ಬೆಂಗಳೂರು, (ಏಪ್ರಿಲ್ 03): ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರು (Lokayukta retired justice santosh hegde ) ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಇಂದು (ಏಪ್ರಿಲ್ 03) ಸ್ಕೌಟ್ಸ್ & ಗೈಡ್ಸ್ ಆಯುಕ್ತ PGR ಸಿಂಧ್ಯಾಗೆ ಅಭಿನಂದನಾ ಸಮಾರಂಭದಲ್ಲಿ ಸಂತೋಷ್ ಹೆಗ್ಡೆ ಭಾಗವಹಿಸಿದ್ದು, ಈ ವೇಳೆ ಭಾಷಣ ಮಾಡುವಾಗ ಅಸ್ವಸ್ಥಗೊಂಡಿದ್ದಾರೆ. ಬಳಿಕ ಭಾಷಣ ಮುಗಿಸಿ ವೇದಿಕೆ ಮೇಲಿನ ಕುರ್ಚಿ ಮೇಲೆ ಕುಳಿತುಕೊಳ್ಳುವಾಗ ಕುಸಿದುಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಸದ್ಯ ಅವರಿಗೆ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಕಿತ್ಸೆ ನೀಡಲಾಗುತ್ತಿದೆ.
ನವದೆಹಲಿ, ಏಪ್ರಿಲ್ 3: ಕಳೆದ 1 ವರ್ಷದಿಂದ ಚಿನ್ನದ ಬೆಲೆ (Gold Rates) ಬಹಳ ಏರಿದೆ. 2025ರ ಏಪ್ರಿಲ್ 3ರಂದು ಅಪರಂಜಿ ಚಿನ್ನದ ಬೆಲೆ 9,164 ರೂ ಇತ್ತು. ಒಂದು ವರ್ಷದ ನಂತರ ಇವತ್ತು ಅದರ ಬೆಲೆ 15,093 ರೂಗೆ ಏರಿದೆ. ಒಂದು ವರ್ಷದಲ್ಲಿ ಬೆಲೆಯಲ್ಲಿ ಶೇ. 65ರಷ್ಟು ಏರಿಕೆ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಔನ್ಸ್ ಚಿನ್ನದ ಬೆಲೆ 4,700 ಡಾಲರ್ ದಾಟಿ, 4,800 ಡಾಲರ್ ಗಡಿಯತ್ತ ಸಾಗಿದೆ. ಒಂದು ಔನ್ಸ್ ಎಂದರೆ 28.35 ಗ್ರಾಮ್.
ಫೆಬ್ರುವರಿ 28ರಂದು ಯುದ್ಧ ಶುರುವಾದಾಗ ಚಿನ್ನ, ಬೆಳ್ಳಿ ಬೆಲೆ ತೀರಾ ಹೆಚ್ಚಬಹುದು ಎಂದು ಭಾವಿಸಲಾಗಿತ್ತು. ಆದರೆ, ಬೆಲೆ ಇಳಿಕೆಯಾಗಿದೆ. ಮಾರ್ಚ್ 1ರಂದು 17,309 ರೂ ಇದ್ದ ಚಿನ್ನದ ಬೆಲೆ ಇವತ್ತು 15,093 ರೂಗೆ ಇಳಿದಿದೆ. ಮಾರ್ಚ್ 1ರಿಂದೀಚೆ ಶೇ. 12ರಷ್ಟು ಬೆಲೆ ಇಳಿಕೆ ಆಗಿದೆ. ಖ್ಯಾತ ಹೂಡಿಕೆದಾರ ಪೀಟರ್ ಶಿಫ್ ಪ್ರಕಾರ ಚಿನ್ನದ ಇಳಿಕೆಯ ಆಟ ಮುಕ್ತಾಯವಾಗಿದೆ. ಇನ್ನೇನಿದ್ದರೂ ಪವರ್ಫುಲ್ ಜಂಪ್.
ಮಾರ್ಚ್ನಲ್ಲಿ ಇಳಿದಿದ್ದ ಚಿನ್ನದ ಬೆಲೆ ಏಪ್ರಿಲ್ನಲ್ಲಿ ಸತತವಾಗಿ ಏರಿಕೆಯಾಗುವ ಟ್ರೆಂಡ್ ಇದೆ. ಇದು ಯುದ್ಧದ ಪರಿಣಾಮದಿಂದ ಮಾತ್ರವೇ ಆಗುತ್ತಿರುವ ಏರಿಕೆಯಲ್ಲ. ಬದಲಾಗಿ, ಹೂಡಿಕೆದಾರರು ಅಮೆರಿಕನ್ ಡಾಲರ್ನಿಂದ ದೂರವಾಗಿ, ನೈಜ ಆಸ್ತಿಯತ್ತ ವಾಲತೊಡಗಿರುವುದರ ಕುರುಹು ಇದು ಎಂಬುದು ಪೀಟರ್ ಶಿಫ್ ಅವರ ಅನಿಸಿಕೆ.
ಏಪ್ರಿಲ್ನಲ್ಲಿ ಚಿನ್ನದ ಬೆಲೆ 20,000 ರೂ ದಾಟುತ್ತಾ?
ಪೀಟರ್ ಶಿಫ್ ಪ್ರಕಾರ, ಮಾರ್ಚ್ ತಿಂಗಳು 2008ರ ನಂತರ ಚಿನ್ನದ ಸಾಧನೆ ಅತ್ಯಂತ ಕಳಪೆ ಸಾಧನೆ ಕಂಡ ತಿಂಗಳೆನಿಸಿದೆ. ಹಾಗೆಯೇ, ಏಪ್ರಿಲ್ ತಿಂಗಳು ಕಳೆದ ನಾಲ್ಕೂವರೆ ದಶಕದಲ್ಲೇ ಚಿನ್ನಕ್ಕೆ ಬೆಸ್ಟ್ ಮಂತ್ ಆಗಿರಲಿದೆಯಂತೆ.
ಚಿನ್ನದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಔನ್ಸ್ಗೆ 4,700 ಡಾಲರ್ ಬೆಲೆ ದಾಟಿ, 4,800 ಡಾಲರ್ನತ್ತ ಸಾಗಿದೆ. ಮಾರ್ಚ್ 23ರ ನಂತರ ಚಿನ್ನದ ಬೆಲೆ ಶೇ. 15ರಷ್ಟು ಹೆಚ್ಚಾಗಿದೆ. ಇದೇ ಟ್ರೆಂಡ್ ಏಪ್ರಿಲ್ನಲ್ಲಿ ಮುಂದುವರಿಯಲಿದ್ದು, ಒಂದು ಔನ್ಸ್ ಚಿನ್ನದ ಬೆಲೆ 6,000 ಡಾಲರ್ ದಾಟಬಹುದು. ಅಂದರೆ, ಒಂದು ಗ್ರಾಮ್ ಚಿನ್ನದ ಬೆಲೆ 19,616 ರೂ ಮುಟ್ಟಬಹುದು. 20,000 ರೂ ದಾಟಿದರೂ ಅಚ್ಚರಿ ಇಲ್ಲ ಎನ್ನುವ ಅಭಿಪ್ರಾಯ ಇವರದ್ದು. ಅಂದರೆ ಮುಂದಿನ ನಾಲ್ಕು ವಾರದಲ್ಲಿ ಬಂಗಾರದ ಬೆಲೆ ಶೇ 20ಕ್ಕಿಂತಲೂ ಹೆಚ್ಚಿನ ಪ್ರಮಾಣದಷ್ಟು ಏರಿಕೆ ಆಗಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರಿನ ಪಾರ್ಟಿಯೊಂದರಲ್ಲಿ ಭಾಗಿ ಆಗಿ ಡ್ರಗ್ಸ್ ಸೇವಿಸಿದ್ದ ಆರೋಪದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ನಟಿ ಹೇಮಾ ಕೊಲ್ಲ (Hema Kolla) ಇದಿಗ ಮತ್ತೊಮ್ಮೆ ಪಾರ್ಟಿಯೊಂದರಲ್ಲಿ ಡ್ರಗ್ಸ್ ಪರೀಕ್ಷೆಗೆ ಒಳಪಟ್ಟಿದ್ದಾರೆ. ನಟಿ ಹೇಮಾ ಕೊಲ್ಲ ಹೈದರಾಬಾದ್ನ ಪಬ್ ಒಂದರಲ್ಲಿ ಪಾರ್ಟಿಯಲ್ಲಿ ಭಾಗಿ ಆಗಿದ್ದರು. ಈ ವೇಳೆ ಪಬ್ ಮೇಲೆ ಪೊಲೀಸ್ ದಾಳಿ ಆಗಿದ್ದು, ಅಲ್ಲಿ ನಟಿ ಹೇಮಾ ಅವರಿಗೆ ಡ್ರಗ್ಸ್ ಪರೀಕ್ಷೆ ಮಾಡಲಾಗಿತ್ತು.
