊಳಿಸಿ ಸರ್ಕಾರ ಆದೇಶಿಸಿದೆ. ನಿಶಾ ಜೇಮ್ಸ್- ಪೊಲೀಸ್ ವರಿಷ್ಠಾಧಿಕಾರಿ (ಗುಪ್ತಚರ ಇಲಾಖೆ), ಮಾನೆ ಸ್ವಪ್ನಿಲ್ ತುಕಾರಾಮ್ ಅವರನ್ನು ಕಲಬುರಗಿ ಇಂಟೆಲಿಜೆನ್ಸ್ ಎಸ್​ಪಿಯಾಗಿ ನಿಯೋಜನೆ ಮಾಡಲಾಗಿದೆ.

ಗ್ರಾಮೀಣಾಭಿವೃದ್ಧಿ ಇಲಾಖೆಯ ಆಯುಕ್ತರಾಗಿದ್ದ ದಿವ್ಯಾ ಪ್ರಭು ಜಿ.ಆರ್.ಜೆ. ಅವರನ್ನು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾಯಿಸಲಾಗಿದೆ. ಇದರೊಂದಿಗೆ, ಅವರು ತಮ್ಮ ಹಿಂದಿನ ಹುದ್ದೆಯಾದ ಗ್ರಾಮೀಣಾಭಿವೃದ್ಧಿ ಆಯುಕ್ತ ಹುದ್ದೆಯ ಹೆಚ್ಚುವರಿ ಪ್ರಭಾರವನ್ನೂ ಸಹ ಮುಂದುವರಿಸಲಿದ್ದಾರೆ.

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಕೆ.ಪಿ. ರುದ್ರಪ್ಪಯ್ಯ ಅವರನ್ನು ವರ್ಗಾವಣೆ ಮಾಡಲಾಗಿದ್ದು, ತೆರವಾಗಿದ್ದ ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ನೇಮಕ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವಿಧಾನಸೌಧ, ಸಚಿವಾಲಯಗಳಿಗೂ ತಟ್ಟಿದ ಬರಗಾಲದ ಬಿಸಿ: ನೀರು, ವಿದ್ಯುತ್‌ ಉಳಿತಾಯಕ್ಕೆ ಕಟ್ಟುನಿಟ್ಟಿನ ಸೂಚನೆ – Kannada News | Karnataka Government Offices: Vidhana Soudha Enforces Strict Water and Power Saving Measures Amid Drought

ಬೆಂಗಳೂರು, ಜುಲೈ 16: ರಾಜ್ಯದ ಯಾವ ದಿಕ್ಕಿಗೆ ಹೋದರೂ ನೀರಿಲ್ಲ. ಕಳೆದ ವಾರ ಅಲ್ಪ ಸ್ವಲ್ಪ ಮಳೆಯಾದರೂ (Rain) ರಾಜ್ಯದ ಜಲಾಶಯಗಳು ತುಂಬುವಷ್ಟು ಒಳ ಹರಿವು ಬಂದಿಲ್ಲ. ಸದ್ಯ ರಾಜ್ಯದಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ವಿಧಾನಸೌಧ ಮತ್ತು ಸಚಿವಾಲಯಗಳಿಗೂ ಬರಗಾಲದ ಬಿಸಿ ತಟ್ಟಿದ್ದು, ಅನಗತ್ಯವಾಗಿ ನೀರು ಪೋಲಾಗುವುದನ್ನು ತಡೆಗಟ್ಟುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ (Shalini Rajneesh) ಗುರುವಾರ ಆದೇಶ ಹೊರಡಿಸಿದ್ದಾರೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್​ರಿಂದ ಕಟ್ಟುನಿಟ್ಟಿನ ಆದೇಶ

ದೇಶದಲ್ಲಿ ಎಲ್‌ನಿನೋ ಹವಾಮಾನ ವೈಪರೀತ್ಯದಿಂದಾಗಿ ಮಳೆಯ ಕೊರತೆ ಉಂಟಾಗಿದ್ದು, ಕೃಷಿ ವಲಯದ ಮೇಲೆ ತೀವ್ರ ಪರಿಣಾಮ ಬೀರಿದೆ. ಈ ಬರಗಾಲದ ಬಿಸಿ ಈಗ ರಾಜ್ಯದ ಶಕ್ತಿ ಕೇಂದ್ರಗಳಾದ ವಿಧಾನಸೌಧ ಮತ್ತು ವಿಕಾಸಸೌಧಕ್ಕೂ ತಟ್ಟಿದೆ. ಸರ್ಕಾರಿ ಕಚೇರಿಗಳಲ್ಲಿ ನೀರು ಮತ್ತು ವಿದ್ಯುತ್ ಪೋಲಾಗುತ್ತಿರುವುದನ್ನು ತಡೆಯಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದು ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಬರ ಪರಿಸ್ಥಿತಿ: ಪ್ರಧಾನಿ ಮೋದಿಗೆ ಡಿಸಿಎಂ ಜಿ. ಪರಮೇಶ್ವರ್ ಪತ್ರ, ತಕ್ಷಣ ನೆರವಿಗೆ ಮನವಿ

ಇತ್ತೀಚಿನ ದಿನಗಳಲ್ಲಿ ಕಚೇರಿ ಸಮಯ ಮುಗಿದ ನಂತರವೂ ವಿದ್ಯುತ್ ದೀಪ, ಫ್ಯಾನ್, ಕಂಪ್ಯೂಟರ್ ಹಾಗೂ ಎಸಿ ಸಾಧನಗಳನ್ನು ಆಫ್ ಮಾಡದೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿಗಳು ಸಚಿವಾಲಯದ ಎಲ್ಲಾ ಇಲಾಖೆಗಳು, ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಕಚೇರಿಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಪಾಲಿಸಬೇಕಾದ ನಿರ್ದೇಶನಗಳನ್ನು ನೀಡಿದ್ದಾರೆ.

