96 ರನ್​ಗಳಿಸಿ ಬಂದ ವೈಭವ್​ನ ಗದರಿಸಿದ ರಿಯಾನ್ ಪರಾಗ್!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಸೀಸನ್-19 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಪ್ಲೇಆಫ್ ಪ್ರವೇಶಿಸಲು ಮುಖ್ಯ ಕಾರಣ ವೈಭವ್ ಸೂರ್ಯವಂಶಿಯ ಪ್ರಚಂಡ ಬ್ಯಾಟಿಂಗ್ ಹಾಗೂ ಜೋಫ್ರಾ ಆರ್ಚರ್ ಅವರ ನಿಖರ ದಾಳಿ. ಈ ಇಬ್ಬರ ಅತ್ಯುತ್ತಮ ಪ್ರದರ್ಶನದ ಫಲವಾಗಿ ಆರ್​ಆರ್​ ತಂಡವು ಈ ಬಾರಿ ಕ್ವಾಲಿಫೈಯರ್-2 ಪಂದ್ಯವಾಡಿತ್ತು. ಆದರೆ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಎಲ್ಲರೂ ವಿಫಲರಾದರೂ ವೈಭವ್ ಸೂರ್ಯವಂಶಿ ಮಾತ್ರ ತಮ್ಮ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದ್ದರು.

ಮುಲ್ಲನ್​ಪುರ್​ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಈ ನಿರ್ಣಾಯಕ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವೈಭವ್ 47 ಎಸೆತಗಳಲ್ಲಿ 96 ರನ್ ಸಿಡಿಸಿದ್ದರು. ಹೀಗೆ ಆರ್​ಆರ್ ತಂಡವು 200ರ ಗಡಿದಾಟುವಲ್ಲಿ ಪ್ರಮುಖ ಪಾತ್ರವಹಿಸಿದ್ದ ವೈಭವ್ ಸೂರ್ಯವಂಶಿ ಕೊನೆಯ ಎರಡು ಓವರ್​ಗಳಿರುವಾಗ ಔಟ್ ಆಗಿದ್ದರು.

ಹೀಗೆ ಔಟಾಗಿ ಡಗೌಟ್​ನಲ್ಲಿ ಬಂದು ಕುಳಿತಿದ್ದ ವೈಭವ್ ಸೂರ್ಯವಂಶಿ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಆಕ್ರೋಶಭರಿತರಾಗಿ ಮಾತನಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಔಟಾದ ನಿರಾಸೆಯೊಂದಿಗೆ ಕೂತಿದ್ದ ವೈಭವ್ ಸೂರ್ಯವಂಶಿ ಬಳಿ ಬಂದ ನಾಯಕ ರಿಯಾನ್ ಪರಾಗ್, ಕೈ ಸನ್ನೆ ಮಾಡುತ್ತಾ ಗದರಿಸುತ್ತಿರುವುದು ವಿಡಿಯೋದಲ್ಲಿ ಕಾಣಬಹುದು. ಅತ್ತ ವೈಭವ್ ತಲೆ ತಗ್ಗಿಸಿ ನಾಯಕನ ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ರಿಯಾನ್ ಪರಾಗ್ ನಡಗೆ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್​ಗಳಲ್ಲಿ 214 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಗುಜರಾತ್ ಟೈಟಾನ್ಸ್ ತಂಡವು 18.4 ಓವರ್​ಗಳಲ್ಲಿ ಚೇಸ್ ಮಾಡಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಜಯದೊಂದಿಗೆ ಗುಜರಾತ್ ಟೈಟಾನ್ಸ್ ತಂಡವು ಫೈನಲ್​ಗೆ ಲಗ್ಗೆಯಿಟ್ಟಿದೆ.

 

 

Source link

ಭೀಮಾ ನದಿ ತೀರದಲ್ಲಿ ಮತ್ತೆ ರಕ್ತಚರಿತ್ರೆ: 6 ಜನರ ಭೀಕರ ಕೊಲೆ!

ವಿಜಯಪುರ, ಮೇ,30: ಜಿಲ್ಲೆಯ ಚಡಚನ ತಾಲೂಕಿನ ಗೋವಿಂದಪುರ ಗ್ರಾಮದ ಬಳಿ ಭೀಮಾ ನದಿ ತಟದಲ್ಲಿ ಭೀಕರ ಕೊಲೆಯೊಂದು ನಡೆದಿದ್ದು, ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ಐವರು ಹಾಗೂ ಸ್ನೇಹಿತ ಸೇರಿದಂತೆ ಒಟ್ಟು ಆರು ಜನರು ದಾರುಣವಾಗಿ ಹತ್ಯೆಯಾಗಿದ್ದಾರೆ. ನಿರಾಳೆ ಕುಟುಂಬದ ದುಂಡಪ್ಪ ಶಿವಪುತ್ರ, ಚಂದ್ರಕಾಂತ್, ರಾಹುಲ್, ಸಮರ್ಥ್ ಹಾಗೂ ಅವರ ಜೊತೆಗಿದ್ದ ಶಬ್ಬೀರ್ ಅತ್ತಾರ್ ಎಂಬುವರು ಈ ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆ ನಡೆದ ಜಮೀನನ್ನು ನಿರಾಳೆ ಕುಟುಂಬದವರು ಇತ್ತೀಚೆಗೆ ಖರೀದಿಸಿದ್ದರು. 15ರಿಂದ 20 ಮಂದಿ ಯುವಕರ ತಂಡ ಬೈಕ್‌ಗಳಲ್ಲಿ ಬಂದು ಮಾರಕಾಸ್ತ್ರಗಳಿಂದ ಕೊಚ್ಚಿ, ಗುಂಡು ಹಾರಿಸಿ ಹತ್ಯೆ ನಡೆಸಿದೆ. ಈ ಘಟನೆಯಿಂದ ವಿಜಯಪುರ ಜಿಲ್ಲೆಯ ಜನತೆ ತಲ್ಲಣಗೊಂಡಿದ್ದಾರೆ. ಚಡಚನ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿದ್ದಾರೆ. ಈ ಕುರಿತು ತನಿಖೆ ಮುಂದುವರಿದಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ವ್ಯಕ್ತಿಯ ಡ್ಯಾನ್ಸ್​ಗೆ ಮನಸೋತ ಆನೆ ಮಾಡಿದ್ದೇನು ನೋಡಿ

