ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಫೈನಲ್ ಪಂದ್ಯದಲ್ಲಿ ಗೆಲ್ಲೋರು ಯಾರು? ಈ ಪ್ರಶ್ನೆಗೆ ಸದ್ಯ ಸಿಗುತ್ತಿರುವ ಉತ್ತರ ಹಾರ್ದಿಕ್ ಪಾಂಡ್ಯ ಜೊತೆಗೆ ನಿಂತವರು. ಅಂದರೆ ಐಪಿಎಲ್ ಪ್ರಿ-ಸೀಸನ್ ಫೋಟೋಶೂಟ್ನಲ್ಲಿ ಯಾರು ಹಾರ್ದಿಕ್ ಪಾಂಡ್ಯ ಪಕ್ಕದಲ್ಲಿ ನಿಲ್ಲುತ್ತಾರೋ, ಅವರೇ ಆ ವರ್ಷದ ಐಪಿಎಲ್ ಚಾಂಪಿಯನ್ ಆಗ್ತಾರೆ!” ಇದಕ್ಕೆ ಸಾಕ್ಷಿಯೇ ಈ ಫೋಟೋಗಳು… (PC: IPL)
ಐಪಿಎಲ್ 2023: ಆ ವರ್ಷ ಗುಜರಾತ್ ಟೈಟಾನ್ಸ್ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ಅವರ ಪಕ್ಕದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ನಿಂತಿದ್ದರು. ಅಂತಿಮವಾಗಿ ಆ ಸೀಸನ್ನಲ್ಲಿ ಸಿಎಸ್ಕೆ ಚಾಂಪಿಯನ್ ಪಟ್ಟ ಅಲಂಕರಿಸಿತು. (PC: IPL)
ಐಪಿಎಲ್ 2024: ಮುಂಬೈ ಇಂಡಿಯನ್ಸ್ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ಪಕ್ಕದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಶ್ರೇಯಸ್ ಅಯ್ಯರ್ ನಿಂತಿದ್ದರು. ಆ ವರ್ಷ ಕೆಕೆಆರ್ ತಂಡ ಟ್ರೋಫಿ ಮುಡಿಗೇರಿಸಿಕೊಂಡಿತು. (PC: IPL)
ಐಪಿಎಲ್ 2025: ಕಳೆದ ವರ್ಷದ ಫೋಟೋಶೂಟ್ನಲ್ಲೂ ಹಾರ್ದಿಕ್ ಪಾಂಡ್ಯ ಪಕ್ಕದಲ್ಲಿ ನಿಂತಿದ್ದ ತಂಡದ ನಾಯಕನೇ ಐಪಿಎಲ್ ಟ್ರೋಫಿ ಎತ್ತಿ ಹಿಡಿದರು. ಅಂದರೆ ಐಪಿಎಲ್ 2025 ರಲ್ಲಿ ಪಾಂಡ್ಯ ಜೊತೆ ಆರ್ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ನಿಂತಿದ್ದರು. ಹಾಗೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. (PC: IPL)
ಐಪಿಎಲ್ 2026: ಈ ಬಾರಿಯ ಐಪಿಎಲ್ ಪ್ರಿ-ಸೀಸನ್ ಫೋಟೋಶೂಟ್ನಲ್ಲಿ ಹಾರ್ದಿಕ್ ಪಾಂಡ್ಯ ಪಕ್ಕದಲ್ಲಿ ನಿಂತಿರುವುದು ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್ಮನ್ ಗಿಲ್. ಹೀಗಾಗಿ ಈ ಬಾರಿ ಗುಜರಾತ್ ಟೈಟಾನ್ಸ್ ಚಾಂಪಿಯನ್ ಆಗಲಿದೆಯಾ? ಅಥವಾ ಈ ಟ್ರೆಂಡ್ಗೆ ಆರ್ಸಿಬಿ ಇತಿಶ್ರೀ ಹಾಡಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ. (PC: IPL)
ಪಂಚಕುಲ, ಮೇ 30: ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮೇ 31 ರಂದು ಹರಿಯಾಣದ ಪಂಚಕುಲ ಜಿಲ್ಲೆಯ ರಾಮಗಢದಲ್ಲಿ ಅತ್ಯಂತ ಶಕ್ತಿಶಾಲಿ ಬಾಂಬ್ ಪರೀಕ್ಷಾರ್ಥ ಪ್ರಯೋಗವನ್ನು ನಡೆಸಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸುತ್ತಮುತ್ತಲಿನ ಹಳ್ಳಿಗಳ ನಿವಾಸಿಗಳಿಗೆ ಪರೀಕ್ಷಾ ಅವಧಿಯಲ್ಲಿ ಮನೆಯೊಳಗೇ ಇರುವಂತೆ ಸ್ಥಳೀಯ ಆಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಮದ್ದುಗುಂಡುಗಳು ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆಗಳ ಪರೀಕ್ಷೆಯಲ್ಲಿ ಪರಿಣತಿ ಹೊಂದಿರುವ ಡಿಆರ್ಡಿಒದ ಪ್ರಮುಖ ಪ್ರಯೋಗಾಲಯವಾದ ಟರ್ಮಿನಲ್ ಬ್ಯಾಲಿಸ್ಟಿಕ್ಸ್ ಸಂಶೋಧನಾ ಪ್ರಯೋಗಾಲಯ (TBRL) ಈ ಹೈ-ಪವರ್ ಬಾಂಬ್ ಪರೀಕ್ಷೆಯನ್ನು ನಡೆಸುತ್ತಿದೆ.
2 ಕಿಲೋಮೀಟರ್ ವ್ಯಾಪ್ತಿ ಅಪಾಯಕಾರಿ ವಲಯ
ಡಿಆರ್ಡಿಒ ವಿಜ್ಞಾನಿಗಳು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಈ ಸ್ಫೋಟವು ಎಷ್ಟು ಶಕ್ತಿಶಾಲಿಯಾಗಿರಲಿದೆ ಎಂದರೆ, ಬಾಂಬ್ನ ತೀಕ್ಷ್ಣ ತುಣುಕುಗಳು (Splinters) ಗಾಳಿಯಲ್ಲಿ ಬರೋಬ್ಬರಿ 1.5 ಕಿಲೋಮೀಟರ್ಗಳಷ್ಟು ದೂರದವರೆಗೆ ಚಿಮ್ಮುವ ಸಾಧ್ಯತೆ ಇದೆ.
ಸುರಕ್ಷತೆಯ ದೃಷ್ಟಿಯಿಂದ ಅಧಿಕಾರಿಗಳು ಸ್ಫೋಟ ನಡೆಯುವ ಸ್ಥಳದ ಸುತ್ತಲಿನ 2 ಕಿಲೋಮೀಟರ್ ವ್ಯಾಪ್ತಿಯನ್ನು ಸ್ಪ್ಲಿಂಟರ್ ಅಪಾಯದ ವಲಯ ಎಂದು ಘೋಷಿಸಿದ್ದಾರೆ. ಈ ಅವಧಿಯಲ್ಲಿ ಸಾರ್ವಜನಿಕರಿಗೆ ಈ ವಲಯದೊಳಗೆ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಸುರಕ್ಷತಾ ಸಲಹೆಗಳು ಮತ್ತು ಹಳ್ಳಿಗಳ ಪಟ್ಟಿ
TBRL ತಂತ್ರಜ್ಞಾನ ನಿರ್ದೇಶಕ ಸಿ. ಸರ್ಕಾರ್ ಅವರು ಪಂಚಕುಲ ಜಿಲ್ಲಾಧಿಕಾರಿಗೆ ಕಳುಹಿಸಿರುವ ಅಧಿಕೃತ ಪತ್ರದ ಪ್ರಕಾರ, ಈ ಕೆಳಗಿನ ಗ್ರಾಮಗಳ ನಿವಾಸಿಗಳು ಪರೀಕ್ಷೆಯ ಸಮಯದಲ್ಲಿ ಜಾಗರೂಕರಾಗಿರಬೇಕು ಮತ್ತು ಅನಗತ್ಯ ಓಡಾಟವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.
