IPL 2027: ಆರ್​ಸಿಬಿಗೆ ಇಶಾನ್ ಕಿಶನ್, ಸನ್‌ರೈಸರ್ಸ್​ಗೆ ಜಿತೇಶ್ ಶರ್ಮಾ..! – Kannada News | IPL 2027 Trade Rumor: SRH RCB Eye Jitesh Sharma, Ishan Kishan Swap Deal

2027 ರ ಐಪಿಎಲ್‌ಗೆ ಇನ್ನು ಸಾಕಷ್ಟು ಸಮಯವಿದೆ. ಆದರೆ ಈಗಾಗಲೇ ಕೆಲವು ಫ್ರಾಂಚೈಸಿಗಳು ತಮ್ಮ ತಮ್ಮ ತಂಡಗಳಲ್ಲಿನ ಲೋಪದೋಷಗಳನ್ನು ಸರಿ ಮಾಡಲಾರಂಭಿಸಿವೆ. ಇದೀಗ ಕೇಳಿ ಬಂದಿರುವ ಸುದ್ದಿಯ ಪ್ರಕಾರ, ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಬಿಗ್ ಡೀಲ್ ನಡೆಯುತ್ತಿದೆ ಎಂದು ವರದಿಯಾಗಿದೆ(PC-PTI).

1 / 5

ಐಪಿಎಲ್ 2026 ರಲ್ಲಿ ಅದ್ಭುತ ಪ್ರದರ್ಶನದೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ ಪ್ಲೇಆಫ್ ತಲುಪಿತು, ಆದರೆ ಎಲಿಮಿನೇಟರ್ ಪಂದ್ಯದಲ್ಲಿ ಸೋತು ಐಪಿಎಲ್ ರೇಸ್‌ನಿಂದ ನಿರ್ಗಮಿಸಿತು. ಇದೀಗ ಕಾವ್ಯ ಮಾರನ್ ನೇತೃತ್ವದ ಎಸ್‌ಆರ್‌ಎಚ್ ಮ್ಯಾನೇಜ್‌ಮೆಂಟ್ ಮುಂಬರುವ ಸೀಸನ್​ಗೆ ತಂಡವನ್ನು ಮತ್ತಷ್ಟು ಬಲಪಡಿಸಲು ತಯಾರಿ ಶುರು ಮಾಡಿದೆ. ವಿಶೇಷವಾಗಿ, ಕೆಳ ಕ್ರಮಾಂಕದಲ್ಲಿ ವೇಗವಾಗಿ ರನ್ ಗಳಿಸಬಲ್ಲ ಸರಿಯಾದ ಭಾರತೀಯ ಫಿನಿಷರ್ ಕೊರತೆಯು ತಂಡದಲ್ಲಿ ಪ್ರಮುಖ ಸಮಸ್ಯೆಯಾಗಿದೆ(PC-PTI).

2 / 5

ಈ ದೌರ್ಬಲ್ಯವನ್ನು ನಿವಾರಿಸಲು, ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಹಾಗೂ ಉಪನಾಯಕ ಜಿತೇಶ್ ಶರ್ಮಾ ಮೇಲೆ ಕಣ್ಣಿಟ್ಟಿದೆ. ಇತ್ತ ಜಿತೇಶ್ ಶರ್ಮಾ ಅವರನ್ನು ಬಿಟ್ಟುಕೊಡಲು ಆರ್​ಸಿಬಿ ಕೂಡ ಸಿದ್ಧವಿದ್ದು, ಜಿತೇಶ್ ಬದಲಿಗೆ ಸನ್‌ರೈಸರ್ಸ್ ತಂಡದಲ್ಲಿರುವ ಮತ್ತೊಬ್ಬ ಸ್ಟಾರ್ ಆಟಗಾರನನ್ನು ಕೇಳಿದೆ ಎಂದು ವರದಿಯಾಗಿದೆ(PC-PTI).

3 / 5

ಜಿತೇಶ್ ಶರ್ಮಾರನ್ನು ಬಿಟ್ಟುಕೊಡಲು ಮುಂದಾಗಿರುವ ಆರ್​ಸಿಬಿ, ಎಸ್‌ಆರ್‌ಹೆಚ್‌ನ ಸ್ಟಾರ್ ಬ್ಯಾಟರ್ ಇಶಾನ್ ಕಿಶನ್ ಅವರನ್ನು ನೀಡುವಂತೆ ಕೇಳಿದೆ. ಆರ್​ಸಿಬಿಯ ಈ ಬೇಡಿಕೆಯಿಂದ ಹೈದರಾಬಾದ್ ಮ್ಯಾನೇಜ್‌ಮೆಂಟ್ ಆಘಾತಕ್ಕೊಳಗಾಗಿದೆಯಾದರೂ ಈ ಬಗ್ಗೆ ಮಾತುಕತೆಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದು ವರದಿಯಾಗಿದೆ(PC-PTI).

4 / 5

ಆದಾಗ್ಯೂ, ಫಾರ್ಮ್‌ನಲ್ಲಿರುವ ಇಶಾನ್ ಕಿಶನ್‌ನಂತಹ ಪಂದ್ಯ ವಿಜೇತರನ್ನು ಬಿಟ್ಟುಕೊಡುವುದು ಸನ್‌ರೈಸರ್ಸ್‌ಗೆ ದೊಡ್ಡ ಹೊಡೆತವಾಗಲಿದೆ. ಪ್ಯಾಟ್ ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ ಇಶಾನ್ ಕಿಶನ್ ಅವರನ್ನು ಎಸ್‌ಆರ್‌ಹೆಚ್ ತನ್ನ ಭವಿಷ್ಯದ ನಾಯಕನನ್ನಾಗಿ ನೋಡುತ್ತಿದೆ. ಮುಂಬರುವ ಸೀಸನ್​ನಲ್ಲಿ ಕಮ್ಮಿನ್ಸ್ ಆಡುವ ಬಗ್ಗೆ ಅನುಮಾನವಿರುವುದರಿಂದ ಹೈದರಾಬಾದ್ ಇಶಾನ್ ಅವರನ್ನು ಬಿಟ್ಟುಕೊಡಲು ಧೈರ್ಯ ಮಾಡದಿರಬಹುದು(PC-PTI).

5 / 5

Published On – 6:05 pm, Thu, 13 August 26

Source link

ಅತ್ಯಾಚಾರ ಆರೋಪ, ದೂರು ದಾಖಲಿಸಿದ ನಟಿಯ ಸಹೋದರಿ – Kannada News | Actress Sister: Blackmail Complaint Filed Against Raghavendra in Bengaluru

ಸ್ಯಾಂಡಲ್​​ವುಡ್ ನಟಿಯ (Sandalwood actress) ಸಹೋದರಿಯೊಬ್ಬರು ಅತ್ಯಾಚಾರ ಆರೋಪ ಮಾಡಿದ್ದು, ವ್ಯಕ್ತಿಯೊಬ್ಬನ ಮೇಲೆ ದೂರು ದಾಖಲಿಸಿದ್ದಾರೆ. ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ದೂರಿನ ಆಧಾರದ ಮೇಲೆ ರಾಘವೇಂದ್ರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ತಮ್ಮ ಇಚ್ಛೆಗೆ ವಿರುದ್ಧವಾಗಿ ತಮ್ಮೊಟ್ಟಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆಂದು ನಟಿಯ ಸಹೋದರಿ ಆರೋಪ ಮಾಡಿದ್ದಾರೆ.

ನಟಿಯ ಸಹೋದರಿ ನೀಡಿರುವ ದೂರಿನ ಅನ್ವಯ ಆಕೆ ಮತ್ತು ಬಂಧಿತ ರಾಘವೇಂದ್ರ ಇಬ್ಬರೂ ಒಂದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರಂತೆ. ಆ ವೇಳೆ ಪರಸ್ಪರ ಪರಿಚಯವಾಗಿತ್ತು, ಪರಿಚಯ ಸ್ನೇಹಕ್ಕೆ ತಿರುಗಿ, ಬಳಿಕ ಇಬ್ಬರೂ ಪ್ರೀತಿಸಲು ಪ್ರಾರಂಭಿಸಿದ್ದರು. ಈ ವೇಳೆ ರಾಘವೇಂದ್ರ ತಮ್ಮನ್ನು ಮದುವೆಯಾಗುವುದಾಗಿ ನಂಬಿಸಿದ್ದ, ಹಾಗೂ ತಮ್ಮೊಟ್ಟಿಗೆ ದೈಹಿಕ ಸಂಪರ್ಕ ಬೆಳೆಸಿದ್ದ ಎಂದು ನಟಿಯ ಸಹೋದರಿ ಹೇಳಿದ್ದಾರೆ.

ರಾಘವೇಂದ್ರ, ತಮ್ಮ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಸಾಲಗಳನ್ನು ಪಡೆದುಕೊಂಡಿದ್ದ. ಈ ವಿಷಯವಾಗಿ ತಮಗೂ ರಾಘವೇಂದ್ರಗೂ ಜಗಳ ಆಗಿತ್ತು. ಆ ಬಳಿಕ ವಿಚಾರಣೆ ಮಾಡಿದಾಗ ರಾಘವೇಂದ್ರಗೆ ಈಗಾಗಲೇ ಮದುವೆ ಆಗಿರುವುದು ಗೊತ್​ತಾಗಿತ್ತು. ಆದರೆ ರಾಘವೇಂದ್ರ, ಯುವತಿಯ ಖಾಸಗಿ ಚಿತ್ರಗಳನ್ನು ಇರಿಸಿಕೊಂಡು ಬ್ಲ್ಯಾಕ್ ಮೇಲ್ ಮಾಡಿದ್ದ. ಆ ವಿಷಯವನ್ನು ನಟಿಯ ಸಹೋದರಿ ಈ ಮೊದಲೇ ಪೊಲೀಸರಿಗೆ ತಿಳಿಸಿದ್ದರು. ಆಗ ಪೊಲೀಸರು ಕರೆದು ರಾಘವೇಂದ್ರಗೆ ಎಚ್ಚರಿಕೆ ಕೊಟ್ಟು ಕಳಿಸಿದ್ದರು.

