‘ನಮಗೆ ಬೇಕಾದ್ದು ದಕ್ಕದೇ ಹೋದರೆ ಬೇರೆ ಮಾರ್ಗದಲ್ಲಿ ಕೊನೆಗಾಣಿಸಬೇಕಾಗುತ್ತದೆ’- ಇರಾನ್​ಗೆ ಟ್ರಂಪ್ ವಾರ್ನಿಂಗ್

ವಾಷಿಂಗ್ಟನ್, ಮೇ 31: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಇರಾನ್ ದೇಶಕ್ಕೆ ತೀವ್ರ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದ್ದಾರೆ. ಪಶ್ಚಿಮ ಏಷ್ಯಾ ಬಿಕ್ಕಟ್ಟು ತೀವ್ರಗೊಂಡಿರುವ ಈ ಸಂದರ್ಭದಲ್ಲಿ, ಶಾಂತಿ ಒಪ್ಪಂದದ ನಿಯಮಗಳನ್ನು ಕಠಿಣಗೊಳಿಸಿರುವ ಟ್ರಂಪ್, “ನಾವು ಅಂದುಕೊಂಡಿದ್ದು ನಮಗೆ ಸಿಗದಿದ್ದರೆ, ನಾವು ಬೇರೆ ಮಾರ್ಗದಲ್ಲೇ ಇದನ್ನು ಕೊನೆಗಾಣಿಸುತ್ತೇವೆ” ಎಂದು ನೇರ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕ ಮತ್ತು ಇರಾನ್ ನಡುವೆ ಮಧ್ಯವರ್ತಿಗಳ ಮೂಲಕ ನಡೆಯುತ್ತಿರುವ ಶಾಂತಿ ಒಪ್ಪಂದದ ಕರಡು ಪ್ರತಿಯನ್ನು (Draft MoU) ಶ್ವೇತಭವನದ ಸಿಚುಯೇಷನ್ ರೂಮ್‌ನಲ್ಲಿ ಪರಾಮರ್ಶಿಸಿದ ನಂತರ ಡೊನಾಲ್ಡ್ ಟ್ರಂಪ್ ಈ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಫಾಕ್ಸ್ ನ್ಯೂಸ್‌ನೊಂದಿಗೆ ಮಾತನಾಡಿದ ಅವರು, ಸಂಧಾನದ ಮಾತುಕತೆಗಳು ನಡೆಯುತ್ತಿವೆಯಾದರೂ ಅಮೆರಿಕದ ನಿಯಮಗಳಿಗೆ ಇರಾನ್ ಒಪ್ಪಲೇಬೇಕು ಎಂದು ಒತ್ತಾಯಿಸಿದ್ದಾರೆ.

ಬೇರೆ ಮಾರ್ಗದ ಎಚ್ಚರಿಕೆ ಇತ್ತ ಟ್ರಂಪ್

ಶಾಂತಿ ಮಾತುಕತೆಯಲ್ಲಿ ಅತಿ ಹೆಚ್ಚು ಆತುರಪಡುವುದು ಒಳ್ಳೆಯದಲ್ಲ ಎಂದು ಹೇಳಿದ ಟ್ರಂಪ್, “ಒಂದು ವೇಳೆ ನಾವು ಬಯಸಿದ ಫಲಿತಾಂಶ ನಮಗೆ ಸಿಗದಿದ್ದರೆ, ನಾವು ಈ ಬಿಕ್ಕಟ್ಟನ್ನು ಸಂಪೂರ್ಣವಾಗಿ ಬೇರೆ ರೀತಿಯಲ್ಲಿ ಕೊನೆಗೊಳಿಸಬೇಕಾಗುತ್ತದೆ. ಇಲ್ಲದಿದ್ದರೆ ನಾವು ಕೇವಲ ‘ಯುದ್ಧ ಇಲಾಖೆ’ಯನ್ನು (Department of War) ಕಣಕ್ಕಿಳಿಸಬೇಕಾಗುತ್ತದೆ” ಎಂದು ಪರೋಕ್ಷವಾಗಿ ಸೇನಾ ಕಾರ್ಯಾಚರಣೆಯ ಮುನ್ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಸಿಂಧೂ ನದಿ ಒಪ್ಪಂದದ ಬಿಕ್ಕಟ್ಟು: ಪಾಕಿಸ್ತಾನದ ಕರಾಚಿಯಲ್ಲಿ ತೀವ್ರ ಜಲಕ್ಷಾಮ, ರಾಜಕೀಯ ಕೆಸರೆರಚಾಟ

ಇರಾನ್​ನ ಮಿಲಿಟರಿಯನ್ನು ಗುರಿ ಮಾಡಿಕೊಂಡಿಲ್ಲವಂತೆ ಟ್ರಂಪ್

ಡೊನಾಲ್ಡ್ ಟ್ರಂಪ್ ಇದೇ ವೇಳೆ ಕುತೂಹಲಕಾರಿ ಸಂಗತಿಯೊಂದನ್ನು ಪ್ರಸ್ತಾಪಿಸಿದ್ದಾರೆ. ಅವರ ಪ್ರಕಾರ, ಅಮೆರಿಕವು ಇರಾನ್​ನ ನೌಕಾಪಡೆ ಮತ್ತು ವಾಯುಪಡೆಯನ್ನು ನೂರಕ್ಕೆ ನೂರು ಧ್ವಂಸ ಮಾಡಿದೆಯಂತೆ. ಆದರೆ, ಮಿಲಿಟರಿ ಉದಾರ ಧೋರಣೆ ಹೊಂದಿರುವುದರಿಂದ ಅದನ್ನು (ಇರಾನ್ ಭೂಸೇನೆ) ಅಷ್ಟೇನೂ ಮುಟ್ಟಿಲ್ಲ ಎನ್ನುತ್ತಾರೆ ಟ್ರಂಪ್.

ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಟ್ರಂಪ್ ಅವರು ಇರಾನ್ ಮುಂದಿಟ್ಟಿದ್ದ ಶಾಂತಿ ಪ್ರಸ್ತಾವನೆಯ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಿ ಟೆಹ್ರಾನ್‌ಗೆ (ಇರಾನ್ ರಾಜಧಾನಿ) ವಾಪಸ್ ಕಳುಹಿಸಿದ್ದಾರೆ. ಇರಾನ್‌ನ ಮುಟ್ಟುಗೋಲು ಹಾಕಿಕೊಳ್ಳಲಾಗಿರುವ ಹಣವನ್ನು ಬಿಡುಗಡೆ ಮಾಡುವ (Unfreeze Funds) ಯಾವುದೇ ನಿಯಮಕ್ಕೆ ಟ್ರಂಪ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬರಾಕ್ ಒಬಾಮಾ ಅವರ ಅವಧಿಯಲ್ಲಿ ಇರಾನ್‌ಗೆ ಶತಕೋಟಿ ಡಾಲರ್ ಹಣ ನೀಡಿದ್ದನ್ನು ಟ್ರಂಪ್ ಈ ಸಂದರ್ಭದಲ್ಲಿ ತೀವ್ರವಾಗಿ ಟೀಕಿಸಿದ್ದಾರೆ.