ಪ್ರಮುಖ ನಿರ್ದೇಶನಗಳು ಮತ್ತು ನಿಯಮಗಳು

  • ನೈಸರ್ಗಿಕ ಬೆಳಕಿನ ಬಳಕೆ: ಸಚಿವಾಲಯದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ನೈಸರ್ಗಿಕ ಬೆಳಕನ್ನು ಬಳಸಬೇಕು. ಕಚೇರಿಗಳ ಕಿಟಕಿಗಳನ್ನು ಪೂರ್ತಿ ತೆರೆದಿಟ್ಟು, ಅಗತ್ಯವಿದ್ದಾಗ ಮಾತ್ರ ದೀಪ ಮತ್ತು ಫ್ಯಾನ್‌ಗಳನ್ನು ಆನ್ ಮಾಡಬೇಕು.
  • ಸಂಜೆ 6 ಗಂಟೆಯ ನಂತರ ಕಠಿಣ ನಿಗಾ: ಪ್ರತಿ ಮಹಡಿಯ ಕಾವಲುಗಾರರು ಮತ್ತು ಭದ್ರತಾ ಸಿಬ್ಬಂದಿ ಸಂಜೆ 6 ಗಂಟೆಯ ನಂತರ ಅನಗತ್ಯ ವಿದ್ಯುತ್ ದೀಪಗಳನ್ನು ನಂದಿಸಲಾಗಿದೆಯೇ ಹಾಗೂ ಬೆಳಿಗ್ಗೆ 6ಗಂಟೆಗೆ ಆಫ್ ಮಾಡಲಾಗಿದೆಯೇ ಎಂದು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು.
  • ಸ್ವಿಚ್-ಆಫ್ ಕಡ್ಡಾಯ: ಸಚಿವರು ಮತ್ತು ಅಧಿಕಾರಿಗಳು ಕೊಠಡಿಯಲ್ಲಿ ಇಲ್ಲದ ಸಮಯದಲ್ಲಿ ಹಾಗೂ ಕಚೇರಿ ವೇಳೆ ಮುಕ್ತಾಯವಾದ ನಂತರ ವಿದ್ಯುತ್ ಸಂಪರ್ಕದ ಎಲ್ಲಾ ಸ್ವಿಚ್‌ಗಳನ್ನು ಕಡ್ಡಾಯವಾಗಿ ಆಫ್ ಮಾಡಬೇಕು. ಕಚೇರಿಗೆ ಬೀಗ ಹಾಕುವ ಮುನ್ನ ಇದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಆಪ್ತ ಕಾರ್ಯದರ್ಶಿಗಳು ಮತ್ತು ಭದ್ರತಾ ಸಿಬ್ಬಂದಿಯದ್ದಾಗಿರುತ್ತದೆ.
  • AC ತಾಪಮಾನ ನಿಯಂತ್ರಣ: ಅಧಿಕಾರಿಗಳ ಕಚೇರಿಗಳಲ್ಲಿನ AC ಕಡ್ಡಾಯವಾಗಿ 24-26°C ತಾಪಮಾನದಲ್ಲೇ ಬಳಸಬೇಕು.
  • ತಂತ್ರಜ್ಞಾನದ ಅಳವಡಿಕೆ: ಸಾಂಪ್ರದಾಯಿಕ ದೀಪಗಳ ಬದಲಿಗೆ ದೀರ್ಘಕಾಲ ಬಾಳಿಕೆ ಬರುವ ಎಲ್‌ಇಡಿ ದೀಪಗಳನ್ನು ಅಳವಡಿಸುವುದು ಹಾಗೂ ಕಾರಿಡಾರ್‌ಗಳು, ವಿಶ್ರಾಂತಿ ಕೊಠಡಿಗಳು ಮತ್ತು ಸಭಾಂಗಣಗಳಲ್ಲಿ ಚಲನಶೀಲ ಸಂವೇದಕಗಳನ್ನು ಅಳವಡಿಸಲು ಸೂಚಿಸಲಾಗಿದೆ.
  • ನೀರು ಪೋಲಾಗುವುದಕ್ಕೆ ಬ್ರೇಕ್: ಶೌಚಾಲಯ ಹಾಗೂ ಕಚೇರಿಗಳಲ್ಲಿ ನಲ್ಲಿಗಳನ್ನು ಕಡ್ಡಾಯವಾಗಿ ಬಂದ್ ಮಾಡಬೇಕು. ನೀರಿನ ಹರಿವು ಕಡಿಮೆ ಮಾಡಲು ವಾಟರ್ ಏರೇಟರ್‌ಗಳನ್ನು ಅಳವಡಿಸಲಾಗುವುದು ನಲ್ಲಿಗಳಲ್ಲಿ ಸೋರಿಕೆಯಿದ್ದರೆ ತಕ್ಷಣ ಲೋಕೋಪಯೋಗಿ ಇಲಾಖೆಯ ಗಮನಕ್ಕೆ ತರಬೇಕು.