ಹೈದರಾಬಾದ್ನ ಕೊಂಡಾಪುರದಲ್ಲಿರುವ ‘ಕ್ವಾಕ್ ಅರೀನಾ ಪಬ್’ ಮೇಲೆ ಇತ್ತೀಚೆಗೆ ಹೈದರಾಬಾದ್ ಪೊಲೀಸರು ಮತ್ತು ಮಾದಕ ವಸ್ತು ನಿಯಂತ್ರಣ ತಂಡವಾದ ಈಗಲ್ ತಂಡ ಜಂಟಿಯಾಗಿ ದಾಳಿ ನಡೆಸಿತ್ತು. ಈ ಪಬ್ನಲ್ಲಿ ಡ್ರಗ್ಸ್ ಪೂರೈಕೆಯಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಈ ದಾಳಿ ನಡೆದಿದೆ. ಪಾರ್ಟಿಯಲ್ಲಿದ್ದ ಸುಮಾರು 64 ಜನರಿಗೆ ಪೊಲೀಸರು ಸ್ಥಳದಲ್ಲೇ ಡ್ರಗ್ಸ್ ಪರೀಕ್ಷೆ ನಡೆಸಿದರು. ಈ ಪರೀಕ್ಷೆಯಲ್ಲಿ ಎಂಟು ಜನರಿಗೆ ಪಾಸಿಟಿವ್ ಬಂದಿದ್ದು, ಅವರಲ್ಲಿ ಆರು ಮಂದಿ ಗಾಂಜಾ ಮತ್ತು ಇಬ್ಬರು ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ.
ಈ ದಾಳಿಯ ಸಮಯದಲ್ಲಿ ನಟಿ ಹೇಮಾ ಕೂಡ ಅದೇ ಪಬ್ನಲ್ಲಿದ್ದರು. ಪೊಲೀಸರು ಅವರಿಗೂ ಡ್ರಗ್ಸ್ ಪರೀಕ್ಷೆ ನಡೆಸಿದ್ದು, ಅದರ ಫಲಿತಾಂಶ ‘ನೆಗೆಟಿವ್’ ಬಂದಿದೆ ಎಂದು ನಟಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಪಬ್ ಆವರಣದಿಂದಲೇ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಹೇಮಾ, ‘ನಾನು ಮತ್ತೆ ಪಬ್ಗೆ ಬಂದಿದ್ದೇನೆ. ಈಗಷ್ಟೇ ಈಗಲ್ ತಂಡದವರು ಮಾಡಿದ ಡ್ರಗ್ಸ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ’ ಎಂದು ತಮ್ಮ ಯೂರಿನ್ ಟೆಸ್ಟ್ ರಿಪೋರ್ಟ್ ತೋರಿಸಿದ್ದಾರೆ. ‘ನಿಮ್ಮ ಹೇಮಕ್ಕ ಯಾವತ್ತೂ ತಪ್ಪು ಮಾಡುವುದಿಲ್ಲ. ನಾಳೆ ಡ್ರಗ್ಸ್ ಪರೀಕ್ಷೆಗೆ ಸಂಬಂಧಿಸಿದ ಮತ್ತೊಂದು ವಿಡಿಯೋ ಪೋಸ್ಟ್ ಮಾಡುತ್ತೇನೆ’ ಎಂದು ಅವರು ಹೇಳಿದ್ದಾರೆ.
ಹಿಂದೆ ಬೆಂಗಳೂರಿನ ಹೊರವಲಯದಲ್ಲಿ ನಡೆದಿದ್ದ ಪಾರ್ಟಿಯಲ್ಲಿ ನಟಿ ಹೇಮಾ ಭಾಗಿ ಆಗಿದ್ದರು. ಆಗ ಅವರ ಮೇಲೆ ಡ್ರಗ್ಸ್ ಪರೀಕ್ಷೆ ನಡೆಸಲಾಗಿದ್ದು, ಅವರು ಡ್ರಗ್ಸ್ ಸೇವಿಸಿದ್ದಾರೆ ಎಂದು ಅವರನ್ನು ಬಂಧಿಸಲಾಗಿತ್ತು. ಸುಮಾರು ಒಂದು ವಾರಗಳ ಕಾಲ ನಟಿ ಹೇಮಾ ಕೊಲ್ಲ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಬಳಿಕ ಇತ್ತೀಚೆಗಷ್ಟೆ ಪ್ರಕರಣದಲ್ಲಿ ಅವರನ್ನು ನಿರ್ದೋಷಿ ಎಂದು ಘೋಷಿಸಲಾಯ್ತು.
ಆದರೆ ಆ ಘಟನೆಯಿಂದ ತನ್ನ ವೈಯಕ್ತಿಕ ಜೀವನ ಮತ್ತು ಕುಟುಂಬದ ಮೇಲೆ ಕೆಟ್ಟ ಪರಿಣಾಮ ಬೀರಿದೆ ಎಂದು ಅವರು ಈ ಹಿಂದೆ ಕಣ್ಣೀರಿಟ್ಟಿದ್ದರು. ಇದೀಗ ಮತ್ತೆ ಪಬ್ ದಾಳಿಯ ವೇಳೆ ಅವರು ಅಲ್ಲಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಸದ್ಯ ಅವರು ಸಿನಿಮಾಗಳಿಂದ ದೂರವಿದ್ದು, ಉತ್ತಮ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಡ್ರಗ್ಸ್ ಪ್ರಕರಣದ ಬಳಿಕ ಅವರಿಗೆ ಸಿನಿಮಾ ಅವಕಾಶಗಳು ಸಂಪೂರ್ಣ ನಿಂತು ಹೋಗಿವೆ.
ಮೈಸೂರು, ಏಪ್ರಿಲ್ 03: ನೈರುತ್ಯ ರೈಲ್ವೆ ಮೈಸೂರು ವಿಭಾಗವು (mysuru railway division) 2025-26ನೇ ಸಾಲಿನ ಹಣಕಾಸು ವರ್ಷದಲ್ಲಿ ಭರ್ಜರಿ ಸಾಧನೆ ಮಾಡಿದೆ. 449.13 ಕೋಟಿ ರೂ ಪ್ರಯಾಣಿಕ ಆದಾಯ ಗಳಿಸುವ ಮೂಲಕ ಈ ಹಿಂದಿನ ದಾಖಲೆಯನ್ನು ಮೀರಿಸಿದೆ. ಜೊತೆಗೆ ಸರಕ ಸಾಗಾಣೆಯಲ್ಲೂ ವಿಭಾಗ ಉತ್ತಮ ಸಾಧನೆ ಮಾಡಿದ್ದು, ಇತಿಹಾಸದಲ್ಲೇ ಹೆಚ್ಚು ಸರಕು ಸಾಗಾಣೆ ಮಾಡಿದ ಎರಡನೇ ಅತ್ಯುನ್ನತ ಸಾಧನೆ ಆಗಿದೆ ಎಂದು ವಿಭಾಗೀಯ ಮುಖ್ಯಸ್ಥ ಮುದಿತ್ ಮಿತ್ತಲ್ ಮಾಹಿತಿ ನೀಡಿದ್ದಾರೆ.