ಇರಾನ್ ತನ್ನ ಬಳಿ ಇರುವ ಸಮೃದ್ಧ ಯುರೇನಿಯಂ ದಾಸ್ತಾನನ್ನು (Enriched Uranium Stockpile) ಯಾವಾಗ ಮತ್ತು ಹೇಗೆ ಅಮೆರಿಕಕ್ಕೆ ಹಸ್ತಾಂತರಿಸಬೇಕು ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ಟ್ರಂಪ್ ಸೂಚಿಸಿದ್ದಾರೆ. ಇದರೊಂದಿಗೆ, ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ‘ಸ್ಟ್ರೈಟ್ ಆಫ್ ಹಾರ್ಮುಜ್’ (Strait of Hormuz) ಜಲಸಂಧಿಯನ್ನು ಮುಕ್ತವಾಗಿಡುವ ಕುರಿತಾದ ನಿಯಮಗಳನ್ನು ಕರಡಿನಲ್ಲಿ ಬದಲಾಯಿಸಲು ಅವರು ತಮ್ಮ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಜರ್ಮನಿಯಲ್ಲಿ ಭಾರತೀಯ ಸಂಘಟನೆಗಳ ಹೊಸ ಒಕ್ಕೂಟ; ಎರಡು ದೇಶಗಳ ಬಾಂಧವ್ಯ ಹೆಚ್ಚಿಸಲು ಒಗ್ಗೂಡಿದ ಭಾರತೀಯರು

“ಅವರು ಇನ್ನು ಮುಂದೆ ನಗಲು ಸಾಧ್ಯವಿಲ್ಲ”

ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣವಾದ ‘ಟ್ರುತ್ ಸೋಷಿಯಲ್’ (Truth Social) ಪೋಸ್ಟ್‌ನಲ್ಲಿ ಇರಾನ್ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. “ಕಳೆದ 47 ವರ್ಷಗಳಿಂದ ಇರಾನಿಯನ್ನರು ನಮ್ಮನ್ನು ಕಾಯುವಂತೆ ಮಾಡುತ್ತಾ, ನಮ್ಮ ಜನರನ್ನು ರಸ್ತೆಬದಿಯ ಬಾಂಬ್‌ಗಳ ಮೂಲಕ ಕೊಲ್ಲುತ್ತಾ, ನಮ್ಮ ದೇಶವನ್ನು ನೋಡಿ ನಗುತ್ತಿದ್ದರು. ಆದರೆ ಅವರು ಇನ್ನು ಮುಂದೆ ನಗಲು ಸಾಧ್ಯವಿಲ್ಲ! ಶಾಂತಿ ಒಪ್ಪಂದಕ್ಕೆ ಇರಾನ್ ತಕ್ಷಣವೇ ಒಪ್ಪಿಗೆ ಸೂಚಿಸಬೇಕು, ಇಲ್ಲದಿದ್ದರೆ ಅವರಿಗೆ ಸಮಯ ಮುಗಿಯುತ್ತಾ ಬರುತ್ತದೆ” ಎಂದು ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ.

ಪ್ರಸ್ತುತ ಪಾಕಿಸ್ತಾನ ಸೇರಿದಂತೆ ಕೆಲವು ಮಧ್ಯವರ್ತಿ ದೇಶಗಳ ಮೂಲಕ ಅಮೆರಿಕ ಮತ್ತು ಇರಾನ್ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಅವರ ನಡುವೆ ಮಾತುಕತೆಗಳು ನಡೆಯುತ್ತಿವೆ. ಆದರೆ ಟ್ರಂಪ್ ಅವರ ಈ ಕಠಿಣ ನಿಲುವು ಮತ್ತು ಯುದ್ಧದ ಎಚ್ಚರಿಕೆಯು ಜಾಗತಿಕ ಮಟ್ಟದಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IPL 2026 Final: ಆರ್​ಸಿಬಿಗೆ 5ನೇ ಫೈನಲ್; ಕಳೆದ 4 ಫೈನಲ್​ಗಳಲ್ಲಿ ಕೊಹ್ಲಿ ಪ್ರದರ್ಶನ ಹೇಗಿತ್ತು?

ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸತತ ಎರಡನೇ ಬಾರಿಗೆ ಟ್ರೋಫಿಗೆ ಮುತ್ತಿಡುವ ಹಾದಿಯಲ್ಲಿದೆ. ರಜತ್ ಪಾಟಿದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2026 ರ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲಬೇಕೆಂದರೆ ತಂಡದಿಂದ ಸಾಂಘಿಕ ಪ್ರದರ್ಶನ ಮೂಡಿಬರಬೇಕು. ಅದರಲ್ಲೂ ತಂಡದ ಬ್ಯಾಟಿಂಗ್‌ ಜೀವಾಳ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ (Virat Kohli) ಈ ನಿರ್ಣಾಯಕ ಪಂದ್ಯದಲ್ಲಿ ಬಿಗ್ ಇನ್ನಿಂಗ್ಸ್ ಆಡಲೇಬೇಕಿದೆ.

ಕೊಹ್ಲಿಗೆ ಐದನೇ ಐಪಿಎಲ್ ಫೈನಲ್

ಐಪಿಎಲ್ ಆರಂಭವಾದಾಗಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿರುವ ವಿರಾಟ್ ಕೊಹ್ಲಿಗೆ ಇದು ಐದನೇ ಐಪಿಎಲ್ ಫೈನಲ್ ಆಗಿದೆ. ಅಂದರೆ ಇದುವರೆಗೆ ಆಡಿರುವ ನಾಲ್ಕು ಫೈನಲ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಒಮ್ಮೆ ಮಾತ್ರ ಟ್ರೋಫಿಯನ್ನು ಎತ್ತಿಹಿಡಿದಿದ್ದಾರೆ. ಆದಾಗ್ಯೂ ಐಪಿಎಲ್‌ನಲ್ಲಿ ಆಡಿರುವ ಅನುಭವ ಹೊಂದಿರುವ ಕೊಹ್ಲಿ ಕಳೆದ ನಾಲ್ಕು ಐಪಿಎಲ್ ಫೈನಲ್​ಗಳಲ್ಲಿ ಯಾವ ರೀತಿಯ ಪ್ರದರ್ಶನ ನೀಡಿದ್ದಾರೆ ಎಂಬುದನ್ನು ನೋಡುವುದಾದರೆ..