ಇದನ್ನೂ ಓದಿ:ಟಾಕ್ಸಿಕ್ ಸಂಬಂಧದ ಕಷ್ಟ ತೆರೆದಿಟ್ಟ ನಟಿ ಅನುಪಮಾ ಪರಮೇಶ್ವರನ್

ಆದರೆ ಇತ್ತೀಚೆಗೆ ರಾಘವೇಂದ್ರ, ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸಂದೇಶ ಕಳಿಸಿದ್ದ. ಕೈಗೆ ಗಾಯ ಮಾಡಿಕೊಂಡಿರುವುದಾಗಿ ಫೋಟೊಗಳನ್ನು ಕಳಿಸಿದ್ದ. ಕೂಡಲೇ ನಟಿಯ ಸಹೋದರಿ ಸ್ಥಳಕ್ಕೆ ತೆರಳಿದಾಗ, ಆತ ಟೊಮ್ಯಾಟೊ ಕೆಚಪ್ ಬಳಸಿ ಸುಳ್ಳು ಫೋಟೊಗಳನ್ನು ಸೃಷ್ಟಿಸಿ ಯುವತಿಗೆ ಕಳಿಸಿದ್ದ ಎಂದು ಯುವತಿ ದೂರಿನಲ್ಲಿ ಹೇಳಿದ್ದಾರೆ. ಆದರೆ ತಾನು ಅಲ್ಲಿಗೆ ಹೋದಾಗ ಮತ್ತೆ ಆಕೆಯ ಖಾಸಗಿ ಫೋಟೊಗಳನ್ನು ತೋರಿಸಿ ಅವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಒಡ್ಡಿ, ಯುವತಿಯ ಇಚ್ಛೆಗೆ ವಿರುದ್ಧವಾಗಿ ಆಕೆಯೊಟ್ಟಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ನಟಿಯ ಸಹೋದರಿಯ ದೂರು ದಾಖಲಿಸಿಕೊಂಡ ಪೊಲೀಸರು ರಾಘವೇಂದ್ರನ ಮೇಲೆ ಅತ್ಯಾಚಾರ, ಬ್ಲಾಕ್​​ಮೇಲ್, ಬೆದರಿಕೆ ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಭಾರತೀಯ ರಾಜಕಾರಣಿಗಳು ಹೆಚ್ಚಾಗಿ ಬಿಳಿ ಬಣ್ಣದ ಬಟ್ಟೆಯನ್ನೇ ಧರಿಸುವುದೇಕೆ? – Kannada News | Reason behind Indian politicians wear white clothes?

ಭಾರತೀಯ ರಾಜಕೀಯ ನಾಯಕರು Image Credit source: Getty Images

ನಮ್ಮ ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ರಾಷ್ಟ್ರವಾಗಿದೆ. ಇಲ್ಲಿ ಸ್ಥಳದಿಂದ ಸ್ಥಳಕ್ಕೆ ಆಹಾರ ಪದ್ಧತಿ, ಭಾಷೆ, ಆಚಾರ ವಿಚಾರ ಪ್ರತಿಯೊಂದರಲ್ಲೂ ಸಾಕಷ್ಟು ಭಿನ್ನತೆಗಳಿರುತ್ತವೆ. ಆದರೆ ರಾಜಕಾರಣಿಗಳ ಉಡುಗೆಯಲ್ಲಿ ಮಾತ್ರ ಯಾವುದೇ ಬದಲಾವಣೆಗಳಿಲ್ಲ. ಹಳ್ಳಿಯಿಂದ ದಿಲ್ಲಿಯವರೆಗೆ ಪ್ರತಿಯೊಬ್ಬ ರಾಜಕಾರಣಿಗಳು ಸಹ ಹೆಚ್ಚಾಗಿ ಬಿಳಿ ಬಣ್ಣದ ಉಡುಗೆಯನ್ನೇ (white clothes) ತೊಡುತ್ತಾರೆ. ಬಹುತೇಕ ರಾಜಕಾರಣಿಗಳು  ಬಿಳಿ ಬಣ್ಣದ ಕುರ್ತಾ-ಪೈಜಾಮ, ಧೋತಿ ಅಥವಾ ಲುಂಗಿ, ಪ್ಯಾಂಟ್‌ ಶರ್ಟ್‌  ಧರಿಸುತ್ತಾರೆ. ಇತರ ದೇಶಗಳ ರಾಜಕಾರಣಿಗಳು  ಕಪ್ಪು ಸೂಟ್ ಮತ್ತು ಬೂಟುಗಳಲ್ಲಿ ಕಾಣಿಸಿಕೊಂಡರೆ ಭಾರತೀಯ ರಾಜಕಾರಣಿಗಳು ಮಾತ್ರ ಬಿಳಿ ಬಣ್ಣದ ಉಡುಗೆಯನ್ನೇ ಧರಿಸುವುದೇಕೆ ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ? ಇದರ ಹಿಂದೆಯೂ ಒಂದು ಕಾರಣವಿದೆಯಂತೆ, ಅದೇನಂಬುದನ್ನು ನೋಡೋಣ ಬನ್ನಿ.

ಇದೇ ಕಾರಣಕ್ಕಾಗಿ ಭಾರತೀಯ ರಾಜಕಾರಣಿಗಳು ಬಿಳಿ ಬಟ್ಟೆಗಳನ್ನು ಧರಿಸುವುದು:

ಈ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸುವ ಸಂಪ್ರದಾಯ ಸ್ವಾತಂತ್ರ್ಯ ಹೋರಾಟ ಯುಗದ ನಾಯಕರಿಂದ ಪ್ರಾರಂಭವಾಯಿತು. ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ, ಮಹಾತ್ಮ ಗಾಂಧಿಜೀ ಸ್ವದೇಶಿ ಉತ್ಪನ್ನಗಳ ಬಳಕೆಗೆ ಘೋಷಣೆಯನ್ನು ನೀಡಿದರು. ನೂಲುವ ಚಕ್ರದ ಮೇಲೆ ಖಾದಿ ಬಟ್ಟೆಗಳನ್ನು ತಯಾರಿಸಿ ಅದನ್ನೇ ಧರಿಸಲು ತಮ್ಮ ದೇಶವಾಸಿಗಳನ್ನು ಪ್ರೋತ್ಸಾಹಿಸಿದರು. ಇವರ ಕರೆಗೆ ಓಗೊಟ್ಟ ಜನರು ವಿದೇಶಿ ಉತ್ಪನ್ನಗಳನ್ನು ಸಂಗ್ರಹಿಸಿ ದೊಡ್ಡ ಪ್ರಮಾಣದಲ್ಲಿ ಸುಟ್ಟು ಹಾಕಿದರು. ಖಾದಿಯಿಂದ ತಯಾರಿಸಿದ ಬಟ್ಟೆಗಳು ಹೆಚ್ಚಾಗಿ ಬಿಳಿ ಬಣ್ಣದ್ದಾಗಿದ್ದವು. ಆ ಸಮಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಂದ ಹಿಡಿದು ಜನಸಾಮಾನ್ಯರವರೆಗೆ ಎಲ್ಲರೂ ಖಾದಿ ಬಟ್ಟೆಳನ್ನೇ ಧರಿಸಲು ಆರಂಭಿಸಿದರು. ಹೌದು ಆ ಸಮಯದಲ್ಲಿ, ಸ್ವಾತಂತ್ರ್ಯ ಹೋರಾಟಗಾರರು, ನಾಯಕರು ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಎಲ್ಲಾ ಭಾರತೀಯರು ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಲು ಪ್ರಾರಂಭಿಸಿದರು. ಮತ್ತು ಕಾಲಾನಂತರದಲ್ಲಿ, ಈ ಬಣ್ಣವು ನಾಯಕರ ಗುರುತಾಯಿತು.  ಕ್ರಮೇಣ ಈ ಬಣ್ಣದ ಉಡುಗೆ ರಾಜಕಾರಣಿಗಳ ವಿಶಿಷ್ಟ ಲಕ್ಷಣವಾಯಿತು. ಅಂದಿನಿಂದ ಇಂದಿನವರೆಗೆ, ಭಾರತೀಯ ರಾಜಕಾರಣಿಗಳು ಹೆಚ್ಚಾಗಿ ಬಿಳಿ ಬಟ್ಟೆಗಳನ್ನೇ ಧರಿಸುತ್ತಿದ್ದಾರೆ.

ಇದನ್ನೂ ಓದಿ: ಭಾರತದಂತೆಯೇ ಆಗಸ್ಟ್‌ 15 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುವ ದೇಶಗಳಿವು

ಬಿಳಿ ಬಟ್ಟೆಗಳನ್ನು ಧರಿಸುವುದರ ಹಿಂದಿನ ಇತರ ಕಾರಣಗಳು:

ಬಣ್ಣಗಳು ಜೀವನಕ್ಕೆ ಸೌಂದರ್ಯವನ್ನು ತರುವುದಲ್ಲದೆ, ವ್ಯಕ್ತಿಯ ಮೇಲೆ ಆಳವಾದ ಪರಿಣಾಮ ಬೀರುತ್ತವೆ. ಪ್ರತಿಯೊಂದು ಬಣ್ಣವು ಒಂದು ನಿರ್ದಿಷ್ಟ ಗುಣದೊಂದಿಗೆ ಸಂಬಂಧ ಹೊಂದಿದೆ. ಬಿಳಿ ಬಣ್ಣವನ್ನು ಶಾಂತಿ, ಶುದ್ಧತೆ ಮತ್ತು ಕಲಿಕೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ.  ಅಲ್ಲದೆ ಬಿಳಿ ಬಣ್ಣವನ್ನು ಸತ್ಯ ಮತ್ತು ಅಹಿಂಸೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಬಣ್ಣದ ಬಟ್ಟೆ ಧರಿಸುವುದರಿಂದ ಸರಳತೆ ಹಾಗೂ ನಾಯಕತ್ವದ ಭಾವನೆಯನ್ನು ಮೂಡಿಸುತ್ತದೆ. ಈ ಬಣ್ಣ ಎಲ್ಲರೂ ಸಮಾನರು ಎಂಬ ಭಾವನೆಯನ್ನು ಮೂಡಿಸುತ್ತದೆ. ಈ ಕಾರಣಕ್ಕಾಗಿಯೇ ಭಾರತದ ರಾಜಕೀಯ ನಾಯಕರು ನಾಯಕರು ಮತ್ತು ಸಾಮಾಜಿಕ ಕಾರ್ಯಕರ್ತರು ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸುವುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದಲ್ಲಿ ಬಹಳ ಹೆಚ್ಚಾಗುತ್ತಿವೆ ಎಲೆಕ್ಟ್ರಿಕ್ ಸ್ಕೂಟರ್, ಬೈಕುಗಳು; ರಾಜ್ಯದ ಇವಿ ನೀತಿಗಳೇ ಇದಕ್ಕೆ ಕಾರಣವಾ? – Kannada News | Karnataka’s EV Policies helps changing the mobility scenario of the state

ಎಲೆಕ್ಟ್ರಿಕ್ ದ್ವಿಚಕ್ರ ವಾಹನImage Credit source: Getty Images

ಕರ್ನಾಟಕವು ದೇಶದಲ್ಲೇ ಎಲೆಕ್ಟ್ರಿಕ್ ವಾಹನ (EV) ಸ್ಟಾರ್ಟ್‌ಅಪ್‌ಗಳು ಮತ್ತು ಬೃಹತ್ ವಾಹನ ತಯಾರಕರ ಪ್ರಮುಖ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮಿದೆ. ಪರಿಸರ ಸ್ನೇಹಿ ಸಂಚಾರ ವ್ಯವಸ್ಥೆಯತ್ತ (Cleaner Mobility) ಭಾರತ ಮಾಡುತ್ತಿರುವ ಪಯಣದಲ್ಲಿ ಕರ್ನಾಟಕ ಪ್ರಮುಖ ಪಾತ್ರ ವಹಿಸುತ್ತಿದೆ.