ಭಾನು ಮತ್ತು ಬಿಲ್ಲಾ ಗ್ರಾಮಗಳು, ಆಸ್ರೆವಾಲಿ, ನಗ್ಗಲ್, ಮೋಗಿನಂದ್, ಕಿಶನ್ಗಢ, ಟಿಎಂವಿ ಕಾಲೋನಿ ಮತ್ತು ರಾಮಗಢ ಮುನ್ಸಿಪಲ್ ವ್ಯಾಪ್ತಿಯ ಪ್ರದೇಶಗಳಿಗೆ ಸೂಚನೆ ನೀಡಲಾಗಿದೆ.
ವಾಯುಪಡೆ ಅಧಿಕಾರಿಗಳ ಮೇಲ್ವಿಚಾರಣೆ
ಈ ಇಡೀ ಪರೀಕ್ಷಾರ್ಥ ಪ್ರಯೋಗವನ್ನು ಕಟ್ಟುನಿಟ್ಟಾದ ಅಂತರರಾಷ್ಟ್ರೀಯ ಭದ್ರತಾ ಮಾನದಂಡಗಳ ಅಡಿಯಲ್ಲಿ ನಡೆಸಲಾಗುತ್ತಿದ್ದು, ಭಾರತೀಯ ವಾಯುಪಡೆಯ (IAF) ಹಿರಿಯ ಅಧಿಕಾರಿಗಳು ಇದರ ನೇರ ಮೇಲ್ವಿಚಾರಣೆ ವಹಿಸಲಿದ್ದಾರೆ.
ಇದು ಭಾರತೀಯ ರಕ್ಷಣಾ ವ್ಯವಸ್ಥೆಯ ಬಲವರ್ಧನೆಗಾಗಿ ನಡೆಯುವ ನಿಯಮಿತ ಮತ್ತು ಯೋಜಿತ ಪರೀಕ್ಷೆಯಾಗಿದೆ. ಹೀಗಾಗಿ ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೆ, ಅಧಿಕಾರಿಗಳು ನೀಡುವ ಸುರಕ್ಷತಾ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದು ವಿನಂತಿಸಲಾಗಿದೆ.
ಬೆಂಗಳೂರು, ಮೇ 30: ನಗರದ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ವಿಶ್ವೇಶ್ವರಯ್ಯ ಲೇಔಟ್ನಲ್ಲಿರುವ ಖಾಸಗಿ ಕೌಶಲ್ಯ ಶಾಲೆಯಲ್ಲಿ ಇಂದು (ಮೇ 30) ಬೆಳಗ್ಗೆ ಹಠಾತ್ ಅಗ್ನಿ ಅವಘಡ ಸಂಭವಿಸಿದೆ. ಶಾಲೆಯ ಆಡಿಟೋರಿಯಂನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ ಎಂದು ಶಂಕಿಸಲಾಗಿದೆ. ಅದೃಷ್ಟವಶಾತ್ ಇಂದು ಶಾಲೆಗೆ ರಜೆ ಇದ್ದಿದ್ದರಿಂದ ಯಾವುದೇ ಪ್ರಾಣಾಪಾಯ ಅಥವಾ ಮಕ್ಕಳಿಗೆ ತೊಂದರೆ ಸಂಭವಿಸಿಲ್ಲ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಜ್ಞಾನಭಾರತಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ತೆಲುಗು ನಟ ರಾಮ್ ಚರಣ್ ಮತ್ತು ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ನಟನೆಯ, ಬುಚಿ ಬಾಬು ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ‘ಪೆದ್ದಿ’ ಬಿಡುಗಡೆಗೆ ಸಜ್ಜಾಗಿದೆ. ಸ್ಪೋರ್ಟ್ಸ್ ಡ್ರಾಮಾ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಜಗಪತಿ ಬಾಬು ಹಾಗೂ ಕನ್ನಡದ ಹಿರಿಯ ನಟ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಯೂಟ್ಯೂಬ್ನಲ್ಲಿ ವೈರಲ್ ಆಗಿರುವ ಹಾಡುಗಳು, ಟೀಸರ್ ಹಾಗೂ ಟ್ರೇಲರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದ್ದು, ಜೂನ್ 4 ರಂದು ಸಿನಿಮಾ ವಿಶ್ವಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ.
ಚಿತ್ರದ ಬಿಡುಗಡೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡ ದೇಶದ ಹಲವು ಪ್ರಮುಖ ನಗರಗಳಲ್ಲಿ ಸರಣಿ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಪ್ರಚಾರದ ಸಂದರ್ಭದಲ್ಲಿ ರಾಮ್ ಚರಣ್ ಮತ್ತು ಶಿವರಾಜ್ ಕುಮಾರ್ ಒಟ್ಟಿಗೆ ಇರುವ ಇತ್ತೀಚಿನ ಫೋಟೋವೊಂದು ಈಗ ಎಲ್ಲರ ಗಮನ ಸೆಳೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಈ ಫೋಟೋ ಮೆಗಾಸ್ಟಾರ್ ಚಿರಂಜೀವಿ ಹಾಗೂ ನಟ ಡಾ. ರಾಜ್ಕುಮಾರ್ ಅವರ ಕಾಲದ ಹಳೆಯ ನೆನಪುಗಳನ್ನು ಮತ್ತು ಉಭಯ ಕುಟುಂಬಗಳ ನಡುವಿನ ಆತ್ಮೀಯ ಬಾಂಧವ್ಯವನ್ನು ಮತ್ತೊಮ್ಮೆ ಮರುಕಳಿಸುವಂತೆ ಮಾಡಿದೆ.
ಆರಂಭದಿಂದಲೂ ಚಿರಂಜೀವಿ ಮತ್ತು ಡಾ. ರಾಜ್ಕುಮಾರ್ ಕುಟುಂಬಗಳ ನಡುವೆ ಉತ್ತಮ ಸ್ನೇಹವಿತ್ತು. ಹಿಂದೆ ರಾಜ್ಕುಮಾರ್ ಕುಟುಂಬದ ಸ್ವಂತ ನಿರ್ಮಾಣ ಸಂಸ್ಥೆಯಾದ ‘ಶ್ರೀ ವಜ್ರೇಶ್ವರಿ ಕಂಬೈನ್ಸ್’ನ ಬೆಳ್ಳಿ ಮಹೋತ್ಸವದ ಆಚರಣೆಯ ಸಂದರ್ಭದಲ್ಲಿ ಚಿರಂಜೀವಿ ಹಾಗೂ ರಾಜ್ಕುಮಾರ್ ಅವರು ಅತ್ಯಂತ ಆತ್ಮೀಯವಾಗಿ ಭೇಟಿಯಾಗಿದ್ದರು.