ಸಂತೋಷ ಎಂಬುದು ಕೇವಲ ನಮ್ಮೊಂದಿಗೆ ಇಟ್ಟುಕೊಳ್ಳುವ ಭಾವವಲ್ಲ, ಅದು ಹಂಚಿದರೆ ಮಾತ್ರ ದುಪ್ಪಟ್ಟಾಗುತ್ತದೆ.ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿ ಮತ್ತು ಮನುಷ್ಯನ ನಡುವಿನ ಅಪರೂಪದ ಬಾಂಧವ್ಯದ ವಿಡಿಯೋವೊಂದು ಭಾರಿ ಸದ್ದು ಮಾಡುತ್ತಿದೆ. ವ್ಯಕ್ತಿಯೊಬ್ಬರು ಆನೆಯೊಂದರ ಮುಂದೆ ನಿಂತು ಅತ್ಯಂತ ಉತ್ಸಾಹದಿಂದ ನೃತ್ಯ (Dance) ಮಾಡಲು ಪ್ರಾರಂಭಿಸುತ್ತಾರೆ. ಮೊದಲ ಕೆಲವು ಸೆಕೆಂಡುಗಳ ಕಾಲ ಆ ಆನೆಯು ಆ ವ್ಯಕ್ತಿಯ ನೃತ್ಯವನ್ನು ಅತ್ಯಂತ ಕುತೂಹಲದಿಂದ ಗಮನಿಸುತ್ತದೆ. ತಕ್ಷಣವೇ ಆನೆಯು ಕೂಡ ತನ್ನ ಸೊಂಡಿಲು ಮತ್ತು ಕಾಲುಗಳನ್ನು ಆಡಿಸುತ್ತಾ, ಪೂರ್ಣ ಮನಸ್ಸಿನಿಂದ ಆತನೊಂದಿಗೆ ಹೆಜ್ಜೆ ಹಾಕಲು ಶುರು ಮಾಡುತ್ತದೆ.

ಆನೆಯ ಮುಖದಲ್ಲೂ ಆ ಕ್ಷಣ ಸಂತೋಷ ಎದ್ದು ಕಾಣುತ್ತಿತ್ತು. ಈ ವಿಡಿಯೋ ಇಡೀ ಇಂಟರ್ನೆಟ್ ಲೋಕದ ಜನರ ಮನಗೆದ್ದಿದ್ದು, ನಿಜವಾದ ಆನಂದಕ್ಕೆ ಯಾವುದೇ ಭಾಷೆಯ ಹಂಗಿಲ್ಲ, ಕೇವಲ ಶುದ್ಧ ಭಾವನೆಗಳಿದ್ದರೆ ಸಾಕು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Operation Sindoor 2.0: ಭಾರತ ಆಪರೇಷನ್ ಸಿಂಧೂರ್ 2.0ಗೆ ತಯಾರಿ ನಡೆಸುತ್ತಿದೆ:ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ

ನವದೆಹಲಿ, ಮೇ 30: ಭಾರತೀಯ ಸೇನೆ(Indian Army)ಯು ಯಾವುದೇ ಕ್ಷಣದಲ್ಲೂ ಎದುರಾಳಿಗೆ ತಕ್ಕ ಪ್ರತ್ಯುತ್ತರ ನೀಡಲು ‘ಆಪರೇಷನ್ ಸಿಂಧೂರ್ 2.0’ ಕಾರ್ಯಾಚರಣೆಗೆ ಸಂಪೂರ್ಣ ಸಜ್ಜಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಶನಿವಾರ ಹೇಳಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದ ಕುತಂತ್ರಗಳ ವಿರುದ್ಧ ಭಾರತೀಯ ಸೇನೆ ತಳೆದಿದ್ದ ಕಠಿಣ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸುದ್ದಿ ಸಂಸ್ಥೆ ಎಎನ್​ಐ ಜೊತೆ ಮಾತನಾಡಿದ ಸೇನಾ ಮುಖ್ಯಸ್ಥರು, ಆಪರೇಷನ್ ಸಿಂಧೂರ್ ಇನ್ನೂ ಕೊನೆಗೊಂಡಿಲ್ಲ, ಅದು ಮುಂದುವರೆಯುತ್ತಲೇ ಇದೆ. ಪ್ರಸ್ತುತ ಗಡಿಯಲ್ಲಿರುವ ಸ್ಥಿತಿಯು ಯುದ್ಧದ ನಡುವಿನ ಒಂದು ತಾತ್ಕಾಲಿಕ ವಿರಾಮವಷ್ಟೇ ಎಂದು ಬಣ್ಣಿಸಿದ್ದಾರೆ.

ಮೂರೂ ಪಡೆಗಳ ಮಹಾ ಜಂಟಿ ಸಿದ್ಧತೆ
ಪಾಕಿಸ್ತಾನದ ಹೆಸರನ್ನು ನೇರವಾಗಿ ಉಲ್ಲೇಖಿಸದೆ ಗಡಾಫಿ ಶೈಲಿಯಲ್ಲಿ ಎಚ್ಚರಿಕೆ ನೀಡಿರುವ ಜನರಲ್ ದ್ವಿವೇದಿ, ಭಾರತೀಯ ಮಿಲಿಟರಿಯ ಸನ್ನದ್ಧತೆಯನ್ನು ಎತ್ತಿ ತೋರಿಸಿದ್ದಾರೆ. ಆಪರೇಷನ್ ಸಿಂಧೂರ್ 2.0 ಸಂಭವಿಸಿದಲ್ಲಿ, ಕೇವಲ ಸೇನೆ ಮಾತ್ರವಲ್ಲದೆ ಭಾರತೀಯ ವಾಯುಪಡೆ (IAF) ಮತ್ತು ನೌಕಾಪಡೆಯೂ (Navy) ಜಂಟಿಯಾಗಿ ಅತ್ಯಂತ ಪ್ರಬಲ ದಾಳಿ ನಡೆಸಲು ಸಜ್ಜಾಗುತ್ತಿವೆ. ಪ್ರಸ್ತುತ ನಾವು ಮೂರೂ ಪಡೆಗಳ ನಡುವೆ ಸಿನರ್ಜಿ (ಪರಸ್ಪರ ಸಮನ್ವಯತೆ) ಹೆಚ್ಚಿಸುವ ಹಾಗೂ ಮುಂದಿನ ಸವಾಲಿಗೆ ನಮ್ಮನ್ನು ಸಿದ್ಧಪಡಿಸಿಕೊಳ್ಳುವತ್ತ ದಿನದ 24 ಗಂಟೆಯೂ ಗಮನಹರಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಇಂದಿನ ಆಧುನಿಕ ಯುದ್ಧಭೂಮಿ ಸಂಪೂರ್ಣ ಮುಕ್ತವಾಗಿದೆ, ನಮ್ಮ ಪ್ರತಿಯೊಂದು ನಡೆಯೂ ಶತ್ರುಗಳಿಗೆ ತಿಳಿಯುತ್ತದೆ. ಆದ್ದರಿಂದ, ನಮ್ಮ ಸೈನಿಕರ ನಿಯೋಜನೆ, ಸುರಕ್ಷತೆ ಮತ್ತು ಗಡಿ ನಿವಾಸಿಗಳ ರಕ್ಷಣೆಯ ಬಗ್ಗೆ ನಾವು ಅತ್ಯಂತ ಜಾಗರೂಕರಾಗಿದ್ದೇವೆ ಎಂದಿದ್ದಾರೆ.