ಇದನ್ನೂ ಓದಿ: Karnataka Weather Update: ಬೆಂಗಳೂರಿಗರಿಗೆ ಕೊನೆಗೂ ತಂಪೆರೆದ ವರುಣ; ರಾಜ್ಯದ ಹಲವೆಡೆಯೂ ಮಳೆ ಮುನ್ಸೂಚನೆ

ಪ್ರಸ್ತುತ ಹವಾಮಾನ ವೈಪರೀತ್ಯದಿಂದಾಗಿ ನೈಸರ್ಗಿಕ ಸಂಪನ್ಮೂಲಗಳ ಕೊರತೆ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯುತ್ ಮತ್ತು ನೀರಿನಂತಹ ಅತ್ಯಮೂಲ್ಯ ಸಂಪನ್ಮೂಲಗಳನ್ನು ಅಪವ್ಯಯ ಮಾಡದೆ ಮಿತವಾಗಿ ಬಳಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ಆದೇಶವನ್ನು ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸುವಂತೆ ಶಾಲಿನಿ ರಜನೀಶ್ ಆದೇಶಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅಮೃತ್ ಭಾರತ್ ನಿಲ್ದಾಣ ಯೋಜನೆ; ಆಧುನೀಕರಣಗೊಂಡ 75 ರೈಲ್ವೆ ನಿಲ್ದಾಣಗಳು ನಾಳೆ ಮೋದಿಯಿಂದ ಲೋಕಾರ್ಪಣೆ – Kannada News | Amrit Bharat Station Scheme is transforming 1,300 Railway stations 75 stations will be inaugurated by PM Modi tomorrow

ನವದೆಹಲಿ, ಜುಲೈ 16: ಭಾರತೀಯ ರೈಲ್ವೆಯನ್ನು (Indian Railways) ವಿಶ್ವದರ್ಜೆಯ ಸೌಲಭ್ಯಗಳೊಂದಿಗೆ ಆಧುನೀಕರಿಸಲು ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಮಹತ್ವಾಕಾಂಕ್ಷೆಯ ಯೋಜನೆಯೇ ‘ಅಮೃತ್ ಭಾರತ್ ನಿಲ್ದಾಣ ಯೋಜನೆ’ (Amrit Bharat Station Scheme). ಈ ಯೋಜನೆಯಡಿ ದೇಶಾದ್ಯಂತ ಒಟ್ಟು 1,340 ರೈಲ್ವೆ ನಿಲ್ದಾಣಗಳನ್ನು ಅತ್ಯಾಧುನಿಕ ಹಾಗೂ ಸಾಂಸ್ಕೃತಿಕ ಸೊಗಡಿನ ತಾಣಗಳನ್ನಾಗಿ ಮರುರೂಪಿಸಲಾಗುತ್ತಿದೆ. ಈ ಅಭಿವೃದ್ಧಿ ಕ್ರಾಂತಿಯ ಮತ್ತೊಂದು ಮಹತ್ವದ ಹೆಜ್ಜೆಯಾಗಿ, ಮರುರೂಪಿಸಲಾದ 75 ರೈಲ್ವೆ ನಿಲ್ದಾಣಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ನಾಳೆ (ಶುಕ್ರವಾರ) ಉದ್ಘಾಟಿಸಿ ದೇಶಕ್ಕೆ ಸಮರ್ಪಿಸಲಿದ್ದಾರೆ.

ಈ ಮೂಲಕ ಭಾರತೀಯ ರೈಲ್ವೆಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಕ್ರಾಂತಿಕಾರಿ ಬದಲಾವಣೆಗೆ ಕೇಂದ್ರ ಸರ್ಕಾರ ಮುನ್ನುಡಿ ಬರೆದಿದೆ. ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಬರೋಬ್ಬರಿ 71,000 ಕೋಟಿ ರೂ. ಬೃಹತ್ ಹೂಡಿಕೆಯೊಂದಿಗೆ ರೈಲ್ವೆ ಜಾಲವನ್ನು ವಿಶ್ವದರ್ಜೆಯ ಸಾರಿಗೆ ಹಬ್‌ಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಒಟ್ಟು 1,340 ರೈಲ್ವೆ ನಿಲ್ದಾಣಗಳು ಒಂದು ಭವ್ಯ ದೃಷ್ಟಿಕೋನದೊಂದಿಗೆ ಸಂಪೂರ್ಣ ಆಧುನಿಕ ಹಾಗೂ ಸುಂದರ ರೂಪಾಂತರವನ್ನು ಪಡೆಯುತ್ತಿವೆ. ದೇಶಾದ್ಯಂತ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಕಾರ್ಯವು ಅತ್ಯಂತ ವೇಗವಾಗಿ ಸಾಗುತ್ತಿದ್ದು, ಅತ್ಯಾಧುನಿಕ ಸೌಲಭ್ಯಗಳು ಸಾರ್ವಜನಿಕ ಸೇವೆಗೆ ಸಿದ್ಧವಾಗುತ್ತಿವೆ. ಈಗಾಗಲೇ ಒಟ್ಟು 122 ರೈಲ್ವೆ ನಿಲ್ದಾಣಗಳ ಆಧುನೀಕರಣದ ಕೆಲಸ ಯಶಸ್ವಿಯಾಗಿ ಪೂರ್ಣಗೊಂಡಿದೆ.