ಈ ಬದಲಾವಣೆ ಈಗ ರಾಜ್ಯದ ರಸ್ತೆಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಇಂಧನ ಬೆಲೆ ಏರಿಕೆ, ಸಣ್ಣ ಅಂತರದ ನಗರ ಪ್ರಯಾಣ ಹಾಗೂ ಸರ್ಕಾರದ ಪ್ರೋತ್ಸಾಹಕಾರಿ ನೀತಿಗಳು ಜನರು ಪೆಟ್ರೋಲ್ ಸ್ಕೂಟರ್‌ಗಳ ಬದಲು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಆಯ್ಕೆ ಮಾಡಲು ಪ್ರಮುಖ ಕಾರಣಗಳಾಗಿವೆ.

ಕರ್ನಾಟಕದ ಇವಿ ನೀತಿಯ ಪ್ರಮುಖ ಗುರಿಗಳು

ರಾಜ್ಯ ಸರ್ಕಾರದ ಹೊಸ ‘ಕ್ಲೀನ್ ಮೊಬಿಲಿಟಿ ಪಾಲಿಸಿ 2025–2030’ ಮೂಲಕ ಕೆಳಗಿನ ಪ್ರಮುಖ ಗುರಿಗಳನ್ನು ಹಮ್ಮಿಕೊಳ್ಳಲಾಗಿದೆ:

  • ಹೂಡಿಕೆ ಮತ್ತು ಉದ್ಯೋಗ: ₹50,000 ಕೋಟಿ ಹೂಡಿಕೆ ಆಕರ್ಷಿಸುವುದು ಮತ್ತು 1 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವುದು.
  • ಚಾರ್ಜಿಂಗ್ ಮೂಲಸೌಕರ್ಯ: ರಾಜ್ಯದಲ್ಲಿ ಹೊಸದಾಗಿ 2,600 ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವುದು ಹಾಗೂ ಪ್ರಮುಖ ಹೆದ್ದಾರಿಗಳಲ್ಲಿ ಪ್ರತಿ 50 ಕಿ.ಮೀ ಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸುವುದು.
  • ಕ್ಲೀನ್ ಮೊಬಿಲಿಟಿ ಕ್ಲಸ್ಟರ್‌ಗಳು: ಗೌರಿಬಿದನೂರು, ಧಾರವಾಡ ಮತ್ತು ಹರೋಹಳ್ಳಿ ಪ್ರದೇಶಗಳಲ್ಲಿ ನೂತನ ಇವಿ ಕ್ಲಸ್ಟರ್‌ಗಳನ್ನು ಅಭಿವೃದ್ಧಿಪಡಿಸುವುದು.
  • ಪ್ರೋತ್ಸಾಹಧನ ಮತ್ತು ಸಬ್ಸಿಡಿ: ಇವಿ ನೋಂದಣಿ ಶುಲ್ಕ ವಿನಾಯಿತಿ, ರೋಡ್ ಟ್ಯಾಕ್ಸ್ ವಿನಾಯಿತಿ ಮತ್ತು PM E-DRIVE ಯೋಜನೆಯಡಿ ಪ್ರೋತ್ಸಾಹ ಒದಗಿಸುವುದು.

ಇದನ್ನೂ ಓದಿ: ಸ್ಮಾಲ್ ಫೈನಾನ್ಸ್ ಬ್ಯಾಂಕ್ vs ಕಾರ್ಪೊರೇಟ್ ಎಫ್​ಡಿ, ಎರಡರಲ್ಲೂ ಶೇ. 8ಕ್ಕಿಂತ ಹೆಚ್ಚು ಬಡ್ಡಿ; ಯಾವುದರಲ್ಲಿ ಹೂಡಿಕೆ ಸೂಕ್ತ?

ಖರೀದಿದಾರರು ಗಮನಿಸಬೇಕಾದ ಪ್ರಮುಖ ಅಂಶಗಳು

ದೈನಂದಿನ ಪ್ರಯಾಣ: ಬೆಂಗಳೂರಿನಂತಹ ನಗರಗಳಲ್ಲಿ ಸರಾಸರಿ ದೈನಂದಿನ ಪ್ರಯಾಣ 9–10 ಕಿ.ಮೀ ಮಾತ್ರ ಇರುವುದರಿಂದ, ಇವಿ ಸ್ಕೂಟರ್‌ಗಳು ನಗರದ ಸಂಚಾರ ದಟ್ಟಣೆಗೆ ಅತ್ಯಂತ ಸೂಕ್ತವಾಗಿವೆ.

ಬ್ಯಾಟರಿ ವಾರಂಟಿ ಮತ್ತು ವೆಚ್ಚ: ಬಹುತೇಕ ತಯಾರಕರು 3 ರಿಂದ 8 ವರ್ಷಗಳ ಬ್ಯಾಟರಿ ವಾರಂಟಿ ನೀಡುತ್ತಾರೆ. ಇವಿ ವಾಹನಗಳಲ್ಲಿ ಬ್ಯಾಟರಿಯೇ ಮುಖ್ಯ ವೆಚ್ಚವಾಗಿರುವುದರಿಂದ ವಾರಂಟಿ ನಿಯಮಗಳು ಮತ್ತು ಬದಲಿ ವೆಚ್ಚಗಳನ್ನು ಗಮನಿಸುವುದು ಅಗತ್ಯ.

ಇನ್ಶೂರೆನ್ಸ್ ಮತ್ತು ರಕ್ಷಣೆ: ಬ್ಯಾಟರಿ ಹಾನಿ, ಶಾರ್ಟ್ ಸರ್ಕ್ಯೂಟ್ ಮತ್ತು ಚಾರ್ಜಿಂಗ್ ಉಪಕರಣಗಳ ದೋಷಗಳಿಂದ ಉಂಟಾಗುವ ನಷ್ಟವನ್ನು ಸರಿದೂಗಿಸಲು ಸೂಕ್ತ ‘ಎಲೆಕ್ಟ್ರಿಕ್ ಬೈಕ್ ಇನ್ಶೂರೆನ್ಸ್’ (Electric Bike Insurance) ಹೊಂದುವುದು ಕಡ್ಡಾಯ ಮತ್ತು ಪ್ರಯೋಜನಕಾರಿ. ಥರ್ಡ್ ಪಾರ್ಟಿ ಇನ್ಷೂರೆನ್ಸ್ ಇಲ್ಲದ ವಾಹನಗಳಿಗೆ ನೊಂದಣಿ ಕೂಡ ಸಿಗುವುದಿಲ್ಲ.

ಎಲೆಕ್ಟ್ರಿಕ್ ಗಾಡಿಗೆ ಬದಲಾವಣೆ ಮಾಡುವ ಮುನ್ನ ಏನು ಲೆಕ್ಕ ಹಾಕಬೇಕು?

ಎಲೆಕ್ಟ್ರಿಕ್ ಟು-ವೀಲರ್ ಖರೀದಿಸುವ ಮೊದಲು ಈ ಕೆಳಗಿನ ಅಂಶಗಳನ್ನು ಗಮನಿಸಿ:

  • ದೈನಂದಿನ ಪ್ರಯಾಣದ ದೂರ ಮತ್ತು ವಾಹನದ ಬ್ಯಾಟರಿ ರೇಂಜ್ ಎಷ್ಟಿದೆ ಹೋಲಿಸಿ
  • ಮನೆ ಅಥವಾ ಕಚೇರಿಯಲ್ಲಿ ಚಾರ್ಜಿಂಗ್ ಸೌಲಭ್ಯ ಇದೆಯಾ?
  • ಇಂಧನ ಮತ್ತು ಮೈಂಟೆನೆನ್ಸ್ ವೆಚ್ಚದಲ್ಲಿ ಎಷ್ಟು ಉಳಿತಾಯ ಆಗಬಹುದು?
  • ಬ್ಯಾಟರಿ ವಾರಂಟಿ
  • ಅಧಿಕೃತ ಸರ್ವಿಸ್ ಬೆಂಬಲ ಲಭ್ಯತೆ ಹೇಗಿದೆ?
  • ಬ್ಯಾಟರಿ ಮತ್ತು ಎಲೆಕ್ಟ್ರಿಕಲ್ ಕಾಂಪೋನೆಂಟ್‌ಗಳಿಗೆ ಸೂಕ್ತ ಟು-ವೀಲರ್ ಇನ್ಶೂರೆನ್ಸ್ ಕವರ್ (Two-wheeler Insurance)

ಇದನ್ನೂ ಓದಿ: ಸರ್ಕಾರದ ಈ ಸೌಲಭ್ಯ ಪಡೆಯಲು ಹಿರಿಯ ನಾಗರಿಕರ ಕಾರ್ಡ್ ಅಗತ್ಯ, ಹೀಗೆ ಅರ್ಜಿ ಸಲ್ಲಿಸಿ

ದೀರ್ಘಕಾಲೀನ ಓನರ್‌ಶಿಪ್ ವೆಚ್ಚಗಳನ್ನು ಮೌಲ್ಯಮಾಪನ ಮಾಡುವಾಗ, ವಿವಿಧ ಟು-ವೀಲರ್ ಇನ್ಶೂರೆನ್ಸ್ ಯೋಜನೆಗಳನ್ನು ಹೋಲಿಕೆ ಮಾಡುವುದು ಸಹ ಮುಖ್ಯವಾಗಿದೆ. ಇದರಿಂದ ಬ್ಯಾಟರಿ ಸಂಬಂಧಿತ ಹಾನಿ, ಎಲೆಕ್ಟ್ರಿಕಲ್ ಕಾಂಪೋನೆಂಟ್‌ಗಳು ಮತ್ತು ರಿಪೇರಿ ವೆಚ್ಚಗಳಿಗೆ ಯಾವ ರೀತಿಯ ಕವರ್ ಲಭ್ಯವಿದೆ ಎಂಬುದನ್ನು ಖರೀದಿದಾರರು ಅರ್ಥಮಾಡಿಕೊಳ್ಳಬಹುದು.

ಕರ್ನಾಟಕ ಇವಿ ಮಾರುಕಟ್ಟೆಯ ಮುಂದಿನ ಹಂತ

ರಾಜ್ಯ ಸರ್ಕಾರದ ಅಂಕಿಅಂಶಗಳ ಪ್ರಕಾರ, FY21 ರಿಂದ FY26 ರ ನಡುವೆ ಇವಿ ಮಾರಾಟವು ಸುಮಾರು 17 ಪಟ್ಟು ಹೆಚ್ಚಾಗಿದೆ ಮತ್ತು ರಾಜ್ಯದಲ್ಲಿ ಇವಿ ಬಳಕೆ ಪ್ರಮಾಣ 13.65% ತಲುಪಿದೆ (ರಾಷ್ಟ್ರೀಯ ಸರಾಸರಿ 9.12%). ಪ್ರಸ್ತುತ ಕರ್ನಾಟಕದಲ್ಲಿ 8,600 ಕ್ಕೂ ಹೆಚ್ಚು ಚಾರ್ಜಿಂಗ್ ಸ್ಟೇಷನ್‌ಗಳಿದ್ದು, ದೇಶದಲ್ಲೇ ಅತ್ಯಧಿಕ ಸಂಖ್ಯೆಯನ್ನು ಹೊಂದಿದೆ.

