FIFA World cup Craze: ಬೆಂಗಳೂರಲ್ಲಿ ಜೋರಾಯ್ತು ಫಿಫಾ ವಿಶ್ವಕಪ್ ಕ್ರೇಜ್! ರೆಸ್ಟೋರೆಂಟ್‌ಗಳಿಗೆ ರಾತ್ರಿ 3:30ರವರೆಗೆ ತೆರೆದಿರಲು ಅನುಮತಿ

ಬೆಂಗಳೂರು, ಜುಲೈ 15: ಬೆಂಗಳೂರಿನಲ್ಲಿ ಫಿಫಾ ವಿಶ್ವಕಪ್‌ ಜ್ವರ ಜೋರಾಗಿದ್ದು, ಫುಟ್ಬಾಲ್‌ ಪ್ರೇಮಿಗಳಿಗೆ ರಾಜ್ಯ ಸರ್ಕಾರ ಗುಡ್‌ ನ್ಯೂಸ್‌ ನೀಡಿದೆ. ಫಿಫಾ ವಿಶ್ವಕಪ್‌ ಪಂದ್ಯಗಳನ್ನು ವೀಕ್ಷಿಸಲು ಅನುಕೂಲವಾಗುವಂತೆ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳನ್ನು ರಾತ್ರಿ 3:30ರವರೆಗೆ ತೆರೆಯಲು ಅನುಮತಿ ನೀಡಲಾಗಿದೆ. ರಾಷ್ಟ್ರೀಯ ರೆಸ್ಟೋರೆಂಟ್ ಅಸೋಸಿಯೇಷನ್‌ನ ಮನವಿಗೆ ಸ್ಪಂದಿಸಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಇಂದು ನಡೆಯುವ ಸೆಮಿಫೈನಲ್ ಪಂದ್ಯ, ನಾಳೆ ಹಾಗೂ ಜುಲೈ 19ರಂದು ನಡೆಯುವ ಪಂದ್ಯಗಳಿಗೆ ಮಾತ್ರ ಈ ವಿಸ್ತೃತ ಸಮಯದ ಅನುಮತಿ ನೀಡಲಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ತಮ್ಮ ಎಕ್ಸ್ (X) ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಹಲವು ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು ಈಗಾಗಲೇ ದೊಡ್ಡ ಸ್ಕ್ರೀನ್‌ಗಳನ್ನು ಅಳವಡಿಸಿ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಿಕೊಂಡಿವೆ. ಗ್ರಾಹಕರ ಸುರಕ್ಷತೆಗಾಗಿ ಹೆಚ್ಚುವರಿ ಬೌನ್ಸರ್‌ಗಳನ್ನು ನಿಯೋಜಿಸಲು ಹಾಗೂ ತಡರಾತ್ರಿ ಉಳಿಯುವ ಗ್ರಾಹಕರಿಗೆ ಕ್ಯಾಬ್‌ ವ್ಯವಸ್ಥೆ ಮಾಡಲು ನಿರ್ವಹಣಾ ಮಂಡಳಿಗೆ ಸೂಚಿಸಲಾಗಿದೆ. ಈ ಕ್ರಮದಿಂದ ಫುಟ್ಬಾಲ್‌ ಅಭಿಮಾನಿಗಳಿಗೆ ಪಂದ್ಯಗಳನ್ನು ಆನಂದಿಸಲು ಉತ್ತಮ ಅವಕಾಶ ದೊರೆತಂತಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Fire Dreams Meaning: ಕನಸಿನಲ್ಲಿ ಪದೇ ಪದೇ ಉರಿಯುವ ಬೆಂಕಿ ಕಾಣುತ್ತಿದೆಯೇ? ಇದರ ಅರ್ಥವೇನು ಗೊತ್ತಾ? – Kannada News | Fire Dreams Meaning: Uncover Positive Future Changes and Mars Sun Influence

ಕನಸಿನಲ್ಲಿ ಪದೇ ಪದೇ ಉರಿಯುವ ಬೆಂಕಿ ಕಾಣುತ್ತಿದೆಯೇ?Image Credit source: Getty Images

ಕನಸುಗಳು ಕೇವಲ ರಾತ್ರಿಯ ಕಲ್ಪನೆಗಳಲ್ಲ, ಅವು ನಮ್ಮ ದಿನನಿತ್ಯದ ಆಲೋಚನೆಗಳು ಮತ್ತು ಆಂತರಾಳದ ಪ್ರತಿಬಿಂಬಗಳಾಗಿರುತ್ತವೆ. ಕೆಲವೊಮ್ಮೆ ಪ್ರತಿದಿನ ಒಂದೇ ರೀತಿಯ ಕನಸು ಬೀಳುವುದು ನಮ್ಮ ಭವಿಷ್ಯದ ಬಗ್ಗೆ ಪ್ರಕೃತಿ ನೀಡುವ ಕೆಲವು ಪ್ರಮುಖ ಸುಳಿವುಗಳಾಗಿರಬಹುದು. ವಿಶೇಷವಾಗಿ, ನಿಮ್ಮ ಕನಸಿನಲ್ಲಿ ದಿನವೂ ಉರಿಯುತ್ತಿರುವ ಬೆಂಕಿ ಕಾಣಿಸಿಕೊಂಡರೆ, ಅದಕ್ಕೆ ಹೆದರಬೇಕಾಗಿಲ್ಲ. ಕನಸಿನ ವಿಜ್ಞಾನ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇದು ನಿಮ್ಮ ಜೀವನದ ದೊಡ್ಡ ಬದಲಾವಣೆಯ ಕಿಟಕಿಯಾಗಬಹುದು.

ಜ್ಯೋತಿಷ್ಯದಲ್ಲಿ ಬೆಂಕಿಯನ್ನು ಮಂಗಳ ಮತ್ತು ಸೂರ್ಯ ಗ್ರಹಗಳ ಸಂಕೇತವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಕನಸಿನಲ್ಲಿ ಕೆಂಪು ಬಣ್ಣದ ಬೆಂಕಿ ಕಾಣಿಸಿಕೊಂಡರೆ ಅದು ಮಂಗಳ ಗ್ರಹದ ಪ್ರಭಾವವನ್ನು ಮತ್ತು ಹಳದಿ ಬಣ್ಣದ ಬೆಂಕಿ ಕಾಣಿಸಿದರೆ ಅದು ಸೂರ್ಯ ಗ್ರಹದ ಪ್ರಭಾವವನ್ನು ಸೂಚಿಸುತ್ತದೆ. ಈ ಎರಡೂ ಗ್ರಹಗಳು ನಿಮ್ಮ ಬದುಕಿನಲ್ಲಿ ತರಲಿರುವ ಶುಭ ಬದಲಾವಣೆಗಳ ವಿವರ ಇಲ್ಲಿದೆ:

ಆಂತರಿಕ ಶಕ್ತಿ ಮತ್ತು ಸಾಮಾಜಿಕ ಗೌರವದ ವೃದ್ಧಿ:

ಮಂಗಳ ಮತ್ತು ಸೂರ್ಯ ಇಬ್ಬರೂ ಬ್ರಹ್ಮಾಂಡದ ಮಹಾನ್ ಶಕ್ತಿಯ ಮೂಲಗಳು. ಕನಸಿನಲ್ಲಿ ಪ್ರಜ್ವಲಿಸುವ ಬೆಂಕಿಯನ್ನು ನೋಡುವುದು ನಿಮ್ಮ ಆಂತರಿಕ ಶಕ್ತಿ ಮತ್ತು ಸಾಮರ್ಥ್ಯಗಳು ಹೆಚ್ಚಾಗಲಿವೆ ಎಂಬುದರ ಮುನ್ಸೂಚನೆ. ಸಮಾಜದಲ್ಲಿ ಜನರು ನಿಮ್ಮ ವ್ಯಕ್ತಿತ್ವವನ್ನು ಗುರುತಿಸಲು ಪ್ರಾರಂಭಿಸುತ್ತಾರೆ. ನಿಮ್ಮ ಸತ್ಕರ್ಮಗಳು ಮತ್ತು ಒಳ್ಳೆಯ ನಡತೆಯಿಂದಾಗಿ ನೀವು ಇದ್ದಕ್ಕಿದ್ದಂತೆ ಜನಪ್ರಿಯತೆಯನ್ನು ಗಳಿಸುತ್ತೀರಿ ಹಾಗೂ ಸಮಾಜದಲ್ಲಿ ನಿಮಗೆ ಗೌರವಯುತ ಸ್ಥಾನಮಾನ ದೊರೆಯುತ್ತದೆ.

ಅದ್ಭುತ ಆತ್ಮವಿಶ್ವಾಸ ಮತ್ತು ಧೈರ್ಯದ ಆಗಮನ:

ಯಾವುದೇ ರಂಗದಲ್ಲಿ ಯಶಸ್ಸು ಸಾಧಿಸಲು ಆತ್ಮವಿಶ್ವಾಸವೇ ಅಡಿಪಾಯ. ಜ್ಯೋತಿಷ್ಯದಲ್ಲಿ ಮಂಗಳ ಮತ್ತು ಸೂರ್ಯನನ್ನು ಧೈರ್ಯ, ಆತ್ಮಬಲ ಮತ್ತು ನಿರ್ಭಯತೆಯ ಕಾರಕರೆಂದು ಕರೆಯಲಾಗುತ್ತದೆ. ಆದ್ದರಿಂದ, ಇವರಿಬ್ಬರನ್ನು ಪ್ರತಿನಿಧಿಸುವ ಬೆಂಕಿಯ ಕನಸು ಪದೇ ಪದೇ ಬೀಳುತ್ತಿದ್ದರೆ, ನಿಮ್ಮಲ್ಲಿ ಅಡಗಿರುವ ಭಯ ದೂರವಾಗಿ, ಹೊಸ ಸವಾಲುಗಳನ್ನು ಎದುರಿಸುವ ಆತ್ಮವಿಶ್ವಾಸ ಮತ್ತು ಧೈರ್ಯ ನಿಮ್ಮಲ್ಲಿ ಮೂಡುತ್ತಿದೆ ಎಂದರ್ಥ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಬದುಕಿನಲ್ಲಿ ಹೊಸ ಅಧ್ಯಾಯದ ಆರಂಭ:

ಬೆಂಕಿಗೆ ಎರಡು ಮುಖಗಳಿವೆ – ಒಂದು ವಿನಾಶ, ಮತ್ತೊಂದು ಸೃಷ್ಟಿ. ಕನಸಿನಲ್ಲಿ ಯಾರಾದರೂ ಬೆಂಕಿ ಹಚ್ಚಿ ನಾಶ ಮಾಡುತ್ತಿರುವುದನ್ನು ಕಂಡರೆ ಅದು ನಕಾರಾತ್ಮಕತೆಯನ್ನು ಸೂಚಿಸುತ್ತದೆ. ಆದರೆ, ಕೇವಲ ಶಾಂತವಾಗಿ ಉರಿಯುತ್ತಿರುವ ಬೆಂಕಿಯನ್ನು ಮಾತ್ರ ನೀವು ನೋಡಿದರೆ, ಅದು ನಿಮ್ಮ ಹಳೆಯ ಕಷ್ಟಗಳು ಕೊನೆಗೊಂಡು, ಜೀವನದಲ್ಲಿ ಒಂದು ಅದ್ಭುತವಾದ ಹೊಸ ಆರಂಭ ಅಥವಾ ಹೊಸ ಅಧ್ಯಾಯ ಆರಂಭವಾಗಲಿದೆ ಎಂಬುದನ್ನು ಸಂಕೇತಿಸುತ್ತದೆ.