140 ರನ್ ಬಾರಿಸಿರುವ ಕೊಹ್ಲಿ

ಐದನೇ ಐಪಿಎಲ್ ಫೈನಲ್ ಆಡಲು ಸಜ್ಜಾಗಿರುವ ವಿರಾಟ್ ಕೊಹ್ಲಿ, ಈ ಮೊದಲು ಆಡಿರುವ ಕಳೆದ 4 ಐಪಿಎಲ್ ಫೈನಲ್‌ಗಳಲ್ಲಿ ಒಟ್ಟು 140 ರನ್‌ ಮಾತ್ರ ಕಲೆಹಾಕಿದ್ದಾರೆ. ಇದರಲ್ಲಿ ಒಂದು ಅರ್ಧಶತಕವೂ ಸೇರಿದೆ. ಕೊಹ್ಲಿ 2009 ರಲ್ಲಿ ಅನಿಲ್ ಕುಂಬ್ಳೆ ನೇತೃತ್ವದಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ತಮ್ಮ ಮೊದಲ ಐಪಿಎಲ್ ಫೈನಲ್ ಆಡಿದ್ದರು. ಆ ಪಂದ್ಯದಲ್ಲಿ ಕೊಹ್ಲಿ 8 ಎಸೆತಗಳಲ್ಲಿ ಕೇವಲ 7 ರನ್‌ಗಳಿಸಲಷ್ಟೇ ಶಕ್ತರಾಗಿದ್ದರು. ಆ ನಂತರ 2011 ರಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೆ ಫೈನಲ್ ಆಡಿತ್ತು. ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ, ವಿರಾಟ್ ಕೊಹ್ಲಿ 32 ಎಸೆತಗಳಲ್ಲಿ 35 ರನ್ ಬಾರಿಸಿದ್ದರು.

ಬಳಿಕ 2016 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮೂರನೇ ಫೈನಲ್ ಆಡಿತ್ತು. ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ನಾಯಕತ್ವ ವಹಿಸಿದ್ದರು. ಮಾತ್ರವಲ್ಲದೆ ಆ ಸೀಸನ್‌ನಲ್ಲಿ ವಿರಾಟ್ ಕೊಹ್ಲಿ 4 ಶತಕಗಳನ್ನು ಬಾರಿಸಿದ್ದು ಮಾತ್ರವಲ್ಲದೆ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಕೊಹ್ಲಿ 35ಎಸೆತಗಳಲ್ಲಿ 54 ರನ್ ಬಾರಿಸಿದ್ದರು. ಆದರೆ, ಆ ಪಂದ್ಯದಲ್ಲೂ ಆರ್​ಸಿಬಿ ಸೋತಿತ್ತು. ಇನ್ನು 2025 ರ ಫೈನಲ್‌ನಲ್ಲಿ, ವಿರಾಟ್ ಕೊಹ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 35 ಎಸೆತಗಳಲ್ಲಿ 43 ರನ್ ಬಾರಿಸಿದ್ದರು. ಈ ಬಾರಿ ಆರ್​ಸಿಬಿ ಚಾಂಪಿಯನ್‌ ಆಗುವಲ್ಲಿ ಯಶಸ್ವಿಯಾಯಿತು.

IPL 2026 Final: ಮೋದಿ ಮೈದಾನದಲ್ಲಿ ಕೊಹ್ಲಿ- ಗಿಲ್ ದಾಖಲೆ ಹೇಗಿದೆ?

ಅದ್ಭುತ ಫಾರ್ಮ್‌ನಲ್ಲಿರುವ ಕೊಹ್ಲಿ

2026 ರ ಐಪಿಎಲ್​ನಲ್ಲಿ ಕೊಹ್ಲಿ ಅತ್ಯುತ್ತಮ ಫಾರ್ಮ್​ನಲ್ಲಿದ್ದಾರೆ. ಈ ಸೀಸನ್​ನಲ್ಲಿ ಇದುವರೆಗೆ 15 ಪಂದ್ಯಗಳನ್ನು ಆಡಿರುವ ಕೊಹ್ಲಿ, 164.38 ಸ್ಟ್ರೈಕ್ ರೇಟ್ ಮತ್ತು 50 ರ ಸರಾಸರಿಯಲ್ಲಿ 600 ರನ್ ಗಳಿಸಿದ್ದಾರೆ. ಇದಲ್ಲದೆ, ಈ ಸೀಸನ್​ನಲ್ಲಿ ಕೊಹ್ಲಿ 4 ಅರ್ಧಶತಕ ಮತ್ತು ಒಂದು ಶತಕವನ್ನು ಬಾರಿಸಿದ್ದಾರೆ. ಈ ಅತ್ಯುತ್ತಮ ಪ್ರದರ್ಶನವನ್ನು ಪರಿಗಣಿಸಿ, ಕೊಹ್ಲಿ ಫೈನಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವುದರ ಜೊತೆಗೆ ಎರಡನೇ ಬಾರಿಗೆ ಟ್ರೋಫಿ ಎತ್ತಿಹಿಡಿಯಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೂ.1ರಿಂದ ಆ. 31ರವರೆಗೆ ದಾಂಡೇಲಿಗೆ ನೋ ಎಂಟ್ರಿ; ಸ್ಕೂಬಾ ಡೈವಿಂಗ್, ರ್ಯಾಫ್ಟಿಂಗ್‌ಗೆ ಬ್ರೇಕ್ ಹಾಕಿದ ಉತ್ತರ ಕನ್ನಡ ಡಿಸಿ