ಮುದಿತ್ ಮಿತ್ತಲ್ ಹೇಳಿದ್ದಿಷ್ಟು
ಇಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುದಿತ್ ಮಿತ್ತಲ್, ಟಿಕೆಟ್ ಪರಿಶೀಲನೆ ಮೂಲಕ 9.75 ಕೋಟಿ ರೂ ಆದಾಯ ಗಳಿಸಲಾಗಿದೆ. 11.81 ಕೋಟಿ ರೂ ಪಾರ್ಸೆಲ್ ಆದಾಯ, ಲೀಸ್ ಮೂಲಕ 5.85 ಕೋಟಿ ರೂ ಗಳಿಕೆ ಮಾಡಲಾಗಿದೆ ಎಂದರು.
ಇನ್ನು ಸರಕು ಚಾಲನೆ ವಿಭಾಗದಿಂದ 900.19 ಕೋಟಿ ಆದಾಯ ಗಳಿಸಲಾಗಿದ್ದು, 10.586 ಮಿಲಿಯನ್ ಟನ್ ಸರಕು ಸಾಗಣೆ ಮಾಡಲಾಗಿದೆ. ಆ ಮೂಲಕ ಇತಿಹಾಸದಲ್ಲೇ ಅತೀ ಹೆಚ್ಚು ಸಾಗಾಟ ಮಾಡುವ ಮೂಲಕ ರೆಲ್ವೆ ವಿಭಾಗದ ಎರಡನೇ ಸಾಧನೆ ಆಗಿದೆ.
ಡಿಜಿಟಲ್ ಟಿಕೆಟ್ ವ್ಯವಸ್ಥೆ
ಕುವೆಂಪುನಗರದಲ್ಲಿ ಹೊಸ ಪಿಆರ್ಎಸ್ ಸೌಲಭ್ಯ, ಡಿಜಿಟಲ್ ಟಿಕೆಟ್ ವ್ಯವಸ್ಥೆ ಆರಂಭಿಸಲಾಗಿದೆ. ನಗದು ರಹಿತ ಸೇವೆ ಸೇರಿದಂತೆ ಸ್ಥಳೀಯ ಪ್ರಯಾಣಿಕರಿಗೆ ಸೌಲಭ್ಯ ಹೆಚ್ಚಿಸಲಾಗಿದೆ. ಟ್ರ್ಯಾಕ್, ಸೇತುವೆ, ಪ್ಲಾಟ್ಫಾರ್ಮ್ ಅಭಿವೃದ್ಧಿ ಪಡಿಸಲಾಗಿದೆ. ದಾಹಕ, ನಿಷಿದ್ಧ ವಸ್ತು ಪತ್ತೆ ಇಲ್ಲ ಆಗಿಲ್ಲ ಆ ಮೂಲಕ ಭದ್ರತೆಯಲ್ಲಿ ಉತ್ತಮ ದಾಖಲೆ ಮಾಡಿದೆ. 69 ಸಿಬ್ಬಂದಿಗೆ ಅಗ್ನಿಶಾಮಕ ತರಬೇತಿ ನೀಡುವ ಮೂಲಕ ಸುರಕ್ಷತೆಗೆ ಒತ್ತು ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ವಿದ್ಯುತ್ ಕಾಮಗಾರಿಯಲ್ಲಿ ಮಹತ್ವದ ಸಾಧನೆ
91.34 MUರಿಂದ 90.53 MUಗೆ ವಿದ್ಯುತ್ ಬಳಕೆಯಲ್ಲಿ ಇಳಿಕೆ ಆಗಿದೆ. ಸೌರ ಶಕ್ತಿ ಸಾಮರ್ಥ್ಯ 160% ಏರಿಕೆ ಆಗಿದ್ದು, ವಾರ್ಷಿಕ 29 ಲಕ್ಷ ರೂ ಉಳಿತಾಯ ಮಾಡಲಾಗುತ್ತಿದೆ. ಮೂಲ ಸೌಕರ್ಯದಲ್ಲಿ ದೊಡ್ಡ ಸುಧಾರಣೆ ವೈಫಲ್ಯದ ಅಂಕಿಅಂಶ 176ರಿಂದ 75ಕ್ಕೆ ಇಳಿಕೆ ಆಗಿದೆ. ಆ ಮೂಲಕ ಸಕಲೇಶಪುರ-ಸುಬ್ರಮಣ್ಯ ಘಾಟ್ ವಿದ್ಯುತ್ ಕಾಮಗಾರಿಯಲ್ಲಿ ಮಹತ್ವದ ಸಾಧನೆ ಮಾಡಲಾಗಿದೆ. ಪ್ರಯಾಣಿಕ ಸೌಲಭ್ಯಗಳಾದ ಲಿಫ್ಟ್, ಸ್ಟೇಷನ್ ಅಭಿವೃದ್ಧಿ ಪಡಿಸಲಾಗಿದೆ. ಶೂನ್ಯ ವಿದ್ಯುತ್, ಅಪಘಾತ ಶೂನ್ಯ ಅಗ್ನಿ ಅವಘಡಗಳ ಭದ್ರತೆಗೆ ಆದ್ಯತೆ ನೀಡಲಾಗಿದೆ.
ಇನ್ನು ನೂರಾರು ಶಸ್ತ್ರಚಿಕಿತ್ಸೆ ಯಶಸ್ವಿಗೊಳಿಸುವ ಮೂಲಕ ಆರೋಗ್ಯ ಸೇವೆಗಳಲ್ಲಿ ಸಾಧನೆ ಮಾಡಲಾಗಿದೆ. 132 ಮಕ್ಕಳ ರಕ್ಷಣೆ, 1.17 ಕೋಟಿ ರೂ ಮೌಲ್ಯದ ವಸ್ತುಗಳನ್ನು ಪ್ರಯಾಣಿಕರಿಗೆ ಹಿಂದಿರುಗಿಸಲಾಗಿದೆ. 88.92 ಕೋಟಿ ರೂ ಹಣಕಾಸು ಉಳಿತಾಯದಿಂದ 53.55% ಏರಿಕೆ ಆಗಿದೆ. QR ಕೋಡ್ ಪಾವತಿ ವ್ಯವಸ್ಥೆ ಪರಿಚಯಿಸಲಾಗಿದೆ. ಸರಕು ಮತ್ತು ಪ್ರಯಾಣಿಕ ಸೇವೆಯಲ್ಲಿ ವಿಶ್ವಾಸಾರ್ಹತೆ ಹೆಚ್ಚಿಸಲಾಗಿದೆ ಎಂದು ಮುದಿತ್ ಮಿತ್ತಲ್ ಹೇಳಿದ್ದಾರೆ.
ಟೆಹ್ರಾನ್, ಏಪ್ರಿಲ್ 3: ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಅಮೆರಿಕದ ಎರಡನೇ F-35 ಯುದ್ಧ ವಿಮಾನವನ್ನು ಹೊಡೆದುರುಳಿಸಿದೆ ಎಂದು ಇರಾನಿನ (Iran War) ರಾಜ್ಯ ಮಾಧ್ಯಮ ಇಂದು ತಿಳಿಸಿದೆ. ಅಮೆರಿಕದ ಮತ್ತೊಂದು ಯುದ್ಧ ವಿಮಾನ ಪತನವಾಗಿ ಸಂಪೂರ್ಣವಾಗಿ ನಾಶವಾಗಿದೆ. ವಿಮಾನಕ್ಕೆ ತೀವ್ರ ಹಾನಿಯಾಗಿದ್ದರಿಂದ ಪೈಲಟ್ ಬದುಕಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಐಆರ್ಜಿಸಿ ತಿಳಿಸಿದೆ.