ಮತ್ತಷ್ಟು ಓದಿ:ಪಾಕಿಸ್ತಾನಿ ಭಯೋತ್ಪಾದಕರ ವಿರುದ್ಧದ ಆಪರೇಷನ್ ಸಿಂಧೂರ್​ಗೆ ಒಂದು ವರ್ಷ: ವೀಡಿಯೊ ಹಂಚಿಕೊಂಡ ಭಾರತೀಯ ಸೇನೆ

ಕಳೆದ ವರ್ಷ (2025ರ ಏಪ್ರಿಲ್ 22 ರಂದು) ದಕ್ಷಿಣ ಕಾಶ್ಮೀರದ ಸುಂದರ ಪ್ರವಾಸಿ ತಾಣವಾದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಪಾಕಿಸ್ತಾನ ಪ್ರಾಯೋಜಿತ ಉಗ್ರರು ಅಟ್ಟಹಾಸ ಮೆರೆದು 26 ಜನರನ್ನು ಬಲಿ ಪಡೆದಿದ್ದರು.

ಭಾರತದ ದಿಟ್ಟ ಪ್ರತಿಕಾರ: ಈ ಹೇಡಿತನದ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಲು ಭಾರತೀಯ ಸೇನೆಯು 2025 ರ ಮೇ 7 ಮತ್ತು 8 ರ ಮಧ್ಯರಾತ್ರಿ ಪಾಕಿಸ್ತಾನದ ವಿರುದ್ಧ ‘ಆಪರೇಷನ್ ಸಿಂಧೂರ್’ ಎಂಬ ಬೃಹತ್ ಮಿಲಿಟರಿ ಮರುದಾಳಿಯನ್ನು ನಡೆಸಿ ಶತ್ರುಗಳ ಬೆನ್ನೆಲುಬು ಮುರಿದಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮಳೆ ಅಬ್ಬರಕ್ಕೆ ಕೆಜಿಎಫ್​​ನಲ್ಲಿ ಕುಸಿದ ಕಟ್ಟಡದ ಗೋಡೆ: 7 ಮಂದಿ ಬದುಕಿದ್ದೇ ಪವಾಡ!

ಕೋಲಾರ, ಮೇ 30: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆ ಸಾಲು ಸಾಲು ಅವಾಂತರಗಳಿಗೆ ಕಾರಣವಾಗಿದ್ದು, ಕೆಜಿಎಫ್ ನಗರದಲ್ಲಿ ವರುಣಾರ್ಭಟಕ್ಕೆ ಕಟ್ಟಡವೊಂದು ಕುಸಿದಿರುವ ಘಟನೆ ನಡೆದಿದೆ. ಈ ವೇಳೆ ಅಲ್ಲೇ ಇದ್ದ 7 ಜನರು ಅದೃಷ್ಟವಶಾತ್​​ ಪ್ರಾಣಾಪಾಯದಿಂದ ಪಾರಾಗಿದ್ದರೆ. ಮಾರಿಕುಪ್ಪಂನ ಕೃಷ್ಣಮೂರ್ತಿ ಎಂಬುವರ ಮನೆ ಕುಸಿದಿದ್ದು, ಮನೆಯ ಒಂದು ಬದಿಯ ಗೋಡೆ ಸಂಪೂರ್ಣವಾಗಿ ನಾಶವಾಗಿದೆ. ಅತ್ತ ರಾಬರ್ಟ್ ಸನ್ ಪೇಟೆಯಲ್ಲಿ ಬೃಹತ್ ಮರಗಳು ಧರೆಗುರುಳಿದ್ದರೂ ತಹಶೀಲ್ದಾರ್ ಹಾಗೂ ನಗರಸಭೆ ಆಯುಕ್ತರು ಸ್ಥಳಗಳಿಗೆ ಭೇಟಿ ನೀಡದೆ ನಿರ್ಲಕ್ಷ್ಯ ತೋರಿರುವ ಆರೋಪ ಕೇಳಿಬಂದಿದ್ದು, ಅಧಿಕಾರಿಗಳ ನಡೆ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸಿಎಲ್​​ಪಿ ಸಭೆ ಮುನ್ನವೇ ರಾಜ್ಯಪಾಲರ ಭೇಟಿಯಾದ ಡಿ.ಕೆ. ಶಿವಕುಮಾರ್​​: ಕಾರಣ ಇಲ್ಲಿದೆ