ಉನ್ನತ ಅಧಿಕಾರ ಮತ್ತು ನಾಯಕತ್ವದ ಯೋಗ:

ನೀವು ಕನಸಿನಲ್ಲಿ ಪ್ರಕಾಶಮಾನವಾದ ಹಳದಿ ಬೆಂಕಿಯನ್ನು ಕಂಡರೆ, ಅದು ನೇರವಾಗಿ ಸೂರ್ಯನ ಅನುಗ್ರಹವನ್ನು ಸೂಚಿಸುತ್ತದೆ. ಸೂರ್ಯನು ನಾಯಕತ್ವ ಗುಣದ ಸಂಕೇತ. ಉದ್ಯೋಗದಲ್ಲಿರುವವರಿಗೆ ಶೀಘ್ರದಲ್ಲೇ ಉನ್ನತ ಸ್ಥಾನಕ್ಕೆ ಬಡ್ತಿ ಸಿಗಲಿದ್ದು, ಇಡೀ ತಂಡವನ್ನು ಮುನ್ನಡೆಸುವ ಅವಕಾಶ ಸಿಗುತ್ತದೆ. ಒಂದು ವೇಳೆ ರಾಜಕಾರಣಿಗಳು ಅಥವಾ ಸಾಮಾಜಿಕ ರಂಗದಲ್ಲಿರುವವರು ಈ ಕನಸು ಕಂಡರೆ, ಅವರು ಉನ್ನತ ಅಧಿಕಾರ ಅಥವಾ ಜವಾಬ್ದಾರಿಯನ್ನು ಪಡೆಯುವ ಸುಯೋಗ ಒದಗಿಬರಲಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ನಾಯು ಸೆಳೆತದಿಂದ ಕೈ ತಪ್ಪಿದ ಐತಿಹಾಸಿಕ ದಾಖಲೆ..! – Kannada News | Cramps Stop Shubman Gill From Making ODI History

ಮೊಹಮ್ಮದ್ ಅಝರುದ್ದೀನ್, ಸೌರವ್ ಗಂಗೂಲಿ, ಎಂ.ಎಸ್. ಧೋನಿ ಅವರಿಂದ ಹಿಡಿದು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾವರೆಗೆ ಭಾರತದ ಹಲವು ಶ್ರೇಷ್ಠ ನಾಯಕರು ಇಂಗ್ಲೆಂಡ್ ವಿರುದ್ಧ ಅವರದ್ದೇ ನೆಲದಲ್ಲಿ ಬ್ಯಾಟ್ ಬೀಸಿದ್ದಾರೆ. ಆದರೆ ಇವರಾರೂ ಮಾಡಲಾಗದ ಒಂದು ವಿಶಿಷ್ಟ ಸಾಧನೆ ಬರೆಯುವ ಸುವರ್ಣ ಅವಕಾಶ ಭಾರತದ ಯುವ ನಾಯಕ ಶುಭ್​ಮನ್ ಗಿಲ್ ಅವರಿಗೆ ಒದಗಿಬಂದಿತ್ತು. ಆದರೆ ದುರದೃಷ್ಟವಶಾತ್, ಇತಿಹಾಸದ ಹೊಸ್ತಿಲಲ್ಲಿ ಗಿಲ್ ಅವರಿಗೆ ‘ಸ್ನಾಯು’ ಕೈ ಕೊಟ್ಟಿತು.

ಸ್ನಾಯು ಸೆಳೆತದಿಂದ ಕೈ ತಪ್ಪಿದ ದಾಖಲೆ!

ಇಂಗ್ಲೆಂಡ್ ನೀಡಿದ 259 ರನ್‌ಗಳ ಸವಾಲನ್ನು ಬೆನ್ನಟ್ಟಿದ ಭಾರತಕ್ಕೆ ಶುಭ್​ಮನ್ ಗಿಲ್ ಆಸರೆಯಾಗಿ ನಿಂತರು. ಇಂಗ್ಲೆಂಡ್ ಬೌಲರ್‌ಗಳ ಲೈನ್ ಮತ್ತು ಲೆಂತ್ ಅರಿತು ಆಡಿದ ಗಿಲ್, ಮೈದಾನದ ಮೂಲೆ ಮೂಲೆಗೂ ಬೌಂಡರಿಗಳನ್ನು ಬಾರಿಸಿದರು. ಕೇವಲ 75 ಎಸೆತಗಳಲ್ಲಿ 11 ಆಕರ್ಷಕ ಬೌಂಡರಿ ಹಾಗೂ 1 ಅದ್ಭುತ ಸಿಕ್ಸರ್ ನೆರವಿನಿಂದ 80 ರನ್ ಗಳಿಸಿ ಶತಕದತ್ತ ಸಾಗುತ್ತಿದ್ದರು.

ಈ ಮೂಲಕ ಆಂಗ್ಲರ ನಾಡಿನಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಶತಕ ಸಿಡಿಸಿದ ಮೊದಲ ಭಾರತೀಯ ನಾಯಕ ಎಂಬ ಐತಿಹಾಸಿಕ ಸಾಧನೆ ಮಾಡಲು ದಾಪುಗಾಲಿಟ್ಟಿದ್ದರು. ಈ ದಾಖಲೆ ಬರೆಯಲು ಕೇವಲ 20 ರನ್​ಗಳ ಅವಶ್ಯಕತೆಯಿದ್ದಾಗ ಶುಭ್​ಮನ್ ಗಿಲ್ ಸ್ನಾಯು ಸೆಳೆತಕ್ಕೆ ಒಳಗಾದರು.

ಪಂದ್ಯದ 26ನೇ ಓವರ್‌ನಲ್ಲಿ ಕವರ್ ಡ್ರೈವ್ ಒಂದನ್ನು ಹೊಡೆದ ತಕ್ಷಣ ಗಿಲ್ ತೀವ್ರವಾದ ನೋವಿನಿಂದ ಮೈದಾನದಲ್ಲೇ ಕುಸಿದುಬಿದ್ದರು. ಅವರ ಬಲಗಾಲಿನ ಸ್ನಾಯು ತೀವ್ರವಾಗಿ ಸೆಳೆತಕ್ಕೊಳಗಾಗಿತ್ತು. ವೈದ್ಯಕೀಯ ಸಿಬ್ಬಂದಿ ಬಂದು ಪ್ರಥಮ ಚಿಕಿತ್ಸೆ ನೀಡಿದರೂ ಗಿಲ್ ಅವರಿಗೆ ಬ್ಯಾಟಿಂಗ್ ಮುಂದುವರಿಸಲು ಸಾಧ್ಯವಾಗಲಿಲ್ಲ. ನೋವಿನಿಂದ ನರಳುತ್ತಲೇ ಅವರು ‘ರಿಟೈರ್ಡ್ ಹರ್ಟ್’ ಆಗಿ ಮೈದಾನ ತೊರೆದರು.

ಗಿಲ್ ದುರಾದೃಷ್ಟ:

ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಇಂಗ್ಲೆಂಡ್ ನೆಲದಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಶತಕ ಬಾರಿಸಿದ ನಾಯಕನೇ ಇಲ್ಲ ಎಂಬ ಅಪರೂಪದ ಹಾಗೂ ನಿರಾಸೆಯ ದಾಖಲೆ ಹಾಗೇ ಉಳಿದುಕೊಂಡಿದೆ. ಗಿಲ್ ಈ ಅಪಕೀರ್ತಿಯನ್ನು ಅಳಿಸಿಹಾಕುವ ಸಂಪೂರ್ಣ ಲಯದಲ್ಲಿದ್ದರು.

ಇದೇ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಕಳೆದ ವರ್ಷ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಶುಭ್​ಮನ್ ಗಿಲ್ ಭರ್ಜರಿ 269 ರನ್ ಚಚ್ಚಿದ್ದರು. ಅದು ಇಂಗ್ಲೆಂಡ್ ನೆಲದಲ್ಲಿ ಭಾರತೀಯ ಟೆಸ್ಟ್ ನಾಯಕರೊಬ್ಬರು ಗಳಿಸಿದ ಅತ್ಯಧಿಕ ಸ್ಕೋರ್ ಆಗಿತ್ತು. ಅದೇ ಮೈದಾನದಲ್ಲಿ ಈಗ ಏಕದಿನ ಕ್ರಿಕೆಟ್ ಇತಿಹಾಸವನ್ನೂ ಬರೆಯಲು ಹೊರಟಿದ್ದ ಗಿಲ್ ದುರಾದೃಷ್ಟಕ್ಕೆ ಬಲಿಯಾಗಿದ್ದಾರೆ.

  • 1990 ರಲ್ಲಿ ಟೀಮ್ ಇಂಡಿಯಾ ನಾಯಕ ಮೊಹಮ್ಮದ್ ಅಝರುದ್ದೀನ್ ಇಂಗ್ಲೆಂಡ್​ನಲ್ಲಿ 73 ರನ್ ಬಾರಿಸಿದ್ದು ಆಂಗ್ಲರನಾಡಿನಲ್ಲಿ ಏಕದಿನ ಕ್ರಿಕೆಟ್​ನಲ್ಲಿ ಮೂಡಿಬಂದ ಗರಿಷ್ಠ ಸ್ಕೋರ್ ಆಗಿತ್ತು.ಇದೀಗ ಈ ದಾಖಲೆಯನ್ನು ಶುಭ್​ಮನ್ ಗಿಲ್ ಮುರಿದಿದ್ದಾರೆ.
  • ಎಡ್ಜ್​ಬಾಸ್ಟನ್​ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಶುಭ್​ಮನ್ ಗಿಲ್ ಅಜೇಯ 80 ರನ್ ಬಾರಿಸಿ, ಆಂಗ್ಲರ ನಾಡಿನಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್​ನಲ್ಲಿ ಗರಿಷ್ಠ ವೈಯುಕ್ತಿಕ ಸ್ಕೋರ್ ಗಳಿಸಿದ ಭಾರತೀಯ ಕ್ಯಾಪ್ಟನ್ ಎನಿಸಿಕೊಂಡಿದ್ದಾರೆ.​

ಇದನ್ನೂ ಓದಿ: ಗೆಲುವಿನ ಬೆನ್ನಲ್ಲೇ ವಿಶ್ವಕಪ್‌ ರಣತಂತ್ರ ಬಿಚ್ಚಿಟ್ಟ ಶುಭ್​ಮನ್ ಗಿಲ್

ಶುಭ್​ಮನ್ ಗಿಲ್ ತಮ್ಮ ಅದ್ಭುತ 80 ರನ್‌ಗಳ ಇನಿಂಗ್ಸ್ ಮೂಲಕ ಮೊಹಮ್ಮದ್ ಅಝರುದ್ದೀನ್ ಅವರ 36 ವರ್ಷಗಳ ಹಳೆಯ ದಾಖಲೆಯನ್ನು (73 ರನ್) ಮುರಿದು ಹೊಸ ಮೈಲಿಗಲ್ಲು ನೆಟ್ಟಿರಬಹುದು. ಆದರೆ, ಇಂಗ್ಲೆಂಡ್ ಮಣ್ಣಿನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತೀಯ ನಾಯಕನೊಬ್ಬ ಏಕದಿನ ಶತಕ ಬಾರಿಸುವ ‘ಕನಸು’ ಮಾತ್ರ ಇನ್ನು ಹಾಗೇ ಉಳಿದುಕೊಂಡಿದೆ. ಈ ಕನಸನ್ನು ಮುಂದಿನ ಪಂದ್ಯಗಳ ಮೂಲಕ ಶುಭ್​ಮನ್ ಗಿಲ್ ನನಸು ಮಾಡಲಿದ್ದಾರಾ ಕಾದು ನೋಡಬೇಕಿದೆ.