ಮುಂದಿನ ದಿನಗಳಲ್ಲಿ ಸಣ್ಣ ನಗರಗಳಿಗೂ ಚಾರ್ಜಿಂಗ್ ಜಾಲ ವಿಸ್ತರಿಸುವುದು ಮತ್ತು ಬ್ಯಾಟರಿ ವೆಚ್ಚಗಳು ಕಡಿಮೆಯಾಗುವುದು ಈ ವಲಯದ ಮತ್ತಷ್ಟು ಬೆಳವಣಿಗೆಗೆ ಕಾರಣವಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಹಾರಾಷ್ಟ್ರದಲ್ಲಿ ಪಂಜಾಬ್ ಮಾಜಿ ಡಿಸಿಎಂ ಸುಖ್‌ಬೀರ್ ಸಿಂಗ್ ಬಾದಲ್ ಮೇಲೆ ತಲ್ವಾರ್ ದಾಳಿ; ಆಸ್ಪತ್ರೆಗೆ ದಾಖಲು – Kannada News | Former Punjab Deputy CM Sukhbir Singh Badal Attacked In Nanded hospitalised

ನಾಂದೇಡ್, ಆಗಸ್ಟ್ 13: ಶಿರೋಮಣಿ ಅಕಾಲಿದಳದ (SAD) ಅಧ್ಯಕ್ಷ ಹಾಗೂ ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಸುಖ್‌ಬೀರ್ ಸಿಂಗ್ ಬಾದಲ್ (Sukhbir Singh Badal) ಅವರ ಮೇಲೆ ಇಂದು (ಆಗಸ್ಟ್ 13) ಮಹಾರಾಷ್ಟ್ರದ ನಾಂದೇಡ್‌ನ ಗುರುದ್ವಾರವೊಂದರಲ್ಲಿ ದಿಢೀರ್ ದಾಳಿ ನಡೆದಿದೆ. ಇದರಿಂದ ಅವರು ಗಾಯಗೊಂಡಿದ್ದು, ಕೂಡಲೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ರಾಜ್ಯ ಸಚಿವರೂ ಆಗಿರುವ ಬಾದಲ್ ಅವರು ಮುದ್ಖೇಡ್ ತಾಲೂಕಿನ ಮುಗಾಟ್‌ನಲ್ಲಿರುವ ‘ಗುರುದ್ವಾರ ಮಾತಾ ಸಾಹಿಬ್ ದೇವಾಜಿ’ಗೆ ಭೇಟಿ ನೀಡಿದ್ದಾಗ ಈ ಘಟನೆ ಸಂಭವಿಸಿದೆ.

64 ವರ್ಷದ ಬಾದಲ್ ಅವರ ಕೈಗೆ ತಲ್ವಾರ್​​ನಿಂದ ಇರಿದ ಪರಿಣಾಮವಾಗಿ ತೀವ್ರ ಗಾಯಗಳಾಗಿದ್ದು, ರಕ್ತ ಸೋರುತ್ತಿದ್ದ ಎಡಕೈಗೆ ಬಟ್ಟೆ ಕಟ್ಟಿಕೊಂಡು ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: ಬಿಜೆಪಿಯಿಂದ ಮಾತ್ರ ಪಂಜಾಬ್​​ನಲ್ಲಿ ಅಭಿವೃದ್ಧಿ ಸಾಧ್ಯ; ಆಪ್ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಪ್ರಧಾನಿ ಮೋದಿ ಭೇಟಿಯ ಬೆನ್ನಲ್ಲೇ ದಾಳಿ:

ಮುಂದಿನ ವರ್ಷ ನಡೆಯಲಿರುವ ಪಂಜಾಬ್ ವಿಧಾನಸಭೆ ಚುನಾವಣೆಗೆ ಶಿರೋಮಣಿ ಅಕಾಲಿದಳ ಮತ್ತು ಭಾರತೀಯ ಜನತಾ ಪಾರ್ಟಿ (BJP) ಮತ್ತೆ ಮೈತ್ರಿ ಮಾಡಿಕೊಳ್ಳಬಹುದು ಎಂಬ ಊಹಾಪೋಹಗಳ ನಡುವೆ, ಕಳೆದ ವಾರ ದೆಹಲಿಯ ಸಂಸತ್ ಭವನದ ಸಂಕೀರ್ಣದಲ್ಲಿರುವ ಪ್ರಧಾನಿ ಕಚೇರಿಯಲ್ಲಿ ಬಾದಲ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಈ ಭೇಟಿ ನಡೆದ ಕೆಲವೇ ದಿನಗಳಲ್ಲಿ ಅವರ ಮೇಲೆ ದಾಳಿ ನಡೆದಿದೆ. ಪ್ರಧಾನಿ ಭೇಟಿಯ ಮರುದಿನವೇ, ಮಹಿಳಾ ಮೀಸಲಾತಿ ವಿಧೇಯಕ ಮತ್ತು ಕ್ಷೇತ್ರ ಮರುವಿಂಗಡಣೆ ವಿಧೇಯಕವನ್ನು ತಕ್ಷಣವೇ ಜಾರಿಗೆ ತರಬೇಕೆಂದು ಬಾದಲ್ ಅವರ ಪಕ್ಷ ಒತ್ತಾಯಿಸಿತ್ತು.

ದಾಳಿ ನಡೆಸಿದವರ ಬಂಧನ:

ಇಂದು ಮಧ್ಯಾಹ್ನ ಸುಮಾರು 1.50ರ ಸುಮಾರಿಗೆ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿ ಮೆಟ್ಟಿಲುಗಳನ್ನು ಇಳಿಯುತ್ತಿದ್ದಾಗ, ಸಿಖ್ ಸ್ವಯಂಸೇವಕನೊಬ್ಬ ಬಾದಲ್ ಅವರ ಕೈಗೆ ತಲ್ವಾರ್​​ನಿಂದ ದಾಳಿ ನಡೆಸಿದನು. ಈ ವೇಳೆ ಬಾದಲ್ ಅವರನ್ನು ರಕ್ಷಿಸಲು ಯತ್ನಿಸಿದ ವಿಶೇಷ ರಕ್ಷಣಾ ಪಡೆಯ ಪೊಲೀಸ್ ಇನ್ಸ್‌ಪೆಕ್ಟರ್ ಸಂತೋಷ್ ಕೇಂಗ್ರೆ ಅವರ ಕೈಗೂ ಗಾಯಗಳಾಗಿವೆ. ಇಬ್ಬರನ್ನೂ ನಾಂದೇಡ್‌ನ ಯಶೋಸಾಯಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.

ಇದನ್ನೂ ಓದಿ: ಪಂಜಾಬ್‌ನ ಸಂಗ್ರೂರ್​​ನಲ್ಲಿರುವ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ

ದಾಳಿ ನಡೆಸಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಆರೋಪಿಯನ್ನು ಜಸ್ಪಾಲ್ ಸಿಂಗ್ ಎಂದು ಗುರುತಿಸಲಾಗಿದ್ದು, ಈತ ನಿಹಾಂಗ್ ಸಿಖ್ ಆಗಿದ್ದು ಕಳೆದ 2 ವರ್ಷಗಳಿಂದ ಗುರುದ್ವಾರದಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಬಾದಲ್ ಮೇಲಿನ ಎರಡನೇ ಬಾರಿ ದಾಳಿ:

ಕಳೆದ 2 ವರ್ಷಗಳಲ್ಲಿ ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿಯವರ ಮೇಲೆ ನಡೆಯುತ್ತಿರುವ ಎರಡನೇ ದಾಳಿ ಇದಾಗಿದೆ. ಈ ಹಿಂದೆ 2024ರ ಡಿಸೆಂಬರ್‌ನಲ್ಲಿ ಅಮೃತಸರದ ಸ್ವರ್ಣ ಮಂದಿರದ ಪ್ರವೇಶದ್ವಾರದಲ್ಲಿ ಬಾದಲ್ ಅವರ ಮೇಲೆ ದಾಳಿ ನಡೆಸಲಾಗಿತ್ತು. ಆ ದಾಳಿಕೋರನನ್ನು ಡೇರಾಬಾಬಾ ನಿವಾಸಿ ಹಾಗೂ ದಳ ಖಾಲ್ಸಾ ಸಂಘಟನೆಯ ಸದಸ್ಯ ನಾರಾಯಣ್ ಸಿಂಗ್ ಚೌರಾ ಎಂದು ಗುರುತಿಸಲಾಗಿತ್ತು. 2007ರ ಗುರು ಗ್ರಂಥ ಸಾಹಿಬ್ ಅಪಚಾರ ಪ್ರಕರಣದಲ್ಲಿ ಗುರ್ಮೀತ್ ರಾಮ್ ರಹೀಮ್ ಅವರನ್ನು ಬೆಂಬಲಿಸಿದ ಆರೋಪದ ಮೇಲೆ ಅಕಾಲ ತಖ್ತ್ ಬಾದಲ್ ಅವರಿಗೆ ಧಾರ್ಮಿಕ ಶಿಕ್ಷೆ ವಿಧಿಸಿದ ನಂತರ ಆ ದಾಳಿ ನಡೆದಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆ 15ರಂದು ವಿಧಾನಸೌಧ ಮುಂದೆ ಫ್ರೀಡಂ ಹಬ್ಬ: ಈ ಮಾರ್ಗಗಳಲ್ಲಿ ವಾಹನ ಸಂಚಾರ ನಿರ್ಬಂಧ – Kannada News | Independence Day 2026: Vidhana Soudha Traffic Alert for August 15, Road Closures and Alternate Routes

ಬೆಂಗಳೂರು, ಆಗಸ್ಟ್​​ 13: ಸ್ವಾತಂತ್ರ್ಯ ದಿನಾಚರಣೆಯಂದು (Independence Day) ವಿಧಾನಸೌಧದ ಮುಂಭಾಗದಲ್ಲಿ ‘ಫ್ರೀಡಂ ಹಬ್ಬ’ ಕಾರ್ಯಕ್ರಮ ಆಯೋಜನೆಯಾಗಿದ್ದು, ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಡೆಯಲಿದೆ. ಈ ಹಬ್ಬಕ್ಕೆ ಸಾವಿರಾರು ಜನರು ಆಗಮಿಸುವ ನಿರೀಕ್ಷೆಯಿರುವುದರಿಂದ ವಿಧಾನಸೌಧದ ಸುತ್ತಮುತ್ತಲಿನ ರಸ್ತೆಗಳಲ್ಲಿ ಸುಗಮ ಸಂಚಾರಕ್ಕಾಗಿ ಬೆಂಗಳೂರು ಸಂಚಾರ ಪೊಲೀಸರು ವಾಹನ ಸಂಚಾರ ಮಾರ್ಗಗಳನ್ನು (traffic diversions) ಮಾರ್ಪಾಡು ಮಾಡಿದ್ದಾರೆ.