ಬೆಂಗಳೂರು, ಮೇ 30: ಸಿಎಲ್​​ಪಿ ಸಭೆ ಮುನ್ನವೇ ಲೋಕಭವನದಲ್ಲಿ ರಾಜ್ಯಪಾಲ ಗೆಹ್ಲೋಟ್‌ ಅವರನ್ನು ಡಿಕೆ ಸಹೋದರರು ಭೇಟಿಯಾಗಿದ್ದಾರೆ. ಗವರ್ನರ್​​ ಜೊತೆ ಡಿ.ಕೆ.ಶಿವಕುಮಾರ್ ಅನೌಪಚಾರಿಕ ಮಾತುಕತೆ ನಡೆಸಿದ್ದು, ಪ್ರಮಾಣವಚನದ ದಿನಾಂಕಗಳ ಬಗ್ಗೆ ಹಾಗೂ ರಾಜ್ಯಪಾಲರ ಲಭ್ಯತೆ ಬಗ್ಗೆ ಚರ್ಚೆ ನಡೆಸಿದ್ದಾರೆ. ತಾತ್ಕಾಲಿಕ ವೇಳಾಪಟ್ಟಿ ಬಗ್ಗೆ ರಾಜ್ಯಪಾಲರ ಬಳಿ ಡಿಕೆಶಿ ಪ್ರಸ್ತಾಪ ಮಾಡಿದ್ದು, ಎರಡು, ಮೂರು ದಿನಾಂಕಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಮಧ್ಯಾಹ್ನದ ಬಳಿಕ ಧರ್ಮಸ್ಥಳಕ್ಕೆ ರಾಜ್ಯಪಾಲರು ತೆರಳುತ್ತಿದ್ದು, ಇಂದು ಲೋಕಭವನದಿಂದ ರಾಜ್ಯಪಾಲರು ಹೊರಟರೆ ನಾಳೆ ಸಂಜೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಹೀಗಾಗಿ ಸಿಎಲ್​​ಪಿ ಸಭೆಗೂ ಮೊದಲೇ ರಾಜ್ಯಪಾಲರನ್ನು ಡಿಕೆಶಿ ಭೇಟಿಯಾಗಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸಿಎಂ ಸ್ಥಾನ ತೊರೆದ ಬೆನ್ನಲ್ಲೇ ಸಿದ್ದರಾಮಯ್ಯಗೆ ಆಯ್ತಾ ಹಿನ್ನಡೆ? ಪ್ರಮುಖ ಮನವಿ ತಿರಸ್ಕರಿಸಿದ ಹೈಕಮಾಂಡ್!

ಬೆಂಗಳೂರು, ಮೇ 30: ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಸಿದ್ದರಾಮಯ್ಯಗೆ (Siddaramaiah) ಹೈಕಮಾಂಡ್ ಮಟ್ಟದಲ್ಲಿ ಮೊದಲ ಹಿನ್ನಡೆಯಾಗಿದೆಯೇ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ತೀವ್ರವಾಗಿ ಗರಿಗೆದರಿವೆ. ಹೊಸ ಸರ್ಕಾರ ರಚನೆಗೂ ಮುನ್ನ ಪಕ್ಷ ಮತ್ತು ಸರ್ಕಾರದ ನಡುವೆ ಉತ್ತಮ ಸಮನ್ವಯಕ್ಕಾಗಿ ‘ಸಮನ್ವಯ ಸಮಿತಿ (Coordination Committee)’ ರಚನೆ ಮಾಡಬೇಕು ಎಂದು ನಿರ್ಗಮಿತ ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್​ಗೆ ಮನವಿ ಮಾಡಿದ್ದಾರೆ. ಆದರೆ, ಸಿದ್ದರಾಮಯ್ಯ ಪ್ರಸ್ತಾವನೆಯನ್ನು ಕಾಂಗ್ರೆಸ್ ನಾಯಕತ್ವ ನಿರಸ್ಕರಿಸಿದೆ. ಈ ಬೆಳವಣಿಗೆಯು ಸದ್ಯ ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಮೂಡಿಸಿದೆ.

ಮುಖ್ಯಾಂಶಗಳು

  • ‘ಸಮನ್ವಯ ಸಮಿತಿ’ ರಚಿಸುವಂತೆ ಸಿದ್ದರಾಮಯ್ಯ ಕೋರಿದ್ದ ಮನವಿಯನ್ನು ತಳ್ಳಿಹಾಕಿದ ಹೈಕಮಾಂಡ್.
  • ಸಮನ್ವಯಕ್ಕೆ ಕೆಪಿಸಿಸಿ ಅಧ್ಯಕ್ಷರೇ ಇದ್ದಾರೆ ಎಂದು ಸಂದೇಶ.
  • ಸಿದ್ದರಾಮಯ್ಯ ಅವರ ಮೂಲಕವೇ ಡಿಕೆ ಶಿವಕುಮಾರ್ ಹೆಸರು ಪ್ರಸ್ತಾಪಿಸಲು ಹೈಕಮಾಂಡ್ ತೀರ್ಮಾನ.

ಸಿದ್ದರಾಮಯ್ಯ ಮನವಿ ಏನು? ತಿರಸ್ಕರಿಸಲು ಕಾರಣವೇನು?

ನೂತನ ಸಚಿವ ಸಂಪುಟದಲ್ಲಿ ಸಾಕಷ್ಟು ಸಂಖ್ಯೆಯ ಹಿರಿಯ ಸಚಿವರು ಇರಲಿದ್ದಾರೆ. ಹೀಗಾಗಿ ಸರ್ಕಾರ ಮತ್ತು ಪಕ್ಷದ ನಡುವೆ ಯಾವುದೇ ರೀತಿಯ ಗೊಂದಲಗಳು ಉಂಟಾಗಬಾರದು ಎನ್ನುವ ದೂರದೃಷ್ಟಿಯಿಂದ ಸಿದ್ದರಾಮಯ್ಯ ಸಮನ್ವಯ ಸಮಿತಿಯ ಅಗತ್ಯತೆಯನ್ನು ಪ್ರತಿಪಾದಿಸಿದ್ದಾರೆ. ಆದರೆ, ಈ ಮನವಿಯನ್ನು ನಿರಾಕರಿಸಿರುವ ಕಾಂಗ್ರೆಸ್ ಹೈಕಮಾಂಡ್, ‘ರಾಜ್ಯದಲ್ಲಿ ಯಾವುದೇ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿಲ್ಲ. ಕಾಂಗ್ರೆಸ್ ಪಕ್ಷವೇ ಸ್ವತಂತ್ರವಾಗಿ ಅಧಿಕಾರ ನಡೆಸುತ್ತಿರುವುದರಿಂದ ಪ್ರತ್ಯೇಕ ಸಮನ್ವಯ ಸಮಿತಿಯ ಅಗತ್ಯವೇ ಇಲ್ಲ. ಪಕ್ಷ ಮತ್ತು ಸರ್ಕಾರದ ನಡುವಿನ ಸಮನ್ವಯದ ಜವಾಬ್ದಾರಿಯನ್ನು ಕೆಪಿಸಿಸಿ ಅಧ್ಯಕ್ಷರೇ ನಿಭಾಯಿಸಲಿದ್ದಾರೆ’ ಎಂದು ಸ್ಪಷ್ಟಪಡಿಸಿದೆ. ಸಿಎಂ ಪಟ್ಟದಿಂದ ಕೆಳಗಿಳಿಯುತ್ತಿದ್ದಂತೆಯೇ ಹೈಕಮಾಂಡ್ ಸಿದ್ದರಾಮಯ್ಯ ಅವರ ಮಾತಿಗೆ ಮೊದಲಿನಷ್ಟು ಮನ್ನಣೆ ನೀಡುತ್ತಿಲ್ಲವೇ ಎಂಬ ಅನುಮಾನಕ್ಕೆ ಇದು ಆಸ್ಪದ ಮಾಡಿಕೊಟ್ಟಿದೆ.