Source link

ಮತ್ತೆ ಸೆನ್ಸಾರ್ ಮಂಡಳಿ ಮುಂದೆ ‘ಜನ ನಾಯಗನ್’ ಬಿಡುಗಡೆ ಮುಂದೂಡಿಕೆ? – Kannada News | Jana Nayagan movie going to be censor again, release date may change

ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾ ಜನವರಿಯಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ ರಾಜಕೀಯ ಪ್ರಭಾವ ಇನ್ನಿತರೆ ಕಾರಣಗಳಿಂದ ಸಿನಿಮಾ ಈಗಾಗಲೇ ಏಳು ತಿಂಗಳು ತಡವಾಗಿದೆ. ನಾನಾ ಅಡೆತಡೆಗಳು, ಕಾನೂನು ಸಂಕಷ್ಟಗಳು ಇನ್ನಿತರೆಗಳನ್ನು ದಾಟಿ ಇದೀಗ ಸಿನಿಮಾ ಬಿಡುಗಡೆಗೆ ಮತ್ತೆ ರೆಡಿ ಆಗಿದೆ. ಕೆಲ ದಿನಗಳ ಹಿಂದಷ್ಟೆ ಹರಿದಾಡಿದ ಸುದ್ದಿಯ ಪ್ರಕಾರ, ‘ಜನ ನಾಯಗನ್’ ಸಿನಿಮಾಕ್ಕೆ ಸಿಬಿಎಫ್​​ಸಿ ಪ್ರಮಾಣ ಪತ್ರ ಸಿಕ್ಕಿದ್ದು, ಜುಲೈ 24 ರಂದು ರಿಲೀಸ್ ಆಗಲಿದೆ ಎನ್ನಲಾಗಿತ್ತು. ಆದರೆ ಇದೀಗ ‘ಜನ ನಾಯಗನ್’ ಸಿನಿಮಾ ಮತ್ತೆ ಸಿಬಿಎಫ್​​ಸಿ ಮುಂದೆ ಹೋಗಲಿದೆ. ಮತ್ತೊಮ್ಮೆ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಲ್ಪಡುವ ಸಾಧ್ಯತೆ ಇದೆ.

‘ಜನ ನಾಯಗನ್’ ಸಿನಿಮಾಕ್ಕೆ ಈಗಾಗಲೇ ಸಿಬಿಎಫ್​​ಸಿ ಪ್ರಮಾಣ ಪತ್ರ ದೊರೆತಿದ್ದು, ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರವನ್ನು ಸಿಬಿಎಫ್​​ಸಿ ನೀಡಿದೆ. ಕೆಲವು ದೃಶ್ಯಗಳಿಗೆ ಕತ್ತರಿ ಸಹ ಹಾಕಿದೆ. ಆದರೆ ಈಗಾಗಲೇ ಸಿಬಿಎಫ್​​ಸಿ ಪ್ರಮಾಣ ಸಿಕ್ಕಿದ್ದರೂ ಸಹ ‘ಜನ ನಾಯಗನ್’ ಸಿನಿಮಾ ಮತ್ತೆ ಸಿಬಿಎಫ್​​ಸಿ ಮಂಡಳಿಗೆ ಹೋಗುತ್ತಿದ್ದು, ಮತ್ತೊಮ್ಮೆ ಮಂಡಳಿಯಿಂದ ಪ್ರಮಾಣ ಪತ್ರ ಪಡೆಯಲಿದೆ.

‘ಜನ ನಾಯಗನ್’ ಸಿನಿಮಾಕ್ಕೆ ಕೆಲವು ಸೆಕೆಂಡುಗಳ ಹೆಚ್ಚುವರಿ ದೃಶ್ಯವನ್ನು ಸೇರಿಸಲಾಗುತ್ತಿದ್ದು, ಇದೇ ಕಾರಣಕ್ಕೆ ಈಗ ಸಿನಿಮಾಕ್ಕೆ ಮತ್ತೆ ಸೆನ್ಸಾರ್ ಮಾಡಿಸಲಾಗುತ್ತಿದೆ. ಈಗಾಗಲೇ ಸೆನ್ಸಾರ್ ಆಗಿರುವ ‘ಜನ ನಾಯಗನ್’ ಸಿನಿಮಾ ಟೈಟಲ್ ಕಾರ್ಡ್ ಎಲ್ಲವೂ ಸೇರಿ 3 ಗಂಟೆ 3 ನಿಮಿಷ 7 ಸೆಕೆಂಡ್ (03:03:07) ಇದೆ. ಆದರೆ ಈಗ ಸಿನಿಮಾಕ್ಕೆ 24 ಸೆಕೆಂಡುಗಳ ಹೆಚ್ಚುವರಿ ಫುಟೇಜ್ ಸೇರಿಸಲಾಗುತ್ತಿದೆ. ಇದು ವಿಜಯ್ ಅವರ ಬೇಡಿಕೆ ಮೇರೆಗೆ ಸೇರಿಸಲಾಗುತ್ತಿರುವ ದೃಶ್ಯ ಆಗಿದ್ದು, ಹೆಚ್ಚುವರಿ ದೃಶ್ಯ ಸೇರಿಸಿರುವ ಕಾರಣ ಸಿನಿಮಾ ಮತ್ತೆ ಸೆನ್ಸಾರ್ ಆಗಲೇ ಬೇಕಿದೆಯಂತೆ.

ಇದನ್ನೂ ಓದಿ:‘ಜನ ನಾಯಗನ್’ ಚಿತ್ರದಿಂದ ದಳಪತಿ ವಿಜಯ್ ಮಗ ಜೇಸನ್ ಸಿನಿಮಾಗೆ ಸಂಕಷ್ಟ

ಅಂದಹಾಗೆ ಆ ಹೆಚ್ಚುವರಿ 24 ಸೆಕೆಂಡ್ ದೃಶ್ಯ, ಸಿನಿಮಾದ ಕತೆಗೆ ಸಂಬಂಧಿಸಿದ್ದಲ್ಲ ಬದಲಿಗೆ ಸಿನಿಮಾದ ಟೈಟಲ್ ಕಾರ್ಡ್​​ಗೆ ಹೆಚ್ಚುವರಿ ಹೆಸರುಗಳನ್ನು ಸೇರಿಸಲಾಗಿದೆಯಂತೆ. ವಿಜಯ್ ಅವರ ಮನವಿ ಮೇರೆಗೆ ಟೈಟಲ್ ಕಾರ್ಡ್​​ನಲ್ಲಿ ಕೆಲ ಬದಲಾವಣೆ ಮಾಡಲಾಗಿದ್ದು, ಕೆಲ ಹೆಚ್ಚುವರಿ ಹೆಸರುಗಳನ್ನು ಸೇರಿಸಿದ್ದು, ಇದು 24 ಸೆಕೆಂಡ್ ಹೆಚ್ಚುವರಿ ಸಮಯವನ್ನು ಸೇರ್ಪಡೆಗೊಳಿಸಿದೆ. ಹಾಗಾಗಿ ಯಾವುದೇ ಹೆಚ್ಚುವರಿ ಬದಲಾವಣೆ ಮಾಡಿದರೆ ಸಿನಿಮಾ ಮರು ಸೆನ್ಸಾರ್ ಆಗಲೇ ಬೇಕಿರುವುದು ನಿಯಮ. ಹಾಗಾಗಿ ಸಿನಿಮಾ ಈಗ ಮತ್ತೆ ಸೆನ್ಸಾರ್ ಬೋರ್ಡ್​​ ಮುಂದೆ ಹೋಗಲಿದೆಯಂತೆ.

‘ಜನ ನಾಯಗನ್’ ಸಿನಿಮಾ ಜುಲೈ 24ಕ್ಕೆ ಬಿಡುಗಡೆ ಆಗಲಿದೆ ಎಂಬ ನಿರೀಕ್ಷೆ ಇದೆ. ಕೆವಿಎನ್ ಪ್ರೊಡಕ್ಷನ್​​​ನವರು ಇದನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಇದೀಗ ಮತ್ತೆ ಸೆನ್ಸಾರ್​​ಗೆ ಹೋಗಿರುವ ಕಾರಣ ಸಿನಿಮಾದ ಬಿಡುಗಡೆ ಮತ್ತೆ ಮುಂದಕ್ಕೆ ಹೋಗುವ ಸಾಧ್ಯತೆಯೂ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮದುವೆಗೆ ಬಂದು ಉಡುಗೊರೆ ಕೊಡದೆ ಊಟ ಮಾಡುವಂತಿಲ್ಲ, ಹಣ ಮರೆತು ಬಂದಿದ್ರೆ ಮಂಟಪದ ಪಕ್ಕದಲ್ಲೇ ಇರುತ್ತೆ ಎಟಿಎಂ,ಇದು ಕೊರಿಯನ್ ಕಲ್ಯಾಣ – Kannada News | Korean Weddings: ATM at Venue, Pay for Food, Get Coupon – A Unique Custom

ಸಿಯೋಲ್, ಜುಲೈ 15: ನೀವು ದಕ್ಷಿಣ ಕೊರಿಯಾದಲ್ಲಿ ಯಾವುದಾದರೂ ಮದುವೆ(Marriage)ಗೆ ಹೋಗಬೇಕಾ? ಹಾಗಿದ್ದರೆ ನಿಮ್ಮ ಜೇಬಿನಲ್ಲಿ ಗರಿಗರಿ ನೋಟುಗಳಿರಲೇಬೇಕು. ಇಲ್ಲದಿದ್ದರೆ ನಿಮಗೆ ಅಲ್ಲಿ ಊಟ ಹಾಗಿರಲಿ, ಮಂಟಪದೊಳಗೆ ಗೌರವವೂ ಸಿಗಲ್ಲ. ಹೌದು, ದಕ್ಷಿಣ ಕೊರಿಯಾದಲ್ಲಿ ಮದುವೆ ಎನ್ನುವುದು ಒಂದು ವ್ಯವಹಾರದಂತಾಗಿ ಮಾರ್ಪಟ್ಟಿದ್ದು, ಇತ್ತೀಚಿನ ವೈರಲ್ ವಿಡಿಯೋವೊಂದು ಅಲ್ಲಿನ ಅತಿಥಿ ಸತ್ಕಾರದ ಕಟು ಸತ್ಯವನ್ನು ಬಯಲಿಗೆಳೆದಿದೆ. ಅಲ್ಲಿ ವಧು-ವರರಿಗೆ ನೀವು ಕೊಡುವ ಹಣ (ಮೊಯ್) ಅವರು ನಿಮ್ಮೊಂದಿಗೆ ಹೊಂದಿರುವ ಸಂಬಂಧದ ಮೇಲೆ ನಿರ್ಧಾರವಾಗುತ್ತದೆ.

ಸಂಬಂಧಕ್ಕೆ ತಕ್ಕಂತೆ ರೇಟ್ ಫಿಕ್ಸ್

ಕೇವಲ ಪರಿಚಯಸ್ಥರು,ಸಹೋದ್ಯೋಗಿ: ನೀವು ಕೇವಲ ನೆಪಮಾತ್ರಕ್ಕೆ ಪರಿಚಯವಿದ್ದು, ಮದುವೆಗೆ ಹೋಗದೆ ಮನೆಯಲ್ಲೇ ಇರುವುದಾದರೆ ಆನ್‌ಲೈನ್ ಮೂಲಕ ಕನಿಷ್ಠ 50,000 KRW (ಕೊರಿಯನ್ ವೊನ್ – ಅಂದರೆ ನಮ್ಮ ಭಾರತೀಯ ಕರೆನ್ಸಿಯಲ್ಲಿ ಸುಮಾರು 3,000 ರೂ.) ಹಣವನ್ನು ಕಳುಹಿಸಬೇಕು.