ಕಾರವಾರ, ಮೇ.31 : ಮಳೆಗಾಲದ ಆರಂಭ ಹಾಗೂ ಸಮುದ್ರದಲ್ಲಿನ ಪ್ರಕ್ಷುಬ್ಧ ವಾತಾವರಣದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ನಾಳೆಯಿಂದ (ಜೂನ್ 1) ಅನ್ವಯವಾಗುವಂತೆ ಮುಂದಿನ ಮೂರು ತಿಂಗಳ ಕಾಲ ಎಲ್ಲಾ ರೀತಿಯ ಜಲಸಾಹಸ ಕ್ರೀಡೆಗಳನ್ನು (Water Sports) ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ಮಳೆಗಾಲದಲ್ಲಿ ಪ್ರವಾಸಿಗರ ಹಾಗೂ ಸಾರ್ವಜನಿಕರ ಪ್ರಾಣ ರಕ್ಷಣೆಯ ದೃಷ್ಟಿಯಿಂದ ಈ ನಿಯಮವನ್ನು ಜಾರಿಗೊಳಿಸಲಾಗಿದೆ. ಜೂನ್ 1 ರಿಂದ ಆಗಸ್ಟ್ 31 ರ ವರೆಗೆ ಜಿಲ್ಲೆಯ ಯಾವುದೇ ಭಾಗದಲ್ಲಿ ಜಲಸಾಹಸ ಕ್ರೀಡೆಗಳನ್ನು ನಡೆಸುವಂತಿಲ್ಲ. ಅರಬ್ಬಿ ಸಮುದ್ರ ಸೇರಿದಂತೆ ಜಿಲ್ಲೆಯ ಪ್ರಮುಖ ನದಿಗಳು ಹಾಗೂ ಇತರೆ ನೀರಿನ ಆಕರಗಳಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳಿಗೂ ಈ ನಿಷೇಧ ಅನ್ವಯಿಸಲಿದೆ.

ಈ ಆದೇಶದ ಅನ್ವಯ ನೇರ ಪ್ರವಾಸಿ ಆಕರ್ಷಣೆಗಳಾದ ಅರಬ್ಬಿ ಸಮುದ್ರದಲ್ಲಿನ ಪ್ರಸಿದ್ಧ ಸ್ಕೂಬಾ ಡೈವಿಂಗ್ (Scuba Diving), ಶರಾವತಿ ನದಿಯಲ್ಲಿನ ಬೋಟಿಂಗ್ (Boating) ಹಾಗೂ ದಾಂಡೇಲಿ ಭಾಗದ ಕಾಳಿ ನದಿಯಲ್ಲಿ ನಡೆಯುವ ಸಾಹಸಮಯ ವೈಟ್‌ವಾಟರ್ ರ್ಯಾಫ್ಟಿಂಗ್ (Rafting) ಸೇರಿದಂತೆ ಎಲ್ಲಾ ಬಗೆಯ ಕಮರ್ಷಿಯಲ್ ಜಲಸಾಹಸ ಕ್ರೀಡೆಗಳನ್ನು ಕಡ್ಡಾಯವಾಗಿ ಸ್ಥಗಿತಗೊಳಿಸಬೇಕು ಎಂದು ಡಿಸಿ ಸೂಚಿಸಿದ್ದಾರೆ.

ಇದನ್ನೂ ಓದಿ: ಸಮುದ್ರದ ಮಧ್ಯೆ ಮುಳುಗಿದ ಬೋಟ್: ಮೃತ್ಯುವಿನ ದವಡೆಯಿಂದ ಪಾರಾದ 7 ಮೀನುಗಾರರು!

ನಾಳೆಯಿಂದ ಜಿಲ್ಲೆಯ ಯಾವುದೇ ಕಡಲತೀರ ಅಥವಾ ನದಿ ತೀರಗಳಲ್ಲಿ ನಿಯಮ ಮೀರಿ ಜಲಸಾಹಸ ಕ್ರೀಡೆಗಳನ್ನು ಆಯೋಜಿಸುವುದು ಕಂಡುಬಂದರೆ, ಅಂತಹ ಸಂಸ್ಥೆಗಳು ಮತ್ತು ವ್ಯಕ್ತಿಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಮಳೆಗಾಲದಲ್ಲಿ ಸಮುದ್ರ ಮತ್ತು ನದಿಗಳಲ್ಲಿ ನೀರಿನ ಹರಿವು ಹಾಗೂ ಅಲೆಗಳ ತೀವ್ರತೆ ಹೆಚ್ಚಿರುವುದರಿಂದ ಪ್ರವಾಸಿಗರು ಸಹ ಸಹಕರಿಸಬೇಕಾಗಿ ಕೋರಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ತೆಲುಗು ಚಿತ್ರರಂಗವ ಕೊಂಡಾಡಿ, ದೀಪಿಕಾ ಪಡುಕೋಣೆಗೆ ಟಾಂಗ್ ಕೊಟ್ಟ ಜಾನ್ಹವಿ

ಜಾನ್ಹವಿ ಕಪೂರ್ (Janhvi Kapoor) ಬಾಲಿವುಡ್​​ನ ಜನಪ್ರಿಯ ಯುವನಟಿ. ದೊಡ್ಡ ಹಿಟ್ ಇಲ್ಲದೇ ಹೋದರು ಒಂದರ ಹಿಂದೊಂದು ಅವಕಾಶಗಳ ಬಾಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ದಕ್ಷಿಣದ ಚಿತ್ರರಂಗದಲ್ಲಿಯೂ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಈಗಾಗಲೇ ಜೂ ಎನ್​​ಟಿಆರ್ ಜೊತೆಗೆ ‘ದೇವರ’ ಸಿನಿಮಾನಲ್ಲಿ ನಟಿಸಿರುವ ಜಾನ್ಹವಿ ಇದೀಗ ರಾಮ್ ಚರಣ್ ಜೊತೆಗೆ ‘ಪೆದ್ದಿ’ ಸಿನಿಮಾನಲ್ಲಿ ನಟಿಸಿದ್ದಾರೆ. ‘ಪೆದ್ದಿ’ ಸಿನಿಮಾ ಪ್ರಚಾರದಲ್ಲಿರುವ ನಟಿ ಜಾನ್ಹವಿ ಕಪೂರ್, ಇದೀಗ ತೆಲುಗು ಚಿತ್ರರಂಗದಲ್ಲಿರುವ ವೃತ್ತಿಪರತೆ, ಸಮಯ ಪಾಲನೆ ಇನ್ನಿತರೆ ವಿಷಯಗಳನ್ನು ಕೊಂಡಾಡಿದ್ದಾರೆ. ಆ ಮೂಲಕ ಪರೋಕ್ಷವಾಗಿ ದೀಪಿಕಾ ಪಡುಕೋಣೆಗೆ ಟಾಂಗ್ ಸಹ ನೀಡಿದ್ದಾರೆ.