ಕಾವೇರಿ ನಿವಾಸಕ್ಕೆ ನಾಯಕರ ದಂಡು

ಈ ಎಲ್ಲಾ ರಾಜಕೀಯ ವಿದ್ಯಮಾನಗಳ ನಡುವೆಯೂ ಬೆಂಗಳೂರಿನ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಶಾಸಕರು ಮತ್ತು ಪ್ರಮುಖ ನಾಯಕರ ಭೇಟಿ ಮುಂದುವರಿದಿದೆ. ಹಿರಿಯ ನಾಯಕ ಕೆಜೆ ಜಾರ್ಜ್, ಶಾಸಕ ಪೊನ್ನಣ್ಣ, ಪುಟ್ಟರಂಗಶೆಟ್ಟಿ ಹಾಗೂ ಬಿಲ್ಕಿಸ್ ಬಾನು ಸೇರಿದಂತೆ ಹಲವು ಪ್ರಮುಖರು ಕಾವೇರಿ ನಿವಾಸಕ್ಕೆ ಧಾವಿಸಿ ಸಿದ್ದರಾಮಯ್ಯ ಅವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ.

ಇಂದು ಸಂಜೆ ಸಿಎಲ್‌ಪಿ ಸಭೆ

ಇಂದು ಸಂಜೆ 4 ಗಂಟೆಗೆ ಕರೆಯಲಾಗಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ಹೊಸ ಇತಿಹಾಸ ಬರೆಯಲು ಹೈಕಮಾಂಡ್ ಮುಂದಾಗಿದೆ. ಶಿಷ್ಟಾಚಾರದಂತೆ ಶಾಸಕಾಂಗ ಪಕ್ಷದ ನೂತನ ನಾಯಕನನ್ನು ಆಯ್ಕೆ ಮಾಡುವ ಜವಾಬ್ದಾರಿ ಶಾಸಕರ ಮೇಲಿದ್ದರೂ, ಯಾವುದೇ ಭಿನ್ನಾಭಿಪ್ರಾಯ ಮೂಡದಂತೆ ತಡೆಯಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದೆ. ಸಭೆಯಲ್ಲಿ ಖುದ್ದು ಸಿದ್ದರಾಮಯ್ಯ ಅವರ ಮೂಲಕವೇ ಡಿಕೆ ಶಿವಕುಮಾರ್ ಅವರ ಹೆಸರನ್ನು ನೂತನ ಸಿಎಲ್‌ಪಿ ನಾಯಕ ಸ್ಥಾನಕ್ಕೆ ಪ್ರಸ್ತಾಪಿಸಲು ಹೈಕಮಾಂಡ್ ಸಿದ್ಧತೆ ನಡೆಸಿದೆ. ಸಿದ್ದರಾಮಯ್ಯ ಅವರು ಹೆಸರು ಸೂಚಿಸಿದ ಬಳಿಕ ಅದಕ್ಕೆ ಶಾಸಕರು ಅಧಿಕೃತ ಅನುಮೋದನೆ ನೀಡಲಿದ್ದಾರೆ. ಪ್ರಸ್ತಾವನೆ ಪ್ರಕ್ರಿಯೆ ಮುಗಿದ ಬಳಿಕ ಸಿದ್ದರಾಮಯ್ಯ ಅವರು ಧನ್ಯವಾದ ಭಾಷಣ ಮಾಡಲಿದ್ದಾರೆ. ತದನಂತರ ನೂತನ ಶಾಸಕಾಂಗ ಪಕ್ಷದ ನಾಯಕರು ಸರ್ಕಾರ ರಚನೆಯ ಹಕ್ಕು ಮಂಡಿಸಲು ಲೋಕಭವನ (ರಾಜಭವನ) ಕ್ಕೆ ಅಧಿಕೃತ ಮಾಹಿತಿ ರವಾನಿಸಲಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಟ ಅಜಿತ್ ತಾಯಿ ಮೋಹಿನಿ ಮಣಿ ನಿಧನ: ಕೊನೆಯ ಮಾತನ್ನು ಕೇಳಲು ಆಗಲೇ ಇಲ್ಲ

ತಮಿಳು ಚಿತ್ರರಂಗದ ಖ್ಯಾತ ನಟ ಅಜಿತ್ ಕುಮಾರ್ ಅವರ (Ajith Kumar) ತಾಯಿ ಮೋಹಿನಿ ಮಣಿ (85) ಅವರು ಶನಿವಾರ ಬೆಳಿಗ್ಗೆ ಚೆನ್ನೈನಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಮೂರು ವರ್ಷಗಳ ಹಿಂದೆ (ಮಾರ್ಚ್ 24, 2023) ಅಜಿತ್ ಅವರ ತಂದೆ ಪಿ. ಸುಬ್ರಮಣ್ಯಂ ಅವರು ತಮ್ಮ 85ನೇ ವಯಸ್ಸಿನಲ್ಲಿಯೇ ನಿಧನರಾಗಿದ್ದರು.