ಈಗ ‘ಪೆದ್ದಿ’ ಚಿತ್ರದ ಪ್ರಚಾರದ ಸಂದರ್ಶನವೊಂದರಲ್ಲಿ ನಿರೂಪಕರು ಅಂದಿನ ಆ ಹಳೆಯ ಅಪರೂಪದ ಫೋಟೋವನ್ನು ತೋರಿಸಿ, ಅದನ್ನು ಮರುಸೃಷ್ಟಿಸುವಂತೆ ವಿನಂತಿಸಿದರು. ತಕ್ಷಣವೇ ಶಿವಣ್ಣ ಅವರು ರಾಮ್ ಚರಣ್ ಅವರನ್ನು ಅಪ್ಪಿಕೊಂಡು ಅಕ್ಕರೆ ವ್ಯಕ್ತಪಡಿಸುವ ಮೂಲಕ ಅಂದಿನ ತಂದೆಯರ ಸ್ನೇಹದ ಕ್ಷಣವನ್ನು ಮರುಸೃಷ್ಟಿಸಿದರು.
ಈ ಚಿತ್ರದ ಮೂಲಕ ಮತ್ತೊಂದು ಕಾಕತಾಳೀಯ ಹಾಗೂ ವಿಶೇಷ ಸಂಗತಿಯೂ ಬೆಳಕಿಗೆ ಬಂದಿದೆ. ಜಾನ್ವಿ ಕಪೂರ್ ಅವರ ತಾಯಿ, ದಿವಂಗತ ನಟಿ ಶ್ರೀದೇವಿ ಅವರು 1974ರಲ್ಲಿ ಡಾ. ರಾಜ್ಕುಮಾರ್ ನಟನೆಯ ಸೂಪರ್ ಹಿಟ್ ‘ಭಕ್ತ ಕುಂಬಾರ’ ಚಿತ್ರದಲ್ಲಿ ಬಾಲನಟಿಯಾಗಿ ನಟಿಸಿದ್ದರು. ಇಂದು ಶಿವರಾಜ್ ಕುಮಾರ್ ಹಾಗೂ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ‘ಪೆದ್ದಿ’ ಚಿತ್ರದ ಮೂಲಕ ಒಟ್ಟಾಗಿ ನಟಿಸುತ್ತಿದ್ದಾರೆ.
ಬೆಂಗಳೂರು, ಮೇ 30: ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ನೂತನ ಸಿಎಂ ಆಯ್ಕೆ ಸಂಬಂಧ ಇಂದು (ಮೇ 30) ಸಿಎಲ್ಪಿ ಸಭೆ ಕರೆಯಲಾಗಿದೆ. ಡಿ.ಕೆ. ಶಿವಕುಮಾರ್ ಅವರೇ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗುವುದು ಬಹುತೇಕ ಕನ್ಫರ್ಮ್ ಆಗಿರುವ ಹಿನ್ನೆಲೆ ಅವರು ಹಾಲಿ ಜವಾಬ್ದಾರಿ ನಿರ್ವಹಿಸುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆಯೂ ಹಲವರು ಕಣ್ಣಿಟ್ಟಿದ್ದಾರೆ. ಹೀಗಿದ್ದರೂ ಈ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಹೆಸರು ಈವರೆಗೂ ಮುಂಚೂಣಿಯಲ್ಲಿತ್ತು. ಆದರೆ ರಾಜ್ಯ ಕಾಂಗ್ರೆಸ್ನ ಅಧ್ಯಕ್ಷ ಗಾದಿಗೆ ಈಗ ಮತ್ತೋರ್ವರ ಹೆಸರು ಸಪ್ರೈಸ್ ಎಂಟ್ರಿ ಆಗಿರೋದು ಭಾರಿ ಕುತೂಹಲ ಮೂಡಿಸಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್ಗೆ ಹರಿಪ್ರಸಾದ್ ಎಂಟ್ರಿ!
ಕೆಪಿಸಿಸಿ ಅಧ್ಯಕ್ಷರ ರೇಸ್ನಲ್ಲಿ ಬಿ.ಕೆ.ಹರಿಪ್ರಸಾದ್ ಹೆಸರು ದಿಢೀರ್ ಮುನ್ನೆಲೆಗೆ ಬಂದಿದ್ದು, ಒಬಿಸಿ ಕೋಟಾದಡಿ ಪಕ್ಷದ ಅಧ್ಯಕ್ಷ ಗಾದಿಯನ್ನು ಅವರಿಗೆ ನೀಡುವ ಸಂಬಂಧವೂ ಚರ್ಚೆ ನಡೆದಿದೆ. ಮಂತ್ರಿಸ್ಥಾನಕ್ಕೆ ಸತೀಶ್ ಪಟ್ಟು ಹಿಡಿದರೆ ಕಾಂಗ್ರೆಸ್ ಹೈಕಮಾಂಡ್ ಎದುರು ಹರಿಪ್ರಸಾದ್ ಹೆಸರು ಪ್ರಸ್ತಾಪ ಸಾಧ್ಯತೆ ಇದ್ದು, ಹರಿಪ್ರಸಾದ್ಗೆ ಕೆ.ಸಿ.ವೇಣುಗೋಪಾಲ್ ಬೆಂಬಲ ಕೂಡ ಇದೆ ಎನ್ನಲಾಗಿದೆ. ಇಂದು ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿಯೇ ಹಿರಿಯ ಶಾಸಕರಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಪ್ರಸ್ತಾಪವನ್ನೂ ನಿರೀಕ್ಷಿಸಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಗಳಲ್ಲಿ ಸತೀಶ್ ಜಾರಕಿಹೊಳಿ ಹೆಸರು ಮೊದಲಿನಿಂದಲೂ ಮುಂಚೂಣಿಯಲ್ಲಿತ್ತು. ಮಂತ್ರಿ ಸ್ಥಾನ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನ ಎರಡನ್ನೂ ಸತೀಶ್ ಬೇಡಿಕೆ ಇಟ್ಟಿದ್ದರು. ಆದರೆ ಅವರ ಈ ಬೇಡಿಕೆಯೇ ಹೈಕಮಾಂಡ್ಗೆ ತಲೆನೋವಾಗಿದೆ ಎನ್ನಲಾಗ್ತಿದೆ. ಒಂದು ವ್ಯಕ್ತಿ, ಒಂದು ಸ್ಥಾನ ಎಂಬ ನೀತಿಯನ್ನು ಕಾಂಗ್ರೆಸ್ ಹೈಕಮಾಂಡ್ ಅನುಸರಿಸುತ್ತಿದೆ. ಈ ನೀತಿಯು ಈಗಾಗಲೇ ಅನೇಕ ರಾಜ್ಯಗಳಲ್ಲಿ ಜಾರಿಯಲ್ಲಿದೆ. ಹಾಗಾಗಿ, ಜಾರಕಿಹೊಳಿ ಅವರ ಈ ಬೇಡಿಕೆ ಹೈಕಮಾಂಡ್ಗೆ ಸವಾಲಾಗಿದೆ.
ಸತೀಶ್ ಲೆಕ್ಕಾಚಾರವೇನು?
ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಮಾತ್ರ ಸ್ವೀಕರಿಸಿದರೆ, ಬೆಳಗಾವಿ ಜಿಲ್ಲೆಯಲ್ಲಿ ಅವರ ರಾಜಕೀಯ ಹಿಡಿತ ದುರ್ಬಲಗೊಳ್ಳಬಹುದು ಎಂಬ ಆತಂಕದಲ್ಲಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಅಥವಾ ಲಕ್ಷ್ಮಣ ಸವದಿ ಅವರಂತಹವರು ಜಿಲ್ಲಾ ಉಸ್ತುವಾರಿ ಸಚಿವರಾದರೆ, ಜಾರಕಿಹೊಳಿಯವರ ರಾಜಕೀಯ ಪ್ರಭಾವ ಕುಸಿಯುವ ಸಾಧ್ಯತೆಯಿದೆ. ಅವರ ಅಹಿಂದಾ ರಾಜಕಾರಣದ ಮೇಲೂ ಇದರ ಪರಿಣಾಮ ಉಂಟಾಗಬಹುದು ಎಂಬುದು ಅವರ ಲೆಕ್ಕಾಚಾರವಾಗಿದೆ.
ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾ ಎಂಬ ಖ್ಯಾತಿ ‘ಹಳ್ಳಿ ಮೇಷ್ಟ್ರು’ ಚಿತ್ರಕ್ಕಿದೆ. ಈ ಸಿನಿಮಾ ಬಿಡುಗಡೆಯಾಗಿ 3 ದಶಕಗಳೇ ಕಳೆದಿವೆ. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ನಡೆದಿದ್ದ ಒಂದು ವಿವಾದ ಮಾತ್ರ ನಟಿ ಬಿಂದಿಯಾ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ನಡುವೆ ದೊಡ್ಡ ಕಂದಕ ಸೃಷ್ಟಿಸಿತ್ತು. ಹಲವು ವರ್ಷಗಳ ನಂತರ ಆ ಕಹಿ ಘಟನೆಯನ್ನು ನೆನೆದು ನಟಿ ಬಿಂದಿಯಾ ಭಾವುಕರಾಗಿದ್ದಾರೆ. ಅಲ್ಲದೆ ರವಿಚಂದ್ರನ್ ಅವರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.
ಇತ್ತೀಚೆಗೆ ರಘುರಾಮ್ ಅವರ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಬಿಂದಿಯಾ, ತಪ್ಪು ತಿಳುವಳಿಕೆಯಿಂದ ಈ ರೀತಿ ಆಯಿತು ಎಂದು ಅವರು ಹೇಳಿದ್ದಾರೆ. ‘ಜಾನ್ ತೇರೆ ನಾಮ್’ ಹೆಸರಿನ ಹಿಂದಿ ಸಿನಿಮಾ ಯಶಸ್ಸಿನಲ್ಲಿ ಬಿಂದಿಯಾ ತೇಲುತ್ತಿದ್ದರು. ಇದೇ ಸಮಯದಲ್ಲಿ ಚಿತ್ರಕ್ಕೆ ಹೊಸ ನಾಯಕಿಯ ಹುಡುಕಾಟದಲ್ಲಿದ್ದ ರವಿಚಂದ್ರನ್ ಮತ್ತು ಅವರ ತಂಡ ಮುಂಬೈಗೆ ತೆರಳಿತ್ತು. ಆಗ ಬಿಂದಿಯಾ ಅವರನ್ನು ಭೇಟಿ ಮಾಡಿತ್ತು. ಭಾಷೆಯ ಸಮಸ್ಯೆ ಇದ್ದರೂ, ಉದ್ಯಮದ ಬಗ್ಗೆ ಅಷ್ಟಾಗಿ ತಿಳಿಯದಿದ್ದರೂ ಬಿಂದಿಯಾ ಅವರು ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರು. ಸಿನಿಮಾ ತೆರೆಕಂಡು ರವಿಚಂದ್ರನ್-ಬಿಂದಿಯಾ ಜೋಡಿಯನ್ನು ಪ್ರೇಕ್ಷಕರು ಮನಸಾರೆ ಮೆಚ್ಚಿಕೊಂಡರು.
ವಿವಾದದ ಕಿಡಿ ಹೊತ್ತಿಸಿದ್ದು ಮ್ಯಾಗಜೀನ್ ವರದಿ:
ಎಲ್ಲವೂ ಚೆನ್ನಾಗಿ ನಡೆಯುತ್ತಿದ್ದಾಗಲೇ ಮಾಧ್ಯಮಗಳಲ್ಲಿ ರವಿಚಂದ್ರನ್ ವಿರುದ್ಧ ಕೇಳಿಬಂದ ಗಂಭೀರ ಆರೋಪಗಳು ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿದವು. ಮ್ಯಾಗಜಿನ್ ಒಂದರಲ್ಲಿ ರವಿಚಂದ್ರನ್ ವಿರುದ್ಧ ಅತ್ಯಾಚಾರ ಆರೋಪವನ್ನು ನಟಿ ಮಾಡಿದ್ದರು.
‘ನಾನು ಹೇಳಿದ್ದೇ ಒಂದು, ಆದರೆ ಅಂದು ಮ್ಯಾಗಜೀನ್ನಲ್ಲಿ ಪ್ರಕಟವಾಗಿದ್ದೇ ಇನ್ನೊಂದು. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ಬರೆಯಲಾಗಿತ್ತು’ ಎಂದು ಬಿಂದಿಯಾ ಹೇಳಿದ್ದಾರೆ. ಈ ವಿವಾದ ದೊಡ್ಡದಾಗುತ್ತಿದ್ದಂತೆ ರವಿಚಂದ್ರನ್ ಅವರು ತಮ್ಮ ಗೌರವಕ್ಕೆ ಧಕ್ಕೆ ತಂದಿದ್ದಕ್ಕಾಗಿ ಕೋರ್ಟ್ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದರು.
‘ಅದು ನನ್ನ ಜೀವನದ ಅತ್ಯಂತ ಕಠಿಣ ಸಮಯ. ವಿಷಯ ಕೋರ್ಟ್ ಮೆಟ್ಟಿಲೇರುವಷ್ಟು ದೊಡ್ಡದಾಗುತ್ತದೆ ಎಂದು ನಾನು ಊಹಿಸಿರಲಿಲ್ಲ. ಆಗ ನನಗೆ ಪರಿಸ್ಥಿತಿಯನ್ನು ಜಾಣ್ಮೆಯಿಂದ ನಿಭಾಯಿಸುವಷ್ಟು ವಯಸ್ಸು ಅಥವಾ ಪ್ರಬುದ್ಧತೆ ಇರಲಿಲ್ಲ’ ಎಂದು ಒಪ್ಪಿಕೊಂಡಿದ್ದಾರೆ. ಕೋರ್ಟ್ನಲ್ಲೇ ಬಿಂದಿಯಾ ಕ್ಷಮೆ ಕೇಳಿದ ನಂತರ ರವಿಚಂದ್ರನ್ ಪ್ರಕರಣವನ್ನು ಹಿಂಪಡೆದರು.
ಸಂದರ್ಶನದಲ್ಲಿ ಮಾತನಾಡುತ್ತಾ ಭಾವುಕರಾದ ಬಿಂದಿಯಾ, ‘ರವಿ ಸರ್ ಯಾವುದೇ ತಪ್ಪು ಮಾಡಿರಲಿಲ್ಲ. ನನ್ನಿಂದಾಗಿ ಅಷ್ಟು ದೊಡ್ಡ ಸ್ಟಾರ್ ಕೋರ್ಟ್ಗೆ ಬಂದು ನಿಲ್ಲುವಂತಾಗಿದ್ದು ನನಗೆ ಇಂದಿಗೂ ಕಾಡುವ ನೋವು’ ಎಂದು ಕಣ್ಣೀರಿಡುತ್ತಾ ಮತ್ತೊಮ್ಮೆ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದಾರೆ.