ಸಂಚಾರ ನಿರ್ಬಂಧ

ಫ್ರೀಡಂ ಹಬ್ಬ ಕಾರ್ಯಕ್ರಮ ಹಿನ್ನೆಲೆ ಅಂಬೇಡ್ಕರ್ ರಸ್ತೆಯ ಮೂಲಕ ಕೆ.ಆರ್. ಸರ್ಕಲ್ ಕಡೆಗೆ ಹೋಗುವ ಹಾಗೂ ಕೆ.ಆರ್. ಸರ್ಕಲ್‌ನಿಂದ ಅಂಬೇಡ್ಕರ್ ರಸ್ತೆಯ ಮೂಲಕ ಶಿವಾಜಿನಗರ ಮತ್ತು ವಸಂತನಗರ ಕಡೆಗೆ ತೆರಳುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. (ವಿಧಾನಸೌಧ ಮುಂಭಾಗದ ಎರಡು ಬದಿಯ ರಸ್ತೆಗಳನ್ನು ಬಂದ್ ಮಾಡಲಾಗುವುದು).

ಪರ್ಯಾಯ ಮಾರ್ಗಗಳು ಹೀಗಿವೆ

  • ಅಂಬೇಡ್ಕರ್ ರಸ್ತೆಯಿಂದ ಕೆ.ಆರ್. ಸರ್ಕಲ್ ಕಡೆಗೆ ಹೋಗುವ ವಾಹನಗಳು ಬಾಳೆಕುಂದ್ರಿ ಜಂಕ್ಷನ್‌ನಿಂದ ಕನ್ನಿಂಗ್‌ಹ್ಯಾಮ್ ರಸ್ತೆಯ ಮೂಲಕ ಚಂದ್ರಿಕಾ ಸರ್ಕಲ್‌ನಲ್ಲಿ ಎಡತಿರುವು ಪಡೆದು ಬಸವೇಶ್ವರ ಜಂಕ್ಷನ್ ಹಾಗೂ ಪ್ಯಾಲೇಸ್ ರಸ್ತೆಯ ಮುಖಾಂತರ ಕೆ.ಆರ್. ಸರ್ಕಲ್ ಕಡೆಗೆ ಸಂಚರಿಸಬಹುದು.
  • ಅಥವಾ ಬಾಳೆಕುಂದ್ರಿ ಜಂಕ್ಷನ್‌ನಿಂದ ಸಿಟಿಒ, ಕ್ವೀನ್ಸ್ ಜಂಕ್ಷನ್, ಸಿದ್ದಲಿಂಗಯ್ಯ ಜಂಕ್ಷನ್, ಆರ್.ಆರ್.ಎಂ.ಆರ್ ರಸ್ತೆ ಹಾಗೂ ಕಾರ್ಪೊರೇಷನ್ ಸರ್ಕಲ್ ಮುಖಾಂತರ ತೆರಳಬಹುದು.
  • ಬಿಆರ್‌ವಿ ಕಡೆಯಿಂದ ಬರುವ ವಾಹನಗಳು ಬಿಆರ್‌ವಿ – ಅನಿಲ್ ಕುಂಬ್ಳೆ ಸರ್ಕಲ್ ಬಳಿ ಬಲತಿರುವು ಪಡೆದು ಕ್ವೀನ್ಸ್ ಜಂಕ್ಷನ್, ಸಿದ್ದಲಿಂಗಯ್ಯ ಜಂಕ್ಷನ್, ಆರ್.ಆರ್.ಎಂ.ಆರ್ ರಸ್ತೆ ಹಾಗೂ ಕಾರ್ಪೊರೇಷನ್ ಸರ್ಕಲ್ ಮುಖಾಂತರ ಸಂಚರಿಸಬಹುದು.

ಇದನ್ನೂ ಓದಿ: Video: ಸ್ವಾತಂತ್ರೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಭಾರತೀಯ ಕಲಾ ವೈವಿಧ್ಯದ ಅನಾವರಣ

  • ಬಿಆರ್‌ವಿ ಕಡೆಯಿಂದ ಬರುವ ವಾಹನಗಳು ರಾಜಭವನ ರಸ್ತೆಯ ಮೂಲಕ ಚಾಲುಕ್ಯ ಸರ್ಕಲ್‌ನಲ್ಲಿ ಎಡತಿರುವು ಪಡೆದು ಪ್ಯಾಲೇಸ್ ರಸ್ತೆಯ ಮುಖಾಂತರ ಕೆ.ಆರ್. ಸರ್ಕಲ್ ಕಡೆಗೆ ಸಂಚರಿಸಲು ಸೂಚಿಸಲಾಗಿದೆ.
  • ಅಂಬೇಡ್ಕರ್ ರಸ್ತೆಯ ಮೂಲಕ ಶಿವಾಜಿನಗರ ಕಡೆಗೆ ತೆರಳುವ ವಾಹನಗಳು ಮಹಾರಾಣಿ ಮೇಲ್ಸೇತುವೆ ಬಳಿ ಎಡತಿರುವು ಪಡೆದು ಪ್ಯಾಲೇಸ್ ರಸ್ತೆಯ ಬಸವೇಶ್ವರ ಸರ್ಕಲ್ ಮುಖಾಂತರ ವಸಂತನಗರ ಹಾಗೂ ಶಿವಾಜಿನಗರ ಕಡೆಗೆ ಸಂಚರಿಸಬಹುದು.
  • ಅಥವಾ ಕೆ.ಆರ್. ಸರ್ಕಲ್‌ನಿಂದ ನೃಪತುಂಗ ರಸ್ತೆಯ ಮುಖಾಂತರ ಕಾರ್ಪೊರೇಷನ್ ಸರ್ಕಲ್ ಮತ್ತು ಕೆ.ಬಿ. ರಸ್ತೆ (ಖಾಸಾ ಸುಬಾರಾವ್ ರಸ್ತೆ) ಮುಖಾಂತರ ಶಿವಾಜಿನಗರ ಕಡೆಗೆ ತೆರಳಬಹುದು.

ಫ್ರೀಡಂ ಹಬ್ಬ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಸೀಮಂತ್ ಕುಮಾರ್ ಸಿಂಗ್

ಇನ್ನು ಫ್ರೀಡಂ ಹಬ್ಬ ಕಾರ್ಯಕ್ರಮ ವಿಚಾರವಾಗಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾಧ್ಯಮದವರೊಂದಿಗೆ ಮಾತನಾಡಿದ್ದು, ‘12 ವರ್ಷದ ಮಕ್ಕಳಿದ್ದರೆ ನೋಂದಣಿ‌ ಇರಲಿದೆ. ಇದುವರೆಗೂ 18 ಸಾವಿರ ಜನರು ಆನ್​​ಲೈನ್​​ನಲ್ಲಿ​​ ನೋಂದಾಯಿಸಿಕೊಂಡಿದ್ದಾರೆ. ಒಟ್ಟು ಮೂರು ಭಾಗಗಳಾಗಿ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12 ರಿಂದ 3 ಗಂಟೆ ಒಂದು ಭಾಗ, ಮಧ್ಯಾಹ್ನ 3 ರಿಂದ ಸಂಜೆ 6 ಗಂಟೆವರೆಗೂ ಎರಡನೇ ಭಾಗ ಮತ್ತು ಸಂಜೆ 6ರ ನಂತರ ಮೂರನೇ ಭಾಗ ಎಂದು ವಿಂಗಡನೆ ಮಾಡಲಾಗಿದ್ದು, ಒಂದೊಂದು ಭಾಗದಲ್ಲೂ ಒಂದೊಂದು ಬಗೆಯ ಕಾರ್ಯಕ್ರಮ‌ ಇರಲಿದೆ’ ಎಂದು ಮಾಹಿತಿ ನೀಡಿದರು.

ಐಪಿಎಲ್ ಪಂದ್ಯ, ಹೊಸ ವರ್ಷದ ಸಂಭ್ರಮಾಚರಣೆ ರೀತಿ ಬಂದೋಬಸ್ತ್ 

ಇನ್ನು ‘ಭದ್ರತೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ವಿಧಾನಸೌಧದ ಮುಂಭಾಗ ಬಿಗಿ ಪೊಲೀಸ್ ಬಂದೋಬಸ್ತ್ ಹೆಚ್ಚಿನ ಸಂಖ್ಯೆ ಇರಲಿದೆ. ಐಪಿಎಲ್ ಪಂದ್ಯ, ಹೊಸ ವರ್ಷದ ಸಂಭ್ರಮಾಚರಣೆ ರೀತಿ ಬಿಗಿ ಬಂದೋಬಸ್ತ್ ಭದ್ರತೆ ಇರಲಿದೆ. ಕ್ಯೂಆರ್ ಕೋಡ್​ನಲ್ಲಿ ಇಂತಿಷ್ಟೇ ಸಮಯ ಎಂದು ನಮೂದಿಸಲಾಗಿರುತ್ತೆ. ಆ ಸಮಯದಲ್ಲಿ ಮಾತ್ರ ಅವರಿಗೆ ಅವಕಾಶ ನೀಡಲಾಗುವುದು. 3000ಕ್ಕೂ ಹೆಚ್ಚಿನ‌ ಸಂಖ್ಯೆಯಲ್ಲಿ ಭದ್ರತೆಗೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಆಗಸ್ಟ್ 15 ರಂದು ಬೆಳಗ್ಗೆ ಕೆ.ಆರ್. ವೃತ್ತದಿಂದ ತಿಮ್ಮಯ್ಯ ವೃತ್ತದವರೆಗೂ ಟ್ರಾಫಿಕ್ ನಿರ್ಬಂಧ ಇರಲಿದೆ. ಸಾರ್ವಜನಿಕರು ಪೊಲೀಸರು ಸೂಚಿಸಿದ ನಿಯಮ ಪಾಲಿಸುವಂತೆ ಮನವಿ’ ಮಾಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 5:34 pm, Thu, 13 August 26

Source link

Independence Day 2026: ಭಾರತದಂತೆಯೇ ಆಗಸ್ಟ್‌ 15 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುವ ದೇಶಗಳಿವು – Kannada News | These are the countries that celebrate Independence Day on August 15, like India

ಪ್ರತಿ ವರ್ಷ, ಭಾರತವು ಆಗಸ್ಟ್ 15 ರಂದು ತನ್ನ ಸ್ವಾತಂತ್ರ್ಯ ದಿನವನ್ನು (Independence Day) ಆಚರಿಸುತ್ತದೆ. 1947 ರ ಈ ದಿನ ನಮ್ಮ ದೇಶವು ಬ್ರಿಟಿಷರ ದಾಸ್ಯದಿಂದ ಮುಕ್ತವಾಗಿ ಸಂಪೂರ್ಣ ಸ್ವಾತಂತ್ರ್ಯವನ್ನು ಗಳಿಸಿತು. ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಹೋರಾಟಗಳು ಬ್ರಿಟಿಷರನ್ನು ಭಾರತ ಬಿಟ್ಟು ತೊಲಗುವಂತೆ ಮಾಡಿತು. ಹಾಗಾಗಿ ಈ ದಿನ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ದಿನವಾಗಿದೆ. ಅಲ್ಲದೆ ಪ್ರತಿವರ್ಷವೂ ಸಾತಂತ್ರ್ಯ ದಿನವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ನಮ್ಮ ದೇಶದಲ್ಲಿ ಆಗಸ್ಟ್‌ 15 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುವಂತೆ ಈ ಕೆಲವು ದೇಶಗಳೂ ಸಹ ಇದೇ ದಿನ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತವೆ. ಆ ದೇಶಗಳು ಯಾವುವು ಎಂಬ ಸಂಪೂರ್ಣ ವಿವರ ಇಲ್ಲಿದೆ.