(Video Source: Indian Railways)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಸುರಂಗ ರಸ್ತೆ ನಿರ್ಮಾಣ:ಲಾಲ್ ಬಾಗ್ ನಲ್ಲಿ ಮರ ಕಡಿಯದಂತೆ ನೀಡಿದ್ದ ಮಧ್ಯಂತರ ಆದೇಶ ಮುಂದುವರಿಕೆ – Kannada News | Karnataka High Court postponed August 20 PIL against Bengaluru tunnel road project

ಕರ್ನಾಟಕ ಉಚ್ಛ ನ್ಯಾಯಾಲಯImage Credit source: Karnataka High court website

ಬೆಂಗಳೂರು, (ಜುಲೈ 16): ಬೆಂಗಳೂರಿನ (Bengaluru) ಹೆಬ್ಬಾಳದಿಂದ ಸಿಲ್ಕ್‌ ಬೋರ್ಡ್‌ವರೆ ನಿರ್ಮಿಸಲು ಉದ್ದೇಶಿಸಿರುವ ಸುರಂಗ ರಸ್ತೆ ಯೋಜನೆಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ (Karnataka High Court) ಆಗಸ್ಟ್ 20ಕ್ಕೆ ನಿಗದಿಪಡಿಸಿದೆ. ಸುರಂಗ ರಸ್ತೆ ಯೋಜನೆಗೆ ಮಧ್ಯಂತರ ತಡೆಯಾಜ್ಞೆ ನೀಡುವಂತೆ ಪ್ರಕಾಶ್ ಬೆಳವಾಡಿ, ಡಾ. ಎ.ರವೀಂದ್ರ, ಸಿಟಿಜನ್ ಆಕ್ಷನ್ ಫೋರಂ ಸಲ್ಲಿಸಿದ್ದ  ಪಿಐಎಲ್ ಅರ್ಜಿಯನ್ನು ಇಂದು (ಜುಲೈ 16) ವಿಚಾರಣೆ ನಡೆಸಿದ ಕೋರ್ಟ್, ಕಾಮಗಾರಿ ಹೈಕೋರ್ಟ್​ನ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ. ಪಿಐಎಲ್ ಬಾಕಿಯಿರುವ ಬಗ್ಗೆ ಗುತ್ತಿಗೆದಾರರಿಗೆ ಮಾಹಿತಿ ನೀಡಲು ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿದೆ. ಅರ್ಜಿದಾರರ ಪರ ತೇಜಸ್ವಿ ಸೂರ್ಯ, ಹಿರಿಯ ವಕೀಲ ಡಿ.ಆರ್.ರವಿಶಂಕರ್ ವಾದ ಮಂಡಿಸಿದರು.

ಕಳೆದ ವಿಚಾರಣೆಯ ವೇಳೆ ನ್ಯಾಯಾಲಯವು ಸರ್ಕಾರ, ಗ್ರೇಟರ್ ಬೆಂಗಳೂರು ಪ್ರಾಧಿಕಾರ, ರಾಜ್ಯ ಪರಿಸರ ಅಧ್ಯಯನ ಮೌಲ್ಯಮಾಪನ ಪ್ರಾಧಿಕಾರ, ನಗರ ಭೂಸಾರಿಗೆ ನಿರ್ದೇಶನಾಲಯ, ಬೆಂಗಳೂರು ಸ್ಮಾರ್ಟ್ ಮೂಲಸೌಕರ್ಯ ನಿಯಮಿತ(ಸ್ಮೈಲ್) ರಾಡಿಕ್ ಕನ್ಸಲ್ಟೆಂಟ್ಸ್ ಮತ್ತು ಆಲ್ಟಿನೋಕ್ ಕನ್ಸಲ್ಟೆಂಟ್ಸ್ ಸೇರಿ ಎಲ್ಲಾ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತ್ತು. ಅಲ್ಲದೆ, ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್‌ನಂತಹ ಸೂಕ್ಷ್ಮ ಪ್ರದೇಶಗಳ ಅಡಿಯಲ್ಲಿ ಸುರಂಗ ನಿರ್ಮಾಣ ಮಾಡುವುದರಿಂದ ಆಗುವ ಅಪಾಯಗಳ ಬಗ್ಗೆ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ(ಎಖಐ)ದಿಂದ ಅಭಿಪ್ರಾಯ ಪಡೆಯುವಂತೆ ಸೂಚಿಸಿತ್ತು.

ಇದನ್ನೂ ಓದಿ: ತೇಜಸ್ವಿ ಸೂರ್ಯ ಬಗ್ಗೆ ಕೇಳಬೇಡಿ, ಆತ ವೇಸ್ಟ್ ಮೆಟೀರಿಯಲ್: ಸುರಂಗ ರಸ್ತೆ ವಿರೋಧಿಸಿದ್ದಕ್ಕೆ ಡಿಕೆ ಶಿವಕುಮಾರ್ ತಿರುಗೇಟು

ಹಿನ್ನೆಲೆ: ಬೆಂಗಳೂರು ಮಹಾನಗರದ ಸಂಚಾರ ದಟ್ಟಣೆ ಸಮಸ್ಯೆ ಪರಿಹರಿಸುವ ಸಲುವಾಗಿ ಹೆಬ್ಬಾಳದಿಂದ ಸಿಲ್ಕ್‌  ಬೋರ್ಡ್‌ವರೆಗೆ ಸುಮಾರು 19 ಸಾವಿರ ಕೋಟಿ ರೂ. ವೆಚ್ಚದಲ್ಲಿ ಸುರಂಗ ಮಾರ್ಗ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ. ಬೆಂಗಳೂರು ಜೋಡಿ ಸುರಂಗ ರಸ್ತೆ ಯೋಜನೆಗೆ 2025ರ ಜು.14ರಂದು ಕರೆದಿರುವ ಟೆಂಡರ್ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.