ಕೆಲಸದ ಅವಧಿ ಇನ್ನಿತರೆ ಕಾರಣಗಳಿಗಾಗಿ ಎರಡು ತೆಲುಗು ಸಿನಿಮಾಗಳನ್ನು ಕೈಬಿಟ್ಟ ದೀಪಿಕಾ ಪಡುಕೋಣೆ, ಆ ನಂತರ ತೆಲುಗು ಚಿತ್ರರಂಗದಲ್ಲಿ ಕೆಲಸದ ಅವಧಿ ಹೆಚ್ಚು ಎಂದು ಪಾಡ್​​ಕಾಸ್ಟ್​​ ಒಂದರಲ್ಲಿ ಹೇಳಿಕೊಂಡಿದ್ದರು. ಆದರೆ ನಟಿ ಜಾನ್ಹವಿ ಕಪೂರ್, ದೀಪಿಕಾರ ಅಭಿಪ್ರಾಯಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ತೆಲುಗು ಚಿತ್ರರಂಗದ ಬಗ್ಗೆ ವ್ಯಕ್ತಪಡಿಸಿದ್ದಾರೆ. ತೆಲುಗು ಚಿತ್ರರಂಗವನ್ನು ಬಾಲಿವುಡ್​ ಜೊತೆಗೆ ಹೋಲಿಸಿರುವ ಜಾನ್ಹವಿ, ಇಲ್ಲಿ ವೃತ್ತಿ ಪರತೆ ಹೆಚ್ಚಿದೆ ಎಂಬರ್ಥದ ಮಾತುಗಳನ್ನು ಆಡಿದ್ದಾರೆ.

ತೆಲುಗು ಚಿತ್ರರಂಗದಲ್ಲಿ ಪ್ರತಿ ಶೆಡ್ಯೂಲ್​​ಗಳನ್ನು ಸರಿಯಾಗಿ ಪ್ಲ್ಯಾನ್ ಮಾಡಲಾಗಿರುತ್ತದೆ. ಎಲ್ಲರಿಗೂ ಸಮಾನ ಕಾಲಾವಕಾಶ ಸಿಗುವಂತೆ ನೋಡಿಕೊಳ್ಳಲಾಗುತ್ತದೆ. ಇಲ್ಲಿ 40 ನಿಮಿಷಗಳ ಊಟದ ಬ್ರೇಕ್ ನೀಡುವ ಜೊತೆಗೆ ಮುಂದಿನ ಶಾಟ್​​ಗೆ ಮುಂಚೆ ಎಲ್ಲರಿಗೂ ಸಾಕಷ್ಟು ವಿಶ್ರಾಂತಿಯನ್ನು ಸಹ ನೀಡಲಾಗುತ್ತದೆ. ಹಿಂದಿ ಚಿತ್ರರಂಗದಲ್ಲಿ ಶೆಡ್ಯೂಲ್ ಸಮಯ ಬದಲಾಗುತ್ತಲೇ ಇರುತ್ತದೆ. ಆದರೆ ತೆಲುಗಿನಲ್ಲಿ ಇದರ ಬಗ್ಗೆ ಸ್ಪಷ್ಟವಾದ ಗಡಿ ಇದೆ. ಇಂತಿಷ್ಟೇ ಸಮಯ ಕೆಲಸ ಮಾಡಬೇಕು ಎಂಬ ನಿಯಮ ಇದೆ. ಬಾಲಿವುಡ್​​ನಲ್ಲಿ ಇದು ಇಲ್ಲ’ ಎಂದು ನೇರವಾಗಿ ಹೇಳಿದ್ದಾರೆ ನಟಿ.

ಇದನ್ನೂ ಓದಿ:‘ಪೆದ್ದಿ’ ಸಿನಿಮಾಕ್ಕೆ ಜಾನ್ಹವಿ ಕಪೂರ್ ಪಡೆದ ಸಂಭಾವನೆ ಎಷ್ಟು ಕೋಟಿ?

‘ತೆಲುಗು ಚಿತ್ರರಂಗದಲ್ಲಿ ರಾತ್ರಿ ಶೂಟಿಂಗ್​​ಗೆ ಸಹ ಸ್ಪಷ್ಟವಾದ ನಿಯಮ ಇದೆ. ಸರಿಯಾಗಿ 2 ಗಂಟೆಗೆ ಶೂಟಿಂಗ್ ನಿಲ್ಲಿಸುತ್ತಾರೆ. ಬಳಿಕ ಎಲ್ಲರಿಗೂ ವಿಶ್ರಾಂತಿಗೆ ಕಾಲಾವಕಾಶ ಕೊಡುತ್ತಾರೆ. ಡೇ ಶೂಟಿಂಗ್​​ಗಳಲ್ಲಿಯೂ ಸಹ 9 ರಿಂದ 10 ಗಂಟೆ ಮಾತ್ರವೇ ಶೂಟಿಂಗ್ ಮಾಡುತ್ತಾರೆ. ತೆಲುಗು ಚಿತ್ರರಂಗದಲ್ಲಿ ನಾನು 12 ಗಂಟೆ ಶಿಫ್ಟ್ ಮಾಡಿರುವುದು ಬಹಳ ಕಡಿಮೆ. ಹೆಚ್ಚೆಂದರೆ ಎರಡು ಮೂರು ಮಾಡಿರಬಹುದು ಅಷ್ಟೆ. ಹಿಂದಿಯಲ್ಲಿ ಹಾಗಾಗುವುದಿಲ್ಲ, ಒಂದೊಂದು ಸೆಟ್​​ನಲ್ಲಿ ಒಂದೊಂದು ರೀತಿಯ ನಿಯಮ ಪಾಲಿಸುತ್ತಾರೆ’ ಎಂದಿದ್ದಾರೆ ಜಾನ್ಹವಿ ಕಪೂರ್.

ದೀಪಿಕಾ ಪಡುಕೋಣೆ, ‘ಕಲ್ಕಿ 2898 ಎಡಿ’ ಭಾಗ 2 ಮತ್ತು ‘ಸ್ಪಿರಿಟ್’ ಸಿನಿಮಾಗಳಲ್ಲಿ ನಟಿಸಬೇಕಿತ್ತು. ಆದರೆ ಕೆಲಸದ ಅವಧಿಯ ಕಾರಣ ನೀಡಿ ಎರಡೂ ಸಿನಿಮಾಗಳಿಂದ ಹೊರನಡೆದರು. ತಾವು ದಿನಕ್ಕೆ ಎಂಟು ಗಂಟೆ ಮಾತ್ರವೇ ಕೆಲಸ ಮಾಡುವುದು ಎಂದು ದೀಪಿಕಾ ಪಡುಕೋಣೆ ಹೇಳಿದ್ದರು. ಈಗ ಹಿಂದಿಯ ‘ಕಿಂಗ್’ ಸಿನಿಮಾನಲ್ಲಿ ಶಾರುಖ್ ಖಾನ್ ಜೊತೆಗೆ ನಟಿಸುತ್ತಿದ್ದಾರೆ. ಆದರೆ ಈಗ ಜಾನ್ಹವಿ ಕಪೂರ್, ತೆಲುಗಿಗಿಂತಲೂ ಹಿಂದಿಯಲ್ಲಿಯೇ ಕೆಲಸದ ಅವಧಿ ಹೆಚ್ಚು ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಚಿಕ್ಕಬಳ್ಳಾಪುರ: ಸರಣಿ ಅಪಘಾತದಲ್ಲಿ ಐವರು ಸಾವು; 10ಕ್ಕೂ ಹೆಚ್ಚು ಜನರಿಗೆ ಗಾಯ