ಆದರೆ, ಅಮೆರಿಕದಿಂದ ಈ ಬಗ್ಗೆ ಇಲ್ಲಿಯವರೆಗೆ ಯಾವುದೇ ದೃಢೀಕರಣ ಬಂದಿಲ್ಲ. F-35 ಯುಎಸ್ನ ಅತ್ಯಂತ ಮುಂದುವರಿದ ಸ್ಟೆಲ್ತ್ ಫೈಟರ್ ಜೆಟ್ಗಳಲ್ಲಿ ಒಂದಾಗಿದ್ದು, ರಾಡಾರ್ ಪತ್ತೆಹಚ್ಚುವಿಕೆಯನ್ನು ತಪ್ಪಿಸುವ ಮತ್ತು ಹೆಚ್ಚು ರಕ್ಷಿಸಲ್ಪಟ್ಟ ವಾಯುಪ್ರದೇಶದೊಳಗೆ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ, ಆ ಯುದ್ಧ ವಿಮಾನವನ್ನು ಕೂಡ ಪತನಗೊಳಿಸಿರುವುದಾಗಿ ಇರಾನ್ ಘೋಷಿಸಿದೆ.
ಇರಾನ್ ಅಮೆರಿಕದ ಅತ್ಯಂತ ಅಮೂಲ್ಯವಾದ ವಿಮಾನಗಳಲ್ಲಿ ಒಂದಾದ ಮತ್ತು ಅಮೆರಿಕದ ಐದನೇ ತಲೆಮಾರಿನ ಯುದ್ಧ ಹೋರಾಟದ ಸಾಮರ್ಥ್ಯದ ಬೆನ್ನೆಲುಬಾದ US F-35 ಲೈಟ್ನಿಂಗ್ 2 ಅನ್ನು ಹೊಡೆದುರುಳಿಸಿದೆ ಎಂದು ಹೇಳಿಕೊಂಡ ಸುಮಾರು 2 ವಾರಗಳ ನಂತರ ಈ ದಾಳಿ ಸಂಭವಿಸಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಹುಬ್ಬಳ್ಳಿ, (ಏಪ್ರಿಲ್ .03): ನಗರದಲ್ಲಿ ಲವ್ ಜಿಹಾದ್ (love jihad) ಆರೋಪದ ಹಿನ್ನೆಲೆಯಲ್ಲಿ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹುಬ್ಬಳಿಯ (Hubballi) ವಿಜಯನಗರದ ನಿವಾಸಿ ಸಮೀರ್ ಎನ್ನುವಾತ ಜಿಮ್ನಲ್ಲಿ ಯುವತಿಯನ್ನು ಪರಿಚಯ ಮಾಡಿಕೊಂಡು ಬಳಿಕ ಆಕೆಯೊಂದಿಗೆ ಸಲುಗೆ ಬೆಳೆಸಿ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಹಿಂದೂ ಪರ ಸಂಘಟನೆ ಕಾರ್ಯಕರ್ತರು, ಮನೆಗೆ ಹೋಗಿ ಸಮೀರ್ ನನ್ನು ಹಿಡಿದು ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
ಹುಬ್ಬಳ್ಳಿ ನಗರದ ವಿಜಯನಗರ ನಿವಾಸಿಯಾಗಿರುವ ಸಮೀರ್ ಮತ್ತು ಹಿಂದೂ ಯುವತಿ ಜಿಮ್ನಲ್ಲಿ ಪರಿಚಯವಾಗಿತ್ತು. ಬಳಿಕ ಸಮೀರ್ ಯುವತಿಯೊಂದಿಗೆ ಸಲುಗೆ ಬೆಳೆಸಿದ್ದಾನೆ. ಬಳಿಕ ಯುವತಿಯನ್ನು ಮನೆಗೆ ಕರೆಯಿಸಿಕೊಂಡು ಜ್ಯೂಸ್ನಲ್ಲಿ ಮತ್ತು ಬರುವ ಔಷಧಿ ಬೆರೆಸಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಇನ್ನು ಸಮೀರ್ ಕುಟುಂಬದವರು ವಿಕಾಸನಗರದಲ್ಲಿರುವ ಯುವತಿಯ ಮನೆಗೆ ನುಗ್ಗಿ ಗಲಾಟೆ ನಡೆಸಿದರೆಂಬ ಆರೋಪ ಕೇಳಿಬಂದಿದೆ.
ಕೆಲ ದಿನ ನಂತರ ಯುವತಿ ಜೊತೆ ಖಾಸಗಿಯಾಗಿ ಕಳೆದ ಕ್ಷಣಗಳಿದ್ದ ವಿಡಿಯೋ ತೋರಿಸಿ ಬೆದರಿಕೆ ಹಾಕಿದ್ದು, ಅನೇಕ ಬಾರಿ ಲೈಂಗಿಕ ಕಿರುಕುಳ ನೀಡಿದ್ದಾನಂತೆ. ಆದರೂ ಇದೆಲ್ಲವನ್ನು ಯುವತಿ ಮನೆಯವರಿಗೆ ಹೇಳಿರಲಿಲ್ಲ. ಆದ್ರೆ ನಿನ್ನೆ (ಏಪ್ರಿಲ್ 02) ಸಂಜೆ ಈ ವಿಚಾರ ಯುವತಿ ಮನೆಯವರು ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರಿಗೆ ಗೊತ್ತಾಗಿದ್ದು, ಬಳಿಕ ದೊಡ್ಡ ಹೈಡ್ರಾಮಾವೇ ನಡೆದಿದೆ. ವಿಚಾರ ತಿಳಿಯುತ್ತಿದ್ದಂತೆಯೇ ಹಿಂದೂ ಕಾರ್ಯಕರ್ತರು, ಹೋಗಿ ಸಮೀರ್ ನನ್ನು ಥಳಿಸಿ ಬಳಿಕಪೊಲೀಸರ ವಶಕ್ಕೊಪ್ಪಿಸಿದ್ದಾರೆ.ಇದಾದ ಬಳಿಕ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ.
ಯುವತಿ ಮನೆಯವರ ಮೇಲೆ ಸಮೀರ್ ಕುಟುಂಬಸ್ಥರಿಂದ ಹಲ್ಲೆ
ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಸಮೀರ್ ಮುಲ್ಲಾ ಮನೆಗೆ ಹೋಗಿ ಆತನನ್ನು ಹಿಡಿದುಕೊಂಡು ಥಳಿಸಿ ಆತನನ್ನು ಹಳೆ ಹುಬ್ಬಳ್ಳಿ ಠಾಣೆಗೆ ಒಪ್ಪಿಸಿದ್ದರು. ಇತ್ತ ಸಮೀರ್ ಮುಲ್ಲಾ ನನ್ನು ಯುವತಿ ಮನೆಯವರೇ ಅಪಹರಣ ಮಾಡಿಕೊಂಡು ಹೋಗಿದ್ದಾರೆ ಎಂದು ತಿಳಿದು ಸಮೀರ್ ಮುಲ್ಲಾ ಮನೆಯವರು ಯುವತಿ ಮನೆಗೆ ನುಗ್ಗಿ ಗಲಾಟೆ ಮಾಡಿ ಅನೇಕರ ಮೇಲೆ ಹಲ್ಲೆ ಮಾಡಿದ್ದರು. ಇತ್ತ ಪೊಲೀಸರು ಬರುತ್ತಿದ್ದಂತೆಯೇ ಅಲ್ಲಿಂದ ಕಾಲ್ಕಿತ್ತಿದ್ದರು. ಇನ್ನು ಇದಾದ ನಂತರ ಹಳೆ ಹುಬ್ಬಳ್ಳಿ ಠಾಣೆಗೆ ಮುತ್ತಿಗೆ ಹಾಕಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮತ್ತು ವಿವಿಧ ಸಮಾಜದವರು, ಪ್ರತಿಭಟನೆ ನಡೆಸಿದ್ದಾರೆ.