ಜತೆಗೆ ಆರ್ಎಫ್ಪಿ ಪ್ರಕಟಣೆ, ಪೂರ್ವ-ಬಿಡ್ ಪ್ರಕ್ರಿಯೆಗಳು, ಬಿಡ್ ಸಲ್ಲಿಕೆ, ಬಿಡ್ ಮೌಲ್ಯಮಾಪನ ಮತ್ತು ಉದ್ದೇಶಿತ ಟೆಂಡರ್ ಪ್ರಸ್ತಾವ ಅಂತಿಮಗೊಳಿಸುವ ಪತ್ರ ಸೇರಿದಂತೆ ಎಲ್ಲಾ ಹಂತಗಳನ್ನೂ ರದ್ದುಗೊಳಿಸಲು ಕೋರಲಾಗಿದೆ. ಸುರಂಗ ಮಾರ್ಗ ಯೋಜನೆಗೆ ಪೂರ್ವ ಪರಿಸರ ಅನುಮತಿ ಅಗತ್ಯವಿಲ್ಲ ಎಂದು ಕರ್ನಾಟಕ ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರ 2024ರ ನ.26ರಂದು ನೀಡಿರುವ ಪತ್ರವನ್ನು ರದ್ದುಗೊಳಿಸಲು ಸಹ ಕೋರಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs ENG: ಶತಕದ ಪಂದ್ಯದಲ್ಲಿ 78ನೇ ಏಕದಿನ ಅರ್ಧಶತಕ ಸಿಡಿಸಿದ ವಿರಾಟ್ ಕೊಹ್ಲಿ – Kannada News | Virat Kohli’s Record Breaking ODI: 78th Half Century and Sophia Gardens Milestone vs England

ಎಂದಿನಂತೆ ಶುಭ್​ಮನ್ ಗಿಲ್ ವಿಕೆಟ್ ಪತನದ ಬಳಿಕ ಕ್ರೀಸ್​ಗಿಳಿದ ಕೊಹ್ಲಿ ಬೌಂಡರಿ ಬಾರಿಸುವ ಮೂಲಕ ತಮ್ಮ ಖಾತೆ ತೆರೆದರೆ, ಇನ್ನೊಂದು ಅಚ್ಚರಿಯ ಸಂಗತಿಯಂತೆ ಕೊಹ್ಲಿ ಬೌಂಡರಿ ಬಾರಿಸುವ ಮೂಲಕ ತಮ್ಮ ಅರ್ಧಶತಕವನ್ನು ಪೂರೈಸಿದರು. ಕೊಹ್ಲಿ 50 ಎಸೆತಗಳಲ್ಲಿ ತಮ್ಮ ಏಕದಿನ ವೃತ್ತಿಜೀವನದ 78 ನೇ ಅರ್ಧಶತಕವನ್ನು ಪೂರೈಸಿದರು(PC-BCCI).

Source link

ಸಂಪುಟ ವಿಸ್ತರಣೆ ಸರ್ಕಸ್: ಹೈಕಮಾಂಡ್‌ಗೆ ಒಪ್ಪಿಗೆಯಾಗದ ರಾಜ್ಯ ನಾಯಕರ ಪಟ್ಟಿ, ತಮ್ಮದೇ ಪಟ್ಟಿ ಸಿದ್ಧಪಡಿಸಿಕೊಂಡಿರೋ ರಾಹುಲ್ – Kannada News | Karnataka Cabinet Expansion: Congress High command Plan New Face In Cabinet Birth, Rahul Gandhi created separate List

ನವದೆಹಲಿ, (ಜುಲೈ 16): ಡಿಕೆ ಶಿವಕುಮಾರ್ (DK Shivakumar) ಸಿಎಂ ಆಗಿ 1 ತಿಂಗಳಿಗೂ ಹೆಚ್ಚು ದಿನಗಳಾಗಿದೆ. ಕೇವಲ 13 ಮಂದಿ ಸಚಿವರನ್ನ ಇಟ್ಕೊಂಡು ಡಿಕೆಶಿ ಸರ್ಕಾರ ನಡೆಸ್ತಿದ್ದಾರೆ. ಪ್ರಬಲ ಖಾತೆಗಳಿಗೆ ಇನ್ನೂ ಸಚಿವರನ್ನೇ ನೇಮಕ ಮಾಡಿಲ್ಲ. ಹೀಗಾಗಿಯೇ ಸಿಎಂ ಡಿಕೆ ಶಿವಕಿಮಾರ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ದೆಹಲಿಗೆ ತೆರಳಿದ್ದು, ಇಂದು (ಜುಲೈ 16) ರಾಹುಲ್ ಗಾಂಧಿ ಜೊತೆ ಮಹತ್ವದ ಚರ್ಚೆ ಮಾಡಿದ್ದಾರೆ. ಸೋನಿಯಾ ಗಾಂಧಿ ಅವರ 10 ಜನಪತ್ ನಿವಾಸದಲ್ಲೂ ಸಭೆ ನಡೆದಿದ್ದು, ಸಂಪುಟ ವಿಸ್ತರಣೆ (cabinet expansion) ಸಂಬಂಧ ಮೀಟಿಂಗ್ ಆಯ್ತು. ಸಭೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಸುರ್ಜೇವಾಲ, ಕೆಸಿ.ವೇಣುಗೋಪಾಲ್, ಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಕೆ.ಜೆ.ಜಾರ್ಜ್ ಸೇರಿದಂತೆ ಹಲವರು ಸಭೆಯಲ್ಲಿ ಭಾಗಿಯಾಗಿದ್ದರು. ಸೋನಿಯಾ ಗಾಂಧಿ ಸಮ್ಮುಖದಲ್ಲಿ ಚರ್ಚೆ ನಡೀತು. ಆದ್ರೆ ಅಂದುಕೊಂಡಂತೆ ಯಾವುದೂ ಫೈನಲ್ ಆಗಲಿಲ್ಲ. ಯಾಕೆಂದ್ರೆ ಅಲ್ಲಿ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನುಪಸ್ಥಿತಿ ಇತ್ತು.