ಚಿಕ್ಕಬಳ್ಳಾಪುರ, ಮೇ 31: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಸುಂಕಲಮ್ಮ ದೇವಸ್ಥಾನದ ಬಳಿ ಇಂದು ಭೀಕರ ಸರಣಿ ಅಪಘಾತ (Accident) ಸಂಭವಿಸಿದ್ದು, ಆಟೋದಲ್ಲಿದ್ದ ಐದು ಜನ ಸ್ಥಳದಲ್ಲೇ ಸಾವನ್ನಪ್ಪಿರುವಂತಹ (death) ಘಟನೆ ನಡೆದಿದೆ. ದುರಂತದಲ್ಲಿ ಹತ್ತಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು, ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಥಾರ್ ಕಾರು, ಆಟೋ ಮತ್ತು ಕ್ಯಾಂಟರ್ ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿ ವೇಗವಾಗಿ ಬಂದ ಥಾರ್ ಕಾರು ತನ್ನ ಮುಂದೆ ಚಲಿಸುತ್ತಿದ್ದ ಆಟೋಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಟೋ ನಿಯಂತ್ರಣ ತಪ್ಪಿ ಮುಂಭಾಗದಲ್ಲಿದ್ದ ಕ್ಯಾಂಟರ್ ವಾಹನಕ್ಕೆ ಅಪ್ಪಳಿಸಿದೆ. ಪರಿಣಾಮವಾಗಿ ಆಟೋ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ಐವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ಸಮುದ್ರದ ಮಧ್ಯೆ ಮುಳುಗಿದ ಬೋಟ್: ಮೃತ್ಯುವಿನ ದವಡೆಯಿಂದ ಪಾರಾದ 7 ಮೀನುಗಾರರು!

ಇನ್ನು ಅಪಘಾತದಲ್ಲಿ ಗಾಯಗೊಂಡ ಹತ್ತಕ್ಕೂ ಹೆಚ್ಚು ಜನರನ್ನು ತಕ್ಷಣ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಮತ್ತಷ್ಟು ಮಾಹಿತಿ ಅಪ್​​ಡೇಟ್​ ಆಗಲಿದೆ.

Source link

Vastu Tips: ಈ 3 ಗಿಡಗಳನ್ನು ಎಂದಿಗೂ ಯಾರಿಗೂ ಉಡುಗೊರೆಯಾಗಿ ನೀಡಬೇಡಿ; ವಾಸ್ತು ಸಲಹೆ ಇಲ್ಲಿದೆ

ಈ 3 ಗಿಡಗಳನ್ನು ಎಂದಿಗೂ ಯಾರಿಗೂ ಉಡುಗೊರೆಯಾಗಿ ನೀಡಬೇಡಿImage Credit source: Pinterest

ಇತ್ತೀಚಿನ ದಿನಗಳಲ್ಲಿ ಸಭೆ-ಸಮಾರಂಭಗಳು, ಹುಟ್ಟುಹಬ್ಬ ಅಥವಾ ಗೃಹಪ್ರವೇಶದಂತಹ ಶುಭ ಸಂದರ್ಭಗಳಲ್ಲಿ ಸ್ನೇಹಿತರಿಗೆ ಮತ್ತು ಆಪ್ತರಿಗೆ ಸುಂದರವಾದ ಗಿಡಗಳನ್ನು ಉಡುಗೊರೆಯಾಗಿ (Green Gifting) ನೀಡುವುದು ಒಂದು ದೊಡ್ಡ ಟ್ರೆಂಡ್ ಆಗಿದೆ. ಗಿಡಗಳನ್ನು ನೀಡುವುದು ಪರಿಸರ ಮತ್ತು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದೇ ಆದರೂ, ವಾಸ್ತು ಶಾಸ್ತ್ರದ ಪ್ರಕಾರ ಕೆಲವು ಗಿಡಗಳನ್ನು ಇತರರಿಗೆ ಗಿಫ್ಟ್ ಆಗಿ ನೀಡುವುದು ಅಥವಾ ಇತರರಿಂದ ಪಡೆದುಕೊಳ್ಳುವುದು ಅಶುಭ ಎಂದು ಪರಿಗಣಿಸಲಾಗುತ್ತದೆ. ಇಂತಹ ಗಿಡಗಳು ಉಡುಗೊರೆ ನೀಡಿದವರ ಮತ್ತು ಪಡೆದವರ ಜೀವನದ ಮೇಲೂ ನಕಾರಾತ್ಮಕ ಪರಿಣಾಮ ಬೀರಬಹುದು. ಹಾಗಾದರೆ ವಾಸ್ತು ಪ್ರಕಾರ ಯಾವ ಗಿಡಗಳನ್ನು ಎಂದಿಗೂ ಗಿಫ್ಟ್ ಮಾಡಬಾರದು ಎಂಬುದರ ವಿವರ ಇಲ್ಲಿದೆ.

ಮುಳ್ಳುಗಳಿರುವ ಗಿಡಗಳು (ವಿಶೇಷವಾಗಿ ಕ್ಯಾಕ್ಟಸ್ ಅಥವಾ ಕಳ್ಳಿ ಗಿಡಗಳು):

ಇತ್ತೀಚೆಗೆ ಸಣ್ಣ ಸಣ್ಣ ಕುಂಡಗಳಲ್ಲಿರುವ ಬಣ್ಣ ಬಣ್ಣದ ಕ್ಯಾಕ್ಟಸ್ (Cactus) ಗಿಡಗಳನ್ನು ಕಚೇರಿ ಮೇಜು ಅಥವಾ ಮನೆಯ ಅಲಂಕಾರಕ್ಕಾಗಿ ಗಿಫ್ಟ್ ಕೊಡುವುದು ಹೆಚ್ಚಾಗಿದೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಮುಳ್ಳುಗಳನ್ನು ಹೊಂದಿರುವ ಯಾವುದೇ ಗಿಡವನ್ನು ಯಾರಿಗೂ ಉಡುಗೊರೆಯಾಗಿ ನೀಡಬಾರದು. ಮುಳ್ಳುಗಳು ನಕಾರಾತ್ಮಕ ಶಕ್ತಿಯನ್ನು ಮತ್ತು ಸಂಘರ್ಷವನ್ನು ಪ್ರತಿನಿಧಿಸುತ್ತವೆ. ಇಂತಹ ಗಿಡಗಳನ್ನು ಗಿಫ್ಟ್ ನೀಡುವುದರಿಂದ ಆಪ್ತರೊಂದಿಗಿನ ಸಂಬಂಧದಲ್ಲಿ ಬಿರುಕು ಮೂಡಬಹುದು ಹಾಗೂ ಅವರ ಮನೆಯಲ್ಲಿ ಸದಾ ಜಗಳ, ಅಶಾಂತಿ ಮೂಡುವಂತೆ ಮಾಡಬಹುದು ಎಂದು ನಂಬಲಾಗಿದೆ.