ಮದುವೆಗೆ ಹಾಜರಾಗಿ ಊಟ ಮಾಡುವುದಾದರೆ: ನೀವು ಖುದ್ದಾಗಿ ಮದುವೆಗೆ ಹೋಗಿ ಅಲ್ಲಿನ ಐಷಾರಾಮಿ ಭೋಜನ ಸವಿಯಬೇಕೆಂದರೆ ಕನಿಷ್ಠ 100,000 KRW (ಸುಮಾರು 6,000 ರೂ.) ಕೊಡಲೇಬೇಕು. ಏಕೆಂದರೆ ಅಲ್ಲಿ ಪ್ರತಿ ಪ್ಲೇಟ್ ಊಟದ ವೆಚ್ಚ ಅಷ್ಟೊಂದು ದುಬಾರಿಯಾಗಿರುತ್ತದೆ.

ಆಪ್ತ ಸ್ನೇಹಿತರು, ಸಂಬಂಧಿಕರು: ಇನ್ನು ತೀರಾ ಹತ್ತಿರದವರಾಗಿದ್ದರೆ 200,000 KRW ನಿಂದ 500,000 KRW (ಸುಮಾರು 12,000 ರೂ. ದಿಂದ 30,000ರೂ.) ವರೆಗೆ ಹಣವನ್ನು ನೀಡಬೇಕಾಗುತ್ತದೆ.

ಮತ್ತಷ್ಟು ಓದಿ: Video: ಮದುವೆ ಮಂಟಪದಿಂದ ಓಡಿಹೋದ ವರ, ವಾಟ್ಸಾಪ್‌ಗೆ ಬಂದ ಆ ಒಂದು ಫೋಟೋ ತಂದ ಭಾರಿ ಫಜೀತಿ

ಮಂಟಪದ ಒಳಗೇ ಇರುತ್ತೆ ATM ಯಂತ್ರಗಳು

ಅಯ್ಯೋ.. ಗಡಿಬಿಡಿಯಲ್ಲಿ ಗಿಫ್ಟ್ ತರೋದು ಮರೆತುಹೋಯ್ತು, ಕೈಯಲ್ಲಿ ಕ್ಯಾಶ್ ಇಲ್ಲ ಎಂಬ ನೆಪ ಕೊರಿಯಾದಲ್ಲಿ ನಡೆಯಲ್ಲ. ಅತಿಥಿಗಳು ಇಂತಹ ಸಬೂಬು ಹೇಳಬಾರದು ಎಂಬ ಕಾರಣಕ್ಕೆ ಅಲ್ಲಿನ ಪ್ರತಿಯೊಂದು ಮದುವೆ ಹಾಲ್‌ನ ಸ್ವಾಗತ ಕೌಂಟರ್ ಪಕ್ಕದಲ್ಲೇ ಎಟಿಎಂ (ATM) ಯಂತ್ರಗಳನ್ನು ಅಳವಡಿಸಲಾಗಿರುತ್ತದೆ. ಹಣ ತರದವರು ತಕ್ಷಣ ಅಲ್ಲಿ ಕಾರ್ಡ್ ಹಾಕಿ ಹಣ ಡ್ರಾ ಮಾಡಿಕೊಳ್ಳಬಹುದು. ಅಲ್ಲೇ ಸಿಗುವ ಬಿಳಿ ಲಕೋಟೆಯಲ್ಲಿ ಹಣವಿಟ್ಟು, ತಮ್ಮ ಹೆಸರು ಬರೆದು ಕೌಂಟರ್‌ಗೆ ಕೊಡಬೇಕು.

ಲಕೋಟೆ ಬಿಚ್ಚಿ ಹಣ ಎಣಿಸಿದ ಮೇಲೆಯೇ ಊಟದ ಕೂಪನ್

ಮದುವೆ ಹಾಲ್ ಪ್ರವೇಶಿಸುತ್ತಿದ್ದಂತೆ ವರ ಮತ್ತು ವಧುವಿನ ಕಡೆಯವರು ಪ್ರತ್ಯೇಕ ಕೌಂಟರ್ ಹಾಕಿ ಕುಳಿತಿರುತ್ತಾರೆ. ಅತಿಥಿಗಳು ತಂದ ಹಣದ ಲಕೋಟೆಯನ್ನು ಅಲ್ಲಿನ ಸಿಬ್ಬಂದಿಗೆ ಕೊಡುತ್ತಿದ್ದಂತೆ, ಅವರು ತಕ್ಷಣವೇ ಅತಿಥಿಗಳ ಕಣ್ಣೆದುರೇ ಲಕೋಟೆ ಬಿಚ್ಚಿ ಹಣವನ್ನು ಎಣಿಸುತ್ತಾರೆ. ಆ ಮೊತ್ತವನ್ನು ಅಧಿಕೃತ ಪುಸ್ತಕದಲ್ಲಿ ದಾಖಲಿಸಿಕೊಳ್ಳಲಾಗುತ್ತದೆ.

ನೀವು ನೀಡಿದ ಹಣ ಅವರು ನಿಗದಿಪಡಿಸಿದ ಕನಿಷ್ಠ ಮೊತ್ತಕ್ಕೆ (ಕನಿಷ್ಠ 6,000 ರೂ.) ಸಮನಾಗಿದ್ದರೆ ಮಾತ್ರ ನಿಮಗೊಂದು ‘ಊಟದ ಕೂಪನ್’ ನೀಡಲಾಗುತ್ತದೆ. ಒಂದು ವೇಳೆ ಅದಕ್ಕಿಂತ ಕಡಿಮೆ ಹಣ ಕೊಟ್ಟರೆ ನಿಮಗೆ ಕೂಪನ್ ಸಿಗಲ್ಲ, ಅಂದರೆ, ನೀವು ವಧು-ವರರನ್ನು ಆಶೀರ್ವದಿಸಿ ಊಟ ಮಾಡದೆಯೇ ಹಸಿದ ಹೊಟ್ಟೆಯಲ್ಲಿ ಮನೆಗೆ ಮರಳಬೇಕಾಗುತ್ತದೆ. ಪ್ರೀತಿ-ವಿಶ್ವಾಸಕ್ಕಿಂತ ಹಣವೇ ಪ್ರಧಾನವಾಗಿರುವ ಕೊರಿಯನ್ನರ ಈ ವಿಚಿತ್ರ ಮದುವೆ ಪದ್ಧತಿ ಸದ್ಯ ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಟಿಕಿ-ಟಾಕಾಗೆ ಕಂಗೆಟ್ಟ ಫ್ರಾನ್ಸ್​: ಫೈನಲ್​ಗೇರಿದ ಸ್ಪೇನ್ – Kannada News | Spain are into the FIFA World Cup 2026 Final

ಫಿಫಾ ವಿಶ್ವಕಪ್ 2026ರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು 2-0 ಗೋಲುಗಳಿಂದ ಮಣಿಸಿ ಸ್ಪೇನ್ ತಂಡ ಫೈನಲ್‌ಗೆ ಲಗ್ಗೆ ಇಟ್ಟಿದೆ. ಟೆಕ್ಸಾಸ್‌ನ ಡಲ್ಲಾಸ್ ಸ್ಟೇಡಿಯಂನಲ್ಲಿ ನಡೆದ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಸ್ಪೇನ್ ತಂಡದ ಅದ್ಭುತ ರಕ್ಷಣಾತ್ಮಕ ಆಟ ಮತ್ತು ಟಿಕಿ-ಟಾಕಾ ತಂತ್ರಗಾರಿಕೆಗೆ ಫ್ರಾನ್ಸ್ ಸಂಪೂರ್ಣವಾಗಿ ತತ್ತರಿಸಿತು. ಪರಿಣಾಮ ಸ್ಪೇನ್ ಬರೋಬ್ಬರಿ 16 ವರ್ಷಗಳ ಬಳಿಕ ಮತ್ತೊಮ್ಮೆ ಫೈನಲ್​ಗೇರುವಲ್ಲಿ ಯಶಸ್ವಿಯಾಗಿದೆ.

ಟಿಕಿ-ಟಾಕಾ 2.0:

‘ಟಿಕಿ-ಟಾಕಾ 2.0’ ಎಂಬುದು ಸಾಂಪ್ರದಾಯಿಕ ನಿಧಾನಗತಿಯ ಪಾಸಿಂಗ್ ಆಟಕ್ಕೆ ಆಧುನಿಕ ವೇಗ ಮತ್ತು ಆಕ್ರಮಣಕಾರಿ ತಂತ್ರವನ್ನು ಬೆರೆಸಿ ಸ್ಪೇನ್ ಕೋಚ್ ಲೂಯಿಸ್ ಡೆ ಲಾ ಫ್ಯೂಯೆಂಟೆ ರೂಪಿಸಿರುವ ಹೊಚ್ಚ ಹೊಸ ಫುಟ್‌ಬಾಲ್ ತಂತ್ರಗಾರಿಕೆಯಾಗಿದೆ.

ಹಳೆಯ ಶೈಲಿಯಲ್ಲಿ ಕೇವಲ ಚೆಂಡನ್ನು ತನ್ನ ಬಳಿ ಇಟ್ಟುಕೊಳ್ಳುವುದಕ್ಕಷ್ಟೇ ಪ್ರಾಮುಖ್ಯತೆ ಇರುತ್ತಿತ್ತು. ಆದರೆ ಈ ಹೊಸ ಟಿಕಿ-ಟಾಕಾ ತಂತ್ರದಲ್ಲಿ ಚೆಂಡಿನ ನಿಯಂತ್ರಣದ ಜೊತೆಗೆ ಎದುರಾಳಿ ಕೋಟೆಗೆ ನೇರವಾಗಿ ಲಗ್ಗೆ ಇಡುವ ಮಾರಕ ವೇಗವೂ ಅಡಗಿದೆ.

ಇದೇ ತಂತ್ರದೊಂದಿಗೆ ಕಣಕ್ಕಿಳಿದ ಸ್ಪೇನ್ ಆಟಗಾರರು ಆರಂಭದಿಂದಲೇ ಚೆಂಡಿನ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದರು. ಪರಿಣಾಮ ಸ್ಪೇನ್ ಇಡೀ ಪಂದ್ಯದಲ್ಲಿ ಶೇಕಡಾ 62 ಕ್ಕಿಂತ ಹೆಚ್ಚು ಸಮಯ ಚೆಂಡನ್ನು ತನ್ನ ಬಳಿಯೇ ಇಟ್ಟುಕೊಳ್ಳುವ ಮೂಲಕ ಫ್ರಾನ್ಸ್ ಆಟಗಾರರನ್ನು ಓಡಾಡುವಂತೆ ಮಾಡಿತು.

ಇದರಿಂದ ಒತ್ತಡಕ್ಕೆ ಒಳಗಾದ ಫ್ರಾನ್ಸ್ ಆಟಗಾರರು ಚೆಂಡಿನ ಮೇಲಿನ ನಿಯಂತ್ರಣ ಕಳೆದುಕೊಂಡರು. ಇತ್ತ ಸ್ಪೇನ್​ ತಂಡದ ಮಿಡ್‌ಫೀಲ್ಡರ್‌ಗಳಾದ ಪೆಡ್ರೆ ಮತ್ತು ಫ್ಯಾಬಿಯನ್ ರೂಯಿಝ್ ಪರಸ್ಪರ ನೂರಾರು ಶಾರ್ಟ್ ಪಾಸ್‌ಗಳನ್ನು ನೀಡುತ್ತಾ ಫ್ರಾನ್ಸ್‌ನ ರಕ್ಷಣಾ ಕೋಟೆಯನ್ನು ನಿರಾಯಾಸವಾಗಿ ಭೇದಿಸಿದರು.