ಹೈಕಮಾಂಡ್​ಗೆ ಒಪ್ಪಿಗೆಯಾಗದ ರಾಜ್ಯ ನಾಯಕರ ಪಟ್ಟಿ

ಮೂಲಗಳ ಮಾಹಿತಿ ಪ್ರಕಾರ ರಾಜ್ಯ ನಾಯಕರ ಪಟ್ಟಿ ಹೈಕಮಾಂಡ್​ಗೆ ಒಪ್ಪಿಗೆ ಆಗಿಲ್ಲ. ಹೊಸ ಮುಖಗಳಿಗೆ ಮನ್ನಣೆ ನೀಡಲು ಹೈಕಮಾಂಡ್ ಒಲವು ಇದೆ. ಆದ್ರೆ ಹಿರಿಯರಿಗೆ ಮಣೆ ಹಾಕುವಂತೆ ರಾಜ್ಯ ನಾಯಕರು ಒತ್ತಡ ಹಾಕಿದ್ದಾರೆ. ಹಿರಿಯ ನಾಯಕರ ಜತೆ ಕೆಲ ನೂತನ ಶಾಸಕರಿಗೆ ಅವಕಾಶ ಕೊಡಿ ಎಂದು ರಾಜ್ಯ ನಾಯಕರು ಒತ್ತಡ ಹಾಕಿದ್ದಾರೆ. ಆದ್ರೆ ರಾಜ್ಯ ನಾಯಕರ ಮಾತಿಗೆ ರಾಹುಲ್ ಗಾಂಧಿ ಒಪ್ಪಿಲ್ಲ.

ಇದನ್ನೂ ನೋಡಿ: ಸಚಿವ ಸಂಪುಟ ವಿಸ್ತರಣೆ ಮತ್ತಷ್ಟು ವಿಳಂಬ: ಬಿಗ್ ಅಪ್ಡೇಟ್ ಕೊಟ್ಟ KPCC ಅಧ್ಯಕ್ಷ ಹರಿಪ್ರಸಾದ್

ತಮ್ಮದೇ ಪ್ರತ್ಯೇಕ ಪಟ್ಟಿ ಸಿದ್ಧಪಡಿಸಿರುವ ರಾಹುಲ್ ಗಾಂಧಿ

ಇನ್ನು ರಾಹುಲ್ ಗಾಂಧಿ ಅವರು ತಮ್ಮದೇ ಪ್ರತ್ಯೇಕ ಪಟ್ಟಿ ಸಿದ್ಧಪಡಿಸಿಕೊಂಡಿದ್ದಾರೆ. ಪರ್ಯಾಯ ಏಜೆನ್ಸಿ ಮೂಲಕ ಮಾಹಿತಿ ಪಡೆದಿರೋ ರಾಹುಲ್, ಆ ಮಾಹಿತಿಯನ್ನೇ ಆಧರಿಸಿ ಪಟ್ಟಿ ಸಿದ್ಧಪಡಿಸಿಕೊಂಡಿದ್ದಾರೆ. ಸಂಪೂರ್ಣವಾಗಿ ಹೊಸ ಮುಖಗಳಿಗೆ ಮಣೆ ಹಾಕೋಕೆ ರಾಜ್ಯ ನಾಯಕರು ಹಿಂದೇಟು ಹಾಕಿದ್ದಾರೆ. ಹೀಗಾಗಿ ರಾಹುಲ್ ಜೊತೆಗಿನ ಸಭೆ ಕೇವಲ 10 ನಿಮಿಷಕ್ಕೆ ಅಂತ್ಯ ಆಗಿದೆ. ಡಿಕೆ, ಸಿದ್ದು, ಬಿ.ಕೆ.ಹರಿಪ್ರಸಾದ್ ಜೊತೆ ಪ್ರತ್ಯೇಕ ಚರ್ಚೆ ಮಾಡಿರೋ ರಾಹುಲ್ ಗಾಂಧಿ, ಮುಂದಿನ ವಾರ ಮತ್ತೆ ಮಾತುಕತೆ ಮಾಡೋಣ ಅಂದಿದ್ದಾರೆ.