ಬೋನ್ಸಾಯ್ ಗಿಡಗಳು (Bonsai Plants):

ದೊಡ್ಡದಾಗಿ ಬೆಳೆಯುವ ಮರಗಳನ್ನು ಕೃತಕ ತಂತ್ರಜ್ಞಾನದ ಮೂಲಕ ಕುಬ್ಜವಾಗಿ (ಚಿಕ್ಕದಾಗಿ) ಬೆಳೆಸುವ ಬೋನ್ಸಾಯ್ ಗಿಡಗಳು ನೋಡಲು ಅತ್ಯಂತ ಆಕರ್ಷಕವಾಗಿರುತ್ತವೆ. ಈ ಕಾರಣಕ್ಕಾಗಿಯೇ ಇದನ್ನು ಪ್ರೀತಿಯಿಂದ ಗಿಫ್ಟ್ ಮಾಡಲು ಅನೇಕರು ಇಷ್ಟಪಡುತ್ತಾರೆ. ಆದರೆ ವಾಸ್ತು ಪ್ರಕಾರ ಬೋನ್ಸಾಯ್ ಗಿಡಗಳನ್ನು ಮನೆಗೆ ತರುವುದು ಅಥವಾ ಇತರರಿಗೆ ಕೊಡುವುದು ಒಳ್ಳೆಯದಲ್ಲ. ಏಕೆಂದರೆ, ಬೋನ್ಸಾಯ್ ಗಿಡಗಳು “ಬೆಳವಣಿಗೆಯನ್ನು ಕುಂಠಿತಗೊಳಿಸಿದ” ಸಂಕೇತವಾಗಿವೆ. ಇದನ್ನು ಉಡುಗೊರೆಯಾಗಿ ನೀಡುವುದರಿಂದ, ಪಡೆದುಕೊಂಡವರ ವೃತ್ತಿಜೀವನ, ವ್ಯಾಪಾರ ಅಥವಾ ಆರ್ಥಿಕ ಪ್ರಗತಿಯು ಕುಂಠಿತಗೊಳ್ಳಬಹುದು ಎಂಬ ನಂಬಿಕೆ ಇದೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಮೆಹಂದಿ ಅಥವಾ ಮದರಂಗಿ ಗಿಡ (Mehndi Plant):

ಮದರಂಗಿ ಅಥವಾ ಮೆಹಂದಿ ಎಲೆಗಳನ್ನು ಶುಭ ಸಮಾರಂಗಳಲ್ಲಿ ಕೈಗೆ ಹಚ್ಚಿಕೊಳ್ಳಲು ಬಳಸಲಾಗುತ್ತದೆಯಾದರೂ, ಅದರ ಗಿಡವನ್ನು ಉಡುಗೊರೆಯಾಗಿ ನೀಡುವುದನ್ನು ವಾಸ್ತು ಶಾಸ್ತ್ರವು ನಿಷೇಧಿಸಿದೆ. ಆಧಾತ್ಮಿಕ ನಂಬಿಕೆಗಳ ಪ್ರಕಾರ, ಮೆಹಂದಿ ಗಿಡಗಳು ನಕಾರಾತ್ಮಕ ಶಕ್ತಿಗಳನ್ನು ಅಥವಾ ದುಷ್ಟ ಶಕ್ತಿಗಳನ್ನು ತನ್ನತ್ತ ಬೇಗನೆ ಆಕರ್ಷಿಸುವ ಗುಣವನ್ನು ಹೊಂದಿರುತ್ತವೆ. ಆದ್ದರಿಂದ, ಈ ಗಿಡವನ್ನು ಯಾರಿಗಾದರೂ ಉಡುಗೊರೆಯಾಗಿ ನೀಡಿದರೆ ಅಥವಾ ಮನೆಯ ಮುಖ್ಯ ಆವರಣದಲ್ಲಿ ನೆಟ್ಟರೆ, ಅದು ಕುಟುಂಬದ ಸದಸ್ಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಮತ್ತು ಮನೆಯಲ್ಲಿ ಧನಾತ್ಮಕ ಶಕ್ತಿಯು ಕ್ಷೀಣಿಸುವಂತೆ ಮಾಡುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ

ಕನ್ನಡ ಚಿತ್ರರಂಗದ ತಾರಾ ಜೋಡಿ ವಸಿಷ್ಠ ಸಿಂಹ (Vasishta Simha) ಮತ್ತು ಹರಿಪ್ರಿಯ. ಇತ್ತೀಚೆಗಷ್ಟೆ ಈ ದಂಪತಿಗೆ ಗಂಡು ಮಗು ಜನಿಸಿದೆ. ಇದೀಗ ಈ ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದರು. ಮಗು ಜನಿಸಿದ ಮೇಲೆ ಹರಕೆ ತೀರಿಸಲೆಂದು ದೇವಾಲಯಕ್ಕೆ ಈ ದಂಪತಿ ಭೇಟಿ ನೀಡಿದ್ದರು. ಕೃಷ್ಣ, ಮುಖ್ಯಪ್ರಾಣ ದರ್ಶನ ಪಡೆದ ವಸಿಷ್ಠ, ಹರಿಪ್ರಿಯ. ಪರ್ಯಾಯ ಶೀರೂರು ಶ್ರೀ ವೇದವರ್ಧನ ಯತಿಗಳ ಆಶೀರ್ವಾದ ಪಡೆದ ದಂಪತಿ. ಮಗನಿಗೆ ಕೃಷ್ಣ, ಮುಖ್ಯ ಪ್ರಾಣ ದರ್ಶನ ಮಾಡಿದರು. ಬಳಿಕ ಹರಕೆ ತೀರಿಸಲೆಂದು ನೆಲದ ಮೇಲೆ ಊಟ ಮಾಡಿದರು. ಇಲ್ಲಿದೆ ನೋಡಿ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಗಳಿಗೆ ಮಂತ್ರಿಗಿರಿ ಸಿಗುತ್ತಾ?: ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ ನೀಡಿದ​​ ಕೆ.ಹೆಚ್. ಮುನಿಯಪ್ಪ