  • ಮೊದಲ ಗೋಲು: ಪಂದ್ಯದ 22ನೇ ನಿಮಿಷದಲ್ಲಿ ಫ್ರಾನ್ಸ್‌ನ ಹಿರಿಯ ಡಿಫೆಂಡರ್ ಲ್ಯೂಕಾಸ್ ಡಿಗ್ನೆ ಅವರು ಸ್ಪೇನ್‌ನ ಯುವ ತಾರೆ ಲಾಮಿನ್ ಯಮಾಲ್ ಅವರ ಮೇಲೆ ಫೌಲ್ ಮಾಡಿದರು. ಇದರ ಫಲವಾಗಿ ಸ್ಪೇನ್‌ಗೆ ಲಭಿಸಿದ ಪೆನಾಲ್ಟಿ ಅವಕಾಶವನ್ನು ಮೈಕೆಲ್ ಒಯರ್ಝಬಾಲ್ ಯಾವುದೇ ತಪ್ಪಿಲ್ಲದೆ ಗೋಲಾಗಿ ಪರಿವರ್ತಿಸಿ 1-0 ಮುನ್ನಡೆ ತಂದುಕೊಟ್ಟರು.
  • ಎರಡನೇ ಗೋಲು: ದ್ವಿತೀಯಾರ್ಧದಲ್ಲೂ ಟಿಕಿ-ಟಾಕಾ ಆಟ ಮುಂದುವರಿಸಿದ ಸ್ಪೇನ್ ತಂಡಕ್ಕೆ 58ನೇ ನಿಮಿಷದಲ್ಲಿ ಯಶಸ್ಸು ಸಿಕ್ಕಿತು. ಪೆಡ್ರೊ ಪೊರೊ ಅವರು ಡ್ಯಾನಿ ಓಲ್ಮೊ ಅವರೊಂದಿಗೆ ಅತ್ಯದ್ಭುತ ಒನ್-ಟು-ಒನ್ ಪಾಸ್ ಚತುರತೆ ಪ್ರದರ್ಶಿಸಿ, ಫ್ರಾನ್ಸ್ ಗೋಲ್‌ಕೀಪರ್ ಮೈಕ್ ಮೈಗ್ನಾನ್ ಅವರನ್ನು ವಂಚಿಸಿ ಎರಡನೇ ಗೋಲು ಬಾರಿಸಿದರು.

ಮಂಕಾದ ಎಂಬಾಪೆ: ಫ್ರಾನ್ಸ್‌ಗೆ ಗಾಯದ ಮೇಲೆ ಬರೆ

ವಿಶ್ವದ ಅತ್ಯಂತ ಅಪಾಯಕಾರಿ ಆಕ್ರಮಣಕಾರಿ ಮುನ್ಪಡೆ ಹೊಂದಿದ್ದರೂ, ಫ್ರಾನ್ಸ್ ನಾಯಕ ಕಿಲಿಯನ್ ಎಂಬಾಪೆ ಸ್ಪೇನ್‌ನ ಬಿಗಿಯಾದ ರಕ್ಷಣಾ ಕೋಟೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ. ಮತ್ತೊಂದೆಡೆ ಪಂದ್ಯದ 31ನೇ ನಿಮಿಷದಲ್ಲಿ ಫ್ರಾನ್ಸ್‌ನ ಪ್ರಮುಖ ಡಿಫೆಂಡರ್ ವಿಲಿಯಂ ಸಲಿಬಾ ಗಾಯಗೊಂಡು ಮೈದಾನ ತೊರೆದದ್ದು ಫ್ರಾನ್ಸ್‌ಗೆ ಭಾರಿ ಹಿನ್ನಡೆಯಾಯಿತು.

ಇತ್ತ ಟಿಕಿ-ಟಾಕಾ ಶೈಲಿಯಲ್ಲೇ ಪಂದ್ಯ ಮುಂದುವರೆಸಿದ ಸ್ಪೇನ್, ಎಂಬಾಪೆಯ ಕೌಂಟರ್ ಅಟ್ಯಾಕ್​ ಅನ್ನು ಸಂಪೂರ್ಣ ನಿಯಂತ್ರಿಸಿದರು. ಪರಿಣಾಮ ಒತ್ತಡಕ್ಕೆ ಒಳಗಾದ ಎಂಬಾಪೆ ಕೆಲ ಅವಕಾಶಗಳು ಲಭಿಸಿದರೂ ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲರಾದರು.

ಸ್ಪೇನ್​ಗೆ ಹ್ಯಾಟ್ರಿಕ್ ಗೆಲುವು:

ಸ್ಪೇನ್ ತಂಡವು ಪ್ರಮುಖ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಫ್ರಾನ್ಸ್ ವಿರುದ್ಧ ಸತತ ಮೂರನೇ ಬಾರಿ ಗೆಲುವು ಸಾಧಿಸಿ ತನ್ನ ಪ್ರಾಬಲ್ಯ ಮೆರೆದಿದೆ.

  • ಯೂರೋ ಕಪ್ 2024 (ಸೆಮಿಫೈನಲ್): ಸ್ಪೇನ್ 2-1 ಗೋಲುಗಳಿಂದ ಜಯಭೇರಿ.
  • ಯುಇಎಫ್‌ಎ ನೇಷನ್ಸ್ ಲೀಗ್ 2025 (ಸೆಮಿಫೈನಲ್): ಸ್ಪೇನ್ 5-4 ಗೋಲುಗಳ ರೋಚಕ ಗೆಲುವು.
  • ಫಿಫಾ ವಿಶ್ವಕಪ್ 2026 (ಸೆಮಿಫೈನಲ್): ಸ್ಪೇನ್ 2-0 ಗೋಲುಗಳ ಭರ್ಜರಿ ಜಯ

ಇದನ್ನೂ ಓದಿ: ನಾವು ಹೆದರಲ್ಲ… ಕೊಹ್ಲಿ, ರೋಹಿತ್​​ಗೆ ಡಕೆಟ್ ಸವಾಲು!

ಫೈನಲ್ ಫೈಟ್:

ಭಾನುವಾರ (ಜುಲೈ 19) ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆಯಲಿರುವ ಮಹಾ ಫೈನಲ್‌ನಲ್ಲಿ ಸ್ಪೇನ್ ತಂಡವು ಅರ್ಜೆಂಟೀನಾ ಅಥವಾ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಸೋತ ಫ್ರಾನ್ಸ್ ತಂಡವು ಶನಿವಾರ ಮಿಯಾಮಿಯಲ್ಲಿ ಮೂರನೇ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ 2ನೇ ಸೆಮಿಫೈನಲ್​ ಪಂದ್ಯದಲ್ಲಿ ಸೋತ ತಂಡವನ್ನು ಎದುರಿಸಲಿದೆ.

Source link

ಗೆಲುವಿನ ಬೆನ್ನಲ್ಲೇ ವಿಶ್ವಕಪ್‌ ರಣತಂತ್ರ ಬಿಚ್ಚಿಟ್ಟ ಶುಭ್​ಮನ್ ಗಿಲ್ – Kannada News | Shubman gill post match presentation After IND vs ENG 1st ODI Match

ಇಂಗ್ಲೆಂಡ್​ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲೇ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು 47.5 ಓವರ್​ಗಳಲ್ಲಿ 258 ರನ್​ಗಳಿಸಿ ಆಲೌಟ್ ಆಯಿತು. ಈ ಗುರಿಯನ್ನು ಟೀಮ್ ಇಂಡಿಯಾ 45.2 ಓವರ್​ಗಳಲ್ಲಿ ಚೇಸ್ ಮಾಡುವ ಮೂಲಕ 6 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ.

ಈ ಗೆಲುವಿನ ಬಳಿಕ ಮಾತನಾಡಿದ ಭಾರತ ತಂಡದ ಯುವ ನಾಯಕ ಶುಭ್‌ಮನ್ ಗಿಲ್, ತಂಡದ ಮಧ್ಯಮ ಕ್ರಮಾಂಕದ ಪ್ರದರ್ಶನ, ಬೌಲಿಂಗ್ ತಂತ್ರ ಹಾಗೂ 2027ರ ವಿಶ್ವಕಪ್ ಸಿದ್ಧತೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಮಧ್ಯಮ ಕ್ರಮಾಂಕದಿಂದ ಆನೆ ಬಲ!

ಟಾಪ್ ಆರ್ಡರ್ ಬ್ಯಾಟರ್‌ಗಳಾದ ರೋಹಿತ್ ಶರ್ಮಾ (11) ಮತ್ತು ವಿರಾಟ್ ಕೊಹ್ಲಿ (5) ಬೇಗನೆ ಔಟಾದಾಗ ಭಾರತ ಸಣ್ಣ ಆತಂಕಕ್ಕೆ ಒಳಗಾಗಿತ್ತು. ಇತ್ತ ಶುಭ್​ಮನ್ ಗಿಲ್ 80 ರನ್ ಗಳಿಸಿ ಸ್ನಾಯು ಸೆಳೆತದಿಂದಾಗಿ ಮೈದಾನ ತೊರೆದಿದ್ದರು. ಈ ಹಂತದಲ್ಲಿ ಜವಾಬ್ದಾರಿ ಹೊತ್ತ ಆಲ್‌ರೌಂಡರ್‌ಗಳಾದ ಅಕ್ಷರ್ ಪಟೇಲ್ (57*) ಮತ್ತು ವಾಷಿಂಗ್ಟನ್ ಸುಂದರ್ (52*) 102 ರನ್‌ಗಳ ಜೊತೆಯಾಟವಾಡಿ ಪಂದ್ಯವನ್ನು ಮುಗಿಸಿದರು.

ಇದರ ಬಗ್ಗೆ ಹರ್ಷ ವ್ಯಕ್ತಪಡಿಸಿದ ಗಿಲ್, “ನಮ್ಮ ಮಧ್ಯಮ ಕ್ರಮಾಂಕ ಮತ್ತು ಕೆಳ-ಮಧ್ಯಮ ಕ್ರಮಾಂಕದ ಆಟಗಾರರು ಕ್ರೀಸ್‌ನಲ್ಲಿ ನಿಂತು ಈ ರೀತಿ ರನ್ ಗಳಿಸಿ ಪಂದ್ಯವನ್ನು ಗೆಲ್ಲಿಸಿಕೊಟ್ಟಾಗ, ಒಬ್ಬ ನಾಯಕನಾಗಿ ಹಾಗೂ ಟಾಪ್ ಆರ್ಡರ್ ಬ್ಯಾಟರ್ ಆಗಿ ನನಗೆ ಅಪಾರ ಆತ್ಮವಿಶ್ವಾಸ ಮೂಡುತ್ತದೆ” ಎಂದು ಶ್ಲಾಘಿಸಿದರು.

ಬೌಲಿಂಗ್ ಆಯ್ಕೆಯ ರಹಸ್ಯ:

ಟಾಸ್ ಗೆದ್ದರೆ ಮೊದಲು ಬೌಲಿಂಗ್ ಮಾಡಬೇಕೆಂಬ ನಿರ್ಧಾರ ಪಿಚ್‌ಗಿಂತ ಹೆಚ್ಚಾಗಿ ತಂಡದ ಕಾಂಬಿನೇಷನ್ ಮೇಲೆ ಆಧಾರಿತವಾಗಿತ್ತು ಎಂದು ಗಿಲ್ ಸ್ಪಷ್ಟಪಡಿಸಿದರು. “ನಮ್ಮ ಬೌಲಿಂಗ್ ವಿಭಾಗ ಸ್ವಲ್ಪ ಯುವ ಆಟಗಾರರಿಂದ ಕೂಡಿದೆ. ಆದರೆ ನಮ್ಮ ಬ್ಯಾಟಿಂಗ್ ವಿಭಾಗವು ಬೌಲಿಂಗ್‌ಗಿಂತ ಹೆಚ್ಚು ಅನುಭವ ಹೊಂದಿದೆ. ಆದ್ದರಿಂದಲೇ ಸರಣಿಯ ಮೊದಲ ಪಂದ್ಯದಲ್ಲಿ ಮೊದಲು ಬೌಲಿಂಗ್ ಮಾಡಲು ಬಯಸಿದೆವು. ಎದುರಾಳಿ ತಂಡ 320 ರನ್ ಗಳಿಸಿದರೂ ನಮ್ಮ ಬ್ಯಾಟಿಂಗ್ ಶಕ್ತಿಯ ಮೇಲೆ ನಮಗೆ ನಂಬಿಕೆಯಿತ್ತು, ಅದನ್ನು ಚೇಸ್ ಮಾಡಬಲ್ಲೆವು ಎಂಬ ವಿಶ್ವಾಸವಿತ್ತು” ಎಂದರು.