ಇನ್ನೊಂದೆಡೆ ಮಂತ್ರಿ ಸ್ಥಾನ ಪಡೆದುಕೊಳ್ಳಲು ಅನೇಕ ಮಂದಿ ಪ್ರಯತ್ನ ನಡೆಸುತ್ತಿದ್ದಾರೆ. ಇಪ್ಪತ್ತು ಸ್ಥಾನಗಳ ಪೈಕಿ ಐವತ್ತು ಮಂದಿ ಲಾಬಿ ನಡೆಸುತ್ತಿದ್ದಾರೆ. ಆದರೆ ಎಷ್ಟು ಜನರಿಗೆ ಈ ಬಾರಿ ಅವಕಾಶ ಸಿಗುತ್ತದೆ? ಯಾರಿಗೆಲ್ಲಾ ಮಂತ್ರಿ ಸ್ಥಾನ? ಸಿಗಲಿದೆ ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ.

ಇವತ್ತು ರಾತ್ರಿಯೊಳಗೆ ಹೈಕಮಾಂಡ್​ನಿಂದ ಶುಭ ಸುದ್ದಿ ಬರಬಹುದು ಅಂತಾ ಎಲ್ಲರೂ ನಿರೀಕ್ಷೆ ಇಟ್ಕೊಂಡಿದ್ರು. ಆದ್ರೆ ಮತ್ತೆ ವಿಳಂಬ ಆಗ್ತಿದೆ. ಸಂಪುಟ ವಿಸ್ತರಣೆಗೆ ಶುಭ ಮುಹೂರ್ತ, ಶುಭ ಘಳಿಗೆ, ಶುಭ ಸಮಯ, ಶುಭ ಸಂದರ್ಭ ಕೂಡಿ ಬರುತ್ತಿಲ್ಲ. ಅದ್ಯಾವ ರಾಹು ಕೇತು ವಕ್ಕರಿಸಿಕೊಂಡಿದ್ಯೋ? ಏನೋ? ಸಂಪುಟ ವಿಸ್ತರಣೆಗೆ ಹಿಡಿದ ಗ್ರಹಣ ಮಾತ್ರ ಬಿಡುತ್ತಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಯೋಧ್ಯೆ ಹಗರಣ ಬೆನ್ನಲ್ಲೇ ರಾಜ್ಯ ಸರ್ಕಾರ ಅಲರ್ಟ್: ರಾಜ್ಯದ ಎಲ್ಲಾ ದೇವಾಲಯದ ಹುಂಡಿಗಳ ರಕ್ಷಣೆಗೆ ಬಿಗಿ ಭದ್ರತೆ – Kannada News | Karnataka Strengthens Temple Security Following Ayodhya Donation Scandal

ಬೆಂಗಳೂರು, ಜುಲೈ 16: ಅಯೋಧ್ಯೆ ರಾಮಮಂದಿರ ಹುಂಡಿ ಅವ್ಯವಹಾರದ ಬೆನ್ನಲ್ಲೇ ಅಲರ್ಟ್ ಆಗಿರುವ ರಾಜ್ಯ ಸರ್ಕಾರವು ರಾಜ್ಯದ ದೇವಾಲಯಗಳಲ್ಲಿ ಭದ್ರತೆಯನ್ನು ಹೆಚ್ಚಿಸಲು ನಿರ್ಧರಿಸಿದೆ. ರಾಜ್ಯದ ಎಲ್ಲಾ ಮುಜರಾಯಿ ದೇವಾಲಯಗಳಲ್ಲಿನ ಕಾಣಿಕೆ ಹುಂಡಿಗಳಿಗೆ ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಈ ಕುರಿತಾಗಿ ಡಿಸಿಎಂ ಜಿ. ಪರಮೇಶ್ವರ್​ ಮಾತನಾಡಿದ್ದು, ‘‘ರಾಜ್ಯದಲ್ಲಿ 39 ಸಾವಿರ ದೇವಸ್ಥಾನಗಳು ಮುಜರಾಯಿ ಅಡಿಯಲ್ಲಿವೆ. ಮುಜರಾಯಿಗೆ ಸೇರದ ದೇವಸ್ಥಾನಗಳೂ ಇವೆ. ಎ ದರ್ಜೆಯ ದೇವಸ್ಥಾನಕ್ಕೆ ಸಾಕಷ್ಟು ಹಣ ಬರುತ್ತೆ. ಹುಂಡಿ ಇತರೆ ಸ್ಥಳಕ್ಕೆ ಸಿಸಿಟಿಸಿ ಹಾಕಿ ಕೇಂದ್ರೀಕೃತ ಸರ್ವರ್​​ ಅಳವಡಿಸಬೇಕು. ಕೇಂದ್ರ ಸ್ಥಾನದಿಂದಲೇ ಮಾನಿಟರ್ ಮಾಡಬೇಕು ಎಂದು ಆದೇಶ ಮಾಡಿದ್ದೇವೆ. ದೇವಸ್ಥಾನದ ಹಣವನ್ನು ಆ ದೇವಸ್ಥಾನಕ್ಕೆ ಖರ್ಚು ಮಾಡಬೇಕು. ಅದಕ್ಕಾಗಿ ಕಾರ್ಯಕ್ರಮ ಹಾಕಿಕೊಳ್ಳುತ್ತೇನೆ. 10% ಹಣವನ್ನು ಸಿ‌ ದರ್ಜೆಯ ದೇವಸ್ಥಾನಕ್ಕೆ ಕೊಡಬಹುದು, ಅದು ಬಿಟ್ಟರೆ ಆ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಲ್ಲ’’ ಎಂದು ಹೇಳಿದ್ದಾರೆ.