ಕಾರ್​ ರೇಸ್ ಹಿನ್ನೆಲೆಯಲ್ಲಿ ದುಬೈನಲ್ಲಿದ್ದ ನಟ ಅಜಿತ್ ಕುಮಾರ್ ಅವರು ತಾಯಿಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಚೆನ್ನೈಗೆ ಹಿಂತಿರುಗುತ್ತಿದ್ದಾರೆ ಎಂದು ತಿಳಿದುಬಂದಿದೆ. ಚೆನ್ನೈನ ಪಾಲವಾಕ್ಕಂನಲ್ಲಿರುವ ಅಜಿತ್ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. ತಾಯಿಯ ಜೊತೆ ಕೊನೆಯದಾಗಿ ಮಾತನಾಡಲು ಅಜಿತ್​ಗೆ ಸಾಧ್ಯವಾಗಲೇ ಇಲ್ಲ.

ಅಜಿತ್ ತಾಯಿಯ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ರಾಜಕಾರಣಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ‘ನಟ ಅಜಿತ್ ಕುಮಾರ್ ಅವರ ತಾಯಿ ಮೋಹಿನಿ ಮಣಿ ಅವರ ನಿಧನದ ಸುದ್ದಿ ಕೇಳಿ ತೀವ್ರ ಬೇಸರವಾಗಿದೆ. ತಾಯಿಯನ್ನು ಕಳೆದುಕೊಂಡು ದುಃಖದಲ್ಲಿರುವ ಅಜಿತ್ ಹಾಗೂ ಅವರ ಕುಟುಂಬಕ್ಕೆ ನನ್ನ ಸಾಂತ್ವನ’ ಎಂದು ಕಮಲ್ ಹಾಸನ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ಸರಿಯಾಗಿ ವರ್ತಿಸಿ, ಇದು ಥಿಯೇಟರ್ ಅಲ್ಲ’; ಅಭಿಮಾನಿಗಳ ಮೇಲೆ ಕೂಗಾಡಿದ ನಟ ಅಜಿತ್

ಡಿಎಂಕೆ ಮುಖ್ಯಸ್ಥ ಹಾಗೂ ತಮಿಳುನಾಡಿನ ಮಾಜಿ ಸಿಎಂ ಎಂ.ಕೆ. ಸ್ಟಾಲಿನ್, ಬಿಜೆಪಿ ನಾಯಕ ಕೆ. ಅಣ್ಣಾಮಲೈ ಸೇರಿದಂತೆ ಅನೇಕರು ಅಜಿತ್ ತಾಯಿ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಅಜಿತ್ ಕೊನೆಯದಾಗಿ ಕಾಣಿಸಿಕೊಂಡಿದ್ದು ಕಳೆದ ವರ್ಷ ರಿಲೀಸ್ ಆದ ‘ವಿದುಮುಯಾರ್ಚಿ’ ಹಾಗೂ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾದಲ್ಲಿ. ಸದ್ಯಕ್ಕೆ ಅವರು ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಅವರಿಗೆ ಕಾರ್ ರೇಸ್ ಎಂದರೆ ಇಷ್ಟ. ಅವರು ತಮ್ಮದೇ ತಂಡ ಆರಂಭಿಸಿದ್ದು, ಇದರಲ್ಲೇ ಬ್ಯುಸಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 12:26 pm, Sat, 30 May 26

Source link

SSB Recruitment 2026: ಸಶಸ್ತ್ರ ಸೀಮಾ ಬಲದಲ್ಲಿ 404 ಕಾನ್ಸ್‌ಟೇಬಲ್ ಹುದ್ದೆಗೆ ನೇಮಕಾತಿ; ಕ್ರೀಡಾಪಟುಗಳಿಗೆ ಸುವರ್ಣಾವಕಾಶ!

ಪೊಲೀಸ್ ಮತ್ತು ರಕ್ಷಣಾ ಇಲಾಖೆಯ ಉದ್ಯೋಗಗಳಿಗಾಗಿ ಕಾಯುತ್ತಿರುವ ದೇಶದ ಯುವಕ-ಯುವತಿಯರಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿ ಸುದ್ದಿ ನೀಡಿದೆ. ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಶಸ್ತ್ರ ಸೀಮಾ ಬಲ್ (SSB), ಕ್ರೀಡಾ ಕೋಟಾದಡಿಯಲ್ಲಿ (Sports Quota) ಹೆಚ್ಚಿನ ಸಂಖ್ಯೆಯ ಕಾನ್ಸ್‌ಟೇಬಲ್ (ಜನರಲ್ ಡ್ಯೂಟಿ) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಒಟ್ಟು 404 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ ಅರ್ಹ ಕ್ರೀಡಾಪಟುಗಳು ಈ ಉತ್ತಮ ಅವಕಾಶವನ್ನು ಬಳಸಿಕೊಳ್ಳಬಹುದು. ಈ ಹುದ್ದೆಗಳಿಗೆ ಮಹಿಳಾ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಆಯ್ಕೆಯಾದವರಿಗೆ ಆಕರ್ಷಕ ಸಂಬಳ ಮತ್ತು ಭತ್ಯೆಗಳೊಂದಿಗೆ ಕೇಂದ್ರ ಸರ್ಕಾರಿ ಕೆಲಸ ಲಭಿಸಲಿದೆ.

ಹುದ್ದೆಗಳಿಗೆ ವಿವಿಧ ಕ್ರೀಡಾ ಹಿನ್ನೆಲೆ:

ಈ ಕಾನ್ಸ್‌ಟೇಬಲ್ (ಜಿಡಿ) ಹುದ್ದೆಗಳಿಗೆ ವಿವಿಧ ಕ್ರೀಡಾ ಹಿನ್ನೆಲೆಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ವಾಲಿಬಾಲ್, ಕಬಡ್ಡಿ, ಅಥ್ಲೆಟಿಕ್ಸ್, ಶೂಟಿಂಗ್, ಬಾಕ್ಸಿಂಗ್, ಬ್ಯಾಡ್ಮಿಂಟನ್, ಫುಟ್‌ಬಾಲ್, ಹಾಕಿ, ಈಜು, ಕುಸ್ತಿ, ಯೋಗಾಸನ, ಜೂಡೋ, ಟೇಕ್ವಾಂಡೋ, ಪವರ್‌ಲಿಫ್ಟಿಂಗ್ ಸೇರಿದಂತೆ ಇನ್ನು ಪ್ರಮುಖ ಕ್ರೀಡಾ ವಿಭಾಗಗಳ ಕ್ರೀಡಾಪಟುಗಳಿಗೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ.