ಈ ಘಟನೆಯ ಹಿನ್ನೆಲೆಯಲ್ಲಿ ಜಿಮ್ಗಳು ಲವ್ ಜಿಹಾದ್ ಕೇಂದ್ರಗಳಾಗುತ್ತಿವೆ ಎಂದು ಹಿಂದೂ ಸಂಘಟನೆಗಳು ವ್ಯಕ್ತಪಡಿಸಿದ್ದು, ಸಮೀರ್ ಜಿಮ್ನಲ್ಲಿ ಹಿಂದೂ ಹುಡುಗಿಯನ್ನು ಪರಿಚಯ ಮಾಡಿಕೊಂಡು ಲವ್ ಜಿಹಾದ್ ಮಾಡುತ್ತಿದ್ದ. ಹೀಗಾಗಿ ಸಮೀರ್ಗೆ ತಕ್ಕ ಶಿಕ್ಷೆ ಆಗಬೇಕು. ಅಲ್ಲದೇ ಜಿಮ್ ಬಂದ್ ಮಾಡಿಸಬೇಕೆಂದು ಹಿಂದೂಪರ ಸಂಘಟನೆಗಳು ಆಗ್ರಹಿಸಿವೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಅವರಿಬ್ಬರು ಪರಿಚಿತರು ಎಂದ ಪೋಷಕರು
ಮತ್ತೊಂದಡೆ ಗಾಯಳು ಸಮೀರ್ ಮುಲ್ಲಾನನ್ನು ಹುಬ್ಬಳ್ಳಿ ಕಿಮ್ಸ್ ಗೆ ದಾಖಲಿಸಿ, ಪೊಲೀಸರು ಚಿಕಿತ್ಸೆ ಕೊಡಿಸಿದ್ದಾರೆ. ಇನ್ನು ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಸಮೀರ್ ಪೋಷಕರು, ನಮ್ಮ ಮಗ ಯಾವುದೇ ಲವ್ ಜಿಹಾದ್ ಮಾಡಿಲ್ಲ. ಅವರಿಬ್ಬರು ಪರಿಚಿತರು, ಓಡಾಡಿಕೊಂಡಿದ್ದರು. ಆದ್ರೆ ಇದನ್ನೇ ತಪ್ಪಾಗಿ ತಿಳಿದುಕೊಂಡು ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಸಮೀರ್ ವಿರುದ್ಧ ಸಂತ್ರಸ್ತೆ ಸ್ಫೋಟಕ ಹೇಳಿಕೆ
ಇನ್ನು ಈ ಬಗ್ಗೆ ಸಂತ್ರಸ್ತೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಈ ವಿಡಿಯೋನಲ್ಲಿ ಸಮೀರ್ ಜತೆ ಹೇಗೆ ಪರಿಯವಾಯ್ತು ? ಬಳಿಕ ಏನೆಲ್ಲಾ ಆಯ್ತು ಎಂದು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಸಮೀರ್ ಸೋದರಿ ತೈಸೀಮ್ ಮುಲ್ಲಾ ನನ್ನ ಸ್ನೇಹಿತೆ. ಆಕೆಯಿಂದ ನನಗೆ ಸಮೀರ್ ಪರಿಚಯವಾಗಿತ್ತು. ಆತ ಚೆನ್ನಾಗಿ ಜಿಮ್ ಮಾಡಿಸುತ್ತಾನೆಂದು ಹೇಳಿದ್ದಳು. ಹೀಗಾಗಿ ಜಿಮ್ನಲ್ಲಿ ಪರಿಚಯವಾಗಿದ್ದು, ಬಳಿಕ ಬರ್ತಡೇ ಪಾರ್ಟಿ, ವಿಕೇಂಡ್ ಪಾರ್ಟಿಗೆ ಹೋಗಿದ್ವಿ. ನಮ್ಮ ಬರ್ತಡೇ ಪಾರ್ಟಿಗೆ ಸಮೀರ್ ಸಹ ಬಂದಿದ್ದ. ಇದಾದ ಮೇಲೆ ಸಮೀರ್ ನನಗೆ ಆತ್ಮೀಯನಾಗಿದ್ದ ಎಂದಿದ್ದಾರೆ.
ಮತ್ತು ಬರುವ ಜ್ಯೂಸ್ ಕೊಟ್ಟು ಅತ್ಯಾಚಾರ
ಒಂದು ದಿನ ಸಮೀರ್ ತನ್ನ ಮನೆಗೆ ಕರೆದೊಯ್ದಿದ್ದ. ಬಳಿಕ ಮನೆಯಲ್ಲಿ ಮತ್ತು ಬರುವ ಜ್ಯೂಸ್ ಕೊಟ್ಟು ಅತ್ಯಾಚಾರ ಮಾಡಿದ್ದ. ಅಲ್ಲದೇ ಅತ್ಯಾಚಾರ ಮಾಡಿರುವುದನ್ನು ವಿಡಿಯೋ ಮಾಡಿದ್ದು, ಅದನ್ನು ನನಗೆ ತೋರಿಸಿದ್ದ. ಅಲ್ಲದೇ ಆ ವಿಡಿಯೋ ಇಟ್ಟುಕೊಂಡು ಬ್ಲಾಕ್ಮೇಲ್ ಮಾಡಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ದೂರು ಪ್ರತಿದೂರು
ಈ ಸಂಬಂಧ ದೂರು ಪ್ರತಿದೂರು ದಾಖಲಾಗಿದೆ. ಸಮೀರ್ ಮುಲ್ಲಾನನ್ನು ಕರೆದುಕೊಂಡು ಹೋಗಿ ಥಳಿಸಿದ ಬಗ್ಗೆ ಯುವಕನ ಮನೆಯವರು ಅಶೋಕ್ ನಗರ ಠಾಣೆಗೆ ದೂರು ನೀಡಿದ್ರೆ, ಇತ್ತ ಯುವತಿ ಮನೆಯವರ ಮೇಲೆ ಹಲ್ಲೆ ಸೇರಿದಂತೆ ಯುವತಿ ಮೇಲೆ ಲೈಂಗಿಕ ಕಿರುಕುಳ ಬಗ್ಗೆ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಎರಡು ಕಡೆಯವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಪರಿಸ್ಥಿತಿ ತಿಳಿಯಾಗಿದ್ದು, ಮುಂದೆ ಈ ಪ್ರಕರಣ ಯಾವ ಸ್ವರೂಪ ಪಡೆದುಕೊಳ್ಳುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.
ಬೆಂಗಳೂರು, ಏಪ್ರಿಲ್ 03: ನಾನಾ ಕಾರಣಗಳಿಂದಾಗಿ ಕುಂಟುತ್ತಾ ಸಾಗಿರುವ ಬೆಂಗಳೂರಿನ (Bengaluru) ಬಹು ನಿರೀಕ್ಷಿತ ಈಜಿಪುರ ಫ್ಲೈಓವರ್ ಸಾರ್ವಜನಿಕ ಬಳಕೆಗೆ ಲಭ್ಯವಾಗುವುದು ಮತ್ತಷ್ಟು ವಿಳಂಬವಾಗಲಿದೆ. ಈಗಿನ ಮಾಹಿತಿಯ ಪ್ರಕಾರ ಜೂನ್ ಒಳಗೆ ಮುಗಿಯಬೇಕಿದ್ದ ಮೇಲ್ಸೇತುವೆಯ ಕೆಲಸ ಆಗಸ್ಟ್ ವೇಳೆಗೆ ಕಂಪ್ಲೀಟ್ ಆಗಬಹುದು ಎನ್ನಲಾಗ್ತಿದೆ. ಮಾರ್ಚ್ ಗಡುವನ್ನು ಹೊಂದಿದ್ದ ಈ ಕಾಮಗಾರಿ ಭೂಸ್ವಾಧೀನ ಹಾಗೂ ಇಂಜಿನಿಯರ್ ವರ್ಗಾವಣೆ ಸಮಸ್ಯೆಗಳ ಕಾರಣದಿಂದ ಅದಾಗಲೇ ವಿಳಂಬವಾಗಿತ್ತು ಎನ್ನುವುದಿಲ್ಲಿ ಗಮನಾರ್ಹ.