ಅಲ್ಲದೆ, ರವಿಚಂದ್ರನ್ ಅವರೊಂದಿಗೆ ಮತ್ತೆ ಕೆಲಸ ಮಾಡುವ ಇಚ್ಛೆ ವ್ಯಕ್ತಪಡಿಸಿರುವ ಅವರು, ‘ಮುಂದೆಂದಾದರೂ ರವಿ ಸರ್ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ, ನಾನು ಯಾವುದೇ ಸಂಭಾವನೆ ಪಡೆಯದೆಯೂ ನಟಿಸಲು ಸಿದ್ಧಳಿದ್ದೇನೆ’ ಎಂದು ತಮ್ಮ ಮನದಾಳದ ಆಸೆಯನ್ನು ಹಂಚಿಕೊಂಡಿದ್ದಾರೆ.
ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ನಿರ್ದಿಷ್ಟ ಜನ್ಮ ದಿನಾಂಕಗಳನ್ನು ಹೊಂದಿರುವ ಜನರು ಬಾಲ್ಯದಿಂದಲೇ ಹಣ, ಯಶಸ್ಸು ಮತ್ತು ಸುಖ-ಸಂತೋಷಗಳನ್ನು ಪಡೆಯುವ ವಿಶೇಷ ಸಾಮರ್ಥ್ಯವನ್ನು ಹೊಂದಿರುತ್ತಾರೆ ಎಂದು ನಂಬಲಾಗಿದೆ. ಇಂತಹ ವ್ಯಕ್ತಿಗಳು ತಮ್ಮ ಕಠಿಣ ಪರಿಶ್ರಮ, ಬುದ್ಧಿವಂತಿಕೆ ಮತ್ತು ಸರಿಯಾದ ನಿರ್ಧಾರಗಳ ಆಧಾರದ ಮೇಲೆ ಜೀವನದಲ್ಲಿ ಅಪಾರ ಸಂಪತ್ತನ್ನು ಗಳಿಸುತ್ತಾರೆ. ಇವರಲ್ಲಿ ನಾಯಕತ್ವದ ಗುಣ, ವ್ಯವಹಾರದ ಜಾಣ್ಮೆ ಮತ್ತು ಜೀವನದಲ್ಲಿ ಮುಂದೆ ಬರಬೇಕೆಂಬ ಹಂಬಲ ಹೆಚ್ಚಾಗಿ ಕಂಡುಬರುತ್ತದೆ. ಸರಿಯಾದ ಅವಕಾಶ ಮತ್ತು ಪರಿಶ್ರಮ ಸಿಕ್ಕಾಗ, ಈ ನಿರ್ದಿಷ್ಟ ಜನ್ಮ ಸಂಖ್ಯೆಗಳನ್ನು ಹೊಂದಿರುವವರು ಆರ್ಥಿಕವಾಗಿ ಅತ್ಯಂತ ಶಕ್ತಿಯುತರಾಗಿ ಹೊರಹೊಮ್ಮುತ್ತಾರೆ.
1, 10, 19 ಅಥವಾ 28 ನೇ ತಾರೀಖಿನಂದು ಜನಿಸಿದವರು:
ಮೊದಲನೆಯದಾಗಿ, ಯಾವುದೇ ತಿಂಗಳ 1, 10, 19 ಅಥವಾ 28 ನೇ ತಾರೀಖಿನಂದು ಜನಿಸಿದವರ ಜನ್ಮ ಸಂಖ್ಯೆ ಅಥವಾ ಮೂಲಾಂಕ ‘1’ ಆಗಿರುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ, ಮೂಲಾಂಕ 1 ರ ಅಧಿಪತಿ ಸೂರ್ಯ ದೇವನಾಗಿದ್ದಾನೆ. ಈ ದಿನಾಂಕಗಳಲ್ಲಿ ಜನಿಸಿದ ಜನರು ಅಪಾರ ಆತ್ಮವಿಶ್ವಾಸ, ಧೈರ್ಯ ಮತ್ತು ಯಶಸ್ಸನ್ನು ಸಾಧಿಸಲು ನಿರಂತರವಾಗಿ ಶ್ರಮಿಸುವ ಗುಣವನ್ನು ಹೊಂದಿರುತ್ತಾರೆ. ಇವರಲ್ಲಿ ನಾಯಕತ್ವದ ಗುಣಗಳು ಸ್ವಾಭಾವಿಕವಾಗಿಯೇ ಇರುವುದರಿಂದ, ಇವರು ವ್ಯಾಪಾರ, ನಿರ್ವಹಣೆ ಅಥವಾ ರಾಜಕೀಯದಂತಹ ಕ್ಷೇತ್ರಗಳಲ್ಲಿ ಉತ್ತಮ ಗುರುತಿಸುವಿಕೆ ಹಾಗೂ ಆರ್ಥಿಕ ಯಶಸ್ಸನ್ನು ಸುಲಭವಾಗಿ ಸಾಧಿಸುತ್ತಾರೆ.
6, 15 ಅಥವಾ 24 ನೇ ತಾರೀಖಿನಂದು ಜನಿಸಿದವರು:
ಎರಡನೆಯದಾಗಿ, ಯಾವುದೇ ತಿಂಗಳ 6, 15 ಅಥವಾ 24 ನೇ ತಾರೀಖಿನಂದು ಜನಿಸಿದವರ ಮೂಲಾಂಕ ‘6’ ಆಗಿರುತ್ತದೆ. ಅಂಕಶಾಸ್ತ್ರದಲ್ಲಿ ಮೂಲಾಂಕ 6 ಹೊಂದಿರುವವರನ್ನು ಅತ್ಯಂತ ಅದೃಷ್ಟವಂತರು ಮತ್ತು ಆರ್ಥಿಕವಾಗಿ ಸದೃಢರು ಎಂದು ಪರಿಗಣಿಸಲಾಗುತ್ತದೆ. ಈ ಸಂಖ್ಯೆಯು ಸುಖ, ವೈಭವ ಮತ್ತು ಭೌತಿಕ ಸೌಕರ್ಯಗಳ ಸಂಕೇತವಾಗಿರುವ ಶುಕ್ರ ಗ್ರಹಕ್ಕೆ ಸಂಬಂಧಿಸಿದೆ. ಈ ದಿನಾಂಕಗಳಲ್ಲಿ ಜನಿಸಿದ ಜನರು ಐಷಾರಾಮಿ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ ಮತ್ತು ಜೀವನದಲ್ಲಿ ಅಂದುಕೊಂಡಂತೆ ಧನ-ಸಂಪತ್ತನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತಾರೆ. ಇವರಲ್ಲಿ ಹಣ ಗಳಿಸುವ ಕಲೆ ಅದ್ಭುತವಾಗಿದ್ದು, ಸಾಮಾನ್ಯವಾಗಿ ಇವರು ಆರ್ಥಿಕ ಸಂಕಷ್ಟಗಳಿಂದ ದೂರವಿರುತ್ತಾರೆ.