ಭಾರತದಂತೆ ಆಗಸ್ಟ್‌ 15 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುವ ದೇಶಗಳು:

ದಕ್ಷಿಣ ಕೊರಿಯಾ: ಭಾರತದಂತೆಯೇ, ದಕ್ಷಿಣ ಕೊರಿಯಾ ಕೂಡ ಆಗಸ್ಟ್ 15 ರಂದು ಸ್ವಾತಂತ್ರ್ಯ ಗಳಿಸಿತು. ಈ ದೇಶ ಆಗಸ್ಟ್ 15, 1945 ರಂದು ಜಪಾನ್‌ನಿಂದ ಸ್ವಾತಂತ್ರ್ಯ ಗಳಿಸಿತು. ಅಮೆರಿಕ ಮತ್ತು ಸೋವಿಯತ್ ಪಡೆಗಳು ಕೊರಿಯಾವನ್ನು ಜಪಾನಿನ ಆಕ್ರಮಣದಿಂದ ಮುಕ್ತಗೊಳಿಸಿದವು. ಈ ದಿನವನ್ನು ದಕ್ಷಿಣ ಕೊರಿಯಾದಲ್ಲಿ ರಾಷ್ಟ್ರೀಯ ರಜಾದಿನವಾಗಿ ಆಚರಿಸಲಾಗುತ್ತದೆ.

ಉತ್ತರ ಕೊರಿಯಾ: ದಕ್ಷಿಣ ಕೊರಿಯಾದಂತೆ, ಉತ್ತರ ಕೊರಿಯಾ ಕೂಡ ಆಗಸ್ಟ್ 15 ರಂದು ಸ್ವಾತಂತ್ರ್ಯ ಗಳಿಸಿತು. ಇದು 1945 ರ ಈ ದಿನದಂದು ಜಪಾನಿನ ಆಕ್ರಮಣದಿಂದ ಮುಕ್ತಗೊಂಡಿತು. ವಾಸ್ತವವಾಗಿ, ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ಎರಡೂ ಒಂದೇ ದೇಶವಾಗಿತ್ತು. ಆದರೆ ಸ್ವಾತಂತ್ರ್ಯ ಗಳಿಸಿದ ಮೂರು ವರ್ಷಗಳ ನಂತರ, ಅವು ವಿಭಜನೆಯಾಗಿ ಪ್ರತ್ಯೇಕ ದೇಶಗಳಾದವು.

ಬಹ್ರೇನ್: ಬಹ್ರೇನ್ ಪರ್ಷಿಯನ್ ಕೊಲ್ಲಿಯಲ್ಲಿರುವ ಒಂದು ಸಣ್ಣ ದೇಶ. ಆಗಸ್ಟ್ 15 ರಂದು ಬಹ್ರೇನ್ ಬ್ರಿಟಿಷರ ದಾಸ್ಯದಿಂದ ಮುಕ್ತವಾಯಿತು. ಈ ದೇಶ ಆಗಸ್ಟ್ 15, 1971 ರಂದು ಸ್ವಾತಂತ್ರ್ಯ ಪಡೆಯಿತು. 1960 ರ ದಶಕದಿಂದಲೂ ಬ್ರಿಟಿಷ್ ಪಡೆಗಳು ಬಹ್ರೇನ್ ಅನ್ನು ತೊರೆಯಲು ಪ್ರಾರಂಭಿಸಿದ್ದವು. ಆಗಸ್ಟ್ 15 ರಂದು ಎರಡೂ ದೇಶಗಳ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು, ಅದರ ನಂತರ ಬಹ್ರೇನ್ ಸಂಪೂರ್ಣ ಸ್ವತಂತ್ರ ರಾಷ್ಟ್ರವಾಯಿತು. ಆದರೆ ಬಹ್ರೇನ್‌ನಲ್ಲಿ ಡಿಸೆಂಬರ್ 16 ರಂದು ರಾಷ್ಟ್ರೀಯ ದಿನವನ್ನು ಅಧಿಕೃತವಾಗಿ ಆಚರಿಸಲಾಗುತ್ತದೆ.

ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಯಂದು ಸುಲಭವಾಗಿ ‘ತ್ರಿವರ್ಣ’ ಖಾದ್ಯ ತಯಾರಿಸಿ; ರೆಸಿಪಿ ಇಲ್ಲಿದೆ

ಲಿಚ್ಟೆನ್‌ಸ್ಟೈನ್: ಲೀಚ್ಟೆನ್‌ಸ್ಟೈನ್ ಎಂಬ ಯುರೋಪಿನ ಪುಟ್ಟ ರಾಷ್ಟ್ರ ಕೂಡ ಆಗಸ್ಟ್‌ 15 ರಂದೇ ತನ್ನ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತದೆ. ಈ ದೇಶವು ಆಗಸ್ಟ್ 15, 1866 ರಂದು ಜರ್ಮನ್ ಆಕ್ರಮಣದಿಂದ ಮುಕ್ತವಾಯಿತು. 1940 ರಿಂದ, ವಿಶ್ವದ ಅತ್ಯಂತ ಚಿಕ್ಕ ದೇಶಗಳಲ್ಲಿ ಒಂದಾದ ಲೀಚ್ಟೆನ್‌ಸ್ಟೈನ್, ಭಾರತದಂತೆಯೇ ಈ ದಿನದಂದು ತನ್ನ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಾ ಬರುತ್ತಿದೆ.

ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ: ಆಫ್ರಿಕಾದ ಕಾಂಗೋ ದೇಶವು ಆಗಸ್ಟ್ 15, 1960 ರಂದು ಫ್ರಾನ್ಸ್‌ನ ದಾಸ್ಯದಿಂದ ಮುಕ್ತವಾಗಿ  ಸ್ವಾತಂತ್ರ್ಯ ಪಡೆಯಿತು. ನಂತರ ಅದು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯವಾಯಿತು. ಫ್ರೆಂಚ್ ಆಕ್ರಮಣದಲ್ಲಿದ್ದಾಗ ಈ ರಾಷ್ಟ್ರವನ್ನು ಫ್ರೆಂಚ್ ಕಾಂಗೋ ಎಂದು ಕರೆಯಲಾಗುತ್ತಿತ್ತು. ಕಾಂಗೋ ಈ ದಿನವನ್ನು ಬಹಳ ಸಂಭ್ರಮದಿಂದ ಆಚರಿಸುತ್ತದೆ. ಈ ದಿನದಂದು ಮೆರವಣಿಗೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಭಾರತೀಯ ಮಜ್ದೂರ್ ಸಂಘ ಆಗ್ರಹ; ಆಗಸ್ಟ್ 17ಕ್ಕೆ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ – Kannada News | Bharatiya Mazdoor Sangh, the wokers wing of RSS, calls for nationwide demonstrations on August 17th

ಭಾರತೀಯ ಮಜ್ದೂರ್ ಸಂಘದ ವತಿಯಿಂದ ಎರಡು ವರ್ಷದ ಹಿಂದೆ ನಡೆದ ಕಾರ್ಮಿಕರ ಪ್ರತಿಭಟನೆಯ ಸಾಂದರ್ಭಿಕ ಚಿತ್ರImage Credit source: PTI

ನವದೆಹಲಿ, ಆಗಸ್ಟ್ 13: ಕಾರ್ಮಿಕರ ದೀರ್ಘಕಾಲದ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ, ದೇಶಾದ್ಯಂತ ಆಗಸ್ಟ್ 17, ಸೋಮವಾರದಂದು ಬೃಹತ್ ಪ್ರತಿಭಟನೆ ನಡೆಸಲು ಆರೆಸ್ಸೆಸ್​ನ ಕಾರ್ಮಿಕ ವಿಭಾಗವಾದ ಭಾರತೀಯ ಮಜ್ದೂರ್ ಸಂಘ (BMS) ಕರೆ ನೀಡಿದೆ. ಬಿಎಂಎಸ್ ಕೇಂದ್ರ ಕಾರ್ಯಕಾರಿ ಸಮಿತಿ (KKS) ನಿರ್ಧಾರದಂತೆ, ದೇಶದ 28 ರಾಜ್ಯ ಘಟಕಗಳು ಹಾಗೂ 42 ಕೈಗಾರಿಕಾ ಫೆಡರೇಶನ್‌ಗಳು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಧರಣಿ ಮತ್ತು ರ‍್ಯಾಲಿಗಳನ್ನು ಆಯೋಜಿಸಲಿವೆ. ಈ ಮೂಲಕ ಪ್ರಧಾನಮಂತ್ರಿ, ಹಣಕಾಸು ಸಚಿವರು ಹಾಗೂ ಕಾರ್ಮಿಕ ಸಚಿವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಬಿಎಂಎಸ್ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಕುಮಾರ್ ಪಾಂಡೆ ತಿಳಿಸಿದ್ದಾರೆ.