ಪವರ್‌ಪ್ಲೇ ಬಳಿಕ ಅದ್ಭುತ ಕಂಬ್ಯಾಕ್:

ಇಂಗ್ಲೆಂಡ್ ತಂಡ ಪವರ್‌ಪ್ಲೇ ಕೊನೆಯಲ್ಲಿ ಉತ್ತಮ ರನ್ ಗಳಿಸಿ ಭಾರತದ ಮೇಲೆ ಒತ್ತಡ ಹೇರಿತ್ತು. ಆದರೆ ಮಿಡಲ್ ಓವರ್‌ಗಳಲ್ಲಿ ಭಾರತೀಯ ಬೌಲರ್‌ಗಳು ಅದ್ಭುತವಾಗಿ ಪುಟಿದೆದ್ದರು. ಈ ಬಗ್ಗೆ ಮಾತನಾಡಿದ ಗಿಲ್, “ಮೊದಲ 6-7 ಓವರ್‌ಗಳಲ್ಲಿ ನಾವು ಅದ್ಭುತವಾಗಿ ಬೌಲಿಂಗ್ ಮಾಡಿದೆವು. ಚೆಂಡು ಸ್ವಲ್ಪ ಮೂವ್ ಆಗುತ್ತಿತ್ತು. ಆದರೆ ಪವರ್‌ಪ್ಲೇ ಕೊನೆಯಲ್ಲಿ ಅವರು ಅಬ್ಬರಿಸಿದರು. ಆ ಒತ್ತಡದ ಪರಿಸ್ಥಿತಿಯಿಂದ ನಾವು ಕಂಬ್ಯಾಕ್ ಮಾಡಿ, ಪ್ರಮುಖ 5 ವಿಕೆಟ್‌ಗಳನ್ನು ಪಡೆದ ರೀತಿ ಅತ್ಯಂತ ಸಂತಸ ನೀಡಿದೆ” ಎಂದು ಬೌಲರ್‌ಗಳನ್ನು ಕೊಂಡಾಡಿದರು.

2027ರ ವಿಶ್ವಕಪ್‌ಗೆ ರಣತಂತ್ರ:

2027ರ ಐಸಿಸಿ ಏಕದಿನ ವಿಶ್ವಕಪ್ ಸೌತ್ ಆಫ್ರಿಕಾದಲ್ಲಿ ನಡೆಯಲಿದ್ದು, ಭಾರತ ಈಗಿನಿಂದಲೇ ಅದಕ್ಕೆ ತಯಾರಿ ನಡೆಸುತ್ತಿದೆ. ಎಡ್ಜ್‌ಬಾಸ್ಟನ್ ಪಿಚ್ ಕೂಡ ಸೌತ್ ಆಫ್ರಿಕಾದ ಪಿಚ್‌ಗಳಂತೆಯೇ ಹೊಸ ಚೆಂಡಿನಲ್ಲಿ ಬ್ಯಾಟರ್‌ಗಳಿಗೆ ಕಠಿಣ ಸವಾಲು ಒಡ್ಡುತ್ತಿತ್ತು.

ಈ ಬಗ್ಗೆ ಮಾತನಾಡಿದ  ಶುಭ್​ಮನ್ ಗಿಲ್, “ನಾವು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಉತ್ತಮ ಡೆಪ್ತ್ ತರಲು ವಿಭಿನ್ನ ಕಾಂಬಿನೇಷನ್‌ಗಳನ್ನು ಪ್ರಯೋಗಿಸುತ್ತಿದ್ದೇವೆ. ಈ ಪಿಚ್‌ನ ಪರಿಸ್ಥಿತಿ ಸೌತ್ ಆಫ್ರಿಕಾದ ಪಿಚ್‌ಗಳಿಗೆ ಹೋಲಿಕೆಯಾಗುತ್ತಿತ್ತು. ಹೊಸ ಚೆಂಡಿನಲ್ಲಿ ರನ್ ಗಳಿಸುವುದು ಸುಲಭವಾಗಿರಲಿಲ್ಲ, ಚೆಂಡು ಬೌನ್ಸ್ ಆಗುತ್ತಿತ್ತು. ಇಂತಹ ಕಠಿಣ ಪಿಚ್‌ಗಳಲ್ಲಿ ನಮ್ಮ ವಿಭಿನ್ನ ಕಾಂಬಿನೇಷನ್‌ಗಳನ್ನು ಪರೀಕ್ಷಿಸುವುದು ಭವಿಷ್ಯದ ದೃಷ್ಟಿಯಿಂದ ಅತ್ಯುತ್ತಮ ಸೌಲಭ್ಯವಾಗಿದೆ” ಎಂದು ತಮ್ಮ ದೂರದೃಷ್ಟಿಯನ್ನು ಹಂಚಿಕೊಂಡರು.

ಇದನ್ನೂ ಓದಿ: ಟಿಕಿ-ಟಾಕಾಗೆ ಕಂಗೆಟ್ಟ ಫ್ರಾನ್ಸ್​: ಫೈನಲ್​ಗೇರಿದ ಸ್ಪೇನ್

ಒಟ್ಟಾರೆಯಾಗಿ ಹೇಳುವುದಾದರೆ, ಎಡ್ಜ್‌ಬಾಸ್ಟನ್‌ನ ಈ ಅಮೋಘ ಗೆಲುವು ಭಾರತೀಯ ಕ್ರಿಕೆಟ್‌ನ ಹೊಸ ಯುಗಕ್ಕೆ ದಿಕ್ಸೂಚಿಯಾಗಿದೆ. ಹಿರಿಯ ಆಟಗಾರರ ವೈಫಲ್ಯದ ನಡುವೆಯೂ ಯುವ ಪಡೆ ತೋರಿದ ಜವಾಬ್ದಾರಿಯುತ ಆಟ ಮತ್ತು ಒತ್ತಡದ ಸಂದರ್ಭದಲ್ಲಿ ಪುಟಿದೆದ್ದ ರೀತಿ ತಂಡದ ಅಪ್ರತಿಮ ಸಾಮರ್ಥ್ಯವನ್ನು ಸಾರುತ್ತದೆ. ನಾಯಕ ಶುಭ್‌ಮನ್ ಗಿಲ್ ಅವರ ದೂರದೃಷ್ಟಿಯ ಯೋಜನೆಗಳು ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬಲವು, ಭಾರತ ತಂಡ 2027ರ ವಿಶ್ವಕಪ್‌ಗೆ ಅತ್ಯಂತ ಭರವಸೆಯ ಹಾದಿಯಲ್ಲಿದೆ ಎಂಬುದನ್ನು ಸಾಬೀತುಪಡಿಸಿದೆ.

Source link

TV9 Kannada News Live: ಬೆಂಗಳೂರಿನ ಫುಟ್​​ಬಾಲ್ ಪ್ರೇಮಿಗಳಿಗೆ ಸರ್ಕಾರ ಗುಡ್ ನ್ಯೂಸ್, ಈ ಹೊತ್ತಿನ ಪ್ರಮುಖ ಸುದ್ದಿಗಳು – Kannada News | TV9 Kannada Live Breaking News 15 July 2026 CM DK Shivakumar, Karnataka Politics, Weather, Rain, SIR, Cinema Latest Updates Online

Breaking News Today Live Updates in Kannada: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕಸರತ್ತು ತೀವ್ರಗೊಂಡಿದೆ. ಈ ವಿಚಾರವಾಗಿ ಹೈಕಮಾಂಡ್ ನಾಯಕರ ಜೊತೆ ಚರ್ಚೆ ನಡೆಸಲು ಜುಲೈ 17ರ ನಂತರ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೆಹಲಿಗೆ ತೆರಳುವ ಸಾಧ್ಯತೆ ಇದೆ. ಮತ್ತೊಂದೆಡೆ ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್ ನಿರ್ವಹಣೆಗೆ ಹೊಸ ಕಾನೂನು ತರಲು ಸರಕಾರ ಮುಂದಾಗಿದ್ದು, ಆ ಕುರಿತು ಇಂದು ಸಿಎಂ ನೇತೃತ್ವದಲ್ಲಿ ಸಂವಾದ ಕಾರ್ಯಕ್ರಮ ನಡೆಯುತ್ತಿದೆ. ಇನ್ನೊಂದೆಡೆ ಬಿಡದಿಯಲ್ಲಿ ರೈತರ ಪ್ರತಿಭಟನೆ ನಡೆಯುತ್ತಿದೆ. ಬೆಂಗಳೂರಿನಲ್ಲಿ ಫುಟ್ಬಾಲ್ ಪ್ರೇಮಿಗಳಿಗೆ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದ್ದು, ತಡರಾತ್ರಿ 1 ಗಂಟೆಯಿಂದ 3.30 ರ ಹೋಟೆಲ್, ರೆಸ್ಟೋರೆಂಟ್ ತೆರೆದಿಡಲು ಅನುಮತಿ ನೀಡಿದೆ. ಇದರೊಂದಿಗೆ ರಾಜ್ಯ, ರಾಷ್ಟ್ರೀಯ, ಕ್ರೀಡೆ, ಸಿನಿಮಾ ಸೇರಿದಂತೆ ಇಂದಿನ ಎಲ್ಲಾ ಸುದ್ದಿ ಬೆಳವಣಿಗೆಗಳ ತಾಜಾ ಮಾಹಿತಿಗಾಗಿ ಈ ಪುಟವನ್ನು ರಿಫ್ರೆಷ್ ಮಾಡುತ್ತಾ ಇರಿ.

Tv9 Kannada Live TV ಇಲ್ಲಿ ವೀಕ್ಷಿಸಿ

Source link

Horoscope Today 15 July : ಇಂದು ಈ ರಾಶಿಯವರಿಂದ ಸಿಗಬೇಕಾದ ನೆರವು ಇರದು, ಪ್ರತೀಕಾರದ ನಿರೀಕ್ಷೆ

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಆಷಾಢ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಪುನರ್ವಸು, ವಾರ : ಬುಧ, ಪಕ್ಷ : ಶುಕ್ಲ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಪುಷ್ಯಾ, ಯೋಗ : ವ್ಯಾಘಾತ, ಕರಣ : ನಾಗವಾನ್, ಸೂರ್ಯೋದಯ – 06 – 02 am, ಸೂರ್ಯಾಸ್ತ – 06 – 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:26 – 14:01, ಯಮಗಂಡ ಕಾಲ 07:38 – 09:14, ಗುಳಿಕ ಕಾಲ 10:50 – 12:26

ಮೇಷ ರಾಶಿ :

ನಾಯಕ ಸ್ಥಾನದಿಂದ ನೀವು ಕೆಳಗಿಳಿಯುವ ಆಲೋಚನೆ ಮಾಡುವಿರಿ. ಹಣಕಾಸಿನಲ್ಲಿ ನಿಖರತೆ ಇರದು. ಸ್ನೇಹಿತರಿಂದ ಬೆಂಬಲ ಸಿಗುತ್ತದೆ. ಮನೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ನಿರತರಾಗಬಹುದು. ಆತ್ಮವಿಶ್ವಾಸ ಹೆಚ್ಚಾಗಿದ್ದು, ಕೆಲಸದಲ್ಲಿ ಉತ್ತೇಜನವೂ ಇರುವುದು. ಪೋಷಕರ ಸಲಹೆ ಮಹತ್ವದ್ದು. ಭವಿಷ್ಯದ ಯೋಜನೆ ರೂಪಿಸಿ. ಕಛೇರಿಯಲ್ಲಿ ಎಂದಿನ ಉತ್ಸಾಹವು ಇರುವುದಿಲ್ಲ. ಹತ್ತರ ಜೊತೆ ಹನ್ನೊಂದು ಆಗದಂತೆ ನೀವೇ ನೋಡಿಕೊಳ್ಳಬೇಕು. ಹೆಚ್ಚು ಶ್ರಮ ನೀವೇ ಸ್ವತಃ ಹಾಕಬೇಕಾಗುವುದು.