ಮೂರನೆಯದಾಗಿ, ಯಾವುದೇ ತಿಂಗಳ 5, 14 ಅಥವಾ 23 ನೇ ತಾರೀಖಿನಂದು ಜನಿಸಿದವರ ಮೂಲಾಂಕ ‘5’ ಆಗಿರುತ್ತದೆ. ಈ ಸಂಖ್ಯೆಯು ಬುದ್ಧಿವಂತಿಕೆ, ವಿವೇಚನೆ ಮತ್ತು ಉತ್ತಮ ಸಂವಹನ ಕಲೆಯ ಸಂಕೇತವಾದ ಬುಧ ಗ್ರಹಕ್ಕೆ ಸಂಬಂಧಿಸಿದೆ. ಈ ಮೂಲಾಂಕದ ಜನರು ತೀಕ್ಷ್ಣವಾದ ಆಲೋಚನಾ ಶಕ್ತಿ, ಪರಿಶ್ರಮ ಮತ್ತು ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಹಣದ ವಿಷಯದಲ್ಲಿ ಇವರು ಅತ್ಯಂತ ಜಾಣ್ಮೆಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಎಲ್ಲಿ ಹೂಡಿಕೆ ಮಾಡಬೇಕು ಎಂಬುದನ್ನು ಚೆನ್ನಾಗಿ ಬಲ್ಲವರಾಗಿರುತ್ತಾರೆ. ವಿಶೇಷವಾಗಿ ವ್ಯಾಪಾರ, ಬಿಸಿನೆಸ್ ಮತ್ತು ಶೇರ್ ಮಾರ್ಕೆಟ್ನಂತಹ ಕ್ಷೇತ್ರಗಳಲ್ಲಿ ಇವರು ತಮ್ಮ ಬುದ್ಧಿವಂತಿಕೆಯಿಂದ ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸುತ್ತಾರೆ.
8, 17 ಅಥವಾ 26 ನೇ ತಾರೀಖಿನಂದು ಜನಿಸಿದವರು:
ನಾಲ್ಕನೆಯದಾಗಿ, ಯಾವುದೇ ತಿಂಗಳ 8, 17 ಅಥವಾ 26 ನೇ ತಾರೀಖಿನಂದು ಜನಿಸಿದವರ ಮೂಲಾಂಕ ‘8’ ಆಗಿರುತ್ತದೆ. ಈ ಸಂಖ್ಯೆಯು ಕಠಿಣ ಪರಿಶ್ರಮ, ಶಿಸ್ತು ಮತ್ತು ಜವಾಬ್ದಾರಿಯ ಸಂಕೇತವಾಗಿರುವ ಶನಿ ಗ್ರಹಕ್ಕೆ ಸಂಬಂಧಿಸಿದೆ. ಈ ದಿನಾಂಕಗಳಲ್ಲಿ ಜನಿಸಿದ ಜನರು ಜೀವನದ ಆರಂಭಿಕ ದಿನಗಳಲ್ಲಿ ಕೆಲವು ಕಷ್ಟಗಳನ್ನು ಮತ್ತು ಹೆಚ್ಚಿನ ಪರಿಶ್ರಮವನ್ನು ಎದುರಿಸಬೇಕಾಗಬಹುದು. ಆದರೆ, ತಮ್ಮ ನಿರಂತರ ಪ್ರಯತ್ನ ಹಾಗೂ ಧೃತಿಗೆಡದ ಗುಣದಿಂದಾಗಿ ಇವರು ಭವಿಷ್ಯದಲ್ಲಿ ದೊಡ್ಡ ಯಶಸ್ಸು ಮತ್ತು ಕೀರ್ತಿಯನ್ನು ಗಳಿಸುತ್ತಾರೆ. ಇವರು ಕೇವಲ ಹಣ ಗಳಿಸುವುದಷ್ಟೇ ಅಲ್ಲದೆ, ಅದನ್ನು ಸರಿಯಾದ ರೀತಿಯಲ್ಲಿ ಹೇಗೆ ನಿರ್ವಹಿಸಬೇಕು ಮತ್ತು ಉಳಿಸಬೇಕು ಎಂಬ ಉತ್ತಮ ಹಣಕಾಸಿನ ಜ್ಞಾನವನ್ನೂ ಹೊಂದಿರುತ್ತಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ (ಮೇ 31) ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ವಿಶೇಷ ಎಂದರೆ ಫೈನಲ್ ಪಂದ್ಯ ನಡೆಯುತ್ತಿರುವುದು ಗುಜರಾತ್ ಟೈಟಾನ್ಸ್ ತಂಡದ ತವರು ಮೈದಾನದಲ್ಲಿ. ಇದುವೇ ಗುಜರಾತ್ ಟೈಟಾನ್ಸ್ ಪಾಲಿಗೆ ಪ್ಲಸ್ ಪಾಯಿಂಟ್.
ಗುಜರಾತ್ ಟೈಟಾನ್ಸ್ ತಂಡಕ್ಕೆ ಹೀಗೊಂದು ಅನುಕೂಲಕರ ವಾತಾವರಣ ಸೃಷ್ಟಿಯಾಗಲು ಮುಖ್ಯ ಕಾರಣ ಬಿಸಿಸಿಐ ತೆಗೆದುಕೊಂಡ ಒಂದು ನಿರ್ಧಾರ. ಅದುವೇ ಫೈನಲ್ ಪಂದ್ಯ ಶಿಫ್ಟ್..!
ಐಪಿಎಲ್ ನಿಯಮದ ಪ್ರಕಾರ, ಫೈನಲ್ ಪಂದ್ಯಕ್ಕೆ ಹಾಲಿ ಚಾಂಪಿಯನ್ನ ತವರು ಮೈದಾನ ಆತಿಥ್ಯವಹಿಸಬೇಕಿತ್ತು. ಅದರಂತೆ ಈ ಬಾರಿಯ ಫೈನಲ್ ಮ್ಯಾಚ್ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿತ್ತು.
ಆದರೆ ನಿರ್ದಿಷ್ಟ ಕಾರಣಗಳನ್ನು ಮುಂದಿಟ್ಟು ಬಿಸಿಸಿಐ, ಐಪಿಎಲ್ ಫೈನಲ್ ಪಂದ್ಯವನ್ನು ಅಹಮದಾಬಾದ್ಗೆ ಸ್ಥಳಾಂತರಿಸಿದ್ದಾರೆ. ಇದಕ್ಕೆ ಬಿಸಿಸಿಐ ನೀಡಿರುವ ಕಾರಣಗಳೆಂದರೆ, ಸ್ಥಳೀಯ ಶಾಸಕರ ಫ್ರೀ ಟಿಕೆಟ್ ಡಿಮ್ಯಾಂಡ್ ಮತ್ತು ಸಾರ್ವಜನಿಕ ಸುರಕ್ಷತೆ.
ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ಅಂಶವೆಂದರೆ, ಮೇ 30 ಮತ್ತು ಮೇ 31 ರಂದು ಅಹಮದಾಬಾದ್ನಲ್ಲಿ ಐಸಿಸಿ ಮಂಡಳಿ ಮತ್ತು ಮುಖ್ಯ ಕಾರ್ಯನಿರ್ವಾಹಕರ ಸಮಿತಿಯ ಈ ಹೈ-ಪ್ರೊಫೈಲ್ ಸಭೆಯನ್ನು ಆಯೋಜಿಸಲಾಗಿರುವುದು.