ಮಜ್ದೂರ್ ಸಂಘ ಮುಂದಿಟ್ಟಿರುವ ಪ್ರಮುಖ ಬೇಡಿಕೆಗಳು

  1. ಪಿಂಚಣಿ ಹಾಗೂ ಇಎಸ್‍ಐ ಸೌಲಭ್ಯ: EPS-95 ಅಡಿಯಲ್ಲಿ ಕನಿಷ್ಠ ಮಾಸಿಕ ಪಿಂಚಣಿಯನ್ನು ₹7,500 ಕ್ಕೆ ಏರಿಕೆ ಮಾಡಬೇಕು ಮತ್ತು ಆಯುಷ್ಮಾನ್ ಭಾರತ್ ಯೋಜನೆಗೆ ಜೋಡಿಸಬೇಕು. ESI ಗರಿಷ್ಠ ವೇತನ ಮಿತಿಯನ್ನು ₹21,000 ರಿಂದ ₹42,000 ಕ್ಕೆ ಹಾಗೂ EPF ಮಿತಿಯನ್ನು ₹15,000 ರಿಂದ ₹30,000 ಕ್ಕೆ ಹೆಚ್ಚಿಸಬೇಕು.
  2. ವೇತನ ಮತ್ತು ಗ್ರಾಚ್ಯುಟಿ: ಗ್ರಾಚ್ಯುಟಿ ಲೆಕ್ಕಾಚಾರವನ್ನು 15 ದಿನಗಳ ವೇತನದಿಂದ 30 ದಿನಗಳಿಗೆ ಹೆಚ್ಚಿಸಬೇಕು. ಹೆಚ್ಚುತ್ತಿರುವ ಜೀವನ ವೆಚ್ಚಕ್ಕೆ ಅನುಗುಣವಾಗಿ ಕನಿಷ್ಠ ವೇತನ ನಿಗದಿಪಡಿಸಬೇಕು.
  3. ಸ್ಕೀಮ್ ವರ್ಕರ್ಸ್‌ಗೆ ಗೌರವಧನ: ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಮಧ್ಯಾಹ್ನದ ಬಿಸಿಯೂಟ ಯೋಜನೆ ಹಾಗೂ ರಾಷ್ಟ್ರೀಯ ಆರೋಗ್ಯ ಮಿಷನ್ ನೌಕರರ ಮಾಸಿಕ ಗೌರವಧನವನ್ನು ಹೆಚ್ಚಿಸಬೇಕು.
  4. ಹಳೆಯ ಪಿಂಚಣಿ ಯೋಜನೆ ಮರುಸ್ಥಾಪನೆ: ಹಳೆಯ ಪಿಂಚಣಿ ಯೋಜನೆಯನ್ನು (OPS) ತಕ್ಷಣವೇ ಮರುಸ್ಥಾಪಿಸಬೇಕು ಮತ್ತು ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು.
  5. ಬ್ಯಾಂಕಿಂಗ್ ವ್ಯವಸ್ಥೆ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಾರಕ್ಕೆ 5 ದಿನಗಳ ಕೆಲಸದ ಅವಧಿಯನ್ನು ಜಾರಿಗೊಳಿಸಬೇಕು.
  6. ಗುತ್ತಿಗೆ ಕಾರ್ಮಿಕರಿಗೆ ಸಮಾನ ವೇತನ: ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಹಾಗೂ ವೇತನ ವಂಚನೆ ಮಾಡುವ ಗುತ್ತಿಗೆದಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

ಇದನ್ನೂ ಓದಿ: ಸರ್ಕಾರದ ಈ ಸೌಲಭ್ಯ ಪಡೆಯಲು ಹಿರಿಯ ನಾಗರಿಕರ ಕಾರ್ಡ್ ಅಗತ್ಯ, ಹೀಗೆ ಅರ್ಜಿ ಸಲ್ಲಿಸಿ

ಕಾರ್ಮಿಕ ಕಾಯ್ದೆಗಳಿಗೆ ವಿರೋಧ

ಕೇಂದ್ರ ಸರ್ಕಾರದ ನೂತನ ಕಾರ್ಮಿಕ ಸಂಹಿತೆಗಳಲ್ಲಿರುವ (IR Code ಮತ್ತು OSH&WC Code) ಕಾರ್ಮಿಕ ವಿರೋಧಿ ಅಂಶಗಳನ್ನು ಬಿಎಂಎಸ್ ತೀವ್ರವಾಗಿ ವಿರೋಧಿಸಿದೆ. ಕೇಂದ್ರ ಸರ್ಕಾರವು ತಕ್ಷಣವೇ ಕಾರ್ಮಿಕ ಸಂಘಟನೆಗಳೊಂದಿಗೆ ಮಾತುಕತೆ ನಡೆಸಿ ಈ ಕಾಯ್ದೆಗಳಿಗೆ ಸೂಕ್ತ ತಿದ್ದುಪಡಿ ತರಬೇಕು ಹಾಗೂ ಶೀಘ್ರವೇ ‘ಭಾರತೀಯ ಕಾರ್ಮಿಕ ಸಮ್ಮೇಳನ’ (Indian Labour Conference) ಕರೆಯಬೇಕು ಎಂದು ಆಗ್ರಹಿಸಿದೆ.

ದೇಶದಲ್ಲಿ 1 ಕೋಟಿಗೂ ಹೆಚ್ಚು ಸಂಖ್ಯೆಯಲ್ಲಿರುವ ಸ್ಕೀಮ್ ವರ್ಕರ್ಸ್‌ಗಳನ್ನು ಕಾರ್ಮಿಕರೆಂದು ಗುರುತಿಸಿ, ಅವರಿಗಾಗಿ ಪ್ರತ್ಯೇಕ ಸಮಗ್ರ ನೀತಿಯನ್ನು ರೂಪಿಸುವಂತೆ ಸರ್ಕಾರವನ್ನು ಬಿಎಂಎಸ್ ಒತ್ತಾಯಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಹೌದು, ನಾನು ಔಟ್ ಆಗಿದ್ದೆ’; ಔಟೆಂದು ಗೊತ್ತಿದ್ದರೂ ಬ್ಯಾಟಿಂಗ್‌ ಮುಂದುವರೆಸಿದ ಸ್ಟೀವ್ ಸ್ಮೀತ್ – Kannada News | Steve Smith Confesses Bat Edge, UltraEdge Fails: Cricket’s Sportsmanship Debate Ignites

ಡಾರ್ವಿನ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶ (australia vs bangladesh) ನಡುವಿನ ಮೊದಲ ಟೆಸ್ಟ್‌ನ ಮೊದಲ ದಿನದಂದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಕೇವಲ 198 ರನ್‌ಗಳಿಗೆ ಆಲೌಟ್ ಆಯಿತು. ಆಸೀಸ್ ಪರ ಅನುಭವಿ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ (steve smith) 109 ಎಸೆತಗಳಲ್ಲಿ 71 ರನ್ ಬಾರಿಸಿ ತಂಡವನ್ನು 150 ರನ್​ಗಳ ಗಡಿ ದಾಟಿಸಿದರು. ಇಲ್ಲದಿದ್ದರೆ ಆಸೀಸ್ ಪಡೆ 150 ರನ್​ಗಳನ್ನು ದಾಟುತ್ತಿರಲಿಲ್ಲ. ಆದರೆ ಪಂದ್ಯದ ಮೊದಲ ದಿನದಾಟ ಮುಗಿದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ಟೀವ್ ಸ್ಮಿತ್ ನೀಡಿದ ಹೇಳಿಕೆ ಅವರ ನೈತಿಕತೆ ಮತ್ತು ಪ್ರಾಮಾಣಿಕತೆಯ ಮೇಲೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಚೆಂಡು ಬ್ಯಾಟಿಗೆ ತಾಗಿತ್ತು

ವಾಸ್ತವವಾಗಿ ಸ್ಟೀವ್ ಸ್ಮಿತ್ ಇಂದಿನ ಪಂದ್ಯದಲ್ಲಿ ಪ್ರಾಮಾಣಿಕತೆ ಮೆರೆದಿದ್ದರೆ ಅವರು ಕೂಡ ಒಂದಂಕಿ ಮೊತ್ತ ದಾಟಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಚೆಂಡು ಬ್ಯಾಟಿಗೆ ತಾಗಿರುವುದು ಗೊತ್ತಿದ್ದರೂ, ತಂತ್ರಜ್ಞಾನದ ಲೋಪದೋಷದ ಲಾಭ ಪಡೆದ ಸ್ಮಿತ್ ಬ್ಯಾಟಿಂಗ್‌ ಮುಂದುವರೆಸಿ ಅರ್ಧಶತಕದ ಇನ್ನಿಂಗ್ಸ್ ಕೂಡ ಆಡಿದರು. ಪಂದ್ಯದ ಮೊದಲ ದಿನದಾಟ ಮುಗಿದ ಬಳಿಕ ಪತ್ರಕರ್ತರು ಈ ಬಗ್ಗೆ ಕೇಳಿದಕ್ಕೆ ಯಾವುದೇ ಅಂಜಿಕೆ ಇಲ್ಲದೆ ಉತ್ತರಿಸಿದ ಸ್ಮಿತ್, ಹೌದು, ಚೆಂಡು ಬ್ಯಾಟಿಗೆ ತಾಗಿತ್ತು. ಆದರೆ ಅಲ್ಟ್ರಾ ಎಡ್ಜ್ ತಂತ್ರಜ್ಞಾನ ಬಳಿಸಿದಾಗ ಚೆಂಡು ತಾಗಿರುವುದು ಖಚಿತವಾಗಲಿಲ್ಲ. ಹೀಗಾಗಿ ನನಗೆ ತಂತ್ರಜ್ಞಾನದ ಲೋಪದೋಷದಿಂದ ಲಾಭವಾಗಿ ಬದುಕುಳಿದೆ ಎಂದಿದ್ದಾರೆ. ಅಷ್ಟಕ್ಕೂ ನಡೆದಿದ್ದೇನು ಎಂಬುದನ್ನು ನೋಡುವುದಾದರೆ..

ಬಾಂಗ್ಲಾ ವಿರುದ್ಧ ಅತ್ಯಲ್ಪ ಮೊತ್ತಕ್ಕೆ ಆಲೌಟ್; ಅವಮಾನಕರ ದಾಖಲೆ ಬರೆದ ಆಸ್ಟ್ರೇಲಿಯಾ

ಸ್ಮಿತ್ ವಿಕೆಟ್​ಗಾಗಿ ಮೇಲ್ಮನವಿ

ಆಸ್ಟ್ರೇಲಿಯಾ ಇನ್ನಿಂಗ್ಸ್​ನ 21 ನೇ ಓವರ್‌ನಲ್ಲಿ ಸ್ಟೀವ್ ಸ್ಮಿತ್ ಸ್ಟ್ರೈಕ್​ನಲ್ಲಿದ್ದರು. ಇತ್ತ ಬಾಂಗ್ಲಾದೇಶ ಪರ ಇಬಾದತ್ ಹೊಸೈನ್ ಬೌಲಿಂಗ್ ಮಾಡುತ್ತಿದ್ದರು. ಈ ಓವರ್​ನ ನಾಲ್ಕನೇ ಎಸೆತವನ್ನು ಸ್ಮಿತ್ ಡಿಫೆಂಡ್ ಮಾಡಲು ಪ್ರಯತ್ನಿಸಿದರು. ಆದರೆ ಚೆಂಡು ಸ್ಮಿತ್ ಅವರ ಬ್ಯಾಟಿನ ಅಂಚಿಗೆ ತಾಗಿ ಸೀಧಾ ವಿಕೆಟ್ ಕೀಪರ್​ ಕೈಗೆ ಹೋಯಿತು. ಕೂಡಲೇ ಬಾಂಗ್ಲಾದೇಶ ಆಟಗಾರರು ಸಂಭ್ರಮಿಸಲು ಶುರು ಮಾಡಿದರು. ಆದರೆ ಅಂಪೈರ್ ಔಟ್ ನೀಡಲಿಲ್ಲ. ಹೀಗಾಗಿ ಬಾಂಗ್ಲಾ ನಾಯಕ ಸ್ಮಿತ್ ವಿಕೆಟ್​ಗಾಗಿ ಮೇಲ್ಮನವಿ ಸಲ್ಲಿಸಿದರು.