ವೃಷಭ ರಾಶಿ :

ಇಂದು ನಿಮ್ಮ ಸ್ನೇಹಿತರು ನಿಮಗೆ ಅಗತ್ಯವಾಗಿ ಬೇಕಾದ ಸಹಾಯವನ್ನು ಮಾಡುವರು. ಸಂಗಾತಿಯೊಂದಿಗೆ ಸಮಯ ಕಳೆಯುವ ಅವಕಾಶ. ನಿಮ್ಮ ಹಳೆಯ ಯೋಜನೆ ಪೂರ್ಣಗೊಳ್ಳುವ ದಿನ. ಆರೋಗ್ಯದಲ್ಲಿ ಚುರುಕು ಹೆಚ್ಚಾಗುತ್ತದೆ. ಮನಸ್ಸು ಶಾಂತವಾಗಿರುತ್ತದೆ. ನಿಮ್ಮ ಸಹೋದರರಿಂದ ನಿಮಗೆ ಬೆಂಬಲ ಸಿಗುತ್ತದೆ. ಸ್ನೇಹಿತರಿಂದ ಉಡುಗೊರೆ ಸಿಗಬಹುದು. ನಿಮ್ಮನ್ನು ವಿರೋಧಿಸುವವರ ನಡುವೆ ಬೆಳೆಯಲು ಹಂಬಲಿಸುವಿರಿ. ಇಂದು ಒಂಟಿಯಾಗಿ ಇರಬೇಕು ಎಂದು ಅನ್ನಿಸಬಹುದು.

ಮಿಥುನ ರಾಶಿ :

ಉದ್ಯೋಗ ಸ್ಥಳದಲ್ಲಿ ಕಿರಿಕಿರಿಯ ಕಾರಣ ಕಾರ್ಯವು ಸೂಚಿಸದೇ ಬಹಳ ಜಡರಾಗುವಿರಿ‌. ನಿಗದಿತ ಕೆಲಸಗಳನ್ನು ಸಮಯಕ್ಕೆ ಮುಗಿಸುವುದು ಮುಖ್ಯ. ಅನಾವಶ್ಯಕ ವ್ಯಯದಿಂದ ದೂರವಿರಿ. ಕುಟುಂಬದಲ್ಲಿ ನಿಮಗೆ ಬೆಂಬಲ ಸಿಗುತ್ತದೆ. ಉದ್ಯೋಗದಲ್ಲಿ ಬದಲಾವಣೆಗಳು ಎದುರಾಗಬಹುದು. ಉದ್ಯಮವನ್ನು ಬೇರೆ ರೀತಿಯಲ್ಲಿ ಮುಂದುವರಿಸುವ ಕುರಿತು ಅಧಿಕಾರಿಗಳ ಜೊತೆ ಚರ್ಚಿಸುವಿರಿ. ಸಂಗಾತಿಯ ಜೊತೆ ಹಾರ್ದವಾದ‌ ಮಾತುಕತೆಗಳು ನಿಮಗೆ ಖುಷಿ ಕೊಡದು.

ಕರ್ಕಾಟಕ ರಾಶಿ :

ನಿಮ್ಮ ಪ್ರತಿ ಮಾತಿನ್ನೂ ಇನ್ನೊಬ್ಬರು ಗಮನಿಸುವರು.‌ ಉತ್ತಮ ವರಮಾನ ವರನನ್ನು ಕೂಡ ಇರಬಹುದು. ಹೊಸ ಉದ್ಯಮಕ್ಕೆ ಉತ್ತಮ ದಿನ. ನಿಮ್ಮ ಶ್ರಮ ಫಲ ನೀಡಲಿದೆ. ಕುಟುಂಬದಲ್ಲಿ ಹಿರಿಯರ ಆರೋಗ್ಯ ಸುಧಾರಣೆಯ ಸೂಚನೆ. ಆತ್ಮೀಯರೊಂದಿಗೆ ಭೇಟಿ ಸಂತೋಷ ನೀಡಲಿದೆ. ಅನ್ಯಾಯದ ಮಾರ್ಗದಲ್ಲಿ ನೀವಿದ್ದರೆ ಮುಂದೆ ನೀವು ನಷ್ಟವನ್ನು ಕಷ್ಟವನ್ನೂ ಅನುಭವಿಸಬೇಕಾಗಬಹುದು. ಈಗಲೇ ಬೇಕಾದ ಕ್ರಮವನ್ನು ಕೈಗೊಳ್ಳಿ.

ಸಿಂಹ ರಾಶಿ :

ಭವಿಷ್ಯದ ಬಗ್ಗೆ ಸರಿಯಾದ ದೃಷ್ಟಿಯು ಬೇಕೆನಿಸುವುದು. ಸಹೋದ್ಯೋಗಿಗಳಿಂದ ಬೆಂಬಲ ಸಾಧ್ಯತೆ. ದೂರದ ಸಂಬಂಧಿಯಿಂದ ಸಿಹಿಸುದ್ದಿ ನಿರೀಕ್ಷೆ. ಹಣದ ವಿಚಾರದಲ್ಲಿ ಖರ್ಚು ನಿಯಂತ್ರಣ ಬೇಕು. ಕೆಲಸದಲ್ಲಿ ಸವಾಲುಗಳನ್ನು ನಿಭಾಯಿಸಬೇಕಾದ ದಿನ. ಮನಸ್ಸಿಗೆ ಧೈರ್ಯ ತುಂಬಿಕೊಳ್ಳಿ. ಅಪಾಯದ ಮುನ್ಸೂಚನೆಯನ್ನು ಅರ್ಥಮಾಡಿಕೊಂಡು ಮುನ್ನಡೆಯಿರಿ. ನೌಕರರಿಗೆ ನಿಮ್ಮಿಂದ ಖುಷಿಯಾಗಲಿದೆ. ನಿಮ್ಮ ಕಾಯುವಿಕೆಯು ಸಾರ್ಥಕವಾಗಬಹುದು.

ಕನ್ಯಾ ರಾಶಿ :

ಕುಟುಂಬದಲ್ಲಿ ಇರುವ ಸಂತೋಷದ ವಾತಾವರಣ ನಿಮ್ಮ ಉತ್ಸಾಹದಿಂದ ಇರುವಂತೆ ಮಾಡುವುದು. ಹಿರಿಯರ ಆಶೀರ್ವಾದ ನಿಮ್ಮ ಮೇಲೆ ಇರಲಿದೆ. ಯಾವುದೇ ಕಾರಣವಿಲ್ಲದೆ ಇತರರ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಬೇಡಿ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ ಉತ್ತಮ‌ ಫಲಿತಾಂಶವು ಸಿಗಬಹುದು. ಬಗ್ಗೆಯೂ ಸುಮ್ಮನೆ ಆಡಿಕೊಳ್ಳುವುದು ಬೇಡ. ಮನೆಯ ಕಾರ್ಯಗಳು ಇಂದು ಅಧಿಕವಾಗಿ ಇರಬಹುದು.

ತುಲಾ ರಾಶಿ :

ಆತ್ಮವಿಶ್ವಾಸದಿಂದ ಸಂಕಷ್ಟಗಳನ್ನು ಎದುರಿಸಬಹುದು. ಮನೆಗೆ ಸಂಬಂಧಪಟ್ಟ ಕೆಲಸಗಳಲ್ಲಿ ನಿರತರಾಗಬಹುದು. ದಂಪತಿಗಳ ನಡುವೆ ಒಡನಾಟ ಹೆಚ್ಚಾಗಲಿದೆ. ಪರಸ್ಪರ ಭಾವನೆಗಳಿಗೆ ಆದ್ಯತೆ ಕೊಡುವಿರಿ. ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯಲೇ ಬೇಕು ಎಂಬ ಮಹದಾಸೆ ನಿಮ್ಮಲ್ಲಿ ಇರಲಿದೆ. ಕೆಲವು ಮಾತುಗಳನ್ನು ಮನಸ್ಸಿಗೆ ಹಚ್ಚಿಕೊಂಡು ಸಂಕಟಪಡುವಿರಿ. ಸಾಲದಿಂದ ನಿಮಗೆ ಕಿರಿಕಿರಿಯಾಗುವುದು. ಓಡಾಟದ ಕಾರಣಕ್ಕೆ ವಾಹನವನ್ನು ಸಾಲ ಮಾಡಿ ಪಡೆಯುವಿರಿ.

ವೃಶ್ಚಿಕ ರಾಶಿ :

ಮಕ್ಕಳು ವಿದ್ಯಾಭ್ಯಾಸದಲ್ಲಿ ಅನಿರೀಕ್ಷಿತ ಬೆಳವಣಿಯಾಗುವುದು ಖುಷಿ ಕೊಡುವುದು. ನೀವು ಸ್ವಲ್ಪ ಸಮಯದಲ್ಲಿ ಭೂ ವ್ಯವಹಾರವನ್ನು ಮಾಡಲು ಉತ್ತಮ ಗ್ರಾಹಕರು ಸಿಗಲಿದ್ದಾರೆ. ಬೇಡದ ಸಂಗತಿಗಳನ್ನು ಹೊರಗೆ ಕಳುಹಿಸಿ. ನಿಮ್ಮ ಕಾರ್ಯಚಟುವಟಿಕೆಯಿಂದ ಹಿರಿಯರ ಮೆಚ್ಚುಗೆ ಗಳಿಸಬಹುದು. ವ್ಯವಹಾರದಲ್ಲಿ ಲಾಭದ ಸೂಚನೆ. ಹಣದ ಮುಂಗಡ ಯೋಜನೆ ಮಾಡಿ. ವಿವಾಹಕ್ಕೆ ಸಂಬಂಧಿಸಿದಂತೆ ಕೆಲವು ನಿರ್ಧಾಗಳನ್ನು ನೀವು ತಪ್ಪಾಗಿ ತೆಗೆದುಕೊಳ್ಳುವಿರಿ. ಭೂಮಿಯ ವ್ಯವಹಾರಕ್ಕೆ ಆಪ್ತರನ್ನು ಜೋಡಿಸಿಕೊಳ್ಳಿ.