2017ರಲ್ಲಿ ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆ ಈ ಫ್ಲೈಓವರ್ ಕಾಮಗಾರಿ ಆರಂಭಿಸಿತ್ತು. ಆದರೆ ನಂತರ ಸಂಸ್ಥೆ ಯೋಜನೆಯನ್ನು ಅರ್ಧದಲ್ಲೇ ಬಿಟ್ಟಿತ್ತು. ಬಳಿಕ ಹೈದರಾಬಾದ್ ಮೂಲದ ಬೊಳ್ಳಿನೇನಿ ಸೀನಯ್ಯ ಕಂಪನಿ ಪ್ರೈವೇಟ್ ಲಿಮಿಟೆಡ್(BSCPL) ಸಂಸ್ಥೆಗೆ 2024ರಲ್ಲಿ 15 ತಿಂಗಳ ಗಡುವಿನೊಂದಿಗೆ ಕಾಮಗಾರಿ ಪೂರ್ಣಗೊಳಿಸುವ ಜವಾಬ್ದಾರಿ ನೀಡಲಾಗಿತ್ತು. ಈಜಿಪುರ ಮುಖ್ಯ ರಸ್ತೆಯ ಮೇಲೆ ನಿರ್ಮಾಣವಾಗುತ್ತಿರುವ 2.38 ಕಿಮೀ ಉದ್ದದ ಫ್ಲೈಓವರ್ನಲ್ಲಿ ಒಟ್ಟು 762 ಸೆಗ್ಮೆಂಟ್ಗಳು ಬರಲಿದ್ದು, ಆ ಪೈಕಿ ಇನ್ನೂ ಸುಮಾರು 20 ಸೆಗ್ಮೆಂಟ್ಗಳನ್ನು ಅಳವಡಿಸೋದು ಬಾಕಿ ಇದೆ. ಸೇಂಟ್ ಜಾನ್ಸ್ ಜಂಕ್ಷನ್ ಬಳಿ ಪಿಯರ್ ಕೆಲಸ ಈಗಷ್ಟೇ ಆರಂಭವಾಗಿರುವುದರಿಂದ ಕೆಲವು ವಾರಗಳು ಬೇಕಾಗುತ್ತದೆ ಎಂದು ಇಂಜಿನಿಯರ್ ತಿಳಿಸಿದ್ದಾರೆ. ಡೊಮ್ಲೂರ್ ಭಾಗ ಹಾಗೂ ಕೇಂದ್ರಿಯ ಸದನ್ ಭಾಗದಲ್ಲಿ ಅಪ್ ರ್ಯಾಂಪ್ ಮತ್ತು ಡೌನ್ ರ್ಯಾಂಪ್ ಕೆಲಸಗಳು ಕೂಡ ಪ್ರಾರಂಭವಾಗಿವೆ. ಮಣ್ಣಿನ ಸ್ಥಿರೀಕರಣ, ಸೈಡ್ವಾಲ್ ನಿರ್ಮಾಣ ಹಾಗೂ ನಂತರ ಬಿಟುಮಿನ್ ಹಾಸುವ ಕೆಲಸಗಳಿಗೆ ಸಮಯ ಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಇನ್ನು ಕಾಮಗಾರಿ ವಿಳಂಬದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಣ್ಣ ಕಾರಣಗಳಿಗೂ ಕೆಲಸ ವಿಳಂಬವಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಈ ಫ್ಲೈಓವರ್ ಪೂರ್ಣಗೊಂಡರೆ ಈಜಿಪುರ ಜಂಕ್ಷನ್, ಸೋನಿ ವರ್ಲ್ಡ್ ಸಿಗ್ನಲ್ ಮತ್ತು ಕೇಂದ್ರೀಯ ಸದನ ಸೇರಿದಂತೆ ಕೋರಮಂಗಲದ ಒಟ್ಟು 7 ಪ್ರಮುಖ ಜಂಕ್ಷನ್ಗಳನ್ನು ಬೈಪಾಸ್ ಮಾಡಬಹುದು. ಇದರಿಂದ ಪ್ರಯಾಣದ ಅವಧಿ ಸುಮಾರು 30 ನಿಮಿಷಗಳ ಉಳಿತಾಯವಾಗಲಿದೆ. ಹೀಗಾಗಿ ಆದಷ್ಟು ಶೀಘ್ರ ಮೇಲ್ಸೇತುವೆ ಸಾರ್ವಜನಿಕ ಸೇವೆಗೆ ಮುಕ್ತವಾಗಬೇಕೆಂಬ ಆಗ್ರಹವೂ ಕೆಳಿಬಂದಿದೆ.
ಬಿಸಿಸಿಐ(BCCI) ಎದುರು ತೊಡೆ ತಟ್ಟಿದ್ದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಇದೀಗ ಸೋತು ಶರಣಾದಂತೆ ತೋರುತ್ತಿದೆ. ಬಿಸಿಸಿಐ ಜೊತೆ ಜಿದ್ದಿಗೆ ಬಿದ್ದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಇದರ ಪರಿಣಾಮವಾಗಿ ತನ್ನ ತಂಡದ ಆಟಗಾರರು ಐಪಿಎಲ್ ಆಡದಂತ್ತಾಯಿತು. ಇದರ ಜೊತೆಗೆ ತನ್ನ ತಂಡ ಟಿ20 ವಿಶ್ವಕಪ್ನಲ್ಲಿ ಭಾಗವಹಿಸದಂತ್ತಾಯಿತು. ಇದೀಗ ಮುಂಬರುವ ಉಭಯ ದೇಶಗಳ ಸರಣಿಯೂ ರದ್ದಾಗುವ ಸಾಧ್ಯತೆಯಿದೆ. ಹಾಗೆಯೇ ಮುಂದಿನ ಆವೃತ್ತಿಯ ಏಷ್ಯಾಕಪ್ ಕೂಡ ಕೈಜಾರುವ ಸ್ಥಿತಿಯಲ್ಲಿದೆ. ಈಗಾಗಲೇ ನಷ್ಟದ ಸುಳಿಯಲ್ಲಿ ಸಿಲುಕಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ, ಬಿಸಿಸಿಐನೊಂದಿಗೆ ಸಂಬಂಧ ಮತ್ತಷ್ಟು ಹಳಸಿದರೆ, ಪಾತಾಳಕ್ಕೆ ಕುಸಿಯಲಿದೆ. ಹೀಗಾಗಿ ಅದಗೆಟ್ಟಿರುವ ಸಂಬಂಧವನ್ನು ಸರಿಪಡಿಸಿಕೊಳ್ಳುವ ಸಲುವಾಗಿ ಬಿಸಿಸಿಐಗೆ ಪತ್ರ ಬರೆದಿದೆ ಎಂದು ವರದಿಯಾಗಿದೆ.
ಬಾಂಗ್ಲಾದೇಶದಲ್ಲಿ ಹೊಸ ಸರ್ಕಾರ ರಚನೆಯಾದ ನಂತರ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಇತ್ತೀಚೆಗೆ ಬಿಸಿಸಿಐಗೆ ಪತ್ರ ಬರೆದಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ . ಭಾರತ ಮತ್ತು ಬಾಂಗ್ಲಾದೇಶ ನಡುವಿನ ದೀರ್ಘಕಾಲದ ಕ್ರಿಕೆಟ್ ಸಂಬಂಧಗಳನ್ನು ಈ ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, ಎರಡು ಮಂಡಳಿಗಳ ನಡುವಿನ ಸಂಬಂಧವನ್ನು ಪುನಃಸ್ಥಾಪಿಸುವ ಬಯಕೆಯನ್ನು ವ್ಯಕ್ತಪಡಿಸಲಾಗಿದೆ ಎಂದು ಬಿಸಿಸಿಐ ಮತ್ತು ಬಿಸಿಬಿಯ ಮೂಲಗಳು ತಿಳಿಸಿವೆ.