ಅಂದರೆ ಐಪಿಎಲ್ ಫೈನಲ್ ಪಂದ್ಯದ ವೇಳೆ ವಿಶ್ವ ಕ್ರಿಕೆಟ್ ಮಂಡಳಿಯ ಪ್ರಮುಖರು ಅಹಮದಾಬಾದ್ನಲ್ಲಿ ಇರಲಿದ್ದಾರೆ ಎಂಬುದು. ಇದಕ್ಕಾಗಿಯೇ ಫೈನಲ್ ಮ್ಯಾಚ್ ಅನ್ನು ಬೆಂಗಳೂರಿನಿಂದ ಅಹಮದಾಬಾದ್ಗೆ ಶಿಫ್ಟ್ ಮಾಡಲಾಗಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ.
ಅದೇನಾಗಿದ್ದರೂ ಇದೀಗ ಐಪಿಎಲ್ ಫೈನಲ್ ಪಂದ್ಯದ ಶಿಫ್ಟ್ ಆರ್ಸಿಬಿ ಪಾಲಿಗೆ ಅಭಿಶಾಪವಾಗಲಿದೆಯಾ ಎಂಬುದೇ ಪ್ರಶ್ನೆ. ಏಕೆಂದರೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರ್ಸಿಬಿ ತಂಡದ ಪ್ರದರ್ಶನ ಅಷ್ಟಕ್ಕಷ್ಟೇ. ಇದಕ್ಕೆ ಸಾಕ್ಷಿ ಈ ಅಂಕಿ ಅಂಶಗಳು.
ಆರ್ಸಿಬಿ ತಂಡವು ಅಹಮದಾಬಾದ್ನಲ್ಲಿ ಈವರೆಗೆ 7 ಪಂದ್ಯಗಳನ್ನಾಡಿದೆ. ಈ ವೇಳೆ ಗೆದ್ದಿರುವುದು ಕೇವಲ 3 ಪಂದ್ಯಗಳಲ್ಲಿ ಮಾತ್ರ. ಅಂದರೆ 4 ಮ್ಯಾಚ್ಗಳಲ್ಲಿ ಸೋಲನುಭವಿಸಿದೆ.
ಈ ಬಾರಿ ಕಣಕ್ಕಿಳಿದಾಗಲೂ ಗುಜರಾತ್ ಟೈಟಾನ್ಸ್ ವಿರುದ್ಧ 4 ವಿಕೆಟ್ಗಳಿಂದ ಸೋಲನುಭವಿಸಿತ್ತು.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರ್ಸಿಬಿ ತಂಡದ ವಿನ್ನಿಂಗ್ ಪರ್ಸಂಟೇಜ್ 42.8 ಮಾತ್ರ.
ಅಂದರೆ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರ್ಸಿಬಿ ಗೆಲುವು ಅಂದುಕೊಂಡಷ್ಟು ಸುಲಭವಲ್ಲ. ಅದರಲ್ಲೂ ತವರಿನ ಸಾಮ್ರಾಟರೆಂದೇ ಗುರುತಿಸಿಕೊಂಡಿರುವ ಗುಜರಾತ್ ಪಡೆಯನ್ನು ಸೋಲಿಸುವುದು ದೊಡ್ಡ ಸವಾಲೇ ಸರಿ. ಏಕೆಂದರೆ…
ಗುಜರಾತ್ ಟೈಟಾನ್ಸ್ ತಂಡವು ತವರು ಮೈದಾನದಲ್ಲಿ ಈವರೆಗೆ 28 ಪಂದ್ಯಗಳನ್ನಾಡಿದೆ. ಈ ವೇಳೆ 17 ಪಂದ್ಯಗಳಲ್ಲಿ ಜಯ ಸಾಧಿಸಿದೆ.
ಈ ಬಾರಿ ತವರಿನಲ್ಲಿ ಆಡಿದ 7 ಪಂದ್ಯಗಳಲ್ಲಿ ಗುಜರಾತ್ ಟೈಟಾನ್ಸ್ ತಂಡವು 5 ಮ್ಯಾಚ್ಗಳಲ್ಲಿ ಜಯ ಸಾಧಿಸಿದೆ.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಬಾರಿ ಆರ್ಸಿಬಿ ತಂಡಕ್ಕೆ ಸೋಲುಣಿಸುವಲ್ಲಿ ಗುಜರಾತ್ ಟೈಟಾನ್ಸ್ ತಂಡ ಯಶಸ್ವಿಯಾಗಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ 60.7 ವಿನ್ನಿಂಗ್ ಪರ್ಸಂಟೇಜ್ ಹೊಂದಿದೆ.
ಈ ಎಲ್ಲಾ ಕಾರಣಗಳಿಂದಾಗಿ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುಜರಾತ್ ಟೈಟಾನ್ಸ್ ತಂಡವು ಗೆಲ್ಲುವ ಫೇವರೇಟ್ ಆಗಿ ಗುರುತಿಸಿಕೊಂಡಿದೆ. ಈ ಗುರುತಿಸಿಕೊಳ್ಳುವಿಕೆಗೆ ಮುಖ್ಯ ಕಾರಣ ಫೈನಲ್ ಮ್ಯಾಚ್ನ ಶಿಫ್ಟ್.
ಅಂದರೆ ಆರ್ಸಿಬಿ ತಂಡದ ತವರು ಮೈದಾನದಲ್ಲಿ ನಡೆಯಬೇಕಿದ್ದ ಫೈನಲ್ ಪಂದ್ಯಕ್ಕೆ ಇದೀಗ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವಹಿಸಲು ಅಣಿಯಾಗಿ ನಿಂತಿದೆ. ಇದುವೇ ಆರ್ಸಿಬಿ ಪಾಲಿಗೆ ಅಭಿಶಾಪವಾಗಲಿದೆಯಾ ಎಂಬುದೇ ಈಗ ದೊಡ್ಡ ಯಕ್ಷ ಪ್ರಶ್ನೆ.