ಧನು ರಾಶಿ :

ಈ ದಿನ ನಿಮಗೆ ಅತ್ಯಂತ ಸುಂದರವಾಗಿ ಇರಲಿದೆ. ಆಧ್ಯಾತ್ಮಿಕ ಚಟುವಟಿಕೆಗಳು ನಿಮ್ಮ ಮನಸ್ಸಿಗೆ ಶಾಂತಿ ನೀಡಲಿವೆ. ಕೆಲಸದ ಒತ್ತಡ ಕಡಿಮೆಯಾಗಬಹುದು. ಕುಟುಂಬದ ಸಮಸ್ಯೆಗಳಿಗೆ ಪರಿಹಾರ ದೊರೆಯಬಹುದು. ವಿದ್ಯಾರ್ಥಿಗಳಿಗೆ ಇಂದು ಲಾಭದಾಯಕ ದಿನ. ನೀವು ಅನುಭವಿಸುತ್ತಿರುವ ಧನಾತ್ಮಕ ಶಕ್ತಿಯನ್ನು ಆನಂದಿಸಿ. ದೂರದೃಷ್ಟಿಯಿಂದ‌ ಕೆಲಸವನ್ನು ಮಾಡಿ. ಹಳೆಯ ವಸ್ತುಗಳನ್ನು ಕೊಟ್ಟು ಹೊಸತನ್ನು ಪಡೆಯುವಿರಿ. ಉದ್ಯೋಗವಿಲ್ಲದೇ ಬೇಸರಗೊಂಡ ನಿಮಗೆ ಬೇರೆಕಡೆಯಲ್ಲಿ ಸಿಗುವುದು.

ಮಕರ ರಾಶಿ :

ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ನಿಮಗೆ ಅನಾನುಕೂಲ. ನಿಮ್ಮ ಮಾತುಗಳು ಇತರರ ಮೇಲೆ ಪ್ರಭಾವ ಬೀರುತ್ತವೆ. ಹೊಸ ಪರಿಚಯಗಳಿಂದ ಮುಂದಿನ ದಾರಿ ಸುಗಮವಾಗಿ ಸಾಗಬಹುದು. ಮನೆಯ ಕೆಲಸಗಳಲ್ಲಿ ನಿರತರಾಗುವ ಸಾಧ್ಯತೆ ಇದೆ. ಮಕ್ಕಳ ಬಗ್ಗೆ ಚಿಂತೆ ಕಡಿಮೆಯಾಗಲಿದೆ. ಸಂಗಾತಿಯಿಂದ ನಿಮಗೆ ಸಿಗುತ್ತಿರುವ ಬೆಂಬಲದ ಕೊರತೆಯಿಂದ ನೀವು ಸಿಟ್ಟಾಗುವಿರಿ. ಸರಳತೆಯನ್ನು ರೂಢಿಸಿಕೊಳ್ಳುವುದು ನಿಮಗೇ ಒಳ್ಳೆಯದು. ವಿಲಾಸಿ ಜೀವನದ ಕನಸಿನಲ್ಲಿ ಇರುವಿರಿ.

ಕುಂಭ ರಾಶಿ :

ನೆರೆ ಹೊರೆಯವರು ನಿಮಗೆ ಸಹಕಾರ ನೀಡದೇ ಕಷ್ಟವಾಗುವುದು. ಇಂದು ನಿಮ್ಮ ಮಾನಸಿಕ ಮತ್ತು ದೈಹಿಕ ಯೋಗ, ಕ್ಷೇಮವು ಚೆನ್ನಾಗಿರಲಿದೆ. ಸಣ್ಣ ವಿಷಯವನ್ನು ದೊಡ್ಡದಾಗಿ ಪರಿಗಣಿಸಬೇಡಿ. ಹಣದ ಲೆಕ್ಕಾಚಾರದಲ್ಲಿ ಗಮನ ಕೊಡಿ, ಬುದ್ದಿವಂತಿಕೆ ಇರಲಿ. ಕುಟುಂಬದ ಹಿರಿಯರ ಸಲಹೆ ಅನೇಕ ಸಮಸ್ಯೆಗಳನ್ನು ಪರಿಹರಿಸಬಹುದು. ನೀವು ಬಯಸಿದ್ದನ್ನು ಸಂಗಾತಿಯು ಸಾಧಿಸುತ್ತಾರೆ. ನಿಮ್ಮ ಪ್ರಗತಿಯ ಬಗ್ಗೆ ಸಿಂಹಾವಲೋಕನ ಮಾಡುವ ಅವಶ್ಯಕತೆ ಇದೆ.

ಮೀನ ರಾಶಿ :

ಅನಧಿಕೃತ ವಸ್ತುಗಳನ್ನು ನೀವು ಇನ್ನೊಬ್ಬರಿಗೆ ಹಸ್ತಾಂತರಿಸುವಿರಿ. ಅವರು ನಿಮಗೆ ನೋಡಿಕೊಳ್ಳುತ್ತಾರೆ. ಹೆಚ್ಚಿನ ನಿಮ್ಮ ನಿರ್ಧಾರಗಳು ಫಲ ನೀಡಲಿವೆ. ಕುಟುಂಬದ ಸದಸ್ಯರಿಂದ ಬೆಂಬಲ ಸಿಗಬಹುದು. ಹಣದ ವ್ಯವಹಾರದಲ್ಲಿ ಜಾಗರೂಕತೆ ಅಗತ್ಯ. ಸ್ನೇಹಿತರೊಂದಿಗೆ ಸಂತೋಷ ಹೆಚ್ಚಾಗುತ್ತದೆ. ಆರ್ಥಿಕ ಚಿಂತೆಗಳು ಸುಧಾರಣೆಯ ಹಾದಿಯಲ್ಲಿವೆ. ಇಂದಿನ ವ್ಯವಹಾರದಲ್ಲಿ ನಿಮಗೆ ತೊಡಕಿರುವುದು. ಮನೆಯ ಎಷ್ಟೋ ವಿಚಾರಗಳು ನಿಮಗೆ ಗೊತ್ತಾಗದೇ ಹೋಗಬಹುದು.

-ಲೋಹಿತ್ ಹೆಬ್ಬಾರ್ – 8762924271 (what’s app only)

Source link

ಕಾಂಗ್ರೆಸ್ ಮನೆಯಲ್ಲಿ ಗರಿಗೆದರಿಂದ ಸಂಪುಟ ವಿಸ್ತರಣೆ ಕಸರತ್ತು: ಆರ್. ಅಶೋಕ್ ಲೇವಡಿ – Kannada News | Karnataka Cabinet Expansion: CM DK to Visit Delhi Post July 17; R Ashoka Slams Congress

ಕಾಂಗ್ರೆಸ್ ಮನೆಯಲ್ಲಿ ಗರಿಗೆದರಿಂದ ಸಂಪುಟ ವಿಸ್ತರಣೆ ಕಸರತ್ತು: ಆರ್. ಅಶೋಕ್ ಲೇವಡಿ

ಬೆಂಗಳೂರು, ಜುಲೈ 15: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ ತಿಂಗಳು ಕಳೆದರೂ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆಯಾಗದ ಹಿನ್ನೆಲೆಯಲ್ಲಿ, ಇದೀಗ ಸಂಪುಟ ವಿಸ್ತರಣೆಯ ಲಾಬಿ ತೀವ್ರಗೊಂಡಿದೆ. ಆಗಸ್ಟ್ 6 ರಿಂದ ಮಳೆಗಾಲದ ಅಧಿವೇಶನ ಆರಂಭವಾಗುವ ಸಾಧ್ಯತೆ ಇದ್ದು, ಅದಕ್ಕೂ ಮುನ್ನ ಹೈಕಮಾಂಡ್ ಒಪ್ಪಿಗೆ ಪಡೆಯಲು ನಾಯಕರು ಸಜ್ಜಾಗಿದ್ದಾರೆ. ಜುಲೈ 17ರ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳಿ ವರಿಷ್ಠರೊಂದಿಗೆ ಅಂತಿಮ ಚರ್ಚೆ ನಡೆಸಲಿದ್ದಾರೆ. ಈಗಾಗಲೇ ಹಲವು ಆಕಾಂಕ್ಷಿಗಳು ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಬೀರಲು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.

‘ಒಂದು ಸಚಿವ ಸ್ಥಾನಕ್ಕೆ 150 ಕೋಟಿ’: ಆರ್.ಅಶೋಕ್ ಗಂಭೀರ ಆರೋಪ

ಕಾಂಗ್ರೆಸ್‌ನಲ್ಲಿನ ಈ ಸಂಪುಟ ಸರ್ಕಸ್ ಅನ್ನು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತೀವ್ರವಾಗಿ ಲೇವಡಿ ಮಾಡಿದ್ದಾರೆ. ಮೊದಲ ಹಂತದಲ್ಲಿ ಅಸಮಾಧಾನಗೊಂಡವರಿಗೆ ಫೈಟಿಂಗ್ ಕೋಟಾ ಅಡಿ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಈಗ ನಡೆಯುತ್ತಿರುವುದು ಪೇಮೆಂಟ್ ಕೋಟಾ. ಒಂದು ಸಚಿವ ಸ್ಥಾನಕ್ಕೆ 100 ರಿಂದ 150 ಕೋಟಿ ರೂ. ಬೇಡಿಕೆ ಇಡಲಾಗಿದೆ ಎಂದು ಅಶೋಕ್ ಹೊಸ ಬಾಂಬ್ ಸಿಡಿಸಿದ್ದಾರೆ. ಆದರೆ ಈ ಆರೋಪಗಳ ನಡುವೆಯೂ ಸಚಿವ ಸ್ಥಾನಕ್ಕಾಗಿ ಭಾರಿ ಪೈಪೋಟಿ ಮುಂದುವರಿದಿದೆ.

ಇದನ್ನೂ ಓದಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಅಭಾವ: ಬರ ಸ್ಥಿತಿ ಅಧ್ಯಯನಕ್ಕೆ ಕೇಂದ್ರದ ತಂಡ ಕಳುಹಿಸುವಂತೆ ಪ್ರಧಾನಿಗೆ ಸಿಎಂ ಡಿಕೆಶಿ ಪತ್ರ

ಸಂಪುಟ ವಿಸ್ತರಣೆ ರಾಕೆಟ್ ಸೈನ್ಸಾ? ಅಶೋಕ್ ಪ್ರಶ್ನೆ

ಆರ್. ಅಶೋಕ್ ಹೇಳುವಂತೆ, ಬಳ್ಳಾರಿಯಿಂದ ಭರತ್ ರೆಡ್ಡಿ ಯುವ ಕೋಟಾದಡಿ ಲಾಬಿ ನಡೆಸುತ್ತಿದ್ದರೆ, ನಾಗೇಂದ್ರ ಅವರು ಸಿದ್ದರಾಮಯ್ಯ ಮೂಲಕ ಹಾಗೂ ಜೆ.ಎನ್. ಗಣೇಶ್ ರೇಸ್‌ನಲ್ಲಿದ್ದಾರೆ. ಸಂಸದ ತುಕಾರಾಂ ತಮ್ಮ ಪತ್ನಿಗೆ ಸಚಿವ ಸ್ಥಾನ ಕೊಡಿಸಲು ಮುಂದಾಗಿದ್ದಾರೆ. ಇತ್ತ ಬೆಳಗಾವಿ ಭಾಗದಿಂದ ಲಕ್ಷ್ಮೀ ಹೆಬ್ಬಾಳ್ಕರ್, ಲಕ್ಷ್ಮಣ್ ಸವದಿ, ಅಶೋಕ ಪಟ್ಟಣ ಸೇರಿದಂತೆ ಆರು ಶಾಸಕರು ನೇರವಾಗಿ ಬೇಡಿಕೆ ಇಟ್ಟಿದ್ದಾರೆ. ಈ ನಡುವೆ, ಕೃಷಿ ಸಚಿವರನ್ನು ತಕ್ಷಣ ನೇಮಿಸುವಂತೆ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ಒತ್ತಾಯಿಸಿದ್ದಾರೆ. ಕಾಂಗ್ರೆಸ್‌ಗೆ ಸಂಪುಟ ವಿಸ್ತರಣೆ ‘ರಾಕೆಟ್ ಸೈನ್ಸ್’ ಆಗಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version