ಅಲ್ಟ್ರಾ ಎಡ್ಜ್ ತಂತ್ರಜ್ಞಾನದಲ್ಲಿ ಲೋಪ

ಮೂರನೇ ಅಂಪೈರ್ ಅಲ್ಟ್ರಾ ಎಡ್ಜ್ ತಂತ್ರಜ್ಞಾನವನ್ನು ಬಳಸಿ ಪರಿಶೀಲಿಸಿದಾಗ ಚೆಂಡು ಸ್ಮಿತ್ ಅವರ ಬ್ಯಾಟ್‌ಗೆ ತಾಗಿರುವುದು ಪತ್ತೆಯಾಗಲಿಲ್ಲ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಅಲ್ಟ್ರಾ ಎಡ್ಜ್ ತಂತ್ರಜ್ಞಾನವನ್ನು ಬಳಸಿದಾಗ ಚೆಂಡು ಬ್ಯಾಟ್ ಸಮೀಪ ಬರುವುದಕ್ಕೂ ಮುನ್ನವೇ ಫ್ಲಾಟ್ ಲೈನ್‌ನಲ್ಲಿ ಏರಿಳಿತ ಕಾಣುತ್ತಿತ್ತು. ಆದ್ದರಿಂದ, ಚೆಂಡು ಸ್ಮಿತ್ ಅವರ ಬ್ಯಾಟ್‌ಗೆ ತಗುಲಿದೆ ಎಂಬುದು ಮೂರನೇ ಅಂಪೈರ್‌ಗೆ ಖಚಿತವಾಗಲಿಲ್ಲ. ಹೀಗಾಗಿ ಮೂರನೇ ಅಂಪೈರ್ ಸ್ಮಿತ್ ನಾಟೌಟ್ ಎಂದು ತೀರ್ಪು ನೀಡಿದರು.

ಕ್ರೀಡಾ ಸ್ಫೂರ್ತಿ ಮರೆತ ಸ್ಮಿತ್

ಪತ್ರಿಕಾಗೋಷ್ಠಿಯಲ್ಲಿ ವರದಿಗಾರರೊಬ್ಬರು ಈ ಬಗ್ಗೆ ಸ್ಮಿತ್ ಬಳಿ ಆ ಘಟನೆಯ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸ್ಮಿತ್, ‘ಹೌದು, ನಾನು ಔಟ್ ಆಗಿದ್ದೆ. ಬ್ಯಾಟಿಗೆ ಚೆಂಡು ತಾಗಿರುವುದು ನನಗೆ ಗೊತ್ತಿತ್ತು. ಆದರೆ ತಂತ್ರಜ್ಞಾನ ನನ್ನನ್ನು ಔಟಾಗುವುದರಿಂದ ಪಾರು ಮಾಡಿತು. ಕೆಲಮೊಮ್ಮೆ ಈ ರೀತಿಯ ಲಾಭವನ್ನು ಬಳಸಿಕೊಳ್ಳಬೇಕು’ ಎಂದು ಸ್ಮಿತ್ ಯಾವುದೇ ಅಂಜಿಕೆ ಇಲ್ಲದೆ ಹೇಳಿದರು. ಎಷ್ಟೋ ಬಾರಿ ಅಂಪೈರ್ ನಾಟೌಟ್ ನೀಡಿದಾಗಲೂ ಸಚಿನ್ ತೆಂಡೂಲ್ಕರ್ ತಾನು ಔಟಾಗಿದ್ದೇನೆ ಎಂದು ಪೆವಿಲಿಯನ್ ಸೇರಿಕೊಳ್ಳುತ್ತಿದ್ದರು. ಹೀಗಾಗಿಯೇ ಅವರನ್ನು ಕ್ರಿಕೆಟ್ ದೇವರು ಎನ್ನುತ್ತಾರೆ. ಆದರೆ ತಾನು ಔಟಾಗಿರುವುದು ಗೊತ್ತಿದ್ದರೂ ಬ್ಯಾಟಿಂಗ್‌ ಮುಂದುವರೆಸಿದ ಸ್ಟೀವ್ ಸ್ಮಿತ್ ಅವರ ಕ್ರೀಡಾ ಸ್ಫೂರ್ತಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:07 pm, Thu, 13 August 26

Source link

‘ಜಂತರ್ ಮಂತರ್ ಪ್ರತಿಭಟನೆಯಲ್ಲಿ ಇದ್ದ ಬಹುತೇಕರು ಜೆನ್ ಜಿ ಅಲ್ಲ’ ಎಂದ ಕಂಗನಾ ರಣಾವತ್ – Kannada News | Kangana Ranaut clarifies Generation Gutter remark Shabana Azmi Jantar Mantar protest

ಪ್ರತಿಭಟನಾ ನಿರತರನ್ನು ‘ಜನರೇಷನ್ ಗಟರ್’ (Gen Gutter) ಎಂದು ಕರೆದು ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದ ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut), ಇದೀಗ ತಮ್ಮ ಹೇಳಿಕೆಗೆ ಮತ್ತೊಂದು ಸ್ಪಷ್ಟನೆ ನೀಡಿದ್ದಾರೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಬಗ್ಗೆ ಕಂಗನಾ ಅವರು ಮೊದಲಿನಿಂದಲೂ ಒಂದಲ್ಲಾ ಒಂದು ರೀತಿ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಈಗ ಅವರು ತಮ್ಮ ಮೊದಲಿನ ಹೇಳಿಕೆಗಳಿಗೆ ಸಮರ್ಥನೆ ನೀಡಿದ್ದಾರೆ.

ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಕಂಗನಾ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ‘ಈ ದೇಶದ ಯುವಕರ ಬಗ್ಗೆ ಮಾತನಾಡುತ್ತಿದ್ದೀರಾ? ಜೆನ್ ಜಿ (Gen Z) ಜನಸಂಖ್ಯೆ ಸುಮಾರು 30ರಿಂದ 35 ಕೋಟಿ ಇದೆ. ಆದರೆ ದೆಹಲಿಯ ಜಂತರ್ ಮಂತರ್‌ನಲ್ಲಿ ನೆರೆದಿದ್ದ 10 ಸಾವಿರ ಜನರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಶಬಾನಾ ಆಜ್ಮಿ ವಯಸ್ಸಿನವರಾಗಿದ್ದರು. ಅಲ್ಲಿ ವಿವಿಧ ವಯೋಮಾನದ ಜನರಿದ್ದರು. ಕೇವಲ 2 ಸಾವಿರದಷ್ಟು ಮಾತ್ರ ಜೆನ್ ಜಿ ಯುವಕರಿದ್ದರು. ಹಾಗಿರುವಾಗ ಇದನ್ನು ಇಡೀ ದೇಶದ ಜೆನ್ ಜಿ ನಡೆಸಿದ ಪ್ರತಿಭಟನೆ ಎಂದು ಹೇಗೆ ಕರೆಯುತ್ತೀರಾ?’ ಎಂದು ಪ್ರಶ್ನಿಸಿದ್ದಾರೆ.

‘ನಾನು ಯುವ ಜನರ ವಿರೋಧಿ ಅಲ್ಲ’

ಮುಂದುವರಿದು ಮಾತನಾಡಿದ ಕಂಗನಾ ರಣಾವತ್ ಅವರು, ‘ನಾನು ಅಲ್ಲಿ ನೆರೆದಿದ್ದ ನಿರ್ದಿಷ್ಟ ಗುಂಪನ್ನು ಉದ್ದೇಶಿಸಿ ಮಾತ್ರ ಹೇಳಿಕೆ ನೀಡಿದ್ದೆ. ಇಡೀ ಯುವ ಪೀಳಿಗೆಯನ್ನು ನಿಂದಿಸಿರುವ ಒಂದೇ ಒಂದು ಸಾಲನ್ನು ತೋರಿಸಿ ಎಂದು ನಿಮಗೆ ಬಹಿರಂಗ ಸವಾಲು ಹಾಕುತ್ತೇನೆ. ನನ್ನ ವಿರುದ್ಧ ಅನಗತ್ಯ ಅಜೆಂಡಾ ಚಲಾಯಿಸಬೇಡಿ, ನಾನು ಕೂಡ ಯುವತಿಯಾಗಿದ್ದು, ಯುವಕರ ವಿರುದ್ಧವಿಲ್ಲ’ ಎಂದು ಹೇಳಿದ್ದಾರೆ.

ಜುಲೈ 20 ರಂದು ಜಂತರ್ ಮಂತರ್‌ನಿಂದ ಸಂಸತ್ತಿನತ್ತ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ 75 ವರ್ಷದ ಹಿರಿಯ ನಟಿ ಶಬಾನಾ ಆಜ್ಮಿ ಭಾಗವಹಿಸಿದ್ದರು. ಪ್ರತಿಭಟನಾಕಾರರೊಂದಿಗೆ ಟ್ರಕ್‌ನಲ್ಲಿ ಪ್ರಯಾಣಿಸುತ್ತಿರುವ ಹಾಗೂ ಬ್ಯಾರಿಕೇಡ್‌ಗಳನ್ನು ದಾಟುತ್ತಿರುವ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ನಟ ಪ್ರಕಾಶ್ ರಾಜ್ ಕೂಡ ಅವರೊಂದಿಗಿದ್ದರು.

ಇದನ್ನೂ ಓದಿ: ‘ನಾನು ಸಂಘಿ ಆಗಬೇಕು’: ವಿಡಿಯೋ ನೋಡಿ ಟ್ರೋಲ್‌ ಮಾಡಿದವರಿಗೆ ಕಂಗನಾ ತಿರುಗೇಟು

ಕಂಗನಾ ನೀಡಿದ್ದ ಹೇಳಿಕೆ ಏನು?

ಕಳೆದ ತಿಂಗಳು ಜೆನ್ ಜಿ ಪ್ರತಿಭಟನೆಯ ವಿಡಿಯೋಗಳನ್ನು ಟೀಕಿಸಿದ್ದ ಕಂಗನಾ, “ನನ್ನ ಜೀವನದಲ್ಲಿ ಇಷ್ಟೊಂದು ಅಸಹ್ಯಕರ ವಾತಾವರಣವನ್ನು ಎಲ್ಲೂ ನೋಡಿರಲಿಲ್ಲ. ಪ್ರತಿಭಟನೆಯ ರೀಲ್ಸ್‌ಗಳು ವಾಂತಿ ಬರುವಂತಿವೆ. ಅವರು ಬಳಸುತ್ತಿರುವ ಭಾಷೆ ತೀರಾ ಅಸಭ್ಯವಾಗಿದೆ. ನಾನು ಅವರನ್ನು ಜನರೇಷನ್ ಗಟಾರ ಎಂದು ಕರೆಯುತ್ತೇನೆ. ವ್ಯವಸ್ಥೆಗೆ ಕೊಡುಗೆ ನೀಡಲು ಅವರ ಬಳಿ ಏನೂ ಇಲ್ಲ. ಅವರು ಓದಿನಲ್ಲೂ ಮುಂದಿಲ್ಲ’ ಎಂದು ಕಟುವಾಗಿ ವಾಗ್ದಾಳಿ ನಡೆಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version