ವಿದ್ಯಾರ್ಹತೆ:

ವಿದ್ಯಾರ್ಹತೆಯ ವಿಷಯಕ್ಕೆ ಬಂದರೆ, ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ (SSLC) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಇದರೊಂದಿಗೆ ಅಭ್ಯರ್ಥಿಗಳು ಕಳೆದ ಎರಡು ವರ್ಷಗಳಲ್ಲಿ ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ರಾಜ್ಯ ಅಥವಾ ದೇಶವನ್ನು ಪ್ರತಿನಿಧಿಸಿರಬೇಕು. ಹಿರಿಯ ಅಥವಾ ಕಿರಿಯ ರಾಷ್ಟ್ರೀಯ ಚಾಂಪಿಯನ್‌ಶಿಪ್‌ ಅಥವಾ ‘ಖೇಲೋ ಇಂಡಿಯಾ’ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆದ್ದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.

ವಯಸ್ಸು ಮತ್ತು ಮೀಸಲಾತಿ ವಿವರ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18 ರಿಂದ 23 ವರ್ಷಗಳ ನಡುವೆ ಇರಬೇಕು. ಸರ್ಕಾರದ ನಿಯಮಾವಳಿಗಳನ್ವಯ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ. ಇನ್ನು ದೈಹಿಕ ಅರ್ಹತೆಗಳ ವಿಷಯದಲ್ಲಿ, ಪುರುಷ ಅಭ್ಯರ್ಥಿಗಳಿಗೆ ಕನಿಷ್ಠ 170 ಸೆಂ.ಮೀ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಕನಿಷ್ಠ 157 ಸೆಂ.ಮೀ ಎತ್ತರ ನಿಗದಿಪಡಿಸಲಾಗಿದೆ. ಎಸ್‌ಟಿ ವರ್ಗದ ಅಭ್ಯರ್ಥಿಗಳಿಗೆ ಎತ್ತರದಲ್ಲಿ ಸಡಿಲಿಕೆ ಇರಲಿದ್ದು, ಪುರುಷ ಅಭ್ಯರ್ಥಿಗಳಿಗೆ ಎದೆಯ ಅಳತೆಯ ನಿರ್ದಿಷ್ಟ ಮಾನದಂಡಗಳು ಅನ್ವಯಿಸುತ್ತವೆ. ಜೊತೆಗೆ ಅಭ್ಯರ್ಥಿಗಳ ಬಿಎಂಐ (BMI) 18 ರಿಂದ 25 ರ ನಡುವೆ ಇರಬೇಕಾಗುತ್ತದೆ.

ಇದನ್ನೂ ಓದಿ: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ

ಆಕರ್ಷಕ ಮೂಲ ವೇತನ:

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ. 21,700 ರಿಂದ ರೂ. 69,100 ರವರೆಗೆ ಆಕರ್ಷಕ ಮೂಲ ವೇತನದೊಂದಿಗೆ ಕೇಂದ್ರ ಸರ್ಕಾರದ ಇತರೆ ಭತ್ಯೆಗಳು ಮತ್ತು ಪಿಂಚಣಿ ಸೌಲಭ್ಯಗಳು ಸಿಗಲಿವೆ. ಅರ್ಜಿ ಶುಲ್ಕದ ವಿವರ ನೋಡುವುದಾದರೆ, ಸಾಮಾನ್ಯ (General), EWS ಮತ್ತು OBC ಅಭ್ಯರ್ಥಿಗಳಿಗೆ ರೂ. 100 ಶುಲ್ಕವಿದ್ದು, SC, ST ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಈ ನೇಮಕಾತಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಬದಲಿಗೆ ಅಭ್ಯರ್ಥಿಗಳ ಕ್ರೀಡಾ ಸಾಧನೆ ಮತ್ತು ಪದಕಗಳ ಆಧಾರದ ಮೇಲೆ ಅಂಕಗಳನ್ನು ನೀಡಿ, ತದನಂತರ ಪ್ರಮಾಣಪತ್ರ ಪರಿಶೀಲನೆ, ದೈಹಿಕ ಗುಣಮಟ್ಟ ಪರೀಕ್ಷೆ (PST) ಹಾಗೂ ವೈದ್ಯಕೀಯ ತಪಾಸಣೆಯನ್ನು ನಡೆಸಿ ಅಂತಿಮ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸಶಸ್ತ್ರ ಸೀಮಾ ಬಲ್‌ನ ಅಧಿಕೃತ ವೆಬ್‌ಸೈಟ್ ಆದ ssb.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜೂನ್ 7 ಕೊನೆಯ ದಿನಾಂಕವಾಗಿದೆ. ದೇಶದ ಸೇವೆ ಮಾಡಲು ಬಯಸುವ ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡಿರುವ ಯುವಜನತೆಗೆ ಇದೊಂದು ಅತ್ಯುತ್ತಮ ಮತ್ತು ಗೌರವಾನ್ವಿತ ಅವಕಾಶವಾಗಿದ್ದು, ಕೊನೆಯ ದಿನಾಂಕದ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಟ್ರಾಫಿಕ್ ಕಿರಿಕಿರಿ, ದುಬಾರಿ ಬಾಡಿಗೆ ಇದ್ರೂ ಬೆಂಗಳೂರು ಬಿಡಲ್ಲ ಜನ! ಬಿಹಾರಿ ಯುವಕನ ವಿಡಿಯೋ ವೈರಲ್

ಬೆಂಗಳೂರು, ಮೇ 30: ಟ್ರಾಫಿಕ್ ಕಿರಿಕಿರಿ, ದುಬಾರಿ ಮನೆ ಬಾಡಿಗೆ ಹಾಗೂ ಒಂಟಿತನ ಕಾಡುತ್ತಿದ್ದರೂ ಸಹ ಜನ ಯಾಕೆ ಬೆಂಗಳೂರು (Bengaluru) ಬಿಟ್ಟು ಹೋಗಲು ಇಷ್ಟಪಡುವುದಿಲ್ಲ ಎಂಬುದನ್ನು ಬಿಹಾರ ಮೂಲದ ಯುವಕನೊಬ್ಬ ವಿವರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಮುಖ್ಯಾಂಶಗಳು