ಕಾರವಾರ/ಅಂಕೋಲಾ, ಮೇ 30: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಶನಿವಾರ ಬೆಳಗಿನ ಜಾವ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಬಳ್ಳಾರಿಯಿಂದ ಗೋವಾ ಕಡೆಗೆ ಸಾಗುತ್ತಿದ್ದ ಸೀಬರ್ಡ್ (Seabird) ಸಂಸ್ಥೆಗೆ ಸೇರಿದ ಖಾಸಗಿ ಲಕ್ಸುರಿ ಬಸ್, ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 52ರ ಕಂಚಿನಬಾಗಿಲು (ಅಡ್ಲೂರು) ಬಳಿ ರಸ್ತೆಗೆ ಅಡ್ಡಲಾಗಿ ಪಲ್ಟಿಯಾಗಿದೆ. ಈ ಭೀಕರ ದುರಂತದಲ್ಲಿ ಓರ್ವ ಪ್ರಯಾಣಿಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಬಸ್ಸಿನಲ್ಲಿದ್ದ ಒಟ್ಟು 36 ಪ್ರಯಾಣಿಕರ ಪೈಕಿ 21 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ 9 ಜನರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ನಿದ್ರೆ ತೂಕಡಿಸಿದ ಕಾರಣ ಚಾಲಕನಿಗೆ ನಿಯಂತ್ರಣ ತಪ್ಪಿರಬಹುದು ಎಂದು ಶಂಕಿಸಲಾಗಿದೆ. ವೇಗವಾಗಿ ಬಂದ ಬಸ್ ಹೆದ್ದಾರಿಯ ಮಧ್ಯದಲ್ಲೇ ಉರುಳಿಬಿದ್ದ ಪರಿಣಾಮ, ಹೆದ್ದಾರಿಯ ಎರಡೂ ಬದಿಗಳಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತು ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಘಟನಾ ಸ್ಥಳಕ್ಕೆ ಅಂಕೋಲಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ತಕ್ಷಣವೇ ಧಾವಿಸಿ ಭರದಿಂದ ರಕ್ಷಣಾ ಕಾರ್ಯಾಚರಣೆ ನಡೆಸಿತು. ಬಸ್ಸಿನ ಕಿಟಕಿಗಳನ್ನು ಒಡೆದು ಒಳಗಿದ್ದ ಪ್ರಯಾಣಿಕರನ್ನು ಹೊರತರಲಾಯಿತು. ಗಾಯಗೊಂಡ 21 ಜನರನ್ನು ತಕ್ಷಣವೇ ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಅವರಲ್ಲಿ ತಲೆ ಮತ್ತು ಎದೆಗೆ ಬಲವಾದ ಪೆಟ್ಟು ಬಿದ್ದು ಪರಿಸ್ಥಿತಿ ಗಂಭೀರವಾಗಿದ್ದ 9 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದ ಕ್ರಿಮ್ಸ್ (KRIHMS) ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಬಳಿಕ ಸ್ಥಳಕ್ಕೆ ಪೊಲೀಸರು ಬೃಹತ್ ಕ್ರೇನ್ ಅಳವಡಿಸಿ, ಹೆದ್ದಾರಿ ಮೇಲಿಂದ ಸೀಬರ್ಡ್ ಬಸ್ಸನ್ನು ಪಕ್ಕಕ್ಕೆ ಎತ್ತಿ ತೆರವುಗೊಳಿಸಿದರು. ಪ್ರಸ್ತುತ ಹೆದ್ದಾರಿಯ ಎರಡು ಬದಿಗಳಲ್ಲೂ ವಾಹನ ಸಂಚಾರವನ್ನು ಸುಗಮಗೊಳಿಸಲಾಗಿದೆ. ಈ ಭೀಕರ ಅಪಘಾತದ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮಂಗಳೂರು, ಮೇ,30 : ಕರಾವಳಿಯ ಜನರ ರಕ್ತದಲ್ಲೇ ಮಾನವೀಯತೆ ಇದೆ ಎಂಬುದಕ್ಕೆ ಮತ್ತೊಂದು ಸಾಕ್ಷಿ ಇದು. ಮಂಗಳೂರು ನಗರದಲ್ಲಿ ಚಲಿಸುತ್ತಿದ್ದ ಬಸ್ಸಿನಿಂದ ಆಕಸ್ಮಿಕವಾಗಿ ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ತಾಯಿ ಮತ್ತು ಮಗುವಿನ ರಕ್ಷಣೆಗೆ ಧಾವಿಸಿದ ಸಿಟಿ ಬಸ್ ಚಾಲಕ ಮತ್ತು ನಿರ್ವಾಹಕ, ಸಾರ್ವಜನಿಕ ಪ್ರಯಾಣಿಕರನ್ನು ಕೆಳಗಿಳಿಸಿ ಅದೇ ಬಸ್ಸಿನಲ್ಲಿ ಗಾಯಾಳುಗಳನ್ನು ನೇರವಾಗಿ ಆಸ್ಪತ್ರೆಗೆ ಕೊಂಡೊಯ್ಯುವ ಮೂಲಕ ರಿಯಲ್ ಹೀರೊಗಳಾಗಿದ್ದಾರೆ. ಇದೀಗ ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.
ಶುಕ್ರವಾರ ಮಂಗಳೂರಿನ ಕಾವೂರು ಕಡೆಯಿಂದ ಕುಂಜತ್ತಬೈಲ್ ಕಡೆಗೆ ಸಾಗುತ್ತಿದ್ದ ರೂಟ್ ನಂಬರ್ 13B ಯ ‘ಮಾಸ್ಟರ್’ (Master) ಹೆಸರಿನ ಸಿಟಿ ಬಸ್ ಮರಕಡ ಜಂಕ್ಷನ್ ತಲುಪುತ್ತಿತ್ತು. ಇದೇ ವೇಳೆ ಎದುರಿನಿಂದ ಬರುತ್ತಿದ್ದ ಮತ್ತೊಂದು ಬಸ್ಸಿನಿಂದ ತಾಯಿ ಮತ್ತು ಆಕೆಯ ಪುಟ್ಟ ಮಗು ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಅವರಿಬ್ಬರೂ ರಸ್ತೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದನ್ನು ನೋಡಿ ಸ್ಥಳೀಯರು ಹಾಗೂ ದಾರಿಹೋಕರು ತೀವ್ರ ಆತಂಕಕ್ಕೆ ಒಳಗಾಗಿದ್ದರು.
ಈ ಭೀಕರ ದೃಶ್ಯವನ್ನು ಗಮನಿಸಿದ ಮಾಸ್ಟರ್ ಬಸ್ ಚಾಲಕ ದಯಾನಂದ್ ಮತ್ತು ನಿರ್ವಾಹಕ (ಕಂಡಕ್ಟರ್) ಸಂದೀಪ್ ಅವರು ಸಮಯ ಪ್ರಜ್ಞೆ ಮೆರೆದಿದ್ದಾರೆ. ತಕ್ಷಣವೇ ತಮ್ಮ ಬಸ್ಸನ್ನು ರಸ್ತೆ ಬದಿಗೆ ನಿಲ್ಲಿಸಿ ಗಾಯಾಳುಗಳ ಬಳಿಗೆ ಧಾವಿಸಿದ್ದಾರೆ. ತಾಯಿ-ಮಗುವಿನ ಸ್ಥಿತಿ ಗಂಭೀರವಾಗಿರುವುದನ್ನು ಅರಿತು ಆಂಬ್ಯುಲೆನ್ಸ್ಗೆ ಕಾಯುತ್ತಾ ಸಮಯ ವ್ಯರ್ಥ ಮಾಡದ ಸಿಬ್ಬಂದಿ, ತಮ್ಮ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಪರಿಸ್ಥಿತಿಯನ್ನು ವಿವರಿಸಿ ಕೆಳಗಿಳಿಯಲು ವಿನಂತಿಸಿದ್ದಾರೆ. ತಕ್ಷಣವೇ ಅವರಿಬ್ಬರನ್ನೂ ಅದೇ ಸಿಟಿ ಬಸ್ಸಿಗೆ ಹತ್ತಿಸಿಕೊಂಡು ನೇರವಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ಕೊಡಿಸಿದ್ದಾರೆ.
ಸಕಾಲದಲ್ಲಿ ಸ್ಪಂದಿಸಿ ಇಬ್ಬರು ಅಮೂಲ್ಯ ಜೀವಗಳನ್ನು ಉಳಿಸಿದ ಚಾಲಕ ದಯಾನಂದ್ ಮತ್ತು ಕಂಡಕ್ಟರ್ ಸಂದೀಪ್ ಅವರ ಈ ನಿಸ್ವಾರ್ಥ ಮಾನವೀಯ ಕಾರ್ಯಕ್ಕೆ ಮಂಗಳೂರಿನ ಸಾರ್ವಜನಿಕ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಶ್ಲಾಘನೆ ಮತ್ತು ಪ್ರಶಂಸೆ ವ್ಯಕ್ತವಾಗುತ್ತಿದೆ.