ಬಾಂಗ್ಲಾ ಮಂಡಳಿಗೆ ಸಾಲು ಸಾಲು ಸಂಕಷ್ಟ
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ನಿಲುವು ಬದಲಾವಣೆಗೆ ಪ್ರಮುಖ ಕಾರಣ ಮುಂಬರುವ ಪ್ರಮುಖ ಟೂರ್ನಮೆಂಟ್ ಮತ್ತು ಸರಣಿ. ಭಾರತ ಮತ್ತು ಬಾಂಗ್ಲಾದೇಶ ಈ ವರ್ಷದ ಸೆಪ್ಟೆಂಬರ್ನಲ್ಲಿ ಏಕದಿನ ಮತ್ತು ಟಿ20 ಸರಣಿಯನ್ನು ಆಡಲಿವೆ, ಇದಕ್ಕಾಗಿ ಟೀಂ ಇಂಡಿಯಾ ಬಾಂಗ್ಲಾದೇಶ ಪ್ರವಾಸ ಮಾಡಬೇಕಾಗಿದೆ. ಈ ಸರಣಿಯನ್ನು ಮೂಲತಃ ಕಳೆದ ವರ್ಷ ಆಡಲು ನಿರ್ಧರಿಸಲಾಗಿತ್ತು, ಆದರೆ ಬಾಂಗ್ಲಾದೇಶದ ಪರಿಸ್ಥಿತಿಯಿಂದಾಗಿ, ಅದನ್ನು ಸೆಪ್ಟೆಂಬರ್ 2026 ಕ್ಕೆ ಮುಂದೂಡಲು ನಿರ್ಧರಿಸಲಾಯಿತು. ಆದಾಗ್ಯೂ, ಐಪಿಎಲ್ ಮತ್ತು ಟಿ20 ವಿಶ್ವಕಪ್ ಸುತ್ತಲಿನ ವಿವಾದವು ಈ ಸರಣಿಯನ್ನು ಅಪಾಯಕ್ಕೆ ಸಿಲುಕಿಸಿದೆ.
ಏಷ್ಯಾಕಪ್ ಸ್ಥಳಾಂತರವಾಗಬಹುದು
ಈ ಸರಣಿ ಮಾತ್ರವಲ್ಲ, ಮುಂದಿನ ವರ್ಷದ ಏಷ್ಯಾಕಪ್ ಕೂಡ ಈ ಪ್ರಯತ್ನಕ್ಕೆ ಪ್ರಮುಖ ಕಾರಣವಾಗಿದೆ. ಬಾಂಗ್ಲಾದೇಶದಲ್ಲಿ ಈ ಪಂದ್ಯಾವಳಿಯನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಆದ್ದರಿಂದ, ಬಿಸಿಸಿಐ ಜೊತೆಗಿನ ಸಂಬಂಧಗಳು ಸುಧಾರಿಸದಿದ್ದರೆ, ಟೀಂ ಇಂಡಿಯಾ ಈ ಪಂದ್ಯಾವಳಿಗಾಗಿ ಬಾಂಗ್ಲಾದೇಶಕ್ಕೆ ಪ್ರಯಾಣಿಸಲು ನಿರಾಕರಿಸಬಹುದು, ಇದರಿಂದಾಗಿ ಅದನ್ನು ಬಾಂಗ್ಲಾದೇಶದ ಹೊರಗೆ ಸ್ಥಳಾಂತರಿಸಬೇಕಾಗುತ್ತದೆ. ಒಂದು ವೇಳೆ, ಟೀಂ ಇಂಡಿಯಾ ದ್ವಿಪಕ್ಷೀಯ ಸರಣಿ ಮತ್ತು ಏಷ್ಯಾಕಪ್ಗಾಗಿ ಬಾಂಗ್ಲಾದೇಶಕ್ಕೆ ಪ್ರಯಾಣಿಸದಿದ್ದರೆ, ಅದು ಬಿಸಿಬಿಗೆ ಗಮನಾರ್ಹ ನಷ್ಟವನ್ನುಂಟು ಮಾಡುತ್ತದೆ. ಹೀಗಾಗಿ ಇದನ್ನು ತಪ್ಪಿಸಲು, ಪರಿಸ್ಥಿತಿಯನ್ನು ಸರಿಪಡಿಸುವ ಬಯಕೆಯನ್ನು ಮಂಡಳಿ ವ್ಯಕ್ತಪಡಿಸುತ್ತಿದೆ.
ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರ್ಕಾರ ಉರುಳಿಸಿದ ನಂತರ, ಕಳೆದ ಒಂದೂವರೆ ವರ್ಷದಿಂದ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧಗಳು ಹದಗೆಡುತ್ತಿವೆ. ಅಂದಿನಿಂದ, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಹತ್ಯೆಗಳು ನಡೆಯುತ್ತಿವೆ. ಇದಲ್ಲದೆ, ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಭಾರತದ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದೆ. ಜನವರಿ 2026 ರಲ್ಲಿ, ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್ನಿಂದ ಹೊರಗಿಡಲು ಬಿಸಿಸಿಐ ಆದೇಶಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಮಧ್ಯಂತರ ಸರ್ಕಾರದ ಕ್ರೀಡಾ ಸಚಿವರು ಮತ್ತು ಆ ಸಮಯದಲ್ಲಿ ಮಂಡಳಿಯ ಉಸ್ತುವಾರಿ ವಹಿಸಿದ್ದ ಅಧಿಕಾರಿಗಳು ಭಾರತದಲ್ಲಿ ಟಿ20 ವಿಶ್ವಕಪ್ ಆಡಲು ನಿರಾಕರಿಸಿದರು.
ಐಸಿಸಿ ಪದೇ ಪದೇ ಒತ್ತಾಯಿಸಿದರೂ ಬಾಂಗ್ಲಾದೇಶ ಮಣಿಯಲು ನಿರಾಕರಿಸಿದಾಗ, ಅದನ್ನು ಪಂದ್ಯಾವಳಿಯಿಂದ ಹೊರಹಾಕಲಾಯಿತು. ಇದೀಗ ಬಾಂಗ್ಲಾದೇಶದಲ್ಲಿ ಹೊಸ ಸರ್ಕಾರ ರಚನೆಯಾಗಿದ್ದು ಅಂದಿನಿಂದ, ಬಾಂಗ್ಲಾದೇಶ ಸರ್ಕಾರ ಮತ್ತು ಅದರ ಮಂಡಳಿಯು ಭಾರತದೊಂದಿಗೆ ಸಂಬಂಧವನ್ನು ಸುಧಾರಿಸಲು ಕೆಲಸ ಮಾಡುತ್ತಿದೆ. ಇದರ ಪರಿಣಾಮವು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಸರ್ಕಾರದೊಂದಿಗೆ ಸಮಾಲೋಚಿಸಿದ ನಂತರವೇ ಬಿಸಿಸಿಐ ಈ ವಿಷಯದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ವರದಿಯಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸೇರಿದಂತೆ 5 ನಗರ ಪಾಲಿಕೆಗಳಿಗೆ ಕೊನೆಗೂ ಹೊಸ ಲೋಗೋ ಅನಾವರಣಗೊಳಿಸಲಾಗಿದೆ.
ಇತ್ತೀಚೆಗೆ 2026-27ರ ಸಾಲಿನ ಬಜೆಟ್ ಮಂಡನೆ ಮಾಡಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಇದೀಗ 5 ನಗರ ಪಾಲಿಕೆಗಳ ಹೊಸ ಲೋಗೋವನ್ನು ಬಿಡುಗಡೆ ಮಾಡಿದೆ. ಖಡ್ಗ ಹಿಡಿದು ನಿಂತಿರುವ ಕೆಂಪೇಗೌಡರ ಚಿತ್ರಣ ಲೋಗೋದ ಪ್ರಮುಖ ಆಕರ್ಷಣೆ.
ಬೆಂಗಳೂರಿನ ಪರಂಪರೆ ಮತ್ತು ವೈಭವವನ್ನು ಪ್ರತಿಬಿಂಬಿಸುವಂತೆ ಲೋಗೋವನ್ನು ಹೊಸ ರೀತಿಯಲ್ಲಿ ರೂಪಿಸಲಾಗಿದೆ. ಹಳೆಯ ಬಿಬಿಎಂಪಿ ಚಿಹ್ನೆಯಲ್ಲಿದ್ದ ಕೆಂಪೇಗೌಡರ ಗೋಪುರವನ್ನು ಇಲ್ಲಿಯೂ ಬಳಸಿಕೊಳ್ಳಲಾಗಿದ್ದು, ಕೊಂಚ ಹೊಸ ಸ್ಪರ್ಶ ನೀಡಲಾಗಿದೆ.