  • ಟ್ರಾಫಿಕ್ ಹಾಗೂ ದುಬಾರಿ ಬಾಡಿಗೆ ಇದ್ದರೂ ಬೆಂಗಳೂರು ಬಿಡಲು ಜನ ಒಪ್ಪುತ್ತಿಲ್ಲ.
  • ಸಿಲಿಕಾನ್ ಸಿಟಿಯ ಅದ್ಭುತ ಹವಾಮಾನವೇ ವಲಸಿಗರನ್ನು ಸೆಳೆಯಲು ಮುಖ್ಯ ಕಾರಣವಾಗಿದೆ.
  • ವರ್ಕ್ ಫ್ರಮ್ ಹೋಮ್ ನೀಡಿದರೆ ಜನರು ಊರಿಗೆ ಮರಳುತ್ತಾರೆ ಎಂದಿದ್ದಾರೆ ನೆಟ್ಟಿಗರು.

ದುಬಾರಿ ಬಾಡಿಗೆ, ಟ್ರಾಫಿಕ್ ಇದ್ದರೂ ಸಿಟಿ ಬಿಡಲ್ಲ ಜನ

ಇನ್‌ಸ್ಟಾಗ್ರಾಮ್‌ನಲ್ಲಿ ತನಗಾದ ಅನುಭವವನ್ನು ಹಂಚಿಕೊಂಡಿರುವ ಅಂಕಿತ್ ಎಂಬ ಯುವಕ, ಇದು ಬೆಂಗಳೂರು.. ಜನ ಇಲ್ಲಿಗೆ ಬರುತ್ತಾರೆ, ಆದರೆ ಬಂದ ಮೇಲೆ ಇಲ್ಲಿಂದ ಹೋಗಲು ಇಷ್ಟಪಡುವುದಿಲ್ಲ. ಇಲ್ಲಿ ಒಂಟಿತನ, ಆತಂಕ ಮತ್ತು ದೈನಂದಿನ ಟ್ರಾಫಿಕ್ ಕಿರಿಕಿರಿ ಇದ್ದರೂ ಜನ ಇಲ್ಲೇ ಇರಲು ಬಯಸುತ್ತಾರೆ. ನಮ್ಮ ಸಂಬಳದ ಅರ್ಧಕ್ಕಿಂತ ಹೆಚ್ಚು ಭಾಗ ಇಲ್ಲಿನ ದೊಡ್ಡ ಅಪಾರ್ಟ್‌ಮೆಂಟ್‌ಗಳ ಬಾಡಿಗೆಗೇ ಖರ್ಚಾಗುತ್ತದೆ. ದೆಹಲಿ, ಗುರುಗ್ರಾಮ್, ಹೈದರಾಬಾದ್, ಮುಂಬೈ ಅಥವಾ ಚೆನ್ನೈನಲ್ಲೂ ಐಟಿ ಕಂಪನಿಗಳಿಲ್ಲವೇ? ಖಂಡಿತ ಇವೆ. ಆದರೆ, ಬೆಂಗಳೂರಿನ ಅದ್ಭುತ ಹವಾಮಾನ (Weather) ನಮ್ಮನ್ನು ಬೇರೆಲ್ಲೂ ಹೋಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಅಂಕಿತ್ ಅವರ ಈ ಮಾತುಗಳು ಸಿಲಿಕಾನ್ ಸಿಟಿಯ ಐಟಿ ಉದ್ಯೋಗಿಗಳು ಮತ್ತು ವಲಸಿಗರ ಮನಸ್ಸು ಮುಟ್ಟಿದ್ದು, ವಿಡಿಯೋಗೆ ಭಾರಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ

ಅಂಕಿತ್ ವಿಡಿಯೋಗೆ ಇನ್‌ಸ್ಟಾಗ್ರಾಮ್‌ನಲ್ಲಿ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು, ಇದು ನೂರಕ್ಕೆ ನೂರು ನಿಜ. ಮೂರ್ನಾಲ್ಕು ದಶಕಗಳ ಮುನ್ನ ಜನ ಕನಸುಗಳನ್ನು ಬೆನ್ನಟ್ಟಿ ಮುಂಬೈಗೆ ಹೋಗುತ್ತಿದ್ದರು, ಈಗ ಆ ಸ್ಥಾನವನ್ನು ಬೆಂಗಳೂರು ತುಂಬಿದೆ ಎಂದು ಸಹಮತ ವ್ಯಕ್ತಪಡಿಸಿದ್ದಾರೆ.

ಆದರೆ, ಎಲ್ಲರೂ ಈ ಮಾತನ್ನು ಒಪ್ಪಿಕೊಂಡಿಲ್ಲ. ಮತ್ತೊಬ್ಬ ಬಳಕೆದಾರ, ನಮಗೆ ವರ್ಕ್ ಫ್ರಮ್ ಹೋಮ್ (WFH) ನೀಡಿ ನೋಡಿ, ಹೊರಗಿನಿಂದ ಬಂದ ಶೇಕಡಾ 80 ರಷ್ಟು ಜನ ತಮ್ಮ ತಮ್ಮ ಸ್ವಗ್ರಾಮಗಳಿಗೆ ಮರಳುತ್ತಾರೆ. ಬೆಂಗಳೂರಿನ ಹವಾಮಾನವನ್ನು ಅತಿಯಾಗಿ ವೈಭವೀಕರಿಸಲಾಗುತ್ತಿದೆ. ಇಲ್ಲಿನ ಟ್ರಾಫಿಕ್ ಮತ್ತು ಮನೆ ಬಾಡಿಗೆ ಜೀವನವನ್ನು ನರಕವಾಗಿಸುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇಷ್ಟೆಲ್ಲಾ ಸವಾಲುಗಳಿದ್ದರೂ ಬೆಂಗಳೂರು ತನ್ನ ಹವಾಮಾನದ ಮೂಲಕ ದೇಶದಾದ್ಯಂತ ಜನರನ್ನು ಆಕರ್ಷಿಸುತ್ತಿರುವುದು ಮಾತ್ರ ಸುಳ್ಳಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version