ವರದಿ: ಈರಣ್ಣ ಬಸವ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಕಾಲ್ತುಳಿತ; ಉಸಿರುಗಟ್ಟಿ ಓರ್ವ ಭಕ್ತ ಸಾವು, ಹಲವರಿಗೆ ಗಾಯ – Kannada News | One dead, several injured in stampede during Puri Jagannath Rath Yatra

ಪುರಿ, ಜುಲೈ 16: ಒಡಿಶಾದ ಪುರಿಯಲ್ಲಿ ಇಂದು ಅತ್ಯಂತ ವೈಭವದಿಂದ ಆರಂಭವಾದ ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆಯ (Puri Jagannath Rath Yatra) ಸಂದರ್ಭದಲ್ಲಿ ಭಾರಿ ಜನದಟ್ಟಣೆಯಿಂದಾಗಿ ಉಸಿರುಗಟ್ಟಿ ಓರ್ವ ಭಕ್ತ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಭಗವಾನ್ ಜಗನ್ನಾಥ, ಬಲಭದ್ರ ಮತ್ತು ದೇವತೆ ಸುಭದ್ರೆಯ ರಥ ಎಳೆಯುವ ಪವಿತ್ರ ಕಾರ್ಯಕ್ರಮವನ್ನು ವೀಕ್ಷಿಸಲು ಲಕ್ಷಾಂತರ ಭಕ್ತರು ಜಮಾಯಿಸಿದ್ದಾಗ ಈ ದುರಂತ ಸಂಭವಿಸಿದೆ. ಮೃತರನ್ನು ಕಟಕ್ ಜಿಲ್ಲೆಯ ನಿವಾಸಿಯಾದ 35 ವರ್ಷದ ಅನಿಲ್ ದಾಸ್ ಎಂದು ಗುರುತಿಸಲಾಗಿದೆ.

ಘಟನೆ ನಡೆದಿದ್ದು ಹೇಗೆ?:

ರಥ ಯಾತ್ರೆಯನ್ನು ವೀಕ್ಷಿಸಲು ಭಕ್ತರು ಪುರಿಯ ಪ್ರಮುಖ ರಸ್ತೆಯಾದ ‘ಬಡಾ ದಂಡಾ’ ಬಳಿ ಕಾಯುತ್ತಿದ್ದಾಗ ಅನಿಲ್ ದಾಸ್ ಅವರಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಪುರಿ ಜಿಲ್ಲಾ ಪ್ರಧಾನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ನೂಕುನುಗ್ಗಲಿನಿಂದಾಗಿ ಇನ್ನೂ ಕೆಲವು ಭಕ್ತರಿಗೆ ಗಾಯಗಳಾಗಿದ್ದು, ತುರ್ತು ರಕ್ಷಣಾ ತಂಡಗಳು ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿವೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಜನದಟ್ಟಣೆಯನ್ನು ನಿರ್ವಹಿಸಲು ಪೊಲೀಸ್ ಹಾಗೂ ವಿಪತ್ತು ನಿರ್ವಹಣಾ ಪಡೆಗಳು ತಕ್ಷಣ ಸ್ಥಳಕ್ಕೆ ಧಾವಿಸಿವೆ.

ಇದನ್ನೂ ಓದಿ: ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ, ಎಲ್ಲೆಲ್ಲೂ ಭಕ್ತಸಾಗರ

ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ, ಲಕ್ಷಾಂತರ ಭಕ್ತರು ಭಗವಾನ್ ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ದೇವಿಯ 9 ದಿನಗಳ ವಾರ್ಷಿಕ ರಥಯಾತ್ರೆ ವೀಕ್ಷಿಸಲು ಜಮಾಯಿಸಿದ್ದರು. ಈ ಪವಿತ್ರ ಆಚರಣೆಯು ವಿಷ್ಣುವಿನ ಸುದರ್ಶನ ಚಕ್ರವನ್ನು ಜಗನ್ನಾಥ ದೇವಾಲಯದಿಂದ ಹೊರತಂದು ಸುಭದ್ರೆಯ ‘ದರ್ಪದಾಲನ್’ ರಥದಲ್ಲಿ ಪ್ರತಿಷ್ಠಾಪಿಸುವುದರೊಂದಿಗೆ ಆರಂಭವಾಯಿತು. ನಂತರ ಜಗನ್ನಾಥನ ಹಿರಿಯ ಸಹೋದರ ಬಲಭದ್ರನನ್ನು ‘ತಾಳಧ್ವಜ’ ರಥಕ್ಕೆ ಮತ್ತು ಜಗನ್ನಾಥನನ್ನು ‘ನಂದಿಘೋಷ’ ರಥಕ್ಕೆ ಭವ್ಯ ಮೆರವಣಿಗೆಯ ಮೂಲಕ ಕೊಂಡೊಯ್ಯಲಾಯಿತು.

ಈ ವೇಳೆ ಭಕ್ತರು “ಜೈ ಜಗನ್ನಾಥ್” ಎಂದು ಘೋಷಣೆಗಳನ್ನು ಕೂಗಿದರು. ಒಡಿಸ್ಸಿ ನೃತ್ಯಗಾರರು ಮತ್ತು ಜಾನಪದ ಕಲಾತಂಡಗಳು ಮೆರವಣಿಗೆಯುದ್ದಕ್ಕೂ ಸಾಂಸ್ಕೃತಿಕ ಪ್ರದರ್ಶನಗಳನ್ನು ನೀಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version