ಬೆಂಗಳೂರು, ಮೇ.31: ಮಾಜಿ ಸಚಿವ ಕೆ.ಹೆಚ್. ಮುನಿಯಪ್ಪ ಅವರು ತಮ್ಮ ಪುತ್ರಿಗೆ ಸಂಪುಟದಲ್ಲಿ ಸ್ಥಾನ ನೀಡುವ ವಿಚಾರವಾಗಿ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಬೆಂಗಳೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ. ಅವರು, “ಕೇಂದ್ರದಲ್ಲಿ 30 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ನನಗೆ ಯಾವುದೇ ಡಿಫರೆನ್ಸ್ ಇಲ್ಲ. ಹೈಕಮಾಂಡ್ ಏನು ತೀರ್ಮಾನವನ್ನು ತೆಗೆದುಕೊಳ್ಳುತ್ತದೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ” ಎಂದು ಹೇಳಿದ್ದಾರೆ. ಇತ್ತೀಚೆಗೆ, ಮುನಿಯಪ್ಪ ಅವರ ಪುತ್ರಿ ರೂಪಾ ಶಶಿಧರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಕೇಳಿದಾಗ, ಅವರು ಮತ್ತೊಮ್ಮೆ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಪುನರುಚ್ಚರಿಸಿದರು. ಒಟ್ಟಾರೆ, ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಉತ್ತಮ ಬದಲಾವಣೆಯಾಗಿದೆ ಎಂದು ಮುನಿಯಪ್ಪ ತಿಳಿಸಿದ್ದಾರೆ. “ಸನ್ಮಾನ್ಯ ಸಿದ್ದರಾಮಯ್ಯನವರಿಗೆ ನಾವು ವಿಶೇಷವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಒಬ್ಬ ವ್ಯಕ್ತಿ ತಾನು ಅಧಿಕಾರದಲ್ಲಿದ್ದಾಗ ಇಷ್ಟು ಸಮಾಧಾನವಾಗಿ ಅವರೇ ಪ್ರಪೋಸ್ ಮಾಡಿ ಕೆಲಸ ಮಾಡಿದಕ್ಕೆ ಅವರಿಗೆ ನಾವು ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಾರ್ಟಿಯು ಸುಗಮವಾಗಿ ನಡೆಯಲಿದ್ದು, ಅವರ ನೇತೃತ್ವದಲ್ಲಿ 2028ಕ್ಕೆ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ಕೆ.ಹೆಚ್. ಮುನಿಯಪ್ಪ ಹೊಂದಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೇಗಿದೆ ನೋಡಿ ಡಿ.ಕೆ. ಶಿವಕುಮಾರ್​​ ಅವರ ಕನಕಪುರದ ಭವ್ಯ ಬಂಗಲೆ!

ಬೆಂಗಳೂರು ದಕ್ಷಿಣ, ಮೇ 31: ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಜೂನ್ ಮೂರರಂದು ಪದಗ್ರಹಣ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸ್ವಕ್ಷೇತ್ರವಾದ ಕನಕಪುರದಲ್ಲಿ ವ್ಯಾಪಕ ಸಂತಸ ಮನೆ ಮಾಡಿದೆ. ಕನಕಪುರದಲ್ಲಿರುವ ಡಿಕೆ ಶಿವಕುಮಾರ್ ಅವರ ನಿವಾಸವು ಕ್ಷೇತ್ರದ ರಾಜಕೀಯ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿದೆ. ಕನಕಪುರ ತಾಲೂಕಿನ ದೊಡ್ಡಹಾಲಹಳ್ಳಿ ಅವರ ಹುಟ್ಟೂರಾಗಿದ್ದರೂ, ಶಾಸಕರಾದ ನಂತರ ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲಿ ಕನಕಪುರದಲ್ಲಿ ಒಂದು ಭವ್ಯವಾದ ಬಂಗಲೆಯನ್ನು ನಿರ್ಮಿಸಿದ್ದಾರೆ. ಕನಕಪುರಕ್ಕೆ ಭೇಟಿ ನೀಡಿದಾಗ, ಕುಟುಂಬ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಲು ಅವರು ಇದೇ ಮನೆಯಲ್ಲಿ ತಂಗುತ್ತಾರೆ. ಕ್ಷೇತ್ರದ ಜನರಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಇದು ಪ್ರಮುಖ ತಾಣವಾಗಿದೆ. ಡಿಕೆಶಿ ಅವರ ಭವ್ಯ ಬಂಗಲೆ ಹೇಗಿದೆ ಎಂಬುದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​

ವಿಜಯಪುರ, ಮೇ 31: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​, ಸಿದ್ದರಾಮಯ್ಯರ ರಾಜಕೀಯ ಶೈಲಿ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ವೈಯಕ್ತಿಕ ದ್ವೇಷದ ರಾಜಕಾರಣ ಮಾಡಿಲ್ಲ. ನನಗೂ ಅವರ ಬಗ್ಗೆ ಒಂದು ರೀತಿ ಗೌರವ ಇದೆ, ಏಕೆಂದರೆ ಅವರು ಹಿರಿಯ ನಾಯಕರು ಮತ್ತು ಹೆಚ್ಚು ಬಾರಿ ಮುಖ್ಯಮಂತ್ರಿಯಾದವರು. ವಿಧಾನಸಭೆಯಲ್ಲಿ ಎಷ್ಟೇ ಟೀಕೆ ಮತ್ತು ಜಗಳ ಮಾಡಿದರು, ಹೊರಗೆ ಬಂದ ಮೇಲೆ ಯಾರಿಗೂ ವೈಯಕ್ತಿಕವಾಗಿ ಟಾರ್ಗೆಟ್ ಮಾಡುವಂತಹ ವ್ಯಕ್ತಿ ಸಿದ್ದರಾಮಯ್ಯ ಅಲ್ಲ. ಆದರೆ ಇನ್ಮುಂದೆ ಅದು ನಡೆಯಲಿದೆ. ಈಗ ಬೇರೆಯವರ ಫೈಲ್‌ಗಳು ಓಪನ್ ಆಗುತ್ತವೆ. ಹಾಗಾಗಿ ವಿಜಯೇಂದ್ರ ಮತ್ತು ಆರ್​. ಅಶೋಕ್​​ ಹುಷಾರಾಗಿರಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version