ಇನ್ನು ಲೋಗೋದ ಪ್ರತಿಯೊಂದು ಬಣ್ಣಗಳು ಗಮನ ಸೆಳೆಯುವಂತಿವೆ. ನಗರ ಪಾಲಿಕೆಗಳ ಹೆಸರನ್ನು ವೃತ್ತಾಕಾರದಲ್ಲಿ ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಬರೆಯಲಾಗಿದೆ.
ಪ್ರತಿಯೊಂದು ಪಾಲಿಕೆಗಳ ಲೋಗೋದಲ್ಲಿ ಕೆಂಪೇಗೌಡರ ಗೋಪುರವಿದ್ದು, ಪ್ರತ್ಯೇಕ ಬಣ್ಣಗಳನ್ನು ಹೊಂದಿವೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು 5 ನಗರ ಪಾಲಿಕೆಗಳ ಲೋಗೋವನ್ನು ಚಿತ್ರಕಲಾ ಪರಿಷತ್ನಿಂದ ಸಿದ್ಧಪಡಿಸಲಾಗಿದೆ.
ಮಾರ್ಚ್ 20ರಂದು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಜಿಬಿಎ ಸಭೆಯಲ್ಲಿ ಲೋಗೋವನ್ನು ಅಂತಿಮಗೊಳಿಸಲಾಗಿತ್ತು.
ಇತ್ತೀಚೆಗಷ್ಟೆ ‘ದಿ ಕೇರಳ ಸ್ಟೋರಿ 2’ (The Kerala story 2) ಸಿನಿಮಾ ಬಿಡುಗಡೆ ಆಯ್ತು. ಮೊದಲ ಭಾಗದಷ್ಟು ದೊಡ್ಡ ಹಿಟ್ ಆಗದಿದ್ದರೂ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಸೋಲನ್ನೇನೂ ಕಾಣಲಿಲ್ಲ. ಆದರೆ ಸಿನಿಮಾದ ಮೊದಲ ಭಾಗಕ್ಕೆ ಬಂದಷ್ಟು ವಿರೋಧ ವಿಶೇಷವಾಗಿ ಕೇರಳದಿಂದ ಈ ಬಾರಿ ವ್ಯಕ್ತವಾಗಲಿಲ್ಲ. ಮೊದಲ ಭಾಗ ಬಿಡುಗಡೆ ಆಗುವಾಗ ಖುದ್ದು ಸರ್ಕಾರವೇ ಸಿನಿಮಾದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡಿತ್ತು. ಕೆಲವಾರು ಸೆಲೆಬ್ರಿಟಿಗಳು ಸಹ ಸಿನಿಮಾದ ವಿರುದ್ಧ ಮಾತನಾಡಿದ್ದರು. ಆದರೆ ಈ ಬಾರಿ ಅಂಥಹದ್ದೇನೂ ಹೆಚ್ಚಿಗೆ ಕಂಡು ಬರಲಿಲ್ಲ. ಮಲಯಾಳಂನ ಸ್ಟಾರ್ ನಟರುಗಳಲ್ಲಿ ಒಬ್ಬರಾದ ಟೊವಿನೊ ಥಾಮಸ್ ಈ ಬಗ್ಗೆ ಮಾತನಾಡಿದ್ದಾರೆ.
ಟೊವಿನೊ ಥಾಮಸ್ ಅವರು ತಮ್ಮ ಹೊಸ ಸಿನಿಮಾದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಈ ವೇಳೆ ಅವರಿಗೆ ‘ದಿ ಕೇರಳ ಸ್ಟೋರಿ 2’ ಸಿನಿಮಾದ ಬಗ್ಗೆ ಪ್ರಶ್ನೆ ಎದುರಾಗಿದೆ. ನೀವೇಕೆ ಸಿನಿಮಾದ ವಿರುದ್ಧ ಮಾತನಾಡಲಿಲ್ಲ ಅಥವಾ ಸಾಮಾಜಿಕ ಜಾಲತಾಣದಲ್ಲಿ ಯಾವ ಸಂದೇಶವನ್ನೂ ಸಹ ಹಂಚಿಕೊಂಡಿಲ್ಲ ಎಂಬ ಪ್ರಶ್ನೆ ಕೇಳಲಾಯ್ತು. ಇದಕ್ಕೆ ಜಾಣತನದ ಉತ್ತರವನ್ನು ಟೊವಿನೋ ಥಾಮಸ್ ನೀಡಿದ್ದಾರೆ ಅಲ್ಲದೆ, ಆ ಸಿನಿಮಾದ ಬಗ್ಗೆ ತಮ್ಮ ಸ್ಪಷ್ಟ ನಿಲವು ವ್ಯಕ್ತಪಡಿಸಿದ್ದಾರೆ.
‘ನಾನು ‘ಕೇರಳ ಸ್ಟೋರಿ’ ಮೊದಲ ಭಾಗ ನೋಡಿದೆ. ಎರಡನೇ ಭಾಗ ನಾನು ನೋಡಿಲ್ಲ. ನಾನು ಮಾತ್ರವಲ್ಲ ಕೇರಳದಲ್ಲಿ ಯಾರೂ ನೋಡಿದಂತಿಲ್ಲ. ಸುಮ್ಮನೆ ಮಾತನಾಡಿ, ಅದಕ್ಕೆ ಪ್ರಚಾರ ನೀಡುವ ಬದಲಿಗೆ ಸುಮ್ಮನಿರುವುದು ಒಳ್ಳೆಯದು ಎನಿಸಿ ನಾನು ಆ ಸಿನಿಮಾದ ಬಗ್ಗೆ ಏನೂ ಮಾತನಾಡಲಿಲ್ಲ. ಪೋಸ್ಟ್ ಸಹ ಮಾಡಲಿಲ್ಲ. ನಾವು ಅದನ್ನು ವಿರೋಧಿಸಿದ್ದರೂ ಸಹ ಅದಕ್ಕೆ ಪ್ರಚಾರ ನೀಡಿದಂತಾಗುತ್ತಿತ್ತು’ ಎಂದಿದ್ದಾರೆ ಟೊವಿನೊ ಥಾಮಸ್.
‘ಮೊದಲ ಭಾಗ ಬಿಡುಗಡೆ ಆದಾಗ ನಾನು ಅದನ್ನು ವಿರೋಧಿಸಿ ಪೋಸ್ಟ್ ಹಾಕಿದ್ದೆ, ಅದು ಒಂದು ರೀತಿಯಲ್ಲಿ ಆ ಸಿನಿಮಾಕ್ಕೆ ಪ್ರಚಾರವೇ ಆಗಿಬಿಟ್ಟಿತು. ಅದನ್ನು ಗಮನಿಸಿದ್ದೆ ಹಾಗಾಗಿ ಈ ಬಾರಿ ಹಾಗೇನೂ ಮಾಡಲಿಲ್ಲ. ಕೇರಳದಲ್ಲಿ ಕೋಟ್ಯಂತರ ಮಂದಿ ಮಹಿಳೆಯರಿದ್ದಾರೆ. ಯಾವುದೋ 3 ಘಟನೆಗಳನ್ನು ಇರಿಸಿಕೊಂಡು ಇಡೀ ಕೇರಳದಲ್ಲಿ ಇಂಥಹುದ್ದೇ ನಡೆಯುತ್ತಿದೆ ಎಂದು ಬಿಂಬಿಸುವುದು ಕೆಟ್ಟದು. ಅದು ಸರಿಯಲ್ಲ’ ಎಂದಿದ್ದಾರೆ ಟೊವಿನೊ ಥಾಮಸ್.